Feb 27, 2015

ಅಮಲುಗಳ ನಡುವೆ ಕಳೆದುಹೋಗುವ ಜಟ್ಟ.

Dr Ashok K R
ಗಿರಿರಾಜರ ಹೆಸರು ಮೊದಲು ಕೇಳಿದ್ದು ‘ವರ್ತಮಾನ’ ವೆಬ್‍ಪತ್ರಿಕೆ ಪ್ರತಿ ವರುಷ ನಡೆಸುವ ಕಥಾ ಸ್ಪರ್ಧೆಯ ಫಲಿತಾಂಶದಲ್ಲಿ. ಅವರ ‘ಗಲೀಜು’ ಎಂಬ ಕಥೆಗೆ ಎರಡನೆಯ ಬಹುಮಾನ ಬಂದಿತ್ತು. ಅದರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಗಿರಿರಾಜರನ್ನು ಭೇಟಿಯಾದಾಗಲೇ ತಿಳಿದಿದ್ದು ಇದೇ ಆಸಾಮಿ ‘ಜಟ್ಟ’ ಚಿತ್ರದ ನಿರ್ದೇಶಕರೆಂದು! ಜಟ್ಟ ಚಿತ್ರದ ಬಗ್ಗೆ ಆಗಲೇ ಸಾಕಷ್ಟು ಚರ್ಚೆ ನಡೆದಿತ್ತು. ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಹೋಗಿ ಚಿತ್ರ ನೋಡುವ ಉಮೇದು ಕಡಿಮೆಯಾಗಿದ್ದ ಕಾರಣ ‘ಜಟ್ಟ’ ಚಿತ್ರವನ್ನಿನ್ನೂ ನೋಡಿರಲಿಲ್ಲ. ಗೆಳೆಯ ನಿರ್ದೇಶಕ ಅಭಿ ಹನಕೆರೆ ಜಟ್ಟವನ್ನೊಂದಷ್ಟು ಹೊಗಳಿ ಹೋಗಿ ನೋಡು ಎಂದಿದ್ದ. ಕಾರಣಾಂತರಗಳಿಂದ ಜಟ್ಟ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡುವುದು ಸಾಧ್ಯವಾಗಲಿಲ್ಲ. ಕೊನೆಗೆ ನಮ್ಮ ‘ಹುಚ್ಚ ವೆಂಕಟ್’ ಹೇಳುವ ಹಾಗೆ ಬಿಟ್ಟಿಯಾಗಿ ಟಿವಿಯಲ್ಲೇ ನೋಡಿದೆ! ಇಂತಹುದೊಂದು ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡದಿದ್ದುದಕ್ಕೆ ಬೇಸರವಿದೆ.

Feb 24, 2015

‘ಎಕೆ 49’ ಎಕೆ 67 ಆದ ಯಶಸ್ಸಿನ ಕಥೆ

Dr Ashok K R
ರಾಜ್ಯವಲ್ಲದ ರಾಜ್ಯದ ಚುನಾವಣೆಯೊಂದು ದೇಶದ ರಾಜಕೀಯ ಭವಿಷ್ಯದ ದಾರಿಯನ್ನೇ ಬದಲಿಸಿಬಿಡುವ ಭಯ – ಆಶಾಭಾವನೆ ಮೂಡಿಸಿದೆ. ಈ ಭಯ ಮತ್ತು ಆಶಾಭಾವನೆಗಳೆರಡೂ ಪ್ರತಿಯೊಂದನ್ನೂ ಅತಿಗೆ ತೆಗೆದುಕೊಂಡು ಹೋಗುವ ಇವತ್ತಿನ ಸಾಮಾನ್ಯ ಮನಸ್ಥಿತಿಯ ಪ್ರತೀಕವಾಗಿದೆಯಾ? ದೆಹಲಿಯ ಚುನಾವಣೆಯ ನಂತರದಲ್ಲಿ ಮಾಧ್ಯಮ ಒಂದು ದೊಡ್ಡ ಯು – ಟರ್ನ್ ತೆಗೆದುಕೊಂಡು ಅರವಿಂದ್ ಕೇಜ್ರಿವಾಲ್ ಎಂಬ ನಾಯಕನ ಮತ್ತಾತನ ಆಮ್ ಆದ್ಮಿ ಪಕ್ಷದ ಗುಣಗಾನದಲ್ಲಿ ನಿಂತುಬಿಟ್ಟಿದೆ. ಸರಿಸುಮಾರು ಒಂದು ವರ್ಷದಿಂದ ಉದ್ದೇಶಪೂರ್ವಕವಾಗಿ ಕಡೆಗಣಿಸಲ್ಪಟ್ಟ ವ್ಯಕ್ತಿಯೊಬ್ಬ ಮತ್ತೆ ಮೀಡಿಯಾ ಡಾರ್ಲಿಂಗ್ ಆಗಿಬಿಟ್ಟಿದ್ದು ಹೇಗೆ? ಗೆದ್ದೆತ್ತಿನ ವರದಿ ಮಾಡುವುದಕ್ಕೂ ಗೆದ್ದೆತ್ತಿನ ಬಾಲ ಹಿಡಿಯುವುದಕ್ಕೂ ವ್ಯತ್ಯಾಸವಿದೆಯಲ್ಲವೇ? ಮಾಧ್ಯಮದ ಸಹಾಯವಿದ್ದರೆ ಚುನಾವಣೆಯಲ್ಲಿ ಗೆಲುವು ಕಾಣಬಹುದು ಎಂಬುದಕ್ಕೆ ಹೋದ ಬಾರಿಯ ದೆಹಲಿಯ ಚುನಾವಣೆ ಮತ್ತು ಲೋಕಸಭಾ ಚುನಾವಣೆ ಉದಾಹರಣೆಯಾಗಿದ್ದರೆ ಮಾಧ್ಯಮಕ್ಕೆ ಅಪ್ರಿಯರಾದರೂ ಜನರ ನೇರ ಸಂಪರ್ಕದಿಂದ ಚುನಾವಣೆಯೊಂದನ್ನು ಗೆಲ್ಲಬಹುದು ಎಂಬುದನ್ನು ನಿರೂಪಿಸಿದೆ ಈ ಬಾರಿಯ ದೆಹಲಿ ಚುನಾವಣೆ.

Feb 14, 2015

ಅವ್ವ

ಉಮೇಶ ಮುಂಡಳ್ಳಿ ಭಟ್ಕಳ
ಮಲಗಿದ್ದಾಳೆ ಅವ್ವ
ಏಳುವಂತಿಲ್ಲಾ,
ಹೇಗೆ ಎದ್ದಾಳು?
ಮಲಗಿದ್ದಾಳೆ
ಚಿರನಿದ್ರೆಯಲಿ.

ಎವೆಯಿಕ್ಕದೆ ನೋಡುತ್ತಿರೆ
ನಿನ್ನ ಕಣ್ಣು,
ಕೇಳಿಸುತ್ತಲೇ ಇಲ್ಲಾ
ಎದೆಯ ಕೂಗು.
ಒಂದು ಹನಿಯಿಲ್ಲ
ಆರ್ದತೆಯೆ ಎಲ್ಲಾ.
ಮಲಗಿದ್ದಾಳೆ
ಅವ್ವ
ಚಿರನಿದ್ರೆಯಲಿ.

Feb 10, 2015

ಗೆಲುವು ಕಂಡ ಆಮ್ ಆದ್ಮಿಗಿದು ಜವಾಬ್ದಾರಿ ಪರ್ವ!

ದೆಹಲಿ ಚುನಾವಣೆಗೆ ಸಂಬಂಧಪಟ್ಟಂತೆ ಬರೆದಿದ್ದ ಹಿಂದಿನ ಲೇಖನದ ಕೊನೆಯಲ್ಲಿ ಅರವಿಂದ್ ಕೇಜ್ರಿವಾಲರ ಅರಾಜಕತೆ ಕಿರಣ್ ಬೇಡಿಯವರ ಅನುಕೂಲಸಿಂಧುತ್ವಗಳೇನೇ ಇದ್ದರೂ ಪ್ರಾಮಾಣಿಕತೆಯ ವಿಷಯದಲ್ಲಿ ಸದ್ಯದ ಮಟ್ಟಿಗೆ ಇಬ್ಬರಲ್ಲೂ ತುಂಬ ವ್ಯತ್ಯಾಸಗಳನ್ನುಡುಕುವುದು ಕಷ್ಟ. ಕಿರಣ್ ಬೇಡಿಯವರು ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿ ಎಂಬ ಕಾರಣಕ್ಕಾಗಿ ಆಮ್ ಆದ್ಮಿ ಪಕ್ಷಕ್ಕೆ ಬದಲಾಗಿ ಬಿಜೆಪಿಗೆ ಮತ ಚಲಾಯಿಸುವವರು ಇರುವ ಹಾಗೆಯೇ ಬಿಜೆಪಿಯ ಅವಕಾಶವಾದಿತನದ ರಾಜಕಾರಣದಿಂದ ಬೇಸತ್ತು ಆಮ್ ಆದ್ಮಿ ಪಕ್ಷಕ್ಕೆ ಮತ ಚಲಾಯಿಸುವವರೂ ಇರುತ್ತಾರೆ. ಒಟ್ಟಿನಲ್ಲಿ ದೇಶದ ರಾಜಧಾನಿಯ ಚುನಾವಣೆ ಹತ್ತಲವು ಕಾರಣಗಳಿಂದ ಗಮನ ಸೆಳೆಯುತ್ತಿದೆ. ಕೊನೆಗೆ ಪ್ರಜಾಪ್ರಭುತ್ವ ಗೆಲ್ಲಲಿ ಎಂಬುದಷ್ಟೇ ಆಶಯ - ಎಂದು ಬರೆದಿದ್ದೆ. ಚುನಾವಣೋತ್ತರ ಸಮೀಕ್ಷೆಗಳು ಆಪ್ ಗೆ ಸ್ಪಷ್ಟ ಬಹುಮತದ ನಿರೀಕ್ಷೆಯನ್ನು ಹುಟ್ಟುಹಾಕಿದ್ದವು. ಇಂದಿನ ಫಲಿತಾಂಶ ಕಾಂಗ್ರೆಸ್ಸಿನ ಧೂಳಿಪಟವನ್ನು ಖಚಿತಪಡಿಸಿ, ಬಿಜೆಪಿಗೂ ಅಘಾತಕಾರಿಯಾದಂತಹ ತೀರ್ಪು ನೀಡಿದ್ದಾರೆ ದೆಹಲಿಯ ಮತದಾರರು. ಇರುವ ಎಪ್ಪತ್ತು ಸೀಟುಗಳಲ್ಲಿ ಆಮ್ ಆದ್ಮಿ ಪಕ್ಷ 67ರಲ್ಲಿ ಜಯ ಗಳಿಸಿದ್ದರೆ, ಬಿಜೆಪಿ ಮೂರರಲ್ಲಿ ಮಾತ್ರ ಗೆಲುವು ಖಂಡಿದೆ. ಕಾಂಗ್ರೆಸ್ಸಿಗೆ ಒಂದೂ ಇಲ್ಲ!

Feb 9, 2015

ಹುಲಿಯ ನೆರಳಿನೊಳಗೆ ಪ್ರಖರವಾಗಿ ಬೆಳಗಿದ ನಾಮದೇವ ನಿಮ್ಗಾಡೆ

in the tigers shadow
ಹುಲಿಯ ನೆರಳಿನೊಳಗೆ
Dr Ashok K R
ಗೌಡ, ಜಮೀನ್ದಾರ, ಪೋಲೀಸ್ ಪಾಟೀಲ್, ಮಾಲಿ ಪಾಟೀಲ್, ಪೂಜಾರಿ, ಅಯ್ಯಂಗಾರಿ ಇನ್ನೂ ಹತ್ತಲವು ಪದಗಳು ನಮ್ಮಲ್ಲನೇಕರ ಹೆಸರುಗಳನ್ನಲಂಕರಿಸುತ್ತವೆ. ಈಗವುಗಳಲ್ಲಿ ಬಹುತೇಕವು ತಲೆಮಾರಿನ ಮುಂದುವರಿಕೆಗೆ ಇದ್ದರೆ ಮುಂಚಿನ ದಿನಗಳಲ್ಲಿ ಅವರ ಸುಪರ್ದಿಯಲ್ಲಿದ್ದ ದೇವಸ್ಥಾನ, ಜಮೀನು, ಕೆಲಸವನ್ನು ಸೂಚಿಸುತ್ತಿದ್ದವು, ಜೊತೆಗೆ ಜಾತಿ ಸೂಚಕವಾಗಿದ್ದವು. ದೇವಸ್ಥಾನದ ಒಳಗೆ ಕಾಲಿಡಲಾಗದ, ಜಮೀನಿನ ಒಡೆತನವೇ ಇಲ್ಲದ, ಮಾಡುವ ಕೆಲಸವನ್ನು ಹೇಳಿಕೊಳ್ಳಲಾಗದ, ಹೆಸರೇ ಕೀಳರಿಮೆ ಹುಟ್ಟಿಸುವ ಜಾತಿಯಲ್ಲಿ ನರಳಿದ ಜನರು ಸರ್ ನೇಮಿಗಾಗಿ ಏನು ಮಾಡುತ್ತಿದ್ದರು?! ಆಸ್ತಿ ಪಾಸ್ತಿ ಇಲ್ಲದ ಜನರು ಪ್ರಕೃತಿಯಲ್ಲಿ ಉಳಿದವರಿಗಿಂತ ಹೆಚ್ಚಾಗಿ ಒಡನಾಡಿದವರು. ಅಂಥಹ ಪ್ರಕೃತಿಯೊಂದಿಗೇ ತಮ್ಮನ್ನು ಗುರುತಿಸಿಕೊಳ್ಳುವ ಅತ್ಯದ್ಭುತ ವಾಸ್ತವಾತ್ಮಕ ಕಲ್ಪನೆಯೊಂದಿಗೆ ಕನ್ನಡಕ್ಕೆ ಭಾವಾನುವಾದಗೊಂಡಿರುವ ನಾಮದೇವ ನಿಮ್ಗಾಡೆಯವರ ಆತ್ಮಕಥನ ‘ಹುಲಿಯ ನೆರಳಿನೊಳಗೆ – ಅಂಬೇಡ್ಕರ್ ವಾದಿಯ ಆತ್ಮಕಥೆ’ ಪ್ರಾರಂಭವಾಗುತ್ತದೆ. ನಿಮ್ಗಾಡೆಯ ಅರ್ಥ ಬೇವಿನ ಮರ! ಇದೇ ರೀತಿ ತೆಂಗಿನ ಮರ(ಕೋಬ್ರಗಾಡೆ), ಮಾವಿನ ಗಿಡ (ಅಂಬಗಾಡೆ), ಸೀಬೆ ಮರ (ಜಮಗಾಡೆ), ಚೆಕ್ಕಕಾಯಿ (ಬೋರ್ಕರ್) ಎಂಬ ಹೆಸರುಗಳೂ ಇವೆಯಂತೆ. ಪ್ರಕೃತಿಯೊಂದಿಗೆ ಇದಕ್ಕಿಂತ ಹೆಚ್ಚಿನ ರೀತಿಯ ಸಹಬಾಳ್ವೆಯ ಉದಾಹರಣೆಯನ್ನು ನಾನಂತೂ ಇದುವರೆಗೆ ಓದಿರಲಿಲ್ಲ.

Feb 4, 2015

ಆಮ್ ಆದ್ಮಿ ಮತ್ತು ‘ಅಭಿವೃದ್ಧಿಯ’ ನಡುವೆ ಗೆಲುವು ಯಾರಿಗೆ?

delhi elections 2015
Dr Ashok K R
ಅರವಿಂದ್ ಕೇಜ್ರಿವಾಲ್ ಎಂಬ ವ್ಯಕ್ತಿ ಅರಾಜಕತೆ ಸೃಷ್ಟಿಸಲಿಕ್ಕಷ್ಟೇ ಲಾಯಕ್ಕು. ಅರಾಜಕತೆ ಸೃಷ್ಟಿಸುವ ಕೇಜ್ರಿವಾಲ್ ಕಾಡಿಗೆ ಹೋಗಿ  ನಕ್ಸಲರ ಜೊತೆ ಸೇರಲಿ ಎಂದು ನರೇಂದ್ರ ಮೋದಿ ಹೇಳುವುದರೊಂದಿಗೆ ದೆಹಲಿಯ ವಿಧಾನಸಭಾ ಚುನಾವಣೆ ರಂಗೇರಿತು. ಕಳೆದ ಬಾರಿಯ ಚುನಾವಣೆಯಲ್ಲಿ ವಿಶ್ಲೇಷಕರು ಮತ್ತು ರಾಜಕಾರಣಿಗಳೆಲ್ಲ ಅಚ್ಚರಿ ಪಡುವಂತಹ ಗೆಲುವು ಕಂಡಿತ್ತು ಆಮ್ ಆದ್ಮಿ ಪಕ್ಷ. ಯು.ಪಿ.ಎ ಸರಕಾರದ ಭ್ರಷ್ಟಾಚಾರದ ವಿರುದ್ಧ ರಾಷ್ಟ್ರಮಟ್ಟದಲ್ಲಿ ಹೋರಾಟ ಕಟ್ಟಿದ ಅಣ್ಣಾ ಹಜಾರೆ ನೇತೃತ್ವದ ತಂಡದ ಸದಸ್ಯರಲ್ಲೊಬ್ಬರಾದ ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷ ಕಟ್ಟಿ ರಾಜಕೀಯ ಆಖಾಡಕ್ಕಿಳಿದಾಗ ಸ್ವತಃ ಅಣ್ಣಾ ಹಜಾರೆ ಬೆಂಬಲ ನೀಡಲಿಲ್ಲ. ಭ್ರಷ್ಟಾಚಾರಿ ವಿರೋಧಿ ಆಂದೋಲನದ ಅನೇಕರು ಬೆಂಬಲಿಸದಿದ್ದರೂ ಅರವಿಂದ್ ಕೇಜ್ರಿವಾಲ್ ರಾಜಕಾರಣಕ್ಕೆ ಧುಮುಕಿದಾಗ ನಕ್ಕವರೇ ಹೆಚ್ಚು. ದೆಹಲಿಯನ್ನು ವಿಶೇಷ ಗಮನದಲ್ಲಿರಿಸಿಕೊಂಡು ಚುನಾವಣೆಗೆ ನಿಂತಾಗ ಬಿಜೆಪಿಗೆ ಒಂದೆಡೆ ಖುಷಿಯೇ ಆಗಿತ್ತು. ಹತ್ತು ವರುಷದ ಕಾಂಗ್ರೆಸ್ಸಿನ ದುರಾಡಳಿತದಿಂದ ಬೇಸತ್ತಿದ್ದ ಮತದಾರ ಬಿಜೆಪಿಗೆ ಬಹುಮತ ಕೊಡುತ್ತಾನೆ ಎಂಬ ನಂಬಿಕೆಯಿತ್ತು. ಬಿಜೆಪಿಯನ್ನು ವಿರೋಧಿಸುವ ಮತದಾರರ ಓಟು ಕಾಂಗ್ರೆಸ್ಸಿಗೂ ಹೋಗದೆ ಆಮ್ ಆದ್ಮಿ ಪಕ್ಷಕ್ಕೆ ಬೀಳುತ್ತದೆ. ಎದುರಾಳಿಯ ಮತಗಳು ವಿಭಜನೆಯಾದರೆ ಅದರಿಂದ ತನಗೇ ಗೆಲುವು ಖಂಡಿತ ಎಂಬ ಭಾವನೆಯಿತ್ತು. ಅವರ ನಂಬುಗೆ ಪೂರ್ಣ ನಿಜವಾಗಲಿಲ್ಲ. ಕಾಂಗ್ರೆಸ್ಸಿನ ಓಟು ಕಿತ್ತುಕೊಳ್ಳುವಲ್ಲಿ ಯಶಸ್ವಿಯಾದ ಆಮ್ ಆದ್ಮಿ ಪಕ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಎಂಟು ಸ್ಥಾನಕ್ಕೆ ಮಾತ್ರ ಸೀಮಿತಗೊಳಿಸಿತು. ಆದರೆ ಬಿಜೆಪಿಗೂ ಬಹುಮತ ದೊರಕಲಿಲ್ಲ. ಮೂವತ್ತೆರಡು ಸ್ಥಾನಗಳನ್ನು ಗಳಿಸಲು ಯಶಸ್ವಿಯಾದ ಬಿಜೆಪಿ ಸರಳ ಬಹುಮತಕ್ಕೆ ನಾಲ್ಕು ಸ್ಥಾನಗಳಷ್ಟು ಕೊರತೆಯನ್ನಭುವಿಸಿತು. ಎಲ್ಲರ ನಿರೀಕ್ಷೆಯನ್ನೂ ಮೀರಿ ಆಮ್ ಆದ್ಮಿ ಪಕ್ಷ 28 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಯಾರಿಗೂ ಬಹುಮತ ಸಿಗದ ಕಾರಣ ಸರಕಾರ ರಚನೆಗೊಂದಷ್ಟು ಕಸರತ್ತು ನಡೆದು ಅಲ್ಲಿಯವರೆಗೂ ವಿರೋಧಿಸಿಕೊಂಡು ಬಂದಿದ್ದ ಕಾಂಗ್ರೆಸ್ಸಿನ ‘ಬಾ-ಹ್ಯ ಬೆಂಬಲ’ದೊಡನೆ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾದರು. ಜನಲೋಕಪಾಲ್ ಮಸೂದೆಯ ನೆಪದಿಂದ ಅರವಿಂದ್ ಕೇಜ್ರಿವಾಲ್ ನಲವತ್ತೊಂಬತ್ತು ದಿನಕ್ಕೆ ರಾಜೀನಾಮೆಯನ್ನೂ ನೀಡಿಬಿಟ್ಟರು! ರಾಜಕಾರಣದಲ್ಲಿ ಅದವರ ಮೊದಲ ತಪ್ಪಾಯಿತು. ನಂತರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಭೂತಪೂರ್ವ ಗೆಲುವು ಕಂಡಿತು. ಅನೇಕ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲೂ ಯಶಸ್ಸು ಗಳಿಸಿತು. ಆದರೂ ದೆಹಲಿಯ ಚುನಾವಣೆಯ ಬಗ್ಗೆ ಆತುರ ತೋರಲಿಲ್ಲ ಬಿಜೆಪಿ. ಆತುರ ತೋರದೆ ತಪ್ಪು ಮಾಡಿತಾ? ದೆಹಲಿ ಚುನಾವಣೆಯ ಸುತ್ತಮುತ್ತಲಿನ ಬೆಳವಣಿಗೆಗಳು ತಪ್ಪು ಮಾಡಿತೆಂದೇ ಹೇಳುತ್ತಿವೆ. ಚುನಾವಣಾ ಫಲಿತಾಂಶ ಏನೇ ಆಗಬಹುದು, ಸದ್ಯದ ಮಟ್ಟಿಗಂತೂ ಬಿಜೆಪಿಯ ಘಟಾನುಘಟಿ ರಾಜಕಾರಣಿಗಳ ವಿರುದ್ಧ ರಾಜಕೀಯವಲ್ಲದ ರಾಜಕಾರಣ ಮಾಡುತ್ತಿರುವ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಗೆದ್ದುಬಿಟ್ಟಿದ್ದಾರೆ!