ಮೇ 3, 2018

ನಿರೀಕ್ಷೆ ಮತ್ತು ವಾಸ್ತವ......

ಸಾಂದರ್ಭಿಕ ಚಿತ್ರ 
ಡಾ. ಅಶೋಕ್. ಕೆ. ಆರ್. ಪೇಪರ್ರಿನವನು ಪತ್ರಿಕೆಯನ್ನು ಕಾಂಪೌಂಡಿನೊಳಗೆ ಎಸೆದ ಸದ್ದಿಗೆ ಎಚ್ಚರವಾಯಿತು. ಕಣ್ಣುಜ್ಜಿಕೊಂಡು ಬಾಗಿಲು ತೆರೆದು ಪತ್ರಿಕೆ ತೆಗೆದುಕೊಂಡು ಒಳಬಂದು ಓದಲಾರಂಭಿಸಿದೆ. ಚುನಾವಣೆಯ ಸಮಯದಲ್ಲಿ ರಾಜಕಾರಣಿಗಳ ಮಾತುಗಳಲ್ಲದೆ ಬೇರೆ ಸುದ್ದಿಗಳನ್ನು ಕಾಣಲು ಸಾಧ್ಯವೇ?

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಾತುಗಳೇ ಇವತ್ತಿನ ಪ್ರಮುಖ ಸುದ್ದಿ:

ಅಕ್ಟೋ 23, 2015

ಕಾಣೆಯಾಗಿದ್ದಾರೆ: ಕೆ.ಜೆ.ಜಾರ್ಜ್, ಗೃಹಮಂತ್ರಿಗಳು ಕರ್ನಾಟಕ.

ಕರ್ನಾಟಕದಲ್ಲಿ ಹಿಂಸೆಯ ಚಕ್ರ ಯಶಸ್ವಿಯಾಗಿ ತಿರುಗಲಾರಂಭಿಸಿದೆ. ಜಾತಿ ಮತ್ತು ಧರ್ಮದ ಕಾರಣಕ್ಕೆ ತಿರುಗಲಾರಂಭಿಸಿರುವ ಈ ಹಿಂಸೆಯ ಚಕ್ರ ನಿಲ್ಲುವ ಯಾವ ಸೂಚನೆಯೂ ಕಾಣುತ್ತಿಲ್ಲ. ಹಿಂಸೆಯನ್ನು ತಡೆಯಲಾರದ ಪೋಲೀಸ್ ಇಲಾಖೆಯ ವೈಫಲ್ಯದಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿದ್ದ ಜಾರ್ಜ್ ಎನ್ನುವ ನಾಲಾಯಕ್ ಗೃಹಮಂತ್ರಿ ಎಷ್ಟು ಜನರು ರೇಪ್ ಮಾಡಿದರೆ ಗ್ಯಾಂಗ್ ರೇಪ್ ಎಂಬುದರ ಬಗ್ಗೆ ಅಧ್ಯಯನ ನಡೆಸುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ನಂಬಲನರ್ಹವಾದ ಮೂಲಗಳಿಂದ ತಿಳಿದು ಬಂದಿದೆ. ಈ ಗೃಹಮಂತ್ರಿಯ ಉಸ್ತುವಾರಿಲ್ಲಿ ಇಬ್ಬರು ಪೋಲೀಸರೂ ಕಳ್ಳರಿಂದ ಹತ್ಯೆಯಾಗಿಬಿಟ್ಟರು. ಪೋಲೀಸರ ನೈತಿಕ ಸ್ಥೈರ್ಯ ಹೆಚ್ಚಿಸುವ ಮಾತುಗಳನ್ನು ಇವರಿಂದಾಗಲೀ ಅಥವಾ ಇವರ ಮೇಲಿರುವ ಸಿದ್ಧರಾಮಯ್ಯನವರಿಂದಾಗಲೀ ಕೇಳಿ ಬರಲೇ ಇಲ್ಲ. ಹಾಡು ಹಗಲೇ ಪುಡಿಗಳ್ಳರಿಂದ ರೌಡಿಗಳಿಂದ ಪೋಲೀಸರು ಹತ್ಯೆಯಾಗುವ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ?

ಡಾ.ಎಂ.ಎಂ.ಕಲಬುರ್ಗಿಯವರ ಹತ್ಯೆಯಾಗಿ ತಿಂಗಳುಗಳೇ ಕಳೆಯಿತು. ಆರೋಪಿಗಳು ಪತ್ತೆಯಾಗಲಿಲ್ಲ. ಅವರ ಹತ್ಯೆಯ ಸಮರ್ಥಕರು ಕೇಕೆ ಹಾಕಿ ನಗುತ್ತಿದ್ದಾರೆ. ಕೆ.ಎಸ್.ಭಗವಾನರಿಗೆ ಬೆದರಿಕೆಯ ಮೇಲೆ ಬೆದರಿಕೆ ಬರುತ್ತಿವೆ. ಬೆದರಿಕೆ ಹಾಕಿದವರ‍್ಯಾರು ಎನ್ನುವುದೇ ಗೊತ್ತಾಗುತ್ತಿಲ್ಲ. ಪೇಜಾವರ ಸ್ವಾಮೀಜಿಗಳ ಕಾರಿನ ಮೇಲೆ ಹಾಡಹಗಲೇ ಕಲ್ಲು ತೂರಲಾಗುತ್ತದೆ, ಅವರ ಬಂಧನವೂ ಸಾಧ್ಯವಾಗಿಲ್ಲ. ಧರ್ಮದ ಹುಳುಕುಗಳನ್ನು ಎತ್ತಿ ತೋರುವ ಲೇಖಕರ ವಿರುದ್ಧ ಕತ್ತಿ ಮಸೆಯುವವರ ಸಂಖೈ ಹೆಚ್ಚಾಗಿದೆ. ಪೋಲೀಸರ ಮತ್ತು ಸರಕಾರದ ನಿಷ್ಕ್ರಿಯತೆ ಇಂತಹ ಮತಾಂಧರಿಗೆ ಮತ್ತಷ್ಟು ಮಗದಷ್ಟು ಹಲ್ಲೆ ನಡೆಸುವ ಆ ಮೂಲಕ ಧರ್ಮರಕ್ಷಕರ ಪಟ್ಟ ಕಟ್ಟಿಕೊಳ್ಳುವಂತೆ ಪ್ರೇರೇಪಿಸುತ್ತಿದೆ. ಕಲಬುರ್ಗಿಯವರ ಹತ್ಯೆಯಾದ ಸ್ಥಳದಿಂದ ನೂರು ಕಿಮಿ ದೂರದಲ್ಲಿ ಉಚ್ಛಂಗಿ ಪ್ರಸಾದ್ ಎಂಬ ಯುವಕನ ಮೇಲೆ ಹಲ್ಲೆಯಾಗಿದೆ. ಕಾರಣ ‘ಒಡಲ ಕಿಚ್ಚು’ ಎಂಬ ಕವನ ಸಂಕಲನದಲ್ಲಿ ಹಿಂದೂ ಧರ್ಮದ ಜಾತಿ ಪದ್ಧತಿಯ ವಿರುದ್ಧ ಉಚ್ಛಂಗಿ ಪ್ರಸಾದ್ ಕಿಡಿಕಾರಿರುವುದು. ಇನ್ನೊಮ್ಮೆ ಹೀಗೆಲ್ಲ ಬರೆದ್ರೆ ಬೆರಳುಗಳಿರೋರಿದಿಲ್ಲ ಬರೆಯೋದಕ್ಕೆ ಎಂದು ಧಮಕಿ ಹಾಕಿ ಹೋಗಿದ್ದಾರೆ. ಶೋಷಿತ ದಲಿತನೊಬ್ಬ ಜಾತಿಯ ವಿರುದ್ಧ ಬರೆಯೋದು ಇವರಿಗೆ ಧರ್ಮ ವಿರೋಧದ ಘಟನೆಯಾಗಿ ಕಾಣಿಸುತ್ತದೆ! ಇನ್ನು ಮೂಡಬಿದರೆಯಲ್ಲಿ ಕಸಾಯಿಖಾನೆಯ ವಿರುದ್ಧ ಹೋರಾಟ ರೂಪಿಸುತ್ತಿದ್ದ ಭಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿಯನ್ನು ಮತಿಗೆಟ್ಟ ಮುಸ್ಲಿಮರು ಕೊಂದುಹಾಕಿದ್ದಾರೆ. ಆ ಹತ್ಯೆಗೆ ಸಾಕ್ಷಿಯಾದವನು ಹೆಚ್ಚೇನು ಕಾರಣವಿಲ್ಲದೆ ಆತ್ಮಹತ್ಯೆ ಮಾಡಿಕೊಂಡುಬಿಡುತ್ತಾನೆ. ಪುಣ್ಯಕ್ಕೆ ಕೋಮುಗಲಭೆಯ ವಿಷಯದಲ್ಲಿ ಒಂದಷ್ಟು ಸೋಮಾರಿತನ ತೋರುವ ದಕ್ಷಿಣ ಕನ್ನಡ ಪೋಲೀಸರು ಈ ಪ್ರಕರಣದಲ್ಲಿ ಹಂತಕರನ್ನು ಶೀಘ್ರವಾಗಿ ಬಂಧಿಸಿದ್ದಾರೆ.

ರಾಜ್ಯದಲ್ಲಿ ವ್ಯವಸ್ಥಿತವಾಗಿ ಹಲ್ಲೆಗಳು, ಹತ್ಯೆಗಳು, ಅತ್ಯಾಚಾರಗಳು ನಡೆಯುತ್ತಿರುವಾಗ ಅದರ ಬಗ್ಗೆ ಪ್ರತಿಕ್ರಯಿಸುವ, ಪೋಲೀಸರನ್ನು ಚುರುಕುಗೊಳಿಸಿ ಜನರ ನಂಬಿಕೆಯನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಾದ ಗೃಹಮಂತ್ರಿಗಳು ‘ಇಬ್ರು ರೇಪ್ ಮಾಡಿದ್ರೆ ಗ್ಯಾಂಗ್ ರೇಪ್ ಅಲ್ಲ ಕಣ್ರೀ’ ಎಂದು ಅಸಂಬದ್ಧವಾಗಿ ಮಾತನಾಡುತ್ತಾರೆ. ಇದನ್ನು ನಖಶಿಖಾಂತ ವಿರೋಧಿಸಬೇಕಾದ ವಿರೋಧ ಪಕ್ಷದ ಮುಖಂಡ ಈಶ್ವರಪ್ಪ ‘ನಿನ್ನನ್ನು ಹೊತ್ಕೊಂಡು ಹೋಗಿ ರೇಪ್ ಮಾಡುದ್ರೆ ನಾವೇನ್ ಮಾಡೋಕಾಗುತ್ತಮ್ಮ’ ಎಂದು ನುಡಿಮುತ್ತು ಉದುರಿಸುತ್ತಾರೆ. ಕಲಬುರ್ಗಿ ಹತ್ಯೆಯ ಬಗ್ಗೆ ಮಾತೇ ಆಡದ ಬಿಜೆಪಿಯವರು ತಮಗೆ ಅನುಕೂಲವೆನ್ನಿಸುವ ಪ್ರಶಾಂತ್ ಪೂಜಾರಿಯ ಬಗ್ಗೆ ಬೊಬ್ಬೆ ಹೊಡೆಯುತ್ತಾರೆ. ಇನ್ನು ನಾಡಿನ ಅಹಿಂದೋದ್ಧಾರಕ ಸಿದ್ಧರಾಮಯ್ಯ ‘ಕೆಲ್ಸ ಮಾಡ್ರೀ ಕೆಲ್ಸ ಮಾಡ್ರೀ’ ಎನ್ನುತ್ತಲೇ ತಮ್ಮ ಶಕ್ತಿ ವ್ಯಯಿಸುತ್ತಾರೆ. ಒಟ್ಟಿನಲ್ಲಿ ಕರ್ನಾಟಕ ಉದ್ಧಾರ.

ಆಗ 21, 2015

ಜೀವ ಅರೆಯುತ್ತಿರುವ ಕಬ್ಬು....


Ashok K R
ರೈತರ ಆತ್ಮಹತ್ಯೆಯ ವಿಷಯದಲ್ಲಿ ಮೊದಲಿನಿಂದಲೂ ಮೊದಲ ಐದು ಅಥವಾ ಹತ್ತು ಸ್ಥಾನದೊಳಗೇ ಇರುವ ಕರ್ನಾಟಕದಲ್ಲಿ ಕಳೆದ ಎರಡು ತಿಂಗಳಿನಿಂದ ಆತ್ಮಹತ್ಯೆಯ ಸಂಖೈಯಲ್ಲಿ ಅಪಾರ ಏರಿಕೆಯಾಗಿದೆ. ನಗರಗಳ ಸೌಖ್ಯದೊಳಗೆ ಕುಳಿತು ರೈತರ ಆತ್ಮಹತ್ಯೆಯ ಬಗ್ಗೆ ಅನುಕಂಪದಿಂದ ಬರೆಯುವುದು ಎಷ್ಟರ ಮಟ್ಟಿಗೆ ಸಮಂಜಸ ಎಂಬ ಗೊಂದಲದೊಂದಿಗೇ ಈ ಲೇಖನ ಬರೆಯುತ್ತಿದ್ದೇನೆ. ರೈತರ ಆತ್ಮಹತ್ಯೆಯೆಂಬುದು ಸಂಖೈಯ ದೃಷ್ಟಿಗೆ ಮಾತ್ರ ಸೀಮಿತವಾಗುತ್ತಿದೆಯಾ? ರೈತರದು ನಿಜಕ್ಕೂ ಆತ್ಮಹತ್ಯೆಯಾ ಎಂಬ ಪ್ರಶ್ನೆ ಕೇಳಿಕೊಂಡರೆ ಇಲ್ಲ, ಅದು ಸರಕಾರೀ ಕೊಲೆ, ಇನ್ನೂ ನಿಷ್ಟವಾಗಿ ಹೇಳಬೇಕೆಂದರೆ ಸಾಮಾಜಿಕ ಕೊಲೆ. ಈ ಕೊಲೆಯೆಂಬ ಆತ್ಮಹತ್ಯೆಗೆ ಯಾರು ಯಾರು ಕಾರಣರು ಎಂದು ಗಮನಿಸುತ್ತಾ ಹೋದರೆ ರೈತನನ್ನೂ ಸೇರಿಸಿಕೊಂಡು ಪ್ರಧಾನಿಯವರೆಗೆ ಎಲ್ಲರನ್ನೂ ಹೊಣೆಯಾಗಿಸಬಹುದು. ತತ್ ಕ್ಷಣಕ್ಕೆ ಕರ್ನಾಟಕದ ಪರಿಸ್ಥಿತಿಯನ್ನು ಸಿದ್ಧರಾಮಯ್ಯ ಸರಕಾರದ ವೈಫಲ್ಯವೆಂದು ಪರಿಗಣಿಸಬಹುದಾದರೂ ಒಟ್ಟಾರೆಯಾಗಿ ನೋಡಿದಾಗ ನಾವೆಲ್ಲರೂ ಅಪರಾಧಿ ಸ್ಥಾನದಲ್ಲಿ ನಿಂತು ಬಿಡುತ್ತೇವೆ.

ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಅತಿ ಹೆಚ್ಚಾಗಿ ನಡೆದಿರುವುದು ಮಂಡ್ಯದಲ್ಲಿ; ಕಬ್ಬು ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡಿರುವುದೇ ಹೆಚ್ಚು. ರಾಜ್ಯದ ಉಳಿದ ಜಿಲ್ಲೆಗಳಲ್ಲೂ ಬಹಳಷ್ಟು ಕಡೆ ರೈತರ ಆತ್ಮಹತ್ಯೆ ಕಬ್ಬು ಬೆಳೆಯ ಸುತ್ತಲೇ ಇದೆ. ಅಲ್ಲಿಗೆ ಸದ್ಯದ ಸಂದರ್ಭದಲ್ಲಿ ರೈತರ ಆತ್ಮಹತ್ಯೆಗೆ ನೇರವಾಗಿ ಕಬ್ಬು ಬೆಳೆಯೇ ಕಾರಣ ಎಂದು ನಿಸ್ಸಂಶಯವಾಗಿ ಹೇಳಬಹುದು. ಪ್ರತ್ಯಕ್ಷ ಕಾರಣವನ್ನು ಪರಿಹರಿಸುವುದರತ್ತ ಗಮನ ಹರಿಸುತ್ತಲೇ ಪರೋಕ್ಷ ಕಾರಣಗಳತ್ತಲೂ ಗಮನಹರಿಸಬೇಕು. ಸಕ್ಕರೆ ನಾಡೆಂದು ಹೆಸರಾದ ಮಂಡ್ಯ ಜಿಲ್ಲೆಯ ಹೆಚ್ಚು ಭಾಗ ಮಳೆಯಾಧಾರಿತ ಪ್ರದೇಶವಾಗಷ್ಟೇ ಉಳಿದಿತ್ತು. ಮಂಡ್ಯ ಎಂದರೆ ಮುದ್ದೆ – ಹುರುಳಿಕಟ್ಟು ಸಾರು.... ರಾಗಿ ಬೆಳೆಯೇ ಪ್ರಮುಖವಾಗಿದ್ದ ಮಂಡ್ಯದ ಇಂದಿನ ಅವಸ್ಥೆಗೆ ಕನ್ನಂಬಾಡಿ ಕಟ್ಟೆಯೂ ಒಂದು ಕಾರಣವೆಂದರೆ ತಪ್ಪಲ್ಲ. ಕನ್ನಂಬಾಡಿ ಕಟ್ಟೆಯ ಮೂಲಕ ಪ್ರಮುಖವಾಗಿ ಶ್ರೀರಂಗಪಟ್ಟಣ, ಪಾಂಡವಪುರ, ಮಂಡ್ಯ, ಮದ್ದೂರು ತಾಲ್ಲೂಕಿನ ಹಳ್ಳಿಗಳು ನೀರಾವರಿ ಸೌಕರ್ಯಕ್ಕೊಳಪಟ್ಟು ಹಸಿರಿನಿಂದ ನಳನಳಿಸಿದ್ದು ಹೌದು, ಅಲ್ಲಿನ ಜನರ ಆರ್ಥಿಕ ಜೀವನಮಟ್ಟದಲ್ಲಿ ಏರಿಕೆಯಾಗಿದ್ದೂ ಸತ್ಯ. ಅಣೆಕಟ್ಟೆಗಳು ಆಧುನಿಕ ಭಾರತದ ದೇವಸ್ಥಾನಗಳು ಎಂದು ನೆಹರೂ ಹೇಳಿದ ಮಾತನ್ನು ಭಾರತ ಅಕ್ಷರಶಃ ಪಾಲಿಸಿತು. ಅಣೆಕಟ್ಟಿನಿಂದಲೇ ಸಮೃದ್ಧಿ ಎಂಬ ಭಾವನೆ ಎಲ್ಲೆಡೆಯೂ ಮೂಡಿತು. ಅದು ಸತ್ಯದಂತೆಯೇ ತೋರಿತು. ಆದರೆ ಈಗಲೂ ಆ ಪರಿಸ್ಥಿತಿಯಿದೆಯೇ ಎಂದು ನೋಡಿದರೆ ಜನರ ಮನಸ್ಸಿನಲ್ಲಾಗಿರುವ ಬದಲಾವಣೆಗಳು ಗೋಚರವಾಗುತ್ತವೆ. “ಅಣೆಕಟ್ಟೆ ಬರದಿದ್ದರೆ, ಇಷ್ಟು ನೀರಾವರಿ ಇರದಿದ್ದರೆ ಕೆ.ಆರ್.ಪೇಟೆ, ನಾಗಮಂಗಲದ ಮಳೆಯಾಧಾರಿತ ಕೃಷಿಯನ್ನು ನೆಚ್ಚಿಕೊಂಡ ಜನರ ರೀತಿ ಗುಳೆ ಹೋಗಿ ಮತ್ತೊಂದು ಮಗದೊಂದೋ ಕೆಲಸವನ್ನು ಮಾಡಿ ಜೀವನ ಕಟ್ಟುಕೊಳ್ಳುತ್ತಿದ್ದೆವೇನೋ. ಇಷ್ಟೊಂದು ನೀರಾವರಿ ಇರೋ ಜಮೀನಿಗೆ ಅಂಟಿಕೊಂಡು ನಿಂತ ಕಾರಣಕ್ಕೇ ನಾವು ಈ ಕೆಟ್ಟ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದೀವಿ. ಭೂಮಿಯ ಸತ್ವವನ್ನೂ ಈ ನೀರಾವರಿ ಹಾಳು ಮಾಡಿದೆ” ಎಂದಿದ್ದು ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯ ರೈತ ಹರೀಶ್.

ಕಬ್ಬಿನತ್ತ ರೈತರು ವಾಲಿದ್ಯಾಕೆ?:

ನನ್ನ ಸ್ವಂತ ಊರು ಬೆಸಗರಹಳ್ಳಿ ಬಳಿಯ ಕೋಣಸಾಲೆ. ಇಲ್ಲಿಗೂ ಕಾವೇರಿ ನೀರು ಬರುತ್ತದಾದರೂ ನಾಲೆಯ ಕೊನೆಯಲ್ಲಿರುವ ಊರಾದ್ದರಿಂದ ಮದ್ದೂರು ತಾಲ್ಲೂಕಿನವರೆಲ್ಲ ಉಪಯೋಗಿಸಿದ ನಂತರ ಉಳಿದ ನೀರಷ್ಟೇ ಇಲ್ಲಿಗೆ ಬರುತ್ತದೆ. ನನ್ನ ತಂದೆಯವರ ಕಾಲದಲ್ಲಿ ಆಗ ಗದ್ದೆಗಳಲ್ಲಿ ರಾಗಿ ಭತ್ತದಿಂದ ಹಿಡಿದು, ತೊಗರಿ, ಹೆಸರು ಇತರೆ ಕಾಳುಗಳು, ಮನೆಯಳತೆಗೆ ಬೇಕಾದ ಸೊಪ್ಪು – ತರಕಾರಿಗಳನ್ನು ಬೆಳೆದುಕೊಳ್ಳುತ್ತಿದ್ದರಂತೆ. ಈಗ ಬಹುತೇಕ ಕಡೆ ಕಬ್ಬು, ಕೆಲವೆಡೆ ಭತ್ತ, ಹೊಲಗಳಲ್ಲಿ ತೆಂಗಷ್ಟೇ ಕಾಣುವ ಪರಿಸ್ಥಿತಿ. ಮಳೆ ಕಡಿಮೆಯಿದ್ದು, ನೀರಾವರಿ ಇಲ್ಲದ ಪ್ರದೇಶದಲ್ಲಷ್ಟೇ ರಾಗಿ ಸೀಮಿತವಾಗಿಬಡುತ್ತಿದೆ. ಭತ್ತವನ್ನು ಮುಂಚೆ ಹೆಚ್ಚು ಬೆಳೆಯುತ್ತಿದ್ದರಾದರೂ ಈಗ ಕಬ್ಬು ಬೆಳೆಯುವವರೇ ಜಾಸ್ತಿ. ಇದಕ್ಕೆ ಕಾರಣಗಳನ್ನು ಅರಸಿದರೆ ಕಬ್ಬು ಬೆಳೆ ಬೇಡುವ ಶ್ರಮ ಉಳಿದವುಕ್ಕಿಂತಲೂ ಕಡಿಮೆ. ನಗರೀಕರಣ, ಕೆಲಸಕ್ಕಾಗಿ ಓದುವಿಕೆ ಹೆಚ್ಚಾಗುತ್ತಿದ್ದಂತೆ ಶುರುವಾದ ವಲಸೆ ಪ್ರಕ್ರಿಯೆ ರೈತರ ಸಂಖೈಯನ್ನೂ ಕಡಿಮೆಗೊಳಿಸಿತು, ಕೃಷಿ ಕಾರ್ಮಿಕರ ಸಂಖೈಯನ್ನೂ ಕಡಿಮೆ ಮಾಡಿತು. ‘ನಗರೀಕರಣವೇ ನಮ್ಮ ಗುರಿ’ ಎಂದು ಹೇಳುತ್ತಿದ್ದ ಪಿ.ಚಿದಂಬರಂ, ಸ್ಮಾರ್ಟ್ ಸಿಟಿಗಳ ಬಗ್ಗೆಯೇ ಮಾತನಾಡುವ ನರೇಂದ್ರ ಮೋದಿಯಂತವರು ದೇಶ ನಡೆಯುವ ದಿಕ್ಕನ್ನು ನಿರ್ಧರಿಸುವವರಾಗಿರುವಾಗ ವಲಸೆಯನ್ನು ತಪ್ಪೆಂದು ಹೇಳಲಾದೀತೇ? ಹೆಚ್ಚು ಕೆಲಸ ಬೇಡುವ ಫಸಲನಿಂದ ವಿಮುಖನಾಗಿ ಕಬ್ಬಿನಂತಹ ಇದ್ದುದರಲ್ಲಿ ಕಡಿಮೆ ಶ್ರಮ ಬೇಡುವ ಫಸಲಿನೆಡೆಗೆ ರೈತರು ಆಕರ್ಷಿತರಾಗಿದ್ದು ಸರಿಯಾದ ನಿರ್ಧಾರವೂ ಆಗಿತ್ತು, ಕೃಷಿಯನ್ನೇ ಮುಂದುವರಿಸಲು ನಿರ್ಧರಿಸಿದವರಿಗದು ಅನಿವಾರ್ಯವೂ ಆಗಿತ್ತು. ಹೆಚ್ಚುತ್ತಿದ್ದ ಸಕ್ಕರೆ ಕಾರ್ಖಾನೆಗಳು ಹೆಚ್ಚೆಚ್ಚು ಕಬ್ಬು ಬೆಳೆಯುವಂತೆ ಪ್ರೇರೇಪಿಸುತ್ತಿದ್ದವು. ಶ್ರಮಕ್ಕೆ ತಕ್ಕ ಪ್ರತಿಫಲವನ್ನೂ ಕಬ್ಬು ರೈತರಿಗೆ ನೀಡಿತು. ಒಬ್ಬನಿಗೆ ದುಡ್ಡು ಬಂತೆಂದು ಮತ್ತೊಬ್ಬ ಮತ್ತೊಬ್ಬನಿಗೆ ಕಬ್ಬಿನಿಂದ ಹಣ ಬಂತೆಂದು ಇನ್ನೊಬ್ಬ ಕಬ್ಬು ಬೆಳೆಯಲು ಪ್ರಾರಂಭಿಸಿ ಕೊನೆಗೆ ಬೆಳೆದ ರಾಶಿ ರಾಶಿ ಫಸಲನ್ನು ಯಾರೂ ಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ವಿಫಲವಾಗಿದ್ದು ರೈತನಾ? ಕಾರ್ಖಾನೆಗಳಾ? ಅಥವಾ ಮುನ್ಸೂಚನೆಯನ್ನು ಅಂದಾಜು ಮಾಡಿ ರೈತರಿಗೆ ಎಚ್ಚರಿಕೆಯನ್ನು ನೀಡದ ಕೃಷಿ ಇಲಾಖೆಯಾ? 

ಸಾಂದರ್ಭಿಕ ಚಿತ್ರ
ಕಬ್ಬು ಕಾರ್ಖಾನೆಗಳತ್ತ ಕಣ್ಣು ಹಾಯಿಸಿದರೆ ಟನ್ನುಗಟ್ಟಲೇ ಸಕ್ಕರೆ ದಾಸ್ತಾನಾಗಿದೆ. ಪತ್ರಿಕೆಗಳಲ್ಲಿ ಬಂದ ವರದಿಯ ಪ್ರಕಾರ ಕೆಜಿಗೆ ಹತ್ತೊಂಬತ್ತು ರುಪಾಯಿಗಳಿಗೆ ಮಾರುತ್ತೇವೆಂದರೂ ಕೊಳ್ಳಲು ಯಾರು ಮುಂದೆ ಬರಲಿಲ್ಲವಂತೆ. ವ್ಯಾಪಾರಿಗಳು ಕೇಳಿದ್ದು ಹದಿನೇಳು ರುಪಾಯಿಗೆ. ಪ್ರತಿ ಟನ್ನು ಕಬ್ಬಿಗೆ ಎರಡು ಸಾವಿರದಷ್ಟು ಹಣ ನೀಡಿ, ಸಕ್ಕರೆ ತಯಾರಿಸಲು ಮತ್ತೊಂದಷ್ಟನ್ನು ಖರ್ಚು ಮಾಡಿ ಒಂದು ಕೆಜಿ ಸಕ್ಕರೆಯನ್ನು ಹದಿನೇಳು ರುಪಾಯಿಗೆ ಮಾರಿದರೆ ಸಕ್ಕರೆ ಕಾರ್ಖಾನೆಗಳು ನಷ್ಟ ಅನುಭವಿಸುವುದು ಖಚಿತವೆಂದೆನ್ನಿಸುತ್ತದೆ. ಈ ನಷ್ಟದ ಮಧ್ಯೆಯೂ ಬಾಗಲಕೋಟೆ, ಬೆಳಗಾವಿಯಲ್ಲಿ ಹೊಸ ಹೊಸ ಸಕ್ಕರೆ ಕಾರ್ಖಾನೆ ತಲೆಯೆತ್ತುತ್ತಿರುವುದ್ಯಾಕೆ? ಸಕ್ಕರೆ ಮಾಡಿದ ನಂತರ ಉಳಿಯುವ ಮೊಲ್ಯಾಸಸ್, ಅದರಿಂದ ಉತ್ಪತ್ತಿಯಾಗುವ ಸ್ಪಿರಿಟ್ ಸಕ್ಕರೆ ಕಾರ್ಖಾನೆಗಳ ಪ್ರಮುಖ ಆದಾಯ. ಜೊತೆಗೆ ಕೋ-ಜೆನ್ ಮಾಡಿ ವಿದ್ಯುತ್ ಉತ್ಪಾದಿಸಿದರೆ ಮತ್ತಷ್ಟು ಲಾಭ. ಈ ಎಲ್ಲಾ ಲಾಭಗಳ ಲೆಕ್ಕಾಚಾರದಿಂದ ಹೊಸ ಕಾರ್ಖಾನೆಗಳು ತಲೆ ಎತ್ತುತ್ತವೆ. ಕಬ್ಬು ಬೆಳೆಯನ್ನು ವಿಸ್ತರಿಸಲು ಪ್ರೋತ್ಸಾಹಿಸುತ್ತವೆ, ಕೊನಗೆ ಕಟಾವಾದ ಕಬ್ಬಿಗೆ ಬೆಲೆ ಇಲ್ಲವೆಂದು ಹೇಳುತ್ತಾ ಸಕ್ಕರೆಯ ದಾಸ್ತಾನನ್ನು ತೋರಿಸುತ್ತವೆ. ಅಲ್ಲಲ್ಲಿ ಸರಕಾರ ದಾಸ್ತಾನಾದ ಕಬ್ಬನ್ನು ವಶಪಡಿಸಿಕೊಳ್ಳುವ ಕೆಲಸ ಮಾಡಿತಾದರೂ ಸ್ಪಿರಿಟ್ಟಿನಿಂದ ಬಂದ ಆದಾಯವೆಷ್ಟು ಎಂದು ಪರಿಶೀಲಿಸುವಲ್ಲಿ ಎಡವಿದೆ. ಖಾಸಗಿ ಕಾರ್ಖಾನೆಗಳಿಂದ ಹಣವನ್ನು ರೈತರಿಗೆ ಕೊಡಿಸುವಲ್ಲಿ ಸರಕಾರ ಯಾಕೆ ವಿಫಲವಾಗುತ್ತದೆ ಎಂದರೆ ಅನೇಕ ಸಕ್ಕರೆ ಕಾರ್ಖಾನೆಗಳು ಇರುವುದೇ ರಾಜಕಾರಣಿಗಳ ಮಾಲೀಕತ್ವದಲ್ಲಿ. ಈ ರಾಜಕಾರಣಿಗಳು ಆಡಳಿತ, ವಿರೋಧ ಪಕ್ಷಗಳೆಲ್ಲದರಲ್ಲೂ ಇದ್ದಾರೆ. ಅವರಿಗೆ ಅವರೇ ನಷ್ಟ ಮಾಡಿಕೊಳ್ಳುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದರದು ನಂಬುವ ಮಾತಲ್ಲ.

ವಾಣಿಜ್ಯ ಬೆಳೆಗಳಿಂದ ಅಪಾರ ಪ್ರಮಾಣದ ಲಾಭವೂ ಸಿಗುತ್ತದೆ, ಅಷ್ಟೇ ಪ್ರಮಾಣದ ನಷ್ಟವೂ ಆಗುತ್ತದೆ. ಅಡಿಕೆ, ಕಾಫಿ ತೋಟಗಳು, ಕಬ್ಬಿನ ಗದ್ದೆಗಳು ಒಂದಷ್ಟು ವರ್ಷ ನಂಬಲಾರದಷ್ಟು ಲಾಭ ತಂದರೆ ಮತ್ತೊಂದಷ್ಟು ವರ್ಷ ನಂಬಿಕೆ ಬರದಷ್ಟು ನಷ್ಟವನ್ನೂ ಹೊತ್ತು ತರುತ್ತದೆ. ನಷ್ಟವೆಂಬ ಕಾರಣಕ್ಕೆ ಹೊಸ ರೀತಿಯ ಪದ್ಧತಿಗೆ, ಹೊಸ ಬೆಳೆಗೆ, ಬಹುವಿಧ ಬೆಳೆಗೆ ಹೊರಳಿಕೊಳ್ಳುವವರ ಸಂಖೈ ತುಂಬಾನೇ ಕಡಿಮೆ. ಮಂಡ್ಯದಲ್ಲಿ ಕಬ್ಬಿನಿಂದ ಇಷ್ಟೆಲ್ಲಾ ನಷ್ಟವಾಗಿದೆ. ಬೆಳೆದ ಕಬ್ಬನ್ನು ಕಟಾವು ಮಾಡಿಸದೆ ಹಾಗೆಯೇ ಬಿಟ್ಟ ರೈತ, ಸಿಟ್ಟಿನಿಂದ ಇಡೀ ಗದ್ದೆಗೆ ಬೆಂಕಿ ಕೊಟ್ಟ ರೈತರಲ್ಲನೇಕರು ಮುಂದಿನ ಬೆಳೆಯಾಗಿಯೂ ಕಬ್ಬನ್ನೇ ಬಿತ್ತನೆ ಮಾಡಿಸುತ್ತಾರೆ. ಬಹುಶಃ ಮುಂದಿನ ವರುಷ ಮಂಡ್ಯದಲ್ಲಿ ಸಂಚರಿಸಿದರೆ ಕಬ್ಬಿನಿಂದಾದ ನಷ್ಟವನ್ನು ಕಬ್ಬಿನಿಂದಲೇ ಪಡೆಯಬೇಕೆನ್ನುವ ಪರಿಸ್ಥಿತಿಯನ್ನು ಕಾಣಬಹುದೇ ಹೊರತು ಹೊಸತಾಗಿ ಬೇರೇನನ್ನಾದರೂ ಬೆಳೆಯುವ ಕಷ್ಟ ತೆಗೆದುಕೊಳ್ಳುವವರನ್ನು ಕಾಣುವುದು ಕಷ್ಟ. ಕಬ್ಬಿನಿಂದಾದ ನಷ್ಟಕ್ಕೆ ಕಾರ್ಖಾನೆಗಳಷ್ಟೇ ಕಾರಣ ಕೃಷಿ ಕಾರ್ಮಿಕರ ಅಭಾವ. ಕೃಷಿ ಕಾರ್ಮಿಕರ ಕೊರತೆಗೆ ಅನ್ನಭಾಗ್ಯದಂತಹ ಯೋಜನೆಗಳು ಕಾರಣವೆಂದು ಮೇಲ್ನೋಟಕ್ಕೆ ಅನ್ನಿಸಬಹುದಾದರೂ ಈ ಯೋಜನೆಗಳು ಬರುವುದಕ್ಕೆ ಮುಂಚಿತವಾಗಿಯೇ ಕೃಷಿ ಕಾರ್ಮಿಕರ ಸಮಸ್ಯೆಯಿತ್ತು, ಮೈಸೂರು ಭಾಗದಲ್ಲಿ ಈ ಸಮಸ್ಯೆ ಹುಟ್ಟಲು ಬೆಂಗಳೂರು ಮೈಸೂರು ರೈಲೂ ಕಾರಣ! ಮುಂಚೆ ವಲಸೆ ಹಳ್ಳಿಗಳಿಂದ ನಗರಕ್ಕೆ ಸೀಮಿತವಾಗಿತ್ತು, ಈಗದು ನಗರದಿಂದ ದೊಡ್ಡ ನಗರಕ್ಕೂ ವ್ಯಾಪಿಸಿದೆ. ಮಂಡ್ಯ, ಮೈಸೂರು ಜಿಲ್ಲೆಗಳ ಅನೇಕರು (ನನ್ನನ್ನೂ ಸೇರಿಸಿ) ಇವತ್ತು ಬೆಂಗಳೂರು ಸೇರಿದ್ದಾರೆ. ಈ ವಲಸೆ ಪ್ರಕ್ರಿಯೆಯಿಂದ ರೈತರೂ ಹೊರತಾಗಿಲ್ಲ, ಕೃಷಿ ಕಾರ್ಮಿಕರೂ ಹೊರತಾಗಿಲ್ಲ. ಊರಿನಲ್ಲಿ ಬಿಸಿಲಿನಲ್ಲಿ ದುಡಿದು ಮಾಡುವ ಸಂಪಾದನೆಯಷ್ಟನ್ನೇ ನಗರದಲ್ಲಿ ತಂಪಿನಲ್ಲಿ ಮಾಡಬಹುದೆಂಬ ಕಲ್ಪನೆ ಎಂಥವರನ್ನಾದರೂ ಸೆಳೆಯುತ್ತದೆ. ಅತಿ ಕಡಿಮೆ ದರದಲ್ಲಿ ರೈಲು ಪಾಸು ಸಿಗುವಾಗ ಬೆಳಿಗ್ಗೆ ಕೆಲಸಕ್ಕೆ ಬಂದು ಸಂಜೆ ಮತ್ತೆ ಮನೆಗೆ ಮರಳುವ ಅವಕಾಶ ಮಂಡ್ಯ, ಮೈಸೂರಿನ ಜನತೆಗೆ ಇರುವುದು ಇಲ್ಲಿನ ಕೃಷಿ ಕಾರ್ಮಿಕರ ಸಮಸ್ಯೆಗೊಂದು ಕಾರಣ. ಫ್ಯಾನಿನ ಕೆಳಗೆ ಕುಳಿತು ನಾಲ್ಕು ಗೋಡೆಯ ಮಧ್ಯೆಯಿಂದ ಕೂಲಿ ಮಾಡ್ತಿರೋರೆಲ್ಲಾ ಹಳ್ಳಿಗೋಗ್ರಿ, ಅಲ್ಲಿ ಕೆಲಸಕ್ಕೆ ಜನರಿಲ್ಲ ಎನ್ನುವುದು ಕ್ರೌರ್ಯವಷ್ಟೇ. ಹಾಗಾದರೆ ಕಬ್ಬು ಕಟಾವು ಮಾಡಲು ಕೃಷಿ ಕಾರ್ಮಿಕರು ಎಲ್ಲಿಂದ ಬರುತ್ತಿದ್ದರು?

ಸಾಂದರ್ಭಿಕ ಚಿತ್ರ
ಬಿರುಬೇಸಿಗೆಯ ಬಳ್ಳಾರಿಯಿಂದ ಕಟಾವಿನ ಸಮಯಕ್ಕೆ ಸರಿಯಾಗಿ ಕಾರ್ಮಿಕರು ಬರುತ್ತಿದ್ದರು. ನೀರಾವರಿ ಭಾಗದ ರೈತರನ್ನು ಈ ಕೃಷಿ ಕಾರ್ಮಿಕರ ಮುಂದೆ ಸೋಮಾರಿಗಳೆಂದೇ ಹೇಳಬಹುದು. ಆ ಕಾರ್ಮಿಕರ ಶ್ರಮ ದೊಡ್ಡದು. ಒಂದು ಟನ್ ಕಬ್ಬು ಕಟಾವು ಮಾಡಲು ಇನ್ನೂರೈವತ್ತು ರುಪಾಯಿ ನಿಗದಿಯಾಗಿತ್ತು, ಕ್ರಮೇಣ ಅದು ಎಂಟುನೂರರಿಂದ ಸಾವಿರ ರುಪಾಯಿಗೆ ಬಂದು ನಿಂತಿದೆ. ಕೃಷಿ ಕಾರ್ಮಿಕರು ಮತ್ತವರಿಗಿಂತ ಹೆಚ್ಚಾಗಿ ಅವರನ್ನು ಕರೆದುಕೊಂಡು ಬರುವ ಮೇಸ್ತ್ರಿಗಳು ವರುಷದಿಂದ ವರುಷಕ್ಕೆ ಸಿರಿವಂತರಾಗಿದ್ದಾರೆ. ಲಾರಿಗಳನ್ನೂ ಕೊಂಡುಕೊಂಡು ಬಳ್ಳಾರಿಯಿಂದಲೇ ತರುವ ಮೇಸ್ತ್ರಿಗಳೂ ಈಗ ಕಾಣಸಿಗುತ್ತಾರೆ. ದೈಹಿಕ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಅವರು ಪಡೆಯುತ್ತಿದ್ದಾರೆ. ಹಸಿರು ಕ್ರಾಂತಿಯ ದೆಸೆಯಿಂದ ರಸಗೊಬ್ಬರ ಬಳಸದೆ ಬೆಳೆ ಬೆಳೆಯಲಾಗದ ಸಂದರ್ಭದಲ್ಲಿ ಕಬ್ಬು ಬೆಳೆಯುವುದಕ್ಕೂ ಹೆಚ್ಚು ಖರ್ಚು ಮಾಡಿ ಕೃಷಿ ಕಾರ್ಮಿಕರಿಗೂ ಹೆಚ್ಚು ಹಣ ನೀಡಿ ಕೊನೆಗೆ ಕಾರ್ಖಾನೆಗಳಿಂದ, ದಲ್ಲಾಳಿ ನಿಯಂತ್ರಿತ ಮಾರುಕಟ್ಟೆಯಿಂದ ನಷ್ಟವನ್ನನುಭವಿಸಬೇಕಾದ ರೈತ ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆಯ ಮೊರೆಹೋಗದೆ ಬದುಕುವುದೇ ಕಷ್ಟದ ಕೆಲಸವಾಗಿಬಿಟ್ಟಿದೆ.

ಈ ಲೇಖನ ಮೂಡಲು ಹಲವು ವಿಷಯಗಳನ್ನು ವಿಸ್ತಾರವಾಗಿ ತಿಳಿಸಿದ್ದು ಕಳೆದ ಇಪ್ಪತ್ತು ವರುಷಗಳಿಂದ ಇದ್ದುದರಲ್ಲಿ ಹೊಸತೇನನ್ನೋ ಮಾಡುತ್ತಾ ಕೃಷಿ ಮಾಡುತ್ತಿರುವ ಹರಳಹಳ್ಳಿಯ ಹರೀಶ್. ಅವರು ತಿಳಿಸಿದ ಒಂದಷ್ಟು ಅಂಶಗಳನ್ನು ಅವರ ಮಾತುಗಳಲ್ಲೇ ಓದಿಕೊಳ್ಳಿ: “ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ರೈತರೇ ಕಾರಣ ಅನ್ನಿಸುತ್ತೆ. ಇವೊತ್ತು ಯಾವ ರೈತನೂ ರೈತನಾಗಿ ಬದುಕುತ್ತಿಲ್ಲ. ಬದುಕಲು ಇಷ್ಟಪಡುತ್ತಿಲ್ಲ. ಅವರವರ ಗದ್ದೆಗೆ ಹೋಗೋಕೆ ರೈತರೇ ಎಷ್ಟೋ ಕಡೆ ಸಿದ್ಧರಿಲ್ಲ. ಕೂಲಿಗೆ ಬರೋರಿಗೆ ಮನೆಯಿಂದ ಬುತ್ತಿ ಕಟ್ಟಿಸ್ಕೊಂಡು ಹೋಗೋದಕ್ಕೂ ಎಷ್ಟೋ ಜನ ರೆಡಿ ಇಲ್ಲ. ಹೋಟ್ಲಿಂದ ಇಪ್ಪತ್ತು ರುಪಾಯಿಗೆ ಊಟ ಕಟ್ಟುಸ್ಕೊಂಡು ಹೋಗಿ ಕೊಡ್ತಾರೆ. ಹೋಟ್ಲೂಟ ತಿಂದ ಕೆಲಸದೋನು ಹನ್ನೆರಡು ಘಂಟೆಗೆ ಜಾಗ ಖಾಲಿ ಮಾಡ್ತಾನೆ. ಕಬ್ಬು, ಭತ್ತಕ್ಕೆ ಹೊಂದಿಕೊಂಡುಬಿಟ್ಟೋರು ಹೊಸದೇನನ್ನಾದರೂ ಮಾಡೋಣ ಅಂತ ಯೋಚಿಸೋದೆ ಕಮ್ಮಿ. ದೇವ್ರು ನೋಡ್ಕೋತಾನೆ ಅಂತ ಮತ್ತೆ ಕಬ್ಬು ಹಾಕೋರೇ ಜಾಸ್ತಿ. ನಮ್ ಕೃಷಿ ಇಲಾಖೇನೂ ಬಿಟಿ, ಹೈಬ್ರಿಡ್ ಹೈಬ್ರಿಡ್ ಅಂತ ಅದನ್ನೇ ಬೆಳೆಯೋಕೆ ಪ್ರೋತ್ಸಾಹ ಕೊಡ್ತಾರೆ. ಚೂರು ಪಾರು ಭತ್ತ ಬೆಳೀತಿದ್ದೋರು, ರಾಗಿ ಬೆಳೀತಿದ್ದೋರು ಅನ್ನಭಾಗ್ಯ ಬಂದ ಮೇಲೆ ನಿಲ್ಲಿಸಿಬಿಟ್ರು. ರಾಗಿ ಬೆಳೆಯೋ ಹೊಲದಲ್ಲೆಲ್ಲಾ ಸಾಲ ಮಾಡಿ ಬೋರ್ ತೆಗ್ಸಿ ಕಬ್ಬು ಬೆಳೀತಾವ್ರೆ. ಎಲ್ಲಿಂದ ರೇಟ್ ಸಿಗುತ್ತೆ? ಈಗ ಗ್ಯಾಸಿಗೆ ಮಾಡ್ತಿರೋ ಹಾಗೆ ನಾಳೆದಿನ ಸೊಸೈಟೀಲಿ ಅಕ್ಕಿ ಕೊಡಲ್ಲ ಬ್ಯಾಂಕಿಗೆ ದುಡ್ ಹಾಕ್ತೀವಿ, ಅಕ್ಕಿ ತಗೊಳ್ಳಿ ಅಂದ್ರೆ ಇನ್ನೂ ಕಷ್ಟ. ಗೊಬ್ಬರಕ್ಕೆ ಕೊಡೋ ಸಬ್ಸಿಡಿ ನಿಧಾನಕ್ಕೆ ನಿಂತೋಗ್ತಿದೆ. ಮುನ್ನೂರು ರುಪಾಯಿ ಇದ್ದ ಗೊಬ್ರ ಈಗ ಒಂದೂಕಾಲು ಸಾವಿರ. ಅದರ ಸಬ್ಸೀಡೀನೂ ಬ್ಯಾಂಕಿಗೇ ಹಾಕ್ತಾರಂತೆ. ಕೊಂಡ್ಕೊಳ್ಳೋಕೆ ಮತ್ತೆ ಸಾಲ ಮಾಡ್ಬೇಕು, ಬ್ಯಾಂಕಿಗೆ ಯಾವಾಗ ಹಾಕ್ತಾರೆ ಗೊತ್ತಿಲ್ಲ. ಶೋಕಿಗಾಗಿ ಸಾಲ ಮಾಡೋದು ಹೆಚ್ಚಾಗ್ತಾ ಇದೆ. ಅವರಿವರದ್ದು ಬೇಡ ನನ್ದೇ ಉದಾಹರಣೆ ಹೇಳಿದ್ರೆ ಹಳೇ ಮನೆ ಚೆನ್ನಾಗೇ ಇತ್ತು. ರಿಪೇರಿ ಮಾಡ್ಸಿ ಗ್ರಾನೈಟು, ಮಾರ್ಬೆಲ್ಲು ಹಾಕ್ಸೋದು ಬೇಕಿರಲಿಲ್ಲ. ಕಬ್ಬು ದುಡ್ಡು ಬರುತ್ತಲ್ಲ ಅಂತ ಎರಡು ವರ್ಷದ ಹಿಂದೆ ಅಡ ಇಟ್ಟು ಸಾಲ ಮಾಡಿ ಮನೆಕೆಲಸ ಮಾಡಿಸ್ದೆ. ಕಬ್ಬಿನ ರೇಟು ಬಿತ್ತು, ಸಾಲ ಇನ್ನೂ ಇದೆ. ಯಾವ ಹಳ್ಳಿಯ ಯಾವ ಮನೆಗೆ ಹೋದ್ರೂ ಐದು ಟಚ್ ಸ್ಕ್ರೀನ್ ಮೊಬೈಲು. ತಿಂಗ್ಳು ತಿಂಗ್ಳು ಅದಕ್ಕೆ ಸಾವಿರದವರೆಗೆ ಖರ್ಚು. ಹತ್ತದಿನೈದು ವರುಷದ ಹಿಂದಕ್ಕೆ ಹೋಲಿಸಿದರೆ ತಿಥಿ, ಬೀಗರೂಟ, ಮದುವೆ ಆಡಂಬರ ಈಗಲೇ ಜಾಸ್ತಿ. ಕಬ್ಬು ಬೆಳೆದೋರಿಗೆಲ್ಲಾ ನಷ್ಟವಾಗಿ ಇಷ್ಟೊಂದು ಜನ ಸತ್ತರಲ್ಲ ನಮ್ಮಲ್ಲೇನು ತಿಥಿ, ಬೀಗರೂಟ ನಿಂತೋಗಿದೆಯಾ? ಜೋರಾಗೇ ನಡೀತಿದೆ. ನಮ್ ಮೋದಿ ಪ್ರಧಾನಿ ಥರ ಇರ್ದೆ ಒಂದು ಮಲ್ಟಿನ್ಯಾಷನಲ್ ಕಂಪನಿ ಸಿ.ಇ.ಒ ಥರ ಮಾತಾಡ್ತಾರೆ. ಯಾವ ದೇಶಕ್ಕೆ ಹೋದ್ರೂ ನಮ್ಮಲ್ಲಿ ಬಂದು ದುಡ್ಡು ಹಾಕಿ ದುಡ್ಡು ಹಾಕಿ ಅಂತಾರೆ. ಚೈನಾದಿಂದ ರೇಷ್ಮೆ ಬಂದು ನಮ್ ರೇಷ್ಮೆ ಮಾರ್ಕೆಟ್ಟೇ ಬಿದ್ದೋಯ್ತು. ಇನ್ನು ಬೇರೆ ಕಡೆ ದುಡ್ಡೆಲ್ಲಾ ಬಂದ್ರೆ ಇಲ್ಲೇನುಳಿಯುತ್ತೆ? ಇದೇ ವ್ಯವಸ್ಥೆ ಮುಂದುವರೆದ್ರೆ ಇದೇ ಮೋದಿ ಗವರ್ನ್ ಮೆಂಟ್ ತರಬೇಕು ಅಂತಿದ್ದ ಭೂಮಸೂದೇನಾ ಯಾವ್ಯಾವ ರೈತರು ವಿರೋಧಿಸಿದ್ರೋ ಅವರೇ ನಾಳೆ ದಿನ ನನ್ ಜಮೀನ್ ತಗೊಳ್ಳಿ ನನ್ ಜಮೀನ್ ತಗೊಳ್ಳಿ ಅಂತ ಮೋದಿ ಹಿಂದೆ ಬಿಳ್ತಾರೆ. ಆ ದಿನ ಬರ್ಲಿ ಅಂತಾನೇ ಹಿಂಗೆಲ್ಲಾ ಮಾಡ್ತಾರೋ ಏನೋ? ಇದೆಲ್ಲದರ ಜೊತೆಗೆ ರೈತ ಸತ್ತಾಗ ಪಾರ್ಟಿಗಳೆಲ್ಲ ಬಂದು 25 ಸಾವಿರ, ಐವತ್ತು ಸಾವಿರ ಅಂತ ದುಡ್ಡು ಕೊಡೋದು ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದೆ. ಒಬ್ಬ ರೈತ ಸತ್ರೆ ಮತ್ತೊಬ್ಬ ರೈತ ಬರೋದು ಸರಿ. ಈ ಪಾರ್ಟಿಗಳೆಲ್ಲ ಯಾಕೆ ಬಂದು ದುಡ್ಡು ಕೊಡಬೇಕು. ನಾನು ಸತ್ತರೆ ಮನೆಯವರಿಗಾದರೂ ನೆಮ್ಮದಿ ಸಿಗುತ್ತೆ ಅನ್ನೋ ಭಾವನೇಲಿ ಸೂಸೈಡ್ ಮಾಡ್ಕೊಳ‍್ಳೋರು ಇರ್ತಾರೆ. ಆ ಟಿವಿಯವ್ರು ಜೋರು ದನೀಲಿ ಇವತ್ತು ಇಷ್ಟು ರೈತ್ರು ಸತ್ರು ಅನ್ನೋದೂ ನಿಲ್ಬೇಕು. ಒಟ್ನಲ್ಲಿ ಇಡೀ ವ್ಯವಸ್ಥೆಯಲ್ಲೇ ತಪ್ಪಿದೆ. ಯಾರನ್ನ ದೂಷಿಸೋದೋ ಗೊತ್ತಿಲ್ಲ”

ನನ್ನನೇಕ ಪ್ರಶ್ನೆಗಳಿಗೆ ಉತ್ತರ ನೀಡುತ್ತಲೇ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟಿಹಾಕಿಸಿದ ಮಾತುಗಳಿವು. ಹೆಚ್ಚೇನು ಬರೆಯಲು ಉಳಿದಿಲ್ಲ.

ಆಗ 20, 2015

ಲಜ್ಜೆಗೆಡುವುದರಲ್ಲಿ ಎಲ್ಲರೂ ಮುಂದು....

ಬಿಬಿಎಂಪಿ ಚುನಾವಣಾ ಪ್ರಣಾಳಿಕೆಯನ್ನು ಕಾಂಗ್ರೆಸ್ ಪಕ್ಷ ಕನ್ನಡ, ಇಂಗ್ಲೀಷಿನ ಜೊತೆಗೆ ತೆಲುಗು, ತಮಿಳು, ಉರ್ದು ಭಾಷೆಯಲ್ಲಿಯೂ ಪ್ರಕಟಿಸಿ ಮತಗಳಿಕೆಗಾಗಿ ಕನ್ನಡತನವನ್ನು ಕೊಲ್ಲುವುದಕ್ಕೆ ತಾನು ಹಿಂಜರಿಯುವುದಿಲ್ಲ ಎಂದು ತೋರಿಸಿತ್ತು. 

ಲಜ್ಜೆಗೆಟ್ಟ ಕಾಂಗ್ರೆಸ್ಸಿನಿಂದ ಪಂಚ ಭಾಷಾ ಪ್ರಣಾಳಿಕೆ.


ಉಳಿದೆರಡು ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಂಚ ಭಾಷಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರಲಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವ ವೇಳೆಗೆ ನಾ ಮುಂದು ತಾ ಮುಂದು ಎಂಬಂತೆ So Called ರಾಷ್ಟ್ರೀಯ ಪಕ್ಷಗಳು ತಮಿಳು ಭಾಷೆಯ ಕರಪತ್ರವನ್ನು ಹಂಚುತ್ತಿವೆ. ಕರ್ನಾಟಕದ ನಾಯಕ ಶಿರೋಮಣಿಗಳಾದ ದೇವೇಗೌಡ, ಕುಮಾರಸ್ವಾಮಿ, ಸಿದ್ಧರಾಮಯ್ಯ, ಪರಮೇಶ್ವರ್, ಅನಂತಕುಮಾರ್, ಯಡಿಯೂರಪ್ಪ, ಸದಾನಂದಗೌಡ ಮುಂತಾದವರು ತಮಿಳು ಭಾಷಾ ಕರಪತ್ರದಲ್ಲಿ ಮಿಂಚುತ್ತಿರುವ ಪರಿಯನ್ನು ಆನಂದಿಸಿ ತಣ್ಣಗೆ ಒಂದು ಲೋಟ ನೀರು ಕುಡ್ಕೊಳ್ಳಿ....
BJP tamil bbmp

Congress Tamil BBMP

JDS Tamil BBMP

ಆಗ 11, 2015

ಲಜ್ಜೆಗೆಟ್ಟ ಕಾಂಗ್ರೆಸ್ಸಿನಿಂದ ಪಂಚ ಭಾಷಾ ಪ್ರಣಾಳಿಕೆ.

Dr Ashok K R
ಬಿಬಿಎಂಪಿ ಚುನಾವಣೆಯನ್ನು ಮುಂದಕ್ಕಾಕುವ ಸರಕಾರದ ಎಲ್ಲಾ ಪ್ರಯತ್ನಗಳನ್ನೂ ನ್ಯಾಯಾಲಯಗಳು ತಳ್ಳಿಹಾಕಿದ ಪರಿಣಾಮವಾಗಿ ಈ ತಿಂಗಳಾಂತ್ಯದಲ್ಲಿ ಚುನಾವಣೆ ಘೋಷಣೆಯಾಗಿದೆ. ಪಕ್ಷಗಳ ರಾಜಕೀಯ ಚಟುವಟಿಕೆಯೂ ಹೆಚ್ಚಾಗಿದೆ. ನಿನ್ನೆ ಕಾಂಗ್ರೆಸ್ ಪಕ್ಷವು ಬಿಬಿಎಂಪಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಬಿಬಿಎಂಪಿಯನ್ನು ಮೂರಾಗಿ ಐದಾಗಿ ವಿಭಜಿಸಲು ವಿಪರೀತವಾಗಿ ಪ್ರಯತ್ನಪಟ್ಟು ಸದ್ಯಕ್ಕೆ ವಿಫಲವಾಗಿರುವ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯನ್ನು ಕನ್ನಡ, ಇಂಗ್ಲೀಷ್, ಉರ್ದು, ತಮಿಳು, ತೆಲುಗು ಭಾಷೆಗಳಲ್ಲಿ ಪ್ರಕಟಮಾಡಿ ವೋಟುಗಳಿಗೋಸ್ಕರ ಬೆಂಗಳೂರಿನಲ್ಲಿ ಕನ್ನಡವನ್ನು ಇಲ್ಲವಾಗಿಸುವುದಕ್ಕೂ ತಾನು ಹೇಸುವುದಿಲ್ಲ ಎಂದು ತೋರಿಸಿಕೊಟ್ಟಿದೆ. ಸಾಮಾನ್ಯವಾಗಿ ಪ್ರಣಾಳಿಕೆಯನ್ನು ಕನ್ನಡದಲ್ಲಿ ಮತ್ತು ನಮಗೆ ಬೇಕೋ ಬೇಡವೋ ಅನಿವಾರ್ಯವಾಗಿಬಿಟ್ಟಿರುವ ಇಂಗ್ಲೀಷಿನಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಸಿಲಿಕಾನ್ ವ್ಯಾಲಿ ಎಂದು ಹೆಸರು ಗಳಿಸಿಕೊಂಡ ಕರ್ನಾಟಕದಲ್ಲಿ ಅನ್ಯಭಾಷಿಕರ ಸಂಖೈ ಹೆಚ್ಚುತ್ತಲೇ ಇರುವುದು ಸತ್ಯ. ಜೊತೆಗೆ ಬೆಂಗಳೂರು ತಮಿಳುನಾಡು ಮತ್ತು ಆಂಧ್ರ ಗಡಿಗಳಿಗೆ ಹೊಂದಿಕೊಂಡಂತೆಯೇ ಇರುವುದರಿಂದ ಸಹಜವಾಗಿ ಅನೇಕ ಪ್ರದೇಶಗಳಲ್ಲಿ ತೆಲುಗು ಮತ್ತು ತಮಿಳು ಭಾಷಿಕರು ನೆಲೆಸಿದ್ದಾರೆ. ಅನ್ಯ ರಾಜ್ಯಗಳಿಂದ ಬಂದವರು ಕನ್ನಡ ಕಲಿಯುವಂತೆ ಪ್ರೇರೇಪಿಸಬೇಕಾದ ಕರ್ನಾಟಕ ಸರಕಾರ ಅವರ ವೋಟುಗಳನ್ನು ಪಡೆಯಲೋಸುಗ ಅವರ ಭಾಷೆಯಲ್ಲಿಯೇ ಪ್ರಣಾಳಿಕೆ ಬಿಡುಗಡೆ ಮಾಡುವಂತಹ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿರುವುದು ಸರಿಯೇ? 
ಆಂಧ್ರದ ಒವೈಸಿ, ಚಂದ್ರಬಾಬು ನಾಯ್ಡು ತಮಿಳುನಾಡಿನ ಜಯಲಲಿತಾ ತಮ್ಮ ತಮ್ಮ ಪಕ್ಷವನ್ನು ಬಿಬಿಎಂಪಿ ಚುನಾವಣೆಗೆ ಅಣಿಗೊಳಿಸುತ್ತಿದೆಯಂತೆ ಎಂಬ ಸುದ್ದಿಗಳು ಕಾಂಗ್ರೆಸ್ಸಿನ ಈ ನಿರ್ಧಾರಕ್ಕೆ ಕಾರಣವಾಯಿತಾ? ಕನ್ನಡಿಗರ ರಾಷ್ಟ್ರೀಯ ಪಕ್ಷಗಳ ಮೇಲಿನ ಪ್ರೇಮದಿಂದ ಹಿಂದಿ ಹೇರಿಕೆಯೆಂಬುದು ನಿರಂತರವಾಗಿಬಿಟ್ಟಿದೆ. ಈಗ ಬೆಂಗಳೂರಿನಲ್ಲಿ ಅನ್ಯಭಾಷಾ ಪ್ರಣಾಳಿಕೆಯನ್ನು ಕಣ್ಣು ಕಣ್ಣು ಬಿಟ್ಟು ನೋಡುವ ಸರದಿ ಬೆಂಗಳೂರಿಗರದು. ಬಿಬಿಎಂಪಿ ವಿಭಜನೆಯಾಗುವ ಮುನ್ನವೇ ಭಾಷಾ ವಿರೋಧಿಯಾಗಿ ವರ್ತಿಸುತ್ತಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಪ್ಪಿತಪ್ಪಿ 'ಆಡಳಿತದ' ಹೆಸರಿನಲ್ಲಿ ಬಿಬಿಎಂಪಿಯನ್ನು ವಿಭಜನಗೊಳಿಸಿಬಿಟ್ಟರೆ ಯಾವ ರೀತಿ ವರ್ತಿಸಬಹುದು? ತೆಲುಗು ಭಾಷಿಕರು ಹೆಚ್ಚಿರುವ ಪ್ರದೇಶದಲ್ಲಿ ಕೇವಲ ತೆಲುಗು ಪ್ರಣಾಳಿಕೆ, ತಮಿಳರು ಹೆಚ್ಚಿರುವ ಕಡೆ ತಮಿಳು ಪ್ರಣಾಳಿಕೆ, ಉರ್ದು ಭಾಷಿಕರಿರುವ ಕಡೆ (ಇಲ್ಲಿರುವ ಮುಸ್ಲಿಮರು ಮಾತನಾಡುವುದು ಉರ್ದುವಾ?) ಉರ್ದು ಪ್ರಣಾಳಿಕೆಯನ್ನಷ್ಟೇ ಪ್ರಕಟಿಸಿ ಕನ್ನಡವನ್ನೇ ಮೂಲೆಗುಂಪು ಮಾಡಿಬಿಡುವ ದಿನಗಳು ದೂರವಿಲ್ಲ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಮರಾಠಿ ಪಕ್ಷಗಳು ನಗರಸಭೆಗಳಲ್ಲಿ ನಿರ್ಣಯ ತೆಗೆದುಕೊಂಡಂತೆ ಮುಂದೊಂದು ದಿನ ಬೆಂಗಳೂರಿನ ಈ ಭಾಗವನ್ನು ಆಂಧ್ರಕ್ಕೆ ತಮಿಳುನಾಡಿಗೆ ಸೇರಿಸಿಬಿಡಿ ಎಂಬ ನಿರ್ಣಯಗಳೂ ಕೇಳಿ ಬರಬಹುದು. 
ಒಟ್ಟಿನಲ್ಲಿ ಕನ್ನಡ, ಕರ್ನಾಟಕ ಎಂದು ಎದೆತಟ್ಟಿ ಹೇಳುತ್ತಾ ದೇಶವನ್ನೇ ಎದುರುಹಾಕಿಕೊಳ್ಳುವ ಪಕ್ಷವೊಂದು ಕರ್ನಾಟಕದಲ್ಲಿ ಇಲ್ಲದ ಫಲಗಳನ್ನು ನಾವೀಗ ನೋಡುತ್ತಿದ್ದೇವೆ. ದೇಶ ಮೊದಲು ಎಂಬ 'ವಿಶಾಲ ಮನೋಭಾವವನ್ನು' ತೊರೆದು ರಾಜ್ಯ ಮೊದಲು ಭಾಷೆ ಮೊದಲು ಎಂಬ 'ಸಂಕುಚಿತ ಮನೋಭಾವವನ್ನು' ಬೆಳೆಸಿಕೊಳ್ಳದಿದ್ದರೆ ಈ ರಾಜಕಾರಣಿಗಳ ಸೋಗಲಾಡಿತನದಿಂದ ಕನ್ನಡಕ್ಕೆ ಚೇತರಿಸಿಕೊಳ್ಳಲಾಗದ ಪೆಟ್ಟು ಬೀಳುತ್ತದೆ.

ಜುಲೈ 14, 2015

ಭೈರಪ್ಪನವರ ಜಾಣ್ಮೆಗೆ ಉಘೇ ಎನ್ನುತ್ತ…

Ashok K R
ನೀವೇನೇ ಹೇಳಿ ಈ ಬಲಪಂಥೀಯರ ಚಾಣಾಕ್ಷತನ ಎಡಪಂಥೀಯರಿಗೆ, ನಡುಪಂಥೀಯರಿಗೆ, ಅಪಂಥೀಯರಿಗೆ ಇಲ್ಲವೇ ಇಲ್ಲ! ಇದು ಮತ್ತೆ ಅರಿವಾಗಿದ್ದು ಎಸ್.ಎಸ್.ಭೈರಪ್ಪನವರು ಕಳೆದ ವಾರ ಪತ್ರಿಕೆಗಳಿಗೆ ಬರೆದ ದೀರ್ಘ ಪತ್ರ ಓದಿದ ಮೇಲೆ. ಅನ್ನಭಾಗ್ಯ ವಿರೋಧಿಸಿ ಅವರು ಹಿಂದೊಮ್ಮೆ ನೀಡಿದ್ದ ಹೇಳಿಕೆ ಅನೇಕ ಚರ್ಚೆಗಳಿಗೆ ನಾಂದಿ ಹಾಡಿತ್ತು. ಆ ವಿರೋಧಿ ಹೇಳಿಕೆಗಳಿಗೆ ಉತ್ತರವಾಗಿ ಭೈರಪ್ಪನವರು ಈ ಪತ್ರವನ್ನು ಬರೆದಿದ್ದಾರೆ. ಆ ಪತ್ರ ಯಥಾವತ್ತಾಗಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಮತ್ತೊಂದು ಸುತ್ತಿನ ಚರ್ಚೆಯನ್ನಾರಂಭಿಸಿದೆ. It is one of the most beautifully ‘crafted’ letter that I have read in recent times! ಸತ್ಯ, ಅರೆ ಸತ್ಯ, ಸುಳ್ಳುಗಳೆಲ್ಲವನ್ನೂ ಮಿಳಿತವಾಗಿಸಿ ಬರೆದಿರುವ ‘ಸತ್ಯವೆಂದೇ’ ತೋರುವ ಪತ್ರವದು.

ಪತ್ರದ ಪ್ರಾರಂಭದಲ್ಲಿಯೇ ಇಡೀ ಪ್ರಕರಣವನ್ನು ಪತ್ರಕರ್ತರ ತಲೆಗೆ ಕಟ್ಟಿಬಿಡುತ್ತಾರೆ! ನನ್ನ ಆಸಕ್ತಿಯೇನಿದ್ದರೂ ಸಾಹಿತ್ಯ, ರಾಜಕೀಯವಲ್ಲ; ಪತ್ರಕರ್ತರೇ ಬಲವಂತ ಮಾಡಿದ್ದರಿಂದ ಸಿದ್ಧರಾಮಯ್ಯ ಸರಕಾರದ ಕಾರ್ಯವೈಖರಿಯ ಬಗ್ಗೆ ಮಾತನಾಡಿದೆ. ಇಲ್ಲವಾದರೆ ರಾಜಕೀಯದಿಂದ ದೂರ ಎನ್ನುತ್ತಾರೆ. ಇದೇ ಭೈರಪ್ಪನವರೇ ಅಲ್ಲವೇ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮೋದಿಯವರ ಪರ ಮಾತನಾಡಿದ್ದು? ಅದೂ ಕೂಡ ರಾಜಕೀಯದ ಒಂದು ಭಾಗವಲ್ಲವೇ? ಸಾಹಿತಿಯೊಬ್ಬರು ರಾಜಕೀಯದ ಬಗೆಗಿನ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಸಮಾಜದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೇ. ಅದನ್ನು ಕದ್ದು ಮುಚ್ಚಿ ಮಾಡುವ ಅಗತ್ಯವೇನಿಲ್ಲ. ಸಿದ್ಧರಾಮಯ್ಯ ಸರಕಾರ ಕಳೆದೆರಡು ವರುಷದಿಂದ ಉದ್ಯೋಗ ಸೃಷ್ಟಿಸುವ ಕೆಲಸವನ್ನೇ ಮಾಡಿಲ್ಲ ಎಂದೇಳುತ್ತಾ ಹ್ಯುಂಡಾಯ್ ಕಂಪನಿ (ಅಸಲಿಗದು ಹೋಂಡಾ ಕಂಪನಿಯಾಗಬೇಕಿತ್ತು. ಎರಡು ಪತ್ರಿಕೆಗಳಲ್ಲಿ ಹ್ಯುಂಡಾಯ್ ಎಂದು ಪ್ರಕಟವಾಗಿದೆ, ಒಂದರಲ್ಲಿ ಹೋಂಡಾ ಎಂದು ಬರೆದಿದೆ. ತಪ್ಪು ಭೈರಪ್ಪನವರದೋ ಪತ್ರಿಕೆಯವರದೋ ತಿಳಿದಿಲ್ಲ) ಕರ್ನಾಟಕದಿಂದ ಆಂಧ್ರಕ್ಕೆ ವಲಸೆ ಹೋಗಿದ್ದನ್ನು ನೆನಪಿಸುತ್ತಾರೆ. ಅದಕ್ಕೆ ಸಿದ್ಧರಾಮಯ್ಯ ಸರಕಾರವನ್ನು ಹೊಣೆಯಾಗಿಸುತ್ತಾರೆ. ಕರ್ನಾಟಕ ಕೊಡುವುದಾಗಿ ಹೇಳಿದ ಸೌಕರ್ಯಕ್ಕಿಂತ ಹೆಚ್ಚಿನ ಸೌಕರ್ಯ ಸೀಮಾಂಧ್ರ ಘೋಷಿಸಿತ್ತು, ಕಾರಣ ಹೊಸದಾಗಿ ರಚನೆಯಾದ ರಾಜ್ಯಕ್ಕೆ ಉದ್ದಿಮೆಗಳ ಅಗತ್ಯವಿದೆಯೆಂದು ಅಲ್ಲಿನ ಚಂದ್ರಬಾಬು ನಾಯ್ಡು ನಂಬಿದ್ದಾರೆ. ಆ ಕಾರಣದಿಂದ ಆ ಕಂಪನಿ ವಲಸೆ ಹೋಗಿದೆಯೇ ಹೊರತು ಕರ್ನಾಟಕ ಯಾವ ಸೌಲಭ್ಯವನ್ನೂ ಕೊಡಲಿಲ್ಲ ಎಂಬುದಕ್ಕಾಗಿಯಲ್ಲ. ಏನೇ ಕಾರಣ ನೀಡಿದರೂ ಇದು ಸಿದ್ಧರಾಮಯ್ಯ ಸರಕಾರದ ವೈಫಲ್ಯವೇ ಹೌದು. ಒಂದು ದೊಡ್ಡ ಉದ್ದಿಮೆಯಿಂದ ಏನೆಲ್ಲ ಅನುಕೂಲಗಳಾಗುತ್ತವೆ ಎಂಬ ಸಾಮಾನ್ಯ ವಿಷಯವನ್ನು ತಿಳಿಸುತ್ತಾರೆ ಭೈರಪ್ಪ. ಸಕಾರಾತ್ಮಕ ಅಂಶಗಳ ಕಡೆಗಷ್ಟೇ ಗಮನ ಸೆಳೆಯುತ್ತಾರೆ. 

ಭೈರಪ್ಪನವರು ಬಿಜೆಪಿಯ ಬೆಂಬಲಿಗರು. ಆದರೆ ಪತ್ರದಲ್ಲಿ ಬಿಜೆಪಿಯ ಬಗ್ಗೆ, ಅದರ ನಾಯಕರ ಬಗ್ಗೆ ಏನನ್ನೂ ಬರೆಯದೆ ರಾಜಕೀಯ ವಿರೋಧದ ಲೇಖನವಲ್ಲ ಇದು ಎಂಬ ಭಾವನೆ ಮೂಡಿಸುತ್ತಾರೆ. ಸಿದ್ಧರಾಮಯ್ಯನವರನ್ನು ಟೀಕಿಸಲು ಅವರು ಕಾಂಗ್ರೆಸ್ಸಿನವರೇ ಆದ ಎಸ್.ಎಂ.ಕೃಷ್ಣರನ್ನು ಹೊಗಳಲಾರಂಭಿಸುತ್ತಾರೆ. ರಾಜಧಾನಿಯನ್ನು ಸಿಲಿಕಾನ್ ವ್ಯಾಲಿಯಾಗಿ ಮಾಡಿದ್ದರ ಬಗ್ಗೆ, ಎಲೆಕ್ಟ್ರಾನಿಕ್ ಸಿಟಿ ಮಾಡಿದ್ದರ ಬಗ್ಗೆ ಹೊಗಳುತ್ತಾರೆ. ಬೆಂಗಳೂರು ದೇಶದ ಐಟಿ ರಾಜಧಾನಿಯಾಗಿದ್ದ ಕಾರಣಕ್ಕಾಗಿ ಲಕ್ಷಾಂತರ ಉದ್ಯೋಗ ಸೃಷ್ಟಿಯಾಯಿತು. ಅದರಲ್ಲಿ ಎರಡು ಮಾತಿಲ್ಲ. ಎಲ್ಲ ಐಟಿ ಕಂಪನಿಗಳೂ ಬೆಂಗಳೂರಲ್ಲೇ ಠಿಕಾಣಿ ಹೂಡಿದ್ದಕ್ಕಾಗಿ ಬೆಂಗಳೂರಿನ ಪರಿಸರದ ಮೇಲೆ ಸಂಸ್ಕೃತಿ ಮೇಲಾಗಿರುವ ಹಾನಿಯ ಬಗ್ಗೆ ಮಾತ್ರ ಬರೆಯುವುದಿಲ್ಲ! ಪ್ರವಾಸಿ ತಾಣವಾಗಬೇಕಿದ್ದ ಬೆಂಗಳೂರೆಂಬ ಸುಂದರ ನಗರವನ್ನು ನಾವೆಲ್ಲರೂ ಗುಳೇ ಬಂದು ಹಾಳು ಮಾಡಿರುವುದು, ಹಸಿರ ನಗರಿಯನ್ನು ಕೆಂಪಾಗಿರಿಸಿರುವುದಕ್ಕೂ ಈ ಐಟಿಯೇ ಕಾರಣ ಎಂಬುದನ್ನು ಮರೆಯುತ್ತಾರೆ. ಎಸ್.ಎಂ.ಕೃಷ್ಣರವರು ಜಾತಿ ರಾಜಕೀಯ ಮಾಡಲೇ ಇಲ್ಲ, ಅವರೊಬ್ಬ ಮೇಧಾವಿ ರಾಜಕಾರಣಿ ಎಂದು ಭೈರಪ್ಪನಂತಹ ಹಿರಿಯರು ಬರೆಯುತ್ತಾರೆ ಎಂದರೆ ಅದಕ್ಕೇನನ್ನೋಣ? ಯಾವ ಎಸ್.ಎಂ.ಕೃಷ್ಣರವರನ್ನು ಇವರು ಭಯಂಕರವಾಗಿ ಹೊಗಳುತ್ತಿದ್ದಾರೋ ಅದೇ ಎಸ್.ಎಂ.ಕೃಷ್ಣ ಅಧಿಕಾರವಧಿ ಮುಗಿದ ಮೇಲೆ ಮದ್ದೂರಿನಲ್ಲಿ ಚುನಾವಣೆಗೆ ನಿಲ್ಲಲು ಭಯಪಟ್ಟು ಬೆಂಗಳೂರಿನಲ್ಲಿ ನಿಂತಿದ್ದಕ್ಕೆ ಕಾರಣವೇನು? ಅಭಿವೃದ್ಧಿ ಎಂದರೆ ಎಲ್ಲರನ್ನೂ ಒಳಗೊಳ್ಳಬೇಕು, ಒಂದು ಪ್ರದೇಶಕ್ಕೆ ಸೀಮಿತವಾಗಬಾರದು ಎಂಬ ಅಂಶವನ್ನು ಕಾಂಗ್ರೆಸ್ಸನ್ನು ಸೋಲಿಸುವ ಮೂಲಕ ಜನರು ತಿಳಿಸಿಕೊಟ್ಟರು. ಪಕ್ಕದ ಆಂಧ್ರದಲ್ಲೂ ಹೈದರಾಬಾದ್ ಅಭಿವೃದ್ಧಿಗಷ್ಟೇ ಒತ್ತು ಕೊಟ್ಟ ಚಂದ್ರಬಾಬು ನಾಯ್ಡುರವರನ್ನೂ ಜನರು ಸೋಲಿಸಿದರು. ಎಸ್.ಎಂ.ಕೃಷ್ಣರವರನ್ನು ಹೊಗಳುವ ಮೂಲಕ ನಾನು ಕಾಂಗ್ರೆಸ್ ವಿರೋಧಿಯಲ್ಲ ಎಂಬ ಪ್ರಭೆಯನ್ನು ಬೆಳೆಸಿದ ಭೈರಪ್ಪನವರು ನಂತರ ತಮ್ಮ ಬಲಪಂಥೀಯತೆಯ ಹಾದಿಗೆ ಹೊರಳುತ್ತಾರೆ.

ಬಲಪಂಥೀಯರ ಗುಣಲಕ್ಷಣವೆಂದರೆ ಮೊದಲು ಒಂದು ದೊಡ್ಡ ಭೂತವನ್ನು ಸೃಷ್ಟಿಸುತ್ತಾರೆ. ಭಾರತದಲ್ಲಿ ಹಿಂದೂ ಬಲಪಂಥೀಯರು ಸೃಷ್ಟಿಸಿರುವ ದೊಡ್ಡ ಭೂತವೆಂದರೆ ಮುಸ್ಲಿಂ ವಿರೋಧ. ಅದೇ ಹಾದಿಯಲ್ಲಿ ಸಾಗುವ ಭೈರಪ್ಪನವರ ಪತ್ರ ಮೊದಲಿಗೆ ಮುಸ್ಲಿಮರಿಗೆ ಸೀಮಿತವಾಗಿದ್ದ ಶಾದಿ ಭಾಗ್ಯದ ಬಗ್ಗೆ ಬರೆಯುತ್ತಾರೆ. ಬಲಪಂಥೀಯರೋ ಅಲ್ಲವೋ ಅನೇಕ ಹಿಂದೂಗಳ ಮನಸ್ಸಿನಲ್ಲಿ ಮುಸ್ಲಿಂ ದ್ವೇಷವೆಂಬುದು ರವಷ್ಟಾದರೂ ಇದ್ದೇ ಇದೆ. ಅಂಥವರನ್ನು ಸೆಳೆಯಲು ಶಾದಿಭಾಗ್ಯದ ವಿರೋಧಿ ಹೇಳಿಕೆ ಸಾಕು. ನಂತರದ ವಾಕ್ಯದಲ್ಲಿ ಅಹಿಂದ ವರ್ಗದ ವಿರುದ್ಧ ಬರೆಯುತ್ತಾರೆ. ಯೋಜನೆಯ ಹಂತದಲ್ಲಿದ್ದ , ವಿರೋಧದಿಂದಾಗಿ ನಿಂತುಹೋದ ಅಹಿಂದ ಮಕ್ಕಳ ಪ್ರವಾಸದ ಬಗ್ಗೆ ಬರೆದು ಇನ್ನಿತರೆ ಹಿಂದೂ ಓದುಗರನ್ನು ಸೆಳೆದುಬಿಡುತ್ತಾರೆ! ಒಮ್ಮೆ ಸೆಳೆದುಕೊಂಡರೆಂದರೆ ನಂತರ ಹೇಳಿದ್ದೆಲ್ಲವೂ ಸತ್ಯವೆಂದೇ ತೋರುತ್ತದೆ! ಈ ಎರಡು ಉದಾಹರಣೆಗಳನ್ನು ಅವರು ನೀಡಿರುವುದು ಆ ಯೋಜನೆಗಳು ತಪ್ಪೆಂಬ ಭಾವನೆಗಿಂತ ಹೆಚ್ಚಾಗಿ ಸಿದ್ಧರಾಮಯ್ಯನವರು ಮುಸ್ಲಿಮರನ್ನು ಓಲೈಸುವ ರಾಜಕಾರಣ ಮಾಡುತ್ತಾರೆ, ಅವರು ಅಹಿಂದ ವರ್ಗಕ್ಕಷ್ಟೇ ಸೀಮಿತ ಎಂಬುದನ್ನು ನಿರೂಪಿಸುವುದಕ್ಕಾಗಿ. ‘ಅವರು ಜಾರಿಗೊಳಿಸಿದ ಅನ್ನಭಾಗ್ಯ ಯೋಜನೆಯನ್ನು ಈ ಹಿನ್ನೆಲೆಯಲ್ಲಿ ನೋಡಬೇಕು’ ಎಂಬ ಭೈರಪ್ಪನವರ ಮಾತು ಅವರ ಉದಾಹರಣೆಗಳ ಸತ್ಯದರ್ಶನ ಮಾಡಿಸುತ್ತದೆ. ಎಸ್.ಎಂ.ಕೃಷ್ಣರವರು ಜಾತಿ ರಾಜಕಾರಣ ಮಾಡಲಿಲ್ಲ ಎನ್ನುವ ಭೈರಪ್ಪನವರಿಗೆ ಈ ಅನ್ನಭಾಗ್ಯ ಯೋಜನೆ ಜಾತಿ ಧರ್ಮಗಳ ಎಲ್ಲೆ ಮೀರಿದ್ದು ಎಂಬುದು ತಿಳಿದಿದೆ. ಅಹಿಂದ ನಾಯಕನೊಬ್ಬ ಎಲ್ಲರಿಗೂ ಉಪಯೋಗವಾಗುವಂತಹ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಓದುಗರಿಗೆ ಅನ್ನಿಸಿಬಿಟ್ಟರೆ ಎಂಬ ಆತಂಕದಿಂದ, ಬುದ್ಧಿವಂತಿಕೆಯಿಂದ ‘ಶಾದಿಭಾಗ್ಯ’ ‘ಅಹಿಂದ ಪ್ರವಾಸ’ದ ಉದಾಹರಣೆಯನ್ನು ನೀಡುತ್ತಾರೆ. ನಂತರ ಅನ್ನಭಾಗ್ಯ ಯೋಜನೆಗಿಂತ ಉದ್ಯೋಗ, ಶಿಕ್ಷಣ ನೀಡುವ ಯೋಜನೆಗಳು ಬರಬೇಕು, ಜನರನ್ನು ಸೋಮಾರಿಗಳನ್ನಾಗಿಸುವ ಕೆಲಸಗಳು ನಡೆಯಬಾರದು ಎಂದು ಹಿಂದೆ ನೀಡಿದ್ದ ಹೇಳಿಕೆಗಳ ಬಗ್ಗೆ ಬರೆಯುತ್ತಾರೆ. 

ಆ ಹೇಳಿಕೆಗೆ ಉತ್ತರವೆಂಬಂತೆ ಬರೆದಿದ್ದ ‘ಅನ್ನವೆಂಬ ಭಾಗ್ಯವೂ ಮನುಜನೆಂಬ ಆಲಸಿಯೂ’ ಲೇಖನದಲ್ಲಿ ಅನ್ನಭಾಗ್ಯ ಯೋಜನೆ ಯಾಕೆ ಅವಶ್ಯಕ ಎಂಬುದನ್ನು ವಿವರಿಸಿದ್ದೆ. ಅನ್ನಭಾಗ್ಯ ಯೋಜನೆಯ ಜೊತೆಜೊತೆಗೇ ಕೆಲಸ ಸೃಷ್ಟಿಸುವ ಯೋಜನೆಗಳೂ ಅವಶ್ಯಕವೇ ಹೊರತು ಅನ್ನಭಾಗ್ಯ ಯೋಜನೆ ತಪ್ಪಲ್ಲ.

ಪತ್ರದ ಮುಂದಿನ ಭಾಗದಲ್ಲಿ ಅನ್ನಭಾಗ್ಯದ ದುಷ್ಪರಿಣಾಮದ ಬಗ್ಗೆ ಉದಾಹರಣೆ ಕೊಡುತ್ತಾ ತಮ್ಮ ಮನೆ ಹತ್ತಿರದ ಹೇರ್ ಕಟಿಂಗ್ ಸೆಲೂನಿನ ಬಗ್ಗೆ ಬರೆಯುತ್ತಾರೆ. ಇಲ್ಲಿ ಅನ್ನಭಾಗ್ಯದ ದುಷ್ಪರಿಣಾಮದ ಬಗ್ಗೆ ತಮ್ಮ ಅಭಿಪ್ರಾಯವನ್ನು ಗಟ್ಟಿಗೊಳಿಸುವುದಕ್ಕಿಂತ ಸೋಷಿಯಲಿಸಂ ಅನ್ನು ಹೀಗಳೆಯುವ ಉತ್ಸಾಹವೇ ಹೆಚ್ಚು ಕಾಣುತ್ತದೆ! ಬಡವನಾಗಿದ್ದ ಸೋಷಿಯಲಿಷ್ಟ್ ಚಿಂತನೆಯ ಮಾಲೀಕ, ಸಾಲ ಸೋಲ ಮಾಡಿ ಕನ್ನಡಿಗಳನ್ನೆಲ್ಲ ಹಾಕಿ ಝಗಮಗಿಸುವ ದೊಡ್ಡ ಅಂಗಡಿ ಮಾಡಿ ಹುಡುಗರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ. ಅವರೇ ಬರೆಯುವ ಹಾಗೆ ಪ್ರತೀ ಹುಡುಗನೂ ಅರ್ಧದಷ್ಟು ದುಡ್ಡನ್ನು ಮಾಲೀಕನಿಗೆ ನೀಡುತ್ತಿದ್ದರು. ಅದನ್ನು ಕೊಟ್ಟ ನಂತರವೂ ಇನ್ನೂರೈವತ್ತು ಮುನ್ನೂರು ರುಪಾಯಿ ದುಡಿಯುತ್ತಿದ್ದರು. ಮಾಲೀಕರು ಕೆಲಸ ಮಾಡುತ್ತಿದ್ದರು. ಅನ್ನಭಾಗ್ಯ ಯೋಜನೆ ಬಂದ ನಂತರ ಹುಡುಗರು ವಾರಕ್ಕೆ ಎರಡು ಮೂರು ದಿನವಷ್ಟೇ ಬರುತ್ತಾರಂತೆ! ತಿನ್ನಲು ದುಡಿಯಬೇಕಾದ ಅಗತ್ಯವಿಲ್ಲ ಎನ್ನುತ್ತಾರಂತೆ. ಸೋಷಿಯಲಿಷ್ಟ್ ಮಾಲೀಕರು ಅನ್ನಭಾಗ್ಯ ಯೋಜನೆಯನ್ನು ಬಯ್ಯುತ್ತಿದ್ದಾರಂತೆ! ಮನುಷ್ಯ ದುಡಿಯುವುದು ತಿನ್ನುವುದಕ್ಕೆ ಮಾತ್ರವಾ ಎಂಬ ಪ್ರಶ್ನೆ ಮೂಡುತ್ತದೆ. ಇತ್ತೀಚೆಗೆ ಭೈರಪ್ಪನವರನ್ನು ರಾಷ್ಟ್ರೀಯ ಪ್ರೊಫೆಸರ್ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಭೈರಪ್ಪನವರಿಗೆ ಈ ಸ್ಥಾನ ಸಿಕ್ಕಿರುವುದು ಲಾಬಿಯ ಸಂಕೇತ ಎಂದು ಮಾತನಾಡಬೇಡಿ; ದೇಶಭಕ್ತರಿಗೆ ಕೋಪ ಬಂದೀತು. ಆ ಸ್ಥಾನದಲ್ಲಿ ದಿನನಿತ್ಯದ ಕೆಲಸವೇನಿರುವುದಿಲ್ಲ, ಸಂಬಳ ಎಪ್ಪತ್ತು ಸಾವಿರದಷ್ಟಿರುತ್ತದೆ. ತುಂಬಾ ಕೆಲಸ ಮಾಡದೆ ಅಷ್ಟು ದುಡ್ಡು ಭೈರಪ್ಪನವರಿಗೆ ಸಿಗುತ್ತಿರುವಾಗ ಅವರು ಭಯಂಕರ ಸೋಮಾರಿಗಳಾಗಿ ಹಾಸಿಗೆ ಬಿಟ್ಟೇಳದೆ ಇರಬೇಕಿತ್ತಲ್ಲವೇ? ಅವರ್ಯಾಕೆ ಇನ್ನೂ ಇಂಥ ಪತ್ರ ಬರೆಯುತ್ತಾ, ಅನೇಕ ಸಮಾರಂಭಗಳಲ್ಲಿ ಭಾಗವಹಿಸುತ್ತಾ, ಚರ್ಚಿಸುತ್ತಾ ಚಟುವಟಿಕೆಯಿಂದಿದ್ದಾರೆ? ಮನುಷ್ಯನ ದುಡಿಮೆ ತಿನ್ನುವುದಕ್ಕೆ ಮಾತ್ರ ಸೀಮಿತವಲ್ಲ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೆ. ತಿಂಗಳಿಗೆ ಐದು ಕೆಜಿ ಅಕ್ಕಿ ಉಚಿತವಾಗಿ ಸಿಗುವ ಕಾರಣಕ್ಕೆ ಜನರು ಸೋಮಾರಿಗಳಾಗಿಬಿಡುವ ಹಾಗಿದ್ದರೆ ಅನಿಲ ಭಾಗ್ಯ, ಪೆಟ್ರೋಲ್ ಭಾಗ್ಯ, ಡೀಸೆಲ್ ಭಾಗ್ಯ, ಟ್ಯಾಕ್ಸ್ ಭಾಗ್ಯ ಪಡೆಯುವ ಮಧ್ಯಮವರ್ಗಗಳೆಲ್ಲ ಸೋಮಾರಿಗಳಾಗಿ ಎಷ್ಟೋ ವರುಷಗಳಾಗಿರಬೇಕಿತ್ತು. ತಿನ್ನುವುದರ ಹೊರತಾಗಿ ಮನುಷ್ಯನಿಗೆ ಬೇರೆ ಖರ್ಚೇ ಇರುವುದಿಲ್ಲ ಎಂಬ ಭಾವನೆ ಪುಸ್ತಕಗಳಿಗೆ, ಸುತ್ತಾಟಕ್ಕೆ ಸಾವಿರಾರು ರುಪಾಯಿಗಳನ್ನು ಖರ್ಚು ಮಾಡುವ ಸಾಹಿತಿಯೊಬ್ಬರಿಗೆ ಮೂಡಿರುವುದು ಅಚ್ಚರಿ ಮೂಡಿಸುತ್ತದೆ. 

ಮೈಸೂರಿನ ಹೇರ್ ಕಟಿಂಗ್ ಸಲೂನಿನಿಂದ ಇದ್ದಕ್ಕಿದ್ದಂತೆ ಅಮೆರಿಕಾದ ಗ್ರೇಟ್ ಡಿಪ್ರೆಷನ್ ಕಡೆಗೆ ನಡೆದುಬಿಡುತ್ತಾರೆ ಭೈರಪ್ಪನವರು. ಭಾರತಕ್ಕೂ, ಅಮೆರಿಕಾಕ್ಕೂ ಸ್ಥಳದಲ್ಲಿ, ಜನರ ಸಂಖೈಯಲ್ಲಿ, ಪೌಷ್ಟಿಕತೆಯಲ್ಲಿ ಇರುವ ಅಪಾರ ವ್ಯತ್ಯಾಸವನ್ನು ಗುರುತಿಸುವ ಗೋಜಿಗೆ ಹೋಗದೆ ರೂಸ್ ವೆಲ್ಟ್ ಮಾಡಿದ್ದೇ ಸರಿ ಎಂದುಬಿಡುತ್ತಾರೆ. ವಿಪರ್ಯಾಸ ನೋಡಿ ಭಾರತೀಯ ಸಂಸ್ಕೃತಿ, ಭಾರತೀಯ ಪರಂಪರೆ ಎಂದು ಇರುವುದಕ್ಕಿಂತಲೂ ಹೆಚ್ಚು ವೈಭವೀಕರಿಸುತ್ತಾ ಉಳಿದೆಲ್ಲವನ್ನೂ ಹೀಗಳೆಯುವ ಸಂಸ್ಕೃತಿಗೆ ಸೇರಿರುವ ಭೈರಪ್ಪನವರು ಕೊನೆಗೆ ಅಮೆರಿಕಾದ ಉದಾಹರಣೆ ನೀಡುತ್ತಾರೆ! ಅಮೆರಿಕಾದ ಸಂಸ್ಕೃತಿಯನ್ನು ಹೀಗಳೆಯುವವರೂ ಇವರೇ ಎನ್ನುವುದನ್ನು ತಮ್ಮ ಪದಪುಂಜದಿಂದ ಮರೆಸಿಬಿಡುತ್ತಾರೆ. ಐಟಿಯನ್ನು ಹೊಗಳುತ್ತಾರೆ, ಬೆಂಗಳೂರು ಸಿಲಿಕಾನ್ ವ್ಯಾಲಿ ಆಗಿರುವುದರ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ, ಕೊನೆಗೆ ತಮ್ಮ ಕಾದಂಬರಿಗಳಲ್ಲಿ ಪದೇ ಪದೇ ಓದಿದ ಜನರಿಂದಾಗುವ ಸಂಸ್ಕೃತಿ ನಾಶದ ಬಗ್ಗೆ ಭಾವನಾತ್ಮಕವಾಗಿ ಬರೆದು ಹೆಸರು ಮಾಡುತ್ತಾರೆ! ಪಶ್ಚಿಮದ್ದೆಲ್ಲವೂ ಬೇಕು, ಆದರೆ ಸಂಸ್ಕೃತಿ ಮಾತ್ರ ಭಾರತೀಯದ್ದೇ ಆಗಿರಬೇಕು ಎಂದರದು ಸಾಧ್ಯವೇ? 

ಭೈರಪ್ಪನವರ ಪತ್ರದಲ್ಲಿ ಅನೇಕ ಒಪ್ಪಿತ ಅಂಶಗಳಿವೆ. ಉದ್ಯೋಗ ಸೃಷ್ಟಿ, ಕೊಳ್ಳುವ ಸಾಮರ್ಥ್ಯದ ಹೆಚ್ಚಳವೆಲ್ಲವೂ ಅಗತ್ಯವಾಗಿ ಎಲ್ಲಾ ಸರಕಾರಗಳು ದೂರದೃಷ್ಟಿಯಿಟ್ಟು ಮಾಡಲೇಬೇಕಾಗಿರುವ ಕೆಲಸ. ಬೇಸರದ ಸಂಗತಿಯೆಂದರೆ ಈಗಿರುವ ಎಲ್ಲಾ ಪಕ್ಷಗಳು ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಷ್ಟೇ ಕೆಲಸ ಮಾಡುತ್ತವೆ. ಭೈರಪ್ಪನವರು ಜಾಣ್ಮೆ ಚಾಣಾಕ್ಷತನವನ್ನು ಬದಿಗಿಟ್ಟು ಟೀಕಿಸುವ ಮನಸ್ಸು ಮಾಡಿದ್ದರೆ ಸಿದ್ಧರಾಮಯ್ಯನವರ ಸರಕಾರದ ಕಾರ್ಯವೈಖರಿಯನ್ನು ಟೀಕಿಸುವುದಕ್ಕೆ ಬೇಕಾದಷ್ಟು ವಿಷಯಗಳಿತ್ತು. ಕಳೆದೆರಡು ತಿಂಗಳಿನಿಂದ ನಲವತ್ತರಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದಷ್ಟೇ ಸಾಲದೆ ಈಗಿರುವ ಸರಕಾರದ ನಿಷ್ಕ್ರಿಯತೆಯನ್ನು ತೋರಿಸಲು. ಮುಸ್ಲಿಂ ದ್ವೇಷ, ಅಹಿಂದದೆಡೆಗೆ ಅಸಹನೆಗಳನ್ನೆಲ್ಲಾ ಸೇರಿಸಿಬಿಟ್ಟರೆ ಲೇಖನವನ್ನು ಮತ್ತು ಲೇಖಕರನ್ನು ಇಷ್ಟ ಪಡುವ ಜನರ ಸಂಖೈಯನ್ನು ಹೆಚ್ಚಿಸಿಕೊಳ್ಳಬಹುದೇ ಹೊರತು ಲೇಖನದಿಂದೇನೂ ಪರಿಣಾಮವಾಗುವುದಿಲ್ಲ.

ತಮ್ಮ ಬಗ್ಗೆ, ಬಾಲ್ಯದಲ್ಲಿ ಅವರು ಮಾಡಿದ ವಾರಾನ್ನದ ಬಗ್ಗೆ ವೈಯಕ್ತಿಕ ಟೀಕೆ ಮಾಡಿದ್ದು ಭೈರಪ್ಪನವರಿಗೆ ಬೇಸರ ಮೂಡಿಸಿದೆ. ಅದರ ಬಗ್ಗೆ ನನ್ನದೂ ಸಹಮತವಿದೆ. ಟೀಕೆಗಳು ವೈಯಕ್ತಿಕವಾಗಿಬಿಟ್ಟಾಗ ವಿಷಯ ಮರೆತುಹೋಗುತ್ತದೆ. ತಮಾಷೆ ಎಂದರೆ ವೈಯಕ್ತಿಕ ಟೀಕೆ ತಪ್ಪು ಎನ್ನುವ ಭೈರಪ್ಪನವರು ಅದೇ ಓಘದಲ್ಲಿ ತಮ್ಮನ್ನು ಟೀಕಿಸಿದವರನ್ನೆಲ್ಲಾ ‘ಆಳುವ ಧಣಿಗಳ ಬಂಟರು’ ಎಂದುಬಿಡುತ್ತಾರೆ. ಇದೂ ವೈಯಕ್ತಿಕ ಟೀಕೆಯೇ ಅಲ್ಲವೇ! 

ಎಲ್ಲದಕ್ಕಿಂತ ಅಚ್ಚರಿ ಮೂಡಿಸಿದ್ದು ‘ನಾನು ಚಿಕ್ಕಮಗಳೂರಿನಲ್ಲಿ ಆಡಿದ್ದು ಗಂಭೀರವಾದ ವಿಷಯ. ಇದನ್ನು ದೇಶದ ಆರ್ಥಿಕ ತಜ್ಞರು ವಿಶ್ಲೇಷಿಸಬೇಕಾಗಿತ್ತು’ ಎಂಬ ಅವರ ಸಾಲು! ಇಂತಹ ಗಂಭೀರವಾದ ವಿಷಯದ ಬಗ್ಗೆ ಮಾತನಾಡಿರುವ ಭೈರಪ್ಪನವರು ಆರ್ಥಿಕ ತಜ್ಞರೇ?
ಭೈರಪ್ಪನವರ ಪತ್ರ ಮೂಲ: ವಿಜಯಕರ್ನಾಟಕ

ಜೂನ್ 18, 2015

ಅನ್ನವೆಂಬ "ಭಾಗ್ಯ"ವೂ ಮನುಜನೆಂಬ "ಆಲಸಿ"ಯೂ

annabhagya
Dr Ashok K R
ಸಿದ್ಧರಾಮಯ್ಯ ಸರಕಾರದ ಅನ್ನಭಾಗ್ಯ ಯೋಜನೆ ಮತ್ತೆ ಚರ್ಚೆಯ ವಿಷಯವಾಗಿದೆ. ಕಾರಣ ಎಸ್.ಎಲ್.ಭೈರಪ್ಪ, ಕುಂ.ವೀರಭದ್ರಪ್ಪ ಮತ್ತು ದೇಜಗೌ ಅದನ್ನು ವಿರೋಧಿಸುವ ಮಾತುಗಳನ್ನಾಡಿದ್ದಾರೆ. ಭೈರಪ್ಪನವರು ಅನ್ನಭಾಗ್ಯ ಸೋಮಾರಿಗಳನ್ನು ಹುಟ್ಟುಹಾಕುತ್ತಿದೆ, ಇದು ದೇಶ ನಾಶದ ಕೆಲಸ ಎಂದು ಗುಡುಗಿರುವ ಬಗ್ಗೆ ವರದಿಗಳು ಬಂದಿವೆ. ಇಲ್ಲಿ ಮೇಲೆ ಹೆಸರಿಸಿರುವ ಲೇಖಕರು ನಿಮಿತ್ತ ಮಾತ್ರ. ಅನ್ನಭಾಗ್ಯವೆಂಬುದು ಸೋಮಾರಿಗಳನ್ನು ತಯಾರಿಸುವ ಯೋಜನೆ ಎಂಬ ಭಾವನೆ ಅನೇಕರಲ್ಲಿದೆ. ಜನರ ದಿನವಹೀ ಮಾತುಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಸಿದ್ಧು ಸರಕಾರದ ಈ ಯೋಜನೆ ಟೀಕೆಗೆ ಗ್ರಾಸವಾಗಿದೆ. ಮತ್ತೀ ಟೀಕೆಯನ್ನು ಮಾಡುತ್ತಿರುವವರ ಆರ್ಥಿಕ ಸ್ಥಿತಿಗತಿಗಳನ್ನು ಗಮನಿಸಿದರೆ ಹೆಚ್ಚಿನಂಶ ಅವರು ಮಧ್ಯಮವರ್ಗದವರೇ ಆಗಿರುತ್ತಾರೆ. ಕೆಳ ಮಧ್ಯಮವರ್ಗದಿಂದ ಉಚ್ಛ ಮಧ್ಯಮವರ್ಗದೆಡೆಗೆ ಸಾಗುತ್ತಿರುವವರು, ಮಧ್ಯಮವರ್ಗದಿಂದ ಶ್ರೀಮಂತ ವರ್ಗಕ್ಕೆ ಸಾಗುತ್ತಿರುವವರ ಸಂಖೈ ಈ ಟೀಕಾಕಾರರಲ್ಲಿ ಹೆಚ್ಚಿದೆ.. ಈ ಅನ್ನಭಾಗ್ಯ ಯೋಜನೆ ನಿಜಕ್ಕೂ ಇಷ್ಟೊಂದು ಟೀಕೆಗೆ ಅರ್ಹವೇ?

ಮೊದಲಿಗೆ ಈ ಯೋಜನೆಗೆ ಇಟ್ಟ ಹೆಸರು ಟೀಕೆಗೆ ಅರ್ಹ. ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಆಹಾರವಿಲ್ಲದೆ ಕಂಗೆಟ್ಟು ಪ್ರಾಣಿ / ಮನುಷ್ಯ ಹಸಿವಿನಿಂದ ಸಾಯುವುದು ಪ್ರಕೃತಿ ರೂಪಿಸಿದ ಜನಸಂಖ್ಯಾ ನಿಯಂತ್ರಣ ನಿಯಮ. ಮಾನವ ಪ್ರಕೃತಿಯಿಂದ ದೂರ ಸರಿದು, ಪ್ರಕೃತಿಯೊಡ್ಡಿದ ಸವಾಲುಗಳನ್ನು ಎದುರಿಸಲಾರಂಭಿಸಿದ. ಬಹಳಷ್ಟು ಬಾರಿ ಸೋತ, ಕೆಲವೊಮ್ಮೆ ಗೆದ್ದ. ಇದಕ್ಕಿಂತಲೂ ಹೆಚ್ಚಾಗಿ Survival of the fittest ಎಂಬ ಪ್ರಕೃತಿಯ ನಿಯಮವನ್ನು ಮೀರುವುದಕ್ಕಾಗಿ ಮಾನವೀಯತೆಯ ಮೊರೆಹೊಕ್ಕ. ಈ ಮಾನವೀಯತೆಯ ಕಾರಣದಿಂದಲೇ ಅಲ್ಲವೇ ಅನ್ಯ ಮನುಷ್ಯನೊಬ್ಬ ಹಸಿವಿನಿಂದ ಸತ್ತರೆ, ಆಹಾರ ಸಿಗದೆ ಸತ್ತರೆ ‘ಕರುಳು ಚುರುಕ್’ ಎನ್ನುವುದು? ಮನುಷ್ಯ ನಿರ್ಮಿತ ಗಡಿಗಳು ದೇಶವನ್ನು ರಚಿಸಿ, ದೇಶದೊಳಗೊಂದಷ್ಟು ರಾಜ್ಯಗಳನ್ನು ಸೃಷ್ಟಿಸಿ ಮನುಷ್ಯನ ಸ್ವೇಚ್ಛೆಗಳಿಗೆ ಕಡಿವಾಣ ವಿಧಿಸಲು ಸಮಾಜ – ಸರಕಾರಗಳೆಲ್ಲ ರಚಿತವಾದ ನಂತರ ಸರಕಾರದ ಭಾಗವಾಗಿರುವ ಮನುಷ್ಯರಿಗೂ ಒಂದಷ್ಟು ಮಾನವೀಯತೆ ಇರಬೇಕೆಂದು ನಿರೀಕ್ಷಿಸಬಹುದು. ನೆರೆಯವನೊಬ್ಬ ಹಸಿವಿನಿಂದ ಸತ್ತಂತಾದರೆ ಅದರ ಹೊಣೆ ಸರಕಾರದ್ದಾಗುತ್ತದೆ. ಪ್ರಜೆಗಳ ಅಪೌಷ್ಟಿಕತೆಯನ್ನು, ಹಸಿವನ್ನು ಹೋಗಲಾಡಿಸುವುದು ಸರಕಾರದ ಆದ್ಯ ಕರ್ತವ್ಯವಾಗುತ್ತದೆ. ಇಷ್ಟೆಲ್ಲ ಯೋಚಿಸಿ ಯೋಜನೆಗಳನ್ನು ಸರಕಾರಗಳು ರೂಪಿಸುವುದು ಅಪರೂಪ, ರಾಜಕಾರಣಿಗಳ ಮುಖ್ಯ ದೃಷ್ಟಿ ಮುಂದಿನ ಚುನಾವಣೆಯಲ್ಲಿ ಒಂದಷ್ಟು ಹೆಚ್ಚಿನ ಮತಗಳು ಬೀಳಲು ಈ ಯೋಜನೆಯಿಂದ ಸಹಾಯವಾಗುತ್ತದಾ ಎನ್ನುವುದೇ ಆಗಿದೆ. ಓಟಿಗಾಗಿ ರಾಜಕೀಯ ಮಾಡುವುದು ತಪ್ಪೆಂದು ತೋರುತ್ತದಾದರೂ ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಯ ಗುರಿಯೇ ಚುನಾವಣೆಯಲ್ಲಿ ಗೆಲ್ಲುವುದಾಗಿರುವಾಗ ಅವರು ಮಾಡುವ ಪ್ರತೀ ಕೆಲಸವೂ ಮತಬ್ಯಾಂಕಿಗಾಗಿ ಅಲ್ಲವೇ? ಕೆಟ್ಟದು ಮಾಡಿಯೂ ಓಟುಗಳನ್ನು ಹೆಚ್ಚಿಸಿಕೊಳ್ಳಬಹುದು, ಒಳ್ಳೆಯದನ್ನು ಮಾಡಿಯೂ ಹೆಚ್ಚಿಸಿಕೊಳ್ಳಬಹುದು, ಆಯ್ಕೆ ಅವರವರಿಗೆ ಬಿಟ್ಟಿದ್ದು. ಅಪೌಷ್ಟಿಕತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬಿ.ಪಿ.ಎಲ್ ಕಾರ್ಡುದಾರರಿಗೆ ಉಚಿತ / ಅತಿ ಕಡಿಮೆ ದರಕ್ಕೆ ಅಕ್ಕಿ, ಬೇಳೆ, ಜೋಳ, ರಾಗಿ ನೀಡುವುದು ಒಪ್ಪತಕ್ಕ ವಿಚಾರವಾದರೂ ಅದಕ್ಕೆ ‘ಭಾಗ್ಯ’ ಎಂದು ಹೆಸರಿಸುವ ಅನಿವಾರ್ಯತೆ ಏನಿದೆ? ಅಪೌಷ್ಟಿಕತೆ ಹೋಗಲಾಡಿಸುವುದು ಸರಕಾರದ ಕರ್ತವ್ಯ ಮತ್ತು ಪೌಷ್ಟಿಕ ಆಹಾರವನ್ನು ಬಯಸುವುದು ಪ್ರತಿಯೊಬ್ಬ ನಾಗರೀಕನ ಹಕ್ಕು. ‘ಭಾಗ್ಯ’ ಎಂದು ಹೆಸರಿಡುವಲ್ಲಿ ವರ್ಗ ತಾರತಮ್ಯದ ದರುಶನವಾಗುತ್ತದೆ. ಸಬ್ಸಿಡಿ ಇರುವ ಗ್ಯಾಸ್ ಸಿಲಿಂಡರಿಗೆ ಅನಿಲ ಭಾಗ್ಯ ಎಂಬ ಹೆಸರಿದೆಯೇ? ಮಧ್ಯಮವರ್ಗದವರು ಪಡೆದುಕೊಳ್ಳುವ ಸೌಲತ್ತುಗಳಿಗೆ ಇಲ್ಲದ ‘ಭಾಗ್ಯ’ವೆಂಬ ನಾಮಧೇಯ ಬಡವರ ಯೋಜನೆಗಳಿಗೆ ಮಾತ್ರ ಇರುವುದ್ಯಾಕೆ? ನಮ್ಮ ಕೃಪೆಯಿಂದ ನೀವು ಬದುಕಿದ್ದೀರಿ ಎಂಬ ದಾರ್ಷ್ಟ್ಯವಿಲ್ಲದೆ ಹೋದರೆ ಈ ರೀತಿಯ ಹೆಸರಿಡಲು ಸಾಧ್ಯವೇ?

ಹೆಸರಿನಲ್ಲೇನಿದೆ ಬಿಡಿ ಎನ್ನುತ್ತೀರೇನೋ! ಸರಕಾರದ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುವವರು ಆ ವಿರೋಧಕ್ಕೆ ಸಮರ್ಥನೆಯಾಗಿ ಈ ಅಂಶಗಳನ್ನು ಪಟ್ಟಿ ಮಾಡುತ್ತಾರೆ.

1. ಉಚಿತವಾಗಿ ಅಕ್ಕಿ ನೀಡುವುದರಿಂದ ಜನರ (ಅರ್ಥಾತ್ ಬಡಜನರ) ಹೊಟ್ಟೆ ತುಂಬಿ ಅವರು ಕೆಲಸ ಕಾರ್ಯ ಮಾಡದೇ ಸೋಮಾರಿಗಳಾಗಿಬಿಡುತ್ತಾರೆ. 

2. ಉಚಿತ ಅಕ್ಕಿ ಪಡೆದುಕೊಂಡ ಜನರು ಅದನ್ನು ಕಾಳಸಂತೆಯಲ್ಲಿ ಕೆಜಿಗೆ ಹತ್ತು ರುಪಾಯಿಯಂತೆಯೋ ಹದಿನೈದು ರುಪಾಯಿಯಂತೆಯೋ ಮಾರಾಟ ಮಾಡಿಬಿಡುತ್ತಾರೆ. ತೆರಿಗೆ ಕಟ್ಟುವ ನಮ್ಮ ಹಣದಿಂದ ಸರಕಾರ ನೀಡುವ ಅಕ್ಕಿಯನ್ನು ಮಾರಿ ‘ಶೋಕಿ’ ಮಾಡುತ್ತಾರೆ. 

3. ಬಿಪಿಎಲ್ ಕಾರ್ಡುದಾರರೆಲ್ಲರೂ ಬಡವರಲ್ಲ, ನಕಲಿ ಕಾರ್ಡುದಾರರಿಗೂ ಉಚಿತವಾಗಿ ಅಕ್ಕಿ ತಲುಪಿ ಸರಕಾರದ ಅಂದರೆ ನಮ್ಮ (ಮಧ್ಯಮ ಮತ್ತು ಶ್ರೀಮಂತ ವರ್ಗದ) ಹಣ ಪೋಲಾಗುತ್ತಿದೆ.

4. ಸರಕಾರದ ಈ ಯೋಜನೆಗಳಿಂದ ಹಳ್ಳಿಗಳಲ್ಲಿ ಕೂಲಿ ಕೆಲಸಕ್ಕೆ ಜನರೇ ಸಿಗುತ್ತಿಲ್ಲ.

5. ಸರಕಾರ ಜನರಿಗೆ ಕೆಲಸ ಕೊಡುವ ಕಾರ್ಯನೀತಿ ರೂಪಿಸಬೇಕೆ ಹೊರತು ಜನರನ್ನು ಸೋಮಾರಿಗಳನ್ನಾಗಿ ಮಾಡಬಾರದು.

ಈ ಮಧ್ಯಮವರ್ಗದವರ ಮನಸ್ಥಿತಿ ಮತ್ತವರನ್ನು ಪ್ರೇರೇಪಿಸುವವರ ಮಾತುಗಳು ಕರ್ಣಾನಂದಕರವಾಗಿರುತ್ತವೆ. ಮೇಲ್ನೋಟಕ್ಕೆ ಹೌದಲ್ಲವೇ? ಇದೇ ಸತ್ಯವಲ್ಲವೇ ಎಂಬ ಭಾವನೆ ಮೂಡಿಸುವಂತಿರುತ್ತವೆ. ಮೇಲಿನ ಐದಂಶಗಳನ್ನು ಗಮನಿಸಿದರೆ ಸತ್ಯವೆಂದೇ ತೋರುತ್ತದೆಯಲ್ಲವೇ? ಕಾಳಸಂತೆಯಲ್ಲಿ ಅನ್ನಭಾಗ್ಯದ ಅಕ್ಕಿ ಮಾರಾಟವಾಗುತ್ತಿರುವುದು, ನಕಲಿ ಬಿಪಿಎಲ್ ಕಾರ್ಡುದಾರರ ಸಂಖೈ ಅಧಿಕವಾಗಿರುವುದು, ಹಳ್ಳಿಗಳಲ್ಲಿ ಕೂಲಿ ಕೆಲಸಕ್ಕೆ ಜನರು ಸಿಗದಿರುವುದು, ಸರಕಾರ ಜನರ ಕೈಗಳಿಗೆ ಕೆಲಸ ಕೊಡುವ ನೀತಿ ರೂಪಿಸಬೇಕೆನ್ನುವುದು ಸತ್ಯವೇ ಅಲ್ಲವೇ? ಆದರದು ಸಂಪೂರ್ಣ ಸತ್ಯವೇ ಎನ್ನುವುದನ್ನು ಪರಿಶೀಲಿಸುವವರ ಸಂಖೈ ತುಂಬಾನೇ ಕಡಿಮೆ.

ಅಪೌಷ್ಟಿಕತೆಯ ಪಟ್ಟಿಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಮತ್ತೇನೂ ಬೇಡ, ಆಸ್ಪತ್ರೆಗಳಲ್ಲಿ ಗರ್ಭಿಣಿ ಹೆಂಗಸರ ಮತ್ತು ಚಿಕ್ಕಮಕ್ಕಳ ರಕ್ತದ ಅಂಶ ಎಷ್ಟಿದೆ ಎಂದು ಗಮನಿಸಿದರೆ ಸಾಕು ಭಾರತದ ಅಪೌಷ್ಟಿಕತೆಯ ದರುಶನವಾಗುತ್ತದೆ. ಅಪೌಷ್ಟಿಕತೆಯಿಂದ ಜನರ ದುಡಿಯುವ ಶಕ್ತಿಯೂ ಕುಂದುತ್ತದೆ, ದುಡಿಮೆ ಕಡಿಮೆಯಾದಾಗ ಆದಾಯದಲ್ಲಿ ಕಡಿತವಾಗುತ್ತದೆ, ಆದಾಯ ಕಡಿಮೆಯಾದಾಗ ಸಹಜವಾಗಿ ಆಹಾರಧಾನ್ಯ ಖರೀದಿಸುವಿಕೆ ಕಡಿಮೆಯಾಗಿ ಅಪೌಷ್ಟಿಕತೆ ಹೆಚ್ಚುತ್ತದೆ. ವಿಷವರ್ತುಲವಿದು. ಮರಣ ಹೊಂದಿದ ನಿರ್ಗತಿಕರ ಶವವನ್ನು ಪೋಸ್ಟ್ ಮಾರ್ಟಮ್ಮಿಗೋ, ಕಾಲೇಜಿನ ಅನಾಟಮಿ ವಿಭಾಗಕ್ಕೋ ತಂದಾಗ ದೇಹದ ಹೊಟ್ಟೆಯ ಭಾಗವನ್ನು ಗಮನಿಸಿಯೇ ಅವರ ಹಸಿವನ್ನು ಅಂದಾಜಿಸಬಹುದು. ಹೊಟ್ಟೆ ಬೆನ್ನಿಗೆ ಅಂಟಿಕೊಂಡಿರುವುದನ್ನಲ್ಲಿ ಗಮನಿಸಬಹುದು. ತಾಂತ್ರಿಕ ಕಾರಣಗಳಿಂದ ಹಸಿವಿನಿಂದ ಮರಣ ಎಂದು ಬರೆಯಲಾಗುವುದಿಲ್ಲ ಅಷ್ಟೇ. ಇಂಥ ಅಪೌಷ್ಟಿಕತೆಯನ್ನು ನೀಗಿಸಲು ಒಂದಷ್ಟು ಅಕ್ಕಿಯಿಂದ ಸಾಧ್ಯವೇ? ಖಂಡಿತ ಸಾಧ್ಯವಿಲ್ಲ. ಪೌಷ್ಟಿಕತೆಯನ್ನು ಕಾಪಾಡಲು ಅಕ್ಕಿಯ ಜೊತೆಜೊತೆಗೆ ಇನ್ನೂ ಅನೇಕ ದವಸಧಾನ್ಯಗಳು ಬೇಕು. ಒಂದಷ್ಟು ಅಕ್ಕಿ/ರಾಗಿ/ಗೋಧಿಯನ್ನು ಉಚಿತವಾಗಿ ನೀಡಿದಾಗ ಅಕ್ಕಿಗೆಂದು ವೆಚ್ಚ ಮಾಡುತ್ತಿದ್ದ ದುಡ್ಡಿನಲ್ಲಿ ಮತ್ತೇನಾದರೂ ಕೊಳ್ಳಬಹುದಲ್ಲವೇ? ಅಲ್ಲಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಉಚಿತ ಅಕ್ಕಿಯಿಂದ ಅಪೌಷ್ಟಿಕತೆ ದೂರಾಗುತ್ತದೆ. ಅಪೌಷ್ಟಿಕತೆ ದೂರಾದಾಗ ಮಾಡುವ ಕೆಲಸಕ್ಕೂ ವೇಗ ಮತ್ತು ಶಕ್ತಿ ದೊರೆಯುತ್ತದೆ. ಅಲ್ಲಿಗೆ ಅಕ್ಕಿಯನ್ನು ಉಚಿತವಾಗೋ ಅತಿ ಕಡಿಮೆ ಬೆಲೆಗೋ ನೀಡುವುದು ಕೊನೇ ಪಕ್ಷ ಜನರ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯಲ್ಲ.

ಉಚಿತ ಅಕ್ಕಿಯಿಂದ ಜನರ ಹೊಟ್ಟೆ ತುಂಬಿ ಅವರು ಸೋಮಾರಿಗಳಾಗಿಬಿಡುತ್ತಾರೆ ಎಂಬ ಆರೋಪ ನಗು ಬರಿಸುತ್ತದೆ. ಯಾವಾಗ ಮನುಷ್ಯ ಗುಡ್ಡಗಾಡು ಅಲೆಯುವುದನ್ನು ಬಿಟ್ಟು ಒಂದು ಕಡೆ ನೆಲೆನಿಂತನೋ ಅವತ್ತಿನಿಂದಲೇ ಮನುಷ್ಯ ಆಲಸಿ. ಮನುಷ್ಯನನ್ನು ಸೋಮಾರಿಗಳನ್ನಾಗಿ ಮಾಡುತ್ತದೆಂದು ನಮ್ಮ ಕಾರು, ಬೈಕು, ಸೈಕಲ್ಲು, ವಾಷಿಂಗ್ ಮಿಷಿನ್ನುಗಳನ್ನು ಮನೆಯಿಂದ ಎಸೆದು ಬಿಡುತ್ತೀವಾ? ಇಲ್ಲವಲ್ಲ. ಹೊಟ್ಟೆ ತುಂಬಿದ ಮನುಷ್ಯ ಸೋಮಾರಿಯಾಗುತ್ತಾನೆ ಎಂದರೆ ಉತ್ತಮ ಸಂಬಳ ಪಡೆಯುವ ಮಧ್ಯಮವರ್ಗದವರು ವರುಷಕ್ಕೆ ಒಂದೋ ಎರಡೋ ತಿಂಗಳು ಕೆಲಸ ಮಾಡಿ ಉಳಿದ ತಿಂಗಳುಗಳೆಲ್ಲ ಸೋಮಾರಿಗಳಾಗಿ ಬಿದ್ದಿರಬೇಕಿತ್ತಲ್ಲ? ಯಾಕೆ ನಾಲ್ಕಂಕಿಯಿಂದ ಐದಂಕಿಗೆ, ಐದಂಕಿಯಿಂದ ಆರಂಕಿಯ ಸಂಬಳಕ್ಕೆ ಜಿಗಿಯಲು ಹಾತೊರೆಯುತ್ತಲೇ ಇರುತ್ತಾರೆ? ಮನುಷ್ಯನ ಹಸಿವು ಹೊಟ್ಟೆಗೆ ಮಾತ್ರ ಸಂಬಂಧಿಸಿದ್ದಲ್ಲ. ಹೊಟ್ಟೆ ತುಂಬಿದ ಮನುಷ್ಯನಿಗೆ ಮತ್ತ್ಯಾವುದರಲ್ಲೋ ಆಸಕ್ತಿ ಕೆರಳಿ ಹಸಿವುಂಟಾಗುತ್ತದೆ. ಆ ಹಸಿವು ತೀರಿಸಿಕೊಳ್ಳಲು ಕೆಲಸ ಮಾಡುತ್ತಲೇ ಇರುತ್ತಾನೆ. ಜನರ ಸೋಮಾರಿತನಕ್ಕೆ ಉದಾಹರಣೆಯಾಗಿ ಕೃಷಿ ಕೆಲಸಕ್ಕೆ ಕಾರ್ಮಿಕರು ಸಿಗುತ್ತಿಲ್ಲ ಎಂಬ ಅಂಶವನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗುತ್ತಿದೆ. ಸ್ವಾಮಿ, ಈ ಅನ್ನಭಾಗ್ಯವೆಂಬ ಹಕ್ಕಿನ ಯೋಜನೆ ಜಾರಿಯಾಗುವುದಕ್ಕೆ ಮುಂಚಿನಿಂದಲೇ ಕೃಷಿ ಕೆಲಸಕ್ಕೆ ಕಾರ್ಮಿಕರ ಅಭಾವವಿದೆ. ಅದಕ್ಕೆ ಕೃಷಿಯೆಂಬುದು ಆಕರ್ಷಕ, ಲಾಭ ತರುವ ವೃತ್ತಿಯಾಗಿ ಉಳಿದಿಲ್ಲ ಎಂಬುದು ಎಷ್ಟು ಸತ್ಯವೋ ಬಿಸಿಲು ಮಳೆ ಚಳಿ ಗಾಳಿಯಲ್ಲಿ ದುಡಿಯುವುದಕ್ಕಿಂತ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲೋ ಮತ್ತೊಂದು ಕಾರ್ಖಾನೆಯಲ್ಲೋ ಸೂರಿನಡಿಯಲ್ಲಿ ದುಡಿಯುವುದು ಉತ್ತಮವೆಂಬ ಭಾವನೆಯೂ ಕಾರಣ. ಓದಿ ಕೆಲಸ ಗಿಟ್ಟಿಸಿಕೊಂಡು ತಣ್ಣಗೆ ಫ್ಯಾನಿನಡಿಯಲ್ಲೋ ಎಸಿಯ ಕೆಳಗೋ ದುಡಿಯುವುದು ನಮ್ಮಲ್ಲನೇಕರ ಆಯ್ಕೆಯೂ ಆಗಿತ್ತಲ್ಲವೇ? ಕೂಲಿ ನಾಲಿ ಮಾಡಿಕೊಂಡವರಿಗೂ ಅದೇ ಭಾವನೆ ಬಂದರದು ತಪ್ಪೇ? ಯೋಗ, ಜಿಮ್ಮು, ಸೈಕ್ಲಿಂಗೂ, ವಾಕಿಂಗೂ, ರನ್ನಿಂಗೂ ಅಂಥ ಮಾಡ್ಕೊಂಡು ಬೊಜ್ಜು ಇಳಿಸಲು ಬಡಿದಾಡುತ್ತಿರುವ ನಮಗೆ ಸೋಮಾರಿತನದ ಬಗ್ಗೆ ಮಾತನಾಡಲು ಯಾವ ನೈತಿಕತೆಯಿದೆ?

ಉಚಿತ ಅಕ್ಕಿ ಪಡೆದುಕೊಳ್ಳುತ್ತಿರುವವರು ಅದನ್ನು ಮಾರಿಕೊಳ್ಳುತ್ತಿರುವುದು ಮತ್ತು ನಕಲಿ ಬಿ.ಪಿ.ಎಲ್ ಕಾರ್ಡುದಾರರ ಸಂಖೈ ಹೆಚ್ಚಿರುವುದು ಖಂಡಿತವಾಗಿಯೂ ಸತ್ಯ. ಸರಕಾರದ ಯಾವುದೇ ಜನಪರ ಯೋಜನೆ ಕಡೇಪಕ್ಷ ಐವತ್ತರಷ್ಟು ನಿಜವಾದ ಫಲಾನುಭವಿಗಳಿಗೆ ದಕ್ಕಿದರೆ ಯಶಸ್ಸು ಕಂಡಂತೆ. ಅಕ್ಕಿ ಮಾರಿಕೊಳ್ಳುತ್ತಿರುವವರ ಸಂಖೈ ಇರುವಂತೆ ಅದನ್ನು ಉಪಯೋಗಿಸುವವರ ಸಂಖೈಯೂ ಇದೆಯಲ್ಲವೇ? ಈ ರೀತಿ ಮಾರಾಟಗೊಂಡ ಅಕ್ಕಿ ಕೊನೆಗೆ ಸೇರುವುದು ಕೂಡ ಅದೇ ಮಧ್ಯಮವರ್ಗದವರ ಮನೆಗೆ! ಅಕ್ಕಿ ಮಾರುವವರನ್ನು ಮತ್ತದನ್ನು ಕೊಳ್ಳುವವರಿಗೆ ದಂಡ ವಿಧಿಸುವ ಹಾಗಾದರೆ? ಇನ್ನು ಬಿ.ಪಿ.ಎಲ್ ಕಾರ್ಡುದಾರರ ಪಟ್ಟಿಯಲ್ಲಿ ಮಧ್ಯಮವರ್ಗದವರು, ಸಣ್ಣ ರೈತರು, ದೊಡ್ಡ ರೈತರು ಎಲ್ಲರ ಹೆಸರೂ ಸೇರಿಕೊಂಡಿದೆ. ನಕಲಿಗಳನ್ನು ತೆಗೆದುಹಾಕುವ ಪ್ರಕ್ರಿಯೆ ನಿರಂತರವಾಗಿರಬೇಕು. ಆಗ ಯೋಜನೆ ಮತ್ತಷ್ಟು ಫಲಕಾರಿಯಾಗಿ ಅರ್ಹ ಫಲಾನುಭಾವಿಗಳಿಗೆ ಉಪಯೋಗವಾಗುತ್ತದೆ.

ಜನರ ಪೌಷ್ಟಿಕತೆಯನ್ನು ದೂರ ಮಾಡುವಲ್ಲಿ ಇಂಥಹ ಕೆಲಸಗಳನ್ನು ರೂಪಿಸುವ ಸರಕಾರಗಳು ಜೊತೆಜೊತೆಗೇ ದುಡಿವ ಕೈಗಳಿಗೆ ಕೆಲಸವನ್ನೆಚ್ಚಿಸುವ ಹಾದಿಯನ್ನೂ ಹುಡುಕಬೇಕು. ಇಂತಹ ಯೋಜನೆಗಳು ಎಷ್ಟು ದಿನ – ತಿಂಗಳು – ವರುಷಗಳವರೆಗೆ ಮುಂದುವರೆಯಬೇಕು ಎಂಬ ಪ್ರಶ್ನೆಗೆ ಉತ್ತರ ದೊರಕುವುದು ಕಷ್ಟ. ಜನಸಂಖ್ಯೆ ಹೆಚ್ಚಿದೆ ನಮ್ಮಲ್ಲಿ, ಇರುವ ಜಾಗ ಕಡಿಮೆ; ಇಷ್ಟೊಂದು ದೊಡ್ಡ ಜನಸಂಖೈಯ ದೇಶದಲ್ಲಿ ಯಾರೊಬ್ಬರಲ್ಲೂ ಅಪೌಷ್ಟಿಕತೆ ಇರದ ದಿನ ಬರುವುದು ಅನೇಕನೇಕ ದಶಕಗಳ ನಂತರವೇ. ಅಲ್ಲಿಯವರೆಗೂ ಇಂತಹ ಯೋಜನೆಗಳಿರಲೇಬೇಕು – ಜನರ ಆರೋಗ್ಯಕ್ಕೆ, ಗರ್ಭಿಣಿಯ ಆರೋಗ್ಯಕ್ಕೆ, ಹುಟ್ಟುವ ಕೂಸುಗಳ ಆರೋಗ್ಯಕ್ಕೆ. ಸಮಾಜ ನಮಗೊಂದು ಬದುಕು ರೂಪಿಸಿಕೊಟ್ಟ ಕಾರಣಕ್ಕಾಗಿಯೇ ಅಲ್ಲವೇ ನಾವು ತೆರಿಗೆ ಕಟ್ಟುತ್ತಿರುವುದು? ಆ ತೆರಿಗೆ ಹಣದಲ್ಲಿ ದೊಡ್ಡ ಪಾಲು ಪರೋಕ್ಷವಾಗಿ ನಮ್ಮ ಅನುಕೂಲಕ್ಕೇ ಖರ್ಚಾಗುತ್ತದೆ. ಆ ತೆರಿಗೆ ಹಣದ ಒಂದು ಚಿಕ್ಕ ಪಾಲಿನಿಂದ ಮತ್ತೊಂದಷ್ಟು ಮಗದೊಂದಷ್ಟು ಜನರ ಏಳ್ಗೆಯಾಗಿ ಅವರೂ ತೆರಿಗೆ ಕಟ್ಟುವಂತಾಗಲೀ ಎಂದು ಆಶಿಸಬೇಕು. 

‘ಭಾಗ್ಯ’ವೆಂಬ ಹಣೆಪಟ್ಟಿಯಿಲ್ಲದೆ ಅನೇಕ ಸೌಲತ್ತುಗಳನ್ನನುಭವಿಸಿ ಸುಖಿಸುತ್ತಾ ಉದ್ದಿಮೆದಾರರಿಗೆ ನೀಡುವ ಭಾರೀ ಭಾರೀ ರಿಯಾಯಿತಿಗಳನ್ನು ಚಪ್ಪಾಳೆ ತಟ್ಟಿ ಸ್ವಾಗತಿಸುತ್ತಾ ಅಕ್ಕಿ ನೀಡುವ ಕ್ರಿಯೆಯನ್ನು ವಿರೋಧಿಸುವುದನ್ನು ಮಾನವತಾ ವಿರೋಧಿ ನಿಲುವೆಂದೇ ಪರಿಗಣಿಸಬೇಕಾಗುತ್ತದೆ.

ಜುಲೈ 7, 2014

ರಕ್ತಭಾಗ್ಯ

mahadevappa
ಮಹದೇವಪ್ಪ
ವಾಸು ಹೆಚ್.ವಿ (ಫೇಸ್ ಬುಕ್ ಪುಟದಿಂದ)
ಹಿಂದೆ.....
ಜನಗಳು ತಿನ್ನುವ ಅನ್ನದ ಪ್ರತಿ ಅಗುಳಿಗೂ ನಮ್ಮ ಬೆವರು ಮೆತ್ತಿಕೊಂಡಿರುತ್ತಿತ್ತು.
ಈಗ.....

ಏಪ್ರಿ 11, 2014

ದೆಹಲಿಯಂತಹ ಸಣ್ಣ ರಾಜ್ಯದಲ್ಲಿ ಸರಕಾರ ನಡೆಸಲಾಗದೆ ಓಡಿ ಹೋದವರಿಂದ ಈ ದೇಶ ಏನನ್ನು ನಿರೀಕ್ಷಿಸಲು ಸಾಧ್ಯ?

ದೆಹಲಿಯಂತಹ ಸಣ್ಣ ರಾಜ್ಯದಲ್ಲಿ ಸರಕಾರ ನಡೆಸಲಾಗದೆ ಓಡಿ ಹೋದವರಿಂದ ಈ ದೇಶ ಏನನ್ನು ನಿರೀಕ್ಷಿಸಲು ಸಾಧ್ಯ? 

ಎಲ್ಲರಿಂದ ಬೇಸತ್ತ ಮತದಾರ ದೆಹಲಿಯಲ್ಲಿ ಹೊಚ್ಚ ಹೊಸ ಪಕ್ಷ, ಹಿಂದೆ ಮುಂದೆ ಕಂಡು ಕೇಳರಿಯದ ಪಕ್ಷ ಆಮ್ ಆದ್ಮಿ ಪಾರ್ಟಿಗೆ ವೋಟ್ ಕೊಟ್ಟು ಗೆಲ್ಲಿಸಿದ. ರೆಫರೆಂಡಮ್‌ನಲ್ಲಿ ಸರ್ಕಾರ್ ಮಾಡಿ ಅಂತ ಕೂಡ ಅಭಿಪ್ರಾಯ ಕೊಟ್ಟ. ಆದರೆ ಈ ಆಮ್ ಆದ್ಮಿ ಪಕ್ಷ 45 ದಿನಗಳ ನೌಟಂಕಿ ನಡೆಸಿ ಸರಕಾರ ಬರ್ಖಾಸ್ತು ಮಾಡಿಕೊಂಡಿತು. ದೆಹಲಿಯಲ್ಲಿ ಮಾಡಲಿಕ್ಕೆ ಸಾವಿರ ಕೆಲಸಗಳು ಬಾಕಿ ಇವೆ. ಅದೆಲ್ಲ ಬಿಟ್ಟು ಏನೇನೋ ಮಾಡಲಿಕ್ಕೆ ಹೋಗಿ ಆಪ್ ಸರಕಾರ ಇಲ್ಲವಾಯಿತು. ಈಗ ದೆಹಲಿಯ ಸ್ಥಿತಿ ಅತಂತ್ರ. ದೆಹಲಿಯಲ್ಲ್ಲಿ ಆಯ್ಕೆಯಾದ ಆಪ್ ಎಂಎಲ್ಎಗಳು ಈಗ ದೆಹಲಿ ಮರೆತು ದೇಶ ಸುತ್ತುತ್ತಿದ್ದಾರೆ. ಎಲ್ಲೆಲ್ಲೋ ಲೋಕಸಭಾ ಚುನಾವಣೆಗೆ ನಿಂತಿದ್ದಾರೆ. ಕೇಜ್ರಿವಾಲ್‌ನನ್ನು ನಾನು ಮೆಚ್ಚುತ್ತೇನೆ ಆದರೆ ಇದೇ ಕೇಜ್ರಿವಾಲ್ ಈಗ ಲೋಕಸಭೆಗೂ ಸ್ಪರ್ಧಿಸುತ್ತಿದ್ದಾರೆ. ಹಾಗಿದ್ದರೆ ದೆಹಲಿಯಲ್ಲಿ ಇವರನ್ನು ಗೆಲ್ಲಿಸಿದ ಮತದಾರನ ಗತಿ ಏನು? ಇದು ಒಂದು ರೀತಿಯ ಬೃಷ್ಟಾಚಾರವಲ್ಲವೆ? ಇದು ಸಾರ್ವಜನಿಕರ ದುಡ್ಡು ಪೋಲಾಗುವ ಕೆಲಸವಲ್ಲವೆ? 

ಜೀವಮಾನದುದ್ದಕ್ಕೂ ಈ ವ್ಯವಸ್ಥೆ ಬಗ್ಗೆ ಒಂದೇ ಒಂದು ಮಾತು ಕೂಡ ಆಡದ, ಒಂದೇ ಒಂದು ಅಭಿಪ್ರಾಯ ವ್ಯಕ್ತಪಡಿಸದ, ಊರ್ ಮೇಲ್ ಊರ್ ಬಿದ್ರೆ ಶಾನುಭಾಗರ ಶಾ... ಎಂತ ಹೋಯ್ತು ಎಂದು ತಮ್ಮ ಕೆಲಸ ಮಾಡಿಕೊಂಡಿದ್ದ ಮಹಾ ಸಭ್ಯ ಸಂಸಾರಸ್ಥ ಮಹಾನುಭಾವರೆಲ್ಲ ಆಪ್ ಅಭ್ಯರ್ಥಿಗಳು. ಹೆಚ್ಚಿನವರು ಬಹಳ ಶಿಕ್ಷಿತರು, ವೈದ್ಯರು, ಇಂಜಿನಿಯರ್‌ಗಳು, ಐಐಟಿಯನ್ನರು, ಸಿಇಒಗಳು, ಚಿತ್ರ ನಟರು ಇತ್ಯಾದಿ ಇತ್ಯಾದಿ. ಈಗ ಈ ಜಾವೇದ್ ಜಾಫ್ರಿ ಎಂಬ ನಟ ಮತ್ತು ಡ್ಯಾನ್ಸ್ ಮಾಸ್ಟರ್, ಗುಲ್ ಪನಾಗ್ ಎಂಬ ನಟಿ ಇವರೆಲ್ಲ ಆಪ್ ಆಭ್ಯರ್ಥಿಗಳು. ಆಪ್ ಕಟ್ಟಿದ ಕಾರ್ಯಕರ್ತರೆಲ್ಲ ಇವರಿಗೆ ಮತದಾರ ಮಾತ್ರ. ಆಮ್ ಆದ್ಮಿ ಹೆಸರಿಗೆ ಮಾತ್ರ. ಆಮ್ ಆದ್ಮಿ ಇವರಿಗೆ ಕೇವಲ ಮತದಾರ ಮಾತ್ರ. 

ಕಸಬರಿಕೆ ಚಿಹ್ನೆಯ ಈ ಪಾರ್ಟಿ ಕಸಬರಿಕೆಯಿಂದ ಕೊಳೆ ಎಲ್ಲ ಸ್ವಚ್ಛ ಮಾಡಿ ಗುಡಿಸುತ್ತೆ ಎಂದ ನಂಬಿದ್ದ ದೆಹಲಿಯ ಜನ ಇವರ ಕಸಬರಿಕೆಯಿಂದ ಕೇವಲ ಧೂಳು ಮಾತ್ರ ಏಳುತ್ತಿದೆ ವಿನಃ ಸ್ವಚ್ಛತೆ ನಡೆಯುತ್ತಿಲ್ಲ ಎಂಬುದನ್ನು ಮನಗಂಡಂತಿದೆ. ಇಂದು ಟಿವಿ ಚಾನೆಲ್‌ನಲ್ಲಿ ಮಾತನಾಡಿದ ದೆಹಲಿಯ ಅನೇಕ ಆಪ್ ಆಭಿಮಾನಿಗಳು ಅವರು ಆಪ್ ಬಗ್ಗೆ ಭ್ರಮನಿರಸನ ಹೊಂದಿದ್ದನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ. ಆಪ್ ಕೇವಲ ಕರಪ್ಷನ್ ಬಗ್ಗೆ ಮಾತನಾಡುತ್ತೆ. ಕೋಮುವಾದದ ಬಗ್ಗೆ ಆಪ್ ಮಾತಾಡುತ್ತಿಲ್ಲ. ಬೃಷ್ಟಾ಼ಚಾರ ವಿರೋಧಿ ಎಂದು ಹೇಳಿಕೊಳ್ಳುವ ಕೇಜ್ರಿವಾಲ್ ಖಾಸಗೀಕರಣದ ದೊಡ್ಡ ಸಮರ್ಥಕನೂ ಹೌದು. 

ಬೃಷ್ಟಾಚಾರದ ಬಗ್ಗೆ ನಾನು, ನೀವು, ಅವರು ಎಲ್ಲರೂ ಮಾತನಾಡಬಹುದು. ಅದು ಸುಲಭ. ಈ ದೇಶದ ಇಂದಿನ ದೊಡ್ಡ ಶತ್ರು ಬೃಷ್ಟಾಚಾರ ಅಲ್ಲ. ಕೋಮುವಾದದ ಬಗ್ಗೆ ಮಾತನಾಡಬೇಕು, ಅದಕ್ಕೆ ಎದೆಗಾರಿಕೆ ಬೇಕು. ಈ ದೇಶದಲ್ಲಿ ಅಲ್ಪಸಂಖ್ಯಾತರು ಎರಡನೆಯ ದರ್ಜೆಯ ಮನುಷ್ಯರಾಗುತ್ತಿದ್ದಾರಲ್ಲಾ, ಅದರ ಬಗ್ಗೆ ಮಾತನಾಡಬೇಕು. ಅದಕ್ಕೆ ಎದೆಗಾರಿಕೆ ಬೇಕು. ದಲಿತರ ಶೋಷಣೆ, ಹತ್ಯೆ, ಅವಮಾನ ಇನ್ನೂ ಮುಂದುವರಿದಿದೆಯಲ್ಲ, ಅದರ ಬಗ್ಗೆ ಮಾತನಾಡಬೇಕು. ಅದಕ್ಕೆ ಎದೆಗಾರಿಕೆ ಬೇಕು. ಹರ್ಯಾಣ, ಪಂಜಾಬ್‌ಗಳಲ್ಲಿ ನಡೆಯುವ ಮರ್ಯಾದಾ ಹತ್ಯೆಗಳನ್ನು ವಿರೋಧಿಸಬೇಕು. ಅದಕ್ಕೆ ಎದೆಗಾರಿಕೆ ಬೇಕು. ಆದರೆ ಸ್ವತಃ ಕೇಜ್ರಿವಾಲ್ ಈ ಖಾಪ್ ಪಂಚಾಯತ್‌ಗಳ ಸಮರ್ಥಕನೂ ಹೌದು.  

ಮೋದಿಯನ್ನು ನರಹಂತಕ ಎಂಬ ಕಾರಣಕ್ಕೆ ವಿರೋಧಿಸಿ ಎಂದು ಸಾರ್ವಜನಿಕವಾಗಿ ಘೋಷಿಸುವ ಸಿದ್ದರಾಮಯ್ಯ ನನಗೆ ಇಷ್ಟವಾಗುತ್ತಾರೆ.  ಕೇಜ್ರಿವಾಲ್ ಬಗ್ಗೆ ಗೌರವ ಇದೆ. ಆದರೆ ಆಪ್‌ ಮೂಲಕ ಮಾಡುತ್ತಿರುವ ಈ ನೌಟಂಕಿ ಅವರು ನಿಲ್ಲಿಸಲೇಬೇಕು. ಇದರಿಂದ ಯಾರಿಗೂ ಪ್ರಯೋಜನವಿಲ್ಲ. ದೆಹಲಿಯಂತಹ ಸಣ್ಣ ರಾಜ್ಯದಲ್ಲಿ ಸರಕಾರ ನಡೆಸಲಾಗದೆ ಓಡಿ ಹೋದವರಿಂದ ಈ ದೇಶ ಏನನ್ನು ನಿರೀಕ್ಷಿಸಲು ಸಾಧ್ಯ? ಅರವಿಂದ ಕೇಜ್ರಿವಾಲ್ ಮತ್ತು ಆಪ್ ಬಗ್ಗೆ ಭಯಂಕರ ಎಕ್ಸೈಟ್ ಆಗಿ ಮಾತನಾಡುವವರು ಸದ್ಯಕ್ಕಂತೂ ನನಗೆ ಮೂರ್ಖರ ತರಹ ಕಾಣಿಸುತ್ತಿದ್ದಾರೆ.
ಅರವಿಂದ್ ಕೇಜ್ರಿವಾಲ್
ಶಶಿಧರ ಹೆಮ್ಮಾಡಿಯವರ ಫೇಸ್ ಬುಕ್ಕಿನಲ್ಲಿ ಓದಿದ ಈ ಲೇಖನದ ಎಲ್ಲ ಅಂಶಗಳನ್ನು ಒಪ್ಪುವುದು ನನಗೆ ಕಷ್ಟವೆನ್ನಿಸಿದರೂ ಕೆಲವಾದರೂ ಚರ್ಚೆಗೊಳಪಡುವ ಚಿಂತಿಸುವ ವಿಷಯಗಳಿರುವುದರಿಂದ 'ಹಿಂಗ್ಯಾಕೆ'ಯಲ್ಲಿ ಮರುಪ್ರಕಟಿಸುತ್ತಿದ್ದೇನೆ.

ಫೆಬ್ರ 22, 2014

ವಿಶೇಷಗಳಿಲ್ಲದ ನಿರಾಸದಾಯಕವೂ ಅಲ್ಲದ ಕರ್ನಾಟಕ ಬಜೆಟ್.

ಡಾ ಅಶೋಕ್ ಕೆ ಆರ್

            ಮತ್ತೊಂದು ಬಜೆಟ್ಟಿನ ಸಮಯ. ಕಳೆದ ವರುಷ ಚುನಾಯಿತವಾದ ಕಾಂಗ್ರೆಸ್ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಮತ್ತೊಂದು ಬಜೆಟ್ ಮಂಡಿಸಿದೆ. ದಾಖಲೆಯ ಒಂಭತ್ತನೆಯ ಬಾರಿಗೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ 2014 – 2015ರ ಸಾಲಿನ ಬಜೆಟ್ಟಿನ ಮೇಲೆ ಯಾರಿಗೂ ಅತಿಯಾದ ನಿರೀಕ್ಷೆಗಳೇನಿರಲಿಲ್ಲ. ಇದು ಲೋಕಸಭಾ ಚುನಾವಣೆ ಇರುವ ವರುಷವಾದ್ದರಿಂದ ತೆರಿಗೆಯನ್ನು ಮತ್ತಷ್ಟು ಹೊರೆಯಾಗಿಸುವ ಸಾಧ್ಯತೆ ಕಡಿಮೆಯೆಂಬುದು ಎಲ್ಲರ ಭಾವನೆಯಾಗಿತ್ತು. ಒಂದಷ್ಟು ತೆರಿಗೆ ಕಡಿತ ಮಾಡಿ ಮುಂದಿನ ಚುನಾವಣೆಯಲ್ಲಿ ಒಂದಷ್ಟು ಮತ ಹೆಚ್ಚಿಸಿಕೊಳ್ಳಬಹುದೆಂಬ ಭಾವನೆಯೂ ಇತ್ತು. ಇಡೀ ದೇಶದ ಆರ್ಥಿಕತೆಯೇ ಒಂದಷ್ಟು ಕುಂಟುತ್ತ ತೆವಳುತ್ತ ಸಾಗುತ್ತಿರುವಾಗ ಕರ್ನಾಟಕ ಬಜೆಟ್ಟಿನಲ್ಲಿ ದೂರದೃಷ್ಟಿಯ ಬೃಹತ್ ವ್ಯಾಪ್ತಿಯ ಯೋಜನೆಗಳನ್ನು ನಿರೀಕ್ಷಿಸುವುದು ತಪ್ಪಾದೀತು. ಆದರೂ ಉತ್ತಮ ಹಣಕಾಸು ಸಚಿವರಾಗಿ ಹೆಸರು ಮಾಡಿರುವ ಸಿದ್ಧರಾಮಯ್ಯ ಆರ್ಥಿಕ ಶಿಸ್ತನ್ನು ತಂದು ಒಂದಷ್ಟು ದೂರದೃಷ್ಟಿಯ ಯೋಜನೆಗಳನ್ನು ಘೋಷಿಸಬಹುದೇನೋ ಎಂಬುದು ಕೆಲವರ ನಿರೀಕ್ಷೆಯಾಗಿತ್ತು. ಅತ್ತ ಪರಿಪೂರ್ಣವೂ ಅಲ್ಲದ ಇತ್ತ ಚುನಾವಣೆಯನ್ನಷ್ಟೇ ಗುರಿಯಾಗಿಸಿಕೊಂಡು ತಯಾರಿಸಿರದ ಆಯವ್ಯಯವನ್ನು ಸಿದ್ಧರಾಮಯ್ಯನವರು ಮಂಡಿಸಿದ್ದಾರೆ. ಒಂದಷ್ಟು ಉತ್ತಮ ಯೋಜನೆಗಳು ಇರುವುದಾದರೂ ಸಿದ್ಧರಾಮಯ್ಯನವರಿಂದ ಮತ್ತಷ್ಟು ಮಗದಷ್ಟು ನಿರೀಕ್ಷೆ ಮಾಡಿದ್ದರೆ ತಪ್ಪಲ್ಲ.

ಜುಲೈ 27, 2013

ಪ್ರಣಾಳಿಕೆ ರೂಪದ ಜನಪ್ರಿಯ ಬಜೆಟ್ಟು



budget 2013-14

ಡಾ ಅಶೋಕ್ ಕೆ ಆರ್
ವಿಧಾನಸಭೆ ಚುನಾವಣೆ ನಡೆದು 2013ರಲ್ಲಿ ಎರಡು ಸರಕಾರವನ್ನು ಕರ್ನಾಟಕ ಕಂಡ ಕಾರಣ ಹೊಸ  ಸರಕಾರದ ಹೊಸ ಬಜೆಟ್ ಮಂಡನೆಯಾಗಿದೆ. ಇತ್ತಿಚಿನ ವರುಷಗಳಲ್ಲಿ ಬಜೆಟ್ ಎಂಬುದು ಕೂಡ ಚುನಾವಣಾ ಪೂರ್ವದ ಪ್ರಣಾಳಿಕೆಗಳ ರೂಪದಲ್ಲೇ ಹೊರಬರುತ್ತಿರುವುದಕ್ಕೆ ರಾಜಕಾರಣಿಗಳ ದೂರದರ್ಶತ್ವದ ಕೊರತೆ, ಹತ್ತಿರದ ಚುನಾವಣೆಗಳ ಮೇಲಿನ ದೃಷ್ಟಿ ಕಾರಣ. ಹಾಗಾಗಿ ದೂರಗಾಮಿಯಾಗಿ ಸಮಾಜದ ದೇಶದ ಏಳಿಗೆಯ ಮೇಲೆ ಪ್ರಭಾವವುಂಟುಮಾಡುವ ಯೋಜನೆಗಳಿಗಿಂತ ತತ್ ಕ್ಷಣದಲ್ಲಿ ಜನರಿಗೆ ನೇರವಾಗಿ ಹಣ ತಲುಪಿಸುವ ಹೆಚ್ಚೆಚ್ಚು ಜನಪ್ರಿಯತೆ ತಂದುಕೊಡುವ ಯೋಜನೆಗಳ ಮೇಲೆಯೇ ಹೆಚ್ಚು ಪ್ರೀತಿ. ಹಿಂದಿನ ಬಜೆಟ್ಟಿಗಿಂತ ಹೆಚ್ಚು ವೆಚ್ಚದ ಬಜೆಟ್ ಮಂಡಿಸಬೇಕು ಎಂಬ ಆತುರವೂ ಇತ್ತೀಚಿನ ವರುಷಗಳಲ್ಲಿ ಕಾಣುತ್ತಿದೆ. ಹಿಂದಿನ ಬಜೆಟ್ಟಿನಲ್ಲಿ ಮೀಸಲಿರಿಸಲಾದ ಹಣದ ಎಷ್ಟು ಅಂಶ ವಿನಿಯೋಗವಾಗಿದೆ ಎಂಬುದನ್ನು ಗಮನಿಸಿದರೆ ಬಹುತೇಕ ಕ್ಷೇತ್ರಗಳಲ್ಲಿ ನಿರಾಶಾದಾಯಕ ವಾತಾವರಣವೇ ಇದೆ. ಹಿಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ 1,17,005 ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದರೆ ಈಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ 1,21,611 ಕೋಟಿಯ ಬಜೆಟ್ ಮಂಡಿಸಿದ್ದಾರೆ. ಅಲ್ಲಿಗೆ ಕಾಗದದ ಮೇಲಿನ ಹಣದ ರೂಪದಲ್ಲಂತೂ ಹಿಂದಿನ ಸರಕಾರದ “ಸಾಧನೆ”ಯನ್ನು ಮುರಿದಿದ್ದಾರೆ! ಆದರೆ ಬಜೆಟ್ಟಿನ ಆಶಯಗಳು ಆಶೋತ್ತರಗಳು ಹಿಂದಿನ ಸರಕಾರಕ್ಕಿಂತ ಉತ್ತಮವಾಗಿದೆಯಾ??