ಜೂನ್ 4, 2018

ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿರುವ ಪಿಯು ಶಿಕ್ಷಣ!

ಕು.ಸ.ಮಧುಸೂದನ
ಸುದ್ದಿವಾಹಿನಿಯೊಂದರಲ್ಲಿ ಉಪಚುನಾವಣೆಯ ಪಲಿತಾಂಶ ನೋಡುತ್ತಿದ್ದಾಗ ಪ್ರಸಾರವಾದ ಜಾಹೀರಾತೊಂದು ನನ್ನ ಗಮನ ಸೆಳೆಯಿತು. ಅದು ಬೆಂಗಳೂರಿನ ಹಲವು ಶಿಕ್ಷಣ ಸಂಸ್ಥೆಗಳ ಜೊತೆ ಸೇರಿ ನಡೆಸುತ್ತಿರುವ ಬೃಹತ್ ಎಜುಕೇಶನ್ ಎಕ್ಸಪೊ ಕುರಿತದ್ದು. ಅದೇ ಸಮಯಕ್ಕೆ ಸರಿಯಾಗಿ ನನ್ನ ಪರಿಚಿತರೊಬ್ಬರು ಒಂದು ಸಮಸ್ಯೆಯೊಂದಿಗೆ ಮನಗೆ ಬಂದರು. ಅವರ ಮಗ ಎಸ್.ಎಸ್.ಎಲ್.ಸಿ.ಯಲ್ಲಿ ಶೇಕಡಾ 74ರಷ್ಟು ಅಂಕ ಪಡೆದಿದ್ದರೂ ಯಾವುದೇ ಒಳ್ಳೆಯ( ಅವರ ದೃಷ್ಠಿಯಲ್ಲಿ ನೂರಕ್ಕೆ ನೂರು ಪಲಿತಾಂಶ ನೀಡುವ) ಕಾಲೇಜುಗಳಲ್ಲಿ ಅವನಿಗೆ ಸೀಟು ಸಿಗಲು ಸಾದ್ಯವಿರಲಿಲ್ಲ. ಪ್ರವೇಶದ ಅರ್ಜಿ ಪಾರಂ ತರಲು ಹೋದಾಗಲೇ ಸಿಬ್ಬಂದಿ ಈ ಬಗ್ಗೆ ಅವರಿಗೆ ಸೂಚನೆ ನೀಡಿ ಮ್ಯಾನೇಜುಮೆಂಟ್ ಕೋಟಾದಲ್ಲಿ ಒಂದೂವರೆ ಲಕ್ಷ ಕಟ್ಟಿದರೆ ಮಾತ್ರ ಸೀಟು ಸಿಗುವುದಾಗಿಯೂ, ಅದಕ್ಕೆ ಮುಂಗಡವಾಗಿ ಟೋಕನ್ ಅಡ್ವಾನ್ಸ್ ನೀಡಿ(ಸೈಟು ವ್ಯಾಪಾರ ಮಾಡುವ ರಿಯಲ್ ಎಸ್ಟೇಟ್ ದಂದೆಯವರಂತೆ) ಸೀಟು ಬುಕ್ ಮಾಡಿ ಎಂದಿದ್ದಾರೆ. ಇವರೊ ನೋಡುವ ಮತ್ತೆ ಬರುವೆ ಅಂತ ಹೇಳಿ ಇನ್ನೂ ಮೂರ್ನಾಲ್ಕು ಕಾಲೇಜುಗಳಲ್ಲಿ ವಿಚಾರಿಸಿದಾಗ ಬಹುತೇಕ ಎಲ್ಲ ಪ್ರತಿಷ್ಠಿತ ಕಾಲೇಜುಗಳಲ್ಲಿಯೂ ಅಂತಹುದೇ ಉತ್ತರ ಸಿಕ್ಕಿದೆ. ಈಗೇನು ಮಾಡಲಿ ಎಂದು ಕೇಳಲು ಎಂದು ನನ್ನ ಮನೆಗೆ ಬಂದಿದ್ದರು. ನಾನು ನಿಮ್ಮ ಮಗನಿಗೆ ಸೈನ್ಸೇ ಆಗಬೇಕೆ ಆರ್ಟ್ಸ್ ಓದಲು ಆಗುವುದಿಲ್ಲವೇ ಎಂದಾಗ ಮುಖ ಕಿವುಚಿ (ನನ್ನನ್ನು ತಮ್ಮ ಹೊಸ ಶತ್ರುವಂತೆನೋಡುತ್ತ) ಏನು ಸಾರ್ ಹೀಗೆ ಹೇಳ್ತೀರಿ. ದುಡ್ಡಿಗಾಗಿ ಅವನ ಭವಿಷ್ಯ ಹಾಳು ಮಾಡೋಕಾಗುತ್ತ? ಅದಕ್ಕೆ ಬೆಲೆ ಎಲ್ಲಿದೆ? ಪಿಯುಸಿ ಆದ ಮೇಲೆ ಬಿಎ, ಎಂಎ ಬಿಟ್ಟರೆ ಬೇರೇನು ಓದೋಕಾಗುತ್ತೆ. ಅವನ್ನು ಓದಿದರೆ ಕೆಲಸ ಎಲ್ಲಿ ಸಿಗುತ್ತೆ? ಅಂತ ನನಗೇನೆ ಹತ್ತಾರು , ಉತ್ತರವಿರದ ಪ್ರಶ್ನೆಗಳನ್ನು ಕೇಳಿದರು. ಸದ್ಯದ ಸ್ಥಿತಿಯಲ್ಲಿ ಅವರ ಮಾತು ನಿಜ ಅನಿಸಿತು. ನನಗೂ ಬೇರೇನು ಹೇಳಲು ತೋಚದೆ ನೋಡುವ ತಡೆಯಿರಿ ಸೀಟುಗಳು ಅಧಿಕೃತವಾಗಿ ಅನೌನ್ಸ್ ಆಗಲಿ. ನಾನೂ ನಿಮ್ಮ ಜೊತೆ ಬರುತ್ತೇನೆ. ಹೇಗಾದರು ಮಾಡಿ ಫೀಸು ಕಡಿಮೆ ಮಾಡಿಸೋಣ ಅಂತ ಹೇಳಿ ಕಳಿಸಿ ನಿಟ್ಟುಸಿರುಬಿಟ್ಟೆ. 
ಕು.ಸ. ಮಧುಸೂದನ್ ರವರ ಮತ್ತಷ್ಟು ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

ಆಗ 17, 2016

ಉನ್ನತ ಶಿಕ್ಷಣದ ಮೋಹದಲ್ಲಿ ದುರ್ಗತಿ ಕಾಣುತ್ತಿರುವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ!

ಸಾಂದರ್ಭಿಕ ಚಿತ್ರ; ದಿ ಹಿಂದೂ
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
17/08/2016
ಇಂಡಿಯಾದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿನ ಸರಕಾರವೊಂದಕ್ಕಿರಬಹುದಾದ ಜನಪರ ಕಾಳಜಿಯನ್ನು ಅರ್ಥ ಮಾಡಿಕೊಳ್ಳಲು ಆ ಸರಕಾರ ಸೇವಾ ಕ್ಷೇತ್ರಗಳಿಗೆ ನೀಡಿರುವ ಆಧ್ಯತೆಯನ್ನು, ಕೊಡಮಾಡಿರುವ ಅನುದಾನದ ಪ್ರಮಾಣಗಳನ್ನು ಅವಲೋಕಿಸಬೇಕಾಗುತ್ತದೆ. ಕರ್ನಾಟಕದಂತಹ ಕಲ್ಯಾಣರಾಜ್ಯದ ಮಟ್ಟಿಗೆ ಇಲ್ಲಿನ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಸರಕಾರ ನೀಡುತ್ತಿರುವ ಪ್ರಾಮುಖ್ಯತೆಯ ಆಧಾರದ ಮೇಲೆ ಸರಕಾರವೊಂದಕ್ಕಿರುವ ಜನಪರ ಕಾಳಜಿಯ ಪ್ರಮಾಣ ಅನಾವರಣವಾಗುತ್ತದೆ. ಕರ್ನಾಟಕದ ಶಿಕ್ಷಣ ಕ್ಷೇತ್ರದ ಬಗ್ಗೆ ಅದ್ಯಯನ ಮಾಡುತ್ತಾ ಹೋದರೆ ತೀರಾ ವಿಚಿತ್ರವಾದ ಅಂಶವೊಂದು ಬೆಳಕಿಗೆ ಬರುತ್ತದೆ, ಯಾವುದೇ ರಾಜ್ಯವೊಂದು ಶೈಕ್ಷಣಿಕವಾಗಿ ನಿಜವಾದ ಪ್ರಗತಿ ಸಾದಿಸಲು ಅದು ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಭದ್ರ ಬುನಾದಿಯ ಪ್ರಾಥಮಿಕ ಶಿಕ್ಷಣವನ್ನು ತನ್ನ ಜನಸಮುದಾಯಕ್ಕೆ ನೀಡುವ ಮೂಲಕ ಅದು ಇತರೇ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾದಿಸಬಹುದಾಗಿದೆ. ಇಂದು ನಾಡನ್ನು ಆಧುನಿಕವಾಗಿ ಕಟ್ಟಲು ಬೇಕಾದ ಉನ್ನತ ಶಿಕ್ಷಣವನ್ನು ನೀಡುವ ಮುನ್ನ ಪ್ರಾಥಮಿಕ ಶಿಕ್ಷಣವನ್ನು ಗುಣಮಟ್ಟದ ಆಧಾರದಲ್ಲಿ ನೀಡಬೇಕಾಗುತ್ತದೆ. ಕರ್ನಾಟಕದ ಮಟ್ಟಿಗೆ ನಮ್ಮ ಪ್ರಾಥಮಿಕ ಶಿಕ್ಷಣಕ್ಕೆ ನಮ್ಮ ರಾಜ್ಯ ಸರಕಾರ ನೀಡಿರುವ ಪ್ರಾಮುಖ್ಯತೆಯನ್ನು ಗಮನಿಸುತ್ತಾ ಹೋದರೆ ನಮ್ಮ ಎದೆ ಒಡೆಯುವಂತಹ ಆಂಶಗಳು ಬೆಳಕಿಗೆ ಬರುತ್ತವೆ.

ಇವತ್ತು ಕರ್ನಾಟಕದ ಶಿಕ್ಷಣ ನೀತಿ ಸಂಪೂರ್ಣವಾಗಿ ಉನ್ನತ ಶಿಕ್ಷಣ ನೀತಿಯಾಗಿ ಮಾತ್ರ ಕೆಲಸ ಮಾಡುತ್ತಿದೆ. ಯಾವ ಸರಕಾರ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡಬೇಕಾಗಿತ್ತೊ ಆ ಸರಕಾರ ಇಂದು ಪ್ರಾಥಮಿಕ ಶಿಕ್ಷಣವನ್ನು ಸಂಪೂರ್ಣವಾಗಿ ಕಡೆಗಣಿಸಿ ಉನ್ನತ ಶಿಕ್ಷಣ ನೀಡುವ ದಲ್ಲಾಳಿಯಂತೆ ಕೆಲಸ ಮಾಡುತ್ತಿದೆ. ಸರಕಾರಿ ಕನ್ನಡ ಶಾಲೆಗಳನ್ನು ನಡೆಸಲು ಬೇಕಾದ ಇಚ್ಚಾಶಕ್ತಿಯನ್ನೆಂದೊ ಕಳೆದುಕೊಂಡಿರುವ ಸರಕಾರ ಕೇವಲ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣಗಳಿಗೆ ಪ್ರಾದಾನ್ಯತೆ ನೀಡುತ್ತಿದೆ. ಇದರಿಂದಾಗಿ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕವೆಂದರೆ ಉನ್ನತ ಶಿಕ್ಷಣದ ದಂದೆ ನಡೆಸುವ ರಾಜ್ಯವೆಂಬಂತಾಗಿ ಹೋಗಿದೆ. 1980ರವರೆಗು ಇದ್ದ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದವು ಹಾಗಾಗಿ ಹೊರಗಿನವರು ಕರ್ನಾಟಕದಲ್ಲಿ ಶಿಕ್ಷಣ ಪಡೆಯಲು ಹಾತೊರೆಯುತಿದ್ದರು. ಇದನ್ನು ಬಳಸಿಕೊಂಡ ಸರಕಾರಗಳು ತದನಂತರದಲ್ಲಿ ನೂರಾರು ಖಾಸಗಿ ಇಂಜಿನಿಯರಿಂಗ್ ಹಾಗು ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಬಿಸಲು ಅನುಮತಿ ನೀಡಿದವು. ಎಂಬತ್ತರ ದಶಕದ ನಂತರ ಎಲ್ಲ ಸರಕಾರಗಳು ರಾಜಕಾರಣಿಗಳಿಗೆ, ಹಲವು ಜಾತಿಯ ಮಠಗಳಿಗೆ, ಇತರೇ ಕ್ಷೇತ್ರಗಳ ಉದ್ಯಮಪತಿಗಳಿಗೆ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಕಾಲೇಜು ಶುರು ಮಾಡಲು ಅನುಮತಿ ನೀಡುವ ಮೂಲಕ ಉನ್ನತ ಶಿಕ್ಷಣದ ವ್ಯಾಪಾರಿಕರಣಕ್ಕೆ ರಹದಾರಿ ನೀಡಿದವು ಇವತ್ತು ನೋಡಿ: ಬಹುತೇಕ ಮೇಲ್ಜಾತಿಗಳ ಮಠಗಳು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನು ನಡೆಸುತ್ತಿವೆ. ಇನ್ನು ಎಲ್ಲಾ ಪಕ್ಷಗಳಲ್ಲಿರುವ ಬಲಿಷ್ಠ ರಾಜಕಾರಣಿಗಳು ಕೂಡ ಇದೇ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದ ಗಂಧಗಾಳಿಯೂ ಇಲ್ಲದ ಹತ್ತಾರು ಉದ್ಯಮಿಗಳು ಸಹ ಇವತ್ತು ಉನ್ನತ ಶಿಕ್ಷಣದ ಕಾಲೇಜುಗಳ ಒಡೆಯರಾಗಿ ತಮ್ಮ ಕಪ್ಪು ಹಣವನ್ನು ಬಿಳಿಯನ್ನಾಗಿ ಪರಿವರ್ತಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇವತ್ತು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳನ್ನು ನಡೆಸುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ಬಗ್ಗೆ ಒಂದಷ್ಟು ಅಂಕಿಅಂಶಗಳನ್ನು ಗಮನಿಸಿದರೆ ಮಾತ್ರ ನಿಮಗೆ ನಿಜಸ್ಥಿತಿ ಅರ್ಥವಾಗುತ್ತದೆ.

ಇವತ್ತು ಕರ್ನಾಟಕದಲ್ಲಿ ಸರಿಸುಮಾರು 205 ಇಂಜಿನಿಯರಿಂಗ್ ಕಾಲೇಜುಗಳಿವೆ. ಅಚ್ಚರಿಯ ಸಂಗತಿಯೆಂದರೆ ಇವುಗಳಲ್ಲಿ ಕೇವಕ 8 ಕಾಲೇಜುಗಳು ಮಾತ್ರ ಸರಕಾರಿ ಒಡೆತನದ್ದಾಗಿದ್ದು, ಉಳಿದವು ಖಾಸಗಿಯವರ ಕೈಲಿವೆ. ಇನ್ನು ನಮ್ಮ ರಾಜ್ಯ ಪ್ರತಿವರ್ಷ ಸುಮಾರು 83 ಸಾವಿರ ಇಂಜಿನಯರಿಂಗ್ ಪದವೀಧರರನ್ನು ತಯಾರು ಮಾಡುತ್ತಿದೆ. ದೇಶದ ಒಟ್ಟು ಜನಸಂಖ್ಯೆಯ ಶೇಕಡಾ ಎಂಟರಷ್ಟನ್ನು ಮಾತ್ರ ಹೊಂದಿರುವ ಕರ್ನಾಟಕ ರಾಷ್ಟ್ರದ ಒಟ್ಟು ಇಂಜಿನಿಯರಿಂಗ್ ಪದವೀಧರರಲ್ಲಿ ಶೇಕಡಾ 40ರಷ್ಟನ್ನು ಉತ್ಪಾದಿಸುತ್ತಿದೆ. ಇನ್ನು ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಬಂದರೆ 47 ವೈದ್ಯಕೀಯ ಕಾಲೇಜುಗಳಿದ್ದು ಪ್ರತಿವರ್ಷ 7 ಸಾವಿರದಷ್ಟು ವೈದ್ಯರು ಪದವಿ ಪಡೆದು ಹೊರಬರುತ್ತಿದ್ದಾರೆ.

ಯಾಕೆ ಹೀಗೆ? ಹೇಳುತ್ತಾ ಹೋದರೆ ಅದೇ ಒಂದು ಸುದೀರ್ಘ ಪ್ರಬಂದ ಬರೆಯಬೇಕಾಗುತ್ತದೆ. ಇಂತಹ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಅದರ ಮಾಲೀಕರಿಗೆ ಅಪಾರ ಲಾಭವಿದೆ. ಸರಕಾರದ ಕೋಟಾ ಕಳೆದು ಉಳಿಯುವ ಆಡಳಿತ ಮಂಡಳಿಯ ಸೀಟುಗಳನ್ನು ಹಣಕ್ಕಾಗಿ ಮಾರಿಕೊಳ್ಳಲಾಗುತ್ತಿದೆ. ಜೊತೆಗೆ ಸರಕಾರದ ಯಾವುದೇ ನಿಯಮಗಳಿಗು ಬೆಲೆ ಕೊಡದೆಖಾಸಗಿ ಕಾಲೇಜುಗಳಲ್ಲಿ ಹೆಚ್ಚುವರಿ ಶುಲ್ಕವನ್ನು ಸುಲಿಗೆ ಮಾಡಲಾಗುತ್ತಿದೆ.ಖಾಸಗಿ ಕಾಲೇಜುಗಳ ಕ್ಯಾಪಿಟೇಶನ್ ದಂದೆ ತಡೆಯಲು ಯಾವ ಸರಕಾರಗಳಿಗುಸಾದ್ಯವಿಲ್ಲ ಮತ್ತು ಮನಸ್ಸೂ ಇಲ್ಲ. ಯಾಕೆಂದರೆ ಎಲ್ಲ ಪಕ್ಷಗಳಲ್ಲೂ ಖಾಸಗಿ ಸಂಸ್ಥೆಗಳ ಮಾಲೀಕರು ಶಾಸಕರಾಗಿಯೊ ಸಚಿವರಾಗಿಯೊ ಇದ್ದೇ ಇರುತ್ತಾರೆ. ಹೇಗೆ ಸರಕಾರದ ವ್ಯವಸ್ಥೆಯಲ್ಲಿ ಈಗಿರುವ ಸಕ್ಕರೆ ಲಾಬಿ ಸರಕಾರವನ್ನು ನಿಯಂತ್ರಿಸುತ್ತಿದೆಯೊ ಅದೇ ರೀತಿ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿ ಸಹ ಕೆಲಸ ಮಾಡುತ್ತಿದೆ, ಕಳೆದ ಎರಡು ದಶಕಗಳಿಂದಲೂ ನಮ್ಮನ್ನಾಳುತ್ತ ಬಂದಿರುವ ಎಲ್ಲ ಸರಕಾರಗಳು ಈ ಉನ್ನತ ಶಿಕ್ಷಣ ದಂದೆಯ ನೆರವಿಗೆ ನಿಂತು ಪ್ರಾಥಮಿಕ ಶಿಕ್ಷಣವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಎದ್ದು ಕಾಣುತ್ತಿದೆ. ಪ್ರತಿವರ್ಷದ ಆಯವ್ಯಯದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಶೇಕಡಾ ಹತ್ತಕ್ಕಿಂತ ಹೆಚ್ಚು ಅನುದಾನ ದೊರೆಯುತ್ತಿಲ್ಲ. ಮತ್ತು ಹೀಗೆ ದೊರೆತ ಅನುದಾನ ಕೂಡ ಸಿಬ್ಬಂದಿಯ ಸಂಬಳ ಇತ್ಯಾದಿಗಳಿಗೆ ಬಹುಪಾಲು ಖರ್ಚಾಗುತ್ತಿದೆ.ಸರಿ ಸುಮಾರು 57 ಸಾವಿರದಷ್ಟಿರುವ ಸರಕಾರಿ ಪ್ರಾಥಮಿಕ ಶಾಲೆಗಳ ದುಸ್ಥಿತಿಯನ್ನು ತಿಳಿಯಲುಅವುಗಳ ಕಟ್ಟಡಗಳನ್ನು ನೋಡಿದರೆ ಸಾಕು. ಬಹಳಷ್ಟು ಶಾಲೆಗಳು ದಶಕಗಳ ಹಿಂದೆ ಕಟ್ಟಲ್ಪಟ್ಟವಾಗಿದ್ದು ಅವುಗಳ ಒಳ ಹೋಗುವ ಯಾವ ಆಕರ್ಷಣೆಯು ಮಕ್ಕಳಿಗೆ ಉಳಿದಿರುವಂತೆ ಕಾಣುವುದಿಲ್ಲ. ಸುಸ್ಥಿತಿಯಲ್ಲಿರುವ, ಮಕ್ಕಳಿಗೆ ಆಕರ್ಷಕವಾಗಿರುವ ಕಟ್ಟಡಗಳನ್ನು ಹೊಂದಿರದ ಶಾಲೆಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹೋಲಿಸಿ ನೋಡಿ. ಇವತ್ತು ಬಹುತೇಕ ಖಾಸಗಿ ಸಂಸ್ಥೆಗಳ ಕಾಲೇಜುಗಳು ಪಂಚತಾರಾ ಹೋಟೆಲುಗಳ ರೀತಿಯಲ್ಲಿ ವಿನ್ಯಾಸಗೊಂಡಿರುತ್ತವೆ. ನಮ್ಮ ಸರಕಾರಿ ಶಾಲೆಗಳ ಹೆಂಚಿನ ಕಟ್ಟಡಗಳು ಸುಣ್ಣಬಣ್ಣ ಕಾಣದೆ, ಮಳೆ ಬಂದರೆ ಸೋರುವ ಸ್ಥಿತಿಯಲ್ಲೇ ಇರುತ್ತವೆ. ಮಕ್ಕಳು ಸ್ವಯಂಆಕರ್ಷಣೆಯಿಂದ ಶಾಲೆಗೆ ಬಂದು ಕಲಿಯುವಂತಹ ಕಟ್ಟಡಗಳನ್ನಾಗಲಿ, ಅವರ ಪಠ್ಯಕ್ಕೆ ಪೂರಕಾದ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಬೇಕಾದ ಉಪಕರಣಗಳ ಸೌಲಭ್ಯಗಳಾಗಲಿ ಇರದ ಸರಕಾರಿ ಶಾಲೆಗಳನ್ನು ಸರಕಾರ ತನ್ನ ಅನಿವಾರ್ಯ ಕರ್ಮವೆಂಬಂತೆ ನಡೆಸುತ್ತಿದೆ. ಪ್ರಾಥಮಿಕ ಶಿಕ್ಷಣ ಸೃಜನಶೀಲವಾಗಿದ್ದರೆ ಮಾತ್ರ ಮಕ್ಕಳ ಬೌದ್ದಿಕ ಬದುಕು ಚೆನ್ನಾಗಿರುತ್ತದೆ. ಆದರೆ ನಾನು ಕಂಡಂತೆ ಸರಕಾರಿ ಶಾಲೆಗಳಲ್ಲಿರುವ ಅವ್ಯವಸ್ಥೆಗಳು ಮಕ್ಕಳು ಶಾಲೆಯಿಂದ ವಿಮುಖರಾಗುವಂತೆ ಮಾಡುತ್ತಿವೆ. ಇದರ ಜೊತೆಗೆ ಇವತ್ತಿಗೂ ಬಹಳಷ್ಟು ಶಾಲೆಗಳು ಏಕೋಪಾದ್ಯಾಯ ಶಾಲೆಗಳಾಗಿದ್ದು ಅವುಗಳಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕನೊಬ್ಬ ಶಿಕ್ಷಕ ವೃತ್ತಿಯ ಜೊತೆಜೊತೆಗೆ ಆಡಳಿತದ ವಿಷಯಗಳನ್ನೂ , ಈಗೀಗ ಬಿಸಿಯೂಟದ ಜವಾಬ್ದಾರಿಗಳನ್ನು ನಿಬಾಯಿಸಬೇಕಾಗಿದ್ದು ಆತ ಕ್ರಿಯಾಶೀಲನಾಗಿ ಮಕ್ಕಳಿಗೆ ಪಾಠಮಾಡುವ ಉತ್ಸಾಹವನ್ನೇ ಕಳೆದುಕೊಂಡಿರುತ್ತಾನೆ. ಇನ್ನು ಶಿಕ್ಷಕರುಗಳ ಪಾಡು ಹೇಳ ತೀರದು ಯಾವುದೇ ಗಣತಿಯ ಕಾರ್ಯವಿರಲಿ, ಚುನಾವಣೆಯ ಕಾರ್ಯವಾಗಲಿ ಆತನೇ ಮಾಡಬೇಕಾದ ಒತ್ತಡಗಳಿವೆ. ಒಂದು ಹಳ್ಳಿಯಲ್ಲಿ ಏಕ ಉಪಾದ್ಯಾಯ ಶಾಲೆಯಿದೆ ಅಂದುಕೊಂಡರೆ, ಆ ಶಾಲೆಯ ಶಿಕ್ಷಕಬೆಳಿಗ್ಗೆ ಎದ್ದು ಶಾಲೆಗೆ ಬಂದು, ಮೊದಲಿಗೆ ಬಿಸಿಯೂಟದ ಸಿಬ್ಬಂದಿಗೆ ದವಸದಾನ್ಯ ನೀಡಿ ಅದರ ಉಸ್ತುವಾರಿಯನ್ನು ನೋಡುತ್ತಲೇ ಪಾಠ ಮಾಡಬೇಕು. ಇನ್ನು ವರ್ಷದ ಆರಂಭದಲ್ಲಿ ಮಕ್ಕಳನ್ನು ದಾಖಲಾತಿ ಮಾಡುವ ಮತ್ತು ಉತ್ತೀರ್ಣರಾಗಿ ಹೊರಹೋಗುವ ಮಕ್ಕಳಿಗೆ ಟಿ.ಸಿ. ನೀಡುವುದನ್ನೂ ಮಾಡಬೇಕು. ಇದೆಲ್ಲದರ ಜೊತೆಗೆ ತಾಲ್ಲೂಕು ಕೇಂದ್ರಕ್ಕೆ ಹೋಗಿ ಮಕ್ಕಳಿಗೆ ಬಂದಿರುವ ಉಚಿತ ಪುಸ್ತಕಗಳನ್ನು ಸಮವಸ್ತ್ರಗಳನ್ನು ಹೊತ್ತು ತರಬೇಕು. ಒಮ್ಮೊಮ್ಮೆ ಇಂತಹ ಕೆಲಸಗಳಿಗಾಗಿ ಆತ ಬಹಳಷ್ಟು ಸಾರಿ ಅಲೆದಾಡಬೇಕು. ಈ ಅವಧಿಯಲ್ಲಿ ಆತ ಲಭ್ಯವಿರುವ ಪಕ್ಕದ ಶಾಲೆಯ ಶಿಕ್ಷಕನನ್ನು ಓಓಡಿ ಹಾಕಿಸಿಕೊಳ್ಳಬೇಕು ಇದು ಸಾದ್ಯವಾಗದೇ ಹೋದರೆ ಶಾಲೆಯನ್ನು ಆ ದಿನ ಮುಚ್ಚ ಬೇಕು. ಇದರ ಅರಿವಿರದ ಪೋಷಕರಿಂದ ಆತ ಬಯ್ಗುಳಗಳನ್ನು ಕೇಳಬೇಕಾಗುತ್ತದೆ. ಹೀಗೆ 21ನೇ ಶತಮಾನದಲ್ಲೂ ನಮ್ಮ ಸರಕಾರಗಳು ಏಕೋಪಾದ್ಯಾಯ ಶಾಲೆಗಳನ್ನು ನಡೆಸುತ್ತಿವೆಯೆಂದರೆ ಅದಕ್ಕಿಂತ ನಾಚಿಕೆಗೇಡಿನ ಮಾತು ಬೇರಿಲ್ಲ. ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಶಿಕ್ಷಕರನ್ನು ನೇಮಿಸದೆ ಕಾಲಕಳೆಯುವ ಸರಕಾರ ಇಲಾಖೆಗೆ ಹೊಸದಾಗಿ ಬರುವ ಶಿಕ್ಷಣ ಮಂತ್ರಿಯ ಮರ್ಜಿಗನುಗುಣವಾಗಿ ಬದಲಿಸುವ ಪರೀಕ್ಷಾಕ್ರಮಗಳಿಂದ ಶಿಕ್ಷಕರು ಮತ್ತು ಮಕ್ಕಳಿಗೆ ತೊಂದರೆಯಾಗುತ್ತಿದೆ. ಇವತ್ತಿಗು ಶಾಲೆಗಳಲ್ಲಿ ಅಗತ್ಯ ಪೀಠೋಪಕರಣಗಳಾಗಲಿ, ಶೌಚಾಲಯಗಳಾಗಲಿ, ಆಟದ ಮೈದಾನಗಳಾಗಲಿ ಇಲ್ಲ. ಮನಸ್ಸು ಮಾಡಿದ್ದರೆ ಕಳೆದ ಅರವತ್ತು ವರ್ಷಗಳಲ್ಲಿ ಪ್ರಾಥಮನಿಕ ಶಿಕ್ಷಣವನ್ನು ವಿಶ್ವ ದರ್ಜೆಗೇರಿಸಬಹುದಾಗಿದ್ದ ಸರಕಾರಗಳು ಕೇವಲ ಉನ್ನತ ಶಿಕ್ಷಣಕ್ಕೆ ಮಹತ್ವ ನೀಡುತ್ತ ಪದವೀಧರರನ್ನು ಉತ್ಪಾದಿಸುವ ಕಾರ್ಖಾನೆಗಳನ್ನು ಪ್ರಾರಂಬಿಸಿದೆಯಷ್ಟೆ!

ಪ್ರಾಥಮಿಕ ಶಾಲೆಗಳು ಮಕ್ಕಳ ವಯೋಸಹಜ ಕುತೂಹಲಗಳನ್ನು ತಣಿಸಿ, ಅವರ ಬೌದ್ದಿಕ ಬೆಳವಣಿಗೆಗಳಿಗೆ ಸಹಕಾರಿಯಾಗಿ ಕಾರ್ಯನಿರ್ವಹಿಸಬೇಕಾಗಿದ್ದ ನಮ್ಮಲ್ಲಿರುವ ಶಾಲೆಗಳು ಸೂಕ್ತ ಕಟ್ಟಡಗಳಿರದೆ, ಸಾಕಷ್ಟು ಶಿಕ್ಷಕರುಗಳಿರದೆ- ಶಿಕ್ಷಕರುಗಳ ಮೇಲಿರುವ ಪಠ್ಯೇತರ ಚಟುವಟಿಕೆಗಳ ಒತ್ತಡಗಳಿಂದಾಗಿ ಅಂತಹ ಮಹತ್ವಪೂರ್ಣ ಕೆಲಸಗಳಾಗುತ್ತಿಲ್ಲ. ಇದಕ್ಕೆ ಪೂರಕವೆಂಬಂತೆ ಶಾಲೆಗಳು ಪ್ರಾರಂಬವಾಗಿ ಮೂರು ತಿಂಗಳಾದರು ಮಕ್ಕಳ ಕೈ ತಲುಪಬೇಕಾದ ಪಠ್ಯಪುಸ್ತಕಗಳು ತಲುಪಿಯೇ ಇರುವುದಿಲ್ಲ. ಇನ್ನು ಸರಕಾರ ನೀಡುವ ಸಮವಸ್ತ್ರ ತಲುಪುವಾಗ ಕನಿಷ್ಠ ಐದಾರು ತಿಂಗಳಾದರು ಆಗಿರುತ್ತದೆ.

ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿನ ಸರಕಾರದ ಇಂತಹ ವೈಫಲ್ಯಗಳನ್ನು ತಮ್ಮ ಬಂಡವಾಳ ಮಾಡಿಕೊಂಡ ಖಾಸಗಿಯವರು ಕಾನ್ವೆಂಟುಗಳೆಂಬ ಅಂಗಡಿಗಳನ್ನು ತೆಗೆದು ಶಿಸ್ತಿನ ಹೆಸರಲ್ಲಿ, ಉತ್ತಮ ಇಂಗ್ಲೀಷ್ ಶಿಕ್ಷಣದ ಹೆಸರಲ್ಲಿ ಪೋಷಕರನ್ನು ಸುಲಿಗೆ ಮಾಡುತ್ತಿವೆ. ಇದನ್ನು ಕಂಡು ಪ್ರಭಾವಿತರಾದ ಮದ್ಯಮವರ್ಗ ಮತ್ತು ಬಡವರು ಸಾಲಸೋಲ ಮಾಡಿ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಇವತ್ತು ಹಳ್ಳಿಗಳ ಬಹಳಷ್ಟು ಜನರು ಇಂತಹ ಖಾಸಗಿ ಶಾಲೆಗಳ ಆಕರ್ಷಣೆಗೆ ಬಲಿಯಾಗಿ ತಮ್ಮ ಮಕ್ಕಳನ್ನು ಪಟ್ಟಣಗಳ ಶಾಲೆಗಳಿಗೆ ಕಳಿಸುತ್ತಿದ್ದಾರೆ. ಹೀಗಾಗಿ ಬಹುತೇಕ ಸರಕಾರಿ ಶಾಲೆಗಳಲ್ಲಿನ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ. ಇದನ್ನೇ ಕಾಯುತ್ತಿದ್ದವರಂತೆ ಸರಕಾರ ಕಡಿಮೆ ಮಕ್ಕಳ ನೆಪ ಹೇಳಿ ಸರಕಾರಿ ಶಾಲೆಗಳನ್ನು ಮುಚ್ಚುತ್ತಿವೆ. ಅಥವಾ ಸಚಿವರ ಬಾಷೆಯಲ್ಲಿಯೇ ಹೇಳುವುದಾದರೆ ವಿಲೀನಗೊಳಿಸುತ್ತಿವೆ.

ಒಟ್ಟಿನಲ್ಲಿ ನಮ್ಮ ಸರಕಾರಗಳು ಉನ್ನತ ಶಿಕ್ಷಣಕ್ಕೆ ನೀಡುತ್ತಿರುವ ಪ್ರದಾನ್ಯತೆಯನ್ನು ಪ್ರಾಥಮಿಕ ಶಿಕ್ಷಣಕ್ಕೆ ನೀಡದೆ ನಮ್ಮ ಮಕ್ಕಳ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ.

ಸೆಪ್ಟೆಂ 9, 2015

ಶೈಕ್ಷಣಿಕ ಸಾಲಕ್ಕೆ ಸರಕಾರವೇ ಗ್ಯಾರಂಟಿ: ದೆಹಲಿ ಸರಕಾರದ ಯೋಜನೆ

ಉನ್ನತ ಶಿಕ್ಷಣವೀಗ ಖರ್ಚಿನ ಬಾಬತ್ತು. ಸರಕಾರೀ ಸಂಸ್ಥೆಗಳಲ್ಲಿರುವ ಶುಲ್ಕವನ್ನು ಭರಿಸುವುದೇ ಅನೇಕರಿಗೆ ಕಷ್ಟವಾಗಿರುವಾಗ ಖಾಸಗಿ ಸಂಸ್ಥೆಗಳಲ್ಲಿನ ಶುಲ್ಕವನ್ನು ಭರಿಸಿ ಓದುವುದು ದೂರದ ಮಾತೇ ಸರಿ. ಬ್ಯಾಂಕುಗಳೇನೋ 12ರಿಂದ 14% ಬಡ್ಡಿಗೆ ಸಾಲ ನೀಡುತ್ತವೆ. ಆದರೆ ಈ ಸಾಲ ಪಡೆಯಲು ವಿದ್ಯಾರ್ಥಿಯ ಪೋಷಕರ ಬಳಿ ಖಾತರಿಯಾಗಿಡಲು ಆಸ್ತಿ ಪಾಸ್ತಿ ಇರಬೇಕು. ಇಲ್ಲವಾದಲ್ಲಿ ಬ್ಯಾಂಕುಗಳು ಸಾಲ ನೀಡುವುದಿಲ್ಲ. ಎಷ್ಟು ಜನರ ಬಳಿ ಈ ರೀತಿ ಆಸ್ತಿ ಇರಲು ಸಾಧ್ಯ. ಆಸ್ತಿ ವಂಚಿತರು ಕೊನೆಗೆ ಉನ್ನತ ಶಿಕ್ಷಣದಿಂದಲೂ ವಂಚಿತರಾಗುವ ಸಾಧ್ಯತೆ ಅಧಿಕ. 

ಇಂತವರಿಗೆ ಸಹಾಯವಾಗಲೆಂಬ ಉದ್ದೇಶದಿಂದ ದೆಹಲಿ ಸರಕಾರ ಹೊಸತೊಂದು ಯೋಜನೆಯನ್ನು ಜಾರಿಗೆ ತಂದಿದೆ. ಪೋಷಕರ ಬಳಿ ಖಾತರಿಯಾಗಿಡಲು ಆಸ್ತಿ ಪಾಸ್ತಿ ಇರದಿದ್ದರೂ ಪರವಾಗಿಲ್ಲ, ವಿದ್ಯಾರ್ಥಿಯ ಸಾಲಕ್ಕೆ ಸರಕಾರವೇ ಗ್ಯಾರಂಟಿ ಕೊಡುತ್ತದೆ! ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಭರವಸೆಯನ್ನು ಈಡೇರಿಸಿರುವ ದೆಹಲಿಯ ಆಪ್ ಸರಕಾರ ಹತ್ತು ಲಕ್ಷದವರೆಗಿನ ಸಾಲಕ್ಕೆ ಬ್ಯಾಂಕಿಗೆ ಖಾತರಿಯಾಗುತ್ತಾರೆ. ಆರ್ಥಿಕವಾಗಿ ಹಿಂದುಳಿದು ದುಡ್ಡಿನ ಕೊರತೆಯ ಕಾರಣದಿಂದ ಉನ್ನತ ಶಿಕ್ಷಣಕ್ಕೆ ಸೇರಲಾಗದವರಿಗೆಲ್ಲರಿಗೂ ಈ ಯೋಜನೆಯಿಂದ ಪ್ರಯೋಜನವಾಗಲಿದೆ.

ಈ ಯೋಜನೆ ಸರಕಾರೀ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಓದುತ್ತಿರುವ/ಓದಲು ಬಯಸುವ ವಿದ್ಯಾರ್ಥಿಗಳೆಲ್ಲರಿಗೂ ಲಭ್ಯವಿದೆ. ಸರಕಾರವೇ ಹೇಳುವಂತೆ ಈ ಯೋಜನೆಯ ಯಶಸ್ಸು ಓದು ಮುಗಿಸಿ ಕೆಲಸಕ್ಕೆ ಸೇರುವ ವಿದ್ಯಾರ್ಥಿಗಳ ಮೇಲಿದೆ. ಕೆಲಸ ಸಿಕ್ಕ ಮೇಲೆ ಸಮಯಕ್ಕೆ ಸರಿಯಾಗಿ ಸಾಲ ತೀರಿಸಿದರಷ್ಟೇ ಈ ಯೋಜನೆ ಮುಂದಿನ ವಿದ್ಯಾರ್ಥಿಗಳಿಗೂ ಯಶಸ್ವಿಯಾಗಿ ಮುಂದುವರೆಯುತ್ತದೆ. ಇಲ್ಲವಾದರೆ ಆರ್ಥಿಕ ಹೊರೆಯ ನೆಪವೊಡ್ಡಿ ಮುಂದಿನ ಸರಕಾರಗಳು ಹಂತಹಂತವಾಗಿ ಯೋಜನೆಯನ್ನೇ ಸ್ಥಗಿತಗೊಳಿಸಿಬಿಡಬಹುದು. ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸರಕಾರವೇ ಉತ್ತಮವಾಗಿ ನಡೆಸುವುದು ಅತ್ಯುತ್ತಮ ವ್ಯವಸ್ಥೆ, ಖಾಸಗೀಕರಣವನ್ನು ಸದ್ಯಕ್ಕೆ ತಡೆಯುವ ಉಪಾಯ ಇಲ್ಲದ ಕಾರಣ ಖಾಸಗೀಕರಣದಿಂದ ಹೆಚ್ಚಳವಾದ ಶುಲ್ಕ ಬಡವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ತೊಂದರೆಯುಂಟುಮಾಡಬಾರದೆಂಬ ಉದ್ದೇಶದ ಈ ಯೋಜನೆ ದೆಹಲಿಯಲ್ಲಿ ಯಶಸ್ವಿಯಾಗಲಿ, ದೇಶದೆಲ್ಲೆಡೆ ಇಂತಹ ಯೋಜನೆಗಳು ಜಾರಿಯಾಗಲಿ.

ಮಾರ್ಚ್ 19, 2013

ನವಸಮಾಜವಾದದ ಹರಿಕಾರ ಹ್ಯುಗೋ ಷಾವೇಜ್!



ಡಾ ಅಶೋಕ್ ಕೆ ಆರ್

ಹ್ಯುಗೋ ಷಾವೆಜ್! ಇಪ್ಪತ್ತೊಂದನೇ ಶತಮಾನದ ಸಮಾಜವಾದಿ ನಾಯಕ, ಲ್ಯಾಟಿನ್ ಅಮೆರಿಕಾದಲ್ಲಿ ಸಮಾಜವಾದದ ಉದಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವ, ಸಮಾಜವಾದದ ಹೆಸರಿನಲ್ಲಿ ಡಿಕ್ಟೇಟರ್ ಆಗಲು ಹೊರಟವ, ಪ್ರತಿಯೊಂದೂ ತನ್ನ ಆಣತಿಯಂತೆಯೇ ನಡೆಯಬೇಕು ಎಂಬ ಹಟದವ...... ಹ್ಯುಗೋ ಷಾವೆಜ್ ಬಗೆಗೆ ತಿಳಿಯಲು ಪುಸ್ತಕಗಳನ್ನೋ ಅಂತರ್ಜಾಲವನ್ನೋ ತೆರೆದು ಕುಳಿತರೆ ವಿವಿಧ ರೀತಿಯ ವ್ಯಕ್ತಿಕ್ವ ವರ್ಣನೆ ನಮ್ಮನ್ನು ತಬ್ಬಿಬ್ಬುಗೊಳಿಸುವುದು ಸಹಜ! ಉಳಿದ ದೇಶದವರ ಮಾತು ಬಿಡಿ ವೆನೆಜುವೆಲಾದ ನಾಗರೀಕರೇ ಅಂತರ್ಜಾಲದಲ್ಲಿ ಅಗಲಿದ ತಮ್ಮ ನಾಯಕನ ಬಗ್ಗೆ ವಿಷ ಕಾರಿದ್ದಾರೆ! ಹಾಗಿದ್ದರೆ ಹ್ಯುಗೋ ಷಾವೆಜ್ ಕೇವಲ ಸರ್ವಾಧಿಕಾರಿಯಾ? ವೆನೆಜುವೆಲಾಗೆ ಏನು ಕೊಡುಗೆಯನ್ನೇ ನೀಡಲಿಲ್ಲವಾ? ತನ್ನ ಅಹಂ ತೃಪ್ತಿಪಡಿಸಿಕೊಳ್ಳಲಷ್ಟೇ ಸಮಾಜವಾದದ ಹೆಸರು ಉಪಯೋಗಿಸಿಕೊಂಡ ನಾಯಕನಾ?!

ಅಕ್ಟೋ 13, 2012

ಮಲಾಳ ಯೂಸುಫ್ ಝಾಯಿಯ ಡೈರಿಯಿಂದ



malala yousufzai

ಪಾಕಿಸ್ತಾನಿ ತಾಲಿಬಾನಿಗಳಿಂದ ಗುಂಡೇಟು ತಿಂದು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಈ ಹೋರಾಟಗಾರ್ತಿ ಮಾಡಿದ ತಪ್ಪಾದರೂ ಏನು? ಹೆಣ್ಣುಮಕ್ಕಳು ಶಾಲೆಗೆ ಹೋಗಬಾರದು ಎಂಬ ತಾಲಿಬಾನ್ ಆದೇಶವನ್ನು ವಿರೋಧಿಸಿದ್ದೇ ಇವಳ ಅಪರಾಧ! ಎರಡು ವರುಷದ ಮುಂಚೆ ಬರೆದ ದಿನಚರಿಗಳನ್ನು ಗುಲ್ ಮಕಾಯಿ ಎಂಬ ಕಾವ್ಯನಾಮದಡಿಯಲ್ಲಿ ಬಿಬಿಸಿ ಉರ್ದುವಿನಲ್ಲಿ ಪ್ರಕಟಣೆಗೆ ನೀಡಿದ್ದು ಇವಳ ಬಹುದೊಡ್ಡ ತಪ್ಪು. ಅಂದಹಾಗೆ ಮಲಾಳ ಯೂಸುಫ್ ಝಾಯಿ ಎಂಬ ಹೆಸರಿನ ಈ ಹೋರಾಟಗಾರ್ತಿಯ ವಯಸ್ಸು ಹದಿನಾಲ್ಕು!

ಸೆಪ್ಟೆಂ 3, 2012

ಮಿನುಗುವ ಮನಗಳ “ರಸ್ತೆ ನಕ್ಷತ್ರ”



-      ಡಾ ಅಶೋಕ್ ಕೆ ಆರ್.

ಇಲ್ಲಿಯವರೆಗೆ ಹೆಚ್ಚುಕಡಿಮೆ ನಾಲ್ಕುನೂರು ಪುಸ್ತಕಗಳನ್ನು ಓದಿದ್ದೇನೆ. ಕಥೆ – ಕವಿತೆ – ಕಾದಂಬರಿ – ನಾಟಕ – ಹಾಸ್ಯ – ಆತ್ಮಕತೆ – ಸಾಮಾಜಿಕ – ಚಿಂತನೆ – ಪ್ರಬಂಧಗಳು – ಐತಿಹಾಸಿಕ – ಕಾಮೋದ್ರೇಕ – ಆದ್ಯಾತ್ಮ ಹೀಗೆ ಇನ್ನೂ ವಿಧವಿಧವಾದ ಪುಸ್ತಕಗಳನ್ನು ಓದಿರುವೆನಾದರೂ ಇದೊಂದು ಪುಸ್ತಕವನ್ನು ಸಾಹಿತ್ಯದ ಯಾವ ಉಪವಿಭಾಗಕ್ಕೆ ಸೇರಿಸಬೇಕೆಂದು ತಿಳಿಯದೆ ಗೊಂದಲಕ್ಕೀಡಾಗಿದ್ದೇನೆ! ಬಡಜನರ ಆತ್ಮಕಥೆಯಷ್ಟೇ ಎಂದುಕೊಳ್ಳೋಣವೆಂದರೆ ದುತ್ತನೆ ರಾಜಕೀಯ ಧಾರ್ಮಿಕ ವಿಶ್ಲೇಷಣೆ ಎದುರಾಗುತ್ತದೆ! ಯಾವ ತಾತ್ವಿಕನಿಗೂ ಕಾಣದ ಜೀವನದೃಷ್ಟಿ ಇಲ್ಲಿರುವ ಜನಸಾಮಾನ್ಯರ ಮಾತಿನಲ್ಲಿ ಸಲೀಸಾಗಿ ಕಾಣಸಿಗುತ್ತದೆ. ಅಯೋಧ್ಯೆಯಿಂದ ಹಿಡಿದು ಭಾರತೀಯ ಸೈನ್ಯದ ವಿಶ್ಲೇಷಣೆಯೂ ನಡೆದುಬಿಡುತ್ತದೆ! ಅಂದಹಾಗೆ ಪುಸ್ತಕದ ಹೆಸರು ‘ರಸ್ತೆ ನಕ್ಷತ್ರ’. ಆಕಾಶದೆಡೆಗೆ ನೆಟ್ಟು ಹೋದ ನಮ್ಮ ನಿಲುವುಗಳನ್ನು ರಸ್ತೆಯ ಮೇಲೆ ಎಳೆದುತಂದು ನಕ್ಷತ್ರಗಳನ್ನು ಗುರುತಿಸುವಂತೆ ಮಾಡಿದ ಶ್ರೇಯ ಇತ್ತೀಚೆಗಷ್ಟೇ ಪಿ.ಸಾಯಿನಾಥ್ ಪ್ರಶಸ್ತಿ ಪಡೆದ ಟಿ.ಕೆ. ದಯಾನಂದರವರದು.

ಆಗ 23, 2012

ತೀವ್ರವಾದದ ನಡುವೆ ಸೊರಗುತ್ತಿರುವ ಮನುಷ್ಯ ಧರ್ಮ


 ಡಾ ಅಶೋಕ್. ಕೆ. ಆರ್.
ಇತ್ತೀಚೆಗಷ್ಟೇ ಸುಳ್ಯ ಮತ್ತು ಪುತ್ತೂರಿನ ಸುತ್ತಮುತ್ತ ವಾಸಿಸುತ್ತಿರುವ ನಿರಾಶ್ರಿತ ಶ್ರೀಲಂಕಾ ತಮಿಳರು ಪಡಿತರ ಚೀಟಿಯನ್ನು ವಿತರಿಸಬೇಕೆಂದು ಪ್ರತಿಭಟಿಸಿದರು. ಟಿಬೆಟ್ಟಿನಲ್ಲಿ ಚೀನಾ ದೇಶದ ಶೋಷಣೆಯನ್ನು ಖಂಡಿಸಿ ಕೆಲವು ತಿಂಗಳುಗಳ ಹಿಂದೆ ಟಿಬೆಟ್ಟಿಯನ್ನರು ಭಾರತದ ವಿವಿದೆಡೆ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೂ ತಿರುಗಿತ್ತು. ನೇಪಾಳಿಗರ ವಲಸೆ ನಿರಂತರವಾಗಿ ನಡೆಯುತ್ತದೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಮಾನವ ಹಕ್ಕು ಆಯೋಗದ ವರದಿಯಂತೆ ಕಳೆದ ಮೂರು ವರ್ಷದಲ್ಲಿ ಮೂರು ಸಾವಿರಕ್ಕೂ ಅಧಿಕ ಹಿಂದೂ ಪಾಕಿಗಳು ಭಾರತಕ್ಕೆ ವಲಸೆ ಬಂದಿದ್ದಾರೆ. ಈ ವಲಸೆಗಳ ಬಗ್ಗೆ ಇಲ್ಲದ ಆಕ್ರೋಶ ಬಾಂಗ್ಲಾ ವಲಸಿಗರ ಮೇಲೆ ಮಾತ್ರ ಯಾಕೆ? ಬಾಂಗ್ಲಾ ವಲಸಿಗರು ಸ್ಥಳೀಯ ಬೋಡೋ ಆದಿವಾಸಿಗಳ ಮೇಲೆ ನಡೆಸಿರುವ ಕ್ರೌರ್ಯವಷ್ಟೇ ಇದಕ್ಕೆ ಕಾರಣವಾ? ಆಶ್ರಯನೀಡಿದ ದೇಶಕ್ಕೆ ಅವರು ದ್ರೋಹಬಗೆಯುತ್ತಿದ್ದಾರೆಂಬ ಅಸಹನೆಯಾ? ಆಶ್ರಯ ನೀಡಿದ ದೇಶದ ಪ್ರಧಾನಮಂತ್ರಿಯನ್ನೇ ಕೊಂದ ಜನರ ವಿರುದ್ಧ ‘ದೇಶಭಕ್ತಿಯ’ ಹೆಸರಿನಲ್ಲಿ ಕೂಗಾಡದ ಮಂದಿ ಬಾಂಗ್ಲಾ ವಲಸಿಗರ ವಿರುದ್ಧ ಪ್ರತಿಭಟನೆಯ ಅಸ್ತ್ರ ಝಳಪಿಸುತ್ತಿರುವುದ್ಯಾಕೆ? ಬಾಂಗ್ಲಾ ವಲಸಿಗರು ಮುಸಲ್ಮಾನರೆಂಬ ಕಾರಣಕ್ಕೆ ಬಿಜೆಪಿ, ಆರೆಸ್ಸೆಸ್, ಶ್ರೀರಾಮ ಸೇನೆಯಂಥ ಸಂಘಟನೆಗಳು ದೊಡ್ಡ ಮಟ್ಟದಲ್ಲಿ ಗುಲ್ಲೆಬ್ಬಿಸುತ್ತಿದ್ದಾರಾ?

ಆಗ 1, 2012

ಪಾಲಿಸಲಾಗದ ಸತ್ಯವೇ “ಚಲಂ”!

ಚಲಂ

ಡಾ ಅಶೋಕ್. ಕೆ. ಆರ್
ಉಪೇಂದ್ರ ನಿರ್ದೇಶಿಸಿದ ‘ಉಪೇಂದ್ರ’ ಚಿತ್ರದ ಆರಂಭದಲ್ಲಿ ಬೇತಾಳನ ಪಾತ್ರಧಾರಿ ‘ಮನಸ್ಸಿನ ಮಾಲಿನ್ಯ’ ಎಂಬ ಪದವನ್ನು ಉಪಯೋಗಿಸುತ್ತಾನೆ. ಹಿಂದೊಮ್ಮೆ ಗೆಳೆಯನೊಡನೆ ಯಾವುದೋ ಚರ್ಚೆ ನಡೆಸುತ್ತಿದ್ದಾಗ ‘ಎಲ್ಲರೊಳಗೂ ಹಾದರದ ಮನಸ್ಸಿರುತ್ತೆ ಕಂಟ್ರೋಲ್ ಮಾಡ್ಕೊಂಡಿರ್ತೀವಿ ಅಷ್ಟೇ!’ ಎಂದು ಹೇಳಿದ್ದೆ. ಮನಸ್ಸಿನಾಳದಲ್ಲಿ ನಮ್ಮೆಲ್ಲರಲ್ಲೂ ಕಲ್ಮಶವೇ ಇರುತ್ತಾ? ನಿಷ್ಕಲ್ಮಶ ಎಂಬ ಪದವೇ ನಿರರ್ಥಕವಾದುದಾ? ಎಂಬ ಪ್ರಶ್ನೆ ಬಹಳಷ್ಟು ಕಾಡಿದ್ದಿದೆ. ಎಲ್ಲರ ಮನದೊಳಗೂ ಕೆಟ್ಟ ಆಲೋಚನೆಗಳು, ಕೆಟ್ಟ ವಿಚಾರಗಳು ಬಂದೇ ಬರುತ್ತದೆಂದು ನನ್ನ ನಂಬಿಕೆ. ನನ್ನದು ನಿಷ್ಕಲ್ಮಶ ಮನಸ್ಸು ಎಂದು ಹೇಳಿಕೊಳ್ಳುವವರ ಬಗ್ಗೆ ಅಸಡ್ಡೆ. ಆದರೆ ಮನಸ್ಸಿನ ಯೋಚನೆ- ಯೋಜನೆಗಳನ್ನೆಲ್ಲ ಕಲ್ಮಶ ನಿಷ್ಕಲ್ಮಶವೆಂದು ಭೇದ ಮಾಡದೆ ಆಚರಣೆಯಲ್ಲಿ ತರುವುದು ಕಷ್ಟಸಾಧ್ಯ. ನೈತಿಕ ಅನೈತಿಕತೆಯ ಪ್ರಶ್ನೆ, ಸಂಭಾವಿತನಾಗಬೇಕೆಂಬ ಹಪಾಹಪಿ, ಸಮಾಜದಲ್ಲೊಂದು ಗೌರವ ಪಡೆಯಬೇಕೆಂಬ ಆಸೆ ಇವೆಲ್ಲವೂ ನಮ್ಮ ಮನದ ಎಷ್ಟೋ ಯೋಚನೆಗಳನ್ನು ಹತ್ತಿಕ್ಕಿಬಿಡುತ್ತವೆ. ಆ ‘ಕೆಟ್ಟ’ ಯೋಚನೆಗಳನ್ನು ತಡೆದುಬಿಟ್ಟೆನಲ್ಲ ಎಂದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುತ್ತ ಆತ್ಮರತಿಯಲ್ಲಿಯೇ ಕಳೆದುಹೋಗುತ್ತೀವಿ. 

ಜುಲೈ 17, 2012

ಬಡವರ “ಕೊಳಚೆ” ಉಳಿದವರ “ಶುದ್ಧತೆ”


ಡಾ ಅಶೋಕ್ ಕೆ ಆರ್
ಸನ್ಮಾನ್ಯ ಶ್ರೀ ಶ್ರೀ ಶ್ರೀ ಪೇಜಾವರ ಸ್ವಾಮಿಗಳಿಗೆ ಸೆಡ್ಡು ಹೊಡೆಯಲು ಮತ್ತೊಬ್ಬ ಹುಟ್ಟಿದ್ದಾನೆ. ಶ್ರೀಗಳು ಮಾಂಸಾಹಾರಿಗಳ ಪಕ್ಕ ಕುಳಿತು ಊಟ ಮಾಡಿದರೆ ಸಸ್ಯಾಹಾರಿ ಬ್ರಾಹ್ಮಣರೂ ಮಾಂಸಾಹಾರಿಗಳಾಗಿಬಿಡುತ್ತಾರೆಂದು ಗಾಬರಿಗೊಂಡಿದ್ದರು. ನಂತರ ತಮ್ಮ ಹೇಳಿಕೆಯ ಬಗ್ಗೆ ಸಮಜಾಯಿಷಿಗಳನ್ನೂ ಕೊಟ್ಟಿದ್ದರು. ಇಂದು ಕರ್ನಾಟಕ ಅನುದಾನರಹಿತ ಶಾಲೆಗಳ ಸಂಘ ಕುಸ್ಮಾದ ಅಧ್ಯಕ್ಷ ಜಿ.ಎಸ್. ಶರ್ಮರವರು ಶಿಕ್ಷಣ ಹಕ್ಕು ಕಾಯ್ದೆಯನ್ನು ವಿರೋಧಿಸುತ್ತ “ಸಮುದ್ರಕ್ಕೆ ಕೊಳಚೆ ನೀರು ಬಂದು ಸೇರಿದರೆ ಇಡೀ ಸಮುದ್ರವೇ ಕೊಳಚೆಯಾಗುತ್ತದೆ. ನೀರು ಯಾವಾಗಲೂ ಶುದ್ಧ ಆಗಿರಬೇಕು. ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಸಂಸ್ಕೃತಿ ವಿಭಿನ್ನ. ಬಡ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡ ಮರುದಿನವೇ ಉಳಿದ ಪೋಷಕರು ಬಂದು ಮಕ್ಕಳ ವರ್ಗಾವಣೆಗೆ ಪತ್ರ ಕೇಳುವ ಅಪಾಯವಿದೆ.

ಡಿಸೆಂ 7, 2011

ಶಿಕ್ಷಣದ ಮಾಧ್ಯಮ ಯಾವುದಿರಬೇಕು?

ಡಾ ಅಶೋಕ್. ಕೆ. ಆರ್
ಶಿಕ್ಷಣದ ಮೂಲಉದ್ದೇಶ ನಮ್ಮನ್ನು ಸಾಕ್ಷರಗೊಳಿಸುವುದರ ಜೊತೆಗೆ ನಮ್ಮನ್ನು ವಿಚಾರಪ್ರಿಯರನ್ನಾಗಿ ಮಾಡಿ ನಮ್ಮ ವೈಚಾರಿಕತೆಯನ್ನು ಉನ್ನತ ಮಟ್ಟಕ್ಕೇರಿಸಿ ಹಳೆಯ ಆಚಾರ ವಿಚಾರಗಳಲ್ಲಿ ಉತ್ತಮವಾದ ನಂಬಿಕೆಗಳನ್ನು ಉಳಿಸಿಕೊಂಡು ಮೂಢನಂಬಿಕೆಗಳನ್ನು ತೊಡೆದು ಜಾತಿ – ಧರ್ಮದ ಕಂದಕ ಅಂತರವನ್ನು ಕಡಿಮೆಗೊಳಿಸಿ ಉತ್ತಮ ಮಾನವರನ್ನಾಗಿ ಮಾಡುವುದು. ಆದರಿವು ಆಗುತ್ತಿದೆಯಾ? ಅತಿ ಹೆಚ್ಚು ಅಂಕಗಳನ್ನು ಪಡೆಯುವ, ಹೆಚ್ಚು ಶಿಕ್ಷಿತರಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾವಂತರೂ {ಕೇವಲ ಸಾಕ್ಷರರು ಎಂಬುದು ಸರಿಯಾದ ಪದ} ಕೂಡ ಮಡೆ ಮಡೆ ಸ್ನಾನದಂತಹ ಆಚರಣೆಗೆ ಬೆಂಬಲ ವ್ಯಕ್ತಪಡಿಸುವ ರೀತಿ, ಉಗ್ರ ಬಲಪಂಥೀಯ ಸಂಘಟನೆಗಳು ದಕ್ಷಿಣ ಕನ್ನಡ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ತಮ್ಮ ಬೇರುಗಳನ್ನು ಆಳವಾಗಿ ಭದ್ರಗೊಳಿಸಿಕೊಳ್ಳುತ್ತಿರುವ ಬಗೆಯನ್ನು ನೋಡಿದರೆ ಎಲ್ಲೋ ನಮ್ಮ ಶಿಕ್ಷಣ ಹಾದಿ ತಪ್ಪಿದೆ ಎನ್ನಿಸುವುದಿಲ್ಲವೇ? ನಮ್ಮ ತಂದೆಯವರ ಮದುವೆಯ ಕಾಲದಲ್ಲಿ ಪ್ರಾಮುಖ್ಯತೆ ಪಡೆಯದ ಜಾತಕಫಲ, ಜ್ಯೋತಿಷ್ಯಗಳು [ಆ ಕಾಲದ ಬಹಳಷ್ಟು ಜನರಿಗೆ ತಮ್ಮ ಜನ್ಮದಿನಾಂಕವೇ ಸರಿಯಾಗಿ ತಿಳಿದಿರುತ್ತಿರಲಿಲ್ಲ, ಇನ್ನು ಜಾತಕ ಕೂಡಿಸುವುದು ಎಲ್ಲಿ ಬಂತು?!] ‘ವಿದ್ಯೆ’ಯ ಮಟ್ಟ ಹೆಚ್ಚುತ್ತಿದ್ದಂತೆ ಪ್ರಮುಖವಾಗುತ್ತಿವೆ ಏಕೆ?