ಊರ ಹೊರಗಿದ್ದ ಕಾಲೋನಿಯ ಆಚೆ ಊರಂಚಿನಲ್ಲಿ ಅಲ್ಲೊಂದಿಲ್ಲೊಂದಂತೆ ಇದ್ದ ಮನೆ ಖರೀದಿಸಿ ಆವಾಗಿವಾಗ ಬರುವುದಕ್ಕೆ ಶುರುಮಾಡಿ ಕೆಲವು ತಿಂಗಳುಗಳಾಗಿತ್ತು. ಮನೆಯಂಗಳದಲ್ಲಿ ಪುಸ್ತಕವೊಂದನ್ನು ಓದುತ್ತಾ ಕುಳಿತಿದ್ದಾಗ ಆ ವ್ಯಕ್ತಿ ಬಂದರು. ಗರಿಗರಿಯಾದ ಹೊಸ ಬಟ್ಟೆ ತೊಟ್ಟುಕೊಂಡಿದ್ದರು. ಅವರ ಅಣ್ಣನ ಮಗನದು ಮದುವೆ – ಕೊಳ್ಳೇಗಾಲದಲ್ಲಿ. ಊರಿಂದಾಗ ಬಸ್ಸು ಹೊರಡುವುದರಲ್ಲಿತ್ತು. ಅಷ್ಟು ದೂರದ ಮದುವೆಗೆ ಕರೆಯಲು ಬಂದಿರಲಿಲ್ಲ. ಮುಂದಿನ ಭಾನುವಾರ ಇಲ್ಲೇ ಇನ್ನೂರು ಅಡಿ ದೂರದಲ್ಲಿ ಅವರ ಅಣ್ಣ ಕಟ್ಟಿಸಿರುವ ಹೊಸ ಮನೆಯೊಂದರ ಮುಂದೆ ಕರ್ನರೆ – ಬೀಗರ ಊಟಕ್ಕೆ ಹೇಳಿ ಹೋಗಲು ಬಂದಿದ್ದರು. ಮುಂದಿನ ವಾರ ಊರಿಗೆ ಬಂದರೆ ಖಂಡಿತ ಬರ್ತೀನಿ ಅಂತೇಳಿದೆ.
ಕರ್ನೆರೆಯ ದಿನ ಹನ್ನೊಂದು ಘಂಟೆಯಷ್ಟೊತ್ತಿಗೆ ಮತ್ತೆ ಬಂದು ನೆನಪಿಸಿದರು. ಬರ್ತೀನಿ ಬಿಡಿ ನೆನಪಿತ್ತು ಅಂತೇಳಿದೆ. ಮಧ್ಯಾಹ್ನದ ಮೇಲೆ ಒಂದಷ್ಟು ಬೇರೆ ಕೆಲಸವಿತ್ತು, ಹಂಗಾಗಿ ಒಂದೂಕಾಲರಷ್ಟೊತ್ತಿಗೆ ಕರ್ನರೆಗೆ ಹೋಗಿ ಊಟ ಮಾಡಿಕೊಂಡು ಹೊರಟುಬಿಡುವ ಎಂದುಕೊಂಡೆ. ಅವರ ಮನೆಯ ಬಳಿ ಹೋದೆ, ಇನ್ನೂ ಮುದ್ದೆ ತಿರುವುತ್ತಿದ್ದದ್ದು ರಸ್ತೆಯಿಂದಲೇ ಕಾಣಿಸುತ್ತಿತ್ತು. ಊಟಕ್ಕಿನ್ನೂ ಕುಳಿತಿರಲಿಲ್ಲ. ಹಂಗೇ ಕಣ್ಣಾಡಿಸಿದೆ. ನನ್ನನ್ನು ಎರಡೆರಡು ಸಲ ಕರೆದು ಹೋಗಿದ್ದವರೂ ಕಾಣಿಸಲಿಲ್ಲ. ಅವರನ್ನು ಬಿಟ್ಟರೆ ಅಲ್ಲಿದ್ದ ಇನ್ಯಾರ ಮುಖ ಪರಿಚಯವೂ ಇಲ್ಲ. ಏನೋ ಊಟ ಈಗಾಗಲೇ ಶುರುವಾಗಿಬಿಟ್ಟಿದ್ದರೆ ಹೋಗಿ ಕುಳಿತು ಊಟ ಮಾಡಿಕೊಂಡು ಹೊರಡಬಹುದಿತ್ತು. ಅವರಲ್ಲಿ ಇದ್ದರೋ ಇಲ್ಲವೋ ಅನ್ನೋದು ಮುಖ್ಯವಾಗಿರಲಿಲ್ಲ! ಈಗಲ್ಲಿ ಹೋಗಿ ಶಾಮಿಯಾನದ ಕೆಳಗೆ ಕೂರಬೇಕು. ಇದ್ಯಾರು ಅಂತ ಗಮನಿಸೋ ಕುತೂಹಲದ ಕಣ್ಣುಗಳಿಗೆ ಆಹಾರವಾಗಬೇಕು. ಯಾಕ್ ಬೇಕಪ್ಪ ಸಾವಾಸ ಅಂತ ಹಂಗೇ ಕಾರಿಂದಿಳಿದು ಹೊರಟುಬಿಟ್ಟೆ.
ಇದೆಲ್ಲ ಆಗಿ ವರ್ಷದ ಮೇಲೇ ಆಗಿರಬೇಕು. ಮತ್ತೊಂದು ಭಾನುವಾರ. ವ್ಯಕ್ತಿಯೊಬ್ಬರು ಗೇಟು ಬದಿಗೆ ಸರಿಸಿ ಒಳಬಂದರು. ಏನೆಂದು ಕೇಳಿದೆ. ಹಿಂಗಿಂಗೆ ಮಧ್ಯಾಹ್ನ ಒಂದ್ ಊಟ ಇಟ್ಕಂಡಿದೀವಿ, ನಮ್ ಅಣ್ಣನಿಗೆ ಎಪ್ಪತ್ತು ವರ್ಷ ತುಂಬಿರೋದಕ್ಕೆ, ಬರಬೇಕು ಅಂದರು. ಎಲ್ಲಿ ಎಂದು ಕೇಳಿದ್ದಕ್ಕೆ ಅದೇ ಇಲ್ಲಿ ಮುಂದೆ ಹೋದ್ರೆ ಬಲಕ್ಕೊಂದು ಮನೆ ಇದ್ಯಲ್ಲ ಅಂತ ಅವರೇಳುವಾಗಷ್ಟೇ ನನಗೆ ಇವರು ವರ್ಷದಿಂದೆ ಕರ್ನರೆಗೆ ಕರೆದಿದ್ದವರಲ್ಲವಾ ಅಂತ ಜ್ಞಾನೋದಯವಾಗಿದ್ದು! ಕಪ್ಪಿದ್ದ ಕೂದಲೆಲ್ಲಾ ಬೆಳ್ಳಗಾಗಿದ್ದರಿಂದ ಗುರುತು ಹತ್ತಲಿಲ್ಲ! ವರ್ಷದಲ್ಲಿ ಬೆಳ್ಳಗಾಗಿದ್ದಲ್ಲ, ಡೈ ಹಾಕಲು ಇವತ್ತು ಸಮಯ ಸಿಗಲಿಲ್ಲವಷ್ಟೇ! ಬರ್ತೀನಿ ಬಿಡಿ ಅಂದಿದ್ದಕ್ಕೆ “ನೀವ್ ಕರ್ನರೆಗೂ ಬರ್ತೀನಿ ಅಂತೇಳಿ ಬರಲೇ ಇಲ್ಲ. ಈ ಸಲ ಅಡುಗೆಗೆ ಸಿಟಿಯಿಂದ ಭಟ್ಟರನ್ನೇ ಕರೆಸಿದ್ದೀವಿ, ನೀಟಾಗಿ ಮಾಡ್ಸಿದೀವಿ” ಅಂತೆಲ್ಲ ಅಂದಾಗ ನನಗೆ ಇದೇನ್ ಹೇಳ್ತಾವ್ರಲ್ಲ ಇವರು ಅಂತ ಗೊಂದಲವುಂಟಾದರೂ ಅವರು ಹೇಳಲೊರಟ ವಿಷಯ ಸುಮಾರಾಗಿ ಅರ್ಥವಾಯಿತು. “ಅಯ್ಯೋ ಹೋದಸಲ ಬಂದಿದ್ದೆ. ನೀವಲ್ಲೆಲ್ಲೂ ಕಾಣಲಿಲ್ಲ ಅಂತ ಹೊರಟುಬಿಟ್ಟೆ. ಕೆಲ್ಸ ಇತ್ತು ಸ್ವಲ್ಪ ಅವತ್ತು. ಇವತ್ತು ಇಲ್ಲೇ ಇರ್ತೀನಿ, ಖಂಡಿತ ಬರ್ತೀನಿ ಬಿಡಿ” ಎಂದೇಳಿದೆ. ಅವರಿಗಿನ್ನೂ ಅನುಮಾನ. ಗೇಟಿನಿಂದ ಹೊರ ಹೋಗುವಾಗ ನಿಮ್ಮ ನಂಬರ್ ಕೊಡಿ ಅಂದರು. ಕಳೆದ ಸಲ ಅವರ ನಂಬರ್ ಫೋನಿನಲ್ಲಿ ಸೇವ್ ಮಾಡಿಕೊಂಡಿದ್ದೆ. ಮಿಸ್ಡ್ ಕಾಲ್ ಕೊಟ್ಟೆ. ಮರೀದೆ ಬರ್ಬೇಕು ಅಂತ ಮತ್ತೊಮ್ಮೆ ನೆನಪಿಸಿ ಅವರತ್ತ ಹೊರಟರು. ನಾ ಗೇಟಾಕುವಾಗ ಎದುರಿನಿಂದ ಕಾರೊಂದು ಬಂತು. “ಎಲ್ಲಿಗೆ ಹೊರಟೆ?” ಅಂತ ಕಾರಲ್ಲಿದ್ದವರು ಕೇಳಿದರು. “ಕರೆದು ಬರ್ತೀನಿ” ಎಂದವರು ಹೇಳಿದ್ದಕ್ಕೆ “ನೀ ಎಷ್ಟು ಸಲ ಕರೆದ್ರೂ ಅವರ್ಯಾರೂ ಬರಲ್ಲ. ಸುಮ್ನೆ ಕಾರತ್ತು, ಊರಲ್ಲಿ ಕರೆದು ಬರೋಣ” ಎಂದರು. ನಾ ಕರೆದು ಬರ್ತೀನಿ ನೀವ್ ಹೋಗಿರಿ ಅಂತ ಕೈ ಸನ್ನೆ ಮಾಡಿ ಹೊರಟರವರು. ಕಾರು ಊರಿನ ಜನರ ಬಾಯಲ್ಲಿ “ಕಾಲೋನಿ”ಯಾಗಿದ್ದ ಊರ ಕಡೆಗೆ ಹೊರಟಿತು.
ಊಟಕ್ಕೆ ಹೋಗುವುದೋ ಬಿಡುವುದೋ ಎಂಬ ಗೊಂದಲ ಉಂಟಾಗಿದ್ದಕ್ಕೆ ಜಾತಿ ಖಂಡಿತ ಕಾರಣವಾಗಿರಲಿಲ್ಲ. ಊರ ಕಡೆ ಊಟಕ್ಕೆ, ಅದೂ ಭಾನುವಾರ ಮಧ್ಯಾಹ್ನ ಊಟಕ್ಕೆ ಕರೆದರೆ ಮಾಂಸದಡುಗೆಯೇ ಇರ್ತದೆ. “ಭಟ್ಟ”ರನ್ನೇ ಕರೆಸಿದ್ದೀವಿ ಅಂತ ಬೇರೆ ಅವರಂದು ಗೊಂದಲ ಹೆಚ್ಚಿಸಿದ್ರು. ಮನೇಲಿ ಈಗಾಗಲೇ ಕೋಳಿ ಸಾರು, ಕೋಳಿ ಫ್ರೈ ತಯಾರಾಗುತ್ತಿತ್ತು. ಭಾನುವಾರದ ದಿನ ಮನೇಲಿದ್ದ ಕೋಳಿ ಊಟ ಬಿಟ್ಟು ಬರೀ ತರಕಾರಿ ತಿನ್ನುವುದಾದರೂ ಹೇಗೆ? “ಭಟ್ಟ”ನೆನ್ನುವ ವಿಶೇಷಣ ಬಹಳಷ್ಟು ಸಲ ಜಾತಿ ಸೂಚಕವಾಗಿರದೆ ಅಡುಗೆ ತಯಾರು ಮಾಡುವವರ ವೃತ್ತಿ ಸೂಚಕವಾಗಿಯೂ ಬಳಸಲ್ಪಡುತ್ತದೆ. “ನಿನ್ನೆ ಸಂಜೆ ಮನೆ ಮುಂದೆ ಅಷ್ಟೊಂದೆಲ್ಲ ಸೊಪ್ಪು ಹರವಿಕೊಂಡಿದ್ರು, ಮಾಂಸದೂಟಾನೇ ಇರ್ತದೆ ಬಿಡಿ” ಎಂದು ಮನೆಯಲ್ಲಿ ಸ್ವಲ್ಪ ಧೈರ್ಯ ತುಂಬಿದರು. ಊಟಕ್ಕೆ ಹೋಗದಿದ್ದರೆ “ಊರಲ್ಲಿರುವ ಇತರ ಗೌಡ ಜನರಂತೆಯೇ ಈ ಯಪ್ಪಾನೂ” ಅಂತ ಬಯ್ಕಂಡು ಬೇಸರ ಪಟ್ಕೊಳ್ತಾರೆ. ವೆಜ್ಜೋ ನಾನ್ವೆಜ್ಜೋ ಹೋಗದೆ ಇರುವುದಂತೂ ತಪ್ಪು. ಅಕಸ್ಮಾತ್ ವೆಜ್ಜಾದ್ರೆ ಅನ್ನೋ ಆತಂಕದಲ್ಲಿ ಅರ್ಧ ಲೋಟ ಕೋಳಿ ಸಾರು ಕುಡಿದು ಎರಡೇ ಎರಡು ತುಂಡು ಕೋಳಿ ಫ್ರೈ ತಿಂದು ಹೊರಟೆ. ಕರೆದವರು ಮನೆ ಮುಂದಿನ ಅಂಗಳದಲ್ಲೇ ಸಿಕ್ಕಿದರು. ಊಟವಿನ್ನೂ ಶುರುವಾಗಿರಲಿಲ್ಲ. “ಇನ್ನೊಂದು ಹತ್ತು ನಿಮಿಷ, ಶುರುಮಾಡಿಬಿಡ್ತೀವಿ” ಅಂದರು. ದೂರದಲ್ಲಿ ಬೇಯಿಸಿದ ಮೊಟ್ಟೆಯನ್ನು ಅರ್ಧಕ್ಕೆ ಕತ್ತರಿಸಿ ಅಗಲವಾದ ತಟ್ಟೆಯಲ್ಲಿ ಜೋಡಿಸಿಡುತ್ತಿದ್ದರು. ಅಲ್ಲಿಗೆ ಮಾಂಸದೂಟವೇ ಅಂತ ಖಾತ್ರಿಯಾಯ್ತಲ್ಲ, ಮನಸ್ಸಿಗೊಂದು ಸಮಾಧಾನ. “ಸರಿ, ಸ್ವಲ್ಪ ಕೆಲಸ ಇದೆ. ಇನ್ನರ್ಧ ಘಂಟೆ ಬಿಟ್ಟು ಬರ್ತೀನಿ” ಎಂದ್ಹೇಳಿ ಹೊರಟೆ. ಮರೀದೆ ಬರಬೇಕು ಅಂತ ಕರೆದವರ ದನಿಯಲ್ಲಿ ಅನುಮಾನದ ಎಳೆಯಿದ್ದದ್ದು ಸುಳ್ಳಲ್ಲ.
ಹೇಳಿದಂತೆ ಅರ್ಧ ಘಂಟೆಯ ನಂತರ ಬಂದಾಗ ನನ್ನ ಕರೆದವರ ಮುಖದಲ್ಲಿ ಧನ್ಯತಾ ಭಾವ. ಇಂಜಿನಿಯರಿಂಗ್ ಮುಗಿಸಿ ಕೆಲಸ ಮಾಡುತ್ತಿರುವ, ಬೇರೆ ಬೇರೆ ಡಿಗ್ರಿ ಮುಗಿಸಿಕೊಂಡು ಸಹಕಾರಿ ಬ್ಯಾಂಕು, ಕೆ.ಎಂ.ಎಫ್ ಡೈರಿ, ವಿಧಾನಸೌಧದಲ್ಲಿ ಕೆಲಸದಲ್ಲಿರುವ, ಬ್ಯುಸಿನೆಸ್ ಮಾಡುತ್ತಿರುವ, ಖಾಸಗಿ ವಲಯದಲ್ಲಿ ಮ್ಯಾನೇಜರ್ ಆಗಿರುವ ತಮ್ಮ ಬಂಧು ಬಳಗದವರನ್ನು ಪರಿಚಯಿಸಿದರು. ಪುಣ್ಯಕ್ಕೆ ನನ್ನ ಓರಗೆಯವರಾದ “ಹಳ್ಳಿ ಬಿಟ್ಟು” ನಗರ ಸೇರಿರುವ ಅವರ್ಯಾರಿಗೂ “ಕಾಲೋನಿಯ” ಹೊರಗಿದ್ದ ಊರಿನಿಂದ ಬಂದ ನನ್ನ ಕಂಡು ಧನ್ಯತಾ ಭಾವ ಮೂಡಲಿಲ್ಲ. ಹೊಸ ಪರಿಚಯದವರೊಡನೆ ಎಷ್ಟು ಕಷ್ಟ ಸುಖ ಮಾತಾಡಬೇಕೋ ಅಷ್ಟು ಮಾತನಾಡಿ ಊಟಕ್ಕೆ ಕೂರಿಸಿದರು.
“ಕಾಲೋನಿಯ” ಹೊರಗಿದ್ದ ಊರಿನಿಂದ ಯಾರೆಂದರೆ ಯಾರೂ ಬಂದಿರಲಿಲ್ಲ. ಇದೇ ಊರಿನಲ್ಲಿ ಹುಟ್ಟಿ ಬೆಳೆದು ವಾಸಿಸುತ್ತಿದ್ದರೆ ಬಹುಶಃ ನಾನೂ ಬರುತ್ತಿರಲಿಲ್ಲವೇನೋ ಅಲ್ಲವೇ ಎಂದು ಯೋಚಿಸುತ್ತ ಮೊಟ್ಟೆ ಕೋಳಿ ಸಾರು, ಬೋಟಿ ಗೊಜ್ಜು, ಮುದ್ದೆ, ಎರಡು ಪೀಸ್ ಕಬಾಬು, ಬಿರಿಯಾನಿ, ಅನ್ನ, ತಿಳಿಸಾರು, ರುಚಿಯಾಗಿದ್ದ ಪಾಯಸವನ್ನು ಇನ್ನೊಂದು ಕಪ್ ಕೇಳಿ ಹಾಕಿಸಿಕೊಂಡು ತಿಂದು ಮುಗಿಸಿ ಊರ ಆಚೆಗಿದ್ದ “ಕಾಲೋನಿ”ಯ ಹೊರಗಿದ್ದ ಊರಂಚಿನ ಮನೆಯ ಕಡೆಗೆ ಹೊರಟೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ