ಡಾ. ಅಶೋಕ್. ಕೆ. ಆರ್
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ನಾ ಮತ ಚಲಾಯಿಸಲು ಪ್ರಮುಖ ಕಾರಣ ಸಿದ್ಧರಾಮಯ್ಯನವರು ಮತ್ತೊಮ್ಮೆ ಸಿಎಂ ಆಗಲಿ ಎಂದು.
ಮಂಡ್ಯದ ಬಹಳಷ್ಟು ಒಕ್ಕಲಿಗ ಗೌಡರು 'ಈ ಕುರುಬ ಎರಡೆರಡು ಸಲ ಮುಖ್ಯಮಂತ್ರಿ ಆಗಿಬಿಟ್ನಲ್ಲ' ಅಂತ ಕೊರಗೋದನ್ನ ನೋಡೋದೇ ಒಂದು ಚೆಂದವಾಗಿತ್ತು! ಕರ್ನಾಟಕದ ಉಳಿದ ಮುಖ್ಯಮಂತ್ರಿಗಳು ಸ್ವರ್ಗವನ್ನೇ ಕರ್ನಾಟಕಕ್ಕೆ ಇಳಿಸಿ ಬಿಟ್ಟಿದ್ದವರಂತೆ ಸಿದ್ಧರಾಮಯ್ಯನವರನ್ನು ಶೋಷಕ ಜಾತಿಯ ಅನೇಕರು ಲೇವಡಿ ಮಾಡುತ್ತಿದ್ದುದಕ್ಕೆ ಜಾತಿ ಕಾರಣವೇ ಹೊರತು ಮತ್ತೇನಲ್ಲ. ಮೇಲ್ ಶೋಷಕ ಜಾತಿಯ ಮಾತಿನ ಶೈಲಿ "ಗತ್ತು" ಅನ್ನಿಸಿಕೊಂಡರೆ ಸಿದ್ಧರಾಮಯ್ಯನವರ ಮಾತಿನ ಶೈಲಿ "ದುರಹಂಕಾರ" ಅನ್ನಿಸಿಕೊಳ್ಳುತ್ತಿತ್ತು. ಇರಲಿ, ನಮ್ಮ ಸಮಾಜದಲ್ಲಿ ಜಾತಿ ಅನ್ನೋದು ನಮ್ಮ ಜೀವಿತಾವಧಿಯಲ್ಲಂತೂ ಅತ್ತಗಿತ್ತಗೂ ಅಲುಗಾಡುವುದಿಲ್ಲ. ಇನ್ನೆರಡಲ್ಲ ಹತ್ತು ತಲೆಮಾರು ಕಳೆಯುವಷ್ಟರಲ್ಲಾದರೂ ಅಲ್ಲಾಡಿದರೆ ಪುಣ್ಯ.
