ಆಗ 27, 2017

ಕೃಷಿ-ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಶಿಕ್ಷಣಸಂಸ್ಥೆಗಳ ಪ್ರವೇಶ ಬೇಡ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಕೃಷಿಕ್ಷೇತ್ರ ತೀವ್ರವಾದ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ ಸದರಿ ಬಿಕ್ಕಟ್ಟುಗಳಿಗೆ ಕಾರಣವಾದ ಅಂಶಗಳನ್ನು ವೈಜ್ಞಾನಿಕವಾಗಿ ಅದ್ಯಯನ ಮಾಡಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಾದ ಸರಕಾರಗಳು ತಮ್ಮ ಖಾಸಗೀಕರಣದ ನೀತಿಯನ್ನುಕೃಷಿಕ್ಷೇತ್ರಕ್ಕೂ ಅನ್ವಯಿಸುವ ಭರದಲ್ಲಿ, ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಲು ಹೊರಟಿರುವಂತೆ ಕಾಣುತ್ತಿದೆ. ಇದುವರೆಗೂ ಸರಕಾರದ ಉನ್ನತ ಶಿಕ್ಷಣ ಸಂಸ್ಥೆಗಳು ನೀಡುತ್ತಿದ್ದ ಕೃಷಿ ಶಿಕ್ಷಣವನ್ನು ನೀಡುವ ಕಾಲೇಜುಗಳನ್ನು ಪ್ರಾರಂಭಿಸಲು ಖಾಸಗಿ ಕ್ಯಾಪಿಟೇಶನ್ ಕುಳಗಳಿಗೆ ಅನುಮತಿ ನೀಡುವಬಗ್ಗೆ ಚಿಂತನೆ ನಡೆಸುತ್ತಿದೆ. ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಶಿಕ್ಷಣ ಈಗಾಗಲೆ ಬಡವರ ಕೈಗೆಟುಕದಷ್ಟು ದುಬಾರಿಯಾಗಿರುವಾಗ ಬಹುತೇಕ ಗ್ರಾಮೀಣ ಭಾಗದ ರೈತರ ಮಕ್ಕಳು ಕಡಿಮೆವೆಚ್ಚದಲ್ಲಿ ಪಡೆಯುತ್ತಿದ್ದ ಕೃಷಿಸಂಬಂದಿತ ಶಿಕ್ಷಣವೂ ಈಗ ಅದೇ ಸಾಲಿಗೆ ಸೇರುವತ್ತ ಸಾಗಿದೆ.

ಆಗ 10, 2016

ಹಿವ್ರೆ ಬಜಾರ್ ಗ್ರಾಮ - ಮಳೆನೆರಳಿನ ಗ್ರಾಮಗಳಿಗೆ ಒಂದು ಮಾದರಿ

ಹಿವ್ರೆ ಬಜಾರಿನಲ್ಲಿರುವ ಇಂಗುಗುಂಡಿ
ಆನಂದ ಪ್ರಸಾದ್
10/08/2016
ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ಒಂದು ಗ್ರಾಮ ಹಿವ್ರೆ ಬಜಾರ್. ಇಲ್ಲಿ ಬೀಳುವ ಮಳೆಯ ಪ್ರಮಾಣ ವಾರ್ಷಿಕ 300-400 ಮಿ. ಮೀ. ಇಷ್ಟು ಕಡಿಮೆ ಪ್ರಮಾಣದ ಮಳೆಯನ್ನು ಪಡೆದರೂ ಈ ಗ್ರಾಮ ಈ ವರ್ಷದ ಭೀಕರ ಬರಗಾಲದಲ್ಲಿಯೂ ಕುಡಿಯುವ ನೀರಿಗಾಗಿ ಟ್ಯಾಂಕರ್ ನೀರನ್ನು ಅವಲಂಬಿಸಲಿಲ್ಲ. ಈ ಪವಾಡ ಸಾಧ್ಯವಾದದ್ದು ಮಳೆ ನೀರಿನ ಕೊಯ್ಲು ಹಾಗೂ ಸಮರ್ಪಕ ಬೆಳೆ ಪದ್ಧತಿ ಅಳವಡಿಸಿಕೊಂಡಿರುವುದರಿಂದ. ಇಲ್ಲಿ ಪ್ರತಿ ವರ್ಷ ಡಿಸೆಂಬರ್ 31ರಂದು ಆ ವರ್ಷದ ಮಳೆಯ ಪ್ರಮಾಣ ಹಾಗೂ ನೀರಿನ ಲಭ್ಯತೆಯನ್ನು ಪರಾಮರ್ಶಿಸಲು ಗ್ರಾಮಸ್ಥರ ಸಭೆ ನಡೆಸಲಾಗುತ್ತದೆ. ಕಳೆದ ವರ್ಷ ಇಂಥ ಸಭೆಯಲ್ಲಿ ಬರಗಾಲದ ಪರಿಸ್ಥಿತಿಯನ್ನು ಮನಗಂಡು ಮುಂದಿನ ಮಳೆಗಾಲದವರೆಗೆ ಯಾವುದೇ ಬೆಳೆಯನ್ನು ಬೆಳೆಯದೇ ಇರುವ ತೀರ್ಮಾನ ತೆಗೆದುಕೊಳ್ಳಲಾಯಿತು. ಇದರಿಂದಾಗಿಯೇ ಇಡೀ ಔರಂಗಾಬಾದ್ ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರತೆ ಆದರೂ ಹಿವ್ರೆ ಬಜಾರ್ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಆಗಲಿಲ್ಲ. ಈ ಗ್ರಾಮದಲ್ಲಿ ಕೊಳವೆ ಬಾವಿ ಕೊರೆಯುವುದನ್ನು ನಿಷೇಧಿಸಲಾಗಿದೆ. ಹೀಗಾಗಿ 20ರಿಂದ 40 ಆಳದಲ್ಲಿ ತೆರೆದ ಬಾವಿಗಳಲ್ಲಿ ಬರಗಾಲದಲ್ಲಿಯೂ ಕುಡಿಯುವ ನೀರು ಲಭ್ಯ.

ಈ ಹಿವ್ರೆ ಬಜಾರ್ ಗ್ರಾಮದಲ್ಲಿ ಇಂಥ ಪವಾಡ ನಡೆಸಿದ ರೂವಾರಿ ಪೋಪಟ್ ರಾವ್ ಪವಾರ್. ಇವರ ಮುತುವರ್ಜಿ ಹಾಗೂ ಮಾರ್ಗದರ್ಶನದಿಂದ 20 ವರ್ಷಗಳ ಅವಧಿಯಲ್ಲಿ ಒಣಗಿ ಬೆಂಗಾಡಾಗಿದ್ದ ಹಿವ್ರೆ ಬಜಾರ್ ನಂದನವನವಾಗಿ ಹಸುರಿನಿಂದ ತುಂಬಿ ಕಂಗೊಳಿಸುತ್ತಿದೆ. ಹಿವ್ರೆ ಬಜಾರ್ ಇಂದು ಇಡೀ ದೇಶದಲ್ಲಿಯೇ ಇಂದು ಮಾದರಿ ಗ್ರಾಮವಾಗಿ ಗುರುತಿಸಿಕೊಂಡಿದೆ ಹಾಗೂ ಗಾಂಧೀಜಿಯವರ ಗ್ರಾಮ ಸ್ವರಾಜ್ಯವನ್ನು ನನಸಾಗಿಸಿದೆ. ಇಂದು ಹಿವ್ರೆ ಬಜಾರ್ ಗ್ರಾಮದಲ್ಲಿ 60 ಜನ ಮಿಲಿಯಾಧೀಶ್ವರ ರೈತರು ಇದ್ದಾರೆ. 1994ಕ್ಕೂ ಮೊದಲು ಈ ಗ್ರಾಮ ಬರಗಾಲ ಹಾಗೂ ನೀರಿನ ಕೊರತೆಯಿಂದ ಬಳಲಿ ಜನ ಕೆಲಸ ಅರಸಿ ನಗರಗಳಿಗೆ ಹೋಗುತ್ತಿದ್ದರು. ಹಾಗೆ ವಲಸೆ ಹೋದ ಸಾಕಷ್ಟು ಮಂದಿ ಇಂದು ನಗರಗಳಿಂದ ವಾಪಸ್ ಬಂದು ಗ್ರಾಮದಲ್ಲಿ ನೆಲೆಸಿದ್ದಾರೆ. ಪೋಪಟ್ ರಾವ್ ಅವರು ನಗರದಲ್ಲಿ ವಾಣಿಜ್ಯ ಸ್ನಾತಕೋತ್ತರ ಪದವಿ ಪಡೆದರೂ ನಗರ ಜೀವನದ ಆರಾಮ ಬದುಕಿನ ಸಾಧ್ಯತೆ ಇದ್ದರೂ ಮರಳಿ ಗ್ರಾಮಕ್ಕೆ ಬಂದು ಇಡೀ ಗ್ರಾಮದ ಚಿತ್ರಣವನ್ನೇ ಬದಲಿಸಿದರು. ಸರಕಾರಿ ಯೋಜನೆಯನ್ನು ಉಪಯೋಗಿಸಿಕೊಂಡು ಹಾಗೂ ಗ್ರಾಮಸ್ಥರ ಶ್ರಮದಾನದ ಮೂಲಕ ಗ್ರಾಮದಲ್ಲಿ ೪೦,೦೦೦ ಮಳೆ ನೀರು ತಡೆ ಹಿಡಿಯುವ ಕಣಿ ಹಾಗೂ ಬದುಗಳನ್ನು ನಿರ್ಮಿಸಲು ಮುಂದಾಳತ್ವ ವಹಿಸಿದರು. ಗ್ರಾಮದಲ್ಲಿ 10 ಲಕ್ಷಕ್ಕೂ ಅಧಿಕ ಮರಗಳನ್ನು ಬೆಳೆಸಿದರು. ಮಳೆನೀರು ತಡೆಹಿಡಿದು ನೀರಿಂಗಿಸುವ ತಡೆಗಟ್ಟ, ಇಂಗು ಗುಂಡಿ, ಕೆರೆಗಳ ಹೂಳೆತ್ತಿ ನೀರು ನಿಲ್ಲುವಂತೆ ಮಾಡಿ ಅಂತರ್ಜಲ ಹೆಚ್ಚುವಂತೆ ಮಾಡಿದರು. ಇದರ ಪರಿಣಾಮಾವಾಗಿ ಮೊದಲು ಬಹಳ ಆಳದಲ್ಲಿದ್ದ ನೀರಿನ ಮಟ್ಟ 15-20 ಅಡಿಗೆ ಏರಿತು. ಗ್ರಾಮದಲ್ಲಿ ಹೆಚ್ಚು ನೀರು ಬೇಡುವ ಭತ್ತ, ಬಾಳೆ, ಕಬ್ಬು ಮೊದಲಾದ ಬೆಳೆ ಬೆಳೆಯುವುದನ್ನು ನಿಷೇಧಿಸಿದರು. ಕಡಿಮೆ ನೀರು ಬಳಸಿ ಅಥವಾ ಹನಿ ನೀರಾವರಿ ಬಳಸಿ ಬೆಳೆಯುವ ಜೋಳ, ಬಾಜ್ರಾ, ನೀರುಳ್ಳಿ, ದ್ವಿದಳ ಧಾನ್ಯಗಳು, ಹೂವು, ಹಣ್ಣು, ತರಕಾರಿ ಬೆಳೆಗಳನ್ನು ಬೆಳೆಯುವ ಯೋಜನೆ ರೂಪಿಸಿ ಗ್ರಾಮಸ್ಥರ ಆದಾಯ ಹೆಚ್ಚುವಂತೆ ಮಾಡಿದರು. ಜೊತೆಗೇ ಹೈನುಗಾರಿಕೆ ಅಭಿವೃದ್ಧಿಪಡಿಸಿ ಇಂದು ಗ್ರಾಮದಲ್ಲಿ ಬರಗಾಲದ ಪರಿಸ್ಥಿತಿಯಲ್ಲಿಯೂ ದೈನಿಕ 4000 ಲೀ. ಹಾಲು ಉತ್ಪಾದನೆ ಆಗುವಂತೆ ಆಗಿದೆ. ಹೈನುಗಾರಿಕೆಗೆ ಬೇಕಾಗುವ ಹುಲ್ಲು ಗ್ರಾಮದಲ್ಲಿಯೇ ಉತ್ಪಾದನೆಯಾಗುತ್ತದೆ.

ಇಷ್ಟೆಲ್ಲಾ ಆಗಿರುವುದು ಕೇವಲ 300-400 ಮಿ. ಮೀ. ವಾರ್ಷಿಕ ಮಳೆಯ ನೀರನ್ನು ಇಂಗಿಸಿ ತೆರೆದ ಬಾವಿ, ಕೆರೆಗಳಲ್ಲಿ ಲಭ್ಯವಾಗುವ ನೀರಿನಿಂದ ಮಾತ್ರವೇ ಹೊರತು ಯಾವುದೇ ಅಣೆಕಟ್ಟಿನ ನೀರು ಅಥವಾ ಕಾಲುವೆಗಳ ನೀರಿನಿಂದ ಅಥವಾ ಕೊಳವೆ ಬಾವಿ ನೀರಿನಿಂದ ಅಲ್ಲ. ಇದನ್ನೆಲ್ಲ ಸಾಧಿಸಲು ಪೋಪಟ್ ರಾವ್ ಪವಾರ್ ಅವರಿಗೆ ಸ್ಫೂರ್ತಿ ಹಾಗೂ ಮಾದರಿ ಹಿವ್ರೆ ಬಜಾರ್ ಗ್ರಾಮದಿಂದ 35 ಕಿ.ಮೀ. ದೂರದಲ್ಲಿರುವ ಅಣ್ಣಾ ಹಜಾರೆಯವರ ರಾಲೇಗಾವ್ ಸಿದ್ಧಿ ಗ್ರಾಮದಲ್ಲಿ ಅವರು ನೀರಿಂಗಿಸುವಿಕೆ ಹಾಗೂ ಮರ ಬೆಳೆಸಿ ಸಾಧಿಸಿದ ಯಶಸ್ಸು. ಕರ್ನಾಟಕದಲ್ಲಿ ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಇರುವ ತಡೆ, ನೀರಿಗಾಗಿ ಹೋರಾಟ, ನ್ಯಾಯಾಧಿಕರಣದ ಕರ್ನಾಟಕಕ್ಕೆ ಅನುಕೂಲಕರವಲ್ಲದ ಮಧ್ಯಂತರ ತೀರ್ಪು, ಎತ್ತಿನ ಹೊಳೆ ಯೋಜನೆಗಾಗಿ ನಡೆಯುತ್ತಿರುವ ಹೋರಾಟ, ಅದಕ್ಕಾಗಿ ವೆಚ್ಚವಾಗುವ ಅಪಾರ ಹಣ ಇವುಗಳನ್ನೆಲ್ಲ ನೋಡಿದಾಗ ನಮ್ಮ ರಾಜ್ಯದ ಮಳೆ ಕಡಿಮೆ ಬೀಳುವ ಹಾಗೂ ಆಣೆಕಟ್ಟು ಹಾಗೂ ಕಾಲುವೆ ನೀರು ಲಭ್ಯವಿಲ್ಲದ ಪ್ರದೇಶಗಳಿಗೆ ಮಹಾರಾಷ್ಟ್ರದ ರಾಲೇಗಾವ್ ಸಿದ್ಧಿ ಹಾಗೂ ಹಿವ್ರೆ ಬಜಾರ್ ಗ್ರಾಮಗಳು 300-500 ಮೀ.ಮೀ. ವಾರ್ಷಿಕ ಮಳೆಯನ್ನು ಪಡೆದೂ ನೀರಿನ ಮಿತವ್ಯಯ ಹಾಗೂ ಮರ ಬೆಳೆಸಿ ಸಾಧಿಸಿದ ಯಶಸ್ಸು ಮಾದರಿಯೆನಿಸುತ್ತದೆ. ಏಕೆಂದರೆ ಕರ್ನಾಟಕದಲ್ಲಿ 500 ಮಿ.ಮೀ.ಗಿಂಥ ಕಡಿಮೆ ಮಳೆಯಾಗುವ ಜಿಲ್ಲೆಗಳು ಇಲ್ಲ (ಬರಗಾಲದ ವರ್ಷಗಳನ್ನು ಹೊರತುಪಡಿಸಿ).

ರಾಲೇಗಾವ್ ಸಿದ್ಧಿ ಹಾಗೂ ಹಿವ್ರೆ ಬಜಾರ್ ಗ್ರಾಮಗಳಲ್ಲಿ ನಡೆದ ಮಳೆ ನೀರಿಂಗಿಸುವ ಹಾಗೂ ಹಸುರು ಬೆಳೆಸುವ ಯೋಜನೆಯನ್ನು ಅನುಸರಿಸಲು ಕೋಟ್ಯಂತರ ರೂಪಾಯಿಗಳ ಅಗತ್ಯವಿಲ್ಲ. ಸರಕಾರದ ಯೋಜನೆಗಳನ್ನು ಬಳಸಿಕೊಂಡು ಮತ್ತು ಗ್ರಾಮೀಣ ಜನರ ಶ್ರಮದಾನದಿಂದ ಇಂಥ ಯೋಜನೆಗಳನ್ನು ಗ್ರಾಮಸ್ಥರೇ ನಡೆಸಲು ಸಾಧ್ಯವಿದೆ. ನೂರಾರು ಅಥವಾ ಸಾವಿರಾರು ಕೋಟಿ ರೂಪಾಯಿಗಳ ಯೋಜನೆ ಮುಗಿಯಲು ಹಲವಾರು ವರ್ಷಗಳನ್ನೇ ತೆಗೆದುಕೊಳ್ಳುವ ಕಾಮಗಾರಿಗಳ ಬದಲು ಅಥವಾ ನ್ಯಾಯಾಧಿಕರಣದ ತೀರ್ಪಿಗಾಗಿ ಕಾಯುತ್ತಾ ಹಲವಾರು ವರ್ಷಗಳನ್ನೇ ವ್ಯರ್ಥ ಮಾಡುವ ಬದಲು ಹಿವ್ರೆ ಬಜಾರ್ ಗ್ರಾಮದ ಯಶಸ್ಸನ್ನು ನಮ್ಮ ರಾಜ್ಯದ ಮಳೆ ಕಡಿಮೆ ಬೀಳುವ ಪ್ರದೇಶಗಳಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿದೆ. ಇದಕ್ಕಾಗಿ ನಮ್ಮ ರೈತ ಸಂಘಟನೆಗಳು, ಕನ್ನಡ ಸಂಘಟನೆಗಳು ಜನರಲ್ಲಿ ಅರಿವನ್ನು ಮೂಡಿಸುವ ಅಗತ್ಯ ಇದೆ. ನಮ್ಮ ಮಾಧ್ಯಮಗಳು ಈ ವಿಚಾರವಾಗಿ ನಿರಂತರವಾಗಿ ಜಾಗೃತಿ ರೂಪಿಸುವ ಅಗತ್ಯ ಇದೆ.

ಆಗ 4, 2016

ರೈತರ ಆತ್ಮಹತ್ಯೆಯ ನೈಜ ಕಾರಣಗಳು ಮತ್ತು ಪರಿಹಾರಗಳು

ಸಾಂದರ್ಭಿಕ ಚಿತ್ರ
ಕು.ಸ.ಮಧುಸೂದನನಾಯರ್
04/08/2016
ನಮ್ಮ ಶಾಲಾಕಾಲೇಜುಗಳ ಪಠ್ಯಪುಸ್ತಕಗಳಿಂದ ಹಿಡಿದು, ಕತೆ ಕಾದಂಬರಿಗಳ ಯಾವುದೇ ಪುಸ್ತಕಗಳನ್ನು ತೆರೆದು ನೋಡಿದರೂ ನಿಮಗೆ ಮೊದಲಿಗೆ ಕಂಡು ಬರುವುದು, ಇಂಡಿಯಾ ಒಂದು ಕೃಷಿ ಪ್ರಧಾನ ರಾಷ್ಟ್ರವೆಂಬ ಹಳಸಲು ಮಾತೇ! ಅದನ್ನೇನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆಯೋ ಇಲ್ಲ ವಿಷಾದದಿಂದ ಹೇಳಿಕೊಳ್ಳುತ್ತೇವೆಯೊ ನನಗಂತು ತಿಳಿದಿಲ್ಲ. ಆದರೆ ಇತ್ತೀಚೆಗೆ ಯಾವತ್ತಿಗಾದರು ನಮ್ಮದು ಕೃಷಿ ಪ್ರಧಾನ ದೇಶವೆಂದು ಹೇಳಿಕೊಳ್ಳುವ ಸಂದರ್ಭ ಬಂದಾಗೆಲ್ಲ ನಾನು ವಿಷಾದ ಮತ್ತು ನೋವನ್ನು ಅನುಭವಿಸುತ್ತೇನೆ. ಅಂಕಿಸಂಖ್ಯೆಗಳ ದೃಷ್ಠಿಯಿಂದ ಇದು ನಿಜವೂ ಹೌದು: ಇವತ್ತಿಗೂ ಇಂಡಿಯಾದ ಪ್ರತಿಶತ ಶೇಕಡಾ 68ಕ್ಕಿಂತ ಹೆಚ್ಚು ಜನ ತಮ್ಮ ಜೀವನೋಪಾಯಕ್ಕೆ ಕೃಷಿಯನ್ನೇ ಅವಲಂಬಿಸಿದ್ದಾರೆ. ತೊಂಭತ್ತರ ದಶಕದ ಜಾಗತೀಕರಣದ ನಂತರ ದೇಶದಲ್ಲಿ ಕೈಗಾರಿಕೋದ್ಯಮಗಳು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದರೂ ಅವುಗಳು ತಮ್ಮ ಸರಕು ಸೇವೆಗಳನ್ನು ಗುರಿಯಾಗಿಸಿಕೊಂಡಿರುವುದು ಈ ಶೇಕಡಾ 68 ಮಂದಿಯನ್ನೇ.

ಸ್ವಾತಂತ್ರ ಸಿಕ್ಕ ನಂತರದ ಪಂಚವಾರ್ಷಿಕ ಯೋಜನೆಗಳ ಮುಖ್ಯ ಆಧ್ಯತಾ ಕ್ಷೇತ್ರ ಕೃಷಿಯಾಗಿದ್ದು, ಹಸಿರು ಕ್ರಾಂತಿಯ ದುಷ್ಪರಿಣಾಮಗಳೇನೇ ಇದ್ದರು ದೇಶ ಆಹಾರ ಸ್ವಾವಲಂಬನೆ ಸಾಧಿಸಲು ಸಾದ್ಯವಾಯಿತು. ಆದರೆ ಆ ಆಹಾರವನ್ನು ಉತ್ಪಾದಿಸುವ ರೈತನ ಬದುಕು ಸ್ವಾವಲಂಬನತೆಯತ್ತ ಸಾಗಿತೇ ಎಂದು ಕೇಳಿದರೆ ಸಿಗುವ ಉತ್ತರ: ಇಲ್ಲ! ನಂತರದ ದಶಕಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಒಂದಿಷ್ಟು ಬದಲಾವಣೆಗಳಾಗಿ ಆಧುನಿಕ ಯಂತ್ರಗಳ ಪ್ರವೇಶವಾದರೂ ಅದು ದೊಡ್ಡ ರೈತರಿಗೆ ಮಾತ್ರ ಸೀಮಿತವಾಗಿತ್ತು. ಬದಲಿಗೆ 1990ರ ನಂತರ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗ ತೊಡಗಿದವು. ಇತ್ತೀಚೆಗಂತು ಇದು ಸರಣಿ ಆತ್ಮಹತ್ಯೆಗಳ ದಾರಿಯನ್ನು ಹಿಡಿಯಿತು. ಈ ನಿಟ್ಟಿನಲ್ಲಿ ನಾವು ನಮ್ಮ ರೈತರ ಆತ್ಮಹತ್ಯೆಗಳಿಗಿರಬಹುದಾದ ಕಾರಣಗಳನ್ನೂ, ಕಂಡುಕೊಳ್ಳಬಹುದಾದ ಪರಿಹಾರ ಕ್ರಮಗಳ ಬಗ್ಗೆಯೂ ಒಂದಷ್ಟು ಗಂಬೀರವಾಗಿ ಚಿಂತಿಸಬೇಕಾದುದು ಅನಿವಾರ್ಯವೆನಿಸುತ್ತದೆ:

1.ನೀರಾವರಿ ಸೌಲಭ್ಯಗಳ ಕೊರತೆ:

ಸಾಂದರ್ಭಿಕ ಚಿತ್ರ
ನಾವು ಕೃಷಿಗೆ ನಿಜವಾಗಿಯೂ ಆಧ್ಯತೆ ನೀಡುವುದೇ ಆಗಿದ್ದರೆ ನಮ್ಮ ಮೊದಲ ಆಧ್ಯತೆಯಾಗಬೇಕಿದ್ದುದು ನೀರಾವರಿ ವ್ಯವಸ್ಥೆಯನ್ನು ಕಲ್ಪಿಸುವುದಾಗಿತ್ತು. 

ಈ ನಿಟ್ಟಿನಲ್ಲಿ ನಮ್ಮ ಪಂಚವಾರ್ಷಿಕ ಯೋಜನೆಗಳು ಹೆಜ್ಜೆ ಇಟ್ಟರೂ ಅದು ಕೂಡ ಇನ್ನೊಂದು ತಪ್ಪು ಹೆಜ್ಜೆಯಾಗಿತ್ತು. ಕೃಷಿಗೆ ನೀರಾವರಿ ಕಲ್ಪಿಸುವುದೆಂದರೆ ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸುವುದು ಮಾತ್ರವೆಂದು ನಂಬಿಕೊಂಡಿದ್ದ ಅವತ್ತಿನ ರಾಜಕಾರಣಿಗಳು, ಯೋಜನಾ ತಜ್ಞರುಗಳು ಬಾರೀ ಅಣೆಕಟ್ಟುಗಳನ್ನು ನಿರ್ಮಿಸಿ ಕೈ ಬಿಟ್ಟರು. ಅವರುಗಳಿಗೆ ಸಣ್ಣ ನೀರಾವರಿ ಯೋಜನೆಗಳಾದ ಚೆಕ್ ಡ್ಯಾಂ ನಿರ್ಮಾಣ, ಹನಿ ನೀರಾವರಿ, ಏತ ನೀರಾವರಿ, ಕೆರೆಗಳ ಕಾಯಕಲ್ಪದಂತಹ ವಿಷಯಗಳು ಮುಖ್ಯವೆನಿಸಲೇ ಇಲ್ಲ. ಯಾಕೆಂದರೆ ಗುತ್ತಿಗೆದಾರರಿಗೆ ಮತ್ತು ರಾಜಕಾರಣಿಗಳಿಗೆ ಬಾರೀ ಯೋಜನೆಗಳು ತಂದು ಕೊಡುವ ಲಾಭದ ಪ್ರಮಾಣದ ಮುಂದೆ ಸಣ್ಣಪುಟ್ಟ ಯೋಜನೆಗಳು ನಿರುಪಯುಕ್ತವೆನಿಸಿದ್ದವು. ಹೀಗಾಗಿ ಬಾರೀ ನೀರಾವರಿ ಯೋಜನೆಗಳ ನಂತರವೂ ದೇಶದ ಶೇಕಡಾ 60 ಕ್ಕಿಂತ ಹೆಚ್ಚು ಕೃಷಿಭೂಮಿ ಮಳೆಯನ್ನೇ ಅವಲಂಬಿಸಿ ನಡೆಯಬೇಕಾಯಿತು. ಕಳೆದ ಮೂವತ್ತು ವರ್ಷಗಳಲ್ಲಿ ಮಳೆಯೆನ್ನುವುದು ಅದೃಷ್ಟದಾಟವಾದಂತಾಗಿದೆ. ಬದಲಾಗುತ್ತಿರುವ ಭೂಮಿಯ ಉಷ್ಣಾಂಶ, ಪರಿಸರದಲ್ಲಾಗುತ್ತಿರುವ ಏರುಪೇರುಗಳು ಮಳೆ ಬರುವ ಸಮಯ ಮತ್ತು ಪ್ರಮಾಣವನ್ನು ನಿಶ್ಚಯಿಸುವಂತಾಗಿ, ಒಂದು ವರ್ಷ ತೀವ್ರ ಅತಿವೃಷ್ಠಿಯಾದರೆ, ಇನ್ನೊಂದು ವರ್ಷ ತೀವ್ರ ಅನಾವೃಷ್ಠಿ ತಲೆದೋರುತ್ತಿದೆ. ಮಳೆಯನ್ನು ನಂಬಿ ಕೃಷಿ ಮಾಡುತ್ತಿರುವ ರೈತನಿಗೆ ಇದು ಬಹಳ ಮುಖ್ಯವಾದ ಸಮಸ್ಯೆಯಾಗಿದೆ. ಅದರಲ್ಲೂ ಕೃಷಿಯೇ ಬಹುಮುಖ್ಯ ಕಸುಬಾಗಿರುವ ಮದ್ಯಭಾರತದಲ್ಲಂತು ನೀರಾವರಿಯ ಸಮಸ್ಯೆ ತೀವ್ರವಾಗಿದೆ. ಇದರಿಂದಾಗಿ ನಿಗದಿತ ಸಮಯದಲ್ಲಿ ಬಿತ್ತನೆ ಮಾಡಲಾಗದೆ, ಸರಿಯಾದ ಸಮಯದಲ್ಲಿ ಕಟಾವು ಮಾಡಲಾಗದೆ ರೈತ ತೀವ್ರ ಸಂಕಷ್ಟಕ್ಕೀಡಾಗುತ್ತಿದ್ದಾನೆ.

ಪರಿಹಾರ:

ಮಳೆಯ ವಿಚಾರದಲ್ಲಿ ಮಾನವ ಅಸಹಾಯಕನಾಗಿದ್ದು ಬೀಳುವ ಮಳೆಯ ನೀರನ್ನು ಸಂಗ್ರಹಿಸಿಟ್ಟುಕೊಂಡು ಬೇಕಾದಾಗ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವುದನ್ನೇ ನಾವು ಕೃಷಿ ನೀರಾವರಿ ಎನ್ನುತ್ತೇವೆ. ನಾನು ಮೊದಲಿಗೆ ಹೇಳಿದಂತೆ ಇಂಡಿಯಾದಂತಹ ವಿಶಾಲವಾದ ಕೃಷಿ ದೇಶದಲ್ಲಿ ಬಾರೀ ನೀರಾವರಿ ಯೋಜನೆಗಳು ಉಪಯೋಗಕ್ಕೆ ಬರುವುದಿಲ್ಲ. ಈಗಾಗಲೇ ಕಟ್ಟಲಾಗಿರುವ ದೊಡ್ಡ ಅಣೆಕಟ್ಟುಗಳ ಅನೇಕ ಕಾಲುವೆಗಳ ಕೊನೆಯವರೆಗು ನೀರು ತಲುಪದಿರುವುದನ್ನು ನಾವು ಗಮನಿಸುತ್ತಿದ್ದೇವೆ. ಹಾಗಾಗಿ ಸಣ್ಣ ನೀರಾವರಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದೊಂದೆ ನಮಗಿರುವ ದಾರಿ. ನದಿಗಳಿಗೆ ಸಣ್ಣಸಣ್ಣ ಚೆಕ್ ಡ್ಯಾಂಗಳನ್ನು ಕಟ್ಟುವುದು, ಏತ ನೀರಾವರಿ, ಹನಿ ನೀರಾವರಿಯಂತಹ ಯೋಜನೆಗಳನ್ನು ಜಾರಿಗೆ ತರುವುದು, ಕೆರೆಗಳಲ್ಲಿ ಹೂಳು ತೆಗೆದು ಅವುಗಳಲ್ಲಿ ಸಾಕಷ್ಟು ನೀರು ಸಂಗ್ರಹಿಸಿ ಕೆರೆ ಅಚ್ಚುಕಟ್ಟು ಪ್ರದೇಶಗಳನ್ನು ಗುರುತಿಸಿ ಅವು ಒತ್ತುವರಿಯಾಗದಂತೆ ನೋಡಿಕೊಳ್ಳುವುದನ್ನು ಮಾಡಬೇಕಾಗಿದೆ. ಇದರ ಜೊತೆಗೆ ಮಳೆ ನೀರು ಸಂಗ್ರಹಿಸುವ ವೈಜ್ಞಾನಿಕ ವಿಧಾನಗಳ ಬಗ್ಗೆ ರೈತರಿಗೆ ಶಿಕ್ಷಣ ನೀಡಬೇಕು. ಪ್ರತಿ ಹಳ್ಳಿಗಳಲ್ಲಿಯೂ ಸಾಮಾಜಿಕ ಅರಣ್ಯಗಳನ್ನು ಬೆಳೆಸುವುದು( ಈಗ ಇರುವ ಈ ಯೋಜನೆಯಲ್ಲಿ ಅರಣ್ಯ ಇಲಾಖೆಯವರು ಕೇವಲ ನೀಲಗಿರಿ ಅಕೇಶಿಯಾಗಳನ್ನು ಬೆಳೆಸಿ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತಿರುವುದನ್ನು ತಡೆಯಬೇಕಾಗಿದೆ)

2. ಗುಣಮಟ್ಟದ ಬೀಜ, ಗೊಬ್ಬರ, ನ್ಯಾಯಯುತ ಬೆಲೆಯಲ್ಲಿ ಲಭ್ಯವಾಗದೇ ಇರುವುದು:

ಸಾಂದರ್ಭಿಕ ಚಿತ್ರ
ನೀರಾವರಿಯ ನಂತರದಲ್ಲಿ ನಮ್ಮ ರೈತರು ಎದುರಿಸುತ್ತಿರುವ ಬಹುಮುಖ್ಯವಾದ ಸಮಸ್ಯೆಯೆಂದರೆ ಉತ್ತಮ ಗುಣಮಟ್ಟದ ಬೀಜ ಮತ್ತು ಗೊಬ್ಬರಗಳು ನಿಗದಿತ ಸಮಯಕ್ಕೆ ದೊರೆಯದೆ ಇರುವುದಾಗಿದೆ. ಇವತ್ತು ದೇಶದಲ್ಲಿ ಹಲವಾರು ಬೀಜೋತ್ಪಾದನೆಯ ಕಂಪನಿಗಳಿದ್ದು ಅವು ಒಳ್ಳೆಯ ಬೀಜಗಳನ್ನು ಸರಬರಾಜು ಮಾಡುವ ಯಾವ ಭರವಸೆಯೂ ಇಲ್ಲದಂತಾಗಿದೆ ಉತ್ತರ ಕರ್ನಾಟಕದಲ್ಲಿ ಕಳಪೆ ಬೀಜಗಳಿಂದಲೇ ನೂರಾರು ರೈತರು ಬೆಳೆನಷ್ಟ ಮಾಡಿಕೊಂಡು ಸಾಲಕ್ಕೆ ತುತ್ತಾಗಿರುವುದನ್ನು ನಾವು ಪ್ರತಿವರ್ಷವೂ ಕೇಳುತ್ತಿದ್ದೇವೆ. ನಮ್ಮ ಸರಕಾರಗಳು ಇಂತಹ ಬೀಜೋತ್ಪಾದಕ ಕಂಪನಿಗಳ ಮೇಲೆ ಯಾವ ನಿಯಂತ್ರಣವನ್ನು ಹೇರದೆ ಬೀಜ ಉತ್ಪಾದನೆಯಲ್ಲಿ ಯಾವ ಅನುಭವಗಳು ಇರದ ಕಂಪನಿಗಳೆಲ್ಲ ಬೀಜ ತಯಾರಿಸಿ ಬಾರಿ ಜಾಹಿರಾತುಗಳೊಂದಿಗೆ ಮಾರುಕಟ್ಟೆಗೆ ಬಿಡುತ್ತಿವೆ. ತೀರಾ ವಿದ್ಯಾವಂತರಲ್ಲದ ರೈತರು ಹಿಂದೆಮುಂದೆ ನೋಡದೆ ಇಂತಹ ಬೀಜಗಳನ್ನು ಖರೀದಿಸಿ ಮೂರ್ಖರಾಗುತ್ತಿದ್ದಾರೆ. ಅದೇ ರೀತಿ ಗೊಬ್ಬರದಲ್ಲೂ ಇತ್ತೀಚೆಗೆ ಗುಣಮಟ್ಟ ಕಡಿಮೆಯಾಗುತ್ತಿದೆ. ಇನ್ನೇನು ಬಿತ್ತನೆ ಮಾಡುವ ಸಮಯಕ್ಕೆ ಮಾರುಕಟ್ಟೆಯಲ್ಲಿ ಬೀಜಗಳ ಅಭಾವ ಸೃಷ್ಠಿಸುವ ಕಾಳಸಂತೇಕೋರರು ಹೆಚ್ಚಾಗಿದ್ದಾರೆ. ಬಿತ್ತನೆಗೆ ನೆಲ ಹದಗೊಳಿಸುವ ಕೆಲಸವನ್ನು ಬಿಟ್ಟು ರೈತ ಪೇಟೆಗಳಲ್ಲಿ ಬೀಜ ಮತ್ತು ಗೊಬ್ಬರಗಳಿಗಾಗಿ ದಿನಗಟ್ಟಲೆ ಅಲೆಯುವ ಸ್ಥಿತಿಯಿದೆ. ಇಂತಹ ಸನ್ನಿವೇಶದಲ್ಲಿ ವರ್ತಕರು ಒಂದಕ್ಕೆರಡು ಬೆಲೆಯಲ್ಲಿ ಕಾಳಸಂತೆಯ ದಂದೆ ನಡೆಸುವುದು ಸಾಮಾನ್ಯವಾಗಿ ಬಿಟ್ಟಿದೆ. ಇವನ್ನೆಲ್ಲ ನಿಯಂತ್ರಿಸಬೇಕಾದ ಸರಕಾರದ ಇಲಾಖೆಗಳು ಭ್ರಷ್ಟರಿಂದ ತುಂಬಿದ್ದು ಅವರ ತಿಜೋರಿಗಳು ಮಾತ್ರ ಭರ್ತಿಯಾಗುತ್ತಿವೆ.

ಪರಿಹಾರಗಳು:

ಸರಕಾರ ಬೀಜೋತ್ಪನ್ನ ಕಂಪನಿಗಳನ್ನು ನಿಯಂತ್ರಿಸುವ ಕಠಿಣ ಕಾನೂನುಗಳನ್ನು ಜಾರಿಗೊಳಿಸಬೇಕು. ಅಕಸ್ಮಾತ್ ಕಳಪೆ ಬೀಜಗಳಿಂದ ಬೆಳೆನಷ್ಟ ಉಂಟಾದರೆ ಸದರಿ ಕಂಪನಿಗಳೇ ರೈತರಿಗೆ ಪರಿಹಾರ ಕೊಡಬಲ್ಲಂತಹ ಕಾನೂನುಗಳನ್ನು ಜಾರಿಗೆ ತರಬೇಕು. ಇಲ್ಲದೇ ಹೋದಲ್ಲಿ ಬೀಜ ಮತ್ತು ಗೊಬ್ಬರ ತಯಾರಿಕೆಗಳನ್ನು ರಾಷ್ಟ್ರೀಕರಣಗೊಳಿಸಿ ತಾನೇ ನೇರವಾಗಿ ರೈತರಿಗೆ ಸುಲಭದರದಲ್ಲಿ ತಲುಪಿಸುವ ಹೊಸ ವ್ಯವಸ್ಥೆಯೊಂದನ್ನು ರೂಪಿಸಬೇಕು. ಯಾವ ಪ್ರದೇಶ ಯಾವ ಬೆಳೆಗೆ ಅನುಕೂಲಕರವಾಗಿದೆಯೊ ಅಂತಹ ಬೆಳೆಯ ಬೀಜಗಳನ್ನು ಆಯಾ ಪ್ರದೇಶಗಳಲ್ಲಿ ಸರಕಾರವೇ ಒದಗಿಸುವ ವ್ಯವಸ್ಥೆಯೊಂದನ್ನು ಮಾಡಿದರೆ ರೈತರು ಖಾಸಗಿಯವರಿಂದ ಮೋಸ ಹೋಗುವ ಸಂದರ್ಭಗಳು ಕಡಿಮೆಯಾಗುತ್ತವೆ. ಕೃಷಿಬಜೆಟ್ ಎನ್ನುವ ನಾಟಕ ಮಾಡುತ್ತ ಲಕ್ಷಾಂತರ ರೂಪಾಯಿಗಳನ್ನು ಕೃಷಿಗೆ ನೀಡಲಾಗಿದೆಯೆಂದು ಜನರನ್ನು ನಂಬಿಸಿ ಕತ್ತು ಕುಯ್ಯುವ ನೀತಿಯನ್ನು ಬಿಟ್ಟು ಇಂತಹ ಕ್ರಮಗಳನ್ನು ಕೈಗೊಂಡರೆ ಮಾತ್ರ ನಮ್ಮ ರೈತರಿಗೆ ಉತ್ತಮ ಬೀಜ, ಗುಣಮಟ್ಟದ ಗೊಬ್ಬರಗಳು ದೊರೆಯಬಲ್ಲವು.

3.ಬೆಳೆದ ಬೆಳೆಗೆ ಸಿಗದ ನ್ಯಾಯಯುತ ಬೆಲೆ:

ಬಹುಶ: ನಮ್ಮ ರೈತರು ನಿಜವಾಗಿಯೂ ಎದುರಿಸುತ್ತಿರುವ ಬೀಕರ ಸಮಸ್ಯೆ ಎಂದರೆ ಇದೇ ಇರಬೇಕು. ಮೇಲೆ ನಾನು ಹೇಳಿದ ಎಲ್ಲ ಸಮಸ್ಯೆಗಳನ್ನು ಎದುರಿಸಿಯೂ ಒಂದಷ್ಟು ಬೆಳೆ ಕೈಗೆ ಬಂದರೆ ಅದನ್ನು ಮಾರುವಲ್ಲಿ ಆತ ಎದುರಿಸಬೇಕಾದ ತೊಂದರೆಗಳು ಅಗಾಧ ಮತ್ತು ಕ್ರೂರವೆನ್ನಬಹುದು. ಯಾಕೆಂದರೆ ಒಬ್ಬ ಸಣ್ಣ ಉದ್ಯಮಿ ಕೂಡ ತಾನು ಉತ್ಪಾದಿಸಿದ ಉತ್ಪನ್ನಕ್ಕೆ ತಾನೇ ಬೆಲೆ ಕಟ್ಟುವ ಕಾನೂನು ಬದ್ದ ಅಧಿಕಾರ ಹೊಂದಿದ್ದಾನೆ. ಇಡೀ ದೇಶದಲ್ಲಿ ಇಂತಹದೊಂದು ಹಕ್ಕು ಇಲ್ಲದಿರುವುದು ನಮ್ಮ ರೈತನಿಗೆ ಮಾತ್ರ.. ರೈತನೊಬ್ಬ ತಾನು ಬೆಳೆದ ಬೆಳೆಗೆ ತಾನು ಖರ್ಚು ಮಾಡಿರುವ ಹಣವನ್ನು, ತಾನು ನೀಡಿದ ಶ್ರಮವನ್ನು ಲೆಕ್ಕ ಹಾಕಿ ಬೆಲೆ ನಿಗದಿಪಡಿಸುವಷ್ಟು ವಿದ್ಯಾವಂತನು ಬುದ್ದಿವಂತನೂ ಆಗಿಲ್ಲ. ಹೋಗಲಿ ಆಯಾ ಪ್ರದೇಶಗಳ ಕೃಷಿ ಅಧಿಕಾರಿಗಳಾದರು ಇದನ್ನು ಮಾಡುತ್ತಾರೆ ಎಂದರೆ ಇಲ್ಲ. ಉದಾಹರಣೆಗೆ ಕಬ್ಬಿನ ಬೆಲೆ ನಿಗದಿ ಮಾಡುವವರು ಸಕ್ಕರೆ ಕಾರ್ಖಾನೆಯವರು ಇಲ್ಲ ಆಲೆಮನೆಯವರು. ಇನ್ನು ಬತ್ತದ ಬೆಲೆ ನಿಗದಿ ಮಾಡುವವರು ರೈಸ್ ಮಿಲ್ ಮಾಲೀಕರು ಇಲ್ಲ ಬತ್ತದ ವ್ಯಾಪಾರಿಗಳು. ಹೀಗೆ ರೈತ ಬೆಳೆಯುವ ಎಲ್ಲ ಬೆಳೆಗಳ ಬೆಲೆಯನ್ನೂ ಯಾವುದೇ ಶ್ರಮ ಹಾಕದ ಬಿಳಿ ಬಟ್ಟೆಯ ವರ್ತಕರು ನಿಗದಿ ಮಾಡುವುದರಿಂದ ರೈತನಿಗೆ ದೊರೆಯಬೇಕಾದ ನ್ಯಾಯಯುತ ಬೆಲೆ ದೊರೆಯುತ್ತಿಲ್ಲ. ಇನ್ನು ಸರಕಾರ ರಚಿಸಿರುವ ರೆಗ್ಯುಲೇಟೆಡ್ ಮಾರುಕಟ್ಟೆಗಳ ಹಣೇಬರಹವೂ ಇದೇ ಆಗಿದೆ. ಅಲ್ಲಿ ಠಳಾಯಿಸುವ ಮದ್ಯವರ್ತಿಗಳು ರೈತರ ಬೆಳೆಗೆ ಕಡಿಮೆ ಬೆಲೆ ಕಟ್ಟಿ ಖರೀಧಿಸಿ ದುಪ್ಪಟ್ಟು ಲಾಭ ಮಾಡಿಕೊಳ್ಳುತ್ತಾರೆ. ಒಬ್ಬ ದಲ್ಲಾಳಿ ಕಟ್ಟಿದ ಬೆಲೆಯನ್ನು ಮೀರಿ ಇನ್ನೊಬ್ಬ ದಲ್ಲಾಳಿ ಬೆಲೆ ಕಟ್ಟುವುದಿಲ್ಲ. ಅಂತಹದೊಂದು ಮಾಫಿಯಾ ರಚಿಸಿಕೊಂಡಿರುವ ವರ್ತಕರು ಮತ್ತು ದಲ್ಲಾಳಿಗಳು ರೈತರನ್ನು ನಿರಂತರವಾಗಿ ಸುಲಿಗೆಗೆ ಒಳಪಡಿಸುತ್ತಿದ್ದಾರೆ. ಹೀಗೆ ತಾನು ಕಷ್ಟಪಟ್ಟು ಬೆಳೆದ ಬೆಳೆಗೆ ತಾನೇ ಬೆಲೆ ಕಟ್ಟಿ ಮಾರಲಾಗದ ರೈತ ನಷ್ಟವನ್ನನುಭವಿಸುತ್ತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. 

ಪರಿಹಾರ:

ತಾನು ಬೆಳೆದ ಬೆಳೆಗೆ ತಾನೇ ಬೆಲೆ ಕಟ್ಟಿ ಮಾರುವ ಹಕ್ಕು ರೈತನಿಗೆ ದೊರೆಯುವವರೆಗೂ ರೈತನ ಈ ಬವಣೆ ತಪ್ಪಿದ್ದಲ್ಲ. ಆದ್ದರಿಂದ ರೈತನೊಬ್ಬ ಬೆಳೆದ ಬೆಳೆಗೆ ಆ ವರ್ಷದ ಮಾರುಕಟ್ಟೆಯ ಸೂಚ್ಯಂಕವನ್ನು ಆಧರಿಸಿ, ರೈತ ಖರ್ಚು ಮಾಡಿರಬಹುದಾದ ಹಣ ಮತ್ತು ಶ್ರಮವನ್ನು ಲೆಕ್ಕ ಹಾಕಿ ಸರಕಾರವೇ ಒಂದು ನ್ಯಾಯಯುತ ಬೆಲೆಯನ್ನು ನಿಗದಿಪಡಿಸುವ ವ್ಯವಸ್ಥೆ ರೂಪುಗೊಳ್ಳಬೇಕು. ಸರಕಾರ ತಾನೇ ಪ್ರಾರಂಭಿಸಿರುವ ರೆಗ್ಯುಲೇಟೆಡ್ ಮಾರುಕಟ್ಟೆಯಲ್ಲಿನ ದಲ್ಲಾಳಿಗಳನ್ನು ಹೊರ ಹಾಕಿ, ಇತ್ತೀಚೆಗೆ ಕೆಲವು ಕಡೆ ಜಾರಿಗೆ ತಂದಿರುವ ಆನ್ ಲೈನ್ ಮಾರುಕಟ್ಟೆಯ ವ್ಯವಸ್ಥೆಯನ್ನು ರೂಪಿಸಬೇಕು. ಹೀಗಾದಾಗ ಮಾತ್ರ ರೈತನಿಗೆ ನ್ಯಾಯಯುತ ಬೆಲೆ ದೊರೆಯುವ ಸಾದ್ಯತೆ ಇದೆ.

4. ದಾಸ್ತಾನುಗಾರಗಳ ಕೊರತೆ.

ಇನ್ನು ರೈತರು ಬೆಳೆದ ಹಲವು ಬೆಳೆಗಳು ಬೇಗನೇ ಹಾಳಾಗುವ ಸಾದ್ಯತೆಗಳಿದ್ದು( ಉದಾಹರಣೆಗೆ ತರಕಾರಿ,ಹಣ್ಣುಗಳು) ಅವನ್ನು ಸಂಗ್ರಹಿಸಿಡಲು ಶಾಶ್ವತವಾದ ಶೈತ್ಯಾಗಾರಗಳಾಗಲಿ ದಾಸ್ತಾನುಮಳಿಗೆಗಳಾಗಲಿ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲದಿರುವುದರಿಂದ ರೈತರು ಬೆಳೆದ ಹೆಚ್ಚುವರಿ ಬೆಳೆಯನ್ನು ಅವನೇ ಸ್ವತ: ನಾಶ ಮಾಡಬೇಕಾದ ಪರಿಸ್ಥಿತಿ ಇದೆ. ಸರಕಾರದ ಅಂಕಿಅಂಶಗಳೇ ಹೇಳುವಂತೆ ರೈತರು ಬೆಳೆದ ಶೇಕಡಾ 40ರಿಂದ 45 ರಷ್ಟು ಬೆಳೆಗಳು ಸಾಕಷ್ಟು ಶೈತ್ಯಾಗಾರಗಳ ಕೊರತೆಯಿಂದಲೇ ನಾಶವಾಗುತ್ತಿವೆ.ಕೆಲವು ಹೆಚ್ಚು ಬತ್ತ ಬೆಳೆಯುವ ಪ್ರದೇಶಗಳಲ್ಲಿರುವ ಸರಕಾರಿ ಗೊಡೌನುಗಳು ವ್ಯಾಪಾರಿಗಳ ಮಾಲುಗಳ ಸಂಗ್ರಹಣೆಗಾಗಿ ಮಾತ್ರ ಬಳಕೆಯಾಗುತ್ತಿದ್ದು ಸಣ್ಣ ರೈತರ ಬೆಳೆಗಳನ್ನು ಸಂಗ್ರಹಿಸಿಡಲು ದೊರೆಯುತ್ತಿಲ್ಲ

ಪರಿಹಾರಗಳು:

ಸರಕಾರಗಳು ಪ್ರತಿ ತಾಲ್ಲೂಕಿನಲ್ಲೂ ಅಲ್ಲಿ ಬೆಳೆಯುವ ಬೆಳೆಗಳಿಗೆ ಅನುಗುಣವಾಗಿ ದಾಸ್ತಾನು ಮಳಿಗೆಗಳನ್ನೂ ಶೈತ್ಯಾಗಾರಗಳನ್ನೂ ಕಟ್ಟಿ ಕಡಿಮೆದರದಲ್ಲಿ ರೈತರಿಗೆ ನೀಡುವ ಕಾರ್ಯ ಮಾಡಬೇಕಿದೆ. ಉದಾಹರಣೆಗೆ ಹೆಚ್ಚಾಗಿ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುವ ತಾಲ್ಲೂಕುಗಳಲ್ಲಿ ಶೈತ್ಯಾಗಾರಗಳನ್ನು, ಕೊಳೆತುಹೋಗದ ಬೆಳೆಗಳನ್ನು ಬೆಳೆಯುವ ತಾಲ್ಲೂಕುಗಳಲ್ಲಿ ಗೋಡೌನುಗಳನ್ನು ನಿರ್ಮಾಣ ಮಾಡಬೇಕು.

4. ಕೃಷಿಗೆ ಪೂರಕವಾದ ಉದ್ದಿಮೆಗಳು:

ನಮ್ಮ ದೇಶದ ದೊಡ್ಡ ದುರಂತವೆಂದರೆ ಕೃಷಿಗೆ ಪೂರಕವಾದ ಉದ್ಯಮಗಳ ಸಂಖ್ಯೆ ತೀರಾ ಅಲ್ಪಪ್ರಮಾಣದಲ್ಲಿರುವುದು. ಡೆನ್ಮಾರ್ಕ ಅಂತಹ ದೇಶಗಳಲ್ಲಿ ಹಾಲು ಉತ್ಪಾದನೆಗೆ ಪೂರಕವಾದ ಹಲವಾರು ಡೈರಿ ಉದ್ಯಮಗಳಿದ್ದು, ಅದೇ ದೊಡ್ಡ ಉದ್ಯಮವಾಗಿ ಇಂದು ಬೆಳೆದು ನಿಂತಿದೆ. ಆದರೆ ಇಂಡಿಯಾದಲ್ಲಿ ವಿಮಾನ ತಯಾರಿಕಾ ಉದ್ಯಮಗಳಿಗೆ, ಕಂಪ್ಯೂಟರ್ ಉದ್ಯಮಗಳಿಗೆ ಆಧ್ಯತೆ ನೀಡಲಾಗಿದೆಯೇ ಹೊರತು ಕೃಷಿಗೆ ಪೂರಕವಾದ ಯಾವುದೇ ಉದ್ಯಮಗಳನ್ನು ಸ್ಥಾಪಿಸುವಲ್ಲಿ ಸರಕಾರಗಳು ವಿಫಲವಾಗಿವೆ.

ಪರಿಹಾರಗಳು:

ಸರಕಾರಗಳು ಇನ್ನಾದರು ಮನಸ್ಸು ಮಾಡಿ ನಮ್ಮ ಕೃಷಿಗೆ ಸಹಾಯಕವಾಗಬಲ್ಲಂತಹ ಉದ್ದಿಮೆಗಳನ್ನು ಸ್ಥಾಪಿಸಬೇಕಿದೆ. ಹೆಚ್ಚು ಟೊಮೋಟೊ ಬೆಳೆಯುವ ತಾಲ್ಲೂಕಿನಲ್ಲಿ ಜಾಮ್ ತಯಾರಿಸಬಲ್ಲಂತಹ ಘಟಕಗಳನ್ನೂ, ಹೆಚ್ಚು ಹಣ್ಣುಗಳನ್ನು ಬೆಳೆಯುವ ತಾಲ್ಲೂಕುಗಳಲ್ಲಿ ಹಣ್ಣಿನರಸ ತಯಾರಿಸುವ ಉದ್ದಿಮೆಗಳನ್ನು ಸ್ಥಾಪಿಸಬೇಕು. ತನ್ಮೂಲಕ ಹೆಚ್ಚುವರಿಯಾದ ಈ ಬೆಳೆಗಳನ್ನು ಕಾರ್ಖಾನೆಗಳು ಖರೀಧಿಸಿ ರೈತರಿಗೆ ಸಹಾಯಕವಾಗಬಲ್ಲವು. ಇಂತಹ ಉದ್ದಿಮೆಗಳನ್ನು ಪ್ರಾರಂಬಿಸಲು ಮುಂದೆ ಬರುವ ಖಾಸಗಿಯವರಿಗೆ ಪ್ರೋತ್ಸಾಹ ನೀಡಿ ಉತ್ತೇಜಿಸುವ ಕ್ರಮಗಳನ್ನು ಕೈಗೊಳ್ಳುವುದರಿಂದ ಸರಕಾರಕ್ಕೆ ತೆರಿಗೆ ಸಂಗ್ರಹವೂ ರೈತರಿಗೆ ಆರ್ಥಿಕ ಲಾಭವೂ ಆಗುವುದು ಖಚಿತ.

5. ರಿಯಲ್ ಎಸ್ಟೇಟ್ ಮಾಫಿಯ ಮತ್ತು ಕೃಷಿಭೂಮಿ:

ಇವತ್ತು ಜನಸಂಖ್ಯೆ ಜಾಸ್ತಿಯಾದಂತೆ ಭೂಮಿಗಾಗಿ ಬೇಡಿಕೆಯೂ ಜಾಸ್ತಿಯಾಗುತ್ತಿದೆ. ಹೀಗಾಗಿ ನಗರಗಳ ಸುತ್ತಮುತ್ತಲಿನ ಕೃಷಿ ಭೂಮಿಯನ್ನು ನಿವೇಶನಗಳನ್ನಾಗಿ ಪರಿವರ್ತಿಸಲು ರಿಯಲ್ ಎಸ್ಟೇಟ್ ದಂದೇ ಕೋರರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಇದರಿಂದಾಗಿ ತಾಲ್ಲೂಕು ಕೇಂದ್ರಗಳ ಸುತ್ತಮುತ್ತಲಿನ ಫಲವತ್ತಾದ ಕೃಷಿ ಭೂಮಿಗಳು ಅನ್ಯ ಉದ್ದೇಶಕ್ಕಾಗಿ ಬಳಕೆಯಾಗುತ್ತ ರೈತರು ಭೂರಹಿತರಾಗಿ ಕೃಷಿ ಉತ್ಪಾದನೆ ದಿನೇ ದಿನೇ ಕುಸಿಯುತ್ತಿದೆ. 

ಪರಿಹಾರ:

ಆದ್ದರಿಂದ ಪ್ರತಿ ನಗರ ಮತ್ತು ಪಟ್ಟಣಗಳಲ್ಲಿ ಹಸಿರು ಪಟ್ಟಿಯನ್ನು ಗುರುತಿಸಿ ಅದರಿಂದ ಹೊರಗಿರುವ ಕೃಷಿ ಭೂಮಿಯನ್ನು ಅನ್ಯ ಉದ್ದೇಶಗಳಿಗೆ ಬಳಸಲಾಗದಂತೆ ಕಾನೂನು ರಚಿಸಬೇಕು. ಇದರಿಂದ ವ್ಯಾಪ್ತಿ ಮೀರಿ ನಗರಗಳು ಬೆಳೆಯುವುದನ್ನು ಹಾಗು ಕೃಷಿ ಭೂಮಿಯ ದುರ್ಬಳಕೆಯನ್ನೂ ತಡೆದಂತಾಗುತ್ತದೆ. 

ರೈತರ ಸರಣಿ ಆತ್ಮಹತ್ಯೆಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಸರಕಾರಗಳು ಇಂತಹ ಯೋಜನೆಗಳನ್ನು ನಾಳೆ ಬೆಳಿಗ್ಗೆಯೇ ಜಾರಿಗೆ ತರುತ್ತವೆಯೆಂಬ ನಂಬಿಕೆ ನನಗಿಲ್ಲ. ಆದರೆ ಆ ದಿಕ್ಕಿನಲ್ಲಿ ಯೋಚಿಸಿ ಹೋರಾಟ ನಡೆಸಬಹುದಾದ ರೈತಪರ ಸಂಘಟನೆಗಳು ಇಂತಹ ನಿರ್ದಿಷ್ಟ ವಿಚಾರಗಳನ್ನು ಮುಂದಿಟ್ಟುಕೊಂಡು ಹೋರಾಡಲು ಇದು ಸಹಕಾರಿಯಾಗಬಲ್ಲೆದೆಂಬುದು ನನ್ನ ಆಶಯ.

ಆಗ 22, 2015

Reply to Crisis of Sugarcane farmers.

Narasimhan Khadri
Sugar industry has posed serious livelihood problems not just in Karnataka but also in uttar Pradesh. Reasons are

1. The failure of cooperative movement in sugar sector. It has gradually lost the democratic nature and in turn cultivated dictatorial tendencies. AMUL model of Anand should be emulated. Cooperative movements has failed even in Karnataka is a sad thing.
2. Ownership patterns of sugar factories has been permanently skewed in favour of powerful politicians. This has resulted in opacity and goondagiri. There are vested interests on the corridors of power as far as sugar sector sector is concerned. They bear direct consequence from this sector and hence resist any attempts of reforms.
3. Integration with global market hasn't benefited either farmers or factories. There has been surplus sugar production in countries like Brazil and Cuba which has resulted in the fall of prices. This means less profit for factories . Two things can be done. A) Increasing import duty to protect from external shock B) Ensuring that ethanol blending is increased from the current 3 p.c to at least 10 p.c . This will make the factorys' bottom line healthy. But will it lead to better payments for farmers ? Can't say . This move has environmental significance as well.
4. Factories have been demanding that government should buy the surplus sugar to improve their financial position. This should be resisted as it is only a short term measure and will lead to further distrust as this benefit will never be transferred to farmers. Instead long term reforms like improving the governance of sugar factories on the one hand and setting up farmer producer organisation on the other should be stressed. Such FPO s gives the farmers a voice.
5. One can't deny the sociological aspect to these suicides. Much of the suicides are happening on the fringes of a urban centre. There may be a life style pressure on these farmers . Such pressure to become super rich in very less time exists also among urban youth and hence there is high suicide rates in this section as well. This can only be collectively addressed by media , teachers and more importantly families.
6. Improving psychiatric facilities in public hospitals is sine qua non in this modern society. Psychiatric care has been cold shouldered by both governments and the public. It has not received help from the films as well which has stigmatized psychiatric care and that only mad people receive such treatments and electric shocks. Quickly identifying suicidal tendencies and giving proper medication goes a long way in addressing this social malady.

There always is a hooplah that surrounds a farmers suicide. But every suicide ,whether it be a model's or a sslc student's , should create the same stir in our mind as each life is as precious as the other.

I also want to add what Prof Ashok Gulati said in a recent interview in rajya sabha tv(its on YouTube)

He mentions about the dismal picture of agricultural insurance in india. Only 10 per cent or so of the net sown area are insured where as in China it is almost 90 per cent. The reason for such pathetic coverage is as Prof Gulati says, due to the high premium rate. 

Instead of ad hoc compensation and debt waiver schemes, which puts serious burdens on our RRB 's and PSB's , govts should seriously look towards reducing premium amounts and also making this model viable for insurance companies.

This type of institutionalised 'compensation' mechanisms reduces shock factor among farmers. 

Prof Gulati also suggests taking ISRO's help in surveying crop losses using GIS(geographic information system) so that compensation is delivered instantly without any delay. We do have satellites which can help us in this regard.

Once the concept of agricultural insurance becomes a hit among our farmers, there is no turning back. 

Please watch his videos on YouTube for an in-depth analysis about our ailing agricultural sector.

ಆಗ 21, 2015

ಜೀವ ಅರೆಯುತ್ತಿರುವ ಕಬ್ಬು....


Ashok K R
ರೈತರ ಆತ್ಮಹತ್ಯೆಯ ವಿಷಯದಲ್ಲಿ ಮೊದಲಿನಿಂದಲೂ ಮೊದಲ ಐದು ಅಥವಾ ಹತ್ತು ಸ್ಥಾನದೊಳಗೇ ಇರುವ ಕರ್ನಾಟಕದಲ್ಲಿ ಕಳೆದ ಎರಡು ತಿಂಗಳಿನಿಂದ ಆತ್ಮಹತ್ಯೆಯ ಸಂಖೈಯಲ್ಲಿ ಅಪಾರ ಏರಿಕೆಯಾಗಿದೆ. ನಗರಗಳ ಸೌಖ್ಯದೊಳಗೆ ಕುಳಿತು ರೈತರ ಆತ್ಮಹತ್ಯೆಯ ಬಗ್ಗೆ ಅನುಕಂಪದಿಂದ ಬರೆಯುವುದು ಎಷ್ಟರ ಮಟ್ಟಿಗೆ ಸಮಂಜಸ ಎಂಬ ಗೊಂದಲದೊಂದಿಗೇ ಈ ಲೇಖನ ಬರೆಯುತ್ತಿದ್ದೇನೆ. ರೈತರ ಆತ್ಮಹತ್ಯೆಯೆಂಬುದು ಸಂಖೈಯ ದೃಷ್ಟಿಗೆ ಮಾತ್ರ ಸೀಮಿತವಾಗುತ್ತಿದೆಯಾ? ರೈತರದು ನಿಜಕ್ಕೂ ಆತ್ಮಹತ್ಯೆಯಾ ಎಂಬ ಪ್ರಶ್ನೆ ಕೇಳಿಕೊಂಡರೆ ಇಲ್ಲ, ಅದು ಸರಕಾರೀ ಕೊಲೆ, ಇನ್ನೂ ನಿಷ್ಟವಾಗಿ ಹೇಳಬೇಕೆಂದರೆ ಸಾಮಾಜಿಕ ಕೊಲೆ. ಈ ಕೊಲೆಯೆಂಬ ಆತ್ಮಹತ್ಯೆಗೆ ಯಾರು ಯಾರು ಕಾರಣರು ಎಂದು ಗಮನಿಸುತ್ತಾ ಹೋದರೆ ರೈತನನ್ನೂ ಸೇರಿಸಿಕೊಂಡು ಪ್ರಧಾನಿಯವರೆಗೆ ಎಲ್ಲರನ್ನೂ ಹೊಣೆಯಾಗಿಸಬಹುದು. ತತ್ ಕ್ಷಣಕ್ಕೆ ಕರ್ನಾಟಕದ ಪರಿಸ್ಥಿತಿಯನ್ನು ಸಿದ್ಧರಾಮಯ್ಯ ಸರಕಾರದ ವೈಫಲ್ಯವೆಂದು ಪರಿಗಣಿಸಬಹುದಾದರೂ ಒಟ್ಟಾರೆಯಾಗಿ ನೋಡಿದಾಗ ನಾವೆಲ್ಲರೂ ಅಪರಾಧಿ ಸ್ಥಾನದಲ್ಲಿ ನಿಂತು ಬಿಡುತ್ತೇವೆ.

ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಅತಿ ಹೆಚ್ಚಾಗಿ ನಡೆದಿರುವುದು ಮಂಡ್ಯದಲ್ಲಿ; ಕಬ್ಬು ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡಿರುವುದೇ ಹೆಚ್ಚು. ರಾಜ್ಯದ ಉಳಿದ ಜಿಲ್ಲೆಗಳಲ್ಲೂ ಬಹಳಷ್ಟು ಕಡೆ ರೈತರ ಆತ್ಮಹತ್ಯೆ ಕಬ್ಬು ಬೆಳೆಯ ಸುತ್ತಲೇ ಇದೆ. ಅಲ್ಲಿಗೆ ಸದ್ಯದ ಸಂದರ್ಭದಲ್ಲಿ ರೈತರ ಆತ್ಮಹತ್ಯೆಗೆ ನೇರವಾಗಿ ಕಬ್ಬು ಬೆಳೆಯೇ ಕಾರಣ ಎಂದು ನಿಸ್ಸಂಶಯವಾಗಿ ಹೇಳಬಹುದು. ಪ್ರತ್ಯಕ್ಷ ಕಾರಣವನ್ನು ಪರಿಹರಿಸುವುದರತ್ತ ಗಮನ ಹರಿಸುತ್ತಲೇ ಪರೋಕ್ಷ ಕಾರಣಗಳತ್ತಲೂ ಗಮನಹರಿಸಬೇಕು. ಸಕ್ಕರೆ ನಾಡೆಂದು ಹೆಸರಾದ ಮಂಡ್ಯ ಜಿಲ್ಲೆಯ ಹೆಚ್ಚು ಭಾಗ ಮಳೆಯಾಧಾರಿತ ಪ್ರದೇಶವಾಗಷ್ಟೇ ಉಳಿದಿತ್ತು. ಮಂಡ್ಯ ಎಂದರೆ ಮುದ್ದೆ – ಹುರುಳಿಕಟ್ಟು ಸಾರು.... ರಾಗಿ ಬೆಳೆಯೇ ಪ್ರಮುಖವಾಗಿದ್ದ ಮಂಡ್ಯದ ಇಂದಿನ ಅವಸ್ಥೆಗೆ ಕನ್ನಂಬಾಡಿ ಕಟ್ಟೆಯೂ ಒಂದು ಕಾರಣವೆಂದರೆ ತಪ್ಪಲ್ಲ. ಕನ್ನಂಬಾಡಿ ಕಟ್ಟೆಯ ಮೂಲಕ ಪ್ರಮುಖವಾಗಿ ಶ್ರೀರಂಗಪಟ್ಟಣ, ಪಾಂಡವಪುರ, ಮಂಡ್ಯ, ಮದ್ದೂರು ತಾಲ್ಲೂಕಿನ ಹಳ್ಳಿಗಳು ನೀರಾವರಿ ಸೌಕರ್ಯಕ್ಕೊಳಪಟ್ಟು ಹಸಿರಿನಿಂದ ನಳನಳಿಸಿದ್ದು ಹೌದು, ಅಲ್ಲಿನ ಜನರ ಆರ್ಥಿಕ ಜೀವನಮಟ್ಟದಲ್ಲಿ ಏರಿಕೆಯಾಗಿದ್ದೂ ಸತ್ಯ. ಅಣೆಕಟ್ಟೆಗಳು ಆಧುನಿಕ ಭಾರತದ ದೇವಸ್ಥಾನಗಳು ಎಂದು ನೆಹರೂ ಹೇಳಿದ ಮಾತನ್ನು ಭಾರತ ಅಕ್ಷರಶಃ ಪಾಲಿಸಿತು. ಅಣೆಕಟ್ಟಿನಿಂದಲೇ ಸಮೃದ್ಧಿ ಎಂಬ ಭಾವನೆ ಎಲ್ಲೆಡೆಯೂ ಮೂಡಿತು. ಅದು ಸತ್ಯದಂತೆಯೇ ತೋರಿತು. ಆದರೆ ಈಗಲೂ ಆ ಪರಿಸ್ಥಿತಿಯಿದೆಯೇ ಎಂದು ನೋಡಿದರೆ ಜನರ ಮನಸ್ಸಿನಲ್ಲಾಗಿರುವ ಬದಲಾವಣೆಗಳು ಗೋಚರವಾಗುತ್ತವೆ. “ಅಣೆಕಟ್ಟೆ ಬರದಿದ್ದರೆ, ಇಷ್ಟು ನೀರಾವರಿ ಇರದಿದ್ದರೆ ಕೆ.ಆರ್.ಪೇಟೆ, ನಾಗಮಂಗಲದ ಮಳೆಯಾಧಾರಿತ ಕೃಷಿಯನ್ನು ನೆಚ್ಚಿಕೊಂಡ ಜನರ ರೀತಿ ಗುಳೆ ಹೋಗಿ ಮತ್ತೊಂದು ಮಗದೊಂದೋ ಕೆಲಸವನ್ನು ಮಾಡಿ ಜೀವನ ಕಟ್ಟುಕೊಳ್ಳುತ್ತಿದ್ದೆವೇನೋ. ಇಷ್ಟೊಂದು ನೀರಾವರಿ ಇರೋ ಜಮೀನಿಗೆ ಅಂಟಿಕೊಂಡು ನಿಂತ ಕಾರಣಕ್ಕೇ ನಾವು ಈ ಕೆಟ್ಟ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದೀವಿ. ಭೂಮಿಯ ಸತ್ವವನ್ನೂ ಈ ನೀರಾವರಿ ಹಾಳು ಮಾಡಿದೆ” ಎಂದಿದ್ದು ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯ ರೈತ ಹರೀಶ್.

ಕಬ್ಬಿನತ್ತ ರೈತರು ವಾಲಿದ್ಯಾಕೆ?:

ನನ್ನ ಸ್ವಂತ ಊರು ಬೆಸಗರಹಳ್ಳಿ ಬಳಿಯ ಕೋಣಸಾಲೆ. ಇಲ್ಲಿಗೂ ಕಾವೇರಿ ನೀರು ಬರುತ್ತದಾದರೂ ನಾಲೆಯ ಕೊನೆಯಲ್ಲಿರುವ ಊರಾದ್ದರಿಂದ ಮದ್ದೂರು ತಾಲ್ಲೂಕಿನವರೆಲ್ಲ ಉಪಯೋಗಿಸಿದ ನಂತರ ಉಳಿದ ನೀರಷ್ಟೇ ಇಲ್ಲಿಗೆ ಬರುತ್ತದೆ. ನನ್ನ ತಂದೆಯವರ ಕಾಲದಲ್ಲಿ ಆಗ ಗದ್ದೆಗಳಲ್ಲಿ ರಾಗಿ ಭತ್ತದಿಂದ ಹಿಡಿದು, ತೊಗರಿ, ಹೆಸರು ಇತರೆ ಕಾಳುಗಳು, ಮನೆಯಳತೆಗೆ ಬೇಕಾದ ಸೊಪ್ಪು – ತರಕಾರಿಗಳನ್ನು ಬೆಳೆದುಕೊಳ್ಳುತ್ತಿದ್ದರಂತೆ. ಈಗ ಬಹುತೇಕ ಕಡೆ ಕಬ್ಬು, ಕೆಲವೆಡೆ ಭತ್ತ, ಹೊಲಗಳಲ್ಲಿ ತೆಂಗಷ್ಟೇ ಕಾಣುವ ಪರಿಸ್ಥಿತಿ. ಮಳೆ ಕಡಿಮೆಯಿದ್ದು, ನೀರಾವರಿ ಇಲ್ಲದ ಪ್ರದೇಶದಲ್ಲಷ್ಟೇ ರಾಗಿ ಸೀಮಿತವಾಗಿಬಡುತ್ತಿದೆ. ಭತ್ತವನ್ನು ಮುಂಚೆ ಹೆಚ್ಚು ಬೆಳೆಯುತ್ತಿದ್ದರಾದರೂ ಈಗ ಕಬ್ಬು ಬೆಳೆಯುವವರೇ ಜಾಸ್ತಿ. ಇದಕ್ಕೆ ಕಾರಣಗಳನ್ನು ಅರಸಿದರೆ ಕಬ್ಬು ಬೆಳೆ ಬೇಡುವ ಶ್ರಮ ಉಳಿದವುಕ್ಕಿಂತಲೂ ಕಡಿಮೆ. ನಗರೀಕರಣ, ಕೆಲಸಕ್ಕಾಗಿ ಓದುವಿಕೆ ಹೆಚ್ಚಾಗುತ್ತಿದ್ದಂತೆ ಶುರುವಾದ ವಲಸೆ ಪ್ರಕ್ರಿಯೆ ರೈತರ ಸಂಖೈಯನ್ನೂ ಕಡಿಮೆಗೊಳಿಸಿತು, ಕೃಷಿ ಕಾರ್ಮಿಕರ ಸಂಖೈಯನ್ನೂ ಕಡಿಮೆ ಮಾಡಿತು. ‘ನಗರೀಕರಣವೇ ನಮ್ಮ ಗುರಿ’ ಎಂದು ಹೇಳುತ್ತಿದ್ದ ಪಿ.ಚಿದಂಬರಂ, ಸ್ಮಾರ್ಟ್ ಸಿಟಿಗಳ ಬಗ್ಗೆಯೇ ಮಾತನಾಡುವ ನರೇಂದ್ರ ಮೋದಿಯಂತವರು ದೇಶ ನಡೆಯುವ ದಿಕ್ಕನ್ನು ನಿರ್ಧರಿಸುವವರಾಗಿರುವಾಗ ವಲಸೆಯನ್ನು ತಪ್ಪೆಂದು ಹೇಳಲಾದೀತೇ? ಹೆಚ್ಚು ಕೆಲಸ ಬೇಡುವ ಫಸಲನಿಂದ ವಿಮುಖನಾಗಿ ಕಬ್ಬಿನಂತಹ ಇದ್ದುದರಲ್ಲಿ ಕಡಿಮೆ ಶ್ರಮ ಬೇಡುವ ಫಸಲಿನೆಡೆಗೆ ರೈತರು ಆಕರ್ಷಿತರಾಗಿದ್ದು ಸರಿಯಾದ ನಿರ್ಧಾರವೂ ಆಗಿತ್ತು, ಕೃಷಿಯನ್ನೇ ಮುಂದುವರಿಸಲು ನಿರ್ಧರಿಸಿದವರಿಗದು ಅನಿವಾರ್ಯವೂ ಆಗಿತ್ತು. ಹೆಚ್ಚುತ್ತಿದ್ದ ಸಕ್ಕರೆ ಕಾರ್ಖಾನೆಗಳು ಹೆಚ್ಚೆಚ್ಚು ಕಬ್ಬು ಬೆಳೆಯುವಂತೆ ಪ್ರೇರೇಪಿಸುತ್ತಿದ್ದವು. ಶ್ರಮಕ್ಕೆ ತಕ್ಕ ಪ್ರತಿಫಲವನ್ನೂ ಕಬ್ಬು ರೈತರಿಗೆ ನೀಡಿತು. ಒಬ್ಬನಿಗೆ ದುಡ್ಡು ಬಂತೆಂದು ಮತ್ತೊಬ್ಬ ಮತ್ತೊಬ್ಬನಿಗೆ ಕಬ್ಬಿನಿಂದ ಹಣ ಬಂತೆಂದು ಇನ್ನೊಬ್ಬ ಕಬ್ಬು ಬೆಳೆಯಲು ಪ್ರಾರಂಭಿಸಿ ಕೊನೆಗೆ ಬೆಳೆದ ರಾಶಿ ರಾಶಿ ಫಸಲನ್ನು ಯಾರೂ ಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ವಿಫಲವಾಗಿದ್ದು ರೈತನಾ? ಕಾರ್ಖಾನೆಗಳಾ? ಅಥವಾ ಮುನ್ಸೂಚನೆಯನ್ನು ಅಂದಾಜು ಮಾಡಿ ರೈತರಿಗೆ ಎಚ್ಚರಿಕೆಯನ್ನು ನೀಡದ ಕೃಷಿ ಇಲಾಖೆಯಾ? 

ಸಾಂದರ್ಭಿಕ ಚಿತ್ರ
ಕಬ್ಬು ಕಾರ್ಖಾನೆಗಳತ್ತ ಕಣ್ಣು ಹಾಯಿಸಿದರೆ ಟನ್ನುಗಟ್ಟಲೇ ಸಕ್ಕರೆ ದಾಸ್ತಾನಾಗಿದೆ. ಪತ್ರಿಕೆಗಳಲ್ಲಿ ಬಂದ ವರದಿಯ ಪ್ರಕಾರ ಕೆಜಿಗೆ ಹತ್ತೊಂಬತ್ತು ರುಪಾಯಿಗಳಿಗೆ ಮಾರುತ್ತೇವೆಂದರೂ ಕೊಳ್ಳಲು ಯಾರು ಮುಂದೆ ಬರಲಿಲ್ಲವಂತೆ. ವ್ಯಾಪಾರಿಗಳು ಕೇಳಿದ್ದು ಹದಿನೇಳು ರುಪಾಯಿಗೆ. ಪ್ರತಿ ಟನ್ನು ಕಬ್ಬಿಗೆ ಎರಡು ಸಾವಿರದಷ್ಟು ಹಣ ನೀಡಿ, ಸಕ್ಕರೆ ತಯಾರಿಸಲು ಮತ್ತೊಂದಷ್ಟನ್ನು ಖರ್ಚು ಮಾಡಿ ಒಂದು ಕೆಜಿ ಸಕ್ಕರೆಯನ್ನು ಹದಿನೇಳು ರುಪಾಯಿಗೆ ಮಾರಿದರೆ ಸಕ್ಕರೆ ಕಾರ್ಖಾನೆಗಳು ನಷ್ಟ ಅನುಭವಿಸುವುದು ಖಚಿತವೆಂದೆನ್ನಿಸುತ್ತದೆ. ಈ ನಷ್ಟದ ಮಧ್ಯೆಯೂ ಬಾಗಲಕೋಟೆ, ಬೆಳಗಾವಿಯಲ್ಲಿ ಹೊಸ ಹೊಸ ಸಕ್ಕರೆ ಕಾರ್ಖಾನೆ ತಲೆಯೆತ್ತುತ್ತಿರುವುದ್ಯಾಕೆ? ಸಕ್ಕರೆ ಮಾಡಿದ ನಂತರ ಉಳಿಯುವ ಮೊಲ್ಯಾಸಸ್, ಅದರಿಂದ ಉತ್ಪತ್ತಿಯಾಗುವ ಸ್ಪಿರಿಟ್ ಸಕ್ಕರೆ ಕಾರ್ಖಾನೆಗಳ ಪ್ರಮುಖ ಆದಾಯ. ಜೊತೆಗೆ ಕೋ-ಜೆನ್ ಮಾಡಿ ವಿದ್ಯುತ್ ಉತ್ಪಾದಿಸಿದರೆ ಮತ್ತಷ್ಟು ಲಾಭ. ಈ ಎಲ್ಲಾ ಲಾಭಗಳ ಲೆಕ್ಕಾಚಾರದಿಂದ ಹೊಸ ಕಾರ್ಖಾನೆಗಳು ತಲೆ ಎತ್ತುತ್ತವೆ. ಕಬ್ಬು ಬೆಳೆಯನ್ನು ವಿಸ್ತರಿಸಲು ಪ್ರೋತ್ಸಾಹಿಸುತ್ತವೆ, ಕೊನಗೆ ಕಟಾವಾದ ಕಬ್ಬಿಗೆ ಬೆಲೆ ಇಲ್ಲವೆಂದು ಹೇಳುತ್ತಾ ಸಕ್ಕರೆಯ ದಾಸ್ತಾನನ್ನು ತೋರಿಸುತ್ತವೆ. ಅಲ್ಲಲ್ಲಿ ಸರಕಾರ ದಾಸ್ತಾನಾದ ಕಬ್ಬನ್ನು ವಶಪಡಿಸಿಕೊಳ್ಳುವ ಕೆಲಸ ಮಾಡಿತಾದರೂ ಸ್ಪಿರಿಟ್ಟಿನಿಂದ ಬಂದ ಆದಾಯವೆಷ್ಟು ಎಂದು ಪರಿಶೀಲಿಸುವಲ್ಲಿ ಎಡವಿದೆ. ಖಾಸಗಿ ಕಾರ್ಖಾನೆಗಳಿಂದ ಹಣವನ್ನು ರೈತರಿಗೆ ಕೊಡಿಸುವಲ್ಲಿ ಸರಕಾರ ಯಾಕೆ ವಿಫಲವಾಗುತ್ತದೆ ಎಂದರೆ ಅನೇಕ ಸಕ್ಕರೆ ಕಾರ್ಖಾನೆಗಳು ಇರುವುದೇ ರಾಜಕಾರಣಿಗಳ ಮಾಲೀಕತ್ವದಲ್ಲಿ. ಈ ರಾಜಕಾರಣಿಗಳು ಆಡಳಿತ, ವಿರೋಧ ಪಕ್ಷಗಳೆಲ್ಲದರಲ್ಲೂ ಇದ್ದಾರೆ. ಅವರಿಗೆ ಅವರೇ ನಷ್ಟ ಮಾಡಿಕೊಳ್ಳುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದರದು ನಂಬುವ ಮಾತಲ್ಲ.

ವಾಣಿಜ್ಯ ಬೆಳೆಗಳಿಂದ ಅಪಾರ ಪ್ರಮಾಣದ ಲಾಭವೂ ಸಿಗುತ್ತದೆ, ಅಷ್ಟೇ ಪ್ರಮಾಣದ ನಷ್ಟವೂ ಆಗುತ್ತದೆ. ಅಡಿಕೆ, ಕಾಫಿ ತೋಟಗಳು, ಕಬ್ಬಿನ ಗದ್ದೆಗಳು ಒಂದಷ್ಟು ವರ್ಷ ನಂಬಲಾರದಷ್ಟು ಲಾಭ ತಂದರೆ ಮತ್ತೊಂದಷ್ಟು ವರ್ಷ ನಂಬಿಕೆ ಬರದಷ್ಟು ನಷ್ಟವನ್ನೂ ಹೊತ್ತು ತರುತ್ತದೆ. ನಷ್ಟವೆಂಬ ಕಾರಣಕ್ಕೆ ಹೊಸ ರೀತಿಯ ಪದ್ಧತಿಗೆ, ಹೊಸ ಬೆಳೆಗೆ, ಬಹುವಿಧ ಬೆಳೆಗೆ ಹೊರಳಿಕೊಳ್ಳುವವರ ಸಂಖೈ ತುಂಬಾನೇ ಕಡಿಮೆ. ಮಂಡ್ಯದಲ್ಲಿ ಕಬ್ಬಿನಿಂದ ಇಷ್ಟೆಲ್ಲಾ ನಷ್ಟವಾಗಿದೆ. ಬೆಳೆದ ಕಬ್ಬನ್ನು ಕಟಾವು ಮಾಡಿಸದೆ ಹಾಗೆಯೇ ಬಿಟ್ಟ ರೈತ, ಸಿಟ್ಟಿನಿಂದ ಇಡೀ ಗದ್ದೆಗೆ ಬೆಂಕಿ ಕೊಟ್ಟ ರೈತರಲ್ಲನೇಕರು ಮುಂದಿನ ಬೆಳೆಯಾಗಿಯೂ ಕಬ್ಬನ್ನೇ ಬಿತ್ತನೆ ಮಾಡಿಸುತ್ತಾರೆ. ಬಹುಶಃ ಮುಂದಿನ ವರುಷ ಮಂಡ್ಯದಲ್ಲಿ ಸಂಚರಿಸಿದರೆ ಕಬ್ಬಿನಿಂದಾದ ನಷ್ಟವನ್ನು ಕಬ್ಬಿನಿಂದಲೇ ಪಡೆಯಬೇಕೆನ್ನುವ ಪರಿಸ್ಥಿತಿಯನ್ನು ಕಾಣಬಹುದೇ ಹೊರತು ಹೊಸತಾಗಿ ಬೇರೇನನ್ನಾದರೂ ಬೆಳೆಯುವ ಕಷ್ಟ ತೆಗೆದುಕೊಳ್ಳುವವರನ್ನು ಕಾಣುವುದು ಕಷ್ಟ. ಕಬ್ಬಿನಿಂದಾದ ನಷ್ಟಕ್ಕೆ ಕಾರ್ಖಾನೆಗಳಷ್ಟೇ ಕಾರಣ ಕೃಷಿ ಕಾರ್ಮಿಕರ ಅಭಾವ. ಕೃಷಿ ಕಾರ್ಮಿಕರ ಕೊರತೆಗೆ ಅನ್ನಭಾಗ್ಯದಂತಹ ಯೋಜನೆಗಳು ಕಾರಣವೆಂದು ಮೇಲ್ನೋಟಕ್ಕೆ ಅನ್ನಿಸಬಹುದಾದರೂ ಈ ಯೋಜನೆಗಳು ಬರುವುದಕ್ಕೆ ಮುಂಚಿತವಾಗಿಯೇ ಕೃಷಿ ಕಾರ್ಮಿಕರ ಸಮಸ್ಯೆಯಿತ್ತು, ಮೈಸೂರು ಭಾಗದಲ್ಲಿ ಈ ಸಮಸ್ಯೆ ಹುಟ್ಟಲು ಬೆಂಗಳೂರು ಮೈಸೂರು ರೈಲೂ ಕಾರಣ! ಮುಂಚೆ ವಲಸೆ ಹಳ್ಳಿಗಳಿಂದ ನಗರಕ್ಕೆ ಸೀಮಿತವಾಗಿತ್ತು, ಈಗದು ನಗರದಿಂದ ದೊಡ್ಡ ನಗರಕ್ಕೂ ವ್ಯಾಪಿಸಿದೆ. ಮಂಡ್ಯ, ಮೈಸೂರು ಜಿಲ್ಲೆಗಳ ಅನೇಕರು (ನನ್ನನ್ನೂ ಸೇರಿಸಿ) ಇವತ್ತು ಬೆಂಗಳೂರು ಸೇರಿದ್ದಾರೆ. ಈ ವಲಸೆ ಪ್ರಕ್ರಿಯೆಯಿಂದ ರೈತರೂ ಹೊರತಾಗಿಲ್ಲ, ಕೃಷಿ ಕಾರ್ಮಿಕರೂ ಹೊರತಾಗಿಲ್ಲ. ಊರಿನಲ್ಲಿ ಬಿಸಿಲಿನಲ್ಲಿ ದುಡಿದು ಮಾಡುವ ಸಂಪಾದನೆಯಷ್ಟನ್ನೇ ನಗರದಲ್ಲಿ ತಂಪಿನಲ್ಲಿ ಮಾಡಬಹುದೆಂಬ ಕಲ್ಪನೆ ಎಂಥವರನ್ನಾದರೂ ಸೆಳೆಯುತ್ತದೆ. ಅತಿ ಕಡಿಮೆ ದರದಲ್ಲಿ ರೈಲು ಪಾಸು ಸಿಗುವಾಗ ಬೆಳಿಗ್ಗೆ ಕೆಲಸಕ್ಕೆ ಬಂದು ಸಂಜೆ ಮತ್ತೆ ಮನೆಗೆ ಮರಳುವ ಅವಕಾಶ ಮಂಡ್ಯ, ಮೈಸೂರಿನ ಜನತೆಗೆ ಇರುವುದು ಇಲ್ಲಿನ ಕೃಷಿ ಕಾರ್ಮಿಕರ ಸಮಸ್ಯೆಗೊಂದು ಕಾರಣ. ಫ್ಯಾನಿನ ಕೆಳಗೆ ಕುಳಿತು ನಾಲ್ಕು ಗೋಡೆಯ ಮಧ್ಯೆಯಿಂದ ಕೂಲಿ ಮಾಡ್ತಿರೋರೆಲ್ಲಾ ಹಳ್ಳಿಗೋಗ್ರಿ, ಅಲ್ಲಿ ಕೆಲಸಕ್ಕೆ ಜನರಿಲ್ಲ ಎನ್ನುವುದು ಕ್ರೌರ್ಯವಷ್ಟೇ. ಹಾಗಾದರೆ ಕಬ್ಬು ಕಟಾವು ಮಾಡಲು ಕೃಷಿ ಕಾರ್ಮಿಕರು ಎಲ್ಲಿಂದ ಬರುತ್ತಿದ್ದರು?

ಸಾಂದರ್ಭಿಕ ಚಿತ್ರ
ಬಿರುಬೇಸಿಗೆಯ ಬಳ್ಳಾರಿಯಿಂದ ಕಟಾವಿನ ಸಮಯಕ್ಕೆ ಸರಿಯಾಗಿ ಕಾರ್ಮಿಕರು ಬರುತ್ತಿದ್ದರು. ನೀರಾವರಿ ಭಾಗದ ರೈತರನ್ನು ಈ ಕೃಷಿ ಕಾರ್ಮಿಕರ ಮುಂದೆ ಸೋಮಾರಿಗಳೆಂದೇ ಹೇಳಬಹುದು. ಆ ಕಾರ್ಮಿಕರ ಶ್ರಮ ದೊಡ್ಡದು. ಒಂದು ಟನ್ ಕಬ್ಬು ಕಟಾವು ಮಾಡಲು ಇನ್ನೂರೈವತ್ತು ರುಪಾಯಿ ನಿಗದಿಯಾಗಿತ್ತು, ಕ್ರಮೇಣ ಅದು ಎಂಟುನೂರರಿಂದ ಸಾವಿರ ರುಪಾಯಿಗೆ ಬಂದು ನಿಂತಿದೆ. ಕೃಷಿ ಕಾರ್ಮಿಕರು ಮತ್ತವರಿಗಿಂತ ಹೆಚ್ಚಾಗಿ ಅವರನ್ನು ಕರೆದುಕೊಂಡು ಬರುವ ಮೇಸ್ತ್ರಿಗಳು ವರುಷದಿಂದ ವರುಷಕ್ಕೆ ಸಿರಿವಂತರಾಗಿದ್ದಾರೆ. ಲಾರಿಗಳನ್ನೂ ಕೊಂಡುಕೊಂಡು ಬಳ್ಳಾರಿಯಿಂದಲೇ ತರುವ ಮೇಸ್ತ್ರಿಗಳೂ ಈಗ ಕಾಣಸಿಗುತ್ತಾರೆ. ದೈಹಿಕ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಅವರು ಪಡೆಯುತ್ತಿದ್ದಾರೆ. ಹಸಿರು ಕ್ರಾಂತಿಯ ದೆಸೆಯಿಂದ ರಸಗೊಬ್ಬರ ಬಳಸದೆ ಬೆಳೆ ಬೆಳೆಯಲಾಗದ ಸಂದರ್ಭದಲ್ಲಿ ಕಬ್ಬು ಬೆಳೆಯುವುದಕ್ಕೂ ಹೆಚ್ಚು ಖರ್ಚು ಮಾಡಿ ಕೃಷಿ ಕಾರ್ಮಿಕರಿಗೂ ಹೆಚ್ಚು ಹಣ ನೀಡಿ ಕೊನೆಗೆ ಕಾರ್ಖಾನೆಗಳಿಂದ, ದಲ್ಲಾಳಿ ನಿಯಂತ್ರಿತ ಮಾರುಕಟ್ಟೆಯಿಂದ ನಷ್ಟವನ್ನನುಭವಿಸಬೇಕಾದ ರೈತ ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆಯ ಮೊರೆಹೋಗದೆ ಬದುಕುವುದೇ ಕಷ್ಟದ ಕೆಲಸವಾಗಿಬಿಟ್ಟಿದೆ.

ಈ ಲೇಖನ ಮೂಡಲು ಹಲವು ವಿಷಯಗಳನ್ನು ವಿಸ್ತಾರವಾಗಿ ತಿಳಿಸಿದ್ದು ಕಳೆದ ಇಪ್ಪತ್ತು ವರುಷಗಳಿಂದ ಇದ್ದುದರಲ್ಲಿ ಹೊಸತೇನನ್ನೋ ಮಾಡುತ್ತಾ ಕೃಷಿ ಮಾಡುತ್ತಿರುವ ಹರಳಹಳ್ಳಿಯ ಹರೀಶ್. ಅವರು ತಿಳಿಸಿದ ಒಂದಷ್ಟು ಅಂಶಗಳನ್ನು ಅವರ ಮಾತುಗಳಲ್ಲೇ ಓದಿಕೊಳ್ಳಿ: “ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ರೈತರೇ ಕಾರಣ ಅನ್ನಿಸುತ್ತೆ. ಇವೊತ್ತು ಯಾವ ರೈತನೂ ರೈತನಾಗಿ ಬದುಕುತ್ತಿಲ್ಲ. ಬದುಕಲು ಇಷ್ಟಪಡುತ್ತಿಲ್ಲ. ಅವರವರ ಗದ್ದೆಗೆ ಹೋಗೋಕೆ ರೈತರೇ ಎಷ್ಟೋ ಕಡೆ ಸಿದ್ಧರಿಲ್ಲ. ಕೂಲಿಗೆ ಬರೋರಿಗೆ ಮನೆಯಿಂದ ಬುತ್ತಿ ಕಟ್ಟಿಸ್ಕೊಂಡು ಹೋಗೋದಕ್ಕೂ ಎಷ್ಟೋ ಜನ ರೆಡಿ ಇಲ್ಲ. ಹೋಟ್ಲಿಂದ ಇಪ್ಪತ್ತು ರುಪಾಯಿಗೆ ಊಟ ಕಟ್ಟುಸ್ಕೊಂಡು ಹೋಗಿ ಕೊಡ್ತಾರೆ. ಹೋಟ್ಲೂಟ ತಿಂದ ಕೆಲಸದೋನು ಹನ್ನೆರಡು ಘಂಟೆಗೆ ಜಾಗ ಖಾಲಿ ಮಾಡ್ತಾನೆ. ಕಬ್ಬು, ಭತ್ತಕ್ಕೆ ಹೊಂದಿಕೊಂಡುಬಿಟ್ಟೋರು ಹೊಸದೇನನ್ನಾದರೂ ಮಾಡೋಣ ಅಂತ ಯೋಚಿಸೋದೆ ಕಮ್ಮಿ. ದೇವ್ರು ನೋಡ್ಕೋತಾನೆ ಅಂತ ಮತ್ತೆ ಕಬ್ಬು ಹಾಕೋರೇ ಜಾಸ್ತಿ. ನಮ್ ಕೃಷಿ ಇಲಾಖೇನೂ ಬಿಟಿ, ಹೈಬ್ರಿಡ್ ಹೈಬ್ರಿಡ್ ಅಂತ ಅದನ್ನೇ ಬೆಳೆಯೋಕೆ ಪ್ರೋತ್ಸಾಹ ಕೊಡ್ತಾರೆ. ಚೂರು ಪಾರು ಭತ್ತ ಬೆಳೀತಿದ್ದೋರು, ರಾಗಿ ಬೆಳೀತಿದ್ದೋರು ಅನ್ನಭಾಗ್ಯ ಬಂದ ಮೇಲೆ ನಿಲ್ಲಿಸಿಬಿಟ್ರು. ರಾಗಿ ಬೆಳೆಯೋ ಹೊಲದಲ್ಲೆಲ್ಲಾ ಸಾಲ ಮಾಡಿ ಬೋರ್ ತೆಗ್ಸಿ ಕಬ್ಬು ಬೆಳೀತಾವ್ರೆ. ಎಲ್ಲಿಂದ ರೇಟ್ ಸಿಗುತ್ತೆ? ಈಗ ಗ್ಯಾಸಿಗೆ ಮಾಡ್ತಿರೋ ಹಾಗೆ ನಾಳೆದಿನ ಸೊಸೈಟೀಲಿ ಅಕ್ಕಿ ಕೊಡಲ್ಲ ಬ್ಯಾಂಕಿಗೆ ದುಡ್ ಹಾಕ್ತೀವಿ, ಅಕ್ಕಿ ತಗೊಳ್ಳಿ ಅಂದ್ರೆ ಇನ್ನೂ ಕಷ್ಟ. ಗೊಬ್ಬರಕ್ಕೆ ಕೊಡೋ ಸಬ್ಸಿಡಿ ನಿಧಾನಕ್ಕೆ ನಿಂತೋಗ್ತಿದೆ. ಮುನ್ನೂರು ರುಪಾಯಿ ಇದ್ದ ಗೊಬ್ರ ಈಗ ಒಂದೂಕಾಲು ಸಾವಿರ. ಅದರ ಸಬ್ಸೀಡೀನೂ ಬ್ಯಾಂಕಿಗೇ ಹಾಕ್ತಾರಂತೆ. ಕೊಂಡ್ಕೊಳ್ಳೋಕೆ ಮತ್ತೆ ಸಾಲ ಮಾಡ್ಬೇಕು, ಬ್ಯಾಂಕಿಗೆ ಯಾವಾಗ ಹಾಕ್ತಾರೆ ಗೊತ್ತಿಲ್ಲ. ಶೋಕಿಗಾಗಿ ಸಾಲ ಮಾಡೋದು ಹೆಚ್ಚಾಗ್ತಾ ಇದೆ. ಅವರಿವರದ್ದು ಬೇಡ ನನ್ದೇ ಉದಾಹರಣೆ ಹೇಳಿದ್ರೆ ಹಳೇ ಮನೆ ಚೆನ್ನಾಗೇ ಇತ್ತು. ರಿಪೇರಿ ಮಾಡ್ಸಿ ಗ್ರಾನೈಟು, ಮಾರ್ಬೆಲ್ಲು ಹಾಕ್ಸೋದು ಬೇಕಿರಲಿಲ್ಲ. ಕಬ್ಬು ದುಡ್ಡು ಬರುತ್ತಲ್ಲ ಅಂತ ಎರಡು ವರ್ಷದ ಹಿಂದೆ ಅಡ ಇಟ್ಟು ಸಾಲ ಮಾಡಿ ಮನೆಕೆಲಸ ಮಾಡಿಸ್ದೆ. ಕಬ್ಬಿನ ರೇಟು ಬಿತ್ತು, ಸಾಲ ಇನ್ನೂ ಇದೆ. ಯಾವ ಹಳ್ಳಿಯ ಯಾವ ಮನೆಗೆ ಹೋದ್ರೂ ಐದು ಟಚ್ ಸ್ಕ್ರೀನ್ ಮೊಬೈಲು. ತಿಂಗ್ಳು ತಿಂಗ್ಳು ಅದಕ್ಕೆ ಸಾವಿರದವರೆಗೆ ಖರ್ಚು. ಹತ್ತದಿನೈದು ವರುಷದ ಹಿಂದಕ್ಕೆ ಹೋಲಿಸಿದರೆ ತಿಥಿ, ಬೀಗರೂಟ, ಮದುವೆ ಆಡಂಬರ ಈಗಲೇ ಜಾಸ್ತಿ. ಕಬ್ಬು ಬೆಳೆದೋರಿಗೆಲ್ಲಾ ನಷ್ಟವಾಗಿ ಇಷ್ಟೊಂದು ಜನ ಸತ್ತರಲ್ಲ ನಮ್ಮಲ್ಲೇನು ತಿಥಿ, ಬೀಗರೂಟ ನಿಂತೋಗಿದೆಯಾ? ಜೋರಾಗೇ ನಡೀತಿದೆ. ನಮ್ ಮೋದಿ ಪ್ರಧಾನಿ ಥರ ಇರ್ದೆ ಒಂದು ಮಲ್ಟಿನ್ಯಾಷನಲ್ ಕಂಪನಿ ಸಿ.ಇ.ಒ ಥರ ಮಾತಾಡ್ತಾರೆ. ಯಾವ ದೇಶಕ್ಕೆ ಹೋದ್ರೂ ನಮ್ಮಲ್ಲಿ ಬಂದು ದುಡ್ಡು ಹಾಕಿ ದುಡ್ಡು ಹಾಕಿ ಅಂತಾರೆ. ಚೈನಾದಿಂದ ರೇಷ್ಮೆ ಬಂದು ನಮ್ ರೇಷ್ಮೆ ಮಾರ್ಕೆಟ್ಟೇ ಬಿದ್ದೋಯ್ತು. ಇನ್ನು ಬೇರೆ ಕಡೆ ದುಡ್ಡೆಲ್ಲಾ ಬಂದ್ರೆ ಇಲ್ಲೇನುಳಿಯುತ್ತೆ? ಇದೇ ವ್ಯವಸ್ಥೆ ಮುಂದುವರೆದ್ರೆ ಇದೇ ಮೋದಿ ಗವರ್ನ್ ಮೆಂಟ್ ತರಬೇಕು ಅಂತಿದ್ದ ಭೂಮಸೂದೇನಾ ಯಾವ್ಯಾವ ರೈತರು ವಿರೋಧಿಸಿದ್ರೋ ಅವರೇ ನಾಳೆ ದಿನ ನನ್ ಜಮೀನ್ ತಗೊಳ್ಳಿ ನನ್ ಜಮೀನ್ ತಗೊಳ್ಳಿ ಅಂತ ಮೋದಿ ಹಿಂದೆ ಬಿಳ್ತಾರೆ. ಆ ದಿನ ಬರ್ಲಿ ಅಂತಾನೇ ಹಿಂಗೆಲ್ಲಾ ಮಾಡ್ತಾರೋ ಏನೋ? ಇದೆಲ್ಲದರ ಜೊತೆಗೆ ರೈತ ಸತ್ತಾಗ ಪಾರ್ಟಿಗಳೆಲ್ಲ ಬಂದು 25 ಸಾವಿರ, ಐವತ್ತು ಸಾವಿರ ಅಂತ ದುಡ್ಡು ಕೊಡೋದು ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದೆ. ಒಬ್ಬ ರೈತ ಸತ್ರೆ ಮತ್ತೊಬ್ಬ ರೈತ ಬರೋದು ಸರಿ. ಈ ಪಾರ್ಟಿಗಳೆಲ್ಲ ಯಾಕೆ ಬಂದು ದುಡ್ಡು ಕೊಡಬೇಕು. ನಾನು ಸತ್ತರೆ ಮನೆಯವರಿಗಾದರೂ ನೆಮ್ಮದಿ ಸಿಗುತ್ತೆ ಅನ್ನೋ ಭಾವನೇಲಿ ಸೂಸೈಡ್ ಮಾಡ್ಕೊಳ‍್ಳೋರು ಇರ್ತಾರೆ. ಆ ಟಿವಿಯವ್ರು ಜೋರು ದನೀಲಿ ಇವತ್ತು ಇಷ್ಟು ರೈತ್ರು ಸತ್ರು ಅನ್ನೋದೂ ನಿಲ್ಬೇಕು. ಒಟ್ನಲ್ಲಿ ಇಡೀ ವ್ಯವಸ್ಥೆಯಲ್ಲೇ ತಪ್ಪಿದೆ. ಯಾರನ್ನ ದೂಷಿಸೋದೋ ಗೊತ್ತಿಲ್ಲ”

ನನ್ನನೇಕ ಪ್ರಶ್ನೆಗಳಿಗೆ ಉತ್ತರ ನೀಡುತ್ತಲೇ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟಿಹಾಕಿಸಿದ ಮಾತುಗಳಿವು. ಹೆಚ್ಚೇನು ಬರೆಯಲು ಉಳಿದಿಲ್ಲ.

ಆಗ 20, 2015

Home Composting

Dr Ashok K R

Home compost
The Black Gold
As I have written in my previous posts my method of setting up of terrace/home garden is time consuming and laborious, yet it is enjoyable. In this post I will share my experiences in mining ‘black gold’ from kitchen waste. Unlike ‘golden gold’ black gold is absolutely free of cost. There are hell lot of websites which teaches you numerous methods of composting. I have learnt a lot from them, and finally it is the practical experience which teaches the real composting. The method has to be standardised for each home, for each environment.


Composting Bin DIY
My first composter - teacher.
In the beginning I tried home composting using a small waste plastic container. With the help of a knife created some holes for aeration. Added kitchen waste with news paper bits. Within few days the entire container was filled with swimming maggots and garbage smell! Since the mouth of the container was small I couldn’t turn the pile regularly and my mistake was a festival for maggots. Luckily there were no flies and addition of some more news paper bits did the magic. Maggots number reduced to minimum. Though I didn’t get black gold, got some half digested compost which I added to pots.

Send your innovative ideas of terrace gardening to hingyake@gmail.com

Since my initial experiment was ‘bit’ successful, decided to expand the composter. I tried composting in open trays. Just added kitchen waste mixed with dried leaves and covered the pile with a layer of soil to avoid attracting flies. Since the aeration is better in this open method composting process was quite fast. This method is suited only during summer. The first rain in summer ruined the entire setup as I had kept in open! Garbage smell and maggots subsided after a week!

Compost pile
My Present composter. Plastic container with holes.
I decided to steal a container from kitchen! My not so ill intention was noticed by my spouse and I dropped the idea of stealing! At last bought a new plastic container (with large mouth) for Rs 160/-. Drilled numerous holes. By this time I had collected 4 bags of dry leaves. Dry leaves are very much essential as it absorbs the moisture and the carbon of dry leaves compensates the nitrogen of kitchen waste. Though news paper bits can be used, it’s not completely natural. Better to collect dry leaves whenever possible. 
Compost pile
Kitchen waste with dry leaves
Depending upon the liquidity of the kitchen waste I add the dry leaves, mix it well and add it to the compost bin. 
DIY composter
Covering the top with newpapers will absorb extra liquid in the top layer.
On the top I will place two three layers of newspaper and close the lid. Since I broke the lid cover (over enthusiasm during gold mining!) now I use an old clay pot to cover it completely. In my experience turning the compost pile regularly is the important step in composting. Turning the pile once in three days will fasten the process and it gives us fair idea of our mistakes. More watery add more leaves, dried up add some water. Adding butter milk will hasten up the process. Once in ten/fifteen days empty the entire compost bin. We can observe the various stages of composting. Mix it again and add back. This method will ensure good aeration and will speed up the composting process.

Mining the Gold:

Sieving the compost
'Stolen' trays to mine Black Gold
This time I could not avoid. I ‘stole’ some plastic trays from kitchen. Of course my wife was not there at that time! One tray had larger holes and other smaller. I use tray with large holes to sieve the compost in first stage. 
half compost
After first stage of sieving.
The sieved product is processed with second tray with smaller holes and the black gold starts appearing! 
home made compost
The Black Gold
The larger chunks are added back to the compost bin. The product left during second stage of sieving is added to the clay pot for further composting. 
store the compost
Storage Period of Black Gold: 10 days.
The black gold is stored in a cardboard box. After a waiting period of ten days this black gold is added to the pots or used to prepare potting mix for new pots.
composting in clay pots
Larger chunks are added to clay pot for further composting.
maggots in compost
Only few maggots appear now. I am not scared of them!
adding compost to pots
Black Gold added to the grow bags.

Check list for starting composting: 

  1. Dried Leaves. (Use newspapers if you don’t have stock of dried leaves now. No excuses after next summer) 
    dried leaves for composting
    Don't forget to collect dried leaves during summer!
  2. Plastic container with holes. 
  3. Obviously Kitchen waste! 

Lack of time (are we really that busy!) might provoke you to purchase readymade composter bins. There are plastic container bins, Kambha and lot more available online. Lack of space could be a real problem. Bokashi method of composting using ecobin / smartbin is suggested by Organic Terrace Gardeners. Those bins can be kept in the kitchen and demands less work when compared to regular composters.
simple home made composter
My Simple composting setup

ಆಗ 10, 2015

ಮಂಡ್ಯದಲ್ಲಿ ಎರಡು ದಿನ ನಡೆದ 'ಬೀಜ ಮೇಳ'

seed festival mandya
ವ್ಯವಸಾಯ ಬಿಡಿ, ಮನೆಯಲ್ಲಿ ಪುಟ್ಟ ಕುಂಡದಲ್ಲಿ ಒಂದು ಗಿಡ ಬೆಳೆಸುವ ಆಸಕ್ತಿ ನಿಮ್ಮಲ್ಲಿದ್ದರೆ ಮೊದಲ ಹಂತದಲ್ಲೇ ನಿರಾಶೆಯಾಗಿಬಿಡುತ್ತೀರಿ. ಕಾರಣ, ದುಡ್ಡು ಕೊಟ್ಟು ಕೊಂಡು ತಂದ ಬೀಜಗಳು ಮೊಳಕೆಯೊಡೆಯುವ ಆಸಕ್ತಿ ತೋರಿಸದೆ ಮಣ್ಣಿನಲ್ಲೊಂದಾಗಿ ಗೊಬ್ಬರವಾಗಿಬಿಡುವುದು! ಬೀಜವೆಂಬುದು ದೊಡ್ಡ ಉದ್ಯಮವಾಗಿಬಿಟ್ಟಿದೆ. ಬಹಳಷ್ಟು ಬೀಜಗಳ ಮೇಲೆ 'ವಿಷ ಸಿಂಪಡಿಸಲಾಗಿದೆ' ಎಂದು ದೊಡ್ಡಕ್ಷರಗಳಲ್ಲಿ ಬರೆದಿರುತ್ತಾರೆ. ವಿಷದ ಬೀಜ ಬಿತ್ತಿ ವಿಷವಿಲ್ಲದೆ ಬೆಳೆದು ವಿಷಮುಕ್ತ ಆಹಾರ ತಿನ್ನಲು ಸಾಧ್ಯವಾಗುವುದಿಲ್ಲ. ಬೀಜ ಶೇಖರಿಸುವ, ಶೇಖರಿಸಿಕೊಂಡ ಬೀಜವನ್ನು ನೆರೆಹೊರೆಯವರಲ್ಲಿ ಹಂಚಿಕೊಳ್ಳುವ ಪ್ರವೃತ್ತಿ ಮಾಯವಾಗುವುದಕ್ಕೆ ಉದ್ದಿಮೆದಾರರು ಎಷ್ಟು ಕಾರಣರೋ ರೈತರೂ ಅಷ್ಟೇ ಕಾರಣ. ಬೀಜ ಶೇಖರಿಸುವ, ಒಣಗಿಸುವ, ಕೆಡದಂತೆ ನೈಸರ್ಗಿಕವಾಗಿ ಸಂಗ್ರಹಿಸಿಡುವ ಶ್ರಮಕ್ಕಿಂತ ಹಣ ಕೊಟ್ಟು ಬೀಜ ತರುವುದು ಸುಲಭದ ಕೆಲಸ. ಹೀಗೆ ಹಣ ಕೊಟ್ಟು ತರುವ ಬೀಜದ ಗುಣಮಟ್ಟದ ಅರಿವಿರುವುದಿಲ್ಲ, ಅದು ಬೆಳೆಯುವಾಗ ಅನುಭವಿಸುವ ತೊಂದರೆಗಳ ಅರಿವಿರುವುದಿಲ್ಲ. 
seed festival mandya
ಮಂಡ್ಯದಲ್ಲಿ ನಡೆದ ಬೀಜ ಜಾತ್ರೆ
ಹಳೆಯ ಪದ್ಧತಿಯ ಬೀಜ ಹಂಚುವಿಕೆಯನ್ನು, ವಿಷಮುಕ್ತವಾದ ಬೀಜಗಳನ್ನು ಸಂಗ್ರಹಿಸುವ, ಕಡಿಮೆ ಬೆಲೆಗೆ ಮಾರುವ ವೇದಿಕೆ ಸೃಷ್ಟಿಸುತ್ತಿರುವುದು 'ಸಹಜ ಸಮೃದ್ಧಿ' ಬಳಗ. ಹದಿನೈದು ವರುಷಗಳಿಂದ ವಿಧವಿಧದ ತಳಿಗಳನ್ನು ಉಳಿಸಿಕೊಳ್ಳುವುದಕ್ಕೆ ಪ್ರೋತ್ಸಾಹ ನೀಡುತ್ತಾ ವರುಷವಿಡೀ ದೇಶದ ಹತ್ತಲವು ಭಾಗಗಳಲ್ಲಿ ಬೀಜ ಮೇಳ ನಡೆಸುತ್ತಿದೆ. ಆಗಸ್ಟ್ 8 ಮತ್ತು 9ರಂದು ಮಂಡ್ಯದ ಗುರುಭವನದಲ್ಲಿ ಬೀಜ ಮೇಳ ಆಯೋಜಿಸಲಾಗಿತ್ತು. ಸಾವಯವ ಬೀಜಗಳು ಮತ್ತು ಸಾವಯವ ಪದ್ಧತಿಯಿಂದ ಬೆಳೆದ ಬೆಳೆಗಳನ್ನು ಮಾರಲು ಇಲ್ಲಿ ಅವಕಾಶ ಕಲ್ಪಿಸಲಾಗಿತ್ತು.
ಉತ್ಸಾಹದಿಂದ ಅನುಭವ ಹಂಚಿಕೊಳ್ಳುತ್ತಿದ್ದ ರೈತರು
ಜೊತೆಗೆ ಸಾವಯವ ರೈತರು ತಮ್ಮ ತಮ್ಮ ಅನುಭವಗಳನ್ನು ಸಹೋದ್ಯೋಗಿಗಳೊಡನೆ ಹಂಚಿಕೊಳ್ಳುತ್ತಿದ್ದರು. ಪಿರಿಯಾಪಟ್ಟಣ, ಬೆಳಗಾವಿ, ಹುಬ್ಬಳ್ಳಿಯ ಕಡೆಯಿಂದೆಲ್ಲ ಬಂದಿದ್ದ ರೈತರು ಸಾವಯವ ಉತ್ಪನ್ನಗಳನ್ನು ಮಾರುತ್ತಿದ್ದರು. ಮಂಡ್ಯದ ಕಿರುಗಾವಲಿನ ಘನಿ ಬರೋಬ್ಬರಿ ಏಳೂನೂರ ಐವತ್ತಕ್ಕೂ ಅಧಿಕ ರೀತಿಯ ಭತ್ತದ ತಳಿಗಳೊಡನೆ ಮಿಂಚುತ್ತಿದ್ದರು. ಭಾರತದಷ್ಟೇ ಅಲ್ಲದೇ ವಿದೇಶೀ ತಳಿ ಭತ್ತಗಳೂ ಅವರ ಬತ್ತಳಿಕೆಯಲ್ಲಿವೆ. ವಿದೇಶಿ ತಳಿಗಳೆಂದರೆ ಹೈಬ್ರಿಡ್ ಅಲ್ಲ! ವಿದೇಶಿ ಸಾವಯವ ತಳಿಗಳು.
ಇನ್ನು ಆವರಣದಲ್ಲಿ ಎಲ್ಲಾ ರೀತಿಯ ಸೊಪ್ಪು, ತರಕಾರಿ ಬೀಜಗಳು ಲಭ್ಯವಿದ್ದವು, ಹೊರಗೆ ಸಿಗುವ ಹೈಬ್ರಿಡ್ಡಿಗಿಂತ ಕಡಿಮೆ ಬೆಲೆಗೆ. ಜನರು ಹೆಚ್ಚು ಮುತ್ತಿಕೊಂಡಿದ್ದು ಮಾತ್ರ ಹಪ್ಪಳ, ಸಂಡಿಗೆ ಮಾರಾಟ ಮಾಡುತ್ತಿದ್ದ ಅಂಗಡಿಯ ಮುಂದೆ! ಅಂಗಡಿಗಳಲ್ಲಿ ಕಾಣಸಿಗದ ಕಪ್ಪು ಬೆಲ್ಲಗಳು ಇಲ್ಲಿ ಲಕಲಕ ಹೊಳೆಯುತ್ತಿದ್ದವು. ಅಂಗಡಿಯ ಬಿಳಿ ಬೆಲ್ಲಗಳು ರಾಸಾಯನಿಕಗಳ ಮುದ್ದೆ ಎಂಬುದು ತಿಳಿದಿದ್ದರೂ ಅದಕ್ಕೇ ಮಾರು ಹೋಗುತ್ತೇವೆ ನಾವು.
Ghani
750ಕ್ಕೂ ಅಧಿಕ ಭತ್ತದ ತಳಿಯೊಂದಿಗೆ ಘನಿ ಮತ್ತು ತಂಡ.
ಸಾವಯವ ಪದ್ಧತಿಯ ಬಗೆಗೆ ವಿವಿಧ ರೈತರು ಬರೆದ ಪುಸ್ತಕಗಳೂ ಲಭ್ಯವಿದ್ದವು. ವಿಷದ ಉಪಯೋಗವನ್ನು ಕಡಿಮೆಗೊಳಿಸಿ ಸಾವಯವ ಪದ್ಧತಿಯ ಕೃಷಿ ಹೆಚ್ಚಾಗುವುದಕ್ಕೆ ರೈತರ ಶ್ರಮವೊಂದೇ ಸಾಲದು. ಕಂಪನಿಗಳ ವಕ್ತಾರನಂತೆ ವರ್ತಿಸುವ ಕೃಷಿ ಇಲಾಖೆ ತನ್ನ ನೀತಿ ನಿಯಮಗಳನ್ನು ಅಮೂಲಾಗ್ರವಾಗಿ ಬದಲಿಸಿಕೊಳ್ಳಬೇಕು. ಗ್ರಾಹಕರು ಸಾವಯವ ಪದ್ಧತಿಯಲ್ಲಿ ಬೆಳೆದ ಉತ್ಪನ್ನಗಳನ್ನು ಉಪಯೋಗಿಸುವುದನ್ನು ಹೆಚ್ಚು ಮಾಡಬೇಕು. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಸಹಜವಾಗಿ ಕೃಷಿಕರೂ ಕೂಡ ಸಾವಯವ ಪದ್ಧತಿಯತ್ತ ಆಸಕ್ತಿ ವಹಿಸುತ್ತಾರೆ. ಇವೆಲ್ಲದರ ಜೊತೆಗೆ ಸಾವಯವದ ಹೆಸರಿನಲ್ಲಿ ಹೆಚ್ಚುತ್ತಿರುವ ನಕಲಿಗಳನ್ನು ಕಂಡು ಹಿಡಿಯುವ ಕೆಲಸವೂ ದೊಡ್ಡ ಮಟ್ಟದಲ್ಲಿ ಆಗಬೇಕು.

ಆಗ 8, 2015

'Seed Mela' at Mandya on Aug 8,9.

Organised by: Sahaja Samruddhi.
Venue: Gurubhavana, Mandya.
Timings: 10:00am to 8:00pm

Exhibition :

- Display of a spectacular diversity of Paddy. Millets and Vegetables
- Photographs, posters and other visual matter
- Uncultivated Food Crops

Stalls 

- Traditional Rice - Medicinal Rice, Biriyani Rice, Black Rice, Red Rice....
- Magic of Millets - Foxtail, Little, Brown top, Barnyard. Finger, Kodo Millet
- Fruits and Vegetables 
- Organic seeds for sale 
- Books, CDs and craft item

Workshop : Searching Organic Alternates


Seed conservation, Cultivation of traditional paddy and millets. value addition and marketing of organic produce. Special talk on legume culture, diversification of sugar cane and marketing of traditional rice and millets.

Image Source and information: Krishna Prasad Govindaiah's facebook page.

ಆಗ 3, 2015

ರೈತರ ಸರಣಿ ಆತ್ಮಹತ್ಯೆಗಳ ಈ ಸಮಯದಲ್ಲಿ ತೇಜಸ್ವಿಯವರು ಮತ್ತೆ ನೆನಪಾದರು.


ಇದು ನನ್ನ “ನಮ್ಮ ನಡುವಿನ ತೇಜಸ್ವಿ” ಪುಸ್ತಕದ ಒಂದು ಅಧ್ಯಾಯ (2010 ಹಂಪಿ ವಿ.ವಿ. ಪ್ರಕಟನೆ). ರೈತರ ಸರಣಿ ಆತ್ಮಹತ್ಯೆಗಳ ಈ ಸಮಯದಲ್ಲಿ ತೇಜಸ್ವಿಯವರು ಮತ್ತೆ ನೆನಪಾದರು. - ಪ್ರಸಾದ್ ರಕ್ಷಿದಿ
97ನೇ ಇಸವಿಯ ಸುಮಾರಿಗೆ ಒಂದುದಿನ ಚಿಕ್ಕಮಗಳೂರಿಗೆ ಹೋದವನು ಹಿಂದಿರುಗುವಾಗ ಮೂಡಿಗೆರೆಯಲ್ಲಿ ಇಳಿದೆ. ಸಕಲೇಶಪುರದತ್ತ ಹೋಗುವ ಬಸ್ಸಿಗಾಗಿ, ಬಸ್ಟ್ಯಾಂಡಿನಲ್ಲಿ ಕಾಯುತ್ತ ಕುಳಿತಿದ್ದೆ, ನಾರಾಯಣಗೌಡ ನನ್ನಮುಂದೆ ತನ್ನ ಬೈಕನ್ನು ತಂದು ನಿಲ್ಲಿಸಿದ.

ಈತ ಹೈಸ್ಕೂಲಿನಲ್ಲಿ ನನ್ನ ಸಹಪಾಠಿ. ನಂತರ ಕೆಲವು ವರ್ಷ ದೂರಾಗಿದ್ದೆವಾದರೂ ರೈತಸಂಘ ಮತ್ತೆ ನಮ್ಮನ್ನು ಹತ್ತಿರ ತಂದಿತ್ತು. ಗೆಳೆತನ ಮತ್ತೊಮ್ಮೆ ಮುಂದುವರಿಯಿತು. ನಾರಾಯಣಗೌಡ ಮೂಡಿಗೆರೆಯ ಪಕ್ಕದ ಬಣಕಲ್ ಎಂಬ ಊರಿನವನು. ಅಲ್ಲೇ ಅವನಿಗೆ ಒಂದಷ್ಟು ಗದ್ದೆ -ತೋಟವೂ ಇದೆ. ಸಾಕಷ್ಟು ಅನುಕೂಲವಿದ್ದವನು. ಎಪ್ಪತ್ತರ ದಶಕದ ಆದಿಬಾಗದಲ್ಲೇ ಒಂದು ಸೆಕೆಂಡ್ ಹ್ಯಾಂಡ್ ಜಾವಾ ಬೈಕನ್ನು ಖರೀದಿಸಿದ್ದ. ಅದನ್ನು ಕಾಡು, ಗುಡ್ಡ, ಗದ್ದೆ ಎಲ್ಲೆಂದರಲ್ಲಿ ಓಡಿಸುತ್ತಿದ್ದ. ಗದ್ದೆಗೆ ಗೊಬ್ಬರ ಸಾಗಿಸುವುದರಿಂದ ಹಿಡಿದು ದನಗಳಿಗೆ ಹುಲ್ಲು ತರಲೂ ಅದನ್ನೇ ಬಳಸುತ್ತಿದ್ದ. ಚಿಕ್ಕಮಗಳೂರು-ಶಿವಮೊಗ್ಗದವರೆಗೂ ಅದರಲ್ಲೇ ಸಂಚರಿಸುತ್ತಿದ್ದ. ಆಗಲೇ ಇವನಿಗೆ ‘ಬೈಕ್ ನಾರಾಯಣಗೌಡ’ ಎಂದ ಅಭಿದಾನ ಪ್ರಾಪ್ತವಾಗಿತ್ತು. ಬೈಕನ್ನು ಎಲ್ಲೆಂದರಲ್ಲಿ ನಿಲ್ಲಿಸಿ ರಿಪೇರಿ ಮಾಡುವ ಕಲೆ ನಾರಾಯಣ ಗೌಡನಿಗೆ ಕರಗತವಾಗಿತ್ತು. ಅದು ಹೇಗೋ ತೇಜಸ್ವಿಯವರೊಂದಿಗೆ ಈತನಿಗೆ ಸಂಪರ್ಕವಿತ್ತು. ಕೆಲವುಬಾರಿ ಅವರಲ್ಲಿಗೆ ಈತ ಹೋಗಿಬರುತ್ತಿದ್ದ. ಇದನ್ನೇ ನೆಪವಾಗಿಟ್ಟುಕೊಂಡು ಸಂದರ್ಭ ಸಿಕ್ಕಿದಾಗಲೆಲ್ಲ, ತೇಜಸ್ವಿಯವರಿಗೆ ಸ್ಕೂಟರ್ ರಿಪೇರಿಯನ್ನು ತಾನೇ ಹೇಳಿಕೊಟ್ಟುದ್ದಾಗಿ ರೀಲು ಬಿಡುತ್ತಿದ್ದ!.

ನಾರಾಯಣ ಗೌಡ ನನ್ನನ್ನುದ್ದೇಶಿಸಿ “ಎತ್ಲಾಗೋ ಮಾರಾಯ” ಎಂದ.

“ಚಿಕ್ಮಗ್ಳೂರಿಗೋಗಿದ್ದೆ, ಈಗ ಊರಿಗೆ” ಎಂದೆ.

“ಬಾ ಇಲ್ಲೇ ತೇಜಸ್ವಿ ಮನೆತಂಕ ಹೋಗ್ಬರೋಣ ಬಾ” ಎಂದು ಕರೆದ.

ನನಗೆ ಅವನೊಂದಿಗೆ ಹೋಗುವ ಮನಸ್ಸಾದರೂ. ಆಗಲೇ ಸಂಜೆ ನಾಲ್ಕಾಗುತ್ತ ಬಂದಿತ್ತು. ಬಸ್ಸು ತಪ್ಪಿದರೆ ಎಂಬ ಚಿಂತೆಯಾಯಿತು. ನಾನು ಬರುವುದಿಲ್ಲ ನೀನೆ ಹೋಗಿ ಬಾ ಎಂದೆ.

“ನನಿಗೆ ಒಬ್ನೇ ಹೋಗಕ್ಕೆ ಬೇಜಾರು, ಅಲ್ಲದೇ ಒಬ್ನೇ ಹೋದ್ರೆ ಮಾರಾಯ ಅವ್ರು ತುಂಬ ಹೊತ್ತು ಮಾತಾಡ್ತ ಕೂತ್ಕಂಡ್ಬಿಡ್ತಾರೆ, ಆಮೇಲ್ ಪಜೀತಿ, ಇಬ್ರಾದ್ರೆ ಏನಾರಹೇಳಿ ಬೇಗ ಹೊರಡ್ಬೋದು ಬಾ” ಎಂದ. ಅವನು ಹೇಳಿದ ದಾಟಿ ತೇಜಸ್ವಿಯವರಿಗೆ ಇವನಂತಹ ಆತ್ಮೀಯ ಸ್ನೇಹಿತ ಇನ್ನೊಬ್ಬರಿಲ್ಲ ಎನ್ನುವಂತಿತ್ತು.

ಈತನ ಮಾತಿನ ಬಗ್ಗೆ ನನಗೇನೋ ಅನುಮಾನವಾಯಿತು. ಆದ್ದರಿಂದ ತಪ್ಪಿಸಿಕೊಳ್ಳಲು ನೆಪಹುಡುಕುತ್ತಾ “ನಾನೀಗ ಅಲ್ಲಿಗೆ ಬಂದು ಐದು ಗಂಟೆ ಬಸ್ ತಪ್ಪಿದ್ರೆ ನಾನಿಲ್ಲೇ ಬಾಕಿ” ಎಂದೆ.

“ಬಾ ಅಮೇಲೆ ನಮ್ಮೂರಿಗೋಗಾಣ, ನಾಳೆ ನಾನು ಆಕಡೆ(ಸಕಲೇಶಪುರ) ಬರೋದಿತ್ತು ಜೊತೆಲೇ ಹೋಗಣ” ಎಂದು ಗಂಟುಬಿದ್ದ. ನನಗೆ ಇವತ್ತು ಊರಿಗೆ ಹೋಗಲೇ ಬೇಕೆಂದೂ ನಾಳೆ ಬೆಳಗ್ಗೆ ಮುಖ್ಯವಾದ ಕೆಲಸವಿರುವುದರಿಂದ ನಿಮ್ಮೂರಿಗೆ ಬಂದು ಉಳಿಯಲು ಸಾಧ್ಯವಿಲ್ಲವೆಂದು ಹೇಳಿದೆ.

“ಸರಿ ಹಂಗಾದ್ರೆ ಇವತ್ತೆ ನಾನು ಸಕಲೇಶಪುರಕ್ಕೆ ಬರ್ತೀನಿ, ನಿನ್ನ ಊರೀಗೇ ಬಿಡ್ತೀನಲ್ಲ ಬಾ, ಹೆಂಗೂ ನಿಂಗೆ ಬಸ್ ಚಾರ್ಜ್ ಉಳಿಯುತ್ತಲ್ಲ ಅದು ದಾರೀಲಿ ಹಾನುಬಾಳಲ್ಲಿ ಸಾಯಂಕಾಲದ ಖರ್ಚಿಗಾಯ್ತು” ಎಂದು ಎಳೆದು ಬೈಕ್ ಹತ್ತಿಸಿದ. “ನಾಲ್ಕು ರುಪಾಯಿ ಉಳಿಸಿಕೊಟ್ಟು ನಲವತ್ತು ರುಪಾಯಿ ಖರ್ಚುಮಾಡ್ಸೋ ಐಡಿಯಾ ಹಾಕ್ಬೇಡ, ನಿನಗಾಗಿ ಬರ್ತೀನೀ ಆದರೆ ಸಾಯಂಕಾಲದ ಖರ್ಚೆಲ್ಲ ನಿಂದೇ” ಎನ್ನುತ್ತಾ ಅವನೊಂದಿಗೆ ಹೊರಟೆ.

ನಾನೂ ತೇಜಸ್ವಿಯವರನ್ನು ಭೇಟಿ ಮಾಡದೆ ತುಂಬ ಸಮಯವಾಗಿತ್ತು. ಈಗ ನಾರಾಯಣಗೌಡ ಜೊತೆಯಲ್ಲಿ ಇರುವುದರಿಂದ ಅವರಲ್ಲಿಗೆ ಹೋಗಲು ಒಂದು ಕಾರಣ ಸಿಕ್ಕಿತ್ತು.

ಹ್ಯಾಂಡ್ ಪೋಸ್ಟಿಗೆ ಬರುತ್ತಿದ್ದಂತೆ ಹೋಟೆಲೊಂದರ ಮುಂದೆ ಬೈಕ್‍ನಿಲ್ಲಿಸಿದ ನಾರಾಯಣಗೌಡ “ಬಾ ಕಾಫಿ ಕುಡ್ದು ಹೋಗಣ” ಎಂದ.

ಹೋಟೆಲಿನಲ್ಲಿ ಕಾಫಿಗೆ ಮೊದಲು ತಿಂಡಿಗೂ ಹೇಳಿದ. ನನ್ನ ಅನುಮಾನ ಬೆಳೆಯುತ್ತಲೇ ಇತ್ತು.

“ನಾರಾಯಣ ನೀನು ಯಾವಾಗ ಬೇಕಾದ್ರೂ ಅವರಲ್ಲಿಗೆ ಒಬ್ನೇ ಹೋಗ್ತಿದ್ದೆ, ಈಗ ನಾನು ಬರಲ್ಲ ಅಂದ್ರು ಎಳ್ಕೊಂಡು ಹೋಗ್ತಾ ಇರೋದು ನೋಡಿದ್ರೆ ನಂಗ್ಯಾಕೋ ಡೌಟು.. ನೀನೇನೋ ಮುಚ್ಚಿಡ್ತಾ ಇದ್ದೀಯ,” ಎಂದೆ.

“ಅದೊಂದು ಕತೆ ಮಾರಾಯ, ಈಗ ಒಂದು ತಿಂಗ್ಳಲ್ಲಿ ನಂಗೆ ಅವ್ರತ್ರ ಅರ್ಜೆಂಟಾಗಿ ಒಂದು ಕೆಲ್ಸ ಆಗ್ಬೇಕಿತ್ತು, ಬೆಳಗ್ಗೆ..ಬೆಳಗ್ಗೇನೆ ಅವ್ರ ಮನೆಹತ್ರ ಹೋದೆ. ಮನೇಲಿ ಯಾರೂ ಕಾಣುಸ್ಲಿಲ್ಲ, ಅಲ್ಲೇ ಮನೆ ಪಕ್ಕದಲ್ಲೇ ಕೆಲಸದೋನಿದ್ದ, ಅವನ್ನ ಕೇಳುದ್ರೆ ‘ಅವುರಾಗಳೇ ಕ್ಯಾಮರಾ ತಗಂದು ತ್ವಾಟಕ್ಕೋದ್ರು’ ಅಂದ, ಅವ್ರು ಹೋದ ದಿಕ್ಕಿಗೇ ಹುಡುಕ್ತಾ ಹೋಗಿ ತೋಟದಲ್ಲೆಲ್ಲಾ ನೋಡ್ದೆ, ಅಲ್ಲೆಲ್ಲೂ ಕಾಣುಸ್ಲಿಲ್ಲ, ಹಂಗೇ ಅವ್ರುಮನೆ ಕೆರೆ ದಾಟಿ ಕಾಡು ಹತ್ತಿ ಗದ್ದೆ ಕಡೀಗ್ ಬಂದು ನೋಡಿದ್ರೂ ಅಸಾಮಿನೇ ಪತ್ತೆ ಇಲ್ಲ. ಇನ್ನೆಂಗೂ ವಾಪಸ್ ಹೋಗದಲ್ಲ, ನನಗ್ ಅವುರ್ನ ಅರ್ಜೆಂಟಾಗಿ ಕಾಣ್ಲೇ ಬೇಕಿತ್ತು, ಇಲ್ಲೇ ಎಲ್ಲಾರ ಇರ್ಬೌದು ಅಂದ್ಕಂಡ್... ಅಣ್ಣಾ... ಅಣ್ಣಾ..... ಅಂತ ಜೋರಾಗಿ ಕೂಗ್ದೆ. ಅವೆಂತವೋ ಹಕ್ಕಿಗಳು ಮರದಿಂದ ಬರ್ರ್..... ಅಂತ ಹಾರಿಹೋದ್ವು.. ಜೊತಿಗೇ ದಡಕ್ಕಂತೆ ಎಂತದೋ ಪ್ರಾಣಿ ನೆಲದಿಂದ ಎದ್ದಂಗಾಯ್ತು. ನಾನು ಇದೆಂತದೋ ಕಾಡು ಹಂದಿನೋ.. ಕಾಟಿನೋ ಅಂತ ಗಾಭರಿಲಿ ಯಾವ್ದಾರು ಮರ ಹತ್ತಾಣ ಅಂತ ನೋಡ್ತಿದ್ರೆ, ಅದು ಇವ್ರೇ ಮಾರಾಯ... ನೆಲದಲ್ಲಿ ಸೊಪ್ಪು ಕಣಾರ (ಟೊಂಗೆ) ಎಲ್ಲ ಗುಡ್ಡಿಗೆ ಹಾಕ್ಕೊಂಡು ಅದರೊಳಗೆ ಮಲಗಿ ಫೋಟೋ ತೆಗಿಯಕ್ಕೆ ಮಾಡ್ಕಂಡಿದ್ರು, ನಂಗೆ ಗಾಬರೀಲೂ ನಗು ಬಂತು. ಅವರು ಎದ್ದೋರೆ ‘ಯಾವೋನೊ ಅವನು, ನಾನು ಅಷ್ಟೊಂತ್ತಿಂದ ಕಾಯ್ತಾ ಇದ್ರೆ ಎಲ್ಲಾ ಹಾಳು ಮಾಡ್ದೋನು, ಇಲ್ಲಿಗ್ಯಾಕಯ್ಯ ಬಂದೆ’ ಅಂಕ ಕಣಾರ ತಗಂದು ಹೊಡಿಯೋಕೇ ಬೆರಸ್ಕಂಡ್ ಬಂದ್ರು, ನಾನು ಸಿಕ್ಕಿದ್ರೆ ಹೊಡದೇ ಬಿಡೋರೋ ಏನೋ, ನಾನು ಹೆಂಗೆ ಪದರಾಡುಹಾಕ್ದೇ (ಓಟಕಿತ್ತೆ) ಅಂದ್ರೇ ಮತ್ತೆ ಇವತ್ತೇ ನೋಡು ನೀನಿರೋಹೊತ್ಗೆ ಧೈರ್ಯವಾಗಿ ಅಲ್ಲಿಗೆ ಹೊರಟಿರೋದು” ಅಂದ.

ನಾನು ಇದೇ ಕತೆಯನ್ನು ಬೇರೊಂದು ರೂಪದಲ್ಲಿ ಇನ್ನೊಬ್ಬನ ಬಾಯಲ್ಲಿ ಕೇಳಿದ್ದೆ. ಆದ್ದರಿಂದ ಇವರಿಬ್ಬರಲ್ಲಿ ಯಾರು ಯಾರ ಕಥೆಯನ್ನು ಕದ್ದಿದ್ದಾರೆ ಎಂದು ತಿಳಿಯಲಿಲ್ಲ. ಆದರೂ ಇವನೂ ಇಷ್ಟೆಲ್ಲ ಕಥೆಕಟ್ಟಿ ನನ್ನನ್ನು ಅಲ್ಲಿಗೆ ಕರೆದೊಯ್ಯತ್ತಿರಬೇಕಾದರೆ ಏನೋ ಭೀಕರವಾದದ್ದನ್ನು ಎದುರಿಸಬೇಕಾದೀತೆಂದು ಆತಂಕವಾಯಿತು. “ನೀನು ಏನೇ ಹೇಳಿದ್ರೂ ನಾರಾಯಣ ನಂಗ್ಯಾಕೋ ನಿನ್ನ ಕಥೆ ಬಗ್ಗೆ ನಂಬಿಕೇನೇ ಬರ್ತಾಇಲ್ಲಾ ನಿನ್ನ ಮಾತು ಕೇಳ್ತಾ ನನ್ನ ಅನುಮಾನ ಇನ್ನೂ ಜಾಸ್ತಿ ಆಯ್ತು” ಎಂದೆ.

“ಅನುಮಾನಂ ಪೆದ್ದರೋಗಂ.. ಸುಮ್ನೆ ಬಾರಯ್ಯ” ಎಂದು ಹೋಟೆಲ್ ಬಿಲ್ಲನ್ನು ಅವನೇ ಪಾವತಿಸಿ, ನನ್ನನ್ನು ಕಾಫಿಯ ಋಣದಲ್ಲಿ ಸಿಲುಕಿಸಿ ಮತ್ತೆ ಬೈಕನ್ನೇರಿದ, ಅನಿವಾರ್ಯವಾಗಿ ಅವನೊಡನೆ ಹೊರಟೆ. ಬೈಕು ‘ನಿರುತ್ತರ’ ದತ್ತ ಸಾಗಿತು.

ನಾವು ಹೋದಾಗ ತೇಜಸ್ವಿ ಮನೆಯಲ್ಲೇ ಇದ್ದರು. ಮನೆಯವರೆಲ್ಲ ಮೈಸೂರಿಗೆ ಹೋಗಿದ್ದಾರೆಂದು, ಸಧ್ಯಕ್ಕೆ ತಾನೊಬ್ಬನೇ ಇದ್ದೇನೆಂದು ತಿಳಿಸಿದರು. “ಊಟಕ್ಕೆ ಏನು ಮಾಡ್ತೀರಿ?” ಎಂದದಕ್ಕೆ. ಅನ್ನವನ್ನು ಮಾಡಿಕೊಳ್ಳುತ್ತೇನೆಂದೂ, ಒಂದು ವಾರಕ್ಕಾಗುವಷ್ಟು ಸಾರನ್ನು ರಾಜೇಶ್ವರಿ ಮಾಡಿಟ್ಟು ಹೋಗಿದ್ದಾರೆಂದೂ ಹೇಳಿ ಅದಕ್ಕೆ ದಿನಾ ಒಂದಿಷ್ಟು ಉಪ್ಪು- ನೀರು, ಏನು ಬೇಕೋ ಅದನ್ನು ಹಾಕಿ ಕುದಿಸುತ್ತಾ ಇದ್ದರೆ ರಾಜೇಶ್ವರಿಯವರು ಬರುವವರೆಗೂ ಎನೂ ತೊಂದರೆ ಇಲ್ಲವೆಂದು.. ಮುಂದೆ ಅವರೇ ಬರೆದ “ಪಾಕಕ್ರಾಂತಿ”ಯ ಕೆಲವು ವಿವರಗಳನ್ನು ನೀಡಿದರು.

ಮಾತು ಮುಂದುವರೆದಂತೆ ‘ಹೇಗಿದೆ ನಿಮ್ಮ ರಂಗ ಚಟುವಟಿಕೆ’ ಎಂದು ನನ್ನಲ್ಲಿ ವಿಚಾರಿಸಿಕೊಂಡರು. ಹಾಗೇ ಮಾತು ‘ ಮೈಸೂರಿನ ರಂಗಾಯಣ’ದತ್ತ ತಿರುಗಿತು. ಆಗಿನ್ನೂ ಬಿ.ವಿ.ಕಾರಂತರೇ ರಂಗಾಯಣದ ನಿರ್ದೇಶಕರಾಗಿದ್ದರು. “ಅಲ್ಲಾ ಕಣ್ರಿ ಅವತ್ತು ನಿಮ್ಮಲ್ಲಿ ರಂಗ ಶಿಬಿರ ಮಾಡೋಕೆ ಬಂದಿದ್ದರಲ್ಲ ಹುಡುಗರು (ಮಂಡ್ಯ ರಮೇಶ್ ಮತ್ತು ಕೃಷ್ಣಕುಮಾರ್ ನಾರ್ಣಕಜೆ) ಅವ್ರಿನ್ನೂ ಅಲ್ಲೇ ಇದ್ದಾರೇನ್ರಿ?” ಎಂದರು.

“ಅಲ್ಲೇ ಇದ್ದಾರೆ ಸಾರ್” ಎಂದೆ.

“ಆ ಕಾರಂತ ಎಲ್ಲ ಸರಿ ಆದ್ರೆ ಆಡಳಿತನೇ ಸರಿಯಾಗಿ ಗೊತ್ತಿಲ್ಲ ಕಣ್ರಿ.. ಪಾಪ ಈ ಹುಡುಗರ ಭವಿಷ್ಯ ಏನು, ನಾಟಕನೇ ನಂಬ್ಕೊಂಡು ಮುಂದೆ ಏನ್ಮಾಡ್ತಾರೆ. ಎಲ್ಲ ಅವ್ಯವಸ್ಥೆ ಆಗಿದಿಯಂತಲ್ರಿ, ಇದನ್ನೆಲ್ಲ ಸರಿಯಾಗಿ ಯೋಚ್ನೆ ಮಾಡ್ದೇ ಮಾಡ್ಬಾರ್ದು, ಎಲ್ಲಾ ಬೇಜವಾಬ್ದಾರಿ ಅನ್ಸುತ್ತೆ, ನಂಗೆ ಆ ಹುಡುಗರನ್ನ ಯೋಚೆ ಮಾಡಿದ್ರೆ ಬೇಜಾರಾಗುತ್ತೆ ಕಣ್ರಿ” ಎಂದರು. ರಂಗಾಯಣದಲ್ಲಿ ಮುಂದೆ ಬರಬಹುದಾದ ಸಮಸ್ಯೆಗಳನ್ನು ಅವರು ಅಂದೇ ಊಹಿಸಿದ್ದರು. ನಮ್ಮ ಮಾತು ಹೀಗೇ ಮುಂದುವರಿಯಿತು. ಕೊನೆಗೆ ತೇಜಸ್ವಿಯರಿಗೆ ಮಾತು ಸಾಕೆನಿಸಿ 

“ಮತ್ತೇನು ಈಕಡೆ ಬಂದ್ರಿ” ಎಂದು ಮುಕ್ತಾಯದ ಸೂಚನೆ ನೀಡಿದರು.

ನಾವು ಇಷ್ಟೆಲ್ಲ ಮಾತನಾಡಿದರೂ ನಾರಾಯಣ ಗೌಡ ಮಾತ್ರ ಮೈಯೆಲ್ಲ ಮುಳ್ಳಾಗಿಸಿಕೊಂಡು ಹಲಸಿನಕಾಯಿಯಂತೆ ಕೂತಿದ್ದ.

ಆಗ ನಾನು ನಿರ್ವಾಹವಿಲ್ಲದೆ ನಾನು ಇವತ್ತು ಇಲ್ಲಿಗೆ ಬರುವ ಉದ್ದೇಶವಿರಲಿಲ್ಲವೆಂದೂ, ಈ ನಾರಾಯಣಗೌಡ ನನ್ನನ್ನು ಕರೆದುಕೊಂಡು ಬಂದನೆಂದೂ ಹೇಳಿದೆ.

ಆಗ ನಾರಾಯಣಗೌಡ ಅನಿವಾರ್ಯವೆಂಬಂತೆ ಬಾಯಿ ತೆರೆದ “ಅಣ್ಣಾ ನಿಮ್ಮಂತೋರೆಲ್ಲ ಕಷ್ಟಪಟ್ಟು ನಮ್ಮ ಈ ಹಾಳುಬಿದ್ದ ಮೂಡಿಗೆರೆಗೆ ಒಂದು ಕೃಷಿ ಬ್ಯಾಂಕು ತಂದ್ರಿ, ಅದ್ರಿಂದ ಇದು ಒಂದು ಊರು ಅಂತ ಆಯ್ತು. ಇಂದ್ರಾಗಾಂಧಿ ಬ್ಯಾಂಕನ್ನೆಲ್ಲ ರಾಷ್ಟ್ರೀಕರಣ ಮಾಡಿದ್ರಂದ ನಮ್ಮಂತೋರೆಲ್ಲ ಬ್ಯಾಂಕೊಳಗೆ ಕಾಲಿಡೋಹಂಗಾಯ್ತು, ಇಲ್ಲಾಂದ್ರೆ ಮೂಡಿಗೆರೇಲಿ ಬರೀ ಹತ್ತು ಹನ್ನೆರಡು ಜನರಿಗೆ ಮಾತ್ರ ಬ್ಯಾಂಕೊಳಗೆ ನುಗ್ಗೋಕೆ ಅವಕಾಶ ಇತ್ತು. ಆದ್ರೆ ಈಗ ನೀವೆಲ್ಲ ಇತ್ತೀಚೆಗೆ ಆ ಕಡೆಗೆ ಬರೋದು ಕಡಿಮೆ ಮಾಡಿದ್ರಿ. ಇವ್ರುನೆಲ್ಲಾ ವಿಚಾರಿಸ್ಕೊಳಣಾ ಅಂದ್ರೆ ರೈತಸಂಘನೂ ಇಲ್ಲ ಅದ್ಕೇ ಈ ಬ್ಯಾಂಕಿನೋರೆಲ್ಲ ಹಿಂಗ್ ಹೆಚ್ಚಿಕೊಂಡಿದ್ದಾರೆ. ನಾನೇನೋ ನ್ಯಾಯ ಮಾತಾಡಕ್ಕೋದ್ರೆ ಬ್ಯಾಂಕ್ ಮೇನೇಜರ್ ನಿನ್ ಮ್ಯಾಲೆ ಪೋಲಿಸ್ ಕಂಪ್ಲೇಂಟ್ ಕೊಡ್ತೀನಿ ಅಂದ. ಅಲ್ಲೇ ಇದ್ದ ಚಂದ್ರೇಗೌಡ್ರು ಮತ್ ಆ ಮಕಾನಳ್ಳಿ ಕಡೆಯೋರೆಲ್ಲಾ ಬ್ಯಾಂಕಿನ ಪರನೇ ಮಾತಾಡಿದ್ರು, ನೀವಿಲ್ದೇ ಹೋಗಿದ್ರೆ ಈ ಮೂಡಿಗೆರೆಗೆ ಕೃಷಿ ಬ್ಯಾಂಕೆಲ್ಲಿ ಬರ್ತಿತ್ತಣ್ಣ ಎಂದು ಒಂದಕ್ಕೊಂದು ಸಂಬಂಧವಿಲ್ಲದಂತೆ ತೋರುವ ಹಲವು ವಿಷಯಗಳನ್ನೆಲ್ಲಾ ಜೋಡಿಸಿ ಹೇಳುತ್ತಾ, ತೇಜಸ್ವಿಯವರನ್ನು ಯದ್ವಾತದ್ವಾ ಹೊಗಳತೊಡಗಿದ.

“ಅದೇನು ಹೇಳ್ಬೇಕೋ ಹೇಳು ಸುಮ್ನೆ ಸುತ್ತಿ ಬಳಸಿ ಮಾತಾಡ್ಬೇಡ” ಎಂದರು ತೇಜಸ್ವಿ. ಧ್ವನಿಯಲ್ಲಿ ಸಣ್ಣ ಅಸಹನೆಯಿತ್ತು.

“ಅದೇ ಅಣ್ಣ ಬ್ಯಾಂಕಲ್ಲಿ ಸ್ವಲ್ಪ ಲೋನ್ ಬಾಕಿ ಆಗಿತ್ತು. ಹಂಗಂತ ಇಡೀ ಬ್ಯಾಂಕಿಗೆ ನಾನೊಬ್ನೇ ಸುಸ್ತಿದಾರ ಅನ್ನೋತರ ಎಲ್ರ ಎದ್ರಿಗೆ, ಮ್ಯಾನೇಜರು, ಕೋರ್ಟು ಕಛೇರಿ, ಜಪ್ತಿ, ಅಂದ್ರೆ, ಹೆಂಗ್ಹೇಳಿ?. ನಂಗೂ ಸಿಟ್ಬಂತು. ನಾನೂ ಒಂದ್‍ಸೊಲ್ಪ ರಾಂಗಾದೆ. ಅಷ್ಟಕ್ಕೇ ಪೋಲಿಸಿಗೆ ಫೋನ್ ಮಾಡ್ತೀನಿ ಅಂದ್ರು. ನಾನೂ ‘ಹಂಗಾದ್ರೆ ನನ್ ಮನೆ ಜಪ್ತಿ ಮಾಡೇ ತಗಳಿ ನಿಮ್ ಹಣವ’ ಅಂದೆ. ಅಲ್ಲಾ ಅಲ್ಲಿದ್ದೋರೆಲ್ಲಾ ನನ್ನಂಗೆ ಸುಸ್ತಿದಾರ್ರೇ, ಅವ್ರೆಲ್ಲಾ ನಂದೇ ತಪ್ಪು ಅನ್ನೋತರ ಮಾತಾಡದ, ಅದ್ಕೇ ನೀವೊಂಸೊಲ್ಪ ಬುದ್ದಿ ಹೇಳಿ ಆ ಮ್ಯಾನೇಜರಿಗೆ ಅವುಂದ್ಯಾಕೋ ಅತಿಯಾಯ್ತು” ಎಂದ. ಮ್ಯಾನೇಜರ್ ಬಗ್ಗೆ ಹೇಳುವಾಗ ನಾರಾಯಣಗೌಡನ ಮಾತು ಅವನ ಸಿಟ್ಟಿಗೆ ಅನುಗುಣವಾಗಿ ಏಕವಚನ ಬಹುವಚನಗಳ ಮಧ್ಯೆ ಹೊಯ್ದಾಡುತ್ತಿತ್ತು.

“ಅಲ್ಲ ಕಣಯ್ಯ ನಂಗೀಗ ಅರ್ಥ ಆಯ್ತು ಆ ಮೇನೇಜರ್ ನಂಗೂ ಫೋನ್ ಮಾಡಿದ್ರು, ನೀನು ಅವ್ರ ಬಟ್ಟೆ ಬಿಚ್ಚಿ ಮೆರವಣಿಗೆ ಮಾಡ್ತೀನಿ ಅಂದ್ಯಂತೆ, ‘ತೇಜಸ್ವಿ ನಂ ನೆಂಟ್ರು ಗೊತ್ತಾ’ ಅಂತ ಹೆದರ್ಸೋತರ ಹೇಳಿದಿಯಂತೆ. ನಾನೇ ಹೇಳ್ದೆ ನನ್ನ ಹೆಸರು ಹೇಳ್ಕೊಂಡು ಏನಾದರೂ ಬೇಡದ್ದು ಮಾಡಿದ್ರೆ ಪೋಲಿಸಿಗೆ ಕೊಡಿ ಅಂತ, ನಿಂಗೇನಾದ್ರು ತಲೆಗಿಲೆಕೆಟ್ಟಿದಿಯೇನಯ್ಯ, ಬ್ಯಾಂಕಿನೋರು ಸಾಲ ಕೊಡಬೇಕಾದ್ರೆ ನಿನ್ನತ್ರ ಎಲ್ಲಾದಕ್ಕೂ ಸೈನ್ ತಗೊಂಡೇ ಅಲ್ವಾ ಕೊಟ್ಟಿರೋದು ಸುಮ್ನೆ ಗಲಾಟೆಮಾಡಿ ಒಂದೆರಡು ಕೇಸು ಮೈಮೇಲೆ ಎಳ್ಕೊಳ್ತೀಯಾ ಅಷ್ಟೆ, ಏನಾದ್ರೂ ಮಾಡಿ ಸಾಲ ತಿರ್ಸೋಕ್ಕಾಗುತ್ತೋ ನೋಡು” ಎಂದು ಹೇಳಿ, ಸ್ವಲ್ಪ ಯೋಚಿಸಿ, “ಈ ದೇಶದಲ್ಲಿ ರೈತ ಒಂದುಸಾರಿ ಸಾಲಮಾಡಿದ್ರೆ ಅದು ತೀರಿದ್ದೇ ಕಾಣೆ, ಅದ್ಯಾಕಯ್ಯ ಅಷ್ಟೊಂದು ಸಾಲ ಮಾಡಿದ್ದೀಯಂತೆ” ಎಂದರು.

“ಅಣ್ಣಾ ಅದೊಂದು ಕತೆ. ಈಗ ಮೂರನೇ ವರ್ಷದಲ್ಲಿ ಒಂದೂವರೆ ಲಕ್ಷ ಲೋನ್ ಮಾಡಿ ಹೊಳೆಪಕ್ಕದ ನಾಕೆಕರೆಗೆ ಪಚ್ಚಬಾಳೆ ಹಾಕಿದ್ದೆ, ಎಂತಾ ಚನ್ನಾಗಿ ಬಂದಿತ್ತೂ ಅಂತೀರಿ, ಹಂಗೇ ಮೈನ್ ರೋಡಿಗೆ ಕಾಣದಲ್ಲ, ಎಲ್ಲಾರೂ ಕೇಳೋರೆ ‘ಅದುಯಾರ್ದು ಮಾರಾಯ್ರೆ ಪಚ್ಚಬಾಳೆ, ಒಂದೊಂದು ಗೊನೆ ಏನಿಲ್ಲ ಅಂದ್ರೂ ಇಪ್ಪತೈದ್ ಕೇಜಿ ಮೇಲೆ ಬೀಳುತ್ತೆ’ ಅನ್ನೋರು. ಹಂಗ್ ಬಂದಿತ್ತು ಬಾಳೆ. ನೋಡೀ ನೋಡೀ ಜನಗಳ್ದೇ ಕಣ್ಣಾಯ್ತೋ ಏನೋ, ಆ ವರ್ಷ ಡಿಸೆಂಬರಲ್ಲಿ ಬಿತ್ತಲ್ಲ ಚಳಿ, ಒಂದೇವಾರದ ಚಳೀಗೆ ಬಾಳೆ ಎಲ್ಲಾ ಕೆಂಪಾಗಿ ಬತ್ತಿದಂಗಾಯ್ತು, ಆ ಮೇಲೆ ಏನೆಲ್ಲಾ ಮಾಡ್ದೆ, ಕೊನೀಗ್ ನೋಡಿದ್ರೆ ಗೊನೆಗಳೆಲ್ಲ ಪೀಚಾಗಿ ಏಳ್ ಕೇಜಿ ಎಂಟು ಕೇಜಿ ಮೇಲ್ ಬರ್ಲೇ ಇಲ್ಲ. ಪೂರಾ ಲಾಸಾಯ್ತು. ಇನ್ನು ಬ್ಯಾಂಕಿನ ಕಂತೆಲ್ಲಿ ಕಟ್ಟಲಿ” ಎಂದ.

ಚಳಿ ತೀರಾ ಹೆಚ್ಚಾದರೆ ನಮ್ಮಲ್ಲಿರುವ ಅನೇಕ ಜಾತಿಯ ಸಸ್ಯಗಳ ಬೇರುಗಳು ಕೆಲಸವನ್ನೇ ನಿಲ್ಲಿಸಿಬಿಡುವುದರಿಂದ ಈರೀತಿ ಆಗುತ್ತದೆಂದೂ, ಇದು ಯಾರ ಕಣ್ಣಿನ ಪ್ರಭಾವವೂ ಅಲ್ಲವೆಂದೂ ತೇಜಸ್ವಿ ವಿವರಿಸಿದರು. 

ಆ ವರ್ಷ ನಾನೂ ಕೂಡಾ ಸ್ವಲ್ಪ ಪಚ್ಚಬಾಳೆ ಬೆಳೆದಿದ್ದೆನೆಂದೂ, ಆ ಸಂದರ್ಭದಲ್ಲಿ ಬಾಳೆಗೆ ಚೆನ್ನಾಗಿ ನೀರು ಹಾಯಿಸಿದರೆ ಚಳಿಯ ಪ್ರಭಾವ ಕಮ್ಮಿಯಾಗುತ್ತದೆಂದೂ ನನಗೆ ಹಿರಿಯರೊಬ್ಬರು ಹೇಳಿದ್ದರು. ಅದರಂತೆ ನಾನೂ ಬಾಳೆಗೆ ಏಳೆಂಟು ದಿನಗಳ ಕಾಲ ಸ್ಪ್ರಿಂಕ್ಲರ್ ಮೂಲಕ ನೀರಾವರಿ ಮಾಡಿಸಿದ್ದೆ. ಇದರಿಂದ ಬಾಳೆಗೆ ಆದಹಾನಿ ಬಹಳಷ್ಟು ಕಡಿಮೆಯಾಗಿತ್ತು. ಈ ವಿಚಾರವನ್ನು ನಾನು ಅವರಿಗೆ ತಿಳಿಸಿದೆ.

ಹೌದು ಅದೂ ಒಂದು ಪರಿಣಾಮಕಾರಿ ವಿಧಾನವೇ ಎಂದರು.

“ಅಣ್ಣ ಅಲ್ಲಿಗೇ ನಿಂತಿಲ್ಲ ನನ್ ಕತೆ, ಹೆಂಗೂ ಇನ್ನು ಈ ಬಾಳೆಕಾಯಿ ಮಾರಿ ಬ್ಯಾಂಕ್ ಸಾಲ ತೀರ್ಸÀದು ಕನಸು ಅಂದ್ಕಂಡು ಇನ್ನೂ ಒಂದು ಲಕ್ಷ ಸಾಲ ತಗಂಡು, ಸಕಲೇಶಪುರದಲ್ಲಿ ಕೃಷ್ಣ ಅಂತಿದ್ದಾನೆ ನನ್ ಫ್ರೆಂಡು, ಚಕ್ಕೆ ವ್ಯಾಪಾರ ಮಾಡ್ತಾನೆ. ಅವುನು ಜೊತೆ ಪಾರ್ಟನರ್ ಆಗಿ ಸುಂಡೆಕೆರೆ ಹತ್ರ ಒಂದು ಸಾಬರ ಎಸ್ಟೇಟಿನ ಚಕ್ಕೆ ಕಂಟ್ರಾಕ್ಟ್ ಮಾಡುದ್ವು, ಎಲ್ಲಾ ಸರಿಯಾಗಿದ್ರೆ ನಾಕ್-ನಾಕ್ ಲಕ್ಷ ಲಾಭ ಉಳ್ದಿರೋದು. ಚಕ್ಕೆ ಎಲ್ಲಾ ಕೆತ್ತಿ ಇನ್ನೇನು ಪರ್ಮಿಟ್ ಸಿಕ್ಕೋ ಹೊತ್ತಿಗೆ ಅದೇನೋ ಕಾಂಪ್ಲಿಕೇಷನ್ ಆಗಿ ಚಕ್ಕೆ ಎಲ್ಲಾ ಪಾರೆಸ್ಟ್‍ನೋರು ಸೀಜ್ ಮಾಡಿದ್ರು. ಅದೆಲ್ಲಾ ಸರಿಮಾಡಿ ನಾವು ಬಚಾವಾಗಿ ಚಕ್ಕೆ ಮಾರೋಹೊತ್ತಿಗೆ ಅಲ್ಲಿಗಲ್ಲಿಗೆ ಸರಿಯಾಗಿ, ಕೈ ಕಾಲಿಯಾಯ್ತಣ್ಣ. ಅಲ್ಲಾ ಆ ಬ್ಯಾಂಕ್ ಮ್ಯಾನೇಜರು ಎಲ್ರ ಎದುರಿಗೆ ನನ್ ಮರ್ಯಾದಿ ಕಳುದ್ರೆ ಸಿಟ್ ಬರಲ್ವಣ್ಣ, ಅದ್ಕೇ ನಿಮ್ ಹೆಸರು ಹೇಳ್ದೆ, ಅವಾಗ ಸ್ವಲ್ಪ ಸುಮ್ನಾದ” ಎಂದು ಕರುಣಾಜನಕವಾಗಿ ತನ್ನ ಕತೆಯನ್ನು ಹೇಳಿದ. 

“ಸರಿ ಮಾರಾಯ ಮತ್ತೀಗ ಸಾಲಕ್ಕೆಂತ ಮಾಡ್ತೀಯಾ” ಎಂದು ತೇಜಸ್ವಿ.

“ಇನ್ನೆಂತದು ಮಾಡ್ಳಿ, ನನ್ನ ಹೊಳೆ ಸಾಲು ಗದ್ದೆ ಮೇಲೆ ತುಂಬಾ ಜನಕ್ಕೆಕಣ್ಣಿರಾದು, ಅದರಲ್ಲೇ ಎರಡು ಎಕರೆ ಮಾರ್ಬೇಕು ಅಂತಿದ್ದೀನಿ. ಅಲ್ಲಿವರ್ಗೂ ಸ್ವಲ್ಪ ಸುಮ್ನಿರೋಕೇ ಆ ಮ್ಯಾನೇಜರಿಗೆ ಹೇಳಿ” ಎಂದ.

“ಸರಿ ಆದ್ರೆ ಪದೇ ಪದೇ ನನ್ನ ಹೆಸರು ಹೇಳಕೊಂಡು ತಿರುಗ್ಬೇಡಾ, ನೀವೆಲ್ಲ ಒಂದು ಶಿಸ್ತು ಕಲೀಬೇಕು ಕಣ್ರಯ್ಯ ಇಲ್ಲಾಂದರೆ ಯಾರೂ ನಮ್ಮ ಸಹಾಯಕ್ಕೆ ಬರೋದೇ ಇಲ್ಲ, ಸರ್ಕಾರವಂತೋ ಬರೋದೇ ಇಲ್ಲ, ತಿಳ್ಕಳಿ” ಎಂದರು.

ನಂತರ ಅವರೇ ಒಂದಷ್ಟು ಕಾಫಿ ಮಾಡಿ ತಂದು ಕೊಟ್ಟರು. ಕಾಫಿ ಕುಡಿದು ನಾವು ಹೊರಡುವಾಗ ನಾರಾಯಣ ಗೌಡನಿಗೆ. “ಹೆಂಗಾದ್ರು ಒಂದ್ಸಾರಿ ಬಚಾವಾಗೋ ದಾರಿ ಹುಡ್ಕು” ಎಂದರು. 

ಆಗಲೇ ಗಂಟೆ ಆರಾಗುತ್ತ ಬಂದಿತ್ತು. ನಾರಾಯಣ ಗೌಡ ನನಗೆ ಕೊಟ್ಟ ಮಾತಿನಂತೆ ನನ್ನನ್ನು ಬೈಕಿನಲ್ಲಿ ಹೇರಿಕೊಂಡು ಸಕಲೇಶಪುರದ ಹಾದಿ ಹಿಡಿದ. ಹಾನುಬಾಳಿಗೆ ಬರುತ್ತಿದ್ದಂತೆ ಇಲ್ಲೇ ‘ಸಾಯಂಕಾಲದ ಕಾರ್ಯಕ್ರಮ’ ಮುಗಿಸೋಣವೆಂದೂ, ನಿನ್ನನ್ನು ಊರಿಗೆಬಿಟ್ಟು ತಾನು ಸಕಲೇಶಪುರಕ್ಕೆ ಬದಲಾಗಿ ಹೆಗ್ಗದ್ದೆಗೆ ನೆಂಟರಮನೆಗೆ ಹೋಗುವುದಾಗಿಯೂ ತಿಳಿಸಿದ. ಸಾಯಂಕಾಲದ ಕಾರ್ಯಕ್ರಮಕ್ಕೆ ಕುಳಿತಿದ್ದಾಗ ನಾರಾಯಣ ಗೌಡನಿಂದ ತಿಳಿದ ಸತ್ಯವೆಂದರೆ ಚಕ್ಕೆ ವ್ಯಾಪಾರದಲ್ಲಿ ಆದನಷ್ಟವನ್ನು ತುಂಬಿಕೊಳ್ಳಲು ಅವನು ಇಸ್ಪೀಟಾಡಲು ಪ್ರಾರಂಭಿಸಿ ಈಗ ಅದೇ ಚಟವಾಗಿ ಬಿಟ್ಟಿತ್ತು. ಎಲ್ಲೆಲ್ಲಿ ‘ರಮ್ಮಿ ನಾಕೌಟ್’ ಜಾತ್ರೆಗಳಾಗಲೀ ಅಲ್ಲೆಲ್ಲ ಹೋಗಿ ಇಸ್ಪೀಟಾಡುತ್ತಿದ್ದ. ಮತ್ತಷ್ಟು ಹಣವನ್ನು ಕಳೆದುಕೊಂಡಿದ್ದ. ಇದರಿಂದ ಅವನ ಆರ್ಥಿಕ ಪರಿಸ್ಥಿತಿ ತುಂಬ ಹದಗೆಟ್ಟು ಹೋಗಿತ್ತು. ಅವನು ಹತಾಶನಾದಂತಿದ್ದ. ಏನೇನೋ ಸುಳ್ಳುಗಳನ್ನು ಹೇಳುತ್ತಾ ಎಲ್ಲರನ್ನೂ ನಂಬಿಸಲು ಪ್ರಯತ್ನಿಸುತ್ತಿದ್ದ. 

ಇದನ್ನು ಊಹಿಸಿಯೇ ತೇಜಸ್ವಿಯವರು “ಶಿಸ್ತು ಕಲೀಬೇಕು ಕಣ್ರಯ್ಯ” ಎಂದಿರಬೇಕು.

ಜೂನ್ 19, 2015

ಸರ್ಕಾರಕ್ಕೆ ರೈತನೊಬ್ಬನ ಡೆತ್ ನೋಟ್.

ಸರ್ಕಾರಕ್ಕೆ,
ಶ್ರೀರಂಗಪಟ್ಟಣ ತಾಲ್ಲೂಕ್ ಚೆನ್ನೇನಹಳ್ಳಿ ಗ್ರಾಮದ ಸಿ.ರಾಜೇಂದ್ರನಾದ ನಾನು ವ್ಯವಸಾಯಗಾರನಾಗಿ ಅನೇಕ ಬೆಳೆಗಳನ್ನು ಮಾಡಿದ್ದೇನೆ. ಈಗ ಹಾಲಿ ಕಬ್ಬು, ಬಾಳೆ ಮತ್ತು ತರಕಾರಿ ಬೆಳೆಗಳನ್ನು ಮಾಡಿರುತ್ತೇನೆ. ಯಾವ ಬೆಳೆಗೂ ಬೆಲೆ ಇಲ್ಲದೆ ವಿಪರೀತ ನಷ್ಟ ಹೊಂದಿರುತ್ತೇನೆ. ಆದ್ದರಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ.
ಸಿ.ರಾಜೇಂದ್ರ
ಚೆನ್ನೇನಹಳ್ಳಿ
18/06/2015

ಜೂನ್ 2, 2015

ಯೋಗೇಶ್ವರನೆಂಬ ಭಗೀರಥನೂ ಚನ್ನಪಟ್ಟಣದ ಕೆರೆಗಳು!

malur lake, channapatna
ಮಳೂರು ಕೆರೆಗೆ ನೀರು ಹರಿಸುತ್ತಿರುವ ದೃಶ್ಯ
ಸಿ.ಪಿ. ಯೋಗೇಶ್ವರ್ ಮೊದಲು ಖ್ಯಾತಿಗೆ ಬಂದಿದ್ದು ಸಿನಿಮಾ ತಾರೆಯಾಗಿ. ಉತ್ತರ ಧ್ರುವದಿಂ ದಕ್ಷಿಣ ದ್ರುವಕೂ, ಸೈನಿಕ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಅದ್ಭುತ ನಟರೇನಲ್ಲ! ನಂತರ ರಾಜಕಾರಣಿಯಾಗಿ ಶಾಸಕರಾಗಿ ಚನ್ನಪಟ್ಟಣದಿಂದ ಆಯ್ಕೆಯಾಗುತ್ತಲೇ ಇದ್ದಾರೆ. ಬಹುತೇಕ ಕರ್ನಾಟಕದ ಎಲ್ಲಾ ಪಕ್ಷಗಳಿಂದಲೂ ಸ್ಪರ್ಧಿಸಿಬಿಟ್ಟಿದ್ದಾರೆ! ಕರ್ನಾಟಕದಲ್ಲಿ ಅಸ್ತಿತ್ವದಲ್ಲೇ ಇಲ್ಲದಿದ್ದ ಸಮಾಜವಾದಿ ಪಕ್ಷದ ಸೈಕಲ್ಲನ್ನೂ ಒಮ್ಮೆ ಏರಿ ಇಳಿದಿದ್ದಾರೆ! ಮತ್ತು ಯಾವ ಪಕ್ಷದಲ್ಲಿ ನಿಂತರೂ ಗೆಲುವು ಸಾಧಿಸಿದ್ದಾರೆ, ಸಮಾಜವಾದಿ ಪಕ್ಷದಿಂದ ನಿಂತಾಗಲೂ ಗೆಲುವು ಅವರದ್ದೇ! ಭ್ರಷ್ಟಾತೀತ ವ್ಯಕ್ತಿಯಾ ಎಂದು ನೋಡಿದರೆ ಅದೂ ಇಲ್ಲ. ಸಿನಿಮಾಗಳಿಗಿಂತ ಹೆಚ್ಚು 'ಖ್ಯಾತಿ'ಯನ್ನು ಯೋಗೇಶ್ವರ್ ಪಡೆದದ್ದು ಮೆಗಾ ಸಿಟಿಯೆಂಬ ರಿಯಲ್ ಎಸ್ಟೇಟ್ ವಂಚನೆಯ ಮುಖಾಂತರ. ಕನ್ನಡದ ಟ್ಯಾಬ್ಲಾಯ್ಡ್ ಪತ್ರಿಕೆಗಳ ಮೂಲಕ ಮೆಗಾಸಿಟಿಯ ದಗಾಕೋರ ಎಂದೇ ಯೋಗೇಶ್ವರ್ ಖ್ಯಾತ! ವರುಷವಿಡೀ ಪತ್ರಿಕೆ, ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳದೆಯೇ, ಇಷ್ಟೆಲ್ಲ ಭ್ರಷ್ಟಾಚಾರದ ಆರೋಪ ಹೊತ್ತ ಯೋಗೇಶ್ವರ್, ಪಕ್ಷದಿಂದ ಪಕ್ಷಕ್ಕೆ ಚಂಗನೆ ಹಾರುತ್ತಿದ್ದರೂ ಗೆಲುವು ಕಾಣುವುದು ಹಿಂದಿನ ಕಾರಣವೇನು? 'ನಮ್ ಜನ ಸರೀ ಇಲ್ಲ ಕಣ್ರೀ. ಇಂಥೋರ್ನೆಲ್ಲ ಗೆಲ್ಲುಸ್ತಾರೆ ನೋಡಿ' ಎಂದು ತೀರ್ಪು ಕೊಡುವ ಮೊದಲು ಚನ್ನಪಟ್ಟಣವನ್ನು ಬೇಸಿಗೆಯಲ್ಲೊಮ್ಮೆ ಸುತ್ತಬೇಕು. ಯೋಗೇಶ್ವರ್ ಗೆಲುವಿನ ರಹಸ್ಯ ತಿಳಿಯುತ್ತದೆ.
cp yogeshwar
ಸಿ.ಪಿ.ಯೋಗೇಶ್ವರ್
ಉತ್ತಮ ರಸ್ತೆ, ಅತ್ಯುತ್ತಮ ಯೋಜನೆ, ಅದೂ ಇದೂ ಎಲ್ಲವೂ ಸರಿಯೇ, ಆದರೆ ಇವೆಲ್ಲಕ್ಕಿಂತ ಮುಖ್ಯವಾದದ್ದು ಮೂಲಭೂತವಾದ ಅಂಶಗೊಳಲ್ಲೊಂದಾದ ನೀರು. ಕೈಗಾರಿಕೆಗಳ ಹೆಚ್ಚಳದ ಮಧ್ಯೆಯೂ ಕೃಷಿ ಮುಖ್ಯವಾಗಿರುವ ದೇಶವಾದ್ದರಿಂದ ನೀರಿನ ಮಹತ್ವ ಮತ್ತಷ್ಟು ಹೆಚ್ಚು. ಕಡು ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾದಾಗ ಕೆರೆಗಳೆಲ್ಲ ಬತ್ತಿ ಹೋದಾಗ ಅದನ್ನು ತುಂಬಿಸುವ ವ್ಯಕ್ತಿಯನ್ನು ಭಗೀರಥನೆಂದು ತಿಳಿಯುವುದು ತಪ್ಪಲ್ಲ. ಯೋಗೇಶ್ವರ್ ಗೆಲುವಿನ ರಹಸ್ಯವೇ ಇದು. ಬೇಸಿಗೆಯ ಪ್ರಾರಂಭವಾಗುತ್ತಿದ್ದಂತೆ ಹತ್ತಿರದ ನದಿಗಳಿಂದ ಕೆರೆಗಳಿಗೆ ನೂರಿಪ್ಪತ್ತು ಹೆಚ್.ಪಿಯ ಮೋಟಾರಿನ ಸಹಾಯದೊಂದಿಗೆ ನೀರು ತುಂಬಿಸಲಾಗುತ್ತದೆ. ಊರಿನವರಿಗೆ ಕುಡಿಯುವ ನೀರು ದೊರೆಯುತ್ತದೆ, ಬೇಸಿಗೆ ಕೃಷಿಗೂ ಸಹಾಯವಾಗುತ್ತದೆ ಮತ್ತು ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗುತ್ತದೆ. 
kanva reservoir
ಕಣ್ವಾ ಜಲಾಶಯಕ್ಕೆ ನೀರು ಹರಿದಾಗ
ಕೆರೆಗಳನ್ನೇ ತುಂಬಿಸುತ್ತಿದ್ದವರು ಈ ಸಲ ಮತ್ತಷ್ಟು ಆಸಕ್ತಿ ತೋರಿ ಬಳಲಿ ಬರಡಾಗಿ ಬೆಂಡಾಗಿ ಹೋಗಿದ್ದ ಕಣ್ವ ಜಲಾಶಯವನ್ನೂ ತುಂಬಿಸಲು ಶ್ರಮಿಸಿದ್ದಾರೆ! ಕಾವೇರಿ ನದಿಯಿಂದ ಏತ ನೀರಾವರಿ ಯೋಜನೆಯ ಮೂಲಕ ಕಣ್ವಾ ಜಲಾಶಯವನ್ನು ತುಂಬಿಸಿದ್ದಾರೆ. ನೈಸರ್ಗಿಕವಾಗಿ ಬರಡಾಗುವ ನೀರಿನ ಮೂಲವನ್ನು ಕೃತಕವಾಗಿ ತುಂಬಿಸುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಮನುಷ್ಯ ಮಾಡುವ ಬಹುತೇಕ ಯಾವ ಕೆಲಸವೂ ಪರಿಸರಕ್ಕೆ ಪ್ರಕೃತಿಗೆ ಪೂರಕವಾಗಿರುವುದಿಲ್ಲ. ಕೃತಕವಾಗಿ ನೀರು ತುಂಬಿಸುವ ಪ್ರಕ್ರಿಯೆ ಕೂಡ ಪ್ರಕೃತಿಗೆ ತನ್ನದೇ ರೀತಿಯಲ್ಲಿ ಹಾನಿಯುಂಟುಮಾಡುತ್ತದೆ. ಇತರೆ ಹಾನಿಕಾರಕ ಕೆಲಸಗಳಿಗೆ ಹೋಲಿಸಿದರೆ ಇದು ಇದ್ದುದರಲ್ಲಿ ವಾಸಿ! ನೀರು ತುಂಬಿಸುವುದಕ್ಕೆ ತೋರುವ ಆಸಕ್ತಿಯನ್ನು ವರುಷದ ಇನ್ನಿತರೆ ತಿಂಗಳುಗಳಲ್ಲಿ ಅನ್ಯ ಕೆಲಸಗಳಿಗೂ ಯೋಗೇಶ್ವರ್ ತೋರಿಸಲಿ ಎನ್ನುವುದು ಜನರ ಆಶಯ.
kanva reservoir
ನೀರ್ದುಂಬಿದ ಕಣ್ವ

ಜೂನ್ 1, 2015

ಶಾಲೆಯ ಮೇಲೊಂದು ಹೊಲವ ಮಾಡಿ......

terrace garden
ವಿಯೆಟ್ನಾಮಿನ ಹೊ ಚಿ ಮಿನ್ ನಗರದ ಬಳಿ ನಿರ್ಮಿಸಲಾಗಿರುವ ಹೊಸ ಶಾಲೆ ತನ್ನ ವಿನ್ಯಾಸದಿಂದ ಗಮನ ಸೆಳೆಯುತ್ತಿದೆ. ಅದ್ಭುತ ವಿನ್ಯಾಸದ ಕಟ್ಟಡಗಳೀಗ ಅಪರೂಪವಲ್ಲವಾದರೂ ಈ ಶಾಲೆ ಗಮನ ಸೆಳೆಯಲು ಕಾರಣ ಮೂರು ಸಾವಿರದ ಎಂಟುನೂರು ಚದರ ಅಡಿಯ ಸೂರನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಲಾಗಿದೆ! ಕೃಷಿ ಭೂಮಿಯನ್ನು ನಿರಂತರವಾಗಿ ಕೃಷಿಯೇತರ ಚಟುವಟಿಕೆಗಳಿಗೆ ಉಪಯೋಗಿಸುವುದು 'ಆಧುನಿಕ' ಜಗತ್ತೆಂದು ಕರೆದುಕೊಳ್ಳಲು ಹವಣಿಸುವ ಎಲ್ಲಾ ದೇಶಗಳಲ್ಲಿ ಕಂಡುಬರುವ ಸಾಮಾನ್ಯ ಪರಿಸ್ಥಿತಿ. ಕೃಷಿ ಮತ್ತು ಹಳ್ಳಿ ಸಮಾನಾರ್ಥಕವಾಗಿಯೇ ಉಪಯೋಗಿಸುತ್ತಿದ್ದ ಪದಗಳು. ನಗರೀಕರಣದ ಪ್ರಭಾವದಿಂದ ಹಳ್ಳಿಗಳ ವಿಸ್ತೀರ್ಣ ಮತ್ತು ತತ್ ಪರಿಣಾಮವಾಗಿ ಕೃಷಿ ಭೂಮಿಯ ವಿಸ್ತೀರ್ಣದಲ್ಲಿ ಗಾಬರಿ ಹುಟ್ಟಿಸುವಷ್ಟು ಕಡಿತವಾಗುತ್ತಿದೆ. ಇದಕ್ಕೊಂದು ಪರ್ಯಾಯವೆಂಬಂತೆ ಇತ್ತೀಚಿನ ದಿನಗಳಲ್ಲಿ ಖ್ಯಾತವಾಗುತ್ತಿರುವುದು ನಗರ ಕೃಷಿ. 
vietnam roof garden
ವಿಯೆಟ್ನಾಂ ಕೂಡ ಈ ರೀತಿಯ ಕೃಷಿ ಭೂಮಿಯ ಅವಸಾನಕ್ಕೆ ಹೊರತಾಗಿಲ್ಲ. ಕೈಗಾರಿಕೀಕರಣ ಮತ್ತು ನಗರೀಕರಣ ಪ್ರಕ್ರಿಯೆ ವೇಗ ಪಡೆಯಲಾರಂಭಿಸಿದಂತೆ ಭೂಮಿಯೊಡನೆಯ ಸಂಬಂಧವನ್ನು ಕಳೆದುಕೊಳ್ಳುವವರು ಮಕ್ಕಳು. ಭಾರತದಲ್ಲೀಗ ಮೂವತ್ತರ ಆಸುಪಾಸಿನಲ್ಲಿರುವ 'ಓದಿ' 'ಕೆಲಸ' ಹುಡುಕಿಕೊಂಡ ನಮಗೇ ಹೆಚ್ಚು ಕಡಿಮೆ ಭೂಮಿಯೊಡನೆ ಸಂಪರ್ಕ ಕಡಿದು ಹೋಗಿದೆ. ಇನ್ನು ಈಗಿನ ಮಕ್ಕಳಿಗೆ ಗಿಡದಲ್ಲಿ ಬೆಳೆಯುವುದ್ಯಾವುದು, ಮರದಲ್ಲಿ ಬೆಳೆಯುವುದ್ಯಾವುದು ಎಂಬುದರ ಅರಿವೂ ಸಿಗುತ್ತಿಲ್ಲ, ಪುಸ್ತಕಗಳಲ್ಲಿ ಗಟ್ ಹಾಕಿದ್ದು ಹೆಚ್ಚು ದಿನ ಉಳಿಯುವುದಿಲ್ಲ. ವಿಯೆಟ್ನಾಮಿನಲ್ಲೂ ಅದೇ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆಗಳಿವೆ. ಓದುವ ಸಲುವಾಗಿ ನಗರದ ಮಕ್ಕಳು ಕೃಷಿಯಿಂದ ವಂಚಿತರಾಗಬಾರದೆಂಬ ಕಾರಣದಿಂದ ಇಂತಹುದೊಂದು ಅದ್ಭುತ ಶಾಲೆ ಕಟ್ಟಲಾಗಿದೆ. ಹತ್ತಿರದ ಶೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವವರ ಮಕ್ಕಳು ಈ ಶಾಲೆಯ ವಿದ್ಯಾರ್ಥಿಗಳು. ನಿಯಮಿತ ಪಾಠದ ಜೊತೆ ಜೊತೆಗೆ ಕೃಷಿಯ ಪಾಠವೂ ಇರುತ್ತದೆ ಮತ್ತಾ ಪಾಠ ತರಗತಿಯೊಳಗೆ ಸೀಮಿತವಾಗದೆ ತರಗತಿಯ ಮೇಲೆ ತಾರಸಿಯಲ್ಲಿ ಮುಂದುವರೆಯುತ್ತದೆ. 
urban farming

school garden

ನೀರಿನ ಮರುಪೂರಣ, ಸೌರ ವಿದ್ಯುತ್ ಶಕ್ತಿಯ ಬಳಕೆಗಳೆಲ್ಲವೂ ಪರಿಸರದ ಮೇಲಾಗುವ ಹಾನಿಯನ್ನು ಕಡಿಮೆಗೊಳಿಸುವ ಅಂಶಗಳು. ಅವುಗಳು ಅನೇಕ ಕಡೆ ಸಾಮಾನ್ಯವಾದರೂ ಶಾಲೆಯ ತಾರಸಿಯಲ್ಲಿ ಕೃಷಿ ಕೆಲಸಕ್ಕೆ ಪ್ರೋತ್ಸಾಹ ಕೊಡುವುದು ವಿಶೇಷವೇ ಸರಿ. ಅದರ ಉದ್ದೇಶ ಪ್ರಕೃತಿ ಮತ್ತು ಮಕ್ಕಳ ಸಂಬಂಧವನ್ನು ಗಟ್ಟಿಗೊಳಿಸುವುದಕ್ಕಾಗಿ ಎಂಬ ಅಂಶ ಮತ್ತಷ್ಟು ಸಂತಸ ತರುವಂತಹುದು. ನಮ್ಮಲ್ಲೂ ಇಂಥ ಶಾಲೆಗಳನ್ನು ನಿರ್ಮಿಸುವುದು ಒಳ್ಳೆಯದಲ್ಲವೇ?!
garden children
ಸುದ್ದಿಮೂಲ: John Vibes, trueactivist.com 
ಈ ಮಾಹಿತಿಯ ಅರಿವಾಗಿದ್ದು ಜಿ.ಎನ್.ನಾಗರಾಜ್ ರವರಿಂದ. ಅವರಿಗೆ ಧನ್ಯವಾದಗಳು

ಮೇ 15, 2015

Trash plant containers!

trash plant container
Beginning!
Ashok K R
The easiest and quickest way to make our terrace/ balcony garden greener is to purchase the ‘ready to water’ plants from nearby nursery, no muddy hands. Easier method is to buy some well built ceramic/ plastic pots and start planting the seeds/ seedlings. Using ‘waste’ items in and around home to build plant container is tougher, yet exciting and creative method. Old buckets, Paint buckets (stronger and tougher) are commonly used to grow all varities of plants. Large paint buckets can be successively used to grow ‘trees’. When all old plastic items were exhausted to grow chilly plant and some flowers i started looking for other trash which can be converted to plant container with minimal expenditure. Used some plastic bottles, but somehow still i am finding it difficult to grow some plant in them. Finally my eyes fell on old, unused, partially destroyed wooden door which was bearing the brunt of all three seasons in backyard. 

Send your innovative ideas of terrace gardening to hingyake@gmail.com

DIY plant container
Plastic bush to raise the door
Using a wooden door has its advantages and disadvantages. I had no doubt that the door will bear the weight of the potting media and the plants but placing the door directly on the floor of the terrace means continous wetness beneath the door which might seep through the roof. Problem would be solved by creating a small gap between the door and the floor. Since i could not find any trash to heighten the door, i thought of alternatives. There were few cement bricks lying in the roof but if the height is more then stability will be less. Finally i decided to buy 6 plastic bush from nearby hardware store and fixed it to the door with screws. 2 inches of gap below the door is good enough for cleaning purposes.
DIY plant container
Good enough space for cleaning
Took 6 unequal wooden bars from Home Trash store! Fixed it vertically at the ends and in the middle of the door. Ofcourse opposite to the plastic bush! Now the door looked like container and only thing missing was side wall to support the potting media.
wooden plant container
Vertical wooden bars
For side wall i opted an old plastic tarpaulin sheet and tied it to the vertical wooden bars. (Now after seeing the status of other tarpaulin sheet i have decided not to use them in future. Weather will wither the sheets in a year or so and its almost impossible to remove the tiny bits of plastic from the potting media)
plant container innovative ideas
Final makeover with seedlings! Used some waste paper carton to provide additional support to side walls
Potting media consisted of red soil, cocopeat and kitchen waste compost. Filled the door, now a container, with potting media upto 1 – 11/2 feet. Fortunaltely, the plastic bush and the plastic sheet did not broke! Shifted and planted 3 chilly and one okra seedlings from small containers to the newly made Trash plant container. Its 3 months since i prepared this container. It has withstood the heavy rains last month. Okra plant was heavily infested with spider mites, had to remove it. Chilly plants are happily flowering and have harvested more than 250 gm of chillies and still counting!
plant container
After 3 months, healthy chillies and 'infested' Okra
Total cost for container: For plastic bush, screws and nails – 40 / -
Time consumed: 1 hour
Worthfulness: Cannot be priced!
diy plant container
Started harvesting!