Apr 30, 2015

ಬೋರಾಗದ ಹಾಡು ಪಡಿಮೂಡಿದ ಬಗೆ!

hadi hadi kannada song
ಆರಂಭ ಚಿತ್ರದ ನಿರ್ದೇಶಕರಾದ ಎಸ್ ಅಭಿ ಹನಕೆರೆಯವ್ರು, ತಮ್ಮ ಚಿತ್ರದ ಹಾಡುಗಳು ಹುಟ್ಟಿದ ಬಗ್ಗೆ ಈ ಮೊದಲೇ ಹಂಚಿಕೊಂಡಿದ್ದರು. ಅವರ ಚಿತ್ರದ ಇನ್ನೊಂದು ಸೂಪರ್ ಹಿಟ್ ಆದ ಹಾಡಿನ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಲಾಂಗು, ಮಚ್ಚು ಹಿಡಿದುಕೊಂಡು ಓಡಾಡಿದ್ದನ್ನ, ಅನಾಥ ಮಕ್ಕಳ ಸೇವೆ ಮಾಡೋದನ್ನ, ರೇಪ್ ನಡೆಯುವಾಗ, ದಿಡೀರನೆ ಬಂದು ಕಾಪಾಡುವ, ಇನ್ನೂ ಏನೇನೋ ರೀತಿಯಲ್ಲಿ ತೋರಿಸೋದು ಹೀರೋಯಿಸಂ ಅಲ್ಲ. ಎಂತಹ ಕಷ್ಟ ಪರಿಸ್ಥಿತಿಯಲ್ಲೂ, ಪಾಸಿಟಿವ್ ಅಗಿರೋದನ್ನ ತೋರಿಸೋದು ಹೀರೋಯಿಸಂ! ಎಂಬ ಸಂದರ್ಭಕ್ಕೆ ಹಾಡೊಂದು ಬೇಕು, ಅನ್ನೋದನ್ನ ಗುರುಕಿರಣ್ ಹತ್ತಿರ ಚರ್ಚಿಸಿದಾಗ, ಅವರು ಯಾವತ್ತೋ, ಇವರ ಮುಂದೆ ಗುನುಗಿದ್ದ ಹಾಡಿನ ಪಲ್ಲವಿ "ಹಾಡಿ ಹಾಡಿ ರೇಡಿಯೋಗೆ ಬೋರು ಆಗೋದಿಲ್ಲ, ಕೂಡಿ ಕೂಡಿ ಪ್ರೇಮಿಗಳಿಗೆ ಸುಸ್ತೆ ಆಗೋದಿಲ್ಲ" ಪಾಸಿಟಿವ್ ಲೈನ್ಸ್ ಚೆನ್ನಾಗಿವೆ. ಇದನ್ನು ಕಂಪೋಸ್ ಮಾಡಿ, ಚೆನ್ನಾಗಿ ಇರುತ್ತೆ, ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದ ಅಭಿಯವ್ರಿಗೆ, "ಅದು ಯಾವತ್ತೋ ಮಾಡಿದ್ದ ಹಾಡಿನ ಸಾಲು, ಯಾರಿಗೂ ಇಷ್ಟ ಆಗಿರ್ಲಿಲ್ಲ, ಹಾಗಾಗಿ ಅದನ್ನ ಡೆವೆಲಪ್ ಮಾಡಿರ್ಲಿಲ್ಲ, ಅದರಲ್ಲೂ ನಾನು ಇದುವರೆಗೂ, ಲವ್ ಹಾಡಿನ ಬಗ್ಗೆ, ಪಾಸಿಟಿವ್ ಆಗಿ ಬರೆದಿಲ್ಲ, ಅದು ಬೇಡ" ಎಂದರು. 
sandeep dance master
ನಮ್ಮ ಆರಂಭ ಚಿತ್ರದಲ್ಲಿ, ನಿಮ್ಮ ಬಿನ್ನವಾದ ಆ ಹಾಡು ಕೂಡ ಆರಂಭ ಆಗಲಿ, ಈ ಹಾಡನ್ನು ನೀವೇ ಬರೆದು, ಹಾಡಬೇಕು ಎಂದು ಪಟ್ಟು ಹಿಡಿದು ಕುಳಿತಾಗ, ಗುರುಕಿರಣ್ ಹಾಡನ್ನು ಬರೆದು, ಹಾಡಿದರು. ಗುರುಕಿರಣ್ ಮೊದಲ ಬಾರಿಗೆ ಬರೆದಂತಹ ಲವ್ ಹಾಡು ಇದಾಗಿದೆ.
ಈ ಹಾಡನ್ನು, ತುಂಬಾ ಸ್ಟೈಲಿಶ್ ಆಗಿ, ಮತ್ತು ಕಲರ್ ಫುಲ್ ಆಗಿ ಚಿತ್ರೀಕರಿಸುವ ದೃಷ್ಟಿಯಿಂದ, ಈ ಹಾಡಿನ ಡ್ಯಾನ್ಸ್ ಮಾಸ್ಟರ್ ಸಂದೀಪ್ ರವರನ್ನ ಬೇಟಿ ಮಾಡಿ, ಸಹ ನೃತ್ಯಗಾರ್ತಿಯರ ಆಯ್ಕೆ ಮಾಡಿ, ಅವ್ರಿಗೆಲ್ಲ ಪ್ರ್ಯಾಕ್ಟೀಸ್ ಮಾಡಿಸಿ, ಶೂಟಿಂಗ್ ಸ್ಪಾಟ್ಗೆ ಕರೆದೊಯ್ದುರು. ಇದಕ್ಕೆ ಬೇಕಾದ ರೇಡಿಯೋ ಪ್ರತಿಕೃತಿಗಳನ್ನು ಆರೋಗ್ಯ ಸ್ವಾಮಿಯವ್ರು ಅದ್ಬುತವಾಗಿ ಮಾಡಿಕೊಟ್ಟಿದ್ದರು. ಹಾಡಿನಲ್ಲಿ ಎಲ್ಲ ನೃತ್ಯಗಾರ್ತಿಯರ ಕೈಯಲ್ಲಿ ಎಲ್‌ಸಿಡಿ ಟೀವೀ ಹಿಡಿಸಿ, ಅದರಲ್ಲಿ ನಾಯಕಿಯ ಚಿತ್ರ ಬರುವಂತೆ ಚಿತ್ರಿಸುವ ಉಪಾಯ ಹೊಳೆದಿದ್ದ ಅಭಿಯವ್ರಿಗೆ, ನಿರ್ಮಾಪಕರ ಸಹಕಾರ ಸಿಗಲಿಲ್ಲ. ಆ ಬೇಸರದಲ್ಲಿ ಇದ್ದಾಗ, ಅದಕ್ಕೆ ತಕ್ಷಣ ಅವ್ರಿಗೆ ಹೊಳೆದಿದ್ದು, ಬಿಸಿಲಲ್ಲೂ ಹೊಳೆಯುತ್ತಿದ್ದ, ನೃತ್ಯಗಾರ್ತಿಯರ ಬಿಳಿ ಸೊಂಟದ ಮೇಲೇನೇ, ಟಿವಿ ಚಾನೆಲ್ಲಿನ ಲೋಗೋ ಬಿಡಿಸಿ ತೋರಿಸೋದು ಅಂತಾ!
aarogya swamy
ಅದಕ್ಕೆ ನೃತ್ಯಗಾರ್ತಿಯರು ಒಪ್ಪಲಿಲ್ಲ "ಚಿತ್ರ ಮಾಡುವುದು ನಟ ನಟಿಯರಿಗೆ ಸಂಭಾವನೆ ಕೊಡೋಕೆ ಅಲ್ಲ, ಜನಗಳಿಗೆ ಮನರಂಜನೆ ನೀಡುವುದಕ್ಕೆ, ಜೊತೆಗೆ ಸಾಧ್ಯವಾದರೆ ಒಂದಷ್ಟು ಒಳ್ಳೇ ಸಂದೇಶ ತಲುಪಿಸೋದಿಕ್ಕೆ" ಎಂದು ಅಭಿಯವ್ರು ಹೇಳಿ ಒಪ್ಪಿಸಿ, ಆರೋಗ್ಯ ಸ್ವಾಮಿ ಎಲ್ಲರ ಸೊಂಟದ ಮೇಲೆ ಟಿವಿ ಚ್ಯಾನೆಲ್ ಗಳ ಲೋಗೋ ಚಿತ್ತಾರ ಬಿಡಿಸಿದರು, ನಂತರ ಎಲ್ಲರೂ ಸಂತೋಷವಾಗಿ ಹಾಡಿನ ಚಿತ್ರೀಕರಣಕ್ಕೆ ಸಹಕರಿಸಿದರು ಹಾಡಿನ ಕೊನೆಯಲ್ಲಿ ಬಾಟಲ್ ಹೊಡೆಯುವ ದೃಶ್ಯದಲ್ಲಿ ಕೆಲ ನೃತ್ಯಗಾರ್ತಿಯರಿಗೆ ಗಾಯಗಳು ಸಹ ಆಯಿತಂತೆ.
ಕೊನೆಗೆ ಹಾಡಿನ ವೀಡಿಯೋ ನೋಡಿ ಸಣ್ಣ ಪುಟ್ಟ ಲೋಪ ದೋಷಗಳಿದ್ದರೂ ತುಂಬಾ ಖುಷಿಪಟ್ಟ ಅಭಿಯವರು ತಮ್ಮ ಅನುಭವ ಮೆಲುಕು ಹಾಕಿದ್ದಾರೆ.
ಗುರುಕಿರಣ್ ತಮ್ಮ ಶೋಗಳಲ್ಲಿ ಈ ಹಾಡನ್ನು ಹಾಡುವುದರ ಮೂಲಕ ಚಿತ್ರಕ್ಕೆ ಪ್ರೋತ್ಸಾಹ ಕೊಡುತ್ತಾ ಬಂದಿದ್ದಾರೆ. ಹೊಸಬರೊಂದಿಗೆ ಗುರುಕಿರಣ್ ಹೆಚ್ಚು ಉತ್ಸಾಹದಿಂದ, ಒಂಚೂರು ಬೇಧವಿಲ್ಲದೆ, ಸಂಗೀತ ಸಂಯೋಜನೆ ಮಾಡಿ ಕೊಟ್ಟಿದ್ದಕ್ಕೆ ತುಂಬಾ ಖುಷಿಯಿದೆ ಎಂದು ಅಭಿ ಹೇಳುತ್ತಾರೆ.
"ಹೊಸಬರೊಂದಿಗೆ ನಾನು ಹೊಸಬನಾಗಿ ಕೆಲಸ ಮಾಡಲು ಇಚ್ಚಿಸುವುದರಿಂದ, ಹೊಸತನ ತುಂಬಾ ಖುಷಿ ಕೊಡುತ್ತೆ"ಅಂತಾ ಗುರುಕಿರಣ್ ಸಹ ಕಣ್ಣು ಮಿಟುಕಿಸಿ ಹೇಳುತ್ತಾರೆ..!
ಹಾಡಿನ ವೀಡಿಯೋ ನೋಡಿದ ಯಾರೋ ಪತ್ರಿಕಾ ಸಿಬ್ಬಂದಿ,"ಏನ್ರೀ ಟೀವೀ ಚ್ಯಾನೆಲ್ನವರನ್ನ, ಸೊಂಟದ ಮೇಲೆ ಕೂರಿಸಿದಿರಾ?" ಎಂದು ಛೇಡಿಸಿದ್ದನ್ನ ನೆನಪು ಮಾಡಿಕೊಂಡ್ರು. ಹಾಡನ್ನು ನೋಡಿದವ್ರೆಲ್ಲ ತಮ್ಮ ಮನೆಯಲ್ಲಿದ್ದ ಹಳೆಯ ರೇಡಿಯೋಗಳನ್ನು ನೆನಪು ಮಾಡಿಕೊಳ್ಳೋದು ಗ್ಯಾರೆಂಟೀ....ನೀವು ಸಾಂಗ್ ನೋಡಿಲ್ಲ ಅಂದ್ರೆ, ಒಂದ್ಸಲ ನೋಡ್ಕೊಂಡು ಅಭಿಪ್ರಾಯ ತಿಳಿಸಿ. ಚಿತ್ರ ಡಿ.ಟಿ.ಎಸ್ ಮುಗಿಸಿ ಸೆನ್ಸಾರ್ ಬೋರ್ಡಿನ ಮುಂದೆ ಪ್ರದರ್ಶನಗೊಳ್ಳಲು ಸಿದ್ಧವಾಗಿದೆ.
ಹಾಡು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ

Apr 28, 2015

ಸರಳ ಸೊಬಗಿನ ಮಲೆನಾಡಿನಲ್ಲೊಂದು ‘ಮಂಗನ ಬ್ಯಾಟೆ’

mangana byate kalkuli vittal hegde
Dr Ashok K R
ವಿದ್ಯಾರ್ಥಿಯಾಗಿದ್ದ ದಿನಗಳಿಂದಲೇ ಪುಸ್ತಕ ಓದುವ ಹುಚ್ಚು. ಪುಸ್ತಕದ ನಿರೂಪಣೆ, ವಿಚಾರ ಮೆಚ್ಚುಗೆಯಾಗಿಬಿಟ್ಟರೆ ಕಾಲೇಜು – ಕ್ಲಾಸುಗಳೆಲ್ಲವಕ್ಕೂ ಚಕ್ಕರ್! ಪೋಲಿ ತಿರುಗಿದ ವಿದ್ಯಾರ್ಥಿ ದಿನಗಳನ್ನು ಕಳೆದು ಕೆಲಸ ಸೇರಿ ಜವಾಬ್ದಾರಿಯುತ ಪ್ರಜೆಯಾಗಿಬಿಟ್ಟ ಮೇಲೆ ‘ಕೆಲಸ’ಗಳನ್ನು ಮುಗಿಸಿದ ತರುವಾಯವಷ್ಟೇ ಪುಸ್ತಕಗಳನ್ನು ಓದುವ ಸೌಕರ್ಯ. ಒಂದೇ ಏಟಿಗೆ ಓದಿಬಿಡಬೇಕು ಎನ್ನಿಸುವ ಪುಸ್ತಕಗಳನ್ನು ಇತ್ತೀಚಿನ ದಿನಗಳಲ್ಲಿ ಓದಿದ್ದು ಕಡಿಮೆಯೇ. ಬೇಟೆಯ ಬಗೆಗಿನ ಪುಸ್ತಕಗಳು ಯಾವತ್ತಿಗೂ ಆಕರ್ಷಕ. ಜಗದೀಶ್ ಕೊಪ್ಪ ಬರೆದಿರುವ ಜಿಮ್ ಕಾರ್ಬೆಟ್ ಬಗೆಗಿನ ಪುಸ್ತಕ ವಿದ್ಯಾರ್ಥಿ ದೆಸೆಯಲ್ಲಿ ಓದಿದ್ದ ಬೇಟೆಯ ಕಥೆಗಳನ್ನು ನೆನಪಿಸಿತು. ಅದೇ ಗುಂಗಿನಲ್ಲಿ ಲಂಕೇಶರ ಎಂಭತ್ತನೇ ವರುಷದ ವಾರ್ಷಿಕೋತ್ಸವಕ್ಕೆ ಹೋದಾಗ ಕಣ್ಣಿಗೆ ಬಿದ್ದಿದ್ದು ಕಲ್ಕುಳಿ ವಿಠಲ್ ಹೆಗಡೆ ಬರೆದಿರುವ ‘ಮಂಗನ ಬ್ಯಾಟೆ’. ಮೈಸೂರಿನ ಬಳಿಯ ಚಾಮಲಾಪುರದಲ್ಲಿ ಉಷ್ಣ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಬೇಕೆಂದು ಸರಕಾರ ನಿರ್ಧರಿಸಿದಾಗ ಅಲ್ಲಿನ ರೈತರು ಬಹುದೊಡ್ಡ ಚಳುವಳಿ ನಡೆಸಿದರು. ಮೈಸೂರಿನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಚಳುವಳಿಗೆ ಸಂಬಂಧಪಟ್ಟ ಕರಪತ್ರಗಳನ್ನು ಹಂಚುತ್ತಿದ್ದಾಗ ಕಲ್ಕುಳಿ ವಿಠಲ್ ಹೆಗಡೆ ಮತ್ತು ಗೌರಿ ಲಂಕೇಶರನ್ನು ಮೊದಲ ಬಾರಿಗೆ ಕಂಡಿದ್ದೆ. ಅದಾಗಲೇ ಕಲ್ಕುಳಿ ವಿಠಲ್ ಹೆಗಡೆ ಕುದುರೆಮುಖದಲ್ಲಿ ಆದಿವಾಸಿಗಳನ್ನು ಎತ್ತಂಗಡಿ ಮಾಡಬಾರದು ಎಂದು ಪ್ರಜಾಸತ್ತಾತ್ಮಕ ರೀತಿಯಲ್ಲಿಯೇ ಹೋರಾಡುತ್ತಿದ್ದರು. ಇದೇ ಹೋರಾಟದಲ್ಲಿ ನಕ್ಸಲರೂ ಸಕ್ರಿಯರಾಗಿದ್ದರು. ಕಲ್ಕುಳಿ ವಿಠಲ್ ಹೆಗಡೆ ಕೂಡ ನಕ್ಸಲ್ ಎಂದು ಹಣೆಪಟ್ಟಿ ಕಟ್ಟುವ ಕೆಲಸ ಜೋರಾಗಿಯೇ ನಡೆದಿತ್ತು. ಇಂತಹ ಕಲ್ಕುಳಿ ವಿಠಲ್ ಹೆಗಡೆಯವರ ಬೇಟೆಯ ಬಗೆಗಿನ ಪುಸ್ತಕವನ್ನು ಕೊಳ್ಳದೆ ಇರಲಾದೀತೇ! ಕೊಂಡು ತಂದು ಓದಲಾರಂಭಿಸಿದ ಮೇಲೆ ‘ನಾನು ಲೇಖಕನಲ್ಲ’ ಎಂದು ವಿನಯದಿಂದಲೇ ಹೇಳಿಕೊಂಡಿರುವ ವಿಠಲ್ ಹೆಗಡೆಯವರ ಲೇಖನಿಯ ಶಕ್ತಿಯ ಅರಿವಾಯಿತು. ದಿನದ ಕೆಲಸಗಳನ್ನು ಮುಗಿಸಿ ಬೇಟೆಯಾಡುವುದೇ ಮೂರು ದಿನದ ಕೆಲಸವಾಯಿತು!

ಹೆಸರಿಗಿದು ಕಾದಂಬರಿಯಾದರೂ ಕಾದಂಬರಿಯ ಲಕ್ಷಣಗಳಿಲ್ಲ. ಮಲೆನಾಡಿನ ಪರಿಸರ ಕಥನ ಎಂಬ ಟ್ಯಾಗನ್ನು ಪುಸ್ತಕದ ಮೇಲೆ ಕಾಣುತ್ತೀವಾದರೂ ನಿರ್ದಿಷ್ಟ ಕಥನಕ್ರಮವಿಲ್ಲ. ಎಡಪಂಥೀಯ ರಾಜಕೀಯ ನಿಲುವುಗಳು ಪಾತ್ರಗಳ ಮೂಲಕ, ಲೇಖಕರ ಸ್ವಯಂ ಮಾತಿನ ಮೂಲಕ ಅಲ್ಲಲ್ಲಿ ಇಣುಕುತ್ತಾದರೂ ಇದು ರಾಜಕಾರಣದ ಪುಸ್ತಕವಲ್ಲ. ಬೇಟೆಯ ಕುರಿತಾದ ಪುಸ್ತಕವೆಂದರೂ ಇಡೀ 272 ಪುಟಗಳಲ್ಲಿ ಬೇಟೆಯ ಚಿತ್ರಣವಿಲ್ಲ. ಈ ಪುಸ್ತಕದ ತುಂಬ ಹಾಸಿಹೊಕ್ಕಿರುವುದು ಒಂದಿಡೀ ಭೂಪ್ರದೇಶದ ಪರಂಪರೆ, ಅಲ್ಲಿಯ ಸಾಂಸ್ಕೃತಿಕ ಸೊಬಗು ಮತ್ತಾ ಸೊಬಗು, ಪರಂಪರೆಯಲ್ಲಿ ನಾನಾ ಕಾರಣಗಳಿಗಾಗಿ ಆಗುತ್ತಿರುವ ನಿರಂತರ ಬದಲಾವಣೆಗಳು. ಬದಲಾವಣೆ ಸಹಜವಾದರೂ ಬದಲಾವಣೆಯ ವೇಗ ಸಹಜವಾಗಿಲ್ಲ. ಅತಿವೇಗದ ಬದಲಾವಣೆ ಪರಿಸರಕ್ಕಾಗಲೀ, ಆ ಪರಿಸರಕ್ಕೆ ಹೊಂದಿಕೊಂಡೇ ಬದುಕುವ ಜನರಿಗಾಗಲೀ ಒಳ್ಳೆಯದನ್ನು ಮಾಡಲಾರದು. 

ಪುಸ್ತಕದ ಪ್ರಾರಂಭವಾಗುವುದೇ ಮಂಗನ ಬ್ಯಾಟೆ ಮತ್ತು ಮಂಗ ತಿನ್ನುವವರು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಾಗಿಹೋದ ಬಗ್ಗೆ ವಿಷಾದ ವ್ಯಕ್ತಪಡಿಸುವ ಬ್ರಾಹ್ಮಣ ರೈತನಿಂದ. ನಗರದಲ್ಲಿ ಮಂಗಗಳ ಹಾವಳಿ ಹೆಚ್ಚಾಯಿತೆನ್ನುವ ಕಾರಣದಿಂದ ವಿಶೇಷ ಬೋನಿನ ಸಹಾಯದಿಂದ ಮಂಗಗಳನ್ನು ಹಿಡಿದು ಹಳ್ಳಿಗಳಿಗೆ, ಹಳ್ಳಿಯ ಸುತ್ತಲಿನ ಕಾಡುಗಳಿಗೆ ಸರಕಾರ ಬಿಟ್ಟುಬಿಡುತ್ತಾರೆ. ಮಂಗನನ್ನು ನಿಯಂತ್ರಿಸುವ ಯಾವ ಉಪಾಯಗಳೂ ಸಿಗದೆ ‘ಕಾಡಿನ ಮಧ್ಯದ ಹಳ್ಳಿ ತೊರೆಯಿರಿ’ ಎಂದ ಸರಕಾರಕ್ಕೆ ಸೆಡ್ಡು ಹೊಡೆದ ಜನರು, ಬಂದೂಕಿಗೆ ಎದೆಯೊಡ್ಡಿದ ಜನರು ಮಂಗನ ಕಾಟಕ್ಕೆ ಹೆದರಿ ಊರು ತೊರೆಯುವ ನಿಸ್ಸಹಾಯಕತೆಯೊಂದಿಗೆ ಮಂಗನ ಬ್ಯಾಟೆ ಪ್ರಾರಂಭವಾಗುತ್ತದೆ. ನಗರದ ಮಂಗಗಳನ್ನು ಹಿಡಿಯಲು ವಿಶೇಷ ಬೋನು ತಯಾರಿಸಿ ಹಿಡಿದ ‘ಸಿದ್ಧ’ ಮಂಗನ ಬ್ಯಾಟೆಯ ನಾಯಕ, ಸರಕಾರದ ನಿರ್ಧಾರಗಳ ಕಾರಣದಿಂದ ಮಂಗನ ಬ್ಯಾಟೆಯ ಖಳನಾಯಕನೂ ‘ಸಿದ್ಧ’ನೇ! ಸಿದ್ಧನ ಹುಟ್ಟು, ಬೆಳವಣಿಗೆ, ಜೀತ, ಬೇಟೆಯ ಚಾತುರ್ಯ, ಅಪರೂಪದ ಔಷಧೀಯ ಗುಣಗಳುಳ್ಳ ಗಿಡಗಳನ್ನು ಗುರುತಿಸುವ ಬಗೆ, ದೈತ್ಯಾಕಾರದ ಮರಗಳನ್ನು ಚಕಚಕನೆ ಏರುವ ಚಾಣಾಕ್ಷತೆ – ಹೀಗೆ ಇಡೀ ಪುಸ್ತಕ ಸಿದ್ಧನ ಮೂಲಕ ಮಲೆನಾಡಿನ ಕಳೆದುಹೋಗಿರಬಹುದಾದ ಪರಿಸರವನ್ನು ನಮಗೆ ಪರಿಚಯಿಸುತ್ತ ಸಾಗುತ್ತದೆ. ಮಲೆನಾಡಿನ ಗಂಧಗಾಳಿ ಇಲ್ಲದ ಬಯಲುಸೀಮೆಯವರನ್ನೂ ತನ್ಮಯವಾಗಿಸುವಷ್ಟರ ಮಟ್ಟಿಗೆ ಕಲ್ಕುಳಿ ವಿಠಲ್ ಹೆಗಡೆಯವರ ಲೇಖನಿ ಹರಿತವಾಗಿದೆ, ಸರಳವಾಗಿದೆ. ಲೇಖಕರ ರಾಜಕೀಯ ನಿಲುವುಗಳು ಒಪ್ಪಿತವಾಗದಿದ್ದವರಿಗೂ ಪುಸ್ತಕದ ಓದು ಆಸಕ್ತಿದಾಯಕವಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಲೆನಾಡಿನ ಬಗ್ಗೆ, ಬೇಟೆಯ ಬಗ್ಗೆ ಬಂದಿರುವ ಪುಸ್ತಕಗಳಲ್ಲಿ ಉತ್ಕ್ರಷ್ಟವಾದ ಪುಸ್ತಕವಿದೆಂದು ಅನುಮಾನವಿಲ್ಲದೆ ಹೇಳಬಹುದು. ಕನ್ನಡ ಪುಸ್ತಕ ಲೋಕದಲ್ಲೊಂದು ಹೊಸ ಬಗೆಯ ಪುಸ್ತಕವಿದು. ರೈತರ ಬಗೆಗೆ ಕಾರ್ಮಿಕರ ಬಗೆಗೆ ಅನೇಕಾನೇಕ ಪುಸ್ತಕಗಳು, ಕಾದಂಬರಿಗಳು ಬಂದಿವೆ. ಜಾಗತೀಕರಣ, ಬಂಡವಾಳಶಾಹಿತನ ರೈತರ – ಕಾರ್ಮಿಕರ ಜೀವನದಲ್ಲಿ ಉಂಟುಮಾಡುವ ಪಲ್ಲಟಗಳ ಬಗ್ಗೆ ಪುಸ್ತಕಗಳಿವೆ. ಆದರೆ ತತ್ವ ಸಿದ್ಧಾಂತಗಳ ಯಾವ ವರ್ಗಕ್ಕೂ ಸೇರದ ಆದಿವಾಸಿಗಳು – ಬುಡಕಟ್ಟು ಜನಾಂಗಗಳ ಜೀವನ ಪದ್ಧತಿಯ ಬಗ್ಗೆ, ಅವರ ರೀತಿ ನೀತಿಗಳ ಬಗ್ಗೆ ಇರುವ ಪುಸ್ತಕಗಳು ತುಂಬ ಕಡಿಮೆ. ಒಂದು ನಿರ್ಧಾರವನ್ನು ಇಡೀ ರಾಜ್ಯಕ್ಕೆ/ ದೇಶಕ್ಕೆ ಏಕರೂಪವಾಗಿ ಹೇರುವ ಸರಕಾರ ಹೇಗೆಲ್ಲ ಗೊಂದಲಗಳನ್ನು ಸೃಷ್ಟಿಸುತ್ತದೆ ಎನ್ನುವುದಕ್ಕೆ ಈ ಪುಸ್ತಕದಲ್ಲಿ ಹತ್ತಲವು ಉದಾಹರಣೆಗಳು ಸಿಕ್ಕುತ್ತವೆ. ಸರಕಾರದ, ಊರ ಮುಖ್ಯಸ್ಥರ ಯಾವ ನಿರ್ಧಾರಕ್ಕೂ ಬೇಸರ ಪಟ್ಟುಕೊಳ್ಳದೆ ಪ್ರತಿಯೊಂದರಲ್ಲೂ ಆಶಾವಾದವನ್ನೇ ಕಾಣುವ ಯಾವ ಕೆಲಸವನ್ನಾದರೂ ಮಾಡುವ ‘ಸಿದ್ಧ’ ದೌರ್ಜನ್ಯವನ್ನು ಸಹಿಸುವ ಮೌನಿಯಾಗಿಯೂ ಕಾಣಿಸುತ್ತಾನೆ, ತನ್ನದೇ ರೀತಿಯಲ್ಲಿ ಪ್ರತಿಭಟಿಸುವ ಕ್ರಾಂತಿಕಾರಿಯಾಗಿಯೂ ಕಾಣಿಸುತ್ತಾನೆ.

ಬ್ಯಾಟೆಯ ಒಂದು ಪುಟ್ಟ ಭಾಗ ಹಿಂಗ್ಯಾಕೆ ಓದುಗರಿಗಾಗಿ

“ಜಗದ್ಗುರುಗಳಿಗೆ ಸರ್ಕಾರ ಇಷ್ಟೆಲ್ಲ ಹೆದರುತ್ತದೆ ಎಂದು ಅಲ್ಲಿಯತನಕ ಸಿದ್ಧನಿಗೆ ಗೊತ್ತೇ ಇರಲಿಲ್ಲ. ಪ್ಯಾಟೆ ತುಂಬಾ ಮಂಗಗಳು ಅದೆಷ್ಟೋ ಜನರಿಗೆ ಏನೇನೋ ಅನಾಹುತ ಮಾಡಿದರೂ ಯಾರೂ ಕ್ಯಾರೆ ಅಂದಿರಲಿಲ್ಲ. ಆದರೆ ಮಂಗಗಳು ಮಠದ ಗುರುಗಳ ಮೇಲೇ ಹಾರಿದವು ಎಂದಮಾತ್ರಕ್ಕೆ ಸರಕಾರದ ಇಷ್ಟೆಲ್ಲ ಅಧಿಕಾರಿಗಳು ಸೇರಿದ್ದು ಸಿದ್ಧನಲ್ಲಿ ಸೋಜಿಗ ಉಂಟುಮಾಡಿತ್ತು. ಆದರೂ ಮಂಗಗಳ ದೆಸೆಯಿಂದ ತನಗೆ ಒಲಿದ ಭಾಗ್ಯದಿಂದ ಆತ ಒಳಗೊಳಗೇ ಸಂತೋಷಗೊಂಡಿದ್ದ. ಸಿದ್ಧನಿಗೆ ಪುರಸಭೆ ಅಧ್ಯಕ್ಷರು ಎಲ್ಲರೂ ಮಾತನಾಡುವಂತೆ ಒತ್ತಾಯಿಸಿದರು. 

ಮಾತಿಗೆ ಎದ್ದುನಿಂತ ಸಿದ್ಧ, ‘ನಾ ಹೇಳೋದೂ ಎಂತದ್ದೂ ಇಲ್ಲ. ನಮ್ಮ ವಡೇರು ಅದಾರೆ. ಅವರೇ ಎಲ್ಲಾ ಹೇಳ್ತಾರೆ’ ಅಂದ. ಆಗ ವಡೇರು, ‘ಮಾತಾಡಿ ಮಾತಾಡಿ. ನಿಮಗೆ ಏನು ಹೇಳಬೇಕೋ ಅದನ್ನೆಲ್ಲಾ ಹೇಳಿ’ ಎಂದು ಮೊದಲ ಬಾರಿಗೆ ಸಿದ್ಧನಿಗೆ ಮರ್ಯಾದೆ ಕೊಟ್ಟು ಹೇಳಿದರು.

ಮೊದಲೆಲ್ಲ ಸಿದ್ಧನ ಹತ್ತಿರ ವಡೇರು ಕೂರುವುದು ಕನಸಿನ ಮಾತು. ಸಿದ್ಧನಿಗೆ ಏನಾದರೂ ಹೇಳಬೇಕಿದ್ರೆ ಹೆಚ್ಚೆಂದರೆ ಗೋವಿಂದನ ಹತ್ತಿರ ಹೇಳುತ್ತಿದ್ದರು. ಸಿದ್ಧನ ಹತ್ತಿರ ವಡೇರು ಮಾತಾಡಿದ್ದು ಸಿದ್ಧನಿಗೆ ನೆನಪಿಲ್ಲ. ಇವತ್ತು ಮಂಗಗಳ ದೆಸೆಯಿಂದ ಸಿದ್ಧ ಸಿದ್ಧಯ್ಯ ಆಗಿದ್ದ. ಸಿದ್ಧಯ್ಯ ಅಂತಲೇ ವಡೇರು ಮರ್ಯಾದೆ ಕೊಟ್ಟು ಹೇಳಿದ್ರು. ಸಿದ್ಧನನ್ನು ಗೋವಿಂದ ಹುರಿದುಂಬಿಸಿದ. ಸಿದ್ಧ ಧೈರ್ಯ ಮಾಡಿ ಮಾತಿಗೆ ಶುರುಮಾಡಿದ.

ಆಗ ಆ ಸಭಾಂಗಣದ ಮೂಲೆಯಲ್ಲಿ ನಿಂತಿದ್ದ ಫಾರೆಸ್ಟ್ ಗಾರ್ಡ್ ಸಿದ್ಧನ ಕಣ್ಣಿಗೆ ಬಿದ್ದ. ಅವನನ್ನು ಉದ್ದೇಶಿಸಿ ‘ಮಂಗನ ಬ್ಯಾಟೆ ಮಾಡಬ್ಯಾಡಿ ಅಂತ ನಮಗೆಲ್ಲ ತಾಕೀತು ಮಾಡಿದ್ರಿ. ಕಾಡಿನಲ್ಲಿದ್ದ ಮಂಗಗಳನ್ನು ತಂದು ಪ್ಯಾಟೇಲಿ ಬಿಟ್ರಿ. ಪ್ಯಾಟೆ ಮನುಷ್ಯರು ಮಂಗಗಳಿಗೆ ತಾವು ತಿನ್ನೋದನ್ನು ಕೊಟ್ರು. ಮನುಷ್ಯರ ಬುದ್ಧಿಯನ್ನು ಮಂಗಗಳಿಗೆ ಕಲ್ಸಿದ್ರು. ಅದ್ಕೆ ನೋಡಿ ಅವು ಇಷ್ಟೆಲ್ಲಾ ಜೋರಾಗಿವೆ. ಮಂಗಗಳನ್ನು ಮಠಕ್ಕೂ ಸೇರಿಸಿದ್ರಿ. ಮಠಕ್ಕೆ ಸೇರಿದ ಮ್ಯಾಲೆ ಅವು ಇನ್ನೂ ಕೊಬ್ಬಿ ಹೋಗ್ಯವೆ. ಅದ್ಕೆ ನೋಡಿ ಇವತ್ತು ಕಾಡಿನ ಮಂಗಗಳ ದೆಸೆಯಿಂದ ಊರಾಗ್ಯಾರು ಇರಂಗಿಲ್ಲ. ಹಂಗೆ ಬಂದದೆ ಕಾಲ’ ಎಂದು ಗಾರ್ಡ್ ಗೆ ತಿರುಗು ಬಾಣ ಬಿಟ್ಟ."
ಮಂಗನ ಬ್ಯಾಟೆ – ಕಲ್ಕುಳಿ ವಿಠಲ್ ಹೆಗಡೆ.
ಲಂಕೇಶ್ ಪ್ರಕಾಶನ, ಬೆಲೆ – ರೂ 200/-
ಸಪ್ನ ಬುಕ್ ಹೌಸಿನಿಂದ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ಕಿಸಿ

Apr 25, 2015

ಅಸಹಾಯಕ ಆತ್ಮಗಳು - ಮುಳ್ಳಿನ ಪೊದೆಯೊಳಗೆ ಹಾಡುಹಕ್ಕಿ

ಕು.ಸ.ಮಧುಸೂದನ್
ಮದುವೆ ಮಾಡಿಕೊಂಡು ಕರ್ನಾಟಕಕ್ಕೆ ಕಾಲಿಟ್ಟಾಗ ನನಗಿನ್ನು ಹದಿನಾರು ನಡೆಯುತ್ತಿತ್ತು. ಸಾಲು ಸಾಲು ಮಕ್ಕಳನ್ನು ಹುಟ್ಟಿಸಿದ್ದ ಅಪ್ಪ ದುಡಿದದ್ದನ್ನೆಲ್ಲ ಹೆಂಡದಂಗಡಿಗೇ ಸುರೀತಿದ್ದ. ಏಳು ಜನ ಹೆಣ್ಣುಮಕ್ಕಳ ಪೈಕಿ ನಾನು ಆರನೆಯವಳು. ಅದೇನು ಕರ್ಮವೊ ನನ್ನ ಮೊದಲನೆಯ ಅಕ್ಕ ಬೇರೆ ಜಾತಿಯವನೊಡನೆ ಓಡಿಹೋಗಿ ನಮ್ಮನ್ನು ನರಕಕ್ಕೆ ತಳ್ಳಿಬಿಟ್ಟಿದ್ದಳು. ಮನೆಯಲ್ಲಿ ಅಷ್ಟು ಬಡತನವಿದ್ದರೂ ಅಪ್ಪ ಅಮ್ಮನಿಗೆ ಜಾತಿಯ ಭೂತ ಮೆಟ್ಟಿಕೊಂಡಿತ್ತು. ದೊಡ್ಡ ಹುಡುಗಿ ಓಡಿಹೋದಮೇಲೆ ಉಳಿದ ಹುಡುಗಿಯರನ್ನು ಯಾರು ಮದುವೆಯಾಗ್ತಾರೆ ಅನ್ನೊದನ್ನು ತಲೆಲಿ ತುಂಬಿಕೊಂಡ ಅಪ್ಪ ಅಮ್ಮ ಹುಡುಗಿಯರು ಮೈನೆರೀತ ಇದ್ದ ಹಾಗೆ ಮದ್ವೆ ಮಾಡಿ ಕೊಡೋಕೆ ಶುರು ಮಾಡಿದರು. ಐದನೆಯವಳು ಮದುವೆಯಾದಾಗ ನನಗೆ ಹನ್ನೆರಡು ವರ್ಷವಾಗಿತ್ತು. ಅದೇನು ಪುಣ್ಯವೋ ಗೊತ್ತಿಲ್ಲ ನಾನು ಮೈನೆರೆದಿದ್ದೇ ಹದಿನೈದು ತುಂಬಿದ ಮೇಲೆ. ಹಾಗಾಗಿ ಉಳಿದವರೆಲ್ಲ ಹದಿಮೂರು ಹದಿನಾಲ್ಕಕ್ಕೆ ಮದುವೆಯಾದರೆ ನನಗೆ ಮಾತ್ರ ಹದಿನಾರನೆ ವಯಸ್ಸಿಗೆ ಮದುವೆ ಆಯ್ತು. ನಮ್ಮೂರಿನವರು ತುಂಬಾ ಜನ ಕರ್ನಾಟಕದಲ್ಲಿ ಇದ್ದರು. ಆಗೀಗ ಅವರುಗಳು ಬಂದು ಹೋಗ್ತಾ ಇದ್ದರು. ಅಂತವರಲ್ಲಿ ಸರವಣ ಅಂತ ಒಬ್ಬ ಅಪ್ಪನಿಗೆ ಆತ್ಮೀಯನಾಗಿದ್ದ. ಊರಿಗೆ ಬಂದಾಗಲೆಲ್ಲ. ಅಪ್ಪನಿಗೆ ಕುಡಿಸೋದು ತಿನ್ನಿಸೋದು ಮಾಡೋನು. ಆ ವರ್ಷ ಅವನು ಮುರುಗ ಅಂತ ಒಬ್ಬನನ್ನು ಕರೆದುಕೊಂಡು ಬಂದು ಇವನಿಗೆ ನಿನ್ನ ಮಗಳನ್ನು ಕೊಡು. ಹುಡುಗ ಗಾರೆ ಕೆಲಸದಲ್ಲಿ ಚೆನ್ನಾಗಿ ದುಡಿತಾ ಇದಾನೆ ಅಂತ ಹೇಳಿ ಅವನಿಗೆ ನನ್ನ ತೋರಿಸಿದ. ಆ ಹುಡುಗ ನನಗಿರೋದು ಅಮ್ಮ ಒಬ್ಬಳೆ ಅವಳಿಗೆ ಸರಿಯಾಗಿ ಕಣ್ಣು ಕಾಣಿಸಲ್ಲ,ಹಾಗಾಗಿ ನಾನು ಮತ್ತೆಮತ್ತೆ ಇಲ್ಲಿಗೆ ಬರೋಕಾಗಲ್ಲ. ನೀವು ಹು ಅಂದ್ರೆ ಈಗಲೆ ಮದ್ವೆ ಮಾಡಿಕೊಂಡು ಹುಡುಗೀನಾ ಕರೆದುಕೊಂಡು ಹೋಗ್ತೀನಿ ಅಂತ ಹೇಳಿದ್ದಕ್ಕೆ ಅಪ್ಪ ತಲೆಯಾಡಿಸಿಬಿಟ್ಟ. ಊರಲ್ಲೇ ಇದ್ದ ಮಾರಿಯಮ್ಮನ ದೇವಸ್ಥಾನದಲ್ಲಿ ಅರಿಶಿನ ದಾರ ಕಟ್ಟಿಸಿಬಿಟ್ಟ. ಸರಿ ಅಂತ ಅವಸರಕ್ಕೆ ಶಾಸ್ತ್ರ ಮುಗಿಸಿದವರು ಒಂದೇ ವಾರಕ್ಕೆ ನನ್ನ ಅವನ ಜೊತೆ ಕಳಿಸಿಬಿಟ್ಟರು. ನನ್ನ ಹಣೇಬರಹ ನೋಡಿ ಬೇರೆ ರಾಜ್ಯಕ್ಕೆ, ಭಾಷೆ ಬರದ ಊರಿಗೆ ಮಗಳನ್ನು ಕೊಡ್ತಾ ಇದೀವಿ ಅಂತ ಯೋಚನೆ ಮಾಡಿ ಯಾರಾದರು ಒಬ್ಬರು ನನ್ನ ಜೊತೆ ಬಿಡೋಕಾದರು ಬರಬಹುದಿತ್ತು. ಊಹು ಯಾರೂ ಬರಲೇ ಇಲ್ಲ. ಗಂಡನ ಜೊತೆ ನಾನೊಬ್ಬಳೇ ಕರ್ನಾಟಕಕ್ಕೆ ಬಂದೆ. ಯಾವತ್ತೂ ನಾನು ಅಷ್ಟು ದೂರ ಪ್ರಯಾಣ ಮಾಡಿದೋಳಲ್ಲ. ಅದೂ ಅಲ್ಲದೆ ಕನ್ನಡ ಅನ್ನೋಭಾಷೇನಾ ನಾನು ಕೇಳಿರಲೇ ಇಲ್ಲ.

ಸರಿ, ಇಲ್ಲಿ ಬಂದಮೇಲೆ ನೋಡಿದರೆ ಊರಲ್ಲಿನ ನಮ್ಮ ಮನೇನೇ ವಾಸಿ ಅನ್ನಿಸ್ತು. ಯಾಕಂದರೆ ಒಂದು ಸಣ್ಣ ಗುಡಿಸಿಲಿನಂತಿದ್ದ ಜಾಗದಲ್ಲಿ ನಾನು ನನ್ನ ಗಂಡ ಅತ್ತೆ ಜೀವನ ಮಾಡಬೇಕಾಗಿತ್ತು. ಮನೆಲಿದ್ದೋವು ಒಂದೆರಡು ಅಲ್ಯುಮಿನಿಯಂ ಪಾತ್ರೆಗಳಷ್ಟೆ. ಸರಿ ಹೇಗೋ ಹೊಂದಿಕೊಂಡು ಅವುಗಳಲ್ಲೆ ಸಂಸಾರ ಮಾಡತೊಡಗಿದೆ. ಬಂದ ಒಂದು ವಾರದಲ್ಲೇ ಅಕ್ಕಪಕ್ಕದ ಒಂದಷ್ಟು ಹೆಂಗಸರು ಪರಿಚಯವಾದರು. ಕನ್ನಡ ಮಾತಾಡೋದನ್ನು ಕಲಿಯತೊಡಗಿದೆ. ನಮ್ಮ ಬೀದಿಯಲ್ಲಿದ್ದೋರೆಲ್ಲ ನಮ್ಮಂತಹ ಗುಡಿಸಲಿನವರೇ ಆಗಿದ್ದರು ಆ ಹಳ್ಳಿಯಲ್ಲಿ ನಮ್ಮ ಬಿಡಾರವನ್ನು ತಮಿಳು ಕ್ಯಾಂಪ್ ಅಂತ ಕರೀತಾ ಇದ್ದರು. ಹೀಗೇ ಆರೇಳು ತಿಂಗಳು ಸಂಸಾರ ಮಾಡಿದೆ. ಅಷ್ಟು ತಿಂಗಳಲ್ಲಿ ನನಗೆ ಗೊತ್ತಾಗಿದ್ದೆಂದರೆ ನನ್ನ ಗಂಡ ನಾನು ಅಂದುಕೊಂಡಷ್ಟೇನು ಒಳ್ಳೆಯವನಾಗಿರಲಿಲ್ಲ. ದುಡಿದ ದುಡ್ಡನ್ನೆಲ್ಲ ಕುಡಿತಕ್ಕೆ ಹಾಕೋನು. ಮನೆಗೆ ಸರಿಯಾಗಿ ಸಾಮಾನು ತಂದು ಹಾಕ್ತಾ ಇರಲಿಲ್ಲ. ಜೊತೆಗೆ ಪಕ್ಕದ ಹಳ್ಳಿಯಲ್ಲಿ ಯಾವಳನ್ನೊ ಇಟ್ಟುಕೊಂಡಿದ್ದ. ಅಂತಾದ್ರಲ್ಲಿಯೇ ನಾನು ಬಸುರಿಯಾದೆ. ನನಗೆ ಏಳು ತಿಂಗಳು ತುಂಬಿದ ಮೇಲೆ ತಮಿಳುನಾಡಿಂದ ಅಪ್ಪ ಅಮ್ಮ ಬಂದು ಕರೆದುಕೊಂಡು ಹೋದರು ಹೆರಿಗೆ ಆದ ಮೂರೇ ತಿಂಗಳಿಗೆ ಗಂಡ ವಾಪಾಸು ಕರೆದುಕೊಂಡುಬಂದುಬಿಟ್ಟ. ನಾನೆಷ್ಟೇ ಪ್ರಯತ್ನ ಪಟ್ಟರು ಅವನು ಬದಲಾಗಲೇ ಇಲ್ಲ.ನಾನು ಕೂಲಿ ಗೀಲಿ ಮಾಡೋಣ ಅಂದ್ರೆ ನನಗೇನು ಬರ್ತಾ ಇರಲಿಲ್ಲ. ಕಪ್ಪಗಿದ್ದರು ನೋಡೋಕೆ ಲಕ್ಷಣವಾಗಿದ್ದ ನನ್ನ ಹೊರಗೆ ಕಳಿಸೋಕು ಅವನು ಒಪ್ತಾ ಇರಲಿಲ್ಲ. ಹೀಗೇ ಸಂಸಾರ ನಡೀತಾ ಇರಬೇಕಾದರೆ ಒಂದು ದಿನ ಅವನು ಕೆಲಸಕ್ಕೆ ಹೋಗಬೇಕಾದರೆ ಲಾರಿಯೊಂದು ಗುದ್ದಿ ಸತ್ತು ಹೋಗಿಬಿಟ್ಟ. ಊರಿಗೆ ಟೆಲಿಗ್ರಾಂ ಕೊಟ್ಟರೂ ಅದು ತಲುಪಿ ಅಪ್ಪ ಅಮ್ಮ ಬರೋದ್ರೊಳಗೆ ಅವನು ಮಣ್ಣಾಗಿದ್ದ. ಬಂದವರು ವಾಪಸು ನನ್ನ ಕರೆದುಕೊಂಡುಹೋಗ್ತಾರೆ ಅಂತ ಇದ್ದೆ. ಆದರೆ ಅದ್ಯಾಕೊ ಅವರು ಅಲ್ಲಿ ನಮಗೆ ನಮ್ಮದೇ ಕಷ್ಟಗಳಿವೆ. ಅದೂ ಅಲ್ಲದೆ ನಿಮ್ಮ ಅತ್ತೇನಾ ಒಬ್ಬಳೇ ಬಿಟ್ಟು ಹೋದರೆ ಜನ ಏನಂತಾರೆ. ಅವಳನ್ನು ನೋಡಿಕೊಂಡು ಇಲ್ಲೇ ಇರು ಅಂತ ಹೇಳಿ ತಿಥಿ ಮಗಿಸಿ ಹೊರಟು ಹೋದರು. ಬೆಳಿಗ್ಗೆ ಎದ್ದರೆ ತಿನ್ನೋಕೆನು ಅಂತ ಹುಡುಕೊ ಪರಿಸ್ಥಿತೀಲಿ ನಾವಿದ್ದ್ವಿ. ಇಂತಹ ಸ್ಥಿತಿಯಲ್ಲಿ ಬಿಟ್ಟುಹೋದ ಅಪ್ಪ ಅಮ್ಮ ಸತ್ತು ಹೋದರು ಅಂತ ಅವತ್ತೆ ಅಂದುಕೊಂಡು ಬಿಟ್ಟೆ. ಮನೆಲಿದ್ದ ಅಷ್ಟಿಷ್ಟು ಸಾಮಾನಲ್ಲಿ ಅಡುಗೆ ಮಾಡ್ತಾ ಒಂದು ವಾರ ನೂಕಿದೆ.ಮನೆಯಲ್ಲಿ ಐದು ಸಾವಿರ ರೂಪಾಯಿಗಳ ಒಂದು ಇನ್ಷೂರೆನ್ಸ್ ಬಾಂಡ್ ಇತ್ತು. ಓದಿದವರಿಗೆ ಅದನ್ನು ತೋರಿಸಿದಾಗ ನನ್ನ ಗಂಡ ಅದನ್ನು ಮದುವೆಗೆ ಮುಂಚೇನೆ ಮಾಡಿಸಿ ಅವರ ಅಮ್ಮನನ್ನು ನಾಮಿನಿ ಮಾಡಿದ್ದ ಅಂತ ಗೊತ್ತಾಯಿತು.. ಸರಿ ಇನ್ನು ಅದನ್ನು ತಗೋಳೇಕೆ ಅಲೆದಾಟ ಶುರುವಾಯಿತು. ಅಕ್ಸಿಡೆಂಟ್ ಕೇಸ್ ಆಗಿದ್ರು ಗುದ್ದಿದ ಲಾರಿ ಯಾವುದು ಅಂತ ಗೊತ್ತಾಗಲೇ ಇಲ್ಲ. ಹಾಗಾಗಿ ಅದರಿಂದಾನು ಏನು ದುಡ್ಡು ಬರಲಿಲ್ಲ. ಸರಿ ಇನ್ಷುರೆನ್ಸ್ ದುಡ್ಡನ್ನ ಹೇಗೆ ತೆಗೆಯೋದು ಅದು ಗೊತ್ತಾಗದೇ ಇದ್ದಾಗ ಪಕ್ಕದ ಹಳ್ಳಿಯಲ್ಲಿ ನಮ್ಮ ತಮಿಳಿನವನೇ ಒಬ್ಬ ಸಣ್ಣ ರಾಜಕಾರಣಿ ಸುಬ್ರಮಣಿ ಅಂತ ಇದ್ದ. ಸರಿ ಅವನ ಹತ್ತಿರ ಹೋದೆ. ಅವನು ಅದನ್ನು ತೆಗೆಯೋಕೆ ನಿನ್ನ ಗಂಡ ಸತ್ತಿದ್ದರ ಸರ್ಟಿಫಿಕೇಟ್ ತಗೋಬೇಕು ಅಂದ. ಅದನ್ನು ಎಲ್ಲಿ ತಗಿಯೋದು ಅನ್ನೋದು ನನಗೆ ಗೊತ್ತಿರಲಿಲ್ಲ. ಅದಕ್ಕವನು ನಿನ್ನ ಗಂಡ ಸತ್ತಿದ್ದು ತಾಲ್ಲೂಕು ಕೇಂದ್ರದ ಹತ್ತಿರದಲ್ಲಿ. ಅಲ್ಲಿನ ಕಚೇರಿಗೆ ಹೋಗಿ ತಗೋಬೇಕು. ಅದಕೆಲ್ಲ ದುಡ್ಡು ಕೊಡಬೇಕಾಗುತ್ತೆ ಏನು ಮಾಡ್ತೀಯಾ ಅಂದ. ನನಗೇನಾದರು ಗೊತ್ತಿದ್ದರೆ ತಾನೇ ಉತ್ತರ ಕೊಡೋದು. ಸುಮ್ಮನಿದ್ದೆ. ಕೊನೆಗವನೇ ನೋಡು ಏನು ಮಾಡ್ತೀಯಾಂತ ದುಡ್ಡಿಲ್ಲದೆ ಯಾವ ಕೆಲಸಾನು ಆಗಲ್ಲ. ನೀನು ದುಡ್ಡಿಗೆ ಹೂ ಅಂದರೆ ಹೋಗಬಹುದು ಅಂದ. ಅದಕ್ಕೆ ನಾನು ಅಣ್ಣಾ ಇನ್ಷುರೆನ್ಸ್ ದುಡ್ಡು ಕೈಗೆ ಬಂದಕೂಡಲೇ ಅದರಲ್ಲೆ ನೀವು ತಗೊಳ್ಳಿವರಂತೆ ಈಗ ಏನಾದರು ಮಾಡಿ ಅಂದೆ. ಅದಕ್ಕವನು ಅರ್ದ ಮನಸಿಂದ ಒಪ್ಪಿದಂತೆ ನಾಟಕ ಮಾಡಿ, ಆಯ್ತು ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ಊರಿನ ಗೇಟಿನ ಹತ್ತಿರ ಬಾ. ಅಲ್ಲಿಗೆ ನಾನು ಬರ್ತೀನಿ,ನನ್ನ ಗಾಡೀಲೇ ಹೋಗೋಣ ಅಂದ. ವಿದಿಯಿಲ್ಲದೆ ಆಯ್ತು ಅಂತ ವಾಪಾಸು ಬಂದೆ. ಮಾರನೆ ದಿನ ಗೇಟಿಗೆ ಹೋಗಿ ಅವನ ಸ್ಕೂಟರಿನಲ್ಲಿ ತಾಲ್ಲೂಕಿಗೆ ಹೋದ್ವಿ. ಅಲ್ಲಿ ಆಫೀಸಿನ ಹೊರಗೆ ನನ್ನ ಕೂರಿಸಿ ಒಳಗೆ ಹೋದವನು ಮದ್ಯಾಹ್ನ ಬಂದ. ಬಂದವನು ಅವರಿಗಿನ್ನೂ ಪೋಲಿಸ್ ರಿಪೋರ್ಟ ಬಂದಿಲ್ವಂತೆ. ಅದು ಬಂದ ಕೂಡಲೇ ಕೊಡ್ತಾರಂತೆ. ಅದು ಪೋಲೀಸ್ ಕೇಸ್ ಆಗಿರೋದ್ರಿಂದ ಸ್ವಲ್ಪ ಕಷ್ಟವಾಗುತ್ತೆ. ಈಗ ನಾವು ಸ್ಟೇಷನ್ನಿಗೆ ಹೋಗಿ ಬರಬೇಕು ಅಂದು ನನ್ನ ಕರೆದುಕೊಂಡು ಸ್ಟೇಷನ್ನಿಗೆ ಹೋದ. ಅಲ್ಲಿಯೂ ನನ್ನ ಹೊರಗೆ ನಿಲ್ಲಿಸಿ ಹೆಣ್ಣುಮಕ್ಕಳು ಸ್ಟೇಷನ್ನಿಗೆಲ್ಲ ಬರಬಾರದು. ನಾನೇ ಒಳಗೆ ಹೋಗಿ ಬರ್ತೀನಿ ಅಂದು ಒಳಗೆ ಹೋದವನು ಒಂದು ಗಂಟೆಬಿಟ್ಟು ಹೊರಗೆ ಬಂದ. ಊಹೂ ಇವತ್ತು ಇನ್ಸಫೆಕ್ಟರ್ ಇಲ್ಲ ನಾಳೆ ಬೆಳಿಗ್ಗೆ ನೋಡೋಣ ಅಂದ್ರು. ನಾವು ವಾಪಾಸ್ ಊರಿಗೆ ಹೋಗಿ ನಾಳೆ ಬೆಳಿಗ್ಗೆ ಬರೋಣ ಅಂದ. ಏನು ಗೊತ್ತಾಗದೆ ಅವನ ಮಾತಿಗೆ ತಲೆದೂಗಿದೆ. ಬೆಳಿಗ್ಗೆ ಕುಡಿದ ಅಂಬಲಿ ಖಾಲಿಯಾಗಿತ್ತು. ಅದು ಅರ್ಥವಾದವನಂತೆ ಬಾ ಮೊದಲು ಏನಾದರು ತಿನ್ನೊಣವಂತೆ ಅಂತ ಒಂದು ಹೋಟೆಲ್ಲಿಗೆ ಕರೆದುಕೊಂಡುಹೋಗಿ ಊಟಕ್ಕೆ ಹೇಳಿದ. ತಟ್ಟೆಯ ಮುಂದೆ ಕೂತರೂ ಊಟ ಸರಿಯಾಗಿ ಸೇರಲಿಲ್ಲ. ಮನೆಯಲ್ಲಿ ಏನೂ ಮಾಡಿರಲಿಲ್ಲ. ಪಾಪ ಹಸಿದುಕೊಂಡು ಕೂತಿರೋ ಅತ್ತೆಯ ನೆನಪಾಯ್ತು. ಮಗನಿಗೆ ಪಕ್ಕದಮನೆಯವರೇನಾದರು ಕೊಟ್ಟಿದ್ದರೆ ಪುಣ್ಯ ಅಂದುಕೊಂಡು ಅಳು ಬಂತು. ಅವನೆಷ್ಟೇ ಬಲವಂತ ಮಾಡಿದರು ತಿನ್ನೋಕಾಗಲಿಲ್ಲ ಅರ್ದ ಊಟಬಿಟ್ಟು ಕೈ ತೊಳೆದು ಎದ್ದು ಬಿಟ್ಟೆ. ನೋಡು ಎಷ್ಟು ದಿನಾಂತ ಹೀಗೆ ಊಟ ಬಿಡ್ತೀಯಾ? ನಿನ್ನ ಗಂಡನ ದುಡ್ಡು ಎಷ್ಟು ದಿನಕ್ಕಾಗುತ್ತೆ. ನೀನು ಹೇಗಾದರು ಮಾಡಿಬದುಕೊದು ಕಲೀಬೇಕು ಅಂತ ಉಪದೇಶ ಮಾಡಿದ. ಅವನು ಹೇಳಿದ್ದರಲ್ಲಿ ತಪ್ಪೇನೂ ಕಾಣಲಿಲ್ಲ. ಸರಿ ಸಂಜೆ ಹೊತ್ತಿಗೆ ಮನೆಗೆ ಬಂದಿವಿ. 

ಹೀಗೇ ಮೂರು ದಿನ ಅಲೆದರೂ ಬೇಕಾದ ಡೆತ್ ಸರ್ಟಿಫಿಕೆಟ್ ಸಿಗಲೇ ಇಲ್ಲ. ಮನೆಯಲ್ಲಿ ನೋಡಿದರೆ ಕಡುಕಷ್ಟ. ಅಕ್ಕಪಕ್ಕದ ಮನೆಗಳಲ್ಲಿ ದುಡ್ಡು ಬಂದಾಕ್ಷಣ ಕೊಡ್ತೀನಿ ಅಂತ ಹೇಳಿ ಒಂದಿಷ್ಟು ಅಕ್ಕಿ ರಾಗಿ ಸಾಲ ತೆಗೆದುಕೊಂಡು ಹೇಗೋ ನಿಬಾಯಿಸ್ತಾ ಇದ್ದೆ. ನಾಲ್ಕನೇ ದಿನ ಸಂಜೆ ಸುಬ್ರಮಣಿ ತಾನೆ ಮನೆ ಹತ್ತಿರ ಬಂದು ನಾಳೆ ಸಂಜೆ ಐದುಗಂಟೆಗೆ ಹೋಗೋಣ. ಹೇಗಾದ್ರು ಮಾಡಿ ಸರ್ಟಿಫಿಕೇಟ್ ಕೊಡಿಸ್ತೀನಿ ಅಂದ. ಮಾರನೆ ಸಂಜೆ ನಾವು ಆಫೀಸಿಗೆ ಹೋದಾಗ ಅದಾಗಲೆ ಐದು ಗಂಟೆಯಾಗಿ ಹೋಗಿತ್ತು. ಮನೆಗೆ ಹೊರಡುತಿದ್ದ ಗುಮಾಸ್ತ ಎಲ್ಲ ರೆಡಿಯಾಗಿದೆ ಸಾಹೇಬರ ಸೈನ್ ಒಂದೇ ಬಾಕಿಯಿರೋದು. ಬೆಳಿಗ್ಗೆ ಹತ್ತುಗಂಟೆಗೆಲ್ಲ ಬಂದುಬಿಡಿ ಅಂದ. ಸರಿ ಇನ್ನೆನು ಮಾಡೋದು ಅಂತ ಅಲ್ಲಿಂದ ಹೊರಟ್ವಿ. ಹೋಟೆಲ್ಲಿನಲ್ಲಿ ಕಾಫಿ ಕುಡಿಯುತ್ತ ಸುಬ್ರಮಣಿ ನನ್ನ ಸ್ಕೂಟರ್ ಸ್ವಲ್ಪ ಸರಿ ಮಾಡಿಸಬೇಕು, ಬಿಟ್ಟರೆ ಹೋಗೋಕೆ ನಿನಗೆ ಬಸ್ಸಿಲ್ಲ. ಆದರಿಂದ ಹೇಗಿದ್ರೂ ಬೆಳಿಗ್ಗೆ ಮತ್ತೆ ಬರಬೇಕು. ಇವತ್ತು ಇಲ್ಲೇ ಉಳಿದುಕೊಂಡು ಬೆಳಿಗ್ಗೆ ಸರ್ಟಿಪೀಕೇಟ್ ತಗೊಂಡೇ ಹೋಗಿಬಿಡೋಣ ಅಂದ. ನಾನು ಅಣ್ಣಾ ಅತ್ತೆಗೆ ಹೇಳಿಲ್ಲ, ಜೊತೆಗೆ ಮಗೂನು ನಾನಿಲ್ಲದಿದ್ದರೆ ಅಳ್ತಾನೆ ಅಂದೆ ಅದಕ್ಕವನು ನೋಡು ಈಗ ಹೇಗಾದರು ಮಾಡಿ ವಾಪಾಸು ಹೋದರೂ ನಾಳೆ ಬೆಳಿಗ್ಗೆ ಗಾಡಿ ರಿಪೇರಿಯಾಗದೆ ಬರೋಕ್ಕಾಗಲ್ಲ ನೀನೊಬ್ಬಳೆ ಬಂದು ತಗೊಳ್ಳೊ ಹಾಗಿದ್ದರೆ ಹೇಳು ಅಂದ. ನಾನೊಬ್ಬಳೇ ಬಂದು ತಗೊಳ್ಳೋದು ಕಷ್ಟದ ಕೆಲಸ ಅನಿಸಿ ಆಯ್ತು ಅಂದು ಬಿಟ್ಟೆ. ಸರಿ ನಾವು ಕಾಫಿ ಕುಡಿಯುತ್ತಿದ್ದ ಹೋಟೆಲ್ಲಿನಲ್ಲೇ ಒಂದು ರೂಮು ಮಾಡಿ, ನನ್ನ ಅಲ್ಲಿ ಬಿಟ್ಟು ಗಾಡಿ ರಿಪೇರಿಗೆ ಬಿಟ್ಟು ಬರ್ತೀನಿ ಅಂತ ಹೋಗಿ ರಾತ್ರಿ ಎಂಟು ಗಂಟೆಗೆ ಊಟ ತಗೊಂಡು ಬಂದ. ಇದ್ದ ಒಂದು ಸಣ್ಣ ಮಂಚ ಅವನಿಗೆ ಬಿಟ್ಟು ನಾನು ರೂಮಿನ ಇನ್ನೊಂದು ಮೂಲೆಯಲ್ಲಿ ಬೆಡ್ ಶೀಟು ಹಾಸಿಕೊಂಡು ಮಲಗಿದೆ. ಲೈಟು ಆರಿಸಿ ಅವನೂ ಮಲಗಿದ ಸುಮಾರು ಒಂದು ಗಂಟೆಯ ನಂತರ ಅವನು ತೀರಾ ಹತ್ತಿರ ಬಂದು ನನ್ನ ಕರೆದಂತಾಗಿ ಕಣ್ಣು ಬಿಟ್ಟರೆ ಅವನು ನನ್ನ ಪಕ್ಕದಲ್ಲೇ ಬಂದು ಮಲಗಿದ್ದ. ನಾನು ಮೇಲೇಳಲು ಹೋದರು ಬಿಡದೆ ಗಟ್ಟಿಯಾಗಿ ಹಿಡಿದುಕೊಂಡು ನೋಡು ನಿನಗೆ ಯಾರೂ ದಿಕ್ಕಿಲ್ಲ. ಪರ್ಮನೆಂಟಾಗ ನಾನು ನೋಡಿಕೊಳ್ಳ್ತೀನಿ. ಸುಮ್ಮನಿರು ಅಂತೆಲ್ಲ ಹೇಳಿದ ನಾನು ಬಹಳಷ್ಟು ಪ್ರಯತ್ನ ಮಾಡಿದರು ಅವನ ಹಿಡಿತದಿಂದ ಹೊರಗೆ ಬರಲಾಗಲೇ ಇಲ್ಲ. ಗಂಡ ಸತ್ತ ಒಂದೆ ತಿಂಗಳೊಳಗೆ ಬೇರೆ ಗಂಡಸಿನ ಜೊತೆ ಮಲಗಿ ಬಿಟ್ಟಿದ್ದೆ. ಬೆಳಿಗ್ಗೆ ಎದ್ದಾಗ ಮನಸ್ಸಿಗೆ ಕಷ್ಟವಾದರು ರಾತ್ರಿಯೆಲ್ಲ ಅವನು ನನ್ನ ಕುಟುಂಬದ ಜವಾಬ್ದಾರಿಯನ್ನು ತಗೊಂಡು ನಿನ್ನ ಮಗನನ್ನು ನನ್ನ ಮಗನ ತರಾ ಸಾಕ್ತೀನಿ ಅಂತೆಲ್ಲ ಹೇಳಿದ್ದನ್ನು ಕೇಳಿ ಮನಸ್ಸಿಗೆ ಸಮಾಧಾನ ಮಾಡಿಕೊಂಡೆ. 

ಆಮೆಲಿನ್ನೇನು ಸರ್ಟಿಫಿಕೇಟು ತಗೊಂಡು ಮನೆಗೆ ಬಂದ್ವಿ. ಆಮೇಲೆ ಒಂದೇ ವಾರದಲ್ಲಿ ದುಡ್ಡೂ ಬಂತು ಆ ದುಡ್ಡಲ್ಲಿ ಮನೆಗೆ ಬೇಕಾದ ಸಾಮಾನು ತಗೊಂಡು ಗಂಡನ ಒಂದೆರಡು ಸಾಲ ತೀರಿಸಿದೆ. ಈ ಮದ್ಯೆ ಒಂದೆರಡು ಬಾರಿ ಸುಬ್ರಮಣಿಯೊಂದಿಗೆ ತಾಲ್ಲೂಕಿಗೆ ಹೋಗಿ ಬರಬೇಕಾಯಿತು. ಆರು ತಿಂಗಳಾಗುವಷ್ಟರಲ್ಲಿ ಮನೆಯ ಸಾಮಾನೆಲ್ಲ ಖಾಲಿಯಾಗಿ ಊಟಕ್ಕಿಲ್ಲದಂತಾಯಿತು. ಒಂದು ರಾತ್ರಿ ಅವನ ಜೊತೆಯಿದ್ದಾಗ ಈ ವಿಷಯ ಹೇಳಿ ಏನು ಮಾಡೋದು ಮುಂದೆ? ಅಂದೆ.ಅದಕ್ಕವನು ಒಂದಿಷ್ಟು ದುಡ್ಡು ಕೊಟ್ಟು ಸದ್ಯಕ್ಕಿದನ್ನು ಇಟ್ಟುಕೊ ಆಮೆಲೆ ಏನಾದರು ಮಾಡೋಣ ಅಂದ.

ಆಮೇಲೊಂದಷ್ಟು ದಿನಗಳಾದ ಮೇಲೆ ಮನೆಗೆ ಬಂದ ಸುಬ್ರಮಣಿ ನಾಳೆ ಬೆಳಿಗ್ಗೆ ರೆಡಿಯಾಗಿ ಗೇಟಿಗೆ ಬಾ ಸಿಟಿಗೆ ಹೋಗಿ ಬರೋಣ ಸ್ವಲ್ಪ ಕೆಲಸವಿದೆ ಅಂದ. ಮಾರನೆ ದಿನ ಅವನ ಜೊತೆ ಸಿಟಿಗೆ ಹೋದೆ. ನನ್ನನ್ನು ಒಂದು ದೊಡ್ಡ ಹೋಟೇಲಿನ ರೂಮಿಗೆ ಕರೆದುಕೊಂಡು ಹೋಗಿ ಬಿಟ್ಟು ಈಗ ಬರ್ತೀನಿ ಅಂತ ಹೊರಗೆ ಹೋಗಿಬಿಟ್ಟ.ಒಂದಷ್ಟು ಹೊತ್ತಾದ ಮೇಲೆ ಇನ್ಯಾರದೊ ಜೊತೆಗೆ ಬಂದು ಸಾಯಂಕಾಲದ ತನಕ ಇವರ ಹತ್ತಿರ ಇರು ಆಮೇಲೆ ನಾನು ಬರ್ತೀನಿ ಅಂತ ಹೊರಟು ಹೋದ. ಆಗವನ ತಂತ್ರ ಗೊತ್ತಾಗಲಿಲ್ಲ.ಬಂದವನು ನಾನು ಅಷ್ಟು ದುಡ್ಡು ಕೊಟ್ಟೀದಿನಿ, ಸುಬ್ರಮಣಿ ಬೇರಲ್ಲ ನಾನು ಬೇರಲ್ಲ ಅಂತ ನನ್ನ ವಿರೋದದ ನಡುವೆಯೂ ನನ್ನ ಉಪಯೋಗಿಸಿಕೊಂಡುಬಿಟ್ಟ. ಸಾಯಂಕಾಲದ ಹೊತ್ತಿಗೆ ರೂಮಿಗೆ ಸುಬ್ರಮಣಿ ಬಂದಾಗ ಅವನು ಮಾಡಿದ್ದಕ್ಕೆ ಜಗಳವಾಡಿದೆ,ಅತ್ತೆ, ಕಾಲಿಡಿದು ಹೀಗ್ಯಾಕೆ ಮಾಡಿದೆ ಅಂತ ಗೋಳಿಟ್ಟೆ.ಅದಕ್ಕವನು ನಿನಗೊಂದು ದಾರಿ ತೋರಿಸಿದೀನಿ. ನೋಡು ಎರಡೆ ಗಂಟೆಗೆ ಎಷ್ಟು ದುಡ್ಡು ಕೊಟ್ಟಿದಾನೆ ಅಂತೇಳಿ ದುಡ್ಡನ್ನು ನನ್ನ ಹತ್ತಿರ ಎಸೆದು ಹೊರಗೆ ಹೋಗಿಬಿಟ್ಟ. ಪಾಪಿ ಸೂಳೇಮಗ ನಾನು ಸಾಕ್ತೀನಿ ಅಂತೇಳಿ ನನ್ನ ಜೊತೆ ಮಲಗಿ ಈಗ ತಲೆಹಿಡುಕನ ತರಾ ಇನ್ನೊಬ್ಬರ ಜೊತೆ ಮಲಗಿಸಿಬಿಟ್ಟ ಅನ್ನೋ ಕೋಪದಲ್ಲಿ ನಾನು ಸಾಯಬೇಕು ಅಂತ ತೀರ್ಮಾನ ಮಾಡಿ ಇನ್ನೇನು ಅದೇ ರೂಮಿನ ಫ್ಯಾನಿಗೆ ಸೀರೆ ಕಟ್ಟಿ ನೇಣು ಹಾಕಿಕೊಳ್ಬೆಕು ಅನ್ನುವಷ್ಟರಲ್ಲಿ ರೂಂಬಾಯ್ ಬಂದು ಬಾಗಿಲು ತಟ್ಟಿಬಿಟ್ಟ. ಒಳಗೆ ಬಂದವನು ಫ್ಯಾನಿಗೆ ನೇತು ಬಿದ್ದಿದ್ದ ಸೀರೆ ನೋಡಿ ಗಾಬರಿಯಿಂದ ಮ್ಯಾನೇಜರ್‍ನನ್ನು ಕರೆದುಕೊಂಡು ಬಂದ. ಒಳಗೆ ಬಂದ ಮ್ಯಾನೇಜರ್ ತಾಳ್ಮೆಯಿಂದ ನನ್ನ ಕತೆ ಕೇಳಿಸಿಕೊಂಡು ನಾವಿಂತದ್ದಕ್ಕೆಲ್ಲ ರೂಂ ಕೊಡಲ್ಲ ಏನೋ ಪರಿಚಯದವರು ಅಂತ ರೂಂ ಕೊಟ್ಟು ತಪ್ಪು ಮಾಡಿಬಿಟ್ಟೆ ಅಂದು ನನಗೆ ಹೋಗುವಂತೆ ಹೇಳಿದ. ಹೊರಗೆ ಬಂದರೆ ಸುಬ್ರಮಣಿ ಕಾಯ್ತಾ ಇದ್ದ. ವಿದಿಯಿಲ್ಲದೆ ಅವನ ಜೊತೆ ಹಳ್ಳಿಗೆ ಬಂದೆ. ಅವನು ಕೊಟ್ಟ ದುಡ್ಡಲ್ಲಿ ಒಂದು ತಿಂಗಳಿಗಾಗುವಷ್ಟು ಸಾಮಾನು ತಂದುಹಾಕಿಕೊಂಡೆ. ಒಂದಷ್ಟು ದಿನಗಳ ನಂತರ ಮುಂದೇನು ಅನ್ನೊ ಪ್ರಶ್ನೆ ಎದುರಾಯ್ತು. ಮತ್ತೆ ಸಾಮಾನು ಖಾಲಿಯಾಗುತ್ತೆ ಉಪವಾಸ ಇರಬೇಕಾಗುತ್ತೆ ಏನು ಮಾಡೋದು ಅಂತ ಯೋಚಿಸ್ತಾ ಇರಬೇಕಾದರೆ ಒಂದು ಮದ್ಯಾಹ್ನ ಸುಬ್ರಮಣಿ ಮನೆಗೆ ಬಂದ. ನೋಡು ನಾನೇನು ಬೇಕೂ ಅಂತ ಆ ತರ ಮಾಡಿಲ್ಲ. ನನ್ನ ಆದಾಯನು ಕಡಿಮೆಯಾಗಿದೆ. ಊರತುಂಬಾ ಕಂಟ್ರಾಕ್ಟರುಗಳಾಗಿ ಕೆಲಸ ಮುಂಚಿನ ಹಾಗೆ ಸಿಕ್ತಿಲ್ಲ. ಜೊತೆಗೆ ಹೋದಸರಿ ಪಂಚಾಯಿತಿ ಎಲೆಕ್ಷನ್ನಿಗೆ ಖರ್ಚು ಮಾಡಿದ ಸಾಲ ಹಾಗೇ ಇದೆ. ಗೆದ್ದಿದರೆ ಏನಾದರು ಮಾಡಬಹುದಿತ್ತು. ಸೋತಮೇಲೆ ದುಡ್ಡೆಲ್ಲಿಂದ ಬರುತ್ತೆ ಹೇಳು ಅಂತೆಲ್ಲ ರಮಿಸಿದ. ಅವನ ಮಾತು ಕೇಳಿ ನನಗೂ ಬೇಜಾರಾಯಿತು. ಸರಿ ಈಗ ಮುಂದಕ್ಕೆ ನಾನೇನು ಮಾಡಲಿ ಅಂದೆ. ಅದಕ್ಕವನು ನೀನೇನು ಯೋಚಿಸಬೇಡ ಸಿಟೀಲಿ ಒಂದಷ್ಟು ಜನ ಫ್ರೆಂಡ್ಸ್ ಇದಾರೆ ಅವರಿಗೆ ಪರಿಚಯಿಸಿ ಕೊಡ್ತೀನಿ.ನೀನು ಸ್ವಲ್ಪ ಮನಸ್ಸು ಗಟ್ಟಿಮಾಡಿಕೊ ಎಲ್ಲ ಸರಿ ಹೋಗುತ್ತೆ ಅಂತ ಹೇಳಿ ನಾಳೆ ಗೇಟಿಗೆ ಬಾ ಅಂತ ಹೊರಟು ಹೋದ.

ಬೆಳಿಗ್ಗೆ ಹೋಗೋದೋ ಬೇಡವೊ ಅಂತ ರಾತ್ರಿಯೆಲ್ಲ ಯೋಚನೆ ಮಾಡಿದೆ. ಆದರೆ ಹೋಗದೇ ಇದ್ದರೆ ವಿಧಿಯಿಲ್ಲ ಅನಿಸ್ತು. ಬೆಳಿಗ್ಗೆ ಧೈರ್ಯ ಮಾಡಿ ಅವನ ಜೊತೆ ಸಿಟಿಗೆ ಹೋದೆ. ಅಲ್ಲೊಂದು ಮನೆಗೆ ಕರೆದುಕೊಂಡು ಹೋಗಿ ಒಬ್ಬ ಮದ್ಯವಯಸ್ಸಿನ ನರಪೇತಲ ಮನುಷ್ಯನನ್ನು ಪರಿಚಯ ಮಾಡಿಸಿದ. ಆ ನರಪೇತಲ ಒಬ್ಬ ತಲೆಹಿಡುಕನಾಗಿದ್ದ. ಪರಿಚಯ ಮಾಡಿಸಿದ ಸುಬ್ರಮಣಿ ನಾಳೆಯಿಂದ ಇವಳು ಬರ್ತಾಳೆ. ನಮ್ಮ ಖಾಸಾ ಹುಡುಗಿ. ಬೆಳಿಗ್ಗೆ ಹತ್ತು ಗಂಟೆಗೆ ಬಂದರೆ ಸಾಯಂಕಾಲ ಐದು ಗಂಟೆಯೊಳಗೆ ಮನೆಗೆ ವಾಪಸಾಗಬೇಕು ಆ ಥರಾ ವ್ಯವಸ್ಥೆ ಮಾಡಿಕೊಡಬೇಕು ಅಂತ ಹೇಳಿದ. ನಾನೇನೋ ದೊಡ್ಡ ಅಫೀಸಿಗೆ ಹೋಗ್ತಾ ಇದೀನೇನೋ ಅನ್ನೋ ತರಾ ಟೈಮೆಲ್ಲಾ ಫಿಕ್ಸ್ ಮಾಡಿದ. ಹು ಅಂದ ಪಿಂಪ್ ನಾಳೆ ಬಸ್ಸು ಇಳಿದು ಸೀದಾ ಮನೆಗೆ ಬಂದು ಬಿಡು ದಾರಿ ಗೊತ್ತಾಗುತ್ತಲ್ಲ ಅಂದ. 

ವಾಪಾಸು ಹೋಗೋವಾಗ ಸುಬ್ರಮಣಿ ನಾನು ಅವಾಗವಾಗ ಬರ್ತಾ ಇರ್ತೀನಿ, ಏನೂ ಭಯ ಪಡಬೇಡ ಅಂತೇಳಿ ಸಮಾಧಾನ ಮಾಡಿದ.

ಮಾರನೆ ದಿನದಿಂದ ಬೆಳಿಗ್ಗೆ ಎಂಟುಗಂಟೆಗೆ ಗೇಟಿಗೆ ನಡೆದುಕೊಂಡು ಹೋಗಿ ಅಲ್ಲಿಂದ ಬಸ್ಸು ಹಿಡಿದು ಹತ್ತುಗಂಟೆಗೆಲ್ಲ ಅವನ ಮನೆ ತಲುಪ್ತಾ ಇದ್ದೆ. ಅಲ್ಲಿಂದ ಅವನು ಯಾವುದಾದರು ಹೋಟೆಲಿಗೊ ಇಲ್ಲ ಯಾರದಾದರು ಮನೆಗೊ ಕರೆದುಕೊಂಡು ಹೋಗಿ ಬಿಡ್ತಾ ಇದ್ದ. ದುಡ್ಡಿನ ವ್ಯವಹಾರವನ್ನೆಲ್ಲ ಅವನೇ ಮಾಡ್ತಾ ಇದ್ದ. ಮೊದಮೊದಲು ನಾನೂ ಸಹ ಗಿರಾಕಿಗಳು ಇವನಿಗೆ ಎಷ್ಟು ಕೊಡ್ತಾರೆ ಇವನು ಅದರಲ್ಲಿ ನನಗೆಷ್ಟು ಕೊಡ್ತಾನೆ ಅನ್ನೊದರ ಬಗ್ಗೆ ತಲೆ ಕೆಡಸಿಕೊಂಡಿರಲಿಲ್ಲ. ಆದರೆ ಅಮೇಲೆ ಗಿರಾಕಿಗಳು ಅಷ್ಟು ಕೊಟ್ಟೆ ಇಷ್ಟು ಕೊಟ್ಟೆ ಅಂದಾಗಲೇ ಅವನು ಜಾಸ್ತಿ ತಗೊಂಡು ಕಡಿಮೆ ಕೊಡ್ತಿದ್ದ ಅಂತ ಗೊತ್ತಾಗಿದ್ದು. ಹಳ್ಳೀಲಿ ಎಲ್ಲರಿಗು ಸಿಟಿಯಲ್ಲಿ ಯಾರೊ ಶ್ರೀಮಂತರ ಮನೆಗೆಲಸ ಮಾಡಿಕೊಂಡಿದೀನಿ ಅಂತ ಸುಳ್ಳು ಹೇಳಿದ್ದೆ. ಹೀಗೇ ಎರಡು ವರ್ಷ ಕಳೆಯಿತು. ಈ ಮದ್ಯೆ ಅತ್ತೆ ಸತ್ತು ಹೋದಳು. ಆಗಲು ಅಪ್ಪ ಅಮ್ಮನಿಗೆ ನಾನು ವಿಷಯ ತಿಳಿಸಲಿಲ್ಲ. ಸಾವಿನ ವಿಷಯ ಗೊತ್ತಾಗಿ ಎಷ್ಟೋ ದಿನಗಳಾದ ಮೇಲೆ ಬಂದೋರಿಗೆ ನಾನು ನೆಮ್ಮದಿಯಾಗಿ ಜೀವನ ಮಾಡೋದು ನೋಡಿ ಆಶ್ಚರ್ಯವಾದರೂ ಸಂತೋಷವೇನು ಪಡಲಿಲ್ಲ. ಒಂದು ವಾರವಿದ್ದು ಹೊರಟುಹೋದರು ಈಗ ನನಗೆ ಮಗನ ಚಿಂತೆ ಶುರುವಾಗಿತ್ತು. ಏಳು ವರ್ಷ ತುಂಬುತ್ತಾ ಬಂದಿದ್ದ ಅವನು ಹಳ್ಳಿ ಸ್ಕೂಲಲ್ಲೇ ಎರಡನೇ ಕ್ಲಾಸು ಓದ್ತಾ ಇದ್ದ. 

ಆಗ ಮತ್ತೆ ಸುಬ್ರಮಣಿನೆ ಅವನನ್ನು ಹಾಸ್ಟೆಲ್ಲಿಗೆ ಸೇರಿಸೋ ಐಡಿಯಾ ಕೊಟ್ಟ. ಪಕ್ಕದ ತಾಲ್ಲೂಕಲ್ಲಿ ಒಂದು ಕ್ರಿಶ್ಚಿಯನ್ ಹಾಸ್ಟೆಲ್ಲಿದೆ, ಅಲ್ಲಿಗೆ ಸೇರಿಸೋಣ ಅಂದಾಗ ನಾನು ವಿಧಿಯಿಲ್ಲದೆ ಒಪ್ಪಿದೆ. ಅಲ್ಲಿದ್ದ ಫಾದರ್ ಇದನ್ನು ನಾವು ಅನಾಥ ಮಕ್ಕಳಿಗಾಗಿ ನಡೆಸ್ತಾ ಇದೀವಿ. ನೀವು ಬದುಕಿರೋವಾಗ ಅವನನ್ನು ಅನಾಥ ಅಂತ ಇಟ್ಟುಕೊಳ್ಳೋಕೆ ಆಗಲ್ಲ ಅಂದರು. ಬೇಕಿದ್ದರೆ ನಾನು ಇನ್ನೊಂದು ಹಾಸ್ಟೆಲ್ ನಡೆಸೊ ಫಾದರ್ ಒಬ್ಬರ ವಿಳಾಸ ಕೊಡ್ತೀನಿ. ಅಲ್ಲಿ ತೀರಾ ಕಡಿಮೆ ದುಡ್ಡು ತಗೊಂಡು ಮದ್ಯಮವರ್ಗದವರ ಮಕ್ಕಳನ್ನು ಓದಿಸ್ತಾರೆ ಅಂದರು. ನಾನು ಅದೇ ಊರಿನ ಆ ಹಾಸ್ಟೆಲ್ಲಿಗೆ ಮಗನನ್ನು ಸೇರಿಸಿ ಬಂದೆ. ಆಮೇಲೆ ಹಳ್ಳಿಯಲ್ಲಿರೋದು ಯಾಕೆ ಅನಿಸ್ತು. ನಾನು ಸಿಟೀಲೇ ಸಣ್ಣದೊಂದು ಬಾಡಿಗೆ ಮನೆ ಮಾಡಿದೆ. ಅಷ್ಟರಲ್ಲಿ ಈವ್ಯವಹಾರ ಅರ್ಥವಾಗಿ ಹೋಗಿತ್ತು. ಗಿರಾಕಿಗಳೊಡನೆ ನೇರವಾಗಿ ವ್ಯವಹಾರ ಕುದುರಿಸೋ ಕಲೆ ಸಿದ್ದಿಸಿತ್ತು. ನಡುಮದ್ಯೆ ಯಾವನೂ ಬೇಡ ಅಂತೇಳಿ ನಾನೇ ಕಸುಬು ಮಾಡತೊಡಗಿದೆ. ಊರಿಂದ ಸ್ವಲ್ಪ ದೂರವಿದ್ದ ಮನೆಯಾದ್ದರಿಂದ ಕೆಲವೇ ಕೆಲವು ಗಿರಾಕಿಗಳಿಗೆ ಅಡ್ರೆಸ್ ಕೊಟ್ಟು ಮನೆಗೆ ಕರೆಸಿಕೊಳ್ಳ್ತಾ ಇದ್ದೆ. ಆದರೆ ಪೋಲಿಸರಿಗೆ ಜನರಿಗೆ ಬೇಗ ವಿಷಯ ಗೊತ್ತಾಗಿ ಬಿಡೋದು. ಆರಾರು ತಿಂಗಳಿಗೆ ಸಿಟಿಯ ಒಂದು ಏರಿಯಾದಿಂದ ಇನ್ನೊಂದು ಏರಿಯಾಗೆ ಮನೆ ಬದಲಾಯಿಸಬೇಕಾಗ್ತಿತ್ತು. ಅಂತೂ ನಾನು ಸಿಟಿಯ ಎಲ್ಲ ದಿಕ್ಕುಗಳನ್ನೂ ನೋಡಿಬಿಟ್ಟಿದ್ದೆ. ಇಷ್ಟೆಲ್ಲ ಮಾಡಿದರು ಪೋಲಿಸರ ಕಾಟ ಇದ್ದೇ ಇರ್ತಿತ್ತು. ಅವರು ಕರೆದಾಗೆಲ್ಲ ಹೋಗಿ ಕಾಸುಕೊಟ್ಟು ಅವರ ಜೊತೆ ಮಲಗಿ ಬರಬೇಕಾಗಿತ್ತು. ಈ ಮದ್ಯೆ ಕಾಯಿಲೆ ಕಸಾಲೆ ಬಂದರೆ ನಾನೇ ಆರೈಕೆ ಮಾಡಿಕೊಳ್ಳಬೇಕಾಗ್ತಿತ್ತು. ಆಗಾಗ ಬಂದುಹೋಗ್ತಾ ಇದ್ದ ಸುಬ್ರಮಣಿ ಬೇರೆ ಸತ್ತು ಹೋಗಿದ್ದ. ರಜಾ ದಿನಗಳಲ್ಲಿ ಮಗ ಮನೆಗೆ ಬಂದರೆ ಎಲ್ಲವನ್ನೂ ನಿಲ್ಲಿಸಿಬಿಡ್ತಾ ಇದ್ದೆ. ಹೀಗೆ ವರ್ಷಗಳು ಕಳೀತಾ ಹೋವು. ಮಗ ಪಿಯುಸಿಗೆ ಬಂದಿದ್ದ. ಅಲ್ಲಿಯತನಕ ಚೆನ್ನಾಗಿ ಓದಿಕೊಂಡು ಒಂದೇ ಹಾಸ್ಟೆಲ್ಲಿನಲ್ಲಿ ಓದ್ತಾ ಫಾದರ್ ಹತ್ತಿರ ಒಳ್ಳೆ ಹೆಸರು ಸಂಪಾದಿಸಿದ್ದ. ಈ ನಡುವೆ ಒಂದು ಅಚಾತುರ್ಯ ನಡೆದು ಹೋಯಿತು. ಮಗ ಓದ್ತಾ ಇದ್ದ ಸಿಟೀಲಿ ಏನೋ ಗಲಾಟೆ ಅಂತ ಅವನ ಕಾಲೇಜಿಗೆ ಹದಿನೈದು ದಿನ ರಜಾ ಕೊಟ್ಟಿದ್ದರಂತೆ. ನನಗದು ಗೊತ್ತಾಗಲಿಲ್ಲ. ಅವಾಗಲೇ ರಿಪೇರಿಗೆ ಅಂತ ಹದಿನೈದು ದಿನ ಹಾಸ್ಟೆಲ್ ಬಂದು ಮಾಡಿ ಎಲ್ಲರಿಗೂ ಊರುಗಳಿಗೆ ಹೋಗುವಂತೆ ಫಾದರ್ ಹೇಳಿದ್ದರು. ಅದರಂತೆ ನನ್ನ ಮಗ ದಿಡೀರನೇ ಊರಿಂದ ಬಂದು ಬಿಟ್ಟು ಕಸುಬು ನಡೆಸುವ ನನ್ನನ್ನು ನೋಡಿಬಿಟ್ಟ. ಬಹುಶ: ಅಂತಾ ಪರಿಸ್ಥಿತಿಯನ್ನು ಎದುರಿಸೋ ಕೆಟ್ಟ ಗಳಿಗೆ ಯಾವ ತಾಯಿಯ ಜೀವನದಲ್ಲೂ ಬಂದಿರಲಿಲ್ಲ ಅನಿಸುತ್ತೆ. ಮನೆಗೆ ಬಂದ ಮಗ ಊಟವನ್ನೂ ಮಾಡದೆ ಮೂಕನಾಗಿ ಕೂತುಬಿಟ್ಟಿದ್ದ. ಒಂದು ಮಾತೂ ಆಡಲಿಲ್ಲ. ಕೊನೆಗೆ ನಾನೇ ಧೈರ್ಯ ತಗೊಂಡು ಅವರ ಅಪ್ಪ ಹೋದಮೇಲೆ ಅವನನ್ನು ಅವನ ಅಜ್ಜಿಯನ್ನೂ ಸಾಕೋಕೆ ಪಟ್ಟ ಪಡಿಪಾಟಲನ್ನೆಲ್ಲ ಹೇಳಿಕೊಂಡು ಅತ್ತೆ. ಅವನಿದ್ದ ಆ ಹದಿನೈದು ದಿನದಲ್ಲಿ ಅವನು ಮಾತೇ ಆಡಲಿಲ್ಲ. ಮಾಡಿಟ್ಟ ಅಡುಗೆಯನ್ನು ತಾನೇ ಹಾಕಿಕೊಂಡು ತಿಂದು ಹೊರಗೆಲ್ಲಾದರು ಹೋಗಿ ಬರೋನು. ಸದ್ಯ ಮಗ ಮನೇಲಿದ್ದು ಊಟ ಮಾಡ್ತನಲ್ಲ ಅನ್ನೋ ಸಮಾಧಾನದಿಂದ ಬದುಕ್ತಾ ಇದ್ದೆ. ರಜಾ ಮುಗಿದಮೇಲೆ ಹೋಗುವಾಗಲು ಅವನು ಮಾತಾಡಲಿಲ್ಲ. ಒಂದೇ ಮಾತು ನೀನಿನ್ನು ಹಾಸ್ಟೆಲ್ಲಿಗೆ ಬರೋ ಅವಶ್ಯಕತೆಯಿಲ್ಲ ಅಂತೇಳಿ ಹೊರಟು ಹೋದ. ಅದೇಕಡೆ ಅವನನ್ನು ನೋಡಿದ್ದು. ಒಂದಷ್ಟು ದಿನ ಕಳೆದ ಮೇಲೆ ಅವನೇ ಸಮಾಧಾನ ಮಾಡಿಕೊಳ್ತಾನೆ ಅಂತ ಒಂದೆರಡು ತಿಂಗಳು ನಾನೂ ಹಾಸ್ಟೆಲ್ಲಿಗೆ ಹೋಗಲೇ ಇಲ್ಲ. ಆಮೇಲೊಂದು ದಿನ ಫಾದರ್ ಬರೋದಿಕ್ಕೆ ಹೇಳಿಕಳಿಸಿದಾಗ ಹೋದೆ. ನನಗೆ ನನ್ನ ತಾಯಿಯನ್ನು ಕಂಡರೆ ಇಷ್ಟವಿಲ್ಲ. ನಾನು ದೂರ ಎಲ್ಲಾದರು ಹೋಗಿ ಬದುಕಿ ಕೊಳ್ತೀನಿ, ನನ್ನ ಹುಡುಕಬೇಡಿ ಅಂತೇಳಿ ಕಾಗದ ಬರೆದಿಟ್ಟು ಎಲ್ಲೊ ಹೊರಟು ಹೋಗಿದ್ದ. ನನಗೆ ಆಕಾಶ ತಲೆಮೇಲೆ ಬಿದ್ದಂತಾಯಿತು. ಪೋಲೀಸಿಗೆ ಕಂಪ್ಲಂಟ್ ಕೊಟ್ಟರು ಪ್ರಯೋಜನವಾಗಲಿಲ್ಲ. 

ಆಮೇಲಿನ್ನೇನು ಕೂಡಿಟ್ಟಿದ್ದ ಒಂದಷ್ಟು ದುಡ್ಡನ್ನು ತಗೊಂಡು ಅವನ ಪೋಟೋ ಹಿಡಿದುಕೊಂಡು ಊರೂರು ಅಲೆದೆ. ಸುಮಾರು ಮೂರುವರ್ಷ ನಾಯಿ ತರಾ ಅಲೆದಿದ್ದೀನಿ. ಅವನ ಎಲ್ಲಿದಾನೊ ಗೊತ್ತಾಗಲಿಲ್ಲ. ಇದ್ದ ದುಡ್ಡೆಲ್ಲ ಖರ್ಚಾದ ಮೇಲೆ ಬದುಕೋಕೆ ಏನು ಮಾಡೋದು ಅಂತಿರುವಾಗಲೆ ನಾನು ಹುಷಾರು ತಪ್ಪಿ ಯಾವುದೊ ಗೊತ್ತಿರದ ಊರಿನ ಸರಕಾರಿ ಆಸ್ಪತ್ರೆಯಲ್ಲಿ ಮಲಗಿಬಿಟ್ಟೆ. ನನಗೀ ಕಾಯಿಲೆ ಇರೋದು ಗೊತ್ತಾಗಿದ್ದು ಅಲ್ಲೇ. ಆಮೆಲೇನು ಮಾಡಲು ತೋಚದೆ ಮತ್ತೆ ನನ್ನ ಮಗ ಓದ್ತಾ ಇದ್ದ ಹಾಸ್ಟೆಲ್ಲಿಗೆ ವಾಪಾಸು ಬಂದು ಫಾದರ್ ಹತ್ತಿರ ಯಾವತ್ತಾದರು ಒಂದು ದಿನ ಅವನಿಲ್ಲಿಗೆ ಬರಬಹುದಲ್ವ, ಫಾದರ್. ಅವನಿಗೆ ಕಾಯ್ತಾ ನಾನಿಲ್ಲಿ ಇರ್ತೀನಿ. ಇಲ್ಲಿ ಏನಾದರು ಕೆಲಸ ಮಾಡಿಕೊಂಡಿರ್ತೀನಿ ಅಂತ ಬೇಡಿಕೊಂಡೆ. ನನ್ನ ಬಗ್ಗೆ ಎಲ್ಲಾ ಗೊತ್ತಿದ್ದ ಅವರು ಸರಿ ಮಗಳೆ ಇಲ್ಲಿಗೆ ಬರುವವರ ಸೇವೆ ಮಾಡು.ಅದರಿಂದಲಾದರು ಏಸು ನಿನ್ನ ಪಾಪಗಳನ್ನು ಕ್ಷಮಿಸಬಹುದು ಅಂದು ಒಪ್ಪಿಗೆ ಕೊಟ್ಟರು. ಅಲ್ಲಿಯೂ ಒಂದು ವರ್ಷ ಕೆಲಸ ಮಾಡಿಕೊಂಡಿದ್ದೆ. ಆದರೆ ಕಾಯಿಲೆ ಜಾಸ್ತಿಯಾದಂತೆ ಚರ್ಚಿನವರೇ ನಡೆಸುವ ಈ ಆಶ್ರಮಕ್ಕೆ ಕಳಿಸಿದರು. ಇಲ್ಲೀಗ ಹೀಗೆ ನಿಮ್ಮೆದರು ಬಿದ್ದುಕೊಂಡಿದ್ದೀನಿ.ಸಾವು ಯಾವ ಕ್ಷಣದಲ್ಲಾದರು ಬರಬಹುದು ಅಂತನೋಡ್ತಾ ಇದೀನಿ.ಎಲ್ಲೋ ಹುಟ್ಟಿ ಹೀಗೆ ಬಂದು ಎಲ್ಲೋ ಅನಾಥಳ ಥರಾ ಸಾಯೋಕೆ ನಾನು ಹಿಂದಿನ ಜನ್ಮದಲ್ಲಿ ಮಾಡಿದ ಯಾವುದೋ ಪಾಪವೇ ಕಾರಣವಿರಬೇಕು.

ಅಷ್ಟು ಹೊತ್ತು ಒಂದೇ ಸಮನೆ ಮಾತಾಡಿದ್ದಕ್ಕೆ ಅವಳಿಗೆ ಕೆಮ್ಮು ಶುರುವಾಯಿತು. ನಮ್ಮ ಮಾತುಗಳನ್ನೇ ಕೇಳುತ್ತಾ ಕುಳಿತಿದ್ದ ಸಿಸ್ಟರ್ ಅವಳಿಗೆ ನೀರು ಕುಡಿಸಿ ಸಾಕು ಅನ್ನುವಂತೆ ನನಗೆ ಸನ್ನೆ ಮಾಡಿದರು.

ಅವಳಿಗೊಂದು ನಮಸ್ಕಾರ ಹೇಳಿ ಹೊರಡಲು ತಯಾರಾದಾಗ ಹಾಸಿಗೆಯ ಕೆಳಗಿಟ್ಟುಕೊಂಡಿದ್ದ ಮಾಸಲು ಬಣ್ಣದ ಪೋಟೋ ಒಂದನ್ನು ತೋರಿಸಿ.ಇವನೇ ನನ್ನ ಮಗ. ಎಲ್ಲಾದರು ನೋಡಿದರೆ ನನಗೆ ತಿಳಿಸಿ ಸರ್ ಅಂದಳು. ಹತ್ತೊ ಹನ್ನೆರಡರ ವಯಸ್ಸಲ್ಲಿ ತೆಗೆಸಿದ ಪೋಟೋದಲ್ಲಿರುವವನನ್ನು ಈಗ ಗುರುತಿಸಲು ಸಾದ್ಯವಿಲ್ಲವೆಂದು ಹೇಳಿ ಅವಳಿಗ್ಯಾಕೆ ನೋವುಂಟು ಮಾಡಬೇಕೆಂದುಕೊಂಡು, ಆಯಿತು, ಖಂಡಿತಾ ಅಂತೇಳಿ ಹೊರಗೆ ಬಂದಾಗ ಸಿಸ್ಟರ್ ನಿರ್ಮಲಾ ನನ್ನ ಹಿಂದೆಯೇ ಬಂದರು.

ಗೇಟಿನ ಹತ್ತಿರ ಬಂದಾಗ ಸಿಸ್ಟರ್ ಮಧು ನೀನು ನನ್ನ ಹಳೆಯ ಮಿತ್ರ ಅಂತ ಹೇಳ್ತಾ ಇದೀನಿ, ಹೀಗೊಂದು ಆರು ತಿಂಗಳ ಹಿಂದೆ ಇವಳ ಮಗ ಇಲ್ಲಿಗೆ ಬಂದಿದ್ದ. ದೂರದಿಂದ ಕಿಟಕಿಯಿಂದಲೇ ತಾಯಿಯನ್ನು ನೋಡಿ ಹೊರಟು ಹೋದ. ಅವನೀಗ ಮಿಲ್ಟ್ರಿಯಲ್ಲಿದ್ದಾನಂತೆ. ಅವಳೆಷ್ಟೇ ಕೆಟ್ಟವಳಾದರು ತಾಯಿಯೇ ಅಲ್ಲವೆ ಒಂದು ಸಾರಿ ಮುಖ ತೋರಿಸು ಸಾಕು ಅವಳು ನೆಮ್ಮದಿಯಾಗಿ ಕರ್ತನನ್ನು ಸೇರುತ್ತಾಳೆಂದು ಎಷ್ಟು ಹೇಳಿದರು ಅವನು ಕೇಳದೇ ಹೋದ. ಹೋಗುವಾಗ ಮಾತ್ರ ನನ್ನ ಹತ್ತಿರ ಬಂದು ಹತ್ತು ಸಾವಿರ ರೂಪಯಿಗಳ ಎರಡು ಕಟ್ಟು ಕೊಟ್ಟು ನಿಮ್ಮ ಆಶ್ರಮಕ್ಕೆ ಇದು ನನ್ನ ಕಾಣಿಕೆಯೆಂದು ಹೇಳಿ ಹೊರಟುಹೋದ ಅಂದರು. ನಾನಾಗ ಸಿಸ್ಟರ್ ಈಗ ನಿಮ್ಮ ಹತ್ತಿರ ಅವನು ಕೊಟ್ಟ ವಿಳಾಸವೇನಾದರು ಇದೆಯಾ ಎಂದಾಗ ಒಂದುನಿಮಿಷ ಎಂದು ಚರ್ಚಿನ ಒಳಗೆ ಹೋದವರು ಒಂದು ಚೀಟಿ ತಂದು ಕೊಟ್ಟರು. ನಾನು ಥ್ಯಾಂಕ್ಸ್ ಹೇಳಿ ಹೊರಗೆ ಬಂದೆ.

ಊರಿಗೆ ಬಂದವನು ನನ್ನ ಪರಿಚಯದ ಬಹಳಷ್ಟು ಸೈನ್ಯದ ಮಿತ್ರರುಗಳಿಗೆ ಕರೆಮಡಿ ಆ ವಿಳಾಸ ಕೊಟ್ಟು ಆ ಹುಡುಗನ್ನು ಪತ್ತೆ ಹಚ್ಚಲು ಕೋರಿದೆ. ಒಂದೆರಡು ತಿಂಗಳಾದ ಮೇಲೆ ದೆಹಲಿಯಲ್ಲಿದ್ದ ನನ್ನ ಮಿತ್ರನೊಬ್ಬನಿಂದ ಕರೆಬಂತು,ನೀನು ಹೇಳಿದ ಹುಡುಗ ಸೈನ್ಯದಲ್ಲಿದ್ದುದು ನಿಜ. ಆದರೆ ಈಗೊಂದು ಮೂರುತಿಂಗಳ ಹಿಂದೆ ಗಡಿಯಲ್ಲಿ ನಡೆದ ಘರ್ಷಣೆಯೊಂದರಲ್ಲಿ ಹತನಾಗಿದ್ದಾನೆ ಅಂದವನ ಮಾತು ಕೇಳಿ ಎದೆ ಬಾರವಾಯಿತು. ಅವನು ಬದುಕಿದ್ದರೆ ತಾಯಿಯನ್ನು ನೋಡುವಂತೆ ಮಾಡಬಹುದಿತ್ತಾ ಗೊತ್ತಿಲ್ಲ,ಆದರೆ ಪ್ರಯತ್ನವನ್ನಂತು ಮಾಡಬಹುದಿತ್ತೆನಿಸಿ ಮನಸ್ಸಿಗೆ ವಿಷಾದವೆನಿಸಿತು! 

Think Small For Better Cities!


Dr Ashok K R
‘Think small’ should be the new Mantra in the era of rapid urbanisation. Residents of Mandur successfully protested against the dumping of garbage generated from the Bruhat Bengaluru Mahanagara Palike. When almost all the governments promote urbanisation, when we the people flood to cities in the name of job, future, success it’s absurd to put the entire blame on the government for mishandling the waste generated in thousands of tonnes per day in Bengaluru. Though the plastic waste is difficult to manage in individual home setup (what we can do best is to reduce the use of plastic covers wherever possible) wet waste / kitchen waste can be handled effectively in home.

Che Guevera is my inspiration for life. That inspiration led me to read more and more about Cuba. While reading many articles about Cuba urban farming/city farms ignited my interest. Cuba initiated city farming because of acute shortage of vegetables and eatables after the fall of Soviet Union and trade ban from America. That ignited interest was further inspired by Organic Terrace Gardening facebook group which actively discusses pros and cons of terrace / balcony gardening. At present Bengalurians are most active in terrace gardening. 

With all those ignition and inspiration i started to compost the kitchen waste through simple aerobic composting in plastic tubs and containers. It was smelly, too dry, too wet, too many magots in the initial days which was quite worrisome. Nature has many ways of correcting our mistakes and gradually i am learning the nature’s way of composting – combine carbon with nitrogen. It’s been a year since i threw wet waste into the garbage van! All those kitchen waste are happily nourishing the plants of our home.

Urban farm in Havana, Cuba.
When we shifted to this present house with full terrace for our use there were two options. First option was to buy the containers, soil, cocopeat, compost at once and fill the terrace with plants; quite easier. Second option to create the compost gradually from kitchen and growing garden’s waste, use the trash in home to create or innovate the containers and later buy containers as and when amount of compost increases. Absence of financial restrain tempted me to go with first option so that i can see everything green in a month’s time but my experimental mind made me to select the time consuming second option!

Ideally we should have small pockets of places for human dwelling so that waste management won’t become troublesome. When the government and we, the people are more inclined towards ‘bigger’ ‘smart’ ‘greenless’ cities amount of waste generated will be proportionately big; Huge enough to spoil the health of an entire village which are near to the ‘big’ cities. While it’s almost impossible for most of us to leave the cities and move to countryside we can atleast do our bit to protect the health of countryside. A container in our balcony/terrace to compost the kitchen waste mixed with dried leaves might appear small, but the benefits it does to the environment is enormous. Think small, save environment.

There are plenty of sites which guide us to terrace gardening, this is a tiny attempt from my side to share my experiences with simple and almost inexpensive methods to create a garden. My main aim is to avoid kitchen waste’s travelling into a distant village. 

Suggestions and full articles from the readers are welcome in both English and Kannada.

Image source: OTG fb page & thecubaneconomy.com

Apr 19, 2015

ಗೂಗಲ್ ಹ್ಯಾಂಡ್ ರೈಟಿಂಗ್ ತಂತ್ರಾಂಶದ ಪರಿಚಯ.

google handwriting input guide
ಆ್ಯಂಡ್ರಾಯ್ಡ್ ಫೋನುಗಳಲ್ಲಿ ಕನ್ನಡ ಟೈಪಿಸುವುದು ಕೊಂಚ ಕಷ್ಟವಾದ ಕೆಲಸವೇ. ಜೆಲ್ಲಿ ಬೀನ್ ನಂತರದ ಆಪರೇಟಿಂಗ್ ಸಿಸ್ಟಮ್ ಇರುವ ಫೋನುಗಳಲ್ಲಿ ಕನ್ನಡ ಪುಟಗಳನ್ನು, ಕನ್ನಡ ಮೆಸೇಜುಗಳನ್ನು ಓದುವುದು ಸಲೀಸಾದರೂ ಟೈಪಿಸುವ ಕೆಲಸ ಮಾತ್ರ ಪ್ರಯಾಸಕರವಾಗಿತ್ತು. ಎನಿ ಸಾಫ್ಟ್ ಕೀಬೋರ್ಡ್, ಜಸ್ಟ್ ಕನ್ನಡ, ಕನ್ನಡ ಪದ ಹೀಗೆ ಹತ್ತಲವು ತಂತ್ರಾಂಶಗಳು ಕನ್ನಡ ಟೈಪಿಸಲು ನೆರವಾಗುತ್ತಿವೆಯಾದರೂ ಟೈಪಿಸುವ ಕೆಲಸವೇ ಕಷ್ಟವೆಂದುಕೊಳ್ಳುವವರಿಗೆ ಇದು ಸುಲಭದ್ದಾಗಿರಲಿಲ್ಲ. ಹಾಗಾಗಿ ಫೇಸ್ ಬುಕ್, ಟ್ವಿಟ್ಟರಿನಂತಹ ಸಾಮಾಜಿಕ ಜಾಲತಾಣಗಳಲ್ಲಿ ಇಂಗ್ಲೀಷ್ ಲಿಪಿ ಬಳಸಿ ಕನ್ನಡ ಬರೆಯುವವರ ಸಂಖ್ಯೆ ಹೆಚ್ಚಿತ್ತು. ಇಂತವರಿಗೆ ನೆರವಾಗಲೆಂಬಂತೆ ಗೂಗಲ್ಲಿನ ಹ್ಯಾಂಡ್ ರೈಟಿಂಗ್ ತಂತ್ರಾಂಶ ಬಿಡುಗಡೆಯಾಗಿದೆ. ಪೇಪರ್ರಿನ ಮೇಲೆ ಬರೆಯುವಂತೆ ಮೊಬೈಲ್ ಪರದೆಯ ಮೇಲೆ ಬರೆದರೆ ಸಾಕು, ನಿಮ್ಮ ಕೈಬರಹ ಅಷ್ಟೇನೂ ಉತ್ತಮವಲ್ಲದಿದ್ದರೂ ಗೂಗಲ್ ಅದನ್ನು ಅಕ್ಷರ ರೂಪಕ್ಕೆ ಮೂಡಿಸುತ್ತದೆ. ಈ ಲೇಖನದಲ್ಲಿ ಗೂಗಲ್ ಹ್ಯಾಂಡ್ ರೈಟಿಂಗ್ ತಂತ್ರಾಂಶವನ್ನು ಮೊಬೈಲಿಗೆ ಹಾಕಿಕೊಂಡು ಅದನ್ನು ಉಪಯೋಗಿಸುವ ವಿಧಾನವನ್ನು ಚಿತ್ರಗಳ ಮೂಲಕ ತಿಳಿಸಲಾಗಿದೆ. ಉಪಯುಕ್ತವೆನ್ನಿಸಿದರೆ ಗೆಳೆಯರೊಡನೆ ಹಂಚಿಕೊಳ್ಳಿ. 
1. ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ ಗೂಗಲ್ಲಿನ ಪ್ಲೇ ಸ್ಟೋರಿನಲ್ಲಿ ಹ್ಯಾಂಡ್ ರೈಟಿಂಗ್ ಇನ್ ಪುಟ್ ತಂತ್ರಾಂಶವನ್ನು ಡೌನ್ ಲೋಡ್ ಮಾಡಿಕೊಂಡು ಇನ್ ಸ್ಟಾಲ್ ಮಾಡಿ. (click to download)
2. ಗೂಗಲ್ಲಿನ ನಿಯಮಗಳಿಗೆ ಓಕೆ ಒತ್ತಿ.
Google Handwriting Input guide

3. ಕಾನ್ಫಿಗರ್ ಲ್ಯಾಂಗ್ವೇಜಸ್ಸಿಗೆ ಹೋಗಿ. ಸಿಸ್ಟಂ ಲ್ಯಾಂಗ್ವೇಜ್ (ಸಾಮಾನ್ಯವಾಗಿ ಎಲ್ಲಾ ಫೋನುಗಳಲ್ಲಿ ಸಿಸ್ಟಂ ಲ್ಯಾಂಗ್ವೇಜ್ ಇಂಗ್ಲೀಷ್) ಆಯ್ಕೆ ಆಗಿರುತ್ತದೆ. ಆ ಆಯ್ಕೆಯನ್ನು ತೆಗೆದುಹಾಕಿ.
Google Handwriting Input guide kannada
4. ಕೆಳಗೆ ಸ್ಕ್ರಾಲ್ ಮಾಡಿದಾಗ ಕನ್ನಡ ಭಾಷೆ ಸಿಗುತ್ತದೆ.
Google Handwriting Input guide kannada
5. ಕನ್ನಡ ಭಾಷೆಯನ್ನು ಆಯ್ಕೆ ಮಾಡಿ. ಜೊತೆಗೆ ಇಂಗ್ಲೀಷ್ ಭಾಷೆಯನ್ನೂ ಆಯ್ಕೆ ಮಾಡಿ.
Google Handwriting Input guide
6. ಭಾಷೆ ಆಯ್ಕೆ ಮಾಡಿದ ನಂತರ, ಆ ಭಾಷೆಗೆ (ಇಲ್ಲಿ ಕನ್ನಡಕ್ಕೆ) ಸಂಬಂಧಪಟ್ಟಂತ ಫೈಲುಗಳನ್ನು ಡೌನ್ ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
Google Handwriting Input guide download
7. 7.2 ಎಂಬಿಯ ಫೈಲನ್ನು ಡೌನ್ ಲೋಡ್ ಮಾಡಿಕೊಳ್ಳಿ.
Google Handwriting Input guide

Google Handwriting Input guide
8. ಭಾಷೆ ಡೌನ್ ಲೋಡ್ ಆದ ನಂತರ ಭಾಷಾ ಇನ್ ಪುಟ್ಟಿನಲ್ಲಿ ಕನ್ನಡವನ್ನು ಆಯ್ಕೆ ಮಾಡಿಕೊಳ್ಳಿ.
Google Handwriting Input guide input method
9. ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿ!
Google Handwriting Input guide typing kannada

10. ಕನ್ನಡದಲ್ಲಿ ಮೆಸೇಜು ಮಾಡಬೇಕೆಂದರೆ ಮೆಸೇಜಿಂಗ್ ತಂತ್ರಾಂಶವನ್ನು ತೆರೆಯಿರಿ. ಮತ್ತು ಕೈಯಲ್ಲಿ ಬರೆಯಿರಿ.
Google Handwriting Input guide in messaging

Google Handwriting Input guide

11. ಭಾಷೆಯ ಆಯ್ಕೆಯಲ್ಲಿ ಬದಲಾವಣೆ ಬೇಕೆನ್ನಿಸಿದಾಗ ಅಥವಾ ಟೈಪಿಂಗ್ ಮಾಡುವುದೇ ಚೆಂದವೆನ್ನಿಸಿದಾಗ ಸೆಟ್ಟಿಂಗ್ಸಿಗೆ ಹೋಗಿ, ಅಲ್ಲಿ ಲ್ಯಾಂಗ್ವೇಜ್ ಮತ್ತು ಇನ್ಪುಟ್ ಆಯ್ಕೆ ಮಾಡಿ. ಅದರಡಿ ಕೀಬೋರ್ಡ್ ಇನ್ಪುಟ್ಟಿನಲ್ಲಿ ನಿಮಗೆ ಸಲೀಸಾದ ಆಯ್ಕೆಯನ್ನು ಬೇಕಾದಾಗ ಬದಲಿಸಿಕೊಳ್ಳಬಹುದು.
Google Handwriting Input guide

Google Handwriting Input guide

Google Handwriting Input guide



Apr 18, 2015

ಅಸಹಾಯಕ ಆತ್ಮಗಳು - ನಾಶವಾದ ಆತ್ಮದೊಡನೆ..!

asahayaka aatmagalu
ಕು.ಸ. ಮಧುಸೂದನ್
ಅವನ ಜೊತೆ ಓಡಿ ಹೋದಾಗ ನನಗಿನ್ನು ಹದಿನೈದು ವರ್ಷ. ಅವನೇನು ಮಹಾ ದೊಡ್ಡವನೇನಲ್ಲ. ಅವನಿಗೂ ಹದಿನಾರೊ ಹದಿನೇಳು. ಪ್ರೀತಿಯೆಂದರೆ ಸೆಕ್ಸ್ ಅನ್ನೋದು ಸಹ ನಮಗೆ ಗೊತ್ತಿರಲಿಲ್ಲ. ಯಾವಾಗಲು, ಯಾರ ಹೆದರಿಕೇನೂ ಇರದಂತೆ ಒಟ್ಟಿಗೆ ಕೂತು ಮಾತಾಡ್ತಾ ಇರಬೇಕು ಅನ್ನೊದಷ್ಟೆ ನಮ್ಮ ಪ್ರೀತಿಯ ಕಲ್ಪನೆಯಾಗಿತ್ತು. ಆ ಸಣ್ಣ ಊರಲ್ಲಿದ್ದ ಸರಕಾರಿ ಸ್ಕೂಲಲ್ಲಿ ಒಂಭತ್ತನೇ ಕ್ಲಾಸ್ ಓದ್ತಾ ಇದ್ದಾಗ ಅವನ ಪರಿಚಯ ಆಗಿತ್ತು. ಅವನು ಬಾಳೆಮಂಡೀಲಿ ಕೆಲಸ ಮಾಡ್ತಾ ಇದ್ದ. ನಾನು ಸ್ಕೂಲಿಗೆ ಹೋಗೋ ದಾರೀಲೆ ಅವನ ಮಂಡಿಯಿತ್ತು. ನೋಡ್ತಾ ನೋಡ್ತಾ ಪ್ರೀತಿಯಾಗಿ ಬಿಡ್ತು. ಸಾಯಂಕಾಲ ಸ್ಕೂಲು ಬಿಟ್ಟ ಮೇಲೆ ನಾನು ನೇರವಾಗಿ ಮನೆಗೆ ಬರದೆ, ಊರಾಚೆಯ ರೈಲ್ವೇ ಸ್ಟೇಷನ್ ಹತ್ತಿರ ಹೋಗ್ತಿದ್ದೆ. ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಅವನು ಸೈಕಲ್ ತಗೊಂಡು ಅಲ್ಲಿಗೇ ಬರೋನು. ಸಾಯಂಕಾಲ ನಮ್ಮೂರಿಗೆ ಯಾವ ರೈಲೂ ಬರ್ತಾ ಇರಲಿಲ್ಲ. ಹಾಗಾಗಿ ಖಾಲಿಯಿರುತ್ತಿದ್ದ ಸ್ಟೇಷನ್ ಒಳಗೆ ಒಂದು ಮೂಲೆಯಲ್ಲಿ ಕೂತು ಮಾತಡ್ತಾ ಇದ್ವೀ. ಹೀಗೇ ಒಂದಾರು ತಿಂಗಳು ಕಳೆದವು. ಅದೆನು ಮಾತಾಡ್ತಾ ಇದ್ದೆವೋ ಈಗಂತು ನೆನಪೂ ಆಗ್ತಿಲ್ಲ. ಒಟ್ಟಿನಲ್ಲಿ ಯಾವಾಗಲು ಜೊತೆಗಿದ್ದು ಮಾತಾಡ್ತಾನೇ ಇರಬೇಕು ಅನ್ನೊ ಆಸೆ ಆ ವಯಸ್ಸಲ್ಲಿ. 

ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಹೋಗಿ ಬರ್ತಾ ಇದ್ದದ್ದೇ ಕತ್ತಲಾದ ಮೇಲೆ. ಹಾಗಾಗಿ ಅವರು ಬರುವಷ್ಟರಲ್ಲಿ ಮನೆ ಸೇರಿರ್ತಾ ಇದ್ದೆ. ಒಬ್ಬಳೇ ಮಗಳಾಗಿದ್ದರಿಂದ ಅವರು ಬಡತನದಲ್ಲೂ ಚೆನ್ನಾಗಿ ನೋಡಿಕೊಳ್ತಾ ಇದ್ದರು. ಯಾವುದೂ ಅರ್ಥವಾಗದ ಆ ವಯಸ್ಸಲ್ಲಿ ಅವನು ಬಿಟ್ಟರೆ ಬೇರೇನು ನನಗೆ ಇಷ್ಟವಾಗ್ತಿರಲಿಲ್ಲ.

ಒಂದು ದಿನ ನಾನು ಸ್ಕೂಲಿಂದ ಬರೋವಷ್ಟರಲ್ಲಿ ಮನೆ ಮುಂದೆ ಅಪ್ಪನ ಹೆಣ ಇಟ್ಟುಕೊಂಡು ಅಮ್ಮ ಅಳ್ತಾ ಇದ್ದಳು. ರೈಸ್ ಮಿಲ್ಲಲ್ಲಿ ಕೆಲಸ ಮಾಡ್ತಿದ್ದ ಅಪ್ಪ ಬತ್ತ ಲೋಡ್ ಮಾಡುವಾಗ ಲಾರಿಯಿಂದ ಆಯಾ ತಪ್ಪಿ ಬಿದ್ದು ಅಲ್ಲೇ ಸತ್ತು ಹೋಗಿದ್ದ. ಅಮ್ಮನ ಜೊತೆ ಸೇರಿ ನಾನೂ ಅತ್ತೆ. ಅವನ ತಿಥಿ ಇತ್ಯಾದಿಯೆಲ್ಲ ಮುಗಿದು ನೆಂಟರಿಷ್ಟರೆಲ್ಲ ಊರಿಗೆ ಹೋದಮೇಲೆ ಮನೇಲಿ ಉಳಿದದ್ದು ನಾನು,ಅಮ್ಮ ಮತ್ತು ಅಮ್ಮನ ತಮ್ಮ ಅಂದರೆ ನನ್ನ ಸೋದರ ಮಾವ ಮಾತ್ರ. ಅವನು ಅದ್ಯಾವುದೋ ಸರಕಾರಿ ಆಸ್ಪತ್ರೆಲಿ ಅಟೆಂಡರ್ ಕೆಲಸ ಮಾಡ್ತಾ ಇದ್ದ. ನನ್ನ ಅವನಿಗೇ ಕೊಟ್ಟು ಮದುವೆ ಮಾಡಬೇಕು ಅಂತ ಅಪ್ಪ ಇದ್ದಾಗಲೇ ಮಾತಾಡಿಕೊಳ್ತಾ ಇದ್ದಿದ್ದು ನನಗೆ ಗೊತ್ತಿತ್ತು. ಆದರೆ ಆ ಹುಡುಗನ ಪ್ರೀತಿಯಲ್ಲಿ ಬಿದ್ದಿದ್ದ ನನಗೆ ಅದರ ಬಗ್ಗೆ ಸೀರಿಯಸ್ ಆಗಿ ಯೋಚನೆ ಮಾಡೋ ಅಗತ್ಯ ಕಂಡಿರಲಿಲ್ಲ. ತಿಥಿ ಮುಗಿದ ಮಾರನೆ ದಿನ ಸ್ಕೂಲಿಗೆ ಹೊರಡೋಕೆ ರೆಡಿಯಾಗ್ತ ಇದ್ದರೆ ಅಮ್ಮ ತಡೆದು ಇವತ್ತಿಂದ ನೀನು ಸ್ಕೂಲಿಗೇನು ಹೋಗೋದು ಬೇಡ. ನಾವೆಲ್ಲ ನಿಮ್ಮ ಮಾವನ ಊರಿಗೆ ಹೋಗಿ ಅಲ್ಲೇ ಇರೋದು ಅಂತ ತೀರ್ಮಾನ ಮಾಡಿದೀವಿ. ನಿನ್ನ ಮಾವ ಸ್ಕೂಲಿಗೆ ಹೋಗಿ ಟಿ.ಸಿ.ತರ್ತಾನೆ. ಅಲ್ಲೆ ಓದೋವಂತೆ. ಒಂದು ಎಸ್.ಎಸ್.ಎಲ್.ಸಿ ಮುಗಿಸೋವಂತೆ ಆಮೇಲೆ ಮಾವನಿಗೆ ನಿನ್ನ ಮದುವೆ ಮಾಡಿ ನಾನು ಕೈ ತೊಳ್ಕೊಳ್ತೀನಿ ಅಂದಳು. ಇದನ್ನೆಲ್ಲ ಯೋಚನೆ ಮಾಡಿರದ ನನಗೆ ಎದೆ ಒಡೆದ ಹಾಗಾಯ್ತು. ಅಮ್ಮ, ಮಾವ ಬಂದು ಟಿ.ಸಿ. ತಗೊಳ್ಳಲಿ ಪರವಾಗಿಲ್ಲ ನಾನು ಸ್ಕೂಲಿಗೆ ಹೋಗಿ ಟೀಚರ್‍ಗಳಿಗೆ ಫ್ರೆಂಡ್ಸ್‍ಗೆ ಹೇಳಿಬರ್ತೀನಿ ಅಂತ ಹಟ ಮಾಡಿ ಮನೆಯಿಂದ ಹೊರಟೆ. ಸೀದಾ ಅವನು ಕೆಲಸ ಮಾಡ್ತಾ ಇದ್ದ ಮಂಡಿಗೆ ಹೋಗಿ ಅವನನ್ನು ಕರೆದುಕೊಂಡು ರೈಲ್ವೇ ಸ್ಟೇಷನ್ನಿಗೆ ಹೋದೆ. ಅಲ್ಲಿ ಅವನಿಗೆ ಎಲ್ಲ ವಿಷಯ ಹೇಳಿ ಈಗೆನು ಮಾಡೋದು ಅಂತ ಕೇಳಿದೆ. ಅವನಿಗೂ ಏನು ಮಾಡೋದು ಅಂತ ಗೊತ್ತಾಗದೆ ಯೋಚನೆ ಮಾಡ್ತಾಇದ್ದಾಗ ನಾನೇ ಎಲ್ಲಾದರು ದೂರ ಓಡಿಹೋಗಿ ಮದುವೆ ಆಗಿಬಿಡೋಣವಾ ಅಂದೆ. ಹತ್ತೇ ನಿಮಿಷದಲ್ಲಿ ನಮ್ಮ ಭವಿಷ್ಯಗಳನ್ನು ನಾವೇ ತೀರ್ಮಾನ ಮಾಡಿಕೊಂಡು ಬಿಟ್ಟಿದ್ದೋ.

ಸರಿ ಮಾತಾಡಿಕೊಂಡಂತೆ ಅವತ್ತೆ ಮದ್ಯಾಹ್ನ ಬಟ್ಟೆ ಬರೇ ಏನೂ ತಗೊಳ್ಳದೆ ಸಿಟಿ ಬಸ್ಸು ಹತ್ತಿಬಿಟ್ಟಿವಿ. ನಾವು ಸಿಟಿ ತಲುಪಿದಾಗ ರಾತ್ರಿ ಎಂಟು ಗಂಟೆಯಾಗಿತ್ತು.ನನ್ನ ಕೈಲಿ ಒಂದು ರೂಪಾಯಿ ಇರಲಿಲ್ಲ. ಅವನು ಮಾತ್ರ ಮಂಡಿ ಸಾಹುಕಾರರಿಗೆ ಏನೋ ಸುಳ್ಳು ಹೇಳಿ ಒಂದಷ್ಟು ದುಡ್ಡು ತಂದಿದ್ದ. ಆ ರಾತ್ರಿ ಎಲ್ಲಿಗೆ ಹೋಗಬೇಕು ಏನು ಮಾಡಬೇಕು ಅನ್ನೋದೇನು ಗೊತ್ತಿರದೆ ಬಸ್ ಇಳಿದು ಬಸ್‍ಸ್ಟ್ಯಾಂಡಲ್ಲಿ ಕೂತು ಬಿಟ್ಟೆವು ರಾತ್ರಿ ಹತ್ತು ಗಂಟೆಯವರೆಗು ಕೂತಿದ್ದ ನಮಗೆ ಆ ಡಿಸೆಂಬರ್ ತಿಂಗಳ ಚಳಿ ತಡೆಯಲಾಗಲಿಲ್ಲ. ಆಗವನು ಲಾಡ್ಜಲ್ಲಿ ರೂಂ ಮಾಡೋಣ, ನಡಿ ಅಂತ ಬಸ್‍ಸ್ಟ್ಯಾಂಡಿಂದ ಹೊರಬಂದು ಅಲ್ಲೇ ಹತ್ತಿರದಲ್ಲಿ ಸಿಕ್ಕ ಸಣ್ಣ ಲಾಡ್ಜಿಗೆ ಹೋದ್ವಿ. ನಮ್ಮನ್ನು ನೋಡಿದ ಮ್ಯಾನೇಜರ್ ನೂರೆಂಟು ಪ್ರಶ್ನೆ ಕೇಳಿ ಕೊನೆಗೊಂದು ರೂಮ್ ಕೊಟ್ಟ.  ನಾನು ರೂಮಲ್ಲಿ ಮುಖ ತೊಳೆಯುವಷ್ಟರಲ್ಲಿ ಅವನು ಹೊರಗೆ ಹೋಗಿ ಊಟದ ಪ್ಯಾಕೇಟ್ ತಂದ. ಇಬ್ಬರೂ ತಿಂದು ಇನ್ನೇನು ಕೈ ತೊಳೆಯಬೇಕು ಅನ್ನುವಷ್ಟರಲ್ಲಿ ಬಾಗಿಲು ಬಡಿದಂತಾಯಿತು. ತೆಗೆದರೆ ಮೂರುಜನ ಪೋಲಿಸರು ಬಾಗಿಲು ತೆಗೆದವವನನ್ನೇ ದಬ್ಬಿಕೊಂಡು ಒಳಗೆ ಬಂದು ನಮ್ಮ ಊರು ಕೇರಿಯೆಲ್ಲ ವಿಚಾರಿಸಿದರು. ನಾವು ಹೆದರಿಕೆಯಿಂದ ಎಲ್ಲ ಹೇಳಿದೆವು. ಆದರದನ್ನು ಕೇಳದ ಪೋಲಿಸಿನವರು. ಅವನಿಗೆ ಲೇಯ್ ಸೂಳೆ ಮಗನೆ ಸಣ್ಣ ಹುಡುಗೀನಾ ಕಿಡ್ನಾಪ್ ಮಾಡಿದೀಯಾ ಬಾ ಸ್ಟೇಷನ್ನಿಗೆ ಅಂತ ನಮ್ಮಿಬ್ಬರನ್ನೂ ಕರೆದುಕೊಂಡು ಹೋದರು. ಲಾಡ್ಜಿನ ಮ್ಯಾನೇಜರ್ ಇವರ ಬಗ್ಗೆ ಅನುಮಾನ ಆಗೀನೆ ಸರ್ ನಾನು ನಿಮಗೆ ಪೋನ್ ಮಾಡಿದ್ದು ಅಂದಾಗ ಅವನೇ ಅವರಿಗೆ ವಿಷಯ ತಿಳಿಸಿದ್ದು ಅಂತ ಗೊತ್ತಾಯಿತು.

ಸರಿ ಇಬ್ಬರನ್ನು ಸ್ಟೇಷನ್ನಿಗೆ ಅಂತ ಕರೆದುಕೊಂಡು ಹೋದ ಪೋಲಿಸರು ಸ್ಟೇಷನ್ನಿನ ಒಳಗೆ ಕರೆದುಕೊಂಡು ಹೋಗದೆ ಅದರ ಹಿಂದಿದ್ದ ಒಂದು ಕ್ವಾಟ್ರಸ್ಸಿಗೆ ಕರೆದುಕೊಂಡು ಹೋಗಿ ಕೂರಿಸಿದರು. ಅವನಿಗೆ ಸೂಳೆ ಮಗನೆ ಅವಳಿಗೆ ಎಲ್ಲ ಮುಗಿಸಿಬಿಟ್ಟೇನೊ ಅಂತ ಕೇಳಿದಾಗ ಅವನು ಇಲ್ಲ ಅನ್ನುವಂತೆ ತಲೆಯಾಡಿಸಿದ. ಅದಕ್ಕೊಬ್ಬ ಪೋಲಿಸನವನು ಹಾಗಾದ್ರೆ ಇವತ್ತು ನಾವು ಅವಳನ್ನು ನೋಡಿಕೊಳ್ಳ್ತೀವಿ ನಾಳೆಯಿಂದ ನೀನೆ ನೋಡಿಕೊ ಅಂತ ಒಬ್ಬೊಬ್ಬರಾಗಿ ಮೂರು ಜನವೂ ಅವನ ಕಣ್ಣೆದುರಲ್ಲೆ ನನ್ನ ಅತ್ಯಾಚಾರ ಮಾಡಿದರು. ನಾನು ಕೂಗಿಕೊಂಡರೆ ಅವನನ್ನು ಸಾಯಿಸಿ ಬಿಡೋದಾಗಿ ಇಲ್ಲ ಅಂದ್ರೆ ಜೈಲಿಗೆ ಹಾಕಿಸೋದಾಗಿ ಹೆದರಿಸಿ ಆ ರಾತ್ರಿ ನನ್ನ ಕಿತ್ತು ತಿಂದು ಬಿಟ್ಟರು.ಇನ್ನೂ ಹದಿನೈದು ವರ್ಷದ ಸಣ್ಣ ಹುಡುಗಿಯ ಮೇಲೆ ಮೂರೂ ಜನ ನಡೆಸಿದ ದಬ್ಬಾಳಿಕೆಗೆ ನಾನು ಪ್ರಜ್ಞೆ ತಪ್ಪಿಬಿಟ್ಟೆ. ಎಚ್ಚರವಾದಾಗ ಬೆಳಿಗ್ಗೆ ಸೂರ್ಯ ಹುಟ್ತಾ ಇದ್ದ. ಕಣ್ಬಿಟ್ಟು ಸುತ್ತ ನೋಡಿದರೆ ಅವನು ಕಾಣಲಿಲ್ಲ. ನನಗೆ ಎಲ್ಲಿವರು ಅವನನ್ನ ಸಾಯಿಸೇ ಬಿಟ್ಟರೊ ಅಂತ ಭಯವಾಯಿತು. ಅಲ್ಲೇ ಬಿದುಕೊಂಡಿದ್ದ ಆ ಮೂರೂ ಜನ ಕಿರಾತಕರನ್ನ ಎಬ್ಬಿಸಿ ಕೇಳಿದರೆ ಅವನಾ ನಿನ್ನ ನಾವು ಮಜಾ ಮಾಡೋದು ನೋಡಿ ನಾನು ಊರಿಗೆ ಹೋಗ್ತೀನಿ ಅಂತ ಆಗಲೇ ಎದ್ದುಹೋದ. ಬೇಕಾದರ ನೀನೂ ಅವನ ಹಿಂದೇನೆ ಹೋಗು. ಆದರೆ ಇಲ್ಲಿ ನಡೆದ ವಿಚಾರವನ್ನು ಬೇರೆ ಯಾವನಿಗಾದರು ಹೇಳಿದರೆ ನಿಮ್ಮನ್ನು ಹುಡುಕಿ ಶೂಟ್ ಮಾಡಿ ಸಾಯಿಸಿ ಬಿಡ್ತೀವಿ ಅಂತ ಕೈಲಿದ್ದ ಬಂದೂಕು ತೋರಿಸಿ ಹೆದರಿಸಿ ಕಳಿಸಿದರು. ಕೆದರಿದ್ದ ತಲೆ ಬಟ್ಟೆ ಸರಿಮಾಡಿಕೊಂಡು ಓಡೋಡಿ ಬಸ್‍ಸ್ಟ್ಯಾಂಡಿಗೆ ಬಂದು ಹುಡುಕಿದರೆ ಅವನೆಲ್ಲೂ ಕಾಣಲಿಲ್ಲ. ನಡು ನೀರಲ್ಲಿ ನನ್ನ ಕೈಬಿಟ್ಟು ಅವನು ಓಡಿ ಹೋಗಿದ್ದ. ಏನಾದರು ಆಗಲಿ ಅಂತ ಬೆಳಿಗ್ಗೆ ಹತ್ತುಗಂಟೆ ತನಕ ಅವನು ಇಲ್ಲೇ ಎಲ್ಲಾದರು ಇರಬಹುದೇನೊ ಅನ್ನೊ ನಂಬಿಕೆಯಲ್ಲಿ ಬಸ್ ಸ್ಟ್ಯಾಂಡಿನಲ್ಲೇ ಕಾದೆ. ಇನ್ನವನು ಬರುವುದಿಲ್ಲವೆಂಬುದು ಯಾವಾಗ ಗ್ಯಾರಂಟಿಯಾಯಿತೊ ಮುಂದೇನು ಅನ್ನುವ ಚಿಂತೆ ಶುರುವಾಯಿತು. ವಾಪಾಸು ಮನೆಗೆ ಹೋಗುವಂತಿರಲಿಲ್ಲ. ಸಿಟೀಲಿ ಯಾರೂ ಗೊತ್ತಿರಲಿಲ್ಲ. ರಾತ್ರಿ ಆ ಲೌಡಿ ಮಕ್ಕಳು ಕೊಟ್ಟ ಹಿಂಸೆಗೆ ಮೈಕೈಯೆಲ್ಲ ನೋವಾಗ್ತಾ ಇತ್ತು. ಕೊನೆಗೆ ಆ ಪೋಲಿಸರಿಗೇ ಕೇಳಿದರೆ ಅವನು ಎಲ್ಲಿ ಹೋದ ಅನ್ನುವುದರ ಬಗ್ಗೆ ಏನಾದರು ಹೇಳಬಹುದೇನೋ ಅನ್ನೋ ಆಸೆಯಿಂದ ಮತ್ತೆ ಪೋಲಿಸ್ ಸ್ಟೇಷನ್ನಿನ ಹಿಂದಿದ್ದ ಆ ಕ್ವಾಟ್ರಸ್‍ಗೆ ಹೋಗಿ ಬೀಗ ಹಾಕಿದ್ದ ಬಾಗಿಲ ಮುಂದೆ ಕೂತು ಕಾಯತೊಡಗಿದೆ. ಎಷ್ಟೊ ಹೊತ್ತಾದ ಮೇಲೆ ಯಾರೋ ಒಬ್ಬ ಬೇರೆ ಪೋಲಿಸಿನವನು ಬಂದು ಯಾರು ನೀನು ? ಇಲ್ಯಾಕೆ ಕೂತಿದಿಯಾ ಅಂತ ಜೋರು ಮಾಡಿಕೇಳಿದಾಗ ಅಳಲು ಶುರು ಮಾಡಿದೆ. ಅಷ್ಟು ಹೊತ್ತು ತಡೆದುಕೊಂಡಿದ್ದ ದು:ಖ ಒಂದೇ ಸಾರಿಗೆ ಹೊರಬಂದಿತ್ತು. ರಾತ್ರಿಯಿಂದ ನಡೆದದ್ದನ್ನೆಲ್ಲ ಅವನಿಗೆ ಹೇಳಿ ಬಿಟ್ಟೆ.. ಓ ಅವರು ಮೂರೂ ಜನ ರಾತ್ರಿ ಬೀಟಿನವರು ಈಗ ಮನೆಲಿ ಮಲಗಿರ್ತಾರೆ. ಮತ್ತವರ ಕೈಲಿ ಸಿಕ್ಕರೆ ನಿನ್ನ ಬಿಡಲ್ಲ. ಸುಮ್ಮನೇ ಊರಿಗೆ ವಾಪಾಸು ಹೋಗಿಬಿಡು ಅಂದ. ಅವನ ಮಾತು ಕೇಳಿದ್ದರೆ ಚೆನ್ನಾಗಿತ್ತೆನೊ. ಆದರೆ ಯಾಕೋ ಊರಿಗೆ ಹೋಗೊ ಮನಸ್ಸಾಗಲಿಲ್ಲ. ನಾನು ವಾಪಾಸು ಊರಿಗೆಹೋಗಲ್ಲ ಅಂದೆ. ಅದಕ್ಕವನು ಏನು ಮಾಡ್ತೀಯಾ ಇಲ್ಲಿದ್ದು ಅಂದ. ಸತ್ತೋಗ್ತೀನಿ ಅಂದೆ. ಸಿಟ್ಟುಬಂದ ಅವನು ಹಾಳಾಗಿ ಹೋಗು! ನೀನಿಲ್ಲಿ ಕೂತಿರೋದನ್ನ ಸಾಹೇಬರು ನೋಡಿದರೆ ಜೈಲಿಗೆ ಹಾಕ್ತಾರೆ. ಮೊದಲು ಇಲ್ಲಿಂದ ಹೋಗು ಅಂದ.

ಅಲ್ಲಿಂದ ಬಂದವಳಿಗೆ ಬಸ್ ಸ್ಟ್ತಾಂಡು ಬಿಟ್ಟರೆ ಬೇರೇನು ಗೊತ್ತಿರಲಿಲ್ಲ. ಮತ್ತೆ ಅಲ್ಲಿಗೇ ಬಂದು ಸಾಯಂಕಾಲದವರೆಗೂ ಅಲ್ಲೆ ಒಂದು ಕಡೆ ಕೂತು ಬಿಟ್ಟೆ. ಸಾಯಂಕಾಲ ಕತ್ತಲಾಗೊ ಸಮಯದಲ್ಲಿ ಸುಮಾರು ಮುವತ್ತು ವರ್ಷದ ಒಬ್ಬ ಬಂದು ಏಯ್ ಹುಡುಗಿ ಮದ್ಯಾಹ್ನದಿಂದ ನೋಡ್ತಾ ಇದೀನಿ ಇಲ್ಲೇ ಕೂತಿದಿಯಲ್ಲ ಯಾವ ಊರಿಗೆ ಹೋಗಬೇಕು? ಅಂದ ನಾನು ಎಲ್ಲಿಗೂ ಹೋಗಬೇಕಾಗಿಲ್ಲ. ಅಂತ ಹೇಳಿ ಸುಮ್ಮನೇ ಕೂತೆ. ಅಷ್ಟರಲ್ಲಿ ಒಬ್ಬ ಹೆಂಗಸು ಬಂದು ಏನು ರಾಮಣ್ಣ ಯಾರಿದು ಏನಂತೆ ಅಂದಳು. ಆಗ ಅವರಿಗೆ ರಾತ್ರಿ ಪೋಲಿಸಿನರು ಮಾಡಿದ ಅತ್ಯಾಚಾರವೊಂದನ್ನು ಬಿಟ್ಟು ಉಳಿದೆಲ್ಲವನ್ನೂ ಹೇಳಿಬಿಟ್ಟೆ. ಅದಕ್ಕವಳು ಈಗ ಬಾ ನಮ್ಮ ಮನೆಗೆ ಹೋಗೋಣ. ಅಲ್ಲಿ ಇವತ್ತು ರಾತ್ರಿ ಇದ್ದು ನಾಳೆ ನಿನಗೆ ಹೇಗನಿಸುತ್ತೊ ಹಾಗೆ ಮಾಡುವಂತೆ ಅಂದಳು. ಬೇರೇ ದಾರಿಯಿರದೆ ಅವರ ಹಿಂದೆ ಹೋದೆ.

ಆಮೇಲೇನು ಹೇಳಲಿ? ರಾತ್ರಿಯ ಮಟ್ಟಿಗೆ ಅಂತ ಹೋದವಳು ಬೇರೆಲ್ಲೂ ಹೋಗಲು ಗೊತ್ತಿರದೆ ಅಲ್ಲೇ ಇದ್ದು ಬಿಟ್ಟೆ. ಅವಳು ಕಸುಬು ಮಾಡುವ ಹೆಂಗಸು. ನಿಧಾನಕ್ಕೆ ನನ್ನ ಪಳಗಿಸಿದಳು ಅನ್ನುವುದಕ್ಕಿಂತ ಪರಿಸ್ಥಿತಿ ಪಳಗುವಂತೆ ಮಾಡಿತು.ಅವಳು ಮನೇಲಿ ದಂಧೆ ಮಾಡ್ತಾ ಇರಲಿಲ್ಲ. ಗಿರಾಕಿಗಳು ಹೇಳಿದ ಕಡೆಗೆ ಹುಡುಗೀರನ್ನ ಕಳಿಸೋಳು.ಮನೆಲಿ ನಾವೊಂದಿಬ್ಬರು ದಿಕ್ಕಿಲ್ಲದ ಹುಡುಗೀರನ್ನ ಬಿಟ್ರೆ ಉಳಿದವರು ಮದುವೆಯಾಗಿ ಸಂಸಾರ ನಡೆಸೋ ಹೆಂಗಸರನ್ನ ಸಂಪರ್ಕದಲ್ಲಿಟ್ಟುಕೊಂಡಿದ್ದಳು. ಅವರಿಗೆ ದುಡ್ಡಿನ ಅಗತ್ಯ ಬಿದ್ದಾಗ ಇವಳು ಅವರಿಗೆ ಗಿರಾಕಿಗಳನ್ನು ಹುಡುಕಿ ಕೊಡೋಳು. ಅಂತ ಸಂಸಾರಸ್ಥ ಹೆಂಗಸರನ್ನು ಗಿರಾಕಿಗಳು ಯಾರಿಗೂ ಗೊತ್ತಾಗದ ಹಾಗೆ ಬೇರೆ ಊರಿಗೆ ಕರೆದುಕೊಂಡು ಹೋಗೋರು. ಇವಳು ಕೂತ ಕಡೇಲೆ ಕಮಿಷನ್ ತಗೊಳ್ತಾ ಇದ್ದಳು. ಮೊದಲು ಒಂದಷ್ಟು ದಿನ ನನ್ನ ಹೊರಗೆಲ್ಲೂ ಕಳಿಸ್ತ ಇರಲಿಲ್ಲ. ಅವಳ ಮನೆಗೆ ಬರ್ತಾ ಇದ್ದ ಒಂದಿಬ್ಬರು ಮಾಮೂಲಿ ಗಿರಾಕಿಗಳಿಗೆ ಮನೆಯಲ್ಲೇ ನನ್ನ ವ್ಯವಸ್ಥೆ ಮಾಡೋಳು. ಒಂದಾರು ತಿಂಗಳಾದ ಮೇಲೆ ಹೊರಗೆ ಕಳಸೋಕೆ ಶುರು ಮಾಡಿದಳು. ಹೀಗೆ ಸುಮಾರು ಎರಡು ವರ್ಷಗಳ ಕಾಲ ಅವಳ ಮನೆಯಲ್ಲೇ ಜೀವನ ಮಾಡಿದೆ. ಆ ಎರಡು ವರ್ಷದಲ್ಲಿ ನನಗೆ ಅಂತ ಒಂದಷ್ಟು ಬಟ್ಟೆಗಳನ್ನು ಕೊಡಿಸಿದ್ದು ಬಿಟ್ಟರೆ ಅವಳು ಒಂದು ರೂಪಾಯಿನೂ ಕೊಡಲಿಲ್ಲ. ಅಷ್ಟೇ ಅಲ್ಲದೆ ಅವಳಿಗೆ ಬೇರೆ ಬೇರೆ ನಗರಗಳಲ್ಲೂ ಇವಳಂತಹ ಕಸುಬು ಮಾಡೊ ಹೆಂಗಸರು ಪರಿಚಯವಿದ್ದರು. ಇವರುಗಳೆಲ್ಲ ಸೇರಿ ಹುಡುಗಿಯರನ್ನು ಎಕ್ಸಚೇಂಜ್ ಮಾಡಿಕೊಳ್ತಾ ಇದ್ದರು. ಇಂತಹ ಎಕ್ಸಚೇಂಜ್ ಮಾಡುವಾಗ ನಾನು ಸಹ ಬೇರೆ ಬೇರೆ ನಗರಗಳನ್ನು ನೋಡಿಬಂದೆ.

ಎರಡು ವರ್ಷವಾದ ಮೇಲೆ ನನಗೊಬ್ಬ ಗಿರಾಕಿ ಪರಿಚಯವಾದ. ಅವನು ಇಲ್ಯಾಕಿರ್ತೀಯಾ ನನ್ನ ಜೊತೆ ಬಾ ನಿನಗೆ ಒಳ್ಳೆ ದುಡ್ಡು ಸಿಗೋ ಕಡೆ ಬಿಡ್ತೀನಿ ಅಂತ ಆಸೆ ಹುಟ್ಟಿಸಿದ. ಆಗ ನಾನು ಅವಳಿಗೆ ನಾನು ಇಷ್ಟು ವರ್ಷ ದುಡಿದ ದುಡ್ಡು ಕೊಡು ಅಂತ ಜಗಳವಾಡಿದೆ. ಕೊನೆಗವಳು ಸತಾಯಿಸಿ ಸತಾಯಿಸಿ ಐದು ಸಾವಿರ ಅಷ್ಟೆ ಕೊಟ್ಟಳು. ಕೊನೆಗೊಂದು ದಿನ ಆ ಗಿರಾಕಿಯೊಂದಿಗೆ ಯಾರಿಗೂ ಹೇಳದೆ ಕೇಳದೆ ಈ ನಗರಕ್ಕೆ ಬಂದು ತಲುಪಿದೆ. ನನಗೆ ಆಸೆ ಹುಟ್ಟಿಸಿ ಕರೆತಂದವನು ಇಲ್ಲಿ ಯಾವಳೋ ಒಬ್ಬ ಕಸುಬು ಮಾಡೊ ಹೈಟೆಕ್ ಹೆಂಗಸಿಗೆ ನನಗೇ ಗೊತ್ತಿಲ್ಲದಂತೆ ನನ್ನ ಮಾರಿ ಹೊರಟು ಹೋದ. ಇಲ್ಲಿ ಬಂದ ಮೇಲೆ ವ್ಯತ್ಯಾಸವೇನು ಆಗಲಿಲ್ಲ. ಅಲ್ಲಿ ಸಾಮಾನ್ಯ ಲಾಡ್ಜುಗಳಲ್ಲಿ ಮಾಮೂಲಿ ಮದ್ಯಮವರ್ಗದ ಗಿರಾಕಿಗಳ ಜೊತೆ ಮಲಗ್ತಾ ಇದ್ದವಳು ಇಲ್ಲಿ ಎಸಿ ರೂಮುಗಳಲ್ಲಿ, ಶ್ರೀಮಂತರ ಜೊತೆ ಮಲಗ್ತಾ ಇದ್ದೆ. ಆದರೆ ದುಡ್ಡಿಗೇನೂ ಮೋಸ ಇರಲಿಲ್ಲ ತುಂಬಾ ದುಡ್ಡು ಸಿಕ್ತಾ ಇತ್ತು. ಇಪ್ಪತ್ತು ವರ್ಷ ಅಂದರೆ ಕಡಿಮೇನಾ ಸರ್? ದುಡೀತಾ ಹೋದೆ. ಈ ನಗರದಲ್ಲಿನ ಅಂಡರ್‍ವಲ್ರ್ಡ ಜನಗಳು ಪರಿಚಯವಾದರು. ಅವರುಗಳಲ್ಲಿದ್ದ ಗುಂಪುಗಾರಿಕೆ ನಮ್ಮ ವ್ಯವಹಾರಕ್ಕು ತಟ್ತಾ ಇತ್ತು. ಡಿಪಾರ್ಟಮೆಂಟಿಗಷ್ಟೇ ಅಲ್ಲದೆ ಅಂಡರ್‍ವಲ್ರ್ಡ ಮುಖಂಡುರುಗಳಿಗೂ ಮಾಮೂಲಿ ಕೊಡಬೇಕಾಗಿತ್ತು. ಜೊತೆಗೆ ಅವರು ಆಗಾಗ ಹೇಳ್ತಾ ಇದ್ದವರ ಜೊತೆಗೂ ಮಲಗಬೇಕಾಗಿತ್ತು. ಅಂತ ಗ್ಯಾಂಗಿನ ಒಬ್ಬ ಲೀಡರ್‍ಗೆ ನಾನು ತುಂಬಾ ಹತ್ತಿರದವಳಾಗಿಬಿಟ್ಟಿದ್ದೆ. ಕೊನೆಗೊಂದು ದಿನ ಅವನು ನೀನೇ ಯಾಕೆ ಸ್ವತಂತ್ರವಾಗಿ ಕಸುಬು ನಡೆಸಬಾರದು ಅಂತ ಹೇಳಿ ಒಂದು ದೊಡ್ಡಮನೆಯ ವ್ಯವಸ್ಥೆ ಮಾಡಿದ,ಸ್ವಲ್ಪ ದುಡ್ಡನ್ನೂ ಕೊಟ್ಟ. ಹಳೆಯ ಮನೆಯಲ್ಲಿದ್ದ ಕೆಲವರು ಹುಡುಗಿಯರು ನನ್ನ ಜೊತೆ ಬಂದರು. ಹುಡುಗಿಯರನ್ನು ಕರೆದುಕೊಂಡು ಬಂದು ಸೇರಿಸ್ತಾ ಇದ್ದ ಏಜೆಂಟರುಗಳು ಸಹ ಒಂದಷ್ಟು ಹುಡುಗಿಯರನ್ನು ಕರೆದುಕೊಂಡು ಬಂದರು. ನೋಡ ನೋಡುತ್ತಲೆ ನಾನು ನಗರದ ನಂಬರ್ ಒನ್ ಆಗಿಬಿಟ್ಟೆ. ಒಂದು ಕಡೆ ಅಂಡರ್ ವಲ್ರ್ಟ ಇನ್ನೊಂದು ಕಡೆ ಅಧಿಕಾರದಲ್ಲಿದ್ದ ರಾಜಕಾರಣಿಗಳು ಮತ್ತೊಂದು ಕಡೆ ಸರಕಾರಿ ಅಧಿಕಾರಿಗಳ ಬೆಂಬಲದಿಂದ ನೋಡನೋಡುತ್ತಲೆ ಸಮಾಜದ ಶ್ರೀಮಂತರಲ್ಲಿ ಒಬ್ಬಳಾಗಿಬಿಟ್ಟಿದ್ದೆ. ಆಗಲೆ ನೋಡಿ ಸಮಾಜಸೇವೆಯ ಹುಚ್ಚು ಹುಟ್ಟಿಕೊಂಡಿದ್ದು. ಗಣಪತಿ ಕೂರಿಸೋದರಿಂದ ಹಿಡಿದು ನಗರದ ಯಾವುದೆ ಕಾರ್ಯಕ್ರಮಗಳಿಗಾಗಲಿ ಇಲ್ಲವೆನ್ನದೆ ದುಡ್ಡು ಕೊಡ್ತಾ ಹೋದೆ. ನಗರದ ಯಾವ ಬೀದಿಯ ಎಲ್ಲ ಕಾರ್ಯಕ್ರಮದ ಪೋಸ್ಟರ್-ಬ್ಯಾನರುಗಳಲ್ಲೂ ನಾನು ಮಿಂಚತೊಡಗಿದೆ.

ಈಗ ನಾನು ನೇರವಾಗಿ ಕಸುಬು ನಡೆಸಲ್ಲ. ಅದನ್ನು ನೋಡಿಕೊಳ್ಳೋಕೆ ಬೇರೆ ಬೇರೆ ಏರಿಯಾಗಳಲ್ಲಿ ಬೇರೇ ಹೆಂಗಸರಿದ್ದಾರೆ. ನಾನು ನಿಯಂತ್ರಕಿಯಷ್ಟೆ. ಇದೀಗ ನಾನು ಸಮಾಜಸೇವಕಿ. ಚುನಾವಣೆಗೆ ನಿಂತು ಗೆದ್ದು ಅಧಿಕಾರ ಪಡೆಯಬೇಕೆಂದೇನೂ ಇಲ್ಲ. ಎಲ್ಲ ರಾಜಕೀಯ ಪಕ್ಷಗಳ ನಾಯಕರುಗಳೂ ನನ್ನ ಮನೆ ಬಾಗಿಲನ್ನು ತಟ್ಟುತ್ತಾರೆ. ಒಂದು ಕಾಲದಲ್ಲಿ ನನ್ನನ್ನು ನಾಶಮಾಡಿದ ಪೋಲಿಸ್ ಇಲಾಖೆಯ ಬಗ್ಗೆ ನನಗಿವತ್ತು ಸಿಟ್ಟಿಲ್ಲ ಒಂದು ಕಾಲದಲ್ಲಿ ನನ್ನನ್ನು ನಾಶ ಮಾಡಿದ ಅದೆ ಪೋಲಿಸ್ ಇಲಾಖೆಯ ದೊಡ್ಡ ದೊಡ್ಡ ಅಧಿಕಾರಿಗಳು ನನಗಿವತ್ತು ಸೆಲ್ಯೂಟ್ ಹೊಡೆಯುತ್ತಾರೆ. ಹೋಗಲಿ ಬಿಡಿ, ಇಷ್ಟಾದ ಮೇಲೆ ಈ ಕಸುಬನ್ಯಾಕೆ ನಿಲ್ಲಿಸಿಲ್ಲ ಅಂತ ಕೇಳಿದರೆ ಏನು ಹೇಳೋದು ಸಾರ್. ಹೋಗಲಿ ನಾನು ನಿಲ್ಲಿಸಿದರೆ ನೀವು ಗಂಡಸರು ದಿಕ್ಕಿಲ್ಲದ ನೊಂದ ಹೆಂಗಸರಿಗೆ ಸಹಾಯ ಮಾಡ್ತೀರಾ? ಅವಳ ಮೈ ಸುಖ ಬಯಸದೇ? ಇಲ್ಲ. ನೀವುಗಳು ಪುಗಸಟ್ಟೆಯಾಗಿ ಅವಳಿಗೇನೂ ಕೊಡಲ್ಲ ಅಂದಮೇಲೆ. ಮೂರುಕಾಸಿಗಾಗಿ ಅವಳ್ಯಾಕೆ ನಿಮ್ಮ ಮುಂದೆ ಕೈ ಚಾಚಿ ನಿಲ್ಲಬೇಕು. ಅವಳೂ ದಂದೇನ ಒಂದು ಉದ್ಯೋಗ ಅಂತ ಮಾಡ್ತಾಳೆ. ತನ್ನ ಮೈಮಾರಿ ಜೀವನ ಮಾಡ್ತಾಳೆ. ಆತ್ಮಾನ ಮಾರಿಕೊಳ್ಳೋದಕ್ಕಿಂತ ಇದು ವಾಸಿಯಲ್ವಾ?. ಆದರೂ ನಾನು ಒಂದು ನಡೆಸಿಕೊಂಡು ಬರ್ತಾ ಇದೀನಿ. ಬಲವಂತದಿಂದ ಯಾವ ಹುಡುಗೀನೂ ಈ ದಂದೆಗೆ ಬರದ ಹಾಗೆ ಎಚ್ಚರಿಕೆ ವಹಿಸಿದೀನಿ. ನನ್ನ ಹತ್ತಿರ ಬಂದ ಬಹಳಷ್ಟು ಹೆಣ್ಣುಮಕ್ಕಳಿಗೆ ಬದುಕೊದಿಕ್ಕೆ ಸಾದ್ಯವಾದ ಮಟ್ಟಿಗೆ ಬೇರೆ ದಾರೀನು ತೋರಿಸಿದಿನಿ. ಅಷ್ಟರ ಮಟ್ಟಿಗೆ ನಾನು ಪಾಪಿಯಲ್ಲ.ಕಲಿಯೋದು ಎಲ್ಲಿಂದ ಸರ್? ಬದುಕು ಮಾತುಗಳನ್ನು ಕಲಿಸುತ್ತೆ. ಇನ್ನೇನು ಹೇಳಲಿ ಸರ್. ದಯವಿಟ್ಟು ನನ್ನ ಹೆಸರು, ಊರುಕೇರಿ ಎಲ್ಲೂ ಹಾಕಬೇಡಿ ಹಾಕಿದರೆ ಪರಿಣಾಮ ಚೆನ್ನಾಗಿರಲ್ಲ. ಹೆದರಬೇಡಿ,ಇದು ದಮಕಿಯಲ್ಲ. ಹೀಗೆ ಮಾತಾಡಿ ಅಭ್ಯಾಸ ಆಗೋಗಿದೆ. ಹೇಳಿದ್ದು ಮಾತ್ರ ನೆನಪಿರಲಿ.

ಇನ್ನು ನಿಮ್ಮನ್ನು ಇಲ್ಲಿಗೆ ಕಳಿಸಿ ಪರಿಚಯ ಮಾಡಿಸಿದ ಆ ನಟಿಗೆ ನಾನು ಥ್ಯಾಂಕ್ಸ್ ಹೇಳಬೆಕು. ಯಾಕೆಂದರೆ ಎಷ್ಟೊ ವರ್ಷಗಳಿಂದ ಒಳಗೇ ಇಟ್ಟುಕೊಂಡಿದ್ದ ವಿಚಾರಗಳನ್ನೆಲ್ಲ ಹೇಳಿ ಒಂದು ರೀತಿಯಲ್ಲಿ ಸಮಾಧಾನ ಆಗಿದೆ ಈಗ. ಅವಳಿಗೆ ಫೋನ್ ಮಾಡಿ ಮಾತಾಡ್ತೀನಿ ಬಿಡಿ. ಬರ್ತಾ ಆಟೋದಲ್ಲಿ ಬಂದರಾ. ತಡೀರಿ, ಈಗ ನಮ್ಮ ಹುಡುಗ ನಿಮ್ಮನ್ನು ಕಾರಲ್ಲಿ ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಡ್ರಾಪ್ ಮಾಡ್ತಾನೆ.

ಅವಳ ಒಂದು ಕೂಗಿಗೆ ಓಡಿಬಂದ ಇಪ್ಪತ್ತೈದರ ಹರಯದ ಒಬ್ಬ ಹುಡುಗ ಅವಳ ಮಾತಿಗೆ ಕಾದು ನಿಂತ. ಮುನ್ನಾ ಇವರನ್ನು ಹೇಳೋ ಜಾಗಕ್ಕೆ ಡ್ರಾಪ್ ಮಾಡಿ ಬಾ, ಹುಶಾರು. ಅಂದಳು. ಅವಳಿಗೆ ನಮಸ್ಕಾರ ಹೇಳಿ ಬಂಗಲೆಯಿಂದ ಹೊರಬಂದು ಕಾರನ್ನು ಹತ್ತಲು ಹೊರಟಾಗ ಆಳೊಬ್ಬ ಡಿಕ್ಕಿಯಲ್ಲಿ ಏನನ್ನೊ ಇಡುತ್ತಿದ್ದ. ಏನು ಅಂತ ಕೇಳಿದ್ದಕ್ಕೆ ನಮ್ಮ ತೋಟದಲ್ಲೇ ಬೆಳೆದ ಮಾವಿನ ಹಣ್ಣುಗಳು ಸಾರ್. ಅಮ್ಮಾವ್ರೆ ಇಡೋದಿಕ್ಕೆ ಹೇಳಿದಾರೆ ಅಂದಾಗ ಮನಸ್ಸಿಗೆ ಪಿಚ್ಚೆನ್ನಿಸಿತು. ಕಾರಿನ ಒಳಗೆ ಹತ್ತಿ ಕೂತೆ. ಅಷ್ಟು ದೊಡ್ಡ ವಿದೇಶಿ ಕಾರನ್ನು ನಾನೆಂದು ಹತ್ತಿರದಿಂದ ಸಹ ನೋಡಿರಲಿಲ್ಲ. ಡ್ರೈವರ್ ಸ್ಥಾನದಲ್ಲಿ ಕೂತ ಮುನ್ನಾ ತಿರುಗಿ ನೋಡಿ ಸಾರ್ ಎಲ್ಲಿಗೆ ಬಿಡಬೇಕು ಎಂದಾಗ ವಿಳಾಸ ಹೇಳಿ ಕಣ್ಮುಚ್ಚಿದೆ!

ನಾನು ಅವಳ ಕಥೆ ಕೇಳಿದೆನೊ ಇಲ್ಲ ಯಾವುದಾದರು ಸಿನಿಮಾ ನೋಡಿದೆನೊ ಎಂಬ ಅನುಮಾನ ಕಾಡತೊಡಗಿತು! ಇದನ್ನೊಂದು ಚಿತ್ರಕಥೆ ಮಾಡಿ ಸಿನಿಮಾ ಮಾಡೋಕ್ಯಾಕೆ ಪ್ರಯತ್ನಿಸಬಾರದೆಂಬ ಸಣ್ಣದೊಂದು ಸ್ವಾರ್ಥದ ಬಾವನೆ ನನ್ನೊಳಗೆ ಬಂದದ್ದು ಸುಳ್ಳಲ್ಲ.

Apr 15, 2015

ಸೈದ್ಧಾಂತಿಕ ‘ಯಾನ’ದಲ್ಲಿ ಕಳೆದುಹೋಗುವ ಭೈರಪ್ಪ.

yaana
Dr Ashok K R
ಯಾನ ಕಾದಂಬರಿಯ ಹಿನ್ನುಡಿಯಲ್ಲಿ ಭೈರಪ್ಪನವರು ‘ಇಂಗ್ಲೀಷಿನಲ್ಲಿ ವಿಜ್ಞಾನಕಥೆ ಎಂಬ ಒಂದು ಹೊಸ ಜಾತಿಯೇ ಬೆಳೆದು ಸಮೃದ್ಧವಾಗಿದೆ. ಇದರ ಕೆಲವು ಉಪಯೋಗಗಳನ್ನು ಕೆಲವು ಮಾಂತ್ರಿಕ ವಾಸ್ತವವಾದೀ ಲೇಖಕರು ಬಳಸಿಕೊಂಡಿದ್ದಾರೆ. ‘ಯಾನ’ವು ಈ ಯಾವ ಜಾತಿಗೂ ಸೇರಿದ್ದಲ್ಲ. ನನ್ನ ಇತರ ಕಾದಂಬರಿಗಳಂತೆ ಮನುಷ್ಯನ ಅನುಭವವನ್ನು ಶೋಧಿಸುತ್ತದೆ. ಮುಂದಿನ ಶತಮಾನಗಳಲ್ಲಿ ಘಟಿಸುವ ಮಾನವ ಅನುಭವಗಳನ್ನು ಹುಡುಕುತ್ತದೆ ಅಷ್ಟೇ’ ಎಂಬ ಮಾತನ್ನಾಡುತ್ತಾರೆ. ಶತಮಾನಗಳು ಕಳೆದ ನಂತರದ ಮನುಷ್ಯ ಯಾನದಲ್ಲೂ ಪುರುಷ ಅಹಂಕಾರವನ್ನು ಸಮರ್ಥಿಸುವುದೇ ಮುಖ್ಯವಾಗಿಬಿಟ್ಟ ಕಾರಣ ಕಥನಕಲೆ ಹಿಂದಾಗಿಬಿಟ್ಟಿದೆ. ಇಡೀ ಯಾನ ಕಾದಂಬರಿಯ ಗುರಿ ಮಹಿಳೆ ಪುರುಷನಿಗಿಂತ ಎಲ್ಲ ವಿಧದಲ್ಲೂ ಕೀಳು ಎಂಬ ಸಿದ್ಧಾಂತವನ್ನು ನಿರೂಪಿಸುವುದು. ಹೋಗಲಿ ಆ ನಿರೂಪಣೆಯಲ್ಲಿ ಭೈರಪ್ಪನವರ ಹಿಂದಿನ ಕಾದಂಬರಿಗಳ ಚಾಕಚಕ್ಯತೆ ಇದೆಯೇ ಎಂದರೆ ಅಲ್ಲೂ ನಿರಾಸೆ ಮೂಡುತ್ತದೆ. 

ಭೂಮಿಯಿಂದ ದೂರದೂರಕೆ ಭಾರತದಿಂದ ಒಂದು ಆಕಾಶನೌಕೆ ಪಯಣ ಬೆಳೆಸುತ್ತದೆ, ಲಕ್ಷಾಂತರ ಮಿಲಿಯನ್ ವರುಷದ ಪಯಣವದು. ಪಯಣದಲ್ಲಿ ಒಂದು ಗಂಡು ಸುದರ್ಶನ್, ಒಂದು ಹೆಣ್ಣು ಉತ್ತರೆ. ಲೈಂಗಿಕ ಸಂಪರ್ಕದಿಂದ ಒಂದು ಮಗು ಪಡೆಯಬೇಕು. ಶೇಖರಿಸಲ್ಪಟ್ಟ ವೀರ್ಯಾಣುವಿನಿಂದ ಮತ್ತೊಂದು ಲಿಂಗದ ಮಗುವನ್ನು ಕೃತಕ ಗರ್ಭಧಾರಣೆಯ ಮುಖಾಂತರ ಪಡೆಯಬೇಕು. ಹುಟ್ಟಿದ ಹೆಣ್ಣು ಮತ್ತು ಗಂಡು ಮಗು ಆಕಾಶನೌಕೆಯ ಪಾಠವನ್ನೆಲ್ಲ ಕಲಿಯುತ್ತ ದೊಡ್ಡವರಾಗಿ ಮದುವೆಯಾಗಿ ವಂಶವನ್ನು ಮುಂದುವರೆಸಬೇಕು, ಮಿಲಿಯಾಂತರ ವರುಷಗಳ ತನಕ ಇದು ಮುಂದುವರೆಯುತ್ತಲೇ ಇರಬೇಕು. ಆಕಾಶನೌಕೆ ಸಾಯುವವರೆಗೆ. ಇದಿಷ್ಟು ಯಾನದ ವೈಜ್ಞಾನಿಕ ತಿರುಳು. ಹುಟ್ಟಿದ ಮಕ್ಕಳು ವಯಸ್ಕರಾಗುವುದಕ್ಕೆ ಮುಂಚೆಯೇ ಖಾಯಿಲೆ ಬಂದು ಸತ್ತರೆ? ಎಂಬಂತಹ ಅನೇಕ ಪ್ರಶ್ನೆಗಳು ಈ ತಿರುಳಿನ ಕುರುತಾಗಿ ಬರುತ್ತವಾದರೂ ಕಾಲ್ಪನಿಕ ವೈಜ್ಞಾನಿಕ ಕಾದಂಬರಿಯಾದ ಕಾರಣ ಆ ಪ್ರಶ್ನೆಗಳನ್ನೆಲ್ಲ ಮರೆತುಬಿಡಬಹುದು. ಭೈರಪ್ಪನವರ ಕಾದಂಬರಿಗಳೆಂದರೆ ಅತ್ಯದ್ಭುತ ವಿವರಗಳ ಸಂಗ್ರಹ. ಅವರ ನಿರಾಕರಣ ಕಾದಂಬರಿಯಲ್ಲಿನ ಹಿಮಾಲಯದ ವಿವರಗಳನ್ನು ಓದಿ ಹಿಮಾಲಯಕ್ಕೆ ಹೋಗಬೇಕೆಂದು ನಿರ್ಧರಿಸಿದವರು ಬಹಳಷ್ಟು ಜನರಿದ್ದಾರೆ. ಮಂದ್ರ ಕಾದಂಬರಿಯನ್ನು ಓದಿ ವೀಣೆ ಹಿಡಿದು ಸಂಗೀತ ಕಲಿಯಲೊರಟವರಿದ್ದಾರೆ. ಆ ರೀತಿಯ ಅದ್ಭುತ ವಿವರಗಳು ಯಾನದಲ್ಲಿ ಕಾಣಸಿಗುವುದಿಲ್ಲ. ಪ್ರಕೃತಿ ಮತ್ತು ಸಂಗೀತ ನಮ್ಮ ದಿನನಿತ್ಯದ ವ್ಯವಹಾರದಲ್ಲಿ ಒಂದಲ್ಲ ಒಂದು ಕಡೆ ಮನಸ್ಸಿಗೆ ತಟ್ಟುತ್ತಲೇ ಇರುತ್ತದೆ. ಆದರೆ ಆಕಾಶದ ಸಂಗತಿಗಳು ದಿನವಹೀ ಮನಸ್ಸು ತಲುಪುವ ಸಂಗತಿಗಳಲ್ಲ. ಈ ಕಾರಣವೂ ಯಾನದ ವಿವರಗಳು ಸಪ್ಪೆ ಎಂಬ ಭಾವ ಮೂಡಿಸಬಹುದು. 

ಈ ವೈಜ್ಞಾನಿಕ ತಿರುಳಿನ ಹಿಂದೆ ಸುದರ್ಶನ್ ಮತ್ತು ಉತ್ತರೆಯ ಭೂಮಿ ಮೇಲಿನ ಜೀವನ ತೆರೆದುಕೊಳ್ಳುತ್ತಾ ಹೋಗುತ್ತದೆ. ಉತ್ತರೆ ಬುದ್ಧಿವಂತ ಧೈರ್ಯಸ್ಥ ಹೆಣ್ಣುಮಗಳಾಗಿ, ದೇಶದ ಪ್ರಪ್ರಥಮ ಯುದ್ಧ ವಿಮಾನದ ಚಾಲಕಳಾಗಿ ಪರಿಚಯವಾಗುತ್ತಾಳೆ. ಅಂತರಿಕ್ಷ ಕೇಂದ್ರದ ಮೊದಲ ಪ್ರಯೋಗಕ್ಕೆ ಆಹ್ವಾನಿತಳಾಗುತ್ತಾಳೆ. ಅಂತರಿಕ್ಷದಲ್ಲಿ ಗಂಡು ಹೆಣ್ಣಿನ ನಡುವೆ ನಡೆಯುವ ಲೈಂಗಿಕತೆ ದೇಹದಲ್ಲಿ ಮೂಡಿಸುವ ಬದಲಾವಣೆಗಳೇನು ಎಂಬ ಪ್ರಯೋಗವದು. ಮತ್ತೊಬ್ಬ ಪೈಲಟ್ ಯಾದವನೊಡನೆ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕು ಎಂಬ ಮಾತು ಕೇಳಿ ಉತ್ತರೆ ಮೊದಲಿಗೆ ಒಪ್ಪುವುದಿಲ್ಲ. ನಂತರ ಯಾದವನೊಡನೆ ಮಾತನಾಡಿ ದೇವಸ್ಥಾನವೊಂದರಲ್ಲಿ ಮದುವೆಯಾಗಿ ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಾರೆ. ಇಲ್ಲಿಂದಲೇ ‘ಹೆಣ್ಣಿನ ಬುದ್ಧಿ ಮೊಣಕಾಲಿನ ಕೆಳಗೆ’ ಎಂಬ ‘ಸಿದ್ಧಾಂತ’ವನ್ನು ನಿರೂಪಿಸುವುದಕ್ಕೆ ಲೇಖಕರು ಪ್ರಾರಂಭಿಸುತ್ತಾರೆ. ಪ್ರೀತಿಸುವ ಯಾದವನೂ ಕೂಡ ನಿನ್ನ ಸೌಂದರ್ಯದಿಂದ ಇಷ್ಟು ಮೇಲೆ ಬಂದಿದ್ದೀಯ, ನೀನು ಇಷ್ಟಕ್ಕೆಲ್ಲ ಅರ್ಹಳಲ್ಲ ಎಂದು ಪದೇ ಪದೇ ಹೇಳುತ್ತಾನೆ. ಮುಂದಿನ ಹಂತದ ಪ್ರಯೋಗ ಮಿಲಿಯನ್ ವರ್ಷದ ಆಕಾಶನೌಕೆಯ ಪಯಣ. ಕುಟುಂಬದ ಕಾರಣಕ್ಕೆ ಯಾದವ ಬರಲು ಒಪ್ಪುವುದಿಲ್ಲ. ಯಾದವ ಬರುವುದು ಪ್ರಯೋಗದ ದೃಷ್ಟಿಯಿಂದ ಸಂಶೋಧನಾ ಕೇಂದ್ರದವರಿಗೂ ಇಷ್ಟವಿರುವುದಿಲ್ಲ. ಅಲ್ಲಿ ಆಯ್ಕೆಯಾಗಿದ್ದು ಭಯಂಕರ ಬುದ್ಧಿವಂತ, ಧ್ರುವ ಪ್ರದೇಶದ ಆರು ತಿಂಗಳ ರಾತ್ರಿಯಲ್ಲಿ ಒಬ್ಬನೇ ಸಂಶೋಧನೆಗಳನ್ನು ಮಾಡಿದ್ದ ಸುದರ್ಶನ. ಆಕಾಶನೌಕೆಯಲ್ಲಿ ಸುದರ್ಶನ ಮತ್ತು ಉತ್ತರೆ ಗಂಡ ಹೆಂಡತಿಯಾಗಿ ಬಾಳಬೇಕು. ಈ ಅಂತರಿಕ್ಷ ಮದುವೆಯ ಪೂರ್ವದಲ್ಲಿ ಉತ್ತರೆಗೆ ಲೈಂಗಿಕ ಅನುಭವಗಳಿರುವ ಹಾಗೆಯೇ ದೇಶ ವಿದೇಶದಲ್ಲಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಸುದರ್ಶನನಿಗೂ ಎರಡು ಗಾಢ ಲೈಂಗಿಕ ಅನುಭವಗಳಾಗಿರುತ್ತವೆ. ಉತ್ತರೆ ಯಾದವನೊಡನೆ ಕೂಡುವ ಮೊದಲು ದೇವಸ್ಥಾನದಲ್ಲಿ ಮದುವೆಯಾಗುತ್ತಾಳೆ. ಸುದರ್ಶನ ಮದುವೆಯ ಕಟ್ಟುಪಾಡಿರದೆ ಲೀಸಾ ಎಂಬ ಸಹಪಾಠಿ ಮತ್ತು ಇಂಗಾ ಎಂಬ ಜರ್ಮನ್ ಪ್ರವಾಸಿಯ ಜೊತೆಗೆ ಲೈಂಗಿಕತೆಯನ್ನನುಭವಿಸುತ್ತಾನೆ. ಸಂಸ್ಕೃತಿಯೆಂಬುದು ಹೆಣ್ಣಿಗಿರಬೇಕೆ ಹೊರತು ಗಂಡಸಿಗಲ್ಲ ಎಂಬುದನ್ನು ತಿಳಿಸುತ್ತಾರೆ ಭೈರಪ್ಪ! ಕೊನೆಗೆ ಅಧಿಕೃತ ಮದುವೆಗೆ ಮುಂಚೆಯೇ ಲೈಂಗಿಕ ಅನುಭವದಲ್ಲಿ ತೊಡಗಿದ್ದ ಉತ್ತರೆ ‘ಎಂಜಲೆಂದು’ ಬಯ್ಯಿಸಿಕೊಳ್ಳುತ್ತಾಳೆ, ಸುದರ್ಶನನಿಂದ!

ಯಾನದ ಸಮಯದಲ್ಲಿ ಸಂಶೋಧನಾ ಕೇಂದ್ರದವರು ಮಾಡಿದ ಮೋಸದಿಂದ, ಯಾದವ ಬರಲು ಒಪ್ಪದ ಬೇಸರದಿಂದ ಉತ್ತರೆ ಖಿನ್ನತೆಯಲ್ಲಿರುತ್ತಾಳೆ. ಸುದರ್ಶನನೊಡನೆ ಲೈಂಗಿಕ ಸಂಪರ್ಕಕ್ಕೆ ಒಪ್ಪುವುದಿಲ್ಲ, ಕೃತಕ ಗರ್ಭಧಾರಣೆಗೂ ಒಪ್ಪುವುದಿಲ್ಲ. ಈ ಸಂಶೋಧನೆ ವ್ಯರ್ಥವಾದರೆ ಆಗಲಿ ಎಂದು ಸುಮ್ಮನಾಗುತ್ತಾಳೆ. ಸುದರ್ಶನನ ಲೈಂಗಿಕ ಆಸಕ್ತಿಗೆ ಉತ್ತರೆ ಸ್ಪಂದಿಸದಾದಾಗ ಬಲಾತ್ಕರಿಸುವ ಮಟ್ಟಕ್ಕೂ ಹೋಗುತ್ತಾನೆ. ಆ ಬಲಾತ್ಕಾರಕ್ಕೂ ಸಮರ್ಥನೆಗಳಿವೆ! ‘ಹೆಣ್ಣುಮಕ್ಕಳು ಬಲಾತ್ಕರಿಸುವುದನ್ನು ಇಷ್ಟಪಡುತ್ತಾರೆ’ ಎಂಬ ಮಾತನ್ನು ಮಹಿಳೆಯಿಂದಲೇ ಹೇಳಿಸಿಬಿಟ್ಟಿದ್ದಾರೆ! ಭಾರತೀಯ ಮಹಿಳೆ ಆ ರೀತಿ ಹೇಳಬಾರದು ಎಂಬ ಕಾರಣಕ್ಕೋ ಏನೋ ಇಂಗಾ ಎಂಬ ಜರ್ಮನ್ ಮಹಿಳೆಯ ಬಾಯಿಂದ ಈ ಹಿತೋಕ್ತಿಯನ್ನು ಹೇಳಿಸಿ ಬೆಚ್ಚಿ ಬೀಳಿಸುತ್ತಾರೆ ಭೈರಪ್ಪ! ಮತ್ತೊಂದು ಸಮರ್ಥನೆ ಸಂಶೋಧನೆ ಮುಂದುವರಿಯಲೇಬೇಕಾದ ಒತ್ತಡ. ದೇಶದ ಸಂಶೋಧನೆಯ ಮುಂದುವರಿಕೆಯ ಸಲುವಾಗಿ ಅತ್ಯಾಚಾರ ಮಾಡುವುದು ತಪ್ಪಲ್ಲ ಎಂಬ ಭಾವ. ಪುಣ್ಯಕ್ಕೆ ಕಾದಂಬರಿಯಲ್ಲಿ ಅತ್ಯಾಚಾರದ ಪ್ರಯತ್ನವಾಗುತ್ತದೆಯೇ ಹೊರತು ಅತ್ಯಾಚಾರವಾಗುವುದಿಲ್ಲ! ಕೊನೆಗೆ ಉತ್ತರೆ ಮಕ್ಕಳು ಮಾಡಿಕೊಳ್ಳುವುದಕ್ಕೆ ಒಪ್ಪಿಕೊಳ್ಳುವುದ್ಹೇಗೆ ಎಂಬ ವಿವರಗಳನ್ನು ತಿಳಿದುಕೊಳ್ಳಲು ಕಾದಂಬರಿ ಓದಿ.

ಉತ್ತರೆ ಬುದ್ಧಿವಂತೆ, ಯಾನದ ಕಾದಂಬರಿ ಲೇಖಕರೇ ತಿಳಿಸಿರುವಂತೆ ಶತಮಾನಗಳ ನಂತರ ನಡೆಯುವಂತಹದ್ದು. ಆದರೆ ಲೇಖಕರ ಮನಸ್ಸು ಶತಮಾನಗಳ ನಂತರವೂ ಮನುಷ್ಯನ ಆಲೋಚನೆಗಳು ಇವತ್ತು ಅಥವಾ ಹಿಂದೆ ಇದ್ದಂತೆಯೇ ಇರಬೇಕು ಎಂದು ಭಾವಿಸಿದಂತಿದೆ. ಆ ಕಾರಣದಿಂದ ಯಾನದಲ್ಲೂ ಮಹಿಳೆಯನ್ನು ಅಡುಗೆಮನೆಗೆ ಮತ್ತು ಅಬ್ಬಬ್ಬಾ ಎಂದರೆ ಕೃಷಿಗೆ ಸೀಮಿತಗೊಳಿಸಿಬಿಟ್ಟಿದ್ದಾರೆ. ಗಂಡಸು ಆಗೊಮ್ಮೆ ಈಗೊಮ್ಮೆ ಅಡುಗೆಮನೆ ಪ್ರವೇಶಿಸುತ್ತಾನಾದರೂ ಅಡುಗೆ ಮಹಿಳೆಯ ಕೆಲಸ ಎಂದು ನಿರ್ಧರಿಸಿಬಿಟ್ಟಿದ್ದಾರೆ! ವಂಶವೃಕ್ಷದ ಕಾತ್ಯಾಯಿನಿಗೂ ಉತ್ತರೆಗೂ ಅನೇಕ ಸಾಮ್ಯತೆಗಳಿವೆ. ಇಬ್ಬರೂ ಮನೆಯವರ ವಿರೋಧದ ನಡುವೆ ಮನೆಯಿಂದ ಹೊರನಡೆಯುತ್ತಾರೆ. ಇಬ್ಬರೂ ಸಂಕಷ್ಟಗಳನ್ನನುಭವಿಸುತ್ತಾರೆ. ಕೊನೆಗೆ ಎರಡೂ ಕಾದಂಬರಿಗಳಲ್ಲಿ ಮಹಿಳೆಯದೇ ತಪ್ಪು ಎಂದು ನಿರೂಪಿಸಿದ್ದಾರೆ. ವಂಶವೃಕ್ಷದ ಕಾತ್ಯಾಯಿನಿ ಮಾಡಿದ್ದೆಲ್ಲವೂ ತಪ್ಪು ಎಂದು ಮೊದಲ ಓದಿನಲ್ಲಿ ಅನ್ನಿಸುವುದಕ್ಕೆ (ಕಾತ್ಯಾಯಿನಿ ಪಾತ್ರರಚನೆ ಎಷ್ಟು ತಪ್ಪಿಂದ ಕೂಡಿತ್ತು ಎಂದು ನನಗೆ ಅರಿವಾಗಿದ್ದು ಲಿಯೋ ಟಾಲ್ ಸ್ಟಾಯ್ ರ ಅನ್ನಾ ಕೆರಾನೀನ ಓದಿದ ನಂತರ) ಮುಖ್ಯ ಕಾರಣ ಕಾತ್ಯಾಯಿನಿ ವಿರುದ್ಧವಿರುವ ಶ್ರೀನಿವಾಸ ಶ್ರೋತ್ರಿಗಳ ಪಾತ್ರದ ಶುದ್ಧತೆ ಮತ್ತು ಬದ್ಧತೆ. ಇಲ್ಲಿ ಉತ್ತರೆಗೆ ಎದುರಿಗಿರುವ ಸುದರ್ಶನ್ ಅಥವಾ ಯಾದವರಲ್ಲಿ ಆ ಶುದ್ಧತೆಯೂ ಇಲ್ಲ ಬದ್ಧತೆಯೂ ಇಲ್ಲ. ಗಂಡಸೆಂಬ ಪ್ರಾಣಿ ಏನು ಬೇಕಾದರೂ ಮಾಡಬಹುದು, ಹೆಣ್ಣು ಸಂಸ್ಕೃತಿ ರಕ್ಷಿಸಬೇಕು ಎಂಬ ಅಹಂಕಾರವಷ್ಟೇ ಇದೆ. ಈ ಅಹಂಕಾರದ ಭಾವವೇ ಕಾದಂಬರಿಯನ್ನು ಪೇಲವವಾಗಿಸಿಬಿಡುತ್ತದೆ, ಹಿಮಾಲಯದ ವಿವರಗಳ ಕೆಲವು ಪುಟಗಳನ್ನೊರತುಪಡಿಸಿ. ಹಿಂದಿನ ಶತಮಾನದ ಮನಸ್ಥಿತಿಯನ್ನೇ ಮುಂದಿನ ಶತಮಾನದಲ್ಲೂ ಕಾಣಬಯಸುವ ಭೈರಪ್ಪನವರ ಕಾದಂಬರಿಯ ಪಾತ್ರಗಳು ಮನುಷ್ಯನ ಆಲೋಚನೆಯಲ್ಲಿನ ಚಲನೆಯನ್ನೇ ಮರೆತುಬಿಟ್ಟಂತೆ ಕಾಣುತ್ತದೆ.

Apr 14, 2015

ಲವ್ ಮೂಡಿತಣ್ಣ!.....ಹೀಗೆ ಮೂಡಿತಣ್ಣ!

iduvarege iddilla
ಆರಂಭ ಚಿತ್ರದ ‘ಲವ್ ಮೂಡಿತಣ್ಣ’ ಹಾಡು ಹುಟ್ಟಿದ ರೀತಿಯ ಬಗ್ಗೆ ಚಿತ್ರದ ನಿರ್ದೇಶಕ ಎಸ್. ಅಭಿ ಹನಕೆರೆ ಅವರು ನೆನಪುಗಳನ್ನು ಹಂಚಿಕೊಂಡಿದ್ದಾರೆ. ಪ್ರೀತಿ ಮೂಡುವ ಸಂದರ್ಭಕ್ಕೆ ತಕ್ಕಂತೆ ಒಂದು ಹಾಡಿಗೆ ಟ್ಯೂನ್ ಹಾಕಲು ಗುರುಕಿರಣ್ ಅವರ ಜೊತೆ ಕುಳಿತುಕೊಂಡಾಗ ಗುರುಕಿರಣ್ ಅನೇಕ ಟ್ಯೂನುಗಳನ್ನು ಮಾಡಿದರು. ಅದರಲ್ಲಿ ಒಂದು ಇಷ್ಟವಾಗಿ, ಅದರ ಮೇಲೆ ಎರಡು ತಿಂಗಳು ಕೆಲಸ ಮಾಡಿದರು. ಇದ್ದಕ್ಕಿದ್ದಂತೆ ಗುರುಕಿರಣ್ ಅವರಿಗೆ, ಈ ಚಿತ್ರ ಬೇರೆ ರೀತಿಯೆ ಇದೆ, ಇದಕ್ಕೆ ಇನ್ನೂ ವಿಭಿನ್ನವಾದ ಟ್ಯೂನ್ ಮಾಡೋಣವೆಂದು ಅಲ್ಲಿಯವರೆಗೆ ಮಾಡಿದ್ದ ಟ್ಯೂನುಗಳನ್ನೆಲ್ಲಾ ತೆಗೆದು ಹಾಕಿದರು, ಇಷ್ಟವಾದ ಟ್ಯೂನನ್ನೂ ತೆಗೆದುಹಾಕಿದರು. ಬೇರೆ ಆಲೋಚನೆಗೆ ತಡಕಾಡುವಾಗ , ಒಂದು ದಿನ ಬೆಳಿಗ್ಗೆ ಎಂಟರಿಂದ ಮಧ್ಯರಾತ್ರಿ ಎರಡು ಮೂವತ್ತರ ತನಕ ಗುರುಕಿರಣ್ ಮತ್ತು ಅಭಿ ಲೋಕಾರೂಢಿ ಮಾತುಗಳನ್ನು ಆಡುತ್ತ ಕಾಲ ಕಳೆದರು.
abhi hanakere
ಅಭಿಯವರು ಮನೆಗೆ ಹೋಗಿ ಇನ್ನೇನು ಮಲಗಬೇಕು, ಆಗ ಕರೆ ಮಾಡಿದ ಗುರುಕಿರಣ್ ಒಂದು ಸಾಲು ಹೊಳೆದಿದೆ ಎನ್ನುತ್ತ ಟ್ಯೂನ್ ಜೊತೆಗೆ ’ಲವ್ ಮೂಡಿತಣ್ಣ' ಎಂದರು (ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ). ಅಭಿಯವರು, ಚೆನ್ನಾಗಿದೆ; ಮೂರು ದಿನದ ನಂತರ ಮತ್ತೆ ಕಾಡುತ್ತಾ ನೋಡೋಣ ಎಂದರು. ಒಂದು ವಾರದ ನಂತರ ಗುರುಕಿರಣ್ ಭೇಟಿಯಾಗಿ , ಸಂಗೀತ ಮಾಡಲು ಕುಳಿತಾಗಲು, ಆ ಟ್ಯೂನ್ ಕಾಡಿತು. ಆದ್ದರಿಂದ ಅದನ್ನು ಅಂತಿಮ ಆಯ್ಕೆ ಮಾಡಿದರು. ಆ ಟ್ಯೂನ್‍ಗೆ ಗೊಟೂರಿಯವರ ಕೈಯಲ್ಲಿ ಸಾಹಿತ್ಯ ಬರೆಸಿದರೆ ಚೆನ್ನಾಗಿರುತ್ತೆ ಎಂದು ಗುರುಕಿರಣ್ ಸಲಹೆ ನೀಡಿದರು. ಅದರಂತೆ ಅಭಿಯವರು, ಗೊಟೂರಿಯವರನ್ನು ಭೇಟಿ ಮಾಡಿ, ಅವರ ಜೊತೆ ಕಾರಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ , ಬೆಂಗಳೂರಿನ ಸುತ್ತಮುತ್ತಾ ಓಡಾಡುತ್ತ ಹಾಡಿನ ಸಂದರ್ಭವನ್ನು ವಿವರಿಸಿ, ಆಮೇಲೆ ಕಾಡುಹರಟೆ ಹೊಡೆಯುತ್ತ ಕಾಲ ತಳ್ಳಿದರು. ನಂತರ, ಗುರುಕಿರಣ್ ಮನೆಗೆ ಬಂದು ಮತ್ತೆ ಮೂರು ಗಂಟೆ ಹರಟೆ! ಹರಟೆ ಮುಗಿದ ಮೇಲೆ ಕೇವಲ ಹತ್ತು ನಿಮಿಷದಲ್ಲಿ, ಗೊಟೂರಿಯವರು ಲವ್ ಮೂಡಿತಣ್ಣ ಹಾಡನ್ನು ಬರೆದು ಅಭಿಯವರ ಕೈಗಿತ್ತು, “ಇದು ದೈವ ಪ್ರೇರಣೆ, ನನ್ನಿಂದ ಈ ಹಾಡು ಬರೆಯುವಂತಾಗಿದೆ. ಈ ಹಾಡಿನಲ್ಲಿ ನೀವು ಯಾವ ಒಂದು ಪದವನ್ನೂ ಬದಲಾಯಿಸದೆ, ಸಂಗೀತಕ್ಕೆ ಅಳವಡಿಸುತ್ತೀರ ಎನ್ನುವ ನಂಬಿಕೆ ನನಗಿದೆ” ಎಂದು ಹೇಳಿ ಹೊರಟು ಹೋದರು. ಈ ಸಾಹಿತ್ಯಕ್ಕೆ ಮಾಲ್ಗುಡಿ ಶುಭ ಅವರ ಧ್ವನಿ ಹೊಂದುತ್ತದೆ ಎಂದ ಗುರುಕಿರಣ್ ಮಾಲ್ಗುಡಿ ಶುಭಾರನ್ನು ಕರೆಸಿ, ಹಾಡಿಸಿದಾಗ, ಅವರು ಸಹ, ಹಾಡುವುದರಲ್ಲಿ ತಲ್ಲೀನರಾಗಿ “ಈ ಹಾಡು, ನಾನು ಹಾಡಿದ, ಅತ್ಯುತ್ತಮ ಹಾಡುಗಳಲ್ಲಿ ಒಂದಾಗಲಿದೆ” ಎಂದು ಸಂತಸ ವ್ಯಕ್ತಪಡಿಸುತ್ತ “ಶುಭವಾಗಲಿ” ಎಂದು ಹಾರೈಸಿದರು.

gurukiran
ಹಾಡು ಸಿದ್ಧವಾದ ನಂತರ, ಅಭಿಯವರಿಗೆ ಭಯ ಕಾಡುವುದಕ್ಕೆ ಶುರುವಾಗಿತ್ತಂತೆ, ಚಿತ್ರದಲ್ಲಿ ಈ ಹಾಡೇ ಹೈಲೈಟ್ ಆಗಿಬಿಟ್ಟು, ಉಳಿದಿದ್ದೆಲ್ಲಾ ಸಪ್ಪೆಯಾಗಬಹುದು ಎಂಬುದೇ ಆ ಭಯ.

ಇನ್ನು ಹಾಡಿನ ಚಿತ್ರೀಕರಣವನ್ನು ಮೂವತ್ತು ದಿನಗಳ ಕಾಲ ಪ್ರತಿನಿತ್ಯ, ಬೆಳಗ್ಗೆ ಮತ್ತು ಸಂಜೆ, ಹೊಂಬಣ್ಣದ ಬೆಳಕಿನಲ್ಲಿ (ಗೋಲ್ಡನ್ ಅವರ್ಸ್) ಒಂದೊಂದೆ ದೃಶ್ಯವನ್ನು ನೃತ್ಯ ಸಂಯೋಜಕರಿಲ್ಲದೆ, ಸ್ವತಃ ಅಭಿಯವರೇ ಚಿತ್ರೀಕರಣ ಮಾಡಿ ಮುಗಿಸಿದರು. ಹಾಡು ಕೇಳಿದವರೆಲ್ಲ, ಗುರುಕಿರಣ್ ಇಲ್ಲಿಯವರೆಗು ಕಂಪೋಸ್ ಮಾಡಿದ ಅತ್ಯುತ್ತಮ ಹಾಡುಗಳಲ್ಲಿ, ಲವ್ ಮೂಡಿತಣ್ಣ ಹಾಡು ಕೂಡ ಒಂದು ಎಂದು ಹೇಳುತ್ತಾರೆ.

ಈಗಾಗಲೇ, ಈ ಚಿತ್ರದ ಹಾಡುಗಳು, ಭಾರಿ ಸದ್ದು ಮಾಡಿವೆ. ಅದರಲ್ಲೂ ಲವ್ ಮೂಡಿತಣ್ಣ ಹಾಡು ತುಂಬಾ ಜನರ ಪ್ರೀತಿಗೆ ಪಾತ್ರವಾಗಿದೆ. ಡಿ.ಟಿ.ಎಸ್ ಹಂತದಲ್ಲಿರುವ ಆರಂಭ ಚಿತ್ರ ಇನ್ನು ಕೆಲವೇ ದಿನಗಳಲ್ಲಿ ಜನರ ಮುಂದೆ ಬರಲು ಸಿದ್ಧವಾಗುತ್ತಿದೆ.

Apr 12, 2015

ಅಸಹಾಯಕ ಆತ್ಮಗಳು - ಲಾರಿಯಿಂದ ಲಾರಿಗೆ

asahayaka aatmagalu
ನಾನು ಎಂಟು ವರ್ಷದವಳಾಗಿದ್ದಾಗ ಅಪ್ಪ ಅಮ್ಮನ ಜೊತೆ ಬೆಂಗಳೂರಿಗೆ ವಲಸೆ ಬಂದೆ. ಮೂಲತ: ನಮ್ಮದು ಆಂದ್ರದ ಒಂದು ಹಳ್ಳಿ. ಅಲ್ಲಿ ನಮಗಿದ್ದ ತುಂಡು ನೆಲಕ್ಕಾಗಿ ದಾಯಾದಿಗಳ ಜೊತೆ ಹೊಡೆದಾಡಿಕೊಂಡು ಪೋಲಿಸ್ ಕೇಸ್ ಹಾಕಿಸಿಕೊಂಡ ನಮ್ಮಪ್ಪ ರಾತ್ರೋರಾತ್ರಿ ನನ್ನನ್ನು ಅಮ್ಮನನ್ನು ಕರೆದುಕೊಂಡು ಬೆಂಗಳೂರಿಗೆ ಓಡಿಬಂದು ಬಿಟ್ಟ. ಇಲ್ಲಿ ಬೆಂಗಳೂರಿಗೆ ಬಂದಮೇಲೆ ಒಬ್ಬ ಆಂದ್ರದವನೇ ಕಂಟ್ರಾಕ್ಟರ್ ಪರಿಚಯವಾಗಿ ಅವನು ಕಟ್ಟಿಸುತ್ತಿದ್ದ ಕಟ್ಟಡಗಳಲ್ಲಿ ಇಟ್ಟಿಗೆ ಸೀಮೆಂಟು ಹೊರುವ ಕೆಲಸಕ್ಕೆ ಅಪ್ಪ ಅಮ್ಮ ಸೇರಿಕೊಂಡರು. ಅವತ್ತಿಂದ ನಮ್ಮ ಅಲೆಮಾರಿ ಜೀವನ ಶುರುವಾಯಿತು. ಎಲ್ಲೆಲ್ಲಿ ಕಟ್ಟಡಗಳನ್ನು ಕಟ್ತಾ ಇದ್ರೋ ಅಲ್ಲೇ ತಗಡಿನ ಶೆಡ್ ಹಾಕಿಕೊಂಡು ಜೀವನ ಮಾಡಬೇಕಾಗಿತ್ತು. ಬಹುಶ: ಬೆಂಗಳೂರಿನ ಎಲ್ಲ ದಿಕ್ಕುಗಳಲ್ಲಿಯೂ ನಮ್ಮ ಶೆಡ್ ಓಡಾಡ್ತಾ ಇತ್ತು. ನನಗೆ ಒಂದತ್ತು ವರ್ಷವಾಗೊತನಕ ಎಲ್ಲವೂ ಚೆನ್ನಾಗಿಯೇ ಇತ್ತು. ಯಾವ ದುರಬ್ಯಾಸವೂ ಇರದ ಅಪ್ಪ, ತನ್ನ ಪಾಡಿಗೆ ತಾನಿರುತ್ತಿದ್ದ ಅಮ್ಮ ನನ್ನನ್ನು ಮುದ್ದಿನಿಂದಲೇ ಸಾಕುತ್ತಿದ್ದರು. ಆದರೆ ಒಂದು ದಿನ ಕಟ್ಟುತ್ತಿದ್ದ ಕಟ್ಟಡದ ಸೆಂಟ್ರಿಂಗ್ ಕುಸಿದು ಅಪ್ಪ ಸತ್ತುಹೋಗಿಬಿಟ್ಟ. ಹಾಗಂತ ನಾವು ಮತ್ತೆ ವಾಪಾಸು ಊರಿಗೆ ಹೋಗೋ ಹಾಗಿರಲಿಲ್ಲ. ವಿಧಿಯಿಲ್ಲದೆ ಅಮ್ಮ ಅಲ್ಲೇ ಕೆಲಸ ಮುಂದುವರೆಸಿದಳು.
ಅದೇನಾಯಿತೊ ಗೊತ್ತಿಲ್ಲ,ತನ್ನ ಪಾಡಿಗೆ ತಾನಿರುತ್ತಿದ್ದ ಅಮ್ಮ ಆಂದ್ರವನೇ ಆದ ಒಬ್ಬ ಮೇಸ್ತ್ರಿಯ ಬಲೆಗೆ ಬಿದ್ದು ಬಿಟ್ಟಳು. ನಮ್ಮ ಅಪ್ಪನಿಗಿಂತ ವಯಸ್ಸಲ್ಲಿ ದೊಡ್ಡವನಾಗಿದ್ದ ಅವನಿಗೆ ಮದುವೆಯಾಗಿ ಹೆಂಡತಿ ಮಕ್ಕಳೆಲ್ಲ ಆಂದ್ರದಲ್ಲೇ ಇರ್ತಾ ಇದ್ದರು. ಅವನದು ಅಂತ ಒಂದು ಬೇರೇ ದೊಡ್ಡ ಶೆಡ್ ಇರ್ತಾ ಇತ್ತು. ಆಮೆಲೆ ನಾವು ಸಹ ಅವನ ಶೆಡ್ಡಿನಲ್ಲೇ ಇರತೊಡಗಿದೆವು. ಅಮ್ಮ ಅವನು ಮದುವೆಯಾದರೋ ಬಿಟ್ಟರೊ ನನಗೆ ನೆನಪಿಲ್ಲ. ಆದರವನನ್ನು ಚಿಕ್ಕಪ್ಪ ಅಂತ ಕರೀ ಅಂತ ಅಮ್ಮ ಹೇಳಿಕೊಟ್ಟಿದ್ದಳು. ನಾನೂ ಹಾಗೇ ಕರೀತಾ ಇದ್ದೆ. ಅವನು ನನ್ನ ತುಂಬಾ ಮುದ್ದು ಮಾಡ್ತಾ ಇದ್ದ. ಕೇಳಿದ ತಿಂಡಿ ತೆಗೆದುಕೊಡ್ತಾ ಇದ್ದ. ಅವನು ಅಮ್ಮ ಕೆಲಸಕ್ಕೆ ಹೋದರೆ ನಾನು ಅಕ್ಕಪಕ್ಕದ ಶೆಡ್ಡುಗಳ ಪುಟಾಣಿ ಮಕ್ಕಳ ಜೊತೆ ಆಟ ಆಡ್ತಾ ಬೆಳಿತಾ ಇದ್ದೆ.

ನನಗೆ ಹದಿನಾಲ್ಕು ವರ್ಷವಾದಾಗ ಮೈನೆರೆದೆ. ಅಮ್ಮ ಆ ಶೆಡ್ಡಲ್ಲೇ ಒಂದಷ್ಟು ಶಾಸ್ತ್ರ ಮಾಡಿದಳು. ಇನ್ನು ಮುಂದೆನಾವು ಕೆಲಸಕ್ಕೆ ಹೋದಾಗ ಹೊರಗೆಲ್ಲೂ ಹೋಗದೆ ಶೆಡ್ಡಲ್ಲೇ ಇರಬೇಕು ಅಂತ ಅವರಿಬ್ಬರು ಹೇಳಿ ಬಿಟ್ಟರು. ಅವತ್ತಿಂದ ಶೆಡ್ಡಿನ ಒಳಗೇ ಕೂತು ಹಳೇ ರೇಡಿಯೋದಲ್ಲಿ ಬರುತ್ತಿದ್ದ ತೆಲುಗು ಚಿತ್ರಗೀತೆಗಳನ್ನು ಕೇಳ್ತಾ ಕಾಲ ಕಳೀತಿದ್ದೆ. ಆದರೆ ನನ್ನ ಜೀವನವನ್ನ ನರಕ ಮಾಡೋ ಆ ದಿನ ಬಂದೇ ಬಿಟ್ಟಿತ್ತು. ನಾನು ಮೈನೆರೆದ ಆರು ತಿಂಗಳಿಗೆ ನಾನು ಸರ್ವನಾಶವಾಗಿ ಹೋಗಿಬಿಟ್ಟೆ. ಎಲ್ಲರೂ ಬೆಳಿಗ್ಗೆ ಏಳುಗಂಟೆಗೇ ಕೆಲಸಕ್ಕೆ ಹೋದರೆ ಮದ್ಯಾಹ್ನ ಅಲ್ಲೇ ಕಂಟ್ರಾಕ್ಟರ್ ಕೊಡಿಸೋ ಊಟ ಮಾಡಿ ಸಾಯಂಕಲ ಆರುಗಂಟೆಗೆ ಶೆಡ್ಡಿಗೆ ವಾಪಾಸು ಬರೋರು. ಅವತ್ತೊಂದು ದಿನ ಬೆಳಿಗ್ಗೆ ಹತ್ತುಗಂಟೆಗೆಲ್ಲ ಚಿಕ್ಕಪ್ಪ ವಾಪಾಸು ಬಂದುಬಿಟ್ಟ. ಬರುವಾಗ ತುಂಬಾ ಕುಡಿದಿದ್ದ. ಅವನ್ಯಾವತ್ತು ಹಗಲು ಹೊತ್ತು ಕುಡಿದಿದ್ದನ್ನು ನಾನು ನೋಡಿರಲಿಲ್ಲ. ಶೆಡ್ಡಿನೊಳಗೆ ಬಂದವನು ತಗಡಿನ ಬಾಗಿಲು ಮುಚ್ಚಿ ಚಾಪೆಯ ಮೇಲೆ ಮಲಗಿ, ನನಗೆ ತಲೆ ನೋವಾಗ್ತಾ ಇದೆ ಹಣೆಯನ್ನು ಸ್ವಲ್ಪ ಅಮುಕು ಅಂದ. ನಾನು ಸರಿಯೆಂದು ಪಕ್ಕದಲ್ಲಿ ಕೂತು ಬೆರಳುಗಳಿಂದ ಹಣೆಯನ್ನು ನಿಧಾನವಾಗಿ ಒತ್ತತೊಡಗಿದೆ. ಅಷ್ಟೇ ತಟಕ್ಕನೆ ನನ್ನನ್ನು ಎಳೆದುಕೊಂಡು ಮಲಗಿಸಿಬಿಟ್ಟು ಬಟ್ಟೆಗಳನ್ನೆಲ್ಲ ಕಿತ್ತು ಹಾಕಿ ನನ್ನನ್ನು ಕೆಡಿಸಿಬಿಟ್ಟಿದ್ದ. ಅವನ ಆವೇಶದ ಮುಂದೆ ಕೂಗಲಾಗಲಿ ಎದ್ದು ಓಡಿಹೋಗಲಾಗಲಿ ನನಗಾಗಲಿಲ್ಲ. ಅರ್ದ ಗಂಟೆ ಅವನ ಆಸೆ ಪೂರೈಸಿಕೊಂಡವನು,ಇದನ್ನು ನಿಮ್ಮಮ್ಮನಿಗೆ ಹೇಳಿದರೆ ನಿಮ್ಮಬ್ಬರನ್ನೂ ಕೊಂದು ಹಾಕಿಬಿಡ್ತೀನಿ ಅಂತ ಹೆದರಿಸಿ ಹೊರಗೆ ಹೊರಟುಹೋದ. ನನಗೇನೂ ತೋಚದಂತಾಗಿ ಮಂಕಾಗಿ ಮೂಲೆಯಲ್ಲಿ ಕೂತುಬಿಟ್ಟೆ. ಸಾಯಂಕಾಲ ಅಮ್ಮ ಬಂದಾಗ ಮೈ ಬೆಚ್ಚಗಾಗಿತ್ತು. ಅವಳದನ್ನು ಜ್ವರ ಅಂದುಕೊಂಡು ಅಂಗಡಿಯಿಂದ ಮಾತ್ರೆ ತಂದು ಗಂಜಿ ಕುಡಿಸಿ ಮಲಗಿಸಿದಳು. ಮಾರನೇ ಬೆಳಿಗ್ಗೆ ಎದ್ದಾಗ ಚಿಕ್ಕಪ್ಪ ಅನಿಸಿಕೊಂಡವನು ಏನೂ ಆಗಿಯೇ ಇಲ್ಲವೇನೋ ಅನ್ನುವಂತೆ ನಡೆದುಕೊಂಡಿದ್ದ.

ಆಮೆಲೆ ಸತತವಾಗಿ ಒಂದೂವರೆ ವರ್ಷ ಅವನು ನನ್ನ ಉಪಯೋಗಿಸಿಕೊಂಡ. ಈ ನಡುವೆ ಕಟ್ಟಡದ ಕೆಲಸಕ್ಕೆ ಸಾಮಗ್ರಿಗಳನ್ನು ತರುತ್ತಿದ್ದ ಲಾರಿ ಡ್ರೈವರ್ ಒಬ್ಬ ಪರಿಚಯವಾಗಿದ್ದ. ಒಂದೆರಡು ಬಾರಿ ಕಟ್ಟಡದ ಕೆಲಸ ನಡೆಯೋ ಸ್ಥಳದಲ್ಲಿ ಅವನನ್ನು ನೋಡಿದ್ದೆ. ಆಮೇಲೊಂದು ದಿನ ಮದ್ಯಾಹ್ನ ಯಾರೂ ಇಲ್ಲದಾಗ ನಮ್ಮ ಶೆಡ್ಡಿಗೆ ಬಂದು ನನ್ನನ್ನು ಮದುವೆಯಾಗ್ತೀಯಾ ಅಂತ ಕೇಳಿದ್ದ. ನಾನು ಅವನಿಗೆ ಏನೂ ಹೇಳಿರಲಿಲ್ಲ.

ಅದೊಂದು ರಾತ್ರಿ ಚಿಕ್ಕಪ್ಪ ತುಂಬಕುಡಿದಿದ್ದು ಅಮ್ಮನ ಎದುರಿಗೇ ನನ್ನ ಮೇಲೆ ಕೈಹಾಕಿದ. ಅದುವರೆಗೂ ಏನೂ ಗೊತ್ತಿರದ ಅಮ್ಮ ಅವನನ್ನು ವಿರೋದಿಸಿ ಕೂಗಾಡಿದಾಗ, ಕುಡಿದ ಅಮಲಿನಲ್ಲಿ ಅವನು ಕಳೆದ ಒಂದು ವರ್ಷದಿಂದ ಅವಳ ಜೊತೆ ಮಲಗ್ತಾ ಇದೀನಿ, ಏನೇ ಮಾಡ್ತೀಯಾ ಬೋಸುಡಿ? ಎಂದು ಬಿಟ್ಟ. ರೊಚ್ಚಿಗೆದ್ದ ಅಮ್ಮ ಪಕ್ಕದಲ್ಲಿದ್ದ ಈಳಿಗೆ ಮಣೆಯಿಂದ ಅವನ ಕತ್ತಿಗೆ ಹೊಡೆದು ಬಿಟ್ಟಳು. ಒಂದೇ ಏಟಿಗೆ ಅವನು ಸತ್ತು ಹೋಗಿದ್ದ. ಆಮೆಲೆ ಪೋಲಿಸರು ಅವಳನ್ನು ಅರೆಸ್ಟ್ ಮಾಡಿಕೊಂಡು ಹೋದರು. ಅವಳಿಗಿನ್ನು ಗಲ್ಲು ಶಿಕ್ಷೆಯಾಗುತ್ತೆ ಅಂತ ಅಕ್ಕಪಕ್ಕದವರೆಲ್ಲ ಮಾತಾಡಿಕೊಂಡರು. ಒಂಟಿಯಾಗಿದ್ದ ನಾನು ಅವರಿವರು ಕೊಟ್ಟದ್ದನ್ನು ತಿಂದುಕೊಂಡು ಒಂದು ವಾರ ಕಳೆದೆ. ಮದುವೆಮಾಡಿಕೊಳ್ಳ್ತೀಯಾ ಅಂತ ಕೇಳಿದ್ದ ಡ್ರೈವರ್ ಅಮ್ಮ ಜೈಲಿಗೆ ಹೋದ ಹತ್ತನೆ ದಿನಕ್ಕೆ ಮದ್ಯಾಹ್ನದ ಹೊತ್ತಿಗೆ ಶೆಡ್ಡಿಗೆ ಬಂದ. ಅವನು ಮಾತಾಡುವ ಮುಂಚೇನೇ ನಾನು ನನ್ನ ಕರೆದುಕೊಂಡು ಹೋಗ್ತೀಯಾ ಅಂತ ಕೇಳಿದೆ. ಆಯ್ತು ಅಂದವನು ಸಂಜೆ ಕತ್ತಲಾದ ಮೇಲೆ ಕಟ್ಟಡದ ಪಕ್ಕದ ರಸ್ತೆಗೆ ಬಾ ಎಂದು ಹೇಳಿ ಹೋದ.

ಸಾಯಂಕಾಲ ನನ್ನ ಒಂದೆರಡು ಬಟ್ಟೆಯನ್ನು ಗಂಟುಕಟ್ಟಿಕೊಂಡು ಅವನು ಹೇಳಿದ ಜಾಗಕ್ಕೆ ಹೋಗಿ ಲಾರಿ ಹತ್ತಿದೆ. ಅಲ್ಲಿಂದ ಅವನು ತಮಿಳುನಾಡಿನ ಯಾವುದೋ ಊರಿಗೆ ಅಂತ ಕರೆದುಕೊಂಡು ಹೋದ. ಅಲ್ಲಿಂದ ಮತ್ತೆ ಬೆಂಗಳೂರಿಗೆ ಬಂದೆವು.ಒಂದೆರಡು ತಿಂಗಳು ಬೆಳಗಾಂ,ಚಿತ್ರದುರ್ಗ, ಮೈಸೂರು ಅಂತ ಲಾರಿಯಲ್ಲೇ ಅವನ ಜೊತೆ ಸಂಸಾರ ಮಾಡಿದೆ. ಅವನಿಗೆ ಬೇಕಾದ ಕಡೆಯಲ್ಲೆಲ್ಲ ಲಾರಿ ನಿಲ್ಲಸೋನು,ಆಗೆಲ್ಲ ಅವನ ಜೊತೆ ಮಲಗಬೇಕಾಗಿತ್ತು.

ಆಮೇಲೊಂದು ದಿನ ದಾವಣಗೆರೆ ಚಿತ್ರದುರ್ಗದ ನಡುವೆ ಹೈವೇಯ ಪಕ್ಕದ ಒಂದು ಗುಡಿಸಲು ಹೋಟೆಲಿನಲ್ಲಿ ರಾತ್ರಿ ಊಟಕ್ಕೆ ಅಂತ ನಿಲ್ಲಿಸಿದ್ದ. ಬೇಗಬೇಗ ಊಟ ಮುಗಿಸಿದ ಅವನು ನನ್ನನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿಬಿಟ್ಟ. ಅಲ್ಲಿಗೆ ಮತ್ತೆ ನಾನು ಒಂಟಿಯಾದೆ. ಅವತ್ತು ರಾತ್ರಿ ಆ ಗುಡಿಸಲು ಹೋಟೆಲಿನ ಓನರ್ ಜೊತೆ ಮಲಗಬೇಕಾಗಿಬಂತು. ಮಾರನೇ ದಿನ ಹಗಲು ಪೂರಾ ಅವನ ಹೋಟೆಲ್ಲಿನಲ್ಲೇ ಕೂತಿದ್ದೆ. ಕತ್ತಲಾಗುತ್ತಿದ್ದಂತೆ ಲಾರಿಗಳು ಬಂದು ನಿಲ್ಲಲಾರಂಬಿಸಿದವು.ಬಂದವರಿಗೆ ಓನರ್ ನನ್ನ ತೋರಿಸಿ ಏನೋ ಹೇಳುತ್ತಿದ್ದ. ಅವರು ನನ್ನ ಹತ್ತಿರ ಬಂದು ಲಾರಿ ಹತ್ತು ಬಾ ಅಂತ ಕರೆಯುತ್ತಿದ್ದರು. ಆದರೆ ಅವತ್ತು ರಾತ್ರಿ ಹತ್ತುಗಂಟೆಯತನಕ ನಾನು ಯಾರಿಗೂ ಉತ್ತರ ಕೊಡದೆ ಸುಮ್ಮನೇ ಇದ್ದೆ. ಕೊನೆಗೆ ಹೋಟೆಲಿನವನು ಹತ್ತಿರ ಕರೆದು ನೋಡು ಸುಮ್ಮನೇ ಅವರ ಜೊತೆ ಹೋಗು, ದುಡ್ಡು ಊಟ ಕೊಡ್ತಾರೆ ನಿನ್ನನ್ನಿಲ್ಲಿ ಯಾರೂ ಸಾಕಲ್ಲ. ಅಂದ. ಅವನ ಹೋಟೆಲ್ಲಿನಲ್ಲೇ ಕೂತಿದ್ದರೂ ಅವನು ಕುಡಿಯಲು ನೀರೂ ಕೊಟ್ಟಿರಲಲ್ಲ. ಹೊಟ್ಟೆ ಹಸಿದಿತ್ತು. ಹು ಅಂದು ಬಿಟ್ಟೆ. ಅವಾಗ ಬಂದ ಲಾರಿಯ ಡ್ರೈವರ್ ಒಬ್ಬ ಊಟ ಕೊಡಿಸಿ ಲಾರಿ ಹತ್ತು ಅಂದ. ಮರುಮಾತಾಡದೆ ಹತ್ತಿಬಿಟ್ಟೆ.

ಅಲ್ಲಿಂದ ಶುರುವಾಯಿತು ನೋಡಿ ಅಲೆದಾಟದ ಬದುಕು. ಆ ಲಾರಿಯಿಂದ ಈ ಲಾರಿ. ಈ ಊರಿನಿಂದ ಆ ಊರು. ಹೀಗೆ ಹದಿನೈದು ವರ್ಷಗಳ ಕಾಲ ದೇಶದ ಎಲ್ಲ ಹೈವೇಗಳನ್ನು ಕಂಡುಬಿಟ್ಟೆ. ಸಿಕ್ಕಸಿಕ್ಕವರ ಜೊತೆಮಲಗಿದೆ,ಸಿಕ್ಕಿಸಿಕ್ಕಿದ್ದನ್ನೆಲ್ಲ ತಿಂದು,ಕುಡಿದೆ. ಮೈ ಎಷ್ಟೂ ಅಂತಾ ಕೇಳುತ್ತೇ?ಒಂದು ದಿನ ಅದು ಸುಸ್ತಾಯಿತು. ಪ್ರಯಾಣ ಸಾಕು ಅನಿಸಿ, ಈ ಕೊಳಕು ಬಸ್ಟ್ಯಾಂಡಿಗೆ ಬಂದು ನಿಂತೆ. ಪಕ್ಕದಲ್ಲೇ ಇರೋ ಸ್ಲಮ್ಮಿನ ಗುಡಿಸಲಲ್ಲಿ ಇರುತ್ತೇನೆ. ಕತ್ತಲಾಗೊ ಸಮಯಕ್ಕೆ ಸರಿಯಾಗಿ ಈ ಸ್ಟ್ಯಾಂಡಿಗೆ ಬಂದು ನಿಲ್ಲುತ್ತೇನೆ. ಒಬ್ಬರೋ ಇಬ್ಬರೋ ಗಿರಾಕಿಗಳು ಸಿಗುತ್ತಾರೆ., ಅವರು ಕೊಟ್ಟಷ್ಟು ತಗೊಂಡು ಮಲಗ್ತೀನಿ ಇಲ್ಲೇ ಎಲ್ಲಾದರು. ಮೂಳೇ ಚಕ್ಕಳವಾಗಿರೋ ಈ ಮೈಗಿನ್ಯಾರು ಜಾಸ್ತಿಕೊಡ್ತಾರೆ ಹೇಳಿ? ಎರಡು ಹೊತ್ತು ತಿನ್ನೋಕೆ,ಸಾಯಂಕಾಲ ಬ್ರಾಂಡಿಗೆ ಸಾಕಾಗುತ್ತೆ,ಬಿಡಿ. 

ಈ ಕೆಲಸ ಬಿಡು ಅಂತ ಈಗ ಹೇಳೋದನ್ನ ನೀವು ಅವತ್ತು ಮೈಯಲ್ಲಿ ನೆಣ ಇರೋವಾಗಲೇ ಹೇಳಿದ್ದರೆ ಕೇಳ್ತಾ ಇದ್ದೆನೋ ಏನೋ? ಈಗ ಅದನ್ನ ಬಿಟ್ಟರೆ ಅನ್ನ ಯಾರು ಹಾಕ್ತಾರೆ? 

ಮಾತು ಮುಗಿಸಿ ಎದ್ದವಳ ಕೈಲಿ ನೂರು ರೂಪಾಯಿಗಳ ಐದು ನೋಟು ತುರುಕಿ,ಇವತ್ತು ನಿಮ್ಮ ದುಡಿಮೆ ಹಾಳು ಮಾಡಿದ್ದಕ್ಕೆ ,ಕ್ಷಮಿಸಿ. ಎಂದು ಹೊರಟೆ. ಹೊರಟವನಿಗೆ ಹಿಂದಿರುಗಿ ಅವಳ ಮುಖ ನೋಡುವ ದೈರ್ಯವಾಗಲಿಲ್ಲ. ಒಳಗೆಲ್ಲೋ ಅಪರಾದಿಪ್ರಜ್ಞೆಯ ನೋವು!

Apr 11, 2015

ಬಿ.ಬಿ.ಎಂ.ಪಿ ವಿಭಜನೆಗೆ ಸುಗ್ರೀವಾಜ್ಞೆ ಪ್ರಹಸನ!

bbmp division
ಹೂವಿನಹಿಪ್ಪರಗಿಯ ಕಾಂಗ್ರೆಸ್ ಶಾಸಕ ಎ.ಎಸ್.ನಡಹಳ್ಳಿ ತಮ್ಮದೇ ಕಾಂಗ್ರೆಸ್ ಸರಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಉತ್ತರ ಕರ್ನಾಟಕಕ್ಕೆ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಪದೇ ಪದೇ ಮಾಡುತ್ತಿರುವ ಅನ್ಯಾಯದ ವಿರುದ್ಧ ಮಾತನಾಡಿರುವ ನಡಹಳ್ಳಿಯವರು ಪೂರ್ಣ ಕರ್ನಾಟಕವನ್ನು ಅಭಿವೃದ್ಧಪಡಿಸುವುದು ನಿಮಗೆ ಸಾಧ್ಯವಾಗದೇ ಇದ್ದರೆ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿಯಾದರೂ ಮಾಡಿಬಿಡಿ ಎಂದಿದ್ದಾರೆ. ಅದನ್ನೇನು ಅವರು ಸಿಟ್ಟಿನಿಂದ, ಬೇಸರದಿಂದ ಹೇಳಿದರೋ ಅಥವಾ ಪ್ರತ್ಯೇಕ ರಾಜ್ಯವಾದರೆ ತಪ್ಪೇನು ಎಂಬರ್ಥದಲ್ಲಿ ಹೇಳಿದರೋ ಗೊತ್ತಿಲ್ಲ. ಎಂಟು ವರುಷಗಳ ಹಿಂದೆ ‘ಬೃಹತ್ತಾಗಿಸಿದ್ದ’ ಬೆಂಗಳೂರು ಮಹಾನಗರ ಪಾಲಿಕೆಯನ್ನು ಬಲವಂತದಿಂದ ಮತ್ತೆ ಚಿಕ್ಕದು ಮಾಡಲು ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಹೊರಟಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರ ಪ್ರತ್ಯೇಕ ರಾಜ್ಯ ಬೇಡಿಕೆಯೂ ಸರಿಯೇ ಅಲ್ಲವೇ?!

ಒಂದು ವರದಿಯ ಪ್ರಕಾರ 1949ರಲ್ಲಿ ಬೆಂಗಳೂರು ನಗರ ಪಾಲಿಕೆ ಅರವತ್ತೊಂಭತ್ತು ಚದರ ಕಿ.ಮಿಗಳಷ್ಟು ಮಾತ್ರವಿತ್ತು. ರಾಜಧಾನಿಯೆಂಬ ಕಾರಣ, ಆರ್ಥಿಕತೆ ಇಲ್ಲೇ ಕೇಂದ್ರೀಕೃತವಾದಂತೆ ಉದ್ಯೋಗಗಳನ್ನರಸಿ ವಿವಿಧ ಜಿಲ್ಲೆಗಳಿಂದಷ್ಟೇ ಅಲ್ಲದೆ ದೇಶದ ವಿವಿದೆಡೆಯಿಂದಲೂ ಬೆಂಗಳೂರಿಗೆ ವಲಸೆ ಬರುವವರ ಸಂಖೈ ಹೆಚ್ಚುತ್ತಲೇ ಸಾಗಿತು. 2007ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿದ್ದಿದ್ದು ನೂರು ವಾರ್ಡುಗಳು. ‘ಅಭಿವೃದ್ಧಿ’ಗೆ ಪೂರಕವಾಗಲಿ ಎಂಬ ಕಾರಣದಿಂದ ಈ ನೂರು ವಾರ್ಡುಗಳ ಜೊತೆಗೆ ಬೊಮ್ಮನಹಳ್ಳಿ, ಬ್ಯಾಟರಾಯನಪುರ, ದಾಸರಹಳ್ಳಿ, ಎಲೆಕ್ಟ್ರಾನಿಕ್ಸ್ ಸಿಟಿ, ಕೃಷ್ಣರಾಜಪುರ, ಮಹದೇವಪುರ, ರಾಜರಾಜೇಶ್ವರಿ ನಗರ, ಯಲಹಂಕ ಮತ್ತು ಕೆಂಗೇರಿ ನಗರ/ಪಟ್ಟಣ ಪಂಚಾಯತ್ ಗಳನ್ನು ಬೆಂಗಳೂರು ಪಾಲಿಕೆಯ ವ್ಯಾಪ್ತಿಗೆ ತರಲಾಯಿತು. ಇದರ ಜೊತೆಜೊತೆಗೆ ನಗರಕ್ಕೆ ಹೊಂದಿಕೊಂಡ ನೂರಹನ್ನೊಂದು ಹಳ್ಳಿಗಳನ್ನೂ ಸೇರಿಸಿಕೊಂಡು ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ’ ಅಸ್ತಿತ್ವಕ್ಕೆ ಬಂತು. ಅರವತ್ತೊಂಭತ್ತು ಚದರ ಕಿ.ಮಿ ಇದ್ದ ಬೆಂಗಳೂರು ಈಗ 716 ಚದರ ಕಿ.ಮಿಗಳವರೆಗೆ ಬೆಳೆದು ನಿಂತಿತು! ಮಾಗಡಿ ಕೆಂಪೇಗೌಡರು ಕಟ್ಟಿದ ಬೆಂಗಳೂರು ಮಾಗಡಿಯವರೆಗೂ ಚಾಚಿಕೊಳ್ಳುತ್ತಿದೆ ಎಂದರೆ ತಪ್ಪಲ್ಲ.

ಈಗ ಬೃಹತ್ ಬೆಂಗಳೂರಿಗೆ ಹೊಂದಿಕೊಂಡಂತಿರುವ ಹಳ್ಳಿಗಳು ತಾವ್ಯಾವಾಗ ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುತ್ತೇವೆ ಎಂದು ಕಾಯುತ್ತಿವೆ! ‘ಮಹಾನಗರ ಪಾಲಿಕೆ’ ಎಂಬ ಬೋರ್ಡು ಬಿದ್ದಾಗ ನಡೆಯುವ ರಸ್ತೆ, ಕುಡಿಯುವ ನೀರಿನ ಅಭಿವೃದ್ಧಿ ಕೆಲಸಗಳು ನಗರ/ಪಟ್ಟಣ/ಗ್ರಾಮ ಪಂಚಾಯ್ತಿ ಎಂಬ ಬೋರ್ಡು ಬಿದ್ದಾಗ ನಡೆಯುವುದಿಲ್ಲ ಎಂಬುದು ಇದಕ್ಕೆ ಒಂದು ಕಾರಣವಾದರೆ ‘ಬಿ.ಬಿ.ಎಂ.ಪಿ’ ವ್ಯಾಪ್ತಿಕೆ ಒಳಪಟ್ಟ ಕ್ಷಣದಿಂದಲೇ ಭೂಮಿಯ ಬೆಲೆ ಆಕಾಶಕ್ಕೇರುವುದು ಮತ್ತೊಂದು ಕಾರಣ. ‘ಮಹಾನಗರ ಪಾಲಿಕೆ’ಯ ವ್ಯಾಪ್ತಿಯಲ್ಲಿ ನಡೆಯುವ ‘ಅಭಿವೃದ್ಧಿ’ ಕೆಲಸಗಳನ್ನು ಇತರ ಬೋರ್ಡುಗಳಡಿಯಲ್ಲೂ ಮಾಡಿದ್ದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅವಶ್ಯಕತೆಯೇ ಇರಲಿಲ್ಲವಲ್ಲವೇ? ಇಷ್ಟಗಲವಿದ್ದ ಊರನ್ನು ಊರಗಲ ಮಾಡಿ ಒಂದು ಸರಕಾರ ತಪ್ಪು ಮಾಡಿದರೆ ‘ಇಲ್ಲಾರೀ ಇದ್ಯಾಕೋ ಸರಿ ಕಾಣ್ತಿಲ್ಲ’ ಎಂದು ಬಿ.ಬಿ.ಎಂ.ಪಿಯನ್ನೇ ಮೂರು ಭಾಗ ಮಾಡಲೊರಟು ಈಗಿನ ಸರಕಾರ ಮತ್ತೊಂದು ತಪ್ಪು ಮಾಡುತ್ತಿದೆ. ಆಗಿನ ಮತ್ತು ಈಗಿನ ಸರಕಾರ ಮತ್ತು ಮುಖ್ಯಮಂತ್ರಿಗಳು ಬೇರೆ ಬೇರೆಯಾದರೂ ಒಟ್ಟಿನಲ್ಲಿ ಇವರೆಲ್ಲರ ಆಡಳಿತ ನೀತಿ ತುಘಲಕ್ಕನ ತಿಕ್ಕಲುತನವನ್ನು ತೋರುತ್ತಿದೆಯಲ್ಲವೇ?

ಎಲ್ಲವೂ ಅಂತರ್ಜಾಲಮಯವಾಗಿರುವಾಗ ಬಿ.ಬಿ.ಎಂ.ಪಿಯನ್ನು ಒಂದಾಗಿಯೇ ಇಟ್ಟು ಅಧಿಕಾರವನ್ನು ವಿಕೇಂದ್ರೀಕರಣಗೊಳಿಸುವುದು ಕಷ್ಟದ ಮಾತೇನಲ್ಲ. ವಿಭಜನೆಗೆ ಸರಕಾರ ಅಭಿವೃದ್ಧಿಗೆ ಪೂರಕವಾದ ನಿರ್ಧಾರವಿದು ಎಂಬ ಸಮರ್ಥನೆ ಕೊಟ್ಟುಕೊಳ್ಳಲು ಪ್ರಯತ್ನಿಸುತ್ತಿದೆಯಾದರೂ ಈ ವಿಭಜನೆಯನ್ನು ಜಾರಿಗೆ ತರಲು ಸುಗ್ರೀವಾಜ್ಞೆಯ ಮೊರೆ ಹೊಕ್ಕಿರುವುದು ಇದು ರಾಜಕೀಯ ಕಾರಣದ ವಿಭಜನೆ ಎಂಬ ಅನುಮಾನಕ್ಕೆ ಪುಷ್ಟಿ ನೀಡುತ್ತದೆ. ವಿಭಜನೆಯ ನೆಪದಲ್ಲಿ ಬಿ.ಬಿ.ಎಂ.ಪಿ ಚುನಾವಣೆಯನ್ನು ಮತ್ತಷ್ಟು ಮುಂದೂಡಲು ಸಾಧ್ಯವೇ ಎಂಬ ಯೋಚನೆ ಕೂಡ ಸರಕಾರಕ್ಕಿರುವಂತಿದೆ. ಮೂರು ಭಾಗಗಳನ್ನಾಗಿ ವಿಂಗಡಿಸಿದ ನಂತರ ಮೂವರು ಮೇಯರ್ರುಗಳು, ಮತ್ತಷ್ಟು ಹುದ್ದೆಗಳು, ಮತ್ತಷ್ಟು ಹೊರೆ, ಆ ಮೂರು ಭಾಗಗಳಿಗೆ ಮತ್ತಷ್ಟು ಹಳ್ಳಿಗಳ ಸೇರ್ಪಡೆ, ನಂತರ ಮತ್ತೆ ಆ ಮೂರು ಭಾಗಗಳನ್ನು ಆರು ಭಾಗಗಳನ್ನಾಗಿ………. ಇವೆಲ್ಲ ಕೊನೆಗಾಣುವುದಾದರೂ ಯಾವಾಗ? ಬೆಂಗಳೂರಿನಲ್ಲೇ ಠಿಕಾಣಿ ಹಾಕಬಯಸುವ ಉದ್ದಿಮೆಗಳನ್ನು ಮತ್ತೊಂದು ನಗರದತ್ತ ಹೋಗುವಂತೆ ಮಾಡುವವರೆಗೂ ಈ ಯಾವ ಸಮಸ್ಯೆಗೂ ಪರಿಹಾರ ದೊರಕುವುದಿಲ್ಲ.

ಸತ್ಯಕ್ಕೆ ಹತ್ತಿರವಾದ ಮತ್ತೊಂದು ಭಯವೆಂದರೆ ಈಗಾಗಲೇ ಸೊರಗಿರುವ ಬೆಂಗಳೂರಿನ ಕನ್ನಡ ಮತ್ತಷ್ಟು ನಿಶ್ಯಕ್ತವಾಗಿಬಿಡಬಹುದು. ಪರಭಾಷಿಕರನ್ನು ಬಿಡಿ ಕನ್ನಡಿಗ ಉದ್ಯಮಿಗಳನೇಕರು ಬೆಂಗಳೂರನ್ನು ಕೇಂದ್ರಾಡಳಿತ ಮಾಡಬೇಕೆಂದು ಆಗೀಗ ಮಾತನಾಡಿದ್ದಿದೆ. ಕರ್ನಾಟಕಕ್ಕೇ ಸೇರಿದ ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಅಲ್ಲಿನ ಸ್ಥಳೀಯ ಆಡಳಿತದಲ್ಲಿ ಬಹುಮತ ಸಿಕ್ಕಿದಾಗಲೆಲ್ಲ ಕನ್ನಡ, ಕರ್ನಾಟಕದ ವಿರುದ್ಧ ನಿರ್ಣಯ ಜಾರಿಗೊಳಿಸುತ್ತಾರೆ. ಜನರ ಭಾವನೆಗಳನ್ನು ಕೆರಳಿಸಿ ಮುಂದಿನ ಸಲದ ಮತ ಬ್ಯಾಂಕನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯ ಶಾಸಕರು, ಸಂಸದರು ಪಕ್ಷಾತೀತವಾಗಿ ಸುಮ್ಮಗಿದ್ದುಬಿಡುತ್ತಾರೆ! ಕಾರಣ ಮರಾಠಿ ಭಾಷಿಕರ ಮತಗಳು ತಮ್ಮ ಕೈತಪ್ಪಿ ಹೋದರೆ ಎಂಬ ಭಯ!. ಅನ್ಯಭಾಷಿಕರ ಸಂಖೈ ಹೆಚ್ಚುತ್ತಿರುವ ಬೆಂಗಳೂರನ್ನು ಈಗ ವಿಭಜಿಸಿದರೆ ಬೆಳಗಾವಿಯಲ್ಲಿ ನಡೆದದ್ದು ಬೆಂಗಳೂರಿನಲ್ಲಿ ನಡೆಯದೇ ಇದ್ದೀತೆ? ತಮಿಳು, ತೆಲುಗು, ಹಿಂದಿ ಭಾಷಿಕರ ಮತಗಳನ್ನು ಕಳೆದುಕೊಳ್ಳಲಿಚ್ಛಿಸದ ಬೆಂಗಳೂರಿನ ಶಾಸಕ – ಸಂಸದರು ಮೌನವಾಗಿದ್ದುಬಿಟ್ಟರೆ ಕನ್ನಡದ ಗತಿಯೇನಾಗಬೇಕು? ಇವ್ಯಾವುದನ್ನೂ ಯೋಚಿಸದೆ ತತ್ ಕ್ಷಣದ ರಾಜಕೀಯ ಲಾಭಕ್ಕಾಗಿ ಬೆಂಗಳೂರನ್ನು ವಿಭಜಿಸುವ ನಿರ್ಧಾರವನ್ನು ಅತ್ಯಾತುರದಿಂದ ತೆಗೆದುಕೊಳ್ಳುತ್ತಿರುವ ಸಿದ್ಧರಾಮಯ್ಯ ಬೆಂಗಳೂರಿನ ಭವಿಷ್ಯದ ಭಾಷಾ ಕಲಹಕ್ಕೆ ಮುನ್ನುಡಿ ಬರೆಯುತ್ತಿದ್ದಾರಾ?

Apr 10, 2015

ಯೆಮೆನ್ನಿನ ಆಂತರಿಕ ಯುದ್ಧದಲ್ಲಿ ಪರದೇಶಗಳದ್ದೇ ಕಾರುಬಾರು

indian army in yemen
Dr Ashok K R
ಯೆಮೆನ್ ದೇಶದಲ್ಲಿ ಭಾರತೀಯ ಸೈನಿಕರು ಪರಾಕ್ರಮ ಮೆರೆದಿದ್ದಾರೆ. ಆಂತರಿಕ ಯುದ್ಧ ಮತ್ತು ಬಾಹ್ಯ ಶಕ್ತಿಗಳ ಕೈವಾಡದಿಂದ ಭುಗಿಲೆದ್ದಿರುವ ಹಿಂಸೆಯಲ್ಲಿ ವಿವಿಧ ದೇಶದ ನಾಗರೀಕರು ಸಿಕ್ಕಿಹಾಕಿಕೊಂಡಿದ್ದಾರೆ. ಮೂರು ಸಾವಿರಕ್ಕೂ ಅಧಿಕ ಭಾರತೀಯರನ್ನು ನಮ್ಮ ಸೈನಿಕರು ಸುರಕ್ಷಿತವಾಗಿ ವಾಪಸ್ಸು ತರುವಲ್ಲಿ ಯಶಸ್ಸು ಕಂಡಿದ್ದಾರೆ. ಜೊತೆ ಜೊತೆಗೇ ಅನ್ಯದೇಶದ ಪ್ರಜೆಗಳನ್ನು ಕಾಪಾಡಿದ್ದಾರೆ. ಮಾಜಿ ಜೆನರಲ್ ಆದ ಕೇಂದ್ರ ಸಚಿವ ವಿ.ಕೆ.ಸಿಂಗ್ ಗಲಭೆಗ್ರಸ್ಥ ದೇಶದ ಸಮೀಪದಲ್ಲೇ ಇದ್ದು ಕಾರ್ಯಾಚರಣೆಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಭಾರತೀಯ ಸೈನಿಕರ ಈ ಸಾಹಸದ ಕಾರ್ಯವನ್ನು ಮೆಚ್ಚಿದ ಅನೇಕ ದೇಶಗಳು ಭಾರತದ ವಿದೇಶಾಂಗ ಕಛೇರಿಗೆ ತಮ್ಮ ದೇಶವಾಸಿಗಳನ್ನೂ ಪಾರು ಮಾಡಬೇಕೆಂದು ಕೇಳಿದ್ದಾರೆಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ದೇಶ ನಿವಾಸಿಗಳನ್ನು ಕಾಪಾಡಲು ಯೆಮೆನ್ನಿಗೆ ತೆರಳಿದ್ದ ಪಾಕಿಸ್ತಾನಿ ಸೈನಿಕರು ಭಾರತದ ಕೆಲವು ಪ್ರಜೆಗಳನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹದಗೆಡುತ್ತಲೇ ಸಾಗುತ್ತಿದ್ದ ಪಾಕ್ – ಭಾರತ ನಡುವಿನ ಸಂಬಂಧ ಯೆಮೆನ್ನಿನ ಹಿಂಸೆ ಮತ್ತಾ ಹಿಂಸೆ ಮೂಡಿಸಿದ ಮಾನವೀಯತೆಯ ಅನುಭವದಿಂದ ಒಂದಷ್ಟು ಸುಧಾರಣೆಗೊಳ್ಳಬಹುದೇ?

ಮಧ್ಯ ಪ್ರಾಚ್ಯದಲ್ಲಿ ಒಂದಾದ ನಂತರ ಮತ್ತೊಂದು ದೇಶಕ್ಕೆ ಹಿಂಸೆ ಹರಡುತ್ತಲೇ ಇದೆ. ಬಹುತೇಕ ಕಡೆಗಳಲ್ಲಿ ಹಿಂಸೆಗೆ – ಯುದ್ಧಕ್ಕೆ ಕಾರಣವಾಗುವ ಅನೇಕ ಅಂಶಗಳು ಪುನರಾವರ್ತನೆಯಾಗುತ್ತಿದೆ. ತೈಲಭರಿತ ದೇಶಗಳು, ಸರ್ವಾಧಿಕಾರಿ, ಮುಸ್ಲಿಂ ಮೂಲಭೂತವಾದಿಗಳು, ಸುನ್ನಿ – ಶಿಯಾ ಮುಸ್ಲಿಮರ ನಡುವಿನ ಕಿತ್ತಾಟ, ಪ್ರಭಾವಿ ದೇಶಗಳ ತೈಲ ದಾಹ – ಇವಿಷ್ಟು ಕಾರಣಗಳು ಮಧ್ಯ ಪ್ರಾಚ್ಯದ ಅನೇಕ ದೇಶಗಳಲ್ಲಿ ಆಂತರಿಕ ಹಿಂಸೆಗೆ ಪ್ರೇರಣೆಯಾಗಿವೆ. ದೇಶವೊಂದರ ಆಂತರಿಕ ಹಿಂಸೆಯನ್ನು ಹತ್ತಿಕ್ಕಿ, ಮಾನವ ಹಕ್ಕು ಉಲ್ಲಂಘನೆಯನ್ನು ತಡೆದು, ‘ಪ್ರಜಾಪ್ರಭುತ್ವ’ವನ್ನು ಸ್ಥಾಪಿಸುವ ಸಲುವಾಗಿ ಅನ್ಯ ದೇಶಗಳು ಹಿಂಸೆಯನ್ನು ಪ್ರಿಯವಾಗಿಸಿಕೊಂಡ ಒಂದು ಗುಂಪನ್ನು ಪರೋಕ್ಷವಾಗಿ ಬೆಂಬಲಿಸುವ ಮತ್ತು ಅನೇಕ ಬಾರಿ ಪ್ರತ್ಯಕ್ಷವಾಗಿಯೇ ಯುದ್ಧದಲ್ಲಿ ತೊಡಗಿಕೊಳ್ಳುತ್ತಿವೆ. ಸಾಮಾಜಿಕ ಜಾಲತಾಣಗಳ ನೆರವಿನಿಂದ, ಸ್ಪೂರ್ತಿಯಿಂದ ಶುರುವಾದ ‘ಅರಬ್ ಕ್ರಾಂತಿ’ ಕ್ರಾಂತಿಗಿಂತ ಹೆಚ್ಚಾಗಿ ಹಿಂಸಾವಿನೋದದಲ್ಲೇ ಅಂತ್ಯವಾಗುತ್ತಿರುವುದು ‘ಕ್ರಾಂತಿ’ಯ ಅಪಹಾಸ್ಯವಲ್ಲದೇ ಮತ್ತೇನೂ ಅಲ್ಲ. ಸರ್ವಾಧಿಕಾರಿ ಹೊಸ್ನಿ ಮುಬಾರಕ್ ವಿರುದ್ಧ ನಡೆದ ಇಜಿಪ್ಟ್ ಕ್ರಾಂತಿ ಪ್ರಜಾಪ್ರಭುತ್ವಕ್ಕಾಗಿ ನಡೆದ ಹೋರಾಟವೇ ಆಗಿತ್ತಾದರೂ ಕೊನೆಗದು ಪರ್ಯಾವಸನಗೊಂಡದ್ದು ಮಿಲಿಟರಿ ಮತ್ತು ಮುಸ್ಲಿಂ ಮೂಲಭೂತವಾದಿಗಳ ಅಟ್ಟಹಾಸದಲ್ಲಿ. ಗದಾಫಿಯ ಸರ್ವಾಧಿಕಾರತನವಿದ್ದ ಲಿಬಿಯಾದಲ್ಲಿ ನಡೆದ ಹೋರಾಟ ಮತ್ತು ಅಲ್ಲಿನ ರೆಬೆಲ್ ಗಳಿಗೆ ಅಮೆರಿಕಾ ನೀಡಿದ ಸರಕಾರದಿಂದ ಗದಾಫಿಯ ಆಡಳಿತವೇನೋ ಅಂತ್ಯಗೊಂಡಿತು, ಆದರೆ ಪ್ರಜಾಪ್ರಭುತ್ವ ಸ್ಥಾಪನೆಯಾಯಿತಾ? ಇನ್ನು ಇರಾಕಿನ ವಿಷಯವಂತೂ ಹೇಳುವುದೇ ಬೇಡ. ಭಯಂಕರ ಯುದ್ಧಾಸ್ತ್ರಗಳನ್ನು ಸದ್ದಾಂ ಹುಸೇನ್ ಅಡಗಿಸಿಕೊಂಡಿದ್ದಾನೆ ಎಂದು ನೂರು ಸಲ ಹೇಳಿ ಅದನ್ನೇ ಸತ್ಯವೆಂದು ನಂಬಿಸಿಬಿಟ್ಟಿತು ಅಮೆರಿಕಾ. ಪ್ರಜಾಪ್ರಭುತ್ವದ ಸ್ಥಾಪನೆಯೇ ನಮ್ಮ ಗುರಿ ಎಂದು ಯುದ್ಧ ಪ್ರಾರಂಭಿಸಿಬಿಟ್ಟಿತು. ಸದ್ದಾಂ ಬಂಧಿತನಾಗಿ ನೇಣಿಗೇರಿ ವರುಷಗಳು ಕಳೆದರೂ ಯಾವ ಭಯಂಕರ ಯುದ್ಧಾಸ್ತ್ರವೂ ಯಾರಿಗೂ ಸಿಗಲಿಲ್ಲ! ಬಹುಶಃ ಇರಾಕಿನ ಜನತೆ ಸದ್ದಾಮಿನ ಆಡಳಿತದಲ್ಲೇ ಈಗಿರುವುದಕ್ಕಿಂತ ನೆಮ್ಮದಿಯಾಗಿದ್ದರೇನೋ! ಸುನ್ನಿ ಪಂಗಡಕ್ಕೆ ಸೇರಿದ್ದ ಸದ್ದಾಂ ಹುಸೇನ್ ಶಿಯಾ ಪಂಗಡದವರ ಮೇಲೆ ನಡೆಸಿದ ದೌರ್ಜನ್ಯಗಳಿಗೆ ಲೆಕ್ಕವಿಲ್ಲ. ಕಾಲಚಕ್ರ ತಿರುಗಿದೆ. ಆಡಳಿತದಲ್ಲಿ ಶಿಯಾಗಳಿದ್ದಾರೆ, ಶಿಯಾಗಳ ಪ್ರಾಬಲ್ಯವನ್ನು ಅಂತ್ಯಗೊಳಿಸುವ ಸಲುವಾಗಿ ಸುನ್ನಿ ಮುಸ್ಲಿಮರು ಉಗ್ರರಾಗಿದ್ದಾರೆ. ಇರಾಕ್ ಮತ್ತು ಸಿರಿಯಾದ ಸುನ್ನಿ ಮುಸ್ಲಿಂ ಉಗ್ರರು ‘ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ’ (ISIS) ಕಟ್ಟಿಕೊಂಡು ಅವೆರಡು ದೇಶಗಳಿಗೇ ಅಲ್ಲದೇ ಪ್ರಪಂಚದ ಅನೇಕ ದೇಶಗಳ ನಿದ್ದೆಗೆಡಿಸುತ್ತಿದ್ದಾರೆ. ನಮ್ಮ ಬೆಂಗಳೂರಿನಲ್ಲೇ ಐ. ಎಸ್. ಐ. ಎಸ್ ಸಂಘಟನೆಯನ್ನು ಬೆಂಬಲಿಸಿ ಟ್ವೀಟುಗಳನ್ನು ಮಾಡುತ್ತಿದ್ದ ಮೆಹದಿ ಬಂಧಿತನಾಗಿರುವುದು ಮುಸ್ಲಿಂ ಮೂಲಭೂತವಾದಿಗಳು ನಿಧಾನಕ್ಕೆ ಆಲ್ ಖೈದಾದ ಪ್ರಭಾವದಿಂದ ಐ.ಎಸ್.ಐ.ಎಸ್ ನ ಕಡೆಗೆ ಹೋಗುತ್ತಿರುವುದರ ಸಂಕೇತ. ಈಗ ಯೆಮೆನ್ ದೇಶದ ಸರದಿ. ಆಂತರಿಕ ಹಿಂಸೆಯಿಂದ ಸೊರಗಿ ಹೋಗಿದ್ದ ದೇಶದಲ್ಲೀಗ ಅನ್ಯದೇಶಗಳ ವಿಮಾನ – ಗುಂಡುಗಳು ಸದ್ದು ಮಾಡಲು ಪ್ರಾರಂಭಿಸಿದೆ. 

yemen crisis
ಯೆಮೆನ್ನಿನ ಇತಿಹಾಸವನ್ನು ಗಮನಿಸಿದರೆ ಅನಕ್ಷರತೆ, ಭ್ರಷ್ಟಾಚಾರ, ಬಡತನ, ಅಪೌಷ್ಟಿಕತೆಯ ವಿವರಗಳೇ ಹೆಚ್ಚಾಗಿ ದೊರಕುತ್ತದೆ. ಸಮುದ್ರ ತೀರದ ಯೆಮೆನ್ ದೇಶ ಒಮನ್ ಮತ್ತು ಸೌದಿ ಅರೇಬಿಯಾದೊಡನೆ ಗಡಿಯನ್ನು ಹಂಚಿಕೊಂಡಿದೆ. ಭಾರತಕ್ಕೆ ಬರುವ ಸಮುದ್ರದ ಹಾದಿಯಲ್ಲಿ ಯೆಮೆನ್ ಬರುವುದರಿಂದ ಬ್ರಿಟೀಷರು ಹಡಗುಯಾನಕ್ಕೆ ಬೇಕಾದ ಕಲ್ಲಿದ್ದಲ್ಲನ್ನು ಶೇಖರಿಸಲು ಯೆಮೆನ್ ದೇಶವನ್ನು ಆಯ್ದುಕೊಂಡಿತ್ತಂತೆ. ಬ್ರಿಟೀಷರ ಆಡಳಿತ, ರಷ್ಯಾದ ಆಕ್ರಮಣಕಾರಿ ನೀತಿಗಳನ್ನೆಲ್ಲಾ ಸಹಿಸಿ ಬಿಡುಗಡೆ ಹೊಂದಿ ಸ್ವಾತಂತ್ರ್ಯ ಪಡೆದಿದ್ದ ಯೆಮೆನ್ ದೇಶದ ಆಧುನಿಕ ಇತಿಹಾಸದುದ್ದಕ್ಕೂ ಹಿಂಸಾ ಕ್ರಾಂತಿಗಳೇ ತುಂಬಿಕೊಂಡಿವೆ. ಯಾರ ಪರ ನಿಮ್ಮ ಅಭಿಪ್ರಾಯ ಮೂಡುತ್ತದೆ ಎಂಬುದರ ಆಧಾರದ ಮೇಲೆ ಹಿಂಸೆ ನಡೆಸಿದವರು ಕ್ರಾಂತಿಕಾರಿಗಳೋ ವಿಧ್ವಂಸಕ ಕೃತ್ಯ ಎಸಗುವ ಭಯೋತ್ಪಾದಕರೋ ಎಂಬುದು ನಿರ್ಧರಿತವಾಗುತ್ತದೆ. ಸೈದ್ಧಾಂತಿಕ ಭಿನ್ನತೆಯನ್ನು ತಳೆದ ಕಾರಣ ಯೆಮೆನ್ ದೇಶ ಉತ್ತರ ಮತ್ತು ದಕ್ಷಿಣ ಭಾಗಗಳಾಗಿ ಒಡೆದು ಹೋಗಿದ್ದು 1967ರಲ್ಲಿ. ಅನೇಕ ಆಂತರಿಕ ಕಲಹಗಳು, ಎರಡು ದೇಶಗಳ ನಡುವೆ ನಡೆದ ಅನೇಕ ಯುದ್ಧಗಳ ತರುವಾಯ ಯೆಮೆನ್ ಮತ್ತೆ ಒಂದಾಗಿದ್ದು 1990ರಲ್ಲಿ. 1978ರಿಂದಲೇ ಉತ್ತರ ಯೆಮೆನ್ನಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಅಲಿ ಮೊಹಮದ್ ಸಲ್ಹೇ ಒಂದಾದ ದೇಶದ ಅಧ್ಯಕ್ಷರಾಗಿ ಮುಂದುವರೆದರು. 2011ರ ಟ್ಯುನೀಷಿಯ ಮತ್ತು ಇಜಿಪ್ಟಿನ ಕ್ರಾಂತಿಯ ಸಂದರ್ಭದಲ್ಲಿಯೇ ಯೆಮೆನ್ನಿನಲ್ಲೂ ಕ್ರಾಂತಿಯ ಕಿಡಿಗಳು ಹೊತ್ತಿಕೊಂಡಿತು. ನಿರುದ್ಯೋಗ, ಭ್ರಷ್ಟಾಚಾರ, ಬಡತನ ವಿರುದ್ಧ ನಡೆಯಲಾರಂಭಿಸಿದ ಪ್ರತಿಭಟನೆಗಳು ಭಗ್ಗನೆ ಉರಿಯಲಾರಂಭಿಸಿದ್ದು ಅಲಿ ಮೊಹಮದ್ ಸಲ್ಹೇ ಸಾಯುವವರೆಗೂ ಅಧ್ಯಕ್ಷನಾಗಿ ಮರಣಾನಂತರ ಆ ಅಧ್ಯಕ್ಷ ಪದವಿ ತನ್ನ ಮನೆತನದಲ್ಲೇ ಉಳಿಯುವಂತೆ ಸಂವಿಧಾನಕ್ಕೆ ತಿದ್ದುಪಡಿ ತರಲು ಪ್ರಯತ್ನಿಸಿದಾಗ. ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದು ಸಲ್ಹೇನನ್ನು ವಿರೋಧಿಸಿದವರನ್ನು ಹತ್ಯೆಗೈಯ್ಯಲಾಯಿತು. ಕೊನೆಗೂ ಪ್ರತಿಭಟನೆಗೆ ಮಣಿದ ಅಲಿ ಮೊಹಮದ್ ಸಲ್ಹೇ 2011ರ ನವೆಂಬರಿನಲ್ಲಿ ಉಪಾಧ್ಯಕ್ಷ ಅಬ್ದುಲ್ ರಬ್ಬೋ ಮನ್ಸೂರ್ ಅಲ್ ಹದಿಗೆ ಅಧಿಕಾರವನ್ನು ಹಸ್ತಾಂತರಿಸಿದರು. ಮೂವತ್ತಮೂರು ವರುಷದ ಸಲ್ಹೇ ಆಡಳಿತ ಕೊನೆಗಂಡಿತ್ತು. ಇಷ್ಟರಲ್ಲಾಗಲೇ ಮೊಹಮದ್ ಸಲ್ಹೇ ರಿಯಾದಿಗೆ ಪರಾರಿಯಾಗಿದ್ದರು. ಜನರ ಪ್ರತಿಭಟನೆಗೆ ಒಂದು ಹಂತದ ಗೆಲುವು ಸಿಕ್ಕಿತ್ತು. ಆದರೆ ಆ ಗೆಲುವಿಗೆ ಜನರ ಬದುಕನ್ನು ಬದಲಿಸುವಷ್ಟು ಶಕ್ತಿಯಿರಲಿಲ್ಲ.

ವಿಶ್ವ ಬ್ಯಾಂಕಿನ ಒತ್ತಾಯದ ಮೇರೆಗೆ 2014ರ ಜುಲೈ ತಿಂಗಳಲ್ಲಿ ಹದಿ ನೇತೃತ್ವದ ಯೆಮೆನ್ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸಬ್ಸಿಡಿಯನ್ನು ನಿಲ್ಲಿಸಿದ್ದು ಮತ್ತೊಂದು ಆಂತರಿಕ ಯುದ್ಧಕ್ಕೆ ಮುನ್ನುಡಿ ಬರೆಯತೊಡಗಿತು. ಅಬ್ದುಲ್ ಮಲಿಕ್ ಹಲ್ ಹುತಿ ನೇತೃತದ ತಂಡ ಸೆಪ್ಟೆಂಬರ್ ಕ್ರಾಂತಿಯನ್ನು ಪ್ರಾರಂಭಿಸಿತು. ಶಿಯಾ ಪಂಗಡಕ್ಕೆ ಸೇರಿದ ಈ ಹುತಿ ತಂಡವನ್ನು ಭಯೋತ್ಪಾದಕರು ಅಥವಾ ಕ್ರಾಂತಿಕಾರಿಗಳೆಂದು ಕರೆಯಲು ನೀವು ಯಾರ ಪರ ಎಂಬುದೇ ಮುಖ್ಯವಾಗುತ್ತದೆ! ಪ್ರಧಾನಿ ಮಂತ್ರಿಯ ರಾಜೀನಾಮೆ ಪಡೆದ ಈ ಹುತಿಗಳು ಯೆಮೆನ್ನಿನ ರಾಜಧಾನಿ ‘ಸನಾ’ವನ್ನು ಎರಡೇ ದಿನದೊಳಗೆ ತಮ್ಮ ಕೈವಶ ಮಾಡಿಕೊಂಡುಬಿಡುತ್ತಾರೆ. ಉತ್ತರ ಯೆಮೆನ್ನಿನ ಈ ಹುತಿಗಳ ತಂಡ ಅಲ್ ಖೈದಾ ಪ್ರೇರಿತ ಅನ್ಸಾರ್ ಅಲ್ ಶರಿಯಾ ಗುಂಪಿನ ವಿರುದ್ಧವೂ ಆಂತರಿಕ ಯುದ್ಧದಲ್ಲಿ ತೊಡಗಿದೆ. ಆಲ್ ಖೈದಾದ ವಿರುದ್ಧ ಹೋರಾಡುತ್ತಿದ್ದೇವೆಂದು ಹೇಳುವ ಅಮೆರಿಕಾ ಮತ್ತದಕ್ಕೆ ಬೆಂಬಲ ಸೂಚಿಸುವ ಮಾತನಾಡುವ ಸೌದಿ ಅರೇಬಿಯಾ ದೇಶಗಳು ಈಗ ಅಲ್ ಖೈದಾದ ಅನ್ಸಾರ್ ಅಲ್ ಶರಿಯಾ ಗುಂಪಿನ ವಿರುದ್ಧ ಹೋರಾಡುತ್ತಿರುವ ಹುತಿಯ ಮೇಲೇಕೆ ಯುದ್ಧ ಸಾರಿದೆ?

saudi airstrike in yemen
ಯೆಮೆನ್ನಿನ ಮಾನವ ಹಕ್ಕು ಹೋರಾಟಗಾರ ಬರಾ ಶಿಬಾನ್ ಹೇಳುವ ಪ್ರಕಾರ ‘ಇದು ಇರಾನ್ ಮತ್ತು ಸೌದಿ ಅರೇಬಿಯಾ ನಡುವೆ ನಡೆಯುತ್ತಿರುವ ಪರೋಕ್ಷ ಯುದ್ಧ. ಈ ಯುದ್ಧ ಇರಾನ್ ಅಥವಾ ಸೌದಿ ಅರೇಬಿಯಾದಲ್ಲಿ ನಡೆಯದೆ ಯೆಮೆನ್ನಿನಲ್ಲಿ ನಡೆಯುತ್ತಿದೆ. ಯಾರನ್ನು ಬೆಂಬಲಿಸಿದರೆ ಯೆಮೆನ್ನಿಗೆ ಏನುಪಯೋಗ ಎಂದು ಅನೇಕರು ಕೇಳುತ್ತಿದ್ದಾರೆ. ಯುದ್ಧದ ಪರಿಣಾಮ ಏನೇ ಆದರೂ ಅದರ ಲಾಭ, ನಷ್ಟ ಉಂಟಾಗುವುದು ಇರಾನ್ ಅಥವಾ ಸೌದಿ ಅರೇಬಿಯಾ ದೇಶಗಳಿಗೆ; ಯೆಮೆನ್ ಸೋಲುತ್ತದೆ’. ಅಲ್ ಹುತಿ ಹೋರಾಟಗಾರರಿಗೆ ಬೆಂಬಲ ನೀಡುವವರ ಪಟ್ಟಿಯಲ್ಲಿ ಮೊದಲು ಇರಾನ್ ದೇಶವಿದ್ದರೆ ನಂತರದ ಸ್ಥಾನದಲ್ಲಿ ಯೆಮೆನ್ನಿನ ಪದಚ್ಯುತ ಅಧ್ಯಕ್ಷ ಅಲ್ ಮೊಹಮದ್ ಸಲ್ಹೇ ಇದ್ದಾರೆ. ಜನರ ಬೆಂಬಲ ಗಳಿಸಿಕೊಳ್ಳುವುದಕ್ಕಾಗಿ ಸಲ್ಹೇ ಅಗತ್ಯವಾದರೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒಟ್ಟುಮಾಡಿಕೊಳ್ಳಲು ಅಲ್ ಹುತಿ ಉಗ್ರರಿಗೆ ಇರಾನ್ ಅತ್ಯಗತ್ಯ. ಇನ್ನು ವಿರೋಧಿ ಹೋರಾಟಗಾರರಿಗೆ / ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಲು ಸೌದಿ ಅರೇಬಿಯಾ ಮತ್ತು ಅಮೆರಿಕಾ ಕೈಚಾಚಿದೆ. ಇಷ್ಟಕ್ಕೂ ಯೆಮೆನ್ನಿನಲ್ಲಿ ಪರೋಕ್ಷ ಯುದ್ಧ ಮಾಡಬೇಕಾದ ಅವಶ್ಯಕತೆ ಇರಾನ್ ಮತ್ತು ಸೌದಿ ಅರೇಬಿಯಾಕ್ಕೆ ಏನಿದೆ ಎಂದು ಗಮನಿಸಿದಾಗ ಇಡೀ ಮಧ್ಯ ಪ್ರಾಚ್ಯದಲ್ಲಿ ತಾವು ನಂಬಿದ ‘ನೈಜ’ ಇಸ್ಲಾಮೇ ವಿಜೃಂಬಿಸಬೇಕು ಎಂಬ ಹಪಾಹಪಿ ಕಾಣುತ್ತದೆ. ಶ್ರೇಷ್ಟತೆಯ ವ್ಯಸನ ಲಕ್ಷಾಂತರ ಜನರ ಹತ್ಯೆಯಲ್ಲಿ ಪರ್ಯಾಯವಸನವಾಗುತ್ತಿದೆ. ಸೌದಿ ಅರೇಬಿಯಾ ಯೆಮೆನ್ನಿನ ಮೇಲೆ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸಮರ್ಥಿಸಿಕೊಳ್ಳುತ್ತ ಅಮೆರಿಕಾದ ಸೆನೇಟರ್ ಜಾನ್ ಮೆಕ್ ಕೇನ್ ‘ಇರಾನಿನ ಬೆಂಬಲ ಹೊಂದಿರುವ ಅಲ್ ಹುತಿ ಉಗ್ರರ ಮೇಲೆ ದಾಳಿ ಮಾಡುತ್ತಿರುವ ಸೌದಿ ಅರೇಬಿಯಾದ ನಿರ್ಧಾರ ಸರಿಯಾಗಿದೆ’ ಎಂದು ಹೇಳಿರುವುದು ಅಮೆರಿಕಾಕ್ಕೆ ‘ಪ್ರಜಾಪ್ರಭುತ್ವ’ ಜಾರಿಗೆ ತರಲು ಮತ್ತೊಂದು ತೈಲ ದೇಶ ಸಿಕ್ಕಿರುವ ಖುಷಿ ಎದ್ದು ಕಾಣುತ್ತಿದೆ. 

ಅಲ್ ಹುತಿ ಉಗ್ರರು ಶಿಯಾ ಪಂಗಡಕ್ಕೆ ಸೇರಿದವರು. ಇರಾನ್ ಹೇಳಿಕೇಳಿ ಶಿಯಾ ಪಂಗಡದ ಪ್ರಾಬಲ್ಯದ ದೇಶ. ಮತ್ತೊಂದೆಡೆ ಸೌದಿ ಅರೇಬಿಯಾದಲ್ಲಿರುವುದು ಸುನ್ನಿ ಇಸ್ಲಾಂ. ಸುನ್ನಿ ಇಸ್ಲಾಂ ಅನ್ನು ಮತ್ತಷ್ಟು ಮೂಲಭೂತವಾದವನ್ನಾಗಿ ಪರಿವರ್ತಿಸಿ ವಹಾಬಿಸಂ ಅನ್ನು ಹುಟ್ಟು ಹಾಕಿರುವುದು ಇದೇ ಸೌದಿ ಅರೇಬಿಯಾ ದೇಶ. ತನ್ನ ಗಡಿ ಭಾಗದ ಯೆಮೆನ್ ದೇಶದಲ್ಲಿ ಇರಾನ್ ಪ್ರೇರಿತ ಶಿಯಾ ಉಗ್ರರು ಮೇಲುಗೈ ಸಾಧಿಸುವುದು ಸೌದಿಗೆ ಬೇಕಿಲ್ಲ. ಸೌದಿಯ ವಹಾಬಿ ಪಂಥ ಯೆಮೆನ್ನಿನಲ್ಲಿ ಬೇರೂರುವುದು ಇರಾನಿಗೆ ಬೇಕಿಲ್ಲ. ಯೆಮೆನ್ನಿನ ಜನತೆಯ ಆಯ್ಕೆಯೇನೆಂಬುದು ಬಹುಶಃ ಯಾರಿಗೂ ಬೇಕಾಗಿಲ್ಲ. ಸ್ವತಃ ತಮ್ಮ ದೇಶದಲ್ಲೇ ಪ್ರಜಾಪ್ರಭುತ್ವಕ್ಕೆ ಅವಕಾಶ ಕೊಡದ ದೇಶವೊಂದು ನೆರೆದೇಶದ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತೇನೆ ಎಂದು ಹೇಳುವ ಮಾತುಗಳನ್ನು ನಂಬಲಾದೀತೆ. ಲೆಬನಾನಿನ ಹೆಜ್ಬೊಲ್ಲಾ, ಸಿರಿಯಾದ ಬಶರ್ – ಅಲ್ – ಅಸ್ಸಾದ್, ಐ.ಎಸ್.ಐ.ಎಸ್ ವಿರುದ್ಧದ ಹೋರಾಟಕ್ಕೆ ನೆರವು ನೀಡುತ್ತಿರುವ ಇರಾನ್ ಯೆಮೆನ್ನಿನ ಅಲ್ – ಹುತಿ ಉಗ್ರರನ್ನು ಬೆಂಬಲಿಸುತ್ತಿರುವುದರಲ್ಲಿ ಹೆಚ್ಚಿನ ಅನುಮಾನವಿಲ್ಲ. ಇರಾನ್ ಈ ಎಲ್ಲಾ ತಂಡಗಳಿಗೆ ನೀಡುತ್ತಿರುವ ಬೆಂಬಲ ನ್ಯಾಯದ ಪರವಾಗೂ ಅಲ್ಲ, ಪ್ರಜಾಪ್ರಭುತ್ವದ ಪರವಾಗೂ ಅಲ್ಲ, ಅನ್ಯದೇಶದ ಆಕ್ರಮಣದ ವಿರುದ್ಧದ ಹೋರಾಟಕ್ಕೆ ಕೊಡುತ್ತಿರುವ ನೈತಿಕ ಬೆಂಬಲವೂ ಅಲ್ಲ; ಶಿಯಾ ಮುಸ್ಲಿಮರ ವಿವಿಧ ಸಂಘಟನೆಗಳು ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ಪ್ರಬಲವಾದರೆ ತಾನೂ ಪ್ರಬಲನಾಗುತ್ತೇನೆ ಎಂಬ ದುರಾಸೆ ಮಾತ್ರ ಈ ಬೆಂಬಲಕ್ಕೆ ಕಾರಣ. ಇನ್ನು ಸೌದಿ ಅರೇಬಿಯಾದ ದಾಳಿಯನ್ನು ಬಹ್ರೇನ್, ಕತಾರ್, ಯು.ಎ.ಇ, ಪಾಕಿಸ್ತಾನ, ಟರ್ಕಿ, ಸೂಡಾನ್, ಮೊರಕ್ಕೋ, ಜೋರ್ಡಾನ್, ಇಜಿಪ್ಟ್, ಕುವೈತ್ ದೇಶಗಳು ಬೆಂಬಲಿಸುತ್ತಿರುವುದು ಸುನ್ನಿ ಇಸ್ಲಾಮಿನ ಮೇಲಿನ ಪ್ರೀತಿಯಿಂದ ಮಾತ್ರ. ಸೌದಿ ನೇತೃತ್ವದ ತಂಡವನ್ನು ಅಮೆರಿಕಾ ಬೆಂಬಲಿಸುತ್ತಿರುವುದಕ್ಕೆ ಇರಾನ್ ಮೇಲಿನ ಮುಗಿಯದ ದ್ವೇಷ ಮತ್ತು ಯೆಮೆನ್ ಕೂಡ ಒಂದು ಪ್ರಮುಖ ತೈಲ ಉತ್ಪಾದಕ ರಾಷ್ಟ್ರವಾಗಿರುವುದು ಕಾರಣ. ಸೌದಿ ಅರೇಬಿಯಾ ತನ್ನ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವುದು ಅಮೆರಿಕಾದಿಂದ. ಯುದ್ಧದಂತಹ ಅತ್ಯುತ್ತಮ ವ್ಯಾಪಾರದ ಸ್ಥಳವನ್ನು ಕಳೆದುಕೊಳ್ಳಲು ಅಮೆರಿಕ ಏನು ‘ದಡ್ಡ’ರ ದೇಶವೇ? ಮತ್ತಷ್ಟು ಮಗದಷ್ಟು ಯುದ್ಧ ನಡೆಯುವಂತಾದರೆ ಶಸ್ತ್ರ ವ್ಯಾಪಾರಿಗಳಿಗೆ ಖುಷಿಯೋ ಖುಷಿ. ಸಿರಿಯಾ, ಇರಾಕ್, ಐ.ಎಸ್.ಐ.ಎಸ್, ಲಿಬಿಯಾದ ಬಗ್ಗೆ ಸೊಲ್ಲೆತ್ತದ ಸೌದಿ ಅರೇಬಿಯಾಗೆ ಪಕ್ಕದ ಯೆಮೆನ್ ದೇಶದ ಬಗ್ಗೆ ಅಪರಿಮಿತ ಉತ್ಸಾಹ; ಶಿಯಾ ಹೋರಾಟಗಳನ್ನೇ ಬೆಂಬಲಿಸುವ ಇರಾನಿಗೆ ಅಲ್-ಹುತಿಗಳೆಂದರೆ ತೀರದ ಪ್ರೀತಿ. ಮೊದಲೇ ಬಡತನದ ಕೂಪದಲ್ಲಿ ತೊಳಲಾಡುತ್ತಿದ್ದ ಯೆಮೆನ್ ದೇಶ; ತಿನ್ನುವ ಗೋಧಿ ಮತ್ತು ಅಕ್ಕಿಯಲ್ಲಿ ತೊಂಭತ್ತು ಪ್ರತಿಶತಃದಷ್ಟನ್ನು ಆಮದು ಮಾಡಿಕೊಳ್ಳುವ ಯೆಮೆನ್ ದೇಶದ ಪರಿಸ್ಥಿತಿ ಅನ್ಯದೇಶಗಳ ಆಟದಲ್ಲಿ ಏನಾಗಿ ಹೋಗಬಹುದು? ಯುದ್ಧದಾಚೆಯೇ ಉಳಿದುಹೋದ ಯೆಮೆನ್ ದೇಶದ ಲಕ್ಷಾಂತರ ಜನತೆ ಹಸಿವಿನಿಂದಲೇ ನಿರ್ನಾಮ ಹೋದರೆ ಅದಕ್ಯಾರು ಹೊಣೆ? ಮಾನವೀಯತೆ ಕಳೆದುಕೊಂಡ ಮನುಷ್ಯರಿಂದ, ಮನುಷ್ಯತ್ವ ಕಲಿಸಲು ಮರೆತುಹೋದ ಧರ್ಮಗಳಿಂದಲೇ ಮಾನವ ಸಂತತಿ ಈ ಭೂಮಿಯಿಂದ ನಶಿಸಿಹೋಗಬಹುದೇ?
ಪೂರಕ ಮಾಹಿತಿ: ವಿಕಿಪೀಡಿಯಾ, ಎಫ್.ಎಸ್.ಆರ್.ಎನ್, ಮುಫ್ತಾ, ಟೈಮ್ಸ್ ಆಫ್ ಇಂಡಿಯಾ, ಆರ್.ಟಿ ಮತ್ತಿತರ ಅಂತರ್ಜಾಲ ತಾಣಗಳು

Apr 7, 2015

ಗುಳಕಮಲೆಯ ಗೆಳೆಯರ ಬಳಗ

gulakamale thottikallu falls map
ಗುಳಕಮಲೆ
Dr Ashok K R
ನಗರಗಳು ‘ಅಭಿವೃದ್ಧಿ’ಯಾಗುತ್ತ ಜನವಸತಿ ಹೆಚ್ಚುತ್ತಿದ್ದಂತೆ ಕ್ರಿಮಿ ಕೀಟ ಪ್ರಾಣಿ ಪಕ್ಷಿಗಳೆಲ್ಲವೂ ವಿಧಿಯಿಲ್ಲದೆ ಊರ ಹೊರಗೆ ಸಾಗುತ್ತವೆ. ಊರು ಊರ ಹೊರಗೂ ಹಬ್ಬಲಾರಂಭಿಸಿದಾಗ ನಶಿಸಿಹೋಗಲೇಬೇಕಾದ ಅನಿವಾರ್ಯಕ್ಕೆ ಸಿಲುಕುತ್ತವೆ. ಕೆರೆಗಳ ನಗರಿ ಬೆಂಗಳೂರು ಕೂಡ ಇದಕ್ಕೆ ಹೊರತಲ್ಲ. ಬಹಳಷ್ಟು ಕೆರೆಗಳನ್ನೀಗಾಗಲೇ ಮುಚ್ಚಿ ಹಾಕಲಾಗಿದೆ, ಅಧಿಕೃತವಾಗಿ ಮತ್ತು ಅನಧಿಕೃತವಾಗಿ! ಇರುವ ಕೆಲವು ಕೆರೆಗಳನ್ನು ಸಂರಕ್ಷಿಸುವುದಕ್ಕೆ ಈಗೀಗ ಪ್ರಾಮುಖ್ಯತೆ ಸಿಗುತ್ತಿದೆಯಾದರೂ ಆ ಸಂರಕ್ಷಣೆ ಕೆರೆಯ ಮೂಲ ಉದ್ದೇಶಕ್ಕೆ ಧಕ್ಕೆ ಕೊಡುವ ರೀತಿಯಲ್ಲಿ ಸಾಗುತ್ತಿದೆ. ಕೆರೆಗಳೆಂದರೆ ನಗರವಾಸಿಗಳು ವಾಕಿಂಗ್ ಮಾಡಲಿರುವ ಜಾಗವೆಂಬಂತೆ ಕೆರೆಯಂಚಿನಲ್ಲಿ ಬೇಲಿ ಸುತ್ತಿ ಪ್ರಾಣಿ ಪಕ್ಷಿಗಳ ಓಡಾಟಕ್ಕೆ ಅಡ್ಡಿಯುಂಟು ಮಾಡಿದ್ದೇವೆ. ಜನರ ನಿರಂತರ ಓಡಾಟ ಮತ್ತು ಸುತ್ತಲಿನ ರಸ್ತೆಯ ಗೌಜು ಗದ್ದಲಗಳ ನಡುವೆ ಊರೊಳಗಿನ ಬಹುತೇಕ ಕೆರೆಗಳಲ್ಲೀಗ ಒಂದಿಷ್ಟು ಗಲೀಜು ನೀರು, ಅಲ್ಲೊಂದಿಲ್ಲೊಂದು ಪಕ್ಷಿಗಳಿವೆ ಅಷ್ಟೇ. ಕಮರ್ಷಿಯಲ್ ಅಲ್ಲದ, ಬೇಲಿಗಳಿಲ್ಲದ ಕೆರೆಯನ್ನು ನೋಡಲು ನಗರದಿಂದಾಚೆಗೇ ಹೋಗಬೇಕು. ಅಂತಹುದೊಂದು ಕೆರೆ ಬೆಂಗಳೂರು ಹೊರವಲಯದಿಂದ ಅರ್ಧ ಘಂಟೆ ಹಾದಿಯ ಗುಳಕಮಲೆ ಕೆರೆ.

ಬೆಂಗಳೂರಿನಿಂದ ಕನಕಪುರ ರಸ್ತೆಯಲ್ಲಿ ಸಾಗಿದರೆ ಕಗ್ಗಲಿಪುರ ಸಿಗುತ್ತದೆ. ಕಗ್ಗಲಿಪುರದೊಳಗೆ ಎಡಗಡೆಗೆ ಬನ್ನೇರುಘಟ್ಟಕ್ಕೆ ಸಾಗುವ ರಸ್ತೆ ಹಿಡಿದು ಎರಡು ಮೂರು ಕಿಮಿ ಕ್ರಮಿಸಿದರೆ ಗುಳಕಮಲೆ ಊರು ಸಿಗುತ್ತದೆ. ಊರು ದಾಟಿದ ನಂತರ ರಸ್ತೆ ಕವಲಾಗಿ ಒಡೆದು ಬಲಗಡೆಯದು ಬನ್ನೇರುಘಟ್ಟಕ್ಕೆ ಹೋಗುತ್ತದೆ. ಎಡಗಡೆಯ ತೊಟ್ಟಿಕಲ್ಲಿಗೆ ಸಾಗುವ ರಸ್ತೆಯಲ್ಲಿ ಒಂದು ಕಿಮಿ ಸವೆಸಿದರೆ ಗುಳಕಮಲೆ ಕೆರೆಯ ಏರಿಯ ದರ್ಶನವಾಗುತ್ತದೆ. ಬೇಸಿಗೆಯಲ್ಲಿ ಕೆರೆಯಲ್ಲಿ ಹೆಚ್ಚು ನೀರಿರುವುದಿಲ್ಲವಾದರೂ ಇರುವ ಸ್ವಲ್ಪ ನೀರಿನಲ್ಲಿ ತರತರದ ಪಕ್ಷಿಸಂಕುಲಗಳನ್ನು ವೀಕ್ಷಿಸಬಹುದು. ಸೂರ್ಯೋದಯವನ್ನು ವೀಕ್ಷಿಸಲೂ ತಕ್ಕ ಸ್ಥಳ ಈ ಗುಳಕಮಲೆ. ನಾನು ಹೋದ ದಿವಸ ಮೋಡವಿದ್ದ ಕಾರಣ ಸೂರ್ಯೋದಯ ಕಾಣಿಸಲಿಲ್ಲ.

Pied Kingfisher
ಬಿಳಿ ಮಿಂಚುಳ್ಳಿ
ಕೆರೆಗಳಲ್ಲಿ ಸಾಧಾರಣವಾಗಿ ಕಾಣಸಿಗುವ ಬೆಳ್ಳಕ್ಕಿ(ಎಗ್ರೆಟ್), ಬಿಳಿ ಮತ್ತು ಹಳದಿ ಕುಂಡೆಕುಸ್ಕ (ವ್ಯಾಗ್ ಟೈಲ್), ತೇನೆ ಹಕ್ಕಿ (ರೆಡ್ ವ್ಯಾಟಲ್ಟ್ ಲ್ಯಾಪ್ ವಿಂಗ್), ನೆಲಗುಬ್ಬಿ (ಕ್ರೆಸ್ಟೆಡ್ ಲಾರ್ಕ್) , ಇಂಡಿಯನ್ ಪಾಂಡ್ ಹೆರಾನ್, ಪಿಕಳಾರ (ಬುಲ್ ಬುಲ್), ಕರಿ ಹೂಗುಬ್ಬಿ (ಪರ್ಪಲ್ ಸನ್ ಬರ್ಡ್), ಕೆಮ್ಮಂಡೆ ಗಣಿಗಾರ್ಲ ಹಕ್ಕಿ (ಗ್ರೀನ್ ಬೀ ಈಟರ್) ಪಕ್ಷಿಗಳನ್ನು ಇಲ್ಲೂ ಕಾಣಬಹುದು. ನಗರದ ಸುತ್ತಮುತ್ತ ಒಂದಷ್ಟು ಅಪರೂಪವಾಗಿರುವ ಬಿಳಿ ಮಿಂಚುಳ್ಳಿ (ಪೈಡ್ ಕಿಂಗ್ ಫಿಷರ್) ಪಕ್ಷಿಗಳಿಲ್ಲಿ ಯಥೇಚ್ಛವಾಗಿವೆ. ಬಣ್ಣಬಣ್ಣದ ರೆಕ್ಕೆಯ ಕಾಮನ್ ಕಿಂಗ್ ಫಿಷರ್ ವಿದ್ಯುತ್ ತಂತಿಯ ಮೇಲೆ ಎತ್ತರದ ಮರದ ಮೇಲೆ ಕುಳಿತು ಬೇಟೆಗೆ ಹೊಂಚುಹಾಕಿದರೆ ಕಪ್ಪು ಬಿಳುಪು ಬಣ್ಣದ ಬಿಳಿ ಮಿಂಚುಳ್ಳಿ ಕೆರೆಯ ಮೇಲೆ ಒಂದೇ ಜಾಗದಲ್ಲಿ ಪಟ ಪಟ ರೆಕ್ಕೆ ಬಡಿಯುತ್ತ ಕೆಳಗಿನ ನೀರಿನಲ್ಲಿ ಈಜಾಡುವ ಪುಟ್ಟ ಪುಟ್ಟ ಮೀನುಗಳನ್ನು ಗಮನಿಸುತ್ತ, ಒಂದ್ಯಾವುದೋ ಮೀನನ್ನು ಗುರಿಯಾಗಿಸಿಕೊಂಡು ಬಾಣದಂತೆ ನೀರಿನೊಳಗೆ ಮುಳುಗಿ ಮೀನಿನೊಡನೆ ಮೇಲೇಳುವ, ಕೆಲವೊಮ್ಮೆ ಬರಿ ಬಾಯಿಯಲ್ಲಿ ಹೊರಬರುತ್ತದೆ. ಬಿಳಿ ಮಿಂಚುಳ್ಳಿಯ ಬೇಟೆಯ ಚಾತುರ್ಯವನ್ನು ಕಂಡೇ ಅನುಭವಿಸಬೇಕು.

River Tern
ಮೀನು ಗುಟುರ
ಕಾವೇರಿ ನದಿ ತೀರದ ರಂಗನತಿಟ್ಟಿನಲ್ಲಿ ಯಥೇಚ್ಛವಾಗಿ ಕಂಡು ಬರುವ ವಲಸೆ ಹಕ್ಕಿ ಮೀನುಗುಟುರ (ರಿವರ್ ಟರ್ನ್). ರಿವರ್ ಟರ್ನ್ ಪಕ್ಷಿಯನ್ನು ಎರಡು ವರುಷದ ಫೋಟೋಗ್ರಫಿ ಅಭ್ಯಾಸದಲ್ಲಿ ಕಂಡಿರಲಿಲ್ಲ. ಗುಬ್ಬಿ ತಾಲ್ಲೂಕಿನ ಕೆರೆಯೊಂದರ ಬಳಿ ಓರಿಯೆಂಟಲ್ ಟರ್ನ್ ನೋಡಿದ್ದೆ. ಈ ಬಾರಿ ರಿವರ್ ಟರ್ನ್ ವೀಕ್ಷಿಸಲು ರಂಗನತಿಟ್ಟಿಗೆ ಹೋಗಬೇಕೆಂದುಕೊಂಡಿದ್ದೆ. ಗುಳಕಮಲೆಯಲ್ಲಿಯೇ ರಿವರ್ ಟರ್ನಿನ ದರುಶನವಾಯಿತು! ಎರಡೇ ಎರಡು ರಿವರ್ ಟರ್ನುಗಳಿದ್ದವು. ಇಡೀ ಕೆರೆಯನ್ನು ಸತತವಾಗಿ ಸುತ್ತುತ್ತ ಸರ್ವೆ ಮಾಡುತ್ತಲೇ ಇರುತ್ತವೆ ಈ ಪಕ್ಷಿಗಳು. ಕೊನೆಗೊಂದೆಡೆ ಸ್ಥಗಿತವಾಗಿ ಸುಯ್ಯನೆ ನೀರಿಗೆ ಬಿದ್ದು ಬೇಟೆಯೊಡನೆ ಹೊರಬರುತ್ತವೆ. 

Asian Open Billed Stork
ಬಾಯ್ಕಳಕ
ಗುಳಕಮಲೆ ಕೆರೆಗೆ ಈ ಬಾರಿ ದೊಡ್ಡ ಗುಂಪಿನಲ್ಲಿ ಬಂದಿದ್ದ ಗೆಳೆಯರು ಬಾಯ್ಕಳಕ (ಏಷಿಯನ್ ಓಪನ್ ಬಿಲ್ ಸ್ಟಾರ್ಕ್). ಬೂದು ಬಣ್ಣದ, ತೆರೆದ ಕೊಕ್ಕಿನ ಈ ಪಕ್ಷಿಗಳು ದಾಸ ಕೊಕ್ಕರೆ (ಪೈಯಿಂಟೆಡ್ ಸ್ಟಾರ್ಕ್)ಯಷ್ಟು ಆಕರ್ಷಕವಲ್ಲ. ಕ್ಯಾಮೆರಾ ಭಾಷೆಯಲ್ಲಿ ಹೇಳಬೇಕೆಂದರೆ ಫೋಟೋಜೆನಿಕ್ ಅಲ್ಲ! ಮೇಲಾಗಿ ಮನುಷ್ಯರ ಇರುವನ್ನು ಅಷ್ಟಾಗಿ ಸಹಿಸುವುದಿಲ್ಲವೆನ್ನಿಸುತ್ತೆ. ದೂರದಿಂದ ಬರುತ್ತಿರುವ ಮನುಷ್ಯನ ಹೆಜ್ಜೆ ಸದ್ದನ್ನು ಗುರುತಿಸಿ ಜಾಗ ಬದಲಿಸಿಬಿಡುತ್ತವೆ. ಒಂದೈದು ದಾಸ ಕೊಕ್ಕರೆಗಳು ಕೆರೆಯಂಚಿನ ಮರದ ಮೇಲೆ ಕುಳಿತಿದ್ದವು. ಗೂಡು ಕಟ್ಟಲು, ಆಹಾರ ಹುಡುಕಲು ಈ ಜಾಗ ಸೂಕ್ತವಾ ಎಂದು ಸರ್ವೆ ಮಾಡುತ್ತಿದ್ದವು. ಬಾಯ್ಕಳಕಕ್ಕೆ ಹೋಲಿಸಿದರೆ ಈ ಕೊಕ್ಕರೆ ಮನುಷ್ಯನ ಇರುವಿಕೆಗೆ ಭಯ ಬೀಳುವುದಿಲ್ಲ. 

tottikallu falls
ತೊಟ್ಟಿಕಲ್ಲು
ಸೂರ್ಯ ತೀಕ್ಷ್ಣವಾಗುವವರೆಗೆ ಪಕ್ಷಿಗಳನ್ನು ವೀಕ್ಷಿಸಿ ನಂತರ ಹತ್ತಿರದಲ್ಲೇ, ಹತ್ತು ನಿಮಿಷದ ಹಾದಿಯಲ್ಲಿ ಇರುವ ತೊಟ್ಟಿಕಲ್ಲಿಗೆ ಹೋಗಬಹುದು. ಸಾಗುವ ದಾರಿ ಚಿಕ್ಕಪುಟ್ಟ ಹಳ್ಳಿಗಳೊಳಗೆ ಮತ್ತು ಒಂದಷ್ಟು ಕಗ್ಗಲಿಪುರ ಕಾಡಿನೊಳಗೆ ಸಾಗುತ್ತದೆ. ತೊಟ್ಟಿಕಲ್ಲಿನಲ್ಲೊಂದು ಮುನೇಶ್ವರ ದೇವಸ್ಥಾನವಿದೆ. ದೇವಸ್ಥಾನ ದಾಟಿ ನಡೆದರೆ ಮಳೆಗಾಲದಲ್ಲಿ ಜಲಪಾತ ಮೂಡಬಹುದಾದ ಜಾಗ ಸಿಗುತ್ತದೆ. ಮಳೆಗಾಲದಲ್ಲೂ ಜಲಪಾತದ ದರ್ಶನ ಸಿಗದಷ್ಟು ಮಳೆಯಾಗುತ್ತಿದೆಂತೆ ಆ ಪ್ರದೇಶದಲ್ಲಿ. ಎಂದಿನಂತೆ ಮನುಷ್ಯರ ಪ್ಲಾಸ್ಟಿಕ್ ಪ್ರೇಮಕ್ಕೆ ಎರಡೂ ಜಾಗಗಳು ಬಲಿಯಾಗಿವೆ.
Muneshwara Temple, tottikallu
ಮುನೇಶ್ವರ ದೇವಸ್ಥಾನ
ಬೆಳಿಗ್ಗೆ ಹೊರಟರೆ ಮಧ್ಯಾಹ್ನದೊಳಗೆ ಎರಡೂ ಸ್ಥಳಗಳನ್ನು ನೋಡಿ ಬರಬಹುದು. ಪಕ್ಷಿ ಪ್ರೇಮಿಗಳು ಗುಳಕಮಲೆಯಲ್ಲಿ ಹೆಚ್ಚು ಸಮಯ ಕಳೆಯಬಹುದು, ಇಲ್ಲವಾದರೆ ತೊಟ್ಟಿಕಲ್ಲಿನ ಸುತ್ತಲಿನ ಕಾಡಿನಲ್ಲಿ ವಿಶ್ರಾಂತಿ ಪಡೆದು ವಾಪಸ್ಸಾಗಬಹುದು. ಗುಳಕಮಲೆ ಊರಿನಲ್ಲಿ ಮತ್ತು ಊರ ಹೊರವಲಯದಲ್ಲಿರುವ ಆಸ್ಪತ್ರೆಗಳ ಬಳಿ ತಿನ್ನಲು ಕುಡಿಯಲು ಅಂಗಡಿಗಳಿವೆ. ಕೆರೆ ಮತ್ತು ತೊಟ್ಟಿಕಲ್ಲಿನ ಬಳಿ ಅಂಗಡಿಗಳಿಲ್ಲ. ತಿನ್ನಲೊಂದಷ್ಟನ್ನು ಮನೆಯಿಂದಲೇ ಕೊಂಡೊಯ್ಯುವುದು ಒಳಿತು.
yellow bulbul
ಪಿಕಳಾರ
Egret
ಬೆಳ್ಳಕ್ಕಿ
green bee eater
ಗಣಿಗಾರ್ಲ
red wattled lapwing
ತೇನೆ ಹಕ್ಕಿ
painted stork
ದಾಸ ಕೊಕ್ಕರೆ
purple sunbird
ಹೂಗುಬ್ಬಿ
white browed wagtail
ಬಿಳಿ ಕುಂಡೆಕುಸ್ಕ
yellow wagtail
ಹಳದಿ ಕುಂಡೆಕುಸ್ಕ
ಪೂರಕ ಮಾಹಿತಿ: ಹಕ್ಕಿಪುಕ್ಕ, ಪೂರ್ಣಚಂದ್ರ ತೇಜಸ್ವಿ