ಫೆಬ್ರ 14, 2019

ಚೀನಾದ ಏರ್‌ ಫಿಲ್ಟರ್ರೂ ಇಂಡಿಯಾದ ಪ್ರತಿಮೆಗಳೂ…….


ಚೀನಾದ ಏರ್‌ ಫಿಲ್ಟರ್;‌ ಚಿತ್ರಮೂಲ: ಸೌತ್‌ ಚೀನಾ ಪೋಸ್ಟ್.
ಡಾ. ಅಶೋಕ್.‌ ಕೆ. ಆರ್ 
ಮೊನ್ನೆ ಟೀ ಅಂಗಡಿಯ ಬಳಿ ಒಂದಷ್ಟು ಇಂಜಿನಿಯರ್‌ ಹುಡುಗರು ಹರಟುತ್ತಿದ್ದರು.
'ಅಲ್ಲಾ ಗುರು… ಆ ಚೀನಾದ್‌ ನನ್‌ ಮಕ್ಳು ದೊಡ್ ದೊಡ್‌ ಏರ್‌ ಫಿಲ್ಟರ್ರುಗಳನ್ನು ಕಟ್ತಾ ಇದ್ರೆ ಈ ನನ್‌ ಮಕ್ಳು ಅಷ್ಟುದ್ದದ್‌ ಸ್ಟಾಚ್ಯೂ ಕಟ್ಕಂಡ್‌ ಕುಂತವ್ರಲ್ಲ….ʼ
'ಕಾಗೆ ಹಿಕ್ಕೆ ಹಾಕೋಕೆʼ
ನಗು…
'ಹಂಗೂ ಕಟ್ಲೇ ಬೇಕೂಂತಿದ್ರೆ ಕರ್ನಾಟಕದಲ್ಲೇ ಕಟ್ಬೋದಿತ್ತಪ್ಪ….. ಗುಜರಾತ್ಗೇ ಮಾಡ್ಬೇಕಿತ್ತಾ….. ಇಲ್ಲೀನೋರೇನು ವೋಟ್‌ ಹಾಕಿರ್ನಿಲ್ವ…..ʼ
'ಎಲ್ಲಾದ್ರೂ ಸರೀನೇ…ಯಾಕ್‌ ಕಟ್ಬೇಕು….ʼ
ಸ್ಟ್ಯಾಚು ಆಫ್‌ ಯೂನಿಟಿ; 
ಚಿತ್ರಮೂಲ: ಫೈನ್ಯಾನ್ಶಿಯಲ್‌  
ಹೌದಲ್ಲ ನಮ್ಮಲ್ಲೇನು ಮಾಲಿನ್ಯಕ್ಕೆ ಕೊರತೆಯಿದೆಯೇ? ಇಲ್ಲವಲ್ಲ. ದೆಹಲಿ, ಬೆಂಗಳೂರು, ಕೊಲ್ಕೊತ್ತಾ, ಚೆನ್ನೈ, ಮುಂಬೈಯಂತಹ ಪ್ರದೇಶಗಳಲ್ಲಿ ನಮ್ಮೆಲ್ಲರ ಕೊಡುಗೆಯಾಗಿ ಅಪಾರ ಪ್ರಮಾಣದ ಗಾಳಿ ಮಲಿನಗೊಂಡಿದೆ. ಈಗಾಗಲೇ ಅನೇಕರು ಮನೆಗಳಲ್ಲಿ ಏರ್‌ ಫಿಲ್ಟರ್ರುಗಳನ್ನು ಬಳಸಲಾರಂಭಿಸುತ್ತಿದ್ದಾರೆ. ಮನೆಯಿಂದ ಹೊರಬಂದಾಗ, ರಸ್ತೆಯಲ್ಲಡ್ಡಾಡುವಾಗ ಕೂಡ ಏರ್‌ ಫಿಲ್ಟರ್ರುಗಳ ಅವಶ್ಯಕತೆ ಇದ್ದೇ ಇದೆಯಲ್ಲ. ಸಾರ್ವಜನಿಕ ಏರ್‌ ಫಿಲ್ಟರ್ರುಗಳನ್ನು ದೊಡ್ಡ ಮಟ್ಟದಲ್ಲಿ ಸ್ಥಾಪಿಸುವುದು ಅನಿವಾರ್ಯವಾಗುತ್ತಿರುವ ದಿನಗಳಲ್ಲೂ ನಮ್ಮಲ್ಲೇಕೆ ಇನ್ನೂ ವಿಶ್ವದ ದೊಡ್ಡ ಪ್ರತಿಮೆ, ರಾಮನ ದೊಡ್ಡ ಪ್ರತಿಮೆ, ಕಾವೇರಿ ಮಾತೆಯ ದೊಡ್ಡ ಪ್ರತಿಮೆಯ ಬಗ್ಗೆಯೇ ತಲೆಕೆಡಿಸಿಕೊಳ್ಳಲಾಗುತ್ತಿದೆ? ಸಾರ್ವಜನಿಕ ಏರ್‌ ಫಿಲ್ಟರ್ರುಗಳ ಪ್ರಾಯೋಗಿಕ ಬಳಕೆ ನಮ್ಮದೇ ಬೆಂಗಳೂರಿನ ಕಬ್ಬನ್‌ ಪಾರ್ಕಿನಲ್ಲಿ ನಡೆಯುತ್ತಿದೆ, ಅದರ ಗಾತ್ರ ಚೀನಾದ ನೂರು ಮೀಟರ್‌ ಎತ್ತರದ ಏರ್‌ ಫಿಲ್ಟರ್ಗೆ ಹೋಲಿಸಿದರೆ ತುಂಬಾ ತುಂಬಾ ಸಣ್ಣದು. ಪೂರ್ತಿ ಗಾಳಿ ಗಬ್ಬೆದ್ದು ಹೋಗಲಿ ಎಂದು ಕಾಯುತ್ತಿದ್ದೇವಾ? ಅಥವಾ ನಮಗೆ ಪ್ರತಿಮೆಗಳೇ ಮುಖ್ಯವಾ?

ಡಿಸೆಂ 25, 2018

ಆಧುನಿಕತೆಯಲ್ಲಿ ಹೆಣ್ಣಿನ ಸ್ಥಾನಮಾನ

ಪದ್ಮಜಾಜೋಯ್ಸ್ ದರಲಗೋಡು
ಆಧುನಿಕತೆಯಲ್ಲಿ ಹೆಣ್ಣಿನ ಸ್ಥಾನಮಾನ ಅಂದರೇ ಆಚಾರ ವಿಚಾರಗಳನ್ನು ದೂಷಿಸುವುದಲ್ಲ, ಸ಼ಂಪ್ರದಾಯದ ಸಂಕೋಲೆಯ ಧಿಕ್ಕಾರವಲ್ಲ, ಪದ್ಧತಿಗಳ ರದ್ಧತಿಯಲ್ಲ, ಉಡುಗೆ ತೊಡುಗೆಗಳ ಬದಲಾವಣೆಯೂ ಅಲ್ಲ, ರೀತಿನೀತಿಗಳ ಮಿತಿ ಮೀರುವುದೂ ಅಲ್ಲ ಸಾಂಸಾರಿಕ ಕೌಟುಂಬಿಕ ಚೌಕಟ್ಟುಗಳ ನಿರಾಕರಣೆಯೂ ಅಲ್ಲ.....

ಇಂದು ಆಧುನಿಕತೆ ಮಹಿಳೆಯರಿಗೂ ಅತ್ಯಗತ್ಯ , ಅದು ಸಕಾರಣವಾಗಿದ್ದಲ್ಲಿ ಹಾಗೂ ಸಂಧರ್ಭಗಳ ಸಮಯೋಚಿತತೆಯಲ್ಲಿ, ಅಂದರೇ ನಮ್ಮ ಆಲೋಚನೆಯಲ್ಲಿ ಆಧುನಿಕತೆ ಇರಲೀ ಆಚಾರ ವಿಚಾರಗಳ ನಿರಾಕರಣೆಯಲ್ಲಲ್ಲ....

ಇಂದು ಮಹಿಳೆಯೊಬ್ಬಳು ಮೌಢ್ಯವನ್ನು ಮೀರಿ ಹೊಸ್ತಿಲಾಚೆ ಕಾಲಿಟ್ಟು ಶಿಕ್ಷಣದ ವಿಚಾರಪರತೆಯ ಜ್ಞಾನದ ವಿಜ್ಞಾನದ ಬೆನ್ನೇರಿ

ಭಾಗಶಃ ಎಲ್ಲಾ ಕ್ಷೇತ್ರಗಳಲ್ಲೂ ಪುರುಷರ ಮೀರಿ ಯಶೋಗಾಥೆ ಹಾಡುವಂತಹ ಆಧುನಿಕತೆಯ ಅಳವಡಿಕೆಯಲ್ಲಿ ಮಹಿಳೆಯ ಪಾತ್ರ ಅಮೋಘವಾಗಿದೆ,

ಈ ಮೊದಲು ಮಹಿಳೆಯ ಜೀವನವು ಅವಳ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿತ್ತು, ಮಕ್ಕಳನ್ನು ಹೆರುವುದು ಅವುಗಳ ಲಾಲನೆ ಪಾಲನೆ, ಕುಟುಂಬ ನಿರ್ವಹಣೆ, ಮಾತ್ರ ಅವಳ ಕೆಲಸವಾಗಿತ್ತು, ಈಗ ಕಾಲ ಬದಲಾಗುತ್ತಿದೆ ಮಹಿಳೆಯರ ಅರಿವಿನ ಪರಿ ವಿಸ್ತರಿಸುತ್ತಿದೆ, ಮಹಿಳೆಯು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದ್ದಾಳೆ. ಅವಳ ಈ ಸಾಧನೆಗೆ ಸಹಾಯಕವಾದ ಶಿಕ್ಷಣ ಮಾಧ್ಯಮಗಳಿಗೆ ಧನ್ಯವಾಧ ಅರ್ಪಿಸಬೇಕಿದೆ,

ಡಿಸೆಂ 18, 2018

ಅವಳ ನೆನಪಿನಲ್ಲಿ.


ಡಾ. ಅಶೋಕ್. ಕೆ. ಆರ್. 
ಒಂದ್ ಹುಡ್ಗೀನ್ ಇಷ್ಟ ಪಟ್ಟು ಧೈರ್ಯ ತಕಂಡ್ ಪ್ರಪೋಸು ಮಾಡಿ ಅಪ್ಪಿ ತಪ್ಪಿ ಅವಳು ಒಪ್ಪೂ ಬಿಟ್ಟು 'ಶುಭಂ' ಅಂತೊಂದ್ ಬೋರ್ಡು ಹಾಕೊಳ್ಳೋದಕ್ಕಿಂತ ಗ್ಯಾಪ್ ಗ್ಯಾಪಲ್ಲಿ ಒಂದೊಂದ್ ಹುಡ್ಗಿ ಜೊತೆ ಒನ್ ವೇ ಲವ್ವಲ್ ಬಿದ್ದು ನಾಕೈದು ವರ್ಷಕ್ಕೊಂದ್ಸಲ ಹಳೇ ಗಾಯ ಕೆರ್ಕಂಡ್ ಕೂರೋದ್ ಚೆಂದ್ವೋ ಏನೋಪ! 

ಮೊನ್ಮೊನ್ನೆ ನಮ್ ಜೆ.ಎಸ್.ಎಸ್. ಮೆಡಿಕಲ್ ಕಾಲೇಜಿನ ಇಮಿಡೀಯಟ್ ಸೀನಿಯರ್ಸು ಗೆಟ್ ಟುಗೆದರ್ ಮಾಡ್ಕಂಡಿದ್ ಫೋಟೋಗಳನ್ನ ಹಾಕಂಡಿದ್ರು ಎಫ್.ಬೀಲಿ. ಅದರಲ್ಲಿದ್ದ ಗ್ರೂಪ್ ಫೋಟೋನ ತಟಕ್ಕಂತ ಝೂಮ್ ಮಾಡಿದ್ದು ಅವಳ ನೋಡುವ ನೆಪದಿಂದ! ಆರೇಳು ವರ್ಷ ಆಗಿತ್ತಾಂತ ಅವಳ ಮುಖ ನೋಡಿ?! 

ಹೆಚ್ಚು ಕಡಿಮೆ ಹದಿನೇಳು ವರುಷದ ಹಿಂದಿನ ನೆನಪುಗಳು. ನಮ್ ಕಾಲೇಜ್ ಶುರುವಾಗಿ ಮೊದಲ ಇಂಟರ್ನಲ್ಸ್ ಮುಗಿಯುವ ಸುಮಾರಿಗೆ ನಮ್ ಇಮಿಡೀಯಟ್ ಸೀನಿಯರ್ಸುಗಳ ರಿಸಲ್ಟ್ ಬಂದಿತ್ತು. ಊರಿಗೋಗಿದ್ದ ಸೀನಿಯರ್ಸ್ ಎಲ್ಲಾ ಕಾಲೇಜಿಗೆ ವಾಪಸ್ಸಾದ್ರು. ಎರಡನೇ ವರ್ಷದ ಶುರುವಿನಲ್ಲಿ ಓದಿ ದಬಾಕೋಕು ಏನೂ ಇರೋಲ್ಲ. ಜೊತೆಗೆ ಮೆಡಿಕಲ್ನಲ್ಲಿ ಮೊದಲ ವರ್ಷ ಪಾಸಾದ್ರೆ ಡಾಕ್ಟರಾಗಿಬಿಟ್ಟ ಫೀಲಿಂಗ್ ತಲೇಲ್ ಇರ್ತದೆ! ಸೀನಿಯರ್ಸ್ ಎಲ್ಲಾ ಗುಂಪು ಗುಂಪಾಗಿ ಲೈಬ್ರರಿಗೆ ಬಂದು ಕೂರೋರು. ಜೂನಿಯರ್ಸ್ ಯಾರ್ನಾದ್ರೂ ಕರುಸ್ಕಂಡು ಅದೂ ಇದೂ ತರ್ಲೆ ಪ್ರಶ್ನೆ ಕೇಳ್ತಾ ಮಜಾ ತಗೊಳ್ಳೋರು. ಆಗಲೇ ಅವಳು ಕಂಡಿದ್ದು. 

ನವೆಂ 28, 2018

ಪರಿತ್ಯಕ್ತೆ

ಪದ್ಮಜಾ ಜೋಯ್ಸ್ ದರಲಗೋಡು
ವಿಷಾದವೇ ಮಡುಗಟ್ಟಿದಂತೆ ನಿಸ್ಸಾರವಾಗಿ ಮಾಗಿದ ವಯಸ್ಸಿನ ದುಗುಡದ ಮನಸ್ಸಿನಿಂದೆಂಬಂತೆ ಸದ್ದಿಲ್ಲದೇ ಸರಿದು ಬಂದ ಅವನನ್ನು ಹೊತ್ತ ಕಾರೊಂದು ಆ ಕಟ್ಟಡದ ಎದುರು ಬಂದು ನಿ಼ಂತಾಗ ನಿರೀಕ್ಷೆಯಲ್ಲಿದ್ದಂತೇ ಒಳಗಿನಿಂದ ಎರಡು ಜೋಡಿ ಕಂಗಳು ಗಮನಿಸಿದ್ದವು.....ಅದೊಂದು ಮಾನಸಿಕ ಚಿಕಿತ್ಸಾ ಕೇಂದ್ರ....
ಗಮನಿಸಿದ, ನಿರೀಕ್ಷೆಯಲ್ಲೇ ಇದ್ದ ಒಂದು ಜೋಡಿ ಕಂಗಳಲ್ಲೊಂದು ಮನೋರೋಗ ತಜ್ಞರಾದರೇ... ಇನ್ನೊಂದು ಚಿಕಿತ್ಸೆ ಪಡೆಯುತ್ತಿರುವ ರೋಗಿಯದು.... ಇಂದವಳ ಹುಟ್ಟಿದ ಹಬ್ಬ , ಇದು ದಶಕದಿಂದಲೂ ಅನೂಚಾನವಾಗಿ ನೆಡೆಯುತ್ತಿರುವ ಘಟನೆಯೇ ಆದರೂ ಯಾವುದೋ ನಿರೀಕ್ಷೆ ಹೊತ್ತು ಬರುವವರಲ್ಲಿ ದಿನದಿನಕ್ಕೂ ನಿರಾಸೆ ಮಡುಗಟ್ಟುತ್ತಿರುವುದನ್ನು .. ತಜ್ಞರೂ .. ಗಮನಿಸಿ ಸತ್ಯವನ್ನು ಹೇಳಿಬಿಡಿಬೇಕೆಂಬ ತುಡಿತ ಅತಿಯಾದರೂ ರೋಗಿಗಿತ್ತ ವಾಗ್ದಾನ ನೆನಪಾಗಿ ಖೇದದಿಂದ ತುಟಿ ಬಿಗಿದುಕೊಂಡರು...
ಕಾರು ನಿಲ್ಲಿಸಿದವ ಏನನ್ನೋ ನಿರೀಕ್ಷಿಸುವಂತೆ "ಅವಳ" ರೂಮಿನ ಕಿಟಕಿಯತ್ತ ಕಣ್ಣು ಹಾಯಿಸಿ ನಿರಾಸೆಯಿ಼ಂದ ನಿಟ್ಟುಸಿರಿಟ್ಟು, ತಲೆಕೊಡವಿ ಅವನು "ಅವಳಿಗಾಗಿ" ತಂದ ವಸ್ತುಗಳನ್ನು ಎದೆಗವಚಿಕೊಂಡು ಹಿಂದೆ ಬ಼ಂದ ಇನ್ನೊಂದು ಕಾರು ಹಾಗೂ ಬ಼ಂದವರಿಗೆ ಕಾಯದೇ ಒಳನೆಡೆದ , 
ಮತ್ತುಳಿದವರು "ಆವಳ" ಬಳಗ ಅವರೂ ತ಼ಂದದ್ದೆಲ್ಲವನ್ನೂ ಎತ್ತಿಕೊಂಡು ಹಿ಼ಂದೆಯೇ ನೆಡೆದರು... ಎಲ್ಲ ಮೌನವಾಗಿ ಪರಸ್ಪರ ದಿಟ್ಟಿಸಿಕೊಂಡರೇ ವಿನಾ ಆಡಲ್ಯಾವ ಮಾತುಗಳಿರಲಿಲ್ಲ... 

ಸೆಪ್ಟೆಂ 17, 2018

"ಹೆಣ್ಣೊಪ್ಪಿಸಿ ಕೊಡೋದು" ಎಂಥೊಂದು ಶಾಸ್ತ್ರದ ಬೆನ್ನೇರಿ.....

ಪದ್ಮಜಾ ಜೋಯಿಸ್
"ಮದುವೆ" ಒಂದು ಮಹತ್ವದ ಸಂಪ್ರದಾಯ, ದೇವಾನುದೇವತೆಗಳ ವಿವರಗಳನ್ನು ಅನುಸರಿಸಿ ಬಂದ ಉಲ್ಲೇಖಗಳು ನಮ್ಮ ಮುಂದೆ ಸಾಕಷ್ಟು ಇವೆ, ಅಂತೆಯೇ ಅನಾದಿ ಕಾಲದಿಂದಲೂ ಇದೊಂದು ಪ್ರಮುಖ ಆಚರಣೆಯಾಗಿ ಶಾಸ್ತ್ರಬದ್ಧವಾಗಿ ನೆಡೆಯುವ ಕಾರ್ಯ, ಇದು ಸಂಸಾರ ಬ಼ಂಧನವನ್ನು ಸಾರುವ ಪತಿಪತ್ನಿಯರ ಸಮಾಗಮಕ್ಕೆ ಅನುವು ಮಾಡಿಕೊಡಲು ಹಿರಿಯರಿಂದ ಪರಂಪರಾನುಗತವಾಗಿ ಬಂದ ಒಂದು ಹಾದಿ... ಮೊದಮೊದಲು 7 ನಂತರ 5 ನಂತರ 3 ನಂತರ 2 ಈಗ 1ಒಂದೇ ದಿನಕ್ಕಾಗಿದೆ, ಇದರಲ್ಲಿ ತಥ್ಯವೂ ಇದೆ.. ಈಗಿನ ರಾಕೆಟ್ ಯುಗದಲ್ಲಿ ಅದಕ್ಕೆಲ್ಲಿ ಸಮಯ ??

ಜೀರಿಗೆ ಬೆಲ್ಲದಿಂದಿಡಿದು ಮಾಂಗಲ್ಯಧಾರಣೆವರೆಗೆ ಹಂತಹಂತವಾಗಿ ಪರಿಪೂರ್ಣಗೊಂಡನಂತರದ ಈ ಘಳಿಗೆ ಹೆಣ್ಣೊಪ್ಪಿಸಿ ಕೊಡುವ/ ಮನೆತುಂಬಿಸಿಕೊಡುವ ಶಾಸ್ತ್ರ , ಈ ಕಾರ್ಯ ಮಾತ್ರ ಹೆತ್ತೊಡಲಿನೊಂದಿಗೆ ನೆರೆದವರೆಲ್ಲರ ಮನಕಲಕಿ ಕರುಳು ಮೀಟುವಂತಹುದು, ಇಲ್ಲಿ ಹೆಣ್ಣೊಪ್ಪಿಸಿಕೊಡುವವರು ಮಾತ್ರವಲ್ಲ ಒಪ್ಪಿಸಿಕೊಂಡವರೂ ಕಣ್ಣೊರೆಸಿಕೊಳ್ಳುವುದು, ಇದಕ್ಕೊಂದಷ್ಟು ಹೆಂಗೆಳೆಯರ ಜಾನಪದ ಭಾವಗೀತೆ ಸಂಪ್ರದಾಯಗೀತೆಗಳ ಹಿಮ್ಮೇಳ ಬೇರೆ ದುಃಖದ ಬಿಕ್ಕುಗಳೊಂದಿಗೆ..... ನಂಬಿಕೆ ಭರವಸೆಗಳು ಸುಂದರ ಸಮರಸ ಬಾಳಿನ ಬುನಾದಿಯೇ ಆಗಿದೆ.....

ಶಾಸ್ತ್ರ ಸಂಪ್ರದಾಯ ಮೂಢನಂಬಿಕೆ ಎಂದು ಹೀಗೆಳೆವ ಮುನ್ನ ವೈಜ್ಞಾನಿಕ ಕಾರಣಗನ್ನೂ ವಿಶ್ಷ್ಲೇಷಿಸಿ ವಿವೇಚನೆಯಿಂದ ವಿವೇಕಯುತವಾಗಿ ಅರಿತು ನೆಡೆದಲ್ಲಿ ಎಲ್ಲವೂ ಸೊಗಸಾಗಿ ಹಿತವಾಗಿಯೇ ಇರುತ್ತವೆ,

ಸೆಪ್ಟೆಂ 11, 2018

‘ದುರಿತಕಾಲದ ದನಿ’ ಕವನಸಂಕಲನದ ಬಿಡುಗಡೆ ಸಮಾರಂಭ.

ಕು.ಸ.ಮಧುಸೂದನರಂಗೇನಹಳ್ಳಿ ಅವರ ಕವನ ಸಂಕಲನ ಲೋಕಾರ್ಪಣೆ ಮಾಡಿದ ಖ್ಯಾತ ವಿಮರ್ಶಕ ಆರ್.ಜಿ. ಹಳ್ಳಿ ನಾಗರಾಜ್ ಈ ಸಂದರ್ಭದಲ್ಲಿ ಮಾತನಾಡುತ್ತ,

“ಸಂತೋಷ ಕೊಡುವ ಕಾಲದಲ್ಲಿ ನಾವು ಬದುಕುತ್ತಿಲ್ಲ ಅಸಹಿಷ್ಣುತೆ, ಭಯದ ಜೊತೆಗೆ ಉಸಿರುಗಟ್ಟುವ ವಾತಾವರಣದಲ್ಲಿ ಬದುಕುತ್ತಿದ್ದೇವೆ.ಸಂಸ್ಕೃತಿಯ ಹೆಸರಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಹತ್ತಿಕ್ಕುವ ಕೆಲಸ ನಡೆಯುತ್ತಿದೆ.ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ.ಇಂತಹ ಸಮಕಾಲೀನ ವಿಚಾರಗಳನ್ನಿಟ್ಟುಕೊಂಡೇ ಕು.ಸ.ಮಧುಸೂದನರಂಗೇನಹಳ್ಳಿಯವರ ಕವಿತೆಗಳು ಸೃಷ್ಠಿಯಾಗಿವೆ.ಈಗಿನ ದುರಿತ ಕಾಲದ ವಿರುದ್ದ ಆರೋಗ್ಯಪೂರ್ಣ ದ್ವನಿ ಎತ್ತಿರುವ ಈ ಸಂಕಲನದ ಕವಿತೆಗಳಿಗೆ ವಿಶೇಷ ಮಹತ್ವವಿದೆ” ಎಂದು ನುಡಿದರು.

ಈ ಕಾರ್ಯಕ್ರಮದಲ್ಲಿ ಕನ್ನಡದ ಹಿರಿಯ ಕವಿಯಿತ್ರಿ ಶ್ರೀಮತಿ ಹೆಚ್.ಎಲ್.ಪುಷ್ಪಾ,ಪ್ರೊ.ವೃಷಭೇಂದ್ರಪ್ಪ. ಡಾ.ಪ್ರಕಾಶ್ ಹಲಗೇರಿ, ಪ್ರೊ, ಅರವಿಂದ್, ಡಾ,ಹೊನ್ನಾಳಿ ಶಿವಕುಮಾರ್, ಶ್ರೀ ಸಂತೇಬೆನ್ನೂರು ಫೈಜ್ನಾಟ್ರಾಜ್, ವೀರಭದ್ರಪ್ಪ ತೆಲಿಗಿ ಹಾಗು ಚಿತ್ರ ಕಲಾವಿದರಾದ ಶ್ರೀ ನಾಮದೇವ ಕಾಗದಕರ ಉಪಸ್ಥಿತರಿದ್ದರು

ಆಗ 11, 2018

ನಮ್ಮನ್ನಗಲಿದ ಸುಮತೀಂದ್ರ ನಾಡಿಗರ ನೆನಪಿನಲ್ಲಿ….

sumateendra nadig
ಸುಮತೀಂದ್ರ ನಾಡಿಗ್
ಕು.ಸ.ಮಧುಸೂದನ ರಂಗೇನಹಳ್ಳಿ 
ಸುಮತೀಂದ್ರ ನಾಡಿಗ್ ಇನ್ನಿಲ್ಲವಾದ ಸುದ್ದಿ ಕೇಳಿ ಮನಸಿಗೆ ಪಿಚ್ಚೆನ್ನಿಸಿ ಬಿಟ್ಟಿತ್ತು. ಬಹುಶ: ಈ ಪೀಳಿಗೆಯ ಬಹುತೇಕರಿಗೆ ನಾಡಿಗರು ಅಪರಿಚಿತರೇ ಎನ್ನ ಬಹುದು. 

ಯಾವತ್ತಿಗೂ ನಾನವರನ್ನು ಬೇಟಿಯಾಗಲೇ ಇಲ್ಲ. ಅದೊಂದು ನೋವು ಸದಾ ನನ್ನನ್ನು ಕಾಡುವುದು ಖಂಡಿತ! ಕೇವಲ ಪತ್ರಗಳ ಮೂಲಕವೇ ನನಗವರು ಕೆಲಕಾಲ ನನ್ನ ಹಿತೈಷಿಯಾಗಿ, ನಾನು ತೀವ್ರವಾದ ಅನಾರೋಗ್ಯ ಪೀಡಿತನಾಗಿದ್ದ ಸಮಯದಲ್ಲಿ ಬದುಕುವ ಧೈರ್ಯ ತುಂಬಿದಂತವರು. 

2000ನವೆಂಬರಿನಲ್ಲಿ ನನ್ನ ದೇಹದ ಎಡಭಾಗಕ್ಕೆ ಆದ ಪಾರ್ಶ್ವವಾಯುವಿನಿಂದ ಸತತ ಎರಡು ವರ್ಷ ಆಸ್ಪತ್ರೆಯಲ್ಲಿ ಅಕ್ಷರಶ: ಜೀವ ಶವದಂತೆ ಮಲಗಿದ್ದೆ. ನಂತರ ನಿದಾನವಾಗಿ ಎದ್ದು ಓಡಾಡುವಂತಾದಾಗ ಎಂದೂ ಸುಮ್ಮನೆ ಕೂರದ ನಾನು ಕವಿತೆಗಳಿಗೆ ಮಾತ್ರ ಮೀಸಲಾಗಿದ್ದ ಕಾವ್ಯ ಖಜಾನೆ( ಕಾವ್ಯ ಕನ್ನಡಿ) ಎನ್ನುವ ಖಾಸಗಿ ಪತ್ರಿಕೆಯೊಂದನ್ನು ಶುರು ಮಾಡಿದ್ದೆ.

ಜೂನ್ 1, 2018

ಹೋಗಿಬನ್ನಿ ಸಿದ್ದರಾಮಯ್ಯನವರೆ......

ಕು.ಸ.ಮಧುಸೂದನ ರಂಗೆನಹಳ್ಳಿ
ನಿಮ್ಮ ಮತ್ತು ನಿಮ್ಮ ಪಕ್ಷದ ಈ ಸೋಲು ಅನಿರೀಕ್ಷಿತವಾಗಿದ್ದರೂ, ಮನಸ್ಸಿನ ಯಾವುದೊ ಒಂದು ಮೂಲೆಯಲ್ಲಿದರ ಮುನ್ಸೂಚನೆ ನನಗೇ ಅರಿವಿಲ್ಲದಂತೆ ಇತ್ತೆಂಬುದು ಇದೀಗ ನಿಜವೆನಿಸುತ್ತಿದೆ. ಹಾಗಾಗಿಯೇ ಚುನಾವಣೆಗಳು ಘೋಷಣೆಯಾದ ಮೊದಲ ದಿನಗಳಲ್ಲಿಯೇ 'ಟಾರ್ಗೆಟ್ ಸಿದ್ದರಾಮಯ್ಯ' ಎಂಬುದೊಂದು ಲೇಖನ ಬರೆದಿದ್ದೆ. ಹೌದು ಈ ನೆಲದ ಮೆಲ್ವರ್ಗಗಳು, ಪಾಳೇಗಾರಿಕೆಯ ಪಳೆಯುಳಿಕೆಗಳು, ಜೊತೆಗೆ ನಿಮ್ಮದೇ ಪಕ್ಷದ ನಿಮ್ಮ ಹಿತ ಶತ್ರುಗಳು ಕಾಂಗ್ರೆಸ್ಸನ್ನು ಸೋಲಿಸುವುದಕ್ಕಿಂತ ಹೆಚ್ಚಾಗಿ ನಿಮ್ಮನ್ನು ಸೋಲಿಸಲು ಪಣತೊಟ್ಟು ನಿಂತಿದ್ದವು. ಆ ಶಕ್ತಿಗಳಿಗೆ ಗೊತ್ತಿತ್ತು ವರ್ತಮಾನದಲ್ಲಿ ರಾಜ್ಯ ಕಾಂಗ್ರೆಸ್ಸನ್ನು ಸೋಲಿಸಬೇಕೆಂದರೆ ಮೊದಲು ಸಿದ್ದರಾಮಯ್ಯನವರನ್ನು ಹಣಿಯಬೇಕೆಂಬುದು. ಇದೇನು ಈ ಚುನಾವಣೆ ಘೋಷಣೆಯಾದ ನಂತರ ಉದ್ಭವವಾದ ಹೊಸ ಬೆಳವಣಿಗೆಯೇನಲ್ಲ.

ಡಿಸೆಂ 9, 2017

ಕನ್ಯತ್ವವೂ ಕನ್ಯಾಪೊರೆಯೂ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಮೊದಲಿಗೆ ನಿರಂಜನ ವಾನಳ್ಳಿ ಅಂತವರು ಅದರಲ್ಲೂ ಪತ್ರಿಕೋದ್ಯಮದ ಬಗ್ಗೆ ಶಿಕ್ಷಣ ನೀಡುವಂತವರು ಕನ್ಯತ್ವದ ಬಗ್ಗೆ ಮಾತನಾಡಿರುವುದೇ ಅತ್ಯಂತ ಅಸಹ್ಯಕರವಾದ ಮತ್ತು ಅಸಂಗತವಾದ ವಿಚಾರ.

ಅಷ್ಟಕ್ಕೂ ಈ ಕನ್ಯತ್ವಎಂದರೇನು? ಯೋನಿಯೊಳಗಿನ ಕನ್ಯಾಪೊರೆಯನ್ನು ಉಳಿಸಿಕೊಳ್ಳುವುದೇ ಕನ್ಯತ್ವವೇ ವಾನಳ್ಳಿಸರ್?

ಹೆಣ್ಣೊಬ್ಬಳ ಯೋನಿನಾಳದ ಆವರಣದ ತೆಳುವಾದ ಪೊರೆಯನ್ನು ಕನ್ಯಾಪೊರೆ ಎಂದು ಕರೆಯುವುದುಂಟು. ಯಾವತ್ತಿಗೂ ಸಂಭೋಗ ಕ್ರಿಯೆಯಲ್ಲಿ ಬಾಗವಹಿಸದ ಹೆಣ್ಣಿನ ಕನ್ಯಾಪೊರೆ ಹರಿಯುವುದಿಲ್ಲ ಎಂಭ ಭ್ರಮೆಯೊಂದು ಸಮಾಜದಲ್ಲಿ ಬೆಳೆದು ಬಂದಿದೆ.

ನವೆಂ 17, 2017

ಇಂಡಿಯಾದಲ್ಲಿ ಮತೀಯವಾದದ ರಾಜಕಾರಣದ ಬೆಳವಣಿಗೆಗೆ ಕಾರಣವಾದ ಅಂಶಗಳು!

ಕು.ಸ.ಮಧುಸೂದನರಂಗೇನಹಳ್ಳಿ
(ಇಂಡಿಯಾದ ರಾಜಕಾರಣದಲ್ಲಿ ಮತೀಯವಾದವೇನು ಇದ್ದಕ್ಕಿದ್ದಂತೆ ಸೃಷ್ಠಿಯಾಗಿದ್ದಲ್ಲ. ಬದಲಿಗೆ ಎಪ್ಪತ್ತರ ದಶಕದಲ್ಲಿ ನಮ್ಮ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನಾಯಕರುಗಳು ತೆಗೆದುಕೊಂಡ ತಪ್ಪು ನಿರ್ದಾರಗಳಿಂದಾಗಿ ಮತ್ತು ತದನಂತರದಲ್ಲೂ ಸಿದ್ದಾಂತಕ್ಕಿಂತ ಅಧಿಕಾರವೇ ಮುಖ್ಯ ಎನ್ನುವ ರೀತಿಯಲ್ಲಿ ನಡೆದುಕೊಂಡಿದ್ದರಿಂದ ಮತೀಯವಾದ ಎನ್ನುವುದು ನಿದಾನವಾಗಿ ಇಂಡಿಯಾದ ರಾಜಕಾರಣದಲ್ಲಿ ವಿಷದಂತೆ ತುಂಬಿಕೊಳ್ಳತೊಡಗಿತು. ಇಂದಿನ ಯುವಜನತೆಗೆ ಇದರ ಸಂಕ್ಷಿಪ್ತ ಪರಿಚಯ ಮಾಡಿಕೊಡುವುದಷ್ಟೆ ಈ ಲೇಖನದ ಉದ್ದೇಶ)

ಅದು ಶಕ್ತಿ ರಾಜಕಾರಣದ ಪಡಸಾಲೆಯೇ ಇರಲಿ, ವಿಚಾರವಂತರು ಮತ್ತು ಪ್ರಗತಿಪರರ ವೈಚಾರಿಕಗೋಷ್ಠಿಗಳಿರಲಿ, ಇಲ್ಲ ಅತಿ ಸಾಮಾನ್ಯಜನರ ಸರಳ ಮಾತುಕತೆಗಳ ಪಟ್ಟಾಂಗದಲ್ಲಿರಲಿ ಒಂದುಮಾತು ಮಾತ್ರ ಪದೆಪದೇ ಪುನರುಚ್ಚರಿಸಲ್ಪಡುತ್ತಿದೆ ಮತ್ತು ತೀವ್ರ ರೀತಿಯ ಚರ್ಚೆಗೆ ಗ್ರಾಸವಾಗುತ್ತಲಿದೆ: ಅದೆಂದರೆ ಇಂಡಿಯಾದಲ್ಲಿ ಮತಾಂಧ ರಾಜಕಾರಣ ಮೇಲುಗೈ ಸಾದಿಸುತ್ತಿದೆಮತ್ತು ಅದರ ಕಬಂದ ಬಾಹುಗಳು ಈ ನೆಲದ ಬುಡಕಟ್ಟುಜನಾಂಗಗಳನ್ನೂ ಸಹ ಆವರಿಸಿಕೊಳ್ಳುತ್ತಿದೆ ಅನ್ನುವುದಾಗಿದೆ.ನಿಜ ಇವತ್ತು ಮತೀಯ ರಾಜಕಾರಣ ಮಾಡುತ್ತಲೆ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಾಜಪ ದಿನೇದಿನೇ ತನ್ನ ಶಕ್ತಿಯನ್ನು ಮತ್ತು ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಿದೆ.ಎಂಭತ್ತರ ದಶಕದಲ್ಲಿ ಶುರುವಾದ ಬಾಜಪದ ಕೋಮುರಾಜಕಾರಣವೀಗ ತನ್ನ ಉತ್ತುಂಗ ಸ್ಥಿತಿಯನ್ನು ತಲುಪಿದ್ದು ಈ ನಾಡಿನ ಜಾತ್ಯಾತೀತ ನೇಯ್ಗೆಯನ್ನು ಚಿಂದಿ ಮಾಡಿದೆ ಮತ್ತು ಮಾಡುತ್ತಿದೆ. ಈಹಿನ್ನೆಲೆಯಲ್ಲಿಯೇ ನಾವು ಬಾಜಪ ಹೇಗೆ ಬೆಳೆಯುತ್ತಬಂದಿತು ಮತ್ತು ಹೇಗೆ ತನ್ನ ಮತೀಯ ರಾಜಕಾರಣ ಮತ್ತು ಸಾಂಸ್ಕೃತಿಕ ರಾಜಕಾರಣವನ್ನು ಭಾರತೀಯರು ಒಪ್ಪುವಂತೆಮಾಡುವಲ್ಲಿ ಯಶಸ್ವಿಯಾಯಿತು ಎನ್ನುವುದನ್ನು ವಿಶ್ಲೇಷಿಸಿ ನೋಡಬೇಕಿದೆ. 

ಮೇ 9, 2017

ಮುದ್ದು ಮನವೇ ಬುದ್ದಿ ಮಾತು ಕೇಳು.....

ಸವಿತ ಎಸ್ ಪಿ
ಹೇಳು ಮನವೇ....‌?ಯಾಕೀ ಪರಿ ಪರಿತಾಪ....! ಭಾವತಂತುವಿನೊಂದು ಕೊಂಡಿ ಕಳಚಿದಂತೆ.....ಏನೀ ಕಸಿವಿಸಿ...? ಬೊಗಸೆಯಷ್ಟು ಪ್ರೀತಿ ಬಯಸುವೆಯಾದರೂ ಯಾಕೆ....? ಅಣುವಿನಷ್ಟು ದೊರಕಲಿಲ್ಲವೆಂಬ ಕೊರಗೇಕೇ‌..? ನೋವ ಅಲೆ ಅಲೆ ನಿನ್ನೊಡಲಿಗೆ ಅಪ್ಪಳಿಸಿತೆಂದು ಭೋರಿಡುವೆಯೇಕೆ.....?

ಯಾಕೀ ನಿರೀಕ್ಷೆ.....? ಇದು ಸಾಧುವೇ....ಯಂತ್ರ ತಾಂತ್ರಿಕತೆಯ ಹುಚ್ಚು ಹಚ್ಚಿಸಿಕೊಂಡಿರುವ ಜಗದ ಜನರ ನಾಗಾಲೋಟದ ವೇಗಕೆ ನೀನೇಕೆ ಓಡದೆಯೇ ಸೋತೆ....? ಗೆಲ್ಲುವ ಹಂಬಲದ ಕುದುರೆಯನೇಕೇ ಹತ್ತದೇ ಹೋದೇ....?

ಮೇ 2, 2017

ಮೃತ್ಯು ಕೂಪಗಳಾಗುತ್ತಿರುವ ತೆರೆದ ಕೊಳವೆಬಾವಿಗಳಿಗೊಂದು ಕಠಿಣ ಕಾಯ್ದೆಯ ಅಗತ್ಯ

ಸಾಂದರ್ಭಕ ಚಿತ್ರ 
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಆಗಾಗ ತೆರದ ಕೊಳವೆಬಾವಿಗಳಲ್ಲಿ ಪುಟ್ಟ ಮಕ್ಕಳು ಬೀಳುವುದು, ಅವರನ್ನು ಹೊರತೆಗೆಯಲು ಸರಕಾರಗಳು ಸತತ ಕಾರ್ಯಾಚರಣೆ ನಡೆಸುವುದು, ಅವು ವಿಫಲವಾಗಿ ಮಕ್ಕಳು ಅಸುನೀಗುವುದು ನಡೆಯುತ್ತಲೇ ಇವೆ. ಇಂತಹ ಪ್ರತಿ ಘಟನೆ ನಡೆದಾಗಲೂ ಜನ ಸರಕಾರಗಳ ವಿರುದ್ದ ಪ್ರತಿಭಟಿಸುವುದು, ಸರಕಾರಗಳು ಕೊಳವೆಬಾವಿಗಳಿಗೆ ಸಂಬಂದಿಸಿದಂತೆ ಒಂದಷ್ಟು ನೀತಿಗಳನ್ನು ರೂಪಿಸುವುದಾಗಿ ಹೇಳುವುದು ನಡೆದೆ ಇದೆ. 

ಆದರೆ ಸರಕಾರ ರೂಪಿಸಿರುವ ಯಾವ ನೀತಿಗಳೂ ಕಾರ್ಯರೂಪಕ್ಕೆ ಬಂದಂತೆ ಕಾಣುತ್ತಿಲ್ಲ ಹೀಗಾಗಿಯೇ ಪದೇಪದೇ ಇಂತಹ ಅವಘಡಗಳು ನಡೆಯುತ್ತಲೇ ಇವೆ. ಯಾವುದೇ ಇಚ್ಚಾಶಕ್ತಿ ಇರದೆ ರೂಪಿಸಿದ ನೀತಿನಿಯಮಗಳಿಂದ, ಕಾನೂನುಗಳಿಂದ ಇಂತಹ ಅಪಘಾತಗಳನ್ನು ತಡೆಯಲು ಸಾದ್ಯವಿಲ್ಲ. ಹಾಗಾಗಿ ಕೆಲವಾದರು ಕಠಿಣ ಕಾನೂನುಗಳನ್ನು ಜಾರಿಗೊಳಿಸುವುದರಿಂದ ಭವಿಷ್ಯದಲ್ಲಿಯಾದರು ಇಂತಹ ಅನಾಹುತಗಳನ್ನು ನಿಯಂತ್ರಿಸ ಬಹುದಾಗಿದೆ. 

ಏಪ್ರಿ 28, 2017

ಮೇ ಸಾಹಿತ್ಯ ಮೇಳ

ಫ್ಯಾಸಿಸಂ ಚಹರೆಗಳು : ಅಪಾಯ-ಪ್ರತಿರೋಧ

೨೦೧೭, ಮೇ ೬ ಮತ್ತು ೭
ಆಲೂರು ವೆಂಕಟರಾವ್ ಸಭಾ ಭವನ, ಧಾರವಾಡ


ಲಡಾಯಿ ಪ್ರಕಾಶನ, ಗದಗ
ಕವಿ ಪ್ರಕಾಶನ, ಕವಲಕ್ಕಿ
ಚಿತ್ತಾರ ಕಲಾ ಬಳಗ, ಧಾರವಾಡ


ಉದ್ಘಾಟನಾ ಸಮಾರಂಭ ಬೆಳಿಗ್ಗೆ ೧೦.೧೫

ಉದ್ಘಾಟನೆ: ಗೀತಾ ಹರಿಹರನ್, ಇಂಡಿಯನ್ ರೈಟರ‍್ಸ್ ಫೋರಂ ಅಧ್ಯಕ್ಷೆ, ದೆಹಲಿ
ಮುಖ್ಯ ಅತಿಥಿಗಳು:
ಮದಿವಣ್ಣನ್, ಕವಿ, ವಿಮರ್ಶಕ, ಈರೋಡು
ಕೆ ನೀಲಾ, ಕಲಬುರಗಿ
ಸಮನ್ವಯ: ಪ್ರೊ. ಅರವಿಂದ ಮಾಲಗತ್ತಿ, ಮೈಸೂರು 
          
ಗೌರವ ಉಪಸ್ಥಿತಿ: ಪ್ರೊ. ಶಿವರುದ್ರ ಕಲ್ಲೋಳಿಕರ, ಎನ್. ಡಿ. ವೆಂಕಮ್ಮ, ವಿಠ್ಠಪ್ಪ ಗೋರಂಟ್ಲಿ, ಅಶೋಕ ಬರಗುಂಡಿ, ಕೆ. ಎನ್. ದೊಡಮನಿ, ರವಿ ನಾಯ್ಕರ
 
ಸಂಯೋಜನೆ : ಡಾ. ಎಚ್. ಎಸ್. ಅನುಪಮಾ

ಮುಸ್ಲಿಂ ಯುವ ಸಮಾವೇಶ

ಅನುಮಾನಿತ, ಅವಮಾನಿತ ಸಮುದಾಯದ ನೋವು ನಲಿವುಗಳ ಕುರಿತು ಚರ್ಚೆ, ಸಂವಾದ

ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ಹದಿನೈದರಷ್ಟಿರುವ ಮುಸ್ಲಿಂ ಸಮುದಾಯ ಇಂದು ಬಹುದೊಡ್ಡ ಬಿಕ್ಕಟ್ಟಿಗೆ, ಸಂಕಟಕ್ಕೆ ಗುರಿಯಾಗಿದೆ. ಸಮುದಾಯದ ಒಳಗೆ, ಹೊರಗೆ ಎರಡೂ ಕಡೆಗಳಲ್ಲಿ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಉದ್ಯೋಗ, ಶಿಕ್ಷಣ, ಆರೋಗ್ಯ, ಆರ್ಥಿಕ ಸ್ಥಿತಿಗತಿಗಳಲ್ಲಿ ಮುಸ್ಲಿಮರು ದಲಿತ ಸಮುದಾಯ ಕ್ಕಿಂತಲೂ ಹಿಂದುಳಿದಿದ್ದಾರೆ ಎಂದು ಜಸ್ಟಿಸ್ ಸಾಚಾರ್ ಸಮಿತಿ ತನ್ನ ವರದಿಯಲ್ಲಿ ಬೊಟ್ಟು ಮಾಡಿದೆ. 

ಏಪ್ರಿ 18, 2017

ಹೀಗೊಂದು ಪತ್ರ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಪ್ರೀತಿಯ ಕೆ,

ಮೊನ್ನೆ ನೀವೆಲ್ಲ ಮಾತಾಡಿದ ಪರ್ಯಾಯ ರಾಜಕಾರಣದ ಮಾತುಗಳನ್ನು ಬಹಳ ಆಸಕ್ತಿಯಿಂದ, ಕುತೂಹಲದಿಂದ ಕೇಳಿಸಿಕೊಂಡೆ. ಬಹಳ ವಿದ್ವತ್ ಪೂರ್ಣವಾದ ಆ ಮಾತುಗಳನ್ನು, ಅದರಲ್ಲಿದ್ದ ಸಮರ್ಥನೀಯ ಗುಣವನ್ನು ಅಲ್ಲಗೆಳೆಯಲು ಸಾದ್ಯವೇ ಇಲ್ಲವಾದರೂ ಆ ಕ್ಷಣಕ್ಕೆ ನನ್ನಲ್ಲಿ ಕೆಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದಂತು ನಿಜ. ಆದರೆ ಆ ಪ್ರಶ್ನೆಗಳಿಗೆ ಒಂದು ಸ್ಪಷ್ಟರೂಪ ಬರಲು ಒಂದಷ್ಟು ದಿನಗಳೇ ಬೇಕಾಗಿದ್ದು, ಇದೀಗ ಆ ಪ್ರಶ್ನೆಗಳನ್ನು ನಿನಗೆ ಕೇಳುತ್ತಿರುವೆ. ನಿಮ್ಮ ಬದ್ದತೆಯನ್ನಾಗಲಿ, ನೀವು ನಡೆಯಹೊರಟಿರುವ ಹಾದಿಯ ಬಗ್ಗೆಯಾಗಲಿ ನನಗೆ ಕಿಂಚಿತ್ತೂ ಅನುಮಾನವಿಲ್ಲ ಮತ್ತು ಅಸಹನೆಯೂ ಇಲ್ಲ. 

ಏಪ್ರಿ 4, 2017

ಗದ್ದರ್ ನೆನಪಲ್ಲೊಂದು ಗೆಳೆಯರ ಕತೆ......

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಗದ್ದರ್!
ಗದ್ದರ್ !!
ಕಳೆದೆರಡು ದಿನಗಳಿಂದ ಸುದ್ದಿಯಾಗುತ್ತಿರುವ ಗದ್ದರ್ ಇಷ್ಟು ವರ್ಷಗಳ ಕಾಲ ತಾವು ನಂಬಿಕೊಂಡಿದ್ದ ಮಾರ್ಕ್ಸ್ ವಾದವನ್ನು ಹಾಡುನೃತ್ಯಗಳ ಮೂಲಕ ಜನರಿಗೆ ಅದರಲ್ಲಿಯೂ ತಳ ಸಮುದಾಯಗಳ ಯುವಕರಿಗೆ ತಲುಪಿಸುತ್ತಿದ್ದ ಕ್ರಾಂತಿಕಾರಿ ನಾಯಕ. ಇದೀಗ ಇಂತಹ ಗದ್ದರ್ ಪುರೋಹಿತರ ಪಾದದ ಬಳಿ ಮಂಡಿಯೂರಿ ಕುಳಿತು ಪೂಜೆ ಸಲ್ಲಿಸಿದ ಬಗ್ಗೆ ಪರವಿರೋಧಗಳ ಚರ್ಚೆ ಬಿರುಸಿನಿಂದ ನಡೆಯುತ್ತಿದೆ.

ಯಾಕೆ ವ್ಯಕ್ತಿಯೊಬ್ಬ ಇದ್ದಕ್ಕಿದ್ದ ಹಾಗೆ ಹೀಗೆ ಬದಲಾಗಿ ಬಿಡುತ್ತಾನೆ? ಅಥವಾ ನಾವು ಅಂದುಕೊಳ್ಳುವ ಆ ‘ಇದ್ದಕ್ಕಿದ್ದಂತೆ’ ಎಂಬುದು ಆ ವ್ಯಕ್ತಿಯ ಒಳಗೆ ವರುಷಗಳಿಂದ ನಡೆಯುತ್ತಿದ್ದ ತಳಮಳಗಳ ಪ್ರತಿಫಲವೇ ಎಂಬುದನ್ನು ಯೋಚಿಸಲೂ ಕಾಯದೆ ತತ್ ಕ್ಷಣದ ಪ್ರತಿಕ್ರಿಯೆ ನೀಡುವ ಭರದಲ್ಲಿ ನಾವು ಎಡವುತ್ತಿದ್ದೇವೆಯೇ? ಗೊತ್ತಿಲ್ಲ!

ಫೆಬ್ರ 18, 2017

ಸಮೂಹ ಮಾಧ್ಯಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ

ಡಾ. ಸುಶಿ ಕಾಡನಕುಪ್ಪೆ
ತಂತ್ರಜ್ನಾನ ವ್ಯಕ್ತಿಯ ಮೇಲೆ ಮಾಂತ್ರಿಕ ಹಿಡಿತ ಹೊಂದಿದೆ ಎಂಬುದಕ್ಕೆ ಸಾಮಾನ್ಯವಾದ ಉದಾಹರಣೆ ನಮ್ಮ ಸುತ್ತ ನಡೆಯುವ ಸಾರ್ವಜನಿಕ ಘಟನೆಯನ್ನು ತಮ್ಮ ಸ್ಮಾರ್ಟ್ ಫೋನ್‌ನ್‌ನಲ್ಲಿ ಸೆರೆ ಹಿಡಿಯುವುದು, ವಿಡಿಯೋ ತೆಗೆಯುವುದು ಮತ್ತು ತಕ್ಷಣವೇ ಅಂತರ್ಜಾಲಕ್ಕೆ ಹರಿಬಿಡುವುದು. 

ಅಮೇರಿಕಾದಲ್ಲಿ ಒಬ್ಬ ವ್ಯಕ್ತಿ ಒಂದು ಬಹುಮಹಡಿ ಕಟ್ಟಡದಿಂದ ಆತ್ಮಹತ್ಯೆಗೆಂದು ಕೆಳಗೆ ಬೀಳಲು ಪ್ರಯತ್ನಿಸುತ್ತಿದ್ದ ಘಟನೆ ವರದಿಯಾಗಿದೆ. ವರದಿಯಲ್ಲಿ ವಿವರಿಸಿದ್ದಂತೆ, ಅಲ್ಲಿ ನೆರೆದ ಹಲವರು ತಮ್ಮ ಸ್ಮಾರ್ಟ್ ಫೋನ್‌ಗಳಲ್ಲಿ ಆತ ಬೀಳುವುದನ್ನು ವಿಡಿಯೊ ತೆಗೆಯುವುದರಲ್ಲಿ ಮಗ್ನರಾಗಿದ್ದರು. ಕೆಲವರು ತಮ್ಮ ವಿಡಿಯೋಗೆ ಬೇಕಾದ ಘಟನೆ ಸೃಷ್ಟಿಸಲೋ ಎಂಬಂತೆ ಆತನನ್ನು ಕೆಳಗೆ ಬೀಳಲು ಹುರಿದುಂಬಿಸುತ್ತಿದ್ದರು. ಇಲ್ಲಿ ಯಾರೂ ಆತನ ಆತ್ಮಹತ್ಯೆಯ ಪ್ರಯತ್ನವನ್ನು ತಡೆಯುವ ಗೋಜಿಗೆ ಹೋಗಲಿಲ್ಲ ಎಂದು ವರದಿಯಾಗಿದೆ. ಇದನ್ನು ಗಮನಿಸಿದಾಗ ಮಾನವನ ಒಂದು ಹೊಸ ರೀತಿಯ ಅಪಾಯಕಾರಿ ನಡತೆ ರೂಪುಗೊಂಡಿರುವುದು ತಿಳಿಯುತ್ತದೆ. ಈ ರೀತಿಯ ಮಾನವನ ನಡತೆಯ ಬಗ್ಗೆ ಆತಂಕ ವ್ಯಕ್ತ ಪಡೆಸಿರುವ ಅಲ್ಲಿನ ಮನೋವಿಜ್ನಾನಿಗಳು ಸಮೂಹ ಮಾಧ್ಯಮಗಳು ಸಮಾಜವನ್ನು ರೂಪಿಸುತ್ತಿರುವ ಬಗೆಯನ್ನು ಚರ್ಚಿಸಿದ್ದಾರೆ. 

ಜನ 19, 2017

ಸ್ವರ್ಗದಿಂದೊಂದು ಸ್ವಗತ: ಎಂ.ಕೆ.ಗಾಂದಿ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ನನ್ನ ದೇಶದಲ್ಲಿ ನೋಟುಗಳ ಮೇಲಿದ್ದ ನನ್ನ ಬಾವಚಿತ್ರವನ್ನು ತೆಗೆದು ಹಾಕಿದ್ದಾರೆ ಮತ್ತು ನಾನು ಬಹಳವಾಗಿ ಪ್ರೀತಿಸುತ್ತಿದ್ದ ಖಾದಿಯನ್ನು ಪ್ರಚಾರ ಮಾಡುತ್ತಿದ್ದ ಖಾದಿಗ್ರಾಮೋದ್ಯೋಗದ ಕ್ಯಾಲೆಂಡರಿನಿಂದಲೂ ನನ್ನ ಬಾವಚಿತ್ರವನ್ನು ತೆಗೆದು ಬೇರೆಯವರದನ್ನು ಹಾಕಿದ್ದಾರೆಂದು ಇದೀಗ ಬಂದವರೊಬ್ಬರು ನನಗೆ ಹೇಳಿದರು. ನನಗೇನೂ ಅನಿಸಲಿಲ್ಲ. ಯಾಕೆಂದರೆ ಅವರು ಮುದ್ರಿಸುತ್ತಿದ್ದ ನೋಟುಗಳ ವ್ಯಾಮೋಹ ನಾನಲ್ಲಿ ಇದ್ದಾಗಲೂ ನನಗಿರಲಿಲ್ಲ. ಇನ್ನು ಕ್ಯಾಲೆಂಡರ್ ಡೈರಿಗಳ ಮೂಲಕ ಪ್ರಚಾರ ನಡೆಸುವ ತಂತ್ರಗಳು ನನ್ನ ಕಾಲದಲ್ಲಿರಲಿಲ್ಲ. ಮತ್ತು ಅಂತವುಗಳ ಬಗ್ಗೆ ನನಗೆ ನಂಬಿಕೆಯೂ ಹಿಂದೆ ಇರಲಿಲ್ಲ, ಈಗಲೂ ಇಲ್ಲ.

ನವೆಂ 15, 2016

ಜನಪರ ಕೆಲಸಗಳ ಜೊತೆಯೇ ಶಕ್ತಿರಾಜಕಾರಣದಲ್ಲಿಯೂ ಯಶಸ್ವಿಯಾದ ನಾಯಕ - ಶ್ರೀ ದೇವರಾಜ್ ಅರಸ್

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಸಕ್ರಿಯ ರಾಜಕಾರಣಿಯೊಬ್ಬ ತಾನು ಮಾಡುವ ಜನಪರ ಕೆಲಸಗಳಿಗೆ ಚ್ಯುತಿ ಬಾರದಂತೆ ರಾಜಕಾರಣ ಮಾಡುವುದು ತೀರಾ ಅಪರೂಪ ಮತ್ತು ವಿಶೇಷ!. ಯಾಕೆಂದರೆ ಶಕ್ತಿರಾಜಕಾರಣದ ಕುತಂತ್ರಗಳಲ್ಲಿ ಮುಳುಗಿ ಹೋಗುವ ರಾಜಕೀಯ ನಾಯಕನೊಬ್ಬ ಜನಪರವಾಗಿ ಕೆಲಸ ಮಾಡಲಾಗದಷ್ಟು ಮಟ್ಟಿಗೆ ತನ್ನ ತಂತ್ರಗಾರಿಕೆಯಲ್ಲಿ ಮುಳುಗಿ ಹೋಗಿರುವುದನ್ನು ನಾವು ಇಂಡಿಯಾದ ಪ್ರಜಾಸತ್ತೆಯ ಇತಿಹಾಸದಲ್ಲಿ ಬಹಳಷ್ಟು ಉದಾಹರಣೆಗಳನ್ನು ಕಂಡಿದ್ದೇವೆ. ಹಾಗೆಯೇ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವ ಭರದಲ್ಲಿ ರಾಜಕೀಯ ತಂತ್ರಗಾರಿಕೆಗಳಲ್ಲಿ ವಿಫಲರಾಗಿ ಹೋದ ಹಲವರನ್ನೂ ನಾವು ನೋಡಿರುವುದುಂಟು. ಇಂಡಿಯಾದ ಮಟ್ಟಿಗೆ ಜನಪರ ಕಾರ್ಯಗಳನ್ನೂ ಹಾಗು ಶಕ್ತಿ ರಾಜಕಾರಣವನ್ನೂ ಒಟ್ಟೊಟ್ಟಿಗೆ ಮಾಡಿಕೊಂಡು ಅದರಲ್ಲಿ ಗೆದ್ದವರ ಸಂಖ್ಯೆ ತೀರಾ ವಿರಳ.

ಸೆಪ್ಟೆಂ 7, 2016

ರಿಲಾಯನ್ಸ್ ಜಿಯೋ - ಹುಸಿಯಾದ ನಿರೀಕ್ಷೆ

ಆನಂದ ಪ್ರಸಾದ್

07/09/2016

ಕಳೆದ ಕೆಲವು ತಿಂಗಳುಗಳಿಂದ ಭಾರೀ ನಿರೀಕ್ಷೆ ಮೂಡಿಸಿದ್ದ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ಕೊನೆಗೂ ತನ್ನ ವಾಣಿಜ್ಯ ಸೇವೆಯನ್ನು ಸೆಪ್ಟೆಂಬರ್ 5ರಿಂದ ಆರಂಭಿಸಿದೆ. ರಿಲಾಯನ್ಸ್ ಜಿಯೋ ತನ್ನ ವೆಬ್ಸೈಟಿನಲ್ಲಿ ಕೊಟ್ಟಿರುವ ಪ್ಲಾನ್, ಡಾಟಾ ದರಗಳನ್ನು ಪರಿಶೀಲಿಸಿದಾಗ ನರೇಂದ್ರ ಮೋದಿಯವರ 'ಡಿಜಿಟಲ್ ಇಂಡಿಯಾ' ಘೋಷಣೆ ಸಾಕಾರವಾಗುವ ಸಂಭವ ಕಡಿಮೆ. ಏಕೆಂದರೆ ಡಾಟಾ ದರಗಳು ಸಾಮಾನ್ಯ ಗ್ರಾಹಕನಿಗೆ ಅನುಕೂಲಕರವಾಗಿ ಇಲ್ಲ. 149 ರೂಪಾಯಿಗಳಿಗೆ 28 ದಿನಗಳ ಅವಧಿಗೆ 300 ಎಂಬಿ ಡಾಟಾ ಹಾಗೂ ಉಚಿತ ದೇಶೀಯ ಕರೆ ರೋಮಿಂಗ್ ವೆಚ್ಚವಿಲ್ಲದೆ ಹಾಗೂ ದಿನಕ್ಕೆ 100 ಎಸ್ಸೆಮ್ಮೆಸ್ ಕೊಡುಗೆ ನೀಡಿದೆ. ಉಚಿತ ಕರೆ ಮಾಡಬೇಕಿದ್ದರೆ ಗ್ರಾಹಕ 4ಜಿ ಮೊಬೈಲ್ ಹೊಂದಿರಬೇಕು. ಹೀಗಾಗಿ 2ಜಿ ಅಥವಾ 3ಜಿ ಮೊಬೈಲ್ ಹೊಂದಿರುವ ಸಾಮಾನ್ಯ ಗ್ರಾಹಕ ರಿಲಾಯನ್ಸ್ ಜಿಯೋ 4ಜಿಗೆ ಬದಲಾಗಲು ಕನಿಷ್ಠ 3000 ರೂಪಾಯಿಗಳನ್ನು ವ್ಯಯಿಸಬೇಕು. ಇದು 4ಜಿ ಸೌಲಭ್ಯವುಳ್ಳ ರಿಲಾಯನ್ಸ್ ಫ್ಲೇಮ್ ಬ್ರಾಂಡಿನ ಅತಿ ಕಡಿಮೆ ದರದ ಮೊಬೈಲ್ ಆಗಿದೆ. ಇನ್ನೂ ಹೆಚ್ಚಿನ ಸೌಲಭ್ಯವುಳ್ಳ 4ಜಿ ಮೊಬೈಲ್ ಬೇಕಿದ್ದರೆ 7,000ದಿಂದ 10,000 ರೂಪಾಯಿ ತೆರಬೇಕು. ಇಷ್ಟು ಹಣ ಖರ್ಚು ಮಾಡಿ ರಿಲಾಯನ್ಸ್ ಜಿಯೋ 4ಜಿ ನೆಟ್ವರ್ಕಿಗೆ ಬದಲಾಯಿಸಿಕೊಳ್ಳಲು ಸಾಮಾನ್ಯ ಭಾರತೀಯ ಗ್ರಾಹಕರು ಹಿಂದೇಟು ಹಾಕುತ್ತಾರೆ. ಏಕೆಂದರೆ ಭಾರತೀಯರು ಈಗಾಗಲೇ ಉತ್ತಮ ಸ್ಥಿತಿಯಲ್ಲಿರುವ 2ಜಿ/3ಜಿ ಮೊಬೈಲ್ ಫೋನ್ ಅನ್ನು ತ್ಯಜಿಸಿ ಹೊಸದನ್ನು ಕೊಳ್ಳುವ ಪ್ರವೃತ್ತಿಯನ್ನು ಹೊಂದಿಲ್ಲ. ತಮ್ಮ 2ಜಿ/3ಜಿ ಮೊಬೈಲ್ ಫೋನ್ ಹಾಳಾದ ನಂತರವೇ ಸಾಮಾನ್ಯ ಜನರು ಹೊಸ ಮೊಬೈಲ್ ಕೊಳ್ಳುವ ಬಗ್ಗೆ ಯೋಚಿಸುತ್ತಾರೆ. ಏಕೆಂದರೆ ಜನಸಾಮಾನ್ಯರ ಆದಾಯ ಮಟ್ಟವು ಕಡಿಮೆ ಇರುತ್ತದೆ. ಇದರಿಂದಾಗಿ ರಿಲಾಯನ್ಸ್ ಜಿಯೋ ಉಚಿತ ಕರೆ ರೋಮಿಂಗ್ ಸಹಿತ, ಉಚಿತ ಎಸ್ಸೆಮ್ಮೆಸ್ ದಿನಕ್ಕೆ 100 ಕೊಡುಗೆ ನೀಡಿದರೂ ಇದಕ್ಕೆ ಬದಲಾಗಲು ಸಾಕಷ್ಟು ಸಮಯ ಹಿಡಿಯಬಹುದು.