ಆಗ 11, 2016

ಶಹಜನಾಪುರದಲ್ಲೊಂದು Snow Plough!

ಸಾಂದರ್ಭಿಕ ಚಿತ್ರ
11/08/2016
ಈ ಚಿತ್ರದಲ್ಲಿ ಕಾಣುತ್ತಿರುವ ವಾಹನದ ಹೆಸರು ‘ಸ್ನೋ ಪ್ಲೋ’ (Snow Plough). ಇದರ ಕೆಲಸವೇನೆಂದರೆ ಹಿಮ ಬೀಳುವ ಸಮಯದಲ್ಲಿ ರಸ್ತೆಯ ಮೇಲೆ ಬಿದ್ದಿರುವ ಹಿಮವನ್ನು ಬದಿಗೆ ಸರಿಸಿ ವಾಹನಗಳು ಓಡಾಡುವಂತೆ ಅನುವು ಮಾಡಿಕೊಡುವುದು. ಹಿಮ ಬೀಳುವ ಕೆನಡಾದಂತಹ ದೇಶಗಳಲ್ಲಿ ಹೆಚ್ಚಾಗಿ ಉಪಯೋಗಿಸಲ್ಪಡುವ ಇಂತಹ ವಾಹನವನ್ನು ಭಾರತದಲ್ಲೂ ತರಿಸಲಾಗಿದೆ. ಎಲ್ಲೋ ಹಿಮಾಲಯದ ಕಡೆಗೆ ಉಪಯೋಗಿಸೋಕೆ ತರಿಸಿದ್ದಾರೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ನಲವತ್ತೈದು ಡಿಗ್ರಿಗಳಿಗಿಂತಲೂ ಅಧಿಕ ತಾಪಮಾನವಿರುವ ಹಿಮವೆಂದರೇನೆಂದೇ ಗೊತ್ತಿರದ ಉತ್ತರಪ್ರದೇಶದ ಶಹಜನಾಪುರದ ಮುನಿಸಿಪಾಲಿಟಿಯವರು ಇಂತಹ ವಾಹನವನ್ನು ತರಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿಯಾಗಿದೆ!

ಇಂತಹ ವಾಹನವನ್ನು ದೂರದೃಷ್ಟಿಯನ್ನು ನಿಜಕ್ಕೂ ಮೆಚ್ಚಬೇಕು! ಜಾಗತಿಕವಾಗಿ ತಾಪಮಾನ ಏರಿಕೆಯಾಗುತ್ತಿದೆ, ಮುಂದೊಂದು ದಿನ ‘ice age’ ಬರುವ ಸಾಧ್ಯತೆಗಳು ಹೆಚ್ಚಾಗುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಮುಂದೆಂದೋ ಬರುವ ‘ice age’ ದಿನಗಳಿಗೆ ಈಗಲೇ ತಯಾರಾಗಿಬಿಟ್ಟಿದೆ ಶಹಜನಾಪುರದ ಮುನಿಸಿಪಾಲಿಟಿ! ಅಷ್ಟರಳೊಗೆ ಈ ವಾಹನ ತುಕ್ಕು ಹಿಡಿದು ಬಿಡುವುದಿಲ್ಲವೋ ಎಂದೆಲ್ಲ ನೀವು ಪ್ರಶ್ನೆ ಮಾಡುವಂತಿಲ್ಲ!

ನಗರ ಪಾಲಿಕೆಯ ಇಂಜಿನಿಯರ್ ವರದಿಗಾರರು ಕೇಳಿದ ಪ್ರಶ್ನೆಗೆ ‘ಎಲ್ಲಾ ರೀತಿಯ ಸವಾಲುಗಳನ್ನೂ ಎದುರಿಸಲು ನಾವು ಸಿದ್ಧರಾಗಿರಬೇಕು’ ಎಂದು ಉತ್ತರ ಕೊಟ್ಟಿದ್ದಾರೆಂದು ವರದಿಯಾಗಿದೆ!

ಮುಂದಿನ ಟೆಂಡರಿನಲ್ಲಿ ಇನ್ಯಾವ್ಯಾವ ವಸ್ತುಗಳನ್ನು ತಂದು ಮುಂದಿನ ಜನಾಂಗವನ್ನು ‘ರಕ್ಷಿಸುತ್ತಾರೋ’ ಕಾದು ನೋಡಬೇಕಿದೆ.


ಸುಳ್ ಸುದ್ದಿ: ಜನರ ಹಣವನ್ನು ಹೆಂಗೆಲ್ಲ ನುಂಗಿ ಅರಗಿಸಿಕೊಳ್ಳಬಹುದು ಎನ್ನುವುದರ ಬಗ್ಗೆ ವಿಶೇಷ ತರಬೇತಿಯನ್ನು ಶಹಜನಾಪುರ ನಗರ ಪಾಲಿಕೆ ಹಮ್ಮಿಕೊಂಡಿದೆ. ಆಸಕ್ತರು ನೇರವಾಗಿ ಪಾಲಿಕೆಯವರನ್ನು ಸಂಪರ್ಕಿಸಬೇಕು.

ಮೇ 27, 2016

ಮತದಾರರಿಗೂ ಒಂದು ಬಾಂಡ್ ಪೇಪರ್ ಬರೆದು ಕೊಡಿ!

bond paper congress
ಡಾ. ಅಶೋಕ್. ಕೆ. ಆರ್
27/05/2016
ಪಶ್ಚಿಮ ಬಂಗಾಳದಲ್ಲೊಂದು ಅಭೂತಪೂರ್ವ ಘಟನೆ ಸಂಭವಿಸಿದೆ. ನೆಹರೂ ಕುಟುಂಬದ ಮುಂದೆ ದೇಹಬಾಗಿಸಿ ಜೀ ಹುಜೂರ್ ಎಂಬ ಸಂಸ್ಕೃತಿಯನ್ನು ಹಾಸಿ ಹೊದ್ದಿಕೊಂಡಿರುವ ಕಾಂಗ್ರೆಸ್ಸಿನಲ್ಲಿ ಈ ಘಟನೆ ಸಂಭವಿಸುವುದರಿಂದ ಇದೇನು ತುಂಬಾ ಅಚ್ಚರಿಯ ಘಟನೆಯಲ್ಲ, ಗಾಬರಿಗೆ ಎದೆ ಹಿಡಿದುಕೊಂಡುಬಿಡುವಂತಹ ಆಘಾತದ ಘಟನೆಯೂ ಅಲ್ಲ! ಸೋನಿಯಾ ಗಾಂಧೀ ‘ಜೀ’ಗೆ, ರಾಹುಲ್ ಗಾಂಧೀ ‘ಜೀ’ಗೆ ಕೈಮುಗೀರಿ ಅಂದ್ರೆ ಕಾಲಿಗೆ ಬೀಳೋ ಜನರೇ ಹೆಚ್ಚಿರುವ ಕಾಂಗ್ರೆಸ್ಸಿನಲ್ಲಿ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ‘ಬಾಂಡ್ ಪೇಪರ್’ ರಾಜಕಾರಣ ಶುರುವಾಗಿದೆ! 

ಇತ್ತೀಚೆಗಷ್ಟೇ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಉಸಿರೇ ನಿಂತು ಹೋಗಿದ್ದ ಕಾಂಗ್ರೆಸ್ಸಿಗೆ ಒಂದಷ್ಟು ಗಾಳಿ ಪಶ್ಚಿಮ ಬಂಗಾಳದಲ್ಲೂ ದಕ್ಕಿದೆ. ತೃಣಮೂಲ ಕಾಂಗ್ರೆಸ್ಸಿನ ಅಬ್ಬರದ ನಡುವೆಯೂ ನಲವತ್ತನಾಲ್ಕು ಸ್ಥಾನಗಳನ್ನು ಗಳಿಸಿಕೊಂಡು ಎಡಪಕ್ಷಗಳನ್ನು ಮೂರನೇ ಸ್ಥಾನಕ್ಕೆ ತಳ್ಳಿ ಅಧಿಕೃತ ವಿರೋಧ ಪಕ್ಷವಾಗಿದೆ. ಬಹುಶಃ ಈ ಸಾಧನೆ ಕಾಂಗ್ರೆಸ್ಸಿಗೇ ಆಶ್ಚರ್ಯ ಮೂಡಿಸಿರಬೇಕು. 2011ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಗೆದ್ದ ಶಾಸಕರು ಚುನಾವಣೆ ಮುಗಿಯುತ್ತಿದ್ದಂತೆಯೇ ಗಂಟು ಮೂಟೆ ಕಟ್ಟಿಕೊಂಡು ತೃಣಮೂಲ ಕಾಂಗ್ರೆಸ್ಸಿನ ತೆಕ್ಕೆಗೆ ಬಿದ್ದುಬಿಟ್ಟಿದ್ದರು. ಈ ಸಲವೂ ಅಂತಹುದೇನಾದರೂ ನಡೆದು ಬಿಟ್ಟೀತೆಂದು ಹೆದರಿ ಬಂಗಾಳದ ಕಾಂಗ್ರೆಸ್ ಘಟಕ ಬಾಂಡ್ ಪೇಪರ್ ರಾಜಕಾರಣವನ್ನು ಪರಿಚಯಿಸಿದ್ದಾರೆ. ಬಾಂಡ್ ಪೇಪರ್ ಕಾಂಗ್ರೆಸ್ಸಿನ ಅಧ್ಯಕ್ಷೆ ಸೋನಿಯಾ ಗಾಂಧೀ ‘ಜೀ’ಯವರಿಗೆ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧೀ ‘ಜೀ’ಯವರಿಗೆ. ‘ನಾನು ಯಾವುದೇ ಪಕ್ಷವಿರೋಧಿ ಚಟುವಟಿಕೆ ನಡೆಸುವುದಿಲ್ಲ, ಪಕ್ಷದ ರೀತಿ ನೀತಿಗಳು, ಪಕ್ಷದ ನಿರ್ಧಾರಗಳು ನನಗೆ ಒಪ್ಪಿತವಾಗದೇ ಹೋದರೂ ಅವುಗಳ ವಿರುದ್ಧ ನಾನು ಮಾತನಾಡುವುದಿಲ್ಲ. ಒಂದು ವೇಳೆ ಅಂತದ್ದೇನನ್ನಾದರೂ ಮಾಡಬೇಕೆಂದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನನ್ನ ಸಂಪೂರ್ಣ ನಿಷ್ಠೆ ಅಧ್ಯಕ್ಷೆ ಸೋನಿಯಾ ಗಾಂಧೀ ‘ಜೀ’ಯವರಿಗೆ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧೀ ‘ಜೀ’ಯವರಿಗೆ’ ಎಂಬ ಗುಲಾಮತ್ವದ ಸಾಲುಗಳು ಎರಡು ಪುಟದ ಬಾಂಡು ಪೇಪರಿನುದ್ದಕ್ಕೂ ತುಂಬಿದೆ. ಕಾಂಗ್ರೆಸ್ಸಿನೊಳಗಿನ ಗುಲಾಮತ್ವ ಮನಸ್ಥಿತಿ ಮತ್ತೊಂದು ಮಜಲನ್ನೇ ತಲುಪಿದೆ ಎಂದು ಹೇಳಬಹುದು.

ಪಕ್ಷದಲ್ಲಿ ಸ್ಥಾನ ಕೊಟ್ಟಿದ್ದಕ್ಕೆ, ಚುನಾವಣೆಗೆ ನಿಲ್ಲಲು ಟಿಕೇಟು ಕೊಟ್ಟಿದ್ದಕ್ಕೆ, ಮತ್ತು ಅಲ್ಲಿ ಇಲ್ಲಿ ಪಕ್ಷದ ಹೆಸರಿನಿಂದಲೇ ಗೆದ್ದಿದ್ದಕ್ಕೆ ಶಾಸಕರು ತಮ್ಮ ಪಕ್ಷದ ಮುಖಂಡರ ಅಣತಿಯಂತೆ ಇಂತಹುದೊಂದು ಬಾಂಡ್ ಪೇಪರ್ರಿಗೆ ಸಹಿ ಹಾಕುತ್ತಾರೆಂದ ಮೇಲೆ ಅವರಿಗೆ ಮತ ಹಾಕಿ ಗೆಲ್ಲಿಸಿದ ಮತದಾರರಿಗೂ ಒಂದು ಬಾಂಡ್ ಪೇಪರ್ ಬರೆದುಕೊಡುವುದು ನ್ಯಾಯಯುತವಾದುದಲ್ಲವೇ? ‘ನನಗೆ ನೀವೆಲ್ಲರೂ ಮತ ಹಾಕಿದ್ದಕ್ಕೆ ಧನ್ಯವಾದ. ನಾನು ಯಾವುದೇ ಜನವಿರೋಧಿ ಚಟುವಟಿಕೆ ನಡೆಸುವುದಿಲ್ಲ, ಭ್ರಷ್ಟನಾಗುವುದಿಲ್ಲ, ನಿಮ್ಮ ಜನಪರ ಸಲಹೆಗಳು ನನಗೆ ಒಪ್ಪಿತವಾಗದೇ ಹೋದರೂ ಅವುಗಳ ವಿರುದ್ಧ ನಾನು ಮಾತನಾಡುವುದಿಲ್ಲ. ಒಂದು ವೇಳೆ ಅಂತದ್ದೇನನ್ನಾದರೂ ಮಾಡಬೇಕೆಂದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನನ್ನ ಸಂಪೂರ್ಣ ನಿಷ್ಠೆ ಮತದಾರರಿಗೆ’ ಎಂಬ ಬಾಂಡು ಪೇಪರನ್ನ್ಯಾಕೆ ಶಾಸಕ – ಸಂಸದರು ಆಯ್ಕೆಯಾದ ತಕ್ಷಣ ಕೊಡುವಂತಾಗಬಾರದು?

ಮೇ 5, 2016

ಬೆಂಗಳೂರಿನ ಗಿಡಗಳ್ಳರು!

(ಸಾಂದರ್ಭಿಕ ಚಿತ್ರ)
ಡಾ. ಅಶೋಕ್. ಕೆ.ಆರ್.
ಬೆಂಗಳೂರಿನಲ್ಲಿ ಸರಗಳ್ಳರಿದ್ದಾರೆ, ಅವರ ಬಗ್ಗೆ ಎಚ್ಚರಿಕೆಯ ಪೋಸ್ಟರುಗಳು ನಗರದಾದ್ಯಂತ ತುಂಬಿಕೊಂಡಿವೆ. ಬೆಂಗಳೂರಿನಲ್ಲಿ ನೆಲಗಳ್ಳರಿದ್ದಾರೆ, ಅವರಲ್ಲಿ ಹೆಚ್ಚಿನವರು ಬಿಳಿ ಬಿಳಿ ಪೋಷಾಕು ಧರಿಸಿ ರಾಜಕೀಯದಲ್ಲೋ ಸಿನಿಮಾದಲ್ಲೋ ಬ್ಯುಸಿ ಬ್ಯುಸಿಯಾಗಿ ಸಮಾಜಸೇವೆ ಮಾಡಿಕೊಂಡಿದ್ದಾರೆ. ಇನ್ನು ಬೈಕು, ಪರ್ಸು, ಕಾರು ಕದಿಯುವವರ ಸಂಖೈ ಅವಸಾನ ಕಾಣದಿರುವಷ್ಟು ಬಲವಾಗಿಯೇ ಇದೆ. ಈ ಪಟ್ಟಿಗೆ ಹೊಸ ಸೇರ್ಪಡೆ ಗಿಡಗಳ್ಳರು!
ಮಂಡ್ಯದ ಮನೆ ಮುಂದಲಿದ್ದ ಮರದಿಂದ ತಂದಿದ್ದ ಹೊಂಗೆ ಬೀಜಗಳಲ್ಲೊಂದನ್ನು ಖಾಲಿಯಾದ ಒಂದು ಲೀಟರ್ ಹಾಲಿನ ಕವರ್ರಿಗೆ ಹಾಕಿದ್ದೆ. ಹೊಂಗೆ ಗಿಡ ಚಿಗುರಿ ಎರಡಡಿ ಎತ್ತರಕ್ಕೆ ಬೆಳೆದಿತ್ತು. ನಾವಿರುವ ಈ ಬಾಡಿಗೆ ಮನೆಯೆದುರಿಗೆ ಪಕ್ಕದಲ್ಲೆಲ್ಲ ಖಾಲಿ ಸೈಟುಗಳಿವೆ! (ಬೆಂಗಳೂರಿನಲ್ಲಿ ಖಾಲಿ ಸೈಟುಗಳಿರುವುದೇ ಅಚ್ಚರಿಯ ಸಂಗತಿ. ಹಂಗಾಗಿ !) ನಮ್ ಪಕ್ಕದ ಮನೆಯವರಿಗೂ ಗಿಡ ನೆಡುವ ಖಯಾಲಿ, ಖಾಲಿ ಸೈಟಿನ ಮುಂದೆ ನಾಕೈದು ಹೊಂಗೆ ಸಸಿ, ಒಂದೆರಡು ಹಳದಿ ಹೂವಿನ ಗಿಡಗಳನ್ನು ನೆಟ್ಟಿದ್ದಾರೆ. ನಮ್ ಮನೆ ಪಕ್ಕದ ಖಾಲಿ ಸೈಟಿನ ಮುಂದೆಯೂ ಎರಡು ಹೊಂಗೆ ಸಸಿ ಒಂದು ಹೂವಿನ ಗಿಡ ನೆಟ್ಟಿದ್ದರು. ಅವರೋ ನಾನೋ ಎರಡು ಮೂರು ದಿನಕ್ಕೊಮ್ಮೆ ನೀರುಣಿಸುತ್ತಿದ್ದೆವು. ಆ ಗಿಡಗಳಲ್ಲಿ ಬಹಳಷ್ಟು ಈಗ ಅರ್ಧ ಆಳೆತ್ತರಕ್ಕೆ ಬೆಳೆದಿವೆ. ಈ ಸಲದ ಬಿರುಬೇಸಿಗೆಯಲ್ಲೂ ಅವೇನು ನೀರು ಕೇಳುವುದಿಲ್ಲ. ವಾರದವರೆಗೆ ನೀರುಣಿಸದಿದ್ದರೂ ಒಣಗದೆ ಆರೋಗ್ಯವಂತವಾಗಿಯೇ ಉಳಿದಿವೆ. ಸಂಜೆ ಹೊತ್ತು ಒಂದಷ್ಟು ತಂಪಾದ ಗಾಳಿಗೆ ಕಾರಣವಾಗಿವೆ. ಆ ಗಿಡಗಳ ನಡುವೆ ಪುಟ್ಟ ಪುಟ್ಟ ಹೂವಿನ ಗಿಡಗಳನ್ನು ನೆಟ್ಟಿದ್ದೇನೆ. ಅವಕ್ಕೆ ಎರಡು ಅಬ್ಬಬ್ಬಾ ಎಂದರೆ ಮೂರು ದಿನಕ್ಕೊಮ್ಮೆ ನೀರು ಬೇಕು.

ಪ್ಲಾಸ್ಟಿಕ್ ಕವರ್ರುಗಳಲ್ಲಿ ಹೊಂಗೆ ಗಿಡ ಬೆಳೆದಿತ್ತಲ್ಲ. ಹತ್ತು ದಿನದ ಕೆಳಗೆ ಒಂದರ್ಧ ಘಂಟೆ ಸುರಿದ ಮೊದಲ ಮಳೆಯ ಮಾರನೇ ದಿನ ಪಕ್ಕದ ಖಾಲಿ ಸೈಟಿನ ಮುಂದೆ, ಇದ್ದ ಎರಡು ಹೊಂಗೆ ಗಿಡದಿಂದ ಸ್ವಲ್ಪ ದೂರದಲ್ಲಿ ಗುಂಡಿ ತೆಗೆದು, ಕವರ್ ಹರಿದು ಹಾಕಿ ಹೊಂಗೆ ಗಿಡವನ್ನು ನೆಟ್ಟು ಸುತ್ತಲೊಂದಷ್ಟು ಒಣ ಎಲೆಗಳನ್ನು ಹಾಕಿ ಒಂದು ಚೊಂಬು ನೀರು ಸುರಿದು ಬಂದೆ. ಗಿಡ ಚೂರು ದೊಡ್ಡದಿದ್ದುದರಿಂದ ಹೊಸ ನೆಲಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಲಿಲ್ಲ. ಎರಡು ಮೂರು ದಿನಕ್ಕೊಮ್ಮೆ ಅರ್ಧ ಚೊಂಬು ನೀರು ಹಾಕಿದರೂ ಸಾಕಿತ್ತು. ಗಿಡ ನೆಟ್ಟು ವಾರ ಕಳೆದಿತ್ತು, ಹೊಸ ಎಲೆಗಳು ಚಿಗುರಿದ್ದವು. ಅವತ್ತೊಂದು ದಿನ ಬೆಳಿಗ್ಗೆ ನೀರುಣಿಸಿ ಕಾಲೇಜಿಗೆ ಹೋಗಿ ಸಂಜೆ ಬಂದು ನೋಡಿದರೆ ಗಿಡವೇ ಇಲ್ಲ! ಒಣಗಿ ಬಿದ್ದು ಹೋಯಿತಾ? ಬೆಳಿಗ್ಗೆ ಚೆನ್ನಾಗೇ ಇತ್ತುಲ್ಲ, ಯಾರಾದರೂ ಕಿತ್ತು ಬಿಸಾಡಿದರಾ? ಉಹ್ಞೂ ಹತ್ತಿರದಲ್ಲೆಲ್ಲೂ ಕಿತ್ತ ಗಿಡವಿಲ್ಲ. ಆಗೀಗ ನಮ್ ಏರಿಯಾದ ಕ್ಷೇಮಸಮಾಚಾರವನ್ನು ವಿಚಾರಿಸುವ ಹಸುಗಳೇನಾದರೂ ತಿಂದುಬಿಟ್ಟವಾ? ಹೊಂಗೆಯನ್ನವು ತಿನ್ನುವುದಿಲ್ಲ. ಏನಾಯ್ತು ಅಂತ ಸ್ಪಾಟ್ ಇನ್ಸ್ ಪೆಕ್ಷನ್ ಮಾಡಿದರೆ ಗಿಡವಿದ್ದ ಸುತ್ತಲೂ ಮಣ್ಣು ಅಗೆಯಲಾಗಿತ್ತು, ಹೆಚ್ಚು ಕಡಿಮೆ ಅರ್ಧ ಅಡಿಯಷ್ಟು ಮಣ್ಣು ಕೆರೆದು ಇಡೀ ಹೊಂಗೆ ಗಿಡವನ್ನೇ ಕಿತ್ತುಕೊಂಡು ಹೋಗಿಬಿಟ್ಟಿದ್ದರು!

ನೆಟ್ಟ ಗಿಡವನ್ನು ಕಿತ್ತುಕೊಂಡದ್ದಕ್ಕೆ ಬೇಸರವಾಗಬೇಕಾ? ಕೋಪಗೊಳ್ಳಬೇಕಾ? ಕಿತ್ಕೊಂಡು ಹೋಗಿಬಿಟ್ಟಿದ್ದಾರೆ, ಬೇರಿಗೆ ಏಟು ಮಾಡದೆ ಕಿತ್ತುಕೊಂಡಿದ್ದು, ಇನ್ನೆಲ್ಲೋ ನೆಟ್ಟರೂ ಅದು ಮತ್ತೊಂದು ಹೊಸ ಭೂಮಿಗೆ ಹೊಂದಿಕೊಂಡು ಬೆಳೆದರಷ್ಟೇ ಸಾಕೆಂದು ಸುಮ್ಮನಾಗಬೇಕಾ? ಏನೋ ಈ ಬಿರುಬೇಸಿಗೇನಾದರೂ ಒಂದಷ್ಟು ಜನರಿಗೆ ಗಿಡ ಮರ ನೆಡಲು, ಕದ್ದಾದರೂ ನೆಡಲು ಪ್ರೇರೇಪಿಸುತ್ತಿದೆಯಲ್ಲ, ಅದೇ ಪುಣ್ಯ! 

ಅಂದಹಾಗೆ ಇನ್ನೈದು ವರುಷಕ್ಕೆ ಬೆಂಗಳೂರು ವಾಸಯೋಗ್ಯವಾಗಿರುವುದಿಲ್ಲವೆಂದು ಐ.ಐ.ಎಸ್.ಸಿಯ ಅಧ್ಯಯನವೊಂದು ಭವಿಷ್ಯ ನುಡಿದಿದೆ. ಬೆಂಗಳೂರು ಸಾವು ಕಂಡರೆ ಅದಕ್ಕೆ ನಮ್ಮ ಸರಕಾರಗಳ ಕೇಂದ್ರೀಕೃತ ಯೋಜನೆಗಳು ಎಷ್ಟು ಕಾರಣವೋ ನಮ್ಮಂಥ ವಲಸಿಗರೂ ಅಷ್ಟೇ ಕಾರಣ. ಪಾಪ ಪರಿಹಾರ್ಥವಾಗಿ ವಲಸಿಗರು ಒಂದೊಂದು ಗಿಡ ನೆಟ್ಟರೂ ಸಾಕು ಹತ್ತಿರತ್ತಿರ ಕೋಟಿ ಲೆಕ್ಕದ ಗಿಡಗಳು ಬೆಂಗಳೂರಿನಲ್ಲಿ ನಳನಳಿಸುತ್ತವೆ. ಕದ್ದಾದರೂ ಗಿಡ ನೆಡಿ!

ಮಾರ್ಚ್ 27, 2016

ಅನುಕಂಪದ ಪ್ರಕೃತಿ ಮತ್ತು ದುರಂಹಕಾರಿ ಮನುಷ್ಯ

ಡಾ. ಅಶೋಕ್.ಕೆ.ಆರ್.
27/03/2016
ಇಂಡಿಪೆಂಡೆನ್ಸ್ ಡೇ ಎನ್ನುವ ಇಂಗ್ಲೀಷ್ ಚಿತ್ರದಲ್ಲಿ ಪರಗ್ರಹ ಜೀವಿಗಳು ಒಂದು ಗ್ರಹದಿಂದ ಮತ್ತೊಂದು ಗ್ರಹಕ್ಕೆ ವಲಸೆ ಹೋಗುತ್ತ ಆ ಗ್ರಹದ ಸಮಸ್ತ ಸಂಪನ್ಮೂಲವನ್ನು ಗೋರಿ ಬಳಿದಾದ ಮೇಲೆ ಮತ್ತೊಂದು ಗ್ರಹದೆಡೆಗೆ ಹೋಗಿಬಿಡುತ್ತಾರೆ. ಈ ಏಲಿಯನ್ನುಗಳ ಅಧ್ಯಯನದಲ್ಲಿ ತೊಡಗಿಕೊಂಡ ಕೆಲವರ ಪ್ರಕಾರ ಮನುಷ್ಯ ಜೀವಿಯೇ ಈ ಭೂಮಿಗೆ ಏಲಿಯನ್ನು, ಬೇರೆ ಗ್ರಹದಿಂದ ಇಲ್ಲಿಗೆ ಬಂದಿದ್ದಾನವನು ಎನ್ನುವ ಗುಮಾನಿಯನ್ನು ವ್ಯಕ್ತಪಡಿಸುತ್ತಾರೆ! ಇಂಡಿಪೆಂಡೆನ್ಸ್ ಡೇ ಚಿತ್ರದಲ್ಲಿ ಭೂಮಿಯನ್ನು ಕಬಳಿಸಲು ಬಂದ ಏಲಿಯನ್ನಿಗೂ ಭೂಮಿ ಮೇಲಿದ್ದು ಭೂಮಿಯನ್ನು ಕಬಳಿಸುತ್ತ ಅನ್ಯಗ್ರಹದೆಡೆಗೆ ದೃಷ್ಟಿ ಹರಿಸಿರುವ ಮನುಷ್ಯನಿಗೂ ಸಾಮ್ಯತೆ ಇದೆಯಲ್ಲವೇ?! 

ಈ ಬಾರಿ ರಣ ಬಿಸಿಲು, ಪ್ರತೀ ಬಾರಿಯೂ ಹಿಂದಿನ ಸಲಕ್ಕಿಂತ ಹೆಚ್ಚು ಬಿಸಿಲಿದೆ ಎಂಬನುಭವವಾಗುತ್ತಿದೆ. ‘ಅಯ್ಯೋ ಬಳ್ಳಾರಿ ರಾಯಚೂರಿನಲ್ಲಿ ಟೆಂಪರೇಚರ್ರು ನಲವತ್ತು ದಾಟುತ್ತಂತೆ ಅದೆಂಗೆ ಇರ್ತಾರೋ!’ ಎಂದಚ್ಚರಿ ವ್ಯಕ್ತಪಡಿಸುತ್ತಿದ್ದ ಹಳೇ ಮೈಸೂರಿಗರಿಗೂ ಈಗ ನಲವತ್ತು ಡಿಗ್ರಿ ನೋಡುವ ಸಂಭ್ರಮ ಹತ್ತಿರದಲ್ಲೇ ಇದೆ ಎಂಬ ಭಾವನೆ ಬರುತ್ತಿದೆ. ಇನ್ನು ಏಪ್ರಿಲ್ ಮೇ ತಿಂಗಳಿನಲ್ಲಿ ನಲವತ್ತು ನೋಡುತ್ತಿದ್ದ ಉತ್ತರ ಕರ್ನಾಟಕದಲ್ಲಿ ಫೆಬ್ರವರಿ ತಿಂಗಳಲ್ಲೇ ನಲವತ್ತೊಂದು ನಲವತ್ತೆರಡು ನೋಡುವ ಕರ್ಮ ಎದುರಾಗಿದೆ. ಶಿವರಾತ್ರಿವರ್ಗೂ ಚಳಿ ಇರುತ್ತೆ ಅನ್ನೋ ನಂಬಿಕೆ ಸುಳ್ಳಾಗಿಬಿಟ್ಟಿದೆ ಈ ವರ್ಷ. ಈ ರೀತಿಯ ಹವಾಮಾನ ವೈಪರೀತ್ಯಗಳು ಕೂಡ ಪ್ರಕೃತಿಯ ನಿಗೂಡ ನೀತಿ ನಿಯಮಗಳ ಅನುಸಾರವಾಗಿಯೇ ಇರುತ್ತದೆ ಎನ್ನುವುದು ಹೌದಾದರೂ ಮನುಷ್ಯ ತನ್ನ ಪ್ರತಿ ಹೆಜ್ಜೆಯಲ್ಲೂ ಪ್ರಕೃತಿಯ ಮೇಲೆ ನಡೆಸುತ್ತಿರುವ ಅನಾಚಾರಗಳು ಈ ಹವಾಮಾನ ವೈಪರೀತ್ಯಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದ್ದಾನೆ. ಏನೇ ಆದ್ರೂ ಪ್ರಕೃತಿಗೆ ತನ್ನದೇ ಒಡಲ ಕುಡಿಯಾದ ಮನುಷ್ಯನ ಬಗೆಗೂ ಒಂದಷ್ಟು ಪ್ರೀತಿ, ಕನಿಕರ, ಅನುಕಂಪವಿದ್ದೇ ಇದೆ. ಆ ಅನುಕಂಪವನ್ನೂ ದುರಹಂಕಾರದಿಂದ ಕಡೆಗಣಿಸುವಷ್ಟು ನಾವು ನೀಚರಾಗಿಬಿಟ್ಟಿದ್ದೇವೆ ಎನ್ನುವುದಕ್ಕೆ ಸಾಕ್ಷಿಯಾಗಿ ದಾವಣಗೆರೆಯ ಜಗಳೂರು ತಾಲ್ಲೂಕಿನ ದೊಣೆಹಳ್ಳಿಯ ಕಲ್ಲು ಕ್ವಾರಿಯ ಉದಾಹರಣೆಯಿದೆ.

ಒಂದು ರೌಂಡು ಭೂಮಿ ಮೇಲಿನ ನೀರನ್ನೆಲ್ಲ ಮಲಿನಗೊಳಿಸಿ, ಉಪಯೋಗಿಸಲು ಯೋಗ್ಯವಾಗದಂತೆ ಮಾಡಿ, ಖಾಲಿಮಾಡಿ ಅಂತರ್ಜಾಲಕ್ಕೆ ಕೈ ಹಾಕಿ ಬಹಳಷ್ಟು ದಶಕಗಳೇ ಕಳೆದುಹೋದವು. ನೂರಡಿಯಲ್ಲಿ ನೀರು ದೊರಕುತ್ತಿದ್ದ ನದಿ ಪಾತ್ರಗಳಲ್ಲೂ ಈಗ ಸಾವಿರ ಅಡಿಯವರೆಗೆ ಕೊರೆಸಬೇಕಾದ ಅನಿವಾರ್ಯತೆ. ಸಾವಿರ ಅಡಿ ಕೊರಸಿದ ಮಾತ್ರಕ್ಕೇ ನೀರು ಸಿಕ್ಕೇಬಿಡುತ್ತದೆನ್ನುವ ಗ್ಯಾರಂಟಿಯೇನಿಲ್ಲ. ಒಂದಾದ ಮೇಲೊಂದು ಬೋರ್ ವೆಲ್ ಕೊರೆಸಿ ಕೊರೆಸಿ ಸಾಲ ಹೆಚ್ಚಾಗಿ ಆರಂಭ ತೊರೆದು ಬೆಂಗಳೂರು ಸೇರಿರುವವರ ಸಂಖೈ ಕಡಿಮೆಯೇನಲ್ಲ. ಭೂಮಿ ಮೇಲೆ ಭೂಮಿ ಕೆಳಗೆ ಮನುಷ್ಯನಿಂದ ಇಷ್ಟೆಲ್ಲ ತೊಂದರೆ ಅನುಭವಿಸಿದ ನೀರಿಗೂ ಈ ಬಿಸಿಲಿನ ಝಳಕ್ಕೆ ಮನುಷ್ಯ ಮತ್ತು ಇನ್ನಿತರೆ ಪ್ರಾಣಿಗಳು ಅನುಭವಿಸುತ್ತಿರುವ ಕಷ್ಟಗಳನ್ನು ನೋಡಿ ಅನುಕಂಪ ಮೂಡಿರಬೇಕು. ಕೊಳವೆ ಬಾವಿಗಳ ಬಾಯಿಗೆ ಸಿಗದೇ ತಪ್ಪಿಸಿಕೊಂಡು ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಎಂಬ ಊರಿನಲ್ಲಿ ನವ ಭಾರತ ಬಿಲ್ಡಿಂಗ್ ಕಂಪನಿಯವರ ಕಲ್ಲು ಕ್ವಾರಿಯ ಹೊಂಡದ ಸಂದಿಯಲ್ಲಿ ಆಕಾಶ ನೋಡಿತು ನೀರು! ನೋಡನೋಡುತ್ತಿದ್ದಂತೆಯೇ ಇಡೀ ಕಲ್ಲು ಕ್ವಾರಿಯಲ್ಲಿ ಬೇಸಿಗೆಯಿಡೀ ಸುತ್ತಮುತ್ತಲಿನ ಹಳ್ಳಿಗಳ ಜನ – ಜಾನುವಾರುಗಳಿಗೆಲ್ಲ ಪೂರೈಸಲು ಸಾಕಾಗುವಷ್ಟು ನೀರು ತುಂಬಿಕೊಂಡಿಬಿಟ್ಟಿತು. ಊರಿನ ಜನರಿಗೆಲ್ಲ ಸಂತಸ, ಆದರೆ ಈ ಸಂತಸ ಎಲ್ಲರಲ್ಲೂ ಕಾಣಲಿಲ್ಲ.

ಕಲ್ಲು ಕ್ವಾರಿಯ ಮೇಲಿನ ಅಧಿಕಾರವಿದ್ದಿದ್ದು ಖಾಸಗಿ ಕಂಪನಿಗೆ. ಕಾನೂನಿನ ಪ್ರಕಾರ ಅದು ಅವರ ಜಾಗ, ಅವರ ಜಾಗದಲ್ಲಿನ ನೀರನ್ನು ಅವರು ಏನು ಬೇಕಾದರೂ ಮಾಡಬಹುದು. ಸುತ್ತಮುತ್ತಲಿನ ಊರಿನವರಿಗೆಲ್ಲ ನೀರು ಕೊಟ್ಟು ಕಂಪನಿಯವರಿಗೇನಾಬೇಕಿತ್ತು? ದೊಡ್ಡ ದೊಡ್ಡ ಮೋಟಾರು ಪಂಪುಗಳನ್ನು ತರಿಸಿ ಕಲ್ಲು ಕ್ವಾರಿಯ ಹೊಂಡದಲ್ಲಿ ತುಂಬಿದ ಸಿಹಿ ನೀರನ್ನು ರಸ್ತೆಗೆ ಹರಿಸಲಾರಂಭಿಸಿದರು. ಇದು ಸಾರ್ವಜನಿಕ ಆಸ್ತಿ ಎಂದು ಘೋಷಿಸಿ, ಆ ಕಂಪನಿಗೆ ಒಂದಷ್ಟು ಪರಿಹಾರವನ್ನೂ ಕೊಟ್ಟು ನೀರು ಹೊಂಡವನ್ನು ರಕ್ಷಿಸಬೇಕಾದ ಆಡಳಿತ ಯಂತ್ರ ಕೂಡ ಕಲ್ಲು ಕ್ವಾರಿಯ ‘ಒಡೆಯರ’ ನಿರ್ಧಾರಗಳಿಗೇ ಮಣೆ ಹಾಕಿತು. ಸಾವಿರ ಸಾವಿರ ನೀರು ರಸ್ತೆಯ ಮೇಲೆ ಹರಿಯಲಾರಂಭಿಸಿತು. ಪ್ರಕೃತಿಯೇ ಕುಡೀರಪ್ಪ ಅಂತ ಹೊರಹಾಕಿದ ನೀರನ್ನು ಮತ್ತೆ ಅಂತರ್ಜಲಕ್ಕೇ ಕಳಿಸುವ ಹುನ್ನಾರ! ಬೇಸತ್ತ ಅಲ್ಲಿನ ಜನತೆ ಹೊಂಡಕ್ಕೆ ಮುತ್ತಿಗ ಹಾಕಿ ಪಂಪುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದಿವತ್ತಿನ ಪ್ರಜಾವಾಣಿ ವರದಿ ಹೇಳುತ್ತಿದೆ. ಈ ಮುತ್ತಿಗೆ ಕಾನೂನಿನ ಬೆಂಬಲ ಸದ್ಯಕ್ಕಿಲ್ಲವೇನೋ, ಆದರೆ ಆಡಳಿತಾಧಿಕಾರಿಗಳು ಮನಸ್ಸು ಮಾಡಿದರೆ ದೊಣೆಹಳ್ಳಿ ಮತ್ತು ಸುತ್ತಮುತ್ತಲಿನ ಊರುಗಳ ನೀರಿನ ದಾಹ ಕಡೇ ಪಕ್ಷ ಈ ವರ್ಷವಾದರೂ ನೀಗುತ್ತದೆಯಲ್ಲವೇ? ದುರಹಂಕಾರಿ ಮನುಷ್ಯ ಏನು ಮಾಡುತ್ತಾನೋ ಕಾದು ನೋಡೋಣ.
Update: ಕಲ್ಲುಕ್ವಾರಿಯ ಹೊಂಡದಲ್ಲಿನ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಬೇಕೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ದಾವಣಗೆರೆಯ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

ಫೆಬ್ರ 29, 2016

ಇಲ್ಲಿ ಕಾರು ತೊಳೆದರೆ ಕಟಕಟೆ ಹತ್ತಬೇಕಾದೀತು

29/02/2016
ಜಾಟರು ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ಹಿಂಸೆಯ ಮಡಿಲಿಗೆ ಜಾರಿ ಹೋಗಿದೆ. ದಲಿತ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವಂತಹ ಗಂಭೀರ ಆರೋಪಗಳೂ ಕೇಳಿ ಬಂದಿವೆ. ಮೀಸಲಾತಿಯ ಹೋರಾಟಗಾರರು ಪ್ರಮುಖ ನಗರಗಳಿಗೆ ನೀರು ಪೂರೈಸುವ ಪೈಪುಗಳನ್ನು ಒಡೆದು ಹಾಕಿದ್ದಾರೆ. ಈ ಬೇಸಿಗೆ ಸಮಯಕ್ಕೆ ಮುಂಚೆಯೇ ಆಗಮಿಸುತ್ತಿರುವಾಗ ಪೈಪುಗಳನ್ನು ಒಡೆದು ಹಾಕಿರುವುದು ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ದೆಹಲಿ ಗುರಗಾಂವ್ ನಂತಹ ನಗರಗಳಲ್ಲಿ ನೀರಿಗೆ ಹಾಹಾಕಾರ ಎದ್ದಿದೆ. ನೀರನ್ನು ಮಿತವಾಗಿ ಬಳಸಲು ಅನುವಾಗುವಂತೆ ಗುರಗಾಂವ್ ಆಡಳಿತ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ.
ಈ ಹೊಸ ನಿಯಮಗಳ ಅನುಸಾರ ಕಾರು ತೊಳೆಯುವುದು ಕೂಡ ಕಾನೂನುಬಾಹಿರ! ಕುಡಿಯಲು ನೀರಿಗೆ ತತ್ವಾರವಾಗಿರುವಾಗ ಕಾರು ತೊಳೆಯುವುದಕ್ಕೆಲ್ಲ ನೀರು ಪೋಲು ಮಾಡುವುದನ್ನು ತಡೆಗಟ್ಟಲು ಅಲ್ಲಿನ ಆಡಳಿತ ಈ ಕ್ರಮಕ್ಕೆ ಮುಂದಾಗಿದೆ. ಇದರ ಜೊತೆಜೊತೆಗೆ ಮನೆಯಲ್ಲಿ ಕುಂಡಗಳಲ್ಲಿ ಬೆಳೆಸಿದ ಗಿಡಗಳಿಗೆ ನೀರಾಕುವುದು ಕೂಡ ಅಪರಾಧವಾಗಿಬಿಡುತ್ತದೆ. ಮೂರನೇ ವಿಶ್ವಯುದ್ಧ ನಡೆಯುವುದು ನೀರಿಗಾಗಿ ಎಂಬ ಮಾತನ್ನು ನೆನಪಿಸುತ್ತದೆ ನೀರು ಉಳಿಸುವ ಈ ಕ್ರಮಗಳು. 
Image source: indiatoday

ಫೆಬ್ರ 24, 2016

ಪೆಟ್ರೋಲ್ ಬೆಲೆ ಎಷ್ಟಿರಬೇಕಿತ್ತು? ಎಷ್ಟಿದೆ ಗೊತ್ತಾ?

ಇಂಧನ ಖಾತೆ ಸಚಿವರಾದ ಧರ್ಮೇಂದ್ರ ಪ್ರಧಾನ್ ರವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಸಂಬಂಧಪಟ್ಟ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಉತ್ತರ ಕೊಟ್ಟಿದ್ದಾರೆ. ಈ ಉತ್ತರದ ಆಧಾರದಲ್ಲೇ ನೋಡುವುದಾದರೆ ನಮಗಿವತ್ತು ಪೆಟ್ರೋಲ್ ಮತ್ತು ಡೀಸೆಲ್ ಐವತ್ತು ರುಪಾಯಿಗೆ ಮತ್ತು ಮೂವತ್ತೈದು ರುಪಾಯಿಗೆ ಸಿಗಬೇಕಿತ್ತು. ಹೇಗಂತೀರಾ?
2014ರ ಮೇ ತಿಂಗಳಿನಲ್ಲಿ (ಅಂದರೆ ಅಚ್ಛೇ ದಿನ್ ಸರಕಾರ ಶುಭಾರಂಭ ಮಾಡಿದ ತಿಂಗಳು) ಭಾರತ ಒಂದು ಬ್ಯಾರೆಲ್ ಸಂಸ್ಕರಿಸದ ತೈಲಕ್ಕೆ 106.85 ಡಾಲರ್ ಕೊಡುತ್ತಿತ್ತು. ಈ ತಿಂಗಳು, ಅಂದರೆ ಫೆಬ್ರವರಿ 2016 ರಲ್ಲಿ ಈ ಬೆಲೆ 29.80 ಡಾಲರ್ರಿನಷ್ಟಿದೆ. ಅಲ್ಲಿಗೆ ಹೆಚ್ಚು ಕಡಿಮೆ 66% ಕಡಿಮೆಯಾಗಿದೆ. ಅದೇ ಮೇ 2014ರಲ್ಲಿ ಪೆಟ್ರೋಲಿನ ಬೆಲೆ 71.41 ರುಪಾಯಿ ಇದ್ದಿದ್ದು ಈಗ 59.95 ರುಪಾಯಿಯಾಗಿದೆ. ಡೀಸೆಲ್ಲಿನ ಬೆಲೆ 2014ರಲ್ಲಿ 55.49 ರುಪಾಯಿಯಷ್ಟಿದ್ದರೆ ಈಗ 44.68 ರುಪಾಯಿ (ಬೆಲೆಗಳು- ದೆಹಲಿಯದ್ದು, ಕರ್ನಾಟಕದಲ್ಲಿ ಇನ್ನೂ ಜಾಸ್ತಿ).
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ 66 % ಕಡಿಮೆಯಾಗಿದ್ದರೆ ಪೆಟ್ರೋಲ್ ಮತ್ತು ಡೀಸೆಲ್ಲಿನ ಬೆಲೆಯಲ್ಲಿ ಕೇವಲ 16 % ಕಡಿಮೆಯಾಗಿದೆ. ಕಾರಣ?
ಕಾರಣ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಯದ್ವಾತದ್ವಾ ಏರಿಸಿರುವ ಕೇಂದ್ರ ಸರಕಾರ ಅಂತರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ತೈಲ ಬೆಲೆ ಇಳಿಯದ ಹಾಗೆ ನೋಡಿಕೊಂಡುಬಿಟ್ಟಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮಾರುಕಟ್ಟೆಯಾಧಾರಿತವಾಗಿರುವಂತೆ ಮಾಡಿದ್ದು ಬೆಲೆ ಏರಿಸುವುದಕ್ಕಷ್ಟೇ ಸೀಮಿತವಾಗಿ ಬೆಲೆ ಇಳಿಸಲು ಉಪಯುಕ್ತವಾಗಿಲ್ಲ. ಬೆಲೆ ಇಳಿಯುವ ಸಂದರ್ಭ ಬಂದಾಗೆಲ್ಲ ತೆರಿಗೆಯನ್ನು ಹೆಚ್ಚಿಸಲಾಗಿದೆ. ಮುಂದೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿದಾಗ ತೆರಿಗೆಯನ್ನು ಇಳಿಸಿ ಬೆಲೆ ಏರದಂತೆ ನೋಡಿಕೊಳ್ಳುತ್ತಾರಾ? ಮೇ 2014ರಿಂದ ಇಲ್ಲಿಯವರೆಗೆ ಕೇಂದ್ರ ಸರಕಾರ ಪೆಟ್ರೋಲಿನ ಮೇಲಿನ ತೆರಿಗೆಯನ್ನು ಹನ್ನೆರಡು ರುಪಾಯಿಯಷ್ಟು ಏರಿಸಿದ್ದರೆ ಡೀಸೆಲ್ಲಿನ ಮೇಲಿನ ತೆರಿಗೆಯನ್ನು ಹತ್ತು ರುಪಾಯಿಯಷ್ಟು ಏರಿಸಿದೆ. ರುಪಾಯಿ ಮೌಲ್ಯದಲ್ಲಿ ಸ್ವಲ್ಪ ಕುಸಿತವಿರುವುದು ಹೌದಾದರೂ ತೆರಿಗೆಯನ್ನು ಯದ್ವಾ ತದ್ವ ಏರಿಸದಿದ್ದಲ್ಲಿ ಜೇಬು ಒಂದಷ್ಟು ಭಾರವಾಗುತ್ತಿತ್ತೇನೋ?!
Correction: In the picture showing the details the rupee value has been interchanged. In May 2014 one dollar equated to 59 dollars and in Feb 2016 it is 68. Thanks Anant Rao for correcting the mistake.

ಜನ 28, 2016

ಸೆನ್ಸಾರ್ ಬೋರ್ಡಿನ ಮೇಲೆ ಕೋಪವಿದ್ದರೆ ಹೀಗೂ ಮಾಡಬಹುದು!

ಸಿನಿಮಾ ಮಂದಿಗೆಲ್ಲ ಸೆನ್ಸಾರು ಬೋರ್ಡಿನ ಮೇಲೆ ಕೋಪವಿದ್ದೇ ಇರುತ್ತದೆ. ತಮಿಳಲ್ಲಿ ಬುಟ್ರು ಕನ್ನಡದಲ್ಲಿ ಬುಡ್ಲಿಲ್ಲ, ಹಿಂದೀಲಿ ಮಾತ್ರ ಕ್ಯಾರೆ ಅನ್ನಲ್ಲ ನಮಗೆ ಮಾತ್ರ ಟಾರ್ಚರ್ರು ಕೊಡ್ತಾರೆ ಅನ್ನೋ ಮಾತುಗಳು ಗಾಂಧಿನಗರದಲ್ಲಿ ಚಿತ್ರವೊಂದು ಸೆನ್ಸಾರಿಗೆ ಹೋದಾಗಿನಿಂದಲೂ ಹರಿದಾಡುತ್ತಲೇ ಇರುತ್ತವೆ. ಇನ್ನು ಟಿವಿಗಿಲ್ಲದ, ನಾಟಕಕ್ಕಿಲ್ಲದ, ಬೇರ್ಯಾವ ಕಲೆಗೂ ಇಲ್ಲದ ಸೆನ್ಸಾರು ಬೋರ್ಡು ನಮಗೆ ಮಾತ್ರ ಯಾಕೆ? ತೀರ ಅಷ್ಟೊಂದು ಕೆಟ್ಟ ಸಂಗತಿಗಳನ್ನು ತೋರಿಸಿಬಿಟ್ಟರೆ ನಂತರ ಕೇಸು ಹಾಕಿಕೊಳ್ಳಲಿ ಬಿಡಿ ಮುಂಚೇನೆ ಕಷ್ಟಪಟ್ಟು ತೆಗೆದಿದ್ದನ್ನೆಲ್ಲ ಕಟ್ ಮಾಡಿ ಬಿಸಾಕಲು ಹೇಳೋಕೆ ಅವರೆಲ್ಲ ಯಾರು? ಎಂದು ವಾದಿಸುವವರ ಸಂಖೈಯೂ ಕಮ್ಮಿಯೇನಿಲ್ಲ. ಸೆನ್ಸಾರು ಮಂಡಳಿಯ ಕಾಟಗಳು ನಮಲ್ಲಷ್ಟೇ ಸೀಮಿತವಾಗಿಲ್ಲ. British Board of Film classification ಕೂಡ ಇದೇ ರೀತಿಯ ತೊಂದರೆ ಕೊಡುತ್ತಿತ್ತಂತೆ. ಸೆನ್ಸಾರ್ ಮಂಡಳಿಯ ವಿರುದ್ಧ ಪ್ರತಿಭಟಿಸಬೇಕೆನ್ನುವವರು ಬಿ.ಬಿ.ಎಫ್.ಸಿಯ ವಿರುದ್ಧ ಪ್ರತಿಭಟಿಸಿದ ಚಾರ್ಲ್ಸ್ ಲೈನಿಯಿಂದ ಕಲಿಯುವುದು ಸಾಕಷ್ಟಿದೆ!
ಅಂದಹಾಗೆ ಚಾರ್ಲ್ಸ್ ಲೈನಿ 'ಪೈಂಟ್ ಡ್ರೈಯಿಂಗ್' (Paint drying) ಹೆಸರಿನ ಚಿತ್ರ ತೆಗೆಯುತ್ತಾನೆ. ಬಿ.ಬಿ.ಎಫ್.ಸಿಯಲ್ಲಿ ಒಂದು ಚಿತ್ರವನ್ನು ಸೆನ್ಸಾರಿಗೆ ತಂದರೆ ಮೊದಲು 145 ಡಾಲರ್ ಹಣವನ್ನು ಕಟ್ಟಿಸಿಕೊಳ್ಳಲಾಗುತ್ತದೆ, ನಂತರ ಸಿನಿಮಾದ ಪ್ರತೀ ನಿಮಿಷಕ್ಕೆ ಹತ್ತು ಡಾಲರಿನಷ್ಟು ಹಣವನ್ನು ಕಟ್ಟಬೇಕಾಗುತ್ತದೆ. ಸೆನ್ಸಾರು ಮಂಡಳಿಗೆ ದುಡ್ಡು ಕಟ್ಟಲು ಹಣವೆತ್ತಲು ಪ್ರಾರಂಭಿಸುತ್ತಾನೆ ಚಾರ್ಲ್ಸ್. ಒಟ್ಟಾದ ಹಣದ ಮೊತ್ತ ಚಿತ್ರದ ಸಮಯವನ್ನು ನಿರ್ಧರಿಸುತ್ತೆ! ಅದ್ಹೇಗೆ ಅಂತೀರಾ? ಚಿತ್ರದ ಹೆಸರು ಸೂಚಿಸುವಂತೆ ಗೋಡೆಯೊಂದಕ್ಕೆ ಪೈಂಟು ಬಳಿದಿರಲಾಗುತ್ತದೆ. ಕ್ಯಾಮೆರಾದ ತುಂಬ ಬಣ್ಣ ಬಳಿಸಿಕೊಂಡ ಗೋಡೆ. ಇಡೀ ಚಿತ್ರದಲ್ಲಿ ಬಳಿದ ಬಣ್ಣ ಒಣಗುವುದನ್ನಷ್ಟೇ ತೋರಿಸಲಾಗಿದೆ! ಮೊದಲ ನಿಮಿಷದಿಂದ ಕೊನೆಯ ನಿಮಿಷದವರೆಗೂ ಕ್ಯಾಮೆರಾ ಚೂರೂ ಮಿಸುಕದೆ ಬಣ್ಣ ಒಣಗುವ 'ಪ್ರಕ್ರಿಯೆ'ಯನ್ನು ತೋರಿಸಲಾಗಿದೆ! ಬಣ್ಣ ಒಣಗುವುದನ್ನು ಹತ್ತು ನಿಮಿಷವೂ ತೋರಿಸಬಹುದು ಒಂದು ಘಂಟೆಯೂ ತೋರಿಸಬಹುದು, ನಿಮಿಷಕ್ಕಿಷ್ಟು ಹಣ ಕಟ್ಟುವ ಚೈತನ್ಯವಿರಬೇಕಷ್ಟೇ! ಚಾರ್ಲ್ಸ್ ನ ಉದ್ದೇಶವರಿತ ಮಂದಿ ಹೆಚ್ಚಾಗೇ ಹಣ ನೀಡಿದ ಪರಿಣಾಮ 'ಪೈಂಟ್ ಡ್ರೈಯಿಂಗ್'ನ ಒಟ್ಟು ಸಮಯ ಹತ್ತು ಘಂಟೆಗಳಾಗಿಬಿಟ್ಟಿತು! ಸೆನ್ಸಾರು ಮಂಡಳಿಯವರ ಕರ್ಮ ನೋಡಿ, ಒಣಗುವ ಪೈಂಟಿನ ಚಿತ್ರವನ್ನು ಒಂದು ನಿಮಿಷವೂ ತಪ್ಪಿಸದೇ ನೋಡಲೇಬೇಕು! ಇನ್ನೂ ತಮಾಷೆಯೆಂದರೆ ಬಿ.ಬಿ.ಎಫ್.ಸಿ ಸದಸ್ಯರಿಗೆ ದಿನಕ್ಕೆ ಒಂಭತ್ತು ಘಂಟೆ ಮಾತ್ರ ಸಿನಿಮಾ ನೋಡುವ ಅವಕಾಶವಿರುವುದು! ಮೊದಲ ದಿನ ಒಂಭತ್ತು ಘಂಟೆ ಬಣ್ಣ ಒಣಗುವುದನ್ನು ಕಂಡು ಮಾರನೇ ದಿನ ಮತ್ತೆ ಒಂದು ಘಂಟೆ ಬಣ್ಣವನ್ನು ಒಣಗಿಸಿ ಮುಗಿಸಿದ ನಂತರ ಸೆನ್ಸಾರ್ ಸರ್ಟಿಫಿಕೇಟು ಕೊಡುವ ಸೌಭಾಗ್ಯ! 
ಇದು ಎಷ್ಟು ಸರಿಯೋ ಎಷ್ಟು ತಪ್ಪೋ ಪ್ರತಿಭಟನೆಯ ನವೀನ ಮಾದರಿ ಎಂಬುದಂತೂ ದಿಟ!

ಜನ 19, 2016

ದನಕ್ಕಿರುವ ಬೆಲೆ ದಲಿತನಿಗಿಲ್ಲದ ದೇಶದಲ್ಲಿ....

(ಈ ಲೇಖನ ಓದಿದ ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಕೋಪ ಮತ್ತು ಬೇಸರ ವ್ಯಕ್ತಪಡಿಸಿರುವುದರಿಂದ ಈ ಸ್ಪಷ್ಟೀಕರಣ. ನಮ್ಮ ನಡುವೆ ಮಾನವೀಯತೆ ಮರೆತ ಮನುವಾದಿ ಮನಸ್ಥಿತಿಯವರು ಹೀಗೂ ಯೋಚಿಸಬಹುದು ಎನ್ನುವ ವಿಡಂಬನಾತ್ಮಕ ಲೇಖನವೇ ಹೊರತು ರೋಹಿತ್ ವೇಮುಲನ ಕುರಿತಾಗಲೀ ಅಥವಾ ದಲಿತರ ಕುರಿತಾಗಲೀ ಅವಹೇಳನ ಮಾಡುವ ಉದ್ದೇಶದ ಲೇಖನವಲ್ಲ. ಸತ್ಯ ಶೋಧನಾ ವರದಿ ಮತ್ತೊಂದು ಮಗದೊಂದು ಎಂಬ ನಾಟಕಗಳಿಂದ ಮೂಡಿದ ವಿಡಂಬನೆಯಿದು. ಆಗಸ್ಟಿನಿಂದ ಇಲ್ಲಿಯವರೆಗೆ ರೋಹಿತ್ ವೇಮುಲ ಮತ್ತವನ ಗೆಳೆಯರ ಸುತ್ತ ನಡೆದ ರಾಜಕೀಯಗಳ ಬಗ್ಗೆ ವಿವರವಾಗಿ ಹಿಂದಿನ ಬರಹದಲ್ಲಿ ದಾಖಲೆಗಳ ಸಮೇತ ಬರೆಯಲಾಗಿದೆ. ಅದನ್ನೋದಲು ಇಲ್ಲಿ ಕ್ಲಿಕ್ಕಿಸಿ - ಹಿಂಗ್ಯಾಕೆ?)
ಡಾ. ಅಶೋಕ್. ಕೆ. ಆರ್
ಭಾನುವಾರ ರಾತ್ರಿ ಒಂದು ಭಾವಪೂರ್ಣ ಪತ್ರ ಬರೆದಿಟ್ಟು ನೇಣಿಗೆ ಶರಣಾಗಿಬಿಟ್ಟವನು ರೋಹಿತ್ ವೇಮುಲ. ಇಂಗ್ಲೀಷಿನಲ್ಲಿದ್ದ ಆ ಪತ್ರವನ್ನು ಕನ್ನಡಕ್ಕೆ ಅನುವಾದಿಸಿ ಜೊತೆಗೆ ಹೈದರಾಬಾದಿನಲ್ಲಿ ಕಳೆದ ಆಗಸ್ಟಿನಿಂದ ನಡೆದಿದ್ದೇನು ಎನ್ನುವುದನ್ನು ನಿನ್ನೆ ಪ್ರಕಟಿಸಲಾಗಿತ್ತು. ಕಿರಣ್ ಗಾಜನೂರು ಕೂಡ ಆ ಪತ್ರವನ್ನು ಕನ್ನಡಕ್ಕೆ ಅನುವಾದಿಸಿ ಫೇಸ್ ಬುಕ್ಕಿನಲ್ಲಿ ಹಾಕಿಕೊಂಡಿದ್ದರು. ಹಿಂಗ್ಯಾಕೆಯಲ್ಲಿ ಬಂದಿದ್ದ ಅನುವಾದ, ಕಿರಣ್ ಗಾಜನೂರು ಮಾಡಿದ್ದ ಅನುವಾದ ಉಳಿದ ವೆಬ್ ಪುಟಗಳಲ್ಲಿ, ಫೇಸ್ ಬುಕ್ಕಿನಲ್ಲಿ, ವಾಟ್ಸ್ ಅಪ್ಪಿನಲ್ಲಿ ಹರಿದಾಡುತ್ತಲೇ ಇದೆ. ನನ್ನ ವಾಟ್ಸಪ್ಪಿಗೆ ಹಲವು ಸಲ ಬಂದಿದೆ. ಎಷ್ಟೇ ಸಲ ಬಂದರೂ ಮತ್ತೆ ಮತ್ತೆ ಓದಬೇಕೆನ್ನಿಸುತ್ತಿತ್ತು. ಓದಿ ಓದಿ ಈಗ ರೋಹಿತನ ಮೇಲೆ ಕೋಪ ಬಂದಿದೆ. ಹೈದರಾಬಾದಿನ ಉಪಕುಲಪತಿ ಅಪ್ಪಾರಾವ್, ಈ ಐದು ಹುಡುಗರ ಜಾತಿವಾದಿ, ದೇಶದ್ರೋಹಿ ಕೆಲಸಗಳಿಗೆ ತಡೆ ಹಾಕಬೇಕೆಂದು ಸ್ಮೃತಿ ಇರಾನಿಗೆ ಪತ್ರ ಬರೆದ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯರ ವಿರುದ್ಧ ಆತ್ಮಹತ್ಯಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕೇಸು ದಾಖಲಾಗಿದೆ. ಸಚಿವೆ ಸ್ಮೃತಿ ಇರಾನಿಯವರು ಸತ್ಯ ಶೋಧನಾ ಸಮಿತಿಯನ್ನು ಕಳುಹಿಸಲಾಗುವುದೆಂದು ಹೇಳಿದ್ದಾರೆ. ಸತ್ಯ ಕಣ್ಣಿಗೆ ಕಾಣುವಾಗ ಶೋಧನಾ ಸಮಿತಿ ಯಾಕೆ? ಮೊದಲಿಗೆ ಮಾಡಬೇಕಾದ ಕೆಲಸವೆಂದರೆ ಅಮಾಯಕರಾದ ಬಂಡಾರು ದತ್ತಾತ್ರೇಯ ಮತ್ತು ಅಪ್ಪಾರಾವರ ವಿರುದ್ಧ ಹಾಕಿರುವ ಕೇಸುಗಳನ್ನು ಹಿಂತೆಗೆದುಕೊಳ್ಳಬೇಕು. ಯಾರ್ಯಾರು ಈ ಪ್ರಕರಣದಲ್ಲಿ ಅಪರಾಧಿಗಳೆಂದು ನೋಡೋಣ.
ಮೊದಲ ಅಪರಾಧಿಯ ಸ್ಥಾನದಲ್ಲಿ ಅಂಬೇಡ್ಕರರನ್ನು ನಿಲ್ಲಿಸಬೇಕು. ಚಾತುರ್ವರ್ಣ ನೀತಿಯೊಳಗೂ ಇಲ್ಲದ ದಲಿತರಿಗೊಂದು ಆತ್ಮಾಭಿಮಾನ ಮೂಡಿಸುವ ಕೆಲಸಕ್ಕಿಂತ ದೊಡ್ಡ ಅಪರಾಧ ಯಾವುದಾದರೂ ಇದೆಯೇ? ದಲಿತರು ಓದಬೇಕು, ದಲಿತರಿಗೆ ಸಮಾನತೆ ಸಿಗಬೇಕು ಎಂಬ ಕೆಟ್ಟ ಬುದ್ಧಿಯನ್ನೆಲ್ಲ ಅವರು ಪ್ರಚುರಪಡಿಸದಿದ್ದರೆ ಎಲ್ಲಾ ದಲಿತರು ಊರಾಚೆ ಬದುಕಿ ದೊಡ್ಡ ಜಾತಿಯವರ ಮಲ ಬಳಿದು, ಸತ್ತ ದನದ ಚರ್ಮ ಸುಲಿದು, ಊರೊಳಗೆ ಬರುವಾಗ ತಮಟೆ ಬಡಿಯುತ್ತ, ತಮ್ಮ ನೆರಳು ಮೇಲ್ಜಾತಿಯವರಿಗೆ ತಗುಲದಂತೆ ಎಚ್ಚರ ವಹಿಸುತ್ತ ಅಕ್ಷರ ಭಯೋತ್ಪಾದಕರ ಹಂಗಿಲ್ಲದೆ ನೆಮ್ಮದಿಯಾಗಿ ಇದ್ದುಬಿಡಬಹುದಿತ್ತಲ್ಲ. ಸುಖಾಸುಮ್ಮನೆ ಹದಿನೆಂಟು ಪರ್ಸೆಂಟು, ರಿಸರ್ವೆಷನ್ನು ಅಂತೆಲ್ಲ ಹೀಯಾಳಿಸಿಕೊಂಡು ಓದಿ ಉದ್ಧಾರವಾಗಬೇಕಾದ ದರ್ದೇನಿತ್ತಿವರಿಗೆ? ಇಂತ ಕೆಟ್ಟ ಬುದ್ಧಿಯನ್ನೆಲ್ಲ ಹೇಳಿಕೊಟ್ಟು ಸ್ವಾಭಿಮಾನ ತುಂಬಿದ್ದು ಆ ಅಂಬೇಡ್ಕರ್ ತಾನೇ? ಅದಿಕ್ಕೆ ಅವರ ಮೇಲೆ ಮೊದಲು ಕೇಸು ಹಾಕಬೇಕು. ಜೊತೆಗೆ ಎಲ್ಲರಿಗೂ ಶಿಕ್ಷಣ ನೀಡಲು ಶ್ರಮಿಸಿದ ಜ್ಯೋತಿಭಾ ಪುಲೆ, ಸಾವಿತ್ರಿಭಾಯಿ ಪುಲೆಯವರ ಮೇಲೆ ಕೇಸು ಜಡಿಯುವುದನ್ನು ಮರೆಯಬಾರದು. ಸತ್ತೋರ ಮೇಲೆ ಹಾಕುವ ಕೇಸಿನಿಂದ ಉಪಯೋಗ ಜಾಸ್ತಿ ಇಲ್ಲ ಅಲ್ಲವೇ.
ಮುಂದಿನ ಕೇಸನ್ನು ರೋಹಿತ್ ವೇಮುಲನ ತಂದೆ ತಾಯಿಯ ಮೇಲೆ ಹಾಕಬೇಕು. ಆಂಧ್ರದಲ್ಲೇನು ಜಮೀನುದಾರರಿಗೆ, ಭೂಮಾಲೀಕರಿಗೆ ಕೊರತೆಯೇ? ಅಂತವರ ಬಳಿಗೆ ತಮ್ಮ ಮಗನನ್ನು ಜೀತಕ್ಕೋ ಕೂಲಿಗೋ ಕಳುಹಿಸಿ ಚಾತುರ್ವರ್ಣ ಪದ್ಧತಿಯ ಉಳಿವಿಗೆ ಶ್ರಮಿಸುವುದನ್ನು ಬಿಟ್ಟು ಹೈದರಾಬಾದಿನ ವಿಶ್ವವಿದ್ಯಾಲಯಕ್ಕೆ ಓದಲು ಕಳುಹಿಸುವ ದುರಹಂಕಾರದ ಕೆಲಸವನ್ಯಾಕೆ ಮಾಡಬೇಕಿತ್ತವರು. ಓದಲಾತ ಇಲ್ಲಿಗೆ ಬರದಿದ್ದರೆ ಹೋರಾಟ ಮಣ್ಣು ಮಸಿ ಅಂತೆಲ್ಲ ಅವನ ತಲೆಗೆ ಹೋಗುತ್ತಲೇ ಇರಲಿಲ್ಲ. ನೆಮ್ಮದಿಯಾಗಿ ತಂಗಳನ್ನ ತಿಂದುಕೊಂಡು ಮೈಮುರಿದು ದುಡಿದು, ದಲಿತರ ಮೇಲಿನ ಅನ್ಯಾಯ ಕಣ್ಣಿಗೆ ಬಿದ್ದಾಗ 'ಎಲ್ಲಾ ನಮ್ ಪೂರ್ವಜನ್ಮದ ಪಾಪದ ಫಲ' ಎಂಬ ಅಯ್ನೋರ ಹೇಳಿಕೆಯನ್ನು ನೆನಪಿಸಿಕೊಂಡು ತಲೆ ತಗ್ಗಿಸಿ ಹೋಗಿಬಿಡಬಹುದಾಗಿದ್ದ ಯುವಕನನ್ನು ಓದಿಸಿ ಅವನ ಸಾವಿಗೆ ಕಾರಣವಾಗಿದ್ದು ವೇಮುಲನ ತಂದೆ ತಾಯಿಯೇ ಅಲ್ಲವೇ?
ಹೋಗ್ಲಿ ಹೈದರಾಬಾದ್ ವಿಶ್ವವಿದ್ಯಾಲಯಕ್ಕೆ ಓದಲು ಬಂದ ಮೇಲೆ ರಾಜಕೀಯ ಪ್ರಜ್ಞೆಯನ್ನು ಚೂರೂ ಬೆಳೆಸಿಕೊಳ್ಳದೇ ಓದಿಕೊಂಡು, ನಲಿದಾಡಿಕೊಂಡು, ಪಿಚ್ಚರ್ರು, ಮಾಲೂ ಅಂತ ತಿರುಗಾಡಿಕೊಂಡು ಇರುವುದನ್ನು ಬಿಟ್ಟು ಅದ್ಯಾಕೆ ಅಂಬೇಡ್ಕರ್ ವಿದ್ಯಾರ್ಥಿ ಸಂಘಕ್ಕೆಲ್ಲ ಸೇರಬೇಕಿತ್ತು? (ನೋಡಿ ಮತ್ತೆ ಇಲ್ಲಿ ಅಂಬೇಡ್ಕರ್ ಅಪರಾಧಿ). ಮುಜಾಫರ್ ನಗರದಲ್ಲಿ ನಡೆದ ಘಟನೆ ಕಟ್ಟಿಕೊಂಡು ಇವರಿಗೇನಾಬೇಕು? ಅಲ್ಲಿನ ಗಲಭೆಯ ಬಗೆಗಿನ ಡಾಕ್ಯುಮೆಂಟರಿಯನ್ನು ದೆಹಲಿಯಲ್ಲಿ ಪ್ರದರ್ಶನ ಮಾಡಲು ಬಿಡದಿದ್ದರೆ ಇವರಿಗೇನು ಹೋಗಬೇಕು? ಓ! ಅಲ್ಲಿನ ಕೋಮುಗಲಭೆಯಲ್ಲಿ ಹಿಂಸೆಗೊಳಗಾಗಿದ್ದು ಮುಸ್ಲಿಮರು, ಇದ್ದ ಹೆಚ್ಚು ಕಡಿಮೆ ಎಲ್ಲಾ ನಿರಾಶ್ರಿತ ಶಿಬಿರಗಳು ಮುಸ್ಲಿಮರದು, ಎರಡೇ ಎರಡು ನಿರಾಶ್ರಿತ ಶಿಬಿರಗಳು ಹಿಂದೂಗಳದ್ದಿತ್ತು. ಹಿಂದೂ ಧರ್ಮ ಅಸಹ್ಯಿಸುವ ದಲಿತರ ನಿರಾಶ್ತಿತ ಶಿಬಿರಗಳು. ದಲಿತರ ಮೇಲೆ ಮುಸ್ಲಿಮರು ಹಲ್ಲೆ ನಡೆಸಿದ ಬಗ್ಗೆಯೂ ಸಾಕ್ಷ್ಯಚಿತ್ರದಲ್ಲಿತ್ತು
(ಮುಜಾಫರ್ ನಗರದ ಕೋಮುಗಲಭೆಯಲ್ಲಿ ನಲುಗಿದ ಧರ್ಮವ್ಯಾವುದು?

ಅದರ ಬಗ್ಗೆಯೆಲ್ಲ ಇವರ್ಯಾಕೆ ತಲೆಕೆಡಿಸಿಕೊಳ್ಳಬೇಕಿತ್ತು. ದೇಶದಲ್ಲಿ ಹಿಂದೂ ಧರ್ಮವನ್ನು ರಕ್ಷಿಸಲು ಬಹುದೊಡ್ಡ ಪಡೆ ಸಿದ್ಧವಾಗಿರುವಾಗ ಅಂತವರ ಜೊತೆ ಕೈಜೋಡಿಸುವ ಕೆಲಸ ಮಾಡುವುದನ್ನು ಬಿಟ್ಟು ಸತ್ಯ - ಧರ್ಮ - ನ್ಯಾಯ ಎಂದೆಲ್ಲ ಬೊಬ್ಬೆ ಹೊಡೆಯುವುದ್ಯಾಕೆ? ಇಂತಹ ಚಿಂತನೆಗಳನ್ನೆಲ್ಲ ತಲೆಗೆ ತುಂಬಿದ ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಮೇಲೂ ಮರೆಯದೆ ಪ್ರಕರಣ ದಾಖಲಾಗಬೇಕು.
ರೋಹಿತನ ತಲೆಕೆಡಿಸಿದ ಅಂಬೇಡ್ಕರ್, ಜ್ಯೋತಿಭಾ ಪುಲೆ, ಶಿಕ್ಷಣ ಕೊಡಿಸಿದ ತಂದೆ ತಾಯಿ, ವಿಚಾರಗಳನ್ನು ತುಂಬಿದ ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಮೇಲೆ ಕೇಸುಗಳನ್ನು ದಾಖಲಿಸುವುದನ್ನು ಬಿಟ್ಟು ಹಿಂದೂ ಧರ್ಮ ರಕ್ಷಕರ ಮೇಲೆ ಕೇಸು ಹಾಕಿರುವುದು ಸರಿಯಲ್ಲ. ಮತ್ತು ದನ ಸಾಯಿಸಿದಾಗ ಮಾತನಾಡದವರೆಲ್ಲರೂ ಯಕಶ್ಚಿತ್ ಒಬ್ಬ ದಲಿತ ಸತ್ತಾಗ ದೇಶವೇ ಹಾಳಾಯಿತೆಂದು ಬೊಬ್ಬೆ ಹೊಡೆಯುವ ದುರ್ವಿಧಿ ಈ ದೇಶಕ್ಕೆ ಬರಬಾರದಿತ್ತು. ಅಲ್ಲರೀ ದನದೊಳಗೆ ಮೂವತ್ತುಮೂರು ಕೋಟಿ ದೇವತೆಗಳು ಬದುಕಿ ಬಾಳುತ್ತಿವೆ, ಈ ಹಾಳಾದ ದಲಿತರಲ್ಲೇನಿದೆ? ಅವರ ಮುಖ ಕಂಡ್ರೆ ನಮ್ ದೇವ್ರಿಗೇ ಮೈಲಿಯಾಗಿಬಿಡುತ್ತೆ ಅನ್ನೋ ಕಾಮನ್ ಸೆನ್ಸ್ ಕೂಡ ನಮ್ ಜನರಲ್ಲಿ ಕಾಣೆಯಾಗಿಬಿಟ್ಟಿದೆಯಲ್ಲ. ಸಮಾನ ಆಹಾರದ ಹಕ್ಕಿನ ಕುರಿತು ಮಾಂಸ ತಿನ್ನೋರು ತಿನ್ದೇ ಇರೋರೆಲ್ಲ ಸೇರ್ಕಂಡು ವಡೆ, ಬೀಫು ತಿಂದು ಪ್ರತಿಭಟನೆ ನಡೆಸಿದಾಗ ಅಂಡು ಬಡ್ಕೊಂಡು ಅರಚಿಕೊಂಡವರೆಲ್ಲ ನೋಡಿ ಎಷ್ಟೊಂದು ಮೌನದಿಂದಿದ್ದಾರೆ. ಅವರಿಗೆ ಗೊತ್ತು ಇಂತಹ ಘಟನೆಗಳು ಸನಾತನ ಧರ್ಮ ಮರುಪ್ರತಿಷ್ಟಾಪನೆಯಾಗುತ್ತಿರುವ ಲಕ್ಷಣಗಳೆಂದು. ಅವರ ಮೌನವನ್ನು ನೋಡಿಯೂ ಕಲಿಯದ ಈ ದೇಶದ ದ್ರೋಹಿಗಳು ರೋಹಿತನ ಆತ್ಮಹತ್ಯೆಯನ್ನು ಪ್ರತಿಭಟಿಸಿ ಇವತ್ತು (19/01/2015) ಅದೇ ಬೆಂಗಳೂರಿನ ಟೌನ್ ಹಾಲಿನ ಮುಂದೆ ಸಂಜೆ ನಾಲ್ಕೂವರೆಗೆ ನಾಲಕ್ಕು ಫೋಟೋ ಇಟ್ಕೊಂಡು, ಹತ್ತು ಬ್ಯಾನರ್ ಕಟ್ಕೊಂಡು ಕೂಗುವ ಕಾರ್ಯಕ್ರಮ ಇಟ್ಕೊಂಡಿದ್ದಾರಂತೆ. ಬಿಡುವಾಗಿದ್ದರೆ ನೀವು ಅತ್ತ ಕಡೆ ಒಮ್ಮೆ ಬಂದು ದೇಶದ್ರೋಹಿಗಳನ್ನು ಕಣ್ತುಂಬ ನೋಡಿಕೊಂಡು ಹೋಗಬೇಕಾಗಿ ವಿನಂತಿ

ಜನ 2, 2016

1 ಜನವರಿ, 1818: ಭೀಮಾ ಕೊರೇಗಾಂವಿನ ಯುದ್ಧ

ಕೊರೇಗಾಂವಿನ 'ವಿಜಯ ಸ್ಥಂಭ'
ಮೂಲ: drambedkarbooks.com
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್.

ಭಾರತದ ಇತಿಹಾಸವೆಂದರೆ ಅಸ್ಪ್ರಶ್ಯರು ಮತ್ತು ಮೇಲ್ಜಾತಿಯರ ನಡುವಿನ ಸಂಘರ್ಷ. ಭಾರತದ ಇತಿಹಾಸದ ನಿಜ ಬಣ್ಣವನ್ನು ತೋರಿಸಲು ಇತಿಹಾಸಕಾರರು ಆಸಕ್ತರಾಗಿಲ್ಲ.

ಜನವರಿ 1, 1818ರಲ್ಲಿ ಸಂಖ್ಯಾಬಲದಲ್ಲಿ ಮೇಲುಗೈ ಸಾಧಿಸಿದ್ದ ಪೇಶ್ವೆಯ ಸೈನ್ಯದ ವಿರುದ್ಧ ಕೆಲವು ನೂರು ಅಸ್ಪ್ರಶ್ಯ ಸೈನಿಕರು ಕೊರೇಗಾಂವಿನ ಯುದ್ಧದಲ್ಲಿ ದಿಗ್ವಿಜಯ ಸಾಧಿಸಿದ ಮಹತ್ವದ ಸಂಗತಿಯನ್ನು ಬಹಳ ನಾಜೂಕಿನಿಂದ ಇತಿಹಾಸದ ಪುಟಗಳಲ್ಲಿ ಅಡಗಿಸಿಡಲಾಗಿದೆ.

ಬ್ರಿಟೀಷ್ ಸೈನ್ಯದಲ್ಲಿದ್ದ ಐದು ನೂರು ಮಹರ್ ಸೈನಿಕರು ಪುಣೆಯನ್ನಾಳುತ್ತಿದ್ದ ಬ್ರಾಹ್ಮಣ ಪೇಶ್ವೆಯರ ವಿರುದ್ಧ ನಡೆಸಬೇಕಿದ್ದ ಯುದ್ಧದ ತಯಾರಿಯಲ್ಲಿದ್ದರು. ಇತಿಹಾಸದ ಪುಸ್ತಕಗಳಲ್ಲಿ ಈ ಯುದ್ಧಕ್ಕೆ ಮಹತ್ವ ಕೊಡಲಾಗಿದೆ ಮತ್ತು ನಾವೆಲ್ಲರೂ ಇದನ್ನು ಪೇಶ್ವೆಯವರ ಸಾಮ್ರಾಜ್ಯವನ್ನು ಸಂಪೂರ್ಣವಾಗಿ ನಾಶಪಡಿಸಿದ ಮತ್ತು ಬ್ರಿಟೀಷ್ ಸಾಮ್ರಾಜ್ಯವನ್ನು ಭಾರತದಲ್ಲಿ ಭದ್ರವಾಗಿ ಸ್ಥಾಪಿಸಿದ ಎರಡನೇ ಆಂಗ್ಲ – ಮರಾಠ ಯುದ್ಧವೆಂದು ಓದಿದ್ದೇವೆ. ಈ ಯುದ್ಧಕ್ಕೆ ಮತ್ತೊಂದು ಐತಿಹಾಸಿಕ ಆಯಾಮವೂ ಇದೆ, ಅದರ ಅರಿವು ನಮಗಿರಬೇಕು.

ಈ ಯುದ್ಧ ಭಾರತದ ಅಸ್ಪ್ರಶ್ಯರ ಮತ್ತು ಬ್ರಾಹ್ಮಣ್ಯದ ನಡುವೆ ನಡೆದ ಯುದ್ಧ.

ಭೀಮಾ ಕೊರೇಗಾಂವಿನ ಬಗೆಗಿನ ಪುಟ್ಟ ಡಾಕ್ಯುಮೆಂಟರಿ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ

ಮಹರ್ ಸೈನಿಕರಿಗೆ, ಇದು ಮತ್ತೊಂದು ಯುದ್ಧವಷ್ಟೇ ಆಗಿರಲಿಲ್ಲ. ತಮ್ಮ ಆತ್ಮಗೌರವವನ್ನು ಹೆಚ್ಚಿಸುವ, ಮನುಸ್ಮೃತಿಯ ಚಾತುರ್ವರ್ಣ್ಯದ ವಿರುದ್ಧದ ಹೋರಾಟವಾಗಿತ್ತು. ಕೇವಲ ಐನೂರರಷ್ಟು ಸಂಖೈಯಲ್ಲಿದ್ದ ಮಹರ್ ಸೈನಿಕರು ಮೂವತ್ತು ಸಾವಿರದಷ್ಟಿದ್ದ ಪೇಶ್ವೆಯವರ ಸೈನ್ಯವನ್ನು ಸೋಲಿಸಲು ತೆಗೆದುಕೊಂಡಿದ್ದ ಕೇವಲ ಒಂದು ದಿನ. ಇದಕ್ಕೆ ಸಮನಾದ ದಿಗ್ವಿಜಯ ಭಾರತದ ಇತಿಹಾಸದಲ್ಲಿ ಬಹುಶಃ ಯಾವುದೂ ಇಲ್ಲ.

ಬ್ರಾಹ್ಮಣರ ಆಡಳಿತವಿದ್ದ ಮಹಾರಾಷ್ಟ್ರದಲ್ಲಿ ಜಾತಿ ಆಧಾರಿತ ಅಸಮಾನತೆ ವಿಜ್ರಂಭಿಸುತ್ತಿತ್ತು; ಚಾತುರ್ವರ್ಣ್ಯದ ವ್ಯವಸ್ಥೆಯ ಹೊರಗಿದ್ದ ಅಸ್ಪ್ರಶ್ಯರು ಬ್ರಾಹ್ಮಣ್ಯದ ನೀತಿ ನಿಯಮಗಳ ಕಾರಣದಿಂದ ಅಭಿವೃದ್ಧಿ ವಂಚಿತರಾಗಿದ್ದರು.

ಅಸ್ಪ್ರಶ್ಯರು ಬೆನ್ನಿಗೊಂದು ಕಸಪೊರಕೆಯನ್ನು ಕಟ್ಟಿಕೊಂಡು ನಡೆಯಬೇಕಿತ್ತು. ಕಾರಣ? ಊರಿನೊಳಗೆ ನಡೆಯುವಾಗ ಮೂಡುವ ಅವರ ಹೆಜ್ಜೆಗುರುತುಗಳನ್ನು ಕಸಪೊರಕೆ ಅಳಿಸಿಹಾಕಬೇಕಿತ್ತು. ಮಹರರ ಹೆಜ್ಜೆ ಗುರುತು ಹಾದಿಯನ್ನು ಕಲುಷಿತಗೊಳಿಸಬಾರದೆಂದು ಮಾಡಿದ್ದ ನಿಯಮವಿದು! ಇಷ್ಟಕ್ಕೇ ಮುಗಿಯಲಿಲ್ಲ. ಉಗುಳಲು ಕತ್ತಿಗೊಂದು ಮಡಿಕೆಯನ್ನು ನೇತುಹಾಕಿಕೊಳ್ಳಬೇಕಿತ್ತು. ಮೇಲ್ಜಾತಿಯವರಿಗೆ ಎಲ್ಲೆಂದರಲ್ಲಿ ಉಗುಳುವ ಸ್ವಾತಂತ್ರ್ಯವಿತ್ತೆನಿಸುತ್ತೆ ಬಿಡಿ. ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಲು ಅವರಿಗೆ ಅನುಮತಿಯಿರಲಿಲ್ಲ ಮತ್ತು ಶಿಕ್ಷಣದಿಂದ ದೂರನಿಲ್ಲಬೇಕಿತ್ತು. ಈ ನಿಯಮಗಳನ್ನು ಪಾಲಿಸದ ಅಸ್ಪ್ರಶ್ಯರನ್ನು ಹತ್ಯೆ ಮಾಡಲಾಗುತ್ತಿತ್ತು. ಭೀಮಾ ಕೊರೇಗಾಂವಿನ ಯುದ್ಧ ಬ್ರಾಹ್ಮಣ ಹಿತಸಾಕ್ತಿಗೆ ಅಸ್ಪ್ರಶ್ಯರು ಕೊಟ್ಟ ಉತ್ತರವಾಗಿತ್ತು.

ಈ ಯುದ್ಧ ಜನವರಿ 1, 1818ರಂದು ಕೊರೇಗಾಂವಿನ ಭೀಮಾ ನದಿಯ ತೀರದಲ್ಲಿ ಬ್ರಿಟೀಷ್ ಸರಕಾರದ ಬಾಂಬೆ ನೇಟಿವ್ ಇನ್ಫೆಂಟ್ರಿಯ ಮಹರ್ ಸೈನಿಕರ ನಡುವೆ ಮತ್ತು ಪೇಶ್ವೆ ಸೈನಿಕರ ನಡುವೆ ನಡೆಯಿತು. ಶಿರೂರಿನಿಂದ ಭೀಮಾ ಕೊರೇಗಾಂವಿನವರೆಗೆ 27 ಕಿಲೋಮೀಟರುಗಳನ್ನು ಸರಿಯಾದ ಅನ್ನಾಹಾರವಿಲ್ಲದೆ ಕ್ರಮಿಸಿದ ಅಸ್ಪ್ರಶ್ಯ ಸೈನಿಕರು ಪೇಶ್ವೆಯ ಸೈನ್ಯದೊಂದಿಗೆ ಹನ್ನೆರಡು ತಾಸು ಕಾದಾಡಿ ದಿನದ ಕೊನೆಗೆ ಅವರನ್ನು ಸಂಪೂರ್ಣವಾಗಿ ಸೋಲಿಸಿಯೇ ಬಿಟ್ಟರು.

ಅನೇಕ ಕಾರಣಗಳಿಂದ ಈ ಯುದ್ಧ ಮಹತ್ವವುಳ್ಳದ್ದು. ಮೊದಲಿಗೆ, ಬ್ರಿಟೀಷರು ಒಂದು ಪುಟ್ಟ ಸೈನ್ಯದೊಂದಿಗೆ ಈ ಯುದ್ಧಕ್ಕೆ ಅಣಿಯಾಗಿದ್ದರು, ಅತ್ಯಂತ ಕೆಟ್ಟ ಸೋಲನ್ನು ಅವರು ನಿರೀಕ್ಷಿಸಿದ್ದರು. ಎರಡನೆಯದಾಗಿ, ಕೊರೇಗಾಂವಿನ ಈ ಯುದ್ಧ ಪೇಶ್ವೆಯವರನ್ನು ಹಣಿಯಲು ಮತ್ತವರನ್ನು ಶರಣಾಗತರನ್ನಾಗಿಸಲು ನೆರವಾಯಿತು. ಮೂರನೆಯ ಬಹುಮುಖ್ಯ ಮಹತ್ವ, ಈ ಯುದ್ಧ ಜಾತಿ ಬಂಧನದ ಸರಪಳಿಗಳನ್ನು ಒಡೆದು ಹಾಕಲು ಮಹಾರಾಷ್ಟ್ರದ ಅಸ್ಪ್ರಶ್ಯ ಮಹರರು ನಡೆಸಿದ ಪ್ರಯತ್ನ.

ಯುದ್ಧದಲ್ಲಿ ಭಾಗವಹಿಸಿದ್ದ ಬಾಂಬೆ ನೇಟಿವ್ ಇನ್ಫೆಂಟ್ರಿಯ ಸೈನಿಕರ ಶೌರ್ಯವನ್ನು ಗೌರವಿಸಲಾಯಿತು. ಅಧಿಕೃತ ವರದಿಯಲ್ಲಿ ಈ ಸೈನಿಕರ ಧೀರೋದ್ದಾತ ಮನೋಭಾವನೆ, ಶಿಸ್ತಿನ ಹೋರಾಟ, ಧೈರ್ಯವನ್ನು ನೆನಪು ಮಾಡಿಕೊಳ್ಳಲಾಗಿದೆ.

ಅತ್ಯಂತ ಕಠಿಣವಾಗಿದ್ದ ಶಿರೂರು – ಕೊರೇಗಾಂವ್ ನಡುವಿನ 27 ಕಿಲೋಮೀಟರುಗಳ ನಡುಗೆಯನ್ನು ಅನ್ನಾಹಾರದ ಕೊರತೆ, ಖಾಯಿಲೆಗಳ ನಡುವೆ ಯಶಸ್ವಿಯಾಗಿ ಪೂರೈಸಿ ಯುದ್ಧವನ್ನು ಗೆದ್ದ ಮಹರ್ ಸೈನಿಕರ ಕಾರ್ಯ ಪ್ರಶಂಸಾರ್ಹವಾಗಿತ್ತು. ಯುದ್ಧರಂಗದಲ್ಲಿ ಮುನ್ನಡೆಯುತ್ತಿದ್ದಾಗ, ಬಂಧನವಾದಾಗ, ಕೋಟೆಗೆ ಲಗ್ಗೆ ಇಡುತ್ತಿದ್ದಾಗ ಅಥವಾ ಕೆಲವೊಮ್ಮೆ ಗೆಲುವಿನ ಕಾರಣಕ್ಕಾಗಿ ಎರಡೆಜ್ಜೆ ಹಿಂದಿಡುತ್ತಿದ್ದಾಗ ಈ ಸೈನಿಕರು ತಮ್ಮ ಅಧಿಕಾರಿಗಳು ಮತ್ತು ಕಾಮ್ರೇಡುಗಳ ಜೊತೆ ಬದ್ಧತೆಯಿಂದ ನಿಂತಿದ್ದರು, ರೆಜಿಮೆಂಟಿನ ಗೌರವವನ್ನು ಮಣ್ಣುಪಾಲು ಮಾಡುವ ಯಾವ ಕೆಲಸವನ್ನೂ ಇವರು ಮಾಡಲಿಲ್ಲ.

ಮಹರ್ ಸೈನಿಕರ ಶೌರ್ಯವನ್ನು ನೆನಪಿನಲ್ಲಿಡುವ ಸಲುವಾಗಿ 1851ರಲ್ಲಿ ಕೊರೇಗಾಂವಿನಲ್ಲಿ ಬ್ರಿಟೀಷರು ವಿಜಯ ಸ್ಥಂಭವನ್ನು ಸ್ಥಾಪಿಸಿದರು. ಸ್ಥಂಭದ ಮೇಲೆ ಯುದ್ಧದಲ್ಲಿ ಹುತಾತ್ಮರಾದ 22 ಮಹರ್ ಸೈನಿಕರ ಹೆಸರುಗಳನ್ನು ಕೆತ್ತಲಾಗಿದೆ. ಭಾರತದ ಜಾತಿವ್ಯವಸ್ಥೆಯ ವಿರುದ್ಧ ಯುದ್ಧ ಸಾರಿದ ಮಹರರ ಶೌರ್ಯದ ವಿಜಯ ಸ್ಥಂಭ ನಮ್ಮ ಹೆಮ್ಮೆಯ ಪ್ರತೀಕವಾಗಿ ಇವತ್ತಿಗೂ ಕೊರೇಗಾಂವಿನಲ್ಲಿ ಘನತೆಯಿಂದ ನಿಂತಿದೆ.

ಡಾ. ಬಾಬಾಸಾಹೇಬ್ ಅಂಬೇಡ್ಕರರು ಪ್ರತಿ ವರ್ಷ ಜನವರಿ ಒಂದರಂದು ಕೊರೇಗಾಂವಿಗೆ ಭೇಟಿ ಕೊಡುತ್ತಿದ್ದರು, ಈಗಿನ ದಲಿತರು ಇದೇ ರೀತಿಯ ಶೌರ್ಯ ಮತ್ತು ಬದ್ಧತೆಯನ್ನು ತೋರಿಸಿ ಇಡೀ ದೇಶದಿಂದ ಬ್ರಾಹ್ಮಣ್ಯವನ್ನು ತೊಲಗಿಸಬೇಕೆಂದು ಹೇಳುತ್ತಿದ್ದರು. 1927ರ ಜನವರಿ ಒಂದರಂದು ಕೊರೇಗಾಂವಿನಲ್ಲಿ ದೊಡ್ಡ ಸಮಾವೇಶವನ್ನು ಆಯೋಜಿಸಿದ ಅಂಬೇಡ್ಕರರು ಅಸ್ಪ್ರಶ್ಯ ಸೈನಿಕರ ವೀರಗಾಥೆಯನ್ನು ಸಾರ್ವಜನಿಕರಿಗೆ ನೆನಪು ಮಾಡಿಕೊಟ್ಟರು.

ಪ್ರತಿ ವರ್ಷ ವರ್ಷದಾರಂಭದ ಹಿಂದಿನ ದಿನ ಅರ್ಥಹೀನ ಮೋಜು ಮಸ್ತಿಗಳಲ್ಲಿ ತೊಡಗುವ ಬದಲು ಪೇಶ್ವೆಗಳನ್ನು ಸೋಲಿಸಿ, ಮನುಸ್ಮ್ರತಿಯ ಆರಾಧಕರಾದ ಬ್ರಾಹ್ಮಣರ ಆಳ್ವಿಕೆಯಿಂದ ಅಸ್ಪ್ರಶ್ಯರಿಗೆ ಸ್ವತಂತ್ರ ತಂದುಕೊಟ್ಟ ನಮ್ಮ ಧೀರೋದ್ದಾತ ಹಿರೀಕರಿಗೆ ಗೌರವ ಸಲ್ಲಿಸೋಣ. ನಮ್ಮ ಭವ್ಯ ಇತಿಹಾಸವನ್ನು ಮತ್ತಷ್ಟು ಅರಿಯಲೂ ಇದು ಸುಸಂದರ್ಭ.

ಬಿ.ಆರ್.ಭಾಸ್ಕರ್ ಪ್ರಸಾದ್ ರವರು ತಮ್ಮ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡಿದ್ದ ಭೀಮಾ ಕೊರೇಗಾಂವಿನ ಬಗೆಗಿನ ಸಾಕ್ಷ್ಯಚಿತ್ರವನ್ನು ನೋಡಿದ ನಂತರ ಆ ಯುದ್ಧದ ಬಗ್ಗೆ ತಿಳಿದುಕೊಳ್ಳಲು ಒಂದಷ್ಟು ಅಂತರ್ಜಾಲ ಜಾಲಾಡುತ್ತಿದ್ದಾಗ drambedkarbooks.comನಲ್ಲಿ ಸಿಕ್ಕ ಲೇಖನದ ಕನ್ನಡ ಭಾವಾನುವಾದವಿದು.

ಡಿಸೆಂ 16, 2015

ಈ ನಿಯತ್ತಿಗೆ ಮೂವತ್ತು ಸಾವಿರ ವರ್ಷ!

ನಿಯತ್ತಿಗೆ ಮತ್ತೊಂದು ಹೆಸರು ನಾಯಿ! ತೋಳಗಳ ಪ್ರಪಂಚದಿಂದ ಹೊರಜಿಗಿದು ಮನುಷ್ಯನ ಸಹವಾಸಕ್ಕೆ ನಾಯಿಗಳು ಬಿದ್ದು ಎಷ್ಟು ವರುಷಗಳಾಗಿರಬಹುದು, ನಾಯಿಗಳ ಜನನ ಮೊದಲು ಪ್ರಾರಂಭವಾದದ್ದೆಲ್ಲಿ ಎನ್ನುವುದನ್ನು ತಿಳಿಯಲು ಚೀನಾದ ವಿಜ್ಞಾನಿಗಳು ಶ್ರಮಿಸಿದ್ದಾರೆ. ಇದಮಿತ್ಥಮಂ ಇಂತಹ ಜಾಗವೇ ನಾಯಿಗಳ ಉಗಮಸ್ಥಾನ ಎಂದು ಹೇಳಲು ಸಂಪೂರ್ಣ ಸಾಧ್ಯವಾಗಿಲ್ಲವಾದರೂ ತಳಿಶಾಸ್ತ್ರದ ಅಧ್ಯಯನದ ಮೂಲಕ ದಕ್ಷಿಣ ಏಷ್ಯಾ ಖಂಡದಲ್ಲಿ ಮನುಷ್ಯ ಮತ್ತು ನಾಯಿಯ ಸಹಬಾಳ್ವೆ ಪ್ರಾರಂಭವಾಯಿತು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಹನ್ನೆರಡು ತೋಳ, ಏಷ್ಯಾ ಮತ್ತು ಆಫ್ರಿಕಾದ ಇಪ್ಪತ್ತೇಳು ಪುರಾತನ ನಾಯಿಗಳು, ಈಗ ಪ್ರಸ್ತುತದಲ್ಲಿ ಇರುವ ಹತ್ತೊಂಭತ್ತು ವಿವಿಧ ತಳಿಯ ನಾಯಿಗಳ ತಳಿ ಅಧ್ಯಯನ ನಡೆಸಿರುವ ವಿಜ್ಞಾನಿಗಳ ತಂಡದ ಪ್ರಕಾರ ದಕ್ಷಿಣ ಏಷ್ಯಾದಲ್ಲಿ ಮೂವತ್ತು ಸಾವಿರ ವರುಷಗಳ ಹಿಂದೆ ತೋಳದಿಂದ ನಾಯಿ ಬೇರ್ಪಟ್ಟಿತು.

ಈ ನಾಯಿಯ ಉಗಮದ ಹಿಂದಿನ ಸ್ವಾರಸ್ಯಕರ ಕತೆಯನ್ನು ಡಿಸ್ಕವರಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ತೋರಿಸಿದ್ದರು. ಬೇಟೆಯಾಡಲು ಶಕ್ತವಲ್ಲದ ಕೆಲವು ತೋಳಗಳು ಮನುಷ್ಯ ವಾಸವಿದ್ದ ಜಾಗದ ಸುತ್ತಮುತ್ತ ತಿರುಗುತ್ತಿದ್ದವಂತೆ. ಮನುಷ್ಯ ಎಸೆದಿದ್ದ ಆಹಾರ ಪದಾರ್ಥವನ್ನು ತಿನ್ನುತ್ತ ಜೀವ ಉಳಿಸಿಕೊಳ್ಳುತ್ತಿದ್ದವಂತೆ. ದಿನವಿಡೀ ತಮ್ಮ ಸುತ್ತಲೇ ಸುತ್ತುತ್ತಿದ್ದ ನಿರುಪದ್ರವಿ ತೋಳಗಳ ಬಗ್ಗೆ ಮನುಷ್ಯನಿಗೂ ಅನುಕಂಪ ಮೂಡಿರಬೇಕು. ತಾನು ತಿನ್ನುತ್ತಿದ್ದ ಆಹಾರದಲ್ಲೇ ಒಂದು ತುಣುಕನ್ನು ನಾಯಿಯ ಕಡೆಗೆ ಎಸೆಯುತ್ತಿದ್ದ. ಸೌಮ್ಯ ತೋಳಗಳಿಗೆ ಒರಟು ತೋಳಗಳಿಗಿಂತ ಹೆಚ್ಚಿನ ಆಹಾರ ಸಿಗುತ್ತಿತ್ತು. ಆಹಾರಕ್ಕೋಸ್ಕರ ತೋಳಗಳು ಸೌಮ್ಯವಾದವು. ನೋಡಲು ಮುದ್ದುಮುದ್ದಾಗಿದ್ದ ತೋಳಗಳಿಗೆ ಹೆಚ್ಚು ಆಹಾರ ದಕ್ಕುತ್ತಿತ್ತು. ಮುದ್ದುಮುದ್ದಾಗಿದ್ದ ತೋಳಗಳು ಪುಷ್ಕಳ ಭೋಜನದ ಪ್ರಭಾವದಿಂದ ಚೆನ್ನಾಗಿ ಬೆಳೆದು ನಿಂತವು. ಉಳಿದ ತೋಳಗಳು ಅಪೌಷ್ಟಿಕತೆಯಿಂದ ಬಳಲಿದವು. ಪರಿಸರ ಕೂಡ ತಳಿಯ ಮೇಲೆ ಪ್ರಭಾವ ಬೀರುವುದರಿಂದ ಸಹಜವಾಗಿ ಮುಂದಿನ ತಲೆಮಾರಿನ ತೋಳಗಳು ಮತ್ತಷ್ಟು ಸೌಮ್ಯವಾಗಿ ಸುಂದರವಾಗಿ ನಾಯಿಗಳಾಗಿ ಪರಿವರ್ತನೆಗೊಂಡವು! 

ಚೀನಾದ ವಿಜ್ಞಾನಿಗಳು ನಡೆಸಿರುವ ಸಂಶೋಧನೆಯ ಪ್ರಕಾರ ದಕ್ಷಿಣ ಏಷ್ಯಾದ ಪುರಾತನ ನಾಯಿಗಳ ತಳಿ ತೋಳಕ್ಕೆ ಅತ್ಯಂತ ಸಮೀಪದಲ್ಲಿದೆ, ಸಾಮ್ಯತೆಗಳು ಹೆಚ್ಚಿವೆ. ಇವುಗಳ ಆಧಾರದ ಮೇಲೆ ಪ್ರಪಂಚದ ಮೊದಲ ನಾಯಿಗಳ ಉಗಮ ಮೂವತ್ತು ವರುಷಗಳ ಹಿಂದೆ ನಡೆದಿದೆ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಹದಿನೈದು ಸಾವಿರ ವರುಷಗಳ ತನಕ ದಕ್ಷಿಣ ಏಷ್ಯಾದಲ್ಲೇ ಮೊಕ್ಕಾಮು ಹೂಡಿದ್ದ ನಾಯಿಗಳು ನಂತರದಲ್ಲಿ ಮಧ್ಯ ಪ್ರಾಚ್ಯ ಏಷ್ಯಾದ ಕಡೆಗೆ ಹೆಜ್ಜೆ ಹಾಕಿದವು. ಜನರ ವಲಸೆಯ ಜೊತೆಗೆ ನಾಯಿಗಳೂ ವಲಸೆ ಪ್ರಾರಂಭಿಸಿದವು. ಹತ್ತು ಸಾವಿರ ವರುಷಗಳ ಕೆಳಗೆ ಯುರೋಪು ಖಂಡಕ್ಕೆ ಭೇಟಿ ನೀಡಿ ಮತ್ತಷ್ಟು ತಳಿ ಸಂಕರವಾಗಿ ಮತ್ತೆ ಉತ್ತರ ಚೀನಾದ ಕಡೆಗೆ ನಡೆದವು ಎನ್ನುತ್ತದೆ ಈ ಸಂಶೋಧನೆ. ನೇಚರ್ ಜರ್ನಲ್ಲಿನಲ್ಲಿ ಪ್ರಕಟವಾಗಿರುವ ಈ ಸಂಶೋಧನೆಯ ಲೇಖನವು ಮನುಷ್ಯ ಮತ್ತು ನಾಯಿಯ ನಡುವಿನ ಬಾಂಧವ್ಯದ ಇತಿಹಾಸವನ್ನು ಅರಿಯಲು ಸಹಕಾರಿಯಾಗಿದೆ.

ನವೆಂ 18, 2015

ಯಥಾ ಪ್ರಧಾನಿ ತಥಾ ವಿರೋಧಿ!

ಕಾಂಗ್ರೆಸ್ಸಿನ ಇಬ್ಬರು ಬೃಹಸ್ಪತಿಗಳು ಭಾರತದ ಮಾನವನ್ನು ವಿದೇಶದಲ್ಲಿ, ಅದೂ ಭಾರತದ ಕೆಡುಕನ್ನೇ ಸದಾ ಬಯಸುವ ಪಾಕಿಸ್ತಾನದಲ್ಲಿ ಕಳೆದು ಬಂದಿದ್ದಾರೆ. ಹೆಸರಿಗೆ ಅವರು ಕಳೆದುಹಾಕಿರುವುದು ನರೇಂದ್ರ ಮೋದಿಯವರ ಮಾನವನ್ನಾದರೂ ಮೋದಿಯವರು ಭಾರತದ ಪ್ರಧಾನಿಯಾಗಿರುವುದರಿಂದ ಇದು ಭಾರತದ ಮಾನಹಾನಿಯೇ ಅಲ್ಲವೇ?! ಇಸ್ಲಮಾಬಾದಿನ ಜಿನ್ನಾ ಸಂಸ್ಥೆಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರದ ಮಾಜಿ ಸಚಿವ ಸಲ್ಮಾನ್ ಖುರ್ಷಿದರಿಗೆ ಇದ್ದಕ್ಕಿದ್ದಂತೆ ನವಾಜ್ ಷರೀಫರ ಮೇಲೆ ಭಯಂಕರ ಪ್ರೀತಿ ಹುಟ್ಟಿ ಅವರನ್ನು ವಾಚಮಾಗೋಚರವಾಗಿ ಹೊಗಳಿ ನರೇಂದ್ರ ಮೋದಿಯವರನ್ನು ತೆಗಳಿದ್ದಾರೆ. ಏನೋ ಪಾಕಿಸ್ತಾನಕ್ಕೆ ಹೋಗಿದ್ದಾರೆ, ಅಲ್ಲಿಯೇ ಇದ್ದುಕೊಂಡು ಅಲ್ಲಿನ ಪ್ರಧಾನಿಯನ್ನು ತೆಗಳುವುದು ಸರಿಯಾಗುವುದಿಲ್ಲ ಎಂದು ನವಾಜ್ ಷರೀಫರನ್ನು ಹೊಗಳಿದ್ದರೆ ಸುಮ್ಮನಾಗಬಹುದಿತ್ತು. ವಿದೇಶಿ ನೆಲದಲ್ಲಿ ಭಾರತದ ಪ್ರಧಾನಮಂತ್ರಿಯನ್ನು ಹೀಗಳೆಯುವ ಕೆಲಸವನ್ಯಾಕೆ ಮಾಡಬೇಕು? ಮಂತ್ರಿ ಪದವಿಯ ಜೊತೆಗೆ ಬುದ್ಧಿಯನ್ನೂ ಮರಳಿಸಿಬಿಟ್ಟರೆ?

ಇನ್ನೂ ಸದಾ ವಿವಾದಿತ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಕಾಂಗ್ರೆಸ್ಸಿನ ಮಣಿಶಂಕರ್ ಅಯ್ಯರ್ ಪಾಕಿಸ್ತಾನದ 'ದುನಿಯಾ ಟಿವಿ'ಗೆ ಕೊಟ್ಟ ಸಂದರ್ಶನದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಬಾಂಧವ್ಯ ವೃದ್ಧಿಯಾಗಬೇಕಾದರೆ ಮೋದಿ ತೊಲಗಿ ಕಾಂಗ್ರೆಸ್ ಮರಳಿ ಬರಬೇಕು ಎಂದಿದ್ದಾರೆ. ಮೊದಲೇ ಭಾರತವನ್ನು ವೈರಿಯಾಗಿಯೇ ನೋಡುವ ಪಾಕಿಸ್ತಾನದಲ್ಲಿ ಮೋದಿ ನಿಮ್ಮ ಮೊದಲ ವೈರಿ ಎಂಬರ್ಥದ ಮಾತುಗಳನ್ನಾಡಿ ಬಂದಿದ್ದಾರೆ. ಇವರಿಗೇನ್ ಬುದ್ಧಿ ಇಲ್ಲವಾ? ಅಥವಾ ಇವರ ದ್ವೇಷವನ್ನು ತೋರ್ಪಡಿಸಲು ಭಾರತದಲ್ಲಿ ವಾಹಿನಿಗಳಿಲ್ಲವಾ? ನಮ್ಮಲ್ಲೇ 24x7 ವಾಹಿನಿಗಳು ಸುದ್ದಿಯಿಲ್ಲದೇ ಬಣಗುಟ್ಟುತ್ತಿರುವಾಗ ವಿದೇಶಿ ವಾಹಿನಿಗಳಲ್ಲಿ ದೇಶದ ಮರ್ಯಾದೆಯನ್ನು ಮೂರುಕಾಸಿಗೆ ಮಾರುವ ಪ್ರವೃತ್ತಿಯನ್ನು ವಿರೋಧಿಸಲೇಬೇಕು.

ಇವರಿಬ್ಬರು ಈ ರೀತಿಯೆಲ್ಲ ಮಾತನಾಡಿರುವುದಕ್ಕೆ ಸ್ಪೂರ್ತಿ ಯಾರಿರಬಹುದೆಂದು ಹುಡುಕಿದರೆ ಅದು ಮತ್ಯಾರೂ ಅಲ್ಲ ಭಕ್ತಾಸುಗಳನ್ನು ಬೆಳೆಸಿ ಪೋಷಿಸುತ್ತಿರುವ ನಮ್ಮಲ್ಲೆರ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು! ವಿರೋಧಿಗಳ ವಿರುದ್ಧ ಮೊನಚಿನ ಭಾಷಣ ಮಾಡುವುದರಲ್ಲಿ ಮೋದಿಯವರದು ಎತ್ತಿದ ಕೈ. ಅವರ ಭಾಷಣ ಕುಟ್ಟುವ ಉಮೇದಿ ಎಷ್ಟರವರೆಗಿದೆಯೆಂದರೆ ವಿದೇಶಿ ನೆಲದಲ್ಲಿ ನಿಂತಾಗಲೂ ಭಾರತದಲ್ಲಿನ ರಾಜಕೀಯ ವಿರೋಧಿಗಳ ಬಗ್ಗೆಯೇ ಮಾತನಾಡುತ್ತಾರೆ. ವಿದೇಶದಲ್ಲಿ ದೇಶದ ಮಾನ ತೆಗೆಯುತ್ತಿದ್ದೇನೆ ಎನ್ನುವುದರ ಅರಿವಿಲ್ಲದೆ ನೆಹರೂ ಬಗ್ಗೆ, ಅವರ ಕುಟುಂಬದ ಬಗ್ಗೆ, ರಾಹುಲ್ ಗಾಂಧಿಯ ಬಗ್ಗೆಯೆಲ್ಲ ಅನವಶ್ಯಕವಾಗಿ ಮಾತನಾಡಿ ಬಂದಿದ್ದಾರೆ. ಜಪಾನಿನಲ್ಲಿ ಭಗವದ್ಗೀತೆಯನ್ನು ಕೊಡುವಾಗ, ವಿದೇಶದಲ್ಲಿ ಸಂಸ್ಕೃತ ಶ್ಲೋಕ ಹಾಡಿದ ಮಕ್ಕಳನ್ನು ಹೊಗಳುವಾಗ ಭಾರತದ ಜಾತ್ಯತೀತರ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ. ದೇಶದ ಮಾನ ತೆಗೆಯುವುದಕ್ಕೆ ಏನೆಲ್ಲ ಒದರಬೇಕೋ ಅದರ ಬಗ್ಗೆ ಒದರಿದ್ದಾರೆ. 

ಭಾರತವೀಗ 'ಸೂಪರ್ ಪವರ್' ಆಗುತ್ತಿರುವ ಕಾರಣ ದೇಶದೊಳಗಿನ ರಾಜಕೀಯ ದ್ವೇಷವನ್ನು ವಿದೇಶದಲ್ಲೂ ತೋರ್ಪಡಿಸಬೇಕು ಎಂದು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಾಕಿಕೊಟ್ಟ ಹಾದಿಯಲ್ಲೇ ಕಾಂಗ್ರೆಸ್ಸಿನ ಸಲ್ಮಾನ್ ಖುರ್ಷಿದ್ ಮತ್ತು ಮಣಿಶಂಕರ್ ಅಯ್ಯರ್ ಸಾಗುತ್ತಿದ್ದಾರೆ. ಭಾರತದ ಮಾನ? ಅಯ್ಯೋ ಬುಡಿ ಮಾನ ಮರ್ಯಾದೆ ಎಲ್ಲಾ ಕಟ್ಕೊಂಡು ಏನ್ ಮಾಡ್ತೀರ... ಪಬ್ಲಿಸಿಟಿ ಮುಖ್ಯ.

ಅಕ್ಟೋ 29, 2015

ದಲಿತ ಜಾತಿ ಹುಟ್ಟಿದ್ದು ಸಾಬರಿಂದ: ಬಿಜೆಪಿ ವಕ್ತಾರ

bizoy sonkar shastri
ಬಿಜೆಪಿಯ ವಕ್ತಾರ ಬಿಝಯ್ ಸಂಕರ ಶಾಸ್ತ್ರಿ ಹೊಸದೊಂದು ವಿಚಾರವನ್ನು 'ಕಂಡು ಹಿಡಿದಿದ್ದಾರೆ'. ಭಾರತದಲ್ಲಿ ದಮನಿತ ದಲಿತ ಜಾತಿ ಹುಟ್ಟಿದ್ದೇಗೆ ಎನ್ನುವುದರ ಕುರಿತು ಬೆಳಕು ಚೆಲ್ಲಿದ್ದಾರೆ. ಎಲ್ಲದಕ್ಕೂ ಮುಸ್ಲಿಮರೇ ಕಾರಣ ಎನ್ನುವ ಸಿದ್ಧಾಂತವನ್ನು ನಂಬುವಂತೆ ಮಾತನಾಡುವ ಬಿಜೆಪಿಯವರಾದ ಬಿಝಯ್ ಅವರ ಅಧ್ಯಯನದ ಪ್ರಕಾರ ಸಾಬರು ಬರುವುದಕ್ಕೆ ಮುಂಚೆ ಭಾರತದಲ್ಲಿದ್ದ ಬ್ರಾಹ್ಮಣರು ದೇಶದ ಸಂಸ್ಕೃತಿ ಮತ್ತು ಧರ್ಮವನ್ನು ರಕ್ಷಿಸುವುದರಲ್ಲಿ ನಿರತರಾಗಿದ್ದರೆ ಕ್ಷತ್ರಿಯರು ಭಾರತದ ಗಡಿಯ ರಕ್ಷಣೆಯಲ್ಲಿ ಬ್ಯುಸಿಯಾಗಿದ್ದರು. ಆಗ ಬಂದ ಸಾಬರು ಈ ಬ್ರಾಹ್ಮಣ ಮತ್ತು ಕ್ಷತ್ರಿಯರ ಮೇಲೆ ಭಯಂಕರವಾಗಿ ಹಲ್ಲೆ ನಡೆಸಿ ಅವರು ಇಸ್ಲಾಮಿಗೆ ಮತಾಂತರವಾಗುವಂತೆ ಮಾಡಿದರಂತೆ. ಧರ್ಮ ಮತ್ತು ತಮ್ಮ ಕುಲದ ಬಗ್ಗೆ ಅಪಾರ ಭಯ ಭಕ್ತಿ ಇಟ್ಟುಕೊಂಡಿದ್ದ ಕೆಲವು ಬ್ರಾಹ್ಮಣರು ಮತ್ತು ಕ್ಷತ್ರಿಯರು ಮತಾಂತರವಾಗಲು ಒಪ್ಪಲಿಲ್ಲವಂತೆ. ಇವರ ಆತ್ಮಾಭಿಮಾನವನ್ನು ತೊಡೆದು ಹಾಕುವ ಕಾರಣಕ್ಕೆ ಮುಸ್ಲಿಮರು ಇವರಿಗೆ ಮಲ ಹೊರುವ ಕೆಲಸವನ್ನು ಮತ್ತು ಪ್ರಾಣಿ ಚರ್ಮವನ್ನು ಹದಗೊಳಿಸುವ ಕೆಲಸವನ್ನು ಮಾಡಿಸಿದರಂತೆ. ಇಂತಹ ಕೆಲಸ ಮಾಡುವವರು ಪರಿಶಿಷ್ಟ ಜಾತಿಯವರಾದರೆಂದು ಬಿಝಯ್ ರವರ ಅಭಿಪ್ರಾಯ! ಸಾಬರು ದಾಳಿ ನಡೆಸಿದಾಗ ಕೆಲವು ಬ್ರಾಹ್ಮಣರು ಮತ್ತು ಕ್ಷತ್ರಿಯರು ಬೆಟ್ಟಗಳಿಗೆ ಓಡಿ ಹೋದರಂತೆ; ಅವರೇ ಇವತ್ತಿರುವ ಪರಿಶಿಷ್ಟ ಪಂಗಡದವರಂತೆ!
ಇಂತಹ ಬ್ರಹಸ್ಪತಿಗಳ ಮಾತುಗಳನ್ನು ಕೇಳಿದಾಗ ಯಾವ ಯಾವ ಕಡೆಯಿಂದ ನಗಬೇಕೋ ಗೊತ್ತಾಗುವುದಿಲ್ಲ. ಮನುಷ್ಯ ಮೂಲತಃ ಕಾಡುವಾಸಿ, ನಂತರ ಕಾಡು ಕಡಿದು ಕಾಡು ತೊರೆದು ಊರುಗಳನ್ನು ನಿರ್ಮಿಸಿದಾತ ಎನ್ನುವಷ್ಟೂ ಸಾಮಾನ್ಯ ಜ್ಞಾನ ಇವರಿಗೆ ಇರುವುದಿಲ್ಲವಾ? ಸಾಬರ ದಾಳಿಯಲ್ಲಿ ಮತಾಂತರಗೊಳ್ಳದೇ ಇರುವವರೆಲ್ಲ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿಕೊಂಡುಬಿಟ್ಟಿದ್ದರೆ ಇವತ್ತು ಭಾರತದ ಬಹುಭಾಗದಲ್ಲಿ ಮುಸ್ಲಿಮರು ಮತ್ತು ದಲಿತರಷ್ಟೇ ಇರಬೇಕಿತ್ತಲ್ಲವೇ? ಅದೇಕೆ ಇನ್ನೂ ಇಲ್ಲಿ ಬ್ರಾಹ್ಮಣರಿದ್ದಾರೆ? ಕ್ಷತ್ರಿಯರಿದ್ದಾರೆ? ಇವರ ಅಧ್ಯಯನದಲ್ಲಿ ಶೂದ್ರರೇ ಇಲ್ಲವಲ್ಲ! ಶೂದ್ರ ಜಾತಿಯ ಹುಟ್ಟಿಗೆ ಕಾರಣಗಳಾವುದು? ಬಹುಶಃ ಕ್ರಿಶ್ಚಿಯನ್ನರ ದಾಳಿಯಿಂದ ಶೂದ್ರ ಸಮುದಾಯ ಹುಟ್ಟಿರಬಹುದು! ಒಂದು ಕ್ಷಣ ಇವರ ನಗೆಪಾಟಲಿನ ಹೇಳಿಕಗಳನ್ನೆಲ್ಲ ಒಪ್ಪಿಕೊಂಡುಬಿಡೋಣ. ಸಾಬರೇ ದಲಿತ ಜಾತಿಯ ಹುಟ್ಟಿಗೆ ಕಾರಣ ಎಂದು ನಂಬೋಣ. ದಲಿತ ಜಾತಿಯನ್ನು ಹುಟ್ಟಿಸಿದ ಸಾಬರಿಗೆ ದಲಿತರನ್ನು ಕಂಡರೆ ಅಸ್ಪ್ರಶ್ಯ ಮನೋಭಾವವಿಲ್ಲ. ಆ ಅಸ್ಪ್ರಶ್ಯ ಮನೋಭಾವ ಇರೋದು ಬ್ರಾಹ್ಮಣ, ಕ್ಷತ್ರಿಯ ಮತ್ತು ಶೂದ್ರರಿಗೆ. ದಲಿತ ಜಾತಿಯವರೆಲ್ಲ ಬ್ರಾಹ್ಮಣ ಮತ್ತು ಕ್ಷತ್ರಿಯ ಜಾತಿಯಿಂದಲೇ ಬಂದವರೆಂದ ಮೇಲೆ ಈ ಜಾತಿಯವರಿಗೇ ದಲಿತರ ಮೇಲಿರುವ ಅಸ್ಪ್ರಶ್ಯತೆ ಅಚ್ಚರಿ ಮೂಡಿಸುವ ವಿಷಯವಲ್ಲವೇ?! ಸಾಬರ ಮೇಲೆ ಎಲ್ಲದಕ್ಕೂ ಗೂಬೆ ಕೂರಿಸುವ ಪ್ರಯತ್ನದ ಜೊತೆಜೊತೆಗೆ ದಲಿತರಿಗೆ 'ನೋಡಿ ನೀವು ಬ್ರಾಹ್ಮಣ ಮತ್ತು ಕ್ಷತ್ರಿಯ ಜಾತಿಯ ಪೂರ್ವಜರಿಂದ ಬೇರ್ಪಟ್ಟವರು. ನೀವು ಸಾಬರ ಹತ್ತಿರ ಚೆನ್ನಾಗಿರಬಾರದು' ಎಂದು ಬ್ರೈನ್ ವಾಶ್ ಮಾಡುವ ಹುನ್ನಾರವೇ? ಉಳಿದವರ ಬಗ್ಗೆ ಗೊತ್ತಿಲ್ಲ ಬಿಜೆಪಿಯ ವಕ್ತಾರ ಬಿಝಯ್ ರವರ ತಲೆಯಂತೂ ಚೆನ್ನಾಗಿ ತೊಳೆಯಲ್ಪಟ್ಟಿದೆ!
ಸುದ್ದಿಮೂಲ: ದಿಹಿಂದೂ

ಅಕ್ಟೋ 16, 2015

ಕ್ರಾಂತಿವೀರ ಖೇಣಿ ಕಣಿಯಲ್ಲಿ ಸುಳ್ಳೆಲ್ಲಿದೆ!

ಬೀದರಿನ ಶಾಸಕರಾದ ಮಾನ್ಯ ಅಶೋಕ್ ಖೇಣಿಯವರು ಒಂದು ಅಮೋಘ ಅಧ್ಯಯನ ಕೈಗೊಂಡು ರೈತರ ಆತ್ಮಹತ್ಯೆಗೆ ಕಾರಣಗಳನ್ನು ಕಂಡುಹಿಡಿದಿದ್ದಾರೆ. ಸನ್ಮಾನ್ಯ ಅಶೋಕ್ ಖೇಣಿಯವರನ್ನು ರೈತ ಸಮುದಾಯ ತಮ್ಮ ನಾಯಕರನ್ನಾಗಿ ಆಯ್ಕೆ ಮಾಡಿಕೊಂಡು ಉದ್ಧಾರವಾಗುವ ದಾರಿಯನ್ನು ಹಿಡಿಯುವುದನ್ನು ಬಿಟ್ಟು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸನ್ಮಾನ್ಯರ ಅತ್ಯಮೋಘ ಕೊಡುಗೆಯಾದ ನೈಸಲ್ಲದ ನೈಸ್ ರಸ್ತೆಯ 'ಅಭಿರುದ್ಧಿ'ಗೆಂದು ಕಟ್ಟಲಾಗಿದ್ದ ಟೋಲ್ ಬೂತನ್ನು 'ಕಿಡಿಗೇಡಿಗಳು' ಧ್ವಂಸ ಮಾಡಿ ಅಶೋಕ್ ಖೇಣಿಯವರ ಮನ ನೋಯಿಸುವಂತಹ ಕೃತ್ಯವನ್ನೆಸಗಿರುವುದು ಅಕ್ಷಮ್ಯವೇ ಸರಿ. ಇಷ್ಟಕ್ಕೂ ಅಶೋಕ್ ಖೇಣಿ ಅಧ್ಯಯನದಲ್ಲಿದ್ದದಾದರೂ ಏನು?
ಜೂನ್ ಜುಲೈ ತಿಂಗಳಲ್ಲಿ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದ್ಯಾಕೆ ಎಂದು ನಮ್ಮ ನಾಡಿನ ಮುಖ್ಯಮಂತ್ರಿಗಳೇ ತಲೆ ಕೆರೆದುಕೊಂಡಿದ್ದರು. ತಲೆ ಕೆರೆದುಕೊಳ್ಳುವುದರ ಬದಲು ಖೇಣಿಯವರನ್ನು ಕರೆಸಿ ಕೇಳಿದ್ದರೆ ಎಲ್ಲವೂ ಪರಿಹಾರವಾಗಿಬಿಡುತ್ತಿತ್ತು. ಇರಲಿ, ಖೇಣಿ ಅಧ್ಯಯನ ಸಂಸ್ಥೆಯ ವರದಿಯ ಪ್ರಕಾರ ಆತ್ಮಹತ್ಯೆ ಮಾಡಿಕೊಂಡ 700 ರೈತರಲ್ಲಿ 500 ಮಂದಿ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಅವರ ಜೂಜು ಪ್ರವೃತ್ತಿ ಕಾರಣವಂತೆ. ಬೆಳೆ ಬೆಳೆಯುತ್ತೀನೆಂದು ಬ್ಯಾಂಕುಗಳಿಗೆ, ಬಡ್ಡಿ ಸಾಲ ನೀಡುವವರಿಗೆ ನಂಬಿಸಿ ಹಣ ಪಡೆದು ಆ ಹಣವನ್ನೆಲ್ಲಾ ಜೂಜಿನಲ್ಲಿ ಕಳೆದು ಸಾಲ ತೀರಿಸಲಾಗದೆ ನೇಣಿಗೆ, ವಿಷಕ್ಕೆ ಶರಣಾಗಿದ್ದಾರಂತೆ. ರೈತ ಬಂಧು ಖೇಣಿ ಹೇಳಿರುವುದರಲ್ಲಿ ಸುಳ್ಳೆಲ್ಲಿದೆ? ಇದನ್ನರಿಯದವರು ಅನಾವಶ್ಯಕವಾಗಿ ಖೇಣಿಯವರ ಮಾನ ಹರಾಜಾಕುತ್ತಿರುವುದನ್ನು ಭಯಾನಕ ಮಾತುಗಳಲ್ಲಿ ಖಂಡಿಸಬೇಕೆಂದು ಹೊಟ್ಟೆಗೆ ಅನ್ನ ತಿನ್ನದವರೆಲ್ಲರನ್ನೂ ಈ ಮೂಲಕ ಕೇಳಿಕೊಳ್ಳುತ್ತೇವೆ.
Freedictionary ವೆಬ್ ಪುಟದ ಪ್ರಕಾರ ಜೂಜು ಅಂದರೆ gamblingಗೆ ಈ ಕೆಳಗಿನ ಅರ್ಥಗಳನ್ನು ನೀಡಲಾಗಿದೆ
1. To bet on an uncertain outcome, as of a contest
2. To play a game of chance for stakes.
3. To take a risk in the hope of gaining an advantage or a benefit.

ಪ್ರತಿಫಲದ ಬಗ್ಗೆ ಚಿಂತಿಸದೆ ಹಣವನ್ನೂಡುವುದು, ಅದೃಷ್ಟ ನಂಬಿ ದುಡ್ಡು ಸುರಿಯುವುದು, ಲಾಭವಾಗಬಹುದೆಂಬ ನಿರೀಕ್ಷೆಯಿಂದ ಅಪಾಯಕ್ಕೆದುರಾಗುವುದು ಜೂಜುಗಾರನ ಪ್ರಮುಖ ಲಕ್ಷಣಗಳು. ಹೂಡಿದ ದುಡ್ಡು ಮರಳುವುದು ನಿರ್ಧಾರವಾಗುವುದು ಹೂಡಿಕೆದಾರನಿಂದಲ್ಲ, ಬೇರೊಬ್ಬನಿಂದ. ನಮ್ಮ ರೈತರಲ್ಲೂ ಈ ಎಲ್ಲಾ ಲಕ್ಷಣಗಳು ಇದೆಯಲ್ಲ? ಬೆಳೆ ಬರುತ್ತೋ ಇಲ್ಲವೋ ಎಂದು ಯೋಚಿಸದೆ ಬೀಜ ಬಿತ್ತುತ್ತಾನೆ, ಮಳೆಯೆಂಬ ಅದೃಷ್ಟವನ್ನು ನಂಬಿ ದುಡ್ಡು ಸುರಿಯುತ್ತಾನೆ, ಲಾಭವಾಗಬಹುದೆಂಬ ನಿರೀಕ್ಷೆಯಿಂದ ಎಲ್ಲಾ ರೀತಿಯ ಅಪಾಯಗಳನ್ನೂ ಎದುರುಗೊಳ್ಳುತ್ತಾನೆ; ಕೊನೆಗೆ ಕೈಹತ್ತಿದ ಬೆಳೆಗೆ ಬೆಲೆ ನಿರ್ಧರಿಸುವುದು ದಲ್ಲಾಳಿ/ವರ್ತಕ/ಸರಕಾರ. ರೈತರಿಗಿಂತ ದೊಡ್ಡ ಜೂಜುಕೋರ ಯಾರಿದ್ದಾರೋ ತೋರಿಸಿ. ಸನ್ಮಾನ್ಯ ಅಶೋಕ್ ಖೇಣಿಯವರನ್ನು ವಿರೋಧಿಸುವವರು ಇಂತಹ ಒಳಾರ್ಥಗಳನ್ನೆಲ್ಲ ಯೋಚಿಸಬೇಕು. ಯೋಚಿಸಿದ ನಂತರ ಇಂತಹ ಸನ್ಮಾನ್ಯರನ್ನು ಶಾಸಕರನ್ನಾಗಿ ಆಯ್ಕೆ ಮಾಡುವ ನಮ್ಮ ಮುಟ್ಟಾಳತನಕ್ಕೆ ನಾವೇ ನಮ್ಮ ಕೆನ್ನೆಗೆರಡು ಬಾರಿಸಿಕೊಳ್ಳಬೇಕು.

ಅಕ್ಟೋ 11, 2015

ಒಗ್ಗಟ್ಟಿನಲ್ಲಿ ಬಲವಿದೆ!

ant raft south carolina
ದಕ್ಷಿಣ ಕೆರೋಲೀನಾದಲ್ಲಿ ಒಂದೇ ಸಮನೆ ಸುರಿದ ಮಳೆಗೆ ಪ್ರವಾಹ ಪರಿಸ್ಥಿತಿ. ಪ್ರವಾಹವೆಂದರೆ ಮನುಷ್ಯನನ್ನೂ ಸೇರಿಸಿ ಸಕಲ ಪಕ್ಷಿ – ಪ್ರಾಣಿ ಸಂಕುಲಕ್ಕೂ ಭಯವೇ. ಈ ಭಯದಿಂದ ಇರುವೆಗಳೂ ಹೊರತಲ್ಲ. ಪ್ರವಾಹಕ್ಕೆ ಸಿಲುಕಿದ ಮನುಷ್ಯನನ್ನೇನೋ ಇತರರು ದೋಣಿಗಳ ಮೂಲಕ, ಹೆಲಿಕಾಪ್ಟರಿನ ಮೂಲಕ ಬಚಾವು ಮಾಡಿಬಿಡುತ್ತಾರೆ. ಕೆಂಪು ಇರುವೆಗಳು ಈ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಿದ ಬಗೆ ಸ್ಪೂರ್ತಿಯಾಗುವಂತಹುದು.
ಇರುವೆ ನೀರಿನಲ್ಲಿ ಬಿದ್ದಾಗ ಸ್ವಲ್ಪ ಮಟ್ಟಿಗೆ ತೇಲಿ ಸ್ವಲ್ಪ ಮಟ್ಟಿಗೆ ಈಜಬಲ್ಲದು. ಈ ತೇಲುವಿಕೆ ಈಜುವಿಕೆಯೆಲ್ಲ ಸ್ವಲ್ಪ ಹೊತ್ತು ನಡೆದು ಇರುವೆ ಮುಳುಗಿ ಬಿಡುತ್ತದೆ. ಒಂಟಿಯಾಗಿ ಮುಳುಗಿಹೋಗುವುದನ್ನು ತಪ್ಪಿಸಲು ಸಾವಿರಾರು ಇರುವೆಗಳ ಸೈನ್ಯ ಒಂದೂವರೆ ನಿಮಿಷದ ಒಳಗೆ ಒಬ್ಬರಿಗೊಬ್ಬರು ಅಂಟಿಕೊಂಡು ತೆಪ್ಪ ನಿರ್ಮಿಸಿ ಪ್ರವಾಹದಲ್ಲಿ ಮುಳುಗುವುದರಿಂದ ಬಚಾವಾಗಿವೆ. ಈ ರೀತಿ ತೆಪ್ಪ ನಿರ್ಮಿಸಿಕೊಂಡರೆ ವಾರಗಟ್ಟಲೆ ತೇಲಿಕೊಂಡೇ ಇರುವಷ್ಟು ಚೈತನ್ಯ ಇರುವೆಗಳಿಗೆ ದಕ್ಕುತ್ತದೆಯಂತೆ.
ವೀಡೀಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ
ಒಂಟಿಯಾಗಿದ್ದರೆ ಶೀಘ್ರ ಸಾವು; ಜೊತೆಯಲ್ಲಿದ್ದರೆ ಪ್ರವಾಹವನ್ನೇ ಎದುರಿಸಬಹುದು ಎಂಬ ಪಾಠ ಕಲಿಸಿಕೊಟ್ಟಿವೆ ಈ ಕೆಂಪು ಇರುವೆಗಳು.

ಸೆಪ್ಟೆಂ 1, 2015

ದುಡ್ಡಿನರಮನೆಯಲ್ಲಿ ಕಳೆದುಹೋಗಿರುವ ಮಾಧ್ಯಮ ಸಂವೇದನೆ ಮೂಡಿಸುವುದೆಂತು?

Dr Ashok K R
ಮೊನ್ನೆ ಭಾನುವಾರ ಬೆಳಿಗ್ಗೆ ಹತರಾದ ಡಾ.ಎಂ.ಎಂ.ಕಲಬುರ್ಗಿಯವರ ಸಾವಿಗೆ ಸಂತಾಪ ಸೂಚಿಸಲು ಮತ್ತು ಕೊಲೆಗಾರರನ್ನು ಶೀಘ್ರವಾಗಿ ಬಂಧಿಸುವಂತೆ ಒತ್ತಾಯಿಸಲು ಬೆಂಗಳೂರಿನ ಟೌನ್ ಹಾಲ್ ಬಳಿ ಹೋಗಿದ್ದಾಗ ಆಕಸ್ಮಿಕವಾಗಿ ಬೋಳುವಾರು ಮೊಹಮದ್ ರವರ ಪರಿಚಯವಾಯಿತು. ಹೊಸಬನೊಡನೆ ಸರಾಗವಾಗಿ ಮಾತನಾಡುತ್ತಿದ್ದರು. ಎಸ್.ಡಿ.ಪಿ.ಐ ಸಂಘಟನೆಯ ಕಾರ್ಯಕರ್ತರು ಅವರ ಧ್ವಜವನ್ನು ಹೊರತೆಗೆದಾಗ ‘ಯಾವ ಸಂಘದ ಕಾರ್ಯಕ್ರಮವೂ ಅಲ್ಲ. ಇಲ್ಲಿ ಫ್ಲ್ಯಾಗ್ ಇಟ್ಕೊಂಡು ಪ್ರಚಾರ ಮಾಡ್ಕೊಳ್ಳೋದ್ಯಾಕೆ’ ಎಂದು ರೇಗಿದರು. ಉಳಿದವರೂ ಧ್ವಜಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಧ್ವಜಗಳನ್ನು ಮಡಿಚಿಟ್ಟರು. ‘ಏನ್ ಕರ್ಮಾರೀ ಇವರ್ದು, ಅರವತ್ತು ವರ್ಷ ವಯಸ್ಸಾದ್ರೆ ಏನೋ ಮುತ್ಸದ್ಧಿ ಅಂತ ತೋರಿಸ್ಕೊ‍ಳ್ಳೋ ಚಟಕ್ಕೆ ಗಡ್ಡ ಬಿಟ್ಕೊಳ್ಲಿ. ಇಪ್ಪತ್ತು ವರ್ಷಕ್ಕೆ ಗಡ್ಡ ಬಿಟ್ಕೊಂಡು ಅಸಹ್ಯವಾಗಿ ಕಾಣ್ತಾರಪ್ಪ’ ಎಂದು ಗೊಣಗಿದರು. ನನ್ನ ಕುರುಚಲು ಗಡ್ಡ ಕೆರೆದುಕೊಂಡೆ. ಜಿ.ರಾಮಕೃಷ್ಣರವರನ್ನು ನೆರೆದಿದ್ದ ಜನಸಮೂಹವನ್ನುದ್ದೇಶಿಸಿ ಮಾತನಾಡಬೇಕೆಂದು ಮುಂದಕ್ಕೆ ಕರೆದರು. ಆ ವಯಸ್ಸಿನಲ್ಲೂ ಸಾಹಿತಿ – ಸಂಶೋಧಕನ ಹತ್ಯೆಗೆ ಪ್ರತಿಭಟನೆ ಸೂಚಿಸಲು ಬಂದಿದ್ದ ಜಿ.ಆರ್ ಟೌನ್ ಹಾಲಿನ ಮೆಟ್ಟಲಿಳಿದು ಮೈಕ್ ಕೈಗೆತ್ತಿಕೊಳ್ಳುವಷ್ಟರಲ್ಲಿ ಗಿರೀಶ್ ಕಾರ್ನಾಡ್ ಆಗಮಿಸಿದರು. ಟಿವಿ ವಾಹಿನಿಯವರೆಲ್ಲರೂ ಮೈಕು ಕ್ಯಾಮೆರಾಗಳೊಂದಿಗೆ ಗಿರೀಶ್ ಕಾರ್ನಾಡರತ್ತ ಧಾವಿಸಿದರು. ಜಿ.ಆರ್ ಮಾತನಾಡಲಿ ಮೊದಲು ಎಂದು ಕೆಲವರು ಕೂಗಿದರೂ ವಾಹಿನಿಯವರದು ಜಾಣ ಕಿವುಡು. ಮೈಕ್ ಹಿಡಿದುಕೊಂಡ ಜಿ.ಆರ್ ಮೌನದಿಂದ ನಿಂತಿದ್ದರು. ಬಿಡಿ, ಸಾಮಾನ್ಯರಿಗೆ ಗಿರೀಶ್ ಕಾರ್ನಾಡರನ್ನಷ್ಟೇ ಗುರುತಿಸುವುದು ಸಾಧ್ಯ, ಕಾರಣ ಅವರೊಬ್ಬ ನಟರಾದ್ದರಿಂದ ಅಲ್ಲಿಲ್ಲಿ ನೋಡಿರುತ್ತೇವೆ. ಮಾಧ್ಯಮದವರಿಗಾದರೂ ಯಾರ ಮಾತಿಗೆ ನಾವು ಅಡ್ಡಿಪಡಿಸುತ್ತಿದ್ದೇವೆ, ಯಾರು ನಮ್ಮಿಂದ ಕಾಯುವಂತಾಗಿದ್ದಾರೆ ಎಂಬ ಪ್ರಜ್ಞೆಯೂ ಇರಬೇಡವೇ? ಗಿರೀಶ್ ಕಾರ್ನಾಡ್ ಅವರನ್ನು ಗುರುತಿಸುವವರ ಸಂಖೈ ಹೆಚ್ಚು, ಅವರ ಮಾತಿಗೆ ಕೊನೇಪಕ್ಷ ಟಿವಿಯಲ್ಲಿ ಟಿ.ಆರ್.ಪಿ ಹೆಚ್ಚು ಎನ್ನುವುದನ್ನು ಒಪ್ಪೋಣ. ಗಿರೀಶ್ ಕಾರ್ನಾಡರದ್ದೇ ಬೈಟ್ ತೆಗೆದುಕೊಳ್ಳಲಿ; ಆದರೆ ಆ ಬೈಟಿಗಾಗಿ ಒಂದರೆಕ್ಷಣ ಕಾಯುವಷ್ಟೂ ಪುರುಸೊತ್ತಿಲ್ಲದಂತಾಯಿತೇ ನಮ್ಮ ಮಾಧ್ಯಮ ಮಿತ್ರರಿಗೆ? ಇಷ್ಟೊಂದು ಸಂವೇದನಾರಹಿತರಾಗಿ ಕಾರ್ಯನಿರ್ವಹಿಸುವ ಅನಿವಾರ್ಯವಾದರೂ ಏನು? ‘ಆ ಟಿವಿಯವರು ಬೈಟ್ ತೆಗೆದುಕೊಂಡಿದ್ದಾರೆ. ನೀನ್ಯಾಕೆ ತೆಗೆದುಕೊಂಡಿಲ್ಲ’ ಎಂದವರ ಮಾಲೀಕರು ಬೈಯ್ಯುತ್ತಾರಾ?

ಮನೆಗೆ ವಾಪಸ್ಸಾದ ನಂತರ ಟಿವಿ ಹಾಕಿದರೆ ವಾಹಿನಿಯೊಂದರಲ್ಲಿ ಶಿವರಾಜ್ ಕುಮಾರ್ ತನ್ನ ಭಾವೀ ಅಳಿಯನಿಗೆ ಗಿಫ್ಟಾಗಿ (ಇದು ವರದಕ್ಷಿಣೆಯೇ ಅಲ್ಲವೇ?!) ಕೊಡುವ ಕಾರಿನ ಬಗೆಗಿನ ಚರ್ಚೆ! ಭಾವೀ ಅಳಿಯನ ಸಂದರ್ಶನ ಬೇರೆ... ಥೂ ಇವರ ಯೋಗ್ಯತೆಗೆ ಎಂದುಕೊಂಡೆ. ಸಹೋದ್ಯೋಗಿಯ ಬಗ್ಗೆ ಇದೇ ವಿಷಯ ಚರ್ಚಿಸುವಾಗ ‘ರೀ. ಅಳಿಯನ ಸಂದರ್ಶನವೇ ವಾಸಿ. ಅಡುಗೆ ಮಾಡೋರತ್ರ, ಡೆಕೊರೇಷನ್ ಮಾಡೋರ್ ಮುಖದ್ ಮುಂದೆ ಮೈಕಿಡ್ದು ಶಿವಣ್ಣನ ಮಗಳ ಮದುವೆ ಕೆಲಸ ಮಾಡ್ತಿದ್ದೀರಲ್ಲ ನಿಮಗೇನನ್ಸುತ್ತೆ? ಗೀತಕ್ಕ ನಿಮಗೇ ಇಂತಿಂತದೇ ಮಾಡ್ಬೇಕು ಅಂದ್ರಾ? ಅಂತೆಲ್ಲ ಕೇಳ್ತಿದ್ರು’ ಅಂದರು. ಮದುವೆ ಹಿಂದಿನ ದಿನದ ಸಮಾರಂಭ, ಮದುವೆ ದಿನದ ಸಂಪೂರ್ಣ ಲೈವ್ ಪ್ರಸಾರ....... ಮಾಧ್ಯಮ ಉದ್ಯಮವೆಂಬುದು ಸತ್ಯ, ಲಾಭದಲ್ಲಿದ್ದರಷ್ಟೇ ಮುಂದುವರೆಯಲು ಸಾಧ್ಯ ಎಂಬುದೂ ಸತ್ಯ.... ಆ ಕಾರಣಕ್ಕೆ ಇಷ್ಟೊಂದು ಕೆಳ ಮಟ್ಟಕ್ಕಿಳಿಯಬೇಕೆ? 

ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗದಲ್ಲಿ ನಟನಾಗಿ ದೊಡ್ಡ ಹೆಸರು. ತಂದೆ ರಾಜ್ ಕುಮಾರ್ ಪ್ರಭಾವಳಿಯಿಂದ ಚಿತ್ರರಂಗಕ್ಕೆ ಅವರ ಮಕ್ಕಳು ಬಂದವರಾದರೂ ತಮ್ಮದೇ ಪ್ರತಿಭೆ, ಶ್ರಮದಿಂದ ಚಿತ್ರರಂಗದಲ್ಲಿ ನೆಲೆನಿಂತವರು. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರರೆಲ್ಲರೂ ಗೌರವಕ್ಕೆ, ಆದರಕ್ಕೆ ಅರ್ಹರು. ಅವರ ಮಕ್ಕಳು ಯಾವ ರೀತಿಯ ಸಾಧಕರು? ಅವರ ಮದುವೆಗ್ಯಾಕೆ ಅಷ್ಟೊಂದು ಪ್ರಾಮುಖ್ಯತೆ. ಓಕ್ಕೋಳ್ಳಿ, ಮದುವೆ ಸಮಾರಂಭವನ್ನು ಬಹುತೇಕ ಪತ್ರಿಕೆಗಳು ಚಿಕ್ಕದಾಗಿ ಪ್ರಕಟಿಸಿರುವಂತೆ ಒಂದೈದು ನಿಮಿಷದ ಸುದ್ದಿ ಮಾಡಿದರೆ ಒಪ್ಕೋಬಹುದು. ದಿನವಿಡೀ ಲೈವ್ ಆಗಿ ತೋರಿಸೋ ದರ್ದೇನು ಮಾಧ್ಯಮದವರಿಗೆ? ‘ಸಿದ್ಧರಾಮಯ್ಯ ಬಂದ್ರು, ಸಿದ್ಧರಾಮಯ್ಯ ಸ್ಟೇಜ್ ಹತ್ತುದ್ರು, ಸಿದ್ಧರಾಮಯ್ಯ ಕೈ ಕೊಟ್ರು, ಸಿದ್ಧರಾಮಯ್ಯ ಕೆಳಗಿಳಿದ್ರು’ ಅಂತ ರನ್ನಿಂಗ್ ಕಾಮೆಂಟ್ರಿ ಬೇರೆ! ಹೋಗ್ಲಿ ಮದುವೆಯೇನಾದ್ರೂ ತುಂಬ ವಿಭಿನ್ನವಾಗಿ, ಸಮಾಜಕ್ಕೆ ಮಾದರಿಯಾಗಿ ನಡೆಯಿತಾ? ಇಲ್ಲವಲ್ಲ. ಅದೊಂದು ಐಷಾರಾಮಿ ಮದುವೆ. ಅವರ ದುಡ್ಡು ಅವರ ಐಷಾರಾಮಿತನ ಅವರಿಷ್ಟ. ಖಾಸಗಿ ಐಷಾರಾಮಿತನವನ್ನು ಲೈವ್ ತೋರಿಸಿ ಸಮಾಜಕ್ಕೆ ಯಾವ ರೀತಿಯ ಸಂದೇಶವನ್ನು ಕೊಡುತ್ತಿವೆ ಮಾಧ್ಯಮಗಳು? ಇದೆಲ್ಲಕ್ಕಿಂತಲೂ ಅಸಹ್ಯವೆಂದರೆ ‘ದೊಡ್ಮನೆ ಮದುವೆ ದೊಡ್ಮನೆ ಮದುವೆ’ ಅಂತ ಬಡಕೊಂಡಿದ್ದು. ದೊಡ್ಮನೆ ಚಿಕ್ಮನೆಗಳೆಲ್ಲವೂ ಊಳಿಗಮಾನ್ಯ ಪದ್ಧತಿಯ ಸಂಕೇತವಲ್ಲವೇ? ಯಾವ ದೊಡ್ಮನೆಯಲ್ಲಿ ರಾಜ್ ಕುಮಾರ್ ಕುಟುಂಬ ಒಟ್ಟಿಗಿದೆ ಎಂಬುದನ್ನು ಅರಿಯದಷ್ಟು ದಡ್ಡರೇ ಮಾಧ್ಯಮದವರು. ‘ಲೈವ್ ಪ್ರೋಗ್ರಾಮ್ ಮಾಡಬೇಡಿ’ ಎಂದು ಹೇಳುವ ಮೂಲಕ ಶಿವರಾಜ್ ಕುಮಾರ್ ಆದರೂ ‘ದೊಡ್ಡ’ತನ ತೋರಿಸಬಹುದಿತ್ತು. ಈ ಅಪಸವ್ಯಗಳೆಲ್ಲ ಮದುವೆಗೇ ಮುಗಿದು ಕ್ಯಾಮೆರಾ ಎತ್ತಿಕೊಂಡು ಹನಿಮೂನು ಪ್ರಸ್ಥದ ಮನೆ ಅಂಥ ತೋರಿಸದಿದ್ದರೆ ಕನ್ನಡಿಗರ ಪುಣ್ಯ.

ಆಗ 27, 2015

ಮೂಗಿನ ಸರ್ಜರಿಗೆ ಮೂವತ್ತು ದಿನ ಪೆರೋಲ್!

ಅಕ್ರಮ ಶಸ್ತ್ರಾಸ್ತ್ರವನ್ನು 'ಮನೆಯವರ ರಕ್ಷಣೆಯ' ನೆಪದಲ್ಲಿ ಶೇಖರಿಸಿಟ್ಟಿದ್ದ ಸಂಜಯ್ ದತ್ ಎಂಬ ನಟನಿಗೆ ಐದು ವರುಷಗಳ ಜೈಲು ಶಿಕ್ಷೆಯಾಗಿತ್ತು. ಜೈಲಿನಲ್ಲಿರುವುದಕ್ಕಿಂತ ಸಂಜಯ್ ದತ್ ಹೊರಗಿರುವುದೇ ಜಾಸ್ತಿ ಎಂಬಂತಾಗಿದೆ. ಕಳೆದ ವರುಷ 118 ದಿನಗಳನ್ನು ಜೈಲಿನಿಂದ ಹೊರಗಡೆ ಕಳೆದ ಸಂಜಯ್ ದತ್ ಮತ್ತೆ ಜೈಲು ಸೇರಿದ್ದು ಡಿಸೆಂಬರ್ 2014ರಂದು. ಈಗ ಮತ್ತೆ ಸಂಜಯ್ ದತ್ ಗೆ ಜೈಲಿನಿಂದ ಹೊರಬರುವ ಭಾಗ್ಯ! ಪೆರೋಲ್ ಹೆಸರಿನಲ್ಲಿ ಸಂಜಯ್ ದತ್ ಒಂದು ತಿಂಗಳು ಶಿಕ್ಷಾ ಅವಧಿಯನ್ನು ಯಾವುದೇ ರೀತಿಯಿಂದ ಹೆಚ್ಚಿಸಿಕೊಳ್ಳದೆ ಹೊರಬಂದು ತಿರುಗಾಡಿ ಸಂಭ್ರಮಿಸಲು ಅವಕಾಶ ನೀಡಲಾಗಿದೆ. Ofcourse ಪೆರೋಲ್ ಪಡೆದುಕೊಳ್ಳಲು ಸಂಭ್ರಮದ ಕಾರಣವನ್ನಂತೂ ನೀಡುವಂತಿಲ್ಲವಲ್ಲ! ಸಂಜಯ್ ದತ್ ನೀಡಿರುವ ಕಾರಣ ಆತನ ಮಗಳಿಗೆ ನಡೆಯುವ ಆಪರೇಷನ್.
ವಿಕಿಪೀಡಿಯಾದ ಪುಟದ ಪ್ರಕಾರ ಭಾರತದಲ್ಲಿ ಒಂದು ತಿಂಗಳ ಪೆರೋಲ್ ಪಡೆಯುವ ಅವಕಾಶವಿದೆ. ಮನೆಯವರು ಸತ್ತಾಗ, ಅತೀವ ಖಾಯಿಲೆಯಿಂದ ನರಳುತ್ತಿರುವಾಗ, ಮಗು ಜನಿಸಿದಲ್ಲಿ ಈ ರೀತಿಯ ಪೆರೋಲ್ ಪಡೆಯಬಹುದಾಗಿದೆ. ದೇಶದ ಭದ್ರತೆಗೆ ಧಕ್ಕೆ ತಂದವರಿಗೆ, ವಿದೇಶಿಗರಿಗೆ, ಮಕ್ಕಳ ಮೇಲೆ ಅತ್ಯಾಚಾರ  ಎಸಗಿದವರಿಗೆ, ಒಂದಾದ ಮೇಲೊಂದರಂತೆ ಕೊಲೆ ಮಾಡಿದವರಿಗೆ ಪೆರೋಲ್ ನೀಡಲಾಗುವುದಿಲ್ಲ. ಸಂಜಯ್ ದತ್ ಅಕ್ರಮವಾಗಿ ಶಸ್ತ್ರಸ್ತ್ರ ಇಟ್ಟುಕೊಂಡಿದ್ದು ಮುಂಬೈ ಸ್ಪೋಟದ ಸಮಯದಲ್ಲಿ, ಆತನ ಮೇಲೆ ಟಾಡಾ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಕೊನೆಗಾತನಿಗೆ ಶಿಕ್ಷೆಯಾಗಿದ್ದು ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿದ್ದಕ್ಕಾಗಿ. ಸಂಜಯ್ ದತ್ ಗೆ ಪೆರೋಲ್ ಸಿಗುವುದು ಕಾನೂನುಬದ್ಧವೇ ಹೌದು. ಆದರೆ ಸಂಜಯ್ ದತ್ ನೀಡಿರುವ ಕಾರಣ ಮಗಳ ಮೂಗಿನ ಸರ್ಜರಿ. ಅದ್ಯಾವ ಮೂಗಿನ ಸರ್ಜರಿಗೆ ಒಂದು ತಿಂಗಳ ಸಮಯ ಹಿಡಿಯುತ್ತದೆ? ಸಂಜಯ್ ದತ್ ಎಂಬ ನಟನಿಗೆ ಸಿಗುವ ಈ ಸೌಲಭ್ಯ ನಿಜಕ್ಕೂ ಅವಶ್ಯಕತೆ ಇರುವ ಎಷ್ಟು ಜನ ಖೈದಿಗಳಿಗೆ ಸಿಗುತ್ತದೆ? 
ನ್ಯಾಯದೇವತೆಗೆ ಕಪ್ಪು ಪಟ್ಟಿ ಕಟ್ಟಿರುವುದು ಎಲ್ಲರನ್ನೂ ಸಮಾನವಾಗಿ ಕಾಣಲೆಂದು. ಪೆರೋಲ್ ನೀಡುವ ಜನರ ಕಣ್ಣಿಗೇನೂ ಪಟ್ಟಿ ಕಟ್ಟಿರುವುದಿಲ್ಲವಲ್ಲ..... ಲಲಿತ್ ಮೋದಿಯಂತಯ ಆಪಾದಿತನಿಗೆ ಹೆಂಡತಿಯ ಖಾಯಿಲೆಯ ನೆಪದಲ್ಲಿ ವಿದೇಶಗಳಲ್ಲಿ ಅಡ್ಡಾಡುವುದಕ್ಕೆ 'ಮಾನವೀಯತೆ' ದೃಷ್ಟಿಯಿಂದ ದೇಶದ ವಿದೇಶಾಂಗ ಸಚಿವರೇ ಸಹಕರಿಸುವಾಗ ದೇಶದೊಳಗಡೆ ಸಂಜಯ್ ದತ್ ಗೆ ಪೆರೋಲ್ ಕೊಡುವ  'ಮಾನವೀಯ' ಕೆಲಸಗಳು ಅಚ್ಚರಿ ತರುವುದಿಲ್ಲ ಬಿಡಿ.

ಅಕ್ಟೋ 23, 2014

ಫ್ಯಾಕ್ಟರಿ ಹಾಲು!

Muufri
ಹಾಲು ಫ್ಯಾಕ್ಟರಿ!
ದೂರದ ಅಮೆರಿಕಾದಲ್ಲಿ ಭಾರತೀಯ ಮೂಲದವರಾದ ರಿಯಾನ್ ಪಾಂಡೆ, ಪೆರುಮಾಲ್ ಗಾಂಧಿ ಮತ್ತು ಇಶಾ ದತಾರ್ ಸೇರಿಕೊಂಡು ಹಾಲಿನ ಫ್ಯಾಕ್ಟರಿ ತಯಾರಿಸುವ ಉತ್ಸಾಹದಲ್ಲಿದ್ದಾರೆ. Genetically engineered ಹಸುಗಳನ್ನು ಚಿಕ್ಕ ಜಾಗದಲ್ಲಿ ಗುಡ್ಡೆ ಹಾಕಿಕೊಂಡು ಹಾಲು ಉತ್ಪಾದಿಸುವ ಫ್ಯಾಕ್ಟರಿ ಎಲ್ಲೆಡೆಯೂ ಇರುವಾಗ ಈ ಹಾಲಿನ ಫ್ಯಾಕ್ಟರಿಯ ವಿಶೇಷವೇನೆಂದರೆ ಇಲ್ಲಿ ಹಸುಗಳೊಂದೂ ಇರುವುದಿಲ್ಲ! ಬೇರೆ ಪ್ರಾಣಿಯೂ ಇರುವುದಿಲ್ಲ ಎಂಬುದನ್ನು ನೆನಪಿಡಿ! ಸಿಲಿಕಾನ್ ವ್ಯಾಲಿಯಲ್ಲಿ ಕಾರ್ಯಾಚರಣೆ ಪ್ರಾರಂಭಿಸಿರುವ ಮುಫ್ರಿ ತಂಡದ ಪ್ರಯತ್ನವಿದು!
Also Read
ಹಿಂಗೂ ಇರುತ್ತೆ!

ಸೆಪ್ಟೆಂ 29, 2014

ಹೆಸರಲ್ಲೆಲ್ಲಾ ಇದೆ!

religion
ಡಾ ಅಶೋಕ್ ಕೆ ಆರ್
ಇಂಡಿಯನ್ ಮುಜಾಹಿದ್ದೀನೋ ಹಿಜ್ಬುಲ್ ಮುಜಾಹಿದ್ದೀನೋ ಹೆಸರಿನ ಮುಸ್ಲಿಂ ಸಂಘಟನೆಯೊಂದರ ನಾಮಧೇಯದಿಂದ ಪೋಲೀಸರಿಗೆ ಬೆದರಿಕೆಯ ಈ-ಮೇಲ್ ಸಂದೇಶಗಳು ತಲುಪುತ್ತವೆ. ಇಡೀ ಮೈಸೂರು ದಸರಾ ಹಬ್ಬದ ಸಂಭ್ರಮದಲ್ಲಿ ಮೈಮರೆತಾಗ, ದೂರದೂರಿನ ಜನರೆಲ್ಲ ಮೈಸೂರಿಗೆ ಬಂದು ದಸರಾದ ವೈಭವವನ್ನು ಸವಿಯುತ್ತಿರುವಾಗ ಮೈಸೂರಿನ ಹಲವೆಡೆ ಸ್ಪೋಟಗೊಳ್ಳುವಂತೆ ಟೈಂ ಬಾಂಬುಗಳನ್ನು ಇಟ್ಟಿದ್ದೇವೆ. ತಾಕತ್ತಿದ್ದರೆ ತಡೆಯಿರಿ ಎಂಬ ಬೆದರಿಕೆ ಮತ್ತು ಪಂಥಾಹ್ವಾನದ ಸಂದೇಶವದು. ದಸರಾ ಹಬ್ಬದ ಸಂದರ್ಭದಲ್ಲಿ ಬಾಂಬ್ ಸ್ಪೋಟವೆಂದರೆ ಹೈಅಲರ್ಟ್ ಘೋಷಿಸಬೇಕಾದ ಸಂದರ್ಭವಂತೂ ಹೌದು. ಮೈಸೂರಿನ ಪೋಲೀಸರು ತಕ್ಷಣ ಕಾರ್ಯಪ್ರವೃತ್ತರಾಗುತ್ತಾರೆ. ಈ – ಮೇಲ್ ಕಳುಹಿಸಿದ ಐ.ಪಿ ಅಡ್ರೆಸ್ಸನ್ನು ಪತ್ತೆ ಹಚ್ಚಿ ಆ ಕಂಪ್ಯೂಟರ್ ಅಂಗಡಿಯ ಬಳಿಯಲ್ಲಿನ ಮನೆಯಲ್ಲಿದ್ದ ಬೆದರಿಕೆ ಸಂದೇಶವನ್ನು ಕಳುಹಿಸಿದ ವ್ಯಕ್ತಿಯನ್ನು ಬಂಧಿಸುತ್ತಾರೆ.
ಮೇಲಿನದಷ್ಟು ನಡೆದ ಘಟನಾವಳಿ. ಪತ್ರಿಕೆಗಳು ಮತ್ತು ಮಾಧ್ಯಮದಲ್ಲಿ ಈ ಘಟನೆ ಯಾವ ರೀತಿ ವರದಿಯಾಗುತ್ತದೆ?

ಆಗ 19, 2014

ವಾಣಿಜ್ಯ ಮಂಡಳಿಯನ್ನೊರತು ಪಡಿಸಿ ಎಲ್ಲವನ್ನೂ ನಿಷೇಧಿಸಲು ಹಿರಿತೆರೆಯ ನಿರ್ಧಾರ!


ಅಪರೂಪದ ವಿದ್ಯಮಾನವೊಂದರಲ್ಲಿ ಕರ್ನಾಟಕದ ಚಲನಚಿತ್ರ ವಾಣಿಜ್ಯ ಮಂಡಳಿಯು ಧೃಡ ನಿರ್ಧಾರವೊಂದರ ಸಮೀಪ ಬಂದು ನಿಂತಿದೆ. ಈ ಅಭಿವ್ಯಕ್ತಿ ಸ್ವಾತಂತ್ರ್ಯದ ವಕ್ತಾರರು ಮತ್ತು ಗ್ರಾಹಕ ಹಕ್ಕು ಮಣ್ಣು ಮಸಿ ಅಂಥ ಬೊಬ್ಬೆ ಹೊಡೆಯುವವರು ವೈಲೆಂಟಾಗದೆ ಸೈಲೆಂಟಾಗಿ ಸೈಡಿಗೋದರೆ ಈ ಧೃಡ ನಿರ್ಧಾರವನ್ನು ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ವಾಣಿಜ್ಯ ಮಂಡಳಿಯ ಗೋಡೆಗಳು ಪಿಸುಗುಟ್ಟುತ್ತಿದ್ದುದಾಗಿ ಅನಧಿಕೃತ ಮೂಲಗಳು ತಿಳಿಸಿವೆ.

ಆಗ 4, 2014

ಚೀನಾದಲ್ಲಿ ಭ್ರಷ್ಟ ಅಧಿಕಾರಿಗಳ ಆತ್ಮಹತ್ಯೆ!!

ಭಾರತೀಯರು ಬೆಚ್ಚಿ ಬೀಳುವಂತ ಸುದ್ದಿಯೊಂದು ಪಕ್ಕದ ಚೀನಾದಿಂದ ಬಂದಿದೆ! ಇಲ್ಲ ಇಲ್ಲ ಇದು ಗಡಿ ಗಲಾಟೆಯೂ ಅಲ್ಲ, ಯುದ್ಧವೂ ಅಲ್ಲ! ಚೀನ ದೇಶದಲ್ಲಿ ಭ್ರಷ್ಟ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಭ್ರಷ್ಟತೆ ಮಾಡಿ ಸುಸ್ತಾಗಿ ಕೊನೆಗೆ ಈ ಅನಗತ್ಯ ಹೆಚ್ಚುವರಿ ಧನಾಗಮನದಿಂದ ಮನಸ್ಸಾಕ್ಷಿ ಕಲಕಿದಂತಾಗಿ ಮಾಡಿದ ಅನ್ಯಾಯಗಳನ್ನೆಲ್ಲ ನೆನೆದು ಪ್ರಾಯಶ್ಚಿತದ ರೂಪದಲ್ಲಿ ಆತ್ಮಹತ್ಯೆಗೆ ಶರಣಾಗಿಲ್ಲ.