
- ಡಾ ಅಶೋಕ್ ಕೆ ಆರ್.
ಇಲ್ಲಿಯವರೆಗೆ ಹೆಚ್ಚುಕಡಿಮೆ ನಾಲ್ಕುನೂರು ಪುಸ್ತಕಗಳನ್ನು ಓದಿದ್ದೇನೆ. ಕಥೆ – ಕವಿತೆ – ಕಾದಂಬರಿ – ನಾಟಕ – ಹಾಸ್ಯ – ಆತ್ಮಕತೆ – ಸಾಮಾಜಿಕ – ಚಿಂತನೆ – ಪ್ರಬಂಧಗಳು – ಐತಿಹಾಸಿಕ – ಕಾಮೋದ್ರೇಕ – ಆದ್ಯಾತ್ಮ ಹೀಗೆ ಇನ್ನೂ ವಿಧವಿಧವಾದ ಪುಸ್ತಕಗಳನ್ನು ಓದಿರುವೆನಾದರೂ ಇದೊಂದು ಪುಸ್ತಕವನ್ನು ಸಾಹಿತ್ಯದ ಯಾವ ಉಪವಿಭಾಗಕ್ಕೆ ಸೇರಿಸಬೇಕೆಂದು ತಿಳಿಯದೆ ಗೊಂದಲಕ್ಕೀಡಾಗಿದ್ದೇನೆ! ಬಡಜನರ ಆತ್ಮಕಥೆಯಷ್ಟೇ ಎಂದುಕೊಳ್ಳೋಣವೆಂದರೆ ದುತ್ತನೆ ರಾಜಕೀಯ ಧಾರ್ಮಿಕ ವಿಶ್ಲೇಷಣೆ ಎದುರಾಗುತ್ತದೆ! ಯಾವ ತಾತ್ವಿಕನಿಗೂ ಕಾಣದ ಜೀವನದೃಷ್ಟಿ ಇಲ್ಲಿರುವ ಜನಸಾಮಾನ್ಯರ ಮಾತಿನಲ್ಲಿ ಸಲೀಸಾಗಿ ಕಾಣಸಿಗುತ್ತದೆ. ಅಯೋಧ್ಯೆಯಿಂದ ಹಿಡಿದು ಭಾರತೀಯ ಸೈನ್ಯದ ವಿಶ್ಲೇಷಣೆಯೂ ನಡೆದುಬಿಡುತ್ತದೆ! ಅಂದಹಾಗೆ ಪುಸ್ತಕದ ಹೆಸರು ‘ರಸ್ತೆ ನಕ್ಷತ್ರ’. ಆಕಾಶದೆಡೆಗೆ ನೆಟ್ಟು ಹೋದ ನಮ್ಮ ನಿಲುವುಗಳನ್ನು ರಸ್ತೆಯ ಮೇಲೆ ಎಳೆದುತಂದು ನಕ್ಷತ್ರಗಳನ್ನು ಗುರುತಿಸುವಂತೆ ಮಾಡಿದ ಶ್ರೇಯ ಇತ್ತೀಚೆಗಷ್ಟೇ ಪಿ.ಸಾಯಿನಾಥ್ ಪ್ರಶಸ್ತಿ ಪಡೆದ ಟಿ.ಕೆ. ದಯಾನಂದರವರದು.