Jan 8, 2015

ಚಾರ್ಲಿ ಹೆಬ್ಡೋ ಮತ್ತು ಇಸ್ಲಾಮಿನೊಳಗಿನ ಸೈತಾನರು

ಫ್ರಾನ್ಸಿನ ವಿಡಂಬನಾತ್ಮಕ ವಾರಪತ್ರಿಕೆ 'ಚಾರ್ಲಿ ಹೆಬ್ಡೋ' ಕಛೇರಿಯ ಮೇಲೆ ಶಸ್ತ್ರಸಜ್ಜಿತ ಮುಸ್ಲಿಂ ಮೂಲಭೂತವಾದಿ ಉಗ್ರರು ಪೈಶಾಚಿಕ ದಾಳಿ ನಡೆಸಿದ್ದಾರೆ. ಪತ್ರಿಕೆಯ ಮುಖ್ಯ ಸಂಪಾದಕ, ನಾಲ್ವರು ಕಾರ್ಟೂನಿಷ್ಟರು, ಇಬ್ಬರು ಪೋಲೀಸರು ಸೇರಿದಂತೆ ಹನ್ನೆರಡು ಮಂದಿ ಹತರಾಗಿದ್ದಾರೆ. ಬಹಳಷ್ಟು ಜನರಿಗೆ ಮಾರಣಾಂತಿಕ ಗಾಯಗಳಾಗಿವೆ. ಶಾರುಖ್ ಖಾನ್ ಸಂದರ್ಶನವೊಂದರಲ್ಲಿ ಎರಡು ಇಸ್ಲಾಂ ಅಸ್ತಿತ್ವದಲ್ಲಿದೆ, ಒಂದು ಅಲ್ಲಾ ಇಸ್ಲಾಂ ಮತ್ತೊಂದು ಮುಲ್ಲಾ ಇಸ್ಲಾಂ ಎಂದು ಹೇಳಿದ್ದರು. ಆಲ್ ಖೈದಾದ ಪತನದ ನಂತರ ಹುಟ್ಟಿಕೊಂಡಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೈತಾನರ ಇಸ್ಲಾಂ ಎಂಬ ಹೊಸ ಇಸ್ಲಾಮನ್ನು ಸೃಷ್ಟಿಸಿದೆಯಾ? ಇಸ್ಲಾಮಿಕ್ ಸ್ಟೇಟ್ ಸಂಘಟನೆ ಮತ್ತದರ ಬೆಂಬಲಿಗರು ನಡೆಸುತ್ತಿರುವ ದುಷ್ಕೃತ್ಯಗಳು ಹೌದೆನ್ನುತ್ತಿವೆ. 

ಚಾರ್ಲಿ ಹೆಬ್ಡೋ ಪತ್ರಿಕೆ ಇಂದು ನಿನ್ನೆಯದಲ್ಲ, 1969ರಲ್ಲೇ ಶುರುವಾದ ಪತ್ರಿಕೆಗೆ ಮೊದಲಿದ್ದ ಹೆಸರು ಹರಾ - ಕಿರಿ. ಮೊದಲಿನಿಂದಲೂ ವಿಡಂಬನಾತ್ಮಕವಾಗಿದ್ದ ಪತ್ರಿಕೆ ಧಾರ್ಮಿಕ ಮೂಲಭೂತವಾದಿಗಳಿಗೆ ಹೋಲಿಸಿದರೆ ವಿಡಂಬನೆಯಲ್ಲಿ ಮೂಲಭೂತವಾದಿತನದಿಂದ ಕೆಲಸ ಮಾಡುತ್ತಿತ್ತೆಂದು ಅದರ ವಿರುದ್ಧ ಇದ್ದ ಆರೋಪ. ಫ್ರಾನ್ಸಿನ ಪ್ರಧಾನಿಯೊಬ್ಬರ ಬಗ್ಗೆ ಬರೆದ ಕೀಳು ಅಭಿರುಚಿಯ ವಿಡಂಬನೆಯಿಂದಾಗಿ ಪತ್ರಿಕೆಯ ಮೇಲೆ ನಿಷೇಧ ಹೇರಲಾಗಿತ್ತು. ನಂತರದಲ್ಲಿ ಅದೇ ತಂಡ ಚಾರ್ಲಿ ಹೆಬ್ಡೋ ಹೆಸರಿನಲ್ಲಿ ಹೊಸ ಪತ್ರಿಕೆ ಪ್ರಾರಂಬಿಸಿತು. ಧಾರ್ಮಿಕ ಮುಖಂಡರು ಅದರ ಗುರಿಯಾಗಿದ್ದು ಹೌದು. ಪೋಪ್, ಜೀಸಸ್, ಪ್ರವಾದಿ ಮೊಹಮ್ಮದ್ ಬಗೆಗೆ ವಿಡಂಬನಾತ್ಮಕ ಕಾರ್ಟೂನುಗಳನ್ನು ಬರೆದು ಬರೆದೇ ಹೆಸರು ಮಾಡಿತು ಚಾರ್ಲಿ ಹೆಬ್ಡೋ. ಮುಸ್ಲಿಂ ಮೂಲಭೂತವಾದತನ ಹೆಚ್ಚುವುದಕ್ಕೂ ಚಾರ್ಲಿ ಹೆಬ್ಡೋ ಪ್ರಸಿದ್ಧಿಯಾಗುವುದಕ್ಕೂ ಹತ್ತಿರದ ಸಂಬಂಧವಿದೆ! ಚಾರ್ಲಿ ಹೆಬ್ಡೋದಲ್ಲಿ ಪ್ರಕಟವಾಗುತ್ತಿದ್ದ ವಿಡಂಬನಾತ್ಮಕ ಕಾರ್ಟೂನುಗಳು ಕೂಡ ಮುಸ್ಲಿಮರ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಹಿಂಸಾ ಪ್ರವೃತ್ತಿ ಮೂಡಿಸುವುದಕ್ಕೆ ಮೂಲಭೂತವಾದಿಗಳು ಯಶ ಕಂಡರು. ಹಿಂದೊಮ್ಮೆ ಪತ್ರಿಕಾ ಕಛೇರಿಯ ಮೇಲೆ ದಾಳಿ ನಡೆಸಿದಾಗಲೂ ಹಿಂಜರಿಯಲಿಲ್ಲ ಚಾರ್ಲಿ ಹೆಬ್ಡೋ. ದಾಳಿಯ ಬಗ್ಗೆಯೂ ವಿಡಂಬನೆ ಮಾಡಿಕೊಂಡಿದ್ದರು! ನಮ್ಮದಷ್ಟೇ ಶ್ರೇಷ್ಟ ಉಳಿದುದೆಲ್ಲಾ ಕನಿಷ್ಟವೆಂಬ ಮುಸ್ಲಿಂ ಮೂಲಭೂತವಾದಿಗಳ ಸಂಕುಚಿತ ದೃಷ್ಟಿಗೆ ವಿಡಂಬನೆಗಳನ್ನು ಎದುರಿಸಬೇಕಾದ ರೀತಿಯೇನು ಎನ್ನುವುದಕ್ಕೆ ಉತ್ತರವಾಗಿ ಕಂಡಿದ್ದು ಬಂದೂಕುಗಳೇ ಇರಬೇಕು.
ಒಂದು ವರದಿಯ ಪ್ರಕಾರ ಚಾರ್ಲಿ ಹೆಬ್ಡೋದ ಪ್ರಸಾರ ಅರವತ್ತು ಸಾವಿರದಿಂದ ಒಂದು ಲಕ್ಷದವರೆಗೆ ಇರುತ್ತಿತ್ತು. ವಿವಾದಿತ ಕಾರ್ಟೂನುಗಳಿದ್ದಾಗ ಒಂದೂವರೆ ಲಕ್ಷದಷ್ಟಿರುತ್ತಿತ್ತಂತೆ. ಇಷ್ಟು ಪ್ರಸಾರದ ಪತ್ರಿಕೆಯಲ್ಲಿ ತಮ್ಮ ಧಾರ್ಮಿಕ ಗುರುಗಳ ಬಗ್ಗೆ ಬರುವ ಕಾರ್ಟೂನುಗಳ ಬಗೆಗಿನ ಅಸಹನೆ ವ್ಯಕ್ತಪಡಿಸಲು ಈ ಮೂಲಭೂತವಾದಿಗಳು ಆರಿಸಿಕೊಂಡ ದಾರಿ ಏನನ್ನು ಸೂಚಿಸುತ್ತಿದೆ? ನಮ್ಮ ಧರ್ಮದ ಮೇಲೆ, ನಾವು ಅ(ಪಾ)ರ್ಥಿಸಿಕೊಂಡ ಧರ್ಮದ ಬಗ್ಗೆ ಯಾವ ದೇಶದವರೂ ಸೊಲ್ಲೆತ್ತುವಂತಿಲ್ಲ, ಸೊಲ್ಲೆತ್ತಿದರೆ ಅವರಿಗೆ ಚಾರ್ಲಿ ಹೆಬ್ಡೋ ತಂಡದವರಿಗೆ ಆದ ಗತಿಯೇ ಕಾದಿದೆ ಎನ್ನುವ ಸೂಚನೆ ಕೊಡುತ್ತಿದ್ದಾರಾ? ಮೊದಲೇ ಹಬ್ಬಿ ನಿಂತಿರುವ ಇಸ್ಲಾಮೋಫೋಬಿಯಾಕ್ಕೆ ಈ ಮೂಲಭೂತವಾದಿಗಳು ಮತ್ತಷ್ಟು ನೀರೆರೆಯುತ್ತಿದ್ದಾರೆ. ಬಂಡವಾಳಶಾಹಿಗಳ ಸ್ವಾರ್ಥಕ್ಕೆ ಮುಸ್ಲಿಂ ಮೂಲಭೂತವಾದಿಗಳು ಬಲಿಯಾಗುತ್ತಿದ್ದಾರೆ, ಇಸ್ಲಾಂ ಬಾಹುಳ್ಯದ ರಾಷ್ಟ್ರಗಳಲ್ಲಿ ಹಿಂಸೆ ತಾಂಡವವಾಡುತ್ತಿದೆ ಎಂದು ಅನುಕಂಪ ತೋರುತ್ತಿದ್ದ ಜನರನ್ನೂ ಈ ತರಹದ ಘಟನೆಗಳು ದೂರ ಮಾಡುತ್ತವೆ. ಮುಸ್ಲಿಂ ಮೂಲಭೂತವಾದಿಗಳಿಗೂ ಬೇಕಿರುವುದು ಅದೇ. ಇಸ್ಲಾಮೋಫೋಬಿಯಾ ಹೆಚ್ಚಿದಷ್ಟೂ ಮೂಲಭೂತವಾದವನ್ನು ಬೆಂಬಲಿಸುವವರ ಸಂಖೈಯಲ್ಲಿ ಹೆಚ್ಚಳವಾಗುತ್ತದೆಂಬ ಸತ್ಯದ ಅರಿವಾಗಿಬಿಟ್ಟಿದೆ ಅವರಿಗೆ. ಸ್ಥಳೀಯ ಕಾನೂನುಗಳಿಗಿಂತ ಧಾರ್ಮಿಕ ಶೃದ್ಧೆಗಳೆಡೆಗೆ ಜನರು ನಿಷ್ಠರಾಗಿಬಿಟ್ಟಾಗ ಈ ರೀತಿಯ ಅನಾಚಾರಗಳು ನಡೆಯುತ್ತವೆ.
ಇಸ್ರೇಲಿಗಳ ಗುಂಡಿಗೆ ಬಲಿಯಾದ ಪ್ರಾಲೆಸ್ತೀನಿನ ಮಕ್ಕಳ ಸ್ಥಿತಿಗೂ ಐ.ಎಸ್.ಐ.ಎಸ್ ಗುಂಡಿಗೆ ಬಲಿಯಾದ ಯಾಜಿದಿ ಮಕ್ಕಳ ಸ್ಥಿತಿಗೂ ಇರುವ ಸಾಮ್ಯತೆ ತಿಳಿಯದಿದ್ದಾಗ ಐ.ಎಸ್.ಐ.ಎಸ್ ಗೆ ಬೆಂಬಲ ನೀಡುವ ಮೆಹದಿ ಬಿಸ್ವಾಸ್ ನಂತವರು ಜನ್ಮ ತಳೆಯುತ್ತಾರೆ. ಹೆಚ್ಚೇನೂ ಬೇಡ, ಊರಿಗೆ ನಾಲ್ಕು ಮೆಹದಿ ಬಿಸ್ವಾಸ್ ಗಳು ಸೃಷ್ಟಿಯಾದರೆ ನಾಲ್ಕು ನೂರು ಮುಸ್ಲಿಮರಿಗೆ ತಮಗೆ ಬೇಕಾದ ಕಡೆ ಮನೆಗಳು ಬಾಡಿಗೆಗೆ ಸಿಗುವುದಿಲ್ಲ (ಈಗಾಗಲೇ ಈ ಸಮಸ್ಯೆ ಜಾತಿ - ಧರ್ಮದ ಕಾರಣದಿಂದ ಬೇಕಾದಷ್ಟಿದೆ). ಓನರನ್ನು ದೂಷಿಸೋಣವೆಂದರೆ ಆತ ಮೆಹದಿ ಬಿಸ್ವಾಸಿನಂತಹ Literate Uneducated  ಕಡೆ ಕೈತೋರಿಸುತ್ತಾರೆ. ಇಸ್ಲಾಮಿನೊಳಗಿನ ಸೈತಾನರನ್ನು ಅಲ್ಲಾ ಇಸ್ಲಾಂ, ಒಂದು ಮಟ್ಟಿಗೆ ಮುಲ್ಲಾ ಇಸ್ಲಾಂನ ಬೆಂಬಲಿಗರು ಮತ್ತು ಹುಟ್ಟಿನಿಂದ ಮುಸಲ್ಮಾನನಾದ ನಾಸ್ತಿಕರು ವಿರೋಧಿಸದಿದ್ದರೆ ಸೈತಾನರ ಇಸ್ಲಾಂ ಜನ್ಮ ತಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಪರಿಚಿತರೊಬ್ಬರು ಪಿಕೆ ಚಿತ್ರ ನೋಡಿದ ನಂತರ ಹಿಂದೂ ಧರ್ಮ ಅವನತಿ ಹೊಂದಲು ಅನ್ಯ ಧರ್ಮದವರು ಬೇಕಿಲ್ಲ, ಹಿಂದೂಗಳೇ ಸಾಕು ಎಂಬ ಮಾತು ಹೇಳಿದ್ದರು. ಇವತ್ತಿನ ಮಟ್ಟಿಗೆ ಇಸ್ಲಾಂ ಧರ್ಮಕ್ಕೆ ಈ ಮಾತು ಹೆಚ್ಚು ಹೊಂದುತ್ತದೆ. 
Image source - pri.org

No comments:

Post a Comment