Jan 16, 2025

ಬಿಬಿಎಂಪಿ ಪಾರ್ಕಿನಲ್ಲಿ ಸಿಕ್ಕ ನೊಣಹಿಡುಕಗಳು.

Indian paradise flycatcher/ ಬಾಲದಂಡೆ/ ರಾಜಹಕ್ಕಿ 
ಡಾ. ಅಶೋಕ್.‌ ಕೆ. ಆರ್

ಹೆಂಡ್ರುಗೆ ಆರ್‌.ಆರ್.‌ ನಗರದಲ್ಲಿ ಒಂದಷ್ಟು ಕೆಲಸವಿತ್ತು. ಅವಳನ್ನು ಬಿಟ್ಟು ನಾನು ಮಕ್ಕಳು ಹತ್ತಿರದ ಹೋಟೆಲ್ಲಿಗೆ ಹೋಗಿ ತಿಂಡಿ ತಿಂದೆವು. ಎರಡು ತಾಸು ಸಮಯ ಕಳೆಯಬೇಕಿತ್ತು. ಗೂಗಲ್ಲಿನಲ್ಲಿ ಹತ್ತಿರದಲ್ಲಿರುವ ಪಾರ್ಕಿನ ಪಟ್ಟಿ ತೋರಿಸಲು ಕೇಳಿದೆ. ಎಲ್ಲದಕ್ಕಿಂತ ಸಮೀಪವಿದ್ದ ಹೆಸರಿಲ್ಲದ ಬಿಬಿಎಂಪಿ ಪಾರ್ಕಿಗೆ ಹೋದೆವು. ಮಕ್ಕಳಿಗೆ ಆಟವಾಡಲಿದ್ದ ಜಾಗದ ಹಿಂದೆ ಬಿದಿರಿನ ಪುಟ್ಟ ಮೆಳೆಯಿತ್ತು. ಬಿದಿರಿನ ಮೆಳೆಯ ಹಿಂದೆ ಎರಡು ಗಸಗಸೆ (ಸಿಂಗಾಪೂರ್‌ ಚೆರ್ರಿ) ಹಣ್ಣಿನ ಮರಗಳಿದ್ದವು. ಗಾತ್ರ ನೋಡಿದರೆ ಐದಾರು ವರ್ಷಗಳ ಆಯಸ್ಸು. ಅಳಿಲುಗಳು ಚಿಂವ್‌ಗುಟ್ಟುತ್ತಿದ್ದವು. ಗಸಗಸೆ ಮರದ ಬಳಿ ಇದ್ದಕ್ಕಿದ್ದಂತೆ ಅಚ್ಚ ಬಿಳುಪಿನ ಹಾಳೆಯೊಂದು ಮಣ್ಣಿನಿಂದ ಗಿಡದ ಕಡೆಗೆ ತೂರಿಹೋದಂತೆನ್ನಿಸಿತು. ಏನದು ಎಂದು ಕತ್ತೆತ್ತಿ ನೋಡಿದವನಿಗೆ ಕಂಡದ್ದು ಇಂಡಿಯನ್‌ ಪ್ಯಾರಡೈಸ್‌ ಫ್ಲೈಕ್ಯಾಚರ್‌ (ಬಾಲದಂಡೆ, ರಾಜಹಕ್ಕಿ). ಅರೆರೆ ಈ ಪಕ್ಷಿ ನೋಡಲೆಂದೇ ಒಮ್ಮೆ ನಂದಿ ಬೆಟ್ಟಕ್ಕೆ ಹೋಗಿದ್ದೆನಲ್ಲವೇ? ದೂರದಲ್ಲಿ ಕಾಣಿಸಿತ್ತಷ್ಟೇ. ಕುಣಿಗಲ್ಲಿನ ಬಳಿ ಒಮ್ಮೆ ಕಂದು ಬಣ್ಣದಲ್ಲಿದ್ದ ನೊಣಹಿಡುಕ ಸಿಕ್ಕಿತ್ತು, ಸುಮಾರಾಗಿ ಹತ್ತಿರದಲ್ಲಿ. ಕುಕ್ಕರಹಳ್ಳಿ ಕೆರೆ, ಕಣ್ವ ಜಲಾಶಯದ ಬಳಿ ಹತ್ತಿರದಲ್ಲೇ ಸಿಕ್ಕಿತ್ತು, ಕ್ಯಾಮೆರಾ ಕೈಯಲ್ಲಿರಲಿಲ್ಲ. ಇವತ್ತೂ ಕ್ಯಾಮೆರಾ ಕೈಯಲ್ಲಿಲ್ಲದಾಗಲೇ ಇಷ್ಟು ಹತ್ತಿರದಲ್ಲಿ ಬಂದು ಕೂರಬೇಕಾ?! ಮಕ್ಕಳಿತ್ತ ಆಟವಾಡುತ್ತಿದ್ದರು. ನಾನು ಪಕ್ಷಿಯ ದಿನಚರಿಯನ್ನು ವೀಕ್ಷಿಸುತ್ತಿದ್ದೆ. ಅದರ ಉದ್ದನೆಯ ಬಾಲ ಗಾಳಿಯಲ್ಲಿ ತುಯ್ದಾಡುವುದನ್ನು ಕಾಣುವುದೇ ಒಂದು ಸೊಗಸು. ಅಷ್ಟು ಉದ್ದನೆಯ ಬಾಲವನ್ನೊತ್ತುಕೊಂಡು ಗಸಗಸೆ ಮರದ ಪೀಚು ಹಣ್ಣುಗಳು, ಎಲೆಗಳ ನಡುವಿದ್ದ ಸಣ್ಣ ಪುಟ್ಟ ಹುಳ – ನೊಣಗಳನ್ನು ಹಿಡಿಯಲು ಆಗೊಮ್ಮೆ ಈಗೊಮ್ಮೆ ನೆಲದ ಬಳಿ ಬಂದು ಮತ್ತೆ ಹಿಂದಿರುಗಿ ಗಸಗಸೆ ಮರ ಹಾಗು ಸುತ್ತಮುತ್ತಲಿದ್ದ ಇತರೆ ಮರಗಳ ಮೇಲೆ ಕುಳಿತು ವಿರಮಿಸಿಕೊಳ್ಳುತ್ತಿತ್ತು. ಸುತ್ತಮುತ್ತಲೆಲ್ಲ ಮನೆಗಳೇ ಇರುವ ಜಾಗದಲ್ಲಿ ಇಂತಹ ಪಕ್ಷಿ ನೋಡಿದೆನೆಂದು ಹೇಳಿದರೆ ಯಾರಾದರೂ ನಂಬದೇ ಹೋದರೆ ಎಂಬ ನೆಪದಲ್ಲಿ ನನ್ನ ಸಮಾಧಾನಕ್ಕೆ ಮೊಬೈಲಿನಲ್ಲೇ ಸುಮ್ಮನೊಂದು ವೀಡಿಯೋ ತೆಗೆದೆ! ಈ ಉದ್ದ ಬಾಲದ ನೊಣಹಿಡುಕನ ಜೊತೆಯೇ ಕೆಂಪುಕೊರಳಿನ ನೊಣಹಿಡುಕುಗಳ (ಟಿಕೆಲ್ಸ್‌ ಬ್ಲೂ ಫ್ಲೈಕ್ಯಾಚರ್) ದರ್ಶನವೂ ಆಯಿತು. ʻಕ್ಯಾಮೆರಾ ಇಲ್ಲದಾಗಲೇ ಎಲ್ಲ ಬಂದು ಕುಣೀರಪ್ಪʼ ಎಂದು ಬಯ್ದುಕೊಂಡೆ!

Tickells blue flycatcher/ ಕೆಂಪುಕೊರಳಿನ ನೊಣಹಿಡುಕ

ಮಕ್ಕಳ ಜೊತೆ ಅಲ್ಲೇ ಆಟವಾಡುತ್ತಿದ್ದ ಪಾರ್ಕಿನ ಎದುರಿನ ಮನೆಯವನಾದ ಶಂಕರನೆಂಬ ಪುಟ್ಟ ಹುಡುಗ ನಾನು ಪಕ್ಷಿಯ ಕಡೆಗೇ ಗಮನಕೊಟ್ಟಿದ್ದು ನೋಡಿ ʻಅದ್ಯಾವಾಗಲೂ ಇಲ್ಲೇ ಇರ್ತದೆ. ಅದರ ಬಾಲ ನನ್ನ ಕೈಗಿಂತ ಉದ್ದ, ನಿಮ್ಮ ಕೈಗಿಂತ ಉದ್ದʼ ನನ್ನ ಮಕ್ಕಳ ಕಡೆ ಕೈ ತೋರುತ್ತಾ ʻನಮ್ಮೆಲ್ಲರ ಕೈ ಸೇರಿಸಿದರೂ ಅದಕ್ಕಿಂತ ಉದ್ದದ ಬಾಲ ಆ ಪಕ್ಷಿಗೆʼ ಎಂದ. ಪಕ್ಷಿಯ ಹೆಸರನ್ನು ಅವನಿಗೆ ತಿಳಿಸಿ ಸಮಯವಾಗಿದ್ದರಿಂದ ಮಕ್ಕಳೊಂದಿಗೆ ಹೊರಟೆ. ನಾನು ಕೆಲಸ ಮಾಡುತ್ತಿದ್ದ ಕಾಲೇಜಿನ ಸಮೀಪವೇ ಈ ಪಾರ್ಕಿರುವುದರಿಂದ ಆಗಾಗ ಭೇಟಿ ಕೊಡಬಹುದು ಎಂದು ಮನಸಿನಲ್ಲೇ ಲೆಕ್ಕ ಹಾಕುತ್ತ ಹೆಂಡ್ರನ್ನು ಕರೆದುಕೊಂಡು ಮನೆ ತಲುಪಿದೆ. ಮನೆ ತಲುಪಿದರೂ ಸಮಾಧಾನವಿಲ್ಲ. ಕ್ಯಾಮೆರಾ ತಗೊಂಡೋಗಿ ಮತ್ತೊಂದು ಸಲ ಈ ಪಕ್ಷಿಯನ್ನು ನೋಡೇ ಬಿಡುವ ಎಂದು ದಡಬಡನೆ ವಾಪಸ್ಸಾದೆ. ಪಕ್ಷಿ ಸಿಗದೇ ಇದ್ದರೂ ಪಾರ್ಕಿಗೆ ಯಾವ್ಯಾವ ಸಮಯದಲ್ಲಿ ಈ ಪಕ್ಷಿ ಬರಬಹುದು ಎನ್ನುವುದನ್ನಾದರೂ ತಿಳಿದುಕೊಳ್ಳಬಹುದು ಎಂಬ ಆಸೆ.

ʻಆಯ್ತು ಬೇಜಾರ್‌ ಮಾಡಿಕೋ ಬೇಡ ಬಾʼ ಎಂದೆನ್ನುತ್ತಾ ಎರಡೂ ಪಕ್ಷಿಗಳು ಗಿಡಗಳ ಮರೆಯಲ್ಲೇ ಒಂದಷ್ಟು ಚಿತ್ರ ತೆಗೆಯಲು ಅನುವು ಮಾಡಿಕೊಟ್ಟವು. ಪಕ್ಷಿಗಳ ಸ್ವಭಾವ ವೀಕ್ಷಿಸುತ್ತಾ, ಆವಾಗಿವಾಗ ಒಂದೊಂದು ಫೋಟೋ ತೆಗೆಯುತ್ತಾ ಹತ್ತಿರತ್ತಿರ ಮೂರು ತಾಸು ನಿಂತರೆ ಕಾಲು ನೋಯದೇ ಇದ್ದೀತೆ. ಒಂದೈದು ನಿಮಿಷ ಅಲ್ಲೇ ವಿರಮಿಸಿಕೊಂಡು ಹೊರಟವನಿಗೆ ಮನೆಯ ಅಂಗಳದಲ್ಲಿ ಅಪ್ಪನೊಂದಿಗೆ ಕ್ರಿಕೆಟ್‌ ಆಡುತ್ತಿದ್ದ ಪುಟ್ಟ ಶಂಕರ ಕಂಡ. ತೆಗೆದ ಫೋಟೋಗಳನ್ನು ಅವನಿಗೆ ತೋರಿಸಿ ಅವನ ಮುಖದ ಮೇಲೆ ಮೂಡಿದ ಮುಗುಳ್ನಗೆಯನ್ನು ಕಣ್ತುಂಬಿಕೊಳ್ಳುತ್ತಾ ಮನೆ ಕಡೆಗೆ ಹೊರಟೆ.

Dec 28, 2024

ಕ್ಯಾಪಿಟಲಿಸಂ ಬಿಟ್ಟು ಬೇರೆ ಆಯ್ಕೆ ನಿಜಕ್ಕೂ ನಮ್ಮ ಮುಂದಿದೆಯೇ?

 

image source: yourdictionary

ಡಾ. ಅಶೋಕ್.‌ ಕೆ. ಆರ್.

ಯಾರಾದರೂ ಎಡಪಂಥೀಯ – ಬಲಪಂಥೀಯ ಅಂತ ಮಾತನಾಡುವಾಗ, ವಾದ ಮಾಡುವಾಗ ನಿಜಕ್ಕೂ ಈಗ ನಮ್ಮಲ್ಲಿ ಎಡಪಂಥೀಯತೆ – ಬಲಪಂಥೀಯತೆ ಅನ್ನುವುದಿದೆಯೇ ಎನ್ನುವ ಪ್ರಶ್ನೆ ನನ್ನಲ್ಲಿ ಮೂಡುತ್ತಲೇ ಇರುತ್ತದೆ. ಈ ರೀತಿಯಾಗಿ ಮಾತನಾಡುವ, ವಾದ ಮಾಡುವ ನಾವೆಲ್ಲರೂ ಬಂಡವಾಳಶಾಹಿ – ಕ್ಯಾಪಿಟಲಿಸ್ಟುಗಳೇ ಅಲ್ಲವೇ ಎನ್ನುವ ಯೋಚನೆ ಸುಳಿಯುತ್ತದೆ. ಅಬ್ಬಬ್ಬಾ ಅಂದರೆ ಒಂಚೂರು ಎಡಕ್ಕಿರುವ ಅಥವಾ ಒಂದಷ್ಟು ಬಲಕ್ಕಿರುವ ಕ್ಯಾಪಿಟಲಿಸ್ಟುಗಳಷ್ಟೇ ಅಲ್ಲವೇ ನಾವು ಬಹುತೇಕರು…

ನರಸಿಂಹರಾವ್‌ ಕಾಲದಲ್ಲಿ, ಮನಮೋಹನ್‌ ಸಿಂಗ್‌ರವರು ಹಣಕಾಸು ಸಚಿವರಾಗಿದ್ದಾಗಿನ ಸಮಯದಲ್ಲಿ ಇಂಡಿಯಾ ಜಾಗತೀಕರಣಕ್ಕೆ ಸಂಪೂರ್ಣವಾಗಿ ತೆರೆದುಕೊಂಡಿತು. ಹಲವು ವರುಷಗಳ ಕಾಲ ವಿಧವಿಧದ ವಿರೋಧಗಳನ್ನು ಈ ಹೊಸ ಆರ್ಥಿಕ ನೀತಿಗಳು ಎದುರಿಸಿತಾದರೂ ಅಂತಿಮವಾಗಿ ಕ್ಯಾಪಿಟಲಿಸಂ ಎನ್ನುವ ಸಿದ್ಧಾಂತವಲ್ಲದ ಸಿದ್ಧಾಂತ ಉಳಿದೆಲ್ಲ ಸಿದ್ಧಾಂತಗಳನ್ನು ಮೀರಿ ಜಯಿಸಲಾರಂಭಿಸಿತು ಎನ್ನುವುದು ತಿರಸ್ಕರಿಸಲಾಗದ ವಾಸ್ತವ.

ಆರ್ಥಿಕ ಹಿಂಜರಿವಿದ್ದ ಸಮಯದಲ್ಲಿ ಈ ಮಾದರಿಯನ್ನು ಹೊರತುಪಡಿಸಿ ಮತ್ಯಾವ ಮಾದರಿಯೂ ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಿರಲಿಲ್ಲವೇ? ಖಂಡಿತವಾಗಿ ಅನೇಕ ಮಾದರಿಗಳಿದ್ದವು. ಆದರೆ ಈ ಬೇರೆ ಎಲ್ಲಾ ಮಾದರಿಗಳೂ ಬಹಳಷ್ಟು ದೇಶದಲ್ಲಿ ವಿಫಲವಾಗಿತ್ತು, ಅಥವಾ ಆ ಮಾದರಿಗಳು ವಿಫಲಗೊಳ್ಳುವಂತೆ ಮಾಡುವಲ್ಲಿ ಕ್ಯಾಪಿಟಲಿಸಂ ಸಫಲತೆ ಕಂಡಿತ್ತು. ಕ್ಯೂಬಾದಂತಹ ದೇಶಗಳಲ್ಲಿ ಭಿನ್ನ ಮಾದರಿಗಳು ಒಂದು ಮಟ್ಟಿಗೆ ಯಶ ಕಂಡಿತ್ತಾದರೂ ನಮ್ಮ ದೇಶದ ಅಗಾಧತೆಗೆ – ನಮ್ಮ ಜನಸಂಖೈಗೆ ಆ ಮಾದರಿಯನ್ನು ಸಂಪೂರ್ಣವಾಗಿ ಅಳವಡಿಸಿ ಯಶ ಕಾಣಲು ಸಾಧ್ಯವಿತ್ತೆ? ಸಮಾಜವಾದಿ ಮಾದರಿ, ಕಮ್ಯುನಿಷ್ಟ್‌ ಮಾದರಿ ಸಂಪೂರ್ಣ ಯಶ ಕಾಣಬೇಕೆಂದರೆ ಅಡಿಯಿಂದ ಮುಡಿಯವರೆಗೂ ಆಡಳಿತ ಯಂತ್ರ ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸಬೇಕು. ಆಡಳಿತ ಯಂತ್ರದ ಒಂದು ಕೀಲು ಕೈಕೊಟ್ಟರೆ ಇಡೀ ವ್ಯವಸ್ಥೆಯೇ ಅವ್ಯವಸ್ಥೆಯ ಕಡೆಗೆ ಸಾಗಿ ಅಂತಿಮವಾಗಿ ಈ ಮಾದರಿಗಳಲ್ಲೇ ಲೋಪವಿದೆ ಎಂಬ ಅಭಿಪ್ರಾಯ ಮೂಡಿಸಿಬಿಡುತ್ತದೆ. ಈ ಅಭಿಪ್ರಾಯಗಳನ್ನು ತನ್ನನುಕೂಲಕ್ಕೆ ಬಳಸಿಕೊಂಡೇ ಕ್ಯಾಪಿಟಲಿಸ್ಟ್‌ ವ್ಯವಸ್ಥೆಯು ಮುನ್ನಡೆಯಲಾರಂಭಿಸಿದ್ದು. ಪಕ್ಕಾ ಕಮ್ಯುನಿಷ್ಟ್‌ ದೇಶವೆಂದೇ ಖ್ಯಾತಿ ಹೊಂದಿದ ಚೀನಾದಂತಹ ದೇಶವೂ ಸಹ ಕ್ಯಾಪಿಟಲಿಸಂನ ತೋಳತೆಕ್ಕೆಗೆ ಸೇರಿದ್ದು. ಭ್ರಷ್ಟಾಚಾರವು ಉಳಿದೆಲ್ಲ ವ್ಯವಸ್ಥೆಗಳನ್ನು ದಿನಬೆಳಗಾಗುವುದರಲ್ಲಿ ಮುಳುಗಿಸಿಬಿಟ್ಟರೆ ಕ್ಯಾಪಿಟಲಿಸಂ ವ್ಯವಸ್ಥೆಯೂ ಭ್ರಷ್ಟಾಚಾರವಿದ್ದಷ್ಟೂ ಪ್ರಖರವಾಗಿ ಬೆಳಗುತ್ತದೆ!

ಕ್ಯಾಪಿಟಲಿಸಂನ ಗೆಲುವಿಗೆ ಬಹುಮುಖ್ಯ ಕಾರಣ ನಮ್ಮನ್ನು ವಸ್ತುಗಳೆಡೆಗೆ ಆಕರ್ಷಿಸಿದ್ದು. ಆ ಆಕರ್ಷಣೀಯ ವಸ್ತುಗಳು ನಮಗೆ ಸುಲಭದಲ್ಲಿ ಲಭ್ಯವಾಗುವಂತೆ ಮಾಡಿದ್ದು. ಮೂಲತಃ ಮನುಷ್ಯರಿಗೆ ಆಟಿಕೆಗಳೆಂದರೆ ಪ್ರೀತಿ. ಸಣ್ಣದರಲ್ಲಿ ಆಟಿಕೆಯ ಗೊಂಬೆಗಳ ಮೇಲಿರುಷ್ಟೇ ಆಸೆ ಮುರಿದ ಪ್ಲ್ಯಾಸ್ಟಿಕ್‌ ಲೋಟದ ಮೇಲೂ ಇರುತ್ತದೆ. ದೊಡ್ಡವರಾಗುತ್ತ ಆಟಿಕೆಗಳ ರೂಪ ಬೈಕು, ಕಾರು, ಒಡವೆ, ಮನೆ, ಬಟ್ಟೆ, ಫೋನು, ಚಪ್ಪಲಿಗಳ ರೂಪ ಪಡೆಯುತ್ತದಷ್ಟೇ. ಆಟಿಕೆ ಕಷ್ಟದಲ್ಲಿ ಸಿಕ್ಕರೆ ಹೆಚ್ಚು ಸಂತಸವೋ ಸುಲಭದಲ್ಲಿ ಸಿಕ್ಕರೆ ಹೆಚ್ಚು ಖುಷಿಯೋ? ಹೆಚ್ಚೇನಿಲ್ಲ, ಮೂರು ದಶಕದ ಹಿಂದೆ ಒಂದು ಸ್ಕೂಟರ್‌ ಖರೀದಿಸಬೇಕೆಂದರೆ ಹಣವಿದ್ದರೂ ತಿಂಗಳುಗಳವರೆಗೆ ಕಾಯಬೇಕಿತ್ತು. ಈಗ ಆನ್‌ಲೈನಿನಲ್ಲೇ ಬುಕ್‌ ಮಾಡಿದರೆ ಎರಡು ಮೂರು ದಿನದಲ್ಲಿ ಮನೆಬಾಗಿಲಿಗೇ ಸ್ಕೂಟರ್‌ ತಲುಪಿಸುತ್ತಾರೆ. ವಸ್ತು ಪ್ರೇಮಿಯಾದ ಮನುಷ್ಯನ ಆಸೆ ದುರಾಸೆಗಳನ್ನು ಪೂರೈಸುವುದೇ ಮೂಲಗುಣವಾದ ಕ್ಯಾಪಿಟಲಿಸಂ ವ್ಯವಸ್ಥೆ ದೇಶ – ದೇಶಗಳನ್ನು ಆವರಿಸುತ್ತಿರುವುದಲ್ಲಿ ಅಚ್ಚರಿಯಿಲ್ಲ.

ಕ್ಯಾಪಿಟಲಿಸಂ ವ್ಯವಸ್ಥೆಯಿಂದಲೇ ಪರಿಸರನಾಶ ವೇಗ ಪಡೆದುಕೊಂಡಿದೆ, ಹೌದು.

ಈ ವ್ಯವಸ್ಥೆಯು ಹಣವಿದ್ದವರಿಗೆ ಚೆಂದ ಕಾಣಿಸುತ್ತದೆಯೇ ಹೊರತು ಹಣದ ವಿಚಾರದಲ್ಲಿ ಹಿಂದುಳಿದಿರುವವರಿಗಲ್ಲ, ಹೌದು ಸತ್ಯ.

ಆರ್ಥಿಕ ಅಸಮತೋಲನ ಈ ವ್ಯವಸ್ಥೆಯಲ್ಲಿ ಮತ್ತಷ್ಟು ಹೆಚ್ಚಾಗುತ್ತದೆ, ಹೌದು.

ಮೊದಲೇ ಸ್ವಾರ್ಥಿ – ಲೋಭಿಯಾದ ಮನುಷ್ಯನನ್ನು ಮತ್ತಷ್ಟು ಮಗದಷ್ಟು ಲೋಭಿಯಾಗಿಸಿ ಮನುಷ್ಯತ್ವವನ್ನೇ ಮರೆತುಬಿಡುವಂತೆ ಮಾಡಿಬಿಡುತ್ತದೆ ಈ ವ್ಯವಸ್ಥೆ, ಹೌದು ಸತ್ಯವೇ.

ಸದ್ಯದ ಪರಿಸ್ಥಿತಿಯಲ್ಲಿ, ಹತ್ತಿರದ ಭವಿಷ್ಯತ್ತಿನಲ್ಲಿ ಪರ್ಯಾಯ ವ್ಯವಸ್ಥೆಯೇನಾದರೂ ರೂಪುಗೊಂಡು, ಸಫಲತೆ ಕಂಡು ಪ್ರಸ್ತುತ ವ್ಯವಸ್ಥೆಯ ಕುಂದುಕೊರತೆಗಳನ್ನು ಸರಿಪಡಿಸಬಲ್ಲದೇ? ಭರವಸೆಯಿಲ್ಲ. ಈ ವ್ಯವಸ್ಥೆಯೇ ಒಂದಷ್ಟು ಮಾನವೀಯವಾಗಿ ಮಾರ್ಪಡುತ್ತಾ ಹೆಚ್ಚಿನ ಜನರನ್ನು ಒಳಗೊಳ್ಳುತ್ತಾ ಸಾಗಬಹುದೆಂದು ನಿರೀಕ್ಷೆ ಮಾಡಬಹುದಷ್ಟೇ.

Nov 22, 2024

ಎಲ್ಲೆಡೆ ಸಲ್ಲುವ “ಬಂಧಮುಕ್ತ”


ಡಾ
. ಅಶೋಕ್. ಕೆ. ಆರ್

ಕೆಲವೊಂದು ಪುಸ್ತಕಗಳೇ ಹಾಗೆ, ನೇರಾನೇರ ಸಂಬಂಧವಿಲ್ಲದಿದ್ದರೂ ನಮ್ಮ ನಡುವಿನದೇ ಪುಸ್ತಕವೆನಿಸಿಬಿಡುತ್ತದೆ. ನಮ್ಮದಲ್ಲದ ಸಂಸ್ಕೃತಿಯ, ನಮ್ಮ ದೇಶದ್ದಲ್ಲದ, ನಮ್ಮ ಖಂಡದ್ದೂ ಅಲ್ಲದ ದೂರದ ದೇಶವೊಂದರ ಲೇಖಕಿಯ ಬರಹಗಳು ನಮ್ಮ ಸುತ್ತಮುತ್ತಲಿನ ಸಮಾಜಕ್ಕೇ ಕನ್ನಡಿ ಹಿಡಿದಂತಿರುವುದನ್ನು ಮೆಚ್ಚಬೇಕೋ ಅಲ್ಲಿರುವ ಸಂಕಷ್ಟ ದುಮ್ಮಾನಗಳು ನಮ್ಮಲ್ಲೂ ಇರುವುದಕ್ಕೆ ದುಃಖ ಪಡಬೇಕೋ ಎನ್ನುವ ಗೊಂದಲಗಳೊಂದಿಗೆಯೇ ಪುಸ್ತಕ ಓದಿ ಮುಗಿಸಿದೆ.

ಪುಸ್ತಕದ ವ್ಯಾಪ್ತಿ ಹಿರಿದಾದುದು. ಕಪ್ಪು ಜನರ ಬವಣೆ, ಕಪ್ಪು ಮಹಿಳೆಯರ ಬವಣೆ, ಸ್ತ್ರೀವಾದ, ಬದಲಾದ ಸಮಾಜದಲ್ಲಿ ಶೋಷಣೆಯ ರೂಪಗಳೂ ಮಾರ್ಪಾಡಾಗುವುದು, ಒಂದು ಕಾಲದಲ್ಲಿ ಶೋಷಣೆಗೊಳಗಾಗಿದ್ದವರೆ ಮತ್ತೊಂದು ಹಂತದಲ್ಲಿ ಶೋಷಕರಾಗುವ ಬಗೆಇವೆಲ್ಲದರ ಜೊತೆಗೆ ಮನುಕುಲದ ಅವನತಿಗೆ ಬಹುಮಖ್ಯ ಕಾರಣವಾದ ಸ್ವಪ್ರೀತಿಯ ಕೊರತೆಯ ಬಗೆಗಿನ ಒಳನೋಟಗಳನ್ನು ಕೊಡುವ ಪುಸ್ತಕ ಬೆಲ್ ಹುಕ್ಸ್ರವರಬಂಧ ಮುಕ್ತ, ಪ್ರೀತಿಯ ಹುಡುಕಾಟದಲ್ಲಿ ದಮನಿತರು”. ಶ್ರೀಮತಿ ಎಚ್.ಎಸ್ರವರ ಸಶಕ್ತ ಅನುವಾದವು ಪುಸ್ತಕವನ್ನು ಮತ್ತಷ್ಟು ಆಪ್ತಗೊಳಿಸುತ್ತದೆ.

ಆಪ್ತಗೊಳಿಸುವಿಕೆಯು ಖುಷಿ ಕೊಡುವ ಸಂಗತಿಯಂತೂ ಖಂಡಿತ ಅಲ್ಲ. ನಮ್ಮಲ್ಲಿ ವರ್ಣಬೇಧ ನೀತಿಯಿಲ್ಲ, ಆದರೆ ಅದರಷ್ಟೇ ಅಥವಾ ಅದಕ್ಕಿಂತಲೂ ಹೀನಾಯವಾದ ಜಾತಿ ಬೇಧ ಪದ್ಧತಿ ನಮ್ಮಲ್ಲಿದೆ. ಕಪ್ಪು ಜನರು ಮತ್ತು ಬಿಳಿಯ ಜನರೆಂದು ಬರೆದಿರುವ ಕಡೆಯಲ್ಲೆಲ್ಲ ಶೋಷಿತ ಜನರು ಮತ್ತು ಶೋಷಕ ಜಾತಿಯ ಜನರೆಂದು ಬದಲಿಸಿಬಿಟ್ಟರೆ ನಮ್ಮಲ್ಲಿ ನಡೆದಿರುವ ಸಂಗತಿಯಂತೆಯೇ, ನಮ್ಮ ಸಮಾಜದ ದಮನಿತರ ಕತೆಯಂತೆಯೇ ಭಾಸವಾಗುತ್ತದೆ. ವರ್ಣಬೇಧ ಕಡಿಮೆಯಾಗಿರುವ ವೇಗದಲ್ಲಿಯೇ ಜಾತಿಬೇಧವು ಕಡಿಮೆಯಾಗಿದೆಯೇ ಎಂದು ಪ್ರಶ್ನಿಸಿಕೊಂಡರೆ ನಿರಾಶೆಯ ಉತ್ತರವೇ ದೊರಕೀತು ಅಲ್ಲವೇ.

ಇನ್ನು ವರ್ಣ ಜಾತಿ ಧರ್ಮಗಳನ್ನು ಮೀರಿ ಸಾರ್ವತ್ರಿಕವಾಗಿರುವ ಪುರುಷ ಅಹಂಕಾರದ ಬಗ್ಗೆ ಹೊಸನೋಟಗಳನ್ನು ಕೊಡುವ ಬಹಳಷ್ಟು ಲೇಖನಗಳಿವೆ. ಪುರುಷರ ಅಹಮಿಕೆಯ ಕೂಪದಿಂದ ಹೊರಬರಬೇಕಿರುವುದು ಮಹಿಳೆಯರಿಗೆಷ್ಟು ಅನಿವಾರ್ಯವೋ ಪುರುಷರಿಗೂ ಅಷ್ಟೇ ಅವಶ್ಯಕ, ಅಷ್ಟೇ ಅನಿವಾರ್ಯ. ಮನೆ ಮನಗಳಲ್ಲಿ ಗಂಡಸಿನ ʻಸ್ಥಾನಮಾನʼವನ್ನು ನಿರ್ಧರಿಸುವುದರಲ್ಲಿ ಮನೆಯಲ್ಲಿನ ಹಿರಿಯ ಗಂಡಸರ ಯಜಮಾನರ ಪಾತ್ರ ಎಷ್ಟು ಮುಖ್ಯವಾಗಿದೆಯೋ ಅದೇ ಮನೆಯಲ್ಲಿರುವ ಹಿರಿಯ ಹೆಂಗಸರ ಪಾತ್ರವೂ ಅಷ್ಟೇ ಪ್ರಮುಖವಾಗಿದೆ. ಇಲ್ಲಿ ʻಯಜಮಾನʼ ಗಂಡಸರನ್ನಷ್ಟೇ ದೂಷಿಸಬೇಕೋ, ಮೇಲಾಟದ ಸಂಪ್ರದಾಯ ಮುಂದುವರೆಯಲು ತನ್ನದೇ ಕೊಡುವೆ ನೀಡುತ್ತಿರುವ ಹಿರಿಯ ಹೆಂಗಸರನ್ನು ದೂಷಿಸಬೇಕೋ? ಅಥವಾ ಇಬ್ಬರಲ್ಲಿಯೂ ರೀತಿಯ ಮೇಲು ಕೀಳಿನ ಮನೋಭಾವವನ್ನು ತುಂಬಿಬಿಟ್ಟಿರುವ ಸಮಾಜದ ನೀತಿರೀತಿಗಳನ್ನು ದೂಷಿಸಬೇಕೋ?

ಎಷ್ಟೇ ಪ್ರಗತಿಪರ, ಓಪನ್ ಮೈಂಡೆಡ್ ಅನ್ನಿಸಿಕೊಂಡವರಲ್ಲಿಯೂ ಉಳಿದುಬಿಟ್ಟಿರುವ ಸಂಕುಚಿತ ಮನೋಭಾವಗಳ ಕುರಿತಾಗಿಯೂ ಪುಸ್ತಕ ಮಾತನಾಡುತ್ತದೆ. ಕಪ್ಪು ಜನರ ಪರವಾಗಿ ಕಪ್ಪು ಮಹಿಳೆಯರ ಪರವಾಗಿ ಚಳುವಳಿಯಲ್ಲಿ ತೊಡಗಿಸಿಕೊಂಡವರೂ ಸಹ ತಮಗೆ ಅರ್ಥವಾಗದ, ತಮಗೆ ಒಪ್ಪಿತವಾಗುತ್ತಿಲ್ಲವೆಂದ ಏಕೈಕ ಕಾರಣಕ್ಕೆ ʻಗೇʼಗಳ ಬಗ್ಗೆ, ʻಲೆಸ್ಬಿಯನ್ನರʼ ಬಗ್ಗೆ ತುಚ್ಛ ಭಾವನೆಗಳನ್ನು ಬೆಳೆಸಿಕೊಂಡುಬಿಡುತ್ತಾರೆ. ನಮ್ಮಲ್ಲಿನ ಸಣ್ಣತನಗಳನ್ನು ಒತ್ತಾಯಪೂರ್ವಕವಾಗಿಯಾದರೂ ಕಳೆದುಕೊಳ್ಳದಿದ್ದರೆ ನಮ್ಮ ಪ್ರಗತಿಪರತೆಗೆ, ಓಪನ್ ಮೈಂಡೆಡ್ನೆಸ್ಗೆ ಬೆಲೆ ಇರುತ್ತದೆಯೇ?

ಸ್ವಪ್ರೀತಿಯು ಇಡೀ ಪುಸ್ತಕದ ಜೀವಾಳ. ನಮ್ಮನ್ನು ನಾವು ಪ್ರೀತಿಸಲು ಸಾಧ್ಯವಾಗದೇ ಹೋದರೆ ಮತ್ತೇನನ್ನು ಮತ್ಯಾರನ್ನೂ ಪ್ರೀತಿಸಲಾರೆವು.

ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ಕಿಸಿ.

Mar 13, 2024

ಕಣ್ಣು ಮಿಟುಕಿಸದೇ ನೋಡಿಸಿಕೊಳ್ಳುವ 'ಬ್ಲಿಂಕ್'


ಡಾ. ಅಶೋಕ್. ಕೆ. ಆರ್

ಟೈಂ ಟ್ರಾವೆಲ್ ಹಿನ್ನೆಲೆಯ ಕಲ್ಪನಾತ್ಮಕ - ವೈಜ್ಞಾನಿಕ (?) ಚಿತ್ರಕ್ಕೆ ಹೆಚ್ಚಿನ ಬಜೆಟ್ ಅತ್ಯವಶ್ಯವಿದೆ ಎನ್ನುವ ಸಾಮಾನ್ಯ ತಿಳುವಳಿಕೆಯನ್ನು ಸುಳ್ಳಾಗಿಸುವ ಚಿತ್ರ ಬ್ಲಿಂಕ್. ಗಟ್ಟಿ ಚಿತ್ರಕತೆಯಿದ್ದು ಉತ್ತಮ ನಿರ್ದೇಶನವಿದ್ದರೆ ಕಡಿಮೆ ಬಜೆಟ್ಟಿನಲ್ಲಿ, ಸುತ್ತಮುತ್ತಲಿರುವ ಕೆಲವೊಂದು ಜಾಗಗಳನ್ನು ಬಳಸಿಕೊಂಡೇ ಒಂದು ಉತ್ತಮ, ಉತ್ತಮವೇನು ಅತ್ಯುತ್ತಮ ಚಿತ್ರವನ್ನೇ ಜನರ ಮುಂದಿಡಬಹುದೆಂದು ಬ್ಲಿಂಕ್ ನಿರ್ದೇಶಕ ಶ್ರೀನಿಧಿ ತೋರಿಸಿಕೊಟ್ಟಿದ್ದಾರೆ.

ಅನಾದಿ ಕಾಲದಿಂದಲೂ ಆಗೊಮ್ಮೆ ಈಗೊಮ್ಮೆ ಎಲ್ಲಾ ಭಾಷೆಗಳಲ್ಲಿ ಟೈಂ ಟ್ರಾವೆಲ್ನ ಕುರಿತಾದ ಚಿತ್ರಗಳು ಮೂಡಿಬರುತ್ತಲೇ ಇವೆ. ವಾಸ್ತವದಲ್ಲಿರುವುದನ್ನು ಬಿಟ್ಟು ಹಿಂದಿನ ಮುಂದಿನ ಸಮಯಕ್ಕೆ ಹೋಗುವಾಸೆ ಮನುಷ್ಯನಿಗೆ ಇದ್ದೇ ಇದೆಯಲ್ಲ! ಲಾಜಿಕ್ಕಾಗಿ ನೋಡಿದರೆ ಟೈಂ ಟ್ರಾವೆಲ್ ಅನ್ನೋದೆ ಇಲ್ಲಾಜಿಕಲ್! ಹಂಗಾಗಿ ಟೈಂ ಟ್ರಾವೆಲ್ ಯಾವ ರೀತಿ ಮಾಡಿದರು ಅನ್ನೋದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ವಾಚ್ ಕಟ್ಟಿಕೊಂಡು, ಟೈಂ ಮೆಷೀನಿನ ಒಳಗೆ ಕುಳಿತುಕೊಂಡು, ಏನನ್ನೋ ಕುಡಿದುಹೀಗೆ ಹತ್ತಲವು ರೀತಿಯಲ್ಲಿ ಟೈಂ ಟ್ರಾವೆಲ್ಲನ್ನು ಚಿತ್ರಗಳಲ್ಲಿ ತೋರಿಸಿದ್ದಾರೆ, ಬ್ಲಿಂಕ್ ಚಿತ್ರದಲ್ಲಿ ಅಡ್ವಾನ್ಸ್ಡ್ ಲ್ಯಾಪ್ ಟಾಪಿನ ಮುಂದೆ ಕುಳಿತುಕೊಂಡು ದ್ರವ್ಯವೊಂದನ್ನು ಕಣ್ಣಿಗೆ ಎರಡು ತೊಟ್ಟು ಹಾಕಿಕೊಂಡರೆ ಸಾಕು ನಮಗೆ ಯಾವ ಹಿಂದಿನ ಕಾಲಕ್ಕೆ ಹೋಗಬೇಕೋ ಅಲ್ಲಿಗೆ ಹೋಗಿಬಿಡಬಹುದು. ಹೇ! ಅಷ್ಟು ಸುಲಭದಲ್ಲಿ ಟೈಂ ಟ್ರಾವೆಲ್ ಮಾಡಿಬಿಡಬಹುದಾ ಅಂತೆಲ್ಲ ಕೇಳಬೇಡಿ. ಟೈಂ ಟ್ರಾವೆಲ್ ಅನ್ನೋದೆ ಅಸಾಧ್ಯವಾಗಿರುವಾಗ ಅಷ್ಟು ಸುಲಭದಲ್ಲೋ ಇಷ್ಟು ಕಷ್ಟದಲ್ಲೋ ಅನ್ನೋದೆಲ್ಲ ಇಲ್ಲಾಜಿಕಲ್ ಪರಿಧಿಯೊಳಗೇ ಇರ್ತದೆ!

ಒಂದು ಇಲ್ಲಾಜಿಕಲ್ ಕತೆಯನ್ನು ಕಣ್ಣುಮಿಟುಕಿಸದೇ ನೋಡುವಂಗೆ ಮಾಡಿರುವುದು ಚಿತ್ರಕತೆ. ಥ್ರಿಲ್ಲರ್ ಚಿತ್ರವೊಂದು ಥ್ರಿಲ್ಲರ್ ಅಂಶಕ್ಕೆ ಬಿಟ್ಟು ಬೇರ್ಯಾವುದಕ್ಕೂ ಪ್ರಾಮುಖ್ಯತೆ ಕೊಡದೆ ಹೋಗುವ ಸಾಧ್ಯತೆಗಳಿರುತ್ತವೆ. ಮತ್ತದು ಒಳ್ಳೆಯದು ಕೂಡ. ಥ್ರಿಲ್ಲರ್ ಚಿತ್ರದಲ್ಲಿ ಇದ್ದಕ್ಕಿದ್ದಂತೆ ನಾಯಕ - ನಾಯಕಿ ಹಾಡನ್ನಾಡಿಬಿಡುವುದು ಚಿತ್ರದ ಓಘಕ್ಕೆ ಅಡ್ಡಿಯಾಗಿಬಿಡುವುದುಂಟು. ಹಾಡಿರಲಿ, ನಾಯಕ - ನಾಯಕಿ ಇಬ್ಬರೂ ಇದ್ದು ಅವರ ಮಧ್ಯೆ ಪ್ರೇಮಾಂಕುರವಾಗುವುದೇ ಅಭಾಸದಂತೆ ಕಾಣಿಸಿವುದುಂಟು. ಬ್ಲಿಂಕ್ ಅಲ್ಲಿ ನಾಯಕ - ನಾಯಕಿ ಇದ್ದಾರೆ, ಅವರ ನಡುವೆ ಸಾಕಾಗುವಷ್ಟು ಪ್ರೇಮವಿದೆ, ಪ್ರಸ್ತುತದ ಕತೆಯಲ್ಲಷ್ಟೇ ಅಲ್ಲ ಹಿಂದಿನ ಸಮಯಕ ಕತೆಯಲ್ಲೂ ನಾಯಕ - ನಾಯಕಿ ಇದ್ದಾರೆ, ಅವರ ನಡುವೂ ಪ್ರೇಮವಿದೆ. ಈಗಿನ ಪ್ರೇಮಕ್ಕೆ ಪೂರಕವಾಗಿ ನಾಟಕಗಳಿದ್ದರೆ, ಆಗಿನ ಪ್ರೇಮಕ್ಕೆ ಪೂರಕವಾಗಿ ಸಾಹಿತ್ಯವಿದೆ, ಕನ್ನಡ ಚಿತ್ರಗಳಲ್ಲಿ ಅತ್ಯಪರೂಪಕ್ಕೆ ಕಾಣಿಸುವ ಮಂತ್ರಮಾಂಗ್ಯದ ಮದುವೆಯಿದೆ! ಹಾಡುಗಳೂ ಚಿತ್ರದಲ್ಲಿವೆ. ಚಿತ್ರದ ಭಾಗವಾಗಿ ಹಾಡುಗಳಿವೆಯೇ ಹೊರತು ಹಾಡಿಗಾಗಿ ಚಿತ್ರಕತೆಯನ್ನು ಬದಲಿಸಿಲ್ಲ ಅನ್ನುವುದು ಸಮಾಧಾನದ ಸಂಗತಿ. ಚಿತ್ರದಲ್ಲಿ ಎಲ್ಲರ ನಟನೆಯೂ ಮೆಚ್ಚುವಂತಿದೆ. ಚಿತ್ರದುದ್ದಕ್ಕೂ ಆವರಿಸಿಕೊಂಡಿರುವ ನಾಯಕನ ನಟನೆ ಅದ್ಭುತವಾಗಿದೆ ಎಂದೇ ಹೇಳಬಹುದು.

ಸೈ ಫೈ ಚಿತ್ರ ಮಾಡಲು ಲೆಕ್ಕವಿಲ್ಲದಷ್ಟು ಹಣ ಖರ್ಚು ಮಾಡುವ ಚಿತ್ರಗಳು ಮೂಡಿಬರುತ್ತಿರುವ ಸಂದರ್ಭದಲ್ಲಿ ಕಡಿಮೆ ಬಜೆಟ್ಟಿನಲ್ಲಿ ಕೂಡ ಪ್ರೇಕ್ಷಕರನ್ನು ಕೊನೆಯ ನಿಮಿಷದವರೆಗೂ ಹಿಡಿದಿಡುವಂತಹ ಚಿತ್ರವನ್ನು ಮಾಡಬಹುದೆಂಬುದಕ್ಕೆ ಬ್ಲಿಂಕ್ ಉದಾಹರಣೆ. ಕತೆ ಚಿತ್ರಕತೆ ನಿರ್ದೇಶನ ಮುಖ್ಯ ಬಜೆಟ್ಟೊಂದೇ ಅಲ್ಲ ಎನ್ನುವುದಕ್ಕೂ ಬ್ಲಿಂಕ್ ಉದಾಹರಣೆ.

 ಚಿತ್ರ ಥಿಯೇಟರುಗಳಲ್ಲಿ ಗೆಲ್ಲುತ್ತದಾ? ಹೇಳುವುದು ಕಷ್ಟ. ಮೊದಲ ದಿನದ ಶೋಗೆ ನಾನು ಹೋಗಿದ್ದಾಗ ಚಿತ್ರತಂಡದವರು ಮತ್ತವರ ಪರಿಚಿತರನ್ನು ಬಿಟ್ಟರೆ ಇದ್ದವರು ನಾಲ್ಕು ಮತ್ತೊಂದು ಮಂದಿ ಅಷ್ಟೇ. ಎರಡು ದಿನ ಕಳೆದ ಮೇಲೆ ಚಿತ್ರ ನೋಡಲು ಹೆಚ್ಚಿನ ಜನರು ಬರುತ್ತಿದ್ದಾರೆಂದು ಸಾಮಾಜಿಕ ಜಾಲತಾಣಗಳಿಂದ ತಿಳಿಯಿತು. ಜನರು ಬರುವ ಸಾಧ್ಯತೆಯಿದ್ದರೂ ಪ್ರತಿ ವಾರ ಏಳೆಂಟು ಕನ್ನಡ ಚಿತ್ರಗಳು ತೆರೆಗೆ ಬರುತ್ತಿರುವುದನ್ನು ನೋಡಿದರೆ ಬ್ಲಿಂಕ್ ಚಿತ್ರಕ್ಕೆ ಥಿಯೇಟರುಗಳು ಸಿಗುತ್ತದಾ ಕಾದು ನೋಡಬೇಕಷ್ಟೇ.