ಮೇ 20, 2014

ನಿರೀಕ್ಷೆಗಳನ್ನು ಮೀರಿಸಿದ ಮತದಾರ “ಪ್ರಭು”



ಡಾ ಅಶೋಕ್ ಕೆ ಆರ್
ಭಾರತದ ಬಹುದೊಡ್ಡ ಐಂದ್ರಜಾಲ ಮತದಾನ ಮತ್ತು ಬಹುದೊಡ್ಡ ಐಂದ್ರಜಾಲಿಕ ಮತದಾರ! 2004ರ ಲೋಕಸಭಾ ಚುನಾವಣೆಗಳಿಂದಲೂ ಇದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಭಾರತೀಯ ಲೋಕಸಭಾ ಚುನಾವಣೆ ಬಲವಂತವಾಗಿ ಅಮೆರಿಕಾದ ಅಧ್ಯಕ್ಷೀಯ ಮಾದರಿಯ ಚುನಾವಣೆಯ ರೂಪದಲ್ಲಿ ನಡೆದು ಬಿಜೆಪಿ ಮತ್ತು ನರೇಂದ್ರ ಮೋದಿಯ ವಿರೋಧಿಗಳಿಗಿರಲಿ ಸ್ವತಃ ಬಿಜೆಪಿ ಮತ್ತು ನರೇಂದ್ರ ಮೋದಿಗೇ ಅಚ್ಚರಿಯೆನ್ನಿಸುವ ಫಲಿತಾಂಶ ನೀಡಿದ್ದಾನೆ ಭಾರತದ ಮತದಾರ. ಕಳೆದ ಇಪ್ಪತ್ತೈದು ಮೂವತ್ತು ವರುಷಗಳಿಂದ ಸಾಧ್ಯವಾಗದಿದ್ದ ಇನ್ನು ಮುಂದೆಯೂ ಅಸಾಧ್ಯವೆಂದೇ ತೋರಿದ್ದ ಏಕಪಕ್ಷದ ಬಹುಮತದ ಸಾಧನೆ 2014ರ ಚುನಾವಣೆಯಲ್ಲಿ ಸಾಧ್ಯವಾಗಿದೆ. ಮೊಟ್ಟ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರಕಾರವೊಂದು ಸರಳ ಬಹುಮತದೊಂದಿಗೆ ಸರಕಾರ ರಚಿಸುವಂತಾಗಿದೆ, ಎಲ್ಲರ ನಿರೀಕ್ಷೆಗಳನ್ನೂ ಮೀರಿ. ಚುನಾವಣ ಪೂರ್ವ ಹೊಂದಾಣಿಕೆಗಳನ್ನು ಮಾಡಿಕೊಂಡು ಎನ್.ಡಿ.ಎ ಹೆಸರಿನಡಿಯಲ್ಲಿ ಚುನಾವಣಾ ಆಖಾಡಕ್ಕೆ ಇಳಿದಿದ್ದ ಬಿಜೆಪಿ ತಂಡ ಮುನ್ನೂರಕ್ಕೂ ಅಧಿಕ ಸ್ಥಾನಗಳನ್ನು ಗೆದ್ದುಕೊಂಡಿದೆ. ಮತ್ತೊಂದೆಡೆ ಸ್ವಾತಂತ್ರೋತ್ತರ ಭಾರತದಲ್ಲಿ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್ ಹಿಂದೆಂದೂ ಕಾಣದ ಸೋಲನ್ನನುಭವಿಸಿದೆ. ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಅರವತ್ತು ಚಿಲ್ಲರೆ ಸ್ಥಾನಗಳಿಗೆ ಸೀಮಿತಗೊಂಡಿದ್ದರೆ ಕಾಂಗ್ರೆಸ್ ಐವತ್ತರ ಗಡಿಯನ್ನೂ ದಾಟಲಾಗಲಿಲ್ಲ. ನರೇಂದ್ರ ಮೋದಿ ಮತ್ತಾತನ ಥಿಂಕ್ ಟ್ಯಾಂಕಿನ ಚಾಣಾಕ್ಷತನ, ಜಾಗರೂಕ ರಾಜಕೀಯ ನಡೆಗಳು ನಿರೀಕ್ಷೆಗೂ ಮೀರಿದ ಫಲಿತಾಂಶವನ್ನು ನೀಡಿದೆ ಎಂಬುದರಲ್ಲಿ ಸಂದೇಹವಿಲ್ಲ.

ಅಕ್ಟೋ 22, 2013

ನೂತನ ರಾಜ್ಯಕ್ಕೆ ನೂರಾರು ವಿಘ್ನಗಳು


         ಡಾ ಅಶೋಕ್ ಕೆ ಆರ್

ಚಿಕ್ಕ ರಾಜ್ಯಗಳು ಆಡಳಿತಕ್ಕೆ ಅಭಿವೃದ್ಧಿಗೆ ಅನುಕೂಲಕರವೆಂಬ ದೂರದೃಷ್ಟಿಯಿಂದ ಜಾರ್ಖಂಡ್, ಉತ್ತರಖಂಡ ಮತ್ತು ಚತ್ತೀಸಗಡ ರಾಜ್ಯಗಳನ್ನು 2000ದಲ್ಲಿ ರಚಿಸಲಾಯಿತು. ಕೆಲವೊಂದು ಸಂಗತಿಗಳಲ್ಲಿ ಈ ಚಿಕ್ಕ ರಾಜ್ಯಗಳು ತಮ್ಮ ಮಾತೃ ರಾಜ್ಯಗಳಿಗಿಂತ ಮುನ್ನಡೆದರೆ ಒಟ್ಟಾರೆಯಾಗಿ ದೊಡ್ಡ ರಾಜ್ಯಗಳನ್ನು ಒಡೆದು ಸಣ್ಣ ರಾಜ್ಯಗಳನ್ನು ರಚಿಸಿದ್ದು ರಾಜಕೀಯ ಪಕ್ಷಗಳಿಗೆ ಅಧಿಕಾರಕ್ಕೇರಲು ಅನುಕೂಲಕರವಾಗಿ ಮತ್ತಷ್ಟು ಅಧಿಕಾರಿ ವರ್ಗದವರಿಗೆ ಹೆಚ್ಚಿನ ಭ್ರಷ್ಟಾಚಾರ ಮಾಡಿಕೊಡಲು ಅನುವು ಮಾಡಿಕೊಟ್ಟಿತೇ ಹೊರತು ಚಿಕ್ಕ ರಾಜ್ಯದಿಂದ ಹೆಚ್ಚಿನ ಅಭಿವೃದ್ಧಿ ಎಂಬ ಭರವಸೆಗೆ ನಿರೀಕ್ಷಿತ ಮಟ್ಟದ ಯಶ ಸಿಕ್ಕಿಲ್ಲ. ಚಿಕ್ಕ ರಾಜ್ಯಗಳಿಂದ ಅಭಿವೃದ್ಧಿಯೆಂಬ ನೆಪವೊಡ್ಡಿ ಹೊಸ ರಾಜ್ಯಗಳ ಉದಯವಾಗಿದ್ದು ಒಂದು ಕಡೆಯಾದರೆ 1956ರಲ್ಲಿ ನಡೆದ ರಾಜ್ಯಗಳ ಪುನರ್ ವಿಂಗಡನೆ ಮತ್ತು ರಚನೆಯ ಸಮಯದಲ್ಲಿ ಬಲವಂತದ ವಿಲೀನಗಳು ನಡೆದುಹೋಗಿ ಪ್ರತ್ಯೇಕ ರಾಜ್ಯಕ್ಕೆ ಆ ಪ್ರಾಂತ್ಯದವರು ದಶಕಗಳಿಂದ ಹೋರಾಟಕ್ಕಿಳಿಯುವಂತೆ ಮಾಡಿದ್ದು ಮತ್ತೊಂದು ಕಡೆ. ಪ್ರತ್ಯೇಕ ರಾಜ್ಯಕ್ಕೆ ಹೋರಾಡಿದವರಿಗೆಲ್ಲ ಸ್ಪೂರ್ತಿಯಾದ ಹೋರಾಟ ತೆಲಂಗಾನ ರಾಜ್ಯಕ್ಕಾಗಿ ನಡೆದ ಹೋರಾಟ. ದಶಕಗಳ ರಕ್ತಸಿಕ್ತ ಹೋರಾಟಕ್ಕೆ ಜಯ ಸಿಕ್ಕಿದೆ. ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ಉದಯಿಸುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ನಿಜಾಮರ ಆಳ್ವಿಕೆಯಿಂದ ಹಿಡಿದು ತೆಲಂಗಾಣ ಉದಯಿಸುವವರೆಗೆ ಸಾವಿರಾರು ಜನರ ಬಲಿದಾನವಾಗಿದೆ.

ನವೆಂ 1, 2012

ನಕ್ಸಲರು ಬರದಿದ್ದಲ್ಲಿ “ಚಕ್ರವ್ಯೂಹದ” ಅರಿವಾಗುತ್ತಿರಲಿಲ್ಲವೇನೋ?!



prakash jha

ಡಾ ಅಶೋಕ್ ಕೆ ಆರ್

ಜಮೀನ್ದಾರಿ ಪದ್ಧತಿಯ ವಿರುದ್ಧ, ಭೂರಹಿತರಿಗೆ ಭೂಮಿ ಹಂಚುವ ಪರವಾಗಿ ಪ್ರಾರಂಭವಾದ ನಕ್ಸಲ್ ಬರಿ ಹೋರಾಟ ಭಾರತದ ಚಳುವಳಿಗಳ ಇತಿಹಾಸದಲ್ಲಿ ಕ್ರಮಿಸಿರುವ ಹಾದಿ ದೊಡ್ಡದು, ವಿಸ್ತಾರವಾದುದು. ತನ್ನೊಳಗೇ ಕಾಲಕಾಲಕ್ಕೆ ನಡೆದ ಸೈದ್ಧಾಂತಿಕ ಸಂಘರ್ಷಗಳು, ಒಡಕುಗಳು, ಹಿಂಸಾತ್ಮಕ ಚಳುವಳಿಗಳ ಬಗ್ಗೆ ಮುಖ್ಯವಾಹಿನಿಯ ಬಹುತೇಕ ಜನರಲ್ಲಿರುವ ಭಯಭರಿತ ತಿರಸ್ಕಾರ, ಸಾವಿರಾರು ಕಾರ್ಯಕರ್ತರ – ಮುಖಂಡರ ಸಾವಿನ ನಂತರವೂ ನಕ್ಸಲ್ ಚಳುವಳಿ ಅಂತ್ಯ ಕಂಡಿಲ್ಲ. ನಕ್ಸಲೈಟ್, ಸಿಪಿಐ – ಎಂ.ಎಲ್, ಪೀಪಲ್ಸ್ ವಾರ್ ಗ್ರೂಪ್ ಮುಂತಾದ ಹೆಸರುಗಳಲ್ಲಿ ಚಲಾವಣೆಗೊಳ್ಳುತ್ತಲೇ ಇರುವ ಈ ಸಿದ್ಧಾಂತ ಹತ್ತನ್ನೆರಡು ವರುಷದ ಹಿಂದೆ ಸಣ್ಣ ಸಣ್ಣ ಸಂಘಟನೆಗಳ ವಿಲೀನದ ನಂತರ ಪಡೆದ ಹೆಸರು ಸಿಪಿಐ – ಮಾವೋವಾದಿ. ಪ್ರಧಾನಿ ಮನಮೋಹನಸಿಂಗ್ ಪದೇ ಪದೇ ಉಚ್ಛರಿಸಿರುವುದನ್ನು ಕೇಳಿರುವಿರಾದರೆ ಈ ಚಳುವಳಿ ಭಾರತದ ಅತಿದೊಡ್ಡ ಆಂತರಿಕ ಶತ್ರು. ಸಾವಿರಾರು ಪೋಲೀಸರು – ಅರೆಸೈನಿಕ ಪಡೆ, ಕೋಟ್ಯಾಂತರ ರುಪಾಯಿಯ ಶಸ್ತ್ರಾಸ್ತ್ರಗಳು, ಅತ್ಯಾಧುನಿಕ ತಂತ್ರಜ್ಞಾನ, ಅಭಿವೃದ್ಧಿ – ವಿಕಾಸ ಹೊಂದಲು ನಮ್ಮೊಡನೆ ಕೈಜೋಡಿಸಿ ಎಂಬ ಸರಕಾರದ ಘೋಷಣೆಗಳ ನಡುವೆಯೂ ತನ್ನದೇ ಮಾರ್ಗದಲ್ಲಿ ದೇಶದ ವಿವಿಧ ರಾಜ್ಯ – ಜಿಲ್ಲೆಗಳಲ್ಲಿ ನಕ್ಸಲ್ ಚಳುವಳಿ ಬೆಳೆಯುತ್ತಲೇ ಸಾಗುತ್ತಿದೆ. ಕೆಲವೊಮ್ಮೆ ಅಬ್ಬರದಿಂದ, ಕೆಲವೊಮ್ಮೆ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ನಕ್ಸಲ್ ಚಳುವಳಿಯ ಬಗ್ಗೆ ಇತ್ತೀಚಿನ ದಿನಗಳಲ್ಲಿ ಮೂಡಿ ಬಂದ ಪರಿಣಾಮಕಾರಿ ಚಿತ್ರ ಪ್ರಕಾಶ್ ಝಾ ನಿರ್ದೇಶನದ “ಚಕ್ರವ್ಯೂಹ”.

ಆಗ 1, 2012

ಪಾಲಿಸಲಾಗದ ಸತ್ಯವೇ “ಚಲಂ”!

ಚಲಂ

ಡಾ ಅಶೋಕ್. ಕೆ. ಆರ್
ಉಪೇಂದ್ರ ನಿರ್ದೇಶಿಸಿದ ‘ಉಪೇಂದ್ರ’ ಚಿತ್ರದ ಆರಂಭದಲ್ಲಿ ಬೇತಾಳನ ಪಾತ್ರಧಾರಿ ‘ಮನಸ್ಸಿನ ಮಾಲಿನ್ಯ’ ಎಂಬ ಪದವನ್ನು ಉಪಯೋಗಿಸುತ್ತಾನೆ. ಹಿಂದೊಮ್ಮೆ ಗೆಳೆಯನೊಡನೆ ಯಾವುದೋ ಚರ್ಚೆ ನಡೆಸುತ್ತಿದ್ದಾಗ ‘ಎಲ್ಲರೊಳಗೂ ಹಾದರದ ಮನಸ್ಸಿರುತ್ತೆ ಕಂಟ್ರೋಲ್ ಮಾಡ್ಕೊಂಡಿರ್ತೀವಿ ಅಷ್ಟೇ!’ ಎಂದು ಹೇಳಿದ್ದೆ. ಮನಸ್ಸಿನಾಳದಲ್ಲಿ ನಮ್ಮೆಲ್ಲರಲ್ಲೂ ಕಲ್ಮಶವೇ ಇರುತ್ತಾ? ನಿಷ್ಕಲ್ಮಶ ಎಂಬ ಪದವೇ ನಿರರ್ಥಕವಾದುದಾ? ಎಂಬ ಪ್ರಶ್ನೆ ಬಹಳಷ್ಟು ಕಾಡಿದ್ದಿದೆ. ಎಲ್ಲರ ಮನದೊಳಗೂ ಕೆಟ್ಟ ಆಲೋಚನೆಗಳು, ಕೆಟ್ಟ ವಿಚಾರಗಳು ಬಂದೇ ಬರುತ್ತದೆಂದು ನನ್ನ ನಂಬಿಕೆ. ನನ್ನದು ನಿಷ್ಕಲ್ಮಶ ಮನಸ್ಸು ಎಂದು ಹೇಳಿಕೊಳ್ಳುವವರ ಬಗ್ಗೆ ಅಸಡ್ಡೆ. ಆದರೆ ಮನಸ್ಸಿನ ಯೋಚನೆ- ಯೋಜನೆಗಳನ್ನೆಲ್ಲ ಕಲ್ಮಶ ನಿಷ್ಕಲ್ಮಶವೆಂದು ಭೇದ ಮಾಡದೆ ಆಚರಣೆಯಲ್ಲಿ ತರುವುದು ಕಷ್ಟಸಾಧ್ಯ. ನೈತಿಕ ಅನೈತಿಕತೆಯ ಪ್ರಶ್ನೆ, ಸಂಭಾವಿತನಾಗಬೇಕೆಂಬ ಹಪಾಹಪಿ, ಸಮಾಜದಲ್ಲೊಂದು ಗೌರವ ಪಡೆಯಬೇಕೆಂಬ ಆಸೆ ಇವೆಲ್ಲವೂ ನಮ್ಮ ಮನದ ಎಷ್ಟೋ ಯೋಚನೆಗಳನ್ನು ಹತ್ತಿಕ್ಕಿಬಿಡುತ್ತವೆ. ಆ ‘ಕೆಟ್ಟ’ ಯೋಚನೆಗಳನ್ನು ತಡೆದುಬಿಟ್ಟೆನಲ್ಲ ಎಂದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುತ್ತ ಆತ್ಮರತಿಯಲ್ಲಿಯೇ ಕಳೆದುಹೋಗುತ್ತೀವಿ. 

ಅಕ್ಟೋ 15, 2011

ಅಂತ್ಯ ಕಾಣದ ತೆಲಂಗಾಣ ಚಳುವಳಿ

telangana;source - wikipedia
ಡಾ. ಅಶೋಕ್. ಕೆ. ಆರ್
           ಮತ್ತೆ ತೆಲಂಗಾಣ ಸುದ್ದಿಯಲ್ಲಿದೆ. ಎಲ್ಲ ಸಂಚಾರ ಮಾರ್ಗಗಳನ್ನು ಮುಚ್ಚಿಸಲಾರಂಭಿಸಿದ್ದಾರೆ ತೆಲಂಗಾಣ ರಾಜ್ಯ ಪರ ಹೋರಾಟಗಾರರು. ಕನ್ನಡ ಪತ್ರಿಕೆಗಳಲ್ಲಿ ಈ ಹೋರಾಟದಿಂದ ಕರ್ನಾಟಕ್ಕೆ ವಿದ್ಯುತ್ ಉತ್ಪಾದಿಸಲು ಸರಬರಾಜಾಗುವ ಕಲ್ಲಿದ್ದಲ್ಲಿನ ಬಗೆಗಿನ ಚಿಂತೆಯೇ ಅಧಿಕವಾಗಿ ಪ್ರಕಟವಾಗುತ್ತಿದೆ. ದಶಕಗಳ ಹೋರಾಟದ ಇತಿಹಾಸದ ವಿವಿಧ ಮಜಲುಗಳ ಬಗ್ಗೆ ಬೆಳಕು ಚೆಲ್ಲುತ್ತಿರುವವರೇ ಕಡಿಮೆ. ತೆಲಂಗಾಣ ಹೋರಾಟದ ಬಗ್ಗೆ ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಗಳ ಸಂಕ್ಷಿಪ್ತ ಕನ್ನಡಾನುವಾದ ಹಿಂಗ್ಯಾಕೆ?!ಯಲ್ಲಿ.