ಜುಲೈ 8, 2015

ವಾಡಿ ಜಂಕ್ಷನ್ .... ಭಾಗ 14

wadi junction
Ashok K R
ಸಂತೋಷಾನಂದ ಸ್ವಾಮಿಗಳ ಆಶ್ರಮಕ್ಕೆ ಕ್ರಾಂತಿ ಕಾಲಿಟ್ಟ ಮೊದಲ ದಿನ ಆಶ್ರಮದ ವಾತಾವರಣದಿಂದ ಉಲ್ಲಸಿತನಾದ. ಹೊಸ ಆಶ್ರಮವಿದು, ಹಣದ ಅಭಾವವಿರಬೇಕು. ಹೆಚ್ಚೆಚ್ಚು ಹಣ ಸೇರಿದಂತೆಲ್ಲಾ ಉಳಿದ ಆಶ್ರಮದ ವೈಭೋಗ, ಐಷಾರಾಮಿತನ ಇಲ್ಲಿಗೂ ಬಂದುಬಿಡಬಹುದೆಂಬ ಅನುಮಾನವೂ ಇತ್ತು. ಧ್ಯಾನದ ಸಮಯ ಮುಗಿದ ನಂತರ ಪ್ರತೀ ದಿನ ಸಂಜೆ ಭಕ್ತರಿಗೂ ಸ್ವಾಮಿಗೂ ಚರ್ಚೆ ನಡೆಯುತ್ತಿತ್ತು. ಬಹಳಷ್ಟು ಚರ್ಚೆಗಳು ಆಧ್ಯಾತ್ಮದ ಬಗ್ಗೆ, ದೇವರ ಬಗ್ಗೆ, ಧ್ಯಾನ – ಜಪ – ತಪ – ಮಂತ್ರಗಳ ಬಗ್ಗೆ. ಲೌಕಿಕದ ಚರ್ಚೆಗೂ ಸ್ವಾಮಿಗಳು ತೆರೆದುಕೊಂಡಿದ್ದರು. ತಮ್ಮ ಪೂರ್ವಾಶ್ರಮದ ನೆನಪುಗಳನ್ನು ಅಗತ್ಯ ಬಿದ್ದಾಗ ಹೇಳುತ್ತಿದ್ದರು. ಕ್ರಾಂತಿ ಭೇಟಿ ಕೊಟ್ಟ ಎರಡನೆಯ ದಿನ ರಾಜಕೀಯದ ಚರ್ಚೆ ನಡೆದಿತ್ತು. ಅನ್ಯ ಧರ್ಮ ದ್ವೇಷ, ಏಕಪಕ್ಷವಾದ ಸ್ವಾಮಿಗಳ ಮಾತಿನಲ್ಲಿರಲಿಲ್ಲ. ಯಾವುದೇ ವಿಷಯವಾದರೂ ಅದರಲ್ಲಿನ ಒಳಿತು – ಕೆಡುಕುಗಳೆರಡರ ಮುಖವನ್ನು ಬಣ್ಣಿಸುತ್ತಿದ್ದರು. ನೂರು ಪ್ರತಿಶತಃ ಒಳ್ಳೆಯತನ ಹೇಗೆ ಸಾಧ್ಯವಿಲ್ಲವೋ ನೂರು ಪ್ರತಿಶತಃ ಕೆಡುಕೂ ಸಾಧ್ಯವಿಲ್ಲ ಎಂದವರ ನಿಲುವಾಗಿತ್ತು. ಎರಡು ಭೇಟಿಯಲ್ಲೇ ಆಶ್ರಮದ ಪರಿಸರ, ಸ್ವಾಮಿಗಳ ಮಾತುಗಳೊಂದಿಗಿನ ಒಡನಾಟ ಕ್ರಾಂತಿಗೆ ಪ್ರಿಯವಾಗಿತ್ತು. ಆದರೆ ಇಂದವರು ಜ್ಞಾನಿಯನ್ನು ಮಕ್ಕಳ ಮನಸ್ಥಿತಿಗೆ ಹೋಲಿಸಿದ್ದು ಒಪ್ಪಿಗೆಯಾಗಲಿಲ್ಲ. ಪ್ರಶ್ನೆ ಕೇಳೇಬಿಡೋಣ ಎಂದುಕೊಂಡವನಿಗೆ ಪ್ರಶ್ನೋತ್ತರ ಅವಧಿ ಮುಗಿದಿದ್ದು ಬೇಸರ ಮೂಡಿಸಿತು. ತನ್ನೊಳಗೆ ಮೂಡಿದ ಪ್ರಶ್ನೆಯನ್ನೇ ಮನನ ಮಾಡುತ್ತ ಆ ಪ್ರಶ್ನೆ ಸರಿಯಿದೆಯಾ ಎಂದು ಯೋಚಿಸುತ್ತಾ ಕುಳಿತವನನ್ನು ಸ್ವಾಮಿಗಳ ದೀಕ್ಷೆ ಪಡೆಯದ ಶಿಷ್ಯನೊಬ್ಬ ಬಂದು ಎಚ್ಚರಿಸಿದ. ಬಾಗಿಲು ಹಾಕುವ ಸಮಯವಾಯಿತು, ಹೊರಡಬೇಕು ಎಂದು ಸೂಚಿಸಿದ.
“ಸ್ವಾಮಿಗಳಲ್ಲಿ ನನ್ನ ಸಂಶಯ ಪರಿಹರಿಸಿಕೊಳ್ಳಬೇಕು”

“ಇವತ್ತಿನ ಭೇಟಿಯ ಸಮಯ ಮುಗಿಯಿತಲ್ಲ. ನಾಳೆ ಕೇಳಿದರಾಗದೆ”

“ಇಲ್ಲ. ಇವತ್ತವರು ಜ್ಞಾನಿಯ ಬಗ್ಗೆ ಹೇಳಿದ ಮಾತಿನಿಂದಲೇ ನನ್ನಲ್ಲಿ ಪ್ರಶ್ನೆಗಳುಟ್ಟಿವೆ. ನಾಳೆಯಷ್ಟೊತ್ತಿಗೆ ಆ ಪ್ರಶ್ನೆಯೇ ಅರ್ಥವಿಲ್ಲದ್ದು ಎನ್ನಿಸಿಬಿಡಬಹುದು. ಹಾಗಾಗಿ ಇವತ್ತೇ ಕೇಳಬೇಕು”

“ಮ್. … ಸರಿ. ಒಂದು ಕೆಲಸ ಮಾಡಿ. ದೇವಾಲಯದ ಹಿಂದಿರುವ ಕೈದೋಟದ ಬಳಿ ಬನ್ನಿ. ಸ್ವಾಮಿಗಳನ್ನೊಮ್ಮೆ ಕೇಳಿ ನೋಡುತ್ತೇನೆ. ಅವರು ಅನುಮತಿ ಕೊಟ್ಟರೆ ಅಲ್ಲೇ ಭೇಟಿಯಾಗಿ ಪ್ರಶ್ನೆ ಕೇಳಬಹುದು”

ಇಬ್ಬರೂ ಕೈದೋಟದ ಬಳಿ ಬಂದರು. ಆಗಲೇ ಕತ್ತಲಾಗಿತ್ತು. ತೋಟದ ಮಧ್ಯೆ ಮಧ್ಯೆ ಸೋಲಾರ್ ದೀಪಗಳು ಉರಿಯುತ್ತಿದ್ದವು. ಸ್ವಾಮಿಗಳು ಗಿಡಗಳೊಡನೆ ಸಂವಾದಿಸುತ್ತಾ ನಿಧಾನಕ್ಕೆ ಹೆಜ್ಜೆ ಹಾಕುತ್ತಿದ್ದರು. ‘ನೀವಿಲ್ಲೇ ಇರಿ’ ಎಂದು ಹೇಳಿದ ಶಿಷ್ಯ ಸ್ವಾಮಿಗಳ ಬಳಿಗೆ ಹೋಗಿ ವಿಷಯ ತಿಳಿಸಿದ. ಸ್ವಾಮಿಗಳು ಕ್ರಾಂತಿಯೆಡೆಗೆ ನೋಡಿ ಬರುವಂತೆ ಕೈಸನ್ನೆ ಮಾಡಿದರು. ಶಿಷ್ಯ ದೇವಸ್ಥಾನದ ಕಡೆಗೆ ತೆರಳಿದ.

ಗಿಡಗಳ ಮೈದಡವುತ್ತಾ “ಹೇಳಿ” ಎಂದರು ಸ್ವಾಮಿಗಳು.

“ಇಂದು ನೀವು ಜ್ಞಾನಿಗಳ ಬಗ್ಗೆ ಹೇಳಿದ್ದು ನನಗೆ ಸಮಾಧಾನ ತರಲಿಲ್ಲ”

“ಯಾಕೆ? ಉತ್ತರ ಅಪೂರ್ಣವೆನ್ನಿಸಿತೆ”

“ಪೂರ್ಣವೋ ಅಪೂರ್ಣವೋ ತಿಳಿಯಲಿಲ್ಲ. ಆದರೆ ಭೂತವನ್ನು ಮರೆತು ವರ್ತಮಾನದಲ್ಲೇ ಇರಬೇಕು ಎಂದಿದ್ದು ಸರಿ ಕಾಣಲಿಲ್ಲ. ನಿಮ್ಮ ಮಾತಿನ ಪ್ರಕಾರವೇ ಹೋದರೆ ನೀವಿವತ್ತು ಹೇಳಿದ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರೆ ಅದನ್ನು ಇಂದೇ ಅಳವಡಿಸಿಕೊಳ್ಳಬೇಕು. ಏಕೆಂದರೆ ನಾಳೆಯೆಂಬ ವರ್ತಮಾನದಲ್ಲಿ ಇಂದೆಂಬ ಭೂತದ ಯಾವುದೇ ನೆನಪೂ ಇರುವುದಿಲ್ಲವಲ್ಲ; ಇರಬಾರದೆಂದು ನೀವು ಹೇಳುತ್ತೀರ”

ಪ್ರಶ್ನೆ ಕೇಳಿದವನ ಜಾಣ್ಮೆಗೆ ಮೆಚ್ಚಿ ಗಿಡಗಳ ಬಳಿ ಮೊಣಕಾಲಿನಲ್ಲಿ ಕುಳಿತಿದ್ದ ಸ್ವಾಮಿಗಳು ಮೇಲೆದ್ದು ಕ್ರಾಂತಿ ಸಂಭವನನ್ನು ನೋಡಿದರು. 

“ಏನ್ ಓದ್ತಾ ಇದ್ದೀರಾ ನೀವು”

“ಫಸ್ಟ್ ಇಯರ್ ಎಂಬಿಬಿಎಸ್”

“ಸಂತೋಷ. ನಿಮ್ಮ ಪ್ರಶ್ನೆ ಸಮಂಜಸವಾಗಿದೆ. ಈ ರೀತಿ ಪ್ರಶ್ನೆ ಮಾಡುವವರ ಸಂಖೈ ಇತ್ತೀಚಿನ ದಿನಗಳಲ್ಲಿ ತುಂಬಾ ಕಡಿಮೆ” ತಾವು ಧರಿಸಿದ ಖಾವಿಯನ್ನೊಮ್ಮೆ ದಿಟ್ಟಿಸಿ “ಈ ಯುನಿಫಾರ್ಮನ್ನು ಧರಿಸಿದವರು ಏನು ಮಾತನಾಡಿದರೂ, ಒದರಿದರೂ ಅದು ಸರಿಯಾಗೇ ಇರುತ್ತದೆ ಎಂಬ ಮೌಡ್ಯ ನಮ್ಮ ಜನರಲ್ಲಿ. ಕಾಲ ಸವೆದಂತೆ ಆ ಮೌಡ್ಯವೂ ಹೆಚ್ಚುತ್ತಿರುವುದು ವಿಷಾದನೀಯ. ಜ್ಞಾನಿಯಾದವನಿಗೆ ಮಕ್ಕಳ ಮನಸ್ಥಿತಿ ಇರಬೇಕೆಂದು ಹೇಳಿದ್ದು ಭೂತದಲ್ಲಿ ನಡೆದ ಕಷ್ಟಗಳಿಗೆ – ದುರ್ಘಟನೆಗಳಿಗೆ ಮಾತ್ರ ಅನ್ವಯ ಮಾಡಿಕೊಳ್ಳಬೇಕು. ಭೂತದಲ್ಲಿನ ಒಳ್ಳೆಯ ವಿಚಾರಗಳಿಗಲ್ಲ! ಒಳ್ಳೆಯ ವಿಚಾರಗಳನ್ನು ನೆನಪಿಟ್ಟುಕೊಂಡು ಕೆಟ್ಟ ಸಂಗತಿಗಳನ್ನು ಮರೆತಾಗ ಕೊನೆಗೆ ನಮ್ಮಲ್ಲಿ ಒಳ್ಳೆ ಸಂಗತಿ, ವಿಚಾರಗಳು ಮಾತ್ರ ಉಳಿಯುತ್ತವೆ. ಜನರಿಗೆ ಸುಲಭವಾಗಿ ಅರ್ಥವಾಗಲೆಂದು ಮಕ್ಕಳ ಉದಾಹರಣೆಯನ್ನು ಹೇಳಿದ್ದು”

“ಸರಿ. ಚರ್ಚೆಯ ಸಂದರ್ಭದಲ್ಲೂ ನೀವು ಪೂರ್ತಿಯಾಗಿ ಹೇಳಬೇಕಿತ್ತಲ್ಲವೇ?”

“ನಿಜ. ಉದಾಹರಣೆಯ ಜೊತೆಗೆ ಹೇಳಿದರೂ ಪೂರ್ಣವಾಗಿ ಬಿಡಿಸಿ ತಿಳಿಸಬೇಕಿತ್ತು. ಕೆಲವರು ಅರ್ಧ ಕೇಳಿಸಿಕೊಂಡು ಪೂರ್ತಿ ಅರ್ಥ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಪೂರ್ತಿ ಕೇಳಿಸಿಕೊಂಡು ಏನನ್ನೂ ಅರ್ಥೈಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಸರ್ವಸಂಗ ಪರಿತ್ಯಾಗಿಗಳೆನ್ನಿಸಿಕೊಂಡ ನಮಗೂ ಬೌದ್ಧಿಕ ಅಹಂಕಾರ ಕೆರಳಿದಂತಾಗಿ ‘ಈ ದಡ್ಡರಿಗೆ ಎಷ್ಟು ಹೇಳಿದರೂ ಅಷ್ಟೇ’ ಎಂಬ ಭಾವನೆಯಿಂದ ಅರ್ಧಕ್ಕೇ ಉಪನ್ಯಾಸವನ್ನು ಮೊಟಕುಗೊಳಿಸಿಬಿಡುತ್ತೇವೆ” ಇಬ್ಬರೂ ಜೋರಾಗಿಯೇ ನಕ್ಕರು.

“ಸರಿ ಸ್ವಾಮೀಜಿ. ನಾನಿನ್ನು ಬರುತ್ತೇನೆ”

“ಸಂತೋಷ. ಬರ್ತಾ ಇರಿ ಆಗಾಗ. ಅಂದಹಾಗೆ ನಿಮ್ಮ ಹೆಸರು”

“ಕ್ರಾಂತಿ ಸಂಭವ್ ಅಂಥ. ಹೋಗಿ ಬರ್ತೀನಿ ಸ್ವಾಮೀಜಿ” ಎಂದ್ಹೇಳಿ ಹೊರಟ.

ದೇವಾಲಯದ ಹಿಂದೆ ನಿಂತಿದ್ದ ಶಿಷ್ಯನೊಬ್ಬ ಕ್ರಾಂತಿಯನ್ನು ನಿಲ್ಲಿಸಿ “ಸ್ವಾಮಿಗಳಿಂದ ಬೀಳ್ಕೊಡುವಾಗ ಅವರ ಪಾದಕ್ಕೆ ನಮಸ್ಕರಿಸಬೇಕೆಂಬುದೂ ತಿಳಿಯದೆ?” ಕೋಪದಿಂದ ಹೇಳಿದ.



“ಹೌದೇ ಗೊತ್ತಿರಲಿಲ್ಲ” ಗುರುವೊಬ್ಬ ಸಿಕ್ಕ ಸಂತಸದಲ್ಲಿ ಶಿಷ್ಯನ ಕೋಪದ ಅರಿವಾಗಲಿಲ್ಲ ಕ್ರಾಂತಿ ಸಂಭವನಿಗೆ.

ಜುಲೈ 1, 2015

ವಾಡಿ ಜಂಕ್ಷನ್ .... ಭಾಗ 13

wadi junction
Dr Ashok K R
ಜ್ಞಾನಿ ಎಂದರ್ಯಾರು? ಭಕ್ತರೊಬ್ಬರು ಪ್ರಶ್ನಿಸಿದರು. ಸ್ವಾಮಿಗಳು ಆವರಣದಲ್ಲಿ ಬೆಳೆಸಿದ್ದ ಗಿಡಗಳ ಮಧ್ಯೆ ಆಟವಾಡುತ್ತಿದ್ದ ಇಬ್ಬರು ಮಕ್ಕಳೆಡೆಗೆ ದೃಷ್ಟಿ ಹರಿಸಿದರು. ಸಂಪಿಗೆ ಮರದಿಂದ ಉದುರಿ ಬಿದ್ದಿದ್ದ ಹೂವುಗಳನ್ನು ಸಂಗ್ರಹಿಸಿ ನಂದಿ ವಿಗ್ರಹದ ಮುಂದೆ ಹಾಕುತ್ತಿದ್ದರು. ಬಿದ್ದಿದ್ದ ಹೂವುಗಳು ಖಾಲಿಯಾಯಿತು. ಹೂವಿಂದ ಹೂವಿಗೆ ಹಾರಿ ಆಹಾರ ಸಂಗ್ರಹಿಸುತ್ತಿದ್ದ ಚಿಟ್ಟೆಗಳ ಬೆನ್ನುಬಿದ್ದರು. ಅವರ ಆಟಗಳನ್ನು ನೋಡಿ ಮೆಲುನಗುತ್ತಾ ಪ್ರಶ್ನೆ ಕೇಳಿದ ಭಕ್ತರೆಡೆಗೆ ನೋಡಿದರು.

“ಜ್ಞಾನಿ ಎಂದರೆ ಮಕ್ಕಳ ಮನಸ್ಥಿತಿಯುಳ್ಳವನು”

“ಅಂದರೆ”
“ಒಂದು ಆಟ – ಘಟನೆಯಿಂದ ಮತ್ತೊಂದು ಆಟಕ್ಕೆ ಮುಂದುವರೆದಾಗ ಮಕ್ಕಳ ಮನದಲ್ಲಿ ಹಳೆಯ ಆಟದ ಭಾರವಿರುವುದಿಲ್ಲ. ಹಳೆಯ ಘಟನೆಯ ಭಾರವಿರುವುದಿಲ್ಲ. ಭೂತದಲ್ಲಿ ನಡೆದ ಘಟನೆಯ ಅಂತ್ಯದೊಂದಿಗೇ ಅದನ್ನವರು ಮರೆತುಬಿಡುವ ಕಾರಣ ವರ್ತಮಾನದಲ್ಲವರು ಸಂತಸದಿಂದಿರುತ್ತಾರೆ. ಬೇಸರ ಮೂಡಿಸಿದ, ಅಳು ತರಿಸಿದ ಘಟನೆಯನ್ನೂ ಮಕ್ಕಳು ಬಹು ಸುಲಭವಾಗಿ ಮರೆತುಬಿಡುತ್ತಾರೆ. ದೊಡ್ಡವರಾಗುತ್ತಿದ್ದ ಹಾಗೆ ಭೂತದ ಸಂಗತಿಗಳಿಗೆ ಮಹತ್ವಕೊಟ್ಟು, ಅವುಗಳ ಬಗೆಗೇ ಚಿಂತಿಸಿ ಮಂಥಿಸಿ ವರ್ತಮಾನದಲ್ಲಿನ ಸಂತೋಷವನ್ನು ಅನುಭವಿಸುವುದಕ್ಕೆ ಮರೆತುಬಿಡುತ್ತಾರೆ. ಸೇಡು, ದ್ವೇಷಗಳೆಲ್ಲ ಮನಸ್ಸಲ್ಲಿ ಉಳಿದು ಬೆಳೆಯುವುದಕ್ಕೆ ಭೂತದ ಮೇಲಿನ ಅತಿಯಾದ ಅವಲಂಬನೆಯೇ ಕಾರಣ. ದೊಡ್ಡವರಾದ ಮೇಲೂ ಯಾರು ಭೂತದ ಭಾರವಿಲ್ಲದೆ ವರ್ತಮಾನದಲ್ಲಿ ಖುಷಿಯಾಗಿರುವ ಮಕ್ಕಳ ಮನಸ್ಥಿತಿಯನ್ನುಳಿಸಿಕೊಳ್ಳುತ್ತಾರೋ ಅವರೇ ಜ್ಞಾನಿಗಳು” ಸ್ವಾಮಿಗಳ ಉತ್ತರ ಪ್ರಶ್ನೆ ಕೇಳಿದ ಭಕ್ತರಿಗೆ ತೃಪ್ತಿ ನೀಡಿತು. ಅವತ್ತಿನ ಪ್ರಶ್ನೋತ್ತರ ವೇಳೆ ಮುಗಿದ ಕಾರಣ ಸ್ವಾಮಿಗಳು ಅವರೇ ಆರೈಕೆ ಮಾಡುತ್ತಿದ್ದ ಕೈದೋಟದ ಕಡೆಗೆ ಹೊರಟರು. ಇದ್ದ ಹದಿನೈದು ಮಂದಿ ಭಕ್ತರಲ್ಲಿ ಎಲ್ಲರೂ ಹೊರಟರು, ಕ್ರಾಂತಿ ಸಂಭವನ ಹೊರತಾಗಿ. ಸಂತೋಷಾನಂದ ಸ್ವಾಮಿಗಳ ಆಶ್ರಮಕ್ಕೆ ಕ್ರಾಂತಿ ಬರುತ್ತಿದ್ದುದು ಇದು ಮೂರನೇ ಬಾರಿ. ಗೆಳೆಯರಿಗೆ ತಿಳಿಯದಂತೆ ಬೇಸರವಾದಾಗಲೆಲ್ಲ ಆತ ಮೈಸೂರಿನಲ್ಲಿರುವ ಆಶ್ರಮಗಳಿಗೆ ಭೇಟಿ ನೀಡುತ್ತಿದ್ದ. ಧ್ಯಾನದಲ್ಲಿ, ಸ್ವಾಮಿಗಳ ಭಾಷಣ, ಆಶೀರ್ವಚನಗಳಲ್ಲಿ ಭಾಗವಹಿಸುತ್ತಿದ್ದ. ತಿಂಗಳೊಪ್ಪತ್ತಿನಲ್ಲಿ ಧ್ಯಾನ – ಆಧ್ಯಾತ್ಮವೆಲ್ಲವೂ ವ್ಯಾಪಾರದ ಸರಕಾಗಿರುವುದನ್ನು ಅರಿತುಕೊಂಡ. ಶಾಂತಿ ದೊರಕಿಸಬೇಕಾದ ಆಶ್ರಮಗಳಲ್ಲಿ ವೈಭವಕ್ಕೇ ಹೆಚ್ಚು ಪ್ರಾಮುಖ್ಯತೆ. ಸರಳತೆ ಭೋದಿಸುವ ಆಶ್ರಮಗಳಲ್ಲಿ ನೆಲಹಾಸಿಗೆಗೆ ಮಾರ್ಬಲ್ಲು, ಗ್ರಾನೈಟು; ಬಾಗಿಲು, ಕಂಬಗಳಲ್ಲಿ ತೇಗ. ಮುಖ್ಯಮೂರುತಿಯ ಬಾಗಿಲಿಗೆ ಶ್ರೀಗಂಧದ ಉಪಯೋಗವೂ ಇದ್ದೀತು. ಶಾಂತಿ ಬೋಧಿಸುವ ಆಶ್ರಮಗಳಲ್ಲಿ ಸ್ವಾಮೀಜಿ ಎನ್ನಿಸಿಕೊಂಡವರಿಂದಲೇ ಕೇಳುಗರನ್ನು ಉದ್ವೇಗಕ್ಕೊಳಪಡಿಸಿ ಹಿಂಸೆಗೆ ಪ್ರಚೋದಿಸುವಂತಹ ಪರಧರ್ಮ ನಿಂದನೆ. ಭಾರತದ ಗತವೈಭವವನ್ನು ಅಗತ್ಯಕ್ಕಿಂತ ಹೆಚ್ಚಿಗೆ ಹೊಗಳುತ್ತಾ ಇಂದಿನ ಸರ್ವಸಂಕಷ್ಟಗಳಿಗೂ ಭಾರತದ ಮೇಲೆ ದಂಡೆತ್ತಿ ಬಂದ ಸಾಬರು ಮತ್ತು ಕ್ರೈಸ್ತರನ್ನೇ ಹೊಣೆಯಾಗಿಸುವ ಮಾತುಗಳನ್ನು ಹೆಣೆಯುವಲ್ಲಿ ಸಿದ್ಧ ಹಸ್ತರು. ಆಧ್ಯಾತ್ಮಕ್ಕೆ ಮನಶ್ಯಾಂತಿಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳಿದರೆ ‘ಅದರ ಬಗ್ಗೆ ನಾನೊಂದು ಪುಸ್ತಕ ಬರೆದಿದ್ದೇನೆ. ನಮ್ಮ ಆಫೀಸಿನಲ್ಲೇ ದೊರೆಯುತ್ತದೆ. ಕೊಂಡು ಓದಿ’ ಎಂದು ಬಿಡುತ್ತಿದ್ದರು! ಪುಸ್ತಕದ ಬೆಲೆ ವಿದ್ಯಾರ್ಥಿಗಳ ಕೈಗೆಟುಕದಂತಿತ್ತು. ಕೆಲವರ ಮಾತುಗಳಲ್ಲಿ ಸತ್ವವಿದೆ ಎನ್ನಿಸುತ್ತಿತ್ತಾದರೂ ಸಂಸ್ಕೃತವನ್ನು ಜಾಸ್ತಿ ಬಳಸಿ ಪೂರ್ಣವಾಗಿ ಅರ್ಥವಾಗದಂತೆ ಮಾಡಿಬಿಡುತ್ತಿದ್ದರು. ಮನದ ಗೊಂದಲಗಳನ್ನು ನಿವಾರಿಸಿಕೊಂಡು ನೆಮ್ಮದಿಯನ್ನರಸಿ ಆಶ್ರಮದ ಕಡೆಗೆ ಮುಖಮಾಡಿದ ಕ್ರಾಂತಿಗೆ ಇರುವ ಗೊಂದಲಗಳ ಜೊತೆಜೊತೆಗೆ ಆಶ್ರಮ – ಸನ್ಯಾಸಿ – ಸ್ವಾಮೀಜಿ – ಆಧ್ಯಾತ್ಮದ ಬಗೆಗಿನ ಗೊಂದಲಗಳು ಸೇರಿಕೊಂಡವು. ಒಂದು ಘಂಟೆ ಆಶ್ರಮದಲ್ಲಿ ಕಳೆಯಬೇಕೆಂದು ಬಂದು ಐದತ್ತು ನಿಮಿಷಕ್ಕೇ ಎದ್ದು ಹೋಗಿಬಿಡುತ್ತಿದ್ದ. ಆಗಷ್ಟೇ ಕಲಿತಿದ್ದ ಸಿಗರೇಟನ್ನು ಹತ್ತಿರದ ಅಂಗಡಿಯಲ್ಲಿ ಸೇದಿ ಕಾಲುಗಳು ಕರೆದುಕೊಂಡು ಹೋದ ಕಡೆಗೆ ತಿರುಗುತ್ತಿದ್ದ. ಹಾಗೆ ಅಲೆಯುವಾಗೊಮ್ಮೆ ಸಂತೋಷಾನಂದ ಸ್ವಾಮಿಗಳ ಆಶ್ರಮ ಕಣ್ಣಿಗೆ ಬಿತ್ತು. ಒಂಟಿಕೊಪ್ಪಲಿನಿಂದ ಕೆ.ಆರ್.ಎಸ್ ಕಡೆಗೆ ಹೋಗುವ ರಸ್ತೆಯಲ್ಲಿ ಒಂದು ಕಿಮಿ ಸಾಗಿ ಎಡಕ್ಕೆ ತಿರುಗಿ ಇಳಿಜಾರು ರಸ್ತೆಯಲ್ಲಿ ಮತ್ತೆ ಅರ್ಧ ಕಿಮಿ ನಡೆದು ಬಲಕ್ಕಿರುವ ಮಣ್ಣಿನ ರಸ್ತೆಯಲ್ಲಿ ಸಾಗಿದರೆ ಕೊನೆಯಲ್ಲಿದೆ ಸಂತೋಷಾನಂದ ಸ್ವಾಮಿಗಳ ಆಶ್ರಮ. ಒಂದೂವರೆ ಎಕರೆ ಪ್ರದೇಶದಲ್ಲಿ ಆಶ್ರಮ ವಿಸ್ತರಿಸಿಕೊಂಡಿದೆ. ಗೇಟು ದಾಟಿ ಹತ್ತು ಹೆಜ್ಜೆ ಹಾಕಿದರೆ ಬಲಗಡೆಗೆ ಧ್ಯಾನ ಮಂದಿರವಿದೆ. ಬೆಳಿಗ್ಗೆ ಐದರಿಂದ ಆರು ಮತ್ತು ಸಂಜೆ ಆರರಿಂದ ಏಳರವರೆಗೆ ಸ್ವತಃ ಸ್ವಾಮೀಜಿಗಳು ಧ್ಯಾನದಲ್ಲಿ ಭಾಗವಹಿಸುತ್ತಾರೆ ದೀಕ್ಷೆ ಪಡೆದುಕೊಂಡ ಮತ್ತು ಪಡೆದುಕೊಳ್ಳದ ತಮ್ಮೈದು ಶಿಷ್ಯರೊಂದಿಗೆ. ಬೆಳಕಿನ ಕಿರಣಗಳು ನಿರ್ಗಮಿಸುವ ಮುನ್ನ ಧ್ಯಾನವೂ ಮುಗಿಯಬೇಕೆಂಬ ಉದ್ದೇಶದಿಂದ ಸಂಜೆಯ ಧ್ಯಾನದ ಸಮಯ ಐದರಿಂದ ಆರರವರೆಗಿತ್ತು. ನಗರದೊಳಗೆ ಕೆಲಸಕ್ಕೋಗುವ ಕೆಲವು ಭಕ್ತಾದಿಗಳಿಗೆ ಆ ಸಮಯ ಹೊಂದುತ್ತಿರಲಿಲ್ಲವಾದ ಕಾರಣ ಸಮಯ ಬದಲಿಸಿದ್ದರು. ಧ್ಯಾನ ಮಂದಿರದ ಹಿಂದೆಯೇ ಸ್ವಾಮಿಗಳ ಕೋಣೆಯಿತ್ತು. ಧ್ಯಾನಮಂದಿರದ ಎದುರಿಗಿರುವ ಆವರಣದಲ್ಲಿ ಭಕ್ತರೊಬ್ಬರು ಕೊಟ್ಟ ನಂದಿ ವಿಗ್ರಹವಿತ್ತು. ವಿಗ್ರಹಗಳನ್ನು ಕೊಡುಗೆಯಾಗಿ ಸ್ವಾಮಿಗಳು ಸ್ವೀಕರಿಸುತ್ತಿರಲಿಲ್ಲ; ಒಂದೂವರೆ ಎಕರೆಯನ್ನು ಆಶ್ರಮದ ಸಲುವಾಗಿ ಒಂದು ರುಪಾಯಿಗೆ ಬರೆದುಕೊಟ್ಟ ಭಕ್ತರು ಆ ವಿಗ್ರಹವನ್ನು ನೀಡಿದ್ದರಿಂದಾಗಿ ನಿರಾಕರಿಸಲು ಸಾಧ್ಯವಾಗಲಿಲ್ಲ. ಕಚ್ಚಾ ರಸ್ತೆಯಲ್ಲಿ ಮತ್ತಷ್ಟು ಒಳ ಸರಿದರೆ ದೇವಸ್ಥಾನವಿತ್ತು. ದೇವರಿಲ್ಲದ ದೇವಸ್ಥಾನವದು. ದೇವಾಲಯದ ಒಳಗೆ ಆಳೆತ್ತರದ ಏಕಶಿಲೆಯಿತ್ತು. ಯಾವುದೇ ಕೆತ್ತನೆಗಳಿರಲಿಲ್ಲ. ಆ ಶಿಲೆಗೆ ಅರಿಶಿಣ – ಕುಂಕುಮ ಹಚ್ಚುತ್ತಿರಲಿಲ್ಲ, ಹೂವು ಮುಡಿಸುತ್ತಿರಲಿಲ್ಲ. ಬೆಳಿಗ್ಗೆ ಮತ್ತು ಸಂಜೆ ಧ್ಯಾನದ ನಂತರ ಸ್ವಾಮಿಗಳ ಶಿಷ್ಯರೊಬ್ಬರು ಏಕಶಿಲೆಗೆ ಪೂಜೆ ಸಲ್ಲಿಸುತ್ತಿದ್ದರು, ಮಂಗಳಾರತಿ ಬೆಳಗುವುದರ ಮೂಲಕ ಮತ್ತು ನಾಲ್ಕು ಸುಗಂಧದ ಕಡ್ಡಿಯನ್ನು ಶಿಲೆಯ ಬುಡದಲ್ಲಿಡುವುದರ ಮೂಲಕ. ಸಂತೋಷಾನಂದ ಸ್ವಾಮಿಗಳು ವಿಗ್ರಹಾರಾಧಕರಲ್ಲ. ಪೂಜೆಯ ಅಂಶವಿರದಿದ್ದರೆ, ಪ್ರಸಾದದ ಆಕರ್ಷಣೆಯಿರದಿದ್ದರೆ ಭಕ್ತಾದಿಗಳನ್ನು ಸೆಳೆಯುವುದು ಕಷ್ಟ ಎಂಬ ಟ್ರಸ್ಟಿಗಳೆಂಬ ಹಿತೈಷಿಗಳ ಮಾತಿಗೆ ಕಟ್ಟುಬಿದ್ದು ದೇವಾಲಯವನ್ನು ಕಟ್ಟಿಸಿದರು. ಯಾವ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕೆಂದು ಟ್ರಸ್ಟಿಗಳ ಮಧ್ಯೆಯೇ ಜೋರು ಗಲಾಟೆಯಾಯಿತು. ವಿಗ್ರಹಾರಾಧನೆಯನ್ನು ಇಷ್ಟಪಡದ ಸ್ವಾಮಿಗಳಿಗೆ ಇದರಿಂದ ಅನುಕೂಲವೇ ಆಯಿತು. ಒಂದು ದೊಡ್ಡ ಏಕಶಿಲೆಯನ್ನು ಪ್ರತಿಷ್ಠಾಪಿಸೋಣ, ಯಾವ ಮೂರ್ತಿಯನ್ನು ಕೆತ್ತಬೇಕೆಂದು ನಂತರ ನಿರ್ಧರಿಸಿದರಾಯಿತು ಎಂದು ಹೇಳಿದರು. ಮೊದಲು ದೇವಾಲಯ ಪ್ರಾರಂಭವಾಗಲಿ ನಂತರ ಮಿಕ್ಕಿದ್ದು ಎಂದು ಟ್ರಸ್ಟಿಗಳೂ ಸಮಾಧಾನ ಪಟ್ಟುಕೊಂಡರು. ದೇವಾಲಯದ ಹಿಂದೆ ಇನ್ನುಳಿದ ಜಾಗದಲ್ಲಿ ಕೈತೋ ಮಾಡಿಕೊಂಡಿದ್ದರು. ಆಶ್ರಮದಲ್ಲಿರುವವರ ನಿತ್ಯಾಹಾರಕ್ಕೆ ಬೇಕಾದ ತರಕಾರಿಗಳನ್ನು ಅಲ್ಲೇ ಸ್ವಾಮಿಗಳ ಮುಂದಾಳತ್ವದಲ್ಲಿ ಬೆಳೆಯಲಾಗುತ್ತಿತ್ತು. ಸೀಮಿತ ಸ್ಥಳದಲ್ಲಿ ಬೆಳೆಯಲಾಗದ ವಸ್ತುಗಳನ್ನು ಮಾತ್ರ ಹೊರಗಿನಿಂದ ತರುತ್ತಿದ್ದರು. ಆಶ್ರಮ ಪ್ರಾರಂಭವಾಗಿ ಮೂರು ವರುಷಗಳಾಗಿತ್ತಷ್ಟೇ. ಭಕ್ತರ ಸಂಖ್ಯೆಯಲ್ಲಿ ತುಂಬಾ ಏರಿಕೆಯೇನೂ ಇರಲಿಲ್ಲ. ದೇವಾಲಯದಲ್ಲಿ ವಿಶೇಷ ಪೂಜಾ ದಿನಗಳು ಇರದಿದ್ದುದೂ ಜನರು ಬರದಿರಲು ಕಾರಣ. ಬರುವ ಭಕ್ತರು ಮತ್ತೆ ಬೇರೆ ಆಶ್ರಮದೆಡೆಗೆ ಹೋಗುತ್ತಿರಲಿಲ್ಲ ಎಂಬುದೂ ಸತ್ಯ.

ಜೂನ್ 3, 2015

ವಾಡಿ ಜಂಕ್ಷನ್ .... ಭಾಗ 12

wadi junction
Dr Ashok K R
ಜಯಂತಿಯ ಬಗೆಗಿನ ನೆನಪುಗಳಲ್ಲಿ ಮುಳುಗಿಹೋದವನು ಇದ್ದಕ್ಕಿದ್ದಂತೆ “ಅರೆರೆ” ಎಂದು ಉದ್ಗರಿಸಿ ಹಾಸಿಗೆಯ ಮೇಲೆ ಎದ್ದು ಕುಳಿತ. ನಿನ್ನೆ ಮತ್ತು ಇವತ್ತಿನ ನಡವಳಿಕೆಯ ಬಗ್ಗೆ ರಾಘವನಿಗೇ ನಗು ಬಂತು. ‘ಅಲ್ಲಾ ಎಲ್ರೂ ಗುಟ್ಟು ಮಾಡ್ತಾ ಇದ್ದಿರಾ ಮಕ್ಳಾ ಅಂತ ನಿನ್ನೆಯಲ್ಲಾ ಬೊಬ್ಬಿರಿದೆನಲ್ಲಾ. ನಾನು ಮಾಡಿರೋದಾದ್ರೂ ಅದೇ ತಾನೇ! ಜಯಂತಿ ಇಷ್ಟವಾಗ್ತಾಳೆ ಅಂತ ಹೇಳಿದ್ದಿದೆ; ಅವತ್ತು ಕಾಲೇಜ್ ಡೇ ದಿನ ಸೀರೆ ಉಟ್ಟು ಬಂದಿದ್ದವಳನ್ನು ನೋಡಿ ಒಂದಷ್ಟು ಹೆಚ್ಚೇ ತಲೆಕೆಡಿಸಿಕೊಂಡು ಇವರಿಗೂ ತಲೆ ತಿಂದಿದ್ದಿದೆ. ಆದರೆ ಅವಳ ಬಗ್ಗೆ ತಲೆಕೆಡಿಸಿಕೊಂಡಿದ್ದಕ್ಕೆ ಕಾರಣ – ಅವಳು ನನ್ನೊಡನೆ ಮಾತನಾಡಿದ್ದಕ್ಕೆ …. ಅಲ್ಲಲ್ಲ ನನ್ನನ್ನು ಗದರಿದ್ದಕ್ಕೆ – ಅನ್ನೋದನ್ನು ನಾನು ಕೂಡ ಮೂವರಲ್ಯಾರಿಗೂ ಹೇಳಿಲ್ಲ ಅಲ್ವ!!’ ಇಷ್ಟು ಯೋಚನೆ ಬರುತ್ತಿದ್ದಂತೆ ಬೆಳಿಗ್ಗೆಯಿಂದ ಮಗುಚಿ ಬಿದ್ದಿದ್ದ ಮನಸ್ಸು ನಿರಾಳವಾಯಿತು. ನಾನೂ ಇವರಿಂದ ವಿಷಯ ಮುಚ್ಚಿಟ್ಟಿದೀನಿ, ಎಲ್ಲವನ್ನೂ ಬಡಬಡಿಸಿಬಿಟ್ಟಿಲ್ಲ ಎಂಬುದಕ್ಕೆ ಸಮಾಧಾನವಾಯಿತು. ಇದರೊಟ್ಟಿಗೆ ಜಯಂತಿಯ ನೆನಪುಗಳೂ ಒತ್ತರಿಸಿ ಬಂದು ಉಲ್ಲಾಸ ಮೂಡಿತು. ಸಮಯ ನೋಡಿದ. ನಾಲ್ಕಕ್ಕೆ ಹತ್ತು ನಿಮಿಷವಿತ್ತು. ಬೆಳಿಗ್ಯೆಯಿಂದ ಏನೂ ಮಾಡಿರಲಿಲ್ಲ, ಏನನ್ನೂ ತಿಂದಿರಲಿಲ್ಲ. ಲಗುಬಗನೇ ಹಲ್ಲುಜ್ಜಿ ಸ್ನಾನ ಮಾಡಿ, ಟೀ ಶರ್ಟು ಪ್ಯಾಂಟು ಧರಿಸಿ ಹೊರಬಿದ್ದಾಗ ಗಡಿಯಾರ ನಾಲ್ಕು ತೋರಿಸುತ್ತಿತ್ತು. ಅಫ್ರೋಜ್ ಭಾಯ್ ಅಂಗಡಿಯ ಬಳಿಗೆ ತೆರಳಿದ. ಗೆಳೆಯರನ್ನು ಭೆಟ್ಟಿಯಾಗಲು. ಅವರಾಗಲೇ ಅಲ್ಲಿ ಸೇರಿದ್ದರು. ಮುಗುಳ್ನಗುತ್ತಾ ಅವರ ಬಳಿಗೆ ಹೋಗಿ ಕಟ್ಟೆಯ ಮೇಲೆ ಕುಳಿತುಕೊಳ್ಳುತ್ತಾ “ನಿನ್ನೆ ನಾ ನಡೆದುಕೊಂಡ ರೀತಿಗೆ ಸಾರಿ ಕಣ್ರಪ್ಪಾ. ನಾನು ಬೆಳಿಗ್ಗೆಯಿಂದ ರೂಮಲ್ಲಿ ಯೋಚಿಸುತ್ತಾ ಮಲಗಿದ್ದೆ. ಯೋಚನೆಗಳು ಎತ್ತೆತ್ತಲೋ ಹರಿದವು. ಕೊನೆಗೆ ಹೊಳೆದದ್ದೆಂದರೆ ನಾನು ಕೂಡ ಒಂದಷ್ಟು ಮುಖ್ಯವಾದ ವಿಷಯಗಳನ್ನೇ ನಿಮ್ಮ ಬಳಿ ಹೇಳಿಲ್ಲ. ನೀವುಗಳು ಹೇಳಿದ್ದೇ ಸತ್ಯ. ತೀರ ನೂರಕ್ಕೆ ನೂರರಷ್ಟು ಎಲ್ಲಾ ವಿಷಯಗಳನ್ನು ಯಾರೊಡನೆಯೂ ಹೇಳಿಕೊಳ್ಳಲಾಗುವುದಿಲ್ಲ. ನಿಮ್ಮ ಮಾತಿಗೆ ನನ್ನದೂ ಸಂಪೂರ್ಣ ಸಹಮತವಿದೆ” ಎಂದ್ಹೇಳಿ ಮೂವರನ್ನೂ ನೋಡಿದ. ‘ಕ್ಷಮೆ ಕೇಳೋ ಅವಶ್ಯಕತೆಯೇನಿರಲಿಲ್ಲ’ ಎಂಬಂತೆ ಅವರೂ ನಕ್ಕರು.
“ಕೊನೆಗೂ ಜ್ಞಾನೋದಯ ಆಯ್ತು ಸಾಹೇಬರಿಗೆ” ಅಭಯನ ಮಾತಿಗೆ ತಲೆಯಾಡಿಸಿದ ರಾಘವ. “ಮತ್ತೆ ಜ್ಞಾನೋದಯವಾಗಿದ್ದಕ್ಕೆ ಇವತ್ತು ನಮ್ಮ ಬಿಲ್ಲನ್ನೂ ನೀನೇ ಕೊಟ್ಟುಬಿಡು” ಎಂದು ಅಭಯ ಅಂದಾಗ “ಹೋಗ್ರೋ ಬಡ್ಡೆತ್ತವ” ಎಂದು ರೇಗಿದ. ಎಲ್ಲರೂ ಮನಸಾರೆ ಜೋರಾಗಿ ನಕ್ಕರು. ತುಷಿನ್ ರಾಘವನ ಹೆಗಲ ಮೇಲೆ ಕೈಹಾಕಿದ.

* * *

“ಅವಳನ್ನ ಅವಳು ಏನಂದುಕೊಂಡುಬಿಟ್ಟಿದ್ದಾಳೆ. ಇಂಥವರನ್ನು ಎಷ್ಟು ಜನನ್ನ ನೋಡಿಲ್ಲ ನಾನು. ಅವಳ ಯೋಗ್ಯತೆಗೆ ಇಲ್ಲದಿರೋ ಕಡೆಯೆಲ್ಲಾ ಧಿಮಾಕು ಅವಳಿಗೆ. ಬಿಡಲ್ಲ ತಮ್ಮ. ಅವಳಿಗೆ ತೊಂದರೆ ಕೊಟ್ಟೇ ತೀರ್ತೀನಿ. ಗೊತ್ತಾಗಲಿ ಅವಳಿಗೆ ನಾನು ಯಾರು ಅಂತ. ನನ್ನ ನಿಜವಾದ ಮುಖ ಗೊತ್ತಿಲ್ಲ ಅವಳಿಗೆ. ಈ ಅನೂಜ್ ಅಂದ್ರೆ ಯಾರೂಂತ ತೋರಿಸ್ತೀನಿ ಅವಳಿಗೆ” ಚಿಗುರಲು ಕಷ್ಟಪಡುತ್ತಿದ್ದ ಮೀಸೆಯ ಮೇಲೆ ಕೈಯಾಡಿಸುತ್ತಾ ಕಣ್ಣನ್ನು ಕಿಟಕಿಯಿಂದಾಚೆಗೆ ಕಾಣುತ್ತಿದ್ದ ತೆಂಗಿನ ಮರದ ಮೇಲೆ ನೆಟ್ಟು ಹೇಳಿದ ಅನೂಜ್. ಅಭಯ ಇವನ ಮಾತಿಗೆ ಏನೂ ಪ್ರತಿಕ್ರಿಯಿಸದೆ ರೆಕಾರ್ಡ್ ಬರೆಯುವುದರಲ್ಲಿ ಮಗ್ನನಾಗಿದ್ದ. ಆಗಷ್ಟೇ ಮೂರು ಚಪಾತಿ, ಹಾಫ್ ರೈಸು, ಡಬಲ್ ಆಮ್ಲೆಟ್ ತಿಂದು ಬಂದಿದ್ದ ರಾಘವನಿಗೆ ಕಣ್ಣೆಳೆಯುತ್ತಿತ್ತು. ಒಂದರ್ಧ ಘಂಟೆ ಮಲಗೆ ಎರಡಕ್ಕಿರುವ ಪ್ರಾಕ್ಟಿಕಲ್ಸಿಗೆ ಹೋದರಾಯಿತು ಎಂದುಕೊಳ್ಳುತ್ತಿದ್ದ. ಅನೂಜನ ವಟಗುಟ್ಟುವಿಕೆಯ ನಡುವೆ ನಿದ್ದೆ ಹತ್ತುವುದು ಕಷ್ಟವಲ್ಲ ಅಸಾಧ್ಯವೇ ಆಗಿತ್ತು. ರಾಘವನಿಗೆ ಅನೂಜನ ಪರಿಚಯ ಅಷ್ಟಾಗಿ ಇರಲಿಲ್ಲ. ಅನೂಜ್ ಮತ್ತು ಅಭಯ್ ಪ್ರಾಕ್ಟಿಕಲ್ಸ್ ನಲ್ಲಿ ಒಟ್ಟಿಗೇ ಇರುತ್ತಿದ್ದರಾದ್ದರಿಂದ ಒಂದಷ್ಟು ಪರಿಚಯ ಬೆಳೆದಿತ್ತು. ಅನೂಜನ ಮೇಲೆ ಬರುತ್ತಿದ್ದ ಸಿಟ್ಟನ್ನು ಅಭಯನ ಕಡೆಗೆ ತಿರುಗಿಸಿದ. 

“ಅಲ್ಲಲೋ ಅಭಿ. ಇವನನ್ನು ಯಾಕೆ ಕರ್ಕೊಂಡು ಬರ್ತೀಯಾ ರೂಮಿಗೆ”. ಅಭಯ ‘ಹಿಂದೆ ಬಂದ್ರೆ ನಾನೇನೋ ಮಾಡ್ಲಿ’ ಎಂಬಂತೆ ನೋಡಿದ. ನಿಧಾನಕ್ಕೆ ತೆಂಗಿನಮರದಿಂದ ದೃಷ್ಟಿ ತೆಗೆದು ಕತ್ತು ತಿರುಗಿಸುತ್ತಾ ಟೇಬಲ್ಲಿನ ಮೇಲಿಟ್ಟಿದ್ದ ಮೂಳೆ, ಅದರ ಪಕ್ಕಕ್ಕಿದ್ದ ಎರಡು ಪುಸ್ತಕ, ಪುಸ್ತಕದ ಮೇಲಿದ್ದ ಸಿಗರೇಟ್ ಪ್ಯಾಕು, ಎಲ್ಲವನ್ನೂ ಸಾವಕಾಶವಾಗಿ ನೋಡುತ್ತಾ ರಾಘವನ ಮುಖದ ಮೇಲೆ ದೃಷ್ಟಿಯನ್ನು ಸ್ಥಿರಪಡಿಸಿದ. ಒಂದು ಕ್ಷಣ ಹಾಗೇ ದಿಟ್ಟಿಸಿ “ಲೋ ರಾಘವ ನಾನು ಬರೋದು ಇಷ್ಟವಿಲ್ಲ ಅಂದ್ರೆ ನೇರಾನೇರ ಹೇಳಿಬಿಡು” ಎಂದ ಗಂಭೀರವಾಗಿ. “ಹಂಗಲ್ಲ ಕಣೋ ಅನೂಜ್….ಅದು”. 

“ಹಂಗೂ ಇಲ್ಲ, ಹಿಂಗೂ ಇಲ್ಲ. ಬರೋದು ಇಷ್ಟವಿಲ್ಲ ಅಂತ ಗೊತ್ತು ನನಗೆ. ಆದರೆ ನೀನ್ಯಾರ್ಗುರೂ ನನಗೆ ಬರ್ಬೇಡ ಅನ್ನಕ್ಕೆ. ನೀವಿಬ್ರೂ ನನಗೆ ಕ್ಲಾಸ್ ಮೇಟ್ಸ್. ಇದು ನನ್ನ ಕ್ಲಾಸ್ ಮೇಟ್ಸ್ ರೂಮು. ಬರಬೇಡ ಅನ್ನಕ್ಕೆ ನಿನಗೆ….ನಿನಗಷ್ಟೇ ಅಲ್ಲ ನಿಮ್ಮಿಬ್ಬರಿಗೂ ಏನು ಹಕ್ಕಿದೆ?”

ಈ ಪ್ರಶ್ನೆಗೆ ರಾಘವ, ಅಭಯ ಇಬ್ಬರ ಬಳಿಯೂ ಉತ್ತರವಿರಲಿಲ್ಲ. ಸುಮ್ಮನೆ ಕುಳಿತಿದ್ದರು. ಅನೂಜನೇ ಮಾತು ಮುಂದುವರೆಸುತ್ತಾ “ಅಲ್ಲ ಅಷ್ಟಕ್ಕೂ ನನ್ನಿಂದ ಏನು ತೊಂದರೆ ಆಗಿದೆ ನಿಮಗೆ? ನಿಜ ಹೇಳ್ಬೇಕು ಅಂದ್ರೆ ನಿಮ್ಮಿಬ್ರಿಂದಾನೇ ನನಗೆ ತೊಂದರೆ. ಇಬ್ಬರೂ ಆ ಸಿಗರೇಟ್ ಹೋಗೇನಾ ಮಿಕ್ಸ್ ಪೆಟ್ರೋಲ್ ಹಾಕ್ಸಿ ಓಡೋ ಆಟೋದ ಥರ ಬಿಡ್ತೀರ. ನನಗೆ ಕೆಮ್ಮು ಕಿತ್ಕೊಂಡು ಬಂದ್ರೂ ಒಂದು ವಾರದಿಂದ ಯಾವತ್ತಾದ್ರೂ ದೂರು ಹೇಳಿದ್ದೀನಾ? ಮುಚ್ಕೊಂಡು ಹೊಗೆ ಕುಡೀತಿಲ್ವಾ? ನನ್ನಿಂದ ಏನು ತೊಂದರೆ ಆಯ್ತು ಹೇಳು” 

‘ಇದು ನಮ್ಮ ರೂಮೋ ಅವನದೋ’ ಎಂದು ಅನುಮಾನವಾಯಿತು ರಾಘವನಿಗೆ. ಸುತ್ತಮುತ್ತ ನೋಡಿದ. ಕಿಟಕಿಯ ಕಂಬಿಯಿಂದ ಎದುರು ಗೋಡೆಯ ಮೊಳೆಗೆ ಕಟ್ಟಿದ್ದ ನೈಲಾನ್ ಹಗ್ಗದ ಮೇಲೆ ಮುದುರಿದಂತೆ ಬಿದ್ದಿದ್ದ ಸ್ಯಾಂಟ್ರೋ ಜಾದೂ ಕಂಪನಿಯ ಕೆಂಪನೆಯ ಒಳಚಡ್ಡಿ, ಪಕ್ಕಕ್ಕೆ ಹಳದಿ ಬಣ್ಣಕ್ಕೆ ತಿರುಗಿದ್ದ ರೂಪಾ ಬನಿಯನ್ನು ‘ಇದು ನಿನ್ನದೇ ರೂಮು ಕಂದಾ’ ಎಂದು ರಾಘವನಿಗಷ್ಟೇ ಕೇಳುವಂತೆ ಚೀರಿ ಹೇಳಿತು.

“ಏನು ಸುಮ್ನೆ ಕುಳಿತ್ಬಿಟ್ಟೆ. ನನ್ನಿಂದಾದ ತೊಂದರೆ ಏನು ಅಂತಾನಾದ್ರೂ ಹೇಳು ನೋಡಾಣ” ರಾಘವನ ಮುಖದಿಂದಾಚೆಗೆ ಅನೂಜನ ದೃಷ್ಟಿ ಕದಲಲಿಲ್ಲ.

“ನೋಡನೂಜ್. ನಿನ್ನಿಂದಾಗೋ ದೊಡ್ಡ ತೊಂದರೆ ಅಂದ್ರೆ ನಿನ್ನ ಮಾತು. ಏನೂಂತ ಮಾತನಾಡ್ತೀಯೋ ಮಾರಾಯ. ನಿನ್ನೆಯಷ್ಟೇ ಅವಳನ್ನ…..ಅವಳ ಹೆಸರೇನಂದೆ”

“ಅವಳ ಹೆಸರು ಹೇಳೋದಿಕ್ಕೂ ಬೇಸರವಾಗುತ್ತೆ ನನಗೆ. ಅಮೃತ ಅಂತ”

“ಹ್ಞಾ ಅಮೃತ. ನಿನ್ನೆಯಷ್ಟೇ ಅವಳನ್ನ ಸಿಕ್ಕಾಪಟ್ಟೆ ಹೊಗಳುತ್ತಿದ್ದೆ. ಅವಳು ತುಂಬಾ ಒಳ್ಳೆಯವಳು. ನೋಡೋದಿಕ್ಕಂತೂ ಥೇಟ್ ದೇವತೆ; ನಕ್ಕಾಗ ಕೆನ್ನೆಯಲ್ಲಿ ಮೂಡೋ ಪುಟ್ಟ ಪುಟ್ಟ ಗುಳಿ ನೋಡಿಬಿಟ್ಟರಂತೂ ಮುಗಿದೇ ಹೋಯಿತು. ಆ ಗುಳೀಲೇ ಮುಳುಗಿ ಸತ್ತುಬಿಡೋಣಾಂತ ಅನ್ನಿಸುತ್ತೆ. ಒಂಚೂರು ಅಹಂಕಾರವಿಲ್ಲ ಹುಡುಗಿಗೆ. ಇದರೊಟ್ಟಿಗೆ ಇನ್ನೂ ಏನೇನೋ ಹೇಳ್ದೆ. ನಾನೂ ಕೇಳ್ದೆ. ಇವತ್ತಾಗಲೇ ಪೂರ್ತಾ ಉಲ್ಟಾ ಮಾತನಾಡ್ತಿದ್ದೀಯ. ಇದನ್ನೂ ಕೇಳೋ ಕರ್ಮ ಏನಿದೆ ನಮಗೆ. ನಿನ್ನ ಹುಚ್ಚುಚ್ಚು ಮಾತುಗಳಿಂದ ನಮಗೆಷ್ಟು ಬೇಸರವಾಗುತ್ತೆ ಅನ್ನೋದನ್ನಾದ್ರೂ ಯೋಚಿಸಬಾರದಾ ನೀನು” ಇಷ್ಟು ಹೇಳಿ ಅಭಯನ ಕಡೆಗೆ ನೋಡಿದ. ಅವನು ರೆಕಾರ್ಡಿನಿಂದ ತಲೆ ಮೇಲೆತ್ತಿರಲಿಲ್ಲ. ಅನೂಜನೂ ಮಾತನಾಡದೆ ಸುಮ್ಮನಿದ್ದ. ಕೈಗಡಿಯಾರದ ಕಡೆ ಕಣ್ಣಾಡಿಸಿದ. ಎರಡಕ್ಕೆ ಐದು ನಿಮಿಷವಿತ್ತು. “ಕಾಲೇಜಿಗೆ ಟೈಮಾಯ್ತು ನಡೀರಿ” ಅಂದ. ಹೊರಟರು. ದಾರಿಯಲ್ಲಿ ಯಾರೂ ಮಾತನಾಡಲಿಲ್ಲ. ಅಭಯ ಒಳಗೊಳಗೇ ನಗುತ್ತಿದ್ದ. ತಮ್ಮ ತಮ್ಮ ಪ್ರಾಕ್ಟಿಕಲ್ಸಿಗೆ ಹೆಜ್ಜೆ ಹಾಕುವ ಮೊದಲು ಅನೂಜ್ ರಾಘವನ ಕಡೆ ನೋಡಿ “ನೋಡು ರಾಘವ ಮಾತನಾಡೋದು ನನ್ನ ಹಕ್ಕು. ಅದರಿಂದ ನಿಮಗೆ ಬೇಸರವಾಗುತ್ತೆ ಅಂದ್ರೆ ಅದು ನಿಮ್ಮಗಳ ಸಮಸ್ಯೇನೆ ಹೊರತು ನನ್ನದಲ್ಲ. ನಿಮ್ಮ ಸಮಸ್ಯೆ ನೀವೇ ಬಗೆಹರಿಸಿಕೊಳ್ಳಬೇಕು” ಗಂಭೀರವಾಗಿ ಹೇಳಿದ. ಅವನ ಗಾಂಭೀರ್ಯವನ್ನು ನೋಡಿ ರಾಘವನಿಗೆ ನಗು ತಡೆಯಲಾಗಲಿಲ್ಲ. “ಥೂ ಹಲ್ಕಾ ನನ್ಮಗನೇ. ಉದ್ಧಾರವಾಗಲ್ಲ ನೀನು. ಬರ್ತೀನಿ ಟೈಮಾಯ್ತು. ನಾಳೆ ಜಗಳವಾಡೋಣ” ಎಂದ್ಹೇಳಿ ನಗುತ್ತಾ ಲ್ಯಾಬಿನ ಕಡೆಗೆ ಹೊರಟ.

ಮೇ 22, 2015

ವಾಡಿ ಜಂಕ್ಷನ್ .... ಭಾಗ 11

wadi junction
Dr Ashok K R
“ಹಲೋ ಹಲೋ….” ಜಯಂತಿಯೆಂದು ಕೂಗಬೇಕೆಂದೂ ಗೊತ್ತಾಗಲಿಲ್ಲ. ದನಿ ಕೇಳಿ ಆಕೆ ನಡಿಗೆ ನಿಲ್ಲಿಸಿ ಹಿಂದೆ ತಿರುಗಿ ನೋಡಿದಾಗ ರಾಘವ ಅವಳ ಸಮೀಪವೇ ಬಂದಿದ್ದ.

“ನನ್ನ ಹೆಸರು ಹಲೋ ಅಲ್ಲ” ಸಿಡಿಲಿನ ಮೊರೆತ ಒಂದಷ್ಟು ಕಡಿಮೆಯಾಗಿತ್ತು.

“ಅದು ನನಗೂ ಗೊತ್ತು. ಆ ವಿಷಯ ಅತ್ಲಾಗಿರಲಿ. ನಮ್ಮ ಮನೆಯವರೇ ತಿಂಗಳ ಖರ್ಚಿಗೆ ಸಿಗರೇಟಿನ ಬೆಲೆಯನ್ನು ಲೆಕ್ಕಾ ಹಾಕಿ ಕೊಡ್ತಾರೆ. ಅವರೇ ನನ್ನನ್ನು ಕೇಳಲ್ಲ. ನೀನ್ಯಾರು ಕೇಳ್ಲಿ….. ಅದೂ ಹೋಗ್ಲಿ ನೀನ್ಯಾಕೆ ಕೇಳ್ತಾ ಇದ್ದೀಯಾ” ಜೋರಾಗಿದ್ದ ದನಿ ‘ಇದ್ದೀಯಾ’ಗೆ ಬರುವಷ್ಟರಲ್ಲಿ ಮೆದುವಾಗಿದ್ದಕ್ಕೆ ಅವಳ ಮುಖಾರವಿಂದ ವಹಿಸಿದ ಪಾತ್ರವನ್ನು ನಿರಾಕರಿಸುವಂತಿಲ್ಲ.

“ನಿನಗೆಲ್ಲಿ ಗೊತ್ತಾಗುತ್ತೆ. ಯಾಕೆ ಕೇಳ್ತಿದ್ದೀಯಾ ಅಂತೆ. ಮನುಷ್ಯರಿಗೆ ಅರ್ಥವಾಗುವ ವಿಷಯ. ನಿನಗೆಲ್ಲಿ ಗೊತ್ತಾಗುತ್ತೆ ಬಿಡು. ಬಾಯ್” ಎಂದ್ಹೇಳಿ ಹೊರಟುಹೋದವಳ ಕಣ್ಣು ತೇವಗೊಂಡಿದ್ದದ್ದು ಜ್ವರದ ತೀರ್ವತೆಗೋ ಅಥವಾ…. ತಲೆಕೊಡವಿ ರೂಮಿನೆಡೆಗೆ ನಡೆದಿದ್ದ ರಾಘವ.
‘ಅಬ್ಬಾ…. ಜಯಂತಿ!’ ಮತ್ತೊಮ್ಮೆ ಉಸಿರೆಳೆದುಕೊಂಡ.

ಎಂದಿಗಿಂತ ಅವತ್ತು ಹೆಚ್ಚೇ ಸಿಗರೇಟು ಸುಟ್ಟಿದ್ದ ರಾಘವ. ಎಲ್ಲಾ ಅಯೋಮಯ. “ಏನಾಯ್ತಲೇ ನಿನಗೆ?” ಎಂದು ಕೇಳಿದ ಅಭಯನಿಗೆ “ಹಿಂಗೆ ಸುಮ್ಮನೆ ಬೇಜಾರು” ಎಂದ್ಹೇಳಿ ತೇಲಿಸಿದ್ದ. ಅವಳೊಡನೆ ಮಾತಾಡಿದ್ದೂ ಇಲ್ಲ. ಅಪರೂಪಕ್ಕೆ ನೋಡಿದಾಗಲೊಮ್ಮೆ ಚೆನ್ನಾಗಿದ್ದಾಳಲ್ವಾ ಎಂದನ್ನಿಸಿದ್ದು ನಿಜವಾದರೂ ಅದರಾಚೆಗೆ ಯಾವ ಯೋಚನೆಗಳೂ ಹೊಳೆದಿರಲಿಲ್ಲ. ತಲೆಯಲ್ಲಿದ್ದ ನೂರಾರು ರೀತಿಯ ಚಿಂತೆ – ಚಿಂತನೆಗಳು, ಸುತ್ತಲಿದ್ದ ಗೆಳೆಯರ ಚಿತ್ರ ವಿಚಿತ್ರ ವಿಚಾರಗಳು, ಇವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದರಲ್ಲೇ ಬ್ಯುಸಿಯಾಗಿಹೋಗಿದ್ದವನಿಗೆ ಬೇರೆ ವಿಷಯಗಳೆಡೆಗೆ ಅನಾದಾರವಿರದಿದ್ದರೂ ಆಸಕ್ತಿಯಂತೂ ಇರಲಿಲ್ಲ. ನಮ್ಮ ತರಗತಿಯ ಅಸ್ಪೃಶ್ಯ ಹುಡುಗರಲ್ಲೊಬ್ಬನಾದ ನನ್ನನ್ನು ಮಾತನಾಡಿಸಿದ್ದೂ ಅಲ್ಲದೆ ಮೊದಲ ದಿನವೇ ಸಿಗರೇಟು ಸೇದಿದ್ದಕ್ಕೆ ಬಯ್ದು ಹೋದಳಲ್ಲ. …. ಎಷ್ಟು ಧಿಮಾಕು ಅವಳಿಗೆ ಎಂದು ಕೋಪ, ಖುಷಿ, ಅಚ್ಚರಿ ಇವುಗಳೆಲ್ಲವನ್ನು ಮೀರಿದ ಭಾವ ಆವರಿಸಿ ಹಾಗೇ ಕಣ್ಣು ಮುಚ್ಚಿದ.

ಈ ಘಟನೆಯಾದ ನಂತರ ಜಯಂತಿ ಎದುರಿಗೆ ಸಿಕ್ಕರೆ ರಾಘವ ಗಲಿಬಿಲಿಗೊಳ್ಳುತ್ತಿದ್ದ. ತಲೆತಗ್ಗಿಸಿ ಹೋಗುತ್ತಿದ್ದ ಆಕೆ ಇವನತ್ತಲೇ ನೋಡುತ್ತಿದ್ದಾಗ್ಯೂ ಇವನೇ ತಲೆಬಗ್ಗಿಸಿಯೋ ಬೇರೆತ್ತಲೋ ನೋಡುವಂತೆ ನಟಿಸುತ್ತಿದ್ದನಾದರೂ ಕಣ್ಣು ಅಂಚಿಗೆ ಸರಿದು ಅವಳೆಡೆಗೆ ಹರಿಯುತ್ತಿದ್ದುದು ಸುಳ್ಳಲ್ಲ. ಅಂದೊಮ್ಮೆ ಅದೇ ಅಂಗಡಿಗೆ ನಾಲ್ಕೂ ಗೆಳೆಯರು ಹೋಗಿದ್ದಾಗ ಜಯಂತಿಯೂ ಅಲ್ಲೇ ಇದ್ದಳು. ಅಭಯ ಅಂಗಡಿಯವನಿಗೆ ನಾಲ್ಕು ಸಿಗರೇಟ್ ತರುವಂತೆ ಕೈಸನ್ನೆ ಮಾಡಿದ. ಇವನಿಗೋ ಉಭಯಸಂಕಟ, ಯಾಕೋ ಅವಳ ಮುಂದೆ ಸಿಗರೇಟು ಸೇದಲೂ ಮನಸ್ಸಿಲ್ಲ. ಸೇದೋದಿಲ್ಲ ಅಂದರೆ ಯಾಕೆ ಅಂತ ಇವರು ಪ್ರಶ್ನೆ ಮಾಡ್ತಾರೆ. ಏನು ಮಾಡೋದು ಅಂತ ಯೋಚಿಸುತ್ತಲೇ ಜಯಂತಿಯೆಡೆಗೆ ನೋಡಿದ. ಅವಳು ಇವನತ್ತಲೇ ಗಮನವಿರಿಸಿದ್ದಳು. ಪಕ್ಕದಲ್ಲಿ ಕುಳಿತಿದ್ದ ಅವಳ ಗೆಳತಿ ಪ್ರೇರಣಾ ಇವಳನ್ನೇನೋ ರೇಗಿಸಿ ಇವಳು ಹುಸಿಮುನಿಸು ತೋರಿಸಿ ನಕ್ಕು – ನನ್ನ ಬಗ್ಗೆಯೇ ಮಾತನಾಡಿದ್ರಾ? ಅಥವಾ ಇದೆಲ್ಲಾ ನನ್ನ ಭ್ರಮೆಯಾ? ಒಂದೂ ತಿಳಿಯದಂತಾದವನಿಗೆ ಅಭಯ “ತಗೊಳ್ಳೋ ಸಿಗರೇಟು” ಎಂದಾಗಲೇ ವಾಸ್ತವಕ್ಕೆ ಬಂದಿದ್ದು. “ಇಲ್ಲ. ನನಗೆ ಬೇಡ” ಎಂದ. “ಯಾಕಪ್ಪಾ ಸಿಗರೇಟ್ ಬಿಟ್ಬಿಟ್ಟಾ ಹೆಂಗೆ? ನಮಗೆಲ್ಲಾ ಸೀನಿಯರ್ ನೀನು. ನೀನೇ ಸಿಗರೇಟು ಬಿಟ್ಟುಬಿಟ್ಟರೆ ತಂಬಾಕು ಬೆಳೆಯೋ ರೈತರೆಲ್ಲಾ ಏನು ಮಾಡಬೇಕು?” ನಗುತ್ತಾ ಕೇಳಿದ. “ಇಲ್ಲೋ ಮಾರಾಯ. ಯಾಕೋ ಹೊಟ್ಟೆ ಉರಿ ಉರಿ. ಸದ್ಯಕ್ಕೆ ಬೇಡ ಅಷ್ಟೇ” ಎಂದ. ಅಭಯ ತಲೆಯಾಡಿಸಿ ಒಂದು ಸಿಗರೇಟನ್ನು ಜೇಬಿನೊಳಗೆ ಹಾಕಿಕೊಂಡು ಇನ್ನೆರಡು ಸಿಗರೇಟನ್ನು ತುಷಿನ್ ಮತ್ತು ಕ್ರಾಂತಿಗೆ ಕೊಟ್ಟು ತಾನೂ ಒಂದನ್ನು ಹಚ್ಚಿಕೊಂಡ. ಎರಡು ದಿನದ ಹಿಂದೆ ಮೈಸೂರು ಫಿಲ್ಮ್ ಸೊಸೈಟಿಯಲ್ಲಿ ನೋಡಿದ ಖಾಮೋಷ್ ಪಾನಿ ಎಂಬ ಚಿತ್ರದ ಬಗ್ಗೆ ಮಾತನಾಡುತ್ತಿದ್ದರು ತುಷಿನ್ ಮತ್ತು ಕ್ರಾಂತಿ. ಅಭಯ್ ಅವರ ಮಾತುಗಳನ್ನು ಮೌನವಾಗಿ ಆಲಿಸುತ್ತಾ ಕುಳಿತಿದ್ದ. ಇಸ್ಲಾಂ ಹೆಸರಿನ ಭಯೋತ್ಪಾದನೆಯ ಬಗ್ಗೆ ಇದ್ದ ಆ ಚಿತ್ರ ಕ್ರಾಂತಿಗೆ ಬಹುವಾಗಿ ಇಷ್ಟವಾಗಿತ್ತು. ಧರ್ಮಿಷ್ಠರಾಗಿ, ಧರ್ಮಾಂಧರಾಗಿರದ ಒಂದಿಡೀ ಹಳ್ಳಿ ಹೇಗೆ ಕೆಲವೇ ಕೆಲವು ಮೂಲಭೂತವಾದಿಗಳ ವಿಚಾರಗಳಿಂದ ತಳಮಳಕ್ಕೊಳಗಾಗಿ ಬಹುತೇಕರು ವಿರೋಧಿಸಿದರೂ, ಒಂದಷ್ಟು ಯುವಕರು ಅವರ ವಿಚಾರಗಳ ಪ್ರಭಾವಕ್ಕೊಳಗಾಗಿ ಇಡೀ ಹಳ್ಳಿಯೇ ಅಧಃಪತನದತ್ತ ಸಾಗುತ್ತದೆ ಎಂಬುದನ್ನು ಮನಮುಟ್ಟುವಂತೆ ಚಿತ್ರಿಸಿದ್ದರು. ತುಷಿನ್ ಹಿಂದೊಮ್ಮೆ ಟಿ.ವಿಯಲ್ಲಿ ನೋಡಿದ್ದ The Partition ಚಿತ್ರದ ಬಗ್ಗೆ ಹೇಳುತ್ತಿದ್ದ. ರಾಘವ ಅವರ ಮಾತುಗಳನ್ನು ಆಲಿಸುವಂತೆ ಮಾಡುತ್ತಾ ಜಯಂತಿಯತ್ತಲೇ ನೋಡುತ್ತಿದ್ದ. ಉಳಿದ ಮೂವರೂ ಅವಳಿಗೆ ಬೆನ್ನು ಮಾಡಿ ಕುಳಿತಿದ್ದರಿಂದ ಇವನ ನಟನೆ ಅವರಿಗೆ ತಿಳಿಯಲಿಲ್ಲ. ಜಯಂತಿ ಮತ್ತು ಪ್ರೇರಣಾ ದುಡ್ಡು ಕೊಟ್ಟು ಹೊರನಡೆದರು. ಜಯಂತಿಯ ಕಣ್ಣಿನಲ್ಲಿ ‘ಥ್ಯಾಂಕ್ಸ್ ಸಿಗರೇಟು ಸೇದದೇ ಇದ್ದುದಕ್ಕೆ’ ಎಂಬ ಭಾವವಿತ್ತು. ಅವರಿಬ್ಬರೂ ಮುಖ್ಯರಸ್ತೆಯಿಂದ ಎಡಕ್ಕೆ ಹಾಸ್ಟೆಲ್ಲಿನ ಕಡೆಗೆ ಹೊರಳುತ್ತಿದ್ದಂತೆ ರಾಘವ ಅಭಯನ ಜೇಬಿಗೆ ಕೈಹಾಕಿ ಸಿಗರೇಟು ತೆಗೆದುಕೊಂಡ. “ಯಾಕಪ್ಪಾ ಇಷ್ಟು ಬೇಗ ಹೊಟ್ಟೆ ಉರಿ ಕಡಿಮೆಯಾಗಿ ಹೋಯ್ತ?” ಚಿತ್ರದ ಗುಂಗಿನಿಂದ ಹೊರಬರುತ್ತಾ ಕೇಳಿದ ಕ್ರಾಂತಿ. “ಬಿಡೊಲೋ. ಒಂದು ಮಾತ್ರೆ ನುಂಗಿದ್ರೆ ಸರಿಯಾಗುತ್ತೆ. ಹೊಟ್ಟೆ ಉರಿಗೆ ಹೆದರ್ಕೊಂಡು ಸಿಗರೇಟು ಸೇದದಿರೋ ಪಾಪ ಮಾಡಲಿಕ್ಕಾಗುತ್ತಾ?” ಎನ್ನುತ್ತಾ ಸಿಗರೇಟು ಹಚ್ಚಿಕೊಂಡ.

“ಒಂದ್ನಿಮಿಷ ತಡಿ ಬಂದೆ” ಎಂದ್ಹೇಳಿ ಪ್ರೇರಣ ಹಿಂದಕ್ಕೆ ತಿರುಗಿ ಕಳ್ಳಹೆಜ್ಜೆಯನ್ನಿಡುತ್ತಾ ಮುಖ್ಯರಸ್ತೆಯ ಅಂಚಿಗೆ ಬಂದು ನೋಡಿದಳು. ರಾಘವ ಆನಂದವಾಗಿ ಹೊಗೆಯ ಜೊತೆ ನಲಿದಾಡುತ್ತಿದ್ದ. ಜೋರಾಗಿ ನಗುತ್ತಾ ಜಯಂತಿಯೆಡೆಗೆ ಓಡಿಬಂದು “ನಾನಂದುಕೊಂಡಂತೆ ಆಯ್ತು ಕಣೇ. ನೀನೀಕಡೆ ಬರುತ್ತಿದ್ದಾಗೆ ಸಿಗರೇಟು ಹಚ್ಚಿ ಕುಳಿತಿದ್ದಾನೆ ಭೂಪ” ಎಂದಳು. ಜಯಂತಿಗೆ ಒಂದಷ್ಟು ಬೇಸರವಾದರೂ ತೋರ್ಪಡಿಸಿಕೊಳ್ಳದೆ “ಇರ್ಲಿ ಬಿಡು. ಕೊನೇಪಕ್ಷ ನನ್ಮುಂದೇನಾದರೂ ಸೇದಲಿಲ್ಲವಲ್ಲ” ಎಂದು ತನಗೇ ಸಮಾಧಾನ ಹೇಳಿಕೊಂಡಳು. “ಹೌದಮ್ಮ. ನಿನ್ನ ಹುಡುಗನನ್ನು ಎಲ್ಲಿ ಬಿಟ್ಟುಕೊಡ್ತೀಯ. ಆದ್ರೂ ಜಯಂತಿ ಒಂದು ಮಾತು. ನಿನಗೆ ಹೋಲಿಸಿದರೆ ಅವನು ತುಂಬಾ ಚೆನ್ನಾಗೇನೂ ಇಲ್ಲ. ಸಾರಿ ಸಾರಿ, ಚೆನ್ನಾಗೇ ಇದ್ದಾನೆ ಅಂತಿಟ್ಕೋ. ಜೊತೆಗೆ ಹುಡುಗೀರಿಗೆ ಕಾಮನ್ನಾಗಿ ಇಷ್ಟವಾಗೋ ಗುಣಗಳೂ ಅವನಿಗೆ ಇರೋದು ಡೌಟು. ಅಂಥವನನ್ನು ನೀನು ಇಷ್ಟಪಟ್ಟಿದ್ದಾದರೂ ಯಾಕೆ ಅಂತ”. ಕಾಲೇಜಿನ ಗೇಟು ತಲುಪುವವರೆಗೆ ಸುಮ್ಮನೆಯೇ ಇದ್ದಳು ಜಯಂತಿ. “ಯಾಕೆ ಅನ್ನೋದು ನನಗೂ ಸರಿಯಾಗಿ ತಿಳಿದಿಲ್ಲ ಕಣೇ. ಅವನನ್ನು ನೋಡಿದ ದಿನಾನೇ ಏನೋ ಆಕರ್ಷಿಸಿತು. ಯಾರಿಗೂ ಕೇರ್ ಮಾಡದಿರುವ ಹಾಗಿರುವ ಅವನ ಕಣ್ಣುಗಳೋ…. ಏನೋಪ್ಪಾ ಇಂಥಾದ್ದೇ ಕಾರಣ ಅಂಥ ನನಗೂ ಗೊತ್ತಿಲ್ಲ. ಯಾರಿಗೆ ಗೊತ್ತು. ಅವನೆಡೆಗೆ ಈಗಿರೋ ಆಕರ್ಷಣೆ ಅಪ್ಪಿತಪ್ಪಿ ನಾಳೆ ಆತ ಪರಿಚಿತನಾದ ನಂತರ ಕಡಿಮೆಯಾಗಿಬಿಡಬಹುದೋ ಏನೋ ಅದಿಕ್ಕೆ ಒಮ್ಮೊಮ್ಮೆ ಅನ್ನಿಸುತ್ತೆ, ಆತನ ಬಗ್ಗೆ ಕನಸುಗಳೇ ಇರಲಿ, ಆ ಕನಸುಗಳು ನನಸಾಗೋದೇ ಬೇಡ ಅಂತ. ಕನಸು ನನಸಾಗೋ ಭರದಲ್ಲಿ ಭ್ರಮನಿರಸನಾಗಿಬಿಡುತ್ತೋ ಅನ್ನೋ ಭಯ” ಮಾತು ಮುಂದುವರಿಸುತ್ತಾ “ಈ ನಾಲ್ಕೂ ಜನರ ಬಗ್ಗೆ ನಿನಗೇನನ್ನಿಸುತ್ಯೇ ಪ್ರೇರಣ”

“ಹುಚ್ ನನ್ ಮಕ್ಳು ಅನ್ಸುತ್ತೆ” ನಕ್ಕಳು. ಜಯಂತಿಯ ಮುಖದಲ್ಲಿದ್ದ ಗಂಭೀರತೆಯನ್ನು ನೋಡಿ “ಇನ್ನೇನು ಹೇಳೋದೆ ಜಯಂತಿ. ಕ್ಲಾಸಿನ ಬಹುತೇಕರು ಫಿಲಮ್ಮೂ, ಟ್ರಿಪ್ಪೂ, ಸುತ್ತಾಟ, ಶಾಪಿಂಗೂ ಅಂತ ತಿರುಗಾಡ್ತಾ ಲೈಫ್ ನ ಎಂಜಾಯ್ ಮಾಡ್ತೀವಿ. ಇನ್ನೊಂದಷ್ಟು ಜನ ಓದ್ಲಿಕ್ಕೇ ಹುಟ್ಟಿದ್ದಾರೇನೋ ಎಂಬಂತೆ ಪಠ್ಯಪುಸ್ತಕಗಳಿಂದಾಚೆಗೆ ಬರೋದೇ ಇಲ್ಲ. ಇವರು ಅಲ್ಲೂ ಸಲ್ಲದೆ ಇಲ್ಲೂ ಇಲ್ಲದೆ ಏನು ಮಾಡ್ತಿದ್ದೀವಿ ಅನ್ನೋದನ್ನು ಸರಿಯಾಗಿ ತೋರ್ಪಡಿಸದೆ ಇರುತ್ತಾರಲ್ಲ. ಈ ರೀತಿಯಾಗೂ ಸ್ಟೂಡೆಂಟ್ಸಿರಬಹುದು ಅನ್ನೋ ಕಲ್ಪನೇನೆ ನನಗೆ ಬರಲ್ಲ. ನಮ್ಮ ಬ್ಯಾಚಷ್ಟೇ ಅಲ್ಲ. ಪ್ರತಿ ಬ್ಯಾಚಲ್ಲೂ ಇಂಥ ಕೆಲವು ಹುಡುಗ್ರು ಇದ್ದೇ ಇರ್ತಾರೆ. ಆದ್ರೂ ನಿಜ ಹೇಳಬೇಕೂ ಅಂದ್ರೆ ನಮ್ಮ ಬ್ಯಾಚಿನ ಕೆಲವು ಹುಡುಗ್ರು ಯಾವಾಗಲೂ ಅವರು ನಾಲ್ಕೂ ಜನ ಸರಿ ಇಲ್ಲ ಸರಿಯಿಲ್ಲ ಅಂತ ಬಾಯಿ ಬಡಕೋತಾರೆ. ನನಗಂತೂ ಅವರಲ್ಲಿ ಯಾವ ಕೆಟ್ಟತನಾನೂ ಕಂಡಿಲ್ಲಪ್ಪ. Ofcourse ಸಿಗರೇಟ್ ಸೇದ್ತಾರೆ, ಕುಡೀಲೂಬಹುದು….ಅಷ್ಟಕ್ಕೇ ಕೆಟ್ಟೋರಾಗಿಬಿಡೋದಿಲ್ಲ ಅಲ್ವಾ. ಅವರು – ಡಿಸೆಕ್ಷನ್ನಿನಲ್ಲಿ ನನ್ನ ಟೇಬಲ್ಲಿನಲ್ಲಿರೋ ರಾಘವನ ಬಗ್ಗೆಯಷ್ಟೇ ಹೇಳಬಲ್ಲೆ ಬೇರೆಯವರ ಬಗ್ಗೆ ಕೆಟ್ಟದಾಗಿ, atleast ನಮ್ಮ ಮುಂದೆ ಮಾತನಾಡಿದ್ದು ನೋಡಿಲ್ಲ. ನಾನೇ ಏನಾದ್ರೂ ಕೇಳಿದ್ರೆ ಎಷ್ಟು ಹೇಳಬೇಕೋ ಅಷ್ಟೇ. ತೂಕಕ್ಕೆ ಹಾಕಿದಂತೆ ಮಾತು. ಅವರು ಒಳ್ಳೆಯವರಾ ಗೊತ್ತಿಲ್ಲ. ಕೆಟ್ಟವರಂತೂ ಇರಲಿಕ್ಕಿಲ್ಲ”

“ಥ್ಯಾಂಕ್ಸ್”…. “ನನ್ನ ಟೇಬಲ್ಲಲ್ಲಿರೋ ಕ್ರಾಂತೀನೂ ಅಷ್ಟೇ. ಮಾತು ಕಡಿಮೇನೆ. ಆದರೆ ಅವತ್ತೊಂದಿನ ಟೇಬಲ್ಲಲ್ಲಿ ಮಾತು ಪಾಠ ಬಿಟ್ಟು ಎತ್ತೆತ್ತಲೋ ಹರಿದು ಕಥೆ ಕಾದಂಬರಿಗಳ ಕಡೆಗೆ ಹರೀತು. ಸಿಡ್ನಿ ಶೆಲ್ಡನ್, ರಾಬಿನ್ ಕುಕ್, ಚೇತನ್ ಭಗತ್ – ಹೀಗೆ ಒಬ್ಬೊಬ್ಬರು ಒಂದೊಂದು ಪುಸ್ತಕದ ಬಗ್ಗೆಯೋ ಲೇಖಕನ ಬಗ್ಗೆಯೋ ಮಾತನಾಡ್ತಿದ್ವಿ. ನಾನೇ ಕೇಳಿದ್ನೋ ಇನ್ಯಾರು ಕೇಳಿದ್ರೋ ನೆನಪಿಲ್ಲ ನೀನು ಪುಸ್ತಕಳನ್ನು ಓದಲ್ವಾ ಕ್ರಾಂತಿ ಎಂದು ಕೇಳಿದಾಗ. ‘ಓದ್ತೀನಿ’ ಅಂದ. ‘ನಿನ್ನ ಫೇವರೇಟ್ ಲೇಖಕ’ ಅಂತ ಕೇಳಿದ್ದಕ್ಕೆ ‘ಸದ್ಯಕ್ಕೆ ವ್ಯಾಸರಾಯ ಬಲ್ಲಾಳರು’ ಅಂದಿದ್ದಕ್ಕೆ ಆ ಜ್ಯೋತಿ ಜೋರಾಗಿಯೇ ‘ಓ ಕನ್ನಡ ಪುಸ್ತಕ ಓದ್ತೀಯಾ ನೀನು’ ಎಂದು ಒಂದಷ್ಟು ವ್ಯಂಗ್ಯವಾಗಿ ಹೇಳಿದಳು ನೋಡು. ಆ ಕ್ರಾಂತಿ ಇರಿಯೋ ಕಣ್ಣಿನಿಂದ ಅವಳೆಡೆಗೆ ನೋಡುತ್ತಾ ‘ನೀವುಗಳು ಓದೋ ರೀತಿಯ ಇಂಗ್ಲೀಷ್ ಪುಸ್ತಕಗಳನ್ನು ಓದಿದ್ದೀನಿ ಒಂದೆರಡು. ಒಂದಷ್ಟು ತಿರುವುಗಳು, ಬಹಳಷ್ಟು ಸೆಕ್ಸೂ…. ಇದಕ್ಕಿಂತ ಹೆಚ್ಚಾಗಿ ಅವುಗಳಲ್ಲಿ ತಿಳಿದುಕೊಳ್ಳಬಹುದಾದ್ದೇನೂ ಇರಲಿಲ್ಲ. ಸೆಕ್ಸ್ ಬಗ್ಗೇನೆ ಓದಬೇಕು ಅಂದ್ರೆ ಲ್ಯಾಂಡ್ಸ್ ಡೌನ್ ಬಿಲ್ಡಿಂಗ್ ಎದುರಿಗೆ ಸೆಕೆಂಡ್ ಹ್ಯಾಂಡಿನಲ್ಲಿ ಐದು ರುಪಾಯಿಗೆ ಒಂದು ಮೋಜು ಗೋಜು ಸಿಗುತ್ತೆ’ ಅಂದದ್ದಕ್ಕೆ ಜ್ಯೋತಿ ಅಲ್ಲೇ ಕಣ್ಣೀರಾದಳು. ಇವನು ಸಮಾಧಾನ ಮಾಡೋದಿರಲಿ ಅವಳೆಡೆಗೆ ತಿರುಗಿಯೂ ನೋಡಲಿಲ್ಲ. ನಾವೆಲ್ಲಾ ಶೋಕಿಗೋ, ಪ್ರೆಸ್ಟೀಜಂತ ತಿಳ್ಕೊಂಡೋ ಇಂಗ್ಲೀಷ್ ಪುಸ್ತಕದ ಹೆಸರು ಹೇಳಿದ್ದೆವೇನೋ ಅಂತ ನನಗೇ ಅನ್ನಿಸ್ತು. ಇನ್ನೂ ವಿಚಿತ್ರ ಅಂದ್ರೆ ಇನ್ನೇನು ಕ್ಲಾಸಿನಿಂದ ಹೊರಡಬೇಕಾದರೆ ‘ಜ್ಯೋತಿ’ ಎಂದು ಕೂಗಿದ. ಸಾರಿ ಕೇಳೋದಿಕ್ಕಿರಬೇಕು ಅಂದುಕೊಂಡೆ. ಅವಳ ಕೈಗೊಂದು ಎಂಟುನೂರು ಪುಟದ ಪುಸ್ತಕ ಕೊಟ್ಟು ‘ನೀವು ಹೇಳೋ ಪುಸ್ತಕಗಳು ಆ ಕ್ಷಣದ ಮಟ್ಟಿಗಷ್ಟೇ ತೃಪ್ತಿ ಕೋಡೋದು. ಓದಿ ಮುಗಿಸಿ ಎರಡು ದಿನ ಕಳೆಯುವಷ್ಟರಲ್ಲಿ ಪಾತ್ರಗಳು, ಕಥೆ ಯಾವುದೂ ನೆನಪಿನಲ್ಲಿರೋದಿಲ್ಲ. ಈ ಪುಸ್ತಕ ಓದಿ. ವ್ಯತ್ಯಾಸ ನಿಮಗೇ ಗೊತ್ತಾಗುತ್ತೆ’ ಎಂದ್ಹೇಳಿ ಹೊರಟು ಹೋದ. The Fountain Head ಅಂತ ಪುಸ್ತಕದ ಹೆಸರು. ಜ್ಯೋತೀನೂ ತಿರುಗಿಸಿಯೇ ತಿರುಗಿಸಿದಳು. ‘ಇಂಗ್ಲೀಷ್ ಪುಸ್ತಕ ಓದ್ತೀವಿ ಅನ್ನೋ ಕೊಬ್ಬಿತ್ತು. ಮೊದಲ ಓದಿಗೆ ಅರ್ಥ ಮಾಡಿಕೊಳ್ಳುವುದೇ ಕಷ್ಟವಾದ ಪುಸ್ತಕ ಕೊಟ್ಟು ಸರಿಯಾಗೇ ಬುದ್ಧಿ ಕಲಿಸಿದ’ ಎಂದು ನಗುತ್ತಲೇ ಸೋಲು ಸ್ವೀಕರಿಸಿ ಒಂದು ವಾರಕ್ಕೇ ವಾಪಸ್ಸು ಮಾಡಿದಳು. ಅವನು ಏನೂ ಮಾತನಾಡಲಿಲ್ಲ. ನಂತರವೂ ಅವಳ ಜೊತೆ ಮಾತನಾಡಿದ್ದು ನೋಡಿಲ್ಲ”

“ಇವರು ನಿಜಕ್ಕೂ ವಿಚಿತ್ರವೋ ಅಥವಾ ವಿಚಿತ್ರ ನಾವು ಅನ್ನುವ ಹಾಗೆ ನಟಿಸುತ್ತಾರೋ? ಹೇಳೋದು ಕಷ್ಟಾನೇ. ಅವರು ಇಷ್ಟು ನಿಗೂಢವಾಗಿರೋದಿಕ್ಕೇ ಅಲ್ವಾ ಅವರೆಡೆಗೆ ನಮಗೆ ಕುತೂಹಲ” ಎಂದು ಕೇಳಿದಳು ಪ್ರೇರಣ. ಹೌದೆಂಬಂತೆ ತಲೆಯಾಡಿಸಿದಳು ಜಯಂತಿ.

ಮೇ 17, 2015

ವಾಡಿ ಜಂಕ್ಷನ್ .... ಭಾಗ 10

Dr Ashok K R
“ಸರಿ ನೀನ್ಹೇಳಿದ್ದು. ಇಷ್ಟು ಬೇಗ ಇಷ್ಟೊಂದು ಕ್ಲೋಸಾಗಿಬಿಟ್ಟಿದ್ದಾರಲ್ಲ ಈ ನಾಲ್ವರು ಅಂಥ ತರಗತಿಯವರು ಒಂದಷ್ಟು ಅಸೂಯೆಯಿಂದ ನಮ್ಮ ಬಗ್ಗೆ ಮಾತನಾಡಿದರೂ ನಮ್ಮ ನಮ್ಮಲ್ಲೇ ನಾವೆಷ್ಟು ಪರಿಚಿತರಾಗಿದ್ದೇವೆ? ನಮ್ಮ ಹೆಸರು, ಊರು. ತುಷಿನ್ ಹೇಳಿದ ಹಾಗೆ ನಮ್ಮ ಸಿ.ಇ.ಟಿ ರ್ಯಾಂಕು; ಇಷ್ಟು ಬಿಟ್ಟರೆ ನಮ್ಮಗಳ ಬಗ್ಗೆ ಏನೇನು ಗೊತ್ತಿಲ್ಲ ಅಲ್ವಾ? ಹೊಸದಾಗಿ ಪರಿಚಿತರಾಗಿರೋದ್ರಿಂದ ಎಲ್ಲರೂ ಒಳ್ಳೆಯವರಂತೆಯೇ ತೋರಿಸಿಕೊಳ್ತಿದ್ದೇವೇನೋ?” ತುಷಿನ್ ಮಾತಿಗೆ ಪೂರಕವಾಗಿಯೇ ಮಾತನಾಡಿದ ರಾಘವ. ಸಿಗರೇಟು ಉರಿದು ಬೀಳುವವರೆಗೂ ಯಾರೂ ಮಾತನಾಡಲಿಲ್ಲ. ಇನ್ನೇನು ರೂಮು ತಲುಪಿದರೆನ್ನುವಷ್ಟರಲ್ಲಿ ಕ್ರಾಂತಿ “ಒಂದು ಕೆಲಸ ಮಾಡೋಣ. ಇವತ್ತು ರಾತ್ರಿ ಎಲ್ಲಾದರೂ ಹೊರಗೆ ಊಟಕ್ಕೆ ಹೋಗೋಣ. ಡಾಬಾಗೆ ಒಮ್ಮೆಯೂ ಹೋಗಿಲ್ಲ. ಡಾಬಾಗೇ ಹೋಗೋಣ. ಊರೊರಗೆ ಗದ್ದೆ ಮಧ್ಯೆ ಚೆನ್ನಾಗಿರುತ್ತೆ. ಇಷ್ಟು ದಿನ ಮಾತನಾಡಿದ ವಿಷಯಗಳನ್ನು ಬೇರೆ ಮಾತನಾಡೋಣ. ನಾವು ಮೊದಲು ಇಷ್ಟಪಟ್ಟ ಹುಡುಗಿ ಇರಬಹುದು, ಮಾಡಿದ್ಯಾವುದಾದರೂ ದೊಡ್ಡ ತಪ್ಪಿರಬಹುದು. ಅಥವಾ ಒಳ್ಳೇ ಕೆಲಸವಿರಬಹುದು – ಒಟ್ಟಿನಲ್ಲಿ ಇಷ್ಟು ದಿನ ಮಿದುಳಿನಿಂದಷ್ಟೇ ಬರುತ್ತಿದ್ದ ಮಾತುಗಳು ಮನಸ್ಸಿನಿಂದಲೂ ಬರಲಿ. ಏನಂತೀರಾ?” ಉತ್ಸಾಹದಿಂದ ಕೇಳಿದ. ಉಳಿದವರಿಗೂ ಅದು ಸರಿಯೆನ್ನಿಸಿ ನಗುತ್ತಾ ತಲೆಯಾಡಿಸಿದರು. ನಾಲ್ವರೂ ಸಮಾಧಾನದ ನಿಟ್ಟುಸಿರು ಬಿಟ್ಟು ರೂಮು ಸೇರಿದರು.
ಅವತ್ತು ರಾತ್ರಿಯೇ ತುಷಿನ್ ತಾನು ಪತ್ರಕರ್ತನಾಗಬೇಕಿತ್ತು ಎಂದಿದ್ದು, ರಾಘವ ವಸತಿ ಶಾಲೆಗಳೆಂಬ ಜೈಲಿನ ಬಗ್ಗೆ ಮಾತನಾಡಿದ್ದು, ಅಭಯ ತಾನು ಭೂಮಿಗೆ ಬಂದಿದ್ದೇ ತನ್ನ ತಾಯಿ ಆಪರೇಷನ್ ಮಾಡಿಸಿಕೊಳ್ಳಲು ತಡಮಾಡಿದ್ದರಿಂದ ಎಂದು ಬೇಸರಪಟ್ಟುಕೊಂಡದ್ದು, ಕ್ರಾಂತಿ ತನ್ನ ಹೆಸರು ತನ್ನಲ್ಲಿ ಮೂಡಿಸಿರುವ ಕೀಳರಿಮೆಯನ್ನು ತೋಡಿಕೊಂಡಿದ್ದು……

‘ನಾವೆಲ್ಲಾ ಮನಸ್ಸು ತೆರೆದು ಮಾತನಾಡಬೇಕು’ ಅಂತ ಹೇಳಿದ ಅದೇ ಕ್ರಾಂತಿ ಈಗ ‘ಎಲ್ಲಾ ವಿಷಯಾನೂ ಎಲ್ಲರ ಹತ್ರ ಹೇಳೋದಿಕ್ಕಾಗೋಲ್ಲ’ ಅಂದುಬಿಟ್ನಲ್ಲಾ. ಆತ ಬದಲಾಗಿದ್ದೇ ತಿಳಿಯಲಿಲ್ಲವಾ ನಮಗೆ? ನಮಗೂ ಅಲ್ಲ… ನನಗೆ …. ಆ ತುಷಿನ್, ಅಭಿ ಕೂಡ ಗುಟ್ಟುಗಳನ್ನಿಟ್ಟುಕೊಂಡಿದ್ದಾರಂತೆ…. ಬಡ್ಡೆತ್ತವು. ಹಳೆಯದನ್ನೆಲ್ಲಾ ನೆನಪಿಸಿಕೊಂಡಷ್ಟು ಸಿಟ್ಟು ಮತ್ತಷ್ಟು ಏರಿಕೆಯಾಯಿತು. ಸಿಟ್ಟಿನ ಭರಕ್ಕೆ ಸಿಗರೇಟುಗಳೂ ಉರಿದು ಬೂದಿಯಾದವು. ಸತತವಾಗಿ ಐದು ಸಿಗರೇಟು ಸೇದಿದ್ದಕ್ಕೋ ಬೆಳಿಗಿನಿಂದ ಖಾಲಿ ಹೊಟ್ಟೆಯಲ್ಲಿದ್ದಿದ್ದಕ್ಕೋ ತಲೆ ಬವಳಿಸಿದಂತಾಯಿತು. ಹಚ್ಚಲು ತೆಗೆದುಕೊಂಡಿದ್ದ ಆರನೇ ಸಿಗರೇಟನ್ನು ಮತ್ತೆ ಪ್ಯಾಕಿನೊಳಗೆ ಸೇರಿಸಿ ಹಾಸಿಗೆಯ ಮೇಲೆ ಅಡ್ಡಾದ. ತಲೆಸುತ್ತು ಒಂದಷ್ಟು ಕಡಿಮೆಯಾಯಿತು. ಜೊತೆಗೆ ಕೋಪವೂ. ನಿಧಾನಕ್ಕೆ ಮನ ಸ್ಥಿಮಿತಕ್ಕೆ ಬರಲು ಪ್ರಾರಂಭಿಸಿತು. ‘ಇಷ್ಟಕ್ಕೂ ನಾನು ಯಾರ ಮೇಲಾದರೂ ಕೋಪ ಮಾಡಿಕೊಳ್ಳಬೇಕೆಂದರೆ ನನ್ನ ಬಗ್ಗೆಯೇ ಮಾಡಿಕೊಳ್ಳಬೇಕು. ಪರಿಚಯವಾದ ಕೆಲವೇ ದಿನಗಳಲ್ಲಿ ಅವರ ಬಳಿ ಯಾವುದೇ ಮುಚ್ಚುಮರೆಯಿಲ್ಲದೆ ಎಲ್ಲಾ ಹೇಳಿಕೊಂಡಿದ್ದು ನನ್ನದೇ ತಪ್ಪು. ಯಾವಾಗಲೂ ನನ್ನ ಮಾತುಗಳು ಓತಪ್ರೋತವಾಗಿ ಎಲ್ಲೆಲ್ಲಿಗೋ ಹರಿದು ಹೋಗುತ್ತದೆ. ಆ ಭರದಲ್ಲಿ ಆ ಕ್ಷಣಕ್ಕೆ ಏನು ಹೇಳ್ತೀನಿ ಅನ್ನೋದೇ ತಿಳಿಯೋದಿಲ್ಲ. ವಟವಟಗುಟ್ಟೋದೇ ನನ್ನ ಸ್ವಭಾವ ಆಗೋಯ್ತಲ್ಲ. ಛೇ’ ಮುಂದೇನೂ ಯೋಚನೆಗಳು ತಟ್ಟನೆ ಹೊರಬರಲಿಲ್ಲ. ಎರಡರ ವೇಗದಲ್ಲಿ ತಿರುಗುತ್ತಿದ್ದ ಫ್ಯಾನನ್ನೇ ದಿಟ್ಟಿಸಿದ. ಫ್ಯಾನಿನ ಬಿಳಿ ರೆಕ್ಕೆಯನ್ನೇ ನೋಡುತ್ತಿದ್ದವನಿಗೆ ಆ ಬಿಳಿ ಬಣ್ಣದ ರೆಕ್ಕೆ ಯಾವುದೋ ಒಂದು ನಿಗೂಢ ಸಂಕೇತವೆಂದೆನಿಸಿ ಬಿಳಿ ಬಣ್ಣದ ರೆಕ್ಕೆ ನಿಧಾನವಾಗಿ ಬಿಳಿಯ ದುಪ್ಪಟ್ಟವಾಗಿ ಪರಿವರ್ತನೆಗೊಂಡು ದುಪ್ಪಟ್ಟಾದ ಹಿಂದೆ ಆಕಾಶ ನೀಲಿ ಬಣ್ಣದ ಚೂಡಿ ಪ್ರತ್ಯಕ್ಷವಾಗಿ, ಚೂಡಿಯ ಮೇಲೆ ಬಂಗಾರ ಬಣ್ಣದ ದಾರದಲ್ಲಿ ಸೂಕ್ಷ್ಮವಾಗಿ ಮಾಡಿದ ಕುಸುರಿ ಕೆಲಸ, ಚಿಕ್ಕ ಚಿಕ್ಕ ಹೂವುಗಳ ಚಿತ್ತಾರ, ಹೂವುಗಳ ನಡುಮಧ್ಯದಲ್ಲಿ ಪುಟ್ಟ ಪುಟ್ಟ ವಜ್ರದಾಕಾರದ ಕನ್ನಡಿಗಳೂ ಗೋಚರಿಸಿದ ಮೇಲೆ ಆ ದಿರಿಸು ಧರಿಸಿದ ಹುಡುಗಿಯ ಗುರುತು ಸಿಗದಿದ್ದೀತೇ? ‘ಜಯಂತಿ……ಅಬ್ಬಾ’ ಜೋರಾಗೊಮ್ಮೆ ಉಸಿರೆಳೆದುಕೊಂಡ ರಾಘವ. ರೂಮಿನೊಳಗೆ ತುಂಬಿಕೊಂಡಿದ್ದ ಐದೂ ಸಿಗರೇಟಿನ ಹೊಗೆ ಒಮ್ಮೆಲೆ ಶ್ವಾಸಕೋಶವನ್ನು ಆವರಿಸಿ ಮೆಲ್ಲಗೆ ಕೆಮ್ಮಿದ. ಅವಳೂ ಬೇರೆಯವರಂತಯೇ. ನಮ್ಮ ಗುಂಪನ್ನು ನೋಡುತ್ತಿದ್ದಂತೆ ತಲೆಕೆಳಗೆ ಹಾಕಿ ಧರಿಸಿದ ಚಪ್ಪಲಿಯ ಉಂಗುಷ್ಠವನ್ನೇ ದಿಟ್ಟಿಸಿ ನೋಡುವವಳಂತೆ ನಟಿಸುತ್ತಾ ನಮ್ಮನ್ನು ದಾಟಿ ನಡೆಯುವವಳು. ಆದರವತ್ತು! ಮಧ್ಯಾಹ್ನ ಪ್ರಾಕ್ಟಿಕಲ್ಸಿಗೆ ಹೋಗಲು ಮನಸ್ಸಾಗದೆ ಅಫ್ರೋಜ್ ಭಾಯ್ ಅಂಗಡಿಯ ಕಡೆ ಹೆಜ್ಜೆ ಹಾಕಿದ್ದ. ಅಫ್ರೋಜ್ ಭಾಯ್ ಶುಕ್ರವಾರದ ನಮಾಜಿಗೆ ಮಸೀದಿಗೆ ಹೋಗಿದ್ದವರು ಇನ್ನೂ ಬಂದಿರಲಿಲ್ಲ. ಕಾಲೇಜಿನ ಇನ್ನೊಂದು ಬದಿಯಲ್ಲಿದ್ದ ಅಂಗಡಿಗೆ ಹೋದ. ಅದು ಹುಡುಗಿಯರ ಹಾಸ್ಟೆಲ್ಲಿಗೆ ಸಮೀಪವಿತ್ತು. ಅಫ್ರೋಜ್ ಭಾಯ್ ಅಂಗಡಿಯೆಂದರೆ ಒಂದು ಪುಟ್ಟ ತಗಡಿನ ಶೆಡ್ಡು. ಮೇಲೊಂದು asbestos ಶೀಟು. ಅಂಗಡಿಯ ಎದುರಿಗೆ ಎರಡು ಕುರ್ಚಿ, ಒಂದು ಪುಟಾಣಿ ಮೇಜು, ಪಕ್ಕದಲ್ಲಿದ್ದ ಫಾರ್ಮಸಿ ಕಾಲೇಜಿನ ಕಾಂಪೋಂಡಿಗೆ ಅಂಟಿಕೊಂಡಂತೆ ಒಂದು ಬೆಂಚು. ಅಲ್ಲಿ ಸಿಗುತ್ತಿದ್ದದಾದರೂ ಸಿಗರೇಟು, ಬೀಡಿ, ಸೋಂಪು, ಗುಟ್ಕಾ, ಚಾ – ಕಾಫಿ, ಸಂಜೆಯ ಹೊತ್ತಿನಲ್ಲಿ ದಿಲ್ ಪಸಂದ್, ಪಪ್ಸ್ ಅಥವಾ ಆಲೂ ಬನ್ ಇಷ್ಟೇ. ಸಿಗರೇಟು ಸೇದಿದವರ ಬಾಯಿ ವಾಸನೆ ಕಡಿಮೆ ಮಾಡಲು ಒಂದಷ್ಟು ಮಿಂಟ್ ಚಾಕಲೇಟುಗಳು. ಮುಂಚೆ ಅಂಗಡಿಗೆ ಹೊಂದಿಕೊಂಡಿದ್ದಂತೆ ಒಂದು ಎಸ್ಟಿಡಿ ಬೂತ್ ಇಟ್ಟಿದ್ದರಂತೆ. ಮೊಬೈಲಿನ ಹಾವಳಿಯಿಂದಾಗಿ ಎಸ್ಟಿಡಿ ಬೂತಿನ ಪಳೆಯುಳಿಕೆಯ ಜಾಗದಲ್ಲಿ ಒಂದು ಹಳೆಯಮರದ ಸ್ಟೂಲಿನ ಮೇಲೆ ಒಂದು ರುಪಾಯಿ ಕಾಯಿನ್ ಬಾಕ್ಸಿನ ಫೋನಿತ್ತು. ಸಿಗರೇಟು ಸೇದಲು ಬರುವ ಹುಡುಗರು, ಚಾ – ಕಾಫಿಗಾಗಿ ಬರುವವರು – ಇವರಷ್ಟೇ ಅಲ್ಲಿಗೆ ಕಾಯಂ ಅತಿಥಿಗಳು. ಹುಡುಗಿಯರು ಅತ್ತ ಸುಳಿಯುತ್ತಿದ್ದುದೇ ಅಪರೂಪ. ಸಿಗರೇಟು – ಟೀ, ತಿನ್ನಲು ಬಗೆಬಗೆಯ ತಿನಿಸುಗಳು ಸಿಗುತ್ತಿದ್ದ ಅಂಗಡಿಗಳು ಸುತ್ತಮುತ್ತ ಬಹಳಷ್ಟಿದ್ದವಾದರೂ ಸಿಗರೇಟಿನಂತೆ ಅಫ್ರೋಜ್ ಭಾಯ್ ನ ಅಂಗಡಿಯೂ ಹುಡುಗರಿಗೆ ಒಂದು ಚಟವಾಗಿತ್ತು. ಏಲಕ್ಕಿ ಹಾಕಿ ಭಾಯ್ ತಯಾರಿಸುತ್ತಿದ್ದ ವಿಶೇಷ ಚಾಗಿಂತ ಭಾಯ್ ನ ನಡವಳಿಕೆಯೇ ಎಲ್ಲರನ್ನೂ ಹೆಚ್ಚು ಆಕರ್ಷಿಸುತ್ತಿತ್ತೆಂಬುದರಲ್ಲಿ ಅನುಮಾನವಿಲ್ಲ. ಐದಡಿ ಉದ್ದ, ಉದ್ದಕ್ಕಿಂತ ಅಗಲವೇ ಹೆಚ್ಚೆಂಬಂತಿದ್ದ ದೇಹ, ಹೇಮಾಮಾಲಿನಿಯ ಕೆನ್ನೆಯನ್ನೂ ನಾಚಿಸುವಂತಿದ್ದ ನುಣುಪಾದ ಗದ್ದ. ತಲೆಯ ಮೇಲೊಂದು ಮುಸಲ್ಮಾನರ ಟೋಪಿ, ಶುಕ್ರವಾರವನ್ನೊಂದರತು ಪಡಿಸಿದರೆ ಉಳಿದ ದಿನಗಳಲ್ಲಿ ಮಾಮುಲಿ ಪ್ಯಾಂಟು ಶರ್ಟು. ಎಲ್ಲರೊಂದಿಗೂ ನಗುನಗುತ್ತಾ ಮಾತು. ಜೊತೆಗೆ ನಮ್ಮ ಕಾಲೇಜಿನ ಹುಡುಗರಿಗೆ ಬೋನಸ್ಸೆಂಬಂತೆ ಅಫ್ರೋಜ್ ಭಾಯ್ ಸಾಲಕ್ಕೂ ಸಿಗರೇಟು ಕೊಡುತ್ತಿದ್ದರು, ಕೆಲವರ ಸಾಲ ಸಾವಿರ ಮುಟ್ಟುತ್ತಿದ್ದದ್ದೂ ಉಂಟು. ‘ಅಲ್ಲಾ ಅಫ್ರೋಜ್ ಭಾಯ್. ತಿಂಗಳಿಗೆ ನಿಮಗೆ ಲಾಭ ಅಂತ ಬರೋದೆ ಕಡಿಮೆ. ಅಂಥದ್ರಲ್ಲಿ ಇಷ್ಟೊಂದು ಸಾಲಾನೂ ಕೊಟ್ಟರೆ ಜೀವನ ಹೆಂಗೆ? ಎಂದ್ಯಾರಾದರೂ ಕೇಳಿದರೆ ಎರಡೂ ಕೈಯನ್ನು ಆಕಾಶದೆಡೆಗೆ ತೋರಿಸಿ “ಎಲ್ಲಾ ಅವನಿಚ್ಛೆ” ಎಂದು ಮುಗುಳ್ನಗುತ್ತಿದ್ದರು. ಇಂತಿದ್ದ ಅಫ್ರೋಜ್ ಭಾಯ್ ಸಿಡಿಮಿಡಿಗೊಳ್ಳುತ್ತಿದ್ದುದು ಮುಖ್ಯರಸ್ತೆಯಲ್ಲಿದ್ದ ಮದ್ರಾಸಾದ ಹುಡುಗರು ಅಪರೂಪಕ್ಯಾವಾಗಾದರೂ ಅಂಗಡಿಗೆ ಬಂದಾಗ. ‘ಮಕ್ಕಳನ್ನೆಲ್ಲಾ ಮದ್ರಾಸಾಗೆ ಸೇರಿಸಿ. ಕುರಾನ್ ಪಠಣ ಸರಿಯಾಗಿ ಮಾಡಿಸ್ತೀವಿ. ಮೌಲ್ವಿ ಮಾಡ್ತೀವಿ ಅಂತಾರೆ. ಇರೋರೆಲ್ಲಾ ಮೌಲ್ವಿಗಳೇ ಆಗಿಬಿಟ್ಟರೆ ಅವರು ಹೇಳೋದನ್ನ ಕೇಳೋದಿಕ್ಕಾದರೂ ಜನ ಬೇಡವಾ? ನಾವೆಲ್ಲ ಮದ್ರಾಸಾಗೆ ಕಾಲೇ ಇಡದೆ ಅರ್ಥವಾಗುವಷ್ಟರ ಮಟ್ಟಿಗೆ ಕುರಾನ್ ಓದಿಕೊಂಡಿಲ್ವಾ?’ ಎಂದೇನೇನೋ ಗೊಣಗಿಕೊಳ್ಳುತ್ತಿದ್ದರು. ಇರಲಿ, ಆ ದಿನ ರಾಘವನ ಅದೃಷ್ಟಕ್ಕೋ, ದುರಾದೃಷ್ಟಕ್ಕೋ ಅಫ್ರೋಜ್ ಭಾಯ್ ಅಂಗಡಿಯನ್ನಿನ್ನೂ ತೆರೆದಿರಲಿಲ್ಲ. ಹುಡುಗಿಯರ ಹಾಸ್ಟೆಲ್ಲಿನ ಪಕ್ಕದಲ್ಲಿದ್ದ ಅಂಗಡಿ ಆಧುನಿಕವಾಗಿತ್ತು. ‘ಎಂಟಾಣೆ ನಾಳೆ ಕೊಡ್ತೀನಿ’ ದಿನಾ ಆ ಅಂಗಡಿಗೆ ಹೋಗುವವರೂ ಈ ಮಾತು ಹೇಳಿದರೆ ಕೆಕ್ಕರಿಸಿ ನೋಡುತ್ತಿದ್ದ ಅಂಗಡಿಯವನ ಕಣ್ಣ ನೋಟದಿಂದ ಹೇಳಬೇಕೆಂದರೆ ಅಂಗಡಿ ಸಂಪೂರ್ಣ ಆಧುನಿಕವಾಗಿತ್ತು. ಅಂಗಡಿಯ ಒಂದು ಬದಿಯಲ್ಲಿ ಒಂದರ ಹಿಂದೆ ಒಂದರಂತೆ ಮೂರು ಮೇಜು, ಪ್ರತಿ ಮೇಜಿಗೂ ನಾಲ್ಕು ಕುರ್ಚಿ. ಗೋಡೆಯ ಮೇಲೆ ‘ನೋ ಸ್ಮೋಕಿಂಗ್’ ಬೋರ್ಡು. ಇನ್ನೊಂದು ಬದಿಯಲ್ಲಿ ಐವತ್ತು ಪೈಸೆಯ ಕ್ಲೋರೋಮಿಂಟಿನಿಂದ ಹಿಡಿದು ನೋಟುಪುಸ್ತಕದಷ್ಟು ಅಗಲವಿದ್ದ ಕ್ಯಾಡ್ ಬರಿ ಸೆಲಬ್ರೇಷನ್ ವರೆಗೆ ಎಲ್ಲಾ ನಮೂನೆಯ ಚಾಕಲೇಟುಗಳು. ಇದರೊಟ್ಟಿಗೆ ಗಾಜಿನ ಪೆಟ್ಟಿಗೆಗಳಲ್ಲಿ ಒಂದು ರುಪಾಯಿಯ ಕಡ್ಲೆಮಿಠಾಯಿಯಿಂದ ನೂರ ಇಪ್ಪತ್ತು ರುಪಾಯಿಯ ಚಿಕನ್ ಶೌರ್ಮಾವರೆಗೆ ಎಲ್ಲವೂ ಇತ್ತು. ಜೊತೆಗೆ ಸಿಗರೇಟು, ಟೀ, ಕಾಫಿ, ಬಾದಾಮಿ ಹಾಲು – ಹಾಟೂ, ಕೋಲ್ಡೂ – ಜ್ಯೂಸು…. ಇನ್ನೂ ಏನೇನೋ. ಸಿಗರೇಟು ಸೇದುವವರಿಗೆಂದು ಅಂಗಡಿಯ ಹೊರಗೆ ಎಂಟತ್ತು ಪ್ಲಾಸ್ಟಿಕ್ ಕುರ್ಚಿಗಳು. ರಾಘವ ಎಷ್ಟೋ ದಿನಗಳ ಬಳಿಕ ಆ ಅಂಗಡಿಯ ಕಡೆಗೆ ಬಂದಿದ್ದ. ಕಾಲೇಜಿನ ಸಮಯವಾದ್ದರಿಂದ ಹೆಚ್ಚು ಜನರಿರಲಿಲ್ಲ. ಅಂಗಡಿಯ ಒಳಗೆ ಸಿಗರೇಟು ಕೊಳ್ಳಲು ಹೋದಾಗ ಅಲ್ಲೇ ಕುಳಿತಿದ್ದ ಜಯಂತಿ ಕಣ್ಣಿಗೆ ಬಿದ್ದಳು. ಚಾ ಜೊತೆಗೆ ಬನ್ನು ತಿನ್ನುತ್ತಿದ್ದಳು. ಪಕ್ಕದಲ್ಲೇ ಒಂದು ಪ್ಲೇಟಿನಲ್ಲಿ ನಾಲ್ಕೈದು ಪಾರ್ಲೆ ಜಿ ಬಿಸ್ಕೆಟ್ಟಿದ್ದವು. ಅದರ ಕವರ್ರು ಅಲ್ಲೇ ಇದ್ದ ಲೋಟದ ಪಕ್ಕದಲ್ಲಿ ಮುದುರಿ ಕುಳಿತಿತ್ತು. ಒಂದು ಚಿಕ್ಕ ತುಂಡು ಬನ್ನನ್ನು ಕಚ್ಚಿ ತಲೆ ಮೇಲೆತ್ತಿದಳು, ಇನ್ನೇನು ಅವಳ ಕಣ್ಣು ರಾಘವನ ಕಣ್ಣನ್ನು ಸಂಧಿಸಬೇಕು ರಾಘವ ಅಂಗಡಿಯವನ ಕಡೆಗೆ ತಿರುಗಿಬಿಟ್ಟ. ಸಿಗರೇಟು ತೆಗೆದುಕೊಂಡು ಹೊರಗೆ ಗೋಡೆಯ ಮೇಲೆ ಸಿಕ್ಕಿಸಿದ್ದ ಎಲೆಕ್ಟ್ರಿಕಲ್ ಲೈಟರ್ ನಿಂದ ಹೊತ್ತಿಸಿಕೊಂಡು ಜಯಂತಿಗೆ ಬೆನ್ನುಮಾಡಿಕೊಂಡು ಕುಳಿತ. ‘ಏನಿವಳು ಕಾಲೇಜಿಗೆ ಹೋಗಿಲ್ಲ. ಬನ್ನೂ ಬಿಸ್ಕೆಟ್ಟೂ ತಿಂತಿರೋದನ್ನ ನೋಡಿದ್ರೆ ಹುಷಾರಿಲ್ವೇನೋ ಪಾಪ’ ಎಂದುಕೊಂಡ. ಪಕ್ಕದ ಕುರ್ಚಿಯಲ್ಲಿದ್ದ ಟೈಮ್ಸ್ ಆಫ್ ಇಂಡಿಯಾ ಪೇಪರನ್ನು ಕೈಗೆತ್ತಿಕೊಂಡು ಅದರಲ್ಲಿ ಮಗ್ನನಾದ. ಅರ್ಧ ಸಿಗರೇಟು ಮುಗಿದಿತ್ತು. ಪತ್ರಿಕೆಯ ಅಕ್ಷರಗಳ ಮೇಲೆ ನೆರಳು ಬಿದ್ದಂತಾಯಿತು. ಬಾಯಲ್ಲಿದ್ದ ಸಿಗರೇಟನ್ನು ಎಡಗೈಯಿಂದ ಹೊರತೆಗೆದು ತುಟಿಯ ನಡುವಿನಿಂದ ನಿಧಾನಕ್ಕೆ ಹೊಗೆ ಹೊರಹಾಕುತ್ತಾ ತಲೆಯನ್ನೆತ್ತಿದ. ಜಯಂತಿ ನಿಂತಿದ್ದಳು!! ಅವಳ ತಲೆಯ ಬಲಭಾಗದ ಮೇಲೆ ಸೂರ್ಯನ ಮೇಲುಭಾಗವಷ್ಟೇ ಇಣುಕುತ್ತಿತ್ತು. ಇವನೊಳಗೆ ಯಾವುದಾದರೂ ಯೋಚನೆ ಮೂಡುವಷ್ಟರಲ್ಲಿ ಜಯಂತಿಯ ದನಿ ಸಿಡಿಲಿನಂತೆ ಅಪ್ಪಳಿಸಿತು. “ಈ ವಯಸ್ನಲ್ಲಿ ಸಿಗರೇಟು ಸೇದೋದೆ ಮಹಾಪಾಪ. ಅಂಥದ್ರಲ್ಲಿ ರಾಜಾರೋಷವಾಗಿ ಕ್ಲಾಸ್ ಮೇಟ್ ಒಬ್ಬಳು ಎದುರಿಗೆ ಕುಳಿತಿದ್ದರೂ ಸೇದ್ತೀಯಲ್ಲ. ನಾಚಿಕೆ ಆಗಲ್ಲ ನಿಂಗೆ” ಇಷ್ಟು ಹೇಳಿದವಳೇ ದಡದಡನೆ ಹಾಸ್ಟೆಲ್ಲಿನ ಕಡೆಗೆ ಹೆಜ್ಜೆ ಹಾಕಿದಳು. ನಾಲ್ಕೈದು ಮಾರು ಹೋಗುವಷ್ಟರಲ್ಲಿ ಒಂದೊಂದು ಹೆಜ್ಜೆಯ ನಡುವಿನ ಅಂತರ ಕಡಿಮೆಯಾಗುತ್ತಾ ಹೋಯಿತು. ರಾಘವನ ಮನದಲ್ಲುಳಿದಿದ್ದು ಅವಳ ಸಿಡಿಲಿನಂತಹ ಮಾತು, ಆಕಾಶ ನೀಲಿ ಬಣ್ಣದ ಚೂಡಿ, ಜ್ವರದಿಂದ ಕೆಂಪಾದಂತಿದ್ದ ಅವಳ ಕಣ್ಣುಗಳು. ‘ಇದೇನ್ ನಿಜವಾಗ್ಲೂ ಅವಳು ನನ್ನ ಬಳಿ ಮಾತನಾಡಿದ್ದೋ ಅಥವಾ ಕನಸಾ?’ ಎಂದು ತಲೆಕೆರೆದುಕೊಳ್ಳುತ್ತಾ ಪತ್ರಿಕೆಯನ್ನು ಕುರ್ಚಿಯ ಮೇಲಿಟ್ಟು ಅಂಗಡಿಯವನಿಗೆ ದುಡ್ಡು ಕೊಟ್ಟು ಅವಳ ಹಿಂದೆಯೇ ಓಡಿದ. ಅವಳೇನು ಹೆಚ್ಚು ದೂರ ಸಾಗಿರಲಿಲ್ಲ.

ಮೇ 8, 2015

ವಾಡಿ ಜಂಕ್ಷನ್ .... ಭಾಗ 9

wadi junction
Dr Ashok K R

ಇಂತಿದ್ದ ಅಭಯನನ್ನು ರಾಘವನ ರೂಮಿಗೆ ಹಾಕಿದ್ದರು. ಸಂಜೆ ರಾಘವನಿಂದ ಆಹ್ವಾನಿತಗೊಂಡು ಅವನ ರೂಮಿಗೆ ಹೋಗಿದ್ದರು ತುಷಿನ್ ಮತ್ತು ಕ್ರಾಂತಿ. ಒಂದಷ್ಟು ಲಘು ಹರಟೆಯಲ್ಲಿ ತೊಡಗಿದ್ದಾಗ ಅಭಯ್ ಎರಡು ಬ್ಯಾಗಿನೊಡನೆ ಒಳಬಂದ. “ಹಾಯ್. ನಾನು ಅಭಯ್ ಅಂತ. ಈ ರೂಮ್ ಅಲಾಟ್ ಮಾಡಿದ್ದಾರೆ ನನಗೆ. ಇಲ್ಲಿ ರಾಘವ ಅಂದ್ರೆ?” ಮೂವರೆಡೆಗೂ ಪ್ರಶ್ನಾರ್ಥಕವಾಗಿ ನೋಡಿದ. ರಾಘವ ಮಂಚದ ಮೇಲಿನಿಂದೆದ್ದು ಕೈಕುಲುಕಿದ. “ನಾನೇ ರಾಘವ. ಹುಣಸೂರಿನಿಂದ”. 

“ಹುಣಸೂರಾ? ಎಲ್ಲಿ ಬರುತ್ತೆ ಅದು?”

ಅಭಯನಿಂದ ಈ ಪ್ರಶ್ನೆಯನ್ನೇ ನಿರೀಕ್ಷಿಸುತ್ತಿದ್ದ ರಾಘವ ಉಳಿದಿಬ್ಬರೆಡೆಗೊಮ್ಮೆ ನೋಡಿ ವ್ಯಂಗ್ಯದಿಂದ “ಕೇಳಿದ್ರೇನಪ್ಪಾ. ಮೈಸೂರು ಕಡೆಯವರಿಗೆ ಮಾತ್ರ ಇವರ ತಾವರೆಕೆರೆ ಗೊತ್ತಿರಬೇಕು. ಆದರೆ ಆ ಕಡೆಯವರಿಗೆ ಹುಣಸೂರು ಗೊತ್ತಿಲ್ಲದಿದ್ದರೂ ನಡೆಯುತ್ತೆ” ಎಂದ. 
‘ಓಹೋ. ನಾನು ಬೆಳಿಗ್ಗೆ ತರಗತಿಯಲ್ಲಿ ಹೇಳಿದ್ದಕ್ಕೆ ಈ ಪ್ರತೀಕಾರ’ ಎಂದು ಯೋಚಿಸುತ್ತಾ ಮೊದಲ ದಿನವೇ ರೂಮ್ ಮೇಟ್ ಜೊತೆ ವಾದ ಮಾಡೋ ಪರಿಸ್ಥಿತಿ ಬಂತಲ್ಲಪ್ಪಾ ಎಂದುಕೊಂಡು ಮುಖದ ಮೇಲೆ ಬಲವಂತದಿಂದ ಮುಗುಳ್ನಗೆಯನ್ನು ತಂದುಕೊಳ್ಳುತ್ತಾ “ತಪ್ಪು ತಿಳ್ಕೊಂಡಿದ್ದೀರಾ ಫ್ರೆಂಡ್ಸ್ ನೀವು. ಇವತ್ತು ಬೆಳಿಗ್ಗೆ ಹೋಟೆಲ್ಲಿಗೆ ರೂಮು ಮಾಡಲು ಹೋದಾಗ ಕನ್ನಡದಲ್ಲೇ ಮಾತನಾಡಿ ರಾಯಚೂರ್ ಅಂದಿದ್ದಕ್ಕೆ ಆ ಹೋಟೆಲ್ ನವ ‘ಪರವಾಗಿಲ್ಲ ಸರ್. ಆಂಧ್ರದಲ್ಲಿದ್ದರೂ ಚೆನ್ನಾಗಿ ಕನ್ನಡ ಮಾತಾಡ್ತೀರಾ’ ಅಂದ. ಕೋಪ ಬರುತ್ತೋ ಇಲ್ವೋ ಹೇಳಿ ಮತ್ತೆ. ಯಾರಾದರೂ ಮೈಸೂರು ತಮಿಳುನಾಡಿನಲ್ಲಿದೆಯಾ ಎಂದರೆ ನಿಮಗೂ ಸಿಟ್ಟು ಬರೋದಿಲ್ವೇ?” ಮೂವರತ್ತ ಪ್ರಶ್ನೆ ಎಸೆದು ಉತ್ತರ ನಿರೀಕ್ಷಿಸುತ್ತಿರುವವನಂತೆ ಸುಮ್ಮನೆ ನಿಂತ. ಅವನು ಹೇಳಿದ್ದರಲ್ಲಿ ಸತ್ಯವಿದೆ ಎಂಬಂತೆ ತಲೆಯಾಡಿಸಿದರು. ರಾಘವನೇ ಮಾತನಾಡಿ “ಹೋಗಲಿ ಬಿಡೋ ಮಾರಾಯ. ನಾನೂ ಸುಮ್ನೆ ತಮಾಷೆ ಮಾಡ್ದೆ ಅಷ್ಟೇ. ಅಂದಹಾಗೆ ಇವರಿಬ್ಬರ ಪರಿಚಯವಾಯ್ತಾ?”

“ಇಲ್ಲಪ್ಪ. ನೂರಕ್ಕಿಂತ ಹೆಚ್ಚು ಜನರ ಹೆಸರು ಒಂದೇ ಸಲ ನೆನಪುಳಿಯೋದು ಹೇಗೆ?”

“ಇವನು ತುಷಿನ್” ತುಷಿನ್ ಕುಳಿತಲ್ಲಿಂದಲೇ ಹಾಯ್ ಮಾಡಿದ. “ಇವನು ಕ್ರಾಂತಿ ಸಂಭವ್” ಕ್ರಾಂತಿ ಹಾಯ್ ಎನ್ನುವಷ್ಟರಲ್ಲಿ ಅಭಯ್ “ಇವನ ಹೆಸರು ನೆನಪಿದೆ. ಕೊಂಚ ಅಪರೂಪದ ಹೆಸರಲ್ವಾ ಕ್ರಾಂತಿ ಸಂಭವ್” ಎಂದು ಹೇಳಿದ್ದನ್ನು ಕೇಳಿ ಕ್ರಾಂತಿ ‘ಒಟ್ಟಿನಲ್ಲಿ ಈ ಅಪರೂಪದ ವಿಚಿತ್ರ ಹೆಸರಿನ ಭೂತ ನಾನು ಸಾಯೋವರ್ಗೂ ಕಾಡುತ್ತೆ’ ಎಂದುಕೊಂಡ.

ನಾಲ್ಕು ಅಪರೂಪದ ಜನರ ಅಪೂರ್ವ ಮೈತ್ರಿಯ ಪ್ರಾರಂಭವಿದಾಗಿತ್ತು.
* * *
“ರೂಮಿನಲ್ಲಿ ಸಿಗರೇಟು ಸೇದಿದ್ರೆ ನಿನಗೇನಾದ್ರೂ ತೊಂದರೆಯಾಗುತ್ತಾ?” ಮುಖದ ಮೇಲಿನ ಮುಸುಕನ್ನು ಅಭಯ್ ಕೆಳಗೆ ಸರಿಸುತ್ತಿದ್ದಂತೆ ಕೇಳಿದ್ದ ರಾಘವ, ಪರಿಚಯವಾದ ಮಾರನೆಯ ದಿನ. ಅಭಯ್ ರಾಘವನನ್ನೇ ದಿಟ್ಟಿಸಿದ. “ಅಲ್ಲ, ನಿನಗೆ ತೊಂದರೆಯಾದ್ರೆ ಮುಲಾಜಿಲ್ಲದೆ ಹೇಳಿಬಿಡು. ಹೊರಗೆ ಹೋಗಿ ಸೇದ್ತೀನಿ. ಇವನ್ಯಾರಪ್ಪ ಸೇರಿದ ಎರಡು ದಿನಕ್ಕೇ ಕಾರಿಡಾರಿನಲ್ಲಿ ನಿಂತು ಸಿಗರೇಟ್ ಸುಡ್ತಿದ್ದಾನೆ ಅಂತ ಜನ ಮಾತಾಡ್ ಬಾರದಲ್ಲ. ಅದಿಕ್ಕೆ ಒಂದೆರಡು ತಿಂಗಳು ರೂಮಲ್ಲಷ್ಟೇ ಸಿಗರೇಟ್ ಸೇದೋಣ ಅಂತಿದ್ದೆ, ನಿನ್ನದೇನೂ ಅಭ್ಯಂತರವಿಲ್ಲದಿದ್ದರೆ”.

ಅಭಯ್ ಮಾತನಾಡದೆ ಸುಮ್ಮನಿದ್ದ.

“ಸರಿ ಬಿಡಪ್ಪ. ನಾನು ಹೊರಗೇ ಹೋಗ್ತೀನಿ” ಎಂದು ಮೇಲೆದ್ದ ರಾಘವ.

ಆತ ಬಾಗಿಲ ಬಳಿ ಹೋಗುತ್ತಿದ್ದಂತೆ “ತೊಂದರೆ ಅಂತ ಅಲ್ಲ. ಆದ್ರೂ ರೂಮಲ್ಲೇ ಸೇದ್ಬೇಕು ಅಂದ್ರೆ ಇವತ್ತಿನ ಮಟ್ಟಿಗೆ ನನಗೂ ಅರ್ಧ ಸಿಗರೇಟು ಕೊಡ್ಬೇಕು” ಅಭಯನ ದನಿ ಕೇಳಿ ಅಚ್ಚರಿ, ಸಂತಸದಿಂದ ತಿರುಗಿದ ರಾಘವ. “ಹಲ್ಕಾ ನನ್ಮಗನೇ. ನಾನೇನೋ ನಿನ್ನ ಮುಖಭಾವ ನೋಡಿ ಸಿಗರೇಟಿನ ವಾಸನೇನೆ ಆಗಲ್ವೇನೋ ಇವನಿಗೆ ಅಂತಿದ್ದೆ. ಅರ್ಧ ಯಾಕ್ ಗುರೂ ಪೂರ್ತಿ ಸೇದು. ಆದ್ರೆ ದಿನಾ ನನ್ಹತ್ರಾನೇ ಕೇಳ್ಬೇಡಪ್ಪಾ, ಅಷ್ಟೊಂದು ಶ್ರೀಮಂತನಲ್ಲ ನಾನು” ಕೊನೆಯ ವಾಕ್ಯಕ್ಕೆ ಒಂದಷ್ಟು ಹೆಚ್ಚೇ ಒತ್ತು ಕೊಟ್ಟುಬಿಟ್ಟೆನೇನೋ ಎಂದುಕೊಳ್ಳುತ್ತಾ ಜೇಬಿನಿಂದ ಕಿಂಗ್ ಸಿಗರೇಟು ಪ್ಯಾಕ್ ಹೊರತೆಗೆದು ಒಂದು ಸಿಗರೇಟನ್ನು ಅಭಯನಿಗೆ ಕೊಟ್ಟು ಮತ್ತೊಂದನ್ನು ತುಟಿಯ ಮಧ್ಯದಲ್ಲಿರಿಸಿಕೊಂಡು ಪ್ಯಾಂಟಿನ ಎಡಗಡೆಯ ಜೇಬಿನಿಂದ ಬೆಂಕಿಪೊಟ್ಟಣ ಹೊರತೆಗೆದ, ಕಡ್ಡಿಯಿರಲಿಲ್ಲ. ಅಭಯ ನಗುತ್ತಾ ಹಾಸಿಗೆಯಿಂದೆದ್ದು ಮಂಚದ ಬಲಬದಿಯ ಗೋಡೆಯಲ್ಲಿನ ಮೊಳೆಗೆ ನೇತುಹಾಕಿದ್ದ ಅಂಗಿಯ ಜೇಬಿನಿಂದ ಲೈಟರನ್ನು ಹೊರತೆಗೆದು ತನ್ನ ಸಿಗರೇಟನ್ನು ಹಚ್ಚಿಕೊಂಡು ಜ್ವಾಲೆಯನ್ನು ರಾಘವನ ಮುಂದೆ ಹಿಡಿದ. ರಾಘವನೂ ಹಚ್ಚಿಕೊಂಡ. ಮೊದಲ ಜುರಿಕೆಯ ಹೊಗೆಯನ್ನು ಹೊರಬಿಡುತ್ತಾ “ಹಿರಿಯರು ದೀಪದಿಂದ ದೀಪ ಹಚ್ಚಬೇಕು ಅಂದ್ರು. ನಾವದನ್ನು ತಪ್ಪಾಗಿ ಆಚರಿಸ್ತಾ ಇದ್ದೀವಲ್ವಾ” ಎಂದ ಅಭಯ್. ಇದೇನು ತಮಾಷೆ ಮಾಡ್ತಿದ್ದಾನೋ ಅಥವಾ ಯೋಚಿಸಬೇಕಾದ ವಿಷಯ ಹೇಳ್ತಿದ್ದಾನೋ ಸರಿಯಾಗಿ ತಿಳಿಯಲಾಗದೆ ಬೆಪ್ಪು ಬೆಪ್ಪಾಗಿ ನಕ್ಕ ರಾಘವ.

ಪರಿಚಯದವರು ಎಂದೆನ್ನಿಸಿಕೊಳ್ಳೋರು ಬಹಳ ಮಂದಿ ಇರಬಹುದಾದರೂ ಗೆಳೆಯರ ಸಂಖೈ ಯಾವಾಗಲೂ ಮಿತಿಯಲ್ಲೇ ಇರುತ್ತೆ. ‘ಊರೋರೆಲ್ಲಾ ನನ್ನ ಫ್ರೆಂಡ್ಸು’ ಅಂತ ಮಾತನಾಡೋರಿಗೆ ಗೆಳೆತನದ ಅರ್ಥ, ವ್ಯಾಪ್ತಿ, ವಿಸ್ತಾರ, ಆಳ ಇವಾವುದೂ ತಿಳಿಯದಿರುವ ಸಾಧ್ಯತೆಯೇ ಹೆಚ್ಚು. ಯಾವಾಗಲಾದರೊಮ್ಮೆ ಎದುರಿಗೆ ಸಿಕ್ಕಾಗ ‘ಹಾಯ್ ಹೇಗಿದ್ದೀರಾ?’ ಅಂತ ಕೇಳಿದವರನ್ನೂ ಗೆಳೆಯನೆನ್ನಲಾದೀತೇ? ಈ ಗೆಳೆಯರಲ್ಲೂ ಬಹಳಷ್ಟು ವಿಧ. ಬೆಳಿಗ್ಗೆ ತಿಂಡಿಗೆ ಹೋಗೋದರಿಂದ ಹಿಡಿದು ರಾತ್ರಿಯ ಊಟದವರೆಗೂ ಕೆಲವರು ಜೊತೆಜೊತೆಯಾಗೇ ಇರುತ್ತಾರೆ. ತರಗತಿಯಲ್ಲೂ ಅಕ್ಕಪಕ್ಕದ ಜಾಗ, ಸಿನಿಮಾ, ಶಾಪಿಂಗೂ, ಟ್ರಿಪ್ಪೂ ಎಲ್ಲದಕ್ಕೂ ಜೊತೆಯಲ್ಲಿ. ಯಾವಾಗಲೂ ನಗುನಗುತಾ ಮಾತು. ಆದರೆ ಆ ಮಾತುಗಳೆಲ್ಲಾ ಮನಸ್ಸಿನ ಪರದೆಯ ಹೊರಗಿನಿಂದಷ್ಟೇ ಬಂದಿರುತ್ತವೆಯೇ ಹೊರತು ಒಳಪದರದಲ್ಲಿನ ಮಾತುಗಳು ಅಲ್ಲೇ ಉಳಿದುಹೋಗಿರುತ್ತೆ. ಕೊನೆಗೆ ಒಬ್ಬರಿಗೊಬ್ಬರು ಪರಿಚಯವಾಗದೇನೇ ಜೀವನದ ಒಂದು ಹಂತದಲ್ಲಿ ಅವರ ಹಾದಿಗಳು ಕವಲೊಡೆದು ಬೇರೆಯಾಗಿಬಿಟ್ಟಿರುತ್ತೆ. ಮುಂದ್ಯಾವತ್ತಾದರೂ ಆ ಹಳೆಯ ಗೆಳೆಯನ ಬಗ್ಗೆ ನೆನಪಿಸಿಕೊಳ್ಳೋಣವೆಂದರೆ ಸಿನಿಮಾಕ್ಕೆ ಹೋದದ್ದರ ಹೊರತಾಗಿ ಮತ್ತೇನೂ ನೆನಪಾಗಲೊಲ್ಲದು. ನಮ್ಮಲ್ಲಿನ ಬಹಳಷ್ಟು ಗೆಳೆತನ ಹೀಗೆಯೇ ಇರುತ್ತದೆಯಲ್ಲವೇ? ಇನ್ನು ಗೆಳೆತನಕ್ಕೆ ನಿಜವಾದ ಅರ್ಥ, ಶ್ರೀಮಂತಿಕೆಯನ್ನು ತಂದುಕೊಟ್ಟವರು ಊರಿಗೆಲ್ಲಾ ಕಾಣುವಂತೆ ದಿನವೆಲ್ಲಾ ಜೊತೆಯಾಗಿರದಿದ್ದರೂ, ದಿನದಲ್ಲಿ ಕೆಲವೇ ನಿಮಿಷಗಳಷ್ಟು ಒಟ್ಟಿಗೆ ಕಳೆದರೂ – ಆ ನಿಮಿಷಗಳಲ್ಲಿ ಮನದಾಳದ ಮಾತುಗಳನ್ನಾಡುತ್ತಾ ಹೆಚ್ಚೆಚ್ಚು ಪರಿಚಿತರಾಗಿ ಹತ್ತಿರವಾಗುತ್ತಾರೆ. ಇನ್ನೂ ಹೆಚ್ಚು ಪರಿಚಿತರಾದಂತೆ ಮೌನದಲ್ಲೂ ಮನದ ಮಾತುಗಳನ್ನು ಅರ್ಥೈಸಿಕೊಳ್ಳಬಲ್ಲವರಾಗುತ್ತಾರೆ.

‘ನಾವು ನಾಲ್ಕೂ ಮಂದಿ ಹತ್ತಿರವಾಗೋದಿಕ್ಕೆ ನಮ್ಮೆಲ್ಲರಲ್ಲೂ ಇರೋ ಸಮಾನ frequencyನೇ ಕಾರಣ’ ಎಂದು ಆಗಾಗ ಹೇಳುತ್ತಿದ್ದ ಕ್ರಾಂತಿ. ಮೊದಮೊದಲು ಈ ನಾಲ್ವರು ಬೇರೆಲ್ಲರಂತೆ ಯಾವಾಗಲೂ ಜೊತೆಯಲ್ಲೇ ಇದ್ದು ಹರಟೆ ಕೊಚ್ಚುತ್ತಿದ್ದರು. ಹದಿನೈದು ದಿನಕ್ಕೇ ವಿಷಯಗಳೆಲ್ಲಾ ಖಾಲಿಯಾದವು. ನಂತರ ಮತ್ತದೇ ಪುನರಾವರ್ತನೆ. ಅಂದು ಶನಿವಾರ. ಮಧ್ಯಾಹ್ನ ಒಂದಕ್ಕೇ ತರಗತಿ ಮುಗಿದಿತ್ತು. ಕಾಲೇಜಿನೆದುರಿಗಿನ ಅಫ್ರೋಜ್ ಭಾಯ್ ಅಂಗಡಿಯಲ್ಲಿ ನಾಲ್ವರೂ ಕುಳಿತಿದ್ದರು. ತುಷಿನ್ ಕೂಡ ಸಿಗರೇಟು ಸಂಘದ ಸದಸ್ಯನಾಗಿದ್ದ. ಕ್ರಾಂತಿ ಇನ್ನೊಂದಷ್ಟು ದಿನದ ನಂತರ ಸೇರುವವನಿದ್ದ. ಕಾಲೇಜಿನ ಪಾಠ, ಹಳೆಯ ಕಾಲೇಜು, ಅಲ್ಲಿದ್ದ ಗೆಳೆಯರು – ಊಹ್ಞೂ ತುಷಿನ್ ಗ್ಯಾಕೋ ಅಂದು ತಡೆಯಲಾಗಲಿಲ್ಲ. “ಯಾಕೋ ನಾವು ನಾಲ್ಕು ಜನ ಮಾತಾಡಿದ್ದೇ ಮಾತಾಡ್ತಿದ್ದೀವಿ ಅನ್ನಿಸ್ತಿಲ್ವಾ?” ತನಗೂ ಎಂಬಂತೆ ಕೇಳಿದ. “ಅಂದ್ರೆ. ನಾವ್ನಾಲ್ಕು ಮಂದಿ ಗೆಳೆಯರಾಗೋಕೆ ಆಗಲ್ಲಾ ಅಂತಾನಾ?” ಅಭಯ ಕೇಳಿದ. ಉಳಿದಿಬ್ಬರೂ ಆತನ ಪ್ರಶ್ನೆಯ ಬಗ್ಗೆ ಯೋಚಿಸುತ್ತಾ ಉತ್ತರವನ್ನರಸುತ್ತಿದ್ದರು. “ನಾನು ಹೇಳಿದ್ದು ಆ ರೀತಿಯಲ್ಲ. ಕಾಲೇಜು ಶುರುವಾಗಿ ಎರಡು ತಿಂಗಳಾಗುತ್ತಾ ಬಂತು. ನಾನು ಮಂಡ್ಯದ ಬಗ್ಗೆ ಹೇಳೋದು, ರಾಘವ ಹುಣಸೂರನ್ನ ಹೊಗಳೋದು, ನೀನು ತಾವರೆಕೆರೆ ಬಗ್ಗೆ ಕೊಚ್ಕೊಂಡಿದ್ದು; ಅದೇ ಪಿ.ಯು.ಸಿ ಮಾರ್ಕ್ಸು, ಸಿ.ಇ.ಟಿ ರ್ಯಾಂಕು; ಮೊದಲ ಸುತ್ತಿನಲ್ಲಿ ಕೆಂಪೇಗೌಡ ಮೆಡಿಕಲ್ ಕಾಲೇಜಿನಲ್ಲಿ ತೆಗೆದುಕೊಂಡಿದ್ದೆ ಅಂತ ಕ್ರಾಂತಿ; ಇನ್ನೊಂದೈದು ಮಾರ್ಕ್ಸ್ ಬಂದಿದ್ರೆ ಮೈಸೂರು ಮೆಡಿಕಲ್ ಕಾಲೇಜಲ್ಲಿ ಸೀಟು ಸಿಕ್ತಿತ್ತು ಅಂತ ರಾಘವ; ಸೊನಾಲಿ ಇವತ್ತು ಮಸ್ತ್ ಕಾಣ್ತಿದ್ಲಲ್ವಾ ಅಂತ ನಾನು; ನೀನು ಕೊನೇ ಮಗ, ನಾನು ಒಬ್ನೇ ಮಗ….. ಇಷ್ಟು ಬಿಟ್ಟು ಮತ್ತೇನಾದರು ಮಾತನಾಡಿದ್ದೀವಾ ಎರಡು ತಿಂಗಳಿನಿಂದ. ಅಪರೂಪಕ್ಕೆ ಒಂದಷ್ಟು ಸಿನಿಮಾಗಳ ಬಗ್ಗೆ ಮಾತಾಡಿದ್ದು ಬಿಟ್ಟರೆ”. ತುಷಿನ್ ನ ಮಾತನ್ನು ಆಸಕ್ತಿಯಿಂದ ಕೇಳುತ್ತಿರುವಂತೆ ಅವನ ಕೈಯಲ್ಲಿದ್ದ ಸಿಗರೇಟು ಸುಡದೆ ಉಳಿದಿತ್ತು. ಮತ್ತೊಮ್ಮೆ ಹಚ್ಚಿಕೊಂಡ. ಅವನು ಹೇಳಿದ್ದು ಅಭಯನಿಗೂ ಸರಿಯೆನ್ನಿಸಿತು. ಆದರೆ ಉತ್ತರ ಅಥವಾ ಸಲಹೆ ಏನು ಕೊಡಬೇಕೆಂದು ಹೊಳೆಯಲಿಲ್ಲ. ಸಿಗರೇಟು ಸೇದುತ್ತಾ ಯೋಚಿಸುತ್ತಿರುವವನಂತೆ ನಟಿಸಿದ.

ಡಿಸೆಂ 31, 2014

ವಾಡಿ ಜಂಕ್ಷನ್ .... ಭಾಗ 8

wadi junction
Dr Ashok K R
ಇದೇನಾಗೋಯ್ತು ನಿನ್ನೆ? ರಾಘವ ಯೋಚನೆಗೆ ಬಿದ್ದಿದ್ದ. ಕಾಲೇಜಿಗೆ ಹೋಗುವ ಮನಸ್ಸಾಗಿರಲಿಲ್ಲ. ‘ನಡೀಲೇ ಕಾಲೇಜಿಗೆ’ ಎಂದ ಅಭಯನ ಮೇಲೂ ರೇಗಿದ್ದ. ‘ಯಾಕೆ ಬರ್ತಿಲ್ಲ ಅನ್ನೋದಾದ್ರೂ ಹೇಳು?’ ಎಂದವನು ಕೇಳಿದ್ದಕ್ಕೆ “ಎಲ್ಲಾ ವಿಷಯಾನೂ ಎಲ್ಲಾ ಸಮಯದಲ್ಲೂ ಎಲ್ಲರಿಗೂ ಹೇಳೋದಿಕ್ಕೆ ಆಗೋದಿಲ್ಲ ಕಣಪ್ಪ” ರಾಘವ ಗಂಭೀರವದನನಾಗಿ ಹೇಳಿದಾಗ ಮನಸ್ಸಿನೊಳಗೇ ನಕ್ಕು ‘ಇನ್ನೂ ಸ್ವಲ್ಪ ಸಮಯ ಬೇಕು. ಇವನ ಮನಸ್ಸು ಸರಿಯಾಗಲಿಕ್ಕೆ’ ಎಂದುಕೊಂಡು ಅಭಯ ಕಾಲೇಜಿಗೆ ತೆರಳಿದ.

ನವೆಂ 21, 2014

ವಾಡಿ ಜಂಕ್ಷನ್ .... ಭಾಗ 7

wadi junction
Dr Ashok K R
ಎಂಟು ಘಂಟೆಯ ಸುಮಾರಿಗೆ ಕ್ರಾಂತಿ ರೂಮಿಗೆ ಬಂದ. ಬನ್ನಿಮಂಟಪದಲ್ಲಿ ಟೆಂಪೋ ಹಿಡಿದು ಕಳಸ್ತವಾಡಿಯಲ್ಲಿ ಇಳಿದುಕೊಂಡು ಚಕ್ರೇಶ್ವರಿ ಬಾರಿನಲ್ಲಿ ಎರಡು ಬಿಯರ್ ಬಾಟಲ್ ಖರೀದಿಸಿ ಪಕ್ಕದ ರಾಜಹಂಸ ಡಾಬಾಕ್ಕೆ ಕಾಲಿಟ್ಟಾಗ ಸಮಯ ಒಂಭತ್ತಾಗಿತ್ತು. ಕ್ರಾಂತಿ ಯೋಚನಾಲಹರಿಯಲ್ಲಿ ತೇಲುತ್ತಾ ಮೌನವಾಗುಳಿದಿದ್ದ. ಉಳಿದ ಮೂವರೂ ಕ್ರಾಂತಿಯನ್ನು ಯಾವ ರೀತಿಯಿಂದ ಮಾತಿಗೆ ಹಚ್ಚಬೇಕು ಎಂಬುದನ್ನು ಚಿಂತಿಸುತ್ತಾ ಕುಳಿತಿದ್ದರು. ‘ನಿಮ್ಮಿಬ್ಬರಲ್ಲೊಬ್ಬರು ಮೊದಲು ಮಾತನಾಡಬೇಕು ನಂತರವಷ್ಟೇ ನಾನು ಆ ವಿಷಯವನ್ನು ಚರ್ಚಿಸೋದು’ ಎಂದು ತುಷಿನ್ ಮೊದಲೇ ಹೇಳಿಬಿಟ್ಟಿದ್ದ. 
Also Read: ವಾಡಿ ಜಂಕ್ಷನ್ ಭಾಗ 6

ನವೆಂ 9, 2014

ವಾಡಿ ಜಂಕ್ಷನ್ .... ಭಾಗ 6



wadi junctionDr Ashok K R
ಅವರು ನಾಲ್ವರು ಇದ್ದಿದ್ದೇ ಹಾಗೆ. ವೈಚಾರಿಕವಾಗಿ ಸೈದ್ಧಾಂತಿಕವಾಗಿ ಒಬ್ಬೊಬ್ಬರಲ್ಲೂ ಬಹಳಷ್ಟು ವ್ಯತ್ಯಾಸಗಳಿದ್ದುವಾದರೂ ಹೊರಗಿನಿಂದ ನೋಡುವವರಿಗೆ ಒಬ್ಬನಿಗೇ ನಾಲ್ಕು ಅಂಗಿ ತೊಡಿಸಿದಂತೆ ಕಾಣಿಸುತ್ತಿದ್ದರು. ಎಲ್ಲರಿಗಿಂತ ಕೊನೆಯಲ್ಲಿ ಬಂದು ತರಗತಿಯ ಒಂದು ಮೂಲೆಯಲ್ಲಿ ಕುಳಿತು ಸಂಜೆ ನಾಲ್ಕಾಗುತ್ತಿದ್ದಂತೆ ಎಲ್ಲರಿಗಿಂತ ಮೊದಲು ಹೊರಟು ಕಾಲೇಜಿನ ಎದುರಿಗಿದ್ದ ಅಫ್ರೋಜ್ ಭಾಯ್ ಅಂಗಡಿಯಲ್ಲಿ ಸಿಗರೇಟಿಡಿದು ಕುಳಿತು ಬಿಡುತ್ತಿದ್ದರು. ಮೊದಲ ವರ್ಷದ ಮೊದಲ internals ಮುಗಿಯುವವರೆಗೂ ಬಹುತೇಕ ಮಂದಿ ಇವರು ನಾಲ್ವರು ದುಡ್ಡು ಕೊಟ್ಟು ಓದಲು ಬಂದಿರೋ ದಡ್ಡ ಶಿಖಾಮಣಿಗಳೆಂದೇ ತಿಳಿದಿದ್ದರು.

ಅಕ್ಟೋ 31, 2014

ವಾಡಿ ಜಂಕ್ಷನ್ .... ಭಾಗ 5

wadi junction

Dr Ashok K R
ಮತ್ತೆ ನಿಲ್ದಾಣದಲ್ಲಿ
“ಮೊದಲ ವರ್ಷ, ಅದೂ ಕಾಲೇಜಿಗೆ ಸೇರಿ ಮೂರು ತಿಂಗಳಾಗಿದೆ ಅಷ್ಟೇ. ಈಗಲೇ ಹೀಗೆ ಇನ್ನು ಮುಂದೆ?” ಪ್ರಿನ್ಸಿಪಾಲರು ಯಾವುದೋ ಕಾಗದಗಳಿಗೆ ಸಹಿಹಾಕುತ್ತಾ ಪ್ರಶ್ನಿಸಿದರು. ರಾಘು, ಅಭಯ್, ತುಷಿನ್, ಕ್ರಾಂತಿ ತಲೆತಗ್ಗಿಸಿದಂತೆ ನಿಂತಿದ್ದರು.
“ಇನ್ನು ಮುಂದೆ ಈ ರೀತಿ ಮಾಡಲ್ಲ ಬಿಡ್ರಿ ಸರ್” ರಾಘು ಮೆಲ್ಲನೆ ಹೇಳಿದ.
“ಯಾರ್ ಯಾರ್ ಹೇಳಿದ್ದು” ಪ್ರಿನ್ಸಿಪಾಲ್ ಕಾಗದದಿಂದ ತಲೆಎತ್ತಿದರು. ಎಲ್ಲರೂ ಯಾರೂ ಮಾತನಾಡಿದ್ದೆಂಬಂತೆ ಅಚ್ಚರಿ ವ್ಯಕ್ತಪಡಿಸುತ್ತಾ ಒಬ್ಬರನ್ನೊಬ್ಬರು ನೋಡಿದರು. ಮತ್ತೆ ತಲೆತಗ್ಗಿಸಿದರು. ಆ ರೀತಿ ನಿಲ್ಲಬೇಕಾದ ಸಂದರ್ಭವನ್ನು ತಾವಾಗೇ ಸೃಷ್ಟಿಸಿಕೊಂಡಿದ್ದರು.
ಬೆಂಗಳೂರಿಗೆ ಹೋಗುವ ರಸ್ತೆಯಲ್ಲಿ ಕಾಲೇಜಿನಿಂದ ಎರಡ್ಮೂರು ಕಿಮಿ ಕ್ರಮಸಿದರೆ ಸಿದ್ಧಲಿಂಗಪುರ, ಅಲ್ಲಿಂದ ಹತ್ತಿಪ್ಪತ್ತೆಜ್ಜೆ ದಾಟಿ ಎಡಕ್ಕೆ ಹೊರಳಿದರೆ ಎ-1 ಡಾಬಾ. ನಾಲ್ವರೂ ಸಂಜೆ ಏಳಕ್ಕೆ ಅಲ್ಲಿ ಸೇರಿದ್ದರು. ಊಟ ಮಾತು. ಹತ್ತು ಘಂಟೆ ಆಗುತ್ತಿದ್ದಂತೆ ರಾಘವ “ಒಂದು ಕೆ.ಎಫ್ ಸ್ಟ್ರಾಂಗ್ ತಗೊಂಡು ಬಾ” ಅಂದ ಅಷ್ಟರಲ್ಲಾಗಲೇ ಪರಿಚಯವಾಗಿದ್ದ ಕುಮಾರನಿಗೆ.
ಉಳಿದ ಮೂವರೂ ಅವನನ್ನೇ ಆಶ್ಚರ್ಯದಿಂದ ನೋಡಿದರು.

ಅಕ್ಟೋ 24, 2014

ವಾಡಿ ಜಂಕ್ಷನ್ .... ಭಾಗ 4

wadi junction
Dr Ashok K R
ಇನ್ನು ನಮ್ಮ ಅಭಯ್, ಅಭಯ್‍ಗೌಡ ಬಸನಗೌಡ ಪೋಲೀಸ್ ಪಾಟೀಲ್ – ಆಗಿನ ರಾಯಚೂರಿನ ಈಗಿನ ಕೊಪ್ಪಳ ಜಿಲ್ಲೆಯಲ್ಲಿರುವ ಕುಷ್ಟಗಿ ತಾಲ್ಲೂಕಿನ ತಾವರಗೆರೆಯವನು. ತಂದೆತಾಯಿಗೆ ಮೂವರು ಮಕ್ಕಳು. ಇವನು ಮೂರನೆಯವನು. ಒಬ್ಬ ಅಣ್ಣ ಬಿಎಸ್ಸಿವರೆಗೆ ಓದಿಕೊಂಡು ತಾವರಗೆರೆಯಲ್ಲೇ ಜಮೀನು ನೋಡಿಕೊಳ್ಳುತ್ತಾನೆ, ನೋಡುತ್ತಾನಷ್ಟೇ ಕೆಲಸಗಳನ್ನೆಲ್ಲಾ ಅವನ ತಂದೆಯೇ ಮಾಡಿಸುತ್ತಾರೆ. ಮಧ್ಯದವಳು ಅಂದ್ರೆ ಅಭಯನ ಅಕ್ಕ ಬಿ.ಕಾಮ್ ಮಾಡಿದ್ದಾಳೆ. ಅಭಯ್ ಮೈಸೂರನ್ನು ಉದ್ಧರಿಸಲು ಬರುವುದಕ್ಕೆ ಸ್ವಲ್ಪ ದಿನಗಳ ಮುಂಚೆ ಆಕೆಯ ಮದುವೆಯಾಯಿತು. ಆಕೆಯೀಗ ಕಲ್ಬುರ್ಗಿಯಲ್ಲಿದ್ದಾಳೆ. ‘ನಾನೇ ಮೂರನೆಯವನು. ಅಪ್ಪ ಅಮ್ಮನಿಗಾಗಲೇ ಮಕ್ಕಳ ಮೇಲಿನ ಆಸ್ಥೆ ಕಡಿಮೆಯಾಗಿತ್ತು. ಈಗಲೇ ಆಪರೇಷನ್ ಮಾಡಿಸಿಕೊಳ್ಳೋದೋ ಬೇಡವೋ ಎಂಬ ಸಂದಿಗ್ಧದಲ್ಲಿದ್ದಾಗ ಹುಟ್ಟಿದವನು ನಾನು. ಭೂಮಿಗೆ ಅಷ್ಟಾಗಿ ನನ್ನ ಅವಶ್ಯಕತೆ ಇರಲಿಲ್ಲವೇನೋ?’ ಇದವನ ಎಂದಿನ ಪ್ರವರ. ಆತ ಹೀಗೆ ದೂರುತ್ತಾನಲ್ಲ, ತಂದೆ ತಾಯಿ ಇವನನ್ನು ಕಡೆಗಣಿಸುತ್ತಾರ ಅಂದರೆ ಅದೂ ಇಲ್ಲ. ಉಳಿದವರ ಮೇಲಿರುವಷ್ಟೇ ಅಕ್ಕರೆ ಇವನ ಮೇಲೂ ಇದೆ.ಇವನಲ್ಲೇ ಬಹುಷಃ ಕೊರಗಿರಬೇಕು. ಏಳನೇ ತರಗತಿಯವರೆಗೆ ತಾವರಗೆರೆಯಲ್ಲೇ ಓದಿ ನಂತರ ಧಾರವಾಡಕ್ಕೆ ವಲಸೆ ಹೋಸ. ಎಸ್.ಡಿ.ಎಂನಲ್ಲಿ ಮುಂದಿನ ಅಧ್ಯಯನ. ರಂಗೀಲಾದ ಹಾಡು ಗುನುಗುತ್ತಾ ಪತ್ರಿಕೆಯಲ್ಲಿ ಬಂದಿದ್ದ ನಗ್ನಬಾಲಿಕೆಯ ಮೊಲೆಯ ಮೇಲೆ ತನ್ನ ಹೆಸರು ಬರೆಯುತ್ತಿದ್ದವನಿಗೆ ಹಿಂದಿನಿಂದ ತಂದೆ ಬಂದು ಬಿಂತಿದ್ದು ಅರಿವಿಗೇ ಬಂದಿರಲಿಲ್ಲ. ‘ಏನಪ್ಪಾ ಬರಿ ಅಭಯ್ ಅಂತ ಬರೆದುಬಿಟ್ಟೆ. ಪೂರ್ತಿ ಹೆಸರು ಬರಿ. ನಮ್ಮ ವಂಶದ ಕೀರ್ತಿನಾದರೂ ಬೆಳೆಯುತ್ತೆ’ ಎಂದು ಅವನ ತಂದೆ ನುಡಿದಾಗ ಇವನ ಸ್ಥಿತಿ......ಸಮಾನತೆ ಸ್ವಾತಂತ್ರ್ಯಕ್ಕಿಂತ ಮುಖ್ಯ ಎಂಬ ಭಾವನೆಯವನು. ಪ್ರತಿಭಾವಂತನಲ್ಲ, ಕೆಲಸ ಸಿಗುತ್ತಿಲ್ಲವೆಂಬ ಒಂದೇ ಕಾರಣಕ್ಕೆ ಒಬ್ಬ ವ್ಯಕ್ತಿ ಹಸಿದು ಮಲಗುತ್ತಾನೆಂದರೆ ಅದು ನಮ್ಮ ದೇಶದ ಅಧಃಪತನದ ಸಂಕೇತ ಎನ್ನುತ್ತಾನೆ. ಬಹಳಷ್ಟು ಬಾರಿ ಆತನ ಮಾತುಗಳು ನಮಗೆ ಅರ್ಥವಾಗುವುದಿಲ್ಲ.

ಅಕ್ಟೋ 16, 2014

ವಾಡಿ ಜಂಕ್ಷನ್ .... ಭಾಗ 3

Dr Ashok K R
“ಭಯ್ಯಾ ಜೀವನ ಅಂದ್ರೆ ಏನು?” ಪ್ರಶ್ನೆ ಕೇಳಿದ ರಾಘವ ಮತ್ತೆ ಮುಸುಕೆಳೆದುಕೊಂಡು ಪಕ್ಕಕ್ಕೆ ಹೊರಳಿದ.
ತುದಿಗಳೆಲ್ಲಾ ಜೀರ್ಣವಾಗಿದ್ದ ಚಾಪೆಯ ಮೇಲೆ ಕೂತು ಕೈಯಲ್ಲಿ ಪಾಲಿಶ್ ಮಾಡಿಸಿಕೊಂಡು ಮಿರಿಮಿರಿ ಮಿಂಚುತ್ತಿದ್ದ ತಲೆಬುರುಡೆಯ ಅಸಂಖ್ಯಾತ ತೂತುಗಳ ಅಧ್ಯಯನದಲ್ಲಿ ಮುಳುಗಿಹೋಗಿದ್ದ ಅಭಯ ರಾಘವನ ಪ್ರಶ್ನೆಯಿಂದ ವಿಚಲಿತಗೊಂಡ. ತಲೆಬುರುಡೆಯನ್ನು ಪಕ್ಕಕ್ಕಿಟ್ಟು ಅಂಗಿಯ ಜೇಬಿನಿಂದ ಸಿಗರೇಟು ಹೊರತೆಗೆದು ಫಿಲ್ಟರನ್ನು ಬಲಗೈಯ ಬೆರಳುಗಳಲ್ಲಿಟ್ಟುಕೊಂಡು ಎಡ ಹೆಬ್ಬರಳಿನ ಉಗುರ ಮೇಲೆ ನಾಲ್ಕು ಬಾರಿ ಕುಟ್ಟಿದ. ಇನ್ನೊಂದು ತುದಿಯಲ್ಲಿನ ತಂಬಾಕು ಒಂದಷ್ಟು ಒಳಹೋಯ್ತು. ಪಕ್ಕದ ಮೇಜಿನ ಮೇಲೆ ವಿವೇಕಾನಂದರ ಫೋಟೋದ ಮುಂದಿದ್ದ ಕಡ್ಡಿಪೆಟ್ಟಿಗೆಯನ್ನು ತೆಗೆದುಕೊಂಡು ಸಿಗರೇಟತ್ತಿಸಿ ಮೇಜಿನ ಅಂಡಿನಲ್ಲಿದ್ದ ಲೋಟ ಕಮ್ ಆ್ಯಶ್ ಟ್ರೇಯನ್ನು ಬಗುಲಲ್ಲಿಟ್ಟುಕೊಂಡ.
“ಕರೆಕ್ಟು ಗುರು ನೀನ್ಕೇಳಿದ್ದು. ಏನು ಜೀವ್ನ ಅಂದ್ರೆ?” ಧೂಮವನ್ನು ಗಾಳಿಯಲ್ಲಿ ಲೀನವಾಗಿಸುತ್ತಾ ಕೇಳಿದ.
“ಪ್ರಶ್ನೆ ಕೇಳಿದ್ದು ನಾನು. ಉತ್ತರ ಹೇಳು”
“ಪ್ರಶ್ನೆಗೆ ಪ್ರಶ್ನೆಯೇ ನನ್ನ ಉತ್ತರ”
Also read

ಅಕ್ಟೋ 10, 2014

ವಾಡಿ ಜಂಕ್ಷನ್ .... ಭಾಗ 2

hingyake
Dr Ashok K R
ಪ್ಲಾಟ್‍ಫಾರಂ ನಂ 1
ನಿಲ್ದಾಣ 1
“ನನ್ನ ತಾತ ತಲೆಯಲ್ಲಿ ಯಾವ ಭಾವನೆ ಇಟ್ಟುಕೊಂಡು ನನಗೀ ಹೆಸರು ಇಟ್ಟರೋ? ತೀರ ಮೊನ್ನೆ ಮೊನ್ನೆ ಎನ್‍ಡಿಟಿವಿ ಇಂಡಿಯಾದಲ್ಲಿ ಕಾರು ಮತ್ತು ಬೈಕುಗಳ ಬಗ್ಗೆ ಕಾರ್ಯಕ್ರಮ ನಡೆಸಿಕೊಡುವವನ ಹೆಸರೂ ಕ್ರಾಂತಿ ಸಂಭವ್ ಎಂದು ನೋಡಿದಾಗ ಮನ ನಿರಾಳವಾಯಿತು. ನನ್ನಿಂದ ಯಾವುದಾದರೂ ಕ್ರಾಂತಿ ಸಂಭವಿಸುತ್ತದೆ ಎಂದು ಭಾವಿಸಿದರೋ ಅಥವಾ ನನ್ನ ಕಾಲಘಟ್ಟದಲ್ಲಿ ದೇಶದಲ್ಲೊಂದು ಮಹತ್ತರ ಬದಲಾವಣೆಯಾಗುತ್ತೆ ಎಂದು ಕನಸಿದ್ದರೋ ಗೊತ್ತಿಲ್ಲ. ಮದ್ದೂರಿನ ಬೆಸಗರಹಳ್ಳಿಯಲ್ಲಿ ಹುಟ್ಟಿದ ಹೈದನಿಗೆ ಕ್ರಾಂತಿ ಸಂಭವ್ ಎಂದು ಹೆಸರಿಟ್ಟುಬಿಟ್ಟರು. ಶಾಲೆಯಲ್ಲಿ ಏನೇ ತಪ್ಪು ಮಾಡಿದರೂ ನನ್ನ ತಪ್ಪಿಗೆ ದಂಡಿಸುವುದನ್ನು ಬಿಟ್ಟು ನನ್ನ ಹೆಸರಿಡಿದುಕೊಂಡು ವ್ಯಂಗ್ಯವಾಡುತ್ತಿದ್ದರು. ‘ಏನಪ್ಪಾ ಕ್ರಾಂತಿ ಮಾಡೋನು ಈ ರೀತಿ ಮಾಡ್ತೀಯಲ್ಲ’ ಎನ್ನುವವರ ಮಾತಲ್ಲಿ ಲೇವಡಿ ಎದ್ದು ಕಾಣುತ್ತಿತ್ತು. ಅವತ್ತು ಮನೆಗೆ ಹಿಂದಿರುಗಿದ ತಕ್ಷಣ ತಾತನ – ಅಜ್ಜ ಅಷ್ಟೊತ್ತಿಗಾಗಲೇ ತೀರಿಕೊಂಡಿದ್ದರು – ಫೋಟೋ ತೆಗೆದುಕೊಂಡು ಅಟ್ಟ ಸೇರಿ ಮನಸಾರೆ ಮನಸ್ಸಿನಲ್ಲೇ ಬಯ್ಯುತ್ತಿದ್ದೆ. ನೀತಿ ಕಥೆಗಳನ್ನು ಹೇಳಿ ಹೇಳಿ ನನ್ನಲ್ಲೊಂದು ಸ್ಥೈರ್ಯ ಉತ್ಸಾಹ ಮೂಡಿಸಿದ್ದ ಅದೇ ತಾತ ಕ್ರಾಂತಿ ಸಂಭವ್ ಎಂದು ಹೆಸರಿಟ್ಟು ಜನ್ಮ ಜನ್ಮಕ್ಕೂ ಸಾಕಾಗುವಷ್ಟು ಕೀಳರಿಮೆ ಮೂಡಲು ಕಾರಣವಾಗಿಬಿಟ್ಟ”
Also Readವಾಡಿ ಜಂಕ್ಷನ್ .... ಭಾಗ 1

ಅಕ್ಟೋ 2, 2014

ವಾಡಿ ಜಂಕ್ಷನ್ .... ಭಾಗ 1


wadi junction


Dr Ashok K R
ಕ್ರಾಸಿಂಗ್
“A patient by name Mr Basavaraju aged 22 years”
‘ಒಂದು ಹಂತದವರೆಗೆ ಹೆಸರು, ದುಡ್ಡು ಎಲ್ಲಾ ನೋಡಿದ ಮೇಲೆ ಮನುಷ್ಯ ಹೊಸತೇನನ್ನೋ ಹುಡುಕಬಯಸೋದು ಸಹಜ’
“comes from a middle class family. He is from”
‘ನಿಮಗೆ ಈ ಸಧ್ಯ ದೇವರು ಎಲ್ಲದರಲ್ಲೂ ಯಶಸ್ಸು ಕೊಟ್ಟಿದ್ದಾನೆ”
“village Hanoor of Gundlupet Taluk. He is an agricultuist by occupation”
‘ಈಗ ಮಾಡಿರೋ ಹೆಸರು ಸಾಲದು, ಮತ್ತಷ್ಟು ಹೆಸರು ಮಾಡಬೇಕೆನ್ನಿಸಿದರೆ ದಾನ ಧರ್ಮ ಮಾಡಿ’
“He presents with compaint of swelling in the right groin region from past 20”
‘ಮಠಕ್ಕೆ ಸೇರಿ ಸನ್ಯಾಸಿ ಜೀವನ ಮಾಡಬೇಕೆನ್ನೋದೂ ನಿಮಗೆ ಹೆಸರು ಮಾಡುವ ಒಂದು’
“years and pain in the swelling from past 7 days”
‘ವಿಧಾನ ಅಲ್ವಾ ಡಾಕ್ಟ್ರೇ! ನಿಮಗೆಷ್ಟೇ ಒಳ್ಳೇ ಸರ್ಜನ್ ಎಂಬ ಹೆಸರಿದ್ದರೂ ಅಂತರಂಗದಲ್ಲಿ ನೀವೇನು ಅನ್ನೋದು ನಿಮಗಿಂತ ಚೆನ್ನಾಗಿ ತಿಳಿದಿರೋರು ಬೇರೆಯವರಿರಲಿಕ್ಕಿಲ್ಲ. ನನ್ನ ಧ್ಯಾನದ ಸಮಯ ಈಗ. ನೀವಿನ್ನು....’
“ಮುಂಡಾಮೋಚ್ತು” ತನಗೇ ಎಂಬಂತೆ ಶ್ರವಣ್ ಹೇಳಿಕೊಂಡನಾದರೂ ಎದುರಿಗಿದ್ದ ಹತ್ತು ಜನ ವಿದ್ಯಾರ್ಥಿಗಳಿಗದು ಕೇಳಿಸಿತ್ತು. Case present ಮಾಡುತ್ತಿದ್ದ ವಿದ್ಯಾರ್ಥಿನಿ ಗಾಬರಿಯಾಗಿ “ಸರ್” ಎಂದಳು. ಉಳಿದವರು ಒಬ್ಬರೊಬ್ಬರ ಮುಖ ನೋಡಿದರು. ಹಿಂದೆ ನಿಂತವರು ನಕ್ಕರೇನೋ ಎನ್ನಿಸಿತು ಶ್ರವಂತ್‍ಗೆ.