Nov 30, 2015

ಜನತಾದಳವೆಂಬ ದಿಕ್ಕೆಟ್ಟ ಪಕ್ಷ

JDS Logo
ಕು.ಸ.ಮಧುಸೂದನ್‍ ರಂಗೇನಹಳ್ಳಿ 
ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಬಹುಶ: ಜನತಾದಳ(ಜಾತ್ಯಾತೀತ)ದಷ್ಟು ಗೊಂದಲದಲ್ಲಿರುವ ಪಕ್ಷ ಇನ್ನೊಂದಿರಲಾರದು. ರಾಷ್ಟ್ರ ರಾಜಕಾರಣದಲ್ಲಾಗಲಿ ಇಲ್ಲ ರಾಜ್ಯ ರಾಜಕಾರಣದಲ್ಲಾಗಲಿ ಅದಕ್ಕೊಂದು ನಿಶ್ಚಿತವಾದ ಗುರಿಯೆಂಬುದಿಲ್ಲದೆ ಅವಕಾಶವಾದಿ ರಾಜಕಾರಣದ ಅತ್ಯುತ್ತಮ ಉದಾಹರಣೆಯಾಗಿ ಪರಿಣಮಿಸಿದೆ. ಹಾಗೆ ನೋಡಿದರೆ ಕಾಂಗ್ರೆಸ್ಸಿನ ವಂಶಪಾರಂಪರ್ಯ ರಾಜಕಾರಣವನ್ನು ವಿರೋಧಿಸುತ್ತಲೇ ಹುಟ್ಟಿದ ಎಪ್ಪತ್ತರ ದಶಕದ ಜನತಾಪಕ್ಷದ ಪಳೆಯುಳಿಕೆಯಾಗಿರುವ ಜನತಾದಳವಿಂದು ಕುಟುಂಬ ರಾಜಕಾರಣದ ಬಗ್ಗೆ ಮಾತಾಡುವ ತನ್ನ ನೈತಿಕ ಶಕ್ತಿಯನ್ನು ಕಳೆದುಕೊಂಡು ಬಹಳ ವರ್ಷಗಳೇ ಆದವು. ತೊಂಭತ್ತರ ದಶಕದ ನಂತರ ಬಾಜಪದ ಕೋಮುವಾದವನ್ನು ವಿರೋಧಿಸುತ್ತ ಜಾತ್ಯಾತೀತ ತತ್ವದಡಿ ರಾಜಕೀಯ ಮಾಡುವ ಭರವಸೆಯನ್ನು ನೀಡಿದ್ದು ಸಹ ದೊಡ್ಡ ಸುಳ್ಳೆಂದು ಇವತ್ತು ಸಾಬೀತಾಗಿದೆ. ಹೀಗೆ ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮತ್ತು ಕೋಮುವಾದದ ವಿರುದ್ದ ಮಾತಾಡುತ್ತಲೇ ತಾನೂ ಅದರ ಒಂದು ಭಾಗವಾಗಿ ತನ್ನೆಲ್ಲ ಮೌಲ್ಯಗಳನ್ನು ಗಾಳಿಗೆ ತೂರಿ ದಿಕ್ಕೆಟ್ಟು ನಿಂತಿರುವಂತೆ ಕಾಣುತ್ತಿರುವ ಜನತಾದಳದ ಮುಂದಿನ ನಡೆಗಳ ಬಗೆ ಜನತೆಗೆ ಮುಖ್ಯವಾಗಿ ಕರ್ನಾಟಕದ ಜನರಿಗೆ ಕುತೂಹಲವಿರುವುದು ಸಹಜವಾದರೂ ಇದೀಗ ಅದರ ಪಾಳಯದಲ್ಲಿ ನಡೆಯುತ್ತಿರುವ ಆಂತರೀಕ ವಿದ್ಯಾಮಾನಗಳನ್ನು ಮತ್ತು ಅದರ ರಾಜ್ಯಾದ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿಯವರ ಮತ್ತು ಮಾಜ ಪ್ರಧಾನಿಗಳು ಮತ್ತು ರಾಷ್ಟ್ರಾದ್ಯಕ್ಷರೂ ಆದ ಶ್ರೀ ದೇವೇಗೌಡರ ಒಗಟಿನಂತ ಮಾತುಗಳನ್ನು ಕೇಳುತ್ತಿದ್ದರೆ ಜನತಾದಳ ತನ್ನ ಹಿಂದಿನ ಎಲ್ಲ ಸಿದ್ದಾಂತಗಳನ್ನೂ ಗಾಳಿಗೆ ತೂರಿ ಅಧಿಕಾರದ ಹಪಾಹಪಿಗೆ ಬಿದ್ದಿರುವುದು ಸ್ಪಷ್ಟವಾಗುತ್ತದೆ. 

ಈ ಹಿನ್ನೆಲೆಯಲ್ಲಿ ಜನತಾದಳದ ಹುಟ್ಟಿನ ಮೂಲದ ಬಗ್ಗೆ ಒಂದಿಷ್ಟು ನೋಡಬೇಕಾಗುತ್ತದೆ. ಎಪ್ಪತ್ತರ ದಶಕದಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂದಿಯವರು ದೇಶದ ಮೇಲೆ ಹೇರಿದ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಹುಟ್ಟಿದ್ದೇ ಅವತ್ತಿನ ಜನತಾ ಪಕ್ಷ. ಅದರ ಜನ್ಮದಲ್ಲಿಯೇ ವಿಪರ್ಯಾಸಗಳಿದ್ದವು. ಯಾಕೆಂದರೆ ಅಂದಿನ ದಿನಮಾನದ ಸಮಾಜವಾದಿಗಳು, ಜನಸಂಘದ ಬಲಪಂಥೀಯರು ಮತ್ತು ಕಾಂಗ್ರೆಸ್ಸನ್ನು ವಿರೋಧಿಸುತ್ತಿದ್ದ ಉದಾರವಾದಿಗಳೆಲ್ಲ ಸೇರಿ ಸೃಷ್ಠಿಯಾಗಿದ್ದೇ ಈ ಜನತಾ ಪಕ್ಷ! ಇಂದಿರಾರವರ ಕುಟುಂಬ ರಾಜಕಾರಣವನ್ನು ಶತಾಯಗತಾಯ ವಿರೋಧಿಸುತ್ತ ಚುನಾವಣೆಯಲ್ಲಿ ಅಧಿಕಾರಕ್ಕೇರಿದ ಪಕ್ಷ ಬಹಳ ಕಾಲ ಉಳಿಯಲಿಲ್ಲ. ತನ್ನ ಆಂತರಿಕ ವೈರುದ್ಯಗಳ ಸುಳಿಗೆ ಸಿಲುಕಿದ ಪಕ್ಷ ಹೋಳಾಯಿತು. ಮೊದಲಿಗೆ ಜನತಾಪಕ್ಷದೊಳಗೆ ಸೇರಿ ಹೋಗಿದ್ದ ಜನಸಂಘ ತನ್ನ ಸಂಘಪರಿವಾರದ ಸೆಳೆತವನ್ನು ಬಿಡಲಾರದೆ ಅದರಿಂದ ಹೊರಬಂದು ಇವತ್ತಿನ ಭಾರತೀಯ ಜನತಾಪಕ್ಷವಾಗಿ ರೂಪುಗೊಂಡಿತು. ತರುವಾಯ 1980ರ ಚುನಾವಣೆಯಲ್ಲಿ ಇಂದಿರಾಗಾಂದಿಯವರು ಮರಳಿ ಅಧಿಕಾರ ಪಡೆಯುವುದರೊಂದಗೆ ಜನತಾ ಪಕ್ಷ ಅನೇಕ ಹೋಳುಗಳಾಗಿ ಒಡೆದು ಹೋಯತು. ಸಮಾಜವಾದಿ ಹಿನ್ನೆಲೆಯಿಂದ ಬಂದವರೆಂದು ಹೇಳಿಕೊಳ್ಳುತ್ತಾ ಬಂದ ಪ್ರಾದೇಶಿಕ ನಾಯಕರುಗಳ ಅಹಂಕಾರ ಮತ್ತು ಅಧಿಕಾರದ ಆಸೆ ಹೆಚ್ಚಾಗುತ್ತ, ವಿ.ಪಿ.ಸಿಂಗ್ ನೇತೃತ್ವದಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದರೂ ಅದಕ್ಕಾಗಿ ಅದು ಮತ್ತೆ ಮತೀಯವಾದಿ ಬಾಜಪದ ಬೆಂಬಲ ಪಡೆಯಬೇಕಾಯಿತು. ನಂತರ ನಡೆದದ್ದು ಇತಿಹಾಸ. ಕಾಂಗ್ರೆಸ್ಸಿನ ವಂಶಪಾರಂಪರ್ಯ ರಾಜಕೀಯದ ಬಗ್ಗೆ ಅಪಹಾಸ್ಯ ಮಾಡುತ್ತಲೇ ರಾಜಕಾರಣ ಮಾಡುತ್ತ ಬಂದ ಜನತಾಪಕ್ಷದ ನಾಯಕರುಗಳಿಗೆ ಹೊಸದೊಂದು ಶತ್ರು ಹುಟ್ಟಿಕೊಂಡಿದ್ದು ಬಾಜಪದ ರೂಪದಲ್ಲಿ. ಹಿಂದೂ ಮತಗಳ ದೃವೀಕರಣಕ್ಕಾಗಿ ಅದು ಎಲ್.ಕೆ.ಅದ್ವಾನಿಯವರ ನೇತೃತ್ವದಲ್ಲಿ ಬಾಬರಿ ಮಸೀದಿಯ ವಿವಾದವನ್ನು ಕೈಗೆತ್ತಿಕೊಂಡು ದೇಶದಾದ್ಯಂತ ರಥಯಾತ್ರೆ ನಡೆಸಿತು. ತದನಂತರ ಅದರ ಕರಸೇವಕರು ಬಾಬರಿ ಮಸೀದಿಯನ್ನು ದ್ವಂಸ ಮಾಡುವುದರ ಮೂಲಕ ತಾನೂ ಒಂದು ಬಲಾಢ್ಯ ರಾಷ್ಟ್ರೀಯ ಪಕ್ಷವಾಗುವತ್ತ ಹೆಜ್ಜೆ ಹಾಕತೊಡಗಿತು. ಆಗ ಕಾಂಗ್ರೆಸ್ ಮತ್ತು ಬಾಜಪವನ್ನು ಸಮಾನವಾಗಿ ವಿರೋಧಿಸುತ್ತ ಬಂದ ಜನತಾಪಕ್ಷದ ಹಲವು ಹೋಳುಗಳು ಸೇರಿ ತೃತೀಯ ವೇದಿಕೆ ರಚಿಸಿಕೊಂಡ ಜನತಾಪಕ್ಷದ ನಾಯಕರುಗಳು ಅಧಿಕಾರ ಹಿಡಿಯುವುದರಲ್ಲಿ ಯಶಸ್ವಿಯೂ ಆದರು. ಆದರೆ ತಮ್ಮ ಅವಧಿಯಲ್ಲಿ ಅವರುಗಳು ನಡೆದುಕೊಂಡ ರೀತಿಯಿಂದಾಗಿ ಮುಂದೆ ಶಾಶ್ವತವಾಗಿ ಅಧಕಾರವಂಚಿತರಾಗಬೇಕಾಗಿ ಬಂತು. ಈ ತೃತೀಯರಂಗ ಅಧಿಕಾರಕ್ಕೆ ಬಂದಾಗಲೇ ಶ್ರೀದೇವೇಗೌಡರು ಪ್ರದಾನಿಯಾಗಿದ್ದು. ನಂತರದ ದಿನಗಳಲ್ಲಿ ತಮ್ಮ ಆಂತರಿಕ ಕಚ್ಚಾಟ, ಮೇಲಾಟಗಳಿಂದಾಗಿ ಬಲಿಷ್ಠ ಪ್ರಾದೇಶಿಕ ನಾಯಕರುಗಳು ಜನತಾಪಕ್ಷವನ್ನು ಒಡೆದು ಚೂರು ಚೂರು ಮಾಡಿದರು. ಹಾಗೆ ಅಂದು ಒಡೆದ ಒಂದು ಚೂರೇ ಕರ್ನಾಟಕದಲ್ಲಿ ದೇವೇಗೌಡರ ನೇತೃತ್ವದಲ್ಲಿ ಅನೇಕ ಹೆಸರುಗಳನ್ನು ಬದಲಾಯಿಸುತ್ತ, ಕೊನೆಗಿವತ್ತು ಜಾತ್ಯಾತೀತ ಜನತಾದಳವಾಗಿ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುವ ಮಟ್ಟಕ್ಕೆ ಬೆಳೆದುನಿಂತಿದೆ.

2004ರವರೆಗೂ ಕಾಂಗ್ರೆಸ್ ಮತ್ತು ಬಾಜಪವನ್ನು ಸಮಾನ ಶತೃಗಳೆಂದು ಪರಿಗಣಿಸಿ ರಾಜಕಾರಣ ಮಾಡುತ್ತಾ ಬಂದ ಜನತಾದಳ 2004ರಲ್ಲಿ ಕೋಮುವಾದಿ ಬಾಜಪವನ್ನು ಅಧಿಕಾರದಿಂದ ದೂರವಿಡುವ ಅನಿವಾರ್ಯತೆಯ ಹೆಸರಲ್ಲಿ ಮೊದಲಬಾರಿ ಕಾಂಗ್ರೆಸ್ಸಿನ ಜೊತೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಅಧಿಕಾರ ಹಿಡಿಯಿತು. ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಟ್ಟು ತನ್ನ ಪಕ್ಷದ ಸಿದ್ದರಾಮಯ್ಯನವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿತು. ಆದರೆ 2006 ರಲ್ಲಿ ದೇವೇಗೌಡರ ಪುತ್ರ ಹೆಚ್,ಡಿ.ಕುಮಾರಸ್ವಾಮಿಯವರು ರಹಸ್ಯವಾಗಿ ಬಾಜಪದ ಯಡಿಯೂರಪ್ಪನವರ ಜೊತೆ ಮೈತ್ರಿಮಾಡಿಕೊಂಡು ಮುಖ್ಯಮಂತ್ರಿ ಪಟ್ಟಕ್ಕೇರಿದರು. ಜೊತೆಗೆ ಅಲ್ಲಿಯವರೆಗು ಅಧಿಕಾರದ ಹತ್ತಿರಕ್ಕೂ ಬರಲಾಗದೆ ಹತಾಶವಾಗಿದ್ದ ಬಾಜಪಕ್ಕೆ ಅಧಿಕಾರದ ರುಚಿಯನ್ನು ಹತ್ತಿಸಿದರು. ಈ ಮೈತ್ರಿಯ ಬಗ್ಗೆ ತನಗೇನು ಗೊತ್ತಿಲ್ಲ ಮತ್ತು ತನ್ನ ಸಮ್ಮತಿಯಿಲ್ಲವೆನ್ನುತ್ತಲೇ ಬಂದ ದೇವೇಗೌಡರು ತದನಂತರದಲ್ಲಿ ಮೌನಕ್ಕೆ ಶರಣಾದರು. ಇಪ್ಪತ್ತು ತಿಂಗಳ ನಂತರ ಅಧಿಕಾರ ಹಂಚಿಕೆಯ ಸೂತ್ರದಂತೆ ಬಾಜಪಕ್ಕೆ ಅಧಿಕಾರ ಬಿಟ್ಟು ಕೊಡದ ಜನತಾದಳ ರಾಜ್ಯದ ಜನತೆಯ ದೃಷ್ಠಿಯಲ್ಲಿ ವಚನಭಂಗ ಮಾಡಿದ ಖಳನಾಯಕನ ಪಟ್ಟಗಿಟ್ಟಿಸಿಕೊಂಡಿತು..

ಇದನ್ನೇ ಬಂಡವಾಳ ಮಾಡಿಕೊಂಡ ಬಾಜಪದ ಯಡಿಯೂರಪ್ಪನವರು ದಳ ಮಾಡಿದ ವಚನಭಂಗ ಮತ್ತು ಲಿಂಗಾಯಿತ ಸಮುದಾಯಕ್ಕೆ ಅದು ಎಸಗಿದ ದ್ರೋಹವನ್ನು ಚುನಾವಣೆಯ ವಿಷಯವನ್ನಾಗಿಸಿ ಅಧಿಕಾರಕ್ಕೇರುವಲ್ಲಿ ಸಫಲರಾದರು. ಹೀಗೆ ಜನತಾದಳದ ತಪ್ಪಿನಿಂದಾಗಿ ಕರ್ನಾಟಕದ ಮಟ್ಟಿಗೆ ನಗಣ್ಯವಾಗಿದ್ದ ಬಾಜಪ ಇವತ್ತು ಕಾಂಗ್ರೆಸ್ ಮತ್ತು ಜನತಾದಳವನ್ನು ಮೀರಿಸುವಂತೆ ಬಳೆದು ನಿಂತಿದೆ. ಜಾತ್ಯಾತೀತ ರಾಜಕಾರಣಕ್ಕೆ ಹೆಸರಾಗಿದ್ದ ಕರ್ನಾಟಕವನ್ನು ಮತೀಯ ಶಕ್ತಿಗಳ ಕೈಗೊಪ್ಪಿಸಿದ ಜನತಾದಳವನ್ನು ಇತಿಹಾಸವೆಂದು ಕ್ಷಮಿಸುವುದಿಲ್ಲ.

ಇವತ್ತು ಕಾಂಗ್ರೆಸ್ ಮತ್ತು ಬಾಜಪದ ನಂತರ ಮೂರನೇ ಸ್ಥಾನದಲ್ಲಿರುವ ಜನತಾದಳ ಕವಲುದಾರಿಯಲ್ಲಿ ನಿಂತಿದೆ. ಅದರೊಳಗಿನ ಗೊಂದಲಗಳಿಂದಾಗಿ ಅದು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಕಾಂಗ್ರೆಸ್ಸಿನ ಕುಟುಂಬ ರಾಜಕಾರಣವನ್ನು ವಿರೋಧಿಸುವ ತನ್ನ ನೈತಿಕ ಶಕ್ತಿಯನ್ನು ಕಳೆದುಕೊಂಡಿರುವ ಅದೀಗ ಇತ್ತ ಬಾಜಪದ ಕೋಮುವಾದದ ಬಗ್ಗೆ ಮಾತಾಡುವ ಅರ್ಹತೆಯನ್ನು ಕಳೆದುಕೊಡಿದೆ

ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಎರಡು ತಿಂಗಳ ಹಿಂದೆ ನಡೆದ ಬೆಂಗಳೂರಿನ ಮಹಾನಗರಪಾಲಿಕೆ ಚುನಾವಣೆಯಲ್ಲಿ ಬಾಜಪವನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ಸಿನ ಜೊತೆ ಮೈತ್ರಿ ಮಾಡಿಕೊಂಡ ಅದು, ಇದೀಗ ಕೆಲ ದಿನಗಳ ಹಿಂದೆಯಷ್ಟೇ ಮೈಸೂರು ನಗರಪಾಲಿಕೆಯಲ್ಲಿ ಕಾಂಗ್ರೆಸ್ಸನ್ನು ದೂರವಿಡಲು ಬಾಜಪದೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಈ ವಿಷಯದಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿಯವರ ನಡುವೆ ಭಿನ್ನಾಭಿಪ್ರಾಯವಿರಬಹುದಾದರೂ ಕಾರ್ಯಕರ್ತರಿಗೆ ಗೊಂದಲ ಉಂಟಾಗಿರುವುದು ಸುಳ್ಳಲ್ಲ. ಇದೆಲ್ಲದರ ಜೊತೆಗೆ ಬಿಹಾರಕ್ಕೆ ಹೋಗುವ ದೇವೇಗೌಡರು ಬಾಜಪವನ್ನು ಮಣಿಸಲು ಬಿಹಾರದ ಮಾದರಿಯಲ್ಲೇ ಮಹಾಮೈತ್ರಿ ಮಾಡಿಕೊಳ್ಳುವ ಬಗ್ಗೆಯೂ ಮಾತಾಡುತ್ತಾರೆ. ಇದನ್ನು ಬರೆಯುತ್ತಿರುವಾಗಲೇ ದೇವೇಗೌಡರ ಆಣತಿಯಂತೆ ಪರಿಷತ್ತಿನ ಚನಾವಣೆಗಾಗಿ ಕಾಂಗ್ರೆಸ್ಸಿನ ಜೊತೆ ಮೈತ್ರಿ ಮಾಡಿಕೊಳ್ಳಲು ದಳದ ಎರಡನೇ ಸಾಲಿನ ನಾಯಕರುಗಳು ಮಾತುಕತೆ ನಡೆಸುತ್ತಿದ್ದಾರೆ. ತನಗಿದು ಗೊತ್ತಿಲ್ಲವೆಂದು ಕುಮಾರಸ್ವಾಮಿ ಹೇಳಿಕೆ ನೀಡುತ್ತಾರೆ. 

ನನಗನ್ನಿಸುವಂತೆ ಜನತಾದಳವಿಂದು ದ್ವಂದ್ವಮಯವಾದ ಕವಲುದಾರಿಯಲ್ಲಿ ನಿಂತಿದೆ. ಸಾಂಪ್ರದಾಯಿಕ ಎದುರಾಳಿಯಾದ ಕಾಂಗ್ರೆಸ್ಸಿನ ಜೊತೆ ಹೋಗುವುದೋ, ಇಲ್ಲ ಕೋಮುವಾದಿ ಬಾಜಪದೊಂದಿಗೆ ಮೈತ್ರಿ ಮಾಡಿಕೊಳ್ಳುವುದೋ ಇಲ್ಲ ಎರಡೂ ಪಕ್ಷಗಳನ್ನು ಸಮಾನ ಅಂತರದಲ್ಲಿಟ್ಟು ತನ್ನ ರಾಜಕೀಯ ಐಡೆಂಟಿಟಿಯನ್ನು ಉಳಿಸಿಕೊಳ್ಳುವುದೊ ಎಂಬ ಗೊಂದಲದ ಪರಿಸ್ಥಿತಿಯಲ್ಲಿ ನಿಂತಿದೆ. ದೇವೇಗೌಡರಿಗೆ ಕಾಂಗ್ರೆಸ್ಸಿನ ಜೊತೆ ಹೆಜ್ಜೆ ಹಾಕುವ ಮನಸ್ಸಿರುವಂತೆ ಕಂಡರೆ, ಕುಮಾರಸ್ವಾಮಿಯವರಿಗೆ ಬಾಜಪದ ಮೇಲೆ ಒಲವಿರುವಂತೆ ತೋರುತ್ತದೆ. ಹೀಗೇ ಜನತಾದಳವಿಂದು ಸ್ಪಷ್ಟವಾಗಿ ಯಾವ ನಿರ್ದಾರವನ್ನೂ ತೆಗೆದುಕೊಳ್ಳಲಾರದೆ ದಿಕ್ಕೆಟ್ಟ ಸ್ಥಿತಿಯಲ್ಲಿ ನಿಂತಿದೆ.

ರಾಜ್ಯದ ಅಭಿವೃದ್ದಿಯ ಬಗ್ಗೆ ಸ್ಪಷ್ಟವಾದ ನಿಲುವನ್ನು ತೋರಿಸದ ಎರಡು ರಾಷ್ಟ್ರೀಯ ಪಕ್ಷಗಳ ಬಗ್ಗೆ ಬೇಸರಗೊಂಡಿರುವ ಕರ್ನಾಟಕದ ಜನತೆಗೆ ಇದುವರೆಗೂ ಇದ್ದ ಭರವಸೆಯೆಂದರೆ ಜನತಾದಳ ಮಾತ್ರ. ಜನತೆಯ ಆ ನಂಬುಗೆಯನ್ನು ಉಳಿಸಿಕೊಳ್ಳುವುದು ಬಿಡುವುದೂ ಸದ್ಯಕ್ಕೆ ಜನತಾದಳದ ನಾಯಕರುಗಳ ಕೈಲಿದೆ. ಸಮಾಜವಾದಿ ನೆಲೆಯಿಂದ ಬಂದ ದೇವೇಗೌಡರು ಇದನ್ನು ಅರ್ಥ ಮಾಡಿಕೊಂಡರೂ ಶಕ್ತಿರಾಜಕಾರಣದ ನಡೆಗಳನ್ನು ಮಾತ್ರ ನಂಬಿಕೊಂಡ ಕುಮಾರಸ್ವಾಮಿಯವರಿಗೆ ಇದು ಸುಲಭವಾಗಿ ಅರ್ಥವಾಗುವಂತಹುದ್ದಲ್ಲ!

ಇದೀಗ ತಮ್ಮ ಪಕ್ಷದ ರಾಜಕೀಯ ನಿಲುವುಗಳ ಬಗ್ಗೆ ಗಟ್ಟಿಯಾದ ನಿಲುವೊಂದನ್ನ ತೆಗೆದುಕೊಂಡು ಜನರ ಮುಂದೆ ಬರುವುದು ಜನತಾದಳಕ್ಕೆ ಅನಿವಾರ್ಯವಾಗಿದೆ. ಕಾಂಗ್ರೆಸ್ಸಿನ ಜಡತೆಯಿಂದ ಹಾಗು ಬಾಜಪದ ಮತೀಯವಾದದಿಂದ ಜಿಗುಪ್ಸೆಗೊಂಡಿರುವ ಕರ್ನಾಟಕದ ಜನರ ಹಿತದೃಷ್ಠಿಯಿಂದ ಸ್ಪಷ್ಟವಾದ ರಾಜಕೀಯ ನಿಲುವೊಂದನ್ನು ತಳೆಯುವುದು ಜನತಾದಳದ ರಾಜಕೀಯ ಭವಿಷ್ಯದ ದೃಷ್ಠಿಯಿಂದಲೂ ಅಗತ್ಯವಾಗಿದೆ. ಇದನ್ನು ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಅರ್ಥಮಾಡಿಕೊಳ್ಳಬೇಕಾಗಿದೆ.

Nov 27, 2015

ಪತ್ರಕರ್ತೆಯ ವಿರುದ್ಧ ಮುಸ್ಲಿಂ ಮತಾಂಧರ ಅಟ್ಟಹಾಸ.

ಕೇರಳದ ಮಾಧ್ಯಮಂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪತ್ರಕರ್ತೆ ವಿ.ಪಿ.ರಜೀನಾ ಕೆಲವು ದಿನಗಳ ಕೆಳಗೆ ತಮ್ಮ ಫೇಸ್ ಬುಕ್ ಪುಟದಲ್ಲಿ ಮದರಾಸಾಗಳ ಬಗ್ಗೆ ಒಂದು ಪೋಸ್ಟನ್ನು ಹಾಕುತ್ತಾರೆ. ಸುಮಾರು ಇಪ್ಪತ್ತು ವರುಷಗಳ ಹಿಂದೆ ಮದರಾಸದಲ್ಲಿದ್ದಾಗ ನೋಡಿದ್ದ ಸಂಗತಿಗಳನ್ನು ಹಾಕುತ್ತಾರೆ. ಫೇಸ್ ಬುಕ್ಕಿನ ಮುಸ್ಲಿಂ ಮತಾಂಧರು ಆ ಪೋಸ್ಟಿಗೆ ರಣಭಯಂಕರವಾಗಿ ಕಮೆಂಟು ಮಾಡಿ, ಎಂದಿನಂತೆ ಪತ್ರಕರ್ತೆಯನ್ನು ನೀಚಾತಿ ನೀಚ ಭಾಷೆಯಲ್ಲೆಲ್ಲ ನಿಂದಿಸಿ ವಿ.ಪಿ.ರಜೀನಾರವರ ಫೇಸ್ ಬುಕ್ ಖಾತೆಯನ್ನೇ ಬ್ಲಾಕ್ ಮಾಡಿಸಿಬಿಡುತ್ತಾರೆ. ಒಂದಷ್ಟು ಪ್ರಯತ್ನದ ನಂತರ ವಿ.ಪಿ.ರಜೀನಾರವರ ಫೇಸ್ ಬುಕ್ ಖಾತೆ ಮತ್ತೆ ಚಾಲ್ತಿಗೆ ಬಂದಿದೆ. ಇಷ್ಟಕ್ಕೂ ರಜೀನಾ ಬರೆದಿದ್ದಾದರೂ ಏನನ್ನು?
ಒಂದನೇ ತರಗತಿಯ ಮೊದಲ ದಿನದಂದು ಉಸ್ತಾದ್ ಶಾಲೆಯ ಹುಡುಗರನ್ನೆಲ್ಲ ಒಬ್ಬೊಬ್ಬರನ್ನಾಗಿ ಕರೆದು ಮುಟ್ಟಬಾರದ ಜಾಗದಲ್ಲೆಲ್ಲಾ ಮುಟ್ಟಿ ಕಳುಹಿಸುತ್ತಿದ್ದುದರ ಬಗ್ಗೆ ರಜೀನಾ ಬರೆದುಕೊಂಡಿದ್ದರು. ಅದರ ಜೊತೆಗೆ ನಾಲ್ಕನೇ ತರಗತಿಯಲ್ಲಿದ್ದ ರಾತ್ರಿ ಶಾಲೆಯ ಮಾಸ್ತರು ಹುಡುಗಿಯರನ್ನು ಸವರುತ್ತಿದ್ದ, ಒಂದು ಹುಡುಗಿ ಜೋರಾಗಿ ಕಿರುಚಿ ದೊಡ್ಡ ಮಾಸ್ತರರಿಗೆ ಎಲ್ಲವನ್ನೂ ಹೇಳುತ್ತೇನೆ ಎಂದು ಹೇಳಿದ ನಂತರ ಆ ನೀಚ ಕೆಲಸವನ್ನು ನಿಲ್ಲಿಸಿಬಿಟ್ಟಿದ್ದರಂತೆ. ಇದಿಷ್ಟು ರಜೀನಾ ಬರೆದ ಪೋಸ್ಟಿನ ಸಾರಾಂಶ. ಇದು ನಡೆದಿದ್ದು ರಜೀನಾ ಓದುತ್ತಿದ್ದಾಗ, ಹೆಚ್ಚು ಕಡಿಮೆ ಇಪ್ಪತ್ತು ವರುಷಗಳ ಕೆಳಗೆ. ಇವತ್ತಿನ ಮದರಾಸಗಳಲ್ಲೂ ಈ ರೀತಿಯ ಘಟನೆಗಳು ನಡೆಯುತ್ತಿವೆಯಾ? ನಡೆಯುತ್ತಿದ್ದರೆ ಸ್ವಸ್ಥ ಸಮಾಜದ ನಾಗರೀಕರು ಯಾವ ರೀತಿಯಿಂದ ಇದನ್ನು ತಡೆಯಬೇಕು? ಎಂಬ ನಿಟ್ಟಿನಲ್ಲಿ ಚರ್ಚೆಗಳು ನಡೆಯಬೇಕಿತ್ತು. ಆದರೆ ಫೇಸ್ ಬುಕ್ಕಿನ ಅವರ ಪೋಸ್ಟುಗಳಲ್ಲಿರುವ ಕಮೆಂಟುಗಳನ್ನು ನೋಡಿದರೆ ಸಮಾಜದ ಅಸ್ವಸ್ಥ ಮುಖಗಳ ದರ್ಶನವಾಗುತ್ತದೆ. ಮೂರ್ತಿ ಪೂಜೆಯನ್ನು ಒಪ್ಪದ ಮುಸ್ಲಿಮರಿಗೆ ಮದರಾಸ ಕಟ್ಟಡವೇ ಮೂರ್ತಿಯಂತೆ ಕಂಡುಬಿಟ್ಟಿತೋ ಏನೋ?! ಮದರಾಸಾದ ಬಗ್ಗೆ ಬರೆದ ರಜೀನಾರವರನ್ನು ಇಲ್ಲಸಲ್ಲದ ಮಾತುಗಳಿಂದೆಲ್ಲ ಟೀಕಿಸಲಾಗಿದೆ. ಬೆದರಿಕೆ ಹಾಕಲಾಗಿದೆ. ಚಿಕ್ಕಂದಿನ ಅನುಭವವನ್ನು ಬರೆದುದಕ್ಕೆ 'ಅದಕ್ಕೆ ಪುರಾವೆ ಏನು?' ಎಂದು ಕೇಳುವ ಮುತ್ಸದ್ಧಿಗಳೂ ಇದ್ದಾರೆ! ಬಹಳಷ್ಟು ಮತಾಂಧರು ರಜೀನಾರವರ ಖಾತೆಯನ್ನು ಬ್ಲಾಕ್ ಮಾಡಲು ಸಲಹೆ ನೀಡಿದ ಕಾರಣ ಫೇಸ್ ಬುಕ್ ಅವರ ಖಾತೆಯನ್ನು ಬ್ಲಾಕ್ ಮಾಡಿಬಿಟ್ಟಿತ್ತು. ಈಗ ಮತ್ತೆ ರಜೀನಾರವರ ಖಾತೆ ಚಾಲ್ತಿಯಲ್ಲಿದೆ. ನನ್ನ ಮಾತುಗಳಿಗೆ ನಾನು ಬದ್ಧ ಎಂಬ ಅವರ ಪೋಸ್ಟಿಗೂ ಕೆಟ್ಟ ಕಮೆಂಟುಗಳ ಸುರಿಮಳೆಯಾಗಿದೆ. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು 'ನೀವೇಳಿದ್ದು ನಿಜ. ಮದರಾಸಾಗೆ ಮಕ್ಕಳನ್ನು ಕಳಿಸಬಾರದು' ಎಂದು ಬರೆದಿದ್ದಾರಷ್ಟೇ.

Nov 25, 2015

Tolerant India’s Intolerant Responses

Dr Ashok K R
Scene 1: Well known Actor ‘A’ was irritated by the opposition to his movie by religious group ‘X’. Frustrated by the opposition actor ‘threatened’ to leave India and move to some foreign country.

Scene 2: Well known Actor ‘B’ was irritated by the opposition to his movie by religious group ‘Y’. He didn’t speak anything about that issue. Months later in an interview he told that his wife is ‘suggesting’ to leave India and move to some foreign country.

According to Present days Tolerant India’s logic Actor ‘A’ and ‘B’ should be considered anti – national and traitors. Wait a minute….

Actor ‘A’ = Kamal Hassan; Religious group ‘X’ = Muslim fundamentalists.
Actor ‘B’ = Aamir Khan; Religious group ‘Y’ = Hindu fundamentalists.

Do you still think both Actor ‘A’ and ‘B’ are anti – national traitors? If your opinion changes once you know the names of actors then it indicates your love and hate for particular religion. Nothing patriotic in that!

Discussing Intolerance in the society based on Aamir Khan’s Wife’s comments is absurd. With the rise of 24x7 news channels and social media most of the discussions will be on these absurd and mundane issues. The ruling parties will be very happy to see people fighting over trivial issues and forgetting the government’s failures! Aamir Khan and Kamal Hassan are actors, have directed few movies and that’s it. Our love or hate to those persons should be limited to their movies. Why should someone consider them as real life heroes and give undue prominence to them? Aamir Khan can’t be called patriotic because of his role in Sarfarosh and Mangal Pandey; at the same time he can’t be named anti hindu because of his role in PK!

Even people who are speaking up against growing intolerance have not branded india as intolerant. Growing intolerance is not equivalent to Intolerant India. But can one deny the fact that growth of intolerance is on the rise? Congress ruled this country for a long long time. Were there not any protests against the Congress? There were protests, and most of the pro – people protests were organized and carried forward by the progressives, dalits intellectuals and leftists. The Hindu rightists and their supporting political parties protested only when there was some religious element in it. In Karnataka at present there is Congress government. Progressives, dalits, intellectuals and leftists have protested against Siddaramaiah’s government. But I have never heard anyone from this state government asking the protestors to leave the state or country, they have never called these protestors against state government anti – national traitors. But is it same with Modi’s BJP government in the centre?

Speak a word against BJP or Modi, you will be named as Congress chamcha! You will be named anti national! You will be named traitor! Responsible ministers say that these people are paid by congress to make such statements! The Politicians of BJP will ask those who oppose BJP or Modi to leave India and move to Pakistan! I have a doubt that these Politicians of BJP are actually funded by Pakistan Tourism Department! Social media will be buzzed with all type of images and posts condemning the statement! And our people who not even a single time protested against any government, show their patriotism by sharing half baked and half truth posts without thinking. Their minds are probably blocked by the words of our great leaders. If this is not growing intolerance what is?

The writers, academicians, scientists, directors and even the army personnel have returned the awards as a form of protest to various issues. They are named Congresswalas, they are named traitors, they were called undeserving candidates for those awards. Even there was a protest headed by Anupam Kher against this award wapsi. Eminent Kannada writer S.L. Bhyrappa and director Nagabharana spoke against this award wapsi. By the way Anupam Kher’s wife is BJP member. Does it make Anupam Kher BJP chamcha? Does S.L. Bhyrappa and Nagabharana paid by the BJP to speak against this award wapsi?

Nov 22, 2015

ತುಂಬೆ ಗಿಡದ ಕನಸ ಕಾಣುತ್ತ..........

ಕು.ಸ.ಮಧುಸೂದನ್‍ ರಂಗೇನಹಳ್ಳಿದಶದಿಕ್ಕುಗಳಲ್ಲಿಯೂ
ದಂಡುಗಟ್ಟಿದ ಮೋಡಗಳ
ಮರೆಯೊಳಗವಿತ ಸೂರ್ಯನ
ಕಂಡು ನಾಚಿದ
ಪೂರ್ವ ಪಶ್ಚಿಮ
ಉತ್ತರ ದಕ್ಷಿಣಗಳೆಲ್ಲ
ಅಡ್ಡಾದಿಡ್ಡಿಯಾಗಿ
ಜಾಗ ಬದಲಿಸಿ ದೆಸೆ ಬದಲಿಸುವವರ ನಾಲಿಗೆಗಳ
ಕತ್ತರಿಸಿದವು
ಹಿಮಚ್ಛಾದಿತ ಕಾಶ್ಮೀರದ ಕಣಿವೆಗಳಲ್ಲಿ ಚೆಲ್ಲಿದ ರಕ್ತ
ಕಲೆಗಳನೊರೆಸಲು ಸಮವಸ್ತ್ರದಾರಿಗಳು
ಕೋವಿ ಹಿಡಿದು ಅಡ್ಡಾಡಿದರು
ಜಾರ್ಖಂಡಿನ ಕಾಡಿನೊಳಗಿನ ಕಚ್ಚಾ ದಾರಿಯಲಿ
ನೆಲಬಾಂಬನಿಟ್ಟು ಸ್ಪೋಟಿಸಿದ ನಕ್ಸಲರ ಕಣ್ಣುಗಳಲ್ಲಿ
ದಿಗ್ವಿಜಯದ ಉನ್ಮಾದ
ಸತ್ತ ಪೋಲಿಸರ ಮನೆಯೊಳಗೆ
ಹಚ್ಚಿಟ್ಟ ದೀಪ ಆರಿ ಸುಟ್ಟ ಬತ್ತಿಯ ಕಮಟು ವಾಸನೆಯ ನಡುವೆ
ಸೂತಕದ ಛಾಯೆ
ಸಿಕ್ಕ ಪರಿಹಾರವನು ಹಂಚಿಕೊಳ್ಳುವ ವ್ಯಾಜ್ಯಕೆ
ಸಾಲು ನಿಂತ ವಕೀಲರುಗಳ ದಂಡು
ಸಿರಿಯಾದ ಬಂಡುಕೋರರ ಬಂದೂಕುಗಳಿಗೆ ಎದೆಯೊಡ್ಡಿ
ಸತ್ತವರ ನೆತ್ತರು ಸೇರಿದ ಸಾಗರದಾಳದೊಳಗೆ ಉಕ್ಕುವ
ತೈಲ ಸಂಪತ್ತನ್ನು ದೋಚಲು ನಿಂತ ಆಧುನಿಕ ಕಡಲ್ಗಳ್ಳರ ಸಾಲಲ್ಲಿ ಪಶ್ಚಿಮದ ದೊಡ್ಡಣ್ಣನ
ಆಜ್ಞೆಯ ಪಾಲಿಸಲು ಕಾದು ಕೂತ ನಮ್ಮ ನೆಲದ ನೆಂಟರು
ತೆರೆಗಳಬ್ಬರಕ್ಕೆ ದಡಕೆ ತೇಲಿಬಂದ ಅಯ್ಲಾನನ ಹೆಣದ
ಪೋಟೊಶಾಪ್ ಚಿತ್ರದಡಿಯಲಿ ಕವಿಗಳು ಬರೆದ ನೂರಾರು ಕವಿತೆಗಳು
ಮೆಚ್ಚುಗೆ ಪಡೆದು
ಧನ್ಯವಾದವು!
ಜಗದಷ್ಟೂ ಘನಘೋರ ಪಾತಕಗಳಿಗೆ
ಬಲಿಪಶುವಾಗಿ ನಿಂತ ನನ್ನ
ಕಾಲುಗಳು ನಡೆದವು ಊರ ಹೊರಗಿನ ಕಲ್ಲು ಮಾರಮ್ಮನ ಗುಡಿಯಂಗಳಕೆ
ಬಿದ್ದು ಬೊಕ್ಕಬೋರಲು
ಬೇಡಿಕೊಂಡೆ
ಕೊಡೆನಗೆ ಅವ್ವ ಒಂದಿಷ್ಟಾದರು ತಾವ ನಿನ್ನ ಮಡಿಲೊಳಗೆ
ಹಾಗೇನೆ ಕೇಳಿಸು ಹೆತ್ತವಳು ಹಾಡುತಿದ್ದ ಹಳೆಯ ಜೋಗುಳವನ್ನ
ತಟ್ಟು ನೆತ್ತಿಯ ಮೇಲೆ ಸದ್ದಾಗದಂತೆ
ಕಣ್ಮುಚ್ಚಿ ಮಲಗಿ ಬಿಡುತ್ತೇನೆ
ಒಂದು ಯುಗದ ಕಾಲ ಜಗದರಿವಿರದ ಹಾಗೆ
ಪಾಪಿಗಳ ಅಂತ್ಯವಾಗಿ
ಪಾಪಗಳು ಇಲ್ಲವಾಗಿ
ಕತ್ತರಿಸಿ ಬಿಸಾಕಿದ ಕಣಗಿಲೆ ಗಿಡಗಳ ಜಾಗದೊಳು
ಮುಕ್ಕಣ್ಣನಿಗೆ ಪ್ರಿಯವಾದ ತುಂಬೆ ಹೂವಿನ
ಗಿಡ ಚಿಗುರೊಡೆಯುವವರೆಗೂ!

Nov 21, 2015

ಬೊಗಸೆ ಎಣ್ಣೆ

ಕು.ಸ.ಮಧುಸೂದನ್
ಒಳ್ಳೆಯದನೆಲ್ಲಿ ಹುಡುಕುವುದು?
ನದಿಗಳು ಮಲೀನವಾಗಿವೆ
ಬೆಟ್ಟಗಳು ಕೊರೆಯಲ್ಪಟ್ಟಿವೆ
ಭೂಭಾಗಗಳು ತೂತು ಮಾಡಲ್ಪಟ್ಟಿವೆ
ಕಾಡುಗಳು ಬಯಲಾಗಿವೆ
ಮರುಭೂಮಿಗಳು ಮಸಣಗಳಾಗಿವೆ
ದೀಪ ಹಚ್ಚುವವರು ಸಿಕ್ಕರೂ
ಸಿಗುತಿಲ್ಲ ಮಣ್ಣ ಹಣತೆ
ಬೊಗಸೆಯಷ್ಟು ಎಣ್ಣೆ!


Nov 20, 2015

ಮಿಸ್ಟೇಕ್!

harish mangalore
ಕತೆಗಳ ಪುಸ್ತಕವನ್ನು ನೂರಾರು ಓದಿದ್ದೇನೆ. ನನ್ನನ್ನು ತುಂಬಾ ಕಾಡಿದ ಕತೆಗಳನ್ನು ಬರೆದಿದ್ದು ಸದತ್ ಹಸನ್ ಮಾಂಟೋ. ದೇಶ ವಿಭಜನೆಯ ಸಂದರ್ಭದಲ್ಲಿ ಧರ್ಮದ ಕಾರಣದಿಂದ, ಮನೆಯವರ ಒತ್ತಡದ ಕಾರಣದಿಂದ ಭಾರತದಿಂದ ಪಾಕಿಸ್ತಾನಕ್ಕೆ ಹೋಗಿ ದಾರಿಯುದ್ದಕ್ಕೂ ಕಂಡ ಧರ್ಮಾಧಾರಿತ ಹಿಂಸಾಚಾರ ಸದತ್ ಹಸನ್ ಮಾಂಟೋನನ್ನು ಹುಚ್ಚನನ್ನಾಗಿ ಮಾಡಿಬಿಡುತ್ತದೆ. ಆ ಹುಚ್ಚುತನದಲ್ಲೇ ಆತ ಬರೆದ ಕತೆಗಳನ್ನು ಓದುತ್ತಿದ್ದರೆ ಮನುಷ್ಯ ಇಷ್ಟೊಂದು ಅಮಾನವೀಯವಾಗಿ ವರ್ತಿಸಬಲ್ಲನಾ ಎಂಬ ಅನುಮಾನ ಮೂಡುತ್ತಿತ್ತು. ಆ ಕತೆಗಳಲ್ಲಿನ ಅಮಾನವೀಯತೆಯನ್ನು ಮೀರಿಸುವಂತಹ ಘಟನೆಗಳು ವರ್ತಮಾನದಲ್ಲಿ ನಡೆಯುತ್ತಿರುವಾಗ ಸ್ವತಂತ್ರ ಬಂದು ಇಷ್ಟೆಲ್ಲ ವರ್ಷಗಳಾಗಿದ್ದರೂ ತಾಂತ್ರಿಕವಾಗಿ ಮೇಲ್ಮೆ ಸಾಧಿಸಿ, ಮಂಗಳನ ಅಂಗಳಕ್ಕೆ ಉಪಗ್ರಹ ಕಳಿಸಿ ಮನುಷ್ಯನ ಕ್ರೂರಿ ಮನಸ್ಸನ್ನು ಅಲ್ಲೇ ನಿಲ್ಲಿಸಿಬಿಟ್ಟಿದ್ದೇವೆಯಾ? ಎಂಬ ಪ್ರಶ್ನೆ ಮೂಡುತ್ತದೆ. ಕೋಮುಗಲಭೆಯ ಸಂದರ್ಭದಲ್ಲೆಲ್ಲ ಸದತ್ ಹಸನ್ ಮಾಂಟೋನ ಪುಟ್ಟ ಕತೆಯೊಂದು ನನ್ನನ್ನು ಬಹಳವಾಗಿ ಕಾಡುತ್ತದೆ. ಕತೆಯ ಹೆಸರು ಮಿಸ್ಟೇಕ್. ಗಲಭೆಯ ಸಂದರ್ಭ. ಕತ್ತಿ ಹಿಡಿದು ಬಂದವರು ದಾರಿಯಲ್ಲಿ ಸಿಕ್ಕ ವ್ಯಕ್ತಿಯೊಬ್ಬನ ಹೊಟ್ಟೆಗೆ ತಿವಿಯುತ್ತಾರೆ. ತಿವಿಯುವಾಗ ಕತ್ತಿ ಆತನ ಲಾಡಿಯನ್ನು ಕತ್ತರಿಸಿಹಾಕುತ್ತದೆ. ಪ್ಯಾಂಟು ಕೆಳಗೆ ಜಾರುತ್ತದೆ. ಸತ್ತ ವ್ಯಕ್ತಿಯ ಶಿಶ್ನ ನೋಡಿದ ಕತ್ತಿವೀರ 'ಮಿಸ್ಟೇಕ್' ಎಂದುದ್ಗರಿಸಿ ಮತ್ತೊಬ್ಬನನ್ನು ಕೊಲ್ಲಲು ಹೊರಡುತ್ತಾನೆ. ಸದತ್ ನ ಮೂರು ಸಾಲಿನ ಈ ಕತೆ ಧರ್ಮಾಂಧರಲ್ಲಿನ ಕ್ರೌರ್ಯ, ಅವರಿಗೆ ಅಂತಿಮ ಸುಖ ಸಿಗುವುದು ಕೊಲ್ಲುವ ಹಿಂಸೆಯಿಂದಷ್ಟೇ ಎನ್ನುವ ವಾಸ್ತವವನ್ನು ತಿಳಿಸಿ ಹೇಳುತ್ತದೆ. 
ಮಿಸ್ಟೇಕ್ ಕತೆಯ ರೀತಿಯ ಘಟನೆಯೇ ಮಂಗಳೂರಿನಲ್ಲಿ ನಡೆದುಹೋಗಿದೆ. ಸ್ನೇಹಿತರಾದ ಸಮೀವುಲ್ಲಾ ಮತ್ತು ಹರೀಶ್ ಕ್ರಿಕೆಟ್ ಆಡಿ ವಾಪಸ್ಸಾಗುವಾಗ ಅಂಗಡಿಯೊಂದರ ಬಳಿ ಕೂಲ್ ಡ್ರಿಂಕ್ಸ್ ಕುಡಿಯುವಾಗ ಗುಂಪೊಂದು ಬಂದು ಸಮೀವುಲ್ಲಾನ ಮೇಲೆ ದಾಳಿ ನಡೆಸುತ್ತಾರೆ, ತಡೆಯಲು ಬಂದ ಹರೀಶನ ಮೇಲೆಯೂ ದಾಳಿ ನಡೆಸುತ್ತಾರೆ. ಹರೀಶ ಹತನಾಗುತ್ತಾನೆ. ಈ ಕೊಲೆಗೆ ಸಂಬಂಧಪಟ್ಟಂತೆ ಮಂಗಳೂರು ಪೋಲೀಸರು ಭುವಿತ್ ಶೆಟ್ಟಿ ಮತ್ತು ಅಚ್ಯುತ್ ಎನ್ನುವವರನ್ನು ಬಂಧಿಸಿದ್ದಾರೆ. ಈ ಭುವಿತ್ ಶೆಟ್ಟಿ ಕಲಬುರಗಿಯ ಹತ್ಯೆಯಾದ ಸಂದರ್ಭದಲ್ಲಿ ಹತ್ಯೆಯನ್ನು ಸಮರ್ಥಿಸಿ ಹಾಕಿದ ಟ್ವೀಟುಗಳ ಕಾರಣದಿಂದ ಬಂಧಿತನಾಗಿದ್ದ. ಭುವಿತನಿಗೆ ಇಪ್ಪತ್ತೈದು ವರ್ಷ, ಅಚ್ಯುತನಿಗೆ ಇಪ್ಪತ್ತೆಂಟು ವರುಷವಷ್ಟೇ. ಇನ್ನು ಸತ್ತ ಹರೀಶನೂ ಅದೇ ವಯಸ್ಸಿನವನು. ಬಡ ಕುಟುಂಬದಿಂದ ಬಂದವನು. ಕುಟುಂಬಕ್ಕೆ ಆಸರೆಯಾಗಿದ್ದವನು. ಧರ್ಮಾಂಧರ ಕ್ರೌರ್ಯ ಒಂದಿಡೀ ಕುಟುಂಬದ ಸರ್ವನಾಶಕ್ಕೆ ಕಾರಣವಾಗಿದೆ. ಧರ್ಮಾಂದತೆಯನ್ನು ತುಂಬಿದವರ ತಣ್ಣನೆಯ ಕ್ರೌರ್ಯದಿಂದ ಭುವಿತ್ ಅಚ್ಯುತನಂತಹ ಸಾವಿರ ಕುಟುಂಬಗಳು ನಾಶವಾಗುತ್ತಿವೆ. ಹಿಂದೂ ಸಂಘಟನೆಯ ಭುವಿತ್ ಮತ್ತು ಅಚ್ಯುತ್ ಗುರಿ ಹರೀಶನಾಗಿರಲಿಲ್ಲ. ಸಮೀವುಲ್ಲಾ ಎಂಬ ಸಾಬಿಯಾಗಿದ್ದ. ಸಾಬಿಗೊಬ್ಬ ಹಿಂದೂ ಗೆಳೆಯನಿರುವುದು ಸಾಧ್ಯವಿಲ್ಲ, ಸಾಧುವೂ ಅಲ್ಲ ಎಂದು ಈ ಯುವಕರ ತಲೆಗೆ ತುಂಬಿಬಿಟ್ಟಿರುತ್ತಾರೆ. ಸಮೀವುಲ್ಲಾನನ್ನು ರಕ್ಷಿಸಲು ಬಂದ ಹುಡುಗ ಕೂಡ ಮುಸಲ್ಮಾನನೇ ಎಂದು ಹತ್ಯೆ ಮಾಡಿದ್ದಾರೆ. ಸದತ್ ಹಸನ್ ಮಾಂಟೋನ ಕತೆಯ ಲೆಕ್ಕದಲ್ಲಿ ಮಿಸ್ಟೇಕಾಗಿದೆ. ಹತ್ಯೆ ಮಾಡಿದವರು ಕತ್ತಿ ಹಿಡಿದು ಮತ್ತೊಬ್ಬನನ್ನು ಮಗದೊಬ್ಬನನ್ನು ಕೊಲ್ಲಲು ಹೊರಟುಬಿಡುತ್ತಾರೆ.

ಮೀಸಲಾತಿಯ ಬಗೆಗಿನ ಪ್ರಶ್ನೆಗಳು ಮತ್ತು ಉತ್ತರಗಳು.

ಇಂಗ್ಲೀಷ್ ಮೂಲ:  ದ್ವಾರಕನಾಥ್ ಚೊಕ್ಕ
ಕನ್ನಡಕ್ಕೆ: ಕು.ಸ.ಮಧುಸೂದನ್ 
1. ಮೀಸಲಾತಿ ಎಂದರೇನು?
ಮೀಸಲಾತಿ ಎಂಬ ಪದಪ್ರಯೋಗವೇ ತಪ್ಪು! ಸಂವಿದಾನದಲ್ಲಿ ಇದಕ್ಕಾಗಿ ಬಳಸಿರುವ ಪದ ಪ್ರಾತಿನಿದ್ಯ. ವೈಯುಕ್ತಿಕ ನೆಲೆಗಟ್ಟಿನಲ್ಲಿ ಇದನ್ಯಾರಿಗು ನೀಡಲಾಗಿಲ್ಲ. ವೈಯುಕ್ತಿಕವಾಗಿ ನೀಡಿರುವುದು ಸಹ ಅವರು ಪ್ರತಿನಿಧಿಸುವ ಶೋಷಿತ ಸಮುದಾಯಗಳ ಕಾರಣದಿಂದ. ಈ ಅವಕಾಶವನ್ನು ಪಡೆದವರು ತಮ್ಮ ಸಮುದಾಯದ ಇತರೇ ಜನರಿಗೆ ಸಹಾಯಕವಾಗಲೆಂಬ ಕಾರಣದಿಂದ.

2. ಮೀಸಲಾತಿ ಏಕೆ?
ಸಮುದಾಯಗಳ ನಡುವಿನ ತಾರತಮ್ಯ ಹೋಗಲಾಡಿಸಿ,ಅವಕಾಶ ವಂಚಿತ ಸಮುದಾಯಗಳಿಗೆ ಸಹಾಯ ಮಾಡುವುದು ಮೀಸಲಾತಿಯ ಉದ್ದೇಶ. ಸಮಾಜದ ಹಲವಾರು ಸಮುದಾಯಗಳು ಅಸ್ಪ್ರ್ಯಶ್ಯತೆಯ ಕಾರಣದಿಂದಾಗಿ ಶಿಕ್ಷಣದ ಹಕ್ಕು, ಸಂಪತ್ತಿನ ಹಕ್ಕು, ವ್ಯಾಪಾರದ ಹಕ್ಕು ಸೇರಿದಂತೆ ಅನೇಕ ನಾಗರೀಕ ಹಕ್ಕುಗಳಿಂದ ವಂಚಿತವಾಗಿವೆ. ಇತಿಹಾಸದಲ್ಲಿನ ಇಂತಹ ತಾರತಮ್ಯಗಳನ್ನು ನಿವಾರಿಸಿ ಭವಿಷ್ಯದಲ್ಲಿ ಅವರ ಹಕ್ಕುಗಳನ್ನು ಸಂರಕ್ಷಿಸಲು ಈ ಮೀಸಲಾತಿಯನ್ನು ಕಲ್ಪಿಸಲಾಗಿದೆ.

3.ಸಂವಿದಾನಕರ್ತರು ಮೀಸಲಾತಿಯನ್ನು ಕೇವಲ ಹತ್ತು ವರ್ಷಗಳಿಗೆ ಮಾತ್ರ ಸೀಮಿತಗೊಳಿಸಿರಲಿಲ್ಲವೆ?
ಕೇವಲ ರಾಜಕೀಯ ಮೀಸಲಾತಿಯನ್ನು ಮಾತ್ರ ಹತ್ತು ವರ್ಷಗಳವರೆಗೆ ನಿಗದಿ ಪಡಿಸಲಾಗಿದ್ದು, ತದನಂತರ ಅದನ್ನು ಪುನರ್ ಪರಿಶೀಲಿಸಲಾಯಿತು. ಹಾಗಾಗಿಯೇ ಎಲ್ಲ ರಾಜಕೀಯ ಮೀಸಲಾತಿಗಳನ್ನು ಪ್ರತಿ ಹತ್ತು ವರ್ಷಕ್ಕೊಮ್ಮೆ ಪುನರ್ ನಿಗದಿ ಪಡಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿನ ಮೀಸಲಾತಿಗೆ ಹತ್ತು ವರ್ಷಗಳ ಮಿತಿ ಹಾಕಲಾಗಿಲ್ಲ. ಆದ್ದರಿಂದ ರಾಜಕೀಯ ಮೀಸಲಾತಿಯ ರೀತಿಯಲ್ಲಿ ನಾವು ಶಿಕ್ಷಣ ಮತ್ತು ಉದ್ಯೋಗದಲ್ಲಿನ ಮೀಸಲಾತಿಯನ್ನು ಪುನರ್ ಪರಿಶೀಲಿಸುವ ಅಗತ್ಯವಿಲ್ಲ.

4. ಜಾತಿಯ ಆಧಾರದ ಮೇಲೆ ಮೀಸಲಾತಿ ಏಕೆ?
ಇದಕ್ಕೆ ಉತ್ತರಿಸುವ ಮುಂಚೆ ನಾವು ಮೀಸಲಾತಿಯ ಅನಿವಾರ್ಯತೆಯ ಬಗ್ಗೆ ತಿಳಿದುಕೊಳ್ಳಬೇಕಾಗಿದೆ.ಸಾವಿರಾರು ವರ್ಷಗಳಿಂದ ಜಾತಿಯ ಕಾರಣಕ್ಕೆ ಹಲವು ಹಕ್ಕುಗಳನ್ನು,ಅವಕಾಶಗಳನ್ನು ಧರ್ಮದ ಹೆಸರಿನಲ್ಲಿ ಕೆಳವರ್ಗಗಳಿಗೆ ನಿರಾಕರಿಸುತ್ತ ಬರಲಾಗಿದೆ. ಆದ್ದರಿಂದ ಕೆಳಜಾತಿಗಳ ಮೇಲೆ ನಡೆಯುತ್ತಿರುವ ಎಲ್ಲ ರೀತಿಯ ಅನ್ಯಾಯ, ಶೋಷಣೆ, ತಾರತಮ್ಯ ವಂಚನೆಗಳಿಗೆ ಮುಖ್ಯ ಕಾರಣ ಜಾತಿಪದ್ದತಿಯೇ ಆಗಿದೆ. ಜಾತಿಯ ಕಾರಣಕ್ಕೆ ಅವಕಾಶಗಳಿಂದ ವಂಚಿತರಾದ ಬಹುಜನ ಸಮಾಜಕ್ಕೆ ಅದೇ ಜಾತಿಯ ಆಧಾರದಲ್ಲೆ ಅವಕಾಶಗಳನ್ನು ಕಲ್ಪಿಸುವುದು ಅನಿವಾರ್ಯವಾಗಿದೆ.

5. ಆರ್ಥಿಕ ಸ್ಥಿತಿಗತಿಯ ಮೇಲೆ ಮೀಸಲಾತಿ ಏಕಿಲ್ಲ?
ಯಾವತ್ತಿಗು ಆರ್ಥಿಕ ಆಧಾರದ ಮೇಲೆ ಮೀಸಲಾತಿ ನೀಡುವುದು ಸಾದ್ಯವಿಲ್ಲ. ಯಾಕೆಂದರೆ:
(ಅ) ಬಹುಜನಸಮಾಜದ ಇವತ್ತಿನ ಬಡತನಕ್ಕೆ ಮೂಲಕಾರಣವಾಗಿರುವುದೇ ಅವರ ಜಾತಿಯಾಗಿದೆ. ಬಡತನ ಒಂದು ಪರಿಣಾಮವಾದರೆ, ಜಾತಿ ಒಂದು ಕಾರಣವಾಗಿದೆ. ಆದ್ದರಿಂದ ನಾವು ಪರಿಣಾಮದ ಬಗ್ಗೆ ನೋಡದೆ ಕಾರಣವನ್ನು ಇಲ್ಲವಾಗಿಸಬೇಕಿದೆ.

(ಆ)ವೈಯುಕ್ತಿಕವಾಗಿ ಒಬ್ಬನ ಆದಾಯ ಬದಲಾಗಬಹುದು.ಆದರೆ ಹಣದ ಕೊಳ್ಳುವ ಶಕ್ತಿ ಇಂಡಿಯಾದಲ್ಲಿ ಅವನ ಜಾತಿಯನ್ನು ಆಧರಿಸಿರುತ್ತದೆ. ಉದಾಹರಣೆಗೆ ಬಹಳ ಕಡೆ ದಲಿತನೊಬ್ಬ ದುಡ್ಡಿದ್ದರೂ ಒಂದು ಕಪ್ ಚಹಾವನ್ನು ಕೊಳ್ಳಲಾಗದ ಪರಿಸ್ಥಿತಿಯಿದೆ.

(ಇ) ತನ್ನ ಆರ್ಥಿಕ ಸ್ಥಿತಿಯನ್ನು ಸಾಬೀತು ಪಡಿಸುವುದು ನಮ್ಮ ವ್ಯವಸ್ಥೆಯ ಲೋಪದೋಷಗಳಿಂದಾಗಿ ನಿಖರವಾಗಿರಲು ಸಾದ್ಯವಿಲ್ಲ. ಇದರಿಂದಾಗಿ ಮತ್ತೆ ವಂಚಿತರೇ ವಂಚನೆಗೊಳಗಾಗುತ್ತಾರೆ.

(ಈ) ಜಾತೀಯತೆಯಿಂದ ನರಳುತ್ತಿರುವ ಇಂಡಿಯಾದಲ್ಲಿ ಬದಲಾಗದೆ ಇರುವ ಒಂದು ವಿಷಯವೆಂದರೆ ಅದು ಜಾತಿಯಾಗಿದೆ. ಇಲ್ಲಿನ ಭ್ರಷ್ಟ ವ್ಯವಸ್ಥೆಯಲ್ಲಿ ಹಣ ನೀಡಿ ಜಾತಿಯ ಪ್ರಮಾಣಪತ್ರವನ್ನು ಪಡೆಯಬಹುದಾಗಿದ್ದು, ವರಮಾನದ ಪ್ರಮಾಣ ಪತ್ರವನ್ನು ಪಡೆಯುವುದು ಇನ್ನೂ ಸುಲಭವಾದ ವಿಷಯವಾಗಿದೆ. ಹಾಗಾಗಿ ಆರ್ಥಿಕ ಸ್ಥಿತಿಗತಿಯ ಮೇಲೆ ಮೀಸಲಾತಿಯನ್ನು ನೀಡುವುದು ವ್ಯಾವಹಾರಿಕವಾಗಿ ಆಗದ ಮಾತು. ಹಣ ಕೊಟ್ಟು ಪಡೆಯಬಲ್ಲಂತಹ ಎರಡು ಪ್ರಮಾಣಪತ್ರಗಳನ್ನಿಟ್ಟುಕೊಂಡು ಮೀಸಲಾತಿಯ ಬಗ್ಗೆ ಚರ್ಚೆ ನಡೆಸುದು ಅನಗತ್ಯವೆನಿಸುತ್ತೆ. ಅದೂ ಅಲ್ಲದೆ ಈ ನೆಲದಲ್ಲಿ ಹಣ ಕೊಟ್ಟು ಆದಾಯ ಪ್ರಮಾಣಪತ್ರ ಪಡೆಯುವುದು ಬಹಳ ಸುಲಭ, ಆದರೆ ಜಾತಿಯ ಪ್ರಮಾಣಪತ್ರ ಪಡೆಯುವುದು ಕಷ್ಟಕರ.

(ಉ) ಮೀಸಲಾತಿಯೇ ಅಂತಿಮ ಗುರಿಯಲ್ಲ. ಬದಲಿಗೆ ಅಂತ್ಯದತ್ತ ಒಂದು ದಾರಿಯಷ್ಟೆ! ಮೀಸಲಾತಿಯ ಮುಖ್ಯ ಉದ್ದೇಶ: ಮುಖ್ಯವಾಹಿನಿಯಿಂದ ಹೊರಗಿರುವವರಿಗೆ ಸರ್ವಕ್ಷೇತ್ರಗಳಲ್ಲಿಯು ಅವಕಾಶಗಳ ಬಾಗಿಲುಗಳನ್ನು ತೆರೆಯುವುದಾಗಿದೆ. ಆದ್ದರಿಂದಲೆ ಮೀಸಲಾತಿ ಶಾಶ್ವತವೂ ಅಲ್ಲ ಜಾತಿ ಪದ್ದತಿಗೆ ದಿವ್ಯೌಷದಿಯೂ ಅಲ್ಲ. ಎಲ್ಲಯವರೆಗು ರಾಷ್ಟ್ರದ ಪತ್ರಿಕೆಗಳ ಜಾಹಿರಾತುಗಳಲ್ಲಿ ಜಾತಿಯ ಪ್ರಸ್ತಾಪವಿರುತ್ತದೆಯೊ ಅಲ್ಲಿಯವರೆಗು ಇದು ಸಾಗಬೇಕಾಗುತ್ತದೆ.

6. ಮೀಸಲಾತಿಯಲ್ಲಿ ಕೆನೆಪದರ ಇರಬೇಕೇ ಬೇಡವೇ?
ಮೀಸಲಾತಿಯಲ್ಲಿ ಕೆನೆಪದರದ ಅಗತ್ಯವನ್ನು ಎತ್ತಿ ಹೇಳುತ್ತಿರುವವರ ಮುಖ್ಯ ಉದ್ದೇಶವೇ ಮೀಸಲಾತಿಯ ಮೂಲ ಗುರಿಯನ್ನು ಮಣ್ಣುಪಾಲು ಮಾಡುವುದಾಗಿದೆ.ಉದಾಹರಣೆಗೆ ಈಗಲೂ ಐ.ಐ.ಟಿ.ಯಂತಹ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ/ಪಂಗಡಗಳಿಗೆ ಮೀಸಲಿಟ್ಟ ಸ್ಥಾನಗಳಲ್ಲಿ ಶೇಕಡ 25 ಕ್ಕಿಂತ ಹೆಚ್ಚು ಸ್ಥಾನಗಳು ಸೂಕ್ತ ಅಭ್ಯರ್ಥಿಗಳಿಲ್ಲದ ಕಾರಣಕ್ಕೆ ಖಾಲಿ ಉಳಿದಿವೆ.ಅಕಸ್ಮಾತ್ ನೀವು ಕೆನೆಪದರವನ್ನು ಜಾರಿಗೆ ತಂದರೆ ಆರ್ಥಿಕವಾಗಿ ಪರಿಶಿಷ್ಟರಿಗಿಂತ ಸ್ವಲ್ಪ ಬಲಾಢ್ಯವಾಗಿರುವ ಕೆಳ ಮತ್ತು ಮದ್ಯವರ್ಗದವರು ಪರಿಶಿಷ್ಟರ ಎಲ್ಲ ಸ್ಥಾನಗಳನ್ನು ಸುಲಭವಾಗಿ ತಮ್ಮ ಬುಟ್ಟಿಗೆ ಹಾಕಿಕೊಳ್ಳುತ್ತಾರೆ.ಹೀಗೆ ಕೆನೆಪದರದ ವಿದ್ಯಾರ್ಥಿಗಳ ಜೊತೆ ಸ್ಪರ್ದೆ ಮಾಡಲು ಪರಿಶಿಷ್ಟರಿಗೆ ಸಾದ್ಯವಾಗುವುದಿಲ್ಲ.

7.ಮೀಸಲಾತಿ ಎಷ್ಟು ಕಾಲ ಮುಂದುವರೆಯಬೇಕು?
ಮೀಸಲಾತಿಯನ್ನು ವಿರೋಧಿಸುವ ಎಲ್ಲರೂ ಸಹಜವಾಗಿ ಕೇಳುವ ಪ್ರಶ್ನೆ ಇದು. ಎಲ್ಲಿಯವರೆಗು ನಮ್ಮ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಎಲ್ಲ ವಿಭಾಶಗಗಳಲ್ಲಿಯೂ ಮೇಲ್ಜಾತಿಯವರೇ ತುಂಬಿಕೊಂಡಿದ್ದು ,ಎಲ್ಲವನ್ನು ನಿಯಂತ್ರಿಸುತ್ತಿರುತ್ತಾರೊ ಅಲ್ಲಿಯವರಗು ಇದು ಮುಂದುವರೆಯುತ್ತದೆ. ನಮ್ಮ ಮೇಲ್ಜಾತಿಗಳು ಸುಮಾರು ಮೂರುಸಾವಿರ ವರ್ಷಗಳಿಂದಲೂ ಎಲ್ಲ ಸವಲತ್ತುಗಳನ್ನು ಅನುಭವಿಸುತ್ತ ಬಂದಿದ್ದು,ಇದೀಗ ಇಪ್ಪತ್ತನೆಯ ಶತಮಾನದಲ್ಲಿಯು ಎಲ್ಲ ಧಾರ್ಮಿಕ ಸ್ಥಾನಗಳಲ್ಲಿಯು ತನ್ನದೇ ಪಾರುಪತ್ಯವನ್ನು ನಡೆಸುತ್ತಿದೆ. ಇದೀಗ ಅವರೇ ಮೀಸಲಾತಿ ಎಲ್ಲಿಯವರೆಗೆ ಎನ್ನು ಪ್ರಶ್ನೆ ಕೇಳುತ್ತಿದ್ದಾರೆ.ಅವರು ತಮ್ಮನ್ನು ತಾವೇ ಕೇಳಿಕೊಳ್ಳಲಿ: ಇನ್ನು ಎಷ್ಟು ವರ್ಷಗಳ ಕಾಲ ಅವರೇ ಎಲ್ಲ ಧಾರ್ಮಿಕ ಸ್ಥಾನಗಳಲ್ಲಿ ಇರುತ್ತಾರೆಂದು?ಮೂರು ಸಾವಿರ ವರ್ಷಗಳ ತಾರತಮ್ಮವನ್ನು ನಿವಾರಸಲು ಎಪ್ಪತ್ತು ವರ್ಷಗಳು ಸಾಕಾಗಿಬಿಡುತ್ತದೆಯೇ ಎಂದು ಅವರೇ ಕೇಳಿಕೊಳ್ಳಲಿ?

8.ಮೀಸಲಾತಿ ವ್ಯವಸ್ಥೆ ಸಮಾಜನ್ನು ಒಡೆಯುವುದಿಲ್ಲವೆ?
ಈ ಪ್ರಶ್ನೆಯೇ ಅಸಂಬದ್ದವಾದುದು. ಈಗಾಗಲೇ ಚಾಲ್ತಿಯಲ್ಲಿಯಲಿರುವ ಜಾತಿ ಪದ್ದತಿ ಸಮಾಜವನ್ನು ಛಿದ್ರಗೊಳಿಸಿಯಾಗಿದೆ. ಆದರೆ ಮೀಸಲಾತಿ ಅದನ್ನು ಸರಿಪಡಿಸುವ ದಿಸೆಯಲ್ಲಿ ಸಾಗಿದೆ. ನಮ್ಮ ಪರಿಶಿಷ್ಠ ಜಾತಿ,ಪಂಗಡ ಮತ್ತು ಹಿಂದುಳಿದ ವರ್ಗಗಳಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಜಾತಿಗಳಿವೆ, ಅವನ್ನೆಲ್ಲ ಸೇರಿಸಿ ಎಸ್.ಸಿ, ಎಸ್.ಟಿ.ಮತ್ತು ಓಬಿಸಿ ಎಂಬ ಕೊಡೆಯ ಅಡಿಯಲ್ಲಿ ತಂದಿರುವುದು ಜಾತಿ ವಿನಾಶದತ್ತ ದೊಡ್ಡ ಹೆಜ್ಜೆಯಾಗಿದೆ. ಆದ್ದರಿಂದ ಮೀಸಲಾತಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಜಾತಿಪದ್ದತಿಯನ್ನು ನಿವಾರಿಸಲು ಮೇಲ್ಜಾತಿಗಳು ಪ್ರಾಮಾಣಿಕ ಪ್ರಯತ್ಮ ನಡೆಸಬೇಕಿದೆ. ಮೀಸಲಾತಿಯನ್ನು ವಿರೋಧಿಸುವವರು ಈ ದಿಸೆಯಲ್ಲಿ ಕೆಲಸ ಮಾಡುತ್ತಿದ್ದಾರೆಯೆ? ಎಂದರೆ ಅದಕ್ಕೆ ಉತ್ತರ: ಇಲ್ಲ! ಇವತ್ತು ಮೀಸಲಾತಿಯನ್ನು ವಿರೋಧಿಸುತ್ತಿರುವವರೆಲ್ಲ. ಜಾತಿ ತಮಗೆ ನೀಡಿರುವ ಎಲ್ಲ ಸವಲತ್ತುಗಳನ್ನು ಅನುಭವಿಸುತ್ತಿರುವವರೇ ಆಗಿದ್ದಾರೆ. ಜಾತಿಯ ಸವಲತ್ತುಗಳನ್ನು ಉಪಯೋಗಿಸಿಕೊಳ್ಳುತ್ತಲೆ ಜಾತಿಯಾಧಾರಿತ ಮೀಸಲಾತಿಯನ್ನು ವಿರೋಧಿಸುವವರ ಆತ್ಮವಂಚನೆ ಇದರಿಂದ ಗೊತ್ತಾಗುತ್ತದೆ.

9.ಮೀಸಲಾತಿಯು ಅರ್ಹತೆಯನ್ನು ನಾಶ ಮಾಡುತ್ತಿಲ್ಲವೆ?
ನಾವು ಅರ್ಹತೆ ಎಂಬುದರ ವ್ಯಾಖ್ಯೆಯನ್ನೆ ಸರಿಯಾಗಿ ಅರ್ಥೈಸಿಕೊಂಡಿಲ್ಲವೆನಿಸುತ್ತೆ. ಕಾನ್ಪುರದ ಐ.ಐ.ಟಿ.ಯ ಪ್ರೊಫೆಸರ್ ರಾಹುಲ್ ಬರ್ಮನ್ ರವರ ಪ್ರಕಾರ: ಮೆರಿಟ್ ಎಂದರೇನು? ಕೇವಲ ಪರೀಕ್ಷೆಗಳನ್ನು ಪಾಸು ಮಾಡುವುದೇ? ಪಾಸ್ ಎನ್ನುವುದು ಒಂದು ದಾರಿಯೆ ಹೊರತು ಅದೇ ಅಂತ್ಯವಲ್ಲ. ಪರೀಕ್ಷೆಗಳು ಒಬ್ಬ ವೈದ್ಯನನ್ನೊ ಒಬ್ಬ ಎಂಜಿನಿಯರ್‍ನನ್ನೊ ಮಾಡುವುದಷ್ಟೇ ಆಗಿದ್ದರೆ, ಹಾಗೆ ಮಾಡಲು ಪರೀಕ್ಷೆಗಳಿಗಿಂತ ಉತ್ತಮ ಮಾರ್ಗಗಳು ಇವೆ. ನನ್ನ ಕಾಲೇಜಿನ ದಿನಗಳಲ್ಲಿಹೀಗೆ ಹೇಳಲಾಗುತ್ತಿತ್ತು: ಒಬ್ಬ ಒಳ್ಳೆಯ ಇಂಜಿನಿಯರ್ ಅಂದರೆ ಕಡಿಮೆ ಸಂಪನ್ಮೂಲಗಳಲ್ಲಿ ಉತ್ತಮವಾದುದ್ದನ್ನು ಮಾಡುವವನು. ಮ್ಯಾನೇಜ್ ಮೆಂಟ್ ಕೂಡ ಅಷ್ಟೆ ಇರುವ ಸಂಪನ್ಮೂಲಗಳನ್ನೇ ಬಳಸಿ, ಕ್ಲಿಷ್ಟಕರ ಪರಿಸ್ಥಿತಿಯಲ್ಲಯೂ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಬಲ್ಲವನು ಎಂದು!. ಆದರೆ ನಾನು ನೋಡಿದ ಹಾಗೆ ಬಹುತೇಕ ಆದಿವಾಸಿಗಳು, ದಲಿತರು,ಹಿಂದುಳಿದವರೆ ನಡೆಸುವ ಮೊರಾದಾಬಾದಿನ ಹಿತ್ತಾಳೆ, ವಾರಣಾಸಿಯ ರೇಶ್ಮೆ, ಕಾನ್ಪುರದ ಚರ್ಮದ ಸಣ್ಣ ಕೈಗಾರಿಕೆಗಳು ತಮ್ಮ ಸೀಮಿತ ಸಂಪನ್ಮೂಲಗಳನ್ನೇ ಬಳಿಸಿ ಅತ್ಯತ್ತಮವಾದ ಉತ್ಪನ್ನಗಳನ್ನು ತಯಾರಿಸುತ್ತಿವೆ. ಅವು ನಿಮ್ಮ ಐ.ಟ. ಬಿ.ಟಿ. ಕೈಗಾರಿಕೆಗಳಿಗಿಂತ ಹೆಚ್ಚು ಸಂಖ್ಯೆಯಲ್ಲಿ ಉದ್ಯೋಗವಕಾಶಗಳನ್ನು ಒದಗಿಸಿವೆ ಮತ್ತು ಹೆಚ್ಚು ರಫ್ತು ವ್ಯವಹಾರವನ್ನೂ ಸಹ ಮಾಡುತ್ತಿವೆ. ಇವರುಗಳು ಅತ್ಯಂತ ಕಡಿಮೆ ಬಂಡವಾಳ ಹೂಡಿದ್ದು,ಸಮರ್ಪಕವಾದ ಶಿಕ್ಷಣವಿಲ್ಲದೆ, ಸಾಕಷ್ಟು ವಿದ್ಯುತ್ ಇಲ್ಲದೆ, ಸರಿಯಾದ ಸಾರಿಗೆ ವ್ಯವಸ್ಥೆಯಿರದೆ ತುಂಬಾ ಸೀಮಿತ ಸಂಪನ್ಮೂಲಗಳ ಸಹಾಯದಿಂದ ಇಂತಹ ಅದ್ಬುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಯಾರೂ ನಿಮ್ಮ ಸಾಂಪ್ರದಾಯಿಕ ಶಿಕ್ಷಣ ಪಡೆದು ಇಂಜಿನಿಯರುಗಳಾದವರು ಇಲ್ಲ. ಇದರ ನಿರ್ವಹಣೆ ಮಾಡುತ್ತಿರುವವರ್ಯಾರು ಎಂ.ಬಿ.ಎ. ಪದವಿ ಪಡೆದವರಲ್ಲ.ಅದೂ ಅಲ್ಲದೇ ಇವ್ಯಾವ ಕೈಗಾರಿಗೆಳು ದೊಡ್ಡ ಕೈಗಾರಿಕೆಗಳೊಂದಿಗೆ ಯಾವ ಸಮಪರ್ಕವನ್ನು ಹೊಂದಿಲ್ಲ.

ದಕ್ಷಿಣದ ನಾಲ್ಕು ರಾಜ್ಯಗಳು ಮಾತ್ರ ಶೇಕಡಾ 60ರಷ್ಟು ಮೀಸಲಾತಿಯನ್ನು ಕಲ್ಪಿಸಿವೆ. ಇನ್ನು ಉತ್ತರದ ಬಹುತೇಕ ರಾಜ್ಯಗಳು ಕೇವಲ ಶೇಕಡಾ15 ರಷ್ಟು ಮಾತ್ರ ಮೀಸಲಾತಿಯನ್ನು ಕಲ್ಪಿಸಿ ಉಳಿದೆಲ್ಲವನ್ನು ಮೇಲ್ವರ್ಗಗಳಿಗೆ ಬಿಟ್ಟು ಕೊಟ್ಟಿವೆ. ಹೀಗಾಗಿಯೆ ಇವತ್ತು ದಕ್ಷಿಣದ ರಾಜ್ಯಗಳು ಬಹುತೇಕ ಕ್ಷೇತ್ರಗಳಲ್ಲ್ಲಿ ಪ್ರಗತಿ ಸಾದಿಸಿವೆಯೆಂದು ವಿಶ್ವ ಬ್ಯಾಂಕಿನ ಅದ್ಯಯನವೇ ಹೇಳಿದೆ. ಸಾಮಾಜಿಕ ಕಳಕಳಿಯ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ದಕ್ಷಿಣದ ರಾಜ್ಯಗಳು ಸಾಕಷ್ಟು ಅಭಿವೃದ್ದಿಯನ್ನು ಸಾದಿಸಿವೆ.

10. ಈಗಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗಿರುವ ಮೀಸಲಾತಿ ಪರಿಣಾಮಕಾರಿಯಾಗಿದೆಯೆ?
ಸಾರ್ವಜನಿಕ ಉದ್ದಿಮೆಗಳಲ್ಲಿರುವ ಮೀಸಲಾತಿಯಿಂದ ಸಾಕಷ್ಟು ಅನುಕೂಲವಾಗಿದೆ. ಕೇಂದ್ರ ಸರಕಾರದಲ್ಲಿಯೆ 14 ಲಕ್ಷ ಉದ್ಯೋಗಿಗಳಿದ್ದಾರೆ. ಆದರೆ ಕೇಂದ್ರ ಸರಕಾರದ ಉದ್ಯೋಗಗಳಲ್ಲಿ ಮೂರು ಮತ್ತು ನಾಲ್ಕನೇ ದರ್ಜೆಯ ನೌಕರರ ಹೊರತಾಗಿ ಒಂದನೇ ಮತ್ತು ಎರಡನೆ ದರ್ಜೆಯ ನೌಕರರರಲ್ಲಿ ಕೇವಲ ಶೇಕಡಾ 8ರಿಂದ 10 ರಷ್ಟು ಮಾತ್ರ ಎಸ್.ಸಿ. ಮತ್ತು ಎಸ್.ಟಿ.ಗಳಿದ್ದಾರೆ. ಇವತ್ತು ಬಹುಜನ ಸಮಾಜವೇನಾದರು ದೆಹಲಿಯನ್ನು ಮುಟ್ಟಲು ಸ್ವಲ್ಪವಾದರು ಸಾದ್ಯವಾಗಿದ್ದರೆ ಅದು ಮೀಸಲಾತಿಯ ಸೌಲಭ್ಯದಿಂದ ಮಾತ್ರ. ಮೀಸಲಾತಿಯೇ ಇಲ್ಲದಿದ್ದರೆ ಉದ್ಯೊಗಗಳಿರಲಿ, ಶಿಕ್ಷಣ ಕ್ಷೇತ್ರಕ್ಕೂ ಬಹುಜನರು ಪ್ರವೇಶಿಸಲು ಸಾದ್ಯವಿರುತ್ತಿರಲಿಲ್ಲ.

ಆದ್ದರಿಂದ ಮೀಸಲಾತಿ ಇವತ್ತಿಗೂ ಪ್ರಸ್ತುತವಾಗಿದೆ.

Nov 19, 2015

ಅಸ್ವಸ್ಥ ಸಮಾಜದ ಹುಚ್ಚು ಮುಖಗಳು

Dr Ashok K R
ನಾನಾಗ ಪಿಯುಸಿ ಓದುತ್ತಿದ್ದೆ. ಗುರುಶ್ರೀ ಥಿಯೇಟರಿನ ಎದುರಿಗಿದ್ದ ಪಿ.ಇ.ಎಸ್ ಕಾಲೇಜಿನಿಂದ ಸಂಜಯ ಥಿಯೇಟರ್ ಸರ್ಕಲ್ಲಿನಲ್ಲಿ ಬಲಕ್ಕೆ ತಿರುಗಿ ನಾಲ್ಕೆಜ್ಜೆ ನಡೆದರೆ ಬಲಕ್ಕೆ ಸಿದ್ಧಾರ್ಥ ಥಿಯೇಟರ್ರಿದೆ. ಅದರ ಎದುರುಗಡೆ ಪೋಲೀಸ್ ಠಾಣೆ. ಒಮ್ಮೊಮ್ಮೆ ಸೈಕಲ್ ತಳ್ಕೊಂಡು ನಡ್ಕೊಂಡು ಹೋಗುವಾಗ ಸಿದ್ದಾರ್ಥ ಥಿಯೇಟರಿನ ಬಳಿಯೋ ಅಥವಾ ಅದರ ಹಿಂದೆಯೋ ಒಬ್ಬ ವ್ಯಕ್ತಿ ಎದುರಾಗುತ್ತಿದ್ದ. ತಲೆಗೆ ಎಣ್ಣೆ ಹಾಕಿ ಕ್ರಾಪು, ಕಣ್ಣಿಗೊಂದು ಕಪ್ಪು ಚೌಕಟ್ಟಿನ ಸೋಡಾ ಗ್ಲಾಸು, ಇಸ್ತ್ರಿ ಮಾಡಿದ್ದ ಕೆಂಚಗಾಗಿದ್ದ ಬಿಳಿ ಶರ್ಟು, ಕಪ್ಪು ಪ್ಯಾಂಟು, ಹೊಳಪು ಮಾಸಿದ ಚಪ್ಪಲಿ ಧರಿಸಿರುತ್ತಿದ್ದ ವ್ಯಕ್ತಿ ಎರಡು ಹೆಜ್ಜೆಗೊಮ್ಮೆ ನಿಂತು ನೆನಪಾದವರಿಗೆಲ್ಲ ಬಯ್ದು ಮತ್ತೆರಡು ಹೆಜ್ಜೆ ಹಾಕಿ ಇನ್ನೊಂದಷ್ಟು ಬಯ್ದು ಮತ್ತೆರಡು ಹೆಜ್ಜೆ ಹಾಕುತ್ತಿದ್ದ. ಬಯ್ಯಿಸಿಕೊಳ್ಳುವವರ ಲಿಸ್ಟಿನಲ್ಲಿ ಮುಖ್ಯಮಂತ್ರಿ, ಪ್ರಧಾನಮಂತ್ರಿಯಿಂದ ಹಿಡಿದು ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗರಿಂದ ಹಿಡಿದು ಪಕ್ಕದ ಮನೆಯವರು, ಮಕ್ಕಳು, ಪೋಲೀಸರೆಲ್ಲರೂ ಇದ್ದರು. ಯಾರಾದರೂ ಆತನನ್ನು ಗಮನಿಸುತ್ತಾ ಹತ್ತಿರದಲ್ಲೇ ನಿಂತುಬಿಟ್ಟರೆ ದನಿಯೇರುತ್ತಿತ್ತು ಬಯ್ಯುವ ಅವಧಿಯೂ ಜಾಸ್ತಿಯಾಗುತ್ತಿತ್ತು. ಯಾರೂ ಗಮನಿಸದಿದ್ದರೆ ಎರಡು ಹೆಜ್ಜೆಗೆ ಒಂದು ಬಯ್ಗುಳ. ಮುಂದೆ ಮೆಡಿಕಲ್ ಓದಲು ಮೈಸೂರಿಗೆ ತೆರಳಿದ ಮೇಲೆ ಆ ವ್ಯಕ್ತಿಯ ಕತೆ ಏನಾಯಿತೋ ತಿಳಿಯಲಿಲ್ಲ. ಕಳೆದೊಂದು ವಾರದಿಂದ 'ರಾಷ್ಟ್ರೀಯ ದುರಂತವಾದ' ವೆಂಕಟನ ಸುತ್ತಲಿನ ಸಂಕಟಗಳ ಬಗ್ಗೆ ಆಗೀಗ ಚೂರು ಚೂರು ನೋಡಿ ಕೇಳಿ ತಿಳಿದುಕೊಂಡಾಗ ನನಗೆ ನೆನಪಾಗಿದ್ದು ಮಂಡ್ಯದ ಆ ವ್ಯಕ್ತಿ.

ಒಬ್ಬ ಮಾನಸಿಕ ಅಸ್ವಸ್ಥನನ್ನು (ಆತ ನಟನೆಯನ್ನೂ ಮಾಡುತ್ತಿರಬಹುದು) ಹೇಗೆ ನಡೆಸಿಕೊಳ್ಳಬೇಕೆಂದು ಮರೆತುಹೋದ ಸಮಾಜವನ್ನು ಯಾವ ಕೋನದಿಂದ ನಾಗರೀಕವೆಂದು ಕರೆಯಬಹುದು? ಆದಿವಾಸಿಗಳನ್ನು ಅವರ ರೀತಿ ನೀತಿಗಳನ್ನು ಅನಾಗರೀಕವೆಂದು ಕರೆದುಬಿಡುವ ನಾವಿರುವ ನಾಗರೀಕತೆ ಇಷ್ಟೊಂದು ವಿಷಮಯವಾಗಿದೆಯೆಂದರೆ ಅನಾಗರೀಕರಾಗುವುದೇ ಉತ್ತಮವಲ್ಲವೇ? ಅದೆಷ್ಟೇ ವೈಯಕ್ತಿಕವೆಂದರೂ ಸುದೀಪ್ ವಿಚ್ಛೇದನ ಪಡೆದುಕೊಂಡಿರುವುದು ಸತ್ಯ. ವಿಚ್ಛೇದನ ಪಡೆದುಕೊಂಡಿರುವ ವ್ಯಕ್ತಿಯೊಬ್ಬ ‘ರಿಯಾಲಿಟಿ ಶೋ’ ಒಂದರಲ್ಲಿ ಕೌಟುಂಬಿಕ ಮೌಲ್ಯಗಳ ಬಗ್ಗೆ ಮಾತನಾಡುವುದನ್ನು ನಮ್ಮ ಕರ್ನಾಟಕದ ಕುಟುಂಬಗಳು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತವೆ! ಮಾನಸಿಕ ಅಸ್ವಸ್ಥನೆಂದೇ ಹೆಸರುವಾಸಿಯಾದ ವೆಂಕಟೇಶನನ್ನು ರಿಯಾಲಿಟಿ ಶೋಗೆ ಸೇರಿಸಿಕೊಳ್ಳುವ ವಾಹಿನಿಯವರು ಅವನಿಂದ ಎಷ್ಟು ಟಿ.ಆರ್.ಪಿ ಪಡೆಯಬೇಕೋ ಅಷ್ಟನ್ನು ಪಡೆದುಬಿಟ್ಟರು. ಆತನ ಹುಚ್ಚಾಟದಿಂದ ವೆಂಕಟನನ್ನು ಬಿಗ್ ಬಾಸ್ ರಿಯಾಲಿಟಿ ಶೋದಿಂದ ಹೊರಹಾಕಿದ್ದೂ ಆಯಿತು. ಅಲ್ಲಿಗಾದರೂ ವೆಂಕಟೇಶನ ಮಹಿಮೆ ಮುಗಿಯಬೇಕಿತ್ತು. ಮುಗಿಯುವುದಕ್ಕೆ ಸುದ್ದಿ ವಾಹಿನಿಗಳು ಬಿಡಲಿಲ್ಲ.

ದಿನದ ಇಪ್ಪತ್ತನಾಲ್ಕು ತಾಸು ತೋರಿಸುವುದಕ್ಕೆ ಸುದ್ದಿಯಾದರೂ ಎಲ್ಲಿರುತ್ತದೆ? ಸುದ್ದಿಯಲ್ಲದ ಇಂತವುಗಳನ್ನು ಮಾಡದಿದ್ದರೆ ವಾಹಿನಿಯವರ ಹೊಟ್ಟೆ ತುಂಬಬೇಕಲ್ಲ. ನೂರಿನ್ನೂರು ಜನರ ಹೊಟ್ಟೆ ತುಂಬಿಸುವುದಕ್ಕೆ ಟಿವಿ ವೀಕ್ಷಕರ ಮನಸ್ಥಿತಿಯನ್ನೇ ಹಾಳುಗೆಡವುವ ಕೆಲಸವನ್ನು ಮಾಡುವುದನ್ನು ವಾಹಿನಿಗಳು ಯಾವಾಗಲೋ ಪ್ರಾರಂಭಿಸಿಬಿಟ್ಟಿವೆ. ಕನ್ನಡಪ್ರಭದಲ್ಲಿ ಸುವರ್ಣ ವಾಹಿನಿಯ ಸುಗುಣ ಎನ್ನುವವರು ಹೇಗೆ ತಾವು ರಾತ್ರಿ ಹನ್ನೊಂದು ಘಂಟೆಯಿಂದ ಬೆಳಗಿನ ಜಾವ ನಾಲ್ಕರವರೆಗೆ ವೆಂಕಟನ ಮನೆಯ ಬಳಿಯೇ ಕಾದು ಕುಳಿತಿದ್ದೆ ಎನ್ನುವುದರ ‘ರೋಚಕ’ ವಿವರಗಳನ್ನು ಬರೆದುಕೊಳ್ಳುತ್ತಾರೆ! ವಾಹಿನಿಯಲ್ಲಿ ಲೈವ್ ಆಗಿ ಕೂರಿಸಿ ವೆಂಕಟನನ್ನು ಕಿಚಾಯಿಸಿ ಥೇಟ್ ಮಂಡ್ಯದ ಆ ವ್ಯಕ್ತಿಯಂತೆ ಬಡಬಡಿಸುವಂತೆ ಮಾಡಿ ಅವನ ನೆನಪಿಗೆ ಬಂದವರಿಗೆಲ್ಲ ಬಯ್ಯುವಂತೆ ಮಾಡಿಬಿಟ್ಟರು. ಕೊನೆಗೆ ಪಬ್ಲಿಕ್ ಟಿವಿಯಲ್ಲಿ ಆತ ಯಾರ ಮೇಲೋ ಕೈ ಮಾಡಲು ಹೋಗಿ ಪಬ್ಲಿಕ್ ವಾಹಿನಿಯ ಪತ್ರಕರ್ತರು ಸ್ಟುಡಿಯೋದಲ್ಲಿನ ಜಗಳ ಬಿಡಿಸಿದರು. ವಾಹಿನಿಯಲ್ಲಿ ಯಾರಾದರೂ ಪರಿಚಯವಿದ್ದರೆ ಕೇಳಿ ನೋಡಿ ‘ನಾವೇನ್ ಮಾಡಾಣ? ಇಂತ ಕಾರ್ಯಕ್ರಮಕ್ಕೇ ಟಿ.ಆರ್.ಪಿ ಜಾಸ್ತಿ. ಟಿ.ಆರ್.ಪಿ ಬರುತ್ತೆ ಮಾಡ್ತೀವಿ’ ಎಂದೇ ಹೇಳುತ್ತಾರೆ. ಆಗ ತಪ್ಪು ಇಂತಹ ಕಾರ್ಯಕ್ರಮಗಳನ್ನು ಮಾಡುವ ವಾಹಿನಿಗಳದ್ದಾ ಅಥವಾ ಇಂತಹ ಕಾರ್ಯಕ್ರಮಗಳನ್ನು ನೋಡುವ ಜನರದ್ದಾ? ಎಂಬ ಪ್ರಶ್ನೆ ಮೂಡದೇ ಇರದು. 

ಮಾಲ್ಗುಡಿ ಡೇಸ್, ಗುಡ್ಡದ ಭೂತದಂತಹ ಉತ್ತಮ ಧಾರವಾಹಿಗಳನ್ನು ನೋಡಿದ ಜನರೇ ಇವತ್ತು ದ್ವೇಷ ತುಂಬಿದ ಹೆಂಗಸರ ಕಿತ್ತಾಟದ ಧಾರವಾಹಿಗಳನ್ನು ನೋಡುತ್ತಿದ್ದಾರೆ, ಅರ್ಥವಿಲ್ಲದ ರಿಯಾಲಿಟಿ ಶೋಗಳನ್ನು ನೋಡುತ್ತಿದ್ದಾರೆ. ಅಂದಿನ ನಿರ್ದೇಶಕರಿಗೆ ಯಾರೂ ಉತ್ತಮ ಅಭಿರುಚಿಯ ಧಾರವಾಹಿಗಳನ್ನು ಮಾಡಿ ಎಂದು ಬೇಡಿಕೆ ಇಟ್ಟಿರಲಿಲ್ಲ, ಇಂದಿನ ನಿರ್ದೇಶಕರಿಗೂ ಯಾರೂ ಕಿತ್ತಾಟದ ಕಾರ್ಯಕ್ರಮಗಳನ್ನು ಮಾಡಿ ಎಂದು ಬೇಡಿಕೆ ಇಟ್ಟಿಲ್ಲ. ಕಲಾವಿದನಿಗೆ, ನಿರ್ದೇಶಕನಿಗೆ, ವಾಹಿನಿಯ ಮುಖ್ಯಸ್ಥನಿಗೆ ಡಿಫಾಲ್ಟಾಗಿ ಒಂದು ಸಾಮಾಜಿಕ ಬದ್ಧತೆ ಕಾಳಜಿ ಇರಲೇಬೇಕು. ಅದಿಲ್ಲವಾಗಿರುವುದೇ ಇಂದಿನ ಪರಿಸ್ಥಿತಿಗೆ ಮುಖ್ಯ ಕಾರಣ. ಬಿಗ್ ಬಾಸಿನ ಮೊದಲನೇ ಸರಣಿ ಮುಗಿದ ಮೇಲೆ ಎರಡನೇ ಸರಣಿ ಮಾಡಿ ಮೂರನೇ ಸರಣಿ ಮಾಡಿ ಎಂದೇನಾದರೂ ಜನರು ವಾಹಿನಿಯ ಮುಂದೆ ಅಲವತ್ತುಕೊಂಡಿದ್ದರೆ? 

ಇನ್ನು ಈ ಎಲ್ಲಾ ಸಂಭ್ರಮದ ನಡುವೆ ದಲಿತ ಸೇನೆಯವರು ದರಿದ್ರ ಕೆಲಸ ಮಾಡಿದ್ದಾರೆ. ಅಂಬೇಡ್ಕರ್ ಬಗ್ಗೆ ಅವಮಾನಕರವಾಗಿ ಮಾತನಾಡಿದ ಎಂಬ ಕಾರಣಕ್ಕೆ ವೆಂಕಟನ ಮೇಲೆ ಮಸಿ ಬಳಿದಿದ್ದಾರೆ. ಆತನ ಮಾನಸಿಕ ಸ್ಥಿತಿಯನ್ನು ಗಮನಿಸಿದ ಮೇಲೂ ಈ ಕೆಲಸ ಮಾಡಬೇಕಿತ್ತಾ? ವಾಹಿನಿಗಳಿಗೇನೋ ಟಿ.ಆರ್.ಪಿ ಹುಚ್ಚು. ವೆಂಕಟನ ಪಟದ ಮೇಲೆ ಹಾಲು ಸುರಿಯುವ ‘ಅಭಿಮಾನಿ’ಗಳು ಮತ್ತು ಮಸಿ ಬಳಿದ ದಲಿತ ಸೇನೆಯವರಿಗೆ ಸುದ್ದಿಯಾಗುವ ಹುಚ್ಚಷ್ಟೇ ಇಲ್ಲಿ ಕಾಣಿಸುತ್ತಿದೆ. ಒಬ್ಬ ಮಾನಸಿಕ ಅಸ್ವಸ್ಥನಿಗೆ ಅಗತ್ಯವಾಗಿ ಬೇಕಾಗಿರುವುದು ಚಿಕಿತ್ಸೆ. ಅಂತಹ ವ್ಯಕ್ತಿಯನ್ನು ಕೂರಿಸಿಕೊಂಡು ಇಲ್ಲಸಲ್ಲದ ಚೇಷ್ಟೆಗಳನ್ನು ಮಾಡುತ್ತ ಕುಳಿತಿರುವ ವಾಹಿನಿಗಳು ಮತ್ತದಕ್ಕೆ ಪೂರಕವಾಗಿ ಸ್ಪಂದಿಸುತ್ತ ವಿಕೃತ ಆನಂದವನ್ನನುಭವಿಸುತ್ತ ಹಾಲು ಸುರಿದು ಮಸಿ ಬಳಿದು ಸಂಭ್ರಮಿಸುತ್ತಿರುವ ಸಮಾಜ! ಇಲ್ಲಿ ನಿಜಕ್ಕೂ ಮಾನಸಿಕ ಅಸ್ವಸ್ಥತೆ ಇರುವುದು ಯಾರಿಗೆ?

ಭೀಕರ

ಕು.ಸ.ಮಧುಸೂದನ್
ವರ್ತಮಾನ ಕಷ್ಟವಾದಾಗ
ಇತಿಹಾಸ ಇಷ್ಟವಾಗುತ್ತದೆ
ತಾಳೆಗರಿಗಳ ಮೇಲೆ ಬರೆಸಲ್ಪಟ್ಟ
ವಿಷಯಗಳೇ ಸಂವಿಧಾನದ ಪರಿಚ್ಛೇದಗಳಾಗಿ
ಅಳತೊಡಗುತ್ತವೆ
ಆಗಿನ್ನೂ ಹುಟ್ಟಿದ ಮಗುಕಿಟಾರನೆ ಕಿರುಚುತ್ತದೆ ಬೆಚ್ಚಿ!
ಕಗ್ಗಂತಲ ಖಂಡದ ಕನಸುಗಳೇ
ನಿಜವಾಗತೊಡಗಿ
ಪುರಾಣ ವರ್ತಮಾನವಾಗತೊಡಗುತ್ತದೆ
ಭವಿಷ್ಯ ಮಂಕಾಗುತ್ತದೆ!

Nov 18, 2015

ಯಥಾ ಪ್ರಧಾನಿ ತಥಾ ವಿರೋಧಿ!

ಕಾಂಗ್ರೆಸ್ಸಿನ ಇಬ್ಬರು ಬೃಹಸ್ಪತಿಗಳು ಭಾರತದ ಮಾನವನ್ನು ವಿದೇಶದಲ್ಲಿ, ಅದೂ ಭಾರತದ ಕೆಡುಕನ್ನೇ ಸದಾ ಬಯಸುವ ಪಾಕಿಸ್ತಾನದಲ್ಲಿ ಕಳೆದು ಬಂದಿದ್ದಾರೆ. ಹೆಸರಿಗೆ ಅವರು ಕಳೆದುಹಾಕಿರುವುದು ನರೇಂದ್ರ ಮೋದಿಯವರ ಮಾನವನ್ನಾದರೂ ಮೋದಿಯವರು ಭಾರತದ ಪ್ರಧಾನಿಯಾಗಿರುವುದರಿಂದ ಇದು ಭಾರತದ ಮಾನಹಾನಿಯೇ ಅಲ್ಲವೇ?! ಇಸ್ಲಮಾಬಾದಿನ ಜಿನ್ನಾ ಸಂಸ್ಥೆಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರದ ಮಾಜಿ ಸಚಿವ ಸಲ್ಮಾನ್ ಖುರ್ಷಿದರಿಗೆ ಇದ್ದಕ್ಕಿದ್ದಂತೆ ನವಾಜ್ ಷರೀಫರ ಮೇಲೆ ಭಯಂಕರ ಪ್ರೀತಿ ಹುಟ್ಟಿ ಅವರನ್ನು ವಾಚಮಾಗೋಚರವಾಗಿ ಹೊಗಳಿ ನರೇಂದ್ರ ಮೋದಿಯವರನ್ನು ತೆಗಳಿದ್ದಾರೆ. ಏನೋ ಪಾಕಿಸ್ತಾನಕ್ಕೆ ಹೋಗಿದ್ದಾರೆ, ಅಲ್ಲಿಯೇ ಇದ್ದುಕೊಂಡು ಅಲ್ಲಿನ ಪ್ರಧಾನಿಯನ್ನು ತೆಗಳುವುದು ಸರಿಯಾಗುವುದಿಲ್ಲ ಎಂದು ನವಾಜ್ ಷರೀಫರನ್ನು ಹೊಗಳಿದ್ದರೆ ಸುಮ್ಮನಾಗಬಹುದಿತ್ತು. ವಿದೇಶಿ ನೆಲದಲ್ಲಿ ಭಾರತದ ಪ್ರಧಾನಮಂತ್ರಿಯನ್ನು ಹೀಗಳೆಯುವ ಕೆಲಸವನ್ಯಾಕೆ ಮಾಡಬೇಕು? ಮಂತ್ರಿ ಪದವಿಯ ಜೊತೆಗೆ ಬುದ್ಧಿಯನ್ನೂ ಮರಳಿಸಿಬಿಟ್ಟರೆ?

ಇನ್ನೂ ಸದಾ ವಿವಾದಿತ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಕಾಂಗ್ರೆಸ್ಸಿನ ಮಣಿಶಂಕರ್ ಅಯ್ಯರ್ ಪಾಕಿಸ್ತಾನದ 'ದುನಿಯಾ ಟಿವಿ'ಗೆ ಕೊಟ್ಟ ಸಂದರ್ಶನದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಬಾಂಧವ್ಯ ವೃದ್ಧಿಯಾಗಬೇಕಾದರೆ ಮೋದಿ ತೊಲಗಿ ಕಾಂಗ್ರೆಸ್ ಮರಳಿ ಬರಬೇಕು ಎಂದಿದ್ದಾರೆ. ಮೊದಲೇ ಭಾರತವನ್ನು ವೈರಿಯಾಗಿಯೇ ನೋಡುವ ಪಾಕಿಸ್ತಾನದಲ್ಲಿ ಮೋದಿ ನಿಮ್ಮ ಮೊದಲ ವೈರಿ ಎಂಬರ್ಥದ ಮಾತುಗಳನ್ನಾಡಿ ಬಂದಿದ್ದಾರೆ. ಇವರಿಗೇನ್ ಬುದ್ಧಿ ಇಲ್ಲವಾ? ಅಥವಾ ಇವರ ದ್ವೇಷವನ್ನು ತೋರ್ಪಡಿಸಲು ಭಾರತದಲ್ಲಿ ವಾಹಿನಿಗಳಿಲ್ಲವಾ? ನಮ್ಮಲ್ಲೇ 24x7 ವಾಹಿನಿಗಳು ಸುದ್ದಿಯಿಲ್ಲದೇ ಬಣಗುಟ್ಟುತ್ತಿರುವಾಗ ವಿದೇಶಿ ವಾಹಿನಿಗಳಲ್ಲಿ ದೇಶದ ಮರ್ಯಾದೆಯನ್ನು ಮೂರುಕಾಸಿಗೆ ಮಾರುವ ಪ್ರವೃತ್ತಿಯನ್ನು ವಿರೋಧಿಸಲೇಬೇಕು.

ಇವರಿಬ್ಬರು ಈ ರೀತಿಯೆಲ್ಲ ಮಾತನಾಡಿರುವುದಕ್ಕೆ ಸ್ಪೂರ್ತಿ ಯಾರಿರಬಹುದೆಂದು ಹುಡುಕಿದರೆ ಅದು ಮತ್ಯಾರೂ ಅಲ್ಲ ಭಕ್ತಾಸುಗಳನ್ನು ಬೆಳೆಸಿ ಪೋಷಿಸುತ್ತಿರುವ ನಮ್ಮಲ್ಲೆರ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು! ವಿರೋಧಿಗಳ ವಿರುದ್ಧ ಮೊನಚಿನ ಭಾಷಣ ಮಾಡುವುದರಲ್ಲಿ ಮೋದಿಯವರದು ಎತ್ತಿದ ಕೈ. ಅವರ ಭಾಷಣ ಕುಟ್ಟುವ ಉಮೇದಿ ಎಷ್ಟರವರೆಗಿದೆಯೆಂದರೆ ವಿದೇಶಿ ನೆಲದಲ್ಲಿ ನಿಂತಾಗಲೂ ಭಾರತದಲ್ಲಿನ ರಾಜಕೀಯ ವಿರೋಧಿಗಳ ಬಗ್ಗೆಯೇ ಮಾತನಾಡುತ್ತಾರೆ. ವಿದೇಶದಲ್ಲಿ ದೇಶದ ಮಾನ ತೆಗೆಯುತ್ತಿದ್ದೇನೆ ಎನ್ನುವುದರ ಅರಿವಿಲ್ಲದೆ ನೆಹರೂ ಬಗ್ಗೆ, ಅವರ ಕುಟುಂಬದ ಬಗ್ಗೆ, ರಾಹುಲ್ ಗಾಂಧಿಯ ಬಗ್ಗೆಯೆಲ್ಲ ಅನವಶ್ಯಕವಾಗಿ ಮಾತನಾಡಿ ಬಂದಿದ್ದಾರೆ. ಜಪಾನಿನಲ್ಲಿ ಭಗವದ್ಗೀತೆಯನ್ನು ಕೊಡುವಾಗ, ವಿದೇಶದಲ್ಲಿ ಸಂಸ್ಕೃತ ಶ್ಲೋಕ ಹಾಡಿದ ಮಕ್ಕಳನ್ನು ಹೊಗಳುವಾಗ ಭಾರತದ ಜಾತ್ಯತೀತರ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ. ದೇಶದ ಮಾನ ತೆಗೆಯುವುದಕ್ಕೆ ಏನೆಲ್ಲ ಒದರಬೇಕೋ ಅದರ ಬಗ್ಗೆ ಒದರಿದ್ದಾರೆ. 

ಭಾರತವೀಗ 'ಸೂಪರ್ ಪವರ್' ಆಗುತ್ತಿರುವ ಕಾರಣ ದೇಶದೊಳಗಿನ ರಾಜಕೀಯ ದ್ವೇಷವನ್ನು ವಿದೇಶದಲ್ಲೂ ತೋರ್ಪಡಿಸಬೇಕು ಎಂದು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಾಕಿಕೊಟ್ಟ ಹಾದಿಯಲ್ಲೇ ಕಾಂಗ್ರೆಸ್ಸಿನ ಸಲ್ಮಾನ್ ಖುರ್ಷಿದ್ ಮತ್ತು ಮಣಿಶಂಕರ್ ಅಯ್ಯರ್ ಸಾಗುತ್ತಿದ್ದಾರೆ. ಭಾರತದ ಮಾನ? ಅಯ್ಯೋ ಬುಡಿ ಮಾನ ಮರ್ಯಾದೆ ಎಲ್ಲಾ ಕಟ್ಕೊಂಡು ಏನ್ ಮಾಡ್ತೀರ... ಪಬ್ಲಿಸಿಟಿ ಮುಖ್ಯ.

Nov 17, 2015

ಮಾತು ಬೇಕಾಗಿಲ್ಲ

ಕು.ಸ.ಮಧುಸೂದನ್
ಮೌನವಾಗಿದ್ದ ಬುದ್ದ
ಮಾತಾಡಲಿಲ್ಲ
ನಾಲ್ಕು ಮನೆಗಳ ಬಗ್ಗೆ
ಎರಡು ದಾರಿಗಳ ಬಗ್ಗೆ
ಕಾಯುತ್ತಾ ಕೂತಿದ್ದರು ಶಿಷ್ಯರು
ಮಳೆಗೆ ಕಾದಿದ್ದ ಇಳೆಯ ಹಾಗೆ
ಮುಗುಳ್ನಕ್ಕ
ಬುದ್ದ
ಎದ್ದ
ಅರ್ಥವಾಯಿತೇ?
ಎಲ್ಲರಿಗೂ
ಎಂದ
ಎಲ್ಲ ಅಡಗಿರುವುದಿಲ್ಲಿ
ಹೂವು ಅರಳುವ ಗಳಿಗೆಯಲ್ಲಿ
ಎಲ್ಲವೂ ಚಣಮಾತ್ರ ಎನ್ನುವ ಸತ್ಯದಲ್ಲಿ
ಹೇಳಬೇಕಾದ್ದನ್ನು
ಹೇಳದೆಯೇ ಹೇಳಿದ
ಅರ್ಥ ಮಾಡಿಸಿದ.

ಅಸಹಿಷ್ಣುತೆಯ ವಿರುದ್ದ ಪ್ರಗತಿಪರರ ಗೆಲುವು!

ಕು.ಸ.ಮಧುಸೂದನ್
ಅಂತೂ ನರೇಂದ್ರಮೋದಿಯ ನಾಯಕತ್ವದಲ್ಲಿ ಮತಾಂಧತೆಯಿಂದ ಹೂಂಕರಿಸುತ್ತಿದ್ದ ಬಾಜಪ, ಬಿಹಾರದ ವಿದಾನಸಭಾ ಚುನಾವಣೆಯಲ್ಲಿ ಬಾರೀ ಸೋಲು ಕಂಡಿದೆ. ಬಿಹಾರದ ವಿದಾನಸಭಾ ಚುನಾವಣೆಯಲ್ಲಿನ ಬಾಜಪದ ಸೋಲು,ದೇಶದಾದ್ಯಂತ ತೀವ್ರಗೊಂಡಿದ್ದ ಅಸಹಿಷ್ಣುತೆಯ ವಿರುದದ್ದ ಚಳುವಳಿಗೆ ದೊರೆತ ದೊಡ್ಡ ಗೆಲುವು ಎಂದು ಬಣ್ಣಿಸಿದರೆ ತಪ್ಪೇನಿಲ್ಲವೆನಿಸುತ್ತೆ. ಬಿಹಾರದ ವಿದಾನಸಭೆಗೆ ಚುನಾವಣಾ ಪ್ರಕ್ರಿಯೆ ಶುರುವಾದ ಸಮಯಕ್ಕೆ ಸರಿಯಾಗಿ ಪ್ರಾರಂಭವಾದ ಅಸಹಿಷ್ಣುತೆಯ ವಿರುದ್ದದ ಚಳುವಳಿ ಚುನಾವಣಾ ಪಲಿತಾಂಶ ಬಂದ ದಿನಕ್ಕೆ ಸರಿಯಾಗಿ ಗೆಲುವಿನ ಮೊದಲ ಮೆಟ್ಟಿಲನ್ನು ಏರಿದೆ.

ಈ ಚಳುವಳಿಯ ಭಾಗವಾಗಿ ಪ್ರಾರಂಭವಾದ ಪ್ರಶಸ್ತಿ ವಾಪಾಸು ಮಾಡುವ ನಮ್ಮ ಲೇಖಕರ, ಕಲಾವಿದರ, ವಿಜ್ಞಾನಿಗಳ ಮತ್ತು ಜಾತ್ಯಾತೀತ ತತ್ವದಲ್ಲಿ ನಂಬಿಕೆಯಿಟ್ಟ ಬಹುತೇಕ ಪ್ರಗತಿಪರರ ನಿಲುವುಗಳು, ವಿಚಾರಗಳು ಬಿಹಾರದ ಜನರನ್ನು ತಲುಪಿರುವುದರಲ್ಲಿ ಅನುಮಾನವೇನಿಲ್ಲ. ಕರ್ನಾಟಕದ ಕಲಬುರ್ಗಿಯವರ ಹತ್ಯೆಯಿಂದ ಶುರುವಾದ ಅಸಹಿಷ್ಣುತೆಯ ಘಟನೆಗಳಲ್ಲಿ ಬಹಳಷ್ಟು ಬಿಹಾರಕ್ಕೆ ತುಂಬಾ ಹತ್ತಿರದಲ್ಲ್ಲಿಯೇ ನಡೆದವು. ದಾದ್ರಿಯ ಹತ್ಯೆ, ಹರಿಯಾಣದಲ್ಲಿ ದಲಿತ ಮಕ್ಕಳನ್ನು ಜೀವಂತ ಸುಟ್ಟ ಪ್ರಕರಣಗಳನ್ನು ಬಿಹಾರದ ಜನ ತುಂಬಾ ಆಸಕ್ತಿಯಿಂದ, ಆತಂಕದಿಂದ ಗಮನಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಾಜಪ ಅಧಿಕಾರಕ್ಕೇರಿದ ಮರುಗಳಿಗೆಯಿಂದಲೇ ಆರಂಭಗೊಂಡ ಅಸಹಿಷ್ಣುತೆಯ ಘಟನಾವಳಿಗಳು ಆರ್ಥಿಕವಾಗಿ ತೀರಾ ಹಿಂದುಳಿದ ಬಿಹಾರದ ಜನತೆಯನ್ನು ಕಂಗೆಡಿಸಿದ್ದರೆ ಅಚ್ಚರಿಯೇನಿಲ್ಲ. ಯಾಕೆಂದರೆ ಈ ಪ್ರಶಸ್ತಿಯ ವಾಪಸಾತಿ ಚಳುವಳಿಯ ಜೊತೆಗೆ ಚುನಾವಣಾ ಪ್ರಚಾರದಲ್ಲಿ ಬಾಜಪದ ನಿಜವಾದ ಮುಖವಾದ ಸಂಘಪರಿವಾರವು ಮೀಸಲಾತಿಯನ್ನು ಪುನರ್ ಪರಿಶೀಲನೆಗೊಳಿಸುವ ಬಗ್ಗೆ ಮಾತಾಡಿತ್ತು. ಅತ್ಯಂತ ಹಿಂದುಳಿದ ಜಾತಿಗಳಿರುವ ಬಿಹಾರದ ಜನತೆಯ ಮಟ್ಟಿಗೆ ಮೀಸಲಾತಿಯ ಹಿಂತೆಗೆತ ಎಂದರೆ ಅದು ಅವರ ಇತಿಶ್ರೀ ಇದ್ದಂತೆ ಎನ್ನುವುದು ಬಿಹಾರದ ಜನತೆಗೆ ಮನವರಿಕೆಯಾಗಿತ್ತು. ಇದರ ಜೊತೆಗೆ ಚುನಾವಣೆಯ ಪ್ರಚಾರದಲ್ಲಿ ಬಾಜಪ ಅನವಶ್ಯಕವಾಗಿ ಹಿಂದುಳಿದ ಜಾತಿಯವರನ್ನು, ಮುಸ್ಲಿಮರನ್ನು ಓಲೈಸುವ ನಾಟಕವಾಡುತ್ತ ಮೇಲ್ಜಾತಿಯ ಮತಗಳನ್ನು ದ್ರುವೀಕರಿಸುವ ಕೆಲಸಕ್ಕೆ ಕೈ ಹಾಕಿತ್ತು. 

ಬಹುಶ: ಇಂತಹದೊಂದು ಸನ್ನಿವೇಶದಲ್ಲಿ ಬಿಹಾರದ ಮತದಾರರು ಸಂಪೂರ್ಣವಾಗಿಯಲ್ಲದಿದ್ದರೂ ಒಂದಿಷ್ಟಾದರು, ಪ್ರಶಸ್ತಿ ವಾಪಸಾತಿ ಚಳುವಳಿಯ ಹಿಂದಿನ ವಿಚಾರವಾದಿಗಳ ನೈಜ ಕಾಳಜಿಯ ಬಗ್ಗೆ ಅರ್ಥ ಮಾಡಿಕೊಂಡು ಬಾಜಪದ ವಿರುದ್ದ ತಮ್ಮ ಮತ ಚಲಾಯಿಸಿದ್ದಾರೆ ಅನಿಸುತ್ತೆ.

ಏನೇ ಆಗಲಿ ಒಂದಂತೂ ಈ ಚುನಾವಣೆಯ ಪಲಿತಾಂಶ ಸ್ಪಷ್ಟ ಪಡಿಸಿದೆ: ಅದೆಂದರೆ ಅಸಹಿಷ್ಣುತೆಯ ವಿರುದದ್ದ ಚಳುವಳಿಯ ಭಾಗವಾಗಿ, ಲೇಖಕರು ತಮ್ಮ ಪ್ರಶಸ್ತಿಯನ್ನು ವಾಪಾಸು ಮಾಡಲು ತೊಡಗಿದಾಗ ವಿರೋಧಿಸಿದ ಬಲಪಂಥೀಯ ಶಕ್ತಿಗಳಿಗೆ ಈ ಚಳುವಳಿಯ ಪರಿಣಾಮ ಎಷ್ಟು ತೀವ್ರವಾಗಿರಬಹುದೆಂಬುದು ಅರ್ಥವಾಗಿರುತ್ತದೆಯೆಂದು ನಂಬಿರುತ್ತೇನೆ. 

Nov 14, 2015

ಈ ಸಾವಿನ ಹೊಣೆಯನ್ನು ಯಾರು ಹೊತ್ತುಕೊಳ್ಳುತ್ತಾರೆ?

ಸಾಬಿ ಸತ್ತರೆ ಹಿಂದೂ ಸಂಘಟನೆಗಳ ಕೃತ್ಯ, ಹಿಂದೂ ಸತ್ತರೆ ಮುಸ್ಲಿಂ ಸಂಘಟನೆಗಳ ಕೃತ್ಯ ಎಂದು ಕಣ್ಣುಮುಚ್ಚಿ ಶರಾ ಬರೆದುಬಿಡುವವರಿಗೆ ಈ ಪ್ರಕರಣವೊಂದು ಒಗಟಾಗಿಬಿಟ್ಟಿದೆ. ಸಮೀವುಲ್ಲಾ ಮತ್ತು ಹರೀಶ್ ಕ್ರಿಕೆಟ್ ಆಡಿ ವಾಪಸ್ಸಾಗುವಾಗ ಅಂಗಡಿಯೊಂದರ ಬಳಿ ಕೂಲ್ ಡ್ರಿಂಕ್ಸ್ ಕುಡಿಯುವಾಗ ಗುಂಪೊಂದು ಬಂದು ಸಮೀವುಲ್ಲಾನ ಮೇಲೆ ದಾಳಿ ನಡೆಸುತ್ತಾರೆ, ತಡೆಯಲು ಬಂದ ಹರೀಶನ ಮೇಲೆಯೂ ದಾಳಿ ನಡೆಸುತ್ತಾರೆ. ಹರೀಶ ಹತನಾಗುತ್ತಾನೆ. 
ಮುಸ್ಲಿಂ ಮತ್ತು ಹಿಂದೂಗಳಿಬ್ಬರ ಮೇಲೆಯೂ ಹಲ್ಲೆಯಾಗಿಬಿಟ್ಟಿದೆ. ಹಲ್ಲೆ ನಡೆಸಿದ್ದು ಹಿಂದೂ ಸಂಘಟನೆಯೋ ಮುಸ್ಲಿಂ ಸಂಘಟನೆಯೋ ಇನ್ನೂ ಗೊತ್ತಾಗಿಲ್ಲ. ಹರೀಶನ ಮನೆಯೀಗ ಅನಾಥವಾಗಿದೆ. 
ಅಂದಹಾಗೆ ಉಳಿದೆಲ್ಲೆಡೆ ಟಿಪ್ಪು ಸಂಬಂಧಿತ ಗಲಭೆಗಳು ಕಡಿಮೆಯಾಗುತ್ತಿದ್ದರೆ ದಕ್ಷಿಣ ಕನ್ನಡದಲ್ಲಿ ಬಿಗುವಿನ ವಾತಾವರಣವೇ ಇದೆಯಂತೆ. ನೆನಪಿರಲಿ ದಕ್ಷಿಣ ಕನ್ನಡದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರವೊಂದನ್ನು ಬಿಟ್ಟು ಬೇರೆಲ್ಲ ಕಡೆಯೂ ಬಿಜೆಪಿ ಸೋಲನ್ನನುಭವಿಸಿತ್ತು. ಅವರಿಗಿದು ಮತ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುವ ಮಾರ್ಗ. ಮೃದು ಹಿಂದುತ್ವವನ್ನಾಚರಿಸುವ ಕಾಂಗ್ರೆಸ್ಸಿಗರು ಮೌನವಾಗೇ ಈ ಘಟನೆಗಳನ್ನು ಒಪ್ಪಿಬಿಡುತ್ತಾರೆ. ಇವರ ಜೊತೆಗೆ ಇವರಿಗಿಂತಲೂ ಹೀನವಾಗಿ ವರ್ತಿಸುವುದಕ್ಕೆ ಪಿ.ಎಫ್.ಐನಂತಹ ಮುಸ್ಲಿಂ ಸಂಘಟನೆಗಳಿವೆ. ಅವರಿಗೆ ಮುಸ್ಲಿಂ ಮತಗಳನ್ನು ಒಟ್ಟುಗೂಡಿಸುವ ಕೆಲಸ. ಮತಗಳ ಒಟ್ಟುಗೂಡುವಿಕೆಯ ಸಮಯದಲ್ಲಿ ಮಾನವೀಯತೆ ಮೂರಾಬಟ್ಟೆಯಾದರೆ ಯಾರಿಗೇನಾಗಬೇಕು ಹೇಳಿ.

Nov 12, 2015

ಕುಂವಿ ಮತ್ತು ಬಂಜಗೆರೆಯವರ ಪ್ರತಿಕ್ರಿಯೆ.

ನವೀನ್ ನಿಮ್ಮಂಥ ಪ್ರಗತಿಪರ ಯುವಮನಸ್ಸುಗಳ ಆತಂಕ ಅರ್ಥಾಗುತ್ತೆ, ನಾನು ಅಕಸ್ಮಾತ್ ಆ ದಿವಸ ಉಪನ್ಯಾಸ ನೀಡಿದರೆ ಅದು ನಾಡಿನ ಸಹಸ್ರ ವಿವಿಧ ಜಾಯಮಾನದ ಹಾಗೂ ಅಭಿರುಚಿಯ ಜನರನ್ನುದ್ದೇಶಿಸಿ, ಆದರೆ ಮೋಹನ್ ಆಳ್ವಾ ಕುಟುಂಬ ಸದಸ್ಯರನ್ನುದ್ದೇಶಿಸಿ ಖಂಡಿತ ಅಲ್ಲ, ಅದು ಮಾತಾಡಲು.ತಿದ್ದಲು. ಪ್ರತಿಭಟಿಸಲು ಸೂಕ್ತ ಜಾಗ, ನನ್ನಂಥೋರು ಭಾಗವಹಿಸದಿದ್ದಲ್ಲಿ ಮೂಲಭೂತವಾದಿಗಳಾದ ಬೇರೆಯವರು ಮಾತಾಡ್ತಾರೆ. ಆತ್ಮಸಾಕ್ಷಿ ಕಳೆದುಕೊಳ್ಳುವುದಿಲ್ಲ, ರಾಜಿಯಾಗೋದಿಲ್ಲ, ನೇರ ದಿಟ್ಟ ನಿರಂತರ, ಆತಂಕ ಬೇಡ.
- ಕುಂವೀ

ಇದನ್ನೂ ಓದಿ: ಬಂಜಗೆರೆ ಮತ್ತು ಕುಂವೀಯವರಿಗೊಂದು ಬಹಿರಂಗ ಪತ್ರ


ಸಾಕಷ್ಟು ಪರ್ಯಾಲೋಚಿಸದೆ, ಸಾಮಾಜಿಕ ನ್ಯಾಯದ ಹೊಸ ಹುಡುಕಾಟಗಳು ಎಂಬ ವಿಷಯವನ್ನಷ್ಟೆ ನೋಡಿಕೊಂಡು ಒಪ್ಪಿಕೊಂಡಿದ್ದೆ. ಈಗ ನಮ್ಮ ಬಂಧು-ಬಳಗಕ್ಕೆ ನಾನು ಹಾಗೇ ಹೋಗುವುದು ಸರಿಯಲ್ಲ ಅನಿಸಿದರೆ ನಾನು 'ನುಡಿಸಿರಿ'ಗೆ ಹೋಗುವುದಿಲ್ಲ. ಸಂಗಾತಿಗಳ ಮನಸ್ಸಿಗೆ ಕಸಿವಿಸಿ ಉಂಟು ಮಾಡಿದ್ದಕ್ಕೆ ನಾನು ನಿಮ್ಮೆಲ್ಲರ ಕ್ಷಮೆ ಕೇಳುತ್ತಿದ್ದೆನೆ. ನಾವೆಲ್ಲರೂ ಒಂದೇ. ನಾವೆಲ್ಲರೂ ಕೈಗೆ ಕೈಜೋಡಿಸಿ ಸಾಂಸ್ಕೃತಿಕ ಯುದ್ಧವನ್ನು ಗೆಲ್ಲಬೇಕಾದ ಸಂಗಾತಿಗಳು. ನಾನು ನಿಮ್ಮೊಡನೆ ಇರುತ್ತೇನೆ, ಎಲ್ಲರಿಗೂ ವಂದನೆಗಳು.
-ಬಂಜಗೆರೆ ಜಯಪ್ರಕಾಶ.

ಸತ್ತವರ ಹೆಸರಲ್ಲಿ ಸಾವಿನ ಆಚರಣೆ.

Dr Ashok K R
ಟಿಪ್ಪು ಬಗೆಗಿನ ಚರ್ಚೆ ಅನವಶ್ಯಕ ಎಂದೇ ನಂಬಿದ್ದವನು ನಾನು. ನಾವು ದಿನನಿತ್ಯ ವ್ಯವಹರಿಸುವ, ಸಂವಹಿಸುವ ಜನರ ಒಳ್ಳೆಯತನದ ಬಗ್ಗೆಯೇ ನಮಗೆ ಅರಿವಾಗದಿರುವಾಗ ಇನ್ನೂರು ಮುನ್ನೂರು ವರ್ಷದ ಹಿಂದೆ ಸತ್ತು ಹೋದ ವ್ಯಕ್ತಿಯೊಬ್ಬ ದೇವರಷ್ಟೇ ಒಳ್ಳೆಯವನು ದೆವ್ವದಷ್ಟೇ ಕೆಟ್ಟವನು ಎಂದು ವಾದಿಸುವುದು ಇವತ್ತಿನ ವರ್ತಮಾನಕ್ಕೆ ಎಷ್ಟರ ಮಟ್ಟಿಗೆ ಅವಶ್ಯಕ? ಟಿಪ್ಪುವಿನ ಹೆಸರಲ್ಲಿ ಸಾವು ನಡೆದುಹೋಗಿದೆ. ಸಾವಿನ ನೆಪದಲ್ಲಿ ಪೊಲಿಟಿಕಲ್ ಮೈಲೇಜ್ ತೆಗೆದುಕೊಳ್ಳುವವರ ಸಂಖೈಯೂ ಹೆಚ್ಚಾಗಿಬಿಟ್ಟಿದೆ. ಜನರನ್ನು ಉದ್ರೇಕಗೊಳಿಸುವಂತಹ ಬರಹಗಳು ಫೇಸ್ ಬುಕ್ ತುಂಬ ರಾರಾಜಿಸುತ್ತಿವೆ. ಈಗಲೂ ಮನಸ್ಸಿಗೆ ಅನ್ನಿಸಿದ್ದನ್ನು ಬರೆಯದಿರುವುದು ಸರಿಯಲ್ಲ ಎಂಬ ಕಾರಣಕ್ಕೆ ಈ ಬರಹ. ಮೊದಲು ಟಿಪ್ಪು ಜಯಂತಿಯ ವಿರೋಧಿಗಳ ವಾದದಲ್ಲಿರುವ ದ್ವಂದ್ವಗಳನ್ನು ಗುರುತಿಸೋಣ.

ಇದನ್ನೂ ಓದಿ: ಟಿಪ್ಪು ಎಂಬ ಅನವಶ್ಯಕ ಚರ್ಚೆ

ಟಿಪ್ಪು ಒಬ್ಬ ಧರ್ಮದ್ರೋಹಿ, ಸಾವಿರಾರು ಹಿಂದೂಗಳನ್ನು ಕೊಂದು ಸಾವಿರಾರು ಜನರನ್ನು ಮತಾಂತರಿಸಿದ, ಅವನ ಕೈಯೆಲ್ಲ ರಕ್ತಮಯ: ಟಿಪ್ಪು ವಿರೋಧಿಗಳು ಹೇಳಿರುವುದೆಲ್ಲವೂ ಸತ್ಯ. ಆತ ಸಾವಿರಾರು ಜನರನ್ನು ಕೊಂದಿರುವುದೂ ಹೌದು, ಮತಾಂತರಿಸಿರುವುದೂ ಹೌದು. ಟಿಪ್ಪು ಪ್ರಜಾಪ್ರಭುತ್ವ ರೀತಿಯಿಂದ ಆಯ್ಕೆಯಾದ ‘ರಾಜ’ನಲ್ಲ ಎನ್ನುವುದನ್ನು ನೆನಪಿಡಬೇಕು. ಆತ ಅರಮನೆಯ ಸುಖದೊಳಗೆ ಬಂಧಿಯಾಗಿದ್ದ ರಾಜನೂ ಅಲ್ಲ. ಹೆಚ್ಚಿನ ದಿನಗಳನ್ನು ಯುದ್ಧಗಳಲ್ಲೇ ಕಳೆದ; ಯುದ್ಧದ ಉದ್ದೇಶ ಸಾಮ್ರಾಜ್ಯ ವಿಸ್ತರಣೆ ಮತ್ತು ಸಾಮ್ರಾಜ್ಯ ರಕ್ಷಣೆ. ಯುದ್ಧವೆಂದ ಮೇಲೆ ಸಾವಿರುವುದು ಸತ್ಯವಲ್ಲವೇ. ಇಡೀ ದೇಶದ ರಾಜರೆಲ್ಲ ಯುದ್ಧವನ್ನು ‘ಶಾಂತಿ’ಯಿಂದ ನಡೆಸಿಬಿಟ್ಟಿದ್ದರೆ ಟಿಪ್ಪು ಅಪರಾಧಿಯಾಗಿಬಿಡುತ್ತಿದ್ದ. ಯುದ್ಧದಲ್ಲಿದ್ದ ಯಾವ ರಾಜ ಶಾಂತಿಯಿಂದ ಕಾರ್ಯನಿರ್ವಹಿಸಿದ? ನಮ್ ದೇಶದ ಬಾವುಟದಲ್ಲಿ ಮಧ್ಯದಲ್ಲೊಂದು ನೀಲಿ ಚಕ್ರವಿದೆಯಲ್ಲ, ಅಶೋಕ ಚಕ್ರ, ಆ ಅಶೋಕನೇನು ಶಾಂತಿಯ ದೂತನೇ? ಸಾವಿರಾರು ಜನರನ್ನು ಕಳಿಂಗ ಯುದ್ಧದಲ್ಲಿ ಕೊಂದ ನಂತರವಷ್ಟೇ ಆತ ಬೌದ್ಧ ಧರ್ಮ ಸ್ವೀಕರಿಸಿದ್ದು ಅಲ್ಲವೇ. ಅವನಿಂದ ಹತರಾದ ಜನರ ವಂಶಜರು ಅಶೋಕ ಚಕ್ರವನ್ನು ಬಾವುಟದಿಂದ ಕಿತ್ತು ಹಾಕಿ ಎಂದರದು ಒಪ್ಪಿತವೇ? ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳೇ ಹಿಂಸೆಯನ್ನು ಬೆಂಬಲಿಸಿದ ಅನೇಕ ನಿದರ್ಶನಗಳನ್ನು ಸ್ವತಂತ್ರ ಭಾರತದಲ್ಲಿ ನಾವು ಕಂಡಿರುವಾಗ ರಾಜರು ಶಾಂತಿ ಪಾಲಿಸಿದರೆಂದರೆ ನಂಬಲು ಸಾಧ್ಯವೇ?

ಇನ್ನು ಟಿಪ್ಪು ಮತಾಂತರ ಮಾಡಿದ ಎನ್ನುವುದರ ಬಗ್ಗೆ. ಅದು ರಾಜರ ಕಾಲ. ರಾಜನ ಧರ್ಮವನ್ನು ಜನರ ಮೇಲೆ ‘ಹೇರುತ್ತಿದ್ದ’ ಕಾಲ. ಹಿಂದೂ ಧರ್ಮದ ಜಾತಿ ಪದ್ಧತಿಯೂ ಮತಾಂತರಕ್ಕೆ ಪೂರಕವಾಗಿ ಕೆಲಸ ಮಾಡುತ್ತಿತ್ತು. ಕೇರಳದಲ್ಲಿ ಟಿಪ್ಪು ಮತಾಂತರಿಸಿದ ಎಂದು ಅರ್ಧ ಸತ್ಯ ಹೇಳುವವರೆಲ್ಲ ಮತ್ತರ್ಧವನ್ನು ಉದ್ದೇಶಪೂರ್ವಕವಾಗಿ ಮರೆತುಬಿಡುತ್ತಾರೆ. ಕೇರಳದಲ್ಲಿ ದಲಿತರು ಮೊಳಕಾಲಿನ ಕೆಳಗೆ ಮತ್ತು ಸೊಂಟದ ಮೇಲೆ ಬಟ್ಟೆಯನ್ನೇ ಧರಿಸುವಂತಿರಲಿಲ್ಲ. ದಲಿತ ಮಹಿಳೆಯರು ತಮ್ಮ ಎದೆಯನ್ನು ಮುಚ್ಚಿಕೊಳ್ಳುವಂತಿರಲಿಲ್ಲ. ದಲಿತ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದಾಗ ಮಗುವಿಗೆ ಹಾಲು ಕುಡಿಸುವ ಮೊದಲು ಮೇಲ್ಜಾತಿಯ ಜನರ ಮುಂದೆ ಬಂದು ನಿಲ್ಲಬೇಕಿತ್ತು. ಮೇಲ್ಜಾತಿಯ ಬ್ರಹಸ್ಪತಿಗಳು ಆಕೆಯ ಮೊಲೆಯನ್ನು ಅಳೆದು ‘ಮೊಲೆ ತೆರಿಗೆ’ ವಿಧಿಸುತ್ತಿದ್ದರು. ಮೊಲೆ ತೆರಿಗೆ ಕಟ್ಟಿದ ನಂತರವಷ್ಟೆ ಮಗುವಿಗೆ ಹಾಲು ಕುಡಿಸುವ ಅನುಮತಿ ಸಿಕ್ಕುತ್ತಿತ್ತು. ಒಬ್ಬ ದಲಿತ ಹೆಣ್ಣುಮಗಳು ಪ್ರತಿಭಟನೆಯ ರೂಪದಲ್ಲಿ ತನ್ನೆರಡೂ ಮೊಲೆಗಳನ್ನೇ ಕಡಿದು ಇದನ್ನೇ ನಿಮ್ಮ ತೆರಿಗೆಗೆ ವಜಾ ಮಾಡಿಕೊಳ್ಳಿ ಎಂದು ಹೇಳಿಬಿಟ್ಟಳು. ಮತಾಂತರಕ್ಕೆ ಟಿಪ್ಪು ಎಷ್ಟು ಕಾರಣನೋ ಈ ಶೋಷಣೆಯೂ ಅಷ್ಟೇ ಕಾರಣವಲ್ಲವೇ? ವಾದಕ್ಕೆ ಕೇಳ್ತೀನಿ, ಮತಾಂತರ ನಡೆಸಿದ ಟಿಪ್ಪುವಿನ ಜಯಂತಿಯನ್ನು ಸರಕಾರ ಆಚರಿಸಬಾರದು ಎನ್ನುತ್ತೀರಲ್ಲ ಬ್ರಾಹ್ಮಣ, ಕುರುಬ, ದಲಿತ ಸಮುದಾಯದಿಂದ ಲಿಂಗಾಯತ ಧರ್ಮಕ್ಕೆ ಮತಾಂತರಿಸಿದ ಬಸವಣ್ಣನ ಜಯಂತಿಯನ್ನು ಸರಕಾರವೇ ಆಚರಿಸುತ್ತದೆಯಲ್ಲವೇ? ಅದು ಸರಿಯಾದರೆ ಇದು ಹೇಗೆ ತಪ್ಪಾಯಿತು?

ಇನ್ನು ಟಿಪ್ಪು ಕನ್ನಡ ವಿರೋಧಿ ಎಂಬ ವಾದ. ಹೌದು ಆತ ಪಾರ್ಸಿ ಭಾಷೆಯನ್ನೋ ಮತ್ತೊಂದು ಭಾಷೆಯನ್ನೋ ಉಪಯೋಗಿಸುತ್ತಿದ್ದ. ರಾಜನ ಆಳ್ವಿಕೆಯ ಕಾನೂನುಗಳನ್ನು ಇವತ್ತಿನ ದೃಷ್ಟಿಯಿಂದ ಅಳೆಯುವುದೇ ತಪ್ಪಲ್ಲವೇ? ಶ್ರೀ ಕೃಷ್ಣದೇವರಾಯ ತೆಲುಗಿಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದ ಅನ್ನುವುದು ಇತಿಹಾಸದಲ್ಲಿದೆ. ಆ ಕಾರಣಕ್ಕೆ ಹಂಪಿ ಉತ್ಸವವನ್ನು ವಿರೋಧಿಸಬೇಕೆ? ಹಿಂದಿ ಹೇರಿಕೆಯನ್ನು ಕಂಡೂ ಕಾಣದಂತಿರುವ, ಹಿಂದಿ ಹೇರಿಕೆಯನ್ನು ಸಮರ್ಥಿಸುವ, ಹಿಂದಿ ರಾಷ್ಟ್ರಭಾಷೆಯೆಂದು ಸುಳ್ಳು ಸುಳ್ಳೇ ಜನರನ್ನು ನಂಬಿಸುವ ಜನರಿಗೆಲ್ಲ ಇದ್ದಕ್ಕಿದ್ದಂತೆ ಕನ್ನಡ ಪ್ರೇಮ ಮೂಡಿಬಿಟ್ಟಿರುವುದು ಸೋಜಿಗ! 

ಟಿಪ್ಪುವನ್ನು ವಿರೋಧಿಸಲು ಇವ್ಯಾವುದೂ ನೈಜ ಕಾರಣವಲ್ಲ. ಇವೆಲ್ಲ ಜನರನ್ನು ಮೂರ್ಖರನ್ನಾಗಿಸಲು ಬಿಜೆಪಿ ಮತ್ತದರ ಬೆಂಬಲಿತ ಸಂಘಟನೆಗಳು ಉಪಯೋಗಿಸುತ್ತಿರುವ ನೆಪಗಳಷ್ಟೆ. ಟಿಪ್ಪು ಸುಲ್ತಾನ್ ಮುಸ್ಲಿಂ ಅದಕ್ಕೆ ನಮಗವನನ್ನ ಕಂಡರೆ ಆಗಲ್ಲ ಎಂದು ಬಹಿರಂಗವಾಗಿ ಹೇಳಲಾಗದವರು ಹುಡುಕುವ ನೆಪಗಳಷ್ಟೇ. 

ವೈಯಕ್ತಿಕವಾಗಿ ನನಗೆ ಈ ಯಾವ ಜಯಂತಿ, ಉತ್ಸವಗಳಲ್ಲಿಯೂ ನಂಬಿಕೆಯಿಲ್ಲ. ಸುಖಾಸುಮ್ಮನೆ ನಮ್ಮ ನಿಮ್ಮಂತೆಯೇ ಒಳಿತು ಕೆಡುಕುಗಳಿದ್ದ ಮನುಷ್ಯರನ್ನು ಆಕಾಶದೆತ್ತರಕ್ಕೆ ಏರಿಸುವ, ರಣಭಯಂಕರವಾಗಿ ಹೊಗಳುವ ಇಂತಹ ಜಯಂತಿಗಳು ಇರದಿದ್ದರೆ ಪ್ರಪಂಚವೇನು ಮುಳುಗಲಾರದು. ಇದರ ಜೊತೆಜೊತೆಗೆ ವ್ಯಕ್ತಿ ಮತ್ತು ಮೂರ್ತಿ ಪೂಜೆಯಿಂದ ಹೊರಬರಲಾರದ ನಮ್ಮ ಜನರಿಗೆ ಇಂತಹ ಜಯಂತಿಗಳು ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತವೆ ಎನ್ನುವುದೂ ಸತ್ಯ. ಅಂಬೇಡ್ಕರ್ ಜಯಂತಿ, ಬಸವ ಜಯಂತಿ, ವಾಲ್ಮೀಕಿ ಜಯಂತಿ, ಕನಕದಾಸ ಜಯಂತಿಗಳೆಲ್ಲವೂ ದೊಡ್ಡ ದೊಡ್ಡ ವ್ಯಕ್ತಿಗಳನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಿಬಿಡುವ ಕೆಟ್ಟ ಕೆಲಸವನ್ನು ಮಾಡುತ್ತಲೇ ಆ ಸಮುದಾಯದ ಜನರ ಮನೋಸ್ಥೈರ್ಯವನ್ನು ಹಿಗ್ಗಿಸುವ ಕೆಲಸವನ್ನು ಮಾಡುತ್ತಿರುವುದು ಸುಳ್ಳಲ್ಲ. ಟಿಪ್ಪು ಜಯಂತಿ ಕೂಡ ಮುಸ್ಲಿಮರಲ್ಲಿ ಅಂತದೊಂದು ಸ್ಥೈರ್ಯ ತುಂಬುತ್ತಿತ್ತೋ ಏನೋ? ತುಂಬಬಾರದು ಎನ್ನುವುದು ವಿರೋಧಿಗಳ ಉದ್ದೇಶ. ಇಂತಹುದೊಂದು ಸರಕಾರ ಪ್ರಾಯೋಜಿತ ಜಯಂತಿಯ ಸಂದರ್ಭದಲ್ಲಿ ಮಡಿಕೇರಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ವಿ.ಎಚ್.ಪಿಯ ಮುಖಂಡ ಕುಟ್ಟಪ್ಪ, ರಾಜು ಮತ್ತು ಸಾವುಲ್ ಹಮೀದ್ ಎಂಬ ಯುವಕ ಸಾವನ್ನಪ್ಪಿದ್ದಾರೆ. ಕುಟ್ಟಪ್ಪ ಮತ್ತು ರಾಜುನನ್ನು ಸಾಬರು ಕಲ್ಲು ಹೊಡೆದು ಕೊಂದರು ಎನ್ನುವುದು ಹಿಂದೂ ಸಂಘಟನೆಗಳ ವಾದವಾದರೆ ಸಾವುಲ್ ಹಮೀದನನ್ನು ಹಿಂದೂಗಳು ಗುಂಡಿಟ್ಟು ಕೊಂದಿದ್ದಾರೆ ಎನ್ನುವುದು ಮುಸ್ಲಿಂ ಸಂಘಟನೆಗಳ ವಾದ. ಪೋಲೀಸರ ಪ್ರಕಾರ ಕುಟ್ಟಪ್ಪ ಓಡುವಾಗ ಹತ್ತಡಿ ಎತ್ತರದ ಕಾಂಪೌಂಡು ಗೋಡೆಯಿಂದ ಬಿದ್ದು ಸತ್ತಿದ್ದು. ಇನ್ನು ರಾಜು ಆಸ್ಪತ್ರೆಯಲ್ಲಿದ್ದ ರೋಗಿ. ಗಲಭೆಯನ್ನು ವೀಕ್ಷಿಸುವಾಗ ಮೇಲಿನಿಂದ ಕೆಳಗೆ ಬಿದ್ದಿದ್ದು ಸತ್ತಿದ್ದು. ಸಾವುಲ್ ಹಮೀದನ ಮೇಲೆ ಯಾರೂ ಗುಂಡು ಹಾರಿಸಿಲ್ಲ. ಲಾಠಿ ಚಾರ್ಜಿನ ಸಮಯದಲ್ಲಿ ಬಿದ್ದ ಪೆಟ್ಟಿನಿಂದ ಸತ್ತಿದ್ದು. ಸಾವು ಯಾವ ರೀತಿಯಿಂದಲೇ ಆಗಿರಲಿ, ಪರೋಕ್ಷವಾಗಿ ಎಲ್ಲಾ ಸಾವುಗಳು ಟಿಪ್ಪು ಜಯಂತಿಯ ಕಾರಣಕ್ಕೇ ಆಗಿದೆ. 

ಪೋಲೀಸ್ ಚಾರ್ಜ್ ಶೀಟು ರೀತಿಯಲ್ಲೇ ಈ ಸಾವುಗಳಿಗೆ ಯಾರು ಹೊಣೆ ಎಂದರೆ ಎ1 ಸ್ಥಾನದಲ್ಲಿ ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್, ಎ2 ಆಗಿ ಪ್ರತಾಪಸಿಂಹ ಮತ್ತು ಬಿಜೆಪಿ, ಎ3 ಆಗಿ ಪೋಲೀಸರನ್ನು ನಿಲ್ಲಿಸಬಹುದು. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿಯನ್ನು ಆಚರಿಸುವುದಕ್ಕೆ ವೋಟ್ ಬ್ಯಾಂಕ್ ರಾಜಕೀಯದ ಹೊರತಾಗಿ ಮತ್ಯಾವ ಕಾರಣವೂ ಇರಲಿಲ್ಲ. ಎಲ್ಲರೂ ಮಾಡುವುದು ವೋಟ್ ಬ್ಯಾಂಕ್ ರಾಜಕೀಯ ಇದರಲ್ಲೇನು ತಪ್ಪು ಎಂಬ ಪ್ರಶ್ನೆಯನ್ನು ಖಂಡಿತವಾಗಿ ಕಾಂಗ್ರೆಸ್ಸಿನವರ ಕೇಳುತ್ತಾರೆ. ವೋಟಿನ ನೆಪದಲ್ಲಿ ಮೂವರ ಹತ್ಯೆಯ ಹೊಣೆಯನ್ನು ಹೊತ್ತಿಕೊಳ್ಳುತ್ತಾರ? ಮುಸ್ಲಿಮರ ಮತಕ್ಕಾಗಿಯಷ್ಟೇ ಈ ಜಯಂತಿ ಮಾಡಿದ್ದು ಎಂದು ಸರಕಾರ ಎಷ್ಟು ನಿಖರವಾಗಿ ಹೇಳಿದೆ ಗೊತ್ತೆ? ಟಿಪ್ಪು ಜಯಂತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದಲೋ ಪ್ರವಾಸೋದ್ಯಮ ಖಾತೆಯ ವತಿಯಿಂದಲೋ ಮಾಡಿಸಿಲ್ಲ ಮಾಡಿಸಿರುವುದು ಅಲ್ಪಸಂಖ್ಯಾತ ಇಲಾಖೆಯ ವತಿಯಿಂದ. ಅದರಲ್ಲೇ ಗೊತ್ತಾಗುವುದಿಲ್ಲವೇ ಇವರ ಯೋಗ್ಯತೆ. ಟಿಪ್ಪು ಜಯಂತಿಯನ್ನು ಘೋಷಿಸಿದರೆ ಅದಕ್ಕೆ ಮತ್ತದೆ ವೋಟ್ ಬ್ಯಾಂಕ್ ರಾಜಕೀಯದ ಕಾರಣದಿಂದ ಬಿಜೆಪಿಯವರು ವಿರೋಧಿಸುತ್ತಾರೆ ಎನ್ನುವುದನ್ನು ತಿಳಿಯದಷ್ಟು ಅಮಯಾಕರೇನಲ್ಲವಲ್ಲ ಸಿದ್ಧರಾಮಯ್ಯನವರು. ವಿರೋಧ ವ್ಯಕ್ತವಾಗಲಿ ಎನ್ನುವುದೇ ಅವರ ಉದ್ದೇಶವಾಗಿತ್ತು. ಬಿಜೆಪಿಯವರು ವಿರೋಧಿಸಿದಷ್ಟೂ ಮುಸ್ಲಿಮರ ವೋಟುಗಳು ಕಾಂಗ್ರೆಸ್ ತೆಕ್ಕೆಗೆ ಬರುತ್ತದೆ ಎನ್ನುವುದರ ಅರಿವೂ ಇತ್ತು. ಎಲ್ಲವೂ ಅವರಂದುಕೊಂಡಂತೆಯೇ ಆಯಿತು; ಮೂವರ ಹೆಣದ ಮೇಲೆ. 

ಇನ್ನು ಎ2 ಸ್ಥಾನದಲ್ಲಿರುವ ಪ್ರತಾಪಸಿಂಹ ಮತ್ತು ಬಿಜೆಪಿ ಕೂಡ ಎ1 ಆರೋಪಿಗಳಷ್ಟೇ ಅಪಾಯಕಾರಿಯಾಗಿ ದ್ವೇಷ ಬಿತ್ತುವ ಕೆಲಸ ಮಾಡಿದ್ದಾರೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜಾತಿ ಪ್ರಜ್ಞೆ ಜಾಗ್ರತವಾಗಿ ಗೌಡ ಗೌಡ ಎಂದುಕೊಂಡು ಓಟು ಗಿಟ್ಟಿಸಿಕೊಂಡ ಪ್ರತಾಪಸಿಂಹರಿಗೆ ಈಗ ಧರ್ಮದ್ವೇಷದ ಆಧಾರದಲ್ಲಿ ‘ಹಿಂದೂ ಹೃದಯ ಸಾಮ್ರಾಟ್’ ಎಂದು ಕರೆಸಿಕೊಳ್ಳುವ ಹಪಾಹಪಿ. ಟಿಪ್ಪು ಜಯಂತಿಯನ್ನು ನಖಶಿಖಾಂತ ವಿರೋಧಿಸಲು ಅವರು ಆಯ್ಕೆ ಮಾಡಿಕೊಂಡಿದ್ದು ಮಡಿಕೇರಿ. ಕಾರಣ ಅಲ್ಲಿ ಬಿಜೆಪಿಗೆ ಬೆಂಬಲವೂ ಇದೆ, ಟಿಪ್ಪುವನ್ನು ದ್ವೇಷಿಸಲು ಕಾರಣವೂ ಇದೆ. ಲೋಕಸಭಾ ಸದಸ್ಯರ ಘನತೆಗೆ ತಕ್ಕದಲ್ಲದ ‘ಟಿಪ್ಪು ಸುಲ್ತಾನ್ ಕುರುಬರನ್ನು ಕೊಂದಿದ್ರೂ ಸಿದ್ಧರಾಮಯ್ಯ ಟಿಪ್ಪು ಜಯಂತಿ ಮಾಡುತ್ತಿದ್ದರಾ?’ ಎಂಬಂತಹ ವಿಚ್ಛಿದ್ರಕಾರಿ ಹೇಳಿಕೆಗಳೂ ಅವರ ಬಾಯಿಂದ ಉದುರಿದವು. ಜನರನ್ನು ಧರ್ಮದ ಹೆಸರಿನಲ್ಲಿ ಉದ್ರಿಕ್ತಗೊಳಿಸಿ ಪ್ರತಿಭಟಿಸುವಂತೆ ಮಾಡಿ, ಸಾಯುವಂತೆ ಮಾಡಿ ಅವರು ಬಹುಶಃ ಮೈಸೂರಿನ ತಮ್ಮ ಮನೆಯಲ್ಲಿ ಬೆಚ್ಚಗೆ ಕುಳಿತಿರಬೇಕು. ಚಳಿಗಾಲ ಬೇರೆ ಶುರುವಾಗಿದೆಯಲ್ಲ.

ಎ3 ಸ್ಥಾನದಲ್ಲಿರುವ ಪೋಲೀಸರನ್ನು ಬಯ್ಯುವುದಾದರೂ ಹೇಗೆ? ಒಂದು ಕಡೆ ಆಡಳಿತ ಪಕ್ಷ, ಇನ್ನೊಂದು ಕಡೆ ಮುಂದೆ ಆಡಳಿತಕ್ಕೆ ಬರಬಹುದಾದ ವಿರೋಧ ಪಕ್ಷ, ಈ ಪಕ್ಷಗಳ ತಾಳಕ್ಕೆ ಕುಣಿಯುವುದೇ ಕಸುಬಾಗಿಬಿಟ್ಟಿರುವಾಗ ಅವರು ಸರಿಯಾಗಿ ಕಾರ್ಯನಿರ್ವಹಿಸುವುದಾದರೂ ಹೇಗೆ? ಮಡಿಕೇರಿಯಲ್ಲಿ ನಡೆಯುವ ಗಲಭೆಯ ಬಗ್ಗೆ ಅವರಿಗೆ ಮಾಹಿತಿಯಿತ್ತು. ಗುಪ್ತಚರ ಮಾಹಿತಿಯೇನು ಬೇಕಿರಲಿಲ್ಲ, ಸಂಘಟನೆಗಳ ಮುಖಂಡರ ಮಾತುಗಳೇ ಸಾಕಿತ್ತು ಗಲಭೆಗೆ ಹೇಗೆ ಎರಡೂ ಗುಂಪುಗಳು ತಯಾರಾಗಿವೆ ಎಂದು ಅರಿಯುವುದಕ್ಕೆ. ಕೆಲವು ದಿನಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ಹಿಂದೂ ಸಂಘಟನೆಗಳು ಟಿಪ್ಪು ಸಮಾಧಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಮಾಹಿತಿಯೂ ಅವರಲ್ಲಿತ್ತು (ಈ ಘಟನೆ ಯಾವ ಮಾಧ್ಯಮದಲ್ಲೂ ಪ್ರಸಾರವೇ ಆಗಲಿಲ್ಲ). ಶ್ರೀರಂಗಪಟ್ಟಣ ಮತ್ತು ಮಂಡ್ಯದಲ್ಲಿ ಶಾಂತಿಯುತವಾಗಿ ಜಯಂತೋತ್ಸವ ನಡೆದಿರುವಾಗ ಮಡಿಕೇರಿಯಲ್ಲಿ ಶಾಂತಿಯುತವಾಗಿ ನಡೆಸುವ ಸ್ಥೈರ್ಯವನ್ನು ಪೋಲೀಸರು ತೋರಿಸಬೇಕಿತ್ತು. ದುರದೃಷ್ಟವಶಾತ್ ಇವರ ಈ ವೈಫಲ್ಯಕ್ಕೆ ಮೂರು ಹೆಣಗಳುರುಳಿವೆ.

ಒಂದು ಗಮನಿಸಿದಿರೋ ಇಲ್ಲವೋ. ಈ ರೀತಿಯ ಗಲಭೆ ನಡೆಯಬಹುದೆನ್ನುವ ಅನುಮಾನ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡಕ್ಕೂ ಇತ್ತು. ಕುಳಿತು ಮಾತನಾಡಿ ಶಾಂತಿ ಕಾಪಿಡುವಂತೆ ಮಾಡಬೇಕಿದ್ದ ಮುಖಂಡರು ಗಲಭೆ ಮತ್ತಷ್ಟು ಹೆಚ್ಚಾಗುವಂತಹ ಮೂರ್ಖತನದ ಹೇಳಿಕೆ ನೀಡುವುದರಲ್ಲಿಯೇ ಬ್ಯುಸಿಯಾಗಿಬಿಟ್ಟರು. ಕಾಂಗ್ರೆಸ್ ಮತ್ತು ಬಿಜೆಪಿಗಳೆರಡಕ್ಕೂ ತಮ್ಮ ತಮ್ಮ ವೋಟ್ ಬ್ಯಾಂಕ್ ಗಟ್ಟಿಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಗಲಭೆ ಮತ್ತು ಹತ್ಯೆಗಳು ಅವಶ್ಯಕವೆನ್ನಿಸಿರಬೇಕು. ಇಬ್ಬರೂ ತಮ್ಮ ತಮ್ಮ ಉದ್ದೇಶ ಈಡೇರಿಸಿಕೊಂಡಿದ್ದಾರೆ ಮೂವರ ಹೆಣದ ಮೇಲೆ.

Nov 9, 2015

ಬಂಜಗೆರೆ ಮತ್ತು ಕುಂವೀಯವರಿಗೊಂದು ಬಹಿರಂಗ ಪತ್ರ.

kum veerabhadrappa
ಹಿರಿಯರೂ, ಮಾರ್ಗದರ್ಶಕರೂ ಆಗಿರುವ ಡಾ ಬಂಜಗೆರೆ ಜಯಪ್ರಕಾಶ್ ಮತ್ತು ಕುಂ ವೀರಭದ್ರಪ್ಪನವರಿಗೆ,

ಆಳ್ವಾಸ್ ನುಡಿಸಿರಿಯ ಆಹ್ವಾನ ಪತ್ರಿಕೆ ನೋಡಿದ ಬಳಿಕ ತಮಗೆ ಪತ್ರ ಬರೆಯುತ್ತಿದ್ದೇವೆ. ತಾವು ಈ ನೆಲದಲ್ಲಿ ಎಷ್ಟೋ ಕಾಲದಿಂದ ಜಾತ್ಯಾತೀತತೆ ಕೋಮುಸೌಹಾರ್ಧತೆ, ಸಾಮಾಜಿಕ ಸಮಾನತೆ ಮತ್ತು ಸಮಾನ ಅವಕಾಶದ ಸ್ವಾಭಿಮಾನಿ ಬದುಕಿಗಾಗಿ ತಮ್ಮ ಮಾತು-ಕೃತಿಗಳ ಮೂಲಕ ಹೋರಾಟ ಮಾಡುತ್ತಾ ಬಂದವರು. ಈ ಮೂಲಕ ಯುವಪೀಳಿಗೆಗೆ ಆದರ್ಶಪ್ರಾಯರಾಗಿರುವವರು. 

ನೀವು ಹೀಗೆ ಎಡವಬಹುದೇ? ಅದೂ ಈ ಕಾಲದಲ್ಲಿ. ಇದೀಗ ದೇಶಾದ್ಯಂತ ಸಾಹಿತ್ಯ ವಲಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಚಳುವಳಿಯಲ್ಲಿ ತೊಡಗಿದೆ. ಹೆಚ್ಚುತ್ತಿರುವ ಅಸೈರಣೆಯ ವಾತಾವರಣದ ವಿರುದ್ಧ ಸಿಡಿದೆದ್ದಿದೆ. ದೇಶದಲ್ಲೆಡೆ ಭುಗಿಲೆದ್ದಿರುವ ಅಸಹಿಷ್ಣುತೆಯ ವಾತಾವರಣದ ವಿರುದ್ದ ಸಾಹಿತಿಗಳು, ನಟ-ನಟಿಯರು, ವಿಜ್ಞಾನಿಗಳು ಹೋರಾಟಕ್ಕಿಳಿದಿದ್ದಾರೆ. ದೇಶದಾದ್ಯಂತ ಪ್ರಶಸ್ತಿ ವಾಪ್ಸಿ ಚಳುವಳಿ ನಡೆಯುತ್ತಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ವಾಪಸು ಮಾಡುವ ಮೂಲಕ ಕುಂ.ವೀರಭದ್ರಪ್ಪ ಅವರೇ ಈ ಹೋರಾಟವನ್ನು ರಾಜ್ಯದಲ್ಲಿ ಮುನ್ನಡೆಸಿದ್ದಾರೆ. ನುಡಿಸಿರಿಯಲ್ಲಿ ಪಾಲ್ಗೊಳ್ಳುವ ನಿಮ್ಮ ನಿರ್ಧಾರವನ್ನು ಈ ಹಿನ್ನೆಲೆಯಲ್ಲಿ ಪುನರ್ ಪರಿಶೀಲಿಸುವುದು ಸೂಕ್ರವಲ್ಲವೇ? 

ದಕ್ಷಿಣ ಕನ್ನಡ ಜಿಲ್ಲೆ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಹಿಂದುತ್ವದ ಪ್ರಯೋಗಶಾಲೆಯಾಗಿ ರಾಷ್ಟ್ರಮಟ್ಟದಲ್ಲಿ ಕುಖ್ಯಾತಿ ಗಳಿಸಿರುವುದು ನಿಮಗೆ ತಿಳಿದಿದೆ. ಆದರೆ ಇಂತಹ ಬೆಳವಣಿಗೆಗೆ ಕಾರಣಗಳೇನು ಎಂಬ ಬಗ್ಗೆ ಆಳವಾದ ಅಧ್ಯಯನ ನಡೆದಿಲ್ಲ. ಮೇಲ್ನೋಟಕ್ಕೆ ಬಜರಂಗಿಗಳು ಸೇರಿದಂತೆ ಒಂದಿಷ್ಟು ಕೇಸರಿಪಡೆಯ ಸದಸ್ಯರು ಈ ಗಲಭೆಗಳ ರೂವಾರಿಗಳಂತೆ ಕಾಣುತ್ತಾರೆ. ಆದರೊ ಹಿಂದುಳಿದ ಮತ್ತು ದಲಿತ ವರ್ಗಕ್ಕೆ ಸೇರಿರುವ ಅಮಾಯಕ ಯುವಕರನ್ನು ದಾಳಗಳಂತೆ ಬಳಸಿಕೊಂಡು ರಾಜಕೀಯದ ಆಟವನ್ನು ಆಡುತ್ತಿರುವ ಸೂತ್ರಧಾರಿಗಳು ಯಾರ ಕಣ್ಣಿಗೂ ಕಾಣಿಸುತ್ತಿಲ್ಲ. ಇಂತಹ ಸೂತ್ರಧಾರರನ್ನು ಗುರುತಿಸುವ ವೈಚಾರಿಕ ಸ್ಪಷ್ಟತೆಯನ್ನು ನಿಮ್ಮಂತಹವರ ಬರವಣಿಗೆಗಳಿಂದಲೇ ನಾವು ಗಳಿಸಿಕೊಂಡದ್ದು. ಅದಕ್ಕಾಗಿ ನಿಮಗೆ ಋಣಿಯಾಗಿದ್ದೇವೆ.

banjagere jayaprakash
ವಿಶ್ವ ಹಿಂದೂ ಪರಿಷತ್ 50 ವರ್ಷಗಳನ್ನು ಈ ನೆಲದಲ್ಲಿ ಪೂರೈಸುತ್ತಿರುವುದಕ್ಕೂ ಈ ದೇಶದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿರುವ ಅಸಹಿಷ್ಣುತೆಗೂ ಸಂಬಂಧವಿದೆ ಎಂದು ನಿಮಗೆ ಅನಿಸುವುದಿಲ್ಲವೇ? ನೀವು ಗಮನಿಸದೆ ಇರಬಹುದಾದ ಕೆಲವು ಸಂಗತಿಗಳ ಕಡೆ ಗಮನ ಸೆಳೆಯುವ ಪ್ರಯತ್ನ ನಮ್ಮದು. ವಿಶ್ವಹಿಂದೂ ಪರಿಷತ್ತಿನ ಸುವರ್ಣ ಮಹೋತ್ಸವ ಸಮಿತಿಯ ರಾಜ್ಯ ಅಧ್ಯಕ್ಷರಾಗಿರುವವರು ನುಡಿಸಿರಿಯ ರೂವಾರಿಯಾಗಿರುವ ಡಾ ಎಂ ಮೋಹನ ಆಳ್ವರು. ಆ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾಗಿರುವವರು ಡಾ ಡಿ ವೀರೇಂದ್ರ ಹೆಗ್ಗಡೆಯವರು. ಇತ್ತೀಚೆಗಷ್ಟೇ ಸುವರ್ಣ ಮಹೋತ್ಸವದ ಹೆಸರಿನಲ್ಲಿ ಮೂರು ತಿಂಗಳು ದೇಶದಾದ್ಯಂತ ಸಮಾವೇಶಗಳನ್ನು ವಿಶ್ವ ಹಿಂದೂ ಪರಿಷತ್ ನಡೆಸಿತ್ತು. ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಮಾಜೋತ್ಸವಗಳನ್ನು ಆಯೋಜಿಸಲಾಗಿತ್ತು.

ಕರ್ನಾಟಕದಲ್ಲಿ ನಡೆದ ಎಲ್ಲಾ ಸಮಾವೇಶಗಳ ಯಜಮಾನಿಕೆ ಡಾ ಎಂ ಮೋಹನ ಆಳ್ವರದ್ದಾದರೆ, ರಾಷ್ಟ್ರಮಟ್ಟದ ಸಮಾವೇಶಗಳ ಯಜಮಾನಿಕೆ ಡಾ ಡಿ ವೀರೇಂದ್ರ ಹೆಗ್ಗಡೆಯವರದ್ದು. ಇದರ ನಂತರ ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಕೋಮುದ್ವೇಷದ ವಿಷಮಯ ವಾತಾವರಣ ನಿರ್ಮಾಣವಾಗಿರುವುದನ್ನು ತಾವು ಅಲ್ಲಗಳೆಯಲಾರಿರಿ ಎಂದು ನಂಬಿದ್ದೇವೆ. ದೇಶದಾದ್ಯಂತ ನಡೆಯುತ್ತಿರುವ ಕೋಮುಗಲಭೆ ಮತ್ತು ಧಾರ್ಮಿಕ ಅಸಹಿಷ್ಣುತೆಯ ಘಟನೆಗಳಿಗೂ ಈ ಸಮಾವೇಶಗಳಿಗೂ ಸಂಬಂಧವಿದೆ ಎಂದು ನಿಮಗೆ ಅನಿಸುವುದಿಲ್ಲವೇ? ಹೆಸರೇ ಸೂಚಿಸುವಂತೆ ಆಳ್ವಾಸ್ ನುಡಿಸಿರಿಯ ಯಜಮಾನಿಕೆ ಡಾ ಎಂ ಮೋಹನ ಆಳ್ವ ಅವರದ್ದು. ಈ ವ್ಯಕ್ತಿ ಕೇಂದ್ರಿತ ಸಾಹಿತ್ಯದ ಜಾತ್ರೆಗೆ ಡಾ ಡಿ ವೀರೇಂದ್ರ ಹೆಗ್ಗಡೆಯವರದ್ದೇ ಆಶೀರ್ವಚನ. ಆಮಂತ್ರಣ ಪತ್ರಿಕೆಯ ಮುಖಪುಟದಲ್ಲಿ ಫೋಟೋ ಕೂಡಾ ಅಚ್ಚು ಹಾಕಲಾಗಿದೆ.

ಸತ್ಯ ಇಷ್ಟೊಂದು ಸ್ಪಷ್ಟವಾಗಿ ನಮ್ಮ ಕಣ್ಣೆದುರು ಇರುವಾಗ ಕೋಮುವಾದದ ಸೂತ್ರಧಾರರ ಯಜಮಾನಿಕೆಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿಯಲ್ಲಿ ನೀವು ಹೇಗೆ ಭಾಗವಹಿಸಲು ಸಾಧ್ಯ? ಇದು ನಮ್ಮನ್ನು ಕಾಡುತ್ತಿರುವ ಪ್ರಶ್ನೆ. ಆಮಂತ್ರಣ ಪತ್ರಿಕೆಯಲ್ಲಿ ಡಾ ಬಂಜಗೆರೆ ಜಯಪ್ರಕಾಶ ಸರ್ ``ಸಾಮಾಜಿಕ ನ್ಯಾಯ-ಹೊಸತನದ ಹುಡುಕಾಟ’’ ಎಂಬ ವಿಚಾರದ ಬಗ್ಗೆ ವಿಶೇಷೋಪನ್ಯಾಸ ನೀಡಿಲಿದ್ದಾರೆ ಎಂದಿದೆ. ಊಳಿಗಮಾನ್ಯ ಪದ್ದತಿ, ವ್ಯಕ್ತಿಪೂಜೆ ಮತ್ತು ಧರ್ಮದ ಹೆಸರಲ್ಲಿ ನಡೆಯುತ್ತಿರುವ ಶೋಷಣೆಯನ್ನು ವಿರೋಧಿಸಿಕೊಂಡು ಬಂದ ಈ ಆಹ್ಹಾನವನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ? 

ಕಳೆದ ಎರಡು ವರ್ಷ ಆಳ್ವಾಸ್ ನುಡಿಸಿರಿಯಲ್ಲಿ ದಲಿತರ ಅವಹೇಳನ ಮಾಡಲಾಗಿತ್ತು. ಈ ಬಗ್ಗೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿರುವುದು ತಮ್ಮ ಗಮನಕ್ಕೆ ಬಂದಿರುವಂತಿಲ್ಲ. ತಾವು ಈಗಲೂ ಗೂಗಲ್ ಮೂಲಕ ಹುಡುಕಿದರೆ ಈ ಬಗ್ಗೆ ಮಾಹಿತಿ ದೊರೆಯುತ್ತದೆ. ಪಕ್ಕಾ ಶಿಕ್ಷಣದ ವ್ಯಾಪಾರಿಯಾಗಿರುವ ಡಾ ಎಂ ಮೋಹನ ಆಳ್ವರು ಇದೀಗ ಬಿಲ್ಡರ್ ಆಗಿಯೂ ಬೆಳೆದಿದ್ದಾರೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ರೆಸಾರ್ಟ್ ಸ್ಥಾಪಿಸಲು ಹೊರಟಿರುವ ಆಳ್ವರ ವಿರುದ್ಧ ಈಗಾಗಲೇ ಪರಿಸರ ಸಂಘಟನೆಗಳು ನ್ಯಾಯಾಲಯದ ಮೊರೆ ಹೋಗಿದೆ. ಜಮೀನ್ದಾರಿ ಪಳಿಯುಳಿಕೆಯಾಗಿರೋ ಡಾ ಎಂ ಮೋಹನ ಅಳ್ವರು ತಮ್ಮ ಶಿಕ್ಷಣ ವ್ಯಾಪಾರಕ್ಕಾಗಿ ಇಂತಹ ಸುಂದರವಾದ ವರ್ಣರಂಜಿತ ವಿಷಯಗಳನ್ನು ಇಟ್ಟುಕೊಂಡು ನುಡಿಸಿರಿ ಜಾತ್ರೆ ನಡೆಸುತ್ತಿದ್ದಾರೆ.

ಈ ಬಾರಿಯ ನುಡಿಸಿರಿಯಲ್ಲಿ ಸಾಮರಸ್ಯ- ಹೊಸತನದ ಹುಡುಕಾಟ ಎಂಬ ವಿಷಯದ ಬಗ್ಗೆ ನಮ್ಮ ನೆಚ್ಚಿನ ಮೇಷ್ಟ್ರಾಗಿರುವ ಕುಂ ವೀರಭದ್ರಪ್ಪನವರು ಮಾತನಾಡಲಿದ್ದಾರೆ ಎಂದು ತಿಳಿದು ಆಘಾತವಾಯಿತು. ಈ ಬಾರಿ 12 ನೇ ನುಡಿಸಿರಿ ನಡೆಯುತ್ತಿದೆ. ಕಳೆದ 11 ವರ್ಷಗಳಿಂದಲೂ ನುಡಿಸಿರಿಯಲ್ಲಿ ಇಂತಹ ಪ್ರಗತಿಪರ ವಿಷಯಗಳ ಮೇಲೆ ಆಳ್ವರು ಭಾಷಣ ಮಾಡಿಸಿದ್ದಾರೆ. ಆದರೆ ಇದರಿಂದ ಸಾಮಾಜಿಕ ಸಾಮರಸ್ಯ ಇನ್ನಷ್ಟು ಹಾಳಾಗುತ್ತಾ ಹೋಯಿತೇ ಹೊರತು ಸುಧಾರಣೆಯಾಗಲಿಲ್ಲ. ನಿಮ್ಮಂತಹ ಗೌರವಾನ್ವಿತ ಸಾಹಿತಿಗಳು ನುಡಿಸಿರಿಯ ವೇದಿಕೆ ಹತ್ತಿ ಭಾಷಣ ಮಾಡುವುದರಿಂದ ಆಳ್ವರಿಗೆ ವಿಶ್ವಾಸಾರ್ಹತೆ ತಂದುಕೊಂಡುತ್ತಿದ್ದಾರೆ. ಈ ರೀತಿ ಗಳಿಸಿಕೊಂಡ ವಿಶ್ವಾಸಾರ್ಹ ನಾಯಕತ್ವದ ಲಾಭವನ್ನು ಅವರು ಹಿಂದೂ ಸಂಘಟನೆಗಳಿಗೆ ಧಾರೆ ಎರೆಯುತ್ತಿದ್ದಾರೆ. ಸರ್, ದಯವಿಟ್ಟು ಯೋಚನೆ ಮಾಡಿ.

ದಕ್ಷಿಣ ಕನ್ನಡದ ಇತಿಹಾಸದಲ್ಲೇ ಕೋಮುಗಲಭೆ ನಡೆಯದ ಏಕೈಕ ವಿಧಾನಸಭಾ ಕ್ಷೇತ್ರವೆಂದರೆ ಅದು ಮೂಡಬಿದ್ರೆ. ಜೊತೆಗೆ ಕರಾವಳಿಯ ಇತಿಹಾಸದಲ್ಲೇ ಒಂದೇ ಒಂದು ಬಾರಿಯೂ ಬಿಜೆಪಿ ಗೆಲ್ಲಲಾಗದ ಕ್ಷೇತ್ರವಿದ್ದರೆ ಅದೂ ಮೂಡಬಿದ್ರೆಯೇ. ಇಂತಹ ಮೂಡಬಿದ್ರೆಯಲ್ಲಿ ಇತ್ತೀಚೆಗೆ ಕೋಮುಗಲಭೆಗಳು ನಡೆದುಹೋಯಿತು. ದನ ಸಾಗಾಟದ ಹೆಸರಿನಲ್ಲಿ ಹಲ್ಲೆಗಳಾಯಿತು. ಕೊಲೆ ನಡೆಯಿತು. ಇದನ್ನೇ ಬಳಸಿಕೊಂಡು ಮುಸ್ಲಿಮರ ಅಂಗಡಿ ಮನೆಗಳ ದ್ವಂಸ ಮಾಡಲಾಯಿತು. ಈ ಎಲ್ಲಾ ಸಾಮರಸ್ಯ ಕದಡುವ ಘಟನೆಗಳಿಗೂ ಹಿಂದೂ ಸಮಾಜೋತ್ಸವಗಳಿಗೂ, ವಿಶ್ವ ಹಿಂದೂ ಪರಿಷತ್ ಸುವರ್ಣ ಮಹೋತ್ಸವಕ್ಕೂ, ಅದರ ಸಂಘಟಕರ ತೆರೆಯಮರೆಯ ನೆರವು-ಬೆಂಬಲಕ್ಕೂ ಸಂಬಂಧವಿಲ್ಲ ಎನ್ನುವಿರಾ ಸರ್ ? 

"ನಮ್ಮ ಪ್ರಗತಿಪರ ವಿಚಾರಧಾರೆಗಳನ್ನು ಅವರ ವೇದಿಕೆಯಲ್ಲೇ ಹೋಗಿ ಹೇಳ್ತೀವಿ’’ ಎಂದು ಕಳೆದ ಹತ್ತು ವರ್ಷಗಳಲ್ಲಿ ಅಲ್ಲಿ ಹೋಗಿ ಭಾಷಣ ಮಾಡಿದವರು ಹೇಳುತ್ತಲೇ ಇದ್ದಾರೆ. ಇದರಿಂದ ಛದ್ಮವೇಷಧಾರಿಗಳಾದ ಬಲಪಂಥೀಯರು ಲಾಭ ಮಾಡಿಕೊಂಡರೇ ಹೊರತು ಪ್ರಗತಿಪರ ಹೋರಾಟಗಳಿಗೆ ಯಾವ ಲಾಭಗಳೂ ಆಗಿಲ್ಲ. ಶಿಕ್ಷಣದ ವ್ಯಾಪಾರಿಗಳಿಗೆ, ಧರ್ಮಾಧಿಕಾರಿಗಳಿಗೆ, ರಿಯಲ್ ಎಸ್ಟೇಟ್ ಮಾಫೀಯಾಕ್ಕೆ ಇದರಿಂದ ಸಮಾಜದಲ್ಲಿ ಗೌರವ ದೊರೆಯುತ್ತಿದೆಯೇ ಹೊರತು ಬೇರಾವ ಸಾಧನೆಯೂ ಆಗಿಲ್ಲ ಎಂಬುದು ನಾವು ಕಂಡುಕೊಂಡ ಸತ್ಯ.

ನಮ್ಮೆಲ್ಲರ ಗುರುಗಳಂತಿದ್ದ ಯು.ಆರ್. ಅನಂತಮೂರ್ತಿಯವರು ತೀರಿಕೊಂಡ ದಿನವನ್ನು ನಾವು ಮರೆಯುವಂತಿಲ್ಲ. ಇಡೀ ರಾಜ್ಯದ ಶಾಲಾ ಕಾಲೇಜುಗಳಿಗೆ ಮರುದಿನ ರಜೆ ಘೋಷಿಸಲಾಗಿತ್ತು. ರಾಜ್ಯದಲ್ಲಿ ಒಂದು ರೀತಿಯ ಸೂತಕದ ವಾತಾವರಣ ಇತ್ತು. ಆದರೆ ಕರಾವಳಿ ಮತ್ತ್ತು ಮಲೆನಾಡು ಭಾಗದಲ್ಲಿ ಕೋಮುವಾದಿಗಳು ಪಟಾಕಿ ಸಿಡಿಸಿದರು. ಈ ಪಟಾಕಿ ಸಿಡಿಸಿದ ಕೋಮುವಾದಿಗಳ ಪೋಷಕರು ಯಾರೆಂದು ಮತ್ತೆ ಬಿಡಿಸಿ ಹೇಳಬೇಕಿಲ್ಲ. ಇರಲಿ. ರಾಜ್ಯಾಧ್ಯಂತ ಶಾಲಾ ಕಾಲೇಜಿಗೆ ರಜೆ ಘೋಷಿಸಿದ್ದರೂ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ರಜೆ ಘೋಷಿಸಿರಲಿಲ್ಲ. ರಜೆ ಕೊಟ್ಟೇ ಸಂತಾಪ ಸೂಚಿಸಬೇಕು ಎಂದೇನಿಲ್ಲ ಎನ್ನುವುದು ನಿಜ, ಆದರೆ ಅಂತಹದ್ದೊಂದು ರಜೆ ಕೋಮುವಾದಿಗಳ ಆರ್ಭಟಕ್ಕೆ ಒಂದು ಸಣ್ಣ ಪ್ರತಿರೋಧ ವ್ಯಕ್ತಪಡಿಸಿದಂತಾಗುತ್ತಿತ್ತು. ಸಾಹಿತಿಗಳನ್ನು ಪಲ್ಲಕ್ಕಿ ಮೇಲೆ ಕೂರಿಸಿ ಮೆರವಣಿಗೆ ಮಾಡುವ ಆಳ್ವಾರ ಮನಸ್ಸನ್ನು ಒಬ್ಬ ಹಿರಿಯ ಸಾಹಿತಿಯ ಸಾವು ಮತ್ತು ಅದನ್ನು ಸಂಭ್ರಮಿಸಿದ ದುಷ್ಟರ ಅಟ್ಟಹಾಸ ಕಲಕಲಿಲ್ಲ ಎನ್ನುವುದು ಎಷ್ಟೊಂದು ವಿಚಿತ್ರ ಅಲ್ಲವೇ? 

ಇದೆಲ್ಲದರ ಹೊರತಾಗಿಯೂ ಡಾ ಎಂ ಮೋಹನ ಆಳ್ವರು ತಾವು ಸಾಹಿತ್ಯದ ಪೋಷಕರು ಹೇಳಿಕೊಳ್ಳುತ್ತಾರೆ. ಅನಂತ ಮೂರ್ತಿಯವರ ಸಾವಿನ ನಂತರ ನಮ್ಮನ್ನೆಲ್ಲ ಆಘಾಥಕ್ಕೀಡುಮಾಡಿರುವುದು ಡಾ ಎಂ ಎಂ ಕಲ್ಬುರ್ಗಿ ಕೊಲೆ. ಆದರೆ ಸಾಹಿತ್ಯ ಪ್ರೇಮಿಗಳು, ಪೋಷಕರೂ ಆಗಿರುವ ಡಾ.ಆಳ್ವರು ಕನಿಷ್ಠ ನೂರು ಜನರನ್ನು ಸೇರಿಸಿ ಕಲ್ಪುರ್ಗಿಯವರ ಹತ್ಯೆಂiÀiನ್ನು ಖಂಡಿಸಲು ಮುಂದಾಗದಿರುವುದು ಏನನ್ನೂ ಸೂಚಿಸುತ್ತದೆ. ಹಾಗೆ ಮಾಡಿದರೆ ವಿಶ್ವಹಿಂದು ಪರಿಷತ್ ನಾಯಕರನ್ನು ಎದುರುಹಾಕಿಕೊಂಡಂತಾಗುತ್ತದೆ ಎಂದು ಅವರು ಭಯಪಟ್ಟಿರಬಹುದೇ? 

ಈ ಬಾರಿಯ ಆಳ್ವಾಸ್ ನುಡಿಸಿರಿಯನ್ನು ಉದ್ಘಾಟನೆ ಮಾಡಬೇಕು ಎಂದು ಹಿರಿಯ ರೈತ ಚಳುವಳಿಗಾರ ಕಡಿದಾಳು ಶ್ಯಾಮಣ್ಣರನ್ನು ಮೋಹನ ಆಳ್ವರು ಆಮಂತ್ರಿಸಿದ್ದರಂತೆ. ಶ್ಯಾಮಣ್ಣ ಅದನ್ನು ನಿರಾಕರಿಸಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಹೊಸತನದ ಹುಡುಕಾಟದ ಬಗ್ಗೆ ಮಾತನಾಡಲು ಡಾ ಸಿ ಎಸ್ ದ್ವಾರಕನಾಥ್ ಅವರನ್ನು ಕೇಳಿದ್ದರು. ಅವರೂ ಕೂಡಾ ಆಳ್ವರ ವಿಹಿಂಪ, ಆರ್ ಎಸ್ ಎಸ್ ನಂಟಿನ ಕಾರಣ ನೀಡಿ ಆಹ್ವಾನವನ್ನು ನೇರವಾಗಿಯೇ ನಿರಾಕರಿಸಿದ್ದಾರೆ. 

ಕಳೆದ ಕೆಲವು ವರ್ಷಗಳಿಂದ ನುಡಿಸಿರಿಯ ಬಣ್ಣ ಬಯಲಾಗುತ್ತಿರುವುದರಿಂದ ಎಚ್ಚೆತ್ತಿರುವ ನಮ್ಮ ಬಹುತೇಕ ಸಾಹಿತಿಗಳು, ಚಿಂತಕರು ಡಾ.ಆಳ್ವ ಅವರ ಆಹ್ಹಾನವನ್ನು ತಿರಸ್ಕರಿಸಿ ದೂರ ಉಳಿದಿದ್ದಾರೆ. ಇದರಿಂದಾಗಿ ಬಲಪಂಥೀಯ ಗುಂಪು ಬೌದ್ದಿಕ ಅಪೌಷ್ಠಿಕತೆಯಿಂದ ನರಳುವಂತಾಗಿದೆ. ಈ ಎಲ್ಲ ಸಂಗತಿಗಳು ನಿಮ್ಮ ಗಮನಕ್ಕೆ ಬಾರದೆಯೂ ಇರಬಹುದು. ಇದಕ್ಕಾಗಿ ಈ ಪತ್ರ ಬರೆಯುತ್ತಿದ್ದೇವೆ. ಕೊನೆಗೂ ನಿರ್ಧಾರ ನಿಮ್ಮದು. ನಿಮ್ಮನ್ನು ಅಪಾರ ಗೌರವದಿಂದ ಕಾಣುತ್ತಿರುವ ನಮ್ಮ ಮನಸ್ಸಿಗೆ ನೀವು ನೋವುಂಟುಮಾಡುವ ನಿರ್ಧಾರ ಕೈಗೊಳ್ಳಲಾರಿರಿ ಎಂದು ನಂಬಿದ್ದೇವೆ.

ವಿಶ್ವಾಸದಿಂದ,

ಅಕ್ಷತಾ ಹುಂಚದಕಟ್ಟೆ, ಡಾ ಅರುಣ್ ಜೋಳದಕೂಡ್ಲಿಗಿ, ಬಿ ಶ್ರೀಪಾದ ಭಟ್, ಟಿ ಕೆ ದಯಾನಂದ, ನವೀನ್ ಸೂರಿಂಜೆ, ಮುನೀರ್ ಕಾಟಿಪಳ್ಳ, ಅನಂತ್ ನಾಯಕ್, ಮುದ್ದು ತೀರ್ಥಹಳ್ಳಿ, ಇರ್ಷಾದ್ ಉಪ್ಪಿನಂಗಡಿ, ಲಿಂಗರಾಜ್ ಪ್ರಜಾಸಮರ, ಪೀರ್ ಬಾಷಾ, ಕಾವ್ಯಾ ಅಚ್ಯುತ್, ಜೀವನ್ ರಾಜ್ ಕುತ್ತಾರ್, ಟಿ ಎಸ್ ಗೊರವರ, ಜಯಶಂಕರ್ ಅಲಗೂರು, ಅಬ್ಬಾಸ್ ಕಿಗ್ಗ, ಕೈದಾಳ ಕೃಷ್ಣಮೂರ್ತಿ, ಸೈಫ್ ಜಾನ್ಸೆ ಕೊಟ್ಟೂರು, ಬಿ ಶ್ರೀನಿವಾಸ, ಪಂಪರೆಡ್ಡಿ ಅರಳಹಳ್ಳಿ, ಅಭಿನಂದನ್ ಬಳ್ಳಾರಿ, ಬಸವರಾಜ್ ಪೂಜಾರ್.

ಟಿಪ್ಪು ಎಂಬ ಅನವಶ್ಯಕ ಚರ್ಚೆ

Dr Ashok K R
ಹೆಚ್ಚು ಕಡಿಮೆ ಪ್ರತಿ ವರುಷವೂ ಟಿಪ್ಪುವಿನ ಪರ ವಿರೋಧದ ಚರ್ಚೆ ಪ್ರಾರಂಭವಾಗುತ್ತದೆ. ಚರ್ಚೆಯ ಎರಡೂ ಬದಿಯಿರುವವರ ಮಾತು – ಹೇಳಿಕೆ – ಬರಹಗಳು ಒಂದು ಅತಿಯಲ್ಲಿಯೇ ಇರುತ್ತವೆ. ಒಂದೆಡೆ ಟಿಪ್ಪು ಅಪ್ರತಿಮ ದೇಶಪ್ರೇಮಿ, ಬ್ರಿಟೀಷರ ವಿರುದ್ಧ ಹೋರಾಡಿದಾತ, ಹಿಂದೂ ದೇವಾಲಯಗಳಿಗೆ ದಾನ ಧರ್ಮ ನೀಡಿದ ಧರ್ಮ ಸಹಿಷ್ಣು ಎಂಬ ವಾದಗಳು ಕೇಳಿಬಂದರೆ ಮತ್ತೊಂದೆಡೆ ಟಿಪ್ಪು ದೇಶದ್ರೋಹಿ, ನೂರಾರು ಹಿಂದೂ ದೇವಾಲಯಗಳನ್ನು ಕೆಡವಿದಾತ, ಸಾವಿರಾರು ಹಿಂದೂಗಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಿಸಿದಾತ ಎಂಬ ವಾದಗಳು ಚಾಲ್ತಿಯಲ್ಲಿವೆ. ನೋಡಿದರೆ ಎರಡೂ ವಾದಗಳಲ್ಲೂ ಸತ್ಯಗಳಿವೆ. ಈ ಬಾರಿ ಕರ್ನಾಟಕದಲ್ಲಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಟಿಪ್ಪುವಿನ ಜಯಂತಿಯನ್ನು ಸರಕಾರದ ವತಿಯಿಂದ ನಡೆಸಲು ನಿರ್ಧರಿಸಿರುವುದು ಮತ್ತೊಂದು ರೌಂಡು ಟಿಪ್ಪು ಪರ ವಿರೋಧದ ಚರ್ಚೆಗೆ ಸರಕು ಒದಗಿಸಿದೆ. ಈ ಚರ್ಚೆಗಳು ಅವಶ್ಯಕವೇ?

ಟಿಪ್ಪು ಸಾಹಸಿ, ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದಾತ, ಬ್ರಿಟೀಷರ ಬೆದರಿಕೆಗೆ ಮಣಿಯದೆ ಹೋರಾಡಿ ಸತ್ತವನು ಎನ್ನುವುದೆಲ್ಲ ಸತ್ಯವೇ ಆದರೆ ಅಷ್ಟಕ್ಕೆ ಟಿಪ್ಪುವನ್ನು ದೇಶಪ್ರೇಮಿ ಎಂದೆಲ್ಲ ಹೊಗಳುವ ಅವಶ್ಯಕತೆಯೇನಿದೆ? ಅದು ಟಿಪ್ಪುಯಿರಬಹುದು ಮತ್ತೊಬ್ಬ ಮಗದೊಬ್ಬ ರಾಜರಿರಬಹುದು. ಅವರ್ಯಾರು ದೇಶಪ್ರೇಮಿಗಳಲ್ಲ, ದೇಶದ್ರೋಹಿಗಳಲ್ಲ; ಅವರೆಲ್ಲ ಅವರವರ ಸಾಮ್ರಾಜ್ಯಪ್ರೇಮಿಗಳಷ್ಟೇ. ಅವರ ಸಾಮ್ರಾಜ್ಯಕ್ಕೆ ಧಕ್ಕೆ ತರುವಂತಹ ವೈರಿಯನ್ನು ಎದುರಿಸಿ ನಿಲ್ಲುತ್ತಿದ್ದರು, ಕೆಲವೊಮ್ಮೆ ಗೆಲ್ಲುತ್ತಿದ್ದರು ಕೆಲವೊಮ್ಮೆ ಸೋಲುತ್ತಿದ್ದರು. ಇಷ್ಟಕ್ಕೂ ಟಿಪ್ಪುವನ್ನು ದೇಶಪ್ರೇಮಿಯೆಂದು ಕರೆಯಲು ಅವನ ಕಾಲಘಟ್ಟದಲ್ಲಿ ‘ಭಾರತ’ವೆಂಬ ದೇಶವಾದರೂ ಎಲ್ಲಿತ್ತು. ನೂರಾರು ರಾಜರ ನಡುವ ಹಂಚಿಹೋಗಿದ್ದ ದೇಶವನ್ನು ಒಗ್ಗೂಡಿಸಿ ನಂತರ ಮತ್ತೆ ಒಡೆದ ಖ್ಯಾತಿ ಬ್ರಿಟೀಷರದ್ದು, ಮತ್ಯಾರದೂ ಅಲ್ಲ. ಇಷ್ಟು ಕಾಮನ್ ಸೆನ್ಸ್ ಇಟ್ಕೊಳ್ಳದೆ ನೂರಿನ್ನೂರು ವರುಷಗಳ ಹಿಂದೆ ಸತ್ತು ಹೋದವರ ನೆನಪಿನಲ್ಲಿ ‘ಚರ್ಚೆ’ ಮಾಡುವುದು ಯಾವ ಸಂಭ್ರಮಕ್ಕೆ. ಬ್ರಿಟೀಷರ ವಿರುದ್ಧ ಹೋರಾಡಿದವರನ್ನು ದೇಶಪ್ರೇಮಿ ಎಂದು ಗುರುತಿಸುವುದಾದರೆ ಟಿಪ್ಪುವನ್ನೂ ದೇಶಪ್ರೇಮಿಯೆಂದು ಹೊಗಳಲು ಅಡ್ಡಿಯಿಲ್ಲ.

ಮೊನ್ನೆ ಗೆಳೆಯನೊಬ್ಬ ಮೆಸೇಜು ಕಳಿಸಿದ್ದ. ಟಿಪ್ಪು ಜಯಂತಿ ಸರಕಾರ ಆಚರಿಸೋದು ತಪ್ಪು ಅಂತ. ಮೈಸೂರು ಸಂಸ್ಥಾನದ ಕುರುಹಾದ ದಸರಾವನ್ನು ಸರಕಾರ ಪ್ರತೀ ವರ್ಷ ಆಚರಿಸುತ್ತದೆ, ‘ರಾಜ’ ಕುಟುಂಬಕ್ಕೆ ಲಕ್ಷ ಲಕ್ಷ ಎಣಿಸಿ ಕೊಡುತ್ತದೆ, ಹಂಪಿ ಉತ್ಸವ ಆಚರಿಸುತ್ತದೆ ಇನ್ನೂ ಹತ್ತಲವು ಜಯಂತಿಗಳನ್ನು ಆಚರಿಸುತ್ತದೆ ಆಗೆಲ್ಲ ಸರಕಾರದ ವತಿಯಿಂದ ಜಯಂತಿಗಳನ್ನು ನಡೆಸುವುದು ತಪ್ಪು ಎನ್ನಿಸದೆ ಈಗ ಟಿಪ್ಪು ಜಯಂತಿಯ ವಿಷಯಕ್ಕೆ ಮಾತ್ರ ವಿರೋಧ ವ್ಯಕ್ತವಾಗುವುದು ಯಾಕೆ? ಟಿಪ್ಪು ಸುಲ್ತಾನ್ ಮುಸ್ಲಿಮನೆಂಬ ಕಾರಣಕ್ಕೆ ತಾನೇ ಈ ವಿರೋಧ. ಟಿಪ್ಪು ಸುಲ್ತಾನ್ ಕೇರಳದಲ್ಲಿ, ಮಲೆನಾಡಿನಲ್ಲಿ ಬಲವಂತದ ಮತಾಂತರ ನಡೆಸಿದ್ದಾನೆ ಎಂದು ಬೊಬ್ಬೆಯೊಡೆಯುವವರು ಕೇರಳದಲ್ಲಿ ದಲಿತರ ಮೇಲಿದ್ದ ‘ತಲೆ ತೆರಿಗೆ’ ‘ದೇಹ ತೆರಿಗೆ’ ‘ಮೊಲೆ ತೆರಿಗೆ’ಯ ಬಗ್ಗೆ ಚಕಾರವೆತ್ತುವುದಿಲ್ಲ. ಬಲವಂತದಿಂದಲೂ ಮತಾಂತರ ನಡೆದಿರುವುದನ್ನು ನಿರಾಕರಿಸದೆಯೇ ಹಿಂದೂ ಧರ್ಮದೊಳಗಿನ ಜಾತಿ ಪದ್ಧತಿ ಕೂಡ ಈ ಮತಾಂತರಕ್ಕೆ ಪೂರಕವಾಯಿತು ಎನ್ನುವುದನ್ನು ಮರೆಯಬಾರದು. 

ಸರಕಾರ ಹಿಂಗೆ ಇರೋ ಬರೋ ರಾಜರ ಹೆಸರಿನಲ್ಲೆಲ್ಲಾ ಜಯಂತಿ ಉತ್ಸವಗಳನ್ನು ಆಚರಿಸಬೇಕೆ ಎಂಬ ಪ್ರಶ್ನೆಗೆ ಉತ್ತರ ಹೌದು ಮತ್ತು ಇಲ್ಲ. ಇಂತಹ ಉತ್ಸವಗಳನ್ನೆಲ್ಲ ಆಚರಿಸೋದು ಸರಕಾರದ ಕೆಲಸವಲ್ಲ ಇನ್ನು ಮುಂದೆ ಸರಕಾರದ ವತಿಯಿಂದ ಮೈಸೂರು ದಸರವನ್ನು ನಡೆಸಲಾಗುವುದಿಲ್ಲ ಎಂದು ಹೇಳುವ ಧೈರ್ಯವಂತ ಸರಕಾರವನ್ನು ಕರ್ನಾಟಕದಲ್ಲಿ ಕಾಣಬಹುದೆ? ಹಾಗೆ ಹೇಳಿದರೆ ಇದೇ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿರುವವರು ಹೇಗೆ ಪ್ರತಿಕ್ರಿಯೆ ನೀಡಬಹುದು? ಹಾಗೆ ನೋಡಿದರೆ ಮೈಸೂರು ಸಂಸ್ಥಾನ ಬ್ರಿಟೀಷರ ವಿರುದ್ಧ ಗಟ್ಟಿ ನೆಲೆಯಲ್ಲಿ ಹೋರಾಡಿದ್ದೇ ಇಲ್ಲ. ‘ದೇಶದ್ರೋಹಿ’ ಕುಟುಂಬಕ್ಕೆ ವರುಷ ವರುಷ ಜನರ ತೆರಿಗೆ ದುಡ್ಡಿನಿಂದ ಲಕ್ಷ ಲಕ್ಷ ಎಣಿಸುತ್ತಾರಲ್ಲ ಅದನ್ನೂ ನಿಲ್ಲಿಸಬೇಕಲ್ಲವೇ? ಸರಕಾರಗಳಿಗೆ ಈ ಉತ್ಸವ, ಜಯಂತಿಗಳೆಲ್ಲವೂ ಮತ ಬ್ಯಾಂಕ್ ಮತ್ತು ಹಣ ಮಾಡುವ ದಂಧೆಗಳಷ್ಟೇ. ದಸರೆಯ ನೆಪದಲ್ಲಿ ಟಾರು ಬಳಿಯಲು, ರಸ್ತೆಗಳನ್ನು ಸಿಂಗರಿಸಲು ಪ್ರತೀ ವರುಷ ಹಣ ಬಿಡುಗಡೆಯಾಗುತ್ತದೆ. ವರುಷ ಮುಗಿಯುವದರೊಳಗೆ ಕೀಳುವಂತಹ ಟಾರನ್ನು ಹಾಕುವುದು ದುಡ್ಡು ಮಾಡುವ ಉದ್ದೇಶದಿಂದಲೇ ಅಲ್ಲವೇ? ಈ ಮತ ಬ್ಯಾಂಕ್, ಭ್ರಷ್ಟಾಚಾರದ ಲೆಕ್ಕದಲ್ಲಿ ನೋಡಿದರೆ ಸರಕಾರ ಎಲ್ಲ ಉತ್ಸವ ಜಯಂತಿಗಳನ್ನೂ ನಿಲ್ಲಿಸಿಬಿಡಬೇಕು. ಆದರೆ ಈ ಉತ್ಸವಗಳಿಂದ ಒಂದು ಅನುಕೂಲವೂ ಇದೆ. ಅದು ಪಾರಂಪರಿಕ ತಾಣಗಳ ಕಟ್ಟುನಿಟ್ಟು ನಿರ್ವಹಣೆ, ಕಾಲಕಾಲಕ್ಕೆ ನಡೆಯುವ ನವೀಕರಣ ಮತ್ತು ಪ್ರವಾಸೋದ್ಯಮಕ್ಕೆ ಅಪಾರ ಪ್ರೋತ್ಸಾಹ. ಮೈಸೂರಿಗೆ ವರುಷದಿಂದ ವರುಷಕ್ಕೆ ಪ್ರವಾಸಿಗರ ಸಂಖೈ ಹೆಚ್ಚುವುದಕ್ಕೆ ದಸರಾ ಮೆರವಣಿಗೆಯ ಕೊಡುಗೆಯನ್ನು ಕಡೆಗಣಿಸಲಾಗದು. ಅದೇ ಲೆಕ್ಕದಲ್ಲಿ ಟಿಪ್ಪು ಜಯಂತಿಯಿಂದ ಶ್ರೀರಂಗಪಟ್ಟಣ ಒಂದಷ್ಟು ಸಿಂಗಾರಗೊಂಡು ಪ್ರವಾಸಿಗರ ಸಂಖೈ ಹೆಚ್ಚಿ ವ್ಯಾಪಾರ ವಹಿವಾಟು ಹೆಚ್ಚಿದರೆ ಯಾಕೆ ಬೇಡವೆನ್ನಬೇಕು? ಟಿಪ್ಪು ಜಯಂತಿಯ ಹೆಸರಿನಲ್ಲಿ ಎಲ್ಲಾ ಜಿಲ್ಲೆ ತಾಲ್ಲೂಕುಗಳಿಗೆ ದುಡ್ಡು ಹಂಚುವುದನ್ನು ಬಿಟ್ಟು ಅಷ್ಟೂ ದುಡ್ಡನ್ನು ಶ್ರೀರಂಗಪಟ್ಟಣದ ಪಾರಂಪರಿಕ ತಾಣಗಳ ಅಭಿವೃದ್ಧಿಗೆ ಬಳಸಿದರೆ ಪ್ರವಾಸೋದ್ಯಮ ಬೆಳೆಯುತ್ತದೆಯೆನ್ನುವುದನ್ನು ಮರೆಯಬಾರದು.

Nov 7, 2015

ಇಲ್ಲಿ ಎಲ್ಲರೂ ಸಮಾನರು; ದಲಿತರು ಮಾತ್ರ ನಿಕೃಷ್ಟರು....

ಮೀಸಲಾತಿಯ ವಿರುದ್ಧದ ಮೇಲಿನ ಚಿತ್ರವನ್ನು ನಿಮ್ಮಲ್ಲಿ ಬಹಳಷ್ಟು ಜನರು ಫೇಸ್ ಬುಕ್ಕಿನಲ್ಲೋ ಮತ್ತೊಂದು ಕಡೆಯೋ ಗಮನಿಸಿರುತ್ತೀರಿ. ಒಂದು ಲೈಕನ್ನೂ ಒತ್ತಿರುತ್ತೀರಿ, ಶೇರ್ ಕೂಡ ಮಾಡಿರುತ್ತೀರಿ. 'ನೋಡ್ರಿ ನೋಡ್ರಿ ಮೀಸಲಾತಿ ಇಲ್ಲದ ಅಮೆರಿಕಾದಲ್ಲಿ ಹೇಗೆಲ್ಲ ಅಭಿರುದ್ಧಿಯಾಗಿದೆ, ನಾವು ನೋಡಿ ಎಷ್ಟು ಹಿಂದುಳಿದಿದ್ದೀವಿ' ಎಂದು ನೊಂದುಕೊಂಡಿರುತ್ತೀರಿ. ಆ ಚಿತ್ರವನ್ನು ಸೃಷ್ಟಿಸಿದವನಿಗೆ ಮತ್ತು ಅದನ್ನು ಮೆಚ್ಚಿ ಹಂಚಿಕೊಂಡವರಿಗೆಲ್ಲ ಭಾರತದಲ್ಲಿನ್ನೂ ಇರುವ ಸಾಮಾಜಿಕ ಅಸಮಾನತೆಯ ಸಂಪೂರ್ಣ ಅರಿವಿದೆ. ಬಹಿರಂಗವಾಗಿ ತೋರಿಸಿಕೊಳ್ಳದಿದ್ದರೂ ಅಂತರಂಗದಲ್ಲಿ ದಲಿತರನ್ನು ಕೀಳಾಗಿ ಕಾಣಬೇಕೆಂದು ಕಲಿಸಿರುವ ಚಾತುರ್ವರ್ಣ್ಯದ ಕುರಿತಾಗಿ ಅಪಾರ ಗೌರವವಿದೆ. ಅಂತದ್ದೇ ಗೌರವಾನ್ವಿತ ಊರಿನಿಂದ ಬಂದಿರುವ ಥರ್ಡ್ ಕ್ಲಾಸ್ ಸುದ್ದಿಯಿದು.
ಸರಕಾರೀ ಕೆಲಸದಲ್ಲಿ ಸರಿಯಾಗಿ ಕೆಲಸ ಮಾಡದಿದ್ದರೂ ಪ್ರತಿ ದಿನ ಏನೇನು ಕೆಲಸ ಮಾಡಿದರೆಂದು ಬರೆದಿಡುವುದನ್ನು ಮಾತ್ರ ಮರೆಯಬಾರದು. ಕೋಲಾರದ ಕಗ್ಗನಹಳ್ಳಿಯ ಸರಕಾರಿ ಶಾಲೆಯ ಅಡುಗೆ ಕೆಲಸದ ಮುಖ್ಯಸ್ಥೆ ರಾಧಮ್ಮನಿಗೂ ಒಂದು ನೋಟ್ ಪುಸ್ತಕ ನೀಡಲಾಗಿದೆ. ತಪ್ಪದೇ ಪ್ರತೀ ದಿನ ರಾಧಮ್ಮಳೂ ಒಂದು ಸಾಲು ಬರೆಯುತ್ತಾಳೆ. 'ಇವತ್ತು ಯಾರೂ ಊಟ ಮಾಡಿಲ್ಲ' ಎಂಬ ಸಾಲು ಇಡೀ ಡೈರಿಯನ್ನು ತುಂಬಿಹೋಗಿದೆ. ಸರಕಾರೀ ಶಾಲೆಯೆಂದು ಊರಿನವರು ಮಕ್ಕಳನ್ನು ಕಳುಹಿಸುತ್ತಿಲ್ಲವೇನೋ, ಅಕ್ಕಪಕ್ಕದ ಖಾಸಗಿ ಶಾಲೆಗೆ ಕಳುಹಿಸುತ್ತಿರಬೇಕೆಂದುಕೊಂಡರೆ ಅದೂ ಸುಳ್ಳು. ಊರಿನ ಮಕ್ಕಳು ಹೋಗುವುದು ಪಕ್ಕದ ಹಳ್ಳಿಯ ಸರಕಾರೀ ಶಾಲೆಗೆ. ಊರಿನಲ್ಲೇ ಉತ್ತಮವಾದ ಶಾಲೆಯಿದ್ದರೂ ಪಕ್ಕದ ಶಾಲೆಗೆ ಮಕ್ಕಳು ಹೋಗುವುದ್ಯಾಕೆ?
ಕಗ್ಗನಹಳ್ಳಿಯ ರಾಧಮ್ಮ
ಯಾಕೆಂದರೆ ರಾಧಮ್ಮ ಚಾತುರ್ವಣ್ಯದ ಒಳಗೂ ಪ್ರವೇಶ ಪಡೆಯದ 'ನಿಕೃಷ್ಟ' ದಲಿತ ಜಾತಿಗೆ ಸೇರಿದ ಹೆಣ್ಣುಮಗಳು. 2014ರಲ್ಲಿ ರಾಧಮ್ಮಳನ್ನು ಅಡುಗೆಯ ಕೆಲಸಕ್ಕೆ ನೇಮಿಸಿದ ನಂತರ ಇದುವರೆಗೆ ಒಟ್ಟು ನೂರು ವಿದ್ಯಾರ್ಥಿಗಳನ್ನು ಅವರ ಹೆತ್ತವರು ಶಾಲೆಯಿಂದ ಬಿಡಿಸಿಬಿಟ್ಟಿದ್ದಾರೆ. 'ಆದಿ ಕರ್ನಾಟಕ ಜಾತಿಗೆ ಸೇರಿದ ಮಹಿಳೆ ಮಾಡಿದ ಅಡುಗೆಯನ್ನು ನಮ್ಮ ಮಕ್ಕಳು ತಿನ್ನುವುದು ಹೇಗೆ ಸಾಧ್ಯ?' ಎಂಬ ಜಾತಿ ಶ್ರೇಷ್ಟತೆಯೇ ಇದಕ್ಕೆಲ್ಲ ಕಾರಣ. ಚೆನ್ನಾಗಿದ್ದ ಶಾಲೆಯನ್ನು ಹಾಳು ಮಾಡಿದ್ದೇ ಈ ರಾಧಮ್ಮ ಎಂದು ದೂಷಿಸುವ ಮಟ್ಟಿಗೆ ಅಲ್ಲಿನ ಊರಿನವರು ಮಾತನಾಡುತ್ತಿದ್ದಾರೆ ಎಂದು ವರದಿ ಮಾಡಿದೆ ಇಂಡಿಯನ್ ಎಕ್ಸ್ ಪ್ರೆಸ್.
ಈಗಲ್ಲಿರುವ ವಿದ್ಯಾರ್ಥಿಗಳ ಸಂಖೈ ಹದಿನೆಂಟು ಮಾತ್ರ. ಇನ್ನೊಂದು ಎಂಟು ಜನರು ಶಾಲೆ ಬಿಟ್ಟರೆ ಶಾಲೆಯನ್ನೇ ಮುಚ್ಚುವ ಪರಿಸ್ಥಿತಿ ಸೃಷ್ಟಿಯಾಗುತ್ತೆ. 'ಥೂ ಈ ಹಾಳಾದ್ ರಾಧಮ್ಮನಿಂದ ಇರೋ ಒಂದು ಶಾಲೇನೂ ಮುಚ್ಚೋಯ್ತು' ಅಂತ ಬಿಟ್ಟಿಯಾಗಿ ಸಿಗುವ ದಲಿತರನ್ನು ಬಯ್ದಾಡುತ್ತಾ ಊರವರೆಲ್ಲ ಕುಸಿ ಪಡಬಹುದು. ಹಿಂದೂ ಧರ್ಮ ನಾಶವಾಗುವವರೆಗೆ ದಲಿತರಿಗೆ ಮುಕ್ತಿಯಿಲ್ಲ ಎಂದ್ಹೇಳಿದ್ದು ಅಂಬೇಡ್ಕರ್ ಅಲ್ಲವೇ?