Oct 10, 2014

ವಾಡಿ ಜಂಕ್ಷನ್ .... ಭಾಗ 2

hingyake
Dr Ashok K R
ಪ್ಲಾಟ್‍ಫಾರಂ ನಂ 1
ನಿಲ್ದಾಣ 1
“ನನ್ನ ತಾತ ತಲೆಯಲ್ಲಿ ಯಾವ ಭಾವನೆ ಇಟ್ಟುಕೊಂಡು ನನಗೀ ಹೆಸರು ಇಟ್ಟರೋ? ತೀರ ಮೊನ್ನೆ ಮೊನ್ನೆ ಎನ್‍ಡಿಟಿವಿ ಇಂಡಿಯಾದಲ್ಲಿ ಕಾರು ಮತ್ತು ಬೈಕುಗಳ ಬಗ್ಗೆ ಕಾರ್ಯಕ್ರಮ ನಡೆಸಿಕೊಡುವವನ ಹೆಸರೂ ಕ್ರಾಂತಿ ಸಂಭವ್ ಎಂದು ನೋಡಿದಾಗ ಮನ ನಿರಾಳವಾಯಿತು. ನನ್ನಿಂದ ಯಾವುದಾದರೂ ಕ್ರಾಂತಿ ಸಂಭವಿಸುತ್ತದೆ ಎಂದು ಭಾವಿಸಿದರೋ ಅಥವಾ ನನ್ನ ಕಾಲಘಟ್ಟದಲ್ಲಿ ದೇಶದಲ್ಲೊಂದು ಮಹತ್ತರ ಬದಲಾವಣೆಯಾಗುತ್ತೆ ಎಂದು ಕನಸಿದ್ದರೋ ಗೊತ್ತಿಲ್ಲ. ಮದ್ದೂರಿನ ಬೆಸಗರಹಳ್ಳಿಯಲ್ಲಿ ಹುಟ್ಟಿದ ಹೈದನಿಗೆ ಕ್ರಾಂತಿ ಸಂಭವ್ ಎಂದು ಹೆಸರಿಟ್ಟುಬಿಟ್ಟರು. ಶಾಲೆಯಲ್ಲಿ ಏನೇ ತಪ್ಪು ಮಾಡಿದರೂ ನನ್ನ ತಪ್ಪಿಗೆ ದಂಡಿಸುವುದನ್ನು ಬಿಟ್ಟು ನನ್ನ ಹೆಸರಿಡಿದುಕೊಂಡು ವ್ಯಂಗ್ಯವಾಡುತ್ತಿದ್ದರು. ‘ಏನಪ್ಪಾ ಕ್ರಾಂತಿ ಮಾಡೋನು ಈ ರೀತಿ ಮಾಡ್ತೀಯಲ್ಲ’ ಎನ್ನುವವರ ಮಾತಲ್ಲಿ ಲೇವಡಿ ಎದ್ದು ಕಾಣುತ್ತಿತ್ತು. ಅವತ್ತು ಮನೆಗೆ ಹಿಂದಿರುಗಿದ ತಕ್ಷಣ ತಾತನ – ಅಜ್ಜ ಅಷ್ಟೊತ್ತಿಗಾಗಲೇ ತೀರಿಕೊಂಡಿದ್ದರು – ಫೋಟೋ ತೆಗೆದುಕೊಂಡು ಅಟ್ಟ ಸೇರಿ ಮನಸಾರೆ ಮನಸ್ಸಿನಲ್ಲೇ ಬಯ್ಯುತ್ತಿದ್ದೆ. ನೀತಿ ಕಥೆಗಳನ್ನು ಹೇಳಿ ಹೇಳಿ ನನ್ನಲ್ಲೊಂದು ಸ್ಥೈರ್ಯ ಉತ್ಸಾಹ ಮೂಡಿಸಿದ್ದ ಅದೇ ತಾತ ಕ್ರಾಂತಿ ಸಂಭವ್ ಎಂದು ಹೆಸರಿಟ್ಟು ಜನ್ಮ ಜನ್ಮಕ್ಕೂ ಸಾಕಾಗುವಷ್ಟು ಕೀಳರಿಮೆ ಮೂಡಲು ಕಾರಣವಾಗಿಬಿಟ್ಟ”
Also Readವಾಡಿ ಜಂಕ್ಷನ್ .... ಭಾಗ 1
“ಕ್ರಾಂತಿ ಕ್ರಾಂತಿ ಅಂಥ ಜನ ಕೂಗಿದಾಗೆಲ್ಲ ಕುಸಿಯತೊಡಗಿದ್ದೇನೆ ಎಂಬ ಭಾವ. ಓದಿನಲ್ಲಿ ಆಸಕ್ತಿ ಕಳೆದುಕೊಂಡೆ. ಪರೀಕ್ಷೆಯ ಸಮಯದಲ್ಲಿ ನೆಪಮಾತ್ರಕ್ಕೆ ಒಂದಷ್ಟು ಓದಿ ಪಾಸಾಗುತ್ತಿದ್ದೆ. ಹಾಗೂ ಹೀಗೂ ಹತ್ತನೇ ತರಗತಿಯವರೆಗೆ ಮುಗ್ಗರಿಸದೆ ಬಂದೆ. ನಾನೇ ಪಾಸಾಗುತ್ತಿದ್ದೆನೋ ಅಥವಾ ಶಾಲೆಯವರೇ ಮುಂದೆ ನೂಕುತ್ತಿದ್ದರೋ ಕೇಳಬೇಡ. ಎಲ್ಲಾ ತಂದೆತಾಯಿಯಂತೆ ನಮ್ಮ ಮನೆಯಲ್ಲೂ ನನ್ನ ವೈಫಲ್ಯಗಳಿಗೆ ನನ್ನ ಸಹವಾಸಗಳನ್ನು ಹೊಣೆ ಮಾಡಿದರು. ಇಲ್ಲೇ ಇದ್ದರೆ ಹತ್ತನೇ ಇಯತ್ತೆಯಲ್ಲೇ ಉಳಿದುಬಿಡುತ್ತಾನೆಂದು ಹೆದರಿ ಮಂಡ್ಯದ ಶಾಲೆಗೆ ಸೇರಿಸಿದರು. ಮಂಡ್ಯದಲ್ಲಿ ನಮ್ಮ ಅತ್ತೆ ಮನೆಯಲ್ಲೇ ಉಳಿದುಕೊಂಡೆ”
“ಗೊತ್ತಾಯ್ತು ಬಿಡು. ಅಲ್ಲಿ ನಿಮ್ಮತ್ತೆ ಮಗಳಿದ್ದಳು. ನಿಮ್ಮಿಬ್ಬರ ನಡುವೆ........”ತುಷಿನ್ ಮಧ್ಯೆ ಬಾಯಿಹಾಕಿದ.
“ಅತ್ತೆ ಮಗಳೇನೋ ಇದ್ದಳು. ಚೆನ್ನಾಗೇ ಇದ್ದಳು. ನನಗಿಂತ ಎರಡು ವರ್ಷಕ್ಕೆ ದೊಡ್ಡವಳಿದ್ದಳು. ಪಿಯುಸಿ ಓದುತ್ತಿದ್ದಳು. ಆದರೆ ನಮ್ಮಿಬ್ಬರ ನಡುವೆ ಏನೂ ನಡೆಯಲಿಲ್ಲ. ಅವರದು ಸುಖಿ ಸಂಸಾರ. ಅಪ್ಪ ಅಮ್ಮ ಬ್ಯಾಂಕೊಂದರಲ್ಲಿ ಕೆಲಸದಲ್ಲಿದ್ದರು. ಒಬ್ಬಳೇ ಮಗಳು. ಬುದ್ಧಿವಂತೆ. ನನಗಿಂತ ಎರಡೇ ವರ್ಷಕ್ಕೆ ದೊಡ್ಡವಳಾದರೂ ಅಕ್ಕ ಎಂದೇ ಮಾತನಾಡಿಸುತ್ತಿದ್ದೆ. ಅವಳಿಗೂ ಒಡಹುಟ್ಟಿದವರ್ಯಾರೂ ಇಲ್ಲದ್ದರಿಂದ ತಮ್ಮನಂತೇ ಕಾಣುತ್ತಿದ್ದಳು”
“ಅವತ್ತು ನಾನು ಊರಿಗೆ ಹೋಗಿದ್ದೆ. ಮಾಮನೂ ನನ್ನ ಜೊತೆ ಬಂದಿದ್ದರು. ಸಂಜೆ ಐದಕ್ಕೆ ಹಿಂದುರಗಬೇಕಿತ್ತು. ಮಾಮನಿಗೆ ಅವತ್ತೇ ಒಂದು ಅರ್ಜೆಂಟ್ ಕೆಲಸ ಮುಗಿಸಬೇಕೆಂದು ನೆನಪಿಗೆ ಬಂದು ಮಧ್ಯಾಹ್ನಕ್ಕೇ ಹೊರಡಿಸಿದರು. ಮಂಡ್ಯಕ್ಕೆ ಬಂದು ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗಿದೆವು. ತಮ್ಮ ಬಳಿಯಿದ್ದ ಕೀಲಿಯಿಂದ ಬಾಗಿಲು ತೆರೆದರು. ಒಳಗೆ ಹೋದರೆ ಪಿಸುಮಾತು, ಮುಲುಗುಟ್ಟುವಿಕೆ. ನಾನಾ ಶಬ್ದಗಳನ್ನು ಮೊದಲ ಬಾರಿಗೆ ಕೇಳುತ್ತಿದ್ದೆನಾದ್ದರಿಂದ ಏನೆಂದು ತಿಳೀಲಿಲ್ಲ. ಮಾಮನಿಗೆ ತಿಳಿಯಿತೆನ್ನಿಸುತ್ತೆ. ಮುಖ ವ್ಯಗ್ರವಾಗಿತ್ತು. ನನ್ನನ್ನು ಅಲ್ಲೇ ಬಾಗಿಲ ಬಳಿ ನಿಲ್ಲುವಂತೆ ಸನ್ನೆ ಮಾಡಿ ಚಪ್ಪಲಿ ಕಳಚಿ ಶಬ್ದವಾಗುತ್ತಿದ್ದ ರೂಮಿನ ಕಡೆ ನಡೆದರು. ಕುತೂಹಲ ತಡೆಯೋದು ಕಷ್ಟ. ನಾನೂ ಅವರ ಹಿಂದಿಂದೆಯೇ ಹೋದೆ. ರೂಮಿನ ಕದ ತೆರೆದಿತ್ತು”
“ಪಕ್ಕದ ಮನೆಯ ಮೇಲಿನ ರೂಮಿನಲ್ಲಿ ಬಾಡಿಗೆಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಅಕ್ಕನ ಮೇಲೆ ಮಲಗಿ ಆಕೆಯ ಟಾಪ್ ತೆಗೆಯುವುದರಲ್ಲಿ ಮಗ್ನನಾಗಿದ್ದ. ಅಕ್ಕ ಮುಲುಗುಟ್ಟುತ್ತಿದ್ದಳು. ಹಿಂದೆ ನಿಂತ ಮನುಷ್ಯರ ವಾಸನೆ ಮೊದಲು ತಟ್ಟಿದ್ದು ಅವನಿಗೆ. ನಮ್ಮೆಡೆ ನೋಡಿ ಗಾಬರಿಯಾಗಿ ಮೇಲೆದ್ದ, ನಾವಿಬ್ಬರೂ ಬಾಗಿಲಿಗೆ ಅಡ್ಡವಾಗೇ ನಿಂತಿದ್ದರಿಂದ ಓಡಿಹೋಗುವ ಪ್ರಯತ್ನ ಮಾಡಲಿಲ್ಲ. ಇದ್ದಕ್ಕಿದ್ದಂತೆ ಮೈಮೇಲಿನ ಭಾರ ಕಡಿಮೆಯಾಗಿದ್ದು ಅಕ್ಕನ ಅರಿವಿಗೆ ಬಂತು. ಏನಾಯ್ತೋ? ಎಂದು ಕೇಳಿದವಳಿಗೆ ರೂಮಿನಲ್ಲಿ ಇನ್ನೂ ಯಾರೋ ಇದ್ದಾರೆ ಎಂದರಿವಿಗೆ ಬಂದು ಕಣ್ಣು ಪೂರ್ತಿ ತೆರೆದವಳಿಗೆ ಕಂಡಿದ್ದು ನಾವು”
“ಅಪ್ಪಾ ನೀವು? ಎಂದು ಕೇಳುತ್ತಲೇ ಟಾಪ್ ಸರಿಮಾಡಿಕೊಂಡಳು. ನನಗೆ ಬೇಸರ, ಆಶ್ಚರ್ಯವಾಗಿದ್ದು ಆಕೆಯನ್ನು ಆ ಸ್ಥಿತಿಯಲ್ಲಿ ನೋಡಿದ್ದಕ್ಕಲ್ಲ. ವಯಸ್ಸಿಗೆ ಬಂದಾಗ ಈ ರೀತಿಯ ವಿಷಯಗಳು ಸಾಮಾನ್ಯ ಎಂಬುದು ಹತ್ತನೇ ಇಯತ್ತೆಯಲ್ಲಿದ್ದ ನನಗೂ ತಿಳಿಯುತ್ತಿತ್ತು. ನನ್ನ ಶಾಲೆಯಲ್ಲೂ ಕತ್ತಲ ಮೂಲೆಯಲ್ಲಿ ನಡೆಯುವುದನ್ನು ನೋಡಿದ್ದೆ. ಬೇಸರವಾಗಿದ್ದು ಆಕೆಯ ನಂತರದ ವರ್ತನೆಯಲ್ಲಿ”
“ಹೆತ್ತ ತಂದೆ ನನ್ನನ್ನು ಈ ಸ್ಥಿತಿಯಲ್ಲಿ ನೋಡಿಬಿಟ್ಟರಲ್ಲ ಎಂಬ ಬೇಸರ, ನಾಚಿಕೆ ಊಹ್ಞೂ ಒಂದೂ ಆಕೆಗೆ ಆಗಲಿಲ್ಲವೇನೋ. ‘ಅಣ್ಣಾ ಪೇಪರ್ ತೆಗೆದುಕೊಳ್ಳೋದಿಕ್ಕೆ ಬಂದಿದ್ದ. ಕಾಲು ಜಾರಿ ನನ್ನ ಮೇಲೆ ಬಿದ್ದುಬಿಟ್ಟ’ ಎಂದವಳು ಸಹಜವಾಗಿ ಹೇಳಿದಾಗ ಮಾಮನ ಕೋಪ ಅಸಹ್ಯಕ್ಕೆ ತಿರುಗಿತ್ತು. ಏನೊಂದೂ ಮಾತನಾಡದೆ ಬಾಗಿಲಿನಿಂದ ಸರಿದು ‘ನೀನು ಹೋಗಪ್ಪಾ’ ಎಂದರು. ಆತ ತಗ್ಗಿಸಿದ್ದ ತಲೆಯನ್ನು ಮತ್ತಷ್ಟು ತಗ್ಗಿಸುತ್ತಾ ‘ಸಾರಿ ಅಂಕಲ್’ ಎಂದ. ‘ನಮ್ಮ ಮನೆಯಲ್ಲೇ ಹುಳುಕಿಟ್ಟುಕೊಂಡು ನಿನ್ನನ್ನ್ಯಾಕೆ ಬಯ್ಯಲಿ. ಹೋಗು’ ಎಂದರು. ಅಕ್ಕ ಏನೂ ನಡೆದೇ ಇಲ್ಲವೆಂಬಂತೆ ಹಾಲಿಗೆ ಹೋಗಿ ಟಿ.ವಿ. ಹಚ್ಚಿದಳು”
“ಅಕ್ಕನ ಮೇಲೆ ಮೊದಲೊಂದಷ್ಟು ಅಸಹ್ಯದ ಭಾವನೆ ಬಂತು. ಆಕೆ ನನ್ನನ್ನು ಅಕ್ಕರೆಯಿಂದ ಮಾತನಾಡಿಸುತ್ತಿದ್ದದ್ದು, ತಲೆ ನೇವರಿಸುತ್ತಿದ್ದದ್ದು, ಎಣ್ಣೆ ಸ್ನಾನ ಮಾಡಿಸುತ್ತಿದ್ದದ್ದು ಎಲ್ಲದಕ್ಕೂ ಹೊಸ ಅರ್ಥ ಅರ್ಥಾಥ್ ಅಪಾರ್ಥಗಳನ್ನು ಕಲ್ಪಿಸಿಕೊಳ್ಳಲಾರಂಭಿಸಿದೆ. ಆ ರೀತಿ ಕಲ್ಪಿಸಿಕೊಂಡಷ್ಟೂ ಅಪರಾಧಿ ಭಾವನೆ ಕೀಳರಿಮೆ ಹೆಚ್ಚುತ್ತಿತ್ತು. ಆಕೆ ಅಣ್ಣ ಎಂದು ಕರೆಯುವವನ ಜೊತೆ ಆ ರೀತಿ ಇರಬಹುದಾದರೆ ನಾನು ಅಕ್ಕ ಎಂದು ಕರೆಸಿಕೊಳ್ಳುವವಳ ಜೊತೆ.... ಥೂ ಥೂ ಬರೀ ಇಂಥದ್ದೇ ಯೋಚನೆಗಳು. ಮೊದಲೇ ಕೀಳರಿಮೆಯಲ್ಲಿ ಬಳಲುತ್ತಿದ್ದವನಿಗೆ ಈ ರೀತಿಯ ಯೋಚನೆಗಳೆಲ್ಲಾ ಕಾಟ ಕೊಡಲು ಶುರುಮಾಡಿ....... ಕೊನೆಗೆ ಇದೆಲ್ಲದರಿಂದ ಮುಕ್ತಿ ಪಡೆಯಬೇಕೆಂದು ಕಷ್ಟಪಟ್ಟು ಓದಲು ಶುರುಮಾಡಿದೆ. ಬಿಡುವಿನ ವೇಳೆಯಲ್ಲೆಲ್ಲಾ ಗ್ರಂಥಾಲಯಕ್ಕೆ ಹೋಗಿ ಕಥೆ ಕಾದಂಬರಿ ಓದಲಾರಂಭಿಸಿದೆ. ಕಥೆ ಕಾದಂಬರಿಗಳಲ್ಲಿ ಆಸಕ್ತಿ ಬೆಳೆಸಿಕೊಂಡ ಮೇಲೆ ಪಾಠ ಓದಬೇಕಾದರೂ ಬೇಸರವಾಗುತ್ತಿರಲಿಲ್ಲ”
“ಆ ಘಟನೆಯಿಂದ ನನ್ನ ಮನದ ಮೇಲಾದ ಕೆಟ್ಟ ಪರಿಣಾಮವೆಂದರೆ ಮನುಷ್ಯ ಸಂಬಂಧಗಳಲ್ಲಿ ನಾನು ನಂಬಿಕೆ ಕಳೆದುಕೊಂಡದ್ದು. ಇವತ್ತಿಗೂ ನನಗೆ ಯಾರನ್ನೂ ಸಂಪೂರ್ಣ ಒಳ್ಳೆಯವರೆಂದು ನಂಬಲಾಗಲ್ಲ” ಹೇಳಿ ಮುಗಿಸಿದ ಕ್ರಾಂತಿ ಸಂಭವ್‍ಗೆ ಒಂದು ದೊಡ್ಡ ಭಾರವನ್ನು ಇಳಿಸಿದಂತಾಗಿ ಹಗುರಾಗಿದ್ದ. ಮಾಮ ಈ ವಿಷಯಾನ ಯಾರಿಗೂ ಹೇಳಬಾರದೆಂದು ಬೋರೇದೇವರ ಮೇಲೆ ಆಣೆ ಮಾಡಿಸಿಕೊಂಡಿದ್ದರು. ಆ ಕೂಡಲೇ ಬೇರೆ ಊರಿಗೆ ವರ್ಗ ಮಾಡಿಸಿಕೊಂಡು ಮಂಡ್ಯ ತೊರೆದಿದ್ದರು. ಹೋಗುವ ಮುನ್ನಾದಿನ ಅಕ್ಕ ನನ್ನ ಕೆನ್ನೆಗೊಂದು ಮುತ್ತನಿಟ್ಟಿದ್ದಳು. ಆ ಮುತ್ತು, ಅವಳ ಕಣ್ಣಲಿದ್ದ ನೀರು ನನಗೆ ಇಂದಿಗೂ ಗೊಂದಲ ಮೂಡಿಸುತ್ತವೆ. ಈ ವಿಷಯವನ್ನು ತುಷಿನ್‍ಗೆ ಹೇಳಲಿಲ್ಲ.
“ಈಗ ಏನು ಮಾಡ್ತಾಳೆ ನಿನ್ನ ಅಕ್ಕ”
“ಮದುವೆಯಾಗಿದೆ. ಸುಖವಾಗಿದ್ದಾಳೆ ಅನ್ನಿಸುತ್ತೆ. ನಾಲ್ಕು ವರ್ಷದಿಂದ ಮನಸಲ್ಲೇ ಕೊರೆಯುತ್ತಿದ್ದ ಈ ವಿಷಯವನ್ನು ನಿನಗೆ ಹೇಳಿ ಹಗುರಾದೆ. ಜಾಸ್ತಿ ಹುಳ ಬಿಟ್ಟೆ ಅನ್ಸುತ್ತೆ ಅಲ್ವಾ?”
“ಹಂಗೇನಿಲ್ಲಪ್ಪ. ಇದರ ಮೇಲೆ ಯಾವುದಾದರೂ ಕಥೆ ಬರೆಯಬಹುದಾ ಯೋಚಿಸುತ್ತಿದ್ದೆ”
“ಕೆಮ್ಮಿದ್ದೂ ಸೀನಿದ್ದೂ ಕಥೆ ಮಾಡಿಬಿಡ್ತೀಯಾ ಮಗನೇ! ಪುಣ್ಯಕ್ಕೆ ಅವುಗಳನ್ಯಾರು ಪ್ರಕಟಿಸೋದಿಲ್ಲ”
ಸುಮ್ಮನೆ ನಕ್ಕ ತುಷಿನ್.
“ಈ ಘಟನೆ ಕೇಳಿ ನಿನಗೇನನ್ನಿಸುತ್ತೆ”
“Its all in the game man. ಅವರವರ ಜೀವನಾನ ಅವರವರೇ judge ಮಾಡಬೇಕು. ನಿನ್ನ ಮೇಲೆ ಕೆಟ್ಟ ಪರಿಣಾಮ ಬೀರಿತು ಅನ್ನೋದೊಂದೇ ಬೇಸರ”
Relatedಆದರ್ಶವೇ ಬೆನ್ನು ಹತ್ತಿ
ಇನ್ನೊಂದಷ್ಟು ಕ್ಷಣಗಳು ಮೌನದಲ್ಲೇ ಕಳೆದವು. ಆಹಾರ ಅರಸುತ್ತಾ ಹೊರಡಲನುವಾದ ಪಕ್ಷಿಗಳ ಕಲರವ ಆರಂಭವಾಯಿತು. ಅದು ಮುಂಜಾನೆ ಐದೂ ಮೂವತ್ತರ ಸಮಯ. ತುಷಿನ್ ಮತ್ತು ಕ್ರಾಂತಿ ಸಂಭವ್ ಚಾಮುಂಡಿ ಬೆಟ್ಟದಲ್ಲಿದ್ದರು. ಚಾಮುಂಡಿ ದೇವಸ್ಥಾನದಿಂದ ಬೆಟ್ಟವಿಳಿಯುವ ರಸ್ತೆಯಿಂದ ಒಂದು ರಸ್ತೆ ಕವಲೊಡೆದುಕೊಂಡು ಸ್ವತಂತ್ರವಾಗಿ ಎಡಕ್ಕೆ ಹೊರಳುತ್ತದೆ. ಅದೇ ರಸ್ತೆಯಲ್ಲಿ ಒಂದಷ್ಟು ದಾರಿ ಸವೆಸಿದರೆ ಇವರು ಕುಳಿತ ಜಾಗ ಸಿಗುತ್ತದೆ. ರಾತ್ರಿ ಹನ್ನೆರಡಕ್ಕೆ ಬೈಕನ್ನೇರಿ ಬಂದಿದ್ದರು. ‘ಹೊಸತೊಂದು ಕಥೆ ಬರೆದಿದ್ದೀನಿ. ನಡಿ ಹೇಳ್ಬೇಕು’ ಎಂದು ಹೇಳಿ ಕ್ರಾಂತಿಯನ್ನು ಎಬ್ಬಿಸಿಕೊಂಡು ಬಂದಿದ್ದ. ಬೆಟ್ಟಕ್ಕೆ ಬರುವಷ್ಟರಲ್ಲಿ ಕಥೆ ಹೇಳುವ ಆಸಕ್ತಿ ಹೊರಟುಹೋಗಿತ್ತು. ಕಥೆಯಲ್ಲಿ ಸತ್ವವೇ ಇಲ್ಲ; ಅರ್ಥ, ಅಪಾರ್ಥ, ದ್ವಂದ್ವಾರ್ಥ ಯಾವುದೂ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಆ ಕಥೆಯಲ್ಲಿ ಕಥೆಯೇ ಇಲ್ಲ. ಬೇರೆಯವರ ಬಳಿ ಹೇಳುವಂತಹ ಕಥೆಯಲ್ಲಿ ಇದು ಎಂದು ತನ್ನಲ್ಲೇ ನಿರ್ಧರಿಸಿ ಮೌನಕ್ಕೆ ಶರಣಾಗಿಬಿಟ್ಟಿದ್ದ ತುಷಿನ್.
ತುಷಿನ್ ಮೌನಕ್ಕೆ ಶರಣಾದರೆ ಒಂದೋ ಆತ ಯಾವುದೋ ಗಂಭೀರ ಯೋಚನೆಯಲ್ಲಿರುತ್ತಾನೆ ಅಥವಾ ಬಹಳಷ್ಟು ಬಾರಿ ಆಗುವಂತೆ ಖಾಲಿಯಾಗಿರುತ್ತಾನೆ ಎಂಬುದನ್ನು ಅರಿತಿದ್ದ ಕ್ರಾಂತಿ ಒಂದಷ್ಟು ಸಮಯ ಸುಮ್ಮನಿದ್ದ. ಮಧ್ಯರಾತ್ರಿಯ ಸಮಯ, ತಣ್ಣನೆ ಬೀಸುತ್ತಿದ್ದ ಗಾಳಿ, ಬೆಟ್ಟಕ್ಕಷ್ಟೇ ಸೀಮಿತವಾದ ಹುಳುಗಳ ಸರಿಗಮ, ಕ್ರಾಂತಿಗೆ ಬೇಸರ ಮೂಡಲಾರಂಭಿಸಿತು. ಜೊತೆಯಲ್ಲೊಬ್ಬನಿದ್ದಾಗ್ಯೂ ಒಂಟಿತನ ಕಾಡಿತು. ಚಾಮುಂಡಿ ಬೆಟ್ಟದಲ್ಲಿ ಅಪರೂಪಕ್ಕೊಮ್ಮೆ ಕಾಣಿಸಿಕೊಳ್ಳುತ್ತಿದ್ದ ಚಿರತೆ ಹಿಂದಿನಿಂದ ಬಂದು ನನ್ನನ್ನು ಕೊಲ್ಲಬಹುದೆಂಬ ಭಾವನೆ ಬಂತು. ಚಿರತೆ ತುಷಿನ್‍ನನ್ನು ಬಿಟ್ಟು ನನ್ನನ್ನೇ ಯಾಕೆ ಆರಿಸಿಕೊಳ್ಳುತ್ತದೆ ಎಂಬ ಪ್ರಶ್ನೆ ಉದ್ಭವಿಸಿತು. ತುಷಿನ್‍ನನ್ನು ನೋಡಿದ. ಆತನಿಗೆ ಹೋಲಿಸಿದರೆ ಮಾಂಸ, ಕೊಬ್ಬು ಎಲ್ಲಾ ನನ್ನಲ್ಲೇ ಜಾಸ್ತಿ ಇದೆ.......ತುಂಬಾನೇ ದಪ್ಪಗಾಗಿದ್ದೇನೆ, ಪ್ಯಾಂಟುಗಳೆಲ್ಲಾ ಬಿಗಿದುಕೊಳ್ಳುತ್ತಿವೆ. ಊಟ ಮಾಡೋದಿಕ್ಕೆ ಮುಂಚೆ ಪ್ಯಾಂಟಿನ ಗುಂಡಿ ಬಿಚ್ಚಲೇಬೇಕು. ಇಲ್ಲವಾದರೆ ನಾಲ್ಕು ತುತ್ತು ಒಳಗೆ ಹೋಗುತ್ತಿದ್ದಂತೆ.......ನಾಳೆಯಿಂದ ಜಾಗಿಂಗ್ ಮಾಡಬೇಕು, ಜಿಮ್‍ಗೆ ಹೋಗಬೇಕು......ಇವತ್ತಿನದೂ ಸೇರಿಸಿ ಜಾಗಿಂಗ್ ಮಾಡಬೇಕು ಎಂದುಕೊಳ್ಳುತ್ತಿರುವುದು.......
“ಏನಾದ್ರೂ ಮಾತನಾಡು” ಗೊತ್ತುಗುರಿಯಿಲ್ಲದೆ ಅಲೆಯುತ್ತಿದ್ದ ಕ್ರಾಂತಿಯ ಯೋಚನೆಗಳಿಗೆ ತಡೆ ಹಾಕುವಂತೆ ಹೇಳಿದ ತುಷಿನ್.

ನಾಡಿದ್ದು ಮಧ್ಯಾಹ್ನ ಬರೆಯಬೇಕಿರೋ internals ಬಗ್ಗೆ, ಮುಂದಿನ ವಾರ ಬಿಡುಗಡೆಗೆ ಸಿದ್ಧವಾಗಿರೋ ಉಪೇಂದ್ರನ ಸಿನಿಮಾ ಬಗ್ಗೆ, ಮೊನ್ನೆ ಮೋಜು – ಗೋಜುವಿನಲ್ಲಿ ಓದಿದ ರಸವತ್ತಾದ ಪೋಲಿ ಕತೆಯ ಬಗ್ಗೆ – ಯಾವುದರ ಬಗ್ಗೆ ಮಾತನಾಡಲಿ ಎಂದುಕೊಳ್ಳುತ್ತಿದ್ದವನಿಗೆ ಮನದ ಮೂಲೆಯ ಕೋಣೆಯೊಂದರಲ್ಲಿ ಧೂಳು ಹಿಡಿಯುತ್ತಿದ್ದ ಅತ್ತೆಯ ಮಗಳ ಘಟನೆ ನೆನಪಾಯಿತು. ಈ ಸರಿರಾತ್ರಿಯಲ್ಲಿ ಅಕ್ಕನ ನೆನಪಾಗಿದ್ದಕ್ಕೆ ಯಾವ ಅಪಾರ್ಥವೂ ಇಲ್ಲ ತಾನೇ ಎಂದು ಪ್ರಶ್ನಿಸಿಕೊಳ್ಳುತ್ತಲೇ ಎಲ್ಲವನ್ನೂ ಹೇಳಿ ಹಗುರಾದ; ಆಕೆ ಕೊಟ್ಟಿದ್ದ ಮುತ್ತು ಮತ್ತವಳ ಕಣ್ಣ ನೀರ ವಿಷಯವನ್ನು ಬಿಟ್ಟು.

No comments:

Post a Comment