ನವೆಂ 22, 2024

ಎಲ್ಲೆಡೆ ಸಲ್ಲುವ “ಬಂಧಮುಕ್ತ”


ಡಾ. ಅಶೋಕ್. ಕೆ. ಆರ್
ಕೆಲವೊಂದು ಪುಸ್ತಕಗಳೇ ಹಾಗೆ, ನೇರಾನೇರ ಸಂಬಂಧವಿಲ್ಲದಿದ್ದರೂ ನಮ್ಮ ನಡುವಿನದೇ ಪುಸ್ತಕವೆನಿಸಿಬಿಡುತ್ತದೆ. ನಮ್ಮದಲ್ಲದ ಸಂಸ್ಕೃತಿಯ, ನಮ್ಮ ದೇಶದ್ದಲ್ಲದ, ನಮ್ಮ ಖಂಡದ್ದೂ ಅಲ್ಲದ ದೂರದ ದೇಶವೊಂದರ ಲೇಖಕಿಯ ಬರಹಗಳು ನಮ್ಮ ಸುತ್ತಮುತ್ತಲಿನ ಸಮಾಜಕ್ಕೇ ಕನ್ನಡಿ ಹಿಡಿದಂತಿರುವುದನ್ನು ಮೆಚ್ಚಬೇಕೋ ಅಲ್ಲಿರುವ ಸಂಕಷ್ಟ ದುಮ್ಮಾನಗಳು ನಮ್ಮಲ್ಲೂ ಇರುವುದಕ್ಕೆ ದುಃಖ ಪಡಬೇಕೋ ಎನ್ನುವ ಗೊಂದಲಗಳೊಂದಿಗೆಯೇ ಪುಸ್ತಕ ಓದಿ ಮುಗಿಸಿದೆ.
ಪುಸ್ತಕದ ವ್ಯಾಪ್ತಿ ಹಿರಿದಾದುದು. ಕಪ್ಪು ಜನರ ಬವಣೆ, ಕಪ್ಪು ಮಹಿಳೆಯರ ಬವಣೆ, ಸ್ತ್ರೀವಾದ, ಬದಲಾದ ಸಮಾಜದಲ್ಲಿ ಶೋಷಣೆಯ ರೂಪಗಳೂ ಮಾರ್ಪಾಡಾಗುವುದು, ಒಂದು ಕಾಲದಲ್ಲಿ ಶೋಷಣೆಗೊಳಗಾಗಿದ್ದವರೆ ಮತ್ತೊಂದು ಹಂತದಲ್ಲಿ ಶೋಷಕರಾಗುವ ಬಗೆಇವೆಲ್ಲದರ ಜೊತೆಗೆ ಮನುಕುಲದ ಅವನತಿಗೆ ಬಹುಮಖ್ಯ ಕಾರಣವಾದ ಸ್ವಪ್ರೀತಿಯ ಕೊರತೆಯ ಬಗೆಗಿನ ಒಳನೋಟಗಳನ್ನು ಕೊಡುವ ಪುಸ್ತಕ ಬೆಲ್ ಹುಕ್ಸ್ರವರಬಂಧ ಮುಕ್ತ, ಪ್ರೀತಿಯ ಹುಡುಕಾಟದಲ್ಲಿ ದಮನಿತರು”. ಶ್ರೀಮತಿ ಎಚ್.ಎಸ್ರವರ ಸಶಕ್ತ ಅನುವಾದವು ಪುಸ್ತಕವನ್ನು ಮತ್ತಷ್ಟು ಆಪ್ತಗೊಳಿಸುತ್ತದೆ.

ಮೇ 18, 2019

ಅವಿಸ್ಮರಣೀಯ ಅರುಣಾಚಲ ಅದರ ಚಿತ್ರ -ವಿಚಿತ್ರ ಇತಿಹಾಸ: ಪುಸ್ತಕ ವಿಮರ್ಶೆ

ನಂದಕುಮಾರ್. ಕೆ. ಎನ್
ಅರುಣಾಚಲ ಪ್ರದೇಶ ಈಗ ಭಾರತದ ಅಂಗವನ್ನಾಗಿಯೇ ನೋಡಲಾಗುತ್ತಿದೆ. ಆದರೆ ಚೀನ ಅದನ್ನು ಈಗಲೂ ಮಾನ್ಯ ಮಾಡಿಲ್ಲ. ಅದರ ಬಗ್ಗೆ ವಿವಾದಗಳು ಈಗಲೂ ಭಾರತ, ಚೀನ ನಡುವೆ ಇವೆ. ಅರುಣಾಚಲ ಪ್ರದೇಶವನ್ನು ಭಾರತದ ಭಾಗವಾಗಿಸುವ ಪ್ರಕ್ರಿಯೆಗಳು ಬ್ರಿಟೀಷ್ ಭಾರತದಲ್ಲೇ ಶುರುವಾಗಿದ್ದವು. ಆದರೆ ಅದಕ್ಕೆ ಅಲ್ಲಿನ ಸ್ಥಳೀಯ ಸ್ವಯಂಮಾಡಳಿತ ಗಣ ವ್ಯವಸ್ಥೆಯ ಬುಡಕಟ್ಟು ಗುಂಪುಗಳು ಪ್ರಬಲವಾದ ಪ್ರತಿರೋಧ ಒಡ್ಡಿದ್ದವು. ಅವರು ಅನುಮತಿಸದೇ ಅವರ ಪ್ರದೇಶದೊಳಕ್ಕೆ ಯಾರೂ ಹೋಗುವಂತಿರಲಿಲ್ಲ. ಹೋದವರು ಜೀವಂತವಾಗಿ ವಾಪಾಸು ಬರಲಾಗುತ್ತಿರಲಿಲ್ಲ. ಬ್ರಿಟೀಷ್ ಅಧಿಕಾರಿಯೊಬ್ಬ ಆ ಪ್ರದೇಶವನ್ನು ಗ್ರಹಿಸಿ ಬ್ರಿಟೀಷ್ ಭಾರತದ ಭಾಗವಾಗಿಸಿಕೊಳ್ಳುವ ಇರಾದೆಯಿಂದ ಯಾವುದೇ ಅನುಮತಿ ಇಲ್ಲದೇ ಅಲ್ಲಿಗೆ ತೆರಳಿ ಸಾವಿಗೀಡಾಗಿದ್ದು ಬ್ರಿಟೀಷ್ ಆಡಳಿತವನ್ನು ಕೆರಳಿಸಿತ್ತು. ಆ ಪ್ರದೇಶವನ್ನು ಕೈವಶ ಮಾಡಿಕೊಳ್ಳುವ ಪ್ರಕ್ರಿಯೆಗಳು ಅಲ್ಲಿಂದ ಚುರುಕುಗೊಂಡವು ಎಂದು ಹೇಳಬಹುದು. ಅಲ್ಲಿ ಸ್ವಾಯತ್ತ ಗಣ ವ್ಯವಸ್ಥೆಯಿರುವ ಬುಡಕಟ್ಟುಗಳು ಸ್ವಯಂಪೂರ್ಣವಾಗಿ ಜೀವನ ಕಟ್ಟಿಕೊಂಡಿದ್ದರೂ ಆ ಪ್ರದೇಶದ ಮೇಲೆ ಚೀನ ಹಾಗೂ ಟಿಬೆಟ್ ನ ಹಿತಾಸಕ್ತಿಗಳೂ ಇದ್ದವು. ಟಿಬೆಟ್ ನಂತರ ಚೀನಾದ ಪ್ರದೇಶವಾಯಿತು. ಇದರ ಮಧ್ಯೆ ಆ ಪ್ರದೇಶದ ಬುಡಕಟ್ಟು ಜನರ ಅಭಿಪ್ರಾಯಗಳಿಗೆ ಯಾವುದೇ ಬೆಲೆ ನೀಡಲಿಲ್ಲ. ಹಾಗಾಗಿ ಆ ಸಮುದಾಯಗಳಲ್ಲಿ ಹಲವು ಈಗಲೂ ಭಾರತವನ್ನೂ ಅಂಗೀಕರಿಸಲಾಗದಂತಹ ಸ್ಥಿತಿಯಲ್ಲಿಯೇ ಇವೆ.

ಸೆಪ್ಟೆಂ 11, 2018

‘ದುರಿತಕಾಲದ ದನಿ’: ವರ್ತಮಾದ ತಲ್ಲಣಗಳಿಗೆ ಹಿಡಿದ ಕೈಗನ್ನಡಿ

ಪದ್ಮಜಾ ಜೋಯ್ಸ್ ದರಲಗೋಡು
"ಕವಿತೆ ಹುಟ್ಟುವುದಿಲ್ಲ ಸುಖದ ಉದ್ಗಾರಗಳಲ್ಲಿ,
ಅದು ಹುಟ್ಟುವುದು ನೋವಿನ ಛೀತ್ಕಾರಗಳಲ್ಲಿ...!!

ಕು.ಸ.ಮಧುಸೂದನ ರಂಗೇನಹಳ್ಳಿ ಯವರ’ದುರಿತಕಾಲದ ದನಿ’ ಹೆಸರೇ ಹೇಳುವಂತೆ ವರ್ತಮಾನದ ವಾಸ್ತವವನ್ನೆಲ್ಲಾ ಸಾರಾಸಗಟಾಗಿ, ತುಸು ಕಟುವೇ ಎನಿಸುವ ಶೈಲಿಯಲ್ಲಿ ಭಟ್ಟೀ ಇಳಿಸಿದ ಸಂಕಲನ.ಈ ದನಿಯ ಹಿಂದಿನ ಕಾಳಜಿ ದೀನದಲಿತರ ಕಷ್ಟ ಸಂಕಷ್ಟಗಳಿಗೆ ಮಿಡಿಯುವ ಹೃದಯದ ಸ್ವಚ್ಛ ಶುದ್ಧ ಮಾನವೀಯತೆ ಮನಕಲಕುವಂತಿದೆ.

‘ನನ್ನ ಕವಿತೆ ಕುರಿತಂತೆ’ ಎ಼ಂದು ತಮ್ಮ ಕವಿತೆಗಳ ಬಗ್ಗೆ ತಮ್ಮದೇ ಶೈಲಿಯ ವಿವರಣೆಯೇ ಅದ್ಭುತವಾಗಿದೆ.. ಅವರ ಮಾತುಗಳಲ್ಲೇ ಹೇಳಬೇಕೆಂದರೇ...

"ಒಂದು ಕಡೆ ಜಾಗತೀಕರಣವು ನಮ್ಮ ಸ್ಥಳೀಯ ಸಂಸ್ಕೃತಿಯನ್ನು ನಾಶಪಡಿಸುತ್ತ ನೆಡೆದಿದ್ದರೇ, ಇನ್ನೊಂದೆಡೆ ಮತೀಯ ಮೂಲಭೂತವಾದ ನಮ್ಮ ಬಹುಸಂಸ್ಕೃತಿಯ ಪರಂಪರೆಯ ಮನೆಯ ಹಂದರವನ್ನು ಕೆಡವಲು ಹೊಂಚು ಹಾಕುತ್ತಿದೆ, ಪ್ರಭುತ್ವ ಧರ್ಮದ ಆಸರೆಯೊಂದಿಗೆ ಅಧಿಕಾರ ಚಲಾಯಿಸುವ ಮಾತಾಡುತ್ತಿದ್ದರೇ ಧರ್ಮವೋ ಸ್ವತಃ ತಾನೇ ಪ್ರಭುತ್ವವಾಗುವ ದಿಸೆಯಲ್ಲಿ ತನ್ನನ್ನು ಅಣಿಗೊಳಿಸಿಕೊಳ್ಳುತ್ತಿದೆ. ಹೀಗೆ ಬಂಡವಾಳ, ಧರ್ಮ , ಪ್ರಭುತ್ವಗಳು ಒಟ್ಟಾಗಿ ಛಿದ್ರಗೊಳಿಸಲು ಹೊರಟಿರುವ ಒಂದು ಸಮಾಜವನ್ನು ಎಚ್ಚರಿಕೆಯ ಸ್ಥಿತಿಯಲ್ಲಿಡಲು ಸಾಹಿತ್ಯ ಮತ್ತು ಸೃಜನಶೀಲ ಕಲಾಪ್ರಕಾರಗಳು ಮುಂದಾಗಬೇಕಿದೆ."" 

‘ದುರಿತಕಾಲದ ದನಿ’ ಕವನಸಂಕಲನದ ಬಿಡುಗಡೆ ಸಮಾರಂಭ.

ಕು.ಸ.ಮಧುಸೂದನರಂಗೇನಹಳ್ಳಿ ಅವರ ಕವನ ಸಂಕಲನ ಲೋಕಾರ್ಪಣೆ ಮಾಡಿದ ಖ್ಯಾತ ವಿಮರ್ಶಕ ಆರ್.ಜಿ. ಹಳ್ಳಿ ನಾಗರಾಜ್ ಈ ಸಂದರ್ಭದಲ್ಲಿ ಮಾತನಾಡುತ್ತ,

“ಸಂತೋಷ ಕೊಡುವ ಕಾಲದಲ್ಲಿ ನಾವು ಬದುಕುತ್ತಿಲ್ಲ ಅಸಹಿಷ್ಣುತೆ, ಭಯದ ಜೊತೆಗೆ ಉಸಿರುಗಟ್ಟುವ ವಾತಾವರಣದಲ್ಲಿ ಬದುಕುತ್ತಿದ್ದೇವೆ.ಸಂಸ್ಕೃತಿಯ ಹೆಸರಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಹತ್ತಿಕ್ಕುವ ಕೆಲಸ ನಡೆಯುತ್ತಿದೆ.ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ.ಇಂತಹ ಸಮಕಾಲೀನ ವಿಚಾರಗಳನ್ನಿಟ್ಟುಕೊಂಡೇ ಕು.ಸ.ಮಧುಸೂದನರಂಗೇನಹಳ್ಳಿಯವರ ಕವಿತೆಗಳು ಸೃಷ್ಠಿಯಾಗಿವೆ.ಈಗಿನ ದುರಿತ ಕಾಲದ ವಿರುದ್ದ ಆರೋಗ್ಯಪೂರ್ಣ ದ್ವನಿ ಎತ್ತಿರುವ ಈ ಸಂಕಲನದ ಕವಿತೆಗಳಿಗೆ ವಿಶೇಷ ಮಹತ್ವವಿದೆ” ಎಂದು ನುಡಿದರು.

ಈ ಕಾರ್ಯಕ್ರಮದಲ್ಲಿ ಕನ್ನಡದ ಹಿರಿಯ ಕವಿಯಿತ್ರಿ ಶ್ರೀಮತಿ ಹೆಚ್.ಎಲ್.ಪುಷ್ಪಾ,ಪ್ರೊ.ವೃಷಭೇಂದ್ರಪ್ಪ. ಡಾ.ಪ್ರಕಾಶ್ ಹಲಗೇರಿ, ಪ್ರೊ, ಅರವಿಂದ್, ಡಾ,ಹೊನ್ನಾಳಿ ಶಿವಕುಮಾರ್, ಶ್ರೀ ಸಂತೇಬೆನ್ನೂರು ಫೈಜ್ನಾಟ್ರಾಜ್, ವೀರಭದ್ರಪ್ಪ ತೆಲಿಗಿ ಹಾಗು ಚಿತ್ರ ಕಲಾವಿದರಾದ ಶ್ರೀ ನಾಮದೇವ ಕಾಗದಕರ ಉಪಸ್ಥಿತರಿದ್ದರು

ಆಗ 24, 2018

‘ದುರಿತಕಾಲದ ದನಿ’ ಕವನ ಸಂಕಲನ ಬಿಡುಗಡೆ ಸಮಾರಂಭ.

ದಿನಾಂಕ 02-09-2018ರ ಬಾನುವಾರ ಕು.ಸ.ಮಧುಸೂದನ ರಂಗೇನಹಳ್ಳಿ ಅವರ ‘ದುರಿತಕಾಲದ ದನಿ’ಕವನ ಸಂಕಲನವನ್ನು ಅನ್ವೇಷಣೆ ಪತ್ರಿಕೆಯ ಸಂಪಾದಕರಾದ ಶ್ರೀ ಆರ್.ಜಿ.ಹಳ್ಳಿ ನಾಗರಾಜ್ ಬಿಡುಗಡೆಗೊಳಿಸಲಿದ್ದಾರೆ.

ಕೃತಿಯ ಕುರಿತು ಖ್ಯಾತ ವಿಮರ್ಶಕರಾದ ಶ್ರೀ ಡಾ. ಪ್ರಕಾಶ್ ಹಲಗೇರಿ, ಕನ್ನಡ ಪ್ರಾದ್ಯಾಪಕರು, ಕುವೆಂಪು ವಿ.ವಿ.ಯ ಸ್ನಾತಕೋತ್ತರ ಕೇಂದ್ರ, ದಾವಣಗೆರೆ, ಅವರು ಮಾತಾಡಲಿದ್ದಾರೆ

ಮುಖ್ಯ ಅತಿಥಿಗಳಾಗಿ ಖ್ಯಾತ ಕವಿಯಿತ್ರಿ ಶ್ರೀಮತಿ ಡಾ.ಹೆಚ್.ಎಲ್.ಪುಷ್ಪಾರವರು (ಪ್ರಾಚಾರ್ಯರು, ಸರಕಾರಿ ಪದವಿ ಪೂರ್ವ ಕಾಲೇಜು,ಬೆಂಗಳೂರು) ಉಪಸ್ಥಿತರಿರುತ್ತಾರೆ.

ಕಾರ್ಯಕ್ರಮದ ಅದ್ಯಕ್ಷತೆಯನ್ನು ಡಾ. ವೃಷಭೇಂದ್ರಪ್ಪ, ನಿರ್ದೇಶಕರು, ಬಾಪೂಜಿ ಇಂಜಿಯರಿಂಗ್ ಕಾಲೇಜು, ದಾವಣಗೆರೆ ಇವರು ವಹಿಸಲಿದ್ದಾರೆ.

ಕಾರ್ಯಕ್ರಮದ ವಿವರಗಳು

ಏಪ್ರಿ 26, 2018

ಇವು ಜೀವಚ್ಛವದಂತ ಆತ್ಮಗಳ ಕರುಳು ಕಿವುಚುವ ಆಕ್ರಂದನ...

ಅಸಹಾಯಕ ಆತ್ಮಗಳು. 
ಪಮ್ಮಿ ದೇರಲಗೋಡು(ಪದ್ಮಜಾ ಜೋಯಿಸ್)

(ಕು.ಸ.ಮಧುಸೂದನ್ ರವರ ಅಸಹಾಯಕ ಆತ್ಮಗಳು ಲೇಖನ ಸರಣಿಯು ಹಿಂಗ್ಯಾಕೆಯಲ್ಲಿ ಪ್ರಕಟಗೊಂಡಿತ್ತು. 'ಅಸಹಾಯಕ ಆತ್ಮಗಳೀಗ' ಪುಸ್ತಕದ ರೂಪ ಪಡೆದಿದೆ. ಪುಸ್ತಕದ ಕುರಿತಾಗಿ ಪದ್ಮಜಾ ಜೋಯಿಸ್ ರವರು ಬರೆದಿರುವ ಪರಿಚಯದ ಲೇಖನ ಹಿಂಗ್ಯಾಕೆಯ ಓದುಗರಿಗಾಗಿ) 

ಕು. ಸ. ಮಧುಸೂದನನಾಯರ್ ರಂಗೇನಹಳ್ಳಿ ಅವರು ಬರೆದ ಈ ಪುಸ್ತಕದೊಳಗಿನ ಕತೆಗಳನ್ನು ಓದುತ್ತ ಹೋದಂತೆ ಹಲವು ಅಸಹಾಯಕ ಆತ್ಮಗಳ ಆಕ್ರಂದನ ಕೇಳಿದಂತಾಗಿ ಒಂದು ಕ್ಷಣ ಬೆಚ್ಚಿದ್ದು ನಿಜ.

ತಮ್ಮ ಸಂಪೂರ್ಣ ಬದುಕನ್ನು ವೇಶ್ಯಾವೃತ್ತಿಯ ನರಕದಲ್ಲಿ ಕಳೆದ ಹತ್ತೊಂಭತ್ತು ಹೆಣ್ಣುಮಕ್ಕಳ ಕತೆಗಳನ್ನು ಅವರ ಬಾಯಿಂದಲೇ ಕೇಳಿ ಅವನ್ನು ಅಕ್ಷರ ರೂಪಕ್ಕಿಳಿಸಿರುವ ಮಧುಸೂದನ್ ರವರ “ಅಸಹಾಯಕ ಆತ್ಮಗಳು” ಪುಸ್ತಕದ ಬಗ್ಗೆ ಒಂದೆರಡು ಮಾತು ಹೇಳಲೇ ಬೇಕಿದೆ

ನವೆಂ 17, 2017

ಅಮೃತಯಾನ.

ಚಿತ್ರಕಲಾವಿದೆ, ವಿನ್ಯಾಸಕಿ, ರಂಗನಟಿಯಾಗಿದ್ದ ಅಮೃತಾ ರಕ್ಷಿದಿ ತನ್ನ ಬದುಕಿನ ಅನುಭವಗಳನ್ನು "ಅಮೃತ ಯಾನ" ಎಂಬ ಹೆಸರಿನಲ್ಲಿ ಪುಟಗಳ ಮೇಲಿಳಿಸಿದ್ದಾಳೆ. ಆತ್ಮಕತೆ ಬರೆದಾಯ್ತಲ್ಲ ಇನ್ನೇನು ಕೆಲಸ ಎನ್ನುವಂತೆ ತುಂಬಾ ಚಿಕ್ಕ ವಯಸ್ಸಿಗೇ ಅನಾರೋಗ್ಯದಿಂದ ಅಸುನೀಗಿಬಿಟ್ಟಳು ಅಮೃತಾ. ಅವಳ ಅನುಪಸ್ಥಿತಿಯಲ್ಲಿ ಐದು ಸಂಪುಟಗಳ "ಅಮೃತ ಯಾನ" ಇದೇ ಭಾನುವಾರ (19/11/2017) ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಬೇಸ್ ಮೆಂಟ್ ಗ್ಯಾಲರಿಯಲ್ಲಿ ಬಿಡುಗಡೆಗೊಳ್ಳಲಿದೆ. ಬಿಡುವು ಮಾಡಿಕೊಂಡು ಬನ್ನಿ. 
ಅಮೃತಯಾನದ ಒಂದು ಪುಟ್ಟ ಅಧ್ಯಾಯ ಹಿಂಗ್ಯಾಕೆಯ ಓದುಗರಿಗಾಗಿ. 

ಅಜ್ಜಮನೆ

ಅಣ್ಣಯ್ಯನಿಗೆ ಅಕ್ಟೋಬರ್ ರಜೆ ಪ್ರಾರಂಭವಾಗಿತ್ತು. ಮಳೆಗಾಲ ಕಳೆದು ಬಿಸಿಲು ಬಂದಿತ್ತು. ಈ ನಡುವೆ ಅಪ್ಪ ದೇವಾಲದ ಕೆರೆಯಲ್ಲಿನ ಕೆಲಸವನ್ನು ಬಿಟ್ಟು ಹಾರ್ಲೆಗೆ ಕೆಲಸಕ್ಕೆ ಸೇರಿದ್ದರು. ಒಮ್ಮೆ ಅಜ್ಜಮನೆಗೆ ಹೋಗಿಬರಬೇಕೆಂದು ಅಮ್ಮ ಅಪ್ಪನಲ್ಲಿ ಹೇಳುತ್ತಿದ್ದುದು ಅಣ್ಣಯ್ಯ ಮತ್ತು ಅಮೃತಾರ ಕಿವಿಗೆ ಬದ್ದಿತ್ತು. ರಜೆ ಬಂದ ಕೂಡಲೇ ಅಣ್ಣಯ್ಯ ಮತ್ತು ಅಮೃತಾ “ಅಮ್ಮ ಅಜ್ಜಮನೆಗೋಗದು ಯಾವಾಗ?” ಎಂದು ಗೋಗರೆಯಲಾರಂಭಿಸಿದರು. ಆದರೆ ಅಮ್ಮ “ಅಪ್ಪನ ಕೇಳ್ಬೇಕಷ್ಟೆ” ಎನ್ನುತ್ತಿದ್ದಳು. ಅಜ್ಜಿಯನ್ನು ಬಿಟ್ಟು ಅಮ್ಮನಿಗೆ ತಕ್ಷಣ ಹೊರಡಲಾಗುತ್ತಿರಲಿಲ್ಲ. ಅಮ್ಮ ಇಲ್ಲದಿದ್ದಾಗ ಒಬ್ಬರೇ ಮನೆಕೆಲಸಗಳನ್ನು ಮಾಡಲು ಅಜ್ಜಿಗೆ ಆಗುತ್ತಿರಲಿಲ್ಲ. ಅಪ್ಪ ಯಾವಾಗಲೂ ಹೊರಗಡೆ ದುಡಿಯಲು ಹೋಗುತ್ತಿದ್ದರು. ಹಾಗಾಗಿ ಅಪ್ಪ ಒಪ್ಪಿದ ಮೇಲೆಯೇ ಅವರೆಲ್ಲರೂ ಹೊರಡುವುದು. ಅಣ್ಣಯ್ಯ ಅಪ್ಪ ಮನೆಯಲ್ಲಿಲ್ಲದಾಗ ಅಮ್ಮನೊಂದಿಗೆ ಹಟ ಮಾಡುತ್ತಿದ್ದ. ಆದರೆ ಅಮೃತಾಳಿಗಾಗಲೀ ಅಣ್ಣಯ್ಯನಿಗಾಗಲೀ ಅಪ್ಪನಲ್ಲಿ ಕೇಳಲು ಧೈರ್ಯವಿರಲಿಲ್ಲ.

ಜನ 23, 2017

ಧೋಬಿಘಾಟ್’ನಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರ ‘ಮೈಲುತುತ್ತ’ ಪದ್ಯಸಂಕಲನ ಬಿಡುಗಡೆ

ಜ.20ರಂದು ಬೆಂಗಳೂರಿನಲ್ಲಿ ಪತ್ರಕರ್ತ, ಸಿನೆಮಾ ನಿರ್ದೇಶಕರೂ ಆಗಿರುವ ಚಕ್ರವರ್ತಿ ಚಂದ್ರಚೂಡ್ ಅವರ “ಮೈಲುತುತ್ತ’ ಪದ್ಯಸಂಕಲನ ವಿಭಿನ್ನ ರೀತಿಯಲ್ಲಿ ಲೋಕಾರ್ಪಣೆಗೊಂಡಿತು. ಮಲ್ಲೇಶ್ವರದ ಧೋಬಿಘಾಟ್’ನಲ್ಲಿ ‘ಪದ್ಯಗಳಿಗೆ ಬಿಡುಗಡೆ’ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದ ಚಕ್ರವರ್ತಿಯವರ ದರ್ವೇಶ್ ಚೌಕಿ ತಂಡ ಈವರೆಗಿನ ಸಾಹಿತ್ಯಲೋಕದ ಶಿಷ್ಟಾಚಾರಗಳನ್ನು ಮೀರಿ ಕಾರ್ಯಕರ್ಮ ರೂಪಿಸಿತ್ತು. 

ಮೇ 26, 2016

ಧಾರವಾಡದಲ್ಲಿ ಮೇ ಸಾಹಿತ್ಯ ಮೇಳ 28 ಮತ್ತು 29ರಂದು

26/05/2016
ವಿಷಯ - ಸಮಕಾಲೀನ ಸವಾಲುಗಳು : ಹೊಸ ತಲೆಮಾರಿನ ಪ್ರತಿಸ್ಪಂದನೆ
೨೦೧೬, ಮೇ ೨೮ ಮತ್ತು ೨೯,
ಆಲೂರು ವೆಂಕಟರಾವ್ ಸಭಾಭವನ, ಧಾರವಾಡ
ಲಡಾಯಿ ಪ್ರಕಾಶನ, ಗದಗ
ಕವಿ ಪ್ರಕಾಶನ, ಕವಲಕ್ಕಿ
ಚಿತ್ತಾರ ಕಲಾ ಬಳಗ

ಬೆಳಗ್ಗೆ 10 ಗಂಟೆಗೆ ಆರಂಭ. ಬನ್ನಿ ಗೆಳೆಯರೊಂದಿಗೆ.. ಹೊರಗಿನಿಂದ ಬರುವವರೆಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ವಸತಿ ಸಮಿತಿಯ ಸಂಚಾಲಕ ಸಮಿತಿ ಸಂಪರ್ಕಿಸಿ. ಡಾ. ಡಿ. ಬಿ ಗವಾನಿ(ಸಂಚಾಲಕರು) -9482931100
ಮೆಹಬೂಬ ನದಾಫ - 9844444826
ರಾಜಕುಮಾರ ಮಡಿವಾಳರ - 9886436020 
ಡಾ. ಶೌಕತ್ ಅಲಿ ಮೇಗಲಮನಿ -9448529867
ಪ್ರೇಮಾ ನಡುವಿನಮನಿ -9035261701 
ಬಸವರಾಜ ಮ್ಯಾಗೇರಿ-9972977789
ಮಧು ಬಿರಾದಾರ -9686645263









ಮೇ 24, 2016

'ಹೊನಲಿಗೆ' ಮೂರು ವರುಷದ ಸಂಭ್ರಮ.

ಡಾ. ಅಶೋಕ್. ಕೆ. ಆರ್
ಭಾಷೆಯೊಂದು ನಿಂತ ನೀರೇ? ಅಥವಾ ಕಾಲದಿಂದ ಕಾಲಕ್ಕೆ ಅದರಲ್ಲಿ ಬದಲಾವಣೆಗಳಾಗಬೇಕಿರುವುದು ಅವಶ್ಯಕವೇ? ಇಂತಹುದೊಂದು ಪ್ರಶ್ನೆಗಳನ್ನು ಮೂಡಿಸುವುದು ನೀವು ಹೊನಲು (honalu.net ) ವೆಬ್ ಪುಟವನ್ನು ವೀಕ್ಷಿಸಿದಾಗ. ಅಲ್ಲಿ ಆಡು ಭಾಷೆಯ ಕನ್ನಡವನ್ನೇ 'ಎಲ್ಲರ ಕನ್ನಡದ' ಹೆಸರಿನಲ್ಲಿ ಹೆಚ್ಚು ಉಪಯೋಗಿಸಲಾಗಿದೆ. ಗ್ರಾಂಥಿಕ ಕನ್ನಡವನ್ನಷ್ಟೇ ಓದಿಕೊಂಡು ಬೆಳೆದವರಿಗೆ ಇದೇನಿದು ವಿಚಿತ್ರವೆಂದು ಅನ್ನಿಸುವುದು ಸಹಜ. ಇವರ ಈ ಪ್ರಯತ್ನ ಒಳ್ಳೆಯದಾ ಕೆಟ್ಟದ್ದಾ ಎಂದು ಇದಮಿತ್ಥಂ ಎಂದು ಹೇಳಿಬಿಡುವುದರ ಮೊದಲು ಹತ್ತಲವು ದಿಕ್ಕಿನಲ್ಲಿ ತೋಚಿದ ರೀತಿಯಲ್ಲಿ ಹರಿಯುವ ಭಾಷೆಗಷ್ಟೇ ಜೀವಂತಿಕೆ ಹಾಗೂ ಕಾಲದ ಮಿತಿಗಳನ್ನು ಮೀರಿ ಬೆಳೆಯುವ ಸಾಧ್ಯತೆಯಿರುವುದು ಎನ್ನುವುದನ್ನು ನೆನಪಿಟ್ಟುಕೊಳ್ಳುವುದು ಅತ್ಯವಶ್ಯಕ.
ಒಮ್ಮೆ ಶಾಲಾ ದಿನಗಳನ್ನು ನೆನಪಿಸಿಕೊಳ್ಳಿ, ಮನೆಯಲ್ಲಿ ಸ್ನೇಹಿತರೊಡನೆ ಅಷ್ಟು ಸರಾಗವಾಗಿ ಉಲಿಯುತ್ತಿದ್ದ ಕನ್ನಡ, ಶಾಲೆಗೆ ಬರುತ್ತಿದ್ದಂತೆ ಬ್ಬೆ ಬ್ಬೆ ಬ್ಬೆ ಎನ್ನಲಾರಂಭಿಸುತ್ತಿತ್ತು. ಧರಣಿ ಎಂದು ಬರೆಯುವ ಬದಲು ದರಣಿ ಎಂದು ಬರೆದುಬಿಟ್ಟರೆ ಮಹಾಪರಾಧವಾಗುತ್ತಿತ್ತು. ಇನ್ನು ಸಂಸ್ಕೃತ ಪದಗಳ ತತ್ಸಮ - ತದ್ಭವದ ಗೋಳಂತೂ ಅನುಭವಿಸಿದವರಿಗೇ ಗೊತ್ತು. ವ್ಯಾಕರಣ ಕಲಿಯಬೇಕು ಎನ್ನುವುದನ್ನು ಒಪ್ಪಬಹುದಾದರೂ ಭಾಷೆಯನ್ನು ಕಬ್ಬಿಣದ ಕಡಲೆಯನ್ನಾಗಿಸಿ, 'ಪಾಸಾದ್ರೆ ಸಾಕು, ಕನ್ನಡ ಪುಸ್ತಕ ಮುಟ್ಟಲ್ಲ' ಅನ್ನೋ ನಿರಭಿಮಾನವನ್ನೂ ಮೂಡಿಸಬಾರದಲ್ಲವೇ? ಇದಕ್ಕೆ ಉತ್ತರವಾಗಿ ಎಲ್ಲರ ಕನ್ನಡದ ಮೂಲಕ ಹೊನಲು ಎಂಬ ವೆಬ್ ಪುಟದ ಮೂಲಕ, ಅಂತರ್ಜಾಲದ ಮಟ್ಟಿಗೆ ಹೊಸ ಪ್ರಯತ್ನ ಪ್ರಾರಂಭವಾಗಿದೆ. 
ಹೊನಲು ತಂಡದ ಪ್ರಯತ್ನ ವಿಚಿತ್ರ ಎನ್ನಿಸಬಹುದು, ಅಸಹ್ಯ ಎನ್ನಿಸಬಹುದು, ಮೊನ್ನೆ ಫೇಸ್ ಬುಕ್ಕಿನಲ್ಲೊಂದು ಪೋಸ್ಟಿಗೆ ಸಹೃದಯರೊಬ್ಬರು ಹೊನಲುವಿನದು ವಿಧ್ವಂಸಕ ಕೃತ್ಯ ಎಂದು ಹೇಳಿದ್ದರು. ಈ ರೀತಿಯ ಎಲ್ಲಾ ಟೀಕೆಗಳ ಹಿಂದಿರಬಹುದಾದ 'ಭಾಷಾ ಶುದ್ಧತೆ'ಯನ್ನು ನಮ್ಮ ತಲೆಗೆ ತುಂಬಿರುವುದು ಮತ್ತದೇ ನಮ್ಮ ಶಾಲಾ ದಿನಗಳು ಎಂದರೆ ತಪ್ಪಲ್ಲ. ಭಾಷೆಯಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರಬೇಕು. ಈ ಹೊಸ ಪ್ರಯೋಗಗಳು ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತವೋ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯುತ್ತದಾದರೂ ಈ ಪ್ರಯೋಗಗಳೇ ಭಾಷೆಯನ್ನು ಜೀವಂತವಾಗಿಡುವ ಸಂಗತಿಗಳು ಎನ್ನುವುದು ಸತ್ಯ. ಪ್ರಯೋಗಗಳೇ ಇಲ್ಲದಿದ್ದರೆ, ನಾವಿನ್ನೂ ಹಳಗನ್ನಡದಲ್ಲೋ, ಅಥವಾ ಅದಕ್ಕೂ ಮುಂಚೆ ಇದ್ದಿರಬಹುದಾದ ಭಾಷಾಶೈಲಿಯಲ್ಲೋ ಮಾತನಾಡುತ್ತಿದ್ದೆವು, ಬರೆಯುತ್ತಿದ್ದೆವು. ಇದೇನಿದು ಹಳೆಗನ್ನಡ ಹಿಂಗಿದೆ ಎಂದೊಬ್ಬರಿಗ್ಯಾರಿಗೋ ಅನ್ನಿಸಿ ಸಿದ್ಧ ಮಾದರಿಯ ಹಾದಿಯಿಂದ ಹೊರಬಂದಿದ್ದಕ್ಕೇ ಅಲ್ಲವೇ ನಾವಿವತ್ತೂ ಬರೆಯುತ್ತಿರುವ ಕನ್ನಡ ಹಳೆಗನ್ನಡಕ್ಕಿಂತ ಸುಲಭವಾಗಿರುವುದು? ಹೊನಲುವಿನ ತಂಡದ ಸದಸ್ಯರ ಶ್ರಮ ಎಂತದ್ದು ಎಂದು ಅರಿವುದಕ್ಕೆ ಸುಮ್ಮನೆ ಒಂದು ಪುಟ ಮಾತನಾಡುವ ಕನ್ನಡದಲ್ಲಿ ಬರೆದು ನೋಡಿ! ನಾನೂ ಪ್ರಯತ್ನಿಸಿದ್ದೆ, ಟೈಪಿಸಲು ಕುಳಿತರೆ ಸಾಕು ಗ್ರಾಂಥಿಕ ಕನ್ನಡವೇ ಬೆರಳ ತುದಿಯಲ್ಲಿರುತ್ತದೆ! ಮಾತನಾಡಲಾರಂಭಿಸಿದರೆ ಗ್ರಾಂಥಿಕ ಕನ್ನಡ ಹತ್ತಿರವೂ ಸುಳಿಯುವುದಿಲ್ಲ! ಎಲ್ಲರ ಕನ್ನಡದಲ್ಲಿ ಬರೆಯುವುದು ಗ್ರಾಂಥಿಕ ಕನ್ನಡದಲ್ಲಿ ಬರೆಯುವುದಕ್ಕಿಂತ ಕಷ್ಟಕರ....(ನನ್ನ ಕಡೆಯಿಂದ ಒಂದು ತಪ್ಪೊಪ್ಪಿಗೆಯೆಂದರೆ, ಬರ್ಕೊಡ್ತೀನಿ ಬರ್ಕೊಡ್ತೀನಿ ಎಂದು ಎರಡು ಮೂರು ಸಲ ಹೇಳಿ ಹೊನಲಿಗಾಗಲೀ ಅರಿಮೆಗಾಗಲೀ ಯಾವ ಲೇಖನವನ್ನೂ ಬರೆಯದೇ ಇರುವುದು! ಇನ್ನು ಮೇಲಾದರೂ ಬರೆಯಲು ಪ್ರಯತ್ನಿಸಬೇಕು!)
ಅಂದಮಾತ್ರಕ್ಕೆ ಹೊನಲು ವೆಬ್ ಪುಟದಲ್ಲಿ ಎಲ್ಲರ ಕನ್ನಡವೇ ಶ್ರೇಷ್ಟವೆಂಬ ಅಹಂ ತುಂಬಿ ಹೋಗಿದೆ ಎಂದು ಭಾವಿಸುವುದು ಬೇಡ. ಆ ರೀತಿ ಆಗಿಹೋದರೆ, ಗ್ರಾಂಥಿಕ ಕನ್ನಡವೇ ಶ್ರೇಷ್ಟ, ಸಂಸ್ಕೃತ ಪದಗಳ ಕನ್ನಡವೇ ಶ್ರೇಷ್ಟ ಎಂದುಕೊಳ್ಳುವವರಿಗೂ ಹೊನಲು ತಂಡಕ್ಕೂ ವ್ಯತ್ಯಾಸ ಉಳಿಯುವುದಿಲ್ಲ. ಸಾಧ್ಯವಾದಷ್ಟು ಆಡು ಮಾತಿನ ಕನ್ನಡ ಉಪಯೋಗಿಸಿ ಎನ್ನುವುದಷ್ಟೇ ಅವರ ವಿನಂತಿ. ಹೊನಲುವಿನ ಈ ಪ್ರಯತ್ನಕ್ಕೆ ಈಗ ಮೂರು ವರುಷದ ಸಂಭ್ರಮ. ಎಲ್ಲರ ಕನ್ನಡವನ್ನು ಮುಂದೊಯ್ಯಲು ಇವರು ಅನುಸರಿಸಿರುವ ದಾರಿಯೂ ಮಾದರಿಯಾಗುವಂತದ್ದು. ವಿಜ್ಞಾನದಿಂದ ಹಿಡಿದು ಅಡುಗೆಯವರೆಗೆ, ಮೊಬೈಲ್ ತಂತ್ರಾಂಶದಿಂದ ಹಿಡಿದು ಕಾರು ಬೈಕುಗಳವರೆಗೆ, ಕತೆ ಕವಿತೆಗಳೆಲ್ಲವೂ ಹೊನಲುವಿನ ಒಡಲಲ್ಲಿದೆ. ಜೊತೆಗೆ ವಿಜ್ಞಾನಕ್ಕೆಂದೇ ಮೀಸಲಾದ ಅರಿಮೆ ಎಂಬ ವೆಬ್ ಪುಟವನ್ನೂ ಇತ್ತೀಚೆಗೆ ಶುರು ಮಾಡಿದ್ದಾರೆ. 
ಈ ಭಾನುವಾರ ಬಿಪಿ ವಾಡಿಯಾ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಹೊನಲು, ಎಲ್ಲರ ಕನ್ನಡದ ಬಗ್ಗೆ ಪ್ರೀತಿಯಿರುವವರು, ದ್ವೇಷವಿರುವವರು, ಕನ್ನಡವನ್ನು ಹಾಳು ಮಾಡುತ್ತಿದ್ದಾರೆ ಎಂದು ಬಯ್ದುಕೊಳ್ಳುವವರು, ಭಾಷಾ ಬೆಳವಣಿಗೆಯ ಬಗ್ಗೆ ಆಸಕ್ತರಾಗಿರುವವರು ಈ ಕಾರ್ಯಕ್ರಮಕ್ಕೆ ಬಿಡುವು ಮಾಡಿಕೊಂಡು ಬನ್ನಿ. ಮತ್ತೇನಲ್ಲದಿದ್ದರೂ ಇಂತಹ ಕಾರ್ಯಕ್ರಮಗಳಿಂದ ಒಂದಷ್ಟು ಹೊಸ ಗೆಳೆಯರ ಪರಿಚಯವಾಗುತ್ತದೆ, ಹೊಸ ವಿಚಾರಗಳು ತಿಳಿಯುತ್ತದೆ. ಭಾನುವಾರ ಸಿಗೋಣ.

ಮೇ 3, 2016

ಅಕಾಡೆಮಿ ಬಹುಮಾನ ಪಡೆವಾಗ ಆಡಿದ ಮಾತು: ಡಾ. ಅನುಪಮ. ಎಚ್. ಎಸ್.

Anupama H S
ಮನ್ನಣೆ = ಜವಾಬ್ದಾರಿ
ಒಬ್ಬ ಕವಿ, ಬರಹಗಾರ, ಕಲಾವಿದನಿಗೆ ಸಾವಿರ ಯೋಧರಿಗಿಂತ ಹೆಚ್ಚು ಶಕ್ತಿಯಿರುತ್ತದೆ. ಅದು ಅಕ್ಷರ ಕೊಟ್ಟ ಶಕ್ತಿ. ಜನಸಮುದಾಯ ತನ್ನ ಪ್ರತಿನಿಧಿಯಾಗಿ ಅವರಿಗೆ ಕೊಟ್ಟ ಶಕ್ತಿ. ಈ ಶಕ್ತಿಯ ಅರಿವಿರುವುದರಿಂದಲೇ ಅವರ ಬಾಯಿ ಮುಚ್ಚಿಸುವುದು ಸಾಂಕೇತಿಕವಾಗಿ ಸಮಾಜದ ಎಲ್ಲ ಜನರ ಬಾಯಿ ಮುಚ್ಚಿಸುವಷ್ಟು ಶಕ್ತಿಶಾಲಿ ಎಂದು ಭಾವಿಸಲಾಗಿದೆ. ಎಂದೇ ನುಡಿ, ಸಾಹಿತ್ಯ, ಸಾಹಿತಿ ಮತ್ತು ಸಾಹಿತ್ಯ ಅಕಾಡೆಮಿ ಕೆಲ ಬಿಕ್ಕಟ್ಟುಗಳನ್ನು ಕಾಲಕಾಲಕ್ಕೆದುರಿಸಿವೆ. ಈಗಲೂ ಅಂತಹ ಘಟನೆಗಳು ಸಂಭವಿಸುತ್ತಲೇ ಇವೆ. ಇತ್ತೀಚೆಗೆ ಮಾತು/ಬರಹ/ಅಭಿವ್ಯಕ್ತಿ ಸ್ಕ್ರುಟಿನಿಗೆ ಒಳಗಾದವು. ಪ್ರತಿಯೊಂದೂ ಸ್ಕ್ಯಾನರಿನ ಅಡಿ ಬಂತು. ಸಾಹಿತ್ಯ ಅಕಾಡೆಮಿ ಕಾರ್ಯಕ್ರಮ ಪೊಲೀಸ್ ರಕ್ಷಣೆಯಲ್ಲಿ ನಡೆಯಬೇಕಾದಂತಹ ಪರಿಸ್ಥಿತಿ ಉಂಟಾಯಿತು. ಅಷ್ಟೆ ಅಲ್ಲ,

• ಭಾವನೆಗಳಿಗೆ ಧಕ್ಕೆ ಮಾಡಿದರು ಎಂದು ಎಂದೋ ಬರೆದ ಕಾದಂಬರಿಯ ಒಂದು ಪುಟದ ಆಧಾರದ ಮೇಲೆ ಕೆಲವರು ಕೋರ್ಟು ಕಚೇರಿ ಹತ್ತಿದರು.
• ಭಾವನೆಗಳಿಗೆ ಧಕ್ಕೆ ಮಾಡಿದರು ಎಂದು ಯುವಕವಿಯೊಬ್ಬನನ್ನು ಹಿಡಿದು ಥಳಿಸಿದರು.
• ಭಾವನೆಗಳಿಗೆ ಧಕ್ಕೆ ಮಾಡಿದರು ಎಂದು ಈ ಧಾರವಾಡ ನೆಲದ ಒಂದು ಅಮೂಲ್ಯ ಜೀವ ತನ್ನ ಪ್ರಾಣವೊಪ್ಪಿಸಬೇಕಾಯಿತು.
• ಭಾವನೆಗಳಿಗೆ ಧಕ್ಕೆ ಮಾಡಿದರು ಎಂದು ಈಗಲೂ ಪ್ರತಿದಿನವೂ ಏನೇನೋ ನಡೆಯುತ್ತಲೇ ಇದೆ.

ಅದಕ್ಕೆ ಅಕ್ಷರಲೋಕ ಸುಮ್ಮನಿರಲಿಲ್ಲ. ಅಭಿವ್ಯಕ್ತಿಯೇ ಒಂದು ಪ್ರತಿರೋಧವಾದರೂ ತನ್ನ ಪ್ರತಿಕ್ರಿಯೆಯನ್ನು ತೀವ್ರವಾಗಿಸಿ ನೀಡಿತು:

• ತಮ್ಮ ಭಾವನೆಗಳಿಗೆ ಧಕ್ಕೆ ಮಾಡಿದರು ಎಂದು ಸಾಹಿತಿಗಳು ಪ್ರಶಸ್ತಿ ಹಿಂತಿರುಗಿಸತೊಡಗಿದರು.
• ಕಲಾವಿದರು, ಬರಹಗಾರರು, ನಟರು, ಮತ್ತಿತರ ಸಂವೇದನಾಶೀಲ ಜೀವಗಳು ಬರಹಗಾರರಾರು ಕೊಟ್ಟ ಸಮ್ಮಾನಗಳನ್ನು ವಾಪಸು ಕೊಟ್ಟರು.
• ಹಲವು ಗೌರವಗಳನ್ನು ಬೇಡವೆನ್ನಲಾಯಿತು.

ಇವೆಲ್ಲ ಸಾಮಾಜಿಕ ಆಗುಹೋಗುಗಳ ಕುರಿತ ಅವರ ನೈತಿಕ ಸಿಟ್ಟನ್ನೂ, ಕಳಕಳಿಯನ್ನೂ ತೋರಿಸಿದವು. ಭಿನ್ನಮತದಿಂದಲೇ ನಮ್ಮನ್ನು ನಾವು ಗುರುತಿಸಿಕೊಳುವ ಕಾಲ ಎದುರಾದಾಗ ತಮಗೆ ಸಾಧ್ಯವಿದ್ದ ಎಲ್ಲ ರೀತಿಯಿಂದ ಅದನ್ನು ವ್ಯಕ್ತಪಡಿಸಿದರು.

ಅವರೆಲ್ಲರನ್ನು ಗೌರವದಿಂದ ನೆನೆಯುತ್ತಲೇ, ಎಲ್ಲವೂ ಸಾಂಕೇತಿಕ ಎನ್ನುವುದನ್ನೂ ನಾವು ನೆನಪಿಡಬೇಕು. `ಪ್ರಶಸ್ತಿ ಪಡೆಯುವುದು, ಹೊಡೆಯುವುದರ ಹಾಗೆಯೇ ಪ್ರಶಸ್ತಿ ವಾಪಸಾತಿಯೂ ಇವರಿಗೊಂದು ಗೀಳಾಗಿದೆ’ ಎಂದು ಜನಸಾಮಾನ್ಯರಿಗೆ ಅನಿಸಬಾರದು. ಏಕೆಂದರೆ ನನ್ನ ಪ್ರಕಾರ ಪ್ರಶಸ್ತಿ ಎನ್ನುವುದು ನಿಮ್ಮ ಜವಾಬ್ದಾರಿಯನ್ನು ಹೆಚ್ಚಿಸಲು, ನೆನಪಿಸಲು ಸಮಾಜ ಇಟ್ಟುಕೊಂಡ ಒಂದು ತಂತ್ರ. ಖ್ಯಾತಿ ಹುಟ್ಟಿಸುವ ಕಷ್ಟ ಎಂಥದೆಂದರೆ ಅದು ನಿಮ್ಮ ಯೋಗ್ಯತೆಯನ್ನು ನಿಮಗೆ ನೀವೇ ಮತ್ತೆಮತ್ತೆ ಸಾಬೀತುಮಾಡಿಕೊಳ್ಳುತ್ತ ಹೋಗುವಂತೆ ಮಾಡುತ್ತದೆ. ಅದಕ್ಕೇ ಈ ಕಷ್ಟಕಾಲದಲ್ಲಿ ಮನ್ನಣೆ ಪಡೆಯುವುದು ಎಂದರೆ ನಿಮ್ಮ ಬದ್ಧತೆಯನ್ನು, ಜವಾಬ್ದಾರಿಯನ್ನು ನೀವು ಗಟ್ಟಿಗೊಳಿಸಿಕೊಳ್ಳುತ್ತ ಹೋಗುವುದೇ ಆಗಿದೆ.

ಅದಕ್ಕೇ ಪ್ರಶಸ್ತಿ ಪಡೆದ ಸಂಭ್ರಮವು ಹೆಮ್ಮೆಯಾಗದಂತೆ, ಬಯೋಡೇಟಾದಲ್ಲಿ ಸೇರದಂತೆ ನೋಡಿಕೊಳ್ಳಬೇಕು. ಪ್ರಶಸ್ತಿ ಮರೆತು ಅದು ನೀಡುವ ಜವಾಬ್ದಾರಿಯನಷ್ಟೆ ಮುಂದೆ ಹೊತ್ತು ಸಾಗಬೇಕು. ಗುರುತಿಸುವಿಕೆ ನಮ್ಮ ಸಮಯ, ಶ್ರಮವನ್ನು ಇನ್ನಷ್ಟು ದಕ್ಷವಾಗಿ ನಿರ್ವಹಿಸಿ ಜನಪರವಾಗಿಸುವಂತೆ ಆಗಬೇಕು. ಇವತ್ತು ಬರವಿದ್ದರೆ ಅದು ಕೇವಲ ನೀರಿಗಲ್ಲ, ಕೇವಲ ಆಹಾರಕ್ಕೂ ಅಲ್ಲ; ಆದರೆ ಒಂದು ಹಿಡಿ ಪ್ರೀತಿಗಾಗಿ ಇವತ್ತು ತೀವ್ರ ಬರಗಾಲವಿದೆ. ನಮ್ಮ ಸಂವೇದನೆಯು ಪ್ರೀತಿ ಹಂಚುವ, ಜೊತೆಗೆ ನೇರವಾಗಿ ದಿಟ್ಟವಾಗಿ ಜನರ ಅನಿಸಿಕೆ ವ್ಯಕ್ತಪಡಿಸುವ ಮಾರ್ಗವೂ ಆಗಬೇಕು. ಆಗಮಾತ್ರ ಯಾವುದು ಬಿಕ್ಕಟ್ಟಿಗೆ ಕಾರಣವಾಗಿದೆಯೋ ಅದೇ ಪರಿಹಾರಕ್ಕೆ ಕಾರಣವೂ ಆಗಿ ಒದಗಿಬಂದೀತು.

ಧಾರವಾಡ ನೆಲದಲ್ಲಿ ಆಡಲು ಸಾಧ್ಯವಾದ, ಸಾಧ್ಯವಾಗದ, ಮೌನವಾಗಿಸಲ್ಪಟ್ಟ ಎಲ್ಲ ಜೀವಗಳ ನೆನೆಯುತ್ತ ನನ್ನ ಜವಾಬ್ದಾರಿ ಸ್ವೀಕರಿಸುತ್ತಿದ್ದೇನೆ. ಅಂಡಮಾನ್ ಕುರಿತಷ್ಟೆ ಅಲ್ಲ ಸಕಲ ಜೀವರಾಶಿ-ಜನಜೀವನದ ಕುರಿತು ನನ್ನ ಆಸಕ್ತಿ ಕೆರಳಿಸಿದ ನನ್ನಿಬ್ಬರು ಗುರುಗಳಾದ ಪೂರ್ಣಚಂದ್ರ ತೇಜಸ್ವಿ ಹಾಗೂ ರಹಮತ್ ತರೀಕೆರೆಯವರಿಗೆ ಈ ಗೌರವವನ್ನು ಅರ್ಪಿಸಬಯಸುವೆ. ನನ್ನ ಎಲ್ಲಕ್ಕು ಬೆಂಬಲವಾಗಿ ನಿಲ್ಲುವ, ಪುಸ್ತಕ ಬಹುಮಾನ ಪಡೆದ ಈ ಪುಸ್ತಕವನ್ನು ಪ್ರಕಟಿಸಿದ ಬಸೂ; ನನ್ನ ಜೀವನಪ್ರೀತಿಯನ್ನು ಕಾಪಿಟ್ಟ ಕೃಷ್ಣ, ಪುಟ್ಟಿ, ಪವಿ, ಕನಸು, ಅಮ್ಮ, ಅಣ್ಣ, ಗೆಳೆಯರ ಬಳಗ ಇವರೆಲ್ಲರನ್ನು ಈ ಹೊತ್ತು ಪ್ರೀತಿಯಿಂದ ನೆನೆಯುತ್ತೇನೆ.

- ಅನುಪಮಾ

ಫೆಬ್ರ 7, 2016

ಸಾಹಿತ್ಯ ಪರಿಷತ್ತಿನ ಅದ್ಯಕ್ಷ ಚುನಾವಣಾ ಸ್ಪರ್ದಿಗಳಿಗೊಂದಿಷ್ಟು ಪ್ರಶ್ನೆಗಳು

ಕು.ಸ.ಮಧುಸೂದನ್
1.ಸಾಹಿತ್ಯ ಪರಿಷತ್ತಿನ ಚುನಾವಣೆಗೆ ನಿಂತಿರೊ ಸ್ಪರ್ದಿಗಳಿಗೆ ವೆಚ್ಚ ಮಾಡುವ ಹಣದ ಮಿತಿಯೇನಾದರು ಇದೆಯೇ?
2.ಹೋಗಲಿ ನಾಮಪತ್ರ ಹಾಕುವ ಮುಂಚೆ ರಾಜಕಾರಣಿಗಳಂತೆ ತಮ್ಮ ಸ್ಥಿರ-ಚರಾಸ್ತಿಗಳನ್ನು ಘೋಷಿಸಿಕೊಳ್ಳಬೇಕೆ?
3. ಗೆದ್ದಮೇಲೆ ಲೋಕಾಯುಕ್ತಕ್ಕೂ ಆಸ್ತಿ ವಿವರ ಸಲ್ಲಿಸಬೇಕೇ?
4.ಇವ್ಯಾವು ಇಲ್ಲವೆಂದಾದರೆ ತಾವುಗಳು ಈ ವಿಚಾರದಲ್ಲಿ ಯಾರಿಗೆ ಹೊಣೆಗಾರರಾಗಿರುತ್ತೀರಿ?
5.ಇನ್ನು ಮತದಾರರ ಸಂಖ್ಯೆ ಕನಿಷ್ಠ ಒಂದು ಲಕ್ಷವಿದ್ದರೆ, ನೀವು ಅವರಿಗೆ ಪತ್ರ ಬರೆಯಲೇ ಸುಮಾರು 5 ಲಕ್ಷ ರೂಪಾಯಿ ಬೇಕಾಗುತ್ತದೆ. ಅಷ್ಟು ದುಡ್ಡನ್ನು ಎಲ್ಲಿಂದ ತರುತ್ತೀರಿ?
6. ಪ್ರತಿ ತಾಲೂಕಿಗೂ ನಿಮ್ಮ ಕಾರಲ್ಲಿ ಬೇಟಿ ಕೊಡುವುದೇ ಆದಲ್ಲಿ ಕನಿಷ್ಠ 5 ಲಕ್ಷ ರೂಪಾಯಿ ಖರ್ಚಾಗುತ್ತದೆ. ಈ ದುಡ್ಡಿಗೇನು ಮಾಡುತ್ತೀರಿ?
7.ಹೋಗಲಿ ಚುನಾವಣೆ ಖರ್ಚಿಗೆಂದು ನೀವುಗಳೇನಾದರು ಪಾರ್ಟಿ ಫಂಡ್ ತರಾ ಹಣ ಸಂಗ್ರಹಿಸುತ್ತೀರಾ? ಹಾಗೆ ಸಂಗ್ರಹಿಸಿದರೆ ಕೊಟ್ಟವರ ಹೆಸರುಗಳನ್ನು ಸಾರ್ವಜನಿಕವಾಗಿ ಪ್ರಕಟಿಸುತ್ತೀರಾ?
8.ಯಾವುದಾದರು ರಾಜಕೀಯ ಪಕ್ಷಗಳ ಬೆಂಬಲ ನಿಮಗೆ ಇದೆಯಾ? ಇದ್ದರೆ ಯಾವ ಪಕ್ಷ ಯಾವ ಕಾರಣ ವಿವರಿಸುತ್ತೀರಾ?
9. ಇಷ್ಟೆಲ್ಲಾ ಖರ್ಚುಮಾಡಿ ಗೆದ್ದ ಮೇಲೆ ಕಳೆದುಕೊಂಡ ಹಣವನ್ನು ಮರಳಿ ಗಳಿಸಲು ಏನೆಲ್ಲಾ ಮಾಡುತ್ತೀರಿ
ಕೊನೆಯ ಪ್ರಶ್ನೆಗೆ ಕ್ಷಮೆಯಿರಲಿ: ಯಾಕೆಂದರೆ ನೀವು ಚುನಾವಣೆಗೆ ಖರ್ಚು ಮಾಡುತ್ತಿರುವು ಕಡಲೆಬೀಜಗಳಲ್ಲ ಲಕ್ಷಲಕ್ಷ ರೂಪಾಯಿಗಳು!
ಉತ್ತರ ಕೊಡಲೇ ಬೇಕೆಂಬ ಕಡ್ಡಾಯವೇನಿಲ್ಲ. ಇಂತಹ ಪ್ರಶ್ನೆಗಳನ್ನು ರಾಜಕಾರಣಿಗಳಿಗೆ ಕೇಳಿಕೇಳಿ ನಮಗೆ ಅಭ್ಯಾಸವಾಗಿ ಹೋಗಿದೆ........

ನವೆಂ 12, 2015

ಕುಂವಿ ಮತ್ತು ಬಂಜಗೆರೆಯವರ ಪ್ರತಿಕ್ರಿಯೆ.

ನವೀನ್ ನಿಮ್ಮಂಥ ಪ್ರಗತಿಪರ ಯುವಮನಸ್ಸುಗಳ ಆತಂಕ ಅರ್ಥಾಗುತ್ತೆ, ನಾನು ಅಕಸ್ಮಾತ್ ಆ ದಿವಸ ಉಪನ್ಯಾಸ ನೀಡಿದರೆ ಅದು ನಾಡಿನ ಸಹಸ್ರ ವಿವಿಧ ಜಾಯಮಾನದ ಹಾಗೂ ಅಭಿರುಚಿಯ ಜನರನ್ನುದ್ದೇಶಿಸಿ, ಆದರೆ ಮೋಹನ್ ಆಳ್ವಾ ಕುಟುಂಬ ಸದಸ್ಯರನ್ನುದ್ದೇಶಿಸಿ ಖಂಡಿತ ಅಲ್ಲ, ಅದು ಮಾತಾಡಲು.ತಿದ್ದಲು. ಪ್ರತಿಭಟಿಸಲು ಸೂಕ್ತ ಜಾಗ, ನನ್ನಂಥೋರು ಭಾಗವಹಿಸದಿದ್ದಲ್ಲಿ ಮೂಲಭೂತವಾದಿಗಳಾದ ಬೇರೆಯವರು ಮಾತಾಡ್ತಾರೆ. ಆತ್ಮಸಾಕ್ಷಿ ಕಳೆದುಕೊಳ್ಳುವುದಿಲ್ಲ, ರಾಜಿಯಾಗೋದಿಲ್ಲ, ನೇರ ದಿಟ್ಟ ನಿರಂತರ, ಆತಂಕ ಬೇಡ.
- ಕುಂವೀ

ಇದನ್ನೂ ಓದಿ: ಬಂಜಗೆರೆ ಮತ್ತು ಕುಂವೀಯವರಿಗೊಂದು ಬಹಿರಂಗ ಪತ್ರ


ಸಾಕಷ್ಟು ಪರ್ಯಾಲೋಚಿಸದೆ, ಸಾಮಾಜಿಕ ನ್ಯಾಯದ ಹೊಸ ಹುಡುಕಾಟಗಳು ಎಂಬ ವಿಷಯವನ್ನಷ್ಟೆ ನೋಡಿಕೊಂಡು ಒಪ್ಪಿಕೊಂಡಿದ್ದೆ. ಈಗ ನಮ್ಮ ಬಂಧು-ಬಳಗಕ್ಕೆ ನಾನು ಹಾಗೇ ಹೋಗುವುದು ಸರಿಯಲ್ಲ ಅನಿಸಿದರೆ ನಾನು 'ನುಡಿಸಿರಿ'ಗೆ ಹೋಗುವುದಿಲ್ಲ. ಸಂಗಾತಿಗಳ ಮನಸ್ಸಿಗೆ ಕಸಿವಿಸಿ ಉಂಟು ಮಾಡಿದ್ದಕ್ಕೆ ನಾನು ನಿಮ್ಮೆಲ್ಲರ ಕ್ಷಮೆ ಕೇಳುತ್ತಿದ್ದೆನೆ. ನಾವೆಲ್ಲರೂ ಒಂದೇ. ನಾವೆಲ್ಲರೂ ಕೈಗೆ ಕೈಜೋಡಿಸಿ ಸಾಂಸ್ಕೃತಿಕ ಯುದ್ಧವನ್ನು ಗೆಲ್ಲಬೇಕಾದ ಸಂಗಾತಿಗಳು. ನಾನು ನಿಮ್ಮೊಡನೆ ಇರುತ್ತೇನೆ, ಎಲ್ಲರಿಗೂ ವಂದನೆಗಳು.
-ಬಂಜಗೆರೆ ಜಯಪ್ರಕಾಶ.

ನವೆಂ 9, 2015

ಬಂಜಗೆರೆ ಮತ್ತು ಕುಂವೀಯವರಿಗೊಂದು ಬಹಿರಂಗ ಪತ್ರ.

kum veerabhadrappa
ಹಿರಿಯರೂ, ಮಾರ್ಗದರ್ಶಕರೂ ಆಗಿರುವ ಡಾ ಬಂಜಗೆರೆ ಜಯಪ್ರಕಾಶ್ ಮತ್ತು ಕುಂ ವೀರಭದ್ರಪ್ಪನವರಿಗೆ,

ಆಳ್ವಾಸ್ ನುಡಿಸಿರಿಯ ಆಹ್ವಾನ ಪತ್ರಿಕೆ ನೋಡಿದ ಬಳಿಕ ತಮಗೆ ಪತ್ರ ಬರೆಯುತ್ತಿದ್ದೇವೆ. ತಾವು ಈ ನೆಲದಲ್ಲಿ ಎಷ್ಟೋ ಕಾಲದಿಂದ ಜಾತ್ಯಾತೀತತೆ ಕೋಮುಸೌಹಾರ್ಧತೆ, ಸಾಮಾಜಿಕ ಸಮಾನತೆ ಮತ್ತು ಸಮಾನ ಅವಕಾಶದ ಸ್ವಾಭಿಮಾನಿ ಬದುಕಿಗಾಗಿ ತಮ್ಮ ಮಾತು-ಕೃತಿಗಳ ಮೂಲಕ ಹೋರಾಟ ಮಾಡುತ್ತಾ ಬಂದವರು. ಈ ಮೂಲಕ ಯುವಪೀಳಿಗೆಗೆ ಆದರ್ಶಪ್ರಾಯರಾಗಿರುವವರು. 

ನೀವು ಹೀಗೆ ಎಡವಬಹುದೇ? ಅದೂ ಈ ಕಾಲದಲ್ಲಿ. ಇದೀಗ ದೇಶಾದ್ಯಂತ ಸಾಹಿತ್ಯ ವಲಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಚಳುವಳಿಯಲ್ಲಿ ತೊಡಗಿದೆ. ಹೆಚ್ಚುತ್ತಿರುವ ಅಸೈರಣೆಯ ವಾತಾವರಣದ ವಿರುದ್ಧ ಸಿಡಿದೆದ್ದಿದೆ. ದೇಶದಲ್ಲೆಡೆ ಭುಗಿಲೆದ್ದಿರುವ ಅಸಹಿಷ್ಣುತೆಯ ವಾತಾವರಣದ ವಿರುದ್ದ ಸಾಹಿತಿಗಳು, ನಟ-ನಟಿಯರು, ವಿಜ್ಞಾನಿಗಳು ಹೋರಾಟಕ್ಕಿಳಿದಿದ್ದಾರೆ. ದೇಶದಾದ್ಯಂತ ಪ್ರಶಸ್ತಿ ವಾಪ್ಸಿ ಚಳುವಳಿ ನಡೆಯುತ್ತಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ವಾಪಸು ಮಾಡುವ ಮೂಲಕ ಕುಂ.ವೀರಭದ್ರಪ್ಪ ಅವರೇ ಈ ಹೋರಾಟವನ್ನು ರಾಜ್ಯದಲ್ಲಿ ಮುನ್ನಡೆಸಿದ್ದಾರೆ. ನುಡಿಸಿರಿಯಲ್ಲಿ ಪಾಲ್ಗೊಳ್ಳುವ ನಿಮ್ಮ ನಿರ್ಧಾರವನ್ನು ಈ ಹಿನ್ನೆಲೆಯಲ್ಲಿ ಪುನರ್ ಪರಿಶೀಲಿಸುವುದು ಸೂಕ್ರವಲ್ಲವೇ? 

ದಕ್ಷಿಣ ಕನ್ನಡ ಜಿಲ್ಲೆ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಹಿಂದುತ್ವದ ಪ್ರಯೋಗಶಾಲೆಯಾಗಿ ರಾಷ್ಟ್ರಮಟ್ಟದಲ್ಲಿ ಕುಖ್ಯಾತಿ ಗಳಿಸಿರುವುದು ನಿಮಗೆ ತಿಳಿದಿದೆ. ಆದರೆ ಇಂತಹ ಬೆಳವಣಿಗೆಗೆ ಕಾರಣಗಳೇನು ಎಂಬ ಬಗ್ಗೆ ಆಳವಾದ ಅಧ್ಯಯನ ನಡೆದಿಲ್ಲ. ಮೇಲ್ನೋಟಕ್ಕೆ ಬಜರಂಗಿಗಳು ಸೇರಿದಂತೆ ಒಂದಿಷ್ಟು ಕೇಸರಿಪಡೆಯ ಸದಸ್ಯರು ಈ ಗಲಭೆಗಳ ರೂವಾರಿಗಳಂತೆ ಕಾಣುತ್ತಾರೆ. ಆದರೊ ಹಿಂದುಳಿದ ಮತ್ತು ದಲಿತ ವರ್ಗಕ್ಕೆ ಸೇರಿರುವ ಅಮಾಯಕ ಯುವಕರನ್ನು ದಾಳಗಳಂತೆ ಬಳಸಿಕೊಂಡು ರಾಜಕೀಯದ ಆಟವನ್ನು ಆಡುತ್ತಿರುವ ಸೂತ್ರಧಾರಿಗಳು ಯಾರ ಕಣ್ಣಿಗೂ ಕಾಣಿಸುತ್ತಿಲ್ಲ. ಇಂತಹ ಸೂತ್ರಧಾರರನ್ನು ಗುರುತಿಸುವ ವೈಚಾರಿಕ ಸ್ಪಷ್ಟತೆಯನ್ನು ನಿಮ್ಮಂತಹವರ ಬರವಣಿಗೆಗಳಿಂದಲೇ ನಾವು ಗಳಿಸಿಕೊಂಡದ್ದು. ಅದಕ್ಕಾಗಿ ನಿಮಗೆ ಋಣಿಯಾಗಿದ್ದೇವೆ.

banjagere jayaprakash
ವಿಶ್ವ ಹಿಂದೂ ಪರಿಷತ್ 50 ವರ್ಷಗಳನ್ನು ಈ ನೆಲದಲ್ಲಿ ಪೂರೈಸುತ್ತಿರುವುದಕ್ಕೂ ಈ ದೇಶದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿರುವ ಅಸಹಿಷ್ಣುತೆಗೂ ಸಂಬಂಧವಿದೆ ಎಂದು ನಿಮಗೆ ಅನಿಸುವುದಿಲ್ಲವೇ? ನೀವು ಗಮನಿಸದೆ ಇರಬಹುದಾದ ಕೆಲವು ಸಂಗತಿಗಳ ಕಡೆ ಗಮನ ಸೆಳೆಯುವ ಪ್ರಯತ್ನ ನಮ್ಮದು. ವಿಶ್ವಹಿಂದೂ ಪರಿಷತ್ತಿನ ಸುವರ್ಣ ಮಹೋತ್ಸವ ಸಮಿತಿಯ ರಾಜ್ಯ ಅಧ್ಯಕ್ಷರಾಗಿರುವವರು ನುಡಿಸಿರಿಯ ರೂವಾರಿಯಾಗಿರುವ ಡಾ ಎಂ ಮೋಹನ ಆಳ್ವರು. ಆ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾಗಿರುವವರು ಡಾ ಡಿ ವೀರೇಂದ್ರ ಹೆಗ್ಗಡೆಯವರು. ಇತ್ತೀಚೆಗಷ್ಟೇ ಸುವರ್ಣ ಮಹೋತ್ಸವದ ಹೆಸರಿನಲ್ಲಿ ಮೂರು ತಿಂಗಳು ದೇಶದಾದ್ಯಂತ ಸಮಾವೇಶಗಳನ್ನು ವಿಶ್ವ ಹಿಂದೂ ಪರಿಷತ್ ನಡೆಸಿತ್ತು. ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಮಾಜೋತ್ಸವಗಳನ್ನು ಆಯೋಜಿಸಲಾಗಿತ್ತು.

ಕರ್ನಾಟಕದಲ್ಲಿ ನಡೆದ ಎಲ್ಲಾ ಸಮಾವೇಶಗಳ ಯಜಮಾನಿಕೆ ಡಾ ಎಂ ಮೋಹನ ಆಳ್ವರದ್ದಾದರೆ, ರಾಷ್ಟ್ರಮಟ್ಟದ ಸಮಾವೇಶಗಳ ಯಜಮಾನಿಕೆ ಡಾ ಡಿ ವೀರೇಂದ್ರ ಹೆಗ್ಗಡೆಯವರದ್ದು. ಇದರ ನಂತರ ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಕೋಮುದ್ವೇಷದ ವಿಷಮಯ ವಾತಾವರಣ ನಿರ್ಮಾಣವಾಗಿರುವುದನ್ನು ತಾವು ಅಲ್ಲಗಳೆಯಲಾರಿರಿ ಎಂದು ನಂಬಿದ್ದೇವೆ. ದೇಶದಾದ್ಯಂತ ನಡೆಯುತ್ತಿರುವ ಕೋಮುಗಲಭೆ ಮತ್ತು ಧಾರ್ಮಿಕ ಅಸಹಿಷ್ಣುತೆಯ ಘಟನೆಗಳಿಗೂ ಈ ಸಮಾವೇಶಗಳಿಗೂ ಸಂಬಂಧವಿದೆ ಎಂದು ನಿಮಗೆ ಅನಿಸುವುದಿಲ್ಲವೇ? ಹೆಸರೇ ಸೂಚಿಸುವಂತೆ ಆಳ್ವಾಸ್ ನುಡಿಸಿರಿಯ ಯಜಮಾನಿಕೆ ಡಾ ಎಂ ಮೋಹನ ಆಳ್ವ ಅವರದ್ದು. ಈ ವ್ಯಕ್ತಿ ಕೇಂದ್ರಿತ ಸಾಹಿತ್ಯದ ಜಾತ್ರೆಗೆ ಡಾ ಡಿ ವೀರೇಂದ್ರ ಹೆಗ್ಗಡೆಯವರದ್ದೇ ಆಶೀರ್ವಚನ. ಆಮಂತ್ರಣ ಪತ್ರಿಕೆಯ ಮುಖಪುಟದಲ್ಲಿ ಫೋಟೋ ಕೂಡಾ ಅಚ್ಚು ಹಾಕಲಾಗಿದೆ.

ಸತ್ಯ ಇಷ್ಟೊಂದು ಸ್ಪಷ್ಟವಾಗಿ ನಮ್ಮ ಕಣ್ಣೆದುರು ಇರುವಾಗ ಕೋಮುವಾದದ ಸೂತ್ರಧಾರರ ಯಜಮಾನಿಕೆಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿಯಲ್ಲಿ ನೀವು ಹೇಗೆ ಭಾಗವಹಿಸಲು ಸಾಧ್ಯ? ಇದು ನಮ್ಮನ್ನು ಕಾಡುತ್ತಿರುವ ಪ್ರಶ್ನೆ. ಆಮಂತ್ರಣ ಪತ್ರಿಕೆಯಲ್ಲಿ ಡಾ ಬಂಜಗೆರೆ ಜಯಪ್ರಕಾಶ ಸರ್ ``ಸಾಮಾಜಿಕ ನ್ಯಾಯ-ಹೊಸತನದ ಹುಡುಕಾಟ’’ ಎಂಬ ವಿಚಾರದ ಬಗ್ಗೆ ವಿಶೇಷೋಪನ್ಯಾಸ ನೀಡಿಲಿದ್ದಾರೆ ಎಂದಿದೆ. ಊಳಿಗಮಾನ್ಯ ಪದ್ದತಿ, ವ್ಯಕ್ತಿಪೂಜೆ ಮತ್ತು ಧರ್ಮದ ಹೆಸರಲ್ಲಿ ನಡೆಯುತ್ತಿರುವ ಶೋಷಣೆಯನ್ನು ವಿರೋಧಿಸಿಕೊಂಡು ಬಂದ ಈ ಆಹ್ಹಾನವನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ? 

ಕಳೆದ ಎರಡು ವರ್ಷ ಆಳ್ವಾಸ್ ನುಡಿಸಿರಿಯಲ್ಲಿ ದಲಿತರ ಅವಹೇಳನ ಮಾಡಲಾಗಿತ್ತು. ಈ ಬಗ್ಗೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿರುವುದು ತಮ್ಮ ಗಮನಕ್ಕೆ ಬಂದಿರುವಂತಿಲ್ಲ. ತಾವು ಈಗಲೂ ಗೂಗಲ್ ಮೂಲಕ ಹುಡುಕಿದರೆ ಈ ಬಗ್ಗೆ ಮಾಹಿತಿ ದೊರೆಯುತ್ತದೆ. ಪಕ್ಕಾ ಶಿಕ್ಷಣದ ವ್ಯಾಪಾರಿಯಾಗಿರುವ ಡಾ ಎಂ ಮೋಹನ ಆಳ್ವರು ಇದೀಗ ಬಿಲ್ಡರ್ ಆಗಿಯೂ ಬೆಳೆದಿದ್ದಾರೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ರೆಸಾರ್ಟ್ ಸ್ಥಾಪಿಸಲು ಹೊರಟಿರುವ ಆಳ್ವರ ವಿರುದ್ಧ ಈಗಾಗಲೇ ಪರಿಸರ ಸಂಘಟನೆಗಳು ನ್ಯಾಯಾಲಯದ ಮೊರೆ ಹೋಗಿದೆ. ಜಮೀನ್ದಾರಿ ಪಳಿಯುಳಿಕೆಯಾಗಿರೋ ಡಾ ಎಂ ಮೋಹನ ಅಳ್ವರು ತಮ್ಮ ಶಿಕ್ಷಣ ವ್ಯಾಪಾರಕ್ಕಾಗಿ ಇಂತಹ ಸುಂದರವಾದ ವರ್ಣರಂಜಿತ ವಿಷಯಗಳನ್ನು ಇಟ್ಟುಕೊಂಡು ನುಡಿಸಿರಿ ಜಾತ್ರೆ ನಡೆಸುತ್ತಿದ್ದಾರೆ.

ಈ ಬಾರಿಯ ನುಡಿಸಿರಿಯಲ್ಲಿ ಸಾಮರಸ್ಯ- ಹೊಸತನದ ಹುಡುಕಾಟ ಎಂಬ ವಿಷಯದ ಬಗ್ಗೆ ನಮ್ಮ ನೆಚ್ಚಿನ ಮೇಷ್ಟ್ರಾಗಿರುವ ಕುಂ ವೀರಭದ್ರಪ್ಪನವರು ಮಾತನಾಡಲಿದ್ದಾರೆ ಎಂದು ತಿಳಿದು ಆಘಾತವಾಯಿತು. ಈ ಬಾರಿ 12 ನೇ ನುಡಿಸಿರಿ ನಡೆಯುತ್ತಿದೆ. ಕಳೆದ 11 ವರ್ಷಗಳಿಂದಲೂ ನುಡಿಸಿರಿಯಲ್ಲಿ ಇಂತಹ ಪ್ರಗತಿಪರ ವಿಷಯಗಳ ಮೇಲೆ ಆಳ್ವರು ಭಾಷಣ ಮಾಡಿಸಿದ್ದಾರೆ. ಆದರೆ ಇದರಿಂದ ಸಾಮಾಜಿಕ ಸಾಮರಸ್ಯ ಇನ್ನಷ್ಟು ಹಾಳಾಗುತ್ತಾ ಹೋಯಿತೇ ಹೊರತು ಸುಧಾರಣೆಯಾಗಲಿಲ್ಲ. ನಿಮ್ಮಂತಹ ಗೌರವಾನ್ವಿತ ಸಾಹಿತಿಗಳು ನುಡಿಸಿರಿಯ ವೇದಿಕೆ ಹತ್ತಿ ಭಾಷಣ ಮಾಡುವುದರಿಂದ ಆಳ್ವರಿಗೆ ವಿಶ್ವಾಸಾರ್ಹತೆ ತಂದುಕೊಂಡುತ್ತಿದ್ದಾರೆ. ಈ ರೀತಿ ಗಳಿಸಿಕೊಂಡ ವಿಶ್ವಾಸಾರ್ಹ ನಾಯಕತ್ವದ ಲಾಭವನ್ನು ಅವರು ಹಿಂದೂ ಸಂಘಟನೆಗಳಿಗೆ ಧಾರೆ ಎರೆಯುತ್ತಿದ್ದಾರೆ. ಸರ್, ದಯವಿಟ್ಟು ಯೋಚನೆ ಮಾಡಿ.

ದಕ್ಷಿಣ ಕನ್ನಡದ ಇತಿಹಾಸದಲ್ಲೇ ಕೋಮುಗಲಭೆ ನಡೆಯದ ಏಕೈಕ ವಿಧಾನಸಭಾ ಕ್ಷೇತ್ರವೆಂದರೆ ಅದು ಮೂಡಬಿದ್ರೆ. ಜೊತೆಗೆ ಕರಾವಳಿಯ ಇತಿಹಾಸದಲ್ಲೇ ಒಂದೇ ಒಂದು ಬಾರಿಯೂ ಬಿಜೆಪಿ ಗೆಲ್ಲಲಾಗದ ಕ್ಷೇತ್ರವಿದ್ದರೆ ಅದೂ ಮೂಡಬಿದ್ರೆಯೇ. ಇಂತಹ ಮೂಡಬಿದ್ರೆಯಲ್ಲಿ ಇತ್ತೀಚೆಗೆ ಕೋಮುಗಲಭೆಗಳು ನಡೆದುಹೋಯಿತು. ದನ ಸಾಗಾಟದ ಹೆಸರಿನಲ್ಲಿ ಹಲ್ಲೆಗಳಾಯಿತು. ಕೊಲೆ ನಡೆಯಿತು. ಇದನ್ನೇ ಬಳಸಿಕೊಂಡು ಮುಸ್ಲಿಮರ ಅಂಗಡಿ ಮನೆಗಳ ದ್ವಂಸ ಮಾಡಲಾಯಿತು. ಈ ಎಲ್ಲಾ ಸಾಮರಸ್ಯ ಕದಡುವ ಘಟನೆಗಳಿಗೂ ಹಿಂದೂ ಸಮಾಜೋತ್ಸವಗಳಿಗೂ, ವಿಶ್ವ ಹಿಂದೂ ಪರಿಷತ್ ಸುವರ್ಣ ಮಹೋತ್ಸವಕ್ಕೂ, ಅದರ ಸಂಘಟಕರ ತೆರೆಯಮರೆಯ ನೆರವು-ಬೆಂಬಲಕ್ಕೂ ಸಂಬಂಧವಿಲ್ಲ ಎನ್ನುವಿರಾ ಸರ್ ? 

"ನಮ್ಮ ಪ್ರಗತಿಪರ ವಿಚಾರಧಾರೆಗಳನ್ನು ಅವರ ವೇದಿಕೆಯಲ್ಲೇ ಹೋಗಿ ಹೇಳ್ತೀವಿ’’ ಎಂದು ಕಳೆದ ಹತ್ತು ವರ್ಷಗಳಲ್ಲಿ ಅಲ್ಲಿ ಹೋಗಿ ಭಾಷಣ ಮಾಡಿದವರು ಹೇಳುತ್ತಲೇ ಇದ್ದಾರೆ. ಇದರಿಂದ ಛದ್ಮವೇಷಧಾರಿಗಳಾದ ಬಲಪಂಥೀಯರು ಲಾಭ ಮಾಡಿಕೊಂಡರೇ ಹೊರತು ಪ್ರಗತಿಪರ ಹೋರಾಟಗಳಿಗೆ ಯಾವ ಲಾಭಗಳೂ ಆಗಿಲ್ಲ. ಶಿಕ್ಷಣದ ವ್ಯಾಪಾರಿಗಳಿಗೆ, ಧರ್ಮಾಧಿಕಾರಿಗಳಿಗೆ, ರಿಯಲ್ ಎಸ್ಟೇಟ್ ಮಾಫೀಯಾಕ್ಕೆ ಇದರಿಂದ ಸಮಾಜದಲ್ಲಿ ಗೌರವ ದೊರೆಯುತ್ತಿದೆಯೇ ಹೊರತು ಬೇರಾವ ಸಾಧನೆಯೂ ಆಗಿಲ್ಲ ಎಂಬುದು ನಾವು ಕಂಡುಕೊಂಡ ಸತ್ಯ.

ನಮ್ಮೆಲ್ಲರ ಗುರುಗಳಂತಿದ್ದ ಯು.ಆರ್. ಅನಂತಮೂರ್ತಿಯವರು ತೀರಿಕೊಂಡ ದಿನವನ್ನು ನಾವು ಮರೆಯುವಂತಿಲ್ಲ. ಇಡೀ ರಾಜ್ಯದ ಶಾಲಾ ಕಾಲೇಜುಗಳಿಗೆ ಮರುದಿನ ರಜೆ ಘೋಷಿಸಲಾಗಿತ್ತು. ರಾಜ್ಯದಲ್ಲಿ ಒಂದು ರೀತಿಯ ಸೂತಕದ ವಾತಾವರಣ ಇತ್ತು. ಆದರೆ ಕರಾವಳಿ ಮತ್ತ್ತು ಮಲೆನಾಡು ಭಾಗದಲ್ಲಿ ಕೋಮುವಾದಿಗಳು ಪಟಾಕಿ ಸಿಡಿಸಿದರು. ಈ ಪಟಾಕಿ ಸಿಡಿಸಿದ ಕೋಮುವಾದಿಗಳ ಪೋಷಕರು ಯಾರೆಂದು ಮತ್ತೆ ಬಿಡಿಸಿ ಹೇಳಬೇಕಿಲ್ಲ. ಇರಲಿ. ರಾಜ್ಯಾಧ್ಯಂತ ಶಾಲಾ ಕಾಲೇಜಿಗೆ ರಜೆ ಘೋಷಿಸಿದ್ದರೂ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ರಜೆ ಘೋಷಿಸಿರಲಿಲ್ಲ. ರಜೆ ಕೊಟ್ಟೇ ಸಂತಾಪ ಸೂಚಿಸಬೇಕು ಎಂದೇನಿಲ್ಲ ಎನ್ನುವುದು ನಿಜ, ಆದರೆ ಅಂತಹದ್ದೊಂದು ರಜೆ ಕೋಮುವಾದಿಗಳ ಆರ್ಭಟಕ್ಕೆ ಒಂದು ಸಣ್ಣ ಪ್ರತಿರೋಧ ವ್ಯಕ್ತಪಡಿಸಿದಂತಾಗುತ್ತಿತ್ತು. ಸಾಹಿತಿಗಳನ್ನು ಪಲ್ಲಕ್ಕಿ ಮೇಲೆ ಕೂರಿಸಿ ಮೆರವಣಿಗೆ ಮಾಡುವ ಆಳ್ವಾರ ಮನಸ್ಸನ್ನು ಒಬ್ಬ ಹಿರಿಯ ಸಾಹಿತಿಯ ಸಾವು ಮತ್ತು ಅದನ್ನು ಸಂಭ್ರಮಿಸಿದ ದುಷ್ಟರ ಅಟ್ಟಹಾಸ ಕಲಕಲಿಲ್ಲ ಎನ್ನುವುದು ಎಷ್ಟೊಂದು ವಿಚಿತ್ರ ಅಲ್ಲವೇ? 

ಇದೆಲ್ಲದರ ಹೊರತಾಗಿಯೂ ಡಾ ಎಂ ಮೋಹನ ಆಳ್ವರು ತಾವು ಸಾಹಿತ್ಯದ ಪೋಷಕರು ಹೇಳಿಕೊಳ್ಳುತ್ತಾರೆ. ಅನಂತ ಮೂರ್ತಿಯವರ ಸಾವಿನ ನಂತರ ನಮ್ಮನ್ನೆಲ್ಲ ಆಘಾಥಕ್ಕೀಡುಮಾಡಿರುವುದು ಡಾ ಎಂ ಎಂ ಕಲ್ಬುರ್ಗಿ ಕೊಲೆ. ಆದರೆ ಸಾಹಿತ್ಯ ಪ್ರೇಮಿಗಳು, ಪೋಷಕರೂ ಆಗಿರುವ ಡಾ.ಆಳ್ವರು ಕನಿಷ್ಠ ನೂರು ಜನರನ್ನು ಸೇರಿಸಿ ಕಲ್ಪುರ್ಗಿಯವರ ಹತ್ಯೆಂiÀiನ್ನು ಖಂಡಿಸಲು ಮುಂದಾಗದಿರುವುದು ಏನನ್ನೂ ಸೂಚಿಸುತ್ತದೆ. ಹಾಗೆ ಮಾಡಿದರೆ ವಿಶ್ವಹಿಂದು ಪರಿಷತ್ ನಾಯಕರನ್ನು ಎದುರುಹಾಕಿಕೊಂಡಂತಾಗುತ್ತದೆ ಎಂದು ಅವರು ಭಯಪಟ್ಟಿರಬಹುದೇ? 

ಈ ಬಾರಿಯ ಆಳ್ವಾಸ್ ನುಡಿಸಿರಿಯನ್ನು ಉದ್ಘಾಟನೆ ಮಾಡಬೇಕು ಎಂದು ಹಿರಿಯ ರೈತ ಚಳುವಳಿಗಾರ ಕಡಿದಾಳು ಶ್ಯಾಮಣ್ಣರನ್ನು ಮೋಹನ ಆಳ್ವರು ಆಮಂತ್ರಿಸಿದ್ದರಂತೆ. ಶ್ಯಾಮಣ್ಣ ಅದನ್ನು ನಿರಾಕರಿಸಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಹೊಸತನದ ಹುಡುಕಾಟದ ಬಗ್ಗೆ ಮಾತನಾಡಲು ಡಾ ಸಿ ಎಸ್ ದ್ವಾರಕನಾಥ್ ಅವರನ್ನು ಕೇಳಿದ್ದರು. ಅವರೂ ಕೂಡಾ ಆಳ್ವರ ವಿಹಿಂಪ, ಆರ್ ಎಸ್ ಎಸ್ ನಂಟಿನ ಕಾರಣ ನೀಡಿ ಆಹ್ವಾನವನ್ನು ನೇರವಾಗಿಯೇ ನಿರಾಕರಿಸಿದ್ದಾರೆ. 

ಕಳೆದ ಕೆಲವು ವರ್ಷಗಳಿಂದ ನುಡಿಸಿರಿಯ ಬಣ್ಣ ಬಯಲಾಗುತ್ತಿರುವುದರಿಂದ ಎಚ್ಚೆತ್ತಿರುವ ನಮ್ಮ ಬಹುತೇಕ ಸಾಹಿತಿಗಳು, ಚಿಂತಕರು ಡಾ.ಆಳ್ವ ಅವರ ಆಹ್ಹಾನವನ್ನು ತಿರಸ್ಕರಿಸಿ ದೂರ ಉಳಿದಿದ್ದಾರೆ. ಇದರಿಂದಾಗಿ ಬಲಪಂಥೀಯ ಗುಂಪು ಬೌದ್ದಿಕ ಅಪೌಷ್ಠಿಕತೆಯಿಂದ ನರಳುವಂತಾಗಿದೆ. ಈ ಎಲ್ಲ ಸಂಗತಿಗಳು ನಿಮ್ಮ ಗಮನಕ್ಕೆ ಬಾರದೆಯೂ ಇರಬಹುದು. ಇದಕ್ಕಾಗಿ ಈ ಪತ್ರ ಬರೆಯುತ್ತಿದ್ದೇವೆ. ಕೊನೆಗೂ ನಿರ್ಧಾರ ನಿಮ್ಮದು. ನಿಮ್ಮನ್ನು ಅಪಾರ ಗೌರವದಿಂದ ಕಾಣುತ್ತಿರುವ ನಮ್ಮ ಮನಸ್ಸಿಗೆ ನೀವು ನೋವುಂಟುಮಾಡುವ ನಿರ್ಧಾರ ಕೈಗೊಳ್ಳಲಾರಿರಿ ಎಂದು ನಂಬಿದ್ದೇವೆ.

ವಿಶ್ವಾಸದಿಂದ,

ಅಕ್ಷತಾ ಹುಂಚದಕಟ್ಟೆ, ಡಾ ಅರುಣ್ ಜೋಳದಕೂಡ್ಲಿಗಿ, ಬಿ ಶ್ರೀಪಾದ ಭಟ್, ಟಿ ಕೆ ದಯಾನಂದ, ನವೀನ್ ಸೂರಿಂಜೆ, ಮುನೀರ್ ಕಾಟಿಪಳ್ಳ, ಅನಂತ್ ನಾಯಕ್, ಮುದ್ದು ತೀರ್ಥಹಳ್ಳಿ, ಇರ್ಷಾದ್ ಉಪ್ಪಿನಂಗಡಿ, ಲಿಂಗರಾಜ್ ಪ್ರಜಾಸಮರ, ಪೀರ್ ಬಾಷಾ, ಕಾವ್ಯಾ ಅಚ್ಯುತ್, ಜೀವನ್ ರಾಜ್ ಕುತ್ತಾರ್, ಟಿ ಎಸ್ ಗೊರವರ, ಜಯಶಂಕರ್ ಅಲಗೂರು, ಅಬ್ಬಾಸ್ ಕಿಗ್ಗ, ಕೈದಾಳ ಕೃಷ್ಣಮೂರ್ತಿ, ಸೈಫ್ ಜಾನ್ಸೆ ಕೊಟ್ಟೂರು, ಬಿ ಶ್ರೀನಿವಾಸ, ಪಂಪರೆಡ್ಡಿ ಅರಳಹಳ್ಳಿ, ಅಭಿನಂದನ್ ಬಳ್ಳಾರಿ, ಬಸವರಾಜ್ ಪೂಜಾರ್.

ಅಕ್ಟೋ 16, 2015

ಮುಹಮ್ಮದರನ್ನು ಜನಪದವಾಗಿಸುವ ‘ಓದಿರಿ’

odiri
Dr Ashok K R
ಸ್ನಾತಕೋತ್ತರ ಪದವಿ ಓದುತ್ತಿದ್ದ ದಿನಗಳಲ್ಲಿ ಒಂದು ಸುತ್ತು ಭಗವದ್ಗೀತೆ ಓದಿ ಮುಗಿಸಿದ್ದೆ. ಕುರಾನ್ ಓದೋಣವೆನ್ನಿಸಿತ್ತು. ಇಂಗ್ಲೀಷಿನಲ್ಲಿ ಓದೋ ಕಷ್ಟವ್ಯಾಕೆ ಎಂದುಕೊಂಡು ಕನ್ನಡ ಕುರಾನ್ ಹುಡುಕಿದವನಿಗೆ ಪುಸ್ತಕ ಸಿಕ್ಕಿತ್ತಾದರೂ ಮುನ್ನೂರು ರುಪಾಯಿ ಜೇಬಿನಲ್ಲಿರಲಿಲ್ಲ! ಮುಂದೆ ಯಾವಾಗಲಾದರೂ ಓದಿದರಾಯಿತು ಎಂದುಕೊಂಡೆ. ಓದಲಿಲ್ಲ. ರಂಜಾನ್ ಮಾಸದಲ್ಲಿ ಕಲಬುರಗಿಯ ವಿದ್ಯಾರ್ಥಿಗಳು ಇಫ್ತಿಯಾರ್ ಕೂಟ ಏರ್ಪಡಿಸುತ್ತಿದ್ದರು. ಆ ಸಮಯದಲ್ಲಿ ಇಸ್ಲಾಮಿನ ಬಗೆಗಿನ ಪುಸ್ತಕಗಳನ್ನು ಉಚಿತವಾಗಿ ಹಂಚುತ್ತಿದ್ದರು. ಆಂಗ್ಲದಲ್ಲಿದ್ದ ಆ ಪುಸ್ತಕಗಳನ್ನು ಓದುವುದಕ್ಕೆ ಯಮಹಿಂಸೆಯಾಗುತ್ತಿತ್ತು. ಕಾರಣ ಎಲ್ಲೆಲ್ಲಿ Prophet ಎಂದು ಬರೆಯುತ್ತಾರೋ ಅಲ್ಲೆಲ್ಲಾ Peace be upon him ಅಥವಾ ಅದರ ಸಂಕ್ಷಿಪ್ತ ರೂಪವಾದ pbuh ಎಂಬ ಅಕ್ಷರಗಳು. ಸರಾಗ ಓದಿಗೆ ಅಡ್ಡಿಯುಂಟಾದರೆ ಪುಸ್ತಕ ಓದುವ ಆಸಕ್ತಿ ಉಳಿಯುವುದಾದರೂ ಹೇಗೆ? ಪ್ರವಾದಿ/ ಇಸ್ಲಾಮಿನ ಬಗ್ಗೆ ಇರುವ ಪುಸ್ತಕಗಳು/ಲೇಖನಗಳು ಒಂದೋ ಅತಿಯಾದ ಧಾರ್ಮಿಕ ಪ್ರಜ್ಞೆಯ ಭಾರದಿಂದ ನಲುಗಿರುತ್ತವೆ, ಇಲ್ಲ ಇಸ್ಲಾಮೋಫೋಬಿಯಾದ ಪ್ರಭಾವಕ್ಕೆ ಒಳಗಾದವರ ಸುಳ್ಳಿನ ಕಂತೆಯಾಗಿರುತ್ತದೆ. ಎರಡೂ ರೀತಿಯ ಬರಹಗಳು ಧಾರ್ಮಿಕ ನಂಬುಗೆಯಿರದ ದ್ವೇಷದ ಮನಸ್ಥಿತಿಯಿರದ ಓದುವ ಕುತೂಹಲವಷ್ಟೇ ಇರುವ ವ್ಯಕ್ತಿಗೆ ರುಚಿಸಲಾರದು. ಇಂತವರ ಓದಿಗೆ ಅನುಕೂಲಕರವಾಗಲೆಂದೇ ಬೋಳೂವಾರ ಮಹಮದ್ ಕುಂಞಿ ‘ಓದಿರಿ’ ಪುಸ್ತಕವನ್ನು ಬರೆದಿದ್ದಾರೆ. ಪೂರ್ಣವಾಗಲ್ಲದಿದ್ದರೂ ಪ್ರವಾದಿಯನ್ನು ರವಷ್ಟು ಮಟ್ಟಿಗಾದರೂ ಕನ್ನಡದ ಓದುಗರಿಗೆ ಪರಿಚಯಿಸುವ ಹತ್ತಿರವಾಗಿಸುವ ಕೆಲಸವನ್ನು ಓದಿರಿ ಮಾಡುತ್ತದೆ. ಯಾವ ಕಾಲದ ಯಾವ ಪ್ರವಾದಿಯಾದರೂ ಆಗ ಪ್ರಚಲಿತದಲ್ಲಿದ್ದ ಅಂಧಾಚರಣೆಗಳ ವಿರುದ್ಧ ಹೋರಾಡುತ್ತ ಹೊಸ ಧರ್ಮವನ್ನು ಹುಟ್ಟುಹಾಕುತ್ತಾರೆ. ಕಾಲ ಸವೆದಂತೆ ಆ ಹೊಸ ಧರ್ಮವೂ ಕೂಡ ಅಂಧಾಚರಣೆಯ ಕೂಪದಲ್ಲಿ ಬಿದ್ದು ಬಿಡುವುದು ಕೂಡ ಕಾಲ ತಿಳಿಸಿದ ಸತ್ಯವೇ!

ಪ್ರವಾದಿಯನ್ನು ಚಿತ್ರ ರೂಪದಲ್ಲಿ ಮೂಡಿಸುವುದು ಬಿಡಿ ಮಾತನಾಡುವುದು, ಚರ್ಚಿಸುವುದು, ಬರೆಯುವುದು ಕೂಡ ಅಪರಾಧವೆಂದು ನಂಬುವ ಅನೇಕ ಮುಸ್ಲಿಮರಿದ್ದಾರೆ. ಇಸ್ಲಾಮಿನ ವಿಚಾರಗಳನ್ನು ಪ್ರಶ್ನಿಸಿದವರ ಕೈಕತ್ತರಿಸುವವರು, ಕೊಲೆಗೈಯ್ಯುವವರು ಮತ್ತವರನ್ನು ಬೆಂಬಲಿಸುವವರ ಸಂಖೈಯೇನೂ ಕಡಿಮೆಯಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬೋಳುವಾರು ಮಹಮದ್ ಕುಂಞಿಯವರ ‘ಓದಿರಿ’ ಕಾದಂಬರಿ ಯಾವ ರೀತಿಯಾಗಿ ಪ್ರವಾದಿ ಮುಹಮ್ಮದರನ್ನು ಚಿತ್ರಿಸಿರಬಹುದು ಎನ್ನುವ ಕುತೂಹಲದಿಂದಲೇ ಪುಸ್ತಕವನ್ನು ಕೈಗೆತ್ತಿಕೊಂಡೆ. ಮೊದಲ ನೆಮ್ಮದಿ ಮುಹಮ್ಮದರ ಹೆಸರು ಬಂದಲ್ಲೆಲ್ಲ peace be upon him ಎಂಬ ಸಾಲುಗಳಿಲ್ಲದಿರುವುದು! ಇದು ಶುದ್ಧಾನುಶುದ್ಧ ಕಾದಂಬರಿಯೇ ಹೊರತು ಧಾರ್ಮಿಕ ಪ್ರಜ್ಞೆಯ ಭಾರದಿಂದ ರೂಪಿತವಾಗಿರುವ ಪುಸ್ತಕವಲ್ಲ. ಬೋಳುವಾರರ ಕಥೆಗಳು ಯಾವ ರೀತಿಯಿಂದ ಓದಿಸಿಕೊಳ್ಳುವ ಗುಣವನ್ನಳವಡಿಸಿಕೊಂಡಿವೆಯೋ ‘ಓದಿರಿ’ ಕೂಡ ಸರಾಗವಾಗಿ ಓದಿಸಿಕೊಳ್ಳುತ್ತದೆ ಅಲ್ಲೊಂದು ಇಲ್ಲೊಂದು ಅಡೆತಡೆಗಳನ್ನೊರತುಪಡಿಸಿ. ಅಂತರಂಗ, ಬಹಿರಂಗ ಮತ್ತು ಚದುರಂಗದಲ್ಲಿ ಪ್ರವಾದಿಯವರ ವಿವಿಧ ಕಾಲಘಟ್ಟದ ಕಥೆಗಳನ್ನು ಹೆಣೆಯಲಾಗಿದೆ. ಅಂತರಂಗ ಬಾಲಕ ಮುಹಮ್ಮದರಲ್ಲಿ ನಿಧನಿಧಾನಕ್ಕೆ ರೂಪುಗೊಳ್ಳುವ ಪ್ರವಾದಿತನದ ಬಗೆಗಿದ್ದರೆ ಬಹಿರಂಗ ಮುಹಮ್ಮದರು ಕೊನೆಯ ಪ್ರವಾದಿಯೆಂಬ ಘೋಷಣೆಯೊಂದಿಗೆ ಇಸ್ಲಾಂ ಧರ್ಮ ಸ್ಥಾಪನೆಯಾಗಿ ಆಗ ಅಸ್ತಿತ್ವದಲ್ಲಿದ್ದ ಇನ್ನಿತರೆ ಧರ್ಮಗಳು ಇಸ್ಲಾಂ ಅನ್ನು ನಾಶಪಡಿಸಬೇಕೆಂದು ನಿರ್ಧರಿಸುವ ಬಗ್ಗೆ. ಸುಳ್ಳು ಹೇಳದ, ಕೆಡಕು ಬಯಸದ, ಕೆಟ್ಟತನವನ್ನೇನೂ ಚಟವಾಗಿಸಿಕೊಳ್ಳದ ಮುಹಮ್ಮದ್ ಮಕ್ಕಾದ ಎಲ್ಲರಿಗೂ ಪ್ರೀತಿ ಪಾತ್ರ ಹುಡುಗ. ಬಡ್ಡಿ ವ್ಯವಹಾರದ ವಿರುದ್ಧ, ವ್ಯಭಿಚಾರದ ವಿರುದ್ಧ, ಮದ್ಯಸೇವನೆಯ ವಿರುದ್ಧದ ಆತನ ನಿಲುವುಗಳನ್ನು ಯಾರೂ ಪಾಲಿಸದಿದ್ದರೂ ಎಲ್ಲರಿಗೂ ಈ ಸತ್ಯಸಂಧನನ್ನು ಕಂಡರೆ ಗೌರವ – ಆದರ. ಈ ಗೌರವಾದರಗಳೆಲ್ಲವೂ ಮಣ್ಣುಪಾಲಾಗುವುದು ಬಹಿರಂಗದಲ್ಲಿ. ದೇವರ ದರ್ಶನವಾಗಿ ಹಿಂದಿನ ಧರ್ಮಗ್ರಂಥಗಳಲ್ಲಿ ಹೇಳಿರುವ ಕೊನೆಯ ಪ್ರವಾದಿ ನಾನೇ ಎಂಬ ಸಂಗತಿ ಮುಹಮ್ಮದರಿಗೆ ತಿಳಿದ ನಂತರ ಅಲ್ಲಿಯವರೆಗೆ ಪಾಲಿಸಿದ ಧರ್ಮಾಚರಣಗೆಗಳನ್ನು ತೊರೆದು ದಿನಕ್ಕೈದು ಬಾರಿ ನಮಾಜು ಮಾಡುವ ಮೂಲಕ ಅಲ್ಲಾಹು ಕೊಟ್ಟ ಸಂದೇಶಗಳನ್ನು ಜನರಿಗೆ ತಲುಪಿಸುವ ಮೂಲಕ ಹೊಸ ಧರ್ಮದ ಹುಟ್ಟಿಗೆ ಕಾರಣರಾಗುತ್ತಾರೆ. ಕೆಲವರು ಈ ಹೊಸ ಧರ್ಮವನ್ನು ಅಪ್ಪಿದರೆ, ಹಲವರು ಅಪ್ಪದಿದ್ದರೂ ಒಪ್ಪಿ ದೂರವುಳಿಯುತ್ತಾರೆ, ಬಹುತೇಕರು ಅಲ್ಲಿಯವರೆಗೆ ಗೌರವಿಸುತ್ತಿದ್ದ ಮುಹಮ್ಮದರನ್ನು ದ್ವೇಷಿಸಲಾರಂಭಿಸುತ್ತಾರೆ.

ಈ ದ್ವೇಷ, ಅನಾದಾರ, ಅಪಹಾಸ್ಯಗಳನ್ನೆಲ್ಲಾ ಎದುರಿಸಿ ಮುಹಮ್ಮದರು ಹೇಗೆ ಇಸ್ಲಾಂ ಧರ್ಮ ಹಬ್ಬಲು ಕಾರಣವಾದರು ಎನ್ನುವುದು ಚದುರಂಗದ ಭಾಗ. ಅಂತರಂಗ ಮತ್ತು ಬಹಿರಂಗದಲ್ಲಿ ಮುಗ್ಧರಂತೆ, ಕೆಲವು ಕಡೆ ದಡ್ಡರಂತೆಯೂ ಕಾಣಿಸಿಬಿಡುವ ಮುಹಮ್ಮದ್ ಚದುರಂಗದಲ್ಲಿ ಚಾಣಾಕ್ಷ್ಯ ಧಾರ್ಮಿಕ ನಾಯಕರಾಗಿ ರೂಪುಗೊಳ್ಳುತ್ತಾರೆ. ಈಗ ಮುಸ್ಲಿಮರ ಪವಿತ್ರ ಸ್ಥಳವೆನ್ನಿಸಿಕೊಳ್ಳುವ ಮಕ್ಕಾದಲ್ಲಿಯೇ ಪ್ರವಾದಿಗೆ ಮತ್ತವರ ಹೊಸ ಧರ್ಮದ ಹಿಂಬಾಲಕರಿಗೆ ರಕ್ಷಣೆಯಿರುವುದಿಲ್ಲ. ತಾತ್ಕಾಲಿಕವಾಗಿ ಮಕ್ಕಾ ತೊರೆದು ಮದೀನಾ ಸೇರುತ್ತಾರೆ. ಇಸ್ಲಾಂ ಧರ್ಮ ವ್ಯಾಪಕವಾಗಿಸಲು ಪ್ರವಾದಿ ವಿರೋಧಿಸುವವರ ಮೇಲಿನ ಯುದ್ಧಗಳಲ್ಲಿ ಗೆದ್ದಿದ್ದಕ್ಕಿಂತ ಆ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಅಸ್ತಿತ್ವದಲ್ಲಿದ್ದ ಗುಲಾಮಗಿರಿ ಪದ್ಧತಿ ಮತ್ತು ಶ್ರೇಷ್ಟ ಗೋತ್ರದ ವ್ಯಸನ ಪ್ರಮುಖ ಕಾರಣವಿರಬೇಕು. ಗುಲಾಮರಿಗೆ ಸ್ವಂತಿಕೆಯ ಧರ್ಮವಿರಲಿಲ್ಲ. ತಮ್ಮ ಒಡೆಯರ ಧರ್ಮವನ್ನೇ ಪಾಲಿಸಬೇಕಾದ ಅನಿವಾರ್ಯತೆ. ಗುಲಾಮಗಿರಿಯೇ ತಪ್ಪೆಂದು ಸಾರಿದ ಪ್ರವಾದಿಯ ಧರ್ಮ ಅವರನ್ನು ಸೆಳೆದಿದ್ದರೆ ಅಚ್ಚರಿಯಿಲ್ಲ. 

ಅಂತರಂಗ ಮತ್ತು ಬಹಿರಂಗದಲ್ಲಿ ಕಾಣುವ ಮುಹಮ್ಮದರ ವಿಮರ್ಶೆ ಚದುರಂಗದಲ್ಲಿ ನಿಧಾನಕ್ಕೆ ಕಣ್ಮರೆಯಾಗಿಬಿಟ್ಟಿದೆ. ಘೋಷಿತ ಪ್ರವಾದಿಯ ಬಗ್ಗೆ ವಿಮರ್ಶಾತ್ಮಕ ಅಂಶಗಳು ಕಡಿಮೆಯಿರಬೇಕು ಎಂದು ಲೇಖಕರು ಬಯಸಿರಬೇಕು ಅಥವಾ ಕಾದಂಬರಿಯ ಪಾತ್ರಗಳು ಬಯಸಿರಬೇಕು! ಪ್ರವಾದಿಯನ್ನು ಸಂಪೂರ್ಣ ಸರಿಯಾಗಿಸಿಬಿಡುವ ಪ್ರಯತ್ನದಲ್ಲಿ ಅಲ್ಲಿಯವರೆಗೂ ಇದ್ದ ಧರ್ಮದ ಜನರನ್ನು ಸಂಪೂರ್ಣ ತಪ್ಪೆಂದು ಬಿಂಬಿಸುವುದೂ ನಡೆದಿದೆ. ಒಂದೇ ಒಂದು ಕಡೆ ಇಸ್ಲಾಮಿಗೆ ಪರಿವರ್ತನೆಗೊಂಡ ಮಗನ ಮನೆಯನ್ನು ತೊರೆದು ಹೋಗುವ ವಯಸ್ಸಾದ ತಾಯಿ ನನ್ನ ಧರ್ಮ ನನಗೆ ಎಂದು ಸೆಡ್ಡುಹೊಡೆಯುವ ಧೈರ್ಯ ತೋರುತ್ತಾಳೆ. ಪ್ರವಾದಿ ಮುಹಮ್ಮದರ ಪ್ರಕಾರ ಕುರ್ ಆನ್ ಅಂತಿಮ ಸತ್ಯವಿರಬಹುದು. ಆದರೆ ಅಂತಿಮ ಸತ್ಯವೆಂಬುದಿದೆಯೇ? ‘ಪ್ರವಾದಿಯ ಅಲ್ಲಾ ದಿನಕ್ಕೆ ಐವತ್ತು ಸಲ ನಮಾಜು ಮಾಡಲು ಹೇಳಿದ್ದನಂತೆ. ಅಷ್ಟೊಂದು ಸಲ ನಮಾಜು ಮಾಡಿದರೆ ಉಳಿದ ಕೆಲಸಗಳಿಗೆ ಸಮಯವಿರುವುದಿಲ್ಲ ಎಂದು ಐದು ಸಲಕ್ಕೆ ಇಳಿಸಲು ಕೇಳಿಕೊಂಡರಂತೆ’ ಎಂಬಂತಹ ಹಾಸ್ಯಾತ್ಮಕ ವಿಮರ್ಶೆಗಳು ಬಹಿರಂಗದ ನಂತರದ ಭಾಗದಲ್ಲಿ ಕಾಣಿಸುವುದಿಲ್ಲ. ಪುಸ್ತಕದ ಕೊನೆಯಲ್ಲಿ ಮುಗಿಯಿತು ಎನ್ನುವುದರ ಬದಲಾಗಿ ‘ಸಶೇಷ’ ಎಂದು ಬೋಳುವಾರರು ಬರೆದಿರುವುದರಿಂದ ‘ನಿರೀಕ್ಷಿಸಬಹುದು’! 

ನಮಗೆ ಪರಿಚಿತವೇ ಇಲ್ಲದ ಪರಿಸರ ಸಂಸ್ಕೃತಿಯನ್ನು ಸರಾಗವಾಗಿ ಓದುವಂತೆ ಮಾಡಿದೆ ಬೋಳುವಾರರ ಲೇಖನಿ. ಪ್ರವಾದಿಯ ಕತೆ ಓದುತ್ತಿದ್ದರೆ ನಮ್ಮ ದೇಶದ ಬುದ್ಧ, ಬಸವಣ್ಣ ನೆನಪಾಗದೆ ಇರಲಾರರು. ಅಂಧಾಚರಣೆಯ ವಿರುದ್ಧದ ಹೋರಾಟದಲ್ಲಿ ಇವರೆಲ್ಲರೂ ಪ್ರಮುಖರೇ ಅಲ್ಲವೇ? ಕಾಲ ಸರಿದಂತೆಲ್ಲ ಇವರು ಪ್ರಾರಂಭಿಸಿದ ಧರ್ಮ ಯಾವ ರೂಪ ಪಡೆದಿದೆ? ಅಂಧಾಚರಣೆಗಳಿಂದ ಮುಕ್ತವಾಗಿದೆಯಾ ಎಂದು ನೋಡಿದರೆ ನಿರಾಶೆಯೇ ಆಗುತ್ತದೆ. ಬಹುದೈವತ್ವವನ್ನು, ಮನುಷ್ಯ ರೂಪಿತ ದೇವಾರಾಧನೆಯನ್ನು ವಿರೋಧಿಸಿದ ಪ್ರವಾದಿ ಮುಹಮ್ಮದ್ ಮಕ್ಕಾದ ಕಅಬಾವನ್ನು, ಮದೀನಾವನ್ನು ಪವಿತ್ರ ಸ್ಥಳ ಮಾಡಿಬಿಡುತ್ತಾರೆ. ಮನುಷ್ಯ ರೂಪಿತ ದೈವದ ಜಾಗವನ್ನು ಮನುಷ್ಯ ನಿರ್ಮಿತ ದುಬಾರಿ ಮಸೀದಿಗಳು ಆಕ್ರಮಿಸಿಕೊಳ್ಳುತ್ತವೆ. ತಮ್ಮ ದೇವ ಮೂರ್ತಿಯನ್ನು ಘಾಸಿಗೊಳಿಸಿದವರ ಮೇಲೆ ಕೋಪಗೊಳ್ಳುತ್ತಿದ್ದ ಕುರೈಶರು ಮುಹಮ್ಮದರನ್ನು ವಿರೋಧಿಸಿದವರಲ್ಲಿ ಪ್ರಮುಖರು. ರೂಪವಿಲ್ಲದ ದೇವರನ್ನು ಮುಹಮ್ಮದರು ಸ್ಥಾಪಿಸಿದರು. ಮಸೀದಿಯನ್ನು ಹಾನಿಗೊಳಿಸಿದವರ ಮೇಲೆ, ‘ಅಪವಿತ್ರ’ಗೊಳಿಸಿದವರ ಮೇಲೆ ಇವತ್ತಿನ ಮುಸ್ಲಿಮರಿಗೂ ಕೋಪವುಕ್ಕುತ್ತದೆ. ಅಲ್ಲಿಗೆ ಬದಲಾದದ್ದೇನು? ಎಂಬಂತಹ ಪ್ರಶ್ನೆಗಳನ್ನು ನಮ್ಮೊಳಗೆ ಮೂಡಿಸುವುದರಲ್ಲಿಯೇ ‘ಓದಿರಿ’ಯ ಯಶಸ್ಸಿದೆ. ಇನ್ನೇನು ಹೇಳುವುದಕ್ಕಿಲ್ಲ. ಒಮ್ಮೆ ಓದಿರಿ!
ಬೆಲೆ: 220/- ನವಕರ್ನಾಟಕದ ಮೂಲಕ ಆನ್ ಲೈನಿನಲ್ಲಿ 176 ರುಪಾಯಿಗೆ ತರಿಸಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ

ಅಕ್ಟೋ 14, 2015

ಯಾಕೆ ಕಾಡುತಿದೆ ಸುಮ್ಮನೆ ನನ್ನನು: ಪುಸ್ತಕ ಬಿಡುಗಡೆ.

ಅವಧಿ ವೆಬ್ ಪತ್ರಿಕೆಯಲ್ಲಿ ಪ್ರಕಟವಾದ ಸಂಧ್ಯಾ ರಾಣಿಯವರ ಆಯ್ದ ಬರಹಗಳ ಸಂಗ್ರಹ "ಯಾಕೆ ಕಾಡುತಿದೆ ಸುಮ್ಮನೆ ನನ್ನನು" ಇದೇ ಭಾನುವಾರ (18, ಅಕ್ಟೋಬರ್) ಬಿಡುಗಡೆಗೊಳ್ಳಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಹತ್ತು ಘಂಟೆಗೆ ಕಾರ್ಯಕ್ರಮ ನಡೆಯಲಿದೆ. ಪುಸ್ತಕ ಪಲ್ಲವ ಪ್ರಕಾಶನದಿಂದ ಪ್ರಕಟಿತವಾಗಿದೆ.

ಅಕ್ಟೋ 10, 2015

ನಾವೇಕೆ ಪ್ರಶಸ್ತಿಗಳನ್ನು ಹಿಂದಿರುಗಿಸಿದೆವು? - ಅಶೋಕ್ ವಾಜಪೇಯಿ

ಅಶೋಕ್ ವಾಜಪೇಯಿ.
ಮೂಲ ಲೇಖನ: ದಿ ಹಿಂದೂ.
ಕನ್ನಡಕ್ಕೆ: ಡಾ.ಅಶೋಕ್.ಕೆ.ಆರ್.
ಹಿಂದಿ, ಉರ್ದು ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಯುವ ನಾಲ್ಕು ತಲೆಮಾರಿಗೆ ಸೇರಿದ ನಾವು ನಾಲ್ವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪ್ರತಿಭಟನೆಯ ಸಂಕೇತವಾಗಿ ಹಿಂದಿರುಗಿಸಿದೆವು. ನಾವು ಒಂಟಿಯಾಗುಳಿದಿಲ್ಲ; ಇತರೆ ಭಾಷೆಗಳ ಅನೇಕರು, ಉಳಿದ ಕಲಾ ಪ್ರಕಾರದವರು ನಮ್ಮಷ್ಟೇ ಕ್ರುದ್ಧರಾಗಿದ್ದಾರೆ, ಕೋಪಗೊಂಡಿದ್ದಾರೆ ಮತ್ತು ಭೀತರಾಗಿದ್ದಾರೆ. ನಮ್ಮದೇ ಆದ ರಾಜಕೀಯ ದೃಷ್ಟಿಕೋನಗಳಿರುವುದು ಹೌದಾದರೂ ನಾವ್ಯಾರೂ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಆದರೆ ಭಾರತದ ರಾಜಕೀಯ ಸಾಗುತ್ತಿರುವ ಹಾದಿಯ ಬಗ್ಗೆ ನಮಗೆ ಚಿಂತೆಯಾಗುತ್ತಿದೆ. ವೈಚಾರಿಕ ಚಿಂತನೆ ಮತ್ತು ಮೌಲ್ಯಗಳು, ಪ್ರತಿಭಟನೆಗಳು, ಪರಸ್ಪರ ನಂಬುಗೆಗಳೆಲ್ಲದರ ಮೇಲೆ ದಿನದ ಲೆಕ್ಕದಲ್ಲಿ ಹಲ್ಲೆಯಾಗುತ್ತಿದೆ. ಎಲ್ಲಾ ರೀತಿಯ ಹಿಂಸಾಕೃತ್ಯಗಳು ಹೆಚ್ಚುತ್ತಿವೆ. ಅದಕ್ಕೆ ಧರ್ಮ ಮತ್ತು ಕೋಮುವಾದ, ಕೊಳ್ಳುಬಾಕತನ ಮತ್ತು ಜಾಗತೀಕರಣ, ಜಾತಿ ಮತ್ತು ಸಂಸ್ಕೃತಿ, ಸಾಮಾಜಿಕ ಮತ್ತು ವೈಯಕ್ತಿಕ – ಹೀಗೆ ಎಲ್ಲವೂ ಹಿಂಸೆಯ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ನಿಷೇಧ, ಅನುಮಾನ, ಭಾವನೆಗಳನ್ನು ಘಾಸಿಗೊಳಿಸುವ ಕೆಲಸವನ್ನು ಶಕ್ತಿ ಕೇಂದ್ರಗಳು ಕಾನೂನಿನ ಬಗ್ಗೆ ಕೊಂಚವೂ ಭಯವಿಲ್ಲದೆ ಮಾಡುತ್ತಿವೆ. ಪ್ರಜಾಪ್ರಭುತ್ವ ನೀಡುವ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರ್ಯ, ನಂಬುಗೆ, ವೈಯಕ್ತಿಕತೆಯನ್ನು ಕೀಳಾಗಿ ಕಂಡು ಅದರಲ್ಲಿ ವಿನಾಕಾರಣ ತಲೆತೂರಿಸುವವರ ಸಂಖೈ ಹೆಚ್ಚುತ್ತಿದೆ.

ಹೊಸ ರೀತಿಯ ರಾಜಕೀಯ ಬೂಟಾಟಿಕೆ ಕೇಂದ್ರದಲ್ಲಿ ನೆಲೆ ಕಾಣುತ್ತಿದೆ. ಸ್ವಾತಂತ್ರ್ಯ, ಜಾತ್ಯತೀತತೆ, ಸಹನೆಯ ಬಗ್ಗೆ ಸಂವಿಧಾನಾತ್ಮಕವಾಗಿ ಸರಿಯಾದ ಹೇಳಿಕೆಗಳನ್ನು ನೀಡುತ್ತ ಸಂವಿಧಾನ ಮತ್ತು ಕಾನೂನನ್ನು ಮುರಿದು ವರ್ತಿಸುವವರ ಬಗ್ಗೆ ಸಂಪೂರ್ಣ ಮೌನದಿಂದಿರುವ ಪ್ರವೃತ್ತಿ ಕಾಣುತ್ತಿದೆ. ಸ್ವತಂತ್ರವಾಗಿ ಜೀವಿಸುವುದಕ್ಕೆ ನಾಗರೀಕರನಿಗಿಂದು ಹಕ್ಕಿಲ್ಲ. ಅವರು ಅನುಮತಿ ಕೊಟ್ಟರೆ ನೀವು ಜೀವಿಸಬಹುದು, ಅವರು ಒಪ್ಪಿದರೆ ನೀವು ಸ್ವತಂತ್ರವಾಗಿರಬಹುದು.

ಇವೆಲ್ಲವನ್ನೂ ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯ ಹೆಸರಿನಲ್ಲಿ ಮಾಡಲಾಗುತ್ತಿದೆ. ಭಾರತೀಯ ಪರಂಪರೆಗೆ ಇದಕ್ಕಿಂತ ದೊಡ್ಡ ಹಾನಿ ಅಥವಾ ಅನುಮಾನ ಮತ್ತೊಂದಿರಲಾರದು. ಪ್ರಪಂಚದ ಅತಿ ಪುರಾತನ ಪರಂಪರೆಯಲ್ಲೊಂದಾಗಿರುವ ಇದು ನಾಗರೀಕ ಭಾರತಕ್ಕೆ ಸೇರಿದೆ. ಬಹುಶಃ ಪ್ರಪಂಚದ ಅತಿ ದೊಡ್ಡ ಪರಂಪರೆ ಇದು. ಭಾಷೆ, ಧರ್ಮ, ವೇಷಭೂಷಣ, ಆಚಾರ ವಿಚಾರ, ಆಹಾರ, ಕಲೆ ಇನ್ನೂ ಇತ್ಯಾದಿ ಇತ್ಯಾದಿಗಳೆಲ್ಲದರಲ್ಲೂ ಇಲ್ಲಿ ಬಹುತ್ವವಿದೆ. ಭಾರತದಲ್ಯಾವುದೂ ಏಕತ್ವವಾಗಿ ಉಳಿದಿಲ್ಲ. ಎಲ್ಲವೂ ಬಹುತ್ವವಾಗಿ ಪರಿವರ್ತನೆಯಾಗಿಬಿಡುತ್ತದೆ ಅಥವಾ ಬಹುತ್ವದ ಭಾಗವಾಗುತ್ತದೆ. ದೇವರಾಗಲಿ, ಭಾಷೆಯಾಗಲಿ, ತತ್ವಜ್ಞಾನವಾಗಲೀ, ಭಕ್ತಿ ಪೂಜೆಯಾಗಲೀ, ನಂಬಿಕೆ – ಮೌಲ್ಯಗಳಾಗಲೀ ಇಲ್ಲಿ ಏಕತ್ವವನ್ನು ಉಳಿಸಿಕೊಂಡಿಲ್ಲ, ಕಾಲ ಸರಿದಂತೆ ಬಹುತ್ವವನ್ನು ಆಲಂಗಿಸಿಕೊಂಡಿವೆ. ಈ ಬಹುತ್ವವನ್ನು ವಿರೋಧಿಸುವ, ಅದನ್ನು ಏಕವಾಗಿ ಪರಿವರ್ತಿಸಿದರೆ  ಸಮಾಜವನ್ನು ನಿಯಂತ್ರಿಸುವುದು ಸುಲಭ ಎಂದು ನಂಬುವ ಶಕ್ತಿಗಳು ಯಾವಾಗಲೂ ನಮ್ಮ ನಡುವೆ ಇದ್ದೇ ಇವೆ. ಚರ್ಚೆ, ಅಸಮ್ಮತಿ, ವಾದ ವಿವಾದ, ಪರಿಶೀಲನೆ, ಹೊಸ ಅನ್ವೇಷಣೆಯಲ್ಲವೂ ನಮ್ಮ ಪರಂಪರೆಯ ಭಾಗ. ಭಾರತೀಯರು ಚರ್ಚೆಗೆ, ಅಸಮ್ಮತಿಗೆ, ಅಸಹನೆಗೆ ಯಾವತ್ತೂ ಭಯಪಟ್ಟವರಲ್ಲ.

ನೈತಿಕತೆಯನ್ನು ಮೀರಿದಾಗ ದೇವರನ್ನೂ ಪ್ರಶ್ನಿಸಿ ಶಿಕ್ಷಿಸಲಾಗಿದೆ. ಸ್ವಾತಂತ್ರೋತ್ತರ ಭಾರತದಲ್ಲೂ ಭಾರತೀಯ ಸಾಹಿತ್ಯ ಹೆಚ್ಚಾಗಿ ಪ್ರಭುತ್ವದ ವಿರುದ್ಧವೇ ನಿಂತಿದೆ. ಎಮರ್ಜೆನ್ಸಿ, ಸಿಖ್ ದಂಗೆ, ಬಾಬರಿ ಮಸೀದಿಯ ಧ್ವಂಸ, ಪಂಜಾಬ್ ಭಯೋತ್ಪಾದನೆ, ನಂದಿಗ್ರಾಮ ಹಿಂಸಾಚಾರ, ಆದಿವಾಸಿ ಪ್ರದೇಶಗಳಲ್ಲಿ ನಕ್ಸಲ್ ಮತ್ತು ಸರಕಾರೀ ಹಿಂಸಾಚಾರ, ಗುಜರಾತ್ ಹಿಂಸಾಚಾರಗಳೆಲ್ಲವೂ ಬರಹಗಾರರನ್ನು, ಕಲಾವಿದರನ್ನು ಪ್ರಭುತ್ವದ ವಿರುದ್ಧ ಪ್ರತಿಭಟನೆಗೆ ಇಳಿಯುವಂತೆ ಮಾಡಿದೆ; ಸಾಮಾಜಿಕ ಚೌಕಟ್ಟಿಗೆ, ಕೋಮುಸಾಮರಸ್ಯಕ್ಕೆ, ಕ್ರಿಯಾಶೀಲ ಬದುಕಿಗೆ ಆಗಿರುವ ಹಾನಿಯನ್ನು ಖಂಡಿಸುವಂತೆ ಮಾಡಿದೆ. ಪ್ರತಿಭಟನೆಗಿಳಿದು ಖಂಡಿಸದಿರುವುದು ಕರ್ತವ್ಯವನ್ನು ಮರೆತಂತೆ. ಒಳ್ಳೆಯದಕ್ಕೋ ಕೆಟ್ಟದಕ್ಕೋ ಈ ಕ್ರಿಯಾಶೀಲ ಸಮುದಾಯವನ್ನು ಸಮಾಜದ ಆತ್ಮಸಾಕ್ಷಿಯನ್ನು ಕಾಪಿಡುವರೆಂದು ನಂಬಿದ್ದೇವೆ. ನಮ್ಮಲ್ಲಿ ಕೆಲವರು ಶಕ್ತಿಕೇಂದ್ರ ಎದುರಿಗೆ ಸತ್ಯವನ್ನೇ ನುಡಿಯುವ ಉನ್ನತ ಪರಂಪರೆಗೆ ಅಂಟಿಕೊಂಡಿದ್ದೇವೆ. ಮತ್ತು ಆ ಕಾರಣಕ್ಕಾಗಿಯೇ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪ್ರತಿಭಟನೆಯ ಸಂಕೇತವಾಗಿ ಹಿಂದಿರುಗಿಸುತ್ತಿದ್ದೇವೆ. ಸ್ವಾತಂತ್ರ್ಯಹರಣ ಹೆಚ್ಚುತ್ತಿದೆ ಎಂದು ಸಾರ್ವಜನಿಕರ ಗಮನಕ್ಕೆ ತರುವ ಸಲುವಾಗಿ ಈ ಪ್ರತಿಭಟನೆ; ಬರಹಗಾರರಾದ, ಕಲಾವಿದರಾದ, ಪ್ರಗತಿಪರರಾದ ನಾವು ಇದರ ಬಗ್ಗೆ ಚಿಂತಿತರಾಗಿದ್ದೇವೆ.

ಸೆಪ್ಟೆಂ 30, 2015

‘ವಿವೇಕ'ವಿಲ್ಲದ ಪರಿಸರವಾದದಲ್ಲಿ ಮನುಷ್ಯನ ಸ್ಥಾನವೆಲ್ಲಿ?

ts vivekananda
Dr Ashok K R
ಕಳೆದ ಏಪ್ರಿಲ್ಲಿನಲ್ಲಿ ಬಿಳಿಗಿರಿರಂಗನಬೆಟ್ಟಕ್ಕೆ ಹೋಗಿದ್ದೆ. ವಾಪಸ್ಸಾಗುವಾಗ ರಸ್ತೆ ಬದಿಯಲ್ಲಿ ಸ್ಥಳೀಯರೊಬ್ಬರು ಚಕೋತ್ತಾ ಹಣ್ಣು ಮಾರುತ್ತ ಕುಳಿತಿದ್ದರು. ಎರಡು ಚಕೋತ್ತಾ ಹಣ್ಣು ಖರೀದಿಸಿ ಕೆ.ಗುಡಿಯಲ್ಲಿನ ಸಫಾರಿಯ ಬಗ್ಗೆ ವಿಚಾರಿಸುತ್ತಿದ್ದೆ. ಯಾವ್ಯಾವ ಟೈಮಲ್ಲಿ ಸಫಾರಿ ಇರುತ್ತೆ ಎಂದು ಕೇಳುತ್ತಿದ್ದೆ. ಹುಲಿ ಏನಾದ್ರೂ ಸಿಗುತ್ತಾ ಸಫಾರಿಯಲ್ಲಿ ಎಂದು ಕೇಳಿದಾಗ ‘ಈಗ ಬೇಸಿಗೆ ಅಲ್ವಾ ಸರ್. ನೀರು ಕಡಿಮೆ ಇರುತ್ತೆ. ನೀರಿರೋ ಜಾಗದಲ್ಲಿ ಉಪ್ಪು ಸವರಿರುತ್ತಾರೆ. ಉಪ್ಪು ಹುಡಿಕ್ಕೊಂಡು ಬಂದೇ ಬರ್ತಾವೆ’ ಎಂದವನು ಹೇಳಿದ. ಇದು ನಮ್ಮ ಎಕೋ ಟೂರಿಸಮ್ ಹೆಸರಿನ ಪರಿಸರವಾದದ ಪರಿ. ಹೆಚ್ಚಿನ ದುಡ್ಡು ಕೊಟ್ಟವರಿಗಷ್ಟೇ ಸಫಾರಿ ಸೌಲಭ್ಯ. ಸಫಾರಿಗೆ ಬಂದವರು ನಿರಾಶರಾಗಬಾರದು ಎಂಬ ಕಾರಣಕ್ಕೆ ಕೃತಕವಾಗಿ ಪ್ರಾಣಿಗಳನ್ನು ನೀರಿರುವ ಜಾಗಕ್ಕೆ ಕರೆಸುವ ವಿಧಾನ ಪರಿಸರಕ್ಕೆ ಪೂರಕವಾಗಿರಲು ಹೇಗೆ ಸಾಧ್ಯ? ಸರ್ಕಸ್ಸಿನಲ್ಲೂ ಪ್ರಾಣಿಗಳನ್ನು ಮನುಷ್ಯನ ಮನೋರಂಜನೆಗಾಗಿ ಉಪಯೋಗಿಸುತ್ತಾರೆ, ಇಲ್ಲೂ ಅದೇ ನಡೆಯುತ್ತೆ; ಅಲ್ಲದು ಹಿಂಸೆ ಎನ್ನಿಸಿಕೊಂಡರೆ ಇಲ್ಲಿ ಪರಿಸರ ಪ್ರವಾಸೋದ್ಯಮದ ಭಾಗವಾಗಿ ನಡೆಯುತ್ತದೆ. ಸಫಾರಿ ಹೋಗುವ ನಿರ್ಧಾರವನ್ನೇ ತ್ಯಜಿಸಿಬಿಟ್ಟೆ. ಈ ಹುಲಿ ಸಂರಕ್ಷಣೆಯ ಹೆಸರಿನಲ್ಲಿ ನಡೆಯುವ ಪರಿಸರವಾದ ಎಲ್ಲೋ ಒಂದು ಕಡೆ ತಪ್ಪಾಗಿದೆಯಾ ಎನ್ನುವ ಅನುಮಾನ ಅವತ್ತು ಬಂತಾದರೂ ಅದರ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಯೋಚನೆಯೇನು ಬರಲಿಲ್ಲ. ಅವತ್ತು ನನ್ನಲ್ಲಿ ಮೊಳಕೆಯೊಡೆದ ಯೋಚನೆಗಳು ಬೆಳೆದು ಆ ಅಭಿಪ್ರಾಯಗಳಿಗೊಂದು ರೂಪ ದಕ್ಕಲಾರಂಭಿಸಿರುವುದು ಡಾ.ಟಿ.ಎಸ್.ವಿವೇಕಾನಂದರ ಬರಹಗಳ ಸಂಗ್ರಹಗಳಾದ ‘ಭೂಮಿಗೀತೆ’ ಮತ್ತು ‘ಜೀವಪಲ್ಲಟಗಳ ಆತ್ಮಕಥ’ ಕೃತಿಗಳನ್ನು ಓದಿದಾಗ. 

2004 – 2005ರಲ್ಲಿ ಪತ್ರಿಕೆಗಳಿಗೆ ಬರೆದ ಲೇಖನಗಳು ಪುಸ್ತಕ ರೂಪದಲ್ಲಿ ಹೊರಬಂದಿದೆ. ಅವತ್ತಿನಷ್ಟೇ ಇವತ್ತಿಗೂ ಪ್ರಸ್ತುತವಾಗಿಸುವ ಅಂಶಗಳಿವೆ. ಎರಡೂ ಪುಸ್ತಕಗಳು ಪರಿಸರದ ಬಗ್ಗೆ ಮಾತನಾಡುತ್ತವೆ. ಮಾತನಾಡುತ್ತವೆ ಅನ್ನುವುದಕ್ಕಿಂತ ಅರಿವು ಮೂಡಿಸುತ್ತವೆ ಎನ್ನುವುದು ಸರಿ. ಪರಿಸರವೆಂದರೆ ಗಿಡ ಮರ ಪಕ್ಷಿ ಪ್ರಾಣಿ ಕಾಡು ನದಿ. ಅವುಗಳು ಕೆಡದಂತೆ, ಅಳಿದುಹೋಗದಂತೆ ಮಾಡುವುದೇ ಪರಿಸರವಾದ. ಒಂದು ಗಿಡ ನೆಟ್ಟು, ಹುಲಿ - ಆನೆ ಸಂರಕ್ಷಣೆಗೆ ಕರೆ ನೀಡಿ, ಕೆರೆ – ನದಿ ನೀರನ್ನು ಶುದ್ಧ ಮಾಡಲು ಕೋಟ್ಯಾಂತರ ಖರ್ಚು ಮಾಡುವುದು ನಾವು ದಿನನಿತ್ಯ ನೋಡುವ ಪರಿಸರವಾದ. ಇದ್ಯಾವುದೂ ಪರಿಸರವಾದವೇ ಅಲ್ಲ ಎಂದು ಸಾರಾಸಗಾಟಾಗಿ ವಿವೇಕಾನಂದರು ಸಿಟ್ಟಿನಿಂದ, ವ್ಯಂಗ್ಯದಿಂದ ಹೇಳಿದಾಗ ‘ಈ ಮನುಷ್ಯನಿಗೇನೂ ತಲೆ ಕೆಟ್ಟಿದೆಯಾ? ಇದು ಪರಿಸರವಾದವಲ್ಲದೇ ಹೋದರೆ ಇನ್ಯಾವುದು ಪರಿಸರವಾದ?’ ಎಂಬ ಪ್ರಶ್ನೆ ಮೂಡದೇ ಇರುವುದಿಲ್ಲ. ಇವೆಲ್ಲವೂ ಯಾಕೆ ಪರಿಸರವಾದವಲ್ಲ ಎಂದವರು ವಿವರಿಸುತ್ತ ಸಾಗಿದಾಗ ಹೌದಲ್ವಾ? ನಮಗ್ಯಾಕೆ ಈ ಯೋಚನೆಯೇ ಬಂದಿರಲಿಲ್ಲ ಎಂದನ್ನಿಸಲಾರಂಭಿಸುತ್ತದೆ. ನಮ್ಮ ಎಲ್ಲಾ ಪರಿಸರವಾದದ ಹೋರಾಟಗಳಲ್ಲೇ ಮನುಷ್ಯನೇ ಕಾಣೆಯಾಗಿದ್ದಾನೆ ಎಂಬ ಸಂಗತಿ ಅರಿವಿಗೆ ಬರಲಾರಂಭಿಸುತ್ತದೆ. ಮನುಷ್ಯ ಕೂಡ ಪ್ರಕೃತಿಯ ಒಂದು ಭಾಗವೇ ಹೌದಲ್ಲವೇ? ಮನುಷ್ಯನನ್ನು ಮರೆತು ಯಾವ ಪರಿಸರದ ಬಗ್ಗೆ ನಾವೆಲ್ಲರೂ ಮಾತನಾಡುತ್ತಿದ್ದೇವೆ? ಹುಲಿ ಸಂರಕ್ಷಣೆಯ ಹೆಸರಿನಲ್ಲಿ ಆದಿವಾಸಿಗಳನ್ನು ‘ಅವರು ಪರಿಸರಕ್ಕೆ ಹಾನಿಕಾರಕ’ ಎಂಬ ನೆಪವೊಡ್ಡಿ ಕಾಡಿನಿಂದ ಹೊರಗಟ್ಟುವ ನಗರ ಕೇಂದ್ರಿತ ಸಮಾಜ ಹೆಚ್ಚು ಹಣ ನೀಡಿದವರಿಗೆ ಕಾಡಿಗೆ ಹೋಗಿ ‘ಮಜಾ’ ಮಾಡುವ ಅವಕಾಶ ನೀಡುವುದು ಯಾವ ರೀತಿಯಿಂದ ಪರಿಸರಕ್ಕೆ ಪೂರಕ?


bhoomigeethe
ಈ ರೀತಿಯ ಪ್ರಶ್ನೆಗಳನ್ನು, ಪರಿಸರವಾದದ ಗೊಂದಲಗಳನ್ನು ಪದಪುಂಜಗಳಿಂದ ಅಲಂಕರಿಸಿ ಓದುಗನನ್ನು ಭಾವನಾತ್ಮಕವಾಗಿ ಸೆಳೆಯುವ ಪ್ರಯತ್ನವಿಲ್ಲದಿರುವುದೇ ಈ ಪುಸ್ತಕಗಳ ಹಿರಿಮೆ. ಇಲ್ಲಿ ಕರಾರುವಾಕ್ ಅಂಕಿ ಸಂಖೈಗಳಿವೆ. “ಭಾರತದಲ್ಲಿ ಸಮಾಜ ವಾದ ಅಥವಾ ‘ಸಮತಾ ವಾದಗಳು’ ಬೇಕಾದರೆ ‘ವಾದ’ಗಳಾಗಿ ನಿಲ್ಲಬಹುದೇ ವಿನಯ ‘ಪರಿಸರ’ ಎಂದೂ ‘ವಾದ’ವಾಗಲು ಸಾಧ್ಯವಿಲ್ಲ. ಯಾವುದು ಆಚರಣೆ ಬರದಿದ್ದರೂ ಚಿಂತೆ ಇಲ್ಲವೋ ಅದು ‘ವಾದ’ ಆಗುತ್ತದೆ. ಇಂತಲ್ಲಿ ಪರಿಸರ ‘ವಾದ’ ಆಗಲು ಹೇಗೆ ಸಾಧ್ಯ? ಅದು ಆಚರಣೆಯಾಗಬೇಕಿತ್ತು” ಎಂದು ನೇರವಾಗಿ ಹೇಳುತ್ತಾರೆ (ಪರಿಸರವಾದ ಎಂಬ ಸಾಂಸ್ಕೃತಿಕ ರಾಜಕೀಯ). ಸಾಮಾನ್ಯವಾಗಿ ಪರಿಸರದ ವಿಷಯದ ಬಗ್ಗೆ ಚರ್ಚೆ ಮಾತು ಬರಹಗಳು ಸಾಗಿದಾಗ ಅಲ್ಲಿ ಜಾತಿ ಪ್ರವೇಶ ಪಡೆಯುವುದು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ವರ್ಗ ಬೇಧದ ಚರ್ಚೆಗಳೂ ಇರುವುದಿಲ್ಲ. ಇವೆರಡೂ ಪುಸ್ತಕಗಳು ಈ ಆಧುನಿಕ ಪರಿಸರವಾದ ಹೇಗೆ ಮೇಲ್ವರ್ಗದವರು - ಮೇಲ್ಜಾತಿಯವರು ಆದಿವಾಸಿಗಳ ಬದುಕುವ ನೆಲೆಯನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ವಿವರಿಸುತ್ತದೆ. ಅಡುಗೆ ಮಾಡಲು ಸೌದೆ ಪುಳ್ಳೆ ಆರಿಸಿಕೊಳ್ಳುವ ಆದಿವಾಸಿ ಮಹಿಳೆ ಹೇಗೆ ತಾನೇ ಪರಿಸರಕ್ಕೆ ಅಪಾಯಕಾರಿ? ಈ ಆದಿವಾಸಿಗಳನ್ಯಾಕೆ ಕಾಡಿನಿಂದ ತೆರವು ಮಾಡಿಸಬೇಕು? ಈ ಆದಿವಾಸಿಗಳ ಮನೆಗಳಲ್ಲಿ ಬೆಲೆಬಾಳುವ ಮರಗಳ ಕುರ್ಚಿ ಮೇಜುಗಳಿವೆಯಾ? ಅವರ ಮನೆಯಲ್ಲಿ ಹುಲಿಯ ಚರ್ಮ, ಜಿಂಕೆಯ ಕೊಂಬುಗಳಿವೆಯಾ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಆದಿವಾಸಿಗಳು ಮರಮಟ್ಟು ಕಡಿಯುತ್ತಿದ್ದರೂ ಅವರಿಗಾಗಿ ಕಡಿಯುವುದಿಲ್ಲ, ನಗರವಾಸಿ ಮೇಲ್ಜಾತಿ – ಮೇಲ್ವರ್ಗದ ಜನರ ಶೋಕಿಗಾಗಿ ಪುಡಿಗಾಸಿಗಾಗಿ ಕಡಿದಿರುತ್ತಾರೆ ಎಂಬಂತಹ ವಿಷಯಗಳ ಸತ್ಯಾಸತ್ಯತೆಯನ್ನು ಅರಿಯಲು ಸುಮ್ಮನೆ ನಮ್ಮ ಮನೆಯ ಬಾಗಿಲು – ಕಿಟಕಿ – ಕುರ್ಚಿ – ಮೇಜುಗಳ ಮೇಲೆ ಕಣ್ಣಾಡಿಸಿದರೆ ಸಾಕು. 

“ದೀಪದ ಕೆಳಗಿನ ಕತ್ತಲಿನಂತೆ ಸಂಪನ್ಮೂಲ ಪ್ರದೇಶದ ಜನ ಅಲ್ಲಿನ ಸಂಪನ್ಮೂಲಗಳಿಂದ ಹೊರತಳ್ಳಲ್ಪಡುತ್ತಾರೆ. ಯಾವುದೋ ಹೆಸರಿನಲ್ಲಿ, ಮತ್ಯಾರಿಗೋ ಇಲ್ಲಿನ ಸಂಪನ್ಮೂಲ ಬಿಸಾಕು ಬೆಲೆಗೆ ಮಾರಾಟವಾಗುತ್ತದೆ. ಸ್ಥಳೀಯರು ಪರಕೀಯರಾಗಿ, ಪರಕೀಯರು ಸ್ಥಳೀಯರನ್ನು ಆಳುವಂತಾಗುತ್ತದೆ” (ಸಗಣಿ ಮಾರಿದರೆ ಪರಿಸರ ವಿರೋಧಿ, ಸಾಫ್ಟ್ ವೇರ್ ಮಾರಿದರೆ) ಜೀವಪಲ್ಲಟಗಳ ಆತ್ಮಕಥನದಲ್ಲಿ ಪರಿಸರದ ಜೊತೆಜೊತೆಗೆ ಕರೆಂಟಿನ ಖಾಸಗೀಕರಣ, ಸಗಣಿ ಮಾರಾಟದ ಹಿಂದಿನ ಜಾತಿ ರಾಜಕೀಯ, ಕಚರನೇ ಸಿಕ್ಸರ್ ಹೊಡೆದಿದ್ದರೆ ‘ಲಗಾನ್’ಗೆ ಏನಾಗುತ್ತಿತ್ತು? ಎನ್ನುವಂತಹ ಸಾಂಸ್ಕೃತಿಕ ಪ್ರಶ್ನೆ, ಇಂಗ್ಲೀಷ್ ಕಲಿಕೆಯ ಬಗ್ಗೆ ಸುಳ್ಳನ್ನಾಡುವ ‘ಕನ್ನಡ’ ಕಂದಮ್ಮಗಳ ಬಗ್ಗೆಯೆಲ್ಲ ವಸ್ತುನಿಷ್ಟವಾಗಿ ಬರೆಯಲಾಗಿದೆ. “1983 – 1992ರವರೆಗೆ ಜಾರಿಯಲ್ಲಿದ್ದ ಸಾಮಾಜಿಕ ಅರಣ್ಯ ಯೋಜನೆಯಡಿಯಲ್ಲಿ ಇವರು ಬೆಳೆಸಿದ ನೆಡುತೋಪು 417 ಚ.ಕಿಮೀ, ಇದಕ್ಕೆ ವಿಶ್ವಬ್ಯಾಂಕ್ ಮತ್ತು ಓಡಿಎ ಇಂದ ಪಡೆದ ಸಾಲ ರೂ 93 ಕೋಟಿ. ಸಾರ್ವಜನಿಕರಿಗೆ ಹಂಚಿದ ಸಸಿಗಳ ಮೊತ್ತ 50.75 ಕೋಟಿ. ಇದರಲ್ಲಿ 75 ಲಕ್ಷ ಸಸಿಗಳನ್ನು ಬಿಟ್ಟು ಬಿಟ್ಟರೂ…., ಹೆಕ್ಟೇರಿಗೆ 100 ಸಸಿಗಳಂತೆ ಈ ರಾಜ್ಯದ ನೆಲಕ್ಕೆ ನಾಟಿ ಮಾಡಿದ್ದರೂ ಕನಿಷ್ಟ 50 ಲಕ್ಷ ಚ.ಕಿಮೀ ಹೊಸ ಕಾಡು ಸೃಷ್ಟಿಯಾಗಿರಬೇಕಿತ್ತು. ಈ ಯೋಜನೆ ಆರಂಭವಾದ ಅವಧಿಯಿಂದ ಇಂದಿನವರೆಗೆ 20 ವರ್ಷಗಳು ಮುಗಿದಿರುವುದರಿಂದ ಬಹುದೊಡ್ಡ ಮರಗಳ ಕಾಡು ಕಣ್ಣಿಗೆ ಕಾಣಬೇಕಿತ್ತು” (ಅಲ್ಲಿ ಹುಲಿಗಳು ಕಾಣೆಯಾದರೆ ಇಲ್ಲಿ ಕಾಡುಗಳೇ ಕಾಣೆ) ಎನ್ನುವಂತಹ ವಿವರಗಳು ಹೇಗೆ ನಮ್ಮ ಪರಿಸರಪರ ಯೋಜನೆಗಳು ದುಡ್ಡು ಮಾಡುವ ದಂಧೆಗಳಾಗಿವೆ ಎನ್ನುವುದನ್ನು ತಿಳಿಸಿಕೊಡುತ್ತದೆ. ನೀರು ಕೂಡ ವ್ಯವಹಾರವಾಗಿಬಿಡುತ್ತಿರುವ ಅಪಾಯದ ಬಗ್ಗೆ 2004ರಲ್ಲಿ ಬರೆದಿದ್ದಾರೆ ವಿವೇಕಾನಂದ. ಇಂದು ಆ ವಾಸ್ತವವನ್ನು ನಾವು ನೋಡುತ್ತಿದ್ದೇವೆ, ಅನುಭವಿಸುತ್ತಿದ್ದೇವೆ. ಹಣವಿಲ್ಲದ ಕಾರಣಕ್ಕೆ ನೀರೂ ದಕ್ಕದ ಪರಿಸ್ಥಿತಿ ಕೊನೆಗೆ ಕಾಡುವುದು ಮೇಲ್ಜಾತಿ – ಮೇಲ್ವರ್ಗದವರಿಗಲ್ಲ ಎಂಬ ವಾಸ್ತವ ಪರಿಸರವಾದಕ್ಕೂ ಮತ್ತು ನಮ್ಮ ಜಾತಿ ವ್ಯವಸ್ಥೆಗೂ ಇರುವ ಸಂಬಂಧವನ್ನು ಅನಾವರಣಗೊಳಿಸುತ್ತದೆ. 

ನೀರು ಕಾಡು ಪರಿಸರದ ಬಗೆಗಿನ ಮಾತುಗಳೆಲ್ಲವೂ ಸರಿಯೇ, ಆದರಾ ಯೋಚನೆ – ಯೋಜನೆಗಳು ಮನುಷ್ಯನನ್ನು ಹೊರತುಪಡಿಸಿದ್ದಾದರೆ ಅದು ಶೋಷಿತ ವರ್ಗಕ್ಕೂ ಅಪಾಯಕಾರಿ, ಪರಿಸರಕ್ಕೂ ಅಪಾಯಕಾರಿ. ಈ ಎರಡೂ ಪುಸ್ತಕಗಳನ್ನು ಓದಿ ಮುಗಿಸುವ ಸಂದರ್ಭದಲ್ಲಿ ಎರಡು ವರದಿಗಳನ್ನು ಪತ್ರಿಕೆಗಳಲ್ಲಿ ಓದಿದೆ. ಒಂದು ಮಂಗಳ ಗ್ರಹದಲ್ಲಿ ನೀರಿರುವ ಅಂಶ ಪತ್ತೆಯಾಗಿದೆಯೆಂಬ ವರದಿ. ಇರುವ ಭೂಮಿಯ ನೀರನ್ನೇ ನೆಟ್ಟಗೆ ಉಪಯೋಗಿಸಲಾಗದೆ, ಖಾಸಗಿಯವರ ಕೈಗೆ ಒಪ್ಪಿಸಿ ಕುಲಗೆಡಿಸಿರುವ ನಮ್ಮ ಮುಂದಿನ ಯೋಜನೆ ಮಂಗಳದ ಅಂಗಳದಲ್ಲಿರುವ ನೀರನ್ನು ಖಾಸಗೀಕರಣಗೊಳಿಸುವುದೇ? ಇನ್ನೊಂದು ವರದಿ ದೇಶದ ರಾಷ್ಟ್ರೀಯ ಹೆದ್ದಾರಿಗಳ ಮಧ್ಯದಲ್ಲಿ, ಇಕ್ಕೆಲದಲ್ಲಿ ಕೋಟ್ಯಾಂತರ ಮರ ನೆಡುವ ‘ಪರಿಸರವಾದಿ’ ಯೋಜನೆ. ಊರಗಲದ ರಸ್ತೆಗಳನ್ನು ಕಟ್ಟಿದ್ದೇ ನಗರವಾಸಿಗಳ ಅನುಕೂಲಕ್ಕಾಗಿ, ಆ ನಗರವಾಸಿಗಳು ಓಡಾಡಲು ತಂಪಾಗಿರಲೆಂದು ಮರಗಳನ್ನು ಬೆಳೆಸಲು ಯೋಚಿಸುವ ಸರಕಾರ, ಎಂತಹ ಅದ್ಭುತ ಯೋಜನೆ ಎಂದು ಹೊಗಳುವ ನಾವು….. ಕೊನೆಗೆ ಆ ಕೋಟ್ಯಾಂತರ ಮರಗಳಲ್ಲಿ ಉಳಿಯುವ ಮರಗಳೆಷ್ಟು? ಕೋಟ್ಯಾಂತರ ರುಪಾಯಿಯ ವ್ಯವಹಾರದಿಂದ ಲಾಭವ್ಯಾರಿಗೆ? ಈ ಎರಡೂ ಪುಸ್ತಕಗಳನ್ನು ಓದದಿದ್ದರೆ ಪರಿಸರಕ್ಕೇ ಲಾಭವಲ್ಲವೇ ಎಂದು ಸರಳವಾಗಿ ಉತ್ತರಿಸಿಬಿಡುತ್ತಿದ್ದೆ. ಈಗ ಸಾಧ್ಯವಾಗುವುದಿಲ್ಲ; ಪುಸ್ತಕ ನೀಡಿದ ಹೊಸ ಹೊಸ ಹೊಳಹುಗಳು ಪರಿಸರ ಪ್ರಜ್ಞೆ ಎಂಬುದನ್ನು ಮತ್ತೆ ಅ ಆ ಇ ಈ ಯಿಂದ ಕಲಿಯುವಂತೆ ಪ್ರೇರೇಪಿಸಿದೆ. ಗಿಡ ನೆಡುವ ಪರಿಸರ ಪ್ರೇಮಿ ನೀವಾಗಿದ್ದಲ್ಲಿ ತಪ್ಪದೇ ಈ ಎರಡೂ ಪುಸ್ತಕಗಳನ್ನು ಓದಿ.

ಪ್ರಕಾಶಕರು:
ತೇಜಸ್ವಿ ಪ್ರಕಾಶನ, ಬೆಂಗಳೂರು.
ಭೂಮಿಗೀತೆ – ಬೆಲೆ: 250/-
ಜೀವಪಲ್ಲಟಗಳ ಆತ್ಮಕಥನ – ಬೆಲೆ: 150
ಪ್ರತಿಗಳಿಗಾಗಿ ಸಂಪರ್ಕಿಸಿ: 
ಬಾಲು – 9986833515
ಶೇಖರ್ ಬಾಬು - 9845353868

ಸೆಪ್ಟೆಂ 21, 2015

ಅಕಾಡೆಮಿ ಪ್ರಶಸ್ತಿಗೆ ಭಗವಾನ್ ಯೋಗ್ಯರೇ?!

ಇತ್ತೀಚೆಗೆ ಗೆಳೆಯನೊಬ್ಬ ಭಗವಾನ್ ಹಿಂದೂ ದೇವತೆಗಳ ಬಗ್ಗೆ, ಗೃಂಥಗಳ ಬಗ್ಗೆ 'ಬಾಯಿಗೆ ಬಂದಂತೆ' ಮಾತನಾಡುವುದರ ಬಗ್ಗೆ ಕೇಳಿದಾಗ 'ಅವರ ಪುಸ್ತಕವನ್ನು ನಾನು ಓದಿಲ್ಲ; ಅವರ ಭಾಷಣವನ್ನೂ ಕೇಳಿಲ್ಲ. ಅಂದಮೇಲೆ ಅವರ ಬಗ್ಗೆ ಕಮೆಂಟಿಸುವುದು ಸರಿಯಲ್ಲ ಎಂದಿದ್ದೆ'. ಪತ್ರಿಕೆಗಳಲ್ಲಿ, ಮಾಧ್ಯಮದಲ್ಲಿ ಭಗವಾನ್ ಹೇಳಿದರೆನ್ನಲಾದ ನಿಜಕ್ಕೂ ಅಸಂಬದ್ಧವೆನ್ನಿಸುವ ಮಾತುಗಳನ್ನು ನೋಡಿ ಅವರನ್ನು ದ್ವೇಷಿಸಲಾರಂಭಿಸಬೇಕಾ? ಎಂದು ಪ್ರಶ್ನಿಸಿಕೊಂಡರೆ ನಮ್ಮ ಮಾಧ್ಯಮಗಳು ಯಾವ ಯಾವ ವಾಕ್ಯವನ್ನು ಎಡಿಟ್ ಮಾಡಿ ಯಾವ್ಯಾವ ವಾಕ್ಯಗಳನ್ನು ಉಳಿಸಿಕೊಂಡು ವರದಿ ರಚಿಸುತ್ತವೆ ಎನ್ನುವುದನ್ನು ಗಮನಿಸಿದವರಿಗೆ ವರದಿ ನೋಡಿ ದ್ವೇಷಿಸುವುದರ ನಿರರ್ಥಕತೆ ಅರ್ಥವಾಗುತ್ತದೆ. ತಮ್ಮ ವಿಚಾರಗಳಿಗೆ ಪೂರಕವಾಗಿ, ಯಾರ್ಯಾರನ್ನು ರೊಚ್ಚಿಗೆಬ್ಬಿಸಬೇಕೋ ಅವರನ್ನು ರೊಚ್ಚಿಗೆಬ್ಬಿಸಲು ಏನೇನು ಬರೆಯಬೇಕೋ ಅದನ್ನಷ್ಟೇ ಬರೆಯುತ್ತಾರೆ. ಇಂತಹ ಮಾಧ್ಯಮಗಳ ಇರುವಿಕೆಯ ಅರಿವಿದ್ದೂ ಅವರ ಉದ್ದೇಶಗಳಿಗೆ ಪೂರಕವಾಗಿ ಮಾತನಾಡುವುದು ಸರಿಯಲ್ಲ ಎಂಬುದು ಭಗವಾನ್ ರಂತವರಿಗೆ ಅರಿವಾಗುವುದಿಲ್ಲವಾ? ಹಿಂದೂ ಧರ್ಮದೊಳಗೆ, ಹಿಂದೂ ಸಂಪ್ರದಾಯಗಳ ವಿರುದ್ಧ ಹಿಂದೂ ದೇವರ ವಿರುದ್ಧ ಕಟುವಾಗಿ ಮಾತನಾಡುವುದು ಹೊಸತೇನಲ್ಲ. ಈ ಕಟು ಮಾತುಗಳಿಗೆ ಮೂಲ ಆ ಹಿಂದೂ ಸಂಪ್ರದಾಯಗಳ ಹೆಸರಿನಲ್ಲಿ ಮೂಲೆಗುಂಪಾದವರ ಆಕ್ರೋಶವೇ ಹೊರತು ಯಾರನ್ನೋ ನೋಯಿಸಿ ಮತ್ಯಾರನ್ನೋ ಪುಸಲಾಯಿಸುವ ಮನಸ್ಥಿತಿಯಲ್ಲ. ಆ ಕಟು ಮಾತುಗಳು ಕೂಡ ಕಟ್ಟರ್ ಹಿಂದೂವಾದಿಗಳಿಗೆ 'ಹೌದಲ್ವಾ? ಇವರು ಹೇಳ್ತಿರೋದು ಸರಿ ಇದೆ' ಎನ್ನಿಸುವಂತಿರಬೇಕೆ ಹೊರತು 'ಇವರು ನಮ್ ವಿರುದ್ಧ ಮಸಲತ್ತು' ಮಾಡ್ತಿದ್ದಾರೆ ಎನ್ನಿಸುವಂತಿರಬಾರದು. ಅಷ್ಟರ ಮಟ್ಟಿಗಿನ ವಿವೇಚನೆ ಭಗವಾನರನ್ನು ಸೇರಿಸಿ ಎಲ್ಲರಿಗೂ ಇರಬೇಕು.
ತಮ್ಮ ಮಾತುಗಳಿಂದ ಅವರು ಫೇಮಸ್ಸಾಗಿದ್ದು (ಅದನ್ನು ನೀವು ಫೇಮಸ್ ಅನ್ನುತ್ತೀರಾದರೆ!) ಇತ್ತೀಚಿನ ವರುಷಗಳಲ್ಲಿ. ಕಲಬುರ್ಗಿಯವರ ಹತ್ಯೆಯಾದ ನಂತರ ಭಗವಾನರಿಗೆ ಪೋಲೀಸ್ ರಕ್ಷಣೆ ನೀಡಲಾಗಿದೆ. ಪದೇ ಪದೇ ಬೆದರಿಕೆ ಪತ್ರಗಳು ಬರುತ್ತಿವೆ. ಇವೆಲ್ಲದರ ಮಧ್ಯೆ ಅವರಿಗೆ 2013ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಿಸಲಾಗಿದೆ. ಇದು ಅವರ ಹಿಂದೂ ವಿರೋಧಿ ಮನಸ್ಥಿತಿಗೆ ಕಾಂಗ್ರೆಸ್ ಸರಕಾರದಿಂದ ಸಿಕ್ಕ ಬಹುಮಾನ ಎಂದು ಹಿಂದೂವಾದಿಗಳು ಆಗಲೇ ಪ್ರಚಾರ ಆರಂಭಿಸಿಬಿಟ್ಟಿದ್ದಾರೆ. 'ಭಗವಾನ್ ಗೆ ಶ್ರದ್ಧಾಂಜಲಿ' ಎಂದು ಬರೆಯುವ ನೀಚ ಮಟ್ಟಕ್ಕೂ ಇಳಿದುಬಿಟ್ಟಿದ್ದಾರೆ. Online Petition ಕೂಡ ಪ್ರಾರಂಭಿಸಿಬಿಟ್ಟಿದ್ದಾರೆ. ಇದು ಹಿಂದೂ ಬಲಪಂಥೀಯರ ಎಂದಿನ ನಡೆಗಳು. ವರುಷಗಳ ಹಿಂದೆ ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಕೂಡ ಇದೇ ರೀತಿ ಉಯಿಲೆಬ್ಬಿಸಿದ್ದರು. ಭೈರಪ್ಪನವರಿಗೆ ಸಿಗದ ಪ್ರಶಸ್ತಿ ಪ್ರಶಸ್ತಿಯೇ ಅಲ್ಲ, ಇದು ಕಂಬಾರರು ಮಾಡಿರುವ ಲಾಬಿಯಷ್ಟೇ ಎಂದು ನಗೆಯಾಡಿದ್ದರು. ಕೆಲವೇ ತಿಂಗಳುಗಳಲ್ಲಿ ಭೈರಪ್ಪನವರಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ ಸಿಕ್ಕಿತು. ಇದು ಭೈರಪ್ಪನವರು ಮಾಡಿದ ಲಾಬಿ ಎಂದವರ್ಯಾರೂ ಯಾಕೋ ನಗೆಯಾಡಲಿಲ್ಲ! ಭೈರಪ್ಪನವರಿಗೆ ರಾಷ್ಟ್ರೀಯ ಪ್ರೊಫೆಸರ್ ಹುದ್ದೆ ದೊರೆತಾಗ ಕೂಡ ಭೈರಪ್ಪನವರು ಮೋದಿ ಪರ ಮತ್ತು ಬಿಜೆಪಿ ಪರವಿದ್ದುದರಿಂದ ಸಿಕ್ಕ ಹುದ್ದೆಯದು ಎಂದವರ್ಯಾರೂ ಗೋಳಾಡಲಿಲ್ಲ! ತಮ್ಮ ವಿಚಾರಗಳಿಗೆ ಪೂರಕವಾಗಿ ಮಾತನಾಡುವವರಿಗೆ ಸಿಗುವ ಪ್ರಶಸ್ತಿ ಹುದ್ದೆಗಳು ಅರ್ಹತೆಯಿಂದ ಎಂದು ಮತ್ತು ತಮ್ಮ ವಿಚಾರಗಳಿಗೆ ವಿರುದ್ಧವಾಗಿರುವವರಿಗೆ ಸಿಗುವ ಪ್ರಶಸ್ತಿ ಹುದ್ದೆಗಳು ಲಾಬಿಯಿಂದ ಎಂದು ವಾದ ಮಾಡುವುದು ಇವರಿಗೆ ಸಹಜವಾಗಿ ಹೋಗಿದೆ. ಅಂತವರಿಗೆ ಹೊಸತಾಗಿ ಸಿಕ್ಕ ಅಸ್ತ್ರ ಭಗವಾನ್ ರವರಿಗೆ ಸಿಕ್ಕ ಪ್ರಶಸ್ತಿ. ಎಲ್ಲಾ ಪ್ರಶಸ್ತಿಯಲ್ಲೂ ಎಲ್ಲಾ ಹುದ್ದೆಗಳ ಆಯ್ಕೆಯಲ್ಲೂ ಲಾಬಿ ಇದ್ದೇ ಇರುತ್ತದೆ. ಅಂತಹ ಲಾಬಿಯನ್ನು ತತ್ವ ಸಿದ್ಧಾಂತಗಳಾಚೆ ನಿಂತು ವಿರೋಧಿಸುವುದಾದರೆ ಅದು ಸರಿಯಾದ ಕ್ರಮ. ಹೋಗಲಿ ಭಗವಾನ್ ಆ ಪ್ರಶಸ್ತಿಗೆ ಅರ್ಹರಲ್ಲ ಎಂದರೆ ಆ ಹಿಂದೂ ಬಲಪಂಥೀಯರಲ್ಲೇ ಒಬ್ಬರು ಅವರ ಪುಸ್ತಕಗಳ ವಿಮರ್ಶೆ ಮಾಡಿ ಯಾಕೆ ಅವರು ಅನರ್ಹರು ಎಂದು ತಿಳಿಸಿದ್ದರೂ ಒಪ್ಪಬಹುದಿತ್ತು. ಶ್ರದ್ಧಾಂಜಲಿಯ ಭಾಷೆಯನ್ನಾಡುವವರಿಂದ ಇಷ್ಟೆಲ್ಲ ನಿರೀಕ್ಷಿಸಬಾರದೇನೋ. ಜನರ ಭಾವನೆಗಳನ್ನು ಭಗವಾನ್ ರ ವಿರುದ್ಧವಾಗಿರುವಂತೆ ಮಾಡಲಾಗಿದೆ, ಅದನ್ನವರು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ and unfortunately ಭಗವಾನ್ ರವರು ಕೂಡ ಬಲಪಂಥೀಯರ ಭಾಷೆಯನ್ನೇ ತಮ್ಮ ಭಾಷೆಯನ್ನಾಗಿಸಿಕೊಂಡು ಅದಕ್ಕೆ ಪೂರಕವಾಗಿಯೇ ವರ್ತಿಸುತ್ತಿದ್ದಾರೆ. 

ಭಗವಾನ್ ರವರಿಗೆ ಸಿಕ್ಕ ಪ್ರಶಸ್ತಿಯ ಬಗ್ಗೆ ಹುಲಿಕುಂಟೆ ಮೂರ್ತಿ ಈ ರೀತಿಯಾಗಿ ಬರೆದಿದ್ದಾರೆ  "ನನಗೆ ಬುದ್ಧಿ ತಿಳಿದಾಗಿನಿಂದ ಭಗವಾನ್ ಅವರ ಸಾಹಿತ್ಯವನ್ನು ಓದುತ್ತಿದ್ದೇನೆ. ಅವರು ನಂಬುವ ವಿಚಾರಗಳ ಪರವಾಗಿದ್ದೇನೆ ಆದರೆ, ಇತ್ತೀಚಿನ ಅವರ ಮಾತುಗಳ ಜತೆಗಿರಲಾರೆ... ಹಿಂದೂ ಧರ್ಮ, ಪುರಾಣಗಳ ಕುರಿತು ಚಳವಳಿಯ ರೀತಿಯಲ್ಲಿ ಮಾತಾಡುವ, ಆ ಮೂಲಕ ಸಮಯ ವ್ಯರ್ಥ ಮಾಡುವ ಯಾರ ಮಾತುಗಳನ್ನೂ ನಾನು ಸಮರ್ಥಿಸಲಾರೆ... ಮಾನವ ಪ್ರೇಮವನ್ನು ಉಳಿಸುವ, ಬೆಳೆಸುವ ಕ್ರಿಯಾತ್ಮಕ ಚಳವಳಿಗಳೊಂದಿಗೆ ನನ್ನ ಪಯಣ.....

ಸಾಹಿತ್ಯ ಅಕಾಡೆಮಿ ಕೊಟ್ಟಿರುವ ಪ್ರಶಸ್ತಿ ಭಗವಾನ್ ಅವರ ಸಾಹಿತ್ಯ ಸೇವೆಗೆ ಕಡಿಮೆಯಾಯಿತು. ಅವರಿಗೆ ಅದಕ್ಕಿಂತಲೂ ದೊಡ್ಡ, ಹೆಚ್ಚಿನ ಪ್ರಶಸ್ತಿಗಳು ಸಿಗಬೇಕು.

ಸಾಹಿತ್ಯ- ಸಮಾಜದ ವಿದ್ಯಾರ್ಥಿಯಾಗಿ ಭಗವಾನ್ ಅವರಿಗೆ ಅಭಿನಂದನೆಗಳನ್ನು ಹೇಳದೆ ಇರಲಾರೆ...."

ಇನ್ನು ರಾಜೇಂದ್ರ ಪ್ರಸಾದ್  ಭಗವಾನ್ ರವರ ಸಾಹಿತ್ಯ ಕೃಷಿಯಲ್ಲೇನಿದೆ ಎಂಬುದರ ಕುರಿತು ವಿವರವಾಗಿ ಬರೆದಿದ್ದಾರೆ
"ಕೆಲವು ಮತಿಗೇಡಿಗಳು ಪ್ರೊ.ಕೆ ಎಸ್ ಭಗವಾನ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2013 ನೇ ಸಾಲಿನ ಗೌರವ ಪ್ರಶಸ್ತಿ ಕೊಟ್ಟಿರುದಕ್ಕೆ ಬೇಕಾಬಿಟ್ಟಿ ಮಾತನಾಡುವುದು ಕಂಡು ಅಸಹ್ಯವಾಗುತ್ತಿದೆ. 
ಹೌದು ಅವರು ಈಚೆಗೆ 'ಭಕ್ತಾಸ್ ಭಾಷೆ'ಯಲ್ಲಿ ಧಾರ್ಮಿಕ ವಿಚಾರಗಳ ಬಗ್ಗೆ ಅಡ್ಡಾದಿಡ್ಡಿ ಮಾತನಾಡುತ್ತಿರುವುದು ಅತಿರೇಕದ ವರ್ತನೆಯೇ. ಖಂಡಿಸೋಣ. 
ಆದರೆ ಅಕಾಡೆಮಿ ಅವರಿಗೆ ಪ್ರಶಸ್ತಿ ಕೊಟ್ಟಿರುವುದು. ಅವರ ಈ ಅತಿರೇಕದ ಮಾತುಗಳಿಗಲ್ಲ, ಅವರ ಸಾಹಿತ್ಯಕ್ಕೆ ಅನ್ನುವುದು ನಮಗೆ ನೆನೆಪಿರಬೇಕು.

ಪ್ರೊ.ಕೆ ಎಸ್ ಭಗವಾನ್ ಕೃತಿಗಳು :

ವಿಮರ್ಶೆ :
ಬದಲಾವಣೆ
ಕುವೆಂಪು ಯುಗ
ಆಂತರ್ಯ
ಕಣಿಗಲೆ

ವಿಚಾರ:
ಭಾಷೆ ಮತ್ತು ಸಂಸ್ಕೃತಿ
ಶಂಕರಾಚಾರ್ಯ ಮತ್ತು ಪ್ರತಿಗಾಮಿತನ
ಗಾಂಧಿಯನ್ನು ಗೋಡ್ಸೆ ಏಕೆ ಕೊಂದ?
ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್
ಸುಖದ ಹಾದಿ
Violence in Hinduism

ಅನುವಾದ:
ಜೂಲಿಯಸ್ ಸೀಸರ್
ವೆನಿಸಿನ ವರ್ತಕ
ಹ್ಯಾಮ್ಲೆಟ್
ಆಂಟನಿ ಮತ್ತು ಕ್ಲಿಯೋಪಾತ್ರ
ಒಥೆಲೊ
ನಿಮ್ಮಿಷ್ಟ
ಮ್ಯಾಕ್ ಬೆತ್
ಮಹಾರಾಜ ಲಿಯರ್
ರೋಮಿಯೊ ಮತ್ತು ಜೂಲಿಯೆಟ್
ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು ಸಂ. ೩, ೭ ಮತ್ತು ೧೧
ವೃದ್ಧ ಮತ್ತು ಸಮುದ್ರ

ಸಂಪಾದನೆ :
ಗಂಗೋತ್ರಿ
ಚಂಪಾ: ಆಯ್ದ ಕವನಗಳು
ಜಿಜ್ಞಾಸು
ಸಾಹಿತ್ಯ ವಿಮರ್ಶೆ ೧೯೮೫
ಕೆಂಗಲ್ಲರ ಭಾಷಣಗಳು
As You Like It
Macbeth
Othello
The Merchant of Venice

ಚರಿತ್ರೆ :
ಇತಿಹಾಸ ಚಕ್ರ
ಇತಿಹಾಸದ ಪಾಠಗಳು
ಹಿಂದೂ ಸಾಮ್ರಾಜ್ಯಶಾಹಿಯ ಇತಿಹಾಸ

ಮಕ್ಕಳ ಸಾಹಿತ್ಯ :
ಮಂತ್ರದ ಉಂಗುರ
ಷೇಕ್ಸ್ ಪಿಯರ್ ಕತೆಗಳು:
ನಲಿವಿನಾಟಗಳು
ನೋವಿನಾಟಗಳು
ಚರಿತ್ರಾಟಗಳು

ಪ್ರೊ.ಕೆ ಎಸ್ ಭಗವಾನ್ ರವರ ಸಾಹಿತ್ಯಿಕ ವ್ಯಕ್ತಿತ್ವಕ್ಕೆ ಗೌರವವಿರಲಿ ಮತ್ತವರ ಈಚಿನ ಕಿರುಚಾಟಗಳ ಬಗ್ಗೆ ದಿವ್ಯನಿರ್ಲಕ್ಷ್ಯವೂ ಇರಲಿ.."

ಆಗ 31, 2015

ಭೂಮಿಗೀತೆ ಮತ್ತು ಜೀವತಲ್ಲಣಗಳ ಆತ್ಮಕಥನ ಪುಸ್ತಕಗಳ ಬಿಡುಗಡೆ ಸಮಾರಂಭದ ಚಿತ್ರಗಳು.

ಆಗಸ್ಟ್ 30ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಟಿ.ಎಸ್.ವಿವೇಕಾನಂದರ ಭೂಮಿಗೀತೆ ಮತ್ತು ಜೀವತಲ್ಲಣಗಳ ಆತ್ಮಕಥನ ಪುಸ್ತಕಗಳ ಬಿಡುಗಡೆಯಾಯಿತು. ಡಾ.ಎಲ್.ಹನುಮಂತಯ್ಯ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕೋಟಿಗಾನಹಳ್ಳಿ ರಾಮಯ್ಯ ಮತ್ತು ದಿನೇಶ್ ಅಮೀನ್ ಮಟ್ಟು ಮುಖ್ಯ ಅತಿಥಿಗಳಾಗಿದ್ದರು. ಭೂಮಿಗೀತೆ ಪುಸ್ತಕದ ಬಗ್ಗೆ ಪ್ರೊ.ಎಲ್.ಮುಕುಂದರಾಜ್ ಮಾತನಾಡಿದರೆ ಜೀವತಲ್ಲಣಗಳ ಆತ್ಮಕಥನದ ಬಗ್ಗೆ ಮಾತನಾಡಿದ್ದು ಪ್ರೊ.ಪ್ರದೀಪ್ ರಮಾವತ್. ತೇಜಸ್ವಿ ಪ್ರಕಾಶನದ ಮೊದಲ ಪ್ರಕಟಣೆಯಿದು.

ಭೂಮಿಗೀತೆಯ ಬಗ್ಗೆ ಪ್ರೊ.ಮುಕುಂದರಾಜ್ ಮಾತುಗಳು.
 ಇದನ್ನೂ ಓದಿ: ಪ್ಲಾಚಿಮಡದ ಜಲ ಪಿಶಾಚಿಗಳು ಮತ್ತು ಇಸ್ಲಾಮಿಕ್ ಪರಿಸರ ವಿವೇಕ
ಜೀವತಲ್ಲಣಗಳ ಆತ್ಮಕಥನ ಕುರಿತು ಪ್ರದೀಪ್ ರಮಾವತ್
 ಇದನ್ನೂ ಓದಿ: ಕಚರನೇ ಸಿಕ್ಸರ್ ಹೊಡೆದಿದ್ದರೆ ‘ಲಗಾನ್’ಗೆ ಏನಾಗುತ್ತಿತ್ತು?
ಕೋಟಿಗಾನಹಳ್ಳಿ ರಾಮಯ್ಯ 

ದಿನೇಶ್ ಅಮೀನ್ ಮಟ್ಟು

ಟಿ.ಎಸ್.ವಿವೇಕಾನಂದ

ಡಾ.ಎಲ್. ಹನುಮಂತಯ್ಯ