ಸಾಂಧರ್ಬಿಕ ಚಿತ್ರ. ಮೂಲ: ಡಿ.ಏನ್.ಎ ಇಂಡಿಯಾ |
ಕು.ಸ.ಮಧುಸೂದನ ರಂಗೇನಹಳ್ಳಿ
ನ್ಯಾಯಾಲಯಗಳ ಮದ್ಯಪ್ರವೇಶಗಳ ನಂತರವೂ ದೆಹಲಿಯ ಮುಖ್ಯಮಂತ್ರಿ ಆಮ್ ಆದ್ಮಿ ಪಕ್ಷದ ಶ್ರೀ ಕೇಜ್ರೀವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ (ಇವರ ಹಿಂದಿರುವುದು ಅದೇ ದೆಹಲಿಯ ಗದ್ದುಗೆ ಹಿಡಿದಿರುವ ಪ್ರದಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕೇಂದ್ರಸರಕಾರ) ನಡುವಿನ ಜಟಾಪಟಿ ಮುಗಿಯುವಂತೆ ಕಾಣುತ್ತಿಲ್ಲ.
2015ರಲ್ಲಿ ಬಾರೀ ಬಹುಮತದೊಂದಿಗೆ ದೆಹಲಿಯಲ್ಲಿ ಅಧಿಕಾರ ಹಿಡಿದ ಶ್ರೀ ಅರವಿಂದ್ ಕೇಜ್ರೀವಾಲರು ಒಂದು ದಿನವೂ ನೆಮ್ಮದಿಯಾಗಿ ಸರಕಾರ ನಡೆಸಲು ಅಲ್ಲಿನ ಲೆಫ್ಟಿನಂಟ್ ಗವರ್ನರ್ ಬಿಡಲೇ ಇಲ್ಲ. ಬ್ರಿಟೀಷ್ ಸಂಸದೀಯ ಪ್ರಜಾಸತ್ತೆಯಿಂದ ಎರವಲು ಪಡೆದು ನಾವು ಸ್ಥಾಪಿಸಿಕೊಂಡಿರುವ ಈ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಲ್ಲಿರುವವರು ಸದಾ ಕೇಂದ್ರದಲ್ಲಿ ಅಧಿಕಾರ ಹೊಂದಿರುವ ಪಕ್ಷದ ಆಣತಿಯಂತೆ ನಡೆದುಕೊಳ್ಳುವವರೇ ಆಗಿರುತ್ತಾರೆ. ಶೀಲಾ ದೀಕ್ಷಿತ್ ಅಂತವರು ದೆಹಲಿಯ ಮುಖ್ಯಮಂತ್ರಿಯಾಗಿದ್ದಾಗ ಇಂತಹ ಸಮಸ್ಯೆಗಳೇನು ಎದುರಾಗಿರಲಿಲ್ಲ. ಅದಕ್ಕೆ ಕಾರಣ ಆಗ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದದ್ದು ಶ್ರೀಮತಿ ಶೀಲಾದೀಕ್ಷೀತರ ಕಾಂಗ್ರೆಸ್ ಪಕ್ಷವೇ. ಹೀಗಾಗಿ ಆಗ ದೆಹಲಿ ಮುಖ್ಯಮಂತ್ರಿಗಳ ಅಧಿಕಾರವನ್ನು ಕೇಂದ್ರಸರಕಾರ ಲೆಫ್ಟಿನೆಂಟ್ ಗವರ್ನರ್ ಮೂಲಕ ನಿಯಂತ್ರಿಸಲು ಹೋಗಿರಲಿಲ್ಲ. ಆ ನಂತರವೂ ಬಾಜಪದ ಶ್ರೀಮತಿ ಸುಷ್ಮಾ ಸ್ವರಾಜ್ ಮತ್ತು ದಿವಂಗತ ಶ್ರಿ ಮದನಲಾಲ್ ಖುರಾನರವರುಗಳು ಮುಖ್ಯಮಂತ್ರಿಗಳಾಗಿದ್ದಾಗಲೂ ಮುಖ್ಯಮಂತ್ರಿಗಳ ಅಧಿಕಾರಕ್ಕೆ ಕಡಿವಾಣ ಹಾಕುವ ಕೆಲಸವನ್ನು ಅಂದಿನ ಕಾಂಗ್ರೆಸ್ ಸರಕಾರ ಮಾಡಿರಲಿಲ್ಲ. ತನ್ಮೂಲಕ ಪ್ರಜಾಸತ್ತಾತ್ಮಕವಾಗಿ ದೆಹಲಿಯ ಜನತೆ ಆಯ್ಕೆ ಮಾಡಿದ ಸರಕಾರವೊಂದು ತನಗಿರುವ ಅದಿಕಾರಗಳ ಮಿತಿಯಲ್ಲಿಯೇ ಸುಗಮವಾಗಿ ಆಡಳಿತ ನಡೆಸಿಕೊಂಡು ಹೋಗುತ್ತಿತ್ತು.