Sep 18, 2018

ನಿನ್ನ ಕಂಡೆ !!

ಪ್ರವೀಣಕುಮಾರ್ ಗೋಣಿ
ಸುಮ್ಮನೆ ನೀರಾಡುವ 
ಕಂಗಳ ಹಸಿಯಲ್ಲಿ ನಿನ್ನ ಕಂಡೆ 
ನಕ್ಕು ಹಗುರಾದಾಗ 
ಸ್ಪುರಿಸಿದ ಸಮಾಧಾನದಲ್ಲಿ ನಿನ್ನ ಕಂಡೆ .

ಸಾಕೆನಿಸಿದ ಬದುಕ ಜಂಜಾಟದಲ್ಲೂ 
ಸೋಕಿದ ಸಂಕಟದೊಳಗೂ ನೀನೇ ಕಂಡೆ 
ಮುಸುಕು ಸರಿಸಿ ಅರಳಿದ 
ಸಂಭ್ರಮದ ಸಡಗರದಲ್ಲೂ ನಿನ್ನನೇ ಕಂಡೆ .

Sep 17, 2018

"ಹೆಣ್ಣೊಪ್ಪಿಸಿ ಕೊಡೋದು" ಎಂಥೊಂದು ಶಾಸ್ತ್ರದ ಬೆನ್ನೇರಿ.....

ಪದ್ಮಜಾ ಜೋಯಿಸ್
"ಮದುವೆ" ಒಂದು ಮಹತ್ವದ ಸಂಪ್ರದಾಯ, ದೇವಾನುದೇವತೆಗಳ ವಿವರಗಳನ್ನು ಅನುಸರಿಸಿ ಬಂದ ಉಲ್ಲೇಖಗಳು ನಮ್ಮ ಮುಂದೆ ಸಾಕಷ್ಟು ಇವೆ, ಅಂತೆಯೇ ಅನಾದಿ ಕಾಲದಿಂದಲೂ ಇದೊಂದು ಪ್ರಮುಖ ಆಚರಣೆಯಾಗಿ ಶಾಸ್ತ್ರಬದ್ಧವಾಗಿ ನೆಡೆಯುವ ಕಾರ್ಯ, ಇದು ಸಂಸಾರ ಬ಼ಂಧನವನ್ನು ಸಾರುವ ಪತಿಪತ್ನಿಯರ ಸಮಾಗಮಕ್ಕೆ ಅನುವು ಮಾಡಿಕೊಡಲು ಹಿರಿಯರಿಂದ ಪರಂಪರಾನುಗತವಾಗಿ ಬಂದ ಒಂದು ಹಾದಿ... ಮೊದಮೊದಲು 7 ನಂತರ 5 ನಂತರ 3 ನಂತರ 2 ಈಗ 1ಒಂದೇ ದಿನಕ್ಕಾಗಿದೆ, ಇದರಲ್ಲಿ ತಥ್ಯವೂ ಇದೆ.. ಈಗಿನ ರಾಕೆಟ್ ಯುಗದಲ್ಲಿ ಅದಕ್ಕೆಲ್ಲಿ ಸಮಯ ??

ಜೀರಿಗೆ ಬೆಲ್ಲದಿಂದಿಡಿದು ಮಾಂಗಲ್ಯಧಾರಣೆವರೆಗೆ ಹಂತಹಂತವಾಗಿ ಪರಿಪೂರ್ಣಗೊಂಡನಂತರದ ಈ ಘಳಿಗೆ ಹೆಣ್ಣೊಪ್ಪಿಸಿ ಕೊಡುವ/ ಮನೆತುಂಬಿಸಿಕೊಡುವ ಶಾಸ್ತ್ರ , ಈ ಕಾರ್ಯ ಮಾತ್ರ ಹೆತ್ತೊಡಲಿನೊಂದಿಗೆ ನೆರೆದವರೆಲ್ಲರ ಮನಕಲಕಿ ಕರುಳು ಮೀಟುವಂತಹುದು, ಇಲ್ಲಿ ಹೆಣ್ಣೊಪ್ಪಿಸಿಕೊಡುವವರು ಮಾತ್ರವಲ್ಲ ಒಪ್ಪಿಸಿಕೊಂಡವರೂ ಕಣ್ಣೊರೆಸಿಕೊಳ್ಳುವುದು, ಇದಕ್ಕೊಂದಷ್ಟು ಹೆಂಗೆಳೆಯರ ಜಾನಪದ ಭಾವಗೀತೆ ಸಂಪ್ರದಾಯಗೀತೆಗಳ ಹಿಮ್ಮೇಳ ಬೇರೆ ದುಃಖದ ಬಿಕ್ಕುಗಳೊಂದಿಗೆ..... ನಂಬಿಕೆ ಭರವಸೆಗಳು ಸುಂದರ ಸಮರಸ ಬಾಳಿನ ಬುನಾದಿಯೇ ಆಗಿದೆ.....

ಶಾಸ್ತ್ರ ಸಂಪ್ರದಾಯ ಮೂಢನಂಬಿಕೆ ಎಂದು ಹೀಗೆಳೆವ ಮುನ್ನ ವೈಜ್ಞಾನಿಕ ಕಾರಣಗನ್ನೂ ವಿಶ್ಷ್ಲೇಷಿಸಿ ವಿವೇಚನೆಯಿಂದ ವಿವೇಕಯುತವಾಗಿ ಅರಿತು ನೆಡೆದಲ್ಲಿ ಎಲ್ಲವೂ ಸೊಗಸಾಗಿ ಹಿತವಾಗಿಯೇ ಇರುತ್ತವೆ,

Sep 16, 2018

ತೆಲಂಗಾಣ: ಕೆ. ಚಂದ್ರಶೇಖರ್ ರಾವ್ ಅವರ ರಾಜಕೀಯ ಜೂಜಾಟ!

ಕು.ಸ.ಮಧುಸೂದನ ರಂಗೇನಹಳ್ಳಿ
ವರ್ತಮಾನದ ರಾಜಕಾರಣದಲ್ಲಿ ಇದ್ದಕ್ಕಿದ್ದಂತೆ ಯೂಟರ್ನ್ ಹೊಡೆದು ತನ್ನ ಅಧಿಕಾರದಾಹವನ್ನು ಪ್ರದರ್ಶಿಸಿ, ಅದಕ್ಕೆ ಪೂರಕವಾಗಿ ಸಂವಿದಾನದತ್ತವಾಗಿ ಜನತೆ ನೀಡಿದ ಐದು ವರ್ಷದ ಅಧಿಕಾರಾವಧಿಯನ್ನು ತಿರಸ್ಕರಿಸಿ, ವಿದಾನಸಭೆಯನ್ನು ವಿಸರ್ಜಿಸಿದ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಶ್ರೀ ಕೆ.ಚಂದ್ರಶೇಖರ್ ರಾವ್ ತಮ್ಮ ರಾಜ್ಯದ ಜನತೆಗೆ ಮಾತ್ರವಲ್ಲದೆ ಸಂವಿದಾನಕ್ಕೂ ದ್ರೋಹ ಬಗೆದಿದ್ದಾರೆ. ಈ ಹಿಂದೆಯೂ ಇಂಡಿಯಾದ ರಾಜಕಾರಣದಲ್ಲಿ ಹಲವಾರು ಮುಖ್ಯಮಂತ್ರಿಗಳು ಅವಧಿಗು ಮುನ್ನವೇ ವಿದಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿದ್ದಿದೆ. ಆದರೆ ಅವರೆಲ್ಲರಿಗೂ ಹೇಳಿಕೊಳ್ಳಲು ಒಂದೊಂದು ಕಾರಣಗಳಿರುತ್ತಿದ್ದವು. ಸ್ಪಷ್ಟ ಬಹುಮತ ಇಲ್ಲದಿರುವುದು, ಸರಕಾರದ ಒಳಗೆ ಹಲವು ರೀತಿಯ ಭಿನ್ನಮತೀಯ ಚಟುವಟಿಕೆಗಳಿರುವುದು, ಸರಕಾರವೇ ದೊಡ್ಡ ಹಗರಣಗಳ ಸುಳಿಗೆ ಸಿಲುಕುವುದು ಹೀಗೇ ವಿದಾನಸಭೆ ವಿಸರ್ಜನೆ ಸಮರ್ಥಿಸಿಕೊಳ್ಳಲು ಅವರುಗಳಿಗೆ ಗಟ್ಟಿ ಕಾರಣಗಳಿರುತ್ತಿದ್ದವು. 

ಈ ಹಿನ್ನೆಲೆಯಲ್ಲಿ ನೋಡಿದರೆ ಚಂದ್ರಶೇಖರ್ರಾವ್ ಅವರಿಗೆ ಇಂತಹ ಯಾವುದೇ ಕಾರಣಗಳೂ ಇರಲಿಲ್ಲ ಮತ್ತು ಅವರ ಸರಕಾರದ ಭದ್ರತೆಗೆ ಯಾವುದೇ ಆಂತರೀಕ ಮತ್ತು ಬಾಹ್ಯ ಬೆದರಿಕೆಯೂ ಇರಲಿಲ್ಲ. ನೂರಾ ಹತ್ತೊಂಭತ್ತು ಸಂಖ್ಯಾಬಲದ ವಿದಾನಸಭೆಯಲ್ಲಿ ಅವರ ಟಿ.ಆರ್.ಎಸ್.ಪಕ್ಷಕ್ಕೆ ತೊಂಭತ್ತು ಸ್ಥಾನಗಳ ರಾಕ್ಷಸ ಬಹುಮತ ಲಭ್ಯವಿತ್ತು. ಜೊತೆಗೆ ಅಂತಹ ಯಾವುದೇ ಭಿನ್ನಮತೀಯ ಚಟುವಟಿಕೆಯಾಗಲಿ, ಹಗರಣಗಳ ಆರೋಪವಾಶಗಲಿ ಇರಲಿಲ್ಲ. ಇಷ್ಟೆಲ್ಲ ಇದ್ದಾಗ್ಯೂ ಚಂದ್ರಶೇಖರ್ ರಾವ್ ಮುಂದಿನ ವರ್ಷದ ಮೇ-ಜೂನ್ ತಿಂಗಳಲ್ಲಿ ಅಂತ್ಯಗೊಳ್ಳಬೇಕಿದ್ದ ವಿದಾನಸಭೆಯನ್ನು ಹೆಚ್ಚೂಕಡಿಮೆ ಹತ್ತು ತಿಂಗಳಿಗೂ ಮುನ್ನವೇ ವಿಸರ್ಜನೆ ಮಾಡಿ ತಮ್ಮ ರಾಜ್ಯವನ್ನು ಚುನಾವಣೆಗೆ ನೂಕಿದ್ದಾರೆ. 

Sep 11, 2018

‘ದುರಿತಕಾಲದ ದನಿ’: ವರ್ತಮಾದ ತಲ್ಲಣಗಳಿಗೆ ಹಿಡಿದ ಕೈಗನ್ನಡಿ

ಪದ್ಮಜಾ ಜೋಯ್ಸ್ ದರಲಗೋಡು
"ಕವಿತೆ ಹುಟ್ಟುವುದಿಲ್ಲ ಸುಖದ ಉದ್ಗಾರಗಳಲ್ಲಿ,
ಅದು ಹುಟ್ಟುವುದು ನೋವಿನ ಛೀತ್ಕಾರಗಳಲ್ಲಿ...!!

ಕು.ಸ.ಮಧುಸೂದನ ರಂಗೇನಹಳ್ಳಿ ಯವರ’ದುರಿತಕಾಲದ ದನಿ’ ಹೆಸರೇ ಹೇಳುವಂತೆ ವರ್ತಮಾನದ ವಾಸ್ತವವನ್ನೆಲ್ಲಾ ಸಾರಾಸಗಟಾಗಿ, ತುಸು ಕಟುವೇ ಎನಿಸುವ ಶೈಲಿಯಲ್ಲಿ ಭಟ್ಟೀ ಇಳಿಸಿದ ಸಂಕಲನ.ಈ ದನಿಯ ಹಿಂದಿನ ಕಾಳಜಿ ದೀನದಲಿತರ ಕಷ್ಟ ಸಂಕಷ್ಟಗಳಿಗೆ ಮಿಡಿಯುವ ಹೃದಯದ ಸ್ವಚ್ಛ ಶುದ್ಧ ಮಾನವೀಯತೆ ಮನಕಲಕುವಂತಿದೆ.

‘ನನ್ನ ಕವಿತೆ ಕುರಿತಂತೆ’ ಎ಼ಂದು ತಮ್ಮ ಕವಿತೆಗಳ ಬಗ್ಗೆ ತಮ್ಮದೇ ಶೈಲಿಯ ವಿವರಣೆಯೇ ಅದ್ಭುತವಾಗಿದೆ.. ಅವರ ಮಾತುಗಳಲ್ಲೇ ಹೇಳಬೇಕೆಂದರೇ...

"ಒಂದು ಕಡೆ ಜಾಗತೀಕರಣವು ನಮ್ಮ ಸ್ಥಳೀಯ ಸಂಸ್ಕೃತಿಯನ್ನು ನಾಶಪಡಿಸುತ್ತ ನೆಡೆದಿದ್ದರೇ, ಇನ್ನೊಂದೆಡೆ ಮತೀಯ ಮೂಲಭೂತವಾದ ನಮ್ಮ ಬಹುಸಂಸ್ಕೃತಿಯ ಪರಂಪರೆಯ ಮನೆಯ ಹಂದರವನ್ನು ಕೆಡವಲು ಹೊಂಚು ಹಾಕುತ್ತಿದೆ, ಪ್ರಭುತ್ವ ಧರ್ಮದ ಆಸರೆಯೊಂದಿಗೆ ಅಧಿಕಾರ ಚಲಾಯಿಸುವ ಮಾತಾಡುತ್ತಿದ್ದರೇ ಧರ್ಮವೋ ಸ್ವತಃ ತಾನೇ ಪ್ರಭುತ್ವವಾಗುವ ದಿಸೆಯಲ್ಲಿ ತನ್ನನ್ನು ಅಣಿಗೊಳಿಸಿಕೊಳ್ಳುತ್ತಿದೆ. ಹೀಗೆ ಬಂಡವಾಳ, ಧರ್ಮ , ಪ್ರಭುತ್ವಗಳು ಒಟ್ಟಾಗಿ ಛಿದ್ರಗೊಳಿಸಲು ಹೊರಟಿರುವ ಒಂದು ಸಮಾಜವನ್ನು ಎಚ್ಚರಿಕೆಯ ಸ್ಥಿತಿಯಲ್ಲಿಡಲು ಸಾಹಿತ್ಯ ಮತ್ತು ಸೃಜನಶೀಲ ಕಲಾಪ್ರಕಾರಗಳು ಮುಂದಾಗಬೇಕಿದೆ."" 

‘ದುರಿತಕಾಲದ ದನಿ’ ಕವನಸಂಕಲನದ ಬಿಡುಗಡೆ ಸಮಾರಂಭ.

ಕು.ಸ.ಮಧುಸೂದನರಂಗೇನಹಳ್ಳಿ ಅವರ ಕವನ ಸಂಕಲನ ಲೋಕಾರ್ಪಣೆ ಮಾಡಿದ ಖ್ಯಾತ ವಿಮರ್ಶಕ ಆರ್.ಜಿ. ಹಳ್ಳಿ ನಾಗರಾಜ್ ಈ ಸಂದರ್ಭದಲ್ಲಿ ಮಾತನಾಡುತ್ತ,

“ಸಂತೋಷ ಕೊಡುವ ಕಾಲದಲ್ಲಿ ನಾವು ಬದುಕುತ್ತಿಲ್ಲ ಅಸಹಿಷ್ಣುತೆ, ಭಯದ ಜೊತೆಗೆ ಉಸಿರುಗಟ್ಟುವ ವಾತಾವರಣದಲ್ಲಿ ಬದುಕುತ್ತಿದ್ದೇವೆ.ಸಂಸ್ಕೃತಿಯ ಹೆಸರಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಹತ್ತಿಕ್ಕುವ ಕೆಲಸ ನಡೆಯುತ್ತಿದೆ.ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ.ಇಂತಹ ಸಮಕಾಲೀನ ವಿಚಾರಗಳನ್ನಿಟ್ಟುಕೊಂಡೇ ಕು.ಸ.ಮಧುಸೂದನರಂಗೇನಹಳ್ಳಿಯವರ ಕವಿತೆಗಳು ಸೃಷ್ಠಿಯಾಗಿವೆ.ಈಗಿನ ದುರಿತ ಕಾಲದ ವಿರುದ್ದ ಆರೋಗ್ಯಪೂರ್ಣ ದ್ವನಿ ಎತ್ತಿರುವ ಈ ಸಂಕಲನದ ಕವಿತೆಗಳಿಗೆ ವಿಶೇಷ ಮಹತ್ವವಿದೆ” ಎಂದು ನುಡಿದರು.

ಈ ಕಾರ್ಯಕ್ರಮದಲ್ಲಿ ಕನ್ನಡದ ಹಿರಿಯ ಕವಿಯಿತ್ರಿ ಶ್ರೀಮತಿ ಹೆಚ್.ಎಲ್.ಪುಷ್ಪಾ,ಪ್ರೊ.ವೃಷಭೇಂದ್ರಪ್ಪ. ಡಾ.ಪ್ರಕಾಶ್ ಹಲಗೇರಿ, ಪ್ರೊ, ಅರವಿಂದ್, ಡಾ,ಹೊನ್ನಾಳಿ ಶಿವಕುಮಾರ್, ಶ್ರೀ ಸಂತೇಬೆನ್ನೂರು ಫೈಜ್ನಾಟ್ರಾಜ್, ವೀರಭದ್ರಪ್ಪ ತೆಲಿಗಿ ಹಾಗು ಚಿತ್ರ ಕಲಾವಿದರಾದ ಶ್ರೀ ನಾಮದೇವ ಕಾಗದಕರ ಉಪಸ್ಥಿತರಿದ್ದರು