ಜನ 8, 2017

ನೀರುಗಂಟಿಗಳಿಗೆ ನ್ಯಾಯ ಸಿಗಲಿ.

ಎಸ್. ಅಭಿ ಹನಕೆರೆ
ನಿಮ್ಮ ಮನೆಗೆ ನಲ್ಲಿ ನೀರು ಸರಿಯಾಗಿ ಬರುತ್ತಿಲ್ಲವೆಂದಾಗ ನೀರು ಬಿಡುವ ನೀರುಗಂಟಿಗಳನ್ನು ಬಾಯಿಗೆ ಬಂದಂತೆ ಬಯ್ಯುತ್ತೀರಿ, ಅದೇ ಏನೂ ತೊಂದರೆ ಆಗದೆ ನಲ್ಲಿ ನೀರು ಬರುತ್ತಿದ್ದರೆ, ಅಪ್ಪಿ ತಪ್ಪಿಯೂ ಹೊಗಳುವುದಿಲ್ಲ. ಹೊಗಳಿಕೆ ತೆಗಳಿಕೆ ಪಕ್ಕಕ್ಕಿಟ್ಟು ಅವರಿಗೆ ಬರುತ್ತಿರುವ ಸಂಬಳ, ಅವರಿಗೆ ಸರ್ಕಾರ ಕೊಡುತ್ತಿರುವ ಸವಲತ್ತು, ಕೆಲಸ ನಿರ್ವಹಿಸುವಾಗ ಜೀವರಕ್ಷಕ ಸಾಧನಗಳಿಲ್ಲದೆಯೇ ಎಂತಹಾ ಕಠಿಣ ಪರಿಸ್ಥಿತಿಯಲ್ಲಿಯೂ ದುಡಿಯಬೇಕಾದ ಅನಿವಾರ್ಯತೆ, ಇವುಗಳನ್ನೆಲ್ಲಾ ಕೇಳುವಾಗ ಎಂಥವರಿಗೂ ಕಣ್ಣೀರು ಬರುತ್ತದೆ. ನಲ್ಲಿ ನೀರಿನಿಂದ ಉಪಯೋಗವಾದರೂ ಇದೆ, ಕಣ್ಣೀರಿನಿಂದ ಏನು ಪ್ರಯೋಜನ?
ಈ ನೀರುಗಂಟಿಗಳಿಗೆ ಕಳೆದ 2016 ಆಗಸ್ಟ್ 04ರಂದು ಸರ್ಕಾರ ಸಂಬಳ ಜಾಸ್ತಿ ಮಾಡಿ ಆದೇಶ ಹೊರಡಿಸಿದೆ. ಆದರೆ ಇದು ಹಲವು ನೀರುಗಂಟಿಗಳಿಗೆ ತಿಳಿದೇ ಇಲ್ಲ. ನಿಮ್ಮ ಮನೆಗೆ ನೀರು ಬಿಡುವ ನೀರುಗಂಟಿಯನ್ನು ಮಾತಾಡಿಸಿ ವಿಚಾರ ತಿಳಿಸಿ. ಅವರ ಹಕ್ಕನ್ನುಅವರ ಹೊಸ ಸಂಬಳವನ್ನು ಅವರು ಪಡೆಯಲು ನೇರವಾಗಿ ನೆರವಾಗಿ ಅಥವಾ ನೀರುಗಂಟಿಯನ್ನು ನಮ್ಮನ್ನು ಸಂಪರ್ಕಿಸಲು ತಿಳಿಸಿ ಅವರಿಗಾಗಿಯೇ ರಾಜ್ಯಾದ್ಯಂತ ನೆರವಾಗಲು ಸಂಘಟನೆ ಇದೆ.

ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ ಹೆಸರಿನಲ್ಲಿ ರಾಜ್ಯಾದ್ಯಂತ 15ಸಾವಿರ ಜನರನ್ನು ನೀರುಗಂಟಿಯ ಕೆಲಸದ ಮುಖೇನ, ವಾರಕ್ಕೊಮ್ಮೆಯೂ ರಜೆಯಿಲ್ಲದೆ ದಿನಕ್ಕೆ 24 ಘಂಟೆಯೂ ದುಡಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸರ್ಕಾರ ರೂ.11,400/- ಕೊಡುತ್ತಿದೆಯಾದರೂ ಅವರ ಕೈಗೆ ತಲುಪುತ್ತಿರುವುದಾದರೂ ಎಷ್ಟು? ಮಧ್ಯೆ ಇರುವ ಕಂಟ್ರ್ರ್ಯಾಕ್ಟರ್, ಮೇಸ್ತ್ರಿ, ಅಧಿಕಾರಿಗಳು, ಜನಪ್ರತಿನಿಧಿಗಳು ಎಲ್ಲರೂ ಸೇರಿ ನುಂಗಿ ನೀರುಕುಡಿದು ಹಲವಾರು ಕಡೆ ನೀರುಗಂಟಿಗಳಿಗೆ ಮೂರು, ಮೂರೂವರೆ, ನಾಲ್ಕು.... ಆರು, ಏಳು ಸಾವಿರ ಮಾತ್ರ ಕೊಡುತ್ತಿದ್ದಾರೆ. ಇದು ಜೀತಪದ್ಧತಿಯ ಹೊಸರೂಪವಲ್ಲದೇ ಮತ್ತೇನೂ?
ಸಂಪರ್ಕ: ರವಿ, ನೀರುಗಂಟಿಗಳ ಸಂಘ.
                  ದೂರವಾಣಿ: 8722704089

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ