ಅಕ್ಟೋ 15, 2019

‘ಅಸುರನ್’: ಸಹಜತೆಗೆ ಹತ್ತಿರವಿರುವ ಒಳ್ಳೆಯ ಪ್ರಯತ್ನದ ಚಲನಚಿತ್ರ

ನಂದಕುಮಾರ್ ಕೆ ಎನ್. ಕುಂಬ್ರಿಉಬ್ಬು
ಅಸುರನ್ ಇಂದಿನ ದಿನಗಳಲ್ಲಿ ಬಂದಿರುವ ವಿರಳ ಚಿತ್ರಕಥೆ ಹೊಂದಿರುವ ಸಿನಿಮಾ. ವೆಟ್ರಿಮಾರನ್ ಇದರ ನಿರ್ದೇಶಕ. ಒಳ್ಳೆಯ ಛಾಯಾಗ್ರಹಣ, ಒಳ್ಳೆಯ ದೃಶ್ಯಸಂಯೋಜನೆ. ಚಿತ್ರದಲ್ಲಿ ಸಹಜತೆ ಹೆಚ್ಚು ಇದೆ.. ಪರವಾಗಿಲ್ಲ ಎನ್ನಬಹುದಾದ ಸಂಗೀತವಿದೆ.

ತಮಿಳಿನ ಧನುಷ್ ಹಾಗೂ ಮಲೆಯಾಳಂ ನ ಮಂಜು ವಾರಿಯರ್ ಮುಖ್ಯ ತಾರಾಗಣದಲ್ಲಿರುವ ಈ ಸಿನಿಮಾ ಜಾತೀಯತೆಯ ಮನಸುಗಳು ಹಾಗೂ ಕ್ರೌರ್ಯಗಳ ಕೆಲವು ಮುಖಗಳನ್ನು ಅನಾವರಣಗೊಳಿಸುತ್ತದೆ. ಕಥಾನಾಯಕನ ಕುಟುಂಬದ ಸುತ್ತಾ ಈ ಕಥೆಯನ್ನು ಹೆಣೆಯಲಾಗಿದೆ. ತಮಿಳಿನ ಪೂಮಣಿ ಬರೆದ ವೆಕೈ ಎಂಬ ಕಾದಂಬರಿ ಆದಾರಿತ ಚಿತ್ರವಿದು.

ಧನುಷ್ ರ ಅಭಿನಯ ಚೆನ್ನಾಗಿದೆ. ಎಲ್ಲಾ ಪಾತ್ರಧಾರಿಗಳು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ.

ಆರಂಭದ ಅಂದರೆ ಫ್ಲಾಶ್ ಬ್ಯಾಕ್ ಬರುವವರೆಗೂ ಚಿತ್ರದಲ್ಲಿ ಬಿಗಿತನ ಕಾಣುವುದಿಲ್ಲ. ಆ ಸನ್ನಿವೇಶಗಳಿಗೆ ತಕ್ಕಂತಹ ಭಾವಗಳನ್ನು, ಗಾಢತೆಗಳನ್ನು ವೀಕ್ಷಕರಿಗೆ ಮೂಡಿಸುವಲ್ಲಿ ಯಶಸ್ಸು ಕಾಣುವುದಿಲ್ಲ. ನಂತರದ ಚಿತ್ರ ನಿರ್ದೇಶಕರ ಹಿಡಿತ, ಪಾತ್ರಧಾರಿಗಳ ಅಭಿನಯ ಗಾಢತೆಯನ್ನು ಸನ್ನಿವೇಶಗಳನ್ನು ವೀಕ್ಷಕರಿಗೆ ಗಾಢವಾಗಿ ತಟ್ಟುವಂತೆ ಕಥೆಯನ್ನು ನಿರೂಪಿಸುತ್ತಾ ಹೋಗುತ್ತದೆ.

ಮೇ 18, 2019

ಅವಿಸ್ಮರಣೀಯ ಅರುಣಾಚಲ ಅದರ ಚಿತ್ರ -ವಿಚಿತ್ರ ಇತಿಹಾಸ: ಪುಸ್ತಕ ವಿಮರ್ಶೆ

ನಂದಕುಮಾರ್. ಕೆ. ಎನ್
ಅರುಣಾಚಲ ಪ್ರದೇಶ ಈಗ ಭಾರತದ ಅಂಗವನ್ನಾಗಿಯೇ ನೋಡಲಾಗುತ್ತಿದೆ. ಆದರೆ ಚೀನ ಅದನ್ನು ಈಗಲೂ ಮಾನ್ಯ ಮಾಡಿಲ್ಲ. ಅದರ ಬಗ್ಗೆ ವಿವಾದಗಳು ಈಗಲೂ ಭಾರತ, ಚೀನ ನಡುವೆ ಇವೆ. ಅರುಣಾಚಲ ಪ್ರದೇಶವನ್ನು ಭಾರತದ ಭಾಗವಾಗಿಸುವ ಪ್ರಕ್ರಿಯೆಗಳು ಬ್ರಿಟೀಷ್ ಭಾರತದಲ್ಲೇ ಶುರುವಾಗಿದ್ದವು. ಆದರೆ ಅದಕ್ಕೆ ಅಲ್ಲಿನ ಸ್ಥಳೀಯ ಸ್ವಯಂಮಾಡಳಿತ ಗಣ ವ್ಯವಸ್ಥೆಯ ಬುಡಕಟ್ಟು ಗುಂಪುಗಳು ಪ್ರಬಲವಾದ ಪ್ರತಿರೋಧ ಒಡ್ಡಿದ್ದವು. ಅವರು ಅನುಮತಿಸದೇ ಅವರ ಪ್ರದೇಶದೊಳಕ್ಕೆ ಯಾರೂ ಹೋಗುವಂತಿರಲಿಲ್ಲ. ಹೋದವರು ಜೀವಂತವಾಗಿ ವಾಪಾಸು ಬರಲಾಗುತ್ತಿರಲಿಲ್ಲ. ಬ್ರಿಟೀಷ್ ಅಧಿಕಾರಿಯೊಬ್ಬ ಆ ಪ್ರದೇಶವನ್ನು ಗ್ರಹಿಸಿ ಬ್ರಿಟೀಷ್ ಭಾರತದ ಭಾಗವಾಗಿಸಿಕೊಳ್ಳುವ ಇರಾದೆಯಿಂದ ಯಾವುದೇ ಅನುಮತಿ ಇಲ್ಲದೇ ಅಲ್ಲಿಗೆ ತೆರಳಿ ಸಾವಿಗೀಡಾಗಿದ್ದು ಬ್ರಿಟೀಷ್ ಆಡಳಿತವನ್ನು ಕೆರಳಿಸಿತ್ತು. ಆ ಪ್ರದೇಶವನ್ನು ಕೈವಶ ಮಾಡಿಕೊಳ್ಳುವ ಪ್ರಕ್ರಿಯೆಗಳು ಅಲ್ಲಿಂದ ಚುರುಕುಗೊಂಡವು ಎಂದು ಹೇಳಬಹುದು. ಅಲ್ಲಿ ಸ್ವಾಯತ್ತ ಗಣ ವ್ಯವಸ್ಥೆಯಿರುವ ಬುಡಕಟ್ಟುಗಳು ಸ್ವಯಂಪೂರ್ಣವಾಗಿ ಜೀವನ ಕಟ್ಟಿಕೊಂಡಿದ್ದರೂ ಆ ಪ್ರದೇಶದ ಮೇಲೆ ಚೀನ ಹಾಗೂ ಟಿಬೆಟ್ ನ ಹಿತಾಸಕ್ತಿಗಳೂ ಇದ್ದವು. ಟಿಬೆಟ್ ನಂತರ ಚೀನಾದ ಪ್ರದೇಶವಾಯಿತು. ಇದರ ಮಧ್ಯೆ ಆ ಪ್ರದೇಶದ ಬುಡಕಟ್ಟು ಜನರ ಅಭಿಪ್ರಾಯಗಳಿಗೆ ಯಾವುದೇ ಬೆಲೆ ನೀಡಲಿಲ್ಲ. ಹಾಗಾಗಿ ಆ ಸಮುದಾಯಗಳಲ್ಲಿ ಹಲವು ಈಗಲೂ ಭಾರತವನ್ನೂ ಅಂಗೀಕರಿಸಲಾಗದಂತಹ ಸ್ಥಿತಿಯಲ್ಲಿಯೇ ಇವೆ.