Mar 13, 2024

ಕಣ್ಣು ಮಿಟುಕಿಸದೇ ನೋಡಿಸಿಕೊಳ್ಳುವ 'ಬ್ಲಿಂಕ್'


ಡಾ. ಅಶೋಕ್. ಕೆ. ಆರ್

ಟೈಂ ಟ್ರಾವೆಲ್ ಹಿನ್ನೆಲೆಯ ಕಲ್ಪನಾತ್ಮಕ - ವೈಜ್ಞಾನಿಕ (?) ಚಿತ್ರಕ್ಕೆ ಹೆಚ್ಚಿನ ಬಜೆಟ್ ಅತ್ಯವಶ್ಯವಿದೆ ಎನ್ನುವ ಸಾಮಾನ್ಯ ತಿಳುವಳಿಕೆಯನ್ನು ಸುಳ್ಳಾಗಿಸುವ ಚಿತ್ರ ಬ್ಲಿಂಕ್. ಗಟ್ಟಿ ಚಿತ್ರಕತೆಯಿದ್ದು ಉತ್ತಮ ನಿರ್ದೇಶನವಿದ್ದರೆ ಕಡಿಮೆ ಬಜೆಟ್ಟಿನಲ್ಲಿ, ಸುತ್ತಮುತ್ತಲಿರುವ ಕೆಲವೊಂದು ಜಾಗಗಳನ್ನು ಬಳಸಿಕೊಂಡೇ ಒಂದು ಉತ್ತಮ, ಉತ್ತಮವೇನು ಅತ್ಯುತ್ತಮ ಚಿತ್ರವನ್ನೇ ಜನರ ಮುಂದಿಡಬಹುದೆಂದು ಬ್ಲಿಂಕ್ ನಿರ್ದೇಶಕ ಶ್ರೀನಿಧಿ ತೋರಿಸಿಕೊಟ್ಟಿದ್ದಾರೆ.

ಅನಾದಿ ಕಾಲದಿಂದಲೂ ಆಗೊಮ್ಮೆ ಈಗೊಮ್ಮೆ ಎಲ್ಲಾ ಭಾಷೆಗಳಲ್ಲಿ ಟೈಂ ಟ್ರಾವೆಲ್ನ ಕುರಿತಾದ ಚಿತ್ರಗಳು ಮೂಡಿಬರುತ್ತಲೇ ಇವೆ. ವಾಸ್ತವದಲ್ಲಿರುವುದನ್ನು ಬಿಟ್ಟು ಹಿಂದಿನ ಮುಂದಿನ ಸಮಯಕ್ಕೆ ಹೋಗುವಾಸೆ ಮನುಷ್ಯನಿಗೆ ಇದ್ದೇ ಇದೆಯಲ್ಲ! ಲಾಜಿಕ್ಕಾಗಿ ನೋಡಿದರೆ ಟೈಂ ಟ್ರಾವೆಲ್ ಅನ್ನೋದೆ ಇಲ್ಲಾಜಿಕಲ್! ಹಂಗಾಗಿ ಟೈಂ ಟ್ರಾವೆಲ್ ಯಾವ ರೀತಿ ಮಾಡಿದರು ಅನ್ನೋದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ವಾಚ್ ಕಟ್ಟಿಕೊಂಡು, ಟೈಂ ಮೆಷೀನಿನ ಒಳಗೆ ಕುಳಿತುಕೊಂಡು, ಏನನ್ನೋ ಕುಡಿದುಹೀಗೆ ಹತ್ತಲವು ರೀತಿಯಲ್ಲಿ ಟೈಂ ಟ್ರಾವೆಲ್ಲನ್ನು ಚಿತ್ರಗಳಲ್ಲಿ ತೋರಿಸಿದ್ದಾರೆ, ಬ್ಲಿಂಕ್ ಚಿತ್ರದಲ್ಲಿ ಅಡ್ವಾನ್ಸ್ಡ್ ಲ್ಯಾಪ್ ಟಾಪಿನ ಮುಂದೆ ಕುಳಿತುಕೊಂಡು ದ್ರವ್ಯವೊಂದನ್ನು ಕಣ್ಣಿಗೆ ಎರಡು ತೊಟ್ಟು ಹಾಕಿಕೊಂಡರೆ ಸಾಕು ನಮಗೆ ಯಾವ ಹಿಂದಿನ ಕಾಲಕ್ಕೆ ಹೋಗಬೇಕೋ ಅಲ್ಲಿಗೆ ಹೋಗಿಬಿಡಬಹುದು. ಹೇ! ಅಷ್ಟು ಸುಲಭದಲ್ಲಿ ಟೈಂ ಟ್ರಾವೆಲ್ ಮಾಡಿಬಿಡಬಹುದಾ ಅಂತೆಲ್ಲ ಕೇಳಬೇಡಿ. ಟೈಂ ಟ್ರಾವೆಲ್ ಅನ್ನೋದೆ ಅಸಾಧ್ಯವಾಗಿರುವಾಗ ಅಷ್ಟು ಸುಲಭದಲ್ಲೋ ಇಷ್ಟು ಕಷ್ಟದಲ್ಲೋ ಅನ್ನೋದೆಲ್ಲ ಇಲ್ಲಾಜಿಕಲ್ ಪರಿಧಿಯೊಳಗೇ ಇರ್ತದೆ!

ಒಂದು ಇಲ್ಲಾಜಿಕಲ್ ಕತೆಯನ್ನು ಕಣ್ಣುಮಿಟುಕಿಸದೇ ನೋಡುವಂಗೆ ಮಾಡಿರುವುದು ಚಿತ್ರಕತೆ. ಥ್ರಿಲ್ಲರ್ ಚಿತ್ರವೊಂದು ಥ್ರಿಲ್ಲರ್ ಅಂಶಕ್ಕೆ ಬಿಟ್ಟು ಬೇರ್ಯಾವುದಕ್ಕೂ ಪ್ರಾಮುಖ್ಯತೆ ಕೊಡದೆ ಹೋಗುವ ಸಾಧ್ಯತೆಗಳಿರುತ್ತವೆ. ಮತ್ತದು ಒಳ್ಳೆಯದು ಕೂಡ. ಥ್ರಿಲ್ಲರ್ ಚಿತ್ರದಲ್ಲಿ ಇದ್ದಕ್ಕಿದ್ದಂತೆ ನಾಯಕ - ನಾಯಕಿ ಹಾಡನ್ನಾಡಿಬಿಡುವುದು ಚಿತ್ರದ ಓಘಕ್ಕೆ ಅಡ್ಡಿಯಾಗಿಬಿಡುವುದುಂಟು. ಹಾಡಿರಲಿ, ನಾಯಕ - ನಾಯಕಿ ಇಬ್ಬರೂ ಇದ್ದು ಅವರ ಮಧ್ಯೆ ಪ್ರೇಮಾಂಕುರವಾಗುವುದೇ ಅಭಾಸದಂತೆ ಕಾಣಿಸಿವುದುಂಟು. ಬ್ಲಿಂಕ್ ಅಲ್ಲಿ ನಾಯಕ - ನಾಯಕಿ ಇದ್ದಾರೆ, ಅವರ ನಡುವೆ ಸಾಕಾಗುವಷ್ಟು ಪ್ರೇಮವಿದೆ, ಪ್ರಸ್ತುತದ ಕತೆಯಲ್ಲಷ್ಟೇ ಅಲ್ಲ ಹಿಂದಿನ ಸಮಯಕ ಕತೆಯಲ್ಲೂ ನಾಯಕ - ನಾಯಕಿ ಇದ್ದಾರೆ, ಅವರ ನಡುವೂ ಪ್ರೇಮವಿದೆ. ಈಗಿನ ಪ್ರೇಮಕ್ಕೆ ಪೂರಕವಾಗಿ ನಾಟಕಗಳಿದ್ದರೆ, ಆಗಿನ ಪ್ರೇಮಕ್ಕೆ ಪೂರಕವಾಗಿ ಸಾಹಿತ್ಯವಿದೆ, ಕನ್ನಡ ಚಿತ್ರಗಳಲ್ಲಿ ಅತ್ಯಪರೂಪಕ್ಕೆ ಕಾಣಿಸುವ ಮಂತ್ರಮಾಂಗ್ಯದ ಮದುವೆಯಿದೆ! ಹಾಡುಗಳೂ ಚಿತ್ರದಲ್ಲಿವೆ. ಚಿತ್ರದ ಭಾಗವಾಗಿ ಹಾಡುಗಳಿವೆಯೇ ಹೊರತು ಹಾಡಿಗಾಗಿ ಚಿತ್ರಕತೆಯನ್ನು ಬದಲಿಸಿಲ್ಲ ಅನ್ನುವುದು ಸಮಾಧಾನದ ಸಂಗತಿ. ಚಿತ್ರದಲ್ಲಿ ಎಲ್ಲರ ನಟನೆಯೂ ಮೆಚ್ಚುವಂತಿದೆ. ಚಿತ್ರದುದ್ದಕ್ಕೂ ಆವರಿಸಿಕೊಂಡಿರುವ ನಾಯಕನ ನಟನೆ ಅದ್ಭುತವಾಗಿದೆ ಎಂದೇ ಹೇಳಬಹುದು.

ಸೈ ಫೈ ಚಿತ್ರ ಮಾಡಲು ಲೆಕ್ಕವಿಲ್ಲದಷ್ಟು ಹಣ ಖರ್ಚು ಮಾಡುವ ಚಿತ್ರಗಳು ಮೂಡಿಬರುತ್ತಿರುವ ಸಂದರ್ಭದಲ್ಲಿ ಕಡಿಮೆ ಬಜೆಟ್ಟಿನಲ್ಲಿ ಕೂಡ ಪ್ರೇಕ್ಷಕರನ್ನು ಕೊನೆಯ ನಿಮಿಷದವರೆಗೂ ಹಿಡಿದಿಡುವಂತಹ ಚಿತ್ರವನ್ನು ಮಾಡಬಹುದೆಂಬುದಕ್ಕೆ ಬ್ಲಿಂಕ್ ಉದಾಹರಣೆ. ಕತೆ ಚಿತ್ರಕತೆ ನಿರ್ದೇಶನ ಮುಖ್ಯ ಬಜೆಟ್ಟೊಂದೇ ಅಲ್ಲ ಎನ್ನುವುದಕ್ಕೂ ಬ್ಲಿಂಕ್ ಉದಾಹರಣೆ.

 ಚಿತ್ರ ಥಿಯೇಟರುಗಳಲ್ಲಿ ಗೆಲ್ಲುತ್ತದಾ? ಹೇಳುವುದು ಕಷ್ಟ. ಮೊದಲ ದಿನದ ಶೋಗೆ ನಾನು ಹೋಗಿದ್ದಾಗ ಚಿತ್ರತಂಡದವರು ಮತ್ತವರ ಪರಿಚಿತರನ್ನು ಬಿಟ್ಟರೆ ಇದ್ದವರು ನಾಲ್ಕು ಮತ್ತೊಂದು ಮಂದಿ ಅಷ್ಟೇ. ಎರಡು ದಿನ ಕಳೆದ ಮೇಲೆ ಚಿತ್ರ ನೋಡಲು ಹೆಚ್ಚಿನ ಜನರು ಬರುತ್ತಿದ್ದಾರೆಂದು ಸಾಮಾಜಿಕ ಜಾಲತಾಣಗಳಿಂದ ತಿಳಿಯಿತು. ಜನರು ಬರುವ ಸಾಧ್ಯತೆಯಿದ್ದರೂ ಪ್ರತಿ ವಾರ ಏಳೆಂಟು ಕನ್ನಡ ಚಿತ್ರಗಳು ತೆರೆಗೆ ಬರುತ್ತಿರುವುದನ್ನು ನೋಡಿದರೆ ಬ್ಲಿಂಕ್ ಚಿತ್ರಕ್ಕೆ ಥಿಯೇಟರುಗಳು ಸಿಗುತ್ತದಾ ಕಾದು ನೋಡಬೇಕಷ್ಟೇ.

Apr 18, 2023

ಕಾಡಿನ ನ್ಯಾಯಕ್ಕೆ ವಿರುದ್ಧವಾದ "ದಿ ಎಲಿಫೆಂಟ್ ವಿಸ್ಪರರ್ಸ್"

ಚಿತ್ರಮೂಲ: ಎಕನಾಮಿಕ್ ಟೈಮ್ಸ್
ಡಾ. ಅಶೋಕ್. ಕೆ. ಆರ್

ಕಾಡ ನಡುವಿನಲ್ಲಿ ಮರಿಯಾನೆಯೊಂದು ಹಿಂಡಿನಿಂದ ಬೇರ್ಪಟ್ಟು ಒಂಟಿಯಾಗುತ್ತದೆ. ಆಹಾರ ಹುಡುಕುವ, ನೀರನ್ನರಸುವ ಗುಣಗಳನ್ನು ಹಿಂಡಿನ ಹಿರಿಯರಿಂದ ಇನ್ನೂ ಕಲಿಯದ ಮರಿಯಾನೆಗೆ ಜೀವವುಳಿಸಿಕೊಳ್ಳುವುದು ಕಷ್ಟದ ಸಂಗತಿಯೇ ಸರಿ. ಮರಿಯಾನೆಯ ಕೂಗಾಟ ಅರಣ್ಯ ಇಲಾಖೆಯ ಕಿವಿಗೆ ತಲುಪುತ್ತದೆ. ಕಾಡಿನ ನಿಯಮಗಳಿಂದ ರಕ್ಷಿಸಲ್ಪಟ್ಟ ಈ ಮರಿಯಾನೆಯನ್ನು ಸಾಕುವ ಜವಾಬ್ದಾರಿಯನ್ನು ಇಲಾಖೆಯ ಕೆಲಸಗಾರರಾದ, ಮೂಲತಃ ಆದಿವಾಸಿಗಳಾದ ಇಬ್ಬರಿಗೆ ವಹಿಸಲಾಗುತ್ತದೆ. ಆ ಈರ್ವರ ನಡುವಿನ ವೈಯಕ್ತಿಕ ಸಂಬಂಧ, ಆನೆಯನ್ನು ಸಾಕಿ ಸಲಹುವ ಪರಿ, ಆನೆ ಜೊತೆಗಿನ ಮಮಕಾರದ ಸಂಬಂಧವೇ "ದಿ ಎಲಿಫೆಂಟ್ ವಿಸ್ಪರರ್ಸ್" ಸಾಕ್ಷ್ಯಚಿತ್ರದ ಹೂರಣ. 

ಆಸ್ಕರ್ರಿಗೆ ಭಾರತದಿಂದ ಕಳುಹಿಸಲ್ಪಟ್ಟ ಸಾಕ್ಷ್ಯಚಿತ್ರಕ್ಕೆ ಅತ್ಯುತ್ತಮವೆಂಬ ಪ್ರಶಸ್ತಿಯೂ ದೊರೆತು ಖ್ಯಾತಿಗಳಿಸಿದ ಚಿತ್ರ ನೆಟ್ ಫ್ಲಿಕ್ಸ್ ನಲ್ಲಿ ನೋಡಲು ಲಭ್ಯವಿದೆ. ಆಸ್ಕರ್ ದೊರೆಯುವ ಮುಂಚೆ ಈ ಸಾಕ್ಷ್ಯಚಿತ್ರವನ್ನು ವೀಕ್ಷಿಸಿದ್ದೆ. ನೋಡಿದ ಯಾರಿಗಾದರೂ ಕಣ್ಣಂಚಿನಲ್ಲಿ ನೀರು ತರಿಸುವ ಚಿತ್ರವಿದು. ನಾನೂ ಅದಕ್ಕೆ ಹೊರತಲ್ಲ.

ಚಿತ್ರ ಮೆಚ್ಚುಗೆಯಾದರೂ, ಚಿತ್ರದಲ್ಲಿನ ನೈಜತೆ ಇಷ್ಟವಾದರೂ, ಈ ಚಿತ್ರಕ್ಕೆ ಆಸ್ಕರ್ ದೊರೆತಿರುವುದಕ್ಕೆ ಖುಷಿಯಾದರೂ, ಮನಸ್ಸಿನ ಮೂಲೆಯಲ್ಲಿ ಕಾಡಿನ ಸಹಜ ನ್ಯಾಯಕ್ಕೆ ವಿರುದ್ಧವಾದ ಸಂದೇಶ ನೀಡುವ ಚಿತ್ರವಿದಲ್ಲವೇ, ಅರಣ್ಯದ ಪರಿಸರದಲ್ಲಿ ಮಾನವನ ಹಸ್ತಕ್ಷೇಪಕ್ಕೆ ಅಧಿಕೃತತೆಯ ಮುದ್ರೆಯನ್ನೊತ್ತುವ ಚಿತ್ರವಿದಲ್ಲವೇ ಎನ್ನಿಸಿದ್ದು ಹೌದು. ನಮ್ಮ ಅರಣ್ಯ ಉಳಿಸುವ ಹಪಾಹಪಿ ಹೇಗೆ ದೊಡ್ಡ 'ಸುಂದರ' ಪ್ರಾಣಿಗಳ ಕುರಿತಾಗಷ್ಟೇ ಇದೆ ಎನ್ನುವುದರ ಸೂಚಕ ಈ ಸಾಕ್ಷ್ಯಚಿತ್ರ.

ಅರಣ್ಯದಲ್ಲಿ ಹುಲಿ ಆನೆ ಕಾಟಿಯಂತಹ ಬೃಹತ್ ಪ್ರಾಣಿಗಳು ಸಹಜ ಕಾರಣಗಳಿಂದ ಸಾವನ್ನಪ್ಪಿದಾಗ ಆ ಸತ್ತ ಪ್ರಾಣಿಯ ಕಳೇಬರವನ್ನು ಸಂಪ್ರದಾಯಬದ್ಧವಾಗಿ (ಮನುಷ್ಯನ ಸಂಪ್ರದಾಯಗಳು ಎಂದು ಹೇಳುವ ಅವಶ್ಯಕತೆಯಿಲ್ಲ ಎಂದು ಭಾವಿಸುತ್ತೇನೆ!) ವಿಲೇವಾರಿ ಮಾಡುವ ಮೂಲಕ ಕಳೆಬರದ ಮೇಲೆ ಅವಲಂಬಿತವಾಗಿರುವ ಎಷ್ಟೋ ಪ್ರಾಣಿ ಪಕ್ಷಿಗಳ, ಚಿಕ್ಕ ಪುಟ್ಟ ಕ್ರಿಮಿಕೀಟಗಳ, ಫಂಗಸ್ಸುಗಳ ಆಹಾರವನ್ನು ನಾವು ಕಸಿದುಕೊಳ್ಳುತ್ತಿದ್ದೇವೆ. ಈ ಸಂಪ್ರದಾಯ ಈಗಲೂ ಚಾಲ್ತಿಯಲ್ಲಿದೆಯಾದರೂ ಕರ್ನಾಟಕದ ಅರಣ್ಯ ಇಲಾಖೆ ಇತ್ತೀಚೆಗೆ ಕಾಡಿನಲ್ಲಿ ಸತ್ತ ಪ್ರಾಣಿಗಳನ್ನು (ಹುಲಿಯೊಂದನ್ನು ಹೊರತುಪಡಿಸಿ) ಅಂತ್ಯಸಂಸ್ಕಾರ ಮಾಡದೆ ಕಾಡಿನಲ್ಲೇ ಬಿಡುವ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕಾಡಿನ ಪರಿಸರದ ನ್ಯಾಯವನ್ನು ತನ್ಮೂಲಕ ಅರಣ್ಯ ಇಲಾಖೆ ಕಾಪಿಡಲು ಪ್ರಯತ್ನಿಸಿದೆ.

ಈ ಹಿನ್ನೆಲೆಯಲ್ಲಿ ನೋಡಿದಾಗ ಕಾಡಿನಲ್ಲಿ ಹತ್ತಲವು ಕಾರಣಗಳಿಂದ ಬೇರ್ಪಟ್ಟ ಮರಿಯಾನೆಯನ್ನು ಸಾಕಿ ಸಲಹುವ ನಿರ್ಧಾರವೂ ಕಾಡಿನ ನ್ಯಾಯಕ್ಕೆ ವಿರುದ್ಧವಾದುದಲ್ಲವೇ? ಆಹಾರ ಹುಡುಕಲಾಗದೇ, ನೀರನ್ನರಸಲಾಗದೆ ಮರಿಯಾನೆಯು ಸಾವನ್ನಪ್ಪಿ ಕಳೇಬರವನ್ನು ಆಧರಿಸಿದ ಪ್ರಾಣಿಗಳಿಗೆ ಆಹಾರವಾಗುತ್ತಿತ್ತು. ಅಥವಾ ಕಾಡಿನ ನ್ಯಾಯಕ್ಕೆ ಸವಾಲೊಡ್ಡಿ ಸ್ವಸಾಮರ್ಥ್ಯದಿಂದ ಜೀವ ಉಳಿಸಿಕೊಂಡು, ತನ್ನ ಜೀವವುಳಿಸಲು ನೆರವಾದ ವಂಶವಾಹಿನಿಯು ಮುಂದಿನ ಜನಾಂಗಕ್ಕೆ ವರ್ಗವಾಗಿ ಅತ್ಯುತ್ತಮ ತಳಿಯ ಆನೆಯ ಕುಟುಂಬವೊಂದು ಕಾಡಿನಲ್ಲಿ ಅರಳುತ್ತಿತ್ತು. ಇವೆರಡೂ ಸಾಧ್ಯತೆಗಳು ಮಾನವನ ಹಸ್ತಕ್ಷೇಪದಿಂದ ಇಲ್ಲವಾಗಿದೆ. 

ಹೌದು, ಆನೆಗಳನ್ನು ಅರಣ ಇಲಾಖೆ ಇವತ್ತಿಗೂ ಸಾಕುವುದಕ್ಕೆ ಸಾಕಷ್ಟು ಕಾರಣಗಳಿವೆ. ಕಾಡಂಚಿನ ಗ್ರಾಮಗಳಿಗೆ ಲಗ್ಗೆ ಇಡುವ ಕಾಡಾನೆಗಳನ್ನು ಓಡಿಸಲು, ಮರಮಟ್ಟುಗಳನ್ನು ಕಾಡೊಳಗಿಂದ ರಸ್ತೆ ಬದಿಗೆ ಸಾಗಿಸಲು, ದೇವಸ್ಥಾನಗಳಲ್ಲಿ ಭಕ್ತರಿಗೆ ಆಶೀರ್ವಾದ ಮಾಡಲು, ದಸರಾದಂತಹ ಹಬ್ಬಗಳಲ್ಲಿ ನಮ್ಮ ನೆಚ್ಚಿನ ದೇವರುಗಳನ್ನು ಹೊತ್ತು ನಮ್ಮ ಕಣ್ಮನ ತಣಿಸಲು, ಉಡುಗೊರೆಯ ರೂಪದಲ್ಲಿ ಕೊಡಲು ನಮಗೆ ಆನೆಗಳು ಬೇಕೇ ಬೇಕು. ಹಿಂದಿನ ಕಾಲದಲ್ಲಿ ಆನೆಗಳನ್ನು ಯುದ್ಧಕ್ಕೆ, ಮನುಷ್ಯರ ಯುದ್ಧಕ್ಕೆ ಬಳಸಲಾಗುತ್ತಿತ್ತು. ಮನುಷ್ಯರಿಗೂ ಆನೆಗೂ ಶತಮಾನಗಳಿಂದ ಅವಿನಾಭಾವ ಸಂಬಂಧ ಇರುವುದು ಹೌದಾದರೂ ಇವತ್ತಿಗೂ ಆನೆ ಕಾಡು ಪ್ರಾಣಿಯ ಪಟ್ಟಿಯಲ್ಲಿ ಬರುತ್ತದೆಯೇ ಹೊರತು ಸಾಕುಪ್ರಾಣಿಯ ಪಟ್ಟಿಯಲ್ಲಲ್ಲ.

ಸಾಕ್ಷ್ಯಚಿತ್ರ ನೋಡಿ ಮನುಷ್ಯ ತನ್ನ " ಮಾನವೀಯ" ಗುಣವನ್ನು ಕಾಡುಪ್ರಾಣಿಯ ಮೇಲೆ ತೋರುವ ಪರಿಯನ್ನು ಕಂಡು ಕಣ್ಣು ತೇವಗೊಳಿಸಿಕೊಳ್ಳುವಾಗ ಇದು ಅರಣ್ಯ ರಕ್ಷಣೆಯ ಮೂಲೋದ್ದೇಶಕ್ಕೆ ವಿರುದ್ಧವಾದ ಸಂದೇಶ ಕೊಡುವ ಚಿತ್ರ ಎಂಬರಿವಾದರೂ ನಮ್ಮಲ್ಲೊಮ್ಮೆ ಮೂಡಬೇಕಿದೆ.

Aug 19, 2022

ಎಲ್ಲಕಿಂತ ಜೀವ ಮುಖ್ಯ…

-       ಡಾ. ಅಶೋಕ್.‌ ಕೆ. ಆರ್

ಪೂರ್ವಿಕಾಳ ಹೆಸರಿನಿಂದ (ಹೆಸರು ಬದಲಿಸಲಾಗಿದೆ) ಫೇಸ್ಬುಕ್ಕಿನಲ್ಲಿ ಸ್ನೇಹದ ಕೋರಿಕೆ ಬಂದಿತ್ತು. ನಲವತ್ತು ಚಿಲ್ಲರೆ ಮಂದಿ ಪರಸ್ಪರ ಸ್ನೇಹಿತರ ಪಟ್ಟಿಯಲ್ಲಿದ್ದರು. ಮುಂಚಿನಂತೆ ಬಂದೆಲ್ಲ ಸ್ನೇಹಿತರ ಕೋರಿಕೆಯನ್ನು ಒಪ್ಪಿಕೊಳ್ಳುತ್ತಿರಲಿಲ್ಲವಾದ್ದರಿಂದ ಪೂರ್ವಿಕಾಳ ಪ್ರೊಫೈಲಿನ ಮೇಲೆ ಕ್ಲಿಕ್ಕಿಸಿದೆ. ಸುಳ್ಯದ ವಿದ್ಯಾರ್ಥಿನಿಯ ಫೋಟೋ ಇದ್ದ ಪ್ರೊಫೈಲದು. ಸುಳ್ಯದ ಹಳೆಯ ವಿದ್ಯಾರ್ಥಿಗಳೇ ಪರಸ್ಪರ ಸ್ನೇಹಿತರ ಪಟ್ಟಿಯಲ್ಲಿದ್ದರು. ಸ್ನೇಹದ ಕೋರಿಕೆಯನ್ನು ಒಪ್ಪಿಕೊಂಡ ದಿನದ ನಂತರ ಪೂರ್ವಿಕಾಳ ಪ್ರೊಫೈಲಿನಿಂದ ಮೆಸೆಂಜರ್ನಲ್ಲಿ ʻಹಾಯ್ʼ ಎಂದೊಂದು ಮೆಸೇಜು ಬಂದಿತ್ತು. ಮೆಸೇಜುಗಳನ್ನು ಆಗಾಗ್ಯೆ ನೋಡುವ ಅಭ್ಯಾಸವಿಲ್ಲದ ಕಾರಣ ಒಂದಷ್ಟು ಸಮಯದ ನಂತರ ʻಹಾಯ್ʼ ಎಂದು ಉತ್ತರಿಸಿ ʻಹೇಗಿದ್ದೀಯಪ್ಪ?ʼ ಎಂದು ಇಂಗ್ಲೀಷಿನಲ್ಲಿ ಕೇಳಿದೆ. ಪೂರ್ವಿಕಾ ಕೇರಳದ ಹುಡುಗಿ ಎಂದು ನೆನಪಿತ್ತು. ʻನಾನು ಚೆನ್ನಾಗಿದ್ದೀನಿ. ನೀವು ಹೇಗಿದ್ದೀರಿ?ʼ ಎಂದು ಕೇಳಿದವಳು ನನ್ನ ಮರುತ್ತರಕ್ಕೂ ಕಾಯದೆ ನಿಮ್ಮ ವಾಟ್ಸಪ್ನಂಬರ್ಕಳುಹಿಸಿ ಅಲ್ಲಿಯೇ ಚಾಟ್ಮಾಡುವ ಎಂದು ಕೇಳಿದಳು. ಓಹ್!‌ ಇದು ಅಸಲಿ ಖಾತೆ ಇರಲಿಕ್ಕಿಲ್ಲ ಎಂದರಿವಾಯಿತಾಗ. ಹಳೆಯ ವಿದ್ಯಾರ್ಥಿಗಳು ಯಾವುದಾದರೂ ವಿಷಯದ ಬಗ್ಗೆ ಮಾಹಿತಿ ಕೇಳಲು, ಅಥವಾ ಬಹಳ ವರುಷಗಳ ನಂತರ ಮಾತನಾಡಲು ಫೋನ್ನಂಬರ್ಕೇಳುವುದು ಅಪರೂಪವೇನಲ್ಲ. ಆದರೆ ಚಾಟ್ಮಾಡಲು ವಾಟ್ಸಪ್ನಂಬರ್ಕೇಳುವುದು ಸಾಮಾನ್ಯ ಸಂಗತಿಯೇನಲ್ಲ. ಪರಿಚಿತರ ಫೋಟೋ ಬಳಸಿಕೊಂಡು ನಕಲಿ ಖಾತೆ ಸೃಷ್ಟಿಸಿ ಸ್ನೇಹದ ಕೋರಿಕೆ ಕಳುಹಿಸಿ ಮೆಸೆಂಜರ್ನಲ್ಲಿ ʻತುರ್ತು ಅವಶ್ಯಕತೆ ಇದೆ. ಒಂದೈದು ಸಾವಿರ ಗೂಗಲ್ಪೇ ಮಾಡಿʼ ಎಂದು ಬೇಡಿಕೆ ಇಡುವ ಸ್ಕ್ಯಾಮು ಹೆಚ್ಚಿದೆ. ಇಲ್ಲಿ ಹಣದ ಬೇಡಿಕೆಯೂ ಇಲ್ಲದೆ ವಾಟ್ಸಪ್ನಂಬರ್ಕೇಳುತ್ತಿದ್ದಾರಲ್ಲಾ? ಇದ್ಯಾವ ಹೊಸ ಮೋಸದ ಯೋಜನೆಯಿರಬಹುದು ಎಂಬ ಕುತೂಹಲವುಂಟಾಯಿತು. ನವಮೋಸದ ಪರಿ ಹೇಗಿರಬಹುದೆಂದು ತಿಳಿಯಬಯಸುವ ಆಸಕ್ತಿಯಿಂದ ವಾಟ್ಸಪ್ನಂಬರ್ಅನ್ನು ಕಳುಹಿಸಿದೆ. ಮೊದಲ ದಿನ ʻಹಾಯ್ʼʻಬಾಯ್ʼ ಮೆಸೇಜಿವೆ ಸಂವಹನ ಸೀಮಿತವಾಗಿತ್ತು. ಮಾರನೆಯ ದಿನ ಮತ್ತೇನೂ ಹೆಚ್ಚಿನ ಸಂವಾದಗಳಿಲ್ಲದೆ ಸೀದಾ ಸಾದಾ ವೀಡಿಯೋ ಕರೆ ಮಾಡುವ ಬೇಡಿಕೆ ಅತ್ತಲಿಂದ ಬಂತು. ಇವರ ಮೋಸದ ಹೊಸ ಯೋಜನೆಯ ರೂಪುರೇಷೆ ಸೂಕ್ಷ್ಮವಾಗಿ ಅರಿವಾಯಿತಾದರೂ ಪೂರ್ಣ ಪ್ರಮಾಣದಲ್ಲಿ ತಿಳಿದುಕೊಳ್ಳುವ ಉತ್ಸಾಹವಿನ್ನೂ ಕಡಿಮೆಯಾಗಿರಲಿಲ್ಲ! ʻವೀಡಿಯೋ ಕರೆ ಯಾಕೆ?ʼ ಎಂದು ಮುಗ್ಧನಂತೆ ಕೇಳಿದೆ. ಮೆಸೇಜುಗಳಲ್ಲಿ ನಾನಿನ್ನೂ ಅತ್ತಲಿನವರನ್ನು ನನ್ನ ಹಳೆಯ ವಿದ್ಯಾರ್ಥಿನಿಯೆಂದೇ ತಿಳಿದುಕೊಂಡಿರುವಂತೆ ನಂಬಿಸಿದೆ. ʻನಾನೊಬ್ಳೇ ಇದೀನಿ. ವೀಡಿಯೋ ಕರೆ ಮಾಡಿ. ಬಾತ್ರೂಮಿಗೆ ಹೋಗಿ ಕಾಲ್ಮಾಡಿʼ ಎಂದು ನೇರಾನೇರ ಅಶ್ಲೀಲ ವೀಡಿಯೋ ಕರೆಗೆ ಬೇಡಿಕೆ ಬಂತು! ʻಸಾರಿ. ನನಗೆ ಆಸಕ್ತಿಯಿಲ್ಲʼ ಎಂದು ಟೈಪಿಸಿದ್ದನ್ನು ಕಳುಹಿಸುವುದಕ್ಕೆ ಮೊದಲೆಯೇ ವೀಡಿಯೋ ಕರೆ ಬಂದಿತು! ಕಾಲೇಜಿಗೆ ಹೊರಡುತ್ತಿದ್ದವನು ಇವರ ಆಟ ಪೂರ್ತಿಯೇ ನೋಡಿಬಿಡುವ ಎಂದು ಕರೆ ಸ್ವೀಕರಿಸಿದೆ. ಅತ್ತ ಕಡೆ ಹುಡುಗಿಯೊಬ್ಬಳಿದ್ದಳು. ಖಂಡಿತಾ ಸುಳ್ಯದ ವಿದ್ಯಾರ್ಥಿನಿ ಪೂರ್ವಿಕಾಳಲ್ಲ ಅವಳು. ಅತ್ತ ಕಡೆ ಹುಡುಗಿ ಇದ್ದಿದ್ದೂ ಅನುಮಾನವೇ, ಕಂಪ್ಯೂಟರಿನಲ್ಲಿದ್ದ ಹುಡುಗಿಯ ವೀಡಿಯೋ ಒಂದನ್ನು ಬಳಸಿಕೊಂಡಂತನ್ನಿಸಿತು. ಆರೇಳು ಸೆಕೆಂಡುಗಳಲ್ಲಿ ಕರೆ ತುಂಡಾಯಿತು. ʻಬಾತ್ರೂಮಿಗೆ ಹೋಗಿ. ಸೆಕ್ಸ್ವೀಡಿಯೋ ಕರೆ ಮಾಡುವʼ ಎಂದು ಬಂದ ಮೆಸೇಜಿಗೆ ಈಗಾಗಲೇ ಟೈಪಿಸಿದ್ದ ʻಸಾರಿ. ನನಗೆ ಆಸಕ್ತಿಯಿಲ್ಲʼ ಎಂಬ ಮೆಸೇಜನ್ನು ಕಳುಹಿಸಿ ಕಾಲೇಜಿಗೆ ಹೊರಟೆ. ಸಂಜೆ ವಾಟ್ಸಪ್ಪಿನಲ್ಲಿ ಪುಟ್ಟ ವೀಡಿಯೋ ಒಂದನ್ನು ಕಳುಹಿಸಿದ್ದರು. ಆರು ಸೆಕೆಂಡಿನ ನನ್ನ ಬೆಳಗಿನ ವೀಡಿಯೋ ಕರೆ ರೆಕಾರ್ಡು ಮುಗಿದ ನಂತರ ಬಚ್ಚಲು ಮನೆಯಲ್ಲಿ ಪುರುಷನೊಬ್ಬ ಜನನಾಂಗ ತೋರಿಸಿರುವ ಮತ್ತೊಂದು ತುಣುಕನ್ನು ಸೇರಿಸಿ ಮಾಡಲಾಗಿದ್ದ ವೀಡಿಯೋ ಅದು. ವೀಡಿಯೋ ಹಿಂದೆಯೇ ಒಂದಷ್ಟು ಸ್ಕ್ರೀನ್ಶಾಟುಗಳನ್ನು ಕಳಿಸಿದರು. ಫೇಸ್ಬುಕ್ಕಿನ ನನ್ನ ಪ್ರೊಫೈಲಿನಲ್ಲಿದ್ದ ನನ್ನ ನೆಂಟರಿಷ್ಟರ ಕಸಿನ್ಸುಗಳ ಪಟ್ಟಿ ಅದು. ನಾವು ಕೇಳಿದಷ್ಟು ಹಣ ನೀಡದಿದ್ದರೆ ಈ ಪಟ್ಟಿಯಲ್ಲಿರುವ ನಿಮ್ಮ ಕಸಿನ್ಸುಗಳಿಗೆಲ್ಲ ಈ ವೀಡಿಯೋ ಕಳಿಸುತ್ತೀವಿ. ನಿಮ್ಮ ಮಾನ ಮರ್ಯಾದೆ ಹೋಗ್ತದೆ, ಯೋಚನೆ ಮಾಡಿ. ತುರ್ತು ಪ್ರತಿಕ್ರಿಯಿಸಿ ಎಂಬ ಮೆಸೇಜು ಹಿಂದಿ ಭಾಷೆಯಲ್ಲಿ ಬಂದಿತ್ತು. ʻಇದು ನನ್ನ ವೀಡಿಯೋನೆ ಅಲ್ಲ. ಯಾರಿಗಾದರೂ ಕಳಿಸಿಕೊಳ್ಳಿʼ ಎಂದುತ್ತರಿಸಿದೆ. ಕರೆ ಬಂತು. ಸ್ವೀಕರಿಸಿದೆ. ಜೋರು ಹಿಂದಿಯಲ್ಲಿ ಹಣದ ಬೇಡಿಕೆ ಇರಿಸಿದರು. ಪೋಲೀಸರಿಗೆ ದೂರು ನೀಡುವುದಾಗಿ ಬೆದರಿಸಿದೆ. ಯಾವ ಪೋಲೀಸರ ಬಳಿಯಾದರೂ ಹೋಗಿ. ನಮಗೇನೂ ಹೆದರಿಕೆ ಇಲ್ಲ ಎಂದರು. ಯಾರಿಗಾದರೂ ವೀಡಿಯೋ ಕಳಿಸಿಕೊಳ್ಳಿ, ನಿಮ್ಮ ಹಣೆಬರಹ ಎಂದೇಳಿ ಫೋನಿಟ್ಟೆ. ಪಟ್ಟಿಯಲ್ಲಿದ್ದ ಕೆಲವು ಕಸಿನ್ಸುಗಳಿಗೆ ಮೆಸೆಂಜರ್ನಲ್ಲಿ ವೀಡಿಯೋ ಕಳುಹಿಸಿದ ಸ್ಕ್ರೀನ್ಶಾಟುಗಳನ್ನು ತೆಗೆದು ನನಗೆ ಕಳುಹಿಸಿ ʻಇನ್ನೂ ಅವರು ವೀಡಿಯೋ ನೋಡಿಲ್ಲ. ದುಡ್ಡು ಕಳುಹಿಸಿದರೆ ವೀಡಿಯೋ ಡಿಲೀಟ್ಮಾಡ್ತೀನಿʼ ಎಂದವನಿಗೆ ಉತ್ತರಿಸುವ ಗೋಜಿಗೆ ಹೋಗದೆ ಫೇಸ್ಬುಕ್ಕಿನಲ್ಲಿ ಘಟನೆ ಕುರಿತಾಗಿ ವಿವರವಾಗಿ ಬರೆದು ʻಪೂರ್ವಿಕಾʼಳ ನಕಲಿ ಖಾತೆಯನ್ನು ಟ್ಯಾಗ್ಮಾಡಿ ಫೋನ್ನಂಬರ್ಹಾಕಿ ʻಈ ರೀತಿಯೂ ಮೋಸ ಮಾಡುತ್ತಿದ್ದಾರೆ. ಎಚ್ಚರಿಕೆʼ ಎಂದು ಪೋಸ್ಟ್ಮಾಡಿದೆ. ಒಂದಷ್ಟು ಸ್ನೇಹಿತರು, ವಿದ್ಯಾರ್ಥಿಗಳು ಅವರಿಗೂ ಈ ರೀತಿ ವೀಡಿಯೋ ಕಾಲ್ಮಾಡುವಂತೆ ಮೆಸೇಜುಗಳು ಬಂದಿದ್ದರ ಬಗ್ಗೆ ತಿಳಿಸಿದರು. ಇನ್ನೊಂದಷ್ಟು ಜನರು ತಮ್ಮ ಪರಿಚಯಸ್ಥರು ಈ ರೀತಿಯ ವಂಚನೆಗೆ ಸಿಕ್ಕಿ ಫೇಸ್ಬುಕ್ಕನ್ನೇ ತೊರೆದ ಬಗ್ಗೆ ಮೆಸೇಜು ಮಾಡಿ ತಿಳಿಸಿದರು. ಇವ ಬಡಪಟ್ಟಿಗೆ ಸಿಗುವ ಆಳಲ್ಲ ಎಂದರಿವಾಗಿ ಪೂರ್ವಿಕಾಳ ನಕಲಿ ಖಾತೆಯವ ನನ್ನನ್ನು ಫೇಸ್ಬುಕ್ಕಿನಲ್ಲಿ, ವಾಟ್ಸಪ್ಪಿನಲ್ಲಿ ಬ್ಲಾಕ್ಮಾಡಿಬಿಟ್ಟ.

* * *

Image source: Deccan herald

ಕ್ಲಾಸೊಂದನ್ನು ಮುಗಿಸಿ ರೂಮಿನ ಬಳಿ ಬಂದಾಗ ತಿಳಿದ ವಿಷಯ ಆಘಾತ ಮೂಡಿಸಿತು, ಬೇಸರ ತರಿಸಿತು. ಎರಡು ಮೂರು ತಿಂಗಳ ಹಿಂದಷ್ಟೇ ಇಂಟರ್ನ್ಶಿಪ್ಮುಗಿಸಿ ನಮ್ಮ ಆಸ್ಪತ್ರೆಯಲ್ಲೇ ಕಿರಿಯ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಅಜಯ್‌ (ಹೆಸರು ಬದಲಿಸಲಾಗಿದೆ) ಎಂಬ ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದ. ಕೆಲವೇ ತಿಂಗಳ ಹಿಂದೆ ಕೊರೋನಾ ನೆಪದಲ್ಲಿ ಲಾಕ್ಡೌನ್ಘೋಷಣೆಯಾದಾಗ ತಂದೆಯೊಂದಿಗೆ ಊರಿಗೆ ಪಯಣಿಸುತ್ತಿದ್ದ ಮೊದಲ ವರುಷದ ವಿದ್ಯಾರ್ಥಿಯೊಬ್ಬ ಅಪಘಾತದಲ್ಲಿ ಮಡಿದ ಸುದ್ದಿ ಮನಃಪಟಲದಿಂದ ದೂರಾಗುವ ಮುಂಚೆಯೇ ಅಜಯನ ಸಾವಿನ ಸುದ್ದಿ. ದೊಡ್ಡವರ ಕಣ್ಣ ಮುಂದೆ ಚಿಕ್ಕವರು ಸಾಯಬಾರದು. ಅದರಲ್ಲೂ ಆತ್ಮಹತ್ಯೆ ಮಾಡಿಕೊಂಡರೆ ಬೇಸರದ ಜೊತೆ ಸಿಟ್ಟೂ ಮೂಡುತ್ತದೆ. ಈಗಷ್ಟೇ ವೈದ್ಯನಾಗಿ ಜೀವನ ಆರಂಭಿಸಬೇಕಿದ್ದ ಹುಡುಗನೊಬ್ಬ ಬೆಂಗಳೂರಿನ ಕೆಂಗೇರಿಯ ಬಳಿ ರೈಲಿಗೆ ತಲೆ ಕೊಟ್ಟಿದ್ದ. ರೈಲಿನ ಬರುವಿಕೆಗೆ ಕಾಯುತ್ತಾ ಸೈರನ್ನಿನ ಶಬ್ದಕ್ಕೆ ಬೆದರದೆ ಜೀವ ಒಡ್ಡಿದವನಿಗೆ ಸಮಸ್ಯೆ ಎದುರಿಸಲು ಆಗಲಿಲ್ಲವೇ ಎಂಬ ಅಸಹನೆ. ಆನ್ಲೈನಿನಲ್ಲಿ ಅರವತ್ತೇಳು ಸಾವಿರ ಕಳೆದುಕೊಂಡಿದ್ದಕ್ಕೆ ಸತ್ತನಂತೆ ಎಂಬ ವಿಷಯ ತಿಳಿದಾಗಲಂತೂ ಸಿಟ್ಟು ಹೆಚ್ಚೇ ಆಯಿತು. ಆನ್ಲೈನ್ಜೂಜಿನ ಅಡ್ಡೆಗಳಲ್ಲಿ ಹಣ ಕಳೆದುಕೊಳ್ಳುವವರ ಸಂಖೈ ಕಡಿಮೆಯೇನಲ್ಲ. ಆದರೂ ಬರೀ ಅರವತ್ತೇಳು ಸಾವಿರಕ್ಕೆ ಜೀವ ಕಳೆದುಕೊಳ್ಳುವುದಾ? ಅದೂ ದುಡಿಯುತ್ತಿರುವ ವೈದ್ಯನಾಗಿ. ಏನೇ ಕಡಿಮೆ ಎಂದರೂ ಒಂದೂವರೆ ಎರಡು ತಿಂಗಳ ಸಂಬಳವಷ್ಟೇ ಎಂದು ಬಯ್ದುಕೊಂಡೆ. ದಿನ ಕಳೆದಂತೆ ಅಜಯನ ಸಾವಿನ ಸುದ್ದಿ ಮನದ ಮೂಲೆ ಸೇರಿತು.

* * *

ಮೂರು ತಿಂಗಳ ನಂತರ ಸಹೋದ್ಯೋಗಿಗಗಳಿಂದ ತಿಳಿದ ಸುದ್ದಿ ದುಃಖಕ್ಕೆ ದೂಡಿತು. ಸೆಕ್ಸ್ವೀಡಿಯೋ ಕರೆಯೆಂಬ ಹೊಸ ರೀತಿಯ ಮೋಸಕ್ಕೆ ಸಿಲುಕಿಬಿಟ್ಟ ಕಾರಣಕ್ಕೆ ಡಾ. ಅಜಯ್ಆತ್ಮಹತ್ಯೆ ಮಾಡಿಕೊಂಡಿದ್ದ. ಅಂತರ್ಜಾಲದಲ್ಲಿ ಸುದ್ದಿಗಾಗಿ ಹುಡುಕಿದೆ. ಬೋಪಾಲಿನ ಇಪ್ಪತ್ತೆರಡು ವರುಷದ ಹುಡುಗ, ಮೂರನೇ ವರುಷದ ಇಂಜಿನಿಯರಿಂಗ್ವಿದ್ಯಾರ್ಥಿಯೊಬ್ಬನನ್ನು ಪೋಲೀಸರು ಬಂಧಿಸಿದ್ದರು. ನನಗೆ ಫೇಸ್ಬುಕ್ಕಿನಲ್ಲಿ ಸ್ನೇಹದ ಕೋರಿಕೆ ಕಳಿಸಿ ಸೆಕ್ಸ್ವೀಡಿಯೋ ಕರೆ ಮಾಡುವಂತೆ ಕೇಳಿದಂತೆಯೇ ಡಾ. ಅಜಯ್ಗೆ ಇನ್ಸ್ಟಾಗ್ರಾಂ ಮತ್ತು ಟೆಲಿಗ್ರಾಮ್ಬಳಸಿ ವೀಡಿಯೋ ಕರೆಯ ಹಳ್ಳಕ್ಕೆ ಕೆಡವಿದ್ದರು. ನಿಜವಾಗಿಯೂ ಅತ್ತ ಕಡೆಯಿದ್ದವರು ಹುಡುಗಿಯೆಂದು ನಂಬಿ, ಇಷ್ಟಪಟ್ಟು ವೀಡಿಯೋ ಕರೆ ಮಾಡಿಬಿಟ್ಟನೇನೋ ಅಜಯ್.‌ ಅರವತ್ತೇಳು ಸಾವಿರದಷ್ಟು ಹಣ ಕಳುಹಿಸಿದ, ಮತ್ತಷ್ಟು ಹಣಕ್ಕೆ ಬೇಡಿಕೆ ಬಂದಾಗ ಒತ್ತಡ ಎದುರಿಸಲಾಗದೇ ಆನ್ಲೈನಿನಲ್ಲಿ ತನ್ನ ಅಶ್ಲೀಲ ವೀಡಿಯೋ ಬಂದುಬಿಟ್ಟರೆ ಗತಿಯೇನು ಎಂದು ಹೆದರಿ ಮೋಸದ ವಿವರಗಳನ್ನು ಬರೆದಿಟ್ಟು ರೈಲಿಗೆ ತಲೆಯೊಡ್ಡಿ ಜೀವ ಕಳೆದುಕೊಂಡುಬಿಟ್ಟ. ಫೇಸ್ಬುಕ್ತೆರೆದು ಡಾ. ಅಜಯ್ನ ಪ್ರೊಫೈಲ್ಹುಡುಕಿದೆ. ನನ್ನ ಸ್ನೇಹಿತರ ಪಟ್ಟಿಯಲ್ಲವನು ಇರಲಿಲ್ಲ. ಆತ ನನ್ನ ಸ್ನೇಹಿತರ ಪಟ್ಟಿಯಲ್ಲಿದ್ದಿದ್ದರೆ, ಈ ತರಹದ ಮೋಸದ ಬಗ್ಗೆ ನಾನು ಒಂದಷ್ಟು ತಮಾಷೆಯಾಗಿಯೇ ಹಾಕಿದ್ದ ಪೋಸ್ಟ್ನೋಡಿದ್ದಿದ್ದರೆ…. ಆತ ನನ್ನನ್ನು ಒಮ್ಮೆಯಾದರೂ ಸಂಪರ್ಕಿಸುತ್ತಿದ್ದನೋ ಏನೋ ಎಂಬ ಸಣ್ಣ ಯೋಚನೆಯೊಂದು ತಲೆಗೆ ಹೊಕ್ಕಿ ಬಿಟ್ಟಿತು. ಪ್ರತ್ಯಕ್ಷವಾಗಿ ಪರೋಕ್ಷವಾಗಿ ಡಾ. ಅಜಯ್ನ ಸಾವಿಗೆ ಯಾವ ರೀತಿಯಲ್ಲೂ ನನಗೆ ಸಂಬಂಧವಿರಲಿಲ್ಲವಾದರೂ ತಪ್ಪಿತಸ್ಥ ಭಾವ ದಿನೇದಿನೇ ಹೆಚ್ಚಾಗಲಾರಂಭಿಸಿತು. ಫೇಸ್ಬುಕ್ತೆರೆದರೆ ಎಲ್ಲಾ ಪೋಸ್ಟುಗಳಲ್ಲೂ ಅಜಯನದೇ ಮುಖ ಕಾಣಿಸುತ್ತಿತ್ತು. ದಿನದ ಯಾವುದೋ ಸಮಯದಲ್ಲಿ ಅಜಯನ ನೆನಪಾಗಿ ಕಣ್ಣಾಲಿಗಳು ತುಂಬಿಕೊಳ್ಳುತ್ತಿದ್ದವು. ಮನಸ್ಥಿತಿ ಕೊಂಚ ಸರಿಹೋಗುವವರೆಗೂ ಸಾಮಾಜಿಕ ಜಾಲತಾಣಗಳಿಂದ ದೂರವಿರಲು ನಿರ್ಧರಿಸಿ ಫೇಸ್ಬುಕ್ಖಾತೆಯನ್ನು ತಾತ್ಕಾಲಿವಾಗಿ ನಿಷ್ಕ್ರಿಯಗೊಳಿಸಿದೆ.

* * *

ಖಾತೆ ನಿಷ್ಕ್ರಿಯಗೊಳಿಸಿ ಮೂರು ತಿಂಗಳಾಗುತ್ತ ಬಂದಿದೆ. ಅಜಯನ ಸಾವಿಗೆ ಕಾರಣ ಯಾರು? ಎಂಬ ಪ್ರಶ್ನೆಗೆ ತೃಪ್ತಿಕರ ಉತ್ತರವಂತೂ ಇದುವರೆಗೆ ಸಿಕ್ಕಿಲ್ಲ. ಬ್ಲ್ಯಾಕ್ಮೇಲೆ ಮಾಡಿದ ಬೋಪಾಲಿನ ಹುಡುಗ ಪ್ರಮುಖ ಕಾರಣ, ಆದರೆ ಅವನೊಬ್ಬನೇ ಕಾರಣವಾ? ಅಪರಿಚಿತರೊಂದಿಗೆ ಸೆಕ್ಸ್ವೀಡಿಯೋ ಕರೆ ಮಾಡಿದ ಅಜಯ್ಅಷ್ಟೇ ಅವನ ಸಾವಿಗೆ ಹೊಣೆಯಾ? ಅಜಯ್ನ ಸಾವಿನಲ್ಲಿ ನಮ್ಮ ಪಾಲಿಲ್ಲವೇ? ಆ ಘಟನೆಗೆ ನೇರವಾಗಿ ಸಂಬಂಧಪಡದಿದ್ದರೂ ಸೂಕ್ಷ್ಮತೆ ಕಳೆದುಕೊಂಡಿರುವ ನಮ್ಮ ಮನಸ್ಥಿತಿಗಳು, ನಮ್ಮ ಅಸೂಕ್ಷ್ಮ ಸಮಾಜ ಕೂಡ ಅಜಯ್ನ ಸಾವಿನ ಹೊಣೆ ಹೊರಬೇಕಲ್ಲವೇ?

ಹೌದು, ಅಜಯ್ಮಾಡಿದ್ದು ತಪ್ಪು. ವೀಡಿಯೋ ಕರೆಯ ಬಲೆಗೆ ಬೀಳಬೇಕಿರಲಿಲ್ಲ. ತಪ್ಪೇ ಮಾಡದವರ್ಯಾರೂ ನಮ್ಮ ನಡುವೆ ಇಲ್ಲವಲ್ಲ. ಅಜಯ್ನೋಟ್ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಕಾರಣಕ್ಕೆ ತಪ್ಪಿತಸ್ಥನ ಬಂಧನವಾಯಿತು. ಸಾಯುವ ನಿರ್ಧಾರದ ಬದಲು ಪೋಲೀಸರ ಬಳಿ ಹೋಗಿದ್ದರೆ? ʻಡಾಕ್ಟರಾಗಿ ಹಿಂಗೆಲ್ಲ ಮಾಡಿಕೊಂಡಿದ್ದೀಯಲ್ಲಪ್ಪʼ ಎಂದು ನಗಾಡಿಕೊಂಡು ಕಳುಹಿಸಿಬಿಡುತ್ತಿದ್ದರೇನೋ. ರಾಜಕಾರಣಿಗಳ ಸೆಕ್ಸ್ವೀಡಿಯೋ ಕರೆಗಳನ್ನು ಫಾರ್ವರ್ಡಿನ ಮೇಲೆ ಫಾರ್ವರ್ಡು ಮಾಡುತ್ತ ಟಿವಿಗಳಲ್ಲಿ ಆ ಸುದ್ದಿಯನ್ನು ಚಪ್ಪರಿಸಿಕೊಂಡು ನೋಡುತ್ತ ಕುಳಿತುಕೊಳ್ಳುವ ನಮ್ಮ ಅಸೂಕ್ಷ್ಮ ಸಮಾಜದಿಂದಲೇ ಮೂಡಿಬಂದವರಲ್ಲವೇ ನಮ್ಮ ಪೋಲೀಸರು. ಸಮಾಜದಲ್ಲಿಲ್ಲದ, ನಮ್ಮ ಮನೆಗಳಲ್ಲಿಲ್ಲದ ಸೂಕ್ಷ್ಮತೆಯನ್ನು ಪೋಲೀಸರಲ್ಲಿ ನಿರೀಕ್ಷಿಸುವುದು ಮೂರ್ಖತನ. ನಿಜಕ್ಕೂ ಪೋಲೀಸಿನವರಲ್ಲೊಬ್ಬರು ಘಟನೆಯ ಗಂಭೀರತೆಯನ್ನು ಅರಿತುಕೊಂಡರೂ ಬ್ಲ್ಯಾಕ್ಮೇಲಿನ ಆರೋಪಕ್ಕಾಗಿ ಬೋಪಾಲಿಗೆ ಹೋಗಿ ಕಾರ್ಯನಿರತರಾಗುವುದು ಪೋಲೀಸರಿಗಿರುವ ಒತ್ತಡದ ನಡುವೆ ಆಗಹೋಗದ ಕೆಲಸವೇ ಸರಿ.

ಅಜಯ್ಮತ್ತೇನು ಮಾಡಬಹುದಿತ್ತು? ಮಾಡಿದ ತಪ್ಪನ್ನು ಒಪ್ಪಿಕೊಂಡು ಮನೆಯವರ ಜೊತೆ, ಆತ್ಮೀಯ ಸ್ನೇಹಿತರ ಜೊತೆ ಮಾತನಾಡಬೇಕಿತ್ತು. ಒಂದಷ್ಟು ಅಪಹಾಸ್ಯಕ್ಕೆ, ಬಹಳಷ್ಟು ಬಯ್ಗುಳಕ್ಕೆ ತುತ್ತಾಗುತ್ತಿದ್ದ. ʻಮಾನ ಮರ್ಯಾದೆ ತೆಗೆಯುವಂತಹ ಕೆಲಸ ಮಾಡಿಬಿಟ್ಟೆಯಲ್ಲʼ ಎಂದು ಬಯ್ಯುವವರ ನಡುವೆ ಅಲ್ಲೆಲ್ಲೋ ಒಬ್ಬರು ʻಹೋಗ್ಲಿ ಬಿಡು. ಆಗಿದ್ದಾಯ್ತು. ಹೆಚ್ಚು ತಲೆಕೆಡಿಸಿಕೊಳ್ಳಬೇಡ. ಇನ್ನು ಮುಂದೆ ಹುಷಾರಾಗಿರುʼ ಎಂದು ಹೇಳುವವರಿದ್ದೇ ಇರುತ್ತಿದ್ದರಲ್ಲವೇ? ಮೋಸಕ್ಕೆ ಸಿಲುಕಿಕೊಂಡವನನ್ನೇ ದೂಷಿಸುವವರ ನಡುವೆ ʻಮೋಸ ಮಾಡಿದವನು ಅಪರಾಧಿ. ನೀನಲ್ಲʼ ಎಂದು ಸಮಾಧಾನದ ಮಾತುಗಳನ್ನಾಡಿ ಸ್ಥೈರ್ಯ ತುಂಬುವವರು ಇರುತ್ತಿದ್ದರಲ್ಲವೇಅಥವಾ ಎಲ್ಲರಿಗೂ ತಿಳಿಸಿಯೂ ಅಜಯ್ಗೆ ಯಾರ ಸಹಾಯವೂ ಸಿಗಲಿಲ್ಲವೇಈ ಎಲ್ಲಾ ಕಲ್ಪನೆಗಳ ನಡುವಿರುವ ವಾಸ್ತವವೆಂದರೆ ʻಮಾನ ಮರ್ಯಾದೆಗೆ ಅಂಜಿದ ಯುವ ವೈದ್ಯನೊಬ್ಬ ನಮ್ಮ ನಡುವಿನಿಂದ ಎದ್ದು ನಡೆದಿದ್ದಾನೆ. ಸೂಕ್ಷ್ಮತೆ ಬೆಳೆಸಿಕೊಳ್ಳಿ, ಮೋಸ ಹೋದವನನ್ನೇ ಅಪರಾಧಿಯನ್ನಾಗಿ ನೋಡಬೇಡಿ ಎಂದು ಮೆಲುದನಿಯಲ್ಲಿ ತಿಳಿಸಿ ಹೋಗಿದ್ದಾನೆ…. ಕೇಳಿಸಿಕೊಳ್ಳುವ ವ್ಯವಧಾನ ನಮಗಿರಬೇಕಷ್ಟೇ.

* * *

ಡಾ. ಅಜಯ್ಗೆ ಬ್ಲ್ಯಾಕ್ಮೇಲ್ಮಾಡಿದವನನ್ನು ಬಂಧಿಸಿದ ಸುದ್ದಿ ಪ್ರಕಟವಾದ ಹತ್ತು ದಿನಕ್ಕೆ ಬೆಂಗಳೂರಿನ ಮಲ್ಲೇಶ್ವರದ ಬಳಿ ರೈಲಿಗೆ ತಲೆ ಒಡ್ಡಿ ಯುವ ಇಂಜಿನಿಯರ್ಪ್ರಾಣ ಕಳೆದುಕೊಂಡಿದ್ದಾನೆ. ಸೆಕ್ಸ್ಬ್ಲ್ಯಾಕ್ಮೇಲ್ಗೆ ಒಳಪಟ್ಟ ಬಗೆಗಿನ ಮಾಹಿತಿಗಳು ಯುವಕನ ಮೊಬೈಲಿನಲ್ಲಿದ್ದ ಮೆಸೇಜುಗಳಿಂದ ಪೋಲೀಸರಿಗೆ ತಿಳಿಯಿತು. ತನ್ನ ಸಾವಿನಿಂದ ಅಪರಾಧಿಗಳ ಬಂಧನವಾಗಬಹುದೆಂಬ ನಿರೀಕ್ಷೆಯಲ್ಲಿ ಅಜಯನ ರೀತಿಯಲ್ಲಿಯೇ ಪ್ರಾಣ ಕಳೆದುಕೊಂಡನಾ? ತಿಳಿಯದು.

ಮಾನ ಮರ್ಯಾದೆಗಿಂತ ಜೀವ ಮುಖ್ಯವೆಂದು ಯುವಜನರಿಗೆ, ನಮ್ಮ ಸಮಾಜಕ್ಕೆ, ನಮ್ಮ ಮನಸ್ಸುಗಳಿಗೆ ತಿಳಿಹೇಳಬೇಕಿದೆ.

Nov 28, 2021

ನೀಟ್ ಪರೀಕ್ಷೆಯ ಸುತ್ತ.

ವರುಷಕ್ಕೊಂದು ಸಲ ನೀಟ್‌ ಪರೀಕ್ಷೆಯಿಂದಾಗುವ (ಯುಜಿ ನೀಟ್)‌ ʼಅನಾಹುತʼಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಈ ಚರ್ಚೆಗಳಲ್ಲಿ ಕಂಡುಬರುವ ಹೆಚ್ಚಿನ ವಿಚಾರಗಳೆಂದರೆ:

೧. ನೀಟ್‌ ಪರೀಕ್ಷೆಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ತೊಂದರೆಯಾಗುತ್ತಿದೆ. ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಗ್ರಾಮೀಣ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಸಿಗದಂತೆ ನೀಟ್‌ ಮಾಡಿಬಿಟ್ಟಿದೆ.

೨. ನೀಟ್‌ ಪರೀಕ್ಷೆಯಿಂದ ಹೊರರಾಜ್ಯದ ವಿದ್ಯಾರ್ಥಿಗಳು ಹೆಚ್ಚು ಸೀಟು ಕಬಳಿಸುತ್ತಿದ್ದಾರೆ. ಕರ್ನಾಟಕದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ.

೩. ಪರೀಕ್ಷೆಗಳು ರಾಜ್ಯಗಳ ನಿಯಂತ್ರಣದಲ್ಲಿರಬೇಕೆ ಹೊರತು ಒಕ್ಕೂಟ ಸರಕಾರದ ನಿಯಂತ್ರಣದಲ್ಲಿರಬಾರದು.

ಕಳೆದ ಇಪ್ಪತ್ತು ವರುಷಗಳಿಂದ ವೈದ್ಯಕೀಯ ಕಾಲೇಜುಗಳಲ್ಲಿ ಓದು ಮತ್ತು ಕೆಲಸದ ಸಲುವಾಗಿ ಇರುವ ಅನುಭವದ ಆಧಾರದ ಮೇಲೆ ಹೇಳುವುದಾದರೆ ಪರೀಕ್ಷೆಗಳು ರಾಜ್ಯಗಳ ನಿಯಂತ್ರಣದಲ್ಲಿರುವ ಅಂಶವನ್ನು ಹೊರತುಪಡಿಸಿದರೆ ಮೇಲೆ ತಿಳಿಸಿದ ಮಿಕ್ಕ ಎರಡೂ ವಿಚಾರಗಳ ಕುರಿತು ನಡೆಯುವ ಚರ್ಚೆಗಳು ದಾರಿ ತಪ್ಪಿಸುವಂತಿದೆ.

ನಮ್ಮ ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡು ನೀಟ್‌ ಪರೀಕ್ಷೆಯ ಸಾಧಕ ಭಾದಕಗಳೇನು ಎನ್ನುವುದನ್ನು ನೋಡುವ.

ಮೊದಲಿಗೆ ನೀಟ್‌ ಎನ್ನುವುದು ಒಂದು ಪರೀಕ್ಷೆಯಷ್ಟೇ ಎನ್ನುವುದು ನೆನಪಿಡಬೇಕಿದೆ. ನೀಟ್‌ ಬರುವುದಕ್ಕೆ ಮುಂಚೆ ನಮ್ಮ ರಾಜ್ಯದಲ್ಲಿ ಸಿಇಟಿ ಪರೀಕ್ಷೆ ನಡೆಯುತ್ತಿತ್ತು. ಕೆಲವು ವರುಷಗಳ ನಂತರ ಖಾಸಗಿ ಕಾಲೇಜುಗಳ ಕೆಲವು ಸೀಟುಗಳಿಗೆ ಕಾಮೆಡ್‌ ಕೆ ಪ್ರಾರಂಭವಾಯಿತು.  ವರುಷಗಳು ಉರುಳಿದಂತೆ ಹತ್ತಲವು ವೈದ್ಯಕೀಯ ಕಾಲೇಜುಗಳು ಡೀಮ್ಡ್‌ ಆಗಲಾರಂಭಿಸಿದ ಮೇಲೆ ಆ ಕಾಲೇಜುಗಳು ಪ್ರತ್ಯೇಕ ಪರೀಕ್ಷೆಗಳನ್ನು ನಡೆಸಲಾರಂಭಿಸಿದವು.

ಸಿಇಟಿ ಪರೀಕ್ಷೆಯ ಬದಲಾದ ವಿಧಾನವನ್ನೇ ಗಮನಿಸುವುದಾದರೆ ನಾನು ವೈದ್ಯಕೀಯ ಕಾಲೇಜಿಗೆ ಸೇರುವ ಸಮಯದಲ್ಲಿ (೨೦೦೧) ಸಿಇಟಿ ರ್‍ಯಾಂಕ್ ನಿರ್ಧರಿತವಾಗುತ್ತಿದ್ದಿದ್ದು ಪಿಯುಸಿಯಲ್ಲಿ ಗಳಿಸಿದ ಅಂಕಗಳು ಮತ್ತು ಸಿಇಟಿಯಲ್ಲಿ ಗಳಿಸಿದ ಅಂಕಗಳ ಮೇಲೆ. ೫೦ ಪ್ರತಿಶತಃ ಪಿಯುಸಿಯ ಅಂಕಗಳು ಮತ್ತು ೫೦ ಪ್ರತಿಶತಃ ಸಿಇಟಿಯ ಅಂಕಗಳನ್ನು ಲೆಕ್ಕ ಹಾಕಿ ರ್‍ಯಾಂಕ್ ಘೋಷಿತವಾಗುತ್ತಿತ್ತು. ನಾನು ಪಿಯುಸಿ ಓದಿದ್ದು ಮಂಡ್ಯದಲ್ಲಿ. ಪಿಯುಸಿ ಲೆಕ್ಕಕ್ಕೆ ಮಂಡ್ಯದಲ್ಲಿ ಉತ್ತಮ ಶಿಕ್ಷಣ ದೊರಕುತ್ತಿತ್ತು (ಕಾಲೇಜು ಮತ್ತು ಟ್ಯೂಷನ್ನಿನಲ್ಲಿ). ಆದರೆ ಸಿಇಟಿ ಶಿಕ್ಷಣ ಹೇಳಿಕೊಳ್ಳುವ ಮಟ್ಟದಲ್ಲಿರಲಿಲ್ಲ. ಜೊತೆಗೆ ಸಿಇಟಿ ಕುರಿತು ನನ್ನ ಆಸಕ್ತಿಯೂ ಕಡಿಮಯೇ ಇತ್ತು. ಸಿಇಟಿಯಲ್ಲಿ ಕಡಿಮೆ ಅಂಕ ಗಳಿಸಿದರೂ ಪಿಯುಸಿಯ ಮುಖ್ಯ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದಿದ್ದ ಕಾರಣದಿಂದಾಗಿ ಉತ್ತಮ ರ್‍ಯಾಂಕ್ ಬಂದು ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಕ್ಕಿತು.

ಕೆಲವು ವರುಷಗಳ ನಂತರ ಸಿಇಟಿ ರ್‍ಯಾಂಕ್ ನಿರ್ಧರಿಸುವ ಮಾನದಂಡಗಳು ಬದಲಾಯಿತು. ಪಿಯುಸಿಯಲ್ಲಿ ತೆಗೆಯುವ ಮಾರ್ಕ್ಸುಗಳು ಅರ್ಹತೆಗೆ ಮಾತ್ರ ಎಂದು ಸೀಮಿತಗೊಳಿಸಲಾಯಿತು (೫೦% ತೆಗೆದರೆ ಅರ್ಹತೆ). ಸಿಇಟಿಯಲ್ಲಿ ತೆಗೆಯುವ ಅಂಕಗಳ ಆಧಾರದ ಮೇಲೆ ಸಿಇಟಿ ರ್‍ಯಾಂಕ್ ನಿರ್ಧರಿತವಾಗುತ್ತಿತ್ತು. ಯಾವಾಗ ಈ ಮಹತ್ತರ ಬದಲಾವಣೆಯಾಯಿತೋ ಅವತ್ತಿನಿಂದಲೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳು (ಹಾಗು ಸಿಇಟಿಗೆ ಹೆಚ್ಚು ಒತ್ತು ಕೊಡದ ಪ್ರದೇಶಗಳಲ್ಲಿ ಓದುವ ವಿದ್ಯಾರ್ಥಿಗಳು) ವೈದ್ಯಕೀಯ ಕಾಲೇಜುಗಳ ಪ್ರವೇಶ ಪಡೆಯುವುದು ಕಡಿಮೆಯಾಗುತ್ತ ಸಾಗಿತು (ಕಡೇ ಪಕ್ಷ ನಾನು ಕೆಲಸ ಮಾಡಿದ ಕಾಲೇಜುಗಳಲ್ಲಿ). ನೀಟ್‌ ಬಂದ ಮೇಲೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪ್ರವೇಶ ಕಠಿಣವಾಯಿತು ಎನ್ನುವುದು ನಿಜವಲ್ಲ. ಸಿಇಟಿ ರ್‍ಯಾಂಕ್‍ನ ಬದಲಾದ ಮಾನದಂಡಗಳೇ ಇದಕ್ಕೆ ಕಾರಣ. 

ನೀಟ್‌ ಪರೀಕ್ಷೆಯಿಂದ ಹೊರರಾಜ್ಯದ ವಿದ್ಯಾರ್ಥಿಗಳು ಹೆಚ್ಚು ಸೀಟು ಕಬಳಿಸುತ್ತಿದ್ದಾರೆ. ಕರ್ನಾಟಕದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎನ್ನುವ ವಾದವೂ ನಿಜವಲ್ಲ. ಮೊದಲೇ ಹೇಳಿದಂತೆ ನೀಟ್‌ ಒಂದು ಪರೀಕ್ಷೆಯಷ್ಟೇ. ಇಡೀ ದೇಶಕ್ಕೆ ಪರೀಕ್ಷೆ ಒಂದೇ ಆದರೂ ರಾಜ್ಯವಾರು ಲೆಕ್ಕದಲ್ಲಿ ರ್‍ಯಾಂಕ್ ಘೋಷಣೆಯಾಗುತ್ತದೆ. ಕರ್ನಾಟಕದಲ್ಲಿ ಆರ್.ಜಿ.ಯು.ಹೆಚ್.ಎಸ್‌ ವೈದ್ಯಕೀಯ ವಿಶ್ವವಿದ್ಯಾಲಯದಡಿ ಬರುವ ಕಾಲೇಜುಗಳಲ್ಲಿ ಈ ಮುಂಚೆ ಇದ್ದಂತೆಯೆ ಸೀಟುಗಳ ಹಂಚಿಕೆ ನಡೆಯುತ್ತಿದೆ. ಖಾಸಗಿ ಕಾಲೇಜುಗಳಲ್ಲಿ ೪೦% ಸೀಟುಗಳು ಸರಕಾರಿ ಕೋಟಾದಲ್ಲಿ (ಅಂದಾಜು ಒಂದು ಲಕ್ಷ ಫೀಸು ಪ್ರತಿ ವರ್ಷಕ್ಕೆ; ಈ ಎಲ್ಲಾ ಸೀಟುಗಳೂ ರಾಜ್ಯದ ವಿದ್ಯಾರ್ಥಿಗಳಿಗೆ ಮಾತ್ರ), ೪೦% ಸೀಟುಗಳು ಪ್ರೈವೇಟ್‌ ಕೋಟಾದಲ್ಲಿ - ಈ ಮುಂಚಿನ ಕಾಮೆಡ್‌ ಕೆ ಕೋಟಾ ಎಂದು ಪರಿಗಣಿಸಬಹುದು (ಅಂದಾಜು ಆರರಿಂದ ಏಳು ಲಕ್ಷದಷ್ಟು ಫೀಸು ಪ್ರತಿ ವರ್ಷಕ್ಕೆ), ಇನ್ನುಳಿಕೆ ೨೦% ಸೀಟುಗಳು ಪ್ರೈವೇಟ್‌ ಮ್ಯಾನೇಜ್‌ಮೆಂಟ್‌ ಕೋಟಾದಲ್ಲಿ (ಇದರ ಫೀಸು ಎಲ್ಲದಕ್ಕಿಂತ ಹೆಚ್ಚಿದೆ. ಕಾಲೇಜಿಂದ ಕಾಲೇಜಿಗೆ ವ್ಯತ್ಯಾಸವಿದೆ; ಈ ಸೀಟುಗಳು ಎಲ್ಲಾ ರಾಜ್ಯದವರಿಗೂ ಲಭ್ಯ). ಸರಕಾರಿ ಕಾಲೇಜುಗಳಲ್ಲಿ ಹದಿನೈದರಿಂದ ಇಪ್ಪತ್ತು ಪ್ರತಿಶತಃದಷ್ಟು (ಸರಿಯಾದ ಪ್ರಮಾಣ ನನಗೆ ತಿಳಿದಿಲ್ಲ) ಸೀಟುಗಳು ಸೆಂಟ್ರಲ್‌ ಕೋಟಾಗೆ ಮೀಸಲಾಗಿರುತ್ತವೆ, ಉಳಿದ ಎಲ್ಲಾ ಸೀಟುಗಳೂ ರಾಜ್ಯದ ವಿದ್ಯಾರ್ಥಿಗಳಿಗೆ. ನೀಟ್‌ ಪರೀಕ್ಷೆ ಬಂದ ಮೇಲೂ ಸಹ ಸೀಟು ಹಂಚಿಕೆ ಇದೇ ರೀತಿಯಾಗಿ ನಡೆಯುತ್ತಿದೆ. ಕಾಮೆಡ್‌ ಕೆ ಇದ್ದಾಗ ಅದರ ಪರೀಕ್ಷೆಯ ಮೂಲಕ ನಾ ಕೆಲಸ ಮಾಡುವ ಕಾಲೇಜಿನಲ್ಲಿ ಪ್ರವೇಶ ಪಡೆಯುವ ಹೆಚ್ಚಿನ ವಿದ್ಯಾ‍ರ್ಥಿಗಳು ಹೊರರಾಜ್ಯದವರೇ ಆಗಿರುತ್ತಿದ್ದರು. ನೀಟ್‌ ಪರೀಕ್ಷೆ ಪ್ರಾರಂಭವಾದ ಮೇಲೆ ನಮ್ಮ ಕಾಲೇಜಿನಲ್ಲಿ ಪ್ರೈವೇಟ್‌ ಕೋಟಾ ಮತ್ತು ಮ್ಯಾನೇಜ್‌ಮೆಂಟ್‌ ಕೋಟಾದಲ್ಲಿ ಸೇರುತ್ತಿರುವ ಹೊರರಾಜ್ಯದ ವಿದ್ಯಾರ್ಥಿಗಳ ಸಂಖೈ ಬೆರಳೆಣಿಕೆಯಷ್ಟು ಮಾತ್ರವಿದೆ. ಮುಂಚೆಯೇ ತಿಳಿಸಿದಂತೆ ಸರಕಾರೀ ಕೋಟಾದಲ್ಲಿ ರಾಜ್ಯದ ವಿದ್ಯಾರ್ಥಿಗಳಿಗಷ್ಟೇ ಅವಕಾಶ. 

ನೀಟ್‌ ಇಂದ ತೊಂದರೆಗಳೇ ಆಗಿಲ್ಲವಾ? ಆಗಿದೆ. ನೀಟ್‌ ಮಾದರಿಯ ಪರೀಕ್ಷೆಗಳಿಗೆ ತಯಾರಿ ನಡೆಸುವುದು ದುಬಾರಿಯಿದೆ, ಎಲ್ಲಾ ಊರುಗಳಲ್ಲೂ ನೀಟ್‌ ತಯಾರಿ ಒಂದೇ ಸಮನಾಗಿಲ್ಲ. ಆದರೆ ಈ ಸಮಸ್ಯೆ ನೀಟ್‌ಗೆ ಮುಂಚಿನ ಸಿಇಟಿ ಇದ್ದಾಗಲೂ ಇತ್ತು. ಆಗಲೂ ಸಿಇಟಿ ಕೋಚಿಂಗ್‌ಗೆಂದು ಮಂಡ್ಯದಿಂದ ಮಂಗಳೂರಿಗೆ ಹೋಗುತ್ತಿದ್ದವರ ಸಂಖೈ ಕಡಿಮೆಯೇನಿರಲಿಲ್ಲ. ಸಮಸ್ಯೆ ಹೆಚ್ಚಾಗಿದ್ದು ಪಿಯು ಅಂಕಗಳನ್ನು ಪರಿಗಣಿಸದೇ ಹೋದ ಕಾರಣಕ್ಕೇ ಹೊರತು ನೀಟ್‌ ಪರೀಕ್ಷೆಯ ಕಾರಣಕ್ಕಲ್ಲ. 

ನೀಟ್‌ ಇಂದಾಗಿರುವ ಬಹುದೊಡ್ಡ ಪ್ರಯೋಜನವೆಂದರೆ ವಿದ್ಯಾರ್ಥಿಗಳು ಯಾವ ಕಾಲೇಜಿಗೇ ಸೇರಬೇಕೆಂದಿದ್ದರೂ ಒಂದೇ ಪರೀಕ್ಷೆ ಬರೆದರೆ ಸಾಕು. ನೀಟ್‌ ಬರುವುದಕ್ಕೆ ಮುಂಚೆ ಕರ್ನಾಟಕದಲ್ಲೇ ವಿದ್ಯಾರ್ಥಿಗಳು ಬರೆಯಬೇಕಿದ್ದ ಪರೀಕ್ಷೆಗಳು ಹತ್ತಲವಿದ್ದವು - ಸಿಇಟಿ, ಕಾಮೆಡ್‌ಕೆ ಜೊತೆಗೆ ಹತ್ತಾರು ಡೀಮ್ಡ್‌ ಕಾಲೇಜುಗಳ ಪರೀಕ್ಷೆಗಳನ್ನು ಬರೆಯಬೇಕಿತ್ತು. ಜೊತೆಗೆ ಆಲ್‌ ಇಂಡಿಯಾ ಮಟ್ಟದ ಪರೀಕ್ಷೆಗಳೂ ಹಲವಿದ್ದವು. ಈಗ ಈ ಎಲ್ಲಾ ಪರೀಕ್ಷೆಗಳ ಬದಲಿಗೆ ಒಂದೇ ಪರೀಕ್ಷೆಯಿದೆ. ಆ ಪರೀಕ್ಷೆಯಲ್ಲಿ ಸಿಕ್ಕ ರ್‍ಯಾಂಕ್ ಆಧಾರದ ಮೇಲೆ ವಿವಿಧ ಕಾಲೇಜುಗಳಿಗೆ ಸೇರಬಹುದಾಗಿದೆ.

ಗ್ರಾಮೀಣ ಭಾಗದ ಹಾಗು ನೀಟ್ ಮಾದರಿಗೆ ಹೆಚ್ಚು ತಯಾರಿ ಸಿಗದ ಊರುಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕೆಂದರೆ ಮುಂಚಿನ ಹಾಗೆ ಅರ್ಧ ಪಿಯು ಅಂಕಗಳು, ಇನ್ನರ್ಧ ನೀಟ್ ಅಂಕಗಳನ್ನು ಪರಿಗಣಿಸಿ ರ್‍ಯಾಂಕ್ ಘೋಷಿಸಬೇಕು. ಅದಾಗದೇ ಹೋದರೆ ನೀಟ್ ಹೋಗಿ ಸಿಇಟಿ ಉಳಿಯುವುದರಿಂದ ಯಾವುದೇ ರೀತಿಯ ಪ್ರಯೋಜನವೂ ಆಗದು. 

Objective ಪರೀಕ್ಷೆಗಳಿಗೆ ಹೆಚ್ಚು ಒತ್ತು ಕೊಡುವ ಪದ್ಧತಿ ಎಲ್ಲಾ ಕ್ಷೇತ್ರದಲ್ಲೂ ಹೆಚ್ಚಾಗಿ ಕಾಣುತ್ತಿರುವ ದಿನಗಳಲ್ಲಿ ಹಳೆಯ ರ್‍ಯಾಂಕಿಂಗ್ ಪದ್ಧತಿಗೆ ಮರಳುವುದು ಸಾಧ್ಯವಿಲ್ಲ. ಎಲ್ಲಾ ಕಾಲೇಜುಗಳಲ್ಲೂ ನೀಟ್‍ ಮಾದರಿಗೆ ಒತ್ತು ಕೊಡುವಂತೆ ಶಿಕ್ಷಕರನ್ನು ತರಬೇತುಗೊಳಿಸುವುದೊಂದೇ ಇದಕ್ಕೆ ಪರಿಹಾರ.

ಡಾ. ಅಶೋಕ್.ಕೆ. ಆರ್.

Oct 24, 2020

ಒಂದು ಬೊಗಸೆ ಪ್ರೀತಿ - 85 - ಕೊನೆಯ ಅಧ್ಯಾಯ.

ಡಾ. ಅಶೋಕ್.‌ ಕೆ. ಆರ್.
ರಾಜೀವ್‌ಗೆ ಡೈವೋರ್ಸ್‌ ಬಗ್ಗೆ ತಿಳಿಸಿ, ರಾಮ್‌ಪ್ರಸಾದ್‌ಗೂ ವಿಷಯ ತಿಳಿಸಿ ಸುಮಾ ಜೊತೆ ಹಂಚಿಕೊಂಡು ಮಾರನೇ ದಿನ ಸಾಗರನಿಗೂ ವಿಷಯ ತಿಳಿಸಿದ ಮೇಲೆ ಮನಸ್ಸಿಗೊಂದು ನಿರಾಳತೆ ಮೂಡಿತ್ತು. ಬಹಳ ದಿನಗಳ ನಂತರ ಮೂಡಿದ ನಿರಾಳತೆಯದು. ಈ ನಿರಾಳ ಮನಸ್ಸಿನೊಂದಿಗೆ ಒಂದು ದಿನದ ಮಟ್ಟಿಗಾದರೂ ನಾನು ನಾನಾಗಷ್ಟೇ ಉಳಿದುಕೊಳ್ಳಬೇಕು. ಡ್ಯೂಟಿಗೆ ರಜೆ ಹಾಕಿದೆ. ರಜಾ ಹಾಕಿದ ವಿಷಯ ಅಮ್ಮನಿಗೆ ತಿಳಿಸಿದರೆ ಮಗಳನ್ನು ಕೈಗೆ ಕೊಟ್ಟುಬಿಡುತ್ತಾರೆ. ಉಹ್ಞೂ, ಇವತ್ತಿನ ಮಟ್ಟಿಗೆ ಮಗಳೂ ಬೇಡ. ಮೊಬೈಲಂತೂ ಬೇಡವೇ ಬೇಡ ಎಂದುಕೊಂಡು ಮನೆಯಲ್ಲೇ ಮೊಬೈಲು ಬಿಟ್ಟು ಅಮ್ಮನ ಮನೆಗೋಗಿ ಮಗಳನ್ನು ಬಿಟ್ಟು ಮೊಬೈಲ್‌ ಮನೇಲೇ ಮರೆತೆ. ಸಂಜೆ ಬರೋದು ಸ್ವಲ್ಪ ತಡವಾಗ್ತದೆ ಅಂತೇಳಿ ಹೊರಟೆ. ಎಲ್ಲಿಗೆ ಹೋಗುವುದೆಂದು ತಿಳಿಯಲಿಲ್ಲ ಮೊದಲಿಗೆ. ಜೆ.ಎಸ್.ಎಸ್‌ ಹತ್ರ ಹೊಸ ಮಾಲ್‌ ಒಂದು ಶುರುವಾಗಿದೆಯಲ್ಲ, ಅಲ್ಲಿಗೇ ಹೋಗುವ ಎಂದುಕೊಂಡು ಹೊರಟೆ. ಜೆ.ಎಸ್.ಎಸ್‌ ದಾಟುತ್ತಿದ್ದಂತೆ ಚಾಮುಂಡವ್ವ ಕರೆದಂತಾಗಿ ಗಾಡಿಯನ್ನು ಸೀದಾ ಬೆಟ್ಟದ ಕಡೆಗೆ ಓಡಿಸಿದೆ. ಮೊದಲೆಲ್ಲ ಪ್ರಶಾಂತವಾಗಿರುತ್ತಿದ್ದ ಚಾಮುಂಡಿ ಬೆಟ್ಟದಲ್ಲೀಗ ಜನರ ಕಲರವ ಹೆಚ್ಚು. ಶನಿವಾರ, ಭಾನುವಾರ, ರಜಾ ದಿನಗಳಲ್ಲಂತೂ ಕಾಲಿಡಲೂ ಜಾಗವಿರುವುದಿಲ್ಲ. ಇವತ್ತೇನೋ ವಾರದ ಮಧ್ಯೆಯಾಗಿರುವುದರಿಂದ ಜನರ ಸಂಚಾರ ಕಮ್ಮಿ. ಮುಂಚೆಯೆಲ್ಲ ಭಾನುವಾರ ಎಷ್ಟು ಜನರಿರುತ್ತಿದ್ದರೋ ಇವತ್ತು ಅಷ್ಟಿದ್ದಾರೆ. ಹೆಚ್ಚಿನಂಶ ಕಾಲೇಜು ಬಂಕು ಮಾಡಿ ಜೋಡಿಯಾಗಿ ಬಂದವರೇ ಹೆಚ್ಚು. 

ದೇಗುಲದ ಒಳಗೋಗಿ ಕೈಮುಗಿದು ಹೊರಬಂದು ದೇವಸ್ಥಾನದ ಹಿಂದಿರುವ ಬೆಂಚುಗಳ ಮೇಲೆ ಕುಳಿತುಕೊಂಡೆ. ಎದುರಿಗೆ ವಿಶಾಲವಾಗಿ ಚಾಚಿಕೊಳ್ಳುತ್ತಿರುವ ಮೈಸೂರು. ಬೆಂಗಳೂರಿನ ಟ್ರಾಫಿಕ್ಕು ಜಂಜಾಟದಿಂದ ಬಂದವರು ಮೈಸೂರು ಚೆಂದವಪ್ಪ, ಎಷ್ಟು ಕಡಿಮೆ ಟ್ರಾಫಿಕ್ಕು ಅಂತ ಲೊಚಗುಟ್ಟುತ್ತಾರೆ. ಮೈಸೂರಲ್ಲೇ ಹುಟ್ಟಿ ಬೆಳೆದವಳಿಗೆ ಇಲ್ಲಿನ ಟ್ರಾಫಿಕ್ಕು ಎಷ್ಟೆಲ್ಲ ಜಾಸ್ತಿಯಾಗಿಬಿಟ್ಟಿದೆ ಅನ್ನುವುದು ಅರಿವಿಗೆ ಬರ್ತಿದೆ. ಎಷ್ಟೊಂದು ಕಡೆ ಹೊಸ ಹೊಸ ಟ್ರಾಫಿಕ್‌ ಸಿಗ್ನಲ್ಲುಗಳಾಗಿಬಿಟ್ಟಿದ್ದಾವಲ್ಲ ಈಗ. 

ಬೆಟ್ಟದ ಮೇಲೆ ಬಂದು ಕುಳಿತವಳಿಗೆ ಪುರುಷೋತ್ತಮನ ನೆನಪಾಗದೇ ಇರುವುದು ಸಾಧ್ಯವೇ? ಹೊಸ ಬಡಾವಣೆಗಳನ್ನು ಬಿಟ್ಟರೆ ಇನ್ನೆಲ್ಲ ರಸ್ತೆಗಳಲ್ಲೂ ಪುರುಷೋತ್ತಮನ ನೆನಪುಗಳಿವೆ. ನನ್ನಿವತ್ತಿನ ಪರಿಸ್ಥಿತಿಗೆ ಪುರುಷೋತ್ತಮನೇ ಕಾರಣನಲ್ಲವೇ? ಪುರುಷೋತ್ತಮ ಕಾರಣನೆಂದರೆ ನನ್ನ ತಪ್ಪುಗಳನ್ನೂ ಅವನ ಮೇಲೊರಸಿ ತಪ್ಪಿಸಿಕೊಳ್ಳುವ ನಡೆಯಾಗ್ತದೆ. ಅವನ ಪ್ರೀತಿಯನ್ನು ಒಪ್ಪಿದ್ದು ತಪ್ಪೋ, ಅವನು ನನ್ನ ಮೇಲೆ ಹೊರಿಸಿದ ಅಭಿಪ್ರಾಯಗಳನ್ನು ನಗುನಗುತ್ತಾ ಒಪ್ಪಿಕೊಂಡದ್ದು ತಪ್ಪೋ, ದೈಹಿಕ ದೌರ್ಜನ್ಯವನ್ನೂ ಪ್ರೀತಿಯ ಭಾಗ ಎಂದುಕೊಂಡದ್ದು ತಪ್ಪೋ, ಅವನು ಅಷ್ಟೆಲ್ಲ ಕೇಳಿಕೊಂಡರೂ ಓಡಿಹೋಗದೇ ಇದ್ದದ್ದು ತಪ್ಪೋ, ಅವನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಿದ್ದು ತಪ್ಪೋ..... ಭೂತದಲ್ಲಿ ಮಾಡಿದ ತಪ್ಪುಗಳನ್ನು ಈ ರೀತಿ ನಿಕಷಕ್ಕೊಳಪಡಿಸುವುದು ಎಷ್ಟರಮಟ್ಟಿಗೆ ಸರಿ? ಪುರುಷೋತ್ತಮನ ನೆನಪುಗಳನ್ನು ದೂರ ಮಾಡಬೇಕೆಂದು ಅತ್ತಿತ್ತ ನೋಡಿದಷ್ಟೂ ಎಲ್ಲೆಡೆಯೂ ಜೋಡಿಗಳೇ ಕಂಡರು. ನೆನಪುಗಳು ಮತ್ತಷ್ಟು ಹೆಚ್ಚಾಯಿತಷ್ಟೇ! ಇಲ್ಲಿರೋ ಜೋಡಿಗಳಲ್ಲಿ ಇನ್ನೆಷ್ಟು ಜೋಡಿಗಳ ಕನಸುಗಳು ಮುರಿದು ಬೀಳ್ತವೋ ಏನೋ... ಜಾತಿ ಧರ್ಮ ಅಂತಸ್ತುಗಳ ಬೃಹತ್‌ ಗೋಡೆಗಳನ್ನು ಎಷ್ಟು ಮಂದಿ ದಾಟಲು ಸಾಧ್ಯವಿದೆಯೋ... ಅವನ್ನೆಲ್ಲ ದಾಟುವ ಉತ್ಸಾಹವಿದ್ದರೂ ಮಕ್ಕಳ ಮೇಲೆ ಪ್ರಭುತ್ವ ಸಾಧಿಸಲು ಹಾತೊರೆಯುವ ಅಪ್ಪ ಅಮ್ಮನನ್ನು ಎದುರು ಹಾಕಿಕೊಳ್ಳಲು ಎಷ್ಟು ಜನಕ್ಕೆ ಸಾಧ್ಯವಿದೆಯೋ... ದಾಟುವ ಉಮ್ಮಸ್ಸು ನನಗೂ ಇತ್ತು ಪುರುಷೋತ್ತಮನಿಗೂ ಇತ್ತು... ಸುಖಾಂತ್ಯಗೊಳಿಸುವಷ್ಟು ಉಮ್ಮಸ್ಸಿರಲಿಲ್ಲ... ಪುರುಷೋತ್ತಮನ ಪ್ರೀತಿ ಉಸಿರುಗಟ್ಟಿಸುವ ಹಂತ ತಲುಪದೇ ಹೋಗಿದ್ದರೆ ಓಡಿ ಹೋಗುತ್ತಿದ್ದೆನಾ? ಸ್ಪಷ್ಟ ಉತ್ತರ ನನ್ನಲ್ಲೇ ಇಲ್ಲ. 

Oct 17, 2020

ಒಂದು ಬೊಗಸೆ ಪ್ರೀತಿ - 84

ಬದುಕು ಬದಲಾಗಲು ತುಂಬ.... ತುಂಬ ಅಂದರೆ ತುಂಬಾ ಕಡಿಮೆ ಸಮಯ ಬೇಕು. ನಿನ್ನೆಯವರೆಗೂ ಜೊತೆಯಲ್ಲಿದ್ದವರು, ಜೊತೆಯಲ್ಲಿದ್ದು ಹರಟಿದವರು, ಹರಟಿ ಕಷ್ಟ ಸುಖಕ್ಕಾದವರು, ಕಷ್ಟ ಸುಖಕ್ಕಾಗುತ್ತಾ ಜೀವನ ಪೂರ್ತಿ ಜೊತೆಯಲ್ಲಿಯೇ ಇರುತ್ತೀವಿ ಅಂತ ನಂಬಿಕೆ ಚಿಗುರಿಸಿದವರು, ಚಿಗುರಿದ ನಂಬುಗೆಯನ್ನು ಮರವಾಗಿಸಿದವರು ಇದ್ದಕ್ಕಿದ್ದಂತೆ ದೊಡ್ಡದೊಂದು ಜೆ.ಸಿ.ಬಿ ಹೊತ್ತು ತಂದು ಮುಲಾಜೇ ಇಲ್ಲದೆ ಬೇರು ಸಮೇತ ಆ ಮರವನ್ನು ಉರುಳಿಸಿಬಿಟ್ಟರೆ ಅದನ್ನು ತಡೆದುಕೊಳ್ಳುವುದು ಮನುಷ್ಯ ಮಾತ್ರರಿಗೆ ಸಾಧ್ಯವೇ? ನಾ ತಡೆದುಕೊಂಡೆ. ಸಾಗರ ಹೇಳ್ತಾನೇ ಇರ್ತಾನಲ್ಲ ನೀ ದೇವತೆ ಅಂತ! ಇದ್ರೂ ಇರಬಹುದೇನೋ ಅಂತಂದುಕೊಂಡು ನಕ್ಕೆ. 

ಡೈವೋರ್ಸ್ ತೆಗೆದುಕೊಳ್ಳುವ ನಿರ್ಧಾರ ಸುಲಭದ್ದಾಗಿರಲಿಲ್ಲ. ಡೈವೋರ್ಸ್ ಬಗ್ಗೆ ಯೋಚನೆ ಮಾಡಿದಾಗೆಲ್ಲ ಮದುವೆಯ ದಿನಗಳ ನೆನಪಾಗುತ್ತಿತ್ತು. ಪುರುಷೋತ್ತಮ ಎಷ್ಟೆಲ್ಲ ತೊಂದರೆ ಕೊಟ್ಟರೂ ಅದನ್ನೆಲ್ಲ ಗಮನಕ್ಕೇ ತೆಗೆದುಕೊಳ್ಳದಂತೆ ಪ್ರಬುದ್ಧರಾಗಿ ವರ್ತಿಸಿದ್ದರು ರಾಜೀವ್. ಪುರುಷೋತ್ತಮನನ್ನು ಬಿಡುವುದು ಎಷ್ಟು ಕಷ್ಟದ ಸಂಗತಿಯಾಗಿತ್ತೋ ರಾಜೀವನನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಅಷ್ಟೇ ಸಂತಸವಾಗಿತ್ತು. ತುಂಬಾ ಸರಿಯಾದ ಆಯ್ಕೆ ಅನ್ನಿಸಿತ್ತು. ಎಲ್ಲಾ ನಿರ್ಧಾರಗಳೂ ಹಿಂಗೇ ಒಂದಷ್ಟು ವರುಷಗಳ ನಂತರ ತಪ್ಪು ಅನ್ನಿಸಲು ಶುರುವಾಗಿಬಿಡುತ್ತಾ? ಯಪ್ಪ! ಆ ತರವಾಗಿಬಿಟ್ಟರೆ ಯಾವ ನಿರ್ಧಾರಗಳನ್ನೂ ತೆಗೆದುಕೊಳ್ಳುವುದೇ ಸಾಧ್ಯವಿಲ್ಲ. ಅವತ್ತಿಗೆ ಆ ನಿರ್ಧಾರ ಸರಿ ಇವತ್ತಿಗೆ ಈ ನಿರ್ಧಾರ ಸರಿಯಾ? ಡೈವೋರ್ಸ್ ತೆಗೆದುಕೊಳ್ಳುತ್ತಿರುವುದು ರಾಜೀವ ನನ್ನ ಮೇಲೆ ಅನುಮಾನ ಪಟ್ಟ, ಅನುಮಾನ ಪಟ್ಟು ಮನೆಯಲ್ಲಿ ಅಸಹ್ಯದ ವಾತಾವರಣ ಸೃಷ್ಟಿಸಿದ ಅನ್ನುವುದು ಮಾತ್ರ ಕಾರಣವಾ? ಕ್ಷಮೆ ಕೇಳು, ಜೊತೆಯಲ್ಲಿರಿ ಅಂತೇಳಿದ್ರಲ್ಲ ಅವರ ಮನೆಯವರು. ಯಾರೋ ದೂರದವರಲ್ಲವಲ್ಲ ರಾಜೀವು, ಒಂದು ಕ್ಷಮೆ ಬಿಸಾಕಿ ಸರಿ ಮಾಡಿಕೊಳ್ಳಬಹುದಿತ್ತಲ್ಲ. ಯಾಕೆ ಕ್ಷಮೆಯ ದಾರಿಯನ್ನು ನಾ ಆಯ್ದುಕೊಳ್ಳಲಿಲ್ಲ? ಯಾಕೆ ಆಯ್ದುಕೊಳ್ಳಲಿಲ್ಲವೆಂದರೆ ಅದಕ್ಕೆ ಕಾರಣ ರಾಧ ಅಂದರೆ ತಪ್ಪಲ್ಲ. 

ಹೌದು. ರಾಜೀವ್ ದೊಡ್ಡ ಸಂಬಳದ ಕೆಲಸ ಹಿಡಿಯುವುದು ನನಗೆ ಬೇಕಿರಲಿಲ್ಲ, ನಾ ಅದನ್ನು ಯಾವತ್ತಿಗೂ ನಿರೀಕ್ಷೆಯೂ ಮಾಡಿರಲಿಲ್ಲ. ಹೋಗಲಿ ಅಪ್ಪನ ಮನೆಯಲ್ಲಿ ದಂಡಿಯಾಗಿ ದುಡ್ಡು ಬಿದ್ದಿದೆಯಲ್ಲ, ಹೋಗಿ ಈಸ್ಕೊಂಡು ಬನ್ನಿ ಅಂತ ಗೋಗರೆದಿರಲಿಲ್ಲ, ಅತ್ತು ರಂಪಾಟ ಮಾಡಿರಲಿಲ್ಲ. ಬರೋ ಸಂಬಳದಲ್ಲಿ ಆರಾಮಾಗಿ ಇರುವ ಬಿಡಿ ಅಂತ ಹೇಳುತ್ತಲೇ ಇದ್ದರೂ ಅವರಿಗೇ ವಾಸ್ತವದ ಜೀವನ ಶೈಲಿ ರುಚಿಸುತ್ತಿರಲಿಲ್ಲ. ಮತ್ತಾ ಜೀವನವನ್ನು ಸರಿಪಡಿಸುವ ಹೆಚ್ಚಿನ ಜವಾಬ್ದಾರಿ ನನ್ನ ಮೇಲೇ ಹೊರಿಸಿಬಿಟ್ಟಿದ್ದರು. ಅದನ್ನೂ ತಡೆದುಕೊಳ್ಳಬಹುದಿತ್ತು. ಆದರೆ ರಾಧಳೆಡೆಗೆ ಅವರು ತೋರುತ್ತಿದ್ದ ಅಸಡ್ಡೆ, ಅಸಡ್ಡೆ ವ್ಯಕ್ತಪಡಿಸಲು ಅವರು ಬಳಸುತ್ತಿದ್ದ ಕೀಳಾದ ಭಾಷೆ, ಆ ಕೀಳಾದ ಭಾಷೆಯನ್ನು ಶತ್ರುವಿನ ಮಕ್ಕಳಿಗೂ ಬಳಸಬಾರದು, ಬಳಸಬಾರದ ಭಾಷೆಯನ್ನು ಬಳಸಿ ಬಳಸಿ ನನ್ನಲ್ಲೂ ಅವರೆಡೆಗೊಂದು ಅಸಹ್ಯ ಮೂಡಿಸಿಬಿಟ್ಟರು. ಅವರ ಬಗ್ಗೆಯಿದ್ದ ಗೌರವ ದಿನೇ ದಿನೇ ಚೂರ್ಚೂರೇ ಕಮ್ಮಿಯಾಗಿದ್ದು ನನಗೂ ಗೊತ್ತಾಗಲಿಲ್ಲ. ರಾಮ್ ಮತ್ತು ನನ್ನ ಕಲ್ಪಿತ ಸಂಬಂಧದ ಬಗೆಗಿನ ಜಗಳ ನನ್ನೊಳ ಮನಸ್ಸಿನಲ್ಲಿದ್ದ ಡೈವೋರ್ಸ್ ತಗೊಂಡ್ ಹೋಗಿಬಿಟ್ಟರೆ ಹೇಗೆ ಅನ್ನೋ ದೂರದ ಬೆಟ್ಟವನ್ನು ಹತ್ತಿರವಾಗಿಸಿಬಿಟ್ಟಿತು. ಇದು ಹತ್ತಲಾರದ ಬೆಟ್ಟವೇನಲ್ಲ ಎಂದು ಅರಿವಾದ ಮೇಲೆ ತಿರುಗಿ ನೋಡುವ ಪ್ರಮೇಯ ಮೂಡಲಿಲ್ಲ. 

Oct 10, 2020

ಒಂದು ಬೊಗಸೆ ಪ್ರೀತಿ - 83

"ಅಲ್ಲಾ ನಾನೇನೋ ಗೂಬ್‌ ನನ್ಮಗ.... ಸರಿ ಇಲ್ಲ. ನೀ ಆದ್ರೂ ಸರಿ ಇದ್ದೀಯಲ್ಲ.... ಬದುಕಿದ್ದೀನೋ ಸತ್ತಿದ್ದೀನೋ ಅಂತಾದ್ರೂ ವಿಚಾರಿಸ್ಬೇಕು ಅಂತ ಕೂಡ ಅನ್ನಿಸಲಿಲ್ಲವಲ್ಲ ನಿನಗೆ..... ಯಾವ್ದೋ ಸಿಟ್ಟಲ್ಲಿ ಬೇಸರದಲ್ಲಿ ನಿನ್‌ ನಂಬರ್‌ ಕೂಡ ಡಿಲೀಟ್‌ ಮಾಡ್ಬಿಟ್ಟಿದ್ದೀನಿ ಕಣವ್ವ.... ಮುಚ್ಕಂಡ್‌ ಫೋನ್‌ ಮಾಡು ಬಿಡುವಾದಾಗ". ಸಾಗರನ ಮೆಸೇಜು. ಎಫ್.ಬಿ ಮೆಸೆಂಜರಿನಲ್ಲಿ. ಸಾಗರನ ಮೆಸೇಜು ಮುಖದ ಮೇಲೊಂದು ನಗು ಮೂಡಿಸದೇ ಇದ್ದೀತೆ. ಒಂಚೂರೇ ಚೂರು ನಗು ಮೂಡಿತು. ಬೇಸರದಿಂದಿದ್ದ ಮನಸ್ಸಿಗೆ ಸಾಗರನ ಮೆಸೇಜು ಒಂದಷ್ಟು ಲವಲವಿಕೆ ತರಿಸಿದ್ದು ಸುಳ್ಳಲ್ಲ. 

ʻಇಲ್ಲಪ್ಪ. ಅದ್ಯಾರೋ ಒಬ್ರು ನಾ ಸತ್ತಾಗ್ಲೂ ಮೆಸೇಜ್‌ ಮಾಡ್ಬೇಡ ಅಂದಿದ್ರುʼ ವ್ಯಂಗ್ಯ ಮಾತಾಡೋ ಅವಕಾಶ ಬಿಡುವುದು ಸಾಧುವೇ. 

"ಆಯ್ತಾಯ್ತು. ತಪ್‌ ನಂದೇ. ನಿಂದೂ ತಪ್ಪಿಲ್ಲ ಅಂತಲ್ಲ. ನಾ ತುಂಬಾ ಇಮೆಚ್ಯೂರ್‌ ಆಗಿ ವರ್ತಿಸಿದ್ದೌದು. ಫೋನ್‌ ಮಾಡ್ತೀಯಾ ಇಲ್ವಾ?" 

ʻಮಾಡ್ತೀನಿ ಕಣೋ. ಮಾಡ್ದೇ ಇರ್ತೀನಾ. ಎಷ್ಟ್‌ ಸಲ ಫೋನ್‌ ಮಾಡ್ಬೇಕು ಮಾಡ್ಬೇಕು ಅಂತಂದುಕೊಳ್ಳುತ್ತಲೇ ಇದ್ದೆ. ಅದರಲ್ಲೂ ಕಳೆದೊಂದು ತಿಂಗಳಿನಿಂದʼ 

"ಸುಮ್ನೆ ಡವ್‌ ಕಟ್ತಿ. ಅಷ್ಟೊಂದೆಲ್ಲ ಅಂದುಕೊಂಡಿದ್ರೆ ಮಾಡಿರ್ತಿದ್ದೆ ಬಿಡು" 

ʻಮ್.‌ ಹೋಗ್ಲಿ ಬಿಡು. ನಾ ಏನ್‌ ಹೇಳಿದ್ರೂ ನಂಬಲ್ಲ ನೀನು. ನಂಬಿಕೆ ಕಮ್ಮಿ ಆಗಿರುವ ದಿನಗಳಲ್ಲಿ ಮೌನವಾಗಿರೋದೇ ಒಳ್ಳೇದುʼ 

"ಇದ್ಯಾಕವ್ವ? ಏನೇನೋ ಮಾತಾಡ್ತಿದ್ದಿ. ಏನ್‌ ಆಯ್ತೇ. ಇಸ್‌ ಎವೆರಿತಿಂಗ್‌ ಆಲ್‌ರೈಟ್?"‌ 

ʻಬಿಡೋ. ಫೋನಲ್‌ ಹೇಳ್ತೀನಿ. ಈಗ ಒಪಿಡಿಗೆ ಹೋಗಬೇಕು. ಐದರಷ್ಟೊತ್ತಿಗೆ ಮುಗಿಯುತ್ತೆ. ಆಮೇಲ್‌ ಫೋನ್‌ ಮಾಡ್ತೀನಿ. ನೀ ಬಿಡುವಾಗಿರ್ತೀಯಲ್ಲ?ʼ 

"ನಿಂಗೋಸ್ಕರ ಯಾವಾಗ್ಲೂ ಬಿಡುವಾಗೇ ಇರ್ತೀನಿ ಬಿಡ" 

Oct 3, 2020

ಒಂದು ಬೊಗಸೆ ಪ್ರೀತಿ - 82

ರಾಮ್‌ಪ್ರಸಾದ್‌ ಮುಜುಗರದಿಂದ ಮುದುಡಿ ಕುಳಿತಿದ್ದರು. ಬಿಯರ್‌ ಬಾಟಲಿನ ಮುಚ್ಚಳದಂಚಿದ ಕೆಳಗೆ ಜಾರಿ ಬೀಳುತ್ತಿದ್ದ ನೀರ ಹನಿಗಳನ್ನೊಮ್ಮೆ ನೋಡ್ತಾರೆ, ಬಾಗಿಲ ಕಡೆಗೊಮ್ಮೆ ನೋಡ್ತಾರೆ, ನಂತರ ಟಿವಿಯ ಕಡೆ ಕಣ್ಣಾಡಿಸಿ ಮತ್ತೆ ಬಿಯರ್ರು ಬಾಟಲುಗಳೆಡೆಗೆ ಕಣ್ಣೋಟ ಹರಿಸಿಬಿಡುತ್ತಾರೆ. ಅವರಿಗೇನು! ಹಿಂದೂ ಗೊತ್ತಿಲ್ಲ, ಮುಂದೂ ಗೊತ್ತಿಲ್ಲ! ಮನೇಲ್ಯಾರೂ ಇಲ್ಲ, ಕುಡಿದೋಗುವ ಅಂತ ಬಂದಿದ್ದಾರೆ ಅಷ್ಟೇ! ಮೇಲ್ನೋಟಕ್ಕೆ ಶಾಂತವಾಗಿ ಕುಳಿತಿದ್ದವಳ ಮನದಲ್ಲಿದ್ದ ಚಿಂತೆಯ ಆಳ ಅಗಲವ್ಯಾವೂ ರಾಮ್‌ಗೆ ಗೊತ್ತೇ ಇಲ್ಲ! ಟೇಬಲ್‌ ಮೇಲೇನೋ ಎರಡೇ ಬಿಯರ್‌ ಇದೆ. ಇವರೊಂದು ಅವರೊಂದು ಕುಡಿದು ಅಲ್ಲಿಗೆ ಮುಗಿಸಿದರೆ ಸರಿ. ಇದರೊಟ್ಟಿಗೆ ಮತ್ತೊಂದಷ್ಟು ಬಿಯರನ್ನು ರಾಜೀವ ಗಂಟಲೊಳಗಿಳಿಸಿದರೆ ಮುಗೀತು ಕತೆ. ನಶೆಯೇರಿದ ಮೇಲೆ ಅವರ ಮಾತುಗಳು ಎತ್ತೆತ್ತಲಿಗೋ ಹೋಗುವುದು ಅಪರೂಪವೇನಲ್ಲ. ಏನಾಗ್ತದೋ ಏನಾಗ್ತದೋ ಅನ್ನೋ ಚಿಂತೆಯಲ್ಲೇ ನನ್ನ ನಿದ್ರೆ ಹಾರಿ ಹೋಗಿತ್ತು. ನಿಮಿಷಕ್ಕೆರಡೆರಡು ಬಾರಿ ರಾಮ್‌ ಕಡೆಗೊಮ್ಮೆ, ಬಾಗಿಲು ಕಡೆಗೊಮ್ಮೆ, ಟಿವಿ ಕಡೆಗೊಮ್ಮೆ ನೋಡುತ್ತಾ ಕುಳಿತೆ. 

ಕೊನೆಗೂ ರಾಜೀವ್‌ ಬಂದರು. ಅದೇನು ಎರಡೇ ನಿಮಿಷಕ್ಕೆ ಬಂದರೋ ಹತ್ತು ನಿಮಿಷಕ್ಕೆ ಬಂದರೋ ಅರ್ಧ ಘಂಟೆಯ ನಂತರ ಬಂದರೋ ಒಂದೂ ತಿಳಿಯಲಿಲ್ಲ ನನಗೆ. ಒಂದು ಯುಗವೇ ಕಳೆದುಹೋದಂತನ್ನಿಸಿತು. ಒಳಗೆ ಕಾಲಿಡುತ್ತಿದ್ದಂತೆಯೇ ನನ್ನನ್ನು ಕಂಡು ಮುಖ ಕಿವುಚಿಕೊಂಡರು. ಥೂ ಅನಿಷ್ಟವೇ ಯಾಕ್‌ ಬಂದೆ ಇವತ್ತು ಅಂದಂತಾಯಿತು. ಅಷ್ಟೆಲ್ಲ ಮುಖ ಕಿವುಚಿಕೊಂಡು ಸಿಟ್ಟು ತೋರಿಬಿಟ್ಟು ನಾ ಅವರಿಬ್ಬರಿಗೂ ಕುಡಿಯುವುದಕ್ಕೇ ಅವಕಾಶ ಕೊಡದಂತೆ ಓಡಿಸಿಬಿಟ್ಟರೆ! ಮುಳುಗುವ ಸೂರ್ಯ ಕೂಡ ಅಷ್ಟು ವೇಗವಾಗಿ ಮೋಡಗಳ ಮೇಲೆ ಬಣ್ಣವನ್ನೆರಚಿರಲಾರ. ಅಷ್ಟು ವೇಗವಾಗಿ ಮುಖದ ಮೇಲೊಂದು ನಗು ಎರಚಿಕೊಂಡು "ಅರೆರೆ... ಇದೇನ್‌ ಬಂದುಬಿಟ್ಟಿದ್ದಿ. ಸುಮಾರ್‌ ಲೇಟಾಯ್ತಲ್ಲ. ಬರೋಲ್ಲವೇನೋ ನೀನು ಅಂದುಕೊಂಡೆ" ಎಂದರು. 

ʻಅಂದುಕೊಳ್ಳೋ ಬದಲು ಫೋನ್‌ ಮಾಡಿದ್ರಾಗಿರೋದುʼ ಎಂದುಕೊಳ್ಳುತ್ತಾʼ ಪಾಪು ಮಲಗಿಬಿಟ್ಟಿದ್ದಳು. ಹಂಗಾಗಿ ತಡವಾಯ್ತುʼ ಎಂದೆ. 

"ಹೌದಾ.... ಹೋಗ್ಲಿ ಬಿಡು. ಒಳ್ಳೇದೇ ಆಯ್ತು. ರಾಮ್‌ ಸಿಕ್ಕಿ ಸುಮಾರು ದಿನಗಳಾಗಿದ್ದವಲ್ಲ. ಇವತ್ಯಾಕೋ ನೆನಪಾಯಿತು. ನೀನೂ ಬರೋ ಹಂಗೆ ಕಾಣಿಸಲಿಲ್ಲವಲ್ಲ. ಫೋನ್‌ ಮಾಡಿ ಕರೆಸಿಕೊಂಡೆ ಅಷ್ಟೇ" 

ʻಮ್.‌ ಏನೇನ್‌ ತಂದ್ರಿ ಪಾರ್ಸಲ್ಲುʼ 

"ಜಾಸ್ತಿ ಇಲ್ಲ. ಒಂದ್‌ ಪ್ಲೇಟ್‌ ಕಬಾಬು, ಒಂದ್‌ ಚಿಲ್ಲಿ ಪೋರ್ಕು, ಎರಡ್‌ ಬಿರಿಯಾನಿ ಅಷ್ಟೇ. ಹೋಗ್ಲಿ ಬಿಡು. ಫ್ರಿಜ್ಜಲ್ಲಿರ್ತದೆ. ನಾಳೆಗಾಗುತ್ತೆ" 

ʻಫ್ರಿಜ್ಜಲ್ಲಿ? ಯಾಕ್‌ ತಿನ್ನಲ್ವ ಈಗʼ 

"ಹೇ... ನೀ ಬರಲ್ಲ ಅಂದ್ಕಂಡು ಮನೇಲೇ ಕೂರೋಣ ಅಂದ್ಕಂಡಿದ್ದೆ. ನೀ ಬಂದುಬಿಟ್ಟಿದ್ದೀಯಲ್ಲ. ಹೊರಗೆ ಎಲ್ಲಾದ್ರೂ ಹೋಗಿ ಕೂರ್ತೀವಿ" 

Sep 26, 2020

ಒಂದು ಬೊಗಸೆ ಪ್ರೀತಿ - 81

ತಿಂಗಳು ಕಳೆಯಿತು ಜಗಳವಾಗಿ, ಅವಮಾನಿತಳಾಗಿ. ಎಲ್ಲ ಕಡೆಯಲ್ಲೂ ಒಂದಷ್ಟು ಶಾಂತಿ ನೆಲೆಸಿತ್ತು. ಅಮ್ಮ ನಿಧಾನಕ್ಕಾದರೂ ಮಾತಿಗೆ ತೊಡಗಿಕೊಂಡಿದ್ದಳು. ಅಮ್ಮನ ಮನೆಯೊಳಗೆ ನಾಲ್ಕೈದು ನಿಮಿಷ ಇದ್ದು ಬರುವುದನ್ನು ನಾನೂ ರೂಢಿಸಿಕೊಂಡೆ. ಎದುರಿಗೆ ಸಿಕ್ಕಾಗ ಮುಖ ತಿರುಗಿಸಿಕೊಳ್ಳುತ್ತಿದ್ದ ಸೋನಿಯಾ ಕಾಟಾಚಾರಕ್ಕಾದರೂ ಸರಿಯೇ ಒಂದು ನಗು ಬಿಸಾಕುವಷ್ಟು ಮೃದುವಾಗಿದ್ದಳು. ಶಶಿ ಅಪ್ಪ ಆರಾಮಾಗೇ ಇದ್ದರು ನನ್ನ ಜೊತೆ. ರಾಜೀವನದೇ ಭಯ ನನಗೆ. ಅಚ್ಚರಿಯೆಂಬಂತೆ ಎಲ್ಲರಿಗಿಂತ ಮುಂಚಿತವಾಗೆ ನನ್ನೊಂದಿಗೆ ರಾಜಿ ಮಾಡಿಕೊಂಡವರಂತೆ ಬದಲಾದದ್ದು ಅವರೇ. ಅಫ್‌ಕೋರ್ಸ್‌ ಒಂದದಿನೈದು ದಿನ ಮಾತುಕತೆಯೇನೂ ಇರಲಿಲ್ಲ. ಆ ಹೂ ಉಹ್ಞೂ ಅಂತ ಶುರುವಾದ ಮಾತುಗಳು ಮತ್ತೊಂದು ವಾರ ಕಳೆಯುವಷ್ಟರಲ್ಲಿ ತೀರ ಮೊದಲಿನಷ್ಟು ಅಲ್ಲವಾದರೂ ಮೊದಲಿದ್ದ ಮಾತುಗಳಲ್ಲಿ ಅರ್ಧಕ್ಕೆ ಬಂದು ನಿಂತಿತ್ತು. ಕಳೆದೆರಡು ದಿನಗಳಿಂದಂತೂ ವಿಪರೀತವೆನ್ನಿಸುವಷ್ಟೇ ಮಾತನಾಡುತ್ತಿದ್ದರು. ಅವರ ಮಾತುಗಳಲ್ಲೆಲ್ಲ ಬೆಂಗಳೂರಿಗೆ ಹೋಗಿದ ನಂತರದ ಜೀವನಗಳ ಕುರಿತೇ ಇರುತ್ತಿತ್ತು. ಇನ್ನೇನು ರಿಸಲ್ಟ್‌ ಬರ್ತದೆ ಈ ತಿಂಗಳೋ ಮುಂದಿನ ತಿಂಗಳೋ. ಹೆಚ್ಚು ಕಮ್ಮಿ ಪಾಸ್‌ ಆಗೋದ್ರಲ್ಲಿ ಅನುಮಾನವೇನಿಲ್ಲ. ಈಗಾಗಲೇ ಒಂದು ತಿಂಗಳ ಬಾಂಡ್‌ ಮುಗಿದೇ ಹೋಗಿದೆ. ಇನ್ನೊಂದು ಹತ್ತು ತಿಂಗಳು ಕಳೆದುಬಿಟ್ಟರೆ ಮುಗೀತು, ಆರಾಮು ಬೆಂಗಳೂರಿಗೆ ಹೋಗಿಬಿಡಬಹುದು. ಮಗಳ ನೋಡಿಕೊಳ್ಳುವುದೊಂದು ಸಮಸ್ಯೆಯಾಗಬಹುದು. ಅಷ್ಟರಲ್ಲಿ ಮಗಳೂ ದೊಡ್ಡವಳಾಗಿರ್ತಾಳಲ್ಲ? ನಡೀತದೆ. ಬೆಂಗಳೂರಿನಲ್ಲೇನು ಹೆಜ್ಜೆಗೊಂದು ಡೇ ಕೇರ್‌ಗಳಿವೆಯಂತೆ. ಒಂದಷ್ಟು ಖರ್ಚಾಗ್ತದೆ ಹೌದು, ಆದರೂ ಹೆಂಗೋ ನಿಭಾಯಿಸಬಹುದು. ರಾಜೀವ ಒಂದಷ್ಟು ನೆಮ್ಮದಿ ಕಂಡುಕೊಂಡರೆ ಮಿಕ್ಕಿದ್ದೆಲ್ಲ ಸಲೀಸಾಗಿ ನಡೆದು ಹೋಗ್ತದೆ. 

ಆದ್ರೂ ಮೈಸೂರು ಬಿಟ್ಟು ಬೆಂಗಳೂರಿಗೆ ಸೆಟಲ್‌ ಆಗಲು ಹೋಗುವುದು ಬಾಲಿಶ ನಿರ್ಧಾರದಂತೇ ತೋರ್ತದೆ. ಅದೂ ಮೈಸೂರಿನಲ್ಲೇ ಕೈ ತುಂಬಾ ಸಂಬಳ ಸಿಗುವ ಕೆಲಸ ದಕ್ಕುವಾಗ. ಮಗಳನ್ನು ನೋಡಿಕೊಳ್ಳಲು ಅಪ್ಪ ಅಮ್ಮ ಇದ್ದಾರೆ. ಜೊತೆಗೆ ಫಸ್ಟ್‌ ಹೆಲ್ತ್‌ ಒಂಥರಾ ಎರಡನೇ ಮನೆಯಂತೆಯೇ ಆಗಿ ಹೋಗಿದೆ. ಎಲ್ಲರೊಡನೆಯೂ ಒಗ್ಗಿ ಹೋಗಿದ್ದೇನೆ. ಕಷ್ಟ ಸುಖ ಹಂಚಿಕೊಂಡು ಕಿತ್ತಾಡೋಕೆ ಸುಮ ಇದ್ದಾಳೆ. ರಾಮ್‌ನಂತಹ ಒಳ್ಳೆ ಗೆಳೆಯ ಕೂಡ ಇದ್ದಾನೆ. ಇರೋದ್ರಲ್ಲಿ ನಮ್‌ ಡಿಪಾರ್ಟ್‌ಮೆಂಟೇ ಕಿರಿಕಿರಿ ಇಲ್ಲದೆ ನಡೀತಿರೋದು. ಇಷ್ಟೆಲ್ಲ ಸೌಕರ್ಯಗಳಿರುವಾಗ ಮೈಸೂರು ಬಿಟ್ಟು ಹೋಗಲು ಮನಸ್ಸಾಗುವುದಾದರೂ ಹೇಗೆ? ಸುಮ್ಮನೆ ಕ್ಲಿನಿಕ್‌ ಮಾಡಿಕೊಂಡು ಇವರಿಗೊಂದು ಫಾರ್ಮಸಿ ಇಟ್ಟುಕೊಟ್ಟರೆ ಆಗ್ತದೋ ಏನೋ? ಅಂತನ್ನಿಸ್ತದೆ. ಆದರೆ ಕ್ಲಿನಿಕ್‌ ಇಡೋದಂದ್ರೆ ಭಯ. ಕ್ಲಿನಿಕ್ಕು ಚೆನ್ನಾಗಿ ನಡೆಯುವಂತಾಗಲು ವರುಷ ಎರಡು ವರುಷವಾದರೂ ಕಾಯಬೇಕು. ಅಷ್ಟು ಕಾದರೂ ಕ್ಲಿಕ್‌ ಆಗೇ ಆಗ್ತದೆ ಅಂತೇನೂ ಇಲ್ಲ. ಕ್ಲಿಕ್‌ ಆದರೂ ಬೇರೆಯವರು ಎಲ್ಲಿ ಹೊಸ ಕ್ಲಿನಿಕ್‌ ತೆಗೆದು ಸ್ಪರ್ಧೆ ನೀಡಿಬಿಡ್ತಾರೋ ಅನ್ನೋ ಭಯ ಇದ್ದೇ ಇದೆ. ಇನ್ನು, ಕ್ಲಿನಿಕ್‌ ನಿರೀಕ್ಷೆಗೂ ಮೀರಿ ಗೆದ್ದು ಬಿಟ್ಟರೆ ಮನೆಯ ಕಡೆಗೆ, ಮಗಳ ಕಡೆಗೆ ಗಮನವೇ ಕೊಡದಷ್ಟು ಕೆಲಸವಾಗಿಬಿಡ್ತದೆ. ರಜಾ ಹಾಕೋಕಾಗಲ್ಲ, ಅಯ್ಯೋ ಇವತ್‌ ಯಾಕೋ ಬೋರು ಮನೇಲೇ ಇದ್ದು ಬಿಡುವ ಅನ್ನುವಂಗಿಲ್ಲ, ಜನ ಬರಲಿ ಬರದೇ ಹೋಗಲಿ ಘಂಟೆ ಹೊಡೀತಿದ್ದಂಗೇ ಹೋಗಿ ಕ್ಲಿನಿಕ್ಕಿನ ಬಾಗಿಲು ತೆರೆದು ಕುಳಿತುಕೊಳ್ಳಲೇಬೇಕು. ಯಪ್ಪ! ಬೆಂಗಳೂರಿಗೆ ಹೋಗಿ ಯಾವುದಾದರೂ ಆಸ್ಪತ್ರೆಯಲ್ಲಿ ನೆಲೆ ಕಂಡುಕೊಳ್ಳುವುದು ಉತ್ತಮ, ಕ್ಲಿನಿಕ್‌ ಗ್ಲಿನಿಕ್‌ ಆಟ ನನಗಲ್ಲ.