ಸೆಪ್ಟೆಂ 7, 2016

ರಿಲಾಯನ್ಸ್ ಜಿಯೋ - ಹುಸಿಯಾದ ನಿರೀಕ್ಷೆ

ಆನಂದ ಪ್ರಸಾದ್

07/09/2016

ಕಳೆದ ಕೆಲವು ತಿಂಗಳುಗಳಿಂದ ಭಾರೀ ನಿರೀಕ್ಷೆ ಮೂಡಿಸಿದ್ದ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ಕೊನೆಗೂ ತನ್ನ ವಾಣಿಜ್ಯ ಸೇವೆಯನ್ನು ಸೆಪ್ಟೆಂಬರ್ 5ರಿಂದ ಆರಂಭಿಸಿದೆ. ರಿಲಾಯನ್ಸ್ ಜಿಯೋ ತನ್ನ ವೆಬ್ಸೈಟಿನಲ್ಲಿ ಕೊಟ್ಟಿರುವ ಪ್ಲಾನ್, ಡಾಟಾ ದರಗಳನ್ನು ಪರಿಶೀಲಿಸಿದಾಗ ನರೇಂದ್ರ ಮೋದಿಯವರ 'ಡಿಜಿಟಲ್ ಇಂಡಿಯಾ' ಘೋಷಣೆ ಸಾಕಾರವಾಗುವ ಸಂಭವ ಕಡಿಮೆ. ಏಕೆಂದರೆ ಡಾಟಾ ದರಗಳು ಸಾಮಾನ್ಯ ಗ್ರಾಹಕನಿಗೆ ಅನುಕೂಲಕರವಾಗಿ ಇಲ್ಲ. 149 ರೂಪಾಯಿಗಳಿಗೆ 28 ದಿನಗಳ ಅವಧಿಗೆ 300 ಎಂಬಿ ಡಾಟಾ ಹಾಗೂ ಉಚಿತ ದೇಶೀಯ ಕರೆ ರೋಮಿಂಗ್ ವೆಚ್ಚವಿಲ್ಲದೆ ಹಾಗೂ ದಿನಕ್ಕೆ 100 ಎಸ್ಸೆಮ್ಮೆಸ್ ಕೊಡುಗೆ ನೀಡಿದೆ. ಉಚಿತ ಕರೆ ಮಾಡಬೇಕಿದ್ದರೆ ಗ್ರಾಹಕ 4ಜಿ ಮೊಬೈಲ್ ಹೊಂದಿರಬೇಕು. ಹೀಗಾಗಿ 2ಜಿ ಅಥವಾ 3ಜಿ ಮೊಬೈಲ್ ಹೊಂದಿರುವ ಸಾಮಾನ್ಯ ಗ್ರಾಹಕ ರಿಲಾಯನ್ಸ್ ಜಿಯೋ 4ಜಿಗೆ ಬದಲಾಗಲು ಕನಿಷ್ಠ 3000 ರೂಪಾಯಿಗಳನ್ನು ವ್ಯಯಿಸಬೇಕು. ಇದು 4ಜಿ ಸೌಲಭ್ಯವುಳ್ಳ ರಿಲಾಯನ್ಸ್ ಫ್ಲೇಮ್ ಬ್ರಾಂಡಿನ ಅತಿ ಕಡಿಮೆ ದರದ ಮೊಬೈಲ್ ಆಗಿದೆ. ಇನ್ನೂ ಹೆಚ್ಚಿನ ಸೌಲಭ್ಯವುಳ್ಳ 4ಜಿ ಮೊಬೈಲ್ ಬೇಕಿದ್ದರೆ 7,000ದಿಂದ 10,000 ರೂಪಾಯಿ ತೆರಬೇಕು. ಇಷ್ಟು ಹಣ ಖರ್ಚು ಮಾಡಿ ರಿಲಾಯನ್ಸ್ ಜಿಯೋ 4ಜಿ ನೆಟ್ವರ್ಕಿಗೆ ಬದಲಾಯಿಸಿಕೊಳ್ಳಲು ಸಾಮಾನ್ಯ ಭಾರತೀಯ ಗ್ರಾಹಕರು ಹಿಂದೇಟು ಹಾಕುತ್ತಾರೆ. ಏಕೆಂದರೆ ಭಾರತೀಯರು ಈಗಾಗಲೇ ಉತ್ತಮ ಸ್ಥಿತಿಯಲ್ಲಿರುವ 2ಜಿ/3ಜಿ ಮೊಬೈಲ್ ಫೋನ್ ಅನ್ನು ತ್ಯಜಿಸಿ ಹೊಸದನ್ನು ಕೊಳ್ಳುವ ಪ್ರವೃತ್ತಿಯನ್ನು ಹೊಂದಿಲ್ಲ. ತಮ್ಮ 2ಜಿ/3ಜಿ ಮೊಬೈಲ್ ಫೋನ್ ಹಾಳಾದ ನಂತರವೇ ಸಾಮಾನ್ಯ ಜನರು ಹೊಸ ಮೊಬೈಲ್ ಕೊಳ್ಳುವ ಬಗ್ಗೆ ಯೋಚಿಸುತ್ತಾರೆ. ಏಕೆಂದರೆ ಜನಸಾಮಾನ್ಯರ ಆದಾಯ ಮಟ್ಟವು ಕಡಿಮೆ ಇರುತ್ತದೆ. ಇದರಿಂದಾಗಿ ರಿಲಾಯನ್ಸ್ ಜಿಯೋ ಉಚಿತ ಕರೆ ರೋಮಿಂಗ್ ಸಹಿತ, ಉಚಿತ ಎಸ್ಸೆಮ್ಮೆಸ್ ದಿನಕ್ಕೆ 100 ಕೊಡುಗೆ ನೀಡಿದರೂ ಇದಕ್ಕೆ ಬದಲಾಗಲು ಸಾಕಷ್ಟು ಸಮಯ ಹಿಡಿಯಬಹುದು.

ಆಗ 24, 2016

ನಿಜವಾದ ದೇಶದ್ರೋಹದ ಬಗ್ಗೆ ಮೌನವೇಕೆ?

ಆನಂದ ಪ್ರಸಾದ್
24/08/2016
ಬೆಂಗಳೂರಿನಲ್ಲಿ ಆಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆಯವರು ಏರ್ಪಡಿಸಿದ ಕಾರ್ಯಕ್ರಮವೊಂದರಲ್ಲಿ ಕೆಲವರು ದೇಶದ್ರೋಹದ ಘೋಷಣೆ ಕೂಗಿದರೆಂದು ಎಬಿವಿಪಿ (ಅಖಿಲ ಭಾರತ ವಿದ್ಯಾರ್ಥಿ ಪರಿಷತ್) ಕಾರ್ಯಕರ್ತರು ರಾಜ್ಯದಲ್ಲಿ ಭಾರೀ ರಾದ್ಧಾಂತವನ್ನೇ ಸೃಷ್ಟಿಸಲು ಯತ್ನಿಸಿದರು. ಆಮ್ನೆಸ್ಟಿ ಕಾರ್ಯಕ್ರಮದಲ್ಲಿ ದೇಶದ್ರೋಹವೆನಿಸುವ ಯಾವ ಘೋಷಣೆ ಕೂಗಲಾಯಿತು ಎಂಬ ಬಗ್ಗೆ ಮಾಧ್ಯಮಗಳಲ್ಲಿ ಏನೂ ಮಾಹಿತಿ ಅಥವಾ ವಿಡಿಯೋ ದೃಶ್ಯಾವಳಿ ಕಂಡುಬರಲಿಲ್ಲ. ಹೀಗಿದ್ದರೂ ಎಬಿವಿಪಿ ಕಾರ್ಯಕರ್ತರು ರಾದ್ಧಾಂತ ಎಬ್ಬಿಸಿದ್ದು ರಾಜಕೀಯಕ್ಕೆ ಹೊರತು ಮತ್ತೇನೂ ಅಲ್ಲ ಎಂಬುದು ಕಂಡುಬರುತ್ತದೆ. ಒಂದು ಘೋಷಣೆ ಕೂಗಿದ ಕೂಡಲೇ ದೇಶದ್ರೋಹ ಎಂದು ಹೇಳುವವರು ನಮ್ಮ ದೇಶದಲ್ಲಿ ದಿನನಿತ್ಯವೂ ನಡೆಯುತ್ತಿರುವ ನಿಜವಾದ ದೇಶದ್ರೋಹದ ಬಗ್ಗೆ ಯಾಕೆ ಚಕಾರ ಎತ್ತುತ್ತಿಲ್ಲ ಎಂಬ ಬಗ್ಗೆ ಜನಸಾಮಾನ್ಯರು ವಿಚಾರ ಮಾಡಬೇಕಾಗಿದೆ.

ನಮ್ಮದೇ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ಸರ್ಕಾರೀ ನೌಕರರು/ಅಧಿಕಾರಿಗಳು ನಮ್ಮ ನ್ಯಾಯಬದ್ಧ ಕೆಲಸಗಳನ್ನು ಶೀಘ್ರವಾಗಿ ಮಾಡಿಕೊಡದೇ ಸತಾಯಿಸುವುದು ದೇಶದ್ರೋಹವಲ್ಲವೇ? ಇವರನ್ನು ಬಂಧಿಸಬೇಕು ಹಾಗೂ ಜನರ ಕೆಲಸಗಳನ್ನು ಶೀಘ್ರವಾಗಿ ಮಾಡಿಕೊಡಬೇಕೆಂದು ದೇಶದ್ರೋಹದ ಬಗ್ಗೆ ರಾದ್ಧಾಂತ ಎಬ್ಬಿಸುವವರು ಯಾಕೆ ಧ್ವನಿ ಎತ್ತುವುದಿಲ್ಲ? ರಾಜಕಾರಣಿಗಳು, ರಾಜಕೀಯ ಪಕ್ಷಗಳು ಕಾಮಗಾರಿಗಳಲ್ಲಿ ಕಮಿಷನ್ ಪಡೆಯುವುದು ದೇಶದ್ರೋಹವಲ್ಲವೇ? ಇಂಥ ಕೃತ್ಯ ನಡೆಸುವವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡುವವರು ಯಾರಾದರೂ ಇದ್ದಾರೆಯೇ? ರಾಜಕೀಯ ಪಕ್ಷಗಳು ಬಹುಮತಕ್ಕಾಗಿ ಶಾಸಕರ ಕುದುರೆ ವ್ಯಾಪಾರ ಮಾಡುವುದು ದೇಶದ್ರೋಹವಲ್ಲವೇ? ಆಪರೇಷನ್ ಕಮಲ ಎಂಬ ಹೆಸರಿನಲ್ಲಿ ಬೇರೆ ಪಕ್ಷದ ಶಾಸಕರಿಂದ ರಾಜೀನಾಮೆ ಕೊಡಿಸಿ ಮರುಚುನಾವಣೆ ಹೇರುವುದು ದೇಶದ್ರೋಹವಲ್ಲವೇ? ಗಣಿಧಣಿಗಳಿಂದ ಯಥೇಚ್ಛ ಹಣ ಪಡೆದು ಅಕ್ರಮ ಗಣಿಗಾರಿಕೆಗೆ ಸ್ವಚ್ಛಂದ ಅವಕಾಶ ಕೊಡುವುದು ದೇಶದ್ರೋಹವಲ್ಲವೇ? ದೇಶದಲ್ಲಿ ಹಾಗೂ ವಿದೇಶಗಳಲ್ಲಿ ಕಪ್ಪು ಹಣ ಸಂಗ್ರಹಿಸಿ ಅದರ ಬಲದಿಂದ ಮಾಡಬಾರದ ಅಕ್ರಮ ವ್ಯವಹಾರ, ರಾಜಕೀಯವನ್ನು ಹೊಲಸೆಬ್ಬಿಸುವುದು ದೇಶದ್ರೋಹವಲ್ಲವೇ? ಕಾಳಸಂತೆಯಲ್ಲಿ ಸರಕುಗಳನ್ನು, ಆಹಾರ ಧಾನ್ಯಗಳನ್ನು, ಬೇಳೆಕಾಳುಗಳನ್ನು ಅಡಗಿಸಿಟ್ಟು ಹೆಚ್ಚು ಲಾಭಕ್ಕೆ ಮಾರುವವರು ದೇಶದ್ರೋಹಿಗಳಲ್ಲವೇ? ಇದರ ಬಗ್ಗೆ ಧ್ವನಿ ಎತ್ತುವವರು ಯಾರಾದರೂ ಇದ್ದಾರೆಯೇ?

ಲೋಕಾಯುಕ್ತ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಎಲ್ಲ ರಾಜಕೀಯ ಪಕ್ಷಗಳು ಪ್ರಯತ್ನಿಸುವಾಗ ಅದನ್ನು ಪ್ರತಿಭಟಿಸಲು ನಮ್ಮ ಸಂಘಟನೆಗಳಿಗೆ ವೀರಾವೇಶ ಬಂದದ್ದು ಕಾಣಲಿಲ್ಲ. ಲೋಕಸೇವಾ ಆಯೋಗಕ್ಕೆ ಭ್ರಷ್ಟರ ನೇಮಕ ಮಾಡಿ ಇಡೀ ವ್ಯವಸ್ಥೆಯ ಉಗಮ ಸ್ಥಾನವನ್ನೇ ಕುಲಗೆಡಿಸಿದ ರಾಜ್ಯ ಸರ್ಕಾರದ ನಿರ್ಧಾರ ದೇಶದ್ರೋಹವಲ್ಲವೇ? ಇದನ್ನು ತಡೆಯಬೇಕೆಂದು ರಾದ್ಧಾಂತ ಎಬ್ಬಿಸಲು ಯಾರೂ ಇಲ್ಲ. ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳು ನ್ಯಾಯಾಧೀಶರ ನೇಮಕ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಕಣ್ಣೀರು ಹಾಕಿ ಕೇಳಿಕೊಂಡರೂ ಸರ್ಕಾರ ನ್ಯಾಯಾಧೀಶರ ನೇಮಕಕ್ಕೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ದೇಶದ್ರೋಹವಲ್ಲವೇ? ಲೋಕಪಾಲ್ ವ್ಯವಸ್ಥೆ ತರಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಕಾಲಹರಣ ಮಾಡುತ್ತಿರುವುದು ದೇಶದ್ರೋಹವಲ್ಲವೇ? ಇದರ ಬಗ್ಗೆ ಪ್ರಶ್ನಿಸಲು ಎಬಿವಿಪಿಯವರಿಗೆ ಧೈರ್ಯ ಇಲ್ಲವೇ? ಈ ದೇಶವನ್ನು ಹಾಳುಗೆಡಹುತ್ತಿರುವ ರಾಜಕೀಯ ಪಕ್ಷಗಳೇ ಅತಿ ದೊಡ್ಡ ದೇಶದ್ರೋಹಿಗಳು ಏಕೆಂದರೆ ಚುನಾವಣಾ ಸುಧಾರಣೆ ಬಗ್ಗೆ, ಆಡಳಿತ ಸುಧಾರಣೆ ಬಗ್ಗೆ ಕ್ರಮ ಕೈಗೊಳ್ಳುವ ಅಧಿಕಾರ ಇವರಿಗೆ ಸಂವಿಧಾನಬದ್ಧವಾಗಿ ಲಭ್ಯವಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ನಮ್ಮ ದೇಶವು ಎಲ್ಲ ಕ್ಷೇತ್ರಗಳಲ್ಲಿಯೂ ಹಿಂದುಳಿಯುವಂತೆ ಮಾಡಿರುವುದು ಇವರ ಸಾಧನೆ.

ಎಬಿವಿಪಿಯಂಥ ಸಂಘಟನೆಗಳಿಗೆ ನಮ್ಮ ದೇಶದ ನಿಜವಾದ ಶತ್ರುಗಳು ನಮ್ಮದೇ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಎಂಬುದು ತಿಳಿಯದೆ ಇರುವುದು ಅಥವಾ ತಿಳಿದಿದ್ದರೂ ನಿಜವಾದ ದೇಶದ್ರೋಹದ ವಿರುದ್ಧ ಪ್ರತಿಭಟಿಸದೇ ಇರುವುದು ವಿಪರ್ಯಾಸ. ಭ್ರಷ್ಟಾಚಾರ, ಅಸ್ಪೃಶ್ಯತೆ, ಧರ್ಮ ಹಾಗೂ ದೇವರ ಹೆಸರಿನಲ್ಲಿ ರಾಜಕೀಯ ಮಾಡುವುದು, ಜಾತಿಯ ಹೆಸರಿನಲ್ಲಿ ರಾಜಕೀಯ ಮಾಡುವುದು, ಓಟಿಗಾಗಿ ನೋಟು ಕೊಡುವುದು ಹಾಗೂ ಪಡೆಯುವುದು ಇವೆಲ್ಲವೂ ನಿಜವಾಗಿ ದೇಶದ್ರೋಹಗಳೇ. ಇವುಗಳು ಯಾರೋ ಕೆಲವು ವ್ಯಕ್ತಿಗಳು ಕೂಗಿದ ಘೋಷಣೆಗಳಿಗಿಂತ ದೇಶಕ್ಕೆ ಹೆಚ್ಚು ಮಾರಕ. ವಿದ್ಯಾರ್ಥಿ ಸಮುದಾಯ ನಿಜವಾದ ದೇಶದ್ರೋಹಿಗಳ ಬಗ್ಗೆ ಆಲೋಚಿಸದೆ ರಾಜಕೀಯ ಪಕ್ಷಗಳ ಘಟಕಗಳಾಗಿ ರಾಜಕೀಯ ಕಾರ್ಯಸೂಚಿಯ ಅನುಸಾರವಾಗಿ ಪ್ರತಿಭಟನೆ ಮಾಡುವುದರಿಂದ ದೇಶಕ್ಕೆ ಯಾವುದೇ ಪ್ರಯೋಜನ ಇಲ್ಲ. ವಿದ್ಯಾರ್ಥಿಗಳು ರಾಜಕೀಯರಹಿತವಾಗಿ ಪ್ರತಿಭಟನೆಗಳಲ್ಲಿ ತೊಡಗಿಕೊಂಡರೆ ಮಾತ್ರ ದೇಶಕ್ಕೆ ಏನಾದರೂ ಒಳಿತಾಗಬಹುದೇ ವಿನಃ ರಾಜಕೀಯ ಪಕ್ಷಗಳ ಕಾರ್ಯಸೂಚಿಯ ದಾಳಗಳಾಗಿ ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುವುದು, ವಿದ್ಯಾರ್ಥಿಗಳಲ್ಲಿ ರಾಜಕೀಯದ ಹೆಸರಿನಲ್ಲಿ ಒಡಕು ಉಂಟಾಗುವುದು ದೇಶಕ್ಕೆ ಮಾರಕ. ನಮ್ಮ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಸ್ವತಂತ್ರವಾಗಿ ಚಿಂತಿಸುವುದನ್ನು ಕಲಿಯಬೇಕು. ಇಲ್ಲದೇ ಹೋದರೆ ದೇಶದ ಭವಿಷ್ಯ ಉತ್ತಮವಾಗಲಾರದು.

ಆಗ 17, 2016

ಡಿಜಿಟಲ್ ಇಂಡಿಯಾ - ಘೋಷಣೆಗೆ ಮಾತ್ರ ಸೀಮಿತ

ಸಾಂದರ್ಭಿಕ ಚಿತ್ರ
ಆನಂದ ಪ್ರಸಾದ್
17/08/2016
ಭಾರತದಲ್ಲಿ ಅಂತರ್ಜಾಲ ಮೂಲಕ ವಿವಿಧ ಸೇವೆ, ಮನರಂಜನೆ, ಆರೋಗ್ಯ, ಶಿಕ್ಷಣ ನೀಡುವ ಮೋದಿಯವರ ಡಿಜಿಟಲ್ ಇಂಡಿಯಾ ಯೋಜನೆ ಕೇವಲ ಘೋಷಣೆಗೆ ಸೀಮಿತವಾಗಿದೆ. ಭಾರತವು ತನ್ನ ಜನಸಂಖ್ಯೆಯ 34% ಶೇಕಡಾ ಜನರಿಗೆ ಮಾತ್ರ ಅಂತರ್ಜಾಲ ಸೌಲಭ್ಯ ಒದಗಿಸಲು ಶಕ್ತವಾಗಿದೆ. ಉಳಿದ 66% ಶೇಕಡಾ ಜನ ಅಂತರ್ಜಾಲ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಏಷಿಯಾ -ಪ್ಯಾಸಿಫಿಕ್ ವಲಯದಲ್ಲಿ ಭಾರತವು ಅತ್ಯಂತ ಕಡಿಮೆ ವೇಗದ ಅಂತರ್ಜಾಲ ಸೌಲಭ್ಯ ನೀಡುವ ದೇಶ ಎನಿಸಿಕೊಂಡಿದೆ. ಮೋದಿಯವರ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷಗಳೇ ಉರುಳಿದರೂ ಭಾರತದ ಗ್ರಾಮೀಣ ಭಾಗಗಳಲ್ಲಿ ಅಂತರ್ಜಾಲ ಸೌಲಭ್ಯ ಲಭ್ಯತೆಯಲ್ಲಿ ಯಾವುದೇ ಸುಧಾರಣೆಯೂ ಆಗಿಲ್ಲ. ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಬಹುತೇಕ ತೆವಳುವ ವೇಗದ 2ಜಿ ಮೊಬೈಲ್ ಇಂಟರ್ನೆಟ್ ಮಾತ್ರ ಲಭ್ಯವಿದೆ. ಭಾರತದ ನಗರಗಳು 4ಜಿ ಮೊಬೈಲ್ ಇಂಟರ್ನೆಟ್ ಸೌಲಭ್ಯವನ್ನು ಪಡೆಯುತ್ತಿರುವಾಗ ಗ್ರಾಮೀಣ ಭಾಗಗಳು ಇಂದಿಗೂ ತೆವಳುವ ವೇಗದ 2ಜಿ ಮೊಬೈಲ್ ಇಂಟರ್ನೆಟ್ ಪಡೆಯುತ್ತಾ ನಗರ ಹಾಗೂ ಹಳ್ಳಿಗಳ ಡಿಜಿಟಲ್ ಕಂದಕ ಮತ್ತಷ್ಟು ಅಗಲವಾಗುತ್ತಿದೆ.

ಖಾಸಗಿ ಬಂಡವಾಳ ಹಾಗೂ ಖಾಸಗಿ ಉದ್ಯಮಗಳು ಬರುವುದರಿಂದ ಮೂಲಭೂತ ಸೌಲಭ್ಯಗಳು ಹೆಚ್ಚುತ್ತವೆ ಎಂಬ ಮಾತಿದೆ. ಈ ವಿಷಯ ಗ್ರಾಮೀಣ ಭಾಗಗಳಲ್ಲಿ ನಿಜವಾಗಿಲ್ಲ. ಭಾರತದ ಖಾಸಗಿ ಮೊಬೈಲ್ ಕಂಪನಿಗಳು ಶೇಕಡಾ 60ಕ್ಕೂ ದೇಶದ ಶೇಕಡಾ 60ಕ್ಕೂ ಹೆಚ್ಚು ಜನ ವಾಸಿಸುವ ಗ್ರಾಮೀಣ ಭಾಗಗಳಿಗೆ ಸೂಕ್ತ ವೇಗದ ಮೊಬೈಲ್ ಇಂಟರ್ನೆಟ್ ಸೇವೆ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಲಾಭದ ಮೇಲೆ ಮಾತ್ರ ಕಣ್ಣಿಟ್ಟಿರುವ ಖಾಸಗಿ ಕಂಪನಿಗಳು ಹೆಚ್ಚು ಲಾಭವಿಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ 3ಜಿ ಇಂಟರ್ನೆಟ್ ಸೇವೆ ಒದಗಿಸುವಲ್ಲಿ ಆಸಕ್ತಿ ವಹಿಸುತ್ತಿಲ್ಲ. ಏರ್ಟೆಲ್ ಕಂಪನಿ ತನ್ನ 'ಓಪನ್ ನೆಟ್ವರ್ಕ್' ವೆಬ್ ಸೈಟ್ ಮೂಲಕ ಕರ್ನಾಟಕದ ಹಲವು ಗ್ರಾಮೀಣ ಭಾಗಗಳಲ್ಲಿ 3ಜಿ ಸೇವೆ ಒದಗಿಸುತ್ತಿದ್ದೇನೆ ಎಂದು ಭೂಪಟದಲ್ಲಿ ತೋರಿಸುತ್ತಿದ್ದರೂ ಅದರ 3ಜಿ ಸೇವೆ ಟವರಿನ ಒಂದೆರಡು ಕಿ.ಮೀ. ದೂರಕ್ಕೂ ಲಭ್ಯವಾಗುವುದಿಲ್ಲ. ಇದರಿಂದಾಗಿ ಟವರಿನ ಬುಡದ ಸ್ವಲ್ಪ ದೂರದವರೆಗೆ ಮಾತ್ರ 3ಜಿ ಮೊಬೈಲ್ ಇಂಟರ್ನೆಟ್ ಲಭ್ಯವೇ ಹೊರತು ದೂರದ ಪ್ರದೇಶಗಳಿಗೆ 3ಜಿ ಮೊಬೈಲ್ ಇಂಟರ್ನೆಟ್ ಲಭ್ಯವಿಲ್ಲ. 3ಜಿ ತರಂಗಾಂತರ ಹರಾಜು ನಡೆದು ಆರು ವರ್ಷಗಳೇ ಉರುಳಿದರೂ ಅದನ್ನು ಪಡೆದ ಖಾಸಗಿ ಮೊಬೈಲ್ ಕಂಪನಿಗಳು ಇನ್ನೂ ದೇಶಾದ್ಯಂತ 3ಜಿ ಮೊಬೈಲ್ ಸೇವೆ ಒದಗಿಸಲು ಹಿಂದೇಟು ಹಾಕುತ್ತಿವೆ. ಸರ್ಕಾರದ ಯೋಜನೆಗಳು ಆರಂಭವಾಗಿ ಮುಗಿಯಲು ಹಲವಾರು ವರ್ಷಗಳೇ ಬೇಕಾಗುತ್ತವೆ. ಈಗ ಆ ಜಾಡ್ಯ ಖಾಸಗಿ ಕಂಪನಿಗಳಿಗೂ ಅಂಟಿಕೊಂಡಿದೆ. ರಿಲಯನ್ಸ್ ಜಿಯೋ ಕಂಪನಿ ಕಳೆದ ವರ್ಷದಿಂದಲೇ ದೇಶಾದ್ಯಂತ ತನ್ನ 4ಜಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸದ್ಯದಲ್ಲಿಯೇ ಆರಂಭಿಸುತ್ತೇನೆ ಎಂದು ಹೇಳುತ್ತಿದ್ದರೂ ಇನ್ನೂ ಅದನ್ನು ಆರಂಭಿಸಿಲ್ಲ. ಅದು ದೇಶಾದ್ಯಂತ ನಗರಗಳಲ್ಲಿ ತನ್ನ ಸೇವೆ ಆರಂಭಿಸಬಹುದಾದರೂ ಗ್ರಾಮೀಣ ಪ್ರದೇಶಗಳಲ್ಲಿ ತನ್ನ ಸೇವೆಯನ್ನು ಆರಂಭಿಸಲು ಇನ್ನೂ ಕೆಲವು ವರ್ಷಗಳು ಬೇಕಾಗಬಹುದು.

ಭಾರತದಲ್ಲಿ ವೇಗದ ಮೊಬೈಲ್ ಇಂಟರ್ನೆಟ್ ಸೇವೆಯ ವಿಸ್ತರಣೆಗೆ ಅಡ್ಡಿಯಾಗಿರುವುದು ಅದರ ದುಬಾರಿ ದರ. ಒಂದು ಜಿಬಿ 3ಜಿ ಇಂಟರ್ನೆಟ್ 250 ರೂಪಾಯಿಗಳಷ್ಟು ದುಬಾರಿಯಾಗಿದ್ದು ಇದು ಜನಸಾಮಾನ್ಯರು ಉಪಯೋಗಿಸಲು ಹಿಂಜರಿಯುವಂತಿದೆ ಏಕೆಂದರೆ ಗ್ರಾಮೀಣ ಹಾಗೂ ನಗರವಾಸಿ ಮಧ್ಯಮ ಹಾಗೂ ಕೆಳಮಧ್ಯಮ ವರ್ಗದ ಜನ ಇಷ್ಟು ಹಣ ಕೊಟ್ಟು ಇಂಟರ್ನೆಟ್ ಉಪಯೋಗಿಸುವ ಪರಿಸ್ಥಿತಿಯಲ್ಲಿ ಇಲ್ಲ. ಈ ರೀತಿಯ ದುಬಾರಿ ಇಂಟರ್ನೆಟ್ ದರಕ್ಕೆ ಖಾಸಗಿ ಕಂಪನಿಗಳು ದುಬಾರಿ ಹಣ ನೀಡಿ ತರಂಗಾಂತರ ಖರೀದಿಸಿರುವುದೂ ಒಂದು ಪ್ರಧಾನ ಕಾರಣವಾಗಿದೆ. 'ಮದುವೆಯಾಗದೆ ಹುಚ್ಚು ಬಿಡದು, ಹುಚ್ಚು ಬಿಡದೆ ಮದುವೆಯಾಗದು' ಎಂಬ ನಾಣ್ಣುಡಿಯಂತೆ ಹೆಚ್ಚು ಜನ ಹೆಚ್ಚು ಮೊಬೈಲ್ ಇಂಟರ್ನೆಟ್ ಬಳಸದೆ ದರ ಇಳಿಯದು, ದರ ಇಳಿಯದೆ ಹೆಚ್ಚು ಜನ ಹೆಚ್ಚು ಇಂಟರ್ನೆಟ್ ಬಳಸಲಾರರು ಎಂಬ ಪರಿಸ್ಥಿತಿ ದೇಶದಲ್ಲಿದೆ. ಮೊಬೈಲ್ ಕಂಪನಿಗಳು ವೇಗದ ಇಂಟರ್ನೆಟ್ ದರವನ್ನು ಜಿಬಿ ಒಂದಕ್ಕೆ ಐವತ್ತು ರೂಪಾಯಿಗಳಿಗಿಂಥ ಕಡಿಮೆ ಮಾಡದೆ ಹೋದರೆ ಇದು ಜನಸಾಮಾನ್ಯರಿಗೆ ಎಟುಕಲಾರದು.

ಭಾರತ ಸರ್ಕಾರವು ರಾಷ್ಟ್ರೀಯ ಆಪ್ಟಿಕ್ ಫೈಬರ್ ಜಾಲ ರೂಪಿಸಿ ದೇಶದ ಎಲ್ಲ ಗ್ರಾಮಗಳಿಗೆ ವೇಗದ ಇಂಟರ್ನೆಟ್ ಸೇವೆಯನ್ನು ವಿಸ್ತರಿಸುವ ಯೋಜನೆಯನ್ನು 2010ರಲ್ಲಿಯೇ ರೂಪಿಸಿದ್ದರೂ ಅದು ಆರು ವರ್ಷಗಳ ನಂತರವೂ ಕುಂಟುತ್ತಾ ಸಾಗಿದೆ. ಈ ಯೋಜನೆಯನ್ವಯ ಕರ್ನಾಟಕದಲ್ಲಿ 5500 ಗ್ರಾಮ ಪಂಚಾಯತಿಗಳ ಪೈಕಿ ಅಂದಾಜು 3000 ಗ್ರಾಮಪಂಚಾಯತಿಗಳಿಗೆ ಆಪ್ಟಿಕ್ ಫೈಬರ್ ಅಳವಡಿಸುವ ಕಾಮಗಾರಿ ಮುಗಿದಿದ್ದರೂ ಗ್ರಾಮೀಣ ಜನರಿಗೆ ಅದರ ಪ್ರಯೋಜನ ಲಭ್ಯವಾಗುವಂತೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ಗ್ರಾಮ ಪಂಚಾಯತಿಗಳಲ್ಲಿ ಮಾತ್ರ ವೇಗದ ಇಂಟರ್ನೆಟ್ ಲಭ್ಯವಾಗಿದೆಯೇ ಹೊರತು ಈ ಆಪ್ಟಿಕ್ ಫೈಬರ್ ಜಾಲವನ್ನು ಉಪಯೋಗಿಸಿ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಎಟಕುವ ದರದಲ್ಲಿ 3ಜಿ ಅಥವಾ 4ಜಿ ಮೊಬೈಲ್ ಸೇವೆ ರೂಪಿಸಲು ಬಿಎಸ್ಸೆನ್ನೆಲ್ ಯಾವುದೇ ಕ್ರಮಗಳನ್ನೂ ಕೈಗೊಂಡಿಲ್ಲ. ಹೀಗಾಗಿ ಆಪ್ಟಿಕ್ ಫೈಬರ್ ಜಾಲ ಅಳವಡಿಸಿದರೂ ಅದು ಜನಸಾಮಾನ್ಯರ ಪಾಲಿಗೆ ವ್ಯರ್ಥವೇ ಸರಿ. ಕೇಂದ್ರ ಸರ್ಕಾರಕ್ಕೆ ವೈಜ್ಞಾನಿಕ ಸಲಹೆ ನೀಡುವ ಯಾವುದೇ ಯೋಗ್ಯ ವ್ಯಕ್ತಿಗಳು ಇಂದು ಇಲ್ಲದಿರುವುದೇ ಇದಕ್ಕೆ ಕಾರಣವಾಗಿರುವಂತೆ ಕಾಣುತ್ತದೆ. ರಾಜೀವ ಗಾಂಧಿಯವರು ಪ್ರಧಾನಿಯಾಗಿದ್ದಾಗ ಸ್ಯಾಮ್ ಪಿಟ್ರೋಡಾ ಅವರು ಸೂಕ್ತ ಯೋಜನೆ ಹಾಗೂ ಸಲಹೆ ನೀಡಿ ದೇಶದಲ್ಲಿ ಟೆಲಿಕಾಂ ಸೌಲಭ್ಯ ಬೆಳೆಯಲು ಕಾರಣರಾದರು. ಇಂದು ಮೋದಿಯವರಿಗೆ ಗ್ರಾಮೀಣ ಜನರ ಬಗ್ಗೆ ಕಾಳಜಿ ಉಳ್ಳ ಸೂಕ್ತ ಸಲಹೆ ನೀಡುವ ವೈಜ್ಞಾನಿಕ ಸಲಹೆಗಾರರು ಇಲ್ಲದಿರುವುದು ದುರಂತವೇ ಸರಿ. ಇದರಿಂದಾಗಿ ಡಿಜಿಟಲ್ ಇಂಡಿಯಾ ಎಂಬ ಯೋಜನೆ ಕುಂಟುತ್ತಾ ಸಾಗುತ್ತಿದೆ. ಬಿಎಸ್ಸೆನ್ನೆಲ್ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ 2ಜಿ ಮೊಬೈಲ್ ಟವರುಗಳನ್ನು ಈಗಾಗಲೇ ಹೊಂದಿದ್ದು ಇವುಗಳನ್ನು ಮೇಲ್ದರ್ಜೆಗೆ ಏರಿಸುವುದು ಸರ್ಕಾರದ ಸಹಾಯದಿಂದ ಶೀಘ್ರವಾಗಿ ಸಾಧ್ಯ.

ಖಾಸಗಿ ಕಂಪನಿಗಳು ಸೌಲಭ್ಯ ಒದಗಿಸಲು ಹಿಂಜರಿಯುವ ಗ್ರಾಮೀಣ ಪ್ರದೇಶಗಳಲ್ಲಿ ಸೌಲಭ್ಯ ಒದಗಿಸುವುದು ಸರ್ಕಾರದ ಬಾಧ್ಯತೆ ಆಗಿದೆ. ಉದಾಹರಣೆಗೆ ಹೆಚ್ಚು ಕಲೆಕ್ಷನ್ ಇಲ್ಲದ ಕಡೆ ಖಾಸಗಿಯವರು ಬಸ್ಸು ಓಡಿಸುವುದಿಲ್ಲ. ಇಂಥಲ್ಲಿ ಸರ್ಕಾರವು ಸರ್ಕಾರೀ ಬಸ್ಸುಗಳನ್ನು ಓಡಿಸುತ್ತದೆ. ಸರ್ಕಾರೀ ಬಸ್ಸುಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಪೇಟೆಗೆ ಹೋಗಿ ಬರಲು ರಿಯಾಯತಿ ದರದ ಪಾಸ್ ಸೌಲಭ್ಯ ಒದಗಿಸುತ್ತದೆ. ಅದೇ ರೀತಿ ಗ್ರಾಮೀಣ ರಸ್ತೆ, ಗ್ರಾಮೀಣ ವಿದ್ಯುದೀಕರಣ ಮೊದಲಾದವುಗಳನ್ನು ಹೆಸರಿಸಬಹುದು. ಇದು ಸರಕಾರಕ್ಕೆ ಇರಬೇಕಾದ ಬಾಧ್ಯತೆ. ಅದೇ ರೀತಿ ಖಾಸಗಿ ಮೊಬೈಲ್ ಕಂಪನಿಗಳು ಬರಲು ಹಿಂಜರಿಯುವ ಗ್ರಾಮೀಣ ಪ್ರದೇಶಗಳಿಗೆ ಬಿಎಸ್ಸೆನ್ನೆಲ್ ಮೂಲಕ 3ಜಿ ಅಥವಾ 4ಜಿಯಂಥ ವೇಗದ ಅಂತರ್ಜಾಲ ಸೌಲಭ್ಯ ಒದಗಿಸುವುದು ಸರ್ಕಾರದ ಬಾಧ್ಯತೆ ಆಗಿದೆ. ಇದಕ್ಕೆ ತರಂಗಾಂತರ ಹರಾಜಿನಲ್ಲಿ ಸರ್ಕಾರ ಸಂಗ್ರಹಿಸಿದ ಲಕ್ಷಾಂತರ ರೂಪಾಯಿಗಳ ಒಂದು ಅಂಶವನ್ನು ಬಿಎಸ್ಸೆನ್ನೆಲ್ ಸಂಸ್ಥೆಗೆ ಒದಗಿಸಿದರೆ ಸಾಕು. ಇಂದು 4ಜಿ ಮೊಬೈಲ್ಗಳು ರೂಪಾಯಿ 3000ಕ್ಕೆ ಲಭ್ಯ ಇವೆ. ಇದು ಒಂದು ಮಿನಿ ಕಂಪ್ಯೂಟರಿಗೆ ಸಮ. ಇದರ ಮೂಲಕ 20,000 ರೂಪಾಯಿ ಕೊಟ್ಟು ಕಂಪ್ಯೂಟರ್ ಕೊಳ್ಳಲಾಗದವರು ಕೂಡ ವೇಗದ ಇಂಟರ್ನೆಟ್ ಸೌಲಭ್ಯ ಇದ್ದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೂ ನಗರಗಳಲ್ಲಿ ಲಭ್ಯವಾಗುವ ಮಾಹಿತಿ, ಶಿಕ್ಷಣ, ಆರೋಗ್ಯ ಮಾಹಿತಿಗಳನ್ನು ಪಡೆಯಬಹುದು. ಗ್ರಾಮೀಣ ವಿದ್ಯಾರ್ಥಿಗಳು 3ಜಿ/4ಜಿ ಮೊಬೈಲ್ ಮೂಲಕ ವೇಗದ ಇಂಟರ್ನೆಟ್ ಸೌಲಭ್ಯ ಇದ್ದಲ್ಲಿ ಸೂಕ್ತ ಮಾಹಿತಿ, ಪಠ್ಯ, ಇಂಗ್ಲೀಷ್ ಶಿಕ್ಷಣವನ್ನು ವಿಡಿಯೋಗಳನ್ನು ನೋಡುವುದರ ಮೂಲಕ ಪಡೆಯಬಹುದು. ಇಂದು ಯುಟ್ಯೂಬ್, ಫೇಸ್ಬುಕ್ಗಳಲ್ಲಿ ಕೃಷಿಗೆ ಸಂಬಂಧಿಸಿದ ಬೇರೆ ಬೇರೆ ದೇಶಗಳ, ಬೇರೆ ಬೇರೆ ರಾಜ್ಯಗಳ ಕೃಷಿಗೆ ಸಂಬಂಧಿಸಿದ ಲಕ್ಷಾಂತರ ವಿಡಿಯೋಗಳು ಲಭ್ಯ ಇವೆ. ಇವುಗಳನ್ನು ವೇಗದ ಇಂಟರ್ನೆಟ್ ಸೌಲಭ್ಯ ಲಭ್ಯವಿದ್ದಲ್ಲಿ ನೋಡಿ ಪರಸ್ಪರ ಸಂವಹನದ ಮೂಲಕ ತಮ್ಮ ಕೃಷಿ ಪದ್ಧತಿಯನ್ನು ಬದಲಾಯಿಸಿಕೊಳ್ಳಬಹುದು. ಟಿವಿ, ಪತ್ರಿಕೆಗಳಂತಲ್ಲದೆ ಅಂತರ್ಜಾಲದಲ್ಲಿ ಪರಸ್ಪರ ಸಂವಹನಕ್ಕೆ ಅವಕಾಶ ಇರುವುದು ಹಾಗೂ ಕೂಡಲೇ ಪ್ರತಿಕ್ರಿಯೆ ಲಭ್ಯವಾಗುವುದು ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಲು ಸಹಕಾರಿ. ಪತ್ರಿಕೆಗಳು ಗ್ರಾಮೀಣ ಜನರನ್ನು ಬಹಳ ಕಡಿಮೆ ಪ್ರಮಾಣದಲ್ಲಿ ತಲುಪುತ್ತವೆ. ಅಂತರ್ಜಾಲದಲ್ಲಿ ಮೊಬೈಲ್ ಹಾಗೂ ಇ-ಆವೃತ್ತಿ ಲಭ್ಯವಿರುವುದರಿಂದ ವೇಗದ ಅಂತರ್ಜಾಲ ಸೌಲಭ್ಯ ಇದ್ದಲ್ಲಿ ಯಾವುದೇ ಹಳ್ಳಿ ಮೂಲೆಗೂ ಪತ್ರಿಕೆಗಳ ಮಾಹಿತಿ ತಲುಪಲು ಸಾಧ್ಯ. ಅದೇ ರೀತಿ ವೇಗದ ಅಂತರ್ಜಾಲ ಲಭ್ಯವಿದ್ದರೆ ಅಂತರ್ಜಾಲ ಪತ್ರಿಕೆಗಳು, ಬ್ಲಾಗುಗಳು ಹೆಚ್ಚು ಹೆಚ್ಚು ಜನರನ್ನು ತಲುಪಲು ತನ್ಮೂಲಕ ಪರಸ್ಪರ ಚರ್ಚೆ, ಸಂವಹನದಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾಗೃತಿ ರೂಪುಗೊಳ್ಳಲು ಸಹಾಯಕ.

ಆಗ 10, 2016

ಹಿವ್ರೆ ಬಜಾರ್ ಗ್ರಾಮ - ಮಳೆನೆರಳಿನ ಗ್ರಾಮಗಳಿಗೆ ಒಂದು ಮಾದರಿ

ಹಿವ್ರೆ ಬಜಾರಿನಲ್ಲಿರುವ ಇಂಗುಗುಂಡಿ
ಆನಂದ ಪ್ರಸಾದ್
10/08/2016
ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ಒಂದು ಗ್ರಾಮ ಹಿವ್ರೆ ಬಜಾರ್. ಇಲ್ಲಿ ಬೀಳುವ ಮಳೆಯ ಪ್ರಮಾಣ ವಾರ್ಷಿಕ 300-400 ಮಿ. ಮೀ. ಇಷ್ಟು ಕಡಿಮೆ ಪ್ರಮಾಣದ ಮಳೆಯನ್ನು ಪಡೆದರೂ ಈ ಗ್ರಾಮ ಈ ವರ್ಷದ ಭೀಕರ ಬರಗಾಲದಲ್ಲಿಯೂ ಕುಡಿಯುವ ನೀರಿಗಾಗಿ ಟ್ಯಾಂಕರ್ ನೀರನ್ನು ಅವಲಂಬಿಸಲಿಲ್ಲ. ಈ ಪವಾಡ ಸಾಧ್ಯವಾದದ್ದು ಮಳೆ ನೀರಿನ ಕೊಯ್ಲು ಹಾಗೂ ಸಮರ್ಪಕ ಬೆಳೆ ಪದ್ಧತಿ ಅಳವಡಿಸಿಕೊಂಡಿರುವುದರಿಂದ. ಇಲ್ಲಿ ಪ್ರತಿ ವರ್ಷ ಡಿಸೆಂಬರ್ 31ರಂದು ಆ ವರ್ಷದ ಮಳೆಯ ಪ್ರಮಾಣ ಹಾಗೂ ನೀರಿನ ಲಭ್ಯತೆಯನ್ನು ಪರಾಮರ್ಶಿಸಲು ಗ್ರಾಮಸ್ಥರ ಸಭೆ ನಡೆಸಲಾಗುತ್ತದೆ. ಕಳೆದ ವರ್ಷ ಇಂಥ ಸಭೆಯಲ್ಲಿ ಬರಗಾಲದ ಪರಿಸ್ಥಿತಿಯನ್ನು ಮನಗಂಡು ಮುಂದಿನ ಮಳೆಗಾಲದವರೆಗೆ ಯಾವುದೇ ಬೆಳೆಯನ್ನು ಬೆಳೆಯದೇ ಇರುವ ತೀರ್ಮಾನ ತೆಗೆದುಕೊಳ್ಳಲಾಯಿತು. ಇದರಿಂದಾಗಿಯೇ ಇಡೀ ಔರಂಗಾಬಾದ್ ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರತೆ ಆದರೂ ಹಿವ್ರೆ ಬಜಾರ್ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಆಗಲಿಲ್ಲ. ಈ ಗ್ರಾಮದಲ್ಲಿ ಕೊಳವೆ ಬಾವಿ ಕೊರೆಯುವುದನ್ನು ನಿಷೇಧಿಸಲಾಗಿದೆ. ಹೀಗಾಗಿ 20ರಿಂದ 40 ಆಳದಲ್ಲಿ ತೆರೆದ ಬಾವಿಗಳಲ್ಲಿ ಬರಗಾಲದಲ್ಲಿಯೂ ಕುಡಿಯುವ ನೀರು ಲಭ್ಯ.

ಈ ಹಿವ್ರೆ ಬಜಾರ್ ಗ್ರಾಮದಲ್ಲಿ ಇಂಥ ಪವಾಡ ನಡೆಸಿದ ರೂವಾರಿ ಪೋಪಟ್ ರಾವ್ ಪವಾರ್. ಇವರ ಮುತುವರ್ಜಿ ಹಾಗೂ ಮಾರ್ಗದರ್ಶನದಿಂದ 20 ವರ್ಷಗಳ ಅವಧಿಯಲ್ಲಿ ಒಣಗಿ ಬೆಂಗಾಡಾಗಿದ್ದ ಹಿವ್ರೆ ಬಜಾರ್ ನಂದನವನವಾಗಿ ಹಸುರಿನಿಂದ ತುಂಬಿ ಕಂಗೊಳಿಸುತ್ತಿದೆ. ಹಿವ್ರೆ ಬಜಾರ್ ಇಂದು ಇಡೀ ದೇಶದಲ್ಲಿಯೇ ಇಂದು ಮಾದರಿ ಗ್ರಾಮವಾಗಿ ಗುರುತಿಸಿಕೊಂಡಿದೆ ಹಾಗೂ ಗಾಂಧೀಜಿಯವರ ಗ್ರಾಮ ಸ್ವರಾಜ್ಯವನ್ನು ನನಸಾಗಿಸಿದೆ. ಇಂದು ಹಿವ್ರೆ ಬಜಾರ್ ಗ್ರಾಮದಲ್ಲಿ 60 ಜನ ಮಿಲಿಯಾಧೀಶ್ವರ ರೈತರು ಇದ್ದಾರೆ. 1994ಕ್ಕೂ ಮೊದಲು ಈ ಗ್ರಾಮ ಬರಗಾಲ ಹಾಗೂ ನೀರಿನ ಕೊರತೆಯಿಂದ ಬಳಲಿ ಜನ ಕೆಲಸ ಅರಸಿ ನಗರಗಳಿಗೆ ಹೋಗುತ್ತಿದ್ದರು. ಹಾಗೆ ವಲಸೆ ಹೋದ ಸಾಕಷ್ಟು ಮಂದಿ ಇಂದು ನಗರಗಳಿಂದ ವಾಪಸ್ ಬಂದು ಗ್ರಾಮದಲ್ಲಿ ನೆಲೆಸಿದ್ದಾರೆ. ಪೋಪಟ್ ರಾವ್ ಅವರು ನಗರದಲ್ಲಿ ವಾಣಿಜ್ಯ ಸ್ನಾತಕೋತ್ತರ ಪದವಿ ಪಡೆದರೂ ನಗರ ಜೀವನದ ಆರಾಮ ಬದುಕಿನ ಸಾಧ್ಯತೆ ಇದ್ದರೂ ಮರಳಿ ಗ್ರಾಮಕ್ಕೆ ಬಂದು ಇಡೀ ಗ್ರಾಮದ ಚಿತ್ರಣವನ್ನೇ ಬದಲಿಸಿದರು. ಸರಕಾರಿ ಯೋಜನೆಯನ್ನು ಉಪಯೋಗಿಸಿಕೊಂಡು ಹಾಗೂ ಗ್ರಾಮಸ್ಥರ ಶ್ರಮದಾನದ ಮೂಲಕ ಗ್ರಾಮದಲ್ಲಿ ೪೦,೦೦೦ ಮಳೆ ನೀರು ತಡೆ ಹಿಡಿಯುವ ಕಣಿ ಹಾಗೂ ಬದುಗಳನ್ನು ನಿರ್ಮಿಸಲು ಮುಂದಾಳತ್ವ ವಹಿಸಿದರು. ಗ್ರಾಮದಲ್ಲಿ 10 ಲಕ್ಷಕ್ಕೂ ಅಧಿಕ ಮರಗಳನ್ನು ಬೆಳೆಸಿದರು. ಮಳೆನೀರು ತಡೆಹಿಡಿದು ನೀರಿಂಗಿಸುವ ತಡೆಗಟ್ಟ, ಇಂಗು ಗುಂಡಿ, ಕೆರೆಗಳ ಹೂಳೆತ್ತಿ ನೀರು ನಿಲ್ಲುವಂತೆ ಮಾಡಿ ಅಂತರ್ಜಲ ಹೆಚ್ಚುವಂತೆ ಮಾಡಿದರು. ಇದರ ಪರಿಣಾಮಾವಾಗಿ ಮೊದಲು ಬಹಳ ಆಳದಲ್ಲಿದ್ದ ನೀರಿನ ಮಟ್ಟ 15-20 ಅಡಿಗೆ ಏರಿತು. ಗ್ರಾಮದಲ್ಲಿ ಹೆಚ್ಚು ನೀರು ಬೇಡುವ ಭತ್ತ, ಬಾಳೆ, ಕಬ್ಬು ಮೊದಲಾದ ಬೆಳೆ ಬೆಳೆಯುವುದನ್ನು ನಿಷೇಧಿಸಿದರು. ಕಡಿಮೆ ನೀರು ಬಳಸಿ ಅಥವಾ ಹನಿ ನೀರಾವರಿ ಬಳಸಿ ಬೆಳೆಯುವ ಜೋಳ, ಬಾಜ್ರಾ, ನೀರುಳ್ಳಿ, ದ್ವಿದಳ ಧಾನ್ಯಗಳು, ಹೂವು, ಹಣ್ಣು, ತರಕಾರಿ ಬೆಳೆಗಳನ್ನು ಬೆಳೆಯುವ ಯೋಜನೆ ರೂಪಿಸಿ ಗ್ರಾಮಸ್ಥರ ಆದಾಯ ಹೆಚ್ಚುವಂತೆ ಮಾಡಿದರು. ಜೊತೆಗೇ ಹೈನುಗಾರಿಕೆ ಅಭಿವೃದ್ಧಿಪಡಿಸಿ ಇಂದು ಗ್ರಾಮದಲ್ಲಿ ಬರಗಾಲದ ಪರಿಸ್ಥಿತಿಯಲ್ಲಿಯೂ ದೈನಿಕ 4000 ಲೀ. ಹಾಲು ಉತ್ಪಾದನೆ ಆಗುವಂತೆ ಆಗಿದೆ. ಹೈನುಗಾರಿಕೆಗೆ ಬೇಕಾಗುವ ಹುಲ್ಲು ಗ್ರಾಮದಲ್ಲಿಯೇ ಉತ್ಪಾದನೆಯಾಗುತ್ತದೆ.

ಇಷ್ಟೆಲ್ಲಾ ಆಗಿರುವುದು ಕೇವಲ 300-400 ಮಿ. ಮೀ. ವಾರ್ಷಿಕ ಮಳೆಯ ನೀರನ್ನು ಇಂಗಿಸಿ ತೆರೆದ ಬಾವಿ, ಕೆರೆಗಳಲ್ಲಿ ಲಭ್ಯವಾಗುವ ನೀರಿನಿಂದ ಮಾತ್ರವೇ ಹೊರತು ಯಾವುದೇ ಅಣೆಕಟ್ಟಿನ ನೀರು ಅಥವಾ ಕಾಲುವೆಗಳ ನೀರಿನಿಂದ ಅಥವಾ ಕೊಳವೆ ಬಾವಿ ನೀರಿನಿಂದ ಅಲ್ಲ. ಇದನ್ನೆಲ್ಲ ಸಾಧಿಸಲು ಪೋಪಟ್ ರಾವ್ ಪವಾರ್ ಅವರಿಗೆ ಸ್ಫೂರ್ತಿ ಹಾಗೂ ಮಾದರಿ ಹಿವ್ರೆ ಬಜಾರ್ ಗ್ರಾಮದಿಂದ 35 ಕಿ.ಮೀ. ದೂರದಲ್ಲಿರುವ ಅಣ್ಣಾ ಹಜಾರೆಯವರ ರಾಲೇಗಾವ್ ಸಿದ್ಧಿ ಗ್ರಾಮದಲ್ಲಿ ಅವರು ನೀರಿಂಗಿಸುವಿಕೆ ಹಾಗೂ ಮರ ಬೆಳೆಸಿ ಸಾಧಿಸಿದ ಯಶಸ್ಸು. ಕರ್ನಾಟಕದಲ್ಲಿ ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಇರುವ ತಡೆ, ನೀರಿಗಾಗಿ ಹೋರಾಟ, ನ್ಯಾಯಾಧಿಕರಣದ ಕರ್ನಾಟಕಕ್ಕೆ ಅನುಕೂಲಕರವಲ್ಲದ ಮಧ್ಯಂತರ ತೀರ್ಪು, ಎತ್ತಿನ ಹೊಳೆ ಯೋಜನೆಗಾಗಿ ನಡೆಯುತ್ತಿರುವ ಹೋರಾಟ, ಅದಕ್ಕಾಗಿ ವೆಚ್ಚವಾಗುವ ಅಪಾರ ಹಣ ಇವುಗಳನ್ನೆಲ್ಲ ನೋಡಿದಾಗ ನಮ್ಮ ರಾಜ್ಯದ ಮಳೆ ಕಡಿಮೆ ಬೀಳುವ ಹಾಗೂ ಆಣೆಕಟ್ಟು ಹಾಗೂ ಕಾಲುವೆ ನೀರು ಲಭ್ಯವಿಲ್ಲದ ಪ್ರದೇಶಗಳಿಗೆ ಮಹಾರಾಷ್ಟ್ರದ ರಾಲೇಗಾವ್ ಸಿದ್ಧಿ ಹಾಗೂ ಹಿವ್ರೆ ಬಜಾರ್ ಗ್ರಾಮಗಳು 300-500 ಮೀ.ಮೀ. ವಾರ್ಷಿಕ ಮಳೆಯನ್ನು ಪಡೆದೂ ನೀರಿನ ಮಿತವ್ಯಯ ಹಾಗೂ ಮರ ಬೆಳೆಸಿ ಸಾಧಿಸಿದ ಯಶಸ್ಸು ಮಾದರಿಯೆನಿಸುತ್ತದೆ. ಏಕೆಂದರೆ ಕರ್ನಾಟಕದಲ್ಲಿ 500 ಮಿ.ಮೀ.ಗಿಂಥ ಕಡಿಮೆ ಮಳೆಯಾಗುವ ಜಿಲ್ಲೆಗಳು ಇಲ್ಲ (ಬರಗಾಲದ ವರ್ಷಗಳನ್ನು ಹೊರತುಪಡಿಸಿ).

ರಾಲೇಗಾವ್ ಸಿದ್ಧಿ ಹಾಗೂ ಹಿವ್ರೆ ಬಜಾರ್ ಗ್ರಾಮಗಳಲ್ಲಿ ನಡೆದ ಮಳೆ ನೀರಿಂಗಿಸುವ ಹಾಗೂ ಹಸುರು ಬೆಳೆಸುವ ಯೋಜನೆಯನ್ನು ಅನುಸರಿಸಲು ಕೋಟ್ಯಂತರ ರೂಪಾಯಿಗಳ ಅಗತ್ಯವಿಲ್ಲ. ಸರಕಾರದ ಯೋಜನೆಗಳನ್ನು ಬಳಸಿಕೊಂಡು ಮತ್ತು ಗ್ರಾಮೀಣ ಜನರ ಶ್ರಮದಾನದಿಂದ ಇಂಥ ಯೋಜನೆಗಳನ್ನು ಗ್ರಾಮಸ್ಥರೇ ನಡೆಸಲು ಸಾಧ್ಯವಿದೆ. ನೂರಾರು ಅಥವಾ ಸಾವಿರಾರು ಕೋಟಿ ರೂಪಾಯಿಗಳ ಯೋಜನೆ ಮುಗಿಯಲು ಹಲವಾರು ವರ್ಷಗಳನ್ನೇ ತೆಗೆದುಕೊಳ್ಳುವ ಕಾಮಗಾರಿಗಳ ಬದಲು ಅಥವಾ ನ್ಯಾಯಾಧಿಕರಣದ ತೀರ್ಪಿಗಾಗಿ ಕಾಯುತ್ತಾ ಹಲವಾರು ವರ್ಷಗಳನ್ನೇ ವ್ಯರ್ಥ ಮಾಡುವ ಬದಲು ಹಿವ್ರೆ ಬಜಾರ್ ಗ್ರಾಮದ ಯಶಸ್ಸನ್ನು ನಮ್ಮ ರಾಜ್ಯದ ಮಳೆ ಕಡಿಮೆ ಬೀಳುವ ಪ್ರದೇಶಗಳಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿದೆ. ಇದಕ್ಕಾಗಿ ನಮ್ಮ ರೈತ ಸಂಘಟನೆಗಳು, ಕನ್ನಡ ಸಂಘಟನೆಗಳು ಜನರಲ್ಲಿ ಅರಿವನ್ನು ಮೂಡಿಸುವ ಅಗತ್ಯ ಇದೆ. ನಮ್ಮ ಮಾಧ್ಯಮಗಳು ಈ ವಿಚಾರವಾಗಿ ನಿರಂತರವಾಗಿ ಜಾಗೃತಿ ರೂಪಿಸುವ ಅಗತ್ಯ ಇದೆ.

ಆಗ 2, 2016

ನೀರು ತಿರುಗಿಸುವುದು ತಪ್ಪಾಗಲಾರದು - ಒಂದು ಪ್ರತಿಕ್ರಿಯೆ

'ಕೆಸರೆರಚಾಟದ ಮಧ್ಯೆ ಕೇಳಿಕೊಳ್ಳದ ಪ್ರಶ್ನೆಗಳು' ಲೇಖನಕ್ಕೆ ಬಂದಿರುವ ಒಂದು ಪ್ರತಿಕ್ರಿಯೆ. 
ಆನಂದ ಪ್ರಸಾದ್ 
02/08/2016
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆಯ ಬದಲು ಅದೇ ಮೊತ್ತದ ಹಣವನ್ನು (12,000 ಕೋಟಿಗೂ ಮೇಲ್ಪಟ್ಟು) ಬಳಸಿ ಆ ಜಿಲ್ಲೆಗಳಲ್ಲಿ ಬೀಳುವ ಮಳೆಯ ನೀರನ್ನು ಹಿಡಿದಿಡುವ ಹಾಗೂ ನೀರಿಂಗಿಸುವ ಕೆರೆಗಳು, ಹೊಂಡಗಳು, ಬದುಗಳು, ತಡೆಗಟ್ಟಗಳನ್ನು ನಿರ್ಮಿಸಿ ಮಳೆಯ ನೀರು ಹರಿದು ಹೋಗದಂತೆ ಮಾಡಿದರೆ ಕುಡಿಯುವ ನೀರಿನ ಕೊರತೆ ಉಂಟಾಗಲಾರದು. ಇದರ ಜೊತೆಗೆ ಬರಡು ಭೂಮಿಯಲ್ಲಿ ಕಾಡು ಬೆಳೆಸುವ ಯೋಜನೆ ರೂಪಿಸಿ ಕಾರ್ಯಗತಗೊಳಿಸಿದರೆ ಮಳೆಯ ಪ್ರಮಾಣ ಹೆಚ್ಚುವ ಸಂಭವ ಇದೆ. ಹೀಗೆ ಮಾಡಿದರೆ ದೂರದಿಂದ ನೀರು ತರುವ ಯೋಜನೆಗಳ ಅಗತ್ಯ ಬೀಳಲಾರದು. ಇಂಥ ಯೋಜನೆ ಹಾಗೂ ಚಿಂತನೆಯನ್ನು ನೀರಾವರಿ ತಜ್ಞರು, ರಾಜಕಾರಣಿಗಳು ಬೆಳೆಸದೆ ಕೋಲಾರ, ಚಿಕ್ಕಬಳ್ಳಾಪುರ ಇತ್ಯಾದಿ ಜಿಲ್ಲೆಗಳ ಜನರಲ್ಲಿ ದೂರದಿಂದ ನೀರು ತರುವುದೇ ಪರಿಹಾರ ಎಂಬ ಕಲ್ಪನೆಯನ್ನು ಹುಟ್ಟುಹಾಕಿ ಬೆಳೆಸಿದ್ದಾರೆ. ಇದರಿಂದಾಗಿ ಸ್ಥಳೀಯ ನೀರಿಂಗಿಸುವ ಯೋಜನೆಗಳು, ಪರಿಹಾರಗಳಿಗಾಗಿ ಜನರಾಗಲೀ, ಸಂಘಟನೆಗಳಾಗಲೀ ಒತ್ತಾಯಿಸುತ್ತಿಲ್ಲ. ಅವರ ಒತ್ತಾಯವೇನಿದ್ದರೂ ದೂರದಿಂದ ನೀರು ತರುವ ತೀರಾ ತ್ರಾಸದಾಯಕ ಎತ್ತಿನಹೊಳೆಯಂಥ ಯೋಜನೆಗಳ ಕಡೆಗೇ ಇದೆ.

ಎತ್ತಿನ ಹೊಳೆ ಯೋಜನೆಯನ್ನು ಜಾರಿಗೊಳಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಜನರ ವಿರೋಧ ವೈಚಾರಿಕ ನೆಲೆಗಿಂತ ಹೆಚ್ಚು ಭಾವನಾತ್ಮಕವಾದದ್ದು. ದಕ್ಷಿಣ ಕನ್ನಡ ಜಿಲ್ಲೆಯು ಸಾಕಷ್ಟು ಮಳೆ ಬೀಳುವ ಪ್ರದೇಶ. ಇದು ಸಾಕಷ್ಟು ಹಸುರಿನಿಂದ ಕೂಡಿರುವ ಹಾಗೂ ಘಟ್ಟದ ಹಾಗೂ ಕರಾವಳಿಯ ನಡುವೆ ಇರುವ ಕಾರಣ ಇಲ್ಲಿ ಬರಗಾಲ (ಘಟ್ಟದ ಮೇಲಣ ಜಿಲ್ಲೆಗಳಂತೆ) ಬಂದ ಅಥವಾ ಬರುವ ಸಂಭವ ಇಲ್ಲ. ನೇತ್ರಾವತಿಯ ಅಥವಾ ಅದರ ಉಪನದಿಯಾದ ಎತ್ತಿನಹೊಳೆ ಹಳ್ಳದ ನೀರನ್ನು ಮಳೆಗಾಲದಲ್ಲಿ ಅಥವಾ ಡಿಸೆಂಬರ್ ಕೊನೆಯವರೆಗೂ ಬೇರೆ ಕಡೆ ತಿರುಗಿಸಿದರೂ ಅದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ಯಾವ ತೊಂದರೆಯೂ ಆಗುವ ಸಂಭವ ಇಲ್ಲವೇ ಇಲ್ಲ. ಏಕೆಂದರೆ ಈ ಸಮಯದಲ್ಲಿ ನದಿಯಲ್ಲಿ ಸಾಕಷ್ಟು ನೀರು ಹರಿದು ಸಮುದ್ರ ಸೇರುತ್ತಿರುತ್ತದೆ. ನೇತ್ರಾವತಿಯ ನೀರು ಪುತ್ತೂರು ಹಾಗೂ ಉಪ್ಪಿನಂಗಡಿ ಪೇಟೆ ವ್ಯಾಪ್ತಿಯ ಜನತೆಗೆ ಕುಡಿಯುವ ನೀರು ಹಾಗೂ ಮಂಗಳೂರು ನಗರದ ಕುಡಿಯುವ ನೀರು ಹಾಗೂ ಮಂಗಳೂರಿನ ಕೆಲವು ಬೃಹತ್ ಕೈಗಾರಿಕೆಗಳಿಗೆ ಬೇಕಾದ ನೀರನ್ನು ಒದಗಿಸುವ ಮೂಲ. ಇದನ್ನು ಬಿಟ್ಟರೆ ನೇತ್ರಾವತಿ ನದಿಯ ನೀರು ಪುತ್ತೂರು, ಬಂಟ್ವಾಳ ತಾಲೂಕಿನ ಗ್ರಾಮೀಣ ಭಾಗಗಳಿಗೆ, ಬೆಳ್ತಂಗಡಿ ತಾಲೂಕಿನ ಪೇಟೆ ಅಥವಾ ಗ್ರಾಮೀಣ ಭಾಗಗಳಿಗೆ ಹಾಗೂ ಸುಳ್ಯ ತಾಲೂಕಿನ ಪೇಟೆ ಹಾಗೂ ಗ್ರಾಮೀಣ ಭಾಗಗಳಿಗೆ ಬಳಕೆ ಆಗುವುದಿಲ್ಲ. ಸುಳ್ಯ ತಾಲೂಕಿನ ಜನರಿಗಂತೂ ನೇತ್ರಾವತಿಯ ಸಂಬಂಧವೇ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಮಳೆ ಬೀಳುವ ಕಾರಣ ಪೇಟೆ ಹಾಗೂ ಕೈಗಾರಿಕೆಗಳಿಗೆ ಹೊರತುಪಡಿಸಿ ಗ್ರಾಮೀಣ ದಕ್ಷಿಣ ಕನ್ನಡ ಭಾಗಗಳಲ್ಲಿ ನೇತ್ರಾವತಿ ನದಿ ನೀರಿನ ಅವಶ್ಯಕತೆ ಕೂಡ ಇಲ್ಲ. ಹೀಗಾಗಿ ದಕ್ಷಿಣ ಕನ್ನಡದ ಜನ ಈ ಯೋಜನೆಯ ಬಗ್ಗೆ ವಿರೋಧ ವ್ಯಕ್ತಪಡಿಸಬೇಕಾದ ಅಗತ್ಯ ಇಲ್ಲ. ಇಲ್ಲಿ ಜನರನ್ನು ಈ ಯೋಜನೆಯ ವಿಷಯದಲ್ಲಿ ಭಾವನಾತ್ಮಕವಾಗಿ ಅಪಪ್ರಚಾರ ಮಾಡಿ ಎತ್ತಿ ಕಟ್ಟಲಾಗುತ್ತಿದೆಯೇ ಹೊರತು ಈ ವಿರೋಧಕ್ಕೆ ವೈಜ್ಞಾನಿಕ ನೆಲೆಗಟ್ಟು ಇಲ್ಲ. ಕೋಲಾರ, ಚಿಕ್ಕಬಳ್ಳಾಪುರ ಇತ್ಯಾದಿ ಬಯಲುಸೀಮೆಗೆ ಹೋಲಿಸಿದರೆ ದಕ್ಷಿಣ ಕನ್ನಡದ ಜನ ಪ್ರಾಕೃತಿಕವಾಗಿ ಪುಣ್ಯವಂತರು ಏಕೆಂದರೆ ಇಲ್ಲಿ ಎಂದೂ ಬರಗಾಲ ಎಂಬ ಪರಿಸ್ಥಿತಿ ಬರುವುದಿಲ್ಲ. ಎಲ್ಲಿ ಎಷ್ಟೇ ಕಡಿಮೆ ಎಂದರೂ 200 ಸೆ.ಮೀ.ಗಿಂಥ ಹೆಚ್ಚು ಮಳೆ ಬಂದೇ ಬರುತ್ತದೆ. ಇಷ್ಟು ಮಳೆಯನ್ನು ಪ್ರಾಕೃತಿಕವಾಗಿ ಪಡೆದೂ ಎತ್ತಿನಹೊಳೆಯ ನೀರನ್ನು ಮಳೆಗಾಲದಲ್ಲಿ ಮಳೆ ಹಾಗೂನೀರಿನ ಕೊರತೆ ಇರುವ ಬೇರೆ ಕಡೆ ಕೊಂಡೊಯ್ಯಲು ದಕ್ಷಿಣ ಕನ್ನಡದ ಜನ ವಿರೋಧಿಸುತ್ತಾರೆ ಎಂದರೆ ಅದು ಸಮಂಜಸ ಆಗಲಾರದು.

ಎತ್ತಿನ ಹೊಳೆ ಪರಿಸರದಲ್ಲಿ ನೀರನ್ನು ಶೇಖರಿಸಲು ಕಟ್ಟುವ ಸಣ್ಣ ಅಣೆಕಟ್ಟುಗಳಿಂದ ಸ್ವಲ್ಪ ಮಟ್ಟಿಗೆ ಕಾಡು ಹಾಗೂ ಪರಿಸರ ನಾಶ ಆಗಬಹುದು ಆದರೆ ದೊಡ್ಡ ಮಟ್ಟದ ನಾಶ ಸಣ್ಣ ಸಣ್ಣ ಆಣೆಕಟ್ಟು ಕಟ್ಟುವುದರಿಂದ ಆಗಲಿಕ್ಕಿಲ್ಲ. ನೀರು ಸಾಗಿಸುವ ಕೊಳವೆ ಮಾರ್ಗಕ್ಕೆ ಒಂದು ರಾಷ್ಟ್ರೀಯ ಹೆದ್ದಾರಿಗೆ ಬೇಕಾಗುವುದಕ್ಕಿಂತ ಹೆಚ್ಚು ಜಾಗ ಬೇಕಾಗಲಿಕ್ಕಿಲ್ಲ. ಹೀಗಾಗಿ ಎತ್ತಿನ ಹೊಳೆ ಯೋಜನೆ ಜಾರಿಗೊಳಿಸುವುದರಿಂದ ದೊಡ್ಡ ಮಟ್ಟದ ಪರಿಸರ ನಾಶ ಆಗುವ ಸಂಭವ ಕಾಣುವುದಿಲ್ಲ. ಎತ್ತಿನಹೊಳೆ ಯೋಜನೆ ಕುಡಿಯುವ ನೀರಿಗೆ ಮಾತ್ರ ಮತ್ತು ಎತ್ತಿನಹೊಳೆ ಪರಿಸರದ ಮಳೆಗಾಲದ ನೀರನ್ನು ಮಾತ್ರ ಕೊಂಡೊಯ್ಯುವ ಯೋಜನೆ ಆದ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಜನರ ವಿರೋಧ ಕೂಡ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಇಲ್ಲ ಎಂದು ಹೇಳಬೇಕಾಗಿದೆ. ಕುಡಿಯುವ ನೀರಿನ ಯೋಜನೆಗೆ ಒಂದೇ ರಾಜ್ಯದಲ್ಲಿ ಇದ್ದುಕೊಂಡು ಇನ್ನೊಂದು ಭಾಗದ ಜನರಿಗೆ ವಿರೋಧ ವ್ಯಕ್ತಪಡಿಸುವುದು ಅದೂ ತಮ್ಮ ಜಿಲ್ಲೆಗೆ ಯಾವುದೇ ಹಾನಿ ಆಗದೇ ಇರುವ ಸಂದರ್ಭದಲ್ಲಿ ಸರಿ ಎಂದು ಅನಿಸುವುದಿಲ್ಲ. 

ಇನ್ನು ಸಾಗರ ಸೇರುವ ನೀರು ವ್ಯರ್ಥ ಅಲ್ಲ ಎಂಬ ಒಂದು ವಾದ ಕೂಡ ಇದೆ. ಇದರಿಂದ ನೀರಿನ ಜೊತೆಗೆ ಪೋಷಕಾಂಶಗಳು ಸಾಗರ ಸೇರಿ ಮೀನುಗಳ ಸಂತತಿ ಬೆಳೆಯಲು ಸಹಕಾರಿ ಎಂಬುದು ವಾದ. ನೇತ್ರಾವತಿಯ ವಿಷಯದಲ್ಲಿ ಈ ವಾದ ಕೂಡ ಅಪ್ರಸುಸ್ತುತ ಏಕೆಂದರೆ ಎತ್ತಿನ ಹೊಳೆಗಿಂಥ ಕೆಳಗಿನ ಭಾಗದಲ್ಲಿ ಭಾರೀ ಮಳೆಯಾಗುತ್ತದೆ. ಹೀಗಾಗಿ ಸಾಗರ ಸೇರುವ ನೀರಿನ ಪ್ರಮಾಣದಲ್ಲಿ ಎತ್ತಿನಹೊಳೆಯಿಂದ ನೀರನ್ನು ಮಳೆಗಾಲದಲ್ಲಿ ತೆಗೆದು ಬೇರೆ ಕಡೆ ತಿರುಗಿಸಿದರೂ ದೊಡ್ಡ ಮಟ್ಟದ ಇಳಿಕೆ ಆಗುವ ಸಾಧ್ಯತೆ ಇಲ್ಲ. ಇನ್ನು ಜಲಚಕ್ರದ ಬಗ್ಗೆ ಹೇಳುವುದಾದರೆ ನದಿಯ ನೀರು ಸಮುದ್ರ ಸೇರದೆ ಇದ್ದರೂ ಜಲಚಕ್ರ ಪೂರ್ತಿ ಆಗಿಯೇ ಆಗುತ್ತದೆ. ನೀರು ಎಲ್ಲಿದ್ದರೂ ಸೂರ್ಯನ ಬಿಸಿಲಿಗೆ ಆವಿ ಆಗಲೇಬೇಕು. ಇದನ್ನು ತಡೆಯಲು ಸಾಧ್ಯವಿಲ್ಲ. ಹೀಗೆ ಆವಿಯಾದ ನೀರು ಮತ್ತೆ ಮಳೆಯಾಗಿ ಭುವಿಗೆ ಬೀಳಲೇ ಬೇಕು. ಇದನ್ನು ಕೂಡ ತಡೆಯಲು ಸಾಧ್ಯವಿಲ್ಲ.

ಕಳಸಾ ಬಂಡೂರಿ ವಿಷಯದಲ್ಲಿ ಕೂಡ ಗೋವಾದ ವಾದ ಹುರುಳಿಲ್ಲದ್ದು. ಗೋವಾದ ಪರಿಸರ ಕೂಡ ಹೆಚ್ಚು ಕಡಿಮೆ ದಕ್ಷಿಣ ಕನ್ನಡದ ಪರಿಸರದಂತೆಯೇ ಇದೆ. ದಕ್ಷಿಣ ಕನ್ನಡ ಜಿಲ್ಲೆಯಂತೆಯೇ ಅಲ್ಲಿ ಕೂಡ ಸಾಕಷ್ಟು ಮಳೆಯಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ವಿಸ್ತೀರ್ಣ 4559 ಚದರ ಕಿ.ಮೀ. ಆದರೆ ಗೋವಾ ರಾಜ್ಯದ ವಿಸ್ತೀರ್ಣ 3702 ಚದರ ಕಿ.ಮೀ. . ದಕ್ಷಿಣ ಕನ್ನಡ ಜಿಲ್ಲೆಯ ಜನಸಂಖ್ಯೆ 2011 ಜನಗಣತಿ ಪ್ರಕಾರ 20,83,625; ಗೋವಾ ರಾಜ್ಯದ ಜನಸಂಖ್ಯೆ 14,57,723. ಹಾಗೆ ನೋಡಿದರೆ ಗೋವಾ ರಾಜ್ಯ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಗಿಂಥ ಜನಸಂಖ್ಯೆ ಹಾಗೂ ವಿಸ್ತೀರ್ಣ ಎರಡರಲ್ಲಿಯೂ ಸಣ್ಣದು. ಗೋವಾ ರಾಜ್ಯದಲ್ಲಿ ಬೀಳುವ ಮಳೆ ನೀರು ಗೋವಾ ರಾಜ್ಯಕ್ಕೆ ಧಾರಾಳ ಸಾಕು. ಕಳಸಾ ಬಂಡೂರಿಯಿಂದ 7 ಟಿಎಂಸಿ ನೀರನ್ನು ಮಳೆಗಾಲದಲ್ಲಿ ತೆಗೆದು ಬೇರೆ ಕಡೆ ತಿರುಗಿಸುವುದರಿಂದ ಗೋವಾದ ಮೇಲೆ ಯಾವ ತೊಂದರೆಯೂ ಆಗಲಾರದು. ಗೋವಾದ ವಿರೋಧ ಕೂಡ ಭಾವನಾತ್ಮಕ ಹಿನ್ನೆಲೆಯ ರಾಜಕಾರಣಿಗಳಿಂದ ಪ್ರಚೋದಿಸಲ್ಪಟ್ಟ ವಿರೋಧವೇ ಹೊರತು ಅದಕ್ಕೆ ವೈಜ್ಞಾನಿಕ ಕಾರಣಗಳು ಇಲ್ಲ. ನ್ಯಾಯಾಲಯವು ತನ್ನ ಮಧ್ಯಂತರ ತೀರ್ಪಿನಲ್ಲಿ ಜಲಚಕ್ರದ ಬಗ್ಗೆ ಪಾಠ ಮಾಡಿದೆ. ಆದರೆ ಅದು ಸಮಂಜಸವೇನೂ ಅಲ್ಲ. ನದಿಯ ನೀರು 7 ಟಿಎಂಸಿ ಪ್ರಮಾಣದಲ್ಲಿ ಬೇರೆ ಕಡೆ ತಿರುಗಿಸುವುದರಿಂದ ಜಲಚಕ್ರದ ಮೇಲೆ ಒಂದು ಎಳ್ಳುಕಾಳಿನಷ್ಟು ಕೂಡ ಪರಿಣಾಮ ಆಗುವುದಿಲ್ಲ ಏಕೆಂದರೆ ಸಮುದ್ರದ ನೀರಿನ ಮಟ್ಟ ಎಂದೂ ಇಳಿಯಲಾರದು. ವಾಸ್ತವವಾಗಿ ಪಳೆಯುಳಿಕೆ ಇಂಧನ ದಹನದಿಂದ ಭೂತಾಪಮಾನ ಏರಿಕೆಯ ಪರಿಣಾಮವಾಗಿ ಧ್ರುವ ಪ್ರದೇಶದ ಹಿಮ ಕರಗಿ ಸಮುದ್ರದ ಮಟ್ಟ ಹೆಚ್ಚುತ್ತಿದೆ ಎಂದು ವಿಜ್ಞಾನಿಗಳು ಬೊಬ್ಬೆ ಹಾಕುತ್ತಿದ್ದಾರೆ. ಇದು ನ್ಯಾಯಾಧೀಶರಿಗೆ ತಿಳಿಯದೆ ಇರುವುದು ಆಶ್ಚರ್ಯವೇ ಸರಿ.

ಕೊನೆಯದಾಗಿ ಪ್ರಧಾನಿ ಮೋದಿ ಈ ವಿಷಯದಲ್ಲಿ ಸಂಬಂಧಿತ ರಾಜ್ಯಗಳ ರಾಜಕಾರಣಿಗಳನ್ನು ಕರೆದು ಈ ವಿಚಾರವನ್ನು ಪರಿಹರಿಸುವುದು ದೊಡ್ಡ ವಿಷಯವೇ ಅಲ್ಲ. ಪ್ರಧಾನಿ ಮೋದಿ ಹಾಗೂ ಸಂಘ ಪರಿವಾರದವರು ಮಾತಿನಲ್ಲಿ ರಾಷ್ಟ್ರೀಯತೆ ಎಂದು ಬುರುಡೆ ಬಿಡುತ್ತಾರೆ, ಆದರೆ ಪಾಲನೆಯಲ್ಲಿ ಅದನ್ನು ತೋರಿಸುವುದಿಲ್ಲ. ರಾಷ್ಟ್ರೀಯತೆ ಬಗ್ಗೆ ನಿಜವಾಗಿ ಕಾಳಜಿ ಇದ್ದರೆ ಕುಡಿಯುವ ನೀರಿನ ಯೋಜನೆಗೆ ಉದ್ಧೇಶಿಸಿದ ಕಳಸ ಬಂಡೂರಿ ಯೋಜನೆಗೆ ಇರುವ ತೊಡಕನ್ನು ಪ್ರಧಾನಿ ಮೋದಿ ಹಾಗೂ ಸಂಘ ಪರಿವಾರದವರು ಸಂಬಂಧಿತ ರಾಜ್ಯಗಳ ಎಲ್ಲ ರಾಜ್ಯಗಳ ರಾಜಕೀಯ ಪಕ್ಷಗಳ ಸಭೆಯನ್ನು ಕರೆದು ಗೋವಾದ ವಿರೋಧ ಅರ್ಥಹೀನ ಹಾಗೂ ವೈಜ್ಞಾನಿಕ ನೆಲೆಗಟ್ಟಿನ ಮೇಲೆ ನಿಂತ ವಿರೋಧ ಅಲ್ಲ ಎಂದು ಮನವರಿಕೆ ಮಾಡಿಕೊಡಲು ಸಾಧ್ಯವಿದೆ. ಇದು ಒಬ್ಬ ರಾಜಕೀಯ ಮುತ್ಸದ್ಧಿ ಹಾಗೂ ರಾಷ್ಟ್ರೀಯ ಸಂಘಟನೆ ಮಾಡಬೇಕಾದ ಕೆಲಸ. ಮೋದಿ ಸಂಬಂಧಿತ ರಾಜ್ಯಗಳ ಎಲ್ಲ ಪಕ್ಷಗಳ ರಾಜಕಾರಣಿಗಳ ಸಭೆ ಕರೆಯದೆ ತೆಪ್ಪಗೆ ಕುಳಿತಿರುವುದು ಅವರಿಗೆ ನಿಜವಾಗಿ ರಾಷ್ಟ್ರೀಯತೆಯ ಬಗ್ಗೆ ಕಾಳಜಿ ಇಲ್ಲ ಎಂಬುದನ್ನು ತೋರಿಸುತ್ತದೆ. ಅದೇ ರೀತಿ ಸಂಘ ಪರಿವಾರವು ಕೂಡ ಈ ವಿಷಯದಲ್ಲಿ ಗೋವಾ ಜನರಿಗೆ ಅವರ ವಿರೋಧ ಅರ್ಥಹೀನ ಎಂದು ಮನವರಿಕೆ ಮಾಡಿಕೊಡದೆ ಇರುವುದು ಕೂಡ ಒಂದು ಲೋಪವೇ ಸರಿ.