ಜೂನ್ 10, 2025

ಬೆಚ್ಚಿ ಬೀಳಿಸದ "ಸ್ಟೋಲನ್"

ಸ್ಟೋಲನ್ ಚಿತ್ರದ ಒಂದು ದೃಶ್ಯ 
ಡಾ. ಅಶೋಕ್. ಕೆ. ಆರ್
ರೈಲು ನಿಲ್ದಾಣದಲ್ಲಿ ಯುವತಿಯೊಬ್ಬಳ ಮಗು ಕಳ್ಳತನವಾಗ್ತದೆ. ಮಗು ಕದ್ದು ಓಡುತ್ತಿದ್ದವಳು ಅದೇ ತಾನೇ ರೈಲಿನಿಂದ ಇಳಿದ ಯುವಕನೊಬ್ಬನಿಗೆ ಡಿಕ್ಕಿ ಹೊಡೆಯುತ್ತಾಳೆ. ಆ ಯುವಕನ ಮೇಲೇ ಮೊದಲ‌ ಅನುಮಾನ. ಕೊನೆಗೆ ಆ ಯುವಕ ಕಳ್ಳತನಕ್ಕೆ ಸಾಕ್ಷಿಯಾಗುತ್ತಾನೆ. ಮಗು ಕಳೆದುಕೊಂಡ ಯುವತಿ, ಸಾಕ್ಷೀದಾರ ಯುವಕ, ಯುವಕನನ್ನು ಮನೆಗೆ ಕರೆದೊಯ್ಯಲು ಬಂದ ಅವನಣ್ಣ ಕೂಡ ಇಷ್ಟವಿದ್ದೊ ಇಷ್ಟವಿಲ್ಲದೆಯೋ ಮಗುವನ್ನು ಹುಡುಕುವುದರಲ್ಲಿ ತೊಡಗಿಕೊಳ್ಳುತ್ತಾರೆ.

ಮಾರ್ಚ್ 13, 2024

ಕಣ್ಣು ಮಿಟುಕಿಸದೇ ನೋಡಿಸಿಕೊಳ್ಳುವ 'ಬ್ಲಿಂಕ್'


ಡಾ. ಅಶೋಕ್. ಕೆ. ಆರ್

ಟೈಂ ಟ್ರಾವೆಲ್ ಹಿನ್ನೆಲೆಯ ಕಲ್ಪನಾತ್ಮಕ - ವೈಜ್ಞಾನಿಕ (?) ಚಿತ್ರಕ್ಕೆ ಹೆಚ್ಚಿನ ಬಜೆಟ್ ಅತ್ಯವಶ್ಯವಿದೆ ಎನ್ನುವ ಸಾಮಾನ್ಯ ತಿಳುವಳಿಕೆಯನ್ನು ಸುಳ್ಳಾಗಿಸುವ ಚಿತ್ರ ಬ್ಲಿಂಕ್. ಗಟ್ಟಿ ಚಿತ್ರಕತೆಯಿದ್ದು ಉತ್ತಮ ನಿರ್ದೇಶನವಿದ್ದರೆ ಕಡಿಮೆ ಬಜೆಟ್ಟಿನಲ್ಲಿ, ಸುತ್ತಮುತ್ತಲಿರುವ ಕೆಲವೊಂದು ಜಾಗಗಳನ್ನು ಬಳಸಿಕೊಂಡೇ ಒಂದು ಉತ್ತಮ, ಉತ್ತಮವೇನು ಅತ್ಯುತ್ತಮ ಚಿತ್ರವನ್ನೇ ಜನರ ಮುಂದಿಡಬಹುದೆಂದು ಬ್ಲಿಂಕ್ ನಿರ್ದೇಶಕ ಶ್ರೀನಿಧಿ ತೋರಿಸಿಕೊಟ್ಟಿದ್ದಾರೆ.

ಅನಾದಿ ಕಾಲದಿಂದಲೂ ಆಗೊಮ್ಮೆ ಈಗೊಮ್ಮೆ ಎಲ್ಲಾ ಭಾಷೆಗಳಲ್ಲಿ ಟೈಂ ಟ್ರಾವೆಲ್ನ ಕುರಿತಾದ ಚಿತ್ರಗಳು ಮೂಡಿಬರುತ್ತಲೇ ಇವೆ. ವಾಸ್ತವದಲ್ಲಿರುವುದನ್ನು ಬಿಟ್ಟು ಹಿಂದಿನ ಮುಂದಿನ ಸಮಯಕ್ಕೆ ಹೋಗುವಾಸೆ ಮನುಷ್ಯನಿಗೆ ಇದ್ದೇ ಇದೆಯಲ್ಲ! ಲಾಜಿಕ್ಕಾಗಿ ನೋಡಿದರೆ ಟೈಂ ಟ್ರಾವೆಲ್ ಅನ್ನೋದೆ ಇಲ್ಲಾಜಿಕಲ್! ಹಂಗಾಗಿ ಟೈಂ ಟ್ರಾವೆಲ್ ಯಾವ ರೀತಿ ಮಾಡಿದರು ಅನ್ನೋದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ವಾಚ್ ಕಟ್ಟಿಕೊಂಡು, ಟೈಂ ಮೆಷೀನಿನ ಒಳಗೆ ಕುಳಿತುಕೊಂಡು, ಏನನ್ನೋ ಕುಡಿದುಹೀಗೆ ಹತ್ತಲವು ರೀತಿಯಲ್ಲಿ ಟೈಂ ಟ್ರಾವೆಲ್ಲನ್ನು ಚಿತ್ರಗಳಲ್ಲಿ ತೋರಿಸಿದ್ದಾರೆ, ಬ್ಲಿಂಕ್ ಚಿತ್ರದಲ್ಲಿ ಅಡ್ವಾನ್ಸ್ಡ್ ಲ್ಯಾಪ್ ಟಾಪಿನ ಮುಂದೆ ಕುಳಿತುಕೊಂಡು ದ್ರವ್ಯವೊಂದನ್ನು ಕಣ್ಣಿಗೆ ಎರಡು ತೊಟ್ಟು ಹಾಕಿಕೊಂಡರೆ ಸಾಕು ನಮಗೆ ಯಾವ ಹಿಂದಿನ ಕಾಲಕ್ಕೆ ಹೋಗಬೇಕೋ ಅಲ್ಲಿಗೆ ಹೋಗಿಬಿಡಬಹುದು. ಹೇ! ಅಷ್ಟು ಸುಲಭದಲ್ಲಿ ಟೈಂ ಟ್ರಾವೆಲ್ ಮಾಡಿಬಿಡಬಹುದಾ ಅಂತೆಲ್ಲ ಕೇಳಬೇಡಿ. ಟೈಂ ಟ್ರಾವೆಲ್ ಅನ್ನೋದೆ ಅಸಾಧ್ಯವಾಗಿರುವಾಗ ಅಷ್ಟು ಸುಲಭದಲ್ಲೋ ಇಷ್ಟು ಕಷ್ಟದಲ್ಲೋ ಅನ್ನೋದೆಲ್ಲ ಇಲ್ಲಾಜಿಕಲ್ ಪರಿಧಿಯೊಳಗೇ ಇರ್ತದೆ!

ಅಕ್ಟೋ 15, 2019

‘ಅಸುರನ್’: ಸಹಜತೆಗೆ ಹತ್ತಿರವಿರುವ ಒಳ್ಳೆಯ ಪ್ರಯತ್ನದ ಚಲನಚಿತ್ರ

ನಂದಕುಮಾರ್ ಕೆ ಎನ್. ಕುಂಬ್ರಿಉಬ್ಬು
ಅಸುರನ್ ಇಂದಿನ ದಿನಗಳಲ್ಲಿ ಬಂದಿರುವ ವಿರಳ ಚಿತ್ರಕಥೆ ಹೊಂದಿರುವ ಸಿನಿಮಾ. ವೆಟ್ರಿಮಾರನ್ ಇದರ ನಿರ್ದೇಶಕ. ಒಳ್ಳೆಯ ಛಾಯಾಗ್ರಹಣ, ಒಳ್ಳೆಯ ದೃಶ್ಯಸಂಯೋಜನೆ. ಚಿತ್ರದಲ್ಲಿ ಸಹಜತೆ ಹೆಚ್ಚು ಇದೆ.. ಪರವಾಗಿಲ್ಲ ಎನ್ನಬಹುದಾದ ಸಂಗೀತವಿದೆ.

ತಮಿಳಿನ ಧನುಷ್ ಹಾಗೂ ಮಲೆಯಾಳಂ ನ ಮಂಜು ವಾರಿಯರ್ ಮುಖ್ಯ ತಾರಾಗಣದಲ್ಲಿರುವ ಈ ಸಿನಿಮಾ ಜಾತೀಯತೆಯ ಮನಸುಗಳು ಹಾಗೂ ಕ್ರೌರ್ಯಗಳ ಕೆಲವು ಮುಖಗಳನ್ನು ಅನಾವರಣಗೊಳಿಸುತ್ತದೆ. ಕಥಾನಾಯಕನ ಕುಟುಂಬದ ಸುತ್ತಾ ಈ ಕಥೆಯನ್ನು ಹೆಣೆಯಲಾಗಿದೆ. ತಮಿಳಿನ ಪೂಮಣಿ ಬರೆದ ವೆಕೈ ಎಂಬ ಕಾದಂಬರಿ ಆದಾರಿತ ಚಿತ್ರವಿದು.

ಧನುಷ್ ರ ಅಭಿನಯ ಚೆನ್ನಾಗಿದೆ. ಎಲ್ಲಾ ಪಾತ್ರಧಾರಿಗಳು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ.

ಆರಂಭದ ಅಂದರೆ ಫ್ಲಾಶ್ ಬ್ಯಾಕ್ ಬರುವವರೆಗೂ ಚಿತ್ರದಲ್ಲಿ ಬಿಗಿತನ ಕಾಣುವುದಿಲ್ಲ. ಆ ಸನ್ನಿವೇಶಗಳಿಗೆ ತಕ್ಕಂತಹ ಭಾವಗಳನ್ನು, ಗಾಢತೆಗಳನ್ನು ವೀಕ್ಷಕರಿಗೆ ಮೂಡಿಸುವಲ್ಲಿ ಯಶಸ್ಸು ಕಾಣುವುದಿಲ್ಲ. ನಂತರದ ಚಿತ್ರ ನಿರ್ದೇಶಕರ ಹಿಡಿತ, ಪಾತ್ರಧಾರಿಗಳ ಅಭಿನಯ ಗಾಢತೆಯನ್ನು ಸನ್ನಿವೇಶಗಳನ್ನು ವೀಕ್ಷಕರಿಗೆ ಗಾಢವಾಗಿ ತಟ್ಟುವಂತೆ ಕಥೆಯನ್ನು ನಿರೂಪಿಸುತ್ತಾ ಹೋಗುತ್ತದೆ.

ನವೆಂ 13, 2018

ಮೇರ್ಕು ತೊಡರ್ಚಿ ಮಲೈ ಎಂಬ ದೃಶ್ಯ ಕಾವ್ಯ.

ಡಾ. ಅಶೋಕ್. ಕೆ. ಆರ್.
ಜಾತಿ ವ್ಯವಸ್ಥೆಯ ಬಗ್ಗೆ ವರ್ಗ ವ್ಯವಸ್ಥೆಯ ಬಗ್ಗೆ ನಮ್ಮಲ್ಲಿ ಆವಾಗವಾಗ ಒಂದೊಂದು ಚಿತ್ರ ಬಂದಿದೆಯಾದರೂ ಭೂರಹಿತ ಕಾರ್ಮಿಕರನ್ನೇ ಮುಖ್ಯಭೂಮಿಯಲ್ಲಿರಿಸಿಕೊಂಡು ಬಂದ ಚಿತ್ರಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯೆಂದು ಹೇಳಬಹುದು. ಜಾತಿ ವರ್ಗ ವ್ಯವಸ್ಥೆಯ ಕುರಿತಾದ ಚಿತ್ರಗಳಲ್ಲಿ ಕೆಲವೊಂದು ವಾಸ್ತವಿಕತೆಯನ್ನು ನಮ್ಮ ಕಣ್ಣ ಮುಂದೆ ಇರಿಸುತ್ತಾದರೂ ವಾಸ್ತವಿಕತೆಯನ್ನು ತಲುಪಿಸುವ ನಿಟ್ಟಿನಲ್ಲಿ ಅದನ್ನು ವೈಭವೀಕರಿಸುವ ಕೆಲಸ ಮಾಡುತ್ತವೆ, ನಾಯಕ ಪಾತ್ರದ ಒಳಿತನ್ನು ಋಜುವಾತುಪಡಿಸುವುದಕ್ಕೆ ಪ್ರತಿನಾಯಕರ ರಕ್ತದಲ್ಲೇ ಕೆಟ್ಟತನವಿದೆಯೆನ್ನುವಂಶವನ್ನು ಒತ್ತಿ ಒತ್ತಿ ಹೇಳುವ ಕ್ರಮವನ್ನೇ ಬಹಳಷ್ಟು ಸಿನಿಮಾಗಳು ಅಳವಡಿಸಿಕೊಂಡಿರುತ್ತವೆ. ಈ ಚಿತ್ರಗಳ ಇನ್ನೊಂದು ದೌರ್ಬಲ್ಯ (ಅದನ್ನು ಈ ಚಿತ್ರಗಳ ಶಕ್ತಿಯೆಂದೂ ಕರೆಯಬಹುದು!) ಅತಿ ಭಾವುಕತೆ. ನಿಜ ಜೀವನದಲ್ಲಿ ಕಂಡುಬರದಷ್ಟು ಭಾವುಕತೆಯನ್ನು ಚಿತ್ರಗಳಲ್ಲಿ ತುಂಬಿಬಿಡಲಾಗುತ್ತದೆ. ಅತಿ ಭಾವುಕತೆ ಅತಿ ವಾಸ್ತವತೆಯ ಕ್ರಮದಿಂದೊರತಾಗಿ ನಿಂತು, ಅತಿ ಎನ್ನುವಷ್ಟು ಒಳ್ಳೆಯ ನಾಯಕ, ಅತಿ ಎನ್ನಿಸುವಷ್ಟು ಕೆಟ್ಟ ವಿಲನ್ನು ಎಂಬ ಕ್ರಮದಿಂದಲೂ ಹೊರತಾಗಿದ್ದು ದೀರ್ಘಕಾಲದವರೆಗೆ ಕಾಡುವಂತಹ ದೃಶ್ಯಕಾವ್ಯವೇ ‘ಮೇರ್ಕು ತೊಡರ್ಚಿ ಮಲೈ’ (ಅರ್ಥಾತ್ ಪಶ್ಚಿಮ ಘಟ್ಟ). 

ಲೆನಿನ್ ಭಾರತಿ ನಿರ್ದೇಶನದ ಚಿತ್ರವನ್ನು ನಿರ್ಮಿಸಿರುವುದು ವಿಜಯ್ ಸೇತುಪತಿ. ಸ್ವತಃ ಉತ್ತಮ ನಟನಾದರೂ ವಿಜಯ್ ಸೇತುಪತಿ ಈ ಚಿತ್ರದಲ್ಲಿ ಅಭಿನಯಿಸಿಲ್ಲ. ಒಂದು ಚಿಕ್ಕ ಪಾತ್ರದಲ್ಲಾದರೂ ವಿಜಯ್ ಸೇತುಪತಿ ನಟಿಸಿದ್ದರೆ ಇಂತಹುದೊಂದು ಚಿತ್ರ ಹೆಚ್ಚು ಜನರನ್ನು ತಲುಪುತ್ತಿತ್ತು ಎನ್ನುವುದು ಸತ್ಯ. ಚಿತ್ರದ ನಾಯಕ ರಂಗಸ್ವಾಮಿ. ಭೂರಹಿತ ಕಾರ್ಮಿಕ. ತಮಿಳುನಾಡು ಕೇರಳ ಗಡಿಪ್ರದೇಶದ ಘಟ್ಟ ಪ್ರದೇಶದಲ್ಲಿ ಆತನ ವಾಸ. ಏಲಕ್ಕಿ ಕಾಯಿಯ ಮೂಟೆಯನ್ನು ಹೆಗಲ ಮೇಲೊತ್ತು ಘಟ್ಟದಿಂದ ಮಾರುಕಟ್ಟೆಗೆ ಸಾಗಿಸುವ ಕೆಲಸ ಆತನದು. ಘಟ್ಟ ಪ್ರದೇಶವನ್ನು ಹೊಸತಾಗಿ ದಾಟುವವರಿಗೆ ದಾರಿಯಾಗುತ್ತಾನೆ, ಆಸರೆಯಾಗುತ್ತಾನೆ. ಎಲ್ಲರ ಮೆಚ್ಚಿನ ವ್ಯಕ್ತಿ ರಂಗಸ್ವಾಮಿ ತನ್ನೂರಿನ ಮನೆಯಲ್ಲಿ ಅಮ್ಮನೊಂದಿಗೆ ವಾಸವಾಗಿದ್ದಾನೆ. ಇಂತಿಪ್ಪ ರಂಗಸ್ವಾಮಿಗೆ ಒಂದು ತುಂಡು ಭೂಮಿಯನ್ನು ಖರೀದಿಸಬೇಕೆಂಬುದೇ ಜೀವನದ ಗುರಿ. ಯಾವುದೇ ದುಶ್ಚಟಗಳಿಲ್ಲದ ರಂಗಸ್ವಾಮಿ ಕೂಡಿಹಾಕಿದ್ದ ಹಣದಿಂದ ಇನ್ನೇನು ಭೂಮಿ ಖರೀದಿಸಿಯೇಬಿಟ್ಟ ಎನ್ನುವಾಗ ಭೂಮಿಯ ಒಡೆಯರ ಕೌಟುಂಬಿಕ ಜಗಳದಿಂದ ಆಸೆಗೆ ಕಲ್ಲು ಬೀಳುತ್ತದೆ. ಮತ್ತೆ ಏಲಕ್ಕಿ ಮೂಟೆಯನ್ನು ಘಟ್ಟದಿಂದಿಳಿಸುವ ಕೆಲಸಕ್ಕೆ ರಂಗಸ್ವಾಮಿ ಮುಂದಾಗುತ್ತಾನೆ. 

ಜುಲೈ 16, 2018

ಕರಾಳ ರಾತ್ರಿಯೆಂಬ ಸರ್ಪ್ರೈಸ್ ಪ್ಯಾಕೇಜು!

ಡಾ. ಅಶೋಕ್.ಕೆ.ಆರ್ 
‘ಆ ಕರಾಳ ರಾತ್ರಿ’ ಎಂಬೆಸರಿನ ಸಿನಿಮಾವೊಂದು ಬಿಡುಗಡೆಯಾಗಿರುವ ವಿಷಯವೇ ತಿಳಿದಿರಲಿಲ್ಲ ಎಂದ ಮೇಲೆ ಅದು ಯಾವ ಥಿಯೇಟರಿನಲ್ಲಿದೆ ಅನ್ನುವುದನ್ನೆಲ್ಲ ಹುಡುಕಾಡಿ ಸಿನಿಮಾ ನೋಡುವುದು ದೂರದ ಮಾತೇ ಸೈ! ಬೆಂಗಳೂರು ಮಿರರ್ ನ ಶ್ಯಾಮ್ ಪ್ರಸಾದ್ ‘ಆ ಕರಾಳ ರಾತ್ರಿ’ ಚಿತ್ರಕ್ಕೆ ಮೂರುವರೆ ಸ್ಟಾರ್ ಕೊಟ್ಟಿದ್ದೇ ಈ ಸಿನಿಮಾ ನೋಡಲು ಕಾರಣ! ಯಾವ ಸಿನಿಮಾವನ್ನೂ ಸುಖಾಸುಮ್ಮನೆ ಶ್ಯಾಮ್ ಪ್ರಸಾದ್ ಹೊಗಳೋರಲ್ಲ ಅನ್ನೋ ನಂಬುಗೆಯಿಂದ ಚಿತ್ರಮಂದಿರದೊಳಗೆ ಕಾಲಿಟ್ಟಾಗಲೇ ಗೊತ್ತಾಗಿದ್ದು ಇದು ದಯಾಳ್ ಪದ್ಮನಾಭನ್ ನಿರ್ಮಾಣ ನಿರ್ದೇಶನದ ಚಿತ್ರವೆಂದು! 

ದಯಾಳ್ ಅವರ ಸಿನಿಮಾಗಳು ಯಾವುವೂ ಹೇಳಿಕೊಳ್ಳುವಷ್ಟು ಮೆಚ್ಚುಗೆಯಾಗಿರಲಿಲ್ಲ ನನಗೆ. ಇದು ಹೇಗಿದೆಯೋ ಅಂದುಕೊಂಡೇ ಕುಳಿತಿದ್ದೆ. ದೂರದ ಊರೊಂದರ ಚಿತ್ರಣ, ಆ ಊರಲ್ಲೊಂದು ಪುಟ್ಟ ಸಂಸಾರ: ಗಂಡ (ರಂಗಾಯಣ ರಘು), ಹೆಂಡತಿ (ವೀಣಾ ಸುಂದರ್), ಮಗಳು (ಮಲ್ಲಿಕಾ - ಅನುಪಮ ಗೌಡ). ಸಾರಾಯಿ ಅಂಗಡಿಯನ್ನೇ ನೆಚ್ಚಿಕೊಂಡ ಗಂಡ, ಹೆರಿಗೆ ಮಾಡಿಸುವುದರಲ್ಲಿ ಪರಿಣಿತಳಾದ ಹೆಂಡತಿ, ಮನೆಯಲ್ಲಿನ ಬಡತನದ ಕಾರಣದಿಂದ ಇನ್ನೂ ಮದುವೆಯಾಗದ ಹಪಾಹಪಿಯ ಮಗಳು. ಪ್ರತಿ ಪಾತ್ರವನ್ನೂ ತುಂಬಾ ಗಮನವಿಟ್ಟು ಕಟ್ಟಿಕೊಡುತ್ತಾರೆ ನಿರ್ದೇಶಕರು. 

ಫೆಬ್ರ 14, 2017

ಸಮಾಜದ ಕ್ರೌರ್ಯದ ಗುಂಡಿಯೊಳಗಿಳಿಸುವ 'ಅಮರಾವತಿ'

ಡಾ. ಅಶೋಕ್. ಕೆ. ಆರ್
ಕನ್ನಡದಲ್ಲಿ ಇಂತಹುದೊಂದು ಹಸಿ ಹಸಿ ಚಿತ್ರವನ್ನು ನೋಡಿ ಬಹಳ ದಿನಗಳಾಗಿತ್ತು. ನಿನ್ನೆ ರಾತ್ರಿ ಮೂಗಿಗಂಟಿದ ಮಲದ ಗುಂಡಿಯ ವಾಸನೆಯು ಇನ್ನೂ ಹೋಗಿಲ್ಲ ಎನ್ನುವುದಷ್ಟೇ ಸಾಕು ಈ ಚಿತ್ರ ಎಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿಸಲು. ಪೌರ ಕಾರ್ಮಿಕರ ಬಗ್ಗೆ ವರದಿಗಳು ಬರುತ್ತವೆ, ಡಾಕ್ಯುಮೆಂಟರಿಗಳೂ ಸಿಗುತ್ತವೆ, ಅವರ ಸುತ್ತಲೇ ಸುತ್ತುವ ಪೂರ್ಣ ಪ್ರಮಾಣದ ಚಿತ್ರವೊಂದು ಇಲ್ಲಿಯವರೆಗಂತೂ ಬಂದಂತಿಲ್ಲ. ಪೌರ ಕಾರ್ಮಿಕರ ಬದುಕಿನ ಸಂಗತಿಗಳನ್ನು ಕತೆಯಾಗಿಸಿ ಸಿನಿಮಾ ಮಾಡುವ ಧೈರ್ಯವನ್ನು ನಿರ್ದೇಶಕ ಗಿರಿರಾಜ್ ತೆಗೆದುಕೊಂಡಿರುವುದರಲ್ಲಿ ಹೆಚ್ಚಿನ ಅಚ್ಚರಿಯೇನಿಲ್ಲ. ನವಿಲಾದವರು ಎಂಬ ಯ್ಯೂಟ್ಯೂಬ್ ಸಿನಿಮಾ, ಜಟ್ಟ, ಮೈತ್ರಿ ಚಿತ್ರಗಳಲ್ಲೂ ಅವರು ವಿಭಿನ್ನ ಕತೆಯನ್ನೇ ಆಯ್ದುಕೊಂಡಿದ್ದರು. ಮುಖ್ಯವಾಹಿನಿಯ ಜನರು ನೋಡದ ಬದುಕನ್ನು, ಊಹಿಸದ ಜೀವನ ರೀತಿಯನ್ನು ತೆರೆಯ ಮೇಲೆ ನೇಯ್ದಿದ್ದರು. ಆ ಎಲ್ಲಾ ಸಿನಿಮಾಗಳಿಗಿಂತಲೂ ಕಷ್ಟಕರವಾದ ಕತೆಯನ್ನು ಈ ಬಾರಿ ಆಯ್ದುಕೊಂಡಿದ್ದಾರೆ, ಅದರಲ್ಲವರು ಸಂಪೂರ್ಣವಾಗಿ ಗೆದ್ದಿದ್ದಾರಾ?

ಅಕ್ಟೋ 24, 2016

ರಾಮಾ ರಾಮಾ ರೇ: ಹುಟ್ಟು ಸಾವಿನ ನಡುವಿನ ಬದುಕಿನ ಪಯಣ.

ಡಾ. ಅಶೋಕ್. ಕೆ. ಆರ್.
ಸಂಪಿಗೆಯಂಥ ಸಂಪಿಗೆ ಥೀಯೇಟರ್ರಿನ ಬಾಲ್ಕಾನಿ ಹೆಚ್ಚು ಕಡಿಮೆ ಪೂರ್ತಿ ತುಂಬಿಹೋಗಿತ್ತು. ಈ ರೀತಿ ತುಂಬಿ ಹೋಗಿದ್ದಕ್ಕೆ ಕಾರಣ ಸಾಮಾಜಿಕ ಜಾಲತಾಣಗಳು ಎಂದರದು ಉತ್ಪ್ರೇಕ್ಷೆಯಲ್ಲ. ಪ್ರಚಾರವಿರಲಿ, ಶುಕ್ರವಾರದ ಪತ್ರಿಕೆಗಳಲ್ಲಿ ಜಾಹೀರಾತನ್ನೂ ನೀಡದ ರಾಮಾ ರಾಮಾ ರೇ ಚಿತ್ರ ಸಾಮಾಜಿಕ ಜಾಲತಾಣಗಳಿಲ್ಲದ ಸಮಯದಲ್ಲಿ ಬಿಡುಗಡೆಗೊಂಡಿದ್ದರೆ ಒಂದೇ ದಿನಕ್ಕೆ ಚಿತ್ರಮಂದಿರಗಳಿಂದ ಮರೆಯಾಗಿಬಿಡುತ್ತಿತ್ತು. ಸಾಮಾಜಿಕ ಜಾಲತಾಣಗಳು ಜನರನ್ನೇನೋ ಚಿತ್ರಮಂದಿರಕ್ಕೆ ಸೆಳೆದು ತಂದಿದೆ, ಅವರಿಗೆ ತಲುಪಿದೆಯಾ? ಹೇಳುವುದು ಕಷ್ಟ. ಇಂಟರ್ವೆಲ್ಲಿನಲ್ಲಿ ‘ಯಾವ್ದಾರಾ ನಾರ್ಮಲ್ ಪಿಚ್ಚರ್ರಿಗೆ ಕರ್ಕೊಂಡ್ ಹೋಗು ಅಂದ್ರೆ ಇದ್ಯಾವ ಫಿಲಮ್ಮಿಗೆ ಕರ್ಕಂಡ್ ಬಂದಪ್ಪ’ ‘ಮನೇಲಿ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಬರ್ತಿತ್ತು. ಅಲ್ಲೇ ಇದ್ದಿದ್ರೆ ಆಗಿರಾದು’ ಅನ್ನೋ ಮಾತುಗಳು ಕೇಳಿಬಂದರೆ ಚಿತ್ರ ಮುಗಿದ ನಂತರ ‘ಫಸ್ಟ್ ಆಫ್ ಸ್ವಲ್ಪ ಬೋರು ಸೆಕೆಂಡ್ ಆಫ್ ಅದ್ಭುತ’ ಅನ್ನುವಂತಹ ಮಾತುಗಳು! ಇಪ್ಪತ್ತೆಂಟಕ್ಕೆ ಇರೋ ಬರೋ ಥಿಯೇಟರುಗಳಿಗೆಲ್ಲ ‘ಮುಕುಂದ ಮುರಾರಿ’ ‘ಸಂತು’ ಚಿತ್ರಗಳು ಬರುತ್ತಿವೆ. ಆ ಚಿತ್ರಗಳಬ್ಬರವನ್ನೆದುರಿಸಿ ರಾಮಾ ರಾಮಾ ರೇ ನಿಲ್ಲಬಲ್ಲದಾ? ಕಷ್ಟವಿದೆ. ಕಾದು ನೋಡುವ!

ಮೇ 30, 2016

ಆತಂಕದ ಸುಳಿಯಿಂದೊರಬಂದ ಬದುಕಿನ ಸುಂದರತೆ

ಡಾ. ಅಶೋಕ್. ಕೆ. ಆರ್
30/05/2016
ಮಲೆನಾಡಿನ ಮಡಿಲಲ್ಲಿರುವ ಸುಂದರ ಹಳ್ಳಿಯದು. ಒಂದಷ್ಟು ಸಾಬರಿದ್ದಾರೆ ಒಂದಷ್ಟು ಹಿಂದೂಗಳಿದ್ದಾರೆ. ಒಂದು ಮಸೀದಿಯಿದೆ ಒಂದು ಮಠವಿದೆ. ಒಬ್ಬ ಮೌಲ್ವಿಯಿದ್ದಾನೆ ಒಬ್ಬ ಮಠದಯ್ಯನಿದ್ದಾನೆ. ಇದೇ ಊರಿನಲ್ಲಿ ಜನರ ಸುಲಿಯುವ ಬಡ್ಡಿ ವ್ಯಾಪಾರಿ ಶೆಟ್ಟಿಯಿದ್ದಾನೆ. ನಗರದಿಂದ ದೂರವಿರುವ ಬೆಟ್ಟದ ಮೇಲಿರುವ ಹಳ್ಳಿಯ ಜನರಿಗೆ ಸಾಮಾನು ಸರಂಜಾಮನ್ನು ಕತ್ತೆ ಮೇಲೆ ಹೊತ್ತು ತರುವ ಅದೇ ಊರಿನ ಬುಡೇನ ಸಾಬನಿದ್ದಾನೆ. ಇಂತಿಪ್ಪ ಬುಡೇನ ಸಾಬನಿಗೆ ಮೂವರು ಹೆಣ್ಣುಮಕ್ಕಳು, ಅವರೆಲ್ಲರೂ ನಿಖಾ ವಯಸ್ಸಿಗೆ ಬಂದಿದ್ದಾರೆ. ಎರಡನೇ ಮಗಳಿಗೆ ನಿಖಾ ಗೊತ್ತಾಗಿದೆ. ಮೊದಲ ಮಗಳು ಶಬ್ಬುವಿನ ಮದುವೆಯಾಗದೆ ಎರಡನೇ ಮಗಳ ಮದುವೆ ಮಾಡಲು ಬುಡೇನ ಸಾಬನಿಗೆ ಮನಸ್ಸಿಲ್ಲ. ಮೊದಲ ಮಗಳಿಗೆ ನಿಖಾ ನಿಕ್ಕಿಯಾಗುತ್ತಿಲ್ಲ. ಕಾರಣ ಆಕೆ ಮೂಗಿ. ಮಾತು ಬರದ ಒಳ್ಳೆ ಮನಸ್ಸಿನ ಹುಡುಗಿಯ ಮದುವೆಯ ಚಿಂತೆ ಬುಡೇನ ಸಾಬನ ಜೀವನೋತ್ಸಾಹವನ್ನೇನೂ ಕಸಿದಿರುವುದಿಲ್ಲ. 

ಬೆಟ್ಟದ ಮೇಲಿನ ದರ್ಗಾಕ್ಕೆ ಹೋಗುವವರು ಮಸೀದಿಯಲ್ಲಿ ತಂಗಿ ಹೋಗುವುದು ಸಾಮಾನ್ಯ. ಹೀಗೇ ದರ್ಗಾಕ್ಕೆಂದು ಹೋಗಲು ಬಂದ ವಾಸೀಮನೆಂಬ ಅನಾಥ ಹುಡುಗ ಮಸೀದಿಯಲ್ಲೇ ಉಳಿದುಕೊಳ್ಳುತ್ತಾನೆ. ಮೌಲ್ವಿ ಸಾಹೇಬರಿಗೆ ಹುಷಾರಿಲ್ಲದಾಗ ಊರಿನ ಜನರಿಗೆ ನಮಾಜು ಮಾಡಿಸುವುದಕ್ಕೆ ಮುಂದಾಳತ್ವ ವಹಿಸುತ್ತಾನೆ. ನಮಾಜು ಮಾಡಿಸಿದರಷ್ಟೇ ಸಾಲದು, ಜನರ ಕಷ್ಟಕ್ಕೂ ನೆರವಾಗಬೇಕು ಎಂದು ಹೇಳುತ್ತಾ ಬಡ್ಡಿ ವ್ಯಾಪಾರಿ ಶೆಟ್ಟಿಯಿಂದ ಸಾಲಕ್ಕೆ ದುಡ್ಡು ತೆಗೆದುಕೊಂಡು ತೊಂದರೆಗೀಡಾಗಿದ್ದ ಮುಶ್ತಾಕನ ಕುಟುಂಬಕ್ಕೆ ನೆರವಾಗುತ್ತಾನೆ. ಮುಶ್ತಾಕನನ್ನು ಅರಬ್ಬಿಗೆ ದುಡ್ಡು ದುಡಿಯಲು ಕಳುಹಿಸುತ್ತಾನೆ. ಊರಿನ ಇತರ ಸಾಬರು ನಮ್ಮನ್ನೂ ಅರಬ್ಬಿಗೆ ಕಳುಹಿಸಿ ಪುಣ್ಯ ಕಟ್ಟಿಕೋ ಎನ್ನುತ್ತಾರೆ. ಈ ಮಧ್ಯೆ ಮೌಲ್ವಿಯ ಸಲಹೆಯಂತೆ ಬುಡೇನ ಸಾಬನ ದೊಡ್ಡ ಮಗಳ ನಿಖಾ ವಾಸೀಮನೊಂದಿಗೆ ನಡೆಯುತ್ತದೆ. ವಾಸೀಮ ಮನೆ ಅಳಿಯನಾಗಿ, ಬುಡೇನ ಸಾಬನ ಕೆಲಸಗಳನ್ನೆಲ್ಲ ಇಚ್ಛೆಯಿಂದ ಮಾಡುತ್ತ ಎಲ್ಲರ ಮೆಚ್ಚುಗೆ ಗಳಿಸುತ್ತಾನೆ. ಕಡಿಮೆ ಮಾತಿನ, ಸಹಾಯ ಮನೋಭಾವದ, ಧರ್ಮಬೀರು ವಾಸೀಮನೇ ಆತಂಕದ ಸುಳಿಯನ್ನೊತ್ತು ತರುತ್ತಾನೆ ಎಂಬ ಸುಳಿವೂ ಬುಡೇನ ಸಾಬನ ಕುಟುಂಬಕ್ಕಾಗಲೀ ಊರವರಿಗಾಗಲೀ ತಿಳಿಯುವುದೇ ಇಲ್ಲ.
ಹಿಂಗ್ಯಾಕೆ' ವೆಬ್ ಪುಟಕ್ಕೆ ಬೆಂಬಲವಾಗಿ ನಿಮ್ಮಿಂದ ಸಾಧ್ಯವಾದಷ್ಟು ಹಣವನ್ನು ಕಳಿಸಿಕೊಡಲು ಕೆಳಗಿರುವ ಲಿಂಕ್ ಕ್ಲಿಕ್ಕಿಸಿ.

ವಾಸೀಮ ಧರ್ಮಬೀರುವಲ್ಲ, ಧರ್ಮಾಂಧ ಎಂದು ಒಂದೇ ದೃಶ್ಯದಲ್ಲಿ ತೋರಿಸಿಬಿಡುತ್ತಾರೆ ನಿರ್ದೇಶಕರಾದ ಪಿ.ಎಚ್.ವಿಶ್ವನಾಥ್. ಬುಡೇನ ಸಾಬರಿಗೆ ಮಠದಯ್ಯ ಆಪ್ತ. ಮಠದಲ್ಲಿ ಕುಳಿತು ಮಠದಯ್ಯನವರೊಡನೆ ಹರಟುತ್ತ ಕಡ್ಲೆಕಾಯಿ ಮೆಲ್ಲುತ್ತಿರುವಾಗ ವಾಸೀಮ್ ಮತ್ತು ಶಬ್ಬು ಬರುತ್ತಾರೆ. ಹಿಂದೂ ಮಠದಲ್ಲಿ ಸಾಬರು ಕುಳಿತು ಮಾತನಾಡುವುದು, ತನ್ನ ಹೆಂಡತಿ ಆ ಮಠದಯ್ಯನಿಗೆ ಬೇಕಾದ ಗಿಡಮೂಲಿಕೆಗಳನ್ನು ತಂದುಕೊಡುವುದು ವಾಸೀಮನಿಗೆ ಸರಿ ಕಾಣುವುದಿಲ್ಲ. ತಗಪ್ಪ ತಿನ್ನು ಎಂದು ಮಠದಯ್ಯ ವಾಸೀಮನಿಗೆ ಎರಡು ಬಾಳೆಹಣ್ಣು ಕೊಡುತ್ತಾನೆ. ನಾನು ಹೊರಗಿರ್ತೀನಿ ಎಂದ್ಹೇಳಿ ಬರುವ ವಾಸೀಮ್ ಅದನ್ನು ತಿನ್ನದೆ ಹಾಗೇ ಜಗುಲಿಯ ಮೇಲಿಡುತ್ತಾನೆ. ಅನ್ಯ ಮತದವರು ಕೊಟ್ಟಿದ್ದನ್ನೂ ತಿನ್ನದಷ್ಟೂ ಮತಾಂಧ ವಾಸೀಮ್. ಆತ ಈ ಕಾಡಳ್ಳಿಗೆ ಬಂದ ಉದ್ದೇಶ ನಗರದಲ್ಲಿ ಬಾಂಬು ಸ್ಪೋಟಿಸಿ ಅಮಾಯಕರನ್ನು ಹತ್ಯೆಗೈದು ಮತ್ತೆ ಕಾಡಳ್ಳಿಯಲ್ಲಿ ಸುಲಭವಾಗಿ ತಲೆಮರೆಸಿಕೊಂಡುಬಿಡಬಹುದೆಂದು. ಆಗೀಗ ಅವನ ಭಯೋತ್ಪಾದಕ ಗೆಳೆಯರೂ ಬರುತ್ತಾರೆ. ಕೊನೆಗೊಂದು ದಿನ ಬುಡೇನ ಸಾಬನಿಗೆ ತನ್ನಳಿಯನ ನಿಜರೂಪ ತಿಳಿಯುತ್ತದೆ, ಆಕಸ್ಮಿಕವಾಗಿ ಬುಡೇನ ಸಾಬನ ಕೈಯಿಂದಲೇ ವಾಸೀಮನೆಂಬ ಕ್ರಿಮಿಯ ಹತ್ಯೆಯಾಗಿಬಿಡುತ್ತದೆ. ಮನೆಯಲ್ಲಿ ಶಬ್ಬು ಗರ್ಭಿಣಿ, ಆಕೆಯ ಗಂಡ, ತನ್ನಳಿಯನನ್ನೇ ಕೊಲೆ ಮಾಡಿದ ಬುಡೇನ ಸಾಬನ ಮಾನಸಿಕ ಸ್ಥಿತಿಯಲ್ಲಿ ಏರುಪೇರಾಗಿ ಕೊನೆಗೇನು ಆತ ಹುಚ್ಚನಾಗುತ್ತಾನಾ? ಶಬ್ಬುವಿಗೆ ವಿಷಯ ತಿಳಿಯುತ್ತದಾ? ಊರವರ ದೃಷ್ಟಿಯಲ್ಲಿ ಎತ್ತರದ ಸ್ಥಾನದಲ್ಲಿದ್ದ ಬುಡೇನ ಸಾಬ ಅಳಿಯನ ಕೃತ್ಯದಿಂದ ಪಾತಾಳಕ್ಕಿಳಿದುಬಿಡುತ್ತಾನಾ? 

ಭಯೋತ್ಪಾದನೆಯ ಬಗೆಗಿನ ಚಿತ್ರವಿದು, ಆದರೆ ಆತಂಕದೊಂದಿಗೇ ನೋಡುವ ಚಿತ್ರವಲ್ಲ. ಇಡೀ ಚಿತ್ರದಲ್ಲೊಂದು ಲವಲವಿಕೆಯಿದೆ. ನಾಯಕ ಬುಡೇನ ಸಾಬನ ಪಾತ್ರವೇ ಹೊಸತನದ್ದು. ಕತ್ತೆ ಮೇಲೆ ಸಾಮಾನು ಹೊತ್ತು ತರುವ ಎಷ್ಟು ಪ್ರಮುಖ ಪಾತ್ರಗಳನ್ನು ನಾವು ಚಿತ್ರಗಳಲ್ಲಿ ನೋಡಿದ್ದೇವೆ ಹೇಳಿ? ಇನ್ನು ಅಕ್ಕ – ತಂಗಿಯರ ಪ್ರೀತಿ, ಮುನಿಸು, ಹಾಸ್ಯವೆಲ್ಲವೂ ಚಿತ್ರದಲ್ಲಿದೆ. ಕೋಮುಸಾಮರಸ್ಯವೆಂಬುದು ಬಲವಂತವಾಗಿ ಹೇರಿಕೊಳ್ಳುವಂತದ್ದಲ್ಲ, ಅದು ಸಹಜವಾಗಿ ಜನರ ನಡುವೆ ಅಸ್ತಿತ್ವದಲ್ಲಿರುವಂತದ್ದು ಎಂದು ತುಂಬಾ ನೈಜವಾಗಿ ತೋರಿಸಿದ್ದಾರೆ ನಿರ್ದೇಶಕರು. ಚಿತ್ರದ ಕೆಲವು ದೃಶ್ಯಗಳು, ಆಟದ ಪಿಸ್ತೂಲಿನ ಬಳಕೆ ಚಿತ್ರದ ಬಜೆಟ್ಟು ತುಂಬಾ ಕಡಿಮೆಯಿತ್ತೇನೋ ಎಂಬ ಭಾವ ಮೂಡಿಸಿದರೆ ಬಜೆಟ್ಟಿನ ಬಗ್ಗೆ ಮತ್ತಷ್ಟು ಯೋಚನೆ ಬರದಂತೆ ಮಾಡುವುದು ಛಾಯಾಗ್ರಹಣ. ಮತ್ತಿಡೀ ಚಿತ್ರಕ್ಕೊಂದು ದೃಶ್ಯಕಾವ್ಯದ ಭಾವವನ್ನು ಕೊಟ್ಟಿರುವುದು ಮಲೆನಾಡ ಹಸಿರ ಚಿತ್ರಣ. ಇನ್ನು ನಮ್ಮ ಪ್ರಣಯರಾಜ ಶ್ರೀನಾಥ್ ಬುಡೇನ ಸಾಬರ ಪಾತ್ರದಲ್ಲಿ ಒಂದಾಗಿಬಿಟ್ಟಿದ್ದಾರೆ. ಅವರ ಚಿತ್ರಜೀವನದಲ್ಲಿನ ಅತ್ಯುತ್ತಮ ಅಭಿನಯಗಳಲ್ಲಿ ಇದೂ ಒಂದು. ಶಬ್ಬು, ಮಠದಯ್ಯ ಮತ್ತು ಶೆಟ್ಟಿ ನೆನಪಿನಲ್ಲುಳಿಯುವಂತೆ ಅಭಿನಯಿಸಿದ್ದಾರೆ. ವಾಸೀಮನ ತಣ್ಣನೆಯ ಕ್ರೌರ್ಯ ಕಣ್ಣಲ್ಲೇ ವ್ಯಕ್ತವಾಗುವಷ್ಟು ಶಕ್ತವಾಗಿದೆ. ಇನ್ನುಳಿದ ಪಾತ್ರಗಳ ಅಭಿನಯವೂ ಚಿತ್ರಕ್ಕೆ ಪೂರಕವಾಗಿದೆ. ಚಿತ್ರದಲ್ಲಿ ಕೊರತೆಗಳೇ ಇಲ್ಲವೆಂದೇನಲ್ಲ. ತಾಂತ್ರಿಕ ಲೋಪಗಳು ಹಲವಿವೆ. ಪಕ್ಕದ ನಗರದಲ್ಲೇ ಬಾಂಬು ಸ್ಪೋಟ ನಡೆದು ಅಮಾಯಕ ಮಕ್ಕಳು ಸಾವಿಗೀಡಾದರೂ ಊರಿನವರಲ್ಲಿ ಏನೊಂದೂ ಬದಲಾಗದಿರುವುದು ಕೊಂಚ ಅಚ್ಚರಿ ಮೂಡಿಸುತ್ತದೆ. ಅಲ್ಲಲ್ಲಿ ಚಿತ್ರಕತೆ ಕೊಂಚ ಬಿಗಿಯಾಗಿರಬೇಕೆಂದೆನ್ನಿಸುವುದು ಸುಳ್ಳಲ್ಲ. 

ಪ್ರಸ್ತುತ ವಿಷಯವೊಂದರ ಮೇಲೆ ಬೆಳಕು ಚೆಲ್ಲುವ ‘ಸುಳಿ’ ಸಿನಿಮಾ ಬಹುತೇಕರಿಗೆ ತಲುಪುವುದೇ ಇಲ್ಲ. ನಾನು ಸಿನಿಮಾ ಮಂದಿರಕ್ಕೆ ಹೋದಾಗ ನಮ್ಮನ್ನೂ ಸೇರಿಸಿ ಚಿತ್ರಮಂದಿರದಲ್ಲಿದ್ದದ್ದು ಎಂಟು ಮಂದಿಯಷ್ಟೇ. ಈ ಚಿತ್ರದ ಸೋಲಿಗೆ ಮೂವರು ಕಾರಣರು. ಚಿತ್ರದ ಬಗ್ಗೆ ಹೆಚ್ಚೇನು ಪ್ರಚಾರ ಕೊಡದೆ ಸಾಯಿಸಿದ ಚಿತ್ರತಂಡ, ಅನ್ಯಭಾಷೆಯ ಚಿತ್ರಗಳಿಗೆ ಸಲ್ಲದ ಪ್ರಚಾರ ಕೊಡುವ ದೃಶ್ಯವಾಹಿನಿಗಳಲ್ಲಿ ನಮ್ಮದೇ ಚಿತ್ರದೆಡೆಗಿರುವ ಅಸಡ್ಡೆ ಹಾಗೂ ಗೊತ್ತೇ ಇರದ ಭಾಷೆಯ ಉತ್ತಮ ಸಿನಿಮಾಗಳನ್ನು ಹುಡುಕುಡುಕಿ ನೋಡುವ ‘ಪ್ರಜ್ಞಾವಂತ’ ಪ್ರೇಕ್ಷಕರೂ ಈ ಚಿತ್ರವನ್ನು ನೋಡಿ ಇತರರಿಗೆ ತಿಳಿಸುವ ತೊಂದರೆ ತೆಗೆದುಕೊಳ್ಳದೇ ಇರುವುದು. ಆಮೇಲಿದ್ದೇ ಇದೆಯಲ್ಲ, ಕನ್ನಡದಲ್ಲಿ ಎಲ್ರೀ ಒಳ್ಳೆ ಸಿನಿಮಾಗಳು ಅನ್ನೋ ಹಳಹಳಿಕೆ. ಇಡೀ ಚಿತ್ರದಲ್ಲಿ ಸಾಬರ ಪಾತ್ರಗಳೇ ಇರುವುದು ಕೂಡ ಚಿತ್ರದ ಬಗ್ಗೆ ಎಲ್ಲೂ ಹೆಚ್ಚೂ ಚರ್ಚೆಯಾಗದಿರುವುದಕ್ಕೆ ಕಾರಣವೆಂದರೆ ತಪ್ಪಾಗಲಾರದು. ಕೊನೆಗೆ ಭಯೋತ್ಪಾದಕನನ್ನು ಸಾಬಿಯಲ್ಲದೇ, ಮಠದಯ್ಯನೋ ಶೆಟ್ಟಿಯೋ ಒಂದಷ್ಟು ವೀರಾವೇಶದಿಂದ ಕೊಂದುಬಿಟ್ಟಿದ್ದರೂ ಚಿತ್ರ ಗೆದ್ದುಬಿಡುತ್ತಿತ್ತೇನೋ! ಇರೋದ್ರಲ್ಲಿ ನಮ್ಮ ಕನ್ನಡ ಪತ್ರಿಕೆಗಳೇ ವಾಸಿ, ಈ ಚಿತ್ರದ ಬಗ್ಗೆ ಚೆಂದದ ವಿಮರ್ಶೆಗಳನ್ನು ಬರೆದು ಒಂದು ನಾಲಕ್ಕು ಜನರಿಗಾದರೂ ತಿಳಿಸಿವೆ. 6-5=2 ಯಿಂದ ಕನ್ನಡ ಸಿನಿಮಾರಂಗಕ್ಕೆ ಶುರುವಾದ ದೆವ್ವದ ಕಾಟ ಇನ್ನೂ ಮುಗಿದಂತೆ ಕಾಣಿಸುತ್ತಿಲ್ಲ. ದೆವ್ವದ ಚಿತ್ರಗಳ ಸುಳಿಯಲ್ಲಿ ಸಿಲುಕಿಹಾಕಿಕೊಂಡಿರುವ ಪ್ರೇಕ್ಷಕನಿಗೆ ಮನುಷ್ಯನೇ ದೆವ್ವ ಮನುಷ್ಯನೇ ದೈವ ಎಂದು ತಿಳಿಸುವ ‘ಸುಳಿ’ ಚಿತ್ರ ಪ್ರಿಯವಾಗುವುದು ಹೇಗೆ ಸಾಧ್ಯ ಅಲ್ಲವೇ? ಚಿತ್ರಮಂದಿರದಿಂದತೂ ಸುಳಿ ಬೇಗ ಮರೆಯಾಗುತ್ತದೆ, ಟಿವಿಯಲ್ಲಿ ಬಂದಾಗಲಾದರೂ ನೋಡಿ.

ಮೇ 14, 2016

ಸಮಾಜದ ಸಿದ್ಧಸೂತ್ರಗಳನ್ನೊಡೆಯದ ‘ತಿಥಿ’

thithi kannada movie review
ಡಾ. ಅಶೋಕ್. ಕೆ. ಆರ್.
ನೀವು ವಿದೇಶಿ ಭಾಷೆಯ ಅದರಲ್ಲೂ ಇರಾನಿ ಸಿನಿಮಾಗಳನ್ನು ನೋಡುವವರಾಗಿದ್ದರೆ ಕನ್ನಡದ ತಿಥಿ ಸಿನಿಮಾ ಇರಾನಿ ಸಿನಿಮಾದಂತೆಯೇ ಇದೆ ಎನ್ನುವ ಭಾವನೆ ಆಗಾಗ ಮೂಡುತ್ತಲೇ ಇರುತ್ತದೆ. ನೈಜತೆಗೆ ಹತ್ತಿರವಾಗಿ ತೆಗೆಯುವ ಪ್ರಯತ್ನ, ಪರಿಸರದಲ್ಲಿನ ಶಬ್ದಗಳನ್ನಷ್ಟೇ ಸಂಗೀತವಾಗಿ ಉಪಯೋಗಿಸಿರುವ ಪರಿಯೆಲ್ಲವೂ ಇರಾನಿ ಸಿನಿಮಾವನ್ನು ನೆನಪಿಸುತ್ತದೆ. ಆದರೆ ಇರಾನಿ ಸಿನಿಮಾಗಳಿಗಿರುವ ಒಂದು ಅನುಕೂಲ ತಿಥಿಗೆ ಇಲ್ಲವಾಗಿದೆ! ಇರಾನಿ ಸಿನಿಮಾದ ಪಾತ್ರಗಳ ಜಾತಿ, ಉಪಜಾತಿಯ ಬಗ್ಗೆ ನಮಗೆ ಅಷ್ಟು ಜ್ಞಾನವಿರುವುದಿಲ್ಲವಾದ್ದರಿಂದ ಸಿನಿಮಾವನ್ನು ಸಿನಿಮಾವಾಗಿ ವೀಕ್ಷಿಸಿ ಅನುಭವಿಸಿ ಎದ್ದುಬಂದುಬಿಡಬಹುದು. ಆದರೆ ನಮ್ಮದೇ ಕರ್ನಾಟಕದ ಮಂಡ್ಯದ ಹಳ್ಳಿ ನೊದೆಕೊಪ್ಪಲಿನಲ್ಲಿ ಚಿತ್ರಿತವಾದ ತಿಥಿಯಲ್ಲಿನ ಪಾತ್ರಗಳ ಜಾತಿಯೆಲ್ಲವೂ ನಮಗೆ ತಿಳಿದುಬಿಡುವುದರಿಂದ ಅಲ್ಲಲ್ಲಿ ತೋರುವ ಜಾತೀಯತೆ ಸಿನಿಮಾದ ಆಹ್ಲಾದವನ್ನು ಕಡಿಮೆ ಮಾಡಿಬಿಡುತ್ತದೆ. ತೆರೆಗೆ ಬರುವ ಮುನ್ನ ತಿಥಿ ಚಿತ್ರ ಬೆಂಗಳೂರಿನ ಅಂತರಾಷ್ಟ್ರೀಯ ಸಿನಿಮಾ ಉತ್ಸವವನ್ನೂ ಸೇರಿದಂತೆ ಅನೇಕ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು, ಅನೇಕ ಪ್ರಶಸ್ತಿಗಳನ್ನೂ ಗೆದ್ದಿತ್ತು. ಚಿತ್ರದ ಬಿಡುಗಡೆಯ ನಂತರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೋಡುಗರ ಪ್ರತಿಕ್ರಿಯೆಗಳೇನೇ ಇರಲಿ, ಅವಾರ್ಡು ಸಿನಿಮಾವೊಂದು ಜನರನ್ನು ಚಿತ್ರಮಂದಿರಗಳೆಡೆಗೆ ಸೆಳೆಯುತ್ತಿದೆಯೆನ್ನುವುದು (ಹೆಚ್ಚು ತೆರೆಕಂಡಿರುವುದು ಬೆಂಗಳೂರಿನಲ್ಲಿ) ಸಂತಸದ ಸಂಗತಿಯೇ. ಅಷ್ಟರಮಟ್ಟಿಗೆ ಜನರಿಗೆ ತಲುಪುವಂತೆ ಮಾಡಿದ ಚಿತ್ರತಂಡಕ್ಕೆ ಧನ್ಯವಾದಗಳನ್ನರ್ಪಿಸಲೇಬೇಕು.

ಮೊದಲ ದೃಶ್ಯದ ನಂತರವೇ ಸತ್ತು ಹೋಗುವ ಸೆಂಚುರಿಗೌಡನ ಮಗ ಗಡ್ಡಪ್ಪ, ಗಡ್ಡಪ್ಪನ ಮಗ ತಮ್ಮಯ್ಯ, ತಮ್ಮಯ್ಯನ ಮಗ ಅಭಿಯ ಸುತ್ತ ಚಿತ್ರದ ಕತೆ ಸಾಗುತ್ತದೆ. ಸೆಂಚುರಿ ಗೌಡನ ಸಾವು ಮತ್ತವನ ತಿಥಿ ಕಾರ್ಯದ ನಡುವಿನ ಹತ್ತು ದಿನಗಳ ಕತೆಯಿದು. ಸೆಂಚುರಿ ಗೌಡ ತದನಂತರದ ದೃಶ್ಯಗಳಲ್ಲಿ ತಿಳಿಸಿದಂತೆ ಹೆಣ್ಣಿನ ಸಂಗವನ್ನು ಚಟವಾಗಿಸಿಕೊಂಡವನು. ಇನ್ನವನ ಮಗ ಗಡ್ಡಪ್ಪ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಸ್ಥಿತಪ್ರಜ್ಞ. ತಮ್ಮಯ್ಯ ಹಣ ಸಂಪತ್ತಿನ ಬೆಂಬತ್ತಿದರೆ ಹದಿಹರೆಯದ ಅಭಿಗೆ ಕುಡಿತ, ಜೂಜು, ಮತ್ತು ಇಷ್ಟವಾಗುವ ಕುರಿ ಕಾಯುವ ಹುಡುಗಿ ಕಾವೇರಿಯೊಡನೆ ಸರಸವಾಡುವ ಹಂಬಲ. ಈ ನಾಲ್ವರಲ್ಲಿ ಚಿತ್ರದ ನಾಯಕನೆಂದು ಯಾರನ್ನಾದರೂ ಕರೆಯಬಹುದಾದರೆ ಅದು ಗಡ್ಡಪ್ಪ. 

ಗಡ್ಡಪ್ಪ ಅಲೆಮಾರಿ ಪ್ರವೃತ್ತಿಯವನು. ಬೆಳಿಗ್ಗೆ ಅಲೆಯಲು ಹೋದರೆ ಸಂಜೆಗೋ ರಾತ್ರಿಗೋ ಮನೆ ಸೇರುವವನು. ಅಪ್ಪ ಸತ್ತಾಗಲೂ ‘ಸರಿ ಬಿಡು’ ಎಂದು ಹೇಳಿಬಿಡುವ ಗಡ್ಡಪ್ಪನ ವ್ಯಕ್ತಿತ್ವವನ್ನು ಮೊದಲರ್ಧದಲ್ಲಿ ನಮ್ಮನುಕೂಲಕ್ಕೆ ತಕ್ಕಂತೆ ಅನುಭಾವ ಎಂದೂ ಕರೆದುಬಿಡಬಹುದು, ಬೇಜವಾಬ್ದಾರಿತನ ಎಂದೂ ಹೆಸರಿಸಬಹುದು. ಬೇಜವಾಬ್ದಾರಿತನವಲ್ಲ ಅನುಭಾವ ಎನ್ನುವುದರಿವಿಗೆ ಬರುವುದು ಎರಡನೇ ಅರ್ಧದಲ್ಲಿ ಗಡ್ಡಪ್ಪ ಕುರುಬರಟ್ಟಿಯಲ್ಲಿ ತನ್ನಪ್ಪನೇ ತನ್ನೆಂಡತಿಯೊಂದಿಗೆ ಸಂಬಂಧ ಹೊಂದಿದ್ದ ಸಂಗತಿಯನ್ನು ವಿವರಿಸಿದಾಗ. ಗದ್ದೆಯಲ್ಲಿ ಅಪ್ಪ ಸೊಸೆಯ ಸರಸ ನೋಡಿದ ಮೇಲೆ ಗಡ್ಡಪ್ಪ ಏನೊಂದೂ ಮಾತನಾಡುವುದಿಲ್ಲ. ಮೌನವಾಗೇ ಇದ್ದುಬಿಡುತ್ತಾನೆ. ಆ ಮೌನವೇ ಕಾಡಿದ ಕಾರಣ ಅವನೆಂಡತಿ ತನ್ನಿಬ್ಬರು ಮಕ್ಕಳನ್ನೂ ಬಾವಿಗೆ ನೂಕಿ ತಾನೂ ಹಾರಿ ಬಿಡುತ್ತಾಳೆ. ಒಬ್ಬ ಮಗನನ್ನು ಉಳಿಸಿಕೊಳ್ಳಲಾಗುತ್ತದೆ, ಅವನೇ ತಮ್ಮಯ್ಯ. ಅನೈತಿಕ ಸಂಬಂಧವೊಂದು ಜಾಹೀರಾದಾಗ ಪಾಪ ಪ್ರಜ್ಞೆ ಕಾಡಿದ ಹೆಣ್ಣು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ, ಆ ಅನೈತಿಕ ಸಂಬಂಧದಲ್ಲಿ ಭಾಗಿಯಾಗಿದ್ದ ಗಂಡು ಸೆಂಚುರಿ ಗೌಡನಾಗಿ ಭಾಳಾ ರಸಿಕನಿದ್ದ ಕಣಯ್ಯ ಎಂದು ಹೊಗಳಿಕೆಗೆ ಒಳಗಾಗುತ್ತಾನೆ! ಗಡ್ಡಪ್ಪನಿಗೆ ಸೆಂಚುರಿ ಗೌಡನ ಸಾವು ಕಾಡದೇ ಇರುವುದಕ್ಕೆ ತಿರಸ್ಕಾರ ಮುಖ್ಯ ಕಾರಣವೇ ಹೊರತು ಅನುಭಾವವೂ ಅಲ್ಲ, ಬೇಜವಾಬ್ದಾರಿತನವೂ ಅಲ್ಲ! 

ತಮ್ಮಯ್ಯ ಇರುವ ಜಮೀನು ಮಾರಿ ಒಂದಷ್ಟು ದುಡ್ಡು ಮಾಡಿಕೊಳ್ಳುವ ಸಲುವಾಗಿ ಖಾತೆಯನ್ನು ತನ್ನ ಹೆಸರಿಗೆ ವರ್ಗ ಮಾಡಿಸಲು ಗಡ್ಡಪ್ಪನ ಬೆನ್ನು ಬೀಳುತ್ತಾನೆ, ಗಡ್ಡಪ್ಪ ಎಲ್ಲಿಗೂ ಬರುವುದಿಲ್ಲವೆಂದು ಕೈಚೆಲ್ಲಿದ ಮೇಲೆ ಗಡ್ಡಪ್ಪ ಸತ್ತು ಹೋದ ಎಂದು ನಕಲಿ ಮರಣ ಪತ್ರ ತಯಾರಿಸಿ ಜಮೀನು ಮಾರಲೊರಡುತ್ತಾನೆ. ಇನ್ನು ಅಭಿ ಹುಬ್ಬಳ್ಳಿ ಕಡೆಯಿಂದ ಬಂದಿದ್ದ ಕುರುಬರ ಹುಡುಗಿಯ ಕಾವೇರಿಯ ಬೆನ್ನು ಬಿದ್ದು ಅವಳನ್ನೊಲಿಸಿಕೊಂಡು ತಾತನ ತಿಥಿಯ ಜೊತೆಗೇ ಅವಳೊಡನೆ ಕೂಡುತ್ತಾನೆ. ಅಪ್ಪನ ದುಡ್ಡು ಕದ್ದು ಜೂಜಾಡುವ, ಇಷ್ಟಪಟ್ಟ ಹುಡುಗಿಯ ಕುರಿಮಂದೆಯಿಂದಲೇ ಕುರಿ ಕದಿಯುವ ಅಭಿ ಮತ್ತವನ ಗೆಳೆಯರು ಯಾವುದೋ ದಾರಿಯಿಂದ ದುಡ್ಡು ಮಾಡಿದರೆ ಸರಿ ಎನ್ನುವ ಮನೋಭಾವದವರು. ಹಾಗೆ ನೋಡಿದರೆ ಇಡೀ ಚಿತ್ರದಲ್ಲಿ ಬೇಜವಾಬ್ದಾರಿ ಮನುಷ್ಯ ಎಂದು ತೋರುವ ಗಡ್ಡಪ್ಪನಿಗಿಂತ ತಮ್ಮಯ್ಯ ಮತ್ತು ಅಭಿಯೇ ಬೇಜವಾಬ್ದಾರಿ ವ್ಯಕ್ತಿತ್ವದವರು! ಗಡ್ಡಪ್ಪ ಮೇಕೆ ಸಾಕಿ ಗದ್ದೆ ನೋಡಿಕೊಂಡು ಸಂಸಾರ ಸಾಕಿದ, ತಮ್ಮಯ್ಯ ಜಮೀನು ಮಾರಿ ದುಡ್ಡು ಮಾಡಿಕೊಂಡು ನೆಲೆ ಕಂಡುಕೊಳ್ಳುವ ಯತ್ನ ಮಾಡುತ್ತಿದ್ದರೆ ತಮ್ಮಯ್ಯನ ಮಗ ಅಭಿ ಮರಳು ಕದ್ದೋ ಕಾಡಿನ ಮರ ಕದ್ದೋ ದುಡ್ಡೆಣಿಸುವ ಕೆಲಸ ಮಾಡುತ್ತಿದ್ದ!

ಹನ್ನೊಂದು ದಿನದ ಘಟನೆಯನ್ನು ಕತೆಯಾಗಿ ತೋರಿಸದೇ ಘಟನೆಯಾಗಿಯೇ ತೋರಿಸಿದ ತಿಥಿ ಚೆನ್ನಾಗಿದೆಯೇ? ಹೇಳುವುದು ಕಷ್ಟ. ಇದು ಸಿದ್ಧಸೂತ್ರದ ಸಿನಿಮಾವಲ್ಲ. ಅವಾರ್ಡು ಸಿನಿಮಾಗಳ ಸೂತ್ರವನ್ನೂ ಇದು ಪಾಲಿಸಿಲ್ಲ ಎನ್ನುವುದು ಹೆಗ್ಗಳಿಕೆಯೂ ಆಗಬಹುದು, ತೆಗಳಿಕೆಯೂ ಆಗಬಹುದು. ಕನ್ನಡದ ಮಟ್ಟಿಗೆ ಸಿನಿಮಾ ಸೂತ್ರಗಳನ್ನು ಒಡೆಯಲೆತ್ನಿಸಿ ಹೊಸ ಅಲೆಯ ಸಿನಿಮಾದಂತೆ ಕಾಣುವ ತಿಥಿ ಸಮಾಜದ ಸಿದ್ಧಸೂತ್ರಗಳನ್ನು ಪ್ರಶ್ನಿಸುವ ಕೆಲಸವನ್ನೂ ಮಾಡಿಲ್ಲ, ಗಡ್ಡಪ್ಪ ಸಾವಿನ ನಂತರದ ಆಚರಣೆಗಳ ಬಗ್ಗೆ ಹೇಳುವ ಒಂದು ಸಂಭಾಷಣೆಯ ತುಣುಕನ್ನು ಹೊರತುಪಡಿಸಿ. ಊಳಿಗಮಾನ್ಯತೆಯನ್ನೇ ಹಾಸು ಹೊದ್ದಿರುವ ಮಂಡ್ಯದ ಹಳ್ಳಿಯದು. ಬ್ಯಾಂಡು ಬಾರಿಸುವ ದಲಿತರನ್ನು 'ಬಾರಿಸಾಯ್ತಲ್ಲ ಅತ್ತಾಗೋಗಿ' ಎನ್ನುವ ದೃಶ್ಯ ಜಾತೀಯತೆಯ, ಗೌಡರ ದುರಹಂಕಾರದ ನೈಜ ದರ್ಶನವೇನೋ ಹೌದು. ಆದರೆ ಸಿನಿಮಾವೊಂದರಲ್ಲಿ ಸಮಾಜದ ಅನಿಷ್ಟಗಳನ್ನು ಪ್ರಶ್ನಿಸುವ, ವಿಮರ್ಶಿಸುವ ಯಾವ ಭಾವವೂ ಇಲ್ಲದೇ ಹೋದರೆ ಅದು ಹೊಸ ಅಲೆಯ ಸಿನಿಮಾ ಆಗುವುದು ಹೇಗೆ? ಇನ್ನು ಜೋಯಿಸ್ರು ‘ನೀವು ಗೌಡರಾದ್ದರಿಂದ ತಿಥಿಗೆ ಮಾಂಸ ಮಾಡಿಸಬೇಕು, ಹೆಚ್ಚು ಜನರನ್ನು ಕರೆಯಬೇಕು’ ಎಂದು ಹೇಳುವುದು ಮೇಲು ಕೀಳಿನ ಭಾವನೆ ತುಂಬಿ ಜಾತಿ ವ್ಯವಸ್ಥೆಯನ್ನು ಬಲಪಡಿಸುವ ಪುರೋಹಿತಶಾಹಿ ಮನಸ್ಥಿತಿಯ ಪ್ರತೀಕ. ಹಣವಿಲ್ಲದಿದ್ದರೂ ಸಾಲ ಮಾಡಿ ತಿಥಿ ಮಾಡುವ ತಮ್ಮಯ್ಯ, ಜೂಜಾಡಿ ಹಣ ಕಳೆಯುವ ಅಭಿ ಮಂಡ್ಯದ ಕೆಲವು ಕುಟುಂಬಗಳ ಸರ್ವನಾಶದ ಕಾರಣಗಳನ್ನು ತಿಳಿಸಿಕೊಡುತ್ತದೆ. 

ತಿಥಿ ಚಿತ್ರದ ಕುರಿತು ಬಂದ ಸುದ್ದಿ, ವಿಮರ್ಶೆಗಳಲ್ಲೆಲ್ಲಾ ವೃತ್ತಿ ನಿರತ ಕಲಾವಿದರಿದರಲ್ಲಿಲ್ಲ, ಊರಿನವರೇ ಅಭಿನಯಿಸಿದ್ದಾರೆ, ಸಹಜಾಭಿನಯ ಎಂದು ಒಂದಷ್ಟು ಹೆಚ್ಚಾಗಿಯೇ ಹೊಗಳಿದ್ದರು. ಹಾಗೆ ನೋಡಿದರೆ ಇಡೀ ಚಿತ್ರದ ನಕಾರಾತ್ಮಕ ಅಂಶವೇ ಚಿತ್ರದಲ್ಲಿರುವವರ ಅಭಿನಯ. ಸಹಜ ಅಭಿನಯವೆಂದರೆ ವೃತ್ತಿ ನಿರತ ಕಲಾವಿದರನ್ನು ಬಳಸಿಕೊಂಡು ಅವರಿಂದ ನೈಜತೆಗೆ ಹತ್ತಿರವಾದ ಅಭಿನಯವನ್ನು ತೆಗೆಸುವುದು. ಅಭಿನಯದ ಕುರಿತು ಏನು ಗೊತ್ತಿಲ್ಲದೇ ಇರುವವರನ್ನು ಚಿತ್ರದಲ್ಲುಪಯೋಗಿಸಿದ ಮಾತ್ರಕ್ಕೆ ಅದು ಸಹಜಾಭಿನಯವಾಗಿಬಿಡುವುದಿಲ್ಲ. ಗಡ್ಡಪ್ಪನ ಅಭಿನಯ ಮನಸ್ಸಲ್ಲುಳಿಯುತ್ತದೆ; ಉಳಿದ ಮುಖ್ಯಪಾತ್ರಧಾರಿಗಳ ಅಭಿನಯದ ಬಗ್ಗೆ ಇದೇ ಮಾತನ್ನು ಹೇಳುವುದು ಕಷ್ಟ. ನೈಜತೆಯ ಚಿತ್ರದಲ್ಲಿ ಪರದೆಯ ಮೇಲೆ ಮೂಡುವ ಎಲ್ಲರ ಅಭಿನಯವೂ ಸಹಜವಾಗಿರಬೇಕು. ಅದಿಲ್ಲಿ ಮಾಯವಾಗಿದೆ. ಅನೇಕ ಸಹಪಾತ್ರಗಳ ಸಂಭಾಷಣೆ ಹೇಳುವ ಶೈಲಿ ಕಂಠಪಾಠ ಮಾಡಿ ಒಪ್ಪಿಸಿದಂತಿದೆಯೇ ಹೊರತು ಸಹಜತೆಗೆ ಹತ್ತಿರದಲ್ಲೂ ಇಲ್ಲ. ಅಭಿನಯ ಸಹಜವಲ್ಲವಾದ್ದರಿಂದ ಕಲಾವಿದರಲ್ಲದವರು ಅಭಿನಯಿಸುವುದೇ ಅಸಹಜವಾಗಿಬಿಡುತ್ತದೆಯಲ್ಲವೇ? ಸಹಜಾಭಿನಯ ನಟನೆಯ ಎಬಿಸಿಡಿ ಗೊತ್ತಿರುವವರೇ ಚೆನ್ನಾಗಿ ಮಾಡುತ್ತಾರೆ ಎಂಬ ಭಾವನೆ ಚಿತ್ರ ನೋಡಿದ ಮೇಲೆ ಮೂಡುತ್ತದೆ. ಹಳ್ಳಿಯ ಪರಿಸರದ ನೈಜತೆಯ ಸಿನಿಮಾ ಎಂದು ಹೊಗಳಿಸಿಕೊಂಡ ಸಿನಿಮಾದಲ್ಲಿ ಅಚ್ಚರಿ ಮೂಡಿಸುವುದು ಸೆಂಚುರಿ ಗೌಡ ಸತ್ತಾಗ ಒಬ್ಬರ ಕಣ್ಣಲ್ಲೂ ನೀರಾಡದೇ ಇರುವುದು, ಯಾರೊಬ್ಬರೂ ಎದೆ ಬಡಿದುಕೊಂಡು ‘ಹೋಗ್ಬಿಟ್ಯಲ್ಲೋ’ ಎಂದು ಕೂಗದೇ ಇರುವುದು! ಮಂಡ್ಯದ ಕಡೆ ಸಾಮಾನ್ಯವಾಗಿ ಕಂಡುಬರುವ ಈ ದೃಶ್ಯ ಅದು ಹೇಗೆ ಚಿತ್ರದಲ್ಲಿ ಬರಲೇ ಇಲ್ಲವೋ ಅಚ್ಚರಿಯಾಗುತ್ತದೆ. ಇಡೀ ಸಿನಿಮಾಕ್ಕೊಂಡು ಉಡಾಫೆಯ, ಹಾಸ್ಯದ ಲೇಪನ ಕೊಡುವ ಸಲುವಾಗಿ ಇದನ್ನು ಉದ್ದೇಶಪೂರ್ವಕವಾಗಿ ಮರೆತುಬಿಡಲಾಯಿತಾ?

ಮಾತಿನ ಮೂಲಕವೇ ಕತೆ ಹೆಚ್ಚು ಸಾಗುವುದರಿಂದ, ಸಂಕೇತಗಳು - ಪ್ರತಿಮೆಗಳ ಸಂಖೈ ಕಡಿಮೆಯಿರುವುದರಿಂದ ಛಾಯಾಗ್ರಹಣಕ್ಕೆ ಹೇಳಿಕೊಳ್ಳುವಂತಹ ಪ್ರಾಮುಖ್ಯತೆಯೂ ಇಲ್ಲ. ನೈಜ ಶಬ್ದಗಳನ್ನುಪಯೋಗಿಸುವ ಪ್ರಯೋಗವನ್ನು ಮಾಡಿರುವುದರಿಂದ ಸಂಗೀತವಿಲ್ಲ. ಏನೇ ಹೇಳಿ ಚಿತ್ರವೊಂದನ್ನು ನೋಡುವಾಗ ಒಂದು ಮೂಡು ಸೃಷ್ಟಿಸಲು ಸಂಗೀತವಿದ್ದರೇ ಚೆಂದ! ಚಿತ್ರ ನೋಡಿ ಮುಗಿಸಿದ ಮೇಲೆ ಕಾಡುವ ಅಂಶಗಳ್ಯಾವುವು ಎಂದು ಪಟ್ಟಿ ಮಾಡಿದರೆ ಗಡ್ಡಪ್ಪನ ಹೊರತು ಹೆಚ್ಚೇನೂ ನೆನಪಾಗುವುದಿಲ್ಲ. ಸಿನಿಮಾ ಹೊಸ ಅಲೆಯದೇ ಇರಬಹುದು, ಅಲೆ ಎಲ್ಲರಿಗೂ ತಾಕುವುದಿಲ್ಲ.

ಸಿನಿಮಾಕ್ಕೆ ಸಿಕ್ಕ ಅತಿಯಾದ ಹೊಗಳಿಕೆ ಚಿತ್ರ ನೋಡುವುದಕ್ಕೆ ಮುಂಚೆ ಒಂದು ನಿರೀಕ್ಷೆಯನ್ನು ಹುಟ್ಟಿಸಿತ್ತು. ಬಹುಶಃ ಈ ನಿರೀಕ್ಷೆಯೂ ಸಿನಿಮಾ ಹೇಳಿಕೊಳ್ಳುವಂತಿಲ್ಲ ಎನ್ನುವ ಭಾವನೆ ಮೂಡಲು ಕಾರಣವಾಗಿರಬೇಕು.

ಮಾರ್ಚ್ 16, 2016

ವ್ಯವಸ್ಥೆಯ ಹಿಂಸೆಯ ‘ವಿಸಾರಣೈ’


visaranai tamil movie review
ಡಾ. ಅಶೋಕ್. ಕೆ. ಆರ್
16/03/2016
ನೈಜತೆಯ ವಿಷಯಕ್ಕೆ ಬಂದರೆ ತಮಿಳು ಸಿನಿಮಾಗಳಿಗೆ ತಮಿಳು ಸಿನಿಮಾಗಳೇ ಸಾಟಿ. ‘ಲಾಕ್ ಅಪ್’ ಎಂಬ ನೈಜ ಘಟನೆಗಳ ಬಗೆಗಿನ ಪುಸ್ತಕವನ್ನಾಧರಿಸಿ ವೆಟ್ರೀಮಾರನ್ ನಿರ್ದೇಶಿಸಿರುವ ‘ವಿಸಾರಣೈ’ ಸಿನಿಮಾ ವ್ಯವಸ್ಥೆಯ ವ್ಯವಸ್ಥಿತ ಹಿಂಸೆಯ ಛಾಯೆಯಲ್ಲಿ ನರಳುವ ನಾಲ್ಕು ಮುಗ್ಧರ ಕತೆ. ಇದು ಬರೀ ವ್ಯವಸ್ಥೆಯ, ಪೋಲೀಸ್ ಹಿಂಸೆಯ ಕತೆಯಷ್ಟೇ ಅಲ್ಲ; ಪೋಲೀಸರ, ಅವರ ಮೇಲಧಿಕಾರಿಗಳಲ್ಲಿರುವ ಕ್ರೌರ್ಯದ ಕತೆ; ಅವರೊಳಗಿರುವ ಪೂರ್ವಾಗ್ರಹಪೀಡಿತ ಮನಸ್ಸುಗಳ ಕತೆ. ವ್ಯವಸ್ಥೆ ನಮಗೆ ಮೋಸ ಮಾಡುವುದಿಲ್ಲ ಎಂದು ನಂಬಿಕೊಂಡ ಅಮಾಯಕರ ಕತೆಯಿದು.

ತಮಿಳುನಾಡಿನ ವಿವಿಧ ಊರುಗಳಿಂದ ನಾನಾ ಕಾರಣಗಳಿಗಾಗಿ ಓಡಿ ಹೋಗಿ ಆಂಧ್ರದಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ – ಪಾಂಡಿ, ಮುರುಗನ್, ಅಫ್ಜಲ್, ಕುಮಾರ್. ಚೆನ್ನಾಗಿ ಸಂಪಾದನೆ ಮಾಡಿ ಊರಿಗೆ ಮರಳಬೇಕೆಂಬ ಕನಸು. ಗಾಂಧಿ ಪಾರ್ಕಿನಲ್ಲಿ ರಾತ್ರಿ ಕಳೆಯುತ್ತಾರೆ, ಬಾಡಿಗೆ ದುಡ್ಡು ಉಳಿಸಲು. ಇವರು ನಾಲ್ವರನ್ನೂ ಆಂಧ್ರದ ಪೋಲೀಸರು ಒಂದು ಮುಂಜಾನೆ ಪೋಲೀಸ್ ಠಾಣೆಗೆ ಕರೆದೊಯ್ದು ಮನಬಂದಂತೆ ಹೊಡೆಯುತ್ತಾರೆ. ಈ ನಾಲ್ವರಿಗೂ ಯಾಕೆ ಹೊಡೆಸಿಕೊಳ್ಳುತ್ತಿದ್ದೀವೆಂದೇ ತಿಳಿಯುವುದಿಲ್ಲ. ಭಾಷೆ ಪೂರ್ಣವಾಗಿ ಬರುವುದಿಲ್ಲ. ಪ್ರಶ್ನೆ ಕೇಳಿದರೆ ಮತ್ತಷ್ಟು ಬಡಿತ. ಪ್ರತಿಷ್ಠಿತರ ಮನೆಯಲ್ಲಿ ದೊಡ್ಡ ಮೊತ್ತ ಕಳುವಾಗಿರುತ್ತದೆ. ಆದಷ್ಟು ಶೀಘ್ರವಾಗಿ ದರೋಡೆಕೋರರನ್ನು ಬಂಧಿಸಬೇಕೆಂದು ಮೇಲಧಿಕಾರಿಗಳಿಂದ ಒತ್ತಡ. ಕಳುವು ಮಾಡಿದವರು ತಮಿಳು ಮಾತನಾಡುತ್ತಿದ್ದರೆಂಬುದನ್ನೇ ನೆಪಮಾಡಿಕೊಂಡು ಈ ನಾಲ್ವರನ್ನು ಹಿಡಿದು ತಂದು ಅವರು ಅಪರಾಧವನ್ನು ಒಪ್ಪಿಕೊಳ್ಳುವಂತೆ ಮಾಡುವುದು ಪೋಲೀಸರ ಉದ್ದೇಶ. ಗಾಂಧಿ ಪಾರ್ಕಿನಿಂದ ಶುರುವಾಗುವ ಚಿತ್ರ ಗಾಂಧಿಯ ಸತ್ಯಾಗ್ರಹ ಮಾರ್ಗವನ್ನು ಪಾಂಡಿ ಮತ್ತು ಗೆಳೆಯರು ಪಾಲಿಸುವಂತೆ ಮಾಡುತ್ತದೆ. ಪೋಲೀಸರು ಕೊಟ್ಟ ಯಾವೊಂದು ಆಹಾರ ಪದಾರ್ಥವನ್ನೂ ಮುಟ್ಟುವುದಿಲ್ಲ. ಕೇಸು ಕ್ಲೋಸು ಮಾಡಲು ಪೋಲೀಸರಿಗೆ ಆತುರ. ಕುಟಿಲತೆಯಿಂದ ಸತ್ಯಾಗ್ರಹವನ್ನು ಮುರಿದುಬಿಡುತ್ತಾರೆ. ವ್ಯವಸ್ಥೆ ಗಾಂಧಿವಾದವನ್ನು ಕುಟಿಲತೆಯಿಂದ ಅಂತ್ಯಗೊಳಿಸಿದ್ದರ ಸಂಕೇತದಂತೆಯೂ ಇದು ಕಾಣಿಸುತ್ತದೆ. ಹಿಂಸೆಯ ಯಾವ ರೂಪವೂ ಪಾಂಡಿಯ ಮನಸ್ಸನ್ನು ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡಲು ಸಫಲತೆ ಕಾಣದಾಗ ಭಾವನೆಗಳ ಜೊತೆಗೆ ಆಟವಾಡಿ ಪೋಲೀಸರ ಸಮ್ಮುಖದಲ್ಲಿ ಎಲ್ಲವನ್ನೂ ಒಪ್ಪಿಕೊಳ್ಳುವಂತೆ ಮಾಡುತ್ತದೆ. ಈ ನಾಲ್ಕು ಪಾತ್ರಧಾರಿಗಳನ್ನಿಟ್ಟುಕೊಂಡು ದೊಡ್ಡದೊಂದು ದರೋಡೆಯ ಕತೆ ಹೆಣೆಯುತ್ತಾರೆ ಪೋಲೀಸರು. ಆದರೆ ನ್ಯಾಯಾಲಯದಲ್ಲಿ ಪಾಂಡಿಗೆ ತಡೆಯಲಾಗುವುದಿಲ್ಲ, ತೆಲುಗು ನ್ಯಾಯಾಧೀಶರಿಗೆ ತಮಿಳಿನಲ್ಲೇ ತಾವುಂಡ ಕಷ್ಟಗಳನ್ನೆಲ್ಲ ಹೇಳಿಬಿಡುತ್ತಾನೆ. ಅದೇ ಸಮಯಕ್ಕೆ ಕೆ.ಕೆ ಎಂಬ ಕ್ರಿಮಿನಲ್ಲನ್ನು ಹಿಡಿಯಲು ಬಂದಿರುತ್ತಾರೆ ತಮಿಳುನಾಡಿನ ಪೋಲೀಸರು. ತಮಿಳುನಾಡು ಪೋಲೀಸ್ ಮುತ್ತುವೇಲು ನ್ಯಾಯಾಧೀಶರ ಮುಂದೆ ಇವರು ತಮಿಳಿನಲ್ಲಿ ಹೇಳಿದ್ದನ್ನು ಇಂಗ್ಲೀಷಿಗೆ ಅನುವಾದಿಸಿ ಅವರು ಬಿಡುಗಡೆಯಾಗುವಂತೆ ಮಾಡುತ್ತಾನೆ. ನ್ಯಾಯಾಲಯದಲ್ಲಿ ಶರಣಾಗಲು ಬಂದಿದ್ದ ಕೆ.ಕೆ.ಯನ್ನು ಹಿರಿಯ ಅಧಿಕಾರಿಗಳ ಒತ್ತಡದಿಂದ ಈ ನಾಲ್ವರನ್ನು ಉಪಯೋಗಿಸಿ ಅಪಹರಿಸಿ ತಮಿಳುನಾಡು ಕಡೆಗೆ ಹೊರಳುತ್ತದೆ ಚಿತ್ರ. ಆಂಧ್ರ ಪೋಲೀಸರ ತೆಕ್ಕೆಯಿಂದ ತಮಿಳುನಾಡು ಪೋಲೀಸರ ತೋಳಿಗೆ ಬೀಳುತ್ತಾರೆ ಈ ನಾಲ್ವರು.

ನಾಲ್ವರಲ್ಲಿ ಕುಮಾರ್ ಪೋಲೀಸ್ ಸ್ಟೇಷನ್ ಬರುವ ಮುಂಚೆಯೇ ತನ್ನ ಊರಿನ ಬಳಿ ಇಳಿದುಕೊಳ್ಳುತ್ತಾನೆ. ಉಳಿದ ಮೂವರು ಪೋಲೀಸ್ ಠಾಣೆಯನ್ನು ಸ್ವಚ್ಛಗೊಳಿಸುತ್ತ ಅಲ್ಲೇ ಉಳಿದುಬಿಡುತ್ತಾರೆ. ಕೆಕೆ ಸುತ್ತಲಿನ ರಾಜಕೀಯಕ್ಕೆ ಸಾಕ್ಷಿಯಾಗಿ, ಡಿಸಿ, ಎಸಿ, ಪೋಲೀಸ್ ಅಧಿಕಾರಿಗಳ ಹಣದ ದಾಹಗಳಿಗೆ ಸಾಕ್ಷಿಯಾಗಿ. ಕೊನೆಗೆ ಈ ಮೂವರು ಬದುಕಿರುವುದು ತಮ್ಮ ಅಸ್ತಿತ್ವಕ್ಕೇ ಅಪಾಯಕಾರಿ ಎಂದರಿತ ಮೇಲಧಿಕಾರಿಗಳು ಅವರನ್ನು ಖೊಟ್ಟಿ ಎನ್ ಕೌಂಟರಿನಲ್ಲಿ ಮುಗಿಸಿಬಿಡಬೇಕೆಂದು ನಿರ್ಧರಿಸುತ್ತಾರೆ. ಮೊದಮೊದಲು ಮುತ್ತುವೇಲು ಅದಕ್ಕೆ ನಿರಾಕರಿಸುತ್ತಾನಾದರೂ ವೈಯಕ್ತಿಕವಾಗಿ ಅವನಿಗೆ ಯಾವೆಲ್ಲ ತೊಂದರೆಗಳು ಬರಬಹುದೆಂಬ ಹೆದರಿಕೆ ಮೂಡಿಸಿಯೇ ಅವನನ್ನು ಒಪ್ಪಿಸಿಬಿಡುತ್ತಾರೆ. ಬಂದೂಕು ಹಿಡಿಯುತ್ತಾನಾದರೂ ಮುತ್ತುವೇಲು ಗುಂಡು ಹಾರಿಸುವುದಿಲ್ಲ. ಎಲ್ಲೋ ಒಳಗೆ ಅವನ ಆತ್ಮಸಾಕ್ಷಿ ಚುಚ್ಚುತ್ತಲೇ ಇತ್ತೇನೋ? ಕೊನೆಗೆ ವ್ಯವಸ್ಥೆಯ ಕ್ರೌರ್ಯಕ್ಕೆ ಮುತ್ತುವೇಲು ಕೂಡ ಬಲಿಪಶುವಾಗಿಬಿಡುತ್ತಾನೆ. ಕುಮಾರ್ ಇಳಿದುಕೊಳ್ಳದಿದ್ದರೆ ಈ ದೌರ್ಜನ್ಯದ ಕತೆ ಹೊರಗಡೆಯೇ ಬರುತ್ತಿರಲಿಲ್ಲವೇನೋ?

ಇನ್ನು ಚಿತ್ರದುದ್ದಕ್ಕೂ ಪೋಲೀಸರಲ್ಲಿ, ವ್ಯವಸ್ಥೆಯಲ್ಲಿ ಇರುವ ಪೂರ್ವಾಗ್ರಹದ ಚಿತ್ರಣ ಒಂದೆರಡು ದೃಶ್ಯಗಳಲ್ಲೇ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ. ನಾಲ್ವರಲ್ಲಿ ಮೊದಲು ಬಂಧನಕ್ಕೊಳಗಾಗುವುದು ಅಫ್ಜಲ್. ರಾತ್ರಿ ಸಿನಿಮಾ ನೋಡಿಕೊಂಡು ಗಾಂಧಿ ಪಾರ್ಕಿನ ಕಡೆಗೆ ಹೋಗುತ್ತಿರುತ್ತಾನೆ. ಗಸ್ತಿನಲ್ಲಿದ್ದ ಪೋಲೀಸರು ‘ವಿಚಾರಿಸುತ್ತಾರೆ’. ಹೆಸರೇನು ಅನ್ನುತ್ತಾರೆ, ‘ಅಫ್ಜಲ್’ ಅನ್ನುತ್ತಿದ್ದಂತೆ ‘ಅಲ್ ಖೈದಾನ? ಐಸಿಸ್ಸಾ?’ ಅನ್ನುವ ಪ್ರಶ್ನೆ. ‘ಇಲ್ಲಾ ಸರ್ ನಾನು ತಮಿಳುನಾಡಿನವ’ ಎಂಬ ಉತ್ತರಕ್ಕೆ ‘ಓ! ತಮಿಳುನಾಡು! ಹಂಗಾಂದ್ರೆ ನೀನು ಎಲ್.ಟಿ.ಟಿ.ಇ, ಹತ್ತು ಗಾಡಿ’ ಎಂದು ಬಂಧಿಸಿಬಿಡುತ್ತಾರೆ….. ಅಮಾಯಕರನ್ನು ಕೊಲ್ಲುವುದನ್ನು ವಿರೋಧಿಸುವ ಮುತ್ತುವೇಲುವಿಗೆ ಹಿರಿಯ ಅಧಿಕಾರಿ ‘ಈ ರಿಸರ್ವೇಷನ್ನಿನವರಿಂದ ಬಂದವರಿಗೆ ಇವೇನೂ ತಲೇಗೇ ಹೋಗಲ್ಲ’ ಎನ್ನುವ ಮಾತಿನಲ್ಲಿ ಮೇಲ್ಜಾತಿಯವರಿಗಿರುವ ದ್ವೇಷದ ಪರಿಚಯವಾಗಿಬಿಡುತ್ತದೆ. ಪೋಲೀಸರ ಪೂರ್ವಾಗ್ರಹ ಪೀಡಿತ ಮನಸ್ಸಿನಿಂದ ನೋವನುಭವಿಸಿದರೂ ಮುರುಗನ್, ಅಫ್ಜಲ್ ಪೋಲೀಸರ ಬಗ್ಗೆ ಒಳಿತನ್ನೇ ಯೋಚಿಸುತ್ತಾರೆ. ಆಂಧ್ರದ ಪೋಲೀಸರು ಇವರ ಸತ್ಯಾಗ್ರಹ ಮುರಿಯುವ ಸಲುವಾಗಿ ನಾಟಕವನ್ನಾಡಿದಾಗ ಮುರುಗನ್ ‘ನಾವಂದುಕೊಂಡಷ್ಟು ಪಾಪ ಕೆಟ್ಟವರಲ್ಲ’ ಎಂದು ಮುರಿಸಿಕೊಂಡ ಹಲ್ಲಿನೊಡನೆಯೇ ಅನುಕಂಪ ತೋರಿಸುತ್ತಾನೆ. ಇನ್ನೇನು ತಮಿಳುನಾಡು ಪೋಲೀಸರು ನಮ್ಮನ್ನು ಕೊಂದೇ ಬಿಡುತ್ತಾರೆ ಎಂಬ ಸನ್ನಿವೇಶದಲ್ಲೂ ‘ನಮ್ಮನ್ನು ಆಂಧ್ರ ಪೋಲೀಸರಿಂದ ಬಚಾವು ಮಾಡಿಸಿ ತಂದಿದ್ದಾರೆ, ಹೆಂಗೆ ಸಾಯಿಸ್ತಾರೆ’ ಅಂತ ಕೇಳುವಷ್ಟು ಮುಗ್ಧತೆ ಅಫ್ಜಲ್ ನಲ್ಲಿದೆ. ವ್ಯವಸ್ಥೆಯ ಪೂರ್ವಾಗ್ರಹಗಳ ಮುಂದೆ ಅಮಾಯಕರ ಮುಗ್ಧತೆಗೆ ಬೆಲೆಯಿರುತ್ತದೆಯೇ? ಇಂತಹ ವ್ಯವಸ್ಥೆಯಲ್ಲೂ ಈ ಅಮಾಯಕರ ಪರವಾಗಿ ಮಿಡಿದಿದ್ದು ಆಂಧ್ರ ಠಾಣೆಯ ಮಹಿಳಾ ಇನ್ಸ್ ಪೆಕ್ಟರ್ ಮತ್ತು ತಮಿಳುನಾಡಿನ ಮುತ್ತುವೇಲು ಮಾತ್ರ. ಕೊನೆಗೆ ಮುತ್ತುವೇಲು ಕೂಡ ವ್ಯವಸ್ಥೆಯ ಭಾಗವಾಗಿಬಿಡುವುದು ದುರಂತ.

ಇನ್ನು ಚಿತ್ರದ ಪ್ರಾರಂಭದಲ್ಲಿ ತಮಿಳು ಪಾಂಡಿ ಮತ್ತು ತೆಲುಗು ಶಾಂತಿಯ ನಡುವೊಂದು ಭಾಷೆ ಅರ್ಥವಾಗದ, ಭಾವದಿಂದಲೇ ನಡೆಯುವ ಪ್ರೇಮವಿದೆ. ದಕ್ಷಿಣ ಭಾರತದ ಚಿತ್ರಗಳು ಹೇಗೆ ದ್ವಿಭಾಷಾ ಚಿತ್ರಗಳಾಗಿ ಹೊಸ ರೀತಿಯ ಸಿನಿಮಾಗಳನ್ನು ಕೊಡಬಹುದು ಎನ್ನುವುದಕ್ಕೂ ಈ ಚಿತ್ರ ಸಾಕ್ಷಿಯಾಗಿದೆ. ಕನ್ನಡದಲ್ಲೂ ಹಿಂದೆ H2O ಚಿತ್ರದಲ್ಲಿ ಕನ್ನಡ ಮತ್ತು ತಮಿಳು ಭಾಷೆಗಳೆರಡೂ ಇತ್ತು, ದ್ವಿಭಾಷಾ ಚಿತ್ರದ ದೃಷ್ಟಿಯಿಂದ ಅದೊಂದು ಉತ್ತಮ ಪ್ರಯತ್ನ, ಕಾವೇರಿ ವಿಷಯವಾಗಿ ತಮಿಳುನಾಡನ್ನು ವಿರೋಧಿಸುವವರ ಒತ್ತಡ, ಪ್ರತಿಭಟನೆಯಿಂದಾಗಿ ಕೊನೆಗೆ ತಮಿಳು ಭಾಗಗಳನ್ನೆಲ್ಲ ಕನ್ನಡವನ್ನಾಗಿ ಮಾಡಿಬಿಡಲಾಯಿತು. ದ್ವಿಭಾಷೆಯ ಪ್ರಯತ್ನಗಳೂ ನಂತರ ದೊಡ್ಡ ಮಟ್ಟದಲ್ಲಿ ನಡೆಯಲಿಲ್ಲ. ಇರಲಿ. ವಿಸಾರಣೈ ನೋಡಲು ಮರೆಯಬೇಡಿ ಮತ್ತೆ.

ಫೆಬ್ರ 10, 2016

ದೇವರ ನಾಡಲ್ಲಿ ಪ್ರತಿಯೊಬ್ಬರೂ ಕತೆ ಹೆಣೆಯುವವರೇ!

Dr Ashok K R
ದೃಶ್ಯ 1: ಪ್ರಮುಖ ಪಾತ್ರಧಾರಿ ಶರತ್ ಶೆಟ್ಟಿ ತನ್ನ ಸಹಪಾಠಿ ಶಬ್ಬೀರ್ ಮನೆಯ ಕಡೆಗೆ ಹೋಗುತ್ತಾನೆ. ಅಲ್ಲಿರುವ ಬಾವಿಯ ಬಳಿಗೆ ನೀರು ಸೇದಿಕೊಳ್ಳಲು ಬರುವ ಸವಿತಾಳ ಜೊತೆಗೆ ಬಳಿಯಿದ್ದ ಮುಸ್ಲಿಂ ಮಹಿಳೆ ಹರಟುತ್ತಾಳೆ. ಮುಂದೊಂದು ದೃಶ್ಯದಲ್ಲಿ ಸವಿತಾ ‘ಕೆಳ ಜಾತಿಯ’ ಹುಡುಗಿ ಎಂದು ನಿರ್ದೇಶಕರು ತೋರಿಸುತ್ತಾರಾದರೂ ಮುಸ್ಲಿಮರ ಜೊತೆ ಜೊತೆಗೆ ಬದುಕುತ್ತಿರುವವರು ನಮ್ಮ ದೇಶದ ದಲಿತರು ಎಂದು ನೀರ ಬಾವಿಯ ಮೂಲಕ ತೋರಿಸಿಕೊಡುತ್ತಾರೆ. ಚಿತ್ರದಲ್ಲಿ ಈ ಮಟ್ಟಿಗಿನ ವಾಸ್ತವಿಕ ಸೂಕ್ಷ್ಮತೆಗಳಿವೆ.

ದೃಶ್ಯ 2: ರಿಚರ್ಡ್ ಸಂಗಡಿಗರೊಂದಿಗೆ ವಿಶೇಷ ಆರ್ಥಿಕ ವಲಯದ (SEZ) ವಿರುದ್ಧ ಸಚಿವರು ಮತ್ತು ಉದ್ಯಮಪತಿಗಳ ನಡುವೆ ನಡೆಯುತ್ತಿದ್ದ ಮೀಟಿಂಗಿನ ಕಟ್ಟಡದ ವಿರುದ್ಧ ಪ್ರತಿಭಟಿಸುತ್ತಿರುತ್ತಾರೆ. ಸಭೆ ಮುಗಿದ ನಂತರ ಸಚಿವ ಸಿ.ಎಂ.ನಾಯ್ಕ ಹೊರಬಂದು ಪ್ರತಿಭಟನಕಾರರೊಂದಿಗೆ ಮಾತನಾಡುತ್ತಿರುವಾಗ ಉದ್ಯಮಪತಿ ಪದ್ಮನಾಭ ಶೆಟ್ಟಿ ಎಲ್ಲರ ಮುಂದೆಯೇ ತನ್ನ ಕಡೆಯ ಗೂಂಡಾಗಳನ್ನು ಕರೆದು ಹೋಗಿ ಗಲಾಟೆ ಮಾಡಿ ಎಂದು ಕಣ್ಸನ್ನೆ ಮಾಡುತ್ತಾನೆ. ಅವನ ಮುಂದೆ ತಲೆಯಾಡಿಸಿ ಹೋದ ಗೂಂಡಾಗಳು ಜನರ ನಡುವೆ ಸೇರಿ ಮಂತ್ರಿಗಳ ಕಡೆಗೆ ಚಪ್ಪಲಿ ಮೊಟ್ಟೆ ಎಸೆಯುತ್ತಾರೆ. ಎಲ್ಲರ ಮುಂದೆಯೇ ಪದ್ಮನಾಭ ಶೆಟ್ಟಿ ಇದನ್ನು ಮಾಡಿದರು ಪ್ರತಿಭಟನಕಾರರಲ್ಲಿ ಒಬ್ಬರಿಗೂ ಇದು ಶೆಟ್ಟಿ ಮಾಡಿದ ಕೆಲಸ ಎನ್ನುವ ಅನುಮಾನ ಬರುವುದಿಲ್ಲ! ಚಿತ್ರದಲ್ಲಿ ಅಲ್ಲೊಂದು ಇಲ್ಲೊಂದು ಎಂಬಂತೆ ಇಂತಹ ಅವಾಸ್ತವಿಕ ಅಸೂಕ್ಷ್ಮತೆಗಳೂ ಇವೆ!

ಇಡೀ ಚಿತ್ರ ನಡೆಯುವುದು ಒಂದೂವರೆ ದಿನ. ಪೂರಕವಾಗಿ ಒಂದಷ್ಟು ಫ್ಲ್ಯಾಷ್ ಬ್ಯಾಕುಗಳು, ಮತ್ತು ಕತೆ ಕಟ್ಟುವವರ ಕತೆಗಳು! ಒಟ್ಟಾರೆ ಒಂದು ಸರಳ ಕತೆಯನ್ನು ಉತ್ತಮವೆನ್ನಿಸುವಂತೆ ಮಾಡಿರುವುದು ಚಿತ್ರಕತೆ. ಚಿತ್ರಕತೆಯ ಶೈಲಿಯಲ್ಲಿ ಹೊಸತನವಿದೆ. ಬರುವ ಯಾವೊಂದು ಪಾತ್ರವೂ ಒಂದು ದೃಶ್ಯಕ್ಕೆ ಸೀಮಿತವಾಗದೆ ಮುಂದೊಂದು ದೃಶ್ಯದಲ್ಲಿ ಕತೆಯನ್ನು ಮುಂದಕ್ಕೋಡಿಸುವ ಚಾಲಕ ಶಕ್ತಿಯಾಗುತ್ತಾರೆ. ಸಚಿವ ಸಿ.ಎಂ.ನಾಯ್ಕರು ಕಾಲೇಜಿನ ಕಾರ್ಯಕ್ರಮಕ್ಕೆ ಬರಬೇಕಿದ್ದ ದಿನವೇ ಕ್ಲಾಸ್ ರೂಮಿನಲ್ಲಿ ಸ್ಪೋಟವಾಗುತ್ತದೆ. ಕೆಳ ಜಾತಿಯ ಪ್ರಾಧ್ಯಾಪಕ ಸಿದ್ದು ಗಾಯಗೊಳ್ಳುತ್ತಾನೆ. ಈ ಸ್ಪೋಟ ಸಿ.ಎಂ.ನಾಯ್ಕರ ವಿರುದ್ಧದ ಸಂಚಾ ಅಥವಾ ಕೋಮು ದಳ್ಳುರಿಗೆ ಕಾರಣವೇ ಬೇಕಿಲ್ಲದ ಊರೊಂದರಲ್ಲಿ ನಡೆದ ವಿದ್ವಂಸಕ ಕೃತ್ಯವಾ? ಎನ್ನುವುದರ ಸುತ್ತಲೇ ಕತೆ ಸಾಗುತ್ತದೆ. ಸ್ಪೋಟದ ಹಿಂದಿನ ಸಂಚನ್ನು ಹುಡುಕುವ ಹೊಣೆ ಎಸ್.ಪಿ ಪಾತ್ರದಲ್ಲಭಿನಯಿಸಿರುವ ಪ್ರಕಾಶ್ ರೈರವರದು. ಒಬ್ಬೊಬ್ಬ ಪ್ರಾಧ್ಯಾಪಕರೂ ಒಂದೊಂದು ಕತೆ ಹೇಳುತ್ತಾರೆ. ಕೆಲವರ ಪ್ರಕಾರ ಇದು ಕಮ್ಯುನಿಷ್ಟರ ಕೆಲಸ, ಹಲವರಿದನ್ನು ಮುಸ್ಲಿಂ ಮೂಲಭೂತವಾದಕ್ಕೆ ಅಂಟಿಸಿದರೆ ಮತ್ತೆ ಕೆಲವರು ಇದು ಹಿಂದೂ ಮೂಲಭೂತವಾದ ಸಿದ್ದು ಎಂಬ ಕೆಳಜಾತಿಯ ಪ್ರಾದ್ಯಾಪಕನನ್ನು ಮುಗಿಸಲು ಮಾಡಿದ ಯತ್ನ ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ಆಗಿದ್ದರೆ ಬಾಂಬ್ ಸಿಡಿಸಿದ್ದು ಯಾರು? ಎನ್ನುವ ತನಿಖೆಯಲ್ಲಿ ತೆರೆದುಕೊಳ್ಳುವುದು ಶರತ್ ಶೆಟ್ಟಿ, ಮ್ಯಾಡಿ ಮತ್ತು ರಾಮಚಂದ್ರ ಭಟ್ಟರ ನಡುವಿನ ಗೆಳೆತನ.

ಶರತ್ ಶೆಟ್ಟಿ ಉದ್ಯಮಪತಿ ಪದ್ಮನಾಭ ಶೆಟ್ಟಿಯವರ ಮಗ, ಬಂಡವಾಳಶಾಹಿತನದ ಪ್ರತೀಕ; ಮ್ಯಾಡಿ ಅಲಿಯಾಸ್ ಮೈಖೆಲ್ ಮಡಗಾಸ್ಕರ್ ಕಮ್ಯುನಿಷ್ಟ್ ಹೋರಾಟಗಾರ ರಿಚರ್ಡ್ ಮಗ, ಇವರ ಹೋರಾಟವಿರುವುದು ಪದ್ಮನಾಭ ಶೆಟ್ಟಿಯವರ ವಿರುದ್ಧ!; ಇನ್ನು ರಾಮಚಂದ್ರ ಭಟ್ಟ ಆರೆಸ್ಸೆಸ್ಸಿನ ಕಟ್ಟಾಳು, ಹಿಂದೂ ಮೂಲಭೂತವಾದತನದ ಪ್ರತೀಕ! ಸೈದ್ಧಾಂತಿಕವಾಗಿ ಒಂದೊಂದು ದಿಕ್ಕಿನಲ್ಲಿರುವ ಈ ಮೂವರನ್ನೂ ಜೊತೆಯಾಗಿಸಿರುವುದು ಗೆಳೆತನವೆಂಬ ಬಂಧ! ಗೆಳೆತನಕ್ಕೂ ಸಿದ್ಧಾಂತಗಳಿಗೂ ಸಂಬಂಧವಿಲ್ಲ ಎನ್ನುವ ಅಂಶವನ್ನು ನಿರ್ದೇಶಕರು ಬಹಳ ಸ್ಪಷ್ಟವಾಗಿ ತೋರಿಸಿದ್ದಾರೆ. ಆದರೆ ಮುಂದೆ ಸಾಗುತ್ತಿದ್ದಂತೆ ಹೇಗೆ ಬಂಡವಾಳಶಾಹಿತನ ತನ್ನ ಅನುಕೂಲಕ್ಕೆ ಧರ್ಮ ಮತ್ತು ಹೋರಾಟಗಳನ್ನು ಬಳಸಿಕೊಳ್ಳುತ್ತದೆ ಎನ್ನುವುದನ್ನೂ ತೋರಿಸಿದ್ದಾರೆ. ಪದ್ಮನಾಭ ಶೆಟ್ಟರು ರಾಮಚಂದ್ರನ ಭಟ್ಟನ ಗುರು ಅತ್ರಾಡಿ ಗೋವಿಂದನ ಸಿದ್ಧಾಂತಗಳ ಬಗ್ಗೆ ಚೂರೂ ಗೌರವ ಕೊಡದಿದ್ದರೂ ಹಣ ಸಹಾಯ ಮಾಡುತ್ತಾನೆ. ತನ್ನನುಕೂಲಕ್ಕೆ ರಾಜಕಾರಣಿಗಳನ್ನು ಉಪಯೋಗಿಸಿಕೊಳ್ಳುತ್ತಾನೆ. ಗೆಳೆತನದ ಬಂಧವಿದ್ದರೂ ಚಿತ್ರ ಸಾಗಿದಂತೆ ಶರತ್ ಶೆಟ್ಟಿ ತನ್ನನುಕೂಲಕ್ಕೆ ರಾಮಚಂದ್ರ ಭಟ್ಟ ಮತ್ತು ಮ್ಯಾಡಿಯನ್ನು ಉಪಯೋಗಿಸಿಕೊಳ್ಳುತ್ತಾನೆ. ಚಿತ್ರದ ಓಘದಲ್ಲಿ ಸವಿತಾಳೊಡನೆ ಪ್ರೀತಿಯಲ್ಲಿ ಬಿದ್ದ ಶರತ್ ಶೆಟ್ಟಿ ಆ ಪ್ರೀತಿ ಸಫಲವಾಗಲು ತನ್ನ ಗೆಳೆಯರಿಂದ ನೆರವು ಪಡೆದುಕೊಳ್ಳುತ್ತಿದ್ದಾನೆ ಎಂದಷ್ಟೇ ಅಂದುಕೊಂಡರೂ ನಡೆದುಬಿಡುತ್ತೆ. ಆದರೆ ಪ್ರತಿಯೊಬ್ಬನಿಗೂ ಒಂದು ಸೈದ್ಧಾಂತಿಕ ಹಿನ್ನೆಲೆಯಿರುವ ಕಾರಣ ಅರ್ಥವ್ಯಾಪ್ತಿಯನ್ನು ಕೊಂಚ ಹಿಗ್ಗಿಸಿಕೊಂಡರೆ ಒಳ್ಳೆಯದೇನೋ? ಪ್ರಾರಂಭದಲ್ಲಿ ವಿರುದ್ಧ ದಿಕ್ಕಿನ ರಾಮಚಂದ್ರ ಭಟ್ಟ (ಹಿಂದೂ ಮೂಲಭೂತವಾದ) ಮತ್ತು ಮ್ಯಾಡಿಯನ್ನು (ಕಮ್ಯುನಿಷ್ಟ್) ಜೊತೆಗೂಡಿಸುವುದು ಶರತ್ ಶೆಟ್ಟಿ (ಬಂಡವಾಳಶಾಹಿ). ಕೊನೆಗೆ ಎಲ್ಲವನ್ನೂ ಛಿದ್ರಛಿದ್ರವಾಗಿಸುವುದೂ ಕೂಡ ಅದೇ ಬಂಡವಾಳಶಾಹಿತನ. ತುಂಬ ಗೆಳೆಯನಲ್ಲದ ಆದರೆ ಸಹಪಾಠಿಯಾದ ಶಬ್ಬೀರ್ ಮತ್ತವನ ತಂದೆ ಕೂಡ ಶರತ್ ಶೆಟ್ಟಿಯ ಕಾರಣಕ್ಕೆ ಸಿಕ್ಕಿಬೀಳುತ್ತಾರೆ. ಒಂದು ಪಟಾಕಿ ಹೊಡೆದ್ರೂ ನಮ್ಮೋರನ್ನೇ ಹಿಡಿದುಕೊಳ್ತಾರೆ ಎಂದು ಟೀ ಅಂಗಡಿಯ ಸಾಬಿ ಸಹಜವಾಗಿ ಹೇಳಿಬಿಡುವುದು ಮುಸ್ಲಿಮರೊಳಗೆ ಸ್ಪೋಟದ ನಂತರದ ವಿಚಾರಣೆಗಳ ಕುರಿತು ಬೆಳೆದು ಬಿಟ್ಟಿರುವ ಜಡತೆಯ ಸಂಕೇತವಾ? ಟೀ ಅಂಗಡಿಯೊಳಗೆ, ಪಾನ್ ಶಾಪಿನೊಳಗೆ, ಕಾಲೇಜಿನ ಪ್ರಾದ್ಯಾಪಕ ಮಂಡ್ಯ ರಮೇಶ್, ಪ್ರಾದ್ಯಾಪಕಿ ಮಂಜು ಭಾಷಿಣಿ ತಮ್ಮನುಕೂಲಕ್ಕೆ ತಕ್ಕಂತಹ ಕತೆಗಳನ್ನು ಹೆಣೆಯುತ್ತಾರೆ. ಮತ್ತಾ ಕತೆಗೆ ಪೂರಕವಾದ ಸಾಕ್ಷಿಗಳನ್ನು ಸೃಷ್ಟಿಸಿಕೊಳ್ಳುತ್ತಾರೆ.

ಈ ಬಾಂಬ್ ಸ್ಪೋಟ, ಸೈದ್ಧಾಂತಿಕ ತಾಕಲಾಟಗಳನ್ನೆಲ್ಲ ಒಂದು ಕ್ಷಣ ಮರೆತು ನಿಂತರೆ ಒಂದು ನವಿರಾದ ಪ್ರೇಮ ಕತೆಯಿದೆ. ಪ್ರೀತಿ ಪ್ರೇಮವೆಂಬುದು ಕೂಡ ಪೌರುಷದ ಸಂಕೇತದಂತೆಯೇ ಹೆಚ್ಚೆಚ್ಚು ಚಿತ್ರಿತವಾಗುವಾಗ ದೊಡ್ಡ ತೆರೆಯಲ್ಲಿ ಹದಿಹರೆಯದ ನವಿರು ಪ್ರೀತಿಯ ಮುದ್ದು ದೃಶ್ಯಗಳನ್ನು ಕಣ್ತುಂಬಿಕೊಳ್ಳುವುದು ಖುಷಿ ಕೊಡುತ್ತದೆ. ಕೊನೆಗೀ ಪ್ರೀತಿಯೂ ಜಾತಿಯ ಬಲೆಗೆ ಸಿಕ್ಕಿಕೊಳ್ಳುತ್ತದೆ. ಶೆಟ್ಟಿ, ಭಟ್ಟ, ರಿಚರ್ಡ್, ನಾಯರ್, ಶಬ್ಬೀರ್ ಎಂದೆಲ್ಲ ಜಾತಿ ಮತ್ತು ಧರ್ಮದ ಐಡೆಂಟಿಟಿಯನ್ನು ಖಡಕ್ಕಾಗಿ ಗುರುತಿಸುವಂತೆ ಮಾಡುವ ನಿರ್ದೇಶಕರು (ಬಿ.ಸುರೇಶ್) ಸಿದ್ದು ಮತ್ತು ಸವಿತಾಳ ವಿಷಯಕ್ಕೆ ಬಂದಾಗ ಮಾತ್ರ ಕೆಳಜಾತಿ ಎಂದಷ್ಟೇ ಹೇಳಿ ಸುಮ್ಮನಾಗಿಬಿಡುತ್ತಾರೆ. ಅವರ ಜಾತಿಯ ಐಡೆಂಟಿಟಿ ತಿಳಿಯುವುದಿಲ್ಲ. ತುಂಬಾ ವಿಷಯಗಳನ್ನು ಎರಡು ಘಂಟೆಯಲ್ಲೇ ಹೇಳಿ ಮುಗಿಸುವುದು ಸಾಧ್ಯವಾ ಎಂಬ ಪ್ರಶ್ನೆಗೆ ಉತ್ತರವಾಗಿಯೂ ಈ ಚಿತ್ರವಿದೆ. ಕರಾವಳಿಯ ಕೋಮುವಾದದ ಮುಖಗಳ ಪರಿಚಯ, ಬಂಡವಾಳಶಾಹಿತನ ಹೇಗೆ ಪ್ರತಿಯೊಂದನ್ನೂ ನಿಯಂತ್ರಿಸಬಯಸುತ್ತಿದೆ ಎಂಬುದರ ಅರಿವಿದ್ದರೆ ಚಿತ್ರದ ಸೂಕ್ಷ್ಮಗಳು ಹೆಚ್ಚು ಸ್ಪಷ್ಟವಾಗಿ ಅರ್ಥವಾಗುತ್ತವೆ. ಈ ಸೂಕ್ಷ್ಮಗಳ ಗೊಡವೆ ಮರೆತರೂ ಚಿತ್ರವನ್ನು ಒಮ್ಮೆ ನೋಡಲಡ್ಡಿಯೇನಿಲ್ಲ. 

ಮರೆತಿದ್ದೆ, ಚಿತ್ರದಲ್ಲಿನ ಅನೇಕ ಘಟನೆಗಳಿಗೆ ಸಾಕ್ಷಿಯಾಗಿ ಗಾಂಧಿಯ ಮೂಕ ಪ್ರತಿಮೆ ಮತ್ತು ನವಿಲುಗರಿ ಸಿಕ್ಕಿಸಿಕೊಂಡು ಕೆಟ್ಟು ಹೋದ ಟ್ಯೂಬ್ ಲೈಟಿನಲ್ಲಿ ಕೊಳಲು ನುಡಿಸುವ ಹುಚ್ಚನ ಪಾತ್ರಕ್ಕೂ ಉಳಿದವರಿಗಿರುವಷ್ಟೇ ಮಹತ್ವವಿದೆ. ಬಿಗಿ ಚಿತ್ರಕತೆಗೆ ಪೂರಕವಾಗಿ ಛಾಯಾಗ್ರಹಣವಿದೆ. ದೇವರ ನಾಡಲ್ಲಿ ‘ಕಲಾತ್ಮಕ’ ಚಿತ್ರವೆಂಬ ಬ್ರ್ಯಾಂಡಿಗೆ ಸಿಕ್ಕಿ ಹಾಕಿಕೊಳ್ಳದಿರುವುದಕ್ಕೆ ಛಾಯಾಗ್ರಹಣದ ಪಾತ್ರ ಬಹಳವಿದೆ; ‘ಕಲಾತ್ಮಕ’ವೆಂಬ ಚಿತ್ರದಲ್ಲಿ ಅದೊಂದು ಅಘೋಷಿತ ನಿಯಮವೆಂಬಂತೆ ಕ್ಯಾಮೆರಾ ಚಲಿಸುವುದೇ ಇಲ್ಲ, ಚಲಿಸಿದರೂ ಭಯಂಕರ ನಿಧಾನ. ಕೆಲವೊಂದು ದೃಶ್ಯಕ್ಕೆ ನಿಧಾನಗತಿಯ ನಿಂತೇ ಹೋಗಿರುವ ಕ್ಯಾಮೆರಾ ಚೆಂದವಾದರೂ ಚಿತ್ರದ ತುಂಬ ಅಂತಹುದೇ ದೃಶ್ಯಗಳು ಅವಶ್ಯಕತೆಯಿಲ್ಲದಿದ್ದರೂ ಇದ್ದುಬಿಟ್ಟರೆ ನೋಡಲು ಬೇಸರವೇ. ಕರಾವಳಿಯ ಸುಂದರ ತಾಣಗಳನ್ನು ಛಾಯಾಗ್ರಹಕರು ಸೊಬಗಿನೊಂದಿಗೆ ಖುಷಿ ಮೂಡಿಸುವಂತೆ ಸೆರೆಹಿಡಿದಿದ್ದಾರೆ. ಹಾಡುಗಳಲ್ಲಿ ಸಾಹಿತ್ಯ ಚೆನ್ನಾಗಿದೆ, ಇದೇ ಮಾತನ್ನು ಸಂಗೀತದ ಬಗ್ಗೆ ಹೇಳುವಂತಿಲ್ಲ. ಹಾಡುಗಳು ನೆನಪಲ್ಲುಳಿಯದಂತೆ ಮಾಡಲು ಸಂಗೀತದ ಕೊಡುಗೆ ಜಾಸ್ತಿ. ಜೊತೆಗೆ ಇಂತಹ ಚಿತ್ರಗಳಲ್ಲಿ ಒಂದು ಮೂಡು ಸೃಷ್ಟಿಸಬೇಕಾದ ಅನಿವಾರ್ಯತೆ ಹಿನ್ನೆಲೆ ಸಂಗೀತಕ್ಕಿರುತ್ತದೆ. ಅಲ್ಲಲ್ಲಿ ಬಿಟ್ಟರೆ ಉಳಿದೆಡೆಯೆಲ್ಲ ಹಿನ್ನೆಲೆ ಸಂಗೀತ ಸಾಧಾರಣವೇ.

ಫೆಬ್ರ 5, 2016

ಚಿತ್ರೋತ್ಸವ ಕರ್ನಾಟಕದ್ದಾಗಲಿ: ಅಭಿ ಹನಕೆರೆ.

ಪತ್ರಿಕಾ ಪ್ರಕಟಣೆ
ಗೆ,
1. ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ.
2. ವಾರ್ತಾ ಸಚಿವರು, ಕರ್ನಾಟಕ ಸರ್ಕಾರ.
3. ಕಾರ್ಯದರ್ಶಿಗಳು, ವಾರ್ತಾ ಇಲಾಖೆ, ಕರ್ನಾಟಕ ಸರ್ಕಾರ.
4. ನಿರ್ದೇಶಕರು, ವಾರ್ತಾ ಇಲಾಖೆ, ಕರ್ನಾಟಕ ಸರ್ಕಾರ.
5. ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ.
6. ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡಮಿ.
ಮಾನ್ಯರೇ,

ಮೈಸೂರು ರಾಜ್ಯ ಅಂತ ಇದ್ದಿದ್ನ ಕರ್ನಾಟಕ ರಾಜ್ಯ ಅಂತ ಮಾಡಿರುವ ವಿಚಾರವನ್ನು ಮರೆತು ಬೆಂಗಳೂರು ರಾಜ್ಯ ಮಾಡಲು ಹೊರಟಂತಿದೆ, ಅಂತರರಾಷ್ಟ್ರೀಯ ಚಿತ್ರೋತ್ಸವದ ವಿಷಯದಲ್ಲಿ, ಇಡೀ ಕರ್ನಾಟಕಕ್ಕೆ ಸಂಬಂಧಪಟ್ಟ ಚಿತ್ರ್ಸೋತ್ಸವಕ್ಕೆ ಇಲ್ಲಿಯವರೆಗು, “ಬೆಂಗಳೂರು ಅಂತರ ರಾಷ್ಟ್ರೀಯ ಚಿತ್ರ್ಸೋತ್ಸವ” ಅಂತಲೇ ಆಚರಿಸಿಕೊಂಡು ಬಂದಿದ್ದೀರಿ, ಬೆಂಗಳೂರು ಕರ್ನಾಟಕಕ್ಕಿಂತ ದೊಡ್ಡದೇ? ಇದರ ಜೊತೆಗೆ ಬೆಂಗಳೂರಿನ ಹೆಸರಿನ ಉತ್ಸವವನ್ನು ಮೈಸೂರಿನಲ್ಲಿ ಆಯೋಜಿಸಿದ್ದೀರಿ! ಈ ಕ್ರಮ ಸರಿಯಿಲ್ಲ. ಆದ್ದರಿಂದ ಇನ್ನುಮುಂದೆ “ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ” ಎಂದು ಆಚರಿಸುವ ಕಾರ್ಯಕ್ರಮಕ್ಕೆ “ಕರ್ನಾಟಕ ಅಂತರರಾಷ್ಟ್ರೀಯ ಚಿತ್ರೋತ್ಸವ” ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸುತ್ತಿದ್ದೇವೆ.

• ಚಿತ್ರೋತ್ಸವದಲ್ಲಿ ಪ್ರದರ್ಶನವಾಗುವ ಪ್ರತಿಚಿತ್ರವು ಬಹು ಮುಖ್ಯವಾಗಿರುವುದರಿಂದ ಒಂದು ಸಮಯಕ್ಕೆ ಒಂದೇ ಸಿನಿಮಾ ಪ್ರದರ್ಶನ ಮಾಡುವಂತಾಗಲೀ (ಹಲವು ಸ್ಕ್ರೀನ್ ಗಳಿದ್ದರೆ ಎಲ್ಲದರಲ್ಲೂ ಒಂದು ಸಮಯಕ್ಕೆ ಒಂದೇ ಸಿನಿಮಾ ಪ್ರದರ್ಶನವಿರಲಿ)

• ಕಲಾವಿದರು ಮತ್ತು ಜನ ಸಾಮಾನ್ಯರು ಒಟ್ಟುಗೂಡುವ ಇಂತ ಸುಸಂದರ್ಭವನ್ನು ಒಂದಕ್ಕಿಂತ ಹೆಚ್ಚು ಊರಿಗೆ ಭಾಗ ಮಾಡದೇ ಒಂದೇ ಊರಿನಲ್ಲಿ ನಡೆಸುವಂತಾಗಬೇಕು. 

• ಈ ಬಾರಿಯಂತೆ ಮುಂದೆಂದು ಮಾಲ್ ಗಳಲ್ಲಿ ಆಯೋಜಿಸಿ ಶಾಪಿಂಗ್ ಮಾಲ್ ಗಳು ಜನರಿಂದ ಹಣ ಸುಲಿಯುವ ಸಂಸ್ಕೃತಿಗೆ ಸಹಾಯ ಮಾಡಬೇಡಿ.

• ತಾಲ್ಲೂಕು-ಹೋಬಳಿ ಮಟ್ಟದಲ್ಲಿ ಸಿನಿಮಾ ಮಂದಿರಗಳ ಸ್ಥಿತಿ ಶೋಚನೀಯವಾಗಿ ಬಾಗಿಲು ಮುಚ್ಚುತ್ತಿರುವ ಸಂದರ್ಭದಲ್ಲಿ, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿಯ ದೃಷ್ಟಿಯಿಂದ ತಾಲ್ಲೂಕು-ಹೋಬಳಿ ಮಟ್ಟದಲ್ಲಿ “ ಕರ್ನಾಟಕ ಅಂತರರಾಷ್ಟ್ರೀಯ ಚಿತ್ರೋತ್ಸವ” ನಡೆಯುವಂತಾಗಲೀ.

• ಮುಂದಿನ ವರ್ಷದಿಂದ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ, “ಕರ್ನಾಟಕ ಅಂತರರಾಷ್ಟ್ರೀಯ ಚಿತ್ರೋತ್ಸವ” ಎಂದು ಮರುನಾಮಕರಣ ಮಾಡಿ, ಪ್ರತಿ ವರ್ಷವೂ ಒಂದೊಂದು ಊರಿನಲ್ಲಿ “ಕರ್ನಾಟಕ ಸಾಹಿತ್ಯ ಸಮ್ಮೇಳನ”ದ ಮಾದರಿಯಲ್ಲಿ ಆಯೋಜಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ. 

• ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಕೂಡ ಬೆಂಗಳೂರು ಹೆಸರನ್ನು ಪ್ರಾಮುಖ್ಯತೆ ಮಾಡಿ ವಿದೇಶದಿಂದ ಬೆಂಗಳೂರಿಗೆ ಮಾತ್ರ ಬಂಡವಾಳ ತರುವ ಹುನ್ನಾರ ಮಾಡಬೇಡಿ. ಮತ್ತು ಬೆಂಗಳೂರಿನ ಹೊರಗಿನ ಕರ್ನಾಟಕದವರಿಗೆ ಬೆಂಗಳೂರೇ ದೊಡ್ಡದ್ದು ಎನ್ನುವ ಮನಸ್ಥಿತಿಯನ್ನು ತರಬೇಡಿ.

• ಹಳ್ಳಿಗಳು, ಸಣ್ಣಪುಟ್ಟ ನಗರಗಳಲ್ಲಿ ಕರೆಂಟಿಲ್ಲದೇ, ರಸ್ತೆಗಳಿಲ್ಲದೇ, ಕುಡಿಯುವ ನೀರಿಲ್ಲದೇ, ಗಂಡುಮಕ್ಕಳಿಗೆ ಮದುವೆಯಾಗಲು ಹೆಣ್ಣು ಕೊಡದಂತಹ ಪರಿಸ್ಥಿತಿ ಯಲ್ಲಿ ವಾಸಿಸುತ್ತಿರುವ ನಮಗೆ ಚಿತ್ರೋತ್ಸವಗಳಾದರೂ ಕೊಡಿ.

• ಮಾಡೋದು ಕರ್ನಾಟಕದಲ್ಲಿ ಚಿತ್ರೋತ್ಸವ. ಆದರೆ ಮೊದಲಿನಿಂದ ಕೊನೆಯವರೆಗೂ ಎಲ್ಲಾ ಹಂತದಲ್ಲೂ ಇಂಗ್ಲೀಷನ್ನೇ ಬಳಸಿದ್ದೀರಿ, ಚಿತ್ರೋತ್ಸವದ ಹೆಸರು, ಗುರುತಿನ ಚೀಟಿ, ಸಿನಿಮೋತ್ಸವದ ಕೈಪಿಡಿ ಮುಂತಾದವುಗಳಲ್ಲಿ ಕೇವಲ ಆಂಗ್ಲ ಭಾಷೆಯನ್ನೇ ಬಳಸಿದ್ದೀರಿ, ಪ್ರತ್ಯೇಕ್ಷವಾಗಿ, ಬಲವಂತವಾಗಿ ಆಂಗ್ಲ ಭಾಷೆಯನ್ನು ಕನ್ನಡಿಗರ ಮೇಲೆ ಏರಿದ್ದೀರಿ. ಬೆಂಗಳೂರು ಕರ್ನಾಟಕದಲ್ಲಿದೆಯೋ ಅಥವಾ ಬ್ರಿಟನ್ ದೇಶದಲ್ಲಿದೆಯೋ! ಬ್ರಿಟಿಷರ ಗುಲಾಮಗಿರಿಯಿಂದ ಆಚೆ ಬಂದಿರುವವರನ್ನು ಚಿತ್ರೋತ್ಸವಕ್ಕೆ ಆಯೋಜಕರನ್ನಾಗಿ ಮಾಡಿ, ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬನಿಗೂ ಕನ್ನಡ ಭಾಷೆಯು ಅನಿವಾರ್ಯವಾಗುವಂತೆ ಮಾಡಲು ಒತ್ತಾಯಿಸುತ್ತಿದ್ದೇವೆ. 
ಇಂತಿ,
ಎಸ್.ಅಭಿಹನಕೆರೆ(9886756172)

ಜನ 28, 2016

ಸೆನ್ಸಾರ್ ಬೋರ್ಡಿನ ಮೇಲೆ ಕೋಪವಿದ್ದರೆ ಹೀಗೂ ಮಾಡಬಹುದು!

ಸಿನಿಮಾ ಮಂದಿಗೆಲ್ಲ ಸೆನ್ಸಾರು ಬೋರ್ಡಿನ ಮೇಲೆ ಕೋಪವಿದ್ದೇ ಇರುತ್ತದೆ. ತಮಿಳಲ್ಲಿ ಬುಟ್ರು ಕನ್ನಡದಲ್ಲಿ ಬುಡ್ಲಿಲ್ಲ, ಹಿಂದೀಲಿ ಮಾತ್ರ ಕ್ಯಾರೆ ಅನ್ನಲ್ಲ ನಮಗೆ ಮಾತ್ರ ಟಾರ್ಚರ್ರು ಕೊಡ್ತಾರೆ ಅನ್ನೋ ಮಾತುಗಳು ಗಾಂಧಿನಗರದಲ್ಲಿ ಚಿತ್ರವೊಂದು ಸೆನ್ಸಾರಿಗೆ ಹೋದಾಗಿನಿಂದಲೂ ಹರಿದಾಡುತ್ತಲೇ ಇರುತ್ತವೆ. ಇನ್ನು ಟಿವಿಗಿಲ್ಲದ, ನಾಟಕಕ್ಕಿಲ್ಲದ, ಬೇರ್ಯಾವ ಕಲೆಗೂ ಇಲ್ಲದ ಸೆನ್ಸಾರು ಬೋರ್ಡು ನಮಗೆ ಮಾತ್ರ ಯಾಕೆ? ತೀರ ಅಷ್ಟೊಂದು ಕೆಟ್ಟ ಸಂಗತಿಗಳನ್ನು ತೋರಿಸಿಬಿಟ್ಟರೆ ನಂತರ ಕೇಸು ಹಾಕಿಕೊಳ್ಳಲಿ ಬಿಡಿ ಮುಂಚೇನೆ ಕಷ್ಟಪಟ್ಟು ತೆಗೆದಿದ್ದನ್ನೆಲ್ಲ ಕಟ್ ಮಾಡಿ ಬಿಸಾಕಲು ಹೇಳೋಕೆ ಅವರೆಲ್ಲ ಯಾರು? ಎಂದು ವಾದಿಸುವವರ ಸಂಖೈಯೂ ಕಮ್ಮಿಯೇನಿಲ್ಲ. ಸೆನ್ಸಾರು ಮಂಡಳಿಯ ಕಾಟಗಳು ನಮಲ್ಲಷ್ಟೇ ಸೀಮಿತವಾಗಿಲ್ಲ. British Board of Film classification ಕೂಡ ಇದೇ ರೀತಿಯ ತೊಂದರೆ ಕೊಡುತ್ತಿತ್ತಂತೆ. ಸೆನ್ಸಾರ್ ಮಂಡಳಿಯ ವಿರುದ್ಧ ಪ್ರತಿಭಟಿಸಬೇಕೆನ್ನುವವರು ಬಿ.ಬಿ.ಎಫ್.ಸಿಯ ವಿರುದ್ಧ ಪ್ರತಿಭಟಿಸಿದ ಚಾರ್ಲ್ಸ್ ಲೈನಿಯಿಂದ ಕಲಿಯುವುದು ಸಾಕಷ್ಟಿದೆ!
ಅಂದಹಾಗೆ ಚಾರ್ಲ್ಸ್ ಲೈನಿ 'ಪೈಂಟ್ ಡ್ರೈಯಿಂಗ್' (Paint drying) ಹೆಸರಿನ ಚಿತ್ರ ತೆಗೆಯುತ್ತಾನೆ. ಬಿ.ಬಿ.ಎಫ್.ಸಿಯಲ್ಲಿ ಒಂದು ಚಿತ್ರವನ್ನು ಸೆನ್ಸಾರಿಗೆ ತಂದರೆ ಮೊದಲು 145 ಡಾಲರ್ ಹಣವನ್ನು ಕಟ್ಟಿಸಿಕೊಳ್ಳಲಾಗುತ್ತದೆ, ನಂತರ ಸಿನಿಮಾದ ಪ್ರತೀ ನಿಮಿಷಕ್ಕೆ ಹತ್ತು ಡಾಲರಿನಷ್ಟು ಹಣವನ್ನು ಕಟ್ಟಬೇಕಾಗುತ್ತದೆ. ಸೆನ್ಸಾರು ಮಂಡಳಿಗೆ ದುಡ್ಡು ಕಟ್ಟಲು ಹಣವೆತ್ತಲು ಪ್ರಾರಂಭಿಸುತ್ತಾನೆ ಚಾರ್ಲ್ಸ್. ಒಟ್ಟಾದ ಹಣದ ಮೊತ್ತ ಚಿತ್ರದ ಸಮಯವನ್ನು ನಿರ್ಧರಿಸುತ್ತೆ! ಅದ್ಹೇಗೆ ಅಂತೀರಾ? ಚಿತ್ರದ ಹೆಸರು ಸೂಚಿಸುವಂತೆ ಗೋಡೆಯೊಂದಕ್ಕೆ ಪೈಂಟು ಬಳಿದಿರಲಾಗುತ್ತದೆ. ಕ್ಯಾಮೆರಾದ ತುಂಬ ಬಣ್ಣ ಬಳಿಸಿಕೊಂಡ ಗೋಡೆ. ಇಡೀ ಚಿತ್ರದಲ್ಲಿ ಬಳಿದ ಬಣ್ಣ ಒಣಗುವುದನ್ನಷ್ಟೇ ತೋರಿಸಲಾಗಿದೆ! ಮೊದಲ ನಿಮಿಷದಿಂದ ಕೊನೆಯ ನಿಮಿಷದವರೆಗೂ ಕ್ಯಾಮೆರಾ ಚೂರೂ ಮಿಸುಕದೆ ಬಣ್ಣ ಒಣಗುವ 'ಪ್ರಕ್ರಿಯೆ'ಯನ್ನು ತೋರಿಸಲಾಗಿದೆ! ಬಣ್ಣ ಒಣಗುವುದನ್ನು ಹತ್ತು ನಿಮಿಷವೂ ತೋರಿಸಬಹುದು ಒಂದು ಘಂಟೆಯೂ ತೋರಿಸಬಹುದು, ನಿಮಿಷಕ್ಕಿಷ್ಟು ಹಣ ಕಟ್ಟುವ ಚೈತನ್ಯವಿರಬೇಕಷ್ಟೇ! ಚಾರ್ಲ್ಸ್ ನ ಉದ್ದೇಶವರಿತ ಮಂದಿ ಹೆಚ್ಚಾಗೇ ಹಣ ನೀಡಿದ ಪರಿಣಾಮ 'ಪೈಂಟ್ ಡ್ರೈಯಿಂಗ್'ನ ಒಟ್ಟು ಸಮಯ ಹತ್ತು ಘಂಟೆಗಳಾಗಿಬಿಟ್ಟಿತು! ಸೆನ್ಸಾರು ಮಂಡಳಿಯವರ ಕರ್ಮ ನೋಡಿ, ಒಣಗುವ ಪೈಂಟಿನ ಚಿತ್ರವನ್ನು ಒಂದು ನಿಮಿಷವೂ ತಪ್ಪಿಸದೇ ನೋಡಲೇಬೇಕು! ಇನ್ನೂ ತಮಾಷೆಯೆಂದರೆ ಬಿ.ಬಿ.ಎಫ್.ಸಿ ಸದಸ್ಯರಿಗೆ ದಿನಕ್ಕೆ ಒಂಭತ್ತು ಘಂಟೆ ಮಾತ್ರ ಸಿನಿಮಾ ನೋಡುವ ಅವಕಾಶವಿರುವುದು! ಮೊದಲ ದಿನ ಒಂಭತ್ತು ಘಂಟೆ ಬಣ್ಣ ಒಣಗುವುದನ್ನು ಕಂಡು ಮಾರನೇ ದಿನ ಮತ್ತೆ ಒಂದು ಘಂಟೆ ಬಣ್ಣವನ್ನು ಒಣಗಿಸಿ ಮುಗಿಸಿದ ನಂತರ ಸೆನ್ಸಾರ್ ಸರ್ಟಿಫಿಕೇಟು ಕೊಡುವ ಸೌಭಾಗ್ಯ! 
ಇದು ಎಷ್ಟು ಸರಿಯೋ ಎಷ್ಟು ತಪ್ಪೋ ಪ್ರತಿಭಟನೆಯ ನವೀನ ಮಾದರಿ ಎಂಬುದಂತೂ ದಿಟ!

ಜನ 21, 2016

ಅಂತರರಾಷ್ಟ್ರೀಯ ಚಿತ್ರೋತ್ಸವ ಕೂಡ ಮಾಲುಗಳಿಗೆ ಸೀಮಿತವೇ?

S Abhi Hanakere
ಬೇರೆ ಇನ್ಯಾವುದೇ ಕಲಾ ಪ್ರಕಾರಗಳಿಗೆ ಸೆನ್ಸಾರ್‍ ಇಲ್ಲ! ಸಿನಿಮಾಗೆ ಮಾತ್ರ ಇದೆ? ಯಾಕೆಂದರೆ ಸಿನಿಮಾ ಒಂದು (ಟಾಕೀಸ್‍ನಲ್ಲಿ ನೋಡೋ) ಬೆಳಕಿನಿಂದ ಕತ್ತಲೆಗೆ ಕರೆದುಕೊಂಡು ಬಂದು, ಯಾವುದೇ ಜಾತಿ-ಮತ-ಲಿಂಗ ಭೇದವಿಲ್ಲದೆ ಅಕ್ಕ-ಪಕ್ಕದಲ್ಲಿ ಕುಳ್ಳಿರಿಸಿ, ಪರದೆಯ ಮುಖಾಂತರ ಹೃದಯ ಮತ್ತು ಮನಸ್ಸಿನಲ್ಲಿ ಬೆಳಕು ಚೆಲ್ಲುವ ಮಾಧ್ಯಮ ಮತ್ತು ಪರಿಣಾಮಕಾರಿಯಾಗಿ ಮನುಷ್ಯನನ್ನು ಆಕರ್ಷಿಸಿ ಆಕ್ರಮಿಸಿಕೊಳ್ಳುವಂತದ್ದು. ಆದರೆ ವ್ಯಾಪಾರದ ದೃಷ್ಠಿಯಿಂದ ಬರೀ ಕೊಳಕನ್ನೇ ನೀಡುವ ಅಪಾಯವಿರುವ ಕಾರಣ ಸೆನ್ಸಾರ್‍ ಇದೆ. ಇಂಥ ಸಿನಿಮಾ ಟಾಕೀಸ್‍ಗಳ ಸ್ಥಿತಿ ದುರ್ಗತಿಗೆ ತಲುಪುತ್ತಿರುವ ಸಮಯದಲ್ಲಿ ಅದನ್ನ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಮೊದಲೆಲ್ಲಾ ಚಿಕ್ಕ-ಪುಟ್ಟ ಊರುಗಳಲ್ಲಿದ್ದ ಟೆಂಟುಗಳನ್ನು ಟಿ.ವಿ ನುಂಗಿ ಹಾಕಿತು. ಈಗ ಸಿ.ಡಿಗಳು, ಮೊಬೈಲ್ ಚಿಪ್‍ಗಳು ಸಣ್ಣ-ಪುಟ್ಟ ನಗರಗಳ ಟಾಕೀಸ್‍ಗಳನ್ನು ನುಂಗಿ ಹಾಕ್ತಿವೆ. ಒಮ್ಮೆ ಮಾಲ್‍ಗಳಲ್ಲಿ ಚಿತ್ರ ವೀಕ್ಷಿಸಿದ ಪ್ರೇಕ್ಷಕ ತನ್ನೂರಿನ ಟಾಕೀಸ್‍ ಕಡೆ ಮುಖ ಕೂಡ ಮಾಡದೆ ಹಿಂತಿರುಗುತ್ತಿರುವ ಈ ಸಂದರ್ಭದಲ್ಲಿ, ಸರ್ಕಾರದ ವತಿಯಿಂದ ನಡೆಯುತ್ತಿರುವ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವವನ್ನು “ಕರ್ನಾಟಕ ಅಂತರರಾಷ್ಟ್ರೀಯ ಚಿತ್ರೋತ್ಸವ” ಎಂದು ಮರುನಾಮಕರಣ ಮಾಡಿ, ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ವರ್ಷ-ವರ್ಷವು ಅಭಿವೃದ್ಧಿ ವಂಚಿತ ಊರುಗಳಲ್ಲಿ ಆಯೋಜಿಸಿದರೆ ಈ ನೆಪದಲ್ಲಿ ಅಂಥ ಊರಿನ ಭೌತಿಕ ಮತ್ತು ಆ ಊರಿನ ಸುತ್ತ-ಮುತ್ತಾ ಜನರ ಬೌದ್ಧಿಕ ಅಭಿವೃದ್ಧಿಗೆ ಎಡೆ ಮಾಡಿಕೊಟ್ಟಂತಾಗುತ್ತದೆ.

ಒಂದು ಮಾತು ನೆನಪಿರಲಿ, ನಾವು ಟಿ.ವಿ, ಮೊಬೈಲ್, ಲ್ಯಾಪ್‍ಟಾಪ್‍ ಇತ್ಯಾದಿ ವಯಕ್ತಿಕ ಡಿವೈಸ್‍ಗಳಲ್ಲಿ ಸಿನಿಮಾ ವೀಕ್ಷಿಸುವುದರಿಂದ ಮನುಷ್ಯ ಸಂಬಂಧಗಳು ಕ್ಷೀಣಿಸುತ್ತವೆ ಅದೇ ಟಾಕೀಸ್‍ನಲ್ಲಿ ಮಾನವೀಯ ಸಂಬಂಧಗಳು ಗಟ್ಟಿಗೊಳ್ಳುತ್ತವೆ ಮತ್ತು ಹೊಸ ಸಂಬಂಧಗಳಾಗುತ್ತದೆ ಮತ್ತೆ ಪರಿಣಾಮಕಾರಿಯಾಗಿ ಕಲೆಯ ಮುಖೇನ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು.

ಈ ಒಂದು ಕ್ರಮದಿಂದ ನಿಶ್ಚಿತವಾಗಿ ಕನ್ನಡ ಚಿತ್ರರಂಗದ ಅಭಿವೃದ್ಧಿ, ಕರ್ನಾಟಕದಾದ್ಯಂತ ಟಾಕೀಸ್‍ಗಳ ಅಭಿವೃದ್ಧಿ, ಕರ್ನಾಟಕದಾದ್ಯಂತ ಪ್ರವಾಸಿ ತಾಣಗಳ ಅಭಿವೃದ್ಧಿ ಮತ್ತು ಎಲ್ಲರಿಗೂ, ಮುಖ್ಯವಾಗಿ ಸಣ್ಣ-ಪುಟ್ಟ ಊರಿನಲ್ಲಿ ವಾಸಿಸುತ್ತಿರುವವರಿಗೆ ಅಂತರರಾಷ್ಟ್ರೀಯ ಸಿನಿಮಾಗಳು ತಲುಪುತ್ತವೆ. ಅದರಲ್ಲು ಅಂತರರಾಷ್ಟ್ರೀಯ ಚಿತ್ರೋತ್ಸವ ಅಂದರೆ ಮನರಂಜನೆಯೇ ಪ್ರಧಾನವಾಗಿರೋ, ಹೀರೋ-ಹೀರೋಯಿನ್ ಪ್ರಧಾನವಾಗಿರೋ ಚಿತ್ರಗಳು ಇರೋದಿಲ್ಲ. ಇಂಥ ಚಿತ್ರೋತ್ಸವದಲ್ಲಿ ಮನಷ್ಯನ ಮನಸ್ಸು ಮತ್ತು ಹೃದಯಕ್ಕೆ ನಾಟಿ, ವಿಮರ್ಶೆ ಮಾಡಿಸುವಂತಹ ಚಿತ್ರಗಳೇ ಪ್ರದರ್ಶನವಾಗುವುದರಿಂದ ಇದು ಸಣ್ಣ-ಪುಟ್ಟ ಊರುಗಳಲ್ಲಿ ನಡೆದರೆ ಹೆಚ್ಚು ಪರಿಣಾಮಕಾರಿ.

ಈಗಾಗಲೇ ಜನಸಂಖ್ಯೆ ಮತ್ತು ಭೌತಿಕ ಅಭಿವೃದ್ಧಿ ಅತೀ ಅನಿಸಿರುವ ಬೆಂಗಳೂರು-ಮೈಸೂರಿಗೆ ಅಂತರರಾಷ್ಟ್ರೀಯ ಚಿತ್ರೋತ್ಸವ ಸೀಮಿತ ಮಾಡದೆ, ಕನ್ನಡ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಸಣ್ಣ-ಪುಟ್ಟ ಊರುಗಳಲ್ಲಿ ಅಂತರರಾಷ್ಟ್ರೀಯ ಚಿತ್ರೋತ್ಸವ ಆಯೋಜಿಸಿದರೆ ಹೇಗೆ? ಎಂದು ನಿಮ್ಮೆಲ್ಲರ ಅಭಿಪ್ರಾಯವನ್ನು ಕೇಳುತ್ತಿದ್ದೇನೆ?

ನಿಮ್ಮೆಲ್ಲರ ಪ್ರತಿಕ್ರಿಯೆ ಮತ್ತು ಚರ್ಚೆಯ ನಂತರ ಸರಿ-ತಪ್ಪುಗಳ ಆಧಾರದ ಮೇಲೆ ಮುಂದಿನ ನಡೆ ಬಗ್ಗೆ ಯೋಚಿಸೋಣ. ಕಡೆ ಪಕ್ಷ ಆಚರಣೆಗಳನ್ನಾದರು ಮಾಡುವ ಮುಖೇನ ಬೆಂಗಳೂರಿನ ದಟ್ಟಣೆಯನ್ನ ಕಡಿಮೆ ಮಾಡೋಣ.

ಜನ 14, 2016

ಚಿತ್ರ ವಿಮರ್ಶೆ: The Day i became a woman

Dr Ashok K R
ಮಾರ್ಜಿಯೆ ಮೆಶ್ಕಿನ್ ನಿರ್ದೇಶನದ ಪರ್ಷಿಯನ್ ಭಾಷೆಯ ಚಿತ್ರ ‘ದಿ ಡೇ ಐ ಬಿಕೇಮ್ ಎ ವಿಮೆನ್’ (The day I became a woman). ಇರಾನ್ ದೇಶದ ಈ ಚಿತ್ರ ಹೆಣ್ಣಿನ ಸ್ವಂತಿಕೆಯನ್ನು ಕಿತ್ತುಕೊಳ್ಳಬಯಸುವ ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ಜೀವಂತಿಕೆ ಮೆರೆಯುವ ಮೂರು ನಾಯಕಿಯರ ಕತೆ. ಪುಟ್ಟ ಹುಡುಗಿ ಹವಾ, ಮದುವೆಯಾಗಿರುವ ಯುವತಿ ಆಹೂ ಮತ್ತು ಸಾಯಲು ಸಿದ್ಧವಾಗಿರುವ ವಯಸ್ಸಿನ ಹೂರಾ ಚಿತ್ರದ ನಾಯಕಿಯರು. ಮೂವರಿಗೂ ಚಿತ್ರದಲ್ಲಿ ನೇರಾನೇರ ಸಂಬಂಧವಿಲ್ಲ, ಕನ್ನಡದ ಕಥಾಸಂಗಮದಂತೆ ಮೂರು ಭಿನ್ನ ಕತೆಗಳಿವೆ; ಇಲ್ಲಿ ಮೂರು ಕತೆಗಳ ಆಶಯದಲ್ಲಿ ಸಾಮ್ಯತೆಯಿದೆ, ಚಿತ್ರದ ಕೊನೆಗೆ ಮೂರೂ ಕತೆಗಳು ಒಂದುಗೂಡಲು ಪ್ರಯತ್ನಿಸುತ್ತವೆ.

ಬಾಲಕಿ ಹವಾಗೊಬ್ಬ ಕರಿಯ ಅನಾಥ ಗೆಳೆಯ. ದಿನಾ ಬರುವಂತೆ ಅವತ್ತೂ ಅವನು ಹವಾಳ ಮನೆಯ ಬಳಿಗೆ ಬರುತ್ತಾನೆ. ಅವತ್ತವಳಿಗೆ ಒಂಭತ್ತು ವರ್ಷ ತುಂಬುತ್ತಿರುತ್ತದೆ. ದೊಡ್ಡವಳಾದ (ವಯಸ್ಸಿನಲ್ಲಿ) ಹುಡುಗಿ ಹುಡುಗರೊಟ್ಟಿಗೆ ಆಡುವಂತಿಲ್ಲ. ತಲೆಯ ಮೇಲೊಂದು ಹೊದಿಕೆ ಹಾಕಿಕೊಳ್ಳಬೇಕು. ಹವಾಳ ಅಮ್ಮ ಮತ್ತು ಅಜ್ಜಿ ಹೊಸ ಹೊದಿಕೆಯನ್ನು ತಯಾರು ಮಾಡುವುದರಲ್ಲಿ ನಿರತರು. ಗೆಳೆಯನೊಟ್ಟಿಗೆ ಆಡುವುದರ ಹೊರತಾಗಿ ಮತ್ತೇನೂ ಯೋಚನೆ ಬಾರದ ಹುಡುಗಿ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ ಈ ಹೊಸ ರೀತಿ ನೀತಿಗಳೆಲ್ಲ ಹನ್ನೆರಡು ಘಂಟೆಯ ನಂತರ ಎಂದು ತಿಳಿದುಕೊಂಡು ಅಲ್ಲಿಯವರೆಗಾದರೂ ಹೋಗಿ ಆಡಿ ಬರುತ್ತೇನೆ ಕೊನೆಯ ಸಲ ಎಂದು ಬೇಡಿಕೊಂಡು ತಲೆಯ ಮೇಲೊಂದು ಬಟ್ಟೆ ಹಾಕಿಕೊಂಡು ನೆರಳಿನ ಮೂಲಕ ಸಮಯ ತಿಳಿಯಲು ಕಡ್ಡಿಯೊಂದನ್ನು ತೆಗೆದುಕೊಂಡು ಕರಿಯ ಗೆಳೆಯನ ಮನೆಯ ಕಡೆಗೆ ಓಡಿ ಹೋಗುತ್ತಾಳೆ. ಕರಿಯ ಗೆಳೆಯನೀಗ ಬಂಧಿತನಾಗಿದ್ದಾನೆ! ಅವನ ಅಕ್ಕ ಓದಿಕೋ ಎಂದವನನ್ನು ಕೂಡಿ ಹಾಕಿರುತ್ತಾಳೆ. ಕಿಟಕಿಯ ಮೂಲಕ ಇಬ್ಬರ ಸಂಭಾಷಣೆ, ಚಾಕಲೇಟಿನ ವಿನಿಮಯ ನಡೆಯುತ್ತದೆ. ಕಿಟಕಿಯ ಒಂದು ಬದಿಯಲ್ಲಿ ಅವನು, ಮತ್ತೊಂದು ಬದಿಯಲ್ಲಿ ಇವಳು. ಒಂದು ಕಡೆಯಿಂದ ನೋಡಿದರೆ ಹುಡುಗ ಬಂಧಿತನಂತೆ ಕಾಣುತ್ತಾನೆ ಮತ್ತೊಂದು ಕಡೆಯಿಂದ ಹುಡುಗಿ ಬಂಧಿತಳಂತೆ ಕಾಣುತ್ತಾಳೆ. ಪುರುಷ ಪ್ರಧಾನ ವ್ಯವಸ್ಥೆ ಇಬ್ಬರನ್ನೂ ಬಂಧಿಸಿದೆಯಲ್ಲವೇ?

ಮದುವೆಯಾಗಿರುವ ಯುವತಿ ಆಹೂಗೆ ಸೈಕಲ್ ರೇಸಿನಲ್ಲಿ ಭಾಗವಹಿಸಿ ಜಯಗಳಿಸುವ ಆಸೆ. ರೇಸಿನಲ್ಲಿ ಭಾಗವಹಿಸುವುದು ಗಂಡನಿಗೆ ಇಷ್ಟವಿಲ್ಲ. ಕಣ್ತಪ್ಪಿಸಿ ಬಂದು ರೇಸಿನಲ್ಲಿ ಉತ್ಸುಕತೆಯಿಂದ ಸೈಕಲ್ಲು ತುಳಿಯುತ್ತಿರುತ್ತಾಳೆ. ಕುದುರೆಯೇರಿ ಇವಳನ್ನು ಹುಡುಕಿ ಬರುವ ಗಂಡ ರೇಸು ನಿಲ್ಲಿಸಿ ನಡಿ ಮನೆಗೆ ಎಂದು ಬೆದರಿಸುತ್ತಾನೆ. ಆಹೂ ನಿಲ್ಲುವುದಿಲ್ಲ. ವಾಪಸ್ಸು ಹೋದ ಗಂಡ ಹಿರೀಕರನ್ನು ಕರೆತರುತ್ತಾನೆ. ಆಹೂ ನಿಲ್ಲುವುದಿಲ್ಲ. ವಿಚ್ಛೇದನ ಕೊಟ್ಟುಬಿಡ್ತೀನಿ ಎಂಬ ಬೆದರಿಕೆಗೂ ಜಗ್ಗುವುದಿಲ್ಲ. ವಾಪಸ್ಸು ಹೋದ ಗಂಡ ಮೌಲ್ವಿಯನ್ನು ಕರೆತಂದು ವಿಚ್ಛೇದನ ಕೊಟ್ಟುಬಿಡುತ್ತಾನೆ. ಆಹೂಳ ಸೈಕಲ್ಲಿನ ವೇಗ ತಗ್ಗುವುದಿಲ್ಲ. ಆಹೂಳ ತವರು ಮನೆಯವರು ಬಂದು ಹೀಯಾಳಿಸುತ್ತಾರೆ, ರೇಸು ನಿಲ್ಲಿಸಿ ನಡಿ ಮನೆಗೆ ಎನ್ನುತ್ತಾರೆ. ಆಹೂ ನಿಲ್ಲುವುದಿಲ್ಲ. ಕೊನೆಗವಳ ಅಣ್ಣಂದಿರು ಬಂದು ಗೆಲುವಿನ ಹಂತದಲ್ಲಿದ್ದ ಆಹೂಳ ಸೈಕಲ್ ತಡೆದು ಹೊಡೆಯಲಾರಂಭಿಸುತ್ತಾರೆ. ಕ್ಯಾಮೆರಾ ನಿಧಾನಕ್ಕೆ ಹಿಂದಾಗುತ್ತದೆ. ಆಹೂ ಸೈಕಲ್ ರೇಸಿನಿಂದ ಹಿಂದೆ ಸರಿದುಬಿಟ್ಟಳಾ? 

ಹಣ್ಣು ಹಣ್ಣು ಮುದುಕಿ ಹೂರಾಳ ಪ್ರತೀ ಬೆರಳಿನಲ್ಲೂ ಬಣ್ಣ ಬಣ್ಣದ ಬಟ್ಟೆಯ ತುಂಡು. ಪ್ರತೀ ತುಂಡು ಖರೀದಿಸಬೇಕಾದ ಒಂದೊಂದು ವಸ್ತುವಿನ ಸಂಕೇತ. ಯಾವ ತುಂಡು ಯಾವುದಕ್ಕೆ ಎಂದು ಮರೆತುಹೋದರೆ ಎಂಬ ಕಾರಣಕ್ಕೆ ಮತ್ತೊಂದು ಚೀಟಿ! ಯೌವನದಲ್ಲಿ ಆಸೆಪಟ್ಟ, ಖರೀದಿಸಲಾಗದ ವಸ್ತುಗಳನ್ನೆಲ್ಲ ಗುಡ್ಡೆ ಹಾಕಿಕೊಂಡು ಸಾಮಾನು ಸಾಗಿಸುವ ಬಡ ಹುಡುಗರ ನೆರವಿನಿಂದ ಸಮುದ್ರ ತೀರಕ್ಕೆ ಬಂದು ಸಾಮಾನುಗಳನ್ನೆಲ್ಲ ಸ್ವಚ್ಛಂದ ಆಕಾಶದ ಕೆಳಗೆ ಜೋಡಿಸಿ ಸಂತಸಪಡುತ್ತಾಳೆ ಹೂರ. ಕರಿ ಹುಡುಗನೊಬ್ಬನನ್ನು ದತ್ತು ತೆಗೆದಿಕೊಳ್ತೀನಿ ಬರ್ತೀಯಾ ನನ್ನ ಜೊತೆಗೆ ಈ ಸಾಮಾನುಗಳೆಲ್ಲ ನಿನ್ನದೇ ಆಗುತ್ತೆ ಎಂದು ಕೇಳುತ್ತಾಳೆ, ಇಲ್ಲಪ್ಪ ನನಗೆ ಅಮ್ಮ ಇದ್ದಾಳೆ ಎಂದು ನಿರಾಕರಿಸುತ್ತಾನೆ ಹುಡುಗ. ಅಫ್ಘನ್ ಬಾಲಕನೊಬ್ಬನಿಗೆ ಅದೇ ಪ್ರಶ್ನೆ ಕೇಳುತ್ತಾಳೆ, ಅವನೂ ಇಲ್ಲವೆನ್ನುತ್ತಾನೆ. ಆ ಸಾಮಾನುಗಳನ್ನೆಲ್ಲ ಖಾಲಿ ಆಯಿಲ್ ಡ್ರಮ್ಮಿನಿಂದ ಮಾಡಿದ ದಿಡೀರ್ ದೋಣಿಗಳ ಮೇಲೆ ಹುಡುಗರು ಹೇರುತ್ತಿದ್ದಾಗ ಉಳಿದೆರಡು ಕತೆಗಳು ಸಂಧಿಸುತ್ತವೆ. ಮಧ್ಯಾಹ್ನವಾಗಿದ್ದರಿಂದ ‘ದೊಡ್ಡವಳಾಗಿ’ ಬಿಟ್ಟಿರುವ ಹವಾ ತಲೆಹೊದಿಕೆಯೊಂದಿಗೆ ಅಮ್ಮನ ಕೈಹಿಡಿದು ಹೂರಾಳನ್ನು ಆಸೆ ಕಂಗಳಿಂದ ನೋಡುತ್ತಿದ್ದಾಳೆ. ಸೈಕಲ್ ರೇಸಿನಲ್ಲಿ ಭಾಗವಹಿಸಿದ್ದ ಇಬ್ಬರು ಯುವತಿಯರು, ಇಷ್ಟೆಲ್ಲ ಆಸ್ತಿ ನಮ್ಮ ಬಳಿ ಇದ್ದಿದ್ದರೆ ಮದುವೆಯಾಗಿಬಿಡುತ್ತಿತ್ತು ಎಂದು ಹೂರಾಳ ಬಳಿ ನಗುತ್ತಾ ಹೇಳುತ್ತಾರೆ. ಮಾತಿನ ನಡುವೆ ಆಹೂಳ ವಿಷಯ ಪ್ರಸ್ತಾಪವಾಗುತ್ತದೆ. ಒಬ್ಬ ಯುವತಿ ಆಹೂ ರೇಸನ್ನು ಪೂರ್ಣಗೊಳಿಸಿದಳು ಎಂದರೆ ಮತ್ತೊಬ್ಬಳು ಇಲ್ಲ ವಾಪಸ್ಸು ಕರೆದುಕೊಂಡು ಹೋಗಿಬಿಟ್ಟರು ಎಂದಳು. ಆಹೂ ರೇಸನ್ನು ಪೂರೈಸಿದಳಾ? ದಿಡೀರ್ ದೋಣಿಗಳ ಮೇಲೆ ಕುಳಿತ ಹೂರಾ ಸಮುದ್ರದ ಮೇಲೆ ತೇಲುತ್ತಾ ಚೂರು ಚೂರೇ ಮುಂದೆ ಸಾಗುತ್ತಾಳೆ, ಹುಯ್ದಾಡುತ್ತಾಳೆ…..

ಓ! ಮೂರು ಕತೆಗಳಲ್ಲೂ ಪ್ರಮುಖವಾದ ಪಾತ್ರವೊಂದರ ಬಗ್ಗೆ ಹೇಳುವುದನ್ನೇ ಮರೆತಿದ್ದೆ. ಸಮುದ್ರವೇ ಮೂರು ಕತೆಗಳಲ್ಲಿನ ಬಂಧ, ಸಮುದ್ರವೇ ಇಲ್ಲಿ ಪ್ರಮುಖ ಪಾತ್ರ. ಬಾಲಕಿಯ ಕತೆ ನಡೆಯುವಾಗ ಸಮುದ್ರದ ಅಲೆಗಳು ದಡ ತಲುಪಿ ಮತ್ತೆ ವಾಪಸ್ಸಾಗುತ್ತಿರುವ ದೃಶ್ಯಗಳಿವೆ, ರೇಸು ನಡೆಯುವಾಗ ರಸ್ತೆ ಪಕ್ಕದಲ್ಲಿ ಮೈಚಾಚಿ ಮಲಗಿರುವ ಸಮುದ್ರ ಆಹೂಳ ಗಂಡ ವಿಚ್ಛೇದನ ಕೊಟ್ಟಾಗ ಮತ್ತವಳ ಅಣ್ಣಂದಿರು ಸಾಯ ಬಡಿಯುವಾಗ ರೊಚ್ಚಿಗೆದ್ದು ದಡಕ್ಕಪ್ಪಳಿಸುತ್ತದೆ – ದಡ ದಾಟುವುದಿಲ್ಲ ಮತ್ತು ಹೂರಾಳ ಕತೆ ಸಾಗುವಾಗ ಸಮುದ್ರ ಸಂಪೂರ್ಣ ಶಾಂತವಾಗಿದೆ. ಮೂರು ಕತೆಗಳಲ್ಲಿ ಮನಸ್ಸಿನ ಚಲನಶೀಲತೆಗೆ ಸಂಬಂಧಿಸಿದಂತೆ ಮೂರು ವಸ್ತುಗಳನ್ನು ಉಪಯೋಗಿಸಿಕೊಳ್ಳಲಾಗಿದೆ. ಮೊದಲ ಕತೆಯಲ್ಲಿ ಸಮುದ್ರ ತೀರದಲ್ಲಿರುವ ಹುಡುಗರು ಹವಾಳಿಗೊಂದು ಪ್ಲಾಸ್ಟಿಕ್ ಮೀನು ಕೊಡುತ್ತಾರೆ, ಸಮುದ್ರದ ನೀರಿನಲ್ಲಿ ಮೀನು ಬಿಟ್ಟರೆ ರವಷ್ಟು ದೂರ ಮುಂದೆ ಸಾಗಿ ಮತ್ತೆ ದಡಕ್ಕೇ ಬಂದುಬಿಡುತ್ತದೆ. ಚಲನಶೀಲತೆ ಇದೆ ಆದರೆ ಹಿಂದಕ್ಕೂ ಮುಂದಕ್ಕೂ ಸಾಗುತ್ತಿದೆಯಷ್ಟೆ. ಎರಡನೆಯ ಕತೆಯಲ್ಲಿ ಸೈಕಲ್ಲು ಚೈನಿನ ಶಬ್ದವೇ ಚಲನಶೀಲತೆ. ಕತೆ ಸಾಗುವ ಇಡೀ ಸಮಯ ಹಿನ್ನೆಲೆ ಸಂಗೀತದಲ್ಲಿ ಚೈನು ತಿರುಗುವ ಶಬ್ದವಿದೆ. ಅಡೆತಡೆಗಳು ಬಂದರೂ ಚಲನಶೀಲತೆ ಮುಂದಾಗಿಯೇ ಸಾಗುತ್ತಿದೆ. ಇನ್ನು ಮೂರನೇ ಕತೆಯಲ್ಲಿ ಹೂರಾಳ ಸ್ವತಂತ್ರ ಮನಸ್ಸಿನ ಚಲನಶೀಲತೆಯ ಸಂಕೇತವಾಗಿ ಶಾಂತ ಸಮುದ್ರದಲ್ಲಿ ಅತ್ತಿಂದಿತ್ತ ಭರ್ರನೆ ಓಡಾಡುವ ಸ್ಪೀಡು ಬೋಟುಗಳಿವೆ. 

ದೃಶ್ಯಗಳಲ್ಲೇ ಭಾವನೆಗಳನ್ನು ದಾಟಿಸುವ, ಸಮುದ್ರವನ್ನು ಪಾತ್ರವನ್ನಾಗಿ ಸೃಷ್ಟಿಸಿರುವ ಸೌಂದರ್ಯವನ್ನು ಕಾಣಲಿಕ್ಕೆ ಈ ಸಿನಿಮಾವನ್ನು ನೋಡಲೇಬೇಕು.

(ಈ ಸಿನಿಮಾ ನೋಡುವ ಅವಕಾಶ ಸಿಕ್ಕಿದ್ದು ಮನುಜಮತ ಮತ್ತು ಸಹಮತ, ಹಾಸನ ಆಯೋಜಿಸಿದ್ದ ‘ಸ್ತ್ರೀಮತ’ ಸಿನಿಮಾ ಹಬ್ಬದ ಸಂದರ್ಭದಲ್ಲಿ)

ಜನ 13, 2016

ಮತ್ತೆ ಮತ್ತೆ ಕೇಳಿಸಿಕೊಳ್ಳುವ ರಿಕ್ಕಿ ಚಿತ್ರದ ಹಾಡುಗಳು.

ರಿಷಬ್ ಶೆಟ್ಟಿ ನಿರ್ದೇಶನದ ರಕ್ಷಿತ್ ಶೆಟ್ಟಿ, ಹರಿಪ್ರಿಯಾ, ಅಚ್ಯುತ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ರಿಕ್ಕಿ' ಚಿತ್ರ ಆಕರ್ಷಿಸುವ ಟ್ರೇಲರ್ರಿನಿಂದ ಗಮನ ಸೆಳೆದಿತ್ತು. ಒಂದಷ್ಟು ಪ್ರೀತಿ, ವಿರಹ, ಸರಕಾರೀ ಕ್ರೌರ್ಯ, ನಕ್ಸಲರ ಹಿಂಸೆ, ನಾಯಕನ ವಿರೋಧದ ತುಣುಕುಗಳಿದ್ದ ಟ್ರೇಲರ್ ಕನ್ನಡಕ್ಕೆ ಮತ್ತೊಂದು ಹೊಸ ಬಗೆಯ ಚಿತ್ರವನ್ನು ನೀಡುವ ಸೂಚನೆ ನೀಡಿತ್ತು. 

ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಹೊಸ ಕನ್ನಡ ಸಿನಿಮಾಗಳ ಹಾಡುಗಳೆಂದರೆ ಅಬ್ಬರವೇ ಅತಿಯಾಗಿ ಆ ಕ್ಷಣಕ್ಕೆ ಇಷ್ಟವಾದರೂ ಮೂರು ತಿಂಗಳ ನಂತರ ಕೇಳುವುದು ಕಷ್ಟ ಕಷ್ಟ ಎಂಬ ಪರಿಸ್ಥಿತಿ. ಮತ್ತೆ ಮತ್ತೆ ಕೇಳಬೇಕೆನ್ನಿಸುವ ಹಾಡುಗಳು ಅಲ್ಲೊಂದು ಇಲ್ಲೊಂದು ಇರುತ್ತದಷ್ಟೆ. ರಿಕ್ಕಿ ಚಿತ್ರಗಳ ಎಲ್ಲಾ ಹಾಡುಗಳು ಇಷ್ಟವಾಗುವುದರಲ್ಲಿ ಸಂದೇಹವಿಲ್ಲ. ಅರ್ಜುನ್ ಜನ್ಯರವರ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಗಮನಸೆಳೆಯಲು ಸಾಹಿತ್ಯವೂ ಕಾರಣ.

ಹರುಷ ತಾಳದೆ, ಓ ಬೇಬೆ, ಎಲೆ ಮರೆಯಲಿ, ಜೀವ ನೀನು ಹಾಡುಗಳು ಮತ್ತೆ ಮತ್ತೆ ಕೇಳುವಂತಿವೆ. ಇನ್ನು ಝೀ ವಾಹಿನಿಯ ಸಾರೆಗಾಮಪ ಕಾರ್ಯಕ್ರಮದಲ್ಲಿ ಗಮನ ಸೆಳೆದಿದ್ದ ಅಂಕಿತಾ ಕುಂದು ಹಾಡಿರುವ ಮಲಗೆ ಮಲಗೆ ಹಾಡು ಈಗಾಗಲೇ ಜನಪ್ರಿಯವಾಗಿದೆ. ಹಾಡಿನ ವೀಡಿಯೋ ಹಾಡಿನಷ್ಟು ಚೆನ್ನಾಗಿಲ್ಲ ಎನ್ನಿಸುವುದು ಹಾಡಿನ ಹೆಚ್ಚುಗಾರಿಕೆ! ಕೇಳಿ ಆನಂದಿಸಿ, ಗೆಳೆಯರಿಗೂ ಕೇಳಿಸಿ.

ಜನ 2, 2016

ದೆವ್ವದ ಮಡಿಲಲ್ಲಿ ನಗುತ್ತಾ ವಿಶ್ರಮಿಸಿ!

ಡಾ.ಅಶೋಕ್.ಕೆ.ಆರ್
ಕತೆಗಾಗಿ ನಟರಿರಬೇಕು, ನಟರಿಗಾಗಿ ಕತೆ ಸೃಷ್ಟಿಯಾಗಬಾರದು ಎನ್ನುವಂಶವನ್ನು ಮತ್ತೊಮ್ಮೆ ನಿರೂಪಿಸುವ ಚಿತ್ರ ಕತೆ-ಚಿತ್ರಕತೆ-ನಿರ್ದೇಶನ: ಪುಟ್ಟಣ್ಣ. ಸಿನಿಮಾದ ಹೆಸರಿಗೂ ಸಿನಿಮಾದೊಳಗಿನ ಕತೆಗೂ ಏನೂ ಸಂಬಂಧವಿಲ್ಲ. ‘ದಂಡುಪಾಳ್ಯ’ ಖ್ಯಾತಿಯ ನಿರ್ದೇಶಕ ಶ್ರೀನಿವಾಸ್ ರಾಜು ಈ ಸಿನಿಮಾಕ್ಕೆ ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣರವರ ಹೆಸರಿಟ್ಟಿರುವುದು ಗಿಮಿಕ್ಕಿನ ಉದ್ದೇಶಕ್ಕೇ ಹೊರತು ಇನ್ಯಾವ ಕಾರಣಕ್ಕೂ ಅಲ್ಲ ಎನ್ನುವುದು ಚಿತ್ರ ಪ್ರಾರಂಭವಾದ ಹತ್ತು ನಿಮಿಷದೊಳಗೆ ಅರಿವಾಗಿಬಿಡುತ್ತದೆ! ಇದು ನಗಾಡಿಸುವ ದೆವ್ವದ ಚಿತ್ರ! ದೆವ್ವ ನಗಿಸುವುದಿಲ್ಲ, ದೆವ್ವದ ಸುತ್ತಲಿರುವ ಮನುಷ್ಯರು ಸಿಕ್ಕಾಪಟ್ಟೆ ನಗಿಸುತ್ತಾರೆ. ನಕ್ಕು ನಕ್ಕು ಹೊಟ್ಟೆ ನೊಂದರೆ ಯಾರು ಜವಾಬ್ದಾರಿ ಎಂಬ ಬಗ್ಗೆ ಟೈಟಲ್ ಕಾರ್ಡಿನಲ್ಲಿ ಸೂಚಿಸಿಲ್ಲ. ಎರಡೂವರೆ ಘಂಟೆ ಸಂಪೂರ್ಣ ಮನೋರಂಜನೆ ಅನುಭವಿಸಿದ ಮೇಲೆ ಇದು ತೆಲುಗಿನ ‘ಗೀತಾಂಜಲಿ’ ಎಂಬ ಚಿತ್ರದ ರೀಮೇಕಂತೆ ಎಂಬ ವಿಷಯ ಓದಿದ ನೆನಪಾಗಿ ರವಷ್ಟು ಬೇಸರವಾಗುತ್ತದೆ. ತೆಲುಗು ಚಿತ್ರ ನೋಡಿದ್ದವರು ಮತ್ತೊಮ್ಮೆ ನೋಡುವ ಅವಶ್ಯಕತೆಯಿಲ್ಲ. ಉಳಿದವರು ತಪ್ಪದೇ ನೋಡಿ, ದೆವ್ವದ ಜೊತೆ ನಗುತ್ತಾ ಕಾಲ ಕಳೆಯಿರಿ!

ಚಿತ್ರದ ನಾಯಕ ಸತ್ಯಹರೀಶ್ಚಂದ್ರ (ಕೋಮಲ್) ಪ್ರಶಸ್ತಿ ವಿಜೇತ ನಿರ್ದೇಶಕನಾಗಬೇಕೆಂಬ ಆಸೆಯಿಂದ ರಾಯಚೂರಿನಿಂದ ಬೆಂಗಳೂರಿಗೆ ಬರುತ್ತಾನೆ. ನಿರ್ಮಾಪಕರನ್ನು ಹುಡುಕುತ್ತಿರುತ್ತಾನೆ. ಸಾಫ್ಟ್ ವೇರ್ ಕಂಪನಿಯ ಮಾಲೀಕ ರವಿಶಂಕರ್ ಗೆ ಸಿನಿಮಾ ನಿರ್ಮಿಸಿ ಪ್ರಶಸ್ತಿ ಗಳಿಸಿ ಹೆಸರು ಮಾಡಬೇಕೆಂಬ ಆಸೆ. ರವಿಶಂಕರರನ್ನು ಭೇಟಿ ಆಗಲು ಮೂರು ತಾಸು ತಡವಾಗಿ ಬರುವ ನಾಯಕ ಕತೆ ಹೇಳಲಾರಂಭಿಸುತ್ತಾನೆ. ಅದು ಸಿನಿಮಾ ಕತೆಯಾಗಿರದೆ ಬೆಂಗಳೂರಿಗೆ ಬರುವಾಗ ಬಸ್ಸಿನಲ್ಲಿ ಸಿಕ್ಕ ನಾಯಕಿ (ಪ್ರಿಯಾಮಣಿ), ಬೆಂಗಳೂರಿನ ಮನೆಯಲ್ಲಿ ಪ್ರಾರಂಭವಾದ ದೆವ್ವದ ಕಾಟವಾಗಿರುತ್ತದೆ. ಬಸ್ಸಿನಲ್ಲಿ ಸಿಕ್ಕವಳೇ ದೆವ್ವವಾ? ಅಥವಾ ಮನೆಯಲ್ಲಿ ಮತ್ತೊಂದು ದೆವ್ವವಿದೆಯಾ? ಎಂಬ ಕುತೂಹಲದಿಂದಲೇ ಚಿತ್ರ ಮುಂದುವರೆಯುತ್ತದೆ. ಮನೆಯಲ್ಲಿ ಹತ್ಯೆಯಾಗಿದ್ದ ಯುವತಿ ಯಾರು? ಅವಳನ್ನು ಕೊಂದವರಾರು? ಎಂಬ ಕುತೂಹಲವೆಲ್ಲವೂ ಎರಡನೆಯ ಅರ್ಧದ ಪ್ರಾರಂಭದಲ್ಲೇ ಗೊತ್ತಾಗಿಬಿಡುತ್ತದೆ. ಇನ್ನೇನು ಚಿತ್ರ ಬೋರು ಹೊಡೆಯುತ್ತೆ ಬಿಡಿ ಎಂದುಕೊಳ್ಳುವಷ್ಟರಲ್ಲಿ ಎರಡನೇ ಅರ್ಧದ ನಾಯಕ ಸಾಧು ಕೋಕಿಲ ಪ್ರವೇಶವಾಗುತ್ತದೆ! ಮತ್ತಷ್ಟು ನಕ್ಕು ಸುಸ್ತಾಗುವ ಸುಸಂದರ್ಭ!

ಹೆಸರಿಗೆ ಕೋಮಲ್ ನಾಯಕನಾದರೂ ನಿರ್ಮಾಪಕ ಸಿ.ಆರ್.ಮನೋಹರ್ ಹೆಸರೇಳಿಕೊಂಡು ದುಡ್ಡು ಪೀಕುವ ಡಿ.ಕೆ, ಪಿಕೆ (ಕುರಿ ಪ್ರತಾಪ್ ಮತ್ತು ಪ್ರಶಾಂತ್ ಸಿದ್ಧಿ), ಸ್ನೇಹಿತ ಮಧು, ಸಾಧು ಕೋಕಿಲ, ರವಿಶಂಕರ್, ಪ್ರಿಯಾಮಣಿಯ ಪಾತ್ರಗಳಿಗೆ ಅಷ್ಟೇ ಪ್ರಾಮುಖ್ಯತೆಯಿದೆ. ದೊಡ್ಡಣ್ಣ, ಪೂಜಾ ಗಾಂಧಿ ಸುಮ್ನೆ ಹಿಂಗೆ ಮುಖ ತೋರ್ಸಿ ಹೋಗಿಬಿಡುತ್ತಾರೆ. ದೆವ್ವವಿಲ್ಲ ಬಿಡ್ರಿ ಎಂದು ಒಂದು ಹಂತದಲ್ಲಿ ತೋರಿಸುವ ಚಿತ್ರ ಕೊನೆಯ ಭಾಗದಲ್ಲಿ ದೆವ್ವ ಇದೆ ಕಣ್ರೀ ಎಂದು ನಂಬಿಸಲು ಪ್ರಯತ್ನಿಸುತ್ತದೆ. ಚಿತ್ರದ ಕೊನೆಯಲ್ಲಿ ಬರುವ ಒಂದು ಪುಟ್ಟ ಹಾಡು ‘ಓ! ಚಿತ್ರದಲ್ಲಿ ಹಾಡುಗಳೇ ಇರಲಿಲ್ಲ ಅಲ್ವಾ’ ಎಂದು ನೆನಪಿಸುವುದು ಪ್ರೇಕ್ಷಕರು ಚಿತ್ರದ ಹಾಸ್ಯ ದೃಶ್ಯಗಳಲ್ಲಿ ಮಗ್ನವಾಗಿಬಿಟ್ಟಿರುವ ಸೂಚನೆ! ಹೀರೋಯಿಸಮ್ಮಿನ ಪಾತ್ರಗಳನ್ನು ‘ಹೀರೋ’ಗಳಿಗೆ ಬಿಟ್ಟು ತಮಗೆ ಸೂಕ್ತವಾಗುವ ಇಂತಹ ಶಕ್ತ ಪಾತ್ರಗಳಲ್ಲಿ ನಟಿಸುವುದನ್ನು ಕೋಮಲ್ ಮುಂದುವರೆಸಿದರೆ ನೋಡುವವರಿಗೂ ಅನುಕೂಲ. ರಾತ್ರಿಹೊತ್ತು ದೆವ್ವದ ನರ್ತನವಾಗುತ್ತಿದ್ದಾಗ ಕಿಟಕಿಯಿಂದ ಸೂರ್ಯನ ಬೆಳಕು ಬೀಳುವ ವಿಚಿತ್ರ ದೃಶ್ಯಗಳನ್ನು ಮುಂದಿನ ಚಿತ್ರಗಳಲ್ಲಿ ಚಿತ್ರೀಕರಿಸದಿರುವುದು ನಿರ್ದೇಶಕರಿಗೆ ಒಳಿತು! ಇಂತಹ ಚಿಕ್ಕ ಪುಟ್ಟ ಸಂಗತಿಗಳನ್ನು ಮರೆತು, ರೀಮೇಕ್ ಚಿತ್ರ ಅನ್ನೋ ಬೇಸರ ಮರೆತು ಸಿನಿಮಾ ಮಂದಿರಕ್ಕೆ ಹೋದರೆ ಕೊಟ್ಟ ದುಡ್ಡಿಗೆ ಮೋಸ ಮಾಡುವುದಿಲ್ಲ ಪುಟ್ಟಣ್ಣ.

ಡಿಸೆಂ 25, 2015

ಅಬ್ಬರದ ವೈಭವಕ್ಕೆ ಬೆದರಿದ ಕತೆ

ಯಶ್ ಅಭಿನಯದ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ‘ಮಾಸ್ಟರ್ ಪೀಸ್’ ಚಿತ್ರ ಇಂದು ತೆರೆಕಂಡಿದೆ. ಬುಕ್ ಮೈ ಶೋನಲ್ಲಿ ಒಂದು ದಿನ ಮೊದಲೇ ಏಳು ಸಾವಿರ ಟಿಕೇಟುಗಳು ಮಾರಾಟವಾದ ದಾಖಲೆ, ಕರ್ನಾಟಕದಾದ್ಯಂತ ಮುನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿರುವ, ಸಂಭಾಷಣೆಕಾರನಾಗಿ ಖ್ಯಾತಿ ಪಡೆದಿದ್ದ ಮಂಜು ಮಾಂಡವ್ಯ ನಿರ್ದೇಶನದ ಮೊದಲ ಚಿತ್ರವೆಂಬ ಹೆಗ್ಗಳಿಕೆಯ ಮಾಸ್ಟರ್ ಪೀಸ್ ಹೇಗಿದೆ? ಚಿತ್ರದ ನಿರೀಕ್ಷೆ ಹೆಚ್ಚಲು ಯಶ್ ಅಭಿನಯದ ಚಿತ್ರಗಳು ಸಾಲು ಸಾಲು ಗೆದ್ದಿದ್ದು, ಮಾಸ್ಟರ್ ಪೀಸ್ ಚಿತ್ರದ ಮೊದಲ ಟ್ರೇಲರಿನಲ್ಲಿ ಭಗತ್ ಸಿಂಗ್ ವೇಷದಲ್ಲಿ ಯಶ್ ಮಿಂಚಿದ್ದು, ಮಾಸ್ಟರ್ ಪೀಸ್ ಚಿತ್ರದ ಅಣ್ಣಂಗೇ ಲವ್ ಆಗಿದೆ ಹಾಡಿನ ಯಶಸ್ಸು ಕಾರಣ. ಚಿತ್ರ ನಿರೀಕ್ಷಿತ ಮಟ್ಟ ಮುಟ್ಟುತ್ತದೆಯಾ?

ಹೊಸ ನಿರ್ದೇಶಕನ ಮೊದಲ ಸಿನಿಮಾದಲ್ಲಿ ಕತೆಯಲ್ಲಿ ಹೊಸತನವನ್ನು ನಿರೀಕ್ಷಿಸುವುದು ಸಹಜ. ತುಂಬ ಹೊಸತನವಿಲ್ಲದ ಕತೆಯನ್ನು ಆಯ್ದುಕೊಂಡಿದ್ದಾರೆ ನಿರ್ದೇಶಕರು. ಒಬ್ಬ ಉಡಾಳ ಹುಡುಗ, ರೌಡಿ ಎಲಿಮೆಂಟೆಂದು ಕರೆಸಿಕೊಳ್ಳಬೇಕೆಂಬ ಹಪಾಹಪಿ ಇರುವಾತ. ಬಹಳಷ್ಟು ಹುಡುಗರಿಗೆ ಒಂದು ಹಂತದಲ್ಲಿ ರೌಡಿ ಎಲಿಮೆಂಟು, ಅಣ್ಣ, ಭಾಯ್ ಅಂತೆಲ್ಲ ಕರೆಸಿಕೊಳ್ಳುವ ಚಟವಿರುತ್ತದೆ. ಕೆಲವರಿಗೆ ಆ ಚಟ ಶಾಲೆ ಮುಗಿಸುವಷ್ಟರಲ್ಲಿ ಮುಗಿದರೆ ಹಲವರಿಗೆ ಪಿಯುಸಿಯಲ್ಲಿ ಮುಗಿಯುತ್ತದೆ. ಎಲ್ಲೋ ಕೆಲವರಿಗೆ ಡಿಗ್ರಿಗೆ ಸೇರಿದರೂ ರೌಡಿಯಾಗುವ ಆಸೆ ಬತ್ತಿರುವುದಿಲ್ಲ. ಅಂತಹ ವ್ಯಕ್ತಿತ್ವ ಚಿತ್ರದ ನಾಯಕ ‘ಯುವ’ನದ್ದು. ಅಣ್ಣನೆನ್ನಿಸಿಕೊಳ್ಳುವ ಭರದಲ್ಲಿ ನಾಯಕನೆದುರಿಸುವ ಸವಾಲುಗಳು, ಮಗನನ್ನು ದೇಶಪ್ರೇಮಿ ಮಾಡಬೇಕೆನ್ನುವ ನ್ಯಾಯಾಲಯದಲ್ಲಿ ಕೆಲಸ ಮಾಡುವ ತಾಯಿ (ಸುಹಾಸಿನಿ) ರೌಡಿ ಮಗನ ಬಗ್ಗೆ ಬೆಳೆಸಿಕೊಳ್ಳುವ ದ್ವೇಷ ಮತ್ತು ಆ ದ್ವೇಷ ಹೇಗೆ ಪ್ರೀತಿಯಾಗಿ ಪರಿವರ್ತನೆಯಾಗುತ್ತದೆ ಎನ್ನುವುದೇ ಚಿತ್ರದ ಪ್ರಮುಖ ಕತೆ. ಹಲವು ಸಾಧ್ಯತೆಗಳಿದ್ದ ಕತೆ ಹೀರೋಯಿಸಮ್ಮಿನ ಸೂತ್ರಕ್ಕೆ ಸಿಲುಕಿ ನಲುಗಿ ಹೋಗಿದೆ. ಒಂದು ಲವ್ ಸ್ಟೋರಿ ಇಲ್ಲದಿದ್ದರೆ ಸಿನಿಮಾ ಪೂರ್ಣವಾಗುವುದಿಲ್ಲ ಎನ್ನುವ ಕಾರಣಕ್ಕೆ ಹೀರೋಯಿನ್ ಇದ್ದಾಳೆ, ಚಿಕ್ಕ ಪಾತ್ರವಾದರೂ ಚೊಕ್ಕವಾಗಿ ಅಭಿನಯಿಸಿ ಮನಗೆಲ್ಲುತ್ತಾಳೆ ನಾಯಕಿ ಶಾನ್ವಿ ಶ್ರೀವಾಸ್ತವ್. ಯಶ್ ನ ಪ್ರಭಾವಳಿಯನ್ನು ಮೀರಿ ಬೆಳೆವ ಪಾತ್ರದಲ್ಲಿ ಚಿಕ್ಕಣ್ಣ. ರೌಡಿ ಎಲಿಮೆಂಟಿನ ಸಹಾಯದಿಂದ ಗೆಲ್ಲುವ ನೂರ್ ಅಹಮದ್ ಪಾತ್ರದಲ್ಲಿ ಅಚ್ಯುತ್; ಅಚ್ಯುತ್ ಅಭಿನಯದ ಬಗ್ಗೆ ಕಮೆಂಟಿಸುವ ಅಗತ್ಯವಿಲ್ಲ. ಮೊದಲಾರ್ಧವಿಡೀ ನಾಯಕನೊಳಗಿನ ರೌಡಿ ಎಲಿಮೆಂಟನ್ನು ವಿಜ್ರಂಭಿಸುವ ಕೆಲಸ. ನನ್ನ ಫೋಟೋ ದೊಡ್ಡದಾಗಿ ಹಾಕಿಲ್ಲ ಎಂದು ಸಂಪಾದಕನ ಕೈಚುಚ್ಚುವ ನಾಯಕ, ರಾಜಕಾರಣಿಯೊಬ್ಬನ ಗೆಲುವಿಗೆ ಹಣ ಹಂಚುವ ಐಡಿಯಾ ಕೊಡವ ನಾಯಕ, ಹಣ ಮಾಡಲು ಶಾರ್ಟು ಕಟ್ಟುಗಳನ್ನುಡುಕುವ ನಾಯಕ – ಒಟ್ಟಾರೆ ಮೊದಲಾರ್ಧದಲ್ಲಿ ಯಶ್ ನೇ ಖಳನಾಯಕ! ಮೊದಲಾರ್ಧದ ಖಳನಾಯಕನನ್ನು ಎರಡನೇ ಅರ್ಧದಲ್ಲಿ ನಾಯಕನನ್ನಾಗಿ ಮಾಡಲು ಡ್ರಗ್ ಮಾಫಿಯಾದ ಬಾಸ್ ರವಿಶಂಕರ್ ಪ್ರವೇಶವಾಗುತ್ತದೆ. 

ರವಿಶಂಕರನ ಸಾಮ್ರಾಜ್ಯವನ್ನು ಮಟ್ಟ ಹಾಕಲು ನಂತರದ ಚಿತ್ರ ಮೀಸಲು. ಮಾಸ್ ಪಿಚ್ಚರುಗಳಲ್ಲೂ ಮೊದಲರ್ಧ ಬಿಲ್ಡಪ್ಪು ನಂತರ ಕತೆ ಎನ್ನುವ ಸೂತ್ರವಿರುತ್ತದೆ. ಇಲ್ಲಿ ಎರಡನೇ ಅರ್ಧವೂ ಬಿಲ್ಡಪ್ಪುಗಳಿಂದಲೇ ತುಂಬಿ ಹೋಗಿದೆ. ಫೈಟಿನ ಮೇಲೆ ಫೈಟುಗಳಿವೆ, ಒಂದೆರಡು ವಿಭಿನ್ನವಾಗಿವೆ. ಆದರೂ ಎಷ್ಟೂಂತ ಬಿಲ್ಡಪ್ಪುಗಳನ್ನು ನೋಡುವುದು. ಚಿಕ್ಕಣ್ಣ ಇಲ್ಲದಿದ್ದರೆ ಯಶ್ ನನ್ನು ತಡೆದುಕೊಳ್ಳುವುದು ಕಷ್ಟವಾಗಿಬಿಡುತ್ತಿತ್ತು! ರೌಡಿ ಎಲಿಮೆಂಟು ಬದಲಾಗುವುದಿಲ್ಲ, ತನ್ನ ರೌಡಿ ಎಲಿಮೆಂಟಿನಿಂದಲೇ ಒಳ್ಳೆಯವನೆಂಬ ಹೆಸರು ಗಳಿಸಿಬಿಡುತ್ತಾನೆ! ರೌಡಿಯ ಬೆಂಬಲಿಗರನ್ನು ಕಂಡ ತಾಯಿ ಅದನ್ನು ಭಗತ್ ಸಿಂಗ್ ಗೆ ಸಿಕ್ಕ ಬೆಂಬಲ ಎಂಬಂತೆ ಕಲ್ಪಿಸಿಕೊಳ್ಳುವುದು ಕಾಮಿಡಿಯಾ ಟ್ರ್ಯಾಜಿಡಿಯಾ ಗೊತ್ತಾಗುವುದಿಲ್ಲ. ಹಾಡುಗಳು ಚಿತ್ರದ ವೇಗಕ್ಕೆ ಪೂರಕವಾಗಿವೆ, ಮೂರು ತಿಂಗಳುಗಳಿಗಿಂತ ಹೆಚ್ಚಾಗಿ ತಲೆಯಲ್ಲುಳಿಯುವುದಿಲ್ಲ. ಚಿತ್ರದ ವೈಭವಕ್ಕೆ ಯಾವುದೇ ಕೊರತೆಯುಂಟುಮಾಡಿಲ್ಲ ನಿರ್ಮಾಪಕರಾದ ವಿಜಯ್ ಕಿರಗಂದೂರು. ಸಂಭಾಷಣೆಕಾರ ನಿರ್ದೇಶಕನಾಗಿರುವುದರಿಂದ ಪಂಚಿಂಗ್ ಡೈಲಾಗುಗಳು ಬಹಳಷ್ಟಿವೆ, ಕೆಲವೊಂದೆಡೆ ಮೌನದ ಜಾಗವನ್ನೂ ಮಾತು ಆವರಿಸಿಕೊಂಡುಬಿಟ್ಟಿದೆ. ಮೌನಕ್ಕಿರುವ ಬೆಲೆ ಚಿತ್ರದ ಪ್ರಾರಂಭದಲ್ಲಿ ಒಂದು ಪುಟ್ಟ ತುಣುಕಾಗಿ ಬರುವ ಭಗತ್ ಸಿಂಗ್ ನ ಕತೆಯಲ್ಲಿ ಗೋಚರವಾಗುತ್ತದೆ. ನಂತರ ಮಾತಿನದ್ದೇ ಅಬ್ಬರ.

ಚಿತ್ರದ ಬಹುಮುಖ್ಯ ಕೊರತೆಯೆಂದರೆ ಬಿಲ್ಡಪ್ಪುಗಳು! ಚಿತ್ರಕ್ಕೆ ಸಂಬಂಧಪಟ್ಟಂತ ಅನೇಕ ಸಂದರ್ಶನಗಳಲ್ಲಿ ಯಶ್ ಪದೇ ಪದೇ Involvementನ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಮಾಸ್ಟರ್ ಪೀಸ್ ಚಿತ್ರದಲ್ಲಿ ಯಶ್ ನ ‘ಇನ್ವಾಲ್ವ್ ಮೆಂಟ್’ ಎದ್ದು ಕಾಣುತ್ತದೆ. ಮೊದಲರ್ಧದ ಅನೇಕ ದೃಶ್ಯಗಳು ಅವರ ಹಿಂದಿನ ಚಿತ್ರ ರಾಮಾಚಾರಿಯನ್ನು ನೆನಪಿಸುತ್ತದೆ! ಮಾಧ್ಯಮವನ್ನು ಅವಹೇಳನ ಮಾಡಲು ಆ ಚಿತ್ರದಲ್ಲಿ ಕಾವೇರಿ – ಸುವರ್ಣ ಎಂಬ ಪಾತ್ರವಿತ್ತು. ಈ ಚಿತ್ರದಲ್ಲಿ ಮಾಧ್ಯಮವನ್ನು ಹೀಗಳೆಯುವ ಹತ್ತಲವು ಡೈಲಾಗುಗಳು ಬಂದು ಹೋಗುತ್ತವೆ. ಇಡೀ ಚಿತ್ರವನ್ನು ಯಶ್ ಆವರಿಸಿಕೊಂಡುಬಿಟ್ಟಿರುವುದೇ ಚಿತ್ರಕ್ಕೆ ದೊಡ್ಡ ಶಾಪ. ಬಹುಶಃ ಇದು ಅವರ ಇನ್ವಾಲ್ವ್ ಮೆಂಟಿನ ಕಾರಣಕ್ಕಾಯಿತಾ? ನಟನ ಇನ್ವಾಲ್ವ್ ಮೆಂಟ್ ನಟನೆಯಲ್ಲಿರಬೇಕು, ನೃತ್ಯ ನಿರ್ದೇಶಕನ ಇನ್ವಾಲ್ವ್ ಮೆಂಟ್ ನೃತ್ಯದಲ್ಲಿರಬೇಕು, ಎಲ್ಲದರಲ್ಲೂ ಇನ್ವಾಲ್ವ್ ಆಗುವ ಹಕ್ಕಿರುವುದು ನಿರ್ದೇಶಕರಿಗೆ ಮಾತ್ರ ಎನ್ನುವ ಅಂಶ ಯಶ್ ನ ನೆನಪಿನಲ್ಲಿರದಿದ್ದರೆ ಮುಂದೆ ಅವರು ನಟಿಸುವ ಚಿತ್ರಗಳನ್ನು ನೋಡುವ ಪ್ರೇಕ್ಷಕರಲ್ಲಿ ಅವರ ಅಭಿಮಾನಿಗಳು ಮಾತ್ರ ಇರುತ್ತಾರೆ. ಉಳಿದ ಪ್ರೇಕ್ಷಕರು ಇನ್ ವಾಲ್ವ್ ಆಗುವುದಿಲ್ಲ!
Masterpiece (Kannada movie)
Direction: Manju Mandavya
Starcast: Yash, Shanvi srivastav, chikkanna, suhasini, achyut, avinash, ravishankar
Producer: Vijay kiragandur

ಆಗ 28, 2015

Stop the Political Assault on Education in India: Dissolve FTII Society

ftii
When i first read about protests in FTII against the appointment of Gajendra Chauhan i thought both the appointment and protest is politically motivated. Appointing a chairman of their favour is not new. Congress has done the same, BJP – the so called different party will also do the same. Nothing surprising in that. But why the protest? In almost all main stream media the FTII issue is related only to Gajendra Chauhan and till date i believed the same. But when i received a pamphlet from students/supporters of FTII protest i understood the reality of the protest. There protest is completely justified. Read it and make your decision.

Students of the Film and Television Institute of India (FTTI) have been on strike since 12th June 2015. This strike came as a difficult and yet spontaneous decision on the part of the students after the constitution of the new FTII society by the ruling government, headed by the newly appointed chairman, Mr Gajendra Chauhan and consisting of several questionable appointments in the society itself. The process by which these appointments were made also subsequently and immediately came into question.

The objections of the students of FTII and a rather large and growing body of people of the nation are extremely serious and urgent and bring into question the kind of vision, ethos and level of seriousness the ruling government has towards India’s premier film school as well as higher education in our nation. Our concerns are serious enough for us to abandon our studies, the only thing we have assembled from all over the country for, putting our professional and financial future’s in limbo for each day that this stike goes on. The very fundamentals of our objections are summarized in the following points. 

1. Gajendra Chauhan. 

The stature of previous chairmen (Girish Karnad, Adoor Gopalkrishnan, U.R. Ananthamurthy, Saeed Mirza) is a clear testament to the kind of academic experience and rigor of practice they have epitomized. Unfortunately, Mr Chauhan’s academic inexperience and body of work does not meet the requirements needed to head and steer an internationally renowned institution in the field of Film and Television education. 

2. Anagha Ghaisas 

Anagha Ghaisas, who has a strong RSS background, has made documentary films supporting Prime Minister Narendra Modi and about Ayodhya. Her comments in mainstream media in wake of the protests and her extreme position vis-a-vis the students, has caused a great deal of anxiety about her presence in the apex body. Additionally, her professional integrity has been questioned by the court of law. The court verdict states the she “does not know the difference between fiction and documentary”, her nomination as an ‘eminent persons of the art’ is therefore unacceptable 

3. Dr. Narendra Pathak 

Dr. Pathak was the head of ABVP (a right inclined student wing), whose members physically assaulted FTII students following a film screening and cultural program at the film archives, Pune. The court case regarding the incident is still going on. Dr. Pathaks statements like ‘there shouldn’t be any anti-national activity at the institute’ and “students ko sabak sikhaana hoga” (students need to be taught a lesson) is perceived as an open threat to the physical safety of the students and cast doubts about his commitment towards upholding the tenets of freedom of expression and thought. Such a person is not conducive to the spirit of learning. 

4. Rahul Solarpurkar 

Rahul has acknowledged to having strong political ideologies and was in contention for a BJP ticket in last year’s state assembly elections. In spite of his fairly large body of work, his insinuation that we as citizens of this nation are behaving in an anti – national manner by simply expressing our views is disturbing. Such statements made by future decision makers at institutes of higher learning threatens the learning environment for students. 

5. Shailesh Gupta 

Mr. Shailesh Gupta, is an FTII alumnus who has worked primarily in the advertisement industry and also as an assistant cameraperson and photographer in a few commercial bollywood films.

His appointment is contentious because of his selection over the many eminent FTII alumnus who have far greater accomplishments and might have been willing to serve at this post. A particular film made by Mr. Gupta is indicative of his political inclinations and it sets a bad precedence where an individual may not be selected despite his credentials in the face of political subservience.

We must mention that it is not the content of the film that disturbs us and neither do we aim to take a higher creative standpoint but we do feel the quality of this video speaks for itself and raises several questions over his position in the governing council of the FTTI


Such appointments have been practiced so far with humility, even with the previous government and these appointments in particular demotivate legions of former, current and prospective students of FTII; rendering such esteemed positions farcical.

The students of the FTII, as well as several experienced voices of our film fraternity and student organisations throughout the country have seamlessly connected to our issues. Because our is not an isolated case of government interference in academia. The appointees at the Tata Institute of Fundamental Research, National Book Trust of India, Indian Council for cultural relations and indian council of historical research and the looming threat of the changes at the IIM’s are ominous signs as well.

We sincerely believe that these moves by the government reek of a very serious effort to destabilize and color the educational institutions of the country. It undermines the very basic pillars and ethos of any education system and raises serious and disconcerting questions about how they want the future generations of this nation to be educated.

On 3rd July 2015, a panel comprising of eminent people from the film industry including oscar winner Resul Pookutty and National award winning filmmaker Girish Kasaravalli and student body memebers held and hour long dialogue with Hon I & B Minister Arun Jaitley, only for him to repeatedly evade all questions related to the credibility of the government’s appointees which makes this petition all the more imperative, since our first round of talks were inconclusive.

For students losing out on their education for every day that this strike goes on, the lack of answers is most disconcerting and reflects on the arrogance and lack of transparency of the incumbent government over this issue.

The students of the FTII urgently appeal to all the students of the nation, to the youth, to the parents, to anyone who believes that th educational institutions of the nation cannot be tampered with in this manner; to appeal to the Hon. Minister, Mr Arun Jaitley, to hold in a passive state the newly formed Society and in the interim, constitute a committee of experts to suggest norms and guidelines for setting up a new FTII society, which would make such appointments diligent, transparent and free from political intentions.

We sincerely appeal to you to help us solidify what might well be the last bastion of fighting against the colouring and degradation of the critical educational institutions of our nation and end the anguish of the students who have had no option but to fight this battle, and in the process set an important and historic precedent that this nation will not let its educational institutions be compromised.

image source: abpnews.abplive.in 

ಆಗ 14, 2015

ಚೌಕಟ್ಟಿಲ್ಲದ ಉಪ್ಪಿ2 ರುಚಿಯಾಗಿದೆಯಾ?

uppi2 review
Ashok K R
ಉಪೇಂದ್ರ ನಿರ್ದೇಶನದ ಸಿನಿಮಾಗಳೆಂದರೆ ಒಂದಷ್ಟು ವಿಚಿತ್ರ ವೇಷಭೂಷಣಗಳು, ಮೊದಲಿನಿಂದ ಖಳರಂತೆ ಚಿತ್ರಿತವಾಗುವ ನಾಯಕಿ, ಹಸಿ ಬಿಸಿ ದೃಶ್ಯಗಳು, ಚಿತ್ರವಿಚಿತ್ರವಾಗಿ ಆಡುವ ನಾಯಕ, ಈ ಎಲ್ಲದರ ಮಧ್ಯೆ ಅಲ್ಲೊಂಚೂರು ಇಲ್ಲೊಂಚೂರು ಎಂಬಂತೆ ಫಿಲಾಸಫಿ! ಗಲ್ಲಾಪೆಟ್ಟಿಗೆಯಲ್ಲಿ ಕೆಲವೊಂದು ಗೆದ್ದಿವೆ, ಕೆಲವೊಂದು ಸಾಧಾರಣ ಯಶಸ್ಸು ಕಂಡಿವೆ, ಕೆಲವೊಂದು ಸೋತಿವೆ; ಆದರೆ ನಿರ್ದೇಶಕನಾಗಿ ಉಪೇಂದ್ರ ಪ್ರತಿ ಸಿನಿಮಾದಲ್ಲೂ ಗೆದ್ದಿದ್ದಾರೆ. ಕಥೆ ಮಾಮೂಲಿದ್ದರೂ ಚಿತ್ರಕಥೆಯಲ್ಲಿ ಪ್ರೇಕ್ಷಕನನ್ನು ತುದಿಗಾಲಲ್ಲಿ ನಿಲ್ಲಿಸುವ ಕಲೆ ಉಪೇಂದ್ರನಿಗಿದೆ. ಆ ಕಲೆ ಇನ್ನೂ ಜೀವಂತವಾಗಿದೆಯಾ ಎಂಬ ಕುತೂಹಲದೊಂದಿಗೆ Uppi2 ಚಿತ್ರ ನೋಡಲು ಪ್ರವೇಶಿಸಿದರೆ ಚೂರೇ ಚೂರು ನಿರಾಸೆಯಾಗುತ್ತದೆ, ಉಪೇಂದ್ರನೆಂಬ ನಿರ್ದೇಶಕನನ್ನು ಮೊದಲಿನಿಂದಲೂ ಮೆಚ್ಚಿದವರು ಮತ್ತಷ್ಟು ಮೆಚ್ಚುತ್ತಾರೆ, ಮೊದಲಿನಿಂದಲೂ ಮೆಚ್ಚದವರು ಅದನ್ನೇ ಮುಂದುವರೆಸುತ್ತಾರೆ!

ಹದಿನೈದು ವರುಷಗಳ ಹಿಂದೆ ತೆರೆಕಂಡಿದ್ದ ‘ಉಪೇಂದ್ರ’ ಚಿತ್ರದ ಮುಂದುವರಿದ ಭಾಗವಿದು. ನಾಯಕನನ್ನೂ ಸೇರಿ ಅಲ್ಲಿನವೇ ಅನೇಕ ಪಾತ್ರಗಳು ಇಲ್ಲಿ ಕಾಣಿಸಿಕೊಳ್ಳುತ್ತವೆ. ‘ಉಪೇಂದ್ರ’ ಅಷ್ಟೇ ಅಲ್ಲದೆ ‘ಶ್’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದ ಬ್ಯಾಂಕ್ ಜನಾರ್ಧನ್ ಮತ್ತು ಬಿರಾದಾರ್ ಇಲ್ಲೂ ಪೋಲೀಸರಾಗಿ ಕಾಣಿಸಿಕೊಂಡಿದ್ದಾರೆ. ‘ಉಪೇಂದ್ರ’ ಚಿತ್ರದಲ್ಲಿ ‘ನಾನು’ ಎಂಬ ಪಾತ್ರದ ಸುತ್ತ ಕಥೆ ಹೆಣೆಯಲಾಗಿತ್ತು, ಆ ‘ನಾನು’ಗೆ ರತಿ, ಸ್ವಾತಿ, ಕೀರ್ತಿ ಎಂಬ ಮೂವರು ನಾಯಕಿಯರ ಮೇಲೆ ಕಣ್ಣು, ಅವನಿಗೆ ಮೂವರೂ ಬೇಕು. ರತಿ, ಸ್ವಾತಿ, ಕೀರ್ತಿ ಪ್ರತಿ ಗಂಡಸು ಆಸೆ ಪಡುವ ಮೂರು ಗುಣಗಳೆಂಬಂತೆ ಚಿತ್ರಿಸಲಾಗಿತ್ತು. ಕೊನೆಗೆ ಮೂವರನ್ನೂ ತೊರೆದ ‘ನಾನು’ ಎಲ್ಲವನ್ನೂ ಬಿಟ್ಟು ಹೊರಟುಬಿಡುತ್ತಾನೆ. ಅಲ್ಲಿಂದ ಹೊರಟ ‘ನಾನು’ ಇಲ್ಲಿ ‘ನೀನಾಗಿ’ ಬದಲಾಗಿದ್ದಾನೆ! ಉಪೇಂದ್ರ ‘ನಾನು ಯಾರು?’ ಎಂದು ಪ್ರಶ್ನಿಸಿದರೆ ಉಪ್ಪಿ2 ‘ನೀನು ಯಾರು?’ ಎಂದು ಪ್ರಶ್ನಿಸುತ್ತದೆ.

ಫಿಲಾಸಫಿ ಹೇಳೋದಕ್ಕೆ ಉಪೇಂದ್ರ ಆಯ್ದುಕೊಳ್ಳುವುದು ಗದ್ದಲದ ಹಾದಿ. ‘ಉಪೇಂದ್ರ’ ಚಿತ್ರದಲ್ಲಿ ಹೆಚ್ಚಾಗಿದ್ದ ಗದ್ದಲ, ದ್ವಂದಾರ್ಥ ‘ಉಪ್ಪಿ2’ ಚಿತ್ರದಲ್ಲಿ ಕಡಿಮೆಯಾಗಿದೆ. ಉಪೇಂದ್ರನಿಗೂ ಹದಿನೈದು ವರ್ಷ ವಯಸ್ಸಾಯಿತಲ್ಲವೇ?! ಉಪ್ಪಿ2 ಚಿತ್ರ ಮೂರು ಕಾಲಗಳ ಬಗೆಗಿನ ಜಿಜ್ಞಾಸೆಯ ಚಿತ್ರ. ಭೂತ – ವರ್ತಮಾನ – ಭವಿಷ್ಯ ಕಾಲದಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕು ಎಂಬುದರ ಬಗೆಗಿನ ಚಿತ್ರ. ಯೋಚನೆ ಮಾಡುವುದೇ ತಪ್ಪು ಎಂದು ಹೇಳುತ್ತಲೇ ನೋಡುಗರನ್ನು ಯೋಚನೆಗೆ ಹಚ್ಚುವ ಚಿತ್ರ! ಫಿಲಾಸಫಿಗಳನ್ನೆಲ್ಲಾ ವಾಚ್ಯವಾಗಿ ಹೇಳುವ ಪ್ರಯತ್ನ ಕೆಲವೆಡೆ ಯಶಸ್ವಿಯಾಗಿದೆ, ಕೆಲವೆಡೆ ಹಾಸ್ಯಾಸ್ಪದವಾಗಿದೆ. ‘ನಾನು’ ಹುಡುಗಿಯ ಹಿಂದೆ ಓಡಿದರೆ ‘ನೀನು’ವನ್ನು ಹುಡುಗಿಯೇ ಅಟ್ಟಿಸಿಕೊಂಡು ಬರುತ್ತಾಳೆ. ಯಾವುದರ ಬಗ್ಗೆಯೂ ಯೋಚನೆಯೇ ಮಾಡದ ‘ನೀನು’ ಮುಗ್ದನಾ ದಡ್ಡನಾ ಎಂಬ ಪ್ರಶ್ನೆಗೆ ‘ಯೋಚ್ನೆ ಮಾಡಲ್ಲ ಅಂದೆ ತಲೆ ಇಲ್ಲ ಅನ್ನಲಿಲ್ಲ’ ಎಂಬ ಉತ್ತರ ಚಿತ್ರದಲ್ಲಿಯೇ ಇದೆ. ಯೋಚನೆ ಮಾಡದ ಕಾರಣಕ್ಕೆ ನಾಯಕನಿಗೆ ನೆಮ್ಮದಿ, ಸಂಪತ್ತು, ‘ಖುಷಿ’ ಸಿಗುತ್ತದೆ. ಯಾವುದಕ್ಕೂ ಯೋಚನೆ ಮಾಡದೆ, ಭಯ ಪಡದೆ, ಮಾಡಿದ ಕೆಲಸಕ್ಕೆ ಹಣ ಪಡೆಯದೆ ಇದ್ದುಬಿಡುವ ‘ನೀನು’ ನಿಜವಾಗಿಯೂ ಬದಲಾದ ‘ನಾನು’ನಾ ಅಥವಾ ನಾಟಕವಾ ಎಂಬ ಗೊಂದಲಗಳೊಂದಿಗೆ ಮೊದಲರ್ಧ ಮುಗಿಯುತ್ತದೆ. 

ಎರಡನೇ ಭಾಗದಲ್ಲಿ ‘ಉಪೇಂದ್ರ’ ಚಿತ್ರದ ‘ನಾನು’, ಉಪ್ಪಿ2 ಚಿತ್ರದ ‘ನೀನು’ ಮತ್ತು ಇವೆರಡೂ ಚಿತ್ರದಲ್ಲಿಲ್ಲದ ‘ಅವನು’ ಕಾಣಿಸಿಕೊಳ್ಳುತ್ತಾರೆ. ‘ನಾನು’ ನೀನಾಗಿ ನಾಟಕವಾಡುತ್ತಿದ್ದಾನೆ ಎಂಬ ಸಂಗತಿಯಿಂದ ಖುಷಿ ವಿಚಲಿತಳಾಗುತ್ತಾಳೆ. ಈ ನಾನು, ನೀನು, ಅವನು ನಿಜವಾಗಿ ಒಬ್ಬನೇನಾ ಅಥವಾ ಮೂರು ಮೂರು ಮಂದಿಯಾ ಎಂಬ ಗೊಂದಲ ಚಿತ್ರ ಮುಗಿದ ಮೇಲೂ (ಅಸಲಿಗೆ ಚಿತ್ರ ಮುಗಿಯುವುದೇ ಇಲ್ಲ!) ಉಳಿದುಬಿಡುತ್ತದೆ. ‘ನಾನು’ ಎಂಬ ಭೂತಕಾಲ, ‘ನೀನು’ ಎಂಬ ವರ್ತಮಾನ, ‘ಅವನು’ ಎಂಬ ಕಲ್ಪನಾತ್ಮಕ ಭವಿಷ್ಯದ ತಂತ್ರ ಉಪಯೋಗಿಸಿದ್ದಾರೆ ಉಪೇಂದ್ರ. ಭೂತಕಾಲದ ‘ನಾನು’ ನೆನಪಿನಲ್ಲಿರುವ ಯಾವ ಪಾತ್ರಧಾರಿಗಳೂ ಚಿತ್ರದಲ್ಲಿ ಸಂತಸದಿಂದಿರುವುದಿಲ್ಲ. ‘ಅವನು’ ಎಂಬ ಕಲ್ಪನೆಯನ್ನು ನಂಬಿಕೊಂಡವರು ಗೊಂದಲದಲ್ಲಿರುತ್ತಾರೆ. ವರ್ತಮಾನದ ‘ನೀನು’ ಜೊತೆ ಇರುವ ನಾಯಕಿ ಮಾತ್ರ ‘ಖುಷಿ’ಯಾಗಿರುತ್ತಾಳೆ! 

ಭೂತವನ್ನು ಮರೆಯಿರಿ ಎಂದ್ಹೇಳುವ ಉಪ್ಪಿ2 ಚಿತ್ರದಲ್ಲಿ ಉಪೇಂದ್ರ ನಿರ್ದೇಶನದ ಶ್, ಓಂ ಚಿತ್ರಗಳ ನೆನಪುಗಳು ಬರುವುದು ಬೇಕಿರಲಿಲ್ಲ! ಉಪೇಂದ್ರನ ವೇಷಭೂಷಣ ಕೂಡ ಅವರ ಅಭಿನಯದ ರೀಮೇಕ್ ಚಿತ್ರ ‘ಬುದ್ಧಿವಂತ’ನನ್ನು ನೆನಪಿಸುತ್ತದೆ. ಉಪೇಂದ್ರ ಎಂಬ ನಿರ್ದೇಶಕನ ಬತ್ತಳಿಕೆ ನಿಧಾನಕ್ಕೆ ಖಾಲಿಯಾಗುತ್ತಿರುವ ಸೂಚನೆಯಾ? ಚಿತ್ರದ ಶುರುವಿನಲ್ಲಿ ಹೊಸ ಹೊಸ ಕೋನಗಳಿಂದ ಗಮನ ಸೆಳೆಯುವ ಛಾಯಾಗ್ರಹಣ ನಂತರದಲ್ಲಿ ಮಾಮೂಲಿಯಾಗಿದೆ. ಹಾಡುಗಳನ್ನು ಕೇಳಬಹುದೇ ಹೊರತು ಮತ್ತೆ ಮತ್ತೆ ಗುನುಗುವಂತಿಲ್ಲ. ‘ಎಲ್ಲರ ಕಾಲೆಳೀತದೆ ಕಾಲ’ ಹಾಡು ಚಿತ್ರಕ್ಕೆ ಬೇಕಾಗಿಯೇ ಇರಲಿಲ್ಲ. ತನ್ನ ಶಕ್ತಿಯ ಬಗ್ಗೆ ಸ್ವತಃ ಅರಿವಿಲ್ಲದೇ ಹೊಸಬರನ್ನು ಹಳಬರನ್ನು ಆಡಿಕೊಳ್ಳುವ ಹಾಡು ಉಪ್ಪಿ2 ಚಿತ್ರಕ್ಕೆ ಬೇಕಿರಲಿಲ್ಲ. ಆ ಇಡೀ ಹಾಡನ್ನೇ ತೆಗೆದುಹಾಕಿದರೂ ಚಿತ್ರಕ್ಕೇನು ಅಡ್ಡಪರಿಣಾಮವಾಗುತ್ತಿರಲಿಲ್ಲ. ಹಿಮಾಲಯದ ಚಳಿಯಲ್ಲಿ ತುಂಡುಡುಗೆ ಧರಿಸುವ ಅಸಂಬದ್ಧಗಳೂ ಚಿತ್ರದಲ್ಲಿವೆ! ನಟನೆಯ ವಿಚಾರಕ್ಕೆ ಬಂದರೆ ಉಪೇಂದ್ರ, ಅಕೀವಾ ಕ್ರಿಷ್ಟೀನಾ, ಪಾರುಲ್, ಟೆನ್ನಿಸ್ ಕೃಷ್ಣ, ಶೋಭರಾಜ್, ನಾಸಿರ್ ಮತ್ತಿತರರು ಪಾತ್ರಕ್ಕೆ ಎಷ್ಟು ಬೇಕೋ ಅಷ್ಟು ಚೆನ್ನಾಗಿ ಮಾಡಿದ್ದಾರೆ. ಚಿತ್ರಕಥೆಯ ಗೊಂದಲಗಳು ಉಳಿದೆಲ್ಲಾ ವಿಷಯವನ್ನು ಮಬ್ಬು ಮಾಡಿಸಿಬಿಡುತ್ತದೆ ಎನ್ನುವುದು ಸತ್ಯ. ‘ಫಿಲ್ಮ್ ಚೆನ್ನಾಗಿದೆ ಏನು ಅರ್ಥಾನೇ ಆಗ್ಲಿಲ್ಲ’ ‘ಏನೋ ಹುಳಾ ಇದೆ ಅರ್ಥ ಆಗ್ತಿಲ್ಲ’ ಎನ್ನುವ ಮಾತುಗಳು ಚಿತ್ರ ನೋಡಿದವರದು! ಇಂಥದ್ದೇ ಒಂದು ಕಥೆಯಿದೆ, ತತ್ವವಿದೆ, ಸಿದ್ಧಾಂತವಿದೆ ಎಂದು ಹೇಳಲಾಗದ ಸಿನಿಮಾವಿದು. ಸಿನಿಮಾದಲ್ಲೇ ಹೇಳಿದಂತೆ ‘ಯೋಚ್ನೆ ಮಾಡ್ಬೇಡ’!

ಈ ಮೇಲಿನ ವಿಮರ್ಶೆಯನ್ನು ಓದಿದ ನಂತರ ನಿಮ್ಮಲ್ಲಿ ಗೊಂದಲ ಮೂಡಿದರೆ ಅದಕ್ಕೆ ‘ನೀನು’ ಕಾರಣವೇ ಹೊರತು ನಾನಲ್ಲ!

Uppi2, kannada film directed by Upendra revolves around Past, Present and Future ideas of a person.