ಡಿಸೆಂ 30, 2016

ಮೇಕಿಂಗ್ ಹಿಸ್ಟರಿ: ಸವಾಲು, ಭ್ರಾಂತಿ ಮತ್ತು ಬಿಕ್ಕಟ್ಟು

Saketh Rajan
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಬಂಡಾಯವನ್ನು ಹತ್ತಿಕ್ಕಲು ಕಾಸಾಮೈಯೂರ್ ಹತ್ತಲವು ಲೆಕ್ಕಾಚಾರಗಳನ್ನು ಮಾಡಿದ. ಮೊದಲಿಗೆ ಆತ ಸೈನ್ಯವನ್ನು ಪ್ರಮುಖ ಪಟ್ಟಣ ಮತ್ತು ಕೋಟೆಗಳನ್ನು ವಶಪಡಿಸಿಕೊಳ್ಳುವ ಸಲುವಾಗಿ ಕಳುಹಿಸಿದ. ಆದರೆ ಸೈನ್ಯ ಅಲ್ಲಿಂದ ತೆರಳುತ್ತಿದ್ದಂತೆಯೇ ಪಟ್ಟಣ ಹಾಗೂ ಕೋಟೆಗಳು ಮರಳಿ ಗೆರಿಲ್ಲಾಗಳ ವಶವಾಗಿಬಿಡುತ್ತಿದ್ದವು. ಆದ್ದರಿಂದ ಆತ ಇನ್ನೂ ಹೆಚ್ಚಿನ ಸೈನ್ಯಕ್ಕಾಗಿ ವಿನಂತಿಸಿಕೊಂಡ, ಬ್ರಿಟೀಷ್ ಸೈನ್ಯವನ್ನು ಕರೆಸಿಕೊಂಡ ಮತ್ತು ನಿರಂತರವಾಗಿ ಸೈನ್ಯದ ಬಲವನ್ನು ಹತ್ತಿರತ್ತಿರ ಹತ್ತು ಸಾವಿರದಷ್ಟು ಹೆಚ್ಚಿಸಿದ, ಇದರಲ್ಲಿ ಅರ್ಧದಷ್ಟು ಸೈನಿಕರನ್ನು ಮೈಸೂರೇ ಪೂರೈಸಿತ್ತು. 

ಡಿಸೆಂ 23, 2016

ಮೇಕಿಂಗ್ ಹಿಸ್ಟರಿ: ಶತ್ರು ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿದ್ದು

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಗೆರಿಲ್ಲಾ ಯುದ್ಧವು ಅಳವಡಿಸಿಕೊಂಡ ಮತ್ತೊಂದು ಕ್ರಮವೆಂದರೆ ಶತ್ರು ಪಾಳಯದ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿದ್ದು. 1833ರ ಮಾರ್ಚಿ ತಿಂಗಳಿನಲ್ಲಿ, ಬರ್ರಿನ ಸಿಪಾಯಿ ನದೀಮ್ ಖಾನ್, ಬ್ರಿಟೀಷ್ ಅಧಿಕಾರಿ ಮೇಜರ್ ಜೇಮ್ಸ್ ಮೇಲೆ ಬೆಂಕಿಪುರದಲ್ಲಿ (ಇವತ್ತಿನ ಭದ್ರಾವತಿ) ಅಂತಹುದೊಂದು ದಾಳಿಯನ್ನು ಆಯೋಜಿಸಿದ. ಮಾರ್ಚಿ 25ರ ರಾತ್ರಿ ಜೇಮ್ಸ್ ತನ್ನ ಟೆಂಟಿಗೆ ವಾಪಸ್ಸಾಗುವ ಸಮಯದಲ್ಲಿ, ಬಂಧನಕ್ಕೊಳಗಾಗುವ ಮುನ್ನ ನದೀಮ್ ಖಾನ್ ತನ್ನ ಖಡ್ಗದಿಂದ ಅವನ ತೋಳ ಮೇಲೆ, ತಲೆಯ ಮೇಲೆ ದಾಳಿ ನಡೆಸಿದ, ತದನಂತರ ನದೀಮ್ ಖಾನನನ್ನು ನೇಣಿಗೇರಿಸಲಾಯಿತು. (166) 

ಡಿಸೆಂ 16, 2016

ಮೇಕಿಂಗ್ ಹಿಸ್ಟರಿ: ಮಳೆ ಮತ್ತು ಭೂಪ್ರದೇಶದ ಲಾಭ ಪಡೆದುಕೊಂಡಿದ್ದು

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ನಗರ ವಿಭಾಗವು ಸಮೃದ್ಧ ಮಲೆನಾಡಿನಿಂದ ಸುತ್ತುವರಿದಿತ್ತು ಮತ್ತಿದನ್ನು ಗೆರಿಲ್ಲಾಗಳು ತುಂಬಾ ಚೆಂದಾಗಿ ಉಪಯೋಗಿಸಿಕೊಂಡರು. ದಟ್ಟ ಅರಣ್ಯ ಪ್ರದೇಶವನ್ನು ತಮ್ಮನುಕೂಲಕ್ಕೆ ಬಳಸಿಕೊಂಡಿದ್ದು ಹೋರಾಟದ ಅಸ್ತಿತ್ವ ಉಳಿಯುವಲ್ಲಿ ಬಹುಮುಖ್ಯ ಪಾತ್ರ ವಹಿಸಿತ್ತು. ಭೂಪ್ರದೇಶವು ಎಷ್ಟು ಉತ್ತೇಜನಕಾರಿಯಾಗಿತ್ತೆಂದರೆ ಹಲವು ಪಾಳೇಗಾರರು ಕೂಡ ತಮ್ಮ ಕೋಟೆಯನ್ನು ತೊರೆದು ಅರಣ್ಯದೊಳಗೆ ರಕ್ಷಣೆ ಪಡೆದುಕೊಂಡರು. 

ಸಶಸ್ತ್ರ ಹೋರಾಟದುದ್ದಕ್ಕೂ, ಗೆರಿಲ್ಲಾ ಯುದ್ಧದ ಪ್ರತಿಯೊಂದು ಪ್ರಮುಖ ತಂತ್ರ ರೂಪುಗೊಂಡಾಗಲೂ, ಅದನ್ನು ಅರಣ್ಯ ಕೊಟ್ಟ ಅನುಕೂಲತೆಗಳಾಧಾರದ ಮೇಲೆಯೇ ಮಾಡಲಾಗಿತ್ತು ಎನ್ನುವುದನ್ನು ಗಮನಿಸಬಹುದು.

ಡಿಸೆಂ 9, 2016

ಮೇಕಿಂಗ್ ಹಿಸ್ಟರಿ: ನಿರ್ಣಾಯಕ ಯುದ್ಧಗಳಿಂದ ದೂರವಿರುವುದು

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಗೆರಿಲ್ಲಾ ಯುದ್ಧದ ಒಂದು ಪ್ರಮುಖ ಲಕ್ಷಣವೆಂದರೆ ನಿರ್ಣಾಯಕ ಯುದ್ಧಗಳಿಂದ ತಪ್ಪಿಸಿಕೊಳ್ಳುವುದು. ಪಾಳೇಗಾರ ಮುಖಂಡತ್ವವು ಹೆಚ್ಚಿದ್ದ ಮತ್ತು ಕೋಟೆ ಯುದ್ಧದ ನೆನಹುಗಳು ಸಶಕ್ತವಾಗಿದ್ದ ಕೆಲವು ಸಂದರ್ಭಗಳನ್ನು ಹೊರತುಪಡಿಸಿದರೆ, ಬಂಡಾಯಗಾರರು ಸುದೀರ್ಘ ಯುದ್ಧದಿಂದ ಸಾಮಾನ್ಯವಾಗಿ ದೂರವಿರುತ್ತಿದ್ದರು ಮತ್ತು ಶತ್ರುಗಳು ಸುತ್ತುವರಿಯಬಹುದು ಎನ್ನಿಸಿದಾಗ ಶೀಘ್ರವಾಗಿ ಹಿಮ್ಮೆಟ್ಟುತ್ತಿದ್ದರು. ಯುದ್ಧದಲ್ಲಿ ತೊಡಗಿದ್ದ ಬ್ರಿಟೀಷ್ ಅಧಿಕಾರಿಗಳ ವರದಿಗಳಲ್ಲಿ ಬಂಡಾಯಗಾರರು “ಚದುರಿದ” ಬಗ್ಗೆ ಹೆಚ್ಚು ಪ್ರಸ್ತಾಪವಿದೆಯೇ ಹೊರತು ಬಂಡಾಯಗಾರರ ಸಾವಿನ ಬಗ್ಗೆಯಲ್ಲ.

ಡಿಸೆಂ 2, 2016

ಮೇಕಿಂಗ್ ಹಿಸ್ಟರಿ: ಯುದ್ಧದ ಸ್ವಭಾವ

saketh rajan
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಶತ್ರುವಿನ ಲೆಕ್ಕದಲ್ಲಿ ಸೈನಿಕ ಕಾರ್ಯಾಚರಣೆಯು ತುಂಬ ಅಸಹ್ಯಕರ ರೀತಿಯಲ್ಲಿ ಶುರುವಾಗಿತ್ತು, ಮೈಸೂರು ಪಡೆಗಳನ್ನು ಸುತ್ತುವರೆಯಲಾಗಿತ್ತು, ಹೊಡೆದು ಬಡಿದು ಕಿರುಕುಳ ಕೊಡಲಾಗಿತ್ತು ಮತ್ತು ಪ್ರಥಮ ಆಕ್ರಮಣದಲ್ಲಿಯೇ ದೂರಕ್ಕಟ್ಟಲಾಗಿತ್ತು. ಕೆಲವು ನೂರರಷ್ಟಿದ್ದ ಪಡೆಗಳು ಅಣ್ಣಪ್ಪನ ನೇತೃತ್ವದಲ್ಲಿ ತರೀಕೆರೆಯನ್ನು ವಶಪಡಿಸಿಕೊಂಡು ಕ್ಯಾಂಪು ಹಾಕಿದ್ದರು. ಗೆರಿಲ್ಲಾ ಪಡೆಗಳು, ಕೋಟೆಯನ್ನು ಸುತ್ತುವರಿದವು ಮತ್ತು ದಾಳಿಗಳನ್ನು ಪದೇ ಪದೇ ನಡೆಸಿದರು, ಹಲವಾರು ಸೈನಿಕರನ್ನು ಸಾಯಿಸಿದರು. “ಕೋಟೆಗಿದ್ದ ಎಲ್ಲಾ ರಸ್ತೆಗಳನ್ನೂ ಆಕ್ರಮಿಸಿಕೊಂಡಿದ್ದರಿಂದ ಕೋಟೆಯಲ್ಲಿದ್ದ ಮೈಸೂರು ಪಡೆಗಳಿಗೆ ಸಾಮಗ್ರಿಗಳು ಸಿಗುವುದು ಕಡಿಮೆಯಾಗಿಬಿಟ್ಟಿತು. ಟಪಾಲುಗಳಿಗೆ ತಡೆಯೊಡ್ಡಲಾಯಿತು ಮತ್ತು ಧಾನ್ಯ ಹಾಗೂ ಹಣದ ಪೂರೈಕೆಯನ್ನು ಕತ್ತರಿಸಿ ಹಾಕಲಾಯಿತು”. (129) 

ನವೆಂ 25, 2016

ಮೇಕಿಂಗ್ ಹಿಸ್ಟರಿ: ಊಳಿಗಮಾನ್ಯತೆಗೆ ಹೊಡೆತಗಳು ಬಿದ್ದಾಗ

ashok k r
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಊಳಿಗಮಾನ್ಯತೆಯನ್ನು ಎರಡು ರೀತಿಯಿಂದ ಗುರಿಯಾಗಿಸಲಾಗಿತ್ತು. ಒಂದನ್ನು ಸುಲಭವಾಗಿ ಗುರುತಿಸಬಹುದಿತ್ತು. ಊಳಿಗಮಾನ್ಯ ವರ್ಗಗಳ ಮೇಲೆ ಸತತವಾಗಿ ನಡೆದ ದಾಳಿಯದು. ಎರಡನೆಯ ರೀತಿ ಸೂಕ್ಷ್ಮವಾಗಿತ್ತು ಮತ್ತು ಅದು ಒಂದು ಸಂದರ್ಭದಲ್ಲಿ ತುಂಬಾ ಖಚಿತವಾಗಿ ತೋರಿಸಿಕೊಂಡಿತಾದರೂ ಅದರ ಬಗ್ಗೆ ನಮ್ಮಲ್ಲಿ ತುಂಬಾ ಸಾಕ್ಷ್ಯಗಳಿಲ್ಲ. ಈ ಎರಡನೆಯ ಅಂಶವನ್ನು ಮೊದಲು ಪರೀಕ್ಷಿಸೋಣ. 

ಸಂಗೊಳ್ಳಿ ರಾಯಣ್ಣ ಪರಿಚಯಿಸಿದ ರೀತಿಯಲ್ಲಿಯೇ, ಹೊಸಂತೆಯಲ್ಲಿ ನಡೆದ ರೈತ ರ್ಯಾಲಿಯಲ್ಲಿ, ಎಲ್ಲಾ ರೈತರು, ತಮ್ಮ ನಡುವಿನ ಜಾತಿ ಭೇದದ ನಡುವೆಯೂ ಸಹಭೋಜನ ನಡೆಸಿದ್ದರು. (120) ವ್ಯಾಪಕ ಜನ ಸಮೂಹ ಜೊತೆಯಾದಾಗ, ಊಳಿಗಮಾನ್ಯತೆ ವಿಧಿಸಿದ್ದ ಕಟ್ಟಳೆಗಳಲ್ಲಿ ಸಂಪೂರ್ಣ ವಿರುದ್ಧ ದಿಕ್ಕಿನ ಮೌಲ್ಯಗಳು ಮತ್ತು ಗ್ರಹಿಕೆಗಳೊಡನೆ ಜೊತೆಯಾಗುತ್ತಿತ್ತು. ಈ ಹೊಸ ಪರಂಪರೆಯು, ದಮನಿತರ ನಡುವಿನ ಒಗ್ಗಟ್ಟನ್ನು ದೃಡಗೊಳಿಸುತ್ತಿತ್ತು ಮತ್ತು ಮೇಲ್ಜಾತಿಯ ಊಳಿಗಮಾನ್ಯ ಮನಸ್ಥಿತಿಯ ವಿರುದ್ಧ ಬಹಿರಂಗವಾಗಿ ದೃಢವಾಗಿ ದಾಳಿ ನಡೆಸುವಂತೆ ಮಾಡುತ್ತಿತ್ತು. 

ನವೆಂ 18, 2016

ಮೇಕಿಂಗ್ ಹಿಸ್ಟರಿ: ಮೂರನೇ ಅಲೆ: ರೈತರ ಗೆರಿಲ್ಲಾ ಯುದ್ಧ

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ನಗರ ರೈತರ ಗೆರಿಲ್ಲಾ ಯುದ್ಧದ ಕೆಲವು ವಿಶಿಷ್ಟ ಲಕ್ಷಣಗಳನ್ನೀಗ ನೋಡೋಣ; ಆ ಯುದ್ಧದ ಸಾಧನೆಗಳು ಮತ್ತು ಅದು ಸೃಷ್ಟಿಸಿದ ಸಂಕಟಗಳು ಶತ್ರುಗಳನ್ನು ಮುಗ್ಗರಿಸುವಂತೆ ಮಾಡಿದ್ದನ್ನು ನೋಡೋಣ. ನಗರದ ಬಂಡಾಯದ ಮೂರನೇ ಹಂತದಲ್ಲಿ ಸಶಸ್ತ್ರ ಹೋರಾಟವು ಬಹುಮುಖ್ಯ ಜನಪ್ರಿಯ ಹೋರಾಟವಾಗಿದ್ದದ್ದು ಸ್ಪಷ್ಟವಾಗಿದೆ. 

i) ವರ್ಗ ಸಂಯೋಜನೆಯಲ್ಲಾದ ಬದಲಾವಣೆ 
ಹೋರಾಟದ ವಿವಿಧ ಹಂತಗಳಲ್ಲಿ, ಹೋರಾಟದ ಮಾದರಿಯೂ ಬದಲಾಗುತ್ತಿತ್ತು. ಜೊತೆ ಜೊತೆಗೇ, ಚಳುವಳಿಯಲ್ಲಿನ ವರ್ಗ ಸಂಯೋಜನೆ ಮತ್ತು ಪಾತ್ರಗಳಲ್ಲೂ ಬದಲಾವಣೆಯಾಗುತ್ತಿತ್ತು. ಈ ಬದಲಾವಣೆಗಳು ಹೋರಾಟದ ಹಂತಗಳ ಮಾರ್ಪಡುವಿಕೆಯನ್ನು ಗುರುತಿಸುತ್ತಿತ್ತು ಮತ್ತು ಅಳವಡಿಸಿಕೊಂಡ ಮಾದರಿಯನ್ನು ನಿರ್ಧರಿಸುತ್ತಿತ್ತು. ಬಂಡಾಯದ ಬಗೆಗಿನ ಯಾವುದೇ ಸಾಮಾನ್ಯ ವಿಶ್ಲೇಷಣೆಯನ್ನೂ ಈ ಅಂಶದ ಆಧಾರದ ಮೇಲೆ ನಿರ್ಧರಿಸುವುದು ಅವಶ್ಯಕ. 

ನವೆಂ 11, 2016

ಮೇಕಿಂಗ್ ಹಿಸ್ಟರಿ: ರಾಜನ ಉಗ್ರ ಪ್ರವಾಸ

saketh rajan
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
1830ರ ಡಿಸೆಂಬರ್ 14ರಿಂದು 1831ರ ಜನವರಿ 10ರವರೆಗೆ ಶತ್ರುಗಳು ರೈತರಲ್ಲಿ ಭೀತಿಯನ್ನುಟ್ಟಿಸಲು ಪ್ರಚಾರ ನಡೆಸಿದರು. ಈ ಭೀತಿಯ ಪ್ರಚಾರವನ್ನು ರಾಜನ ಪ್ರವಾಸದ ಭಾಗವಾಗಿ ನಡೆಸಲಾಯಿತು; ಮೈಸೂರು, ಹಾಸನ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳ ತೊಂದರೆಗೀಡಾದ ಪ್ರದೇಶಗಳಿಗೆ ರಾಜ ಪ್ರವಾಸ ನಡೆಸುತ್ತಿದ್ದ. 

ರಾಜನೊಂದಿಗೆ ಸಾವಿರ ಸೊವರ್ಗಳು, 200 ಮಂದಿ ಅಂಗರಕ್ಷಕರು ಮತ್ತು ಮೂರು ಬೆಟಾಲಿಯನ್ನಿನಷ್ಟು ಕಾಲಾಳು ಸೈನಿಕರಿದ್ದರು. ರೈತರನ್ನು ಸಂತೈಸುವುದು ಇದರ ಉದ್ದೇಶವಾಗಿತ್ತು, ಆದರೆ ವಾಸ್ತವದಲ್ಲಿ, ರೈತರು ಪ್ರತಿರೋಧಿಸುವ ಧೈರ್ಯವನ್ನೂ ಮಾಡಬಾರದೆಂಬ ನಿಟ್ಟಿನಲ್ಲಿ ನಡೆದ ಪ್ರಭುತ್ವದ ಶಕ್ತಿ ಪ್ರದರ್ಶನವಾಗಿತ್ತಿದು. 

ನವೆಂ 4, 2016

ಮೇಕಿಂಗ್ ಹಿಸ್ಟರಿ: ನಗರದ ರೈತಾಪಿ ಬಂಡಾಯ ಭಾಗ 3

ashok k r
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಈ. ರೈತರ ವರ್ಗ ಬೇಡಿಕೆಗಳು 
ಬುಡಿ ಬಸಪ್ಪ 1830ರಲ್ಲಿ ನಗರದ ಅನೇಕ ಭಾಗಗಳಲ್ಲಿ ಪ್ರವಾಸ ಮಾಡಿದ್ದ. ತನ್ನ ಪ್ರತಿನಿಧಿಯಾಗಿ ಮಾನಪ್ಪನನ್ನು ನೇಮಿಸಿದ್ದ. ಮಾನಪ್ಪನನ್ನು ಬುಡಿ ಬಸಪ್ಪನ “ಪ್ರಧಾನ ದಂಡನಾಯಕ”ನೆಂದೂ ಕರೆಯಲಾಗುತ್ತಿತ್ತು. (96) 

ಶಿವಮೊಗ್ಗ ಜಿಲ್ಲೆಯ ಆನಂದಪುರ ಸಮೀಪದ ಹೊಸಂತೆ ಗ್ರಾಮದಲ್ಲಿ 1830ರ ಆಗಷ್ಟ್ 23ರಂದು ರ್ಯಾಲಿಗೆ ಕರೆ ನೀಡಲಾಗಿತ್ತು. ಸಾವಿರಾರು ರೈತರು ಅದರಲ್ಲಿ ಭಾಗವಹಿಸಿದರು. ನೂರಾರು ಎತ್ತಿನಗಾಡಿಗಳು ಹೊಸಂತೆಯ ಮೈದಾನವನ್ನು ತುಂಬಿದವು ಎಂದು ರಾಮಭಟ್ಟ ಬರೆಯುತ್ತಾರೆ. ರೈತರು ಧಾರವಾಡ ಮತ್ತು ಬಳ್ಳಾರಿ ಜಿಲ್ಲೆಗಳಿಂದಲೂ ಬಂದಿದ್ದರು. 

ಅಕ್ಟೋ 28, 2016

ಮೇಕಿಂಗ್ ಹಿಸ್ಟರಿ: ನಗರದ ರೈತಾಪಿ ಬಂಡಾಯ ಭಾಗ 2

Saketh rajan
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಇ. ಮೊದಲ ಅಲೆ: ಕೂಟವೆಂಬ ಸಾಮೂಹಿಕ ಎಚ್ಚರಿಕೆ 
ಹೋರಾಟವು ಮೂರು ಅಲೆಗಳಾಗಿ ನಡೆಯಿತು. ಮೊದಲನೆಯದು ಸಾಮೂಹಿಕ ಚಳುವಳಿ; ಎರಡನೆಯದು ಸಾಮೂಹಿಕ ಕಾರ್ಯ, ಮತ್ತು; ಮೂರನೆಯದರಲ್ಲಿ ಸಶಸ್ತ್ರ ಹೋರಾಟ ಪ್ರಮುಖವಾಗಿತ್ತು. 

ಸಾಮೂಹಿಕ ಚಳುವಳಿ ಮತ್ತು ಹೋರಾಟಗಳು 1830ರ ಮೊದಲ ಭಾಗದಲ್ಲೇ ಪ್ರಾರಂಭವಾಯಿತು ಮತ್ತು ಹಲವಾರು ರೂಪಗಳನ್ನು ಪಡೆಯಿತು. ಇವೆಲ್ಲವುಗಳಲ್ಲಿ ಪ್ರಮುಖವಾಗಿದ್ದದ್ದು ಕೂಟ ಅಥವಾ ಸರಳವಾಗಿ ಹೇಳಬೇಕೆಂದರೆ ಜೊತೆ ಸೇರುವಿಕೆ. ಕೂಟದಲ್ಲಿ ಜೊತೆಯಾದ ಕಾರಣದಿಂದ ಸಾಮೂಹಿಕ ಎಚ್ಚರ ಹೊತ್ತಿಕೊಂಡಿತು, ಇದು ಜನಸಮೂಹವನ್ನು ಸಂಘಟತಿರಾಗಿಸುವುದಕ್ಕಿದ್ದ ವಿಶಾಲ ವೇದಿಕೆ. ನಗರದ ಕ್ರಾಂತಿಯ ಸಮಯದಲ್ಲಿ ಕೂಟವು ಸ್ವಾಭಾವಿಕವಾಗಿ ರೂಪುಗೊಂಡಿತು ಎಂದು ತೋರುತ್ತದೆಯಾದರೂ, ಶ್ಯಾಮ ಭಟ್ಟರು ಕರಾವಳಿಯಲ್ಲಿ ನಡೆಸಿರುವ ಅಧ್ಯಯನವು ಕೂಟ ರಚನೆಯು ಕರ್ನಾಟಕದಲ್ಲಿ ಪುರಾತನವಾಗಿದ್ದ ಒಂದು ಪದ್ಧತಿ ಮತ್ತು ಸಾಮಾನ್ಯ ವಿಚಾರವೆಂದು ತಿಳಿದುಬರುತ್ತದೆ. ಹೋರಾಟಗಳು ಸ್ವಾಭಾವಿಕವಾಗಿದ್ದಿರಬಹುದು, ಕೂಟಗಳ ರಚನೆ ತುಂಬ ಅಭಿವೃದ್ಧಿಗೊಂಡ ಪದ್ಧತಿಯಾಗಿತ್ತು. ಇದೇನನ್ನು ತೋರಿಸುತ್ತದೆಯೆಂದರೆ, ರೈತಾಪಿ ವರ್ಗವು ತನ್ನ ವರ್ಗ ಹೋರಾಟದ ದೀರ್ಘೇತಿಹಾಸದಲ್ಲಿ ಮತ್ತು ಬಂಡಾಯಗಳಲ್ಲಿ, ಊಳಿಗಮಾನ್ಯತೆ ವಿರೋಧಿ ಹೋರಾಟದ ಇತಿಹಾಸದ ಭಾಗವಾಗಿ, ಅಳವಡಿಸಿಕೊಂಡಿದ್ದ ಚಳುವಳಿಯ ರೂಪಗಳು ಈ ಹೊಸ ಕಾಲಘಟ್ಟದಲ್ಲೂ ಮುಂದುವರೆಯಿತು ಮತ್ತು ಅದೇ ಸಮಯದಲ್ಲಿ ವಸಾಹತುಶಾಹಿಯನ್ನು ಪ್ರಶ್ನಿಸಲಾರಂಭಿಸಿತು. 

ಅಕ್ಟೋ 21, 2016

ಮೇಕಿಂಗ್ ಹಿಸ್ಟರಿ: ನಗರದ ರೈತಾಪಿ ಬಂಡಾಯ ಭಾಗ1

Making history
ಸಾಕೇತ್ ರಾಜನ್ 

ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್

ಅ. ವ್ಯಾಪಕ ಬಂಡಾಯ
1830 – 33ರ ಸಮಯದಲ್ಲಿ ಕರ್ನಾಟಕದ ಹಲವು ಭಾಗಗಳಲ್ಲಿ ರೈತಾಪಿ – ಜನರ ವ್ಯಾಪಕ ಬಂಡಾಯವೆದ್ದಿತು. ಇದು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡಿದ್ದ ನಗರ ಫೌಜುದಾರಿಯಲ್ಲಿ ತೀರ್ವವಾಗಿದ್ದ ಕಾರಣದಿಂದಾಗಿ ನಗರ ರೈತಾಪಿ ಬಂಡಾಯ ಎಂದು ಖ್ಯಾತವಾಯಿತು. ಇದೇ ಸಮಯದಲ್ಲಿ ಇತರೆ ಜಿಲ್ಲೆಗಳಿಗೂ ಸಶಸ್ತ್ರ ಕ್ರಾಂತಿ ಹಬ್ಬಿತ್ತು. ಉತ್ತರ ಕನ್ನಡ, ಚಿತ್ರದುರ್ಗ, ತುಮಕೂರು, ಹಾಸನ, ಮೈಸೂರು, ಮಂಡ್ಯ ಮತ್ತು ಬೆಂಗಳೂರಿನಲ್ಲಿ ಸಶಸ್ತ್ರ ಕ್ರಾಂತಿ ನಡೆದಿತ್ತು. ಹಿಂಸಾತ್ಮಕ ರೂಪವನ್ನಿನ್ನೂ ಪಡೆಯದ ಜನ ಸಮೂಹದ ಹೋರಾಟಗಳು ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ನಡೆದಿದ್ದವು. ರಾಯಚೂರು ಮತ್ತು ಧಾರವಾಡ ಜಿಲ್ಲೆಗಳು ವಿವಿಧ ರೂಪಗಳಲ್ಲಿ ಹೋರಾಟಕ್ಕೆ ತಮ್ಮ ಬೆಂಬಲವನ್ನು ನೀಡಿದವು. ಧಾರವಾಡದ ಉತ್ತರ ಭಾಗದಲ್ಲಿ ಸಂಗೊಳ್ಳಿ ರಾಯಣ್ಣನ ನೇತೃತ್ವದಲ್ಲಿ ಬಂಡಾಯ ನಡೆದಿದ್ದರೆ, ದಕ್ಷಿಣದ ಭಾಗಗಳು ಆ ಬಂಡಾಯಕ್ಕೆ ಕೈಲಾದ ಸಹಾಯವನ್ನು ಮಾಡಿದವು. ಹಾಗಾಗಿ ನಗರದ ರೈತಾಪಿ ಬಂಡಾಯ ಬಹುಶಃ ಕರ್ನಾಟಕದಲ್ಲಷ್ಟೇ ಅಲ್ಲದೆ ಇಡೀ ಭಾರತದಲ್ಲಿ ಬ್ರಿಟೀಷ್ ವಸಾಹತುಶಾಹಿಯ ಆಳ್ವಿಕೆಯ ಮೊದಲ ದಶಕಗಳಲ್ಲಿ ನಡೆದ ವ್ಯಾಪಕ ಊಳಿಗಮಾನ್ಯ ವಿರೋಧಿ ಮತ್ತು ವಸಾಹತು ವಿರೋಧಿ ಹೋರಾಟವಾಗಿತ್ತು.

ಅಕ್ಟೋ 14, 2016

ಮೇಕಿಂಗ್ ಹಿಸ್ಟರಿ: ಸಂಗೊಳ್ಳಿ ರಾಯಣ್ಣನ ಗೆರಿಲ್ಲಾ ಯುದ್ಧ - 2

ಮೇಕಿಂಗ್ ಹಿಸ್ಟರಿ
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಇ. ಭೂಭಾಗದ ಸರಿಯಾದ ಉಪಯೋಗ
ಬೆಳಗಾವಿ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಭಾಗಗಳನ್ನೊಳಗೊಂಡಿದ್ದ ಕಿತ್ತೂರು ಸಂಸ್ಥಾನದ ಪಶ್ಚಿಮ ಭಾಗದಲ್ಲಿ ಮಲೆನಾಡಿನ ಅರಣ್ಯ ಪ್ರದೇಶವಿತ್ತು. ಇನ್ನಿತರ ದಿಕ್ಕುಗಳು ಪಕ್ಕದ ದೇಶಗಳಿಗೆ ತೆರೆದುಕೊಂಡಿತ್ತು. ಚೆನ್ನಮ್ಮಳ ಹೋರಾಟ ಪ್ರಾರಂಭವಾದಾಗಲೂ ಬ್ರಿಟೀಷರಿಗೆ ಕಿತ್ತೂರಿನ ಮಲೆನಾಡಿನಲ್ಲಿ ಸೋಲುಂಟಾಗಬಹುದೆಂಬ ಭಯವಿತ್ತು. ಹಾಗಾಗ್ಯೂ, ರಾಣಿ ಮತ್ತವಳ ಮಂತ್ರಿಗಳ ಊಳಿಗಮಾನ್ಯ ಮನಸ್ಥಿತಿ ಭೂಭಾಗದ ಸರಿಯಾದ ಉಪಯೋಗವನ್ನು ತಡೆದುಬಿಟ್ಟಿತು. ಆದರೂ, ಬ್ರಿಟೀಷರು ಈ ಪ್ರದೇಶದ ಬಗ್ಗೆ ಪದೇ ಪದೇ ತೋರಿದ ಆತಂಕ 1829 – 30ರಲ್ಲಿ ಸತ್ಯವಾಯಿತು. ಕಿತ್ತೂರಿನ ಬಂಡಾಯದ ಬಗ್ಗೆ ಬರೆದ ಮೊದಲ ಟಿಪ್ಪಣಿಯಲ್ಲೇ ಎಲ್ಫಿನ್ ಸ್ಟೋನ್: “……ಕಿತ್ತೂರು ಜಾಗೀರುದಾರರ ಭೂಮಿಯ ಮಧ್ಯದಲ್ಲಿದೆ, ಕೊಲ್ಲಾಪುರದಿಂದಾಗಲೀ ಅಥವಾ ವಾರೀಯಿಂದಾಗಲೀ ಹೆಚ್ಚು ದೂರವೇನಿಲ್ಲ, ಮತ್ತು ನಮ್ಮ ಮತ್ತು ಪೋರ್ಚುಗೀಸರ ಪ್ರಾಂತ್ಯದ ಮಧ್ಯೆ ಇರುವ ಕಾಡು ಗುಡ್ಡಗಳ ಸಮೀಪದಲ್ಲಿದೆ. ಈ ಕಾರಣಗಳಿಂದ, ಅರಣ್ಯ ಯುದ್ಧವಿಲ್ಲಿ ದೀರ್ಘಕಾಲೀನವಾಗುವ ಪರಿಸ್ಥಿತಿಯುಂಟಾಗಬಹುದು ಮತ್ತು ಆ ಯುದ್ಧ ಹೆಚ್ಚೆಚ್ಚು ಕಡೆಗೆ ಹರಡುತ್ತದೆ, ಅತಿ ಶೀಘ್ರವಾಗಿ ನಿಯಂತ್ರಿಸದಿದ್ದರೆ”. (69)

ಅಕ್ಟೋ 7, 2016

ಮೇಕಿಂಗ್ ಹಿಸ್ಟರಿ: ಸಂಗೊಳ್ಳಿ ರಾಯಣ್ಣನ ಗೆರಿಲ್ಲಾ ಯುದ್ಧ - 1

saketh rajan
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ರೈತಾಪಿ ಜನರು ಬಂದೂಕು ಹಿಡಿದರು 
ಮೂರನೇ ರೀತಿಯ ಸಶಸ್ತ್ರ ಹೋರಾಟದಲ್ಲಿ ರೈತ ಕಾರ್ಮಿಕರು ನೇತೃತ್ವ ವಹಿಸಿದರು. ಹತ್ತೊಂಭತ್ತನೇ ಶತಮಾನದ ಮೊದಲರ್ಧದಲ್ಲಿ ಕರ್ನಾಟಕದ ವಿಮೋಚನಾ ಹೋರಾಟದಲ್ಲಿ ಇದು ಅತ್ಯಂತ ಮಹತ್ವದ ವಿಚಾರ. ಕರ್ನಾಟಕದ ರೈತಾಪಿ ಸಮೂಹ ವಸಾಹತು ವಿರೋಧಿ ಹೋರಾಟದ ಹಾದಿಯಲ್ಲಿ ದೀವಿಗೆ ಹಿಡಿದು ಬೆಳಕು ಚೆಲ್ಲಿದರು. ನಾಯಕರು ಹುಟ್ಟಿದರು. ಸಂಗೊಳ್ಳಿ ರಾಯಣ್ಣ ಇವರೆಲ್ಲರಲ್ಲಿ ಮುಂಚೂಣಿಯಲ್ಲಿದ್ದರು. ಅವರ ಹೋರಾಟ ವಸಾಹತುಶಾಹಿ ಮತ್ತವರ ಊಳಿಗಮಾನ್ಯ ಮಿತ್ರರ ಮೇಲೂ ದಾಳಿ ನಡೆಸಿತು ಮತ್ತು ರೈತ – ಕಾರ್ಮಿಕ ಸಮೂಹದಾಧಾರದಲ್ಲಿ ಗೆರಿಲ್ಲಾ ಯುದ್ಧ ನಡೆಸಿ ವಿಮೋಚನಾ ಹಾದಿಯನ್ನು ರೂಪಿಸಿತು. ನಾವೀಗ ಇವುಗಳಲ್ಲಿ ಮೂರು ಪ್ರಮುಖ ಹೋರಾಟಗಳನ್ನು ಗಮನಿಸೋಣ, ಈ ಮೂರೂ ನಿರಂತರ ಚಳುವಳಿಯಾಗಿತ್ತು, ಒಂದಾದ ನಂತರ ಮತ್ತೊಂದು ನಡೆದಿತ್ತು ಮತ್ತು 1829 ಹಾಗು 1837ರ ಅವಧಿಯ ಮಧ್ಯೆ ನಡೆದಿತ್ತು – ಸಂಗೊಳ್ಳಿ ರಾಯಣ್ಣನ ಗೆರಿಲ್ಲಾ ಯುದ್ಧ, ನಗರದ ಸಶಸ್ತ್ರ ಬಂಡಾಯ ಹಾಗೂ ಕಲ್ಯಾಣಸ್ವಾಮಿ ಮುನ್ನಡೆಸಿದ ಸಶಸ್ತ್ರ ಹೋರಾಟ. ಕರ್ನಾಟಕದ ಜನಸಮೂಹದ ಶ್ರೀಮಂತ ಅನುಭವದಿಂದ ನಾವು ಕಲಿಯೋಣ. ರಕ್ತ ಮತ್ತು ಕಣ್ಣೀರು, ಅತ್ಯಂತ ಅಮೂಲ್ಯವಾದ – ಜೀವದ – ತ್ಯಾಗವೇ ಅಲ್ಲವೇ ಇತಿಹಾಸವನ್ನು ಮುಂದಿನ ಪೀಳಿಗೆಗೆ ಸಮೃದ್ಧಗೊಳಿಸುವುದು? 

ಸೆಪ್ಟೆಂ 30, 2016

ಮೇಕಿಂಗ್ ಹಿಸ್ಟರಿ: ಬೆಳಗುತ್ತಿ-ಬಾದಾಮಿ-ನಿಪ್ಪಾಣಿ-ಚಿತ್ರದುರ್ಗ-ಬೀದರ್

saketh rajan
ಸಾಕೇತ್ ರಾಜನ್ 

ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
26/09/2016
7. ಬೆಳಗುತ್ತಿ (1835)


ಬೆಳಗುತ್ತಿಯನ್ನು 1804ರಲ್ಲಿ ಮೂರನೇ ಕೃಷ್ಣರಾಜ ಒಡೆಯರ್, ವೆಂಕಟಪ್ಪ ನಾಯಕನಿಗೆ ಇನಾಮು ಹಳ್ಳಿಯಾಗಿ ನೀಡಿದ್ದ. ಜೊತೆಗೆ, ವೆಂಕಟ್ಟಪ್ಪ ಮಗ ತಿಮ್ಮಾ ನಾಯಕನ ದಿನನಿತ್ಯದ ಹಾಲು ಬೆಣ್ಣೆಗಾಗಿ, ರಾಜ ವಾರ್ಷಿಕ 220 ವರಹಗಳನ್ನು ಕೊಡುಗೆಯಾಗಿ ನೀಡುತ್ತಿದ್ದ. ಆದರಿದನ್ನು ನಂತರದಲ್ಲಿ ಬ್ರಿಟೀಷರು ನಿಲ್ಲಿಸಿಬಿಟ್ಟರು. 1830ರಲ್ಲಿ, ತಿಮ್ಮಪ್ಪ ನಾಯಕ ತನ್ನ ಬಡತನದ ಬಗ್ಗೆ ಬರೆದುಕೊಂಡು ಮುಂಚಿದ್ದ ಜಾಗೀರನ್ನು ಮತ್ತೆ ಸ್ಥಾಪಿಸಬೇಕೆಂದು ಕೇಳಿಕೊಂಡ. ಆದರೆ ಬ್ರಿಟೀಷರು ಇದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ. 1830ರಲ್ಲಿ, ನಗರದ ಬಂಡಾಯವನ್ನು ಮುನ್ನಡೆಸಿದ್ದ ಬೂಡಿ ಬಸಪ್ಪ, ಬೆಳಗುತ್ತಿಗೆ ಭೇಟಿ ನೀಡಿ, ತನ್ನ ಗೆಲುವಿನೊಂದಿಗೆ ನಿನ್ನ ಜಾಗೀರು ನಿನಗೆ ಸಿಗುತ್ತದೆ ಎಂದು ತಿಮ್ಮಪ್ಪನಿಗೆ ಭರವಸೆ ಕೊಟ್ಟಿದ್ದ. ತಿಮ್ಮಪ್ಪ ನಾಯಕ ನಗರದ ಬಂಡಾಯಕ್ಕೆ ತನ್ನ ಬೆಂಬಲ ಸೂಚಿಸಿದ. (48)

ಸೆಪ್ಟೆಂ 23, 2016

ಮೇಕಿಂಗ್ ಹಿಸ್ಟರಿ: ಕಿತ್ತೂರು (1824)

Making history by saketh rajan
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
23/09/2016
ಕಿತ್ತೂರನ್ನು ಬ್ರಿಟೀಷ್ ವಸಾಹತುಶಾಹಿಯ ಕೈಗೊಂಬೆ ರಾಜ್ಯವನ್ನಾಗಿ ಉಳಿಸಿಕೊಳ್ಳುವ ಚೆನ್ನಮ್ಮಳ ಹೋರಾಟ, ವಿವಿಧ ಊಳಿಗಮಾನ್ಯ ದೊರೆಗಳ ಪ್ರಕರಣಗಳಲ್ಲಾದಂತೆಯೇ, ಬ್ರಿಟೀಷರೊಂದಿಗೆ ಸಶಸ್ತ್ರ ಕದನಕ್ಕೆ ದಾರಿ ಮಾಡಿತು. 

ನಾವೀಗಾಗಲೇ ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದ ಕೊನೆಯ ಅಧ್ಯಾಯದಲ್ಲಿ ಗಮನಿಸಿದಂತೆ, ಕಿತ್ತೂರಿನ ದೇಸಾಯಿ, ಮಲ್ಲಾಸರ್ಜಾರ ಮಗ ಶಿವಲಿಂಗ ರುದ್ರ ಸರ್ಜಾ ಬ್ರಿಟೀಷರ ಸಲುವಾಗಿ ಪೇಶ್ವೆಗಳನ್ನು ತೊರೆದುಬಿಟ್ಟ, 1818ರಲ್ಲಿ. ಮರಾಠ ಪ್ರಾಂತ್ಯವನ್ನು ವಶಪಡಿಸಿಕೊಳ್ಳುವ ಹೋರಾಟದಲ್ಲಿ ಅವನು ಬ್ರಿಟೀಷರ ಕೈ ಜೋಡಿಸಿದ. (36) ಈ ಸೇವೆಯನ್ನು ಪರಿಗಣಿಸುತ್ತಾ, ಮುನ್ನೂರ ಐವತ್ತು ಹಳ್ಳಿಗಳಷ್ಟಿದ್ದ ಅವನ ಪ್ರಾಂತ್ಯವನ್ನು ಉಳಿಸಿಕೊಳ್ಳುವ ಅವಧಿಯನ್ನು ಬ್ರಿಟೀಷರು ವಿಸ್ತರಿಸಿದರು, ಮೈಸೂರಿನ ನಂತರ ಕರ್ನಾಟಕದಲ್ಲಿದ್ದ ಅತಿ ದೊಡ್ಡ ಪ್ರಾಂತ್ಯವಿದು. ಮಲ್ಲಸರ್ಜವನ್ನು ಟಿಪ್ಪು ಸುಲ್ತಾನ್ 1785ರಲ್ಲಿ ಸೋಲಿಸಿ, ವಶಪಡಿಸಿಕೊಂಡು ಬಂಧನದಲ್ಲಿಟ್ಟಿದ್ದ. ಅವನ ಸಂಸ್ಥಾನ ಕೊನೆಗೊಂಡಿತ್ತು. ಕಿತ್ತೂರು ದೇಶಗತಿಗಳಿಗೆ, ಇತಿಹಾಸ ಒಂದು ಪೂರ್ಣ ಸುತ್ತು ಹೊಡೆದಿತ್ತು. ಆದರೆ 1787ರಲ್ಲಿ, ಮರಾಠರ ಸಂಚು ಟಿಪ್ಪು ಸುಲ್ತಾನನನ್ನು ಸೋಲಿಸಿದಾಗ, ಮಲ್ಲಸರ್ಜ ಮತ್ತೆ ಸ್ಥಾಪಿತನಾಗಿದ್ದ. ವಿಜಯಿಗಳು ಗಡಿಯಾರದ ಮುಳ್ಳನ್ನು ಮತ್ತೆ ತಿರುಗಿಸಿದ್ದರು ಮತ್ತು ಮಲ್ಲಸರ್ಜನಿಗೆ ಅವನ ಅಧಿಕಾರ ಕ್ಷೇತ್ರವಿದ್ದ ಹನ್ನೊಂದು ಹಳ್ಳಿಗಳನ್ನು ಕಾಣ್ಕೆಯಾಗಿ ನೀಡಿದ್ದರು. (37) 1800ರಲ್ಲಿ, ದೊಂಡಿಯಾ ವಾಗ್ ಕರ್ನಾಟಕದ ಉತ್ತರ ಭಾಗಗಳಲ್ಲಿ ಸಂಚರಿಸುತ್ತಿದ್ದಾಗ, ಕಿತ್ತೂರು ದೇಸಾಯಿಗಳು ದೊಂಡಿಯಾನನ್ನು ಹುಡುಕುತ್ತಿದ್ದ ಬ್ರಿಟೀಷರಿಗೆ ನೂರು ಕುದುರೆಸವಾರರನ್ನು ಮತ್ತು ನೂರು ಕಾಲಾಳು ಸೈನಿಕರನ್ನು ಕೊಟ್ಟರು. ಸಂಗೊಳ್ಳಿಯ ಕೋಟೆಯನ್ನೂ ವಸಾಹತುಶಾಹಿಗಳು ಸೇವೆಗೆ ಮೀಸಲಿಟ್ಟರು. (38) ಮನ್ರೋ ಬಹಿರಂಗಪಡಿಸಿದಂತೆ, ಬ್ರಿಟೀಷರು ಕಳೆದೆರಡು ದಶಕಗಳಿಂದ ದೇಸಾಯಿಗಳನ್ನು ಪೋಷಿಸಿ ಬೆಳೆಸಿದ್ದರು. ಬ್ರಿಟೀಷರ ಉದಾರತನ ಅಂತಿಮವಾಗಿ ಶಿವಲಿಂಗ ರುದ್ರ ಸರ್ಜನನ್ನು ಅವರೆಡೆಗೆ ಬರುವಂತೆ ಮಾಡಿತು ಮತ್ತು ಅವನು ತನ್ನ ಕಡೆಯಿಂದ ಮುನ್ನೂರೈವತ್ತು ಹಳ್ಳಿಗಳನ್ನು ಪಡೆದುಕೊಂಡು, ಪೇಶ್ವೆಗಳ ಸಾಮ್ರಾಜ್ಯದ ದಕ್ಷಿಣಕ್ಕಿರುವ ಪ್ರಮುಖ ಆಸರೆಯಾಗಿದ್ದ.

ಸೆಪ್ಟೆಂ 16, 2016

ಮೇಕಿಂಗ್ ಹಿಸ್ಟರಿ: ಐಜೂರ್ - ಕೊಪ್ಪಳ - ಬೀದರ್ - ಸಿಂಧಗಿ.

Making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
16/09/2016
ಶ್ರೀರಂಗಪಟ್ಟಣದಿಂದ ಓಡಿಹೋದ ಮೇಲೆ ದೊಂಡಿಯಾ ಮೊದಲಿಗೆ ತಲುಪಿದ್ದು ಬ್ರಿಟೀಷರ ವಿರುದ್ಧ ಹೋರಾಡಲು ತಯಾರಿ ಮಾಡಿಕೊಳ್ಳುತ್ತಿದ್ದ ಪಾಳೇಗಾರ ವೆಂಕಟಾದ್ರಿ ನಾಯಕರ ಪ್ರಾಂತ್ಯವಾದ ಐಜೂರಿಗೆ. 

ಹಾಸನದ ಸಕಲೇಶಪುರ ತಾಲ್ಲೂಕಿನ ಐಜೂರಿನ ಪಾಳೇಗಾರರು ಇಕ್ಕೇರಿಯ ನಾಯಕರ ಸಾಮಂತರು. ಕೊಡವರನ್ನು ನಿಗ್ರಹಿಸಲು ಪ್ರಯತ್ನಿಸಿ ಕಲಿತ ಪಾಠಗಳಿಂದ, ಟಿಪ್ಪು ಐಜೂರಿನ ಪಾಳೇಗಾರ ಕೃಷ್ಣಪ್ಪ ನಾಯಕನೊಡನೆ ಗೆಳೆತನ ಬೆಳೆಸಿಕೊಂಡು; ಐಜೂರಿನ ಪಾಳೇಗಾರ ಕೃಷ್ಣಪ್ಪ ನಾಯಕ ಬ್ರಿಟೀಷರಿಗೆ ಬೆಂಬಲ ಕೊಡುತ್ತಿದ್ದರೂ ಅವನೊಡನೆ ಗೆಳೆತನ ಬೆಳೆಸಿಕೊಂಡ ಟಿಪ್ಪು, ಅವನಿಗೆ ತನ್ನ ಪ್ರಾಂತ್ಯವನ್ನು ಉಳಿಸಿಕೊಳ್ಳಲು ಅನುಮತಿ ನೀಡಿದ, ವಾರ್ಷಿಕ ಕಪ್ಪ ಕಾಣಿಕೆಯನ್ನು ಶ್ರೀರಂಗಪಟ್ಟಣಕ್ಕೆ ನೀಡಬೇಕು ಎಂಬ ಶರತ್ತಿನೊಂದಿಗೆ. ನಂತರ, ಬೆಂಗಳೂರು ಮಂಗಳೂರು ರಸ್ತೆಯಲ್ಲಿರುವ ಬಲ್ಲಂ ಪ್ರದೇಶದಲ್ಲಿ ಮಂಜರಾಬಾದ್ ಕೋಟೆಯನ್ನು ಕಟ್ಟಿದ, ಕರಾವಳಿಯೊಡನೆ ತೊಂದರೆಯಿಲ್ಲದ ವಾಣಿಜ್ಯಕ ವ್ಯವಹಾರವನ್ನು ಸಾಧಿಸಿದ.

ಸೆಪ್ಟೆಂ 9, 2016

ಮೇಕಿಂಗ್ ಹಿಸ್ಟರಿ: ಊಳಿಗಮಾನ್ಯ ದೊರೆಗಳು ಮುನ್ನಡೆಸಿದ ಸಶಸ್ತ್ರ ಹೋರಾಟ

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
09/09/2016
ಬ್ರಿಟೀಷರಾಳ್ವಿಕೆಯಲ್ಲಿ ಊಳಿಗಮಾನ್ಯ ದೊರೆಗಳು ತಮ್ಮ ಹಳೆಯ ಸೌಕರ್ಯಗಳನ್ನೆಲ್ಲ ಕಳೆದುಕೊಂಡರು. ಉತ್ತರಾಧಿಕಾರತ್ವದ ಬಗೆಗಿನ ಬ್ರಿಟೀಷರ ನೀತಿಗಳಿಂದಾಗಿ ಕೆಲವು ಕುಟುಂಬಗಳು ನಿರ್ವೀರ್ಯರಾಗುವ ಹಂತಕ್ಕೆ ಬಂದು ನಿಂತಿದ್ದವು. ತಮ್ಮ ಕಳೆದುಹೋದ ಘನತೆಯನ್ನು ಮರಳಿ ಗಳಿಸುವುದಕ್ಕಾಗಿ ಅವರು ಬ್ರಿಟೀಷರನ್ನು ಕಿತ್ತೆಸೆಯುವ ನಿರ್ಧಾರ ಮಾಡಿದ್ದು, 1857ರವರೆಗೆ ನಡೆದ ಸಶಸ್ತ್ರ ಹೋರಾಟಗಳನ್ನು ಅವರು ಮುನ್ನಡೆಸಿದರು. ನಾವೀಗ ಈ ರೀತಿಯ ಪ್ರತಿಯೊಂದು ಹೋರಾಟವನ್ನೂ ಗಮನಿಸೋಣ, ತದನಂತರ ಕರ್ನಾಟಕ ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ನಡೆಸಿದ ಯುದ್ಧಗಳಲ್ಲಿನ ಅವರ ತ್ಯಾಗದ ಅನುಭವಗಳನ್ನು ಒಟ್ಟುಗೂಡಿಸೋಣ.

ಸೆಪ್ಟೆಂ 2, 2016

ಮೇಕಿಂಗ್ ಹಿಸ್ಟರಿ: ವೆಲ್ಲೂರಿನ ಬಂಡಾಯ (1806)

ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
02/09/2016
ಮುಂದಿನ ಭಾಗದಲ್ಲಿ 1800-1801ರ ಸಮಯದಲ್ಲಿ ಊಳಿಗಮಾನ್ಯ ದೊರೆಗಳು, ಈ ಮುಂಚೆ ಮೈಸೂರು ಸೈನ್ಯದಲ್ಲಿದ್ದ, ಪಾಳೇಗಾರರೊಡನೆ ಸೇರಿ ಬ್ರಿಟೀಷರೊಡನೆ ದಕ್ಷಿಣ ಕನ್ನಡದಲ್ಲಿ ಹೋರಾಡಿದ್ದ ಸುಬ್ಬಾ ರಾವ್ ಮತ್ತು ಮಹತಾಬ್ ಖಾನನ ನೇತೃತ್ವದಲ್ಲಿ ನಡೆಸಿದ ಸಶಸ್ತ್ರ ಪ್ರತಿರೋಧದ ಬಗ್ಗೆ ಚರ್ಚಿಸೋಣ. 

ಕಾರ್ಲ್ ಮಾರ್ಕ್ಸ್ ನ್ಯೂ ಯಾರ್ಕ್ ಡೈಲಿ ಟ್ರಿಬ್ಯೂನಿಗೆ 1857ರ ಭಾರತದ ಬಂಡಾಯದ ಬಗ್ಗೆ ಬರೆದ ಲೇಖನ, ಕೆಲವು ಪ್ರಶ್ನೆಗಳ ತೀಕ್ಷ್ಣ ವಿಶ್ಲೇಷಣೆ ನಡೆಸಿರುವುದು ವೆಲ್ಲೂರಿನ ಬಂಡಾಯವನ್ನು ಅರ್ಥೈಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ಇಪ್ಪತ್ತು ಕೋಟಿ ಜನರನ್ನು ಎರಡು ಲಕ್ಷ ಜನರ ಸೈನ್ಯವೊಂದು ಆಳುತ್ತಿರುವ ದೇಶ ಭಾರತ ಎಂದು ಮಾರ್ಕ್ಸ್ ಬರೆಯುತ್ತಾರೆ. ಮತ್ತಿದರಲ್ಲಿ, ಬ್ರಿಟೀಷರ ಸಂಖೈ ಕೇವಲ ನಲವತ್ತು ಸಾವಿರ. (12) 

ಬಂಗಾಳದ ಸೈನ್ಯದ ರಚನೆಯಲ್ಲಿ ಮತ್ತು ಮದ್ರಾಸ್ – ಬಾಂಬೆಯ ಸೈನ್ಯದ ರಚನೆಯಲ್ಲಿ ವ್ಯತ್ಯಾಸಗಳಿದ್ದವು. 

ಬಂಗಾಳದ ಸೈನ್ಯದಲ್ಲಿದ್ದ 80,000 ಜನರಲ್ಲಿ, 30,000ದಷ್ಟು ಬ್ರಿಟೀಷರಿದ್ದರು, 28,000 ರಜಪೂತರು, 23,000 ಬ್ರಾಹ್ಮಣರು, 13,000 ಮುಸ್ಲಿಮರು ಮತ್ತು ಕೇವಲ 5,000ದಷ್ಟು “ಕೆಳಜಾತಿಯವರು”. (13) 

ಮಾರ್ಕ್ಸ್ ಬರೆಯುತ್ತಾರೆ “ಬಾಂಬೆ ಮತ್ತು ಮದ್ರಾಸಿನ ಸೈನ್ಯದಲ್ಲಿದ್ದ ಹೆಚ್ಚಿನವರು ಕೆಳ ಜಾತಿಯ ಜನರು”. (14) ಮದ್ರಾಸ್ ಸೈನ್ಯದಲ್ಲಿದ್ದ ಯುರೋಪಿಯನ್ ಪ್ರಾಬಲ್ಯ ಬಂಗಾಳದ ಸೈನ್ಯಕ್ಕೆ ಹೋಲಿಸಿದರೆ ಬಹಳವೇ ಕಡಿಮೆಯಿತ್ತು. 

ಟಿಪ್ಪುವಿನ ಮಕ್ಕಳನ್ನು ಬ್ರಿಟೀಷರು ತಮಿಳುನಾಡಿನ ವೆಲ್ಲೂರು ಜೈಲಿನಲ್ಲಿಟ್ಟಿದ್ದರು. ಅಲ್ಲಿ ಕಾವಲಿಗಿದ್ದ ಮದ್ರಾಸ್ ಸೈನ್ಯದಲ್ಲಿದ್ದ ಹೆಚ್ಚಿನವರು ಶೋಷಿತ ಜಾತಿಗೆ ಸೇರಿದ್ದವರು. ಆದ್ದರಿಂದಾಗಿ, ವಸ್ತುನಿಷ್ಠವಾಗಿ ನೋಡಿದರೆ, ಕೆಲವೇ ಕೆಲವು ಸಂಖೈಯಲ್ಲಿದ್ದ ಯುರೋಪಿಯನ್ ಅಧಿಕಾರಿಗಳು ಮತ್ತು ಸೈನಿಕರನ್ನು ಇಲ್ಲವಾಗಿಸಲು ಹೆಚ್ಚು ಸಮಯವೂ ಬೇಕಿರಲಿಲ್ಲ, ಯೋಜನೆಯೂ ಮಾಡಬೇಕಿರಲಿಲ್ಲ. 

“ಮೊದಲ ನೋಟದಲ್ಲಿ, ಭಾರತದ ಜನರ ನಿಷ್ಠೆ ಸ್ಥಳೀಯ ಸೈನ್ಯದ ನಿಷ್ಠೆಯ ಮೇಲವಲಂಬಿತವಾಗಿದೆ ಎಂದು ತೋರುತ್ತದೆ, ಭಾರತದ ಜನರಲ್ಲಿದ್ದ ಪ್ರತಿಭಟನೆಯ ಮನೋಭಾವವನ್ನು ಕೇಂದ್ರೀಕೃತಗೊಳಿಸಿದ್ದು ಬ್ರಿಟೀಷ್ ಆಳ್ವಿಕೆ” ಎಂದು ಮಾರ್ಕ್ಸ್ ಪರಿಸ್ಥಿತಿಯನ್ನು ಸರಿಯಾಗಿ ಅವಲೋಕಿಸುತ್ತಾರೆ. (15) 

ಬ್ರಿಟೀಷ್ ಸೈನ್ಯದಲ್ಲಿ ಭಾರತೀಯ ಸೈನಿಕರಿಗಿದ್ದ ಶೋಷಣಾತ್ಮಕ ಪರಿಸ್ಥಿತಿ ಸೈನಿಕರಲ್ಲಿ ಆಗಾಗ ಉಂಟಾಗುವ ಅಸಮಾಧಾನಕ್ಕೆ ಕಾರಣವಾಗಿತ್ತು ಮತ್ತಿದು ದಂಡನಾತ್ಮಕ ಕೋರ್ಟ್ ಮಾರ್ಷಲ್ಲುಗಳಲ್ಲಿ ಅಂತ್ಯವಾಗುತ್ತಿತ್ತು. 1857ರ ಸ್ವಾತಂತ್ರ್ಯದ ಯುದ್ಧವನ್ನಾರಂಭಿಸಿದ್ದು ಬ್ರಿಟೀಷ್ ಸೈನ್ಯದಲ್ಲಿ ಭಾರತೀಯ ಸಿಪಾಯಿಗಳು, ಅವರಲ್ಲಿದ್ದ ವಸಾಹತು ವಿರೋಧಿ ಕ್ರಾಂತಿಕಾರತೆಯನ್ನು 1857ರ ಸ್ವಾತಂತ್ರ್ಯ ಹೋರಾಟ ಹೊರಗೆಳೆದಿತ್ತು. ಟಿಪ್ಪುವಿನ ಮಗ ಫತಾ ಹೈದರನ ನೇತೃತ್ವದಲ್ಲಿ ವೆಲ್ಲೂರಿನ ಸಿಪಾಯಿಗಳ ರೋಷವನ್ನು ಕ್ರೋಡೀಕರಿಸಲಾಯಿತು, ಫತಾ ಹೈದರನ ನೇತೃತ್ವವನ್ನು ಅವರು ತತ್ ಕ್ಷಣ ಒಪ್ಪಿಕೊಂಡರು; ಪರಿಣಾಮವಾಗಿ ನಗರದ ಜನರ ಬೆಂಬಲದೊಂದಿಗೆ ಬಂಡಾಯ ಪ್ರಾರಂಭವಾಯಿತು. 

ಈ ದಂಗೆಯ ಬಗ್ಗೆ ನಂತರದಲ್ಲಿ ನಡೆದ ತನಿಖಾ ಸಮಿತಿ ಕೊಟ್ಟ ವರದಿಯನ್ನಾಧರಿಸಿ ಚೋಪ್ರಾ, ರವಿಚಂದ್ರನ್ ಮತ್ತು ಸುಬ್ರಮಣಿಯನ್ ಬರೆಯುತ್ತಾರೆ: “ಭಾರತೀಯ ಸೈನಿಕರಿಗೆ ಬಡ್ತಿ ಸಿಗುವ ಸಾಧ್ಯತೆಗಳು ಕಡಿಮೆಯಿರುತ್ತಿತ್ತು; ಸುಬೇದಾರನ ಸ್ಥಾನದಿಂದ ಮೇಲೇರಲು ಅವರಿಗೆ ಸಾಧ್ಯವೇ ಇರಲಿಲ್ಲ. ಚಿಕ್ಕ ಪುಟ್ಟ ತಪ್ಪಿಗೂ ಭಾರತೀಯ ಅಧಿಕಾರಿಗಳನ್ನು ಅವಮಾನಿಸಿ ಹಿಂಬಡ್ತಿ ನೀಡಲಾಗುತ್ತಿತ್ತು. ಅವರಿಗೆ ಸಿಗುತ್ತಿದ್ದ ಪಗಾರವೂ ತುಂಬಾ ಕಮ್ಮಿ; ನಿಜಾಮ್ ಮತ್ತು ಮರಾಠ ಮುಖ್ಯಸ್ಥರ ಕೆಳಗಿದ್ದ ಸಾಮಾನ್ಯ ಸಿಪಾಯಿಗಳಿಗೂ ಕಂಪನಿಯ ಕೆಳಗಿದ್ದ ಸುಬೇದಾರರು ಮತ್ತು ಜಮಾದಾರರಿಗಿಂತ ಹೆಚ್ಚಿನ ಸಂಬಳ ಸಿಗುತ್ತಿತ್ತು ಎಂದವರು ಆರೋಪಿಸುತ್ತಾರೆ. ಆದಾಗ್ಯೂ, ಈ ಅಸಮಾಧಾನಗಳೆಲ್ಲವೂ ಮೇಲ್ ಬಂದಿದ್ದು ಸಿಪಾಯಿಗಳಿಗೆ ಹೊಸ ತಲೆ ವಸ್ತ್ರವನ್ನು ಕಂಪನಿ ಪರಿಚಯಿಸಲು ಪ್ರಯತ್ನಿಸಿದಾಗ”. (16) 

1857ರ ದಂಗೆಯ ರೋಷಕ್ಕೆ ಕಿಡಿ ಹಚ್ಚಲು ಬೀಫ್ ಮತ್ತು ಪೋರ್ಕ್ ಕಾರಣವಾದ ರೀತಿಯಲ್ಲೇ, ನಾಮಕಾವಾಸ್ಥೆ ವಿಷಯವಾದ ತಲೆ ವಸ್ತ್ರದ ಕಾರಣದಿಂದ ಇಲ್ಲಿನ ಅಸಮಾಧಾನ ಸ್ಪೋಟಗೊಂಡಿತು. ಬ್ರಿಟೀಷ್ ತನಿಖಾ ಸಮಿತಿಯ ದಾಟಿಯಲ್ಲೇ ಬರೆಯುತ್ತಾ ಈ ಭಾರತೀಯ ಲೇಖಕರು ಬರೆಯುತ್ತಾರೆ: “ಸಿಪಾಯಿಗಳು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಲು, ಯುರೋಪಿನ ಟೋಪಿಯಂತೆ ಕಾಣುವ ಹೊಸ ತಲೆ ವಸ್ತ್ರವನ್ನು ಪರಿಚಯಿಸಲಾಯಿತು. ಕಿವಿ ಓಲೆ ಮತ್ತು ಹಣೆಯ ಮೇಲೆ ಜಾತಿ ಸೂಚಕ ಚಿಹ್ನೆಗಳನ್ನು ನಿಷೇಧಿಸಲಾಯಿತು…. ಆದರೆ ಸಿಪಾಯಿಗಳು ಹೊಸ ತಲೆ ವಸ್ತ್ರವನ್ನು ಒಪ್ಪಲು ನಿರಾಕರಿಸಿದರು ಮತ್ತು ಬಂಧನದ ಭೀತಿಯ ಹೊರತಾಗಿಯೂ ಈ ಆದೇಶದ ವಿರುದ್ಧ ಬಹಿರಂಗವಾಗಿ ಪ್ರತಿಭಟಿಸಿದರು. ತತ್ಪರಿಣಾಮವಾಗಿ ಕೆಲವರನ್ನು ಬಂಧಿಸಲಾಯಿತು. 1806ರ ಮೇ 7ರಂದು ಬೆಳಗಿನ ಪೆರೇಡಿನ ಸಮಯದಲ್ಲಿ ಹೊಸ ತಲೆ ವಸ್ತ್ರವನ್ನು ಧರಿಸುವಂತೆ ಸಿಪಾಯಿಗಳಿಗೆ ಆದೇಶಿಸಿದಾಗ, ಆದೇಶವನ್ನು ಧಿಕ್ಕರಿಸಿದ ಸಿಪಾಯಿಗಳು ತಲೆಯ ಮೇಲೊಂದು ಕೈಚೌಕವನ್ನು ಹಾಕಿಕೊಂಡು ಇಂಗ್ಲೀಷ್ ಅಧಿಕಾರಿಗಳನ್ನು ‘ನಾಯಿ’ಗಳೆಂದು ಹೀಗಳೆದರು…. 

ವೆಲ್ಲೂರಿನಲ್ಲಿ ಈ ಘಟನೆ ಶುರುವಾದ ಕೆಲವೇ ದಿನಗಳಲ್ಲಿ ಉತ್ತರ ಆರ್ಕಾಟಿನ ವಲ್ಲಜಾಬಾದಿನಲ್ಲಿದ್ದ ಸಿಪಾಯಿಗಳು ಇದೇ ರೀತಿಯ ಪ್ರತಿಭಟನೆಯನ್ನು ನಡೆಸಿದರು. ಈ ಪ್ರಕರಣ ಸಾರ್ವಜನಿಕರ ನೇತೃತ್ವದಿಂದ ಪ್ರಾರಂಭವಾಗಿತ್ತು; ಯುರೋಪಿಯನ್ ಶೈಲಿಯ ಟೋಪಿಗಳನ್ನು ಹಾಕಿದ್ದ ಸಿಪಾಯಿಗಳನ್ನು ಅವರು ಹೀಯಾಳಿಸಿದ್ದರು. ಪರಿಣಾಮವಾಗಿ ಸಿಪಾಯಿಗಳು ಆ ಟೋಪಿಗಳನ್ನು ತೆಗೆದೆಸೆದರು ಮತ್ತಿನ್ನೂ ಅದನ್ನು ಧರಿಸಿದವರನ್ನು ತೆಗಳಿದರು. 

ಈ ಸಂದರ್ಭವನ್ನು ವೆಲ್ಲೂರಿನಲ್ಲಿ ಬಂಧನದಲ್ಲಿದ್ದ ಟಿಪ್ಪುವಿನ ಮಕ್ಕಳು ಸಂಪೂರ್ಣವಾಗಿ ಉಪಯೋಗಿಸಿಕೊಂಡರು….ಈ ದಂಗೆಗೊಂದು ರಾಜಕೀಯ ಗುರಿ ನೀಡುವ ಪ್ರಯತ್ನ ಮಾಡಿದರು….ಮತ್ತು ಸಿಪಾಯಿಗಳೊಡನೆ ಗುಪ್ತ ಸಂಪರ್ಕವನ್ನು ಬೆಳೆಸಿಕೊಂಡು, ಅವರ ಅಸಮಾಧಾನವನ್ನು ಇಂಗ್ಲೀಷರ ವಿರುದ್ಧದ ಹಿಂಸಾತ್ಮಕ ಹೋರಾಟಕ್ಕೆ ತಿರುಗಿಸಿದರು, ದಕ್ಷಿಣ ಭಾರತದದಿಂದ ಬ್ರಿಟೀಷರನ್ನು ಓಡಿಸುವ ಸ್ಪಷ್ಟ ಉದ್ದೇಶದೊಂದಿಗೆ…..ಟಿಪ್ಪುವಿನ ನಾಲ್ಕನೇ ಮಗನಾದ ಮೊಯಿನುದ್ದೀನನ ನೇತೃತ್ವದಲ್ಲಿ, ದಕ್ಷಿಣ ಭಾರತದ ವಿವಿಧ ಭಾಗಗಳಿಂದ ದೊರೆಯುವ ಬೆಂಬಲದಿಂದ ಬಂಡಾಯ ನಡೆಯುತ್ತದೆ ಎಂದು ಸಿಪಾಯಿಗಳಿಗೆ ತಿಳಿಸಲಾಯಿತು. ಬಂಡಾಯವನ್ನು ಹಿಂಸಾತ್ಮವಾಗಿ ಪ್ರಾರಂಭಿಸಬೇಕೆಂದು ರಹಸ್ಯವಾಗಿ ನಿರ್ಧರಿಸಲಾಯಿತು ಮತ್ತು ಇದರಾರಂಭಕ್ಕೆ 1806ರ ಜುಲೈ 10ನೇ ತಾರೀಖನ್ನು ನಿಗದಿಗೊಳಿಸಲಾಯಿತು. ರಾತ್ರಿಯಷ್ಟರಲ್ಲಿ ಸಿಪಾಯಿಗಳು ಕಾರ್ಯಾಚರಣೆಗೆ ಇಳಿದಿದ್ದರು; ಮುಖ್ಯ ದ್ವಾರದಲ್ಲಿದ್ದ ಇಂಗ್ಲೀಷ್ ಕಾವಲುಗಾರರನ್ನು ಅವರು ಕೊಂದರು ಮತ್ತು ಸೇನಾ ಉಗ್ರಾಣವನ್ನು ವಶಕ್ಕೆ ಪಡೆದುಕೊಂಡರು. ಇದರ ನಂತರ ಯುರೋಪಿಯನ್ ಪಡೆಯ ಸೈನಿಕರ ಮತ್ತು ಅಧಿಕಾರಿಗಳ ಮಾರಣಹೋಮ ನಡೆಯಿತು, ಹೆಂಗಸರು ಮತ್ತು ಮಕ್ಕಳನ್ನು ಹೊರತುಪಡಿಸಿ…..ಲೂಟಿ ಮತ್ತು ನಿಧಿ ಹುಡುಕುವಿಕೆ ಅವ್ಯಾಹತವಾಗಿ ನಡೆಯಿತು. ರಕ್ಷಣೆಯಿಲ್ಲದ ಇಂಗ್ಲೀಷರ ಸಂಪತ್ತನ್ನು ದೋಚಲಾಯಿತು ಮತ್ತು ಎಲ್ಲೆಡೆ ಗೊಂದಲಗಳಿದ್ದವು”. (17) 

ಒಟ್ಟಾರೆ, 14 ಬ್ರಿಟೀಷ್ ಅಧಿಕಾರಿಗಳು ಮತ್ತು ಸೈನಿಕರನ್ನು ಕೊಲ್ಲಲಾಯಿತು ಮತ್ತು 76 ಮಂದಿ ಗಾಯಗೊಂಡರು. “ಕಗ್ಗೊಲೆ”ಯನ್ನು ಚೆನ್ನಾಗಿ ನಿಯಂತ್ರಿಸಿ ನಿರ್ವಹಿಸಲಾಯಿತು. ಬ್ರಿಟೀಷ್ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಭಾರತೀಯ ಸೈನಿಕರು ದಂಗೆಯೆದ್ದು ತಮ್ಮ ಯುರೋಪಿಯನ್ ಅಧಿಕಾರಿಗಳನ್ನು ಹತ್ಯೆ ಮಾಡಿದ್ದರು. ವೆಲ್ಲೂರಿನ ಜನತೆ ಈ ದಂಗೆಗೆ ತುಂಬು ಹೃದಯದ ಬೆಂಬಲ ನೀಡಿದರು ಮತ್ತು ಸೈನಿಕರಿಗೆ ಬೇಕಾದ ಎಲ್ಲಾ ರೀತಿಯ ಸಹಾಯವನ್ನೂ ಮಾಡಿದರು. ದಂಗೆಯನ್ನು ಇತರೆ ರಕ್ಷಣಾ ಕೋಟೆಗಳೆಡೆಗೂ ಹಬ್ಬಿಸುವ ಯೋಜನೆಗಳನ್ನು ರೂಪಿಸಲಾಗಿತ್ತಾದರೂ, ಬ್ರಿಟೀಷರು ವೆಲ್ಲೂರನ್ನು ಸುತ್ತುವರಿದರು ಮತ್ತು ಯುದ್ಧದಿಂದ ಕೋಟೆಯನ್ನು ಪುನರ್ ವಶಪಡಿಸಿಕೊಂಡರು. ಕೋಟೆಯ ಹೊರಗಡೆ ಅಸಂಖ್ಯಾತ ಜನರನ್ನು ಹತ್ಯೆಗೈದ ನಂತರ ಅವರು ಕೋಟೆಯೊಳಗಿನಿಂದ 800 ದೇಹಗಳನ್ನು ಎಳೆದು ಬಿಸಾಡಿದರು, ವಿದೇಶಿಗರಿಂದ ಓಡಿಸಲ್ಪಟ್ಟ ಮೈಸೂರು ಸುಲ್ತಾನರಿಗೆ ಮತ್ತೆ ಅಧಿಕಾರ ನೀಡಲು ನಡೆದ ಬಂಡಾಯವನ್ನು ಶಮನ ಮಾಡಿಬಿಟ್ಟರು. ವ್ಯಂಗ್ಯದ ವಿಷಯವೆಂದರೆ ತನಿಖಾ ಸಮಿತಿಗೆ ಈ “ಸ್ವೇಚ್ಛಾಚಾರದ ಹತ್ಯಾಕಾಂಡದ” ಬಗ್ಗೆ ಯಾವ ಸುಳಿವೂ ಸಿಗಲಿಲ್ಲ! ಕೊಲೊನೆಲ್ ಗಿಲೆಸ್ಪಿ ತನ್ನ 

ಡ್ರಾಗನ್ ರೆಜಿಮೆಂಟಿನೊಂದಿಗೆ ಹಲವರನ್ನು ಕೊಂದ ಎಂದು ಮಾರ್ಕ್ಸ್ ಹೇಳುತ್ತಾನೆ, ವೆಲ್ಲೂರನ್ನು ವಶಪಡಿಸಿಕೊಳ್ಳುವಾಗ, ಗವರ್ನರ್ ಜೆನರಲ್ ಮಿಂಟೋ, ಬಂಡಾಯವೆದ್ದವರಿಗೆ “ಕುಲೀನ” ಉಪಚಾರ ನೀಡುತ್ತಾನೆ. ಒಬ್ಬ ಪರಿಪೂರ್ಣ ಸಭ್ಯಸ್ಥನಂತೆ, ಆತ ಹಲವಾರು ಜನರನ್ನು ಸಾವಿನ ಮನೆಗೆ ಕಳುಹಿಸಿರಬೇಕು. (18) 

ಹಾಗಿದ್ದರೂ, ಬ್ರಿಟೀಷರು ನಡೆಸಿದ ಹತ್ಯಾಕಾಂಡವನ್ನು ಮೌನದಿಂದ ನೋಡುತ್ತಾ ಕೂರಲಿಲ್ಲ. ಬ್ರಿಟೀಷರು ನಡೆಸಿದ ಮನುಷ್ಯಹರಣವನ್ನು ಸಮರ್ಥಿಸುವ ಅನೇಕಾನೇಕ ವಸಾಹತುಶಾಹಿ ನೆಲೆಯ ಬರಹಗಳಿವೆ. ಇಲ್ಲೊಂದು ಗಿಲೆಸ್ಪಿಯ ಕಾರ್ಯಗಳನ್ನು ವಿವರಿಸುವ ಬರಹವಿದೆ: “ಹತ್ತೊಂಬತ್ತನೆಯ ಹಾಗೂ ಮದ್ರಾಸಿನ ಸೈನ್ಯ ತನ್ನ ಹಾದಿಗೆ ಅಡ್ಡ ಬಂದ ಪ್ರತಿಯೊಬ್ಬರ ಮೇಲೂ ದಾಳಿ ನಡೆಸಿ ಕೊಂದು ಹಾಕಿತು. ಅಸಹಾಯಕ ಯುರೋಪಿಯನ್ನಿನ ರೋಗಿಗಳನ್ನೂ ಹತ್ಯೆ ಮಾಡಿದ್ದು ಬ್ರಿಟೀಷರಿಗೆ ಎಷ್ಟು ಕೋಪ ತರಿಸಿತ್ತೆಂದರೆ ಯಾವುದೇ ವಿಧದ ಕರುಣೆಯನ್ನೂ ಅವರು ತೋರಲಿಲ್ಲ; ಅರಮನೆಯಲ್ಲಿ ಆಸರೆ ಪಡೆದಿದ್ದ ನೂರು ಮಂದಿ ಸಿಪಾಯಿಗಳನ್ನು ಹೊರಗೆಳೆದು ತಂದು, ಗೋಡೆಗೊರಗಿ ನಿಲ್ಲಿಸಿ, ಎಲ್ಲರೂ ಸಾಯುವವರೆಗೂ ಗುಂಡಿನ ಮಳೆಗೆರೆಯಲಾಯಿತು. ಕೋಟೆಯ ದ್ವಾರಗಳನ್ನು ಒಡೆದು ಹಾಕುವ ಯೋಜನೆ ಹಾಕಿದ ಇಂಜಿನಿಯರ್ ಜಾನ್ ಬ್ಲಾಕಿಸ್ಟನ್ ಆ ದಿನಗಳನ್ನು ನೆನಪಿಸಿಕೊಳ್ಳುತ್ತ, ಈ ರೀತಿಯ ಶಿಕ್ಷೆ ಕೊಡುವುದು ನಾಗರೀಕ ಸಮಾಜದ ಎಲ್ಲಾ ನಂಬುಗೆಗಳಿಗೆ ವಿರುದ್ಧವಾದುದು, ‘ಈ ಭೀಬತ್ಸ ದೃಶ್ಯವನ್ನು ನಾನು, ಹೇಳಬೇಕೆಂದರೆ ತುಂಬಾ ಸಮಚಿತ್ತದಿಂದ ನೋಡುತ್ತಿದೆ. ಇದು ನ್ಯಾಯಕ್ಕಾಗಿ ನಡೆಯುತ್ತಿರುವ ಕೃತ್ಯ ಮತ್ತು ಎಲ್ಲಾ ಕೋನದಿಂದಲೂ ಇದು ಸರಿಯಾದುದು.’ ಭಾರತದಲ್ಲಿ ನಡೆಯುತ್ತಿದ್ದ ಯುದ್ಧದ ಗುಣಲಕ್ಷಣಗಳಿವು, ಇಲ್ಲಿ ಯುರೋಪಿನ ಯುದ್ಧದಲ್ಲಿನ ‘ನಾಗರೀಕ’ ನಡವಳಿಕೆಗಳನ್ನು ಅಳವಡಿಸಲಾಗುವುದಿಲ್ಲ.” (19) 

ಸೋಲಿಸಿದ ತಕ್ಷಣವೇ, ಬ್ರಿಟೀಷರು ಟಿಪ್ಪುವಿನ ಮಕ್ಕಳನ್ನು ಕಲ್ಕತ್ತಾಗೆ ಕಳುಹಿಸಿದರು. ಬ್ರಿಟೀಷ್ ಅಧಿಕಾರದ ಶಕ್ತಿ ಕೇಂದ್ರವಾಗಿತ್ತು ಕಲ್ಕತ್ತ. ಬ್ರಿಟೀಷರ ಅಭಿಪ್ರಾಯದಲ್ಲಿ, ಟಿಪ್ಪುವಿನ ಮಕ್ಕಳು ಮೈಸೂರಿಗೆ ಹತ್ತಿರವಿದ್ದಷ್ಟೂ ಜನಸಮೂಹವನ್ನು ಕಲುಷಿತಗೊಳಿಸಿ ವಸಾಹತುಶಾಹಿಯ ವಿರುದ್ಧದ ಹೋರಾಟಕ್ಕೆ ಸ್ಫೂರ್ತಿ ತುಂಬುತ್ತಾರೆ. 

ವೆಲ್ಲೂರು ಬಂಡಾಯದ ಗಂಭೀರತೆ ಮತ್ತು ಬ್ರಿಟೀಷ್ ಆಳ್ವಿಕೆಯ ಭವಿಷ್ಯತ್ತಿನ ಮೇಲೆ ಅದು ಉಂಟು ಮಾಡಬಹುದಾದಂತಹ ಪರಿಣಾಮಗಳ ಬಗ್ಗೆ ಮದ್ರಾಸಿನ ಗವರ್ನರ್ ವಿಲಿಯಂ ಬೆಂಟಿಕ್, ಥಾಮಸ್ ಮನ್ರೋಗೆ ಆಗಷ್ಟ್ 1806ರಲ್ಲಿ ಒಂದು ರಹಸ್ಯ ಪತ್ರ ಬರೆಯುತ್ತಾನೆ: “ಟಿಪ್ಪು ಸುಲ್ತಾನನ ಮಕ್ಕಳ ಗುಪ್ತಚರರು ಮತ್ತು ಅನುಯಾಯಿಗಳು ಘಟ್ಟದ ಕೆಳಗೆ ಹೆಚ್ಚು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಅನುಮಾನವಿಲ್ಲದೇ ನಂಬಲು ನಮಗೆ ಎಲ್ಲಾ ಕಾರಣಗಳೂ ಇವೆ. ಅದೇ ರೀತಿಯ ಪಿತೂರಿಗಳನ್ನು ಘಟ್ಟದ ಮೇಲೂ ಕೈಗೊಳ್ಳುತ್ತಾರೆ ಎನ್ನಲಾಗಿದೆ. ಗುರ್ರಂಕೊಂಡದ ಪಾಳೇಗಾರರ ಮೇಲೆ ಯುವರಾಜರು ಹೆಚ್ಚಿನ ನಂಬುಗೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಅತೀವ ಜಾಗರೂಕತೆ ಮತ್ತು ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕೆಂದು ನಾನು ನಿಮಗೆ ಶಿಫಾರಸು ಮಾಡುತ್ತಿದ್ದೇನೆ; ಮತ್ತು ಆ ರೀತಿಯ ಬಂಡಾಯದ ಯಾವುದೇ ಮುನ್ಸೂಚನೆ ಅಥವಾ ಚಿಹ್ನೆಗಳು ಕಂಡ ಕೂಡಲೇ, ನಿಮ್ಮ ಅನ್ನಿಸಿಕೆಯ ಪ್ರಕಾರ ಅವಶ್ಯವಿರುವ ಕ್ರಮಗಳನ್ನು ಯಾವುದೇ ಹಿಂಜರಿತವಿಲ್ಲದಂತೆ ತೆಗೆದುಕೊಳ್ಳಲು ಈ ಮೂಲಕ ನಿಮಗೆ ಅಧಿಕಾರ ನೀಡುತ್ತಿದ್ದೇನೆ. ಸ್ಥಳೀಯ ಪಡೆಗಳ ಮೇಲೆ ತುಂಬ ಹೆಚ್ಚಿನ ಅವಲಂಬನೆ ಬೇಡ ಎನ್ನುವುದು ನನ್ನ ಸಲಹೆ. ಈ ಸಂದರ್ಭದಲ್ಲಿ, ಸ್ಥಳೀಯ ಪಡೆಗಳು ಅವಶ್ಯಕತೆ ಬಿದ್ದಾಗ ಎಷ್ಟರ ಮಟ್ಟಿಗೆ ನಮ್ಮ ಪರವಾಗಿ ನಿಲ್ಲುತ್ತವೆ ಎಂದು ಹೇಳುವುದು ಅಸಾಧ್ಯ. ಸೈನಿಕರು ನಮ್ಮ ಬಗ್ಗೆ ಅಸಂತುಷ್ಟಗೊಂಡಿದ್ದಾರೆ, ಅಸಮಾಧಾನಗೊಂಡಿದ್ದಾರೆ ಮತ್ತು ಈ ಭಾವನೆಗಳ ಮೇಲೆ ಮುಸಲ್ಮಾನರ ಸರಕಾರವನ್ನು ಮರು ಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿವೆ, ಟಿಪ್ಪು ಸುಲ್ತಾನನ ಒಬ್ಬ ಮಗನ ನೇತೃತ್ವದಲ್ಲಿ: ಇದನ್ನು ನಮ್ಮರಿವಿಗೆ ಬರದಂತೆ ಮತ್ತು ತುಂಬಾ ಕಡಿಮೆ ಸಮಯದಲ್ಲಿ ಮಾಡುವುದು ಅಸಾಧ್ಯವೇ ಸರಿ. ಆದರೆ, ನನ್ನನ್ನು ನಂಬಿ, ಪಿತೂರಿಗಳು ನಮ್ಮೆಲ್ಲಾ ನಂಬಿಕೆಯನ್ನು ಮೀರಿ ನಡೆದಿದೆ ಮತ್ತು ದೂರದೂರಲ್ಲಿರುವ ಸೈನ್ಯವನ್ನೂ ತಲುಪಿಬಿಟ್ಟಿದೆ; ಮತ್ತು ಒಳಸಂಚುಗಳನ್ನು ಎಲ್ಲೆಡೆಯೂ ಯಶಸ್ವಿಯಾಗಿ ನಡೆಸಿದಂತೆ ಕಾಣುತ್ತದೆ. ವೆಲ್ಲೂರನ್ನು ಆಕ್ರಮಿಸಿದ್ದು ಮತ್ತು ಇತರೆ ಚಿಂತನಾ ಕ್ರಮಗಳನ್ನು ಜಾರಿಗೆ ತಂದು ಎಲ್ಲೆಡೆಯೂ ಕಣ್ಗಾವಲನ್ನು ಹೆಚ್ಚಿಸಿದರೆ, ನನ್ನ ನಂಬಿಕೆಯ ಪ್ರಕಾರ ದೊಡ್ಡ ಮಟ್ಟದ ಸ್ಪೋಟವನ್ನು ತಡೆಗಟ್ಟಬಹುದು”. (20) 

ಬೆಂಟಿಕ್ ಇದೇ ರೀತಿಯ ದಂಗೆಗಳನ್ನು ನಿರೀಕ್ಷಿಸುತ್ತಿದ್ದನಷ್ಟೇ ಅಲ್ಲ, ಜೊತೆಗೆ, ಪತ್ರದಲ್ಲಿ ಬ್ರಿಟೀಷ್ ಸೈನ್ಯದಲ್ಲಿದ್ದ ಭಾರತೀಯ ಸೈನಿಕರ ನಿಯತ್ತಿನ ಬಗ್ಗೆ ಅವನಲ್ಲಿದ್ದ ಸಂಪೂರ್ಣ ಅಪನಂಬಿಕೆ, ಆತ ಬಹುಶಃ ಮನ್ರೋನಂತಹ ಬ್ರಿಟೀಷ್ ಅಧಿಕಾರಿಗಳ ಸುರಕ್ಷತೆಯ ಬಗ್ಗೆ ಚಿಂತಿಸುತ್ತಿದ್ದ ಎನ್ನಿಸುತ್ತದೆ. ಆಗ ಲೆಫ್ಟಿನೆಂಟ್ ಕಲೋನಲ್ ಆಗಿದ್ದ ಥಾಮಸ್ ಮನ್ರೋ, ಸಂಪೂರ್ಣವಾಗಿ, ತನ್ನ ಚಿಕ್ಕ ಪುಟ್ಟ ವೈಯಕ್ತಿಕ ಕೆಲಸಕ್ಕೂ ಭಾರತೀಯ ಸೈನಿಕರ ಮೇಲೆಯೇ ಅವಲಂಬಿತನಾಗಿದ್ದ. 

ವೆಲ್ಲೂರಿನ ಬಂಡಾಯದ ಕಾರಣಗಳನ್ನು ಆಳವಾಗಿ ಗಮನಿಸಿ ಮತ್ತು ಇನ್ನೂ ನಿರ್ದಿಷ್ಟವಾಗಿ ಭಾರತದಲ್ಲಿನ ಬ್ರಿಟೀಷ್ ಸೈನ್ಯದ ಇರುವಿಕೆಯ ಬಗ್ಗೆ ಅಧ್ಯಯನ ನಡೆಸಿದ ಥಾಮಸ್ ಮನ್ರೋ, 1822ರಲ್ಲಿನ ಬರಹದಲ್ಲಿ, ಮದ್ರಾಸಿನಲ್ಲಿ ಬ್ರಿಟೀಷ್ ಪತ್ರಿಕೆಗಳಿಗೆ ಅನುಮತಿ ನೀಡುವ ಪ್ರಶ್ನೆ ಎದ್ದಾಗ, ಆ ಪ್ರಸ್ತಾಪವನ್ನು ತಿರಸ್ಕರಿಸುತ್ತಾನೆ, ಕಾರಣ ಈ ರೀತಿಯ ಅನುಮತಿಗಳು ಭಾರತದಲ್ಲಿನ ಸ್ಪೋಟಕ ಪರಿಸ್ಥಿತಿಗೆ ಕಿಡಿ ಹಚ್ಚುವ ಕೆಲಸ ಮಾಡಿ ಬ್ರಿಟೀಷರನ್ನು ಗಂಟುಮೂಟೆ ಕಟ್ಟಿಕೊಂಡು ಹೋಗುವಂತೆ ಮಾಡುತ್ತಿತ್ತು ಮತ್ತು ಮನ್ರೋನ ಅಂದಾಜಿನಂತೆ ಈ ಕಾರ್ಯದಲ್ಲಿ ಸೈನ್ಯದ ಬಹುಮುಖ್ಯ ಪಾತ್ರವಿರುತ್ತಿತ್ತು. ಬಹಳ ವಿಧದಲ್ಲಿ, ವೆಲ್ಲೂರಿನಲ್ಲಿ ನಡೆದ ಘಟನೆ 1857ರ ಬಂಡಾಯದ ಚಿಕ್ಕ ಪ್ರತಿಕೃತಿಯಂತಿತ್ತು ಮತ್ತು ಮನ್ರೋ, ವಸಾಹತು ಗುಂಪಿನ ದೊಡ್ಡ ಅಯೋಗ್ಯ, ಅದರ ವಾಸ್ತವವನ್ನು ಬಹು ಚೆನ್ನಾಗಿ ಗ್ರಹಿಸಿಬಿಟ್ಟಿದ್ದ. ಕೆ.ಎನ್.ವಿ. ಶಾಸ್ತ್ರಿ ಮತ್ತು ಇತರೆ ಬ್ರಿಟೀಷ್ ಎಸೆದ ಬ್ರೆಡ್ಡು ತಿಂದ ‘ಸ್ಥಳೀಯ’ ಇತಿಹಾಸಕಾರರು ಮನ್ರೋನನ್ನು “ಪ್ರಗತಿಪರ” ಎಂದು ಕರೆಯಲಿಚ್ಛಿಸುತ್ತಾರೆ. ಇದು ಪೈಶಾಚಿಕ ಪ್ರಭುತ್ವದ ಕಾರ್ಯಗಳನ್ನು ಮರೆಮಾಚುವ ‘ಸ್ಥಳೀಯ’ ಬಣ್ಣಗಳಷ್ಟೇ. ಮನ್ರೋ ಬ್ರಿಟೀಷ್ ಮಾಧ್ಯಮಕ್ಕೆ ಅನುಮತಿ ಕೊಡುವುದರಿಂದಾಗುವ ಪರಿಣಾಮಗಳ ಬಗ್ಗೆ ನೀಡಿರುವ ಈ ಕೆಳಗಿನ ಹೇಳಿಕೆ ಅಂತಹ ಇತಿಹಾಸಕಾರರಿಗೆ ಸರಿಯಾಗಿ ಕಪಾಳ ಮೋಕ್ಷ ಮಾಡುತ್ತದೆ. ಇಂಗ್ಲೆಂಡಿನ ಮಧ್ಯಮವರ್ಗೀಯ ಪ್ರಜಾಪ್ರಭುತ್ವ ಕ್ರಾಂತಿ ನೀಡಿದ ರಾಜಕೀಯ ಕೊಡುಗೆಗಳನ್ನೊಂದನ್ನು ಮನ್ರೋ ಬಿಟ್ಟುಬಿಟ್ಟಿದ್ದು ಬಣ್ಣದ ಖಂಡದಲ್ಲಿ ಬಿಳಿ ಜನರ ನಾಗರೀಕತೆಯನ್ನು ಮುಂದೊಯ್ಯುವುದಕ್ಕಾಗಿ. ಥಾಮಸ್ ಮನ್ರೋ ಒಬ್ಬ ನಾಜೂಕಾಗಿ ಬೆಳೆದ ಪಟ್ಟುಬಿಡದ ವಸಾಹತುಶಾಹಿಯಾಗಿದ್ದ, ಯಾವುದೇ ಸಂಕೋಚವಿಲ್ಲದೆ. ಅವನು ಬರೆಯುತ್ತಾನೆ: “ನಮ್ಮ ಬಗ್ಗೆ ಸ್ಥಳೀಯರಿಗಿರುವ ಉನ್ನತಾಭಿಪ್ರಾಯಗಳು ಮತ್ತು ನಮ್ಮಧಿಕಾರದ ಬಗ್ಗೆ ಅವರು ಕೊಡುವ ಮಾನ್ಯತೆ ಹಾಗೂ ಗೌರವ, ಇದುವರೆಗೆ ಇದು ನಮ್ಮೊಳಗಷ್ಟೇ ಇತ್ತು, ಈ ದೇಶದೊಳಗೆ ನಾವು ಯಶಸ್ಸು ಕಂಡಿರುವುದಕ್ಕೆ ಪ್ರಮುಖ ಕಾರಣ; ಆದರೆ ಈ ತತ್ವಗಳಾಧಾರ ಅಲುಗಲಾರಂಭಿಸಿದರೆ ಅಥವಾ ಮುಕ್ತ ಮಾಧ್ಯಮದ ಮೂಲಕ ಕೊಚ್ಚಿ ಹೋದರೆ, ನಮ್ಮ ಜ್ಯೂರಿಗಳ ಪ್ರೋತ್ಸಾಹದಿಂದ ವಿಷಯಲಂಪಟತನವಾಗಿಬಿಟ್ಟರೆ, ಬದಲಾವಣೆ ಅತಿ ವೇಗದಲ್ಲಿ ಇಡೀ ಸ್ಥಳೀಯ ಸೈನ್ಯಕ್ಕೆ ತಲುಪಿಬಿಡುತ್ತದೆ. ಸ್ಥಳೀಯ ಸೈನ್ಯ ಪಡೆಗಳಷ್ಟೇ ಯುರೋಪಿಯನ್ನರ ಜೊತೆಗೆ ಯಾವಾಗಲೂ ಬೆರೆತು ಇರುವುದು, ಮತ್ತು ಅವರ ಬಗ್ಗೆ ಪತ್ರಿಕೆಗಳಲ್ಲಿ ಬಂದ ವಿಷಯಗಳನ್ನು, ಸಿದ್ಧಾಂತಗಳನ್ನು ಮೊದಲು ಅವರೇ ತಿಳಿದುಕೊಂಡುಬಿಡುತ್ತಾರೆ; ಯಾಕೆಂದರೆ ಈ ವಿಷಯ – ಸಿದ್ಧಾಂತಗಳು, ಯುರೋಪಿಯನ್ ಅಧಿಕಾರಿಗಳ ಚರ್ಚೆಯ ವಿಷಯವಾಗಿರುತ್ತದೆ, ಸ್ಥಳೀಯ ಅಧಿಕಾರಿಗಳಿಗೆ ಮತ್ತು ಸೈನಿಕ ಪಡೆಗಳಿಗೆ ಈ ವಿಷಯಗಳು ತಿಳಿಯುವುದಕ್ಕೆ ಹೆಚ್ಚೇನು ಸಮಯ ಬೇಕಾಗುವುದಿಲ್ಲ. ಆ ಜನರು ಬಹುಶಃ ಹಾನಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಾರರು, ಜನರ ಹಕ್ಕುಗಳ ಬಗ್ಗೆಯಾಗಲೀ, ಸರಕಾರ ರಚಿಸುವುದರ ಬಗ್ಗೆಯಾಗಲೀ ಜಾಸ್ತಿ ಯೋಚಿಸಲಾರರು, ಆದರೆ ತಮಗೆ ತತ್ ಕ್ಷಣಕ್ಕೆ ಸಂಬಂಧಪಟ್ಟ ಸಂಗತಿಗಳು ಯಾವುವು ಎನ್ನುವುದನ್ನು ತಾವು ಕೇಳುವುದರ ಮೂಲಕ ಅರಿತುಕೊಂಡುಬಿಡುತ್ತಾರೆ, ಮತ್ತು ಇದಕ್ಕೆ ಅವರಿಗೆ ಚೂರೇ ಚೂರು ಪ್ರೇರೇಪಣೆ ಸಾಕು. ತಮಗೆ ಸಿಗುತ್ತಿರುವ ಕಡಿಮೆ ಸಂಬಳ ಮತ್ತು ಕೆಳ ದರ್ಜೆಯನ್ನು ಯುರೋಪಿಯನ್ ಅಧಿಕಾರಿಗಳಿಗೆ ಹೋಲಿಸಿ ನೋಡುವುದನ್ನವರು ಕಲಿತುಕೊಳ್ಳುತ್ತಾರೆ, - ಯಾವ ಆಧಾರದ ಮೇಲೆ ಈ ವಿಸ್ತಾರದ ವ್ಯತ್ಸಾಸವಿದೆ ಎಂದು ಪರೀಕ್ಷಿಸುತ್ತಾರೆ – ತಮ್ಮದೇ ಶಕ್ತಿಯನ್ನು ಮತ್ತು ಸಂಪನ್ಮೂಲವನ್ನು ಪರೀಕ್ಷಿಸುತ್ತಾರೆ, ವಿದೇಶಿ ನೊಗವನ್ನು ಅಲುಗಾಡಿಸುವುದು ತಮ್ಮ ಕರ್ತವ್ಯವೆಂದು ನಂಬುತ್ತಾರೆ ಮತ್ತು ತಮ್ಮ ದೇಶದ ಗೌರವ ಹಾಗೂ ಘನತೆಯನ್ನು ರಕ್ಷಿಸುವ ಸಲುವಾಗಿ ತಯಾರಾಗುತ್ತಾರೆ. ಮಾಧ್ಯಮ ಮುಕ್ತವಾಗಿಬಿಟ್ಟರೆ, ಅವರು ಅತಿ ಶೀಘ್ರವಾಗಿ ಇವೆಲ್ಲಕ್ಕೂ ಮತ್ತು ಇನ್ನೂ ಹೆಚ್ಚಿನದಕ್ಕೆ ಹಾನಿಯುಂಟು ಮಾಡಬೇಕಾಗುತ್ತದೆ. ಶಸ್ತ್ರಗಾರಗಳಲ್ಲಿ ಮತ್ತು ದಂಡು ಪ್ರದೇಶಗಳಲ್ಲಿ ಅವರು ಜೊತೆ ಸೇರುವುದು ಅವರ ಕೆಲಸವನ್ನು ಸಲೀಸು ಮಾಡಿಬಿಡುತ್ತದೆ; ತಮ್ಮನ್ನು ಮುನ್ನಡೆಸಬಲ್ಲ ಯೋಗ್ಯ ನಾಯಕರಾರು ಎನ್ನುವುದನ್ನು ತಿಳಿಯುವುದು ಅವರಿಗೆ ಅಂತ ಕಷ್ಟದ ಕೆಲಸವೇನಲ್ಲ; ಅವರ ಸಹನೆ, ಅವರ ಶಿಸ್ತಿನ ಅಭ್ಯಾಸ ಮತ್ತು ಯುದ್ಧದಲ್ಲಿ ಅವರ ಅನುಭವಗಳೆಲ್ಲವೂ ಅವರಿಗೆ ಯಶ ತಂದು ಕೊಡುವ ಎಲ್ಲಾ ಸಾಧ್ಯತೆಗಳಿವೆ; ಅಧಿಕಾರ ಮತ್ತು ಸ್ವಾತಂತ್ರ್ಯದೆಡೆಗಿನ ಪ್ರೀತಿ ಅವರನ್ನು ಉತ್ತೇಜಿಸುತ್ತದೆ, ಹಾಗೂ ಹಣದಾಸೆ ಮತ್ತು ಮಹತ್ವಾಕಾಂಕ್ಷೆಗಳು ಅವರ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಂತೆ ಮಾಡುತ್ತದೆ. ಈ ಪ್ರಯತ್ನಗಳು ಅಪಾಯಕಾರಿ ಎಂಬ ಬಗ್ಗೆ ಅನುಮಾನ ಬೇಡ; ಆದರೆ ಶ್ರೀಮಂತ ರಾಜ್ಯದ ಸಂಬಂಧವಾಗಿ ನಡೆಯುತ್ತಿರುವ ಸ್ಪರ್ಧೆಯಾದ್ದರಿಂದ ಆ ಅಪಾಯಗಳು ಅವರನ್ನು ಹಿಮ್ಮೆಟ್ಟಿಸಲಾರದು. ಅವರು ತಮ್ಮ ಮೊದಲ ಯತ್ನಗಳಲ್ಲಿ ವಿಫಲವಾಗಬಹುದು, ಆದರೆ ಅವರ ವಿಫಲತೆಯೂ ಸಹಿತ, ಕೇಂದ್ರ ಸರಕಾರವಾದ ನಮ್ಮ ಅಧಿಕಾರದ ಬುಡವನ್ನೇ ಅಲುಗಾಡಿಸಿಬಿಡುತ್ತದೆ. ಸೈನ್ಯದಲ್ಲಿನ ಅವಿಧೇಯತೆ ತಾತ್ಕಾಲಿಕ ಕಾರಣಕ್ಕಾಗಿ ಆಗಿದ್ದರೆ ಅದನ್ನು ನಿವಾರಿಸಿಬಿಡಬಹುದು, ಆದರೆ ಸೈನಿಕ ಪಡೆಯಲ್ಲಿನ ಗುಣ – ವ್ಯಕ್ತಿತ್ವದಲ್ಲಾಗುವ ಬದಲಾವಣೆಯಿಂದ ಮೂಡುವ ಅವಿಧೇಯತೆ, ವ್ಯವಸ್ಥಿತ ರೀತಿಯಲ್ಲಿ ವಿರೋಧಿಸುವ ಗುಣ ಮೂಡಿಸುತ್ತದೆ, ಅದನ್ನು ಹತ್ತಿಕ್ಕಲಾಗುವುದಿಲ್ಲ, ನಮ್ಮ ವರ್ತಮಾನದ ಏಳ್ಗೆಯನ್ನು ನಾವು ಮತ್ಯಾವತ್ತೂ ಮರಳಿ ಪಡೆಯಲಾಗುವುದಿಲ್ಲ; ಅವರು ನಮ್ಮ ಮೇಲಿಟ್ಟಿರುವ ಎಲ್ಲಾ ನಂಬಿಕೆಗಳೂ ನಾಶವಾಗಿಬಿಡುತ್ತದೆ; ಕೊನೆಗೊಮ್ಮೆ ಯಶಸ್ಸು ಸಿಗುವವರೆಗೂ ಅವರು ಪಟ್ಟು ಸಡಿಲಿಸದೆ ತಮ್ಮ ಕಾರ್ಯಗಳನ್ನು ಮಾಡಬಹುದು; ಮತ್ತು ಒಂದು ರಕ್ತಪಿಪಾಸು ಅಂತರ್ಯುದ್ಧದ ನಂತರ, ಅಥವಾ ಸಾಲು ಸಾಲು ಬಂಡಾಯ ಮತ್ತು ಸಾಮೂಹಿಕ ಹತ್ಯೆಯ ನಂತರ, ನಾವು ದೇಶವನ್ನು ಬಿಡಬೇಕಾದ ಪರಿಸ್ಥಿತಿ ಬರಬಹುದು”. (21) 

ಇದು ಖಂಡಿತವಾಗಿ 1857ರ ಪೂರ್ವ ನಿರೀಕ್ಷಣೆ, 1806ರಲ್ಲಿ ವೆಲ್ಲೂರಿನಲ್ಲಿ ನಡೆದಿದ್ದು ಅದರ ಪ್ರಾರಂಭವಷ್ಟೇ. ಮಾವೋ ಹೇಳುತ್ತಾರೆ: “ಎಲ್ಲಾ ಸಾಮ್ರಾಜ್ಯವಾದಿಗಳೂ ಕಾಗದದ ಮೇಲಿನ ಹುಲಿಗಳು”. “ಯುದ್ಧ” ಅಥವಾ “ಸಾಲು ಸಾಲು ಬಂಡಾಯಗಳು” ವಸಾಹತುಶಾಹಿಯನ್ನು ಗುರಿ ಮಾಡಿಕೊಂಡಾಗ ಬ್ರಿಟೀಷರು ಭಾರತವನ್ನು ಆಳಲು ಸಾಧ್ಯವೇ ಇಲ್ಲ, ಈ ನೆಲದಿಂದ ವಿದೇಶಿಗರು ಕೊನೆಗೆ ಹೊರಗೋಗಲೇ ಬೇಕಾಗುತ್ತದೆ ಎಂದು ಮಾನ್ಯತೆ ಪಡೆದ ವಸಾಹತುಶಾಹಿ ಥಾಮಸ್ ಮನ್ರೋನಂತವರೇ ಒಪ್ಪಿಕೊಳ್ಳುವುದು ಮಾವೋನ ಅಭಿಪ್ರಾಯವನ್ನು ಧೃಡೀಕರಿಸುತ್ತದೆ.

ಮುಂದಿನ ವಾರ:
ಊಳಿಗಮಾನ್ಯ ದೊರೆಗಳು ಮುನ್ನಡೆಸಿದ ಸಶಸ್ತ್ರ ಹೋರಾಟ

ಆಗ 26, 2016

ಮೇಕಿಂಗ್ ಹಿಸ್ಟರಿ: ಸೈನ್ಯದ ಮುನ್ನಡೆ

Making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
26/08/2016
ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದಲ್ಲಿ ನೋಡಿದಂತೆ (1) ಮೈಸೂರು ಸೈನ್ಯಕ್ಕೆ ವಸಾಹತು ವಿರೋಧಿ ಯುದ್ಧದಲ್ಲಿ ದೊಡ್ಡ ಪರಂಪರೆಯೇ ಇದೆ. ಇದರ ಕಾರಣದಿಂದಾಗಿ, ಸೈನಿಕರಲ್ಲಿ ಗಮನಾರ್ಹ ಮಟ್ಟದ ವಸಾಹತು ವಿರೋಧಿ ಪ್ರಜ್ಞೆಯಿದೆ. ಈ ವಸಾಹತು ವಿರೋಧಿ ಭಾವನೆಗಳು ಶ್ರೀರಂಗಪಟ್ಟಣ ಕುಸಿತ ಕಂಡ ಕೆಲ ದಿನಗಳಲ್ಲೇ ಗಮನಕ್ಕೆ ಬಂತು. ನಗರ ಕುಸಿದರೂ ಸಹಿತ, ಮೀರ್ ಸಾದಿಕ್ ನಂತಹ ವಿದ್ರೋಹಿಗಳನ್ನು ಶಿಕ್ಷಿಸಲಾಯಿತು. ನಂತರದಲ್ಲಿ, ಎಲ್ಲೋ ಕಮ್ರುದ್ದೀನಿನಂತಹ ಕೆಲವು ಅಧಿಕಾರಿಗಳನ್ನು ಬಿಟ್ಟರೆ ಇಡೀ ಸೈನ್ಯ ಸೋಲನ್ನು ಒಪ್ಪಿಕೊಂಡಾಗ್ಯೂ ಬ್ರಿಟಿಷರಿಗೆ ಸಹಕರಿಸಲು ನಿರಾಕರಿಸಿತ್ತು. ಸೈನಿಕರನ್ನು ವಸಾಹತು ಸೈನ್ಯಕ್ಕೆ ಸೇರಿಸಿಕೊಳ್ಳುವ ಎಲ್ಲಾ ಪ್ರಯತ್ನಗಳನ್ನೂ ಬಹಿಷ್ಕರಿಸಲಾಗಿತ್ತು. ಸೈನ್ಯಕ್ಕೆ ಸೇರಿಸಿಕೊಳ್ಳುವ ಎಲ್ಲಾ ಪ್ರಯತ್ನಗಳನ್ನೂ ಹೇಗೆ ಸೈನಿಕರ ಸಮೂಹ ನಿರಾಕರಿಸಿತು, ನಿರುದ್ಯೋಗಿಯಾಗಿ ಹಳ್ಳಿಗಳಿಗೆ ಬಲವಂತಾಗಿ ವಲಸೆ ಹೋಗಿ ಕೂಲಿಯಾಳಾದರೂ ಪರವಾಯಿಲ್ಲ ಬ್ರಿಟನ್ ಸೈನ್ಯ ಸೇರುವುದಿಲ್ಲ ಎಂದು ನಿರ್ಧರಿಸಿದ ಬಗ್ಗೆ ಬುಚನನ್ ನಮಗೆ ತಿಳಿಸುತ್ತಾರೆ. ಹೆಚ್ಚಿನ ಸಂಖೈ ಮುಸ್ಲಿಂ ಸೈನಿಕರಿದ್ದ ಸೈನ್ಯ, ದೊಡ್ಡ ತ್ಯಾಗಗಳನ್ನು ಮಾಡಲು ಸಿದ್ಧವಾಗಿತ್ತು; ಟಿಪ್ಪುವಿನ ಪತನದ ನಂತರ ದೇಶಭಕ್ತಿಯನ್ನು ತೋರಿದ ಮೊದಲಿಗರಿವರು ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಈ ನಿಯತ್ತು ಇದ್ದಕ್ಕಿದ್ದಂತೆ ಮೂಡಿಬಿಟ್ಟಿದ್ದಲ್ಲ. ಇದು ನಾಲ್ಕು ದಶಕಗಳಿಂದ ಸುಧಾರಣೆ ಕಂಡಿದ್ದ ಮೈಸೂರು ಸೈನ್ಯದ ಪರಂಪರೆ. ಯುದ್ಧದ ಸಂಕಷ್ಟದ ಸಮಯದಲ್ಲೂ ಓಡಿಹೋಗದೆ ಬ್ರಿಟೀಷರನ್ನು ಅಚ್ಚರಿಗೊಳಿಸಿದ ಸೈನ್ಯವಿದು. ಟಿಪ್ಪುವಿನ ಹತ್ಯೆ ಸೈನಿಕರಲ್ಲಿನ ರೋಷವನ್ನು ಮತ್ತಷ್ಟು ಹೆಚ್ಚಿಸಿತ್ತಷ್ಟೇ. ವಸಾಹತು ಆಕ್ರಮಣದ ಬಗೆಗಿನ ಈ ಆಳದಲ್ಲಿನ ಸಿಟ್ಟೇ ಬ್ರಿಟೀಷರ ವಿರುದ್ಧ ಸಶಸ್ತ್ರ ಹೋರಾಟ ನಡೆಸಲು ಸೈನಿಕರನ್ನು ಕ್ರೋಡೀಕರಿಸಿ ಪ್ರೇರೇಪಿಸಿದ ಪ್ರಮುಖ ಅಂಶ. ಮೈಸೂರು ಸೈನ್ಯದಲ್ಲಿ ಕುದುರೆ ಓಡಿಸುವವನಾಗಿದ್ದ, ಅತಿಯಾಸೆಗಳ ಕಾರಣಕ್ಕೆ ಟಿಪ್ಪುವಿನಿಂದ ಬಂಧನಕ್ಕೊಳಗಾಗಿದ್ದ ದೊಂಡಿಯಾ ವಾಗ್ ನಂತವರೂ ಕೂಡ ಈ ಪ್ರತಿರೋಧದಲ್ಲಿ ಸಕ್ರಿಯರಾಗಿದ್ದರು. ಹೈದರ್ ಮತ್ತು ಟಿಪ್ಪು ಕಟ್ಟಿದ್ದ ಕೇಂದ್ರೀಕೃತ ಸರಕಾರದಲ್ಲಿ ಸೈನ್ಯವೇ ಪ್ರಮುಖವಾಗಿತ್ತು. ಅದು ತನ್ನ ಸದಸ್ಯರಲ್ಲಿ ಊಳಿಗಮಾನ್ಯ ಪಾಳೇಗಾರ ಶಕ್ತಿಗಳು ಬೆಳೆಸಿದ ಪ್ರಜ್ಞೆಗಿಂತ ಬಹಳ ಭಿನ್ನವಾದ ಪ್ರಜ್ಞೆಯನ್ನು ಬೆಳೆಸಿತ್ತು. ಆಧುನಿಕ ಮತ್ತು ಕೇಂದ್ರೀಕೃತವಾಗಿದ್ದ ಮೈಸೂರು ಸೈನ್ಯ, ತನ್ನ ವಿವಿಧ ಇಲಾಖೆಗಳ ನಡುವೆ ಅತ್ಯಂತ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುತ್ತಿತ್ತು. ಈ ಹೊಂದಾಣಿಕೆಯ ಪ್ರಯತ್ನಗಳು ಅದರ ಸದಸ್ಯರಲ್ಲೂ ಕಂಡುಬರುತ್ತಿತ್ತು ಮತ್ತು ಮಾಜಿ ಸೈನಿಕರು ಬ್ರಿಟೀಷರ ವಿರುದ್ಧ ಮುಂದಾಳತ್ವ ವಹಿಸಿ ನಡೆಸಿದ ಹೋರಾಟದಲ್ಲೂ, ಬ್ರಿಟೀಷರ ವಿರುದ್ಧ ಹೋರಾಡುತ್ತಿದ್ದ ಇನ್ನಿತರೆ ಊಳಿಗಮಾನ್ಯ ಶಕ್ತಿಗಳನ್ನು ಒಂದುಗೂಡಿಸುವ ಪ್ರಯತ್ನಗಳನ್ನು ಕಾಣಬಹುದು. ಮಾಜಿ ಸೈನಿಕರು – ಅದು ದೊಂಡಿಯಾ ಇರಬಹುದು ಅಥವಾ ದಕ್ಷಿಣ ಕನ್ನಡದ ಸುಬ್ಬಾ ರಾವ್ ಮತ್ತು ತಿಮ್ಮಾನಾಯಕರಿರಬಹುದು – ಪಾಳೇಗಾರರ ನಡುವಿನ ಹೊಂದಾಣಿಕೆಗೆ ಕೇಂದ್ರಬಿಂದುವಾದರು. ಮತ್ತೊಂದೆಡೆ, ಪಾಳೇಗಾರರ ಜೀವನ ಶೈಲಿ ಮತ್ತವರ ಯುದ್ಧತಂತ್ರಗಳು ಯಾವಾಗಲೂ ಮುಚ್ಚಿದ ಬಾಗಿಲಿನಿಂದೆ ಕಿರಿದಾಗಿರುತ್ತಿತ್ತು. 

1. ದೊಂಡಿಯಾ ವಾಗನ ಬಂಡಾಯ ಸೈನ್ಯ (1799 – 1800) 

ದೊಂಡಿಯಾ ಶಿವಮೊಗ್ಗದ ಚೆನ್ನಗಿರಿಯವನು. ತನ್ನ ಸೇನಾ ಸಾಮರ್ಥ್ಯವನ್ನು ಪಟವರ್ಧನರಿಗೆ, ಕೊಲ್ಲಾಪುರದ ರಾಜನಿಗೆ ಮತ್ತು ಧಾರವಾಡದ ಲಕ್ಷ್ಮೇಶ್ವರ ದೇಸಾಯಿಗೆ ಸಲ್ಲಿಸಿದ ಸೇವೆಯಲ್ಲಿ ಸಾಬೀತು ಪಡಿಸಿದ್ದ.(2) ಹೈದರ್ 1780ರಲ್ಲಿ ಉತ್ತರ ಕರ್ನಾಟಕದಲ್ಲಿ ನಡೆಸುತ್ತಿದ್ದ ಕಾರ್ಯಾಚರಣೆಯೊಂದರ ಸಂದರ್ಭದಲ್ಲಿ ದೊಂಡಿಯಾನ ಸಂಪರ್ಕಕ್ಕೆ ಬಂದ ನಂತರ ಆತನನ್ನು ಮೈಸೂರು ಸೈನ್ಯಕ್ಕೆ ಕುದುರೆಸವಾರನಾಗಿ ಆಯ್ಕೆಮಾಡಿದ, ಅದೇ ಸಮಯದಲ್ಲಿ ಆತನನ್ನು ಇಸ್ಲಾಮಿಗೆ ಮತಾಂತರಿಸಿದ. 1792ರ ಮೂರನೇ ವಸಾಹತು ವಿರೋಧಿ ಯುದ್ಧದ ಸಂದರ್ಭದಲ್ಲಿ, ದೊಂಡಿಯಾ ಸೈನ್ಯವನ್ನು ತೊರೆದು ಧಾರವಾಡದಲ್ಲಿ ಸ್ವತಂತ್ರವಾಗಿ ಅಸ್ತಿತ್ವ ಕಂಡುಕೊಳ್ಳಲು ಪ್ರಯತ್ನಿಸಿದ. 1794 ರಲ್ಲಿ ಟಿಪ್ಪು ಮತ್ತೆ ಅವನ ಮನಸ್ಸನ್ನು ಗೆದ್ದು ಸೈನ್ಯದಲ್ಲಾತನಿಗೆ ಬಡ್ತಿ ನೀಡಿದ. ಆದರೆ ಕೆಲವೇ ಸಮಯದಲ್ಲಿ, ತನ್ನದೇ ಸ್ವಂತ ಸಾಮ್ರಾಜ್ಯವನ್ನು ಸ್ಥಾಪಿಸಬೇಕೆಂಬ ದೊಂಡಿಯಾನ ಆಸೆ, ಅವನಿಗೆ ಜೈಲಿನ ಹಾದಿ ತೋರಿಸಿತು; ಅಲ್ಲವನಿಗೆ ಸಣ್ಣ ಮೊತ್ತದ ವೇತನ ನೀಡಲಾಗುತ್ತಿತ್ತು. ಶ್ರೀರಂಗಪಟ್ಟಣದ ಕುಸಿತದೊಂದಿಗೆ, ಇತರೆ ಖೈದಿಗಳ ಜೊತೆಗೆ ದೊಂಡಿಯಾನನ್ನೂ ಬಿಡುಗಡೆ ಮಾಡಲಾಯಿತು. ಅರವತ್ತರ ವಯಸ್ಸಿನಲ್ಲಿ ಸ್ವತಂತ್ರಗೊಂಡ ದೊಂಡಿಯಾ, ಶ್ರೀರಂಗಪಟ್ಟಣವನ್ನು ತೊರೆದು ಸೈನ್ಯವನ್ನು ಕಟ್ಟಲಾರಂಭಿಸಿ ಬ್ರಿಟೀಷರನ್ನು ಸದೆಬಡಿಯಬೇಕೆಂದುಕೊಂಡಿದ್ದ ಎಲ್ಲಾ ಪಾಳೇಗಾರರನ್ನು ಸೇರಿಸಿ ಒಂದು ರಾಜಕೀಯ ಒಕ್ಕೂಟವನ್ನು ರಚಿಸಲಾರಂಭಿಸಿದ. 

ಕೆ.ರಾಜಯ್ಯಮರ South Indian Rebellion ಮತ್ತವರ Rise and fall of the Palegaras of Tamil Nadu ಪುಸ್ತಕ ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಮಹಾರಾಷ್ಟ್ರದ ಪಾಳೇಗಾರರ ಒಕ್ಕೂಟದ ಬಗ್ಗೆ ಒಂದು ಸ್ಥೂಲ ಚಿತ್ರಣವನ್ನು ನೀಡುತ್ತದೆ. ಈ ಪ್ರದೇಶಗಳನ್ನು ಒಂದಾಗಿಸಲು ದೊಂಡಿಯಾ ವಹಿಸಿದ ಪಾತ್ರ ಹಿರಿದು. ಹಾಗಾಗ್ಯೂ, ಒಂದೆಡೆ ಪ್ರದೇಶದ ವಿಸ್ತೀರ್ಣತೆ ಮತ್ತು ಒಕ್ಕೂಟದಲ್ಲಿ ಎಲ್ಲಾ ಸೈನ್ಯಗಳ ದುರ್ಬಲತೆಗಳು ಮತ್ತೊಂದೆಡೆ ಅವರಲ್ಲಿದ್ದ ವರ್ಗಾಧಾರಿತ ಮಿತಿಗಳು ಈ ಒಕ್ಕೂಟವನ್ನು ಅದಕ್ಷವನ್ನಾಗಿ ಮಾಡಿಬಿಟ್ಟಿತು, ಸಮನ್ವತೆಯಿಂದ ಏಕತೆಯಿಂದ ಕಾರ್ಯನಿರ್ವಹಿಸಲು ವಿಫಲವಾಯಿತು. 

ಶ್ರೀರಂಗಪಟ್ಟಣ ತೊರೆದ ನಂತರ, ದೊಂಡಿಯಾ ಹಾಸನದ ಮಲೆನಾಡಿನ ಐಗೂರಿಗೆ ಹೋಗಿ ಅಲ್ಲಿನ ಪಾಳೇಗಾರರೊಂದಿಗೆ ಮಾತುಕತೆ ನಡೆಸಿ ಅಲ್ಲಿಂದ ಉತ್ತರಕ್ಕಿದ್ದ ಮರಾಠ ಪ್ರಾಂತ್ಯಕ್ಕೆ ತೆರಳಿದ. ರಾಜಯ್ಯಮ್ ಹೇಳುತ್ತಾರೆ: “ಅಲ್ಲಿಂದ ಟಿಪ್ಪುವಿನ ಸೈನ್ಯದಲ್ಲಿ ಕಾರ್ಯನಿರ್ವಹಿಸಿದ್ದ ಸರದಾರರೊಡನೆ ಪತ್ರವ್ಯವಹಾರ ನಡೆಸಿ, ಸಶಸ್ತ್ರ ಸೈನಿಕರ ತಂಡವನ್ನು ಮತ್ತು ಮೈಸೂರು ಸೈನ್ಯದ ಉಳಿಕೆಯಿಂದ ಐದು ಸಾವಿರ ಕುದುರೆಗಳನ್ನು ಒಟ್ಟುಗೂಡಿಸಿದ….. ಹೆಚ್ಚುಕಡಿಮೆ ಮೈಸೂರಿನ ಎಲ್ಲಾ ಮುಸ್ಲಿಮರೂ ಬಂಡಾಯಗಾರರ ಜೊತೆಗೆ ಗುರುತಿಸಿಕೊಂಡರು. ದೊಂಡೋಜಿ ವಾಗ್ ಶಿವಮೊಗ್ಗವನ್ನಾಕ್ರಮಿಸಿ ತಮ್ಮನ್ನು ತಾವೇ ‘ಎರಡು ಪ್ರಪಂಚದ ರಾಜ’ನೆಂದು ಘೋಷಿಸಿಕೊಂಡರು.’ 

ಶಿವಮೊಗ್ಗದಲ್ಲಿ ಕೇಂದ್ರ ಕಛೇರಿಯನ್ನು ಸ್ಥಾಪಿಸಿದ ನಂತರ, ದೊಂಡಾಜಿ ವಾಗ್ ಮೈಸೂರಿನಿಂದ ಬ್ರಿಟೀಷ್ ಅಧಿಕಾರವನ್ನು ಕಿತ್ತೊಗೆಯಲು ತಂತ್ರಗಳನ್ನು ರೂಪಿಸಿದ. ವಾಯುವ್ಯದಲ್ಲೊಂದಷ್ಟು ಸುಲಿಗೆ ಮಾಡಿ, ಬ್ರಿಟೀಷ್ ಸಂಗ್ರಹದಲ್ಲಿದ್ದ ಯುದ್ಧ ಸಾಮಗ್ರಿಗಳನ್ನು ವಶಪಡಿಸಿಕೊಂಡು ತನ್ನದೇ ಸ್ವಂತ ಫಿರಂಗಿ ದಳವನ್ನು ರಚಿಸಿದ. ಇದರ ನಂತರ ಕಂಪನಿಯಿಂದ ನಗರ ಮತ್ತು ಬೆದನೂರನ್ನು ವಶಪಡಿಸಿಕೊಳ್ಳಲಾಯಿತು. ಬಂಡಾಯಗಾರರ ಒಂದು ತಂಡ ಪೂರ್ವಕ್ಕೆ ತೆರಳಿ ನಿಜಾಮನ ಸಾಮ್ರಾಜ್ಯದಲ್ಲಿ ಗೂಟಿಯನ್ನು ವಶಪಡಿಸಿಕೊಂಡರು. ಮೈಸೂರಿನಲ್ಲಿದ್ದ ಬ್ರಿಟೀಷ್ ಸೈನ್ಯದ ಕಮಾಂಡರ್ ಕೊಲೊನಲ್ ವೆಲ್ಲೆಸ್ಲಿಯನ್ನು ಅಪಹರಿಸಲು ಯೋಜನೆಗಳನ್ನು ಹಾಕಿದ…. ಸೋತ ಸುಲ್ತಾನನ ಉದ್ದಿಶ್ಯಗಳನ್ನು ತೊರೆದು ಹೋಗಿದ್ದ ಪೂರ್ಣಯ್ಯನನ್ನು ಕೊಲೆ ಮಾಡುವ ಸಂಚು ರೂಪಿಸಿದ….” (3) 

ಜೂನ್ 1799ರಲ್ಲಿ, ಮೈಸೂರು ಸಾಮ್ರಾಜ್ಯ ಕುಸಿದ ಎರಡೇ ತಿಂಗಳಿನಲ್ಲಿ ದೊಂಡಿಯಾ ಸೈನಿಕ ದಾಳಿಯನ್ನಾರಂಭಿಸಿ ದೊಡ್ಡ ಪ್ರದೇಶವನ್ನೇ ವಶಪಡಿಸಿಕೊಂಡಿದ್ದ; ವರುಷ ಕಳೆಯುವುದರಳೊಗೆ ಶಿವಮೊಗ್ಗ, ಚಿತ್ರದುರ್ಗ, ಧಾರವಾಡ ಮತ್ತು ಬಳ್ಳಾರಿ ಜಿಲ್ಲೆಯ ಬಹುಭಾಗಗಳು ದೊಂಡಿಯಾನ ವಶದಲ್ಲಿತ್ತು. ಜೂನ್ 1800ರಲ್ಲಿ, ದೊಂಡಿಯಾನ ಪಡೆಗಳು ಹತ್ತು ಸಾವಿರ ಅಶ್ವಾರೋಹಿಗಳು, ಐದು ಸಾವಿರ ಕಾಲಾಳುಗಳು ಮತ್ತು ಎಂಟು ಗನ್ನುಗಳನ್ನೊಂದಿದ್ದ ಮರಾಠಾ ಕಮಾಂಡರ್ ದೊಂಡೋಜಿ ಪಂತ್ ಗೋಕಲೆಯನ್ನು ಕೊಂದು ಹಾಕಿದರು.(4) ರಾಮದುರ್ಗ, ಸೊಲ್ಲಾಪುರ, ಕೊಲ್ಲಾಪುರ, ಆನೆಗುಂದಿ ಮತ್ತು ಗ್ವಾಲಿಯರ್ರಿನ ರಾಜರ ಬೆಂಬಲವನ್ನೂ ಗಳಿಸಿಕೊಂಡ. (5) 

ಕೇವಲ ಇನ್ನೂರು ಅಶ್ವಾರೋಹಿಗಳಿಂದ ಪ್ರಾರಂಭಗೊಂಡ ದೊಂಡಿಯಾನ ಸೈನ್ಯ, (6) ಚಿಕ್ಕ ಸಮಯದಲ್ಲೇ 5,000 ಅಶ್ವಾರೋಹಿಗಳಷ್ಟಾಯಿತು ಮತ್ತು ಉತ್ತುಂಗದ ದಿನಗಳಲ್ಲಿ 70,000 ದಿಂದ 80,000 ದಷ್ಟಿತ್ತು. (7) 

ಈ ಗಮನಾರ್ಹ ಬೆಳವಣಿಗೆಗೆ ಮತ್ತು ತತ್ ಕ್ಷಣದ ನೇಮಕಕ್ಕೆ ಕಾರಣ ಮೈಸೂರಿನ ಸೈನಿಕರು ದೊಂಡಿಯಾನ ಸೈನ್ಯ ಸೇರಲು ಮೆರವಣಿಗೆ ಹೊರಟಿದ್ದು. ಶ್ರೀರಂಗಪಟ್ಟಣದ ಸೋತ ಸೈನಿಕರು ತಮ್ಮ ಶಸ್ತ್ರಾಸ್ತ್ರಗಳನ್ನು ಉಳಿಸಿಕೊಂಡಿದ್ದರು, ಅಶ್ವಾರೋಹಿಗಳು ತಮ್ಮ ಕುದುರೆಗಳನ್ನು. ಅವರು ದೊಡ್ಡ ಸಂಖೈಯಲ್ಲಿ ವಲಸೆ ಹೋದರು ಮತ್ತು ಬ್ರಿಟೀಷರಿಗೆ ಸೋತಿಲ್ಲದ ಕೋಟೆಗಳಲ್ಲೆವೂ ತಮ್ಮ ದಿಡ್ಡಿ ಬಾಗಿಲುಗಳನ್ನು ತೆರೆದು ದೊಂಡಿಯಾನ ಸೈನ್ಯವನ್ನು ಸ್ವಾಗತಿಸಿ ಅವನೊಡನೆ ಕೈಜೋಡಿಸಿದವು. 

ಶ್ರೀರಂಗಪಟ್ಟಣ ಮೇ 1799ರಲ್ಲಿ ಕುಸಿದು ಬಿದ್ದರೂ, ಅದು ಬ್ರಿಟೀಷರಿಗೆ ಸಿಕ್ಕ ಗೆಲುವಾಗಿತ್ತೇ ಹೊರತು ಮೈಸೂರು ಸೈನ್ಯದೊಂದಿಗೆ ಯುದ್ಧ ಕೊನೆಯಾಗಿರಲಿಲ್ಲ. ಕರ್ನಾಟಕದ ದಕ್ಷಿಣಕ್ಕಿದ್ದ, ಪ್ರಮುಖ ಕೇಂದ್ರಗಳಾಗಿದ್ದ ಶ್ರೀರಂಗಪಟ್ಟಣ ಮತ್ತು ಬೆಂಗಳೂರನ್ನು ಬ್ರಿಟೀಷರು ವಶಪಡಿಸಿಕೊಂಡಿದ್ದರು, ಆದರೆ ಕೇಂದ್ರ ಮತ್ತು ಉತ್ತರ ಭಾಗಗಳಿನ್ನೂ ದೊಂಡಿಯಾ ಮತ್ತವನ ಮೈತ್ರಿಯ ಮರಾಠ ಸೈನ್ಯದ ವಶದಲ್ಲಿತ್ತು. 1799ರ ಜೂನ್ ತಿಂಗಳಿನಲ್ಲೇ ಬ್ರಿಟೀಷರು ತಮ್ಮ ಸೈನ್ಯವನ್ನು ದೊಂಡಿಯಾನನ್ನು ಹುಡುಕಿ ಹಿಡಿಯಲಟ್ಟಿದರು, ಮೈಸೂರಿನ ಇತರೆ ಭಾಗಗಳನ್ನೂ ತನ್ನ ವಶಕ್ಕೆ ಪಡೆದುಕೊಳ್ಳುವ ಸಲುವಾಗಿ. 

ಈ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಬ್ರಿಟೀಷರು ಕಳುಹಿಸಿದ್ದು ಕೊಲೊನೆಲ್ ವೆಲ್ಲೆಸ್ಲಿಯನ್ನು. ಬ್ರಿಟೀಷ್ ಆಳ್ವಿಕೆ ಪೂರ್ಣವಾಗಿ ಸಂಯೋಜಿತಗೊಳ್ಳತೇ ಇದ್ದುದರಿಂದ ಉಂಟಾದ ಗಂಭೀರ ಪರಿಸ್ಥಿತಿಯು ಮನ್ರೋ ವೆಲ್ಲೆಸ್ಲಿಗೊಂದು ಪತ್ರ ಬರೆಯುವಂತೆ ಮಾಡುತ್ತದೆ: “ದೊಂಡಿಯಾ ಸ್ವತಂತ್ರ ಮತ್ತು ಶಕ್ತಿಶಾಲಿ ರಾಜನಾಗುವುದರಲ್ಲಿ ಮತ್ತು ಕ್ರೂರ ವಿಶ್ವಾಸಘಾತುಕ ಸುಲ್ತಾನರನ್ನೊಳಗೊಂಡ ಸಾಮ್ರಾಜ್ಯದ ಸ್ಥಾಪಕನಾಗುವುದರಲ್ಲಿ ಯಾವುದೇ ಅನುಮಾನ ಬೇಡ” (8) (ಬ್ರೀಟಿಷರೆಡೆಗೆ “ಕ್ರೂರ” ಮತ್ತು ಬ್ರಿಟೀಷರ ಆಕ್ರಮಣಶಾಲಿತನಕ್ಕೆ “ವಿಶ್ವಾಸಘಾತುಕ”ತನ ಎಂಬುದು ವಸಾಹತುಶಾಹಿಗಳ ಇಂತಹ ಹಲವಾರು ಹೇಳಿಕೆಗಳನ್ನು ಓದಿರುವ ನಮ್ಮ ಓದುಗರಿಗೆ ಇಷ್ಟೊತ್ತಿಗೆ ಅರ್ಥವಾಗಿರಬೇಕು) 

ದೊಂಡಿಯಾನ ಪಡೆಗಳ ಮುಖಂಡನನ್ನು ಏಕಾಂಗಿಯಾಗಿಸಿ ಕುಗ್ಗಿಸಬೇಕೆಂಬ ಬ್ರಿಟೀಷರ ಕಾರ್ಯತಂತ್ರದ ಕಾರಣ ಅವರು ದೊಂಡಿಯಾನ ವಿರುದ್ಧ ಜೂನ್ 1799ರಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದರು. ಆದಾಗ್ಯೂ, ಹಲವಾರು ಕದನಗಳವರಿಗೆ ಬೇಕಾಯಿತು ಮತ್ತು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡ ನಂತರವಷ್ಟೇ ಅವರಿಗೆ ದೊಂಡಿಯಾನ ಪಡೆಗಳನ್ನು ಸೋಲಿಸಲಾಗಿದ್ದು ಮತ್ತು ರಾಯಚೂರಿನ ಕೃಷ್ಣಾ ನದಿ ತೀರದಲ್ಲಿ ದೊಂಡಿಯಾನನ್ನು ಕೊನೆಗೊಳಿಸಲಾಗಿದ್ದು. 

ಬ್ರಿಟೀಷರ ಕಾರ್ಯತಂತ್ರವೆಂದರೆ, ಮನ್ರೋನ ಸಿಹಿ ತುಂಬಿದ ಶಬುದಗಳಾದ ‘ಕ್ರೂರ’ ಮತ್ತು ‘ವಿಶ್ವಾಸಘಾತುಕ’ ಪದಗಳನ್ನು ಉಪಯೋಗಿಸಿಕೊಳ್ಳುವುದು. 1799ರ ಜುಲೈ 14ರಂದು ಡಾರ್ಲಿಂಪೈಲ್ ನೇತೃತ್ವದಲ್ಲಿ ಚಿತ್ರದುರ್ಗವನ್ನು ವಶಪಡಿಸಿಕೊಂಡಾಗ, ಅವರಿಗೆ ದೊಂಡಿಯಾನ ಸೈನ್ಯವೊಂದು ಎದುರಾಯಿತು, ಈ ಸೈನ್ಯವನ್ನು ಶಾಮ ರಾವ್ ಹೇಳುವಂತೆ, “ತಕ್ಷಣ ದಾಳಿ ಮಾಡಿಲಾಯಿತು, ಸೋಲಿಸಾಯಿತು ಮತ್ತು ಚದುರಿಸಲಾಯಿತು……ಬಂಧಿತರಾದ ನಲವತ್ತು ಜನರಲ್ಲಿ ಮೂವತ್ತೊಂಭತ್ತು ಮಂದಿಯನ್ನು ನೇಣಿಗೇರಿಸಲಾಯಿತು ಮತ್ತು ಒಬ್ಬನನ್ನು ಬಿಡುಗಡೆ ಮಾಡಲಾಯಿತು. ಬಿಡುಗಡೆ ಮಾಡಿದಾತ ತನ್ನ ಜೊತೆಗಾರ ನೇಣಿಗೇರಿದ್ದಕ್ಕೆ ಸಾಕ್ಷಿಯಾಗಿದ್ದ, ದೊಂಡಿಯಾನ ಜನರಿಗೆ ಆದ ಈ ವಿಧಿಯನ್ನು ಊರೂರುಗಳಲ್ಲಿ ಹೇಳಿ ಭಯಭೀತಿಯ ವಾತಾವರಣ ಸೃಷ್ಟಿಸುವ ಸಲುವಾಗಿಯೇ ಆತನನ್ನು ಬಿಡುಗಡೆ ಮಾಡಲಾಗಿತ್ತು”. (9) 

ಒಂದು ವರುಷದವರೆಗೆ ರಕ್ತ ಹರಿಸಿದ ಯುದ್ಧಗಳಲ್ಲಿ ಬ್ರಿಟೀಷ್ ಸೈನ್ಯ ಭಾಗವಹಿಸಿದಾಗ್ಯೂ ಮತ್ತು ದೊಂಡಿಯಾನ ನಿಯಂತ್ರಣವಿದ್ದ ಹಲವಾರು ಕೋಟೆಗಳನ್ನು – ಉದಾಹರಣೆಗೆ ಹೊನ್ನಾಳಿ, ಶಿಕಾರಿಪುರ ಮತ್ತು ಚೆನ್ನಗಿರಿ - ವಶಪಡಿಸಿಕೊಂಡಾಗ್ಯೂ ಬ್ರಿಟೀಷರಿಗೆ ದೊಂಡಿಯಾನನ್ನು ಕೊನೆಗಾಣಿಸುವುದು ಕಷ್ಟದ ಸಂಗತಿಯಾಗಿತ್ತು. ಈ ಕಾರ್ಯಾಚರಣೆಯ ಬಗ್ಗೆ ನಡೆದ ಬ್ರಿಟೀಷ್ ಸೈನ್ಯದ ಪತ್ರವ್ಯವಹಾರವನ್ನು ಉದ್ಧರಿಸುತ್ತಾ ಶಾಮ ರಾವ್ ಹೇಳುತ್ತಾರೆ ದೊಂಡಿಯಾ “ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತ ಹುಡುಕುತ್ತಿದ್ದ ಶತ್ರುಗಳಿಂದ ಜಾರಿಕೊಳ್ಳುತ್ತಿದ್ದರು ಮತ್ತು ಕದನವನ್ನು ತಪ್ಪಿಸಿಕೊಳ್ಳುತ್ತಿದ್ದರು.” (10) 

ದೊಂಡಿಯಾ ಭೂಭಾಗವನ್ನು ವಶಪಡಿಸಿಕೊಂಡು, ತನ್ನ ಸೈನ್ಯವನ್ನು ಕೋಟೆಯಲ್ಲಿರಿಸಿದರೂ ತಮಗಿಂತ ಉನ್ನತ ಮಟ್ಟದಲ್ಲಿದ್ದ ಬ್ರಿಟೀಷ್ ಸೈನ್ಯದ ವಿರುದ್ಧ ಕೋಟೆಯೊಳಗಿಂದ ಯುದ್ಧಗೈಯಲಿಲ್ಲ. ನಿರ್ಧಾರ ಮಾಡಿಬಿಡುವ ಯುದ್ಧಗಳಲ್ಲಿ ಭಾಗವಹಿಸುವುದೇ ಸಣ್ಣ ಚಕಮಕಿಯ ನಂತರ ಹಿಂದಡಿ ಇಡುತ್ತಿದ್ದರು. ಮೇಲ್ನೋಟಕ್ಕಿದು ದೊಂಡಿಯಾ ವಸಾಹತು ದಾಳಿಯ ಸಮಯದಲ್ಲಿ ಕದನರಂಗದಿಂದ ‘ಓಡಿಹೋಗುತ್ತಿದ್ದರು’ ಎಂದು ತೋರುತ್ತದಾದರೂ, ನಿಜಾರ್ಥದಲ್ಲಿ ದೊಂಡಿಯಾ ತನ್ನ ಸೈನ್ಯ ಬಲವನ್ನು ಉಳಿಸಿಕೊಳ್ಳುತ್ತ ಹೆಚ್ಚೆಚ್ಚು ಸೈನಿಕರನ್ನು ತನ್ನ ಕಡೆಗೆ ಸೇರಿಸಿಕೊಳ್ಳುತ್ತಿದ್ದ, 200 ಅಶ್ವಾರೋಹಿಗಳಿಂದಾರಂಭವಾದ ಪಡೆ 80,000 ಸೈನಿಕರ ಶಕ್ತಿಯುತ ಸೈನ್ಯವಾಯಿತು, ಅದರಲ್ಲಿ 5000ದಷ್ಟು ಕುದುರೆಸವಾರರೇ ಇದ್ದರು. ಸಾವಿರಾರು ಚದುರ ಕಿಮಿಗಳಲ್ಲಿ ಹರಡಿಹೋಗಿದ್ದ ಅರಣ್ಯ, ಕಣಿವೆ ಮತ್ತು ಬಯಲನ್ನುಪಯೋಗಿಸಿಕೊಂಡು ದೊಂಡಿಯಾ ಜಂಗಮ ಯುದ್ಧ ತಂತ್ರವನ್ನು ಅಳವಡಿಸಿಕೊಂಡಿದ್ದ. ಕೋಟೆಯೊಳಗಿನಿಂದ ನಡೆಸುವ ಯುದ್ಧಕ್ಕಿಂತ ಬಯಲಿನ ಕಾರ್ಯಾಚರಣೆಗೆ ಪ್ರಾಮುಖ್ಯತೆ ಕೊಟ್ಟಿದ್ದ. ಶಕ್ತಿಯುತ ಕುದುರೆಸವಾರರ ತಂಡದಿಂದ ಸಬಲವಾಗಿದ್ದ ದೊಂಡಿಯಾನನ್ನು ಹುಡುಕಲು ಮತ್ತವನನ್ನು ಸುತ್ತುವರಿಯಲು ಬ್ರಿಟೀಷರಿಗೆ ಯಾವಾಗಲೂ ಕಷ್ಟವಾಗುತ್ತಿತ್ತು. 

ಆದರೆ ಕೊನೆಗೆ, ದೊಂಡಿಯಾನ ಶಕ್ತಿಯೇ ಅವನ ಸೋಲಿಗೂ ಕಾರಣವಾಗಿಬಿಟ್ಟಿತು. ಎಲ್ಲಿಯವರೆಗೆ ದೊಂಡಿಯಾನ ಪಡೆಗಳು ಚಿಕ್ಕವಾಗಿದ್ದವೋ ಅಲ್ಲಿಯವರೆಗೆ ಅವುಗಳು ವೇಗವನ್ನುಳಿಕೊಂಡಿದ್ದವು ಮತ್ತು ಮಿಂಚಿನ ವೇಗದಲ್ಲಿ ಸ್ಥಳಾಂತರ ಮಾಡುತ್ತ, ಬ್ರಿಟೀಷ್ ಸೈನ್ಯಕ್ಕೆ ಇವರನ್ನುಡುಕುವುದನ್ನು ಅಸಾಧ್ಯವಾಗಿಸಿಬಿಡುತ್ತಿದ್ದವು; ಗೆರಿಲ್ಲಾ ಯುದ್ಧದ ಚಲನಶೀಲತೆಗೆ ಉತ್ತಮ ಉದಾಹರಣೆಯಾಗಿತ್ತು. ದೊಂಡಿಯಾ ತನ್ನ ಸೈನಿಕ ಶಕ್ತಿಯನ್ನು ಹೆಚ್ಚಿಸುತ್ತಿದ್ದಂತೆ ಎಲ್ಲಾ ಪಡೆಗಳನ್ನೂ ಒಂದೇ ತುಕಡಿಯಾಗಿ ರೂಪಿಸಿದನು. ಕುದುರೆಸವಾರರು ಕಾಲಾಳುಗಳ ಜೊತೆಗೆ ಬೆರೆತಿದ್ದರು ಮತ್ತವರು ಆಡಳಿತ ನಡೆಸುತ್ತಿದ್ದವರ ಜೊತೆಗೆ. ಚಲಿಸುವ ಸೈನ್ಯಕ್ಕೆ ಬೇಕಾದ ಸಾಮಗ್ರಿಗಳನ್ನು ಮತ್ತಿತರೆ ವಸ್ತುಗಳನ್ನು ಪೂರೈಸಲು ಮರಾಠ ಸೈನ್ಯದ ಮಾದರಿಯನ್ನು ಉಪಯೋಗಿಸಲಾಗುತ್ತಿತ್ತು. ಈಗ ದೊಂಡಿಯಾನ ಸೈನ್ಯ ಚಲಿಸಲಾರಂಭಿಸಿದರೆ ದಟ್ಟ ಧೂಳೇಳುತ್ತಿತ್ತು ಮತ್ತವನ ಪಡೆ ಕ್ಯಾಂಪು ಮಾಡಿದಾಗ ಒಂದು ಚಿಕ್ಕ ನಗರದಂತೆ ಕಾಣುತ್ತಿತ್ತು. ಇದು ಗೆರಿಲ್ಲಾ ಯುದ್ಧ ತಂತ್ರಕ್ಕೆ ಹೊಂದಾಣಿಕೆಯಾಗದೇ ದೊಂಡಿಯಾನ ಸೈನ್ಯ ಸ್ಥಿರ ಯುದ್ಧವನ್ನು ಅಳವಡಿಸಿಕೊಳ್ಳುವಂತೆ ಮಾಡಿತು. ಆದರೆ ಈ ಹೊಸ ತಂತ್ರವನ್ನು ಕಾರ್ಯರೂಪಕ್ಕೆ ತರಲು ದೊಂಡಿಯಾ ಅಸಮರ್ಥನಾಗಿದ್ದ, ಯಾಕೆಂದರೆ ದೊಂಡಿಯಾ ಪ್ರಾಂತ್ಯವನ್ನು ಏಕೀಕೃತಗೊಳಿಸಿರಲಿಲ್ಲ ಮತ್ತವನ ಬಳಿ ಮೇಲ್ ದರ್ಜೆಯ ಸೈನ್ಯವನ್ನು ಎದುರಿಸಲು ಬೇಕಾದ ಶಸ್ತ್ರಾಸ್ತ್ರಗಳೂ ಇರಲಿಲ್ಲ. ದೊಂಡಿಯಾನ ಸೈನಿಕ ಪಡೆ ಹೆಚ್ಚಾದಷ್ಟೂ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳು ಜಾಸ್ತಿಯಾದವು, ದೊಂಡಿಯಾನನ್ನು ಹುಡುಕುವುದು – ಗುರುತಿಸುವುದು ಸುಲಭವಾಯಿತು. ವೆಲ್ಲೆಸ್ಲಿ ಪಡೆಗಳ ನಿರಂತರ ಕಾರ್ಯಾಚರಣೆಯಿಂದಾಗಿ, ಕೊನೆಗೆ ದೊಂಡಿಯಾ ಕೃಷ್ಣಾ ನದಿಯ ದಂಡೆಗೆ ಬಂದ, ಬಿರುಸಾಗಿ ಹರಿಯುತ್ತಿರುವ ನದಿಯ ಅಂಚಿಗೆ ಬಂದುಬಿಟ್ಟ. ಒಂದೆಡೆ ಆಳ ಸಮುದ್ರ ಮತ್ತೊಂದೆಡೆ ಸೈತಾನನಿಂದ ಸುತ್ತುವರಿದಂತೆ ದೊಂಡಿಯಾನನ್ನು ಸುತ್ತುವರಿಯಲಾಯಿತು ಮತ್ತು ಮೇಲ್ ದರ್ಜೆಯ ಸೈನಿಕ ಪಡೆಯಿಂದ ಅವನನ್ನು ಮಣಿಸಲಾಯಿತು. 1800ರ ಸೆಪ್ಟೆಂಬರ್ 10ರಂದು ದೊಂಡಿಯಾ ಬ್ರಿಟೀಷರ ಎದುರಿನ ಕದನದಲ್ಲಿ ಹುತಾತ್ಮನಾದ. 

ಈ ಪರಿಸ್ಥಿತಿಗಿಂತ ಹೆಚ್ಚೇನೂ ಭಿನ್ನವಲ್ಲದ ಪರಿಸ್ಥಿತಿಯ (ದೆಹಲಿ ಸೋತ ನಂತರ ಬಂಡಾಯ ಸೈನಿಕರು ಹಳ್ಳಿಗಳ ಕಡೆಗೆ ಚದುರಿಹೋದಾಗ) ಬಗ್ಗೆ ಫ್ರೆಡರಿಕ್ ಏಂಜೆಲ್ಸ್ ಬರೆಯುತ್ತಾರೆ: “ಎಲ್ಲಿಯವರೆಗೆ ಬಂಡಾಯ ಸೈನಿಕರು ದೊಡ್ಡ ಸಂಖೈಯಲ್ಲಿದ್ದರೋ, ಎಲ್ಲಿಯವರೆಗೆ ಇದು ಆಕ್ರಮಣದ ಮತ್ತು ದೊಡ್ಡ ಮಟ್ಟದ ತೀಕ್ಷ್ಣ ಯುದ್ಧದ ಪ್ರಶ್ನೆಯಾಗಿತ್ತೋ, ಇಂಗ್ಲೀಷ್ ಪಡೆಗಳಿಗೆ ಇಂತಹ ಕಾರ್ಯಾಚರಣೆಯಲ್ಲಿದ್ದ ಉನ್ನತಿ ಅವರಿಗೆ ಅನುಕೂಲಕರವಾಗಿತ್ತು.” (11)

ಮುಂದಿನ ವಾರ:
ವೆಲ್ಲೂರಿನ ಬಂಡಾಯ

ಆಗ 19, 2016

ಮೇಕಿಂಗ್ ಹಿಸ್ಟರಿ: ಎರಡನೇ ಭಾಗ - ವಸಾಹತುಶಾಹಿಯ ವಿರುದ್ಧ ನಡೆದ ಖ್ಯಾತ ಸಶಸ್ತ್ರ ಹೋರಾಟ (1800-1857)

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
19/08/2016
ಬ್ರಿಟೀಷ್ ವಸಾಹತುಶಾಹಿ ಆಳ್ವಿಕೆಯ ತೀವ್ರತೆ ಜನರ ಕಡೆಯಿಂದ ಆ ತೀವ್ರತೆಯನ್ನು ಸರಿಗಟ್ಟುವ ಪ್ರತಿರೋಧವನ್ನು ಬಯಸಿತು. ಈ ಸತತ ಪ್ರತಿರೋಧವನ್ನು ಮತ್ತು ತನ್ನಾಡಳಿತಕ್ಕೆ ಎದುರಾಗುವವರನ್ನು ಸಾಧ್ಯವಿರುವ ಎಲ್ಲಾ ರೀತಿಯ ಕ್ರಮಗಳಿಂದ ದಮನಿಸುವುದರಿಂದಷ್ಟೇ ಬ್ರಿಟೀಷ್ ರಾಜ್ ತನ್ನ ಲೂಟಿಯ ಆಳ್ವಿಕೆಯನ್ನು ಉಳಿಸಿಕೊಳ್ಳಬಹುದಿತ್ತು. ಅದೆಷ್ಟೇ ಪ್ರಯತ್ನಿಸಿದರೂ, ಕರ್ನಾಟಕದ ಜನರು ಬ್ರಿಟೀಷ್ ವಸಾಹತುಶಾಹಿಗೆ ತಮ್ಮನುಕೂಲಕ್ಕೆ ಮತ್ತು ಶಾಂತಿಯಿಂದ ಲೂಟಿ ಮಾಡಲು ಅವಕಾಶ ನೀಡಲಿಲ್ಲ. 

ಹೈದರ್ ಮತ್ತು ಟಿಪ್ಪು ವಿದೇಶಿಗರು ನಮ್ಮ ನೆಲದಲ್ಲಿ ಕಾಲಿಡಲು ಪ್ರಯತ್ನಿಸಿದ್ದಕ್ಕೇ ವಸಾಹತುಶಾಹಿಯ ವಿರುದ್ಧ ಧೀರೋದ್ಧಾತವಾಗಿ ಹೋರಾಡಿದ್ದನ್ನು ನಾವೀಗಾಗಲೇ ನೋಡಿದ್ದೇವೆ. ಈ ನಲವತ್ತು ವರುಷಗಳ ವಸಾಹತುಶಾಹಿ ವಿರೋಧಿ ಮೈಸೂರು ಆಳ್ವಿಕೆಯನ್ನೊರತುಪಡಿಸಿದರೆ, 1857ರವರೆಗೆ, ಶತ್ರುಗಳ ವಿರುದ್ಧ ಸಶಸ್ತ್ರ ಹೋರಾಟಗಳು ಸತತವಾಗಿ ನಡೆಯುತ್ತಿದ್ದವು, ಈ ಹೋರಾಟಗಳು ಕರ್ನಾಟಕಕ್ಕೆ ಯುರೋಪ್ ಆಕ್ರಮಣಕಾರರ ವಿರುದ್ಧದ ಪ್ರತಿರೋಧದ ಶ್ರೀಮಂತ ಇತಿಹಾಸವನ್ನು ನೀಡಿತು. 1799ರಲ್ಲಿ ಟಿಪ್ಪುವಿನ ಸರಕಾರ ನಾಶಗೊಂಡ ಕೆಲವು ದಿನಗಳಲ್ಲೇ ಶುರುವಾದ ಹೋರಾಟ, 1857ರವರೆಗೆ ಮುಂದುವರೆಯಿತು; ಇಡೀ ಭಾರತದಲ್ಲಿ ಆಕ್ರಮಣಕೋರರ ವಿರುದ್ಧ ನಡೆದ ಹೋರಾಟಗಳ ಜೊತೆಗೂಡಿತು. ನಮ್ಮ ಬಳಿಯಿರುವ ದಾಖಲೆಗಳು, ಸಶಸ್ತ್ರ ಹೋರಾಟ 1799 – 1802ರಲ್ಲಿ ನಡೆಯಿತೆಂದು ತಿಳಿಸುತ್ತದೆ, 1806, 1810-11, 1819, 1820, 1824ರಲ್ಲಿ ಎರಡು, 1829-30. 1830, 1837, 1840, 1841, 1849, 1852 ಮತ್ತು 1857-58ರಲ್ಲಿ ಕೆಲವು ಹೋರಾಟಗಳು ನಡೆದವು. ನಾವೀಗ ನೋಡಿದಂತೆ, ಹೋರಾಟಗಳು ಸಮನಾಗಿ ಹರಡಿದ್ದವು ಮತ್ತು ಕೆಲವು ವರುಷಗಳ ಅಂತರದಲ್ಲಿ ಗಂಭೀರ ಹೋರಾಟ ನಡೆಯುತ್ತಿತ್ತು. 

ಈ ಹೋರಾಟಗಳಲ್ಲಿ ಮೂರು ವಿಧ. ಮೊದಲನೆಯ ಹೋರಾಟ ಟಿಪ್ಪುವಿನ ಮಾಜಿ ಸೈನ್ಯದ್ದು. ಸೈನಿಕರಲ್ಲಿದ್ದ ರಾಷ್ಟ್ರೀಯತೆ ಭಾವನೆಯನ್ನು ಉಪಯೋಗಿಸಿಕೊಂಡು ಹೆಚ್ಚಿನ ಸಂಖೈಯ ಜನರನ್ನು ಒಟ್ಟುಗೂಡಿಸಿದರು. ಈ ವಿಧಾನದ ಹೋರಾಟದಲ್ಲಿ ಸೈನಿಕರೇ ಪ್ರಮುಖ ಹೋರಾಟ ಶಕ್ತಿ. ಈ ರೀತಿಯ ಸಶಸ್ತ್ರ ಹೋರಾಟ ಮೊದಲಿಗೆ ಪ್ರಾರಂಭವಾದದ್ದಷ್ಟೇ ಅಲ್ಲ, ಮೊದಲಿಗೆ ಕೊನೆಯಾಗಿದ್ದೂ ಹೌದು; ಮೈಸೂರಿನಲ್ಲಿ ವಿದೇಶಿ ಆಳ್ವಿಕೆ ಪ್ರಾರಂಭವಾದ ಮೊದಲ ದಶಕದ ಕೆಲವು ವರುಷಗಳಷ್ಟೇ ಈ ಹೋರಾಟ ಚಾಲ್ತಿಯಲ್ಲಿತ್ತು. ಹಾಗಾಗ್ಯೂ, ಈ ಹೋರಾಟದ ಕ್ಷೀಣ ಪ್ರತಿಧ್ವನಿಯನ್ನು ಆಗಷ್ಟ್ 1857ರಲ್ಲಿ ಬ್ರಿಟೀಷ್ ಇಂಡಿಯನ್ ಸೈನ್ಯದ ಬೆಳಗಾವಿ ತುಕಡಿ ಯೋಜಿಸಿದ ಬಂಡಾಯದಲ್ಲಿ ಕಾಣಬಹುದು. ಈ ಯೋಜನೆ ವಿಫಲವಾಯಿತು ಮತ್ತದರ ಮುಖಂಡರನ್ನು ಗಲ್ಲಿಗೇರಿಸಲಾಯಿತು. (1A) 

ಎರಡನೇ ವಿಧದ ಹೋರಾಟವನ್ನು ಮುನ್ನಡೆಸಿದ್ದು ಊಳಿಗಮಾನ್ಯ ದೊರೆಗಳು. ಈ ಮಾಜಿ ಪಾಳೇಗಾರರು ತಮ್ಮಲ್ಲಿದ್ದ, ತಮ್ಮ ಸೇವೆಗೈದಿದ್ದ ಶಸ್ತ್ರದಾರಿಗಳನ್ನು ಸಜ್ಜುಗೊಳಿಸಿ ಊಳಿಗಮಾನ್ಯ ಸೈನ್ಯವನ್ನು ಕಟ್ಟಿದರು. 

ಮೂರನೇ ವಿಧದ ಹೋರಾಟ, ನಿಧಾನಕ್ಕೆ ರೂಪು ಪಡೆದುಕೊಂಡರೂ ಹೆಚ್ಚು ಕಾಲ ಉಳಿದ ಹೋರಾಟ, ಈ ಹೋರಾಟಗಳನ್ನು ಮುನ್ನಡೆಸಿದವರು ರೈತ ಸಮೂಹದ ಸದಸ್ಯರು ಮತ್ತಿವರ ಹೋರಾಟದ ಶಕ್ತಿ ಶೋಷಣೆಗೊಳಗಾದ ರೈತ – ಕಾರ್ಮಿಕರಾಗಿದ್ದರು. 

ಕೆಲವು ಇತಿಹಾಸಕಾರರು, ಉದಾಹರಣೆಗೆ ಶ್ಯಾಮ್ ಭಟ್ ರಂತವರು, ಊಳಿಗಮಾನ್ಯ ದೊರೆಗಳ ಮುಂದಾಳತ್ವದ ಹೋರಾಟಗಳನ್ನು ವಸಾಹತುಶಾಹಿ ವಿರೋಧಿ ಹೋರಾಟವಲ್ಲ ಎಂದು ಪರಿಗಣಿಸುತ್ತಾರೆ, ಯಾಕೆಂದರೆ ಇದರ ಮುಂದಾಳತ್ವ ವಹಿಸಿದ್ದವರು ಮಾಜಿ ಪಾಳೇಗಾರರು ಮತ್ತವರ ಏಕೈಕ ಗುರಿ ತಾವು ಕಳೆದುಕೊಂಡಿದ್ದ ಊಳಿಗಮಾನ್ಯತೆಯ ಸೌಕರ್ಯಗಳನ್ನು ಗಳಿಸುವುದಾಗಿತ್ತೇ ಹೊರತು ಮತ್ತೇನಲ್ಲ. ಆದ್ದರಿಂದ ಈ ಹೋರಾಟಗಳನ್ನು ಶ್ಯಾಮ್ ಭಟ್ ಪ್ರತಿಗಾಮಿ ಗುಣದ ಹೋರಾಟಗಳು ಎಂದು ಕರೆಯುತ್ತಾರೆ. 

ಭಾರತದ 1857ರ ಬಂಡಾಯವನ್ನು “ಸ್ವಾತಂತ್ರ್ಯಕ್ಕಾಗಿ ಭಾರತದ ಯುದ್ಧ” ಎಂದು ಮೊದಲು ಗುರುತಿಸಿದ್ದು ಮಾರ್ಕ್ಸ್ ಮತ್ತು ಏಂಜೆಲ್ಸ್. ಅದನ್ನವರು ತಮ್ಮದೇ ಪರಿಭಾಷೆಯಲ್ಲಿ ಹೊಗಳಿದರು. ಮಾರ್ಕ್ಸಿಸಂ ಅನ್ನು ಸ್ಥಾಪಿಸಿದವರಿಗೆ 1857ರ ಬಂಡಾಯವನ್ನು ಮುನ್ನಡೆಸಿದ್ದು ಊಳಿಗಮಾನ್ಯ ದೊರೆಗಳು ಮತ್ತು ತಮ್ಮ ಪ್ರಾಂತ್ಯ ಮತ್ತು ಅನುಕೂಲತೆಗಳನ್ನು ಉಳಿಸಿಕೊಳ್ಳುವ ಸಲುವಾಗಿ ಹೋರಾಡುತ್ತಿದ್ದ ರಾಜ – ರಾಣಿಯರು ಎನ್ನುವುದರ ಅರಿವಿರಲಿಲ್ಲವೇ? ಅಂತಿಮವಾಗಿ, ಈ ಚಳುವಳಿ ಮೊಘಲರ ವ್ಯಂಗ್ಯಚಿತ್ರದಂತಿದ್ದ, ಕೊನೆಯ ಹಾಗೂ ದುರ್ಬಲ ಬಹಾದ್ದೂರ್ ಶಾ ಝಾಫರನನ್ನು ಪೀಠದ ಮೇಲೆ ಕೂರಿಸಿತು. 

ಮಾರ್ಕ್ಸಿಸಂನ ಸ್ಥಾಪಕರು ಈ ಹೋರಾಟವನ್ನು ಮುನ್ನಡೆಸುತ್ತಿದ್ದ ವರ್ಗಗಳನ್ನು ಮಾತ್ರ ನೋಡುತ್ತಿರಲಿಲ್ಲ ಅಥವಾ ಬಿರುಸಿನ ದಾಳಿ ನಡೆಸಲು ಉತ್ತೇಜಿಸಿದ ಪ್ರಜ್ಞೆಯನ್ನು ಮಾತ್ರ ಗಮನಿಸುತ್ತಿರಲಿಲ್ಲ. ಅವರು ಈ ಹೋರಾಟದ ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳುತ್ತಿದ್ದರು. ನಿಜವಾದ ಐತಿಹಾಸಿಕ ಭೌತವಾದಿಗಳಾದ ಅವರು ಈ ಹೋರಾಟದ ನೈಜತೆ ಮತ್ತು ಗುರಿಗಳ ಪರಿಣಾಮಗಳನ್ನು ಅಂದಾಜಿಸಿದರು. 

ಒಂದು ನಿರ್ದಿಷ್ಟ ಐತಿಹಾಸಿಕ ಕಾಲಘಟ್ಟದಲ್ಲಿ ಯಾವುದು ‘ಪ್ರಗತಿ’ ಮತ್ತು ‘ಪ್ರತಿಕ್ರಿಯೆ’ಯ ಅರ್ಥವೇನು ಎನ್ನುವಂತಹ ಪ್ರಧಾನ ಪ್ರಶ್ನೆಗಳಿಗೆ ಉತ್ತರಿಸಬೇಕು. 

ಈ ಹೋರಾಟಗಳ ಸಫಲತೆ – ಅದು ಚೆನ್ನಮ್ಮಳ ಮುಂದಾಳತ್ವದಲ್ಲಿ ನಡೆದಿರಬಹುದು ಅಥವಾ ಶೋಷಕ ಊಳಿಗಮಾನ್ಯ ಪಾಳೇಗಾರ ಮುನ್ನಡೆಸಿರಬಹುದು – ಈ ಹೋರಾಟಗಳ ತಾತ್ವಿಕ ತೀರ್ಮಾನಗಳು ಬ್ರಿಟೀಷ್ ವಸಾಹತುಶಾಹಿಯನ್ನು ನಮ್ಮ ಭೂಮಿಯಿಂದ ಹೊರಗಾಕುವುದಾಗಿತ್ತೇ ಹೊರತು ಅದಕ್ಕಿಂತ ಕಡಿಮೆಯೇನಲ್ಲ. 

ವಿದೇಶಿ ಶತ್ರುವಿನ ವಿರುದ್ಧದ ಹೋರಾಟದಲ್ಲಿ ಜಯವಾಗಿದ್ದರೆ, ಊಳಿಗಮಾನ್ಯ ವ್ಯವಸ್ಥೆಯ ಆಳ್ವಿಕೆಗೆ ನಾವು ಸಿಲುಕಿಕೊಂಡಿದ್ದರೂ, ಮಧ್ಯಮವರ್ಗದ ಪ್ರಜಾಪ್ರಭುತ್ವ ಕ್ರಾಂತಿಗೆ ಪೋಷಣೆ ಸಿಗುತ್ತಿತ್ತು. 

ಮತ್ತು, ಈ ಪ್ರಜಾಪ್ರಭುತ್ವ ಕ್ರಾಂತಿ ಪ್ರಗತಿಯೇ ಅಲ್ಲವೇ, ವಸಾಹತು – ಊಳಿಗಮಾನ್ಯ ಪ್ರಾಬಲ್ಯಕ್ಕಿಂತ ರಾಷ್ಟ್ರೀಯವಾದಿ ಊಳಿಗಮಾನ್ಯ ಆಳ್ವಿಕೆ ಪ್ರಗತಿಕಾರಕವಲ್ಲವೇ? ಈ ಇತಿಹಾಸಕಾರರು ಜಪಾನಿನ ಇತಿಹಾಸದ ಪುಟಗಳನ್ನು ಓದಿಕೊಂಡರೆ ಒಳ್ಳೆಯದು ಮತ್ತು 1868ರಲ್ಲಿ ಮೈಜಿ ಸಾಮ್ರಾಜ್ಯ ಮತ್ತೆ ಅಧಿಕಾರಕ್ಕೆ ಬಂದ ಮಹತ್ವವನ್ನು ಅರಿತುಕೊಳ್ಳಬೇಕು; ಇದು ಹೇಗೆ ಜಪಾನಿನ ಸ್ಥಳೀಯ ಮಾರುಕಟ್ಟೆಯ ರಕ್ಷಣೆಯನ್ನು ನಡೆಸಿ ನಿಧಾನವಾಗಿ ದೇಶೀ ಬಂಡವಾಳಶಾಹಿತ್ವವನ್ನು ಬೆಳೆಸಿತು ಎನ್ನುವುದನ್ನು ಅರಿತುಕೊಳ್ಳಬೇಕು. ಭಾರತೀಯ ಜನಸಮೂಹ ವಸಾಹತಿನ ಬೆಂಬಲವಿಲ್ಲದ ಊಳಿಗಮಾನ್ಯ ವ್ಯವಸ್ಥೆಯನ್ನು ಇನ್ನೂ ಸುಲಭವಾಗಿ ನಾಶ ಪಡಿಸಿಬಿಡುತ್ತಿದ್ದರು. ಬ್ರಿಟೀಷರ ಬಲದ ಕಾರಣದಿಂದಾಗಿ ಸಾವಿನಿಂದೆದ್ದು ಬಂದ ಊಳಿಗಮಾನ್ಯತೆಯನ್ನು ಎದುರು ಹಾಕಿಕೊಳ್ಳುವುದಕ್ಕಿಂತ ಅದು ಸುಲಭವಾಗಿತ್ತು. ವಸಾಹತುಶಾಹಿ ಪ್ರಮುಖ ಶತ್ರು ಮತ್ತು ಅದಕ್ಕೆ ಯಾವುದೇ ಮೂಲೆಯಿಂದ ಯಾವುದೇ ಗುರಿಯಿಟ್ಟುಕೊಂಡು ಹೊಡೆದ ಏಟೂ ಸಹಿತ ಅದನ್ನು ಮತ್ತಷ್ಟು ದುರ್ಬಲಗೊಳಿಸುತ್ತಿತ್ತು. 

ಎಲ್ಲಿಯವರೆಗೂ ಈ ಹೋರಾಟಗಳೆಲ್ಲವೂ ಕರ್ನಾಟಕ ಮತ್ತು ಭಾರತದ ಪ್ರಮುಖ ವೈರಿಯಾದ ಬ್ರಿಟೀಷ್ ವಸಾಹತುಶಾಹಿಯ ವಿರುದ್ಧವಿದ್ದವೋ ಅಲ್ಲಿಯವರೆಗೂ ಇವು ಪ್ರಗತಿಪರ ಗುಣವನ್ನು ಹೊಂದಿದೆಯೆನ್ನಬಹುದು, ಸಮಾಜವನ್ನು ಮುನ್ನಡೆಸುವ ಗುಣ. ವಸಾಹತುಶಾಹಿಯ ವಿರುದ್ಧ ಊಳಿಗಮಾನ್ಯ ದೊರೆಗಳ ಗೆಲುವು ಸಹ ಕ್ರಾಂತಿಕಾರಕ ಸಾಧ್ಯತೆಯನ್ನು ಹೊಂದಿರುತ್ತದೆ; ಕಾರಣ ಇದು ಸ್ಥಳೀಯ ಬಂಡವಾಳಶಾಹಿಯನ್ನು ಬೆಳೆಸಿ ಮುಂದಕ್ಕೆ ಊಳಿಗಮಾನ್ಯ ಸಮಾಜವನ್ನು ಕಿತ್ತುಹಾಕುವ ಮತ್ತು ರೈತರನ್ನು ತಮ್ಮ ನೊಗದ ಭಾರದಿಂದ ಬಿಡುಗಡೆಗೊಳಿಸುತ್ತದೆ. ರಾಜ್ಯದ ಅಧಿಕಾರದ ಗುಣಮಟ್ಟದಲ್ಲಿ ಬದಲಾವಣೆಯಾಗಲೇಬೇಕಾದ ಅನಿವಾರ್ಯತೆ ಮತ್ತು ಬ್ರಿಟೀಷ್ ಆಕ್ರಮಣ ಆಳುವ ಮೈತ್ರಿಕೂಟದಲ್ಲಿ ತಂದ ಬದಲಾವಣೆಗಳನ್ನು ಮನಗಾಣದಿದ್ದರೆ, ಕುರುಡು ಮೈತ್ರಿಕೂಟಕ್ಕಷ್ಟೇ ದಾರಿಯಾಗಿಬಿಡುತ್ತದೆ. 

ಪ್ರಗತಿಪರ ಹೋರಾಟಗಳ ಬದ್ಧತೆಯನ್ನು ಕಡೆಗಣಿಸಿ ವಸಾಹತುಶಾಹಿ ವಿರೋಧಿ ಮುಂದಾಳತ್ವದಲ್ಲಿನ ವರ್ಗ ಬೇರುಗಳನ್ನಷ್ಟೇ ಹೊರತೆಗೆಯುವುದು ಅತಿಯಾದ ಮಾರ್ಕ್ಸಿಸಂ ಎಂದೆನ್ನಿಸುತ್ತದೆ. ಆದರಿದೇ ಮಾರ್ಕ್ಸಿಸಂ ಮತ್ತು ರಿವಿಷನಿಸಂ ನಡುವಿರುವ ವ್ಯತ್ಯಾಸ. ರಿವಿಷನಿಷ್ಟ್ ಇತಿಹಾಸ ಯಾಂತ್ರಿಕವಾಗಿರುತ್ತದೆ, ಮೇಲ್ಮಟ್ಟದ್ದಾಗಿರುತ್ತದೆ. ಅದರ ಕೊನೆಯ ಉದ್ದೇಶ ವಸಾಹತು ಆಕ್ರಮಣವನ್ನು ನ್ಯಾಯಬದ್ಧವೆನ್ನಿಸಿಬಿಡುವುದೇ ಆಗಿದೆ. ಮಾರ್ಕ್ಸಿಸ್ಟ್ ಇತಿಹಾಸ ವರ್ಗ ಗುಣಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ, ಐತಿಹಾಸಿಕ ಸನ್ನಿವೇಶದಲ್ಲದನ್ನು ಇಡುತ್ತದೆ ಮತ್ತು ಜಿಜ್ಞಾಸೆಯ(dialectical) ಕಾರ್ಯವಿಧಾನಗಳನ್ನು ಪರಿಗಣಿಸುತ್ತದೆ. 

ಇವೆಲ್ಲವನ್ನೂ ನಾವು ನೆನಪಿನಲ್ಲಿಟ್ಟುಕೊಂಡಾಗ ಮಾತ್ರ, ಇತಿಹಾಸದ ದಿಕ್ಕಿನ ಗುರಿಯನ್ನು ಗ್ರಹಿಸಿದಾಗ ಮತ್ತು ಪ್ರತಿಯೊಂದು ಐತಿಹಾಸಿಕ ತಿರುವಿನಲ್ಲೂ ಆಳುವ ವರ್ಗದ ಗುಣಗಳೇನಿದ್ದವು ಎನ್ನುವುದನ್ನು ಅರ್ಥೈಸಿಕೊಂಡಾಗ, ಕೆಲವೊಮ್ಮೆ ತದ್ವಿರುದ್ಧದ ಅಭಿಪ್ರಾಯವೆನ್ನಿಸಿದರೂ ಇತಿಹಾಸವನ್ನು ನಿಶ್ಚಿತತೆಯಿಂದ ಒಪ್ಪಬಹುದು. ಬ್ರಿಟೀಷರ ನೆರವಿನಿಂದ, ತಮ್ಮ ಪ್ರಾಂತ್ಯವನ್ನುಳಿಸಿಕೊಳ್ಳಲು ಟಿಪ್ಪುವಿನ ವಿರುದ್ಧ ಹೋರಾಡಿದ ಪಾಳೇಗಾರರು ಇತಿಹಾಸವನ್ನು ಹಿಂದಕ್ಕೆಳೆಯಲು ಪ್ರಯತ್ನಿಸುತ್ತಿದ್ದರು; ಅದೇ ಸಂದರ್ಭದಲ್ಲಿ, ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ಶಸ್ತ್ರ ಸಜ್ಜಿತರಾಗಿ ತಮ್ಮ ಪ್ರಾಂತ್ಯವನ್ನುಳಿಸಿಕೊಳ್ಳಲು ನಿಂತ ಪಾಳೇಗಾರರು ಇತಿಹಾಸವನ್ನು ಮುಂದೆ ತಳ್ಳುತ್ತಿದ್ದರು.

ಮುಂದಿನ ವಾರ:
ಸೈನ್ಯದ ಮುನ್ನಡೆ