ಮಾರ್ಚ್ 1, 2017

ಬೇಡಿಕೆ ಈಡೇರುವವರೆಗೆ ಧರಣಿ: ಚಲೋ ಗುಡಿಬಂಡೆ.

ಚಿಕ್ಕಬಳ್ಳಾಪುರದ ಗುಡಿಬಂಡೆ ಸರ್ಕಾರಿ ಪ್ರೌಡಶಾಲೆಯಲ್ಲಿ 9 ನೇ ತರಗತಿ ಓದುತ್ತಿದ್ದ ದಲಿತ ಯುವಕ ಮುರಳಿ ಜನವರಿ 20 ರಂದು ಗುಡಿಬಂಡೆ ಕೆರೆಯ ಬಳಿ ಹೆಬ್ಬೆಟ್ಟಿನ ಗಾತ್ರದ ಮರವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪಕ್ಕದ ಕೊಂಬೆ ಮುರಿದಿದೆ.

ಈ ಘಟನೆಯ ಹಿನ್ನೆಲೆ ಎಂತಹವರನ್ನೂ ನಡುಗಿಸುತ್ತದೆ. ನಮ್ಮ ದೇಶದ ಜಾತಿ ಪದ್ದತಿ, ಶೈಕ್ಷಣಿಕ ಪದ್ಧತಿಯ ಕರಾಳ ಮುಖವನ್ನು ಮತ್ತೆ ನಮ್ಮ ಮುಂದಿಟ್ಟಿದೆ. ಮುರಳಿ ಅದೇ ಶಾಲಾವರಣದಲ್ಲಿರುವ 8 ನೇ ತರಗತಿಯ ಮೇಲ್ಜಾತಿ ಹೆಣ್ಣು ಮಗಳೊಂದಿಗೆ ಸ್ನೇಹದಿಂದಿದ್ದಾನೆ. ಇದನ್ನು ಅದೇ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದ ಆ ಹುಡುಗಿಯ ಅಣ್ಣ ಸಾಯಿ ಗಗನ್ ಗೆ ಸಹಿಸಲಾಗಿಲ್ಲ. ತನ್ನ ತಂಗಿಯನ್ನು ಚುಡಾಯಿಸಿದ ಎಂಬ ನೆಪ ಒಡ್ಡಿ ದಿನಾಂಕ 18 ರಂದು ಶಾಲಾವರಣದಲ್ಲಿಯೇ ತನ್ನ ಸ್ನೇಹಿತರೊಂದಿಗೆ ಕೂಡಿ ಮುರಳಿಯನ್ನು ಥಳಿಸಿದ್ದಾನೆ. ಶಿಕ್ಷಕರು ಜಗಳ ಬಿಡಿಸಿ ಬುದ್ಧಿ ಹೇಳಿ ಕಳಿಸಿದ್ದಾರೆ. ಮುರಳಿ ಸಹಜವಾಗಿ ಮನೆಗೆ ಮರಳಿದ್ದಾನೆ. ಮಾರನೇ ದಿನ ಶಾಲೆಗೆ ಹೋದಾಗ ಮತ್ತೆ ಮುರಳಿಯನ್ನು ಸಾಯಿ ಗಗನ್ ಮತ್ತು ಸ್ನೇಹಿತರ ತಂಡ ಹಿಗ್ಗಾ ಮುಗ್ಗ ಥಳಿಸಿದೆ. ಅಂದೂ ಸಹ ಮುರಳಿ ಶಾಲೆ ಮುಗಿಸಿ ಮನೆಗೆ ಮರಳಿದ್ದಾನೆ. ದಿನಾಂಕ 20 ರಂದೂ ಸಹ ಎಂದಿನಂತೆ ಶಾಲೆಗೆ ಹೋಗಿರುವ ಮುರಳಿಯನ್ನು ಮತ್ತೆ ಸಾಯಿಗಗನ್ ತಂಡ ಶಾಲಾ ಆವರಣದೊಳಗೆ ಹಾಗೂ ಹೊರಗೆ ಥಳಿಸಿದ್ದಾರೆ. ಅಷ್ಟೆ ಅಲ್ಲ ಒಂದಷ್ಟು ಬೈಕುಗಳಲ್ಲಿ ಮುರಳಿಯನ್ನು ಹೊತ್ತೊಯ್ದಿದ್ದಾರೆ. ಇದನ್ನು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ದಸಂಸದ ಸಿ.ಜಿ.ಗಂಗಪ್ಪ ಹೇಳುತ್ತಾರೆ‌. ಹೀಗೆ ಮುರಳಿಯನ್ನು ಬೈಕಿನಲ್ಲಿ ಹೊತ್ತೊಯ್ದ ನಂತರ ಸಂಜೆ 3:00 ಗಂಟೆಗೆ ಸಮೀಪ ಮುರಳಿ ಶವವಾಗಿ ಪತ್ತೆಯಾಗಿದ್ದಾನೆ.

ಸೆಪ್ಟೆಂ 8, 2016

ದಲಿತ ಮತ್ತು ಮಹಿಳೆಯನ್ನು ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ನೋಡಲು ಇಚ್ಚಿಸದ ನಮ್ಮ ರಾಜಕೀಯ ವ್ಯವಸ್ಥೆ: ಮಾಯಾವತಿಯವರ ವಿರುದ್ದ ಮೂರೂ ಪಕ್ಷಗಳ ಕೆಂಗಣ್ಣು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
08/09/2016
ಇಂಡಿಯಾದ ರಾಜಕಾರಣ ಕಳೆದ ಏಳು ದಶಕಗಳಲ್ಲಿ ಸಾಕಷ್ಟು ಪ್ರಬುದ್ದತೆಯನ್ನು ಪಡೆದಿದೆಯೆಂಬ ಮಾತು ಕೆಲ ಮಟ್ಟಿಗೆ ನಿಜವಾದರು, ಅದರ ಸಮಯಸಾಧಕತನದ ಕನಿಷ್ಠಬುದ್ದಿಯೇನೂ ಕಡಿಮೆಯಾಗಿಲ್ಲವೆಂಬ ಮಾತು ಸಹ ನಿಜ. ಇದರ ಜೊತೆಗೆ ಜಾತಿ ತಾರತಮ್ಯದ ರಾಜಕಾರಣ ಹಿಂದೆಂದಿಗಿಂತಲೂ ಹೆಚ್ಚಾಗಿ ತನ್ನ ಇರುವಿಕೆಯನ್ನು ತೋರಿಸುತ್ತಿರುವುದು ಕೂಡ ಅಷ್ಟೇ ಸತ್ಯ. ಕಾಲದಿಂದ ಕಾಲಕ್ಕೆ ಚುನಾವಣೆಯಿಂದ ಚುನಾವಣೆಗೆ ಇದು ಮತ್ತೆ ಮತ್ತೆ ಸಾಬೀತಾಗುತ್ತ ಬರುತ್ತಿದೆ. ಜಾತಿ ರಾಜಕಾರಣದ ಜೊತೆಜೊತೆಗೆ ಲಿಂಗ ತಾರತಮ್ಯದ ರಾಜಕಾರಣವೂ ಸಹ ನಮ್ಮ ದೇಶದ ರಾಜಕಾರಣಕ್ಕೆ ಅಂಟಿರುವ ಒಂದು ಕಳಂಕವೆನ್ನಬಹುದಾಗಿದೆ. ಏಳು ದಶಕಗಳ ನಂತರವೂ ನಾವು ಮಹಿಳೆಯರಿಗೆ ಶೇಕಡಾವಾರು ಮೀಸಲಾತಿಯನ್ನು ನೀಡುವ ಮಾತಾಡುತ್ತಿದ್ದೇವೆಯೇ ಹೊರತು ಸಮಾನತೆಯನ್ನಲ್ಲ. ಜೊತೆಗೆ ಯಾವುದೆ ಪ್ರತಿಷ್ಠಿತ ಕುಟುಂಬದ ಹಿನ್ನೆಲೆಯಿಲ್ಲದ ಹೆಣ್ಣುಮಗಳೊಬ್ಬಳು ಈ ನೆಲದಲ್ಲಿ ಸ್ವತಂತ್ರವಾಗಿ ತನ್ನದೇ ಸಿದ್ದಾಂತಗಳಿಗನುಗುಣವಾಗಿ ರಾಜಕೀಯ ಮಾಡುವ ವಾತಾವರಣ ನಮ್ಮಲ್ಲಿನ್ನೂ ಸೃಷ್ಠಿಯಾಗಿಲ್ಲ. ಈ ಮಾತುಗಳನ್ನು ನಾನು ಹೇಳುವುದಕ್ಕೆ ಮುಖ್ಯ ಕಾರಣ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿಯಾದ, ಬಹುಜನ ಪಕ್ಷದ ನಾಯಕಿ ಕುಮಾರಿ ಮಾಯಾವತಿಯವರಿಗೆ ಇಂದು ಎದುರಾಗುತ್ತಿರುವ ಅಡೆತಡೆಗಳು. ಯಾಕೆಂದರೆ ಮೇಲೆ ನಾನು ಹೇಳಿದ ಜಾತಿ ಮತ್ತು ಲಿಂಗ ತಾರತಮ್ಯದ ಎರಡೂ ಕೆಡುಕುಗಳು ಇವತ್ತು ಮಾಯಾವತಿಯವರ ರಾಜಕೀಯ ಜೀವನವನ್ನು ಮುಗಿಸಲು ಬಳಕೆಯಾಗುತ್ತಿವೆ. ಮೊದಲಿಗೆ ಆಕೆ ಒಬ್ಬ ದಲಿತ ಮಹಿಳೆಯೆನ್ನುವ ಕಾರಣವಾದರೆ, ಎರಡನೆಯದು ಆಕೆ ಒಬ್ಬ ಮಹಿಳೆ ಎನ್ನುವುದಾಗಿದೆ. ಇವತ್ತೇನು ಉತ್ತರ ಪ್ರದೇಶದ ಮಟ್ಟಿಗೆ ಸಮಾಜವಾದಿ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಶ್ರೀ ಮುಲಾಯಂ ಸಿಂಗ್ ಯಾದವರ ವರ್ಚಸ್ಸಿಗೆ ಸರಿಸಮಾನವಾಗಿರುವವರು ಯಾರಾದರು ಇದ್ದರೆ ಅದು ಮಾಯಾವತಿಯವರು ಮಾತ್ರ. ಜನಪ್ರಿಯತೆಯಲ್ಲಿ ಹಾಗು ಸಮುದಾಯಗಳ ನಾಯಕರಾಗಿ ಮತ ಸೆಳೆಯುವ ತಾಕತ್ತಿನಲ್ಲಿ, ಹಾಗು ಹಿಡಿದ ಹಟ ಸಾಧನೆಯಲ್ಲಿ ಮುಲಾಯಮರಿಗೆ ಜಿದ್ದಾಜಿದ್ದಿಯಾಗಿ ನಿಲ್ಲಬಲ್ಲವರೆಂದರೆ ಅದು ಮಾಯಾವತಿಯವರು ಮಾತ್ರ. ಅಷ್ಟಲ್ಲದೆ ಚುನಾವಣಾ ತಂತ್ರಗಾರಿಕೆಯಲ್ಲಿ ಕೂಡ ಅವರು ಅಸಾಮಾನ್ಯರಾಗಿದ್ದಾರೆ.

ಆಗ 9, 2016

ದಲಿತರು ತೋರಿದ ‘ಗುಜರಾತ್ ಮಾದರಿ’

ಡಾ. ಅಶೋಕ್. ಕೆ. ಆರ್
09/08/2016
ಕಳೆದ ಐದಾರು ವರುಷಗಳಿಂದ ‘ಗುಜರಾತ್ ಮಾದರಿ’ ಎಂಬ ಪದವನ್ನು ತೀರ ಸವಕಲಾಗುವಷ್ಟು ಬಳಸಲಾಗಿದೆ. ಕರ್ನಾಟಕದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲೂ ಗುಜರಾತ್ ಮಾದರಿಯನ್ನು ಅಳವಡಿಸಿಕೊಳ್ಳಲಾಗುವುದು ಎಂದಿದ್ದರು. ನಂತರದಲ್ಲಿ ಕಳೆದ ಲೋಕಸಭಾ ಚುನಾವಣೆಯ ಕಾಲದಲ್ಲಿ ‘ಗುಜರಾತ್ ಮಾದರಿ’ ಎನ್ನುವುದು ಬಿಜೆಪಿಯ ಪ್ರಚಾರದ ಪ್ರಮುಖ ಅಸ್ತ್ರವಾಗಿತ್ತು. ಬಿಜೆಪಿ ಮತ್ತು ಮೋದಿ ಬೆಂಬಲಿಗರ ದೃಷ್ಟಿಯಲ್ಲಿ ‘ಗುಜರಾತ್ ಮಾದರಿ’ ಎನ್ನುವುದು ಕೈಗಾರಿಕೆಗಳಿಗೆ ವಿಪರೀತವಾಗಿ ಸಹಾಯಹಸ್ತ ಚಾಚುವ ಉದ್ಯಮಿಗಳನ್ನು ಆಹ್ವಾನಿಸುವ ಮಾದರಿಯಾಗಿದ್ದರೆ ಬಿಜೆಪಿ ಮತ್ತು ಮೋದಿ ವಿರೋಧಿಗಳ ದೃಷ್ಟಿಯಲ್ಲಿ ‘ಗುಜರಾತ್ ಮಾದರಿ’ ಎಂದರೆ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಮಾದರಿಯಾಗಿತ್ತು. ಈ ಎಲ್ಲಾ ಗುಜರಾತಿನ ಮಾದರಿಗಳನ್ನು ಹಿಂದಿಕ್ಕಿ ಈಗ ಗುಜರಾತ್ ರಾಜ್ಯದ ದಲಿತರು ಹೊಸ ರೀತಿಯ ಹೋರಾಟದ, ಚಳುವಳಿಯ, ಪ್ರತಿಭಟನೆಯ ಮಾರ್ಗವನ್ನು ತೋರಿದ್ದಾರೆ. ಗುಜರಾತಿನ ಎಲ್ಲಾ ಮಾದರಿಗಳಿಗಿಂತಲೂ ಇದು ವಿಭಿನ್ನವಾಗಿದೆ.

ಊನಾ ಎಂಬ ಊರಿನಲ್ಲಿ ಸತ್ತ ದನದ ಚರ್ಮ ಸುಲಿಯುತ್ತಿದ್ದ ದಲಿತರನ್ನು ‘ಗೋರಕ್ಷಕ’ ಪಡೆಯವರು ಹಿಡಿದು, ಬಟ್ಟೆ ಬಿಚ್ಚಿ ಬಡಿದಿದ್ದರು. ಅದರ ದೃಶ್ಯಾವಳಿಗಳು ಅಂತರ್ಜಾಲದ ಮೂಲಕ ಎಲ್ಲೆಡೆಯೂ ವ್ಯಾಪಕವಾಗಿ ಹರಡಿ ‘ಗೋರಕ್ಷಕರ’ ವಿರುದ್ಧದಲೆಯನ್ನು ಸೃಷ್ಟಿಸಿತು. ಇಲ್ಲಿಯವರೆಗೂ ಗೋರಕ್ಷಣೆಯ ನೆಪದಲ್ಲಿ ಮುಸ್ಲಿಮರನ್ನಷ್ಟೇ ಹಿಡಿದು ಬಡಿಯುತ್ತಿದ್ದ ಗೋರಕ್ಷಕರು ಪ್ರಥಮ ಬಾರಿಗೆ ಬಹಿರಂಗವಾಗಿ ದಲಿತರ ಮೇಲೆ ಹಲ್ಲೆ ನಡೆಸಿದ್ದರು. ಗುಜರಾತಿನ ದಲಿತರು ಪ್ರತಿಭಟನೆಗೆ ಇಳಿದರು. ಅವರು ಪ್ರತಿಭಟನೆಗೆ ಆಯ್ದುಕೊಂಡ ದಾರಿ ಭಿನ್ನವಾಗಿತ್ತು. ಸಾವಿರಾರು ಸಂಖೈಯಲ್ಲಿ ಜನರು ಸೇರಿದರು, ಮೆರವಣಿಗೆ ಮಾಡಿದರು ಇವೆಲ್ಲವೂ ಮಾಮೂಲು ರೀತಿಯ ಪ್ರತಿಭಟನೆಗಳೇ. ಆದರೆ ಪ್ರತಿಭಟನೆಯ ಸಂದರ್ಭದಲ್ಲಿ ‘ಇನ್ನು ಮೇಲೆ ಸತ್ತ ದನಗಳನ್ನು ನಾವು ಎತ್ತುವುದಿಲ್ಲ. ನಿಮ್ಮ ಮಾತೆಯನ್ನು ನೀವೇ ಎತ್ತಿ ಸಂಸ್ಕಾರ ಮಾಡಿಕೊಳ್ಳಿ’ ಎಂದು ಘೋಷಿಸಿದ್ದು ಜಾತಿ ವ್ಯವಸ್ಥೆಯನ್ನು ಅಪ್ಪಿ ಮಲಗಿರುವ ಸಮಾಜಕ್ಕೆ ದಿಗ್ಭ್ರಮೆ ಮೂಡಿಸಿಬಿಟ್ಟಿತು. ಸತ್ತ ದನಗಳ ಮೂಳೆಗಳನ್ನು ಕಳೇಬರವನ್ನು ಹೊತ್ತು ತಂದು ಸರಕಾರಿ ಕಛೇರಿಗಳ ಮುಂದೆ ಎಸೆದು ಪ್ರತಿಭಟಿಸಿದರು. ಸತ್ತ ದನಗಳನ್ನು ವಿಲೇವಾರಿ ಮಾಡುವುದೇಗೆಂದು ತಿಳಿಯದೆ ಗುಜರಾತಿನ ಅಧಿಕಾರಿ ವರ್ಗ ಕಕ್ಕಾಬಿಕ್ಕಿಯಾಯಿತು. ‘ನಮ್ಮ ಕೆಲಸ ನಾವು ಮಾಡಿದ್ರೆ ಹಲ್ಲೆ ಮಾಡಿ ಧರ್ಮ ರಕ್ಷಿಸುವ ಮಾತಾಡ್ತೀರಲ್ವಾ? ನಮ್ಮ ಕೆಲಸಾನೇ ಮಾಡಲ್ಲ, ನೀವೇ ಮಾಡ್ಕಳ್ಳಿ’ ಅನ್ನೋ ಪ್ರತಿಭಟನೆಯ ರೀತಿ ಅಸಂಘಟಿತ ವಲಯದಲ್ಲಿ ಬಹುಶಃ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಕಾಣಿಸಿದೆ. ಸಣ್ಣ ಮಟ್ಟದಲ್ಲಿ ದಲಿತರು ಊರಿನ ಜಾತ್ರೆಯಲ್ಲಿ ತಮಟೆ ಬಾರಿಸುವುದಿಲ್ಲ ಎಂದಾಗಲೋ, ಹೆಣದ ಮುಂದೆ ತಮಟೆ ಬಾರಿಸುವುದಿಲ್ಲ ಎಂದಾಗಲೋ ದಲಿತರ ಮೇಲೆ ಹಲ್ಲೆ ನಡೆಯುವ ಸುದ್ದಿಗಳು ಆಗಾಗ ಬರುತ್ತಲೇ ಇರುತ್ತದೆ. ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡದೆ ಅಸಹಕಾರ ತೋರಿದ್ದು ಇದೇ ಮೊದಲಿರರಬೇಕು.

ಸಂಘಟಿತ ವಲಯದಲ್ಲಿ ಬೇಡಿಕೆಗಳನ್ನೀಡೇರಿಸಿಕೊಳ್ಳಲು ಇಂತಹ ಪ್ರತಿಭಟನೆಗಳು ಸರ್ವೇ ಸಾಮಾನ್ಯ. ಇತ್ತೀಚೆಗಷ್ಟೇ ಕರ್ನಾಟಕದ ಸಾರಿಗೆ ನಿಗಮದ ನೌಕರರು ಮುಷ್ಕರ ಹೂಡಿ ಸಾರಿಗೆ ವ್ಯವಸ್ಥೆಯನ್ನೇ ಅಸ್ತವ್ಯಸ್ತ ಮಾಡಿ ತಮ್ಮ ಬೇಡಿಕೆಗಳಲ್ಲಿ ಹಲವನ್ನಾದರೂ ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಎಲ್ಲೆಡೆಯೂ ಚದುರಿ ಹೋಗಿರುವ, ಸಂಘಟನೆಗಳಿಲ್ಲದ, ಅವತ್ತಿನ ಕೂಲಿಯಲ್ಲೇ ಅವತ್ತಿನ ಅನ್ನ ಸಂಪಾದಿಸಬೇಕಾದ ಅಸಂಘಟಿತ ವಲಯದ ಜನರಿಗೆ ಈ ರೀತಿ ಮುಷ್ಕರ ಹೂಡುವುದು ಸುಲಭವಲ್ಲ. ಕರ್ನಾಟಕದಲ್ಲೇ ಕೆಲವು ವರುಷಗಳ ಹಿಂದೆ ಪೌರ ಕಾರ್ಮಿಕರು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಲೆಯ ಮೇಲೆ ಮಲ ಸುರಿದುಕೊಂಡು ಪ್ರತಿಭಟಿಸಿದ್ದರು. ತಮ್ಮ ತಲೆಯ ಮೇಲೆ ಮಲ ಸುರಿದುಕೊಂಡು ಪ್ರತಿಭಟಿಸುವ ಬದಲು, ‘ಇನ್ನು ಮುಂದೆ ನಿಮ್ಮ ಊರಿನ ಒಂದು ಚಿಕ್ಕ ಕಸದ ಚೂರನ್ನೂ ನಾವು ಎತ್ತಿಹಾಕುವುದಿಲ್ಲ’ ಎಂದವರು ಪ್ರತಿಭಟಿಸಿದ್ದರೆ ಊರುಗಳ ಕತೆ ನೆನಪಿಸಿಕೊಳ್ಳಿ…… ಗುಜರಾತಿನ ದಲಿತರು ಇಂತಹುದೊಂದು ಪ್ರತಿಭಟನೆ ಅಸಂಘಟಿತ ವಲಯದಲ್ಲೂ ಸಾಧ್ಯವಿದೆ ಎಂದು ತೋರಿಸಿಕೊಟ್ಟಿದ್ದಾರೆ. ಈ ‘ಗುಜರಾತ್ ಮಾದರಿ’ಯ ಪರಿಣಾಮ ಎಷ್ಟಿತ್ತೆಂದರೆ ದೇಶದೊಳಗಿನ ಆಗುಹೋಗುಗಳ ಬಗ್ಗೆ ಮೌನವಾಗಿದ್ದುಬಿಡುವ ಅಭ್ಯಾಸವನ್ನು ಬೆಳೆಸಿಕೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೂ ಸಹಿತ ಮೊದಲ ಬಾರಿಗೆ ‘ಗೋರಕ್ಷಕರ’ ವಿರುದ್ಧ, ದಲಿತರ ಪರವಾಗಿ ಹರಿಹಾಯ್ದಿದ್ದಾರೆ. ಅವರ ದೃಷ್ಟಿ ದಲಿತರ ಮತಗಳೆಡೆಗೇ ಇರಬಹುದು, ಮುಂದಿನ ಉತ್ತರ ಪ್ರದೇಶದ ಚುನಾವಣೆಗಳೆಡೆಗೇ ಇರಬಹುದು ಆದರೆ ಅವರ ಮಾತುಗಳಿಗೆ ಕಾರಣ ಗುಜರಾತ್ ದಲಿತರ ಪ್ರತಿಭಟನೆ. ಅವರ ಮಾತುಗಳಲ್ಲಿ ಗೋರಕ್ಷಕರಿಂದ ಅತಿ ಹೆಚ್ಚು ತೊಂದರೆಗೀಡಾದ ಮುಸ್ಲಿಮರ ಬಗ್ಗೆ ಯಾವ ಮಾತೂ ಇರಲಿಲ್ಲ ಎನ್ನುವುದನ್ನೂ ಗಮನಿಸಬಹುದು. ಇದಕ್ಕೆ ಮೋದಿಯವರ ಮತ್ತವರ ರಾಜಕೀಯ ಸಿದ್ಧಾಂತದ ಮನಸ್ಥಿತಿ ಎಷ್ಟು ಕಾರಣವೋ ಪ್ರತಿಭಟಿಸದ ಮುಸ್ಲಿಮರೂ ಅಷ್ಟೇ ಕಾರಣ.

ದಲಿತರು ಹಾಕಿಕೊಟ್ಟ ‘ಗುಜರಾತ್ ಮಾದರಿಯಿಂದ’ ಅತಿ ದೊಡ್ಡ ಪಾಠ ಕಲಿಯಬೇಕಿರುವುದು ನಮ್ಮ ದೇಶದ ಮುಸ್ಲಿಮರು. ಗೋರಕ್ಷಣೆಯ ನೆಪದಲ್ಲಿ ಅತಿ ಹೆಚ್ಚು ಹಿಂಸೆಗೀಡಾಗಿರುವುದು ಮುಸ್ಲಿಮರೇ. ಆದರೆ ಅಸಂಘಟಿತ ವಲಯದ ಮುಸ್ಲಿಮರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ ನಿದರ್ಶನಗಳು ತುಂಬಾ ಕಡಿಮೆ. ಪ್ರವಾದಿಗ್ಯಾರೋ ಏನೋ ಅಂದ್ರು ಅಂದಾಗ ಗುಂಪುಗೂಡುವ ಜನರಲ್ಲಿ ಹತ್ತು ಪರ್ಸೆಂಟಷ್ಟಾದರೂ ತಮ್ಮ ಕೆಲಸಕ್ಕೆ ಅಡ್ಡಿಯುಂಟುಮಾಡುವ ಜನರ ವಿರುದ್ಧದ ಪ್ರತಿಭಟನೆಯಲ್ಲಿ ಸೇರಿದ್ದರೆ ಮುಸ್ಲಿಮರ ಮೇಲೆ ಗೋರಕ್ಷಣೆಯ ನೆಪದಲ್ಲಿ, ಕದ್ದು ದನ ಸಾಗಿಸುತ್ತಾರೆ ಎಂಬ ನೆಪದಲ್ಲಿ ಹಲ್ಲೆಗಳು ನಿರಂತರವಾಗಿ ನಡೆಯುತ್ತಿರಲಿಲ್ಲ. ‘ಸತ್ತ ನಿಮ್ಮ ಮಾತೆಯನ್ನು ನೀವೇ ಎತ್ತಿ ಹೂತು ಹಾಕಿ’ ಎಂದ ಗುಜರಾತಿನ ದಲಿತರ ಮಾದರಿಯಲ್ಲೇ ಸುಖಾಸುಮ್ಮನೆ ಗೋರಕ್ಷಕರಿಂದ ಹೊಡೆತ ತಿಂದ ಮುಸ್ಲಿಮರು ಒಟ್ಟಾಗಿ ‘ಸರಿ ಬಿಡಿ ದನ, ಎಮ್ಮೆ, ಕೋಣ ಅಷ್ಟೇ ಅಲ್ಲ ಕುರಿ ಕೋಳೀನೂ ನಾವು ಕತ್ತರಿಸಿ ಮಾರುವುದಿಲ್ಲ. ನೀವೇ ಮಾಡ್ಕಳ್ಳಿ’ ಎಂದು ಘೋಷಿಸಿಬಿಟ್ಟಿದ್ದರೆ ಬಹುತೇಕ ಊರುಗಳ ಮಾಂಸಾಹಾರದ ವ್ಯಾಪಾರವೇ ಅಲ್ಲೋಲಕಲ್ಲೋಲವಾಗಿಬಿಡುತ್ತಿತ್ತು. ಪ್ರಭುತ್ವ ಏನನ್ನಾದರೂ ಸಹಿಸಿಕೊಳ್ಳುತ್ತದೆ, ಯಾವುದರ ಬಗ್ಗೆಯಾದರೂ ಮೌನವಾಗುಳಿದುಬಿಡುತ್ತದೆ. ಆದರೆ ವ್ಯಾಪಾರ - ವ್ಯವಹಾರ - ಆದಾಯದ ವಿಷಯದಲ್ಲಿ ಏರುಪೇರಾಗಿಬಿಟ್ಟರೆ ಸಹಿಸಿಕೊಳ್ಳುವುದಿಲ್ಲ. 
ಗುಜರಾತ್ ಮಾದರಿಯ ಹೋರಾಟ ಗುಜರಾತಿಗಷ್ಟೇ ಸೀಮಿತವಾಗುತ್ತದಾ ಅಥವಾ ಬೇರೆಡೆಗೂ ಹಬ್ಬುತ್ತದಾ? ಕಾದು ನೋಡಬೇಕು.

ಆಗ 4, 2016

ದಲಿತ ದಂಪತಿಗಳ ಹತ್ಯೆಯೂ ಉತ್ತರ ಪ್ರದೇಶದ ರಾಜಕೀಯವೂ

ಹದಿನೈದು ರುಪಾಯಿಗೆ ಹತ್ಯೆಯಾದ ದಲಿತ ದಂಪತಿ
(ಚಿತ್ರ ಕೃಪೆ: ಎನ್ ಡಿ ಟಿ ವಿ)
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
04/08/2016
ಸ್ವಾತಂತ್ರ ದೊರೆತ ಎಪ್ಪತ್ತು ವರ್ಷಗಳ ನಂತರವೂ ಈ ದೇಶದಲ್ಲಿ ದಲಿತರ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿವೆ ಮತ್ತು ಅವುಗಳನ್ನು ತಡೆಯಬೇಕಾದ ಪ್ರಭುತ್ವಗಳು ಮೊಸಳೆ ಕಣ್ಣೀರು ಸುರಿಸಿ ಮೇಲ್ಜಾತಿಯವರಿಗೆ ತೊಂದರೆಯಾಗದ ರೀತಿಯಲ್ಲಿ ಅಂತಹ ಪ್ರಕರಣಗಳನ್ನು ನಿಬಾಯಿಸುತ್ತಿವೆಯೆನ್ನುವು
ದೇ ನಮ್ಮ ನಾಡಿನ ಬಹು ದೊಡ್ಡ ದುರಂತ. ಎರಡು ದಿನದ ಹಿಂದೆ ಉತ್ತರಪ್ರದೇಶದಲ್ಲಿ ನಡೆದ ಈ ಘಟನೆಯನ್ನೇ ನೋಡಿ:

ಈ ತಿಂಗಳ 21ನೇ ತಾರೀಖು ಗುರುವಾರ ಉತ್ತರಪ್ರದೇಶದ ಕುರಾ ವ್ಯಾಪ್ತಿಯ ಲಕ್ಷ್ಮಿಪುರ ಎಂಬ ಹಳ್ಳಿಯಲ್ಲಿ ದಲಿತ ದಂಪತಿಗಳಾದ ಶ್ರೀಭರತ್ ನಾಥ್(48), ಮಮತಾ(45)ರವರನ್ನು ಮೇಲ್ಜಾತಿಯ ಅಂಗಡಿ ಮಾಲೀಕನೊಬ್ಬ ಕೊಡಲಿಯಿಂದ ಕತ್ತರಿಸಿ ಕೊಂದಿದ್ದಾನೆ. ಕೆಲ ದಿನಗಳ ಹಿಂದೆ ಈ ದಂಪತಿಗಳು ಬಿಸ್ಕೆಟ್ ಖರೀದಿಸಿದ 15 ರೂಪಾಯಿಗಳ ಸಾಲವನ್ನು ಹಿಂದಿರುಗಿಸಲು ಇನ್ನಷ್ಟು ಸಮಯಾವಕಾಶ ಕೇಳಿದ್ದೇ ಈ ಕೊಲೆಗೆ ಕಾರಣವೆನ್ನಲಾಗಿದೆ. ಹತ್ಯೆಯಾದ ದಂಪತಿಗಳು ನಾತ್ (ದೊಂಬರ ಜಾತಿ) ಸಮುದಾಯಕ್ಕೆ ಸೇರಿದ್ದು ಕೂಲಿ ಮಾಡಲು ಜಮೀನಿಗೆ ಹೋಗುತ್ತಿದ್ದ (ಬೆಳಗಿನ 6ಗಂಟೆ ಸುಮಾರಿಗೆ) ಸಂದರ್ಭದಲ್ಲಿ ಈ ಹತ್ಯೆ ನಡೆದಿದೆ. ಗಮನಿಸಬೇಕಾದ ಅಂಶವೆಂದರೆ ಉತ್ತರ ಪ್ರದೇಶದಲ್ಲಿರುವ ನಾತ್ ಸಮುದಾಯದವರು ಪಾರಂಪರಿಕವಾಗಿ ದೊಂಬರ ಆಟ ಆಡಿ ಜನರಿಗೆ ಮನೋರಂಜನೆ ಒದಗಿಸುವ ಕಸುಬಿನವರು ಮತ್ತು ಹೆಚ್ಚಿನ ಭಾಗದಲ್ಲಿ ಅಲೆಮಾರಿ ಪ್ರವೃತ್ತಿಯವರು. ಈ ಸಮುದಾಯದ ಶೇಕಡಾ 99ರಷ್ಟು ಜನರಿಗೆ ಉಳುಮೆ ಮಾಡಲು ಸ್ವಂತದ ಭೂಮಿಯಿಲ್ಲವಾಗಿದ್ದು ತಮ್ಮ ಕುಲಕಸುಬನ್ನೇ ನಂಬಿ ಕೊಂಡು ಬದುಕುವವರು. ಕೊಲೆಯಾದ ಈ ದಂಪತಿಗಳು ತಮ್ಮ ಕುಲಕಸುಬನ್ನು ಮುಂದುವರೆಸಲಾಗದೆ ಹಳ್ಳಿಯಲ್ಲಿ ನೆಲೆಸಿ ಭೂಮಾಲೀಕರ ಜಮೀನುಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದವರಾಗಿದ್ದರು. ಈ ಹತ್ಯೆ ನಡೆದ ಲಕ್ಷ್ಮಿಪುರ ಮಿಯಾಪುರ ಕ್ಷೇತ್ರಕ್ಕೆ ಸೇರಿದ್ದು ಇಲ್ಲಿ ಮುಲಾಯಂಸಿಂಗ್ ಯಾದವರ ಸೋದರ ಸಂಬಂದಿ ಸಂಸದರಾಗಿದ್ದಾರೆ. ಉತ್ತರ ಪ್ರದೇಶದ ಮಟ್ಟಿಗೆ ದಲಿತನೊಬ್ಬನ ಜೀವದ ಬೆಲೆ ಕೇವಲ 15 ರೂಪಾಯಿಗಳೆಂಬ ಕಠೋರ ಸತ್ಯವನ್ನು ಅರಗಿಸಿಕೊಳ್ಳುವುದು ಅಷ್ಟು ಸುಲಭವಲ್ಲ.

ಕಳೆದ ಕೆಲ ವಾರಗಳಿಂದಲೂ ದೇಶದ ವಿವಿದ ಭಾಗಗಳಲ್ಲಿ, ಅದರಲ್ಲೂ ಹೆಚ್ಚಾಗಿ ಉತ್ತರಭಾರತದಲ್ಲಿ ದಲಿತರ ಮೇಲಿನ ಹಲ್ಲೆಗಳು ಸರಣಿ ರೂಪದಲ್ಲಿ ನಡೆಯುತ್ತಿವೆ 

ಈ ಘಟನೆಗೆ ಕೆಲದಿನಗಳ ಮೊದಲು ಮೇಲ್ವರ್ಗಕ್ಕೆ ಸೇರಿದ ಉತ್ತರಪ್ರದೇಶ ಬಾಜಪದ ಉಪಾದ್ಯಕ್ಷರಾದ ದಯಾಶಂಕರ್ ಎಂಬುವವರು ಬಹುಜನ ಪಕ್ಷದ ನಾಯಕಿ ಮಾಯಾವತಿಯವರನ್ನು (?)ಗೆ( ಸದರಿ ಪದವನ್ನು ಬಳಸಲು ನಾನು ಬಯಸುವುದಿಲ್ಲ) ಹೋಲಿಸಿ ಬಾಷಣ ಮಾಡಿ ದಲಿತರ ಮೇಲೆ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಹಲ್ಲೆ ಮಾಡುವ ತಮ್ಮ ಮೇಲ್ಜಾತಿಗಳ ಚಾಳಿಯನ್ನು ಬಹಿರಂಗಗೊಳಿಸಿದರು. ಉತ್ತರ ಪ್ರದೇಶದ ಮಟ್ಟಿಗೆ ದಲಿತರ ಮೇಲಿನ ಇಂತಹ ಹಲ್ಲೆಗಳು ಹೊಸವೇನು ಅಲ್ಲ. ಜೊತೆಗೆ ಅಪರೂಪಕ್ಕೊಮ್ಮೆ ಆಗುವಂತಹವು ಅಲ್ಲ. ನ್ಯಾಷನಲ್ ಕ್ರೈಂ ಬ್ಯೂರೊದ ವರದಿಗಳ ಪ್ರಕಾರ ಅಲ್ಲಿ ದಲಿತರ ಮೇಲಿನ ಹಲ್ಲೆಗಳು ಕನಿಷ್ಠ ವಾರಕ್ಕೊಂದಾದರು ನಡೆಯುತ್ತಿವೆಯಂತೆ. ಆದರೆ ಶೇಕಡಾ 50ರಷ್ಟು ಪ್ರಕರಣಗಳನ್ನು ಮೇಲ್ಜಾತಿಯವರ ಭಯದ ಕಾರಣದಿಂದಾಗಿ ದಲಿತರು ಹೊರಜಗತ್ತಿಗೆ ಬಾಯಿ ಬಿಡುವುದೇ ಇಲ್ಲ. ರಾಷ್ಟ್ರ ರಾಜದಾನಿಗೆ ಬಹಳ ಸಮೀಪವಿರುವ ರಾಜ್ಯದಲ್ಲೇ ದಲಿತರ ಮೇಲಿನ ಹಲ್ಲೆಗಳು ಸತತವಾಗಿ, ಯಾವ ಭಯವೂ ಇಲ್ಲದೆ ನಡೆಯುತ್ತಿರುವುದು ನಿಜಕ್ಕೂ ಖಂಡನೀಯ.

ಹಾಗಿದ್ದರೆ ಇಂತಹ ಹಲ್ಲೆಗಳನ್ನು ನಡೆಸುವಲ್ಲಿ ಮತ್ತು ನಿಲ್ಲಿಸುವಲ್ಲಿ ರಾಜಕಾರಣಿಗಳ ಪಾತ್ರವೇನೂ ಇಲ್ಲವೇ ಎನ್ನುವುದೇ ಅತ್ಯಂತ ಮುಖ್ಯ ಪ್ರಶ್ನೆಯಾಗಿದೆ. ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಸಿಗುವುದು ಹಲ್ಲೆಗಳ ಹಿಂದೆ ಮತ್ತು ಅದನ್ನು ತಡೆಯುವ ಯತ್ನದ ಹಿಂದೆ ಇರುವ ರಾಜಕೀಯದ ಚದುರಂಗದಾಟಗಳು. ತೀರಾ ಕ್ಷುಲ್ಲಕ ಕಾರಣಕ್ಕೂ ದಲಿತರ ಮೇಲೆ ಹಲ್ಲೆ ನಡೆಸುವ ಮೇಲ್ಜಾತಿಗಳ ಮನಸಿನಲ್ಲಿರುವ ಶ್ರೇಷ್ಠತೆಯನ್ನು ಬಡಿದೆಬ್ಬಿಸಿ ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳುವಲ್ಲಿ ನಮ್ಮ ರಾಜಕೀಯ ಪಕ್ಷಗಳು ಅವುಗಳ ನಾಯಕರುಗಳು ಬಹುಮುಖ್ಯಪಾತ್ರ ವಹಿಸುತ್ತಿವೆ. ತಾವು ಬೆಂಬಲಿಸುವ ರಾಜಕಾರಣಿಗಳ ಅಭಯಹಸ್ತ ತಮಗಿದೆಯೆಂಬ ನಂಬಿಕೆಯೇ ಮೇಲ್ಜಾತಿಗಳ ಈ ಕ್ರೌರ್ಯಕ್ಕೆ ಮೂಲಭೂತ ಕಾರಣವಾಗಿವೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ, ಸರಕಾರದ ವ್ಯವಸ್ಥೆಯೊಳಗಿರುವ ಮೇಲ್ಜಾತಿಗಳ ಪಟ್ಟಭದ್ರ ಹಿತಾಸಕ್ತಿಗಳು ತಮ್ಮನ್ನು ಕಾಪಾಡಬಲ್ಲವೆಂಬ ಆತ್ಮವಿಶ್ವಾಸದಿಂದಲೇ ಇವತ್ತು ದಲಿತರ ಮೇಲಿನ ಹಲ್ಲೆಗಳು ಹೆಚ್ಚುತ್ತಿವೆ. ಅದರಲ್ಲೂ ಜಾತಿ ಆಧಾರಿತ ರಾಜಕಾರಣವೇ ಪರಾಕಷ್ಠೆಯಲ್ಲಿರುವ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಇಂತಹವುಗಳು ಹೆಚ್ಚಿವೆ, ಇಂತಹ ಘಟನೆಗಳು ನಡೆದ ತಕ್ಷಣ ಸ್ಪರ್ದೆಗೆ ಬಿದ್ದಂತೆ ಘಟನಾ ಸ್ಥಳಕ್ಕೆ ಧಾವಿಸುವ ರಾಜಕಾರಣಿಗಳು ತಮ್ಮ ವಿಷಾದದ ಹೇಳಿಕೆಗಳನ್ನು, ತಪ್ಪು ಮಾಡಿದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕೆಂಬ ಆಕ್ರೋಶಭರಿತ ಹೇಳಿಕೆಗಳನ್ನು, ತಕ್ಷಣಕ್ಕೆ ಒಂದಿಷ್ಟು ಪರಿಹಾರದ ಹಣವನ್ನು ನೀಡುವುದರಲ್ಲಿ ನಿಸ್ಸೀಮರಾಗಿದ್ದಾರೆ. ಬಹುತೇಕ ಪಕ್ಷಗಳ ರಾಜಕಾರಣಿಗಳು ಇಂತಹ ನಾಟಕಗಳಲ್ಲಿ ಪಳಗಿದವರಾಗಿದ್ದು, ಅವರಿಗೆ ಜಾತಿ ರಾಜಕಾರಣದ ಒಳಸುಳಿಗಳು ಗೊತ್ತಿರುವುದರಿಂದಲೇ ಯಾವ ಪ್ರಕರಣಕ್ಕೆ ಎಷ್ಟು ಕಣ್ಣೀರು ಸುರಿಸಬೇಕು, ಯಾವ ಪ್ರಕರಣಕ್ಕೆ ತಮ್ಮ ದನಿ ಎತ್ತರಿಸಬೇಕು ಎನ್ನುವ ಲೆಕ್ಕಾಚಾರದಲ್ಲಿ ಪಳಗಿ ಹೋಗಿದ್ದಾರೆ. ಬಹುಶ: ಇಂಡಿಯಾದ ವೃತ್ತಿಪರ ರಾಜಕಾರಣಿಗಳನ್ನು ಮೀರಿಸಲು ಬೇರಿನ್ಯಾವ ದೇಶದ ರಾಜಕಾರಣಿಗಳಿಂದಲೂ ಸಾದ್ಯವಿಲ್ಲವೇನೊ?

ಇವತ್ತು ಉತ್ತರ ಪ್ರದೇಶದಲ್ಲಿ ನಡೆದಿರುವ ಈ ಘಟನೆಯ ಲಾಭವನ್ನು ಪಡೆಯಲು, ಮತ್ತು ಇದರಿಂದ ತನಗಾಗುವ ನಷ್ಟವನ್ನು ಸರಿದೂಗಿಸಲು ರಾಜಕೀಯ ಪಕ್ಷಗಳು ಪ್ರಯತ್ನ ನಡೆಸಿವೆ. ಯಾಕೆಂದರೆ ಇನ್ನೊಂದು ವರ್ಷದಲ್ಲಿ ಅಲ್ಲಿ ರಾಜ್ಯವಿದಾನಸಭಾ ಚುನಾವಣೆಗಳು ನಡೆಯಲಿದ್ದು ಚುನಾವಣೆ ಗೆಲ್ಲಲು ಎಲ್ಲ ಪಕ್ಷಗಳು ಒಂದೊಂದು ಜಾತಿಯನ್ನು ಅವಲಂಬಿಸಿವೆ. ಕೊಲೆಯಾದ ದಂಪತಿಗಳು ದಲಿತರಾಗಿದ್ದು ಶೇಕಡಾ 21ರಿಂದ 22ರಷ್ಟಿರುವ ದಲಿತ ಮತಗಳನ್ನು ಪಡೆಯಲು ಎಲ್ಲ ಪಕ್ಷಗಳೂ ಪ್ರಯತ್ನಿಸಿದರೆ, ಹಲ್ಲೆ ಮಾಡಿದವನು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು ಶೇಕಡಾ 13ರಷ್ಟಿರುವ ಬ್ರಾಹ್ಮಣ ಮತಗಳನ್ನು ಕಳೆದುಕೊಳ್ಳಲು ಉಳಿದ ಯಾವ ಪಕ್ಷಗಳೂ ತಯಾರಿರುವುದಿಲ್ಲ. ದಲಿತರ ಮತಗಳು ಬಹುಜನಪಕ್ಷಕ್ಕೆ ಹೋಗುತ್ತವೆಯೆಂಬ ಕಾರಣಕ್ಕೆ ಮತ್ತು ಬ್ರಾಹ್ಮಣ ಮತಗಳು ತಮ್ಮ ಕೈತಪ್ಪ ಬಹುದೆಂಬ ಕಾರಣಕ್ಕೆ ಕಾಂಗ್ರೆಸ್ ಮತ್ತು ಬಾಜಪಗಳು ಈ ಘಟನೆಯನ್ನು ತೀರಾ ಹೆಚ್ಚು ಪ್ರಸ್ತಾಪಿಸಲಾರವು. ಇನ್ನು ಸಮಾಜವಾದಿ ಪಕ್ಷ ಈ ಎರಡೂ ಸಮುದಾಯಗಳ ಮತ ತನಗೆ ದೊರೆಯಲಾರದೆಂಬ ನಂಬಿಕೆಯಿಂದ ಈ ಪ್ರಕರಣದ ಬಗ್ಗೆ ಹೆಚ್ಚು ಆಸಕಿ ವಹಿಸಲಾರದು. ಹೀಗಾಗಿ ಇದೂ ಕೂಡ ಮತ್ತೊಮದು ಪ್ರಕರಣವಾಗಿ ಮುಚ್ಚಿಹೋಗಬಲ್ಲದು. ಆದ್ದರಿಂದ ಈ ಘಟನೆಯನ್ನು ತೀವ್ರವಾಗಿ ಖಂಡಿಸುವಲ್ಲಿಯೂ ರಾಜಕೀಯ ಪಕ್ಷಗಳು ಅಗಾಧವಾದ ತಾಳ್ಮೆಯಿಂದಲೇ ಕೆಲಸ ಮಾಡುವುದು ನಿಶ್ಚಿತ. ಹೀಗಾಗಿ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ.

ಸಾಮಾಜಿಕ ಪರಿವರ್ತನೆ, ರಾಜಕೀಯ ಇಚ್ಚಾ ಶಕ್ತಿ, ದಲಿತರಿಗೆ ರಾಜಕೀಯ ಬಲ ನೀಡುವುದು ಮುಂತಾದ ಮಾತುಗಳೆಲ್ಲ ಸದ್ಯದ ಮಟ್ಟಿಗೆ ಬೊಗಳೆಗಳಂತೆ ಕಂಡರೆ ಅಚ್ಚರಿಯೇನಿಲ್ಲ. ಯಾಕೆಂದರೆ ಜಾತಿಯ ಆಧಾರದಲ್ಲಿ ಈಗಾಗಲೇ ಒಡೆದು ಹೋಗಿರುವ ಭಾರತೀಯ ಸಮಾಜವನ್ನು ಅಷ್ಟು ಸುಲಭವಾಗಿ ಬದಲಾಯಿಸುವುದು ಸಾದ್ಯವಿಲ್ಲ. ಹಾಗೆ ಬದಲಾಗಿಬಿಟ್ಟರೆ ರಾಜಕೀಯ ಮಾಡಲಾಗುವುದಿಲ್ಲವೆಂಬ ಸತ್ಯ ನಮ್ಮ ರಾಜಕೀಯ ಪಕ್ಷಗಳಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ಈ ಜಾತಿವ್ಯವಸ್ಥೆಯ ಕರಾಳ ಮುಖವನ್ನು, ಆಂತರೀಕವಾಗಿರುವ ದ್ವೇಷದ ದಳ್ಳುರಿಯನ್ನು ಯಥಾ ಸ್ಥಿತಿಯಲ್ಲಿಡಲು ಶಕ್ತಿಮೀರಿ ಪ್ರಯತ್ನ ನಡೆಸುತ್ತಿವೆ, ಮುಂದೆಯೂ ನಡೆಸುತ್ತಲಿರುತ್ತವೆ.

ಜುಲೈ 28, 2016

ಹೆಚ್ಚಾಗುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳು: ಮೋದಿಯವರ ಮೌನ ಮತ್ತು ರಾಜಧರ್ಮ! ಒಂದು ಟಿಪ್ಪಣಿ.

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
28/07/2016
ಇತ್ತೀಚೆಗೆ ಗುಜರಾತಿನಲ್ಲಿ ಸತ್ತ ದನದ ಚರ್ಮ ಸುಲಿದರೆಂಬ ಕಾರಣಕ್ಕೆ ದಲಿತ ಯುವಕರ ಮೇಲೆ ಸವರ್ಣಿಯರು ನಡೆಸಿದ ಅಮಾನುಷ ಹಲ್ಲೆಗಳ ಬಗ್ಗೆ ಹಾಗು ಉತ್ತರಪ್ರದೇಶದಲ್ಲಿ ಹೆಚ್ಚುತ್ತಿರುವ ದಲಿತರ-ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳ ಬಗ್ಗೆ ಪ್ರದಾನಿ ನರೇಂದ್ರಮೋದಿಯವರು ಮೌನ ಮುರಿದು ಮಾತಾಡಬೇಕೆಂದು ಬಹುಜನ ಪಕ್ಷದ ನಾಯಕಿ ಮಾಯಾವತಿಯವರು ಒತ್ತಾಯಿಸಿದ್ದಾರೆ. ಇದು ಕೇವಲ ಮಾಯಾವತಿಯವರ ಒತ್ತಾಯ ಮಾತ್ರವಾಗಿರದೆ ಈ ರಾಷ್ಟ್ರದ ಎಲ್ಲ ದಲಿತರ ಒತ್ತಾಯವೂ ಆಗಿದೆ. ಚುನಾವಣಾ ರ್ಯಾಲಿಗಳ ಬಾಷಣಗಳಲ್ಲಿ, ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ, ಅನಿವಾಸಿ ಭಾರತೀಯರ ಸಭೆಗಳಲ್ಲಿ ಉಸಿರು ಎಳೆದುಕೊಳ್ಳಲು ಬಿಡುವು ಸಿಗದಂತೆ ಪುಂಕಾನುಪುಂಖವಾಗಿ ಮಾತಾಡುವ ಪ್ರದಾನಿಯವರದು ರಾಷ್ಟ್ರದ ಆಂತರಿಕ ವಿಚಾರಗಳಲ್ಲಿ, ಅದೂ ತಳ ಮಟ್ಟದವರ ಮೇಲೆ ನಡೆಯುವ ಇಂತಹ ದೌರ್ಜನ್ಯಗಳ ವಿಚಾರದಲ್ಲಿ ಮಾತ್ರ ದಿವ್ಯಮೌನ. ಇಂತಹ ವಿಷಯಗಳಲ್ಲಿ ಸರಕಾರದ ಕ್ರಮಗಳನ್ನು ಸಮರ್ಥಿಸಿಕೊಳ್ಳುವ ಮತ್ತು ವಿರೋಧಪಕ್ಷಗಳ ಆರೋಪಗಳನ್ನು ನಿರಾಕರಿಸುವ ಸಂಪೂರ್ಣ ಹೊಣೆಗಾರಿಕೆ ಬಾಜಪದ ಎರಡನೇ ಸಾಲಿನ ನಾಯಕರುಗಳಿಗೆ ನೀಡಿರುವ ಪ್ರದಾನಿಯವರು ಮಾತ್ರ ಯಾವ ಪ್ರತಿಕ್ರಿಯೆಯನ್ನು ನೀಡದೆ ಮೌನಕ್ಕೆ ಶರಣಾಗುವುದನ್ನು ಅವರ ಅಭಿಮಾನಿ ದೇವರುಗಳು ಪ್ರದಾನಿಯವರದು ಮೌನ ಮಾತ್ರವಲ್ಲ ದೇಶದ ಅಭಿವೃದ್ದಿಯ ಬಗೆಗಿನ ಏಕಾಗ್ರಚಿತ್ತದ ದ್ಯಾನವೆಂದು ಇನ್ನೂ ವರ್ಣಿಸದಿರುವುದು ನಮ್ಮ ಪುಣ್ಯ!

ದಲಿತರ ಮೇಲಾಗುತ್ತಿರುವ ಹಲ್ಲೆಗಳಿಗಿರುವ ಕಾರಣಗಳ ಬಗ್ಗೆ ಅದ್ಯಯನ ಮಾಡಿದರೆ ಸವರ್ಣಿಯರ ಕ್ರೂರತೆ ಮತ್ತು ಪ್ರಭುತ್ವದ ಮೌನದ ಹಿಂದಿರುವ ತಣ್ಣಗಿನ ಕ್ರೌರ್ಯ ಅರಿವಾಗುತ್ತದೆ. ಕೆಳಗಿನ ಕೆಲ ಘಟನೆಗಳನ್ನು ನೀವು ಓದಿದರೆ ದೌರ್ಜನ್ಯಗಳಿಗೆ ಕಾರಣವಾಗಿರುವ ತೀರಾ ಬಾಲೀಶ ಕಾರಣಗಳು ಗೊತ್ತಾಗುತ್ತವೆ:

ಮೇಲ್ಜಾತಿಯ ಹುಡುಗಿಯೊಬ್ಬಳನ್ನು ಪ್ರೀತಿಸಿದ ತಪ್ಪಿಗೆ ದಲಿತ ಯುವಕನನ್ನು ತುಂಡುತುಂಡಾಗಿ ಕತ್ತರಿಸಿ ಎಸೆಯಲಾಗುತ್ತದೆ.

ದಲಿತ ಕುಟುಂಬದ ಮೇಕೆಯೊಂದು ಸವರ್ಣಿಯರ ಜಮೀನಿನಲ್ಲಿ ಓಡಾಡಿದ ಕಾರಣಕ್ಕೆ ಆಡು ಕಾಯುವ ದಲಿತ ಹುಡುಗನನ್ನು ಜೀವಂತವಾಗಿ ಸುಡಲಾಗುತ್ತದೆ.

ದಲಿತ ಅಪ್ರಾಪ್ತೆಯನ್ನು ಅತ್ಯಚಾರ ಮಾಡಿ, ಆಕೆಯನ್ನು ಆಸ್ಪತ್ರೆಯಲ್ಲಿ ದಾಖಲಾಗದಂತೆ ನೋಡಿಕೊಳ್ಳಲಾಗುತ್ತದೆ.

ಭೂಮಾಲೀಕನ ಬಂಧನದಲ್ಲಿದ್ದ ಇಬ್ಬರು ದಲಿತ ಜೀತದಾಳುಗಳು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಕ್ಕೆ ಅವರಿಬ್ಬರ ಕೈಗಳನ್ನು ಕತ್ತರಿಸಿ ಎಸೆಯಲಾಗುತ್ತದೆ.

ದೇವಸ್ಥಾನದ ಪ್ರಸಾದವನ್ನು ಕೇಳಿದ್ದಕ್ಕೆ ಎಂಟು ವರ್ಷದ ದಲಿತ ಬಾಲಕನಿಗೆ ರಕ್ತಸ್ರಾವವಾಗುವಂತೆ ಥಳಿಸಲಾಗುತ್ತದೆ.

ಹೀಗೆ ನಾಗರೀಕ ಸಮಾಜವೊಂದರಲ್ಲಿ ತೀರಾ ಕ್ಷುಲ್ಲಕವಾದ ಕಾರಣಗಳಿಗಾಗಿ ನಡೆಯುತ್ತಿರುವ ದಲಿತರ ಮೇಲಿನ ಹಲ್ಲೆಗಳ ಹಿಂದೆ ಮೇಲ್ಜಾತಿಗಳ ಶತಮಾನಗಳ ಕ್ರೌರ್ಯವಿರುವಂತೆ ಪ್ರಭುತ್ವದ ಮೌನ ಸಮ್ಮತಿಯ ಕಾರಣವೂ ಅಡಗಿದೆಯೆಂಬುದನ್ನು ನಾವು ಮರೆಯಬಾರದು. ದಲಿತರ ಮೇಲಿನ ದೌರ್ಜನ್ಯಗಳಲ್ಲಿ ಬಹಳ ಸುಲಭವಾಗಿ ತುತ್ತಾಗಿ ಸಿಕ್ಕಿ ಬೀಳುವವರು ದಲಿತ ಮಹಿಳೆಯರು. ಅತ್ಯಾಚಾರಗಳಂತಹ ಕ್ರೂರ ಕೃತ್ಯಗಳು ಬಹಳಷ್ಟು ಸಾರಿ ಬೆಳಕಿಗೆ ಬಾರದಂತೆ ತಡೆಯಲು ಮೇಲ್ಜಾತಿಗಳ ರಾಜಕೀಯ ಶಕ್ತಿಗಳು ತಾವು ಬೆಂಬಲಿಸುವ ಪ್ರಭುತ್ವದ ನೆರವನ್ನು ಪಡೆಯುವುದು ಮಾಮೂಲಿಯಾಗಿದೆ. ಯಾವುದೇ ಪಕ್ಷದ ಯಾವುದೇ ಸರಕಾರಗಳಿದ್ದರು ಪ್ರಭುತ್ವದ ಮೇಲಿನ ತಮ್ಮ ಪರೋಕ್ಷ ಹಿಡಿತವನ್ನು ಸಡಿಲಿಸದ ಮೇಲ್ಜಾತಿಗಳು ದಲಿತರ ದಮನಕಾರ್ಯವನ್ನು ಯಾವುದೆ ಎಗ್ಗಿಲ್ಲದೆ ಮುಂದುವರೆಸುತ್ತ ಬರುತ್ತಿವೆ.

ಈ ಹಿನ್ನೆಲೆಯಲ್ಲಿಯೇ ನಾವು ದಲಿತರ ಮೇಲಿನ ಹಲ್ಲೆಗಳನ್ನು ನೋಡಬೇಕಾಗುತ್ತದೆ. ಬಲಿಷ್ಠ ಶಾಸಕಾಂಗ ಮತ್ತು ಕಾರ್ಯಾಂಗಗಳ ಜಂಟಿ ಕಾರ್ಯಾಚರಣೆಗಳ ಮೂಲಕ ದಲಿತರನ್ನು ಹತ್ತಿಕ್ಕುವ ಕಾರ್ಯ ಮುಂದುವರೆಯುತ್ತಲೇ ಇದೆ. ವರ್ಷದಿಂದ ವರ್ಷಕ್ಕೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಲೇ ಹೋಗುತ್ತಿವೆ.

ಅದರಲ್ಲೂ 2014ರ ನಂತರವಂತು ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹಿಂದೆಂದಿಗಿಂತಲೂ ಹೆಚ್ಚಾಗಿವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ 2014ರಲ್ಲಿ ದಲಿತರ ಮೇಲಿನ ಹಲ್ಲೆ ಪ್ರಕರಣಗಳು ಶೇಕಡಾ 19 ರಷ್ಟು ಹೆಚ್ಚಾಗಿದ್ದು, 2013ರಲ್ಲಿ ದಲಿತರ ಕೊಲೆಗಳು 676 ಆಗಿದ್ದರೆ, 2014ರಲ್ಲಿ ಅದು 744 ಕ್ಕೆ ಏರಿವೆ. ಉತ್ತರ ಇಂಡಿಯಾದ ಹರಿಯಾಣ ಮತ್ತು ಉತ್ತರಪ್ರದೇಶಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಹೆಚ್ಚಿದ್ದರೆ, ದಕ್ಷಿಣದಲ್ಲಿ ತಮಿಳುನಾಡು ಇಂತಹ ದೌರ್ಜನ್ಯಗಳಗೆ ಹೆಸರಾಗಿದೆ.

ವಿಷಾದವೆಂದರೆ, ಹಿಂದೂಗಳೆಲ್ಲ ಒಂದು ಎಂಬ ಹುಸಿಘೋಷಣೆಯೊಂದಿಗೆ, ಹಿಂದೂ ಮತಗಳ ದೃವೀಕರಣದೊಂದಿಗೆ ಅಧಿಕಾರಕ್ಕೆ ಬಂದ ಪಕ್ಷವೊಂದು ಆಡಳಿತ ನಡೆಸುವಾಗ ಹೆಚ್ಚಾಗುತ್ತಿರುವ ಇಂತಹ ದಲಿತ ದೌರ್ಜನ್ಯ ಪ್ರಕರಣಗಳು ಹಿಂದುತ್ವದ ಪೊಳ್ಳುತನವನ್ನು ಬಯಲು ಮಾಡುತ್ತಿವೆ, ಈಗಾಗಲೇ ಬಾಹ್ಯದ ಭಯೋತ್ಪಾದಕ ಶಕ್ತಿಗಳು ನಮ್ಮ ರಾಷ್ಟ್ರವನ್ನು ವಿಭಜಿಸಲು ಯತ್ನಿಸುತ್ತಿವೆ. ಜಾತ್ಯಾತೀತವಾಗಿ ಬದುಕುತ್ತಿರುವ ಬಹುಸಂಸ್ಕೃತಿಯ ಈ ರಾಷ್ಟ್ರವನ್ನು ಅದರ ಉದಾತ್ತತೆಯನ್ನು ಸರ್ವನಾಶಗೊಳಿಸಲು ಹೊರಗಿನ ಶಕ್ತಿಗಳು ಪ್ರಯತ್ನಿಸುತ್ತಿರುವ ಈ ಸಮಯದಲ್ಲಿ ಜಾತಿಯ ಹೆಸರಲ್ಲಿ ನಡೆಯುವ ಇಂತಹ ದೌರ್ಜನ್ಯಗಳು ನಮ್ಮ ಸಮಾಜವನ್ನು ವಿಚ್ಛಿದ್ರಗೊಳಿಸುತ್ತ ಹೋಗುತ್ತವೆ. ದೇಶದ ಜಾತಿಗಳ ನಡುವಿನ ಸೌಹಾರ್ದತೆ, ಕೋಮುಸೌಹಾರ್ದತೆಗೆ ಭಂಗ ತರುವ ಇಂತಹ ಘಟನೆಗಳ ಬಗ್ಗೆ ಗಟ್ಟಿಯಾಗಿ ಮಾತಾಡಿ ಅವನ್ನು ಖಂಡಿಸುವುದು ಈ ರಾಷ್ಟ್ರದ ಜನತೆಯ ಕರ್ತವ್ಯವಾಗಿದೆ. ಅದರಲ್ಲೂ ಒಂದು ದೇಶದ ಪ್ರದಾನಿಯಾಗಿ ಮೋದಿಯವರು ಇಂತಹ ಪ್ರಕರಣಗಳನ್ನು ಖಡಾಖಂಡಿತವಾಗಿ ಖಂಡಿಸಿ ದಲಿತರಲ್ಲಿ ಆತ್ಮವಿಶ್ವಾಸವನ್ನು ತುಂಬ ಬೇಕಿರುವುದು ಅಗತ್ಯವಾಗಿದೆ. ಆದರೆ ನಮ್ಮ ಪ್ರದಾನಿಯವರದು ಮಾತ್ರ ದೀರ್ಘ ಮೌನ.

ಹಿಂದೆ ಅವರು ಗುಜರಾತಿನ ಪ್ರದಾನಿಯಾಗಿದ್ದಾಗ, ಅಲ್ಲಿ ನಡೆದ ಕೋಮು ಗಲಭೆಗಳ ಬಗ್ಗೆ ಮಾತಾಡುತ್ತ ಅಂದಿನ ಪ್ರದಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರು ಮೋದಿಯವರಿಗೆ ರಾಜಧರ್ಮ ಪಾಲಿಸುವ ಸಲಹೆ ನೀಡಿದ್ದರು. ಈಗ ಅದೇ ಕುರ್ಚಿಯಲ್ಲಿ ಕುಳಿತಿರುವ ಮೋದಿಯವರು ತಮ್ಮ ಮೌನವನ್ನು ತೊರೆದು ರಾಜಧರ್ಮವನ್ನು ಪಾಲಿಸಬೇಕಾಗಿದೆ. ಇಲ್ಲದೇ ಹೋದರೆ ಮೋದಿಯವರ ಮೌನಕ್ಕೆ ಅಪಾರ್ಥಗಳು ಸೃಷ್ಠಿಯಾಗುವ ಸಾದ್ಯತೆಗಳಿವೆ.

ಮೌನಂ ಸಮ್ಮತಿ ಲಕ್ಷಣಂ ಎಂಬ ಮಾತು ಅವರಿಗೂ ತಿಳಿದಿರಬಹುದೆಂದು ಬಾವಿಸುತ್ತೇನೆ!

ಫೆಬ್ರ 2, 2016

ಜಾತಿ ಪದ್ಧತಿಯ ಬಗ್ಗೆ ಚರ್ಚಿಸಲು ದಲಿತೇತರಿಗೆ ಒಂಭತ್ತು ಸೂತ್ರಗಳು

ಯಾಶಿಕಾ ದತ್, ಹಫಿಂಗ್ಟನ್ ಪೋಸ್ಟ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಸಾಮಾಜಿಕ ಮಾಧ್ಯಮಗಳ ಉನ್ನತಿಯ ನಂತರ ಮೊಟ್ಟ ಮೊದಲ ಬಾರಿಗೆ ಜಾತಿ ಸಂಕಥನದ ಚರ್ಚೆಯಾಗುತ್ತಿದೆ. ಜಾತಿ, ತಾರತಮ್ಯ ಮತ್ತು ಅವಕಾಶಗಳು ಬಗ್ಗೆ ಫೇಸ್ ಬುಕ್, ಟ್ವಿಟರ್, ರೆಡಿಟ್, ಕ್ಯುರಾ ಮತ್ತು ಇನ್ಸ್ಟಾಗ್ರಾಮಿನಲ್ಲಿ ಕೂಡ ಚರ್ಚೆಗಳಾಗುತ್ತಿದೆ. ದುಃಖದ ಸಂಗತಿಯೆಂದರೆ ಇಂತಹ ಚರ್ಚೆಗಳು ನಡೆಯಲು ರೋಹಿತ್ ವೇಮುಲನೆಂಬ ಪ್ರತಿಭಾವಂತ ಯುವಕ ನೇಣಿಗೆ ಶರಣಾಗಬೇಕಾಯಿತು. ನೀವು ದಲಿತರಾಗದಿದ್ದಲ್ಲಿ ವಾದ ವಿವಾದಗಳಲ್ಲಿ ಮುಳುಗಿಹೋಗುವ ಮೊದಲು ಇದನ್ನೊಮ್ಮೆ ಓದಿಕೊಳ್ಳಿ.

1. ಪೂರ್ವಾಗ್ರಹಗಳ ಬಗ್ಗೆ ಎಚ್ಚರಿಕೆಯಿರಲಿ

ನೀವು ಯಾವತ್ತೂ ಜಾತಿಯಾಧಾರಿತ ತಾರತಮ್ಯವನ್ನು ನೇರವಾಗಿ ಎದುರಿಸದೆ ಇದ್ದರೆ, ಜಾತಿ ತಾರತಮ್ಯವೇ ಇಲ್ಲ ಎಂದಂದುಕೊಳ್ಳುವುದು ಸಹಜ. ಯಾಕೆಂದರೆ ಅದು ನಿಮಗೆ ಅನುಭವಕ್ಕೇ ಬಂದಿಲ್ಲ. ಆದರೆ ಲಕ್ಷಾಂತರ ದಲಿತರಿಗೆ ಅದು ದಿನನಿತ್ಯದ ವಾಸ್ತವ. ಹಾಗಾಗಿ, “ಜಾತಿಯೆಂಬುದು ಪುರಾತನ ದಿನಗಳ ಕತೆ”ಯೆಂದೋ ಅಥವಾ “ಅದೀಗ ದೊಡ್ಡ ವಿಷಯವೇನಲ್ಲ” ಎಂದೋ ಹೇಳುವ ಮುಂಚೆ ಅವರ ಮಾತುಗಳನ್ನು ಕೇಳಿ, ತಾರತಮ್ಯದ ಕತೆಗಳನ್ನು ಕೇಳಿ.

2. ಇತಿಹಾಸವನ್ನರಿಯಿರಿ

ಚರ್ಚೆಯಾಗುತ್ತಿರುವ ಜಾತಿ ಆಧಾರಿತ ಶೋಷಣೆಯ ಸ್ವರೂಪಗಳನ್ನು ಸರಿಯಾಗಿ ತಿಳಿದುಕೊಳ್ಳಿ, ನಮ್ಮ ಪಠ್ಯಪುಸ್ತಕಗಳು ಅವುಗಳ ಕುರಿತು ಸರಿಯಾಗಿ ತಿಳಿಸಿಕೊಡುವುದಿಲ್ಲ. ಮೀಸಲಾತಿ ವ್ಯವಸ್ಥೆ ಜಾರಿಗೆ ಬಂದಿದ್ದೇಕೆ ಎನ್ನುವುದನ್ನು ಮೊದಲು ಅರಿತುಕೊಳ್ಳಿ. ಕೆಲವು ನಿರ್ದಿಷ್ಟ ಜಾತಿಗಳ ಹೆಸರನ್ನು ಕಳಂಕದಂತೆ ಉಪಯೋಗಿಸುವುದ್ಯಾಕೆ ಎನ್ನುವ ಪ್ರಶ್ನೆ ಕೇಳಿಕೊಳ್ಳಿ; ಆ ಜಾತಿಯ ಜನರ ಮೇಲೆ ಉಂಟಾಗುವ ಮಾನಸಿಕ ಪರಿಣಾಮಗಳ ಬಗ್ಗೆ ಯೋಚಿಸಿ. ಡಾ. ಬಿ. ಆರ್. ಅಂಬೇಡ್ಕರರ Annihilation of caste ಅಥವಾ ಇತ್ತೀಚೆನ Hatred in the belly ಓದುವುದುತ್ತಮ. Dalitdiscrimination.tumblr.com ಕೂಡ ಚೆನ್ನಾಗಿದೆ.

3. ನಿಮಗೆ ಸಿಕ್ಕಿರುವ ಸವಲತ್ತುಗಳನ್ನು ಅರಿತುಕೊಳ್ಳಿ

ಜಾತಿ ವ್ಯವಸ್ಥೆ ಪ್ರತ್ಯೇಕವಾಗಿ ಅಸ್ತಿತ್ವದಲ್ಲಿಲ್ಲ. ಒಬ್ಬನ್ಯಾರೋ ಶೋಷಣೆಗೊಳಪಟ್ಟಿದ್ದರೆ ಅದರಿಂದ ಇನ್ನೊಬ್ಬನಿಗ್ಯಾರಿಗೋ ನ್ಯಾಯಬದ್ಧವಲ್ಲದ ಅನುಕೂಲಗಳಾಗಿರಬೇಕು. ನೀವು ದಲಿತರಾಗಿಲ್ಲದೆ ಇದ್ದರೆ ಆ ‘ಇನ್ನೊಬ್ಬ’ ನೀವೇ ಇರುವ ಸಾಧ್ಯತೆ ಅಧಿಕ. ನಿಮ್ಮ ಪೂರ್ವಜರಿಗೆ ಶಿಕ್ಷಣ ಮತ್ತು ಸಂಪತ್ತು ಸುಲಭಕ್ಕೆ ಸಿಗುವ ಸಮಯದಲ್ಲೇ ದಲಿತರನ್ನು ಆ ಎಲ್ಲಾ ಸವಲತ್ತುಗಳಿಂದ ವಂಚಿತರನ್ನಾಗಿ ಮಾಡಲಾಯಿತು, ಆ ಸವಲತ್ತುಗಳನ್ನು ನೀವು ಇನ್ನೂ ಅನುಭವಿಸುತ್ತಿದ್ದೀರಿ. ನೀವು ಮಾಡಿದ ಅಥವಾ ಮಾಡದ ಕಾರ್ಯವೊಂದರಿಂದ ಅದು ಮರೆಯಾಗಿ ಹೋಗುವುದಿಲ್ಲ. ನೀವು ಆ ವಂಶಪಾರಂಪರ್ಯದ ಸವಲತ್ತಿನೊಂದಿಗೆ ಹುಟ್ಟಿದ್ದರೆ ದಲಿತರು ವಂಶಪಾರಂಪರ್ಯದ ಶೋಷಣೆಯೊಂದಿಗೆ ಹುಟ್ಟಿದ್ದಾರೆ. ಮತ್ತು ನೀವದರ ಅಸ್ತಿತ್ವವನ್ನು ಬದಲಿಸಲು ಸಾಧ್ಯವಿಲ್ಲವಾದರೂ ಅದನ್ನು ಒಪ್ಪುವ ಮನಸ್ಸಾದರೂ ಮಾಡಬಹುದು.

4. ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ

ನಿಮ್ಮನ್ಯಾರೂ ವೈಯಕ್ತಿಕವಾಗಿ ದೂಷಿಸುತ್ತಿಲ್ಲ. ನೀವು ಜಾತಿವಾದಿ ಮನಸ್ಥಿತಿಯೊಂದಿಗೆ ಗುರುತಿಸಿಕೊಳ್ಳದಿದ್ದರೆ, ಪೂರ್ವಾಗ್ರಹಪೀಡಿತರಾಗಿಲ್ಲದೇ ಹೋದರೆ ಮತ್ತು ಜಾತಿ ವ್ಯವಸ್ಥೆಯ ಸಂಕೀರ್ಣತೆಯ ಬಗ್ಗೆ ನಿಮಗೆ ಸಂಪೂರ್ಣ ಅರಿವಿದ್ದರೆ ನೀವು ನಿಯಮಗಳಿಗೆ ಅಪವಾದ. ಎಲ್ಲಾ ಮೇಲ್ಜಾತಿಯವರು ತಾರತಮ್ಯ ಮಾಡುವುದಿಲ್ಲ ಎನ್ನುವುದು ನಿಮ್ಮ ವಾದವಾಗಿದ್ದರೆ ‘ದಲಿತರ ವಿರುದ್ಧದ ತಾರತಮ್ಯ’ವೆನ್ನುವ ವಾಸ್ತವ ಸಂಗತಿಗೆ ಬೆನ್ನು ತೋರಿಸಿದಂತೆ. ಒಂದು ಕಾರು ಒಬ್ಬನಿಗೆ ಗುದ್ದಿದ ಸಂದರ್ಭದಲ್ಲಿ ನೀವು ಎಲ್ಲಾ ಡ್ರೈವರುಗಳು ಕೊಲೆಗೈಯುವುದಿಲ್ಲ ಎಂದು ಹೇಳುತ್ತಾ ನಿಂತರೆ ಆ ವ್ಯಕ್ತಿಯನ್ನು ಸಾಯಲು ಬಿಡುತ್ತ ನಿಮ್ಮನ್ನು ನೀವೇ ‘ಬಲಿಪಶು’ವಾಗಿ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ ಎಂದರ್ಥ.

5. ದನಿಯ ಶೈಲಿಯಿಂದ ಅಳೆಯಬೇಡಿ

ಕಾಲದಿಂದಲೂ ಅವಮಾನದ ಸುತ್ತ ಕಟ್ಟಲಾಗಿದ್ದ ದಲಿತರೆಂಬ ಗುರುತು ನಿಧಾನಕ್ಕೆ ಹೆಮ್ಮೆಯೆನ್ನಿಸಿಕೊಳ್ಳಲಾರಂಭಿಸಿದೆ. ಈ ಹೆಮ್ಮೆಯ ಪತನಗೊಳಿಸುವಂತಹ ಕೆಲಸವಾಗಬಾರದು. ನಮ್ಮ ದಲಿತ ಹೆಮ್ಮೆ ನಿಮ್ಮನ್ನು ಹೆದರಿಸಲಲ್ಲ, ಬದಲಿಗೆ ನಾವಾ ಹೆಮ್ಮೆಯನ್ನು ಮತ್ತೆ ಮತ್ತೆ ಅನುಭವಿಸಲು. ಪುನಃ, ಇದು ನಿಮ್ಮ ಬಗ್ಗೆ ಅಲ್ಲ.

6. ನಿಮಗೂ ಒಂದು ಜಾತಿಯಿದೆ ಎನ್ನುವುದನ್ನು ಒಪ್ಪಿಕೊಳ್ಳಿ

ಜಾತಿ ಕಾಣಿಸುತ್ತಿಲ್ಲವೆನ್ನುವುದು ನಿಮ್ಮ ಜೀವನ ಪರ್ಯಂತ ನಡೆದು ಬಂದ ಹೂವಿನ ಹಾಸಿಗೆಯನ್ನು ಇಲ್ಲವೆಂದಂತೆ; ಕೆಲವರನ್ನು ಬರಿಗಾಲಿನಲ್ಲಿ ನಡೆಯುವಂತೆ ಬಲವಂತ ಮಾಡಲಾಗಿತ್ತು. ನಿಮಗಾಗಲೀ, ನಿಮ್ಮ ಪೂರ್ವಜರಿಗಾಗಲೀ ಓದುವುದನ್ನು ನಿಷೇಧಿಸಲಾಗಿರಲಿಲ್ಲ, ನಿಮ್ಮ ಹೆಸರಿನ ಕಾರಣದಿಂದ ವಿಶ್ವವಿದ್ಯಾನಿಲಯಗಳಿಂದ ಹೊರಹಾಕಲಾಗಿರಲಿಲ್ಲ ಅಥವಾ ಸುಮ್ಮನೆ ನಿಮ್ಮ ಅಸ್ತಿತ್ವವನ್ನೇ ಅವಮಾನದ ವಿಷಯದಂತೆ ಮಾಡಿರಲಿಲ್ಲ. ಲಕ್ಷಾಂತರ ದಲಿತರಿಗೆ ಹೀಗೆ ಮಾಡಲಾಗಿತ್ತು, ಈಗಲೂ ಮಾಡಲಾಗುತ್ತಿದೆ. ಜಾತಿಯಿಲ್ಲವೆನ್ನುವುದನ್ನು ನೀವು ಸುಲಭವಾಗಿ ಹೇಳುವ ಸಮಯದಲ್ಲೇ, ಹಲವರಿಗೆ ಆ ಗುರುತಿನ ಕಾರಣದಿಂದ ಕಿರುಕುಳ ನೀಡಲಾಗುತ್ತಿದೆ, ಆ ಗುರುತನ್ನು ಕಳಚಿಕೊಳ್ಳುವ ಆಯ್ಕೆಯೂ ಅವರ ಬಳಿ ಇಲ್ಲ. ನಿಮ್ಮಂತಲ್ಲದೆ, ಪೂರ್ವಾಗ್ರಹಗಳು ಅವರನ್ನು ಬೇಟೆಯಾಡುತ್ತಿವೆ ಮತ್ತು ಅವರನ್ನು ಶರಣಾಗಲು ಬಲವಂತಪಡಿಸುತ್ತಿವೆ. ನಿಮ್ಮ ಜಾತಿ ಅಸ್ತಿತ್ವದಲ್ಲಿದೆ, ನಮ್ಮದ್ದಿದ್ದಂತೆ. ಅದನ್ನು ಅಂಗೀಕರಿಸದಿದ್ದರೆ ಅದು ಮರೆಯಾಗಿಬಿಡುವುದಿಲ್ಲ.

7. ನೀವು ಕಾರುಣ್ಯದಿಂದಿಲ್ಲ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಿ

ನಿಮಗೆ ಸಿಕ್ಕ ಅನುಕೂಲಗಳನ್ನು ಅರಿತುಕೊಂಡು ಮತ್ತು ದಲಿತರ ಮೇಲೆ ನಡೆಯುವ ಶೋಷಣೆಯನ್ನು ಅರ್ಥಮಾಡಿಕೊಂಡಾಕ್ಷಣ ನೀವು ಯಾವುದೇ ಅನುಗ್ರಹ ಮಾಡಿದಂತಲ್ಲ, ಕೊನೇ ಪಕ್ಷ ಜಾತಿಯ ಸಂಕಥನದಲ್ಲಿ ಎನ್ನುವುದನ್ನು ಅರಿತುಕೊಳ್ಳಲು ಪ್ರಯತ್ನಿಸಿ. ಜವಾಬ್ದಾರಿಯುತ ನಾಗರೀಕನಾಗಿ, ರಾಷ್ಟ್ರದ ಪ್ರಜೆಯಾಗಿ ನಮ್ಮ ಇತಿಹಾಸವನ್ನು ಕಲಿತು ಅರ್ಥೈಸಿಕೊಳ್ಳುವುದು ನಿಮ್ಮ ಕರ್ತವ್ಯ. ನಮ್ಮನುಕೂಲಕ್ಕಾಗಿ ಸಂಕೀರ್ಣ ಚರ್ಚೆಯನ್ನು ಅರ್ಥಮಾಡಿಕೊಂಡು ‘ಒಳ್ಳೆಯವ’ನಾಗಿದ್ದೀನಿ ಎಂದು ನೀವು ಯೋಚಿಸುವುದು ಸಹ ಜಾತಿವಾದವೇ. ಯಾಕೆಂದರೆ ನಮಗೆ ನಿಮ್ಮ ಕರುಣೆಗಿಂತ ಸಮಾನರಾಗಿ ಇರುವುದಕ್ಕೆ ನಾವು ಹೆಚ್ಚು ಅರ್ಹರು.

ಗಮನಿಸಿ: ನೀವು ಅಸಮಾನ ಜಾಗದಲ್ಲಿ ನಿಂತು ‘ಕರುಣೆ’ಯಿಂದ ನಮ್ಮನ್ನು ನೋಡಲು ಕೆಳಗಿಣುಕುವುದು ಕೂಡ ನಿಮಗೆ ದಕ್ಕಿರುವ ಒಂದು ಸೌಲತ್ತಿಗೆ ಉದಾಹರಣೆ.

8. ನಿಮ್ಮನ್ನು ‘ರಾಕ್ಷಸರನ್ನಾಗಿಸುತ್ತಿಲ್ಲ’ ಎನ್ನುವುದನ್ನು ತಿಳಿದುಕೊಳ್ಳಿ

ಚರ್ಚೆಯ ವೇಳೆ ಮೇಲ್ಜಾತಿಗೆ ಸಿಕ್ಕಿರುವ ಸೌಲತ್ತಿನ ಬಗ್ಗೆ ಗಮನ ಸೆಳೆದಾಗ, “ನನ್ನ ಜನನವನ್ನು ನಾನು ದೂರುವುದಿಲ್ಲ” ಎಂದು ಹೇಳಬೇಡಿ. ಇದು ನಿಮ್ಮ ಜನನವನ್ನು ದೂರುವುದರ ಬಗೆಗಲ್ಲ. ನೀವು ಎಷ್ಟು “ಅದೃಷ್ಟ”ವಂತರಾಗಿದ್ದೀರಿ ಎನ್ನುವುದನ್ನು ಮತ್ತು ನಾವು ಆ “ಅದೃಷ್ಟ”ದಿಂದ ವಂಚಿತರಾಗಿದ್ದನ್ನು ನಿಮಗೆ ನೆನಪಿಸುವುದಷ್ಟೇ ಇದರ ಉದ್ದೇಶ. ಪ್ರಸ್ತುತ ಚರ್ಚೆಗಳೆಲ್ಲವೂ ತಾರತಮ್ಯದ ಸವಲತ್ತಿನ ಮನಸ್ಥಿತಿಯ ವಿರುದ್ಧವೇ ಹೊರತು ವ್ಯಕ್ತಿಯ ವಿರುದ್ಧವಲ್ಲ.

9. ಇಷ್ಟೇಕೆ ಕೋಪಗೊಂಡಿದ್ದೇನೆ? ಎಂದು ನೀವೇ ಕೇಳಿಕೊಳ್ಳಿ

ಒಂದು ವೈಚಾರಿಕ ಅಭಿಪ್ರಾಯದ ಬಗ್ಗೆ ನಿಮಗೆ ಪದೇ ಪದೇ ಕೋಪವುಕ್ಕಿದರೆ, ಹಿಂಗ್ಯಾಕೆ? ಎಂದು ಕೇಳಿಕೊಳ್ಳುವ ಸಮಯವಿದು. ನಿಮಗಿಂತ ಕೆಳಮಟ್ಟದಲ್ಲಿರುವವರು ಎಂದು ನೀವು ಯಾರ ಬಗ್ಗೆ ಅಂದುಕೊಂಡಿದ್ದೀರೋ ಅವರಿವತ್ತು ನಿಮಗೆ ಸಮಾನವಾಗಿ ಮಾತನಾಡುತ್ತಿದ್ದಾರೆಂಬ ಕಾರಣಕ್ಕೆ ನಿಮಗೆ ಈ ಕೋಪವಾ? ತಾರತಮ್ಯದ ದೃಷ್ಟಿ ಇರುವುದೇ ಹೀಗೆ.

ಇರಲಿ, ಒಂದು ಆರೋಗ್ಯಪೂರ್ಣ ಚರ್ಚೆಗಾಗಿ ನೀವಿರದಿದ್ದರೆ ಮೇಲೆ ಹೇಳಿದ ಯಾವುದೂ ನಿಮಗನ್ವಯಿಸುವುದಿಲ್ಲ. ಜೊತೆಗೆ ಆಗ ನಿಮ್ಮ ಮಾತು ಕೇಳುವವರಾರೂ ಇರುವುದಿಲ್ಲ.

ರೋಹಿತ್ ವೇಮುಲನನ್ನು ಸಾಯಿಸಿದ್ಯಾರು?

ಬ್ರಾಹ್ಮಣ್ಯದ ಆಳ್ವಿಕೆಯನ್ನು ಮತ್ತೆ ಮುನ್ನೆಲೆಗೆ ತರಲು ನಡೆಯುತ್ತಿರುವ ಪ್ರಯತ್ನಗಳನ್ನು ನೋಡಿಕೊಂಡು ಮೌನ ಪ್ರೇಕ್ಷಕರಾಗುಳಿದವರೆಲ್ಲರೂ ರೋಹಿತನ ಸಾವಿಗೆ ಕಾರಣ.
ಆನಂದ್ ತೇಲ್ತುಂಬೆ
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್.

ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾನಿಲಯದ 26 ವರ್ಷದ ದಲಿತ ಪಿ.ಎಚ್.ಡಿ ಸ್ಕಾಲರ್ ರೋಹಿತ್ ವೇಮುಲ, ತನ್ನ ಕೊನೆಯ ಪತ್ರದಲ್ಲಿ ಯಾರನ್ನೂ ದೂಷಿಸಿಲ್ಲ, ಗೆಳೆಯರನ್ನು ಅಥವಾ ಶತ್ರುಗಳನ್ನು; ಅವನ ಕೊಲೆಮಾಡಿದವರಿಗೆ ಮುಗ್ಧತೆಯನ್ನು ಸಾಬೀತುಪಡಿಸಲು ಈ ಪತ್ರ ಆಹಾರವಾಯಿತು. ಕಾರ್ಲ್ ಸೆಗಾನನಂತೆ ವಿಶ್ವವನ್ನು ಅನ್ವೇಷಿಸಬೇಕೆಂದು ತನ್ನ ಕಲ್ಪನೆಗಳನ್ನು ತೇಲಿಬಿಡುವ ಪತ್ರ ಬರೆದ ಆಕಾಂಕ್ಷಿಯೊಬ್ಬ, ತನ್ನೊಳಗಿನ ಹುಡುಕಾಟದಲ್ಲಿ, ಛೇದಗೊಂಡ ದಲಿತಾತ್ಮದಲ್ಲಿ, ಜಾತಿ ವ್ಯವಸ್ಥೆಯ ನಾಡಿನಲ್ಲಿ, ಶೋಷಕರ ಶೋಷಣೆಯಿಂದ ನಿರರ್ಥಕತೆಯ ಅಸ್ತಿತ್ವವನ್ನು ಕೊನೆಗಾಣಿಸಿಕೊಂಡುಬಿಡುತ್ತಾನೆ. ಅವನ ಸಾವು ಒಂದಂಶವಂವನ್ನು ಸ್ಪಷ್ಟಪಡಿಸುತ್ತದೆ, ಆತ್ಮಹತ್ಯೆಯೆಂದರೆ ತಮ್ಮನ್ನು ತಾವೇ ಕೊಂದುಕೊಳ್ಳುವುದಲ್ಲ; ಪರಿಸ್ಥಿತಿ ಸೃಷ್ಟಿಸಿದ ಸಾವದು, ಸಂಸ್ಕೃತಿ, ಪದ್ಧತಿ ಮತ್ತು ಸಂಸ್ಥೆಗಳು ಕೊಲೆಗಾರರಿಗೆ ರಕ್ಷಣೆ ನೀಡುವ ಪರಿಸ್ಥಿತಿ.

ಹಾಸ್ಟೆಲ್ಲಿನಿಂದ ಹೊರಹಾಕಿದ ನಂತರ ರೋಹಿತ್ ವಿಶ್ವವಿದ್ಯಾನಿಲಯದ ತೆರೆದ ಜಾಗದಲ್ಲಿ ಹೂಡಿದ ತಾತ್ಕಾಲಿಕ ಟೆಂಟಿನಲ್ಲಿ ತನ್ನ ನಾಲ್ಕು ಸಹವರ್ತಿ ಕಾಮ್ರೇಡುಗಳ ಜೊತೆಗೆ ಹನ್ನೆರಡು ದಿನಗಳ ಕಾಲ ಇದ್ದಿದ್ದು ಆತ್ಮಾಭಿಮಾನಕ್ಕಾಗಿ ನಡೆದ ಹೋರಾಟ. ಡಿಸೆಂಬರ್ ಹದಿನೆಂಟರಂದು ವಿಶ್ವವಿದ್ಯಾನಿಲಯದ ಉಪಕುಲಪತಿಗಳಿಗೆ ಬರೆದ ಕುಟುಕುವ ಪತ್ರ, ಇಪ್ಪತ್ತೇಳನೇ ಹುಟ್ಟುಹಬ್ಬಕ್ಕೆ ತನ್ನ ಸ್ನೇಹಿತರಿಗೊಂದು ಪಾರ್ಟಿ ಕೊಡಲು ದುಡ್ಡಿಲ್ಲದ್ದಕ್ಕೆ ಗೆಳೆಯರೊಟ್ಟಿಗೆ ವ್ಯಕ್ತಪಡಿಸಿದ ಬೇಸರ, ತನ್ನ ತಾಯಿಗೆ ಮಾಡಿದ ಕೊನೆಯ ಕರೆಯನ್ನು ಮಧ್ಯದಲ್ಲೇ ತುಂಡರಿಸಿದ್ದು, ಇದಿಷ್ಟು ಸಾಕಲ್ಲವೇ ಹತ್ಯಾ ಪರಿಸ್ಥಿತಿ ಮತ್ತು ಸಂಭಾವ್ಯ ಕೊಲೆಗಾರರ ಮೇಲಿರುವ ಪರದೆಯನ್ನು ಹರಿದು ಹಾಕಲು?

ಕೇಸಿನ ವಿವರಗಳೆಲ್ಲವೂ ಸಾರ್ವಜನಿಕರಿಗೀಗ ಲಭ್ಯವಿದೆ. ಎಬಿವಿಪಿಯ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಅಧ್ಯಕ್ಷ ನಂದನಂ ಸುಶೀಲ್ ಕುಮಾರ್ ಮೇಲೆ ನಡೆಯಿತೆನ್ನಲಾದ ಹಲ್ಲೆಯಿಂದ ರೋಹಿತನನ್ನೂ ಸೇರಿಸಿ ಐವರಿಗೆ ಶಿಕ್ಷೆ ವಿಧಿಸಿದರಲ್ಲ; ಆ ಹಲ್ಲೆ ನಡೆಯಿತೆನ್ನುವುದೇ ಇನ್ನೂ ಸಾಬೀತಾಗಿಲ್ಲ. ಬದಲಿಗೆ ಎಲ್ಲಾ ತನಿಖೆಗಳು, ವೈದ್ಯರ ಹೇಳಿಕೆ ಮತ್ತು ಸಾಕ್ಷಿಗಳು ಅದು ನಡೆದಿಲ್ಲ ಎಂದೇ ಧೃಡಪಡಿಸುತ್ತಾರೆ. ಆಗಿದ್ದರೂ ದಲಿತ ವಿದ್ಯಾರ್ಥಿಗಳನ್ನು ಶಿಕ್ಷಿಸುತ್ತಾರೆ. ವಿಶ್ವವಿದ್ಯಾನಿಲಯದ ಆಡಳಿತ ಉಲ್ಟಂಪಲ್ಟ ನಿರ್ಣಯಗಳನ್ನು ತೆಗೆದುಕೊಂಡದ್ದು ಜಾತಿ ತಾರತಮ್ಯ ಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದ್ದುದರ ಬಗ್ಗೆ ಸೂಚಿಸುವುದರ ಜೊತೆಗೆ ಹೊರಗಿನ ಶಕ್ತಿಗಳ ಪ್ರಭಾವ ಮತ್ತು ಅಸಮಂಜಸ ಆಡಳಿತ ರೀತಿಯನ್ನು ತೋರಿಸುತ್ತದೆ.

ಇಡೀ ಘಟನೆಗೊಂದು ಪ್ರಮುಖ ತಿರುವಾಗಿದ್ದು ನರೇಂದ್ರ ಮೋದಿ ಸರಕಾರದ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಮಾನವ ಸಂಪನ್ಮೂಲ ಇಲಾಖೆಯ ಸ್ಮ್ರತಿ ಇರಾನಿಗೆ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯ “ಜಾತಿವಾದಿಗಳ, ತೀವ್ರಗಾಮಿಗಳ ಮತ್ತು ದೇಶದ್ರೋಹಿ ರಾಜಕಾರಣದ ಗೂಡಾಗಿದೆ” ಎಂದು ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು. ಇದಕ್ಕೆ ಪೂರಕವೆಂಬಂತೆ ಅಂಬೇಡ್ಕರ್ ವಿದ್ಯಾರ್ಥಿ ಸಂಘದವರು ಯಾಕೂಬ್ ಮೆಮನನಿಗೆ ವಿಧಿಸಿದ ನೇಣನ್ನು ವಿರೋಧಿಸಿ ನಡೆಸಿದ ಪ್ರತಿಭಟನೆಯನ್ನು ಉಲ್ಲೇಖಿಸಿದ್ದರು. ವಿವಾದಾತ್ಮಕ ಹೆಚ್.ಆರ್.ಡಿ ಸಚಿವೆ, ಬಹುಶಃ ಹೆಚ್.ಆರ್.ಡಿಯನ್ನು Hindutva resource development ಎಂದು ಭಾವಿಸಿಕೊಂಡಿರುವ ಸಚಿವೆ ಇಲಾಖೆಯಿಂದ ಉಪಕುಲಪತಿಗಳಿಗೆ ಪತ್ರ ಬರೆಯಲಾಗುತ್ತದೆ, ಒಂದು ಅನಾಮಧೇಯ ದೂರಿನ ಕಾರಣದಿಂದ ಐಐಟಿ ಮದ್ರಾಸಿನಲ್ಲಿ ಅಂಬೇಡ್ಕರ್ ಪೆರಿಯಾರ್ ಸ್ಟಡಿ ಸರ್ಕಲ್ಲನ್ನು ನಿಷೇಧಿಸಲು ಬರೆದಂತೆ, ದೇಶವ್ಯಾಪಿ ಪ್ರತಿಭಟನೆಗದು ಕಾರಣವಾಗಿತ್ತು. ಮೊದಲ ಪತ್ರದ ಬೆನ್ನ ಹಿಂದೆಯೇ ವಿವಿಧ ಮಟ್ಟದ ಸೆಕ್ರೆಟರಿಗಳು ಒಂದರ ಹಿಂದೊಂದರಂತೆ ನಾಲ್ಕು ಪತ್ರಗಳನ್ನು ಬರೆದದ್ದು ಆ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಹಾಕಲಾದ ಒತ್ತಡ ಎಷ್ಟಿತ್ತೆಂಬುದನ್ನು ತಿಳಿಸುತ್ತದೆ. ಮಂತ್ರಿಗಳಿಂದ ಜಾತಿವಾದಿ ಆಡಳಿತಕ್ಕೆ ಸಿಕ್ಕ ಈ ಭಾರೀ ಬೆಂಬಲದಿಂದಲೇ ವಿದ್ಯಾರ್ಥಿಗಳಿಗೆ ಆ ಶಿಕ್ಷೆಯಾಯಿತು, ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಇದು ಗಲ್ಲು ಶಿಕ್ಷೆಗಿಂತಲೂ ಕಡಿಮೆಯೇನಲ್ಲ. ಹಾಸ್ಟೆಲ್ಲು, ಆಡಳಿತ ಕಟ್ಟಡಗಳು, ಸಾರ್ವಜನಿಕ ಸ್ಥಳಕ್ಕೆ ಹೋಗದೆ, ಸಹಪಾಟಿ ವಿದ್ಯಾರ್ಥಿಗಳ ಜೊತೆಗೆ ಮಾತನಾಡದೆ ಸಂಶೋಧನಾ ವಿದ್ಯಾರ್ಥಿಗಳು ಈ ಭೂಮಿಯ ಮೇಲೆ ಅಸ್ತಿತ್ವದಲ್ಲಿರುವುದಾದರೂ ಹೇಗೆ? ಸಂಶೋಧನೆಗೆ ಸಾವಲ್ಲವೇ ಇದು?

ಹಾಸ್ಟೆಲ್ಲಿನಿಂದ ಹೊರಹಾಕಿದ ಮೇಲೆ, ವಿದ್ಯಾರ್ಥಿಗಳು ಹೈದರಾಬಾದಿನ ಥಂಡಿಯಲ್ಲಿ ತೆರೆದ ಜಾಗದಲ್ಲಿ ಇದ್ದರು, ಆಗಲೂ ಉಪಕುಲಪತಿಗಳಿಗೆ ತಮ್ಮ ತಪ್ಪು ನಿರ್ಧಾರವನ್ನು ಗ್ರಹಿಸಲಾಗಲಿಲ್ಲ. ಡಿಸೆಂಬರ್ ಹದಿನೆಂಟರು ಉಪಕುಲಪತಿಗಳಿಗೆ ಬರೆದ ಪತ್ರದಲ್ಲಿ ರೋಹಿತ್ ದಲಿತ ವಿದ್ಯಾರ್ಥಿಗಳು ಮತ್ತು ಎಬಿವಿಪಿ ನಡುವಿನ ಗಲಾಟೆಯನ್ನು ತೀರ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಿದ್ದೀರಿ ಎಂದು ಆರೋಪಿಸಿದ್ದರು. ವಿಶ್ವವಿದ್ಯಾನಿಲಯದಲ್ಲಿ ದಲಿತ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ವ್ಯಂಗ್ಯವಾಗಿ ಬರೆಯುತ್ತಾ ಎಲ್ಲಾ ದಲಿತ ವಿದ್ಯಾರ್ಥಿಗಳಿಗೂ ಪ್ರವೇಶಾತಿಯ ಸಮಯದಲ್ಲೇ ಒಂದಷ್ಟು ವಿಷ ಮತ್ತೊಂದು ಹಗ್ಗ ಕೊಟ್ಟುಬಿಡಬೇಕು ಎಂದು ಕೇಳಿಕೊಳ್ಳುತ್ತಾನೆ ಮತ್ತು ತನ್ನಂಥಹ ವಿದ್ಯಾರ್ಥಿಗಳಿಗೆ ದಯಾಮರಣದ ಸೌಕರ್ಯವನ್ನು ಒದಗಿಸಬೇಕು ಎಂದು ಬರೆಯುತ್ತಾನೆ. ಒಬ್ಬ ಜವಾಬುದಾರಿಯುತ ವ್ಯಕ್ತಿಗೆ ವಿದ್ಯಾರ್ಥಿಯ ಮನಸ್ಥಿತಿಯನ್ನರಿಯಲು ಇದೊಂದು ಪತ್ರವೇ ಸಾಕಿತ್ತು. ಗುಂಟೂರಿನ ಮನೆಯಲ್ಲಿರುವ ಅಮ್ಮ ಮತ್ತು ತಮ್ಮನನ್ನು ನೋಡಿಕೊಳ್ಳಲು ಕಳುಹಿಸುತ್ತಿದ್ದ ಸ್ಟೈಪಂಡ್ ಹಣ ಕಳೆದಾರು ತಿಂಗಳಿಂದ ನಿಂತು ಹೋಗಿತ್ತು.

ಕುತೂಹಲವೆಂದರೆ, ಒಂದೆಡೆ ಸರಕಾರ ಬಾಬಾಸಾಹೇಬ್ ಅಂಬೇಡ್ಕರರ 125ನೇ ಜನ್ಮೋತ್ಸವವನ್ನು ಅತ್ಯದ್ಭುತವಾಗಿ ಆಚರಿಸಿ ದಲಿತ ಮತಗಳನ್ನು ಸೆಳೆಯಲು ಕಾಂಗ್ರೆಸ್ಸಿಗೆ ಪೈಪೋಟಿ ಕೊಡುತ್ತದೆ. ಮತ್ತೊಂದೆಡೆ, ಅಂಬೇಡ್ಕರ್ ಬೆಂಬಲಿಸಿದ ದಲಿತ ಪ್ರತಿಭಟನೆಯ ದನಿಗಳನ್ನು ಹತ್ತಿಕ್ಕಲು ಆಶಿಸುತ್ತದೆ. ಪ್ರಾಥಮಿಕ ಶಿಕ್ಷಣಕ್ಕಿಂತ ಉನ್ನತ ಶಿಕ್ಷಣಕ್ಕೆ ಅಂಬೇಡ್ಕರ್ ಹೆಚ್ಚು ಮಹತ್ವ ಕೊಟ್ಟಿದ್ದರು, ಕಾರಣ ಉನ್ನತ ಶಿಕ್ಷಣವಷ್ಟೇ ಜನರಲ್ಲಿ ಸರಿಯಾದ ಯೋಚನೆಯನ್ನು ರೂಪಸುತ್ತದೆ ಮತ್ತು ಜಾತಿ ತಾರತಮ್ಯದ ಶಕ್ತಿಗಳ ಎದುರು ಎದ್ದು ನಿಲ್ಲುವ ನೈತಿಕತೆಯನ್ನು ಕೊಡುತ್ತದೆ ಎಂದವರು ಕಂಡುಕೊಂಡಿದ್ದರು. ಅಂಬೇಡ್ಕರರನ್ನು ಹಾಡಿ ಹೊಗಳುವ ಸರಕಾರ ಅಂಬೇಡ್ಕರರ ಜ್ಞಾನದೀವಿಗೆಯನ್ನು ಮುನ್ನಡೆಸಲು ಶಕ್ತರಾಗಿರುವವರನ್ನು ಎಲ್ಲಾ ವಿಧದಿಂದಲೂ ಹತ್ತಿಕ್ಕುತ್ತಿದೆ.

ಪ್ರಪಂಚದಾದ್ಯಂತ ಪ್ರತಿಭಟಿಸುವ ಮುಸ್ಲಿಂ ಯುವಕರನ್ನು ಸುಲಭವಾಗಿ ಉಗ್ರಗಾಮಿ ಎಂದು ಹೇಗೆ ಕರೆದುಬಿಡಲಾಗುವುದೋ, ದಲಿತ – ಆದಿವಾಸಿ ಯುವಕರನ್ನು ತೀವ್ರಗಾಮಿ, ಜಾತಿವಾದಿ ಮತ್ತು ದೇಶದ್ರೋಹಿಗಳೆಂದು ಬಿಂಬಿಸಿಬಿಡಲಾಗುತ್ತಿದೆ. ಭಾರತದ ಜೈಲುಗಳಲ್ಲಿ ಇಂತಹ ಮುಗ್ಧ ಯುವಕರನ್ನು ದೇಶದ್ರೋಹದ ನೆಪದಲ್ಲಿ, ಕಾನೂನುಭಂಗ ಚಟುವಟಿಕೆಯ ನೆಪದಲ್ಲಿ ತುಂಬಿಸಲಾಗಿದೆ. ಬಿಜೆಪಿ ಸಂಸ್ಥೆಗಳನ್ನು ಅದರಲ್ಲೂ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕೇಸರೀಕರಣಗೊಳಿಸಲು ತೋರಿಸುತ್ತಿರುವ ಆಕ್ರಮಣಕಾರಿ ಪ್ರವೃತ್ತಿ, ಮತ್ತಷ್ಟು ರೋಹಿತರನ್ನು ಮುಂಬರುವ ವರುಷಗಳಲ್ಲಿ ಸೃಷ್ಟಿಸಿಬಿಡಬಹುದು.

ಭಾರತದ ಬಹುತ್ವವನ್ನು ನಾಶಪಡಿಸಿ, ಬ್ರಾಹ್ಮಣ್ಯದ ಆಳ್ವಿಕೆಯನ್ನು ಮತ್ತೆ ಮುನ್ನೆಲೆಗೆ ತರಲು ನಡೆಯುತ್ತಿರುವ ಪ್ರಯತ್ನಗಳನ್ನು ನೋಡಿಕೊಂಡು ಮೌನ ಪ್ರೇಕ್ಷಕರಾಗುಳಿದವರೆಲ್ಲರೂ ನೇರವಾಗಿ ಈ ಪ್ರಕರಣಕ್ಕೆ ಸಂಬಂಧಿಸಿದವರ ಜೊತೆಗೆ ರೋಹಿತನ ಸಾವಿಗೆ ಕಾರಣ.

Teltumbde is a writer and civil rights activist with the Committee for Protection of Democratic Rights, Mumbai

ಫೆಬ್ರ 1, 2016

ಅನಿಕೇತನ ತಾಯಿ ರೋಹಿತನ ಕುಟುಂಬಕ್ಕೆ, ಸ್ನೇಹಿತರಿಗೆ ಬರೆದ ಪತ್ರ.



ಅದು ರೋಹಿತ್ ವೇಮುಲನಿರಬಹುದು, ಡಿ.ಕೆ.ರವಿ ಇರಬಹುದು ಮತ್ತೊಬ್ಬರಿರಬಹುದು ಆತ್ಮಹತ್ಯೆ ಮಾಡಿಕೊಳ್ಳುವವರನ್ನು ಕಂಡರೆ ನನಗೆ ಮುಂಚಿನಿಂದಲೂ ಒಂದಷ್ಟು ಅಸಹ್ಯವೇ. ರೋಹಿತ್ ವೇಮುಲನ ಸಾವಿಗೆ ಪೂರ್ವಾಗ್ರಹಪೀಡಿತ ವ್ಯವಸ್ಥೆಯ ಕಾರಣವೂ ಇದ್ದಿದ್ದರಿಂದ ವ್ಯವಸ್ಥೆಯ ಬಗ್ಗೆ ಒಂದಷ್ಟು ಸಿಟ್ಟಿತ್ತು. ಅವನ ಕೊನೆಯ ಪತ್ರ ಬಹಳವಾಗಿ ಕಾಡಿದ್ದೂ ಹೌದು. ರೋಹಿತನ ಸಾವಿಗೊಂದು ಸಂತಾಪ – ಪ್ರತಿಭಟನೆಯಲ್ಲಿ ಭಾಗವಹಿಸಿದಾಗಲೂ ಗೆಳೆಯರೊಂದಿಗೆ ಆತ್ಮಹತ್ಯೆಗೆ ಹತ್ತಾರು ಕಾರಣಗಳು ಇದ್ದಿರಬಹುದು, ಆದರೆ Instigating factor ಅಂತ ಇದ್ದರೆ ಅದು ವಿಶ್ವವಿದ್ಯಾಲಯದ ನಿರ್ಧಾರಗಳು ಎಂದು ಚರ್ಚಿಸಿದ್ದೆ. ಬಿಜೆಪಿ ಕೂಡ ‘ಇದು ವೈಯಕ್ತಿಕ ಕಾರಣಕ್ಕಾದ ಸಾವು’ ಎಂದು ತಿಪ್ಪೆ ಸಾರಿಸುವ ಮಾತುಗಳಾನ್ನಡುತ್ತಾರೆ ಎಂದೇ ನಿರೀಕ್ಷಿಸಿದ್ದೆ. ಆದರೆ ಯಾವಾಗ ರೋಹಿತನ ವ್ಯಕ್ತಿತ್ವಹರಣ, ಅವನು ದಲಿತನಲ್ಲ(ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಸದಸ್ಯನಾದವನೊಬ್ಬ ದಲಿತನೇ ಆಗಿರಬೇಕು ಎಂದುಕೊಳ್ಳುವ ನಮ್ಮೆಲ್ಲರ ಮನಸ್ಥಿತಿಯೂ ಒಂದು ರೀತಿಯಲ್ಲಿ ದುರಂತವೇ), ಅವನು ದೇಶದ್ರೋಹಿ, ವಿದ್ರೋಹಿ ಎಂದೆಲ್ಲ ಬಿಜೆಪಿಯ ವಕ್ತಾರರು, ಅವರ ಹಿಂಬಾಲಕರು, ದಲಿತ ಚಿಂತನೆಯ, ಮೀಸಲಾತಿಯ ವಿರೋಧಿಗಳು ಆಕ್ರಮಣಕಾರೀ ರೀತಿಯಲ್ಲಿ ಬೊಬ್ಬೆಯೊಡೆಯಲಾರಂಭಿಸಿದರೋ ಆಗ ರಾಜಕೀಯ ಕಾರಣ ಹೊರತು ಪಡಿಸಿ ಮತ್ಯಾವ ಕಾರಣವೂ ರೋಹಿತನನ್ನು ಆತ್ಮಹತ್ಯೆಗೆ ಪ್ರಚೋದಿಸಿಲ್ಲ ಎಂದು ಸ್ಪಷ್ಟವಾಯಿತು. ರೋಹಿತನ ಕೊನೆಯ ಪತ್ರ ಮೂಡಿಸಿದ ಬೇಸರದಿಂದ ಹೊರಬರುವಷ್ಟರಲ್ಲಿ 2014ರ ಸೆಪ್ಟೆಂಬರ್ ನಾಲ್ಕರಂದು ಐಐಟಿ ಬಾಂಬೆಯಲ್ಲಿ ಸತ್ತ ಅನಿಕೇತ್ ಅಂಬ್ಹೋರ್ ಎಂಬ ವಿದ್ಯಾರ್ಥಿಯ ತಾಯಿ ರೋಹಿತನ ಕುಟುಂಬಸ್ಥರಿಗೆ ಮತ್ತು ಗೆಳೆಯರಿಗೆ ಬರೆದ ಪತ್ರ ಮತ್ತಷ್ಟು ಬೇಸರ ಮೂಡಲು ಕಾರಣವಾಗಿದೆ. ಆ ತಾಯಿಯ ಅನೇಕ ಪ್ರಶ್ನೆಗಳಿಗೆ ಉತ್ತರ ಕೊಡುವ ಸಾಮರ್ಥ್ಯ ನಮ್ಮ ಸಮಾಜಕ್ಕೆ ಬಂದೇ ಇಲ್ಲ. ಜೀವನದಲ್ಲಿ ಮಾಡಿದ ಹತ್ತಲವು ತಪ್ಪುಗಳಲ್ಲಿ ಎಂಬಿಬಿಎಸ್ ಮಾಡುವಾಗ ಜಾತಿಯಾಧಾರಿತ ಮೀಸಲಾತಿ ಅಳಿಯಬೇಕು ಎಂಬ ಅಸಂಬದ್ಧ ಹೋರಾಟದಲ್ಲಿ ಭಾಗಿಯಾಗಿದ್ದೂ ಒಂದು. ಜಾತಿ ವ್ಯವಸ್ಥೆಯ ಕ್ರೂರ ಮುಖಗಳ ಪರಿಚಯವೇ ಇಲ್ಲದೆ ಭಾಗವಹಿಸಿಬಿಟ್ಟಿದ್ದ ದಿನಗಳವು. ಆ ಪ್ರತಿಭಟನೆಯಲ್ಲಿ ಮೈಸೂರು ಮೆಡಿಕಲ್ ಕಾಲೇಜಿನ ದಲಿತ ಹುಡುಗನೂ ಭಾಗವಹಿಸಿದ್ದಾನಂತೆ ಎನ್ನುವ ಸುದ್ದಿ ಮೀಸಲಾತಿ ತಪ್ಪು ಎನ್ನುವ ನಂಬಿಕೆಗೆ ಮತ್ತಷ್ಟು ಬಲ ತಂದಿತ್ತು. ಅನಿಕೇತನ ತಾಯಿಯ ಪತ್ರ ಓದುತ್ತಿದ್ದಂತೆ ಆ ಹುಡುಗ ಆ ಚಳುವಳಿಯಲ್ಲಿ ಭಾಗವಹಿಸುವುದರ ಹಿಂದೆ ಎಷ್ಟೆಲ್ಲ ಮಾತುಗಳನ್ನು, ಸಲಹೆಗಳನ್ನು, ಸವರ್ಣೀಯರ ಚರ್ಚೆಯನ್ನು ಕೇಳಿರಬೇಕು, ಅವನ ಮನದಲ್ಯಾವ ಭಾವನೆಗಳೆಲ್ಲ ಹರಿದಿರಬೇಕು ಎಂಬ ಯೋಚನೆ ಬಂತು. ನನ್ನ ಗೆಳತಿಯೊಬ್ಬಳಿದ್ದಳು, ಅವಳು ಹೇಳ್ತಿದ್ದಳು ಪ್ರತೀ ವರ್ಷ ಎಪ್ಪತ್ತು ಪರ್ಸೆಂಟ್ ತೆಗುದ್ರೂ ನೀನ್ ಬಿಡಮ್ಮ ರಿಸರ್ವೇಷನ್ನು ಅಂತ ಕೆಲವರು ಬೆನ್ನ ಹಿಂದೆ ಆಡಿಕೊಂಡರೆ, ಹಲವರು ನೇರವಾಗಿಯೇ ಹೇಳಿಬಿಡುತ್ತಿದ್ದರು, ಮೀಸಲಾತಿಯಿಂದ ಬಂದ ದಲಿತ ಹುಡುಗಿಯೊಬ್ಬಳು ನಮಗಿಂತ ಹೆಚ್ಚು ಅಂಕಗಳನ್ನು ತೆಗೆಯಬಲ್ಲಳು ಎನ್ನುವುದೇ ಅವರಿಗೆ ಅಪಥ್ಯದ ಸಂಗತಿಯಾಗಿತ್ತು ಅಂತ. 
ನಮ್ಮ ಸಮಾಜಕ್ಕೆ ದಲಿತತ್ವದಿಂದ, ಅಂಬೇಡ್ಕರ್ ವಿದ್ಯಾರ್ಥಿ ಸಂಘದಿಂದ, ಪೆರಿಯಾರ್ ಸ್ಟಡಿ ಸರ್ಕಲ್ಲಿನಿಂದ ಯಾವ ಆಪತ್ತೂ ಇಲ್ಲ. ಬ್ರಾಹ್ಮಣ್ಯ ಪಾಲಿಸುವ ಬ್ರಾಹ್ಮಣರ ನೀಚತನ, ಬ್ರಾಹ್ಮಣ್ಯದ ಪಾದ ನೆಕ್ಕುತ್ತ ಬ್ರಾಹ್ಮಣರಿಗಿಂತ ಕೀಳಾದರೇನು, ದಲಿತರಿಗಿಂತ ನಾವು ಮೇಲಲ್ಲವೇ ಎನ್ನುವ ಭ್ರಮೆ ತುಂಬಿಕೊಂಡ ಶೂದ್ರರ ದೂರ್ತತನ, ಶೈಕ್ಷಣಿಕವಾಗಿ ಮೇಲೆ ಬಂದು ಆರ್ಥಿಕ ಉನ್ನತಿ ಕಾಣುತ್ತಿದ್ದಂತೆ ಬೇರುಗಳನ್ನು ಮರೆತು ಬ್ರಾಹ್ಮಣ್ಯದ ಹಿಂದೆ ನಾ ಮುಂದು ತಾಮುಂದು ಎಂದು ಓಡುತ್ತ ಬೆಳವಣಿಗೆಯ ಮೆಟ್ಟಿಲ ಮೇಲೆ ಮೊದಲ ಹೆಜ್ಜೆಯನ್ನೂ ಇಡದ ಇತರೆ ದಲಿತರನ್ನು ಕೀಳಾಗಿ ಕಾಣಲಾರಂಭಿಸಿರುವ ದಲಿತರಿಂದ ನಮ್ಮ ಸಮಾಜಕ್ಕೆ ನಿಜವಾದ ಅಪಾಯವಿದೆ. ‘ನಮ್ಮ ಮಕ್ಕಳು ಈ ಜಾತಿ ವ್ಯವಸ್ಥೆಯ ವಿರುದ್ಧ ಇನ್ನೂ ಎಲ್ಲಿಯವರೆಗೆ ಹೋರಾಡಬೇಕೋ ಗೊತ್ತಿಲ್ಲ’ ಎಂದು ಬೇಸರದಿಂದ ಹೇಳುವ ಅನಿಕೇತನ ಅಮ್ಮನ ಮಾತುಗಳಿಗೆ ಸಮಂಜಸ ಪ್ರತ್ಯುತ್ತರ ನಮ್ಮಲಿದೆಯೇ? - ಡಾ. ಅಶೋಕ್. ಕೆ. ಆರ್



ಐಐಟಿ, ಮುಂಬೈನಲ್ಲಿ ನಾಲ್ಕನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಅನಿಕೇತ್ ಅಂಬ್ಹೋರ್ ಸಂಶಯಾಸ್ಪದ ರೀತಿಯಲ್ಲಿ ಕ್ಯಾಂಪಸ್ಸಿನೊಳಗೆ ನಾಲ್ಕನೇ ಸೆಪ್ಟೆಂಬರ್ 2014ರಂದು ಸಾವನ್ನಪ್ಪುತ್ತಾನೆ. ಮರಣದ ನಂತರ ಅನಿಕೇತನ ಹೆತ್ತವರಾದ ಸುನಿತಾ ಮತ್ತು ಸಂಜಯ್ ಐಐಟಿಯ ನಿರ್ದೇಶಕರಿಗೆ ಹತ್ತು ಪುಟದ ಪತ್ರ ಬರೆದು ಅನಿಕೇತ್ ಕ್ಯಾಂಪಸ್ಸಿನೊಳಗೆ ಅನುಭವಿಸಿದ ಜಾತಿ ತಾರತಮ್ಯವನ್ನು ವಿವರಿಸುತ್ತಾರೆ. ಇದರ ನಂತರ ಸಾವಿನ ಕುರಿತು ತನಿಖೆ ನಡೆಸಲೊಂದು ಸಮಿತಿ ರಚನೆಯಾಗುತ್ತದೆ. ಅನಿಕೇತನ ಕುಟುಂಬ ಮತ್ತು ಸ್ನೇಹಿತರ ಸತತ ಒತ್ತಾಯದ ನಂತರವೂ ಸಮಿತಿಯ ವರದಿಯನ್ನು ಬಹಿರಂಗಗೊಳಿಸುವುದಿಲ್ಲ. ಅನಿಕೇತನ ತಾಯಿ ಸುನಿತ ರೋಹಿತ್ ವೇಮುಲನ ಕುಟುಂಬದವರಿಗೆ ಮತ್ತು ಸ್ನೇಹಿತರಿಗೊಂದು ಪತ್ರ ಬರೆದಿದ್ದಾರೆ. 



23, ಜನವರಿ 2015.
ರೋಹಿತ್ ವೇಮುಲನ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ,


ರೋಹಿತ್ ವೇಮುಲನ ಕೊನೆಯ ಪತ್ರವನ್ನು ಓದಿದ ಮೇಲೆ ಉಸಿರು ಕಟ್ಟಿದಂತಾಗುತ್ತಿದೆ, ಆರಾಮಿಲ್ಲವೆನ್ನಿಸುತ್ತಿದೆ. ಶಿಕ್ಷೆಯ ಹೆಸರಿನಲ್ಲಿ ಸಂಶೋಧಕನೊಬ್ಬನಿಗೆ ಏಳು ತಿಂಗಳಿಂದ ಸ್ಕಾಲರ್ ಶಿಪ್ ಸಿಗುವುದಿಲ್ಲ, ಹಾಸ್ಟೆಲ್ಲಿನಿಂದ ಹೊರದಬ್ಬಲಾಗುತ್ತದೆ, ಎಲ್ಲವೂ ಆತನನ್ನು ಒಳಗಿನಿಂದ ಮುರಿದುಹಾಕುವ ಯತ್ನ. ರೋಹಿತ್ ಪತ್ರದಲ್ಲಿ ಯಾರನ್ನೂ ದೂಷಿಸಿಲ್ಲವಾದರೂ ಹೃದಯ ಹಿಂಡುವ ಪತ್ರವದು. ನನಗೆ ರೋಹಿತ್ ಮತ್ತು ಅನಿಕೇತನ ಯೋಚನೆಗಳಲ್ಲಿರುವ ಸಾಮ್ಯತೆ ಎದ್ದುಕಾಣಿಸುತ್ತಿದೆ ಮತ್ತು ಅವರಿಬ್ಬರೂ ಅನುಭವಿಸಿದ ನೋವೆಂತಹದಿರಬಹುದೆಂಬುದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಅನಿಕೇತ್ ಯಾವುದೇ ಪತ್ರ ಬಿಟ್ಟು ಹೋಗಲಿಲ್ಲ, ಆದರೆ ಅವನ ಡೈರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿರುವ ವಾಕ್ಯಗಳಿಂದ, ಅವನ ಕವಿತಗಳಿಂದ ಜೀವ ತೆಗೆದುಕೊಳ್ಳುವ ಹಂತದಲ್ಲಿದ್ದ ಇಬ್ಬರ ಮನಸ್ಥಿತಿಯೂ ಒಂದೇ ತೆರನಾಗಿತ್ತು ಎಂದು ಕಂಡುಕೊಂಡಿದ್ದೇನೆ.

ಅನಿಕೇತನೂ ಸಮಾನತೆಯ ಬಗ್ಗೆ ಮಾತನಾಡುತ್ತಿದ್ದ, ಮತ್ತು ಸಂಪೂರ್ಣ ಮನಸ್ಸಿನೊಂದಿಗೆ ತೃತೀಯ ಲಿಂಗಿಗಳ ಹೋರಾಟಕ್ಕೆ ಬೆಂಬಲಿಸುತ್ತಿದ್ದ. ಹೆತ್ತವರ ಬಗ್ಗೆ ಅವನಿಗೆ ಬಹಳಷ್ಟು ಯೋಚನೆಯಿತ್ತು. ಜಾತಿ, ಮೀಸಲಾತಿ, ದೇವರ ಬಗೆಗಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದ. ಐಐಟಿಯ ಪೂರ್ವಭಾವಿ ಪರೀಕ್ಷೆಗೆ ತಯಾರಿ ನಡೆಸುವ ದಿನಗಳಿಂದಲೂ ಅನುಭವಿಸುತ್ತಿದ್ದ ತಾರತಮ್ಯದ ಹಿಂದಿನ ಮನಸ್ಸುಗಳನ್ನು ಎದುರಿಸುತ್ತಿದ್ದ.

ಯಾವಾಗ ಸಶಕ್ತರ ವಿರುದ್ಧದ ಹೋರಾಟದಲ್ಲಿ ವ್ಯಕ್ತಿಯೊಬ್ಬ ದಣಿದುಬಿಡುತ್ತಾನೋ, ಆಗಷ್ಟೇ ಅವನಿಗೆ ಖಾಲಿತನ ಕಾಡುತ್ತದೆ, ನನ್ನ ಮಗನ ಮತ್ತು ರೋಹಿತನ ಜೀವನದಲ್ಲಿ ಕಂಡಂತೆ. ಈ ಖಾಲಿತನ ಸೂಕ್ಷ್ಮಮತಿಗಳಿಗೆ, ಹೆಚ್ಚು ಯೋಚಿಸುವವರಿಗೆ ಮತ್ತು ತಮ್ಮ ಕನಸನ್ನು ನನಸಾಗಿಸಿಕೊಳ್ಳಬಯಸುವವರಿಗೆ ಭಯ ಮೂಡಿಸುತ್ತದೆ. ಈ ರೀತಿಯ ಜನರು ತಮ್ಮ ಸ್ವಭಾವದಿಂದಾಗಿ ಇತರರನ್ನು ದೂಷಿಸುವುದಿಲ್ಲ, ಮುಂದೆ ಸಾಗಲಾಗದಂತಹ ಒಂದು ಹಂತವನ್ನು ತಲುಪಿಬಿಡುತ್ತಾರೆ. ಅನಿಕೇತನ್ಯಾಕೆ ಅಷ್ಟೊಂದು ಯೋಚಿಸುತ್ತಿದ್ದ? ನಾವವನು ನಗುವುದನ್ನು, ಮಿಮಿಕ್ರಿ ಮಾಡುವುದನ್ನು, ಹಾಡುವುದನ್ನು ನೋಡಿದ್ದೆವು. ನನ್ನ ಮಗ ನಗು ಮರೆಯುವಂತಹದ್ದು ಐಐಟಿಯಲ್ಲೇನಿತ್ತು? ಅವನ ಮರಣದ ನಂತರ ವೈದ್ಯರು ಹೇಳಿದರು, ಅನಿಕೇತ್ ಗೊಂದಲದಲ್ಲಿದ್ದ ಎಂದು. ಆದರೆ ವಿಜ್ಞಾನ ಮತ್ತು ಗಣಿತ ಮೊದಲಿನಿಂದಲೂ ಅವನ ಮೆಚ್ಚಿನ ವಿಷಯಗಳು, ಅವನು ಗೊಂದಲಕ್ಕೇಕೆ ಈಡಾದ?

ಐಐಟಿಯಲ್ಲಿ ಅನಿಕೇತ್ ಅಪಮಾನಗಳನ್ನೆದುರಿಸಿರಬೇಕು, ಖಾಲಿತನ ಮೂಡಿರಬೇಕು. ಇದು ಪ್ರತ್ಯಕ್ಷವಾಗಲ್ಲದಿದ್ದರೂ ಪರೋಕ್ಷವಾಗಿತ್ತು, ದಿನನಿತ್ಯದ ಚರ್ಚೆಗಳಲ್ಲಿ, ಗುರುಗಳು ಕೊಡುವ ಸಲಹೆಗಳೆಲ್ಲ ಇದನ್ನವನು ಅನುಭವಿಸಿರಬೇಕು. ಐಐಟಿ ಮಾತ್ರವಲ್ಲ, ಇತರೆ ಪ್ರತಿಷ್ಟಾರ್ಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಈ ಅಹಂಭಾವದ ಯೋಚನಾ ಲಹರಿಯಿದೆ. ಮೀಸಲಾತಿಯ ಮೂಲಕ ಈ ಸಂಸ್ಥೆಗಳಿಗೆ ಬಂದ ವಿದ್ಯಾರ್ಥಿಗಳಿಗೆ ಪದೇ ಪದೇ “ನೋಡು, ನೀನು ಮತ್ತು ನಾನು ಒಂದೇ ಆರ್ಥಿಕ ಪರಿಸ್ಥಿತಿಯಿಂದ ಬಂದಿದ್ದೇವೆ, ಆದರೂ ನಿನಗೆ ನಿನ್ನ ಜಾತಿಯ ಕಾರಣದಿಂದ ವಿಶೇಷ ಸೌಲತ್ತುಗಳು ಲಭಿಸಿವೆ…. ಮೀಸಲಾತಿ ತಪ್ಪು” ಹೇಳಲಾಗುತ್ತದೆ. ಇನ್ನಿತರೆ ಅದೇ ರೀತಿಯ ಸಂಗತಿಗಳನ್ನು ಹೇಳುತ್ತಾರೆ.

ಈ ಕಾರಣದಿಂದ ಅನಿಕೇತ್ ಜಾತಿಯ ಬೇರುಗಳನ್ನು ಹುಡುಕಲು ಶುರುಮಾಡಿದ. ವೈದಿಕ ಧರ್ಮ, ಅದರ ಪುಸ್ತಕಗಳು ಮತ್ತು ಅವುಗಳಲ್ಲಿನ ಜ್ಞಾನವೆಲ್ಲವೂ ಸತ್ಯವೆಂದು ಹೇಳುತ್ತ ಅದಕ್ಕೊಂದು ವೈಜ್ಞಾನಿಕ ರೂಪ ಕೊಟ್ಟು ಹುಡುಗರ ತಲೆಗೆ ಅಂತಹ ವಿಚಾರಗಳನ್ನು ತುಂಬುವ ಕೆಲಸ ಪ್ರತಿಷ್ಟಿತ ಸಂಸ್ಥೆಗಳಲ್ಲಿ ನಡೆಯುತ್ತಿದೆ. ಆದರೆ ಜಾತಿ ತಾರತಮ್ಯದಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರೆ ಸಂಸ್ಥೆಯ ವತಿಯಿಂದ ಯಾವುದೇ ನೆರವು ಸಿಗುವುದಿಲ್ಲ. ಈ ಸಮಸ್ಯೆಗಳ ಬಗ್ಗೆ ಸಮಾಲೋಚಿಸುವುದಿಲ್ಲ, ಇವನ್ನು ಸಮಸ್ಯೆ ಎಂದೇ ಪರಿಗಣಿಸುವುದಿಲ್ಲ, ಒಂದು ವರ್ಗದ ವಿದ್ಯಾರ್ಥಿ ಇದನ್ನು ಎದುರಿಸಬೇಕಾಗಿರುವುದು ವಾಸ್ತವ ಎಂದು ಬಿಂಬಿಸಿಬಿಡುತ್ತಾರೆ. ಮೀಸಲಾತಿ ಪಡೆಯುವುದನ್ನು ಅಪರಾಧದಂತೆ ನೋಡಲಾಗುತ್ತದೆ. ನೀವು ಮೀಸಲಾತಿ ಪಡೆದಿದ್ದರೆ ಜನರ ವಾದ ಮತ್ತು ತೀರ್ಪುಗಳನ್ನು ನೀವು ಎದುರಿಸಬೇಕೆಂದು ನಿರೀಕ್ಷಿಸುವುದು ಸವರ್ಣೀಯರ ಮನಸ್ಥಿತಿಯಾಗಿದೆ. ಅನಿಕೇತ್ ಮತ್ತು ಇತರೆ ಮಕ್ಕಳ ಸ್ಥಿತಿಯನ್ನು ಅನುಭೂತಿಯಿಂದ ನೋಡದೆ, ಅವರ ಸಾಮರ್ಥ್ಯದಲ್ಲಿನ ಕೊರತೆಯಾಗಿ, ಹೆತ್ತವರ ಒತ್ತಡದಂತೆ, ಜಾಸ್ತಿ ನಿರೀಕ್ಷೆಯಂತೆ ನೋಡುತ್ತಾರೆ, ಕಾರಣ? ನಿಜವಾದ ಸಮಸ್ಯೆಯ ಬಗ್ಗೆ ಸವರ್ಣೀಯರಾಗ ತಲೆ ಕೆಡಿಸಿಕೊಳ್ಳಬೇಕಿಲ್ಲ.

ತನ್ನ ಗುರುತನ್ನು ಅನಿಕೇತ್ ಕಳೆದುಕೊಂಡುಬಿಟ್ಟಿದ್ದ. “ನಾನ್ಯಾರು?” – ಇಂತಹ ಪ್ರಶ್ನೆ ಯಾಕೆ ಅವನನ್ನು ಕಾಡಬೇಕಿತ್ತು? ಐಐಟಿಗೆ ಬಂದ ಮೇಲೆ ಅನಿಕೇತ್ ಗ್ರಹ, ನಕ್ಷತ್ರ, ಆತ್ಮ, ಉನ್ನತಾತ್ಮ ಅಥವಾ ಇತರೆ ಪ್ರಪಂಚದ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಬೇಕಿತ್ತು? ಅವನ ಸ್ಪಷ್ಟ ಯೋಚನೆಗಳು, ಕ್ರಿಯಾತ್ಮಕ ಬುದ್ಧಿ ಮತ್ತವನ ನಗು ಎಲ್ಲಿ ಕಳೆದುಹೋಯಿತೆಂದು ನಮಗೆ ಗೊತ್ತಿಲ್ಲ. ನಮ್ಮ ಒಂದೇ ಒಂದು ಅಪರಾಧವೆಂದರೆ ಅವನನ್ನು ಐಐಟಿಗೆ ಜಾತಿ ಸರ್ಟಿಫಿಕೇಟಿನೊಡನೆ ಕಳುಹಿಸಿದ್ದು. ಅವನನ್ನು ಸಾಮಾನ್ಯ ಸಂಸ್ಥೆಗೆ ಸೇರಿಸಿದ್ದರೆ ಅವನ ಮನಸ್ಸನ್ನು ದುರ್ಬಲಗೊಳಿಸಿದ ಅಷ್ಟೊಂದು ಚರ್ಚೆ ಮತ್ತು ಸಲಹೆಗಳನ್ನವನು ಕೇಳಬೇಕಿರಲಿಲ್ಲ. ನೀನು ಅಸಾಮರ್ಥ್ಯ ಎನ್ನುವ ಭಾವನೆಯನ್ನು ಸಮರ್ಥ, ವಿವೇಕವುಳ್ಳ, ನಗುವಿನ ಹುಡುಗ ಅನಿಕೇತನಲ್ಲಿ ತುಂಬಿದ್ಯಾರು?

ಮಾನವ ಸಂಪನ್ಮೂಲ ಇಲಾಖೆಗೆ, ಪರಿಶಿಷ್ಟ ಜಾತಿಗಳ ಕಮಿಷನ್ನಿಗೆ ಬರೆದ ಯಾವ ಪತ್ರಕ್ಕೂ ನಮಗೆ ಪ್ರತಿಕ್ರಿಯೆ ಸಿಕ್ಕಿಲ್ಲ. ನಮ್ಮ ಮನವಿಯ ನಂತರ ಐಐಟಿ ಬಾಂಬೆ ತನಿಖಾ ಸಮಿತಿಯನ್ನೇನೋ ನೇಮಿಸಿತು ಆದರೆ ಸಂಸ್ಥೆಯ ಕಾರ್ಯವೈಖರಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ, ಸಮಿತಿಯ ವರದಿಯ ಬಗ್ಗೆ ನಮಗ್ಯಾವುದೇ ಮಾಹಿತಿಯಿಲ್ಲ. ಬಹುಶಃ ಉತ್ತರ ಕೊಡುವುದು ಅನವಶ್ಯಕ ಎಂದವರು ತಿಳಿದರೇನೋ…….

ನಮ್ಮ ಕಣ್ಣಲ್ಲಿ ನಾವು ತುಂಬ ಚಿಕ್ಕವಾರಾಗಿಬಿಟ್ಟಿದ್ದೀವಿ. ರೋಹಿತನ ಘಟನೆ ಮತ್ತೊಮ್ಮೆ ಈ ವಿಷಯವನ್ನು ಮುನ್ನೆಲೆಗೆ ತಂದಿದೆ. ಅನಿಕೇತ್ ಮತ್ತು ರೋಹಿತ್ ಎದುರಿಸಿದ ಸಂದರ್ಭಗಳು ಬೇರೆ ಬೇರೆ ಇದ್ದವು ಆದರೆ ಹೋರಾಟಕ್ಕಿದ್ದ ಕಾರಣ ಒಂದೇ ಆಗಿತ್ತು. ನಮ್ಮ ಮಕ್ಕಳು ಈ ಅವಿತು ಕುಳಿತ ಜಾತಿವ್ಯವಸ್ಥೆಯ ವಿರುದ್ಧ ಎಲ್ಲಿಯವರೆಗೆ ಹೋರಾಡಬೇಕೋ ಗೊತ್ತಿಲ್ಲ. ನಾವೂ ಹೋರಾಡುತ್ತಿದ್ದೇವೆ…..

ವಿದ್ಯಾರ್ಥಿಗಳ ಹೋರಾಟವಷ್ಟೇ ಈಗ ಉಳಿದಿರುವ ಆಶಾಕಿರಣ. ಬಹುಶಃ ವಿದ್ಯಾರ್ಥಿಗಳಿಗಷ್ಟೇ ನಿದ್ರಾವಸ್ಥೆಯಲ್ಲಿರುವ ವ್ಯವಸ್ಥೆಯನ್ನು ಬಡಿದೆಬ್ಬಿಸುವ ಶಕ್ತಿಯಿರುವುದು. ರೋಹಿತನ ಕುಟುಂಬ ಮತ್ತು ದಲಿತ ಸಮುದಾಯ ಅನುಭವಿಸುತ್ತಿರುವ ನೋವಿಗೆ ಒಂದಷ್ಟು ಶಾಂತಿ ದೊರಕುವುದೆಂಬ ನಿರೀಕ್ಷೆಯಲ್ಲಿದ್ದೀವಿ.

ಅನಿಕೇತನ ತಾಯಿ,
ಸುನಿತ ಅಂಬ್ಹೋರ್.
(ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್)

ಜನ 31, 2016

ರೋಹಿತ್ ವೇಮುಲನ ಆತ್ಮಹತ್ಯೆಯನ್ನು ರಾಜಕೀಯಗೊಳಿಸುತ್ತಿರುವವರಾರು?

ರೋಹಿತ್ ವೇಮುಲನ ಸಾವನ್ನು ಪ್ರತಿಭಟಿಸಿದ ವಿರೋಧ ಪಕ್ಷದವರಲ್ಲಿ ಅವಕಾಶವಾದಿತನದ ಒಂದಂಶವಿತ್ತು. ಆದರೆ ಬಿಜೆಪಿಗೆ ಹೋಲಿಸಿದರೆ ಅವರು ಬಂದಿದ್ದು ತುಂಬ ತಡವಾಗಿ.
ಅಂಜಲಿ ಮೋದಿ, scroll.in
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್

ರೋಹಿತ್ ವೇಮುಲನ ಗೆಳೆಯರು ಮತ್ತು ಸಂಗಾತಿಗಳು ಅವನ ಆತ್ಮಹತ್ಯೆಗಿದ್ದ ನೈಜ ಕಾರಣವನ್ನು ತಿಳಿಸಲು ಪ್ರಯತ್ನಪಡುವಾಗ, ರೋಹಿತನ ಸಾರ್ವಜನಿಕ ಜೀವನ ಮತ್ತು ವೈಯಕ್ತಿಕ ಹತಾಶೆ ಮತ್ತು ಏಕಾಂಗಿ ಸಾವನ್ನು ಬೇರೆಬೇರೆಯಾಗಿ ನೋಡುವುದು ಸಾಧ್ಯವೇ ಇಲ್ಲ. ಸಂದರ್ಶನವೊಂದರಲ್ಲಿ ಅವನ ರೂಮ್ ಮೇಟ್: “ಬಹುಶಃ ವಸ್ತುಸ್ಥಿತಿ ಬದಲಾಗಲು ಒಬ್ಬರ್ಯಾರಾದರೂ ಸಾಯಬೇಕು ಎಂದವನು ಯೋಚಿಸಿರಬೇಕು. ಮತ್ತವನು ಹೀಗೆ ಮಾಡಿಕೊಂಡುಬಿಟ್ಟ.”

ಆದರೆ, ಜೀವ ತೆಗೆದುಕೊಂಡುಬಿಡುವ ರೋಹಿತನ ನಿರ್ಧಾರ ಸಮಾಜವನ್ನು ಬದಲಿಸಲು ತೆಗೆದುಕೊಂಡ ಕೊನೆಯ ರಾಜಕೀಯ ನಡೆಯಾ? ರಾಜಕೀಯ ಶಕ್ತಿಗಳ ದುರುಪಯೋಗದಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಂಡನಾ? ಶೂನ್ಯದಾಚೆಗೆ ಮತ್ತೇನನ್ನು ನೋಡದ ಯುವಕನೊಬ್ಬನ ವಿವೇಚನಾರಹಿತ ಕಾರ್ಯವಾ?

ಅವನ ಕಾವ್ಯಾತ್ಮಾಕ ಕೊನೆಯ ಪತ್ರವನ್ನು ನೂರು ರೀತಿಯಲ್ಲಿ ಓದಿಕೊಳ್ಳಬಹುದು, ಪ್ರತಿ ಓದುಗ ತನಗನುಕೂಲವಾದ ಅರ್ಥವನ್ನು ಕಂಡುಕೊಳ್ಳುತ್ತಾಳೆ.

ಬಿಜೆಪಿ ರೋಹಿತನ ಪತ್ರವನ್ನು ಕ್ಲೀನ್ ಚಿಟ್ ನಂತೆ ನೋಡುವ ನಿರ್ಧಾರ ಮಾಡಿಬಿಟ್ಟಿದೆ. ಬಿಜೆಪಿಯ ವಿದ್ಯಾರ್ಥಿ ಪಡೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪರವಾಗಿ ಹೈದರಾಬಾದ್ ವಿಶ್ವವಿದ್ಯಾಲಯದ ಮೇಲೆ ಒತ್ತಡ ಹೇರಿದ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಘೋಷಿಸುತ್ತಾರೆ: 

“ಈ ಪತ್ರದಲ್ಲಿ ವಿಶ್ವವಿದ್ಯಾಲಯದ ಯಾವ ಅಧಿಕಾರಿಯ ಹೆಸರಿಲ್ಲ, ಯಾವುದೇ ರಾಷ್ಟ್ರೀಯ ರಾಜಕೀಯ ಪಕ್ಷವನ್ನು ಹೆಸರಿಸಿಲ್ಲ, ಯಾವ ಸಂಸದನ ಹೆಸರಿಲ್ಲ”

ಎಬಿವಿಪಿಯ ಮುಖಂಡ ಸುಶೀಲ್ ಕುಮಾರ ಹಲ್ಲೆಯ ದೂರು ನೀಡಿದ್ದು (ಪೋಲೀಸರ ಪ್ರಕಾರ ದೂರನ್ನು ಉತ್ಪ್ರೇಕ್ಷಿಸಲಾಗಿತ್ತು) ರೋಹಿತ್ ವೇಮುಲ ರಾಜಕೀಯ ಸುಳಿಯಲ್ಲಿ ಸಿಲುಕುವ ಮುನ್ನುಡಿಯಾಗಿತ್ತು. ಸುಶೀಲ್ ಕುಮಾರ್ ಕೂಡ ಸ್ಮೃತಿ ಇರಾನಿಯವರೆಂತೆಯೇ ಪತ್ರವನ್ನು ವಿಶ್ಲೇಷಿಸುತ್ತಾರೆ:

“ಆ ಆತ್ಮಹತ್ಯಾ ಪತ್ರವನ್ನು ನೂರರಿಂದ ಇನ್ನೂರು ಸಲ ಓದಿದ್ದೇನೆ. ಯಾರ ಹೆಸರನ್ನೂ ಆತ ಉಲ್ಲೇಖಿಸುವುದಿಲ್ಲ; ಇಂತಿಂತವರು ಜವಾಬ್ದಾರರು ಎಂದು ಹೇಳುವುದಿಲ್ಲ”

ಬಿಜೆಪಿ ಈ ಸಾವಿನ ಆರೋಪದಿಂದ ಮುಕ್ತವಾಗುವುದಷ್ಟೇ ಬೇಕಾಗಿಲ್ಲ, ರೋಹಿತ್ ವೇಮುಲನ ಸಾವು ನಡೆದದ್ದೇಗೆ ಎನ್ನುವುದರ ನಿರೂಪಣೆಯನ್ನು ಅವರೇ ನಿಯಂತ್ರಿಸಬೇಕೆಂದಿದ್ದಾರೆ. ಜನರು ರೋಹಿತನ ಪತ್ರವನ್ನು ಜಾತಿ ವ್ಯವಸ್ಥೆಯ ಅಸಮಾನತೆಗಳ ಕುರಿತ ಪತ್ರ, ಅಂಚಿನ ಸಮುದಾಯದ ಜನರು ಎದುರಿಸುತ್ತಿರುವ ಪಕ್ಷಪಾತದ ಕುರಿತ ಪತ್ರದಂತೆ ಓದಿಕೊಂಡಿದ್ದು ಬಿಜೆಪಿಗೆ ಇರುಸುಮುರುಸು ಉಂಟುಮಾಡಿತು. ರೋಹಿತ್ ಬರೆಯುತ್ತಾನೆ, 

“ಮನುಷ್ಯನ ಮೌಲ್ಯ ಅವನ ತತ್ ಕ್ಷಣದ ಗುರುತು ಮತ್ತು ಸಾಧ್ಯತೆಗಳಿಗೆ ಇಳಿದುಬಿಟ್ಟಿದೆ. ಒಂದು ವೋಟಿಗೆ. ಒಂದು ನಂಬರ್ರಿಗೆ. ಒಂದು ವಸ್ತುವಿಗೆ. ನಕ್ಷತ್ರದ ಧೂಳಿನಿಂದ ಉದ್ಭವವಾದ ಅತ್ಯದ್ಭುತ ವಸ್ತುವಿನಂತಹ ಬುದ್ಧಿವಂತಿಕೆ ಮೂಲಕ ಎಂದೂ ಮನುಷ್ಯನನ್ನು ಗುರುತಿಸಲಿಲ್ಲ. ಬೀದಿಯಲ್ಲಿ, ಓದಿನಲ್ಲಿ, ರಾಜಕೀಯದಲ್ಲಿ, ಸಾವಿನಲ್ಲಿ, ಬದುಕಿನಲ್ಲಿ.”

ಜನರು ಈ ಪ್ರಕರಣವನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆಂದು ಹೇಳುವ ಇರಾನಿ “ಇದನ್ನು ಜಾತಿ ಕದನವಾಗಿ ಮಾರ್ಪಡಿಸಿ ಕೆರಳಿಸುವ ದುರುದ್ದೇಶದಿಂದ ಕೂಡಿದ ಪ್ರಯತ್ನ” ಎಂದು ಹೇಳುತ್ತಾರೆ.

ಯಾವುದೇ ಅನುಭೂತಿಯಿಲ್ಲ.

ಆದರೆ, ರೋಹಿತನ ಪತ್ರವನ್ನು ಓದಿದ ಜನರದನ್ನು ಜಾತಿ ತಾರತಮ್ಯ ಎಂದು ಭಾವಿಸುವುದಕ್ಕೆ ಬಹಳ ಮೊದಲೇ, ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ರೋಹಿತ್ ಭಾಗಿಯಾಗಿದ್ದ ಅಂಬೇಡ್ಕರ್ ವಿದ್ಯಾರ್ಥಿ ಸಂಘವನ್ನು “ಜಾತಿವಾದಿ” ಎಂದು ಕರೆದು “ಒಳಿತಿಗಾಗಿ ಕ್ಯಾಂಪಸ್ಸನ್ನು ಬದಲಿಸಿ” ಎಂದು ಇರಾನಿಗೆ ಕೇಳಿಕೊಂಡಿದ್ದರು.

ಬಂಡಾರು ದತ್ತಾತ್ರೇಯ ಪತ್ರ ಬರೆಯಲಿದ್ದ ಏಕೈಕ ಪ್ರಚೋದನೆಯೆಂದರೆ ಎಬಿವಿಪಿಯ ವಿರುದ್ಧ ಅಂಬೇಡ್ಕರ್ ವಿದ್ಯಾರ್ಥಿ ಸಂಘದವರು ಮುಜಾಫರ್ ನಗರದ ಕೋಮುಗಲಭೆಯ ಬಗೆಗಿನ ಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಏರ್ಪಡಿಸಿದ್ದ ಪ್ರತಿಭಟನೆ. ಇಲ್ಲಿ ದತ್ತಾತ್ರೇಯರವರಿಗೆ ಜಾತಿ ಎಲ್ಲಿಂದ ಕಾಣಿಸಿತು, ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಹೆಸರಿನಲ್ಲಿರುವ ‘ಅಂಬೇಡ್ಕರ್’ ಅವರಿಗೆ ಜಾತಿ ಸೂಚಕವಾಗಿ ಕಂಡರಾ?

ಬಿಜೆಪಿಗೆ ರೋಹಿತ್ ವೇಮುಲನ ಸಾವಿನಿಂದಿನ ಘಟನಾವಳಿಗಳನ್ನು ನಿಯಂತ್ರಿಸುವ ಮನಸ್ಸಿರಬಹುದು ಆದರದು ಸಾಧ್ಯವಿಲ್ಲ, ಕಾರಣ ಅದಕ್ಕೆ ಅನುಭೂತಿಯ ಕೊರತೆಯಿದೆ – ಅದರ ಸಿದ್ಧಾಂತ ಮತ್ತು ಸಂಘಗಳಲ್ಲಿ ಸಾಮಾನ್ಯ ಮನುಷ್ಯತ್ವಕ್ಕೆ ಆಸ್ಪದವಿಲ್ಲ. ಆತ್ಮಹತ್ಯೆಯ ಸುದ್ದಿ ಹರಡುತ್ತಿದ್ದಂತೆ, ಯುವ ಪ್ರಾಯದಲ್ಲಿ ಜೀವ ಕಳೆದುಕೊಂಡವನ ಬಗ್ಗೆ ಹೆಸರಿಗೊಂದಷ್ಟು ದುಃಖ ಸೂಚಿಸಿದ ಮರುಕ್ಷಣವೇ ಬಿಜೆಪಿ ಆಕ್ರಮಶೀಲವಾಗಿ ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಬಗೆಗಿನ ದತ್ತಾತ್ರೇಯರ ಅಭಿಪ್ರಾಯವನ್ನು ಸಮರ್ಥಿಸಿಕೊಳ್ಳುತ್ತದೆ ಮತ್ತು ಅದರ ಮುಂದುವರಿಕೆಯಂತೆ ರೋಹಿತ ವೇಮುಲ ಜಾತಿವಾದಿ, ತೀವ್ರಗಾಮಿ ಮತ್ತು ದೇಶದ್ರೋಹಿ, ಹಾಗಾಗಿ ಅವನ ಸಾವಿಗೆ ಸಹಾನುಭೂತಿ ತೋರಬೇಕಿಲ್ಲ ಎಂದು ವಾದಿಸುತ್ತದೆ. ಬಿಜೆಪಿಯ ವಕ್ತಾರರು ಮತ್ತು ಎಬಿವಿಪಿ ಅಂಬೇಡ್ಕರ್ ವಿದ್ಯಾರ್ಥಿ ಸಂಘವು ಯಾಕೂಬ್ ಮೆಮನನ ನೇಣು ಶಿಕ್ಷೆಯನ್ನು ವಿರೋಧಿಸಿದ್ದನ್ನು – ವಿರೋಧವಿದ್ದದ್ದು ಗಲ್ಲು ಶಿಕ್ಷೆಯ ವಿರುದ್ಧ – ಅವರ ದೇಶದ್ರೋಹಿ ಚಟುವಟಿಕೆಗೆ ಆಧಾರದಂತೆ ನೀಡುತ್ತಾರೆ.

ಆತ್ಮಹತ್ಯೆಯ ರಾಜಕೀಯಗೊಳಿಸುವಿಕೆ.

ಯಾವುದೇ ಅಚ್ಚರಿ ಬೇಡ, ಬಿಜೆಪಿ ತನ್ನ ರಾಜಕೀಯ ವಿರೋಧಿಗಳು ರೋಹಿತನ ಆತ್ಮಹತ್ಯೆಯನ್ನು ಬಂಡಾರು ದತ್ತಾತ್ರೇಯರ ಪತ್ರಕ್ಕೆ ಮತ್ತು ಮಾನವ ಸಂಪನ್ಮೂಲ ಇಲಾಖೆ ಹಲವು ಸಲ ಹೈದರಾಬಾದ್ ವಿಶ್ವವಿದ್ಯಾಲಯಕ್ಕೆ ಈ ವಿಷಯವನ್ನು ನೆನಪಿಸಿದ್ದಕ್ಕೆ ಜೋಡಿಸಿದ್ದನ್ನು ‘ರಾಜಕೀಯ’ ಎಂದು ಆರೋಪಿಸಿತು. ವಿರೋಧ ಪಕ್ಷದ ರಾಷ್ಟ್ರ ಮಟ್ಟದ ನಾಯಕರು ರೋಹಿತ್ ವೇಮುಲನ ಸಾವಿಗೆ ಸಂತಾಪ ಸೂಚಿಸಿ ಪ್ರತಿಭಟನೆಗೆ ಇಳಿದಿದ್ದರಲ್ಲಿ ರಾಜಕೀಯದ ಒಂದಂಶವಿದ್ದೇ ಇದೆ. ಆದರವರು ಎಬಿವಿಪಿಯ ಆಪಾದನೆಯನ್ನು ಪರಿಶೀಲಿಸದೆ ವಿದ್ಯಾರ್ಥಿ ಸಂಘಟನೆಯನ್ನು “ಜಾತಿವಾದಿ, ತೀವ್ರಗಾಮಿ ಮತ್ತು ದೇಶವಿರೋಧಿ” ಎಂದು ಬರೆದು, ಯಾವೊಂದು ಆಧಾರವಿಲ್ಲದೆ ಎಬಿವಿಪಿಯ ಸದಸ್ಯ ಮಾರಣಾಂತಿಕ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದೆ ಎಂದು ಹೇಳಿದ್ದನ್ನು ಪತ್ರದಲ್ಲಿ ಪುನರುಚ್ಛರಿಸಿದ ಬಿಜೆಪಿಯ ಮಂತ್ರಿಗಳಿಗೆ ಹೋಲಿಸಿದರೆ ನಿಧಾನಕ್ಕೆ ಬಂದರು.

ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಗಳು ವಿರೋಧ ಪಕ್ಷಗಳ ಈ ಬೆಂಬಲವನ್ನು ಸ್ವಾಗತಿಸುತ್ತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಹಗೆಯುಳ್ಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು ತಮ್ಮ ವಿರುದ್ಧದ ದುರುದ್ದೇಶಪೂರಿತ ದೂರುಗಳಿಗೂ ಪ್ರೋತ್ಸಾಹ ನೀಡುವ ಕೇಂದ್ರ ಸರಕಾರದ ವಿರುದ್ಧ ಹೋರಾಡಲು ಈ ಬೆಂಬಲ ಬೇಕೆನ್ನಿಸಿದ್ದರೆ ಅಚ್ಚರಿಯಿಲ್ಲ.

ರೋಹಿತ್ ವೇಮುಲ ತನ್ನ ಕೊನೆಯ ದಿನಗಳನ್ನು ಹಾಸ್ಟೆಲಿನ ರೂಮಿನ ಬದಲಾಗಿ ತಾತ್ಕಾಲಿಕ ಶೆಡ್ಡಿನಲ್ಲಿ ಕಳೆದ; ಸಂಶೋಧನೆಯನ್ನು ಮುಂದುವರೆಸಲಾಗದ, ಲ್ಯಾಬ್ ಕೆಲಸವನ್ನು ಮುಗಿಸಲಾಗದ ರೋಹಿತ್ ಪೋಲೀಸ್ ದೂರುಗಳು ಮತ್ತು ಮಾತ್ಸರ್ಯದಿಂದ ಎಬಿವಿಪಿಯ ಸದಸ್ಯ ಹಾಕಿದ್ದ ಕೇಸುಗಳು ತನ್ನ ಭವಿಷ್ಯವನ್ನು ನಿರ್ಧರಿಸುವುದನ್ನು ಕಾಯುತ್ತಿದ್ದ. ರೋಹಿತ ವೇಮುಲ ಆಯ್ದುಕೊಂಡ ದಾರಿಯನ್ನು ಅರ್ಥಮಾಡಿಕೊಳ್ಳಬಯಸುವವರು ತಮ್ಮ ಗಮನವನ್ನು ರೋಹಿತನ ಸಾವಿನಿಂದಾರಂಭವಾದ ದೊಡ್ಡ ರಾಜಕೀಯ ನಾಟಕದಿಂದ ಸರಿಸಿ, ಮನುಷ್ಯನನ್ನು ಒಂದು ವೋಟು, ಒಂದು ಸಂಖೈ, ಒಂದು ವಸ್ತುವಾಗಿ ಮಾರ್ಪಡಿಸಿಬಿಟ್ಟ ಸಂಕುಚಿತ ಭಾವ ಮತ್ತು ಭ್ರಷ್ಟತೆಯಿಂದ ಕೂಡಿದ ಮುಖ್ಯವಾಹಿನಿ ರಾಜಕೀಯದ ಪ್ರತಿಬಿಂಬದಂತಿರುವ ವಿಶ್ವವಿದ್ಯಾಲಯ ಮತ್ತು ವಿದ್ಯಾರ್ಥಿಗಳ ರಾಜಕೀಯದತ್ತ ಹರಿಸಬೇಕು.

ಜನ 28, 2016

ಪಿ. ಸಾಯಿನಾಥ್: ಇದು ಹಿಂದೂ ಮೇಲ್ಜಾತಿ ಮೂಲಭೂತವಾದಿಗಳು ಮತ್ತು ದಲಿತ, ದಲಿತೇತರರು, ಮನುಷ್ಯತ್ವವುಳ್ಳ ಮನುಷ್ಯರ ನಡುವಿನ ಸಂಘರ್ಷ

ಸಾಂದರ್ಭಿಕ ಚಿತ್ರ
ರೋಹಿತ್ ವೇಮುಲ ಆತ್ಮಹತ್ಯೆಯನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ಉದ್ದೇಶಿಸಿ ನಮ್ಮ ನಡುವಿನ ಖ್ಯಾತ ಪತ್ರಕರ್ತ ಮತ್ತು ಚಿಂತಕ ಪಿ. ಸಾಯಿನಾಥ್ ಮಾಡಿದ ಭಾಷಣದ ಕನ್ನಡ ಭಾವಾನುವಾದ. . . 
ಕನ್ನಡಕ್ಕೆ: ಡಾ. ಕಿರಣ್ ಎಂ ಗಾಜನೂರು
ಭಾರತದ ತಳವರ್ಗದ, ತುಳಿತಕ್ಕೊಳಗಾದವರ, ಅಂಚಿಗೆ ತಳ್ಳಲ್ಪಟ್ಟವರ ನೆಲೆಯಲ್ಲಿ ಯೋಚಿಸಿದರೆ ರೋಹಿತ್ ಬಹಳ ದೊಡ್ಡ ಸಾಧನೆ ಮಾಡಿದ್ದಾನೆ! ಆತ ಮಾಡಿದ ಸಾಧನೆಯನ್ನು ನೀವು ತಿಳಿದುಕೊಳ್ಳಬೇಕಾದರೆ ಈ ದೇಶದ ಜನಗಣತಿಯ ವರದಿಗಳನ್ನು, ಸಮುದಾಯಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳ ಸಮೀಕ್ಷೆಗಳನ್ನು, ನ್ಯಾಷನಲ್ ಸ್ಯಾಂಪೆಲ್ ಸರ್ವೇ (National Sample Survey) ಇಲಾಖೆಯ ಅಂಕಿ-ಅಂಶಗಳನ್ನು ಗಮನಿಸಬೇಕು. ಆಗ ಆತ ಮಾಡಿರುವ ಸಾಧನೆ ಏನು ಎಂಬುದು ಅರ್ಥವಾಗುತ್ತದೆ.
1.28 ಬಿಲಿಯನ್ ಜನಸಂಖ್ಯೆಯುಳ್ಳ ಭಾರತದಲ್ಲಿ ಕೇವಲ 3 ಶೇಕಡಾ, ಕೇವಲ ಮೂರೇ ಮೂರು ಶೇಕಡಾ ಗ್ರಾಮೀಣ ಕುಟುಂಬಗಳಲ್ಲಿ ಮಾತ್ರ ಪದವೀಧರರಿದ್ದಾರೆ. ಇದು ಭಾರತದ ಒಟ್ಟು ಜನಸಂಖ್ಯೆಯ ಸರಾಸರಿ. ಇದನ್ನು ಆದಿವಾಸಿ ಮತ್ತು ದಲಿತರ ಹಿನ್ನಲೆಯಲ್ಲಿ ನೋಡಿದರೆ ಆ ಸಂಖ್ಯೆ ಇನ್ನೂ ಕೆಳಹಂತದಲ್ಲಿದೆ. ಭಾರತದ ಜನಗಣತಿಯ ವರದಿಗಳು ತೋರಿಸುವಂತೆ ಈ ದೇಶದಲ್ಲಿ ಸುಮಾರು 400 ಮಿಲಿಯನ್ ಜನರು ಇದುವರೆಗೂ ಯಾವುದೇ ಹಂತದ ಶಿಕ್ಷಣ ಸಂಸ್ಥೆಗಳ ಒಳಭಾಗವನ್ನು ನೋಡಿಯೇ ಇಲ್ಲ ! ಆ ಹಿನ್ನಲೆಯಿಂದ ಬಂದ ರೋಹಿತ್ ಮೆರಿಟ್ ಕೋಟಾದಲ್ಲಿ ಪಿ.ಹೆಚ್.ಡಿ ಹಂತಕ್ಕೆ ಬರುತ್ತಾನೆ ಎಂದರೆ ಅದಕ್ಕಿಂತ ಸಾಧನೆ ಏನಿದೆ! ಇದು ಸಾಧನೆ ಎಂದರೆ.
ಆದರೆ ದುರಂತ ಎಂದರೆ ಇಂದು ಈ ಸಮಾಜದ ನಿರಂತರ ಶೋಷಣೆಯನ್ನು, ತಾರತಮ್ಯವನ್ನು ಜಯಿಸಿ ಮೆರಿಟ್ ಆಧಾರದಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಪಿ.ಹಚ್.ಡಿ ಹಂತಕ್ಕೆ ಬಂದ ರೋಹಿತನ ವಿರುದ್ಧ ನಿಂತಿರುವುದು ಕಾಲೇಜು ಡ್ರಾಪ್ ಔಟ್ ಆದ ಶಿಕ್ಷಣ ಸಚಿವರು! ನನಗೆ ತಿಳಿದಿರುವಂತೆ ಇವರು ಭಾರತದ ರಾಜಕೀಯ ಇತಿಹಾಸದಲ್ಲಿನ ಅತ್ಯಂತ ಕಳಪೆ ಶಿಕ್ಷಣ ಸಚಿವರು. ಇದರಲ್ಲಿ ನನಗೆ ಯಾವ ಸಂಶಯವೂ ಇಲ್ಲ! ನಾನು ರೋಹಿತ್ ನನ್ನು ಅವರೊಂದಿಗೆ ಹೋಲಿಸುವುದಿಲ್ಲ, ಏಕೆಂದರೆ ನಮಗೆ ಅವರ ಶೈಕ್ಷಣಿಕ ಅರ್ಹತೆಗಳೇನು ಎಂಬುದೇ ಗೊತ್ತಿಲ್ಲ! ಅವರು ಪ್ರತಿಬಾರಿ ಪ್ರಮಾಣ ಪತ್ರಗಳನ್ನು ಸಲ್ಲಿಸುವಾಗ ಅವರ ಪದವಿ ಬದಲಾಗುತ್ತಿರುತ್ತವೆ, ಕಳೆದ ಚುನಾವಣೆಯ ನಂತರ ಅವರು ಎ.ಎಲ್ ವಿಶ್ವವಿದ್ಯಾನಿಲಯದ ಪ್ರಮಾಣ ಪತ್ರ ಪ್ರದರ್ಶಿಸಿದ್ದರು. . . 
sainath speech on rohit vemula
ಆ ಹುಡುಗನನ್ನು ನೋಡಿ, ಅವನು ಶಾಲೆಗಳ ಮುಖವನ್ನೇ ನೋಡದ ಆ ೪೦೦ ಮಿಲಿಯನ್ ಜನರ ನಡುವಿನಿಂದ ಬಂದಿದ್ದಾನೆ, ಈ ದೇಶದ ಶೋಷಿತ ಇತಿಹಾಸದ ಮಧ್ಯದಿಂದ ಎದ್ದು ಬಂದಿದ್ದಾನೆ. ಈ ಸಮಾಜದ ಶೋಷಣೆಯಿಂದ ನಲುಗಿ, ಜೀತ ಕಾರ್ಮಿಕನಾಗಿ ದುಡಿದು ಪಿ.ಹೆಚ್.ಡಿ ಅಧ್ಯಯನಕ್ಕೆಂದು ಬಂದಿದ್ದಾನೆ.
ಆದರೆ ಏನಾಗುತ್ತಿದೆ ನೋಡಿ? ಕೇಂದ್ರ ಮಂತ್ರಿ ನಾನು ಎರಡು ಪತ್ರ ಬರೆದೆ ಎನ್ನುತ್ತಾರೆ! ಶಿಕ್ಷಣ ಸಚಿವರು ನಾನು ಐದು ಪತ್ರ ಬರೆದೆ ಎಂದು ಹೇಳುತ್ತಿದ್ದಾರೆ. ಆಶ್ಚರ್ಯದ ವಿಷಯ ಎಂದರೆ ಆ ಹುಡುಗರ ಮೇಲೆ ಏನು ಕ್ರಮ ಜರುಗಿಸಲಾಗಿದೆ ಎಂದು ಐದು ಪತ್ರ ಬರೆಯುವ ಶಿಕ್ಷಣ ಸಚಿವರು ಆ ಮಕ್ಕಳಿಗೆ ಕಳೆದ ಏಳು ತಿಂಗಳಿಂದ ಶಿಷ್ಯವೇತನ ಏಕೆ ಕೊಟ್ಟಿಲ್ಲ ಎಂದು ಒಂದೇ ಒಂದು ಸಾಲು ಬರೆಯುವುದಿಲ್ಲ. . .
ಆ ಮಕ್ಕಳ ಕುರಿತು ತೆಗೆದುಕೊಂಡ ಕ್ರಮವನ್ನು ತಿಳಿಯಲು ಐದು ಪತ್ರ ಬರೆಯುವ ನೀವು ಪತ್ರದಲ್ಲಿ ಆ ಹುಡುಗನ ಕುಟುಂಬ ಆಧರಿಸಿದ್ದ, ಆತ ಸರಳವಾಗಿ ಬದುಕು ನಡೆಸಿ ಉಳಿಸಿ ಕುಟುಂಬಕ್ಕೆ ಕಳುಹಿಸುತ್ತಿದ್ದ ಶಿಷ್ಯವೇತನವನ್ನು ತಡೆದ ವ್ಯವಸ್ಥೆಯ ಕುರಿತು ಒಂದು ಪ್ಯಾರ, ಒಂದು ಸಾಲು, ಒಂದೇ ಒಂದು ಪದವನ್ನು ಬರೆಯುವುದಿಲ್ಲ. ಆತನ ಮೇಲೆ ತೆಗೆದುಕೊಂಡ ಕ್ರಮದ ಮೇಲಿನ ನಿಮ್ಮ ಆಸಕ್ತಿ ಆತನ ಶಿಷ್ಯವೇತನ ನಿಲ್ಲಿಸಿರುವುದರ ಕುರಿತು, ಅದನ್ನೇ ನಂಬಿಕೊಂಡ ಆತನ ಕುಟುಂಬದ ಪರಿಸ್ಥಿತಿಯ ಮೇಲೆ ಇರುವುದಿಲ್ಲ!
ನಾವು ಇಂದು ರಾಜಕೀಯ, ಅಕಾಡೆಮಿಕ್ ಮತ್ತು ರಾಷ್ಟ್ರ ಎಂಬ ಮೂರು ಮುಖ್ಯ ವಿಷಯಗಳನ್ನು ಗಮನಿಸುವ ಹಂತಕ್ಕೆ ಬಂದಿದ್ದೇನೆ. ನಾನು ಈ ವಿಷಯಗಳ ಕುರಿತ ಪತ್ರಿಕಾ ವರದಿಗಳನ್ನು ಗಮನಿಸುತ್ತಿದ್ದೇನೆ, ಇಲ್ಲಿ ಆತ ಬರೆದ ಆತ್ಮಹತ್ಯಾ ಪತ್ರವನ್ನು ಆತ್ಮಹತ್ಯೆಯಿಂದ ಪ್ರತ್ಯೇಕಿಸಿ ನೋಡುವ ಪ್ರಯತ್ನ ನಡೆಯುತ್ತಿದೆ, ಆತ್ಮಹತ್ಯಾ ಪತ್ರವನ್ನು ಆತನ ಬದುಕಿನಿಂದ ಪ್ರತ್ಯೇಕಿಸಿ ನೋಡುವ ಪ್ರಯತ್ನಗಳು ನಡೆಯುತ್ತಿವೆ. ನಾವು ರೋಹಿತನ ಸಾವನ್ನಷ್ಟೆ ನೋಡಿದರೆ ಸಾಲದು, ಬದಲಾಗಿ ಆತ ಬದುಕಿದ ಬದುಕಿನ ರೀತಿಯನ್ನು ಗಮನಿಸಬೇಕು. ರೋಹಿತನ ಬದುಕನ್ನು, ಸಂಘಟನೆಯನ್ನು, ಸ್ನೇಹಿತರನ್ನು ಸಂಗಾತಿಗಳನ್ನು ಆತ ಬರೆದ ಪತ್ರದಿಂದ ಪ್ರತ್ಯೇಕಿಸಿ ಓಹೋ ಇದು ಒಂದು ದುಖ: ತರುವ ಆತ್ಮಹತ್ಯೆ ಅಷ್ಟೆ, ಇದಕ್ಕೂ ಶೋಷಣೆಗೂ, ಇದಕ್ಕೂ ಈ ಸಮಾಜದಲ್ಲಿನ ರಚನಾತ್ಮಕ ತಾರಮತ್ಯಕ್ಕೂ ಸಂಬಂದವಿಲ್ಲ ಎಂದು ಮಾತನಾಡುವ ಶುಷ್ಕ ಮನಸ್ಸಿನವರು ನಮ್ಮ ನಡುವೆ ಬರೆಯುತ್ತಿದ್ದಾರೆ. . . . 
ಇನ್ನೂ ಮುಖ್ಯವಾದ ವಿಚಾರ ಇಂದು ಹಿಂದೂಸ್ಥಾನ್ ಟೈಮ್ಸ್ ನಲ್ಲಿ ಒಬ್ಬ ಪತ್ರಕರ್ತ ಇದು ಒತ್ತಡದಿಂದ ಸಂಬವಿಸಿದ ಆತ್ಮಹತ್ಯೆ ಎಂದು ಬರೆಯುತ್ತಾರೆ. ಇದೇ ವ್ಯಕ್ತಿ ಹಿಂದೆ ರೈತರ ಆತ್ಮಹತ್ಯೆಗಳು ಒತ್ತಡದಿಂದ ಸಂಬವಿಸಿರುವುದು ಇದಕ್ಕೂ ಆರ್ಥಿಕತೆಗೂ ಯಾವುದೇ ಸಂಬಂದವಿಲ್ಲ ಎಂದು ಬರೆದಿದ್ದರು. ಇಂದು ರೋಹಿತನ ಆತ್ಮಹತ್ಯೆ ಒತ್ತಡದಿಂದ ಸಂಬವಿಸಿದೆ ಇದು ಶೋಷಣೆಯ ಕಾರಣಕ್ಕೆ ನಡೆದ ಘಟನೆ ಅಲ್ಲ ಎಂದು ಬರೆಯುತ್ತಾರೆ. ನಾವು ಇವರಿಗೆ 27ರ ಆ ಹುಡುಗ ಸಾಯುವ ಒತ್ತಡ ಎಲ್ಲಿಂದ ಬಂತು? ನಿಮ್ಮ ತರ್ಕವೆ ಸರಿ ಎಂದಾದರೆ ಈ ಸಮಾಜದ ಕೆಲವೇ ವರ್ಗ ಮತ್ತು ಜಾತಿಯವರು ಯಾಕೆ ಒತ್ತಡಕ್ಕೆ ಒಳಗಾಗುತ್ತಾರೆ? ಎಂಬ ಪ್ರಶ್ನೆಗಳನ್ನು ಕೇಳಬೇಕಿದೆ. . .
ಇಲ್ಲಿ ಇನ್ನೊಂದು ವಿಷಪೂರಿತ ತರ್ಕವೊಂದಿದೆ. ಈ ಲೇಖಕ ವಿವರಿಸುವಂತೆ ಇದು ಭಾವಾನಾತ್ಮಕ ಒತ್ತಡದಿಂದ ಸಂಬವಿಸಿದ ಆತ್ಮಹತ್ಯೆ ಅಲ್ಲ! ಬದಲಾಗಿ ಇದು ಮನೋವೈಜ್ಞಾನಿಕ , ಮಾನಸಿಕ ಸ್ಥಿಮಿತಕ್ಕೆ ಸಂಬಂಧಿಸಿ ಆತನೊಳಗೆ ಸಂಬವಿಸಿರುವ ಸಂಗತಿಯೆಂದು ಅವರು ಬರೆಯುತ್ತಾರೆ. ರೋಹಿತ್ ನ ಆತ್ಮಹತ್ಯಾ ಪತ್ರ ಎಲ್ಲಿಯೂ ನಮಗೆ ಬೇರೆ ಕಾರಣಗಳನ್ನು ತೋರಿಸುವುದಿಲ್ಲ ಅದು ಆತನೊಳಗೆ ಹುಟ್ಟಿರುವ ಜೀಗುಪ್ಸೆಯ ಕಾರಣದಿಂದ ಸಂಬವಿಸಿರುವ ಕ್ರಿಯೆ, ಇದಕ್ಕೂ ಹೊರಗಿನ ಸಂಗತಿಗಳಿಗೂ ಸಂಬಂಧವಿಲ್ಲ ಎಂದು ಬರೆಯುತ್ತಾರೆ. ಇಂತಹ ಮಂದಿ ನಮ್ಮ ನಡುವೆ ಇದ್ದಾರೆ. ಸದ್ಯಕ್ಕೆ ದೇಶದ ವಿದ್ಯಾರ್ಥಿಗಳ ಈ ಎಲ್ಲಾ ಹೋರಾಟವನ್ನು ಒಂದು ಪಿತೂರಿ ಎಂದು ಕರೆಯುತ್ತಿರುವ ಬರಹಗಾರರನ್ನು ಮರೆತು ಬಿಡೋಣ.... 
ಅದಕ್ಕೆ ಬದಲಾಗಿ ವಿಶಾಲ ದೃಷ್ಟಿಯಲ್ಲಿ ಈ ಸಮಾಜವನ್ನು ಅರ್ಥಮಾಡಿಕೊಳ್ಳಲು, ಸಮಸ್ಯೆಯನ್ನು ಗುರುತಿಸಲು ಈ ಸಮಾಜದಲ್ಲಿ ರೋಹಿತ್ ಎಲ್ಲಿದ್ದಾನೆ, ದಲಿತರು ಎಲ್ಲಿದ್ದಾರೆ, ಎಲ್ಲಿ ಶೋಷಣೆ ನಡೆಯುತ್ತಿದೆ ಎಂಬುದನ್ನು ನೋಡೋಣ. 3 ದಿನಗಳ ಹಿಂದೆ ನಾನು ರಾಜಸ್ಥಾನದಲ್ಲಿ ಇದ್ದೆ. ಅಲ್ಲಿನ ಹೈಕೋರ್ಟ್ “ರಾಜಸ್ಥಾನ್ ಪಂಚಾಯಿತಿ ಕಾಯ್ದೆಯನ್ನು” ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಅನೂರ್ಜಿತಗೊಳಿಸಿದೆ. ನಿಮಗೆ ಗೊತ್ತಿರಲಿ ಪ್ರಸ್ತಾಪಿತ ರಾಜಸ್ಥಾನ್ ಪಂಚಾಯಿತಿ ಕಾಯ್ದೆ ಶೈಕ್ಷಣಿಕ ಅರ್ಹತೆಯನ್ನು ಒಂದು ಮಾನದಂಡ ಎಂದು ಪರಿಗಣಿಸಿರುವುದರಿಂದ ಇದು ಶೇ ತೊಂಭತ್ತರಷ್ಟು ಮಹಿಳೆಯರು ಗ್ರಾಮೀಣ ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸುವ ಅವಕಾಶವನ್ನು ನಿರಾಕರಿಸುತ್ತದೆ. ಇದು ಜಾರಿಯಾದರೆ ಶೇ75 ದಲಿತ ಮಹಿಳೆಯರು ಗ್ರಾಮೀಣ ಚುನಾವಣೆಗಳಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳಲಿದ್ದಾರೆ.
ವಿವರವಾಗಿ ನೋಡುವುದಾದರೆ ಈ ಕಾಯ್ದೆಯ ಪ್ರಕಾರ 21 ವರ್ಷಕ್ಕೆ ಮೇಲ್ಪಟ್ಟ ಪ್ರಾಥಮಿಕ ಶಿಕ್ಷಣ ಪೂರೈಸಿದ ಮಹಿಳೆಯರು ಚುನಾವಣೆಗೆ ಸ್ಪರ್ಧಿಸಬಹುದು. 21ರ ವಯಸ್ಕರ ಗುಂಪಿನಲ್ಲಿ ಕೇವಲ 11.1 ಶೇ ಜನರು ಮಾತ್ರ ಶಾಲೆಯಲ್ಲಿ ಕಲಿತಿದ್ದಾರೆ. ಆ ಕಾರಣಕ್ಕೆ ಮಿಕ್ಕ 89.9 ಶೇ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನೆ ಕಳೆದುಕೊಳ್ಳಲಿದ್ದಾರೆ. ಇನ್ನೂ ಪಂಚಾಯಿತಿ ಅಧ್ಯಕ್ಷರಾಗಲು 8ನೇ ತರಗತಿಗಿಂತ ಮೇಲಿನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು ಎನ್ನುತ್ತದೆ ಈ ಕಾಯ್ದೆ. ಇದರಿಂದ 90.4 ಶೇ ದಲಿತ ಮಹಿಳೆಯರು ಮತ್ತು 62 ಶೇ ಪುರುಷರು ಪಂಚಾಯಿತಿ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ.
ನಿಮಗೆ ಒಂದು ಆಸಕ್ತಿಕರ ಅಂಶ ತಿಳಿಸಬೇಕು ದೇಶದ ಎಲ್ಲಾ ನ್ಯಾಯಾಲಯಗಳಿಗೆ ಹೋಲಿಸಿದರೆ ರಾಜಸ್ತಾನ್ ಹೈಕೊರ್ಟ್ ಗೆ ಒಂದು ವಿಷೇಷತೆ ಇದೆ. ಅಲ್ಲಿ ಸಂವಿಧಾನ ಕರ್ತೃ ಡಾ. ಅಂಬೇಡ್ಕರ್ ಪ್ರತಿಮೆ ನ್ಯಾಯಾಲಯದ ಹೊರಗೆ ಟ್ರಾಫಿಕ್ ಕಡೆ ಮುಖ ಮಾಡಿಕೊಂಡು ನಿಂತಿದ್ದರೆ ನ್ಯಾಯಾಲಯದ ಒಳಗೆ ಮನುವಿನ 20 ಅಡಿ ಪ್ರತಿಮೆ ನಿಲ್ಲಿಸಲಾಗಿದೆ. ದೇಶದ ಯಾವ ನ್ಯಾಯಾಲಯದಲ್ಲಿಯೂ ಇಂತಹ ಅಸಂಗತಿ ಕಾಣಲು ಸಿಗಲಾರದು! ಇರಲಿ, ವಿಷಯ ಅದಲ್ಲ. ಈ ರೀತಿಯ ಅನ್ಯಾಯಯುತ ಕಾಯ್ದೆಯನ್ನು ಸುಪ್ರಿಂ ಕೊರ್ಟ್‌ನ ಸಂವಿಧಾನಿಕ ಪೀಠ ಪರಿಶಿಲನೆಗೆ ಒಳಪಡಿಸುತ್ತದೆ ಎಂಬ ಭರವಸೆಯನ್ನು ನಾವು ಉಳಿಸಿಕೊಳ್ಳೊಣ. ಆದರೆ ಈ ಕಾಯ್ದೆ ನಿಜಕ್ಕೂ ಅನ್ಯಾಯ ಮತ್ತು ಶೋಷಣೆಯ ಪ್ರತೀಕವಾಗಿದೆ ಇದರ ವಿರುದ್ಧ ನಾವು ಹೋರಾಟವನ್ನು ರೂಪಿಸಬೇಕಿದೆ. . . .
ಇದೊಂದೇ ಸಮಸ್ಯೆಯಲ್ಲ. ನಾವು ಜಾತಿಗಳ ಸಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಂಕಿ-ಅಂಶಗಳನ್ನು ನೋಡಿದರೆ ಈ ದೇಶದಲ್ಲಿ ಬಡವರ ಬದುಕು ಏನಾಗಿದೆ ಎಂಬುದು ಅರ್ಥವಾಗುತ್ತದೆ. ಒಂದು ವಿಷಯದಲ್ಲಿ ನಾನು ಸ್ಮೃತಿ ಇರಾನಿಯವರ “ಇದು ದಲಿತ ಮತ್ತು ದಲಿತೇತರರ ನಡುವಿನ ಸಂಘರ್ಷವಲ್ಲ” ಎಂಬ ಹೇಳಿಕೆಯನ್ನು ಸಮರ್ಥಿಸುತ್ತೇನೆ. ಖಂಡಿತ ಅದು ಸತ್ಯ. ಇದು ದಲಿತ ಮತ್ತು ದಲಿತೇತರರ ನಡುವಿನ ಹೋರಾಟವಲ್ಲ ಬದಲಾಗಿ ಇದು “ಹಿಂದೂ ಮೇಲ್ಜಾತಿ ಮೂಲಭೂತವಾದಿಗಳು ಮತ್ತು ದಲಿತ, ದಲಿತೇತರರ ಹಾಗೂ ಮನುಷ್ಯತ್ವವುಳ್ಳ ಮನುಷ್ಯರ ನಡುವಿನ ಸಂಘರ್ಷ”. ನಾವು ಮೊದಲೇ ಗುರುತಿಸಿದಂತೆ ಈ ದೇಶದಲ್ಲಿ 400 ಮಿಲಿಯನ್ ಜನರು ಇದುವರೆಗೂ ಯಾವ ಮಾದರಿಯ ಶಿಕ್ಷಣ ಸಂಸ್ಥೆಗಳ ಒಳಗೂ ಕಾಲಿಡಲಾಗಿಲ್ಲ ಈ ದೇಶಧ ಒಟ್ಟು ಜನಸಂಖ್ಯೆಯ ಮೂರನೆ ಒಂದು ಭಾಗದಷ್ಟು ಜನರಿಗೆ ಶಿಕ್ಷಣವನ್ನು ನಿರಾಕರಿಸಲಾಗಿದೆ ಇವರಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ವಂಚನೆಗೆ ಒಳಪಟ್ಟವರು ದಲಿತರು, ಆದಿವಾಸಿಗಳು, ಮಹಿಳೆಯರು ಮತ್ತು ಬಡ ಹಿಂದುಳಿದ ಸಮುದಾಯಗಳ ವಿಧ್ಯಾರ್ಥಿಗಳು 
ಇಂದು ಭಾರತ 68 ಮಿಲಿಯನ್ ಪದವೀಧರರನ್ನು ಹೊಂದಿದೆ. ಆದರೆ ಇದರ ಆರು ಪಟ್ಟು ಜನರು ಅನಕ್ಷರಸ್ತರಾಗಿದ್ದಾರೆ. ಈ ದೇಶದಲ್ಲಿ ಅಸಮಾನತೆ ಎಷ್ಟು ಹೆಚ್ಚಿದೆ ಎಂದರೆ ಎಲ್ಲಾ ಮಾದರಿಯ ತಾರತಮ್ಯಗಳನ್ನು ಮರುಹೇರಿಕೆ ಮಾಡಲಾಗುತ್ತಿದೆ. ಇಂದು ಸಮೀಕ್ಷೆಗಳನ್ನು ನೋಡಿದರೆ ಈ 1.28 ಬಿಲಿಯನ್ ಜನಸಂಖ್ಯೆಯ ದೇಶದಲ್ಲಿ 100 ಜನ ಭಾರತೀಯರು ಒಟ್ಟು ಜನಸಂಖ್ಯೆಯ ಎರಡನೇ ಒಂದು ಭಾಗದಷ್ಟು ಸಂಪತ್ತನ್ನು ಹೊಂದಿದ್ದಾರೆ. ಅದರಲ್ಲಿ 15 ಜನ ಭಾರತೀಯರು ಈ ದೇಶದ ಅರ್ಧದಷ್ಟು ಜನಸಂಖ್ಯೆಯ ಸಂಪತ್ತನ್ನು ಹೊಂದಿದ್ದಾರೆ. ಈ ಎಲ್ಲಾ ಪ್ರಕರಣಗಳ ಪರಿಣಾಮ ಅನುಭವಿಸುತ್ತಿರುವವರು ಈ ದೇಶದ ದಲಿತ, ಆದಿವಾಸಿ, ಮಹಿಳೆ ಮತ್ತು ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳು. . . 
ಇನ್ನು ಈ ದೇಶದ ಜನಸಂಖ್ಯೆಯ ಉಗ್ರಾಣವಾದ ಗ್ರಾಮೀಣ ಭಾರತವನ್ನು ನೋಡಿದರೆ ನಿಮಗೆ ಆಶ್ಚರ್ಯವಾಗಬಹದು. ಈ ದೇಶದ ಪ್ರತಿಶತಃ ಒಂದರಷ್ಟು ಜನರು ಈ ದೇಶದ ಶೇ 46 ರಷ್ಟು ಸಂಪನ್ಮೂಲಗಳ ಮೇಲಿನ ಒಡೆತನ ಹೊಂದಿದ್ದಾರೆ. ಇದು ಅಮೇರಿಕಾಕ್ಕಿಂತ ಕೆಟ್ಟ ಸ್ಥಿತಿ. ಅಲ್ಲಿ ಶೇ1 ಜನರು ಆ ದೇಶದ 39ಶೇ ಸಂಪತ್ತಿನ ಒಡೆತನ ಹೊಂದಿದ್ದಾರೆ. ಈ ಎಲ್ಲಾ ಘಟನೆಗಳು ಕಳೆದು 15-20 ವರ್ಷಗಳಿಂದ ಈಚೆಗೆ ನವ ಉದಾರಿಕರಣದ ಹೆಸರಿನಲ್ಲಿ ಘಟಿಸಲ್ಪಟ್ಟಿವೆ.
ನೀವು ಒಪ್ಪಿ ಬಿಡಿ, ನಿಜವಾದ ಅರ್ಥದಲ್ಲಿ ಇಂದು ನಿಮ್ಮ ದೇಶ ಅಳಲ್ಪಡುತ್ತಿರುವುದು “ಸಾಮಾಜಿಕ ಮತ್ತು ಆರ್ಥಿಕ ಮೂಲಭೂತವಾದಿಗಳ ಒಕ್ಕೂಟ" ಮತ್ತು ಮಾರುಕಟ್ಟೆ ಆರ್ಥಿಕತೆಯ ಮೂಲಭೂತವಾದಿಗಳಿಂದ ಇದು ಭಾರತಕ್ಕೆ ಸೀಮಿತವಾದ ಮೈತ್ರಿಕೂಟವಲ್ಲ ಬದಲಾಗಿ ಇದು ವಿಶ್ವವ್ಯಾಪಿಯಾಗಿದೆ. ನಿಮಗೆ ಆಶ್ಚರ್ಯವಾಗಬಹದು ಜಗತ್ತಿನ ಅತ್ಯಂತ ಅಪಾಯಕಾರಿ ಬಂಡವಾಳಶಾಹಿ ಆರ್ಥಿಕತೆಯ ಜನಕ ಯುನೈಟೆಡ್ ಸ್ಟೇಟ್ಸ್ ಜಗತ್ತಿನ ಅತಿ ಅಪಾಯಕಾರಿಯಾದ ಎರಡು ಧಾರ್ಮಿಕ ಮೂಲಭೂತವಾದಿಗಳಾದ ಇಸ್ರೇಲ್ ಮತ್ತು ಸೌದಿ ಅರೇಬಿಯಾಗಳನ್ನು ತನ್ನ ಯುದ್ಧಗಳಿಗಾಗಿ ಆಶ್ರಯಿಸಿದೆ. ಹಾಗೆ ನೊಡಿದರೆ ನಾವೀಗ ಅತ್ಯಂತ ಶಕ್ತಿಶಾಲಿ, ಒಗ್ಗೂಡಿದ ಶತ್ರುವಿನ ವಿರುದ್ದ ಹೋರಾಡಬೇಕಿದೆ. . . . 
ನಾವು ಇಂದು ನಮ್ಮ ನಡುವಿನ ರಚನಾತ್ಮಕ, ಸಾಮಾಜಿಕ, ಆರ್ಥಿಕ, ಕಾನೂನಾತ್ಮಕ ತಾರತಮ್ಯಗಳ ಕುರಿತು ಧ್ವನಿ ಎತ್ತಬೇಕಿದೆ ಈ ದೇಶದಲ್ಲಿನ 75ಶೇ ಗ್ರಾಮೀಣ ಕುಟುಂಬಗಳ ಮುಖ್ಯಸ್ಥ ಹೆಚ್ಚೆಂದರೆ ತಿಂಗಳಿಗೆ 5000 ಸಂಪಾದನೆ ಮಾಡುತ್ತಿದ್ದಾನೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ. ಇದು ದೇಶದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ದೊರೆಯುವ ಚಿತ್ರಣ. ಇದನ್ನು ನೀವು ಅದಿವಾಸಿ ಮತ್ತು ದಲಿತರಿಗೆ ಅನ್ವಯಿಸಿ ನೋಡಿದರೆ ಪರಿಸ್ಥಿತಿ ಇನ್ನೂ ಭೀಕರವಾಗಿದೆ, ಇದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. . .
ಪ್ರಮುಖವಾಗಿ academic institutionಗಳಿಗೆ ಸಂಬಂಧಿಸಿದ ಇತ್ತೀಚಿನ ಈ ಹೋರಾಟಗಳನ್ನು ಕೆಲವು ಜನರು ಓಹೋ ಇದು ಹೈದರಾಬಾದ್ ಪ್ರಕರಣವಾ, ಅಯ್ಯೋ ಅಲ್ಲಿನ ಸ್ಥಿತಿಯೇ ಹಾಗಿದೆ ಬಿಡಿ ಈ ತರಹದ ಘಟನೆಗಳು ಅಲ್ಲಿ ನಡೆಯುತ್ತಲೇ ಇರುತ್ತವೆ ನಮಗ್ಯಾಕೆ ಎಂಬ ಮಾತುಗಳನ್ನು ಹೇಳುತ್ತಾರೆ. ಆದರೆ ನಿಮಗೆ ನಾನು ಒಂದು ವಿಷಯ ಹೇಳಬೇಕು ನಾನು ದೇಶದ ಪ್ರತಿಷ್ಟಿತ ಜವಾಹಾರ್ ಲಾಲ್ ನೆಹರು ವಿಶ್ವವಿದ್ಯಾನಿಲಯದ ಕಾರ್ಯಕಾರಿ ಮಂಡಳಿಯ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ. ಒಬ್ಬ ಕಾರ್ಯಕಾರಿ ಮಂಡಳಿಯ ಸದಸ್ಯನಾಗಿ ನನ್ನ ಅವಧಿಯ ಶೇ 80ರಷ್ಟು ಸಮಯ ಮಿಸಲಾತಿ ವಿರೋಧಿಸುವ ಮನಸ್ಸುಗಳನ್ನು ಎದುರಿಸುವುದರಲ್ಲಿಯೇ ಕಳೆದು ಹೋಗಿದೆ ಎಂಬ ಸತ್ಯವನ್ನು ನಿಮ್ಮೆದುರು ಇಡುತ್ತಿದ್ದೇನೆ. ಆ ಎಲ್ಲಾ ಹೋರಾಟಗಳು ಇಂದು ದಾಖಲೆಗಳಲ್ಲಿವೆ. ಆ ಸಮಯದಲ್ಲಿ ಸುಪ್ರಿಂ ಕೊರ್ಟ್ ಅದೇಶವನ್ನು ಧಿಕ್ಕರಿಸಿ ಹಿಂದುಳಿದ ವರ್ಗದ 27ಶೇ ಮಿಸಲಾತಿಯನ್ನು ಕಡಿತಗೊಳಿಸುವ ಪ್ರಯತ್ನಗಳು ನಡೆದವು. ಆದ್ದರಿಂದ ದಯಮಾಡಿ ಇದು ಹೈದಾರಾಬದ್ ನಲ್ಲಿ ಮಾತ್ರ ನಡೆಯುತ್ತಿರುವ ಸಂಗತಿ ಎಂಬ ಮೂರ್ಖತನದ ಹೇಳಿಕೆಗಳನ್ನು ನಂಬಬೇಡಿ. ಇಂದು ತಾರತಮ್ಯ ಎಂಬುದು ದೇಶದ ಪ್ರತಿಷ್ಟಿತ ಸಂಸ್ಥೆಗಳಲ್ಲಿಯೇ ನಡೆಯುತ್ತಿದೆ . . .
ಈ ಹಂತದಲ್ಲಿ ನಾವು ವಿಶ್ವವಿದ್ಯಾನಿಲಯಗಳ ಉಳಿವಿಗೆ ಏನು ಮಾಡಬೇಕು? ಎಂಬುದರ ಕುರಿತು ನನ್ನ ಸ್ನೇಹಿತ ಪ್ರೊ. ಸುಖ್ದೇವ್ ಥೋರಟ್ ಒಂದು ನೀಲನಕ್ಷೆಯನ್ನು ಒದಗಿಸಿದ್ದಾರೆ. ನಾನು ಅವರು ನೀಡಿದ ಆ ವರದಿಯನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ನಾವು ಬದಲಾವಣೆ ಆರಂಭಿಸುವುದಿದ್ದರೆ ಅದು ಈ ವರದಿಯಿಂದಲೇ ಆರಂಭವಾಗಲಿ, ನಮಗಿರುವ ಉತ್ತಮ ಆರಂಭ ಅದೆ ಆಗಲಿದೆ . . .
ಇದರ ಮುಂದೆ ನಾವು ಹಲವು ರಾಜಕೀಯ ಹೋರಾಟಗಳನ್ನು ನಡೆಸಬೇಕಿದೆ. ಹೊರಗೆ ಇನ್ನೂ ಹಲವು ಹೋರಾಟಗಳು ನಮ್ಮನ್ನು ಎದಿರು ನೋಡುತ್ತಿವೆ. ದಯಮಾಡಿ ಅರ್ಥಮಾಡಿಕೊಳ್ಳಿ, ಇದು ಹೈದರಾಬಾದ್ ಗೆ ಮಾತ್ರ ಸೀಮಿತವಾಗಿಲ್ಲ. ಅಲಹಬಾದ್ ವಿಶ್ವವಿದ್ಯಾನಿಲಯದಲ್ಲಿ ನನ್ನ ಸ್ನೇಹಿತ ಸಿದ್ಧಾರ್ಥ್ ವರದರಾಜ್ ಅವರನ್ನು ಇದೇ ಎಬಿವಿಪಿ ಗುಂಪು ಕುಲಪತಿಗಳ ಕಟ್ಟಡದಲ್ಲಿ ಬಂಧನಕ್ಕೆ ಒಳಪಡಿಸಿತ್ತು. ಅವರ ಭಾಷಣವನ್ನು ಕ್ಯಾಂಪಸ್ ನಲ್ಲಿ ನಿಷೇಧಿಸಲಾಯಿತು. ನೀವು ಹೊರಕ್ಕೆ ಬಂದರೆ ದಾಳಿ ನಡೆಸುತ್ತೇವೆ ಎಂದು ಬೆದರಿಕೆಯನ್ನು ಒಡ್ಡಲಾಗಿತ್ತು! ಜನ ಮರೆತಿರಬಹದು, ಮಧ್ಯಪ್ರದೇಶದ ಒಬ್ಬರು ಕುಲಪತಿಗಳನ್ನು ಮನಬಂದಂತೆ ಧಳಿಸಲಾಗಿತ್ತು, ಬಿದ್ದ ಹೊಡೆತಗಳನ್ನು ತಾಳಲಾರದೆ ಅವರು ಅಸುನೀಗಿದ್ದರು. ಇದು ಈ ವಿವಿ ಯಲ್ಲಿ ನಡೆಯುತ್ತಿರುವ ಘಟನೆ ಮಾತ್ರ ಅಲ್ಲ. ಇನ್ನೂ ನಿಮ್ಮ ಉಪಕುಲಪತಿಗಳ ವಿಷಯ ಅವರು ಧೀರ್ಘ ರಜೆಯ ಮೇಲೆ ತೆರಳಿದ್ದಾರೆ ಅವರ ರಜೆ ಹಾಗೆ ದೀರ್ಘವಾಗಲಿ ಎಂದು ಆಶಿಸುತ್ತೇನೆ . . .
ನನಗೆ ಅನ್ನಿಸುವಂತೆ ರೋಹಿತ್ ಸಾವು/ಆತ್ಮಹತ್ಯೆ ನಮ್ಮನ್ನು ಒಂದಾಗಿಸಬೇಕಿದೆಯೇ ಹೊರತು ನಮ್ಮಲ್ಲೆ ಒಡಕು ಮೂಡಿಸಬಾರದು! ಅವನು ಅವನ ಸಂಘಟನೆಯ ವಿರೋಧವನ್ನು ಮಾಡುತ್ತಿದ್ದ, ಅವನು ತನ್ನದೆ ಸ್ನೇಹಿತರನ್ನು ವಿರೋಧಿಸುತ್ತಿದ್ದ, ಎಂಬ ಹೇಳಿಕೆಗಳನ್ನು ನೀಡುವ, ಆ ಮೂಲಕ ನಮ್ಮನ್ನು ಒಡೆಯುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆತನ ನೆನಪನ್ನು ನಮ್ಮಿಂದ ಅಳಿಸುವ ಕ್ರೌರ್ಯಕ್ಕೆ, ಅನ್ಯಾಯಕ್ಕೆ ಜನ ಮುಂದಾಗುತ್ತಿದ್ದಾರೆ. ಆದರೆ ಒಂದು ಶ್ಲಾಘನೀಯ ಅಂಶ ಎಂದರೆ ಈ ಎಲ್ಲಾ ವಿರೋಧ, ತಂತ್ರ, ಕುತಂತ್ರಗಳನ್ನು ಎದುರಿಸಿ ಪ್ರತಿರೋಧ ಎಂಬುದು ದೇಶದ ಮೂಲೆ ಮೂಲೆಗಳಿಂದ ಹರಿದು ಬರುತ್ತಿದೆ ಮತ್ತು ಅದು ವಿಧ್ಯಾರ್ಥಿಗಳ ಕಡೆಯಿಂದ ಹರಿದು ಬರುತ್ತಿದೆ . . . . 
ನಿಮಗೆ ನೆನಪಿರಲಿ ಕಳೆದ 105 ದಿನಗಳಿಂದ “ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟೀಟ್ಯೋಟ್” ಪುಣೆ ವಿಧ್ಯಾರ್ಥಿಗಳು ಈ ಸರ್ಕಾರದ ವಿರುದ್ಧ ವಿಶ್ವವಿದ್ಯಾನಿಲಯದ ಮೇಲೆ ಯುಧಿಷ್ಟರನ ಹೇರಿಕೆಯನ್ನು ವಿರೋಧಿಸಿ ಹೋರಾಡುತ್ತಿದ್ದಾರೆ. ನಿಮಗೆ ಗೊತ್ತಾ ನೈಜವಾದ ಮಹಾಭಾರತದಲ್ಲಿ ಯುಧಿಷ್ಟಿರ ಎಷ್ಟು ಪರಿಶುಧ್ಧ ಆತ್ಮ ಎಂದರೆ ಅವನು ಎಂದೂ ಸುಳ್ಳನ್ನೆ ಹೇಳಿರಲಿಲ್ಲ! ಆ ಕಾರಣಕ್ಕೆ ಆತನ ರಥ ಭೂಮಿಯಿಂದ 6 ಇಂಚು ಮೇಲಕ್ಕೆ ಚಲಿಸುತ್ತಿತ್ತು. ಇದೊಂದು ಆಸಕ್ತಿಕರ ಪವಿತ್ರತೆಯ ಉದಾಹರಣೆ ಯುಧಿಷ್ಟರ ಒಬ್ಬ ಕುಡುಕ, ಜೂಜುಕೋರ, ಜೂಜಿನಲ್ಲಿ ತನ್ನ ಹೆಂಡತಿಯನ್ನೆ ಪಣವಾಗಿ ಸೋತವನು ಆದರೆ ಅವನು ಸುಳ್ಳನ್ನು ಮಾತ್ರ ಹೇಳಿರಲಿಲ್ಲ ಆ ಕಾರಣಕ್ಕೆ ಅವನು ಪವಿತ್ರ. . .! ಅವನು ದ್ರೋಣರಿಗೆ “ಅಶ್ವಥಾಮ ಸತ್ತ” ಎಂದು ಸುಳ್ಳು ಹೇಳಿದ ದಿನ ಅವನ ರಥ ನೆಲವನ್ನು ತಾಕಿತಂತೆ ಆದರೆ “ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟೀಟ್ಯೋಟ್” ನ ಯುಧಿಷ್ಟರರ ರಥ ಭೂಮಿಯಿಂದ ಮೇಲೆ ಎದ್ದೆ ಇಲ್ಲ! ಅದು ಕೆಸರಿನಲ್ಲಿ ಹೂತು ಹೋಗಿದೆ. ಆ ಕಾರಣಕ್ಕೆ ಅವರನ್ನು ಯಾರು ಗೌರವಿಸುತ್ತಿಲ್ಲ. . .. 
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿಧ್ಯಾರ್ಥಿಗಳೆ, ನೀವು ಈ ಹೋರಾಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕಿದೆ. ಈ ಹೋರಾಟದ ಜೊತೆಗೆ ಇನ್ನು ಮುಖ್ಯವಾದ ಸಂಗತಿಗಳನ್ನು ನೀವು ಮುಂಚೂಣಿಗೆ ತರಬೇಕಿದೆ. ಇದನ್ನು ನಾವು ರೋಹಿತ್ ವೇಮುಲ ಎಂಬ ಚೇತನದ ಆತ್ಮಹತ್ಯೆಯ ಪರಿಣಾಮ ಎಂದು ನಾನು ಗುರುತಿಸುತ್ತೇನೆ, ಜಗತ್ತು ಓದಿಕೊಳ್ಳುತ್ತದೆ . . .
ಬಹಳ ಹಿಂದೆ ಒಬ್ಬ ಫ್ರೆಂಚ್ ಬರಹಗಾರ ವಿಕ್ಟರ್ ಹ್ಯೂಗೋ ಬರೆಯುತ್ತಾನೆ All the forces in the world are not so powerful as an idea whose time has come.. . .ನನಗೆ ಅನ್ನಿಸುವಂತೆ 2016 ರಲ್ಲಿ ಭಾರತಕ್ಕೆ ಆ ಸಮಯ ಬಂದಿದೆ. ಆ ಅಲೋಚನೆ ಹಿಂದಿನ ಬೇಡಿಕೆ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಲಿಂಗಾಧಾರಿತ ನ್ಯಾಯದ ಹಕ್ಕೊತ್ತಾಯವಾಗಿದೆ. ಜೊತೆಗೆ ರೋಹಿತ್ ಮತ್ತು ಲಕ್ಷಾಂತರ ರೋಹಿತರುಗಳ ನ್ಯಾಯಯುತ ಹಕ್ಕಾಗಿದೆ. ನಮ್ಮ ಹೋರಾಟದ ಮಾದರಿಗಳು ಭಿನ್ನ ಇರಬಹದು ಆದರೆ ಉದ್ದೇಶ ಅಂಬೇಡ್ಕರ್ ಹೇಳಿದ ಶಿಕ್ಷಣ , ಸಂಘಟನೆ, ಹೋರಾಟದ ಹಕ್ಕುಗಳಿಗಾಗಿದೆ ಎಂಬುದನ್ನು ಮರೆಯದಿರೋಣ. . . 
ಧನ್ಯವಾದಗಳು. . . .

ಜನ 19, 2016

ದನಕ್ಕಿರುವ ಬೆಲೆ ದಲಿತನಿಗಿಲ್ಲದ ದೇಶದಲ್ಲಿ....

(ಈ ಲೇಖನ ಓದಿದ ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಕೋಪ ಮತ್ತು ಬೇಸರ ವ್ಯಕ್ತಪಡಿಸಿರುವುದರಿಂದ ಈ ಸ್ಪಷ್ಟೀಕರಣ. ನಮ್ಮ ನಡುವೆ ಮಾನವೀಯತೆ ಮರೆತ ಮನುವಾದಿ ಮನಸ್ಥಿತಿಯವರು ಹೀಗೂ ಯೋಚಿಸಬಹುದು ಎನ್ನುವ ವಿಡಂಬನಾತ್ಮಕ ಲೇಖನವೇ ಹೊರತು ರೋಹಿತ್ ವೇಮುಲನ ಕುರಿತಾಗಲೀ ಅಥವಾ ದಲಿತರ ಕುರಿತಾಗಲೀ ಅವಹೇಳನ ಮಾಡುವ ಉದ್ದೇಶದ ಲೇಖನವಲ್ಲ. ಸತ್ಯ ಶೋಧನಾ ವರದಿ ಮತ್ತೊಂದು ಮಗದೊಂದು ಎಂಬ ನಾಟಕಗಳಿಂದ ಮೂಡಿದ ವಿಡಂಬನೆಯಿದು. ಆಗಸ್ಟಿನಿಂದ ಇಲ್ಲಿಯವರೆಗೆ ರೋಹಿತ್ ವೇಮುಲ ಮತ್ತವನ ಗೆಳೆಯರ ಸುತ್ತ ನಡೆದ ರಾಜಕೀಯಗಳ ಬಗ್ಗೆ ವಿವರವಾಗಿ ಹಿಂದಿನ ಬರಹದಲ್ಲಿ ದಾಖಲೆಗಳ ಸಮೇತ ಬರೆಯಲಾಗಿದೆ. ಅದನ್ನೋದಲು ಇಲ್ಲಿ ಕ್ಲಿಕ್ಕಿಸಿ - ಹಿಂಗ್ಯಾಕೆ?)
ಡಾ. ಅಶೋಕ್. ಕೆ. ಆರ್
ಭಾನುವಾರ ರಾತ್ರಿ ಒಂದು ಭಾವಪೂರ್ಣ ಪತ್ರ ಬರೆದಿಟ್ಟು ನೇಣಿಗೆ ಶರಣಾಗಿಬಿಟ್ಟವನು ರೋಹಿತ್ ವೇಮುಲ. ಇಂಗ್ಲೀಷಿನಲ್ಲಿದ್ದ ಆ ಪತ್ರವನ್ನು ಕನ್ನಡಕ್ಕೆ ಅನುವಾದಿಸಿ ಜೊತೆಗೆ ಹೈದರಾಬಾದಿನಲ್ಲಿ ಕಳೆದ ಆಗಸ್ಟಿನಿಂದ ನಡೆದಿದ್ದೇನು ಎನ್ನುವುದನ್ನು ನಿನ್ನೆ ಪ್ರಕಟಿಸಲಾಗಿತ್ತು. ಕಿರಣ್ ಗಾಜನೂರು ಕೂಡ ಆ ಪತ್ರವನ್ನು ಕನ್ನಡಕ್ಕೆ ಅನುವಾದಿಸಿ ಫೇಸ್ ಬುಕ್ಕಿನಲ್ಲಿ ಹಾಕಿಕೊಂಡಿದ್ದರು. ಹಿಂಗ್ಯಾಕೆಯಲ್ಲಿ ಬಂದಿದ್ದ ಅನುವಾದ, ಕಿರಣ್ ಗಾಜನೂರು ಮಾಡಿದ್ದ ಅನುವಾದ ಉಳಿದ ವೆಬ್ ಪುಟಗಳಲ್ಲಿ, ಫೇಸ್ ಬುಕ್ಕಿನಲ್ಲಿ, ವಾಟ್ಸ್ ಅಪ್ಪಿನಲ್ಲಿ ಹರಿದಾಡುತ್ತಲೇ ಇದೆ. ನನ್ನ ವಾಟ್ಸಪ್ಪಿಗೆ ಹಲವು ಸಲ ಬಂದಿದೆ. ಎಷ್ಟೇ ಸಲ ಬಂದರೂ ಮತ್ತೆ ಮತ್ತೆ ಓದಬೇಕೆನ್ನಿಸುತ್ತಿತ್ತು. ಓದಿ ಓದಿ ಈಗ ರೋಹಿತನ ಮೇಲೆ ಕೋಪ ಬಂದಿದೆ. ಹೈದರಾಬಾದಿನ ಉಪಕುಲಪತಿ ಅಪ್ಪಾರಾವ್, ಈ ಐದು ಹುಡುಗರ ಜಾತಿವಾದಿ, ದೇಶದ್ರೋಹಿ ಕೆಲಸಗಳಿಗೆ ತಡೆ ಹಾಕಬೇಕೆಂದು ಸ್ಮೃತಿ ಇರಾನಿಗೆ ಪತ್ರ ಬರೆದ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯರ ವಿರುದ್ಧ ಆತ್ಮಹತ್ಯಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕೇಸು ದಾಖಲಾಗಿದೆ. ಸಚಿವೆ ಸ್ಮೃತಿ ಇರಾನಿಯವರು ಸತ್ಯ ಶೋಧನಾ ಸಮಿತಿಯನ್ನು ಕಳುಹಿಸಲಾಗುವುದೆಂದು ಹೇಳಿದ್ದಾರೆ. ಸತ್ಯ ಕಣ್ಣಿಗೆ ಕಾಣುವಾಗ ಶೋಧನಾ ಸಮಿತಿ ಯಾಕೆ? ಮೊದಲಿಗೆ ಮಾಡಬೇಕಾದ ಕೆಲಸವೆಂದರೆ ಅಮಾಯಕರಾದ ಬಂಡಾರು ದತ್ತಾತ್ರೇಯ ಮತ್ತು ಅಪ್ಪಾರಾವರ ವಿರುದ್ಧ ಹಾಕಿರುವ ಕೇಸುಗಳನ್ನು ಹಿಂತೆಗೆದುಕೊಳ್ಳಬೇಕು. ಯಾರ್ಯಾರು ಈ ಪ್ರಕರಣದಲ್ಲಿ ಅಪರಾಧಿಗಳೆಂದು ನೋಡೋಣ.
ಮೊದಲ ಅಪರಾಧಿಯ ಸ್ಥಾನದಲ್ಲಿ ಅಂಬೇಡ್ಕರರನ್ನು ನಿಲ್ಲಿಸಬೇಕು. ಚಾತುರ್ವರ್ಣ ನೀತಿಯೊಳಗೂ ಇಲ್ಲದ ದಲಿತರಿಗೊಂದು ಆತ್ಮಾಭಿಮಾನ ಮೂಡಿಸುವ ಕೆಲಸಕ್ಕಿಂತ ದೊಡ್ಡ ಅಪರಾಧ ಯಾವುದಾದರೂ ಇದೆಯೇ? ದಲಿತರು ಓದಬೇಕು, ದಲಿತರಿಗೆ ಸಮಾನತೆ ಸಿಗಬೇಕು ಎಂಬ ಕೆಟ್ಟ ಬುದ್ಧಿಯನ್ನೆಲ್ಲ ಅವರು ಪ್ರಚುರಪಡಿಸದಿದ್ದರೆ ಎಲ್ಲಾ ದಲಿತರು ಊರಾಚೆ ಬದುಕಿ ದೊಡ್ಡ ಜಾತಿಯವರ ಮಲ ಬಳಿದು, ಸತ್ತ ದನದ ಚರ್ಮ ಸುಲಿದು, ಊರೊಳಗೆ ಬರುವಾಗ ತಮಟೆ ಬಡಿಯುತ್ತ, ತಮ್ಮ ನೆರಳು ಮೇಲ್ಜಾತಿಯವರಿಗೆ ತಗುಲದಂತೆ ಎಚ್ಚರ ವಹಿಸುತ್ತ ಅಕ್ಷರ ಭಯೋತ್ಪಾದಕರ ಹಂಗಿಲ್ಲದೆ ನೆಮ್ಮದಿಯಾಗಿ ಇದ್ದುಬಿಡಬಹುದಿತ್ತಲ್ಲ. ಸುಖಾಸುಮ್ಮನೆ ಹದಿನೆಂಟು ಪರ್ಸೆಂಟು, ರಿಸರ್ವೆಷನ್ನು ಅಂತೆಲ್ಲ ಹೀಯಾಳಿಸಿಕೊಂಡು ಓದಿ ಉದ್ಧಾರವಾಗಬೇಕಾದ ದರ್ದೇನಿತ್ತಿವರಿಗೆ? ಇಂತ ಕೆಟ್ಟ ಬುದ್ಧಿಯನ್ನೆಲ್ಲ ಹೇಳಿಕೊಟ್ಟು ಸ್ವಾಭಿಮಾನ ತುಂಬಿದ್ದು ಆ ಅಂಬೇಡ್ಕರ್ ತಾನೇ? ಅದಿಕ್ಕೆ ಅವರ ಮೇಲೆ ಮೊದಲು ಕೇಸು ಹಾಕಬೇಕು. ಜೊತೆಗೆ ಎಲ್ಲರಿಗೂ ಶಿಕ್ಷಣ ನೀಡಲು ಶ್ರಮಿಸಿದ ಜ್ಯೋತಿಭಾ ಪುಲೆ, ಸಾವಿತ್ರಿಭಾಯಿ ಪುಲೆಯವರ ಮೇಲೆ ಕೇಸು ಜಡಿಯುವುದನ್ನು ಮರೆಯಬಾರದು. ಸತ್ತೋರ ಮೇಲೆ ಹಾಕುವ ಕೇಸಿನಿಂದ ಉಪಯೋಗ ಜಾಸ್ತಿ ಇಲ್ಲ ಅಲ್ಲವೇ.
ಮುಂದಿನ ಕೇಸನ್ನು ರೋಹಿತ್ ವೇಮುಲನ ತಂದೆ ತಾಯಿಯ ಮೇಲೆ ಹಾಕಬೇಕು. ಆಂಧ್ರದಲ್ಲೇನು ಜಮೀನುದಾರರಿಗೆ, ಭೂಮಾಲೀಕರಿಗೆ ಕೊರತೆಯೇ? ಅಂತವರ ಬಳಿಗೆ ತಮ್ಮ ಮಗನನ್ನು ಜೀತಕ್ಕೋ ಕೂಲಿಗೋ ಕಳುಹಿಸಿ ಚಾತುರ್ವರ್ಣ ಪದ್ಧತಿಯ ಉಳಿವಿಗೆ ಶ್ರಮಿಸುವುದನ್ನು ಬಿಟ್ಟು ಹೈದರಾಬಾದಿನ ವಿಶ್ವವಿದ್ಯಾಲಯಕ್ಕೆ ಓದಲು ಕಳುಹಿಸುವ ದುರಹಂಕಾರದ ಕೆಲಸವನ್ಯಾಕೆ ಮಾಡಬೇಕಿತ್ತವರು. ಓದಲಾತ ಇಲ್ಲಿಗೆ ಬರದಿದ್ದರೆ ಹೋರಾಟ ಮಣ್ಣು ಮಸಿ ಅಂತೆಲ್ಲ ಅವನ ತಲೆಗೆ ಹೋಗುತ್ತಲೇ ಇರಲಿಲ್ಲ. ನೆಮ್ಮದಿಯಾಗಿ ತಂಗಳನ್ನ ತಿಂದುಕೊಂಡು ಮೈಮುರಿದು ದುಡಿದು, ದಲಿತರ ಮೇಲಿನ ಅನ್ಯಾಯ ಕಣ್ಣಿಗೆ ಬಿದ್ದಾಗ 'ಎಲ್ಲಾ ನಮ್ ಪೂರ್ವಜನ್ಮದ ಪಾಪದ ಫಲ' ಎಂಬ ಅಯ್ನೋರ ಹೇಳಿಕೆಯನ್ನು ನೆನಪಿಸಿಕೊಂಡು ತಲೆ ತಗ್ಗಿಸಿ ಹೋಗಿಬಿಡಬಹುದಾಗಿದ್ದ ಯುವಕನನ್ನು ಓದಿಸಿ ಅವನ ಸಾವಿಗೆ ಕಾರಣವಾಗಿದ್ದು ವೇಮುಲನ ತಂದೆ ತಾಯಿಯೇ ಅಲ್ಲವೇ?
ಹೋಗ್ಲಿ ಹೈದರಾಬಾದ್ ವಿಶ್ವವಿದ್ಯಾಲಯಕ್ಕೆ ಓದಲು ಬಂದ ಮೇಲೆ ರಾಜಕೀಯ ಪ್ರಜ್ಞೆಯನ್ನು ಚೂರೂ ಬೆಳೆಸಿಕೊಳ್ಳದೇ ಓದಿಕೊಂಡು, ನಲಿದಾಡಿಕೊಂಡು, ಪಿಚ್ಚರ್ರು, ಮಾಲೂ ಅಂತ ತಿರುಗಾಡಿಕೊಂಡು ಇರುವುದನ್ನು ಬಿಟ್ಟು ಅದ್ಯಾಕೆ ಅಂಬೇಡ್ಕರ್ ವಿದ್ಯಾರ್ಥಿ ಸಂಘಕ್ಕೆಲ್ಲ ಸೇರಬೇಕಿತ್ತು? (ನೋಡಿ ಮತ್ತೆ ಇಲ್ಲಿ ಅಂಬೇಡ್ಕರ್ ಅಪರಾಧಿ). ಮುಜಾಫರ್ ನಗರದಲ್ಲಿ ನಡೆದ ಘಟನೆ ಕಟ್ಟಿಕೊಂಡು ಇವರಿಗೇನಾಬೇಕು? ಅಲ್ಲಿನ ಗಲಭೆಯ ಬಗೆಗಿನ ಡಾಕ್ಯುಮೆಂಟರಿಯನ್ನು ದೆಹಲಿಯಲ್ಲಿ ಪ್ರದರ್ಶನ ಮಾಡಲು ಬಿಡದಿದ್ದರೆ ಇವರಿಗೇನು ಹೋಗಬೇಕು? ಓ! ಅಲ್ಲಿನ ಕೋಮುಗಲಭೆಯಲ್ಲಿ ಹಿಂಸೆಗೊಳಗಾಗಿದ್ದು ಮುಸ್ಲಿಮರು, ಇದ್ದ ಹೆಚ್ಚು ಕಡಿಮೆ ಎಲ್ಲಾ ನಿರಾಶ್ರಿತ ಶಿಬಿರಗಳು ಮುಸ್ಲಿಮರದು, ಎರಡೇ ಎರಡು ನಿರಾಶ್ರಿತ ಶಿಬಿರಗಳು ಹಿಂದೂಗಳದ್ದಿತ್ತು. ಹಿಂದೂ ಧರ್ಮ ಅಸಹ್ಯಿಸುವ ದಲಿತರ ನಿರಾಶ್ತಿತ ಶಿಬಿರಗಳು. ದಲಿತರ ಮೇಲೆ ಮುಸ್ಲಿಮರು ಹಲ್ಲೆ ನಡೆಸಿದ ಬಗ್ಗೆಯೂ ಸಾಕ್ಷ್ಯಚಿತ್ರದಲ್ಲಿತ್ತು
(ಮುಜಾಫರ್ ನಗರದ ಕೋಮುಗಲಭೆಯಲ್ಲಿ ನಲುಗಿದ ಧರ್ಮವ್ಯಾವುದು?

ಅದರ ಬಗ್ಗೆಯೆಲ್ಲ ಇವರ್ಯಾಕೆ ತಲೆಕೆಡಿಸಿಕೊಳ್ಳಬೇಕಿತ್ತು. ದೇಶದಲ್ಲಿ ಹಿಂದೂ ಧರ್ಮವನ್ನು ರಕ್ಷಿಸಲು ಬಹುದೊಡ್ಡ ಪಡೆ ಸಿದ್ಧವಾಗಿರುವಾಗ ಅಂತವರ ಜೊತೆ ಕೈಜೋಡಿಸುವ ಕೆಲಸ ಮಾಡುವುದನ್ನು ಬಿಟ್ಟು ಸತ್ಯ - ಧರ್ಮ - ನ್ಯಾಯ ಎಂದೆಲ್ಲ ಬೊಬ್ಬೆ ಹೊಡೆಯುವುದ್ಯಾಕೆ? ಇಂತಹ ಚಿಂತನೆಗಳನ್ನೆಲ್ಲ ತಲೆಗೆ ತುಂಬಿದ ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಮೇಲೂ ಮರೆಯದೆ ಪ್ರಕರಣ ದಾಖಲಾಗಬೇಕು.
ರೋಹಿತನ ತಲೆಕೆಡಿಸಿದ ಅಂಬೇಡ್ಕರ್, ಜ್ಯೋತಿಭಾ ಪುಲೆ, ಶಿಕ್ಷಣ ಕೊಡಿಸಿದ ತಂದೆ ತಾಯಿ, ವಿಚಾರಗಳನ್ನು ತುಂಬಿದ ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಮೇಲೆ ಕೇಸುಗಳನ್ನು ದಾಖಲಿಸುವುದನ್ನು ಬಿಟ್ಟು ಹಿಂದೂ ಧರ್ಮ ರಕ್ಷಕರ ಮೇಲೆ ಕೇಸು ಹಾಕಿರುವುದು ಸರಿಯಲ್ಲ. ಮತ್ತು ದನ ಸಾಯಿಸಿದಾಗ ಮಾತನಾಡದವರೆಲ್ಲರೂ ಯಕಶ್ಚಿತ್ ಒಬ್ಬ ದಲಿತ ಸತ್ತಾಗ ದೇಶವೇ ಹಾಳಾಯಿತೆಂದು ಬೊಬ್ಬೆ ಹೊಡೆಯುವ ದುರ್ವಿಧಿ ಈ ದೇಶಕ್ಕೆ ಬರಬಾರದಿತ್ತು. ಅಲ್ಲರೀ ದನದೊಳಗೆ ಮೂವತ್ತುಮೂರು ಕೋಟಿ ದೇವತೆಗಳು ಬದುಕಿ ಬಾಳುತ್ತಿವೆ, ಈ ಹಾಳಾದ ದಲಿತರಲ್ಲೇನಿದೆ? ಅವರ ಮುಖ ಕಂಡ್ರೆ ನಮ್ ದೇವ್ರಿಗೇ ಮೈಲಿಯಾಗಿಬಿಡುತ್ತೆ ಅನ್ನೋ ಕಾಮನ್ ಸೆನ್ಸ್ ಕೂಡ ನಮ್ ಜನರಲ್ಲಿ ಕಾಣೆಯಾಗಿಬಿಟ್ಟಿದೆಯಲ್ಲ. ಸಮಾನ ಆಹಾರದ ಹಕ್ಕಿನ ಕುರಿತು ಮಾಂಸ ತಿನ್ನೋರು ತಿನ್ದೇ ಇರೋರೆಲ್ಲ ಸೇರ್ಕಂಡು ವಡೆ, ಬೀಫು ತಿಂದು ಪ್ರತಿಭಟನೆ ನಡೆಸಿದಾಗ ಅಂಡು ಬಡ್ಕೊಂಡು ಅರಚಿಕೊಂಡವರೆಲ್ಲ ನೋಡಿ ಎಷ್ಟೊಂದು ಮೌನದಿಂದಿದ್ದಾರೆ. ಅವರಿಗೆ ಗೊತ್ತು ಇಂತಹ ಘಟನೆಗಳು ಸನಾತನ ಧರ್ಮ ಮರುಪ್ರತಿಷ್ಟಾಪನೆಯಾಗುತ್ತಿರುವ ಲಕ್ಷಣಗಳೆಂದು. ಅವರ ಮೌನವನ್ನು ನೋಡಿಯೂ ಕಲಿಯದ ಈ ದೇಶದ ದ್ರೋಹಿಗಳು ರೋಹಿತನ ಆತ್ಮಹತ್ಯೆಯನ್ನು ಪ್ರತಿಭಟಿಸಿ ಇವತ್ತು (19/01/2015) ಅದೇ ಬೆಂಗಳೂರಿನ ಟೌನ್ ಹಾಲಿನ ಮುಂದೆ ಸಂಜೆ ನಾಲ್ಕೂವರೆಗೆ ನಾಲಕ್ಕು ಫೋಟೋ ಇಟ್ಕೊಂಡು, ಹತ್ತು ಬ್ಯಾನರ್ ಕಟ್ಕೊಂಡು ಕೂಗುವ ಕಾರ್ಯಕ್ರಮ ಇಟ್ಕೊಂಡಿದ್ದಾರಂತೆ. ಬಿಡುವಾಗಿದ್ದರೆ ನೀವು ಅತ್ತ ಕಡೆ ಒಮ್ಮೆ ಬಂದು ದೇಶದ್ರೋಹಿಗಳನ್ನು ಕಣ್ತುಂಬ ನೋಡಿಕೊಂಡು ಹೋಗಬೇಕಾಗಿ ವಿನಂತಿ

ಜನ 18, 2016

ರೋಹಿತ್ ವೇಮುಲನ ಸಾವಿಗೆ ಹೊಣೆಯಾರು?

“ಶುಭ ಮುಂಜಾನೆ,
ಈ ಪತ್ರವನ್ನು ನೀವು ಓದುವಾಗ ನಾನಿರುವುದಿಲ್ಲ. ಕೋಪ ಮಾಡಿಕೊಳ್ಳಬೇಡಿ. ನನಗೆ ಗೊತ್ತು, ನಿಮ್ಮಲ್ಲಿ ಹಲವರು ನನ್ನ ಒಳಿತು ಬಯಸಿದಿರಿ, ಪ್ರೀತಿಸಿದಿರಿ ಮತ್ತು ಚೆಂದ ನೋಡಿಕೊಂಡಿರಿ. ಯಾರ ಮೇಲೂ ನನಗೆ ದೂರುಗಳಿಲ್ಲ. ಯಾವಾಗಲೂ ನಾನೇ ನನ್ನ ಸಮಸ್ಯೆಗಳಿಗೆ ಕಾರಣ. ನನ್ನ ದೇಹ ಮತ್ತು ಆತ್ಮದ ನಡುನಿನ ಕಂದಕ ದೊಡ್ಡದಾಗುತ್ತಿರುವ ಭಾವನೆ. ಮತ್ತು ನಾನು ರಾಕ್ಷಸನಾಗಿಬಿಟ್ಟಿದ್ದೇನೆ. ನನಗೆ ಬರಹಗಾರನಾಗಬೇಕೆಂದಿತ್ತು. ವಿಜ್ಞಾನ ಲೇಖಕ ಕಾರ್ಲ್ ಸಗಾನಿನ ಹಾಗೆ. ಕೊನಗೆ, ಇದೊಂದೇ ಪತ್ರವನ್ನಷ್ಟೇ ಬರೆಯಲು ನನ್ನಿಂದಾದದ್ದು.

ವಿಜ್ಞಾನ, ನಕ್ಷತ್ರ, ಪ್ರಕೃತಿಯನ್ನು ಪ್ರೀತಿಸಿದೆ; ಪ್ರಕೃತಿಯಿಂದ ಮನುಷ್ಯರು ವಿಚ್ಛೇದನ ಪಡೆದು ಬಹಳ ದಿನಗಳಾಯಿತು ಎಂಬುದನ್ನು ಅರಿಯದೆ ಮನುಷ್ಯರನ್ನು ಪ್ರೀತಿಸಿದೆ. ನಮ್ಮ ಭಾವನೆಗಳೆಲ್ಲ ಸೆಕೆಂಡ್ ಹ್ಯಾಂಡು. ಪ್ರೀತಿಯನ್ನಿಲ್ಲಿ ‘ಕಟ್ಟಲಾಗಿದೆ’. ನಂಬಿಕೆಗಳಿಗೆ ಬಣ್ಣ ಬಳಿಯಲಾಗಿದೆ. ನಮ್ಮ ಸ್ವಂತಿಕೆಗೆ ಬೆಲೆ ಬರುವುದು ಕೃತಕ ಕಲೆಯಿಂದ. ನೋವುಣ್ಣದೆ ಪ್ರೀತಿಸುವುದು ನಿಜಕ್ಕೂ ಕಷ್ಟಕರವಾಗಿಬಿಟ್ಟಿದೆ.

ಮನುಷ್ಯನ ಮೌಲ್ಯ ಅವನ ತತ್ ಕ್ಷಣದ ಗುರುತು ಮತ್ತು ಸಾಧ್ಯತೆಗಳಿಗೆ ಇಳಿದುಬಿಟ್ಟಿದೆ. ಒಂದು ವೋಟಿಗೆ. ಒಂದು ನಂಬರ್ರಿಗೆ. ಒಂದು ವಸ್ತುವಿಗೆ. ನಕ್ಷತ್ರದ ಧೂಳಿನಿಂದ ಉದ್ಭವವಾದ ಅತ್ಯದ್ಭುತ ವಸ್ತುವಿನಂತಹ ಬುದ್ಧಿವಂತಿಕೆ ಮೂಲಕ ಎಂದೂ ಮನುಷ್ಯನನ್ನು ಗುರುತಿಸಲಿಲ್ಲ. ಬೀದಿಯಲ್ಲಿ, ಓದಿನಲ್ಲಿ, ರಾಜಕೀಯದಲ್ಲಿ, ಸಾವಿನಲ್ಲಿ, ಬದುಕಿನಲ್ಲಿ.

ಈ ರೀತಿಯ ಪತ್ರವನ್ನು ಮೊದಲ ಬಾರಿಗೆ ಬರೆಯುತ್ತಿದ್ದೇನೆ. ಮೊದಲ ಬಾರಿಗೆ ಕೊನೆಯ ಪತ್ರ. ಸರಿಯಿರದಿದ್ದರೆ ಕ್ಷಮಿಸಿ.

ಬಹುಶಃ ಪ್ರಪಂಚವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾನು ತಪ್ಪಿದೆ. ಪ್ರೀತಿ, ನೋವು, ಬದುಕು, ಸಾವು ಅರ್ಥ ಮಾಡಿಕೊಳ್ಳುವಲ್ಲಿ ಸೋತೆ. ಆತುರವೇನಿರಲಿಲ್ಲ, ನಾನು ಓಡುತ್ತಲೇ ಇದ್ದೆ. ಬದುಕು ಪ್ರಾರಂಭಿಸುವ ಅವಸರವಿತ್ತು. ಕೆಲವರಿಗೆ ಬದುಕೇ ಶಾಪ. ನನಗೆ, ನನ್ನ ಹುಟ್ಟೇ ಮಾರಾಣಾಂತಿಕ ಅಪಘಾತ. ಬಾಲ್ಯದ ಒಂಟಿತನದಿಂದ ನಾನೆಂದೂ ಹೊರಬರಲಾರೆ. ಹೊಗಳಿಕೆ ಪಡೆಯದ ಮಗುವಿನ ಭೂತ.

ಈ ಕ್ಷಣದಲ್ಲಿ ನನಗೆ ನೋವಾಗುತ್ತಿಲ್ಲ, ದುಃಖವಾಗುತ್ತಿಲ್ಲ; ಖಾಲಿಯಾಗಿದ್ದೀನಷ್ಟೇ. ನನ್ನ ಬಗ್ಗೆ ನನಗೇ ಕ್ಯಾರೆಯಿಲ್ಲ. ಇದು ಅಸಹ್ಯ. ಹಾಗಾಗಿ ಈ ಕೆಲಸ ಮಾಡುತ್ತಿದ್ದೇನೆ.

ಜನರು ನನ್ನನ್ನು ಹೇಡಿಯೆಂದು ಜರಿಯಬಹುದು. ನಾನು ಹೋದ ಮೇಲೆ ಮೂರ್ಖ, ಸ್ವಾರ್ಥಿ ಎನ್ನಬಹುದು. ನನ್ನನ್ನು ಹೇಗೆ ಕರೆಯುತ್ತಾರೋ ಎನ್ನುವುದರ ಬಗ್ಗೆ ನನಗೆ ಚಿಂತೆಯಿಲ್ಲ. ಮರಣಾನಂತರದ ಕತೆಗಳಲ್ಲಿ, ದೆವ್ವಗಳಲ್ಲಿ ನನಗೆ ನಂಬಿಕೆಯಿಲ್ಲ. ಏನನ್ನಾದರೂ ನಂಬಬಹುದೆಂದರೆ, ನಕ್ಷತ್ರಗಳ ಜೊತೆ ಪಯಣಿಸುವುದನ್ನು ನಂಬುತ್ತೇನೆ. ಮತ್ತು ಇತರೆ ವಿಶ್ವಗಳ ಬಗ್ಗೆ ತಿಳಿದುಕೊಳ್ಳಬಯಸುತ್ತೇನೆ.

ಈ ಪತ್ರ ಓದುತ್ತಿರುವ ನೀವು ನನಗೇನಾದರೂ ಮಾಡಬಹುದಾದರೆ, ಕಳೆದ ಏಳು ತಿಂಗಳಿನ ಫೆಲ್ಲೋಶಿಪ್ ಹಣ ಒಂದು ಲಕ್ಷದ ಎಪ್ಪತ್ತೈದು ಸಾವಿರ ರುಪಾಯಿ ಇನ್ನೂ ಬರಬೇಕಿದೆ. ನನ್ನ ಕುಟುಂಬದವರಿಗೆ ಆ ಹಣ ತಲುಪುವುದನ್ನು ಖಾತ್ರಿ ಪಡಿಸಿಕೊಳ್ಳಿ. ರಾಮ್ಜಿಗೆ ನಲವತ್ತು ಸಾವಿರದತ್ತಿರ ಕೊಡಬೇಕಿದೆ. ಅವನದ್ಯಾವತ್ತನ್ನೂ ವಾಪಸ್ಸು ಕೇಳಿಲ್ಲ. ದಯವಿಟ್ಟು ನನಗೆ ಬರುವ ಹಣದಲ್ಲಿ ಅವನ ಹಣವನ್ನು ಕೊಟ್ಟುಬಿಡಿ.

ನನ್ನ ಅಂತ್ಯಕ್ರಿಯೆ ಶಾಂತವಾಗಿ ಸರಾಗವಾಗಿ ನಡೆಯಲಿ. ಹಿಂಗೆ ಕಾಣಿಸಿಕೊಂಡು ಹಂಗೆ ಮರೆಯಾಗಿಬಿಟ್ಟ ಎನ್ನುವಂತೆ ವರ್ತಿಸಿ. ನನಗಾಗಿ ಕಣ್ಣೀರು ಬೇಡ. ಬದುಕಿಗಿಂತ ಸಾವಿನಲ್ಲೇ ನನಗೆ ಹೆಚ್ಚು ಖುಷಿಯಿದೆ ಎನ್ನುವುದು ಗೊತ್ತಿರಲಿ.

ಉಮಾ ಅಣ್ಣ, ಈ ಕೆಲಸಕ್ಕೆ ನಿಮ್ಮ ರೂಮನ್ನು ಉಪಯೋಗಿಸಿದ್ದಕ್ಕೆ ಕ್ಷಮೆ ಇರಲಿ.

ನಿರಾಸೆ ಮೂಡಿಸಿದ್ದಕ್ಕೆ ಎ.ಎಸ್.ಎ ಕುಟುಂಬದ (ASA: Ambedkar Students Association) ಕ್ಷಮೆ ಕೇಳುತ್ತೇನೆ. ನೀವೆಲ್ಲರೂ ನನ್ನನ್ನು ತುಂಬಾ ಪ್ರೀತಿಸಿದಿರಿ. ಎ.ಎಸ್.ಎನ ಭವಿಷ್ಯಕ್ಕೆ ಶುಭ ಕೋರುತ್ತೇನೆ.
ಕೊನೆಯ ಬಾರಿಗೆ,
ಜೈ ಭೀಮ್.

ಫಾರ್ಮಾಲಿಟಿಗಳನ್ನು ಬರೆಯುವುದನ್ನು ಮರೆತುಬಿಟ್ಟೆ. ಈ ಆತ್ಮಹತ್ಯೆಗೆ ಯಾರೂ ಜವಾಬ್ದಾರರಲ್ಲ. 
ತಮ್ಮ ಕಾರ್ಯ ಅಥವಾ ತಮ್ಮ ಮಾತಿನಿಂದ ಯಾರೂ ಪ್ರೇರೇಪಿಸಲಿಲ್ಲ.
ಇದು ನನ್ನ ನಿರ್ಧಾರ ಮತ್ತು ಇದಕ್ಕೆ ನಾನೊಬ್ಬನೇ ಜವಾಬ್ದಾರ.
ನಾನು ಹೋದ ಮೇಲೆ ಈ ವಿಷಯವಾಗಿ ನನ್ನ ಸ್ನೇಹಿತರಿಗೆ ಮತ್ತು ಶತ್ರುಗಳಿಗೆ ತೊಂದರೆ ಕೊಡಬೇಡಿ.”

ಇಂತಹುದೊಂದು ಮನಕಲಕುವ ಪತ್ರವನ್ನು ಬರೆದು ಭಾನುವಾರ ರಾತ್ರಿ ನೇಣಿನ ಕುಣಿಕೆಗೆ ಕುತ್ತಿಗೆಯನ್ನೊಡ್ಡಿದವನು ರೋಹಿತ್ ವೇಮುಲಾ, ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ, ಪೂರ್ಣವಾಗಿ ಹೇಳಬೇಕೆಂದರೆ Dalit Research scholar. ಮರಣ ಪತ್ರ ಸಾವಿಗೆ ಹತ್ತಲವು ಕಾರಣಗಳಿದ್ದಿರಬಹುದೆಂಬ ಅನುಮಾನ ಮೂಡಿಸುತ್ತದೆ. ಹತ್ತಲವು ಕಾರಣಗಳಲ್ಲಿ ಕಳೆದೈದು ತಿಂಗಳುಗಳಿಂದ ರೋಹಿತ್ ವೇಮುಲ ಮತ್ತವನ ಸ್ನೇಹಿತರ ಮೇಲಾದ ಮಾನಸಿಕ ಕ್ರೌರ್ಯ ಪ್ರಮುಖವಾದುದು. ಉಳಿದ ಕಾರಣಗಳನ್ನು ಪ್ರಮುಖವಾಗಿಸಿ ಮೂಲಕಾರಣವನ್ನು ಮರೆಮಾಚುವ ಮುನ್ನ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ನಡೆದಿದ್ದರ ಕಡೆಗೆ ಗಮನಹರಿಸೋಣ.

ದೆಹಲಿ ವಿಶ್ವವಿದ್ಯಾಲಯದಲ್ಲಿ ‘ಮುಝಾಫರ್ ನಗರ್ ಬಾಕೀ ಹೈ’ ಸಾಕ್ಷ್ಯಚಿತ್ರದ ಪ್ರದರ್ಶನದ ವೇಳೆ ಎಬಿವಿಪಿಯ ಕಾರ್ಯಕರ್ತರು ನುಗ್ಗಿ ದಾಂಧಲೆ ಮಾಡಿ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ನಿಲ್ಲಿಸಿಬಿಟ್ಟರು. ಎಬಿವಿಪಿಯ ಈ ಕೃತ್ಯವನ್ನು ವಿರೋಧಿಸಿ ಹೈದರಾಬಾದ್ ವಿಶ್ವವಿದ್ಯಾಲಯದ ಅಂಬೇಡ್ಕರ್ ವಿದ್ಯಾರ್ಥಿ ಸಂಘ (ಎ.ಎಸ್.ಎ: Ambedkar student association) 2015ರ ಆಗಸ್ಟ್ ಮೂರರಂದು ಪ್ರತಿಭಟನೆ ಆಯೋಜಿಸುತ್ತಾರೆ. 
ಪ್ರತಿಭಟಿಸುವುದು ತಪ್ಪೇ?
ಹೈದರಾಬಾದ್ ವಿಶ್ವವಿದ್ಯಾಲಯದ ಎಬಿವಿಪಿಯ ಮುಖಂಡ ನಂದನಂ ಸುಶೀಲ್ ಕುಮಾರ್ ಈ ಪ್ರತಿಭಟನೆಯ ಕುರಿತಂತೆ ಕೆಳಗಿನಂತೆ ಫೇಸ್ ಬುಕ್ಕಿನಲ್ಲೊಂದು ಪೋಸ್ಟ್ ಹಾಕುತ್ತಾನೆ. 
ಸುಶೀಲ್ ಕುಮಾರನ ಫೇಸ್ ಬುಕ್ ಪೋಸ್ಟ್
ಕೆರಳಿದ ಎ.ಎಸ್.ಎ ಹುಡುಗರು ಗುಂಪು ಕಟ್ಟಿಕೊಂಡು ಸುಶೀಲ್ ಕುಮಾರನ ರೂಮಿಗೆ ನುಗ್ಗುತ್ತಾರೆ. ಅಲ್ಲವನು ಸೆಕ್ಯುರಿಟಿಯವರ ಮುಂದೆ ಒಂದು ಕ್ಷಮಾಪಣೆ ಪತ್ರ ಬರೆದುಕೊಡುತ್ತಾನೆ. ಸಂಘಟನೆಗಳ ಗಲಾಟೆ, ಹುಡುಗರ ಗಲಾಟೆ ಅಲ್ಲಿಗೆ ಮುಗಿಯಬೇಕಿತ್ತು. ಮುಗಿಯಲಿಲ್ಲ. 
ಸುಶೀಲ್ ಕುಮಾರ್ ಬರೆದುಕೊಟ್ಟ ಕ್ಷಮಾಪಣಾ ಪತ್ರ
ಸುಶೀಲ್ ಕುಮಾರ್ ಎ.ಎಸ್.ಎ ಹುಡುಗರಿಂದ ಪೆಟ್ಟು ತಿಂದಿದ್ದಾನೆ ಎಂದು ಆಸ್ಪತ್ರೆಗೆ ಸೇರುತ್ತಾನೆ. ಬಿಜೆಪಿಯಲ್ಲಿರುವ ಸುಶೀಲನ ಅಣ್ಣ, ಬಿಜೆಪಿಯ ಎಂ.ಎಲ್.ಸಿ ರಾಮಚಂದ್ರ ರಾವ್ ಹೀಗೆ ರಾಜಕೀಯ ಪಕ್ಷದ ಪ್ರವೇಶವಾಗುತ್ತದೆ. ದಲಿತ ಹುಡುಗರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗುತ್ತದೆ.

ನಡೆದಿದ್ದೇನು ಎನ್ನುವುದನ್ನು ವಿಚಾರಿಸಲು ಆಗಿದ್ದ ಉಪಕುಲಪತಿ ಪ್ರೊಫೆಸರ್ ಆರ್.ಪಿ.ಶರ್ಮಾ, ಪ್ರೊಫೆಸರ್ ಅಲೋಕ್ ಪಾಂಡೆಯವರ ನೇತೃತ್ವದಲ್ಲೊಂದು ಸಮಿತಿ ರಚಿಸುತ್ತಾರೆ. ಈ ಸಮಿತಿ ಕೊಟ್ಟ ವರದಿ ಅವರೇ ಕಂಡುಕೊಂಡೆವೆಂದು ಬರೆದಿದ್ದ ಸಂಗತಿಗಳಿಂತ ಸಂಪೂರ್ಣ ಭಿನ್ನವಾಗಿತ್ತು! 



ಸಮಿತಿಯ ಮೊದಲ ನಿರ್ಧಾರಗಳು

ಸಮಿತಿ ಕಂಡುಕೊಂಡ ಸಂಗತಿಗಳಲ್ಲಿ ಸುಶೀಲ್ ಕುಮಾರ್ ಮೇಲೆ ಹಲ್ಲೆಯಾಗಿದ್ದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಸುಶೀಲ್ ಕುಮಾರರನ್ನು ನೋಡಿಕೊಳ್ಳುತ್ತದ್ದ ಡಾ. ಅನುಪಮಾ ಕೊಟ್ಟ ವರದಿಯಲ್ಲೂ ಹಲ್ಲೆಗೂ ಸುಶೀಲ್ ಕುಮಾರನ ಪರಿಸ್ಥಿತಿಗೂ ಸಂಬಂಧವಿಲ್ಲವೆಂದೇ ಹೇಳುತ್ತಿತ್ತು. (ಸುಶೀಲ್ ಕುಮಾರನಿಗೆ ಅಪೆಂಡಿಸೈಟಿಸ್ ಆಗಿತ್ತು). ಎಡ ತೋಳಿನ ಮೇಲೆ ಕೆಲವು ಗೀರು ಗಾಯಗಳಿದ್ದವು ಎಂದಷ್ಟೇ ವೈದ್ಯೆ ಹೇಳಿದ್ದರು. ಸೆಕ್ಯುರಿಟಿ ಆಫೀಸರ್ ದಿಲೀಪ್ ಸಿಂಗ್ ಕೂಡ ಎ.ಎಸ್.ಎ ಹುಡುಗರು ಸುಶೀಲ್ ಕುಮಾರನನ್ನು ಹೊಡೆದಿದ್ದನ್ನು ನಾನು ನೋಡಲಿಲ್ಲ ಎಂದು ತಿಳಿಸಿದರು. ಸುಶೀಲ್ ಕುಮಾರ್ ಆಸ್ಪತ್ರೆಯಲ್ಲಿದ್ದರಿಂದ ಆತನ ಹೇಳಿಕೆಯನ್ನು ಪಡೆದಿರಲಿಲ್ಲ. ಎ.ಎಸ್.ಎ ಬಗ್ಗೆ ಸುಶೀಲ್ ಕುಮಾರ್ ಬರೆದ ಫೇಸ್ ಬುಕ್ ಪೋಸ್ಟು, ಅದರಿಂದಾಗಿ ಉಂಟಾದ ವಾಗ್ವಾದ ಮತ್ತು ಕೊನೆಯಲ್ಲಿ ಬರೆದುಕೊಟ್ಟ ಕ್ಷಮಾಪಣಾ ಪತ್ರದ ಬಗ್ಗೆ ಪ್ರಸ್ತಾಪಿಸುತ್ತಾರೆ. ಗಮನಿಸಬೇಕಾದ್ದೆಂದರೆ ವಿಚಾರಣೆಯನ್ನು ಮೂರ್ನಾಲ್ಕು ದಿನದಲ್ಲೇ ಕೊಡಬೇಕೆಂಬ ಒತ್ತಡದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವ ಸಮಿತಿ ತನ್ನ ಮೊದಲ ನಿರ್ಧಾರದಲ್ಲಿ ಫೇಸ್ ಬುಕ್ಕಿನಲ್ಲಿ ಆ ರೀತಿ ಬರೆದ ಸುಶೀಲ್ ಕುಮಾರನಿಗೆ ಎಚ್ಚರಿಕೆ ಕೊಡಬೇಕು ಮತ್ತು ಸಂಬಂಧಪಟ್ಟವರಲ್ಲಿ ದೂರು ನೀಡದೆ ಸುಶೀಲ್ ಕುಮಾರನ ರೂಮಿಗೆ ಹೋಗಿ ಕ್ಷಮೆ ಕೋರುವಂತೆ ಮಾಡಿದ ಡಿ.ಪ್ರಶಾಂತ್, ವಿನ್ಸೆಂಟ್, ರೋಹಿತ್ ವೆಮುಲ, ಪಿ.ವಿಜಯ್, ಸುಂಕನ್ನ, ಸೇಶು ಚೆಮುದುಗುಂಟರಿಗೆಲ್ಲ ಎಚ್ಚರಿಕೆ ನೀಡಬೇಕು ಎಂದು ಹೇಳುತ್ತಾರೆ. ಜೊತೆಗೆ ರಾಜಕೀಯ ಸಂಘಟನೆಗಳು ಹೇಗೆ ವಿಶ್ವವಿದ್ಯಾಲಯದ ಗೌರವವನ್ನು ಮಣ್ಣುಪಾಲು ಮಾಡುತ್ತಿವೆ, ಮತ್ತಿದನ್ನು ತಡೆಯಲು ಮಾಡಬೇಕಾದ ಕೆಲಸಗಳ್ಯಾವುವು ಎಂದು ವಿವರಿಸುತ್ತಾರೆ. ಆದರೆ ಕೊನೆಯ ನಿರ್ಣಯದಲ್ಲಿ ಎರಡೂ ಕಡೆಯವರಿಗೆ ಎಚ್ಚರಿಕೆ ಕೊಡುವ ನಿರ್ಧಾರ ದಲಿತ ಹುಡುಗರನ್ನೆಲ್ಲರನ್ನೂ ವಿಶ್ವವಿದ್ಯಾಲಯದಿಂದ ಹೊರಹಾಕಬೇಕೆಂದು ಬರೆದುಬಿಡುತ್ತಾರೆ! ಸುಂಕನ್ನ ವಿದ್ಯಾರ್ಥಿಯಲ್ಲ, ಹೊರಗಿನವರ ಪ್ರವೇಶದ ಮೇಲೆ ನಿಗಾ ಇಡಬೇಕು ಎಂಬ ಸಮಿತಿಯ ನಿರ್ಧಾರವನ್ನೇನೋ ಒಪ್ಪಬಹುದು. ಆದರೆ ಹೊರಗಿನವರ ಒತ್ತಾಯಕ್ಕೆ ಇಡೀ ವರದಿಯನ್ನೇ ಬದಲಿಸುವುದನ್ನು ಹೇಗೆ ಒಪ್ಪುವುದು? 
ಸಮಿತಿಯ ಅಂತಿಮ ನಿರ್ಧಾರ
ವರದಿಯಲ್ಲಿನ ಅಂತಿಮ ವಿಷಯಗಳನ್ನು ತಿಳಿಯುತ್ತಿದ್ದಂತೆ ಎ.ಎಸ್.ಎ ಪ್ರತಿಭಟನೆ ನಡೆಸುತ್ತದೆ. ಆಗಿನ ಉಪಕುಲಪತಿ ಆರ್.ಪಿ.ಶರ್ಮಾರವರೊಡನೆ ಚರ್ಚೆ ನಡೆಸುತ್ತದೆ. ಅಮಾನತ್ತಿನ ಆದೇಶವನ್ನು ಹಿಂಪಡೆದು ತನಿಖೆ ನಡೆಸಲು ಮತ್ತೊಂದು ಸಮಿತಿ ರಚಿಸಲವರು ಒಪ್ಪುತ್ತಾರೆ. 
ಹೊಸ ತನಿಖೆ ನಡೆಸಲು ಮಾಡಿದ ಆದೇಶ
ಆದರೆ ಈಗಿನ ಉಪಕುಲಪತಿ ಪ್ರೊಫೆಸರ್ ಪೋಡಿಲೇ ಅಪ್ಪಾರಾವ್ ಹೊಸ ತನಿಖೆಗೆ ಆದೇಶಿಸುವುದಿಲ್ಲ. ಐದೂ ಜನ ಹುಡುಗರನ್ನು ಹಾಸ್ಟೆಲಿನ ರೂಮು ಖಾಲಿ ಮಾಡುವಂತೆ ಆದೇಶ ಹೊರಡಿಸುತ್ತಾರೆ.
ಹಾಸ್ಟೆಲ್ಲಿನಿಂದ ಹೊರಹಾಕಿದ ಆದೇಶ
ಮೇಲ್ನೋಟಕ್ಕೆ ಎರಡೂ ಕಡೆಯಿಂದ ಒಂದಷ್ಟಷ್ಟು ತಪ್ಪುಗಳಾಗಿರುವುದು ಎದ್ದು ಕಾಣುತ್ತಿರುವ ಪ್ರಕರಣದಲ್ಲಿ ಎರಡೂ ಕಡೆಯವರನ್ನು ಕರೆಸಿ ಕೂರಿಸಿ ಮಾತನಾಡಿ ಬಗೆಹರಿಸಬೇಕಾದ ವಿಷಯವಿಲ್ಲಿ ಬಿಜೆಪಿ ಮತ್ತು ಹಿಂದೂ ಬಲಪಂಥೀಯ ಸಂಘಟನೆಗಳ ಒತ್ತಡದಿಂದ ದಲಿತ ಹುಡುಗರಷ್ಟೇ ಬಲಿಪಶುವಾಗುವಂತಹ ಸಂದರ್ಭವನ್ನು ಸೃಷ್ಟಿಸಿದೆ.
ಹಾಸ್ಟೆಲ್ಲಿನಿಂದ ಹೊರಗಡಿಯಿಟ್ಟಾಗ (ಅಂಬೇಡ್ಕರ್ ಫೋಟೋ ಇಟ್ಟುಕೊಂಡಿರುವವನು ರೋಹಿತ್ ವೇಮುಲ
ಹಾಸ್ಟೆಲ್ಲಿನಿಂದ ಹೊರಹಾಕಲ್ಪಟ್ಟ ಹುಡುಗರು ರಸ್ತೆಯಲ್ಲೇ ಮಲಗಿ ಪ್ರತಿಭಟಿಸಿದ್ದಾರೆ. ಪ್ರತಿಭಟನೆ ಮುಂದುವರೆಯುತ್ತಿರುವ ಹೊತ್ತಿನಲ್ಲೇ ರೋಹಿತ್ ವೆಮುಲ ನೇಣಿಗೆ ಶರಣಾಗಿದ್ದಾನೆ. ಈ ಸಾವಿಗೆ ಹೊಣೆಯಾರು?
ಮೂಲ: ಎ.ಎಸ್.ಎ, ಸ್ಕ್ರಾಲ್, ದಿ ಹಿಂದೂ ಮತ್ತು ಇತರೆ ನ್ಯೂಸ್ ತಾಣಗಳು.

ಜನ 2, 2016

1 ಜನವರಿ, 1818: ಭೀಮಾ ಕೊರೇಗಾಂವಿನ ಯುದ್ಧ

ಕೊರೇಗಾಂವಿನ 'ವಿಜಯ ಸ್ಥಂಭ'
ಮೂಲ: drambedkarbooks.com
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್.

ಭಾರತದ ಇತಿಹಾಸವೆಂದರೆ ಅಸ್ಪ್ರಶ್ಯರು ಮತ್ತು ಮೇಲ್ಜಾತಿಯರ ನಡುವಿನ ಸಂಘರ್ಷ. ಭಾರತದ ಇತಿಹಾಸದ ನಿಜ ಬಣ್ಣವನ್ನು ತೋರಿಸಲು ಇತಿಹಾಸಕಾರರು ಆಸಕ್ತರಾಗಿಲ್ಲ.

ಜನವರಿ 1, 1818ರಲ್ಲಿ ಸಂಖ್ಯಾಬಲದಲ್ಲಿ ಮೇಲುಗೈ ಸಾಧಿಸಿದ್ದ ಪೇಶ್ವೆಯ ಸೈನ್ಯದ ವಿರುದ್ಧ ಕೆಲವು ನೂರು ಅಸ್ಪ್ರಶ್ಯ ಸೈನಿಕರು ಕೊರೇಗಾಂವಿನ ಯುದ್ಧದಲ್ಲಿ ದಿಗ್ವಿಜಯ ಸಾಧಿಸಿದ ಮಹತ್ವದ ಸಂಗತಿಯನ್ನು ಬಹಳ ನಾಜೂಕಿನಿಂದ ಇತಿಹಾಸದ ಪುಟಗಳಲ್ಲಿ ಅಡಗಿಸಿಡಲಾಗಿದೆ.

ಬ್ರಿಟೀಷ್ ಸೈನ್ಯದಲ್ಲಿದ್ದ ಐದು ನೂರು ಮಹರ್ ಸೈನಿಕರು ಪುಣೆಯನ್ನಾಳುತ್ತಿದ್ದ ಬ್ರಾಹ್ಮಣ ಪೇಶ್ವೆಯರ ವಿರುದ್ಧ ನಡೆಸಬೇಕಿದ್ದ ಯುದ್ಧದ ತಯಾರಿಯಲ್ಲಿದ್ದರು. ಇತಿಹಾಸದ ಪುಸ್ತಕಗಳಲ್ಲಿ ಈ ಯುದ್ಧಕ್ಕೆ ಮಹತ್ವ ಕೊಡಲಾಗಿದೆ ಮತ್ತು ನಾವೆಲ್ಲರೂ ಇದನ್ನು ಪೇಶ್ವೆಯವರ ಸಾಮ್ರಾಜ್ಯವನ್ನು ಸಂಪೂರ್ಣವಾಗಿ ನಾಶಪಡಿಸಿದ ಮತ್ತು ಬ್ರಿಟೀಷ್ ಸಾಮ್ರಾಜ್ಯವನ್ನು ಭಾರತದಲ್ಲಿ ಭದ್ರವಾಗಿ ಸ್ಥಾಪಿಸಿದ ಎರಡನೇ ಆಂಗ್ಲ – ಮರಾಠ ಯುದ್ಧವೆಂದು ಓದಿದ್ದೇವೆ. ಈ ಯುದ್ಧಕ್ಕೆ ಮತ್ತೊಂದು ಐತಿಹಾಸಿಕ ಆಯಾಮವೂ ಇದೆ, ಅದರ ಅರಿವು ನಮಗಿರಬೇಕು.

ಈ ಯುದ್ಧ ಭಾರತದ ಅಸ್ಪ್ರಶ್ಯರ ಮತ್ತು ಬ್ರಾಹ್ಮಣ್ಯದ ನಡುವೆ ನಡೆದ ಯುದ್ಧ.

ಭೀಮಾ ಕೊರೇಗಾಂವಿನ ಬಗೆಗಿನ ಪುಟ್ಟ ಡಾಕ್ಯುಮೆಂಟರಿ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ

ಮಹರ್ ಸೈನಿಕರಿಗೆ, ಇದು ಮತ್ತೊಂದು ಯುದ್ಧವಷ್ಟೇ ಆಗಿರಲಿಲ್ಲ. ತಮ್ಮ ಆತ್ಮಗೌರವವನ್ನು ಹೆಚ್ಚಿಸುವ, ಮನುಸ್ಮೃತಿಯ ಚಾತುರ್ವರ್ಣ್ಯದ ವಿರುದ್ಧದ ಹೋರಾಟವಾಗಿತ್ತು. ಕೇವಲ ಐನೂರರಷ್ಟು ಸಂಖೈಯಲ್ಲಿದ್ದ ಮಹರ್ ಸೈನಿಕರು ಮೂವತ್ತು ಸಾವಿರದಷ್ಟಿದ್ದ ಪೇಶ್ವೆಯವರ ಸೈನ್ಯವನ್ನು ಸೋಲಿಸಲು ತೆಗೆದುಕೊಂಡಿದ್ದ ಕೇವಲ ಒಂದು ದಿನ. ಇದಕ್ಕೆ ಸಮನಾದ ದಿಗ್ವಿಜಯ ಭಾರತದ ಇತಿಹಾಸದಲ್ಲಿ ಬಹುಶಃ ಯಾವುದೂ ಇಲ್ಲ.

ಬ್ರಾಹ್ಮಣರ ಆಡಳಿತವಿದ್ದ ಮಹಾರಾಷ್ಟ್ರದಲ್ಲಿ ಜಾತಿ ಆಧಾರಿತ ಅಸಮಾನತೆ ವಿಜ್ರಂಭಿಸುತ್ತಿತ್ತು; ಚಾತುರ್ವರ್ಣ್ಯದ ವ್ಯವಸ್ಥೆಯ ಹೊರಗಿದ್ದ ಅಸ್ಪ್ರಶ್ಯರು ಬ್ರಾಹ್ಮಣ್ಯದ ನೀತಿ ನಿಯಮಗಳ ಕಾರಣದಿಂದ ಅಭಿವೃದ್ಧಿ ವಂಚಿತರಾಗಿದ್ದರು.

ಅಸ್ಪ್ರಶ್ಯರು ಬೆನ್ನಿಗೊಂದು ಕಸಪೊರಕೆಯನ್ನು ಕಟ್ಟಿಕೊಂಡು ನಡೆಯಬೇಕಿತ್ತು. ಕಾರಣ? ಊರಿನೊಳಗೆ ನಡೆಯುವಾಗ ಮೂಡುವ ಅವರ ಹೆಜ್ಜೆಗುರುತುಗಳನ್ನು ಕಸಪೊರಕೆ ಅಳಿಸಿಹಾಕಬೇಕಿತ್ತು. ಮಹರರ ಹೆಜ್ಜೆ ಗುರುತು ಹಾದಿಯನ್ನು ಕಲುಷಿತಗೊಳಿಸಬಾರದೆಂದು ಮಾಡಿದ್ದ ನಿಯಮವಿದು! ಇಷ್ಟಕ್ಕೇ ಮುಗಿಯಲಿಲ್ಲ. ಉಗುಳಲು ಕತ್ತಿಗೊಂದು ಮಡಿಕೆಯನ್ನು ನೇತುಹಾಕಿಕೊಳ್ಳಬೇಕಿತ್ತು. ಮೇಲ್ಜಾತಿಯವರಿಗೆ ಎಲ್ಲೆಂದರಲ್ಲಿ ಉಗುಳುವ ಸ್ವಾತಂತ್ರ್ಯವಿತ್ತೆನಿಸುತ್ತೆ ಬಿಡಿ. ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಲು ಅವರಿಗೆ ಅನುಮತಿಯಿರಲಿಲ್ಲ ಮತ್ತು ಶಿಕ್ಷಣದಿಂದ ದೂರನಿಲ್ಲಬೇಕಿತ್ತು. ಈ ನಿಯಮಗಳನ್ನು ಪಾಲಿಸದ ಅಸ್ಪ್ರಶ್ಯರನ್ನು ಹತ್ಯೆ ಮಾಡಲಾಗುತ್ತಿತ್ತು. ಭೀಮಾ ಕೊರೇಗಾಂವಿನ ಯುದ್ಧ ಬ್ರಾಹ್ಮಣ ಹಿತಸಾಕ್ತಿಗೆ ಅಸ್ಪ್ರಶ್ಯರು ಕೊಟ್ಟ ಉತ್ತರವಾಗಿತ್ತು.

ಈ ಯುದ್ಧ ಜನವರಿ 1, 1818ರಂದು ಕೊರೇಗಾಂವಿನ ಭೀಮಾ ನದಿಯ ತೀರದಲ್ಲಿ ಬ್ರಿಟೀಷ್ ಸರಕಾರದ ಬಾಂಬೆ ನೇಟಿವ್ ಇನ್ಫೆಂಟ್ರಿಯ ಮಹರ್ ಸೈನಿಕರ ನಡುವೆ ಮತ್ತು ಪೇಶ್ವೆ ಸೈನಿಕರ ನಡುವೆ ನಡೆಯಿತು. ಶಿರೂರಿನಿಂದ ಭೀಮಾ ಕೊರೇಗಾಂವಿನವರೆಗೆ 27 ಕಿಲೋಮೀಟರುಗಳನ್ನು ಸರಿಯಾದ ಅನ್ನಾಹಾರವಿಲ್ಲದೆ ಕ್ರಮಿಸಿದ ಅಸ್ಪ್ರಶ್ಯ ಸೈನಿಕರು ಪೇಶ್ವೆಯ ಸೈನ್ಯದೊಂದಿಗೆ ಹನ್ನೆರಡು ತಾಸು ಕಾದಾಡಿ ದಿನದ ಕೊನೆಗೆ ಅವರನ್ನು ಸಂಪೂರ್ಣವಾಗಿ ಸೋಲಿಸಿಯೇ ಬಿಟ್ಟರು.

ಅನೇಕ ಕಾರಣಗಳಿಂದ ಈ ಯುದ್ಧ ಮಹತ್ವವುಳ್ಳದ್ದು. ಮೊದಲಿಗೆ, ಬ್ರಿಟೀಷರು ಒಂದು ಪುಟ್ಟ ಸೈನ್ಯದೊಂದಿಗೆ ಈ ಯುದ್ಧಕ್ಕೆ ಅಣಿಯಾಗಿದ್ದರು, ಅತ್ಯಂತ ಕೆಟ್ಟ ಸೋಲನ್ನು ಅವರು ನಿರೀಕ್ಷಿಸಿದ್ದರು. ಎರಡನೆಯದಾಗಿ, ಕೊರೇಗಾಂವಿನ ಈ ಯುದ್ಧ ಪೇಶ್ವೆಯವರನ್ನು ಹಣಿಯಲು ಮತ್ತವರನ್ನು ಶರಣಾಗತರನ್ನಾಗಿಸಲು ನೆರವಾಯಿತು. ಮೂರನೆಯ ಬಹುಮುಖ್ಯ ಮಹತ್ವ, ಈ ಯುದ್ಧ ಜಾತಿ ಬಂಧನದ ಸರಪಳಿಗಳನ್ನು ಒಡೆದು ಹಾಕಲು ಮಹಾರಾಷ್ಟ್ರದ ಅಸ್ಪ್ರಶ್ಯ ಮಹರರು ನಡೆಸಿದ ಪ್ರಯತ್ನ.

ಯುದ್ಧದಲ್ಲಿ ಭಾಗವಹಿಸಿದ್ದ ಬಾಂಬೆ ನೇಟಿವ್ ಇನ್ಫೆಂಟ್ರಿಯ ಸೈನಿಕರ ಶೌರ್ಯವನ್ನು ಗೌರವಿಸಲಾಯಿತು. ಅಧಿಕೃತ ವರದಿಯಲ್ಲಿ ಈ ಸೈನಿಕರ ಧೀರೋದ್ದಾತ ಮನೋಭಾವನೆ, ಶಿಸ್ತಿನ ಹೋರಾಟ, ಧೈರ್ಯವನ್ನು ನೆನಪು ಮಾಡಿಕೊಳ್ಳಲಾಗಿದೆ.

ಅತ್ಯಂತ ಕಠಿಣವಾಗಿದ್ದ ಶಿರೂರು – ಕೊರೇಗಾಂವ್ ನಡುವಿನ 27 ಕಿಲೋಮೀಟರುಗಳ ನಡುಗೆಯನ್ನು ಅನ್ನಾಹಾರದ ಕೊರತೆ, ಖಾಯಿಲೆಗಳ ನಡುವೆ ಯಶಸ್ವಿಯಾಗಿ ಪೂರೈಸಿ ಯುದ್ಧವನ್ನು ಗೆದ್ದ ಮಹರ್ ಸೈನಿಕರ ಕಾರ್ಯ ಪ್ರಶಂಸಾರ್ಹವಾಗಿತ್ತು. ಯುದ್ಧರಂಗದಲ್ಲಿ ಮುನ್ನಡೆಯುತ್ತಿದ್ದಾಗ, ಬಂಧನವಾದಾಗ, ಕೋಟೆಗೆ ಲಗ್ಗೆ ಇಡುತ್ತಿದ್ದಾಗ ಅಥವಾ ಕೆಲವೊಮ್ಮೆ ಗೆಲುವಿನ ಕಾರಣಕ್ಕಾಗಿ ಎರಡೆಜ್ಜೆ ಹಿಂದಿಡುತ್ತಿದ್ದಾಗ ಈ ಸೈನಿಕರು ತಮ್ಮ ಅಧಿಕಾರಿಗಳು ಮತ್ತು ಕಾಮ್ರೇಡುಗಳ ಜೊತೆ ಬದ್ಧತೆಯಿಂದ ನಿಂತಿದ್ದರು, ರೆಜಿಮೆಂಟಿನ ಗೌರವವನ್ನು ಮಣ್ಣುಪಾಲು ಮಾಡುವ ಯಾವ ಕೆಲಸವನ್ನೂ ಇವರು ಮಾಡಲಿಲ್ಲ.

ಮಹರ್ ಸೈನಿಕರ ಶೌರ್ಯವನ್ನು ನೆನಪಿನಲ್ಲಿಡುವ ಸಲುವಾಗಿ 1851ರಲ್ಲಿ ಕೊರೇಗಾಂವಿನಲ್ಲಿ ಬ್ರಿಟೀಷರು ವಿಜಯ ಸ್ಥಂಭವನ್ನು ಸ್ಥಾಪಿಸಿದರು. ಸ್ಥಂಭದ ಮೇಲೆ ಯುದ್ಧದಲ್ಲಿ ಹುತಾತ್ಮರಾದ 22 ಮಹರ್ ಸೈನಿಕರ ಹೆಸರುಗಳನ್ನು ಕೆತ್ತಲಾಗಿದೆ. ಭಾರತದ ಜಾತಿವ್ಯವಸ್ಥೆಯ ವಿರುದ್ಧ ಯುದ್ಧ ಸಾರಿದ ಮಹರರ ಶೌರ್ಯದ ವಿಜಯ ಸ್ಥಂಭ ನಮ್ಮ ಹೆಮ್ಮೆಯ ಪ್ರತೀಕವಾಗಿ ಇವತ್ತಿಗೂ ಕೊರೇಗಾಂವಿನಲ್ಲಿ ಘನತೆಯಿಂದ ನಿಂತಿದೆ.

ಡಾ. ಬಾಬಾಸಾಹೇಬ್ ಅಂಬೇಡ್ಕರರು ಪ್ರತಿ ವರ್ಷ ಜನವರಿ ಒಂದರಂದು ಕೊರೇಗಾಂವಿಗೆ ಭೇಟಿ ಕೊಡುತ್ತಿದ್ದರು, ಈಗಿನ ದಲಿತರು ಇದೇ ರೀತಿಯ ಶೌರ್ಯ ಮತ್ತು ಬದ್ಧತೆಯನ್ನು ತೋರಿಸಿ ಇಡೀ ದೇಶದಿಂದ ಬ್ರಾಹ್ಮಣ್ಯವನ್ನು ತೊಲಗಿಸಬೇಕೆಂದು ಹೇಳುತ್ತಿದ್ದರು. 1927ರ ಜನವರಿ ಒಂದರಂದು ಕೊರೇಗಾಂವಿನಲ್ಲಿ ದೊಡ್ಡ ಸಮಾವೇಶವನ್ನು ಆಯೋಜಿಸಿದ ಅಂಬೇಡ್ಕರರು ಅಸ್ಪ್ರಶ್ಯ ಸೈನಿಕರ ವೀರಗಾಥೆಯನ್ನು ಸಾರ್ವಜನಿಕರಿಗೆ ನೆನಪು ಮಾಡಿಕೊಟ್ಟರು.

ಪ್ರತಿ ವರ್ಷ ವರ್ಷದಾರಂಭದ ಹಿಂದಿನ ದಿನ ಅರ್ಥಹೀನ ಮೋಜು ಮಸ್ತಿಗಳಲ್ಲಿ ತೊಡಗುವ ಬದಲು ಪೇಶ್ವೆಗಳನ್ನು ಸೋಲಿಸಿ, ಮನುಸ್ಮ್ರತಿಯ ಆರಾಧಕರಾದ ಬ್ರಾಹ್ಮಣರ ಆಳ್ವಿಕೆಯಿಂದ ಅಸ್ಪ್ರಶ್ಯರಿಗೆ ಸ್ವತಂತ್ರ ತಂದುಕೊಟ್ಟ ನಮ್ಮ ಧೀರೋದ್ದಾತ ಹಿರೀಕರಿಗೆ ಗೌರವ ಸಲ್ಲಿಸೋಣ. ನಮ್ಮ ಭವ್ಯ ಇತಿಹಾಸವನ್ನು ಮತ್ತಷ್ಟು ಅರಿಯಲೂ ಇದು ಸುಸಂದರ್ಭ.

ಬಿ.ಆರ್.ಭಾಸ್ಕರ್ ಪ್ರಸಾದ್ ರವರು ತಮ್ಮ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡಿದ್ದ ಭೀಮಾ ಕೊರೇಗಾಂವಿನ ಬಗೆಗಿನ ಸಾಕ್ಷ್ಯಚಿತ್ರವನ್ನು ನೋಡಿದ ನಂತರ ಆ ಯುದ್ಧದ ಬಗ್ಗೆ ತಿಳಿದುಕೊಳ್ಳಲು ಒಂದಷ್ಟು ಅಂತರ್ಜಾಲ ಜಾಲಾಡುತ್ತಿದ್ದಾಗ drambedkarbooks.comನಲ್ಲಿ ಸಿಕ್ಕ ಲೇಖನದ ಕನ್ನಡ ಭಾವಾನುವಾದವಿದು.