ಡಿಸೆಂ 7, 2018

ಶಾಂತಿ- ಪ್ರಶಾಂತಿ

ಪದ್ಮಜಾ ಜೋಯ್ಸ್ ದರಲಗೋಡು
ಹೆಸರೂ ಶಾಂತಿ , ಮನೆಯೂ ಪ್ರಶಾಂತಿ ನಿಲಯ ಪರಿಸರವೂ ಶಾಂತ ಪ್ರಶಾಂತವೇ ಇದ್ದರೂ.... 

ಶಾಂತಿಯ ಮನ ಅಶಾಂತಿಯ ಕಡಲಾಗಿತ್ತು.... ಬದುಕಿಡೀ ಶಾಂತಿಯ ಅರ್ಥವೂ ನಿಲುಕದ ಅಶಾಂತಿಯ ಬೀಡಾಗಿತ್ತು
ಇದ್ದುದರಲ್ಲೇ ನೆಮ್ಮದಿ ನೀಡುತ್ತಿದ್ದು ಸಾಗರನ ಸಾಂಗತ್ಯ ಮಾತ್ರ...

ಇದೀಗ ಅವನಲ್ಲಾದ ಬದಲಾವಣೆಗಳೂ ಅವಳಲ್ಲಿ ಕಡಲ ನಡುವಿನ ಬಿರುಗಾಳಿಗೆ ಸಿಕ್ಕ ಹಾಯಿ ದೋಣಿಯಾಗಿತ್ತು ಅವಳ ಬದುಕು...

"ಜನಮನ" ಎಂದೇ ಹೆಸರಿಟ್ಟ ಹೊರಚಾವಣಿಯಲ್ಲಿ ಆಪ್ತ ಸಲಹಾ ಕೇಂದ್ರದಲ್ಲಿ ನೆರೆದಿದ್ದ ಹತ್ತಾರು ಜನದ ಕ್ಲಿಷೆಕೇಶಗಳನ್ನು ಕೇಳಿ ಒಂದಷ್ಟು ತಿಳಿ ಹೇಳಿ ಸಲಹೆ ನೀಡಿ ಅಯ್ಯೋ ಎನಿಸಿದ ಹಲಕೆಲವು ಜವಾಬ್ದಾರಿಗಳ ಅನಗತ್ಯವಾದರೂ ಹೆಗಲೇರಿಸಿಕೊಂಡು ಎಲ್ಲರನ್ನೂ ಊಟಕ್ಕೆ ಕಳುಹಿಸಿ ಬ಼ಂದು ಮರೆತ ಯಾವುದೋ ಕೆಲಸ ನೆನಪಾದ಼ಂತೆ ಅರ್ಧ ಟೈಪಿಸಿ ಉಳಿದ ನೋಟ್ ಪ್ಯಾಡನ್ನು ತೆರೆದಾಗ ಪಕ್ಕದಲ್ಲಿ ನಗುತ್ತಿದ್ದ ಫೋಟೋ ಅದರಲ್ಲಿನ ಮುಖಭಾವವೂ ತನ್ನ ಅಪಹಾಸ್ಯ ಮಾಡಿದಂತೆನಿಸಿತು.... 

ಜೂನ್ 2, 2018

ಕಥೆ: ತಂದೂರಿ.

ಅಭಿಗೌಡ
ಊರಲ್ಲಿ ಯಾರದೇ ಬರ್ತ್‍ಡೇ ಆಚರಣೆಯಾದ್ರು ಶಿವನ ಅಂಗಡಿ ಕಬಾಬಿಗೆ ಭಾರಿ ಬೇಡಿಕೆ. ಏಕೆಂದರೆ ಕಬಾಬ್ ಜೊತೆ ಕಾಂಪ್ಲಿಮೆಂಟರಿ ಕಾಪಿ ಥರ ಒಂದು ತಂದೂರಿ ಚಿಕನ್ ಕೊಡುತ್ತಿದ್ದ. ಕೇಕ್ ಕತ್ತರಿಸುವುದರ ಬದಲು ಅದನ್ನೆ ಆತ ಮಾರ್ಕ್ ಮಾಡಿರುವ ಜಾಗದಲ್ಲಿ ಚಾಕುವಿನಿಂದ ಕಟ್ ಮಾಡಿದರೆ ಸರಾಗವಾಗಿ ಕೇಕ್ ಪೀಸ್‍ನಂತೆಯೇ ಎಲ್ಲರ ಬಾಯಿಗು ಹಾಕಿ ಬರ್ತ್‍ಡೇ ಸಂಭ್ರಮ ಆಚರಿಸಿಕೊಳ್ಳಬಹುದಿತ್ತು. ಪ್ರಾರಂಭದಲ್ಲಿ ಇರಿಸು-ಮುರಿಸು ತೋರಿದ ಜನ ದಿನೇ ದಿನೇ ಕೇಕ್ ಜೊತೆ ಇದನ್ನು ಕತ್ತರಿಸಲು ಶುರು ಮಾಡಿದ್ರು. ಈಗ ಕೇಕ್ ಬಿಟ್ಟೇ ಬಿಟ್ಟಿದ್ದಾರೆ. ಜನರೇ ಅವರಿಗೆ ಇಷ್ಟವಾದ ಮಾಂಸದ ತುಂಡು ತಂದು ಬರ್ತ್‍ಡೇ ಪಾರ್ಟಿಲಿ ಕತ್ತರಿಸಲು ರೆಡಿ ಮಾಡಿಕೊಡಿ ಎಂದು ದುಂಬಾಲು ಬೀಳುತ್ತಿದ್ದಾರೆ.
ಹೆಚ್ಚು ಕೇಕ್ ಸೇಲ್ ಆಗ್ತಿದ್ದ ಬೇಕರಿಯ ರವೀಂದ್ರ ಸ್ವಲ್ಪ ದಿನ ‘ಛೇ ಕೇಕ್ ಬಿಸಿನೆಸ್‍ಗೆ ಕುತ್ ತಂದ್ ಬಿಟ್ನಲ್ಲ ಈ ಕಬಾಬ್ ಶಿವ’ ಎಂದು ಮನದೊಳಗೆ ಗೊಣಗಿಕೊಳ್ಳುತ್ತಿದ್ದರು. ಆತ ನೀಡುತ್ತಿದ್ದ ಆ ಬರ್ತ್‍ಡೇ ಸ್ಪೆಷಲ್ ತಂದೂರಿ ಚಿಕನ್ ರುಚಿ ನೆನಪಾದೊಡನೆ ಯಾರಾದ್ರು ಬರ್ತ್‍ಡೇಗೆ ಕರೆದಿದ್ದಾರ ಎಂದು ನೆನೆಪಿಸಿಕೊಳ್ಳುತ್ತಿದ್ದ.
 
ಇನ್ನಷ್ಟು ಕತೆಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

ಏಪ್ರಿ 5, 2017

ಒಂದು ಕತೆ....

ಎಸ್. ಅಭಿ ಗೌಡ, ಹನಕೆರೆ.
ಕಳ್ಳ ಸಂಬಂಧಗಳ ಸಿಗ್ನಲ್‍ಗಳು ನೈತಿಕ ಸಂಬಂಧಗಳ ಸಿಗ್ನಲ್‍ಗಳಿಗಿಂತ ಸೂಕ್ಷ್ಮ. ರೂಮಿನೊಳಗೆ “ಯಾ ಆಲಿ” ಹಾಡು ಅಷ್ಟು ಜೋರಾಗಿ ಮೊಳಗುತ್ತಿತ್ತು, ಸ್ನೇಹಿತರೆಲ್ಲ ಕುಡಿತದ ಅಮಲಿನಲ್ಲಿ ಕುಣಿಯುತ್ತಿದ್ದದ್ದು ಮಾತ್ರವಲ್ಲ ಪೂರ್ಣನೂ ಕುಡಿದು ಕುಣಿಯುತ್ತಿದ್ದ. ಆರ್.ಎಕ್ಸ್100 ಬೈಕಿನ ಹಾರ್ನ್ ಒಂದು ಬಾರಿ ಆಗುತ್ತಿದ್ದಂತೆ ಹಾಗೆ ರೂಮಿನಿಂದ ಹೊರಬಂದ ಪೂರ್ಣ ಕತ್ತಲಲ್ಲಿ ಆರ್.ಎಕ್ಸ್ 100 ಏರಿ ಹೊರಟುಹೋದ. ಸಮಯ ರಾತ್ರಿ 10:45. ಯಾರು ಕೂಡ ಅಷ್ಟೊತ್ತು ರಾತ್ರಿಯಲ್ಲಿ ಆರ್.ಎಕ್ಸ್100 ಬೈಕಲ್ಲಿ ಅಲ್ಲಿ ಬಂದು ಪೂರ್ಣನನ್ನು ಕರೆದುಕೊಂಡು ಹೋಗಿದ್ದು ಸುಂದರವಾದ ಹುಡುಗಿಯೆಂದು ಊಹಿಸಲು ಸಾಧ್ಯವಿಲ್ಲ, ಆಕೆ ಎಷ್ಟು ಸುಂದರಿಯೆಂದರೆ ಬೈಕ್ ಹತ್ತಿದ ಮರುಕ್ಷಣವೇ ಹೆಲ್ಮೆಟ್ ತೆಗೆದು ಮುತ್ತಿಕಲು ಆತುರ ಪಡುತ್ತಿದ್ದ ಪೂರ್ಣ.

ಮಾರ್ಚ್ 8, 2017

ವೃದ್ದಾಪ್ಯ ವೇತನವೂ ಹನುಮಕ್ಕನ ಅಲೆದಾಟವೂ!

ಚಿತ್ರಮೂಲ: youthkiawaaz
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಹುಲಿಹಳ್ಳಿಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದೊಳಗೆ ಹನುಮಕ್ಕ ಕಾಲಿಟ್ಟಾಗ ನಿಂಗಣ್ಣ ಅನ್ನೊ ಆರಡಿಯ ಅಟೆಂಡರ್ ಕಷ್ಟಪಟ್ಟು ಸೊಂಟ ಬಗ್ಗಿಸಿ ಕಸ ಹೊಡೆಯುತ್ತಿದ್ದ.

ಅಪ್ಪಾ ಸಾಮಿ, ಡಾಕುಟರು ಎಷ್ಟೊತ್ತಿಗೆ ಬರ್ತಾರೆ? ಅನ್ನೊ ದ್ವನಿ ಕೇಳಿಸಿದಾಕ್ಷಣ ಕೈಲಿದ್ದ ಪೊರಕೆಯನ್ನು ಮೂಲೆಗೆ ಬಿಸಾಕಿ ಯಾಕವ್ವಾ? ಅವರು ಬರೋದು ಹನ್ನೊಂದು ಗಂಟೆ ಮೇಲೇನೆ ಅನ್ನುತ್ತ ಖಾಲಿ ಹೊಡೆಯುತ್ತ ಬಿದ್ದಿದ್ದ ಆಸ್ಪತ್ರೆಯೊಳಗೆ ಯಾರೊ ಒಬ್ಬರು ಮಾತಿಗೆ ಸಿಕ್ಕಿದ ಖುಶಿಯಲ್ಲಿ ಮುಖವರಳಿಸಿ ಅಲ್ಲೆ ಇದ್ದ ಬೆಂಚಿನಲ್ಲಿ ಅವಳ ಜೊತೆ ಅವನೂ ಆಸೀನನಾದ. ಏನಿಲ್ಲ ಸಾಮಿ, ವಯಸಾದೋರಿಗೆ ಸರಕಾರದೋರು ಐನೂರು ರೂಪಾಯಿ ಕೊಡ್ತಾರಲ್ಲ ಅದಕ್ಕೆ ಡಾಕುಟರ ಸಯಿನ್ ಬೇಕಾಗಿತ್ತು ಅಂತ ಹನುಮಕ್ಕ ಹೇಳಲು ಎಲ್ಲ ಹೊಳೆದವನಂತೆ ಅಯ್ಯೋ ಅವ್ವ ಅದು ವೃದ್ದಾಪ್ಯವೇತನ ಅದನ್ನ ಮಾಡಿಕೊಡೋನು ವಿಲೇಜ್ ಅಕೌಂಟೆಂಟ್ ಅಂದ್ರೆ ಸೆಕ್ರೇಟರಿ. ಅವರು ಪಂಚಾಯಿತಿ ಆಪೀಸಲ್ಲಿ ಇರ್ತಾರೆ. ಅಲ್ಲಿಗೋಗೋದು ಬಿಟ್ಟು ಇಲ್ಲಿಗ್ಯಾಕೆ ಬಂದೆ ಅಂದ. ಅವನ ಮಾತಿಗೆ ತಬ್ಬಿಬ್ಬಾದ ಹನುಮಕ್ಕ ನಿಜಾನ? ಮತ್ತೆ ನಮ್ಮ ಪಕ್ಕದ ಮನೆ ಹುಡುಗ ಡಾಕುಟರ ಹತ್ರ ವಯಸಿನ ಬಗ್ಗೆ ಬರೆಸಿಕೊಂಡು ಬಾ ಅಂದನಲ್ಲ. ಹೂನವ್ವಾ, ನಿಂಗೆ ಅರವತ್ತು ವರ್ಷ ಆಗಿದೆ ಅಂತಷ್ಟೆ ಡಾಕ್ರ್ಟು ಬರಕೊಡೋದು ಮಿಕ್ಕಿದ್ದೆಲ್ಲ ಸೆಕ್ರೇಟರೀನೆ ಮಾಡಿಕೊಡೋದು. ಹೋಗಲಿ, ವಯಸ್ಸಿನ ಫಾರಂ ತಂದಿದಿಯಾ ಅಂತ ಕೇಳಿದ. ಪಾರಮ್ಮು ಕೋಳಿ ಎಲ್ಲ ನಂಗೆ ಗೊತ್ತಿಲ್ಲ ಅಂದ ಹನುಮಕ್ಕನ ನೋಡಿ ನಿಂಗಣ್ಣಂಗೆ ಅಯ್ಯೋ ಅನಿಸಿ, ಅವ್ವಾ ಇಲ್ಲಿಂದ ಬಸ್ಸ್ಟಾಂಡ್ ಹೋಗೋ ದಾರೀಲಿ ಒಂದು ಪೆಟ್ಟಿಗೆ ಅಂಗಡಿ ಐತಲ್ಲ ಅದೇ ಐಯ್ನೋರ್ದು ಅವರ ಹತ್ರ ವಯಸಿನ ಫಾರಂ ತಗೊಂಬಾ. ಬರೇ ಎಂಟಾಣೆಯಷ್ಟೆ! ಅಂದ.

ಮೇ 9, 2015

ಅತೀತ

Dr Ashok K R
“ಏಯ್, ಸರಿಯಾಗಿ ನೋಡ್ಕೊಂಡು ನಡಿ”

“ನೀನ್ ಸರಿಯಾಗಿ ನೋಡ್ಕೊಂಡು ನಡಿ”

“ಯಾರಿಗ್ಹೇಳ್ತಿ?”

“ನೀನ್ಯಾರಿಗ್ಹೇಳ್ತಿ?”

“ನಿಮ್ಮಗಳ ಬುದ್ಧೀನೇ ಇಷ್ಟು”

“ನಿಮ್ಮಗಳ ಬುದ್ಧೀನೇ ಇಷ್ಟು”

“ಸಂಸ್ಕಾರವಿಲ್ಲದ ಜನ”

“ಸಂಸ್ಕಾರವಿಲ್ಲದ ಜನ”


ಏರುತ್ತಲೇ ಸಾಗುತ್ತಿದ್ದ ದನಿಗಳಿಂದ ವಿಚಲಿತನಾಗಿ ಡಾಕ್ಟ್ರು ತಮ್ಮ ಕೋಣೆಯಿಂದ ಹೊರಬಂದು “ಯಾರ್ರೀ ಅದು ಆಸ್ಪತ್ರೆ ಅನ್ನೋ ಸೆನ್ಸೂ ಇಲ್ದೆ ಕಿರುಚ್ತಿರೋದು?” ಎಂದ್ಹೇಳಿ ನೋಡಿದವರಿಗೆ ಕಂಡಿದ್ದು ಜೀವನದಲ್ಲೇ ಮರೆಯಲಾಗದ ದುರನುಭವಗಳನ್ನು ನೀಡಿದ್ದ ಸುಲೇಮಾನ್ ಮತ್ತು ಭಾಸ್ಕರ. 

“ಅವನ್ದೇ ತಪ್ಪು”

“ಅವನ್ದೇ ತಪ್ಪು”

“ತಪ್ಪು ನಿಮ್ದೋ ಅವರ್ದೋ ನನಗ್ಯಾಕೆ. ರೋಗಿಗಳ ಮುಂದೆ ಕಿತ್ತಾಡೋಕೆ ಬಂದಿದ್ದೀರಾ? ಹೊರಗೋಗ್ರಿ”

ಸುಲೇಮಾನ್ ಮತ್ತು ಭಾಸ್ಕರ ಬಸಿರಾಗಿದ್ದ ತಮ್ಮ ಹೆಂಡಿರನ್ನು ಚೆಕಪ್ಪಿಗೆ ಕರೆದುಕೊಂಡು ಬಂದಿದ್ದರು. ಅವರನ್ನು ಪರೀಕ್ಷಿಸಿ ಕಳುಹಿಸಿದ ಡಾಕ್ಟ್ರಿಗೆ ಹಳೆಯ ಘಟನೆಗಳು ನೆನಪಾಯಿತು.

ಎಂಬಿಬಿಎಸ್ ಮಾಡುವಾಗ ಪ್ರೀತಿಸಿದ್ದ ರೇಷ್ಮಾಳನ್ನು ಮನೆಯವರ ವಿರೋಧದ ನಡುವೆ ಮದುವೆಯಾಗಿ ಈ ಪುಟ್ಟ ಊರಿಗೆ ಬಂದು ನೆಲೆಸಿದ್ದ. ಎರಡು ವರ್ಷದೊಳಗೆ ಪುಟ್ಟ ನರ್ಸಿಂಗ್ ಹೋಮನ್ನು ಕಟ್ಟುವಷ್ಟರ ಮಟ್ಟಿಗೆ ಪ್ರಾಕ್ಟೀಸ್ ಕ್ಲಿಕ್ ಆಗಿತ್ತು. ರೇಷ್ಮಾ ಪಿ.ಜಿ ಮಾಡಲು ಹೋದಳು. ಇಲ್ಲಿನ ಸಮಾಜವೂ ರೋಗಗ್ರಸ್ಥವಾಗಿದೆ ಎಂದರಿವಾಗಲು ಡಾಕ್ಟ್ರಿಗೆ ಹೆಚ್ಚಿನ ಸಮಯ ಬೇಕಾಗಲಿಲ್ಲ. ಜನರಿಗಾಗುವ ಖಾಯಿಲೆಗಳು ಏರಿಳಿಯುತ್ತಿತ್ತು, ಸಮಾಜಕ್ಕಂಟುತ್ತಿದ್ದ ಖಾಯಿಲೆ ಏರುಗತಿಯಲ್ಲಷ್ಟೇ ಸಾಗುತ್ತಿತ್ತು. ರಂಜಾನ್ ಮಾಸದಲ್ಲಿ, ಬಕ್ರೀದಿನ ಆಸುಪಾಸು, ಗಣೇಶೋತ್ಸವದ ಸುತ್ತಮುತ್ತ ‘ಎರಡು ಗುಂಪುಗಳ’ ನಡುವೆ ‘ಮಾರಾಮಾರಿ’ ನಡೆಯುವುದು ಸಾಮಾನ್ಯವಾಯಿತು. ತಲೆಗೆ ಬ್ಯಾಂಡೇಜು ಸುತ್ತಿಸಿಕೊಳ್ಳಲು, ಹೊಲಿಗೆ ಹಾಕಿಸಿಕೊಳ್ಳಲು ‘ಎರಡು ಗುಂಪಿನವರೂ’ ಅಕ್ಕಪಕ್ಕದಲ್ಲೇ ಕುಳಿತು ಕಾಯುತ್ತಿದ್ದರು. “ಎಂ.ಎಲ್.ಸಿ ಮಾಡ್ಬೇಕಾಗುತ್ತೆ, ಪೋಲೀಸರಿಗೆ ತಿಳಿಸಬೇಕಾಗುತ್ತೆ” ಎಂದು ಮೊದಮೊದಲು ಹೇಳುತ್ತಿದ್ದ ಡಾಕ್ಟ್ರು ಒಂದೆರಡು ಸಂದರ್ಭದಲ್ಲಿ ರೋಗಿಯಾಗಿ ಬಂದವರು ತಲೆಯ ಗಾಯವನ್ನು ಎಡಗೈಯಲ್ಲಿ ಒತ್ತಿ ಹಿಡಿದು ಬಲಗೈಯಿಂದ ಸೊಂಟದತ್ತಿರ ಸಿಕ್ಕಿಸಿಕೊಂಡ ಚಾಕುವನ್ನೊರಗೆಳೆದ ನಂತರ ಬಂದವರ ಗಾಯಗಳಿಗೆ ಬಾಯ್ಮುಚ್ಚಿಕೊಂಡು ಹೊಲಿಗೆ ಹಾಕಿ ಔಷಧಿ ನೀಡುವುದಕ್ಕೆ ಸೀಮಿತಗೊಳಿಸಿಕೊಂಡರು.

ದೇಹದೊಳಗಿನ ರೋಗಾಣು ಪ್ರತಿರೋಗಾಣುವಿನ ಕಾರ್ಯಾಲಾಪಗಳು ಅರಿಯದವರಿಗೆ ಅಸಂಬದ್ಧದಂತೆ ತೋರಿದಾಗ್ಯೂ ಪ್ರತಿಯೊಂದೂ ಕೂಡ ಯೋಜನಾಬದ್ಧವಾಗಿಯೇ ನಡೆಯುತ್ತಿರುತ್ತದೆ. ಎರಡು ವರ್ಷಗಳವರೆಗೆ ಹಬ್ಬಗಳ ಸಂದರ್ಭದಲ್ಲಿ ‘ಎರಡು ಗುಂಪುಗಳ’ ನಡುವೆ ನಡೆಯುತ್ತಿದ್ದ ಮಾರಾಮಾರಿ ಕ್ರಮೇಣವಾಗಿ ಸ್ಥಳೀಯ ಸಂಸ್ಥೆಯ ಚುನಾವಣೆಯ ಮೊದಲು ಅಥವಾ ನಂತರ ‘ಸ್ಪೋಟಗೊಳ್ಳುವ’ ಕೋಮುಗಲಭೆಗಳಾದವು. ಒಂದು ಕೋಮಿನ ನಾಯಕ ವೆಂಕಟಗಿರಿಯಪ್ಪ. ಮತ್ತೊಂದು ಕೋಮಿಗೆ ರಿಜ್ವಾನ್ ಅಬ್ಬಾಸನ ನೇತೃತ್ವ. ‘ಧರ್ಮಿಷ್ಠರಾಗಿದ್ದ’ ಇಬ್ಬರಿಗೂ ಮೂಲವೃತ್ತಿ ವ್ಯಾಪಾರ. ಕಣ್ಣಿಗೆ ಕಾಣುವ ಪ್ರತಿಯೊಂದು ವಸ್ತು, ವ್ಯಕ್ತಿಯನ್ನೂ ತೂಗುತ್ತಿದ್ದರು. ಅತ್ಯಮೋಘ ಭಾಷಣಗಳಿಂದ ಭಾವನೆಗಳನ್ನು ಕೆರಳಿಸುವಲ್ಲಿ ಸಿದ್ಧಹಸ್ತರು. ಇವರ ಬಟ್ಟೆ ಅವರಿಗೆ ಅವರ ಬಟ್ಟೆ ಇವರಿಗೆ ಹಾಕಿಸಿ ಭಾಷಣ ಮಾಡಿಸಿದರೂ ಗಲಭೆಗಳನ್ನೆಬ್ಬಿಸುವಲ್ಲಿ ಸಫಲವಾಗುವಷ್ಟು ನಾಜೂಕಾಗಿರುತ್ತಿತ್ತು ಇವರ ಮಾತು. ಒಬ್ಬರ ಬಲಗೈ ಮತ್ತೊಬ್ಬರ ಎಡಗೈ ರೀತಿ ಕಾರ್ಯನಿರ್ವಹಿಸುತ್ತಿದ್ದರು ಭಾಸ್ಕರ ಮತ್ತು ಸುಲೇಮಾನ್. ಆರ್ಥಿಕತೆಯಲ್ಲಿ, ಅಂಡಲೆಯುವುದರಲ್ಲಿ, ಮನೆಯವರಿಂದ ತೆಗಳಿಸಿಕೊಳ್ಳುವುದರಲ್ಲಿ ಈರ್ವರಿಗೂ ಸಾಮ್ಯತೆಯಿತ್ತು. ವೆಂಕಟಗಿರಿಯಪ್ಪ ಮತ್ತು ರಿಜ್ವಾನ್ ಅಬ್ಬಾಸರ ಅತ್ಯಮೋಘ ಭಾಷಣ ಕೇಳಿ ಧರ್ಮರಕ್ಷಕರಾಗುವ ಧೃಡನಿಶ್ಚಯ ಮಾಡಿ ಗಣೇಶೋತ್ಸವಕ್ಕೆ ಐದು ದಿನಗಳಿರುವಾಗ ದೀಕ್ಷೆ ತೆಗೆದುಕೊಂಡರು.

ಒಂದೆಡೆ ಸೇರಿದ್ದ ವೆಂಕಟಗಿರಿಯಪ್ಪನ ಸಹಚರರು ‘ಇನ್ಯಾವ ಹಾದಿಯಲ್ಲಿ ಸಾಗದಿದ್ದರೂ ಮಸೀದಿಯ ಮುಂದೆ ಅರ್ಧ ಘಂಟೆ ನಿಲ್ಲಲೇಬೇಕು, ಅಸಂಬದ್ಧ ಮಾತನಾಡಬೇಕು. ಅವರಲ್ಲೊಬ್ಬ ರೊಚ್ಚಿಗೆದ್ದು ಕಲ್ಲೆಸೆಯಬೇಕು. ಎಸೆಯದಿದ್ದರೂ ಚಿಂತಿಲ್ಲ ಯಾರೋ ನಮ್ಮ ದೇವರ ಮೇಲೆ ಕಲ್ಲೆಸೆದರು ಎಂದರಚುತ್ತಾ ಹೊಡೆದಾಟ ಪ್ರಾರಂಭಿಸಬೇಕು’ ಎಂಬ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿತ್ತು.

ಮತ್ತೊಂದೆಡೆ ಸೇರಿದ್ದ ಅಬ್ಬಾಸನ ಸಹಚರರು ‘ಅವರು ಮಸೀದಿಯ ಮುಂದೆ ಅರ್ಧ ಘಂಟೆ ನಿಲ್ಲುತ್ತಾರೆ, ನಿಲ್ಲಲೇಬೇಕು, ಅಸಂಬದ್ಧ ಮಾತನಾಡಬೇಕು. ಅವರಲ್ಲೊಬ್ಬ ರೊಚ್ಚಿಗೆದ್ದು ಕಲ್ಲೆಸೆಯಬೇಕು. ಎಸೆಯದಿದ್ದರೂ ಚಿಂತಿಲ್ಲ ಯಾರೋ ನಮ್ಮ ದೇವರ ಮೇಲೆ ಕಲ್ಲೆಸೆದರು ಎಂದರಚುತ್ತಾ ಹೊಡೆದಾಟ ಪ್ರಾರಂಭಿಸಬೇಕು’ ಎಂಬ ತೀರ್ಮಾನ ತೆಗೆದುಕೊಳ್ಳಲಾಗಿತ್ತು.

ಎಲ್ಲವೂ ಅಂದುಕೊಂಡತೆಯೇ ನಡೆಯಿತು. ಭಾಸ್ಕರ ಮತ್ತು ಸುಲೇಮಾನ್ ಧರ್ಮರಕ್ಷಕರಾಗಿ ವೀರೋಚಿತವಾಗಿ ಹೋರಾಡಿದ್ದು ಅವರನ್ನು ವೆಂಕಟಗಿರಿಯಪ್ಪ ಮತ್ತು ರಿಜ್ವಾನ್ ಅಬ್ಬಾಸರ ಬಲಗೈ ಮತ್ತು ಎಡಗೈಯನ್ನಾಗಿ ಮಾಡಿತ್ತು.

ತಲೆ, ಕೈಕಾಲುಗಳಿಗಾಗುತ್ತಿದ್ದ ಗಾಯಗಳು ಪ್ರಾಣಹರಣದ ಮಟ್ಟ ಮುಟ್ಟಿದ್ದು ವಿಧಾನಸಭಾ ಚುನಾವಣೆ ಘೋಷಣೆಯಾದಾಗಿನಿಂದ. ತಮ್ಮ ತಮ್ಮ ‘ಮತ’ಬ್ಯಾಂಕನ್ನು ಗಟ್ಟಿಪಡಿಸಿಕೊಂಡಿದ್ದ ವೆಂಕಟಗಿರಿಯಪ್ಪ ಮತ್ತು ರಿಜ್ವಾನ್ ಅಬ್ಬಾಸ್ ಚುನಾವಣಾ ಅಭ್ಯರ್ಥಿಗಳಾಗಿದ್ದರು. ಗೆಲುವಿನ ನಿರೀಕ್ಷೆಯಲ್ಲಿದ್ದರು. ಚುನಾವಣೆಯ ನಿಮಿತ್ತ ರಜವಿದ್ದುದರಿಂದ ರೇಷ್ಮಾ ಹಿಂದಿನ ದಿನವೇ ಕಾಲೇಜಿನಿಂದ ಮನೆಗೆ ಹಿಂದಿರುಗುತ್ತಿದ್ದಳು. ಎರಡು ತಿಂಗಳ ಗರ್ಭಿಣಿಯಾಕೆ. ಬಸ್ ನಿಲ್ದಾಣದ ಹತ್ತಿರವೇ ಇದ್ದ ಮನೆಗೆ ತಲುಪುವಷ್ಟರಲ್ಲಿ ಆಕೆಯ ಹತ್ಯೆಯಾಗಿತ್ತು. ಪೋಸ್ಟ್ ಮಾರ್ಟಮ್ಮಿಗೆ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದರು. ಪೋಸ್ಟ್ ಮಾರ್ಟಮ್ಮಿಗೆ ಅಂದು ಸಾಲು ಮಾಡಿ ಟೋಕನ್ ನೀಡಲಾಗಿತ್ತು. ಅಲ್ಲೇ ಇದ್ದ ಪರಿಚಯದ ಪೋಲೀಸ್ ಸಬ್ ಇನ್ಸ್ ಪೆಕ್ಟರರೊಡನೆ ಘಟನೆಯ ಬಗ್ಗೆ ಚರ್ಚಿಸಲು ಡಾಕ್ಟ್ರು ಹೋದರು. ಸುಲೇಮಾನ್ ಮತ್ತು ಭಾಸ್ಕರ ಧರ್ಮದಾಧಾರದಲ್ಲಿ ಸತ್ತವರ ಸಂಖೈಯನ್ನು ಎಣಿಕೆ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ತಮ್ಮ ಊರಿನ ಖ್ಯಾತ ಡಾಕ್ಟ್ರ ಅನ್ಯಧರ್ಮೀಯ ವಿವಾಹದ ಬಗ್ಗೆ ಕೇಳಿ ತಿಳಿದಿರದೆ ಇರಲಿಲ್ಲ.

“ಬಿಡ್ರೀ ಡಾಕ್ಟ್ರೇ. ಆ ಧರ್ಮದವಳು ತಾನೇ. ಸತ್ತರೆ ಸತ್ಲು. ನಮ್ಮ ಪೈಕೀನೇ ಯಾರನ್ನಾದ್ರೂ ನೋಡಿ ಮಾಡ್ಕಳ್ಳೋರಂತೆ”

“ಅವರ ಪೈಕಿ ಮದುವೆಯಾಗಿದ್ಲು. ಸತ್ತರೆ ಸತ್ಲು. ನಮ್ಮ ಜನರಲ್ಲಿ ಕಟ್ಕೊಳ್ಳೋಕೆ ಯಾರೂ ಇರಲಿಲ್ವಾ ಅವಳಿಗೆ”

ಹೇಸಿಗೆಯೆನ್ನಿಸಿತ್ತು ಡಾಕ್ಟ್ರಿಗೆ. ಊರನ್ನೇ ತೊರೆಯಬೇಕೆಂದುಕೊಂಡವರು ಸ್ನೇಹಿತರ ಒತ್ತಾಯ ಮತ್ತು ಸಮಾಧಾನದ ಬಳಿಕ ಅಲ್ಲೇ ನೆಲೆಸಿದರು ರೇಷ್ಮಾಳ ನೆನಪಿನೊಂದಿಗೆ. ಚುನಾವಣೆ ಮುಗಿಯಿತು. ರಿಜ್ವಾನ್ ಅಬ್ಬಾಸ್ ಆಯ್ಕೆಯಾದ. ಧರ್ಮರಕ್ಷಣೆಗಾಗಿ ಅಪಾರ ಶ್ರಮ ಪಟ್ಟ ವೆಂಕಟಗಿರಿಯಪ್ಪನನ್ನು ಅವರ ಪಕ್ಷ ವಿಧಾನಪರಿಷತ್ತಿಗೆ ನೇಮಿಸಿತು. ಕೋಮುಗಲಭೆಗಳು ನಿಂತೇ ಹೋದವೆನ್ನುವಷ್ಟು ಕಡಿಮೆಯಾದವು. ಹಬ್ಬಗಳು ಉತ್ಸವಗಳಾಗುವುದಕ್ಕೆ ಹರಿದು ಬರುತ್ತಿದ್ದ ಹಣಕ್ಕೆ ಕಾಣದ ಕೈಗಳು ತಡೆಯೊಡ್ಡಿದ್ದರಿಂದ ಹಬ್ಬಗಳು ಮತ್ತು ದೇವರು ಬೀದಿಯಿಂದ ಮರಳಿ ಮನೆಯೊಳಗೆ ಬೆಚ್ಚಗಾದವು. ಸುಲೇಮಾನ್ ಮತ್ತು ಭಾಸ್ಕರ ಊರಿನೆರಡು ಮೂಲೆಗಳಲ್ಲಿ ದೊಡ್ಡ ದೊಡ್ಡ ಅಂಗಡಿ ಮಳಿಗೆ ತೆರೆದರು. ಜೊತೆಗೆ ರಿಜ್ವಾನ್ ಅಬ್ಬಾಸ್ ಮತ್ತು ವೆಂಕಟಗಿರಿಯಪ್ಪನ ವ್ಯಾಪಾರದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಸುಲೇಮಾನ್ ಮತ್ತು ಭಾಸ್ಕರನಿಗೆ ಹೆಚ್ಚು ಕಡಿಮೆ ಒಂದೇ ತಿಂಗಳಲ್ಲಿ ಮದುವೆಯಾಗಿತ್ತು. ಈರ್ವರ ಪತ್ನಿಯರೂ ಗರ್ಭ ಧರಿಸಿದ್ದರು. ಕೈಗುಣದಿಂದ ಫೇಮಸ್ಸಾಗಿದ್ದ ಡಾಕ್ಟ್ರ ಬಳಿಯೇ ತೋರಿಸಲು ಬಂದಿದ್ದರು.

ಈರ್ವರ ಹೆಂಡಿರಿಗೂ ಒಂದೇ ಸಮಯದಲ್ಲಿ ಹೆರಿಗೆ ನೋವು ಪ್ರಾರಂಭವಾಗಿತ್ತು. ಡಾಕ್ಟ್ರ ನರ್ಸಿಂಗ್ ಹೋಮಿಗೆ ಕರೆದುಕೊಂಡು ಬಂದು ಸೇರಿಸಿದ್ದರು. ಇಬ್ಬರನ್ನೂ ಹೆರಿಗೆ ಕೊಠಡಿಗೆ ಸಾಗಿಸಿ ಪರೀಕ್ಷಿಸಿ ಒಂದಷ್ಟು ಔಷಧಿಗಳನ್ನು ನೀಡಿ ಹೆರಿಗೆಯಾಗಲು ಇನ್ನೂ ಸಮಯವಿದೆಯೆನ್ನಿಸಿ ಒಳಗೇ ಇದ್ದ ಕೊಠಡಿಯೊಳಗೆ ಕುಳಿತ ಡಾಕ್ಟರಿಗೆ ತಲೆಸಿಡಿಯಲಾರಂಭಿಸಿತು. ‘ನನ್ನ ಗರ್ಭಿಣಿ ರೇಷ್ಮಾಳನ್ನು ಕೊಂದ ಜನರಿವರು. ಇವರ ಪತ್ನಿಯನ್ನು ಮಗುವನ್ನು ಉಳಿಸಲು ನಾನೇ ಕಾವಲಾಗಬೇಕು. ಅದೂ ಇದೂ ಔಷಧಿ ನೀಡಿ ಮಗುವನ್ನೋ ತಾಯಿಯನ್ನೋ ಅಥವಾ ಇಬ್ಬರನ್ನೂ ಸಾಯುವಂತೆ ಮಾಡಿಬಿಡಲಾ? ಛೇ! ಛೇ! ವೈದ್ಯನಾಗಿ ಈ ರೀತಿ ಯೋಚಿಸಬಾರದು. ರಂಗಣ್ಣ ಇಬ್ಬರ ಸ್ಕ್ಯಾಂನಿಗನ್ನೂ ಮಾಡುತ್ತಿದ್ದಾಗ ನೋಡಿದ್ದೆನಲ್ಲ, ಇಬ್ಬರ ಗರ್ಭದೊಳಗೂ ಗಂಡು ಮಗು. ಅಪ್ಪನ ರೀತಿ ಅವರೂ ಧರ್ಮದ ನಂಜೇರಿಸಿಕೊಂಡು ಕಾದಾಟಕ್ಕಿಳಿದರೆ? ಅದರ ಬದಲು ಇಂದೇ ಮುಗಿಸಿಬಿಟ್ಟರೆ. ಛೀ ಛೀ ಇದೇನ್ ಯೋಚಿಸ್ತಿದ್ದೀನಿ ನಾನು. ಅಪ್ಪ ಮಾಡಿದ ತಪ್ಪಿಗೆ ಪಾಪ ಹಸುಗೂಸುಗಳ್ಯಾಕೆ ಶಿಕ್ಷೆ ಅನುಭವಿಸಬೇಕು’ ಒಂದು ಗ್ಲಾಸು ನೀರು ಕುಡಿದ. ಹೆರಿಗೆ ರೂಮಿನಲ್ಲಿ ಇಬ್ಬರ ಕೂಗು ರಾಗಬದ್ಧವಾಗಿ ದನಿಸಲಾರಂಭಿಸಿತ್ತು. ‘ಆದ್ರೂ ಏನಾದ್ರೂ ಮಾಡ್ಬೇಕು. ಇಬ್ಬರಿಗೂ ಬುದ್ಧಿ ಕಲಿಸಲೇಬೇಕು. ಹುಟ್ಟಿನಿಂದ ಬರುವ ಧರ್ಮದ ಲೇಬಲ್ಲಿನ ಮೇಲೆ ಇಷ್ಟೊಂದೆಲ್ಲಾ ಹಿಂಸಾ ಪ್ರವೃತ್ತಿ ಬೆಳೆಸಿಕೊಳ್ಳುವ ಇವರಿಗೆ ಬುದ್ಧಿ ಕಲಿಸಲೇಬೇಕು. ಏನ್ ಮಾಡ್ಲಿ ಏನ್ ಮಾಡ್ಲಿ? ಮಕ್ಕಳನ್ನು ಅದಲು ಬದಲು ಮಾಡಿಬಿಟ್ಟರೆ?’ ತನ್ನ ಯೋಜನೆಗೆ ಬೆಚ್ಚಿಬಿದ್ದ ಡಾಕ್ಟ್ರ ಮುಖದಲ್ಲಿ ನಿಧಾನಕ್ಕೆ ಮಂದಹಾಸ ಮೂಡಿತು. ‘ಹೌದು ಅದೇ ಸರಿ. ಮುಸ್ಲಿಂ ಹಿಂದೂ ಮಗುವನ್ನೂ ಹಿಂದೂ ಮುಸ್ಲಿಂ ಮಗುವನ್ನೂ ಸಾಕಿ ಸಲಹಿ ಪ್ರೀತಿಸಬೇಕು’ ತನ್ನ ಆಲೋಚನೆಗೆ ಶಹಬ್ಬಾಸ್ ಹೇಳಿಕೊಂಡ. ಮರುಕ್ಷಣವೇ ನೈತಿಕತೆಯ ಪ್ರಶ್ನೆ ಎದುರಾಯಿತು. ಬದಲಿಸಲೋ ಬೇಡವೋ ಬದಲಿಸಲೋ ಬೇಡವೋ ಎಂದು ತುಯ್ದಾಡುತ್ತಲೇ ಕುಳಿತವನಿಗೆ ಹೆರಿಗೆ ರೂಮಿನಿಂದ ಬರುತ್ತಿದ್ದ ರಾಗದ ಸ್ವರ ಹೆಚ್ಚುತ್ತಿದ್ದಂತೆ ಕರ್ತವ್ಯಪ್ರಜ್ಞೆ ಜಾಗೃತವಾಗಿ ಹೊರಬಂದ. ಬದಲಿಸಲೋ ಬೇಡವೋ ಬದಲಿಸಲೋ ಬೇಡವೋ ........... ಹೆರಿಗೆಯಾಯಿತು.ಐದು ನಿಮಿಷದ ನಂತರ ತಾಯಂದಿರಿಗೆ ಮಕ್ಕಳನ್ನು ತೋರಿಸಿದಳು ನರ್ಸಮ್ಮ.

* * *

ತಮ್ಮ ಗುರುಗಳೆಡೆಗಿರುವ ಭಕ್ತಿಭಾವದಿಂದ ಅಬ್ಬಾಸ್ ಮತ್ತು ವೆಂಕಟ್ ಎಂದು ಮಕ್ಕಳಿಗೆ ಹೆಸರಿಟ್ಟರು. ಧರ್ಮಕ್ಕನುಸಾರವಾಗಿ ಶಾಸ್ತ್ರಗಳು ಕಾಲಕಾಲಕ್ಕೆ ನಡೆದವು. ಇಬ್ಬರಿಗೂ ಅಮ್ಮನಿಗಿಂತ ಅಪ್ಪನೇ ಅಚ್ಚುಮೆಚ್ಚು. ಸ್ಕೂಲಿಗೆ ಹೋಗುವ ವಯಸ್ಸಾದಾಗ ಆಗ ಖ್ಯಾತವಾಗಿದ್ದ ಶಾಲೆಗೇ ಸೇರಿದರು. ಅಪ್ಪಂದಿರಲ್ಲಿದ್ದ ದ್ವೇಷ ಆ ಸದ್ಯಕ್ಕೆ ಮಕ್ಕಳಲ್ಲಿರಲಿಲ್ಲ. ಗೆಳೆಯರಾಗಿದ್ದರು. ಜೊತೆಗೂಡಿ ಆಡುತ್ತಿದ್ದರು ತಿನ್ನುತ್ತಿದ್ದರು. ಮನೆಯವರು ಬರುವ ವೇಳೆಗೆ ದೂರವಿರುತ್ತಿದ್ದರು. ಹತ್ತು ವರುಷಗಳುರುಳಿತು. ಇನ್ನೊಂದು ಮಗುವಾಗಿದ್ದರೂ ಸುಲೇಮಾನ್ ಮತ್ತು ಭಾಸ್ಕರನಿಗೆ ಮೊದಲನೆಯವನ ಮೇಲೆ ಮಮತೆ ಹೆಚ್ಚು.

ಅಂದು ಬೆಳಿಗ್ಗೆ ಇಬ್ಬರಿಗೂ ಫೋನ್ ಕರೆ ಬಂದಿತ್ತು.

“ಹಲೋ”

“ಹಲೋ”

“ಇವತ್ತು ಸಂಜೆ ನಾಲ್ಕಕ್ಕೆ ಗುಡ್ಡದ ಹಿಂದಿನ ಕೆರೆ ಏರಿ ಮೇಲೆ ನೀವು ಬರಬೇಕು”

“ಯಾಕೆ?”

“ನಿಮಗೆ ಇಲ್ಲಿಯವರೆಗೆ ಗೊತ್ತಿಲ್ಲದ ಒಂದು ರಹಸ್ಯ ತಿಳಿಸಬೇಕಿದೆ”

“ನೀವ್ಯಾರು ಮಾತಾಡ್ತಿರೋದು?”

“ಅದೆಲ್ಲವೂ ಸಂಜೆ ಗೊತ್ತಾಗುತ್ತೆ ಬನ್ನಿ. ಅಂದ್ಹಾಗೆ ಒಬ್ಬರೇ ಬಂದರೆ ಒಳ್ಳೇದು” ಫೋನ್ ಕಟ್ಟಾಗಿತ್ತು.

ತಮ್ಮ ಕಡೆಯವರನ್ನು ಗುಡ್ಡದ ಬಳಿ ಕಾವಲು ಕಾಯುವಂತೆ ಹೇಳಿ ಸಂಜೆ ನಾಲ್ಕರ ಸಮಯಕ್ಕೆ ಇಬ್ಬರೂ ಕೆರೆಯ ಬಳಿಗೆ ಬಂದರು. ಶತ್ರುವನ್ನು ನೋಡಿ ಅಲರ್ಟ್ ಆದರು.

“ನೀನ್ಯಾಕೆ ನನಗೆ ಫೋನ್ ಮಾಡಿ ಕರೆಸಿದೆ”

“ನೀನ್ಯಾಕೆ ನನಗೆ ಫೋನ್ ಮಾಡಿ ಕರೆಸಿದೆ”

“ನನಗೇನ್ ತಿಕ್ಲಾ”

“ನನಗೇನ್ ತಿಕ್ಲಾ”

“ಏನ್ ಮಸ್ಲತ್ತು ನಡಿಸಿದ್ದೀಯಾ?”

“ಏನ್ ಮಸ್ಲತ್ತು ನಡಿಸಿದ್ದೀಯಾ?”

ಭಾಸ್ಕರನ ಫೋನ್ ರಿಂಗಣಿಸಿತು.

“ಹಲೋ”

“ಹಲೋ ಭಾಸ್ಕರ್. ಸ್ವಲ್ಪ ನಿಮ್ಮ ಫೋನಿನ ಲೌಡ್ ಸ್ಪೀಕರ್ ಆನ್ ಮಾಡಿ”

“ಹಲೋ ಸುಲೇಮಾನ್. ನನ್ನ ದನಿ ಕೇಳ್ತಿದೆಯಲ್ಲ”

“ಕೇಳ್ತಿದೆ”

“ನಮಸ್ತೆ ನಾನೇ ಕರೆಸಿದ್ದು ನಿಮ್ಮನ್ನು. ನಾನ್ಯಾರು ಅಂತ ಗೊತ್ತಾಯ್ತ?”

“ಇಲ್ಲ”

“ನಾನು ಡಾಕ್ಟ್ರು”

“ಯಾವ ಡಾಕ್ಟ್ರು?”

“ನಿಮ್ಮ ಹೆಂಡತಿಯರ ಹೆರಿಗೆ ಮಾಡಿಸಿದ್ದೆ. ಅದಕ್ಕೂ ಮುಂಚೆ ನನ್ನ ಹೆಂಡತಿಯನ್ನು ‘ಧರ್ಮರಕ್ಷಕರು’ ಸಾಯಿಸಿದ್ದರು”

“ಗೊತ್ತಾಯ್ತು ಗೊತ್ತಾಯ್ತು. ಇಲ್ಲಿಗ್ಯಾಕೆ ಕರೆಸಿದ್ದು”

“ನಿಮ್ಮಿಬ್ಬರಿಗೂ ಒಂದು ಸತ್ಯ ತಿಳಿಸಬೇಕಿತ್ತು”

“ಏನು ಸತ್ಯ?”

“ನಿಮ್ಮ ಪತ್ನಿಯರು ಮೊದಲ ಹೆರಿಗೆಗೆ ನನ್ನ ಆಸ್ಪತ್ರೆಗೇ ಬಂದಿದ್ದರು. ಆಗ ನೀವೋ ಅಥವಾ ನಿಮ್ಮ ತಂಡದವರೋ ನನ್ನ ಪತ್ನಿ, ಆಗಷ್ಟೇ ಎರಡು ತಿಂಗಳ ಗರ್ಭಿಣಿಯಾಗಿದ್ದ ಪತ್ನಿಯನ್ನು ಸಾಯಿಸಿದ್ದೆಲ್ಲಾ ನೆನಪಿಗೆ ಬಂತು. ನನಗೆ ತೊಂದರೆ ಕೊಟ್ಟವರ ಹೆಂಡತಿ ಮತ್ತು ಗರ್ಭದಲ್ಲಿರುವ ಮಗುವನ್ನು ಸಾಯಿಸಿಬಿಡಲಾ? ಎಂಬ ಕೆಟ್ಟ ಯೋಚನೆಯೂ ಬಂತು. ನಾನು ನೀವಲ್ಲ ನೋಡಿ! ಅದಕ್ಕೆ ಸಾಯಿಸಲಾಗಲಿಲ್ಲ. ಆದರೆ..”

“ಆದ್ರೆ?”

“ಧರ್ಮದ ಅಮಲೇರಿಸಿಕೊಂಡಿರುವ ನಿಮ್ಮನ್ನು ಸುಮ್ಮನೇ ಬಿಡಲೂ ಮನಸ್ಸಾಗಲಿಲ್ಲ. ಅದಿಕ್ಕೆ..”

“ಅದಿಕ್ಕೆ?”

“ನಿಮಗೆ ನೆನಪಿದ್ಯೋ ಇಲ್ವೋ ನಿಮ್ಮಿಬ್ಬರ ಮೊದಲ ಮಗು ಒಂದೇ ದಿನ ಹೆಚ್ಚುಕಡಿಮೆ ಒಂದೇ ಸಮಯಕ್ಕೆ ಹುಟ್ಟಿದ್ದು”

“ಇರಬಹುದು”

“ಆ ದಿನ ನಾನು ಮಕ್ಕಳನ್ನು ಅದಲು ಬದಲು ಮಾಡಿಬಿಟ್ಟೆ”

“ಡಾಕ್ಟ್ರೇ......”

“ಹ್ಹ ಹ್ಹ ಹ್ಹ. . . ಕಿರುಚಿ ಉಪಯೋಗವಿಲ್ಲ ಕಣ್ರೀ! ಹೇಗಿದೆ ಈ ಡಾಕ್ಟ್ರ ಕೈಚಳಕ. ಹಿಂದೂ ಮನೆಯಲ್ಲಿ ಮುಸ್ಲಿಂ ಹಿಂದೂವಾಗಿ ಬೆಳೆದ. ಮುಸ್ಲಿಂ ಮನೆಯಲ್ಲಿ ಹಿಂದೂ ಮುಸ್ಲಿಮನಾಗಿ ಬೆಳೆದ. ಹ್ಹ ಹ್ಹ ಹ್ಹ”

“ಸುಳ್ಳಾಡಬೇಡಿ ಡಾಕ್ಟ್ರೇ”

“ಸುಳ್ಳಾ! ನಾನ್ಯಾಕೆ ಸುಳ್ಳಾಡಲಿ? ಅನುಮಾನವಿದ್ರೆ ಡಿ.ಎನ್.ಎ ಪರೀಕ್ಷೆ ಮಾಡಿಸಿಕೊಳ್ಳಿ” ಫೋನ್ ಕಟ್ ಮಾಡಿಬಿಟ್ಟ. ಅದೇ ನಂಬರಿಗೆ ತಿರುಗಿ ಕರೆ ಮಾಡಿದರು. ಸ್ವಿಚ್ ಆಫ್ ಆಗಿತ್ತು. ಕ್ರೋದದಿಂದ. ಕುದ್ದುಹೋಗಿ ಇಬ್ಬರೂ ನರ್ಸಿಂಗ್ ಹೋಮಿನೆಡೆಗೆ ಧಾವಿಸಿದರು. ಬೋರ್ಡಿಳಿಸುತ್ತಿದ್ದರು. ಡಾಕ್ಟರು ಊರು ತೊರೆದು ಹೋಗಿದ್ದರು. ಎಲ್ಲೆಗೆಂಬುದು ಯಾರಿಗೂ ತಿಳಿದಿರಲಿಲ್ಲ.

‘ನನ್ನ ಮನೆಯಲ್ಲಿ ಅವನ ಮಗ. ಆ ಧರ್ಮದವನ ಮಗ ನನ್ನ ಮನೆಯಲ್ಲಿ. ಏನ್ ಮಾಡೋದು, ಏನ್ ಮಾಡೋದೀಗ? ಆ ದರಿದ್ರ ಡಾಕ್ಟ್ರು ಮಾಡಿರೋ ಹಲ್ಕಟ್ ಕೆಲಸದಿಂದ ನನ್ನ ಧರ್ಮದ ಮಾನ ಮರ್ಯಾದೆಯಲ್ಲಾ ಹಾಳಾಗಿ ಹೋಯ್ತು. ಅವನ ಮಗನನ್ನು ಸಾಯಿಸುವುದಷ್ಟೇ ಇದಕ್ಕೆ ಪರಿಹಾರ. ಹೌದು ಅದೊಂದೇ ಪರಿಹಾರ. ಆ ಧರ್ಮದವನನ್ಯಾಕೆ ನಾನು ಸಾಕಬೇಕು’ ಮನೆ ಸಿಕ್ಕಿತು. ಕೋಪದಿಂದ ಬಾಗಿಲನ್ನು ದೂಡಿ ಒಳನಡೆದರು.

“ಅಪ್ಪಾ ಅಪ್ಪ ನೀನಿಲ್ಲಾಂತ ಅಮ್ಮ ನನಗೆ ಹೊಡೆದುಬಿಟ್ಟಳು”

“ಪಪ್ಪಾ ಪಪ್ಪ ನೀನಿಲ್ಲಾಂತ ಅಮ್ಮ ನನಗೆ ಹೊಡೆದುಬಿಟ್ಟಳು”

ಓಡಿಬಂದು ಅಪ್ಪನನ್ನು ತಬ್ಬಿಕೊಂಡರು.

ಬಿಗಿದಿದ್ದ ಮುಷ್ಟಿ ದಶಕಗಳಿಂದ ಮುಷ್ಟಿಯಂತೆ ಬಿಗಿಯಾಗಿದ್ದ ಮನಸ್ಸು ತೆರೆದುಕೊಳ್ಳಲಾರಂಭಿಸಿತು.

ಡಿಸೆಂ 19, 2014

ನಂಬಿಕೆಯ ಸೌಧ

ರೇಷ್ಮಾ ಉಮೇಶ ಭಟ್ಕಳ
ಬೆಳಗಿನಿಂದ ಮನೆಯಲ್ಲಿ ಒಂದೇ ಸವನೆ ಗಜಿವಿಜಿಯಿಂದ ಕೂಡಿದ ಕೆಲಸ ಕಾರ್ಯಗಳು. ಒಂದೆಡೆ ಮಕ್ಕಳ ತಿಂಡಿ ತೀರ್ಥಗಳ ತಕರಾರು,ಇನ್ನೊಂದೆಡೆ ಗಂಡನ ಆಜ್ಞೆಯ ಭೂತಗಳು, ಇವೆಲ್ಲವುಗಳ ನಡುವೆ ತೊಂದರೆ ಅನುಭವಿಸುವವಳು ನನ್ನ ಬೆಟರ್ ಹಾಪ್, ಅಂದರೇ ನನ್ನ ಅರ್ಧಾಂಗಿ. ಆಕೆಯನ್ನು ಅರ್ದಅಂಗಿ ಎಂದು ಸದಾ ನಾನು ರೇಗಿಸುತ್ತಿದ್ದೆ. ಅವಳು ಸಹ ತಮಾಷೆಗೇನು ಕಡಿಮೆ ಇರಲಿಲ್ಲ, ಆಕೆಯ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವಲ್ಲಿಯೂ ನನ್ನ ಮಾತಿಗೆ ಪ್ರತಿಯಾಗಿ ಅರ್ಧ ಅಂಗಿನೋ ಅಥವಾ ಹರಿದ ಅಂಗಿನೋ ಎಂದು ರೇಗಿಸುತ್ತಿದ್ದಳು. ಆದರೆ ಇಂತಹ ತಮಾಷೆಯ ಸಂದರ್ಭದಲ್ಲು ನನ್ನ ಕಣ್ಮುಂದೆ ಕಟ್ಟುತ್ತಿದ್ದ ಸ್ಥಿತಿ ಅಗೋಚರ, ಚಿತ್ತ ಚಂಚಲ ಮಾಡುವಂತದ್ದು.  ಆದರೆ ಅವಳನ್ನು ನೋಡಿದಾಗಲೆಲ್ಲ ಶರೀಫ್‍ರ ಹಾಡು ನೆನಪಿಗೆ ಬರುತ್ತಿತ್ತು.

ಅಕ್ಟೋ 4, 2014

ಮೌನ

ಅಂದು
'ಅವರೆಲ್ಲಾ ಅಲ್ಪಸಂಖ್ಯಾತರನ್ನು ಓಲೈಸುವ ರಾಜಕಾರಣ ಮಾಡುತ್ತಿದ್ದಾರೆ. ಛೀ ಅಸಹ್ಯ' ಎಂದರು. ನನಗೆ ಸಂಬಂಧಪಟ್ಟಿದ್ದಾಗಿರಲಿಲ್ಲ. ಏನೋ ರಾಜಕೀಯ, ಮಾಡಿಕೊಳ್ಳಲಿ ಬಿಡಿ ಎಂದು ಸುಮ್ಮನಿದ್ದೆವು.
ಇಂದು
'ರಾಷ್ಟ್ರೀಯವಾದಿ ಪಕ್ಷದ ನಾಯಕನೊಬ್ಬ ಸರಕಾರೀ ದೂರದರ್ಶನದಲ್ಲಿ ಕಾಣಿಸಿಕೊಂಡ್ರೆ ಏನ್ರೀ ತಪ್ಪು' ಎಂದು ಅಬ್ಬರಿಸಿದರು. ಥೂ...ಓಕ್ಕೊಳ್ಲಿ ಬಿಡಪ್ಪ ಎಂದು ಸುಮ್ಮನಿದ್ದೆವು.
ಮುಂದು
'ಹಿಂದೂ ರಾಷ್ಟ್ರವಾದ ಭಾರತದಲ್ಲಿ ಎಲ್ಲಾ ಜಾತಿಯವರೂ ಜೊತೆಜೊತೆಯಾಗಿ ವಾಸಿಸಿದರೆ ಹೆಂಗೆ? ವರ್ಣಾಶ್ರಮ ವ್ಯವಸ್ಥೆಗೆ ಅವಮಾನಿಸಿದರೆ ದೇಶಕ್ಕೆ ಒಳ್ಳೆಯದಲ್ಲ' ಎಂದು ನಯವಾಗಿ ತಲೆಸವರಿದರು. ಅಂದು ಮತ್ತು ಇಂದು ಸುಮ್ಮನಿದ್ದ ಕಾರಣ ಮಾತನಾಡಲೇನೂ ಉಳಿದಿರಲಿಲ್ಲ. ಗಂಟು ಮೂಟೆ ಕಟ್ಟಲಾರಂಭಿಸಿದೆವು.
Also Readಕಥೆಗಳು

ಸೆಪ್ಟೆಂ 25, 2014

ಚಿಕ್ಕ ಹಗರಣ

ಮೂಲ – ಹರ್ಷ Think Bangalore
ಅನುವಾದ – ಡಾ ಅಶೋಕ್ ಕೆ ಆರ್.
ರಾಮಸ್ವಾಮಿ ಪ್ರಖ್ಯಾತ ವ್ಯಕ್ತಿ. ಊರಿನ ಹೈಸ್ಕೂಲಿನಲ್ಲಿ ಹೆಡ್ ಮಾಸ್ಟರ್ ಆಗಿ ಕೆಲಸಮಾಡುತ್ತಿದ್ದರು. ಅವರ ಮಾತೆಂದರೆ ಊರವರಿಗೆಲ್ಲ ಬಹಳ ಗೌರವ. ಕಾರಣ, ಅವರ ಆದರ್ಶಯುತ ಜೀವನ. ಸುಳ್ಳಾಡದೆ, ಯಾರೊಬ್ಬರಿಗೂ ಮೋಸ ಮಾಡದೆ, ಕೆಟ್ಟದನ್ನು ಮಾಡದೆ ಎಲ್ಲರೊಡನೆ ಸೌಮ್ಯದಿಂದ ಸ್ನೇಹಮಯದಿಂದಿರುತ್ತಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳು. ಬುದ್ಧಿವಂತರು. ಚೆನ್ನಾಗಿ ಓದಿಕೊಂಡರು. ದೊಡ್ಡವ ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿದರೆ ಚಿಕ್ಕವ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ.

ಜನ 7, 2014

ವಿಚಾರಣೆ

ಕು ಸ ಮಧುಸೂದನ

ನನ್ನ ಮುಂದೆ ಮೂರು ಜನ ಕೂತಿದ್ದರು. ಮದ್ಯದವನು ಕೆಂಪಗೆ ಇದ್ದು,ಸುಮ್ಮನಿದ್ದರೂ ಮುಗುಳ್ನಗುವಂತೆ ಕಾಣುತ್ತಿದ್ದ. ಆತನ ಕಣ್ಣುಗಳಲ್ಲಿ ನನ್ನ ಬಗ್ಗೆ ಅನುಕಂಪ ತುಂಬಿರುವಂತೆ ಅನಿಸಿತ್ತು. ನನ್ನ ಮುವತ್ತಮೂರು ದಿವಸಗಳ ಜೈಲಿನ ವಾಸದಲ್ಲಿ ಹಿಂದೆಂದೂ ಆತನನ್ನು ನೋಡಿದ ನೆನಪಾಗಲಿಲ್ಲ.ಅವನನ ಎಡಗಡೆಗೆ ಬೊಕ್ಕತಲೆಯವನೊಬ್ಬ ಕುಳಿತಿದ್ದ. ಆತನನ್ನು ಈ ರೂಮಿನಲ್ಲೇ ನೋಡಿದ್ದೆ. ಅಲ್ಲಿದ್ದ ಮೂರನೆಯವನು ಮಾತ್ರ ಪೋಲಿಸರ ಉಡುಪಿನಲ್ಲಿರದೆ,ಇದೆಲ್ಲ ತನಗೆ ಸಂಬಂದಿಸಿಯೇ ಇಲ್ಲವೇನೊ ಎಂಬಂತೆ ಕುಳಿತಿದ್ದ. ಬಹುಶ: ಅವನು ಬೇರೆ ಇಲಾಖೆಯವನಿರಬೇಕು.

ಅಕ್ಟೋ 11, 2013

ನೆರಳು



 ಡಾ ಅಶೋಕ್ ಕೆ ಆರ್

ಉಹ್ಞೂ, ಸರಿಯಾಗಿ ಇಂಥದೇ ದಿನದಿಂದ ಈ ತೊಂದರೆ ಆರಂಭವಾಗಿತ್ತು ಎಂದ್ಹೇಳಲು ಕಷ್ಟವಾಗಿತ್ತು ರಾಜೀವನಿಗೆ. ಮೊದಲು ಅನುಭವಕ್ಕೆ ಬಂದಿದ್ದು ಇತ್ತೀಚೆಗೆ ಮೈಸೂರಿನಿಂದ ಬೆಂಗಳೂರಿಗೆ ಹೋಗುವ ಹಾದಿಯಲ್ಲಿ. ಶ್ರೀರಂಗಪಟ್ಟಣ ದಾಟಿ ಹತ್ತು ನಿಮಿಷವಾಗಿತ್ತಷ್ಟೇ. ಕಾರು ಕೆಟ್ಟು ನಿಂತಿತು. ಈ ಸಲ ಹಿಂದೆಂದೂ ನೋಡದ ಪ್ರಚಂಡ ಬಿಸಿಲು. ಕಾರಿನ ಎಸಿಯೂ ಬಂದಾಗಿತ್ತು. ‘ಅಲ್ಲೇ ಮರದ ನೆರಳಿನಲ್ಲಿ ನಿಂತಿರಿ ಸರ್. ಏನಾಗಿದೆ ನೋಡ್ತೀನಿ’ ಎಂದ ಡ್ರೈವರ್. ಸರಿ ಎಂದುಕೊಂಡು ಮರದ ಬಳಿ ಬಂದ. ಘಂಟೆ ಮೂರಾಗಿತ್ತು. ಸೂರ್ಯ ಪ್ರಖರವಾಗಿದ್ದ. ಮರದ ನೆರಳು ಕಾಣಲಿಲ್ಲ! ತಲೆಯೆತ್ತಿ ನೋಡಿದ. ಸೂರ್ಯ ನಕ್ಕಂತಾಯಿತು. ರಾತ್ರಿ ಕುಡಿದಿದ್ದು ಜಾಸ್ತಿಯಾಯಿತೇನೋ ಎಂದುಕೊಂಡು ನಗು ಬಂತು. ರಾತ್ರಿ ಪಾರ್ಟಿಯಲ್ಲಿ ನಡೆದುದೆಲ್ಲವನ್ನೂ ನೆನಪಿಗೆ ತಂದುಕೊಂಡು ಮತ್ತೊಂದಷ್ಟು ನಕ್ಕ. ಅಳಿಲಿನ ಕಿಚಪಚ ಸದ್ದು ಕೇಳಿ ಕತ್ತು ತಿರುಗಿಸಿ ಹಿಂದೆ ನೋಡಿದ. ಅಳಿಲು ಕಂಡಿತು, ಆದರೆ ತನ್ನ ನೆರಳೇ ಮಾಯವಾಗಿತ್ತು!

ಜನ 28, 2013

ಜಾಹ್ನವಿ



ಅನ್ಸಿಲಾ ಫಿಲಿಪ್ ವಾಸ್.
“ಜಾಹ್ನವಿ ಮತ್ತು ಸತೀಶರನ್ನು ಬೇರೆ ಬೇರೆ ಮಾಡ್ಬೇಡಿ ಪ್ಲೀಸ್” ರಾಧಿಕಾ ಬೇಡಿಕೊಳ್ಳುವವಳಂತೆ ಕೇಳಿದಾಗ
“ಆದರೆ ....ಶಿಲ್ಪಳ ಸಂತೃಪ್ತ ಜೀವನಕ್ಕಾಗಿ ಜಾಹ್ನವಿ...” ನಿತಿನ್ ತನ್ನ ಮಾತುಗಳನ್ನು ಮುಗಿಸುವ ಮುನ್ನವೇ ತಡೆದ ರಾಧಿಕಾ ರೋಷದಿಂದ ಕೇಳಿದಳು
“ಜಾಹ್ನವಿ... ಸಾಯಬೇಕೇನು?”
“ಅದೂ ಸಹ ಆಗುತ್ತದೆ” ಶಾಂತತೆಗೆ ಉದಾಸೀನದ ಲೇಪನ ಮಾಡಿ ನುಡಿದಿದ್ದ ಆತ.

ನವೆಂ 21, 2012

ಶಮೀನ



ಅನ್ಸಿಲಾ ಫಿಲಿಪ್ ವಾಸ್

ಛೇ! ನಾನೇನ್ಮಾಡ್ಲಿ? ಶಮೀನಾಗಿಂತ ತಾನು ಚೆನ್ನಾಗಿರುವುದು ನನ್ನ ತಪ್ಪೇ? ತನಗೆ ಹೇರಳವಾಗಿ ದೊರೆತ ಸೌಂದರ್ಯದ ಕುರಿತು ಚಿಂತಿಸುತ್ತಾಳೆ ಸೀಮ.

ಸೀಮ, ಶಮೀನರ ಮನೆಯ ಇಬ್ಬರು ಅಣ್ಣಂದಿರು ಸೌದಿಯಲ್ಲಿರುವುದರಿಂದ ಆಧುನಿಕ ಸಾಮಗ್ರಿಗಳನ್ನೊಳಗೊಂಡು ಸುಂದರವಾಗೇ ಇದ್ದಿತು ಶಮೀನಾಳಿಗಿಂತ ಸೀಮ ಚೆನ್ನಾಗಿದ್ದಾಳೆ ಎಂದು ಎಲ್ಲರೂ ಹೇಳುವಾಗ ಸೀಮಳಿಗೇಕೋ ವೇದನೆಯಾಗುತ್ತಿತ್ತು. “ಶಮೀನಾ ತನ್ನ ಅಕ್ಕ ಅವಳು ಚೆನ್ನಾಗಿ ಕಾಣಬೇಕು” ಇದು ಸೀಮಳ ಯೋಚನೆ.

ನವೆಂ 15, 2012

ರಿಮೋಟಿಗಿಂದು ನಾನೇ ಒಡತಿ!

ಡಾ ಅಶೋಕ್ ಕೆ ಆರ್
ಇವರು ನಿನ್ನೆ ರಾತ್ರಿ ಚಿತ್ರದುರ್ಗಕ್ಕೆ ಹೊರಟರು, ಇವರ ಅಕ್ಕನ ಮಗಳಿಗೆ ಹೆರಿಗೆಯಾಗಿತ್ತು. ವಾರದಿಂದ ಬೆನ್ನು ನೋವು ನನಗೆ, ಮಗನೊಟ್ಟಿಗೆ ಇನ್ನೊಂದು ದಿನ ಹೋದರಾಯಿತೆಂದು ಸುಮ್ಮನಾಗಿದ್ದೆ. ಹಿರಿಮಗ ಹುಣಸೂರಿಗೆ ಸ್ನೇಹಿತನ ಮದುವೆಗೆಂದು ಇವತ್ತು ಬೆಳಿಗ್ಗೆ ಹೊರಟ. ಸೊಸೆ, ಮೊಮ್ಮಗಳು ಅವನೊಂದಿಗೆ ಹೋಗಿದ್ದಾರೆ. ಗೆಳೆಯರೆಲ್ಲಾ ಬಂದಿದ್ದಾರೆ ಅನ್ನೋ ನೆಪ ಮಾಡಿಕೊಂಡು ಬೆಳಗಿನ ಜಾವ ಐದು ಘಂಟೆಗೇ ಬೈಕನ್ನೇರಿ ಕಿರಿಯವನು ಗೋಪಾಲಸ್ವಾಮಿ ಬೆಟ್ಟಕ್ಕೆ ಹೋದ. ಎಂಟು ಘಂಟೆಯವರೆಗೆ ಪತ್ರಿಕೆ ತಿರುವಿ ಹಾಕಿ ಸ್ನಾನಕ್ಕೆ ಹೋದೆ. ಹಂಡೆಯಿಂದ ಬಕೇಟಿಗೆ ನೀರು ವರ್ಗಾಯಿಸುವುದರಲ್ಲಿ ‘ಸ್ನಾನ ಯಾಕೆ ಮಾಡಬೇಕಿವತ್ತು?’ ಎಂದೆನ್ನಿಸಿ ಕೈಕಾಲಿಗೊಂದು ಮುಖ ತೊಳೆಯಲೊಂದು ಚೊಂಬು ನೀರು ಖರ್ಚು ಮಾಡಿ ಉಳಿದದ್ದನ್ನು ಬಚ್ಚಲಿಗೆ ಚೆಲ್ಲಿ ಹೊರಬಂದೆ.

ಅಕ್ಟೋ 30, 2012

. . . ದೂರದಲ್ಲಿ



ಡಾ. ಅಶೋಕ್. ಕೆ. ಆರ್
‘ದುಡಿಯೋ ವಯಸ್ನಲ್ಲಿ ಮನೇಲಿ ಕುಂತವ್ನೆ, ದಂಡಪಿಂಡ’ “ಇದ್ಯಾಕ್ ಮಗಾ ಬೆಂಗ್ಳೂರಿಗೆ ಹೋಗ್ಲಿಲ್ವಾ ಇವತ್ತು” ಬಾಗಿಲು ತಳ್ಳುತ್ತಾ ಒಳಬಂದ ಚಿಕ್ಕಪ್ಪ ಪತ್ರಿಕೆ ಓದುತ್ತಿದ್ದ ದಿಲೀಪನನ್ನು ವ್ಯಂಗ್ಯದಿಂದ ನೋಡುತ್ತಾ ಕೇಳಿದರು. ವ್ಯಂಗ್ಯದ ಅರಿವಾಗದೆ ಇರಲಿಲ್ಲ ದಿಲೀಪನಿಗೆ. ‘ಅದನ್ನೆಲ್ಲಾ ಕಟ್ಟಿಕೊಂಡು ನಿಮಗೇನ್ರಿ ಆಗಬೇಕು’ “ಓ! ಬನ್ನಿ ಚಿಕ್ಕಪ್ಪ. ಇವತ್ತೊಂದಷ್ಟು ಕಾಯಿ ಕೀಳಿಸಬೇಕಿತ್ತು ಅದಿಕ್ಕೆ ಉಳ್ಕೊಂಡೆ” ಎಂದೆನ್ನುತ್ತಾ ಪತ್ರಿಕೆ ಮಡಿಚಿದ. ‘ಬೆಂಗ್ಳೂರಿಗೆ ಹೋಗೆ ನೀನು ಕಿಸಿಯೋದೂ ಅಷ್ಟರಲ್ಲೇ ಇದೆ ಬಿಡು’ “ಹ್ಞು. ನಾನು ಈ ವಾರ ಕಾಯಿ ಕೀಳಿಸ್ಬೇಕು ಅಂದ್ಕೋತಿದ್ದೆ ನೋಡು. ಅಂದ್ಹಂಗೆ ಅಣ್ಣ ಎಲ್ಲೋದ್ರು”

ಅಕ್ಟೋ 28, 2012

ಆಯಾಮ



     ಡಾ. ಅಶೋಕ್. ಕೆ. ಆರ್.
‘ಈ ರೀತಿ ದಿನಗಟ್ಟಲೆ ಮಳೆ ಸುರಿದಿದ್ದೇ ಇಲ್ಲ ನಮ್ಮೂರಲ್ಲಿ’ ಸಂಜೆ ಆಫೀಸಿನಲ್ಯಾರೋ ಹೇಳಿದ ಮಾತುಗಳನ್ನು ಮೆಲಕುಹಾಕುತ್ತ ಕಿಟಕಿಯ ಬಳಿ ನಿಂತಿದ್ದ ರಾಜು ಮೌಳೇಶ್ವರ್. ಭೂರಮೆಯನ್ನೇ ಸೀಳಿಹಾಕುವಂತಹ ಗುಡುಗಿನ ಶಬ್ದಕ್ಕೆ ಎಚ್ಚರವಾಗಿ ರೂಮಿನಿಂದ ಹೊರಬಂದು ಮಳೆಯ ಆರ್ಭಟವನ್ನು ವೀಕ್ಷಿಸುತ್ತಿದ್ದ. ಯಾವ ಫೋನೂ ಬರದಿದ್ದರೆ ಸಾಕಪ್ಪ ಎಂದುಕೊಳ್ಳುವಷ್ಟರಲ್ಲಿ ಲ್ಯಾಂಡ್ ಲೈನ್ ರಿಂಗಣಿಸಿತು. ಈ ಲ್ಯಾಂಡ್ ಲೈನನ್ನೂ ಸ್ವಿಚ್ ಆಫ್ ಮಾಡುವ ಹಾಗಿದಿದ್ದರೆ ಚೆನ್ನಾಗಿತ್ತು ಎಂದುಕೊಂಡು ರಿಸೀವರ್ ತೆಗೆದುಕೊಂಡ

ಆಗ 10, 2012

ಬ್ರಹ್ಮಚಾರಿ


ಡಾ ಅಶೋಕ್. ಕೆ. ಆರ್.
ಕಥೆಯ ಆರಂಭಕ್ಕೂ ಮುಂಚೆ ಒಂದು Disclaimer! – ಈ ಕಥೆಯಲ್ಲಿ ಉಪಯೋಗಿಸಿರುವ ಜಾತಿ ಧರ್ಮದ ಹೆಸರುಗಳು ಕೇವಲ ಸಾಂಕೇತಿಕ. ಒಂದು ಜಾತಿಯ ಬದಲಿಗೆ ಮತ್ತೊಂದು ಜಾತಿಯ ಹೆಸರು ಬರೆದಾಗ್ಯೂ ಈ ಕಥೆಯ ಪ್ರಸ್ತುತತೆಗೆ ಧಕ್ಕೆಯಾಗುವುದಿಲ್ಲವೆಂಬುದು ನಮ್ಮ ಇವತ್ತಿನ ಸಮಾಜದ ದುರಂತ ಮತ್ತು ನಮ್ಮೆಲ್ಲರ ವೈಯಕ್ತಿಕ ವೈಫಲ್ಯ. ಈ ಕೆಳಗೆ ಹೆಸರಿಸಿರುವ ಯಾವುದಾದರೂ ಜಾತಿ ಧರ್ಮದವರು ನೀವಾಗಿದ್ದ ಪಕ್ಷದಲ್ಲಿ ಕಥೆ ಓದಿ ಮುಗಿಸಿದ ನಂತರ ನಿಮ್ಮಲ್ಲಿ ಖುಷಿ ಅಥವಾ ಕೋಪದ ಭಾವನೆ ಮೂಡಿದರೆ ಅದು ನಿಮ್ಮ ಕಲ್ಮಶ ಮನಸ್ಸಿನ ಸಂಕೇತ!

ಆಗ 3, 2012

ಗುಡ್ಡೆ ಮೇಲೆ ದೇವಸ್ಥಾನ


-      S. ಅB ಹನಕೆರೆ.
        
 “ಹತ್ತೋವಾಗಲೆ ಎಷ್ಟು ಮೆಟ್ಟಿಲು ಇದೆ ಅಂತ ಎಣಿಸಿಬಿಟ್ಟು ಇನ್ನು ಇಳಿಯುವಾಗ relax ಆಗ್ಬಿಟ್ರೆ ಅಂತ ಅದರ ಕಡೆ ಗಮನ ಕೊಡಲಿಲ್ಲ” ಎಂದು ಸಮರ್ಥನೆ ಮಾಡಿಕೊಂಡಳು ಗಾಯತ್ರಿ. ಸುತ್ತಲೂ ನೋಡುತ್ತಾಳೆ, ಕೆಳಗಿನ ಊರು, ರಸ್ತೆ ಮೇಲಿನ ವಾಹನ ಎಲ್ಲವೂ ಸ್ತಬ್ಧವಾಗಿ ಮತ್ತೊಮ್ಮೆ ಎಲ್ಲವೂ ಚಲಿಸುತ್ತಿರುವಂತೆ ಕಾಣುತ್ತವೆ. “ನಿನ್ನ ಈ ವಕ್ರ ದೃಷ್ಟೀನೆ ನನಗೆ ಇಷ್ಟ ಆಗೋದು” ಎಂದು ಗಾಯತ್ರಿ ಕಣ್ಣನ್ನೇ ದೃಷ್ಟಿಸಿದ ಶೇಖರನ್ನ ನೋಡಿ, ಗಾಯತ್ರಿ ಮನದೊಳಗೆ ‘ನನ್ನ ದೃಷ್ಟಿ ಇವನಿಗೆ ಹೇಗೆ ಗೊತ್ತಾಯ್ತು? ಈ ಮನುಷ್ಯನಿಗೆ ಸೃಷ್ಟಿ ಯಾವುದು? ದೃಷ್ಟಿ ಯಾವುದು? ಸಮರ್ಥನೆ ಯಾವುದೆಂದು ಗೊತ್ತಾಗಿದ್ರೆ ನನ್ನ ಹಿಂದೆ ಯಾಕ್ ಬೀಳ್ತಿದ್ದ’ ಎಂದುಕೊಂಡು ಶೇಖರನೊಡನೆ ದೇವಸ್ಥಾನದೊಳಗೆ ಹೋದಳು.

ಜೂನ್ 13, 2012

ಅಂತ್ಯೋದಯ


ಮೂಲ 
ಡಾ ಅಶೋಕ್. ಕೆ. ಆರ್.
ಅರ್ಧ ಘಂಟೆಯ ಮುಂಚೆ ಅಪೆಂಡಿಸೈಟಿಸ್ ಆಪರೇಷನ್ ಮುಗಿಸಿ ಮಲಗಲು ಹೋದವಳನ್ನು ನರ್ಸ್ ಎಬ್ಬಿಸಿದ್ದಳು. ಆಕ್ಸಿಡೆಂಟ್ ಕೇಸ್ ಬಂದಿದೆ. ಎರಡು ಎರಡೂವರೆ ವರ್ಷದ ಮಗು, ತಲೆಗೆ ಪೆಟ್ಟಾಗಿದೆ ಎಂದು ಹೇಳಿದ್ದಳು. ತಣ್ಣನೆಯ ನೀರನ್ನು ಮುಖಕ್ಕೆರಚಿಕೊಂಡು ಕೂದಲು ಸರಿಮಾಡಿಕೊಂಡು ಎದೆಯ ಮೇಲೊಂದು ದುಪ್ಪಟ್ಟಾ ಹೊದ್ದಿಕೊಂಡು ಕೆಳಮಹಡಿಯಲ್ಲಿದ್ದ ಎಮರ್ಜೆನ್ಸಿ ವಾರ್ಡಿಗೆ ಬಂದಾಗ ಘಂಟೆ ಹನ್ನೊಂದಾಗಿತ್ತು. ಮಗುವಿನ ತಲೆಗೊಂದು ಬ್ಯಾಂಡೇಜನ್ನು ಒತ್ತಿ ಹಿಡಿದಿದ್ದರು, ರಕ್ತಮಯವಾಗಿತ್ತು. ಮಂಚದ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯ ಅಂಗಿ ಪ್ಯಾಂಟು ಅಲ್ಲಲ್ಲಿ ಹರಿದಿತ್ತು. ಅಂಗಿಯ ಎಡಭಾಗದಲ್ಲಿ ರಕ್ತದ ಕಲೆಯಿತ್ತು. ಮಣ್ಣಾಗಿ ಕೆದರಿದ್ದ ಕೂದಲು. ಡಾಕ್ಟರ್ ಬಂದರೆಂದು ತಿರುಗಿ ನೋಡಿದ ರಾಕೇಶ. “ಅರೆ! ರಾಕಿ ನೀನು?!” ಭವ್ಯಳ ದನಿಯಲ್ಲಿ ಅಚ್ಚರಿ ಆಶ್ಚರ್ಯ ಸಂತಸವಿತ್ತು.

ಜನ 4, 2012

ಒಂದು ಗಲಭೆಯ ಸುತ್ತ. . .

--> ಡಾ. ಅಶೋಕ್. ಕೆ. ಆರ್
ಒಂದು ಬೆಳಿಗ್ಗೆ ಬಸ್ಸಿನಲ್ಲಿ: - “ಏ ರಫೀಕ್. ಬಾ ಇಲ್ಲಿ. ಇಲ್ಲೇ ಸೀಟು ಖಾಲಿ ಇದೆ”. ರಫೀಕ್ ಅವಳೆಡೆಗೆ ನೋಡಿದ. ಹಿಂದಿರುಗಿ ತನ್ನ ಗೆಳೆಯರಾದ ಗಣೇಶ, ರಾಜು, ರಷೀದ್ ಕುಳಿತಿದ್ದೆಡೆಗೆ ನೋಡಿದ. ಮುಸಿಮುಸಿ ನಗಲಾರಂಭಿಸಿದ್ದರು. “ಏನ್ ಯೋಚಿಸುತ್ತಿದ್ದೀಯೋ? ಬಾ ಬೇಗ ಏನೋ ಕೊಡಬೇಕು” ಅವಳು ಮತ್ತೆ ಕೂಗಿದಳು. ನಿಂತಲ್ಲಿಂದ ಒಂದಿಂಚೂ ಅತ್ತಿತ್ತ ಕದಲದೆ ಅವಳೆಡೆಗೆ ನೋಡುತ್ತಾ “ಇಲ್ಲ ರಶ್ಮಿ ದೀದಿ. ನಾನಿಲ್ಲೇ ಎಲ್ಲಾದರೂ ಕೂತ್ಕೋತೀನಿ” ಎಂದ್ಹೇಳಿ ತಲೆತಗ್ಗಿಸಿದ. “ಯಾಕೋ? ಏನಾಯ್ತು? ಅಮ್ಮ ನಿನಗೂ ತಿಂಡಿ ಕೊಟ್ಟು ಕಳುಹಿಸಿದ್ದಾರೆ. ಬಾ”. ತಗ್ಗಿಸಿದ ತಲೆಯನ್ನು ಮೇಲೆತ್ತದೆ “ಇಲ್ಲ ದೀದಿ. ನಾನಲ್ಲಿ ಬಂದು ಕೂತರೆ ಇವರೆಲ್ಲ ರೇಗಿಸ್ತಾರೆ. ಹೆಣ್ಮುಕ್ಕ ಹೆಣ್ಮುಕ್ಕ ಅಂತಾರೆ. ಆಮೇಲೆ ತಗೋತೀನಿ ಬಿಡು”. ರಶ್ಮಿ ಮತ್ತವಳ ಪಕ್ಕದಲ್ಲಿ ಕುಳಿತಿದ್ದ ಅವಳ ಗೆಳತಿ ಜೋರು ದನಿಯಲ್ಲಿ ನಕ್ಕರು. “ಈಗ ಎಂಟನೇ ತರಗತಿಗೆ ಬಂದಿದ್ದೀರ. ದೊಡ್ಡ ಗಂಡಸಂಗೆ ಆಡ್ತೀರಲ್ಲ. ಬಾರೋ ಇಲ್ಲಿ. ಅದ್ಯಾವನು ರೇಗಿಸ್ತಾನೋ ನಾನೂ ನೋಡ್ತೀನಿ” ಎಂದು ಜೋರು ಮಾಡಿದಳು. ರಫೀಕ ಮತ್ತೆ ತನ್ನ ಗೆಳೆಯರೆಡೆಗೆ ನೋಡಿದ. ನಗು ಕಡಿಮೆಯಾಗಿತ್ತು, ಮಾಯವಾಗಿರಲಿಲ್ಲ. ‘ದಯವಿಟ್ಟು ರೇಗಿಸಬೇಡ್ರೋ’ ಎಂದು ಕಣ್ಣಿನಲ್ಲೇ ಬೇಡುತ್ತ ರಶ್ಮಿಯ ಪಕ್ಕ ಬಂದು ಕುಳಿತ. “ಇನ್ನು ಸರಿಯಾಗಿ ಮೀಸೆ ಮೂಡಿಲ್ಲ ನಿನ್ನ ಫ್ರೆಂಡ್ಸಿಗೆ, ಪಿಯುಸಿ ಓದ್ತಿರೋ ನನ್ನನ್ನೂ ರೇಗಿಸ್ತಾರಂತ?!” ಅವಳ ಪ್ರಶ್ನೆಗೆ ಉತ್ತರವೀಯದೆ ಆಕೆಯಿತ್ತ ತಿಂಡಿಯನ್ನು ತಿನ್ನತೊಡಗಿದ. ಬಸ್ಸು ಹೊರಟಿತು.

ಅಕ್ಟೋ 26, 2011

ಕೊನೆಯ ಪುಟಗಳು


ಡಾ. ಅಶೋಕ್. ಕೆ. ಆರ್.
          ಅಕ್ಟೋಬರ್ 1 – ಪ್ರತಿಯೊಬ್ಬನಿಗೂ ವರ್ಷದ ಯಾವುದಾದರೊಂದು ದಿನ ಪ್ರಮುಖವಾಗಿರುತ್ತೆ. ಹೈಸ್ಕೂಲಿನಲ್ಲಿ ಪುಂಡಾಟಗಳು; ಮುಂಜಾನೆ ಟ್ಯೂಷನ್ನೂ, ಬೆಳಿಗ್ಗೆ ಕಾಲೇಜು, ಸಂಜೆ ಮತ್ತೊಂದೆರಡು ಟ್ಯೂಷನ್ನೂ, ರಾತ್ರಿ ಒಂದಷ್ಟು ಓದು – ಪಿ ಯು ಸಿಯಲ್ಲಿ ಬೇರೇನನ್ನೂ ಯೋಚಿಸಲು ಸಮಯವಿರಲಿಲ್ಲ. ಓದಿದ್ದು ವ್ಯರ್ಥವಾಗದೆ ಮೆಡಿಕಲ್ ಸೀಟು ಸಿಕ್ಕಿ ಇವತ್ತಿಗಾಗಲೇ ಹತ್ತು ವರ್ಷವಾಯಿತು. ಜೀವನದ ವಿವಿಧ ಮಜಲುಗಳನ್ನು ಪರಿಚಯಿಸಿದ ಚೇತನ್ ನ ಪರಿಚಯವಾದ ದಿನವಿದು. ನನ್ನ ಜೀವನದ ಪ್ರಮುಖ ದಿನ. ಕೆಲವು ವರ್ಷಗಳ ಹಿಂದಿನವರೆಗೂ ನನ್ನಲ್ಲಿ ಉತ್ಸಾಹ ಮೂಡಿಸುತ್ತಿದ್ದ ದಿನ. ಆದರೀಗ? ಆತ್ಮಸಾಕ್ಷಿಯ ಇರಿತಕ್ಕೆ ಜರ್ಝರಿತನಾಗಿದ್ದೇನೆ.