Sep 30, 2015

‘ವಿವೇಕ'ವಿಲ್ಲದ ಪರಿಸರವಾದದಲ್ಲಿ ಮನುಷ್ಯನ ಸ್ಥಾನವೆಲ್ಲಿ?

ts vivekananda
Dr Ashok K R
ಕಳೆದ ಏಪ್ರಿಲ್ಲಿನಲ್ಲಿ ಬಿಳಿಗಿರಿರಂಗನಬೆಟ್ಟಕ್ಕೆ ಹೋಗಿದ್ದೆ. ವಾಪಸ್ಸಾಗುವಾಗ ರಸ್ತೆ ಬದಿಯಲ್ಲಿ ಸ್ಥಳೀಯರೊಬ್ಬರು ಚಕೋತ್ತಾ ಹಣ್ಣು ಮಾರುತ್ತ ಕುಳಿತಿದ್ದರು. ಎರಡು ಚಕೋತ್ತಾ ಹಣ್ಣು ಖರೀದಿಸಿ ಕೆ.ಗುಡಿಯಲ್ಲಿನ ಸಫಾರಿಯ ಬಗ್ಗೆ ವಿಚಾರಿಸುತ್ತಿದ್ದೆ. ಯಾವ್ಯಾವ ಟೈಮಲ್ಲಿ ಸಫಾರಿ ಇರುತ್ತೆ ಎಂದು ಕೇಳುತ್ತಿದ್ದೆ. ಹುಲಿ ಏನಾದ್ರೂ ಸಿಗುತ್ತಾ ಸಫಾರಿಯಲ್ಲಿ ಎಂದು ಕೇಳಿದಾಗ ‘ಈಗ ಬೇಸಿಗೆ ಅಲ್ವಾ ಸರ್. ನೀರು ಕಡಿಮೆ ಇರುತ್ತೆ. ನೀರಿರೋ ಜಾಗದಲ್ಲಿ ಉಪ್ಪು ಸವರಿರುತ್ತಾರೆ. ಉಪ್ಪು ಹುಡಿಕ್ಕೊಂಡು ಬಂದೇ ಬರ್ತಾವೆ’ ಎಂದವನು ಹೇಳಿದ. ಇದು ನಮ್ಮ ಎಕೋ ಟೂರಿಸಮ್ ಹೆಸರಿನ ಪರಿಸರವಾದದ ಪರಿ. ಹೆಚ್ಚಿನ ದುಡ್ಡು ಕೊಟ್ಟವರಿಗಷ್ಟೇ ಸಫಾರಿ ಸೌಲಭ್ಯ. ಸಫಾರಿಗೆ ಬಂದವರು ನಿರಾಶರಾಗಬಾರದು ಎಂಬ ಕಾರಣಕ್ಕೆ ಕೃತಕವಾಗಿ ಪ್ರಾಣಿಗಳನ್ನು ನೀರಿರುವ ಜಾಗಕ್ಕೆ ಕರೆಸುವ ವಿಧಾನ ಪರಿಸರಕ್ಕೆ ಪೂರಕವಾಗಿರಲು ಹೇಗೆ ಸಾಧ್ಯ? ಸರ್ಕಸ್ಸಿನಲ್ಲೂ ಪ್ರಾಣಿಗಳನ್ನು ಮನುಷ್ಯನ ಮನೋರಂಜನೆಗಾಗಿ ಉಪಯೋಗಿಸುತ್ತಾರೆ, ಇಲ್ಲೂ ಅದೇ ನಡೆಯುತ್ತೆ; ಅಲ್ಲದು ಹಿಂಸೆ ಎನ್ನಿಸಿಕೊಂಡರೆ ಇಲ್ಲಿ ಪರಿಸರ ಪ್ರವಾಸೋದ್ಯಮದ ಭಾಗವಾಗಿ ನಡೆಯುತ್ತದೆ. ಸಫಾರಿ ಹೋಗುವ ನಿರ್ಧಾರವನ್ನೇ ತ್ಯಜಿಸಿಬಿಟ್ಟೆ. ಈ ಹುಲಿ ಸಂರಕ್ಷಣೆಯ ಹೆಸರಿನಲ್ಲಿ ನಡೆಯುವ ಪರಿಸರವಾದ ಎಲ್ಲೋ ಒಂದು ಕಡೆ ತಪ್ಪಾಗಿದೆಯಾ ಎನ್ನುವ ಅನುಮಾನ ಅವತ್ತು ಬಂತಾದರೂ ಅದರ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಯೋಚನೆಯೇನು ಬರಲಿಲ್ಲ. ಅವತ್ತು ನನ್ನಲ್ಲಿ ಮೊಳಕೆಯೊಡೆದ ಯೋಚನೆಗಳು ಬೆಳೆದು ಆ ಅಭಿಪ್ರಾಯಗಳಿಗೊಂದು ರೂಪ ದಕ್ಕಲಾರಂಭಿಸಿರುವುದು ಡಾ.ಟಿ.ಎಸ್.ವಿವೇಕಾನಂದರ ಬರಹಗಳ ಸಂಗ್ರಹಗಳಾದ ‘ಭೂಮಿಗೀತೆ’ ಮತ್ತು ‘ಜೀವಪಲ್ಲಟಗಳ ಆತ್ಮಕಥ’ ಕೃತಿಗಳನ್ನು ಓದಿದಾಗ. 

2004 – 2005ರಲ್ಲಿ ಪತ್ರಿಕೆಗಳಿಗೆ ಬರೆದ ಲೇಖನಗಳು ಪುಸ್ತಕ ರೂಪದಲ್ಲಿ ಹೊರಬಂದಿದೆ. ಅವತ್ತಿನಷ್ಟೇ ಇವತ್ತಿಗೂ ಪ್ರಸ್ತುತವಾಗಿಸುವ ಅಂಶಗಳಿವೆ. ಎರಡೂ ಪುಸ್ತಕಗಳು ಪರಿಸರದ ಬಗ್ಗೆ ಮಾತನಾಡುತ್ತವೆ. ಮಾತನಾಡುತ್ತವೆ ಅನ್ನುವುದಕ್ಕಿಂತ ಅರಿವು ಮೂಡಿಸುತ್ತವೆ ಎನ್ನುವುದು ಸರಿ. ಪರಿಸರವೆಂದರೆ ಗಿಡ ಮರ ಪಕ್ಷಿ ಪ್ರಾಣಿ ಕಾಡು ನದಿ. ಅವುಗಳು ಕೆಡದಂತೆ, ಅಳಿದುಹೋಗದಂತೆ ಮಾಡುವುದೇ ಪರಿಸರವಾದ. ಒಂದು ಗಿಡ ನೆಟ್ಟು, ಹುಲಿ - ಆನೆ ಸಂರಕ್ಷಣೆಗೆ ಕರೆ ನೀಡಿ, ಕೆರೆ – ನದಿ ನೀರನ್ನು ಶುದ್ಧ ಮಾಡಲು ಕೋಟ್ಯಾಂತರ ಖರ್ಚು ಮಾಡುವುದು ನಾವು ದಿನನಿತ್ಯ ನೋಡುವ ಪರಿಸರವಾದ. ಇದ್ಯಾವುದೂ ಪರಿಸರವಾದವೇ ಅಲ್ಲ ಎಂದು ಸಾರಾಸಗಾಟಾಗಿ ವಿವೇಕಾನಂದರು ಸಿಟ್ಟಿನಿಂದ, ವ್ಯಂಗ್ಯದಿಂದ ಹೇಳಿದಾಗ ‘ಈ ಮನುಷ್ಯನಿಗೇನೂ ತಲೆ ಕೆಟ್ಟಿದೆಯಾ? ಇದು ಪರಿಸರವಾದವಲ್ಲದೇ ಹೋದರೆ ಇನ್ಯಾವುದು ಪರಿಸರವಾದ?’ ಎಂಬ ಪ್ರಶ್ನೆ ಮೂಡದೇ ಇರುವುದಿಲ್ಲ. ಇವೆಲ್ಲವೂ ಯಾಕೆ ಪರಿಸರವಾದವಲ್ಲ ಎಂದವರು ವಿವರಿಸುತ್ತ ಸಾಗಿದಾಗ ಹೌದಲ್ವಾ? ನಮಗ್ಯಾಕೆ ಈ ಯೋಚನೆಯೇ ಬಂದಿರಲಿಲ್ಲ ಎಂದನ್ನಿಸಲಾರಂಭಿಸುತ್ತದೆ. ನಮ್ಮ ಎಲ್ಲಾ ಪರಿಸರವಾದದ ಹೋರಾಟಗಳಲ್ಲೇ ಮನುಷ್ಯನೇ ಕಾಣೆಯಾಗಿದ್ದಾನೆ ಎಂಬ ಸಂಗತಿ ಅರಿವಿಗೆ ಬರಲಾರಂಭಿಸುತ್ತದೆ. ಮನುಷ್ಯ ಕೂಡ ಪ್ರಕೃತಿಯ ಒಂದು ಭಾಗವೇ ಹೌದಲ್ಲವೇ? ಮನುಷ್ಯನನ್ನು ಮರೆತು ಯಾವ ಪರಿಸರದ ಬಗ್ಗೆ ನಾವೆಲ್ಲರೂ ಮಾತನಾಡುತ್ತಿದ್ದೇವೆ? ಹುಲಿ ಸಂರಕ್ಷಣೆಯ ಹೆಸರಿನಲ್ಲಿ ಆದಿವಾಸಿಗಳನ್ನು ‘ಅವರು ಪರಿಸರಕ್ಕೆ ಹಾನಿಕಾರಕ’ ಎಂಬ ನೆಪವೊಡ್ಡಿ ಕಾಡಿನಿಂದ ಹೊರಗಟ್ಟುವ ನಗರ ಕೇಂದ್ರಿತ ಸಮಾಜ ಹೆಚ್ಚು ಹಣ ನೀಡಿದವರಿಗೆ ಕಾಡಿಗೆ ಹೋಗಿ ‘ಮಜಾ’ ಮಾಡುವ ಅವಕಾಶ ನೀಡುವುದು ಯಾವ ರೀತಿಯಿಂದ ಪರಿಸರಕ್ಕೆ ಪೂರಕ?


bhoomigeethe
ಈ ರೀತಿಯ ಪ್ರಶ್ನೆಗಳನ್ನು, ಪರಿಸರವಾದದ ಗೊಂದಲಗಳನ್ನು ಪದಪುಂಜಗಳಿಂದ ಅಲಂಕರಿಸಿ ಓದುಗನನ್ನು ಭಾವನಾತ್ಮಕವಾಗಿ ಸೆಳೆಯುವ ಪ್ರಯತ್ನವಿಲ್ಲದಿರುವುದೇ ಈ ಪುಸ್ತಕಗಳ ಹಿರಿಮೆ. ಇಲ್ಲಿ ಕರಾರುವಾಕ್ ಅಂಕಿ ಸಂಖೈಗಳಿವೆ. “ಭಾರತದಲ್ಲಿ ಸಮಾಜ ವಾದ ಅಥವಾ ‘ಸಮತಾ ವಾದಗಳು’ ಬೇಕಾದರೆ ‘ವಾದ’ಗಳಾಗಿ ನಿಲ್ಲಬಹುದೇ ವಿನಯ ‘ಪರಿಸರ’ ಎಂದೂ ‘ವಾದ’ವಾಗಲು ಸಾಧ್ಯವಿಲ್ಲ. ಯಾವುದು ಆಚರಣೆ ಬರದಿದ್ದರೂ ಚಿಂತೆ ಇಲ್ಲವೋ ಅದು ‘ವಾದ’ ಆಗುತ್ತದೆ. ಇಂತಲ್ಲಿ ಪರಿಸರ ‘ವಾದ’ ಆಗಲು ಹೇಗೆ ಸಾಧ್ಯ? ಅದು ಆಚರಣೆಯಾಗಬೇಕಿತ್ತು” ಎಂದು ನೇರವಾಗಿ ಹೇಳುತ್ತಾರೆ (ಪರಿಸರವಾದ ಎಂಬ ಸಾಂಸ್ಕೃತಿಕ ರಾಜಕೀಯ). ಸಾಮಾನ್ಯವಾಗಿ ಪರಿಸರದ ವಿಷಯದ ಬಗ್ಗೆ ಚರ್ಚೆ ಮಾತು ಬರಹಗಳು ಸಾಗಿದಾಗ ಅಲ್ಲಿ ಜಾತಿ ಪ್ರವೇಶ ಪಡೆಯುವುದು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ವರ್ಗ ಬೇಧದ ಚರ್ಚೆಗಳೂ ಇರುವುದಿಲ್ಲ. ಇವೆರಡೂ ಪುಸ್ತಕಗಳು ಈ ಆಧುನಿಕ ಪರಿಸರವಾದ ಹೇಗೆ ಮೇಲ್ವರ್ಗದವರು - ಮೇಲ್ಜಾತಿಯವರು ಆದಿವಾಸಿಗಳ ಬದುಕುವ ನೆಲೆಯನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ವಿವರಿಸುತ್ತದೆ. ಅಡುಗೆ ಮಾಡಲು ಸೌದೆ ಪುಳ್ಳೆ ಆರಿಸಿಕೊಳ್ಳುವ ಆದಿವಾಸಿ ಮಹಿಳೆ ಹೇಗೆ ತಾನೇ ಪರಿಸರಕ್ಕೆ ಅಪಾಯಕಾರಿ? ಈ ಆದಿವಾಸಿಗಳನ್ಯಾಕೆ ಕಾಡಿನಿಂದ ತೆರವು ಮಾಡಿಸಬೇಕು? ಈ ಆದಿವಾಸಿಗಳ ಮನೆಗಳಲ್ಲಿ ಬೆಲೆಬಾಳುವ ಮರಗಳ ಕುರ್ಚಿ ಮೇಜುಗಳಿವೆಯಾ? ಅವರ ಮನೆಯಲ್ಲಿ ಹುಲಿಯ ಚರ್ಮ, ಜಿಂಕೆಯ ಕೊಂಬುಗಳಿವೆಯಾ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಆದಿವಾಸಿಗಳು ಮರಮಟ್ಟು ಕಡಿಯುತ್ತಿದ್ದರೂ ಅವರಿಗಾಗಿ ಕಡಿಯುವುದಿಲ್ಲ, ನಗರವಾಸಿ ಮೇಲ್ಜಾತಿ – ಮೇಲ್ವರ್ಗದ ಜನರ ಶೋಕಿಗಾಗಿ ಪುಡಿಗಾಸಿಗಾಗಿ ಕಡಿದಿರುತ್ತಾರೆ ಎಂಬಂತಹ ವಿಷಯಗಳ ಸತ್ಯಾಸತ್ಯತೆಯನ್ನು ಅರಿಯಲು ಸುಮ್ಮನೆ ನಮ್ಮ ಮನೆಯ ಬಾಗಿಲು – ಕಿಟಕಿ – ಕುರ್ಚಿ – ಮೇಜುಗಳ ಮೇಲೆ ಕಣ್ಣಾಡಿಸಿದರೆ ಸಾಕು. 

“ದೀಪದ ಕೆಳಗಿನ ಕತ್ತಲಿನಂತೆ ಸಂಪನ್ಮೂಲ ಪ್ರದೇಶದ ಜನ ಅಲ್ಲಿನ ಸಂಪನ್ಮೂಲಗಳಿಂದ ಹೊರತಳ್ಳಲ್ಪಡುತ್ತಾರೆ. ಯಾವುದೋ ಹೆಸರಿನಲ್ಲಿ, ಮತ್ಯಾರಿಗೋ ಇಲ್ಲಿನ ಸಂಪನ್ಮೂಲ ಬಿಸಾಕು ಬೆಲೆಗೆ ಮಾರಾಟವಾಗುತ್ತದೆ. ಸ್ಥಳೀಯರು ಪರಕೀಯರಾಗಿ, ಪರಕೀಯರು ಸ್ಥಳೀಯರನ್ನು ಆಳುವಂತಾಗುತ್ತದೆ” (ಸಗಣಿ ಮಾರಿದರೆ ಪರಿಸರ ವಿರೋಧಿ, ಸಾಫ್ಟ್ ವೇರ್ ಮಾರಿದರೆ) ಜೀವಪಲ್ಲಟಗಳ ಆತ್ಮಕಥನದಲ್ಲಿ ಪರಿಸರದ ಜೊತೆಜೊತೆಗೆ ಕರೆಂಟಿನ ಖಾಸಗೀಕರಣ, ಸಗಣಿ ಮಾರಾಟದ ಹಿಂದಿನ ಜಾತಿ ರಾಜಕೀಯ, ಕಚರನೇ ಸಿಕ್ಸರ್ ಹೊಡೆದಿದ್ದರೆ ‘ಲಗಾನ್’ಗೆ ಏನಾಗುತ್ತಿತ್ತು? ಎನ್ನುವಂತಹ ಸಾಂಸ್ಕೃತಿಕ ಪ್ರಶ್ನೆ, ಇಂಗ್ಲೀಷ್ ಕಲಿಕೆಯ ಬಗ್ಗೆ ಸುಳ್ಳನ್ನಾಡುವ ‘ಕನ್ನಡ’ ಕಂದಮ್ಮಗಳ ಬಗ್ಗೆಯೆಲ್ಲ ವಸ್ತುನಿಷ್ಟವಾಗಿ ಬರೆಯಲಾಗಿದೆ. “1983 – 1992ರವರೆಗೆ ಜಾರಿಯಲ್ಲಿದ್ದ ಸಾಮಾಜಿಕ ಅರಣ್ಯ ಯೋಜನೆಯಡಿಯಲ್ಲಿ ಇವರು ಬೆಳೆಸಿದ ನೆಡುತೋಪು 417 ಚ.ಕಿಮೀ, ಇದಕ್ಕೆ ವಿಶ್ವಬ್ಯಾಂಕ್ ಮತ್ತು ಓಡಿಎ ಇಂದ ಪಡೆದ ಸಾಲ ರೂ 93 ಕೋಟಿ. ಸಾರ್ವಜನಿಕರಿಗೆ ಹಂಚಿದ ಸಸಿಗಳ ಮೊತ್ತ 50.75 ಕೋಟಿ. ಇದರಲ್ಲಿ 75 ಲಕ್ಷ ಸಸಿಗಳನ್ನು ಬಿಟ್ಟು ಬಿಟ್ಟರೂ…., ಹೆಕ್ಟೇರಿಗೆ 100 ಸಸಿಗಳಂತೆ ಈ ರಾಜ್ಯದ ನೆಲಕ್ಕೆ ನಾಟಿ ಮಾಡಿದ್ದರೂ ಕನಿಷ್ಟ 50 ಲಕ್ಷ ಚ.ಕಿಮೀ ಹೊಸ ಕಾಡು ಸೃಷ್ಟಿಯಾಗಿರಬೇಕಿತ್ತು. ಈ ಯೋಜನೆ ಆರಂಭವಾದ ಅವಧಿಯಿಂದ ಇಂದಿನವರೆಗೆ 20 ವರ್ಷಗಳು ಮುಗಿದಿರುವುದರಿಂದ ಬಹುದೊಡ್ಡ ಮರಗಳ ಕಾಡು ಕಣ್ಣಿಗೆ ಕಾಣಬೇಕಿತ್ತು” (ಅಲ್ಲಿ ಹುಲಿಗಳು ಕಾಣೆಯಾದರೆ ಇಲ್ಲಿ ಕಾಡುಗಳೇ ಕಾಣೆ) ಎನ್ನುವಂತಹ ವಿವರಗಳು ಹೇಗೆ ನಮ್ಮ ಪರಿಸರಪರ ಯೋಜನೆಗಳು ದುಡ್ಡು ಮಾಡುವ ದಂಧೆಗಳಾಗಿವೆ ಎನ್ನುವುದನ್ನು ತಿಳಿಸಿಕೊಡುತ್ತದೆ. ನೀರು ಕೂಡ ವ್ಯವಹಾರವಾಗಿಬಿಡುತ್ತಿರುವ ಅಪಾಯದ ಬಗ್ಗೆ 2004ರಲ್ಲಿ ಬರೆದಿದ್ದಾರೆ ವಿವೇಕಾನಂದ. ಇಂದು ಆ ವಾಸ್ತವವನ್ನು ನಾವು ನೋಡುತ್ತಿದ್ದೇವೆ, ಅನುಭವಿಸುತ್ತಿದ್ದೇವೆ. ಹಣವಿಲ್ಲದ ಕಾರಣಕ್ಕೆ ನೀರೂ ದಕ್ಕದ ಪರಿಸ್ಥಿತಿ ಕೊನೆಗೆ ಕಾಡುವುದು ಮೇಲ್ಜಾತಿ – ಮೇಲ್ವರ್ಗದವರಿಗಲ್ಲ ಎಂಬ ವಾಸ್ತವ ಪರಿಸರವಾದಕ್ಕೂ ಮತ್ತು ನಮ್ಮ ಜಾತಿ ವ್ಯವಸ್ಥೆಗೂ ಇರುವ ಸಂಬಂಧವನ್ನು ಅನಾವರಣಗೊಳಿಸುತ್ತದೆ. 

ನೀರು ಕಾಡು ಪರಿಸರದ ಬಗೆಗಿನ ಮಾತುಗಳೆಲ್ಲವೂ ಸರಿಯೇ, ಆದರಾ ಯೋಚನೆ – ಯೋಜನೆಗಳು ಮನುಷ್ಯನನ್ನು ಹೊರತುಪಡಿಸಿದ್ದಾದರೆ ಅದು ಶೋಷಿತ ವರ್ಗಕ್ಕೂ ಅಪಾಯಕಾರಿ, ಪರಿಸರಕ್ಕೂ ಅಪಾಯಕಾರಿ. ಈ ಎರಡೂ ಪುಸ್ತಕಗಳನ್ನು ಓದಿ ಮುಗಿಸುವ ಸಂದರ್ಭದಲ್ಲಿ ಎರಡು ವರದಿಗಳನ್ನು ಪತ್ರಿಕೆಗಳಲ್ಲಿ ಓದಿದೆ. ಒಂದು ಮಂಗಳ ಗ್ರಹದಲ್ಲಿ ನೀರಿರುವ ಅಂಶ ಪತ್ತೆಯಾಗಿದೆಯೆಂಬ ವರದಿ. ಇರುವ ಭೂಮಿಯ ನೀರನ್ನೇ ನೆಟ್ಟಗೆ ಉಪಯೋಗಿಸಲಾಗದೆ, ಖಾಸಗಿಯವರ ಕೈಗೆ ಒಪ್ಪಿಸಿ ಕುಲಗೆಡಿಸಿರುವ ನಮ್ಮ ಮುಂದಿನ ಯೋಜನೆ ಮಂಗಳದ ಅಂಗಳದಲ್ಲಿರುವ ನೀರನ್ನು ಖಾಸಗೀಕರಣಗೊಳಿಸುವುದೇ? ಇನ್ನೊಂದು ವರದಿ ದೇಶದ ರಾಷ್ಟ್ರೀಯ ಹೆದ್ದಾರಿಗಳ ಮಧ್ಯದಲ್ಲಿ, ಇಕ್ಕೆಲದಲ್ಲಿ ಕೋಟ್ಯಾಂತರ ಮರ ನೆಡುವ ‘ಪರಿಸರವಾದಿ’ ಯೋಜನೆ. ಊರಗಲದ ರಸ್ತೆಗಳನ್ನು ಕಟ್ಟಿದ್ದೇ ನಗರವಾಸಿಗಳ ಅನುಕೂಲಕ್ಕಾಗಿ, ಆ ನಗರವಾಸಿಗಳು ಓಡಾಡಲು ತಂಪಾಗಿರಲೆಂದು ಮರಗಳನ್ನು ಬೆಳೆಸಲು ಯೋಚಿಸುವ ಸರಕಾರ, ಎಂತಹ ಅದ್ಭುತ ಯೋಜನೆ ಎಂದು ಹೊಗಳುವ ನಾವು….. ಕೊನೆಗೆ ಆ ಕೋಟ್ಯಾಂತರ ಮರಗಳಲ್ಲಿ ಉಳಿಯುವ ಮರಗಳೆಷ್ಟು? ಕೋಟ್ಯಾಂತರ ರುಪಾಯಿಯ ವ್ಯವಹಾರದಿಂದ ಲಾಭವ್ಯಾರಿಗೆ? ಈ ಎರಡೂ ಪುಸ್ತಕಗಳನ್ನು ಓದದಿದ್ದರೆ ಪರಿಸರಕ್ಕೇ ಲಾಭವಲ್ಲವೇ ಎಂದು ಸರಳವಾಗಿ ಉತ್ತರಿಸಿಬಿಡುತ್ತಿದ್ದೆ. ಈಗ ಸಾಧ್ಯವಾಗುವುದಿಲ್ಲ; ಪುಸ್ತಕ ನೀಡಿದ ಹೊಸ ಹೊಸ ಹೊಳಹುಗಳು ಪರಿಸರ ಪ್ರಜ್ಞೆ ಎಂಬುದನ್ನು ಮತ್ತೆ ಅ ಆ ಇ ಈ ಯಿಂದ ಕಲಿಯುವಂತೆ ಪ್ರೇರೇಪಿಸಿದೆ. ಗಿಡ ನೆಡುವ ಪರಿಸರ ಪ್ರೇಮಿ ನೀವಾಗಿದ್ದಲ್ಲಿ ತಪ್ಪದೇ ಈ ಎರಡೂ ಪುಸ್ತಕಗಳನ್ನು ಓದಿ.

ಪ್ರಕಾಶಕರು:
ತೇಜಸ್ವಿ ಪ್ರಕಾಶನ, ಬೆಂಗಳೂರು.
ಭೂಮಿಗೀತೆ – ಬೆಲೆ: 250/-
ಜೀವಪಲ್ಲಟಗಳ ಆತ್ಮಕಥನ – ಬೆಲೆ: 150
ಪ್ರತಿಗಳಿಗಾಗಿ ಸಂಪರ್ಕಿಸಿ: 
ಬಾಲು – 9986833515
ಶೇಖರ್ ಬಾಬು - 9845353868

Sep 28, 2015

ಲೈಕು ಕಮೆಂಟು ಶೇರು....

Dr Ashok K R
ತಂತ್ರಜ್ಞಾನದಲ್ಲಿ ಎಲ್ಲವೂ ಸಲೀಸು!
ಲೈಕು ಕಮೆಂಟು ಶೇರು

ದೇಶಪ್ರೇಮಿಯಾಗುವುದು ಎಷ್ಟೊತ್ತಿನ ಕೆಲಸ?
ಮೂರು ಬಣ್ಣ ಬಳ್ಕಂಡು
ಒಂದು ಸೆಲ್ಫಿ ತಗಂಡು
ಫೋಟೋ ಹಾಕಿದರಾಯಿತು....
ಲೈಕು ಕಮೆಂಟು ಶೇರು.


ಧರ್ಮರಕ್ಷಣೆಯಂತೂ ಬಲು ಸುಲಭ
ಅನ್ಯ ಧರ್ಮ ದ್ವೇಷಿಸುವ 
ಎರಡು ಬರಹ ಸಾಕು
ಫೋಟೋ ಹಾಕಿದರಾಯಿತು....
ಲೈಕು ಕಮೆಂಟು ಶೇರು.

ಪ್ರತಿಭಟಿಸಲು ಬಿಸಿಲು ಮಳೆ 
ಚಳಿಯಲ್ಲಿ ನಿಲ್ಲುವ ಅಗತ್ಯವೇನಿಲ್ಲ
ಪಿಟಿಷನ್ನಿಗೆ ಸಹಿ ಹಾಕಿ
ಲಿಂಕ್ ಹಾಕಿದರಾಯಿತು....
ಲೈಕು ಕಮೆಂಟು ಶೇರು.

ಅಲ್ಯಾರೋ ಮಲೆಕುಡಿಯನ
ಕೈ ಕತ್ತರಿಸಿದರು ಇಲ್ಯಾರೋ
ದಲಿತರನ್ನು ಹೊರಗಿಟ್ಟರು ಮತ್ತೆಲ್ಲೋ
ತಮಟೆ ಬಾರಿಸದವರಿಗೆ 
ದಬದಬನೆ ಬಡಿದರು 
ಇವುಗಳ ಮಧ್ಯೆ ನಂದೆಲ್ಲಿಡ್ಲಿ ಅಂತ ರೈತನ ಆತ್ಮಹತ್ಯೆ 
ಅವರ ಬೆಂಬಲಕ್ಕೆ ಅಬಿರುದ್ದಿ ವಿರೋಧಿಗಳ ಅರಚಾಟ.... ಇಸ್ಕಿ ಮಾಕೀ.

ದೇಶದ ಏಳ್ಗೆಗೆ ರಕ್ತವಿರಲಿ
ಬೆವರು ಹರಿಸುವುದೂ ಬೇಡ
Supportdigitalindiaದ ಮೇಲೆ ಕ್ಲಿಕ್ಕಿಸಿ
ಚಿತ್ರ ಬದಲಿಸಿದರಾಯಿತು....
ಲೈಕು ಕಮೆಂಟು ಶೇರು.

ಈ ಸಂಭ್ರಮದ ಸಂಕಟದ
ನಡುವೆ ತೋಚಿದ್ದು ಗೀಚಿ
ಗೀಚಿದ್ದನ್ನು ತಿದ್ದಿ ತೀಡುವ
ನನ್ನಂತೋರ ತುಮುಲಗಳಿಗೂ....
ಲೈಕು ಕಮೆಂಟು ಶೇರು.

ಸಾಂದರ್ಭಿಕ ಚಿತ್ರ: ಅಂತರ್ಜಾಲ.

Sep 22, 2015

ಡಿಜಿಟಲ್ ಇಂಡಿಯಾದ ಮೇಲೆ ಸರ್ಕಾರದ ಕಳ್ಳಗಣ್ಣು?!

vijaykarnataka
ಬೆಳಿಗ್ಗೆ ಬೆಳಿಗ್ಗೆ ಸುದ್ದಿಗಳನ್ನು ಓದುವವರ, ಅದರಲ್ಲೂ ಯುವಜನತೆಯ ಎದೆಬಡಿತ ಒಂದರೆಕ್ಷಣ ನಿಂತುಬಿಟ್ಟಿರಲಿಕ್ಕೂ ಸಾಕು! ವಾಟ್ಸ್ ಅಪ್ ಮೆಸೇಜುಗಳನ್ನು 90 ದಿನಗಳವರೆಗೆ ಡಿಲೀಟ್ ಮಾಡುವುದು ಹೊಸ ಕಾನೂನಿನ ಪ್ರಕಾರ ಅಪರಾಧವಾಗುತ್ತದೆ ಎಂಬ ಅಂಶ ದಿಕ್ಕೆಟ್ಟವರೆಷ್ಟು ಮಂದಿಯೋ. ಗೆಳತಿಗೋ ಗೆಳೆಯನಿಗೋ ಮೆಸೇಜು ಕಳಿಸಿ ಆ ಕಡೆಯಿಂದ ಬಂದ ರಿಪ್ಲೈ ಓದಿಕೊಂಡು ಮನೆಯವರ ಕಣ್ಣಿಗೆ ಬಿದ್ದುಗಿದ್ದು ಬಿಟ್ಟೀತು ಎಂಬ ಆತಂಕದಿಂದ ಪಟಕ್ಕಂತ ಮೆಸೇಜು ಡಿಲೀಟು ಮಾಡುವವರ ಪೈಕಿ ನೀವೂ ಒಬ್ಬರಾಗಿದ್ದರೆ ಈ ವರದಿಯನ್ನು ತಪ್ಪದೇ ಓದಿ! 
"National Encryption Policy" ಎಂಬ ಹೊಸ ಕಾನೂನನ್ನು ಕೇಂದ್ರದ ಐಟಿ ಇಲಾಖೆ ಜಾರಿಗೆ ತರಲುದ್ದೇಶಿಸಿದೆ. ಇದರನ್ವಯ ಗುಂಪಿನಲ್ಲಿ ಮೆಸೇಜು ಕಳುಹಿಸಲು ಉಪಯೋಗಿಸುವ ತಂತ್ರಾಂಶಗಳನ್ನು (ಉದಾ: ವಾಟ್ಸ್ ಅಪ್, ಲೈನ್, ಹೈಕ್, ಟಿಲಿಗ್ರಾಮ್ ಇತ್ಯಾದೆ) ಸರಕಾರದ ಕಾನೂನಿನಡಿ ನೋಂದಣಿಗೊಳಿಸಬೇಕು. ಮತ್ತು ಈ ತಂತ್ರಾಂಶವನ್ನುಪಯೋಗಿಸುವವರು ಮೆಸೇಜು ಕಳುಹಿಸಿದ ದಿನದಿಂದ ತೊಂಭತ್ತು ದಿನಗಳವರೆಗೆ ಆ ಮೆಸೇಜನ್ನು ಅಳಿಸಿ ಹಾಕುವಂತಿಲ್ಲ. ಕಾನೂನಿನ ಸಂರಕ್ಷಕರು ಮೆಸೇಜುಗಳನ್ನು ಪರಿಶೀಲಿಸಲು ಕೇಳಿಕೊಂಡಾಗ ಒಂದು ವೇಳೆ ನೀವು ಮೆಸೇಜು ಅಳಿಸಿಬಿಟ್ಟಿದ್ದರೆ ಅದು ಅಪರಾಧವಾಗಿಬಿಡುತ್ತದೆ! ಈ ತಂತ್ರಾಂಶಗಳಿಗಷ್ಟೇ ಅಲ್ಲದೆ ಅನೇಕ ವೆಬ್ ಪುಟಗಳ ಮಾಹಿತಿಗಳು, ಈಮೇಲುಗಳನ್ನು ಕೂಡ ಈ ಕಾಯ್ದೆಯಡಿ ತರುವ ಉದ್ದೇಶವಿದೆಯಂತೆ. ಡಿಜಿಟಲ್ ಇಂಡಿಯಾದ ಹೆಸರಿನಲ್ಲಿ ಇಡೀ ಭಾರತವನ್ನೇ ತಂತ್ರಜ್ಞಾನಕ್ಕೆ ತೆರೆಯುವ ಆಸಕ್ತಿ ತೋರಿಸುತ್ತ ಇದೇನಿದು ಕಳ್ಳಗಣ್ಣು?!
ಸದ್ಯಕ್ಕೆ ನಿರಾಳವಾಗಿರಬಹುದು!
ಆಧುನಿಕ ತಂತ್ರಾಂಶಗಳಲ್ಲಿ ಸುರಕ್ಷತೆ ಹೆಚ್ಚು. ಆ ಸುರಕ್ಷತೆಯನ್ನು ಮೀರಿ ಹಳೆಯ ಸಂದೇಶಗಳನ್ನು ಹೊರತೆಗೆಯುವುದು ಪೋಲೀಸರಿಗೆ ಕಷ್ಟವಾಗುತ್ತದೆಂಬ ಕಾರಣಕ್ಕೆ ಈ ರೀತಿಯ ಕಾನೂನು ಜಾರಿಯಾಗುತ್ತಿದೆಯಂತೆ. ಬಹುಶಃ ಇಂತಹ ಎಲ್ಲಾ ಕಾಯ್ದೆ ಕಾನೂನು ಜಾರಿಗೆ ತರುವುದಕ್ಕೆ 'ದೇಶದ ಸಂರಕ್ಷಣೆಯ' ಹೆಸರನ್ನು ಉಪಯೋಗಿಸುತ್ತಾರೆ. ಇದಕ್ಕೂ ಅದೇ ಹೆಸರನ್ನು ಉಪಯೋಗಿಸುತ್ತಾರ ತಿಳಿದಿಲ್ಲ. ಈ ಕಾನೂನಿನ್ನೂ ಶೈಶಾವಸ್ಥೆಯಲ್ಲಿದೆ. ಸಾರ್ವಜನಿಕರ ಅಭಿಪ್ರಾಯಗಳನ್ನು ಆಹ್ವಾನಿಸಲಾಗಿದೆ. akrishnan@deity.gov.in ಮಿಂಚಂಚೆಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಬಹುದು. ಈಗಾಗಲೇ ಐಟಿ ಇಲಾಖೆಗೆ ಈ ಸಂಬಂಧವಾಗಿ ಅನೇಕ ದೂರುಗಳು ತಲುಪಿರಬಹುದು. ಕಳ್ಳಗಣ್ಣನ್ನು ವಿರೋಧಿಸುವವರ ಸಂಖೈ ಹೆಚ್ಚಿರಬಹುದು. ಆ ಕಾರಣದಿಂದ ಐಟಿ ಇಲಾಖೆಯ ವೆಬ್ ಪುಟದಲ್ಲಿ ಈ ಸಂದೇಹಗಳನ್ನು ನಿವಾರಿಸುವ ಸಲುವಾಗಿ ವಾಟ್ಸ್ ಅಪ್ ಮುಂತಾದ ತಂತ್ರಾಂಶಗಳನ್ನು, ಪಾಸ್ ವರ್ಡ್ ಆಧಾರಿತ ಸೇವೆಗಳನ್ನು ಸದ್ಯಕ್ಕೆ ಈ ವಿಧೇಯಕದಿಂದ ಹೊರಗಿಡುವ ತೀರ್ಮಾನವನ್ನು ಮಾಡುವುದಾಗಿ ತಿಳಿಸಿದೆ. ಮಾಡಿಯೇ ತೀರುತ್ತದೆಂದು ಹೇಳುವಂತಿಲ್ಲ.
ನೀವು ಒಂದು ಮಿಂಚಂಚೆ ಕಳುಹಿಸಿ: (ಕೆಳಗಿನದನ್ನು ಕಾಪಿ ಮಾಡಿ ಕಳುಹಿಸಿದರೂ ನಡೆದೀತು):
I, Citizen of India strongly oppose the National Encryption Policy in its current form which clearly intrudes my privacy. The policy appears to be misused by the government agencies to disturb my personal life, to track my day to day activities and even it will be used to track my e-commerce activities. Being a citizen it is my right to have some private life without being monitored by the government agencies. 
I kindly request you to revert back the National Encryption Policy. Digital India should not be equated to Monitor India.

ಅರ್ಧ ಸತ್ಯಗಳನ್ನು ಮೊದಲು ನಿಷೇಧಿಸಬೇಕು.

ಡಾ.ಅಶೋಕ್. ಕೆ. ಆರ್.
(ಪ್ರಜಾವಾಣಿಗೆ ಪ್ರತಿಕ್ರಿಯೆಯಾಗಿ ಬರೆದ ಪ್ರಕಟಿತ ಪತ್ರ)
ಮಾಂಸ ನಿಷೇಧದ ಬಗ್ಗೆ ಪರ ವಿರೋಧದ ಚರ್ಚೆಯಲ್ಲಿ (ಪ್ರಜಾವಾಣಿ, ಶನಿವಾರ 19/09/2015) ಡಾ. ವಿಜಯಲಕ್ಷ್ಮಿಯವರು ಬರೆದಿರುವ ಅಭಿಪ್ರಾಯಗಳಿಗೆ ಪ್ರತಿಯಾಗಿ ಈ ಪತ್ರ. ವೈದ್ಯರು ತಮ್ಮ ಲೇಖನದ ಪ್ರಾರಂಭದಿಂದಲೇ ಮಾಂಸಾಹಾರಿಗಳನ್ನು ಕೀಳಾಗಿ ಕಾಣುವಂತೆ ವಿವಿಧ ಧರ್ಮಗ್ರಂಥಗಳ ನೆರವು ಪಡೆದುಕೊಂಡಿದ್ದಾರೆ. ಅಥರ್ವ ವೇದ, ಮನುಸ್ಮೃತಿಯಲ್ಲಿ ಮಾಂಸಾಹಾರಿಗಳನ್ನು ನಾಶ ಮಾಡಬೇಕೆಂಬ ಅಭಿಪ್ರಾಯವನ್ನು, ಮಾಂಸಹಾರಿಗಳೆಂದರೆ ಕೊಲೆಗಡುಕರು, ಅಪಾಯಕಾರಿ ಮನಸ್ಥಿತಿಯವರು ಎನ್ನುವುದನ್ನು ಉಲ್ಲೇಖಿಸುತ್ತಾರೆ. ಮುಸ್ಲಿಮರು ಹಲಾಲ್ ಮಾಂಸವನ್ನು ತಿನ್ನುವುದು ಕೂಡ ಅವರ ಕಣ್ಣಿಗೆ ಮಾಂಸಹಾರಿ ವಿರೋಧಿ ಮನಸ್ಥಿತಿಯಂತೆಯೇ ಕಾಣುತ್ತದೆ. ಮುಂದುವರೆಯುತ್ತಾ ಹೇಗೆ ಪಾಕಿಸ್ತಾನದ ಮುಸ್ಲಿಮ್ ಮಹಿಳೆಯರು ವಿದೇಶದಲ್ಲಿ ಸಸ್ಯಾಹಾರವನನ್ನು ಸೇವಿಸಿ ‘ಧರ್ಮರಕ್ಷಣೆ’ ಮಾಡುತ್ತಿದ್ದರು, ಭಾರತದ ಹಿಂದೂಗಳು ಅಲ್ಲಿ ಸಿಕ್ಕ ಸಿಕ್ಕ ಮಾಂಸವನ್ನು ತಿಂದು ‘ಧರ್ಮ’ ಮರೆತರು ಎಂದು ತಿಳಿಸುವುದರ ಮೂಲಕ ಏನನ್ನು ಸಾಧಿಸಲು ಹೊರಟಿದ್ದಾರೆ ಎಂಬುದೇ ತಿಳಿಯುವುದಿಲ್ಲ. ಆ ವಿದೇಶದಲ್ಲಿ ಅದೇ ಮಾಂಸವನ್ನು ತಿಂದುಕೊಂಡು ಬದುಕುವ ಜನರಿದ್ದಾರೆ, ಅವರದೂ ಒಂದು ಸಂಸ್ಕೃತಿಯಿದೆ ಎನ್ನುವುದನ್ನು ಕಡೆಗಣಿಸಿ ಅದನ್ನು ಹೀಯಾಳಿಸುವುದು ಎಷ್ಟರ ಮಟ್ಟಿಗೆ ಸರಿ? ತಮ್ಮ ವೈಯಕ್ತಿಕ ಮಾಂಸ ವಿರೋಧವನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಕ್ರಿಶ್ಚಿಯನ್ ಧರ್ಮಗ್ರಂಥಗಳನ್ನೂ ಉಪಯೋಗಿಸಿಕೊಳ್ಳುತ್ತಾರೆ. ಕೊನೆಗೆ ಅವರ ಲೇಖನ ಸಮರ್ಥಿಸುವುದು ಮಾಂಸಹಾರಿಗಳು ವಿಕೃತರು, ಕೊಲೆಗಡುಕರು, ಸಮಾಜಕ್ಕೆ ಅಪಾಯಕಾರಿಗಳು, ಸಸ್ಯಾಹಾರಿಗಳು ‘ಸಾತ್ವಿಕರು’ ಎಂಬ ಮನುವಾದವನ್ನೇ. 

ವೈದ್ಯರಾಗಿರುವುದರಿಂದ ತಮ್ಮ ವಾದಕ್ಕೆ ವೈದ್ಯಕೀಯ ಸಮರ್ಥನೆಯನ್ನು ಕೊಡುವ ಅನಿವಾರ್ಯತೆಗೆ ಬಿದ್ದು ಹೇಗೆ ಮಾಂಸಾಹಾರ ಸೇವಿಸುವುದರಿಂದ ದೇಹದ ಎಲ್ಲಾ ಅಂಗಾಂಗಗಳೂ ನಾಶವಾಗುತ್ತವೆ ಎಂದು ಭಯ ಹುಟ್ಟಿಸುವ ರೀತಿಯಲ್ಲಿ ಬರೆದಿರುವುದರಲ್ಲೆಲ್ಲಾ ಅರ್ಧ ಸತ್ಯವಿದೆ. ಮಾಂಸಾಹಾರಿಗಳು ವರುಷದ ಮುನ್ನೂರೈವತ್ತು ದಿನವೂ ದಿನದ ಮೂರೊತ್ತು ಒಂಚೂರೂ ತರಕಾರಿ – ಸೊಪ್ಪನ್ನು ತಿನ್ನದೆ ಮಾಂಸವನ್ನೇ ಸೇವಿಸುತ್ತಾರೆನ್ನುವುದಾದರೆ ಅವರು ಬರೆದ ಹಾಗೆ ಮನುಷ್ಯನ ದೇಹ ಅನೇಕ ರೋಗ ರುಜಿನಗಳಿಗೆ ‘ಮಾಂಸ’ದ ಕಾರಣದಿಂದಲೇ ತುತ್ತಾಗುತ್ತದೆ. ಆದರೆ ಆ ರೀತಿ ತಿನ್ನುವವರಿದ್ದಾರೆಯೇ? ವಾರದ ಕೆಲವೊಂದು ದಿನವಷ್ಟೇ ಮಾಂಸ ತಿನ್ನುವವರಿಗೆ ಅವರು ಹೇಳಿದಂತೆ ಹೃದ್ರೋಗ, ಮೂತ್ರಪಿಂಡದ ರೋಗ, ಯಕೃತ್ತಿನ ರೋಗವ್ಯಾವುದೂ ಮಾಂಸ ತಿನ್ನುವ ಕಾರಣಕ್ಕೆ ಬರಲಾರದು. ಮತ್ತು ಆ ರೋಗಗಳಿಗೆಲ್ಲ ಇನ್ನೂ ಅನೇಕಾನೇಕ ಕಾರಣಗಳಿರುವುದು ವೈದ್ಯರಾಗಿ ಅವರಿಗೂ ಗೊತ್ತಿರುತ್ತದೆ. ಉದ್ದೇಶಪೂರ್ವಕವಾಗಿ ಹೇಳಿಲ್ಲವಷ್ಟೇ. ಇನ್ನು ಮಾಂಸ ನಮ್ಮ ದೇಹದಲ್ಲಿ ಜೀರ್ಣವಾಗುವುದಿಲ್ಲ, ಅದು ಕೊಳೆತು ವಿಷವನ್ನು ಹೊರಹಾಕುತ್ತದೆ ಎಂದಿದ್ದಾರೆ; ಬೇಯಿಸಿದ ಮಾಂಸ ಜೀರ್ಣವೇ ಆಗದಿದ್ದಲ್ಲಿ ಮಾಂಸ ಸೇವನೆಯಿಂದ ದೇಹಕ್ಕೆ ವಿವಿಧ ಪ್ರೋಟೀನು, ವಿಟಮಿನ್ನುಗಳು ಸಿಗಬಾರದಿತ್ತಲ್ಲವೇ? ಮನುಷ್ಯ ಸಸ್ಯಾಹಾರಿಯಾಗಿ ‘ಸಾತ್ವಿಕ’ರಾಗಬೇಕೆಂದು ಬಯಸುವ ಅವರು ಸಸ್ಯಾಹಾರಿಗಳು ಹಸಿ ಸೊಪ್ಪು – ಹುಲ್ಲನ್ನು ತಿಂದರೆ ಅದೂ ಕೂಡ ಜೀರ್ಣವಾಗುವುದಿಲ್ಲ ಎನ್ನುವುದನ್ನು ಬೇಕಂತಲೇ ಮರೆಯುತ್ತಾರೆ. ಸುಟ್ಟ ಮಾಂಸ ಒಳ್ಳೆಯದಲ್ಲ ಎನ್ನುವ ಅವರು ಸುಟ್ಟ ಯಾವ ಪದಾರ್ಥವೂ (ರೊಟ್ಟಿ, ಜೋಳ) ಹೊಟ್ಟೆಗೆ ಒಳ್ಳೆಯದಲ್ಲ ಎನ್ನುವುದನ್ನು ಬರೆಯುವುದಿಲ್ಲ. ಮೇಲಾಗಿ ಯಾರೂ ದಿನಾ ಸುಟ್ಟ ಪದಾರ್ಥವನ್ನು (ಮಾಂಸವೋ ಸಸ್ಯಾಹಾರವೋ ವ್ಯತ್ಯಾಸವಿಲ್ಲ) ತಿನ್ನುವುದಿಲ್ಲ ಎನ್ನುವುದು ಅವರ ಗಮನಕ್ಕೆ ಬಂದಿಲ್ಲವೇ? ಕೇವಲ ಸಸ್ಯಾಹಾರ ತಿನ್ನುವುದರಿಂದಲೂ ಅನೇಕಾನೇಕ ಪ್ರೋಟೀನು, ವಿಟಮಿನ್ನುಗಳ ಕೊರತೆಯಾಗಿಬಿಡುತ್ತದೆ ಎನ್ನುವುದು ಅವರಿಗೆ ತಿಳಿದಿಲ್ಲವೇ?. ಪ್ರಾಣಿಜನ್ಯ ಹಾಲನ್ನು ಸೇವಿಸುವುದು ಕೂಡ ಈ ಕೊರತೆಯನ್ನು ನೀಗಿಸುವುದಕ್ಕಾಗಿ ತಾನೇ?

ವೈದ್ಯರೊಬ್ಬರು ಆಹಾರ ಪದ್ಧತಿಯ ಬಗ್ಗೆ ಬರೆವ ಲೇಖನದಲ್ಲಿ ಸಸ್ಯಾಹಾರ ಶ್ರೇಷ್ಟವೆಂಬ ಭ್ರಮೆಯನ್ನು ಬಿತ್ತುವ ಕೆಲಸವಾಗಬಾರದು. ಸಮತೋಲನ ಆಹಾರವೆಂದರೆ ಏನು ಎನ್ನುವುದರ ಕುರಿತು ಬೆಳಕು ಚೆಲ್ಲಬೇಕಿತ್ತು. ಸಸ್ಯಾಹಾರ, ಮಾಂಸಾಹಾರವೆಲ್ಲವೂ ಹೇಗೆ ಕಲುಷಿತವಾಗುತ್ತಿವೆ ಎನ್ನುವುದರ ಕುರಿತು ಅವರ ಕಾಳಜಿಯಿರಬೇಕಿತ್ತು. ಕೋಳಿಗಳು ಶೀಘ್ರವಾಗಿ ಬೆಳೆಯಲು ಹಾರ್ಮೋನುಗಳ ಬಳಕೆ, ತರಕಾರಿ ಸೊಪ್ಪುಗಳು ದಿಡೀರ್ ಅಂತ ಬೆಳೆಯಲು ಬಳಕೆಯಾಗುತ್ತಿರುವ ಕೆಮಿಕಲ್ಲುಗಳು, ವಿದೇಶಿ ತಳಿಯ ಹಸುಗಳಿಗೆ ನೀಡುವ ಹಾರ್ಮೋನುಗಳು ಹಾಲನ್ನು ಸೇರುತ್ತಿರುವ ಬಗ್ಗೆ – ಈ ಹಾರ್ಮೋನು, ಕೆಮಿಕಲ್ಲುಗಳು ಮನುಷ್ಯ ದೇಹವನ್ನು ಸೇರಿ ಹೇಗೆ ವಿವಿಧ ಖಾಯಿಲೆಗಳಿಗೆ ಕಾರಣವಾಗುತ್ತಿವೆ ಎನ್ನುವುದರ ಕುರಿತು ಬರೆದಿರುತ್ತಾರೆ ಎಂದುಕೊಂಡು ಲೇಖನವನ್ನು ಓದಿದರೆ ನಿರಾಸೆಯಾಗುತ್ತದೆ. ಪ್ರಪಂಚದ ಬಹುಸಂಖ್ಯಾತರ ಆಹಾರ ಪದ್ಧತಿಯನ್ನು ಕೀಳಾಗಿ ಕಾಣುವ ಮನಸ್ಥಿತಿ ಇಡೀ ಲೇಖನದ ತುಂಬ ತುಂಬಿಕೊಂಡಿದೆ. ವಿವಿಧ ಧರ್ಮಗ್ರಂಥಗಳನ್ನು ಉಲ್ಲೇಖಿಸಿ ತಮ್ಮ ‘ತಪ್ಪು’ ವಾದವನ್ನು ಸಮರ್ಥಿಸಿಕೊಳ್ಳುವುದು ಬಲಪಂಥೀಯತೆಯ ರೋಗ. ಅಂತದೇ ರೋಗಿಷ್ಟ ಮನಸ್ಥಿತಿಯಿಂದ ವೈಜ್ಞಾನಿಕವಾಗಿ ಅರ್ಧ ಸತ್ಯಗಳಂತಿರುವ ವಾಕ್ಯಗಳಿಂದ ತುಂಬಿಹೋಗಿರುವ ಅವರ ಲೇಖನ ಪ್ರಜಾವಾಣಿಯಂತಹ 
ಪತ್ರಿಕೆಯಲ್ಲಿ ಪ್ರಕಟವಾಗಿರುವುದು ನಿಜಕ್ಕೂ ಅಚ್ಚರಿ ಮೂಡಿಸಿತು.

Sep 21, 2015

Chennai Declaration of Language Rights

Language Rights Conference 

19-20. September, 2015 
Chennai 
The organizations and individuals, signatories to the present Chennai Declaration of Language Rights. or Chennai Declaration, meeting in Chennai on 20th September 2015, 

Having regard to the Universal Declaration of Linguistic Rights, released on 9th June 1996 in Barcelona, Spain which was a culmination of various international and regional declarations, laws, covenants and conventions. including 1948 Universal Declaration of Human Rights. 1966 International Covenant on Civil and Political Rights, 1992 Resolution 47/135 of the General Assembly of the United Nations Organization, 1989 Convention of the International Labour Organization and others, 

Having regard to various resolutions and demands raised by various language communities in the Union of India on preventing or removing imposition or selective promotion of any particular anguage over any other language and for language rights, 

Considering that the current language policies of the Union Government of India are detrimental to the very survival and development of languages spoken by various communities in the Indian Union. 
Considering that the current provisions in the Constitution of India and all acts, rules and guidelines based on it related to the languages in the Indian Union are neither based on language equality and rights nor on the demands of the people of various language communities, 

Considering the imposition of Hindi by the Union Government, supported and promoted by various pan-Indian political parties and organizations, the centers of power including media and the State governments and considering the historically significant movements by various language communities against the imposition. 

Considering that in the name of development, English is given over emphasis and the all pervasive and increasing phenomenon of English dominating every aspect of our lives and replacing all the languages in the Indian Union in the public and private spaces, thus restricting our linguistic. cultural and economic choices; 

Considering that the people representing the languages listed in the Schedule 8 of the Constitution of India are demanding to make their languages the official languages of the Union Government of India, the people representing many other languages demanding their languages to be included in the said schedule and hundreds of language communities with numerically smaller population are fighting for conserving and developing their ethnic languages 

Considering that the Languages in the Indian Union signify the diversity of the population in the Indian Union, with these languages being historically, socially, culturally and territorially part and parcel of the respective language communities. 

Considering that the languages of the Indian Union are the vaults of traditional knowledge systems which have evolved over centuries based on their own conditions and practices and losing them would mean losing our heritage, knowledge base and traditional expertise, 

HEREBY DECLARE THAT 

All languages in the Indian Union are considered to be equal and each language community has the right to conserve, develop and empower their languages in all possible ways and means in a democratic milieu. 

Every citizen of the Indian Union has the fundamental and inalienable right to use his/her mother tongue for all transactions with the executive, judiciary and legislative wings of the government and the government shall use the mother tongue of the citizen for all transactions and 
communications with the citizen. All citizens of the Indian Union shall have the rights to get all education in their mother tongues. All citizens of the Indian Union shall also have the rights to get commercial and public services in their mother tongues.

We call for setting up a New Language Commission to review and amend Part 17 of the Constitution of India and other relevant provisions to create a new language policy, based on the recommendations and demands for all language communities in the Indian Union. 

We demand that the Union Government to address the following demands and accept them immediately: 

a. Make all the languages listed in Schedule 8 of the Constitution of India the official languages of the Union Government 
b. Include in the Schedule 8 of the Constitution the languages for which the demands were made by their respective language communities and pending with the Union Government for many years 
c. Provide urgent support to the ethnic, indigenous and other languages with fewer number of speakers through an exclusive government agency and save them from extinction and assimilation 

We demand that all the governments ensure that the right to get education in mother tongue is not infringed at every level. 

We demand that the state governments to implement already existing governing language laws and policies fully. States that do not have such a policy should create one. 

Declaring the above demands, we seek the support of all political parties, organizations. civil society organizations including human rights bodies. educational and cultural entities, and media to bring what we call THE LANGUAGE EQUALITY AND RIGHTS BILL in the Parliament and pass it to achieve the above goal. We urge the State Governments and local governments to pass legally powerful resolutions to demand the above three rights particularly and set up of a new Language Commission to address the various aspects of language rights, policies and planning. 

Drafted by: 
Anand G., Karnataka 
Deepak Pawar, Maharashtra 
Ganesh Chetan, Karnataka 
Garga Chatterjee, West Bengal 
Joga Singh Virk, Punjab 
Kumuthavaiji Tamjl Nadu 
Manj M. Manivannan, Tamil Nadu 
P. Pavithran Kerala  
Priyank KS, Karnataka 
Saket Shreebushan Sahu, Odisha 
S. Senthilnathan (Aazhi Senthilnathan) Tamil Nadu 
Thamizneriyan, Tamil Nadu 
Vasant Shetty, Karnataka 
Vivek V., Karnataka 
Umakanthan P., Karnataka 



ಅಕಾಡೆಮಿ ಪ್ರಶಸ್ತಿಗೆ ಭಗವಾನ್ ಯೋಗ್ಯರೇ?!

ಇತ್ತೀಚೆಗೆ ಗೆಳೆಯನೊಬ್ಬ ಭಗವಾನ್ ಹಿಂದೂ ದೇವತೆಗಳ ಬಗ್ಗೆ, ಗೃಂಥಗಳ ಬಗ್ಗೆ 'ಬಾಯಿಗೆ ಬಂದಂತೆ' ಮಾತನಾಡುವುದರ ಬಗ್ಗೆ ಕೇಳಿದಾಗ 'ಅವರ ಪುಸ್ತಕವನ್ನು ನಾನು ಓದಿಲ್ಲ; ಅವರ ಭಾಷಣವನ್ನೂ ಕೇಳಿಲ್ಲ. ಅಂದಮೇಲೆ ಅವರ ಬಗ್ಗೆ ಕಮೆಂಟಿಸುವುದು ಸರಿಯಲ್ಲ ಎಂದಿದ್ದೆ'. ಪತ್ರಿಕೆಗಳಲ್ಲಿ, ಮಾಧ್ಯಮದಲ್ಲಿ ಭಗವಾನ್ ಹೇಳಿದರೆನ್ನಲಾದ ನಿಜಕ್ಕೂ ಅಸಂಬದ್ಧವೆನ್ನಿಸುವ ಮಾತುಗಳನ್ನು ನೋಡಿ ಅವರನ್ನು ದ್ವೇಷಿಸಲಾರಂಭಿಸಬೇಕಾ? ಎಂದು ಪ್ರಶ್ನಿಸಿಕೊಂಡರೆ ನಮ್ಮ ಮಾಧ್ಯಮಗಳು ಯಾವ ಯಾವ ವಾಕ್ಯವನ್ನು ಎಡಿಟ್ ಮಾಡಿ ಯಾವ್ಯಾವ ವಾಕ್ಯಗಳನ್ನು ಉಳಿಸಿಕೊಂಡು ವರದಿ ರಚಿಸುತ್ತವೆ ಎನ್ನುವುದನ್ನು ಗಮನಿಸಿದವರಿಗೆ ವರದಿ ನೋಡಿ ದ್ವೇಷಿಸುವುದರ ನಿರರ್ಥಕತೆ ಅರ್ಥವಾಗುತ್ತದೆ. ತಮ್ಮ ವಿಚಾರಗಳಿಗೆ ಪೂರಕವಾಗಿ, ಯಾರ್ಯಾರನ್ನು ರೊಚ್ಚಿಗೆಬ್ಬಿಸಬೇಕೋ ಅವರನ್ನು ರೊಚ್ಚಿಗೆಬ್ಬಿಸಲು ಏನೇನು ಬರೆಯಬೇಕೋ ಅದನ್ನಷ್ಟೇ ಬರೆಯುತ್ತಾರೆ. ಇಂತಹ ಮಾಧ್ಯಮಗಳ ಇರುವಿಕೆಯ ಅರಿವಿದ್ದೂ ಅವರ ಉದ್ದೇಶಗಳಿಗೆ ಪೂರಕವಾಗಿ ಮಾತನಾಡುವುದು ಸರಿಯಲ್ಲ ಎಂಬುದು ಭಗವಾನ್ ರಂತವರಿಗೆ ಅರಿವಾಗುವುದಿಲ್ಲವಾ? ಹಿಂದೂ ಧರ್ಮದೊಳಗೆ, ಹಿಂದೂ ಸಂಪ್ರದಾಯಗಳ ವಿರುದ್ಧ ಹಿಂದೂ ದೇವರ ವಿರುದ್ಧ ಕಟುವಾಗಿ ಮಾತನಾಡುವುದು ಹೊಸತೇನಲ್ಲ. ಈ ಕಟು ಮಾತುಗಳಿಗೆ ಮೂಲ ಆ ಹಿಂದೂ ಸಂಪ್ರದಾಯಗಳ ಹೆಸರಿನಲ್ಲಿ ಮೂಲೆಗುಂಪಾದವರ ಆಕ್ರೋಶವೇ ಹೊರತು ಯಾರನ್ನೋ ನೋಯಿಸಿ ಮತ್ಯಾರನ್ನೋ ಪುಸಲಾಯಿಸುವ ಮನಸ್ಥಿತಿಯಲ್ಲ. ಆ ಕಟು ಮಾತುಗಳು ಕೂಡ ಕಟ್ಟರ್ ಹಿಂದೂವಾದಿಗಳಿಗೆ 'ಹೌದಲ್ವಾ? ಇವರು ಹೇಳ್ತಿರೋದು ಸರಿ ಇದೆ' ಎನ್ನಿಸುವಂತಿರಬೇಕೆ ಹೊರತು 'ಇವರು ನಮ್ ವಿರುದ್ಧ ಮಸಲತ್ತು' ಮಾಡ್ತಿದ್ದಾರೆ ಎನ್ನಿಸುವಂತಿರಬಾರದು. ಅಷ್ಟರ ಮಟ್ಟಿಗಿನ ವಿವೇಚನೆ ಭಗವಾನರನ್ನು ಸೇರಿಸಿ ಎಲ್ಲರಿಗೂ ಇರಬೇಕು.
ತಮ್ಮ ಮಾತುಗಳಿಂದ ಅವರು ಫೇಮಸ್ಸಾಗಿದ್ದು (ಅದನ್ನು ನೀವು ಫೇಮಸ್ ಅನ್ನುತ್ತೀರಾದರೆ!) ಇತ್ತೀಚಿನ ವರುಷಗಳಲ್ಲಿ. ಕಲಬುರ್ಗಿಯವರ ಹತ್ಯೆಯಾದ ನಂತರ ಭಗವಾನರಿಗೆ ಪೋಲೀಸ್ ರಕ್ಷಣೆ ನೀಡಲಾಗಿದೆ. ಪದೇ ಪದೇ ಬೆದರಿಕೆ ಪತ್ರಗಳು ಬರುತ್ತಿವೆ. ಇವೆಲ್ಲದರ ಮಧ್ಯೆ ಅವರಿಗೆ 2013ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಿಸಲಾಗಿದೆ. ಇದು ಅವರ ಹಿಂದೂ ವಿರೋಧಿ ಮನಸ್ಥಿತಿಗೆ ಕಾಂಗ್ರೆಸ್ ಸರಕಾರದಿಂದ ಸಿಕ್ಕ ಬಹುಮಾನ ಎಂದು ಹಿಂದೂವಾದಿಗಳು ಆಗಲೇ ಪ್ರಚಾರ ಆರಂಭಿಸಿಬಿಟ್ಟಿದ್ದಾರೆ. 'ಭಗವಾನ್ ಗೆ ಶ್ರದ್ಧಾಂಜಲಿ' ಎಂದು ಬರೆಯುವ ನೀಚ ಮಟ್ಟಕ್ಕೂ ಇಳಿದುಬಿಟ್ಟಿದ್ದಾರೆ. Online Petition ಕೂಡ ಪ್ರಾರಂಭಿಸಿಬಿಟ್ಟಿದ್ದಾರೆ. ಇದು ಹಿಂದೂ ಬಲಪಂಥೀಯರ ಎಂದಿನ ನಡೆಗಳು. ವರುಷಗಳ ಹಿಂದೆ ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಕೂಡ ಇದೇ ರೀತಿ ಉಯಿಲೆಬ್ಬಿಸಿದ್ದರು. ಭೈರಪ್ಪನವರಿಗೆ ಸಿಗದ ಪ್ರಶಸ್ತಿ ಪ್ರಶಸ್ತಿಯೇ ಅಲ್ಲ, ಇದು ಕಂಬಾರರು ಮಾಡಿರುವ ಲಾಬಿಯಷ್ಟೇ ಎಂದು ನಗೆಯಾಡಿದ್ದರು. ಕೆಲವೇ ತಿಂಗಳುಗಳಲ್ಲಿ ಭೈರಪ್ಪನವರಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ ಸಿಕ್ಕಿತು. ಇದು ಭೈರಪ್ಪನವರು ಮಾಡಿದ ಲಾಬಿ ಎಂದವರ್ಯಾರೂ ಯಾಕೋ ನಗೆಯಾಡಲಿಲ್ಲ! ಭೈರಪ್ಪನವರಿಗೆ ರಾಷ್ಟ್ರೀಯ ಪ್ರೊಫೆಸರ್ ಹುದ್ದೆ ದೊರೆತಾಗ ಕೂಡ ಭೈರಪ್ಪನವರು ಮೋದಿ ಪರ ಮತ್ತು ಬಿಜೆಪಿ ಪರವಿದ್ದುದರಿಂದ ಸಿಕ್ಕ ಹುದ್ದೆಯದು ಎಂದವರ್ಯಾರೂ ಗೋಳಾಡಲಿಲ್ಲ! ತಮ್ಮ ವಿಚಾರಗಳಿಗೆ ಪೂರಕವಾಗಿ ಮಾತನಾಡುವವರಿಗೆ ಸಿಗುವ ಪ್ರಶಸ್ತಿ ಹುದ್ದೆಗಳು ಅರ್ಹತೆಯಿಂದ ಎಂದು ಮತ್ತು ತಮ್ಮ ವಿಚಾರಗಳಿಗೆ ವಿರುದ್ಧವಾಗಿರುವವರಿಗೆ ಸಿಗುವ ಪ್ರಶಸ್ತಿ ಹುದ್ದೆಗಳು ಲಾಬಿಯಿಂದ ಎಂದು ವಾದ ಮಾಡುವುದು ಇವರಿಗೆ ಸಹಜವಾಗಿ ಹೋಗಿದೆ. ಅಂತವರಿಗೆ ಹೊಸತಾಗಿ ಸಿಕ್ಕ ಅಸ್ತ್ರ ಭಗವಾನ್ ರವರಿಗೆ ಸಿಕ್ಕ ಪ್ರಶಸ್ತಿ. ಎಲ್ಲಾ ಪ್ರಶಸ್ತಿಯಲ್ಲೂ ಎಲ್ಲಾ ಹುದ್ದೆಗಳ ಆಯ್ಕೆಯಲ್ಲೂ ಲಾಬಿ ಇದ್ದೇ ಇರುತ್ತದೆ. ಅಂತಹ ಲಾಬಿಯನ್ನು ತತ್ವ ಸಿದ್ಧಾಂತಗಳಾಚೆ ನಿಂತು ವಿರೋಧಿಸುವುದಾದರೆ ಅದು ಸರಿಯಾದ ಕ್ರಮ. ಹೋಗಲಿ ಭಗವಾನ್ ಆ ಪ್ರಶಸ್ತಿಗೆ ಅರ್ಹರಲ್ಲ ಎಂದರೆ ಆ ಹಿಂದೂ ಬಲಪಂಥೀಯರಲ್ಲೇ ಒಬ್ಬರು ಅವರ ಪುಸ್ತಕಗಳ ವಿಮರ್ಶೆ ಮಾಡಿ ಯಾಕೆ ಅವರು ಅನರ್ಹರು ಎಂದು ತಿಳಿಸಿದ್ದರೂ ಒಪ್ಪಬಹುದಿತ್ತು. ಶ್ರದ್ಧಾಂಜಲಿಯ ಭಾಷೆಯನ್ನಾಡುವವರಿಂದ ಇಷ್ಟೆಲ್ಲ ನಿರೀಕ್ಷಿಸಬಾರದೇನೋ. ಜನರ ಭಾವನೆಗಳನ್ನು ಭಗವಾನ್ ರ ವಿರುದ್ಧವಾಗಿರುವಂತೆ ಮಾಡಲಾಗಿದೆ, ಅದನ್ನವರು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ and unfortunately ಭಗವಾನ್ ರವರು ಕೂಡ ಬಲಪಂಥೀಯರ ಭಾಷೆಯನ್ನೇ ತಮ್ಮ ಭಾಷೆಯನ್ನಾಗಿಸಿಕೊಂಡು ಅದಕ್ಕೆ ಪೂರಕವಾಗಿಯೇ ವರ್ತಿಸುತ್ತಿದ್ದಾರೆ. 

ಭಗವಾನ್ ರವರಿಗೆ ಸಿಕ್ಕ ಪ್ರಶಸ್ತಿಯ ಬಗ್ಗೆ ಹುಲಿಕುಂಟೆ ಮೂರ್ತಿ ಈ ರೀತಿಯಾಗಿ ಬರೆದಿದ್ದಾರೆ  "ನನಗೆ ಬುದ್ಧಿ ತಿಳಿದಾಗಿನಿಂದ ಭಗವಾನ್ ಅವರ ಸಾಹಿತ್ಯವನ್ನು ಓದುತ್ತಿದ್ದೇನೆ. ಅವರು ನಂಬುವ ವಿಚಾರಗಳ ಪರವಾಗಿದ್ದೇನೆ ಆದರೆ, ಇತ್ತೀಚಿನ ಅವರ ಮಾತುಗಳ ಜತೆಗಿರಲಾರೆ... ಹಿಂದೂ ಧರ್ಮ, ಪುರಾಣಗಳ ಕುರಿತು ಚಳವಳಿಯ ರೀತಿಯಲ್ಲಿ ಮಾತಾಡುವ, ಆ ಮೂಲಕ ಸಮಯ ವ್ಯರ್ಥ ಮಾಡುವ ಯಾರ ಮಾತುಗಳನ್ನೂ ನಾನು ಸಮರ್ಥಿಸಲಾರೆ... ಮಾನವ ಪ್ರೇಮವನ್ನು ಉಳಿಸುವ, ಬೆಳೆಸುವ ಕ್ರಿಯಾತ್ಮಕ ಚಳವಳಿಗಳೊಂದಿಗೆ ನನ್ನ ಪಯಣ.....

ಸಾಹಿತ್ಯ ಅಕಾಡೆಮಿ ಕೊಟ್ಟಿರುವ ಪ್ರಶಸ್ತಿ ಭಗವಾನ್ ಅವರ ಸಾಹಿತ್ಯ ಸೇವೆಗೆ ಕಡಿಮೆಯಾಯಿತು. ಅವರಿಗೆ ಅದಕ್ಕಿಂತಲೂ ದೊಡ್ಡ, ಹೆಚ್ಚಿನ ಪ್ರಶಸ್ತಿಗಳು ಸಿಗಬೇಕು.

ಸಾಹಿತ್ಯ- ಸಮಾಜದ ವಿದ್ಯಾರ್ಥಿಯಾಗಿ ಭಗವಾನ್ ಅವರಿಗೆ ಅಭಿನಂದನೆಗಳನ್ನು ಹೇಳದೆ ಇರಲಾರೆ...."

ಇನ್ನು ರಾಜೇಂದ್ರ ಪ್ರಸಾದ್  ಭಗವಾನ್ ರವರ ಸಾಹಿತ್ಯ ಕೃಷಿಯಲ್ಲೇನಿದೆ ಎಂಬುದರ ಕುರಿತು ವಿವರವಾಗಿ ಬರೆದಿದ್ದಾರೆ
"ಕೆಲವು ಮತಿಗೇಡಿಗಳು ಪ್ರೊ.ಕೆ ಎಸ್ ಭಗವಾನ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2013 ನೇ ಸಾಲಿನ ಗೌರವ ಪ್ರಶಸ್ತಿ ಕೊಟ್ಟಿರುದಕ್ಕೆ ಬೇಕಾಬಿಟ್ಟಿ ಮಾತನಾಡುವುದು ಕಂಡು ಅಸಹ್ಯವಾಗುತ್ತಿದೆ. 
ಹೌದು ಅವರು ಈಚೆಗೆ 'ಭಕ್ತಾಸ್ ಭಾಷೆ'ಯಲ್ಲಿ ಧಾರ್ಮಿಕ ವಿಚಾರಗಳ ಬಗ್ಗೆ ಅಡ್ಡಾದಿಡ್ಡಿ ಮಾತನಾಡುತ್ತಿರುವುದು ಅತಿರೇಕದ ವರ್ತನೆಯೇ. ಖಂಡಿಸೋಣ. 
ಆದರೆ ಅಕಾಡೆಮಿ ಅವರಿಗೆ ಪ್ರಶಸ್ತಿ ಕೊಟ್ಟಿರುವುದು. ಅವರ ಈ ಅತಿರೇಕದ ಮಾತುಗಳಿಗಲ್ಲ, ಅವರ ಸಾಹಿತ್ಯಕ್ಕೆ ಅನ್ನುವುದು ನಮಗೆ ನೆನೆಪಿರಬೇಕು.

ಪ್ರೊ.ಕೆ ಎಸ್ ಭಗವಾನ್ ಕೃತಿಗಳು :

ವಿಮರ್ಶೆ :
ಬದಲಾವಣೆ
ಕುವೆಂಪು ಯುಗ
ಆಂತರ್ಯ
ಕಣಿಗಲೆ

ವಿಚಾರ:
ಭಾಷೆ ಮತ್ತು ಸಂಸ್ಕೃತಿ
ಶಂಕರಾಚಾರ್ಯ ಮತ್ತು ಪ್ರತಿಗಾಮಿತನ
ಗಾಂಧಿಯನ್ನು ಗೋಡ್ಸೆ ಏಕೆ ಕೊಂದ?
ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್
ಸುಖದ ಹಾದಿ
Violence in Hinduism

ಅನುವಾದ:
ಜೂಲಿಯಸ್ ಸೀಸರ್
ವೆನಿಸಿನ ವರ್ತಕ
ಹ್ಯಾಮ್ಲೆಟ್
ಆಂಟನಿ ಮತ್ತು ಕ್ಲಿಯೋಪಾತ್ರ
ಒಥೆಲೊ
ನಿಮ್ಮಿಷ್ಟ
ಮ್ಯಾಕ್ ಬೆತ್
ಮಹಾರಾಜ ಲಿಯರ್
ರೋಮಿಯೊ ಮತ್ತು ಜೂಲಿಯೆಟ್
ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು ಸಂ. ೩, ೭ ಮತ್ತು ೧೧
ವೃದ್ಧ ಮತ್ತು ಸಮುದ್ರ

ಸಂಪಾದನೆ :
ಗಂಗೋತ್ರಿ
ಚಂಪಾ: ಆಯ್ದ ಕವನಗಳು
ಜಿಜ್ಞಾಸು
ಸಾಹಿತ್ಯ ವಿಮರ್ಶೆ ೧೯೮೫
ಕೆಂಗಲ್ಲರ ಭಾಷಣಗಳು
As You Like It
Macbeth
Othello
The Merchant of Venice

ಚರಿತ್ರೆ :
ಇತಿಹಾಸ ಚಕ್ರ
ಇತಿಹಾಸದ ಪಾಠಗಳು
ಹಿಂದೂ ಸಾಮ್ರಾಜ್ಯಶಾಹಿಯ ಇತಿಹಾಸ

ಮಕ್ಕಳ ಸಾಹಿತ್ಯ :
ಮಂತ್ರದ ಉಂಗುರ
ಷೇಕ್ಸ್ ಪಿಯರ್ ಕತೆಗಳು:
ನಲಿವಿನಾಟಗಳು
ನೋವಿನಾಟಗಳು
ಚರಿತ್ರಾಟಗಳು

ಪ್ರೊ.ಕೆ ಎಸ್ ಭಗವಾನ್ ರವರ ಸಾಹಿತ್ಯಿಕ ವ್ಯಕ್ತಿತ್ವಕ್ಕೆ ಗೌರವವಿರಲಿ ಮತ್ತವರ ಈಚಿನ ಕಿರುಚಾಟಗಳ ಬಗ್ಗೆ ದಿವ್ಯನಿರ್ಲಕ್ಷ್ಯವೂ ಇರಲಿ.."

Sep 15, 2015

ಕೆಂಪ್ ಶರ್ಟು ನೀಲಿ ಚೆಡ್ಡಿ ಮೂರು ವರ್ಷ....

Dr Ashok K R
ಬದುಕು ಮುಗಿಸಿದ ಮಗುವೊಂದು ಮನುಕುಲವನ್ನು ಕಲಕಿದ ದೃಶ್ಯವದು. ಸಾವಿರ ಸಾವಿರ ಪದಗಳ ಲೇಖನಗಳು, ಪ್ರತಿಭಟನೆಗಳು, ನಿರಾಶ್ರಿತರ ಕೂಗುಗಳ್ಯಾವುದೂ ಮಾಡದ ಕಾರ್ಯವನ್ನು ಒಂದು ಫೋಟೋ ಮಾಡಿಸುತ್ತಿದೆ. ಲಕ್ಷ ಲಕ್ಷ ಸಂಖೈಯಲ್ಲಿ ಬರುತ್ತಿದ್ದ ಸಿರಿಯಾ ನಿರಾಶ್ರಿತರಿಗೆ ಮುಚ್ಚಿಹೋಗಿದ್ದ ಯುರೋಪ್ ದೇಶದ ಗಡಿಗಳು ಇದೊಂದು ಫೋಟೋದಿಂದ ತೆರೆದುಕೊಂಡಿದೆ. ನಿರಾಶ್ರಿತರಿಗೆ ಆಶ್ರಯ ಕೊಡುವುದಕ್ಕೆ ಅನೇಕ ಹಳೆಯ ಒಪ್ಪಂದಗಳನ್ನು ಬದಿಗೆ ಸರಿಸಿರುವ ಜರ್ಮನಿ ದೇಶ ಇತರೆ ದೇಶಗಳಿಗೂ ಅದೇ ಮಾದರಿ ಅನುಸರಿಸುವಂತಹ ವಾತಾವರಣ ನಿರ್ಮಿಸಿದೆ. ಈ ಮಾನವೀಯ ನೆಲೆಗಳ ನಡುವೆಯೇ ನಿರಾಶ್ರಿತರಿಗೆ ಆಶ್ರಯ ಕೊಡುವುದಕ್ಕೆ ದೇಶವಾಸಿಗಳಿಂದ, ವಿವಿಧ ಪಕ್ಷಗಳಿಂದ ವಿರೋಧವೂ ವ್ಯಕ್ತವಾಗುತ್ತಿದೆ. ಆ ವಿರೋಧ ಕೂಡ ಸಂಪೂರ್ಣ ನಿರಾಧಾರವಾದುದೇನಲ್ಲ. ಏನಿದು ಸಿರಿಯಾ ಬಿಕ್ಕಟ್ಟು? ಯಾಕೆ ನಾಲ್ಕು ಲಕ್ಷಕ್ಕೂ ಅಧಿಕ ಜನರು ಸಿಕ್ಕ ಸಿಕ್ಕ ದಾರಿಗಳಲ್ಲಿ, ಸಿಕ್ಕ ಸಿಕ್ಕ ಬೋಟುಗಳಲ್ಲಿ ಜೀವದ ಹಂಗು ತೊರೆದು ದೇಶ ಬಿಡುತ್ತಿದ್ದಾರೆ. ಓಡುವಿಕೆಯ ಹಾದಿಯಲ್ಲಿ ಕುಟುಂಬಸ್ಥರು ಸತ್ತು ಹೋದರೂ ಓಡುವವರ ವೇಗ ಕುಂದಿಲ್ಲ. ಇನ್ನು ದೇಶದೊಳಗಡೆಯೇ ನಿರಾಶ್ರಿತರಾಗಿರುವವರ ಸಂಖೈ ಅಂದಾಜಿಗೇ ಸಿಗದಷ್ಟು ಏರಿಕೆಯಾಗುತ್ತಿದೆ. ಅಧಿಕೃತವಾಗಿ ಪ್ರಪಂಚ ನೋಡಿರುವುದು ಎರಡು ವಿಶ್ವ ಯುದ್ಧ. ನಿರಾಶ್ರಿತರ ಗೋಳುಗಳನ್ನು ಓದುತ್ತಿದ್ದರೆ, ನೋಡುತ್ತಿದ್ದರೆ ಯುದ್ಧಗಳು ಮುಗಿದಿದ್ದಾದರೂ ಎಲ್ಲಿ ಎಂಬ ಪ್ರಶ್ನೆ ಮೂಡುತ್ತಲೇ ವಿಶ್ವ ಯುದ್ಧ ನಿರಂತರ ಎಂಬ ಕಹಿ ಸತ್ಯದ ದರ್ಶನವನ್ನೂ ಮಾಡಿಸುತ್ತಿದೆ.

ಮಧ್ಯಪ್ರಾಚ್ಯದ ದೇಶಗಳಲ್ಲಿ ನಡೆಯುವ ಆಂತರಿಕ ಯುದ್ಧಗಳೆಲ್ಲ ಒಂದಷ್ಟು ಸಂಗತಿಗಳು ಸಾಮಾನ್ಯವಾಗಿಬಿಟ್ಟಿದೆ. ಅದು ಯೆಮೆನ್ ಇರಬಹುದು, ಇಜಿಪ್ಟ್ ಇರಬಹುದು, ಲಿಬಿಯಾ, ಇರಾಕ್ ಇರಬಹುದು ಈ ದೇಶದೊಳಗೆ ನಡೆದ – ನಡೆಯುತ್ತಿರುವ ಯುದ್ಧಗಳಲ್ಲೆಲ್ಲಾ ಕೆಲವು ಪದಗಳನ್ನು ಬಳಸಲೇಬೇಕು. ಸರ್ವಾಧಿಕಾರ, ಶಿಯಾ, ಸುನ್ನಿ, ತೈಲ ಸಂಪತ್ತು, ಇರಾನ್, ಸೌದಿ ಅರೇಬಿಯಾ, ಅಮೆರಿಕ, ಜಿಹಾದಿ ಉಗ್ರರು, ಮತ್ತೀಗ ಹೊಸದಾಗಿ ಐ.ಎಸ್.ಐ.ಎಸ್ ಇವಿಷ್ಟೂ ಎಲ್ಲ ಗಲಭೆಗಳಲ್ಲೂ ಪ್ರಮುಖ ಪಾತ್ರ ವಹಿಸಿವೆ. ಕೆಲವೆಡೆ ಪ್ರಭುತ್ವದ ಪರವಾಗಿ, ಕೆಲವೆಡೆ ಪ್ರಭುತ್ವದ ವಿರುದ್ಧ ಹೋರಾಡುತ್ತಿರುವವರ ಪರವಾಗಿ. ಯೆಮೆನ್ನಿನಲ್ಲಿ ಪ್ರಭುತ್ವದ ಪರವಾಗಿ ಸೌದಿ ಅರೇಬಿಯಾ ನಿಂತರೆ, ಪ್ರಭುತ್ವದ ವಿರುದ್ಧ ಹೋರಾಡಲು ಬಂದೂಕು ಹಿಡಿದಿದ್ದ ಅಲ್ ಹುತಿ ಉಗ್ರರಿಗೆ ನೆರವಾಗಿದ್ದು ಇರಾನ್. ಇಂತಹ ‘ನೆರವಿಗೆ’ ಸತ್ಯ - ಅಸತ್ಯ, ನ್ಯಾಯ - ಅನ್ಯಾಯ, ಧರ್ಮ – ಅಧರ್ಮಗಳು ಪ್ರಮುಖ ಪಾತ್ರವಹಿಸಿಲ್ಲ. ಪ್ರಮುಖ ಪಾತ್ರ ವಹಿಸಿರುವುದು ಶಿಯಾ ಮತ್ತು ಸುನ್ನಿ ಮುಸ್ಲಿಮರಿಗೆ ನೆರವು ನೀಡಿ, ಅದರಿಂದ ತಮ್ಮ ಪಂಗಡದ ಜನರ ಪ್ರಾಬಲ್ಯ ಮಧ್ಯಪ್ರಾಚ್ಯದಲ್ಲಿರುವಂತೆ ನೋಡಿಕೊಳ್ಳುವುದೇ ಆಗಿದೆ. ಸಿರಿಯಾದ ಆಂತರಿಕ ಯುದ್ಧದಲ್ಲೂ ಮೇಲೆ ತಿಳಿಸಿದ ಎಲ್ಲಾ ಅಂಶಗಳೂ ಇವೆ. ಕೆಲವಷ್ಟು ಮುಖಗಳು ಬದಲಾಗಿವೆ, ಯಾರು ಯಾರ ಪರವಾಗಿದ್ದಾರೆ ಎಂಬುದು ಕೊಂಚ ಬದಲಾಗಿದೆ. ಅಷ್ಟು ಬಿಟ್ಟರೆ ಎಲ್ಲೆಡೆ ಹಿಂಸೆಯನ್ನು ಪ್ರಚೋದಿಸುವವರ ಸಂಖೈಯೇ ಜಾಸ್ತಿಯಿದೆ.

2011ರ ಇಸವಿ ಅರಬ್ ದೇಶಗಳನ್ನು ಬೆಚ್ಚಿಬೀಳಿಸಿದ ವರುಷ. ಬಹುತೇಕ ಅರಬ್ ದೇಶಗಳಲ್ಲಿರುವುದು ಏಕವ್ಯಕ್ತಿಯ ಸರಕಾರ. ಕುಟುಂಬದಿಂದ ಕುಟುಂಬಕ್ಕೆ ಇಡೀ ದೇಶವನ್ನೇ ಬಳುವಳಿಯಾಗಿ ಪಡೆದವರೇ ಇಲ್ಲಿ ಅಧ್ಯಕ್ಷರು. ಹೆಸರಿಗೆ ಬೇರೆಯವರು ಇರುತ್ತಾರಾದರೂ ಕೊನೆಗೆ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವವರು ಅಧ್ಯಕ್ಷರೇ. ಯಾರೂ ಪ್ರಶ್ನಿಸಲಾರದ ಅಧ್ಯಕ್ಷತೆ ಸಿಕ್ಕಾಗ ಸಹಜವಾಗಿ ಅದು ಅಧ್ಯಕ್ಷ ಸ್ಥಾನದಲ್ಲಿರುವವರ ಅಹಂ ಅನ್ನು ಹೆಚ್ಚಿಸಿ ಸರ್ವಾಧಿಕಾರಕ್ಕೆ ದಾರಿ ಮಾಡಿಬಿಡುತ್ತದೆ. ಸರ್ವಾಧಿಕಾರವೆಂಬುದು ಒಳ್ಳೆಯದ್ದಾಗಿರುವ ಸಾಧ್ಯತೆಗಳು ತುಂಬಾನೇ ಕಡಿಮೆ. ಒಳ್ಳೆಯದಾದವರಿಗದು ಅದೇ ಒಳಿತೆಂಬ ಭಾವನೆ ಮೂಡಿಸುತ್ತದಾದರೂ ಸರ್ವಾಧಿಕಾರದಿಂದ ನೊಂದವರು ಖಂಡಿತವಾಗಿಯೂ ಅದರ ಪರವಾಗಿರುವುದಿಲ್ಲ. ನೊಂದವರ ಸಂಖೈ ಹೆಚ್ಚುತ್ತಿದ್ದಂತೆ ಅರಬ್ ದೇಶಗಳಲ್ಲಿ ಸರ್ವಾಧಿಕಾರದ ವಿರುದ್ಧ ಪ್ರಜಾಪ್ರಭುತ್ವದ ಪರವಾಗಿ ಹೋರಾಟಗಳು ರೂಪುಗೊಳ್ಳುತ್ತವೆ. ಹೀಗೆ ರೂಪುಗೊಂಡ ಹೋರಾಟಗಳನ್ನು ಹೈಜಾಕ್ ಮಾಡಿಕೊಳ್ಳುವವರ ಸಂಖೈ ಹೆಚ್ಚಿದಂತೆ ಹೋರಾಟದ ಮೂಲ ಆಶಯವೇ ಮರೆತು ಹೋಗಿ ಎಲ್ಲೆಡೆ ಹಿಂಸಾಚಾರವೇ ತಾಂಡವವಾಡತೊಡಗಿತು. Arab Spring ಹೆಸರಿನಲ್ಲಿ ಶುರುವಾದ ಜನರ ಹೋರಾಟ ಅರಬ್ಬಿನ ಅನೇಕ ದೇಶಗಳಿಗೆ ವ್ಯಾಪಿಸಿತು. ಈ ಹೋರಾಟದಲ್ಲಿ ಪಾಲ್ಗೊಂಡ ದೇಶಗಳಲ್ಲಿ ಸಿರಿಯಾ ಕೂಡ ಒಂದು. ಸಿರಿಯಾದ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ವಿರುದ್ಧ ಸಿರಿಯಾದ ನಾಗರೀಕರು ದೊಡ್ಡ ಸಂಖೈಯಲ್ಲಿ ಪ್ರತಿಭಟನೆಗೆ ಇಳಿದರು. ಅಂತರ್ಯುದ್ಧಕ್ಕೆ ಸಿರಿಯಾ ಹೋಗುವಷ್ಟರ ಮಟ್ಟಿಗೆ ಅಲ್ಲಿನ ಪರಿಸ್ಥಿತಿ ಹದಗೆಟ್ಟಿದ್ದಾದರೂ ಯಾಕೆ?

ಬಶರ್ ಅಲ್ ಅಸ್ಸದ್
ಬಶರ್ ಅಲ್ ಅಸ್ಸಾದ್ ತಮ್ಮ ತಂದೆಯ ಸಾವಿನ ನಂತರ 2000ದಿಂದ ಅಧ್ಯಕ್ಷರಾಗಿ ಸ್ವ – ಆಯ್ಕೆಗೊಂಡರು. ಬಶರ್ ಅಲ್ ಅಸ್ಸಾದ್ ಶಿಯಾ ಪಂಗಡಕ್ಕೆ ಸೇರಿದವರು. ಸಿರಿಯಾದ ಹೆಚ್ಚಿನ ಮುಸ್ಲಿಮರು ಸುನ್ನಿ ಪಂಗಡಕ್ಕೆ ಸೇರಿದವರು. ಸುನ್ನಿ ಶಿಯಾ ಹೊರತುಪಡಿಸಿದರೆ ಕುರ್ದಿ ಪಂಗಡಕ್ಕೆ ಸೇರಿದವರು ಸಿರಿಯಾದಲ್ಲಿ ಹೆಚ್ಚಿದ್ದರು. ಶಿಯಾ ಪಂಗಡಕ್ಕೆ ಸೇರಿದ ಬಶರ್ ಅಲ್ ಅಸ್ಸಾದರ ಸರಕಾರ ಹೆಸರಿಗೆ ಜಾತ್ಯತೀತವಾದರೂ ಶಿಯಾ ಪಂಗಡಕ್ಕೆ ಅನುಕೂಲಕರವಾಗಿ ಕಾರ್ಯನಿರ್ವಹಿಸಿ ಸುನ್ನಿ ಪಂಗಡದ ಜನರಲ್ಲೊಂದು ಅಸಹನೆಯನ್ನು ಸೃಷ್ಟಿಸುತ್ತಲೇ ಇತ್ತು. ಅಧಿಕಾರಕ್ಕೆ ಬಂದ ಹೊಸತರಲ್ಲಿ ಅಸ್ಸಾದ್ ಸರ್ವಾಧಿಕಾರದಿಂದ ಪ್ರಜಾಪ್ರಭುತ್ವಕ್ಕೆ ದೇಶವನ್ನು ಕೊಂಡೊಯ್ಯುವುದರ ಬಗ್ಗೆ ಕೆಲವು ಚರ್ಚೆಗಳನ್ನು ಹುಟ್ಟಿಹಾಕಿದರಾದರೂ, ತಾವೇ ಹುಟ್ಟುಹಾಕಿದ ಚರ್ಚೆಯನ್ನು ತಾವೇ ಮೊಟಕುಮಾಡಿಬಿಟ್ಟರು. ಪ್ರಜಾಪ್ರಭುತ್ವ ಹೋರಾಟಗಾರರನ್ನು ಬಂಧಿಸುವುದೆಲ್ಲ ಯಥೇಚ್ಛವಾಗಿ ನಡೆಯಿತು. ಇನ್ನು ಕುರ್ದ್ ಜನಾಂಗದವರಿಗೆ ದಶಕಗಳ ಕಾಲ ಸಿರಿಯಾದ ಪೌರತ್ವವೇ ದಕ್ಕಿರಲಿಲ್ಲ. ತಮ್ಮದೇ ಊರಿನಲ್ಲಿ ತಮ್ಮದೇ ದೇಶದಲ್ಲಿ ಅವರು ಪರದೇಸಿಗಳಾಗಿದ್ದರು. ಸುತ್ತಮುತ್ತಲ ದೇಶಗಳಲ್ಲಿ ಪ್ರಜಾಪ್ರಭುತ್ವದ ಪರವಾಗಿ ಶುರುವಾದ ಹೋರಾಟಗಳು ಸಿರಿಯಾಗೂ ಹಬ್ಬಲು ಹೆಚ್ಚು ಕಾಲ ಹಿಡಿಯಲಿಲ್ಲ. 2011ರ ಇಸವಿಯ ಮಾರ್ಚಿ 15ರಂದು ಸಿರಿಯಾದ ರಾಜಧಾನಿ ಡಮಾಸ್ಕಸ್ ನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಯುತ್ತದೆ, ಪ್ರಜಾಪ್ರಭುತ್ವದ ಸ್ಥಾಪನೆಗೆ ಮತ್ತು ರಾಜಕೀಯ ಖೈದಿಗಳ ಬಿಡುಗಡೆಗೆ ಒತ್ತಾಯಿಸಿ. ಪೋಲೀಸರು ಗುಂಡು ಹಾರಿಸಿ ಮೂವರನ್ನು ಹತ್ಯೆಗೈಯುತ್ತಾರೆ. ಪ್ರತಿಭಟನೆ ಕಾವು ಪಡೆದುಕೊಳ್ಳುತ್ತದೆ. ಪ್ರತಿಭಟನೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿದ್ದು ಸರಕಾರದ ವಿರುದ್ಧ ಗೋಡೆಬರಹ ಬರೆದ ಶಾಲಾ ಹುಡುಗರನ್ನು ಪೋಲೀಸರು ಬಂಧಿಸಿದಾಗ. ರೊಚ್ಚಿಗೆದ್ದ ಪ್ರತಿಭಟನಕಾರರು ಏಳು ಜನ ಪೋಲೀಸರನ್ನು ಹತ್ಯೆಗೈಯುವುದರೊಂದಿಗೆ ಪ್ರಜಾಪ್ರಭುತ್ವಕ್ಕಾಗಿ ಆಗ್ರಹಿಸಿ ನಡೆಯುತ್ತಿದ್ದ ಹೋರಾಟ ಹಿಂಸೆಯ ಮಾರ್ಗವನ್ನು ಆಯ್ದುಕೊಂಡಿತು. ಹಿಂಸೆ – ಪ್ರತಿಹಿಂಸೆಯ ವಿಷವರ್ತುಲದಲ್ಲಿ ಸಿರಿಯಾ ಸಿಲುಕಿಕೊಂಡಿತು. ಸಿರಿಯಾದ ದಂಗೆಗೆ 2007ರಲ್ಲಿ ಸಿರಿಯಾ ಎದುರಿಸಿದ ಭೀಕರ ಬರಗಾಲ ಕೂಡ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ. ಬರದ ಕಾರಣದಿಂದ ಲಕ್ಷಾಂತರ ಜನರು ಗ್ರಾಮೀಣ ಭಾಗದಿಂದ ನಗರಗಳಿಗೆ ವಲಸೆ ಬಂದರು. ವಲಸೆ ಹೆಚ್ಚಿ, ನಿರುದ್ಯೋಗಿಗಳ ಸಂಖೈ ಹೆಚ್ಚಿ ಆರ್ಥಿಕತೆಯಲ್ಲಿ ಉಂಟಾದ ಏರುಪೇರುಗಳು ಸಿರಿಯಾದ ಬಿಕ್ಕಟ್ಟಿಗೆ ತನ್ನದೇ ರೀತಿಯಲ್ಲಿ ಕ್ರಾಂತಿ ಪ್ರಕ್ರಿಯೆಯೆ ಕಾರಣವಾಯಿತು. ಆದರೆ ಕ್ರಾಂತಿಯೆಂಬುದೀಗ ಕೇವಲ ಹಿಂಸೆಯಾಗಿ ಪರಿವರ್ತನೆಯಾಗಿಬಿಟ್ಟಿದೆ.

ಸ್ವತಂತ್ರ ಸಿರಿಯಾ ಸೇನೆ
ಪ್ರತಿಭಟನೆ ಹಿಂಸೆಯ ರೂಪ ತಾಳಿದಾಗ ಬಶರ್ ಅಲ್ ಅಸ್ಸಾದ್ ಶಾಂತಿ ಕಾಪಾಡುವ ಯೋಚನೆ ಮಾಡಲಿಲ್ಲ. ಅರಬ್ ದೇಶಗಳಲ್ಲಾದ ಬೆಳವಣಿಗೆಗಳು, ಸರ್ವಾಧಿಕಾರದ ಪತನವಾಗಿದ್ದೆಲ್ಲವೂ ಅವರ ಗಮನದಲ್ಲಿತ್ತಲ್ಲ. ಹಾಗಾಗಿ ಶಾಂತಿಗಾಗಿ ಅವರ ಕಾರ್ಯಕ್ರಮಗಳಿರದೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಪ್ರತಿಭಟನೆಯನ್ನು ಹತ್ತಿಕ್ಕುವ ಆತುರಕ್ಕೆ ಬಿದ್ದರು. ಪ್ರತಿಭಟನಾಕಾರರ ಹತ್ಯೆಗಳಾದವು. ಮತ್ತೆ ಇಲ್ಲಿ ಹೋರಾಟ ಶಿಯಾ ಮತ್ತು ಮುಸ್ಲಿಂ ಪಂಗಡದ ಮಧ್ಯೆ ಎಂದು ಬದಲಾಗಿಬಿಟ್ಟಿತು. ಶಿಯಾ ಮುಸ್ಲಿಮ್ ಪಂಗಡಕ್ಕೆ ಸೇರಿದ ಸರ್ವಾಧಿಕಾರಿ ಅಸ್ಸಾದ್ ಗೆ ಶಿಯಾ ಪ್ರಾಬಲ್ಯ ಹೆಚ್ಚಿಸುವುದಕ್ಕೆ ಸದಾ ಬೆಂಬಲ ನೀಡುವ ಇರಾನಿನ ಬೆಂಬಲ ದೊರೆಯಿತು. ಶಸ್ತ್ರಾಸ್ತ್ರ, ಯುದ್ಧ ತರಬೇತಿಯೆಲ್ಲವೂ ಇರಾನ್ ನೀಡಿತು. ದೀರ್ಘ ಕಾಲದ ಗೆಳೆಯನೆಂಬ ನೆಪದಿಂದ ರಷ್ಯಾ ಕೂಡ ಅಸ್ಸಾದ್ ನ ಬೆಂಬಲಕ್ಕೆ ನಿಂತಿತು. ಇನ್ನು ಸ್ವತಂತ್ರ ಸಿರಿಯಾ ಸೈನ್ಯ ಕಟ್ಟಿದ ಪ್ರತಿಭಟನಕಾರರ ಗುಂಪಗೆ ಸಿರಿಯಾ ಸೇನೆಯನ್ನು ತೊರೆದು ಪ್ರತಿಭಟನೆಗೆ ಇಳಿದವರ ಮಾರ್ಗದರ್ಶನ ಸಿಕ್ಕಿತು. ಪ್ರತಿಭಟನಕಾರರಲ್ಲಿ ಹೆಚ್ಚಿನವರು ಸುನ್ನಿ ಪಂಗಡಕ್ಕೆ ಸೇರಿದವರಾದ್ದರಿಂದ ಇರಾನಿನ ಶಿಯಾ ಪ್ರಾಬಲ್ಯವನ್ನು ಮುರಿಯಲಿಚ್ಛಿಸುವ ಸೌದಿ ಅರೇಬಿಯಾದ ಬೆಂಬಲ ದಕ್ಕಿತು. ಅಮೆರಿಕಾದಂತಹ ದೇಶಗಳು ಪ್ರತಿಭಟನಕಾರರ ಗುಂಪಿಗೆ ಸಹಾಯ ಮಾಡಲಾರಂಭಿಸಿತು. ಶಸ್ತ್ರಾಸ್ತ್ರಗಳನ್ನೊರತುಪಡಿಸಿ ಇನ್ನಿತರ ಸಾಮಗ್ರಿಗಳಿಗೆ ಲಕ್ಷಾಂತರ ಡಾಲರ್ ನೆರವು ನೀಡಿತು. ಅಲ್ಲಿಗೆ ಬಾಹುಬಲ ಪ್ರದರ್ಶಿಸಲು ಪ್ರಬಲ ದೇಶಗಳಿಗೆ ಮತ್ತೊಂದು ಯುದ್ಧಭೂಮಿ ದಕ್ಕಿದಂತಾಯಿತು.

ಸಿರಿಯಾದಲ್ಲಿ ಐ.ಎಸ್.ಐ.ಎಸ್
ಒಂದಷ್ಟು ದೇಶಗಳ ನೆರವನ್ನು ಅಸ್ಸಾದ್ ಕಳೆದುಕೊಂಡಿದ್ದು ತನ್ನದೇ ದೇಶದ ಪ್ರಜೆಗಳ ಮೇಲೆ ಕೆಮಿಕಲ್ ಯುದ್ಧವನ್ನು ಸಾರಿದಾಗ. ತಾವು ಸಾವನ್ನು ಉಸಿರಾಡುತ್ತಿದ್ದೇವೆ ಎನ್ನುವುದು ಅರಿವಾಗುವುದರೊಳಗಾಗಿ ವ್ಯಕ್ತಿ ಮೃತಪಟ್ಟಿರುತ್ತಾನೆ. ಸರೀನ್ (Sarine) ಎಂಬ ವಿಷಯುಕ್ತ ಅನಿಲವನ್ನು ಈ ಕಾರ್ಯಕ್ಕೆ ಬಳಸಲಾಯಿತು. ಸಾವಿರಕ್ಕೂ ಅಧಿಕ ಜನರು ಮೃತಪಟ್ಟರು. ಅಸ್ಸಾದ್ ಸರಕಾರದ ಈ ಕ್ರಮ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೊಳಗಾಗಿ ಅಸ್ಸಾದ್ ಸರಕಾರಕ್ಕೆ ಬೆಂಬಲ ಕೊಡುತ್ತಿದ್ದವರನ್ನು ಮತ್ತೆ ತಮ್ಮ ನಿರ್ಧಾರವನ್ನು ಯೋಚಿಸುವಂತೆ ಮಾಡಿತು. ಸ್ವತಂತ್ರ ಸಿರಿಯಾ ಸೇನೆಯ ಜೊತೆಜೊತೆಗೆ ಆಲ್ ಖೈದಾ ಬೆಂಬಲಿತ ಸಂಘಟನೆಗಳೂ ಸರಕಾರದೊಂದಿಗೆ ಯುದ್ಧಕ್ಕೆ ಇಳಿದವು. ಕುರ್ದ್ ಜನಾಂಗದ ಜನರಿಗೆ ಈ ಗಲಭೆಗಳ ಮಧ್ಯೆ ಅಸ್ಸಾದ್ ಸರಕಾರ ಪೌರತ್ವ ನೀಡಿಬಿಟ್ಟಿತು. ಸುನ್ನಿಗಳ ಜೊತೆಗೆ ಕುರ್ದ್ ಗಳು ಸೇರುವುದು ಅವರಿಗೆ ಬೇಕಿರಲಿಲ್ಲ. ಕುರ್ದ್ ಜನರು ಮೊದಮೊದಲು ಈ ಪ್ರತಿಭಟನೆಗಳಿಗೆ ಇಳಿಯಲಿಲ್ಲವಾದರೂ, ಸರಕಾರೀ ಸೈನಿಕರು ಕುರ್ದ್ ಪ್ರದೇಶದ ಮೇಲೂ ದಾಳಿ ನಡೆಸಲು ಪ್ರಾರಂಭಿಸಿದ ನಂತರ ತಮ್ಮದೇ ಸೈನ್ಯವನ್ನು ಕಟ್ಟಿಕೊಂಡಿತು. ಸಿರಿಯಾದ ಅಲ್ಪಸಂಖ್ಯಾತರಾದ ಕ್ರಿಶ್ಚಿಯನ್ನರು ಸರಕಾರೀ ಸೈನ್ಯವನ್ನು ಸೇರಿದರು. ರೆಬೆಲ್ಲುಗಳಿಗಿಂತ ಸರಕಾರೀ ಸೈನ್ಯವೇ ಹೆಚ್ಚು ಜಾತ್ಯತೀತ ಮನೋಭಾವ ಹೊಂದಿದೆ ಎಂದವರ ಅಭಿಪ್ರಾಯ. ಒಂದು ದಿನ ಪ್ರತಿಭಟನಕಾರರು ಮೇಲುಗೈ ಸಾಧಿಸಿದರೆ, ಶಸ್ತ್ರಾಸ್ತ್ರಗಳನ್ನು ಹೆಚ್ಚು ಹೊಂದಿರುವ ಸರಕಾರೀ ಸೈನ್ಯ ಮತ್ತೊಂದು ದಿನ ಮೇಲುಗೈ ಸಾಧಿಸುತ್ತಿತ್ತು. ಹಿಂಸೆಯೇ ಪ್ರಮುಖ ಸ್ಥಾನ ಪ್ರಜಾಪ್ರಭುತ್ವವಕ್ಕಾಗಿ ಪ್ರಾರಂಭವಾದ ಹೋರಾಟ ತನ್ನ ಉದ್ದೇಶವನ್ನಾಗಲೇ ಕಳೆದುಕೊಳ್ಳಲು ಪ್ರಾರಂಭಿಸಿತ್ತು. ವೈಯಕ್ತಿಕ ಹಿತಾಸಕ್ತಿಗಾಗಿ ಅನ್ಯದೇಶದವರು ನಡೆಸಿದ ಹಸ್ತಕ್ಷೇಪವೂ ಇದಕ್ಕೆ ಕಾರಣವಾಗಿತ್ತು. ಕೊನೆಗೆ ಸಿರಿಯಾದ ಇಡೀ ಚಿತ್ರಣ ಬದಲಾಗಿ ಹೋಗಿದ್ದು ಐ.ಎಸ್.ಐ.ಎಸ್ ಎಂಬ ಉಗ್ರ ಇಸ್ಲಾಂ ಸಂಘಟನೆಯ ಆಗಮನದೊಂದಿಗೆ.

ಇಸ್ಲಾಮಿನ ರಕ್ಷಕನೆಂಬ ಹಣೆಪಟ್ಟಿಯೊಂದಿಗೆ Islamic State ಅಸ್ತಿತ್ವಕ್ಕೆ ಬಂದಿದ್ದು ಇರಾಕಿನಲ್ಲಿ. ಇಷ್ಟರಲ್ಲಾಗಲೇ ಪ್ರಾಮುಖ್ಯತೆ ಕಳೆದುಕೊಂಡಿದ್ದ ಆಲ್ ಖೈದಾ ಸಂಘಟನೆಯ ಮುಂದುವರೆದ ರೂಪದಂತೆ ಇಸ್ಲಾಮಿಕ್ ಸ್ಟೇಟ್ ಹುಟ್ಟಿಕೊಂಡಿತು. ಐ.ಎಸ್ ಕ್ರೌರ್ಯ ಅಲ್ ಖೈದಾ ಸಂಘಟನೆಯವರನ್ನೇ ಬೆಚ್ಚಿ ಬೀಳಿಸಿತು. ಮತಾಂಧ ಮನಸ್ಸುಗಳು ಹೆಚ್ಚು ಕ್ರೌರ್ಯದ ಐ.ಎಸ್ ಕಡೆಗೆ ಆಕರ್ಷಿತರಾದರು. ಇರಾಕಿನಲ್ಲಿ ಸದ್ದಾಂ ಹುಸೇನ್ ಹತ್ಯೆಯೊಂದಿಗೆ ಇಸ್ಲಾಮಿಕ್ ಸ್ಟೇಟ್ ನ ಪ್ರಾರಂಭವಾಗುತ್ತದೆ. ಸದ್ದಾಂ ಹುಸೇನ್ ಹತ್ಯೆಗೆ, ಇರಾಕ್ ಯುದ್ಧಕ್ಕೆ ಅಮೆರಿಕಾ ನೇರ ಕಾರಣ. ಇರಾಕಿನಲ್ಲಿ ಕೆಮಿಕಲ್ ವೆಪನ್ನುಗಳಿವೆ ಎಂಬ ನೆಪ ಕೊಟ್ಟು ಯುದ್ಧವಾರಂಭಿಸಿತ್ತು ಅಮೆರಿಕ. ಕೊನೆಗೆ ಲಕ್ಷ ಲಕ್ಷ ಜನರ ಹತ್ಯೆಯಾದರೂ ಯಾವೊಂದು ಕೆಮಿಕಲ್ ವೆಪನ್ನುಗಳೂ ಸಿಗಲಿಲ್ಲ. ಸದ್ದಾಂ ಹುಸೇನ್ ಆಡಳಿತ ಕೊನೆಗೊಂಡಿತು, ತನಗೆ ಬೇಕಾದ ಸರಕಾರವನ್ನು ಅಮೆರಿಕಾ ಇರಾಕಿನಲ್ಲಿ ಪ್ರತಿಷ್ಟಾಪಿಸಿತು. ಜನಾಂಗೀಯ ಘರ್ಷಣೆಗಳು ಜರುಗುತ್ತಿದ್ದ ಇರಾಕಿನಿಂದ ತನ್ನ ಸೈನಿಕರನ್ನು ವಾಪಸ್ಸು ಕರೆಸಿಕೊಂಡಿತು. ಇಲ್ಲಿ ಇರಾಕಿನಲ್ಲಿ ಇಸ್ಲಾಮಿಕ್ ಸ್ಟೇಟ್ ಜನ್ಮ ತಾಳಿತು. ಅದು ಅಲ್ ಖೈದಾ ಇರಬಹುದು, ಐ.ಎಸ್ ಇರಬಹುದು ಅನೇಕನೇಕ ಉಗ್ರಗಾಮಿ ಸಂಘಟನೆಗಳ ಹುಟ್ಟಿನಲ್ಲಿ ಬೆಳವಣಿಗೆಯಲ್ಲಿ ಅಮೆರಿಕಾದ ನೇರ ಪಾತ್ರವಿದೆ. ಮತ್ತೀ ಪಾತ್ರಕ್ಕೆ ಪ್ರಮುಖ ಕಾರಣವಾಗಿ ಈ ದೇಶಗಳಲ್ಲಿ ಅಪಾರ ಪ್ರಮಾಣ ತೈಲ ಸಂಗ್ರಹವಿದೆ. ಇರಾಕಿನಿಂದ ಪ್ರಾರಂಭವಾದ ಐ.ಎಸ್ ನ ಪ್ರಾಬಲ್ಯ ಸಿರಿಯಾದತ್ತಲೂ ಸಾಗಿತು. ಐ.ಎಸ್ ಎಂಬ ಹೆಸರು ಐ.ಎಸ್.ಐ.ಎಸ್ (Islamic State of Iraq and Syria) ಎಂದು ಬದಲಾಯಿತು; ಆಂತರಿಕ ಯುದ್ಧದ ಪರಿಸ್ಥಿತಿ ಮೂಡಿದ ಸಿರಿಯಾದಲ್ಲಿ ಐ.ಎಸ್.ಐ.ಎಸ್ ನ ಪ್ರವೇಶ ಸಿರಿಯಾದ ಚಿತ್ರವನ್ನು ಹೇಗೆ ಬದಲಿಸಿತು?

ಐ.ಎಸ್.ಐ.ಎಸ್ ಸಂಘಟನೆಯಲ್ಲಿ ಸುನ್ನಿಗಳ ಪ್ರಾಬಲ್ಯವೇ ಅಧಿಕ. ಅದರಲ್ಲೂ ಸುನ್ನಿ ಪಂಗಡದೊಳಗಿರುವ ಕಟ್ಟರ್ ಇಸ್ಲಾಮಿನ ಪ್ರತಿಪಾದಕರಾದ ವಹಾಬಿ ಪಂಥದವರೇ ಅಧಿಕ. ಸಿರಿಯಾದ ಶಿಯಾ ಸರಕಾರದ ವಿರುದ್ಧ ಅಲ್ಲಿನ ಜನರು, ಅದರಲ್ಲೂ ಹೆಚ್ಚಿನ ಸುನ್ನಿ ಪಂಗಡದವರು ಬಂದೂಕು ಹಿಡಿದು ಹೋರಾಡುವಾಗ ತನ್ನ ಉದ್ದೇಶಗಳನ್ನು ಈಡರಿಸಿಕೊಳ್ಳದೇ ಬಿಟ್ಟೀತೆ? ಐ.ಎಸ್.ಐ.ಎಸ್ ನ ಪ್ರವೇಶ ಸರಕಾರೀ ಸೈನ್ಯದ ಪ್ರಾಬಲ್ಯವನ್ನು ಕಡಿಮೆ ಮಾಡಿತು. ಅನೇಕ ಕಡೆ ಸರಕಾರವನ್ನು ಐ.ಎಸ್.ಐ.ಎಸ್ ಮಣಿಸಲಾರಂಭಿಸಿತು. ಐ.ಎಸ್.ಐ.ಎಸ್ ನ ಉಗ್ರ ರೀತಿಗಳಿಂದ ಬೆಚ್ಚಿ ಬಿದ್ದ ಸ್ವತಂತ್ರ ಸಿರಿಯಾ ಸೇನೆ ಕೂಡ ಕೆಲವು ದಿನಗಳ ನಂತರ ಐ.ಎಸ್.ಐ.ಎಸ್ ವಿರುದ್ಧ ಹೋರಾಡಲಾರಂಭಿಸಿತು. ವಹಾಬಿ ಪಂಥ ಒಪ್ಪದ ಕುರ್ದ್ ಜನಾಂಗದವರ ಮೇಲೂ ಐ.ಎಸ್.ಐ.ಎಸ್ ಯುದ್ಧ ಸಾರಿತು. ಒಟ್ಟಿನಲ್ಲಿ ಇಡೀ ಸಿರಿಯಾ ಗೋಜಲುಗಳ ನಾಡಾಗಿಬಿಟ್ಟಿತು. ಸರಕಾರೀ ಸೈನ್ಯದ ವಿರುದ್ಧ ಸ್ವತಂತ್ರ ಸಿರಿಯಾ ಸೇನೆ, ಕುರ್ದ್ ಸೇನೆ, ಅಲ್ ಖೈದಾ ಮತ್ತು ಐ.ಎಸ್.ಐ.ಎಸ್ ಉಗ್ರರು; ಐ.ಎಸ್.ಐ.ಎಸ್ ಉಗ್ರರ ವಿರುದ್ಧ ಸ್ವತಂತ್ರ ಸಿರಿಯಾ ಸೇನೆ, ಕುರ್ದ್ ಸೇನೆ, ಸರಕಾರೀ ಸೇನೆ! ಯಾರು ಯಾರೊಡನೆ ಯಾಕೆ ಹೋರಾಡುತ್ತಿದ್ದಾರೆ ಎಂಬುದೇ ಮರೆಯುವ ಸ್ಥಿತಿ. ನೆನಪಿರಲಿ ಈ ಎಲ್ಲಾ ಹೋರಾಟ ಪ್ರಾರಂಭವಾಗಿದ್ದು ಪ್ರಜಾಪ್ರಭುತ್ವಕ್ಕಾಗಿ; ಆದರೀಗ ತನ್ನ ಮಾತಿಗೆ ಎದುರಾಡುವವರನ್ನು ಕೊಂದೇ ಬಿಡುವ ಇಸ್ಲಾಮಿನ ರಕ್ಷಕನೆಂದು ಹೇಳಿಕೊಳ್ಳುವ ಐ.ಎಸ.ಐ.ಎಸ್ ಸಿರಿಯಾದ ಬಹುಭಾಗವನ್ನು ನಿಯಂತ್ರಿಸುತ್ತಿದೆ. ಐ.ಎಸ್.ಐ.ಎಸ್ಸಿಗೆ ಶಸ್ತ್ರಾಸ್ತ್ರಗಳಿಗೆ ಬರವಿಲ್ಲ, ಅನೇಕ ದೇಶಗಳ ಮತಾಂಧ ಮುಸ್ಲಿಮರು ಐ.ಎಸ್ ಸೇರಲು ಹವಣಿಸುತ್ತಿರುವ ಕಾರಣ ಅವರಿಗೆ ಸೈನಿಕರ ಕೊರತೆಯೂ ಇಲ್ಲ.

ಈ ಎಲ್ಲಾ ಹೊಡೆದಾಟ ಬಡಿದಾಟಗಳಿಂದ ಹಾನಿಯಾಗಿರುವುದು ಯುದ್ಧದಲ್ಲಿ ನೇರವಾಗಿ ಭಾಗಿಯಾಗದ ಜನರಿಗೆ. ಈ ಜನರಲ್ಲಿ ಪ್ರಜಾಪ್ರಭುತ್ವ ಹೋರಾಟಕ್ಕೆ ಬೆಂಬಲ ಕೊಟ್ಟ ಜನರೂ ಇದ್ದಿರಲೇಬೇಕು. ಪ್ರಜಾಪ್ರಭುತ್ವಕ್ಕಾಗಿ ನಡೆದ ಹೋರಾಟ ಈ ರೀತಿಯಾಗಿ ಹಾಳುಗೆಟ್ಟುಹೋಗುತ್ತದೆ ಎಂದು ಅವರೂ ನಿರೀಕ್ಷಿಸರಲಿಕ್ಕಿಲ್ಲ. ಇರುವ ಭೂಮಿಯಲ್ಲಿ ಬದುಕುವುದು ದುಸ್ತರವಾದಾಗ ಹೆಚ್ಚು ಕಡಿಮೆ ನಾಲ್ಕು ಲಕ್ಷ ಜನರು ದೇಶದ ಗಡಿ ದಾಟಿ ಲೆಬನಾನ್, ಟರ್ಕಿ, ಗ್ರೀಸ್, ಜರ್ಮನಿಯಂತಹ ದೇಶಗಳಿಗೆ ಪಲಾಯನ ಮಾಡಲಾರಂಭಿಸಿದರು. ಬೆನ್ನ ಹಿಂದೆಯೂ ಸಾವು ಪಲಾಯನದ ಹಾದಿಯಲ್ಲಿಯೂ ಸಾವು. ಚಿಕ್ಕ ಚಿಕ್ಕ ಬೋಟುಗಳಲ್ಲಿ ಅದರ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ಮೆಡಿಟರೇನಿಯನ್ ಸಮುದ್ರವನ್ನು ದಾಟಲು ಪ್ರಯತ್ನಿಸುತ್ತ ಪರದೇಶಗಳಿಗೆ ಆಶ್ರಯಕ್ಕಾಗಿ ಮೊರೆಯಿಟ್ಟರು. ಸಾವಿರ ಸಾವಿರ ಜನರು ಸಮುದ್ರದಲ್ಲೇ ನೀರುಪಾಲಾದರು. ನಿರಾಶ್ರಿತರಿಗೆ ಆಶ್ರಯ ಕೊಟ್ಟ ದೇಶದವರಿಗೂ ಈ ನಿರಾಶ್ರಿತರು ತಲೆ ನೋವಾದರು. ಅವರಿಗೆ ಸಹಾಯ ಮಾಡುವಷ್ಟು ಆರ್ಥಿಕ ಚೈತನ್ಯ ಕೂಡ ಅನೇಕ ದೇಶಗಳಿಗೆ ಇಲ್ಲವಾಯಿತು. ತಮ್ಮ ದೇಶದ ಆರ್ಥಿಕತೆಯೇ ಅಲುಗಾಡುವ ಪರಿಸ್ಥಿತಿ ನಿರ್ಮಾಣವಾದಾಗ ದೇಶವಾಸಿಗಳು ಕೂಡ ಈ ನಿರಾಶ್ರಿತರ ಬಗ್ಗೆ ಕೆಂಡಕಾರಲಾರಂಭಿಸಿದರು. ತಮ್ಮ ಆರ್ಥಿಕತೆ ಈ ನಿರಾಶ್ರಿತರಿಂದ ನಾಶವಾಗುತ್ತದೆ ಎಂಬ ಭಯದ ಜೊತೆಗೆ ಅನ್ಯಧರ್ಮದ ಅನ್ಯಸಂಸ್ಕೃತಿಯ ಜನರ ಆಗಮನದಿಂದಾಗಿ ತಮ್ಮ ಸಂಸ್ಕೃತಿ ನಾಶವಾಗಿಬಿಡಬಹುದೆಂಬ ಆತಂಕ ಕಾಡಿದರೆ ಅದು ಸಹಜ. ಭಯ ಮತ್ತಷ್ಟು ಹೆಚ್ಚಾಗಲು ಇಸ್ಲಾಮೋಫೋಬಿಯಾ ಕೂಡ ಕಾರಣ. ಪಂಗಡ ಯಾವುದೇ ಇದ್ದರೂ ಕೊನೆಗೆ ನಿರಾಶ್ರಿತರಾಗಿ ಬರುತ್ತಿರುವವರಲ್ಲಿ ಮುಸ್ಲಿಮರೇ ಹೆಚ್ಚು. ಐ.ಎಸ್.ಐ.ಎಸ್ ತನ್ನವರನ್ನು ಈ ನಿರಾಶ್ರಿತರ ಜೊತೆಗೆ ಕಳುಹಿಸಿದ್ದರೇನು ಗತಿ ಎಂಬ ಯೋಚನೆ ಕೂಡ ಸರಕಾರಕ್ಕಿದೆ. ಈ ಎಲ್ಲಾ ಭಯಗಳ ಜೊತೆಗೆ ವಲಸೆಗಾರರಿಗೂ ನಿರಾಶ್ರಿತರಿಗೂ ವ್ಯತ್ಯಾಸವಿದೆ; ವಲಸೆ ತಡೆಯೋಣ ನಿರಾಶ್ರಿತರಿಗೆ ಆಶ್ರಯ ಕೊಡೋಣ ಎನ್ನುವ ಜರ್ಮನಿಯಂತಹ ದೇಶಗಳೂ ಇವೆ. ಕಡಿಮೆಯಿದ್ದ ಇಂತಹ ದೇಶಗಳ ಸಂಖೈಯನ್ನು ಹೆಚ್ಚಿಸಿದ್ದು ಮೂರು ವರುಷದ ಹುಡುಗನ ಶವ.

ಶವವನ್ನೆತ್ತಿದ ಮೆಹಮತ್ ಸಿಪ್ಲಾಕ್
ಸಿರಿಯಾದಿಂದ ತಪ್ಪಿಸಿಕೊಂಡ ಅಯ್ಲಾನ್ ಕುರ್ದಿಯ ಕುಟುಂಬ ಗ್ರೀಕಿನ ಕೋಸ್ ದ್ವೀಪದತ್ತ ಹೊರಟಿದ್ದ ದೋಣಿ ಅಲೆಗಳೊಡೆತಕ್ಕೆ ಸಿಕ್ಕಿಬೀಳುತ್ತದೆ. ದೋಣಿಯ ಕ್ಯಾಪ್ಟನ್ ಮುಳುಗುವ ದೋಣಿಯನ್ನು ಬಿಟ್ಟು ತನ್ನ ಜೀವ ಉಳಿಸಿಕೊಂಡುಬಿಡುತ್ತಾನೆ. ಅಯ್ಲಾನ್ ಕುರ್ದಿಯ ತಂದೆಯೇ ದೋಣಿಯನ್ನು ಮುನ್ನಡೆಸಲು ಪ್ರಯತ್ನ ಪಡುತ್ತಾನಾದರೂ ದೋಣಿ ಮಗುಚಿ ಬಿದ್ದು ಅವನ ಹೆಂಡತಿ ಮಕ್ಕಳೇ ಸತ್ತು ಹೋಗುತ್ತಾರೆ. ಸಮುದ್ರ ದಂಡೆಯಲ್ಲಿ ಮಗುವೊಂದ ಮಲಗಿರುವ ರೀತಿಯಲ್ಲಿ ಸತ್ತು ಬಿದ್ದಿರುವುದು ಸತ್ತು ಬಿದ್ದಿರುವ ನಮ್ಮ ಮಾನವೀಯತೆಯನ್ನು ಬಡಿದೆಬ್ಬಿಸುತ್ತದೆ. ಅದರ ಫೋಟೋ ತೆಗೆದ ಪತ್ರಕರ್ತೆ ನಿಲುಫರ್ ಡೆಮಿರಳ ಮಾನವೀಯತೆಯ ಬಗ್ಗೆಯೂ ಪ್ರಶ್ನೆಗಳೆದ್ದಿದ್ದವು. ಮಗು ಬದುಕಿದೆಯಾ ಸತ್ತಿದೆಯಾ ನೋಡುವುದು ಬಿಟ್ಟು ಈ ರೀತಿ ಫೋಟೋ ತೆಗೆಯುವುದು ಎಷ್ಟು ಸರಿ? ಎಂಬ ಪ್ರಶ್ನೆ ಹುಟ್ಟಿತ್ತು. ‘ಮಗು ಬದುಕಿರಲಿಲ್ಲ. ನಿರಾಶ್ರಿತರ ಗೋಳನ್ನು ಕೇಳಿಸುವಂತೆ ಮಾಡಲು ಫೋಟೋ ತೆಗೆದೆ’ ಎಂದು ಹೇಳುವ ನಿಲುಫರ್ ಕಳೆದ ಹದಿನೈದು ವರುಷಗಳಿಂದ ನಿರಾಶ್ರಿತರಾಗಿ ಬರುವವರ ಬಗ್ಗೆ ವರದಿ ಮಾಡುತ್ತಿದ್ದಾರೆ. ಪೋಲೀಸ್ ಅಧಿಕಾರಿಯ ಕಣ್ಣಿಗೆ ಮಗುವಿನ ಶವ ಕಾಣಿಸುತ್ತದೆ. ಆತ ಅದನ್ನು ಎತ್ತಿಕೊಳ್ಳುವುದಕ್ಕೆ ಕ್ಷಣ ಮುಂಚೆ ಫೋಟೋ ಕ್ಲಿಕ್ಕಿಸಲಾಗಿದೆ. ಆ ಪೋಲೀಸ್ ಅಧಿಕಾರಿ ಮೆಹಮತ್ ಸಿಪ್ಲಾಕ್ ಗೂ ಇದೇ ವಯಸ್ಸಿನ ಮಗನಿದ್ದಾನಂತೆ. ನಂತರದ ಫೋಟೋಗಳಲ್ಲಿ ದುಃಖ ಭರಿತನಾದ ಅಧಿಕಾರಿಯ ಚಿತ್ರಣವಿದೆ.
ಮುಂಬೈ ಬಾಂಬ್ ಬ್ಲಾಸ್ಟ್

ಪ್ಯಾಲೇಸ್ತೇನ್

ಭೋಪಾಲ್ ಗ್ಯಾಸ್ ದುರಂತ

ಗುಜರಾತ್ ಗಲಭೆ

ಚಿತ್ರಗಳು ಮಾನವೀಯತೆಯನ್ನು ಬಡಿದೆಬ್ಬಿಸುವುದು ಹೊಸತೇನಲ್ಲ. ನಾಜಿ ಕ್ಯಾಂಪಿನ ಚಿತ್ರಗಳು, ಭೋಪಾಲದಲ್ಲಿ ಹೂತು ಹಾಕುವ ಮಗುವಿನ ವಿಕಾರ ಮುಖದ ಚಿತ್ರ, ಹಸಿದ ಮಗುವಿನ ಹಿಂದೆ ರಣಹದ್ದೊಂದು ಕುಳಿತಿರುವ ಚಿತ್ರ, ಎದುರಿಗಿನ ಕ್ಯಾಮೆರಾವನ್ನು ಬಂದೂಕೆಂದು ತಿಳಿದು ಕೈ ಮೇಲೆತ್ತಿದ ಮಗುವಿನ ಚಿತ್ರ, ಪ್ಯಾಲೇಸ್ತೀನಿನ ಚಿತ್ರಗಳು, ಬಾಂಬ್ ಸ್ಪೋಟದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಜನರ ಅಂಗಾಂಗಗಳು – ವಸ್ತುಗಳ ಚಿತ್ರ, ಸಾಯಿಸಿದ ನಕ್ಸಲನನ್ನು ಪ್ರಾಣಿಯಂತೆ ಕೋಲಿಗೆ ಕಟ್ಟಿ ತೆಗೆದುಕೊಂಡ ಹೋಗುವ ಚಿತ್ರ, ನೆಲಬಾಂಬ್ ಸ್ಪೋಟದಿಂದ ಸತ್ತ ಸಿ.ಆರ್.ಪಿ.ಎಫ್ ಯೋಧರ ಚಿತ್ರ, ಗೋದ್ರೋತ್ತರ ಗಲಭೆಯಲ್ಲಿ ಕೈ ಮುಗಿದು ಬೇಡಿಕೊ‍ಳ್ಳುವ ವ್ಯಕ್ತಿಯ ಕಣ್ಣಲ್ಲಿನ ನೀರು – ಇವೆಲ್ಲವೂ ಮನುಷ್ಯನ ಮಾನವೀಯತೆಯನ್ನು ಬಡಿದೆಬ್ಬಿಸಿವೆ. ಒಂದರೆಕ್ಷಣವಾದರೂ ತತ್ವ ಸಿದ್ಧಾಂತಗಳನ್ನು ಮರೆತು ಮನುಷ್ಯ ಮಾನವೀಯತೆಯನ್ನು ತೋರ್ಪಡಿಸುವಲ್ಲಿ ‘ಛೇ ಛೇ’ ಎಂದು ಉದ್ಗರಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಆದರಾ ಮಾನವೀಯತೆ ಶಾಶ್ವತವಾಗಿ ಉಳಿಯುವುದಿಲ್ಲವೆಂಬುದಕ್ಕೆ ಬಹಳಷ್ಟು ಉದಾಹರಣೆಗಳು ಸಿಗುತ್ತವೆ. ಯುದ್ಧ ಪಿಪಾಸು ರಾಷ್ಟ್ರಗಳು, ಶಸ್ತ್ರಾಸ್ತ್ರ ಕಂಪನಿಗಳ ದುರಾಸೆಗಳು, ಶ್ರೇಷ್ಟ ಧರ್ಮದ ವ್ಯಸನ.......... ಸತ್ತವರೊಂದಿಗೆ ಮಾನವೀಯತೆಯೂ ಸಾಯುತ್ತಿದೆ.

ಮೂಲ : ವಿಕಿಪೀಡಿಯ, vox, mercycorps, mirror, theglobeandtimess

Sep 12, 2015

ಹಿಂದಿ ‘ಮುಂದಾಳು’ ಭಾಷೆಯಾದರೆ ಉಳಿದವೇನು ಜೀತಕ್ಕಿವೆಯೇ?

ಪಾಂಚಜನ್ಯದ ಸಂಪಾದಕೀಯ
 DrAshok K R
‘ಭಾರತದ ತಾಕತ್ತು ಹಿಂದಿ’ ಎಂದು ದೊಡ್ಡ ಹೆಡ್ಡಿಂಗಿನಲ್ಲಿ ಆರ್.ಎಸ್.ಎಸ್ಸಿನ ಮುಖವಾಣಿ ಪಂಚಜನ್ಯದಲ್ಲೊಂದು ಸಂಪಾದಕೀಯ ಬರುತ್ತದೆ, ಸೆಪ್ಟೆಂಬರ್ ನಾಲ್ಕರಂದು. ಸಂಪಾದಕೀಯದ ಮೇಲೆ ‘ಹಿಂದಿಯನ್ನು ವಿರೋಧಿಸುವ ಯಾವುದೇ ಆಂದೋಲನ ದೇಶದ ಪ್ರಗತಿಗೆ ಮಾರಕ’ ಎಂದು ಸುಭಾಷ್ ಚಂದ್ರಬೋಸ್ ಹೇಳಿದರೆನ್ನಲಾದ ಹೇಳಿಕೆಯಿದೆ. ಹಿತೇಶ್ ಶಂಕರ್ ಬರೆದಿರುವ ಸಂಪಾದಕೀಯದಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿ ಆಗಸ್ಟ್ ಹದಿನೈದರಂದು ಟ್ವಿಟರಿನಲ್ಲಿ ನಡೆದ #stophindiimposition ಅನ್ನು ಟೀಕಿಸಿದ್ದಾರೆ. ಹಿಂದಿಯನ್ನು ವಿರೋಧಿಸುವುದು (ಸತ್ಯವಾಗಿ ನಾವೆಲ್ಲರೂ ವಿರೋಧಿಸುತ್ತಿರುವುದು ಹಿಂದಿ ಹೇರಿಕೆಯನ್ನು ಎಂಬುದನ್ನು ನಯವಾಗಿ ಮರೆಸುತ್ತಾರೆ) ಮೂರ್ಖತನದ ಕೆಲಸವಂತೆ, ಹಿಂದಿಯನ್ನು ವಿರೋದಿಸುವವರ ರಾಜತಾಂತ್ರಿಕ ಶಡ್ಯಂತ್ರದ ಭಾಗವಂತೆ! ಗಂಗ, ಯಮುನಾ, ಕಾವೇರಿ, ನರ್ಮದಾ ನದಿಗಳ ಹೆಸರನ್ನು ಹೇಳುತ್ತಾ ಭಾವನಾತ್ಮಕವಾಗಿ ಹಿಂದಿಯನ್ನು ವಿರೋಧಿಸುವುದು ತಪ್ಪು ಎನ್ನುತ್ತಾರೆ. ಹಿಂದಿಯನ್ನು ಸಮರ್ಥಿಸಲು ಗಾಂಧಿ, ಭಗತ್ ಸಿಂಗರೆಲ್ಲರನ್ನೂ ಎಳೆದು ತರುತ್ತಾರೆ.

ಹಿಂದಿಯನ್ನು ಮತ್ತಷ್ಟು ಬೆಳೆಸಬೇಕಂತೆ! ನಮ್ಮ ಭಾಷೆಯನ್ನು ಕೊಂದೇ?
ಇದೇ ಪಾಂಚಜನ್ಯದಲ್ಲಿ ‘ದಕ್ಷಿಣ ಭಾರತದಲ್ಲಿ ಹೆಚ್ಚುತ್ತಿರುವ ಹಿಂದಿಯ ಪ್ರಭಾವ’ ಎಂಬ ಮತ್ತೊಂದು ಲೇಖನ ಪ್ರಕಟವಾಗಿದೆ. 1918ರಲ್ಲಿ ಮದ್ರಾಸಿನಲ್ಲಿ ಮಹಾತ್ಮ ಗಾಂಧಿ ಹಿಂದಿ ಪ್ರಚಾರ ಸಭಾವನ್ನು ಉದ್ಘಾಟಿಸಿದರು. ಅಲ್ಲಿಂದ ಇಲ್ಲಿಯವರೆಗೆ ದಕ್ಷಿಣದ ರಾಜ್ಯಗಳಲ್ಲಿ ಹಿಂದಿ ಸಾಕಷ್ಟು ಬೆಳೆದಿದೆ. ಹಿಂದಿ ಬೆಳೆದಿದೆ, ಇನ್ನಷ್ಟು ಪ್ರಯತ್ನ ಪಡಬೇಕೆಂದು ಬರೆದಿದ್ದಾರೆ! ಈಗಲೇ ನಮ್ಮ ರಾಜ್ಯದ ಬ್ಯಾಂಕು ಪೋಸ್ಟ್ ಆಫೀಸುಗಳಲ್ಲಿರುವ ಚಲನ್ನುಗಳು ಹಿಂದಿ ಮತ್ತು ಇಂಗ್ಲೀಷಿನಲ್ಲಷ್ಟೇ ಇವೆ. 
ಇನ್ನಷ್ಟು ಪ್ರಯತ್ನವೆಂದರೆ ಹಿಂದಿಯಷ್ಟೇ ಇರುವುದಾ? ದಕ್ಷಿಣದ ನಾಲ್ಕು ರಾಜ್ಯಗಳ ಪ್ರಮುಖ ನಗರಗಳಲ್ಲೆಲ್ಲಾ ಹಿಂದಿ ಪ್ರಚಾರಕರು ಇರಬೇಕರಂತೆ! ಇತಿಹಾಸ, ಪ್ರವಾಸ, ಪುರಾತತ್ವ, ಅನುವಾದದ ಬಗ್ಗೆ ಹಿಂದಿಯಲ್ಲಿ ಶಿಕ್ಷಣ ಕೊಟ್ಟು ಅಂತವರನ್ನು ರೈಲ್ವೆ ನಿಲ್ದಾಣ, ಹೋಟೆಲ್, ಪ್ರವಾಸಿ ಕೇಂದ್ರ, ಸಂಗ್ರಹಾಲಯ, ಐತಿಹಾಸಿಕ ಸ್ಥಳಗಳಲ್ಲಿ ಹಿಂದಿಯ ಸಮನ್ವಯಕಾರರನ್ನಾಗಿ ಮಾಡಬೇಕಂತೆ!
ದಕ್ಷಿಣ ಭಾರತದಲ್ಲಿ ಹಿಂದಿ ಸಮನ್ವಯಕರು ಇರಬೇಕಂತೆ
ಹಿಂದಿ ಗೊತ್ತಿರುವವರು ಈ ರಾಜ್ಯಗಳಲ್ಲಿ ಇಲ್ಲದ ಕಾರಣ ಒರಿಸ್ಸಾ, ಗುಜರಾಜ್, ಪಂಜಾಬಿನ ಜನರು ಭಾಷೆಯ ಸಮಸ್ಯೆಯಿಂದ ದಕ್ಷಿಣ ಭಾರತದ ದರ್ಶನೀಯ ಸ್ಥಳಗಳನ್ನು ನೋಡಲಾಗುತ್ತಿಲ್ಲವಂತೆ! ವ್ಯಾಪಾರ ವಹಿವಾಟು ಹೆಚ್ಚಲು ಈ ಹಿಂದಿ ಸಮನ್ವಯಕಾರರು ಕಾರಣಕರ್ತರಾಗುತ್ತಾರಂತೆ. ಹೀಗೆ ಲೇಖನದ ತುಂಬೆಲ್ಲ ಸುಳ್ಳುಗಳೇ ತುಂಬಿಕೊಂಡಿದೆ. ಪ್ರವಾಸಕ್ಕೆ ಹೋಗಲು ಅಲ್ಲಿನವರಿಗೆ ನಮ್ಮ ಭಾಷೆ ಗೊತ್ತಿರಬೇಕು ಎಂಬುದೇ ಸತ್ಯವಾದರೆ ದಕ್ಷಿಣದವರ್ಯಾರು ಉತ್ತರ ಭಾರತಕ್ಕೆ ಪ್ರವಾಸ ಹೋಗುವಂತಿಲ್ಲ. ಕನ್ನಡಿಗರು ತಮಿಳುನಾಡಿಗೆ, ತೆಲುಗರು ಕರ್ನಾಟಕಕ್ಕೆ ಪ್ರವಾಸ ಬರುವಂತಿಲ್ಲ! ಹಿಂದಿಯನ್ನು ಎಲ್ಲರ ಭಾಷೆಯಾಗಿಸಿ ಬಲಪಡಿಸಬೇಕಂತೆ. ನಮಗೇನ್ ಕರ್ಮವೇ! ದಕ್ಷಿಣ ಭಾರತವನ್ನು ಹಿಂದಿಯಿಂದ ‘ಕಂಗೊಳಿಸಬೇಕೆಂದು’ ಬರೆದಿರುವುದು ಆಲ್ ಇಂಡಿಯಾ ರೇಡಿಯೋದ ಪತ್ರಕರ್ತ ಸಂಜಯ್ ಬ್ಯಾನರ್ಜಿ! ಸರಕಾರೀ ಕೆಲಸದಲ್ಲಿರುವ ಹಿಂದಿ ಪತ್ರಕರ್ತನೊಬ್ಬನ ಮನಸ್ಥಿತಿಯಿದು.

ಈ ಆರ್.ಎಸ್.ಎಸ್ಸಿಗರಿಗೆ ಹಿಂದಿ ಭಾಷೆಯ ಮೇಲೆ ವ್ಯಾಮೋಹವಿರಲಿ. ಬೇರೆ ಭಾಷೆಗಳನ್ನು ಸಾಯಿಸಿ ಹಿಂದಿಯನ್ನು ಬಲಿಷ್ಟಗೊಳಿಸಿ ಅದನ್ನು ದೇಶಪ್ರೇಮದೊಂದಿಗೆ ಬೆರೆಸುವ ಚಟವ್ಯಾಕೆ? ಪಾಂಚಜನ್ಯದ ಲೇಖನಗಳು ಪ್ರಕಟವಾಗಿರುವುದು ಸೆಪ್ಟೆಂಬರ್ ನಾಲ್ಕರ ಸಂಚಿಕೆಯಲ್ಲಿ. ಸೆಪ್ಟೆಂಬರ್ ಹತ್ತರಿಂದ ಮಧ್ಯಪ್ರದೇಶದ ಭೋಪಾಲದಲ್ಲಿ ವಿಶ್ವ ಹಿಂದಿ ಸಮ್ಮೇಳನ ಪ್ರಾರಂಭವಾಗುತ್ತದೆ. ಸಮ್ಮೇಳನದ ಮೊದಲ ದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾಷಣ. ಅದೇನು ಮೋದಿಯವರ ಭಾಷಣ ಕೇಳಿ ಪಾಂಚಜನ್ಯದ ಲೇಖನಗಳನ್ನು ಬರೆಯಲಾಯಿತೋ ಅಥವಾ ಪಾಂಚಜನ್ಯ ಓದಿ ಮೋದಿಯವರು ಭಾಷಣ ಮಾಡಿದರೋ ತಿಳಿಯುವುದಿಲ್ಲ.
ನರೇಂದ್ರ ಮೋದಿಯವರ ಭಾಷಣ ಪಾಂಚಜನ್ಯದ ಮತ್ತೊಂದು ರೂಪವಾಗಿತ್ತು
ಮೋದಿಯವರು ಬೆಳೆದು ಬಂದಿದ್ದು ಆರ್.ಎಸ್.ಎಸ್ಸಿನ ಸಂಸ್ಕೃತಿಯಲ್ಲೇ ಎಂಬ ಅಂಶ ಹಿಂದಿ ಮಾತೃಭಾಷೆಯಲ್ಲದ ಗುಜರಾತಿನಿಂದ ಬಂದೂ ‘ಹಿಂದಿಗಷ್ಟೇ ಭಾರತವನ್ನು ಗಟ್ಟಿಗೊಳಿಸುವ ಶಕ್ತಿಯಿರುವುದು’ ಎನ್ನುವ ಅವರ ಅಭಿಪ್ರಾಯದ ಮೂಲಕವೇ ಗುರುತಿಸಿಬಿಡಬಹುದು. ಪ್ರಪಂಚದಲ್ಲಿರುವ 6000 ಭಾಷೆಗಳಲ್ಲಿ 90% ವಿನಾಶದ ಅಂಚಿನಲ್ಲವೆ ಎಂದವರು ಹೇಳುತ್ತಾರೆ, ಭಾಷೆ ಜ್ಞಾನವನ್ನು ತಿಳಿಸುತ್ತದೆ, ಅನುಭವವನ್ನು ತಿಳಿಸಿಕೊಡುತ್ತದೆ ಎಂದೆಲ್ಲ ಹೇಳುತ್ತಾರೆ; ಕೊನೆಗೆ ಹಿಂದಿಯ ಪಾದಾರವಿಂದಗಳಿಗೆ ಶರಣಾಗಿ ಬಿಡುತ್ತಾರೆ! ಹಿಂದಿ ಬರದಿದ್ದರೆ ನನ್ನ ಕಥೆ ಏನ್ ಆಗುತ್ತಿತ್ತು? ಎಂದು ಹೇಳುತ್ತಾ ಹಿಂದಿ ಬರದವರು ದೇಶದ ಪ್ರಧಾನಿಯಾಗಲು ಲಾಯಕ್ಕಿಲ್ಲ ಎಂಬ ಸಂದೇಶ ಕೊಡುತ್ತಾರೆ. ಹಿಂದಿ ಬರದಿದ್ದರೆ ಮೋದಿಯವರು ಜನರನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲವಂತೆ, ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲವಂತೆ! ವಿವಿಧ ಮಾತೃಭಾಷೆಗಳನ್ನು ಜೋಡಿಸಲು ಹಿಂದಿ ಉಪಯುಕ್ತವೆಂಬುದು ನಮ್ಮ ಪ್ರಧಾನ ಮಂತ್ರಿಗಳ ಅಭಿಪ್ರಾಯ! ಎಲ್ಲದಕ್ಕಿಂತ ಅಪಾಯಕಾರಿ ಅಭಿಪ್ರಾಯವೆಂದರೆ ಎಲ್ಲಾ ಭಾಷಿಕರು ತಮ್ಮ ತಮ್ಮ ಭಾಷೆಯನ್ನು ನಾಗರಿ ಲಿಪಿಯಲ್ಲಿ (ದೇವನಾಗರಿ) ಬರೆಯುವ ಅಭ್ಯಾಸ ಮಾಡಬೇಕಂತೆ! ಹಿಂದಿ ಹೇರಿಕೆಯ ಜೊತೆಜೊತೆಗೆ ಮುಂದಿನ ದಿನಗಳಲ್ಲಿ ಶಾಲೆಗಳಲ್ಲಿ ಕನ್ನಡವನ್ನು ನಾಗರಿ ಲಿಪಿಯಲ್ಲಿ ಬರೆಸುವಂತಹ ಅಸಹ್ಯದ ಕೆಲಸವೂ ನಡೆದರೆ ಅಚ್ಚರಿಪಡಬೇಡಿ. ಗುಜರಾತಿಗೆ ವ್ಯಾಪಾರಕ್ಕೆಂದು ಬಂದ ಉತ್ತರಪ್ರದೇಶದವರಿಗೆ ಚಹಾ ಮಾರುತ್ತಾ ಹಿಂದಿ ಕಲಿತೆ ಎಂದವರು ಹೆಮ್ಮೆಯಿಂದ ಹೇಳುತ್ತಾರೆ. ಒಂದು ಭಾಷೆ ಕಲಿಯುವುದೇನೋ ಹೆಮ್ಮೆಯ ಸಂಗತಿಯೇ. ಗುಜರಾತಿಗೆ ವ್ಯಾಪಾರಕ್ಕೆಂದು ಬಂದವರು ಗುಜರಾತಿ ಕಲಿಯಬೇಕೆ ಹೊರತು ಗುಜರಾತಿಗಳೇ ಹಿಂದಿ ಕಲಿಯಬೇಕೆ? ಎಂಬ ಪ್ರಶ್ನೆ ಹಾಗೆಯೇ ಉಳಿದುಹೋಗುತ್ತದೆ. ಗುಜರಾತಿಗಳು ನೆರೆಹೊರೆಯವರೊಂದಿಗೆ, ಆಟೋದವರೊಂದಿಗೆ ಜಗಳವಾಡಬೇಕಾದರೆ ಹಿಂದಿಯಲ್ಲಿ ಜಗಳವಾಡುತ್ತಾರಂತೆ. ಹಿಂದಿ ಮಾತನಾಡಿದರೆ ಧಮ್ ಇದೆ ಎಂದುಕೊಳ್ಳುತ್ತಾರಂತೆ! “ಭಾರತದ ತಾಕತ್ತು ಹಿಂದಿ” ಎಂಬ ಸಂಪಾದಕೀಯ ಬರೆದ ಪಾಂಚಜನ್ಯಕ್ಕೂ “ಹಿಂದಿ ಮಾತನಾಡಿದರೆ ಧಮ್ ಇದೆ ಎಂದುಕೊಳ್ಳುತ್ತಾರೆ” ಎನ್ನುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಾಲಿಗೂ ಎಷ್ಟೊಂದು ಸಾಮ್ಯತೆಯಿದೆಯಲ್ಲವೇ? ಹಿಂದಿ ತಾಕತ್ತಿನ ಧಮ್ಮಿನ ಭಾರತವನ್ನು ಮುನ್ನಡೆಸುವ ಭಾಷೆಯಾದರೆ ಭಾರತದ ಉಳಿದ ಭಾಷೆಗಳೇನು ಜೀತಕ್ಕಿವೆಯೇ?

ನೂರಾರು ಭಾಷೆಗಳಿರುವ ಒಂದು ದೇಶದ ಪ್ರಧಾನಮಂತ್ರಿ ಮತ್ತು ಆ ಪ್ರಧಾನಮಂತ್ರಿಯವರನ್ನು ಸಾಂಸ್ಕೃತಿಕವಾಗಿ ಬೆಳೆಸಿದ ಒಂದು ಸಂಸ್ಥೆ ಹಿಂದಿ ಹೇರಿಕೆಯನ್ನು ವಿವಿಧ ಭಾವನೆಗಳ ನೆಪದಲ್ಲಿ, ವ್ಯಾಪಾರ ವಹಿವಾಟಿನ ನೆಪದಲ್ಲಿ ಇತರೆ ಭಾಷಿಕರ ಮೇಲೆ ಹೇರಲು ಉತ್ತೇಜನ ನೀಡುತ್ತಾರೆ. ಇದಕ್ಕಿಂತ ದೊಡ್ಡ ದುರಂತವಿದೆಯೇ? ಇವರೇನು ಈ ಹೇರಿಕೆ ಮಾಡುವವರಲ್ಲಿ ಮೊದಲಿಗರಲ್ಲ, ಕೊನೆಯವರೂ ಅಲ್ಲ. ಕಾಂಗ್ರೆಸ್ (ಇದನ್ನೂ ಓದಿ: ಲಜ್ಜೆಗೆಟ್ಟ ಕಾಂಗ್ರೆಸ್ಸಿನಿಂದ ಪಂಚಭಾಷಾ ಪ್ರಣಾಳಿಕೆ), ಬಿಜೆಪಿ (ಇದನ್ನೂ ಓದಿ: ಲಜ್ಜೆಗೆಡುವುದರಲ್ಲಿ ಎಲ್ಲರೂ ಮುಂದು) ಎಂಬ ‘ರಾಷ್ಟ್ರೀಯ’ ಪಟ್ಟ ಕಟ್ಟಿಕೊಂಡ ಪಕ್ಷಗಳೆರಡರ ಮುಖಂಡರುಗಳು ಈ ಹಿಂದಿ ಹೇರಿಕೆಯ ಸಮರ್ಥಕರೇ ಆಗಿದ್ದಾರೆ. ಹಿಂದಿ ದೇಶವನ್ನು ಒಗ್ಗೂಡಿಸುವುದಿರಲಿ, ಇದೇ ರೀತಿಯ ಹೇರಿಕೆಯನ್ನು ಒಂದು ಭಾಷೆ ಶ್ರೇಷ್ಟವೆಂಬ ಸಂಗತಿಯನ್ನು ಇವರು ಪ್ರಚುರಪಡಿಸುತ್ತಲೇ ಸಾಗಿದರೆ ದೇಶವನ್ನೊಡೆಯಲು ಪರದೇಶದವರ ಅವಶ್ಯಕತೆಯೇ ಇಲ್ಲ. ಈ ಹಿಂದಿ ಭಾಷಾಂಧರೇ ಸಾಕು ದೇಶ ಮತ್ತೊಮ್ಮೆ ವಿಭಜನೆಗೊಳ್ಳಲು.

Sep 9, 2015

ಶೈಕ್ಷಣಿಕ ಸಾಲಕ್ಕೆ ಸರಕಾರವೇ ಗ್ಯಾರಂಟಿ: ದೆಹಲಿ ಸರಕಾರದ ಯೋಜನೆ

ಉನ್ನತ ಶಿಕ್ಷಣವೀಗ ಖರ್ಚಿನ ಬಾಬತ್ತು. ಸರಕಾರೀ ಸಂಸ್ಥೆಗಳಲ್ಲಿರುವ ಶುಲ್ಕವನ್ನು ಭರಿಸುವುದೇ ಅನೇಕರಿಗೆ ಕಷ್ಟವಾಗಿರುವಾಗ ಖಾಸಗಿ ಸಂಸ್ಥೆಗಳಲ್ಲಿನ ಶುಲ್ಕವನ್ನು ಭರಿಸಿ ಓದುವುದು ದೂರದ ಮಾತೇ ಸರಿ. ಬ್ಯಾಂಕುಗಳೇನೋ 12ರಿಂದ 14% ಬಡ್ಡಿಗೆ ಸಾಲ ನೀಡುತ್ತವೆ. ಆದರೆ ಈ ಸಾಲ ಪಡೆಯಲು ವಿದ್ಯಾರ್ಥಿಯ ಪೋಷಕರ ಬಳಿ ಖಾತರಿಯಾಗಿಡಲು ಆಸ್ತಿ ಪಾಸ್ತಿ ಇರಬೇಕು. ಇಲ್ಲವಾದಲ್ಲಿ ಬ್ಯಾಂಕುಗಳು ಸಾಲ ನೀಡುವುದಿಲ್ಲ. ಎಷ್ಟು ಜನರ ಬಳಿ ಈ ರೀತಿ ಆಸ್ತಿ ಇರಲು ಸಾಧ್ಯ. ಆಸ್ತಿ ವಂಚಿತರು ಕೊನೆಗೆ ಉನ್ನತ ಶಿಕ್ಷಣದಿಂದಲೂ ವಂಚಿತರಾಗುವ ಸಾಧ್ಯತೆ ಅಧಿಕ. 

ಇಂತವರಿಗೆ ಸಹಾಯವಾಗಲೆಂಬ ಉದ್ದೇಶದಿಂದ ದೆಹಲಿ ಸರಕಾರ ಹೊಸತೊಂದು ಯೋಜನೆಯನ್ನು ಜಾರಿಗೆ ತಂದಿದೆ. ಪೋಷಕರ ಬಳಿ ಖಾತರಿಯಾಗಿಡಲು ಆಸ್ತಿ ಪಾಸ್ತಿ ಇರದಿದ್ದರೂ ಪರವಾಗಿಲ್ಲ, ವಿದ್ಯಾರ್ಥಿಯ ಸಾಲಕ್ಕೆ ಸರಕಾರವೇ ಗ್ಯಾರಂಟಿ ಕೊಡುತ್ತದೆ! ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಭರವಸೆಯನ್ನು ಈಡೇರಿಸಿರುವ ದೆಹಲಿಯ ಆಪ್ ಸರಕಾರ ಹತ್ತು ಲಕ್ಷದವರೆಗಿನ ಸಾಲಕ್ಕೆ ಬ್ಯಾಂಕಿಗೆ ಖಾತರಿಯಾಗುತ್ತಾರೆ. ಆರ್ಥಿಕವಾಗಿ ಹಿಂದುಳಿದು ದುಡ್ಡಿನ ಕೊರತೆಯ ಕಾರಣದಿಂದ ಉನ್ನತ ಶಿಕ್ಷಣಕ್ಕೆ ಸೇರಲಾಗದವರಿಗೆಲ್ಲರಿಗೂ ಈ ಯೋಜನೆಯಿಂದ ಪ್ರಯೋಜನವಾಗಲಿದೆ.

ಈ ಯೋಜನೆ ಸರಕಾರೀ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಓದುತ್ತಿರುವ/ಓದಲು ಬಯಸುವ ವಿದ್ಯಾರ್ಥಿಗಳೆಲ್ಲರಿಗೂ ಲಭ್ಯವಿದೆ. ಸರಕಾರವೇ ಹೇಳುವಂತೆ ಈ ಯೋಜನೆಯ ಯಶಸ್ಸು ಓದು ಮುಗಿಸಿ ಕೆಲಸಕ್ಕೆ ಸೇರುವ ವಿದ್ಯಾರ್ಥಿಗಳ ಮೇಲಿದೆ. ಕೆಲಸ ಸಿಕ್ಕ ಮೇಲೆ ಸಮಯಕ್ಕೆ ಸರಿಯಾಗಿ ಸಾಲ ತೀರಿಸಿದರಷ್ಟೇ ಈ ಯೋಜನೆ ಮುಂದಿನ ವಿದ್ಯಾರ್ಥಿಗಳಿಗೂ ಯಶಸ್ವಿಯಾಗಿ ಮುಂದುವರೆಯುತ್ತದೆ. ಇಲ್ಲವಾದರೆ ಆರ್ಥಿಕ ಹೊರೆಯ ನೆಪವೊಡ್ಡಿ ಮುಂದಿನ ಸರಕಾರಗಳು ಹಂತಹಂತವಾಗಿ ಯೋಜನೆಯನ್ನೇ ಸ್ಥಗಿತಗೊಳಿಸಿಬಿಡಬಹುದು. ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸರಕಾರವೇ ಉತ್ತಮವಾಗಿ ನಡೆಸುವುದು ಅತ್ಯುತ್ತಮ ವ್ಯವಸ್ಥೆ, ಖಾಸಗೀಕರಣವನ್ನು ಸದ್ಯಕ್ಕೆ ತಡೆಯುವ ಉಪಾಯ ಇಲ್ಲದ ಕಾರಣ ಖಾಸಗೀಕರಣದಿಂದ ಹೆಚ್ಚಳವಾದ ಶುಲ್ಕ ಬಡವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ತೊಂದರೆಯುಂಟುಮಾಡಬಾರದೆಂಬ ಉದ್ದೇಶದ ಈ ಯೋಜನೆ ದೆಹಲಿಯಲ್ಲಿ ಯಶಸ್ವಿಯಾಗಲಿ, ದೇಶದೆಲ್ಲೆಡೆ ಇಂತಹ ಯೋಜನೆಗಳು ಜಾರಿಯಾಗಲಿ.

ಮಂಗಳೂರಿನ ಮತಿಗೆಟ್ಟ 'ಯುವಕರು'


Ashok K R
ದಕ್ಷಿಣ ಕನ್ನಡದಲ್ಲಿ ಬಿಜೆಪಿಯದೇ ಪಾರುಪತ್ಯವಿತ್ತು. ಬಿಜೆಪಿ ಬೆಂಬಲಿತ ಸಂಘಪರಿವಾರದ ವಿವಿಧ ಶಾಖೆಗಳ ಆಟೋಟಾಪಗಳು, ಸಾಮಾನ್ಯ ಜನರಿಗೆ ವಿನಾಕಾರಣವಾಗಿ ಅವರು ನೀಡಿದ ತೊಂದರೆ, ಅದರ ಜೊತೆಜೊತೆಗೇ ಬೆಳೆದ ಮುಸ್ಲಿಂ ಮೂಲಭೂತವಾದಿಗಳ ಕಾಟವೆಲ್ಲವೂ ಸೇರಿ ಜನರನ್ನು ಜಿಗುಪ್ಸೆಗೆ ತಳ್ಳಿತ್ತು. ಆ ಜಿಗುಪ್ಸೆಯ ಫಲವೆಂಬಂತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಡೀ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು, ಸುಳ್ಯ ಕ್ಷೇತ್ರವೊಂದನ್ನು ಹೊರತುಪಡಿಸಿ. ಓ! ಕಾಂಗ್ರೆಸ್ ಬಂತು, ಅದರಲ್ಲೂ ಸಿದ್ಧರಾಮಯ್ಯನಂತಹ 'ಸಮಾಜವಾದಿ' 'ಅಹಿಂದ' ನಾಯಕ ಈಗ ಮುಖ್ಯಮಂತ್ರಿ. ಇನ್ನೇನು ಇಡೀ ದಕ್ಷಿಣ ಕನ್ನಡ ಶಾಂತಿಯ ಬೀಡಾಗಿಬಿಡುತ್ತದೆ ಎಂದುಕೊಂಡಿರಾದರೆ ಅದು ಖಂಡಿತ ತಪ್ಪು. ತಪ್ಪೆಂದು ನಿರೂಪಿಸಲು ಮತ್ತೆ ಮತ್ತೆ ಅನೈತಿಕ ಪೋಲೀಸ್ ಗಿರಿಯಂತಹ ಕಾರ್ಯಗಳು ನಡೆಯುತ್ತಲೇ ಇವೆ. 
ಮುಸ್ಲಿಮನೊಬ್ಬ ಪರಿಚಯದ ಹಿಂದೂ ಹುಡುಗಿಯೊಂದಿಗೆ ಹೋಗುವುದು, ಹಿಂದೂವೊಬ್ಬ ಪರಿಚಯದ ಮುಸ್ಲಿಂ ಹುಡುಗಿಯೊಟ್ಟಿಗೆ ಹೋಗುವುದು ಇಲ್ಲಿ ಧರ್ಮದ್ರೋಹದ ಅಪರಾಧ! ಇಂತವರ ವಿರುದ್ಧ ಮಾತನಾಡಿದರೆ ಅದು ದೇಶದ್ರೋಹಕ್ಕೆ ಸಮ! ನಿನ್ನೆ ದಿನ ಹಿಂದೂ ಯುವಕೊನೊಬ್ಬನನ್ನು ನಡುಬೀದಿಯಲ್ಲಿ ಹೊಡೆಯಲಾಗಿದೆ. ಕಾರಣ ಆತ ಮುಸ್ಲಿಂ ಹುಡುಗಿಯೊಟ್ಟಿಗೆ ಹೋಗುತ್ತಿದ್ದ. ಹೆಣ್ಣುಮಕ್ಕಳ 'ರಕ್ಷಣೆಯ' ನೆಪದಲ್ಲಿ ಮುಸ್ಲಿಂ ಮೂಲಭೂತವಾದಿಗಳು ಇಂತಹ ಕೃತ್ಯವೆಸಗಿದ್ದಾರೆ! ಸಹಪಾಠಿಗಳೂ ಮಾತನಾಡದಂತಹ ಸ್ಥಿತಿಗೆ ಮಂಗಳೂರು ತಲುಪಿರುವುದಾದರೂ ಯಾಕೆ?
ಮೇಲಿನ ಚಿತ್ರ ಗಮನಿಸಿ, ಆ ಹಿಂದೂ ಹುಡುಗನ ಎದುರಿಗೆ ನಿಂತು ಬಹುಶಃ 'ಸಂಸ್ಕೃತಿ'ಯ ಪಾಠ ಮಾಡುತ್ತಿರುವವರೆಲ್ಲರೂ ಯುವಕರು. ಇಂತಹ ಯುವಕರಿಗೆ ಕೋಮುನಂಜನ್ನು ತುಂಬುತ್ತಿರುವವರಾರು? ಆ ಕೋಮು ವಿಷವನ್ನು ತುಂಬುವ ವ್ಯಕ್ತಿಗಳು ದೊಡ್ಡ ದೊಡ್ಡ ಭಾಷಣ ಬಿಗಿದು ಬೆಚ್ಚಗೆ ಮನೆ ಸೇರುತ್ತಾರೆ. ವಿಷದ ನಂಜೇರಿದ ಈ ಯುವಕರು ಬೀದಿಯಲ್ಲಿ ಓಡಾಡುತ್ತಿದ್ದ ಗೆಳೆಯರಿಬ್ಬರನ್ನೂ ಹಿಡಿದು ಚಚ್ಚುತ್ತಾರೆ. ಕೊನೆಗೆ ಜೈಲು ಪಾಲಾಗುವ ಸಂದರ್ಭ ಬಂದರೆ ಅದು ಈ ಹುಡುಗರಿಗೇ ಹೊರತು ಭೀಕರ ಭಾಷಣ ಕುಟ್ಟುವವರಿಗಲ್ಲ.
ಅಂದಹಾಗೆ ಕಾಂಗ್ರೆಸ್ ಸರಕಾರ ಬಂದ ಮೇಲೂ ಇದು ಯಾಕೆ ನಡೆಯುತ್ತಿದೆ ಎಂದಿರಾ? ಬಿಜೆಪಿ ಮಂಗಳೂರಿನಲ್ಲಿ ಉಗ್ರ ಹಿಂದೂ ಮೂಲಭೂತವಾದ ನಡೆಸಿದರೆ ಕಾಂಗ್ರೆಸ್ ನಡೆಸುವುದು ಸೌಮ್ಯ ಹಿಂದೂ ಮೂಲಭೂತವಾದ.... ಹಿಂದೂ ಮೂಲಭೂತ ಅಸ್ತಿತ್ವದಲ್ಲಿರಬೇಕಾದರೆ ಮುಸ್ಲಿಂ ಮೂಲಭೂತವಿಲ್ಲದಿದ್ದರೆ 'ಇಸ್ಲಾಮಿಗೆ' ಅವಮಾನವೆಂದು ಈ ಯುವಕರು ತಿಳಿದಿರಬೇಕು! ತನ್ನಲ್ಲಿರುವ ಅಪಾರ ಪ್ರಮಾಣದ ನೈಸರ್ಗಿಕ ಸೌಂದರ್ಯದಿಂದ ಗಮನ ಸೆಳೆಯಬೇಕಿದ್ದ ಮಂಗಳೂರು ಮತಿಗೆಟ್ಟವರ ಕಾರಣದಿಂದಲೇ ಸುದ್ದಿಯಾಗುತ್ತಿರುವುದು ಬೇಸರದ ಸಂಗತಿ.

ಈ ಇಡೀ ಲೇಖನವನ್ನು ಹೊಸದಾಗಿ ಬರೆದಿಲ್ಲ. ಅತ್ತಾವರದಲ್ಲಿ ಹಿಂದೂ ಮೂಲಭೂತವಾದಿಗಳು ನಡೆಸಿದ ದಾಂಧಲೆಯ ಸಂದರ್ಭದಲ್ಲಿ ಬರೆದ "ಮಂಗಳೂರಿನ ಮತಿಗೆಟ್ಟ ಹುಡುಗರು "ಲೇಖನವನ್ನೇ ಕಾಪಿ ಪೇಸ್ಟ್ ಮಾಡಲಾಗಿದೆ! ಹಿಂದೂ ಎನ್ನುವ ಜಾಗದಲ್ಲಿ ಮುಸ್ಲಿಂ ಎಂದು ಮುಸ್ಲಿಂ ಎಂದು ಬರೆದಿದ್ದ ಜಾಗದಲ್ಲಿ ಹಿಂದೂ ಎಂದು ತಿದ್ದಿದರೆ ಈ ಲೇಖನ ಸಿದ್ಧವಾಗಿಬಿಟ್ಟಿತು. ಮೂಲಭೂತವಾದಿಗಳ ಕಾರ್ಯವೈಖರಿಯಲ್ಲಿ ಅಷ್ಟರಮಟ್ಟಿಗೆ ಹೋಲಿಕೆಗಳಿವೆ.

Sep 8, 2015

ಅಡ್ಡಡ್ಡ ಮಲಗಲು ಅಡ್ಡದಾರಿ ಹಿಡಿದವರು.

Dr Ashok K R
ಯಾವ ಚುನಾವಣೆಯೇ ಆದರೂ ಬಹುಮತ ಬರದಿದ್ದರೆ ರಾಜಕೀಯ ನಾಟಕಗಳು ಉತ್ತುಂಗಕ್ಕೇರಿಬಿಡುತ್ತವೆ. ಬಿಬಿಎಂಪಿ ಚುನಾವಣೆ ಕೂಡ ರಾಜಕೀಯ ನಾಟಕಗಳಿಗೆ ರೆಸಾರ್ಟ್ ರಾಜಕೀಯಕ್ಕೆ ಕಾರಣವಾಗಿದೆ. ಯಾವ ಪಕ್ಷಕ್ಕೂ ಸರಳ ಬಹುಮತ ಪಡೆಯಲು ಸಾಧ್ಯವಾಗಿಲ್ಲ. 100 ಸ್ಥಾನಗಳನ್ನು ಪಡೆದ ಬಿಜೆಪಿ ಪ್ರಥಮ ಸ್ಥಾನದಲ್ಲಿದ್ದರೆ ಕಾಂಗ್ರೆಸ್ 76 ಸ್ಥಾನಗಳನ್ನು ಗಿಟ್ಟಿಸಿಕೊಂಡಿದೆ. ಜೆಡಿಎಸ್ 14ರಲ್ಲಿ ಮತ್ತು ಪಕ್ಷೇತರರು 8 ರಲ್ಲಿ ಜಯ ಗಳಿಸಿದ್ದಾರೆ. ಕಳೆದ ಬಾರಿಯ ಬಿಬಿಎಂಪಿ ಚುನಾವಣಾ ಫಲಿತಾಂಶ ಗಮನಿಸಿದರೆ ಬಿಜೆಪಿ ಕಳೆದ ಬಾರಿಗಿಂತ ಹನ್ನೆರಡು ಸ್ಥಾನಗಳನ್ನು ಕಡಿಮೆ ಗಳಿಸಿದ್ದರೆ, ಕಾಂಗ್ರೆಸ್ ಹನ್ನೊಂದು ಸ್ಥಾನಗಳನ್ನು ಹೆಚ್ಚು ಗಳಿಸಿದೆ. ಜೆಡಿಎಸ್ ಕಳೆದ ಬಾರಿಯೂ ಹದಿನಾಲ್ಕು ಸ್ಥಾನಗಳನ್ನೇ ಗಳಿಸಿತ್ತು. ಇನ್ನು 8 ಪಕ್ಷೇತರರಲ್ಲಿ ಮೂವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾದರೆ ಮೂವರು ಬಿಜೆಪಿಯ ಬಂಡಾಯ ಅಭ್ಯರ್ಥಿಗಳು. ಕಳೆದ ಬಾರಿಗಿಂತ ಹೆಚ್ಚು ಮತ, ಸ್ಥಾನಗಳನ್ನು ಪಡೆದಿದ್ದರೂ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಪರಿಸ್ಥಿತಿ ಕಾಂಗ್ರೆಸ್ಸಿನದು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವೇ ಇದ್ದು ಬೆಂಗಳೂರಿನ ಚುನಾವಣೆ ಸೋತಿರುವುದು ಆ ಪಕ್ಷದ ಬೆಂಗಳೂರು ನಾಯಕರಿಗೆ, ಚುನಾವಣೆಗೆ ಮುಂಚೆ ಊರು ಸುತ್ತಿದ ಸಿದ್ಧರಾಮಯ್ಯರಿಗಾದ ಸೋಲೆಂದೇ ಹೇಳಬೇಕು.

ಕಾಂಗ್ರೆಸ್ ಸೋಲಿಗೆ ಬಿಬಿಎಂಪಿ ಚುನಾವಣೆಯನ್ನು ಪದೇ ಪದೇ ಮುಂದೂಡಲು ಪ್ರಯತ್ನಿಸಿದ್ದು, ಬಿಬಿಎಂಪಿಯನ್ನು ವಿಭಜಿಸಲು ಪ್ರಯತ್ನಿಸಿದ್ದು ಹೇಗೆ ಪ್ರಮುಖ ಕಾರಣವೋ ಬೆಂಗಳೂರಿನ ಜನತೆ ಹಲವು ವರುಷಗಳಿಂದ ಯಾವ ಚುನಾವಣೆಯೇ ಆದರೂ ಬಿಜೆಪಿಯ ಕಡೆಗೆ ಹೆಚ್ಚು ವಾಲುತ್ತಿರುವುದೂ ಸತ್ಯ. ಆ ವಾಲುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ಸಿನ ಪ್ರಯತ್ನ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಿತ್ತು. ಜೊತೆಗೆ ಕಾಂಗ್ರೆಸ್ಸಿನೊಳಗಡೆಯೇ ಮೂಲ ಕಾಂಗ್ರೆಸ್ಸಿಗರು ಮತ್ತು ವಲಸೆ ಕಾಂಗ್ರೆಸ್ಸಿಗರ ನಡುವಿನ ಮುಸುಕಿನ ಗುದ್ದಾಟ ಚುನಾವಣೆಗೆ ಕೆಲವೇ ದಿನಗಳ ಮುಂಚೆ ಬಹಿರಂಗವಾಗಿಯೇ ಸ್ಪೋಟಗೊಂಡಿತ್ತು. ಬೆಂಗಳೂರಿಗರು ಇವತ್ತಿಗೂ ನೆನೆಯುವ ಎಸ್.ಎಂ.ಕೃಷ್ಣ ಮತ್ತು ಬಿ.ಕೆ.ಹರಿಪ್ರಸಾದ್ ನೇರವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ಮಾತನಾಡಿದರು. ಇವೆಲ್ಲವೂ ಕಾಂಗ್ರೆಸ್ಸಿನ ಸೋಲಿಗೆ ಪ್ರಮುಖ ಕಾರಣಗಳಾಯಿತು. ಭ್ರಷ್ಟಾಚಾರದ ಆರೋಪಗಳನ್ನು ಹೊತ್ತರೂ ಬಿಜೆಪಿ ಮತ್ತೆ ಹೆಚ್ಚು ಸ್ಥಾನ ಪಡೆಯುವಲ್ಲಿ ಅದರ ನಾಯಕ ಅಶೋಕ್ ರ ಪಾತ್ರ ದೊಡ್ಡದು. ಒಂದು ಹಂತದಲ್ಲಿ ಅಶೋಕ್ ಮತ್ತು ಯಡಿಯೂರಪ್ಪ ನಡುವಿನ ತಿಕ್ಕಾಟಗಳು ಬಿಜೆಪಿಯನ್ನು ದಯನೀಯ ಸೋಲಿಗೆ ದೂಡುತ್ತವೆ ಎಂದು ಎಣಿಸಲಾಗಿತ್ತು. ಸಮೀಕ್ಷೆಗಳೂ ಕಾಂಗ್ರೆಸ್ಸಿಗೆ ಅಧಿಕ ಸ್ಥಾನ ಸಿಗುವುದೆಂದೇ ಹೇಳಿತ್ತು. ಮತದಾರ ಆ ಊಹಾ ಪೋಹಗಳಿಗೆಲ್ಲಾ ತಿಲಾಂಜಲಿ ಕೊಟ್ಟು ಬಿಜೆಪಿಗೇ ಅಧಿಕ ಸ್ಥಾನ ಸಿಗುವಂತೆ ಮಾಡಿದ. ಸೋತ ಕಾಂಗ್ರೆಸ್ ಏನು ಮಾಡಬೇಕಿತ್ತು?

ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದ ಕಾಂಗ್ರೆಸ್ ಸ್ವಾಭಾವಿಕವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಹೆಚ್ಚು ಸ್ಥಾನ ಪಡೆದಿರುವ ಬಿಜೆಪಿ ಸರಿಯಾದ ದಿಕ್ಕಿನಲ್ಲಿ ನಡೆಯುವಂತೆ ವರ್ತಿಸಬೇಕಿತ್ತು. ಕಳೆದ ಬಾರಿ ಬಿಜೆಪಿ ಬಿಬಿಎಂಪಿಯಲ್ಲಿ ನಡೆಸಿದ ಭ್ರಷ್ಟಾಚಾರ ಮತ್ತೆ ಪುನಾರವರ್ತನೆಯಾಗದಂತೆ ನೋಡಿಕೊಳ್ಳಬೇಕಿತ್ತು. ಅದರ ಬಗ್ಗೆ ಯೋಚನೆಯನ್ನೇ ಮಾಡದ ಕಾಂಗ್ರೆಸ್ ಬಿಜೆಪಿ ಗೆಲುವಿನ ಸಂಭ್ರಮದಲ್ಲಿರುವಾಗ ಒಳಗೊಳಗೇ ಬಿಬಿಎಂಪಿಯ ಅಧಿಕಾರ ಹಿಡಿಯಲಿರುವ ಎಲ್ಲಾ ಅಡ್ಡದಾರಿಗಳನ್ನು ಹುಡುಕಲಾರಂಭಿಸಿತ್ತು. ಬಿಜೆಪಿಗೂ ಸರಳ ಬಹುಮತವಿರಲಿಲ್ಲ. ಪಕ್ಷೇತರರ ಬೆಂಬಲ ಅದಕ್ಕೆ ಅಗತ್ಯವಾಗಿ ಬೇಕಿತ್ತು. ಜೊತೆಗೆ ಬಿಬಿಎಂಪಿ ಮೇಯರ್ ಆಯ್ಕೆಯಲ್ಲಿ ಬೆಂಗಳೂರಿನ ಶಾಸಕರು, ಸಂಸದರು, ರಾಜ್ಯಸಭೆ ಸದಸ್ಯರು, ಸಂಸದರೆಲ್ಲರ ಮತಗಳೂ ಅವಶ್ಯಕ. ಕಾಂಗ್ರೆಸ್ ಪಕ್ಷೇತರರನ್ನು ಸೆಳೆದರೆ ಸಾಕಾಗುತ್ತಿರಲಿಲ್ಲ. ಅಡ್ಡದಾರಿಯಿಂದ ಗೆಲ್ಲಲು ಅದಕ್ಕೆ ಜೆಡಿಎಸ್ಸಿನ ಬೆಂಬಲವೂ ಬೇಕಿತ್ತು. ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೂ ಜೆಡಿಎಸ್ಸಿನ ಒಡೆಯರಾದ ದೇವೇಗೌಡರ ಕುಟುಂಬಕ್ಕೂ ಇರುವ ತಿಕ್ಕಾಟಗಳು ಎಲ್ಲರಿಗೂ ತಿಳಿದಿರುವಂತದ್ದೇ. ಬಹುಶಃ ಈ ತಿಕ್ಕಾಟವಿರುವ ಕಾರಣದಿಂದಲೇ ಏನೋ ಬಿಜೆಪಿ ಕಾಂಗ್ರೆಸ್-ಜೆಡಿಎಸ್ ಸೇರಿ ಬಿಬಿಎಂಪಿ ಅಧಿಕಾರ ಹಿಡಿಯುವುದರ ಬಗ್ಗೆ ಚಿಂತಿಸಲೇ ಇಲ್ಲ. ಕಳೆದ ಬಾರಿಯ ಬಿಜೆಪಿ ಸರಕಾರದಲ್ಲಿ, ಅದಕ್ಕೂ ಹಿಂದಿನ ಬಿಜೆಪಿ-ಜೆಡಿಎಸ್ ದೋಸ್ತಿ ಸರಕಾರದ ಸಮಯದಲ್ಲಿ ಕರ್ನಾಟಕದ ಹೆಸರನ್ನು ದೇಶದೆಲ್ಲೆಡೆ ಹಾಳುಗೆಡವಿದ್ದ ರೆಸಾರ್ಟ್ ರಾಜಕೀಯ ಈಗ ಬಿಬಿಎಂಪಿಯಲ್ಲೂ ಕಾಲಿಟ್ಟುಬಿಟ್ಟಿದೆ. ಪಕ್ಷೇತರರನ್ನು ಕೇರಳಕ್ಕೆ ರವಾನಿಸಲಾಗಿದೆ. ನಾವು ಬಂದಿರೋದು ಆಡಳಿತ ಹೇಗೆ ನಡೆಸಬೇಕು ಎಂದು ಕಲಿಯಲು ಎನ್ನುವ ಜೋಕುಗಳನ್ನು ಬಿಬಿಎಂಪಿ ಕಾರ್ಪೊರೇಟರ್ರುಗಳು ಮಾಡುತ್ತಿದ್ದಾರೆ. ಜೆಡಿಎಸ್ ಕೂಡ ತನ್ನವರನ್ನು ರೆಸಾರ್ಟುಗಳಿಗೆ ಅಟ್ಟುತ್ತಿದೆ! ಒಟ್ಟಿನಲ್ಲಿ ಕುದುರೆ ವ್ಯಾಪಾರ ಜೋರಾಗಿರುವಂತೆ ಕಾಣುತ್ತಿದೆ. ‘ಅಭಿವೃದ್ಧಿ’ಗಾಗಿ ಜೆಡಿಎಸ್ ಕಾಂಗ್ರೆಸ್ಸಿನ ಜೊತೆಗೆ ಕೈಜೋಡಿಸುತ್ತಿದೆಯಂತೆ! ಬಿಬಿಎಂಪಿಯಲ್ಲೊಂದು ರಾಜ್ಯದಲ್ಲೊಂದು ಪಕ್ಷ ಅಧಿಕಾರವಿದ್ದರೆ ಬೆಂಗಳೂರು ಅಭಿವೃದ್ಧಿಯಾಗುವುದಿಲ್ಲವೇ? 

ಸಿದ್ಧರಾಮಯ್ಯ ಸರಕಾರದ ಎಲ್ಲಾ ನೂನ್ಯತೆಗಳ ನಡುವೆ ಕಳೆದ ಬಾರಿಯಂತೆ ಅಸಹ್ಯದ ರಾಜಕಾರಣವಿಲ್ಲ ಎಂದು ಸಮಾಧಾನಪಟ್ಟುಕೊಳ್ಳಬಹುದಿತ್ತು. ಇನ್ನು ಮುಂದೆ ಆ ಸಮಾಧಾನವೂ ಇಲ್ಲದಂತಾಗಿದೆ ಬಿಬಿಎಂಪಿಯ ರೆಸಾರ್ಟ್ ರಾಜಕೀಯದ ದೆಸೆಯಿಂದ. ಬಿಬಿಎಂಪಿಯ ವಿಚಾರವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಸೇರಿ ಅಧಿಕಾರ ಹಿಡಿದರೆ ಅಚ್ಚರಿಪಡಬೇಕಿಲ್ಲ. ಕೆಲವು ಗ್ರಾಮ ಪಂಚಾಯತ್ ಜಿಲ್ಲಾ ಪಂಚಾಯತ್ ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಒಟ್ಟಾಗಿ ಅಧಿಕಾರ ಹಿಡಿದಿರುವುದೂ ಇದೆ! ‘ಸ್ಥಳೀಯ ಅನುಕೂಲಗಳಿಗಾಗಿ’! ಇನ್ನು ಹಲವು ಸಲ ರಾಜ್ಯ ರಾಷ್ಟ್ರ ಮಟ್ಟದಲ್ಲೇ ಜೊತೆಗಿದ್ದ ಕಾಂಗ್ರೆಸ್ – ಜೆಡಿಎಸ್ ಬಿಬಿಎಂಪಿಯಲ್ಲಿ ಒಂದಾಗುವುದು ಸಹಜ, ಆದರೆ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿರುವಾಗ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವುದು ಅನೈತಿಕ. ಈ ಅನೈತಿಕತೆಯನ್ನು ಬಿಜೆಪಿ ಬೀದಿಗಿಳಿದು ವಿರೋಧಿಸುತ್ತಿದೆ. ಕೆಲವೇ ವರುಷಗಳ ಹಿಂದೆ ಅವರೇ ಉತ್ಸಾಹದಿಂದ ಮಾಡುತ್ತಿದ್ದ ಆಪರೇಷನ್ ಕಮಲವನ್ನು ಅವರು ಮರೆತುಬಿಟ್ಟಿದ್ದಾರೆ! ಆಪರೇಷನ್ ಕಮಲ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಸೋಲಲು ಮಹತ್ತರ ಪಾತ್ರ ವಹಿಸಿತು ಎಂಬಂಶವನ್ನು ಆಪರೇಷನ್ ಕೈ ಆಪರೇಷನ್ ಬಿಬಿಎಂಪಿ ಮಾಡುತ್ತಿರುವ ಕಾಂಗ್ರೆಸ್ ಕೂಡ ಮರೆತುಬಿಟ್ಟಿದೆ! ಮತ್ತೆ ರಾಜಕೀಯ ಮನರಂಜನೆಯಾಗಿಬಿಡುವ ಎಲ್ಲಾ ಅಪಾಯಗಳೂ ಕಾಣುತ್ತಿವೆ…

Sep 5, 2015

ಸಂಶೋಧಕನ ಹತ್ಯೆ ಕಾಣಿಸಿದ ಸತ್ಯಗಳು

Dr Ashok K R
ಸಂಶೋಧಕ ಎಂ.ಎಂ.ಕಲ್ಬುರ್ಗಿಯವರ ಹತ್ಯೆ ತಲ್ಲಣ ಮೂಡಿಸಿದೆ ಜೊತೆಜೊತೆಗೆ ಅನೇಕ ಗೊಂದಲಗಳನ್ನೂ ಸೃಷ್ಟಿಸಿಬಿಟ್ಟಿದೆ. ಜನ, ಮಾಧ್ಯಮ ಒಟ್ಟಾರೆಯಾಗಿ ಇಡೀ ಸಮಾಜ ಕಲಬುರ್ಗಿಯವರ ಹತ್ಯೆಗೆ ಪ್ರತಿಕ್ರಿಯಿಸಿದ ರೀತಿ ನಿರಾಶೆಯನ್ನು ಮೂಡಿಸುತ್ತದೆ. ಕಲಬುರ್ಗಿಯವರ ಸಾವು ಮನಕಲಕಲು ಒಂದು ಹಿರಿಯ ಜೀವಿಯ ಹತ್ಯೆ ಎಂಬ ಕಾರಣವೇ ಸಾಕಿತ್ತು. ಆದರೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು, ತಾತ್ವಿಕ ವಿರೋಧಗಳು ಸಾವನ್ನೂ ಸಂಭ್ರಮಿಸುವ ಸರಕಾಗಿಸಿಬಿಟ್ಟಿದೆ. ಅನಂತಮೂರ್ತಿಯವರ ಸಾವಿನ ಸಮಯದಲ್ಲಿ ಪಟಾಕಿ ಹೊಡೆದು ಸಂಭ್ರಮಿಸಿದ ಮನಸ್ಥಿತಿ ಮತ್ತಷ್ಟು ಹೆಚ್ಚಾಗುತ್ತಿದೆ. ವಿರೋಧಗಳಿಲ್ಲದೆ ಯಾವ ಧರ್ಮ ತಾನೇ ಉತ್ತಮಗೊಂಡಿದೆ? ಯಥಾಸ್ಥಿತಿವಾದಿಗಳಷ್ಟೇ ಪ್ರತಿರೋಧವನ್ನು ವಿರೋಧಿಸುತ್ತಾರೆ. ಇದರ ನಡುವೆ ಅರ್ಧ ಸತ್ಯವನ್ನಾಡುವವರು ಸಮಾಜದ ಬಗ್ಗೆಯೇ ರೇಜಿಗೆ ಹುಟ್ಟಿಸುವಂತೆ ಮಾಡುತ್ತಾರೆ.

ಒಂದು ಹತ್ಯೆ ನಡೆದ ತಕ್ಷಣ ಅದು ಇಂತವರದ್ದೇ ಕೃತ್ಯ ಎಂದು ಇದಮಿತ್ಥಂ ಹೇಳಿಬಿಡುವುದು ತನಿಖೆಯ ದಾರಿ ತಪ್ಪಿಸುವುದರ ಜೊತೆಗೆ ಜನರನ್ನೂ ತಪ್ಪು ದಾರಿಗೆ ಎಳೆದುಬಿಡುತ್ತದೆ. ಡಾ.ಎಂ.ಎಂ.ಕಲಬುರ್ಗಿಯವರಿಗಿದ್ದ ಜೀವ ಬೆದರಿಕೆಗಳು, ಅವರ ಮೇಲಾಗಿದ್ದ ಕಲ್ಲು ತೂರಾಟಗಳನ್ನೆಲ್ಲಾ ಗಮನಿಸಿದ್ದ ಕೆಲವು ಪ್ರಗತಿಪರರು ಅವರು ಹತರಾದ ದಿನ ಇದು ಬಲಪಂಥೀಯರದೇ ಕೃತ್ಯ ಎಂದು ಸಾಮಾಜಿಕ ಜಾಲತಾಣಗಳಲ್ಲಿ, ಕೆಲವು ಮಾಧ್ಯಮಗಳಲ್ಲಿ ಹೇಳಿಕೆ ಕೊಟ್ಟುಬಿಟ್ಟರು. ಬಹುತೇಕ ಪ್ರಗತಿಪರರೇ ಅದನ್ನು ವಿರೋಧಿಸಿ ಒಂದೆರಡು ದಿನ ತಾಳ್ಮೆಯಿಂದ ಕಾಯುವ ಕೆಲಸವಾಗಬೇಕೀಗ, ಆತುರದ ತೀರ್ಮಾನಗಳೇಕೆ ಎಂದು ಪ್ರಶ್ನಿಸಿದರು. ನನ್ನದೂ ವೈಯಕ್ತಿಕವಾಗಿ ಅದೇ ಅಭಿಪ್ರಾಯವಾಗಿತ್ತು. ಬಲಪಂಥೀಯರಾಗಲೇ ಕೆಲವು ಪ್ರಗತಿಪರರ ಹೇಳಿಕೆಗಳನ್ನಿಡಿದುಕೊಂಡು ‘ನೋಡಿ ನೋಡಿ. ಹಿಂದೂ ಸಂಘಟನೆಯ ಮೇಲೆ ಗೂಬೆ ಕೂರಿಸಿಬಿಡ್ತಾರೆ’ ಎಂದು ಹೇಳುವುದೂ ಪ್ರಾರಂಭವಾಯಿತು. ಹಿರಿಯ ಸಾಹಿತಿ – ಸಂಶೋಧಕರೊಬ್ಬರ ಹತ್ಯೆ ಇತರೆ ಸಾಹಿತಿ ಸಂಶೋಧಕರಿಗೆ ಭಯ ಮೂಡಿಸಿದರೆ ಅದು ಸಹಜ. ಆ ರೀತಿಯೆಲ್ಲ ಭಯಪಡಬೇಡಿ ಎಂದು ಹೇಳಬೇಕಾದ ಸಮಾಜ, ಆ ಭಯ ವ್ಯಕ್ತಪಡಿಸಿದವರನ್ನೇ ಗೇಲಿ ಮಾಡುವ ಮಟ್ಟಕ್ಕೆ ಇಳಿದುಬಿಟ್ಟಿರುವುದು ಬೇಸರ ಮೂಡಿಸುತ್ತದೆ. 

ಅವರ ಹತ್ಯೆಯಾದ ದಿನ ರಾಜ್ಯದ ವಿವಿದೆಡೆ ಚಿಕ್ಕ ಪುಟ್ಟ ಸಂತಾಪ ಸಭೆಗಳು, ಕೊಲೆಗಾರರನ್ನು ಶೀಘ್ರವಾಗಿ ಬಂಧಿಸುವಂತೆ ಒತ್ತಾಯಿಸುವ ಪ್ರತಿಭಟನೆಗಳು ನಡೆದವು. ಬೆಂಗಳೂರಿನಲ್ಲೂ ಟೌನ್ ಹಾಲ್ ಎದುರಿಗೆ ಅಂತಹುದೊಂದು ಸಭೆ ನಡೆಯಿತು. ಆ ಸಭೆಯನ್ನು ಬಲಪಂಥೀಯರಿಂದ ಹಿಡಿದು ಪ್ರಗತಿಪರರೆನ್ನಿಸಿಕೊಂಡ ಕೆಲವರೂ ಆಡಿಕೊಂಡರು. ಅವರ ಪ್ರಕಾರ ಅದು ಕಲಬುರ್ಗಿಯವರ ಹತ್ಯೆಯನ್ನು ಬಲಪಂಥೀಯರ ತಲೆಗೆ ವಿನಾಕಾರಣ ಕಟ್ಟುವ ಪ್ರಯತ್ನವಾಗಿತ್ತಂತೆ! ಸಿಂಪಥಿ ಬರಲೆಂಬ ಕಾರಣಕ್ಕೆ ಪ್ರಗತಿಪರರೇ ಯಾಕೆ ಈ ಕೊಲೆ ಮಾಡಿಸಿರಬಾರದು ಎಂದು ಕಥೆ ಹೆಣೆಯುವುದರಲ್ಲೂ ಅನೇಕರು ಬ್ಯುಸಿಯಾಗಿಬಿಟ್ಟರು! ನಿಲುಮೆಯೆಂಬ ವೆಬ್ ಪುಟದಲ್ಲಿ, ಅಗ್ನಿ ಪತ್ರಿಕೆಯ ಸಂಪಾದಕೀಯದಲ್ಲಿ ಅಂದು ಸೇರಿದ್ದ ಜನರನ್ನೇ ಹೀಗಳೆಯುವ ಕೆಲಸ ನಡೆದಿದೆ. ಅವರುಗಳು ಬರೆದಿರುವುದರಲ್ಲಿ ಬಹುತೇಕ ಸುಳ್ಳೇ ಸೇರಿದೆ! ಅನೇಕರು ಬರೆದಂತೆ ಅದು ಪ್ರತಿಭಟನಾ ಸಭೆಯೇನು ಆಗಿರಲಿಲ್ಲ. ನಾಲ್ಕೂ ಮೂವತ್ತರ ಸಮಯಕ್ಕೆ ನಿಗದಿಯಾಗಿದ್ದ ಸಭೆಗೆ ನಾಲ್ಕು ಘಂಟೆಯಿಂದಲೇ ಜನರು ಬರಲಾರಂಭಿಸಿದ್ದರು. ಅದು ಯಾವ ಸಂಘಟನೆಯೂ ಸೇರಿಸಿದ ಸಭೆಯಾಗಿರಲಿಲ್ಲ. ವಾಟ್ಸಪ್ಪಿನಲ್ಲಿ, ಫೇಸ್ ಬುಕ್ಕಿನಲ್ಲಿ ನಾಲ್ಕೂವರೆಗೆ ಟೌನ್ ಹಾಲ್ ಬಳಿ ಹೀಗೊಂದು ಸಂತಾಪ ಸೂಚಕ ಸಭೆ ನಡೆಸೋಣ ಎಂಬ ಮೆಸೇಜು ಹರಿದಾಡಿ ಇನ್ನೂರೈವತ್ತು ಮುನ್ನೂರು ಜನರು ಅಲ್ಲಿ ನೆರೆದಿದ್ದರು. ಬರಗೂರು, ಸುರೇಂದ್ರನಾಥ್, ಜಿ.ರಾಮಕೃಷ್ಣ, ಬೋಳುವಾರು, ಗೌರಿ ಲಂಕೇಶ್, ವಡ್ಡಗೆರೆ ನಾಗರಾಜಯ್ಯ, ಗಿರೀಶ್ ಕಾರ್ನಾಡ್, ಅನಂತ ನಾಯಕ್, ಕುಮಾರ ರೈತ ಹೀಗೆ ಅನೇಕರು ಅಲ್ಲಿ ಸೇರಿದ್ದರು. ವಿವಿಧ ಸಂಘಟನೆಗಳಿಗೆ ಸೇರಿದವರೂ ನೆರೆದಿದ್ದರು, ಯಾವ ಸಂಘಟನೆಗೂ ಸೇರದ ನನ್ನಂತವರ ಸಂಖೈ ಅಲ್ಲಿ ಜಾಸ್ತಿ ಇತ್ತು. ತಾಂತ್ರಿಕವಾಗಿ ಸರಕಾರದ ಭಾಗವೇ ಆಗಿರುವ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಕೂಡ ಆ ಸಭೆಯಲ್ಲಿ ಭಾಗವಹಿಸಿದ್ದರು. ಅದು ಸಂತಾಪ ಸೂಚಕ ಸಭೆಯೆಂದು ಭಾಗವಹಿಸಿದವರ ಸಂಖೈ ಹೆಚ್ಚಿತ್ತೇ ಹೊರತು ಅದು ಪ್ರತಿಭಟನೆಯ ಸಭೆಯೆಂದಲ್ಲ. ಹಂತಕರನ್ನು ಶೀಘ್ರವಾಗಿ ಬಂಧಿಸುವಂತೆ ಒತ್ತಾಯಿಸಿದ್ದು ತಪ್ಪೇ?. ಹಿರಿಯರೊಬ್ಬರ ಸಾವಿಗೆ ಸಂಭ್ರಮ ಸೂಚಿಸುವ, ಪಟಾಕಿ ಹೊಡೆಯುವ ಮನಸ್ಥಿತಿ ಇರುವವರ ಸಂಖೈ ಹೆಚ್ಚುತ್ತಿರುವ ಸಂದರ್ಭದಲ್ಲಿ ಸಂತಾಪ ಸೂಚಿಸುವವರೇ ಅಪರಾಧಿಗಳೇನೋ?

ಕಲಬುರ್ಗಿಯವರ ಹತ್ಯೆ ನಡೆದ ನಂತರ ಟ್ವಿಟರಿನಲ್ಲಿ ಭುವಿತ್ ಶೆಟ್ಟಿ ಎಂಬ ಯುವಕ ಆಗ ಅನಂತಮೂರ್ತಿ ಈಗ ಕಲಬುರ್ಗಿ ಕೆ.ಎಸ್.ಭಗವಾನ್ ಮುಂದಿನ ಸರದಿ ನಿನ್ನದು ಎಂಬ ದಾಟಿಯ ಬೆದರಿಕೆ ಒಡ್ಡುತ್ತಾನೆ. ಆತನ ಮೇಲೆ ಪೋಲೀಸರು ಕೇಸು ದಾಖಲಿಸಿಕೊಂಡು ಬಂಧಿಸುತ್ತಾರೆ. ನಂತರ ಏನು ನಡೆಯುತ್ತದೆ ಎನ್ನುವುದು ಸಮಾಜ ಸಾಗುತ್ತಿರುವ ಹಾದಿಯ ಸ್ಪಷ್ಟ ಚಿತ್ರಣ ನೀಡುತ್ತದೆ. ಹೆಚ್ಚೇನಿಲ್ಲ ಕಳೆದ ಡಿಸೆಂಬರಿನಲ್ಲಿ ಪೋಲೀಸರು ಮೆಹದಿಯೆಂಬ ವ್ಯಕ್ತಿಯನ್ನು ಬಂಧಿಸುತ್ತಾರೆ. ಕಾರಣ? ಆತ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಪರವಾಗಿ ಟ್ವೀಟುಗಳನ್ನು ಮಾಡುತ್ತಿದ್ದ. ಅವರ ಉಗ್ರಗಾಮಿತವನ್ನು ಬೆಂಬಲಿಸುತ್ತಿದ್ದ. ನೇರವಾಗಿ ಆತನೇನೂ ಇಸ್ಲಾಮಿಕ್ ಸ್ಟೇಟ್ ಜೊತೆಗೆ ಕಾರ್ಯನಿರ್ವಹಿಸುತ್ತಿರಲಿಲ್ಲ ಆದರೆ ಅವರ ತತ್ವ ಸಿದ್ಧಾಂತಗಳನ್ನು ಬೆಂಬಲಿಸುತ್ತಿದ್ದ. ಬೆಂಬಲದ ಟ್ವೀಟುಗಳನ್ನು ಹಂಚಿಕೊಳ್ಳುತ್ತಿದ್ದ, ಜನರನ್ನು ಆ ತತ್ವ ಸಿದ್ಧಾಂತಗಳೆಡೆಗೆ ಆಕರ್ಷಿತರಾಗುವಂತೆ ಮಾಡುತ್ತಿದ್ದ. ಅವನನ್ನು ಬಂಧಿಸಿದ ಪೋಲೀಸರು ‘Waging war against Asiatic Powers’ – ‘ಏಷಿಯಾ ದೇಶಗಳ ವಿರುದ್ಧ ಯುದ್ಧ ಸಾರಿದಾತ’ ಎಂಬ ಆರೋಪ ಹೊರಿಸುತ್ತದೆ. ಹತ್ತು ತಿಂಗಳ ನಂತರವೂ ಆತ ಜೈಲಿನಲ್ಲಿದ್ದಾನೆ. ಈಗ ಮತ್ತೆ ಭುವಿತ್ ಶೆಟ್ಟಿಯ ಪ್ರಕರಣ ಗಮನಿಸಿದರೆ ಆತನೇನು ಅನಂತಮೂರ್ತಿಯವರ ಸ್ವಾಭಾವಿಕ ಮೃತ್ಯುವಿಗೆ ಕಾರಣಕರ್ತನಲ್ಲ, ಕಲಬುರ್ಗಿಯವರನ್ನು ಕೊಂದವನೂ ಅಲ್ಲ; ಆದರೆ ಆ ಕೊಲ್ಲುವ ಉಗ್ರ ಸಿದ್ಧಾಂತದ ಸಮರ್ಥಕ, ಆ ಕೊಲ್ಲುವಿಕೆಯ ಸಮರ್ಥಕ, ಮುಂದೆ ಇತರರನ್ನೂ ಕೊಲ್ಲುವುದಕ್ಕೆ ಪ್ರೇರೇಪಿಸುವಂತಹ ಟ್ವೀಟುಗಳನ್ನು ಹಾಕಿದಾತ. ತಾಂತ್ರಿಕವಾಗಿ ನೋಡಿದರೆ ಭುವಿತ್ ಶೆಟ್ಟಿಯ ಮೇಲೂ ಕಠಿಣ ಕಾಯ್ದೆಗಳನ್ನು ಹಾಕಬೇಕಿತ್ತು, ಆತ ಇನ್ನೂ ಜೈಲಿನಲ್ಲಿರಬೇಕಿತ್ತು. ಕ್ಷಮಿಸಿ, ಆತ ಮುಸ್ಲಿಮನಲ್ಲ; ದಿನದೊಳಗೇ ಜಾಮೀನು ಪಡೆದು ಹಿಂದಿರುಗಿದ್ದಾನೆ. ಸದ್ಯದ ಭವಿಷ್ಯದಲ್ಲಿ ಮಂಗಳೂರಿನ ಹಿಂದೂ ಸಂಘಟನೆಗಳು ಆತನಿಗೆ ಸನ್ಮಾನ ಮಾಡಿದರೂ ಅಚ್ಚರಿಯಿಲ್ಲ. ಜೈಭಜರಂಗಿ ಹೆಸರಿನಲ್ಲಿ ಉಗ್ರ ಹೇಳಿಕೆಗಳನ್ನು ಕೊಟ್ಟ, ಅನೇಕ ಕೇಸುಗಳಲ್ಲಿ ಆರೋಪಿಯಾಗಿರುವ ಪ್ರಸಾದ್ ಅತ್ತಾವರನನ್ನು ಕಲಬುರ್ಗಿಯವರ ಹತ್ಯೆ ಸಂಬಂಧ ವಿಚಾರಣೆಗಾಗಿ ಬಂಧಿಸುತ್ತಾರೆ. ಆತನೂ ಜಾಮೀನಿನ ಮೇಲೆ ಹೊರಬರುತ್ತಾನೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಹೆಸರಿಸಲಾಗದ ಮೂಲಗಳಿಂದ ಒಂದು ಸುದ್ದಿ ಪ್ರಕಟಿಸುತ್ತಾರೆ. ಪ್ರಸಾದ್ ಅತ್ತಾವರನ ಬಂಧನದಿಂದ ಪೋಲೀಸರಿಗೆ ಹೊಸ ವಿಷಯ ತಿಳಿದಿದೆ. ಕೆ.ಎಸ್.ಭಗವಾನರನ್ನು ಹತ್ಯೆ ಮಾಡಲು ಇಬ್ಬರು ಮೈಸೂರಿಗೆ ಬಂದಿದ್ದರು, ಆದರೆ ವಿವಿಧ ಕಾರಣಗಳಿಂದ ಅವರು ವಾಪಸ್ಸಾದರು ಎಂದು. ಟೈಮ್ಸ್ ಬಿಟ್ಟು ಬೇರೆ ಯಾವ ಪತ್ರಿಕೆಯಲ್ಲೂ ಈ ಸುದ್ದಿ ಬರುವುದಿಲ್ಲ. ಸುಮ್ಮನೆ ಯೋಚಿಸಿ, ಮುಸ್ಲಿಂ ಸಾಹಿತಿಯೊಬ್ಬ ಹತನಾಗಿ ಮುಸ್ಲಿಂ ಮೂಲಭೂತವಾದಿಯೊಬ್ಬ ಈ ರೀತಿಯಾಗಿ ಟ್ವೀಟಿಸಿದ್ದರೆ ಪೋಲೀಸರ ಸಮಾಜದ ಮಾಧ್ಯಮಗಳ ಪ್ರತಿಕ್ರಿಯೆ ಹೇಗಿರುತ್ತಿತ್ತು? ಇದೊಂದೇ ಪ್ರಕರಣವಲ್ಲ, ಧರ್ಮಾಧಾರಿತವಾಗಿ ಪೋಲೀಸರು ಕಾರ್ಯನಿರ್ವಹಿಸುವ ಅನೇಕ ಸಂದರ್ಭಗಳನ್ನು ಪದೇ ಪದೇ ಕಾಣುತ್ತೇವೆ. ಕಳೆದ ದಸರೆಯ ಸಮಯದಲ್ಲಿ ಮೈಸೂರು ಪೋಲೀಸರಿಗೆ ಕರೆ ಮಾಡಿ ಅರಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ, ಇಂಡಿಯನ್ ಮುಜಾಹಿದೀನ್ ಸಂಘಟನೆಗೆ ಸೇರಿದವನೆಂದು ಹೇಳಿಕೊಂಡಿದ್ದ. ಮೈಸೂರಿನ ಮೇಲೆ ಉಗ್ರರ ದಾಳಿ ಎಂದೇ ಸುದ್ದಿ ಬಿತ್ತರವಾಗಿತ್ತು. ಮೈಸೂರು ಪೋಲೀಸರ ಶೀಘ್ರ ಕಾರ್ಯಾಚರಣೆಯಿಂದ ಕರೆ ಮಾಡಿದ್ದವನ ಬಂಧನವೂ ಆಯಿತು. ‘ಉಗ್ರನ ಬಂಧನ’ ಎಂದು ದೊಡ್ಡ ಸುದ್ದಿಯಾಯಿತಾ? ದಿನಗಟ್ಟಲೇ ಚರ್ಚೆ ನಡೆಯಿತಾ? ಪತ್ರಿಕೆಗಳು ಮುಖಪುಟದಲ್ಲಿ ಆ ಸುದ್ದಿ ಪ್ರಕಟಿಸಿದವಾ? ಸಾಮಾಜಿಕ ಜಾಲತಾಣಗಳಲ್ಲಿ ಆ ‘ಉಗ್ರನನ್ನು’ ಹೀನಾಮಾನ ಟೀಕಿಸಲಾಯಿತಾ? ಇಲ್ಲ. ಯಾಕೆಂದರೆ ಕರೆ ಮಾಡಿ ಬೆದರಿಸಿದ್ದು ಮುಸ್ಲಿಮನಾಗದೇ ಹಿಂದೂ ಆಗಿದ್ದ! ಹಿಂದೂವೊಬ್ಬ ಉಗ್ರನಾಗಲು ಹೇಗೆ ಸಾಧ್ಯ?! ಮಾನಸಿಕ ಸ್ಥಿಮಿತವಿಲ್ಲದ ಬಾಲಕನಾಗಿ ಆ ಹಿಂದೂ ವರದಿಯಾಗಿದ್ದ! ಅದೂ ನಿಜವೇ ಇರಬಹುದು. ಆದರೆ ಮಾನಸಿಕ ಸ್ಥಿಮಿತವಿಲ್ಲದ ಮುಸ್ಲಿಂ ಹುಡುಗನೊಬ್ಬ ಇದೇ ರೀತಿ ಮಾಡಿದ್ದರೂ ಸಮಾಜ ಹೀಗೆಯೇ ಪ್ರತಿಕ್ರಿಯಿಸುತ್ತಿತ್ತಾ? ಉತ್ತರ ನಿಮ್ಮಲ್ಲೇ ಇದೆ.

ಒಂದು ವಾರ ಕಳೆದಿದೆ ಕಲಬುರ್ಗಿಯವರ ಹತ್ಯೆಯಾಗಿ. ಹೆಚ್ಚಿನ ಸುಳಿವುಗಳೇನೂ ದಕ್ಕಿಲ್ಲ. ಪತ್ರಿಕಾ ವರದಿಗಳ ಪ್ರಕಾರ ಪೋಲೀಸರೇನೋ ವಿವಿಧ ದಿಕ್ಕುಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಆಸ್ತಿ ವಿಚಾರವಾಗಿ ಗಲಾಟೆಗಳಿತ್ತಾ, ವೈಯಕ್ತಿಕ ಜೀವನದಲ್ಲಿ ತೊಂದರೆಗಳಿತ್ತಾ, ಇವತ್ತಿನ ವರದಿಯಂತೆ ಬಸವರಾಜ ಕಟ್ಟೀಮನಿ ಪ್ರತಿಷ್ಟಾಪನೆಯ ಸಂಬಂಧ ತೊಂದರೆಯಿತ್ತಾ, ಹಿಂದೂ ಬಲಪಂಥೀಯರ ಕೃತ್ಯವಾ ಇದು, ಲಿಂಗಾಯತ ಮೂಲಭೂತವಾದಿಗಳ ಕೃತ್ಯವಾ ಇದು ಎಂದು ಅನೇಕ ದಿಕ್ಕುಗಳಲ್ಲಿ ತನಿಖೆ ಸಾಗುತ್ತಿದೆ. ರಾಜ್ಯ ಸರಕಾರ ಈಗಾಗಲೇ ಪ್ರಕರಣವನ್ನು ಸಿಬಿಐಗೆ ವಹಿಸಲು ಸಿದ್ಧತೆ ಮಾಡಿಕೊಂಡಿದೆ. ನಿಜವಾದ ಕಾರಣ ಏನೂ ಇರಬಹುದು, ಆದರೆ ಆ ಕಾರಣ ತಿಳಿಯುತ್ತದಾ ಎಂದು ಗಮನಿಸಿದಾಗ ಒಂದಷ್ಟು ಬೇಸರವಾಗುತ್ತದೆ, ಜೊತೆಗೊಂದಷ್ಟು ಭಯವೂ. ಇದೇ ರೀತಿ ಹತ್ಯೆಯಾದ ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಬೋಲ್ಕರ್, ಕಮ್ಯುನಿಷ್ಟ್ ಮುಖಂಡ ಗೋವಿಂದ ಪನ್ಸಾರೆಯ ಹಂತಕರು ಇದುವರೆಗೆ ಪತ್ತೆಯಾಗಿಲ್ಲ. ಅವರನ್ನು ಸಾಯಿಸಿದ ರೀತಿಗೂ ಕಲಬುರ್ಗಿಯವರನ್ನು ಸಾಯಿಸಿದ ರೀತಿಗೂ ತುಂಬಾ ಸಾಮ್ಯತೆಯಿದೆ. ದಾಬೋಲ್ಕರ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ, ಪ್ರಕರಣದ ತನಿಖೆ ಅಷ್ಟೇನೂ ವೇಗದಲ್ಲಿ ನಡೆಯದಿರುವುದಕ್ಕೆ ನ್ಯಾಯಾಲಯವೇ ಆಕ್ಷೇಪ ವ್ಯಕ್ತಪಡಿಸಿದೆ. ಅವರ ಸಾಲಿಗೇ ಕಲಬುರ್ಗಿಯವರ ಹತ್ಯೆಯೂ ಸೇರಿಹೋಗುತ್ತದಾ ಎಂಬ ಭೀತಿ ಕಾಡಿದರದು ತಪ್ಪೇ?

ಕಲಬುರ್ಗಿಯವರು ಸಾವಿನಲ್ಲಿ ನಿಜಕ್ಕೂ ಅನಾಥರಾಗಿಬಿಟ್ಟರು ಎಂದರೆ ತಪ್ಪಲ್ಲ. ಅವರನ್ನು ಬೆಂಬಲಿಸಿ ಮಾತನಾಡಿದವರ ಪ್ರಗತಿಪರರ ಸಂಖೈ ಎಷ್ಟಿತ್ತೋ, ಯಾರು ಸಾಯಿಸಿದರೋ ಏತಕ್ಕೆ ಸಾಯಿಸಿದರೋ ಸುಖಾಸುಮ್ಮನೆ ಅವರನ್ನು ಬೆಂಬಲಿಸಿ ಸಮಾಜದ ಪ್ರಮುಖ ವಾಹಿನಿಯ ವಿರೋಧವನ್ನು ಯಾಕೆ ಕಟ್ಟಿಕೊಳ್ಳಬೇಕು ಎಂದು ಮೌನ ವಹಿಸಿದ ಪ್ರಗತಿಪರರ ಸಂಖೈಯೂ ಹೆಚ್ಚಿದೆ. ಇಂತಹ ಅಪಾಯಗಳನ್ನು ಎದುರಿಸಲು ಒಂದು ಸ್ಟ್ರ್ಯಾಟಜಿ ಇರಬೇಕು ಎಂದ ಮಾತುಗಳನ್ನು ತಿರುಚಿ ‘ಸಾವಿನಲ್ಲೂ ಸ್ಟ್ರ್ಯಾಟಜಿ’ ಹುಡುಕುವವರು ಎಂದು ನಟರಾಜ್ ಹುಳಿಯಾರರಂತವರೂ ಬರೆದುಬಿಡುತ್ತಾರೆ! ಅರ್ಧ ಸತ್ಯಗಳಿಗೆ ಅವರೂ ತಲೆದೂಗಲಾರಂಭಿಸುತ್ತಾರೆ! ಕಲಬುರ್ಗಿಯವರು ಹಿಂದೂ ಧರ್ಮದ ವಿರುದ್ಧ ಮಾತನಾಡಿದರು ಎಂಬ ಕಾರಣಕ್ಕೆ ಹಿಂದೂ ಬಲಪಂಥೀಯ ಸಂಘಟನೆಯವರು ಅವರ ಹತ್ಯೆಯನ್ನು ಖಂಡಿಸುವುದಿಲ್ಲ, ಬದಲಿಗೆ ಸಂಭ್ರಮಿಸುತ್ತಾರೆ. ಲಿಂಗಾಯತವೆಂಬುದು ಪ್ರತ್ಯೇಕ ಧರ್ಮ, ಹಿಂದೂ ಧರ್ಮದ ಭಾಗವಲ್ಲ ಅದು ಎಂಬುದು ಕಲಬುರ್ಗಿಯವರ ನಿಲುವಾಗಿತ್ತು. ಹಿಂದೂ ಧರ್ಮಪದ್ಧತಿಯಲ್ಲಿದ್ದ ಅನಾಚಾರಗಳನ್ನು ವಿರೋಧಿಸಿ ಮೂಡಿದ್ದೇ ಲಿಂಗಾಯತ ಧರ್ಮವಲ್ಲವೇ? ಇದೇ ರೀತಿ ಹಿಂದೂ ಧರ್ಮದಿಂದ ಸಿಡಿದೆದ್ದ ಬುದ್ಧನ ಹಾದಿ ಬೌದ್ಧ ಧರ್ಮದ ಹುಟ್ಟಿಗೆ ಕಾರಣವಾಗಿರಬೇಕಾದರೆ, ಬಸವಣ್ಣನ ಹಾದಿ ಲಿಂಗಾಯತ ಧರ್ಮದ ಹುಟ್ಟಿಗೆ ಕಾರಣವೆಂದು ಅವರು ಹೇಳಿದ್ದು ಸರಿ ಅಲ್ಲವೇ. ಲಿಂಗಾಯತ ಧರ್ಮದೊಳಗಿನ ವೈದಿಕ ಪರಂಪರೆಯನ್ನು ವಿರೋಧಿಸಿದ ಕಾರಣಕ್ಕೆ ಲಿಂಗಾಯತರ ಬೆಂಬಲವೂ ಅವರಿಗಿರಲಿಲ್ಲ. ಒಟ್ಟಿನಲ್ಲಿ ಅವರ ಸಾವಿಗೆ ನ್ಯಾಯ ಸಿಗಬೇಕೆಂದು ವಾದಿಸುವವರ ಸಂಖೈ ಕ್ಷೀಣವಾಗಿದೆ. ಪ್ರವಾಹದ ವಿರುದ್ಧ ಈಜುವವರಲ್ಲಿ ಸತ್ಯವಿದ್ದರೂ ಆ ಸತ್ಯವನ್ನು ಸಮಾಜ ಒಪ್ಪುವುದಿಲ್ಲವೆನ್ನುವುದು ಕಲಬುರ್ಗಿಯವರ ವಿಷಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. 

ಹಿಂದೂ ಎಂಬುದು ಧರ್ಮವೇ ಅಲ್ಲ ಎನ್ನುವ ಕಲಬುರ್ಗಿ, ಭಗವಾನರ ಮಾತುಗಳು ಎಷ್ಟು ಸರಿ, ಒಂದು ಬಹುಸಂಖ್ಯಾತ ಮನಸ್ಥಿತಿಯನ್ನು ಟೀಕಿಸಿ ನೋಯಿಸುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಸಾಮಾನ್ಯವಾಗಿ ಕೇಳಿಬರುತ್ತಿರುತ್ತದೆ. ಬಹುತೇಕ ಪತ್ರಿಕೆಗಳೂ ಅದೇ ದಾಟಿಯಲ್ಲಿ ಬರೆಯುತ್ತವೆ. ನೀವು ನಂಬದಿದ್ದರೆ ಬೇಡ, ಹೀಗಳೆಯುವುದ್ಯಾಕೆ ಎಂದು ಪ್ರಶ್ನಿಸುವವರು ಯಥಾಸ್ಥಿತಿವಾದಿಗಳು. ಧರ್ಮ ಹೇಗಿದೆಯೋ ಹಾಗೆಯೇ ಇರಲಿ, ಸಾಧ್ಯವಾದರೆ ಉತ್ತಾಮ ಉತ್ತಮ ಸನಾತನ ಧರ್ಮಕ್ಕೆ ಹೋಗೋಣ, ಧರ್ಮಾಚರಣೆಗಳನ್ನು ಪ್ರಶ್ನಿಸದಿರೋಣ ಎನ್ನುವ ಅಭಿಪ್ರಾಯ ಹೆಚ್ಚುತ್ತಿದೆ. ಒಂದು ಧರ್ಮದೊಳಗೆ ಪ್ರಶ್ನೆಗಳೇಳದಿದ್ದರೆ ಆ ಧರ್ಮ ಸತ್ತಂತಾಗುತ್ತದೆ. ಗಾಂಧೀಜಿ, ಅಂಬೇಡ್ಕರ್ ಹಿಂದೂ ಧರ್ಮದ ಆಚರಣೆಗಳ, ಅವಮಾನಕರ ಶ್ರೇಣೀಕೃತ ಪದ್ಧತಿಯ ವಿರುದ್ಧ ದನಿಯೆತ್ತದಿದ್ದರೆ, ನೆನಪಿರಲಿ ಇವತ್ತು ಯಾವ ಸಮುದಾಯಗಳು ‘ಹಿಂದೂ’ ಧರ್ಮದ ಪರ ಪುಂಖಾನುಪುಂಖವಾಗಿ ಬರೆಯುತ್ತಿವೆಯೋ ಅವುಗಳಲ್ಲನೇಕ ಸಮುದಾಯಗಳಿಗೆ ಶಿಕ್ಷಣದ ಹಕ್ಕೂ ಸಿಗುತ್ತಿರಲಿಲ್ಲ. ಹಿಂದೂ ಧರ್ಮವನ್ನು ಉಗ್ರವಾಗಿ ಟೀಕಿಸಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಅಂಬೇಡ್ಕರ್ ಕೂಡ ಇವತ್ತಿನ ಮನಸ್ಥಿತಿಯ ಪ್ರಕಾರ ಹತ್ಯೆಗೊಳಗಾಗಲು ಅರ್ಹರು. ಧರ್ಮದ ಯಥಾಸ್ಥಿತಿಯನ್ನೇ ಕಾದುಕೊಳ್ಳಬೇಕೆಂದು ಕೊಳ್ಳುವವರ ಪ್ರಕಾರ ಸತಿ ಪದ್ಧತಿಯನ್ನು ವಿರೋಧಿಸಿದ, ದೇವದಾಸಿ ಪದ್ಧತಿಯನ್ನು ವಿರೋಧಿಸಿದವರೆಲ್ಲರ ಸಾವಿಗೂ ಸಂಭ್ರಮ ಪಡಬೇಕು! ಟೀಕೆಯನ್ನೊಪ್ಪಿಕೊಳ್ಳದ ಧರ್ಮ ಮುಂದೆ ಸಾಗಲಾರದು. ಈ ಅನಂತಮೂರ್ತಿ, ಭಗವಾನ್, ಕಲಬುರ್ಗಿಯವರ ಮೇಲೆ ದ್ವೇಷ ಹೆಚ್ಚಿಸುವುದರಲ್ಲಿ ಮಾಧ್ಯಮಗಳ ಪಾತ್ರವೂ ಪ್ರಮುಖವಾಗಿದೆ. ಇಡೀ ಭಾಷಣದಲ್ಲಿ ಬರುವ ಒಂದೋ ಎರಡೋ ಸಾಲುಗಳನ್ನಿಟ್ಟುಕೊಂಡು ಅದನ್ನೇ ಪ್ರಮಖವಾಗಿಸಿ ಉದ್ವಿಗ್ನ ಭಾವನೆಗಳನ್ನು ಪ್ರೇರೇಪಿಸುತ್ತವೆ. ಕಲಬುರ್ಗಿಯವರು ಅನಂತಮೂರ್ತಿಯವರ ವಿರುದ್ಧ ಮಾತನಾಡುತ್ತಾ ದೈವದ ಮೂರ್ತಿಗೆ ಉಚ್ಛೆ ಹುಯ್ದಿದ್ದ ಎಂದಿದ್ದರು. ಅದು ಅನೇಕ ದಿನಗಳ ಕಾಲ ಚರ್ಚೆಯ ವಿಷಯವಾಗಿತ್ತು. ಅನಂತಮೂರ್ತಿಯವರು ಪುಸ್ತಕವೊಂದರಲ್ಲಿ ದೆವ್ವ ಬಂದಾಗ ಸುತ್ತಲೂ ಉಚ್ಛೆ ಹುಯ್ದರೆ ದೆವ್ವ ಹತ್ತಿರ ಸುಳಿಯುವುದಿಲ್ಲ ಎಂದು ಬರೆದಿದ್ದರು. ಅದನ್ನು ಯಾವ ಮಾಧ್ಯಮದವರೂ ಸುದ್ದಿ ಮಾಡಲಿಲ್ಲ. ಅವರಿಗೆ ಸೆನ್ಶೇಷನ್ ಮೂಡಿಸುವುದು ಬೇಕಾಗಿತ್ತು. ಅದನ್ನವರು ಮಾಡಿದರು. ನಿಜ ವಿಷಯವನ್ನು ತಿಳಿಸದೆ ದ್ವೇಷದ ಭಾವನೆಯನ್ನು ಬೆಳೆಸುವಲ್ಲಿ ಸಹಕರಿಸಿದರು. ಕಲಬುರ್ಗಿಯವರು ಸತ್ತಾಗ ಫೇಸ್ ಬುಕ್ಕಿನ ಪೇಜೊಂದರಲ್ಲಿ ಅವರೇ ದೇವರ ಮೂರ್ತಿಯ ಮೇಲೆ ಉಚ್ಛೆ ಹುಯ್ದಿದ್ದರು ಎಂಬ ಸಾಲುಗಳು ಕಾಣಿಸಿದವು. ಅದನ್ನು ನೂರಾರು ಜನ ಲೈಕ್ ಮಾಡಿ ನೂರಾರು ಜನ ಶೇರ್ ಮಾಡಿದ್ದರು. ಮತ್ತೊಂದು ಸುಳ್ಳು ಸತ್ತ ಕಲಬುರ್ಗಿಯ ಮೇಲೆ ದ್ವೇಷ ಸಾಧಿಸಲು ನೆರವಾದವು. ಸುಳ್ಳಿನ ಜಾತ್ರೆಯಲ್ಲಿ ಸತ್ಯದ ಮೆರವಣಿಗೆ ಮಾಡುವುದೇ ತಪ್ಪೇನೋ?

ದಿನೇಶ್ ಅಮೀನ್ ಮಟ್ಟು ವಿವಿಧ ಜಾಲತಾಣಗಳಲ್ಲಿ ಬಂದ ಬೆದರಿಕೆಯ ಸಂದೇಶಗಳನ್ನು ಪರಿಗಣಿಸಿ ನನ್ನ ಹೆಸರೂ ಲಿಸ್ಟಿನಲ್ಲಿದೆ ಎಂದು ಹೇಳಿಕೊಂಡಿದ್ದೂ ಅಪಹಾಸ್ಯದ ವಿಷಯವಾಯಿತು. ನಮ್ಮ ದೇಶದ ಪರಿಸ್ಥಿತಿ ಅಷ್ಟೇನೂ ಹದಗೆಟ್ಟಿಲ್ಲ, ಈ ರೀತಿಯ ಹತ್ಯೆಗಳು ಪದೇ ಪದೇ ನಡೆಯುವುದಿಲ್ಲ ಎಂದು ನಂಬಬಯಸಿದರೂ ಹತ್ಯೆಯನ್ನು ಸಂಭ್ರಮಿಸುವ ಜನರಿರುವಾಗ ಏನೂ ಕೂಡ ಇಲ್ಲಿ ಸಾಧ್ಯ ಎನ್ನುವುದು ಸತ್ಯ. ದಿನೇಶ್ ಅಮೀನರಿಗೆ ಬೆದರಿಕೆಯ ಕರೆಗಳು ಪುಂಖಾನುಪುಂಖವಾಗಿ ಬರುತ್ತಿದ್ದುದು ಸುಳ್ಳಲ್ಲವಲ್ಲ. ಬೆದರಿಕೆಯ ಕರೆಗಳನ್ನು ಉಪೇಕ್ಷಿಸಿ, ಇದ್ದ ಪೋಲೀಸ್ ಬೆಂಗಾವಲನ್ನು ವಾಪಸ್ಸು ಕಳುಹಿಸಿದ ಕಾರಣಕ್ಕೇ ತಾನೇ ಕಲಬುರ್ಗಿಯವರ ಹತ್ಯೆಯಾಗಿರುವುದು. ಪೋಲೀಸ್ ಬೆಂಗಾವಲು ಇದ್ದಿದ್ದರೆ ಹತ್ಯೆ (ಮಾಡಿದವರ್ಯಾರೇ ಇರಲಿ) ನಡೆಯುತ್ತಿರಲಿಲ್ಲ. ದಿನೇಶ್ ಅಮೀನ್ ಪ್ರಗತಿಪರರೋ ವಿಚಾರವಂತರೋ ಮತ್ತೊಂದೋ ಮಗದೊಂದೋ ಮೊದಲಿಗೆ ಅವರೂ ಮನುಷ್ಯ, ಮನುಷ್ಯನಲ್ಲಿ ಸಹಜವಾಗಿರುವ ಭಯದ ಯೋಚನೆ ಅವರಲ್ಲೂ ಇದೆ. ಬೆದರಿಕೆಯ ಕರೆ ಸ್ವೀಕರಿಸುತ್ತಿದ್ದ, ಹಲ್ಲೆ ಎದುರಿಸಿದ್ದ ವ್ಯಕ್ತಿಯೊಬ್ಬನ ಕೊಲೆಯಾಗಿದೆ. ಅದೇ ರೀತಿಯ ಬೆದರಿಕೆಗಳನ್ನು, ಹಲ್ಲೆಯನ್ನು ಎದುರಿಸಿದ ದಿನೇಶ್ ಅಮೀನ್ ಮಟ್ಟುರವರಿಗೆ ನಾನು ಇದೇ ರೀತಿ ಹತ್ಯೆಯಾಗಿಬಿಡಬಹುದಾ ಎಂಬ ಯೋಚನೆ ಬಂದರೆ ಅದು ಯಾರ ತಪ್ಪು? ಆ ಯೋಚನೆಯನ್ನೂ ಅಪಹಾಸ್ಯ ಮಾಡಬೇಕೆ?

ದೂರದ ಬಾಂಗ್ಲಾದೇಶದಲ್ಲಿ ನಡೆದ ಪ್ರಗತಿಪರ ಬ್ಲಾಗರುಗಳನ್ನು ಮುಸ್ಲಿಂ ಮೂಲಭೂತವಾದಿಗಳು ಸಾಯಿಸುತ್ತಿದ್ದಾರೆ, ಆ ಹತ್ಯೆಗಳು ನಮ್ಮನ್ನು ವಿಚಲಿತಗೊಳಿಸುವುದಿಲ್ಲ, ಪಕ್ಕದ ಮಹಾರಾಷ್ಟ್ರದಲ್ಲಿ ವಿಚಾರವಾದಿಯ ಹತ್ಯೆಯಾಗುತ್ತದೆ, ಎರಡು ವರುಷವಾದರೂ ಕೊಲೆಗಾರರ ಸುಳಿವು ಸಿಗುವುದಿಲ್ಲ. ಅದೂ ನಮ್ಮನ್ನು ವಿಚಲಿತಗೊಳಿಸುವುದಿಲ್ಲ. ನಮ್ಮ ಪಕ್ಕದ ಊರಿನ ವಿಚಾರವಾದಿಯ ಕೊಲೆಯೂ ನಮ್ಮನ್ನು ವಿಚಲಿತಗೊಳಿಸುವುದಿಲ್ಲ ಎಂದರೆ ನಮ್ಮನ್ನು ವಿಚಲಿತಗೊಳಿಸುವ ಸಂಗತಿ ಯಾವುದು? ನಮ್ಮ ವಿಚಾರಗಳನ್ನು ಒಪ್ಪದ ವ್ಯಕ್ತಿ ಮನೆಗೆ ನುಗ್ಗಿ ನಮ್ಮ ಹಣೆಗೇ ಗುರಿಯಿಟ್ಟಾಗಲಾದರೂ ನಾವು ವಿಚಲಿತಗೊಳ್ಳುತ್ತೇವಾ? ಸಮಾಜದ ಆತ್ಮಸಾಕ್ಷಿಯನ್ನು ಪ್ರತಿದಿನ ಕೊಲೆ ಮಾಡಲಾಗುತ್ತಿದೆ.……

Sep 4, 2015

ಸ್ವಾಮ್ಗಳ್ ಮಾತ್ಗಳು!

raghaweshwara swamy rape case
ರಾಘವೇಶ್ವರ ಭಾರತಿ ಸ್ವಾಮಿಗಳ ಮೇಲೆ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ಆ ಪ್ರಕರಣ ದಾಖಲಿಸಿದ ಮಹಿಳೆಯ ವೈದ್ಯಕೀಯ ಪರೀಕ್ಷೆ ಇತ್ಯಾದಿ ಇತ್ಯಾದಿಗಳೆಲ್ಲವೂ ನಡೆಯುತ್ತಿದೆ. ಸ್ವಾಮಿಗಳ ಹೆಸರು ಕೆಡಿಸಲು ಮತ್ತೊಂದು ಪ್ರಯತ್ನವಿದು ಎಂಬ ಅಭಿಪ್ರಾಯಕ್ಕೇನೂ ಕೊರತೆಯಿಲ್ಲ. ಆ ಮಹಿಳೆಯ ಜೊತೆ ದೂರು ಕೊಡಲು ಹೋಗಿದ್ದ ಜನವಾದಿ ಸಂಘಟನೆಯ ವಿಮಲಾ “ರಾಘವೇಶ್ವರ ಸ್ವಾಮಿಗಳ ಮೇಲೆ ಮೊದಲು ಕೇಸು ಹಾಕಿದ್ದು ಪ್ರೇಮಲತಾ. ಅವರಿಗೆ ನ್ಯಾಯ ಸಿಕ್ಕಿದೆಯಾ? ಸಾಕ್ಷಿ ಸಂಗ್ರಹ ಅದೂ ಇದೂ ಅಂತ ದೇಶ ಪೂರ್ತಿ ತಿರುಗಿಸುತ್ತಿದ್ದಾರೆ. ಅವರ ಮನೆಯವರಿಗೆ ಕೊಡಬಾರದ ಕಷ್ಟಗಳನ್ನೆಲ್ಲ ಕೊಡುತ್ತಿದ್ದಾರೆ. ಇವೆಲ್ಲವನ್ನೂ ಕೇಳಿ ನೋಡಿದ ಮೇಲೆಯೂ ಒಂದು ಹೆಣ್ಣುಮಗಳು ಸುಖಾಸುಮ್ಮನೆ ಸ್ವಾಮಿಗಳ ಮೇಲೆ ಕಂಪ್ಲೇಂಟ್ ಕೊಟ್ಟು ತೊಂದರೆಗ್ಯಾಕೆ ಒಳಗಾಗುತ್ತಾಳೆ?” ಎಂದು ಪ್ರಶ್ನಿಸುತ್ತಾರೆ. ಅತ್ಯಾಚಾರದ ದೂರು ನೀಡಿದಾಕ್ಷಣ ಪೋಲೀಸರೇನು ಇತರೆ ಅತ್ಯಾಚಾರ ಪ್ರಕರಣಗಳಲ್ಲಿ ಮಾಡುವಂತೆ ಓಡಿಹೋಗಿ ಸ್ವಾಮೀಜಿಯನ್ನು ಬಂಧಿಸಿಲ್ಲ. ಕಾರಣ ಇಲ್ಲಿ ಎಲ್ಲರೂ ಸಮಾನರು ಕೆಲವರು ಹೆಚ್ಚು ಸಮಾನರು!

ಇವೆಲ್ಲದರ ಮಧ್ಯೆ ವಾಟ್ಸಪ್ಪಿನಲ್ಲಿ ರಾಘವೇಶ್ವರ ಸ್ವಾಮೀಜಿಗಳದ್ದು ಎನ್ನಲಾದ ಧ್ವನಿಮುದ್ರಿಕೆಯೊಂದು ಹರಿದಾಡುತ್ತಿದೆ. ತಮ್ಮ ಶಿಷ್ಯ ರಾಮಚಂದ್ರ ಎಂಬುವವರೊಡನೆ ಅವರಾಡಿರುವ ಮಾತುಗಳು ಸ್ವಾಮೀಜಿಯೆಂದರೆ ದೈವಾಂಶ ಸಂಭೂತವೆಂದುಕೊಂಡವರಿಗೆ ಕಪಾಳ ಮೋಕ್ಷ ಮಾಡಿದಂತಿದೆ. ಅವರಿಗೂ ಭಯವಿದೆ, ತಮ್ಮ ಸ್ಥಾನ ಗಟ್ಟಿಯಾಗಿಲ್ಲವೆಂಬ ಗಾಬರಿಯಿದೆ, ಕೋಪ – ತಾಪವಿದೆ, ತಮ್ಮ ಪ್ರಭಾವ ಬಳಸಿ ಏನನ್ನಾದರೂ ಅರಗಿಸಿಕೊಳ್ಳುವೆನೆಂಬ ಅಹಂಭಾವವೂ ಇದೆ. ಆ ಧ್ವನಿಮುದ್ರಿಕೆಯ ಮಾತುಗಳಿವು:

“ವಿರೋಧ ಮಾಡುವವರ ಬಗ್ಗೆ ನಮಗೆ ಭಿನ್ನಾಭಿಪ್ರಾಯ ಇಲ್ಲ…. ಈ ದಾರಿ ನಾವೇ ನಿಮಗೆ ಹೇಳಿಕೊಟ್ಟಿದ್ದೀವಿ. ವಿರೋಧ ಮಾಡುವವರ ಬಗ್ಗೆ ನಮಗೆ ಭಿನ್ನಾಭಿಪ್ರಾಯ ಇಲ್ಲ. ಇರಲಿ. 

ಅದು ಅವರ ಜಾತಿ ಸ್ವಭಾವ ಅದು ಜನ್ಮ ಸ್ವಭಾವ ಅದು.

ನಮ್ಮ ಸಮಸ್ಯೆ ಇರೋದು ನಮ್ಮ ಜೊತೆಗೆ ಇರೋರ ಬಗ್ಗೆ. ಬಸ್ ಸ್ಟ್ಯಾಂಡಿನಲ್ಲಿ ಬಾಯಿಗೆ ಬಂದಂತೆ ಮಾತಾಡ್ತಿರೋವಾಗ ನಿಮ್ಮ ಪೌರುಷ ಎಲ್ಲಿತ್ತು. ಶಿಷ್ಯರುಗಳ ಪೌರುಷ ಎಲ್ಲಿತ್ತು ಅಂತ. ನಮ್ಮ. . . . ನಮ್ಮ ಧ್ವನಿ ಅರ್ಥ ಮಾಡ್ಕೋ ರಾಮಚಂದ್ರ.

ಸಮಾಜವನ್ನ ಉದ್ಧಾರ ಮಾಡೋ ಕೆಲ್ಸ ನಮ್ದು. ಆದರೆ ಗುರುಪೀಠ ಕಾದುಕೊಳ್ಳೋ ಕೆಲ್ಸ ನಿಮ್ದು. ಧರ್ಮೋ ರಕ್ಷತಿ ರಕ್ಷಿತಃ.

ಲಂಕೇಶ್ ಪತ್ರಿಕೆ ಜೊತೆಗೆ ನಾವ್ ಹೋರಾಟ ಮಾಡೋಕೆ ಸಾಧ್ಯ ಇಲ್ಲಾ. ಬೀದಿ ಬಸವರಿಗೆ ನಾವ್ ಉತ್ತರ ಕೊಡ್ಲಿಕ್ಕೆ ಸಾಧ್ಯ ಇಲ್ಲ. ನೀನ್ ಉತ್ರ ಕೊಡ್ಬೇಕು ಅದಕ್ಕೆ.

ಎಲ್ಲಿದ್ರೀ ನೀವು? ನಿಮ್ಮ ಗುರುವನ್ನು ವಾಚಾಮಾಗೋಚರವಾಗಿ ನಿಂದೆ ಮಾಡುವಾಗ ಸಾಮೂಹಿಕ ನಾಶ ಮಾಡೋ ರೀತಿಯಲ್ಲಿ ಸಮಾಜದಲ್ಲಿ ಒಂದು …. ಈ ರೀತಿ ಅಡೆತಡೆ……ಎಲ್ಲಿದ್ರಿ ನೀವು?

ನಾವ್ ಕೇಳ್ತಿರೋ ಪ್ರಶ್ನೆ ಅದು. ನಮಗೆ….ನಮ್ ಸಾಮರ್ಥ್ಯ ಕಡಿಮೆ ಆಗಲಿಲ್ಲ. ನಿನಗ್ ಹೇಳ್ತೇನ್ ಕೇಳು.

ಜೀವನಪರ್ಯಂತ ಇಂಥಾ ಸಂಗ್ರಾಮಗಳನ್ನ ಎದುರಿಸ್ತೇವೆ ನಾವು. ಇಡೀ ಜಗತ್ತು ಮುಗಿದು …. ಮುರಿದುಬಿದ್ರೂ ಕೂಡ ಎದುರಿಸ್ತೇವೆ ನಾವು. ಆ ಛಾತಿ ಇದೆ ನಮಗೆ ಇವತ್ತೂ ಕೂಡ. ಯಾರಿಗಾಗಿ ಅನ್ನೋ ಪ್ರಶ್ನೆ ನಮಗೆ. ಯಾರಿಗಾಗಿ? ಯಾರ ಜೊತೆ ಮಾಡಬೇಕು ಸಂಗ್ರಾಮವನ್ನು? ನಾವಾಗ್ಲೇ ಹೇಳಿದ್ವು. ಹೊರಗಿನವರ್ಯಾರ ಜೊತೇನೂ ಸಂಗ್ರಾಮ ಮಾಡೋ ಸಂದರ್ಭ ಅಲ್ಲ ಇದು. ಒಳಗಿನವರ ಜೊತೆ ಮಾಡಬೇಕಾದ ಸಂಗ್ರಾಮ ಉದ್ಭವವಾಗಿಬಿಟ್ಟಿದೆ.

ನಿನಗೆ ಬೇಕು ಅಂತ ನಮಗ್ ಗೊತ್ತಾಗೋದ್ ಹ್ಯಾಗೆ? ಗುರು ಪೀಠ ಬೇಕು ಅಂತ ಗೊತ್ತಾಗೋದ್ ಹ್ಯಾಗೆ?

ಹಾಗಾಗಿ ಒಂದು ವಿಷಯ ಪುನಃ ಸ್ಪಷ್ಟಪಡಿಸುತ್ತೇನೆ. ಯಾರೋ ವಿರೋಧ ಮಾಡಿದ್ರು ನಿಂದನೆ ಮಾಡಿದ್ರು ಅಂತ ನಾವ್ ಹೆದರಿ ಹೊರಡ್ತಾ ಇರೋದ್ ಅಲ್ಲ. ಸಾಮರ್ಥ್ಯ ಕಡಿಮೆ ಆಗಿಲ್ಲ ಅಥವಾ ಅನುಭವ ಕಡಿಮೆ ಆಗಿಲ್ಲ. ಅವತ್ತು ನಮಗೇನ್ ಅನುಭವ ಇತ್ತೋ ಅದಕ್ಕಿಂತ ಹೆಚ್ಚೆಚ್ಚು ಅನುಭವ ಇದೆ, ಇವತ್ತಿದೆ.

ಇಂಥದನ್ ನಿಭಾಯಿಸಕ್ಕೆ ಬೇಕಾದಂತಹ ಎಲ್ಲವೂ ನಮ್ಮತ್ರ ಇದೆ. ಮಾಡಬೇಕಾ? ಯಾರಿಗಾಗಿ ಮಾಡಬೇಕು? ಯಾರಿಗಾಗ್ ಮಾಡಬೇಕೋ ಅವರೆಲ್ಲಾ ಕೂತ್ಕೊಂಡಿದ್ದಾರೆ ಅವರ ಜೊತೆಗೆ ….. ಅಲ್ಲ ಸುಮ್ನಿದ್ದಾರೆ”

‘ಎರಡನೇದ್ ಸತ್ಯ’

“ಉಳಿಸಿಕೊಳ್ಳುವ ಪ್ರಯತ್ನ ನೀವ್ ಮಾಡದಿದ್ರೆ ಉಳಿಯೋದಿಲ್ಲ. ನೀವ್ ಉಳಿಸ್ಕೊಂಡ್ರೆ ಉಳೀತದೆ ಇದು. ಒಂದು ನಿಮಗೆ ನಾವ್ ಪುನಃ ಪುನಃ ಸ್ಪಷ್ಟಪಡಿಸ್ತೀನಿ. ಇವತ್ತಿನವರೆಗೂ ಸಾರಥ್ಯವನ್ನು ನಾವೇ ಮಾಡಿದ್ದೇವೆ. ಸಂಗ್ರಾಮವನ್ನೂ ನಾವೇ ಮಾಡಿದ್ದೇವೆ. ಇನ್ನು ಎರಡೂ ಆಗ್ಲಿಕ್ಕಿಲ್ಲ. ನಿಮ್ ಕೆಲ್ಸ ನೀವ್ ಮಾಡಿ. ಪುನಃ ಹೇಳ್ತೇವೆ. ಸಮಾಜಕ್ಕೆ ಬೇಕಾದ್ ಎಲ್ಲಾನೂ ನಾವ್ ಮಾಡ್ತೇವೆ. ಆದ್ರೆ ಈ ವಿರೋಧದ ಅಲೆಗಳು ಏಳ್ತಾವಲ್ಲ ನೀವದನ್ನ ಎದುರಿಸಿ. ಅದು ನಿಮ್ ಕೆಲ್ಸ ಅದು. ನಿಮಗ್ ಬಂದ್ರೆ ನಾವ್ ನೋಡ್ಕೊಳ್ತೇವೆ. ಈ ಸಮಾಜದ ಕೊನೆಯ ಮಗುವಿಗೆ ಒಂದ್ ಆಪತ್ತು ಬಂದ್ರೆ ನಾವ್ ನಿಂತು ಮೊದಲು, ಆ ಮಗುವಿಗಿಂತ ಮೊದ್ಲು, ಏಟು ನಮಗ್ ಬೀಳ್ಬೇಕು. ಮುಂದೆ ನಿಂತು ಮಾತಾಡ್ತೇವೆ. ಆದ್ರೆ ಪೀಠ ಕಾಪಾಡೋ ಕೆಲ್ಸ ಯಾರದ್ದು? ಪೀಠದ ಮರ್ಯಾದೆ ಕಾಪಾಡೋ ಕೆಲ್ಸ ಯಾರದ್ದು? ಬರ್ತಾ ಬರ್ತಾ ನಮಗ್ ಅಭ್ಯಾಸ ಆಗೋಯ್ತಲ್ಲ ಅಂತ.

ಅದೇನ್ ವಿಷಯ ಲಂಕೇಶಲ್ಲಿ ಬಂದ್ರೇನು, ಹಾಯ್ ಬೆಂಗಳೂರಲ್ಲಿ ಬಂದ್ರೇನು ಇವನ್ ಮಾತಾಡಿದ್ರೇನು ಅವನ್ ಮಾತಾಡಿದ್ರೇನು ಅನ್ನೋ ತರಹ ಆದ್ರೆ…..ನೋಡು ರಾಮಚಂದ್ರ ಕೆಲ್ಸ ಮಾಡೋಕ್ ಒಂದ್ ವಾತಾವರಣ ಬೇಕು. ಆ ವಾತಾವರಣ ಇಲ್ದೆ ಕೆಲ್ಸ ಮಾಡ್ಲಿಕ್ಕೆ ಸಾಧ್ಯ ಇಲ್ಲ.

ನಾವೆಲ್ಲೂ ಕೆಲ್ಸ ಮಾಡೋದಿಲ್ಲಾ ಅಂತ ಹೇಳ್ತಾ ಇಲ್ಲ. ಎಲ್ಲೂ ಕೆಲ್ಸ ಮಾಡೋದಿಲ್ಲಾ ಅಂತ ಹೇಳ್ತಾ ಇಲ್ಲ. ನಾವೆಲ್ಲಿರ್ತೇವೆ ಅಲ್ಲಿ ಕೆಲ್ಸ ಆಗತ್ತೆ ತಮ್ಮಷ್ಟಕ್ಕೆ.

ಇಂಥದೇ ಸಾಮ್ರಾಜ್ಯಾನ ರಾಜಸ್ಥಾನದಲ್ಲಿ ಕಟ್ಬೋದು. ನೆನಪಿರಲಿ. ಸವಾಲಾಗಿ ಹೇಳ್ತಿದ್ದೇವೆ ನಾವು. ಇವತ್ತೇನ್ ಸಾಮ್ರಾಜ್ಯ ಇದೆ ನಮ್ದು ಇಂಥದೇ ಸಾಮ್ರಾಜ್ಯವನ್ನ ರಾಜಸ್ಥಾನಕ್ಕೆ ಹೋಗಿ ಕಟ್ತೇವೆ ನಾವು ಬೇಕಿದ್ರೆ. ಬಿಹಾರಕ್ಕೆ ಹೋಗಿ ಕಟ್ತೇವೆ ಬೇಕಿದ್ರೆ. ಬಂಗಾಳಕ್ಕೆ ಹೋಗಿ ಕಟ್ತೇವೆ ಬೇಕಿದ್ರೆ. ನಿಮಗ್ ಗೊತ್ತಿರ್ಲಿ, ಬೆಂಗ್ಳೂರಲ್ಲಿ ಎಷ್ಟು ದೊಡ್ಡ ಒಂದು ವಲಯ ಇದೆ ನಮ್ದು ಅದಕ್ಕಿಂತ ದೊಡ್ಡ ವಲಯ ಕಲ್ಕತ್ತಾದಲ್ಲಿದೆ ಇವತ್ತು. ಶ್ರೀಮಂತರಲ್ಲಿ ಶ್ರೀಮಂತರಿಂದ ಬಡವರಲ್ಲಿ ಬಡವರವರೆಗೆ ಬೆಂಗ್ಳೂರಿಗಿಂತ ಪೀಠಕ್ಕೆ ಶರಣಾಗಿರುವಂತಹ ವಲಯ ಕಲ್ಕತ್ತಾದಲ್ಲಿದೆ ಇವತ್ತು. ಸಾಮರ್ಥ್ಯ ಕಡಿಮೆಯಾಗಿ ಅಧ್ಯೆರ್ಯದಿಂದ ಆಡ್ತಿರೋ ಮಾತಲ್ಲ ಇದು. ನಿಮಗೆ ಬೇಕಾ ಅಂತಾ?”

‘ಶ್ರೀಗಳೋರು ಕ್ಷಮಿಸಬೇಕು. ನನಗರ್ಥ ಆಯ್ತು ಧಣಿ. ನನಗರ್ಥ ಆಯ್ತು ಧಣಿ’

Sep 3, 2015

ಮುಜಾಫರ್ ನಗರದ ಕೋಮುಗಲಭೆಯಲ್ಲಿ ನಲುಗಿದ ಧರ್ಮವ್ಯಾವುದು?

Muzaffarnagar baaqi hai
Dr Ashok K R
ದೃಶ್ಯ 1: 
ಪುಟ್ಟ ಹುಡುಗನನ್ನು ಸಂದರ್ಶನಕಾರರು ಮಾತನಾಡಿಸುತ್ತಿರುತ್ತಾರೆ. ಬಾಗಿಲ ಹೊರಗೆ ಗೋಡೆಗೊರಗಿಕೊಂಡು ನಿಂತಿರುತ್ತಾನೆ ಹುಡುಗ. ನಿಮ್ಮ ಊರು ಬಿಟ್ಟು ಇಲ್ಲಿಗ್ಯಾಕೆ ಬಂದೆ ಎನ್ನುತ್ತಾನೆ ಸಂದರ್ಶಕ. ‘ನಮ್ಮ ಮನೆ ಅಂಗಡಿಗೆಲ್ಲ ಬೆಂಕಿ ಹಚ್ಚಿಬಿಟ್ಟಿದ್ದರು. ಅದಕ್ಕೆ ಇಲ್ಲಿಗೆ ಬಂದೆ’.
‘ಶಾಲೆಗೆ ಹೋಗುತ್ತಿದ್ದಾ ಅಲ್ಲಿ’
‘ಹ್ಞೂ’
‘ಈಗ ಹೋಗ್ತಿಲ್ವಾ ಶಾಲೆಗೆ’
‘ಇಲ್ಲ’
‘ಯಾಕೆ’
ಹುಡುಗ ಒಂದರೆಕ್ಷಣ ಯೋಚಿಸುತ್ತಾನೆ ‘ಹೋಗ್ತೀನಿ ಇನ್ಮೇಲೆ’ ಎಂದ್ಹೇಳಿ ಒಳಗೋಡುತ್ತಾನೆ. ಒಂದೇ ಕೋಣೆಯ ಮನೆಯಲ್ಲಿ ಅಡುಗೆ ಮಾಡುತ್ತಿರುತ್ತಾಳೆ ಅಮ್ಮ. ‘ಅಮ್ಮ ಅಮ್ಮ ನಾನು ಶಾಲೆಗೆ ಹೋಗ್ತೀನಲ್ವಾ’ ಎಂದು ಕೇಳುತ್ತಾನೆ. ಅಮ್ಮನ ಬಳಿ ಸರಿಯಾದ ಉತ್ತರವಿರುವುದಿಲ್ಲ.
ದೃಶ್ಯ 2:
ರೈತರ ಸಂಘಟನೆಯ ಮುಖಂಡನೊಡನೆ ಮಾತುಕತೆ. ‘ಕಬ್ಬಿಗೆ ಬೆಲೆ ಸಿಕ್ಕಿಲ್ಲವಲ್ಲ ಯಾಕೆ?’
‘ಪ್ರತಿ ವರ್ಷ ಸರಿಯಾದ ಬೆಲೆ ಸಿಗುತ್ತಿರಲಿಲ್ಲ. ಹೋರಾಟ ಮಾಡುತ್ತಿದ್ದೋ. ಕಾರ್ಖಾನೆಯವರು ನಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳುತ್ತಿದ್ದರು’
‘ಈಗ’
‘ಈಗೆಲ್ಲಿ ಗಲಭೆ ನಡೆದ ನಂತರ ರೈತರೆಲ್ಲ ಮುಸ್ಲಿಂ ಜಾಟ್, ಹಿಂದೂ ಜಾಟ್ ಆಗಿಬಿಟ್ಟಿದ್ದಾರೆ. ರೈತ ಹೋರಾಟ ಹಳ್ಳಹಿಡಿದಿದೆ. ಮೊದಲು ಮುಸ್ಲಿಮರು ಅಲ್ಲಾಹೋ ಅಕ್ಬರ್ ಅಂದ್ರೆ ಹಿಂದೂ ಹರಹರ ಮಹಾದೇವ್ ಅಂತ ಪ್ರತಿಕ್ರಿಯಿಸುತ್ತಿದ್ದ. ಈಗ ಹರಹರ ಮಹಾದೇವ್ ಅಷ್ಟೇ ಉಳಿದಿದೆ. ಅದೂ ಇಲ್ಲ ಹರಹರ ಮೋದಿ ಅಷ್ಟೇ ಉಳಿದಿದೆ.
Muzaffarnagar baaqi hai
ಗಲಭೆಗೆ ಬಲಿಯಾದ ಬಾಲ್ಯ
ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ನಡೆದ ಕೋಮುಗಲಭೆಯ ಬಗ್ಗೆ ನಕುಲ್ ಸಿಂಗ್ ಸಾಹ್ನಿ ತೆಗೆದಿರುವ ‘ಮುಜಾಫರ್ ನಗರ್ ಬಾಕೀ ಹೈ’ ಸಾಕ್ಷ್ಯಚಿತ್ರದ ಎರಡು ದೃಶ್ಯಗಳಿವು. ಇಡೀ ಕೋಮುಗಲಭೆಯಿಂದ ಅನ್ಯಾಯಕ್ಕೊಳಗಾದವರಾರೆಂದು ಈ ಎರಡೇ ದೃಶ್ಯದಲ್ಲಿ ತೋರಿಸಿಬಿಡುತ್ತಾರೆ. ಬಾಲ್ಯ ಕಳೆದುಕೊಂಡ ಮಕ್ಕಳು, ಹಕ್ಕಿನ ಹೋರಾಟ ಕಳೆದುಕೊಂಡ ರೈತರು ಇಡೀ ಕೋಮುಗಲಭೆಯೆಂಬ ಪೂರ್ವನಿಯೋಜಿತ ಹಿಂಸಾ ನಾಟಕದಿಂದ ನೊಂದವರು. ಕೋಮುಗಲಭೆಯ ಸಂದರ್ಭವನ್ನನುಸರಿಸಿ ತೆಗೆಯುವ ಸಾಕ್ಷ್ಯಚಿತ್ರಗಳು ಒಂದು ಧರ್ಮದ ಪರವಾಗಿ ಮತ್ತೊಂದು ಧರ್ಮದ ವಿರುದ್ಧವಾಗಿ ವಾದ ಮಂಡಿಸಿಬಿಡುವ ಸಾಧ್ಯತೆಗಳೇ ಹೆಚ್ಚು. ತಮಗೆ ಬೇಕಾದವರ ಮಾತುಗಳನ್ನಷ್ಟೇ ಚಿತ್ರೀಕರಿಸಿಕೊಂಡು ತಮ್ಮಲ್ಲಿರುವ ಸ್ಥಾಪಿತ ಸತ್ಯಕ್ಕೆ ಮತ್ತಷ್ಟು ಪುರಾವೆಗಳನ್ನು ಸೃಷ್ಟಿಸಿಕೊಳ್ಳುವುದು ಸುಲಭದ ಕೆಲಸ. ಮನಸ್ಸಿನಲ್ಲಿ ಸ್ಥಾಪಿತವಾದ ಸತ್ಯಗಳನ್ನೆಲ್ಲ ತೊಡೆದುಹಾಕಿ ಹೊಡೆದವರ ಹೊಡೆಸಿಕೊಂಡವರನ್ನೆಲ್ಲಾ ಚಿತ್ರಿಸಿ ಕಣ್ಣಿಗೆ ಕಾಣಿಸುವ ಸತ್ಯದ ಹಿಂದಿರುವ ಸತ್ಯಗಳನ್ನು ಹುಡುಕಿ ತೆಗೆಯುವ ಕೆಲಸವನ್ನು ಈ ಸಾಕ್ಷ್ಯಚಿತ್ರ ಮಾಡಿದೆ. 
Muzaffarnagar riots documentary
ಧರ್ಮ ರಕ್ಷಿಸುವ ಕೆಲಸ...

ಮುಜಾಫರ್ ನಗರ ಗಲಭೆಯಲ್ಲಿ ಹಿಂದೂಗಳು ಹೊಡೆಯುವವರಾಗಿದ್ದರು, ಮುಸ್ಲಿಮರು ಹೊಡೆಸಿಕೊಂಡವರಾಗಿದ್ದರು. ಬಹುತೇಕ ಎಲ್ಲಾ ನಿರಾಶ್ರಿತರ ಶಿಬಿರಗಳು ಮುಸ್ಲಿಮರದೇ ಆಗಿತ್ತು. ಒಂದೇ ಒಂದು ನಿರಾಶ್ರಿತ ಶಿಬಿರ ಹಿಂದೂಗಳಿಗಿತ್ತು. ಅಲ್ಲಿಗೆ ಮುಸ್ಲಿಮರು ತಮ್ಮ ಕೈಲಾದ ಮಟ್ಟಿಗೆ ಹಿಂಸೆಯಲ್ಲಿ ಪಾಲ್ಗೊಂಡಿದ್ದು ನಿಚ್ಚಳವಾಗಿತ್ತು. ಆ ಹಿಂದೂ ನಿರಾಶ್ರಿತ ಶಿಬಿರದಲ್ಲಿದ್ದವರೆಲ್ಲ ಕೂಲಿ ನಾಲಿ ಮಾಡುತ್ತಿದ್ದ ದಲಿತರು. ಇನ್ನು ಮುಸ್ಲಿಂ ನಿರಾಶ್ರಿತ ಶಿಬಿರಗಳಲ್ಲೂ ಹೆಚ್ಚಿನ ಸಂಖೈಯಲ್ಲಿದ್ದಿದ್ದು ಕೂಲಿ ಕಾರ್ಮಿಕರೇ. ಐವತ್ತು ಚಿಲ್ಲರೆ ಬಾಗಿಲಿದ್ದ ಮನೆಯ ಒಡೆಯರು, ಸಣ್ಣ ಪುಟ್ಟ ಅಂಗಡಿ ನಡೆಸುತ್ತಿದ್ದವರು ಕೂಡ ಬೀದಿಗೆ ಬಿದ್ದಿದ್ದರು. ಒಂದು ಕೋಮುಗಲಭೆಗೆ ಎರಡೂ ಕೋಮಿನ ಜನರ ತಪ್ಪುಗಳಿರುವುದೇ ಅಧಿಕ. ಮುಜಾಫರ್ ನಗರದಲ್ಲೂ ಹಾಗೆಯೇ ಆಗಿತ್ತೆ? 

ಎಳೆಎಳೆಯಾಗಿ ಕೋಮುರಾಜಕಾರಣದ ಬಿಡಿಸುತ್ತಾ ಸಾಗುತ್ತದೆ ಸಾಕ್ಷ್ಯಚಿತ್ರ. ಮುಜಾಫರ್ ನಗರದ ಗಲಭೆಗೆ ಆರು ತಿಂಗಳ ಹಿಂದೆಯವರೆಗೂ ಆ ಪ್ರದೇಶದಲ್ಲಿನ ಪ್ರಮುಖ ಪತ್ರಿಕೆಗಳು ರಾಜಕೀಯದ, ಸಮಾಜದ ಸಂಕಟಗಳ ಸುದ್ದಿಯನ್ನು ಮುಖಪುಟದಲ್ಲಿ ಪ್ರಕಟಿಸುತ್ತಿರುತ್ತವೆ. ಆರು ತಿಂಗಳಿನಿಂದ ಬಹುತೇಕ ಪತ್ರಿಕೆಗಳಲ್ಲಿ ‘ಒಂದು ಕೋಮಿನ ಹುಡುಗ ಮತ್ತೊಂದು ಕೋಮಿನ ಹುಡುಗಿಯನ್ನು ಚುಡಾಯಿಸಿದ’ ಎನ್ನುವುದೇ ವಿವಿಧ ರೀತಿಯಲ್ಲಿ ಮರುಪ್ರಕಟವಾಗುತ್ತಿರುತ್ತದೆ. ಅಷ್ಟೊಂದು ಪ್ರಕರಣಗಳು ನಡೆದವಾ ಎಂದು ಗಮನಿಸಿದರೆ ಇಲ್ಲವೆಂಬ ಉತ್ತರ ಸಿಗುತ್ತದೆ. ಇದರ ಜೊತೆಜೊತೆಗೆ ಲವ್ ಜಿಹಾದ್ ಎಂಬ ಭೂತವನ್ನು ತೋರಿಸಿ ಬೆದರಿಸಲಾಗುತ್ತದೆ. ಹಿಂದೂ ಸಂಘಟನೆಯೊಂದರ ಮುಖಂಡನನ್ನು ಇದರ ಬಗ್ಗೆ ಸಂದರ್ಶಿಸಿದಾಗ ಆತ ಲವ್ ಜಿಹಾದ್ ಇದೆ ಎನ್ನುತ್ತಾನೆ. ‘ಸರಿ. ಲವ್ ಜಿಹಾದ್ ಇಂದ ತೊಂದರೆಗೊಳಗಾದ ಒಂದು ಹುಡುಗಿಯ ಕುಟುಂಬವನ್ನು ಪರಿಚಯಿಸಿ’ ಎಂದು ಸಂದರ್ಶನಕಾರ ಕೇಳಿಕೊಂಡಾಗ ತನ್ನ ಶಿಷ್ಯರಿಗೆ ಹಲವು ಫೋನ್ ಮಾಡುತ್ತಾನೆ. ಆ ಹುಡುಗಿ ಈಗ ಇಲ್ಲ, ಅವರ ಕುಟುಂಬ ಊರು ಬಿಟ್ಟಿದೆ, ಅವರು ಮಾತನಾಡಲು ತಯಾರಿಲ್ಲ ಎಂಬಂತಹ ಉತ್ತರಗಳೇ ದೊರಕುತ್ತವೆ. ಒಟ್ಟಿನಲ್ಲಿ ಒಂದು ಗಲಭೆಗೆ ಬೇಕಾದ ಎಲ್ಲಾ ಪೂರ್ವ ತಯಾರಿ ಮುಜಾಫರ್ ನಗರದ ವಿವಿಧ ಭಾಗಗಳಲ್ಲಿ ನಿರಂತರವಾಗಿ ನಡೆಯುತ್ತಿರುತ್ತದೆ. ರಾಜಕೀಯ ಭಾಷಣಗಳಲ್ಲಿ ಎಲ್ಲರೂ ಪರಧರ್ಮ ನಿಂದನೆಯನ್ನೇ ಪ್ರಮುಖವಾಗಿಸಿಕೊಂಡುಬಿಡುತ್ತಾರೆ. ಕೊನೆಗೆ ಮುಸ್ಲಿಂ ಹುಡುಗನೊಬ್ಬ ಹಿಂದೂ ಹುಡುಗಿಯನ್ನು ಚುಡಾಯಿಸಿದ್ದನ್ನು ನೆಪವಾಗಿಸಿಕೊಂಡು ಮುಸ್ಲಿಂ ಹುಡುಗನನ್ನು ಸಾಯುವವರೆಗೆ ಹೊಡೆಯುತ್ತಾರೆ. ಇತ್ತ ಮುಸ್ಲಿಮರು ಆ ಹಿಂದೂ ಹುಡುಗರಲ್ಲಿಬ್ಬರನ್ನು ಹೊಡೆದು ಸಾಯಿಸುತ್ತಾರೆ. ಕೋಮುಗಲಭೆ ಹೊತ್ತಿಕೊಳ್ಳಲು ಇದಕ್ಕಿಂತ ಹೆಚ್ಚು ಕಾರಣ ಬೇಕೆ? ಅದೂ ಗಲಭೆಯ ಆಟವಾಡಲು ಭೂಮಿಕೆ ಸಿದ್ಧವಾಗಿರುವಾಗ? ಕೋಮುಗಲಭೆಯ ಜ್ವಾಲೆಗಳು ಎಲ್ಲೆಡೆ ಹರಡಲು ವಾಟ್ಸಪ್ಪು ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಹುಡುಗರಿಬ್ಬರನ್ನು ಸಾಯಿಸಿದ ವೀಡಿಯೋ ಕೂಡ ಪ್ರಮುಖ ಕಾರಣ. ಬಿಜೆಪಿಯ ನಾಯಕರೂ ಈ ವೀಡಿಯೋವನ್ನು ಹಂಚುತ್ತಾರೆ. ಅಸಲಿಗೆ ಆ ವೀಡಿಯೋ ಪಾಕಿಸ್ತಾನದಲ್ಯಾವಗಲೋ ಚಿತ್ರಿತವಾಗಿದ್ದು ಎಂಬ ಸಂಗತಿ ತಿಳಿಯುವುದರೊಳಗೆ ಹಿಂಸೆ ವ್ಯಾಪಕವಾಗಿ ಸಾವಿರಾರು ಜನರು ನಿರಾಶ್ರಿತರಾಗುತ್ತಾರೆ. ಒಂದು ಊರಿನ ಬೀದಿಯಲ್ಲಿನ ಎರಡು ಅಂಗಡಿಯ ಮೇಲೆ ಹಿಂದೂ ಹೆಸರಿದೆ. ಮಧ್ಯದ ಅಂಗಡಿಯ ಮೇಲೆ ಮುಸ್ಲಿಂ ಹೆಸರಿದೆ. ಹಿಂದೂ ಅಂಗಡಿಗಳು ಸುರಕ್ಷಿತವಾಗಿದ್ದರೆ ಮುಸ್ಲಿಂ ಅಂಗಡಿ ಸುಟ್ಟು ಕರಕಾಲಗಿರುವ ದೃಶ್ಯ ಇಡೀ ಮುಜಾಫರ್ ನಗರ ಗಲಭೆಯಲ್ಲಿ ಹಾನಿಗೀಡಾದವರು ಯಾರು ಎನ್ನುವುದನ್ನು ತಿಳಿಸಿಬಿಡುತ್ತದೆ. 
muzaffarnagar baaqi hai
ಒಂದು ಬದಲಾವಣೆಗೆ ಪ್ರಯತ್ನಿಸುವವರು.....
ಸಂತ್ರಸ್ತರ ಗೋಳು, ರಾಜಕಾರಣಿಗಳ ಕಪಟ ಮಾತುಗಳು, ಮತಾಂಧ ಸಂಘಟನೆಯ ಕಾರ್ಯಕರ್ತರ ಅಟ್ಟಹಾಸದ ನಡುವೆ ಅಲ್ಲಲ್ಲಿ ಇದ್ದಕ್ಕಿದ್ದಂತೆ ರೈತ, ಕಬ್ಬು, ಆಲೆಮನೆ, ಸಕ್ಕರೆ ಕಾರ್ಖಾನೆಗಳನ್ನು ತೋರಿಸುತ್ತಾರೆ. ಕೋಮುಗಲಭೆಯಲ್ಲಿ ರೈತನ ಚಿತ್ರಣವ್ಯಾಕೆ ಎನ್ನುವುದಕ್ಕೆ ಉತ್ತರ ಸಾಕ್ಷ್ಯಚಿತ್ರ ಸಾಗಿದಂತೆ ತಿಳಿಯುತ್ತದೆ. ರೈತನಾಗಿದ್ದ ರೈತನಲ್ಲಿ ಮುಸ್ಲಿಂ ರೈತ ಹಿಂದೂ ರೈತ ಎಂಬ ಭಿನ್ನಾಭಿಪ್ರಾಯ ಮೂಡುತ್ತದೆ. ಜೊತೆಜೊತೆಯಾಗಿದ್ದವರೇ ಹೊಡೆದಾಡಿಕೊಳ್ಳುತ್ತಾರೆ. ಧರ್ಮಭೇದವಿಲ್ಲದೇ ಒಂದಾಗಿದ್ದ ರೈತ ಸಂಘಟನೆಗಳು ಧರ್ಮಾಧಾರಿತವಾಗಿ ವಿಭಜಿತವಾಗಿ ಬಿಟ್ಟ ಮೇಲೆ ಎಲ್ಲಿಯ ರೈತ ಹೋರಾಟ? ‘ಗಲಭೆಯಿಂದ ಹೆಚ್ಚು ಲಾಭ ಪಡೆದುಕೊಂಡಿದ್ದು ಸಕ್ಕರೆ ಕಾರ್ಖಾನೆಗಳು. ಅವರು ಕೊಟ್ಟಷ್ಟೇ ದುಡ್ಡಿಗೆ ನಾವೀಗ ಕಬ್ಬು ಹೊಡೆಯಬೇಕು. ಯಾಕೆಂದರೆ ನಮ್ಮಲ್ಲೀಗ ಹೋರಾಟವಿಲ್ಲ. ಮುಸ್ಲಿಂ ರೈತ ಬಂದರೆ ಹಿಂದೂ ಬರೋದಿಲ್ಲ, ಹಿಂದೂ ಬಂದರೆ ಮುಸ್ಲಿಂ ಬರೋದಿಲ್ಲ’ ಎಂದೊಬ್ಬ ಬೆಳೆಗಾರ ಹೇಳುವ ದೃಶ್ಯ ಒಂದು ಗಲಭೆಯ ದುರ್ಬಾಹುಗಳು ಎಲ್ಲಿಯವರೆಗೆ ಚಾಚಲು ಸಾಧ್ಯ ಎಂದು ತಿಳಿಸುತ್ತದೆ. ಅಯೋಧ್ಯಾ ಗಲಭೆಯ ಸಂದರ್ಭದಲ್ಲೂ ಶಾಂತವಾಗಿದ್ದ ಹಳ್ಳಿಗಳಲ್ಲಿ ಈ ಬಾರಿ ಗಲಭೆ ನಡೆಯಿತು. ಇದೆಲ್ಲದರ ಲಾಭ ಪಡೆದಿದ್ಯಾರು? 

ಇವೆಲ್ಲದರ ಆಯೋಜಕ ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳು ಎಂದು ನಿಸ್ಸಂಶಯವಾಗಿ ಹೇಳಬಹುದು. ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶಕ್ಕೆ ಪ್ರಾಮುಖ್ಯತೆ ಜಾಸ್ತಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಹತ್ತು ಸ್ಥಾನಗಳನ್ನಷ್ಟೇ ಗಳಿಸಿದ್ದ ಬಿಜೆಪಿ ಈ ಎಲ್ಲ ಗಲಭೆಯ ನಂತರ ನಡೆದ ಚುನಾವಣೆಯಲ್ಲಿ ಬರೋಬ್ಬರಿ ಎಪ್ಪತ್ತು ಸ್ಥಾನಗಳಲ್ಲಿ ಗೆದ್ದು ಬೀಗಿತು. ಅದು ನಡೆಸಿದ ಕೋಮುಗಲಭೆಯ ರಾಜಕೀಯ ಧರ್ಮಾಧಾರಿತವಾಗಿ ಹಿಂದೂಗಳೆಲ್ಲರೂ ಬಿಜೆಪಿಗೆ ಮತ ಹಾಕುವಂತೆ ಮಾಡಿತು. ಮುಸ್ಲಿಮರ ಪರ ಎಂಬ ಸೋಗಿನ ಸಮಾಜವಾದಿ ಪಕ್ಷ ನಿರಾಶ್ರಿತ ಶಿಬಿರಗಳಲ್ಲಿರುವ ಜನರ ಸಂಕಷ್ಟಗಳನ್ನು ಪರಿಹರಿಸುವ ಕೆಲಸ ಮಾಡುವುದನ್ನು ಬಿಟ್ಟು ನಿರಾಶ್ರಿತ ಶಿಬಿರಗಳನ್ನೇ ರಾತ್ರೋರಾತ್ರಿ ಬೀಳಿಸಿ ನಿರಾಶ್ರಿತರನ್ನು ಮತ್ತೊಮ್ಮೆ ಬೀದಿಗೆ ತಳ್ಳಿದರು. ‘ದೀದಿ ಒಮ್ಮೆ ಗಲಭೆಯಲ್ಲಿ ತೊಂದರೆಗೊಳಗಾದವರನ್ನು ಭೇಟಿಯಾಗಿಬಿಟ್ಟಿದ್ದರೆ ಎಲ್ಲೆಡೆಯೂ ಅವರೇ ಗೆಲ್ಲುತ್ತಿದ್ದರು. ಅವರ ಸುತ್ತಲಿರುವ ಮೂವರು ಬ್ರಾಹ್ಮಣರು ನಮ್ಮನ್ನವರು ಭೇಟಿಯಾಗಲು ಬಿಡಲಿಲ್ಲ’ ಎಂದು ಮಾಯವತಿಯ ಬಿ.ಎಸ್.ಪಿಯ ಸೋಲನ್ನು ಅಲ್ಲಿಯವರು ವಿಶ್ಲೇಷಿಸುತ್ತಾರೆ. ಒಂದು ಅಪಾಯಕಾರಿ ಗಲಭೆಯನ್ನು ಪ್ರಾಯೋಜಿಸಿ ದೊಡ್ಡ ಮಟ್ಟದಲ್ಲಿ ಗೆದ್ದು ಬೀಗುತ್ತದೆ ಬಿಜೆಪಿ. ಈ ಎಲ್ಲಾ ರಾಜಕಾರಣಿಗಳ ನಡುವೆ ಭಗತ್ ಸಿಂಗನ ಒಂದು ಫೋಟೋ ಹಿಡಿದುಕೊಂಡು ಐದು ಹುಡುಗರು ಹಳ್ಳಿ ಹಳ್ಳಿ ತಿರುಗುತ್ತಾರೆ. ವಸ್ತುಸ್ಥಿತಿಯನ್ನು ವಿವರಿಸುತ್ತಾರೆ. ಗಲಭೆಯ ದೆಸೆಯಿಂದ, ಕೋಮು ರಾಜಕಾರಣದ ದೆಸೆಯಿಂದ ಹೇಗೆ ಊರಿನ ನಿಜವಾದ ಸಮಸ್ಯೆಗಳು ಚರ್ಚೆಗೇ ಬರದೆ ಹೋಗುತ್ತಿದೆ ಎಂದು ವಿವರಿಸಿ ಹೇಳುತ್ತಾರೆ. ಹೌದೆಂದು ತಲೆಯಾಡಿಸುವ ಜನ ಧರ್ಮಾಧಾರಿತವಾಗಿ ಮತ ಚಲಾಯಿಸುತ್ತಾರೆ....... ಉಳುವುದಕ್ಕೆ ಭೂಮಿಗೆ ಕಾಲಿಟ್ಟ ರೈತನಿಗೆ ಧರ್ಮವಿಲ್ಲ; ಕೋಮುಗಲಭೆಯ ದೆಸೆಯಿಂದ ಈಗಾತ ಒಬ್ಬಂಟಿ......

ಒಂದು ಸಶಕ್ತ ಸಾಕ್ಷ್ಯಚಿತ್ರವಿದು. ಪ್ರಮುಖ ಅಂಶಗಳ ಬಗ್ಗೆಯಷ್ಟೇ ಇಲ್ಲಿ ಬರೆದಿದ್ದೇನೆ. ಇಡೀ ಸಾಕ್ಷ್ಯಚಿತ್ರದಲ್ಲಿ ಸತ್ಯದ ಮಾತನಾಡುವವರು ಮಹಿಳೆಯರು. ಗಂಡಸರ ದ್ವಂದ್ವಗಳನ್ನವರು ಈಚೆಗೆಳೆಯುತ್ತಾರೆ! ಭಯೋತ್ಪಾದನೆ, ಉಗ್ರತೆಗಳೆಲ್ಲವೂ ಮುಸ್ಲಿಮರದೇ ಕೃತ್ಯ, ಹಿಂದೂಗಳು ಎಂದಿಗೂ ಭಯೋತ್ಪಾದಕರಾಗಲು, ಉಗ್ರಗಾಮಿಗಳಾಗಲು ಸಾಧ್ಯವೇ ಇಲ್ಲ ಎಂದಿನ್ನೂ ನಂಬುವವರು ಈ ಸಾಕ್ಷ್ಯಚಿತ್ರವನ್ನು ನೋಡಲೇಬೇಕು. ಕೈಯಲ್ಲಿ ಬಂದೂಕು ಹಿಡಿದವ ಮಾತ್ರ ಭಯೋತ್ಪಾದಕನಲ್ಲ, ಮನಸ್ಸಿನ ತುಂಬ ನಂಜು ತುಂಬಿಕೊಂಡು ಅನ್ಯಧರ್ಮದವನ ಮನೆ ಸುಡಲೆಂದೇ ಜೇಬಿನಲ್ಲೊಂದು ಬೆಂಕಿಪಟ್ಟಣ ಇಟ್ಟುಕೊಂಡವನೂ ಭಯೋತ್ಪಾದಕನೇ ಎಂಬ ಸತ್ಯದ ಅರಿವಾಗುತ್ತದೆ.
ಟ್ರೇಲರ್ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ