May 2, 2015

ಅಸಹಾಯಕ ಆತ್ಮಗಳು - ಹರಯದ ಕುದುರೆಯೇರಿದಾಗ

kannada prostitute stories
ಕು.ಸ.ಮಧುಸೂದನ್
ನಮ್ಮಪ್ಪ ಪ್ರೈಮರಿ ಸ್ಕೂಲಿನಲ್ಲಿ ಮೇಸ್ಟ್ರಾಗಿದ್ದರು. ಹಳ್ಳಿಯಲ್ಲಿ ಅವರ ಸ್ಕೂಲಿದ್ದರೂ ಮನೆಯನ್ನು ಮಾತ್ರ ತಾಲ್ಲೂಕು ಕೇಂದ್ರದಲ್ಲಿ ಮಾಡಿದ್ದರು. ನಾಲ್ಕು ಮೈಲಿ ದೂರವಿದ್ದ ಹಳ್ಳಿಗೆ ದಿನಾ ಸೈಕಲ್ಲಿನಲ್ಲಿ ಹೋಗಿಬರೋರು. ನಾನು ಒಂಭತ್ತನೇ ತರಗತಿ ಓದುವಾಗ ಒಬ್ಬ ಹುಡುಗ ಪರಿಚಯವಾದ. ಅವನು ಏನು ಮಾಡ್ತಿದ್ದ ಏನು ಓದ್ತಿದ್ದ ಒಂದೂ ಗೊತ್ತಿರಲಿಲ್ಲ. ನಾನು ಸ್ಕೂಲಿಗೆ ಹೋಗುವಾಗ, ಮನೆಗೆ ವಾಪಾಸು ಬರೋವಾಗ ನನ್ನ ಹಿಂಬಾಲಿಸ್ತಾ ಇದ್ದ. ನಮ್ಮ ಮನೆ ಊರಿಂದ ಸ್ವಲ್ಪ ದೂರ ಇದ್ದಿದ್ದರಿಂದ ನಾನು ಒಬ್ಬಳೇ ಹೋಗ್ತಿದ್ದೆ. ಆ ಏರಿಯಾದಿಂದ ಬೇರಾವ ಹುಡುಗೀನು ನಮ್ಮ ಸ್ಕೂಲಿಗೆ ಬರ್ತಾ ಇರಲಿಲ್ಲ. ಹಾಗಾಗಿ ಒಬ್ಬಳೇ ಹೋಗೊದು ಮಾಮೂಲಿಯಾಗಿತ್ತು. ಒಂದಷ್ಟು ದಿನ ಹಿಂದೆ ತಿರುಗಿದೋನು ಒಂದು ದಿನ ಹತ್ತಿರಬಂದು ಒಂದು ಬಿಳಿಹಾಳೆ ಕೊಟ್ಟು ಓದು ಅಂದು ಹೋಗಿಬಿಟ್ಟ. ನಾನು ಕುತೂಹಲ ತಡೆಯಲಾರದೆ ಅಲ್ಲೇ ಅದನ್ನು ಓದಿದರೆ ಐ ಲವ್ ಯೂ,ನಾಳೆ ನೀನು ಇಂತ ಕಾಗದ ಕೊಡಬೇಕು ಅಂತ ಬರೆದಿತ್ತು. ಅದನ್ನು ನೋಡಿ ನನಗೇನು ಶಾಕ್ ಆಗಿರಲಿಲ್ಲ. ಯಾಕಂದ್ರೆ ಇಂತಹ ಪ್ರೇಮ ಪ್ರಕರಣಗಳ ಬಗ್ಗೆ ನನ್ನ ಸ್ಕೂಲಿನ ಹುಡುಗಿಯರು ಸಾಕಷ್ಟು ಹೇಳಿದ್ದರು. ಅವರಲ್ಲಿ ಬಹಳಷ್ಟು ಜನರಿಗೆ ಇಂತಹ ಪತ್ರಗಳು ಬಂದಿದ್ದವು ಒಂದಷ್ಟು ಜನ ಅವಕ್ಕೆ ಉತ್ತರವನ್ನೂ ಕೊಟ್ಟು ಪ್ರೀತಿಸ್ತಾ ಇದ್ದರು ಸತ್ಯ ಹೇಳಬೇಕು ಅಂದರೆ ಒಬ್ಬ ಹುಡುಗ ಇಂತ ಕಾಗದ ಕೊಟ್ಟಿದ್ದು ನನ್ನೊಳಗೆ ಎಂತದೊ ಸಂತೋಷ ಹುಟ್ಟಿ ಹಾಕಿತ್ತು. ಯಾರಿಗೂ ಗೊತ್ತಾಗಬಾರದು ಅಂತ ಅದನ್ನು ಅಲ್ಲೇ ಹರಿದು ಹಾಕಿಬಿಟ್ಟೆ. ಮಾರನೇ ದಿನ ಅವನು ಎದುರು ಬಂದು ನಿಂತು ಉತ್ತರ ಕೊಡು ಅಂದಾಗ ಬರೆದಿಲ್ಲ ಅಂದೆ. ಅದಕ್ಕವನು ಬಾಯಲ್ಲೇ ಹೇಳು ಅಂದ. ನಾಚಿಕೆಯಿಂದ ನಾನು ಆಮೇಲೆ ಎಂದು ಶಾಲೆಗೆ ಹೋಗಿಬಿಟ್ಟೆ. ಸಾಯಂಕಾಲ ಮತ್ತೆ ಬಂದು ಕೇಳಿದ ನಾನು ಬೆಳಿಗ್ಗೆ ಕೊಟ್ಟ ಉತ್ತರವನ್ನೇ ಕೊಟ್ಟೆ. ಹೀಗೇ ಒಂದು ವಾರ ನಾನು ಏನನ್ನು ಹೇಳಲಿಲ್ಲ. ಆಡಲಿಲ್ಲ. ಆದರವನು ಬಡಪೆಟ್ಟಿಗೆ ಬಿಡುವಂತೆ ಕಾಣಲಿಲ್ಲ. ಪ್ರತಿದಿನ ಬೆಳಿಗ್ಗೆ ಸಂಜೆ ನನಗಾಗಿ ಕಾದು ಅದೇ ಮಾತನ್ನು ಹೇಳ್ತಾ ಇದ್ದ. ಹರಯದ ಮಸಲತ್ತು ನೋಡಿ. ಒಂದು ದಿನ ಅವನು ಕಾಣದೇ ಹೋದರೆ ಒಂತರಾ ಏನೋ ಕಳೆದುಕೊಂಡಂತಾಗ್ತಿತ್ತು. ನನಗೆ ಗೊತ್ತಿಲ್ಲದಂತೆ ಅವನ ಬಲೆಯೊಳಗೆ ಬೀಳ್ತ್ತಾ ಹೋಗಿಬಿಟ್ಟೆ. ಆಮೇಲಿನ್ನೇನು ದಿನಾ ಯಾರಿಗೂ ಗೊತ್ತಾಗದ ಹಾಗೆ ಮಾತಾಡ್ತಾ ಇದ್ವಿ. ಅಪ್ಪನಿಗೆ ಊರಲ್ಲೆಲ್ಲ ಪರಿಚಯದವರೇ ಇದ್ದುದರಿಂದ ಕದ್ದು ಮುಚ್ಚಿ ಮಾತಾಡಬೇಕಾಗಿತ್ತು. ನಮ್ಮ ನಡುವೆ ಚೀಟಿಗಳು ಓಡಾಡ ತೊಡಗಿದವು. ಇನ್ನೇನು ಅವನಿಲ್ಲದೆ ಇದ್ದರೆ ಸತ್ತುಹೋಗಿಬಿಡ್ತೀನಿ ಅನ್ನೊವಷ್ಟರ ಮಟ್ಟಿಗೆ ಅವನನ್ನು ಪ್ರೀತಿಸೋಕೆ ಶುರು ಮಾಡಿದ್ದೆ. ಇಂತಾದ್ದರಲ್ಲಿ ಅಪ್ಪನಿಗೆ ತುಂಬಾ ದೂರದ ಊರಿಗೆ ವರ್ಗಾವಣೆ ಆಯ್ತು. ಇಷ್ಟವಿಲ್ಲದ ಮನಸಿಂದ ಅಪ್ಪ ಹೋಗಿ ಅಲ್ಲಿ ಡ್ಯೂಟಿಗೆ ಸೇರಿದರು. ಸದ್ಯ ಈ ವರ್ಷ ಮನೆ ಇಲ್ಲೇ ಇರಲಿ ನಾನಲ್ಲಿ ಹೇಗೋ ಒಬ್ಬನೇ ಇರ್ತೀನಿ ಅಂತ ಅಪ್ಪ ಹೇಳಿ ಹೋದರು. ತಿಂಗಳಿಗೊಂದು ಸಲ ಬಂದು ಮನೆಗೆ ಏನೇನು ಬೇಕೋ ಅದನ್ನೆಲ್ಲ ತಂದು ಹಾಕಿ ಹೋಗ್ತಾ ಇದ್ದರು .ಅಪ್ಪ ಹೋದ ಮೇಲೆ ನನಗೆ ಸ್ವಲ್ಪ ಸ್ವಾತಂತ್ರ ಸಿಕ್ಕಿದ ಹಾಗಾಯ್ತು. ಯಾಕೆಂದರೆ ಅಮ್ಮನಿಗೆ ನನ್ನ ಕಂಡರೆ ತುಂಬಾ ಮುದ್ದು, ಜೊತೆಗವಳಿಗೆ ಕಳ್ಳ ಕಪಟ ಗೊತ್ತಾಗ್ತಿರಲಿಲ್ಲ. ತುಂಬಾ ಮುಗ್ದೆಯಾಗಿದ್ದ ಅವಳು ನಾನು ಹೇಳಿದ್ದನ್ನೆಲ್ಲ ನಂಬಿ ಬಿಡ್ತಾ ಇದ್ದಳು. ಹೀಗಾಗಿ ನಾನು ಶಾಲೆಯಿಂದ ಲೇಟಾಗಿ ಬರೋದು, ಟ್ಯೂಷನ್ ಹೋಗ್ತೀನಿ ಅಂತ ಹೇಳಿ ಅವನ ಜೊತೆ ತಿರುಗೋದು ಜಾಸ್ತಿಯಾಯಿತು. ಒಂದು ದಿನ ಅಮ್ಮ ಪಕ್ಕದವರ ಮನೆ ಜೊತೆ ಯಾವುದೋ ದೇವಸ್ಥಾನಕ್ಕೆ ಹೊರಟಿದ್ದಳು. ಅದು ಹಿಂದಿನ ದಿನವೇ ನನಗೆ ಗೊತ್ತಾಗಿದ್ದರಿಂದ ಅವನಿಗೆ ಬೆಳಿಗ್ಗೆ ಹತ್ತುಗಂಟೆಗೆ ಮನೆಗೆ ಬರೋಕೆ ಹೇಳಿದ್ದೆ. ಬೆಳಿಗ್ಗೆ ಎಂಟಕ್ಕೆ ಅಮ್ಮ ಮನೆ ಬಿಟ್ಟಳು. ನಾನು ತಿಂಡಿ ತಿಂದು ಶಾಲೆಯ ಯೂನಿಫಾರಂನ್ನು ನೆಪ ಮಾತ್ರಕ್ಕೆ ಹಾಕಿಕೊಂಡು ಅವನಿಗಾಗಿ ಕಾಯುತ್ತಾ ಕೂತೆ. ಹೇಳಿದಂತೆ ಸರಿಯಾಗಿ ಹತ್ತುಗಂಟೆಗೆಲ್ಲ ಬಂದವನ ಜೊತೆ ಮಾತಾಡುತ್ತ ಕೂತೆ. ಮದ್ಯಾಹ್ನದವರೆಗು ಮಾತಾಡಿದ ಮೇಲೆ ಒಟ್ಟಿಗೇ ಊಟ ಮಾಡಿದೆವು. ಆನಂತರ ನನ್ನ ರೂಮಿಗೆ ಕರದುಕೊಂಡು ಹೋಗಿ ನನ್ನ ಹಳೆಯ ಆಟದ ಸಾಮಾನುಗಳನ್ನು ಗೋಡೆಗೆ ಅಂಟಿಸಿದ್ದ ಸಿನಿಮಾ ತಾರೆಯರ ಚಿತ್ರಗಳನ್ನೆಲ್ಲ ತೋರಿಸುತ್ತ ಇರುವಾಗ ತಟಕ್ಕನೆ ಅವನು ನನ್ನ ಅಪ್ಪಿಕೊಂಡು ಬಿಟ್ಟ. ಬೇಡವೆಂದು ಕೊಸರಾಡಿದರೂ ಅವನು ಬಿಡಲಿಲ್ಲ. ನಾನೂ ಸುಮ್ಮನಾಗಿಬಿಟ್ಟೆ. ಅವನ ಮೈಬಿಸಿಗೆ ನಾನು ಕರಗತೊಡಗಿದೆ. ಯಾವುದೇ ಹುಡುಗಿಯ ಜೀವನದಲ್ಲಿ ಮದುವೆಗೆ ಮುಂಚೆ ಏನು ನಡೆಯಬಾರದೊ ಅದು ನನ್ನ ಜೀವನದಲ್ಲಿ ನಡೆದು ಹೋಗಿತ್ತು. ಅವನನ್ನು ನನ್ನ ರೂಮಿಗೆ ಕರೆತರುವ ಅವಸರದಲ್ಲಿ ನಾನು ಮುಂದಿನ ಬಾಗಿಲಿಗೆ ಚಿಲಕ ಹಾಕಿಯೇ ಇರಲಿಲ್ಲ. ಸಂಜೆ ಐದು ಗಂಟೆಗೆ ಬರುತ್ತೇನೆಂದು ಹೇಳಿ ಹೋಗಿದ್ದ ಅಮ್ಮ ದಿಡೀರನೆ ಬಾಗಲು ತೆರೆದು ಬಂದುಬಿಟ್ಟಳು. ರೂಮಲ್ಲಿ ಅರೆಬರೆ ಬೆತ್ತಲೆಯಾಗಿ ಮಲಗಿದ್ದ ನಮ್ಮನ್ನು ನೋಡಿ ಹೌಹಾರಿಬಿಟ್ಟಳು. ಅವಳನ್ನು ಕಂಡವನು ಅದ್ಯಾವ ಮಾಯದಲ್ಲಿ ಓಡಿಹೋದನೊ ಗೊತ್ತೇ ಆಗಲಿಲ್ಲ. ಅವತ್ತಿಗೆ ನನ್ನ ಸ್ವಾತಂತ್ರದ ದಿನಗಳು ಮುಗಿದು ಹೋದವು. ಅಷ್ಟು ಮುದ್ದು ಮಾಡುತ್ತಿದ್ದ ಅಮ್ಮ ಅವತ್ತಿನಿಂದ ರಾಕ್ಷಸಿಯಾಗಿಬಿಟ್ಟಳು. ಒಂದು ತಿಂಗಳವರೆಗು ಶಾಲೆಗೂ ಕಳಿಸದೆ ಮನೆಯಲ್ಲಿ ಕೂಡಿಹಾಕಿಬಿಟ್ಟಳು .ಮುಂದಿನ ತಿಂಗಳು ಅಪ್ಪ ಬರುವ ತನಕವೂ ನಾನು ಮನೆಯಲ್ಲೇ ಇರಬೇಕೆಂದು ತಾಕೀತು ಮಾಡಿದ್ದಳು. ಅವನ ದೇಹದ ಬಿಸಿ ಅನುಭವಿಸಿದ್ದ ನನಗೆ ಮನೆ ಜೈಲಿನಂತೆ ಬಾಸವಾಗತೊಡಗಿತ್ತು. ಅಂತಹುದರಲ್ಲಿ ಒಂದು ದಿನ ಪಕ್ಕದ ಮನೆಯ ಏಳನೇ ಕ್ಲಾಸಿನ ಹುಡುಗನ ಕೈಲಿ ಅವನಿಗೆ ಒಂದು ಉದ್ದದ ಕಾಗದ ಬರೆದು ಕೊಟ್ಟು ಕಳಿಸಿದೆ. ಮಾರನೇ ದಿನ ಅವನಿಂದಲೂ ಅಷ್ಠೇ ಉದ್ದದ ಕಾಗದ ಬಂತು. ಅದರಲ್ಲಿದ್ದ ವಿಷಯ ಓದಿ ಸಂತೋಷವಾಗಿ ಹೋಯಿತು. ಅವನು ನನ್ನನ್ನು ತುಂಬಾ ಪ್ರೀತಿಸುತ್ತಿರುವುದಾಗಿಯೂ ನನಗಾಗಿ ಏನು ಬೇಕಾದರು ಮಾಡಲು ಸಿದ್ದವಾಗಿರುವುದಾಗಿಯೂ ಹೇಳಿ ಇವತ್ತು ರಾತ್ರಿ ಹತ್ತು ಗಂಟೆಗೆ ನಿನ್ನ ಬಟ್ಟೆಗಳನ್ನೆಲ್ಲ ತೆಗೆದುಕೊಂಡು ನಿಮ್ಮ ಬೀದಿ ಕೊನೆ ತಿರುವಿಗೆ ಬಂದು ಬಿಡು ಎಂದು ಬರೆದಿದ್ದೆ. ಸರಿ, ಅದು ವಿವೇಚನೆಯ ವಯಸ್ಸಲ್ಲ. ರಾತ್ರಿ ಊಟ ಮಾಡಿ ನನ್ನ ಬಟ್ಟೆ ಒಂದಷ್ಟು ಒಡವೆ ತಗೊಂಡು ಅಮ್ಮನಿಗೆ ಕಾಣದ ಹಾಗೆ ಹಿಂದಿನ ಬಾಗಿಲಿನಿಂದ ಮನೆ ಬಿಟ್ಟೆ. ಕೊನೆಗವನು ಹೇಳಿದಂತೆ ಧರ್ಮಸ್ಥಳದ ಕಡೆ ಹೋದೆವು. ಇನ್ನೂ ಚಿಕ್ಕ ವಯಸ್ಸಿನವರಾದ ನಮಗಲ್ಲಿ ರೂಮು ಕೊಡಲಿಲ್ಲ. ಕೊನೆಗಲ್ಲಿಂದ ಮಂಗಳೂರಿಗೆ ಬಂದು ಹೇಗೋ ಮಾಡಿ ಒಂದು ಸಣ್ಣ ಲಾಡ್ಜಿನಲ್ಲಿ ತಂಗಿದೆವು. ಹಗಲು ರಾತ್ರಿ ಒಬ್ಬರನ್ನೊಬ್ಬರು ಬಿಡದೆ ಅಂಟಿಕೊಂಡೇ ಹತ್ತು ದಿನಗಳನ್ನು ಕಳೆದೆವು. ತಂದಿದ್ದ ದುಡ್ಡು ಕರಗತೊಡಗಿತ್ತು. ಮುಂದೇನು ಮಾಡಬೇಕು ಅನ್ನುವ ಯಾವ ಕಲ್ಪನೆಯೂ ಇಬ್ಬರಿಗೂ ಇರಲಿಲ್ಲ. ಆದರೆ ಒಂದು ಸಾಯಂಕಾಲ ಪೋಲಿಸರ ಜೊತೆ ಅಪ್ಪ ಬಂದು ರೂಮಿನ ಬಾಗಿಲು ತಟ್ಟಿದಾಗ ಎದೆ ಝಲ್ಲೆಂದು ಬಿಟ್ಟಿತು. ಅಲ್ಲೇ ಎಲ್ಲರ ಎದುರಿಗೆ ದನಕ್ಕೆ ಹೊಡೆದಂತೆ ಹೊಡೆದು ನನ್ನ ಎಳೆದುಕೊಂಡು ಹೋದರು. ಅವನಂತು ಪೋಲಿಸರ ಜೊತೆ ಹೋಗಬೇಕಾಯಿತು. ಅಲ್ಲಿಂದ ನನ್ನನು ಸೀದಾ ಅಮ್ಮನ ತವರು ಮನೆಗೆ ಕರೆತಂದಿದ್ದರು. ಅಲ್ಲಾಗಲೆ ಮನೆ ಖಾಲಿ ಮಾಡಿ ಸಾಮಾನೆಲ್ಲ ಅಜ್ಜಿಯ ಮನೆಗೆ ಸಾಗಿಸಲಾಗಿತ್ತು. 

ಪೋಲಿಸರು ಕರೆದುಕೊಂಡು ಹೋದವನು ಏನಾದನೊ ನನಗೆ ಗೊತ್ತಾಗಲೇ ಇಲ್ಲ.. ನಂತರ ಮೂರೇ ತಿಂಗಳಿಗೆ ದೂರದೂರಿನ ಒಬ್ಬನಿಗೆ ನನ್ನ ಮದುವೆ ಮಾಡಿಕೊಡಲಾಯಿತು. ಅವನಿಗೆ ಆಗಲೇ ಮುವತ್ತೈದು ತುಂಬಿ ನಾನು ಎರಡನೇ ಹೆಂಡತಿಯಾಗಿದ್ದೆ. ಅವನ ಮೊದಲ ಹೆಂಡತಿ ಹೆರಿಗೆಯಲ್ಲೇ ಸತ್ತು ಹೋಗಿದ್ದಳು. ಮದುವೆಯಾಗಿ ಅವನ ಮನೆಗೆ ಕಾಲಿಟ್ಟ ನನಗೆ ನಾಲ್ಕು ವರ್ಷದ ಗಂಡು ಮಗುವಿನ ಆರೈಕೆ ಮಾಡುವ ಬಾರ ಬಂದು ಬಿತ್ತು. ಆಶ್ಚರ್ಯವೆಂದರೆ ಮದುವೆಯಾದ ಆ ಮನುಷ್ಯನಿಗೆ ಸೆಕ್ಸ್ ಬಗ್ಗೆ ಆಸಕ್ತಿಯೇ ಹೊರಟು ಹೋಗಿತ್ತು. ಒಂದು ದಿನವೂ ಅವನು ನನ್ನ ಜೊತೆ ಮಲಗಲಿಲ್ಲ. ಕೇಳಿದರೆ ನಿನಗೇನೂ ಕಡಿಮೆ ಮಾಡಲ್ಲ, ನನ್ನ ಮಗುವಿಗೆ ತಾಯಿಯಾಗಿರು ಸಾಕು ಅನ್ನುತ್ತಿದ್ದ. ಹೀಗೇ ಎರಡು ವರ್ಷ ಕಳೆದ ಮೇಲೆ ನಾವಿದ್ದ ಹಳೆಯ ಮನೆ ರಿಪೇರಿಗೆ ಅಂತ ಪರವೂರಿಂದ ಆಳುಗಳು ಬಂದರು. ಅವರಿಗೊಬ್ಬ ಮೇಸ್ತ್ರಿ ಇದ್ದ. ಅವನು ನೋಡಲು ಕಟ್ಟುಮಸ್ತಾಗಿ ನಾನು ಪ್ರೀತಿಸಿದ ಹುಡುಗನ ತರಾನೆ ಇದ್ದ. ಅದೇಗೊ ಅವನ ಬಲೆಗೆ ಬಿದ್ದು ಬಿಟ್ಟೆ. ಆಗಾಗ ಹತ್ತಿರ ಬಂದು ಮಾತಾಡಿಸುವುದನ್ನೆಲ್ಲ ಮಾಡುತ್ತಿದ್ದ ಅವನು ಒಂದು ದಿನ ಯಾರೂ ಇಲ್ಲದಾಗ ಬಂದು ನನ್ನ ಜೊತೆ ಬರ್ತೀಯಾ ಮದುವೆಯಾಗೋಣ ಅಂದು ಬಿಟ್ಟ. ಅದ್ಯಾವ ಕೆಟ್ಟಗಳಿಗೆಯೊ ಗೊತ್ತಿಲ್ಲ ಹೂ ಅಂದುಬಿಟ್ಟೆ. ಸರಿ ನಾಲ್ಕೇ ದಿನಕ್ಕೆ ಮನೆಯಲ್ಲಿದ್ದ ಸುಮಾರು ಹಣವನ್ನು ಲಕ್ಷಗಟ್ಟಲೆ ಒಡವೆಯನ್ನೂ ಎತ್ತಿಕೊಂಡು ಅವನ ಜೊತೆ ಓಡಿಹೋದೆ.ತಮಿಳುನಾಡಿನ ಊರೊಂದಕ್ಕೆ ಕರೆದೊಯ್ದ ಅವನು ಒಂದು ಮನೆ ಮಾಡಿ ನನ್ನನ್ನಿಟ್ಟ. ಹಗಲೂ ರಾತ್ರಿ ಅವನ ಜೊತೆ ಕಳಿದದ್ದೇ ಗೊತ್ತಾಗಲಿಲ್ಲ. ಹೀಗೇ ಆರು ತಿಂಗಳು ಕಳೆಯುವಷ್ಟರಲ್ಲಿ ನಾನು ಬಸಿರಾಗಿದ್ದೆ. ಆಗ ಇದ್ದಕ್ಕಿದ್ದಂತೆ ನನಗೆ ಜ್ಞಾನೋದಯವಾದಂತಾಯಿತು. ಅವನಿಗೆ ನನ್ನ ಮದುವೆ ಮಾಡಿಕೊ, ನೀನು ಕೆಲಸ ಮಾಡು ಇಲ್ಲ ಅಂದರೆ ತಂದ ಒಡವೆ ದುಡ್ಡೆಲ್ಲ ಹೀಗೇ ಖಚಾಗಿಬಿಡುತ್ತೆ ಅಂತ ರಂಪಾಟ ಶುರು ಮಾಡಿದೆ. ನೋಡೋಣ ಅನ್ನುತ್ತಲೇ ಮತ್ತೆರಡು ತಿಂಗಳು ಕಳೆದವನಿಗೆ ಒಂದು ದಿನ ತೀರಾ ಕಟುವಾಗಿ ಮಾತನಾಡಿದೆ. ಆಗ ಕೆರಳಿದ ಅವನು ನಿನ್ನ ಯಾಕೆ ಮದುವೆಯಾಗಬೇಕು? ನೀನು ಇನ್ನೊಬ್ಬನ ಜೊತೆ ಓಡಿಹೋಗೋಕಾ ಅಂದುಬಿಟ್ಟ. ನನಗೆ ಶಾಕ್ ಆಯಿತು. ತಿರುಗಿ ಉತ್ತರ ಕೊಟ್ಟಿದ್ದಕ್ಕೆ ನೀನು ನನ್ನ ಸೂಳೆ ಅಷ್ಟೆ ಮುಚ್ಚಿಕೊಂಡಿರು ಅಂತ ನಾಯಿಗೆ ಬಡಿದ ಹಾಗೆ ಬಡಿದು ಮನೆಯಿಂದ ಹೊರಗೆ ಹೊರಟು ಹೋದ. ಹಾಗೆ ಹೋದವನು ನಂತರ ನಾಲ್ಕು ದಿನವಾದರು ಮನೆಗೆ ಬರಲೇ ಇಲ್ಲ. ನನಗೆ ಹೆದರಿಕೆ ಶುರುವಾಯಿತು. ಅದಾಗಲೆ ನನಗೆ ಐದು ತಿಂಗಳು ನಡೆಯುತ್ತಿತ್ತು. ಆಮೇಲೆ ಮನೆಯೆಲ್ಲ ಹುಡುಕಿದರು ನಾನು ತಂದ ದುಡ್ಡಲ್ಲಿ ಒಂದು ರೂಪಾಯಿಯಾಗಲಿ, ಒಡವೆಯ ಒಂದು ಚೂರಾಗಲಿ ಸಿಗಲಿಲ್ಲ. ಸದ್ಯ ನನ್ನ ಮೈಮೇಲೆ ಹಾಕಿಕೊಂಡಿದ್ದ ಒಂದಷ್ಟು ಒಡವೆಗಳು ಹಾಗೇ ಇದ್ದವು. ಮಾರನೇ ದಿನ ಬೆಳಿಗ್ಗೆ ನಾನು ಪಕ್ಕದಲ್ಲೇ ಇದ್ದ ಮನೆ ಓನರ್‍ಗೆ ನನ್ನ ಗಂಡ ಕೆಲಸಕ್ಕೋಸ್ಕರ ಬೆಂಗಳೂರಿಗೆ ಹೋಗಿದ್ದಾನೆ,ಮನೆ ನಿಬಾಯಿಸೋಕೆ ದುಡ್ಡು ಬೇಕಾಗಿತ್ತು ಈ ಬಂಗಾರ ಎಲ್ಲಾದರು ಇಟ್ಟು ದುಡ್ಡು ಕೊಡಿಸೋಕೆ ಆಗುತ್ತಾ ಅಂತ ಅರ್ದಬರ್ದ ತಮಿಳಿನಲ್ಲಿ ಕೇಳಿದಾಗ ಆತ ಆಯಿತು ಅಂತ ಅವನ್ನು ತೆಗೆದುಕೊಂಡ. ಸಾಯಂಕಾಲದ ಹೊತ್ತಿಗೆ ಹಣ ತಂದು ಕೊಟ್ಟ. ಆತ ಮತ್ತು ಆತನ ಹೆಂಡತಿಯ ಸಹಾಯದಿಂದ ಅಲ್ಲೇ ಹೆರಿಗೆಯೂ ಆಯಿತು. ಒಬ್ಬ ಕೆಲದವಳನ್ನು ಇಟ್ಟುಕೊಂಡು ಸುಮಾರು ಐದು ತಿಂಗಳ ಬಾಣಂತನ ಮುಗಿಸಿಕೊಂಡೆ. ಆಮೇಲೊಂದು ದಿನ ಓನರ್‍ಗೆ ಹೇಳದೆ ಒಂದೆರಡು ಜೊತೆ ಬಟ್ಟೆ ತಗೊಂಡು ಆ ಊರು ಬಿಟ್ಟು ಮದ್ರಾಸಿಗೆ ಹೋದೆ. ಅಲ್ಲಿದ್ದ ಯಾವುದೋ ಒಂದು ಅನಾಥಾಶ್ರಮದಲ್ಲಿ ಮಗುವನ್ನು ಬಿಟ್ಟು ನಾನು ಬೆಂಗಳೂರು ಬಸ್ಸು ಹತ್ತಿಬಿಟ್ಟೆ. ಬೆಂಗಳೂರಿಗೆ ಬಂದವಳಿಗೆ ತವರು ಮನೆಯ ಅಮ್ಮ ಅಪ್ಪ, ಗಂಡನ ಮನೆ, ಗಂಡ ಅವನ ಮಗ ನೆನಪಾದರೂ ಅಲ್ಲಿಗೆ ತಿರುಗಿ ಹೋಗುವ ಮುಖವಿರಲಿಲ್ಲ. ಇಪ್ಪತ್ತು ವರ್ಷಕ್ಕೆ ಬದುಕಿನ ಎಲ್ಲ ಏರಿಳಿತಗಳನ್ನೂ ಕಂಡಿದ್ದ ನನಗೆ ಭಯ ಅನ್ನುವುದು ಹೊರಟುಹೋಗಿತ್ತು. ಒಬ್ಬಳೇ ಬೆಂಗಳೂರಿನ ಲಾಡ್ಜೊಂದರಲ್ಲಿ ರೂಮು ಮಾಡಿ ಒಂದು ವಾರ ಅಲ್ಲೇ ಇದ್ದೆ. ಒಬ್ಬಳೇ ಇರುವುದನ್ನು ನೋಡಿದ ಹೋಟೆಲಿನ ಮ್ಯಾನೇಜರ್ ಒಂದು ದಿನ ರೂಮಿಗೆ ಬಂದು ಇದೇ ಹೋಟೆಲಿನ ರೂಮೊಂದರಲ್ಲಿರುವ ಒಬ್ಬರು ನೀವು ಫ್ರೀ ಇದ್ದರೆ ರೂಮಿಗೆ ಬರುವುದಾಗಿ ಹೇಳಿದ್ದಾರೆ ಎಂದು ನೇರವಾಗಿ ಕೇಳಿದ. ಎಲ್ಲ ಭಯ ಮುಜುಗರಗಳನ್ನು ಬಿಟ್ಟು ನಿಂತಿದ್ದ ನಾನು ಈ ಹೋಟೆಲ್ ಬೇಡ ಬೇರೆ ಕಡೆ ರೂಮ್ ಮಾಡುವಂತೆ ಹೇಳು ಬರ್ತೀನಿ ಅಂದು ಕಳಿಸಿದೆ. ಹೇಳಿದಂತೆ ಆ ಗಿರಾಕಿ ಬೇರೊಂದು ಹೋಟೆಲ್ಲಿನಲ್ಲಿ ರೂಮು ಮಾಡಿದ್ದ. ಆ ರಾತ್ರಿ ಅವನೊಂದಿಗೆ ಕಳೆದು ಕೊಟ್ಟ ದುಡ್ಡು ತೆಗೆದುಕೊಂಡು ಬಂದೆ. ನಂತರ ಮ್ಯಾನೇಜರ್ ಗೆ ಅದರಲ್ಲಿ ಒಂದಿಷ್ಟು ಕೊಟ್ಟು ಇದು ನಿನಗೆ, ನನಗೊಂದು ಸಣ್ಣ ಮನೆ ನೋಡು, ನೀನು ಹೇಳಿದಾಗ ಬಂದು ಹೋಗುತ್ತೇನೆಂದು ಒಪ್ಪಂದ ಮಾಡಿಕೊಂಡೆ. ಸರಿ ಮೂರೇ ದಿನದಲ್ಲಿ ಬೆಂಗಳೂರಿನ ಹೊರವಲಯದಲ್ಲಿ ಸಣ್ಣ ಮನೆಯೊಂದನ್ನು ಹುಡುಕಿದ ಜನದಟ್ಟಣೆಯಿರದ ಆ ಮನೆಗೆ ಬೇಕಾದ ವಸ್ತುಗಳನ್ನೆಲ್ಲ ತಂದು ಕೊಂಡೆ. ಒಂದು ರೀತಿಯಲ್ಲಿ ಸಂಸಾರಸ್ಥರ ರೀತಿ ಮನೆಯನ್ನು ಸಜ್ಜುಗೊಳಿಸಿಕೊಂಡೆ. ನಂತರ ಮ್ಯಾನೇಜರ್ ಒಳ್ಳೆಯ ಶ್ರೀಮಂತ ಗಿರಾಕಿ ಇದ್ದಾಗ ಹೇಳಿ ಕಳಿಸೋನು. ನಾನು ಬೇರೆ ಬೇರೆ ಹೋಟೆಲ್ಲುಗಳಲ್ಲಿ ರೂಮ್ ಮಾಡಿಸಿ ಅವರ ಜೊತೆ ಇರುತ್ತಿದ್ದೆ. ಒಂದೆರಡು ವರ್ಷ ಹೀಗೆ ನನ್ನ ಕಸುಬು ಮಾಡುತ್ತಾ ಹೋದೆ . ಈ ಮದ್ಯೆ ಬೆಂಗಳೂರು ನನಗೆ ಚೆನ್ನಾಗಿ ಪರಿಚಯವಾಗಿಬಿಡ್ತು. ಒಂದು ದಿನ ಗಿರಾಕಿಯೊಬ್ಬ ದೊಡ್ಡ ಹೋಟೆಲ್ಲಿನಲ್ಲಿ ರೂಮ್ ಸಿಗಲಿಲ್ಲವೆಂದು ಯಾವುದೊ ಮೂರನೇ ದರ್ಜೆಯ ಹೋಟೆಲ್ಲಿನಲ್ಲಿ ರೂಮ್ ಮಾಡಿದ್ದ. ಅಲ್ಲಿ ಪೋಲಿಸ್ ರೈಡ್ ಆಗಿ ಸಿಕ್ಕಿ ಬಿದ್ದೆ. ಸ್ಟೇಷನ್ನಿನ ಮುದುಕ ಇನ್ಸಪೆಕ್ಟರ್ ಬಹಳ ಒಳ್ಳೆಯವನು,ಮುಂದೆ ಇಂತಾ ಕೆಲಸ ಮಾಡಬೇಡ ಅಂತ ಬುದ್ದಿ ಹೇಳಿ ಕಳಿಸಿದ. ಹಾಗೆ ವಾಪಾಸು ಕಳಿಸುವ ಮುಂಚೆ ನನ್ನ ಜೊತೆ ಒಂದಿಡೀ ರಾತ್ರಿ ಕಳೆದೇ ಕಳಿಸಿದ್ದು.

ನನಗೆ ಗಿರಾಕಿಗಳನ್ನು ಪೂರೈಸುತ್ತಿದ್ದ ಮ್ಯಾನೇಜರ ಒಂದು ದಿನ ಸತ್ತು ಹೋದ. ಆದರೆ ಈಗಾಗಲೆ ನಾನು ನನ್ನದೇ ಆದ ಬೇರೆ ಜನರನ್ನು ಸಂಪಾದಿಸಿದ್ದೆ ಅವರ ಮೂಲಕ ದಂದೆ ನಡೆಸತೊಡಗಿದೆ. ಸ್ವಲ್ಪದಿನಗಳಾದ ಮೇಲೆ ಅನಾಥಾಶ್ರಮದಲ್ಲಿ ಬಿಟ್ಟುಬಂದ ಮಗುವಿನ ನೆನಪಾಗ ತೊಡಗಿತು. ತಡೆಯಲಾರದೆ ಒಂದು ದಿನ ಮದ್ರಾಸಿಗೆ ಹೋಗಿ ವಿಚಾರಿಸಿದೆ. ಅದಕ್ಕವರು ಅದನ್ನು ಯಾರೋ ದತ್ತು ತೆಗೆದುಕೊಂಡಿದ್ದಾರೆ. ಅವರ ವಿಳಾಸ ಕೊಡಲಾಗುವುದಿಲ್ಲವೆಂದು ಹೇಳಿದರು. ಬರಿಗೈಲಿ ವಾಪಾಸಾದೆ. ಯಾಕೊ ಮಗುವನ್ನು ಬಿಟ್ಟುಬಂದ ಪಾಪ ಕಾಡತೊಡಗಿತ್ತು.. ಹೀಗೇ ಬದುಕು ಸಾಗುತ್ತಿರುವಾಗ ಯಾವುದೊ ಹಳ್ಳಿಯಿಂದ ಬೆಂಗಳೂರಿಗೆ ಓಡಿಬಂದ ಹುಡುಗಿಯೊಬ್ಬಳು ಸಿಕ್ಕಿದಳು. ಅವಳನ್ನು ತಂದು ಮನೆಯಲ್ಲಿಟ್ಟುಕೊಂಡೆ. ಹದಿನಾರು ವರ್ಷದ ಅವಳಿಗೆ ಅಪ್ಪ ಅಮ್ಮ ಯಾರೂ ಇರಲಿಲ್ಲ. ನೆಂಟರ ಮನೆಯಲ್ಲಿದ್ದವಳು, ಅವರ ಕಾಟ ತಡೆಯಲಾರದೆ ಓಡಿ ಬಂದಿದ್ದಳು. ಸತ್ಯ ಹೇಳ್ತೀನಿ ಅವಳನ್ನು ದಂದೆಗೆ ಇಳಿಸೋದಿರಲಿ ನಾನೇನು ಮಾಡ್ತೀನಿ ಅನ್ನೋದು ಸಹ ಗೊತ್ತಾಗದ ಹಾಗೆ ನೋಡಿಕೊಂಡೆ. ಐದು ವರ್ಷ ನನ್ನ ಜೊತೆಗಿದ್ದ ಅವಳು ಟೈಲರಿಂಗ್ ಕಲಿತಳು. ಕೊನೆಗೆ ಆಗತಾನೇ ಶುರುವಾಗಿದ್ದ ಗಾರ್ಮೆಂಟ್ಸ್ ಒಂದಕ್ಕೆ ಸೇರಿಕೊಂಡಳು. ಅವಳು ನನ್ನನ್ನು ಚಿಕ್ಕಮ್ಮ ಅಂತ ಕರೀತೀದ್ದಳು. ಕೊನೆಗೊಂದು ದಿನ ಅದೇ ಗಾರ್ಮೆಂಟ್ಸಲ್ಲಿ ಕೆಲಸ ಮಾಡೋ ಹುಡುಗನ್ನ ಇಷ್ಟಪಟ್ಟು ನನಗೆ ಹೇಳಿದಳು. ಹುಡುಗಾನು ಹಳ್ಳಿಯವನು, ಅನಾಥ. ನಾನೇ ನಿಂತು ಮದುವೆ ಮಾಡಿಸಿದೆ. ಅಷ್ಟು ವರ್ಷ ನಾನು ಕೂಡಿಟ್ಟಿದ್ದ ದುಡ್ಡನ್ನೆಲ್ಲ ಅವಳ ಮದುವೆಗೆ ಖರ್ಚು ಮಾಡಿದೆ. ಆಮೇಲವರ ಒತ್ತಾಯದ ಮೇರೆಗೆ ಅವರ ಮನೆಯಲ್ಲೇ ಇರತೊಡಗಿದೆ. ಈಗವರಿಗೆ ಇಬ್ಬರು ಹೆಣ್ಣಮಕ್ಕಳು. ನೆಮ್ಮದಿಯಾಗಿದ್ದಾರೆ. ಆಮೇಲೊಂದು ದಿನ ಹುಡುಗನಿಗೆ ನನ್ನ ನಿಜವಾದ ಕಸುಬು ಗೊತ್ತಾಗಿ ಗಲಾಟೆ ಮಾಡಿದ. ಹುಡುಗಿ ನನ್ನ ಸಪೋರ್ಟಿಗೆ ನಿಂತಳು. ಇನ್ನು ನನ್ನಿಂದ ಅವರ ಸಂಸಾರಕ್ಕೆ ತೊಂದರೆಯಾಗೋದು ಬೇಡವೆಂದು ನಾನು ಅವರಿಗೆ ಹೇಳದೆ ಕೇಳದೆ ಬೆಂಗಳೂರು ಬಿಟ್ಟೆ. ಈ ಊರಿಗೆ ಬರುವಷ್ಟರಲ್ಲಿ ನನಗೆ ಗುಣವಾಗದ ಕಾಯಿಲೆಗಳೆಲ್ಲ ಶುರುವಾಗಿದ್ದವು. ಕೈಲಿ ಮುಂಚಿನ ಹಾಗೆ ದುಡ್ಡಿರಲಿಲ್ಲ. ಮೈಲಿ ಶಕ್ತಿಯೂ ಇರಲಿಲ್ಲ. ಒಂದು ದಿನ ಹೊಟ್ಟೆ ಹಸಿದುಕೊಂಡು ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ಕೂತಿರುವಾಗ ಯಾರೋ ಭಕ್ತರು ಬಿಕ್ಷುಕಿ ಇರಬೇಕು ಅಂತ ತಮ್ಮ ಕೈಲಿದ್ದ ಪ್ರಸಾದ ಮತ್ತು ಚಿಲ್ಲರೆ ಕಾಸು ಹಾಕಿ ಹೋದರು. ಸರಿ ಆಮೇಲಾಮೇಲೆ ಆ ದೇವಸ್ಥಾನವೇ ನನ್ನ ಮನೆಯಾಗಿಬಿಟ್ಟಿತು. ಹಗಲು ಹೊತ್ತು ಹೊರಗೆ ಕೂತರೆ ಸಾಕು ಒಂದಷ್ಟು ಚಿಲ್ಲರೇ ಕಾಸು ಮಡಿಲಿಗೆ ಬಂದು ಬೀಳುತ್ತೆ. ದಿನಾ ಬೇರೆ ಬೇರೆ ರೀತಿಯ ಪ್ರಸಾದ ಕೊಡ್ತಾರೆ. ಸಂಜೆ ಭಜನೆಯಲ್ಲಿ ನಾನು ಹೊರಗೆ ಕೂತೆ ಹಾಡ್ತೀನಿ. ಇವತ್ತಿನವರೆಗು ದೇವಸ್ಥಾನದ ಒಳಗೆ ಹೋಗಿಲ್ಲ. ನಾನು ಯಾವಾಗ ಬೇಕಾದರು ಸಾಯಬಹುದು. ಒಳಗಿರುವ ದೇವರು ಯಾವಾಗ ಕರೆದುಕೊಳ್ತಾನೊ ಅಂತ ಕಾಯ್ತಾ ಇದೀನಿ. ಆದರೆ ನನ್ನಂತವರಿಗೆ ಅಷ್ಟು ಸುಲಭವಾಗಿ ದೇವರು ಮುಕ್ತಿ ಕೊಡ್ತಾನಾ ಸಾರ್. ತಪ್ಪು ಮಾಡಿದೆ ಅನಿಸುತ್ತೆ ಸಾರ್. ಆದರೆ ತಪ್ಪು ಯಾರು ಮಾಡಲ್ಲ ಹೇಳಿ? ಆದರೆ ಶಿಕ್ಷೆ ಮಾತ್ರ ಒಬ್ಬರಿಗೇ ಯಾಕೆ ಆಗ್ಬೇಕು ಹೇಳಿ?

ಉತ್ತರ ನನಗಿರಲಿ ಬಹುಶ: ಆ ದೇವರಿಗೂ ಗೊತ್ತಿರಲಿಕ್ಕಿಲ್ಲವೆನಿಸಿತು!

No comments:

Post a Comment