ಜನ 30, 2016

ಹಿಂದಿ ಹೇರಿಕೆ ನಿಲ್ಬೇಕ್!

ದಿನೇ ದಿನೇ ಹೆಚ್ಚುತ್ತಲೇ ಇರುವ ಹಿಂದಿ ಹೇರಿಕೆಯ ವಿರುದ್ಧ ಹೋರಾಟಗಳು ನಾನಾ ರೂಪ ಪಡೆದುಕೊಳ್ಳುತ್ತಿವೆ, ಸರಕಾರಗಳು ಎಚ್ಚೆತ್ತುಕೊಳ್ಳದಿದ್ದರೆ ಒಂದೋ ಹೋರಾಟಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತವೆ ಇಲ್ಲಾ ಕುರಿಮಂದೆಯಂತಹ ಕನ್ನಡಿಗರು ‘ರಾಷ್ಟ್ರಭಾಷೆ’ ‘ಏಕತೆ’ ‘ಭಾರತ ದೇಶ’ ಎಂಬ ರಾಷ್ಟ್ರೀಯ ಪಕ್ಷಗಳ ಘೋಷಣೆಗಳ ಭ್ರಮೆಯಲ್ಲಿ ಮುಳುಗಿಹೋಗಿ ಕನ್ನಡವನ್ನೂ ಮುಳುಗಿಸಿಬಿಡುತ್ತಾರೆ. ರತೀಶ್ ರತ್ನಾಕರ ಇಂಥಹ ಕನ್ನಡಿಗರನ್ನು ಬಡಿದೆಬ್ಬಿಸಲು ‘ಪರಪಂಚ’ ಚಿತ್ರದ “ಹುಟ್ಟಿದ ಊರನ್ನು ಬಿಟ್ಟು ಬಂದ ಮೇಲೆ” ಹಾಡಿನ ದಾಟಿಯಲ್ಲಿ “ಹುಟ್ಟಿದ ಊರಿಗೆ ಹಿಂದಿ ಬಂದ ಮೇಲೆ” ಎಂಬ ಗೀತೆ ರಚಿಸಿದ್ದಾರೆ. ಪರಪಂಚ ಚಿತ್ರದ ಹಾಡು ಎಲ್ಲರ ಬಾಯಲ್ಲಿ ನಲಿಯಲಾರಂಭಿಸಿದ್ದು ಅನವಶ್ಯಕ ಕಾರಣಗಳಿಂದ ಪ್ರಸಿದ್ಧಿಗೆ ಬಂದಿದ್ದ ವೆಂಕಟ್ ಬಾಯಲ್ಲಿ ಅದನ್ನು ಮತ್ತೆ ಹಾಡಿಸಿದಾಗ. ರತೀಶ್ ರತ್ನಾಕರರ ಹಾಡನ್ನೊಮ್ಮೆ ಓದಿಬಿಡಿ, ಹಂಚಿಕೊಳ್ಳಿ, ಸಾಧ್ಯವಾದರೆ ಅದೇ ರಾಗದಲ್ಲಿ ಹಾಡಿ ವೀಡಿಯೋ ಅಪ್ ಲೋಡ್ ಮಾಡಿ, ಎಲ್ಲದಕ್ಕಿಂತ ಮುಖ್ಯವಾಗಿ ಹಿಂದಿ ಹೇರಿಕೆಯ ವಿರುದ್ಧ ದನಿಎತ್ತಿ.

‘ಹುಟ್ಟಿದ ಊರಿಗೆ ಹಿಂದಿ ಬಂದ ಮೇಲೆ ಇನ್ನೇನು ಬರುವುದು ಬಾಕಿ ಇದೆ
ನಿನ್ನೂರಲ್ಲೇ ನೀನು ಆಗ್ಬೇಡ ಪರದೇಸಿ ಎದ್ದೇಳು ಕಾಲ ಮಿಂಚಿ ಹೋಗೋದ್ರೊಳ್ಗೆ
ಹಿಂದೆ ಹೇರಿಕೆ ಊರ ತುಂಬಿದೆ ನಿನ್ನ ಇರುವನು ಅಳಿಸಲು
ತಾಯ್ನುಡಿಗಿಂತ ಇನ್ನೇನು ಬೇಕು ನಿನ್ನಯ ಬದುಕು ಬೆಳಗಲು
ನಿದ್ದೆಯಿಂದೇಳೋ ಮಗನೆ ಮೈಕೊಡ್ವಿ ನಿಲ್ಲೋ ಸಿವನೆ
ಕಣ್ಣುಬಿಡು ಎಲ್ಲಾ ನೋಡು ಕೈಯನ್ನೆತ್ತಿ ಕೂಗಿಬಿಡು || ಹುಟ್ಟಿದ ಊರಿಗೆ ||

ನಿನ್ನುಡಿ ಒಟ್ಟಿಗೆ ಹಿಂದಿಯೂ ಇದ್ದರು ಅಲ್ಲೇನೋ ಮಾಟ ಅಡಗಿದೆ
ಕನ್ನಡ ಅಳಿಸಿ ಹಿಂದಿಯೇ ಸಾಕು ಅನ್ನುವ ಕಾಲ ಬರಲಿದೆ
ಆಸೆಯ ತೋರಿಸಿ ಒತ್ತಾಯ ಮಾಡಿಸಿ ಹಿಂದಿಯ ಒಪ್ಪ ಬೇಕಂತಾರೊ
ಒಪ್ಪಿದರೆ ಅಲ್ಲಿ ಗುಂಡಿಯ ತೆಗೆದು ಇದ್ದಂತೆ ಮಣ್ಣು ಮಾಡ್ತಾರೊ

ಅಂಚೆಲಿ ಹಿಂದಿಯೇ ಮೊದಲಂತೆ ರೈಲಲ್ಲಿ ಕನ್ನಡ ಇಲ್ವಂತೆ
ಬ್ಯಾಂಕಲ್ಲಿ ಕೇಳೋದ್ ಬ್ಯಾಡ್ವಂತೆ ಕನ್ನಡ ಮಾಯ ಆಯ್ತಂತೆ
ಆಳೋರು ಕೈಯ ಕೊಟ್ರಂತೆ ಹಿಂದಿಯ ದಾಸರಾಗ್ ಬಿಟ್ರಂತೆ
ವಲಸೆಯೆ ಎಲ್ಲಾ ಹೆಚ್ಚಾಯ್ತು, ಕೆಲಸಾನೆ ನಿಂಗೆ ದೂರಾಯ್ತು
ನಿಂಗು ತಾಕತ್ತಿದೆ ಮಗನೆ, ತಲೆಯೆತ್ತಿ ನಿಲ್ಲೋ ಸಿವನೆ
ನಿದ್ದೆ ಬಿಡು ಎದ್ದು ನೋಡು ಹೆಜ್ಜೆಯಿಟ್ಟು ನುಗ್ಗಿಬಿಡು || ಹುಟ್ಟಿದ ಊರಿಗೆ ||

ಸೆಪ್ಟೆಂ 12, 2015

ಹಿಂದಿ ‘ಮುಂದಾಳು’ ಭಾಷೆಯಾದರೆ ಉಳಿದವೇನು ಜೀತಕ್ಕಿವೆಯೇ?

ಪಾಂಚಜನ್ಯದ ಸಂಪಾದಕೀಯ
 DrAshok K R
‘ಭಾರತದ ತಾಕತ್ತು ಹಿಂದಿ’ ಎಂದು ದೊಡ್ಡ ಹೆಡ್ಡಿಂಗಿನಲ್ಲಿ ಆರ್.ಎಸ್.ಎಸ್ಸಿನ ಮುಖವಾಣಿ ಪಂಚಜನ್ಯದಲ್ಲೊಂದು ಸಂಪಾದಕೀಯ ಬರುತ್ತದೆ, ಸೆಪ್ಟೆಂಬರ್ ನಾಲ್ಕರಂದು. ಸಂಪಾದಕೀಯದ ಮೇಲೆ ‘ಹಿಂದಿಯನ್ನು ವಿರೋಧಿಸುವ ಯಾವುದೇ ಆಂದೋಲನ ದೇಶದ ಪ್ರಗತಿಗೆ ಮಾರಕ’ ಎಂದು ಸುಭಾಷ್ ಚಂದ್ರಬೋಸ್ ಹೇಳಿದರೆನ್ನಲಾದ ಹೇಳಿಕೆಯಿದೆ. ಹಿತೇಶ್ ಶಂಕರ್ ಬರೆದಿರುವ ಸಂಪಾದಕೀಯದಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿ ಆಗಸ್ಟ್ ಹದಿನೈದರಂದು ಟ್ವಿಟರಿನಲ್ಲಿ ನಡೆದ #stophindiimposition ಅನ್ನು ಟೀಕಿಸಿದ್ದಾರೆ. ಹಿಂದಿಯನ್ನು ವಿರೋಧಿಸುವುದು (ಸತ್ಯವಾಗಿ ನಾವೆಲ್ಲರೂ ವಿರೋಧಿಸುತ್ತಿರುವುದು ಹಿಂದಿ ಹೇರಿಕೆಯನ್ನು ಎಂಬುದನ್ನು ನಯವಾಗಿ ಮರೆಸುತ್ತಾರೆ) ಮೂರ್ಖತನದ ಕೆಲಸವಂತೆ, ಹಿಂದಿಯನ್ನು ವಿರೋದಿಸುವವರ ರಾಜತಾಂತ್ರಿಕ ಶಡ್ಯಂತ್ರದ ಭಾಗವಂತೆ! ಗಂಗ, ಯಮುನಾ, ಕಾವೇರಿ, ನರ್ಮದಾ ನದಿಗಳ ಹೆಸರನ್ನು ಹೇಳುತ್ತಾ ಭಾವನಾತ್ಮಕವಾಗಿ ಹಿಂದಿಯನ್ನು ವಿರೋಧಿಸುವುದು ತಪ್ಪು ಎನ್ನುತ್ತಾರೆ. ಹಿಂದಿಯನ್ನು ಸಮರ್ಥಿಸಲು ಗಾಂಧಿ, ಭಗತ್ ಸಿಂಗರೆಲ್ಲರನ್ನೂ ಎಳೆದು ತರುತ್ತಾರೆ.

ಹಿಂದಿಯನ್ನು ಮತ್ತಷ್ಟು ಬೆಳೆಸಬೇಕಂತೆ! ನಮ್ಮ ಭಾಷೆಯನ್ನು ಕೊಂದೇ?
ಇದೇ ಪಾಂಚಜನ್ಯದಲ್ಲಿ ‘ದಕ್ಷಿಣ ಭಾರತದಲ್ಲಿ ಹೆಚ್ಚುತ್ತಿರುವ ಹಿಂದಿಯ ಪ್ರಭಾವ’ ಎಂಬ ಮತ್ತೊಂದು ಲೇಖನ ಪ್ರಕಟವಾಗಿದೆ. 1918ರಲ್ಲಿ ಮದ್ರಾಸಿನಲ್ಲಿ ಮಹಾತ್ಮ ಗಾಂಧಿ ಹಿಂದಿ ಪ್ರಚಾರ ಸಭಾವನ್ನು ಉದ್ಘಾಟಿಸಿದರು. ಅಲ್ಲಿಂದ ಇಲ್ಲಿಯವರೆಗೆ ದಕ್ಷಿಣದ ರಾಜ್ಯಗಳಲ್ಲಿ ಹಿಂದಿ ಸಾಕಷ್ಟು ಬೆಳೆದಿದೆ. ಹಿಂದಿ ಬೆಳೆದಿದೆ, ಇನ್ನಷ್ಟು ಪ್ರಯತ್ನ ಪಡಬೇಕೆಂದು ಬರೆದಿದ್ದಾರೆ! ಈಗಲೇ ನಮ್ಮ ರಾಜ್ಯದ ಬ್ಯಾಂಕು ಪೋಸ್ಟ್ ಆಫೀಸುಗಳಲ್ಲಿರುವ ಚಲನ್ನುಗಳು ಹಿಂದಿ ಮತ್ತು ಇಂಗ್ಲೀಷಿನಲ್ಲಷ್ಟೇ ಇವೆ. 
ಇನ್ನಷ್ಟು ಪ್ರಯತ್ನವೆಂದರೆ ಹಿಂದಿಯಷ್ಟೇ ಇರುವುದಾ? ದಕ್ಷಿಣದ ನಾಲ್ಕು ರಾಜ್ಯಗಳ ಪ್ರಮುಖ ನಗರಗಳಲ್ಲೆಲ್ಲಾ ಹಿಂದಿ ಪ್ರಚಾರಕರು ಇರಬೇಕರಂತೆ! ಇತಿಹಾಸ, ಪ್ರವಾಸ, ಪುರಾತತ್ವ, ಅನುವಾದದ ಬಗ್ಗೆ ಹಿಂದಿಯಲ್ಲಿ ಶಿಕ್ಷಣ ಕೊಟ್ಟು ಅಂತವರನ್ನು ರೈಲ್ವೆ ನಿಲ್ದಾಣ, ಹೋಟೆಲ್, ಪ್ರವಾಸಿ ಕೇಂದ್ರ, ಸಂಗ್ರಹಾಲಯ, ಐತಿಹಾಸಿಕ ಸ್ಥಳಗಳಲ್ಲಿ ಹಿಂದಿಯ ಸಮನ್ವಯಕಾರರನ್ನಾಗಿ ಮಾಡಬೇಕಂತೆ!
ದಕ್ಷಿಣ ಭಾರತದಲ್ಲಿ ಹಿಂದಿ ಸಮನ್ವಯಕರು ಇರಬೇಕಂತೆ
ಹಿಂದಿ ಗೊತ್ತಿರುವವರು ಈ ರಾಜ್ಯಗಳಲ್ಲಿ ಇಲ್ಲದ ಕಾರಣ ಒರಿಸ್ಸಾ, ಗುಜರಾಜ್, ಪಂಜಾಬಿನ ಜನರು ಭಾಷೆಯ ಸಮಸ್ಯೆಯಿಂದ ದಕ್ಷಿಣ ಭಾರತದ ದರ್ಶನೀಯ ಸ್ಥಳಗಳನ್ನು ನೋಡಲಾಗುತ್ತಿಲ್ಲವಂತೆ! ವ್ಯಾಪಾರ ವಹಿವಾಟು ಹೆಚ್ಚಲು ಈ ಹಿಂದಿ ಸಮನ್ವಯಕಾರರು ಕಾರಣಕರ್ತರಾಗುತ್ತಾರಂತೆ. ಹೀಗೆ ಲೇಖನದ ತುಂಬೆಲ್ಲ ಸುಳ್ಳುಗಳೇ ತುಂಬಿಕೊಂಡಿದೆ. ಪ್ರವಾಸಕ್ಕೆ ಹೋಗಲು ಅಲ್ಲಿನವರಿಗೆ ನಮ್ಮ ಭಾಷೆ ಗೊತ್ತಿರಬೇಕು ಎಂಬುದೇ ಸತ್ಯವಾದರೆ ದಕ್ಷಿಣದವರ್ಯಾರು ಉತ್ತರ ಭಾರತಕ್ಕೆ ಪ್ರವಾಸ ಹೋಗುವಂತಿಲ್ಲ. ಕನ್ನಡಿಗರು ತಮಿಳುನಾಡಿಗೆ, ತೆಲುಗರು ಕರ್ನಾಟಕಕ್ಕೆ ಪ್ರವಾಸ ಬರುವಂತಿಲ್ಲ! ಹಿಂದಿಯನ್ನು ಎಲ್ಲರ ಭಾಷೆಯಾಗಿಸಿ ಬಲಪಡಿಸಬೇಕಂತೆ. ನಮಗೇನ್ ಕರ್ಮವೇ! ದಕ್ಷಿಣ ಭಾರತವನ್ನು ಹಿಂದಿಯಿಂದ ‘ಕಂಗೊಳಿಸಬೇಕೆಂದು’ ಬರೆದಿರುವುದು ಆಲ್ ಇಂಡಿಯಾ ರೇಡಿಯೋದ ಪತ್ರಕರ್ತ ಸಂಜಯ್ ಬ್ಯಾನರ್ಜಿ! ಸರಕಾರೀ ಕೆಲಸದಲ್ಲಿರುವ ಹಿಂದಿ ಪತ್ರಕರ್ತನೊಬ್ಬನ ಮನಸ್ಥಿತಿಯಿದು.

ಈ ಆರ್.ಎಸ್.ಎಸ್ಸಿಗರಿಗೆ ಹಿಂದಿ ಭಾಷೆಯ ಮೇಲೆ ವ್ಯಾಮೋಹವಿರಲಿ. ಬೇರೆ ಭಾಷೆಗಳನ್ನು ಸಾಯಿಸಿ ಹಿಂದಿಯನ್ನು ಬಲಿಷ್ಟಗೊಳಿಸಿ ಅದನ್ನು ದೇಶಪ್ರೇಮದೊಂದಿಗೆ ಬೆರೆಸುವ ಚಟವ್ಯಾಕೆ? ಪಾಂಚಜನ್ಯದ ಲೇಖನಗಳು ಪ್ರಕಟವಾಗಿರುವುದು ಸೆಪ್ಟೆಂಬರ್ ನಾಲ್ಕರ ಸಂಚಿಕೆಯಲ್ಲಿ. ಸೆಪ್ಟೆಂಬರ್ ಹತ್ತರಿಂದ ಮಧ್ಯಪ್ರದೇಶದ ಭೋಪಾಲದಲ್ಲಿ ವಿಶ್ವ ಹಿಂದಿ ಸಮ್ಮೇಳನ ಪ್ರಾರಂಭವಾಗುತ್ತದೆ. ಸಮ್ಮೇಳನದ ಮೊದಲ ದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾಷಣ. ಅದೇನು ಮೋದಿಯವರ ಭಾಷಣ ಕೇಳಿ ಪಾಂಚಜನ್ಯದ ಲೇಖನಗಳನ್ನು ಬರೆಯಲಾಯಿತೋ ಅಥವಾ ಪಾಂಚಜನ್ಯ ಓದಿ ಮೋದಿಯವರು ಭಾಷಣ ಮಾಡಿದರೋ ತಿಳಿಯುವುದಿಲ್ಲ.
ನರೇಂದ್ರ ಮೋದಿಯವರ ಭಾಷಣ ಪಾಂಚಜನ್ಯದ ಮತ್ತೊಂದು ರೂಪವಾಗಿತ್ತು
ಮೋದಿಯವರು ಬೆಳೆದು ಬಂದಿದ್ದು ಆರ್.ಎಸ್.ಎಸ್ಸಿನ ಸಂಸ್ಕೃತಿಯಲ್ಲೇ ಎಂಬ ಅಂಶ ಹಿಂದಿ ಮಾತೃಭಾಷೆಯಲ್ಲದ ಗುಜರಾತಿನಿಂದ ಬಂದೂ ‘ಹಿಂದಿಗಷ್ಟೇ ಭಾರತವನ್ನು ಗಟ್ಟಿಗೊಳಿಸುವ ಶಕ್ತಿಯಿರುವುದು’ ಎನ್ನುವ ಅವರ ಅಭಿಪ್ರಾಯದ ಮೂಲಕವೇ ಗುರುತಿಸಿಬಿಡಬಹುದು. ಪ್ರಪಂಚದಲ್ಲಿರುವ 6000 ಭಾಷೆಗಳಲ್ಲಿ 90% ವಿನಾಶದ ಅಂಚಿನಲ್ಲವೆ ಎಂದವರು ಹೇಳುತ್ತಾರೆ, ಭಾಷೆ ಜ್ಞಾನವನ್ನು ತಿಳಿಸುತ್ತದೆ, ಅನುಭವವನ್ನು ತಿಳಿಸಿಕೊಡುತ್ತದೆ ಎಂದೆಲ್ಲ ಹೇಳುತ್ತಾರೆ; ಕೊನೆಗೆ ಹಿಂದಿಯ ಪಾದಾರವಿಂದಗಳಿಗೆ ಶರಣಾಗಿ ಬಿಡುತ್ತಾರೆ! ಹಿಂದಿ ಬರದಿದ್ದರೆ ನನ್ನ ಕಥೆ ಏನ್ ಆಗುತ್ತಿತ್ತು? ಎಂದು ಹೇಳುತ್ತಾ ಹಿಂದಿ ಬರದವರು ದೇಶದ ಪ್ರಧಾನಿಯಾಗಲು ಲಾಯಕ್ಕಿಲ್ಲ ಎಂಬ ಸಂದೇಶ ಕೊಡುತ್ತಾರೆ. ಹಿಂದಿ ಬರದಿದ್ದರೆ ಮೋದಿಯವರು ಜನರನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲವಂತೆ, ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲವಂತೆ! ವಿವಿಧ ಮಾತೃಭಾಷೆಗಳನ್ನು ಜೋಡಿಸಲು ಹಿಂದಿ ಉಪಯುಕ್ತವೆಂಬುದು ನಮ್ಮ ಪ್ರಧಾನ ಮಂತ್ರಿಗಳ ಅಭಿಪ್ರಾಯ! ಎಲ್ಲದಕ್ಕಿಂತ ಅಪಾಯಕಾರಿ ಅಭಿಪ್ರಾಯವೆಂದರೆ ಎಲ್ಲಾ ಭಾಷಿಕರು ತಮ್ಮ ತಮ್ಮ ಭಾಷೆಯನ್ನು ನಾಗರಿ ಲಿಪಿಯಲ್ಲಿ (ದೇವನಾಗರಿ) ಬರೆಯುವ ಅಭ್ಯಾಸ ಮಾಡಬೇಕಂತೆ! ಹಿಂದಿ ಹೇರಿಕೆಯ ಜೊತೆಜೊತೆಗೆ ಮುಂದಿನ ದಿನಗಳಲ್ಲಿ ಶಾಲೆಗಳಲ್ಲಿ ಕನ್ನಡವನ್ನು ನಾಗರಿ ಲಿಪಿಯಲ್ಲಿ ಬರೆಸುವಂತಹ ಅಸಹ್ಯದ ಕೆಲಸವೂ ನಡೆದರೆ ಅಚ್ಚರಿಪಡಬೇಡಿ. ಗುಜರಾತಿಗೆ ವ್ಯಾಪಾರಕ್ಕೆಂದು ಬಂದ ಉತ್ತರಪ್ರದೇಶದವರಿಗೆ ಚಹಾ ಮಾರುತ್ತಾ ಹಿಂದಿ ಕಲಿತೆ ಎಂದವರು ಹೆಮ್ಮೆಯಿಂದ ಹೇಳುತ್ತಾರೆ. ಒಂದು ಭಾಷೆ ಕಲಿಯುವುದೇನೋ ಹೆಮ್ಮೆಯ ಸಂಗತಿಯೇ. ಗುಜರಾತಿಗೆ ವ್ಯಾಪಾರಕ್ಕೆಂದು ಬಂದವರು ಗುಜರಾತಿ ಕಲಿಯಬೇಕೆ ಹೊರತು ಗುಜರಾತಿಗಳೇ ಹಿಂದಿ ಕಲಿಯಬೇಕೆ? ಎಂಬ ಪ್ರಶ್ನೆ ಹಾಗೆಯೇ ಉಳಿದುಹೋಗುತ್ತದೆ. ಗುಜರಾತಿಗಳು ನೆರೆಹೊರೆಯವರೊಂದಿಗೆ, ಆಟೋದವರೊಂದಿಗೆ ಜಗಳವಾಡಬೇಕಾದರೆ ಹಿಂದಿಯಲ್ಲಿ ಜಗಳವಾಡುತ್ತಾರಂತೆ. ಹಿಂದಿ ಮಾತನಾಡಿದರೆ ಧಮ್ ಇದೆ ಎಂದುಕೊಳ್ಳುತ್ತಾರಂತೆ! “ಭಾರತದ ತಾಕತ್ತು ಹಿಂದಿ” ಎಂಬ ಸಂಪಾದಕೀಯ ಬರೆದ ಪಾಂಚಜನ್ಯಕ್ಕೂ “ಹಿಂದಿ ಮಾತನಾಡಿದರೆ ಧಮ್ ಇದೆ ಎಂದುಕೊಳ್ಳುತ್ತಾರೆ” ಎನ್ನುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಾಲಿಗೂ ಎಷ್ಟೊಂದು ಸಾಮ್ಯತೆಯಿದೆಯಲ್ಲವೇ? ಹಿಂದಿ ತಾಕತ್ತಿನ ಧಮ್ಮಿನ ಭಾರತವನ್ನು ಮುನ್ನಡೆಸುವ ಭಾಷೆಯಾದರೆ ಭಾರತದ ಉಳಿದ ಭಾಷೆಗಳೇನು ಜೀತಕ್ಕಿವೆಯೇ?

ನೂರಾರು ಭಾಷೆಗಳಿರುವ ಒಂದು ದೇಶದ ಪ್ರಧಾನಮಂತ್ರಿ ಮತ್ತು ಆ ಪ್ರಧಾನಮಂತ್ರಿಯವರನ್ನು ಸಾಂಸ್ಕೃತಿಕವಾಗಿ ಬೆಳೆಸಿದ ಒಂದು ಸಂಸ್ಥೆ ಹಿಂದಿ ಹೇರಿಕೆಯನ್ನು ವಿವಿಧ ಭಾವನೆಗಳ ನೆಪದಲ್ಲಿ, ವ್ಯಾಪಾರ ವಹಿವಾಟಿನ ನೆಪದಲ್ಲಿ ಇತರೆ ಭಾಷಿಕರ ಮೇಲೆ ಹೇರಲು ಉತ್ತೇಜನ ನೀಡುತ್ತಾರೆ. ಇದಕ್ಕಿಂತ ದೊಡ್ಡ ದುರಂತವಿದೆಯೇ? ಇವರೇನು ಈ ಹೇರಿಕೆ ಮಾಡುವವರಲ್ಲಿ ಮೊದಲಿಗರಲ್ಲ, ಕೊನೆಯವರೂ ಅಲ್ಲ. ಕಾಂಗ್ರೆಸ್ (ಇದನ್ನೂ ಓದಿ: ಲಜ್ಜೆಗೆಟ್ಟ ಕಾಂಗ್ರೆಸ್ಸಿನಿಂದ ಪಂಚಭಾಷಾ ಪ್ರಣಾಳಿಕೆ), ಬಿಜೆಪಿ (ಇದನ್ನೂ ಓದಿ: ಲಜ್ಜೆಗೆಡುವುದರಲ್ಲಿ ಎಲ್ಲರೂ ಮುಂದು) ಎಂಬ ‘ರಾಷ್ಟ್ರೀಯ’ ಪಟ್ಟ ಕಟ್ಟಿಕೊಂಡ ಪಕ್ಷಗಳೆರಡರ ಮುಖಂಡರುಗಳು ಈ ಹಿಂದಿ ಹೇರಿಕೆಯ ಸಮರ್ಥಕರೇ ಆಗಿದ್ದಾರೆ. ಹಿಂದಿ ದೇಶವನ್ನು ಒಗ್ಗೂಡಿಸುವುದಿರಲಿ, ಇದೇ ರೀತಿಯ ಹೇರಿಕೆಯನ್ನು ಒಂದು ಭಾಷೆ ಶ್ರೇಷ್ಟವೆಂಬ ಸಂಗತಿಯನ್ನು ಇವರು ಪ್ರಚುರಪಡಿಸುತ್ತಲೇ ಸಾಗಿದರೆ ದೇಶವನ್ನೊಡೆಯಲು ಪರದೇಶದವರ ಅವಶ್ಯಕತೆಯೇ ಇಲ್ಲ. ಈ ಹಿಂದಿ ಭಾಷಾಂಧರೇ ಸಾಕು ದೇಶ ಮತ್ತೊಮ್ಮೆ ವಿಭಜನೆಗೊಳ್ಳಲು.

ಆಗ 26, 2015

ಕಚರನೇ ಸಿಕ್ಸರ್ ಹೊಡೆದಿದ್ದರೆ ‘ಲಗಾನ್’ಗೆ ಏನಾಗುತ್ತಿತ್ತು?

TS Vivekananda
ಇದೇ ಆಗಸ್ಟ್ 30ರಂದು ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷತ್ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಂಜೆ 5:30ಕ್ಕೆ ಟಿ.ಎಸ್.ವಿವೇಕಾನಂದರು ಬರೆದಿರುವ "ಭೂಮಿಗೀತೆ" ಮತ್ತು "ಜೀವತಲ್ಲಣಗಳ ಆತ್ಮಕಥನ" ಪುಸ್ತಕಗಳು ಬಿಡುಗಡೆಯಾಗುತ್ತಿದೆ.
ಪುಸ್ತಕದ ಆಯ್ದ ಭಾಗ ಹಿಂಗ್ಯಾಕೆಯ ಓದುಗರಿಗಾಗಿ.

ಕಳೆದ ವಾರದ ಮನವಿಯಂತೆ ನೀವು ಅಶುತೋಷ್ ಗೌರೀಕರ್‌ರ ಮಹತ್ವದ ಚಿತ್ರಗಳಾದ ಲಗಾನ್ ಮತ್ತು ಸ್ವದೇಶ್ ಚಿತ್ರಗಳನ್ನು ನೋಡಿದ್ದರೆ ಈ ನಮ್ಮ ಚರ್ಚೆ ಸ್ವದೇಶ್ ಚಿತ್ರದ ನಾಯಕ ಮೋಹನ್ ಭಾರ್ಗವನ ಗ್ರಾಮೀಣಾಭಿವೃದ್ದಿ ಕಲ್ಪನೆಯಷ್ಟೇ ಸಲೀಸಾಗಿರುತ್ತದೆ. ಇಲ್ಲದಿದ್ದರೂ ಆತಂಕವೇನಿಲ್ಲ ನೀವು ಡಾ. ರಾಜ್‌ರ ಬಂಗಾರದ ಮನುಷ್ಯ ಸಿನೆಮಾ ನೋಡಿದ್ದರೂ ಸಾಕು. ಅದರ ಶಾರುಖ್ ಖಾನ್ ವಿಸ್ತರಣೆ ಈ ಸ್ವದೇಶ್. ಬಹುಶಃ ೫೦-೬೦ರ ದಶಕದಲ್ಲಿ ಮಂಡಿಸಬಹುದಾಗಿದ್ದ ಮೇಲ್ನೋಟದ ಹಳ್ಳಿಗಳ ಅಭಿವೃದ್ಧಿಯ ಹುಮ್ಮಸ್ಸನ್ನು ಹುಟ್ಟಿಸುವ ‘ಉಪ್ಪರಿಗೆ ದೃಷ್ಟಿಕೋನ’ದ ಸೆಲ್ಯುಲಾಯ್ಡ್ ರೂಪ.

ಈ ಜಗತ್ತಿನ ಪ್ರತಿಯೊಂದು ಜೀವಿಯೂ ಗ್ರಹಿಸುವುದು ತನ್ನ ನೆಲೆಯಿಂದ. ಕೆಲವರು ಕೆಳಗೆ ನಿಂತು ಮೇಲಕ್ಕೆ ನೋಡುತ್ತಾರೆ. ಬಹುತೇಕರು ಮೇಲಿನಿಂದ ಕೆಳಕ್ಕೆ ನೋಡುತ್ತಾರೆ. ಎತ್ತರದ ಕಟ್ಟಡದ ಮೇಲೆ ನಿಂತು ಮಾರುತಿ ಕಾರನ್ನು ನೋಡಿ, ಅದು ಬೆಂಝ್ ಕಾರಿನಷ್ಟು ಉದ್ದಕ್ಕೆ ಕಾಣುತ್ತದೆ. ಬೆಂಝ್ ಏರ್ ಬಸ್ಸಿನಷ್ಟು ದೊಡ್ಡದಾಗಿ. ಹಾಗೇ ಒಂದು ಗುಡಿಸಲುಗಳ ಸಮೂಹವನ್ನು ನೋಡಿ..., ಎಷ್ಟು ಕಲಾತ್ಮಕವಾಗಿ ಕಾಣುತ್ತವೆಂದರೆ, ಇದರಿಂದಲೇ ಅನೇಕ ‘ಉಪ್ಪರಿಗೆ ಕಲಾವಿದರು’ ಸ್ಫೂರ್ತಿವಂತರಾಗಿ ಅನೇಕ ಅಭಿಜಾತ ಕಲಾಕೃತಿಗಳನ್ನು ರಚಿಸಿ ಧನ್ಯರಾಗಿದ್ದಾರೆ. ವಿಮಾನದಲ್ಲಿ ಕುಳಿತು ರಾಗಿ, ಬತ್ತ, ಜೋಳದ ಹೊಲಗಳನ್ನು ಕಂಡು ವಿಶ್ವದ ವಿಸ್ಮಯಗಳಲ್ಲಿ ಒಂದನ್ನು ಕಂಡಷ್ಟು ಮೂಕ ವಿಸ್ಮಿತರಾಗಿದ್ದಾರೆ.

ಮೋಹನ್ ಭಾರ್ಗವ ಅಮೆರಿಕೆಯ ಮಹೋನ್ನತ ಅಂತರಿಕ್ಷ ಸಂಸ್ಥೆಯಾದ ನಾಸಾದಲ್ಲಿ ಒಬ್ಬ ವಿಜ್ಞಾನಿ. ಇವನು ಅಮೆರಿಕನ್ನರಿಗಿಂತ ಹೆಚ್ಚು ಬ್ರಿಲಿಯಂಟ್. ಇವನಿಗೆ ಹಿಂದಿಲ್ಲ ಮುಂದಿಲ್ಲ. ಮೀನ್ಸ್... ಇವನೊಬ್ಬ ಅನಾಥ. ಬಹುಶಃ ವಾರಾನ್ನ ತಿಂದು ಓದಿದ್ದರೂ ಇರಬಹುದು. ಇವನು ಅಷ್ಟು ಕಷ್ಟಪಟ್ಟು ಓದಿ, ತನ್ನ ಪ್ರತಿಭೆಯ ಮೂಲಕವೇ ನಾಸಾ ತಲುಪಿದವನು. ಇವನಿಗೆ ಸ್ವದೇಶದಲ್ಲಿ ಇರುವ ಏಕೈಕ ಸಂಬಂಧವೆಂದರೆ ಇವನನ್ನು ಸಾಕಿದ ಒಬ್ಬ ತಾಯಿ. ನಿಜಾರ್ಥದಲ್ಲಿ ಈಕೆ ಒಬ್ಬ ಆಯಾ. ಆಕೆಯೊಂದಿಗೆ ಇವನ ಸಂಬಂಧ- ನೆನಪುಗಳು ಅತ್ಯಂತ ಗಾಢವಾದವು. ಈಕೆಯನ್ನು ನೋಡುವುದು ಒಂದು ಹಂಬಲವಾಗಿ, ಕೊನೆಗೆ ಗೀಳಾಗಿ ಅವನು ತಾನು ಒಪ್ಪಿಕೊಂಡಿದ್ದ ಯೋಜನೆಯ ಪ್ರಕಾರ ಅತ್ತ ಉಪಗ್ರಹವನ್ನು ಆಕಾಶಕ್ಕೆ ಹಾರಿಸಿ ಇತ್ತ ಭಾರತಕ್ಕೆ ವಿಮಾನ ಏರುತ್ತಾನೆ. ಈತ ನಗರಕ್ಕೆ ಬಂದಾಗ ಆ ಅಮ್ಮ ಗುಜರಾತಿನ ಯಾವುದೋ ಒಂದು ಹಳ್ಳಿಯಲ್ಲಿರುವುದಾಗಿ ತಿಳಿಯುತ್ತದೆ. ಇದನ್ನು ಈತನಿಗೆ ಹೇಳಿದವಳು ಒಬ್ಬ ಹುಡುಗಿ. 

ಈತ ಆಧುನಿಕ ಸೌಲಭ್ಯಗಳಿಂದ ಇಡಿಕಿರಿದಿದ್ದ ಒಂದು ಕಾರವಾನನ್ನು ಬಾಡಿಗೆ ಪಡೆದು ಆ ಹಳ್ಳಿಗೆ ಬರುತ್ತಾನೆ. ಯಥಾರೀತಿ ಅಲ್ಲಿನ ಅನಕ್ಷರತೆ, ಅಸ್ಪೃಶ್ಯತೆ, ಮೂಲಭೂತ ಸೌಕರ್ಯಗಳ ಕೊರತೆ, ಬಡತನ ಇದಕ್ಕೆಲ್ಲಾ ಕಾರಣವಾದ ಅಜ್ಞಾನ ಇವನನ್ನು ಕಾಡುತ್ತವೆ. ಈತ ತನ್ನ ದೇಶಕ್ಕಾಗಿ ಮರುಗಲು ಆರಂಭಿಸುತ್ತಾನೆ. ಮೊದಲು ಮಕ್ಕಳನ್ನು ಶಾಲೆಗೆ ಕರೆತರುವ ಪ್ರಯತ್ನ ನಡೆಯುತ್ತದೆ. ಕೇರಿ ಕೇರಿ-ಮನೆಮನೆಗೆ ಹೋಗಿ ಮಕ್ಕಳನ್ನು ಕಳಿಸುವಂತೆ ಕೇಳುತ್ತಾನೆ. ಅನೇಕರು ಅನೇಕ ಕಾರಣ ಹೇಳುತ್ತಾರೆ. ಆದರೆ ಕೆಲವರು ತಮ್ಮ ಅಸ್ಪೃಶ್ಯತೆಯ ಕಾರಣ ನಾವು ಮಕ್ಕಳನ್ನು ಶಾಲೆಗೆ ಕಳಿಸಲಾಗದು ಎಂದು ಹೇಳುತ್ತಾರೆ. ಕೊನೆಗೂ ಅವರೆಲ್ಲಾ ಶಾಲೆಗೆ ಬರುವಂತೆ ಮಾಡುತ್ತಾನೆ. ಈ ನಡುವೆ ಹಳ್ಳಿಯ ಮುಖಂಡರು ಇವನ ಕಾರ್ಯಕ್ಕೆ ಕ್ರಿಯಾಲೋಪ ಎತ್ತುತ್ತಾರೆ. ಅಸ್ಪೃಶ್ಯರನ್ನು ಸ್ಪೃಶ್ಯರ ನಡುವೆ ಕೂಡಿಸಿ ಅಕ್ಷರ ಕಲಿಸುವುದನ್ನು ವಿರೋಧಿಸುತ್ತಾರೆ. ಈ ನಡುವೆ ಊರಿನ ಮುಖಂಡರು ಇವನನ್ನು ಒಂದು ಪ್ರಶ್ನೆ ಕೇಳುತ್ತಾರೆ. ನೀನು ಯಾವ ಜಾತಿಯವನು?
ಪುಸ್ತಕ ಬಿಡುಗಡೆ ಸಮಾರಂಭದ ವಿವರ
ಇಲ್ಲಿನವರೆಗೂ ಸಿನೆಮಾ ಓಕೆ. ಹೆಸರಿನ ಮೂಲಕ ಜಾತಿಯನ್ನು ಗುರುತಿಸಲಾಗದ ಜನಕ್ಕೆ ಅದರಲ್ಲೂ ಆ ಪಾತ್ರ ಮಾಡಿರುವ ವ್ಯಕ್ತಿ ಶಾರುಖ್ ಖಾನ್ ಆದ್ದರಿಂದ ಈ ದೇಶದ ಜನ ಸಾಮಾನ್ಯ ಎಲ್ಲೂ ತಪ್ಪು ಭಾವಿಸುವ ಸಂದರ್ಭ ಬಂದಿರುವುದಿಲ್ಲ. ಆದರೆ ಈ ಭಾರ್ಗವ ಉತ್ತರಿಸುತ್ತಾನೆ. ನಾನು ಬ್ರಾಹ್ಮಣ!!. ಈ ಭಾರ್ಗವ ಅವರ ಅಜ್ಞಾನ, ಅಸ್ಪೃಶ್ಯತೆಯ ಆಚರಣೆಯ ಬಗ್ಗೆ ಕಿಡಿಗಾರುತ್ತಾನೆ. ಭಾಷಣ ಮಾಡುತ್ತಾನೆ. ಅಂತೂ ಊರವರಿಗೆ ಜ್ಞಾನೋದಯ ವಾಗುವಂತೆ ಮಾಡುತ್ತಾನೆ. 

ನಿಜಕ್ಕೂ ಇದೊಂದು ಆದರ್ಶ. ಒಬ್ಬ ಬ್ರಾಹ್ಮಣನೇ ಬಂದು ಅಸ್ಪೃಶ್ಯತೆಯನ್ನು ವಿರೋಧಿಸಿ ಮಾತನಾಡುವುದು, ಅವರನ್ನೂ ಮುಖ್ಯವಾಹಿನಿ ಎಂದು ಇದೇ ಸ್ಪೃಶ್ಯರು ಹೇಳುವಂಥ ಜೀವನಧಾರೆಗೆ ಆಹ್ವಾನಿಸುವುದು... ಎಲ್ಲವೂ ಅಮೋಘಾದ್ಭುತವಾಗಿ ಕಾಣುತ್ತವೆ. ಆದರೆ ಇಡಿಯಾಗಿ ಭಾರತದ ವರ್ಣಾಶ್ರಮ ಧರ್ಮದ ಇತಿಹಾಸವನ್ನು ನೋಡಿದರೆ ಈ ಚಿತ್ರದ ಆದರ್ಶ ಸಹ ಅದರ ವಿಸ್ತರಣೆಯಾಗಿ ಕಾಣುತ್ತದೆ. ನಿಜವಾದ ಸತ್ಯು, ನಿಜವಾದ ಗೌರೀಕರ್ ಬಿಚ್ಚಿಕೊಳ್ಳುವುದು ಇಲ್ಲೇ!! ಇದನ್ನೇನು ಅವರು ಪ್ರಜ್ಞಾಪೂರ್ವಕವಾಗಿ ಮಾಡುತ್ತಿಲ್ಲ ಎಂದರೂ....!? ಇದೇ ಮೋಹನ ಭಾರ್ಗವನ ಜಾಗದಲ್ಲಿ ಒಬ್ಬ ಆದಿವಾಸಿ, ಒಬ್ಬ ದಲಿತ, ಒಬ್ಬ ಅಗಸ, ಒಬ್ಬ ಹಜಾಮ, ಒಬ್ಬ ಮೇದ, ಒಬ್ಬ ಲಂಬಾಣಿ... ಇವರೇ ಏಕೆ ಅದೇ ಚಿತ್ರದ ನಿಜ ನಾಯಕ ಶಾರುಖ್ ಖಾನನಂಥಾ ಒಬ್ಬ ಮುಸ್ಲೀಂ, ಒಬ್ಬ ಕ್ರಿಶ್ಚಿಯನ್‌ನನ್ನು ಏಕೆ ಈ ಮನಸ್ಸುಗಳು ಕಲ್ಪಿಸಿಕೊಳ್ಳುವುದಿಲ್ಲ? ಆ ಭಾರ್ಗವ ಮಾಡಿದ ಕೆಲಸವನ್ನು, ತೋರಿದ ದೇಶಪ್ರೇಮವನ್ನು ಒಬ್ಬ ದಲಿತ ಯಾ ಮುಸ್ಲಿಮನಲ್ಲಿ ಕಾಣಲು ಇವರಿಗೆ ಏಕೆ ಸಾಧ್ಯವಾಗುವುದಿಲ್ಲ? ಆ ಚಿತ್ರದ ನಾಯಕ ಸ್ವತಃ ಒಬ್ಬ ಮುಸ್ಲೀಂ ಆಗಿದ್ದಾಗ ಸಹ!! 

ಇರಲಿ..., ಯಾರನ್ನೂ ದೂಷಿಸುವುದಾಗಲೀ, ಕಟಕಟೆಯಲ್ಲಿ ನಿಲ್ಲಿಸುವುದಾಗಲೀ ಇಲ್ಲಿನ ಉದ್ದೇಶವಲ್ಲ. ಬದಲಾಗಿ ಹೇಗೆ ‘ಉಪ್ಪರಿಗೆ ದೃಷ್ಟಿಕೋನ’ವೊಂದು ತನ್ನ ಗ್ರಹಿಕೆಯ ಮಿತಿಯಲ್ಲಿಯೇ ಇಡೀ ಜನ ಮಾನಸದ ಹೃದಯಗಳಲ್ಲಿ ತಪ್ಪುಗಳನ್ನು ತುಂಬುತ್ತದೆ ಎಂಬುದನ್ನು ಕಂಡುಕೊಳ್ಳಲು ಅಥವಾ... ಲಗಾನ್ ಚಿತ್ರದಲ್ಲಿ ‘ಕಚರಾ’ ನನ್ನು ಸಿಕ್ಸರ್‌ನಿಂದ ವಂಚಿಸುತ್ತದೆ ಎಂದು ಹೇಳಲು.

ಬಹುಶಃ ಇದು ಎಲ್ಲರಿಗೂ ಗೊತ್ತಿರುವ ಚಿತ್ರ. ತೆರಿಗೆಯಿಂದ ರಿಯಾಯತಿ ಪಡೆಯಲು ಒಂದು ಹಳ್ಳಿಯ ಜನ ಒಟ್ಟಾಗಿ ಒಂದು ಸಾಮ್ರಾಜ್ಯಶಾಹಿ ವ್ಯವಸ್ಥೆಯ ವಿರುದ್ಧ ಹೇಗೆ ಹೋರಾಡುತ್ತದೆ ಎಂಬುದನ್ನು ಹೇಳುವ ಕತೆ. ಈ ಸಿನೆಮಾದ ವಿಶೇಷವೆಂದರೆ ಇಲ್ಲಿನ ಹೋರಾಟದಲ್ಲಿ ಸೈನ್ಯಗಳಿಲ್ಲ, ಮದ್ದುಗುಂಡುಗಳಿಲ್ಲ, ಸಾವು ನೋವುಗಳಿಲ್ಲ ಇರುವುದೆಲ್ಲಾ ಬರೀ ಮರದ ಬ್ಯಾಟು ಮತ್ತು ಚರ್ಮದ ಚೆಂಡು. ಶ್ರೇಷ್ಟತೆಯ ತೆವಲು ಹತ್ತಿದ ದುಡುಕು ಸ್ವಭಾವದ ಒಬ್ಬ ಕಮ್ಯಾಂಡರನ ಕಾರಣದಿಂದ ತಮಗೆ ಗೊತ್ತಿಲ್ಲದ, ಸಾಮ್ರಾಜ್ಯಶಾಹಿ ಹಿರಿಮೆಯ ಆಟವಾದ ಕ್ರಿಕೆಟ್ಟನ್ನು ಒಂದು ನುರಿತ ತಂಡದ ಮೇಲೆ ಹಳ್ಳಿಗರು ಆಡಬೇಕಾಗಿ ಬಂದ ಸಂದರ್ಭವನ್ನು ಹೇಳುವ ಕತೆ.

ಸಿನೆಮಾದ ಕತೆ ಸರಳವಾಗಿದೆ. ಮಂಡನೆ ಮನೋಹರವಾಗಿದೆ. ಸ್ಕ್ರೀನ್ ಪ್ಲೇ, ಕ್ಯಾಮೆರಾ, ಸಂಗೀತ, ನಿರ್ದೇಶನ ಎಲ್ಲಾ ಚೆನ್ನಾಗಿದೆ. ಅದಕ್ಕಾಗಿಯೇ ಈ ಚಿತ್ರ ಆಸ್ಕರ್ ಮಟ್ಟಕ್ಕೆ ಹೋಗಿದ್ದು. ಅನಕ್ಷರಸ್ಥರ ಗುಂಪೊಂದು ತಮ್ಮ ಉಳಿವಿನ ದಾರಿಯನ್ನು ಉಳಿಸಿಕೊಳ್ಳುವ ಸಲುವಾಗಿ ಒಂದು ಸಾಮ್ರಾಜ್ಯಶಾಹಿ ಮನಸ್ಥಿತಿಯ ವಿರುದ್ದ ಹೋರಾಡುವ ಪಣ ತೊಟ್ಟು, ಅದನ್ನು ಗೆಲ್ಲುವುದನ್ನು ಸಾಂಕೇತಿಕವಾಗಿ ಇದು ಹೇಳುತ್ತದೆ. ಈ ಚಿತ್ರಕ್ಕೆ ಆಸ್ಕರ್‌ನಲ್ಲಿ ಎದುರಾಗಿದ್ದು ಇಡೀ ಮನುಕುಲದ ಇಂದಿನ ದುರಂತವನ್ನು ಲಗಾನ್‌ಗಿಂತಲೂ ಸರಳವಾದ ಘಟನೆಯೊಂದರ ಮೂಲಕ ನಿರೂಪಿಸುತ್ತಾ ಸಾಗುವ ಚಿತ್ರ ‘ನೋ ಮ್ಯಾನ್ಸ್ ಲ್ಯಾಂಡ್’. ಲಗಾನ್ ಈ ಚಿತ್ರದ ಮಂದೆ ಸೋಲಲು ಅನೇಕ ಕಾರಣಗಳಿದ್ದವು. ಸ್ವತಃ ಈ ಚಿತ್ರದ ನಾಯಕ ಹಾಗೂ ನಿರ್ಮಾಪಕ ಅಮೀರ್‌ಖಾನ್ ಇದನ್ನು ಒಪ್ಪಿಕೊಂಡಿದ್ದರು.

ಆದರೆ ಈ ಚಿತ್ರಕ್ಕೆ ಆಸ್ಕರ್ ನಿರೀಕ್ಷಿಸಿದ್ದ ಜನ ಗಮನಿಸದೇ ಹೋದ ಒಂದು ಮುಖ್ಯವಾದ ಸಂಗತಿ ಇತ್ತು. ನನಗನ್ನಿಸಿದಂತೆ ಈ ಸಂಗತಿಯನ್ನು ಆಸ್ಕರ್ ಜ್ಯೂರಿಗಳು ಖಂಡಿತ ಗಮನಿಸಿರುತ್ತಾರೆ. ಇಲ್ಲದಿದ್ದರೆ ಅವರು ನೋಮ್ಯಾನ್ಸ್ ಲ್ಯಾಂಡಿನ ಮಹತ್ವವನ್ನೂ ಸಹ ಗುರುತಿಸಲಾಗುತ್ತಿರಲಿಲ್ಲ. ಒಂದು ಪಕ್ಷ ಲಗಾನ್ ಈ ಸಂಗತಿಯಲ್ಲಿ ಒಂದಿಷ್ಟು ಉದಾತ್ತವಾಗಿದ್ದರೆ.....! ಇಂದಿನ ಜಾಗತಿಕ ಸಂದರ್ಭದಲ್ಲಿ ಅದು ನೋಮ್ಯಾನ್ಸ್ ಲ್ಯಾಂಡಿನ ಉದ್ದೇಶದಷ್ಟೇ ಉದಾತ್ತವಾಗುತ್ತಿತ್ತು. ಭಾರತದ ಸಂದರ್ಭದಲ್ಲಂತೂ ಬಹುದೊಡ್ಡ ಸಂದೇಶವನ್ನು ನೀಡುತ್ತಿತ್ತು. 

ಅಲ್ಲಿ ಏನಾಗುತ್ತದೆ ಎಂದರೆ.....,

ತೆರಿಗೆ ನೆಪವಾಗಿ ಆರಂಭವಾಗುವ ಈ ವಿವಾದ ಬ್ರಿಟಿಷ್ ಕಮ್ಯಾಂಡನೊಬ್ಬನ ಹಠಮಾರಿ ನಡೆವಳಿಕೆಯ ಮೂಲಕ ಒಂದು ಮೂರ್ತರೂಪ ಪಡೆಯುತ್ತದೆ. ಭುವನ್ ಎಂಬ ಸ್ಥಳೀಯ ಯುವಕ ಒಂದೆರಡು ಸಾರಿ ಈ ಕಮ್ಯಾಂಡರನಿಗೆ ಕಿರಿಕಿರಿಯಾಗುವಂತೆ ಮಾಡಿರುತ್ತಾನೆ. ಇವನನ್ನೇ ಗುರಿಯಾಗಿಟ್ಟುಕೊಂಡು ಕ್ರಿಕೆಟ್‌ನಲ್ಲಿ ನಮ್ಮನ್ನು ಸೋಲಿಸಿದರೆ ನೀವು ಸಧ್ಯಕ್ಕೆ ರಿಯಾಯತಿ ಕೇಳಲು ಬಂದಿರುವ ತೆರಿಗೆಯಲ್ಲಿ ಒಂದಲ್ಲ, ಎರಡಲ್ಲ ಮೂರು ವರ್ಷ ರಿಯಾಯತಿ ಕೊಡುವುದಾಗಿ ಆ ಸಿಡುಕು ಮೂತಿಯ ಕಮ್ಯಾಂಡರ್ ಷರತ್ತು ಹಾಕುತ್ತಾನೆ. ಮೀನಮೇಷ ಎಣಿಸಿ ಅಂತೂ ಭುವನ್ ಅವನ ಪಂಥಾಹ್ವಾನವನ್ನು ಅಂಗೀಕರಿಸುತ್ತಾನೆ. ಊರವರ ಸಹಕಾರದ ನಡುವೆಯೂ ಭುವನನ ತಂಡಕಟ್ಟುವ ಪ್ರಯತ್ನ ಸಾಗುತ್ತಿರುತ್ತದೆ. ಈ ನಡುವೆ ಆ ಕಮ್ಯಾಂಡರನ ತಂಗಿಯೇ ಇವರಿಗೆ ಸಹಾಯಮಾಡಲು ಬರುತ್ತಾಳೆ. ಇಲ್ಲಿ ಈ ಭುವನನಿಗೆ ಈಗಾಗಲೇ ಇದ್ದ ಒಬ್ಬ ಪ್ರಿಯತಮೆಯ ಜೊತೆಗೆ ಈ ಕೆಂಪು ಹುಡುಗಿಯೂ ಕೂಡಿಕೊಳ್ಳುವ ಕಾರಣದಿಂದ ತ್ರಿಕೋನ ಪ್ರೇಮ ಆರಂಭವಾಗುವುದರೊಂದಿಗೆ ಚಿತ್ರಕ್ಕೊಂದು ಹೊಸ ಓಘ ಸೃಷ್ಟಿಯಾಗುತ್ತದೆ. 

ಭುವನ ಒಬ್ಬೊಬ್ಬರದೇ ಮನಒಲಿಸಿ, ಪ್ರಚೋದಿಸಿ ತಂಡ ನಿರ್ಮಾದಲ್ಲಿ ತೊಡಗಿದ್ದಾಗ ಈ ಕೆಂಪು ಹುಡುಗಿಯ ಆಗಮನದಿಂದ ಊರವರಿಗೆ ಹೊಸ ಹುಮ್ಮಸ್ಸು ಬಂದು, ತಂಡ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ಬಂದಿರುತ್ತದೆ. ಈಗ ಪ್ರಾಕ್ಟೀಸ್ ನಡೆದಿರುತ್ತದೆ. ಒಬ್ಬ ಬ್ಯಾಟ್ ಮಾಡುತ್ತಾನೆ. ಚೆಂಡು ದೂರದ ಮೂಲೆಯಲ್ಲಿ ಕುಳಿತಿದ್ದ ಒಬ್ಬನ ಮುಂದೆ ಬೀಳುತ್ತದೆ. ಭುವನ ಚೆಂಡನ್ನು ಎಸೆಯುವಂತೆ ಹೇಳುತ್ತಾನೆ. ಅವನು ಹಿಂಜರಿಯುತ್ತಾನೆ. ಕೊನೆಗೆ ಎಸೆಯುತ್ತಾನೆ. ಭುವನ್ ಚಕಿತನಾಗಿ ‘ಕಚರಾ ಬಾ ಇಲ್ಲಿ, ಇನ್ನೊಮ್ಮೆ ಚೆಂಡು ಎಸಿ’ ಎನ್ನುತ್ತಾನೆ. ಕಚರಾ ಗಾಬರಿಯಾಗುತ್ತಾನೆ. ಆಗ ಭುವನನೇ ಅವನ್ನು ಕರೆತಂದು ಫೀಲ್ಡಿನ ಮಧ್ಯೆ ನಿಲ್ಲಿಸಿ ‘ಇವನದು ಸ್ಪಿನ್ ಬೌಲಿಂಗ್, ನೋಡಿ ಹೇಗೆ ಬಾಲು ಸುತ್ತಿ ತಿರುಗಿ ಪುಟಿಯುತ್ತದೆ!!’ ಎಂದು ಎಲ್ಲರಿಗೂ ಹೇಳುತ್ತಾನೆ. 

ಅಷ್ಟರಲ್ಲಿ ಊರವರು ಈ ಕಚರನ ಸೇರ್ಪಡೆಯನ್ನು ವಿರೋಧಿಸುತ್ತಾರೆ. ಕಾರಣ ಅವನು ಅಸ್ಪೃಶ್ಯ ಎಂದು. ಆಗ ಭುವನ ಉದಾತ್ತ-ಧೀರೋದ್ಧಾತವಾದ ಒಂದು ಭಾಷಣ ಮಾಡುತ್ತಾನೆ. ಊರ ಜನ ಭುವನನ ಮಾನವೀಯ ಮಾತುಗಳನ್ನು ಒಪ್ಪುತ್ತಾರೆ. ಕಚರಾ ತಂಡಕ್ಕೆ ಸ್ಪಿನ್ ಬೌಲರ್ ಆಗಿ ಸೇರ್ಪಡೆಯಾಗುತ್ತಾನೆ. ಈತ ಒಬ್ಬ ಹೆಳವ. ಇವನ ಬಲಗೈ ಪೋಲಿಯೋ ಪೀಡಿತವಾದಂತೆ, ದುರ್ಬಲವಾಗಿ ಮುರುಟಿಕೊಂಡಿರುತ್ತದೆ. 

ಇಂದಿನ ಸ್ಪಿನ್ ಬೌಲರ್‌ಗಳ ಬಗೆಗಿನ ಪ್ರಚಾರವನ್ನು ಕಂಡ ಯಾರಾದರೂ ಒಂದು ಕ್ಷಣ ರೋಮಾಂಚನಗೊಳ್ಳುವ ಸಂದರ್ಭ ಇದು. ಸ್ಪಿನ್ ಬೌಲರ್ ಎಂದರೆ ಅಂತಾ ಶ್ರೇಷ್ಠ...., ಇಂಥಾ ಶ್ರೇಷ್ಠ..., ಅದೂ ಇದೂ... ಲೊಟ್ಟೆ ಲೊಸ್ಗ.... ಎಂದೆಲ್ಲಾ ನಮ್ಮ ಮಾಧ್ಯಮಗಳು ಚಕ್ಕೆ ಕಟ್ಟುತ್ತಿರುವ ಹೊತ್ತಿನಲ್ಲಿ ಒಬ್ಬ ಹೆಳವನನ್ನು ಸ್ಪಿನ್ ಬೌಲರ್ ಎಂದು ಹೇಳುವ ಮೂಲಕ ಸ್ಪಿನ್ ಬೌಲಿಂಗಿನ ಚಕ್ಕೆಗಳನ್ನೆಲ್ಲಾ ಕಿತ್ತು ಬಿಸಾಕಿ, ಅದನ್ನು ಲೇವಡಿ ಮಾಡಿ ಸ್ಪಿನ್ ಬೌಲ್ ಮಾಡುವವರು ಹೆಳವರು ಎಂಬ ಅರ್ಥ ಬರುವಂಥ ಇಂಥಾ ದೃಶ್ಯವೊಂದನ್ನು ಕಟ್ಟಿಕೊಡುವುದು ನಿರ್ದೇಶಕನ ಮೆಚ್ಯೂರಿಟಿಯನ್ನು ಹೇಳುತ್ತದೆ ಎಂದು ಭಾವಿಸುವ ಸಂದರ್ಭ ಅದು. ಒಂದು ಸರಳ ಮಾದರಿಯ ಮೂಲಕ ಒಂದು ಬಹುದೊಡ್ಡ ಭ್ರಮೆಯನ್ನು ಒಡೆದು ಬಿಸಾಕುವಂತಹ ಎದೆಗಾರಿಕೆ ಅದು. 

ಅಂತಿಮವಾಗಿ ತಂಡ ಸಿದ್ದವಾಗುತ್ತದೆ. ಮೂರು ದಿನಗಳ ಮ್ಯಾಚ್ ನಿರ್ಧಾರವಾಗುತ್ತದೆ. ಮೊದಲ ಒಂದೂವರೆ ದಿನ ಬ್ರಿಟಿಶ್ ತಂಡ ಬ್ಯಾಟ್ ಮಾಡುತ್ತದೆ. ಅಷ್ಟರಲ್ಲಿ ಗೌರವಾರ್ಹ ಮೊತ್ತವನ್ನು ಪೇರಿಸುತ್ತದೆ. ನಂತರದ ಬ್ಯಾಟಿಂಗ್ ಭುವನನ ತಂಡದ್ದು. ಹಾಗೂ ಹೀಗೂ ಈ ತಂಡ ಅಂತಿಮ ಹಂತಕ್ಕೆ ಬರುತ್ತದೆ. ಎಲ್ಲಾ ಆಟಗಾರರೂ ಪೆವಿಲಿಯನ್‌ಗೆ ಮರಳಿದ್ದಾರೆ. ನಾಯಕ ಭುವನ್ ಮಾತ್ರ ನಿನ್ನೆಯಿಂದಲೂ ಫೀಲ್ಡಿನಲ್ಲೇ ಉಳಿದಿದ್ದಾನೆ. ಕೊನೆಯ ಆಟಗಾರನಾಗಿ ಕಚರಾ ಬರುತ್ತಾನೆ. ಈಗ ಕೇವಲ ೧೧ ಬಾಲ್‌ಗಳಿವೆ, ೧೨ ರನ್ ಬೇಕು.

ಕೊನೆಗೆ ಒಂದೇ ಒಂದು ಬಾಲು ಉಳಿಯುತ್ತದೆ, ಬೇಕಿರುವುದು ೬ ರನ್. ನಾಯಕ ಆತಂಕದಿಂದ ಕಚರಾನ ಸಮೀಪಕ್ಕೆ ಬಂದು.... “ಕಚರಾ ಇದು ಕೊನೆಯ ಬಾಲು, ನಮಗೆ ೬ ರನ್ ಬೇಕು. ಈ ಬಾರಿ ನೀನು ಬಾಲು ಗಡಿಯಾಚೆಗೆ ಹೋಗುವಂತೆ ಹೊಡೆಯಲೇ ಬೇಕು. ಇಲ್ಲದಿದ್ದರೆ ಊರವರೆಲ್ಲಾ ಮೂರು ಪಟ್ಟು ತೆರಿಗೆ ಕೊಡಬೇಕಾಗುತ್ತದೆ. ಮೊದಲೇ ಬರಗಾಲ, ನಾವು ಎಲ್ಲಿಂದ ತರುವುದು. ಇದರ ಜೊತೆಗೆ ಸೋಲಿನ ಅಪಮಾನವನ್ನೂ ಸಹಿಸಬೇಕಾಗುತ್ತದೆ... ಏನಾದರೂ ಮಾಡು ಕಚರಾ.... ಏನಾದರೂ ಮಾಡು...." ಎಂದೆಲ್ಲಾ ಹೇಳುತ್ತಾನೆ.

ಕೊನೆಯ ಬಾಲು ಬರುತ್ತದೆ. ಕಚರಾ ಬ್ಯಾಟ್ ಬೀಸುತ್ತಾನೆ. ಬ್ಯಾಟು ಗಾಳಿಯಲ್ಲಿ ತೇಲಿ ಹಿಂತಿರುಗುತ್ತದೆ. ಬಾಲು ಎತ್ತ ಹೋಯಿತು? ಎಂದು ಇವರು ಗೊಂದಲಲ್ಲಿದ್ದಾಗಲೇ ಅವರು ವಿಜಯೋತ್ಸವ ಆಚರಿಸಲು ಆರಂಭಿಸುತ್ತಾರೆ. ನಾಯಕ ವಿಷಣ್ಣನಾಗುತ್ತಾನೆ. ಜನ ಗರಬಡಿದಂತಾಗುತ್ತಾರೆ. ಆದರೆ ಅಷ್ಟರಲ್ಲಿ ಒಂದು ಚಮತ್ಕಾರ ನಡೆಯುತ್ತದೆ. ಅಂಪೈರ್ ‘ನೋ ಬಾಲ್’ ಕೊಡುತ್ತಾನೆ. ಕ್ಯಾಮರಾ ಮತ್ತೆ ತಿರುಗಿದಾಗ ನಾಯಕ ಬ್ಯಾಟಿಂಗ್‌ನಲ್ಲಿರುತ್ತಾನೆ. ಬಾಲು ಬರುತ್ತದೆ. ನಾಯಕ ಘಟ್ಟಿಸುತ್ತಾನೆ. ಬಾಲು ದಿಗಂತದಲ್ಲಿ ಹಾರುತ್ತಿರುತ್ತದೆ. ಎದುರಾಳಿ ತಂಡದ ನಾಯಕ ಬಾಲನ್ನು ಕ್ಯಾಚ್ ಮಾಡುತ್ತಾನೆ. ಪರಿಸ್ಥಿತಿ ಗೊಂದಲದಲ್ಲಿದ್ದಾಗ ಅಂಪೈರ್ ತನ್ನ ನೊಟದಲ್ಲಿಯೇ ಅವನು ಬೌಂಡರಿಯ ಆಚೆ ಇರುವುದನ್ನು ಸೂಚಿಸುತ್ತಾನೆ. ಭುವನನ ತಂಡ ಗೆದ್ದಿರುತ್ತದೆ. ತೆರಿಗೆ ತಪ್ಪಿರುತ್ತದೆ.

ನಿರ್ದೇಶನ, ಕ್ಲೈಮ್ಯಾಕ್ಸ್ ಎಲ್ಲಾ ಸುಂದರವಾಗಿದೆ. ಸಿನೆಮಾದಲ್ಲಿ ಯಾವ ಸಮಸ್ಯೆಯೂ ಇಲ್ಲ. ಆದರೆ ಕಥೆಯ ಒಂದು ಸಮಸ್ಯೆ ಹಾಗೇ ಉಳಿಯುತ್ತದೆ. ಕಚರಾನೇ ಸಿಕ್ಸರ್ ಹೊಡೆದಿದ್ದರೆ ಏನಾಗುತ್ತಿತ್ತು? ಅಲ್ಲಿಗೆ ನೋ ಬಾಲಿನ ನೆಪದಲ್ಲಿ ನಾಯಕನೇ ಏಕೆ ಬರಬೇಕಿತ್ತು? ನೋ ಬಾಲ್ ಕೊಟ್ಟ ಮೇಲೂ ಅದೇ ಬ್ಯಾಟ್ಸ್‌ಮನ್ ಮತ್ತೆ ಹೊಡೆಯಬಹುದಿತ್ತಲ್ಲವೇ? ಈ ಗೆಲುವಿನ ಅವಕಾಶವನ್ನು ಕಚರಾನಿಗೇಕೆ ಕೊಡಲಿಲ್ಲ? ಅವನು ಅಸ್ಪೃಶ್ಯನೆಂದೇ? ಅಥವಾ....

ನೋಡಿ..., ಇವರಿಗೆ ತಂಡದಲ್ಲಿ ಸ್ಥಳ ಕೊಟ್ಟೆವು, ಊರಿಗಾಗಿ ಸೇವೆ ಸಲ್ಲಿಸಲು ಅವಕಾಶ ಕೊಟ್ಟೆವು. ಜಾತೀಯತೆಯನ್ನೆಲ್ಲಾ ಮರೆತು, ಸ್ಪೃಶ್ಯ-ಅಸ್ಪೃಶ್ಯಗಳನ್ನೆಲ್ಲಾ ಬದಿಗಿಟ್ಟು ಆಟದಲ್ಲಿ ಒಂದಾಗಿ ದುಡಿದೆವು. ಆದರೆ ನಿಜವಾದ ಪ್ರತಿಭೆ ತೋರುವಂತ ಅವಕಾಶ ಸಿಕ್ಕಿದಾಗ ಅವರು ಅಸಮರ್ಥರಾದರು. ಅವರಿಗೆ ಅಂಥಾ ಇಚ್ಛಾಶಕ್ತಿ-ಸಾಮರ್ಥ್ಯಗಳಿಲ್ಲ ಎಂದು ಈ ಜಗತ್ತಿಗೆ ಸಾರ್ವತ್ರಿಕ ಸಂದೇಶ ಕೊಡಲೆಂದೇ? 

ಈ ‘ಉಪ್ಪರಿಗೆ ದೃಷ್ಟಿಕೋನ’ ಹೇಳಿದ್ದು, ಅನಿಸಿದ್ದು, ಗ್ರಹಿಸಿದ್ದು ಮಾತ್ರ ಕಲೆಯಾಗುವುದಾದರೆ.....! ಜಾಗತಿಕವಾದ ಮಾನವೀಯ ಮೌಲ್ಯ, ಉದಾತ್ತತೆಯ ಅರ್ಥವೇನು? ಇವನ್ನು ಹೊರತು ಪಡಿಸಿದ ಕಲೆ ಸುಂದರವಾಗಿದ್ದ ಮಾತ್ರಕ್ಕೆ ಕಲೆಯಾಗಬಲ್ಲದೇ. ಬಹುಶಃ ಆಸ್ಕರ್ ಜ್ಯೂರಿಗಳು ಕಲೆಯನ್ನು ಮಾನವೀಯ ಮೌಲ್ಯದಡಿಯಲ್ಲಿ ವಿಮರ್ಶಿಸುತ್ತಾರೆ ಎನಿಸುತ್ತದೆ. ಹಾಗಾಗಿಯೇ ಲಗಾನ್ ಸೋತಿತು, ನೋಮ್ಯಾನ್ಸ್ ಲ್ಯಾಂಡ್ ಗೆದ್ದಿತು ಅನಿಸುತ್ತದೆ.

ಇದು ಕಲೆಯ ಬಗ್ಗೆ ಮಾತನಾಡುವ ಎಲ್ಲರಿಗೂ ಅರ್ಥವಾಗಬೇಕು. ಅಶುತೋಷ್ ಗೌರೀಕರ್‌ಗೆ, ಇವರ ಯಶಸ್ವೀ ನಟರಾದ ಅಮೀರ್ ಖಾನ್ ಮತ್ತು ಶಾರುಖ್ ಖಾನ್‌ಗೆ. ಹೀಗಾಗಿಯೇ ಎಂ.ಎಸ್. ಸತ್ಯು ಮನಸ್ಸಿಗೆ ಬಂದಂತೆ ಮಾತನಾಡಿದಾಗ ಅದಕ್ಕೆ ಬೇರೊಂದು ಪ್ರಭಾವಳಿ ಸೃಷ್ಠಿಯಾಗುವುದು. ಮಾನವಂತರಾದರೆ ಇದನ್ನು ಸತ್ಯು ಸಹ ಅರಿಯಬೇಕು ಜೊತೆಗೆ ಇವರನ್ನು ಸಮರ್ಥಿಸುತ್ತಿರುವ ಮತ್ತು ವಿರೋಧಿಸುತ್ತಿರುವ ಜನಕ್ಕೆ ಸಹ.

ಪ್ಲಾಚಿಮಡದ ಜಲ ಪಿಶಾಚಿಗಳು ಮತ್ತು ಇಸ್ಲಾಮಿಕ್ ಪರಿಸರ ವಿವೇಕ.

TS Vivekananda
ಇದೇ ಆಗಸ್ಟ್ 30ರಂದು ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷತ್ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಂಜೆ 5:30ಕ್ಕೆ ಟಿ.ಎಸ್.ವಿವೇಕಾನಂದರು ಬರೆದಿರುವ "ಭೂಮಿಗೀತೆ" ಮತ್ತು "ಜೀವತಲ್ಲಣಗಳ ಆತ್ಮಕಥನ" ಪುಸ್ತಕಗಳು ಬಿಡುಗಡೆಯಾಗುತ್ತಿದೆ.
ಪುಸ್ತಕದ ಆಯ್ದ ಭಾಗ ಹಿಂಗ್ಯಾಕೆಯ ಓದುಗರಿಗಾಗಿ.

ಕೇರಳದ ಕಾಡುಭಾಗದ ಹಳ್ಳಿಗಳ ಪೈಕಿ ಇದೊಂದು ಸಣ್ಣ ಹಳ್ಳಿ, ಹೆಸರು ಪ್ಲಾಚಿಮಡ. ಕೇರಳ-ತಮಿಳುನಾಡು ರಾಜ್ಯಗಳ ಗಡಿಯಲ್ಲಿರುವ ಪಾಲಕ್ಕಾಡ್ ಜಿಲ್ಲೆಯ ಚಿತ್ತೂರು ತಾಲ್ಲೂಕಿನಲ್ಲಿದೆ. ಎಲ್ಲರಿಗೂ ತಿಳಿದಂತೆ ಚಿತ್ತೂರು ಭತ್ತ/ಅಕ್ಕಿಗೆಪ್ರಸಿದ್ದಿ ಪಡೆದ ಪ್ರದೇಶ. ಈ ಪಾಲಕ್ಕಾಡಿನ ಸುತ್ತಮತ್ತ ಪಟ್ಟಂಚೇರಿ ಮತ್ತು ಮತ್ತಲಮಡ ಗ್ರಾಮ ಪಂಚಾಯ್ತಿಗಳಿವೆ. ಈ ಒಟ್ಟೂ ಪ್ರದೇಶ ಪಶ್ಚಿಮಘಟ್ಟ ಶ್ರೇಣಿಯು ಒಂದೆಡೆ ಸ್ವಲ್ಪ ತೆರವಾಗಿರುವ ಜಾಗದಲ್ಲಿದೆ. ಇಲ್ಲಿ ಸಾಮಾನ್ಯವಾಗಿ ಮಳೆ ಕಡಿಮೆ. ಕೇರಳದ ವಾರ್ಷಿಕ ಸರಾಸರಿ ಮಳೆಯಲ್ಲಿ ಅರ್ಧದಷ್ಟು ಮಳೆ ಬಂದರೆ ಹೆಚ್ಚು. ಹಾಗಾಗಿ ಇಲ್ಲಿನ ಎಲ್ಲ ಜೀವರಾಶಿ ಅಂತರ್ಜಲವನ್ನು ಆಧರಿಸಿದೆ. ಇಲ್ಲಿನ ಅಂತರ್ಜಲ ಸಮೃದ್ದವಾಗಿದ್ದು, ಇಲ್ಲಿನ ಜೀವಜಾಲದ ಪೋಷಣೆಗೆ ಅಗತ್ಯವಾದಷ್ಟಿದೆ. ಅಲ್ಲದೆ ಅಂತರ್ಜಲ ಪ್ರತಿವರ್ಷ ತಂತಾನೆ ಮಟ್ಟವನ್ನು ಕಾಪಾಡಿಕೊಳ್ಳುತ್ತದೆ. ಕಾರಣ ಈ ಪ್ರದೇಶದಿಂದ ದೂರದಲ್ಲಿ ಎರಡು ಜಲಾಶಯಗಳಿವೆ. ಹೀಗಾಗಿ ಇಲ್ಲಿನ ಮುಖ್ಯ ಕಸುಬು ಬೇಸಾಯ ಮತ್ತು ಬೇಸಾಯ ಆಧಾರಿತ ಕೂಲಿ. 

ಹೀಗೆ ನೂರಾರು ವರ್ಷಗಳಿಂದ ಬದುಕುತ್ತಾ ಬಂದ ಈ ಪಂಚಾಯತಿಗಳ ಪ್ರದೇಶಕ್ಕೆ ಒಮ್ಮೆ ಕೆಲವು ಜನ ಬಂದು ಸುಮಾರು ೩೬ ಎಕರೆ ಕೃಷಿ ಜಮೀನನ್ನು ಕೊಳ್ಳುತ್ತಾರೆ. ಇದಾದ ಕೆಲವೇ ದಿನಗಳಲ್ಲಿ ಅಲ್ಲಿಗೆ ಹಿಂದೂಸ್ತಾನ್ ಕೊಕೋ ಕೋಲಾ ಬೇವರೇಜಸ್ ಲಿ. ಎಂಬ ಕಂಪನಿ ಬರುವುದಾಗಿ ಜನಕ್ಕೆ ತಿಳಿಯುತ್ತದೆ. ಜನ ಪ್ರತಿರೋಧಿಸುತ್ತಾರೆ. ಇದಾದ ಕೆಲವು ದಿನಗಳಲ್ಲಿ ಕಂಪನಿಯ ಮಂದಿ ಬರುತ್ತಾರೆ, ಬಂದವರು “ನೀವು ಏಕೆ ಮನೆ ಬಾಗಿಲಿಗೆ ಬಂದ ಅದೃಷ್ಟವನ್ನು ಕಾಲಲ್ಲಿ ದೂಡುತ್ತಿದ್ದೀರಿ?! ನಾವು ಇಲ್ಲಿಗೆ ಬರುತ್ತಿದ್ದಂತೆ ನಿಮ್ಮೆಲ್ಲರ ಮನೆಯವರಿಗೆ ಕೆಲಸ ಕೊಡುತ್ತೇವೆ. ಕೈತುಂಬಾ ಸಂಬಳ ಕೊಡುತ್ತೇವೆ, ಇಲ್ಲಿನ ಎಲ್ಲಾ ಹಳ್ಳಿಗಳನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲ್ಮಟ್ಟಕ್ಕೆ ಎತ್ತುತ್ತೇವೆ, ನಾವು ಸದಾ ನಿಮ್ಮ ಹಳ್ಳಿಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತೇವೆ..." ಎಂದೆಲ್ಲಾ ಕನಸುಗಳ ಹೂ ಮಾಲೆ ಹಾಕುತ್ತಾರೆ. ಜನ ಅವರ ಮಾತುಗಳನ್ನು ನಂಬುತ್ತಾರೆ. ಇದಾದ ಕೆಲವೇ ದಿನಗಳಲ್ಲಿ ಕಾರ್ಖಾನೆ ಕೆಲಸ ಆರಂಭಿಸುತ್ತದೆ. ಸುತ್ತಮುತ್ತ ಒಟ್ಟು ಎರಡು ಲಕ್ಷಕ್ಕೂ ಮಿಗಿಲಾದ ಜನಸಂಖ್ಯೆಯಲ್ಲಿ ಸುಮಾರು ೨೦೦ ಜನಕ್ಕೆ ದಿನಗೂಲಿ ಕೆಲಸ ಸಿಗುತ್ತದೆ. ೧೭೦ ಮಂದಿ ಹೊರಗಿನವರಿಗೆ ಶಾಶ್ವತ ಉದ್ಯೋಗ ದೊರೆಯುತ್ತದೆ. 

TS Vivekananda books
ಪುಸ್ತಕ ಬಿಡುಗಡೆ ಸಮಾರಂಭದ ವಿವರಗಳು
ಇಲ್ಲಿಂದ ಪ್ರತಿದಿನ ೮೫ ಲಾರಿಗಳು ಕುತ್ತಿಗೆಮಟ್ಟ ಲೋಡನ್ನು ತುಂಬಿಕೊಂಡು ಕೇರಳದ ನಗರಗಳತ್ತ ಸಾಗುತ್ತವೆ. ಪ್ರತಿಯೊಂದು ಲಾರಿಯಲ್ಲಿ ೫೫೦-೬೦೦ ಕೇಸುಗಳಿರುತ್ತವೆ. ಇಂಥಾ ಪ್ರತಿಯೊಂದು ಕೇಸಿನಲ್ಲಿ ೨೪ ಬಾಟಲಿಗಳು ತುಂಬಿರುತ್ತವೆ. ಈ ಲೆಕ್ಕದಲ್ಲಿ ದಿನಕ್ಕೆ ಇಂಥಾ ೧೨ ಲಕ್ಷ ಬಾಟಲಿ ಕೊಕೋ ಕೋಲಾ ನೀರು ಪ್ಲಾಚಿಮಡಾದಿಂದ ಹೊರಹೋಗಲಾರಂಭಿಸುತ್ತದೆ. 

ಅತ್ತ ಅವರ ಲಾರಿಗಳ ಓಡಾಟ ಜಾಸ್ತಿಯಾದಂತೆ ಇತ್ತ ಸುತ್ತಮುತ್ತಲ ಮೂರೂ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಬರುವ ಹತ್ತಾರು ಹಳ್ಳಿಗಳ ಬಾವಿಗಳು ನಿಧಾನಕ್ಕೆ ತಳ ಕಾಣಲಾರಂಭಿಸುತ್ತವೆ. ಅಲ್ಲಲ್ಲಿ ಕೆಲವು ಬಾವಿಗಳಲ್ಲಿ ತಳದಲ್ಲಿ ಅಲ್ಪಸ್ವಲ್ಪ ನೀರಿದ್ದರೂ ಆ ನೀರು ಮೊದಲಿನಂತೆ ಕಾಣುವುದಿಲ್ಲ. ಕುಡಿಯಲು ಸಾಧ್ಯವಾಗುತ್ತಿಲ್ಲ. ಬಟ್ಟೆ ತೊಳೆಯಲು ಸಾಧ್ಯವಾಗುತ್ತಿಲ್ಲ. ಇದಾದ ಕೆಲವೇ ದಿನಗಳಲ್ಲಿ ಆ ವರ್ಷದ ಮೊದಲ ಬೆಳೆ ಬರುತ್ತದೆ. ಯಾರಿಗೂ ಸರಿಯಾದ ಇಳುವರಿಯಿಲ್ಲ. ಈ ನಡುವೆ ಕಾರ್ಖಾನೆಯು ಉಚಿತವಾಗಿ ಕೊಟ್ಟಿದ್ದ ಮಂದ ದ್ರವರೂಪದ ತ್ಯಾಜ್ಯವನ್ನು ಉತ್ತಮ ಗೊಬ್ಬರವೆಂದು ಹೇಳಿ ರೈತರ ಹೊಲಗಳಿಗೆ ಸಾಗಿಸಿದ್ದ ಕಂಪನಿಯ ಉದ್ದೇಶದ ಬಗ್ಗೆ ಜನಕ್ಕೆ ಗುಮಾನಿ ಆರಂಭವಾಗುತ್ತದೆ. ನೀರು ನಿಧಾನವಾಗಿ ಪಾತಾಳ ಸೇರುತ್ತಿರುತ್ತದೆ. ಬೇಸಾಯ ಅಸಾಧ್ಯವಾಗುತ್ತದೆ. ಅಲ್ಲಿನ ಬಾವಿ, ಕೆರೆ, ಹೊಂಡಗಳಲ್ಲಿ ನೀರಲ್ಲಿ ಸ್ನಾನ ಮಾಡಿದ ಜನ-ಜಾನುವಾರುಗಳ ಮೈಯಲ್ಲಿ ನಿಧಾನವಾಗಿ ಬೊಕ್ಕೆಗಳು ಕಾಣಿಸಿಕೊಳ್ಳುತ್ತವೆ. ಸಾವಿರಾರು ಜನ ಜೀವನೋಪಾಯಕ್ಕಾಗಿ ವಲಸೆ ಹೋಗಲು ಆರಂಭಿಸುತ್ತಾರೆ. 

ಜನಕ್ಕೆ ತಮ್ಮ ಸಮಸ್ಯೆಗಳ ಮೂಲವನ್ನು ಹುಡುಕುವುದು ಅನಿವಾರ್ಯವಾಗುತ್ತದೆ. ನಿಜಸ್ಥಿತಿ ಅವರ ಗಮನಕ್ಕೆ ಬಂದಾಗ ಜನ ಬೆಚ್ಚಿಬೀಳುತ್ತಾರೆ. ಆ ಕಂಪನಿಯ ಆವರಣದಲ್ಲಿ ಯಮ ಸಾಮರ್ಥ್ಯದ ಆರು ಬೋರ್‌ವೆಲ್‌ಗಳಿರುತ್ತವೆ. ಇವುಗಳಿಂದ ಕಾರ್ಖಾನೆ ಪ್ರತಿನಿತ್ಯ ೧೫ ಲಕ್ಷ ಲೀ. ನೀರನ್ನು ನೆಲದಿಂದ ಹೀರಿ, ಅದಕ್ಕೆ ಪರಿಮಳ ಹಾಕಿ ರವಾನಿಸುತ್ತಿರುತ್ತದೆ. ಜನರ ಗಮನಕ್ಕೆ ಇದು ಬರುವ ಹೊತ್ತಿಗೆ ಕಂಪನಿಯ ಬೋರುಗಳೂ ಮುಷ್ಕರ ಹೂಡಿರುತ್ತವೆ. ಆಗ ಅವುಗಳಿಂದ ನಿತ್ಯ ಕೇವಲ ೮ ಲಕ್ಷ ಲೀ. ನೀರು ಮಾತ್ರ ಹೊರಬರುತ್ತಿರುತ್ತದೆ. ಈ ಕೊರತೆಯನ್ನು ಹೊಂದಿಸಿಕೊಳ್ಳಲು ಕಂಪನಿ ದೂರದೂರದ ರೈತರ ಹೊಲಗಳಿಂದ ನೀರನ್ನು ಖರೀದಿ ಮಾಡುತ್ತಿರುತ್ತದೆ. ಈ ನಡುವೆ ರೈತರು ಅವರ ಉಚಿತ ಗೊಬ್ಬರವನ್ನು ನಿರಾಕರಿಸಲಾರಂಭಿಸಿದ ಮೇಲೆ ಬೇಕಾಬಿಟ್ಟಿ ಸಿಕ್ಕಿದ ಕಡೆ ಎಸೆದ ಅಪಾಯಕಾರಿ ತ್ಯಾಜ್ಯದಿಂದ ಹೊರಬಿದ್ದ ಗಬ್ಬುನಾತ ಇಡೀ ಪ್ರದೇಶಕ್ಕೊಂದು ಹೊಸ ಹೆಸರನ್ನಿಡುವಂತೆ ಮಾಡುತ್ತದೆ. 

ಜನ ಪ್ರತಿರೋಧಿಸುತ್ತಾರೆ, ಕಂಪನಿ ಕೇರೇ ಮಾಡುವುದಿಲ್ಲ. ಅವರ ಬಾವಿಗಳು ಪೂರ್ತಿ ಬತ್ತಿಹೋಗುತ್ತವೆ. ಸುತ್ತಮುತ್ತಲ ಜಮೀನುಗಳು ಸವುಳು ನೆಲಗಳಾಗಿ, ಕೃಷಿಗೆ ಅಯೋಗ್ಯವಾಗುತ್ತವೆ. ಸುತ್ತಮುತ್ತಲ ಹಳ್ಳಿಗಳ ಮಕ್ಕಳು ಮುದುಕರಾದಿಯಾಗಿ ಎಲ್ಲರಿಗೂ ಅನೇಕ ಖಾಯಿಲೆಗಳು ಸಾಮಾನ್ಯವೆಂಬಂತೆ ಕಾಡತೊಡಗುತ್ತವೆ. ಒಂದೆಡೆ ನಿಂತುಹೋಗಿರುವ ಕೃಷಿ, ಮತ್ತೊಂದೆಡೆ ಬೀದಿ ಪಾಲಾದ ಕೃಷಿ ಕಾರ್ಮಿಕರು, ಈ ನಡುವೆ ಕಂಡು ಕೇಳರಿಯದ ರೋಗಗಳು, ಔಷಧ ವೆಚ್ಚ , ಜೊತೆಗೆ ಗಬ್ಬು ವಾಸನೆ. ರೋಸಿಹೋದ ಜನ ಸರ್ಕಾರದ ಮೊರೆ ಹೋಗುತ್ತಾರೆ. ಸರ್ಕಾರ ಕಂಪನಿಯ ಪರವಾಗಿ ನಿಲ್ಲುತ್ತದೆ. ಜನ ಕಾರ್ಖಾನೆಯ ಮುಂದೆ ಪ್ರದರ್ಶನ ಪ್ರತಿಭಟನೆಗಿಳಿಯುತ್ತಾರೆ, ಪಿಕೆಟಿಂಗ್ ಮಾಡುತ್ತಾರೆ. ಪೋಲೀಸರು ನಿರ್ದಾಕ್ಷಿಣ್ಯವಾಗಿ ಲಾಠಿಬೀಸಿ ಜನರನ್ನು ಮಗ್ಗ ಮಲಗಿಸುತ್ತಾರೆ. ಪ್ರತಿಯೊಬ್ಬರ ಮೇಲೆ ಅಸಂಖ್ಯಾತ ಐಪಿಸಿ ಕೋಡುಗಳ ಮೂಲಕ ಸಾಧ್ಯವಾದ ಎಲ್ಲಾ ಮೊಕದ್ದಮೆಗಳನ್ನು ಹೂಡುತ್ತಾರೆ. ಕಾರ್ಖಾನೆಯ ಕಾವಲಿಗೆ ಪೋಲೀಸ್ ತುಕಡಿ ಬರುತ್ತದೆ. ಅನಿವಾರ್ಯವಾಗಿ ಸ್ಥಳೀಯರು ಬೀದಿಗಳಿಯುತ್ತಾರೆ. 

ಈ ಹೋರಾಟ ಆರಂಭವಾಗಿದ್ದು ೨೨ ನೇ ಏಪ್ರಿಲ್ ೨೦೦೨ ರಂದು, ಉದ್ಘಾಟಿಸಿದ್ದು ಆದಿವಾಸಿ ಗೋತ್ರ ಮಹಾಸಭಾದ ನಾಯಕಿ ಸಿ.ಕೆ.ಜಾನು. ಈ ದುರಂತದ ಹೆಚ್ಚು ಬಲಿಪಶುಗಳು ಆದಿವಾಸಿಗಳು ಮತ್ತು ದಲಿತರು. ಈ ಹೋರಾಟಕ್ಕೆ ನಾಡಿದ್ದು ೧೫ ತಾರೀಖಿಗೆ ಒಂದು ಸಾವಿರ ದಿನಗಳು ತುಂಬಲಿವೆ. 

ಈ ನಡುವೆ ಆ ಪ್ರದೇಶದ ಮಿಲಿಯಾನು ಲೀಟರ್ ನೀರು ಭೂಮಿಯಿಂದ ಹೊರಬಂದು ನಗರವಾಸಿ ಶೋಕಿಲಾಲರ ಹೊಟ್ಟೆಸೇರಿ, ಮೂತ್ರವಾಗಿ ಕೇರಳದ ಉದ್ದಗಲಕ್ಕೂ ಹರಿದಾಡುತ್ತಿದೆ. ಅಲ್ಲಿನ ಸಾವಿರಾರು ಆದಿವಾಸಿಗಳು, ದಲಿತರು ಹಸಿವು ಅಪಮಾನಗಳಿಂದ ಕಂಗೆಟ್ಟಿದ್ದಾರೆ. ಸರ್ಕಾರ ಕಂಪನಿಯ ರಕ್ಷಣೆಗೆ ಟೊಂಕಕಟ್ಟಿ ನಿಂತಿದೆ. ಇವುಗಳ ನಡುವೆ ಸ್ಥಳೀಯ ಗ್ರಾಮ ಪಂಚಾಯ್ತಿಗಳು ಕಾರ್ಖಾನೆಯ ಪರವಾನಗಿಯನ್ನು ರದ್ದುಪಡಿಸಿವೆ. ಇದನ್ನು ಪ್ರಶ್ನಿಸಿ ಕಂಪನಿ ಕೇರಳ ಹೈಕೋರ್ಟಿನ ಮೆಟ್ಟಿಲು ಹತ್ತಿದೆ. ಕೋರ್ಟು ಪಂಚಾಯತಿಯ ಆದೇಶಕ್ಕೆ ತಡೆಯಾಜ್ಞೆ ನೀಡಿ, ಇದಕ್ಕೆ ಸಂಬಂಧಿಸಿದ ಅಧಿಕಾರದ ಮುಂದೆ ಮನವಿ ಸಲ್ಲಿಸುವಂತೆ ಸೂಚಿಸಿದೆ. ಇದನ್ನು ಆಧರಿಸಿ ಕಂಪನಿ ರಾಜ್ಯದ ಸ್ಥಳೀಯ ಸ್ವಯಂ ಆಡಳಿತ ಇಲಾಖೆಯ ಮುಂದೆ ಮನವಿ ಸಲ್ಲಿಸಿದೆ. ಆ ಆಡಳಿತವು ತನ್ನ ಮಧ್ಯಂತರ ಆದೇಶದಲ್ಲಿ ಎಲ್ಲಾ ಸರ್ಕಾರಿ ಇಲಾಖೆಗಳೂ ಮಾಡುವಂತೆ ಈ ತೀರ್ಮಾನಕ್ಕೆ ಬರುವುದಕ್ಕೆ ಮುಂಚೆ ‘ತಜ್ಞರ ಸಮಿತಿಯನ್ನು’ ನೇಮಿಸಿ ಅದರಿಂದ ವರದಿ ಪಡೆಯಿರಿ ಎಂದು ಹೇಳಿದೆ. ಈ ಮಧ್ಯಂತರ ಆದೇಶವನ್ನು ಪ್ರಶ್ನಿಸುತ್ತಾ ಪಂಚಾಯ್ತಿಯು ಈ ರೀತಿ ತಜ್ಞರ ಸಮಿತಿಯನ್ನು ನೇಮಿಸುವುದಕ್ಕೆ ಮುಂಚೆ ಕಾರ್ಖಾನೆಯು ನಾವು ಈ ಕೆಳಗೆ ಮಂಡಿಸಿರುವ ೧೬ ಪ್ರಶ್ನೆಗಳಿಗೆ ಪಂಚಾಯ್ತಿಗೆ ಬಂದ ಉತ್ತರಿಸಲಿ ಎಂದು ಹೇಳಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಪಂಚಾಯ್ತಿಗೆ ಹೋದ ಕಂಪನಿಯ ಅಧಿಕಾರಿ ಬರಿಗೈಯಲ್ಲಿ ಹೋಗಿದ್ದಾನೆ. ಪ್ರಶ್ನೆಗಳಿಗೆ ಉತ್ತರಿಸಲು ಅವನಿಂದ ಸಾಧ್ಯವಾಗಿಲ್ಲ. 

ಇದಾಗುವಷ್ಟರಲ್ಲಿ ಪೆರುಮಟ್ಟಿ ಗ್ರಾಮ ಪಂಚಾಯ್ತಿಯು ತನ್ನ ಪರವಾನಗಿ ರದ್ದು ಆದೇಶಕ್ಕೆ ಸರ್ಕಾರವು ನೀಡಿದ್ದ ತಡೆಯಾಜ್ಞೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿ ಹೈಕೋರ್ಟಿನಲ್ಲಿ ವಿಚಾರಣೆಗೆ ಬಂದು, ಹೈಕೋರ್ಟು ಒಂದು ತಿಂಗಳೊಳಗೆ ಕಾರ್ಖಾನೆಯು ಬೋರಿನ ನೀರಿಗೆ ಬದಲಾಗಿ ಬೇರೊಂದು ಮಾರ್ಗವನ್ನು ಕಲ್ಪಿಸಿಕೊಳ್ಳುವಂತೆ ಸೂಚಿಸಿದೆ. ಹಾಗೊಂದು ಪಕ್ಷ ಕಾರ್ಖಾನೆ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡರೆ ಕಾರ್ಖಾನೆಯ ವ್ಯವಹಾರದಲ್ಲಿ ಪಂಚಾಯ್ತಿಯು ಮಧ್ಯಪ್ರವೇಶಿಸಬಾರದೆಂದೂ, ಅಲ್ಲಿಯವರೆಗೆ ಕಾರ್ಖಾನೆಯು ತನ್ನ ೩೬ ಎಕರೆ ಪ್ರದೇಶಕ್ಕೆ ಅನುಗುಣವಾಗಿ ಕೃಷಿಗೆ ಹಾಗೂ ದಿನಬಳಕೆಗೆ ಒಬ್ಬ ರೈತ ಎಷ್ಟು ನೀರನ್ನು ಬಳಸುತ್ತಾನೋ ಅಷ್ಟು ನೀರನ್ನು ಅಂತರ್ಜಲದಿಂದ ಎತ್ತಿ ಬಳಸಬಹುದೆಂದೂ, ಒಂದು ತಿಂಗಳ ನಂತರ ಅವರ ಕೊಳವೆ ಬಾವಿಗಳ ಬಳಕೆಯನ್ನು ನಿಲ್ಲಿಸಿರುವುದನ್ನು ಖಚಿತಪಡಿಸಬೇಕೆಂದೂ ಹೇಳಿದೆ. ಮುಂದುವರಿದು ಈ ರೀತಿ ಸರ್ಕಾರವು ಒಂದು ಕಂಪನಿಗೆ ಇಷ್ಟೊಂದು ಅಗಾಧ ಪ್ರಮಾಣದ ಅಂತರ್ಜಲವನ್ನು ಬಳಸಲು ಅನುಮತಿ ನೀಡಲು ಬರುವುದಿಲ್ಲ. ಹಾಗೊಂದು ಪಕ್ಷ ಇದೇ ಆಧಾರದ ಮೇಲೆ ಎಲ್ಲಾ ರೈತರೂ ಇದೇ ಪ್ರಮಾಣದಲ್ಲಿ ಅಂತರ್ಜಲವನ್ನು ಬಳಸಲು ಕೋರಿದರೆ ಅದಕ್ಕೆ ಸರ್ಕಾರ ಅನುಮತಿ ನೀಡಬೇಕಾಗುತ್ತದೆ, ಆಗ ಅಂತರ್ಜಲದ ಕಥೆ ಏನಾಗುತ್ತದೆ? ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದೆ. 

ಏಕ ಪೀಠದ ಈ ಮೇಲಿನ ತೀರ್ಪನ್ನು ಪ್ರಶ್ನಿಸಿ ಡಿವಿಷನಲ್ ಬೆಂಚಿನ ಮುಂದೆ ಕಂಪನಿ ಮೇಲ್ಮನವಿಯನ್ನು ಸಲ್ಲಿಸಿದೆ. ಇದರಲ್ಲಿ ಕಂಪನಿ ‘ಒಂದು ಪಂಚಾಯ್ತಿಗೆ ಇಂಥಾ ಒಂದು ಕಂಪನಿಯ ಪರವಾನಗಿಯನ್ನು ರದ್ದುಪಡಿಸುವ ಅಥವಾ ಪ್ರಶ್ನಿಸುವ ಅಧಿಕಾರವಿಲ್ಲ’ ಎಂದು ಹೇಳಿದೆ. ವಿಚಾರಣೆ ಇನ್ನೂ ಬಾಕಿ ಇದೆ. ಈ ನಡುವೆ ನಡೆದಿರುವ ಎಲ್ಲಾ ಸಂಶೋದನೆಗಳೂ ಕಂಪನಿಯ ವಿರುದ್ದವಾಗಿವೆ. ಮನುಷ್ಯನ ಕೇಂದ್ರ ನರವ್ಯೂಹ, ಮೂತ್ರಕೋಶ ಹಾಗೂ ಮಿದುಳಿನ ಕ್ರಿಯೆಗಳ ಮೇಲೆ ಅಗಾಧ ಪರಿಣಾವನ್ನುಂಟುಮಾಡಿ, ಜೀವ ತಗೆಯಬಲ್ಲ ಕ್ಯಾಡ್ಮಿಯಂ ಮತ್ತು ಸೀಸದ ಧಾತುಗಳು ಅಲ್ಲಿನ ತ್ಯಾಜ್ಯದಲ್ಲಿ ನಿಗಧಿತ ಮಿತಿಗಿಂತ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿರುವುದನ್ನು ಸಂಶೋಧನೆಗಳು ಸ್ಥಿರಪಡಿಸಿವೆ. 

ಈ ಹಿನ್ನೆಲೆಯಲ್ಲಿ ಭವಿಷ್ಯದ ವಿಚಾರಣೆ ಕೇವಲ ನೀರನ್ನು ಮಾತ್ರ ಕುರಿತು ಯೋಚಿಸುತ್ತದೋ ಇಲ್ಲಾ ಸಮಗ್ರವಾಗಿ ಹಳ್ಳಿಯ ವಿನಾಶವನ್ನು ಗಮನಿಸುತ್ತದೋ ಕಾದು ನೋಡಬೇಕಾಗಿದೆ. ಇದಕ್ಕಾಗಿ ಈ ಹೋರಾಟದ ಮುಂಚೂಣಿಯಲ್ಲಿರುವ ‘ಕೊಕೋ ಕೋಲಾ ವಿರುದ್ಧ ಸಮರ ಸಮಿತಿ’ ಹಾಗೂ ಇದನ್ನು ಬೆಂಬಲಿಸುತ್ತಿರುವ ಹಲವು ಜನಪರ ಸಂಘಟನೆಗಳು ಹಾಗೂ ವ್ಯಕ್ತಿಗಳು ಕುತೂಹಲದಿಂದ ಕಾದಿದ್ದಾರೆ. ಇದೊಂದು ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯಾಗಿರುವುದರಿಂದ ಅಂಥಾ ಮಾಧ್ಯಮಗಳೂ ಈ ನಿರೀಕ್ಷೆಯಲ್ಲಿವೆ. 

ಈ ನಡುವೆ ಪಾಕಿಸ್ತಾನ ಸಿಂಧ್ ಪ್ರಾಂತ್ಯ ಹೈಕೋರ್ಟ್ ಇಂಥದ್ದೇ ಒಂದು ತಾಪತ್ರಯದಲ್ಲಿ ಸಿಕ್ಕಿಕೊಂಡು ಹೊರಬಂದ ಘಟನೆಯೊಂದು ವರದಿಯಾಗಿದೆ. ಕರಾಚಿಯ ಹೊರವಲಯದಲ್ಲಿ ಸಿಂಧ್ ಸರ್ಕಾರ ಒಂದೆಡೆ “ಶಿಕ್ಷಣ ನಗರ"ವನ್ನು ಸೃಷ್ಠಿಸಲು ಜಮೀನನ್ನು ಮಂಜೂರು ಮಾಡಿತ್ತು.ಇಲ್ಲಿ ಜಮೀನು ಪಡೆದ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಪಾಕಿಸ್ತಾನದ ಪ್ರಖ್ಯಾತ ‘ಸಿಂಧ್ ಇನ್ಸ್‌ಟಿಟ್ಯೂಟ್ ಆಫ್ ಯೂರಾಜಲಿ’, ಹಾಗೂ ‘ಜುಲ್ಫಿಕರ್ ಆಲಿ ಬುಟ್ಟೋ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ’ ಸಂಸ್ಥೆಗಳು ಸೇರಿದ್ದವು. ಈ ನಡುವೆ ಸಿಂಧ್ ಸರ್ಕಾರ ಅದೇ ಪ್ರದೇಶದಲ್ಲಿ ಇದೇ ಕೊಕೋ ಕೋಲಾ ಕಂಪನಿಯ ಸೋದರನಾದ ನೆಸ್ಲೆ ಕಂಪನಿಗೆ ಬಾಟಲಿ ನೀರನ್ನು ಉತ್ಪಾದಿಸುವ ಕಾರ್ಖಾನೆಗೆ ಸುಮಾರು ೮.೫ ಹೆಕ್ಟೇರ್ ನೆಲವನ್ನು ಕೊಟ್ಟಿತ್ತು. 

ಈ ಕಾರ್ಖಾನೆಯು ಇಲ್ಲಿಂದ ಪ್ರತಿದಿನ ೩೦ ಕೋಟಿ ಲೀಟರ್ ನೀರನ್ನು ಭೂಮಿಯಿಂದ ತಗೆದು, ಅದನ್ನು ಸಂಸ್ಕರಿಸಿ, ಬಾಟಲಿಮಾಡಿ, ಸಧ್ಯಕ್ಕೆ ಅಮೆರಿಕಾದ ಸೇನೆಗಳು ಕಾರ್ಯಾಚರಣೆಯಲ್ಲಿರುವ ಅಪ್ಘಾನಿಸ್ಥಾನ ಮತ್ತು ಕೆಲವು ಅರಬ್ ದೇಶಗಳಿಗೆ ಸರಬರಾಜು ಮಾಡುವ ಯೋಜನೆ ಹೊಂದಿತ್ತು. ಇದಕ್ಕಾಗಿ ಹತ್ತು ಮಿಲಿಯಾನು ಡಾಲರ್‌ಗಳಷ್ಟು ಬಂಡವಾಳ ಹೂಡಲು ತೀರ್ಮಾನಿಸಿತ್ತು. ಆದರೆ ಈ ಕಾರ್ಖಾನೆ ಆರಂಭವಾಗುವುದಕ್ಕೆ ಮುಂಚೆಯೇ ಅಲ್ಲಿ ಜಾಗ ಪಡೆದಿದ್ದ ಶಿಕ್ಷಣ ಸಂಸ್ಥೆಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದವು. ಈ ಪ್ರದೇಶವು ಅಂತರ್ಜಲದ ದೃಷ್ಟಿಯಿಂದ ತೀರಾ ನಾಜೂಕಿನದಾಗಿದ್ದು. ಪ್ರತಿದಿನ ಇಷ್ಟೋಂದು ಅಗಾಧ ಪ್ರಮಾಣದ ನೀರನ್ನು ಹೊರತಗೆಯುವುದರಿಂದ ನಾಳೆ ಅಲ್ಲಿ ವಾಸಿಸುವ ಯಾರಿಗೂ ನೀರೇ ಇಲ್ಲದಂತಾಗುತ್ತದೆ. ಆದರೆ ಅಲ್ಲಿನ ಅಂತರ್ಜಲ ಮುಗಿದ ತಕ್ಷಣ ಈ ಕಾರ್ಖಾನೆ ಬೇರೊಂದು ನೀರು ಸಿಗುವ ಜಾಗಕ್ಕೆ ತನ್ನ ಟೆಂಟನ್ನು ಬದಲಾಯಿಸುತ್ತದೆ. ಆದರೆ ನಾವು ಹಾಗೆ ಮಾಡಲು ಬರುವುದಿಲ್ಲ. ಆದ್ದರಿಂದ ಈ ಕಾರ್ಖಾನೆಯು ಇಲ್ಲಿ ಸ್ಥಾಪನೆಯಾಗದಂತೆ ತಡೆಯಬೇಕು ಎಂದು ಕೋರಲಾಗಿತ್ತು. 

ವಾದವಿವಾದಗಳು ನಡೆದವು ಶಿಕ್ಷಣ ಸಂಸ್ಥೆಗಳ ಪರವಾಗಿ ವಾದಿಸುತ್ತಿದ್ದ ವಕೀಲರು ಕಂಪನಿಯು ಹೂಡಿದ ಅನೇಕ ಕುತಂತ್ರಗಳನ್ನು ಬಯಲಿಗೆಳೆದರು ಅದರಲ್ಲಿ ಮುಖ್ಯವಾದದದ್ದು... “ಕಂಪನಿಯು ಸಲ್ಲಿಸಿರುವ ತನ್ನ ‘ಪರಿಸರ ಪರಿಣಾಮ ಅಧ್ಯಯನ’ವು ಅದರ ನಿಜವಾದ ಹೆಸರಿನಲ್ಲಿಲ್ಲ. ಆಧ್ಯಯನ ವರದಿ ಒಂದು ಪಕ್ಷ ಸತ್ಯವಾದದ್ದೇ ಆದರೆ ಅದು ಏಕೆ ಸುಳ್ಳು ಹೆಸರಿನಲ್ಲಿ ವರದಿಯನ್ನು ಮಂಡಿಸಿದೆ" ಎಂದರು. ಇದಕ್ಕೆ ಕಂಪನಿಯ ಬಳಿ ಉತ್ತರವಿರಲಿಲ್ಲ. ಈ ಕಂಪನಿಗಳು ಸ್ಥಳೀಯ ಆಡಳಿತಗಳ ಕಣ್ಣಿಗೆ ಮಣ್ಣೆರಚಲು ಇಂಥಾ ಆಟಗಳನ್ನು ವ್ಯವಸ್ಥಿತವಾಗಿ ಆಡುತ್ತವೆ ಎಂಬುದನ್ನು ಸಾಬೀತು ಪಡಿಸಿದರು. 

ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ ಪ್ಲಾಚಿಮಡದ ಕೊಕೋ ಕೋಲಾ ಕಂಪನಿ ಜಮೀನುಗಳನ್ನು ಬೇರೆಯವರ ಹೆಸರಿನಲ್ಲಿ ಖರೀದಿಸಿತ್ತು. ತನ್ನ ಅಗತ್ಯಕ್ಕೆ ಮೀರಿದ ಅಥವಾ ತನಗೆ ಮಂಜೂರಾದ ಭೂಮಿಗಿಂತ ಹೆಚ್ಚು ಭೂಮಿಯನ್ನು ಖರೀದಿಸುವುದು ಇವುಗಳ ಇನ್ನೊಂದು ಕುತಂತ್ರವಾಗಿರುತ್ತದೆ. 

ಈ ನಡುವೆ ಕಂಪನಿ ಸಾವಿರಾರು ನೆಪಗಳನ್ನು ಹೇಳಿತು. ಆದರೆ ಶಿಕ್ಷಣ ಸಂಸ್ಥೆಗಳ ವಕೀಲರು ವೈeನಿಕವಾಗಿ ಮಂಡಿಸಿದ ವಾದದ ಮುಂದೆ ಕಂಪನಿಗೆ ಉತ್ತರವಿರಲಿಲ್ಲ. ಕೊನೆಗೆ ಶಿಕ್ಷಣ ಸಂಸ್ಥೆಗಳ ವಕೀಲರು “ಈ ವರೆಗೂ ನಾನು ಹೇಳಿದ್ದು ವೈಜ್ಞಾನಿಕ ವಿವರಗಳನ್ನು ಆದರೆ ಈ ಕಂಪನಿಯು ಇಸ್ಲಾಮಿನ ಮೂಲಭೂತ ಸಿದ್ದಾಂತಗಳನ್ನೇ ಉಲ್ಲಂಘಿಸುತ್ತಿದೆ. ಇಸ್ಲಾಂ ಧರ್ಮದ ನೀತಿಯ ಪ್ರಕಾರ ಪರಿಸರ ಹಾಗೂ ಅದರ ಸಂರಕ್ಷಣೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮನುಷ್ಯ ಹೊಣೆ. ಹಾಗೂ ನೀರು ಸಾರ್ವಜನಿಕ ಸಂಪನ್ಮೂಲ ಇದನ್ನು ಹಂಚಿಕೊಂಡು ಬದುಕಬೇಕು. ಈ ನೀರಿನ ಮೇಲೆ ಹೀಗೆ ಯಾರೊಬ್ಬರೂ ಅಧಿಕಾರ ಹೊಂದಬಾರದು, ಹೀಗೆ ಹೊಂದಲು ಪ್ರಭುತ್ವಗಳು ಅನುಮತಿಯನ್ನೂ ನೀಡಬಾರದು, ಇದು ಇಸ್ಲಾಂ ತತ್ವಕ್ಕೆ ವಿರುದ್ಧ" ಎಂದು ಹೇಳಿದರು. 

ಇದಕ್ಕೆ ಪ್ರತಿಯಾಗಿ ನೆಸ್ಲೆ ವಕೀಲರು “ ಆ ಪ್ರದೇಶದಲ್ಲಿ ಸಿಗುವ ನೀರು ಮನುಷ್ಯನ ಬಳಕೆಗೆ ಯೋಗ್ಯವಾಗಿಲ್ಲ. ಆದರೂ ನಾವು ಅದನ್ನು ಸಂಸ್ಕರಿಸಿ ನೀಡುವ ಶ್ರಮವಹಿಸುತ್ತೇವೆ" ಎಂದರು. ಆದರೆ ನ್ಯಾಯಾಧೀಶರು “ಈ ಕಂಪನಿ ಅಲ್ಲಿ ಯಾವುದೇ ಕಾರಣದಿಂದ ನೀರನ್ನು ತಗೆಯುವ ಪ್ರಯತ್ನಕ್ಕೆ ನೆರವಾಗುವಂತಹ ಯಾವ ಘಟಕಗಳನ್ನೂ ಸ್ಥಾಪಿಸಕೂಡದು. ಮತ್ತು ಆ ಜಾಗವನ್ನು ಸರ್ಕಾರ ವಹಿಸಿಕೊಂಡು ಶಿಕ್ಷಣ ಕಾರಣಗಳಿಗೆ ನೀಡಬೇಕು" ಎಂದು ಎಂದಿತು. ನೆಸ್ಲೆ ಬಾಲಮುದುರಿಕೊಂಡಿತು. 

ಇದು ನೆರೆ ರಾಜ್ಯದ, ನೆರೆ ದೇಶದ ಕತೆಯಾಯಿತು. ಇನ್ನು ನಮ್ಮ ರಾಜ್ಯದ ಕತೆ? ನಮ್ಮಲ್ಲೂ ಇಂತಾ ಹಲವು ಕಂಪನಿಗಳು ಕಾರ್ಯಪ್ರವೃತ್ತವಾಗಿವೆ. ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಬಿಡದಿ ಬಳಿಯ ಕೊಕೋ ಕೋಲಾ ಕಾರ್ಖಾನೆ ಈಗಾಗಲೇ ಪ್ಲಾಚಿಮಡದ ದಾಖಲೆಗಳನ್ನೆಲ್ಲಾ ಮುರಿದು ಹಾಕಿದೆ. ಬೆಂಗಳೂರು-ತುಮಕೂರು ರಸ್ತೆಯಲ್ಲಿರುವ ಪೆಪ್ಸಿ ಕಂಪನಿ ಯಾವ ಪ್ರತಿಭಟನೆಯೂ ಇಲ್ಲದೆ ತಣ್ಣಗೆ ಸಾಗುತ್ತಿದೆ. ಅಲ್ಲಿನ ಸಮಸ್ಯೆಗಳ ಬಗ್ಗೆ ಸ್ಥಳೀಯರನ್ನು ಕೇಳುವ ಮಂದಿಯೇ ಇಲ್ಲದಂತಾಗಿದ್ದಾರೆ. ಅಂತಾ ಪ್ರಯತ್ನಕ್ಕೆ ಪ್ಲಾಚಿಮಡ ಮತ್ತು ಕರಾಚಿ ಸ್ಫೂರ್ತಿಯಾದರೆ ಅವರ ಹೋರಾಟಗಳು ಸಾರ್ಥಕವಾದಂತೆ. 
೧೫ನೇ ಜುಲೈ-೨೦೦೫

ಆಗ 24, 2015

ಆಗಸ್ಟ್ 30ರಂದು ಟಿ.ಎಸ್.ವಿವೇಕಾನಂದರ ಪುಸ್ತಕಗಳ ಬಿಡುಗಡೆ

ಇದೇ ಆಗಸ್ಟ್ 30ರಂದು ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷತ್ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಂಜೆ 5:30ಕ್ಕೆ ಟಿ.ಎಸ್.ವಿವೇಕಾನಂದರು ಬರೆದಿರುವ "ಭೂಮಿಗೀತೆ" ಮತ್ತು "ಜೀವತಲ್ಲಣಗಳ ಆತ್ಮಕಥನ" ಪುಸ್ತಕಗಳು ಬಿಡುಗಡೆಯಾಗುತ್ತಿದೆ. ಅಗ್ರಹಾರ ಕೃಷ್ಣಮೂರ್ತಿ, ದಿನೇಶ್ ಅಮೀನ್ ಮಟ್ಟು ಮತ್ತು ಕೋಟಗಾನಹಳ್ಳಿ ರಾಮಯ್ಯ ಮುಖ್ಯ ಅತಿಥಿಗಳಾಗಿರುವ ಸಮಾರಂಭದ ಅಧ್ಯಕ್ಷತೆ ಡಾ.ಎಲ್.ಹನುಮಂತಯ್ಯರವರದು.

ಆಗ 10, 2015

ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಿಗೊಂದು ಬಹಿರಂಗ ಪತ್ರ!

ಸನ್ಮಾನ್ಯ ಅಧ್ಯಕ್ಷರಿಗೆ ನಮಸ್ಕಾರಗಳು,
ಮೊದಲಿಗೆ ನಿಮ್ಮ ಕ್ಷಮೆ ಕೋರುತ್ತೇನೆ: ಹೀಗೊಂದು ಬಹಿರಂಗ ಪತ್ರ ಬರೆದು ಬಿಡುವಿರದ ತಮ್ಮ ಸಮಯವನ್ನು ಹಾಳು ಮಾಡುತ್ತಿರುವುದಕ್ಕೆ.

ವಿಷಯ ನಿಮಗೆ ಗೊತ್ತಿಲ್ಲದ್ದೇನೂ ಅಲ್ಲ! ನಮ್ಮ ಅರ್ಧ ನಾಡು ಮಳೆಯಿರದೆ ಬರದಿಂದ ತತ್ತರಿಸುತ್ತಿದೆ. ಈಗಾಗಲೇ ತಮಗಾದ ಬೆಳೆನಷ್ಟ ಮತ್ತು ತೀರಿಸಲಾಗದ ಸಾಲಭಾದೆಯಿಂದ ಬಹಳಷ್ಟು ರೈತರು ಆತ್ಮಹತ್ಯೆಯ ಹಾದಿ ಹಿಡಿದು ನಡೆದು ಹೋಗಿದ್ದಾರೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಬಹುದೆಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಇದುವರೆಗು ಎಷ್ಟು ಜನ ಆತ್ಮಹತ್ಯೆ ಮಾಡಿಕೊಂಡರು ಎಂಬ ಅಂಕಿ ಅಂಶಗಳ ಒಣಪಾಠವನ್ನು ನಾನಿಲ್ಲಿ ಒಪ್ಪಿಸಹೋಗುವುದಿಲ್ಲ ಮತ್ತು ಅದು ನನ್ನ ಉದ್ದೇಶವೂ ಅಲ್ಲ. 

ಇರಲಿ ವಿಷಯಕ್ಕೆ ಬರುತ್ತೇನೆ: ಈಗಾಗಲೇ ಕೆಲವು ಜನಪರ ಸಂಘಟನೆಗಳು ಅಕ್ಟೋಬರಿನಲ್ಲಿ ರಾಯಚೂರಿನಲ್ಲಿ ನಡೆಯಲಿರುವ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನವನ್ನು ಮುಂದೂಡಬೇಕೆಂಬ ಬೇಡಿಕೆ ಇಟ್ಟಿರುವುದು ತಮಗೆ ತಿಳಿದ ವಿಚಾರವಾಗಿದೆ. ನಾನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ವರ್ಷದ ಸಮ್ಮೇಳನವನ್ನೇ ರದ್ದು ಮಾಡಬೇಕೆಂದು ಕೋರುತ್ತೇನೆ. ಕ್ಷಮಿಸಿ, ಹೀಗೆ ಹೇಳದೆ ವಿಧಿಯಿಲ್ಲ. ಯಾಕೆಂದರೆ ಬರಗಾಲದ ಇಂತಹ ಸನ್ನಿವೇಶದಲ್ಲಿ, ಜೊತೆಗೆ ಸಾಲು ಸಾಲಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸಮಯದಲ್ಲಿ ನಾವುಗಳು ಸಾಹಿತ್ಯ ಸಮ್ಮೇಳನದ ಹೆಸರಲ್ಲಿ ಸರಕಾರದ ಹಣವನ್ನು ಖರ್ಚು ಮಾಡಿ ಹಬ್ಬದ ಸಡಗರವನ್ನು ಆಚರಿಸುವುದು ಸೂಕ್ತವಲ್ಲವೆಂದು ನನ್ನ ಅನಿಸಿಕೆಯಾಗಿದೆ. ಇದರಲ್ಲಿ ಹಣದ ವಿಷಯ ಮಾತ್ರ ಅಡಕವಾಗಿಲ್ಲ. ಬದಲಿಗೆ ಸೂಕ್ಷ್ಮ ಮನಸ್ಸಿನವರೆನಿಸಿಕೊಂಡ ಸಾಹಿತಿಗಳ ಮತ್ತು ಸಾಹಿತ್ಯಾಸಕ್ತರ ನೈತಿಕ ಹೊಣೆಗಾರಿಕೆಯಾಗಿದೆ. ಸಾಹಿತಿಯಾದವನು ಕೊನೆಗೂ ಹೊಣೆಗಾರನಾಗುವುದು ತಾನು ಬದುಕುವ, ಬರೆಯುವ ಸಮಾಜಕ್ಕೆ ತಾನೆ? ಈ ವಿಚಾರವನ್ನು ನಾನು ಬಹಳಷ್ಟು ಜನರ ಜೊತೆ ಚರ್ಚಿಸಿದಾಗ ಕೇಳಿಬಂದ ಅಭಿಪ್ರಾಯಗಳು ಆಘಾತಕಾರಿಯಾಗಿದ್ದವು. ಅವುಗಳಲ್ಲಿ ಕೆಲವನ್ನು ನಾನಿಲ್ಲಿ ಹೇಳಬಯಸುತ್ತೇನೆ: ಮೊದಲ ಅನಿಸಿಕೆ ಒಂದು ಊರಲ್ಲಿ ಯಾರಾದರು ಸತ್ತರೆ ಆ ಊರಿನವರೇನು ಉಪವಾಸ ಇರುವುದಿಲ್ಲ. ಹೌದು ನಾನು ಒಪ್ಪುತ್ತೇನೆ, ಊರವರಿರಲಿ ಆ ಮನೆಯವರೆ ಯಾರೂ ಉಪವಾಸ ಇರುವುದಿಲ್ಲ. ಮಣ್ಣು ಮುಗಿದ ಮೇಲೆ ಅವರೂ ಉಣ್ಣುತ್ತಾರೆ, ಯಥಾ ಪ್ರಕಾರ ಜೀವನ ಸಾಗುತ್ತದೆ. ಆದರೆ ಸತ್ತವರ ಸೂತಕದ ಮನೆಯಲ್ಯಾರು ಹಬ್ಬದ ಅಡುಗೆ ಮಾಡಿ ಚಪ್ಪರ ಹಾಕಿ ಉಂಡು ನಲಿಯುವುದಿಲ್ಲ. ಇನ್ನೊಂದು ಅನಿಸಿಕೆ: ಸಮ್ಮೇಳನ ರದ್ದು ಮಾಡಿದರೆ ರಾಯಚೂರು ಭಾಗದ ಜನರ ಬಾವನೆಗಳಿಗೆ ಧಕ್ಕೆ ಯಾಗುತ್ತದೆ. ಇದನ್ನು ಖಂಡಿತಾ ಒಪ್ಪಲು ಸಾದ್ಯವಿಲ್ಲ .ಸಮ್ಮೇಳನದಿಂದ ಲಾಭ ಮಾಡಿಕೊಳ್ಳುವ ಕೆಲವರಿಗೆ ಬೇಸರವಾಗಬಹುದೇನೊ ಆದರೆ ತಮ್ಮ ರೈತ ಬಂದುಗಳನ್ನು ಕಳೆದುಕೊಂಡು ಬರದಿಂದ ತತ್ತರಿಸುತ್ತಿರುವ ಆ ಭಾಗದ ಜನರು ಇದನ್ನವರು ಮನಪೂರ್ವಕವಾಗಿಯೇ ಸ್ವಾಗತಿಸುತ್ತಾರೆ. ನನಗೆ ಅರಿವಿರುವಂತೆ ನಮ್ಮ ಜನ ಸಾವಿನ ಮನೆಯಲ್ಲಿ ಸಂಭ್ರಮ ಆಚರಿಸುವವರಲ್ಲ. ಇನ್ನು ಕೆಲವರ ಪ್ರಶ್ನೆ ರಾಜಕಾರಣಿಗಳು ಯಾವುದನ್ನು ನಿಲ್ಲಿಸಿದ್ದಾರೆಂಬುದು? ಇದು ಎಲ್ಲದಕ್ಕೂ ರಾಜಕಾರಣವನ್ನು ಹೊಣೆ ಮಾಡುವ ಪ್ರಶ್ನೆ. ಒಂದು ಸಾಹಿತ್ಯ ಸಮ್ಮೇಳನ ನಡೆಸುವುದು ಬಿಡುವುದು ಪರಿಷತ್ತು ಮತ್ತು ಸಾಹಿತ್ಯಾಸಕ್ತರ ಕೆಲಸವೇ ಹೊರತು ರಾಜಕಾರಣಿಗಳದ್ದಲ್ಲ. ಹಾಗಾಗಿ ನಾವು ಎಲ್ಲದಕ್ಕೂ ರಾಜಕಾರಣಿಗಳನ್ನು ದೂರುವುದು ತರವಲ್ಲ. ಸಾಹಿತ್ಯ ಸಮ್ಮೇಳನವೆನ್ನುವುದು ಕನ್ನಡಿಗರ ಕೆಲಸ. ಅದನ್ನು ಮಾಡುವುದು ಬೇಡವೆನ್ನುವುದು ಅವರದೇ ನಿರ್ಧಾರ. ಇನ್ನು ಕನ್ನಡಿಗರ ಅಭಿಮಾನಕ್ಕೆ ಬರಬಂದಿಲ್ಲ. ದುಡ್ಡು ಕೊಡುವವರು ಇದ್ದಾರೆ . ಸಮ್ಮೇಳನ ನಡೆಯಲಿ. ಎನ್ನುವವರೂ ಇದ್ದಾರೆ. ಹೌದು ಕನ್ನಡಿಗರ ಅಭಿಮಾನವಿರಬೇಕಾಗಿದ್ದು: ಮೊದಲು ಅನ್ನ ಕೊಡುವ ಮಣ್ಣಿನ ಮಕ್ಕಳ ಬಗ್ಗೆ. ಅದರ ತರುವಾಯವೇ ಸಾಹಿತ್ಯ ಕಲೆಗಳೆಲ್ಲ. ಹೀಗೆ ವಾದ ಮಾಡುತ್ತಾ ಹೋದರೆ ಮಾಡುತ್ತಲೇ ಹೋಗಬಹುದು. ಆದರೆ ನನ್ನ ವಿಚಾರ ಅದಲ್ಲ. ಒಂದು ಸಾಹಿತ್ಯ ಸಮ್ಮೇಳನವನ್ನು ರದ್ದು ಮಾಡುವುದರಿಂದ ಕನ್ನಡ ಸಾಹಿತ್ಯವೇನೂ ಸತ್ತು ಹೋಗುವುದಿಲ್ಲ. ಹಾಗೆಯೇ ರದ್ದು ಮಾಡುವುದರಿಂದ ಸತ್ತವರೂ ಎದ್ದು ಬರುವುದಿಲ್ಲ. ಹಾಗಾಗಿ ಸಮ್ಮೇಳನವನ್ನು ರದ್ದು ಮಾಡಬೇಕೆನ್ನುವ ನನ್ನ ಉದ್ದೇಶ: ಸಂಕಷ್ಟದಲ್ಲಿರುವ ರೈತ ಕುಟುಂಬಗಳಿಗೆ ನಾವು ನಿಮ್ಮೊಂದಿಗಿದ್ದೇವೆ, ನಿಮ್ಮ ದು:ಖದಲ್ಲಿ ನಾವುಗಳು ಪಾಲುದಾರರು ಎಂಬ ಭಾವನೆ ಮೂಡಿಸಿ, ಆತ್ಮಹತ್ಯೆಯಂತಹ ವಿಚಾರಗಳಿಂದ ಅವರುಗಳನ್ನು ಹೊರತರುವ ಮಾನವೀಯ ಕಾಳಜಿಮಾತ್ರವಾಗಿದೆ. ಇಂತಹದೊಂದು ಕನಿಷ್ಠ ಸೌಜನ್ಯವನ್ನೂ ನಾವು ತೋರಿಸದೇ ಹೋದಲ್ಲಿ ನಾವು ರಚಿಸುವ ಸಾಹಿತ್ಯಕ್ಕೆ ಅರ್ಥವಿರುವುದಿಲ್ಲ.

ಅದರ ಬದಲಿಗೆ ಅದೇ ಅಕ್ಟೋಬರ್ ತಿಂಗಳಲ್ಲಿ ಸಾಹಿತ್ಯ ಪರಿಷತ್ ವತಿಯಿಂದ ಪ್ರತಿ ಜಿಲ್ಲೆಯಲ್ಲೂ, ಏಕಕಾಲಕ್ಕೆ ರೈತರ ಸಮಸ್ಯೆಗಳು ಮತ್ತು ಪರಿಹಾರಗಳ ಹುಡುಕಾಟ ಎಂಬ ವಿಚಾರವನ್ನಿಟ್ಟುಕೊಂಡು ಹೆಚ್ಚು ಖರ್ಚಿಲ್ಲದೆ ವಿಚಾರಸಂಕಿರಣಗಳನ್ನು ನಡೆಸಬಹುದಾಗಿದೆ. ಇಂತಹ ಸಂಕಿರಣಗಳಲ್ಲಿ ಆಯಾ ಜಿಲ್ಲೆಯ ಸಾಹಿತಿಗಳು ಕೃಷಿ ತಜ್ಞರು, ಪ್ರಗತಿಪರರು ಬಾಗವಹಿಸುವಂತೆ ನೋಡಿಕೊಳ್ಳಬಹುದಾಗಿದೆ. ತದನಂತರ ಸಂಕಿರಣದಲ್ಲಿ ಹೊರಹೊಮ್ಮಿದ ಮುಖ್ಯ ಅಂಶಗಳನ್ನು ಕ್ರೋಢೀಕರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಬಹುದು. ಇದು ನನ್ನ ವಿನಮ್ರ ಸಲಹೆ ಮಾತ್ರ.

ಇದರೊಂದಿಗೆ ಸರಕಾರ ಕೊಡುವ ಒಂದೆರಡು ಕೋಟಿ ಅನುದಾನವನ್ನು ರೈತರಿಗೆ ನಿಜಕ್ಕೂ ಅನುಕೂಲವಾಗುವ ಯಾವುದಾದರು ಯೋಜನೆಗೆ ಬಳಸಲು,ಪರಿಷತ್ತು ಸರಕಾರಕ್ಕೆ ಒತ್ತಾಯಿಸಬೇಕು.

ಆದ್ದರಿಂದ ಸಾಹಿತ್ಯಪರಿಷತ್ತಿನ ಅದ್ಯಕ್ಷರಿಗೆ ನಾನು ಮನವಿ ಮಾಡಿಕೊಳ್ಳುವುದೇನೆಂದರೆ ದಯಮಾಡಿ ಸಾಹಿತ್ಯ ಸಮ್ಮೇಳವನ್ನು ಈವರ್ಷ ರದ್ದು ಮಾಡಿ. ನಿಮ್ಮ ಅವಧಿ ಮುಗಿದ ನಂತರ- ಬರವಿದ್ದರೂ ಸಮ್ಮೇಳನ ನಡೆಸಿದವರು ಅನಿಸಿಕೊಳ್ಳುವುದಕ್ಕಿಂತ ಬರದ ಕಾರಣದಿಂದ ಸಮ್ಮೇಳನವನ್ನು ರದ್ದು ಮಾಡಿ ರೈತಪರ ಕಾಳಜಿಯನ್ನು ಮೆರೆದವರೆಂದು ಗುರುತಿಸಿಕೊಳ್ಳುವುದು ಹೆಮ್ಮೆಯ ವಿಷಯವೆಂದು ನನಗನ್ನಿಸುತ್ತದೆ. ಇತಿಹಾಸದ ಪುಟಗಳನ್ನು ಸೇರುವುದು ಮುಖ್ಯವಲ್ಲ, ಯಾಕೆ ಸೇರಲಾಯಿತು ಅನ್ನುವುದೇ ಮುಖ್ಯವಲ್ಲವೇ ಸರ್. ದಯಮಾಡಿ ಯೋಚಿಸಿ , ನಿಮ್ಮ ಪದಾಧಿಕಾರಿಗಳನ್ನು ನನಗಿಂತ ಹಿರಿಯರಾದ ಸಾಹಿತಿಗಳನ್ನು, ಬುದ್ದಿಜೀವಿಗಳನ್ನು ಸಂಪರ್ಕಿಸಿ ಒಂದು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ಕೋರುತ್ತೇನೆ.

ಕು.ಸ.ಮಧುಸೂದನ್ ನಾಯರ್

ಜೂನ್ 24, 2015

ಫ್ಲಿಪ್ ಕಾರ್ಟಿನಿಂದ ನಾಯಿ ಖರೀದಿ!

ನಾಯಿ ಖರೀದಿ!
ಫ್ಲಿಪ್ ಕಾರ್ಟ್ ಬೆಂಗಳೂರನ್ನು ಮುಖ್ಯಕಛೇರಿ ಮಾಡಿಕೊಂಡಿರುವ ಬಹುದೊಡ್ಡ ಇ-ಕಾಮರ್ಸ್ ಕಂಪನಿ. ಫ್ಲಿಪ್ ಕಾರ್ಟ್ ಮೊದಮೊದಲು ಪುಸ್ತಕಗಳನ್ನಷ್ಟೇ ಮಾರುವ ಸಂಸ್ಥೆಯಾಗಿತ್ತು. ಫ್ಲಿಪ್ ಕಾರ್ಟಿನ ಅಂತರ್ಜಾಲ ಪುಟವನ್ನು ತೆರೆದರೆ ಪುಸ್ತಕಗಳ ರಾಶಿಯೇ ಕಾಣಿಸುತ್ತಿತ್ತು. ನಿಧನಿಧಾನವಾಗಿ ಮೊಬೈಲು, ಕ್ಯಾಮೆರಾ ಎಂದು ವ್ಯಾಪಾರ ವಿಸ್ತಾರಗೊಳ್ಳುತ್ತಾ ಈಗ ಫ್ಲಿಪ್ ಕಾರ್ಟಿನಲ್ಲಿ ಸಿಗದ ವಸ್ತುವೇ ಇಲ್ಲ ಎಂದು ಹೇಳಬಹುದು. ಅಮೆಜಾನ್, ಸ್ನ್ಯಾಪ್ ಡೀಲ್, ಶಾಪ್ ಕ್ಲೂಸ್, ಇಬೇನಂತಹ ಹತ್ತಲವು ಇ-ಕಾಮರ್ಸ್ ಕಂಪನಿಗಳು ಈಗ ಕಾರ್ಯನಿರ್ವಹಿಸುತ್ತಿದೆಯಾದರೂ ಫ್ಲಿಪ್ ಕಾರ್ಟ್ ಮುಂಚೂಣಿಯಲ್ಲಿರುವುದು ಸುಳ್ಳಲ್ಲ.
ತಿಂಗಳಿಗೆರಡು ಮೂರು ದಿವಸ 'ವಿಶೇಷ ದಿನ'ಗಳನ್ನಾಗಿ ಮಾಡಿ ವಿಪರೀತವೆನ್ನುವಷ್ಟು ರಿಯಾಯತಿಯನ್ನು ಘೋಷಿಸುವುದು ಈಗ ಸಾಮಾನ್ಯವಾಗಿದೆ. ಅನೇಕ ಬಾರಿ ಹೆಚ್ಚಿನ ಬೆಲೆ ನಮೂದಿಸಿ ರಿಯಾಯತಿ ಘೋಷಿಸುವುದೂ ಇದೆ. ಈ ತಿಂಗಳ ಇಪ್ಪತ್ತೆರಡರಿಂದ ಇಪ್ಪತ್ತನಾಲ್ಕರವರೆಗೆ ಫ್ಲಿಪ್ ಕಾರ್ಟ್ ಈ ರೀತಿಯೊಂದು ರಿಯಾಯತಿ ಹಬ್ಬ ಘೋಷಿಸಿದೆ. ಅದಕ್ಕೆ ಸಂಬಂಧಪಟ್ಟ ಜಾಹೀರಾತಿನಲ್ಲಿ "ನಹೀ ಕರೀದಾ" ಎಂಬ ಹಿಂದಿ ವಾಕ್ಯವನ್ನು ಉಪಯೋಗಿಸಲಾಗಿದೆ. ಸರಿ, ಹಿಂದಿ ಭಾಷಿಕರಿರುವ ರಾಜ್ಯಗಳಲ್ಲಿ ಹಿಂದಿ ವಾಕ್ಯವನ್ನು ಉಪಯೋಗಿಸಿಕೊಳ್ಳಲಿ ಆದರೆ ಕರ್ನಾಟಕದ ರಾಜಧಾನಿಯಲ್ಲೇ ಮುಖ್ಯ ಕಛೇರಿ ಮಾಡಿಕೊಂಡಿರುವ ಸಂಸ್ಥೆಯೊಂದು ಬೆಂಗಳೂರಿನಲ್ಲಿ ಹಾಕುವ ಜಾಹೀರಾತಿನಲ್ಲಾದರೂ ಕನ್ನಡವನ್ನು ಉಪಯೋಗಿಸಬೇಕಿತ್ತಲ್ಲವೇ? ಅದು ಬಿಟ್ಟು Nahee karidaa? ಎಂದು ಹಿಂದಿಯನ್ನು ಆಂಗ್ಲದಲ್ಲಿ ಹಾಕಿ ಅಪಸವ್ಯ ಸೃಷ್ಟಿಸಿದೆ. ಕನ್ನಡದಲ್ಲದು 'ನಾಯಿ ಖರೀದ' ಎಂದು ವಿಚಿತ್ರವಾಗಿ ಧ್ವನಿಸುತ್ತದಲ್ಲವೇ?
ಅಂಗಡಿಯಲ್ಲಿ ಕನ್ನಡ ನುಡಿಯ ಗೆಳೆಯರು ಫೇಸ್ ಬುಕ್ ಪುಟದ ಮೂಲಕ ಈ ನಾಯಿ ಖರೀದಿಯ ವ್ಯವಹಾರವನ್ನು ಪ್ರಚುರಪಡಿಸಲಾಯಿತು. ಫ್ಲಿಪ್ ಕಾರ್ಟಿನ ಫೇಸ್ ಬುಕ್ ಪುಟ, ಟ್ವಿಟರ್ ಪುಟಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಕೇಳಿಕೊಂಡರು ಅಂಗಡಿಯ ಗೆಳೆಯರು. 
ಇದಕ್ಕೆ ಪೂರಕವೆಂಬಂತೆ ನಿಶಾಂತ್ ಶೆಟ್ಟಿ ಎಂಬುವರು ಯೂಟ್ಯೂಬಿನಲ್ಲಿ ಕನ್ನಡ ಉಪಯೋಗಿಸದ ಕಾರಣಕ್ಕಾಗಿ ಖರೀದಿಸಿದ ವಸ್ತುವನ್ನು ವಾಪಸ್ಸು ಮಾಡುತ್ತಿರುವುದಾಗಿ ಫ್ಲಿಪ್ ಕಾರ್ಟಿಗೆ ಹೇಳುವ ವೀಡಿಯೋವೊಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಅದರ ಸತ್ಯಾಸತ್ಯತೆಗಳನ್ನು ಪಕ್ಕಕ್ಕಿಟ್ಟರೂ ಉದ್ದೇಶದ ಬಗ್ಗೆ ಎರಡು ಮಾತಿಲ್ಲ. ಈ ಚರ್ಚೆಗಳ ನಡುವೆ ನಾರಾಯಣ್ ಎಂಬುವರು ಫ್ಲಿಪ್ ಕಾರ್ಟಿನಿಂದ ಲ್ಯಾಪ್ ಟಾಪನ್ನು ಖರೀದಿಸಿದ್ದಾರೆ; ಕನ್ನಡ ಉಪಯೋಗಿಸುತ್ತಿಲ್ಲವೆಂಬ ಕಾರಣ ನೀಡಿ ವಾಪಸ್ಸು ಮಾಡುವುದಕ್ಕೆ! ಒಟ್ಟಿನಲ್ಲಿ ಇರುವ ನಾಡಿನ ಭಾಷೆಗೆ ಗೌರವ ನೀಡದ ಸಂಸ್ಥೆಯೊಂದಕ್ಕೆ ಕನ್ನಡ ಗ್ರಾಹಕರು ಸರಿಯಾಗಿಯೇ ಚುರುಕು ಮುಟ್ಟಿಸುತ್ತಿದ್ದಾರೆ.
ಫ್ಲಿಪ್ ಕಾರ್ಟಿನ ವಿರುದ್ಧ ನಿಮ್ಮ ದೂರನ್ನು ದಾಖಲಿಸಲು
https://twitter.com/Flipkart 
ಚಿತ್ರಗಳು: ಫೇಸ್ ಬುಕ್.

ಡಿಸೆಂ 31, 2014

ವಾಡಿ ಜಂಕ್ಷನ್ .... ಭಾಗ 8

wadi junction
Dr Ashok K R
ಇದೇನಾಗೋಯ್ತು ನಿನ್ನೆ? ರಾಘವ ಯೋಚನೆಗೆ ಬಿದ್ದಿದ್ದ. ಕಾಲೇಜಿಗೆ ಹೋಗುವ ಮನಸ್ಸಾಗಿರಲಿಲ್ಲ. ‘ನಡೀಲೇ ಕಾಲೇಜಿಗೆ’ ಎಂದ ಅಭಯನ ಮೇಲೂ ರೇಗಿದ್ದ. ‘ಯಾಕೆ ಬರ್ತಿಲ್ಲ ಅನ್ನೋದಾದ್ರೂ ಹೇಳು?’ ಎಂದವನು ಕೇಳಿದ್ದಕ್ಕೆ “ಎಲ್ಲಾ ವಿಷಯಾನೂ ಎಲ್ಲಾ ಸಮಯದಲ್ಲೂ ಎಲ್ಲರಿಗೂ ಹೇಳೋದಿಕ್ಕೆ ಆಗೋದಿಲ್ಲ ಕಣಪ್ಪ” ರಾಘವ ಗಂಭೀರವದನನಾಗಿ ಹೇಳಿದಾಗ ಮನಸ್ಸಿನೊಳಗೇ ನಕ್ಕು ‘ಇನ್ನೂ ಸ್ವಲ್ಪ ಸಮಯ ಬೇಕು. ಇವನ ಮನಸ್ಸು ಸರಿಯಾಗಲಿಕ್ಕೆ’ ಎಂದುಕೊಂಡು ಅಭಯ ಕಾಲೇಜಿಗೆ ತೆರಳಿದ.

ಡಿಸೆಂ 4, 2014

ಹಿಂದಿ ಹೇರಿಕೆಯ ವಿವಿಧ ಹಂತಗಳು

santemavattur
ಹಿಂದಿ ಹೇರಿಕೆ
Dr Ashok K R
ತಾತ ತೀರಿಹೋಗಿದ್ದ ಕಾರಣ ಕುಣಿಗಲ್ ಸಮೀಪದ ಊರಿಗೆ ತೆರಳಿದ್ದೆ. ಮೇನ್ ರೋಡಿನಿಂದ ಕೊಂಚ ದೂರದಲ್ಲಿದ್ದ ಊರಾದ ಕಾರಣ ಸಾವಿಗೆ ಬಂದಿದ್ದ ಸಂಬಂಧಿಕರೊಬ್ಬರನ್ನು ಕರೆತರಲು ರೇಷ್ಮೆ ಮಾರುಕಟ್ಟೆಗೆ ಹೆಸರುವಾಸಿಯಾದ ಸಂತೆಮಾವತ್ತೂರಿಗೆ ಹೋಗಿ ಬಸ್ಸು ನಿಲ್ಲುವ ಜಾಗದಲ್ಲಿ ಬೈಕು ನಿಲ್ಲಿಸಿಕೊಂಡು ಕಾಯುತ್ತಿದ್ದೆ. ಎದುರಿಗೊಂದು ಮುರಿದು ಬಿದ್ದಂತಿದ್ದ ಮನೆ ಕಾಣಿಸಿತು. ಮತ್ತೊಮ್ಮೆ ಆ ಮನೆಯತ್ತ ಕಣ್ಣಾಡಿಸಿದಾಗ ಮನೆಯ ಒಂದು ಪಾರ್ಶ್ವ ಸಂಪೂರ್ಣ ಪಾಳು ಬಿದ್ದಿದ್ದರೆ ಮತ್ತೊಂದು ಬದಿಯಲ್ಲಿ ಅಂಚೆ ಕಛೇರಿಯಿತ್ತು. ಇದೇನು ಅಂಚೆ ಕಛೇರಿಯ ಹಳೆಯ ಕಟ್ಟಡವೋ ಈಗಲೂ ಕಾರ್ಯನಿರ್ವಹಿಸುತ್ತಿದೆಯೋ ಎಂದು ಅಲ್ಲೇ ರಸ್ತೆ ಬದಿಯಲ್ಲಿ ಒಣಗಿಸಿ ಸುತ್ತಿದ ತಂಬಾಕು ಎಲೆಗಳು, ಅಡಿಕೆ, ವೀಳ್ಯದೆಲೆ ಮಾರುತ್ತಿದ್ದ ಹೆಂಗಸನ್ನು ಕೇಳಿದಾಗ ‘ಅದೇ ಆಪೀಸು. ಮಧ್ಯಾಹ್ನ ಅಲ್ವಾ ಊಟಕ್ಕೆ ಹೋಗಿರ್ತಾರೆ’ ಎಂದ್ಹೇಳಿ ಅಂಚೆ ಕಛೇರಿಯ ಆಧುನೀಕರಣದ ಮತ್ತೊಂದು ಮಜಲನ್ನು ತೋರಿಸಿದರು.

ನವೆಂ 11, 2014

ಇಂತಿ ನಮಸ್ಕಾರಗಳು

inthi namaskaragalu
ಇಂತಿ ನಮಸ್ಕಾರಗಳು
ಬಹುಶಃ ಇತ್ತೀಚಿನ ದಿನಗಳಲ್ಲಿ ಅಷ್ಟೇನೂ ಅರ್ಥವಾಗದ, ಅರ್ಥವಾಗದಿದ್ದರೂ ಓದಿಸಿಕೊಂಡ ಪುಸ್ತಕವೆಂದರೆ ನಟರಾಜ್ ಹುಳಿಯಾರರು ಪಿ.ಲಂಕೇಶ್ ಮತ್ತು ಡಿ.ಆರ್.ನಾಗರಾಜರ ಕುರಿತು ಬರೆದಿರುವ ನೆನಪಿನ ಸಂಚಿಕೆ 'ಇಂತಿ ನಮಸ್ಕಾರಗಳು'. ಈ ಪುಸ್ತಕ ಅರ್ಥವಾಗದ್ದಕ್ಕೆ ಮುಖ್ಯ ಕಾರಣ ನಟರಾಜ್ ಹುಳಿಯಾರರು ಬರೆದಿರುವ ಇಬ್ಬರ ಬರವಣಿಗೆ, ಬದುಕಿನ ಬಗೆಗೆನ ಅಷ್ಟೇನೂ ತಿಳಿಯದಿರುವುದು.

ನವೆಂ 9, 2014

ವಾಡಿ ಜಂಕ್ಷನ್ .... ಭಾಗ 6



wadi junctionDr Ashok K R
ಅವರು ನಾಲ್ವರು ಇದ್ದಿದ್ದೇ ಹಾಗೆ. ವೈಚಾರಿಕವಾಗಿ ಸೈದ್ಧಾಂತಿಕವಾಗಿ ಒಬ್ಬೊಬ್ಬರಲ್ಲೂ ಬಹಳಷ್ಟು ವ್ಯತ್ಯಾಸಗಳಿದ್ದುವಾದರೂ ಹೊರಗಿನಿಂದ ನೋಡುವವರಿಗೆ ಒಬ್ಬನಿಗೇ ನಾಲ್ಕು ಅಂಗಿ ತೊಡಿಸಿದಂತೆ ಕಾಣಿಸುತ್ತಿದ್ದರು. ಎಲ್ಲರಿಗಿಂತ ಕೊನೆಯಲ್ಲಿ ಬಂದು ತರಗತಿಯ ಒಂದು ಮೂಲೆಯಲ್ಲಿ ಕುಳಿತು ಸಂಜೆ ನಾಲ್ಕಾಗುತ್ತಿದ್ದಂತೆ ಎಲ್ಲರಿಗಿಂತ ಮೊದಲು ಹೊರಟು ಕಾಲೇಜಿನ ಎದುರಿಗಿದ್ದ ಅಫ್ರೋಜ್ ಭಾಯ್ ಅಂಗಡಿಯಲ್ಲಿ ಸಿಗರೇಟಿಡಿದು ಕುಳಿತು ಬಿಡುತ್ತಿದ್ದರು. ಮೊದಲ ವರ್ಷದ ಮೊದಲ internals ಮುಗಿಯುವವರೆಗೂ ಬಹುತೇಕ ಮಂದಿ ಇವರು ನಾಲ್ವರು ದುಡ್ಡು ಕೊಟ್ಟು ಓದಲು ಬಂದಿರೋ ದಡ್ಡ ಶಿಖಾಮಣಿಗಳೆಂದೇ ತಿಳಿದಿದ್ದರು.

ಅಕ್ಟೋ 31, 2014

ವಾಡಿ ಜಂಕ್ಷನ್ .... ಭಾಗ 5

wadi junction

Dr Ashok K R
ಮತ್ತೆ ನಿಲ್ದಾಣದಲ್ಲಿ
“ಮೊದಲ ವರ್ಷ, ಅದೂ ಕಾಲೇಜಿಗೆ ಸೇರಿ ಮೂರು ತಿಂಗಳಾಗಿದೆ ಅಷ್ಟೇ. ಈಗಲೇ ಹೀಗೆ ಇನ್ನು ಮುಂದೆ?” ಪ್ರಿನ್ಸಿಪಾಲರು ಯಾವುದೋ ಕಾಗದಗಳಿಗೆ ಸಹಿಹಾಕುತ್ತಾ ಪ್ರಶ್ನಿಸಿದರು. ರಾಘು, ಅಭಯ್, ತುಷಿನ್, ಕ್ರಾಂತಿ ತಲೆತಗ್ಗಿಸಿದಂತೆ ನಿಂತಿದ್ದರು.
“ಇನ್ನು ಮುಂದೆ ಈ ರೀತಿ ಮಾಡಲ್ಲ ಬಿಡ್ರಿ ಸರ್” ರಾಘು ಮೆಲ್ಲನೆ ಹೇಳಿದ.
“ಯಾರ್ ಯಾರ್ ಹೇಳಿದ್ದು” ಪ್ರಿನ್ಸಿಪಾಲ್ ಕಾಗದದಿಂದ ತಲೆಎತ್ತಿದರು. ಎಲ್ಲರೂ ಯಾರೂ ಮಾತನಾಡಿದ್ದೆಂಬಂತೆ ಅಚ್ಚರಿ ವ್ಯಕ್ತಪಡಿಸುತ್ತಾ ಒಬ್ಬರನ್ನೊಬ್ಬರು ನೋಡಿದರು. ಮತ್ತೆ ತಲೆತಗ್ಗಿಸಿದರು. ಆ ರೀತಿ ನಿಲ್ಲಬೇಕಾದ ಸಂದರ್ಭವನ್ನು ತಾವಾಗೇ ಸೃಷ್ಟಿಸಿಕೊಂಡಿದ್ದರು.
ಬೆಂಗಳೂರಿಗೆ ಹೋಗುವ ರಸ್ತೆಯಲ್ಲಿ ಕಾಲೇಜಿನಿಂದ ಎರಡ್ಮೂರು ಕಿಮಿ ಕ್ರಮಸಿದರೆ ಸಿದ್ಧಲಿಂಗಪುರ, ಅಲ್ಲಿಂದ ಹತ್ತಿಪ್ಪತ್ತೆಜ್ಜೆ ದಾಟಿ ಎಡಕ್ಕೆ ಹೊರಳಿದರೆ ಎ-1 ಡಾಬಾ. ನಾಲ್ವರೂ ಸಂಜೆ ಏಳಕ್ಕೆ ಅಲ್ಲಿ ಸೇರಿದ್ದರು. ಊಟ ಮಾತು. ಹತ್ತು ಘಂಟೆ ಆಗುತ್ತಿದ್ದಂತೆ ರಾಘವ “ಒಂದು ಕೆ.ಎಫ್ ಸ್ಟ್ರಾಂಗ್ ತಗೊಂಡು ಬಾ” ಅಂದ ಅಷ್ಟರಲ್ಲಾಗಲೇ ಪರಿಚಯವಾಗಿದ್ದ ಕುಮಾರನಿಗೆ.
ಉಳಿದ ಮೂವರೂ ಅವನನ್ನೇ ಆಶ್ಚರ್ಯದಿಂದ ನೋಡಿದರು.

ಅಕ್ಟೋ 24, 2014

ವಾಡಿ ಜಂಕ್ಷನ್ .... ಭಾಗ 4

wadi junction
Dr Ashok K R
ಇನ್ನು ನಮ್ಮ ಅಭಯ್, ಅಭಯ್‍ಗೌಡ ಬಸನಗೌಡ ಪೋಲೀಸ್ ಪಾಟೀಲ್ – ಆಗಿನ ರಾಯಚೂರಿನ ಈಗಿನ ಕೊಪ್ಪಳ ಜಿಲ್ಲೆಯಲ್ಲಿರುವ ಕುಷ್ಟಗಿ ತಾಲ್ಲೂಕಿನ ತಾವರಗೆರೆಯವನು. ತಂದೆತಾಯಿಗೆ ಮೂವರು ಮಕ್ಕಳು. ಇವನು ಮೂರನೆಯವನು. ಒಬ್ಬ ಅಣ್ಣ ಬಿಎಸ್ಸಿವರೆಗೆ ಓದಿಕೊಂಡು ತಾವರಗೆರೆಯಲ್ಲೇ ಜಮೀನು ನೋಡಿಕೊಳ್ಳುತ್ತಾನೆ, ನೋಡುತ್ತಾನಷ್ಟೇ ಕೆಲಸಗಳನ್ನೆಲ್ಲಾ ಅವನ ತಂದೆಯೇ ಮಾಡಿಸುತ್ತಾರೆ. ಮಧ್ಯದವಳು ಅಂದ್ರೆ ಅಭಯನ ಅಕ್ಕ ಬಿ.ಕಾಮ್ ಮಾಡಿದ್ದಾಳೆ. ಅಭಯ್ ಮೈಸೂರನ್ನು ಉದ್ಧರಿಸಲು ಬರುವುದಕ್ಕೆ ಸ್ವಲ್ಪ ದಿನಗಳ ಮುಂಚೆ ಆಕೆಯ ಮದುವೆಯಾಯಿತು. ಆಕೆಯೀಗ ಕಲ್ಬುರ್ಗಿಯಲ್ಲಿದ್ದಾಳೆ. ‘ನಾನೇ ಮೂರನೆಯವನು. ಅಪ್ಪ ಅಮ್ಮನಿಗಾಗಲೇ ಮಕ್ಕಳ ಮೇಲಿನ ಆಸ್ಥೆ ಕಡಿಮೆಯಾಗಿತ್ತು. ಈಗಲೇ ಆಪರೇಷನ್ ಮಾಡಿಸಿಕೊಳ್ಳೋದೋ ಬೇಡವೋ ಎಂಬ ಸಂದಿಗ್ಧದಲ್ಲಿದ್ದಾಗ ಹುಟ್ಟಿದವನು ನಾನು. ಭೂಮಿಗೆ ಅಷ್ಟಾಗಿ ನನ್ನ ಅವಶ್ಯಕತೆ ಇರಲಿಲ್ಲವೇನೋ?’ ಇದವನ ಎಂದಿನ ಪ್ರವರ. ಆತ ಹೀಗೆ ದೂರುತ್ತಾನಲ್ಲ, ತಂದೆ ತಾಯಿ ಇವನನ್ನು ಕಡೆಗಣಿಸುತ್ತಾರ ಅಂದರೆ ಅದೂ ಇಲ್ಲ. ಉಳಿದವರ ಮೇಲಿರುವಷ್ಟೇ ಅಕ್ಕರೆ ಇವನ ಮೇಲೂ ಇದೆ.ಇವನಲ್ಲೇ ಬಹುಷಃ ಕೊರಗಿರಬೇಕು. ಏಳನೇ ತರಗತಿಯವರೆಗೆ ತಾವರಗೆರೆಯಲ್ಲೇ ಓದಿ ನಂತರ ಧಾರವಾಡಕ್ಕೆ ವಲಸೆ ಹೋಸ. ಎಸ್.ಡಿ.ಎಂನಲ್ಲಿ ಮುಂದಿನ ಅಧ್ಯಯನ. ರಂಗೀಲಾದ ಹಾಡು ಗುನುಗುತ್ತಾ ಪತ್ರಿಕೆಯಲ್ಲಿ ಬಂದಿದ್ದ ನಗ್ನಬಾಲಿಕೆಯ ಮೊಲೆಯ ಮೇಲೆ ತನ್ನ ಹೆಸರು ಬರೆಯುತ್ತಿದ್ದವನಿಗೆ ಹಿಂದಿನಿಂದ ತಂದೆ ಬಂದು ಬಿಂತಿದ್ದು ಅರಿವಿಗೇ ಬಂದಿರಲಿಲ್ಲ. ‘ಏನಪ್ಪಾ ಬರಿ ಅಭಯ್ ಅಂತ ಬರೆದುಬಿಟ್ಟೆ. ಪೂರ್ತಿ ಹೆಸರು ಬರಿ. ನಮ್ಮ ವಂಶದ ಕೀರ್ತಿನಾದರೂ ಬೆಳೆಯುತ್ತೆ’ ಎಂದು ಅವನ ತಂದೆ ನುಡಿದಾಗ ಇವನ ಸ್ಥಿತಿ......ಸಮಾನತೆ ಸ್ವಾತಂತ್ರ್ಯಕ್ಕಿಂತ ಮುಖ್ಯ ಎಂಬ ಭಾವನೆಯವನು. ಪ್ರತಿಭಾವಂತನಲ್ಲ, ಕೆಲಸ ಸಿಗುತ್ತಿಲ್ಲವೆಂಬ ಒಂದೇ ಕಾರಣಕ್ಕೆ ಒಬ್ಬ ವ್ಯಕ್ತಿ ಹಸಿದು ಮಲಗುತ್ತಾನೆಂದರೆ ಅದು ನಮ್ಮ ದೇಶದ ಅಧಃಪತನದ ಸಂಕೇತ ಎನ್ನುತ್ತಾನೆ. ಬಹಳಷ್ಟು ಬಾರಿ ಆತನ ಮಾತುಗಳು ನಮಗೆ ಅರ್ಥವಾಗುವುದಿಲ್ಲ.

ಅಕ್ಟೋ 21, 2014

ಚೌಕಟ್ಟು ಮೀರಿದ ಬದುಕಿನ ಬಿಳಿ ಸಾಹೇಬನ ಕಥನ



jim corbet
ಬಿಳಿ ಸಾಹೇಬನ ಭಾರತ
Dr Ashok K R
ಇತಿಹಾಸ ನಿರ್ಮಿಸಿ ಬದುಕಿದವರನ್ನೆಲ್ಲ ಒಂದು ನಿರ್ದಿಷ್ಟ ಚೌಕಟ್ಟಿಗೆ ಸೀಮಿತಗೊಳಿಸುವುದಕ್ಕೆ ಆ ವ್ಯಕ್ತಿಯ ಬದುಕಿನ ಬಗ್ಗೆ ಪುಸ್ತಕ ಬರೆಯುವವರು ಎಷ್ಟು ಕಾರಣರೋ ಕೆಲವೊಮ್ಮೆ ಚೌಕಟ್ಟಿನೊಳಗಡೆಯೇ ಸೇರಿ ಹೋಗುವ ವ್ಯಕ್ತಿಯ ವ್ಯಕ್ತಿತ್ವವೂ ಕಾರಣ. ನಮ್ಮ ಇಷ್ಟಾನಿಷ್ಟಗಳ ಅನುಕೂಲಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಇತಿಹಾಸದಿಂದ ತೆಗೆದುಕೊಳ್ಳುವುದು ಸಂಪೂರ್ಣ ತಪ್ಪೇನೂ ಅಲ್ಲ! ಇದರಿಂದಾಗುವ ಅನಾನುಕೂಲವೆಂದರೆ ವ್ಯಕ್ತಿಯ ನೈಜ ವ್ಯಕ್ತಿತ್ವ ಅರಿಯದೆ ಹೋಗುವುದು. ಕನ್ನಡದ ಮಟ್ಟಿಗೆ ಚೌಕಟ್ಟಿನೊಳಗಡೆ ಬಂಧಿಯಾಗಿಬಿಟ್ಟಿದ್ದ ‘ಜಿಮ್ ಕಾರ್ಬೆಟ್ ನ’ ವ್ಯಕ್ತಿತ್ವವನ್ನು ಬಿಡುಗಡೆಗೊಳಿಸಿದ ಕೀರ್ತಿ ಡಾ ಜಗದೀಶ್ ಕೊಪ್ಪರವರ “ಬಿಳಿ ಸಾಹೇಬನ ಭಾರತ” ಪುಸ್ತಕದ್ದು.
Also Read

ಅಕ್ಟೋ 16, 2014

ವಾಡಿ ಜಂಕ್ಷನ್ .... ಭಾಗ 3

Dr Ashok K R
“ಭಯ್ಯಾ ಜೀವನ ಅಂದ್ರೆ ಏನು?” ಪ್ರಶ್ನೆ ಕೇಳಿದ ರಾಘವ ಮತ್ತೆ ಮುಸುಕೆಳೆದುಕೊಂಡು ಪಕ್ಕಕ್ಕೆ ಹೊರಳಿದ.
ತುದಿಗಳೆಲ್ಲಾ ಜೀರ್ಣವಾಗಿದ್ದ ಚಾಪೆಯ ಮೇಲೆ ಕೂತು ಕೈಯಲ್ಲಿ ಪಾಲಿಶ್ ಮಾಡಿಸಿಕೊಂಡು ಮಿರಿಮಿರಿ ಮಿಂಚುತ್ತಿದ್ದ ತಲೆಬುರುಡೆಯ ಅಸಂಖ್ಯಾತ ತೂತುಗಳ ಅಧ್ಯಯನದಲ್ಲಿ ಮುಳುಗಿಹೋಗಿದ್ದ ಅಭಯ ರಾಘವನ ಪ್ರಶ್ನೆಯಿಂದ ವಿಚಲಿತಗೊಂಡ. ತಲೆಬುರುಡೆಯನ್ನು ಪಕ್ಕಕ್ಕಿಟ್ಟು ಅಂಗಿಯ ಜೇಬಿನಿಂದ ಸಿಗರೇಟು ಹೊರತೆಗೆದು ಫಿಲ್ಟರನ್ನು ಬಲಗೈಯ ಬೆರಳುಗಳಲ್ಲಿಟ್ಟುಕೊಂಡು ಎಡ ಹೆಬ್ಬರಳಿನ ಉಗುರ ಮೇಲೆ ನಾಲ್ಕು ಬಾರಿ ಕುಟ್ಟಿದ. ಇನ್ನೊಂದು ತುದಿಯಲ್ಲಿನ ತಂಬಾಕು ಒಂದಷ್ಟು ಒಳಹೋಯ್ತು. ಪಕ್ಕದ ಮೇಜಿನ ಮೇಲೆ ವಿವೇಕಾನಂದರ ಫೋಟೋದ ಮುಂದಿದ್ದ ಕಡ್ಡಿಪೆಟ್ಟಿಗೆಯನ್ನು ತೆಗೆದುಕೊಂಡು ಸಿಗರೇಟತ್ತಿಸಿ ಮೇಜಿನ ಅಂಡಿನಲ್ಲಿದ್ದ ಲೋಟ ಕಮ್ ಆ್ಯಶ್ ಟ್ರೇಯನ್ನು ಬಗುಲಲ್ಲಿಟ್ಟುಕೊಂಡ.
“ಕರೆಕ್ಟು ಗುರು ನೀನ್ಕೇಳಿದ್ದು. ಏನು ಜೀವ್ನ ಅಂದ್ರೆ?” ಧೂಮವನ್ನು ಗಾಳಿಯಲ್ಲಿ ಲೀನವಾಗಿಸುತ್ತಾ ಕೇಳಿದ.
“ಪ್ರಶ್ನೆ ಕೇಳಿದ್ದು ನಾನು. ಉತ್ತರ ಹೇಳು”
“ಪ್ರಶ್ನೆಗೆ ಪ್ರಶ್ನೆಯೇ ನನ್ನ ಉತ್ತರ”
Also read

ಅಕ್ಟೋ 12, 2014

ಬಿಳಿ ಸಾಹೇಬನ ಭಾರತ – ಜಿಮ್ ಕಾರ್ಬೆಟ್ ಜೀವನಗಾಥೆ ಪುಸ್ತಕ ಬಿಡುಗಡೆ ಸಮಾರಂಭ

jim corbet kannada book
ದೀಪ ಬೆಳಗಿದ ನಾರಾಯಣಗೌಡರು
Dr Ashok K R


ಡಾ ನಲ್ಲೂರು ಪ್ರಸಾದ್ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಬಳ್ಳಾರಿ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಪಲ್ಲವ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಡಾ.ಎನ್ ಜಗದೀಶ್ ಕೊಪ್ಪರವರ “ಬಿಳಿ ಸಾಹೇಬನ ಭಾರತ – ಜಿಮ್ ಕಾರ್ಬೆಟ್ ಜೀವನಗಾಥೆ” ಪುಸ್ತಕ ಶನಿವಾರ (10/10/2014) ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಲೋಕಾರ್ಪಣೆಗೊಂಡಿತು. ಪಲ್ಲವ ಪ್ರಕಾಶನದ ಡಾ ವೆಂಕಟೇಶ್, ಡಾ. ನಲ್ಲೂರು ಪ್ರಸಾದ್ ಸಾಂಸ್ಕೃತಿಕ ಪ್ರತಿಷ್ಠಾನದ ಸುರೇಶ್, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ, ಡಾ. ನಲ್ಲೂರು ಪ್ರಸಾದ್, ಪ್ರೊ. ಹಂಪನಾ, ಕರ್ನಾಟಕ ವಾರ್ತಾ ಇಲಾಖೆಯ ನಿರ್ದೇಶಕರಾದ ಡಾ. ವಿಷುಕುಮಾರ್, ಡಾ. ಎನ್. ಜಗದೀಶ್ ಕೊಪ್ಪ, ವಿಜಯ ಕರ್ನಾಟಕದ ಪತ್ರಕರ್ತ ಮತ್ತು ಕವಿ ಎಸ್. ಕುಮಾರ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
Also Read

ಅಕ್ಟೋ 10, 2014

ವಾಡಿ ಜಂಕ್ಷನ್ .... ಭಾಗ 2

hingyake
Dr Ashok K R
ಪ್ಲಾಟ್‍ಫಾರಂ ನಂ 1
ನಿಲ್ದಾಣ 1
“ನನ್ನ ತಾತ ತಲೆಯಲ್ಲಿ ಯಾವ ಭಾವನೆ ಇಟ್ಟುಕೊಂಡು ನನಗೀ ಹೆಸರು ಇಟ್ಟರೋ? ತೀರ ಮೊನ್ನೆ ಮೊನ್ನೆ ಎನ್‍ಡಿಟಿವಿ ಇಂಡಿಯಾದಲ್ಲಿ ಕಾರು ಮತ್ತು ಬೈಕುಗಳ ಬಗ್ಗೆ ಕಾರ್ಯಕ್ರಮ ನಡೆಸಿಕೊಡುವವನ ಹೆಸರೂ ಕ್ರಾಂತಿ ಸಂಭವ್ ಎಂದು ನೋಡಿದಾಗ ಮನ ನಿರಾಳವಾಯಿತು. ನನ್ನಿಂದ ಯಾವುದಾದರೂ ಕ್ರಾಂತಿ ಸಂಭವಿಸುತ್ತದೆ ಎಂದು ಭಾವಿಸಿದರೋ ಅಥವಾ ನನ್ನ ಕಾಲಘಟ್ಟದಲ್ಲಿ ದೇಶದಲ್ಲೊಂದು ಮಹತ್ತರ ಬದಲಾವಣೆಯಾಗುತ್ತೆ ಎಂದು ಕನಸಿದ್ದರೋ ಗೊತ್ತಿಲ್ಲ. ಮದ್ದೂರಿನ ಬೆಸಗರಹಳ್ಳಿಯಲ್ಲಿ ಹುಟ್ಟಿದ ಹೈದನಿಗೆ ಕ್ರಾಂತಿ ಸಂಭವ್ ಎಂದು ಹೆಸರಿಟ್ಟುಬಿಟ್ಟರು. ಶಾಲೆಯಲ್ಲಿ ಏನೇ ತಪ್ಪು ಮಾಡಿದರೂ ನನ್ನ ತಪ್ಪಿಗೆ ದಂಡಿಸುವುದನ್ನು ಬಿಟ್ಟು ನನ್ನ ಹೆಸರಿಡಿದುಕೊಂಡು ವ್ಯಂಗ್ಯವಾಡುತ್ತಿದ್ದರು. ‘ಏನಪ್ಪಾ ಕ್ರಾಂತಿ ಮಾಡೋನು ಈ ರೀತಿ ಮಾಡ್ತೀಯಲ್ಲ’ ಎನ್ನುವವರ ಮಾತಲ್ಲಿ ಲೇವಡಿ ಎದ್ದು ಕಾಣುತ್ತಿತ್ತು. ಅವತ್ತು ಮನೆಗೆ ಹಿಂದಿರುಗಿದ ತಕ್ಷಣ ತಾತನ – ಅಜ್ಜ ಅಷ್ಟೊತ್ತಿಗಾಗಲೇ ತೀರಿಕೊಂಡಿದ್ದರು – ಫೋಟೋ ತೆಗೆದುಕೊಂಡು ಅಟ್ಟ ಸೇರಿ ಮನಸಾರೆ ಮನಸ್ಸಿನಲ್ಲೇ ಬಯ್ಯುತ್ತಿದ್ದೆ. ನೀತಿ ಕಥೆಗಳನ್ನು ಹೇಳಿ ಹೇಳಿ ನನ್ನಲ್ಲೊಂದು ಸ್ಥೈರ್ಯ ಉತ್ಸಾಹ ಮೂಡಿಸಿದ್ದ ಅದೇ ತಾತ ಕ್ರಾಂತಿ ಸಂಭವ್ ಎಂದು ಹೆಸರಿಟ್ಟು ಜನ್ಮ ಜನ್ಮಕ್ಕೂ ಸಾಕಾಗುವಷ್ಟು ಕೀಳರಿಮೆ ಮೂಡಲು ಕಾರಣವಾಗಿಬಿಟ್ಟ”
Also Readವಾಡಿ ಜಂಕ್ಷನ್ .... ಭಾಗ 1

ಅಕ್ಟೋ 2, 2014

ವಾಡಿ ಜಂಕ್ಷನ್ .... ಭಾಗ 1


wadi junction


Dr Ashok K R
ಕ್ರಾಸಿಂಗ್
“A patient by name Mr Basavaraju aged 22 years”
‘ಒಂದು ಹಂತದವರೆಗೆ ಹೆಸರು, ದುಡ್ಡು ಎಲ್ಲಾ ನೋಡಿದ ಮೇಲೆ ಮನುಷ್ಯ ಹೊಸತೇನನ್ನೋ ಹುಡುಕಬಯಸೋದು ಸಹಜ’
“comes from a middle class family. He is from”
‘ನಿಮಗೆ ಈ ಸಧ್ಯ ದೇವರು ಎಲ್ಲದರಲ್ಲೂ ಯಶಸ್ಸು ಕೊಟ್ಟಿದ್ದಾನೆ”
“village Hanoor of Gundlupet Taluk. He is an agricultuist by occupation”
‘ಈಗ ಮಾಡಿರೋ ಹೆಸರು ಸಾಲದು, ಮತ್ತಷ್ಟು ಹೆಸರು ಮಾಡಬೇಕೆನ್ನಿಸಿದರೆ ದಾನ ಧರ್ಮ ಮಾಡಿ’
“He presents with compaint of swelling in the right groin region from past 20”
‘ಮಠಕ್ಕೆ ಸೇರಿ ಸನ್ಯಾಸಿ ಜೀವನ ಮಾಡಬೇಕೆನ್ನೋದೂ ನಿಮಗೆ ಹೆಸರು ಮಾಡುವ ಒಂದು’
“years and pain in the swelling from past 7 days”
‘ವಿಧಾನ ಅಲ್ವಾ ಡಾಕ್ಟ್ರೇ! ನಿಮಗೆಷ್ಟೇ ಒಳ್ಳೇ ಸರ್ಜನ್ ಎಂಬ ಹೆಸರಿದ್ದರೂ ಅಂತರಂಗದಲ್ಲಿ ನೀವೇನು ಅನ್ನೋದು ನಿಮಗಿಂತ ಚೆನ್ನಾಗಿ ತಿಳಿದಿರೋರು ಬೇರೆಯವರಿರಲಿಕ್ಕಿಲ್ಲ. ನನ್ನ ಧ್ಯಾನದ ಸಮಯ ಈಗ. ನೀವಿನ್ನು....’
“ಮುಂಡಾಮೋಚ್ತು” ತನಗೇ ಎಂಬಂತೆ ಶ್ರವಣ್ ಹೇಳಿಕೊಂಡನಾದರೂ ಎದುರಿಗಿದ್ದ ಹತ್ತು ಜನ ವಿದ್ಯಾರ್ಥಿಗಳಿಗದು ಕೇಳಿಸಿತ್ತು. Case present ಮಾಡುತ್ತಿದ್ದ ವಿದ್ಯಾರ್ಥಿನಿ ಗಾಬರಿಯಾಗಿ “ಸರ್” ಎಂದಳು. ಉಳಿದವರು ಒಬ್ಬರೊಬ್ಬರ ಮುಖ ನೋಡಿದರು. ಹಿಂದೆ ನಿಂತವರು ನಕ್ಕರೇನೋ ಎನ್ನಿಸಿತು ಶ್ರವಂತ್‍ಗೆ.

ಸೆಪ್ಟೆಂ 30, 2014

ಡಾ ಎನ್ ಜಗದೀಶ್ ಕೊಪ್ಪ: ಬಿಳಿ ಸಾಹೇಬನ ಭಾರತ - ಜಿಮ್ ಕಾರ್ಬೆಟ್ ನ ಮಾನವೀಯ ಮುಖ


jim corbet kannada book
ಬಿಳಿ ಸಾಹೇಬನ ಭಾರತ - ಡಾ ಎನ್ ಜಗದೀಶ್ ಕೊಪ್ಪ
ನಾನು ಇತ್ತೀಚಿನ ದಿನಗಳಲ್ಲಿ ಇಷ್ಟಪಡುವ ಲೇಖಕರಲ್ಲೊಬ್ಬರು ಜಗದೀಶ್ ಕೊಪ್ಪ. ಅವರ ಲೇಖನಗಳನ್ನು ಮೊದಲು ಓದಿದ್ದು ವರ್ತಮಾನದಲ್ಲಿ. ಅವರ ಅನುವಾದಿತ ಕೃತಿಗಳಿರಬಹುದು, ವಿಶ್ಲೇಷಣಾತ್ಮಕ ಲೇಖನಗಳಿರಬಹುದು ಹೊಸತೇನನ್ನೋ ಓದುಗರಿಗೆ ತಿಳಿಸುವ ಹಂಬಲವಿರುವಂತಹ ಬರಹಗಳವು. ಅವರ ಹೊಸ ಪುಸ್ತಕ - ಬಿಳಿ ಸಾಹೇಬನ ಭಾರತ, ಜಿಮ್ ಕಾರ್ಬೆಟ್  ಜೀವನಗಾಥೆ. ಜಿಮ್ ಕಾರ್ಬೆಟ್ ಎಂದರೆ ನನಗೆ ಗೊತ್ತಿರುವಂತೆ ಬೇಟೆಗಾರ ಮತ್ತು ಇಂಗ್ಲೀಷ್ ಆಫೀಸರ್. ಆತನ ಮಾನವೀಯ ಮುಖಗಳು ಮತ್ತು ನಿಸರ್ಗದೊಂದಿಗಿನ ಸಂಬಂಧಗಳ ಬಗೆಗಿನ ಪುಸ್ತಕವಿದು. ಅಕ್ಟೋಬರ್ ಹನ್ನೊಂದರಂದು ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಪುಸ್ತಕ ಬಿಡುಗಡೆಯಾಗುತ್ತಿದೆ. 
ಬಿಳಿ ಸಾಹೇಬನ ಭಾರತದ ಒಂದು ಪುಟ್ಟ ಅಧ್ಯಾಯ ಹಿಂಗ್ಯಾಕೆಯ ಓದುಗರಿಗಾಗಿ.


ಜಿಮ್ ಕಾರ್ಬೆಟ್ ಮೊಕಮೆಘಾಟ್ಗೆ ಬಂದ ನಂತರ ಅವನ ಬದುಕಿನಲ್ಲಿ ತೀವ್ರ ಬದಲಾವಣೆಗಳಾದವು. ರೈಲ್ವೆ ನಿಲ್ದಾಣದ ಸರಕು ಸಾಗಾಣಿಕೆಯ ವಿಷಯದಲ್ಲಿ ಶಿಸ್ತು ಕಾಣತೊಡಗಿತು. ಆರಂಭದಲ್ಲಿ ಕಾರ್ಬೆಟ್ಗೆ ಇದ್ದ ಒತ್ತಡಗಳು ಮರೆಯಾಗತೊಡಗಿದವು. ಕೆಲಸ ಸುಗಮವಾಗಿ ಸಾಗತೊಡಗಿದಂತೆ ಅವನ ಮನಸ್ಸು ನಿರಾಳವಾಯಿತು. ಆದರೂ ಕೂಡ ಅವನೊಳಗೆ ಹುಟ್ಟೂರಿನ ಪರಿಸರದ ಸೆಳೆತ ಯಾವಾಗಲೂ ಕಾಡುತ್ತಿತ್ತು. ಪ್ರತಿವರ್ಷ ಡಿಸಂಬರ್ ತಿಂಗಳ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ನೈನಿತಾಲ್ಗೆ ಹೋಗಿ ತನ್ನ ಕುಟುಂಬದ ಜೊತೆ ಕಾಲಕಳೆಯುತ್ತಿದ್ದ. ತನ್ನ ಮನೆಯಲ್ಲಿದ್ದ ಬೇಟೆ ನಾಯಿಗಳ ಜೊತೆ ಕಲದೊಂಗಿಯ ಅರಣ್ಯ ಪ್ರದೇಶವನ್ನು ಹೊಕ್ಕಿಬರುತ್ತಿದ್ದ. ಅಲ್ಲಿನ ಸ್ಥಳೀಯರ ಯೋಗಕ್ಷೇಮ ವಿಚಾರಿಸುತ್ತಿದ್ದ.

ಸೆಪ್ಟೆಂ 25, 2014

ಚಿಕ್ಕ ಹಗರಣ

ಮೂಲ – ಹರ್ಷ Think Bangalore
ಅನುವಾದ – ಡಾ ಅಶೋಕ್ ಕೆ ಆರ್.
ರಾಮಸ್ವಾಮಿ ಪ್ರಖ್ಯಾತ ವ್ಯಕ್ತಿ. ಊರಿನ ಹೈಸ್ಕೂಲಿನಲ್ಲಿ ಹೆಡ್ ಮಾಸ್ಟರ್ ಆಗಿ ಕೆಲಸಮಾಡುತ್ತಿದ್ದರು. ಅವರ ಮಾತೆಂದರೆ ಊರವರಿಗೆಲ್ಲ ಬಹಳ ಗೌರವ. ಕಾರಣ, ಅವರ ಆದರ್ಶಯುತ ಜೀವನ. ಸುಳ್ಳಾಡದೆ, ಯಾರೊಬ್ಬರಿಗೂ ಮೋಸ ಮಾಡದೆ, ಕೆಟ್ಟದನ್ನು ಮಾಡದೆ ಎಲ್ಲರೊಡನೆ ಸೌಮ್ಯದಿಂದ ಸ್ನೇಹಮಯದಿಂದಿರುತ್ತಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳು. ಬುದ್ಧಿವಂತರು. ಚೆನ್ನಾಗಿ ಓದಿಕೊಂಡರು. ದೊಡ್ಡವ ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿದರೆ ಚಿಕ್ಕವ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ.