ಜೂನ್ 2, 2018

ಕಥೆ: ತಂದೂರಿ.

ಅಭಿಗೌಡ
ಊರಲ್ಲಿ ಯಾರದೇ ಬರ್ತ್‍ಡೇ ಆಚರಣೆಯಾದ್ರು ಶಿವನ ಅಂಗಡಿ ಕಬಾಬಿಗೆ ಭಾರಿ ಬೇಡಿಕೆ. ಏಕೆಂದರೆ ಕಬಾಬ್ ಜೊತೆ ಕಾಂಪ್ಲಿಮೆಂಟರಿ ಕಾಪಿ ಥರ ಒಂದು ತಂದೂರಿ ಚಿಕನ್ ಕೊಡುತ್ತಿದ್ದ. ಕೇಕ್ ಕತ್ತರಿಸುವುದರ ಬದಲು ಅದನ್ನೆ ಆತ ಮಾರ್ಕ್ ಮಾಡಿರುವ ಜಾಗದಲ್ಲಿ ಚಾಕುವಿನಿಂದ ಕಟ್ ಮಾಡಿದರೆ ಸರಾಗವಾಗಿ ಕೇಕ್ ಪೀಸ್‍ನಂತೆಯೇ ಎಲ್ಲರ ಬಾಯಿಗು ಹಾಕಿ ಬರ್ತ್‍ಡೇ ಸಂಭ್ರಮ ಆಚರಿಸಿಕೊಳ್ಳಬಹುದಿತ್ತು. ಪ್ರಾರಂಭದಲ್ಲಿ ಇರಿಸು-ಮುರಿಸು ತೋರಿದ ಜನ ದಿನೇ ದಿನೇ ಕೇಕ್ ಜೊತೆ ಇದನ್ನು ಕತ್ತರಿಸಲು ಶುರು ಮಾಡಿದ್ರು. ಈಗ ಕೇಕ್ ಬಿಟ್ಟೇ ಬಿಟ್ಟಿದ್ದಾರೆ. ಜನರೇ ಅವರಿಗೆ ಇಷ್ಟವಾದ ಮಾಂಸದ ತುಂಡು ತಂದು ಬರ್ತ್‍ಡೇ ಪಾರ್ಟಿಲಿ ಕತ್ತರಿಸಲು ರೆಡಿ ಮಾಡಿಕೊಡಿ ಎಂದು ದುಂಬಾಲು ಬೀಳುತ್ತಿದ್ದಾರೆ.
ಹೆಚ್ಚು ಕೇಕ್ ಸೇಲ್ ಆಗ್ತಿದ್ದ ಬೇಕರಿಯ ರವೀಂದ್ರ ಸ್ವಲ್ಪ ದಿನ ‘ಛೇ ಕೇಕ್ ಬಿಸಿನೆಸ್‍ಗೆ ಕುತ್ ತಂದ್ ಬಿಟ್ನಲ್ಲ ಈ ಕಬಾಬ್ ಶಿವ’ ಎಂದು ಮನದೊಳಗೆ ಗೊಣಗಿಕೊಳ್ಳುತ್ತಿದ್ದರು. ಆತ ನೀಡುತ್ತಿದ್ದ ಆ ಬರ್ತ್‍ಡೇ ಸ್ಪೆಷಲ್ ತಂದೂರಿ ಚಿಕನ್ ರುಚಿ ನೆನಪಾದೊಡನೆ ಯಾರಾದ್ರು ಬರ್ತ್‍ಡೇಗೆ ಕರೆದಿದ್ದಾರ ಎಂದು ನೆನೆಪಿಸಿಕೊಳ್ಳುತ್ತಿದ್ದ.
 
ಇನ್ನಷ್ಟು ಕತೆಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

ಏಪ್ರಿ 5, 2017

ಒಂದು ಕತೆ....

ಎಸ್. ಅಭಿ ಗೌಡ, ಹನಕೆರೆ.
ಕಳ್ಳ ಸಂಬಂಧಗಳ ಸಿಗ್ನಲ್‍ಗಳು ನೈತಿಕ ಸಂಬಂಧಗಳ ಸಿಗ್ನಲ್‍ಗಳಿಗಿಂತ ಸೂಕ್ಷ್ಮ. ರೂಮಿನೊಳಗೆ “ಯಾ ಆಲಿ” ಹಾಡು ಅಷ್ಟು ಜೋರಾಗಿ ಮೊಳಗುತ್ತಿತ್ತು, ಸ್ನೇಹಿತರೆಲ್ಲ ಕುಡಿತದ ಅಮಲಿನಲ್ಲಿ ಕುಣಿಯುತ್ತಿದ್ದದ್ದು ಮಾತ್ರವಲ್ಲ ಪೂರ್ಣನೂ ಕುಡಿದು ಕುಣಿಯುತ್ತಿದ್ದ. ಆರ್.ಎಕ್ಸ್100 ಬೈಕಿನ ಹಾರ್ನ್ ಒಂದು ಬಾರಿ ಆಗುತ್ತಿದ್ದಂತೆ ಹಾಗೆ ರೂಮಿನಿಂದ ಹೊರಬಂದ ಪೂರ್ಣ ಕತ್ತಲಲ್ಲಿ ಆರ್.ಎಕ್ಸ್ 100 ಏರಿ ಹೊರಟುಹೋದ. ಸಮಯ ರಾತ್ರಿ 10:45. ಯಾರು ಕೂಡ ಅಷ್ಟೊತ್ತು ರಾತ್ರಿಯಲ್ಲಿ ಆರ್.ಎಕ್ಸ್100 ಬೈಕಲ್ಲಿ ಅಲ್ಲಿ ಬಂದು ಪೂರ್ಣನನ್ನು ಕರೆದುಕೊಂಡು ಹೋಗಿದ್ದು ಸುಂದರವಾದ ಹುಡುಗಿಯೆಂದು ಊಹಿಸಲು ಸಾಧ್ಯವಿಲ್ಲ, ಆಕೆ ಎಷ್ಟು ಸುಂದರಿಯೆಂದರೆ ಬೈಕ್ ಹತ್ತಿದ ಮರುಕ್ಷಣವೇ ಹೆಲ್ಮೆಟ್ ತೆಗೆದು ಮುತ್ತಿಕಲು ಆತುರ ಪಡುತ್ತಿದ್ದ ಪೂರ್ಣ.

ಜನ 8, 2017

ನೀರುಗಂಟಿಗಳಿಗೆ ನ್ಯಾಯ ಸಿಗಲಿ.

ಎಸ್. ಅಭಿ ಹನಕೆರೆ
ನಿಮ್ಮ ಮನೆಗೆ ನಲ್ಲಿ ನೀರು ಸರಿಯಾಗಿ ಬರುತ್ತಿಲ್ಲವೆಂದಾಗ ನೀರು ಬಿಡುವ ನೀರುಗಂಟಿಗಳನ್ನು ಬಾಯಿಗೆ ಬಂದಂತೆ ಬಯ್ಯುತ್ತೀರಿ, ಅದೇ ಏನೂ ತೊಂದರೆ ಆಗದೆ ನಲ್ಲಿ ನೀರು ಬರುತ್ತಿದ್ದರೆ, ಅಪ್ಪಿ ತಪ್ಪಿಯೂ ಹೊಗಳುವುದಿಲ್ಲ. ಹೊಗಳಿಕೆ ತೆಗಳಿಕೆ ಪಕ್ಕಕ್ಕಿಟ್ಟು ಅವರಿಗೆ ಬರುತ್ತಿರುವ ಸಂಬಳ, ಅವರಿಗೆ ಸರ್ಕಾರ ಕೊಡುತ್ತಿರುವ ಸವಲತ್ತು, ಕೆಲಸ ನಿರ್ವಹಿಸುವಾಗ ಜೀವರಕ್ಷಕ ಸಾಧನಗಳಿಲ್ಲದೆಯೇ ಎಂತಹಾ ಕಠಿಣ ಪರಿಸ್ಥಿತಿಯಲ್ಲಿಯೂ ದುಡಿಯಬೇಕಾದ ಅನಿವಾರ್ಯತೆ, ಇವುಗಳನ್ನೆಲ್ಲಾ ಕೇಳುವಾಗ ಎಂಥವರಿಗೂ ಕಣ್ಣೀರು ಬರುತ್ತದೆ. ನಲ್ಲಿ ನೀರಿನಿಂದ ಉಪಯೋಗವಾದರೂ ಇದೆ, ಕಣ್ಣೀರಿನಿಂದ ಏನು ಪ್ರಯೋಜನ?

ಆಗ 3, 2016

ಅಧಿಕಾರಿಯ ಪರ ವಕಾಲತ್ತು ವಹಿಸುವುದರಲ್ಲಿ ಯಾವ ಸುಧಾರಣೆ ಇದೆ?

ಎಸ್. ಅಭಿ ಹನಕೆರೆ
03/08/2016
ಮೊನ್ನೆ ನಿರಂತರವಾಗಿ ಚಾನೆಲ್ ಛೇಂಜ್ ಮಾಡುತ್ತಾ ಇರುವಾಗ ಕೆಲವು ಮಕ್ಕಳು ತಮ್ಮ ಮೇಷ್ಟ್ರು ವರ್ಗಾವಣೆಯನ್ನು ಅಳುತ್ತಾ ವಿರೋಧಿಸುತ್ತಿದ್ದರು. ಸೂಪರ್! ಮೇಷ್ಟ್ರು ಈ ರೀತಿಯ ಪ್ರಭಾವವನ್ನು ಮಕ್ಕಳ ಮೇಲೆ ಬೀರಿದ್ದಾರಲ್ಲ ಎಂದು ಆಶ್ಚರ್ಯಪಟ್ಟೆ. ಹಾಗೆ ಚಾನೆಲ್ ಛೇಂಜ್ ಮಾಡುತ್ತಿರುವಾಗ ಹಾಸನದ ಮಹಿಳಾ ಅಧಿಕಾರಿಯೊಬ್ಬರು ತಮ್ಮನ್ನು ವರ್ಗಾವಣೆ ಮಾಡಿರುವುದನ್ನು ತಪ್ಪಿಸಿಕೊಳ್ಳುವ ಭಾಗವಾಗಿ ಆತ್ಮಹತ್ಯೆ ಪ್ರಯತ್ನ ಮಾಡಿರುವ ಸುದ್ದಿ ಪ್ರಕಟವಾಗುತ್ತಿತ್ತು. ಅಷ್ಟರಲ್ಲಾಗಲೇ ಪ್ರಮುಖ ರಾಜಕೀಯ ಪಕ್ಷದ ಮುಖಂಡರು ಆತ್ಮಹತ್ಯೆಗೆ ತಮ್ಮ ಎದುರಾಳಿ ಪಕ್ಷದ ದುರೀಣರೇ ಕಾರಣರೆಂದು ಟಿವಿ ಚಾನೆಲ್ ಗಳಿಗೆ ಬೈಟ್ ಕೊಡುತ್ತಿದ್ದರು. ಆ ಧುರೀಣರ ಹೇಳಿಕೆಯನ್ನೇ ಆಧರಿಸಿಕೊಂಡು ಟಿವಿ ಚಾನೆಲ್ ಗಳು ಅಧಿಕಾರಿಗೆ ಕಿರುಕುಳ, ಆತ್ಮಹತ್ಯೆಗೆ ಯತ್ನ ಎಂದು ಸುದ್ದಿ ಬಿತ್ತರಿಸುತ್ತಿದ್ದವು. ಇದೇನು ಈಗ ಇದ್ದಕ್ಕಿದ್ದಂತೆ ರಾಜ್ಯದಲ್ಲಿ ಅಧಿಕಾರಿಗಳ ಆತ್ಮಹತ್ಯೆ ಸರಣಿ ಸುರುವಾದಂತಿದೆಯಲ್ಲ ಎನ್ನಿಸಿತು. (ಅದು ಎಷ್ಟೇ ಅನುಕಂಪದಿಂದ ನೋಡಿದರೂ ಈ ಚಾನೆಲ್ಲುಗಳನ್ನು ಹತ್ತು ನಿಮಿಷಕ್ಕಿಂತ ಹೆಚ್ಚು ಕಾಲ ನೋಡುವುದಕ್ಕಾಗುವುದಿಲ್ಲ ಎಂಬುದು ಬೇರೆ ಮಾತು!) ಸದರಿ ಅಧಿಕಾರಿ ಹಾಸನದ ಎಸಿ ಆಗಿದ್ದವರು. ಸರ್ಕಾರ ತನ್ನಷ್ಟಕ್ಕೇ ಅವರನ್ನು ವರ್ಗಾವಣೆ ಮಾಡಿದೆ. ಆ ಸ್ಥಾನಕ್ಕೆ ದಕ್ಷ ಎಂದೇ ಖ್ಯಾತವಾಗಿರುವ ನಾಗರಾಜ್ ರನ್ನು ನಿಯೋಜಿಸಿದೆ. ಆದರೆ ಆ ಮಹಿಳಾ ಅಧಿಕಾರಿಗೆ ಸ್ಥಾನೊಪಲ್ಲಟ ಇಷ್ಟವಿಲ್ಲದ ಸಂಗತಿ. ಇನ್ನು ಅದಾಗಲೇ ಸಂಘಟನೆಗಳು ಬೀದಿಗಿಳಿದಿವೆ. ಆ ಅಧಿಕಾರಿಯ ಅಧಿಕಾರವನ್ನು ಹಸ್ತಾಂತರಿಸಲೆಂದು. ಮಹಿಳಾ ಅಧಿಕಾರಿಯು ಸುಮ್ಮನೆ ಕುಳಿತಿಲ್ಲ. ಕೆಎಟಿ ಮೊರೆ ಹೋಗಿ ವರ್ಗಾವಣೆ ರದ್ದು ಮಾಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸಂಘಟನೆಗಳು ಸುಮ್ಮನಿರುತ್ತಿಲ್ಲ. ಕಡೆಗೆ ಕಡೆ ಅಸ್ತ್ರವಾಗಿ ಆಕೆ ಆತ್ಮಹತ್ಯೆಯ ಮೂಲಕ ಎದುರಿಸಲು ಹೊರಟಿದ್ದಾರೆ. ಇದಿಷ್ಟು ಕಥೆಯ ಹೂರಣ. 
ಆದರೆ ನಮ್ಮ ಜನರು ಯಾರೋ ಒಬ್ಬ ಅಧಿಕಾರಿ ದಕ್ಷ ಎಂದ ಮಾತ್ರಕ್ಕೆ ನಮ್ಮ ಜಿಲ್ಲೆಗೇ ಇರಲಿ ಎಂದು ಹಠಕ್ಕೆ ಬೀಳುವುದು ಯಾಕೆ? ಅವರ ಜಾಗಕ್ಕೆ ಬರುವ ಮತ್ತೊಬ್ಬ ಅಧಿಕಾರಿಯನ್ನು ಈ ಹಿಂದಿನ ಅಧಿಕಾರಿಯಂತೆ ದಕ್ಷತೆಯಿಂದ ಕೆಲಸ ಮಾಡುವಂತಹ ಸಾಮಾಜಿಕ ಒತ್ತಡ ಸೃಷ್ಟಿಸಲು ಯಾಕೆ ಸಾಧ್ಯವಿಲ್ಲ ಎನ್ನಿಸಿತು. ಯಾವುದೇ ಸಂಘಟನೆಯಾಗಲೀ ಅಥವಾ ಜನಸಾಮಾನ್ಯರಾಗಲೀ ನಮ್ಮ ಸುತ್ತಲಿನ ಸಾಮಾಜಿಕ ವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳುವ ಅಧಿಕಾರ ನಮ್ಮಲ್ಲಿಯೇ ಇದೆ. ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ದಕ್ಷತೆಯಿಂದ ಪ್ರಾಮಾಣಿಕರಾಗಿ ಕರ್ತವ್ಯ ನಿರ್ವಹಿಸಲೇಬೇಕಾದ ಅನಿವಾರ್ಯತೆಯನ್ನು ನಾವುಗಳೇ ಸೃಷ್ಟಿಸಬಹುದಾಗಿದೆ. ಆದರೆ ನಮ್ಮ ಆಲೋಚನೆಗಳು ವ್ಯಕ್ತಿ ಕೇಂದ್ರಿತವಾಗಿರುವುದರಿಂದ, ಕುಟುಂಬ ಕೇಂದ್ರಿತವಾಗಿರುವುದರಿಂದ, ಹೆಚ್ಚೆಂದರೆ ಗುಂಪು ಕೇಂದ್ರಿತವಾಗಿರುವುದರಿಂದ ಅದು ಸಾಧ್ಯವಾಗುತ್ತಿಲ್ಲ. ಯಾವುದೋ ಪಕ್ಷಕ್ಕೊ ಎಮ್ಮೆಲ್ಲೆಗೋ ನಮ್ಮ ನಿಷ್ಠೆ ಮುಡಿಪಾಗಿರುತ್ತದೆ. ಆದ್ದರಿಂದ ಜನರಿಗೆ ಎಲ್ಲಾ ಸರಕಾರೀ ಅಧಿಕಾರಿಗಳು ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕೆಲಸ ಮಾಡಲೇಬೇಕು ಎಂದೆನ್ನಿಸುವುದಿಲ್ಲ. ನನ್ನ ಸ್ನೇಹಿತನೊಬ್ಬ ರಾಯಚೂರಿನಲ್ಲಿ ಸರಕಾರೀ ಕೆಲಸದಲ್ಲಿದ್ದಾನೆ. 'ಯಾವಾಗಪ್ಪ ನೀನು ಮಂಡ್ಯಕ್ಕೆ ಅಧಿಕಾರಿಯಾಗಿ ಬರೋದು' ಅಂದರೆ 'ಸುಮ್ನಿರಪ್ಪ ನೀನು. ಅಲ್ಲಿ ಹಾದೀ ಬೀದೀಲಿ ಹೋಗೋರೆಲ್ಲ ಅದು ಏನಾಯಿತು ಇದು ಏನಾಯಿತು ಎಂದು ಸರಕಾರೀ ಯೋಜನೆಗಳ ಬಗ್ಗೆ ಪ್ರಶ್ನೆ ಮಾಡ್ತಾರಂತೆ. ಆದರೆ ಇಲ್ಲಿ ಜನಪ್ರತಿನಿಧಿಗಳು ಮಾತ್ರ ಪ್ರಶ್ನೆ ಮಾಡೋದು' ಎಂದು ಹೇಳಿದ! ನಿಜವಾದ ಪರಿಸ್ಥಿತಿ ಮಂಡ್ಯದಲ್ಲಿ ಆ ಪ್ರಮಾಣಕ್ಕೆ ಇಲ್ಲವಾದರೂ ಹೊರ ಜಿಲ್ಲೆಗಳಲ್ಲಿ ಮಂಡ್ಯ ಜಿಲ್ಲೆಯ ಬಗ್ಗೆ ಇರುವ ಬಿಲ್ಡಪ್ ನೋಡಿ ಖುಸಿಯಾಯಿತು. ಎಲ್ಲಿ ದುಡ್ಡು ಹರಿದಾಡುತ್ತೋ ಅಲ್ಲಿ ಭ್ರಷ್ಟಾಚಾರ ಮಾಡಲು ಮನುಷ್ಯ ಮುಂದಾಗುತ್ತಾನೆ. ಏಕೆಂದರೆ ಮನುಷ್ಯ ಮೊದಲು ಅಗತ್ಯಕ್ಕೆ ನಂತರ ಲಾಭಕ್ಕೆ ಆಮೇಲೆ ದೋಚುವುದಕ್ಕಾಗಿಯೇ ಬದುಕಲು ಶುರು ಮಾಡುತ್ತಾನೆ. ಕಂಟ್ರೋಲ್ ಆಗಿ ಬದುಕಲೆಂದೇ ಮನುಷ್ಯರಾದ ನಾವುಗಳು ಕೆಲವು ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದಕ್ಕೆ ನೈತಿಕತೆ, ಮಾನವೀಯತೆಯನ್ನು ಆಧಾರವಾಗಿಸಿಕೊಂಡಿದ್ದೇವೆ. ಮನುಷ್ಯ ಹೊಸ ಹೊಸ ವ್ಯವಸ್ಥೆಗೆ ಹೋದಂತೆ ಇನ್ನಷ್ಟು ಪ್ರಬುದ್ಧನಾಗಬೇಕು, ಬದಲಿಗೆ ನಾವು ವ್ಯತಿರಿಕ್ತ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ಒಬ್ಬ ಸರಕಾರಿ ಅಧಿಕಾರಿ ವರ್ಗವಾದರೆ, ಆತನಿಗಾಗಿ ನಾವು ಧರಣಿ ಕೂರಬೇಕಿಲ್ಲ. ಬದಲಿಗೆ ಬರುವ ಮತ್ತೊಬ್ಬ ದಕ್ಷತೆಯಿಂದ ಕೆಲಸ ಮಾಡಬೇಕಾದ ಅನಿವಾರ್ಯತೆಯನ್ನು ನಾವು ಸೃಷ್ಟಿಸಬೇಕಿದೆ. ಆ ಅಧಿಕಾರಿಗಳ ವರ್ಗಾವರ್ಗಿ ವಿಚಾರದಲ್ಲೂ ನನ್ನದು ಇದೇ ಅಭಿಮತ. ಶಾಲಾ ಮಕ್ಕಳು ಮೇಷ್ಟರಿಗಾಗಿ ಅಳುವುದರಲ್ಲಿ ಮುಗ್ದತೆ ಇದೆ. ಮಮಕಾರವಿದೆ. ಕೆಲವರು ಸಂಘಟನೆಗಳ ಹೆಸರಿನಲ್ಲಿ ಅಧಿಕಾರಿಗಳ ವರ್ಗಾವಣೆ ತಡೆಯುವುದರಲ್ಲಿ ಯಾವು ಮುಗ್ಧತೆಯಿದೆ? ಸಮಾಜವನ್ನು ಸರಿಪಡಿಸುವವರು, ಅದಕ್ಕಾಗಿ ಸಂಘಟನೆ ಕಟ್ಟಿಕೊಂಡಿರುವವರು ಒಬ್ಬ ಅಧಿಕಾರಿಯ ವರ್ಗಾವಣೆ ತಡೆಯುವುದರಿಂದ ವ್ಯವಸ್ಥೆಯನ್ನು ಸುಧಾರಿಸಲು ಸಾಧ್ಯವೇ? ಅದರಲ್ಲೂ ಇಂತಹ ಘಟನೆಗಳು ಜರುಗಲಿ ಎಂದು ಕಾಯುವ ನಮ್ಮ ರಾಜಕೀಯ ಪಕ್ಷಗಳ ಮುಖಂಡರು, ಈ ಪುಡಾರಿಗಳ ಹೇಳಿಕೆಗಳನ್ನೇ ಮುಂದಿಟ್ಟುಕೊಂಡು ಸುದ್ದಿ ಪಸಾರ ಮಾಡುವ ಮಾಧ್ಯಮಗಳು ಸಮಾಜಕ್ಕೆ ಇನ್ನಷ್ಟು ಅಪಾಯಕಾರಿಯಾಗುತ್ತಿರುವ ಸನ್ನಿವೇಶದಲ್ಲಿ ನಾವು ಬದುಕುತ್ತಿದ್ದೇವೆ. ಇಂತಹ ಅಧಿಕಾರಿಗಳ ಪರ ವಿರೋಧವಾಗಿ ಪ್ರತಿಭಟನೆ ಮಾಡುವವರನ್ನೇ ಕರೆದು ಕರೆದು ಪ್ರಚಾರ ನೀಡುವ ವ್ಯವಸ್ಥೆ ಎಲ್ಲವೂ ಸೇರಿ ಸಮಾಜವನ್ನು ಇನ್ನಷ್ಟು ಕಲುಷಿತಗೊಳಿಸುವ ಮುನ್ನಾ ಜನರದ್ದೇ ಆದ ಪರ್ಯಾಯ ರಾಜಕಾರಣದ ನಿರ್ಮಾಣಕ್ಕೆ ಮುಂದಡಿ ಇಡೋಣ.

ಜುಲೈ 11, 2016

ದೇಶ ದ್ರೋಹವೂ ಇಲ್ಲಿ ಪುಣ್ಯದ ಕೆಲಸ!

ಸಾಂದರ್ಭಿಕ ಚಿತ್ರ
S Abhi Hanakere
11/07/2016
ನನ್ನ ತಮಿಳು ಚಿತ್ರದ ಕೆಲಸದ ನಿಮಿತ್ತ ನಾನು ಚೆನ್ನೈನಲ್ಲಿದ್ದೆ. ಕಾಲ್ ಬಂತು. ಮೈಸೂರಿನ ಗೆಳೆಯ ಕರೆ ಮಾಡಿದ್ದ. ಮಾತನಾಡಬಹುದ, ಫ್ರೀ ಇದ್ದೀರಾ ಅಂದ. ಅದು ಎಷ್ಟು ಕ್ಲೋಸ್ ಫ್ರೆಂಡ್ ಆದರೂ ಪಾರ್ಮಲಿಟಿಸ್ ಫಾಲೋ ಮಾಡೋ ವಿನಯದ ಬುದ್ಧಿ, ಮತ್ತಾತ ಮುಗ್ದ ಕೂಡ.

ಈ ಕಡೆಯಿಂದ "ಬ್ಯುಸಿ ಇದ್ದೀನಿ, ಚೆನ್ನೈನಲ್ಲಿದ್ದೀನಿ ಬೆಳಿಗ್ಗೆ ಮಾಡ್ಲಾ" ಅಂದೆ. "ಸ್ವಲ್ಪ ಅರ್ಜೆಂಟು ಮಿಸ್ ಮಾಡ್ದೆ ಮಾಡಿ" ಎಂದು ಕಾಲ್ ಕಟ್ ಮಾಡಿದ. ಯಾಕೋ ಮನಸ್ಸು ತಡಿಲಿಲ್ಲ. ನಾನಿದ್ದ ರಜಿನಿಕಾಂತರ ಕಬಾಲಿ ಡೈರೆಕ್ಟರ್ ಪರಂಜೀತ್‍ನ ಆಫೀಸ್‍ನಿಂದ ಈಚೆ ಬಂದು ಮತ್ತೆ ಕಾಲ್ ಮಾಡಿದೆ. “ಸಾರ್ ಏನಿಲ್ಲ ಪುನೀತ್ ರಾಜ್‍ಕುಮಾರ್ ಕಾಂಟೆಕ್ಟ್ ಮಾಡಬೇಕಿತ್ತು. ನಮ್ಮ ಫ್ರೆಂಡ್ಸ್ ಎಲ್ಲಾ ಸೇರಿ ಒಂದು ಎನ್‍ಜಿಓ ಮಾಡಿಕೊಂಡಿದ್ದಾರೆ. ಅದಕ್ಕೆ ಬ್ರಾಂಡ್ ಅಂಬಾಸಿಡರಾಗಿ ಪುನೀತ್‍ನ ಹಾಕಬೇಕು ಅಂತಾ, ಯಾಕಂದ್ರೆ ಎನ್‍ಜಿಓದು ತುಂಬಾ ಒಳ್ಳೆ ಉದ್ದೇಶ, ಈ ಸ್ಟಾರ್ ಹೋಟ್ಲು ಮತ್ತೆ ಮದುವೆ, ರಿಸೆಪ್ಷನ್ ಅಲ್ಲಿ ಊಟ ಉಳಿದು ಬಿಡುತ್ತಲ್ಲಾ ಅದ್ನ ತಕ್ಕೊಂಡ್ ಹೋಗಿ ಬಡವರಿಗೆ ಕೊಡೋದು, ತುಂಬ ಪುಣ್ಯದ ಕೆಲಸ’’ ಅಂದ. ನನಗೆ ಸರ್ರನೆ ಕೋಪ ಬಂದ್ ಬಿಡ್ತು, ಕಂಟ್ರೋಲ್ ಮಾಡಿಕೊಂಡು ಸಾರಿ, ನಂಗೆ ಪುನೀತ್ ರಾಜ್‍ಕುಮಾರ್ ಲಿಂಕ್ ಇಲ್ಲಾ ಎಂದು ತಪ್ಪಿಸಿಕೊಳ್ಳಲು ನೋಡಿದೆ, ಇಲ್ಲಾ ಅವರ ಮ್ಯಾನೇಜರ್ ಅಥವಾ ಯಾರ ಮುಖಾಂತರನಾದ್ರು ಕಾಂಟೆಕ್ಟ್ ಮಾಡ್ಸಿ ತುಂಬಾ ಒಳ್ಳೇ ಉದ್ದೇಶ ಅಂದು ಬಿಟ್ಟ ಮತ್ತೆ, ನನಗೆ ಕೋಪ ಜಾಸ್ತಿಯಾಗಿ ಬಾಯಿ ಬಿಡುವ ಮುನ್ನವೆ ಮಣ್ಣಿವಣ್ಣನ್ ಅಂತವರೆಲ್ಲಾ ಸಪೋರ್ಟ್ ಮಾಡ್ತಿದ್ದಾರೆ ಅಂದ..

ಓಹೋ ಇದ್ಯಾವುದೋ ಆಗಲೇ ಬೆಳೆದು - ಬಲಿತು ಬಿಟ್ಟಿರುವ ಎನ್.ಜಿ.ಓ. ಗುಂಪೇ ಇರಬೇಕು, ಸುಮ್ಮನ್ನೆ ನಮಗ್ಯಾಕೆ ಅಂತ ನನಗೆ ಆಗದ್ದನ್ನ ಸಹಿಸಿಕೊಳ್ಳುವುದ ಕಲಿಯುವ ಅವಶ್ಯಕತೆಯಿಲ್ಲ ಅನ್ನಿಸಿ "ಅಲ್ಲಾ ಇದು ಯಾವ ಒಳ್ಳೇ ಕೆಲಸ, ಯಾವ ಪುಣ್ಯದ ಕೆಲಸ, ಇವರಿಗೆ ಅಷ್ಟೊಂದು ಕಾಳಜಿ ಇದ್ರೆ ಫಂಕ್ಷನ್ ನಲ್ಲಿ ಉಳಿದ ದವಸ ಧಾನ್ಯವನ್ನು ಕೊಡಲಿ, ಇಲ್ಲಾಂದ್ರೆ ಆ ರೀತಿ ತಮ್ಮ ಧಿಮಾಕಿಗಾಗಿ ಆಹಾರವನ್ನು ಅಗತ್ಯಕ್ಕಿಂತ ಹೆಚ್ಚಾಗಿ ಮಾಡುವವರಿಗೆ ಶಿಕ್ಷೆ ಕೊಡಸಲಿ, ಅದ್ ಬಿಟ್ಟು ಈ ರೀತಿ ಉಳಿದ ಆಹಾರವನ್ನು ಬಡವರಿಗೆ ಕೊಟ್ಟು ಅವರನ್ನು ಇನ್ನು ಮಾನಸಿಕವಾಗಿ ಗುಲಾಮಗಿರಿಗೆ ತಳ್ಳ ಬೇಡಿ" ಅಂದೆ. ಆ ಕಡೆ ಯಿಂದ ಅವನು "ಸ್ವಾಭಿಮಾನ ಇರೋರು ಈಸ್ ಕೊಳ್ಳಲ್ಲ ಸರ್" ಅಂದ. ಇಷ್ಟೊತ್ತು ನನ್ನ ಆಡು ಭಾಷೆ ತಡೆದುಕೊಂಡೆ ಮಾತಾಡ್ತಿದ್ದೆ. "ಲೋ, ನೀನೆ ಹೇಳ್ತಿದೀಯಾ, ಸ್ವಾಭಿಮಾನ ಇರೋರು ಈಸಿಕೊಳ್ಳಲ್ಲ ಅಂತ. ಯೋಚನೆ ಮಾಡು ಆ ರೀತಿ ನೀವು ತಕೊಂಡ್ ಹೋಗಿ ಕೊಟ್ರೆ ಸ್ವಾಭಿಮಾನ ಕುಂದುತ್ತೆ ಹೊರತು ಬೆಳೆಯೋ ಮಾತೆಲ್ಲಿ, ಒಂದ್ ಕೆಲಸ ಮಾಡಿ ಯಾರು ಅಗತ್ಯಕ್ಕಿಂತ ಹೆಚ್ಚಾಗಿ ಅಡಿಗೆ ಮಾಡಿ ಈ ರೀತಿ ವೇಸ್ಟ್ ಮಾಡ್ತರೋ ಆ ಬೋಳಿ ಮಕ್ಳಿಗೆ ಚಪ್ಪಲೀಲಿ ಹೋಡೀರಿ ಫಸ್ಟ್" ಅಂದೆ. ಮಂಡ್ಯ ಸ್ಟೈಲ್ ಅಲ್ಲಿ ಕೋಪದಿಂದ, ಮೃದು ಸ್ವಭಾವದ ಅವನು ಬೇಜಾರ್ ಮಾಡಿ ಕೊಂಡ, ಏನೇನೋ ಸಮಜಾಯಿಸಿ ಕೊಟ್ಟ, ಆ ಮೇಲೆ "ನೀವೇಳಿದ್ದು ಸರಿ. ಆದ್ರೆ ಎಲ್ಲಾ ಒಂದೆ ದಿನಕ್ಕೆ ಸರಿ ಮಾಡೋಕೆ ಆಗಲ್ಲ- ನಾವ್ ಒಬ್ಬರೆ ಏನು ಮಾಡೋಕೆ ಆಗಲ್ಲ". ಇಂಥವೆ ಸೋಗಲಾಡಿತನದ ಡೈಲಾಗ್ ಹೇಳಿದ.

ನೀನು ಅವರನ್ನ ಸಪೋರ್ಟ್ ಮಾಡ್ ಬೇಡ ಅವರನ್ನ ನಾನ್ ಹೇಳಿದ ರೀತಿ ಹೇಳಿ ಎಜುಕೇಟ್ ಮಾಡು. ಅವರೇನಾದ್ರು ನಿಜವಾಗ್ಲು ಬಡವರ ಬಗ್ಗೆ ಕಾಳಜಿ ಇದ್ರೆ ಕೇಳ್ತಾರೆ, ಇಲ್ಲಾ ಸುಮ್ನೆ ಅವರು ಸಮಾಜ ಸೇವಕರು ಅನ್ನೋ ಬಿಲ್ಡ್ ಅಪ್ ತಕೋಳ್ಳೋಕೆ ಮಾಡೋರಾದ್ರೆ ಕೇಳಲ್ಲ. ಆ ರೀತಿ ಅವರೇನಾದ್ರು ಮುಂದುವರಿದರೆ ಪುನೀತ್ ರಾಜ್‍ಕುಮಾರ್‍ನ ತಲುಪೋದು ಅವರಿಗೂ ನಾವು ಪುಣ್ಯದ ಕೆಲಸ ಮಾಡ್ತಿದಿವಿ ಅಂತ ಭ್ರಮೆ ಹುಟ್ಟಿಸೋದು ಏನು ಕಷ್ಟ ಅಲ್ಲಾ.

ಯಾಕೆಂದರೆ ನಾನು ಕೂಡ ಮೊದಲು ಅದೇ ರೀತಿ ಯೋಚಿಸಿದ್ದೆ ಅಂತ ಮನಸ್ಸಿನಲ್ಲಿ ಅಂದುಕೊಂಡು ಅಪ್ಪಿ-ತಪ್ಪಿ ಪುನೀತ್ ಒಪ್ಪಿ ಬ್ರಾಂಡ್ ಅಂಬಾಸಿಟರ್ ಆಗ್ ಬಿಟ್ರೆ ದೇಶ ದ್ರೋಹಿಗಳು ಇನ್ನು ಆಹಾರ ಜಾಸ್ತಿ ವೇಸ್ಟ್ ಮಾಡಿ ಬಡವರನ್ನ ನಾಯಿ ಥರ ನೋಡಿ ಅವರ ಸ್ವಾಭಿಮಾನವನ್ನ ಇನ್ನು ಪಾತಾಳಕ್ಕೆ ತಳ್ಳಿ ಬಿಡುತ್ತಾರೆ. ನಿಮ್ಮ ಮಾತ್ ಕೇಳಲಿಲ್ಲ ಅಂದ್ರೆ ನನಗೆ ಆ ಎನ್‍ಜಿಓ ಹೆಸರು ಹೇಳಿ ಪ್ಲೀಸ್ ಕನ್ವಿನ್ಸ್ ಮಾಡ್ತಿನಿ ಅಂದೆ. ಮಾತು ಬದಲಿಸಿ ಕ್ಯಾಷುವಲ್ ಆಗಿ ಮಾತನಾಡಿ ಕಾಲ್ ಕಟ್ ಮಾಡಿದ. ನನಗೆ ನನ್ನ ಸ್ನೇಹಿತನ ಮೇಲೆ ನಂಬಿಕೆ ಇದೆ. ಆತ ಅವರನ್ನ ಎಜುಕೇಟ್ ಮಾಡ್ತನೆ ಅಂತ. ಈ ವಿಚಾರದಲ್ಲಿ ನನ್ನ ಯೋಚನ ಲಹರಿ ಬದಲಿಸಿದ ಎರಡು ಸನ್ನಿವೇಶಗಳನ್ನ ಹೇಳ್ತಿನಿ.

ಮೊದಲ ಸನ್ನಿವೇಶ- ಸ್ಲಂ ಅಲ್ಲೇ ಹುಟ್ಟಿ ಬೆಳೆದು, ಈಗ ಒಂದು ಒಳ್ಳೇ ಹುದ್ದೇಲಿ ಇರುವ ನನ್ನ ಸ್ನೇಹಿತ ಸಂತೋಷ್ ಹೇಳಿದ್ದ: 'ಒಮ್ಮೆ ಚಿಕ್ಕಂದಿನಲ್ಲಿ ನನಗೆ ಮುದ್ದೆ ತಿನ್ನುವ ಆಸೆ ಆಗಿತ್ತು. ಒಂದು ದಿನ ನಿಮ್ಮಂಥ ಸಾಹುಕಾರರ ಮನೇಲಿ ಏನೋ ಫಂಕ್ಷನ್ ಅಂತ ಅನ್ನ, ಬಾತು, ಪಲ್ಯ ಎಲ್ಲಾ ಉಳಿದು ಬಿಟ್ಟಿತ್ತು. ಅದು ನೇರವಾಗಿ ನಮ್ಮ ಸ್ಲಂಗೆ ನಮ್ಮ ಮನೆಗೆ ತಲುಪಿತ್ತು, ನಮ್ಮವ್ವ ಊಟಕ್ಕೆ ಕೊಟ್ಲು ನಾನು ಬೇಡ ಇದು ಅಂದೆ, ಅದ್ಕೆ ನಮ್ಮವ್ವ ಯಾರೋ ಪುಣ್ಯಾತ್ಮರು ಕೊಟ್ಟವರೆ ತಿನ್ನು ಅಂದ್ಲು, ಅವ್ವ ಅವರು ನಮ್ಮ ಮೇಲಿನ ಕಾಳಜಿಯಿಂದ ಕೊಟ್ಟಿಲ್ಲ ಅವರ ಪ್ರತಿಷ್ಠೆಗೆ ಇದ್ನ ಮಾಡಿ, ನಾಯಿಗಳು ತಿನ್ನೊಲ್ಲ ಎಂದು ನನಗೆ ಕೊಟ್ಟಿದ್ದಾರೆ ಅಂದೆ ಅದ್ಕೆ ನಮ್ಮವ್ವ ವಿದ್ಯೆ ಕಲಿತಿದಿನಿ ಅಂತ ನಿಂಗೆ ಕೊಬ್ಬು ಅಂದ್ಲು. ನನ್ನ ಮನಸ್ಸಿನಲ್ಲಿ ಇದ್ಕೆ ಅಲ್ಲವೆ ನಮಗೆ ವಿದ್ಯೆ ಸಿಗಬಾರ್ದು ಅಂತ ಸಂಚು ಮಾಡೋದು, ನಿಮ್ಮ ವೇಸ್ಟ್ ನ ತಿನ್ನೋರಿಲ್ಲ ಬಳಿಯೋರಿಲಲ್ಲ ಎಂದು' ಅಂದ. ನಾನು ಮೌನಕ್ಕೆ ಶರಣಾಗಿದ್ದೆ. ಅವನು ಮುಂದುವರಿಸಿದ 'ಅವತ್ತು ನನ್ನ ಮುದ್ದೆ ತಿನ್ನುವ ಆಸೆಗೆ ಕಲ್ಲು ಬಿತ್ತು, ಹಸಿವು ನೀಗಿಸಲು ಆ ಕ್ರಿಮಿನಲ್ ಸಾಹುಕಾರರ ವೇಸ್ಟ್ ನೆ ತಿಂದೆ'. ಅಂದು ಬಿಟ್ಟ ಪುಣ್ಯದ ಕೆಲಸ ಅಂತಿದ್ದ ಭಾವನೆ ಒಂದೇ ಏಟಿಗೆ ಅಗತ್ಯಕ್ಕಿಂತ ಹೆಚ್ಚಾಗಿ ಅಡಿಗೆ ಮಾಡುವುದು ದೇಶದ್ರೋಹ ಮತ್ತೆ ಆ ರೀತಿ ಪ್ರತಿಷ್ಟೆಗಾಗಿ ವೇಸ್ಟ್ ಮಾಡೋರು ಮತ್ತು ಬಡವರಿಗೆ ಹಂಚುವವರು ದೇಶ ದ್ರೋಹಿಗಳು ಅಂತ ಬದಲಾಯ್ತು.

ಎರಡನೆ ಸನ್ನಿವೇಶ- ಭಾರತದ ಶ್ರೀಮಂತ ಕುಟುಂಬ ಒಂದು ಯಾವುದೋ ದೇಶದಲ್ಲಿ ಮೆನುಲಿ ಇರೋ- ಬರೋದ್ನೆಲ್ಲಾ ಆರ್ಡರ್ ಮಾಡಿ ಸ್ವಲ್ಪ ತಿಂದು, ಪ್ಲೇಟ್ ಅಲ್ಲೇ ಜಾಸ್ತಿ ಬಿಟ್ಟು ಬಿಲ್ ಕೇಳಿದಾಗ ಹೋಟ್ಲಿನವನು ಎಲ್ಲವನ್ನು ತಿನ್ನಿ ಆ ಮೇಲೆ ಕೊಡ್ತಿನಿ ಅಂದನಂತೆ, ಅದ್ಕೆ ಸಾಲಗಾರ ಭಾರತ ದೇಶದ ಶ್ರೀಮಂತ ಕುಟುಂಬದವರು ದುಡ್ಡು ನಮ್ದು ನಮಗೆ ಇಷ್ಟ ಬಂದಷ್ಟು ತಿಂತಿವಿ ಅಂದ್ರಂತೆ. ಹೋಟೆಲ್ ನವನು ಯಾರಿಗೋ ಕಾಲ್ ಮಾಡಿದ್ನಂತೆ 10 ನಿಮಿಷದಲ್ಲಿ ಗ್ರೀನ್ ಪೋಲೀಸ್‍ನವರು ಅಂತ ಬಂದು ಭಾರತೀಯ ಶ್ರೀಮಂತರಿಗೆ ದುಡ್ಡು ನಿಮ್ಮದೆ ಇರಬಹುದು ಸಂಪನ್ಮೂಲ ಎಲ್ಲರದು ಈ ರೀತಿ ವೇಸ್ಟ್ ಮಾಡ ಬಾರದು ಅಂತ ಹೇಳಿ 50 ಸಾವಿರ ರೂಪಾಯಿ ದಂಡ ಹಾಕಿ 3 ದಿನ ಜೈಲಿಗೆ ಹಾಕಿದ್ರಂತೆ. ಈ ಕಥೆ ಕೇಳಿದ ಮೇಲೆ, ಪುಣ್ಯದ ಕೆಲಸ ಅಂತಿದ್ದ ಭಾವನೆ ದೇಶ ದ್ರೋಹ ಅಂತ ಬದಲಾಗಿದ್ದು ಇನ್ನೂ ಬಲವಾಯ್ತು.

ನಿಮಗು ಈ ಪುಣ್ಯದ ಕೆಲಸ ಅಂತಿರೋ ಭಾವನೆ, ದೇಶ ದ್ರೋಹ ಅಂತೆನಿಸಿದರೆ, ಈ ಬರಹವನ್ನು ಬೇರೆಯವರಿಗೂ ಓದುವಂತೆ ಪ್ರೇರೇಪಿಸಿ ಅಥವಾ ನಿಮ್ಮದೆ ರೀತಿಯಲ್ಲಿ ಈ ವಿಚಾರವನ್ನು ಸ್ಪ್ರೆಡ್ ಮಾಡಿ ಎಜುಕೇಟ್ ಮಾಡಿ…

ಕಡೆಯಾದಾಗಿ ಕುವೆಂಪುರವರ ಕೆಲವು ಸಾಲುಗಳನ್ನು ನೆನಪು ಮಾಡಲು ಇಚ್ಚಿಸುತ್ತೀನಿ.,.. ಪ್ರತಿಯೊಬ್ಬನ ಜೀವನದಲ್ಲಿಯೂ ಒಂದು ಸಂಧಿಕಾಲ ಬರುತ್ತದೆ. ಚಿಕ್ಕಂದಿನಲ್ಲಿ ತಂದೆತಾಯಿಗಳಿಂದಲೂ ಇತರರಿಂದಲೂ ವಿಮರ್ಶೆಯಿಲ್ಲದೆ- ವಿಚಾರವಿಲ್ಲದೆ- ಸಂಶಯವಿಲ್ಲದೆ ಸ್ವೀಕರಿಸಿದ ಭಾವನೆ, ಆಲೋಚನೆ, ಶ್ರದ್ಧೆ, ಕಥೆ, ನಂಬುಗೆ ಇತ್ಯಾದಿಗಳ ಶ್ರುತಿ (ಹೇಳಿದೊಡನೆ ನಂಬುವುದು)ಗೂ ತರುವಾಯ ತಾರುಣ್ಯದಲ್ಲಿ ಬುದ್ಧಿ ಪ್ರಬುದ್ಧವಾದ ಮೇಲೆ ಮೂಡುವ ವಿಮರ್ಶೆಯ- ವಿಚಾರದ- ಸಂಶಯದ ಪ್ರತಿಭಟನೆಯ ಮತಿಗೂ (ಹೇಳಿದ್ದು ಸಕಾರಣವಾಗಿದ್ದರೆ ಮಾತ್ರ ನಂಬುವುದು) ಗದಾಯುದ್ಧವಾಗುವ ಕ್ರಾಂತಿಕಾಲದಿಂದ ಬುದ್ಧಿಯಿರುವವರು ಯಾರೂ ತಪ್ಪಿಸಿಕೊಳ್ಳಲಾರರು. ಅಂತಹ ಮಾನಸಿಕ ಕ್ರಾಂತಿ ಹೊಸ ಬಾಳಿಗೆ ಕಾರಣವಾಗುತ್ತದೆ ಹಾಗೆ ಎರಡನೆಯ ಸಾರಿ ಹೊಸತಾಗಿ ಹುಟ್ಟಿದವರೆಲ್ಲರೂ ನಿಜವಾಗಿ ದ್ವಿಜರಾಗುತ್ತಾರೆ.

ಪ್ರತಿಷ್ಟೆಗಾಗಿ ಅಗತ್ಯಕ್ಕಿಂತ ಹೆಚ್ಚು ಆಹಾರವನ್ನ ತಯಾರಿಸಿ, ಉಳಿದ ಮೇಲೆ ಅದನ್ನು ಬಡವರಿಗೆ ಹಂಚುವುದು ದೇಶದ್ರೋಹದ ಕೆಲಸವೆಂದು ನಾವೆಲ್ಲರು ಪರಿಗಣಿಸ ಬೇಕಾದ ಅನಿವಾರ್ಯತೆ ಇದೆ ಮತ್ತು ಸರ್ಕಾರ ಈ ವಿಚಾರವಾಗಿ strict ಆಗಿ ಕಾನೂನು ಮಾಡೋವರೆಗೆ ನಾವೆಲ್ಲರು ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ.

ಜುಲೈ 2, 2015

ನಾಳೆಯಿಂದ 'ಆರಂಭ'

ಬೆಂಗಳೂರಿಗೆ ಬಂದ ಹೊಸದರಲ್ಲಿ ಒಂದು ಕನ್ನಡ ಸಿನಿಮಾ ನೋಡಿ ರೂಮಿಗೆ ಬಂದಾಗ ಅಲ್ಲೇ ಇದ್ದ ಸಿನಿ ತಂತ್ರಜ್ಞ ಗೆಳೆಯನೊಬ್ಬ 'ಹೆಂಗಿದೆ ಸಿನಿಮಾ?' ಎಂದು ಕೇಳಿದ. 'ಚೆನ್ನಾಗಿಲ್ಲ ಗುರು. ತಲೆ ನೋವ್ ಬಂತು' ಎಂದೆ. 'ಎಷ್ಟು ಕಷ್ಟ ಪಟ್ಟು ಮಾಡಿರ್ತಾರೆ ಗೊತ್ತಾ ಒಂದು ಫಿಲಮ್ ನಾ? ಸುಮ್ನೆ ಒಂದೇ ಮಾತಲ್ಲಿ ಚೆನ್ನಾಗಿಲ್ಲ ಅಂದ್ಬುಟ್ರೆ' ಕೋಪ ಮಾಡ್ಕಂಡ. 'ಗುರುವೇ, ಎಂಬಿಬಿಎಸ್ ಓದೋರೆಲ್ಲ ಕಷ್ಟಪಟ್ಟೇ ಪಾಸಾಗಿರ್ತಾರೆ. ಹಂಗಂದ್ಬುಟ್ಟು ಟ್ರೀಟ್ ಮೆಂಟ್ ಸರಿಯಾಗಿ ಕೊಡದೇ ಇದ್ರೆ ಬಯ್ಯದೆ ಇರ್ತೀವಾ? ಹಂಗೆ ಫಿಲಮ್ಮು. ಎಷ್ಟಾದ್ರೂ ಕಷ್ಟಪಟ್ಟಿರ್ಲಿ ಕೊನೆಗೆ ಒಂದು ವರ್ಡ್ ರೆಸ್ಪಾನ್ಸೇ ಸಿಗೋದು' ಎಂದಾಗ ಗೆಳೆಯ ಸುಮ್ಮನಾದ. 
ಈ ಘಟನೆ ನೆನಪಾಗಿದ್ದು ಇವತ್ತು ಪಾಲಿಮರ್ ಕನ್ನಡದಲ್ಲಿ 'ಸಿನಿಮಾ ಚೆನ್ನಾಗಿತ್ತಾ ಹತ್ತು ಜನಕ್ಕೆ ಹೇಳಿ, ಚೆನ್ನಾಗಿಲ್ವಾ ಫಿಲಮ್ಮಿಗೆ ಹೋಗೋರನ್ನೂ ವಾಪಸ್ ಕಳಿಸಿ' ಎಂದು ಕಡ್ಡಿತುಂಡುಮಾಡಿದಂತೆ ಗೆಳೆಯ ಅಭಿ ಹನಕೆರೆ ಹೇಳಿದಾಗ.
ಚರ್ಚೆಗೆ ಕನಸಿಗೆ ಅಪರೂಪಕ್ಕೊಮ್ಮೆ ಸಣ್ಣ ಪುಟ್ಟ ಜಗಳಕ್ಕೆ S Abhi Hanakere ಜೊತೆಯಾಗಿ ವರುಷಗಳೇ ಕಳೆದಿವೆ. ಹೊಸಬರನ್ನೇ ಇಟ್ಟುಕೊಂಡು ತರಬೇತಿ ಕೊಟ್ಟು 'ಆರಂಭ' ಸಿನಿಮಾವನ್ನು ಮಾಡಲು ಪಟ್ಟ ಕಷ್ಟವನ್ನು ನೋಡಿದ್ದೇನೆ. 
ಪ್ರೀತಿ, ಜಾತಿ, ಜಾತಿ ಪ್ರೀತಿಯ ಅಭಿಯ ಕನಸಿನ ಒಂದು ಭಾಗವಾದ ಆರಂಭ ನಾಳೆ ತೆರೆಮೇಲೆ ಮೂಡಲಿದೆ.
ಅಭಿ ಕಷ್ಟಪಟ್ಟ ಕಾರಣಕ್ಕೆ ಸಿನಿಮಾ ನೋಡೋದು ಬೇಡ! ಹೊಸತನದ ಸಿನಿಮಾ ಎಂದು ನೋಡಿ, ಅವನ ಮಾತಿನಲ್ಲೇ ಹೇಳೋದಾದರೆ ಸಿನಿಮಾ ಚೆನ್ನಾಗಿದ್ದರೆ ಹತ್ತು ಜನಕ್ಕೆ ನೋಡಲು ಹೇಳಿ.
ಸಿನಿಮಾದ ಬಗ್ಗೆ ನಾಳೆ ಮಾತನಾಡೋಣ. 

ಜೂನ್ 27, 2015

ಜುಲೈ ಮೂರರಿಂದ 'ಅಭಿ'ಯ ಆರಂಭ!

ಹೊಸಬರ ತಂಡ ಕಟ್ಟಿ ಸತತ ಎರಡು ವರುಷ ಚಿತ್ರದ ನಟ ನಟಿಯರಿಗೆ ತರಬೇತಿ ನೀಡಿ ನೈಜತೆಗೆ ಒತ್ತು ನೀಡಿ ಚಿತ್ರೀಕರಿಸಿರುವ ಆರಂಭ ಚಿತ್ರ ಜುಲೈ ಮೂರರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಸೆನ್ಸಾರಿನ ಬಾಹು ಬಂಧನದಿಂದ ಹೊರಬರಲು ಕೊಂಚ ತಡವಾಯಿತು ಎಂಬುದು ಚಿತ್ರತಂಡದ ಮಾತು! 
'ಹಾರ್ಟ್ ಟಚಿಂಗ್' ಟೀಸರ್, ಕಣಗಾಲಿನಲ್ಲಿ ಪುಟ್ಟಣ್ಣರ ನೆನಪಿಗೊಂದು ಪ್ರದರ್ಶನ, 'ಇದುವರೆಗೆ ಇದ್ದಿಲ್ಲ' ಎಂಬ ನವೀನ ಮಾದರಿಯ ಹಾಡಿನ ಮೂಲಕ ಸದ್ದು - ಸುದ್ದಿ ಮಾಡಿದ್ದ 'ಆರಂಭ' ನಿನ್ನೆ 'ಹೆಣ್ಣಿಂದ ಹಾಳಾದ ಕುಮಾರ'ನ ಟ್ರೇಲರ್ ಬಿಡುಗಡೆ ಮಾಡಿದೆ. ಜಾತಿ, ಮಹಿಳಾ ದೌರ್ಜನ್ಯದ ಎಳೆಗಳು ಟ್ರೇಲರ್ರಿನಲ್ಲಿ ಕಾಣಿಸುತ್ತಿದೆ. 

ಗೆಳೆಯ ಎಸ್.ಅಭಿ ಹನಕೆರೆ ನಿರ್ದೇಶನದ ಚಿತ್ರವನ್ನು ನಿರ್ಮಿಸಿರುವುದು ಗಣೇಶ್ ವಿ ನಾಗೇನಹಳ್ಳಿ. ಗುರಕಿರಣ್ ಸಂಗೀತವಿರುವ ಚಿತ್ರದ ಪ್ರಮುಖ ಪಾತ್ರದಲ್ಲಿ ಮಿಥುನ್ ಪ್ರಕಾಶ್, ಅಭಿರಾಮಿ, ರಸಗವಳ ನಾರಾಯಣ, ಅಭಿರಾಜು, ಬಳ್ಳಾರಿ ರಾಘವೇಂದ್ರ, ನಂದೀಶ್, ರಾಜೇಗೌಡ, ಚಂದ್ರು, ಹಾಸಿನಿ, ಪ್ರಥ್ವಿ ಮತ್ತಿತರಿದ್ದಾರೆ.

ಏಪ್ರಿ 30, 2015

ಬೋರಾಗದ ಹಾಡು ಪಡಿಮೂಡಿದ ಬಗೆ!

hadi hadi kannada song
ಆರಂಭ ಚಿತ್ರದ ನಿರ್ದೇಶಕರಾದ ಎಸ್ ಅಭಿ ಹನಕೆರೆಯವ್ರು, ತಮ್ಮ ಚಿತ್ರದ ಹಾಡುಗಳು ಹುಟ್ಟಿದ ಬಗ್ಗೆ ಈ ಮೊದಲೇ ಹಂಚಿಕೊಂಡಿದ್ದರು. ಅವರ ಚಿತ್ರದ ಇನ್ನೊಂದು ಸೂಪರ್ ಹಿಟ್ ಆದ ಹಾಡಿನ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಲಾಂಗು, ಮಚ್ಚು ಹಿಡಿದುಕೊಂಡು ಓಡಾಡಿದ್ದನ್ನ, ಅನಾಥ ಮಕ್ಕಳ ಸೇವೆ ಮಾಡೋದನ್ನ, ರೇಪ್ ನಡೆಯುವಾಗ, ದಿಡೀರನೆ ಬಂದು ಕಾಪಾಡುವ, ಇನ್ನೂ ಏನೇನೋ ರೀತಿಯಲ್ಲಿ ತೋರಿಸೋದು ಹೀರೋಯಿಸಂ ಅಲ್ಲ. ಎಂತಹ ಕಷ್ಟ ಪರಿಸ್ಥಿತಿಯಲ್ಲೂ, ಪಾಸಿಟಿವ್ ಅಗಿರೋದನ್ನ ತೋರಿಸೋದು ಹೀರೋಯಿಸಂ! ಎಂಬ ಸಂದರ್ಭಕ್ಕೆ ಹಾಡೊಂದು ಬೇಕು, ಅನ್ನೋದನ್ನ ಗುರುಕಿರಣ್ ಹತ್ತಿರ ಚರ್ಚಿಸಿದಾಗ, ಅವರು ಯಾವತ್ತೋ, ಇವರ ಮುಂದೆ ಗುನುಗಿದ್ದ ಹಾಡಿನ ಪಲ್ಲವಿ "ಹಾಡಿ ಹಾಡಿ ರೇಡಿಯೋಗೆ ಬೋರು ಆಗೋದಿಲ್ಲ, ಕೂಡಿ ಕೂಡಿ ಪ್ರೇಮಿಗಳಿಗೆ ಸುಸ್ತೆ ಆಗೋದಿಲ್ಲ" ಪಾಸಿಟಿವ್ ಲೈನ್ಸ್ ಚೆನ್ನಾಗಿವೆ. ಇದನ್ನು ಕಂಪೋಸ್ ಮಾಡಿ, ಚೆನ್ನಾಗಿ ಇರುತ್ತೆ, ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದ ಅಭಿಯವ್ರಿಗೆ, "ಅದು ಯಾವತ್ತೋ ಮಾಡಿದ್ದ ಹಾಡಿನ ಸಾಲು, ಯಾರಿಗೂ ಇಷ್ಟ ಆಗಿರ್ಲಿಲ್ಲ, ಹಾಗಾಗಿ ಅದನ್ನ ಡೆವೆಲಪ್ ಮಾಡಿರ್ಲಿಲ್ಲ, ಅದರಲ್ಲೂ ನಾನು ಇದುವರೆಗೂ, ಲವ್ ಹಾಡಿನ ಬಗ್ಗೆ, ಪಾಸಿಟಿವ್ ಆಗಿ ಬರೆದಿಲ್ಲ, ಅದು ಬೇಡ" ಎಂದರು. 
sandeep dance master
ನಮ್ಮ ಆರಂಭ ಚಿತ್ರದಲ್ಲಿ, ನಿಮ್ಮ ಬಿನ್ನವಾದ ಆ ಹಾಡು ಕೂಡ ಆರಂಭ ಆಗಲಿ, ಈ ಹಾಡನ್ನು ನೀವೇ ಬರೆದು, ಹಾಡಬೇಕು ಎಂದು ಪಟ್ಟು ಹಿಡಿದು ಕುಳಿತಾಗ, ಗುರುಕಿರಣ್ ಹಾಡನ್ನು ಬರೆದು, ಹಾಡಿದರು. ಗುರುಕಿರಣ್ ಮೊದಲ ಬಾರಿಗೆ ಬರೆದಂತಹ ಲವ್ ಹಾಡು ಇದಾಗಿದೆ.
ಈ ಹಾಡನ್ನು, ತುಂಬಾ ಸ್ಟೈಲಿಶ್ ಆಗಿ, ಮತ್ತು ಕಲರ್ ಫುಲ್ ಆಗಿ ಚಿತ್ರೀಕರಿಸುವ ದೃಷ್ಟಿಯಿಂದ, ಈ ಹಾಡಿನ ಡ್ಯಾನ್ಸ್ ಮಾಸ್ಟರ್ ಸಂದೀಪ್ ರವರನ್ನ ಬೇಟಿ ಮಾಡಿ, ಸಹ ನೃತ್ಯಗಾರ್ತಿಯರ ಆಯ್ಕೆ ಮಾಡಿ, ಅವ್ರಿಗೆಲ್ಲ ಪ್ರ್ಯಾಕ್ಟೀಸ್ ಮಾಡಿಸಿ, ಶೂಟಿಂಗ್ ಸ್ಪಾಟ್ಗೆ ಕರೆದೊಯ್ದುರು. ಇದಕ್ಕೆ ಬೇಕಾದ ರೇಡಿಯೋ ಪ್ರತಿಕೃತಿಗಳನ್ನು ಆರೋಗ್ಯ ಸ್ವಾಮಿಯವ್ರು ಅದ್ಬುತವಾಗಿ ಮಾಡಿಕೊಟ್ಟಿದ್ದರು. ಹಾಡಿನಲ್ಲಿ ಎಲ್ಲ ನೃತ್ಯಗಾರ್ತಿಯರ ಕೈಯಲ್ಲಿ ಎಲ್‌ಸಿಡಿ ಟೀವೀ ಹಿಡಿಸಿ, ಅದರಲ್ಲಿ ನಾಯಕಿಯ ಚಿತ್ರ ಬರುವಂತೆ ಚಿತ್ರಿಸುವ ಉಪಾಯ ಹೊಳೆದಿದ್ದ ಅಭಿಯವ್ರಿಗೆ, ನಿರ್ಮಾಪಕರ ಸಹಕಾರ ಸಿಗಲಿಲ್ಲ. ಆ ಬೇಸರದಲ್ಲಿ ಇದ್ದಾಗ, ಅದಕ್ಕೆ ತಕ್ಷಣ ಅವ್ರಿಗೆ ಹೊಳೆದಿದ್ದು, ಬಿಸಿಲಲ್ಲೂ ಹೊಳೆಯುತ್ತಿದ್ದ, ನೃತ್ಯಗಾರ್ತಿಯರ ಬಿಳಿ ಸೊಂಟದ ಮೇಲೇನೇ, ಟಿವಿ ಚಾನೆಲ್ಲಿನ ಲೋಗೋ ಬಿಡಿಸಿ ತೋರಿಸೋದು ಅಂತಾ!
aarogya swamy
ಅದಕ್ಕೆ ನೃತ್ಯಗಾರ್ತಿಯರು ಒಪ್ಪಲಿಲ್ಲ "ಚಿತ್ರ ಮಾಡುವುದು ನಟ ನಟಿಯರಿಗೆ ಸಂಭಾವನೆ ಕೊಡೋಕೆ ಅಲ್ಲ, ಜನಗಳಿಗೆ ಮನರಂಜನೆ ನೀಡುವುದಕ್ಕೆ, ಜೊತೆಗೆ ಸಾಧ್ಯವಾದರೆ ಒಂದಷ್ಟು ಒಳ್ಳೇ ಸಂದೇಶ ತಲುಪಿಸೋದಿಕ್ಕೆ" ಎಂದು ಅಭಿಯವ್ರು ಹೇಳಿ ಒಪ್ಪಿಸಿ, ಆರೋಗ್ಯ ಸ್ವಾಮಿ ಎಲ್ಲರ ಸೊಂಟದ ಮೇಲೆ ಟಿವಿ ಚ್ಯಾನೆಲ್ ಗಳ ಲೋಗೋ ಚಿತ್ತಾರ ಬಿಡಿಸಿದರು, ನಂತರ ಎಲ್ಲರೂ ಸಂತೋಷವಾಗಿ ಹಾಡಿನ ಚಿತ್ರೀಕರಣಕ್ಕೆ ಸಹಕರಿಸಿದರು ಹಾಡಿನ ಕೊನೆಯಲ್ಲಿ ಬಾಟಲ್ ಹೊಡೆಯುವ ದೃಶ್ಯದಲ್ಲಿ ಕೆಲ ನೃತ್ಯಗಾರ್ತಿಯರಿಗೆ ಗಾಯಗಳು ಸಹ ಆಯಿತಂತೆ.
ಕೊನೆಗೆ ಹಾಡಿನ ವೀಡಿಯೋ ನೋಡಿ ಸಣ್ಣ ಪುಟ್ಟ ಲೋಪ ದೋಷಗಳಿದ್ದರೂ ತುಂಬಾ ಖುಷಿಪಟ್ಟ ಅಭಿಯವರು ತಮ್ಮ ಅನುಭವ ಮೆಲುಕು ಹಾಕಿದ್ದಾರೆ.
ಗುರುಕಿರಣ್ ತಮ್ಮ ಶೋಗಳಲ್ಲಿ ಈ ಹಾಡನ್ನು ಹಾಡುವುದರ ಮೂಲಕ ಚಿತ್ರಕ್ಕೆ ಪ್ರೋತ್ಸಾಹ ಕೊಡುತ್ತಾ ಬಂದಿದ್ದಾರೆ. ಹೊಸಬರೊಂದಿಗೆ ಗುರುಕಿರಣ್ ಹೆಚ್ಚು ಉತ್ಸಾಹದಿಂದ, ಒಂಚೂರು ಬೇಧವಿಲ್ಲದೆ, ಸಂಗೀತ ಸಂಯೋಜನೆ ಮಾಡಿ ಕೊಟ್ಟಿದ್ದಕ್ಕೆ ತುಂಬಾ ಖುಷಿಯಿದೆ ಎಂದು ಅಭಿ ಹೇಳುತ್ತಾರೆ.
"ಹೊಸಬರೊಂದಿಗೆ ನಾನು ಹೊಸಬನಾಗಿ ಕೆಲಸ ಮಾಡಲು ಇಚ್ಚಿಸುವುದರಿಂದ, ಹೊಸತನ ತುಂಬಾ ಖುಷಿ ಕೊಡುತ್ತೆ"ಅಂತಾ ಗುರುಕಿರಣ್ ಸಹ ಕಣ್ಣು ಮಿಟುಕಿಸಿ ಹೇಳುತ್ತಾರೆ..!
ಹಾಡಿನ ವೀಡಿಯೋ ನೋಡಿದ ಯಾರೋ ಪತ್ರಿಕಾ ಸಿಬ್ಬಂದಿ,"ಏನ್ರೀ ಟೀವೀ ಚ್ಯಾನೆಲ್ನವರನ್ನ, ಸೊಂಟದ ಮೇಲೆ ಕೂರಿಸಿದಿರಾ?" ಎಂದು ಛೇಡಿಸಿದ್ದನ್ನ ನೆನಪು ಮಾಡಿಕೊಂಡ್ರು. ಹಾಡನ್ನು ನೋಡಿದವ್ರೆಲ್ಲ ತಮ್ಮ ಮನೆಯಲ್ಲಿದ್ದ ಹಳೆಯ ರೇಡಿಯೋಗಳನ್ನು ನೆನಪು ಮಾಡಿಕೊಳ್ಳೋದು ಗ್ಯಾರೆಂಟೀ....ನೀವು ಸಾಂಗ್ ನೋಡಿಲ್ಲ ಅಂದ್ರೆ, ಒಂದ್ಸಲ ನೋಡ್ಕೊಂಡು ಅಭಿಪ್ರಾಯ ತಿಳಿಸಿ. ಚಿತ್ರ ಡಿ.ಟಿ.ಎಸ್ ಮುಗಿಸಿ ಸೆನ್ಸಾರ್ ಬೋರ್ಡಿನ ಮುಂದೆ ಪ್ರದರ್ಶನಗೊಳ್ಳಲು ಸಿದ್ಧವಾಗಿದೆ.
ಹಾಡು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ

ಏಪ್ರಿ 14, 2015

ಲವ್ ಮೂಡಿತಣ್ಣ!.....ಹೀಗೆ ಮೂಡಿತಣ್ಣ!

iduvarege iddilla
ಆರಂಭ ಚಿತ್ರದ ‘ಲವ್ ಮೂಡಿತಣ್ಣ’ ಹಾಡು ಹುಟ್ಟಿದ ರೀತಿಯ ಬಗ್ಗೆ ಚಿತ್ರದ ನಿರ್ದೇಶಕ ಎಸ್. ಅಭಿ ಹನಕೆರೆ ಅವರು ನೆನಪುಗಳನ್ನು ಹಂಚಿಕೊಂಡಿದ್ದಾರೆ. ಪ್ರೀತಿ ಮೂಡುವ ಸಂದರ್ಭಕ್ಕೆ ತಕ್ಕಂತೆ ಒಂದು ಹಾಡಿಗೆ ಟ್ಯೂನ್ ಹಾಕಲು ಗುರುಕಿರಣ್ ಅವರ ಜೊತೆ ಕುಳಿತುಕೊಂಡಾಗ ಗುರುಕಿರಣ್ ಅನೇಕ ಟ್ಯೂನುಗಳನ್ನು ಮಾಡಿದರು. ಅದರಲ್ಲಿ ಒಂದು ಇಷ್ಟವಾಗಿ, ಅದರ ಮೇಲೆ ಎರಡು ತಿಂಗಳು ಕೆಲಸ ಮಾಡಿದರು. ಇದ್ದಕ್ಕಿದ್ದಂತೆ ಗುರುಕಿರಣ್ ಅವರಿಗೆ, ಈ ಚಿತ್ರ ಬೇರೆ ರೀತಿಯೆ ಇದೆ, ಇದಕ್ಕೆ ಇನ್ನೂ ವಿಭಿನ್ನವಾದ ಟ್ಯೂನ್ ಮಾಡೋಣವೆಂದು ಅಲ್ಲಿಯವರೆಗೆ ಮಾಡಿದ್ದ ಟ್ಯೂನುಗಳನ್ನೆಲ್ಲಾ ತೆಗೆದು ಹಾಕಿದರು, ಇಷ್ಟವಾದ ಟ್ಯೂನನ್ನೂ ತೆಗೆದುಹಾಕಿದರು. ಬೇರೆ ಆಲೋಚನೆಗೆ ತಡಕಾಡುವಾಗ , ಒಂದು ದಿನ ಬೆಳಿಗ್ಗೆ ಎಂಟರಿಂದ ಮಧ್ಯರಾತ್ರಿ ಎರಡು ಮೂವತ್ತರ ತನಕ ಗುರುಕಿರಣ್ ಮತ್ತು ಅಭಿ ಲೋಕಾರೂಢಿ ಮಾತುಗಳನ್ನು ಆಡುತ್ತ ಕಾಲ ಕಳೆದರು.
abhi hanakere
ಅಭಿಯವರು ಮನೆಗೆ ಹೋಗಿ ಇನ್ನೇನು ಮಲಗಬೇಕು, ಆಗ ಕರೆ ಮಾಡಿದ ಗುರುಕಿರಣ್ ಒಂದು ಸಾಲು ಹೊಳೆದಿದೆ ಎನ್ನುತ್ತ ಟ್ಯೂನ್ ಜೊತೆಗೆ ’ಲವ್ ಮೂಡಿತಣ್ಣ' ಎಂದರು (ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ). ಅಭಿಯವರು, ಚೆನ್ನಾಗಿದೆ; ಮೂರು ದಿನದ ನಂತರ ಮತ್ತೆ ಕಾಡುತ್ತಾ ನೋಡೋಣ ಎಂದರು. ಒಂದು ವಾರದ ನಂತರ ಗುರುಕಿರಣ್ ಭೇಟಿಯಾಗಿ , ಸಂಗೀತ ಮಾಡಲು ಕುಳಿತಾಗಲು, ಆ ಟ್ಯೂನ್ ಕಾಡಿತು. ಆದ್ದರಿಂದ ಅದನ್ನು ಅಂತಿಮ ಆಯ್ಕೆ ಮಾಡಿದರು. ಆ ಟ್ಯೂನ್‍ಗೆ ಗೊಟೂರಿಯವರ ಕೈಯಲ್ಲಿ ಸಾಹಿತ್ಯ ಬರೆಸಿದರೆ ಚೆನ್ನಾಗಿರುತ್ತೆ ಎಂದು ಗುರುಕಿರಣ್ ಸಲಹೆ ನೀಡಿದರು. ಅದರಂತೆ ಅಭಿಯವರು, ಗೊಟೂರಿಯವರನ್ನು ಭೇಟಿ ಮಾಡಿ, ಅವರ ಜೊತೆ ಕಾರಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ , ಬೆಂಗಳೂರಿನ ಸುತ್ತಮುತ್ತಾ ಓಡಾಡುತ್ತ ಹಾಡಿನ ಸಂದರ್ಭವನ್ನು ವಿವರಿಸಿ, ಆಮೇಲೆ ಕಾಡುಹರಟೆ ಹೊಡೆಯುತ್ತ ಕಾಲ ತಳ್ಳಿದರು. ನಂತರ, ಗುರುಕಿರಣ್ ಮನೆಗೆ ಬಂದು ಮತ್ತೆ ಮೂರು ಗಂಟೆ ಹರಟೆ! ಹರಟೆ ಮುಗಿದ ಮೇಲೆ ಕೇವಲ ಹತ್ತು ನಿಮಿಷದಲ್ಲಿ, ಗೊಟೂರಿಯವರು ಲವ್ ಮೂಡಿತಣ್ಣ ಹಾಡನ್ನು ಬರೆದು ಅಭಿಯವರ ಕೈಗಿತ್ತು, “ಇದು ದೈವ ಪ್ರೇರಣೆ, ನನ್ನಿಂದ ಈ ಹಾಡು ಬರೆಯುವಂತಾಗಿದೆ. ಈ ಹಾಡಿನಲ್ಲಿ ನೀವು ಯಾವ ಒಂದು ಪದವನ್ನೂ ಬದಲಾಯಿಸದೆ, ಸಂಗೀತಕ್ಕೆ ಅಳವಡಿಸುತ್ತೀರ ಎನ್ನುವ ನಂಬಿಕೆ ನನಗಿದೆ” ಎಂದು ಹೇಳಿ ಹೊರಟು ಹೋದರು. ಈ ಸಾಹಿತ್ಯಕ್ಕೆ ಮಾಲ್ಗುಡಿ ಶುಭ ಅವರ ಧ್ವನಿ ಹೊಂದುತ್ತದೆ ಎಂದ ಗುರುಕಿರಣ್ ಮಾಲ್ಗುಡಿ ಶುಭಾರನ್ನು ಕರೆಸಿ, ಹಾಡಿಸಿದಾಗ, ಅವರು ಸಹ, ಹಾಡುವುದರಲ್ಲಿ ತಲ್ಲೀನರಾಗಿ “ಈ ಹಾಡು, ನಾನು ಹಾಡಿದ, ಅತ್ಯುತ್ತಮ ಹಾಡುಗಳಲ್ಲಿ ಒಂದಾಗಲಿದೆ” ಎಂದು ಸಂತಸ ವ್ಯಕ್ತಪಡಿಸುತ್ತ “ಶುಭವಾಗಲಿ” ಎಂದು ಹಾರೈಸಿದರು.

gurukiran
ಹಾಡು ಸಿದ್ಧವಾದ ನಂತರ, ಅಭಿಯವರಿಗೆ ಭಯ ಕಾಡುವುದಕ್ಕೆ ಶುರುವಾಗಿತ್ತಂತೆ, ಚಿತ್ರದಲ್ಲಿ ಈ ಹಾಡೇ ಹೈಲೈಟ್ ಆಗಿಬಿಟ್ಟು, ಉಳಿದಿದ್ದೆಲ್ಲಾ ಸಪ್ಪೆಯಾಗಬಹುದು ಎಂಬುದೇ ಆ ಭಯ.

ಇನ್ನು ಹಾಡಿನ ಚಿತ್ರೀಕರಣವನ್ನು ಮೂವತ್ತು ದಿನಗಳ ಕಾಲ ಪ್ರತಿನಿತ್ಯ, ಬೆಳಗ್ಗೆ ಮತ್ತು ಸಂಜೆ, ಹೊಂಬಣ್ಣದ ಬೆಳಕಿನಲ್ಲಿ (ಗೋಲ್ಡನ್ ಅವರ್ಸ್) ಒಂದೊಂದೆ ದೃಶ್ಯವನ್ನು ನೃತ್ಯ ಸಂಯೋಜಕರಿಲ್ಲದೆ, ಸ್ವತಃ ಅಭಿಯವರೇ ಚಿತ್ರೀಕರಣ ಮಾಡಿ ಮುಗಿಸಿದರು. ಹಾಡು ಕೇಳಿದವರೆಲ್ಲ, ಗುರುಕಿರಣ್ ಇಲ್ಲಿಯವರೆಗು ಕಂಪೋಸ್ ಮಾಡಿದ ಅತ್ಯುತ್ತಮ ಹಾಡುಗಳಲ್ಲಿ, ಲವ್ ಮೂಡಿತಣ್ಣ ಹಾಡು ಕೂಡ ಒಂದು ಎಂದು ಹೇಳುತ್ತಾರೆ.

ಈಗಾಗಲೇ, ಈ ಚಿತ್ರದ ಹಾಡುಗಳು, ಭಾರಿ ಸದ್ದು ಮಾಡಿವೆ. ಅದರಲ್ಲೂ ಲವ್ ಮೂಡಿತಣ್ಣ ಹಾಡು ತುಂಬಾ ಜನರ ಪ್ರೀತಿಗೆ ಪಾತ್ರವಾಗಿದೆ. ಡಿ.ಟಿ.ಎಸ್ ಹಂತದಲ್ಲಿರುವ ಆರಂಭ ಚಿತ್ರ ಇನ್ನು ಕೆಲವೇ ದಿನಗಳಲ್ಲಿ ಜನರ ಮುಂದೆ ಬರಲು ಸಿದ್ಧವಾಗುತ್ತಿದೆ.

ಮಾರ್ಚ್ 26, 2015

ಆರಂಭ ಚಿತ್ರಕ್ಕೆ ಎಮ್ಮೆ ಬಲಿ!

ರಸಗವಳ ನಾರಾಯಣ
ಇದು ಪಟ್ಟು ಬಿಡದ ನಿರ್ದೇಶಕ ಮತ್ತು ನಟನೊಬ್ಬನ ಕಲಾನಿಷ್ಠೆಯ ಪರಿ! ಆರಂಭ ಚಿತ್ರದ ಹಾಡುಗಳು ಮತ್ತು ಟೀಸರ್ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಚಿತ್ರದಲ್ಲಿ ಸದ್ದು ಮಾಡುವ ತಮಟೆಯೊಂದರ ಹಿಂದಿನ ಕಥೆಯಿದು! ಕಥೆಯಲ್ಲ, ನೈಜ ಘಟನೆ! ಎಸ್. ಅಭಿ ಹನಕೆರೆ ನಿರ್ದೇಶನದ ‘ಆರಂಭ ಚಿತ್ರದ ಒಂದು ಪ್ರಮುಖ ಪಾತ್ರ ಕುಂಟು ಬೋರನದು. ಚಿತ್ರದ ಹಲವೆಡೆ ಕುಂಟು ಬೋರ ತಮಟೆ ಬಡಿಯುವ ದೃಶ್ಯಗಳಿತ್ತು. ತಮಟೆ ಮೇಲೆ ಕೈ ಆಡಿಸುವ ರೀತಿಯನ್ನು, ದೇಹಭಾಷೆಯ ವ್ಯತ್ಯಾಸವನ್ನು ಅಧ್ಯಯನ ಮಾಡಲು ಕುಂಟು ಬೋರನ ಪಾತ್ರ ನಿರ್ವಹಿಸಿರುವ ‘ರಸಗವಳ ನಾರಾಯಣ’ರವರನ್ನು ತಮಟೆ ಬಡಿಯುವವರ ಹತ್ತಿರವೇ ಕಳುಹಿಸಿದ್ದರಂತೆ.

ಕಲಿತು ವಾಪಸ್ಸಾದ ರಸಗವಳ ನಾರಾಯಣರಿಗೆ ‘ಎಲ್ಲಾದ್ರೂ ಹುಡುಕಿಕೊಂಡು ಒಂದು ಚರ್ಮದ ತಮಟೆಯನ್ನೇ ತರಬೇಕು’ ಎಂದು ನಿರ್ದೇಶಕರು ತಾಕೀತು ಮಾಡಿದ್ದರು. ಎಲ್ಲೆಡೆಯೂ ಪ್ಲಾಸ್ಟಿಕ್ಕು, ಫೈಬರ್ರಿನ ತಮಟೆಯನ್ನೇ ನೋಡಿ ಕಂಗೆಟ್ಟರು ರಸಗವಳ ನಾರಾಯಣ! ಅಲ್ಲೊಂದಿಲ್ಲೊಂದಿದ್ದ ಚರ್ಮದ ತಮಟೆಯನ್ನು ಕೊಡಲು ಅದರ ಯಜಮಾನರು ಒಪ್ಪುತ್ತಿರಲಿಲ್ಲ! ಕೊನೆಗೆ ಕುಂಟು ಬೋರ ಒಂದು ಎಮ್ಮೆಯನ್ನು ಬಲಿಕೊಟ್ಟು ಅದರ ಚರ್ಮದಿಂದ ಹೊಸತೊಂದು ತಮಟೆಯನ್ನೇ ಮಾಡಿಸಿಕೊಂಡು ಚಿತ್ರೀಕರಣಕ್ಕೆ ಹಾಜರಾದರು!

ಚಿತ್ರದ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ, ಹಿನ್ನೆಲೆ ಸಂಗೀತ ನುಡಿಸುವಾಗ ನೈಜತೆಗಾಗಿ ಆ ಚರ್ಮದ ತಮಟೆಯನ್ನೇ ಬಳಸಿದರೆ ಒಳ್ಳೆಯದು ಎಂದು ತಮ್ಮ ಹಂಬಲವನ್ನು ಸಂಗೀತನಿರ್ದೇಶಕರಾದ ಗುರುಕಿರಣ್ ಹತ್ತಿರ ಅಭಿ ಹನಕೆರೆ ಹೇಳಿಕೊಂಡಾಗ, ಮತ್ತೆ ಅದೇತಮಟೆಯನ್ನು ತರಿಸಿ, ಲೈವ್ ರೆಕಾರ್ಡ್ ಮಾಡಿಸಿದ್ದಾರೆ.

ರಸಗವಳ ನಾರಾಯಣನಿಗೆ ಮತ್ತೆ,ತಮಟೆ ತರಲು ಹೇಳಿದಾಗೆ,"ಮನೆಯಲ್ಲಿ ತಮಟೆಯನ್ನುಇಟ್ಟುಕೊಂಡರೆ,ಕೆಟ್ಟಾದಾಗಬಹುದು ಎಂದು ಭಾವಿಸಿ, ಮದ್ದೂರಿನ ದೇವಸ್ತಾನದಲ್ಲಿಇರಿಸಿದ್ದನ್ನು ಕೇಳಿ,ನಿರ್ದೇಶಕರು "ಚಿತ್ರ ಚೆನ್ನಾಗಿ ಮೂಡಿಬರಲು,ನಮ್ಮ ಕೈಯಲ್ಲಿ ಎಷ್ಟುಸಾಧ್ಯ,ಅಷ್ಟು ನೈಜವಾಗಿ ಮಾಡ್ಬೇಕು,ಇಲ್ಲಿ ಎಲ್ಲಾನೂ ಒಳ್ಳೇದಾಗುತ್ತೆ,ಕೆಟ್ಟದಾಗೋ ಮಾತೆಇಲ್ಲ"ಅಂತ ಅವರಿಗೆ ಹೇಳಿ,ಅವರಿಗೆ ಅದೇ ತಮಟೆಯಿಂದ ಬ್ಯಾಕ್ ಗ್ರೌಂಡ್ ಮ್ಯೂಸಿಕ್ಮಾಡೋಣವೆಂದು,ಮತ್ತೆ ಅದೇ ತಮಟೆ ತರಿಸಿದ್ದಾರೆ.

ಚಿತ್ರದಲ್ಲಿ ಉಪಯೋಗಿಸಿದ ಚರ್ಮದ ತಮಟೆಯನ್ನೇ ಬ್ಯಾಕ್ ಗ್ರೌಂಡ್ ಮ್ಯೂಸಿಕ್ಕಿನಲ್ಲೂ ಉಪಯೋಗಿಸಿರುವುದಕ್ಕೆ ಗುರುಕಿರಣ್ ಹರ್ಷ ವ್ಯಕ್ತ ಪಡಿಸುತ್ತಾ ಈ ರೀತಿಯ ಅನುಭವ ಇದೇ ಮೊದಲು ಎಂದಿದ್ದಾರೆ. ಕುಂಟು ಬೋರನ ಪಾತ್ರದ ಅಭಿನಯಕ್ಕೆ ‘ರಸಗವಳನಾರಾಯಣ’ರಿಗೆ ಪ್ರಶಸ್ತಿಗಳ ಸುರಿಮಳೆಯೇ ಬಂದರೂ ಅಚ್ಚರಿ ಪಡಬೇಕಿಲ್ಲ ಎಂದು ಅಭಿಹೇಳುತ್ತಾರೆ.

ಹಿನ್ನೆಲೆ ಸಂಗೀತವನ್ನು ಮುಗಿಸಿರುವ ಚಿತ್ರವು ಸೆನ್ಸಾರಿಗೆ ತೆರಳಲು ತಯಾರಾಗಿದ್ದು,ಶೀಘ್ರದಲ್ಲೇ ತೆರೆ ಕಾಣಲಿದೆ.

ಶರ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಡಿ. ಗಣೇಶ್ ವಿ ನಾಗೇನಹಳ್ಳಿ ನಿರ್ಮಿಸಿ ಎಸ್ ಅಭಿ ಹನಕೆರೆ ನಿರ್ದೇಶನದ ಈ ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ.