ಏಪ್ರಿ 26, 2018

ಇವು ಜೀವಚ್ಛವದಂತ ಆತ್ಮಗಳ ಕರುಳು ಕಿವುಚುವ ಆಕ್ರಂದನ...

ಅಸಹಾಯಕ ಆತ್ಮಗಳು. 
ಪಮ್ಮಿ ದೇರಲಗೋಡು(ಪದ್ಮಜಾ ಜೋಯಿಸ್)

(ಕು.ಸ.ಮಧುಸೂದನ್ ರವರ ಅಸಹಾಯಕ ಆತ್ಮಗಳು ಲೇಖನ ಸರಣಿಯು ಹಿಂಗ್ಯಾಕೆಯಲ್ಲಿ ಪ್ರಕಟಗೊಂಡಿತ್ತು. 'ಅಸಹಾಯಕ ಆತ್ಮಗಳೀಗ' ಪುಸ್ತಕದ ರೂಪ ಪಡೆದಿದೆ. ಪುಸ್ತಕದ ಕುರಿತಾಗಿ ಪದ್ಮಜಾ ಜೋಯಿಸ್ ರವರು ಬರೆದಿರುವ ಪರಿಚಯದ ಲೇಖನ ಹಿಂಗ್ಯಾಕೆಯ ಓದುಗರಿಗಾಗಿ) 

ಕು. ಸ. ಮಧುಸೂದನನಾಯರ್ ರಂಗೇನಹಳ್ಳಿ ಅವರು ಬರೆದ ಈ ಪುಸ್ತಕದೊಳಗಿನ ಕತೆಗಳನ್ನು ಓದುತ್ತ ಹೋದಂತೆ ಹಲವು ಅಸಹಾಯಕ ಆತ್ಮಗಳ ಆಕ್ರಂದನ ಕೇಳಿದಂತಾಗಿ ಒಂದು ಕ್ಷಣ ಬೆಚ್ಚಿದ್ದು ನಿಜ.

ತಮ್ಮ ಸಂಪೂರ್ಣ ಬದುಕನ್ನು ವೇಶ್ಯಾವೃತ್ತಿಯ ನರಕದಲ್ಲಿ ಕಳೆದ ಹತ್ತೊಂಭತ್ತು ಹೆಣ್ಣುಮಕ್ಕಳ ಕತೆಗಳನ್ನು ಅವರ ಬಾಯಿಂದಲೇ ಕೇಳಿ ಅವನ್ನು ಅಕ್ಷರ ರೂಪಕ್ಕಿಳಿಸಿರುವ ಮಧುಸೂದನ್ ರವರ “ಅಸಹಾಯಕ ಆತ್ಮಗಳು” ಪುಸ್ತಕದ ಬಗ್ಗೆ ಒಂದೆರಡು ಮಾತು ಹೇಳಲೇ ಬೇಕಿದೆ

ಜನ 14, 2016

ಅಸಹಾಯಕ ಆತ್ಮಗಳು - ಅಲಮೇಲಮ್ಮನ ಮನೆಯೊಳಗಿನ ಅಬಲೆ!

madhusudan rangenahalli
ಕು.ಸ.ಮಧುಸೂದನ ರಂಗೇನಹಳ್ಳಿ
ನನಗೆ ಮದುವೆಯಾದಾಗ ಕೇವಲ ಹದಿನಾಲ್ಕು ವರ್ಷ ವಯಸ್ಸು. ಮೈನೆರೆದ ಆರೇ ತಿಂಗಳಿಗೆ ಮದುವೆ ಮಾಡಿದರು. ಮದುವೆ ಅಂದ್ರೇನು ಮನೆ ಮುಂದೆ ಚಪ್ಪರ ಹಾಕಿ ಊರಿಗೆಲ್ಲ ಊಟ ಹಾಕಿ ಮಾಡಿದ್ದಲ್ಲ. ಬಸ್ಸಿನಲ್ಲಿ ಧರ್ಮಸ್ಥಳಕ್ಕೆ ಹೋಗಿ ತಾಳಿಕಟ್ಟಿಸಿಕೊಂಡು ಬಂದಿದ್ದಷ್ಟೇ ನಮ್ಮ ಮದುವೆಯ ಸಂಭ್ರಮ. ಮದುವೆಯಾಗಿ ನೇರವಾಗಿ ಗಂಡನ ಮನೆಗೆ ಹೋದೆ. ನಮ್ಮೂರಿಂದ ಎಂಭತ್ತು ಮೈಲಿ ದೂರದ ಸಣ್ಣ ಊರದು. ಗಂಡನ ಮನೇಲಿ ಇದ್ದದ್ದು ಅಂದರೆ ನನ್ನ ಗಂಡ ಮತ್ತೆ ನಮ್ಮ ಅತ್ತೆ ಅಷ್ಟೇ. ಅತ್ತೆಗೂ ವಯಸ್ಸಾಗಿ ಕಣ್ಣು ಸರಿಯಾಗಿ ಕಾಣ್ತಿರಲಿಲ್ಲ. ಅಪ್ಪನ ಮನೆಯಂತೆ ಗಂಡನ ಮನೇಲೂ ಕಿತ್ತು ತಿನ್ನೊ ಬಡತನ. ಸಾಲಾಗಿ ಹುಟ್ಟಿದ ಏಳು ಹೆಣ್ಣು ಮಕ್ಕಳನ್ನು ದಾಟಿಸೋಕೆ ತುಂಬ ಕಷ್ಟ ಅಂತ ಗೊತ್ತಿದ್ದ ನಮ್ಮಪ್ಪ ಮೊದಲ ಮೂರೂ ಜನವನ್ನೂ ಅದೆಂಗೊ ಮಾಡಿ ನಮ್ಮಷ್ಟೇ ದರಿದ್ರರಾಗಿದ್ದ ಮನೆಗಳಿಗೆ ದಾಟಿಸಿದ್ದ. ಇನ್ನು ನಾಲ್ಕನೆಯವಳಾಗಿದ್ದ ನನಗೇನು ವಿಶೇಷವಾಗಿ ಮಾಡ್ತಾನೆ? ಕೈಗೆ ಸಿಕ್ಕ ಒಬ್ಬನಿಗೆ ಮದುವೆ ಮಾಡಿಕೊಟ್ಟು ಬಿಟ್ಟ. ನನ್ನ ಗಂಡನಿಗೆ ಪೋಲಿಯೊ ಆಗಿ ಕಾಲು ಎಳೆದು ನಡೆಯುತ್ತಿದ್ದ. ಹೇಳಿಕೊಳ್ಳೋ ಮಾತಲ್ಲ, ನಾನು ನೋಡೋಕೆ ಬೆಳ್ಳಗೆ ಮೈಕೈ ತುಂಬಿಕೊಂಡು ಲಕ್ಷಣವಾಗಿದ್ದೆ. ಇಷ್ಟು ಬೆಳ್ಳಗೆ ಚೆನ್ನಾಗಿರೊ ಹುಡುಗೀನಾ ಈ ಕುಂಟನಿಗೆ ಕೊಟ್ಟಿದಾರೆ ಅಂದರೆ ಹುಡುಗಿ ಏನೋ ಸರಿಯಿಲ್ಲ ಅನಿಸುತ್ತೆ ಅಂತ ಗಂಡನೂರಿನ ಜನ ಮಾತಾಡಿಕೊಳ್ಳಿದ್ದರು. ನಾನು ಅಂತಹುದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಇದ್ದೆ. ನಮ್ಮ ಮನೆಯಲ್ಲಿ ಬಡತನವಿದ್ದರು ನನ್ನ ಹೊರಗೆ ಕೂಲಿಗೆ ಅಂತ ಕಳಿಸ್ತಿರಲಿಲ್ಲ. ಹಾಗಾಗಿ ರೈತರ ಯಾವ ಕೆಲಸವು ಗೊತ್ತಿರಲಿಲ್ಲ. ಮೈ ನೆರೆಯೊತನಕ ಹಳ್ಳೀಲೆ ಇದ್ದ ಸ್ಕೂಲಲ್ಲಿ ಆರನೆ ಕ್ಲಾಸು ಮಾತ್ರ ಓದಿದ್ದೆ. 

ನನ್ನ ಗಂಡ ಅದೆ ಊರಲ್ಲಿದ್ದ ಒಂದು ಸಣ್ಣ ಹೋಟೆಲ್ಲಿನಲ್ಲಿ ಕೆಲಸ ಮಾಡ್ತಿದ್ದ. ಕೆಲಸ ಅಂದರೆ ಪಾತ್ರೆ ತೊಳೆಯೋದು, ಕ್ಲೀನ್ ಮಾಡೋದು ಹಿಟ್ಟು ರುಬ್ಬೋದು ಹೀಗೆ. ಅವರೇನು ಸಂಬಳ ಕೊಡ್ತಿದ್ದರು ನನಗಂತು ಗೊತ್ತಿರಲಿಲ್ಲ. ವಾರಕ್ಕೊಂದು ಸಾರಿ ಸಾಮಾನು ತಂದು ಹಾಕೋನು. ಬೆಳಿಗ್ಗೆ ಐದು ಗಂಟೆಗೆ ಎದ್ದು ಹೋಟೆಲಿಗೆ ಹೋದರೆ ರಾತ್ರಿ ಹನ್ನೆರಡು ಗಂಟೆಗೆ ಮನೆಗೆ ಬರೋನು. ಹಾಗೆ ಬರಬೇಕಾದರೆ ಹೊಟ್ಟೆ ತುಂಬ ಕುಡಿದೇ ಬರೋನು. ಇನ್ನು ಅತ್ತೆ ಪಾಪ ಯಾವಾಗಲು ಒಂದು ಮೂಲೇಲಿ ಕೂತು ಎಲೆ ಅಡಿಕೆ ಜಗೀತಾ ಗೊಣಗ್ತಾ ಕೂತಿರೋಳು. ಪಾಪ ಆಕೆ ಒಂದು ದಿನಾನು ದನಿಯೆತ್ತಿ ಮಾತಾಡಿದವಳಲ್ಲ. ಹೀಗೆ ಒಂದೂವರೆ ವರ್ಷ ಕಳೆದವು. ಅಷ್ಟರಲ್ಲಿ ಊರಿನ ಎಲ್ಲ ಗಂಡಸರ ಕಣ್ಣು ನನ್ನ ಮೇಲೆ ಬಿದ್ದಿರೋದು ನನಗೆ ಗೊತ್ತಾಗಿತ್ತು. ನನ್ನ ಗಂಡ ಅನಿಸಿಕೊಂಡ ಸೂಳೆಮಗನಿಗೆ ಕುಡಿಯೋದು ಮಾತ್ರವಲ್ಲ, ಓಸಿ ಆಡೋದು, ಅಂದರ್ ಬಾಹರ್ ಆಡೋದು ಸೇರಿದಂತೆ ಪ್ರಪಂಚದಾಗೆ ಇರೊ ಎಲ್ಲ ಚಟಗಳು ಇದ್ದವು. ಹಂಗಾಗಿ ಊರತುಂಬಾ ಸಾಲ ಮಾಡಿಕೊಂಡಿದ್ದ. ಅದರಲ್ಲೂ ಅವನ ದಾಯಾದಿಯೊಬ್ಬ ಇದ್ದ ಚನ್ನೇಗೌಡ ಅಂತ. ಅವನು ನಾವಿದ್ದ ಮನೆಯ ಪತ್ರ ಇಟ್ಟುಕೊಂಡು ಕೇಳಿದಾಗೆಲ್ಲ ಐವತ್ತು ನೂರು ಸಾಲ ಕೊಟ್ಟು ಹಾಳು ಮಾಡಿದ್ದ. 


ನಾನು ಮದುವೆಯಾಗಿ ಹೋದಮೇಲೆ ಅವನ ಕಣ್ಣು ನನ್ನ ಮೇಲೂ ಬಿತ್ತು. ಆ ಹಳ್ಳೀಲಿ ಒಬ್ಬಳು ಸಾವಿತ್ರಮ್ಮ ಅಂತ ಇದ್ದಳು. ಗಂಡ ಇದ್ದರು ಈ ಚನ್ನೇಗೌಡನ್ನ ಇಟ್ಟುಕೊಡಿದ್ದಳು. ಜೊತೆಗೆ ಮನೆಗೆಲಸಕ್ಕೆ ಅಂತ ಸುತ್ತಮುತ್ತ ಹತ್ತು ಹಳ್ಳಿಯ ಬಡಹುಡುಗಿಯರನ್ನು ಸಿಟಿಗಳಿಗೆ ಕಳಿಸೊ ದಲ್ಲಾಳಿ ಕೆಲಸ ಕೂಡಾ ಮಾಡ್ತಿದ್ದಳು. ನಾನು ಮದುವೆಯಾಗಿ ಹೋಗಿ ಮೂರೇ ತಿಂಗಳಿಗೆ ಆ ಸಾವಿತ್ರಮ್ಮ ಬಂದು ನೀನು ಹೂ ಅಂದರೆ ನಿನ್ನ ಗಂಡನ ಸಾಲಾನೆಲ್ಲ ವಜಾ ಮಾಡಿ ಮನೆ ಕಾಗದ ವಾಪಾಸು ಕೊಡ್ತಾನಂತೆ ಜೊತೆಗೆ ನಿನಗೇನು ಬೇಕಾದರು ಸಹಾಯ ಮಾಡ್ತಾನಂತೆ, ಏನು ಹೇಳ್ತೀಯಾ? ಅಂತ ಕೇಳಿ ನನ್ನ ಹತ್ತಿರ ಬಯಿಸ್ಕೊಂಡು ಹೋಗಿದ್ದಳು. ನಾನು ಥೂ ಅಂತ ಉಗಿದು ಕಳಿಸಿದ ಮೇಲೂ ಅವನು ಬಿಟ್ಟಿರಲಿಲ್ಲ. ಆಗಾಗ ಮನೆಗೆ ಬರೋದು ಆ ಕುಂಟನ ಜೊತೆ ಏನಿರ್ತಿಯಾ. ನನ್ನ ಜೊತೆ ಬಾ ತೋಟದ ಮನೇಲಿ ಇಟ್ಟು ಸಂಸಾರ ಮಾಡ್ತೀನಿ. ಅಂತೆಲ್ಲ ತಲೆ ಕೆಡಿಸೋಕೆ ನೋಡಿದ್ದ. ಆದರೆ ನಾನು ಅದಕ್ಕೆಲ್ಲ ಸೊಪ್ಪು ಹಾಕಿರಲಿಲ್ಲ.

ನಮ್ಮಪ್ಪನ ಮನೆಯಿಂದ ಯಾರೂ ಬರ್ತಿರಲಲ್ಲ. ಇಲ್ಲಿಗೆ ಬರೊ ಬಸ್ ಚಾರ್ಜ ದುಡ್ಡಿದ್ದರೆ ಮೂರು ದಿನದ ಊಟಕ್ಕಾಗುತ್ತೆ ಅನ್ನೋ ಸ್ಥಿತಿಲಿದ್ದ ಕುಟುಂಬ ಅದು. ಹಾಗಾಗಿ ಗಂಡನ ಮನೆಯ ಯಾವ ಸಂಕಟಾನು ಹೇಳಿಕೊಳ್ಳೋಕೆ ಅಂತ ನನಗ್ಯಾರು ಇರಲಿಲ್ಲ. ಬರ್ತಾ ಬರ್ತಾ ನನ್ನ ಗಂಡನ ಕುಡಿತ ಜಾಸ್ತಿಯಾಗ್ತಾ ಹೋಯ್ತು. ರಾತ್ರಿ ಕೆಲಸ ಮುಗಿದ ಮೇಲೆ ಯಾವುದಾದರು ತೋಟದಲ್ಲಿ ಕೂತು ಇಸ್ಪೀಟ್ ಆಡೋದು ಮಾಡ್ತಿದ್ದ. ವಾರಕ್ಕೊಮ್ಮೆ ಸಾಮಾನು ತಂದು ಹಾಕ್ತಾ ಇದ್ದವನು ಈಗ ತಿಂಗಳಾದರು ಸಾಮಾನು ತರ್ತಾ ಇರಲಿಲ್ಲ. ನಿದಾನಕ್ಕೆ ನಾನು ಮನೆ ಹೊಸಿಲು ದಾಟಬೇಕಾಯಿತು. ಹೋಟೆಲಿನ ಕೆಲಸದ ಟೈಮಲ್ಲೂ ಕುಡಿತಾನೆ ಅಂತ ಆ ಕೆಲಸದಿಂದ ಅವನನ್ನ ಬಿಡಿಸಿದರು. ಅಲ್ಲಿಗೆ ಅವನನ್ನು ನಂಬಿ ಕೂರೋ ಕಾಲ ಹೋಯ್ತು ಅಂತ ಗೊತ್ತಾಯ್ತು. ಒಂದೆರಡು ವಾರ ಕಳೆದ ಮೇಲೆ ಅವನು ಕೆಲಸ ಮಾಡ್ತಿದ್ದ ಹೋಟೆಲಿಗೆ ಹೋಗಿ ತೊಳೆಯೊ ಬಳಿಯೊ ಕೆಲಸ ಇದ್ರೆ ನನಗೆ ಕೊಡಿ ನಾನು ಮಾಡ್ತೀನಿ ಅಂದೆ. ಸರಿ ಅಂದರು. ಮಾರನೇ ದಿನದಿಂದ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಅಡಿಗೆ ಮಾಡಿಟ್ಟು ಹೋಟೆಲಿಗೆ ಹೋಗೋಕೆ ಶುರು ಮಾಡಿದೆ. ನಾನು ದುಡಿದು ತರ್ತಿದ್ದ ದುಡ್ಡಲ್ಲು ಗಂಡ ಪಾಲು ಕೇಳ ತೊಡಗಿದ. ನಾನು ಕೊಡದೆ ಹೋದಾಗ ಅವನ ಸಿಟ್ಟು ಜಾಸ್ತಿಯಾಗಿ ರಸ್ತೆಯಲ್ಲಿ ನಿಂತುಕೊಂಡು, “ಇವಳು ಪಾತ್ರೆ ತೊಳೆಯೊಕೆ ಹೋಗ್ತಿಲ್ಲ. ಅಲ್ಲಿಗೆ ಬರೊ ಗಿರಾಕಿಗಳ ಜೊತೆ ಮಲಗೋಕೆ ಹೋಗ್ತಿದಾಳೆ” ಅಂತ ಕೂಗಾಡ್ತಿದ್ದ. ಆ ಹಳ್ಳಿಯ ಜನ ಎಷ್ಟು ಕೆಟ್ಟವರಾಗಿದ್ರು ಅಂದರೆ ಒಬ್ಬರಾದರು ಬಂದು ಅವನಿಗೆ ಬುದ್ದಿ ಹೇಳ್ತಾ ಇರಲಿಲ್ಲ. ಹೀಗೇ ನಡೀತಾ ನಡೀತಾ ಇರಬೇಕಾದರೆ ಒಂದು ದಿನ ಹೋಟೆಲಿಗೆ ರಜಾ ಇತ್ತು. ಮದ್ಯಾಹ್ನದ ಹೊತ್ತಿಗೆ ಮನೇಲಿ ನಾನು ಅಡಿಗೆ ಮಾಡ್ತಿರುವಾಗ ಕುಡಿದು ಬಂದ ಗಂಡ ಜಗಳ ತೆಗೆದು ಹೊಡೆಯೋಕೆ ಶುರು ಮಾಡಿದ. ತಡೆಯುವಷ್ಟು ತಡೆದ ನಾನು ಅವನನ್ನು ರಸ್ತೆಗೆ ಎಳೆದು ಕೊಂಡು ಬಂದು ಬಿಟ್ಟು ಮನೆಯ ಬಾಗಿಲು ಹಾಕಿಕೊಂಡೆ. ಎಷ್ಟೊ ಹೊತ್ತಿನವರೆಗು ಅವನು ಕೂಗಾಡ್ತಲೇ ಇದ್ದ. ಒಳಗೆ ಬಂದೋಳು ಅಡಿಗೆ ಮುಗಿಸಿ ಅಳ್ತಾ ಕೂತಿದ್ದ ಮುದುಕಿಗೆ ಊಟ ಹಾಕಿ ಬಟ್ಟೆ ಒಗೆಯೋಕೆ ಅಂತ ಕೆರೆಗೆ ಹೊರಟೆ. ಬಾಗಿಲು ತೆಗೆದು ನೋಡಿದರೆ ಗಂಡ ಕಾಣಲಿಲ್ಲ. ಮತ್ತೆ ಕುಡಿಯೋಕೆ ಹೋಗಿರಬೇಕು ಅಂತನ್ನಿಸಿ ಬಾಗಿಲು ಮುಂದಕ್ಕೆಳೆದು ಕೊಂಡು ಕೆರೆಗೆಹೋದೆ. ಬಟ್ಟೆ ಒಗೆದು ಒಣಗಿಸಿಕೊಂಡು ಸಾಯಂಕಾಲ ಆರು ಗಂಟೆ ಹೊತ್ತಿಗೆ ಮನೆಗೆ ಬಂದೆ ಒಳಗೆ ಹೋಗಿ ನೋಡಿದರೆ ಅಡುಗೆಮನೆಯ ಸೂರಿಗೆ ನನ್ನ ಗಂಡ ನೇತಾಡ್ತಾ ಇದ್ದ. ನನಗೆ ಗಾಬರಿಯಾಗಿ ಹೊರಗೆ ಬಂದು ಬಾಯಿ ಬಾಯಿ ಬಡಿದುಕೊಂಡೆ. ಅಕ್ಕಪಕ್ಕದ ಜನ ಸೇರಿ ಹೆಣ ಇಳಿಸಿ ನೋಡಿದರೆ ಅವನಾಗಲೆ ಸತ್ತು ತುಂಬಾ ಹೊತ್ತಾಗಿತ್ತು. ಜಗುಲಿಯ ಮೇಲೆ ಹೆಣ ಮಲಗಿಸಿ ನೆಂಟರಿಷ್ಟರಿಗೆಲ್ಲ ಹೇಳಿಕಳಿಸಲಾಯಿತು. ಅವನ ದಾಯಾದಿ ಚನ್ನೇಗೌಡನೆ ಇದನ್ನೆಲ್ಲ ಮಾಡಿದ. ಅಷ್ಟೆಲ್ಲಾ ಮಾಡುತ್ತಿದ್ದರು ಅವನ ಕಣ್ಣೆಲ್ಲ ನನ್ನ ಮೇಲೇ ಇತ್ತು. ಸರಿ ಮಾರನೇ ದಿನ ಬೆಳಿಗ್ಗೆ ಮಣ್ಣು ಮಾಡೋದು ಅಂತ ತೀರ್ಮಾನ ಮಾಡಿದರು ಬೆಳಿಗ್ಗೆ ಆರು ಗಂಟೆಗೇನೆ ಪೋಲಿಸರು ಮನೆ ಮುಂದೆ ಬಂದು ನಿಂತು ಪಂಚನಾಮೆಯೆಲ್ಲ ಮಾಡಿದರು. ಮದ್ಯಾಹ್ನದೊತ್ತಿಗೆ ಮಣ್ಣು ಮುಗಿದರೂ ನನಗೆ ಮಾತ್ರ ಪೋಲಿಸರು ಪ್ರಶ್ನೆ ಮಾಡೋದು ನಿಲ್ಲಿಸಲಲ್ಲ. ಸಾಯಂಕಾಲದ ಹೊತ್ತಿಗೆ ಅವರು ನೀನೆ ಗಂಡನನ್ನು ನೇಣು ಹಾಕಿದಿಯಾ ಅಲ್ವಾ ಅಂತ ಕೇಳೋ ಮಟ್ಟಿಗೆ ಬಂದಿದ್ದರು. ನಾನು ಸತ್ಯ ಹೇಳಿದರು ಅವರು ಬಿಡಲಿಲ್ಲ. ನಿನ್ನ ಮೇಲೆ ನಮಗೆ ಕಂಪ್ಲೇಂಟ್ ಬಂದಿದೆ. ಅದಕ್ಕೇ ವಿಚಾರಣೆ ಮಾಡ್ತಾ ಇದೀವಿ. ಇವತ್ತು ನಿನ್ನ ಬಿಟ್ಟು ಹೋಗ್ತೀವಿ. ನಾಳೆ ಬೆಳಿಗ್ಗೆ ವಿಚಾರಣೆ ಮುಂದುವರೆಸ್ತೀವಿ ಅಂತ ಹೇಳಿ ಹೋದರು. ಮನುಷ್ಯರು ಎಷ್ಟು ಕ್ರೂರಿಗಳು ನೋಡಿ, ಮಣ್ಣಿಗೆ ಬಂದ ಅಪ್ಪ ಅಮ್ಮ ನನಗೂ ಹೇಳದೆ ವಾಪಾಸು ಹೋಗಿಬಿಟ್ಟಿದ್ದರು. ಅವತ್ತು ರಾತ್ರಿ ಹತ್ತುಗಂಟೆ ಸುಮಾರಿಗೆ ಸಾವಿತ್ರಮ್ಮ ಮನೆಗೆ ಬಂದವಳು, ನೋಡು ಈಗಲೇ ಹೇಳಿಬಿಡ್ತೀನಿ ನೀನು ಚನ್ನೇಗೌಡ ಹೇಳಿದ್ದಕ್ಕೆ ಹೂ ಅಂದರೆ ಯಾವ ಪೋಲಿಸಿನೋರು ಬೆಳಿಗ್ಗೆ ಬರಲ್ಲ. ಇಲ್ಲ ಅಂದರೆ ಕೊಲೆ ಕೇಸಲ್ಲಿ ನಿನ್ನ ಒಳಗೆ ಹಾಕ್ತಾರೆ ಅಂತ ಹೆದರಿಸಿದಳು. ಆಗ ನನಗೆ ಇದೆಲ್ಲ ಚನ್ನೇಗೌಡನದೇ ಕುತಂತ್ರ ಅನಿಸಿಬಿಟ್ಟಿತು. ಸಾವಿತ್ರಮ್ಮನನ್ನು ಇಲ್ಲ ಅಂತೇಳಿ ವಾಪಾಸು ಕಳಿಸಿ, ಮಾರನೆ ದಿನ ಪೋಲಿಸರಿಗೆ ನಿಜ ಹೇಳಿ ಬಿಟ್ರೆ ಆಯ್ತು. ಚನ್ನೇಗೌಡನ ಕಿತಾಪತಿಯನ್ನು ಹೇಳಿದರೆ ನನ್ನ ಕಷ್ಟ ಅರ್ಥವಾಗುತ್ತೆ ಅನಿಸಿ ಮಲಗಿದೆ. ಬೆಳಿಗ್ಗೆ ಬಂದ ಪೋಲಿಸನೊಬ್ಬ ನನ್ನನ್ನು ಮೂರುಮೈಲಿ ದೂರದ ಪಕ್ಕದೂರಿನ ಸ್ಟೇಷನ್ನಿಗೆ ಕರೆದುಕೊಂಡು ಹೋದ. ಅಲ್ಲಿದ್ದ ಸಬ್ ಇನ್ಸಫೆಕ್ಟರ್ ವಿಷಯವನ್ನೆಲ್ಲ ಕೇಳಿ ನನ್ನ ವಿಚಾರನೆ ಮಾಡಿ, ಆಯ್ತು ಎರಡು ದಿನ ನೀನಿಲ್ಲೆ ಇರು ನಾವು ನಿಮ್ಮ ಹಳ್ಳಿಗೆ ಹೋಗಿ ಸತ್ಯ ಏನು ಅಂತ ವಿಚಾರಿಸ್ತೀವಿ ಅಂದ. ಸಾಯಂಕಾಲದ ತನಕ ನಾನು ಅಲ್ಲೇ ಕೂತಿದ್ದೆ. ಅಲ್ಲಿದ್ದ ಇಬ್ಬರು ಮೂರು ಜನ ಪೋಲಿಸಿನವರು ನನ್ನ ನೋಡಿ ಕೆಟ್ಟದಾಗಿ ಮಾತಾಡೋದು ಕೇಳಿಸಿದರೂ ಏನೂ ಮಾಡೋಕಾಗದೆ ಸುಮ್ಮನಿದ್ದೆ. ಮದ್ಯಾಹ್ನ ಮಾತ್ರ ಪೋಲಿಸಿನವರೆ ಊಟ ತಂದುಕೊಟ್ಟಿದ್ದರು. ಸರಿ ಕತ್ತಲಾದ ಮೇಲೆ ಒಬ್ಬ ಪೋಲಿಸಿನವನು ಬಂದು, ನಡಿ ಸಾಹೇಬರು ನಿನ್ನ ವಿಚಾರಣೆ ಮಾಡಬೇಕಂತೆ ಅಂತ ಸ್ಟೇಷನ್ ಹಿಂದಿದ್ದ ಕ್ವಾಟ್ರಸ್ಸಿಗೆ ಕರೆದುಕೊಂಡು ಹೋದ. ನನ್ನ ಒಳಗೆ ಬಿಟ್ಟು ಅವನು ಮುಂದಿನಿಂದ ಬಾಗಿಲು ಹಾಕಿಕೊಂಡು ಹೋದ. ಅಲ್ಲಿದ್ದ ಇನ್ಸಪೆಕ್ಟರ್ ನನಗೆ ಕೂರೋಕೆ ಹೇಳಿ ಮತ್ತೊಂದು ಸಾರಿ ನೀನು ನಿಜ ಹೇಳಿದರೆ ನಾನು ಏನಾದರು ಸಹಾಯ ಮಾಡಬಹುದು, ಮಾಡಿರೋದನ್ನ ಒಪ್ಪಿಕೊಂಡು ಬಿಡು ಅಂತ ಹೆದರಿಸಿದ. ನಾನು ನಡೆದ ವಿಷಯವನ್ನೆಲ್ಲ ಬಿಡಿಸಿ ಬಿಡಿಸಿ ಹೇಳಿದರೂ ಅವನು ಕೇಳಲಿಲ್ಲ. ಹೀಗೆ ಸ್ವಲ್ಪ ಹೊತ್ತು ಆದಮೇಲೆ ಆಯಿತು ನಾನು ಹೇಳಿದ ಹಾಗೆ ಕೇಳಿದರೆ ನಿನ್ನ ಈ ಕೇಸಿಂದ ಬಿಡ್ತೀನಿ ಅಂತ ಹೇಳಿ ನನ್ನ ತೋಳುಹಿಡಿದು ಒಳಗಿನ ರೂಮಿಗೆ ಕರೆದುಕೊಂಡು ಹೋದ; ಅಲ್ಲಿದ್ದ ಮಂಚದ ಮೇಲೆ ಕೂರಿಸಿ ಇವತ್ತೊಂದು ರಾತ್ರಿ ಹೇಳಿದ ಹಾಗೆ ಕೇಳಿಕೊಂಡು ಸುಮ್ಮನಿದ್ದು ಬಿಡು ನಾಳೆಯಿಂದ ಆ ಚನ್ನೇಗೌಡ ನಿನ್ನ ಕಂಡರೆ ನಡುಗ ಬೇಕು ಹಾಗೆ ಮಾಡ್ತೀನಿ ಅಂದ. ಹಳ್ಳಿಯಲ್ಲಿ ಚನ್ನೇಗೌಡನಿಗೆ ತಿರುಗಿ ನಿಂತ ಹಾಗೆ ಇಲ್ಲಿ ನನಗೆ ನಿಲ್ಲೋಕೆ ಆಗಲಿಲ್ಲ. ಎಂದೂ ಸ್ಟೇಷನ್ನಿನ ಮುಖ ನೋಡದ ನಾನು ಗಡಗಡ ನಡುಗುತ್ತಲೇ ಅದೊಂದು ಬೇಡ ಅಂದೆ. ಆದರವನು ನನಗೆ ಅದೊಂದೇ ಸಾಕು ಅಂತ ನನ್ನ ಮೇಲೆ ಬಿದ್ದ. ಪೋಲಿಸ್ ಇನ್ಸಪೆಕ್ಟರೊಬ್ಬನನ್ನು ಎದುರಿಸಿನಿಲ್ಲುವ ದೈರ್ಯವಾಗಲಿ ಶಕ್ತಿಯಾಗಲಿ ನನಗಾಕ್ಷಣಕ್ಕೆ ಬರಲಿಲ್ಲ. ಸುಮ್ನಾಗಿಬಿಟ್ಟೆ. ಆ ಇಡೀರಾತ್ರಿ ಅವನು ನನ್ನನ್ನು ಪ್ರಾಣಿಗಿಂತ ಕಡೆಯಾಗಿ ಉಪಯೋಗಿಸಿಕೊಂಡ. ಬೆಳಿಗ್ಗೆ ಎದ್ದ ಮೇಲೆ ನನ್ನ ಕೈಗೆ ಒಂದಿಷ್ಟು ದುಡ್ಡು ಕೊಟ್ಟು ನೀನೀಗ ಊರಿಗೆ ಹೋಗು, ಯಾರಿಗೂ ಹೆದರಬೇಡ. ಆದರೆ ನಾನು ವಿಚಾರಣೆಗೆ ಕರೆಸಿದಾಗ ಬರಬೇಕು ಅಂತೇಳಿ ಕಳಿಸಿಕೊಟ್ಟ. ಹೊರಡುವ ಮುಂಚೆ ಖಾಲಿ ಬಿಳಿ ಹಾಳೆಯಲ್ಲಿ ನನ್ನ ಹತ್ತಿರ ಸೈನು ಮಾಡಿಸಿದ್ದಲ್ಲದೆ ಹೆಬ್ಬೆಟ್ಟನ್ನೂ ಹಾಕಿಸಿಕೊಂಡ.

ವಾಪಾಸು ಊರಿಗೆ ಬಂದವಳು ಯಾರ ಹತ್ತಿರಾನು ಮಾಡದೆ ಅಡುಗೆ ಮಾಡಿ ಅತ್ತೆಗೆ ಊಟ ಹಾಕಿ ಸುಮ್ಮನೆ ಕೂತುಕೊಂಡೆ. ರಾತ್ರಿಯಾದ ಘಟನೆ ಬಗ್ಗೆ ಯೋಚನೆ ಮಾಡೋಕೇ ಹೋಗಲಿಲ್ಲ. ಸದ್ಯ ಇಷ್ಟಕ್ಕೆ ಬಿಟ್ಟು ಕಳಿಸಿದನಲ್ಲ ಅನ್ನೋ ಸಮಾದಾನದಲ್ಲಿ ನಾನಿದ್ದೆ. ನೋಡೋದಿಕ್ಕೆ ಚೆನ್ನಾಗಿದ್ದು ಒಂಟಿ ಹೆಣ್ಣಾಗಿದ್ದೆ ನನ್ನ ತಪ್ಪಾಗಿತ್ತು. ಏನೊ ಒಂದು ದಿನದ ಹಿಂಸೆ ಅನ್ಕೊಂಡೇ ನಾನು ಸುಮ್ಮನಾಗಿ ಮತ್ತೆ ಕೆಲಸಕ್ಕೆ ಅಂತ ಹೋಟೆಲಿಗೆ ಹೋದರೆ ಅವರು ಬೇರೆಯವರು ಬಂದಿದಾರೆ ನೀನೇನು ಬರೋದು ಬೇಡ ಅಂತೇಳಿ ವಾಪಾಸು ಕಳಿಸಿಬಿಟ್ಟರು. ಮನೆಗೆ ವಾಪಾಸು ಬಂದವಳು ತಲೆ ಮೇಲೆ ಕೈ ಹೊತ್ತು ಕೂತುಬಿಟ್ಟೆ. ಮನೆಯಲ್ಲಿ ಏನೇನು ಇರಲಿಲ್ಲ. ಇನ್ಸಪೆಕ್ಟರ್ ಕೊಟ್ಟಿದ್ದ ದುಡ್ಡಲ್ಲಿ ಹದಿನೈದು ದಿನಕ್ಕಾಗುವಷ್ಟು ದಿನಸಿ ತಂದುಕೊಂಡೆ. ಇದಾದ ಮೂರನೇ ದಿನಕ್ಕೆ ಊರಲ್ಲಿ ಚನ್ನೇಗೌಡನಿಗು ಅವನಿಟ್ಟುಕೊಂಡಿದ್ದ ಸಾವಿತ್ರಮ್ಮನಿಗು ದೊಡ್ಡ ಗಲಾಟೆಯೊಂದು ನಡೆದು ಹೋಯಿತು. ಅದ್ಯಾವುದೊ ಆಸ್ತಿಯ ವಿಚಾರ ಅನ್ನೋದಷ್ಟೆ ಕಿವಿಗೆ ಬಿತ್ತು.

ಒಂದು ದಿನ ಪೋಲಿಸಿನವನೊಬ್ಬ ಬಂದು ಸಾಹೇಬರು ಕರೀತಾ ಇದಾರೆ ಸಾಯಂಕಾಲ ಬರಬೇಕಂತೆ ಅಂತ ಹೇಳಿ ಹೋದ. ಇದೇನಪ್ಪಾ ನನ್ನ ಗ್ರಹಚಾರ ಅಂದುಕೊಂಡು ವಿಧಿಯಿಲ್ಲದೆ ಸಾಯಂಕಾಲ ಹೋದರೆ. ಯತಾಪ್ರಕಾರ ರಾತ್ರಿ ಇನ್ಸಪೆಕ್ಟರ್ ಜೊತೆ ಮಲಗಬೇಕಾಯಿತು. ಏನೊ ಒಂದು ದಿನದ ನರಕ ಅಂದುಕೊಂಡಿದ್ದರೆ ಇದ್ಯಾಕೊ ಅಸಹ್ಯವೆನಿಸ ತೊಡಗಿತು. ಸರಿ ಬೆಳಗ್ಗೆ ಹೊರಟಾಗ ಸಾರ್, ಪದೇ ಪದೇ ಹೀಗೆ ಬಂದರೆ ಊರಲ್ಲಿ ಜನಕ್ಕೆ ಗೊತ್ತಾಗುತ್ತೆ. ದಯವಿಟ್ಟು ಬೇಡ ಸಾರ್. ಅಂತವನ ಕಾಲಿಗೆ ಬಿದ್ದು ಬೇಡಿಕೊಂಡೆ. ಆದರವನು ಕರಗಲಿಲ್ಲ. ಮುಚ್ಕೊಳ್ಳೇ ನಾನಿಲ್ಲ ಅಂದರೆ ಚನ್ನ ಗವಡನಂತ ಹಲ್ಕಟ್ಟ ಜೊತೆ ಮಲಗಬೇಕಾಗ್ತಿತ್ತು, ಸುಮ್ಮನೆ ಬರೋದು ಕಲಿ ಅಂತೇಳಿ ಒಂದಿಷ್ಟು ಕೊಟ್ಟು ಕಳಿಸಿದ. ಮತ್ತೆ ಸ್ಟೇಷನ್ನಿಗೆ ಹೋಗಿ ರಾತ್ರಿ ಇದ್ದು ಬಂದಿದ್ದು ಊರ ಜನಕ್ಕೆಲ್ಲ ಗೊತ್ತಾಗಿ ತಲೆ ಎತ್ತದಂತಾಗಿತ್ತು. ಹಲ್ಲು ಕಚ್ಚಕೊಂಡು ಮನೇಯಲ್ಲೇ ಇರೋಕೆ ತೊಡಗಿದೆ ಆದರೆ ಆ ರಾಕ್ಷಸ ಹಾಗಿರೋಕು ಬಿಡಲಿಲ್ಲ. ಪ್ರತಿ ಎರಡು ಮೂರು ದಿನಕ್ಕೆ ನನ್ನ ರಾತ್ರಿ ಹೊತ್ತು ಕರೆಸತೊಡಗಿದ. 

ಹಾಗೆ ಒಂದು ದಿನ ಹೋದಾಗ ಕ್ವಾಟ್ರಸ್ಸಿನಲ್ಲಿ ಅವನ ಜೊತೆ ಮೂರು ಜನ ಸ್ನೇಹಿತರೂ ಇದ್ದರು. ನನ್ನ ಕರ್ಮ ನೋಡಿ, ಆ ರಾತ್ರಿ ಇನ್ಸಪೆಕ್ಟರ್ ಸೇರಿದಂತೆ ಒಟ್ಟು ನಾಲ್ಕು ಜನರೂ ನನ್ನ ಹರಿದು ಹಂಚಿಕೊಂಡು ತಿಂದರು. ಬೆಳಿಗ್ಗೆಯಾಗುವಷ್ಟರಲ್ಲಿ ನಾನೊಂದು ನಿರ್ದಾರಕ್ಕೆ ಬಂದುಬಿಟ್ಟಿದ್ದೆ. ಇದೇ ಕೊನೆಯ ದಿನ. ಅದು ಏನಾದರು ಆಗಲಿ ಮತ್ಯಾವತ್ತು ಇಲ್ಲಿಗೆ ಬರಬಾರದು ಅಂತ. ವಾಪಾಸು ಊರಿಗೆ ಹೋದವಳು ಮೊದಲ ಬಾರಿಗೆ ಸಾವಿತ್ರಮ್ಮನ ಮನೆಗೆ ನಾಚಿಕೆ ಬಿಟ್ಟು ಹೋದೆ. ಅವಳೂ ಯಾವುದು ಸಿಟ್ಟು ತೋರಿಸದೆ ನಗುನಗುತ್ತಲೇ ಮಾತಾಡಿದಳು. ಅಷ್ಟು ದಿನ ತಡೆದಿಟ್ಟುಕೊಂಡ ದು:ಖವನ್ನೆಲ್ಲ ಅವಳ ಎದುರು ತೋಡಿಕೊಂಡು ಅತ್ತು ಬಿಟ್ಟೆ. ಸುಮಾರು ಮೂರುವರೆ ವರ್ಷಗಳ ಕಾಲ ಯಾವುದನ್ನು ಯಾರ ಬಳಿಯೂ ಹೇಳಕೊಳ್ಳಲಾಗದ ಎಲ್ಲವನ್ನು ಅವಳೆದರು ಹೇಳಿಕೊಂಡು ಹಗುರಾಗಿಬಿಟ್ಟೆ. ಕೇಳಿಸಿಕೊಂಡ ಅವಳು ಸಮಾದಾನ ಮಾಡಿ ಮುಂದೇನು ಮಾಡಬೇಕು ಅಂತಿದಿಯಾ ಅಂತ ಕೇಳಿದಳು. ಮುಂದೇನು ಅನ್ನೊ ಬಗ್ಗೆ ನನಗೇನೂ ಹೊಳೆದಿರಲಿಲ್ಲ. ಅದನ್ನೇ ಅವಳ ಬಳಿ ಹೇಳಿದೆ. ಏನು ಹೆದರಬೇಡ, ದೇವರಿದ್ದಾನೆ ಹೇಗೊ ಆಗುತ್ತೆ. ನೀನು ಯಾವ ಸುಖಕ್ಕೆ ಅಂತ ಇಲ್ಲಿರ್ತೀಯಾ? ಸುಮ್ಮನೆ ಬೆಂಗಳೂರಿಗೆ ಹೋಗಿಬಿಡು. ನೀನು ಹೋಗೋದಾದರೆ ಅಲ್ಲಿ ನಾನು ನಿನಗೇನಾದರು ಕೆಲಸದ ವ್ಯವಸ್ಥೆ ಮಾಡ್ತೀನಿ. ಇಲ್ಲ ತವರುಮನೆಗೆ ಬೇಕಾದರೆ ಹೋಗು ಅಂದಳು. ತವರು ಮನಗೆ ಹೋದರೆ ಏನಾಗುತ್ತೆ ಅಂತ ನನಗೆ ಗೊತ್ತಿತ್ತು. ಗಂಡ ಸತ್ತಾಗಲೆ ಒಂದೂ ಮಾತಾಡದೇ ಹೋದವರು ಈಗ ಹೋದರೆ, ಅವರು ನನಗೆ ಸಾಕೋದು ಕಷ್ಟ ಅಂತ ಯೋಚಿಸಿದವಳು ಇಲ್ಲ ಸಾವಿತ್ರಕ್ಕ ನಾನು ಬೆಂಗಳೂರಿಗೆ ಹೋಗ್ತೀನಿ. ಆದರೆ ಅಲ್ಲೇನು ಕೆಲಸ ಅಂತ ಹೇಳು ಅಂದೆ. ಯೋಚನೆ ಮಾಡಿದ ಸಾವಿತ್ರಮ್ಮ ನನಗೆ ಒಬ್ಬಳು ಪರಿಚಯದವಳಿದ್ದಾಳೆ, ಅವರ ಮನೆಗೆ ಕಳಿಸ್ತೀನಿ. ಅಲ್ಲಿ ಹೋದ ಮೇಲೆ ಏನು ಕೆಲಸ ಕೊಡ್ತಾಳೋ ಅದನ್ನು ನಿಷ್ಠೆಯಿಂದ ಮಾಡು ಅಂದಳು. ಆದರೆ ಇಲ್ಲಿನ ಪೋಲಿಸಿನವರು ಬಿಡ್ತಾರಾ? ಎಂದೆ. ಅದಕ್ಕವಳು “ಅಯ್ಯೋ ದಡ್ಡಿ ಆ ಇನ್ಸಪೆಕ್ಟರ್ ಕತೆ ನಂಗೊತ್ತಿಲ್ವಾ. ನಿನ್ನ ಮೇಲೆ ಯಾರೂ ಕಂಪ್ಲೇಂಟು ಕೊಟ್ಟಿಲ್ಲ, ಯಾವ ಕೇಸೂ ಹಾಕಿಲ್ಲ. ನಿನ್ನ ಜೊತೆ ಮಲಗೋಕೆ ಅವನು ಆಡಿರೋ ನಾಟಕ ಅದು. ಅವನು ನಂಗೆ ಚೆನ್ನಾಗಿ ಗೊತ್ತು. ಅವನಿಗೆ ಬೇಕಾದಾಗೆಲ್ಲ ನಾನು ಸಹಾಯ ಮಾಡಿದೀನಿ. ಅವನು ಆಸೆ ಪಟ್ಟಿದ್ದನ್ನೆಲ್ಲ ನಾನು ಈಡೇರಿಸಿದ್ದೀನಿ. ಬಿಡು ಅವನಿಗೆ ನಾನು ಹೇಳ್ತೀನಿ” ಅಂದಳು. ಅವಳು ಅಷ್ಟು ಹೇಳಿದ ಮೇಲೆ ನನಗೆ ಸಮಾದಾನವಾದರೂ ಅತ್ತೆಯ ಗತಿಯೇನು ಅಂತ ಯೋಚಿಸಿ ಕೇಳಿದೆ. ಅಯ್ಯೊ ಮಂಕೆ ನೀನ್ಯಾಕೆ ಯೋಚನೆ ಮಾಡ್ತೀಯಾ ಏನೇ ದಾಯಾದಿಗಳಾದರು ಅವಳಿಗೆ ಚನ್ನೇಗೌಡನ ಮನೆಯವರು ಅನ್ನ ಹಾಕ್ತಾರೆ. ಇವತ್ತೊ ನಾಳೆ ಸಾಯೊ ವಯಸ್ಸು ಅವಳಿಗೆ. ಅವಳ ಚಿಂತೆ ಬಿಟ್ಟು ನೀನು ಹೊರಡು ಅಂದಳು.

ಸರಿ ಅವಳು ಹೇಳಿದಂತೆ ಕೇಳುವುದೆ ಒಳ್ಳೆಯದು ಅಂತ ಆ ಸಮಯಕ್ಕೆ ಅನಿಸಿತು. ಹಾಗಾಗಿ ಬೇರೇನು ಯೋಚಿಸದೆ ಹೊರಟುಬಿಟ್ಟೆ. ಒಟ್ಟಿನಲ್ಲಿ ಅವಳ ಸಹಾಯದಿಂದ ಬೆಂಗಳೂರಿನ ಅಲಮೇಲಮ್ಮನ ಮನೆಗೆ ತಲುಪಿದೆ. ಹೋಗಿ ಒಂದೆರಡು ದಿನ ಅವಳು ನನಗೇನೂ ಹೇಳಲಿಲ್ಲ. ನಾಲ್ಕನೆ ದಿನಕ್ಕೆ ನನ್ನ ಒಬ್ಬಳೇ ಕೂರಿಸಿಕೊಂಡು ಸಾವಿತ್ರಿ ನನಗೆ ನಿನ್ನ ಕಷ್ಟಾನೆಲ್ಲ ಹೇಳಿದಾಳೆ. ಪಾಪ ಈ ವಯಸ್ಸಿಗೆ ಇಷ್ಟೊಂದು ಅನುಭವಿಸದಿಯಾ ಅಂದರೆ ನಂಗೆ ಬೇಜಾರಾಗುತ್ತೆ. ಏನೂ ಗೊತ್ತಿರದ ಪಾಪದ ಹುಡುಗಿ, ನೀನು ಆ ಪೋಲಿಸಿನವನ ದಮಕಿಗೆ ಹೆದರಿ ಮಲಗಿದ್ದಕ್ಕೆ ನಿಂಗೇನು ಸಹಾಯವಾಗಲಿಲ್ಲವಲ್ಲ. ಯಾರದೊ ಹೆದರಿಕೆ, ಮುಲಾಜಿಗೆ ಮಲಗಿ ಕಷ್ಟ ಪಡೋದಿಕ್ಕಿಂತ ನಮ್ಮ ಖುಶಿಗೆ ನಮಗೆ ಬೇಕಾದ ದುಡ್ಡಿಗೆ ಬೇರೆಯವರ ಜೊತೆ ಮಲಗೋದು ವಾಸಿ ಅಂತ ಉಪದೇಶ ಮಾಡಿದಳು. “ನೋಡು ಈಗಾಗಲೆ ನಿನಗೀ ಮನೆಯ ವ್ಯವಹಾರ ಅರ್ಥವಾಗಿರಬಹುದು. ನಾನು ಜಾಸ್ತಿಯೇನು ಹೇಳಲ್ಲ. ನಿನಗಿಷ್ಟ ಬಂದಾಗ ನಿನಗೆ ಸರಿಯೆನಿಸದವನ ಜೊತೆ ಮಲಗು. ಅದನ್ನೇ ಇಷ್ಟಪಟ್ಟು ಮಾಡು, ದುಡ್ಡೂ ಸಿಗುತ್ತೆ ಸುಖಾನು ಸಿಗುತ್ತೆ ಅಂದಳು. ಇವತ್ತು ಸಾಯಂಕಾಲ ರೆಡಿಯಾಗಿರು. ಒಬ್ಬ ಒಳ್ಳೆ ಗಿರಾಕಿ ಬರ್ತಾನೆ. ತುಂಬ ಗೌರವಸ್ಥ. ಸಾಕಷ್ಟು ದುಡ್ಡು ಕೊಡ್ತಾನೆ. ಕಡೆಯದಾಗಿ ಹೇಳ್ತೀನಿ ನಿನಗೆ ನಾನು ಬಲವಂತ ಮಾಡ್ತಿಲ್ಲ. ನೀನಾಗೆ ಈ ಮನೆಗೆ ಬಂದಿದಿಯಾ. ನಿನಗಿಷ್ಟ ಬಂದ ತೀರ್ಮಾನ ತಗೊ. ಆದರೆ ಒಂದು ನನಪಿಡು. ನೀನೆಲ್ಲೇ ಹೋದರು ಯಾವನ ಜೊತೆಗೂ ಮಲಗದೆ ಜೀವನ ಮಾಡೋಕೆ ಬೇಕಾದ ದುಡ್ಡು ಸಿಗಲ್ಲ. ಆದರೆ ಅಲಮೇಲಮ್ಮನ ಮನೆಯಲ್ಲಿ ಸಿಗೊ ಮರ್ಯಾದೆಯಾಗಲಿ, ರಕ್ಷಣೆಯಾಗಲಿ ನಿನಗೆ ಬೇರೆಲ್ಲೂ ಸಿಗಲ್ಲ ಅಂತ ಹೇಳಿ ಎದ್ದು ಹೋದಳು. ಸಾಯಂಕಾಲದವರೆಗು ಕೂತು ಯೋಚಿಸಿದೆ. ಬೇರ್ಯಾವ ದಾರಿಯೂ ನನಗೆ ಕಾಣಲಿಲ್ಲ. ಇನ್ನು ಗಂಡಸಿನ ಜೊತ ಮಲಗುವ ಸುಖದ ಬಗ್ಗೆ ನನಗೆ ಆಸಕ್ತಿಯೇ ಹೊರಟು ಹೋಗಿತ್ತು. ಅದು ಆ ಪೋಲಿಸಿನವನ ಜೊತೆ ಬಲವಂತಕ್ಕೆ ಮಲಗಿದ ದಿನವೇ ಅಸಹ್ಯವೆನಿಸಿ ಬಟ್ಟಿತು.

ಗಟ್ಟಿ ಮನಸು ಮಾಡಿದವಳಂತೆ ಸಾಯಂಕಾಲದ ಹೊತ್ತಿಗೆ ಸಿದ್ದವಾಗಿ ನಿಂತಿದ್ದೆ. ಗಿರಾಕಿಯಾಗಿ ಬಂದವನು ಆ ಮನೆಗೆ ಹಳಬ ಅನಿಸುತ್ತೆ. ನನ್ನ ಹೊರಗೆ ಕರೆದುಕೊಂಡು ಹೋಗ್ತೀನಿ ಅಂದಾಗ ಅಲಮೇಲಮ್ಮ ಬೇಡವೆನ್ನಲಿಲ್ಲ. ಅವನು ಯಾವುದೊ ಲಾಡ್ಜಿಗೆ ನನ್ನ ಕರೆದುಕೊಂಡು ಹೋದ. ನಿಜ ಹೇಳಬೇಕೆಂದರೆ ಅವತ್ತು ರಾತ್ರಿ ನನಗೆ ಅಸಹ್ಯವೂ ಅನಿಸಲಿಲ್ಲ ಜೊತೆಗೆ ತಪ್ಪು ಮಾಡ್ತಿದಿನಿ ಅಂತಾನು ಅನಿಸಲಿಲ್ಲ. ಅವನೂ ಅಷ್ಟೆ ಬಹಳ ಒಳ್ಳೆ ಮನುಷ್ಯ .ನನ್ನ ಜೊತೆ ಒರಟಾಗಿ ನಡೆದುಕೊಳ್ಳಲಿಲ್ಲ. ಅವತ್ತು ಶುರುವಾದ ನನ್ನ ರಾತ್ರಿಯ ಜೀವನ ಸುಮಾರು ಹದಿನೆಂಟು ವರ್ಷಗಳು ಯಾವುದೇ ಅಡೆತಡೆಯಿಲ್ಲದೆ ನಡೆಯಿತು. ತಿಂಗಳು ಕಳೆಯುವಷ್ಟರಲ್ಲಿ ನಾನು ಪಕ್ಕಾ ಕಸುಬುದಾರಳಾಗಿಬಿಟ್ಟೆ. ಆ ಕೆಲಸಕ್ಕೆ ಬೇಕಾದ ನಾಜೂಕು ವಯ್ಯಾರ ಒರಟುತನ ಎಲ್ಲವನ್ನು ಕಲಿತು ಅಲಮೇಲಮ್ಮನ ಪ್ರೀತಿಗೆ ಪಾತ್ರವಾದೆ.

ಕಸುಬಲ್ಲಿ ನೋವೇ ಇರಲಿಲ್ಲ ಅಂತೇನೂ ಅಲ್ಲ. ಆದರೆ ಪ್ರತಿಕೆಲಸದಲ್ಲೂ ಇರುವಂತೆ ಅದರಲ್ಲು ಕಷ್ಟಗಳಿದ್ದವು. ಕುಡಿದು ಪ್ರಾಣಿಯ ಹಾಗೆಲ್ಲ ನಡೆಸಿಕೊಳ್ಳುತ್ತಿದ್ದ ಗಿರಾಕಿಗಳು, ಎಲ್ಲ ಮುಗಿದ ಮೇಲೆ ಕೊಟ್ಟ ದುಡ್ಡನ್ನೇ ಕಿತ್ತು ಕೊಂಡು ಹೋಗುವ ಚಂಡಾಲರು ಇವರನ್ನೆಲ್ಲ ಸಂಬಾಳಿಸಬೇಕಾಗುತ್ತಿತ್ತು. ಇದರ ಜೊತೆಗೆ ಬಹಳಷ್ಟು ದುರಭ್ಯಾಸಗಳು ಜೊತೆಯಾದವು. ಹೊಗೆಸೊಪ್ಪು ಹಾಕೋದು ಕುಡಿಯೋದು ಅಭ್ಯಾಸವಾಯಿತು. ಹನ್ನೆರಡು ವರ್ಷ ದಂದೆಯ ದೆಸೆಯಿಂದ ನನ್ನ ಮೈ ಬಣ್ಣ ಕಪ್ಪಾಗತೊಡಗಿ ಆರೋಗ್ಯ ಹಾಳಗೋಕ್ಕೆ ಶುರುವಾಯಿತು. ಇನ್ನು ಇದನ್ನು ಮಾಡಲಾಗುವುದಿಲ್ಲ ಅನಿಸಿದಾಗ ದಂದೆ ನಿಲ್ಲಿಸಿ ಎಲ್ಲಿ ಹೋಗೋದು ಅನಿಸಿ ಯೋಚಿಸಿದೆ. ಅಲಮೇಲಮ್ಮನ ಮನೆಗೆ ಬಂದ ಎರಡು ವರ್ಷಗಳ ನಂತರ ಒಂದು ಸಾರಿ ನನ್ನ ತವರು ಮನೆಗೆ ಹೋಗಿಬಂದೆ. ಎಲ್ಲ ಹೆಣ್ಣುಮಕ್ಕಳ ಮದುವೆ ಮಾಡಿಕೊಟ್ಟ ಅಪ್ಪ ಟಿ.ಬಿ ಕಾಯಿಲೆಯಿಂದ ಸತ್ತುಹೋಗಿದ್ದ. ಇದ್ದ ಅಮ್ಮನಿಗೆ ಬೆಂಗಳೂರಲ್ಲಿ ಮನೆಕೆಲಸ ಮಾಡಿಕೊಂಡು ಬದುಕುತ್ತಿರೋದಾಗಿ ಹೇಳಿದ್ದೆ. ಆಮೇಲೆ ವರ್ಷಕ್ಕೊಂದು ಸಾರಿ ಹೋಗಿ ಅಮ್ಮನಿಗೆ ಬೇಕಾದಷ್ಟು ದುಡ್ಡು ಕೊಟ್ಟು ಬರ್ತಿದ್ದೆ.ಹಾಗಾಗಿ ಈ ಕಸುಬು ನಿಲ್ಲಿಸಬೇಕೆಂದು ಅನಿಸಿದಾಗ ಅಲಮೇಲಮ್ಮನಿಗೆ ಹೇಳಿ ನಾನು ದುಡಿದು ಕೂಡಿಟ್ಟ ಹಣವನ್ನು ಅವಳ ಹತ್ತಿರ ಇಸಗೊಂಡು ತವರು ಮನಗೆ ಬಂದು ಬಿಟ್ಟೆ. ಈಗ ಇಲ್ಲಿ ಸಣ್ಣದೊಂದು ಪೆಟ್ಟಿಗೆ ಅಂಗಡಿ ಹಾಕಿಕೊಂಡಿದೀನಿ. ತಮಾಷೆ ನೋಡಿ ನನ್ನ ಅಂಗಡಿ ಇರೋದೇ ಪೋಲಿಸ್ ಸ್ಟೇಷನ್ ಮುಂದೆ. ಪೋಲಿಸರನ್ನು ನೋಡಿದಾಗೆಲ್ಲ ಸಾಯಿಸುವಷ್ಟು ಕೋಪ ಬರುತ್ತೆ. ಆದರೆ ಪಾಪ ಯಾವನೊ ಒಬ್ಬ ಮಾಡಿದ ತಪ್ಪಿಗೆ ಎಲ್ರನ್ನೂ ಯಾಕೆ ದ್ವೇಷಿಸಬೇಕೆಂದುಕೊಂಡು ಸುಮ್ಮನಾಗುತ್ತೇನೆ. ಕಷ್ಟದಲ್ಲಿರೊ ಹೆಂಗಸರನ್ನು ನೋಡಿದಾಗ ಬೇಜಾರಾಗುತ್ತೆ. ತೀರಾ ಏನೂ ಮಾಡೋಕಾಗದೆ ಇರೊ ಅಂತ ಹೆಣ್ಣುಮಕ್ಕಳಿಗೆ ಈ ಸಮಾಜ ಏನು ಮಾಡಲ್ಲ. ಎಲ್ಲ ಬೂಟಾಟಿಕೆಯ ಮಾತುಗಳು. ಇವತ್ತು ತೀರಾ ಕಷ್ಟದಲ್ಲಿದ್ದು, ಬೇರೇನು ದಾರೀನೇ ಇಲ್ಲ ಅಂದುಕೊಂಡ ಹೆಣ್ಣುಮಕ್ಕಳಿಗೆ, ಮೊದಲೇ ಇರೋ ವಿಷಯ ಹೇಳಿ ಅಲಮೇಲಮ್ಮನ ಮನೆ ಅಡ್ರೆಸ್ ಕೊಡ್ತೀನಿ. ನೀವು ತಪ್ಪು ಅನ್ನಬಹುದು ಸಾರ್, ಆದರೆ ತಪ್ಪು ಅನ್ನೋ ನೀವು ಅವರಿಗೆ ಅವಳ ಜೊತೆ ಮಲಗದೆ ಹತ್ತು ರೂಪಾಯಿ ಕೊಡೋಕೆ ತಯಾರಿದ್ದೀರಾ? ಇಲ್ಲಸಾರ್ ಏನೂ ಉಪಯೋಗವಿಲ್ಲದೆ ಈ ಪ್ರಪಂಚದಲ್ಲಿ ಯಾರು ಯಾರಿಗೂ ಸಹಾಯ ಮಾಡಲ್ಲ. ರಾತ್ರಿ ಪಕ್ಕದಲ್ಲಿ ಮಲಗಿದ್ರೇನೆ ಹೆಂಡತಿಗೆ ಅನ್ನ ಹಾಕೊ ಪ್ರಪಂಚ ಇದು. ಅದಕ್ಕೆ ನಾನು ತಪ್ಪು ಮಾಡ್ತೀನಿ ಅಂತ ಅನಿಸಿಲ್ಲ. ಆದರೆ ಯಾರಿಗು ಇವತ್ತನವರೆಗು ಬಲವಂತ ಮಾಡಿಲ್ಲ.

ನೀವು ಸಾವಿತ್ರಕ್ಕನಿಗೆ ಪರಿಚಯದೋರು ಅಂತ ಇಲ್ಲೀತನಕ ಬಂದು ನನ್ನ ಕಥೆ ಹೇಳಿದ್ದೀನಿ. ನಾನಿನ್ನು ಹೋಗ್ತೀನಿ ಸಾರ್ ಅಂತ ಎದ್ದವಳಿಗೆ ನಿನಗೇನಾದರು ಸಹಾಯ ಬೇಕಾದರೆ ನನಗೆ ಕೇಳಿ. ಆದರೆ ಯಾರಿಗೂ ಇನ್ನುಮುಂದೆ ಅಲಮೇಲಮ್ಮನ ಮನೆ ಅಡ್ರೆಸ್ ಕೊಡಬೇಡಿ ಅಂದೆ. ಕಿಸಕ್ಕನೆ ನಕ್ಕ ಅವಳು ನನ್ನ ಜೊತೆ ಮಲಗ್ದೇನೆ ಸಹಾಯ ಬೇಕಾದೆ ಕೇಳು ಅಂದ್ರಲ್ಲ ಅದೇದೊಡ್ಡ ಸಹಾಯ ಸಾರ್. ಅಲಮೇಲಮ್ಮನ ಬದಲಿಗೆ ನಿಮ್ಮ ಅಡ್ರೆಸ್ ಕೊಡಲಾ? ದಯವಿಟ್ಟು ಬೇಜಾರಾಗಬೇಡಿ ಸುಮ್ಮನೆ ತಮಾಷೆಗೆ ಅಂದೆ ಅಂತ ಹೊರಟು ಹೋದಳು. ಅವಳು ಮಾಡಿದ್ದು ತಮಾಷೆಯೇ ಆದರು ನನಗಂತು ಅದು ಹೃದಯಕ್ಕೆ ನಾಟಿದ್ದು ಸುಳ್ಳಲ್ಲ!

ಜನ 9, 2016

ಅಸಹಾಯಕ ಆತ್ಮಗಳು - ಮದುವೆಯ ಕನಸ ಮರೆತು ಮಾರಿಕೊಂಡವಳು....

ಕು. ಸ. ಮಧುಸೂದನ್ 
ಅಪ್ಪ ಅದೇನು ಕೆಲಸ ಮಾಡ್ತಿದ್ದ ಅಂತ ನನಗಾಗ ಗೊತ್ತಿರಲಿಲ್ಲ. ಅಮ್ಮ ಮಾತ್ರ ಅಕ್ಕಪಕ್ಕದವರ ಮನೇಲಿ ಕೆಲಸ ಮಾಡಿ ಸಂಸಾರ ಸಾಗಿಸ್ತಿದ್ದಳು. ನಾನು ಹತ್ತಿರದಲ್ಲೆ ಇದ್ದ ಗವರ್ನಮೆಂಟ್ ಶಾಲೆಗೆ ಒಂದು ಬಟ್ಟೆ ಚೀಲ ನೇತಾಕಿಕೊಂಡು ಹೋಗ್ತಿದ್ದೆ. ಒಂದು ದಿನ ಸ್ಕೂಲಿಂದ ಮನೆಗೆ ಬರೊ ಹೊತ್ತಿಗೆ ಅಮ್ಮ ಸತ್ತೋಗಿದ್ದಳು. ಬೆಳಿಗ್ಗೆ ಸ್ಕೂಲಿಗೆ ಹೋಗಬೇಕಾದರೆ ಚೆನ್ನಾಗೆ ಇದ್ದ ಅವಳಿಗೆ ಸಾಯೊ ಅಂತಾದ್ದು ಏನಾಗಿತ್ತು ಅನ್ನೋದು ಎಂಟು ವರ್ಷದ ನನಗೆ ಅರ್ಥವಾಗಿರಲಿಲ್ಲ. ಹಳ್ಳಿಯಿಂದ ಅಮ್ಮನ ಅಪ್ಪ ಅಮ್ಮ ಅಂದರೆ ನಮ್ಮ ಅಜ್ಜ ಅಜ್ಜಿ ಬಂದರು . ಮಣ್ಣು ಮುಗಿಸಿ ತಿಥಿ ಕಾರ್ಯವನ್ನೆಲ್ಲ ಮುಗಿಸಿದ ಮೇಲೆ ಮಗೂನ ನಾವೇ ಕರಕೊಂಡು ಹೋಗ್ತೀವಿ ಅಂದಾಗ ಅಪ್ಪ “ಹು ಹಂಗೇ ಮಾಡಿ ನಾನು ಅಗಾಗ ಹಳ್ಳಿಗೆ ಬಂದು ನೋಡ್ಕೊಂಡು ಹೋಗ್ತಾ ಇರ್ತೀನಿ” ಅಂದು ನನ್ನ ಕೈಗೆ ಒಂದಿಷ್ಟು ಚಿಲ್ಲರೆ ತುರುಕಿದ. ಅಲ್ಲಿಗೆ ನನ್ನ ಓದು ಕೂಡ ಮುಗಿದು ಹೋಯ್ತು. ಹಳ್ಳೀಲಿ ಅಜ್ಜ ಅಜ್ಜಿಗೆ ಇದ್ದ ಒಂದರ್ದ ಏಕರೆ ಹೊಲವನ್ನು ರಾಗಿ ಬೆಳೆಯೋಕೆ ಗುತ್ತಿಗೆ ನೀಡಿದ್ರು. ಅದರಿಂದ ಬರೋ ದುಡ್ಡಲ್ಲೇ ನಾವು ಮೂರು ಜನದ ಜೀವನ ಸಾಗ ಬೇಕಿತ್ತು. ಮನೇಲಿ ಒಂದೆರಡು ಕುರಿಗಳಿದ್ದವು. ನಾನು ಬೆಳಿಗ್ಗೆ ಊಟ ಮಾಡಿ ಕುರಿ ಹೊಡ್ಕೊಂಡು ಹೋಗ್ತಾ ಇದ್ದೆ. ಮದ್ಯಾಹ್ನದ ಊಟ ಇರ್ತಾ ಇರ್ಲಿಲ್ಲ.ಸಾಯಂಕಾಲ ಮನೆಗೆ ಬಂದು ಕುರಿ ಕಟ್ಟಿ ಹಾಕಿ ಮನೆಗೆಲಸ ಮಾಡಿ ರಾತ್ರಿ ಊಟ ಮಾಡಿ ಮಲಗ್ತಾ ಇದ್ದೆ.ವರ್ಷದಲ್ಲಿ ಒಂದೆರಡು ಸಾರಿ ಅಪ್ಪ ಬರೋನು. ಬೆಳಿಗ್ಗೆ ಬಸ್ಸಿಗೆ ಬಂದು ಸಾಯಂಕಾಲದ ಹೊತ್ತಿಗೆ ವಾಪಸು ಹೋಗಿಬಿಡೋನು. ಯಾವತ್ತಿಗು ಅವನು ನನ್ನ ಅಷ್ಟೇನು ಪ್ರೀತಿಯಿಂದ ಮಾತಾಡಿಸ್ತಾ ಇರಲಿಲ್ಲ.ಚೆನ್ನಾಗಿದಿಯಾ ಅಂತ ಕೇಳಿ ತಂದ ಒಂದಷ್ಟು ಮಿಠಾಯಿ ಕೈಗಿಟ್ಟರೆ ಅವನ ಕೆಲಸ ಮುಗೀತು ಅಂತಹೊರಟುಹೋಗೋನು. ಹಾಗಾಗಿ ನನಗೂ ಅವನ ಮೇಲೆ ಅಪ್ಪ ಅನ್ನೋ ಮಮಕಾರ ಬೆಳಿಲೇ ಇಲ್ಲ.

ಹಂಗೇ ಒಂದೆರಡು ವರ್ಷ ಆದಮೇಲೆ ಒಂದು ಸಾರಿ ಬಂದಾಗ ಒಬ್ಬ ಹೆಂಗಸನ್ನು ಕರೆದುಕೊಂಡು ಬಂದಿದ್ದ. ಅವನು ಅದಾಗಲೆ ಮತ್ತೆ ಮದುವೆಯಾಗಿದ್ದ. ಅವನು ಇವಳೇ ನಿನ್ನ ಚಿಕ್ಕಮ್ಮ ಅಂತ ಹೇಳಿದ್ದ. ಅವನು ಹಾಗೆ ಮದುವೆಯಾಗಿದ್ದು ಅಜ್ಜ ಅಜ್ಜಿಯರಿಗೆ ಇಷ್ಟವಾಗದಿದ್ದರು ಪಾಪ ಒಂಟಿ ಗಂಡಸು ಒಂದು ಹೆಣ್ಣು ದಿಕ್ಕು ಬೇಕಲ್ವ ಅಂತ ಅವರವರೇ ಮಾತಾಡಿಕೊಂಡು ಸಮಾದಾನ ಮಾಡಿಕೊಂಡಿದ್ದರು. ಅದಾಗಿ ವರ್ಷಕ್ಕೆ ನಾನು ಮೈನೆರೆದೆ. ಪೇಟೇಲಿದ್ದ ಅಪ್ಪನಿಗೆ ಅಜ್ಜ ಅಜ್ಜಿ ಹೇಳಿ ಕಳಿಸಿದರು. ಒಂಭತ್ತನೇ ದಿನದ ಆರತಿ ಶಾಸ್ತ್ರದ ದಿನ ಅಪ್ಪ ಮತ್ತೆ ಚಿಕ್ಕಮ್ಮ ಬಂದರು. ಬರೋವಾಗ ನನಗೆ ಹೊಸ ಬಟ್ಟೆ, ಹೂವು, ಹಣ್ಣು ಎಲ್ಲ ತಂದಿದ್ದರು. ಅಷ್ಟು ವರ್ಷದಲ್ಲಿ ಮೊದಲ ಬಾರಿಗೆ ಅಪ್ಪ ನನಗಾಗಿ ಅಷ್ಟು ಖರ್ಚು ಮಾಡಿದ್ದ. ಅವನೀಗ ಮೊದಲಿನಂತಿರಲಿಲ್ಲ. ಬದಲಿಗೆ ಸಾಕಷ್ಟು ದುಡ್ಡು ಮಾಡಿದವನ ಹಾಗೆ ಕಾಣ್ತಿದ್ದ. ಚಿಕ್ಕಮ್ಮನ ಮೈಮೇಲೂ ಒಡವೆಗಳು ತುಂಬಾ ಇದ್ದವು ಅವತ್ತು ಸಾಯಂಕಾಲ ಶಾಸ್ತ್ರ ಮುಗಿಸಿ ಮಾರನೇ ದಿನ ಬೆಳಿಗ್ಗೆ ಅವರು ಹೊರಟು ಹೋದರು. ಅದಾಗಿ ಒಂದು ವರ್ಷದ ತನಕ, ತಿಂಗಳು ಎರಡು ತಿಂಗಳಿಗೊಮ್ಮೆ ಚಿಕ್ಕಮ್ಮ ಮಾತ್ರ ಬಂದು ಹೋಗಿ ಮಾಡೋದಿಕ್ಕೆ ಶುರು ಮಾಡಿದಳು. ಕೇಳಿದರೆ ಅಪ್ಪನಿಗೆ ಹುಷಾರಿಲ್ಲ. ಹಾಗಾಗಿ ಅವನಿಗೆ ಇಷ್ಟು ದೂರ ಬಸ್ಸಲ್ಲಿ ಬರೋಕೆ ಕಷ್ಟವಾಗುತ್ತೆ ಅಂತ ಹೇಳೋಳು. ಕೊನೆಗೆ ನಾನು ಮೈನೆರೆದ ಎರಡನೇ ವರ್ಷಕ್ಕೆ ಅಪ್ಪ ಸತ್ತು ಹೋದ ಸುದ್ದಿ ಬಂತು. ನಾವು ಪೇಟೆಗೆ ಹೋಗೊ ಅಷ್ಟರಲ್ಲಿ ಮಣ್ಣಾಗಿಬಿಟ್ಟಿತ್ತು. ಆ ದು:ಖದಲ್ಲೂ ಚಿಕ್ಕಮ್ಮ ನನ್ನ ಮದುವೆ ಮಾತಾಡಿದಳು. ನಿಮ್ಮ ಅಳಿಯ ಇಲ್ಲ ಅಂತ ಕೊರಗಬೇಡಿ ಇವಳು ನನ್ನ ಮಗಳಿದ್ದ ಹಾಗೇನೆ, ಇವಳಿಗೊಂದು ಗಂಡು ನೋಡಿ ಮದುವೆ ಮಾಡೋದು ನನ್ನಕರ್ತವ್ಯ, ನೀವೇನು ಚಿಂತೆ ಮಾಡಬೇಡಿ ಅಂತೆಲ್ಲ ಹೇಳಿದಳು. ಮೂರನೆ ದಿನದ ಕಾರ್ಯ ಮುಗಿಸಿ ನಾವು ಊರಿಗೆ ಹೊರಟಾಗ ಮಾತ್ರ ಇವಳು ಇಲ್ಲೇ ಇರಲಿ, ಪೇಟೇಲಿದ್ದರೆ ನಾಲ್ಕು ಗಂಡುಗಳಿಗೆ ಇವಳನ್ನು ತೋರಿಸಬಹುದು. ಯಾರಾದರು ಒಳ್ಳೆ ಹುಡುಗ ಸಿಕ್ಕರೆ ಮದುವೆ ಮಾಡೋಣ. ಇವಳನ್ನು ಸದ್ಯಕ್ಕೆ ಇಲ್ಲೇ ಬಿಟ್ಟು ಹೋಗಿ ಅಂತ ಅಜ್ಜ ಅಜ್ಜಿನ ಕೇಳಿದಾಗ ಪಾಪ ಅವರಿಗೂ ಸರಿಯೆನಿಸಿರಬೇಕು. ಮಲತಾಯಿ ಆದೋಳೇ ಇಷ್ಟು ಪ್ರೀತಿ ತೋರಿಸ್ತಿರಬೇಕಾದ್ರೆ ನಮ್ಮ ಮೊಮ್ಮಗಳು ತುಂಬಾ ಅದೃಷ್ಟವಂತೆ ಅನ್ಕೊಂಡು ನಾವು ಆಗಾಗ ಬಂದು ನೋಡ್ಕೊಂಡು ಹೋಗ್ತೀವಿ ಅಂತ ಹೇಳಿ ನನಗೊಂದಿಷ್ಟು ಬುದ್ದಿಮಾತು ಹೇಳಿ ಹಳ್ಳಿಗೆ ವಾಪಾಸು ಹೋದರು. 

ಚಿಕ್ಕಮ್ಮ ಈಗಿದ್ದಮನೆ ತುಂಬಾ ದೊಡ್ಡದಾಗಿ, ಎರಡು ಮೂರು ರೂಮುಗಳಿದ್ದವು. ಇಷ್ಟು ವರ್ಷಗಳಲ್ಲಿ ಅಪ್ಪ ಸಾಕಷ್ಟು ದುಡಿಮೆ ಮಾಡಿದ್ದಾನೆ ಅನಿಸ್ತು. ಚಿಕ್ಕಮ್ಮನಿಗೆ ಹತ್ತುವರ್ಷದ ಮಗಳೊಬ್ಬಳಿದ್ದು, ಅವಳು ಬೇರೆ ಊರಿನ ಹಾಸ್ಟೆಲ್ಲಿನಲ್ಲಿದ್ದಾಳೆ ಅಂತ ಅಲ್ಲಿ ಹೋದ ಮೇಲೇನೆ ನನಗೆ ಗೊತ್ತಾಗಿದ್ದು. ಹೀಗೆ ಒಂದಷ್ಟು ವಾರ ಅಲ್ಲಿದ್ದಾಗ ನನಗ್ಯಾಕೊ ಆ ಮನೆಯ ವ್ಯವಹಾರಗಳು ವಿಚಿತ್ರ ಅನಿಸತೊಡಗಿತು. ಬೆಳಿಗ್ಗೆ ತಿಂಡಿ ತಿಂದಮೇಲೆ ನಾನು ಮನೆಯ ಹಿಂದಿದ್ದ ಕೊನೆ ರೂಮಲ್ಲೇ ಇರಬೇಕು. ಏನಾದ್ರು ಬೇಕಿದ್ದರೆ ಮಾತ್ರ ಹೊರಗೆ ಬರಬೇಕು. ಅದು ಇದು ವ್ಯವಹಾರ ಅಂತ ಗಂಡಸರು ಬರ್ತಿರ್ತಾರೆ, ನೀನು ಅವರೆದುರಲ್ಲಿ ಓಡಾಡೋದು ಸರಿಯಲ್ಲ ಅಂತ ಚಿಕ್ಕಮ್ಮ ಹೇಳಿದಾಗ ಅದರಲ್ಲಿ ನಂಗೇನು ತಪ್ಪು ಕಂಡಿರಲಿಲ್ಲ. ಆದರೆ ಹಾಗೆ ಬಂದ ಗಂಡಸರು ಮನೆಯ ಬೇರೆ ರೂಮುಗಳಿಗೆ ಹೋಗಿ ಬಾಗಿಲು ಹಾಕಿಕೊಂಡು ಗಂಟೆಗಟ್ಟಲೆ ಇರೋದು ನನಗೆ ಆಶ್ಚರ್ಯವಾಗುತ್ತಿತ್ತು. ಬರಿ ಗಂಡಸರಲ್ಲದೆ ಬಹಳ ಹುಡುಗಿಯರು ಹೆಂಗಸರು ಸಹ ಆ ಮನೆಗೆ ಬರ್ತಿದ್ದರು. ಹಾಗೆ ಬಂದ ಹೆಂಗಸರ ಜೊತೆ ಗಂಡಸರು ರೂಮಿಗೆ ಹೋಗೋದನ್ನು ನೋಡಿದ ಮೇಲೆ ಮನಸ್ಸಿಗೊಂದು ಥರಾ ಕಸಿವಿಸಿ ಆಗತೊಡಗಿತು. ಗಂಡುಹೆಣ್ಣಿನ ಸಂಬಂದವಾಗಲಿ, ಈ ಸೆಕ್ಸ್ ಆಗಲಿ ಗೊತ್ತಾಗದಷ್ಟು ನಾನು ದಡ್ಡಿಯಾಗಿದ್ದೆ, ಈ ನಡುವೆ ಆಗಾಗ ನನ್ನನ್ನ ಮಾತನಾಡಿಸುತ್ತಿದ್ದ ಚಿಕ್ಕಮ್ಮ ಚೆನ್ನಾಗೇ ನೋಡಿಕೊಳ್ತಾ ಇದ್ದಳು. ನಾನೂ ಅವಳಿಗೆ ಬೇಜಾರಾಗದಂತೆ ಯಾವ ಪ್ರಶ್ನೆಗಳನ್ನು ಕೇಳದೆ ಇರತೊಡಗಿದ್ದೆ. ಏನೇ ಆದರು ನಾನು ವಯಸ್ಸಿಗೆ ಬಂದಿದ್ದ ಹುಡುಗಿ ಅಲ್ವಾ ನಿದಾನಾಗಿ ಅಲ್ಲೇನು ನಡೀತಾ ಇದೆ ಅನ್ನೋದು ಅರ್ಥವಾಗತೊಡಗಿತು.

ಎರಡು ತಿಂಗಳಾದ ಮೇಲೊಂದು ದಿನ ನನ್ನ ರೂಮಿಗೆ ಬಂದ ಚಿಕ್ಕಮ್ಮ ನೋಡು ಇವತ್ತು ಮದ್ಯಾಹ್ನ ನಿನ್ನ ನೋಡೋಕೆ ಒಬ್ಬ ಹುಡುಗ ಬರ್ತಾನೆ. ಒಳ್ಳೆ ಕೆಲಸದಲ್ಲಿದ್ದಾನೆ. ನೀನು ಮದ್ಯಾಹ್ನದ ಹೊತ್ತಿಗೆ ರೆಡಿಯಾಗಿರು. ನೀನು ಹೊರಗೇನು ಬರೋದು ಬೇಡ. ನಿನ್ನ ರೂಮಿಗೆ ಅವನನ್ನು ಕರಕೊಂಡು ಬರ್ತೀನಿ. ನಾಚಿಕೆ ಪಡದೆ ಅವನ ಜೊತೆ ಮಾತಾಡು. ಅವನು ಹೇಳಿದ ಹಾಗೆ ಕೇಳು. ಅವನು ಒಪ್ಪಿದರೆ ನಿನ್ನ ಪುಣ್ಯ ಅಂತ ಹೇಳಿ ಹೊರಟು ಹೋದಳು. ಮದುವೆ ಅನ್ನೋ ಮಾತು ಕೇಳಿ ನನಗೂ ಸಂತೋಷವಾಯ್ತು. ಸರಿ ಅಂತ ಎದ್ದು ಹನ್ನೆರಡು ಗಂಟೆಗೆಲ್ಲ ಸ್ನಾನ ಮಾಡಿ ಕೂತೆ. ಮತ್ತೆ ಬಂದ ಚಿಕ್ಕಮ್ಮ ನಾನು ಹಾಕಿದ್ದ ಲಂಗ ಜಾಕೀಟು ನೋಡಿ ಥೂ ಇದೇನೆ ಇದನ್ನು ಹಾಕಿಕೊಂಡಿದಿಯಾ ಅಂತೇಳಿ ಒಂದು ಒಳ್ಳೆ ಸೀರೆತಂದು ಕೊಟ್ಟಳು. ನನಗೆ ಉಡೋದಿಕ್ಕೆ ಬರಲ್ಲ ಅಂದಾಗ ಅವಳೇ ಉಡಿಸಿ, ನೋಡು ಹುಡುಗ ತುಂಬಾ ಒಳ್ಳೇನು. ಅವನೇನೇ ಕೇಳಿದರು ಸರಿಯಾಗಿ ಉತ್ತರ ಕೊಡು ಪ್ರೀತಿಯಿಂದ ಮಾತಾಡು. ಹಳ್ಳಿ ಹುಡುಗಿತರಾ ನಾಚಿಕೆ ಪಡಬೇಡ ಅಂತ ಹೇಳಿ ಹೋದಳು. ಅದಾಗಿ ಒಂದು ಗಂಟೆ ಆದ ಮೇಲೆ ಸುಮಾರು ಸುಮಾರು ಮುವತ್ತು ವರ್ಷದ ಒಬ್ಬ ಗಂಡಸು ಒಳಗೆ ಬಂದ. ಬಂದವನು ಮಂಚದ ಮೇಲೆ ಕೂತುಕೊಂಡು ಹೆಸರು ಕೇಳಿದ. ನಾನು ಹೇಳಿದಾಗ ಬಾ ಇಲ್ಲೆ ಮಂಚದ ಮೇಲೆ ಕೂರು ಅಂತ ತನ್ನ ಪಕ್ಕ ಕೂರುವಂತೆ ಹೇಳಿದ. ಚಿಕ್ಕಮ್ಮ ಹೇಳಿದ ಮಾತಿನಂತೆ ನಾನು ಅವನ ಪಕ್ಕ ಕೂತುಕೊಂಡೆ. ಅವನು ಅದು ಇದು ಮಾತಾಡುತ್ತ ನನ್ನ ಹೆಗಲ ಮೇಲೆ ಕೈ ಹಾಕಿದ. ನನಗೆ ಒಂಥರಾ ನಾಚಿಕೆ ಆಗಿ ಅವನ ಕೈ ತೆಗಿಯೋಕೆ ಹೇಳಿದೆ. ಅದಕ್ಕವನು ನಿಮ್ಮ ಚಿಕ್ಕಮ್ಮ ನೀನು ತುಂಬಾ ಒಳ್ಳೆ ಹುಡುಗಿ ಅಂತ ಹೇಳಿದಾಳೆ ಅಂತ ಹೇಳುತ್ತಾ ನನ್ನ ತಬ್ಬಿಕೊಂಡ. ನಾನು ಅವನಿಂದ ಬಿಡಿಸಿಕೊಳ್ಳಲು ಕೊಸರಾಡಿದೆ. ಆದರವನ ಕೈನಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಏನಾಗುತ್ತಿದೆ ಅಂತ ನನಗರ್ಥವಾಗುವಷ್ಟರಲ್ಲಿ ನನ್ನೆಲ್ಲ ಬಟ್ಟೆಗಳ್ನು ಬಿಚ್ಚಿ ಬೆತ್ತಲು ಮಾಡಿಬಿಟಿದ್ದ. ಜೋರಾಗಿಕೂಗಲು ಚಿಕ್ಕಮ್ಮನ ಭಯ. ಹಾಗಾಗಿ ಇದೆಲ್ಲ ಬೇಡ ಅಂತೇಳಿ ದೂರ ಹೋಗಲು ನೋಡಿದೆ. ಆದರವನು ಬಲವಂತದಿಂದ ನನ್ನನ್ನು ಹಾಳು ಮಾಡಿಬಿಟ್ಟ. ರಾತ್ರಿ ಎಂಟುಗಂಟೆಯವರೆಗು ಅವನು ರೂಮಿಂದ ಆಚೆ ಹೋಗದೆ ನನ್ನ ಹರಿದು ಮುಕ್ಕಿಬಿಟ್ಟ. ರಾತ್ರಿ ಹೋಗುವಾಗ ಮತ್ತೆ ನಾಳೆ ಬರುತ್ತೇನೆ ಅಂತೇಳಿ ಹೋದ. ನಾನು ಏನೋ ಕಳೆದುಕೊಂಡಂತೆ ಅಳುತ್ತಾ ಕೂತೆ. ಆಮೇಲೆ ಬಂದ ಚಿಕ್ಕಮ್ಮ ನನ್ನನ್ನು ಸಮಾದಾನ ಮಾಡುತ್ತಾ ಅವನಿಗೆ ತುಂಬ ಅವಸರ ನೋಡು, ಮದುವೆಗೆ ಮುಂಚೇನೆ ಇದೆಲ್ಲ ಮಾಡಿಬಿಟ್ಟಿದ್ದಾನೆ. ಹೋಗಲಿ ಬಿಡು ಅಳಬೇಡ. ಸಮಾದಾನ ಮಾಡಿಕೊ ಅಂದು ಅಲ್ಲಿಗೇ ಊಟ ತಂದು ಕೊಟ್ಟಳು. ಮೊದಲ ದಿನವೇ ಅವನು ನನ್ನ ಹಿಂಡಿ ಹಿಪ್ಪೆಮಾಡಿದ್ದ. ಮೈಯೆಲ್ಲ ನೋವಾಗಿದ್ದು ಅವನು ಮದುವೆಯಾಗುವ ಹುಡುಗ ಅಂತ ಅನ್ನಿಸಿ ಒಂಥರಾ ಸಮಾದಾನವೂ ಆಗಿತ್ತು.

ಮಾರನೇ ದಿನ ರಾತ್ರಿಯಾದರು ಅವನು ಮತ್ತೆ ಬರಲಿಲ್ಲ. ಯಾಕೊ ಗೊತ್ತಿಲ್ಲ ಅವನು ಬರಲಿಲ್ಲವೆಂಬುದು ಮನಸ್ಸಿಗೆ ಬೇಜಾರೆನಿಸಿತು. ಅದಾಗಿ ಮೂರನೆ ದಿನಕ್ಕೆ ನನ್ನ ರೂಮಿಗೆ ಬಂದ ಚಿಕ್ಕಮ್ಮ ರಾತ್ರಿ ಎಂಟುಗಂಟೆ ಹೊತ್ತಿಗೆ ರೆಡಿಯಾಗಿರು ಹುಡುಗ ಬರ್ತಾನೆ ಅಂತ ಹೇಳಿದಾಗ ನಾನು ಅವನೇ ಬರ್ತಾನೆ ಅಂತ ಆಸೆಯಿಂದ ಕಾಯ್ತಿದ್ದೆ. ಆದರೆ ರಾತ್ರಿ ಬೇರೊಬ್ಬ ಗಂಡಸು ಬಂದು ನನ್ನ ರೂಮಿನ ಬಾಗಿಲು ಹಾಕಿದಾಗ ಮಾತ್ರ ದಿಗ್ಬ್ರಮೆಯಾಯಿತು. ಬಂದವನು ನನ್ನ ಮೇಲೆರಗಿದಾಗ ನಾನು ವಿರೋಧಿಸಿ ಕೂಗಾಡಿದಾಗ ರೂಮಿಗೆ ಬಂದ ಚಿಕ್ಕಮ್ಮ ಬಾಯಿ ಮಚ್ಚಿಕೊಂಡಿರೆ ಸಾಕು ಅಂತ ನನ್ನ ಕೆನ್ನಗೆ ಎರಡು ಹೊಡೆದಳು. ಆ ಮೇಲೆ ನಾನು ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅವತ್ತು ಎರಡನೆಯ ವ್ಯಕ್ತಿ ನನ್ನನ್ನು ಉಪಯೋಗಿಸಿಕೊಂಡ. ಅವತ್ತು ಇಡೀರಾತ್ರಿ ನಾನು ಊಟ ಮಾಡದೆ ಅಳುತ್ತಾ ಮಲಗಿದೆ. ಆದರೆ ಚಿಕ್ಕಮ್ಮ ನನ್ನ ಅಳುವಿಗೆಲ್ಲ ಕೇರ್ ಮಾಡೊ ಹೆಂಗಸಾಗಿರಲಿಲ್ಲ. ನಾನಾ ಹಿಂಸೆಗಳನ್ನು ಕೊಟ್ಟು, ಉಪವಾಸ ಹಾಕಿ ಅವಳ ಮಾತಿಗೆ ನಾನು ಹೂ ಅನ್ನುವಂತೆ ಮಾಡಿಬಿಟ್ಟಳು. ಆಮೇಲಾಮೇಲೆ ಅದು ಮಾಮೂಲಿಯಾಗತೊಡಗಿತು. ಎರಡು ಮೂರು ದಿನಕ್ಕೊಮೆ ಬರುತ್ತಿದ್ದವರು ಆಮೇಲೆ ದಿನಾ ಬರತೊಡಗಿದ್ದರು. ಒಟ್ಟಿನಲ್ಲಿ ಒಂದೇ ತಿಂಗಳಿಗೆ ನಾನು ಚಿಕ್ಕಮ್ಮನ ಅಡ್ಡೆಯೊಳಗೆ ಸೂಳೆಯಾಗಿ ಬದಲಾಗಿಬಿಟ್ಟಿದ್ದೆ. ಈ ನಡುವೆ ಒಂದು ಸಾರಿ ಅಜ್ಜ ಒಬ್ಬನೇ ಹಳ್ಳಿಯಿಂದ ನನ್ನ ನೋಡಲು ಬಂದಿದ್ದ. ಅವನು ಬಂದ ತಕ್ಷಣ ಚಿಕ್ಕಮ್ಮ ಏನೂ ಹೇಳಬಾರದೆಂಬಂತೆ ನನಗೆ ಪರೋಕ್ಷ ಎಚ್ಚರಿಕೆ ಕೊಟ್ಟಿದ್ದಳು. ಬಂದ ಅಜ್ಜನಿಗೆ ನಾನು ಚೆನ್ನಾಗಿರುವುದಾಗಿ ಹೇಳಿ ಕಳಿಸಿಕೊಟ್ಟೆ. ಅವನು ಹೋಗುವಾಗ ನನಗೆ ಗಿರಾಕಿಗಳು ಕೊಟ್ಟಿದ್ದ ಒಂದಿಷ್ಟು ದುಡ್ಡನ್ನೂ ಕೊಟ್ಟು ಕಳಿಸಿದೆ. ಇದ್ಯಾವ ದುಡ್ಡು ಅಂತ ಕೇಳಿದವನಿಗೆ ಚಿಕ್ಕಮ್ಮ ಕೊಟ್ಟಿದ್ದು ಅಂತೇಳಿದೆ.

ಮತ್ಯಾವತ್ತು ಚಿಕ್ಕಮ್ಮ ನನ್ನ ಮದುವೆಯ ಮಾತೆತ್ತಲಿಲ್ಲ. ನನಗೂ ಪರಿಸ್ಥಿತಿ ಅರ್ಥವಾಗಿತ್ತು. ನಿದಾನಕ್ಕೆ ಅವಳೊಂದಿಗೆ ಹೊಂದಿಕೊಂಡು ಬಿಟ್ಟೆ. ಹೀಗೇ ಮೂರು ವರ್ಷಗಳು ಕಳೆದು ಹೋದವು. ಹಾಸ್ಟೆಲ್ಲಿನಲಿದ್ದ ಚಿಕ್ಕಮ್ಮನ ಮಗಳು ವರ್ಷಕ್ಕೊಂದು ಸಾರಿ ಬಂದಾಗ ಮನೆಯ ಎಲ್ಲ ವ್ಯವಹಾರಗಳು ಬಂದ್ ಆಗುತ್ತಿದ್ದವು. ಆದರೆ ಆಕೆಗೆ ಇಲ್ಲಿಯ ಎಲ್ಲವೂ ಗೊತ್ತಿದ್ದವು ಅಂತ ಅವಳು ನನ್ನ ಹತ್ತಿರ ಮಾತನಾಡುವಾಗ ನನಗೆ ಗೊತ್ತಾಗುತ್ತಿತ್ತು. ಹೀಗಾಗಿಯೇ ಅವಳು ರಜಕ್ಕೆ ಅಂತ ಬಂದರೂ ಎರಡು ದಿನದ ಮೇಲೆ ಇರುತ್ತಿರಲಿಲ್ಲ. ಬರಬರುತ್ತ ಚಿಕ್ಕಮ್ಮನಿಗೆ ನನ್ನ ಮೇಲೆ ನಂಬಿಕೆ ಬರುತ್ತಿದ್ದಂತೆ ತಿಂಗಳಿಗೊಂದು ಸರಿ ಹಳ್ಳಿಗೆ ಹೋಗಿ ಅಜ್ಜ ಅಜ್ಜಿಯರನ್ನು ಮಾತಾಡಿಸಿಕೊಂಡು ಬರುತ್ತಿದ್ದೆ. ಅವರು ಮದುವೆಯ ಮಾತು ಎತ್ತಿದಾಗೆಲ್ಲ ಏನಾದರು ಒಂದು ಕಥೆ ಕಟ್ಟಿ ಮಾತು ಬದಲಾಯಿಸುತ್ತಿದ್ದೆ. ಅವರ ಜೀವನಕ್ಕಾಗುವಷ್ಟು ದುಡ್ಡನ್ನು ಕೊಟ್ಟು ಬರುತ್ತಿದ್ದೆ. 

ದಿನಗಳು ಉರುಳುತ್ತಾ ಹೋದವು ಈ ನಡುವೆ ಅಜ್ಜ ಅಜ್ಜಿ ಇಬ್ಬರು ತೀರಿಕೊಂಡರು. ಚಿಕ್ಕಮ್ಮನ ಮಗಳ ಓದು ಮುಗಿದು ಕಾಲೇಜಲ್ಲೇ ಯಾರನ್ನೊ ಪ್ರೀತಿಸಿ ಮದುವೆಯಾಗಿಬಿಟ್ಟಳು. ಮತ್ಯಾವತ್ತು ಆಕೆ ಮನೆ ಕಡೆ ತಲೆ ಹಾಕಲಿಲ್ಲ.. ಮೊದಲೆ ಕುಡಿಯುತ್ತಿದ್ದ ಚಿಕ್ಕಮ್ಮ ಮಗಳು ಕೈಬಿಟ್ಟು ಹೋದ ಮೇಲೆ ಬೆಳಿಗ್ಗೆ ಬೆಳಿಗ್ಗೆಯೇ ಕುಡಿಯೋಕೆ ಶುರು ಮಾಡಿದ್ದಳು. ಮಗಳ ಮದುವೆಯಾದ ಎರಡೇ ವರ್ಷಕ್ಕೆ ಚಿಕ್ಕಮ್ಮನಿಗೆ ಲಕ್ವಾ ಹೊಡೆದು ಹಾಸಿಗೆ ಹಿಡಿದಳು. ಮಲಗಿದಲ್ಲೆ ಮಲಗಿರುತ್ತಿದ್ದವಳು ಮನೆಯ ಎಲ್ಲ ವ್ಯವಹಾರವನ್ನೂ ನನಗೆ ಕೊಟ್ಟಿದ್ದಳು. ಚಿಕ್ಕಮ್ಮನ ದಂದೆಯ ವಾರಸುದಾರಳಾಗಿ ನಾನು ಗಿರಾಕಿಗಳನ್ನು ಸಂಬಾಳಿಸುವ, ಹೊಸ ಹುಡುಗಿಯರನ್ನು ಹೊಂದಿಸುವ ಕೆಲಸವನ್ನು ಮಾಡಬೇಕಾಗಿತ್ತು. ಇದರ ನಡುವೆ ಆಗಾಗ ಕಾಟ ಕೊಡುತ್ತಿದ್ದ ರೌಡಿಗಳನ್ನು, ಸ್ಥಳೀಯ ರಾಜಕಾರಣಿಗಳನ್ನು ಮಾಮೂಲಿ ಕೊಟ್ಟು ಸಮಾದಾನ ಮಾಡಬೇಕಾಗಿತ್ತು. ಇನ್ನು ಪೋಲಿಸರಿಗೆ ತಿಂಗಳು ತಿಂಗಳು ಮಾಮೂಲಿಕೊಟ್ಟರೂ ಅವಾಗವಾಗ ರೇಡು ಮಾಡುವುದನ್ನು ತಪ್ಪಿಸುತ್ತಿರಲಿಲ್ಲ. ಆಗೆಲ್ಲ ಪೋಲಿಸ್ ಸ್ಟೇಷನ್ನಿಗೆ ಹೋಗಿ ಅವರಿಗೆ ದುಡ್ಡು ಕೊಡಬೇಕಾಗಿತ್ತು. ಹೀಗೆ ಮನೆಯ ಎಲ್ಲ ವ್ಯವಹಾರಗಳನ್ನು ಕೈಗೆ ತೆಗೆದುಕೊಂಡ ಮೇಲೆ ತೀರಾ ಸುಸ್ತೆನಿಸುತ್ತಿತ್ತು. ಬರೋಬರಿ 21 ವರ್ಷ ಇದನ್ನೆಲ್ಲ ನಿಬಾಯಿಸಿದೆ. ಅಂದರೆ 16ನೇ ವಯಸ್ಸಿಗೆ ಶುರುವಾದ ಈ ಕಸುಬು ಮತ್ತು ಮನೆ ವ್ಯವಹಾರವನ್ನು ನನಗೆ ಮುವತ್ತೆಂಟು ಮುವತ್ತೊಂಭತ್ತು ವರ್ಷಗಳಾಗುವವರೆಗು ನೋಡಿಕೊಂಡೆ.

ನರಳಿ ನರಳಿ ಚಿಕ್ಕಮ್ಮ ಒಂದು ದಿನ ಸತ್ತು ಹೋದಳು. ಆದರೆ ಸಾಯುವ ಮುಂಚೆ ನಾವಿದ್ದ ಮನೆಯನ್ನು ತನ್ನ ಮಗಳ ಹೆಸರಿಗೆ ಬರೆದಿಟ್ಟು ಹೋಗಿದ್ದಳು. ತಾಯಿ ಸತ್ತಾಗಲು ಬರದ ಮಗಳು ಮನೆಯ ವಿಚಾರ ಗೊತ್ತದ ಕೂಡಲೆ ಬಂದು ನೀನಿದನ್ನು ಈ ಕೂಡಲೆ ಖಾಲಿಮಾಡಿ ಹೋಗು ನಾನಿದನ್ನು ಮಾರಬೇಕೆಂದು ಹಟ ಹಿಡಿದು ಕುಂತಳು. ಈ ವಿಷಯವಾಗಿ ನನಗೂ ಅವಳಿಗೂ ಜಗಳವಾಗಿ ಪೋಲಿಸ್ ಸ್ಟೇಷನ್ ಮೆಟ್ಟಿಲೂ ಹತ್ತಿದೆವು. ನಾನವಳಿಗೆ ಮನೆ ಕೊಡಲ್ಲ ಅಂತ ಹೇಳಿರಲಿಲ್ಲ. ಬದಲಿಗೆ ಬೇಕಾದರೆ ಬಾಡಿಗೆ ಕೊಡುತ್ತೇನೆ. ಮಾರಿದ ಮೇಲೆ ಅದನ್ನು ತಗೊಂಡೋರನ್ನು ಕೇಳಿಕೊಂಡು, ಅವರು ಹು ಅಂದರೆ ಮುಂದುವರೆಯುತ್ತೇನೆ ಇಲ್ಲವೆಂದರೆ ಬೇರೆ ಕಡೆ ಹೋಗುತ್ತೇನೆ ಅಂತ ಮಾತ್ರ ಹೇಳಿದ್ದೆ. ಆದರವಳಿಗೆ ನನ್ನ ಮೇಲೆ ಅದ್ಯಾವ ಸಿಟ್ಟೊ ಕಾಣೆ ನಿಂತ ಕಾಲಲ್ಲೇ ಮನೆ ಬಿಟ್ಟು ಹೋಗಲು ಹೇಳಿದಳು. ಪೋಲಿಸರು ಸಹ ಅವಳ ಪರವಾಗೇ ನಿಂತು ನನಗೆ ಹೆದರಿಸತೊಡಗಿದ್ದರು. ಆಯಿತು ಅಂತೇಳಿ ಎರಡು ತಿಂಗಳ ಟೈಮು ತಗೊಂಡೆ. 

ಪುಸ್ತಕ ಖರೀದಿಸಿ ವೆಬ್ ಸೈಟ್ ಬೆಂಬಲಿಸಿ! ಇಲ್ಲಿ ಕ್ಲಿಕ್ಕಿಸಿ
ಆದರೆ ವಿಧಿಯಾಟ ನೋಡಿ ಅವತ್ತೊಂದು ದಿನ ರಾತ್ರಿ ನನ್ನ ಮನೆಯಲ್ಲಿದ್ದ ಗಿರಾಕಿಗಳ ನಡುವೆ ಅದೇನೊ ಗಲಾಟೆಯಾಗಿ ಬಂದಿದ್ದ ಗಿರಾಕಿಯೊಬ್ಬ ಇನ್ನೊಬ್ಬನನ್ನು ಚಾಕುವಿನಿಂದ ತಿವಿದು ಸಾಯಿಸಿಬಿಟ್ಟ. ಇನ್ನೇನಾಗುತ್ತೆ? ಪೋಲಿಸರು ಬಂದು ನಮ್ಮನ್ನೆಲ್ಲ ಅರೆಸ್ಟ್ ಮಾಡಿದರು. ತಿಂಗಳುಗಟ್ಟಲೇ ಕೇಸು ನಡೆದು ನನಗೆ ಮೂರೂವರೆ ವರ್ಷಗಳ ಶಿಕ್ಷೆಯಾಯಿತು. 

ಶಿಕ್ಷೆಮಗಿಸಿಕೊಂಡು ಹೊರಗೆ ಬಂದಾಗ ನನಗೆ ಅಂತ ಯಾರೂ ಇರಲಿಲ್ಲ, ಏನೂ ಇರಲಿಲ್ಲ. ಇದ್ದಿದ್ದು ಹಳ್ಳಿಯಲಿದ್ದ ಅಜ್ಜನ ಒಂದು ಕರಿ ಹೆಂಚಿನ ಮುರುಕಲು ಮನೆ ಮತ್ತು ಅರ್ದ ಏಕರೆ ಹೊಲ. ಸರಿ, ಇನ್ನೇನು ವಯಸ್ಸಾಗುತ್ತಾ ಬಂತು ಅಂತ ಹಳ್ಳಿಗೇ ಹೋಗಿಬಿಡೋಣ ಅಂತ ಹಳ್ಳಿಗೆಹೋದೆ. ಪಾಳುಬಿದ್ದ ಮನೆಯನ್ನೆ ಒಂದಿಷ್ಟು ರಿಪೇರಿ ಮಾಡಿಕೊಂಡು ಇರೋಣವೆಂದರೆ ಹಳ್ಳಿಯವರಿಗೆಲ್ಲ ನನ್ನ ಕಥೆ ಗೊತ್ತಾಗಿತ್ತು. ಯಾರೂ ಅದಕ್ಕೆ ಅವಕಾಶ ಕೊಡಲಿಲ್ಲ. ಇನ್ನು ಹೊಲವನ್ನು ಗುತ್ತಿಗೆ ಮಾಡುತ್ತಿದ್ದವನೇ ಯಾವಾಗಲೊ ಅಜ್ಜನಿಂದ ಅದನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದ. ಹಾಗಾಗಿ ಆ ಹಳ್ಳಿಯು ನನಗೆ ಇಲ್ಲವಾಯಿತು. ಹಾಗಾಗಿ ಮತ್ತೆ ಅದೇ ಹಳೆಪೇಟೆಗೆ ಬಂದೆ. ಅಲ್ಲಿ ಎಲ್ಲವೂ ಬದಲಾಗಿ ಹೋಗಿತ್ತು. ದಂದೆಗೆ ಹೊಸ ಹೊಸ ಹೆಂಗಸರು ಇಳಿದಿದ್ದರು. ವಿದಿಯಿಲ್ಲದೆ ಅಂತಹ ದಂದೆ ಮಾಡುವ ಒಬ್ಬ ಹೆಂಗಸಿನ ಮನೆಗೆ ಹೋದೆ. ಅವಳಿಗೆ ನನ್ನ ಕತೆಯೆಲ್ಲ ಹೇಳಿ ಆಶ್ರಯ ಕೇಳಿದೆ. ಆಯಿತೆಂದ ಅವಳು ತನ್ನ ಮನೆಕೆಲಸ ಮಾಡಲು ನನ್ನನ್ನು ಇಟ್ಟುಕೊಂಡಳು. ಸರಿ ಅಲ್ಲಿಯೂ ಸುಮಾರು ಐದು ವರ್ಷ ಕೆಲಸ ಮಾಡಿದೆ. ಆದರೆ ಮಾಡಿದ ಪಾಪ ಬಿಡಬೇಕಲ್ಲ. ನನ್ನ ಆರೋಗ್ಯ ಕೆಟ್ಟಿತು. ಆ ಮನೆಯ ಯಜಮಾನಿ ಸರಕಾರಿ ಆಸ್ಪತ್ರೆಗೆ ಸೇರಿಸಿದಳು. ಅವಳು ಎಷ್ಟು ದಿನ ಅಂತ ನೋಡಿಕೊಳ್ತಾಳೆ. ತಿಂಗಳಾದರು ಗುಣವಾಗಲಿಲ್ಲ. ಸರಿ ಒಂದು ದಿನ ಡಾಕ್ಟರ್ ನಿನಗೆ ಏಡ್ಸ್ ಕಾಯಿಲೆ ಬಂದಿದೆ, ನಾವು ಏನು ಮಾಡಕಾಗಲ್ಲ ಅಂತೇಳಿ ಡಿಸ್ ಚಾರ್ಜ್ ಮಾಡಿದರು. ಹೊರಗೆ ಬಂದು ಮನೆಗೆ ಹೋದರೆ ನನಗೆ ಆ ಕಾಯಿಲೆ ಇರುವ ವಿಷಯ ಗೊತ್ತಾಗಿದ್ದವಳು ಮನೆಗೆ ಸೇರಿಸಲಿಲ್ಲ. ಸರಿ ಇನ್ನೇನು ಮಾಡೋದು ಅಂತ ಪೇಟೆಯ ಬೀದಿ ತಿರುಗ ತೊಡಗಿದೆ. ಮೈಲಿ ಶಕ್ತಿಯಿರಲಿಲ್ಲ ತೀರಾ ಗುರುತು ಹಿಡಿಯಲಾರದಷ್ಟು ಸಣ್ಣವಾಗಿದ್ದೆ. ಮುಖ ಕಪ್ಪಿಟ್ಟು ವಿಕಾರವಾಗ ತೊಡಗಿದ್ದೆ. ಹೀಗೆ ಪೇಟೆಯ ಬೀದಿಗಳನ್ನು ತಿರುಗುವಾಗ ಜನರು ತಾವೇನೆ ನನಗೆ ಬಿಕ್ಷುಕಿ ಅಂತ ಹೆಸರಿಟ್ಟು ಬಿಕ್ಷೆ ಹಾಕತೊಡಗಿದರು. ಹೀಗೆ ಪೇಟೆಯ ಎರಡು ಮಾರ್ಕೆಟ್ ಬೀದಿಗಳಲ್ಲಿ ಎರಡು ಬಾರಿ ಅಡ್ಡಾಡಿದರೆ ಮೂರು ಹೊತ್ತು ಊಟಕ್ಕಾಗುವಷ್ಟು ದುಡ್ಡು ಸಿಗುತ್ತಿದೆ. 

ಇವತ್ತಿಗೂ ಹಾಗೇನೆ ಜೀವನ ಕಳೆಯುತ್ತಿದ್ದೇನೆ. ವ್ಯತ್ಯಾಸ ಏನೆಂದರೆ ಈಗ ಬೀದಿಗಳಲ್ಲಿ ತಿರುಗೊವಷ್ಟು ಶಕ್ತಿಯಿಲ್ಲ. ಹಾಗಾಗಿ ಈ ಬಸ್ ಸ್ಟ್ಯಾಂಡನ್ನು ಖಾಯಂ ಮಾಡಿಕೊಂಡಿದ್ದೇನೆ. ಇಲ್ಲೇ ಬಿಕ್ಷೆ ಬೇಡಿ ಇಲ್ಲೆ ತಿಂದು ಇಲ್ಲೇ ಮಲಗುತ್ತೇನೆ. 

ಇಷ್ಟೇ ಸರ್ ನನ್ನ ಜೀವನದ ಕಥೆ. ಹಳೆಯದನೆಲ್ಲ ನೆನೆಸಿಕೊಂಡರೆ ಒಂದಂತು ಬೇಜಾರಾಗುತ್ತೆ. ಅದೇನೆಂದರೆ ಚಿಕ್ಕಮ್ಮನ ಮನೇಲಿ ಮೊದಲ ದಿನ ನಾನು ಹಾಳಾದ ಕೂಡಲೆ ಹೇಳದೆ ಕೇಳದೆ ಹಳ್ಳಿಗೆ ಓಡಿ ಹೋಗಬೇಕಿತ್ತು ಅನಿಸುತ್ತೆ. ಆದರವತ್ತು ಯಾವುದನ್ನು ಯೋಚಿಸೋ ಪರಿಸ್ಥಿತಿಯಲ್ಲಿ ನಾನಿರಲಿಲ್ಲ. ಬಿಡಿ ಸರ್, ಈಗ ಯೋಚಿಸಿ ಏನೂ ಮಾಡೋಕ್ಕಾಗಲ್ಲ. ನಿಮ್ಮ ಹತ್ತಿರ ಎರಡು ಗಂಟೆ ಮಾತಾಡಿದ್ದಕ್ಕೆ ನನ್ನ ಮನಸ್ಸು ಹಗುರವಾಯ್ತು. ನಿಮಗೆ ಕೊಡಬೇಕೆನಿಸಿದರೆ ಒಂದು ನೂರುರೂಪಾಯಿ ಕೊಡಿ ಸರ್. ಯಾಕೊ ಹಳೆದೆಲ್ಲ ನೆನಪಾಗಿ ಬೇಜಾರಾಗ್ತಿದೆ. ಇವತ್ತು ಸಾಯಂಕಾಲ ಹೊಟ್ಟೆ ತುಂಬಾ ಕುಡಿಯಬೇಕು ಅನಿಸ್ತಿದೆ ಎಂದುಮಾತು ಮುಗಿಸಿದವಳ ದ್ವನಿಯಲ್ಲಿದ್ದ ಯಾತನೆ ನನಗರ್ಥವಾಯಿತು. ಪರ್ಸಿನಿಂದ ನೂರು ರೂಪಾಯಿಗಳ ಎರಡು ನೋಟುಗಳನ್ನು ಅವಳ ಕೈಲಿಟ್ಟು ಎದ್ದೆ.

ಸೀದಾ ಹೋಟೆಲಿನ ರೂಮಿಗೆ ಹೋಗಿ ಮಲಗಿದವನು ಮಾರನೆ ದಿನ ಬೆಳಿಗ್ಗೆ ಊರಿಗೆ ಹೋಗಲು ಬಸ್ ಸ್ಟ್ಯಾಂಡಿಗೆ ಬಂದೆ. ಒಂದು ಮೂಲೆಯಲ್ಲಿ ಸಾಕಷ್ಟು ಜನರ ಗುಂಪು ಸೇರಿದ್ದು, ಪೋಲಿಸರು ನಿಂತಿರುವುದನ್ನು ನೋಡಿ ಆ ಕಡೆ ನಡೆದೆ. ಗುಂಪನ್ನು ಸೀಳಿಕೊಂಡು ನೋಡಿದರೆ ಹಿಂದಿನ ದಿನ ಮದ್ಯಾಹ್ನ ನಾನು ಮಾತಾಡಿಸಿದ ಹೆಂಗಸು ಹೆಣವಾಗಿ ಬಿದ್ದಿದ್ದಳು. ಪಕ್ಕದಲ್ಲಿದ್ದವನಿಗೆ ಏನಾಯ್ತು ಅಂತ ಕೇಳಿದೆ. “ಯಾವಳೋ ಬೇವಾರ್ಸಿ ಸರ್. ಚೆನ್ನಾಗಿ ಶರಾಪು ಕುಡಿದು, ಜಾಸ್ತಿಯಾಗಿ ಸತ್ತಿದ್ದಾಳೆ” ಅಂದ. ಜಾಸ್ತಿ ದುಡ್ಡು ಕೊಟ್ಟು ಅವಳ ಸಾವಿಗೆ ನಾನೇ ಕಾರಣವಾಗಿಬಿಟ್ಟೆನಾ ಎಂಬ ಅಪರಾಧಿಪ್ರಜ್ಞೆ ಕಾಡತೊಡಗಿತು.ಹೊಟ್ಟೆ ತೊಳೆಸಿದಂತಾಗಿ ಅಲ್ಲಿಂದ ಬಾತ್ ರೂಮಿನ ಕಡೆಗೆ ಓಡಿದೆ.

ಮೇ 30, 2015

ಅಸಹಾಯಕ ಆತ್ಮಗಳು - ಮಾಯಾಲೋಕದ ಮಾಯೆಯ ಬಲೆಯೊಳಗೆ

asahayaka aatmagalu
ಕು.ಸ.ಮಧುಸೂದನ್
ಅಪ್ಪ ಪ್ರೈವೇಟ್ ಕಂಪನೀಲಿ ಕೆಲಸ ಮಾಡ್ತಿದ್ದರು. ಅವರ ಸಂಬಳ ಸಾಕಾಗ್ತಾ ಇರಲಿಲ್ಲ. ಮನೆಯಲ್ಲಿದ್ದೋರು ನಾವು ಆರುಜನ. ನಾನು ನನ್ನ ತಂಗಿಯರಿಬ್ಬರು ಮತ್ತು ತಮ್ಮ. ವಾಸವಿದ್ದ ಮನೆಯೂ ಸ್ವಂತದ್ದೇನೂ ಅಲ್ಲ. ಹಾಗಾಗಿ ಅಮ್ಮ ಅಕ್ಕಪಕ್ಕದ ಹೆಂಗಸರನ್ನು ಒಟ್ಟಾಕಿಕೊಂಡು ಚೀಟಿ ವ್ಯವಹಾರ ಮಾಡ್ತಾ ಇದ್ದಳು. ನಮ್ಮ ಮನೆ ಮಟ್ಟಿಗೆ ಅಪ್ಪ ನೆಪ ಮಾತ್ರಕ್ಕೆ ಮನೆ ಯಜಮಾನನಾಗಿದ್ದ. ತಿಂಗಳ ಸಂಬಳ ತಂದು ಅಮ್ಮನ ಕೈಲಿ ಕೊಟ್ಟರೆ ಅವನ ಕೆಲಸ ಮುಗಿದು ಹೋಗ್ತಿತ್ತು. ಇನ್ನುಳಿದ ವ್ಯವಹಾರವನ್ನೆಲ್ಲ ಅಮ್ಮನೇ ನೋಡಿಕೊಳ್ತಾ ಇದ್ದಳು. ಚೀಟಿ ನಡೆಸೋದು, ಮುಂತಾದ ವ್ಯವಹಾರಗಳಿಂದ ಬರ್ತಿದ್ದ ದುಡ್ಡಲ್ಲಿ ಮಕ್ಕಳನ್ನು ಮಾತ್ರ ಅದ್ದೂರಿಯಾಗಿ ಸಾಕ್ತಾ ಇದ್ದಳು. ನಾವೆಲ್ಲರೂ ಒಳ್ಳೆಯ ಖಾಸಗಿ ಶಾಲೆಯಲ್ಲೇ ಓದ್ತಾ ಇದ್ದೆವು. ನಾನೇ ದೊಡ್ಡ ಮಗಳಾಗಿದ್ದು, ನನ್ನ ಮೊದಲ ತಂಗಿ ನನಗಿಂತ ಆರು ವರ್ಷಕ್ಕೆ ಸಣ್ಣವಳು; ಅವಳ ಹಿಂದಿನವರಿಗೆಲ್ಲ ಒಂದೊಂದು ವರ್ಷದ ಅಂತರ!

ನಿಜ ಹೇಳಬೇಕು ಅಂದರೆ ನಾನು ನೋಡೋದಿಕ್ಕೆ ಸುಂದರವಾಗಿದ್ದೆ. ಮೈಕೈ ತುಂಬಿಕೊಂಡು ಲಕ್ಷಣವಾಗಿದ್ದ ನನ್ನನ್ನು ಕಂಡರೆ ಅಮ್ಮನಿಗೆ ತುಂಬಾ ಪ್ರೀತಿ. ಮುಂದೆ ಸಂಸಾರದ ಜವಾಬ್ದಾರಿಯನ್ನು ನಾನೇ ಹೊರ್ತೀನಿ ಅನ್ನೋ ನಂಬಿಕೆಯಲ್ಲೇ ನನ್ನ ಸಾಕ್ತಾ ಇದ್ದಳು. ಆದರೆ ಅವಳ ನಿರೀಕ್ಷೆಗಳನ್ನು ಸುಳ್ಳು ಮಾಡೋ ರೀತಿಯಲ್ಲಿ ಯಾಕೊ ವಿದ್ಯೆ ನನ್ನ ತಲೆಗೆ ಹತ್ತಲೇ ಇಲ್ಲ. ನಾನೆಷ್ಟು ಕಷ್ಟಪಟ್ಟು ಓದಿದರೂ ಬರೀ ಪಾಸು ಮಾಡೋಕೆ ಮಾತ್ರ ಆಗ್ತಿತ್ತು. ಹೀಗಿರುವಾಗ ನಾನು ಪಿ.ಯು.ಸಿ.ಗೆ ಬಂದಾಗ ನಮ್ಮ ಕಾಲೇಜಿನ ಯಾವುದೋ ಸಮಾರಂಭದಲ್ಲಿ ಒಂದು ಫ್ಯಾಷನ್ ಶೋ ಇತ್ತು. ಅದರಲ್ಲಿ ನಾನೂ ಬಾಗವಹಿಸಿದ್ದೆ. ಅಮ್ಮನೇ ನನಗೆಲ್ಲ ಅಲಂಕಾರ ಮಾಡಿ ವೇದಿಕೆ ಹತ್ತಿಸಿದ್ದಳು. ಆ ಸಮಾರಂಭಕ್ಕೆ ಒಂದೆರಡು ಜಾಹಿರಾತು ಕಂಪನಿಯವರ ಪ್ರತಿನಿಧಿಗಳೂ ಬಂದಿದ್ದರು. ಅದೇನು ಪವಾಡಾನೋ ಅದರಲ್ಲಿ ನನಗೆ ಮೊದಲ ಬಹುಮಾನ ಬಂತು. ಕಾರ್ಯಕ್ರಮ ಮುಗಿದ ಮೇಲೆ ನಾನು ಜಾಹಿರಾತು ಸಂಸ್ಥೆಯೊಂದರ ಏಜೆಂಟ್ ಅಂತ ಹೇಳಿಕೊಂಡು ಬಂದ ನಡುವಯಸ್ಕನೊಬ್ಬ ನನ್ನನ್ನು, ಅಮ್ಮನನ್ನು ಪರಿಚಯ ಮಾಡಿಕೊಂಡು ನನ್ನ ಸೌಂದರ್ಯದ ಬಗ್ಗೆ ತುಂಬಾ ಹೊಗಳಿದ. ಆತನ ಕಾರಲ್ಲೇ ಮನೆಗೆ ಡ್ರಾಪ್ ಮಾಡಿದ. ಮನೆ ತಲುಪುವಷ್ಟರಲ್ಲಿ ಅವನನ್ನು ಅಮ್ಮ ತುಂಬ ನಂಬಿ ಬಿಟ್ಟಿದ್ದಳು. ಅಷ್ಟು ಚೆನ್ನಾಗಿ ನನ್ನ ಬಗ್ಗೆ ಮುಂದೆ ನಾನು ಗ್ಯಾರಂಟಿಯಾಗಿ ಒಳ್ಳೆಯ ಮಾಡೆಲ್ ಆಗುವ ಬಗ್ಗೆ ಮಾತಾಡಿದ್ದ. ಮನೆಗೆ ಬಿಟ್ಟವನು ಹೋಗುವ ಮುಂಚೆ ನಿಮ್ಮ ಮಗಳ ಭವಿಷ್ಯದ ಬಗ್ಗೆ ಚರ್ಚೆ ಮಾಡೋಕೆ ನಾನು ಒಂದು ದಿನ ನಿಮ್ಮ ಮನೆಗೆ ಬರ್ತೀನಿ ಅಂದವನು ಗೇಟಿನಿಂದ ಹಾಗೆಯೇ ಹೋಗಿಬಿಟ್ಟಿದ್ದ. ಅವತ್ತು ರಾತ್ರಿಯೆಲ್ಲ ನನಗೆ ನಾನು ಮಾಡೆಲ್ ಆದ ಹಾಗೆ ಕೈತುಂಬಾ ಸಂಪಾದಿಸಿದ ಹಾಗೆ ಕಣ್ಣು ತುಂಬಾ ಕನಸುಗಳೋ ಕನಸುಗಳು!

ಬಹುಶ: ಅಮ್ಮನೂ ಅಂತಹುದೇ ಕನಸುಗಳನ್ನ ಕಂಡಿರಬೇಕು.ಹಾಗಾಗಿ ಮಾರನೇ ದಿನ ಬರೀ ನನ್ನ ಬಹುಮಾನದ ಮತ್ತು ಹೊಗಳಿ ಮನೆಗೆ ಬಿಟ್ಟು ಹೋದವನದೇ ಮಾತು. 

ಅದೇನು ಅದೃಷ್ಟವೋ ದುರಾದೃಷ್ಟವೋ ಅದಾದ ಮೂರನೇ ದಿನಕ್ಕೆ ಅವನ ಕಾರು ನಮ್ಮ ಮನೆ ಬಂದು ನಿಂತಿತು.ನಾನು ರೂಮಿಂದ ಹೊರಗೇ ಬರಲಿಲ್ಲ. ಆದರವನ ಮಾತು ಕೇಳಿಸಿಕೊಳ್ತಾ ಇದ್ದೆ. ನನ್ನ ಸೌಂದರ್ಯದ ಬಗ್ಗೆ ಮಾತಾಡುತ್ತ ಒಂದೆರಡು ತಿಂಗಳ ತರಭೇತಿ ಸಿಕ್ಕುಬಿಟ್ಟರೆ ಅವಳು ರಾಜ್ಯದಲ್ಲೇ ದೊಡ್ಡ ಮಾಡೆಲ್ ಆಗಿಬಿಡ್ತಾಳೆ. ನೋಡಿ ನೀವು ಅವಳನ್ನು ಅದಕ್ಕೆ ಸೇರಿಸಿ ಅಂದ. ಅದಕ್ಕೆ ಅಮ್ಮ, ಅಯ್ಯೋ ಅವಳ ಕಾಲೇಜಿಗೆ ಕಳಿಸೋದೇ ಕಷ್ಟವಾಗಿದೆ. ನಾವೇನು ಅಂತಾ ಶ್ರೀಮಂತರಲ್ಲ. ತರಬೇತಿಗೆಲ್ಲ ಸೇರಿಸಿ ಖರ್ಚು ಮಾಡೋದು ಕಷ್ಟ ಅಂದಳು. ಅದಕ್ಕವನು ನೀವ್ಯಾಕೆ ದುಡ್ಡಿನ ಬಗ್ಗೆ ಯೋಚನೆ ಮಾಡ್ತೀರಾ? ಅದು ನಮ್ಮದೇ ಇನ್‍ಸ್ಟಿಟ್ಯೂಟ್ ಅಂದೆನಲ್ಲ. ನಿಮ್ಮ ಹುಡುಗಿಯ ಪ್ರತಿಭೆಗೆ ನಾನು ಅವಳಿಗೆ ಉಚಿತವಾಗಿ ತರಬೇತಿ ಕೊಡಿಸ್ತೇನೆ. ಅಷ್ಟೂ ಮಾಡಲಾರೆನಾ? ಅಂತ ಅಮ್ಮನಿಗೆ ಆಸೆ ಹುಟ್ಟಿಸಿದ. ಅಷ್ಟಾದರೂ ಅಮ್ಮ ಅವಳ ಕಾಲೇಜಿಗೆ ತೊಂದರೆಯಾಗುತ್ತಲ್ಲ ಅಂತ ರಾಗ ಎಳೆದಳು. ಅದಕ್ಕವನು ಇಲ್ಲ ಇಲ್ಲ ಅವಳ ಓದಿಗೇನು ತೊಂದರೆಯಾಗುವುದಿಲ್ಲ. ಅವಳು ಕಾಲೇಜು ಮುಗಿಸಿ ನಾಲ್ಕು ಗಂಟೆಗೆ ಬಂದರೆ ಸಾಕು. ರಾತ್ರಿ ಒಂಭತ್ತಕ್ಕೆಲ್ಲ ಮನೆ ಸೇರಬಹುದೆಂದ. ಮದ್ಯಮವರ್ಗದವರ ಆಸೆಯಿದೆಯಲ್ಲ, ಅದು ಎಂತವರನ್ನು ಪಾತಾಳಕ್ಕೆ ತಳ್ಳಿಬಿಡುತ್ತೆ ನೋಡಿ. ದುಡ್ಡಿಲ್ಲದೆ, ಕಾಲೇಜಿಗು ತೊಂದರೆಯಾಗದೆ ಉಚಿತವಾಗಿ ತರಬೇತಿ ಸಿಗುತ್ತೆ ಅಂದರೆ ಯಾರು ಬೇಡವೆನ್ನುತ್ತಾರೆ. ಮಗಳು ಇದರಲ್ಲಿ ಯಶಸ್ವಿಯಾದರೆ ಕುಟುಂಬದ ಭವಿಷ್ಯ ಉಜ್ವಲವಾಗಿ ಬಿಡುತ್ತದೆಯೆಂಬ ಆಸೆಯಿಂದ ಅಮ್ಮ ನನ್ನನ್ನೂ ಕೇಳದೆ ಆಯಿತು ನಾಳೆಯಿಂದ ಕಳಿಸುತ್ತೇನೆಂದು ಬಿಟ್ಟಳು. ಹೊರಡುವ ಮುಂಚೆ ಅವನ ಇನ್ ಸ್ಟಿಟ್ಯೂಟ್ ಅಡ್ರೆಸ್ ಕೊಟ್ಟು ನಾಳೆ ಕಳಿಸಿ ಅಂತ ಹೇಳಿ ಹೋದ.

ಸರಿ ಮಾರನೇ ದಿನ ಕಾಲೇಜು ಮುಗಿಸಿ ಮನೆಗೆ ಬರದೆ ಅಲ್ಲಿಂದಲೇ ಹೋಗುವುದೆಂದು ತೀರ್ಮಾನಿಸಿ ಅವನು ಕೊಟ್ಟ ಅಡ್ರೆಸ್ಸಿಗೆ ಹೋದೆ. ಅದೊಂದು ರೆಸಿಡೆನ್ಷಿಯಲ್ ಏರಿಯಾದಲ್ಲಿ ದೊಡ್ಡ ಬಂಗಲೆ. ಹೊರಗೆ ಮಾಡೆಲಿಂಗ್ ಮತ್ತು ನಟನಾ ತರಬೇತಿ ಕೇಂದ್ರ ಅನ್ನುವ ಮಾಸಿದ ಬೋರ್ಡ್ ಇತ್ತು. ಒಳಗೂ ಸಹ ಕಾಲೇಜಿನ ವಾತಾವರಣವೇನು ಕಂಡು ಬರಲಿಲ್ಲ. ದೊಡ್ಡ ಹಾಲಿನಲ್ಲಿ ಒಂದಷ್ಟು ಹುಡುಗ ಹುಡುಗಿಯರು ಇದ್ದರು ಅವರಲ್ಲಿ ಕೆಲವರು ಡ್ಯಾನ್ಸ್ ಪ್ರಾಕ್ಟೀಸ್ ಮಾಡ್ತಾ ಇದ್ದರೆ, ಉಳಿದವರು ನಾಟಕದ ರೀತಿಯ ಸಂಭಾಷಣೆಗಳನ್ನು ಹೇಳಿಕೊಂಡು ಕೂತಿದ್ದರು. ನನಗೆ ಬರುವಂತೆ ಹೇಳದವನು ಮಧ್ಯದಲ್ಲಿ ಒಂದು ಆರಾಮ ಕುರ್ಚಿಯ ಮೇಲೆ ಕಾಲು ಮೇಲೆ ಕಾಲು ಹಾಕಿ ಕೊಂಡು ಸಿಗರೇಟು ಸೇದುತ್ತಾ ಕೂತಿದ್ದ.

ನನ್ನನ್ನು ನೋಡಿದವನೇ ಬಾ ಒಳಗೆ ಆಫೀಸು ರೂಮಿಗೆ ಹೋಗಿನ ಮಾತಾಡೋಣ ಅಂತ ಒಂದು ರೂಮಿನ ಒಳಗೆ ಕರೆದುಕೊಂಡು ಹೋದ. ಅಲ್ಲಿ ಒಂದು ಫಾರಂ ಕೊಟ್ಟು ನನ್ನ ಸಹಿ ಹಾಕಲು ಹೇಳಿದ. ಯಾಕೆ ಅಂತ ಕೇಳಿದ್ದಕ್ಕೆ ಇದು ಅಡ್ಮಿಶನ್ ಅರ್ಜಿ ಅಂದ ಸರಿಯೆಂದು ಸೈನ್ ಹಾಕಿದೆ. ಎದುರಿಗೆ ಕೂರಿಸಿಕೊಂಡವನು, ನೋಡು ಇದು ಮಾಡೆಲಿಂಗ್ ಕ್ಷೇತ್ರ. ಇಲ್ಲಿ ಮಡಿವಂತಿಕೆ ಉಪಯೋಗಕ್ಕೆ ಬರಲ್ಲ. ಫ್ರೀಯಾಗಿರಬೇಕು ಬೇರೆ ಯಾರ ಹತ್ತಿರವೂ ಜಾಸ್ತಿ ಮಾತಾಡಬಾರದು. ಯಾಕೆಂದರೆ ಇಲ್ಲಿರುವ ಯಾರೂ ನಿನ್ನಷ್ಟು ಚೆನ್ನಾಗಿಲ್ಲ. ಹಾಗಾಗಿ ಅವರಿಗೆ ಅಸೂಯೆ ಇರುತ್ತೆ. ನೀನು ನನ್ನ ಸ್ಪೆಶಲ್ ಸ್ಟೂಡೆಂಟ್ ಅಂತೆಲ್ಲ ಹೇಳಿ ಹೊರಗೆ ಕರೆದು ಕೊಂಡು ಬಂದು ಒಬ್ಬ ನಡುವಯಸ್ಸಿನ ಹೆಂಗಸಿಗೆ ಇವಳಿಗೆ ತರಬೇತಿ ಶುರು ಮಾಡು ಅಂದು ಹೊರಗೆ ಹೋದ. ಅವಳು ಒಂದು ಕುರ್ಚಿಯಲ್ಲಿ ಕೂತು ನನ್ನನ್ನು ಕೂರಿಸಿಕೊಂಡು ಮಾಡೆಲ್ಲುಗಳು ಹೇಗಿರಬೇಕು ಹೇಗೆ ಡ್ರೆಸ್ ಮಾಡಬೇಕು ಹೇಗೆ ಮಾತಾಡಬೇಕು ಅನ್ನುವುದನ್ನೆಲ್ಲ ಹೇಳುತ್ತಾ ಹೋದಳು. ಮೊದಲ ದಿನವಾದ್ದರಿಂದ ಯಾವ ಪ್ರಶ್ನೆಯನ್ನೂ ಕೇಳದೆ ಅವಳ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಹೋದೆ. ಸತತವಾಗಿ ಎರಡು ಗಂಟೆ ಕೊರೆದವಳು ನಿಲ್ಲಿಸಿಈಗ ನೀನು ಇಲ್ಲಿರುವ ಯಾವ ವಿಭಾಗದಲ್ಲಾದರು ಹೋಗಿ ಏನು ಬೇಕಾದರು ಕಲಿಯಬಹುದು ಅಂದಳು. ಒಂದೂ ಗೊತ್ತಾಗದೆ ಸುಮ್ಮನೆ ಸುತ್ತಲೂ ನೋಡುತ್ತ ಕೂತೆ. ಸಂಜೆ ಸುಮಾರು ಆರು ಗಂಟೆಯ ಹೊತ್ತಿಗೆ ಅವನು ಬಂದು ಬಾ, ಇವತ್ತು ಮೊದಲದಿನ ಇಷ್ಟು ಸಾಕು ನಿನ್ನನ್ನು ಮನೆಗೆ ಬಿಡುತ್ತೇನೆ ಎಂದಾಗ ನಾನು ಬೇಡ ಬಸ್ಸಲ್ಲಿ ಹೋಗುತ್ತೇನೆ ಎಂದೆ. ಆದರವನು ಇಲ್ಲ ನಿನ್ನ ಯೋಗಕ್ಷೇಮ ನನ್ನ ಜವಾಬ್ದಾರಿ, ನಿಮ್ಮ ಅಮ್ಮನಿಗೆ ಮಾತು ಕೊಟ್ಟಿದ್ದೀನಿ ಅಂತ ಒತ್ತಾಯ ಮಾಡಿ ಕಾರು ಹತ್ತಿಸಿಕೊಂಡ. ಮನೆಗೆ ಹೋಗ್ತಿದಿವಿ ಅಂದುಕೊಂಡರೆ ಕಾರು ಯಾವುದೋ ಸ್ಟಾರ್ ಹೋಟೆಲ್ಲಿಗೆ ಹೋಗಿ ನಿಲ್ತು. ಇಲ್ಲಿಗ್ಯಾಕೆ ಅಂದದ್ದಕ್ಕೆ ಕಾಫಿ ಕುಡಿದು ಹೋಗೋಣ ಅಂದ. ಅಂತಹ ಹೋಟೆಲಿನ ಒಳಗೆ ನಾನೆಂದು ಹೋಗಿರಲಿಲ್ಲ. ಒಳಗೆ ಹೋಗಿ ಫ್ಯಾಮಿಲಿ ರೂಮಿನಲ್ಲಿ ಕೂತೆವು. ಅವನು ನಾನು ಎಂದೂ ಹೆಸರೇ ಕೇಳಿರದ ಎಂತಹದೊ ತಿಂಡಿಯನ್ನು ಆರ್ಡರ ಮಾಡಿದ. ನಾನೆಷ್ಟೇ ಬೇಡವೆಂದರೂ ಅವನು ಕೇಳಲಿಲ್ಲ ಅವನು ಮಾತು ಮಾತಿಗು ನನ್ನನ್ನು ಹೊಗಳುತ್ತಲೇ ಇದ್ದ. ಕೊನೆಗೆ ರಾತ್ರಿ ಎಂಟುಗಂಟೆಗೆ ಮನೆಗೆ ಬಿಟ್ಟ. ಹೀಗೇನೇ ಸುಮಾರು ಒಂದೂವರೆ ತಿಂಗಳು ಕಳೆಯಿತು. ಅಲ್ಲಿ ಕಲಿಯುವುದು ಏನೂ ಇರಲಿಲ್ಲ ಹೋಗಿ ಕೂತು ಅವರು ಹೇಳಿದ್ದನ್ನು ಕೇಳುವುದು ಸಂಜೆ ಅವನ ಕಾರಲ್ಲಿ ವಾಪಾಸು ಬರುವುದು ಇದೇ ಆಗಿತ್ತು. ಅಮ್ಮನಿಗೆ ಹೇಳಿದರೆ ಅವರು ನಮ್ಮ ಒಳ್ಳೆಯದಕ್ಕಾಗಿ ಇಷ್ಟು ಮಾಡುವಾಗ ಹೋದರೆ ತಪ್ಪೇನಿಲ್ಲ ಹೋಗು ಅಂದುಬಿಟ್ಟಳು. ನನಗೂ ಅದರಲ್ಲಿ ತಪ್ಪೇನುಕಾಣಲಿಲ್ಲ. ಕಾರಲ್ಲಿನ ಓಡಾಟ..ದೊಡ್ಡ ಹೋಟೆಲಿನ ತಿಂಡಿ ತೀರ್ಥ, ಸದಾ ನನ್ನನ್ನೇ ಹೊಗಳುವ ಒಬ್ಬ ಗಂಡಸು ಯಾಕೋ ಅದು ಇಷ್ಟವಾಗತೊಡಗಿತ್ತು. ಅದನ್ನೇ ನೋಡಿ ಹರಯ ಅನ್ನೋದು. ಇದು ತಪ್ಪು ಅಂತ ಹೇಳಬೇಕಾದ ಅಮ್ಮ ತಾನೇ ಇದಕ್ಕೆ ಸಪೋರ್ಟ್ ಮಾಡತೊಡಗಿದ್ದಳು. ಆಮೇಲೆ ಗೊತ್ತಾಗಿದ್ದೆಂದರೆ ನಾನು ಕಾಲೇಜಿಗೆ ಹೋದ ಸಮಯದಲ್ಲಿ ಅವನು ನಮ್ಮ ಮನೆಗೆ ಬಂದು ಅಮ್ಮನನ್ನು ಬೇಟಿಯಾಗ್ತಿದ್ದ ಅತ ಅಮ್ಮನಿಗೆ ಮೋಡಿ ಮಾಡಿಬಿಟ್ಟಿದ್ದ. ಅಲ್ಲದೆ ಚೀಟಿವ್ಯವಹಾರದ ನೆಪದಲ್ಲಿ ಅವಳು ಅವನಿಂದ ಸಾವಿರಾರು ರೂಪಾಯಿಗಳನ್ನು ಪಡೆದುಬಿಟ್ಟಿದ್ದಳು. ಅವನ ಈ ತಂತ್ರವೆಲ್ಲ ನನ್ನನ್ನು ತನ್ನ ವ್ಯೂಹದೊಳಗೆ ಸೆಳೆಯುವ ತಂತ್ರವೆಂದು ಅಮ್ಮನಿಗೆ ಗೊತ್ತಿತ್ತಾ ಇಲ್ಲವಾ ನನಗಿವತ್ತಿಗೂ ಗೊತ್ತಾಗಿಲ್ಲ.

ಒಟ್ಟಿನಲ್ಲಿ ಅದು ಯಾರು ಮಾಡಿದ ಸಂಚು ಅಂತ ಹೇಳಲಿ? ಒಂದೂವರೆ ತಿಂಗಳಾದ ಮೇಲೊಂದು ದಿನ ಅವನು ನಾಳೆ ಸಂಜೆ ಮಾಡೆಲಿಂಗ್ ಜಗತ್ತಿನ ದೊಡ್ಡವರದೊಂದು ಪಾರ್ಟಿಯಿದೆ, ಅದಕ್ಕೆ ಇಬ್ಬರೂ ಹೋಗೋಣ. ನಾಳೆ ನೀನು ಕ್ಲಾಸಿಗೆ ಬರೋದು ಬೇಡ. ಮಾಡ್ರನ್ ಆಗಿ ಡ್ರೆಸ್ ಮಾಡಿಕೊಂಡು ಮನೇಲಿರು ಸಂಜೆ ಐದು ಗಂಟೆಗೆ ನಾನು ಬಂದು ಕರೆದುಕೊಂಡು ಹೋಗ್ತೀನಿ ಅಂದ. ಪಾರ್ಟಿಗಳ ಬಗ್ಗೆ ಕೇಳಿದ್ದ, ಆದರೆ ನೋಡಿರದ ನಾನು ಒಪ್ಪಿಕೊಂಡೆ. ಹೇಳಿದಂತೆ ನಾನು ಮಾರನೇ ಸಂಜೆ ಮಿನಿಸ್ಕರ್ಟ ಹಾಕಿ ರೆಡಿಯಾಗಿದ್ದೆ. ಸಂಜೆ ಬಂದವನು ಯಾವುದೋ ಒಂದು ಊರಾಚೆಯ ಫಾರ್ಮ ಹೌಸಿಗೆ ಕರೆದುಕೊಂಡು ಹೋದ. ಅಲ್ಲಿದ್ದವರೆಲ್ಲ ತುಂಬಾ ಶ್ರೀಮಂರಂತೆ ಕಾಣುತ್ತಿದ್ದರು. ಗಂಡು ಹೆಣ್ಣಗಳು ತಮಗಿಷ್ಟ ಬಂದ ಹಾಗೆ ನಡೆದುಕೊಳ್ಳುತ್ತಿದ್ದರು. ಒಂದಷ್ಟು ಜನರನ್ನು ನನಗೆ ಇವಳು ನನ್ನ ಸ್ವೀಟ್ ಫ್ರೆಂಡ್ ಅಂತ ಪರಿಚಯಿಸಿಕೊಟ್ಟ. ಕತ್ತಲಾಗುತ್ತಿದ್ದಂತೆ ಎಲ್ಲರೂ ಡ್ರಿಂಕ್ಸ್ ತೆಗೆದುಕೊಳ್ಳತೊಡಗಿದರು. ಅವನೂ ತೆಗೆದುಕೊಳ್ಳತೊಡಗಿದ . ಆಮೇಲೆ ನನ್ನನ್ನು ಒಂದು ಮೂಲೆಗೆ ಕರೆದುಕೊಂಡು ಹೋಗಿ ಒಂದು ಗ್ಲಾಸನ್ನು ಕೈಗಿಟ್ಟು ಇದು ವೈನ್ ಹುಡುಗಿಯರು ಇದನ್ನೇ ಕುಡಿಯೋದು ಅಂತ ಹೇಳಿ ಬಲವಂತವಾಗಿ ಕುಡಿಸಿದ. ಮೊದಮೊದಲು ಒಗರುಒಗರಾಗಿದ್ದ ಡ್ರಿಂಕ್ಸ್ ಒಳಗೆ ಹೋದಮೇಲೆ ಯಾಕೊ ಇನ್ನೂ ಬೇಕೆನಿಸಿಬಿಟ್ಟಿತು. ಒಂದು ತೆರನಾದ ಅಮಲು ಏರ ತೊಡಗಿತು. ಅದರ ಅಮಲಲ್ಲಿ ಅವನು ನನಗೆ ಇನ್ನಷ್ಟು ಕುಡಿಸಿಬಿಟ್ಟ. ಕೊನೆಗೆ ನಾನೆಲ್ಲಿದ್ದೇನೆ, ಏನು ಮಾಡುತ್ತಿದ್ದೆನೆಂಬ ಪರಿವೆಯೆ ಇಲ್ಲವಾಯಿತು. ಅದ್ಯಾವಾಗ ಪಾರ್ಟಿ ಮುಗಿಯಿತೋ ಗೊತ್ತಾಗಲಿಲ್ಲ. ಎಚ್ಚರವಾದಾಗ ಬೆಳಿಗ್ಗೆಯಾಗಿದ್ದು, ನಾವು ಫಾರ್ಮಹೌಸಿನ ಒಂದು ರೂಮಿನ ಮಂಚದ ಮೇಲೆ ಮಲಗಿದ್ದೆವು. ಕಣ್ಣು ಬಿಟ್ಟು ನೋಡಿಕೊಂಡರೆ ನನ್ನ ಮೈಮೇಲೆ ಒಂದೂ ಬಟ್ಟೆ ಇರಲಲ್ಲ. ಪಕ್ಕದಲಿ ಮಲಗಿದ್ದ ಅವನಿಗೂ ಬಟ್ಟೆಯಿರಲಿಲ್ಲ. ನನಗೆ ನಡೆದದ್ದೆಲ್ಲ ಅರ್ಥವಾಗಿ ಅಳ ತೊಡಗಿದೆ. ಅಳುವಿನ ಶಬ್ದ ಕೇಳಿ ಎಚ್ಚರವಾದ ಅವನು ರಿಲ್ಯಾಕ್ಸ್ ಮಾಡಿಕೊ ಇದೆಲ್ಲ ಈಗ ಸಹಜ ಮುಂದೆ ನೀನು ದೊಡ್ಡ ಮಾಡೆಲ್ ಆಗಬೇಕಾದವಳು ಇಂತಹದಕ್ಕೆಲ್ಲ ಹೊಂದಿಕೊಂಡು ಹೋಗಬೇಕು.ನಿಮ್ಮಮ್ಮನಿಗೆ ಎಲ್ಲ ಹೇಳಿದ್ದೇನೆ. ಸ್ನಾನ ಮುಗಿಸಿ ತಿಂಡಿತಿಂದು ಹೋಗೋಣ ಎಂದೆಲ್ಲ ಹೇಳಿ ನೀನು ಸ್ನಾನ ಮಾಡಿ ಫ್ರೆಶ್ ಆಗು ಅಂತ ರೂಮಿಂದ ಹೊರಗೆ ಹೋದ. ವಿಧಿಯಿಲ್ಲದೆ ರೂಮಲ್ಲೆ ಇದ್ದ ಅಟ್ಯಾಚ್ ಬಾತ್ ರೂಮಲ್ಲಿ ಸ್ನಾನ ಮಾಡಿ ರೆಡಿಯಾದೆ. ಇಬ್ಬರಿಗೂ ಅವನೇ ರೂಮಿಗೆ ತಿಂಡಿ ತಂದ. ಅಷ್ಟರಲ್ಲಿ ನನಗೆ ಸ್ವಲ್ಪ ದೈರ್ಯ ಬಂದಂತಾಗಿತ್ತು. ಸಾವರಿಸಿಕೊಂಡು ಎಲ್ಲರೂ ಇಲ್ಲೇ ಇದಾರ ಅಂದೆ. ಅವನು ನಗುತ್ತ ಇಲ್ಲ ಇಲ್ಲಿರೋದು ನಾನು ನೀನು ಮತ್ತು ಕೆಲಸದವನು ಮಾತ್ರ ಅಂದು ನೋಡು ರಾತ್ರಿ ನಿನ್ನ ನೋಡಿದ ಒಂದು ಕಂಪನಿಯ ಮ್ಯಾನೇಜರ್ ಹತ್ತು ಸಾವಿರ ಕೊಟ್ಟು ಅವರ ಜಾಹಿರಾತಿಗೆ ನಿನ್ನನ್ನು ಬುಕ್ ಮಾಡಿದ್ದಾರೆ, ಇನ್ನೊಬ್ಬರು ನಾಳೆ ನಿಮ್ಮ ಮನೆಗೆ ಬಂದು ಅಡ್ವಾನ್ಸ್ ಕೊಡೋದಾಗಿ ಹೇಳಿದ್ದಾರೆ ಅಂದು ಹತ್ತು ಸಾವಿರ ರೂಪಾಯಿಯ ಕಟ್ಟೊಂದನ್ನು ನನ್ನ ಕೈಗಿತ್ತ. ನನಗೋ ಆಶ್ವರ್ಯವಾಗಿ ಬಿಟ್ಟಿತು. ಅಷ್ಟು ದುಡ್ಡು ಕೊಟ್ಟಿದ್ದಾರೆಂದರೆ ನನಗಿನ್ನು ಜಾಹಿರಾತು ಲೋಕದಲ್ಲಿ ತುಂಬಾ ಕೆಲಸ ಸಿಗುತ್ತದೆ ಅಂದುಕೊಂಡು ರಾತ್ರಿಯದನ್ನೆಲ್ಲ ಮರೆತು ಬಿಟ್ಟೆ. ದುಡ್ಡಿನ ಮೋಹ ನನ್ನ ಶೀಲದ ಮೇಲಿನ ಕಾಳಜಿಯನ್ನೂ ತೊರೆಸಿಬಿಟ್ಟಿತು. ಇನ್ನೇನು ಹೊರಡುವ ಅನ್ನುವಷ್ಟರಲ್ಲಿ ಅವನು ಊಟ ಮಾಡಿ ಮದ್ಯಾಹ್ನ ಹೋಗೋಣ ಇರು ಅಂದು ನನ್ನನ್ನು ಮಂಚದಲ್ಲಿ ಕೂರಿ ತಾನೂ ಪಕ್ಕ ಬಂದು ಕೂತ. ಮತ್ತೊಮ್ಮೆ ನನ್ನ ಎಚ್ಚರದಲ್ಲಿ ಅನುಭವಿಸಿದ. ಎಲ್ಲ ಮುಗಿದ ಮೇಲೆ ಯಾಕೆ ರಾತ್ರಿ ಸಾಕಾಗಲಿಲ್ಲವೇ ಅಂದೆ. ರಾತ್ರಿ ನಿನ್ನ ಜೊತೆ ನಾನೆಲ್ಲಿ ಮಲಗಿದ್ದೆ. ಈಗ ನಿನ್ನನ್ನು ಬುಕ್ ಮಾಡಿರೋ ಅವರಿಬ್ಬರು ಮಲಗಿದ್ದರು ಅಂದ. ಒಂದು ಕ್ಷಣ ನಾನು ಶಾಕ್ ಆಗಿ ಬಿಟ್ಟೆ ಮಾತಾಗಲಿ ಅಳುವಾಗಲಿ ಬರಲಿಲ್ಲ. ನಾನು ಅದರಿಂದ ಸುದಾರಿಸಿಕೊಳ್ಳುವಷ್ಟರಲ್ಲಿ ನನ್ನ ಕೈ ಹಿಡಿದು ನೋಡು ಇದೆಲ್ಲ ಮೊದಮೊದಲು ಸಹಜ ಒಂದು ಸಾರಿ ನಿನಗೆ ಹೆಸರು ಬಂದುಬಿಟ್ಟರೆ ಆಮೇಲಿವರೆಲ್ಲ ನಿನ್ನ ಕಾಲ ಬಳಿ ಬಿದ್ದಿರುತ್ತಾರೆ. ಹೊಂದಿಕೊಂಡು ಹೋಗುಅಂದ. ಏನೋ ನೀವೊಬ್ಬರಾದರೆ ಪರವಾಗಿಲ್ಲ, ಆದರೆ ಪರಿಚಯವಿಲ್ಲದವರ ಜೊತೆಯಲ್ಲೆಲ್ಲ ಹೀಗೆ ಮಾಡೋದು ತಪ್ಪಲ್ವ ಅಂದೆ. ಅದಕ್ಕವನು ಇದು ಮೊದಲ ಸಲ ಹಾಗನ್ನಿಸುತ್ತೆ. ಮಾಡೆಲಿಂಗಿನಲ್ಲಿ ಹೆಸರು ಮಾಡಿದ ಮೇಲೆ ಸಿನಿಮಾ ಲೋಕಕ್ಕೂ ನೀನು ಹೋಗಬೇಡವಾ ಎಂದೆಲ್ಲ ಸಮಾದಾನ ಪಡಿಸಿದ. ಬಹುಶ: ನನ್ನೊಳಗೂ ಜನಪ್ರಿಯತೆಯ ಹಣದ ಮೋಹ ಇತ್ತು ಅನಿಸುತ್ತೆ. ಹು ಅಂತ ಸುಮ್ಮನಾಗಿಬಿಟ್ಟೆ. ಮದ್ಯಾಹ್ನ ವಾಪಾಸು ಹೋಗುತ್ತ ಕಾರಲ್ಲಿ ನಿನ್ನ ಅಮ್ಮನಿಗೆ ಮೊದಲೆ ನಾಳೆ ಬರುತ್ತೇವೆ ಕೆಲವು ಮೀಟಿಂಗುಗಳಿವೆ ಅಂತ ಹೇಳಿದ್ದೆ. ಆದರೆ ರಾತ್ರಿಯ ವಿಚಾರ ಏನೂ ಹೇಳಿರಲಿಲ್ಲ. ನೀನೂ ಹೇಳಬೇಡ ಎಂದ. ನಾನು ಸರಿ ಎಂದು ಸುಮ್ಮನಾಗಿಬಿಟ್ಟೆ. ಅಮ್ಮನಿಗೆ ಆ ಹತ್ತು ಸಾವಿರ ರೂಪಾಯಿ ನೋಡಿ ಖುಶಿಯೋ ಖುಶಿ. ಮತ್ತೆ ಮಾರನೇ ದಿನದಿಂದ ಮಾಮೂಲಿಯಾದ ದಿನಚರಿ ಶುರುವಾಯಿತು. ವಾರಕ್ಕೆ ಒಂದೆರಡು ದಿನವಾದರು ಜಾಹಿರಾತು ಕಂಪನಿಯ ಮಾಲೀಕರ ಜೊತೆ ಮೀಟಿಂಗ್ ಇದೆ ಅನ್ನುತ್ತ ಅಮ್ಮನಿಗೆ ಹೇಳಿ ನನ್ನನ್ನು ದೊಡ್ಡ ದೊಡ್ಡ ಸ್ಟಾರ್ ಹೋಟೆಲುಗಳಿಗೆ ಕರೆದೊಯ್ಯತೊಡಗಿದ. ನಾನು ಅವನು ಹೇಳಿದವರ ಜೊತೆ ರಾತ್ರಿ ಕಳೆದು ಬೆಳಿಗ್ಗೆ ಅವನು ಅಡ್ವಾನ್ಸ್ ಎಂದು ಕೊಡುತ್ತಿದ್ದ ದುಡ್ಡು ತಂದು ಅಮ್ಮನಿಗೆ ಕೊಡುತ್ತಿದ್ದೆ. ಒಂದೆರಡು ತಿಂಗಳಲ್ಲಿ ನನಗೆ ಇದು ಜಾಹಿರಾತಿನ ಕೆಲಸವೂ ಅಲ್ಲ, ಅಡ್ವಾನ್ಸು ಅಲ್ಲ ಎಂಬುದು ಗೊತ್ತಾಗಿ ಹೋಯಿತು. ಅವನು ನನ್ನನ್ನು ನಗರದ ಹೈಟೆಕ್ ಕಾಲ್ ಗರ್ಲ ಮಾಡಿಬಿಟ್ಟಿದ್ದ. ಅಷ್ಟು ಹೊತ್ತಿಗಾಗಲೆ ನನ್ನ ಬಳಿ ಬಂದ ಕೆಲವರ ವಿಳಾಸ ಮತ್ತು ಪೋನ್ ನಂಬರುಗಳನ್ನು ನಾನು ಪಡೆದಿದ್ದೆ. ಆರೋಗ್ಯ ಸರಿಯಿಲ್ಲವೆಂದು ಹೇಳಿ ಒಂದು ವಾರ ಮನೆಯಿಂದ ಹೊರಗೇ ಹೊಗದೆ ಒಬ್ಬಳೇ ರೂಮಲ್ಲಿ ಕೂತು ಒಂದು ಗಟ್ಟಿಯಾದ ನಿರ್ದಾರಕ್ಕೆ ಬಂದಿದ್ದೆ. ಸದ್ಯ ಅಮ್ಮನಿಗೆ ಏನನ್ನೂ ಹೇಳಬಾರದೆಂದು ತೀರ್ಮಾನಿಸಿಬಿಟ್ಟೆ.

ವಾರದ ನಂತರ ಹುಡುಕಿಬಂದವನಿಗೆ ನಯವಾಗಿಯೇ ಇನ್ನು ಮುಂದೆ ನಾನು ಬರುವುದಿಲ್ಲ, ಕರೆಯಬೇಡಿ ಅಂದು ಬಿಟ್ಟೆ. ಅವನು ಪರಿಪರಿಯಾಗಿ ಕೇಳಿಕೊಂಡ, ನಾನು ಒಪ್ಪಲಿಲ್ಲ. ಅಮ್ಮನ ಹತ್ತಿರ ಹೇಳಿಸಿದರು ನಾನು ಒಪ್ಪದೇ ಹೋದಾಗ ರೌಡಿಗಳಿಂದ ಹೊಡೆಸುತ್ತೇನೆಂದೆಲ್ಲ ಬೆದರಿಕೆ ಹಾಕಿ ಹೋದ. ಅವತ್ತು ಸಂಜೆ ಅಮ್ಮನನ್ನು ಕೂರಿಸಿಕೊಂಡು ನಾನು ಇನ್ನು ಮೇಲೆ ಯಾವನ ತರಬೇತಿ ರೆಕಮೆಂಡೇಶನ್ನನ್ನು ಕಾಯುವುದಿಲ್ಲ. ಈಗ ದಾರಿಗೊತ್ತಾಗಿದೆ. ಇಷ್ಟು ದಿನ ಹೇಗೆ ಆದಾಯ ಬರುತ್ತಿತ್ತೋ ಹಾಗೆಯೇ ಇನ್ನು ಮುಂದೆಯೂ ಬರುತ್ತದೆ. ನನ್ನನ್ನು ಫ್ರೀಯಾಗಿಬಿಡು. ಅಂದೆ. ಅವಳಿಗೆ ಎಲ್ಲವು ಗೊತ್ತಿತ್ತೇ? ಇವತ್ತಿಗು ನನಗೆ ತಿಳಿದಿಲ್ಲ. ಏನೋ ನಿನಗಿಷ್ಟಬಂದ ಹಾಗೆ ಮಾಡು ಅಂದು ಸುಮ್ಮನಾದಳು. ಯಥಾ ಪ್ರಕಾರ ನಾನು ಕಾಲೇಜಿಗೆ ಹೋಗತೊಡಗಿದೆ. ಮುಂಚಿನಂತೆ ಓದಿನಲ್ಲಿ ಆಸಕ್ತಿ ಉಳಿದಿರಲಿಲ್ಲ. ನನಗೆ ಈಗಾಗಲೆ ಗೊತ್ತಿದ್ದ ಹಳೆಯ ಸಂಪರ್ಕಗಳನ್ನು ಬಳಸಿಕೊಂಡು ಸಾಕಷ್ಟು ಜನರ ಪರಿಚಯ ಮಾಡಿಕೊಂಡೆ. ಶನಿವಾರ ಮತ್ತು ಬಾನುವಾರದಂದು ಹೊರಗೆ ಹೋಗುತ್ತಿದ್ದೆ. ಬೆಂಗಳೂರಿನಾಚೆಯ ಯಾವುದಾದರು ಊರುಗಳಲ್ಲಿ ಕರೆದುಕೊಂಡು ಹೋಗುವ ಹೈ ಫ್ರೋಫೈಲ್ ಗಿರಾಕಿಗಳಿಗೆ ಮಾತ್ರ ನಾನು ಸಿಗುತ್ತಿದ್ದೆ. ನನ್ನ ಮನೆಯ ವಿಳಾಸವಾಗಲಿ ಕಾಲೇಜಿನ ಹೆಸರಾಗಲಿ ಯಾರಿಗೂ ಹೇಳುತ್ತಿರಲಿಲ್ಲ.

ಹೀಗೆ ಆ ಕೆಲಸ ಮುಂದುವರಸಿದೆ. ಅದೇಗೊ ಪಾಸಾಗುತ್ತ ಡಿಗ್ರಿಯನ್ನೂ ಮುಗಿಸಿದೆ. ಆಮೇಲಾಮೇಲೆ ಬಹಳಷ್ಟು ರಾಜಕಾರಣಿಗಳ ಪರಿಚಯವಾಯಿತು. ಅವರೊಂದಿಗೆ ದೆಹಲಿ,ಮುಂಬೈಗಳಿಗೆಲ್ಲ ಹೋಗಿ ಬಂದೆ. 

ಒಂದು ದಿನವೂ ಅಮ್ಮ ನೀನು ಏನು ಮಾಡುತ್ತೀಯಾ, ಎಲ್ಲಿಗೆ ಹೋಗುತ್ತೀಯಾ ಅಂತ ಕೇಳಲಿಲ್ಲ. ಅಪ್ಪ ಅಂತು ಬಿಡಿ ಮುಂಚಿನಿಂದಲು ಏನನ್ನು ಕೇಳುತ್ತಿರಲಿಲ್ಲ.ತಮ್ಮ ತಂಗಿಯರು ಅವರ ಪಾಡಿಗವರು ಬೆಳೆಯುತ್ತ ಓದುತ್ತ ಇದ್ದರು. ನಂಬುತ್ತೀರೋ ಬಿಡುತ್ತೀರೋ ನನಗೆ ಮುವತ್ತು ವರ್ಷ ತುಂಬುವವರೆಗು ಹೈಟೆಕ್ ಕಾಲ್ ಗರ್ಲ ಕೆಲಸ ಮಾಡಿದೆ. ಇಬ್ಬರು ತಂಗಿಯರ ಮದುವೆಯಾಯಿತು. ತಮ್ಮ ಬಿ.ಇ. ಮುಗಿಸಿ ಅಮೇರಿಕಾ ಹೊರಟು ಹೋದ. ಅಪ್ಪ ಹಾರ್ಟ ಅಟ್ಯಾಕ್ ಆಗಿ ಸತ್ತು ಹೋದ. ಅಮ್ಮ ಒಬ್ಬಳಿದ್ದಾಳೆ ಮನೆಯಲ್ಲಿ ಒಂಟಿಯಾಗಿ. ನಾನೀಗ ಅವಳ ಜೊತೆಯಲ್ಲಿಲ್ಲ. ಆರು ವರ್ಷಗಳ ಹಿಂದೆ ಪರಿಚಯವಾದ ಉದ್ಯಮಿಯೊಬ್ಬ ನೀನು ಇದನ್ನೆಲ್ಲ ಬಿಟ್ಟು ನನಗೆ ನಿಷ್ಠಳಾಗಿ ಇರುತ್ತೀನಿ ಅಂದರೆ ನಾನು ನಿನ್ನ ಸಾಕುತ್ತೇನೆ ಅಂದ. ಹಾಗಿದ್ದರೆ ಮದುವೆಯಾಗಿ ಎರಡನೆ ಹೆಂಡತಿಯನ್ನಾಗಿ ಮಾಡಿಕೊ ಅಂದೆ. ಆದರವನು ಸಮಾಜದ ಎದುರು ಮದುವೆಯಾಗುವುದು ಆಗೋದು ಕಷ್ಟ, ಆದರೆ ನಿನ್ನ ಹೆಂಡತಿಗಿಂತ ಹೆಚ್ಚಾಗಿ ನೋಡಿಕೊಳ್ತೀನಿ ಅಂದ. ಕೊನೆಗವನ ಮಾತಿಗೆ ಒಪ್ಪಿ ಕಸುಬಿಗೆ ಗುಡ್‍ಬೈ ಹೇಳಿಬಿಟ್ಟೆ. ಒಂದೊಳ್ಳೆಯ ರೆಸಿಡೆನ್ಷಿಯಲ್ ಏರಿಯಾದಲ್ಲಿ ನನ್ನ ಹೆಸರಲ್ಲೇ ಮನೆ ತೆಗೆದುಕೊಟ್ಟಿದ್ದಾನೆ. ಸಣ್ಣದೊಂದು ತೋಟ ಮಾಡಿ ಫಾರ್ಮ ಹೌಸ್ ಕಟ್ಟಿಸಿದ್ದಾನೆ. ನನ್ನ ಹೆಸರಲ್ಲಿಯೂ ಸಾಕಷ್ಟು ಆಸ್ತಿ ಮಾಡಿಟ್ಟಿದ್ದಾನೆ. ದಿನಕ್ಕೊಮ್ಮೆಯಾದರು ಬರುತ್ತಾನೆ. ವಾರಕ್ಕೆರಡು ದಿನ ನನ್ನ ಜೊತೆಯಲ್ಲಿಯೇ ಇರುತ್ತಾನೆ. ಈಗ ಅವರ ಕುಟುಂಬದವರೆಲ್ಲರಿಗೂ ನಮ್ಮ ವಿಷಯ ಗೊತ್ತಾಗಿದೆ. ಯಾರೂ ಗಲಾಟೆ ಮಾಡಿಲ್ಲ. ಒಂದೊಂದು ಸಾರಿ ಬರುವಾಗ ಅವನ ಹತ್ತು ವರ್ಷದ ಮಗನನ್ನು ಕರೆದುಕೊಂಡು ಬರುತ್ತಾನೆ. ಅದು ಆಂಟಿ ಅಂತ ಮಾತಾಡಿಸುತ್ತೆ. ಸಮಾಜದ ದೃಷ್ಟಿಯಲ್ಲಿ ಮಾತ್ರ ನಾನು ಅವನ ಇಟ್ಟುಕೊಂಡವಳು ಅನ್ನುವುದೇ ಖಾಯಂ ಬಿರುದು. ನನಗೇನೂ ಬೇಸರವಿಲ್ಲ. ಒಂದೇ ಕೊರಗೆಂದರೆ ನನಗೊಂದು ಮಗುವಿಲ್ಲವೆಂಬುದು ಈ ವಿಷಯದಲ್ಲಿ ಅವನ ಜೊತೆ ಜಗಳವಾಡಿದ್ದೇನೆ. ಆದರವನು ಬೇಡ ಅನ್ನುತ್ತಾನೆ. ಯಾಕೆ ಅಂತ ಹೇಳಲ್ಲ. ಯಾಕೊ ನನಗಾಗಿ ಇಷ್ಟೆಲ್ಲ ಮಾಡಿದ ಅವನ ಮಾತು ಮೀರಲು ನನಗಿಷ್ಟವಿಲ್ಲ. ಹಾಗಾಗಿ ಮುಂದಿನ ವಾರದಲ್ಲಿ ಒಂದು ಅನಾಥ ಮಗುವನ್ನು ತಂದು ಸಾಕಬೇಕು ಅಂತ ಅಂದುಕೊಂಡು, ಈ ವಿಚಾರವಾಗಿ ನನ್ನ ಲಾಯರ್ ಬಳಿ ಮಾತಾಡಿದ್ದೇನೆ. ಅನಾಥ ಮಗು ಸಾಕೋದಿಕ್ಕೆ ಅವನೂ ಒಪ್ಪಿದಾನೆ. 

ಮನೆಗೆ ಬಂದಿರಿ, ಎಲ್ಲ ಹೇಳಿದೆ. ದಯವಿಟ್ಟು ನನ್ನ ಹೆಸರನ್ನಾಗಲಿ ಅವರ ಹೆಸರನ್ನಾಗಲಿ ಎಲ್ಲೂ ಪ್ರಸ್ತಾಪಿಸ ಬೇಡಿ. ನೀವು ಸಾಹಿತಿಗಳು, ಪತ್ರಕರ್ತರು, ಅನಾಥಾಶ್ರಮದಲ್ಲಿ ಮಗು ದತ್ತು ತೆಗೆದುಕೊಳ್ಳಲು ಬಹಳಷ್ಟು ಕಾನೂನಿನ ಅಡಚಣೆಗಳಿರುತ್ತವೆ ಅನ್ನೋದು ಗೊತ್ತಲ್ಲ. ಅದಕ್ಕೆ ಯಾವುದಾದರು ಸರಕಾರಿ ಆಸ್ಪತ್ರೆಯಲ್ಲಿ ಹುಟ್ಟಿದ ಮಗುವನ್ನು ಬೇಡ ಅಂದು ಬಿಟ್ಟು ಹೋಗುತ್ತಾರಂತಲ್ಲ, ಅಂತಹ ಮಗುವೊಂದನ್ನು ಕೊಡಿಸೋಕೆ ಸಹಾಯ ಮಾಡ್ತೀರಾ,ಸರ್. ನಿಮಗೆ ಆಸ್ಪತ್ರೆಗಳಲ್ಲಿ ಯಾರಾದರು ಪರಿಚಯಸ್ಥರು ಇದ್ದರೆ ದಯವಿಟ್ಟು ಇದೊಂದು ಸಹಾಯ ಮಾಡಿ.

ಅವಳು ಹೇಳುತ್ತಿರುವುದು ಕಾನೂನಿನ ಪ್ರಕಾರ ತಪ್ಪಾದರು ಸಹಾಯ ಮಾಡುವುದರಲ್ಲಿ ಒಂದು ಮಗುವಿನ ಭವಿಷ್ಯ ಇದೆಯೆನಿಸಿ, ಅವಳ ಒಪ್ಪಿಗೆ ಪಡೆದು ಅವಳ ಮನೆಯ ಪೋನಿಂದ ನನಗೆ ಪರಿಚಯವಿದ್ದ ಒಂದಿಬ್ಬರು ಸರಕಾರಿ ಆಸ್ಪತ್ರೆಯ ವೈದ್ಯರಿಗೆ ಮಗು ಬೇಕಿರುವ ವಿಚಾರ ತಿಳಿಸಿ, ಸಿಕ್ಕ ತಕ್ಷಣ ನನಗೆ ತಿಳಿಸಬೇಕೆಂದು ಕೋರಿಕೊಂಡೆ.

ಮೇಡಂ, ಹೇಳಿದ್ದೇನೆ. ಅಂತಹದೊಂದು ಮಗು ದೊರೆತ ತಕ್ಷಣ ನಾನು ನಿಮಗೆ ಪೋನ್ ಮಾಡಿ ತಿಳಿಸುತ್ತೇನೆ. ನಿಮ್ಮ ಕೆಲಸ ಆದಂತೆ ಅಂದೆ. ನನ್ನ ಮಾತು ಕೇಳಿದಾಕ್ಷಣ ಅವಳ ಮುಖದಲ್ಲಿ ಸಂತೋಷ ತುಂಬಿ ತುಳುಕ ತೊಡಗಿತ್ತು. ಅದುವರೆಗು ಕೇವಲ ಒಬ್ಬ ಹೆಣ್ಣಾಗಿ ಕಾಣುತ್ತಿದ್ದ ಅವಳ ಮುಖದಲ್ಲಿ ತಾಯಿಯೊಬ್ಬಳು ಕಾಣತೊಡಗಿದಳು. 

ಅಲ್ಲಿಂದ ಹೊರಡುವಾಗ ಅವಳಿಗೆ ಎಂತಹ ಮಗುಬೇಕು ಗಂಡೊ ಹೆಣ್ಣೊ ಎಂದೆ. ಅದಕ್ಕವಳು ಯಾವುದಾರು ಸರಿ ಎಂದು ಮಗು ಸಿಕ್ಕಿಯೇ ಬಿಟ್ಟಿತೇನೋ ಎಂಬಂತೆ ನಕ್ಕ ನಗುವಿದೆಯಲ್ಲ ಅದು ದೇವತೆಯೊಬ್ಬಳ ನಗುವಾಗಿತ್ತು.
(ಅಸಹಾಯಕ ಆತ್ಮಗಳು ಸರಣಿಯ ಕೊನೆಯ ಲೇಖನವಿದು. ಲೇಖಕರು ಮತ್ತೆ ಈ ಸರಣಿಯನ್ನು ಪ್ರಾರಂಭಿಸಲೂಬಹುದು! - ಸಂ)

ಮೇ 23, 2015

ಅಸಹಾಯಕ ಆತ್ಮಗಳು - ಮೋಸದ ಬಲೆಯೊಳಗೆ!

madhusudan
ಕು.ಸ.ಮಧುಸೂದನ್
ನಾಲ್ಕು ಹೆಣ್ಣುಮಕ್ಕಳನ್ನು ಹುಟ್ಟಿಸಿದ ಅಪ್ಪ ಕುಡಿಕುಡಿದೇ ಸತ್ತು ಹೋದ ಮೇಲೆ ನಮ್ಮನ್ನೆಲ್ಲ ಸಾಕಿದ್ದು ನಮ್ಮಮ್ಮನೇ! ನಾಲ್ಕೂ ಜನರಲ್ಲಿ ನಾನೇ ದೊಡ್ಡವಳು.ಇರೋದಕ್ಕೊಂದು ಅಜ್ಜನ ಕಾಲದ ಹಳೇ ಕೆಂಪಂಚಿನ ಮನೆ ಬಿಟ್ಟರೆ ಅಪ್ಪ ಮಾಡಿದ್ದು ಸಾಲ ಮಾತ್ರ. ಅದನ್ನೂ ಅವನು ಸತ್ತಮೇಲೆ ಪಟೇಲರ ಮನೇಲಿ ಕೂಲಿಮಾಡಿ ಅಮ್ಮನೇ ತೀರಿಸಿದ್ದಳು. ಸ್ಕೂಲಿನ ಮುಖವನ್ನ ನಾವ್ಯಾರು ಹೆಣ್ಣು ಮಕ್ಕಳು ನೋಡಲೇಯಿಲ್ಲ.ನಮ್ಮೆಲ್ಲರಿಗೂ ವಯಸ್ಸಲ್ಲಿ ಎರಡೆರಡು ವರ್ಷಗಳ ಅಂತರವಷ್ಟೆ ಇದ್ದಿದ್ದು. ನನಗೊಂದು ಹತ್ತು ವರ್ಷವಾದ ಮೇಲೆ ಅಮ್ಮನ ಜೊತೆ ನಾನೂ ಕೂಲಿಗೆ ಹೋಗ್ತಾ ಇದ್ದೆ. ನನ್ನ ಹಿಂದಿನವಳು ಮಾತ್ರ ಪಟೇಲರ ಮನೆ ಕಸಮುಸುರೆ ಮಾಡ್ತಾ ಇದ್ದಳು. ಇನ್ನು ಉಳಿದಿಬ್ಬರೂ ಮನೆಯಲ್ಲೆ ಇರೋರು. ನಮ್ಮೂರಲ್ಲಿ ಬಸಪ್ಪ ಅಂತ ಇದ್ದ. ಸಾಕಷ್ಟು ಮಟ್ಟಿಗೆ ದುಡ್ಡಿದ್ದವನೇ. ಮುಂಚಿಂದಲೂ ಅವರೇನು ದುಡ್ಡಿದ್ದೋರಲ್ಲ. ಆದರೆ ಅವರ ಅಕ್ಕ ಒಬ್ಬಳು ಮದುವೆಯಾಗಿ ಬೆಂಗಳೂರಲ್ಲಿದ್ದಳು. ಅವಳ ಸಹಾಯದಿಂದ ಬಸಪ್ಪನ ಮನೆಯವರು ಶ್ರೀಮಂತರಾಗಿದ್ದಾರೆ ಅಂತ ಜನ ಮಾತಾಡಿಕೊಳ್ತಾ ಇದ್ದರು. ಆ ಬಸಪ್ಪ ಒಂದು ದಿನ ನಮ್ಮ ಮನೆಗೆ ಬಂದ. ಅವಾಗ ನನಗೆ ಹದಿನಾರು ವರ್ಷ ಅನಿಸುತ್ತೆ. ಬಂದವನು ಅಮ್ಮನ ಹತ್ತಿರ ಮಾತಾಡ್ತಾ ನಮ್ಮ ಅಕ್ಕನಿಗೆ ಮೈಲಿ ಹುಷಾರಿಲ್ಲ. ಅವಳ ಜೊತೆಗಿದ್ದು ಮನೆಗೆಲಸಕ್ಕೆ ಸಹಾಯ ಮಾಡೋಕೆ ಅಂತ ಒಂದು ಹುಡುಗಿ ಹುಡುಕ್ತಾ ಇದ್ದೆ. ಈಗ ನಿನ್ನ ಮನೆಗೆ ಬಂದು ನಿನ್ನ ಮಗಳನ್ನು ನೋಡಿದ ಮೇಲೆ, ಯಾಕೆ ನಿನ್ನ ಮಗಳನ್ನೇ ನಮ್ಮಕ್ಕನ ಹತ್ತಿರ ಬಿಡಬಾರದು ಅನಿಸ್ತು ಅಂತ ಕೇಳ್ತಾ ಇದೀನಿ. ಅದು ಬೆಂಗಳೂರು, ಇಲ್ಲಿ ತರ ಸಗಣಿ ಬಾಚಬೇಕಾಗಿಲ್ಲ. ಎಲ್ಲ ಕರೆಂಟಿನ ಸಾಮಾನುಗಳು. ನಿನ್ನ ಮಗಳು ಹೆಚ್ಚೇನೂ ಕಷ್ಟ ಪಡಬೇಕಿಲ್ಲ.ನಮ್ಮಕ್ಕನ ಜೊತೆ ನೆಮ್ಮದಿಯಾಗಿರಬಹುದು. ಅಲ್ಲಿದ್ರೆ ನಿನ್ನ ಮಗಳೂ ಸ್ವಲ್ಪ ನಾಜೂಕು ಕಲೀಯ ಬಹುದು..ನಾನೇನು ತಿಂಗಳಿಗಿಷ್ಟು ಕೊಡ್ತೀನಿ ಅಂತಾ ಚೌಕಾಸಿ ಮಾಡಲ್ಲ. ಬದಲಿಗೆ ವರ್ಷಕ್ಕಿಷ್ಟು ಅಂತ ಒಂದೇ ಸಾರಿ ಕೊಡ್ತೀನಿ. ಇನ್ನು ಮಿಕ್ಕಂತೆ ನಿನಗೆ ಸಣ್ಣಪುಟ್ಟ ತೊಂದರೆಯಾದರೆ ನಾನು ನೋಡ್ಕೋತಿನಿ. ಅಂತೆಲ್ಲ ಮಾತಾಡಿದ. ಮೊದಮೊದಲು ಅಮ್ಮನಿಗೆ ವಯಸ್ಸಿಗೆ ಬಂದ ಮಗಳನ್ನು ಕಂಡವರ ಮನೆ ಚಾಕರಿಗೆ ಬಿಡೋದು ಇಷ್ಟವಿರಲಿಲ್ಲ. ಅವಳು ಆಗಲ್ಲ ಅಂತಾನೆ ಹೇಳಿದಳು. ಆದರೆ ಅವಾಗಾಗಲೆ ನಮ್ಮ ಮನೆಯ ಹಿಂದುಗಡೆಯ ಭಾಗ ಬೀಳೊಹಾಗಿತ್ತು. ಅದನ್ನ ರಿಪೇರಿ ಮಾಡಿಸ್ದೇ ಹೋದರೆ ಈ ಮಳೆಗಾಲಕ್ಕೆ ಅದು ತಡಿತಾ ಇರಲಿಲ್ಲ. ಹಂಗಾಗಿ ನಾನೇ ಅಮ್ಮನಿಗೆ ನೀನೇನು ಹೆದರಬೇಡ, ನಾನು ಹೋಗ್ತೀನಿ, ದುಡ್ಡು ಕಾಸಿನ ಬಗ್ಗೆ ನೀನು ಮಾತಾಡು ಅಂದೆ. ಆಗ ವಿಧಿಯಿಲ್ಲದೆ ಅಮ್ಮ ಒಪ್ಪಿಕೊಂಡಳು. ಆ ಕಾಲಕ್ಕೆ ಅಂದರೆ ಇಪ್ಪತ್ತು ವರ್ಷಗಳ ಹಿಂದೇನೆ ವರ್ಷಕ್ಕೆ ಆರು ಸಾವಿರ ಕೊಡೋದು ಅಂತ ತೀರ್ಮಾನ ಆಗಿ ಬಸಪ್ಪ ಆಗಲೇ ಐದು ಸಾವಿರ ಕೊಟ್ಟ. ಸದ್ಯಕ್ಕೆ ನೀನು ಮನೆ ರಿಪೇರಿ ಮಾಡಿಸು, ಸಾಲದೆ ಬಂದರೆ ಉಳಿದ್ದನ್ನು ನಾನು ಕೊಡ್ತೀನಿ ಅಂದ. ಎದ್ದು ಹೋಗುವ ಮುಂಚೆ ನನಗೆ, ನಾಳೆ ಸಾಯಂಕಾಲ ಆರುಗಂಟೆ ಬಸ್ಸಿಗೆ ಹೋಗೋಕೆ ರೆಡಿಯಾಗಿರು ಅಂದು ಹೋದ.

ಬೆಂಗಳೂರಿಗೆ ಹೋಗಲು ನನಗೇನು ಸಡಗರವಿರಲಿಲ್ಲ. ಆದರೆ ಮನೆ ರಿಪೇರಿಯಾಗುತ್ತೆ ಮತ್ತೆ ತಂಗಿಯರಿಗೇನಾದರು ಮಾಡಬಹುದು ಅನ್ನೋ ಕಾರಣಕ್ಕೆ ಒಪ್ಪಿಕೊಂಡಿದ್ದೆ.

ಒಟ್ನಲ್ಲಿ ನನ್ನ ಹದಿನಾರನೇ ವರ್ಷಕ್ಕೆ ಬೆಂಗಳೂರು ಸೇರಿಕೊಂಡೆ.

ಬೆಂಗಳೂರಿನಲ್ಲಿ ಬಸಪ್ಪನ ಅಕ್ಕನಿಗೆ ಯಾವುದೇ ಕಾಯಿಲೆ ಇದ್ದಂತೆ ಕಾಣಲಿಲ್ಲ. ಆದರೆ ವಿಪರೀತ ದಪ್ಪವಿದ್ದುದರಿಂದ ಎದ್ದು ಓಡಾಡಿದರೆ ಏದುಸಿರು ಬಿಡ್ತಾ ಇದ್ದಳು. ಅವಳ ಮನೇಲಿ ಅಂತಾ ಹೇಳಿಕೊಳ್ಳುವಂತ ಕೆಲಸವೇನೂ ಇರಲಿಲ್ಲ. ಮನೇಲಿದ್ದವರು ಅವಳ ಮತ್ತು ಅವಳ ಗಂಡ ಇಬ್ಬರೇ. ಮಕ್ಕಳು ಯಾವುದೋ ಬೇರೆ ಊರಲ್ಲಿ ಓದ್ತಾ ಇದ್ದರು. ಅವಳನ್ನು ನಾನು ಅಕ್ಕ ಅಂತ ಕರೆಯೋಕೆ ಶುರು ಮಾಡಿದೆ. ಅವಳು ಕೂತುಕೊಂಡೆ ಎಲ್ಲ ಕೆಲಸವನ್ನು ಹೇಳೋಳು, ನಾನು ಮಾಡ್ತಾ ಹೋಗ್ತಾ ಇದ್ದೆ. ಒಂದೇನು ಅಂದ್ರೆ ಅವಳ ಮನೆಗೆ ತುಂಬಾ ಜನರು ಬರ್ತಾ ಇದ್ದರು. ರಾಜಕೀಯ ಸಮಾಜಸೇವೆ ಅದೂ ಇದೂ ಅಂತ ಹೇಳಿಕೊಂಡು ಹೆಂಗಸರು ಗಂಡಸರು ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಬರ್ತಾನೆ ಇರ್ತಿದ್ದರು. ಅವರುಗಳಿಗೆ ಕಾಫಿ, ಟೀ ಮಾಡಿಕೊಡೋದೇ ಒಂದು ದೊಡ್ಡ ಕೆಲಸವಾಗ್ತಾ ಇತ್ತು. ಹೀಗೆ ಅಕ್ಕನ ಮನೇಲಿ ಒಂದು ತಿಂಗಳು ಕಳೆದೆ. ಆಮೇಲೊಂದು ದಿನ ಅಕ್ಕ ನನ್ನ ಹತ್ತಿರ, ಪುಟ್ಟಿ ಬೇಜಾರಾಗಬೇಡ, ನನಗೆ ಗೊತ್ತಿರೋ ಎಂ.ಎಲ್.ಎ. ಒಬ್ಬರ ಮನೆಗೆ ನಿನ್ನಂತ ಒಬ್ಬ ಹುಡುಗಿ ಬೇಕಂತೆ, ಸ್ವಲ್ಪ ದಿನದ ಮಟ್ಟಿಗೆ ಅವರ ಮನೇಲಿ ಕೆಲಸ ಮಾಡ್ತೀಯಾ? ಅವರಿಗೆ ಬೇರೆ ಕೆಲಸದವರು ಸಿಕ್ಕ ಕೂಡಲೇ ನೀನು ವಾಪಾಸು ಬಂದು ಬಿಡುವಂತೆ ಅಂದಳು. ನಾನು ಸ್ವಲ್ಪ ದಡ್ಡೀನೆ. ಕೆಲಸ ಮಾಡೋಕೆ ಯಾರ ಮನೆಯಾದರೇನು? ದುಡ್ಡು ಕೊಟ್ಟಿದ್ದಾರಲ್ಲ ಪಾಪ ಅಂದುಕೊಂಡು ಒಪ್ಪಿಕೊಂಡೆ.

ಅವತ್ತೇ ಸಾಯಂಕಾಲ ಒಬ್ಬ ಹೆಂಗಸು ಬಂದು ನನ್ನ ಕರೆದುಕೊಂಡು ಹೋಗಿ ಎಂ.ಎಲ್.ಎ. ಮನೆಗೆ ಬಿಟ್ಟಳು. ಆ ದೊಡ್ಡ ಮನೆಯಲ್ಲಿ ಅಡುಗೆಗೆ ಸಾಕವ್ವ ಅನ್ನೊ ಹೆಂಗಸಿದ್ದಳು. ಪರಿಚಯ ಮಾಡಿಕೊಂಡ ಅವಳು, ಸಾಹೇಬರ ಹೆಂಡತಿ ಅವರ ಅಕ್ಕನ ಮಗಳ ಮದುವೆಗೆ ಅಂತ ಊರಿಗೆ ಹೋಗಿದಾರೆ. ಇನ್ನೊಂದೆರಡು ತಿಂಗಳಲ್ಲಿ ಬರ್ತಾರೆ. ನೀನು ಅಡುಗೆ ಮನೆಗೇನು ಬರೋದೇನು ಬೇಡ, ಹೊರಗಡೆ ಕೆಲಸ ನೋಡಿಕೊಂಡು, ಸಾಹೇಬರಿಗೇನು ಬೇಕು ಅಂತ ವಿಚಾರಿಸಿಕೊಳ್ಳೋ ಕೆಲಸ ಮಾಡು ಸಾಕು ಅಂದಳು. ಅವತ್ತು ರಾತ್ರಿ ಹತ್ತು ಗಂಟೆ ಸುಮಾರಿಗೆ ಸಾಹೇಬ್ರು ಬಂದ್ರು. ನನ್ನ ಹತ್ತಿರ ಹೆಚ್ಚಿಗೇನೂ ಮಾಡಲಿಲ್ಲ. ಚೆನ್ನಾಗಿ ಕೆಲಸ ಮಾಡಿಕೊಂಡು ಹೋಗು ಅಂತ ಹೇಳಿ ಅವರ ರೂಮಿಗೆ ಹೋದರು. ಅಡುಗೆ ಮನೆ ಪಕ್ಕದಲ್ಲಿದ್ದ ಒಂದು ರೂಮಲ್ಲಿ ನಾನು ನನ್ನ ಬಟ್ಟೆ ಬರೆ ಇಟ್ಟುಕೊಂಡು ಮಲಗಿದೆ. ಹೀಗೇ ಎರಡು ದಿನ ಕಳೆದ ಮೇಲೆ ಮೂರನೇ ರಾತ್ರಿ ಹತ್ರ ನನ್ನ ಕೈಲಿ ಹಾಲು ಕೊಟ್ಟ ಅಡುಗೆಯವಳು ತಗೊಂಡು ಹೋಗಿ ಯಜಮಾನರಿಗೆ ಕೊಡು ಅಂದಳು. ಅವರ ರೂಮಿಗೆ ಹೇಗೆ ಹೋಗೋದು ಅಂತ ಹೆದರಿಕೊಂಡೆ ಒಳಗೆ ಹೋದೆ. ಮಂಚದ ಮೇಲೆ ಮಲಗಿದ್ದ ಅವರು ಟೇಬಲ್ಲಿನ ಮೇಲೆ ಹಾಲಿಟ್ಟು ಹತ್ತಿರ ಬಾ ಅಂತ ಕರೆದರು. ಅವರಿಗೆ ಸುಮಾರು ನಲವತ್ತೈದು ವರ್ಷವಾಗಿತ್ತು ಅನಿಸುತ್ತೆ. ಮಂಚದ ಹತ್ತಿರ ಹೋದ ತಕ್ಷಣ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು ಮುತ್ತು ಕೊಡಲು ಶುರು ಮಾಡಿದ್ರು.ನಾನು ಬೇಡ ಅಂತ ಜೋರಾಗಿ ಕಿರುಚಿಕೊಂಡು ಬಾಗಿಲ ಹತ್ತಿರ ಓಡಿದೆ. ಅವರು ನಗುತ್ತಾ ಬಾಗಿಲು ಹೊರಗಡೆಯಿಂದ ಮುಚ್ಚಿದೆ ಸುಮ್ಮನೇ ಹತ್ತಿರ ಬಂದು ನಾನು ಹೇಳಿದ ಹಾಗೆ ಕೇಳು ಅಂತ ನನ್ನ ಮಂಚಕ್ಕೆ ಎಳೆದುಕೊಂಡು ಹೋದರು. ಬಹಳ ಹೊತ್ತು ನಾನವರಿಂದ ಬಿಡಿಸಿಕೊಳ್ಳಲು ಕೊಸರಾಡಿದೆ. ಆದರೆ ಸಾದ್ಯವಾಗಲಿಲ್ಲ. ಅವತ್ತು ರಾತ್ರಿ ನಾನು ನನ್ನದೆಲ್ಲವನ್ನು ಕಳೆದುಕೊಂಡು ಬಿಟ್ಟಿದ್ದೆ. ಎಲ್ಲ ಮುಗಿದಾದ ಮೇಲೆ ಅವರು ನೋಡು ನಾನು ಅಧಿಕಾರದಲ್ಲಿರೋ ದೊಡ್ಡ ವ್ಯಕ್ತಿ, ನಿನಗೋಸ್ಕರ ಏನು ಬೇಕಾದರು ಮಾಡ್ತೀನಿ. ನೀನು ಹೂಂ ಅಂದರೆ ನಾನು ನಿನ್ನ ಮದುವೆಯಾಗ್ತೀನಿ. ನನ್ನ ಹೆಂಡತಿ ಊರಿಂದ ಬರೋಕ್ಕೆ ಇನ್ನೊಂದೆರಡು ತಿಂಗಳಾಗುತ್ತೆ. ಅಷ್ಟರಲ್ಲಿ ನಿನ್ನ ಮದುವೆಯಾಗಿ ಬೇರೆ ಮನೆ ಮಾಡ್ತೀನಿ. ಅಲ್ಲಿಯವರೆಗೂ ನಮ್ಮಿಬ್ಬರ ವಿಚಾರ ಗುಟ್ಟಾಗಿರಲಿ. ಅಂತೆಲ್ಲ ಸಮಾದಾನ ಮಾಡಿದರು. ಎಲ್ಲ ಮುಗಿದು ಹೋದಮೇಲೆ ಅವನು ಏನು ಹೇಳಿದರೆ ನನಗೇನು ಅಂತ ಸುಮ್ಮನೇ ಕೂತಿದ್ದೆ.

ಅವರು ಬೆಳಿಗ್ಗೆ ಹೊರಗೆ ಹೋದಮೇಲೆ ಅಡುಗೆಯವಳನ್ನು ಮಾತಾಡಿಸಿದರೆ ಅವಳು, ಸುಮ್ಮನೆ ಸಾಹೇಬರನ್ನು ನಂಬು, ಅವರು ನಿನ್ನ ಕೈ ಬಿಡಲ್ಲ. ಅವರಿಂದ ನಿನ್ನ ಕಷ್ಟ ಎಲ್ಲ ಬಗೆಹರಿಯುತ್ತೆ ಅಂದಳು. ವಾಪಾಸು ಅಕ್ಕನ ಮನೆಗೆ ಹೋಗೋ ದಾರೀನು ಗೊತ್ತಿರಲಿಲ್ಲ. ಅದೂ ಅಲ್ಲದೆ ಆ ಬಂಗಲೆಯ ಕಾವಲುಗಾರರರನ್ನು ಮೀರಿ ಹೋಗೋದು ಸಾದ್ಯವಿರಲಿಲ್ಲ. ಅವತ್ತು ಹಗಲಿಡೀ ಅಳುತ್ತಲೇ ಇದ್ದೆ. ರಾತ್ರಿ ಅವರು ಬಂದಾಗ ಅಡುಗೆಯವಳು ಸಾಹೇಬರಿಗೆ ನೀನೆ ಊಟ ಬಡಿಸಬೇಕಂತೆ ಅಂತ ಹೇಳಿ ಅಡುಗೆ ಮನೆಯಲ್ಲೆ ಇದ್ದುಬಿಟ್ಟಳು. ನಾನು ವಿಧಿಯಿಲ್ಲದೆ ಅವರಿಗೆ ಊಟ ಬಡಿಸಿದೆ. ನಂತರ ಅವರ ರೂಮಿಗೆ ಹಾಲು ತೆಗೆದುಕೊಂಡು ಹೋದೆ. ಹಿಂದಿನ ದಿನದಂತೆ ಅವರು ಆತುರ ಪಡಲಿಲ್ಲ. ಬಾ ಅಂತ ಪಕ್ಕದಲ್ಲಿ ಕೂರಿಸಿಕೊಂಡು ನನ್ನ ಮನೆಯವರ ಬಗ್ಗೆಯೆಲ್ಲ ವಿಚಾರಿಸಿ ತಿಳಿದುಕೊಂಡರು. ಅವರಷ್ಟು ಸಮಾಧಾನದಿಂದ ಎಲ್ಲವನ್ನೂ ಕೇಳಿಸಿಕೊಂಡದ್ದನ್ನು ನೋಡಿ ನನಗೆ ಅವರ ಮೇಲೆ ನಂಬಿಕೆ ಬಂತು. ಇವರು ನನ್ನನ್ನು ಮದುವೆಯಾದರೆ, ಎರಡನೇ ಹೆಂಡತಿಯಾದರು ಪರವಾಗಿಲ್ಲ, ನಮ್ಮ ಮನೆಯವರಿಗೆಲ್ಲ ಒಂದು ದಾರಿಯಾಗುತ್ತೆ ಅನಿಸಿತು. ಅವತ್ತು ಸಂತೋಷದಿಂದ ನಾನೇ ಅವರಿಗೆ ನನ್ನನ್ನು ಒಪ್ಪಿಸಿಕೊಂಡು ಬಿಟ್ಟೆ. 

ಹೀಗೇ ಎರಡು ತಿಂಗಳಾದ ನಂತರ ಒಂದು ದಿನ ರಾತ್ರಿ ಅವರು ನಾಳೆ ಸಾಯಂಕಾಲ ನನ್ನ ಹೆಂಡತಿ ಊರಿಂದ ಬರ್ತಾಳೆ. ಅವಳು ಬಂದಾಗ ನೀನಿಲ್ಲಿದ್ದರೆ ಅಷ್ಟು ಚೆನ್ನಾಗಿರೊಲ್ಲ. ನಾಳೆ ಬೆಳಿಗ್ಗೆ ನನ್ನ ಪರಿಚಯದವರೊಬ್ಬರ ಮನೇಲಿ ಬಿಡ್ತೀನಿ.ಇನ್ನೊಂದು ವಾರದಲ್ಲಿ ಎಲೆಕ್ಷನ್ ಶುರುವಾಗುತ್ತೆ. ಅದು ಮುಗಿದ ಕೂಡಲೇ ಮದುವೆಯಾಗೋಣ. ಹೇಗಾದ್ರು ಮಾಡಿ ಅಲ್ಲೀತನಕ ಅವರ ಮನೇಲಿರು ಅಂತ ಹೇಳಿದರು. ಹೇಳಿದ ಹಾಗೇನೆ ಮಾರನೇ ದಿನ ಒಂದು ದೊಡ್ಡ ಮಹಡಿ ಮನೆಗೆ ಕರೆದುಕೊಂಡು ಹೋಗಿಬಿಟ್ಟರು. ಅಲ್ಲಿ ಅಕ್ಕ ಸಹ ಇದ್ದಳು. ಅವಳ ಜೊತೆಯಲ್ಲಿ ಐವತ್ತು ವರ್ಷದ ವಿಮಲಾ ಅನ್ನುವ ಹೆಂಗಸು ಸಹ ಇದ್ದಳು. ಅಕ್ಕ ನನ್ನ ನೋಡಿದೊಡನೆ ಏನೇ ಪುಟ್ಟಿ ಸಾಹೇಬರ ಮನೆಯವಳಾಗಿಬಿಟ್ಟೆ. ನಿನ್ನ ಅದೃಷ್ಟ ನೋಡು ಅಂತ ಹೇಳಿ ಊರಲ್ಲಿ ನಿಮ್ಮ ಮನೆಯವರೆಲ್ಲ ಚೆನ್ನಾಗಿದ್ದಾರೆ ಅವರ ಬಗ್ಗೆ ಯೋಚನೆ ಮಾಡಬೇಡ ಅಂತ ಹೇಳಿ ಹೊರಟು ಹೋದಳು. ಆ ಮನೆಯ ಮಹಡಿಯಲ್ಲಿ ನನಗೊಂದು ರೂಮು ಕೊಟ್ಟರು. ಆ ಮನೆಯಲ್ಲಿ ತುಂಬಾ ಜನ ಹುಡುಗಿಯರು ಹೆಂಗಸರು ಇದ್ದರು. ಯಾಕೋ ಆ ಮನೆಯ ವಾತಾವರಣ ನೋಡಿನನಗೆ ಅನುಮಾನ ಶುರುವಾಯಿತು. ಒಂದು ವಾರ ಯಾರ ಜೊತೆಗೂ ಮಾತಾಡದೆ ಕಾಲ ಕಳೆದೆ. ರಾತ್ರಿ ಎಷ್ಟೊತ್ತಾದರು ಕೆಳಗಿನ ರೂಮುಗಳ ದೀಪ ಆರುತ್ತಿರಲಿಲ್ಲ. ಆಗಾಗ ಯಾರ್ಯಾರೊ ಗಂಡಸರು ಬಂದು ಹೋಗುವುದನ್ನೆಲ್ಲ ನೋಡಿ ನನಗೆ ಯಾರನ್ನಾದರು ಕೇಳಬೇಕು ಅನ್ನಿಸಿತು. ವಯಸ್ಸಲ್ಲಿ ನನಗಿಂತ ಸ್ವಲ್ಪ ದೊಡ್ಡವಳಾದ ಹೆಂಸೊಬ್ಬಳು ನನ್ನ ಜೊತೆ ಸಲಿಗೆಯಿಂದ ಮಾತಾಡುತ್ತಿದ್ದಳು. ಒಂದು ದಿನ ನಾವಿಬ್ಬರೇ ಇದ್ದಾಗ ಅವಳನ್ನು ಇದರ ಬಗ್ಗೆ ಕೇಳಿದೆ. ಆಗವಳು ಆ ಮನೆಯೊಳಗೆ ನಡೆಯುವ ವ್ಯವಹಾರದ ಬಗ್ಗೆ. ಅಲ್ಲಿರುವ ಅಷ್ಟೂ ಹೆಣ್ಣುಮಕ್ಕಳ ಬಗ್ಗೆ ಹೇಳಿದಳು. ನನಗದೆಲ್ಲ ಹೊಸದು. ಆದರೆ ಇವತ್ತಲ್ಲ ನಾಳೆ ಅವರು ಬಂದು ನನ್ನ ಕರೆದುಕೊಂಡು ಹೋಗ್ತಾರೆ ಅನ್ನೊ ನಂಬಿಕೆಯಲ್ಲೇ ಇದ್ದೆ. ಆದರೆ ಆ ಮನೆಯವರಿಗೆ ಅವರು ಬರುವುದಿಲ್ಲವೆಂಬುದು ಮುಂಚೆಯೇ ಗೊತ್ತಿತ್ತೇನೋ ಅನಿಸುತ್ತೆ. ಒಂದು ತಿಂಗಳಾದ ಮೇಲೆ ಮನೆ ಯಜಮಾನಿ ನನ್ನ ರೂಮಿಗೆ ಬಂದು, ನೋಡು, ನಿಮ್ಮ ಸಾಹೇಬರಿಗೆ ಎಲೆಕ್ಷನ್‍ಗೆ ಟಿಕೇಟ್ ಸಿಗಲಿಲ್ಲವಂತೆ. ಇನ್ನವರು ಬೆಂಗಳೂರಿಗೆ ಬರೋದೆ ಅನುಮಾನ, ಇಂತದ್ದರಲ್ಲಿ ಅವರು ಮತ್ತೆ ಬಂದು ಕರೆದುಕೊಂಡು ಹೋಗೋದು ಸಾದ್ಯವಿಲ್ಲ. ಅವರಿಗಿದೆಲ್ಲ ಹೊಸದೇನಲ್ಲ. ಸುಮ್ಮನೆ ನಿನ್ನ ಇಲ್ಲಿ ಸಾಕಿಕೊಳ್ಳೋಕೆ ಆಗಲ್ಲ. ನೀನೂ ಬೇರೇಯವರ ತರಾ ಬದುಕೊದನ್ನ ಕಲಿ ಅಂದಳು. ನಾನು ಅಕ್ಕನ ಮನೆಗೆ ಕಳಿಸಿ ಅಂತ ಅವಳಿಗೆ ಗೋಗರೆದೆ. 

ಮಾರನೇ ದಿನ ಸಂಜೆ ನೋಡು ನಿಮ್ಮಕ್ಕನ ಕಡೆಯವರು ಬಂದಿದ್ದಾರೆ, ಅವರ ಜೊತೆ ಹೋಗು. ನಿನ್ನ ಬಟ್ಟೆಯೆಲ್ಲ ಆಮೇಲೆ ನಾನೇ ಕಳಿಸ್ತೀನಿ ಅಂತ ಯಾವುದೋ ಕಾರಿಗೆ ಹತ್ತಿಸಿಕಳಿಸಿದಳು. ಕಾರಿನಲ್ಲಿದ್ದ ವ್ಯಕ್ತಿ ನನ್ನ ಊರ ಹೊರಗಿನ ಯಾವುದೋ ತೋಟದ ಮನೆಗೆ ಕರೆದುಕೊಂಡು ಹೋಗಿಬಿಟ್ಟ. ನನ್ನ ಈ ದಂಧೆಗೆ ನೂಕಲು ಅವರೆಲ್ಲ ಸೇರಿ ಮಾಡಿದ ಪ್ಲಾನ್ ಅದು. ಒಟ್ಟಿನಲ್ಲಿ ಅವತ್ತು ರಾತ್ರಿ ಅವನೊಂದಿಗೆ ಮಲಗಿ ಜಗತ್ತಿನ ದೃಷ್ಠಿಯಲ್ಲಿ ನಾನು ಸೂಳೆಯಾಗಿ ಬಿಟ್ಟಿದ್ದೆ.

ಇನ್ನೇನು ಉಳಿದಿತ್ತು, ಸರಿ ಸುಮಾರು ಮೂರು ವರ್ಷಗಳ ಕಾಲ ಅದೇ ಮನೆಯಲ್ಲಿ ದಂಧೆ ಮಾಡಿದೆ. ಈ ನಡುವೆ ಇಷ್ಟವಿಲ್ಲದೇ ಹೋದರು ಅಕ್ಕನನ್ನು ಬೇಟಿಯಾಗಿ ಮನೆಯವರ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದೆ. ಅವರ ಮೂಲಕವೇ ಊರಿಗೆ ತಿಂಗಳು ತಿಂಗಳು ದುಡ್ಡು ಕಳಿಸುತ್ತಿದ್ದೆ. ಊರಲ್ಲಿ ಮನೆಯವರಿಗೆ ನಾನೀಗ ಒಂದು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದೇನೆಂದು ಅಕ್ಕನ ಮೂಲಕವೇ ನಂಬಿಸಿ ಬಿಟ್ಟಿದ್ದೆ. 

ಆ ಮನೆಯಲ್ಲಿ ಮೂರು ವರ್ಷಗಳನ್ನು ಕಳೆಯೊವಷ್ಟರಲ್ಲಿ ಈ ದಂಧೆಯ ಎಲ್ಲ ಪಟ್ಟುಗಳನ್ನೂ ಕಲಿತು ಬಿಟ್ಟಿದ್ದೆ. ಅದೇ ಸಮಯದಲ್ಲಿ ಸಿನಿಮಾದಲ್ಲಿ ನಟಿಯರಾಗಲು ಬಂದು ದಂಧೆಗೆ ಇಳಿದಿದ್ದ ಒಂದಿಬ್ಬರು ನನಗೆ ಪರಿಚಯವಾಗಿದ್ದರು. ನಾವು ಮೂರೂಜನ ಮಾತಾಡಿಕೊಂಡು ಆ ಮನೆಯಿಂದ ಹೊರಬಂದು ಒಂದು ಒಳ್ಳೆಯ ಏರಿಯಾದಲ್ಲಿ ಮನೆ ಮಾಡಿಕೊಂಡು ಕೆಲಸಕ್ಕೆ ಹೋಗುವ ಹೆಣ್ಣಮಕ್ಕಳ ರೀತಿಯಲ್ಲ ಬದುಕತೊಡಗಿದೆವು. ಹಗಲು ಹೊತ್ತು ಮಾತ್ರ ಕಾಲ್‍ಗರ್ಲಗಳ ರೀತಿಯಲ್ಲಿ ಕೆಲಸ ಮಾಡತೊಡಗಿದ್ದೆವು. ಆಮೇಲೆ ಅಮ್ಮನ ಒತ್ತಾಯದ ಮೇಲೆ ವರ್ಷಕ್ಕೆ ಒಂದುಸಾರಿ ಊರಿಗೆ ಹೋಗಿಬರಲು ಶುರು ಮಾಡಿದೆ. ಏನೂ ಓದದ ನಾನು ಸಾಕಷ್ಟು ದುಡ್ಡು ಖರ್ಚು ಮಾಡಿ ತಂಗಿಯರ ಮದುವೆ ಮಾಡಿದ್ದು ಊರವರಲ್ಲಿ ಅನುಮಾನ ಮೂಡಿಸಿದಂತೆ ಅಮ್ಮನಿಗೂ ಅನುಮಾನ ಮೂಡಿಸಿತು. ಒಂದು ದಿನ ಅವಳನ್ನು ಕೂರಿಸಿಕೊಂಡು ಎಲ್ಲ ವಿಷಯಗಳನ್ನು ಹೇಳಿಬಿಟ್ಟೆ. ಕೇಳಿದ ಅಮ್ಮ ಮೊದಮೊದಲು ಎದೆ ಬಡಿದುಕೊಂಡು ಅತ್ತಳು. ಆದರೆ ನಂತರದಲ್ಲಿ ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸುಮ್ಮನಾದಳು. ಕೊನೆಗೆ ಅಲ್ಲಿ ಊರಲ್ಲಿ ಅವಳೊಬ್ಬಳಿದ್ದು ಏನು ಮಾಡುವುದು ಅಂತ ಹೇಳಿ ಅವಳನ್ನೂ ಬೆಂಗಳೂರಿಗೆ ಕರೆದುಕೊಂಡು ಬಂದು ಬಿಟ್ಟೆ. ಈಗ ನನಗೆ ನಲವತ್ತು ನಡೆಯುತ್ತಿದೆ. ಸೆಕ್ಸ್ ವಿಷಯದಲ್ಲಿ ನನ್ನಂತವಳಿಗೆ ಸುಖದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈಗ ನಾನು ಎಲ್ಲದರಿಂದ ದೂರವಾಗಿ ಬದುಕುತ್ತಿದ್ದೇನೆ. ವಯಸಿದ್ದಾಗ ಉಳಿಸಿದ ಒಂದಷ್ಟು ದುಡ್ಡನ್ನು ಬ್ಯಾಂಕಿನಲ್ಲಿ ಹಾಕಿದ್ದೀನಿ ಅದರಲ್ಲಿ ಬರೋ ಬಡ್ಡಿಯಲ್ಲಿ ಇಬ್ಬರ ಜೀವನ ಮಾಡೋದು ಕಷ್ಟ ಅಂತಾ ನಾನೊಂದು ಪ್ರೈವೆಟ್ ಕಂಪನಿಯಲ್ಲಿ ಅಟೆಂಡರ್ ಕೆಲಸಕ್ಕೆ ಸೇರಿಕೊಂಡಿದಿನಿ.

ನೀವು ಹೇಳೋದು ನಿಜಾನೆ. ಊರಿನ ಬಸಪ್ಪನ ಅಕ್ಕ ಆಗ ಮಾಡ್ತಾ ಇದ್ದದ್ದು ಹಳ್ಳಿಗಳಿಂದ ಮನೆಗೆಲಸಕ್ಕೆ ಅಂತ ಹುಡುಗಿಯರನ್ನು ಕರೆದುಕೊಂಡು ಹೋಗಿ ಸಾಹೇಬರಂತ ದೊಡ್ಡವರಿಗೆ ಸಪ್ಲೈ ಮಾಡೋ ಕೆಲಸ. ಆಮೇಲವಳು ಅವರೆಲ್ಲ ಉಪಯೋಗಿಸಿದ ಹುಡುಗಿಯರನ್ನ ಇನ್ನೊಂದು ಮನೆಗೆ ತಲುಪಿಸಿ ಕಸುಬಿಗೆ ಇಳಿಸ್ತಾ ಇದ್ದಳು ಅಂತ. ಇಂತದ್ದೊಂದು ಕೆಲಸದಲ್ಲಿ ಆ ಎಂ.ಎಲ್.ಎ. ಅವನ ಮನೆ ಅಡುಗೆಯವಳು ಎಲ್ಲರೂ ಬಾಗಿಗಳು. ಆದರೆ ಆ ಚಿಕ್ಕ ವಯಸ್ಸಲ್ಲಿ, ಒಂದಕ್ಷರವನ್ನು ಓದಿರದ ನನ್ನಂತ ಹಳ್ಳಿ ಹುಡುಗೀಗೆ ಆಗ ಇವೆಲ್ಲ ಹೇಗೆ ಅರ್ಥವಾಗಬೇಕು ಹೇಳಿ. ಈಗ ಅದನ್ನೆಲ್ಲ ಯೋಚಿಸಿ ಏನು ಮಾಡಬೇಕಾಗಿದೆ, ಬಿಡಿ. ಮಾತು ಮುಗಿಸಿ ಎದ್ದವಳು ಅವರಮ್ಮನನ್ನು ಪರಿಚಯಿಸಿದಳು. ಅವರಿಗೆ ನಮಸ್ಕಾರ ಮಾಡಿ ಎದ್ದು ಬರುವಾಗ ಬದುಕು ನಾವಂದುಕೊಂಡಷ್ಟು ಸುಂದರವೇನಲ್ಲವೆನಿಸಿತು!

ಮೇ 16, 2015

ಅಸಹಾಯಕ ಆತ್ಮಗಳು - ತಾನೇ ತೋಡಿಕೊಂಡ ಖೆಡ್ಡಾ

ಕು. ಸ. ಮಧುಸೂದನ್
ಸಮುದ್ರದ ಮೊರೆತ ಕೇಳುವಷ್ಟು ಹತ್ತಿರವಿದ್ದ, ಬಡವರೇ ಹೆಚ್ಚಾಗಿದ್ದ ಊರು ನನ್ನದು. ಹತ್ತಿರದ ಹೆಂಚಿನ ಫ್ಯಾಕ್ಟರಿಗೆ ಹೋಗುವ ಅಪ್ಪ, ಮನೆಯಲ್ಲಿ ಬೀಡಿ ಕಟ್ಟುವ ಅಮ್ಮ, ವಯಸ್ಸಿನಲ್ಲಿ ನನಗಿಂತಲೂ ಹತ್ತು ವರ್ಷಗಳಷ್ಟು ಚಿಕ್ಕವರಾದ ತಮ್ಮ ತಂಗಿಯರು ಮತ್ತು ನಾನು, ಇಷ್ಟೇ ಜನರಿದ್ದ ಚೊಕ್ಕ ಸಂಸಾರ ನಮ್ಮದು.

ಏಳನೇ ತರಗತಿಯವರೆಗೆ ಮಾತ್ರವಿದ್ದ ನಮ್ಮ ಊರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ ನಾನು ಹೈಸ್ಕೂಲಿಗಾಗಿ ಮೂರು ಕಿ.ಮೀ. ದೂರದ ಪೇಟೆಗೆ ಹೋಗಬೇಕಾಗಿ ಬಂತು. ಬಹುಶಃ ನನ್ನ ಬದುಕು ಮತ್ತೊಂದು ತಿರುವಿಗೆ ಎದುರಾದದ್ದೇ ಅಲ್ಲಿಂದ. ಏಳನೇ ತರಗತಿಗಾಗಲೇ ನೋಡುವವರ ಕಣ್ಣುಕುಕ್ಕುವಷ್ಟು ಬೆಳೆದಿದ್ದ ನಾನು, ಸುಂದರಿಯಾಗಿದ್ದೆ. ಮೊದಲಿನಿಂದಲೂ ಹಾಡು ಮತ್ತು ನೃತ್ಯದಲ್ಲಿ ಹೆಚ್ಚು ಆಸಕ್ತಿಯಿದ್ದ ನಾನು ಶಾಲೆಯ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದೆ. ನನ್ನ ಸೌಂದರ್ಯ, ಪ್ರತಿಭೆ ಹಾಗೂ ನನ್ನ ಟೀಚರ್ಸ್ ನೀಡಿದ ಬೆಂಬಲದಿಂದ ಫೇಮಸ್ ಆಗಿಬಿಟ್ಟಿದ್ದೆ. ಹತ್ತನೇ ತರಗತಿಗೆ ಬರುವಷ್ಟರಲ್ಲಿ ನಾನೊಬ್ಬಳು ಸಿನೆಮಾ ತಾರೆಯಾಗಬೇಕೆಂಬ ಕನಸು ಶುರುವಾಗಿತ್ತು. ಅದ್ಯಾಕೆ ಆ ಆಸೆ ಚಿಗುರೊಡೆಯಿತೋ ಗೊತ್ತಿಲ್ಲ. ಈ ಕನಸಿನ ಗುಂಗಲ್ಲೇ 10ನೇ ತರಗತಿಯನ್ನು ಸೆಕೆಂಡ್ ಕ್ಲಾಸಿನಲ್ಲಿ ಪಾಸು ಮಾಡಿ, ಮನೆಯಲ್ಲಿ ಕಷ್ಟವಿದ್ದರೂ, ಅದೇ ಪೇಟೆಯ ಜೂನಿಯರ್ ಕಾಲೇಜಿಗೆ ಸೇರಿದೆ. 

ಮೊದಲನೇ ವರ್ಷದ ಪಿ.ಯು.ಸಿ. ಓದುವಾಗ ಡಿಸೆಂಬರಿನಲ್ಲಿ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಾವುದೋ ಸಿನೆಮಾ ಹಾಡಿಗೆ ನನ್ನದೊಂದು ಡ್ಯಾನ್ಸ್ ಇತ್ತು. ಆ ಕಾರ್ಯಕ್ರಮದ ಫೋಟೋ ತೆಗೆಯಲು ಹತ್ತಿರದ ಸ್ಟುಡಿಯೋದ ಹುಡುಗನೊಬ್ಬ ಬಂದಿದ್ದ. ಡ್ಯಾನ್ಸ್ ಮುಗಿದ ನಂತರ ಅವನನ್ನು ಭೇಟಿ ಮಾಡಿ, ಫೋಟೋಗಳನ್ನು ಯಾವಾಗ ಕೊಡ್ತೀರಿ ಎಂದೆ. ಆಗ ರೀಲು ಹಾಕಿ ತೆಗೆದ ಫೋಟೋಗಳನ್ನು ತೊಳೆದು ಪ್ರಿಂಟ್ ಹಾಕಬೇಕಾದ್ದರಿಂದ, ಎರಡು ದಿನ ಬಿಟ್ಟು ಸ್ಟುಡಿಯೋ ಬಳಿ ಬನ್ನಿ ಕೊಡುತ್ತೇನೆ ಎಂದ. ಐದು ರೂಪಾಯಿ ಕೊಟ್ಟು ಒಂದು ಕಾಪಿ ತೆಗೆದುಕೊಳ್ಳುವುದಷ್ಟೇ ನನ್ನ ಉದ್ದೇಶವಾಗಿತ್ತು. 

ನನ್ನ ಜೀವನದಲ್ಲಿ ನಾನು ಮೊದಲು ಮಾಡಿದ ತಪ್ಪು ಫೋಟೋಗ್ರಾಫರನ ಮಾತು ಕೇಳಿ ಅವನ ಸ್ಟುಡಿಯೋ ಬಳಿ ಹೋಗಿದ್ದು. ನಗುನಗುತ್ತಾ ಬರಮಾಡಿಕೊಂಡ ಅವನು ನನ್ನ ಮುಂದೆ ನನ್ನದೊಂದು ಫೋಟೋ ಹಿಡಿದ. ಸೈಡಿನಿಂದ ತೆಗೆದ್ದರಿಂದ ಮುಖ ಸರಿಯಾಗಿ ಕಾಣದ ಕಾರಣ ನನಗೆ ಬೇಜಾರಾಯಿತು. ಸರಿಯಾಗಿ ಮುಖ ಕಾಣ್ತಿಲ್ಲ ಎಂದಾಗ ನಿಮ್ಮ ಡ್ಯಾನ್ಸ್ ಅಷ್ಟು ಫಾಸ್ಟ್ರಿ, ಫೋಟೋ ತೆಗೆಯೋದೆ ಕಷ್ಟವಾಯ್ತು ಎಂದ. ನನಗೆ ಈ ಫೋಟೋ ಬೇಡ ಎಂದು ಹೊರಡಲನುವಾದೆ. ಅಷ್ಟರಲ್ಲವನು ತಡೀರಿ ಅನ್ನುತ್ತಾ ಒಂದು ಸಣ್ಣ ಕವರನ್ನು ಕೈಗೆ ಕೊಟ್ಟ. ಏನು ಎನ್ನುತ್ತಲೇ ಅದನ್ನು ತೆರೆದರೆ ನನ್ನದೇ ವಿವಿಧ ಭಂಗಿಯ, ಒಂದಕ್ಕಿಂತ ಒಂದು ಸುಂದರವಾದ ಫೋಟೋಗಳು. ಶಾಲೆಯವರು ಹೇಳಿದ್ದಕ್ಕಿಂತ ಜಾಸ್ತಿ ಫೋಟೋ ತೆಗೆದೆ, ನೀವು ತುಂಬಾ ಸುಂದರವಾಗಿದೀರಿ ಡ್ಯಾನ್ಸೂ ತುಂಬಾ ಚನ್ನಾಗಿ ಮಾಡ್ತೀರಿ. ಬೇಸರವಾಗಿದ್ರೆ ಸ್ಸಾರಿ ಎಂದ. ಇಷ್ಟು ಚಂದದ ಫೋಟೋ ತೆಗೆದವನ ಮೇಲೆ ಬೇಸರವೇಕೆ ಎಂದು ಪರವಾಗಿಲ್ಲ ಎಂದೆ. ಫೋಟೋ ಕೊಳ್ಳಲು ದುಡ್ಡಿಲ್ಲ ಎಂದಾಗ ನನ್ನ ಗಿಫ್ಟ್ ಅಂತ ತೆಗೊಳಿ ಪ್ಲೀಸ್ ಎಂದ. ಸಂತೋಷದಿಂದ ಫೋಟೋ ತೆಗೆದುಕೊಂಡು ಮನೆಗೆ ಬಂದವಳು ಮನೆಯವರಿಗೆ ಗೊತ್ತಿಲ್ಲದಂತೆ, ಆಗಾಗ ನೋಡಿ ಖುಷಿ ಪಡುತ್ತಿದ್ದೆ.

ಆ ನಂತರ ಒಂದು ದಿನ ಕಾಲೇಜಿನ ದಾರಿಯಲ್ಲಿ ಸಿಕ್ಕವನು “ಏನ್ರಿ, ಸ್ಟುಡಿಯೋ ಕಡೆ ಬರಲೇ ಇಲ್ಲ” ಎಂದಾಗ ಬಾಯಿ ತಪ್ಪಿ ನಾಳೆ ಮಧ್ಯಾಹ್ನ ಬರುತ್ತೇನೆ ಎಂದೆ. ಹಾಗಾದರೆ ಮಧ್ಯಾಹ್ನ ನಿಮಗಾಗಿ ಕಾಯ್ತಾ ಇರ್ತೀನಿ ಎಂದು ಹೊರಟುಬಿಟ್ಟ. ಮರುದಿನ ಮಧ್ಯಾಹ್ನ ಸ್ಟುಡಿಯೋ ಬಳಿ ಹೋದಾಗ ಅದು ಇದು ಮಾತನಾಡುತ್ತಾ, ನೀವ್ಯಾಕೆ ಸಿನೆಮಾದಲ್ಲಿ ಆಕ್ಟ್ ಮಾಡಬಾರದು? ಎಂದು ನನ್ನ ಮನಸ್ಸಿನಲ್ಲಿ ಇದ್ದದ್ದನ್ನೇ ಕೇಳಿದಾಗ ಅವನ ಮೇಲೆ ಅಭಿಮಾನವೆನಿಸಿತು. ಮಾಡಬಹುದು ಅವಕಾಶ ಸಿಗಬೇಕಲ್ಲ, ನಾನೂ ಆಕ್ಟರ್ ಆಗಬಹುದಾ? ಎಂದು ಅನುಮಾನಿಸಿದಾಗ, ಎಂತೆಂತವರೋ ಮಾಡುವಾಗ ನೀವು ಮಾಡಬಾರದ, ನೀವು ವಿವಿಧ ಡ್ರೆಸ್ ಹಾಕಿರೋ ಫೋಟೋಗಳನ್ನು ತೆಗೆದು ನಿರ್ಮಾಪಕರಿಗೆ ನೀಡಿದರೆ ಅವರಿಗಿಷ್ಟವಾದರೆ ನಿಮಗೆ ಅವಕಾಶ ಸಿಗುತ್ತೆ, ಎಂದ. ಹಾಗೆ ಫೋಟೋ ತೆಗೆಸಲು ನನ್ನ ಬಳಿ ಬೇರೆ ಬೇರೆ ಬಟ್ಟೆಯಾಗಲೀ, ದುಡ್ಡಾಗಲೀ ಇಲ್ಲ, ಎಂದೆ. ಒಂದು ನಿಮಿಷ ಸುಮ್ಮನಾದವನು, ಬಟ್ಟೆನಾ ನಾನೇ ಅರೆಂಜ್ ಮಾಡಿ, ಫೋಟೋನ ಫ್ರೀಯಾಗಿ ತೆಗೆದುಕೊಡ್ತೇನೆ, ನಟಿಯಾದ ಮೇಲೆ ಹಣ ವಾಪಸ್ಸು ಕೊಡುವಿರಂತೆ ಎಂದ. 

ಹದಿನಾರು ತುಂಬಿ ಹದಿನೇಳಕ್ಕೆ ಕಾಲಿಟ್ಟು ಸುಂದರಿಯೆಂದು ಬೀಗುತ್ತಿದ್ದ ಹುಡುಗಿಯೊಬ್ಬಳ ಮನಸ್ಸನ್ನು ಊಹೆ ಮಾಡಿಕೊಳ್ಳಿ, ಆ ಕ್ಷಣದಲ್ಲಿ ನಾನು ಹೇಗೆ ಪ್ರತಿಕ್ರಿಯಿಸಿರಬಹುದು. ಯಾವುದರ ಬಗ್ಗೆಯೂ ಯೋಚಿಸುವ ಸಹನೆಯಿಲ್ಲದ ನಾನು ಆ ಕೂಡಲೇ ಸರಿಯೆಂದು ಬಿಟ್ಟೆ. ಸರಿ ರಜಾ ದಿನ ಗಿರಾಕಿಗಳ ಕಾಟ ಇರುವುದಿಲ್ಲವಾದ್ದರಿಂದ ಒಂದು ಭಾನುವಾರ ಫೋಟೋ ತೆಗೆಯುವುದೆಂದು ನಿಶ್ಚಯವಾಯ್ತು. 

ನಂತರ ಒಂದು ಭಾನುವಾರ ಕಾಲೇಜಿನಲ್ಲಿ ಕಾರ್ಯಕ್ರಮ ಇದೆ ಅಂತ ಮನೆಯವರಿಗೆ ಸುಳ್ಳು ಹೇಳಿ ಸ್ಟುಡಿಯೋಗೆ ಬಂದೆ. ನನ್ನ ಮುಂದೆ ಸುರಿದ ರಾಶಿ ಬಟ್ಟೆಯಲ್ಲಿ ಯಾವುದನ್ನು ಮೊದಲು ಹಾಕೋದು ಎಂದು ತಬ್ಬಿಬ್ಬಾದಾಗ, ನಾನು ಒಂದೊಂದೇ ಕೊಡುತ್ತೇನೆ ಹಾಕಿಕೊಂಡು ಬನ್ನಿ ಎಂದ. ಡ್ರೆಸ್ ಬದಲಾಯಿಸಲು ಬೇರೆ ರೂಮಿಲ್ಲದ್ದರಿಂದ, ವಿಧಿಯಿಲ್ಲದೆ ಅಲ್ಲೇ ಇದ್ದ ಮರದ ಹಲಗೆಯ ಹಿಂದೆ ಬದಲಾಯಿಸಿಕೊಂಡು ಬಂದೆ. ನಂತರ ಫೋಟೋ ತೆಗೆಯುತ್ತಾ ಹೋದ. ಬಹುತೇಕ ಎಲ್ಲಾ ಬಟ್ಟೆಗಳನ್ನು ಹಾಕಿಕೊಂಡು ಫೋಟೋ ತೆಗೆಸಿಕೊಂಡೆ. ಎರಡು ದಿನಗಳಲ್ಲಿ ನನ್ನ ಫೋಟೋಗಳನ್ನು ನೋಡುವ ಸಂತೋಷದೊಂದಿಗೆ ಸಂಜೆಯಾಗುವಷ್ಟರಲ್ಲಿ ಮನೆಗೆ ವಾಪಸ್ಸು ಬಂದೆ. 

ಎರಡು ದಿನಗಳ ನಂತರ ಹೋಗಿ ಫೋಟೋಗಳನ್ನು ನೋಡಿದಾಗ ನನಗೆ ಆಕಾಶವೇ ಕೈಗೆ ಸಿಕ್ಕಂತಾಗಿತ್ತು. ಅಷ್ಟು ಸುಂದರವಾಗಿದ್ದೆ. ಇವನ್ನೆಲ್ಲಾ ಇವತ್ತೇ ನಿರ್ಮಾಪಕರಿಗೆ ಕಳುಹಿಸುತ್ತೇನೆ ಎಂದು ಹೇಳಿದವನಿಗೆ ಸರಿಯೆಂದು ಹೇಳಿ ಬಂದೆ. ಆಮೇಲೆ ದಿನವೂ ಕಾಲೇಜಿನ ಬಳಿ ಸಿಗುತ್ತಿದ್ದ ಅವನು ಸಿನೆಮಾ ಬಗ್ಗೆ ಚಕಾರವೆತ್ತದೆ, ಕೇವಲ ಯೋಗಕ್ಷೇಮ ವಿಚಾರಿಸುತ್ತಿದ್ದ. ಎರಡು ತಿಂಗಳ ಬಳಿಕ ತಡೆಯಲಾರದೆ ನಾನೇ ಸಿನೆಮಾ ಕಥೆ ಏನಾಯಿತು ಎಂದಾಗ, ನಿರ್ಮಾಪಕರಿಗೆ ಬೇರೆ ತರದ ಫೋಟೋಗಳು ಬೇಕಂತೆ, ತೆಗೆಯಬೇಕು ಭಾನುವಾರ ಸ್ಟುಡಿಯೋ ಹತ್ತಿರ ಬನ್ನಿ ಎಂದ. 

ಸರಿ ಮುಂದಿನ ಭಾನುವಾರ ಸ್ಟುಡಿಯೋಗೆ ಹೋದೆ. ಒಳಗೆ ಕುಳಿತವಳಿಗೆ, ಪತ್ರಿಕೆಯಲ್ಲಿನ ಕೆಲವೊಂದು ಫೋಟೋ ತೋರಿಸಿ, ಇಂತಹ ಫೋಟೋಗಳನ್ನು ಕಳಿಸಬೇಕಂತೆ, ನಿಮಗೆ ಸಂಕೋಚವಾದರೆ ಬೇಡ ಎಂದ, ನಾನು ಹಿಂದೆಮುಂದೆ ಯೋಚಿಸದೆ ಒಪ್ಪಿದೆ. ಮೊದಲೇ ಗೊತ್ತಿತ್ತೇನೋ ಅನ್ನುವ ಹಾಗೆ ಕೆಲವು ಬಟ್ಟೆಗಳನ್ನು ಕೊಟ್ಟ.. ಅವು ಎಷ್ಟು ಚಿಕ್ಕವೆಂದರೆ ಹಾಕಿಕೊಂಡು ಅವನ ಮುಂದೆ ನಿಲ್ಲಲು ಮುಜುಗರವಾಯ್ತು.. ಆದರೆ ಸಿನೆಮಾ ಕನಸು ನಿಲ್ಲುವಂತೆ ಮಾಡಿತು. ಅವನು ನನ್ನ ಎದೆ ತೊಡೆಗಳು ಎದ್ದು ಕಾಣುವಂತೆ ಫೋಟೋ ತೆಗೆಯುತ್ತಾ ಹೋದ. ನಾನು ಸಹಕರಿಸುತ್ತಾ ಹೋದೆ. ಸಂಜೆಯಷ್ಟರಲ್ಲಿ, ಕೂದಲು, ಬಟ್ಟೆ ಸರಿ ಮಾಡುವ ನೆಪದಲ್ಲಿ, ನನ್ನಿಡೀ ಮೈಯನ್ನು ಮುಟ್ಟಿದ್ದ. 

ಸಿನೆಮಾದೊಂದಿಗೆ ಅವನನ್ನೂ ಬಿಟ್ಟಿರಲಾರದಷ್ಟು ತುಂಬಾ ಹಚ್ಚಿಕೊಂಡಿದ್ದೆ ಅನ್ನಿಸುತ್ತೆ. ಆಮೇಲಾಮೇಲೆ ಸಿನೆಮಾ ಬಗ್ಗೆ ಕೇಳುವ ನೆಪದಲ್ಲಿ ಸ್ಟುಡಿಯೋಗೆ ಹೆಚ್ಚು ಹೋಗಲು ಶುರು ಮಾಡಿದೆ. ಹೀಗೆ ಮೂರು ತಿಂಗಳು ಕಳೆದ ನಂತರ ಒಂದು ದಿನ ಯಾರೋ ನಿರ್ಮಾಪಕರು ಬೆಂಗಳೂರಿಗೆ ಬರುವಂತೆ ಹೇಳಿದ್ದಾರೆ, ಯಾವಾಗ ಹೋಗೋಣ ಎಂದು ಕೇಳಿದ. ಮನೆಯವರು ಒಪ್ಪುವುದಿಲ್ಲವೆಂದು ಗೊತ್ತಿದ್ದರೂ, ಸಿನೆಮಾದ ಹುಚ್ಚು ಅವರಿಗೆ ತಿಳಿಸದೆ ಹೋಗುವ ಧೈರ್ಯ ತಂದಿತ್ತು. ನೀನು ಯಾವಾಗೆಂದರೆ ಆವಾಗ ಎಂದು ಒಪ್ಪಿಗೆ ಕೊಟ್ಟೆ. 

ಅದಾದ ನಂತರ, ಒಂದು ದಿನ ಕಾಲೇಜಿಗೆಂದು ಬಂದವಳು, ಅವನ ಜೊತೆ ಬೆಂಗಳೂರಿನ ಬಸ್ಸು ಹತ್ತಿದೆ. ಬೆಂಗಳೂರಿನ ಅವನ ಗೆಳೆಯನೊಬ್ಬನ ಮನೆಯಲ್ಲಿ ಉಳಿದುಕೊಂಡೆವು. ದಿನ ಹೊರಗೆ ಹೋಗುತ್ತಿದ್ದವನು, ನಿರ್ಮಾಪಕರು ಸಿಕ್ಕಿಲ್ಲ, ನಾಳೆನಾಡಿದ್ದು ಅಂತ ವಾರ ಕಳೆದುಬಿಟ್ಟ. ಈ ನಡುವೆ ಅವನ ದೇಹದ ಹಸಿವಿಗೆ ಬಲಿಯಾಗಿ ಬಿಟ್ಟಿದ್ದೆ. ಒಂದು ರಾತ್ರಿ ತಡವಾಗಿ ಬಂದವನು ಇಲ್ಲಿ ಯಾಕೋ ಸರಿಯಾಗ್ತಿಲ್ಲ, ಬಾಂಬೆಗೆ ಹೋಗೋಣ, ಅಲ್ಲಿ ಅವಕಾಶ ಸಿಗುತ್ತೆ ಎಂದು ಬಾಂಬೆಗೆ ಕರೆದುಕೊಂಡು ಬಂದ. 

ಬಾಂಬೆಗೆ ಬಂದವನೇ ಒಂದು ಡಾನ್ಸ್ ಬಾರಿಗೆ ಕರೆದೊಯ್ದು, ಅಲ್ಲಿನ ಮ್ಯಾನೇಜರಿಗೆ ಪರಿಚಯಿಸಿದ. ಮ್ಯಾನೇಜರ್ ಹೇಗೂ ನಿನಗೆ ಡ್ಯಾನ್ಸ್ ಬರುತ್ತಲ್ಲ. ನಮ್ಮ ಹೋಟೆಲಿನಲ್ಲಿ ಡ್ಯಾನ್ಸ್ ಮಾಡು, ಇಲ್ಲಿ ಬರುವ ನಟರು ನಿರ್ಮಾಪಕರ ಕಣ್ಣಿಗೆ ಬಿದ್ದರೆ ಅದೃಷ್ಟ ಖುಲಾಯಿಸುತ್ತೆ. ಎಂದು ಹೇಳಿದಾಗ ನಾನು ಒಪ್ಕೊಂಡೆ.

ಅಲ್ಲಿಂದ ಶುರುವಾಯ್ತು ನನ್ನ ಜೀವನದ ಮತ್ತೊಂದು ಮಜಲು. ಡ್ಯಾನ್ಸ್ ಬಾರಿನವರು ನನ್ನಂಥ ಹೆಣ್ಣುಮಕ್ಕಳಿಗಾಗಿಯೇ ಒಂದು ಮನೆ ಮಾಡಿದ್ದರು. ಅಲ್ಲಿ ಹನ್ನೆರಡು ಹುಡುಗಿಯರಿದ್ದೆವು. ಅವರದೇ ಗಾಡಿಯಲ್ಲಿ ಸಂಜೆ ಏಳು ಗಂಟೆಗೆ ಬಾರಿಗೆ ಬಂದು ಸರದಿಯಂತೆ ಡ್ಯಾನ್ಸ್ ಮಾಡಿ, ರಾತ್ರಿ ಹನ್ನೊಂದಕ್ಕೆ ವಾಪಾಸ್ಸಾಗಬೇಕಿತ್ತು. ದಿನಕ್ಕಿಷ್ಟು ಸಂಬಳವೆಂದು ನಿಗಧಿಯಾಗಿತ್ತು. ಖುಶಿಪಟ್ಟು ಗಿರಾಕಿಗಳು ನಮ್ಮ ಮೇಲೆ ಎಸೆಯುತ್ತಿದ್ದ, ಹಣದಲ್ಲಿ ಮುಕ್ಕಾಲು ಪಾಲು ಮೇನೇಜರಿನ ಬೊಕ್ಕಸ ಸೇರುತ್ತಿತ್ತು. ನನ್ನನ್ನು ಇಲ್ಲಿ ಬಂದು ಸೇರಿಸಿದವನು ಮತ್ತೆ ಬರದೇ ಹೋದಾಗಲೇ ತಿಳಿದಿದ್ದು, ಅವನು ನನ್ನನ್ನು ಇಪ್ಪತ್ತು ಸಾವಿರಕ್ಕೆ ಮಾರಿದ್ದಾನೆ ಎಂದು. ಮೊದಮೊದಲು ಕುಡಿದು ಕುಪ್ಪಳಿಸುತ್ತಿದ್ದ, ಜನರ ಮುಂದೆ ಡ್ಯಾನ್ಸ್ ಮಾಡಲು ಮುಜುಗರಪಡುತ್ತಿದ್ದವಳು, ಇಂದಲ್ಲ ನಾಳೆ ಸಿನೆಮಾ ಅವಕಾಶ ಸಿಗುತ್ತೆ ಅನ್ನೋ ನಂಬಿಕೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದೆ. ಹೀಗೆ ಕಾಲ ಉರುಳುತ್ತಿತ್ತು. ನಾನಲ್ಲಿ ಸೇರಿಕೊಂಡ ನಾಲ್ಕು ತಿಂಗಳ ನಂತರ, ಮ್ಯಾನೇಜರ್, ನನ್ನ ಕರೆದು, ಯಾರೋ ಒಬ್ಬರು ಶ್ರೀಮಂತರು ನಿನ್ನ ಡ್ಯಾನ್ಸ್ ಒಬ್ಬರೇ ನೋಡಬೇಕಂತೆ ಹೋಗಿ ಬಾ ಕೈ ತುಂಬಾ ದುಡ್ಡುಕೊಡುತ್ತಾರೆ ಎಂದ. ಒಬ್ಬರೇ ನೋಡುವ ಉದ್ದೇಶದ ಅರಿವಿದ್ದರೂ ಅಸಹಾಯಕತೆ ಆ ಶ್ರೀಮಂತನೊಡನೆ ಹೋಗುವಂತೆ ಮಾಡಿತ್ತು. ಆ ವ್ಯಕ್ತಿ ಯಾವುದೋ ಫಾರಂ ಹೌಸಿಗೆ ಕರೆದುಕೊಂಡು ಹೋಗಿ ಸಂಜೆಯವರೆಗೂ ಕುಡಿಯುತ್ತಾ ನನ್ನನ್ನು ಅನುಭವಿಸಿದವನು, ವಾಪಾಸ್ಸು ಬಿಡುವಾಗ ಕೈತುಂಬಾ ದುಡ್ಡು ಕೊಟ್ಟು ಹೋದ. ಸದ್ಯ ಆ ಹಣದಲ್ಲಿ ಮ್ಯಾನೇಜರನಿಗೆ ಪಾಲಿರಲಿಲ್ಲ. ಆಮೇಲೆ ಪ್ರತಿವಾರಕ್ಕೆ ಎರಡೋ ಮೂರೋ ಬಾರಿ, ಹೀಗೆ ಹೋಗಿ ಬರುವುದು ಒಂದು ರೀತಿ ಪಿಕ್ನಿಕ್ ಆಗಿಬಿಟ್ಟಿತ್ತು. 

ಹೀಗೆ ಒಂದು ವರ್ಷ ಕಳೆದು ಹೋಯಿತು. ನನ್ನನ್ನು ನಟಿಯಾಗಿ ಮಾಡಲು ಯಾವ ನಿರ್ಮಾಪಕ-ನಟನೂ ಬರಲಿಲ್ಲ. ಎಟುಕದ ಕನಸಿಗೆ ಏರಲು ನೀಡುವ ಸುಳ್ಳಿನ ಏಣಿ ಅದು ಎಂದು ಗೊತ್ತಾಯಿತು. 

ದುರಂತ ನೋಡಿ ಒಂದು ದಿನ ಮ್ಯಾನೇಜರ್ ಬಂದು ನೀವೆಲ್ಲಾ ಬಂದು ಒಂದು ವರ್ಷವಾಯ್ತು. ಈಗ ಗಿರಾಕಿಗಳು ಹೊಸಮುಖಗಳನ್ನು ಕೇಳ್ತಾ ಇದಾರೆ. ಆದ್ದರಿಂದ ನಿಮ್ಮನ್ನೆಲ್ಲಾ, ನಮ್ಮ ಬೇರೆ ಬಾರಿಗೆ ಶಿಫ್ಟ್ ಮಾಡುತ್ತೇವೆ ಎಂದು ಮತ್ತೊಂದು ಮೂಲೆಯ ಬಾರಿಗೆ ಕಳುಹಿಸಿಬಿಟ್ಟರು, ಅದು ಕೆಳದರ್ಜೆಯ ಬಾರಾಗಿದ್ದು, ಅಸಲಿಗೆ ವೇಶ್ಯಾವಾಟಿಕೆಯ ಅಡ್ಡವಾಗಿತ್ತು. ನಾವು ಹುಡುಗಿಯರ ಬದುಕಿನ ಎಲ್ಲಾ ದಾರಿಗಳು ಮುಚ್ಚಿದ್ದರಿಂದ, ಅನಿವಾರ್ಯವಾಗಿ ಅಲ್ಲಿ ಕೆಲಸ ಮಾಡಬೇಕಾಯ್ತು. ಐದು ವರ್ಷಗಳ ಕಾಲ ಆ ನರಕದಲ್ಲಿ ನಾನು, ಪೋಲೀಸ್ ಠಾಣೆ, ಜೈಲು, ಕೋರ್ಟು ಕಛೇರಿ, ನಿರಾಸೆ ರೋಷ, ಸಂಕಟ, ನೋವು, ರೊಚ್ಚು, ಕಾಯಿಲೆ-ಕಸಾಲೆ ಎಲ್ಲವನ್ನೂ ಅನುಭವಿಸಿಬಿಟ್ಟೆ.. ಇದು ಸಾಲದೆ ಟಿ.ಬಿ. ಅಂಟಿಕೊಂಡದ್ದರಿಂದ, ಈಗ ಈ ಬಾರಿಗೆ ಬಂದು ಬಾರ್ ಹುಡುಗಿಯರ ಕೇರ್ ಟೇಕರ್ ಆಗಿ, ಅವರ ಯೋಗಕ್ಷೇಮ ನೋಡಿಕೊಳ್ಳುತ್ತಾ ಕಾಲತಳ್ಳುತ್ತಿದ್ದೇನೆ. ಊಟ ತಿಂಗಳಿಗಿಷ್ಟು ಸಂಬಳ ನೀಡುತ್ತಾರೆ. 

ತಮಾಷೆಯೆಂದರೆ ಒಂದು ದಿನವೂ ನನ್ನವರ, ಮನೆಯ, ಊರಿನ ನೆನಪಾಗಲೇ ಇಲ್ಲ. ನೋಡಬೇಕೂ ಎಂದೂ ಅನಿಸಲಿಲ್ಲ. ಯಾವತ್ತೂ ನಾನು ನನ್ನ ಬಗ್ಗೆಯೇ ಹೆಚ್ಚು ಕಾಳಜಿ ವಹಿಸುತ್ತಿದ್ದುದೇ ಕಾರಣವಿರಬೇಕು. ನಮ್ಮೂರಿನ ಕಡೆಯವರನ್ನೂ ಭೇಟಿಯಾಗಿಲ್ಲ. ಮುಂದೆ ಆಗುವುದು ಬೇಡ. ಮನೆಯವರ ಪಾಲಿಗೆ ನಾನು ಸತ್ತು ವರ್ಷಗಳೇ ಕಳೆದಿವೆ.. ಹಾಗೆ ಸತ್ತೇ ಇರುತ್ತೇನೆ.

ನೋವಾಗುತ್ತೆ. ಅರಿಯದ ಬಣ್ಣದ ಬದುಕಿನ ಕನಸಿಗೆ ಬಲಿಯಾದ ತಪ್ಪಿಗೆ. ನನ್ನನ್ನು ಈ ನರಕಕ್ಕೆ ತಳ್ಳಿದವನಿಗೆ ಅಷ್ಟು ಆಸೆಯಿದ್ದಿದ್ದರೆ, ಅಲ್ಲೇ ನನ್ನನ್ನು ಅನುಭವಿಸಬಹುದಿತ್ತು. ಸಾಯುವತನಕ ಅವನ ಜೊತೆ ಮಲಗುತ್ತಿದ್ದೆನೇನೋ? ಆದರೆ ಅವನು ಒಂದಷ್ಟು ದಿನದ ತೆವಲಿಗೆ, ಖಾಲಿ 20 ಸಾವಿರದ ಆಸೆಗೆ ನನ್ನ ಬದುಕನ್ನು ಮೂರಾಬಟ್ಟೆಯಾಗಿಸಿಬಿಟ್ಟ. ತಪ್ಪು ನನ್ನದೂ ಇದೆ. ನನ್ನ ದೌರ್ಬಲ್ಯವನ್ನು ಚನ್ನಾಗಿ ಬಳಸಿಕೊಂಡ. ಆದರೂ ಸರ್ ಗಂಡಸರ್ಯಾಕೆ ಹೆಣ್ಣುಗಳ ಮೇಲೆ ಇಂತಹ ದೌರ್ಜನ್ಯ ಮಾಡುತ್ತಾರೋ ಗೊತ್ತಿಲ್ಲ. ಇವತ್ತು ನಾನು ಏನೂ ಅಲ್ಲ. ಯಾರಿಗೂ ಸಹಾಯವನ್ನೂ ಮಾಡಲಾರೆ. ಅದರೆ ದಾರಿತಪ್ಪಿ ಬಂದ ಹೆಣ್ಣುಮಕ್ಕಳಿಗೆ ಸಮಾಧಾನ ಮಾಡಬಲ್ಲೆ. ಅವರ ಆರೋಗ್ಯದ ಬಗ್ಗೆ ಎಚ್ಚರವಹಿಸುವ ತಿಳುವಳುಕೆ ನೀಡಬಲ್ಲೆ. ಒಬ್ಬ ಸೂಳೆಯಿಂದ ಇನ್ನೇನು ಬಯಸಬಹುದು ಸಮಾಜ.?

ನೀವು ನಮ್ಮ ರಾಜ್ಯದವರು, ತೊಂದರೆಯಿಲ್ಲವೆಂದರೆ ಇವತ್ತು ರಾತ್ರಿ ಇಲ್ಲೇ ಉಳಿದು ಹೋಗಿ. ನಮ್ಮಲ್ಲಿ ಒಳ್ಳೆಯ ಹುಡುಗಿಯರಿದ್ದಾರೆ. ಮಾತು ಮುಗಿಸಿದವಳ ಕಣ್ಣಲ್ಲಿ ನೀರು ತುಂಬಿದ್ದವು. ನನ್ನ ಮನೆಯವರ ಬಗ್ಗೆ ಚಿಂತೆಯಿಲ್ಲ, ಅವರ ಬಗ್ಗೆ ಯೋಚಿಸುವುದೂ ಇಲ್ಲವೆಂದು ಅವಳು ಹೇಳಿದ್ದು ಸುಳ್ಳು ಎಂದು ನನಗೆ ಗೊತ್ತಾಯಿತು. ನನ್ನ ವಿಸಿಟಿಂಗ್ ಕಾರ್ಡ್ ಅವಳ ಕೈಗಿತ್ತು ನಮ್ಮ ಕಡೆ ಬಂದಾಗ ನಮ್ಮ ಮನೆಗೆ ಬನ್ನಿ ಎಂದು ನಮಸ್ಕಾರ ಹೇಳಿ ಹೊರಬಂದವನಿಗೆ, ಇಳಿಸಂಜೆಯಲಿ ಸುಂದರವಾಗಿ ಕಾಣಬೇಕಿದ್ದ ಪ್ರಪಂಚ ಒಂದು ಕಸಾಯಿಖಾನೆಯಂತೆ ಕಂಡಿತು.

ಮೇ 9, 2015

ಅಸಹಾಯಕ ಆತ್ಮಗಳು - ಚಿಕ್ಕಮ್ಮನ ಚಕ್ರವ್ಯೂಹ

ಕು.ಸ.ಮಧುಸೂದನ್
ಅಪ್ಪನಿಗೆ ಹಳ್ಳಿಯಲ್ಲಿ ಒಂದೆರಡು ಎಕರೆ ಜಮೀನಿತ್ತು. ಆದರದರಲ್ಲಿ ಬರುವ ಆದಾಯಕ್ಕಿಂತ ಅವನು ಮಾಡುತ್ತಿದ್ದ ಲೇವಾದೇವಿಯಿಂದಲೇ ಜೀವನ ಸಾಗುತ್ತಿತ್ತು. ಉಣ್ಣೋಕೆ ತಿನ್ನೋಕೆ ಏನೂ ಕೊರತೆಯಿರದೇ ಬೆಳೆಯುತ್ತಿರುವಾಗಲೇ ಅಮ್ಮ ಮನೆ ಹಿಂದಿದ್ದ ಕಲ್ಲಿನ ಬಾವಿಗೆ ಬಿದ್ದು ಸತ್ತು ಹೋದಳು. ತಾತ ತೆಗೆಸಿದ ಬಾವಿಗೆ ಸುತ್ತ ಕಲ್ಲು ಕಟ್ಟಿದ್ದರೂ ಅದುಯಾವಾಗ ಬೇಕಾದರೂ ಕುಸಿಯುವ ಸ್ಥಿತಿಯಲ್ಲಿತ್ತು. ಆ ಬಾವಿ ಮುಚ್ಚಿಸಿ ಅಂತಾ ಅಮ್ಮ ಎಷ್ಟು ಬಡಕೊಂಡರು ಅಪ್ಪ ಅವಳ ಮಾತು ಕೇಳಿರಲಿಲ್ಲ. ಕೊನೆಗೆ ಅವಳೇ ಅದಕ್ಕೆ ಬಲಿಯಾಗಿ ಹೋದಳು. ಅವಳು ಸತ್ತಾಗ ನಾನು ನಾಲ್ಕನೇ ಕ್ಲಾಸಲ್ಲಿ ಓದ್ತಾ ಇದ್ದೆ.

ಅಮ್ಮ ಸತ್ತ ಒಂದಷ್ಟು ದಿನದವರೆಗೂ ಇಡೀ ಊರಲ್ಲಿ ಅಪ್ಪನೇ ಅಮ್ಮನ್ನು ಹೊಡೆದು ಬಾವಿಗೆ ಹಾಕಿದಾನೆ ಅಂತ ಗುಸುಗುಸು ಹಬ್ಬಿತ್ತು. ಆ ಮಾತುಗಳು ನನ್ನ ಕಿವಿಗೆ ಬಿದ್ದರೂ ಅದೆಲ್ಲ ಅರ್ಥ ಆಗೋ ವಯಸ್ಸು ನನಗಾಗಿರಲಿಲ್ಲ. ತಿನ್ನೋಕೆ ಗತಿಯಿಲ್ಲದ ಸ್ಥಿತಿಯಲ್ಲಿದ್ದ ಅಮ್ಮನ ತವರು ಮನೆಯವರು ಅದರ ಬಗ್ಗೆ ಏನನ್ನು ಕೇಳಲಿಲ್ಲ. ಆದರೆ ಊರಲ್ಲಿ ಹಬ್ಬಿದ ಆ ಗಾಳಿಮಾತುಗಳು ಸತ್ಯವಿರಬಹುದೆಂಬ ಅನುಮಾನ ನನಗೆ ಬಂದಿದ್ದು ಅಮ್ಮ ಸತ್ತ ಮೂರೇ ತಿಂಗಳಿಗೆ ಅಪ್ಪ ಪಕ್ಕದ ಹಳ್ಳಿಯ ಗಂಡ ಸತ್ತ ಹೆಂಗಸೊಬ್ಬಳನ್ನು ಮದುವೆಯಾಗಿ ಮನೆಗೆ ಕರೆದುಕೊಂಡು ಬಂದಾಗ!


ಹಳ್ಳಿಯ ಜನವಂತೂ ಈಗ ಅಪ್ಪನೇ ಅಮ್ಮನನ್ನು ಸಾಯಿಸಿದ್ದಾನೆಂದು ನಂಬಿಬಿಟ್ಟರು. ಆದರೆ ಯಾರಿಗೂ ಹೊರಗೆ ಮಾತಾಡೋ ಧೈರ್ಯವಿರಲಿಲ್ಲ. ಯಾಕೆಂದರೆ ಹಳ್ಳಿಯೊಳಗಿನ ಬಹಳಷ್ಟು ಜನ ಅಪ್ಪನ ಹತ್ತಿರ ಲೇವಾದೇವಿ ಇಟ್ಟುಕೊಂಡೋರೆ ಆಗಿದ್ದರು. ಹಾಗೆ ಅಪ್ಪ ಮದುವೆಯಾಗಿ ಮನೆಗೆ ಕರೆದುಕೊಂಡ ಬಂದ ಹೆಂಗಸಿನ ಬಗ್ಗೆಯೂ ಯಾರಿಗೂ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಅವಳ ಗಂಡ ಇವಳ ಕಿರುಕುಳ ತಾಳಲಾರದೆ ನೇಣು ಹಾಕಿಕೊಂಡು ಸತ್ತುಹೋದ ಅಂತ ಜನ ಮಾತಾಡ್ತಾ ಇದ್ದರು. ನಾನು ಸಣ್ಣ ಹುಡುಗಿಯಾಗಿದ್ದರಿಂದ ಇದೆಲ್ಲ ನನಗೆ ಅರ್ಥವಾಗಲ್ಲ ಅನ್ನೋ ಧೈರ್ಯದಿಂದ ನನ್ನ ಎದುರಿಗೇ ಮಾತಾಡಿಕೊಳ್ತಿದ್ದರು. ಅದರಲ್ಲೂ ಅಪ್ಪನ ಅಣ್ಣತಮ್ಮಂದಿರಿಗೆ ಮುಂಚಿನಿಂದಲೂ ಅಪ್ಪನ ಕಂಡರೆ ಯಾಕೋ ದ್ವೇಷ. ಇಂತಹ ಸುದ್ದಿಗಳನ್ನೆಲ್ಲ ಅವರೇ ಹೆಚ್ಚು ಹಬ್ಬಿಸ್ತಾ ಇದ್ದರು. ಒಟ್ಟಲ್ಲಿ ಯಾವುದು ಸುಳ್ಳು ಯಾವುದು ಸತ್ಯ ಅಂತ ತಿಳಿದುಕೊಳ್ಳೋ ಆಸಕ್ತಿಯಾಗಲಿ, ಅಂತ ಬುದ್ದಿವಂತಿಕೆಯಾಗಲಿ ನನಗಿರಲಿಲ್ಲ.

ನಾನು ಏಳನೇ ಕ್ಲಾಸು ಮುಗಿಸಿ ಎಂಟನೇ ಕ್ಲಾಸಿಗೆ ಬಂದ ಒಂದೇ ತಿಂಗಳಿಗೆ ಮೈನೆರೆದೆ. ಇದನ್ನೇ ನೆವವಾಗಿಟ್ಟುಕೊಂಡ ಚಿಕ್ಕಮ್ಮ ಮೈನೆರೆದ ಹುಡುಗಿ ಪಕ್ಕದೂರಿಗೆ ಹೋಗಿ ಓದೋದೇನು ಬೇಕಾಗಿಲ್ಲ ಅಂತ ಅಪ್ಪನ ಕಿವಿ ಚುಚ್ಚಿ ಸ್ಕೂಲ್ ಬಿಡಿಸಿ ಬಿಟ್ಟಳು. ಅಪ್ಪ ಹೆಂಡತಿ ಹೇಳ್ತಿರೋದು ಮನೆಯ ಗೌರವ ಮತ್ತು ಮಗಳ ಭವಿಷ್ಯದ ಹಿತದೃಷ್ಠಿಯಿಂದ ನಂಬಿದ್ದ. ಅಲ್ಲೀತನಕ ನೆಮ್ಮದಿಯಾಗಿ ಆಟ ಆಡಿಕೊಂಡಿದ್ದ ನನಗೆ ಅಲ್ಲಿಂದ ನರಕ ಶುರುವಾಯ್ತು ನೋಡಿ. ಅಪ್ಪ ಮನೆ ಬಿಟ್ಟು ಹೊರಗೆ ಹೋದ ತಕ್ಷಣ ಅವಳ ಕಾಟ ಶುರುವಾಗೋದು. ಆ ಕೆಲಸ ಮಾಡು ಈ ಕೆಲಸ ಮಾಡು ಅಂತಾ ಒಂದು ನಿಮಿಷ ಕೂರೋಕೆ ಬಿಡದ ಹಾಗೆ ಕಂಬ ಸುತ್ತಿಸೋಳು. ಹೀಗೇ ಮೂರು ವರ್ಷ ಕಳೆಯುವಷ್ಟರಲ್ಲಿ ಹೊಲಕ್ಕೆ ಹೋದ ಅಪ್ಪ ಅಲ್ಲೇ ಸತ್ತು ಹೋಗಿದ್ದ. ಅವನಿಗಾಗದ ಯಾರೋ ಅವನನ್ನು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಸಾಯಿಸಿದ್ದರು. ಹಳ್ಳಿಗೆ ಬಂದ ಪೋಲಿಸರು ಅವರಿವರನ್ನು ವಿಚಾರಣೆ ಮಾಡಿ ಅಪ್ಪನ ದಾಯಾದಿಗಳ ಪೈಕಿ ಮೂರು ಜನರನ್ನು ಅರೆಸ್ಟ್ ಮಾಡಿಕೊಂಡು ಹೋದರು. ನೆಂಟರಿಷ್ಟರೆಲ್ಲ ಬಂದು ತಿಥಿಗಿಥಿ ಎಲ್ಲ ಪೂರೈಸಿಕೊಂಡು ಹೋದ ಮೇಲೆ ಚಿಕ್ಕಮ್ಮನ ಗೊಣಗಾಟ ಶುರುವಾಯಿತು. ನಿಮ್ಮಪ್ಪ ಯಾರ್ಯಾರಿಗೆ ದುಡ್ಡು ಕೊಟ್ಟು ಸತ್ತು ಹೋದನೋ ಏನೋ ಈಗ ನಾನೆಲ್ಲಿ ವಸೂಲಿ ಮಾಡಿ ಜೀವನ ಕಳೀಲಿ. ನಿನ್ನ ಮದುವೆ ಹೆಂಗೆ ಮಾಡಲಿ ಅಂತ ನಿಮಿಷ ನಿಮಿಷಕ್ಕೂ ರಾಗ ಎಳೆಯೋಳು. ಈ ಕಾಟವಲ್ಲದೆ ಅಪ್ಪ ಇರೋತನಕ ತೋರಿಕೆಗಾದ್ರು ಮಗಳು ಅಂತ ನಾಟಕ ಮಾಡಿ ಅವರಿವರ ಮನೆಗೆ ಹೋಗೋಕೆ ಬಿಡ್ತಿದ್ದವಳು, ಈಗ ಪಕ್ಕದ ಮನೆಯವರ ಜೊತೆ ಮಾತಾಡೋಕು ಬಿಡದಷ್ಟು ಕಠೋರವಾಗಿಬಿಟ್ಟಳು.

ಕೊನೆಗೊಂದು ದಿನ ಅವಳ ತಮ್ಮ ಅನಿಸಿಕೊಂಡೋನು ಸಹ ನಮ್ಮ ಮನೆಗೇ ಬಂದು ಇರೋಕೆ ಶುರು ಮಾಡಿಬಿಟ್ಟ. ಮುಂಚೇನು ಅಪ್ಪ ಇದ್ದಾಗ ವರ್ಷಕ್ಕೊಂದೆರಡು ಬಾರಿ ಹಬ್ಬಹುಣ್ಣಿಮೆಗೆ ಬಂದು ಹೋಗ್ತಿದ್ದೋನು ಈಗ ಇನ್ನು ಮೇಲೆ ಇಲ್ಲೇ ಇರ್ತೀನಿ ಅಕ್ಕ ನಿನಗೆ ತಾನೆ ಯಾರಿದ್ದಾರೆ ಹೇಳು ಅಂತಾ ಝಾಂಡಾ ಹೂಡಿಬಿಟ್ಟ. ಅಷ್ಟಕ್ಕು ನಾನು ಕೇಳಿದ ಸುದ್ದಿ ಪ್ರಕಾರ ಅವನೇನು ಅವಳ ಸ್ವಂತ ತಮ್ಮ ಆಗಿರಲಿಲ್ಲ ಜೊತೆಗೆ ಯಾವುದೋ ದೂರದ ಸಂಬಂಧದವನಾಗಿದ್ದ. ಅಂತೂ ಮನೆಗೆ ಮೂರನೆಯವನೊಬ್ಬ ಬಂದು ಸೇರಿಕೊಂಡಿದ್ದು ನನಗೇನೂ ಇಷ್ಟವಾಗಲಿಲ್ಲ. ಅದೂ ಅಲ್ಲದೆ ಮುಂಚೇನು ಮನೆಗೆ ಬಂದಾಗ ನನ್ನ ತಿನ್ನೋ ಹಾಗೆ ನೋಡೋನು. ಅವನ ನೋಟ ನಡತೆ ಯಾವುದು ನನಗಿಷ್ಟವಾಗಿರಲಿಲ್ಲ. ಅವನಿಗಾಗಲೆ ಮುವತ್ತು ವರ್ಷ ಮೀರಿತ್ತು. ಬೆಂಗಳೂರಲ್ಲಿ ಅದೇನು ಕೆಲಸ ಮಾಡ್ತಿದ್ದನೊ ದೇವರಿಗೆ ಗೊತ್ತು, ಯಾವಾಗಲು ಒಳ್ಳೆ ಬಟ್ಟೆ ಹಾಕ್ಕೊಂಡು ಶೋಕಿ ಮಾಡ್ತಾ ಇದ್ದ. 

ಅವನು ಬಂದ ಮೇಲೆ ಚಿಕ್ಕಮ್ಮ ನನಗೇನಾದ್ರು ಕೆಲಸ ಹೇಳಿದ್ರೆ ಪಾಪ ಆಮೇಲೆ ಮಾಡ್ತಾಳೆ ಬಿಡು ಅವಳಿಗೂ ಸುಸ್ತಾಗಿರಬೇಕು ಅಂತೆಲ್ಲ ಹೇಳಿ ನನ್ನ ಪರವಹಿಸಿಕೊಂಡು ಮಾತಾಡೋನು. ಒಂದು ದಿನ ಚಿಕ್ಕಮ್ಮ ಬಂದು ನನ್ನ ಹತ್ತಿರ ಕರೆದು ನೋಡು ನಿನಗೂ ಹದಿನೇಳು ತುಂಬುತ್ತಾ ಬಂತು, ಈಗ ನಿನ್ನ ಮದುವೆಮಾಡಬೇಕು, ವರದಕ್ಷಿಣೆ ತುಂಬಾ ಕೇಳಿದರೆ ನಾನೆಲ್ಲಿಂದ ತರಲಿ? ಅಂತ ನಯವಾಗಿ ಮಾತು ಶುರು ಮಾಡಿದೋಳು, ಸುಮ್ಮನೆ ನನ್ನ ತಮ್ಮನನ್ನು ಮದುವೆಯಾಗು, ಅವನೇನು ದೂರದವನ ಖರ್ಚಿಲ್ಲದೆ ಮದುವೆಯಾಗುತ್ತೆ. ನಿನ್ನ ಚೆನ್ನಾಗಿ ನೋಡಿಕೊಳ್ತಾನೆ. ಮದುವೆ ಆದಮೇಲೆ ನೀವಿಬ್ಬರೂ ಬೆಂಗಳೂರಿಗೆ ಹೋಗಿ ಬಿಡಿ. ನನ್ನದು ಹೇಗಿದ್ದರೂ ನಡೆಯುತ್ತೆ. ನಿಮ್ಮಪ್ಪ ಇದ್ದಿದ್ದರೆ ನಾನೀ ಮಾತನ್ನ ಹೇಳೋ ಕಾಲ ಬರ್ತಿರಲಿಲ್ಲ. ಹೊಟ್ಟೇಲಿ ಹುಟ್ಟದಿದ್ರೂ ನೀನು ನನ್ನ ಮಗಳೇ ಅಲ್ವಾ ಅಂತೆಲ್ಲ ಹೇಳಿದಳು. ಆ ಕ್ಷಣಕ್ಕೆ ಏನು ಹೇಳಬೇಕೊ ನನಗೆ ಗೊತ್ತಾಗಲಿಲ್ಲ. ಸುಮ್ಮನೆ ಅಳ್ತಾ ಕೂತೆ. ನನಗೆ ಮದುವೆ ಅನ್ನೋದೆ ಒಂದು ಅನಿರೀಕ್ಷಿತವಾದ ವಿಷಯವಾಗಿತ್ತು ಅದರಲ್ಲೂ ಅವನನ್ನು ಆಗೋದು ಅಂದ್ರೆ ನಾನ್ಯಾವತ್ತು ಅದನ್ನೆಲ್ಲ ಊಹೆ ಮಾಡಿಕೊಂಡೋಳಲ್ಲ.

ಆದರೆ ಚಿಕ್ಕಮ್ಮ ಸಾಮಾನ್ಯದವಳಲ್ಲ. ದಿನಾ ಇದೇ ಮಾತಾಡಿ ಮಾತಾಡಿ ನನಗೆ ಸಂಕಟ ಆಗೋಹಾಗೆ ಮಾಡಿದಳು. ಕೊನೆಗೊಂದು ದಿನ ಇದಕ್ಕೆ ಒಪ್ಪಲಿಲ್ಲ ಅಂದ್ರೆ ನಾನು ನನ್ನ ತಮ್ಮನ ಜೊತೆ ಬೆಂಗಳೂರಿಗೆ ಹೋಗಿ ಬಿಡ್ತೀನಿ ನೀನು ನಿಮ್ಮಪ್ಪನ ಹೊಲ ಲೇವಾದೇವಿ ನೋಡ್ಕೊಂಡು ಇಲ್ಲೇ ಇರು ಅಂತ ಹೆದರಿಸಿಬಿಟ್ಟಳು. ನಿಜಕ್ಕೂ ಅದನ್ನ ನಾನು ಕನಸಲ್ಲೂ ನೆನೆಸಿರಲಿಲ್ಲ. ದಾಯಾದಿಗಳು ಜೈಲಿಗೆ ಹೋದಮೇಲೆ ಆ ಕುಟುಂಬದವರು ನಮಗೆ ಹೊಲದಲ್ಲಿ ಬೆಳೆ ಬೆಳೆಯೋಕೆ ಸಾಕಷ್ಟು ತೊಂದರೆ ಕೊಡ್ತಾ ಇದ್ದರು. ಅಂತದ್ದರಲ್ಲಿ ನಾನೊಬ್ಬಳೇ ಆಗಿಬಿಟ್ಟರೆ ನನ್ನ ಸಾಯಿಸೋದು ಗ್ಯಾರಂಟಿ ಅನ್ನಿಸ್ತು.

ಆಮೇಲೊಂದು ದಿನ ಮನಸು ಗಟ್ಟಿ ಮಾಡಿಕೊಂಡು ಹೂ ಅಂದು ಬಿಟ್ಟೆ. ಹಾಗೆ ಒಪ್ಪಿಕೊಂಡ ತಕ್ಷಣ ಚಿಕ್ಕಮ್ಮನ ವರಸೆಯೇ ಬದಲಾಗಿ ಹೋಯಿತು. ಏನು ಹೊಟ್ಟೇಲಿ ಹುಟ್ಟಿದ ಮಗಳಿಗೂ ಅಂತ ಸೇವೆನಾ ಯಾರೂ ಮಾಡಲ್ಲ. ಹಾಗೆ ನನ್ನ ಒಂದೂ ಕೆಲಸ ಮಾಡೋಕೆ ಬಿಡದೆ ತಾನೇ ಎಲ್ಲ ಕೆಲಸ ಮಾಡಿ ಕೂತಕಡೆಗೆ ಊಟ ತಂದು ಕೊಡೋಳು. ನನಗೆ ಇದೆಲ್ಲ ಒಂದು ತರ ಅನ್ನಿಸಿ ಚಿಕ್ಕಮ್ಮ ನೀವು ಹೀಗೆಲ್ಲ ಮಾಡಬೇಡಿ ಅಂದುಬಿಟ್ಟೆ. ಇಷ್ಟವಿತ್ತೊ ಇರಲಿಲ್ಲವೊ ಮದುವೆಗೆ ಒಪ್ಪಿದ್ದೆ, ನಂದೂ ಹರಯದ ವಯಸ್ಸಲ್ವಾ ಮದುವೆ ಮನೆ ಮಕ್ಕಳು ಬಗ್ಗೆ ಏನೇನೋ ಕನಸು ಕಾಣೋಕೆ ಶುರು ಮಾಡಿದೆ.

ಹಾಗಿರೋವಾಗ ಒಂದು ರಾತ್ರಿ ಚಿಕ್ಕಮ್ಮ ನನಗೆ ಮಲಗೋಕೆ ಅವಳ ತಮ್ಮನ ರೂಮಿಗೆ ಹೋಗೋಕೆ ಹೇಳಿದಳು. ನನಗೆ ಆಶ್ಚರ್ಯವಾಗಿ ಏನು ಚಿಕ್ಕಮ್ಮ ಮದುವೆಗೆ ಮುಂಚೇನೆ ಒಟ್ಟಿಗೆ ಮಲಗ್ತಾರಾ ಅಂದೆ. ಅದಕ್ಕವಳು ಇನ್ನೇನು ಮೂರು ತಿಂಗಳಲ್ಲಿ ಮದುವೆ ಆಗುತ್ತಲ್ಲ. ಅವನೇನು ಹೊಸಬನಾ, ಸುಮ್ಮನೇ ಹೋಗು ನಾನು ನಿಮ್ಮಮ್ಮ ಹೇಳ್ತಿದಿನಿ ಅಂದು ಬಿಟ್ಟಳು. ಸತ್ಯ ಹೇಳ್ತೀನಿ ಅವಳು ನಾನು ನಿಮ್ಮಮ್ಮ ಅಂದ ಒಂದು ಮಾತಿಗೆ ನಾನು ಮರು ಮಾತಾಡದೆ ಒಳಗೆ ಹೋಗಿ ಬಿಟ್ಟೆ. ರೂಮಿನಲ್ಲಿದ್ದ ಅವನು ನನ್ನಿಷ್ಟ ಕಷ್ಟ ಏನನ್ನೂ ಕೇಳದೆ ಇಡೀರಾತ್ರಿ ನನ್ನ ಹಿಚುಕಿ ಹಾಕಿಬಿಟ್ಟ. ಬೆಳಿಗ್ಗೆ ಎಷ್ಟೊತ್ತಾದರು ಏಳದೆ ಮಲಗಿ ಬಿಟ್ಟಿದ್ದೆ. ಇದೇನೋ ಒಂದು ದಿನದ ಕಥೆ ಅಂದುಕೊಂಡಿದ್ದರೆ ಊಹೂ ಸತತವಾಗಿ ಆರು ತಿಂಗಳು ಮದುವೆಯಾಗದೆ ಅವನ ಜೊತೆ ಸಂಸಾರ ಮಾಡಿಬಿಟ್ಟೆ. ಹೊರಗಿನ ಒಬ್ಬರಿಗೂ ಗೊತ್ತಾಗದೆ ಇದೆಲ್ಲ ನಡೆಯುತ್ತ ಇತ್ತು. ನಾನೂ ಸಹ ಮನೆಯಿಂದಾಚೆ ಇಣುಕುವುದನ್ನೇ ಬಿಟ್ಟಿದ್ದೆ. ಮದುವೆ ಮಾತೆತ್ತಿದಾಗೆಲ್ಲ ಚಿಕ್ಕಮ್ಮ ಇನ್ನೆರಡು ತಿಂಗಳು ಒಳ್ಳೆಯ ಮುಹೂರ್ತವಿಲ್ಲ ತಡಿ ಅನ್ನುತ್ತಲೇ ಬಂದಳು. ಇದು ತಪ್ಪು ಅಂತ ಗೊತ್ತಿದ್ದರು ನಾನು ಏನೂ ಮಾಡದ ಸ್ಥಿತಿಯಲ್ಲಿದ್ದೆ.

ಆದರೆ ನಾನು ಸುಮ್ಮನಿದ್ದರೂ ದೇವರು ಸುಮ್ಮನಿರ್ತಾನಾ? ನನ್ನ ಹೊಟ್ಟೇಲಿ ಅವನ ಪಿಂಡ ಬೆಳೆಯೋಕೆ ಶುರುವಾಯಿತು. ಈ ವಿಷಯ ಗೊತ್ತಾದ ಕೂಡಲೆ ಅದುವರೆಗೂ ಹೊರಗೆ ವಿಷಯ ಗೊತ್ತಾಗದಂತೆ ನೋಡಿಕೊಂಡಿದ್ದ ಚಿಕ್ಕಮ್ಮ ಮನೆಯಂಗಳದಲ್ಲಿ ಬಾಯಿ ಬಡಿದುಕೊಂಡು ಅಯ್ಯೋ ನಮ್ಮನೆ ಮಾರ್ಯಾದೆ ತಗದಳಲ್ಲಪ್ಪ, ಮದುವೆಗೆ ಮುಂಚೇನೆ ಕದ್ದು ಬಸಿರಾಗಿದಾಳೆ ಅನ್ನುತ್ತ ಊರು ಕೇರಿ ಒಂದು ಮಾಡಿಬಿಟ್ಲು. ಚಿಕ್ಕಮ್ಮನ ವರ್ತನೆ ನನಗೆ ಅರ್ಥವಾಗದೆ ಮನೆಯೊಳಗೆ ಅಳುತ್ತಾ ಕೂತೆ. ಊರವರೆಲ್ಲ ಬಂದು ಚಿಕ್ಕಮ್ಮನಿಗೆ ಅಯ್ಯೋ ಪಾಪ ಅಂತ ಸಮಾಧಾನ ಹೇಳಿ ಹೋದರೆ ಹೊರತು ನನಗೆ ಯಾರು ಏನೂ ಕೇಳಲಿಲ್ಲ.

ಹೀಗೆ ಎರಡುದಿನದ ಅವಳ ಅಳುವಿನ ನಾಟಕ ಮುಗಿದ ಮೇಲೆ ಒಂದು ದಿನಾ ಸುಮ್ಮನೆ ಅವನ ಜೊತೆ ಬೆಂಗಳೂರಿಗೆ ಹೋಗು ಅಂತ ಹೇಳಿ ರಾತ್ರಿ ಯಾರಿಗೂ ಗೊತ್ತಾಗದ ಹಾಗೆ ನಮ್ಮಿಬ್ಬರನ್ನೂ ಬೆಂಗಳೂರಿಗೆ ಕಳಿಸಿಬಿಟ್ಟಳು. ಬೆಂಗಳೂರಿಗೆ ಬೆಳಗಿನ ಜಾವ ಬಂದ ನನ್ನನ್ನು ಒಂದು ಲಾಡ್ಜಿನ ರೂಮಲ್ಲಿ ಇರಿಸಿ, ಇಲ್ಲೇ ಇರು ಸಾಯಂಕಾಲ ಬರ್ತೀನಿ ಅಂತ ಹೊರಟು ಹೋದ. ನನಗಾಮೇಲೆ ಗೊತ್ತಾಗಿದ್ದೆಂದರೆ ಅವನು ವಾಪಾಸು ಹಳ್ಳಿಗೆ ಹೋಗಿ ನಾನೆಲ್ಲೊ ಓಡಿ ಹೋಗಿದ್ದೀನಿ ಅನ್ನೋ ತರಾ ಹುಡುಕಾಡಿದ ನಾಟಕವಾಡಿ ರಾತ್ರಿ ಹತ್ತು ಗಂಟೆಗೆಲ್ಲ ಬೆಂಗಳೂರಿಗೆ ಬಂದು ಬಿಟ್ಟಿದ್ದ. ಸುಮಾರು ಒಂದು ವಾರ ಹೀಗೇ ನಾಟಕವಾಡಿದ ಅವನು ಕೊನೆಗೊಂದು ದಿನ ಸಣ್ಣ ಮನೆ ಮಾಡಿ ನನ್ನ ಕರೆದುಕೊಂಡು ಹೋದ. ನಾನು ನಮ್ಮ ಮದುವೆಯ ಮಾತೆತ್ತಿದರೆ, ಸ್ವಲ್ಪ ದಿನ ತಡಿ ಅಂತ ಹೇಳುತ್ತ ಬಂದ. ಹಾಗೆ ದಿನ ತಳ್ಳುತ್ತಲೇ ಒಂದು ದಿನ ನನ್ನನ್ನು ಸೂಳೆಗಾರಿಕೆಯ ನರಕಕ್ಕೆ ತಳ್ಳಿಬಿಟ್ಟ. ಮನೆಯನ್ನೆ ಕಸುಬಿನ ಅಡ್ಡೆ ಮಾಡಿಕೊಂಡವನಿಗೆ ಗಿರಾಕಿಗಳನ್ನು ಕರೆತರೋದೇ ಕೆಲಸವಾಗಿ ಬಿಡ್ತು. ಅವನ ಮಾತು ನಡವಳಿಕೆಗಳಿಂದ ನನಗೆ ಗೊತ್ತಾಗಿದ್ದೆಂದರೆ ಅವನು ಬೆಂಗಳೂರಿನಲ್ಲಿ ಮುಂಚೆ ಮಾಡುತ್ತಿದ್ದುದು ಇದೇ ತಲೆಹಿಡುಕನ ಕೆಲಸ. ಒಂದು ದಿನ ನಾನು ಅವನ ಜೊತೆ ಜೋರುದನಿಯಲ್ಲಿ ಜಗಳವಾಡಿ ಇದೆಲ್ಲ ನಿಮ್ಮಕ್ಕನಿಗೆ ಗೊತ್ತಾದರೆ ಏನು ಮಾಡ್ತೀಯಾ ಅಂದೆ. ಕುಡಿದ ಅಮಲಿನಲ್ಲಿದ್ದ ಅವನು ಏಯ್ ನಾಯಿ ಅವಳೇನು ನನ್ನ ಅಕ್ಕ ಏನೇ ದೂರದ ಸಂಬಂಧಿ, ನಿಮ್ಮಪ್ಪನ ಜೊತೆ ಅವಳು ಮದುವೆ ಆಗೋಕೆ ಮುಂಚೇನೆ ಅವಳ ಜೊತೆ ಮಲಗಿದೀನಿ. ಇದೆಲ್ಲ ಅವಳಿಗೆ ಗೊತ್ತೆ ಮಾಡ್ತಿರೋದು ಅಂದುಬಿಟ್ಟ. ಅಲ್ಲಿಗೆ ನನಗೆ ಚಿಕ್ಕಮ್ಮ ಅನ್ನಿಕೊಂಡೋಳ ಯೋಗ್ಯತೆ ಏನು ಅಂತ ಗೊತ್ತಾಗಿ ಹೋಯಿತು. ಆದರೀಗ ಅದನ್ನು ತಿಳಿದುಕೊಂಡು ನಾನೇನು ಮಾಡುವಂತಿರಲಿಲ್ಲ. 

ಹೀಗೆ ಒಂದು ವರ್ಷ ಕಳೆದ ಮೇಲೆ ಅವನು ಇದ್ದಕ್ಕಿದ್ದಹಾಗೆ ನನ್ನ ಬಿಟ್ಟು ಎಲ್ಲಿಗೋ ಓಡಿಹೋಗಿಬಿಟ್ಟ. ಅಷ್ಟರಲ್ಲಿ ನನಗೆ ನನ್ನ ಜೀವನ ಇಷ್ಟೇ ಅನ್ನೋದು ಅರ್ಥವಾಗಿ ಹೋಗಿತ್ತು. ಜೊತೆಗೆ ಬೆಂಗಳೂರಿನ ದಂಧೆ ಮಾಡುವ ಲಾಡ್ಜುಗಳು ಪರಿಚಯವಾಗಿದ್ದವು. ಒಬ್ಬಳೇ ಒಂಟಿಯಾಗಿ ಮನೇಲಿದ್ದು ವ್ಯವಹಾರ ಮಾಡೋದು ಕಷ್ಟದ ಕೆಲಸವಾಗಿತ್ತು. ಆ ಮನೆ ಖಾಲಿ ಮಾಡಿ ಒಂದು ಲಾಡ್ಜಿನ ಮಾಮೂಲಿ ಸದಸ್ಯಳಾಗಿಬಿಟ್ಟೆ. ಹಗಲೂ ರಾತ್ರಿ ಅಲ್ಲಿ ದಂಧೆ ನಡೆಯೋದು. ದುಡಿದ ದುಡ್ಡನ್ನ ಯಾರಿಗೆ ಕೊಡಬೇಕಾಗಿತ್ತು ಹೇಳಿ. ಇಡೀ ಪ್ರಪಂಚದಲ್ಲಿ ನಾನೊಬ್ಬಳೆ, ನನಗೇ ಅಂತ ಯಾರೂ ಇಲ್ಲ ಅನ್ನೊ ಸತ್ಯ ಅರಗಿಸಿಕೊಳ್ಳೋಕೆ ಮೊದಮೊದಲು ಕಷ್ಟವಾಯಿತು. ಅದನ್ನ ಮರೆಯೋಕೆ ಕುಡಿತ ಕಲಿತೆ, ಜೊತೆಗೆ ಬೇರೆಬೇರೆ ಗಿರಾಕಿಗಳು ಕಲಿಸಿಕೊಟ್ಟ ಡ್ರಗ್ಸ್ ಗಳಿಗೂ ದಾಸಿಯಾದೆ. 

ಮನುಷ್ಯರೇನು ಅಮೃತ ಕುಡಿದು ಬಂದಿರ್ತೀವಾ? ಎಲ್ಲರಿಗೂ ಬರೋ ಹಾಗೆ ನನಗೂ ಚಿತ್ರವಿಚಿತ್ರವಾದ ಕಾಯಿಲೆಗಳು ಬಂದವು. ಹೇಗೋ ಸಂಬಾಳಿಸಿಕೊಂಡು ಬದುಕಿದೆ. ಈಗ ನನಗೆ ನಲವತ್ತಾರು ವರ್ಷ. ಲೆಕ್ಕ ಹಾಕಿನೋಡಿ ನಾನೆಷ್ಟು ವರ್ಷ ಈ ಪಾಪದ ಕೆಲಸ ಮಾಡಿರಬೇಕು ಅಂತ! ಅಷ್ಟು ವರ್ಷ ದುಡಿದ ದುಡ್ಡಲ್ಲಿ ಒಂದು ರೂಪಾಯಿನೂ ಉಳಿಸಲಿಲ್ಲ ಬಿಡಿ.ಕೊನೆಗಿನ್ನು ನನ್ನ ಕೈಲಿ ಈ ಕೆಲಸ ಮಾಡೋಕಾಗಲ್ಲ ಅಂದಾಗ ಈ ಆಶ್ರಮಕ್ಕೆ ಸೇರಿಕೊಂಡು ಕಾಲಕಳೀತಾ ಇದೀನಿ. ತಮಾಷೆ ಅಂದರೆ ನನ್ನ ಈ ಆಶ್ರಮಕ್ಕೆ ಸೇರಿಸಿದೋನು ಈ ಆಶ್ರಮದ ಸ್ವಾಮಿಯ ಪರಮ ಭಕ್ತ ಮತ್ತು ಒಂದು ಕಾಲದ ನನ್ನ ಖಾಯಂ ಗಿರಾಕಿ. ಪಾಪ ಅವನಿಗೆ ಮನೇಲೇನು ಸಮಸ್ಯೆನೋ ನನ್ನ ಹತ್ತಿರ ಬರ್ತಾ ಇದ್ದ. ಈಗ ಅವನಿಲ್ಲಿಗೆ ವಾರಕ್ಕೆರಡು ಸಾರಿ ಸಂಸಾರದೊಂದಿಗೆ ಬರ್ತಾನೆ. ನಾನವನ್ನು ಮಾತಾಡಿಸಿ ತೊಂದರೆ ಕೊಡೋಕೆ ಹೋಗಲ್ಲ. ನಮ್ಮಂತವರು ಬಚ್ಚಲಿನಹುಳುಗಳ ತರಾ! ನೋಡಿದರೆ ಅಸಹ್ಯ ಅನಿಸುತ್ತೆ. ಆದರೆ ನೀವು ಇಷ್ಟು ಹೊತ್ತು ತಾಳ್ಮೆಯಿಂದ ಕೂತು ನನ್ನ ಕಥೆ ಕೇಳಿದಿರಿ. ಅದಕ್ಕೆ ನಾನು ನಿಮಗೆನಮಸ್ಕಾರ ಹೇಳಬೇಕು.

ಆಯಿತು ಸಾರ್, ಸಾಯಂಕಾಲದ ಪ್ರಾರ್ಥನೆಯ ಟೈಮ್ ಆಯಿತು. ಇಲ್ಲೇ ವಾಸ ಮಾಡೋರು ತಡವಾಗಿ ಹೋದರೆ ಸ್ವಾಮಿಗಳಿಗೆ ಕೋಪ ಬರುತ್ತೆ. ನಾನಿನ್ನು ಬರ್ತೀನಿ.

ಮಾತು ಮುಗಿಸಿ ಎದ್ದು ಹೋದವಳ ಕಣ್ಣಲ್ಲಿ ದು:ಖವಿದ್ದರೂ ಅವಳ ಹೃದಯ ಹಗುರವಾಗಿರಬಹುದೆ ಎಂದುಕೊಂಡೆ ಆಶ್ರಮದ ಗೇಟಿನಾಚೆಗೆ ಬಂದೆ. 

ಮೇ 2, 2015

ಅಸಹಾಯಕ ಆತ್ಮಗಳು - ಹರಯದ ಕುದುರೆಯೇರಿದಾಗ

kannada prostitute stories
ಕು.ಸ.ಮಧುಸೂದನ್
ನಮ್ಮಪ್ಪ ಪ್ರೈಮರಿ ಸ್ಕೂಲಿನಲ್ಲಿ ಮೇಸ್ಟ್ರಾಗಿದ್ದರು. ಹಳ್ಳಿಯಲ್ಲಿ ಅವರ ಸ್ಕೂಲಿದ್ದರೂ ಮನೆಯನ್ನು ಮಾತ್ರ ತಾಲ್ಲೂಕು ಕೇಂದ್ರದಲ್ಲಿ ಮಾಡಿದ್ದರು. ನಾಲ್ಕು ಮೈಲಿ ದೂರವಿದ್ದ ಹಳ್ಳಿಗೆ ದಿನಾ ಸೈಕಲ್ಲಿನಲ್ಲಿ ಹೋಗಿಬರೋರು. ನಾನು ಒಂಭತ್ತನೇ ತರಗತಿ ಓದುವಾಗ ಒಬ್ಬ ಹುಡುಗ ಪರಿಚಯವಾದ. ಅವನು ಏನು ಮಾಡ್ತಿದ್ದ ಏನು ಓದ್ತಿದ್ದ ಒಂದೂ ಗೊತ್ತಿರಲಿಲ್ಲ. ನಾನು ಸ್ಕೂಲಿಗೆ ಹೋಗುವಾಗ, ಮನೆಗೆ ವಾಪಾಸು ಬರೋವಾಗ ನನ್ನ ಹಿಂಬಾಲಿಸ್ತಾ ಇದ್ದ. ನಮ್ಮ ಮನೆ ಊರಿಂದ ಸ್ವಲ್ಪ ದೂರ ಇದ್ದಿದ್ದರಿಂದ ನಾನು ಒಬ್ಬಳೇ ಹೋಗ್ತಿದ್ದೆ. ಆ ಏರಿಯಾದಿಂದ ಬೇರಾವ ಹುಡುಗೀನು ನಮ್ಮ ಸ್ಕೂಲಿಗೆ ಬರ್ತಾ ಇರಲಿಲ್ಲ. ಹಾಗಾಗಿ ಒಬ್ಬಳೇ ಹೋಗೊದು ಮಾಮೂಲಿಯಾಗಿತ್ತು. ಒಂದಷ್ಟು ದಿನ ಹಿಂದೆ ತಿರುಗಿದೋನು ಒಂದು ದಿನ ಹತ್ತಿರಬಂದು ಒಂದು ಬಿಳಿಹಾಳೆ ಕೊಟ್ಟು ಓದು ಅಂದು ಹೋಗಿಬಿಟ್ಟ. ನಾನು ಕುತೂಹಲ ತಡೆಯಲಾರದೆ ಅಲ್ಲೇ ಅದನ್ನು ಓದಿದರೆ ಐ ಲವ್ ಯೂ,ನಾಳೆ ನೀನು ಇಂತ ಕಾಗದ ಕೊಡಬೇಕು ಅಂತ ಬರೆದಿತ್ತು. ಅದನ್ನು ನೋಡಿ ನನಗೇನು ಶಾಕ್ ಆಗಿರಲಿಲ್ಲ. ಯಾಕಂದ್ರೆ ಇಂತಹ ಪ್ರೇಮ ಪ್ರಕರಣಗಳ ಬಗ್ಗೆ ನನ್ನ ಸ್ಕೂಲಿನ ಹುಡುಗಿಯರು ಸಾಕಷ್ಟು ಹೇಳಿದ್ದರು. ಅವರಲ್ಲಿ ಬಹಳಷ್ಟು ಜನರಿಗೆ ಇಂತಹ ಪತ್ರಗಳು ಬಂದಿದ್ದವು ಒಂದಷ್ಟು ಜನ ಅವಕ್ಕೆ ಉತ್ತರವನ್ನೂ ಕೊಟ್ಟು ಪ್ರೀತಿಸ್ತಾ ಇದ್ದರು ಸತ್ಯ ಹೇಳಬೇಕು ಅಂದರೆ ಒಬ್ಬ ಹುಡುಗ ಇಂತ ಕಾಗದ ಕೊಟ್ಟಿದ್ದು ನನ್ನೊಳಗೆ ಎಂತದೊ ಸಂತೋಷ ಹುಟ್ಟಿ ಹಾಕಿತ್ತು. ಯಾರಿಗೂ ಗೊತ್ತಾಗಬಾರದು ಅಂತ ಅದನ್ನು ಅಲ್ಲೇ ಹರಿದು ಹಾಕಿಬಿಟ್ಟೆ. ಮಾರನೇ ದಿನ ಅವನು ಎದುರು ಬಂದು ನಿಂತು ಉತ್ತರ ಕೊಡು ಅಂದಾಗ ಬರೆದಿಲ್ಲ ಅಂದೆ. ಅದಕ್ಕವನು ಬಾಯಲ್ಲೇ ಹೇಳು ಅಂದ. ನಾಚಿಕೆಯಿಂದ ನಾನು ಆಮೇಲೆ ಎಂದು ಶಾಲೆಗೆ ಹೋಗಿಬಿಟ್ಟೆ. ಸಾಯಂಕಾಲ ಮತ್ತೆ ಬಂದು ಕೇಳಿದ ನಾನು ಬೆಳಿಗ್ಗೆ ಕೊಟ್ಟ ಉತ್ತರವನ್ನೇ ಕೊಟ್ಟೆ. ಹೀಗೇ ಒಂದು ವಾರ ನಾನು ಏನನ್ನು ಹೇಳಲಿಲ್ಲ. ಆಡಲಿಲ್ಲ. ಆದರವನು ಬಡಪೆಟ್ಟಿಗೆ ಬಿಡುವಂತೆ ಕಾಣಲಿಲ್ಲ. ಪ್ರತಿದಿನ ಬೆಳಿಗ್ಗೆ ಸಂಜೆ ನನಗಾಗಿ ಕಾದು ಅದೇ ಮಾತನ್ನು ಹೇಳ್ತಾ ಇದ್ದ. ಹರಯದ ಮಸಲತ್ತು ನೋಡಿ. ಒಂದು ದಿನ ಅವನು ಕಾಣದೇ ಹೋದರೆ ಒಂತರಾ ಏನೋ ಕಳೆದುಕೊಂಡಂತಾಗ್ತಿತ್ತು. ನನಗೆ ಗೊತ್ತಿಲ್ಲದಂತೆ ಅವನ ಬಲೆಯೊಳಗೆ ಬೀಳ್ತ್ತಾ ಹೋಗಿಬಿಟ್ಟೆ. ಆಮೇಲಿನ್ನೇನು ದಿನಾ ಯಾರಿಗೂ ಗೊತ್ತಾಗದ ಹಾಗೆ ಮಾತಾಡ್ತಾ ಇದ್ವಿ. ಅಪ್ಪನಿಗೆ ಊರಲ್ಲೆಲ್ಲ ಪರಿಚಯದವರೇ ಇದ್ದುದರಿಂದ ಕದ್ದು ಮುಚ್ಚಿ ಮಾತಾಡಬೇಕಾಗಿತ್ತು. ನಮ್ಮ ನಡುವೆ ಚೀಟಿಗಳು ಓಡಾಡ ತೊಡಗಿದವು. ಇನ್ನೇನು ಅವನಿಲ್ಲದೆ ಇದ್ದರೆ ಸತ್ತುಹೋಗಿಬಿಡ್ತೀನಿ ಅನ್ನೊವಷ್ಟರ ಮಟ್ಟಿಗೆ ಅವನನ್ನು ಪ್ರೀತಿಸೋಕೆ ಶುರು ಮಾಡಿದ್ದೆ. ಇಂತಾದ್ದರಲ್ಲಿ ಅಪ್ಪನಿಗೆ ತುಂಬಾ ದೂರದ ಊರಿಗೆ ವರ್ಗಾವಣೆ ಆಯ್ತು. ಇಷ್ಟವಿಲ್ಲದ ಮನಸಿಂದ ಅಪ್ಪ ಹೋಗಿ ಅಲ್ಲಿ ಡ್ಯೂಟಿಗೆ ಸೇರಿದರು. ಸದ್ಯ ಈ ವರ್ಷ ಮನೆ ಇಲ್ಲೇ ಇರಲಿ ನಾನಲ್ಲಿ ಹೇಗೋ ಒಬ್ಬನೇ ಇರ್ತೀನಿ ಅಂತ ಅಪ್ಪ ಹೇಳಿ ಹೋದರು. ತಿಂಗಳಿಗೊಂದು ಸಲ ಬಂದು ಮನೆಗೆ ಏನೇನು ಬೇಕೋ ಅದನ್ನೆಲ್ಲ ತಂದು ಹಾಕಿ ಹೋಗ್ತಾ ಇದ್ದರು .ಅಪ್ಪ ಹೋದ ಮೇಲೆ ನನಗೆ ಸ್ವಲ್ಪ ಸ್ವಾತಂತ್ರ ಸಿಕ್ಕಿದ ಹಾಗಾಯ್ತು. ಯಾಕೆಂದರೆ ಅಮ್ಮನಿಗೆ ನನ್ನ ಕಂಡರೆ ತುಂಬಾ ಮುದ್ದು, ಜೊತೆಗವಳಿಗೆ ಕಳ್ಳ ಕಪಟ ಗೊತ್ತಾಗ್ತಿರಲಿಲ್ಲ. ತುಂಬಾ ಮುಗ್ದೆಯಾಗಿದ್ದ ಅವಳು ನಾನು ಹೇಳಿದ್ದನ್ನೆಲ್ಲ ನಂಬಿ ಬಿಡ್ತಾ ಇದ್ದಳು. ಹೀಗಾಗಿ ನಾನು ಶಾಲೆಯಿಂದ ಲೇಟಾಗಿ ಬರೋದು, ಟ್ಯೂಷನ್ ಹೋಗ್ತೀನಿ ಅಂತ ಹೇಳಿ ಅವನ ಜೊತೆ ತಿರುಗೋದು ಜಾಸ್ತಿಯಾಯಿತು. ಒಂದು ದಿನ ಅಮ್ಮ ಪಕ್ಕದವರ ಮನೆ ಜೊತೆ ಯಾವುದೋ ದೇವಸ್ಥಾನಕ್ಕೆ ಹೊರಟಿದ್ದಳು. ಅದು ಹಿಂದಿನ ದಿನವೇ ನನಗೆ ಗೊತ್ತಾಗಿದ್ದರಿಂದ ಅವನಿಗೆ ಬೆಳಿಗ್ಗೆ ಹತ್ತುಗಂಟೆಗೆ ಮನೆಗೆ ಬರೋಕೆ ಹೇಳಿದ್ದೆ. ಬೆಳಿಗ್ಗೆ ಎಂಟಕ್ಕೆ ಅಮ್ಮ ಮನೆ ಬಿಟ್ಟಳು. ನಾನು ತಿಂಡಿ ತಿಂದು ಶಾಲೆಯ ಯೂನಿಫಾರಂನ್ನು ನೆಪ ಮಾತ್ರಕ್ಕೆ ಹಾಕಿಕೊಂಡು ಅವನಿಗಾಗಿ ಕಾಯುತ್ತಾ ಕೂತೆ. ಹೇಳಿದಂತೆ ಸರಿಯಾಗಿ ಹತ್ತುಗಂಟೆಗೆಲ್ಲ ಬಂದವನ ಜೊತೆ ಮಾತಾಡುತ್ತ ಕೂತೆ. ಮದ್ಯಾಹ್ನದವರೆಗು ಮಾತಾಡಿದ ಮೇಲೆ ಒಟ್ಟಿಗೇ ಊಟ ಮಾಡಿದೆವು. ಆನಂತರ ನನ್ನ ರೂಮಿಗೆ ಕರದುಕೊಂಡು ಹೋಗಿ ನನ್ನ ಹಳೆಯ ಆಟದ ಸಾಮಾನುಗಳನ್ನು ಗೋಡೆಗೆ ಅಂಟಿಸಿದ್ದ ಸಿನಿಮಾ ತಾರೆಯರ ಚಿತ್ರಗಳನ್ನೆಲ್ಲ ತೋರಿಸುತ್ತ ಇರುವಾಗ ತಟಕ್ಕನೆ ಅವನು ನನ್ನ ಅಪ್ಪಿಕೊಂಡು ಬಿಟ್ಟ. ಬೇಡವೆಂದು ಕೊಸರಾಡಿದರೂ ಅವನು ಬಿಡಲಿಲ್ಲ. ನಾನೂ ಸುಮ್ಮನಾಗಿಬಿಟ್ಟೆ. ಅವನ ಮೈಬಿಸಿಗೆ ನಾನು ಕರಗತೊಡಗಿದೆ. ಯಾವುದೇ ಹುಡುಗಿಯ ಜೀವನದಲ್ಲಿ ಮದುವೆಗೆ ಮುಂಚೆ ಏನು ನಡೆಯಬಾರದೊ ಅದು ನನ್ನ ಜೀವನದಲ್ಲಿ ನಡೆದು ಹೋಗಿತ್ತು. ಅವನನ್ನು ನನ್ನ ರೂಮಿಗೆ ಕರೆತರುವ ಅವಸರದಲ್ಲಿ ನಾನು ಮುಂದಿನ ಬಾಗಿಲಿಗೆ ಚಿಲಕ ಹಾಕಿಯೇ ಇರಲಿಲ್ಲ. ಸಂಜೆ ಐದು ಗಂಟೆಗೆ ಬರುತ್ತೇನೆಂದು ಹೇಳಿ ಹೋಗಿದ್ದ ಅಮ್ಮ ದಿಡೀರನೆ ಬಾಗಲು ತೆರೆದು ಬಂದುಬಿಟ್ಟಳು. ರೂಮಲ್ಲಿ ಅರೆಬರೆ ಬೆತ್ತಲೆಯಾಗಿ ಮಲಗಿದ್ದ ನಮ್ಮನ್ನು ನೋಡಿ ಹೌಹಾರಿಬಿಟ್ಟಳು. ಅವಳನ್ನು ಕಂಡವನು ಅದ್ಯಾವ ಮಾಯದಲ್ಲಿ ಓಡಿಹೋದನೊ ಗೊತ್ತೇ ಆಗಲಿಲ್ಲ. ಅವತ್ತಿಗೆ ನನ್ನ ಸ್ವಾತಂತ್ರದ ದಿನಗಳು ಮುಗಿದು ಹೋದವು. ಅಷ್ಟು ಮುದ್ದು ಮಾಡುತ್ತಿದ್ದ ಅಮ್ಮ ಅವತ್ತಿನಿಂದ ರಾಕ್ಷಸಿಯಾಗಿಬಿಟ್ಟಳು. ಒಂದು ತಿಂಗಳವರೆಗು ಶಾಲೆಗೂ ಕಳಿಸದೆ ಮನೆಯಲ್ಲಿ ಕೂಡಿಹಾಕಿಬಿಟ್ಟಳು .ಮುಂದಿನ ತಿಂಗಳು ಅಪ್ಪ ಬರುವ ತನಕವೂ ನಾನು ಮನೆಯಲ್ಲೇ ಇರಬೇಕೆಂದು ತಾಕೀತು ಮಾಡಿದ್ದಳು. ಅವನ ದೇಹದ ಬಿಸಿ ಅನುಭವಿಸಿದ್ದ ನನಗೆ ಮನೆ ಜೈಲಿನಂತೆ ಬಾಸವಾಗತೊಡಗಿತ್ತು. ಅಂತಹುದರಲ್ಲಿ ಒಂದು ದಿನ ಪಕ್ಕದ ಮನೆಯ ಏಳನೇ ಕ್ಲಾಸಿನ ಹುಡುಗನ ಕೈಲಿ ಅವನಿಗೆ ಒಂದು ಉದ್ದದ ಕಾಗದ ಬರೆದು ಕೊಟ್ಟು ಕಳಿಸಿದೆ. ಮಾರನೇ ದಿನ ಅವನಿಂದಲೂ ಅಷ್ಠೇ ಉದ್ದದ ಕಾಗದ ಬಂತು. ಅದರಲ್ಲಿದ್ದ ವಿಷಯ ಓದಿ ಸಂತೋಷವಾಗಿ ಹೋಯಿತು. ಅವನು ನನ್ನನ್ನು ತುಂಬಾ ಪ್ರೀತಿಸುತ್ತಿರುವುದಾಗಿಯೂ ನನಗಾಗಿ ಏನು ಬೇಕಾದರು ಮಾಡಲು ಸಿದ್ದವಾಗಿರುವುದಾಗಿಯೂ ಹೇಳಿ ಇವತ್ತು ರಾತ್ರಿ ಹತ್ತು ಗಂಟೆಗೆ ನಿನ್ನ ಬಟ್ಟೆಗಳನ್ನೆಲ್ಲ ತೆಗೆದುಕೊಂಡು ನಿಮ್ಮ ಬೀದಿ ಕೊನೆ ತಿರುವಿಗೆ ಬಂದು ಬಿಡು ಎಂದು ಬರೆದಿದ್ದೆ. ಸರಿ, ಅದು ವಿವೇಚನೆಯ ವಯಸ್ಸಲ್ಲ. ರಾತ್ರಿ ಊಟ ಮಾಡಿ ನನ್ನ ಬಟ್ಟೆ ಒಂದಷ್ಟು ಒಡವೆ ತಗೊಂಡು ಅಮ್ಮನಿಗೆ ಕಾಣದ ಹಾಗೆ ಹಿಂದಿನ ಬಾಗಿಲಿನಿಂದ ಮನೆ ಬಿಟ್ಟೆ. ಕೊನೆಗವನು ಹೇಳಿದಂತೆ ಧರ್ಮಸ್ಥಳದ ಕಡೆ ಹೋದೆವು. ಇನ್ನೂ ಚಿಕ್ಕ ವಯಸ್ಸಿನವರಾದ ನಮಗಲ್ಲಿ ರೂಮು ಕೊಡಲಿಲ್ಲ. ಕೊನೆಗಲ್ಲಿಂದ ಮಂಗಳೂರಿಗೆ ಬಂದು ಹೇಗೋ ಮಾಡಿ ಒಂದು ಸಣ್ಣ ಲಾಡ್ಜಿನಲ್ಲಿ ತಂಗಿದೆವು. ಹಗಲು ರಾತ್ರಿ ಒಬ್ಬರನ್ನೊಬ್ಬರು ಬಿಡದೆ ಅಂಟಿಕೊಂಡೇ ಹತ್ತು ದಿನಗಳನ್ನು ಕಳೆದೆವು. ತಂದಿದ್ದ ದುಡ್ಡು ಕರಗತೊಡಗಿತ್ತು. ಮುಂದೇನು ಮಾಡಬೇಕು ಅನ್ನುವ ಯಾವ ಕಲ್ಪನೆಯೂ ಇಬ್ಬರಿಗೂ ಇರಲಿಲ್ಲ. ಆದರೆ ಒಂದು ಸಾಯಂಕಾಲ ಪೋಲಿಸರ ಜೊತೆ ಅಪ್ಪ ಬಂದು ರೂಮಿನ ಬಾಗಿಲು ತಟ್ಟಿದಾಗ ಎದೆ ಝಲ್ಲೆಂದು ಬಿಟ್ಟಿತು. ಅಲ್ಲೇ ಎಲ್ಲರ ಎದುರಿಗೆ ದನಕ್ಕೆ ಹೊಡೆದಂತೆ ಹೊಡೆದು ನನ್ನ ಎಳೆದುಕೊಂಡು ಹೋದರು. ಅವನಂತು ಪೋಲಿಸರ ಜೊತೆ ಹೋಗಬೇಕಾಯಿತು. ಅಲ್ಲಿಂದ ನನ್ನನು ಸೀದಾ ಅಮ್ಮನ ತವರು ಮನೆಗೆ ಕರೆತಂದಿದ್ದರು. ಅಲ್ಲಾಗಲೆ ಮನೆ ಖಾಲಿ ಮಾಡಿ ಸಾಮಾನೆಲ್ಲ ಅಜ್ಜಿಯ ಮನೆಗೆ ಸಾಗಿಸಲಾಗಿತ್ತು. 

ಪೋಲಿಸರು ಕರೆದುಕೊಂಡು ಹೋದವನು ಏನಾದನೊ ನನಗೆ ಗೊತ್ತಾಗಲೇ ಇಲ್ಲ.. ನಂತರ ಮೂರೇ ತಿಂಗಳಿಗೆ ದೂರದೂರಿನ ಒಬ್ಬನಿಗೆ ನನ್ನ ಮದುವೆ ಮಾಡಿಕೊಡಲಾಯಿತು. ಅವನಿಗೆ ಆಗಲೇ ಮುವತ್ತೈದು ತುಂಬಿ ನಾನು ಎರಡನೇ ಹೆಂಡತಿಯಾಗಿದ್ದೆ. ಅವನ ಮೊದಲ ಹೆಂಡತಿ ಹೆರಿಗೆಯಲ್ಲೇ ಸತ್ತು ಹೋಗಿದ್ದಳು. ಮದುವೆಯಾಗಿ ಅವನ ಮನೆಗೆ ಕಾಲಿಟ್ಟ ನನಗೆ ನಾಲ್ಕು ವರ್ಷದ ಗಂಡು ಮಗುವಿನ ಆರೈಕೆ ಮಾಡುವ ಬಾರ ಬಂದು ಬಿತ್ತು. ಆಶ್ಚರ್ಯವೆಂದರೆ ಮದುವೆಯಾದ ಆ ಮನುಷ್ಯನಿಗೆ ಸೆಕ್ಸ್ ಬಗ್ಗೆ ಆಸಕ್ತಿಯೇ ಹೊರಟು ಹೋಗಿತ್ತು. ಒಂದು ದಿನವೂ ಅವನು ನನ್ನ ಜೊತೆ ಮಲಗಲಿಲ್ಲ. ಕೇಳಿದರೆ ನಿನಗೇನೂ ಕಡಿಮೆ ಮಾಡಲ್ಲ, ನನ್ನ ಮಗುವಿಗೆ ತಾಯಿಯಾಗಿರು ಸಾಕು ಅನ್ನುತ್ತಿದ್ದ. ಹೀಗೇ ಎರಡು ವರ್ಷ ಕಳೆದ ಮೇಲೆ ನಾವಿದ್ದ ಹಳೆಯ ಮನೆ ರಿಪೇರಿಗೆ ಅಂತ ಪರವೂರಿಂದ ಆಳುಗಳು ಬಂದರು. ಅವರಿಗೊಬ್ಬ ಮೇಸ್ತ್ರಿ ಇದ್ದ. ಅವನು ನೋಡಲು ಕಟ್ಟುಮಸ್ತಾಗಿ ನಾನು ಪ್ರೀತಿಸಿದ ಹುಡುಗನ ತರಾನೆ ಇದ್ದ. ಅದೇಗೊ ಅವನ ಬಲೆಗೆ ಬಿದ್ದು ಬಿಟ್ಟೆ. ಆಗಾಗ ಹತ್ತಿರ ಬಂದು ಮಾತಾಡಿಸುವುದನ್ನೆಲ್ಲ ಮಾಡುತ್ತಿದ್ದ ಅವನು ಒಂದು ದಿನ ಯಾರೂ ಇಲ್ಲದಾಗ ಬಂದು ನನ್ನ ಜೊತೆ ಬರ್ತೀಯಾ ಮದುವೆಯಾಗೋಣ ಅಂದು ಬಿಟ್ಟ. ಅದ್ಯಾವ ಕೆಟ್ಟಗಳಿಗೆಯೊ ಗೊತ್ತಿಲ್ಲ ಹೂ ಅಂದುಬಿಟ್ಟೆ. ಸರಿ ನಾಲ್ಕೇ ದಿನಕ್ಕೆ ಮನೆಯಲ್ಲಿದ್ದ ಸುಮಾರು ಹಣವನ್ನು ಲಕ್ಷಗಟ್ಟಲೆ ಒಡವೆಯನ್ನೂ ಎತ್ತಿಕೊಂಡು ಅವನ ಜೊತೆ ಓಡಿಹೋದೆ.ತಮಿಳುನಾಡಿನ ಊರೊಂದಕ್ಕೆ ಕರೆದೊಯ್ದ ಅವನು ಒಂದು ಮನೆ ಮಾಡಿ ನನ್ನನ್ನಿಟ್ಟ. ಹಗಲೂ ರಾತ್ರಿ ಅವನ ಜೊತೆ ಕಳಿದದ್ದೇ ಗೊತ್ತಾಗಲಿಲ್ಲ. ಹೀಗೇ ಆರು ತಿಂಗಳು ಕಳೆಯುವಷ್ಟರಲ್ಲಿ ನಾನು ಬಸಿರಾಗಿದ್ದೆ. ಆಗ ಇದ್ದಕ್ಕಿದ್ದಂತೆ ನನಗೆ ಜ್ಞಾನೋದಯವಾದಂತಾಯಿತು. ಅವನಿಗೆ ನನ್ನ ಮದುವೆ ಮಾಡಿಕೊ, ನೀನು ಕೆಲಸ ಮಾಡು ಇಲ್ಲ ಅಂದರೆ ತಂದ ಒಡವೆ ದುಡ್ಡೆಲ್ಲ ಹೀಗೇ ಖಚಾಗಿಬಿಡುತ್ತೆ ಅಂತ ರಂಪಾಟ ಶುರು ಮಾಡಿದೆ. ನೋಡೋಣ ಅನ್ನುತ್ತಲೇ ಮತ್ತೆರಡು ತಿಂಗಳು ಕಳೆದವನಿಗೆ ಒಂದು ದಿನ ತೀರಾ ಕಟುವಾಗಿ ಮಾತನಾಡಿದೆ. ಆಗ ಕೆರಳಿದ ಅವನು ನಿನ್ನ ಯಾಕೆ ಮದುವೆಯಾಗಬೇಕು? ನೀನು ಇನ್ನೊಬ್ಬನ ಜೊತೆ ಓಡಿಹೋಗೋಕಾ ಅಂದುಬಿಟ್ಟ. ನನಗೆ ಶಾಕ್ ಆಯಿತು. ತಿರುಗಿ ಉತ್ತರ ಕೊಟ್ಟಿದ್ದಕ್ಕೆ ನೀನು ನನ್ನ ಸೂಳೆ ಅಷ್ಟೆ ಮುಚ್ಚಿಕೊಂಡಿರು ಅಂತ ನಾಯಿಗೆ ಬಡಿದ ಹಾಗೆ ಬಡಿದು ಮನೆಯಿಂದ ಹೊರಗೆ ಹೊರಟು ಹೋದ. ಹಾಗೆ ಹೋದವನು ನಂತರ ನಾಲ್ಕು ದಿನವಾದರು ಮನೆಗೆ ಬರಲೇ ಇಲ್ಲ. ನನಗೆ ಹೆದರಿಕೆ ಶುರುವಾಯಿತು. ಅದಾಗಲೆ ನನಗೆ ಐದು ತಿಂಗಳು ನಡೆಯುತ್ತಿತ್ತು. ಆಮೇಲೆ ಮನೆಯೆಲ್ಲ ಹುಡುಕಿದರು ನಾನು ತಂದ ದುಡ್ಡಲ್ಲಿ ಒಂದು ರೂಪಾಯಿಯಾಗಲಿ, ಒಡವೆಯ ಒಂದು ಚೂರಾಗಲಿ ಸಿಗಲಿಲ್ಲ. ಸದ್ಯ ನನ್ನ ಮೈಮೇಲೆ ಹಾಕಿಕೊಂಡಿದ್ದ ಒಂದಷ್ಟು ಒಡವೆಗಳು ಹಾಗೇ ಇದ್ದವು. ಮಾರನೇ ದಿನ ಬೆಳಿಗ್ಗೆ ನಾನು ಪಕ್ಕದಲ್ಲೇ ಇದ್ದ ಮನೆ ಓನರ್‍ಗೆ ನನ್ನ ಗಂಡ ಕೆಲಸಕ್ಕೋಸ್ಕರ ಬೆಂಗಳೂರಿಗೆ ಹೋಗಿದ್ದಾನೆ,ಮನೆ ನಿಬಾಯಿಸೋಕೆ ದುಡ್ಡು ಬೇಕಾಗಿತ್ತು ಈ ಬಂಗಾರ ಎಲ್ಲಾದರು ಇಟ್ಟು ದುಡ್ಡು ಕೊಡಿಸೋಕೆ ಆಗುತ್ತಾ ಅಂತ ಅರ್ದಬರ್ದ ತಮಿಳಿನಲ್ಲಿ ಕೇಳಿದಾಗ ಆತ ಆಯಿತು ಅಂತ ಅವನ್ನು ತೆಗೆದುಕೊಂಡ. ಸಾಯಂಕಾಲದ ಹೊತ್ತಿಗೆ ಹಣ ತಂದು ಕೊಟ್ಟ. ಆತ ಮತ್ತು ಆತನ ಹೆಂಡತಿಯ ಸಹಾಯದಿಂದ ಅಲ್ಲೇ ಹೆರಿಗೆಯೂ ಆಯಿತು. ಒಬ್ಬ ಕೆಲದವಳನ್ನು ಇಟ್ಟುಕೊಂಡು ಸುಮಾರು ಐದು ತಿಂಗಳ ಬಾಣಂತನ ಮುಗಿಸಿಕೊಂಡೆ. ಆಮೇಲೊಂದು ದಿನ ಓನರ್‍ಗೆ ಹೇಳದೆ ಒಂದೆರಡು ಜೊತೆ ಬಟ್ಟೆ ತಗೊಂಡು ಆ ಊರು ಬಿಟ್ಟು ಮದ್ರಾಸಿಗೆ ಹೋದೆ. ಅಲ್ಲಿದ್ದ ಯಾವುದೋ ಒಂದು ಅನಾಥಾಶ್ರಮದಲ್ಲಿ ಮಗುವನ್ನು ಬಿಟ್ಟು ನಾನು ಬೆಂಗಳೂರು ಬಸ್ಸು ಹತ್ತಿಬಿಟ್ಟೆ. ಬೆಂಗಳೂರಿಗೆ ಬಂದವಳಿಗೆ ತವರು ಮನೆಯ ಅಮ್ಮ ಅಪ್ಪ, ಗಂಡನ ಮನೆ, ಗಂಡ ಅವನ ಮಗ ನೆನಪಾದರೂ ಅಲ್ಲಿಗೆ ತಿರುಗಿ ಹೋಗುವ ಮುಖವಿರಲಿಲ್ಲ. ಇಪ್ಪತ್ತು ವರ್ಷಕ್ಕೆ ಬದುಕಿನ ಎಲ್ಲ ಏರಿಳಿತಗಳನ್ನೂ ಕಂಡಿದ್ದ ನನಗೆ ಭಯ ಅನ್ನುವುದು ಹೊರಟುಹೋಗಿತ್ತು. ಒಬ್ಬಳೇ ಬೆಂಗಳೂರಿನ ಲಾಡ್ಜೊಂದರಲ್ಲಿ ರೂಮು ಮಾಡಿ ಒಂದು ವಾರ ಅಲ್ಲೇ ಇದ್ದೆ. ಒಬ್ಬಳೇ ಇರುವುದನ್ನು ನೋಡಿದ ಹೋಟೆಲಿನ ಮ್ಯಾನೇಜರ್ ಒಂದು ದಿನ ರೂಮಿಗೆ ಬಂದು ಇದೇ ಹೋಟೆಲಿನ ರೂಮೊಂದರಲ್ಲಿರುವ ಒಬ್ಬರು ನೀವು ಫ್ರೀ ಇದ್ದರೆ ರೂಮಿಗೆ ಬರುವುದಾಗಿ ಹೇಳಿದ್ದಾರೆ ಎಂದು ನೇರವಾಗಿ ಕೇಳಿದ. ಎಲ್ಲ ಭಯ ಮುಜುಗರಗಳನ್ನು ಬಿಟ್ಟು ನಿಂತಿದ್ದ ನಾನು ಈ ಹೋಟೆಲ್ ಬೇಡ ಬೇರೆ ಕಡೆ ರೂಮ್ ಮಾಡುವಂತೆ ಹೇಳು ಬರ್ತೀನಿ ಅಂದು ಕಳಿಸಿದೆ. ಹೇಳಿದಂತೆ ಆ ಗಿರಾಕಿ ಬೇರೊಂದು ಹೋಟೆಲ್ಲಿನಲ್ಲಿ ರೂಮು ಮಾಡಿದ್ದ. ಆ ರಾತ್ರಿ ಅವನೊಂದಿಗೆ ಕಳೆದು ಕೊಟ್ಟ ದುಡ್ಡು ತೆಗೆದುಕೊಂಡು ಬಂದೆ. ನಂತರ ಮ್ಯಾನೇಜರ್ ಗೆ ಅದರಲ್ಲಿ ಒಂದಿಷ್ಟು ಕೊಟ್ಟು ಇದು ನಿನಗೆ, ನನಗೊಂದು ಸಣ್ಣ ಮನೆ ನೋಡು, ನೀನು ಹೇಳಿದಾಗ ಬಂದು ಹೋಗುತ್ತೇನೆಂದು ಒಪ್ಪಂದ ಮಾಡಿಕೊಂಡೆ. ಸರಿ ಮೂರೇ ದಿನದಲ್ಲಿ ಬೆಂಗಳೂರಿನ ಹೊರವಲಯದಲ್ಲಿ ಸಣ್ಣ ಮನೆಯೊಂದನ್ನು ಹುಡುಕಿದ ಜನದಟ್ಟಣೆಯಿರದ ಆ ಮನೆಗೆ ಬೇಕಾದ ವಸ್ತುಗಳನ್ನೆಲ್ಲ ತಂದು ಕೊಂಡೆ. ಒಂದು ರೀತಿಯಲ್ಲಿ ಸಂಸಾರಸ್ಥರ ರೀತಿ ಮನೆಯನ್ನು ಸಜ್ಜುಗೊಳಿಸಿಕೊಂಡೆ. ನಂತರ ಮ್ಯಾನೇಜರ್ ಒಳ್ಳೆಯ ಶ್ರೀಮಂತ ಗಿರಾಕಿ ಇದ್ದಾಗ ಹೇಳಿ ಕಳಿಸೋನು. ನಾನು ಬೇರೆ ಬೇರೆ ಹೋಟೆಲ್ಲುಗಳಲ್ಲಿ ರೂಮ್ ಮಾಡಿಸಿ ಅವರ ಜೊತೆ ಇರುತ್ತಿದ್ದೆ. ಒಂದೆರಡು ವರ್ಷ ಹೀಗೆ ನನ್ನ ಕಸುಬು ಮಾಡುತ್ತಾ ಹೋದೆ . ಈ ಮದ್ಯೆ ಬೆಂಗಳೂರು ನನಗೆ ಚೆನ್ನಾಗಿ ಪರಿಚಯವಾಗಿಬಿಡ್ತು. ಒಂದು ದಿನ ಗಿರಾಕಿಯೊಬ್ಬ ದೊಡ್ಡ ಹೋಟೆಲ್ಲಿನಲ್ಲಿ ರೂಮ್ ಸಿಗಲಿಲ್ಲವೆಂದು ಯಾವುದೊ ಮೂರನೇ ದರ್ಜೆಯ ಹೋಟೆಲ್ಲಿನಲ್ಲಿ ರೂಮ್ ಮಾಡಿದ್ದ. ಅಲ್ಲಿ ಪೋಲಿಸ್ ರೈಡ್ ಆಗಿ ಸಿಕ್ಕಿ ಬಿದ್ದೆ. ಸ್ಟೇಷನ್ನಿನ ಮುದುಕ ಇನ್ಸಪೆಕ್ಟರ್ ಬಹಳ ಒಳ್ಳೆಯವನು,ಮುಂದೆ ಇಂತಾ ಕೆಲಸ ಮಾಡಬೇಡ ಅಂತ ಬುದ್ದಿ ಹೇಳಿ ಕಳಿಸಿದ. ಹಾಗೆ ವಾಪಾಸು ಕಳಿಸುವ ಮುಂಚೆ ನನ್ನ ಜೊತೆ ಒಂದಿಡೀ ರಾತ್ರಿ ಕಳೆದೇ ಕಳಿಸಿದ್ದು.

ನನಗೆ ಗಿರಾಕಿಗಳನ್ನು ಪೂರೈಸುತ್ತಿದ್ದ ಮ್ಯಾನೇಜರ ಒಂದು ದಿನ ಸತ್ತು ಹೋದ. ಆದರೆ ಈಗಾಗಲೆ ನಾನು ನನ್ನದೇ ಆದ ಬೇರೆ ಜನರನ್ನು ಸಂಪಾದಿಸಿದ್ದೆ ಅವರ ಮೂಲಕ ದಂದೆ ನಡೆಸತೊಡಗಿದೆ. ಸ್ವಲ್ಪದಿನಗಳಾದ ಮೇಲೆ ಅನಾಥಾಶ್ರಮದಲ್ಲಿ ಬಿಟ್ಟುಬಂದ ಮಗುವಿನ ನೆನಪಾಗ ತೊಡಗಿತು. ತಡೆಯಲಾರದೆ ಒಂದು ದಿನ ಮದ್ರಾಸಿಗೆ ಹೋಗಿ ವಿಚಾರಿಸಿದೆ. ಅದಕ್ಕವರು ಅದನ್ನು ಯಾರೋ ದತ್ತು ತೆಗೆದುಕೊಂಡಿದ್ದಾರೆ. ಅವರ ವಿಳಾಸ ಕೊಡಲಾಗುವುದಿಲ್ಲವೆಂದು ಹೇಳಿದರು. ಬರಿಗೈಲಿ ವಾಪಾಸಾದೆ. ಯಾಕೊ ಮಗುವನ್ನು ಬಿಟ್ಟುಬಂದ ಪಾಪ ಕಾಡತೊಡಗಿತ್ತು.. ಹೀಗೇ ಬದುಕು ಸಾಗುತ್ತಿರುವಾಗ ಯಾವುದೊ ಹಳ್ಳಿಯಿಂದ ಬೆಂಗಳೂರಿಗೆ ಓಡಿಬಂದ ಹುಡುಗಿಯೊಬ್ಬಳು ಸಿಕ್ಕಿದಳು. ಅವಳನ್ನು ತಂದು ಮನೆಯಲ್ಲಿಟ್ಟುಕೊಂಡೆ. ಹದಿನಾರು ವರ್ಷದ ಅವಳಿಗೆ ಅಪ್ಪ ಅಮ್ಮ ಯಾರೂ ಇರಲಿಲ್ಲ. ನೆಂಟರ ಮನೆಯಲ್ಲಿದ್ದವಳು, ಅವರ ಕಾಟ ತಡೆಯಲಾರದೆ ಓಡಿ ಬಂದಿದ್ದಳು. ಸತ್ಯ ಹೇಳ್ತೀನಿ ಅವಳನ್ನು ದಂದೆಗೆ ಇಳಿಸೋದಿರಲಿ ನಾನೇನು ಮಾಡ್ತೀನಿ ಅನ್ನೋದು ಸಹ ಗೊತ್ತಾಗದ ಹಾಗೆ ನೋಡಿಕೊಂಡೆ. ಐದು ವರ್ಷ ನನ್ನ ಜೊತೆಗಿದ್ದ ಅವಳು ಟೈಲರಿಂಗ್ ಕಲಿತಳು. ಕೊನೆಗೆ ಆಗತಾನೇ ಶುರುವಾಗಿದ್ದ ಗಾರ್ಮೆಂಟ್ಸ್ ಒಂದಕ್ಕೆ ಸೇರಿಕೊಂಡಳು. ಅವಳು ನನ್ನನ್ನು ಚಿಕ್ಕಮ್ಮ ಅಂತ ಕರೀತೀದ್ದಳು. ಕೊನೆಗೊಂದು ದಿನ ಅದೇ ಗಾರ್ಮೆಂಟ್ಸಲ್ಲಿ ಕೆಲಸ ಮಾಡೋ ಹುಡುಗನ್ನ ಇಷ್ಟಪಟ್ಟು ನನಗೆ ಹೇಳಿದಳು. ಹುಡುಗಾನು ಹಳ್ಳಿಯವನು, ಅನಾಥ. ನಾನೇ ನಿಂತು ಮದುವೆ ಮಾಡಿಸಿದೆ. ಅಷ್ಟು ವರ್ಷ ನಾನು ಕೂಡಿಟ್ಟಿದ್ದ ದುಡ್ಡನ್ನೆಲ್ಲ ಅವಳ ಮದುವೆಗೆ ಖರ್ಚು ಮಾಡಿದೆ. ಆಮೇಲವರ ಒತ್ತಾಯದ ಮೇರೆಗೆ ಅವರ ಮನೆಯಲ್ಲೇ ಇರತೊಡಗಿದೆ. ಈಗವರಿಗೆ ಇಬ್ಬರು ಹೆಣ್ಣಮಕ್ಕಳು. ನೆಮ್ಮದಿಯಾಗಿದ್ದಾರೆ. ಆಮೇಲೊಂದು ದಿನ ಹುಡುಗನಿಗೆ ನನ್ನ ನಿಜವಾದ ಕಸುಬು ಗೊತ್ತಾಗಿ ಗಲಾಟೆ ಮಾಡಿದ. ಹುಡುಗಿ ನನ್ನ ಸಪೋರ್ಟಿಗೆ ನಿಂತಳು. ಇನ್ನು ನನ್ನಿಂದ ಅವರ ಸಂಸಾರಕ್ಕೆ ತೊಂದರೆಯಾಗೋದು ಬೇಡವೆಂದು ನಾನು ಅವರಿಗೆ ಹೇಳದೆ ಕೇಳದೆ ಬೆಂಗಳೂರು ಬಿಟ್ಟೆ. ಈ ಊರಿಗೆ ಬರುವಷ್ಟರಲ್ಲಿ ನನಗೆ ಗುಣವಾಗದ ಕಾಯಿಲೆಗಳೆಲ್ಲ ಶುರುವಾಗಿದ್ದವು. ಕೈಲಿ ಮುಂಚಿನ ಹಾಗೆ ದುಡ್ಡಿರಲಿಲ್ಲ. ಮೈಲಿ ಶಕ್ತಿಯೂ ಇರಲಿಲ್ಲ. ಒಂದು ದಿನ ಹೊಟ್ಟೆ ಹಸಿದುಕೊಂಡು ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ಕೂತಿರುವಾಗ ಯಾರೋ ಭಕ್ತರು ಬಿಕ್ಷುಕಿ ಇರಬೇಕು ಅಂತ ತಮ್ಮ ಕೈಲಿದ್ದ ಪ್ರಸಾದ ಮತ್ತು ಚಿಲ್ಲರೆ ಕಾಸು ಹಾಕಿ ಹೋದರು. ಸರಿ ಆಮೇಲಾಮೇಲೆ ಆ ದೇವಸ್ಥಾನವೇ ನನ್ನ ಮನೆಯಾಗಿಬಿಟ್ಟಿತು. ಹಗಲು ಹೊತ್ತು ಹೊರಗೆ ಕೂತರೆ ಸಾಕು ಒಂದಷ್ಟು ಚಿಲ್ಲರೇ ಕಾಸು ಮಡಿಲಿಗೆ ಬಂದು ಬೀಳುತ್ತೆ. ದಿನಾ ಬೇರೆ ಬೇರೆ ರೀತಿಯ ಪ್ರಸಾದ ಕೊಡ್ತಾರೆ. ಸಂಜೆ ಭಜನೆಯಲ್ಲಿ ನಾನು ಹೊರಗೆ ಕೂತೆ ಹಾಡ್ತೀನಿ. ಇವತ್ತಿನವರೆಗು ದೇವಸ್ಥಾನದ ಒಳಗೆ ಹೋಗಿಲ್ಲ. ನಾನು ಯಾವಾಗ ಬೇಕಾದರು ಸಾಯಬಹುದು. ಒಳಗಿರುವ ದೇವರು ಯಾವಾಗ ಕರೆದುಕೊಳ್ತಾನೊ ಅಂತ ಕಾಯ್ತಾ ಇದೀನಿ. ಆದರೆ ನನ್ನಂತವರಿಗೆ ಅಷ್ಟು ಸುಲಭವಾಗಿ ದೇವರು ಮುಕ್ತಿ ಕೊಡ್ತಾನಾ ಸಾರ್. ತಪ್ಪು ಮಾಡಿದೆ ಅನಿಸುತ್ತೆ ಸಾರ್. ಆದರೆ ತಪ್ಪು ಯಾರು ಮಾಡಲ್ಲ ಹೇಳಿ? ಆದರೆ ಶಿಕ್ಷೆ ಮಾತ್ರ ಒಬ್ಬರಿಗೇ ಯಾಕೆ ಆಗ್ಬೇಕು ಹೇಳಿ?

ಉತ್ತರ ನನಗಿರಲಿ ಬಹುಶ: ಆ ದೇವರಿಗೂ ಗೊತ್ತಿರಲಿಕ್ಕಿಲ್ಲವೆನಿಸಿತು!

ಏಪ್ರಿ 25, 2015

ಅಸಹಾಯಕ ಆತ್ಮಗಳು - ಮುಳ್ಳಿನ ಪೊದೆಯೊಳಗೆ ಹಾಡುಹಕ್ಕಿ

ಕು.ಸ.ಮಧುಸೂದನ್
ಮದುವೆ ಮಾಡಿಕೊಂಡು ಕರ್ನಾಟಕಕ್ಕೆ ಕಾಲಿಟ್ಟಾಗ ನನಗಿನ್ನು ಹದಿನಾರು ನಡೆಯುತ್ತಿತ್ತು. ಸಾಲು ಸಾಲು ಮಕ್ಕಳನ್ನು ಹುಟ್ಟಿಸಿದ್ದ ಅಪ್ಪ ದುಡಿದದ್ದನ್ನೆಲ್ಲ ಹೆಂಡದಂಗಡಿಗೇ ಸುರೀತಿದ್ದ. ಏಳು ಜನ ಹೆಣ್ಣುಮಕ್ಕಳ ಪೈಕಿ ನಾನು ಆರನೆಯವಳು. ಅದೇನು ಕರ್ಮವೊ ನನ್ನ ಮೊದಲನೆಯ ಅಕ್ಕ ಬೇರೆ ಜಾತಿಯವನೊಡನೆ ಓಡಿಹೋಗಿ ನಮ್ಮನ್ನು ನರಕಕ್ಕೆ ತಳ್ಳಿಬಿಟ್ಟಿದ್ದಳು. ಮನೆಯಲ್ಲಿ ಅಷ್ಟು ಬಡತನವಿದ್ದರೂ ಅಪ್ಪ ಅಮ್ಮನಿಗೆ ಜಾತಿಯ ಭೂತ ಮೆಟ್ಟಿಕೊಂಡಿತ್ತು. ದೊಡ್ಡ ಹುಡುಗಿ ಓಡಿಹೋದಮೇಲೆ ಉಳಿದ ಹುಡುಗಿಯರನ್ನು ಯಾರು ಮದುವೆಯಾಗ್ತಾರೆ ಅನ್ನೊದನ್ನು ತಲೆಲಿ ತುಂಬಿಕೊಂಡ ಅಪ್ಪ ಅಮ್ಮ ಹುಡುಗಿಯರು ಮೈನೆರೀತ ಇದ್ದ ಹಾಗೆ ಮದ್ವೆ ಮಾಡಿ ಕೊಡೋಕೆ ಶುರು ಮಾಡಿದರು. ಐದನೆಯವಳು ಮದುವೆಯಾದಾಗ ನನಗೆ ಹನ್ನೆರಡು ವರ್ಷವಾಗಿತ್ತು. ಅದೇನು ಪುಣ್ಯವೋ ಗೊತ್ತಿಲ್ಲ ನಾನು ಮೈನೆರೆದಿದ್ದೇ ಹದಿನೈದು ತುಂಬಿದ ಮೇಲೆ. ಹಾಗಾಗಿ ಉಳಿದವರೆಲ್ಲ ಹದಿಮೂರು ಹದಿನಾಲ್ಕಕ್ಕೆ ಮದುವೆಯಾದರೆ ನನಗೆ ಮಾತ್ರ ಹದಿನಾರನೆ ವಯಸ್ಸಿಗೆ ಮದುವೆ ಆಯ್ತು. ನಮ್ಮೂರಿನವರು ತುಂಬಾ ಜನ ಕರ್ನಾಟಕದಲ್ಲಿ ಇದ್ದರು. ಆಗೀಗ ಅವರುಗಳು ಬಂದು ಹೋಗ್ತಾ ಇದ್ದರು. ಅಂತವರಲ್ಲಿ ಸರವಣ ಅಂತ ಒಬ್ಬ ಅಪ್ಪನಿಗೆ ಆತ್ಮೀಯನಾಗಿದ್ದ. ಊರಿಗೆ ಬಂದಾಗಲೆಲ್ಲ. ಅಪ್ಪನಿಗೆ ಕುಡಿಸೋದು ತಿನ್ನಿಸೋದು ಮಾಡೋನು. ಆ ವರ್ಷ ಅವನು ಮುರುಗ ಅಂತ ಒಬ್ಬನನ್ನು ಕರೆದುಕೊಂಡು ಬಂದು ಇವನಿಗೆ ನಿನ್ನ ಮಗಳನ್ನು ಕೊಡು. ಹುಡುಗ ಗಾರೆ ಕೆಲಸದಲ್ಲಿ ಚೆನ್ನಾಗಿ ದುಡಿತಾ ಇದಾನೆ ಅಂತ ಹೇಳಿ ಅವನಿಗೆ ನನ್ನ ತೋರಿಸಿದ. ಆ ಹುಡುಗ ನನಗಿರೋದು ಅಮ್ಮ ಒಬ್ಬಳೆ ಅವಳಿಗೆ ಸರಿಯಾಗಿ ಕಣ್ಣು ಕಾಣಿಸಲ್ಲ,ಹಾಗಾಗಿ ನಾನು ಮತ್ತೆಮತ್ತೆ ಇಲ್ಲಿಗೆ ಬರೋಕಾಗಲ್ಲ. ನೀವು ಹು ಅಂದ್ರೆ ಈಗಲೆ ಮದ್ವೆ ಮಾಡಿಕೊಂಡು ಹುಡುಗೀನಾ ಕರೆದುಕೊಂಡು ಹೋಗ್ತೀನಿ ಅಂತ ಹೇಳಿದ್ದಕ್ಕೆ ಅಪ್ಪ ತಲೆಯಾಡಿಸಿಬಿಟ್ಟ. ಊರಲ್ಲೇ ಇದ್ದ ಮಾರಿಯಮ್ಮನ ದೇವಸ್ಥಾನದಲ್ಲಿ ಅರಿಶಿನ ದಾರ ಕಟ್ಟಿಸಿಬಿಟ್ಟ. ಸರಿ ಅಂತ ಅವಸರಕ್ಕೆ ಶಾಸ್ತ್ರ ಮುಗಿಸಿದವರು ಒಂದೇ ವಾರಕ್ಕೆ ನನ್ನ ಅವನ ಜೊತೆ ಕಳಿಸಿಬಿಟ್ಟರು. ನನ್ನ ಹಣೇಬರಹ ನೋಡಿ ಬೇರೆ ರಾಜ್ಯಕ್ಕೆ, ಭಾಷೆ ಬರದ ಊರಿಗೆ ಮಗಳನ್ನು ಕೊಡ್ತಾ ಇದೀವಿ ಅಂತ ಯೋಚನೆ ಮಾಡಿ ಯಾರಾದರು ಒಬ್ಬರು ನನ್ನ ಜೊತೆ ಬಿಡೋಕಾದರು ಬರಬಹುದಿತ್ತು. ಊಹು ಯಾರೂ ಬರಲೇ ಇಲ್ಲ. ಗಂಡನ ಜೊತೆ ನಾನೊಬ್ಬಳೇ ಕರ್ನಾಟಕಕ್ಕೆ ಬಂದೆ. ಯಾವತ್ತೂ ನಾನು ಅಷ್ಟು ದೂರ ಪ್ರಯಾಣ ಮಾಡಿದೋಳಲ್ಲ. ಅದೂ ಅಲ್ಲದೆ ಕನ್ನಡ ಅನ್ನೋಭಾಷೇನಾ ನಾನು ಕೇಳಿರಲೇ ಇಲ್ಲ.

ಸರಿ, ಇಲ್ಲಿ ಬಂದಮೇಲೆ ನೋಡಿದರೆ ಊರಲ್ಲಿನ ನಮ್ಮ ಮನೇನೇ ವಾಸಿ ಅನ್ನಿಸ್ತು. ಯಾಕಂದರೆ ಒಂದು ಸಣ್ಣ ಗುಡಿಸಿಲಿನಂತಿದ್ದ ಜಾಗದಲ್ಲಿ ನಾನು ನನ್ನ ಗಂಡ ಅತ್ತೆ ಜೀವನ ಮಾಡಬೇಕಾಗಿತ್ತು. ಮನೆಲಿದ್ದೋವು ಒಂದೆರಡು ಅಲ್ಯುಮಿನಿಯಂ ಪಾತ್ರೆಗಳಷ್ಟೆ. ಸರಿ ಹೇಗೋ ಹೊಂದಿಕೊಂಡು ಅವುಗಳಲ್ಲೆ ಸಂಸಾರ ಮಾಡತೊಡಗಿದೆ. ಬಂದ ಒಂದು ವಾರದಲ್ಲೇ ಅಕ್ಕಪಕ್ಕದ ಒಂದಷ್ಟು ಹೆಂಗಸರು ಪರಿಚಯವಾದರು. ಕನ್ನಡ ಮಾತಾಡೋದನ್ನು ಕಲಿಯತೊಡಗಿದೆ. ನಮ್ಮ ಬೀದಿಯಲ್ಲಿದ್ದೋರೆಲ್ಲ ನಮ್ಮಂತಹ ಗುಡಿಸಲಿನವರೇ ಆಗಿದ್ದರು ಆ ಹಳ್ಳಿಯಲ್ಲಿ ನಮ್ಮ ಬಿಡಾರವನ್ನು ತಮಿಳು ಕ್ಯಾಂಪ್ ಅಂತ ಕರೀತಾ ಇದ್ದರು. ಹೀಗೇ ಆರೇಳು ತಿಂಗಳು ಸಂಸಾರ ಮಾಡಿದೆ. ಅಷ್ಟು ತಿಂಗಳಲ್ಲಿ ನನಗೆ ಗೊತ್ತಾಗಿದ್ದೆಂದರೆ ನನ್ನ ಗಂಡ ನಾನು ಅಂದುಕೊಂಡಷ್ಟೇನು ಒಳ್ಳೆಯವನಾಗಿರಲಿಲ್ಲ. ದುಡಿದ ದುಡ್ಡನ್ನೆಲ್ಲ ಕುಡಿತಕ್ಕೆ ಹಾಕೋನು. ಮನೆಗೆ ಸರಿಯಾಗಿ ಸಾಮಾನು ತಂದು ಹಾಕ್ತಾ ಇರಲಿಲ್ಲ. ಜೊತೆಗೆ ಪಕ್ಕದ ಹಳ್ಳಿಯಲ್ಲಿ ಯಾವಳನ್ನೊ ಇಟ್ಟುಕೊಂಡಿದ್ದ. ಅಂತಾದ್ರಲ್ಲಿಯೇ ನಾನು ಬಸುರಿಯಾದೆ. ನನಗೆ ಏಳು ತಿಂಗಳು ತುಂಬಿದ ಮೇಲೆ ತಮಿಳುನಾಡಿಂದ ಅಪ್ಪ ಅಮ್ಮ ಬಂದು ಕರೆದುಕೊಂಡು ಹೋದರು ಹೆರಿಗೆ ಆದ ಮೂರೇ ತಿಂಗಳಿಗೆ ಗಂಡ ವಾಪಾಸು ಕರೆದುಕೊಂಡುಬಂದುಬಿಟ್ಟ. ನಾನೆಷ್ಟೇ ಪ್ರಯತ್ನ ಪಟ್ಟರು ಅವನು ಬದಲಾಗಲೇ ಇಲ್ಲ.ನಾನು ಕೂಲಿ ಗೀಲಿ ಮಾಡೋಣ ಅಂದ್ರೆ ನನಗೇನು ಬರ್ತಾ ಇರಲಿಲ್ಲ. ಕಪ್ಪಗಿದ್ದರು ನೋಡೋಕೆ ಲಕ್ಷಣವಾಗಿದ್ದ ನನ್ನ ಹೊರಗೆ ಕಳಿಸೋಕು ಅವನು ಒಪ್ತಾ ಇರಲಿಲ್ಲ. ಹೀಗೇ ಸಂಸಾರ ನಡೀತಾ ಇರಬೇಕಾದರೆ ಒಂದು ದಿನ ಅವನು ಕೆಲಸಕ್ಕೆ ಹೋಗಬೇಕಾದರೆ ಲಾರಿಯೊಂದು ಗುದ್ದಿ ಸತ್ತು ಹೋಗಿಬಿಟ್ಟ. ಊರಿಗೆ ಟೆಲಿಗ್ರಾಂ ಕೊಟ್ಟರೂ ಅದು ತಲುಪಿ ಅಪ್ಪ ಅಮ್ಮ ಬರೋದ್ರೊಳಗೆ ಅವನು ಮಣ್ಣಾಗಿದ್ದ. ಬಂದವರು ವಾಪಸು ನನ್ನ ಕರೆದುಕೊಂಡುಹೋಗ್ತಾರೆ ಅಂತ ಇದ್ದೆ. ಆದರೆ ಅದ್ಯಾಕೊ ಅವರು ಅಲ್ಲಿ ನಮಗೆ ನಮ್ಮದೇ ಕಷ್ಟಗಳಿವೆ. ಅದೂ ಅಲ್ಲದೆ ನಿಮ್ಮ ಅತ್ತೇನಾ ಒಬ್ಬಳೇ ಬಿಟ್ಟು ಹೋದರೆ ಜನ ಏನಂತಾರೆ. ಅವಳನ್ನು ನೋಡಿಕೊಂಡು ಇಲ್ಲೇ ಇರು ಅಂತ ಹೇಳಿ ತಿಥಿ ಮಗಿಸಿ ಹೊರಟು ಹೋದರು. ಬೆಳಿಗ್ಗೆ ಎದ್ದರೆ ತಿನ್ನೋಕೆನು ಅಂತ ಹುಡುಕೊ ಪರಿಸ್ಥಿತೀಲಿ ನಾವಿದ್ದ್ವಿ. ಇಂತಹ ಸ್ಥಿತಿಯಲ್ಲಿ ಬಿಟ್ಟುಹೋದ ಅಪ್ಪ ಅಮ್ಮ ಸತ್ತು ಹೋದರು ಅಂತ ಅವತ್ತೆ ಅಂದುಕೊಂಡು ಬಿಟ್ಟೆ. ಮನೆಲಿದ್ದ ಅಷ್ಟಿಷ್ಟು ಸಾಮಾನಲ್ಲಿ ಅಡುಗೆ ಮಾಡ್ತಾ ಒಂದು ವಾರ ನೂಕಿದೆ.ಮನೆಯಲ್ಲಿ ಐದು ಸಾವಿರ ರೂಪಾಯಿಗಳ ಒಂದು ಇನ್ಷೂರೆನ್ಸ್ ಬಾಂಡ್ ಇತ್ತು. ಓದಿದವರಿಗೆ ಅದನ್ನು ತೋರಿಸಿದಾಗ ನನ್ನ ಗಂಡ ಅದನ್ನು ಮದುವೆಗೆ ಮುಂಚೇನೆ ಮಾಡಿಸಿ ಅವರ ಅಮ್ಮನನ್ನು ನಾಮಿನಿ ಮಾಡಿದ್ದ ಅಂತ ಗೊತ್ತಾಯಿತು.. ಸರಿ ಇನ್ನು ಅದನ್ನು ತಗೋಳೇಕೆ ಅಲೆದಾಟ ಶುರುವಾಯಿತು. ಅಕ್ಸಿಡೆಂಟ್ ಕೇಸ್ ಆಗಿದ್ರು ಗುದ್ದಿದ ಲಾರಿ ಯಾವುದು ಅಂತ ಗೊತ್ತಾಗಲೇ ಇಲ್ಲ. ಹಾಗಾಗಿ ಅದರಿಂದಾನು ಏನು ದುಡ್ಡು ಬರಲಿಲ್ಲ. ಸರಿ ಇನ್ಷುರೆನ್ಸ್ ದುಡ್ಡನ್ನ ಹೇಗೆ ತೆಗೆಯೋದು ಅದು ಗೊತ್ತಾಗದೇ ಇದ್ದಾಗ ಪಕ್ಕದ ಹಳ್ಳಿಯಲ್ಲಿ ನಮ್ಮ ತಮಿಳಿನವನೇ ಒಬ್ಬ ಸಣ್ಣ ರಾಜಕಾರಣಿ ಸುಬ್ರಮಣಿ ಅಂತ ಇದ್ದ. ಸರಿ ಅವನ ಹತ್ತಿರ ಹೋದೆ. ಅವನು ಅದನ್ನು ತೆಗೆಯೋಕೆ ನಿನ್ನ ಗಂಡ ಸತ್ತಿದ್ದರ ಸರ್ಟಿಫಿಕೇಟ್ ತಗೋಬೇಕು ಅಂದ. ಅದನ್ನು ಎಲ್ಲಿ ತಗಿಯೋದು ಅನ್ನೋದು ನನಗೆ ಗೊತ್ತಿರಲಿಲ್ಲ. ಅದಕ್ಕವನು ನಿನ್ನ ಗಂಡ ಸತ್ತಿದ್ದು ತಾಲ್ಲೂಕು ಕೇಂದ್ರದ ಹತ್ತಿರದಲ್ಲಿ. ಅಲ್ಲಿನ ಕಚೇರಿಗೆ ಹೋಗಿ ತಗೋಬೇಕು. ಅದಕೆಲ್ಲ ದುಡ್ಡು ಕೊಡಬೇಕಾಗುತ್ತೆ ಏನು ಮಾಡ್ತೀಯಾ ಅಂದ. ನನಗೇನಾದರು ಗೊತ್ತಿದ್ದರೆ ತಾನೇ ಉತ್ತರ ಕೊಡೋದು. ಸುಮ್ಮನಿದ್ದೆ. ಕೊನೆಗವನೇ ನೋಡು ಏನು ಮಾಡ್ತೀಯಾಂತ ದುಡ್ಡಿಲ್ಲದೆ ಯಾವ ಕೆಲಸಾನು ಆಗಲ್ಲ. ನೀನು ದುಡ್ಡಿಗೆ ಹೂ ಅಂದರೆ ಹೋಗಬಹುದು ಅಂದ. ಅದಕ್ಕೆ ನಾನು ಅಣ್ಣಾ ಇನ್ಷುರೆನ್ಸ್ ದುಡ್ಡು ಕೈಗೆ ಬಂದಕೂಡಲೇ ಅದರಲ್ಲೆ ನೀವು ತಗೊಳ್ಳಿವರಂತೆ ಈಗ ಏನಾದರು ಮಾಡಿ ಅಂದೆ. ಅದಕ್ಕವನು ಅರ್ದ ಮನಸಿಂದ ಒಪ್ಪಿದಂತೆ ನಾಟಕ ಮಾಡಿ, ಆಯ್ತು ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ಊರಿನ ಗೇಟಿನ ಹತ್ತಿರ ಬಾ. ಅಲ್ಲಿಗೆ ನಾನು ಬರ್ತೀನಿ,ನನ್ನ ಗಾಡೀಲೇ ಹೋಗೋಣ ಅಂದ. ವಿದಿಯಿಲ್ಲದೆ ಆಯ್ತು ಅಂತ ವಾಪಾಸು ಬಂದೆ. ಮಾರನೆ ದಿನ ಗೇಟಿಗೆ ಹೋಗಿ ಅವನ ಸ್ಕೂಟರಿನಲ್ಲಿ ತಾಲ್ಲೂಕಿಗೆ ಹೋದ್ವಿ. ಅಲ್ಲಿ ಆಫೀಸಿನ ಹೊರಗೆ ನನ್ನ ಕೂರಿಸಿ ಒಳಗೆ ಹೋದವನು ಮದ್ಯಾಹ್ನ ಬಂದ. ಬಂದವನು ಅವರಿಗಿನ್ನೂ ಪೋಲಿಸ್ ರಿಪೋರ್ಟ ಬಂದಿಲ್ವಂತೆ. ಅದು ಬಂದ ಕೂಡಲೇ ಕೊಡ್ತಾರಂತೆ. ಅದು ಪೋಲೀಸ್ ಕೇಸ್ ಆಗಿರೋದ್ರಿಂದ ಸ್ವಲ್ಪ ಕಷ್ಟವಾಗುತ್ತೆ. ಈಗ ನಾವು ಸ್ಟೇಷನ್ನಿಗೆ ಹೋಗಿ ಬರಬೇಕು ಅಂದು ನನ್ನ ಕರೆದುಕೊಂಡು ಸ್ಟೇಷನ್ನಿಗೆ ಹೋದ. ಅಲ್ಲಿಯೂ ನನ್ನ ಹೊರಗೆ ನಿಲ್ಲಿಸಿ ಹೆಣ್ಣುಮಕ್ಕಳು ಸ್ಟೇಷನ್ನಿಗೆಲ್ಲ ಬರಬಾರದು. ನಾನೇ ಒಳಗೆ ಹೋಗಿ ಬರ್ತೀನಿ ಅಂದು ಒಳಗೆ ಹೋದವನು ಒಂದು ಗಂಟೆಬಿಟ್ಟು ಹೊರಗೆ ಬಂದ. ಊಹೂ ಇವತ್ತು ಇನ್ಸಫೆಕ್ಟರ್ ಇಲ್ಲ ನಾಳೆ ಬೆಳಿಗ್ಗೆ ನೋಡೋಣ ಅಂದ್ರು. ನಾವು ವಾಪಾಸ್ ಊರಿಗೆ ಹೋಗಿ ನಾಳೆ ಬೆಳಿಗ್ಗೆ ಬರೋಣ ಅಂದ. ಏನು ಗೊತ್ತಾಗದೆ ಅವನ ಮಾತಿಗೆ ತಲೆದೂಗಿದೆ. ಬೆಳಿಗ್ಗೆ ಕುಡಿದ ಅಂಬಲಿ ಖಾಲಿಯಾಗಿತ್ತು. ಅದು ಅರ್ಥವಾದವನಂತೆ ಬಾ ಮೊದಲು ಏನಾದರು ತಿನ್ನೊಣವಂತೆ ಅಂತ ಒಂದು ಹೋಟೆಲ್ಲಿಗೆ ಕರೆದುಕೊಂಡುಹೋಗಿ ಊಟಕ್ಕೆ ಹೇಳಿದ. ತಟ್ಟೆಯ ಮುಂದೆ ಕೂತರೂ ಊಟ ಸರಿಯಾಗಿ ಸೇರಲಿಲ್ಲ. ಮನೆಯಲ್ಲಿ ಏನೂ ಮಾಡಿರಲಿಲ್ಲ. ಪಾಪ ಹಸಿದುಕೊಂಡು ಕೂತಿರೋ ಅತ್ತೆಯ ನೆನಪಾಯ್ತು. ಮಗನಿಗೆ ಪಕ್ಕದಮನೆಯವರೇನಾದರು ಕೊಟ್ಟಿದ್ದರೆ ಪುಣ್ಯ ಅಂದುಕೊಂಡು ಅಳು ಬಂತು. ಅವನೆಷ್ಟೇ ಬಲವಂತ ಮಾಡಿದರು ತಿನ್ನೋಕಾಗಲಿಲ್ಲ ಅರ್ದ ಊಟಬಿಟ್ಟು ಕೈ ತೊಳೆದು ಎದ್ದು ಬಿಟ್ಟೆ. ನೋಡು ಎಷ್ಟು ದಿನಾಂತ ಹೀಗೆ ಊಟ ಬಿಡ್ತೀಯಾ? ನಿನ್ನ ಗಂಡನ ದುಡ್ಡು ಎಷ್ಟು ದಿನಕ್ಕಾಗುತ್ತೆ. ನೀನು ಹೇಗಾದರು ಮಾಡಿಬದುಕೊದು ಕಲೀಬೇಕು ಅಂತ ಉಪದೇಶ ಮಾಡಿದ. ಅವನು ಹೇಳಿದ್ದರಲ್ಲಿ ತಪ್ಪೇನೂ ಕಾಣಲಿಲ್ಲ. ಸರಿ ಸಂಜೆ ಹೊತ್ತಿಗೆ ಮನೆಗೆ ಬಂದಿವಿ. 

ಹೀಗೇ ಮೂರು ದಿನ ಅಲೆದರೂ ಬೇಕಾದ ಡೆತ್ ಸರ್ಟಿಫಿಕೆಟ್ ಸಿಗಲೇ ಇಲ್ಲ. ಮನೆಯಲ್ಲಿ ನೋಡಿದರೆ ಕಡುಕಷ್ಟ. ಅಕ್ಕಪಕ್ಕದ ಮನೆಗಳಲ್ಲಿ ದುಡ್ಡು ಬಂದಾಕ್ಷಣ ಕೊಡ್ತೀನಿ ಅಂತ ಹೇಳಿ ಒಂದಿಷ್ಟು ಅಕ್ಕಿ ರಾಗಿ ಸಾಲ ತೆಗೆದುಕೊಂಡು ಹೇಗೋ ನಿಬಾಯಿಸ್ತಾ ಇದ್ದೆ. ನಾಲ್ಕನೇ ದಿನ ಸಂಜೆ ಸುಬ್ರಮಣಿ ತಾನೆ ಮನೆ ಹತ್ತಿರ ಬಂದು ನಾಳೆ ಸಂಜೆ ಐದುಗಂಟೆಗೆ ಹೋಗೋಣ. ಹೇಗಾದ್ರು ಮಾಡಿ ಸರ್ಟಿಫಿಕೇಟ್ ಕೊಡಿಸ್ತೀನಿ ಅಂದ. ಮಾರನೆ ಸಂಜೆ ನಾವು ಆಫೀಸಿಗೆ ಹೋದಾಗ ಅದಾಗಲೆ ಐದು ಗಂಟೆಯಾಗಿ ಹೋಗಿತ್ತು. ಮನೆಗೆ ಹೊರಡುತಿದ್ದ ಗುಮಾಸ್ತ ಎಲ್ಲ ರೆಡಿಯಾಗಿದೆ ಸಾಹೇಬರ ಸೈನ್ ಒಂದೇ ಬಾಕಿಯಿರೋದು. ಬೆಳಿಗ್ಗೆ ಹತ್ತುಗಂಟೆಗೆಲ್ಲ ಬಂದುಬಿಡಿ ಅಂದ. ಸರಿ ಇನ್ನೆನು ಮಾಡೋದು ಅಂತ ಅಲ್ಲಿಂದ ಹೊರಟ್ವಿ. ಹೋಟೆಲ್ಲಿನಲ್ಲಿ ಕಾಫಿ ಕುಡಿಯುತ್ತ ಸುಬ್ರಮಣಿ ನನ್ನ ಸ್ಕೂಟರ್ ಸ್ವಲ್ಪ ಸರಿ ಮಾಡಿಸಬೇಕು, ಬಿಟ್ಟರೆ ಹೋಗೋಕೆ ನಿನಗೆ ಬಸ್ಸಿಲ್ಲ. ಆದರಿಂದ ಹೇಗಿದ್ರೂ ಬೆಳಿಗ್ಗೆ ಮತ್ತೆ ಬರಬೇಕು. ಇವತ್ತು ಇಲ್ಲೇ ಉಳಿದುಕೊಂಡು ಬೆಳಿಗ್ಗೆ ಸರ್ಟಿಪೀಕೇಟ್ ತಗೊಂಡೇ ಹೋಗಿಬಿಡೋಣ ಅಂದ. ನಾನು ಅಣ್ಣಾ ಅತ್ತೆಗೆ ಹೇಳಿಲ್ಲ, ಜೊತೆಗೆ ಮಗೂನು ನಾನಿಲ್ಲದಿದ್ದರೆ ಅಳ್ತಾನೆ ಅಂದೆ ಅದಕ್ಕವನು ನೋಡು ಈಗ ಹೇಗಾದರು ಮಾಡಿ ವಾಪಾಸು ಹೋದರೂ ನಾಳೆ ಬೆಳಿಗ್ಗೆ ಗಾಡಿ ರಿಪೇರಿಯಾಗದೆ ಬರೋಕ್ಕಾಗಲ್ಲ ನೀನೊಬ್ಬಳೆ ಬಂದು ತಗೊಳ್ಳೊ ಹಾಗಿದ್ದರೆ ಹೇಳು ಅಂದ. ನಾನೊಬ್ಬಳೇ ಬಂದು ತಗೊಳ್ಳೋದು ಕಷ್ಟದ ಕೆಲಸ ಅನಿಸಿ ಆಯ್ತು ಅಂದು ಬಿಟ್ಟೆ. ಸರಿ ನಾವು ಕಾಫಿ ಕುಡಿಯುತ್ತಿದ್ದ ಹೋಟೆಲ್ಲಿನಲ್ಲೇ ಒಂದು ರೂಮು ಮಾಡಿ, ನನ್ನ ಅಲ್ಲಿ ಬಿಟ್ಟು ಗಾಡಿ ರಿಪೇರಿಗೆ ಬಿಟ್ಟು ಬರ್ತೀನಿ ಅಂತ ಹೋಗಿ ರಾತ್ರಿ ಎಂಟು ಗಂಟೆಗೆ ಊಟ ತಗೊಂಡು ಬಂದ. ಇದ್ದ ಒಂದು ಸಣ್ಣ ಮಂಚ ಅವನಿಗೆ ಬಿಟ್ಟು ನಾನು ರೂಮಿನ ಇನ್ನೊಂದು ಮೂಲೆಯಲ್ಲಿ ಬೆಡ್ ಶೀಟು ಹಾಸಿಕೊಂಡು ಮಲಗಿದೆ. ಲೈಟು ಆರಿಸಿ ಅವನೂ ಮಲಗಿದ ಸುಮಾರು ಒಂದು ಗಂಟೆಯ ನಂತರ ಅವನು ತೀರಾ ಹತ್ತಿರ ಬಂದು ನನ್ನ ಕರೆದಂತಾಗಿ ಕಣ್ಣು ಬಿಟ್ಟರೆ ಅವನು ನನ್ನ ಪಕ್ಕದಲ್ಲೇ ಬಂದು ಮಲಗಿದ್ದ. ನಾನು ಮೇಲೇಳಲು ಹೋದರು ಬಿಡದೆ ಗಟ್ಟಿಯಾಗಿ ಹಿಡಿದುಕೊಂಡು ನೋಡು ನಿನಗೆ ಯಾರೂ ದಿಕ್ಕಿಲ್ಲ. ಪರ್ಮನೆಂಟಾಗ ನಾನು ನೋಡಿಕೊಳ್ಳ್ತೀನಿ. ಸುಮ್ಮನಿರು ಅಂತೆಲ್ಲ ಹೇಳಿದ ನಾನು ಬಹಳಷ್ಟು ಪ್ರಯತ್ನ ಮಾಡಿದರು ಅವನ ಹಿಡಿತದಿಂದ ಹೊರಗೆ ಬರಲಾಗಲೇ ಇಲ್ಲ. ಗಂಡ ಸತ್ತ ಒಂದೆ ತಿಂಗಳೊಳಗೆ ಬೇರೆ ಗಂಡಸಿನ ಜೊತೆ ಮಲಗಿ ಬಿಟ್ಟಿದ್ದೆ. ಬೆಳಿಗ್ಗೆ ಎದ್ದಾಗ ಮನಸ್ಸಿಗೆ ಕಷ್ಟವಾದರು ರಾತ್ರಿಯೆಲ್ಲ ಅವನು ನನ್ನ ಕುಟುಂಬದ ಜವಾಬ್ದಾರಿಯನ್ನು ತಗೊಂಡು ನಿನ್ನ ಮಗನನ್ನು ನನ್ನ ಮಗನ ತರಾ ಸಾಕ್ತೀನಿ ಅಂತೆಲ್ಲ ಹೇಳಿದ್ದನ್ನು ಕೇಳಿ ಮನಸ್ಸಿಗೆ ಸಮಾಧಾನ ಮಾಡಿಕೊಂಡೆ. 

ಆಮೆಲಿನ್ನೇನು ಸರ್ಟಿಫಿಕೇಟು ತಗೊಂಡು ಮನೆಗೆ ಬಂದ್ವಿ. ಆಮೇಲೆ ಒಂದೇ ವಾರದಲ್ಲಿ ದುಡ್ಡೂ ಬಂತು ಆ ದುಡ್ಡಲ್ಲಿ ಮನೆಗೆ ಬೇಕಾದ ಸಾಮಾನು ತಗೊಂಡು ಗಂಡನ ಒಂದೆರಡು ಸಾಲ ತೀರಿಸಿದೆ. ಈ ಮದ್ಯೆ ಒಂದೆರಡು ಬಾರಿ ಸುಬ್ರಮಣಿಯೊಂದಿಗೆ ತಾಲ್ಲೂಕಿಗೆ ಹೋಗಿ ಬರಬೇಕಾಯಿತು. ಆರು ತಿಂಗಳಾಗುವಷ್ಟರಲ್ಲಿ ಮನೆಯ ಸಾಮಾನೆಲ್ಲ ಖಾಲಿಯಾಗಿ ಊಟಕ್ಕಿಲ್ಲದಂತಾಯಿತು. ಒಂದು ರಾತ್ರಿ ಅವನ ಜೊತೆಯಿದ್ದಾಗ ಈ ವಿಷಯ ಹೇಳಿ ಏನು ಮಾಡೋದು ಮುಂದೆ? ಅಂದೆ.ಅದಕ್ಕವನು ಒಂದಿಷ್ಟು ದುಡ್ಡು ಕೊಟ್ಟು ಸದ್ಯಕ್ಕಿದನ್ನು ಇಟ್ಟುಕೊ ಆಮೆಲೆ ಏನಾದರು ಮಾಡೋಣ ಅಂದ.

ಆಮೇಲೊಂದಷ್ಟು ದಿನಗಳಾದ ಮೇಲೆ ಮನೆಗೆ ಬಂದ ಸುಬ್ರಮಣಿ ನಾಳೆ ಬೆಳಿಗ್ಗೆ ರೆಡಿಯಾಗಿ ಗೇಟಿಗೆ ಬಾ ಸಿಟಿಗೆ ಹೋಗಿ ಬರೋಣ ಸ್ವಲ್ಪ ಕೆಲಸವಿದೆ ಅಂದ. ಮಾರನೆ ದಿನ ಅವನ ಜೊತೆ ಸಿಟಿಗೆ ಹೋದೆ. ನನ್ನನ್ನು ಒಂದು ದೊಡ್ಡ ಹೋಟೇಲಿನ ರೂಮಿಗೆ ಕರೆದುಕೊಂಡು ಹೋಗಿ ಬಿಟ್ಟು ಈಗ ಬರ್ತೀನಿ ಅಂತ ಹೊರಗೆ ಹೋಗಿಬಿಟ್ಟ.ಒಂದಷ್ಟು ಹೊತ್ತಾದ ಮೇಲೆ ಇನ್ಯಾರದೊ ಜೊತೆಗೆ ಬಂದು ಸಾಯಂಕಾಲದ ತನಕ ಇವರ ಹತ್ತಿರ ಇರು ಆಮೇಲೆ ನಾನು ಬರ್ತೀನಿ ಅಂತ ಹೊರಟು ಹೋದ. ಆಗವನ ತಂತ್ರ ಗೊತ್ತಾಗಲಿಲ್ಲ.ಬಂದವನು ನಾನು ಅಷ್ಟು ದುಡ್ಡು ಕೊಟ್ಟೀದಿನಿ, ಸುಬ್ರಮಣಿ ಬೇರಲ್ಲ ನಾನು ಬೇರಲ್ಲ ಅಂತ ನನ್ನ ವಿರೋದದ ನಡುವೆಯೂ ನನ್ನ ಉಪಯೋಗಿಸಿಕೊಂಡುಬಿಟ್ಟ. ಸಾಯಂಕಾಲದ ಹೊತ್ತಿಗೆ ರೂಮಿಗೆ ಸುಬ್ರಮಣಿ ಬಂದಾಗ ಅವನು ಮಾಡಿದ್ದಕ್ಕೆ ಜಗಳವಾಡಿದೆ,ಅತ್ತೆ, ಕಾಲಿಡಿದು ಹೀಗ್ಯಾಕೆ ಮಾಡಿದೆ ಅಂತ ಗೋಳಿಟ್ಟೆ.ಅದಕ್ಕವನು ನಿನಗೊಂದು ದಾರಿ ತೋರಿಸಿದೀನಿ. ನೋಡು ಎರಡೆ ಗಂಟೆಗೆ ಎಷ್ಟು ದುಡ್ಡು ಕೊಟ್ಟಿದಾನೆ ಅಂತೇಳಿ ದುಡ್ಡನ್ನು ನನ್ನ ಹತ್ತಿರ ಎಸೆದು ಹೊರಗೆ ಹೋಗಿಬಿಟ್ಟ. ಪಾಪಿ ಸೂಳೇಮಗ ನಾನು ಸಾಕ್ತೀನಿ ಅಂತೇಳಿ ನನ್ನ ಜೊತೆ ಮಲಗಿ ಈಗ ತಲೆಹಿಡುಕನ ತರಾ ಇನ್ನೊಬ್ಬರ ಜೊತೆ ಮಲಗಿಸಿಬಿಟ್ಟ ಅನ್ನೋ ಕೋಪದಲ್ಲಿ ನಾನು ಸಾಯಬೇಕು ಅಂತ ತೀರ್ಮಾನ ಮಾಡಿ ಇನ್ನೇನು ಅದೇ ರೂಮಿನ ಫ್ಯಾನಿಗೆ ಸೀರೆ ಕಟ್ಟಿ ನೇಣು ಹಾಕಿಕೊಳ್ಬೆಕು ಅನ್ನುವಷ್ಟರಲ್ಲಿ ರೂಂಬಾಯ್ ಬಂದು ಬಾಗಿಲು ತಟ್ಟಿಬಿಟ್ಟ. ಒಳಗೆ ಬಂದವನು ಫ್ಯಾನಿಗೆ ನೇತು ಬಿದ್ದಿದ್ದ ಸೀರೆ ನೋಡಿ ಗಾಬರಿಯಿಂದ ಮ್ಯಾನೇಜರ್‍ನನ್ನು ಕರೆದುಕೊಂಡು ಬಂದ. ಒಳಗೆ ಬಂದ ಮ್ಯಾನೇಜರ್ ತಾಳ್ಮೆಯಿಂದ ನನ್ನ ಕತೆ ಕೇಳಿಸಿಕೊಂಡು ನಾವಿಂತದ್ದಕ್ಕೆಲ್ಲ ರೂಂ ಕೊಡಲ್ಲ ಏನೋ ಪರಿಚಯದವರು ಅಂತ ರೂಂ ಕೊಟ್ಟು ತಪ್ಪು ಮಾಡಿಬಿಟ್ಟೆ ಅಂದು ನನಗೆ ಹೋಗುವಂತೆ ಹೇಳಿದ. ಹೊರಗೆ ಬಂದರೆ ಸುಬ್ರಮಣಿ ಕಾಯ್ತಾ ಇದ್ದ. ವಿದಿಯಿಲ್ಲದೆ ಅವನ ಜೊತೆ ಹಳ್ಳಿಗೆ ಬಂದೆ. ಅವನು ಕೊಟ್ಟ ದುಡ್ಡಲ್ಲಿ ಒಂದು ತಿಂಗಳಿಗಾಗುವಷ್ಟು ಸಾಮಾನು ತಂದುಹಾಕಿಕೊಂಡೆ. ಒಂದಷ್ಟು ದಿನಗಳ ನಂತರ ಮುಂದೇನು ಅನ್ನೊ ಪ್ರಶ್ನೆ ಎದುರಾಯ್ತು. ಮತ್ತೆ ಸಾಮಾನು ಖಾಲಿಯಾಗುತ್ತೆ ಉಪವಾಸ ಇರಬೇಕಾಗುತ್ತೆ ಏನು ಮಾಡೋದು ಅಂತ ಯೋಚಿಸ್ತಾ ಇರಬೇಕಾದರೆ ಒಂದು ಮದ್ಯಾಹ್ನ ಸುಬ್ರಮಣಿ ಮನೆಗೆ ಬಂದ. ನೋಡು ನಾನೇನು ಬೇಕೂ ಅಂತ ಆ ತರ ಮಾಡಿಲ್ಲ. ನನ್ನ ಆದಾಯನು ಕಡಿಮೆಯಾಗಿದೆ. ಊರತುಂಬಾ ಕಂಟ್ರಾಕ್ಟರುಗಳಾಗಿ ಕೆಲಸ ಮುಂಚಿನ ಹಾಗೆ ಸಿಕ್ತಿಲ್ಲ. ಜೊತೆಗೆ ಹೋದಸರಿ ಪಂಚಾಯಿತಿ ಎಲೆಕ್ಷನ್ನಿಗೆ ಖರ್ಚು ಮಾಡಿದ ಸಾಲ ಹಾಗೇ ಇದೆ. ಗೆದ್ದಿದರೆ ಏನಾದರು ಮಾಡಬಹುದಿತ್ತು. ಸೋತಮೇಲೆ ದುಡ್ಡೆಲ್ಲಿಂದ ಬರುತ್ತೆ ಹೇಳು ಅಂತೆಲ್ಲ ರಮಿಸಿದ. ಅವನ ಮಾತು ಕೇಳಿ ನನಗೂ ಬೇಜಾರಾಯಿತು. ಸರಿ ಈಗ ಮುಂದಕ್ಕೆ ನಾನೇನು ಮಾಡಲಿ ಅಂದೆ. ಅದಕ್ಕವನು ನೀನೇನು ಯೋಚಿಸಬೇಡ ಸಿಟೀಲಿ ಒಂದಷ್ಟು ಜನ ಫ್ರೆಂಡ್ಸ್ ಇದಾರೆ ಅವರಿಗೆ ಪರಿಚಯಿಸಿ ಕೊಡ್ತೀನಿ.ನೀನು ಸ್ವಲ್ಪ ಮನಸ್ಸು ಗಟ್ಟಿಮಾಡಿಕೊ ಎಲ್ಲ ಸರಿ ಹೋಗುತ್ತೆ ಅಂತ ಹೇಳಿ ನಾಳೆ ಗೇಟಿಗೆ ಬಾ ಅಂತ ಹೊರಟು ಹೋದ.

ಬೆಳಿಗ್ಗೆ ಹೋಗೋದೋ ಬೇಡವೊ ಅಂತ ರಾತ್ರಿಯೆಲ್ಲ ಯೋಚನೆ ಮಾಡಿದೆ. ಆದರೆ ಹೋಗದೇ ಇದ್ದರೆ ವಿಧಿಯಿಲ್ಲ ಅನಿಸ್ತು. ಬೆಳಿಗ್ಗೆ ಧೈರ್ಯ ಮಾಡಿ ಅವನ ಜೊತೆ ಸಿಟಿಗೆ ಹೋದೆ. ಅಲ್ಲೊಂದು ಮನೆಗೆ ಕರೆದುಕೊಂಡು ಹೋಗಿ ಒಬ್ಬ ಮದ್ಯವಯಸ್ಸಿನ ನರಪೇತಲ ಮನುಷ್ಯನನ್ನು ಪರಿಚಯ ಮಾಡಿಸಿದ. ಆ ನರಪೇತಲ ಒಬ್ಬ ತಲೆಹಿಡುಕನಾಗಿದ್ದ. ಪರಿಚಯ ಮಾಡಿಸಿದ ಸುಬ್ರಮಣಿ ನಾಳೆಯಿಂದ ಇವಳು ಬರ್ತಾಳೆ. ನಮ್ಮ ಖಾಸಾ ಹುಡುಗಿ. ಬೆಳಿಗ್ಗೆ ಹತ್ತು ಗಂಟೆಗೆ ಬಂದರೆ ಸಾಯಂಕಾಲ ಐದು ಗಂಟೆಯೊಳಗೆ ಮನೆಗೆ ವಾಪಸಾಗಬೇಕು ಆ ಥರಾ ವ್ಯವಸ್ಥೆ ಮಾಡಿಕೊಡಬೇಕು ಅಂತ ಹೇಳಿದ. ನಾನೇನೋ ದೊಡ್ಡ ಅಫೀಸಿಗೆ ಹೋಗ್ತಾ ಇದೀನೇನೋ ಅನ್ನೋ ತರಾ ಟೈಮೆಲ್ಲಾ ಫಿಕ್ಸ್ ಮಾಡಿದ. ಹು ಅಂದ ಪಿಂಪ್ ನಾಳೆ ಬಸ್ಸು ಇಳಿದು ಸೀದಾ ಮನೆಗೆ ಬಂದು ಬಿಡು ದಾರಿ ಗೊತ್ತಾಗುತ್ತಲ್ಲ ಅಂದ. 

ವಾಪಾಸು ಹೋಗೋವಾಗ ಸುಬ್ರಮಣಿ ನಾನು ಅವಾಗವಾಗ ಬರ್ತಾ ಇರ್ತೀನಿ, ಏನೂ ಭಯ ಪಡಬೇಡ ಅಂತೇಳಿ ಸಮಾಧಾನ ಮಾಡಿದ.

ಮಾರನೆ ದಿನದಿಂದ ಬೆಳಿಗ್ಗೆ ಎಂಟುಗಂಟೆಗೆ ಗೇಟಿಗೆ ನಡೆದುಕೊಂಡು ಹೋಗಿ ಅಲ್ಲಿಂದ ಬಸ್ಸು ಹಿಡಿದು ಹತ್ತುಗಂಟೆಗೆಲ್ಲ ಅವನ ಮನೆ ತಲುಪ್ತಾ ಇದ್ದೆ. ಅಲ್ಲಿಂದ ಅವನು ಯಾವುದಾದರು ಹೋಟೆಲಿಗೊ ಇಲ್ಲ ಯಾರದಾದರು ಮನೆಗೊ ಕರೆದುಕೊಂಡು ಹೋಗಿ ಬಿಡ್ತಾ ಇದ್ದ. ದುಡ್ಡಿನ ವ್ಯವಹಾರವನ್ನೆಲ್ಲ ಅವನೇ ಮಾಡ್ತಾ ಇದ್ದ. ಮೊದಮೊದಲು ನಾನೂ ಸಹ ಗಿರಾಕಿಗಳು ಇವನಿಗೆ ಎಷ್ಟು ಕೊಡ್ತಾರೆ ಇವನು ಅದರಲ್ಲಿ ನನಗೆಷ್ಟು ಕೊಡ್ತಾನೆ ಅನ್ನೊದರ ಬಗ್ಗೆ ತಲೆ ಕೆಡಸಿಕೊಂಡಿರಲಿಲ್ಲ. ಆದರೆ ಅಮೇಲೆ ಗಿರಾಕಿಗಳು ಅಷ್ಟು ಕೊಟ್ಟೆ ಇಷ್ಟು ಕೊಟ್ಟೆ ಅಂದಾಗಲೇ ಅವನು ಜಾಸ್ತಿ ತಗೊಂಡು ಕಡಿಮೆ ಕೊಡ್ತಿದ್ದ ಅಂತ ಗೊತ್ತಾಗಿದ್ದು. ಹಳ್ಳೀಲಿ ಎಲ್ಲರಿಗು ಸಿಟಿಯಲ್ಲಿ ಯಾರೊ ಶ್ರೀಮಂತರ ಮನೆಗೆಲಸ ಮಾಡಿಕೊಂಡಿದೀನಿ ಅಂತ ಸುಳ್ಳು ಹೇಳಿದ್ದೆ. ಹೀಗೇ ಎರಡು ವರ್ಷ ಕಳೆಯಿತು. ಈ ಮದ್ಯೆ ಅತ್ತೆ ಸತ್ತು ಹೋದಳು. ಆಗಲು ಅಪ್ಪ ಅಮ್ಮನಿಗೆ ನಾನು ವಿಷಯ ತಿಳಿಸಲಿಲ್ಲ. ಸಾವಿನ ವಿಷಯ ಗೊತ್ತಾಗಿ ಎಷ್ಟೋ ದಿನಗಳಾದ ಮೇಲೆ ಬಂದೋರಿಗೆ ನಾನು ನೆಮ್ಮದಿಯಾಗಿ ಜೀವನ ಮಾಡೋದು ನೋಡಿ ಆಶ್ಚರ್ಯವಾದರೂ ಸಂತೋಷವೇನು ಪಡಲಿಲ್ಲ. ಒಂದು ವಾರವಿದ್ದು ಹೊರಟುಹೋದರು ಈಗ ನನಗೆ ಮಗನ ಚಿಂತೆ ಶುರುವಾಗಿತ್ತು. ಏಳು ವರ್ಷ ತುಂಬುತ್ತಾ ಬಂದಿದ್ದ ಅವನು ಹಳ್ಳಿ ಸ್ಕೂಲಲ್ಲೇ ಎರಡನೇ ಕ್ಲಾಸು ಓದ್ತಾ ಇದ್ದ. 

ಆಗ ಮತ್ತೆ ಸುಬ್ರಮಣಿನೆ ಅವನನ್ನು ಹಾಸ್ಟೆಲ್ಲಿಗೆ ಸೇರಿಸೋ ಐಡಿಯಾ ಕೊಟ್ಟ. ಪಕ್ಕದ ತಾಲ್ಲೂಕಲ್ಲಿ ಒಂದು ಕ್ರಿಶ್ಚಿಯನ್ ಹಾಸ್ಟೆಲ್ಲಿದೆ, ಅಲ್ಲಿಗೆ ಸೇರಿಸೋಣ ಅಂದಾಗ ನಾನು ವಿಧಿಯಿಲ್ಲದೆ ಒಪ್ಪಿದೆ. ಅಲ್ಲಿದ್ದ ಫಾದರ್ ಇದನ್ನು ನಾವು ಅನಾಥ ಮಕ್ಕಳಿಗಾಗಿ ನಡೆಸ್ತಾ ಇದೀವಿ. ನೀವು ಬದುಕಿರೋವಾಗ ಅವನನ್ನು ಅನಾಥ ಅಂತ ಇಟ್ಟುಕೊಳ್ಳೋಕೆ ಆಗಲ್ಲ ಅಂದರು. ಬೇಕಿದ್ದರೆ ನಾನು ಇನ್ನೊಂದು ಹಾಸ್ಟೆಲ್ ನಡೆಸೊ ಫಾದರ್ ಒಬ್ಬರ ವಿಳಾಸ ಕೊಡ್ತೀನಿ. ಅಲ್ಲಿ ತೀರಾ ಕಡಿಮೆ ದುಡ್ಡು ತಗೊಂಡು ಮದ್ಯಮವರ್ಗದವರ ಮಕ್ಕಳನ್ನು ಓದಿಸ್ತಾರೆ ಅಂದರು. ನಾನು ಅದೇ ಊರಿನ ಆ ಹಾಸ್ಟೆಲ್ಲಿಗೆ ಮಗನನ್ನು ಸೇರಿಸಿ ಬಂದೆ. ಆಮೇಲೆ ಹಳ್ಳಿಯಲ್ಲಿರೋದು ಯಾಕೆ ಅನಿಸ್ತು. ನಾನು ಸಿಟೀಲೇ ಸಣ್ಣದೊಂದು ಬಾಡಿಗೆ ಮನೆ ಮಾಡಿದೆ. ಅಷ್ಟರಲ್ಲಿ ಈವ್ಯವಹಾರ ಅರ್ಥವಾಗಿ ಹೋಗಿತ್ತು. ಗಿರಾಕಿಗಳೊಡನೆ ನೇರವಾಗಿ ವ್ಯವಹಾರ ಕುದುರಿಸೋ ಕಲೆ ಸಿದ್ದಿಸಿತ್ತು. ನಡುಮದ್ಯೆ ಯಾವನೂ ಬೇಡ ಅಂತೇಳಿ ನಾನೇ ಕಸುಬು ಮಾಡತೊಡಗಿದೆ. ಊರಿಂದ ಸ್ವಲ್ಪ ದೂರವಿದ್ದ ಮನೆಯಾದ್ದರಿಂದ ಕೆಲವೇ ಕೆಲವು ಗಿರಾಕಿಗಳಿಗೆ ಅಡ್ರೆಸ್ ಕೊಟ್ಟು ಮನೆಗೆ ಕರೆಸಿಕೊಳ್ಳ್ತಾ ಇದ್ದೆ. ಆದರೆ ಪೋಲಿಸರಿಗೆ ಜನರಿಗೆ ಬೇಗ ವಿಷಯ ಗೊತ್ತಾಗಿ ಬಿಡೋದು. ಆರಾರು ತಿಂಗಳಿಗೆ ಸಿಟಿಯ ಒಂದು ಏರಿಯಾದಿಂದ ಇನ್ನೊಂದು ಏರಿಯಾಗೆ ಮನೆ ಬದಲಾಯಿಸಬೇಕಾಗ್ತಿತ್ತು. ಅಂತೂ ನಾನು ಸಿಟಿಯ ಎಲ್ಲ ದಿಕ್ಕುಗಳನ್ನೂ ನೋಡಿಬಿಟ್ಟಿದ್ದೆ. ಇಷ್ಟೆಲ್ಲ ಮಾಡಿದರು ಪೋಲಿಸರ ಕಾಟ ಇದ್ದೇ ಇರ್ತಿತ್ತು. ಅವರು ಕರೆದಾಗೆಲ್ಲ ಹೋಗಿ ಕಾಸುಕೊಟ್ಟು ಅವರ ಜೊತೆ ಮಲಗಿ ಬರಬೇಕಾಗಿತ್ತು. ಈ ಮದ್ಯೆ ಕಾಯಿಲೆ ಕಸಾಲೆ ಬಂದರೆ ನಾನೇ ಆರೈಕೆ ಮಾಡಿಕೊಳ್ಳಬೇಕಾಗ್ತಿತ್ತು. ಆಗಾಗ ಬಂದುಹೋಗ್ತಾ ಇದ್ದ ಸುಬ್ರಮಣಿ ಬೇರೆ ಸತ್ತು ಹೋಗಿದ್ದ. ರಜಾ ದಿನಗಳಲ್ಲಿ ಮಗ ಮನೆಗೆ ಬಂದರೆ ಎಲ್ಲವನ್ನೂ ನಿಲ್ಲಿಸಿಬಿಡ್ತಾ ಇದ್ದೆ. ಹೀಗೆ ವರ್ಷಗಳು ಕಳೀತಾ ಹೋವು. ಮಗ ಪಿಯುಸಿಗೆ ಬಂದಿದ್ದ. ಅಲ್ಲಿಯತನಕ ಚೆನ್ನಾಗಿ ಓದಿಕೊಂಡು ಒಂದೇ ಹಾಸ್ಟೆಲ್ಲಿನಲ್ಲಿ ಓದ್ತಾ ಫಾದರ್ ಹತ್ತಿರ ಒಳ್ಳೆ ಹೆಸರು ಸಂಪಾದಿಸಿದ್ದ. ಈ ನಡುವೆ ಒಂದು ಅಚಾತುರ್ಯ ನಡೆದು ಹೋಯಿತು. ಮಗ ಓದ್ತಾ ಇದ್ದ ಸಿಟೀಲಿ ಏನೋ ಗಲಾಟೆ ಅಂತ ಅವನ ಕಾಲೇಜಿಗೆ ಹದಿನೈದು ದಿನ ರಜಾ ಕೊಟ್ಟಿದ್ದರಂತೆ. ನನಗದು ಗೊತ್ತಾಗಲಿಲ್ಲ. ಅವಾಗಲೇ ರಿಪೇರಿಗೆ ಅಂತ ಹದಿನೈದು ದಿನ ಹಾಸ್ಟೆಲ್ ಬಂದು ಮಾಡಿ ಎಲ್ಲರಿಗೂ ಊರುಗಳಿಗೆ ಹೋಗುವಂತೆ ಫಾದರ್ ಹೇಳಿದ್ದರು. ಅದರಂತೆ ನನ್ನ ಮಗ ದಿಡೀರನೇ ಊರಿಂದ ಬಂದು ಬಿಟ್ಟು ಕಸುಬು ನಡೆಸುವ ನನ್ನನ್ನು ನೋಡಿಬಿಟ್ಟ. ಬಹುಶ: ಅಂತಾ ಪರಿಸ್ಥಿತಿಯನ್ನು ಎದುರಿಸೋ ಕೆಟ್ಟ ಗಳಿಗೆ ಯಾವ ತಾಯಿಯ ಜೀವನದಲ್ಲೂ ಬಂದಿರಲಿಲ್ಲ ಅನಿಸುತ್ತೆ. ಮನೆಗೆ ಬಂದ ಮಗ ಊಟವನ್ನೂ ಮಾಡದೆ ಮೂಕನಾಗಿ ಕೂತುಬಿಟ್ಟಿದ್ದ. ಒಂದು ಮಾತೂ ಆಡಲಿಲ್ಲ. ಕೊನೆಗೆ ನಾನೇ ಧೈರ್ಯ ತಗೊಂಡು ಅವರ ಅಪ್ಪ ಹೋದಮೇಲೆ ಅವನನ್ನು ಅವನ ಅಜ್ಜಿಯನ್ನೂ ಸಾಕೋಕೆ ಪಟ್ಟ ಪಡಿಪಾಟಲನ್ನೆಲ್ಲ ಹೇಳಿಕೊಂಡು ಅತ್ತೆ. ಅವನಿದ್ದ ಆ ಹದಿನೈದು ದಿನದಲ್ಲಿ ಅವನು ಮಾತೇ ಆಡಲಿಲ್ಲ. ಮಾಡಿಟ್ಟ ಅಡುಗೆಯನ್ನು ತಾನೇ ಹಾಕಿಕೊಂಡು ತಿಂದು ಹೊರಗೆಲ್ಲಾದರು ಹೋಗಿ ಬರೋನು. ಸದ್ಯ ಮಗ ಮನೇಲಿದ್ದು ಊಟ ಮಾಡ್ತನಲ್ಲ ಅನ್ನೋ ಸಮಾಧಾನದಿಂದ ಬದುಕ್ತಾ ಇದ್ದೆ. ರಜಾ ಮುಗಿದಮೇಲೆ ಹೋಗುವಾಗಲು ಅವನು ಮಾತಾಡಲಿಲ್ಲ. ಒಂದೇ ಮಾತು ನೀನಿನ್ನು ಹಾಸ್ಟೆಲ್ಲಿಗೆ ಬರೋ ಅವಶ್ಯಕತೆಯಿಲ್ಲ ಅಂತೇಳಿ ಹೊರಟು ಹೋದ. ಅದೇಕಡೆ ಅವನನ್ನು ನೋಡಿದ್ದು. ಒಂದಷ್ಟು ದಿನ ಕಳೆದ ಮೇಲೆ ಅವನೇ ಸಮಾಧಾನ ಮಾಡಿಕೊಳ್ತಾನೆ ಅಂತ ಒಂದೆರಡು ತಿಂಗಳು ನಾನೂ ಹಾಸ್ಟೆಲ್ಲಿಗೆ ಹೋಗಲೇ ಇಲ್ಲ. ಆಮೇಲೊಂದು ದಿನ ಫಾದರ್ ಬರೋದಿಕ್ಕೆ ಹೇಳಿಕಳಿಸಿದಾಗ ಹೋದೆ. ನನಗೆ ನನ್ನ ತಾಯಿಯನ್ನು ಕಂಡರೆ ಇಷ್ಟವಿಲ್ಲ. ನಾನು ದೂರ ಎಲ್ಲಾದರು ಹೋಗಿ ಬದುಕಿ ಕೊಳ್ತೀನಿ, ನನ್ನ ಹುಡುಕಬೇಡಿ ಅಂತೇಳಿ ಕಾಗದ ಬರೆದಿಟ್ಟು ಎಲ್ಲೊ ಹೊರಟು ಹೋಗಿದ್ದ. ನನಗೆ ಆಕಾಶ ತಲೆಮೇಲೆ ಬಿದ್ದಂತಾಯಿತು. ಪೋಲೀಸಿಗೆ ಕಂಪ್ಲಂಟ್ ಕೊಟ್ಟರು ಪ್ರಯೋಜನವಾಗಲಿಲ್ಲ. 

ಆಮೇಲಿನ್ನೇನು ಕೂಡಿಟ್ಟಿದ್ದ ಒಂದಷ್ಟು ದುಡ್ಡನ್ನು ತಗೊಂಡು ಅವನ ಪೋಟೋ ಹಿಡಿದುಕೊಂಡು ಊರೂರು ಅಲೆದೆ. ಸುಮಾರು ಮೂರುವರ್ಷ ನಾಯಿ ತರಾ ಅಲೆದಿದ್ದೀನಿ. ಅವನ ಎಲ್ಲಿದಾನೊ ಗೊತ್ತಾಗಲಿಲ್ಲ. ಇದ್ದ ದುಡ್ಡೆಲ್ಲ ಖರ್ಚಾದ ಮೇಲೆ ಬದುಕೋಕೆ ಏನು ಮಾಡೋದು ಅಂತಿರುವಾಗಲೆ ನಾನು ಹುಷಾರು ತಪ್ಪಿ ಯಾವುದೊ ಗೊತ್ತಿರದ ಊರಿನ ಸರಕಾರಿ ಆಸ್ಪತ್ರೆಯಲ್ಲಿ ಮಲಗಿಬಿಟ್ಟೆ. ನನಗೀ ಕಾಯಿಲೆ ಇರೋದು ಗೊತ್ತಾಗಿದ್ದು ಅಲ್ಲೇ. ಆಮೆಲೇನು ಮಾಡಲು ತೋಚದೆ ಮತ್ತೆ ನನ್ನ ಮಗ ಓದ್ತಾ ಇದ್ದ ಹಾಸ್ಟೆಲ್ಲಿಗೆ ವಾಪಾಸು ಬಂದು ಫಾದರ್ ಹತ್ತಿರ ಯಾವತ್ತಾದರು ಒಂದು ದಿನ ಅವನಿಲ್ಲಿಗೆ ಬರಬಹುದಲ್ವ, ಫಾದರ್. ಅವನಿಗೆ ಕಾಯ್ತಾ ನಾನಿಲ್ಲಿ ಇರ್ತೀನಿ. ಇಲ್ಲಿ ಏನಾದರು ಕೆಲಸ ಮಾಡಿಕೊಂಡಿರ್ತೀನಿ ಅಂತ ಬೇಡಿಕೊಂಡೆ. ನನ್ನ ಬಗ್ಗೆ ಎಲ್ಲಾ ಗೊತ್ತಿದ್ದ ಅವರು ಸರಿ ಮಗಳೆ ಇಲ್ಲಿಗೆ ಬರುವವರ ಸೇವೆ ಮಾಡು.ಅದರಿಂದಲಾದರು ಏಸು ನಿನ್ನ ಪಾಪಗಳನ್ನು ಕ್ಷಮಿಸಬಹುದು ಅಂದು ಒಪ್ಪಿಗೆ ಕೊಟ್ಟರು. ಅಲ್ಲಿಯೂ ಒಂದು ವರ್ಷ ಕೆಲಸ ಮಾಡಿಕೊಂಡಿದ್ದೆ. ಆದರೆ ಕಾಯಿಲೆ ಜಾಸ್ತಿಯಾದಂತೆ ಚರ್ಚಿನವರೇ ನಡೆಸುವ ಈ ಆಶ್ರಮಕ್ಕೆ ಕಳಿಸಿದರು. ಇಲ್ಲೀಗ ಹೀಗೆ ನಿಮ್ಮೆದರು ಬಿದ್ದುಕೊಂಡಿದ್ದೀನಿ.ಸಾವು ಯಾವ ಕ್ಷಣದಲ್ಲಾದರು ಬರಬಹುದು ಅಂತನೋಡ್ತಾ ಇದೀನಿ.ಎಲ್ಲೋ ಹುಟ್ಟಿ ಹೀಗೆ ಬಂದು ಎಲ್ಲೋ ಅನಾಥಳ ಥರಾ ಸಾಯೋಕೆ ನಾನು ಹಿಂದಿನ ಜನ್ಮದಲ್ಲಿ ಮಾಡಿದ ಯಾವುದೋ ಪಾಪವೇ ಕಾರಣವಿರಬೇಕು.

ಅಷ್ಟು ಹೊತ್ತು ಒಂದೇ ಸಮನೆ ಮಾತಾಡಿದ್ದಕ್ಕೆ ಅವಳಿಗೆ ಕೆಮ್ಮು ಶುರುವಾಯಿತು. ನಮ್ಮ ಮಾತುಗಳನ್ನೇ ಕೇಳುತ್ತಾ ಕುಳಿತಿದ್ದ ಸಿಸ್ಟರ್ ಅವಳಿಗೆ ನೀರು ಕುಡಿಸಿ ಸಾಕು ಅನ್ನುವಂತೆ ನನಗೆ ಸನ್ನೆ ಮಾಡಿದರು.

ಅವಳಿಗೊಂದು ನಮಸ್ಕಾರ ಹೇಳಿ ಹೊರಡಲು ತಯಾರಾದಾಗ ಹಾಸಿಗೆಯ ಕೆಳಗಿಟ್ಟುಕೊಂಡಿದ್ದ ಮಾಸಲು ಬಣ್ಣದ ಪೋಟೋ ಒಂದನ್ನು ತೋರಿಸಿ.ಇವನೇ ನನ್ನ ಮಗ. ಎಲ್ಲಾದರು ನೋಡಿದರೆ ನನಗೆ ತಿಳಿಸಿ ಸರ್ ಅಂದಳು. ಹತ್ತೊ ಹನ್ನೆರಡರ ವಯಸ್ಸಲ್ಲಿ ತೆಗೆಸಿದ ಪೋಟೋದಲ್ಲಿರುವವನನ್ನು ಈಗ ಗುರುತಿಸಲು ಸಾದ್ಯವಿಲ್ಲವೆಂದು ಹೇಳಿ ಅವಳಿಗ್ಯಾಕೆ ನೋವುಂಟು ಮಾಡಬೇಕೆಂದುಕೊಂಡು, ಆಯಿತು, ಖಂಡಿತಾ ಅಂತೇಳಿ ಹೊರಗೆ ಬಂದಾಗ ಸಿಸ್ಟರ್ ನಿರ್ಮಲಾ ನನ್ನ ಹಿಂದೆಯೇ ಬಂದರು.

ಗೇಟಿನ ಹತ್ತಿರ ಬಂದಾಗ ಸಿಸ್ಟರ್ ಮಧು ನೀನು ನನ್ನ ಹಳೆಯ ಮಿತ್ರ ಅಂತ ಹೇಳ್ತಾ ಇದೀನಿ, ಹೀಗೊಂದು ಆರು ತಿಂಗಳ ಹಿಂದೆ ಇವಳ ಮಗ ಇಲ್ಲಿಗೆ ಬಂದಿದ್ದ. ದೂರದಿಂದ ಕಿಟಕಿಯಿಂದಲೇ ತಾಯಿಯನ್ನು ನೋಡಿ ಹೊರಟು ಹೋದ. ಅವನೀಗ ಮಿಲ್ಟ್ರಿಯಲ್ಲಿದ್ದಾನಂತೆ. ಅವಳೆಷ್ಟೇ ಕೆಟ್ಟವಳಾದರು ತಾಯಿಯೇ ಅಲ್ಲವೆ ಒಂದು ಸಾರಿ ಮುಖ ತೋರಿಸು ಸಾಕು ಅವಳು ನೆಮ್ಮದಿಯಾಗಿ ಕರ್ತನನ್ನು ಸೇರುತ್ತಾಳೆಂದು ಎಷ್ಟು ಹೇಳಿದರು ಅವನು ಕೇಳದೇ ಹೋದ. ಹೋಗುವಾಗ ಮಾತ್ರ ನನ್ನ ಹತ್ತಿರ ಬಂದು ಹತ್ತು ಸಾವಿರ ರೂಪಯಿಗಳ ಎರಡು ಕಟ್ಟು ಕೊಟ್ಟು ನಿಮ್ಮ ಆಶ್ರಮಕ್ಕೆ ಇದು ನನ್ನ ಕಾಣಿಕೆಯೆಂದು ಹೇಳಿ ಹೊರಟುಹೋದ ಅಂದರು. ನಾನಾಗ ಸಿಸ್ಟರ್ ಈಗ ನಿಮ್ಮ ಹತ್ತಿರ ಅವನು ಕೊಟ್ಟ ವಿಳಾಸವೇನಾದರು ಇದೆಯಾ ಎಂದಾಗ ಒಂದುನಿಮಿಷ ಎಂದು ಚರ್ಚಿನ ಒಳಗೆ ಹೋದವರು ಒಂದು ಚೀಟಿ ತಂದು ಕೊಟ್ಟರು. ನಾನು ಥ್ಯಾಂಕ್ಸ್ ಹೇಳಿ ಹೊರಗೆ ಬಂದೆ.

ಊರಿಗೆ ಬಂದವನು ನನ್ನ ಪರಿಚಯದ ಬಹಳಷ್ಟು ಸೈನ್ಯದ ಮಿತ್ರರುಗಳಿಗೆ ಕರೆಮಡಿ ಆ ವಿಳಾಸ ಕೊಟ್ಟು ಆ ಹುಡುಗನ್ನು ಪತ್ತೆ ಹಚ್ಚಲು ಕೋರಿದೆ. ಒಂದೆರಡು ತಿಂಗಳಾದ ಮೇಲೆ ದೆಹಲಿಯಲ್ಲಿದ್ದ ನನ್ನ ಮಿತ್ರನೊಬ್ಬನಿಂದ ಕರೆಬಂತು,ನೀನು ಹೇಳಿದ ಹುಡುಗ ಸೈನ್ಯದಲ್ಲಿದ್ದುದು ನಿಜ. ಆದರೆ ಈಗೊಂದು ಮೂರುತಿಂಗಳ ಹಿಂದೆ ಗಡಿಯಲ್ಲಿ ನಡೆದ ಘರ್ಷಣೆಯೊಂದರಲ್ಲಿ ಹತನಾಗಿದ್ದಾನೆ ಅಂದವನ ಮಾತು ಕೇಳಿ ಎದೆ ಬಾರವಾಯಿತು. ಅವನು ಬದುಕಿದ್ದರೆ ತಾಯಿಯನ್ನು ನೋಡುವಂತೆ ಮಾಡಬಹುದಿತ್ತಾ ಗೊತ್ತಿಲ್ಲ,ಆದರೆ ಪ್ರಯತ್ನವನ್ನಂತು ಮಾಡಬಹುದಿತ್ತೆನಿಸಿ ಮನಸ್ಸಿಗೆ ವಿಷಾದವೆನಿಸಿತು!