ಅಕ್ಟೋ 1, 2015

ದನ ತಿಂದ್ರೆ ತಪ್ಪು ಜನಾನ್ ಬೇಕಾದ್ರೆ ತಿವ್ಕೊಳ್ಳಿ...

mohammad akhlaq
ಈ ಲೇಖನದ ಹೆಡ್ಡಿಂಗು ಇವತ್ತಿನದಲ್ಲ. ಬರೋಬ್ಬರಿ ಮೂರು ವರುಷದ ಹಿಂದೆ ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ನಡೆಯುವ ಬೀಫ್ ಫೆಸ್ಟಿವಲ್ ಎಂಬ ಊಟದ ಹಬ್ಬದ ಸಂದರ್ಭದಲ್ಲಿ ಆ ಫೆಸ್ಟಿವಲ್ಲಿನ ಪರವಾಗಿದ್ದ ಹುಡುಗನೊಬ್ಬನಿಗೆ ಹಬ್ಬವನ್ನು ವಿರೋಧಿಸುವವರು ಚೂರಿ ಹಾಕಿಬಿಟ್ಟಿದ್ದರು. ಆಗ ಬರೆದ ಲೇಖನ ಇವತ್ತು ಮತ್ತೆ ನೆನಪಾಗಿದ್ದು ಉತ್ತರಪ್ರದೇಶದ ದಾದ್ರಿಯ ಬಿಸಾರ ಎಂಬಲ್ಲಿ 'ಬೀಫ್' ತಿಂದರು ಎಂಬ ಅನುಮಾನದ ಮೇಲೆ ಒಂದಿಡೀ ಕುಟುಂಬವನ್ನು ಥಳಿಸಲಾಗಿದೆ. ಮನೆಯ ಹಿರಿಯ ಮೊಹಮದ್ ಅಕ್ಲಾಖನನ್ನು ಹೊಡೆದು ಬಡಿದು ಸಾಯಿಸಲಾಗಿದೆ. ಅವರ ಮಗ ಡ್ಯಾನಿಷ್ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾನೆ. ಮೂರು ವರ್ಷದ ಕೆಳಗೆ ಚೂರಿ ಚುಚ್ಚುವವರೆಗಿದ್ದ ಮನಸ್ಥಿತಿ ಈಗ ಸಾಯಿಸಿಯೇಬಿಡುವಷ್ಟು ಹಾಳಾಗಿಬಿಟ್ಟಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಕೆಲವು ಹಿಂದೂ ಉಗ್ರರನ್ನು ಬಂಧಿಸಲಾಗಿದೆ. ಯಾವ ಉಗ್ರಗಾಮಿ ಸಂಘಟನೆಗೂ ಅಧಿಕೃತವಾಗಿ ಸೇರಿದವರಲ್ಲ ಎಂದು ಪೋಲೀಸರು ಹೇಳಿದ್ದಾರೆ.


ಒಂದು ಕರು ಕಾಣೆಯಾಗುತ್ತದೆ. ಅದರ ಮಾಂಸವನ್ನು ಮೊಹಮದ್ ಅಕ್ಲಾಖ್ ತೆಗೆದುಕೊಂಡು ಹೋಗುತ್ತಿದ್ದ'ನಂತೆ' ಎಂದು ಸುದ್ದಿಯಾಗುತ್ತದೆ. ಅವರ ಮನೆಯವರು ದನದ ಮಾಂಸವನ್ನು ತಿಂದ'ರಂತೆ' ಎಂದು ಸ್ಥಳೀಯ ದೇವಸ್ಥಾನದಲ್ಲಿ 'ಘೋಷಿಸಲಾಗುತ್ತದೆ'. ಧರ್ಮರಕ್ಷಣೆಯ ಹೊಣೆ ಹೊತ್ತ ಹಿಂದೂ ಉಗ್ರರು ಅಕ್ಲಾಖನ ಮನೆಗೆ ನುಗ್ಗಿ ಸಾಯುವವರೆಗೂ ಬಡಿಯುತ್ತಾರೆ. ಫ್ರಿಜ್ಜಿನಲ್ಲಿದ್ದ ಮಾಂಸವನ್ನು ಪೋಲೀಸರು ಪರೀಕ್ಷೆಗೆ ಲ್ಯಾಬಿಗೆ ಕಳುಹಿಸುತ್ತಾರೆ! ಅಕ್ಲಾಖನ ಮಗಳು ಸಾಜ್ದಾಳ 'ಅದು ದನದ ಮಾಂಸವೇ ಅಲ್ಲ. ದನದ ಮಾಂಸ ಅಲ್ಲವೆಂದು ಲ್ಯಾಬ್ ರಿಪೋರ್ಟ್ ಹೇಳಿದರೆ ನನ್ನ ತಂದೆಯನ್ನು ವಾಪಸ್ಸು ಕೊಡುತ್ತಾರೆಯೇ?' ಎಂಬ ಪ್ರಶ್ನೆಗೆ ಉತ್ತರ ಕೊಡುವವರು ಯಾರು? ಅದು ದನದ ಮಾಂಸವೋ ಮತ್ತೊಂದೋ ಮನೆಗೆ ನುಗ್ಗಿ ಸಾಯ ಬಡಿಯುವಂತಹ 'ಹಕ್ಕನ್ನು' ಈ ಉಗ್ರರಿಗೆ ನೀಡಿದ್ದಾದರೂ ಯಾರು? ಮೊಹಮದ್ ಅಕ್ಲಾಖ್ ಕರುವನ್ನು ಕದ್ದಿದ್ದೇ ಹೌದಾದರೆ ಅದನ್ನು ವಿಚಾರಿಸಲು ಪೋಲೀಸರಿಲ್ಲವೇ? ಏನು ಊಟ ಮಾಡಬೇಕೆಂದು ಆದೇಶಿಸಲು ಇವರ್ಯಾರು? ಇವತ್ತು ದನದ ಮಾಂಸದ ಹೆಸರಿನಲ್ಲಿ ಹಿಂದೂ ಉಗ್ರರು ಸಾಬರ ಮನೆಗೆ ನುಗ್ಗಿದ್ದಾರೆ, ಸಾಬರ ಮನೆಗೆ ತಾನೇ ಎಂದು ನಾವು ಸುಮ್ಮನಿರುತ್ತೀವಿ; ನಾಳೆ ಮಾಂಸ ತಿನ್ನುವ ಹಿಂದೂಗಳ ಮನೆಗೆ ನುಗ್ಗಿ ಬಡಿಯುತ್ತಾರೆ.... ಈಗ ಸುಮ್ಮನಿದ್ದವರು ಆಗ ಮಾತನಾಡುತ್ತೀವಾ?
ದನಕ್ಕಿರುವ ಬೆಲೆ ಮನುಷ್ಯನಿಗಿಲ್ಲವೇ? ಅಂದಹಾಗೆ ಬಿಹಾರ ಚುನಾವಣೆ ಹತ್ತಿರದಲ್ಲಿದೆ....

ಸೆಪ್ಟೆಂ 22, 2015

ಅರ್ಧ ಸತ್ಯಗಳನ್ನು ಮೊದಲು ನಿಷೇಧಿಸಬೇಕು.

ಡಾ.ಅಶೋಕ್. ಕೆ. ಆರ್.
(ಪ್ರಜಾವಾಣಿಗೆ ಪ್ರತಿಕ್ರಿಯೆಯಾಗಿ ಬರೆದ ಪ್ರಕಟಿತ ಪತ್ರ)
ಮಾಂಸ ನಿಷೇಧದ ಬಗ್ಗೆ ಪರ ವಿರೋಧದ ಚರ್ಚೆಯಲ್ಲಿ (ಪ್ರಜಾವಾಣಿ, ಶನಿವಾರ 19/09/2015) ಡಾ. ವಿಜಯಲಕ್ಷ್ಮಿಯವರು ಬರೆದಿರುವ ಅಭಿಪ್ರಾಯಗಳಿಗೆ ಪ್ರತಿಯಾಗಿ ಈ ಪತ್ರ. ವೈದ್ಯರು ತಮ್ಮ ಲೇಖನದ ಪ್ರಾರಂಭದಿಂದಲೇ ಮಾಂಸಾಹಾರಿಗಳನ್ನು ಕೀಳಾಗಿ ಕಾಣುವಂತೆ ವಿವಿಧ ಧರ್ಮಗ್ರಂಥಗಳ ನೆರವು ಪಡೆದುಕೊಂಡಿದ್ದಾರೆ. ಅಥರ್ವ ವೇದ, ಮನುಸ್ಮೃತಿಯಲ್ಲಿ ಮಾಂಸಾಹಾರಿಗಳನ್ನು ನಾಶ ಮಾಡಬೇಕೆಂಬ ಅಭಿಪ್ರಾಯವನ್ನು, ಮಾಂಸಹಾರಿಗಳೆಂದರೆ ಕೊಲೆಗಡುಕರು, ಅಪಾಯಕಾರಿ ಮನಸ್ಥಿತಿಯವರು ಎನ್ನುವುದನ್ನು ಉಲ್ಲೇಖಿಸುತ್ತಾರೆ. ಮುಸ್ಲಿಮರು ಹಲಾಲ್ ಮಾಂಸವನ್ನು ತಿನ್ನುವುದು ಕೂಡ ಅವರ ಕಣ್ಣಿಗೆ ಮಾಂಸಹಾರಿ ವಿರೋಧಿ ಮನಸ್ಥಿತಿಯಂತೆಯೇ ಕಾಣುತ್ತದೆ. ಮುಂದುವರೆಯುತ್ತಾ ಹೇಗೆ ಪಾಕಿಸ್ತಾನದ ಮುಸ್ಲಿಮ್ ಮಹಿಳೆಯರು ವಿದೇಶದಲ್ಲಿ ಸಸ್ಯಾಹಾರವನನ್ನು ಸೇವಿಸಿ ‘ಧರ್ಮರಕ್ಷಣೆ’ ಮಾಡುತ್ತಿದ್ದರು, ಭಾರತದ ಹಿಂದೂಗಳು ಅಲ್ಲಿ ಸಿಕ್ಕ ಸಿಕ್ಕ ಮಾಂಸವನ್ನು ತಿಂದು ‘ಧರ್ಮ’ ಮರೆತರು ಎಂದು ತಿಳಿಸುವುದರ ಮೂಲಕ ಏನನ್ನು ಸಾಧಿಸಲು ಹೊರಟಿದ್ದಾರೆ ಎಂಬುದೇ ತಿಳಿಯುವುದಿಲ್ಲ. ಆ ವಿದೇಶದಲ್ಲಿ ಅದೇ ಮಾಂಸವನ್ನು ತಿಂದುಕೊಂಡು ಬದುಕುವ ಜನರಿದ್ದಾರೆ, ಅವರದೂ ಒಂದು ಸಂಸ್ಕೃತಿಯಿದೆ ಎನ್ನುವುದನ್ನು ಕಡೆಗಣಿಸಿ ಅದನ್ನು ಹೀಯಾಳಿಸುವುದು ಎಷ್ಟರ ಮಟ್ಟಿಗೆ ಸರಿ? ತಮ್ಮ ವೈಯಕ್ತಿಕ ಮಾಂಸ ವಿರೋಧವನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಕ್ರಿಶ್ಚಿಯನ್ ಧರ್ಮಗ್ರಂಥಗಳನ್ನೂ ಉಪಯೋಗಿಸಿಕೊಳ್ಳುತ್ತಾರೆ. ಕೊನೆಗೆ ಅವರ ಲೇಖನ ಸಮರ್ಥಿಸುವುದು ಮಾಂಸಹಾರಿಗಳು ವಿಕೃತರು, ಕೊಲೆಗಡುಕರು, ಸಮಾಜಕ್ಕೆ ಅಪಾಯಕಾರಿಗಳು, ಸಸ್ಯಾಹಾರಿಗಳು ‘ಸಾತ್ವಿಕರು’ ಎಂಬ ಮನುವಾದವನ್ನೇ. 

ವೈದ್ಯರಾಗಿರುವುದರಿಂದ ತಮ್ಮ ವಾದಕ್ಕೆ ವೈದ್ಯಕೀಯ ಸಮರ್ಥನೆಯನ್ನು ಕೊಡುವ ಅನಿವಾರ್ಯತೆಗೆ ಬಿದ್ದು ಹೇಗೆ ಮಾಂಸಾಹಾರ ಸೇವಿಸುವುದರಿಂದ ದೇಹದ ಎಲ್ಲಾ ಅಂಗಾಂಗಗಳೂ ನಾಶವಾಗುತ್ತವೆ ಎಂದು ಭಯ ಹುಟ್ಟಿಸುವ ರೀತಿಯಲ್ಲಿ ಬರೆದಿರುವುದರಲ್ಲೆಲ್ಲಾ ಅರ್ಧ ಸತ್ಯವಿದೆ. ಮಾಂಸಾಹಾರಿಗಳು ವರುಷದ ಮುನ್ನೂರೈವತ್ತು ದಿನವೂ ದಿನದ ಮೂರೊತ್ತು ಒಂಚೂರೂ ತರಕಾರಿ – ಸೊಪ್ಪನ್ನು ತಿನ್ನದೆ ಮಾಂಸವನ್ನೇ ಸೇವಿಸುತ್ತಾರೆನ್ನುವುದಾದರೆ ಅವರು ಬರೆದ ಹಾಗೆ ಮನುಷ್ಯನ ದೇಹ ಅನೇಕ ರೋಗ ರುಜಿನಗಳಿಗೆ ‘ಮಾಂಸ’ದ ಕಾರಣದಿಂದಲೇ ತುತ್ತಾಗುತ್ತದೆ. ಆದರೆ ಆ ರೀತಿ ತಿನ್ನುವವರಿದ್ದಾರೆಯೇ? ವಾರದ ಕೆಲವೊಂದು ದಿನವಷ್ಟೇ ಮಾಂಸ ತಿನ್ನುವವರಿಗೆ ಅವರು ಹೇಳಿದಂತೆ ಹೃದ್ರೋಗ, ಮೂತ್ರಪಿಂಡದ ರೋಗ, ಯಕೃತ್ತಿನ ರೋಗವ್ಯಾವುದೂ ಮಾಂಸ ತಿನ್ನುವ ಕಾರಣಕ್ಕೆ ಬರಲಾರದು. ಮತ್ತು ಆ ರೋಗಗಳಿಗೆಲ್ಲ ಇನ್ನೂ ಅನೇಕಾನೇಕ ಕಾರಣಗಳಿರುವುದು ವೈದ್ಯರಾಗಿ ಅವರಿಗೂ ಗೊತ್ತಿರುತ್ತದೆ. ಉದ್ದೇಶಪೂರ್ವಕವಾಗಿ ಹೇಳಿಲ್ಲವಷ್ಟೇ. ಇನ್ನು ಮಾಂಸ ನಮ್ಮ ದೇಹದಲ್ಲಿ ಜೀರ್ಣವಾಗುವುದಿಲ್ಲ, ಅದು ಕೊಳೆತು ವಿಷವನ್ನು ಹೊರಹಾಕುತ್ತದೆ ಎಂದಿದ್ದಾರೆ; ಬೇಯಿಸಿದ ಮಾಂಸ ಜೀರ್ಣವೇ ಆಗದಿದ್ದಲ್ಲಿ ಮಾಂಸ ಸೇವನೆಯಿಂದ ದೇಹಕ್ಕೆ ವಿವಿಧ ಪ್ರೋಟೀನು, ವಿಟಮಿನ್ನುಗಳು ಸಿಗಬಾರದಿತ್ತಲ್ಲವೇ? ಮನುಷ್ಯ ಸಸ್ಯಾಹಾರಿಯಾಗಿ ‘ಸಾತ್ವಿಕ’ರಾಗಬೇಕೆಂದು ಬಯಸುವ ಅವರು ಸಸ್ಯಾಹಾರಿಗಳು ಹಸಿ ಸೊಪ್ಪು – ಹುಲ್ಲನ್ನು ತಿಂದರೆ ಅದೂ ಕೂಡ ಜೀರ್ಣವಾಗುವುದಿಲ್ಲ ಎನ್ನುವುದನ್ನು ಬೇಕಂತಲೇ ಮರೆಯುತ್ತಾರೆ. ಸುಟ್ಟ ಮಾಂಸ ಒಳ್ಳೆಯದಲ್ಲ ಎನ್ನುವ ಅವರು ಸುಟ್ಟ ಯಾವ ಪದಾರ್ಥವೂ (ರೊಟ್ಟಿ, ಜೋಳ) ಹೊಟ್ಟೆಗೆ ಒಳ್ಳೆಯದಲ್ಲ ಎನ್ನುವುದನ್ನು ಬರೆಯುವುದಿಲ್ಲ. ಮೇಲಾಗಿ ಯಾರೂ ದಿನಾ ಸುಟ್ಟ ಪದಾರ್ಥವನ್ನು (ಮಾಂಸವೋ ಸಸ್ಯಾಹಾರವೋ ವ್ಯತ್ಯಾಸವಿಲ್ಲ) ತಿನ್ನುವುದಿಲ್ಲ ಎನ್ನುವುದು ಅವರ ಗಮನಕ್ಕೆ ಬಂದಿಲ್ಲವೇ? ಕೇವಲ ಸಸ್ಯಾಹಾರ ತಿನ್ನುವುದರಿಂದಲೂ ಅನೇಕಾನೇಕ ಪ್ರೋಟೀನು, ವಿಟಮಿನ್ನುಗಳ ಕೊರತೆಯಾಗಿಬಿಡುತ್ತದೆ ಎನ್ನುವುದು ಅವರಿಗೆ ತಿಳಿದಿಲ್ಲವೇ?. ಪ್ರಾಣಿಜನ್ಯ ಹಾಲನ್ನು ಸೇವಿಸುವುದು ಕೂಡ ಈ ಕೊರತೆಯನ್ನು ನೀಗಿಸುವುದಕ್ಕಾಗಿ ತಾನೇ?

ವೈದ್ಯರೊಬ್ಬರು ಆಹಾರ ಪದ್ಧತಿಯ ಬಗ್ಗೆ ಬರೆವ ಲೇಖನದಲ್ಲಿ ಸಸ್ಯಾಹಾರ ಶ್ರೇಷ್ಟವೆಂಬ ಭ್ರಮೆಯನ್ನು ಬಿತ್ತುವ ಕೆಲಸವಾಗಬಾರದು. ಸಮತೋಲನ ಆಹಾರವೆಂದರೆ ಏನು ಎನ್ನುವುದರ ಕುರಿತು ಬೆಳಕು ಚೆಲ್ಲಬೇಕಿತ್ತು. ಸಸ್ಯಾಹಾರ, ಮಾಂಸಾಹಾರವೆಲ್ಲವೂ ಹೇಗೆ ಕಲುಷಿತವಾಗುತ್ತಿವೆ ಎನ್ನುವುದರ ಕುರಿತು ಅವರ ಕಾಳಜಿಯಿರಬೇಕಿತ್ತು. ಕೋಳಿಗಳು ಶೀಘ್ರವಾಗಿ ಬೆಳೆಯಲು ಹಾರ್ಮೋನುಗಳ ಬಳಕೆ, ತರಕಾರಿ ಸೊಪ್ಪುಗಳು ದಿಡೀರ್ ಅಂತ ಬೆಳೆಯಲು ಬಳಕೆಯಾಗುತ್ತಿರುವ ಕೆಮಿಕಲ್ಲುಗಳು, ವಿದೇಶಿ ತಳಿಯ ಹಸುಗಳಿಗೆ ನೀಡುವ ಹಾರ್ಮೋನುಗಳು ಹಾಲನ್ನು ಸೇರುತ್ತಿರುವ ಬಗ್ಗೆ – ಈ ಹಾರ್ಮೋನು, ಕೆಮಿಕಲ್ಲುಗಳು ಮನುಷ್ಯ ದೇಹವನ್ನು ಸೇರಿ ಹೇಗೆ ವಿವಿಧ ಖಾಯಿಲೆಗಳಿಗೆ ಕಾರಣವಾಗುತ್ತಿವೆ ಎನ್ನುವುದರ ಕುರಿತು ಬರೆದಿರುತ್ತಾರೆ ಎಂದುಕೊಂಡು ಲೇಖನವನ್ನು ಓದಿದರೆ ನಿರಾಸೆಯಾಗುತ್ತದೆ. ಪ್ರಪಂಚದ ಬಹುಸಂಖ್ಯಾತರ ಆಹಾರ ಪದ್ಧತಿಯನ್ನು ಕೀಳಾಗಿ ಕಾಣುವ ಮನಸ್ಥಿತಿ ಇಡೀ ಲೇಖನದ ತುಂಬ ತುಂಬಿಕೊಂಡಿದೆ. ವಿವಿಧ ಧರ್ಮಗ್ರಂಥಗಳನ್ನು ಉಲ್ಲೇಖಿಸಿ ತಮ್ಮ ‘ತಪ್ಪು’ ವಾದವನ್ನು ಸಮರ್ಥಿಸಿಕೊಳ್ಳುವುದು ಬಲಪಂಥೀಯತೆಯ ರೋಗ. ಅಂತದೇ ರೋಗಿಷ್ಟ ಮನಸ್ಥಿತಿಯಿಂದ ವೈಜ್ಞಾನಿಕವಾಗಿ ಅರ್ಧ ಸತ್ಯಗಳಂತಿರುವ ವಾಕ್ಯಗಳಿಂದ ತುಂಬಿಹೋಗಿರುವ ಅವರ ಲೇಖನ ಪ್ರಜಾವಾಣಿಯಂತಹ 
ಪತ್ರಿಕೆಯಲ್ಲಿ ಪ್ರಕಟವಾಗಿರುವುದು ನಿಜಕ್ಕೂ ಅಚ್ಚರಿ ಮೂಡಿಸಿತು.

ಆಗ 31, 2013

“ಆಹಾರ ಭದ್ರ”ವಾಗಲು ಭ್ರಷ್ಟರ ಹಸಿವು ನಿಲ್ಲಬೇಕು!



ಡಾ ಅಶೋಕ್ ಕೆ ಆರ್
ಪ್ರತಿಯೊಬ್ಬ ಪ್ರಜೆಗೂ ಆಹಾರವೆಂಬುದು ಹಕ್ಕಾಗಬೇಕೆಂಬ ಸದುದ್ದೇಶದಿಂದ ಆಹಾರ ಭದ್ರತಾ ಮಸೂದೆ ಕೊನೆಗೂ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದ ಮೇಲೆ ಜಾರಿಯಾಗಲಿದೆ. ಇತ್ತೀಚಿನ ದಿನಗಳಲ್ಲಿ ಯಾವ ಪಕ್ಷದ ವಿರೋಧವೂ ಇಲ್ಲದೆ (ಸಂಸದರ ವೇತನ ಹೆಚ್ಚಳಗಳನ್ನು ಹೊರತುಪಡಿಸಿ) ಜಾರಿಯಾದ ಮಸೂದೆಯಿದು. ಕೆಲವೊಂದು ರಾಜಕೀಯ ಪಕ್ಷಗಳ ವಿರೋಧವಿದ್ದಿದ್ದೂ ಸತ್ಯವಾದರೂ ಆ ವಿರೋಧ ಮಸೂದೆಯಲ್ಲಿನ ಕೆಲವು ಅಂಶಗಳ ಮಾರ್ಪಾಟಿಗೆ ಮತ್ತು ಕೆಲ ಉತ್ತಮಪಡಿಸುವಿಕೆಗಾಗಿಯ ಬದಲಾವಣೆಗೆ ಹೊರತು ಸಂಪೂರ್ಣ ಮಸೂದೆಯ ವಿರುದ್ಧವಲ್ಲ ಎಂಬುದು ಗಮನಾರ್ಹ.

ಏಪ್ರಿ 16, 2012

ದನ ತಿಂದ್ರೆ ತಪ್ಪು ಜನಾನ್ ಬೇಕಾದ್ರೆ ತಿವ್ಕೊಳ್ಳಿ!


ಮೂಲ
ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾನಿಲಯದಲ್ಲಿ ಅದೇನೋ ಬೀಫ್ ಫೆಸ್ಟಿವಲ್ ಅಂತ ಮಾಡ್ತಾರಂತೆ. ದನದ ಮಾಂಸ ಮಾಡಿ ಹಬ್ಬವನ್ನಾಚರಿಸುತ್ತಾರಂತೆ. ‘ಊಟ ನಮ್ಮಿಷ್ಟದಂತಿರಬೇಕು’ ಎಂಬುದ್ದಿಶ್ಯದಿಂದ ಆರಂಭವಾದ ಹಬ್ಬವಂತೆ. ಈ ಸಂದರ್ಭದಲ್ಲಿ ಹಬ್ಬದ ಪರವಾಗಿದ್ದ ವಿದ್ಯಾರ್ಥಿಯೊಬ್ಬನಿಗೆ ಚೂರಿ ಇರಿತವಾಗಿರುವ ಸುದ್ದಿ ಬಂದಿದೆ. ದನದ ರಕ್ಷಕರು ಜನರನ್ನು ಭಕ್ಷಿಸುತ್ತಿರುವ ಕಥೆಯಿದು!