ಜೂನ್ 16, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 5: ಕೊಮ್ಮಘಟ್ಟ ಕೆರೆ - 2

ಹೆಜ್ಜಾರ್ಲೆ (ಪೆಲಿಕಾನ್)
ಡಾ. ಅಶೋಕ್.‌ ಕೆ. ಆರ್
ಇಂದು ಕ್ಯಾಮೆರಾ, ದೊಡ್ಡ ಲೆನ್ಸುಗಳೆರಡನ್ನೂ ತಂದಿದ್ದೆ. ಚಲುಕದ ಬಾತುಗಳು ಕೆರೆಯ ಮಧ್ಯಭಾಗದಲ್ಲಿದ್ದವು. ಕ್ಯಾಮೆರಾಗೆ ಅಷ್ಟು ಚೆನ್ನಾಗಿ ಸಿಗುತ್ತಿರಲಿಲ್ಲ. ಜೊತೆಗೆ ಸಂಜೆಯ ಸಮಯವಾದ್ದರಿಂದ ಕೆರೆಯ ನೀರು ಗಾಳಿಗೆ ತುಯ್ದಾಡುತ್ತಿತ್ತು. ಪ್ರತಿಬಿಂಬದ ಚಿತ್ರಗಳನ್ನು ತೆಗೆಯೋದಿಕ್ಕೆ ನನಗೆ ಹೆಚ್ಚು ಆಸಕ್ತಿ. ಬೆಳಗಿನ ಜಾವದಲ್ಲಿ ಸೂರ್ಯಕಿರಣಗಳಿನ್ನೂ ತಣ್ಣನೆಯ ಬೆಳಕನ್ನು ಹೊರಸೂಸುವಾಗ ಗಾಳಿಯ ತುಯ್ದಾಟ ಇಲ್ಲದೇ ಇದ್ದಾಗ ಕೆರೆಯ ನೀರು ಕನ್ನಡಿಯಂತಿರುತ್ತದೆ. ಎಂಟು, ಒಂಭತ್ತು ಘಂಟೆಯೊಳಗಷ್ಟೇ ಆ ಪ್ರತಿಬಿಂಬದ ಚಿತ್ರಗಳನ್ನು ತೆಗೆಯಬಹುದು.

ಕೆರೆಯ ಬದಿಯಲ್ಲಿನ ನಡೆಯುವ ಹಾದಿಯಲ್ಲಿ ಒಂದು ಸುತ್ತು ನಡೆದು ದಾಖಲೆಗಾಗಿ ಅಲ್ಲಿರುವ ಪಕ್ಷಿಗಳ ಫೋಟೋಗಳನ್ನು ತೆಗೆದುಕೊಂಡೆ. ಚಲುಕದ ಬಾತುಗಳು ದೂರದಲ್ಲಿದ್ದವು. ಹೆಜ್ಜಾರ್ಲೆಗಳು ಹಾರಾಡುತ್ತ ಈಜಾಡುತ್ತ ನಡುಗಡ್ಡೆಯ ಮೇಲಿನ ಕೊಂಬೆಗಳ ಮೇಲೆ ವಿರಮಿಸುತ್ತಿದ್ದವು. ಕೆರೆಯ ಗೇಟಿನಿಂದ ಎಡಭಾಗದಲ್ಲಿ ಕ್ಷಣ ಹೊತ್ತು ನಡೆದರೆ ನಡುಗಡ್ಡೆಯ ವೀಕ್ಷಣೆಗೆಂದೇ ಕಟ್ಟೆಯೊಂದನ್ನು ಕಟ್ಟಲಾಗಿದೆ, ಕೆರೆಯ ಒಳಭಾಗಕ್ಕೆ. ನಿನ್ನೆಗಿಂತ ಇಂದು ಆ ಕಟ್ಟೆಯಲ್ಲಿ ನೀರು ಹೆಚ್ಚಿತ್ತು. ಅಲ್ಲಿಗೆ ಹೋಗಿ ಕ್ಯಾಮೆರಾ ನೆಲದ ಮೇಲಿಟ್ಟು ಕುಳಿತುಕೊಂಡೆ. ಚಲುಕದ ಬಾತುಗಳ ಚಿತ್ರ ಸಿಗದಿದ್ದರೇನಂತೆ ಹೆಜ್ಜಾರ್ಲೆ/ಜೋಳಿಗೆ ಕೊಕ್ಕ‌ ಇವೆಯಲ್ಲ. ಅವುಗಳ ಹಾರಾಟದ ಚಿತ್ರಗಳನ್ನು ಸಂಜೆ ಸೂರ್ಯನ ಹೊಂಬೆಳಕಿನಲ್ಲಿ ತೆಗೆಯಲಿದು ಸೂಕ್ತವಾದ ಜಾಗವಾಗಿತ್ತು. ಜೊತೆಗೆ ಒಂದಷ್ಟು ದೂರದಲ್ಲಿ ಮಲಿನ ನೀರಿನಲ್ಲಿ ಬೆಳೆದಿದ್ದ ಪಾಚಿಯ ಕಾರಣಕ್ಕೋ ಏನೋ ಪ್ರತಿಬಿಂಬದ ಚಿತ್ರಗಳನ್ನೂ ತೆಗೆಯಬಹುದೆನ್ನಿಸಿತು.
ನಡುಗಡ್ಡೆಯ ಗಿಡಗಳ ಮೇಲೆ

ಒಂದಷ್ಟು ಚಿತ್ರಗಳನ್ನು ತೆಗೆದುಕೊಂಡೆ. ನಿನ್ನೆ ಭೇಟಿಯಾಗಿದ್ದ ಡಾ. ಮಂಜುನಾಥ್‌ ಇವತ್ತೂ ಸಿಕ್ಕರು. ಅವರ ಕ್ಯಾಮೆರಾ ತಂದಿದ್ದರು. ಅವರ ಬಳಿ ೧೮-೫೫ಎಂಎಂ ಕಿಟ್‌ ಲೆನ್ಸ್‌ ಮಾತ್ರವಿತ್ತು. ನನ್ನ ಲೆನ್ಸ್‌ ಅಥವಾ ಕ್ಯಾಮೆರಾ ಬಳಸಿಯೇ ಫೋಟೋ ತೆಗೀರಿ ಅಂತ ಅವರನ್ನೊಪ್ಪಿಸುವುದಕ್ಕೆ ಸ್ವಲ್ಪ ಬಲವಂತಾನೇ ಮಾಡಬೇಕಾಯಿತು. ನಾನೂ ಹೀಗೇನೆ ಬೇರೆಯವರ ದೊಡ್ಡ ಲೆನ್ಸ್‌ ಕ್ಯಾಮೆರಾ ಬಳಸಿ ಫೋಟೋ ತೆಗೆದು ನಂತರ ಲೆನ್ಸ್‌ ಖರೀದಿಸಿದ್ದು ತಗೊಳಿ ಸರ್‌ ಅಂತ ಎರಡು ಮೂರು ಸಲ ಹೇಳಿದ ಮೇಲಷ್ಟೇ ಅವರು ಒಪ್ಪಿಕೊಂಡದ್ದು!

ಹೆಜ್ಜಾರ್ಲೆಗಳ ಹಾರಾಟದ ಚಿತ್ರ ಚೆಂದವಾಗೇ ಬಂದಿತು. ನಿನ್ನೆಗಿಂತ ಇವತ್ತು ಹೆಜ್ಜಾರ್ಲೆಗಳ ಸಂಖೈ ಬಹಳವಾಗಿ ಹೆಚ್ಚಿತ್ತು. ನಡುಗಡ್ಡೆಯ ಮರಗಳಲ್ಲಿ ಸ್ಥಳದ ಅಭಾವ ಉಂಟಾಗಿತ್ತು. ಒಂದಷ್ಟು ನೀರ್ಕಾಗೆಗಳನ್ನು ಹೆಜ್ಜಾರ್ಲೆಗಳು ಓಡಿಸಿದಂತಿತ್ತು. ಹೊಸ ಹೆಜ್ಜಾರ್ಲೆಯೊಂದು ಕೆರೆಯ ಮುಕ್ಕಾಲು ಭಾಗವನ್ನು ಸುತ್ತೊಡೆದು ಮರದ ಬಳಿ ಬಂದರೆ ಅಲ್ಲಾಗಲೇ ಆಸೀನವಾಗಿದ್ದ ನಿವಾಸಿಗಳು ಇಷ್ಟಗಲ ಬಾಯ್ತೆರೆದು ಹೊಸಾಗಮನವನ್ನು ವಿರೋಧಿಸುತ್ತಿದ್ದವು. ಕೆಲವು ಹೊಸಬರು ವಿರೋಧಕ್ಕೆ ಪ್ರತಿರೋಧ ತೋರಿ ಅಲ್ಲೇ ಸಿಕ್ಕೆಡೆಯಲ್ಲಿ ತೂರಿ ಜಾಗ ಮಾಡಿಕೊಂಡರೆ ಮಿಕ್ಕ ಪಕ್ಷಿಗಳು ಮತ್ತೊಂದು ಸುತ್ತು ಗಾಳಿಯಲ್ಲಿ ಪ್ರದಕ್ಷಿಣೆ ಹಾಕಲೋ ಅಥವಾ ನೀರಿಗಿಳಿಯಲೋ ತೆರಳುತ್ತಿದ್ದವು.
ಹೊಸಬರ ಪ್ರವೇಶಕ್ಕೆ ವಿರೋಧ...
ಮನೆಯಲ್ಲೊಂದಷ್ಟು ಕೆಲಸವಿದ್ದುದರಿಂದಾಗಿ ಸೂರ್ಯಾಸ್ತದವರೆಗೂ ಇರಲಾಗಲಿಲ್ಲ.
21/1/25

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ