ಸೆಪ್ಟೆಂ 1, 2015

ದುಡ್ಡಿನರಮನೆಯಲ್ಲಿ ಕಳೆದುಹೋಗಿರುವ ಮಾಧ್ಯಮ ಸಂವೇದನೆ ಮೂಡಿಸುವುದೆಂತು?

Dr Ashok K R
ಮೊನ್ನೆ ಭಾನುವಾರ ಬೆಳಿಗ್ಗೆ ಹತರಾದ ಡಾ.ಎಂ.ಎಂ.ಕಲಬುರ್ಗಿಯವರ ಸಾವಿಗೆ ಸಂತಾಪ ಸೂಚಿಸಲು ಮತ್ತು ಕೊಲೆಗಾರರನ್ನು ಶೀಘ್ರವಾಗಿ ಬಂಧಿಸುವಂತೆ ಒತ್ತಾಯಿಸಲು ಬೆಂಗಳೂರಿನ ಟೌನ್ ಹಾಲ್ ಬಳಿ ಹೋಗಿದ್ದಾಗ ಆಕಸ್ಮಿಕವಾಗಿ ಬೋಳುವಾರು ಮೊಹಮದ್ ರವರ ಪರಿಚಯವಾಯಿತು. ಹೊಸಬನೊಡನೆ ಸರಾಗವಾಗಿ ಮಾತನಾಡುತ್ತಿದ್ದರು. ಎಸ್.ಡಿ.ಪಿ.ಐ ಸಂಘಟನೆಯ ಕಾರ್ಯಕರ್ತರು ಅವರ ಧ್ವಜವನ್ನು ಹೊರತೆಗೆದಾಗ ‘ಯಾವ ಸಂಘದ ಕಾರ್ಯಕ್ರಮವೂ ಅಲ್ಲ. ಇಲ್ಲಿ ಫ್ಲ್ಯಾಗ್ ಇಟ್ಕೊಂಡು ಪ್ರಚಾರ ಮಾಡ್ಕೊಳ್ಳೋದ್ಯಾಕೆ’ ಎಂದು ರೇಗಿದರು. ಉಳಿದವರೂ ಧ್ವಜಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಧ್ವಜಗಳನ್ನು ಮಡಿಚಿಟ್ಟರು. ‘ಏನ್ ಕರ್ಮಾರೀ ಇವರ್ದು, ಅರವತ್ತು ವರ್ಷ ವಯಸ್ಸಾದ್ರೆ ಏನೋ ಮುತ್ಸದ್ಧಿ ಅಂತ ತೋರಿಸ್ಕೊ‍ಳ್ಳೋ ಚಟಕ್ಕೆ ಗಡ್ಡ ಬಿಟ್ಕೊಳ್ಲಿ. ಇಪ್ಪತ್ತು ವರ್ಷಕ್ಕೆ ಗಡ್ಡ ಬಿಟ್ಕೊಂಡು ಅಸಹ್ಯವಾಗಿ ಕಾಣ್ತಾರಪ್ಪ’ ಎಂದು ಗೊಣಗಿದರು. ನನ್ನ ಕುರುಚಲು ಗಡ್ಡ ಕೆರೆದುಕೊಂಡೆ. ಜಿ.ರಾಮಕೃಷ್ಣರವರನ್ನು ನೆರೆದಿದ್ದ ಜನಸಮೂಹವನ್ನುದ್ದೇಶಿಸಿ ಮಾತನಾಡಬೇಕೆಂದು ಮುಂದಕ್ಕೆ ಕರೆದರು. ಆ ವಯಸ್ಸಿನಲ್ಲೂ ಸಾಹಿತಿ – ಸಂಶೋಧಕನ ಹತ್ಯೆಗೆ ಪ್ರತಿಭಟನೆ ಸೂಚಿಸಲು ಬಂದಿದ್ದ ಜಿ.ಆರ್ ಟೌನ್ ಹಾಲಿನ ಮೆಟ್ಟಲಿಳಿದು ಮೈಕ್ ಕೈಗೆತ್ತಿಕೊಳ್ಳುವಷ್ಟರಲ್ಲಿ ಗಿರೀಶ್ ಕಾರ್ನಾಡ್ ಆಗಮಿಸಿದರು. ಟಿವಿ ವಾಹಿನಿಯವರೆಲ್ಲರೂ ಮೈಕು ಕ್ಯಾಮೆರಾಗಳೊಂದಿಗೆ ಗಿರೀಶ್ ಕಾರ್ನಾಡರತ್ತ ಧಾವಿಸಿದರು. ಜಿ.ಆರ್ ಮಾತನಾಡಲಿ ಮೊದಲು ಎಂದು ಕೆಲವರು ಕೂಗಿದರೂ ವಾಹಿನಿಯವರದು ಜಾಣ ಕಿವುಡು. ಮೈಕ್ ಹಿಡಿದುಕೊಂಡ ಜಿ.ಆರ್ ಮೌನದಿಂದ ನಿಂತಿದ್ದರು. ಬಿಡಿ, ಸಾಮಾನ್ಯರಿಗೆ ಗಿರೀಶ್ ಕಾರ್ನಾಡರನ್ನಷ್ಟೇ ಗುರುತಿಸುವುದು ಸಾಧ್ಯ, ಕಾರಣ ಅವರೊಬ್ಬ ನಟರಾದ್ದರಿಂದ ಅಲ್ಲಿಲ್ಲಿ ನೋಡಿರುತ್ತೇವೆ. ಮಾಧ್ಯಮದವರಿಗಾದರೂ ಯಾರ ಮಾತಿಗೆ ನಾವು ಅಡ್ಡಿಪಡಿಸುತ್ತಿದ್ದೇವೆ, ಯಾರು ನಮ್ಮಿಂದ ಕಾಯುವಂತಾಗಿದ್ದಾರೆ ಎಂಬ ಪ್ರಜ್ಞೆಯೂ ಇರಬೇಡವೇ? ಗಿರೀಶ್ ಕಾರ್ನಾಡ್ ಅವರನ್ನು ಗುರುತಿಸುವವರ ಸಂಖೈ ಹೆಚ್ಚು, ಅವರ ಮಾತಿಗೆ ಕೊನೇಪಕ್ಷ ಟಿವಿಯಲ್ಲಿ ಟಿ.ಆರ್.ಪಿ ಹೆಚ್ಚು ಎನ್ನುವುದನ್ನು ಒಪ್ಪೋಣ. ಗಿರೀಶ್ ಕಾರ್ನಾಡರದ್ದೇ ಬೈಟ್ ತೆಗೆದುಕೊಳ್ಳಲಿ; ಆದರೆ ಆ ಬೈಟಿಗಾಗಿ ಒಂದರೆಕ್ಷಣ ಕಾಯುವಷ್ಟೂ ಪುರುಸೊತ್ತಿಲ್ಲದಂತಾಯಿತೇ ನಮ್ಮ ಮಾಧ್ಯಮ ಮಿತ್ರರಿಗೆ? ಇಷ್ಟೊಂದು ಸಂವೇದನಾರಹಿತರಾಗಿ ಕಾರ್ಯನಿರ್ವಹಿಸುವ ಅನಿವಾರ್ಯವಾದರೂ ಏನು? ‘ಆ ಟಿವಿಯವರು ಬೈಟ್ ತೆಗೆದುಕೊಂಡಿದ್ದಾರೆ. ನೀನ್ಯಾಕೆ ತೆಗೆದುಕೊಂಡಿಲ್ಲ’ ಎಂದವರ ಮಾಲೀಕರು ಬೈಯ್ಯುತ್ತಾರಾ?

ಮನೆಗೆ ವಾಪಸ್ಸಾದ ನಂತರ ಟಿವಿ ಹಾಕಿದರೆ ವಾಹಿನಿಯೊಂದರಲ್ಲಿ ಶಿವರಾಜ್ ಕುಮಾರ್ ತನ್ನ ಭಾವೀ ಅಳಿಯನಿಗೆ ಗಿಫ್ಟಾಗಿ (ಇದು ವರದಕ್ಷಿಣೆಯೇ ಅಲ್ಲವೇ?!) ಕೊಡುವ ಕಾರಿನ ಬಗೆಗಿನ ಚರ್ಚೆ! ಭಾವೀ ಅಳಿಯನ ಸಂದರ್ಶನ ಬೇರೆ... ಥೂ ಇವರ ಯೋಗ್ಯತೆಗೆ ಎಂದುಕೊಂಡೆ. ಸಹೋದ್ಯೋಗಿಯ ಬಗ್ಗೆ ಇದೇ ವಿಷಯ ಚರ್ಚಿಸುವಾಗ ‘ರೀ. ಅಳಿಯನ ಸಂದರ್ಶನವೇ ವಾಸಿ. ಅಡುಗೆ ಮಾಡೋರತ್ರ, ಡೆಕೊರೇಷನ್ ಮಾಡೋರ್ ಮುಖದ್ ಮುಂದೆ ಮೈಕಿಡ್ದು ಶಿವಣ್ಣನ ಮಗಳ ಮದುವೆ ಕೆಲಸ ಮಾಡ್ತಿದ್ದೀರಲ್ಲ ನಿಮಗೇನನ್ಸುತ್ತೆ? ಗೀತಕ್ಕ ನಿಮಗೇ ಇಂತಿಂತದೇ ಮಾಡ್ಬೇಕು ಅಂದ್ರಾ? ಅಂತೆಲ್ಲ ಕೇಳ್ತಿದ್ರು’ ಅಂದರು. ಮದುವೆ ಹಿಂದಿನ ದಿನದ ಸಮಾರಂಭ, ಮದುವೆ ದಿನದ ಸಂಪೂರ್ಣ ಲೈವ್ ಪ್ರಸಾರ....... ಮಾಧ್ಯಮ ಉದ್ಯಮವೆಂಬುದು ಸತ್ಯ, ಲಾಭದಲ್ಲಿದ್ದರಷ್ಟೇ ಮುಂದುವರೆಯಲು ಸಾಧ್ಯ ಎಂಬುದೂ ಸತ್ಯ.... ಆ ಕಾರಣಕ್ಕೆ ಇಷ್ಟೊಂದು ಕೆಳ ಮಟ್ಟಕ್ಕಿಳಿಯಬೇಕೆ? 

ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗದಲ್ಲಿ ನಟನಾಗಿ ದೊಡ್ಡ ಹೆಸರು. ತಂದೆ ರಾಜ್ ಕುಮಾರ್ ಪ್ರಭಾವಳಿಯಿಂದ ಚಿತ್ರರಂಗಕ್ಕೆ ಅವರ ಮಕ್ಕಳು ಬಂದವರಾದರೂ ತಮ್ಮದೇ ಪ್ರತಿಭೆ, ಶ್ರಮದಿಂದ ಚಿತ್ರರಂಗದಲ್ಲಿ ನೆಲೆನಿಂತವರು. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರರೆಲ್ಲರೂ ಗೌರವಕ್ಕೆ, ಆದರಕ್ಕೆ ಅರ್ಹರು. ಅವರ ಮಕ್ಕಳು ಯಾವ ರೀತಿಯ ಸಾಧಕರು? ಅವರ ಮದುವೆಗ್ಯಾಕೆ ಅಷ್ಟೊಂದು ಪ್ರಾಮುಖ್ಯತೆ. ಓಕ್ಕೋಳ್ಳಿ, ಮದುವೆ ಸಮಾರಂಭವನ್ನು ಬಹುತೇಕ ಪತ್ರಿಕೆಗಳು ಚಿಕ್ಕದಾಗಿ ಪ್ರಕಟಿಸಿರುವಂತೆ ಒಂದೈದು ನಿಮಿಷದ ಸುದ್ದಿ ಮಾಡಿದರೆ ಒಪ್ಕೋಬಹುದು. ದಿನವಿಡೀ ಲೈವ್ ಆಗಿ ತೋರಿಸೋ ದರ್ದೇನು ಮಾಧ್ಯಮದವರಿಗೆ? ‘ಸಿದ್ಧರಾಮಯ್ಯ ಬಂದ್ರು, ಸಿದ್ಧರಾಮಯ್ಯ ಸ್ಟೇಜ್ ಹತ್ತುದ್ರು, ಸಿದ್ಧರಾಮಯ್ಯ ಕೈ ಕೊಟ್ರು, ಸಿದ್ಧರಾಮಯ್ಯ ಕೆಳಗಿಳಿದ್ರು’ ಅಂತ ರನ್ನಿಂಗ್ ಕಾಮೆಂಟ್ರಿ ಬೇರೆ! ಹೋಗ್ಲಿ ಮದುವೆಯೇನಾದ್ರೂ ತುಂಬ ವಿಭಿನ್ನವಾಗಿ, ಸಮಾಜಕ್ಕೆ ಮಾದರಿಯಾಗಿ ನಡೆಯಿತಾ? ಇಲ್ಲವಲ್ಲ. ಅದೊಂದು ಐಷಾರಾಮಿ ಮದುವೆ. ಅವರ ದುಡ್ಡು ಅವರ ಐಷಾರಾಮಿತನ ಅವರಿಷ್ಟ. ಖಾಸಗಿ ಐಷಾರಾಮಿತನವನ್ನು ಲೈವ್ ತೋರಿಸಿ ಸಮಾಜಕ್ಕೆ ಯಾವ ರೀತಿಯ ಸಂದೇಶವನ್ನು ಕೊಡುತ್ತಿವೆ ಮಾಧ್ಯಮಗಳು? ಇದೆಲ್ಲಕ್ಕಿಂತಲೂ ಅಸಹ್ಯವೆಂದರೆ ‘ದೊಡ್ಮನೆ ಮದುವೆ ದೊಡ್ಮನೆ ಮದುವೆ’ ಅಂತ ಬಡಕೊಂಡಿದ್ದು. ದೊಡ್ಮನೆ ಚಿಕ್ಮನೆಗಳೆಲ್ಲವೂ ಊಳಿಗಮಾನ್ಯ ಪದ್ಧತಿಯ ಸಂಕೇತವಲ್ಲವೇ? ಯಾವ ದೊಡ್ಮನೆಯಲ್ಲಿ ರಾಜ್ ಕುಮಾರ್ ಕುಟುಂಬ ಒಟ್ಟಿಗಿದೆ ಎಂಬುದನ್ನು ಅರಿಯದಷ್ಟು ದಡ್ಡರೇ ಮಾಧ್ಯಮದವರು. ‘ಲೈವ್ ಪ್ರೋಗ್ರಾಮ್ ಮಾಡಬೇಡಿ’ ಎಂದು ಹೇಳುವ ಮೂಲಕ ಶಿವರಾಜ್ ಕುಮಾರ್ ಆದರೂ ‘ದೊಡ್ಡ’ತನ ತೋರಿಸಬಹುದಿತ್ತು. ಈ ಅಪಸವ್ಯಗಳೆಲ್ಲ ಮದುವೆಗೇ ಮುಗಿದು ಕ್ಯಾಮೆರಾ ಎತ್ತಿಕೊಂಡು ಹನಿಮೂನು ಪ್ರಸ್ಥದ ಮನೆ ಅಂಥ ತೋರಿಸದಿದ್ದರೆ ಕನ್ನಡಿಗರ ಪುಣ್ಯ.

ಆಗ 7, 2015

ಪತ್ರಕರ್ತನೊಬ್ಬನ ಆಸ್ತಿ ವಿವರ!

ಗೆ, 
ಎಚ್.ಆರ್. ರಂಗನಾಥ್
ವ್ಯವಸ್ಥಾಪಕ ನಿರ್ದೇಶಕರು
ಪಬ್ಲಿಕ್ ಟಿವಿ
ಬೆಂಗಳೂರು

ಆತ್ಮೀಯ ಸರ್, 

ವಿಷಯ: ನನ್ನ ಆಸ್ತಿ ವಿವರ ಸಲ್ಲಿಸುವ ಕುರಿತು

ಇವತ್ತಿಗೆ ನಾನು ಪತ್ರಿಕೋದ್ಯಮದಲ್ಲಿ ಕೆಲಸ ಮಾಡಲು ಆರಂಭಿಸಿ 12 ವರ್ಷ ಕಳೆಯಿತು. 2003 ಆಗಸ್ಟ್ 6ರಂದು ಮೈಸೂರು ಕನ್ನಡಪ್ರಭ ಕಚೇರಿಯಲ್ಲಿ ಅಂಶಿ ಪ್ರಸನ್ನಕುಮಾರ್ ಅವರ ಮಾರ್ಗದರ್ಶನದಲ್ಲಿ ಕೆಲಸ ಶುರುಮಾಡಿದೆ. ಅದಾದ ನಂತರ ಕನ್ನಡಪ್ರಭ, ಧಾರವಾಡ ಅಲ್ಲಿಂದ ಬೆಂಗಳೂರು ಕನ್ನಡಪ್ರಭಕ್ಕೆ ಬಂದೆ. ಅದಾದ ನಂತರ ಸುವರ್ಣನ್ಯೂಸ್ ಅಲ್ಲಿಂದ ಹೊರಟು ಉದಯವಾಣಿ ದೆಹಲಿ ವರದಿಗಾರನಾಗಿಯೂ ಇದೆ. 2011 ಅಕ್ಟೋಬರ್ 27ರಂದು ಬಂದು ಬೆಂಗಳೂರು ಪಬ್ಲಿಕ್ ಟಿವಿ ಸೇರ್ಪಡೆಯಾಗಿ ಸದ್ಯ ಇನ್‍ಪುಟ್ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದೇನೆ. 6 ಸಾವಿರ ರೂಪಾಯಿ ಸಂಬಳದಿಂದ ಉದ್ಯೋಗ ಶುರು ಮಾಡಿದ ನಾನೀಗ ತಿಂಗಳಿಗೆ 64,500 ರೂಪಾಯಿ (ನಿಗದಿಯಾಗಿರುವ ಸಂಬಳ 72 ಸಾವಿರ ರೂಪಾಯಿ, ಟ್ಯಾಕ್ಸ್ ಕಳೆದು ಕೈಗೆ ಸಿಗುವ ಸಂಬಳ 64,500 ರೂಪಾಯಿ) ಪಡೆದುಕೊಳ್ಳುತ್ತಿದ್ದೇನೆ. ಸಂಬಳದ ವಿಚಾರದಲ್ಲಿ ಸಂತೃಪ್ತನಾಗಿದ್ದೇನೆ.

ಪಬ್ಲಿಕ್ ಟಿವಿ ಶುರು ಮಾಡಿದಾಗ ನೀವು ಆಸ್ತಿ ಘೋಷಿಸಿಕೊಂಡಂತೆಯೇ ನಾನು ಆಸ್ತಿ ಘೋಷಿಸಿಕೊಳ್ಳಬೇಕು ಅಂದುಕೊಳ್ಳುತ್ತಲೇ ದಿನ ತಳ್ಳಿದ್ದೆ. ಆಗಾಗ ಅನ್ನಿಸಿದರೂ ಬರೆಯಲು ಕುಳಿತವ ನನ್ನ ಹತ್ತಿರ ಏನಿದೆ ಆಸ್ತಿ ಬರೆದುಕೊಳ್ಳಲು ಅಂತ ಸುಮ್ಮನಾಗುತ್ತಿದ್ದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಭ್ರಷ್ಟಾಚಾರ ಕುರಿತಂತೆ ಎದ್ದಿರುವ ಚರ್ಚೆಗಳ ವೇಳೆ ಸಾಮಾಜಿಕ ಜಾಲ ತಾಣಗಳಲ್ಲಿ ಸಾರ್ವಜನಿಕರು ಪತ್ರಕರ್ತರ ಕುರಿತಂತೆ ಹಾಕಿದ ಕಾಮೆಂಟ್‍ಗಳು ಹಾಗೂ ನನ್ನ ಹಳೆಯ ತುಡಿತದಿಂದಾಗಿ ನಿಮಗೆ ನನ್ನ ಆಸ್ತಿ ವಿವರವನ್ನು ಸಲ್ಲಿಸುತ್ತಿದ್ದೇನೆ. ತಾವು ಅನುಮತಿ ನೀಡಿದರೆ ಇದನ್ನು ನನ್ನ ವೈಯಕ್ತಿಕ ಫೇಸ್‍ಬುಕ್ ಅಕೌಂಟಿನಲ್ಲಿಯೂ ಪ್ರಕಟಿಸುತ್ತೇನೆ. 

ಇದನ್ನು ನನ್ನ ಅಹಂ ಪ್ರದರ್ಶನಕ್ಕೋ, ಪ್ರಚಾರಕ್ಕೋ ಮಾಡುತ್ತಿಲ್ಲ. ಎಲ್ಲರ ಅಕೌಂಟಬಿಲಿಟಿ ಪ್ರಶ್ನಿಸುವ ನಾವು ನಮ್ಮ ಗಳಿಕೆ ಪಾರದರ್ಶಕವಾಗಿಡಬೇಕು ಎಂಬುದು ನನ್ನ ಅಭಿಪ್ರಾಯ, ನಂಬಿಕೆ ಮತ್ತು ನಿರ್ಧಾರ ಆಗಿದ್ದರಿಂದ ಈ ವಿವರ ಸಲ್ಲಿಸುತ್ತಿದ್ದೇನೆ.

ಇಲ್ಲಿಯ ತನಕ ನಾನು ಆಯಾ ಸಂಸ್ಥೆಗಳು ನೀಡಿದ ಸಂಬಳದ ವಿನಃ ಬೇರೆ ಸಂಪಾದನೆಯನ್ನ ಮಾಡಿಲ್ಲ. ಆದರೆ, ನಾನು ವರದಿಗಾರನಾದ ಮೊದಲ ಎರಡು ವರ್ಷ ಪಿಜಿಎಫ್ ಕಂಪನಿಯ ಸಣ್ಣ ಉಳಿತಾಯ ಯೋಜನೆಯ ಏಜೆಂಟ್ ಆಗಿಯೂ ಕಮಿಷನ್ ಪಡೆದಿದ್ದೇನೆ. ನಂತರ ಅದರಿಂದ ಹೊರಬಂದೆ. ಧಾರವಾಡದಲ್ಲಿದ್ದ ವೇಳೆ ಭಾಷಾಂತರ ಕಾರ್ಯ ಮಾಡಿ 25 ಸಾವಿರ ರೂಪಾಯಿ ಸಂಪಾದಿಸಿದ್ದು ಬಿಟ್ಟರೆ ಈವರೆಗೆ ಸಂಬಳದ ವಿನಃ ಬೇರೆಲ್ಲೂ ಒಂದು ರೂಪಾಯಿಯನ್ನು ದುಡಿದೂ ಇಲ್ಲ. ಪಡೆದೂ ಇಲ್ಲ. ಹಣದ ಆಸೆ ಆಗಾಗ ಹುಟ್ಟಿದೆ ನಾನೇ ತಾಳ್ಮೆಯಿಂದ ಅವನ್ನು ಕೊಂದು ಹಾಕಿದ್ದೇನೆ.

ಪಿತ್ರಾರ್ಜಿತ ಆಸ್ತಿ ವಿವರ:

ನಾನು ಈ ಕ್ಷಣದವರೆಗೆ ಅವಿವಾಹಿತ. ಮುಂದೆ ಗೊತ್ತಿಲ್ಲ. ಮಂಡ್ಯ ತಾಲೂಕಿನ ಹನಕರೆ ನನ್ನ ಹುಟ್ಟೂರು. ನನ್ನ ತಂದೆ ತಾಯಿ, ನನ್ನ ತಮ್ಮ ಮತ್ತು ಆತನ ಪತ್ನಿ ಎಲ್ಲರೂ ಇರುವ ಒಟ್ಟು ಕುಟುಂಬ. ನನ್ನ ತಮ್ಮ ಅಭಿಲಾಷ್ ಚಿತ್ರ ನಿರ್ದೇಶಕ. ಒಟ್ಟು ಕುಟುಂಬವಾದರೂ ಚಿತ್ರ ನಿರ್ಮಾಣ-ನಿರ್ದೇಶನದಲ್ಲಿ ತೊಡಗಿಕೊಂಡಿರುವ ಆತನ ವ್ಯವಹಾರಕ್ಕೆ ಯಾವತ್ತೂ ನಾನಾಗಲಿ, ನನ್ನ ತಂದೆ-ತಾಯಿಯಾಗಲಿ ಕೈ ಹಾಕಿಲ್ಲ. ಆತ ನಮ್ಮಲ್ಲಿ ಕೇಳಿಲ್ಲ. ಸಾಮಾನ್ಯ ಸಹೋದರರಂತೆ ಒಂದಿಷ್ಟು ಕಷ್ಟ-ಸುಖಗಳಿಗೆ ಒಬ್ಬರಿಗೊಬ್ಬರು ಆಗಿದ್ದೇವೆ ಅಷ್ಟೇ. ನನ್ನ ತಂದೆ ಶಂಕರಪ್ಪ - ತಾಯಿ ರತ್ನಮ್ಮ ಅವರ ಯೋಗಕ್ಷೇಮಕ್ಕೆ ನಾನು ಹಣ ಕೊಡುವುದು ಉಂಟು ಆದರೆ ನಾನು ದುಡಿಯಲಾರಂಭಿಸಿದ ದಿನದಿಂದ ಅವರಲ್ಲಿ ನಾನು ಹಣ ಪಡೆದಿಲ್ಲ. ನನ್ನ ತಾಯಿ ಪಿಎಸಿಎಲ್ ಕಂಪನಿ ಉಳಿತಾಯ ಯೋಜನೆಯ ಪ್ರತಿನಿಧಿಯಾಗಿ ಕಮಿಷನ್ ಪಡೆಯುತ್ತಿದ್ದರು. ಆದರೆ ಕಳೆದ ಒಂದೂವರೆ ವರ್ಷದಿಂದ ಆ ಕಂಪನಿಯೇ ತೊಂದರೆಯಲ್ಲಿರುವುದರಿಂದ ಅವರಿಗೆ ಯಾವುದೇ ಹಣ ಬರುತ್ತಿಲ್ಲ. ನನ್ನ ತಂದೆ ಶಂಕರಪ್ಪ, ಮಧುಮೇಹ ಸೇರಿದಂತೆ ಹಲವು ವಿಷಯಗಳಲ್ಲಿ ಅನಾರೋಗ್ಯಪೀಡಿತರು. ನಮಗೆ ಒಟ್ಟು 3 ಎಕರೆ 25 ಗುಂಟೆ ನೀರಾವರಿ ಜಮೀನಿದೆ. ಅದರಲ್ಲಿ ನಾವು ಸಾಗುವಳಿ ಮಾಡುತ್ತಿಲ್ಲ. ಗುತ್ತಿಗೆಗೆ ನೀಡಿದ್ದೇವೆ. ಅದರಿಂದ ಬರುವ ಆದಾಯ - ನಷ್ಟ ಎಲ್ಲವೂ ನಮ್ಮ ತಂದೆ-ತಾಯಿಯೇ ನಿಭಾಯಿಸುತ್ತಾರೆ. 

ನನ್ನ ಹೆಸರಿನಲ್ಲಿರುವ ಪಿತ್ರಾರ್ಜಿತ ಆಸ್ತಿ ಮತ್ತು ಸಾಲ

* ನನ್ನ ಹುಟ್ಟೂರಾದ ಮಂಡ್ಯ ತಾಲೂಕಿನ ಹನಕೆರೆಯಲ್ಲಿ 1 ಎಕರೆ 23 ಗುಂಟೆ ಜಮೀನು ನನ್ನ ಹೆಸರಿನಲ್ಲಿ ಇದೆ. ಈ ಜಮೀನನ ಮೇಲೆ 70 ಸಾವಿರ ರೂಪಾಯಿ (ಬಡ್ಡಿ ಹೊರತುಪಡಿಸಿ) ಬೆಳೆ ಸಾಲವಿದೆ.

* ನನ್ನ ತಾಯಿಯ ಹೆಸರಲ್ಲಿ 2 ಎಕರೆ 2 ಗುಂಟೆ ಜಮೀನು ಇದೆ. ಈ ಜಮೀನಿನ ಮೇಲೆ 70 ಸಾವಿರ ರೂಪಾಯಿ (ಬಡ್ಡಿ ಹೊರತುಪಡಿಸಿ) ಬೆಳೆ ಸಾಲವಿದೆ.

* ಹನಕೆರೆಯಲ್ಲಿರುವ ನಮ್ಮ ಮನೆಯ ಸುತ್ತ ಒಟ್ಟು 17 ಗುಂಟೆ ಜಾಗವಿದೆ. ಇದು ನನ್ನ ತಂದೆ ಶಂಕರಪ್ಪ ಅವರ ಹೆಸರಲ್ಲಿದೆ.

* ನನಗಾಗಿ ನಾನು ಒಂದು ಗುಲಗಂಜಿ ಚಿನ್ನವನ್ನು ಕೊಂಡುಕೊಂಡಿಲ್ಲ. ನನ್ನ ತಾಯಿ ಅವರು ದುಡಿದ ಹಣದಲ್ಲಿ ಚಿನ್ನ ಮಾಡಿಸಿಕೊಂಡಿದ್ದಾರೆ. ಕೆಜಿ ಲೆಕ್ಕದಲ್ಲಂತು ಚಿನ್ನವಿಲ್ಲ.

* ಮಂಡ್ಯ ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುವುದರಿಂದ ಸಹಜವಾಗಿ ಅದರಲ್ಲಿ ಷೇರುಗಳಿವೆ. ಅದರ ಲೆಕ್ಕವಿಲ್ಲ.

ನನ್ನ ವೈಯಕ್ತಿಕ ಉಳಿತಾಯ - ಗಳಿಕೆ

* ಜೀವ ವಿಮೆ - 1. ಮ್ಯಾಕ್ಸ್ ನ್ಯೂ ಯಾರ್ಕ್ - 2007ರಿಂದ ವಾರ್ಷಿಕ 5057 ರೂಪಾಯಿ ಕಟ್ಟಲಾಗುತ್ತಿದೆ.

2. ಭಾರತೀಯ ಜೀವ ವಿಮೆ - 2007ರಿಂದ 6 ತಿಂಗಳಿಗೊಮ್ಮೆ 1,276 ರೂಪಾಯಿ ಕಟ್ಟಲಾಗುತ್ತಿದೆ

ತಿಂಗಳ ಉಳಿತಾಯ ಯೋಜನೆಗಳು

* ಪಿಎಸಿಎಲ್ ಲಿ.ಗೆ - ತಿಂಗಳಿಗೆ 550 ರೂಪಾಯಿಯ ಮೂರು ಖಾತೆಗಳಿಗೆ ನನ್ನ ಹೆಸರಿನಲ್ಲೇ ಹಣ ಜಮೆ ಮಾಡುತ್ತಿದ್ದೇನೆ.

* ಪಿಎಸಿಎಲ್ ಲಿ.ಗೆ - ತಿಂಗಳಿಗೆ 550 ರೂಪಾಯಿಯ ಎರಡು ಖಾತೆಗಳಿಗೆ ನನ್ನ ತಾಯಿ ಮತ್ತು ನನ್ನ ಸಂಬಂಧಿ ಒಬ್ಬರ ಹೆಸರಿಗೂ ಹಣ ಜಮೆ ಮಾಡುತ್ತಿದ್ದೇನೆ.

* ಮೈಸೂರಿನಲ್ಲಿ ಗೆಳಯರ ಬಳಿ 9 ಸಾವಿರ ರೂಪಾಯಿ ಚೀಟಿ ಕಟ್ಟುತ್ತಿದ್ದೇನೆ. ಹಣ ಪಡೆದು ಬಳಸಿಕೊಂಡಿದ್ದೇನೆ.

* ನನಗೆ ಗೆಳೆಯರು-ಸಂಬಂಧಿಕರಿಂದ ಬರಬೇಕಾಗಿರುವ ಹಣ - 4.5 ಲಕ್ಷ ರೂಪಾಯಿ (ಬರುವುದಿಲ್ಲ ಎಂದು ಖಾತ್ರಿಯಾಗಿರುವ ಮೊತ್ತ ಇದರಲ್ಲಿ ಸೇರಿಸಿಲ್ಲ)

* ನಾನು ಮೊಟ್ಟ ಮೊದಲ ಬಾರಿಗೆ ಕೊಂಡುಕೊಂಡ ಸ್ಟಾರ್ ಸಿಟಿ ಬೈಕ್ ನನ್ನ ಹೆಸರಲ್ಲೇ ಇದೆ. ಅದನ್ನು ಗೆಳಯನಿಗೆ ಕೊಟ್ಟಿದ್ದೇನೆ, ವಾಪಸ್ ನೀಡಬೇಕು ಎನ್ನುವ ಷರತ್ತಿನೊಂದಿಗೆ. ಅದನ್ನು ಮಾರಿದರೆ 10 ಸಾವಿರ ರೂಪಾಯಿಗೆ ವ್ಯಾಪಾರವಾದ್ರೆ ಹೆಚ್ಚು.

* ಕಮಾಡಿಟಿ ಮಾರ್ಕೆಟ್‍ನಲ್ಲಿ ಹಣ ಹಾಕಿದೆನಾದರೂ ಅದರಲ್ಲಿ ದುಡಿಯಲಿಲ್ಲ. ಝರೋದಾ ಬ್ರೋಕರೇಜ್‍ನ ಅಕೌಂಟಿನಲ್ಲಿ 6,500 ರೂಪಾಯಿ ಹಣ ಉಳಿದಿದೆ.

* ಭಾರತೀಯ ಸ್ಟೇಟ್ ಬ್ಯಾಂಕ್, ಮೈಸೂರು ಮುಖ್ಯ ಶಾಖೆಯಲ್ಲಿ ಒಂದು ಎಸ್‍ಬಿ ಖಾತೆ ಹೊಂದಿದ್ದೇನೆ. 3 ಸಾವಿರ ರೂಪಾಯಿಯಷ್ಟು ಹಣ ಅದರಲ್ಲಿದೆ. ಖಾತೆ ಸಂಖ್ಯೆ - 10562379822

* ನನ್ನ ಸಂಬಳದ ಖಾತೆಯು ಬೆಂಗಳೂರು ಮಲ್ಲೇಶ್ವರದಲ್ಲಿರುವ ಐಎನ್‍ಜಿ ವೈಶ್ಯ ಬ್ಯಾಂಕ್ (ಇದೀಗ ಕೊಟಕ್ ಮಹೇಂದ್ರ)ನಲ್ಲಿದೆ. ಖಾತೆ ಸಂಖ್ಯೆ - 147010163987

ನನ್ನ ವೈಯಕ್ತಿಕ ಸಾಲ

ಭಾರತೀಯ ಸ್ಟೇಟ್ ಬ್ಯಾಂಕಿನ ಬೆಂಗಳೂರು ಜೆಪಿನಗರದ ಶಾಖೆಯಲ್ಲಿ ಎರಡು ಕಾರು ಲೋನ್‍ಗಳು ನನ್ನ ಹೆಸರಲ್ಲಿವೆ.

* ಐ10 ಕಾರಿನ ಸಾಲ - 4 ಲಕ್ಷ ರೂಪಾಯಿ (ಈ ಕಾರು ನನ್ನ ಬಳಿ ಇಲ್ಲ. ಆದರೆ, ಕಾರು ನನ್ನ ಹೆಸರಲ್ಲೇ ಇದೆ. ಪ್ರತಿ ತಿಂಗಳು 8,550 ರೂಪಾಯಿಯನ್ನು ನಾನೇ ತುಂಬುತ್ತಿದ್ದೇನೆ. ಕಾರಣ, ಕಾರಿನ ಸಾಲದ ಹಣ ನಾನೇ ಬಳಸಿಕೊಂಡಿದ್ದೇನೆ)

* ಐ20 ಕಾರಿನ ಸಾಲ - 6.5 ಲಕ್ಷ ರೂಪಾಯಿ (ಈ ಕಾರನ್ನು ನಾನೇ ಬಳಸಲು ಕೊಂಡುಕೊಂಡೆನಾದರೂ ಅದನ್ನು ನನ್ನ ಗೆಳೆಯನಿಗೆ ಮಾರಿದ್ದೇನೆ. ಆಗಸ್ಟ್ ತಿಂಗಳಿನಿಂದ ನನ್ನ ಗೆಳೆಯನೇ ಇದರ ಇಎಂಐ ಪಾವತಿಸಲಿದ್ದಾನೆ.)

* ಗೆಳಯರಿಂದ ಪಡೆದ ಸಾಲ - 3 ಲಕ್ಷ ರೂಪಾಯಿ ಇದೆ.
ಮೈಸೂರಲ್ಲಿರುವ ತನಕ ಒಂದಷ್ಟು ವೈಯಕ್ತಿಕ ಸಾಲ-ಕಮಿಟ್‍ಮೆಂಟ್‍ಗಳಿಂದಾಗಿ ತಿನ್ನುವುದರಲ್ಲೂ ಉಳಿಸುತ್ತಿದ್ದೆ. ಧಾರವಾಡಕ್ಕೆ ಹೋದ ಮೇಲೆ ಸಂಬಳವೂ ಹೆಚ್ಚಾದ್ದರಿಂದ ನೆಮ್ಮದಿಯಿಂದ ತಿಂದಿದ್ದೇನೆ. ತಿನ್ನಿಸಿದ್ದೇನೆ. ಬಟ್ಟೆಗಳಿಗೆ ಎಂದಿಗೂ ಹೆಚ್ಚು ಖರ್ಚು ಮಾಡಿದವನಲ್ಲ. ತಿರುಗಾಟಕ್ಕೆ ಖರ್ಚು ಮಾಡಿದ್ದೇನೆ. ಬೆಂಗಳೂರಿಗೆ ಬಂದ ಮೇಲೆ ಪುಸ್ತಕಕ್ಕೆ ದುಡ್ಡು ಸುರಿಯುವುದು ನಿಂತು ಹೋಯಿತು. ದೆಹಲಿಯಲ್ಲಿದ್ದಾಗ ಒಂದು ನೂರು ಪುಸ್ತಕಗಳನ್ನು ಕೊಂಡುಕೊಂಡಿದ್ದೆ. ಒಟ್ಟಾರೆ ಒಂದೂವರೆ ಸಾವಿರದಷ್ಟು ಪುಸ್ತಕಗಳು ನನ್ನ ಬಳಿ ಇರಬಹುದು. ನೆರವಿನ ವಿವರ ಹೇಳಿಕೊಳ್ಳಬಾರದು. ಹೇಳಿಕೊಳ್ಳುವುದಿಲ್ಲ. ಅಪಾರ ಸಂಖ್ಯೆಯ ಗೆಳೆಯರು, ಒಂದಷ್ಟು ಗೆಳೆತಿಯರು ಇದ್ದಾರೆ. ಅವರೇ ನಾನು ಕಳೆದುಕೊಳ್ಳಾರದ ನನ್ನ ಆಸ್ತಿ. ಮೇಲೆ ತಿಳಿಸಿದ ವಿವರಗಳಿಗಿಂತ ಹೆಚ್ಚಿನ ಆಸ್ತಿ, ಹಣಕಾಸು ನನ್ನ ಬಳಿ ಇಲ್ಲ ಎಂದು ನಂಬಿದ್ದೇನೆ. ಯಾರಾದರೂ ಇದಕ್ಕಿಂತ ಹೆಚ್ಚಿನ ಹಣ-ಆಸ್ತಿಯನ್ನು ತೋರಿಸಿದರೆ ಅದನ್ನು ಅವರಿಗೇ ಕೊಟ್ಟು ಬಿಡುತ್ತೇನೆ.

ಕೊನೆ ಮಾತು - ಮದ್ವೆ ಇಲ್ಲ, ಮಕ್ಕಳಿಲ್ಲ. ನಿಂಗೇನಪ್ಪಾ ಖರ್ಚು...? ಅಂತ ಅನ್ನುವ ಸಾವಿರ ಬಗೆಯ ಮಾತು ಕೇಳಿಸಿಕೊಂಡಿದ್ದೇನೆ. ಹೆಂಡತಿ - ಮಕ್ಕಳ ನೆಪ ತೋರಿ ತಪ್ಪಿಸಿಕೊಳ್ಳುವ ಅವಕಾಶ ಅವಿವಾಹಿತರಿಗೆ ಇರುವುದಿಲ್ಲ. ಉಳಿಸು - ಗಳಿಸು ಅಂತ ಪೀಡಿಸಲು ಹೆಂಡತಿ ಇರುವುದಿಲ್ಲ. ಕೊಟ್ಟದ್ದು ತನಗೆ - ಬಚ್ಚಿಟ್ಟದ್ದು ಪರರಿಗೆ ಅಷ್ಟೇ ಅಂದುಕೊಂಡಿದ್ದೇನೆ. 
ಇಂತಿ,
ನಿಮ್ಮ ವಿಶ್ವಾಸಿ
ಎಚ್.ಎಸ್. ಅವಿನಾಶ್







ಜುಲೈ 31, 2015

ಏರಿಳಿದ ಕನ್ನಡ ಮಾಧ್ಯಮ ಲೋಕ.

ವಿಜಯ್ ಗ್ರೋವರ್, ತೆಹೆಲ್ಕಾ.
ಮೂವತ್ತನಾಲ್ಕು ವರುಷದ ಸುನಿಲ್ ಶಿರಸಂಗಿ ಒರ್ವ ಪತ್ರಕರ್ತ. ಕಳೆದ ಕೆಲವು ತಿಂಗಳುಗಳಿಂದ ಕಾರ್ಮಿಕ ನ್ಯಾಯಾಲಯ ಮತ್ತು ಕಾರ್ಮಿಕ ಅಧಿಕಾರಿಯ ಕಛೇರಿಗೆ ಅಲೆಯುತ್ತಲೇ ಸುಸ್ತಾಗಿ ಹೋಗಿದ್ದಾನೆ. ಐದು ವರುಷಗಳ ಹಿಂದೆ ಮುದ್ರಣ ಮಾಧ್ಯಮದಿಂದ ದೃಶ್ಯ ಮಾಧ್ಯಮಕ್ಕೆ ಸುನಿಲ್ ಹೊರಳಿಕೊಂಡಾಗ ಈ ರೀತಿಯ ದಿನಮಾನಗಳನ್ನು ನೋಡಬೇಕಾಗಬಹುದೆಂದು ಊಹಿಸಿರಲಿಲ್ಲ. ಸುನಿಲ್ ತನ್ನೊಬ್ಬನ ಹಕ್ಕಿಗಾಗಿ ನ್ಯಾಯಾಲಯಕ್ಕೆ ಅಲೆಯುತ್ತಿಲ್ಲ, ಜನಶ್ರೀ ವಾಹಿನಿಯಲ್ಲಿ ತನ್ನೊಡನೆ ಕೆಲಸ ಹಂಚಿಕೊಳ್ಳುತ್ತಿದ್ದ ಅರವತ್ತು ಸಹೋದ್ಯೋಗಿಗಳಿಗಾಗಿ ಹೋರಾಡುತ್ತಿದ್ದಾನೆ.

ಸರಿಯಾಗಿ ಸಂಬಳ ಸಿಗುತ್ತಿಲ್ಲವೆಂದು ವಾಹಿನಿಯ ಮಾಲೀಕರ ಬಳಿ ಕೇಳಿದ್ದೇ ಸುನಿಲ್ ಮತ್ತವರ ಸಹೋದ್ಯೋಗಿಗಳ ಕೆಲಸಕ್ಕೆ ಎರವಾಯಿತು. ಸುನಿಲ್ ನೆನಪಿಸಿಕೊಳ್ಳುವಂತೆ ಡಿಸೆಂಬರ್ 2014ರ ಒಂದು ದುರ್ದಿನ ಅರವತ್ತೈದು ಜನರನ್ನು ಕಛೇರಿಯ ಒಳಗಡೆ ಕಾಲಿಡಲು ಬಿಡಲಿಲ್ಲ. “ಕೆಲಸ ನಿರ್ವಹಿಸಿದ್ದಕ್ಕೆ ಸಂಬಳ ಕೊಡಿ ಎಂಬುದಷ್ಟೇ ನಮ್ಮ ಬೇಡಿಕೆಯಾಗಿತ್ತು. ಗುಂಪಾಗಿ ಹೋಗಿ ಸಂಬಳ ಕೇಳಿದ್ದು ಮಾಲೀಕರ ತಂಡಕ್ಕೆ ಮೆಚ್ಚುಗೆಯಾಗಲಿಲ್ಲವಂತೆ” ಎನ್ನುತ್ತಾರೆ ಸುನಿಲ್.

ಏಳು ತಿಂಗಳ ನಂತರ ಕಾರ್ಮಿಕ ನ್ಯಾಯಾಲಯದಲ್ಲಿ ನೌಕರರ ಪರ ತೀರ್ಪು ಬರುವ ಸಂಭವ ಹೆಚ್ಚಿದೆ. ಬಾಕಿ ಇರುವ ಸಂಬಳವನ್ನು ನೀಡುವಂತೆ ನ್ಯಾಯಾಲಯ ಆದೇಶಿಸುವುದೆಂಬ ಆಶಯದಲ್ಲಿರುವ ಅರವತ್ತು ಜನ ಪತ್ರಕರ್ತರ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿದೆ.

“ನ್ಯಾಯಕ್ಕಾಗಿ ಸವೆಸಿದ ಹಾದಿ ಕಠಿಣವಾಗಿತ್ತು. ಜೀವನ ಕಷ್ಟಕರವಾಗಿತ್ತು. ಏಳು ತಿಂಗಳು ಸಂಬಳವಿಲ್ಲದೆ ಮನೆ ಕಟ್ಟಲು ತೆಗೆದುಕೊಂಡ ಸಾಲ ತೀರಿಸಲು ಸಾಧ್ಯವಾಗಿಲ್ಲ; ಕಷ್ಟಗಳು ಹೆಂಡತಿಯ ಒಡವೆಗಳನ್ನು ಒತ್ತೆ ಇಡುವಂತೆ ಮಾಡಿಬಿಟ್ಟವು” ಹೆಸರು ಹೇಳಲಿಚ್ಛಿಸದ ದೃಶ್ಯ ವಾಹಿನಿಯ ಪತ್ರಕರ್ತರೊಬ್ಬರ ದುಗುಡವಿದು.

ಈ ರೀತಿಯ ದುರ್ವಿಧಿ ಜನಶ್ರೀ ವಾಹಿನಿಯಲ್ಲಿ ಕೆಲಸ ಮಾಡಿದ ಅರವತ್ತೂ ಚಿಲ್ಲರೆ ಪತ್ರಕರ್ತರದ್ದು ಮಾತ್ರವಲ್ಲ. ಕರ್ನಾಟಕದಾದ್ಯಂತ ನೂರೈವತ್ತಕ್ಕೂ ಹೆಚ್ಚು ದೃಶ್ಯ ವಾಹಿನಿ ಪತ್ರಕರ್ತರು ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಅನೇಕ ಕನ್ನಡ ವಾಹಿನಿಗಳ ಆರ್ಥಿಕ ಸ್ಥಿತಿ ದಯನೀಯವಾಗುತ್ತಿರುವುದು ಸಿಲಿಕಾನ್ ವ್ಯಾಲಿಯೆಂದೇ ಹೆಸರಾದ ಬೆಂಗಳೂರಿನ ಅನೇಕ ಪತ್ರಕರ್ತರ ಜೀವನವನ್ನು ದುರ್ಬರವಾಗಿಸಿದೆ; ಸಿಲಿಕಾನ್ ಸಿಟಿ ಏಷ್ಯಾದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಅಂಶ ಈ ಪತ್ರಕರ್ತರಿಗೆ ಅಪಹಾಸ್ಯದಂತೆ ಕಂಡರೆ ಅಚ್ಚರಿಯಿಲ್ಲ!

2007ರಲ್ಲಿ ಕನ್ನಡ ದೃಶ್ಯ ವಾಹಿನಿಗಳಲ್ಲಿದ್ದ ಉತ್ಸಾಹದ ಬೆಳವಣಿಗೆಗೆ ತದ್ವಿರುದ್ಧವಾದ ಪರಿಸ್ಥಿತಿಯನ್ನು ಇಂದು ಕಾಣುತ್ತಿದ್ದೇವೆ.

2007ರಲ್ಲಿ ಜೆಡಿಎಸ್ಸಿನ ಹೆಚ್.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿಯ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಕರ್ನಾಟಕ ‘ಸುದ್ದಿಗ್ರಸ್ಥ’ ರಾಜ್ಯವಾಗಿ ಹೆಸರು ಮಾಡಿತು. ಇಪ್ಪತ್ತಿಪ್ಪತ್ತು ತಿಂಗಳ ಅಧಿಕಾರ ಹಂಚಿಕೆ, ತಂದೆಯ ಮಾತು ಕೇಳಿ ವಚನಭ್ರಷ್ಟರಾದ ಕುಮಾರಸ್ವಾಮಿ, ದಿನಕ್ಕತ್ತು ಸುದ್ದಿ ಕೊಡುತ್ತಿದ್ದ ಯಡಿಯೂರಪ್ಪನವರ ಆಡಳಿತಾವಧಿ, ಬಿಜೆಪಿಯ ಆಂತರಿಕ ಕಚ್ಚಾಟದಿಂದ ಮುಖ್ಯಮಂತ್ರಿಗಳು ಬದಲಾಗಿದ್ದು, ಬಳ್ಳಾರಿಯ ರೆಡ್ಡಿ ಸಹೋದರರ ಅನ್ಯಾಯದ ಗಣಿಗಾರಿಕೆ, ಆಗ ಲೋಕಾಯುಕ್ತದ ನ್ಯಾಯಮೂರ್ತಿಯಾಗಿದ್ದ ಸಂತೋಷ್ ಹೆಗ್ಡೆ ಗಣಿ ಮಾಫಿಯಾದ ವಿರುದ್ಧ ಅಂಜದೆ ಕಾರ್ಯನಿರ್ವಹಿಸಿದ್ದೆಲ್ಲವೂ ಕರ್ನಾಟಕದ ಪತ್ರಕರ್ತರಿಗೆ ಮತ್ತು ವೀಕ್ಷಕರಿಗೆ ಬಿಡುವನ್ನೇ ನೀಡಿರಲಿಲ್ಲ.

ಕನ್ನಡದ ಮಾಧ್ಯಮದ ದೃಷ್ಟಿಯಿಂದ 2007ರಿಂದ 2013ರವರೆಗೆ ಸುವರ್ಣ ಸಮಯ ನಡೆಯುತ್ತಿತ್ತು. ಬರೋಬ್ಬರಿ ಆರು ಹೊಸ ಕನ್ನಡ ಸುದ್ದಿವಾಹಿನಿಗಳು ಶುರುವಾಯಿತು. ಉದ್ದಿಮೆದಾರರು, ರಾಜಕಾರಣಿಗಳು ಕೋಟಿ ಕೋಟಿ ರುಪಾಯಿಯನ್ನು ದೃಶ್ಯ ಮಾಧ್ಯಮವೆಂಬ ಉದ್ದಿಮೆಗೆ ಸುರಿದರು. 2007ರಲ್ಲಿ ಆಂಧ್ರ ಮೂಲದ ಟಿವಿ 9 ಕನ್ನಡದಲ್ಲಿ ವಾಹಿನಿ ಪ್ರಾರಂಭಿಸಿದ ನಂತರ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಸುವರ್ಣ ವಾಹಿನಿಯನ್ನು ಹುಟ್ಟು ಹಾಕಿದರು. ರೆಡ್ಡಿ ಸಹೋದರರು ಜನಶ್ರೀ ವಾಹಿನಿಯನ್ನು ಪ್ರಾರಂಭಿಸಿದರೆ ಜಾರಕಿಹೊಳಿ ಕುಟುಂಬ ಸಮಯ ವಾಹಿನಿಯನ್ನು ಶುರುಮಾಡಿದರು.

ಕಡಿಮೆ ಸಮಯದಲ್ಲಿ ಹೆಚ್ಚೆಚ್ಚು ವಾಹಿನಿಗಳು ಪ್ರಾರಂಭಗೊಂಡಿದ್ದೇ ತಡ, ದೃಶ್ಯ ಮಾಧ್ಯಮದಲ್ಲಿ ಅನುಭವ ಇದ್ದವರು, ಇಲ್ಲದವರಿಗೆಲ್ಲ ಅಲ್ಲಿಯವರೆಗೆ ಪತ್ರಿಕೋದ್ಯಮ ಕಂಡು ಕೇಳರಿಯದ ರೀತಿಯಲ್ಲಿ ಅವಕಾಶಗಳು ಸಿಗಲಾರಂಭಿಸಿತು. ಬೇಕಾಬಿಟ್ಟಿ ನೇಮಕಗಳಿಂದ, ತರಬೇತಿಯ ಕೊರತೆಯಿಂದ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವಾರ್ತೆ, ಕಾರ್ಯಕ್ರಮಗಳ ಗುಣಮಟ್ಟ ಹೇಳಿಕೊಳ್ಳುವಂತಿರಲಿಲ್ಲ. ರಾಜಕೀಯ ನಾಟಕಗಳು ಪರಾಕಾಷ್ಟೆಯಲ್ಲಿದ್ದ ಸುದ್ದಿ ಹಸಿವಿನ ರಾಜ್ಯ ಇದಾವುದನ್ನೂ ಲೆಕ್ಕಕ್ಕಿಟ್ಟುಕೊಳ್ಳಲಿಲ್ಲ. ಮಾಧ್ಯಮಕ್ಕೆ ಹಣ ಹರಿಯುತ್ತಲೇ ಇತ್ತು, 2013ರ ವಿಧಾನಸಭಾ ಚುನಾವಣೆಯವರೆಗೆ. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ರಾಜಕೀಯದ ನಾಟಕಗಳು ಪರದೆಯ ಹಿಂದೆ ಸರಿದವು. ರಾಜಕಾರಣಿಗಳ ನಾಟಕಾಭಿನಯ ಕಡಿಮೆಯಾಗುತ್ತಿದ್ದಂತೆ ಸುದ್ದಿ ವಾಹಿನಿಗಳೆಡೆಗೆ ಜನರಿಗಿದ್ದ ಆಸಕ್ತಿಯೂ ಕಡಿಮೆಯಾಯಿತು. ಕುಸಿಯುತ್ತಿದ್ದ ಆದಾಯ, ಟಿ.ಆರ್.ಪಿ ಅನೇಕ ವಾಹಿನಿಗಳ ಅಸ್ತಿತ್ವಕ್ಕೇ ಸಂಚಕಾರ ತಂದಿತು.

ಸಮಯ ವಾಹಿನಿ ಮಾಲೀಕತ್ವದಲ್ಲಿ ಎರಡಕ್ಕೂ ಹೆಚ್ಚು ಬಾರಿ ಬದಲಾವಣೆಗಳಾಗಿದ್ದರೆ, ಜನಶ್ರೀ ತನ್ನನ್ನು ಉಳಿಸಿಕೊಳ್ಳಬಲ್ಲ ಹಣವಂತರಿಗಾಗಿ ಕಾಯುತ್ತಿದೆ. ಸುವರ್ಣ ಮತ್ತು ಪಬ್ಲಿಕ್ ಟಿವಿ ಏದುಸಿರುಬಿಡುತ್ತಾ ವೆಚ್ಚಗಳನ್ನು ಕಡಿಮೆ ಮಾಡುವುದರತ್ತ ಗಮನಹರಿಸುತ್ತಿವೆ. ಇವುಗಳ ನಡುವೆ ಕನ್ನಡದ ಅತ್ಯಂತ ಹಳೆಯ ಸುದ್ದಿ ವಾಹಿನಿಯಾದ ಉದಯ ನ್ಯೂಸ್ ಕನಿಷ್ಟ ಬಂಡವಾಳ ಮತ್ತು ಕಡಿಮೆ ಉದ್ಯೋಗಿಗಳ ಕಾರಣದಿಂದಾಗಿ ಇನ್ನೂ ಉಳಿದುಕೊಂಡಿದೆ.

ಕಳೆದ ಕೆಲವು ತಿಂಗಳುಗಳಿಂದ ಮತ್ತೆ ಎರಡು ಹೊಸ ಕನ್ನಡ ಸುದ್ದಿ ವಾಹಿನಿಗಳು ಪ್ರಾರಂಭವಾಗಿವೆಯಾದರೂ ವೀಕ್ಷಕರ ಮೇಲಿನ್ನೂ ಪರಿಣಾಮ ಬೀರಲಾಗಿಲ್ಲ. ಈ ಎರಡೂ ವಾಹಿನಿಗಳಿಗೆ ರಿಯಲ್ ಎಸ್ಟೇಟಿನ ಹಣ ಹರಿದು ಬರುತ್ತಿದೆಯಾದರೂ ಅವುಗಳ ಗೆಲುವು ಸುಲಭವಲ್ಲ. “ತಮ್ಮ ರಾಜಕೀಯ ಮತ್ತು ಸಾಮಾಜಿಕ ಅಂತಸ್ತು ಹೆಚ್ಚಿಸುವಲ್ಲಿ ವಾಹಿನಿಗಳು ಸಹಾಯ ಮಾಡುತ್ತವೆ ಎನ್ನುವ ನಂಬುಗೆಯಿಂದ ಅನೇಕ ಬಂಡವಾಳಗಾರರು ಸುದ್ದಿವಾಹಿನಿಯಲ್ಲಿ ಹಣ ತೊಡಗಿಸುತ್ತಾರೆ. ಕೆಲವು ಸಮಯದ ನಂತರ ಸುದ್ದಿ ವಾಹಿನಿಯೆಂಬುದು 24 x 7 ದುಡ್ಡು ಸೆಳೆಯುವ ಸುಳಿಯೆಂದು ಅರಿವಾಗುತ್ತದೆ; ಬರುವ ಆದಾಯ ತುಂಬಾನೇ ಕಡಿಮೆ ಎಂದು ಅರಿತುಕೊಳ್ಳುತ್ತಾರೆ” ಎನ್ನುತ್ತಾರೆ ಮ್ಯಾನೇಜ್ ಮೆಂಟ್ ಕನ್ಸಲ್ಟೆಂಟ್ ನಜರ್ ಅಲಿ.

ಬಂಡವಾಳ ಹಾಕುವವರು ದೂರ ಸರಿಯುತ್ತ, ದೃಶ್ಯ ವಾಹಿನಿಗಳ ಬೆಳವಣಿಗೆಯೂ ಕುಂಠಿತಗೊಂಡಿರುವ ಸಂಗತಿ ಇನ್ನೂರೈವತ್ತು ಪತ್ರಕರ್ತರಿಗೆ ಎಷ್ಟು ತಲೆಬೇನೆ ತರುತ್ತಿದೆಯೋ 29 ಪತ್ರಿಕೋದ್ಯಮ ಕಾಲೇಜುಗಳಿಂದ ಪ್ರತೀ ವರುಷ ಹೊರಬರುವ ಏಳುನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗೂ ಭವಿಷ್ಯದ ಭೀತಿ ಹುಟ್ಟಿಸುತ್ತಿದೆ. ಕನ್ನಡ ಸುದ್ದಿ ವಾಹಿನಿಗಳಿಗೆ ಮತ್ತೆ ಒಳ್ಳೆಯ ದಿನಗಳು ಬರುವವರೆಗೆ ಈ ಪ್ರತಿಭಾವಂತ ವಿದ್ಯಾರ್ಥಿಗಳು ಈಗಿನ ಸಂದರ್ಭದಲ್ಲಿ ಸಿಗುವ ಕೆಲವೇ ಕೆಲವು ಅವಕಾಶಗಳಿಗೆ ಬಡಿದಾಡಲೇಬೇಕಾಗಿದೆ.
ಕನ್ನಡಕ್ಕೆ: ಡಾ.ಅಶೋಕ್.ಕೆ.ಆರ್.

ಜುಲೈ 24, 2015

ಪತ್ರಕರ್ತರ ಅಧ್ಯಯನ ಕೇಂದ್ರದ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ.

ಇದೇ ಜುಲೈ 25 2015ರಂದು ಬೆಂಗಳೂರಿನ ನೃಪತುಂಗ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ವಿವರಗಳನ್ನು ಕೆಳಗಿನ ಪಟಗಳಲ್ಲಿ ನೀಡಲಾಗಿದೆ.



ಡಿಸೆಂ 9, 2014

ಮೌಡ್ಯದ ವಿರುದ್ಧ ಕಿಕ್ ಔಟ್ ಸಮರ

kickout astrologers
Dr Ashok K R
ನಂಬಿಕೆಗೂ ಮೂಢನಂಬಿಕೆಗೂ ನಡುವಿನ ಗೆರೆ ಅತಿ ತೆಳುವಾದದ್ದು. ಜೊತೆಗೆ ಅನಾದಿ ಕಾಲದಿಂದ ನಂಬಿಕೊಂಡು ಬಂದ ಮೂಢನಂಬಿಕೆ ಕಾಲ ಸವೆದ ಹಾಗೆ ನಂಬಿಕೆಯಾಗಿ ಮಾರ್ಪಟ್ಟು ಆ ಆಚರಣೆಯನ್ನು ಮೌಡ್ಯವೆಂದು ಹೇಳುವವರೇ ಮೂಢರೆಂದು ಜರೆಯುವವರ ಸಂಖೈ ಹೆಚ್ಚುತ್ತದೆ. ಪ್ರತಿ ನಂಬಿಕೆಗೆ ಹೇಗೆ ಪ್ರತ್ಯಕ್ಷ ಪರೋಕ್ಷ ಕಾರಣಗಳಿವೆಯೋ ಅದೇ ರೀತಿ ಮೂಢನಂಬಿಕೆಗೂ ಕಾರಣಗಳಿವೆ. ನಂಬಿದವರಿಗದು ಮೌಡ್ಯತೆ ಎಂದು ತಿಳಿಹೇಳಬೇಕಿರುವುದು ವೈಚಾರಿಕ ಸಮಾಜದ ಕರ್ತವ್ಯವಾ? ಅಥವಾ ಒಬ್ಬರ ನಂಬಿಕೆಯನ್ನು ಪ್ರಶ್ನಿಸುವುದು ತಪ್ಪಾಗುತ್ತದೆ ಎಂಬ ನಂಬುಗೆಯೊಂದಿಗೆ ಮೂಡತೆಯೆಡೆಗೆ ಸಾಗುವವರ ಸಂಖೈ ಹೆಚ್ಚಾಗುತ್ತಿದ್ದರೂ ತೆಪ್ಪಗಿರಬೇಕಾ? ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಿವಿಧ ಘಟನಾವಳಿಗಳು, ಅದಕ್ಕೆ ಪ್ರತಿಯಾಗಿ ನಡೆಯುತ್ತಿರುವ ಪ್ರತಿಭಟನೆಗಳು, ಎಫ್ ಐ ಆರ್, ಪ್ರತಿ – ಎಫ್ ಐ ಆರ್ ಗಳು ಇಂತಹ ಪ್ರಶ್ನೆಗಳನ್ನು ಮೂಡಿಸಿ ಒಂದಷ್ಟು ದ್ವಂದ್ವಗಳನ್ನು ಮೂಡಿಸುತ್ತವೆ.

ನವೆಂ 25, 2014

ಅಹಮ್ಮುಗಳಿಗೆ ಬಲಿಯಾದ ಧರ್ಮ ಮತ್ತು ಕರ್ತವ್ಯ

kannada news channels
Dr Ashok K R
ಟಿ.ವಿ 9 ಮತ್ತು ಇಂಧನ ಸಚಿವ ಡಿ.ಕೆ ಶಿವಕುಮಾರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ, ಕೆಟ್ಟತನಕ್ಕಾಗಿ! ಡಿ.ಕೆ.ಶಿವಕುಮಾರರ ಮೇಲೆ ಟಿ.ವಿ.9 ಮತ್ತು ಅದರ ಸೋದರ ಸಂಸ್ಥೆ ನ್ಯೂಸ್ 9 ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ ತಂದ ಆರೋಪವನ್ನೊರಸಿದ್ದಾರೆ. ಡಿ.ಕೆ.ಶಿವಕುಮಾರರು ತಮ್ಮ ಅಧಿಕಾರದ ಪ್ರಭಾವಳಿಯನ್ನು ಬಳಸಿ ಕೇಬಲ್ ಆಪರೇಟರ್ರುಗಳ ಮೂಲಕ ಟಿ.ವಿ.9 ಮತ್ತು ನ್ಯೂಸ್ 9 ವಾಹಿನಿ ಪ್ರಸಾರವಾಗದಂತೆ ನೋಡಿಕೊಂಡಿದ್ದಾರೆ! ಟಿ.ವಿ.9 ವಾಹಿನಿಯ ಪ್ರಕಾರ ಸೋಮವಾರ ಸಂಜೆಯಿಂದ ಮಂಗಳವಾರ ಬೆಳಿಗ್ಗೆಯ ವರೆಗೆ ಈ ಬ್ಲ್ಯಾಕ್ ಔಟ್ ನಡೆದಿದೆ. ಮಾಧ್ಯಮಗಳನ್ನು ಹತ್ತಿಕ್ಕುವ ಸರ್ಕಾರದ ಪ್ರತಿನಿಧಿಯ ಪ್ರಯತ್ನ ಸ್ವಹಿತಾಸಕ್ತಿಗಾಗಿ ನಡೆಸಿದ ಫ್ಯಾಸಿಸ್ಟ್ ಮನೋಭಾವವೇ ಹೊರತು ಮತ್ತೇನಲ್ಲ. ಸರಕಾರದ ವಿರುದ್ಧ ಒಂದಾದ ಮೇಲೊಂದರಂತೆ ವರದಿಗಳನ್ನು ಪ್ರಕಟಿಸುತ್ತಿರುವುದು ಈ ಹತ್ತಿಕ್ಕುವಿಕೆಗೆ ಕಾರಣವಂತೆ! ಮಾಧ್ಯಮದ ಕೆಲಸವೇ ವಿರೋಧ ಪಕ್ಷದಂತೆ ಕೆಲಸ ನಿರ್ವಹಿಸುವುದಲ್ಲವೇ? ಅದನ್ನೇ ಅವರನ್ನು ಮಾಡಬೇಡಿ (ಅವರು ಮಾಡುತ್ತಿಲ್ಲ ಎಂಬುದು ಮತ್ತೊಂದು ಸತ್ಯ) ಎಂದರೆ ಹೇಗೆ ಸ್ವಾಮಿ? ಉಳಿದ ವಾಹಿನಿಗಳೂ ಕೂಡ ಸರಕಾರದ ವಿರುದ್ಧ ವರದಿಗಳನ್ನು ಬಿತ್ತರಿಸುವಾಗ ಟಿ.ವಿ.9 ಮಾತ್ರ ಹೇಗೆ ಮತ್ತು ಏಕೆ ಬಹಿಷ್ಕಾರಕ್ಕೊಳಗಾಯಿತು?

ಅಕ್ಟೋ 29, 2014

P. Sainath: 100 days of Namo and Sycophant media.



Sainath P
ಪಿ. ಸಾಯಿನಾಥ್

P.Sainath
Its barely a couple of weeks ago since the media and the elite celebrated hundred days of the Modi government in power. I want to speak about the media, because at this point the media are an embarrassment not only to themselves but to Mr Modi’s public relation officers who must be feeling insecure about their jobs! You know, so since the media are doing so much better, the sycophantic projection, that PR firm which he had hired, I don’t think there contract need be renewed. The first hundred days, you know we had that tamasha over the first hundred days, I ask myself this question whether its Mr Modi or whether it is Mr Dr Manmohan singh or whoever, what about, what happens in those hundred days typically in rural area. 

ಅಕ್ಟೋ 27, 2014

ಮಾಧ್ಯಮ ಮತ್ತು ಜನಸಾಮಾನ್ಯ

media and common man
Dr Ashok K R


ಭಾರತದ ಮಕ್ಕಳ ಏಳಿಗೆಗಾಗಿ, ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವುದರ ವಿರುದ್ಧ ಅವಿರತ ಹೋರಾಟ ಮಾಡಿದ ಕೈಲಾಶ್ ಸತ್ಯಾರ್ಥಿ ಎನ್ನುವವರಿಗೆ ಪಾಕಿಸ್ತಾನದ ಮಲಾಲಾ ಯೂಸುಫ್ ಝಾಹಿಯ ಜೊತೆಗೆ ಜಂಟಿಯಾಗಿ ಶಾಂತಿಗಾಗಿ ನೋಬೆಲ್ ಪ್ರಶಸ್ತಿ ಘೋಷಣೆಯಾಯಿತು. ಇದ್ದಕ್ಕಿದ್ದಂತೆ ಭಾರತಕ್ಕೆ ಬಂದ ನೋಬಲ್ ಪ್ರಶಸ್ತಿ ಸಂತಸ ನೀಡುವುದರ ಜೊತೆಜೊತೆಗೆ “ಯಾರಿದು ಕೈಲಾಶ್ ಸತ್ಯಾರ್ಥಿ?” ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತು. ಬಹುಶಃ ಕೈಲಾಶ್ ಸತ್ಯಾರ್ಥಿಯ ಸಂಘಟನೆಗೆ ಸಂಬಂಧಪಟ್ಟವರನ್ನು ಹೊರತುಪಡಿಸಿ ಇನ್ಯಾರಿಗೂ ಅವರ ಹೆಸರಾಗಲೀ ಅವರ ಕೆಲಸ ಕಾರ್ಯಗಳಾಗಲೀ ತಿಳಿದೇ ಇರಲಿಲ್ಲ. ನೋಬೆಲ್ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ ಎಲ್ಲೆಡೆಯೂ ಅವರ ಬಗ್ಗೆಯೇ ಮಾತು, ಅವರ ಬಗ್ಗೆಯೇ ಚರ್ಚೆ. ದೂರದೂರಿನವರಿಗಿರಲಿ ಅವರು ಕೆಲಸ ಮಾಡುತ್ತಿದ್ದ ರಾಜ್ಯದ ಹೆಚ್ಚಿನ ಜನರಿಗೂ ಅವರ ಬಗ್ಗೆ ಯಾವುದೇ ಮಾಹಿತಿಯಿರಲಿಲ್ಲವಂತೆ. ಎಲೆಮರೆಕಾಯಿಯಂತೆ ಅವರು ಕೆಲಸ ನಿರ್ವಹಿಸಿದ್ದನ್ನು ಒಪ್ಪಿಕೊಳ್ಳಬಹುದಾದರೂ ಜನಸಾಮಾನ್ಯರಿಗೆ ಜನಸಾಮಾನ್ಯರ ಮಧ್ಯೆಯೇ ಇದ್ದು ಅತ್ಯುತ್ತಮವೆನ್ನಿಸುವಂತಹ ಕೆಲಸ ಮಾಡುತ್ತಿರುವ ಕೈಲಾಶ್ ಸತ್ಯಾರ್ಥಿಯವರನ್ನು ನೋಬೆಲ್ ಬರುವುದಕ್ಕೆ ಮುಂಚೆಯೇ ಪರಿಚಯಿಸುವ ಕೆಲಸ ಮಾಧ್ಯಮದ್ದಾಗಿತ್ತಲ್ಲವೇ? ಒಬ್ಬ ವ್ಯಕ್ತಿ ಆತನ ಕೆಲಸಗಳು ನಮ್ಮ ಮಾಧ್ಯಮದಲ್ಲಿ ಬರುವುದಕ್ಕೂ ವಿದೇಶಿ ಪ್ರಶಸ್ತಿಯೊಂದು ಅವರಿಗೆ ಸಿಗುವವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದಾದರೂ ಯಾಕೆ?

ಅಕ್ಟೋ 18, 2014

ನಂ 1 ಸ್ಥಾನ ಸುಲಭವಾಗಿ ದಕ್ಕುವುದಿಲ್ಲ!

vijayavani kannada daily
ನಂ.1 ಆಗಲು ಹೀಗೆಲ್ಲ ಮಾಡಬೇಕೆ
Dr Ashok K R
ಕಳೆದ ಶುಕ್ರವಾರದ ವಿಜಯವಾಣಿಯ ಮುಖಪುಟದಲ್ಲಿ 'ವಿಜಯವಾಣಿ' ಪತ್ರಿಕೆ ಮೊದಲೆರಡು ಸ್ಥಾನಗಳಲ್ಲಿದ್ದ 'ವಿಜಯ ಕರ್ನಾಟಕ' ಮತ್ತು 'ಪ್ರಜಾವಾಣಿ' ಪತ್ರಿಕೆಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ತಲುಪಿದೆ ಎಂಬ ಸುದ್ದಿ ಭರ್ತಿ ಎರಡು ಪುಟಗಳ ತುಂಬ ಪ್ರಕಟವಾಗಿದೆ. ಜನವರಿಯಿಂದ ಜೂನ್ ವರೆಗಿನ ಆಡಿಟ್ ಬ್ಯೂರೋ ಆಫ್ ಸರ್ಕುಲೇಷನ್ ಪ್ರಕಾರ ವಿಜಯವಾಣಿ ದಿನಂಪ್ರತಿ 6, 67, 879 ಪ್ರತಿಗಳನ್ನು ಮಾರಾಟ ಮಾಡುತ್ತಿದೆ. ಅಲ್ಪ ಕಾಲಾವಧಿಯಲ್ಲಿಯೇ ವಿಜಯವಾಣಿ ಇಷ್ಟರಮಟ್ಟಿಗೆ ಯಶ ಸಾಧಿಸಿರುವುದು ಪ್ರಶಂಸಾರ್ಹವೇನೋ ಹೌದು. ಆದರೆ ನೈತಿಕತೆಯ ಬಗ್ಗೆ ಪುಂಖಾನುಪುಂಖವಾಗಿ ಬರೆಯುವ ಪತ್ರಿಕೆಗಳು ಮಾರಾಟ ಸಂಖೈ ಹೆಚ್ಚಿಸಲು ಹಿಡಿದಿರುವ ಮಾರ್ಗಗಳನ್ನು ನೋಡಿದರೆ ಬೇಸರವುಂಟಾಗುತ್ತದೆ.
Also Read
ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭವನ್ನು ಪ್ರಶ್ನಿಸುವರಾರು?

ಸೆಪ್ಟೆಂ 29, 2014

ಹೆಸರಲ್ಲೆಲ್ಲಾ ಇದೆ!

religion
ಡಾ ಅಶೋಕ್ ಕೆ ಆರ್
ಇಂಡಿಯನ್ ಮುಜಾಹಿದ್ದೀನೋ ಹಿಜ್ಬುಲ್ ಮುಜಾಹಿದ್ದೀನೋ ಹೆಸರಿನ ಮುಸ್ಲಿಂ ಸಂಘಟನೆಯೊಂದರ ನಾಮಧೇಯದಿಂದ ಪೋಲೀಸರಿಗೆ ಬೆದರಿಕೆಯ ಈ-ಮೇಲ್ ಸಂದೇಶಗಳು ತಲುಪುತ್ತವೆ. ಇಡೀ ಮೈಸೂರು ದಸರಾ ಹಬ್ಬದ ಸಂಭ್ರಮದಲ್ಲಿ ಮೈಮರೆತಾಗ, ದೂರದೂರಿನ ಜನರೆಲ್ಲ ಮೈಸೂರಿಗೆ ಬಂದು ದಸರಾದ ವೈಭವವನ್ನು ಸವಿಯುತ್ತಿರುವಾಗ ಮೈಸೂರಿನ ಹಲವೆಡೆ ಸ್ಪೋಟಗೊಳ್ಳುವಂತೆ ಟೈಂ ಬಾಂಬುಗಳನ್ನು ಇಟ್ಟಿದ್ದೇವೆ. ತಾಕತ್ತಿದ್ದರೆ ತಡೆಯಿರಿ ಎಂಬ ಬೆದರಿಕೆ ಮತ್ತು ಪಂಥಾಹ್ವಾನದ ಸಂದೇಶವದು. ದಸರಾ ಹಬ್ಬದ ಸಂದರ್ಭದಲ್ಲಿ ಬಾಂಬ್ ಸ್ಪೋಟವೆಂದರೆ ಹೈಅಲರ್ಟ್ ಘೋಷಿಸಬೇಕಾದ ಸಂದರ್ಭವಂತೂ ಹೌದು. ಮೈಸೂರಿನ ಪೋಲೀಸರು ತಕ್ಷಣ ಕಾರ್ಯಪ್ರವೃತ್ತರಾಗುತ್ತಾರೆ. ಈ – ಮೇಲ್ ಕಳುಹಿಸಿದ ಐ.ಪಿ ಅಡ್ರೆಸ್ಸನ್ನು ಪತ್ತೆ ಹಚ್ಚಿ ಆ ಕಂಪ್ಯೂಟರ್ ಅಂಗಡಿಯ ಬಳಿಯಲ್ಲಿನ ಮನೆಯಲ್ಲಿದ್ದ ಬೆದರಿಕೆ ಸಂದೇಶವನ್ನು ಕಳುಹಿಸಿದ ವ್ಯಕ್ತಿಯನ್ನು ಬಂಧಿಸುತ್ತಾರೆ.
ಮೇಲಿನದಷ್ಟು ನಡೆದ ಘಟನಾವಳಿ. ಪತ್ರಿಕೆಗಳು ಮತ್ತು ಮಾಧ್ಯಮದಲ್ಲಿ ಈ ಘಟನೆ ಯಾವ ರೀತಿ ವರದಿಯಾಗುತ್ತದೆ?

ಜುಲೈ 31, 2014

ತಿರುವುಮುರುವಾದ ವಿಬ್ ಗಯಾರ್ ತನಿಖೆ

stop rape


ಡಾ ಅಶೋಕ್ ಕೆ ಆರ್
“ಆತನಿಗಿನ್ನು ಯಾರೂ ಕೆಲಸ ನೀಡಲಾರರು. ಕಳೆದೆರಡು ವಾರದಿಂದ ಅವನನ್ನು ಕಂಡೇ ಇಲ್ಲ. ಬಡವರಾದ ನಾವು ಪೋಲೀಸರು ಹೊರಿಸಿದ ಸುಳ್ಳು ಆರೋಪಗಳ ವಿರುದ್ಧ ಕಾನೂನಿನ ಮೊರೆಹೋಗುವುದಾದರೂ ಹೇಗೆ?” - ಮುರ್ತಾಝ (ಮುಸ್ತಾಫಾನ ತಂದೆ)

ಏಪ್ರಿ 17, 2014

ಪ್ರಜಾಪ್ರಭುತ್ವದ ಆರೋಗ್ಯದ ಮಾಪಕ ಪತ್ರಿಕೋದ್ಯಮ



ಡಾ ಅಶೋಕ್ ಕೆ ಆರ್

ಪ್ರಜಾಪ್ರಭುತ್ವ ಮಾಧ್ಯಮಗಳ ಪಾತ್ರ ಪ್ರಮುಖವಾದುದು. ಆ ಕಾರಣದಿಂದಲೇ ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ಮೂರು ಆಧಾರ ಸ್ಥಂಭಗಳಾದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಂಗದ ಜೊತೆಗೆ ಸಮೀಕರಿಸಿ ನಾಲ್ಕನೇ ಸ್ಥಂಭವಾಗಿ ಗುರುತಿಸಲಾಗಿದೆ. ಒಂದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಪತ್ರಿಕೋದ್ಯಮದ ಕೊಡುಗೆ ಅಪಾರ. ಪತ್ರಿಕೋದ್ಯಮಕ್ಕಿರುವ ಸ್ವಾತಂತ್ರ್ಯ ಮತ್ತು ಪತ್ರಕರ್ತರಿಗಿರುವ ರಕ್ಷಣೆಯ ಆಧಾರದ ಮೇಲೆ ಆ ಸಮಾಜದ ಆರೋಗ್ಯವನ್ನಳೆಯುವುದೂ ಇದೆ. Reporters without borders ಸಂಸ್ಥೆಯ ಅಧ್ಯಯನದ ಅನ್ವಯ ಭಾರತ ಪತ್ರಿಕೋದ್ಯಮದ ವಿಷಯದಲ್ಲಿ ಗಳಿಸಿರುವುದು 143ನೇ ಸ್ಥಾನ! ಇತ್ತೀಚಿನ ವರುಷಗಳಲ್ಲಿ ಭಾರತದಲ್ಲಿ ಪತ್ರಿಕೋದ್ಯಮಿಗಳ ಮೇಲೆ ಪತ್ರಕರ್ತರ ಮೇಲಿನ ಹಲ್ಲೆಯ ಪ್ರಕರಣಗಳು ಹೆಚ್ಚುತ್ತಲೇ ಸಾಗಿದೆ. 2013ರಲ್ಲಿ ಭಾರತದ ಎಂಟು ಮಂದಿ ಪತ್ರಕರ್ತರನ್ನು ಹತ್ಯೆಗೈಯ್ಯಲಾಗುತ್ತದೆ. ಈ ಸಂಖ್ಯೆ ಪತ್ರಕರ್ತರಿಗೆ ಅಪಾಯಕಾರಿ ದೇಶವೆನ್ನಿಸಿಕೊಂಡಿರುವ ಪಾಕಿಸ್ತಾನಕ್ಕಿಂತಲೂ ಹೆಚ್ಚು ಎಂಬುದು ಭಾರತದಲ್ಲಿ ಪತ್ರಿಕೋದ್ಯಮ ಎದುರಿಸುತ್ತಿರುವ ಬಿಕ್ಕಟ್ಟಿನ ಪರಿಸ್ಥಿತಿಯನ್ನು ನೆನಪಿಸುತ್ತದೆ.

ಮಾರ್ಚ್ 21, 2014

ಗಲಭಾ ರಾಜಕೀಯ!

ಕೆಲವೊಮ್ಮೆ ಏನೋ ಹೇಳಲು ಹೋಗಿ ಸತ್ಯವನ್ನು ಹೊರಹಾಕಿಬಿಡಲಾಗುತ್ತದೆ! ಇವತ್ತಿನ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಬಂದಿರುವ ಒಂದು ವರದಿ ಗಲಭೆಗಳ ಹಿಂದಿನ ರಾಜಕೀಯವನ್ನು ಬಯಲು ಮಾಡಿಬಿಡುವುದರ ಜೊತೆಜೊತೆಗೆ ಬಿಜೆಪಿ ರಾಜಕೀಯ ಪಕ್ಷವಾಗಿ ಬೆಳೆಯಲು ಏನು ಕಾರಣ ಎಂಬುದನ್ನೂ ಸೂಚ್ಯವಾಗಿ ತಿಳಿಸಿಬಿಟ್ಟಿದೆ.

ಮಾರ್ಚ್ 19, 2014

ಆಪರೇಷನ್ ಕನಕಾಸುರ! ಪತ್ರಿಕೋದ್ಯಮವನ್ನೇ ಕುಟುಕಿದ ಕಾರ್ಯಾಚರಣೆ!



ಡಾ. ಅಶೋಕ್. ಕೆ. ಆರ್
ಪ್ರಕರಣವೊಂದರ ಬೆನ್ನು ಹತ್ತಿ ತನಿಖೆ ಮಾಡುವುದು ಪತ್ರಿಕೋದ್ಯಮದ ಭಾಗ. ಪತ್ರಿಕೋದ್ಯಮದ ರೀತಿ ರಿವಾಜುಗಳು ಬದಲಾದಂತೆ ತನಿಖಾ ಪತ್ರಿಕೋದ್ಯಮದ ರೂಪು ರೇಷೆಗಳೂ ಬದಲಾಗುತ್ತಿವೆ. ಅವಶ್ಯ ದಾಖಲೆಗಳನ್ನು ಸಂಗ್ರಹಿಸುತ್ತ ಸಂಗ್ರಹಗೊಂಡ ದಾಖಲೆ ವ್ಯಕ್ತಿಯೊಬ್ಬರ ವಿರುದ್ಧ, ಸಂಸ್ಥೆಯೊಂದರ ವಿರುದ್ಧ ಪತ್ರಿಕಾ ಲೇಖನ ಬರೆಯುವುದಕ್ಕೆ ಸಾಕಷ್ಟಾಯಿತು ಎಂಬ ಭಾವ ಮೂಡಿದ ನಂತರ ಲೇಖನಿಗೆ ಕೆಲಸ ಕೊಡಲಾಗುತ್ತಿತ್ತು. ಪತ್ರಿಕಾ ವರದಿಗಳು ಸಮಾಜವನ್ನಲುಗಿಸಿ ಕ್ರಿಯಾಶೀಲವಾಗಿಸುತ್ತಿತ್ತು. ಪತ್ರಿಕಾ ವರದಿಗಳ ಕರಾರುವಕ್ಕುತನ ಎಷ್ಟಿರುತ್ತಿತ್ತೆಂದರೆ ಅದರ ಸತ್ಯಾ ಸತ್ಯತೆಗಳ ಬಗ್ಗೆ ಹೆಚ್ಚಿನ ಸಂದರ್ಭಗಳಲ್ಲಿ ಅನುಮಾನ ಮೂಡುತ್ತಿರಲಿಲ್ಲ. ಇದು ವಿರೋಧಿಗಳ ಒಳಸಂಚು ಎಂಬ ಭಾವನೆ ಮೂಡುತ್ತಿದ್ದುದಂತೂ ಅಪರೂಪದಲ್ಲಿ ಅಪರೂಪ. ಬೋಪೋರ್ಸ್ ತರಹದ ಹಗರಣಗಳು ಹೊರಪ್ರಪಂಚಕ್ಕೆ ತಿಳಿದಿದ್ದು ಇಂತಹ ನಿರ್ಭಯ ತನಿಖಾ ಪತ್ರಿಕೋದ್ಯಮದಿಂದ. ವರದಿಯನ್ನು ಬೆಂಬಲಿಸುವಂತಹ ದಾಖಲೆಗಳನ್ನು ಸಂಗ್ರಹಿಸಿದ ನಂತರವಷ್ಟೇ ಪ್ರಕಟಣೆಗೆ ಪರಿಗಣಿಸಲಾಗುತ್ತಿತ್ತು. ಪತ್ರಿಕೆಗಳ ಸಂಖ್ಯೆ ಹೆಚ್ಚಿದ ನಂತರ ಅದರಲ್ಲೂ ವಾರಕ್ಕೊಮ್ಮೆ ಹದಿನೈದು ದಿನಕ್ಕೊಮ್ಮೆ ಬರುವ ಟ್ಯಾಬ್ಲಾಯ್ಡ್ ಪತ್ರಿಕೆಗಳ ಸಂಖೈ ಅಧಿಕಗೊಂಡ ಬಳಿಕ ತನಿಖಾ ಪತ್ರಿಕೋದ್ಯಮದಲ್ಲೂ ಆತುರತೆ ಕಾಣಲಾರಂಭಿಸಿತು. ತತ್ಪರಿಣಾಮವಾಗಿ ಪತ್ರಿಕೆ ಮತ್ತು ಪತ್ರಕರ್ತರ ಮೇಲಿನ ಮಾನನಷ್ಟ ಮೊಕದ್ದಮೆಗಳೂ ಹೆಚ್ಚಾಗಲಾರಂಭಿಸಿತು. ಕೆಲವೊಮ್ಮೆ ಕಣ್ಣಿಗೆ ಕಾಣುವ ಸತ್ಯಕ್ಕೆ ದಾಖಲೆಯ ಅಲಭ್ಯತೆಯುಂಟಾಗುವುದರಿಂದ ಸಂಪೂರ್ಣ ದಾಖಲೆಗಳಿಲ್ಲದ ತನಿಖಾ ಪತ್ರಿಕೋದ್ಯಮವನ್ನು ಒಂದು ಹಂತದವರೆಗೆ ಒಪ್ಪಿಕೊಳ್ಳಲಾಯಿತು. ಇತ್ತೀಚಿನ ದಿನಮಾನದಲ್ಲಿ ಉತ್ತಮ ತನಿಖಾ ಪತ್ರಿಕೋದ್ಯಮಕ್ಕೆ ಪ್ರಜಾವಾಣಿಯಲ್ಲಿ ಪ್ರಕಟವಾದ ಕೆ.ಪಿ.ಎಸ್.ಸಿ ಕರ್ಮಕಾಂಡವನ್ನು ಉದಹರಿಸಬಹುದು.

ಡಿಸೆಂ 10, 2013

ಕಲ್ಪನಾತ್ಮಕ ಭ್ರಮೆಗಳೆಲ್ಲ ವಾಸ್ತವವಾಗುವ ವಿಷಮ ಘಳಿಗೆ...



ಡಾ ಅಶೋಕ್ ಕೆ ಆರ್
‘Twenty thousand leagues under sea’ – ನಾನು ಓದಿದ ಪ್ರಥಮ ಪಠ್ಯೇತರ ಪುಸ್ತಕ. ಜೂಲಿಸ್ ವರ್ನೆ ರಚನೆಯ ಈ ಫ್ರೆಂಚ್ ಕೃತಿಯಲ್ಲಿ ನಾಟಿಲಸ್ ಎಂಬ ಬೃಹತ್ ಗಾತ್ರದ ಸಮುದ್ರದ ಎಲ್ಲ ಭಾಗಗಳಲ್ಲೂ ಚಲಿಸುವ ಸಾಮರ್ಥ್ಯವಿರುವ ಸಬ್ ಮೆರೀನ್ ಇದೆ; ಸಬ್ ಮೆರೀನ್ ಮೂಲಕ ಸಮುದ್ರದಾಳದ ಚಿತ್ರ ವಿಚಿತ್ರ ವಿಸ್ಮಯಕಾರಿ ಜೀವಿಗಳ ಪರಿಚಯ ಮಾಡಿಸುತ್ತಾನೆ ಲೇಖಕ. ಪುಸ್ತಕ ಓದಿ ಮುಗಿಸುವಷ್ಟರಲ್ಲಿ ಖುದ್ದು ನಾವೇ ಸಮುದ್ರದೊಳಗೆ ಈಜಾಡಿ ಬಂದಂತಹ ಅನುಭವವಾಗುತ್ತದೆ. ಪುಸ್ತಕವನ್ನು ಓದಿ ಮುಗಿಸಿದ ಎಷ್ಟೋ ದಿನಗಳ ಮೇಲೆ ಆ ಇಡೀ ಪುಸ್ತಕ ಕಲ್ಪನೆಯಿಂದ ಮೂಡಿದ್ದು ಎಂಬ ಸತ್ಯ ತಿಳಿಯಿತು!! 1870ರಲ್ಲಿ ಜೂಲಿಸ್ ವರ್ನೆ ಆ ಪುಸ್ತಕ ರಚಿಸಿದಾಗ ‘ನಾಟಿಲಸ್’ ಸಾಮರ್ಥ್ಯದ ಸಬ್ ಮೆರೀನ್ ಇರಲೇ ಇಲ್ಲ! ಪುಸ್ತಕದಲ್ಲಿದ್ದ ಕಲ್ಪಿತ ತಾಂತ್ರಿಕ ವಿವರಗಳನ್ನು ಕಾಲಾಂತರದಲ್ಲಿ ನಿಜಕ್ಕೂ ಅಳವಡಿಸಿಕೊಳ್ಳಲಾಯಿತು! ನ್ಯೂಕ್ಲಿಯರ್ ಇಂಧನ ಮೂಲದಿಂದ ಚಲಿಸಬಲ್ಲ ತನ್ನ ಪ್ರಥಮ ಸಬ್ ಮೆರೀನಿಗೆ ಅಮೆರಿಕ ‘ನಾಟಿಲಸ್’ ಎಂದೇ ನಾಮಕರಣ ಮಾಡಿತು! ಇಷ್ಟೇ ಅಲ್ಲದೆ ಲೇಖಕನ ಕಲ್ಪನೆಯಲ್ಲಿ ಸೃಷ್ಟಿಯಾದ ಅನೇಕ ಜೀವಿಗಳನ್ನು ಹೋಲುವಂತಹ ಸಮುದ್ರಜೀವಿಗಳನ್ನೂ ನಂತರದಲ್ಲಿ ಪತ್ತೆ ಹಚ್ಚಲಾಯಿತು!

ಸೆಪ್ಟೆಂ 1, 2013

ನೀವೆಲ್ಲ ಸರ್ವಜ್ಞರೇ? ಸರಸ್ವತಿಯರೇ ಎಂದ ಆ ಹೆಣ್ಣುಮಗಳಿಗೆ ಏನು ಉತ್ತರ ಕೊಡಲಿ?





ಮೂಲ  - ಪ್ರಜಾವಾಣಿ
ನಾಲ್ಕನೇ ಆಯಾಮದಲ್ಲಿ ಪದ್ಮರಾಜ್ ದಂಡಾವತಿ ಬರೆಯುತ್ತಾರೆ -
ಅವರು ಸಣ್ಣಗೆ ಅಳುತ್ತಿದ್ದಂತಿತ್ತು. ಮಾತು ನಿಂತು ನಿಂತು ಬರುತ್ತಿತ್ತು. ದನಿ ಮೆದುವಾಗಿದ್ದರೂ ಆಳದಲ್ಲಿ ಸಿಟ್ಟು ಇದ್ದಂತೆ ಇತ್ತು. ಆಕ್ರೋಶ ಇತ್ತು. ಹತಾಶೆ ಇತ್ತು. ಅವರಿಗೆ ಅವಮಾನ ಆದಂತಿತ್ತು. ಅದಕ್ಕೆ ಏನು ಪರಿಹಾರ ಎಂದು ಝಂಕಿಸಿ ಕೇಳುವ ದಾಷ್ಟೀಕ ಇದ್ದಂತಿತ್ತು. ಆದರೆ, ತಮ್ಮ ಹೆಸರು, ಊರು ಬರೆಯಬಾರದು ಎಂದು ಅವರು ಷರತ್ತು ಹಾಕಿದರು. ಅದಕ್ಕೆ ಕಾರಣವನ್ನೂ ಕೊಟ್ಟರು. ಇದು ನನ್ನ ಕಥೆ ಎಂದು ಮಾತ್ರ ನೀವು ತಿಳಿಯಬೇಡಿ. ಇಂಥ ಬೇಕಾದಷ್ಟು ಕಥೆಗಳು ರಾಜ್ಯದ ಮೂಲೆ ಮೂಲೆಯಲ್ಲಿ ನಡೆದಿರಬಹುದು ಎಂದರು. ನಾನು ಹೇಳಿದ್ದನ್ನು ನನ್ನ ಮಾತುಗಳಲ್ಲಿಯೇ ಇಟ್ಟು ಬಿಡಿ. ನಿಮ್ಮದನ್ನು ಏನೂ ಸೇರಿಸಬೇಡಿ ಎಂದು ತಾಕೀತೂ ಮಾಡಿದರು!:

ಆಗ 14, 2013

ಪ್ರಜಾಪ್ರಭುತ್ವಕ್ಕೇ ಮಾರಕವಾಗುವ ವ್ಯಕ್ತಿ ಪೂಜೆ

ಪ್ರಜಾಸಮರ ಮತ್ತು ನಿಲುಮೆಯಲ್ಲಿ ಪ್ರಕಟವಾಗಿದ್ದ ಲೇಖನ



ಒಂದೂರಲ್ಲಿ ಒಬ್ಬ ರಾಜ ಇದ್ದ. ಆತನಿಗೊಬ್ಬಳು ಸುರಸುಂದರಿ ಮಗಳು. ರಾಜನ ವೈರಿಗಳು ರಾಜನ ಮೇಲಿನ ದ್ವೇಷಕ್ಕೆ ಯುವರಾಣಿಯನ್ನು ಅಪಹರಿಸಿಬಿಟ್ಟರು. ಯುವರಾಣಿ ಅಘಾತಕ್ಕೊಳಗಾಗಿ ಮೂರ್ಛೆ ತಪ್ಪಿದಳು. ಆಘಾತದಿಂದ ಹೊರಬಂದ ಮೇಲೆ ನೋಡುತ್ತಾಳೆ ಯಾವುದೋ ಗುಹೆಯೊಳಗೆ ಕೈ ಕಟ್ಟಿಹಾಕಿಹಾಕಿದ್ದಾರೆ. ಹೊರಗಡೆ ಪಹರೆ. ಚಾಕಚಕ್ಯತೆಯಿಂದ ಕೈಗೆ ಕಟ್ಟಿದ್ದ ಹಗ್ಗವನ್ನು ಬಿಡಿಸಿ ವೈರಿಗಳೊಂದಿಗೆ ಶೌರ್ಯದಿಂದ ಹೊಡೆದಾಡಿ........’ ರೀ ರೀ ರೀ ಕಥೆ ಹೋಗೋದು ಆ ರೀತಿ ಅಲ್ಲ ...... ‘ಪಕ್ಕದ ದೇಶದ ಯುವರಾಜ ಏಕಾಂಗಿಯಾಗಿ ವೈರಿಗಳ ಮೇಲೆ ಕಾದಾಡಿ ಯುವರಾಣಿಯನ್ನು ರಕ್ಷಿಸುತ್ತಾನೆ. ಯುವರಾಜನ ಸಾಹಸಕ್ಕೆ ಮನಸೋತ ಯುವರಾಣಿಗೆ ಪ್ರೇಮಾಂಕುರವಾಗುತ್ತದೆ. ಹಿರಿಯರ ಆಶೀರ್ವಾದದೊಂದಿಗೆ ಮದುವೆಯಾಗಿ ನೂರ್ಕಾಲ ಚೆನ್ನಾಗಿ ಬಾಳಿ ಬದುಕುತ್ತಾರೆ’ ಇದು ಕಥೆ ಸಾಗುವ ರೀತಿ! ಚಿಕ್ಕಂದಿನಿಂದಲೂ ಈ ರೀತಿಯ ಕಥೆಗಳನ್ನೇ ಕೇಳಿ ಬೆಳೆದ ನಮಗೆ ಯುವರಾಣಿ ಅಬಲೆಯಲ್ಲ ಬಲಿಷ್ಠೆ, ತನ್ನನ್ನು ತಾನು ಕಾಪಾಡಿಕೊಳ್ಳಲು ಎಂದರೆ ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದಲ್ಲವೇ? ಯುವರಾಣಿಯ ಸಹಾಯಕ್ಕೆ ಯುವರಾಜನೊಬ್ಬ ಬೇಕೇ ಬೇಕು ಎಂಬ ಸಿದ್ಧಾಂತ ನಮ್ಮದು!

ಮುಂದಿನ ವರುಷದ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳ ಸಿದ್ಧತೆ ಜೋರಾಗಿಯೇ ನಡೆದಿದೆ. ಬಿಜೆಪಿಯಿಂದ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿಯೆಂಬುದು ಹೆಚ್ಚೂ ಕಡಿಮೆ ಖಚಿತವಾಗಿದೆ. ಇನ್ನು ಕಾಂಗ್ರೆಸ್ಸಿನಿಂದ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾ? ಖಚಿತವಾಗಿ ಹೇಳುವುದು ಕಷ್ಟ. ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಅಭಿಮಾನಿಗಳ “ಯುದ್ಧ” ಜೋರಾಗಿಯೇ ನಡೆದಿದೆ. ಬಿಜೆಪಿ ಸಾಮಾಜಿಕ ತಾಣದ ಪ್ರಚಾರಕ್ಕೆ ವರುಷಗಳಿಂದ ಕೊಟ್ಟ ಪ್ರಾಮುಖ್ಯತೆಯಿಂದ ಅಂತರ್ಜಾಲದಲ್ಲಿ ನರೇಂದ್ರ ಮೋದಿಯ ಬೆಂಬಲಿಗರೇ ಹೆಚ್ಚಿರುವುದು ನಿಜ. ನರೇಂದ್ರ ಮೋದಿಯ ವಿರುದ್ಧವಾಗಿಯೋ ಅಥವಾ ರಾಹುಲ್ ಗಾಂಧಿಯ ಪರವಾಗಿಯೋ ನೀವೇನಾದರೂ ಅಂತರ್ಜಾಲದಲ್ಲಿ ಬರೆದಿರೋ ನಿಮ್ಮ ಜನ್ಮ ಜಾಲಾಡಿ, ಹೀಯಾಳಿಸಿ, ಖಂಡಿಸಿ, ದೇಶದ್ರೋಹಿಯೆಂದು ಜರೆಯುವ ಅಸಂಖ್ಯ ಕಮೆಂಟುಗಳು ಬರುವುದು ಖಂಡಿತ!!

ಆಗ 8, 2013

ಇದ್ದರು ಮಹಾನುಬಾವುಲು .....

ಗುಜರಾತಿನ ಜನ ಅಪೌಷ್ಟಿಕತೆಯಿಂದ ನರಳುತ್ತಿಲ್ಲ ಅವರು "diet conscious" ಆಗಿದ್ದಾರೆ ಆಷ್ಟೇ  - ನರೇಂದ್ರ ಮೋದಿ . 
ಬಡತನ ಎಂಬುದು ಒಂದು ಮಾನಸಿಕ ಸ್ಥಿತಿ ಅಷ್ಟೇ - ರಾಹುಲ್ ಗಾಂಧಿ .

ಆಗ 3, 2013

ಮಾಧ್ಯಮಗಳ ಆದ್ಯತೆ ಏನು?

ಚಿತ್ರೀಕರಣದ ಸಮಯದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ ನಟ ದರ್ಶನ್. ಆಸ್ಪತ್ರೆಯ ವೈದ್ಯರ ಪ್ರಕಾರ ಕುತ್ತಿಗೆಯ ಬಳಿ ಪೆಟ್ಟಾಗಿದೆ, ಅಪಾಯವೇನೂ ಇಲ್ಲ.
ದರ್ಶನ್ ಸದ್ಯದ ಮಟ್ಟಿಗೆ ಕರ್ನಾಟಕದ ಖ್ಯಾತ ನಾಯಕ ನಟ. ಬಾಕ್ಸ್ ಆಫೀಸ್ ಹೀರೋ ಎನ್ನವುದು ಹೆಚ್ಚು ಸೂಕ್ತ. ದರ್ಶನ್ ಗಾಯಗೊಂಡಾಗ ಅದನ್ನು ವರದಿ ಮಾಡಬೇಕಿರುವುದು ಮಾಧ್ಯಮದ ಕರ್ತವ್ಯವೆಂಬುದೇನೋ ಸರಿ ಆದರೆ ಸತತ ಎರಡು ದಿನದಿಂದ ಆಸ್ಪತ್ರೆಯ ಹೊರಗೆ ಓ.ಬಿ ವ್ಯಾನ್ ನಿಲ್ಲಿಸಿಕೊಂಡು ವರದಿ ಮಾಡುವಷ್ಟು ಪ್ರಮುಖ ವಿಷಯವಾ ಅದು? 

ಜುಲೈ 28, 2013

ಸಾವಿರ ರುಪಾಯಿಯ ಫೋಟೋ ಮತ್ತು ಲಕ್ಷದ ಪ್ರಚಾರ

ವೈಯಕ್ತಿಕ ವಿಷಯದಿಂದ ಲೇಖನವೊಂದನ್ನು ಪ್ರಾರಂಭಿಸುವುದು ಅಷ್ಟೇನೂ ಸರಿಯಲ್ಲವಾದರೂ ಈ ಲೇಖನಕ್ಕೆ ಪೂರಕವಾಗಿರುವ ಘಟನೆಯಾಗಿರುವುದರಿಂದ ಹೇಳುತ್ತಿದ್ದೇನೆ, ಕ್ಷಮೆಯಿರಲಿ. ಮದುವೆಯಾಗುವ ದಿನ ಹೊಸದೇನನ್ನಾದರೂ ಮಾಡಬೇಕೆಂಬ ಆಸೆಯಿಂದ ನನ್ನ ಗೆಳೆಯನೊಬ್ಬ ಮದುವೆಗೆ ಬಂದವರಿಗೆಲ್ಲ ಒಂದೊಂದು ಗಿಡ ಹಂಚಿದ್ದ, ಒಟ್ಟು ಎರಡು ಸಾವಿರ ಗಿಡಗಳು. ಬಂದವರಿಗೆಲ್ಲ ಯಾವುದಾದರೊಂದು ಪುಸ್ತಕವನ್ನು ತಾಂಬೂಲದ ರೂಪದಲ್ಲಿ ಕೊಡಬೇಕೆಂಬುದು ನನ್ನಾಸೆಯಾಗಿತ್ತು. ಮದುವೆ ನಿಶ್ಚಿತವಾಗುವಷ್ಟರೊಳಗೆ ನನ್ನದೇ ಹದಿನೈದರಷ್ಟು ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಕಾರಣ ನನ್ನದೇ ಕಥಾ ಸಂಕಲನ ಬಿಡುಗಡೆಗೊಳಿಸಿ ಮದುವೆಮನೆಯಲ್ಲೇ ತಾಂಬೂಲದ ಜೊತೆಗೆ ಕೊಡುವ ನಿರ್ಧಾರವೂ ಆಯಿತು. ಮಾಧ್ಯಮದವರನ್ನೂ ಕರೆಯುವ ತೀರ್ಮಾನವನ್ನೂ ಕೈಗೊಂಡೆವು. ಮದುವೆ ದಿನ ತಾಳಿ ಕಟ್ಟಿದ ಮೇಲೆ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು. ಮಾಧ್ಯಮದವರು ವಿಡಿಯೋ ಕ್ಯಾಮೆರಾಗಳ ಜೊತೆಗೆ ಬಂದು ಮುಂದಿನ ಸಾಲಿನಲ್ಲಿ ಆಸೀನರಾಗಿದ್ದರು. ಆಗ ಗಾಬರಿಯಾಗಿದ್ದು ಹುಡುಗಿ ಮತ್ತು ನನ್ನ ಮನೆ ಕಡೆಯ ನೆಂಟರು!! ಕೆಲವರಿಗಷ್ಟೇ ಪುಸ್ತಕ ಬಿಡುಗಡೆಯ ಬಗ್ಗೆ ತಿಳಿಸಿದ್ದೆವು, ಇನ್ನುಳಿದವರಿಗೆ ಅಂದೇ ತಿಳಿಯಲಿ ಎಂದು ಸುಮ್ಮನಿದ್ದೆವು. ಮೀಡಿಯಾದವರು ಕ್ಯಾಮೆರ ಸಮೇತ ದಾಂಗುಡಿಯಿಟ್ಟಿದ್ದು ಕಂಡು ಗಾಬರಿಗೊಂಡ ಜನ ಅವರ ಬಳಿ ಹೋಗಿ ಏನು ಸಮಾಚಾರ ಎಂದು ವಿಚಾರಿಸಿ ಪುಸ್ತಕ ಬಿಡುಗಡೆಯ ಬಗ್ಗೆ ತಿಳಿದು ನಿಟ್ಟುಸಿರುಬಿಟ್ಟರು!! ಜನ ಗಾಬರಿಗೊಂಡಿದ್ದಾದರೂ ಯಾಕೆ? ಯಾವುದೇ ದೃಶ್ಯ ಮಾಧ್ಯಮದಲ್ಲಿ ಮದುವೆಯ ಸುದ್ದಿ ಬರುವುದು ಹುಡುಗ/ಹುಡುಗಿ ಓಡಿ ಹೋದಾಗ ಅಥವಾ ಮತ್ಯಾವುದೋ ರಂಪ ರಾಮಾಯಣವಾದಾಗ. ಮಾಧ್ಯಮದವರಿದ್ದಾರೆಂದರೆ ಅಲ್ಲೇನೋ ಕೆಟ್ಟದ್ದು ನಡೆಯುತ್ತಿದೆ ಎಂಬ ಭಾವನೆಯೇ ತುಂಬಿ ಹೋಗಿದೆ ಜನರಲ್ಲಿ. ಅದೇ ಕಾರಣದಿಂದ ನನ್ನ ಮದುವೆಯ ದಿನ ನೆಂಟರಿಷ್ಟರು ಗಾಬರಿಯಾಗಿದ್ದರು! ಇದು ನಮ್ಮ ಮಾಧ್ಯಮಗಳು ಬೆಳೆಸಿಕೊಂಡಿರುವ ಪ್ರಭಾವಳಿ!