ಮಾರ್ಚ್ 7, 2015

ಸಕಲ ಜೀವಾತ್ಮರಿಗೆ ಲೇಸ ಬಯಸುವ ಮಹಿಳಾ ಚಳುವಳಿ

ಕೆ. ನೀಲಾ
ಲಡಾಯಿ ಪ್ರಕಾಶನದಿಂದ ಪ್ರಕಟವಾಗಿರುವ ಬಿಡುಗಡೆಗೆ ಸಿದ್ಧವಾಗಿರುವ 'ಸಾಕಾರದತ್ತ ಸಮಾನತೆಯ ಕನಸು' ಪುಸ್ತಕದ ಒಂದು ಅಧ್ಯಾಯ 'ಹಿಂಗ್ಯಾಕೆ'ಯ ಓದುಗರಿಗಾಗಿ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಈ ಪ್ರಭುತ್ವದ ಕಾನೂನಿನಿಂದಾಗಿ ಖರೇವು ಅರ್ಥದೊಳಗೆ ನಾ ಮಾಡ್ಲಿಕ್ ಹೊಂಟ್ರ ಕದನ ಗ್ಯಾರಂಟಿ. ಕದನದ ಹಿನ್ನೆಲೆಯೊಳಗೆ ಅಂತಾರಾಷ್ಟ್ರೀಯ ದಿನಾಚರಣೆ ಹುಟ್ಟಿಕೊಂಡಿದೆ. ಮತ್ತ 8ನೇ ತಾರೀಕಿನ ಘೋಷಣೆ ಇತ್ತಲ್ಲ, ಅವತ್ತು ನಮ್ಮ ಕಾರ್ಮಿಕ ಮಹಿಳೆಯರು ಉಳಿದೆಲ್ಲ ಆರ್ಥಿಕ ಬೇಡಿಕೆಗಳ ಜೊತೆಗೆ ಮುನ್ನೆಲೆಯಾಗಿ ಮತದಾನ ಹಕ್ಕಿನ ಬೇಡಿಕೆಯನ್ನು ಇಟ್ಟು ಹೋರಾಟ ಮಾಡಿದ್ರು. ಅದು ರಾಷ್ಟ್ರೀಯ ಪ್ರಜ್ಞೆಯ ಹೋರಾಟ ಆಗಿತ್ತು. ಅದನ್ನು ನೆನಪಿಸಿಕೊಳ್ಳುತ್ತಾ... ಮಹಿಳೆಯರ ಪ್ರಶ್ನೆಯಂದ್ರಾ ಅದೊಂದು ಹಂಗಿಸಿ ಅನುಮಾನಿಸುವ ಪದವಲ್ಲ. ಪುರುಷ ಮತ್ತು ಮಹಿಳೆ ಎದುರು ಬದುರು ನಿಂತಿರುವ ಪ್ರಶ್ನೆಯಲ್ಲ. ಅದನ್ನು ನಾನು ಉತ್ತರ ಕರ್ನಾಟಕ ಭಾಷೆಯ ಒಳಗ ಹೇಳಬೇಕು ಅಂತಂದ್ರ ಇದು ಸಕಲ ಜೀವಾತ್ಮರಿಗೆ ಲೇಸು ಬಯಸುವ ಒಂದು ಚಳುವಳಿ. ಅದೇ ನಮ್ಮ ಸಂಸ್ಕೃತಿ. ಸಕಲ ಜೀವಾತ್ಮರಿಗೆ ಲೇಸು ಬಯಸುವಂಥ ಈ ಚಳುವಳಿಯನ್ನು ನಾವು ನಾಡಿನಾದ್ಯಂತ ಪ್ರಖರವಾಗಿ ಮುಂದಕ್ಕ ತೊಕ್ಕೊಂಡು ಹೋಗುವಂಥ ಹೊಣೆಗಾರಿಕೆ ನಮ್ಮ ಮ್ಯಾಲ ಐತಿ. 

ಕಳೆದ ಅನೇಕ ವರ್ಷಗಳಿಂದ ನಮ್ಮ ನಾಡಿನೊಳಗ ಅನೇಕ ಸಂಘ ಸಂಸ್ಥೆಗಳು ಮಹಿಳಾ ಪರ ಕಾರ್ಯಕ್ರಮಗಳನ್ನ ನಿರ್ವಹಿಸುತ್ತಾ ಇದಾರ. ಆ ರೀತಿಯ ಪ್ರತಿ ವ್ಯಕ್ತಿ ಶಕ್ತಿ ಎಲ್ಲರಿಗೂ ನಾನೊಂದು ದೊಡ್ಡ ಸಲಾಮು ಹೇಳಿ, ಕೆಲವು ಅಂಶ ನಿಮ್ಮ ಮುಂದೆ ಮಂಡಿಸುತ್ತೀನಿ. ವೇದಿಕೆಯ ಮೇಲೆ ಇಷ್ಟು ತನಕ ಲಿಂಗರಾಜಕಾರಣ, ವರ್ಗ ರಾಜಕಾರಣ, ಜಾತಿ ರಾಜಕಾರಣ ಎಲ್ಲಾ ವಿಷಯಗಳನ್ನು ನಿಮ್ಮ ಮುಂದೆ ಇಟ್ಟಿದ್ರು. 

ನಾವು ಇಲ್ಲಿ ಮುಂಜಾನೆದ್ದು ಯಾರ್ಯಾರ್ನ ನೆನೆಯಬೇಕು ಅಂತ ಕೇಳಿದ್ರ, ನಮ್ಮ ಜಾನಪದ ಅಕ್ಕ ಅಥವಾ ತಾಯಿ ಬೀಸುತ್ತಾ ಒಂದು ಮಾತು ಹೇಳುತ್ತಿರುತ್ತಾರೆ. 

ಮುಂಜಾನೆ ನಾನೆದ್ದು ಯಾರ್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯುವ ತವರವರ ಎದ್ದೊಂದು ಗಳಿಗೆ

ಆಯ್ತು ತವರವರನ್ನು ನೆನೆಯೋಣ. ಆದ್ರ ಇವತ್ತಿಗೂ ಸಹಿತ 90-95 ಪರ್ಸೆಂಟು ನಮ್ಮ ಹೆಣ್ಣು ಮಕ್ಕಳು ಆಸ್ತಿವಂಚಿತರು ಆಗ್ಯಾರಲ್ಲ. ನಮ್ಮನ್ನು ಹೆತ್ತವರೇ ನಮಗೆ ಆಸ್ತಿ ಕೊಡಲು ತಯಾರಿಲ್ಲ. ಕಟ್ಟಿಕೊಂಡಿರುವ ಗಂಡನ ಮನೆಯವರು ಆಸ್ತಿ ಕೊಡಲು ತಯಾರಿಲ್ಲ. ಇಂಥ ಸಂದರ್ಭದಲ್ಲಿ ನಮಗೊಂದು ಬಲವಾದ ಕಾನೂನು ಮಾಡಿಕೊಟ್ಟಂತಹ, ಹೆಣ್ಣುಮಕ್ಕಳಿಗೆ, ಸಮಸ್ತಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಹಕ್ಕು ಇರಬೇಕು ಅಂತ ಕಾನೂನು ಮಾಡಿಕೊಟ್ಟಂತಹ ಡಾ. ಬಾಬಾ ಸಾಹೇಬ್ ಅಂಬೇಡ್ಕರರನ್ನು ಮುಂಜಾನೆದ್ದು ನಮ್ಮ ಹೆಣ್ಣುಮಕ್ಕಳು ಮತ್ತು ಸಮಸ್ತ ಜನತೆ ನೆನೆಯಲಿಕ್ಕೆ ಸಾಧ್ಯವಾಗಬೇಕು. 

ಹೆಣ್ಣುಮಕ್ಕಳನ್ನು ಜಾಗತಿಕ ದಲಿತತ್ವಕ್ಕೆ ದೂಡಿದ ಪ್ರಕ್ರಿಯೆಯನ್ನು ವಿವರಿಸಲು ನಾನು ಹೋಗುವುದಿಲ್ಲ. ಸಮಸ್ತ ಹೆಣ್ಣುಮಕ್ಕಳು ಜಾಗತಿಕ ದಲಿತತ್ವಕ್ಕೆ ತಳ್ಳಲ್ಪಟ್ಟವರು. ಅದರೊಂದಿಗೆ ಭಾರತದ ಪರಿಸ್ಥಿತಿಯೊಳಗ ಇವತ್ತು ಬಹಳ ದೊಡ್ಡ ಸಂಖ್ಯೆಯಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೀತದ, ಅದು ನಮ್ಮ ಶ್ರೇಣೀಕೃತ ವ್ಯವಸ್ಥೆಗೆ ಅನುಸರಿಸಿ ನಡೀತದ. 

ಬಡವರು, ಭೂರಹಿತರು ಮತ್ತು ಅತ್ಯಂತ ಕಡು ಬಡತನಕ್ಕೆ ಒಳಗಾದವರು, ದಲಿತರು, ಹಿಂದುಳಿದವರು, ಗ್ರಾಮೀಣ ಪ್ರದೇಶದಲ್ಲಿರುವವರು, ಈ ರೀತಿ ಶ್ರೇಣೀಕೃತ ವ್ಯವಸ್ಥೆ ರೀತಿಯೊಳಗೇನೆ ನಮ್ಮ ಬಡತನದ ಅಂಕಿ ಅಂಶ ಸಿಗುತ್ತವೆ ಅಂತ ನಮಗ ಗಮನಿಸಲು ಸಾಧ್ಯವಾಗಬೇಕು. ವರ್ಗ ಮತ್ತು ಜಾತಿ ಈ ಎರಡು ಪ್ರಶ್ನೆಗಳು ಸಹಿತ ಒಂದಕ್ಕೊಂದು ತಳಕು ಹಾಕಿಕೊಂಡು ಇವತ್ತು ಬೆಳೆದು ಬಂದಿರುವುದನ್ನು ನೋಡ್ತೇವೆ. ಹಾಗಾಗಿ ನಮ್ಮ ಚಳುವಳಿಯನ್ನು, ಇವತ್ತು ವರ್ಗ ತಾರತಮ್ಯದ ವಿರುದ್ಧ ಚಳುವಳಿಯನ್ನು ಮಾಡ್ತ ಮಾಡ್ತನೆ ಜಾತಿಯ ತಾರತಮ್ಯದ ವಿರುದ್ಧ ಸಹ ಚಳುವಳಿ ಮಾಡುವಂತಹ ಅವಶ್ಯಕತೆ ಹಿಂದೆಂದಿಗಿಂತ ಇವತ್ತು ಹೆಚ್ಚದ. ಅದನ್ನು ಮುಂದೆಯೂ ಅದನ್ನು ಗಮನಿಸಲು ನಮಗ ಸಾಧ್ಯವಾಗಬೇಕು. 

ನಾನು ಇಲ್ಲಿ ಬಂದಂತಹ ಎಲ್ಲ ಹೆಣ್ಮಕ್ಳು ಸಹಿತ ಮನೆಯೊಳಗೆ ಕೆಲಸ ಮಾಡಿಬಂದಿದೀವಿ. ನಮ್ಮ ಯಾರ ಮನೆಯೊಳಗೂ ರೊಟ್ಟಿ ತಟ್ಟಿದ್ದಕ್ಕೂ, ಮುದ್ದೆ ತಟ್ಟಿದ್ದಕ್ಕೂ, ಅಡಿಗೆ ಮನೆ ಕೆಲಸ ಮಾಡಿದ್ದಕ್ಕೂ, ಬಟ್ಟೆ ತೊಳೆದದ್ದಕ್ಕೂ, ಪಾತ್ರೆ ತೊಳೆದಿದ್ದಕ್ಕೂ ನಮಗೆ ಖಂಡಿತಾ ಕೂಲಿಯಿಲ್ಲ. ನೀವು ಏನಾದರೂ ಆರ್ಥಿಕ ವಿಚಾರ ಮಾತಾಡಕ ಚಾಲು ಮಾಡಿದ್ರಿ ಅಂದ್ರ, ಆವಾಗ ಹೊಸ ವಾದ ನಿಮ್ಮ ಎದುರು ಬಂದು ಬಿಡ್ತದ. ಅದು ಎನು ಅಂತಂದ್ರ ‘ನೀವು ತಾಯಿಯಾಗಿ, ಅಕ್ಕ-ತಂಗಿ ಇಷ್ಟೆಲ್ಲ ಆಗಿ ಇಷ್ಟೊಂದು ನಮ್ಮ ನಿಮ್ಮ ಮಧ್ಯದ ಭಾವನಾತ್ಮಕ ಸಂಬಂಧ ಇಟ್ಟುಕೊಂಡು ನೀವು ವ್ಯವಹಾರಿಕವಾಗಿ ನೋಡ್ತಿರೇನೂ’ ಅಂತ ನಮಗ ಪ್ರಶ್ನೆ ಮಾಡ್ತಾರ. ಅಂದ್ರ ನಾವು ವ್ಯಾವಹಾರಿಕ ಮಾತನಾಡಿದಾಗ ಭಾವನಾತ್ಮಕ ಪ್ರಶ್ನೆ ಎತ್ತಿ, ಭಾವನಾತ್ಮಕ ಮಾತನಾಡಿದಾಗ ವ್ಯವಹಾರಿಕ ಪ್ರಶ್ನೆ ಎತ್ತಿ ಗಲಿಬಿಲಿ ಮಾಡ್ತಾರ. 

ಇದ್ರ ಉದ್ದೇಶವೇನು ಅಂದ್ರ ಹೆಂಗಸರನ್ನು ಬಿಟ್ಟಿಯಾಗಿ, ಪುಕ್ಕಟೆಯಾಗಿ ದುಡಿಯುವುದಕ್ಕ ಬೇಕಾದಂತಹ ತಂತ್ರ ಕುತಂತ್ರವನ್ನು ಹೆಣ್ದಿದ್ದಾರ ಅಂತ ಅನ್ನುವುದು ನಮಗೆ ಸ್ಪಷ್ಟವಾಗುತ್ತದೆ. ಬಂಧುಗಳೇ, ನಾನು ಹಳ್ಳಿಯಲ್ಲಿ ಕೆಲಸ ಮಾಡ್ತೀನಿ. ನಮ್ಮ ಗೌಡರ ಮನೆಯಾಗ ಜಮೀನ್ದಾರರ ಹೆಂಡತಿ ಬಂಗಾರ ಹೇರಿಕೊಂಡು ಮೀಟಿಂಗ್‍ಗೆ ಬಂದಿರ್‍ತಾರ. ಅಂಥವ್ರನ್ನ ಒಂದು ಮಾತು ಕೇಳ್ತೀನಿ, ‘ಏನಕ್ಕ ನಿಮ್ಮ ತಂಗಿ ಬಡತನದಲ್ಲಿ ಇದ್ದಳಾ, ನಿಮ್ಮ ಒಂದು ತೊಲ ಬಂಗಾರನ ತೆಗೆದು ಕೊಡ್ತೀಯಾ?’ ಅಂದ್ರ ‘ಇಲ್ಲ’. ಆಕೆಯ ಮೈಮೇಲೆ ಹಾಕಿಕೊಂಡಿರುವ ಬಂಗಾರ ಆ ಗೌಡ/ಸಾಹುಕಾರನ ಹೆಂಡತಿ ಅಂತ ತೋರಿಸಿಕೊಳ್ಳಲು ಹಾಕಿಕೊಂಡಿರುವುದೇ ವಿನ: ಆಕೆಗೆ ಅದರ ಮ್ಯಾಲೆ ಯಾವ ರೀತಿಯ ಅಧಿಕಾರನೂ ಇಲ್ಲ. ಹಂಗೇನೇ ನಮ್ಮ ಉದ್ಯೋಗಸ್ತ ಹೆಣ್ಣು ಮಕ್ಕಳು ಸಹಿತ ಒಂದು ಲಕ್ಷ ರೂಪಾಯಿ ಯುಜಿಸಿ ಸಂಬಳ ತೆಗೆದುಕೊಂಡ್ರ ಸಹಿತ, ಅದರ ಮೇಲೆ ಅವಳದು ಎಷ್ಟು ಅಧಿಕಾರ ಇರ್ತದ? ನೀವು ಅವರನ್ನು ಕೇಳಬಹುದು, ಆ ಮಾತು ಬೇರೆ. ನಮ್ಮ ಹೆಣ್ಣುಮಕ್ಕಳನ್ನು ಮನೆಯ ಒಳಗೂ ಹೊರಗೂ ಪುಕ್ಸಟೆ ದುಡಿಸಿಕೊಳ್ಳಲು ಬೇಕಾದಂತಹ ವ್ಯವಸ್ಥೆ ನಮ್ಮ ಸಮಾಜದ್ದು ಅದಲ್ಲ ಅದನ್ನು ಗಮನಿಸಲು ನಮಗ ಸಾಧ್ಯವಾಗಬೇಕು. ಮತ್ತೆ ಹಿಂಗೇನೆ ಅಂಗನವಾಡಿ, ಬಿಸಿಯೂಟ, ಇಟ್ಟಿಗೆ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುವವರು, ಗಾರ್ಮೆಂಟ್‍ನಲ್ಲಿ ಕೆಲಸ ಮಾಡುವವರು, ಬೇರೆ ಬೇರೆ ರೀತಿ (ಇತ್ತೀಚಿನ ಹತ್ತು ವರ್ಷಗಳಿಂದ) ಹಳ್ಳಿಗಳಿಂದ ನಗರಕ್ಕೆ ವಲಸೆ ಶುರುವಾಗಿಬಿಟ್ಟಿದೆ. ಈ ವಲಸೆ ಬರುವ ಸಂಖ್ಯೆ ಬಹಳ ದೊಡ್ಡದಾಗಿದೆ. ದಲಿತ ಮಹಿಳೆಯರ ಸಂಖ್ಯೆಯೂ ಅಷ್ಟೇ ದೊಡ್ಡ ರೀತಿಯಲ್ಲಿ ಅಗಿದೆ. ಸಣ್ಣ ರೈತರು, ಬಡ ರೈತರು, ಸಾಮಾನ್ಯ ರೈತರು, ಕೃಷಿ ಕೂಲಿ ಕಾರ್ಮಿಕರು ಇವರೆಲ್ಲರೂ ಪಟ್ಟಣಕ್ಕೆ ಬರಲು ಶುರುಮಾಡಿದ್ದಾರೆ.

ಎಲ್ಲಿ ಒಂದು ಆರ್ಥಿಕ ಅಸಮಾನತೆ ಉಂಟಾಗುತ್ತದೋ ಎಲ್ಲಿ ಸಂಪತ್ತು ಒಂದು ಕಡೆ ಕ್ರೋಢೀಕರಣವಾಗಿ ಬಡತನ ಜಾಸ್ತಿಯಾಗುತ್ತೋ ಅಲ್ಲಿ ವಿಚಿತ್ರವಾದ, ವಿಕಾರವಾದ ಎಲ್ಲ ರೀತಿಯ ಕ್ರೌರ್ಯ ತಲೆದೋರುತ್ತ ಅನ್ನೋದನ್ನು ಗಮನಿಸಲಿಕ್ಕೆ ನಮಗೆ ಸಾಧ್ಯವಾಗಬೇಕು. ಹಾಗಾಗಿ ಇವತ್ತು ನಗರದೊಳಗೆ ಹೆಣ್ಣುಮಕ್ಕಳನ್ನು ಅವಳ ಶರೀರ, ಅವಳ ಮನಸ್ಸು, ಅವಳ ಶ್ರಮ ಎಲ್ಲವನ್ನು ಸಹಿತ ಪುಕ್ಸಟೆಯಾಗಿ ದುಡಿಸಿಕೊಳ್ಳಲು ಬೇಕಾದ ಫ್ಲೆಕ್ಸಿಬಲ್ ರೀವರ್ ರೀತಿಯಲ್ಲಿ ದುಡಿಸಿಕೊಳ್ಳಲು ಬೇಕಾದಂತಹ ಕಾನೂನು ಸರ್ಕಾರದಿಂದ ಆಗಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯೆನ್ನುವುದು ಮಹಿಳೆಯ ಅಸ್ಮಿತೆ, ಸ್ವಾಭಿಮಾನ, ವಿಮೋಚನೆಯ ಹಕ್ಕಿಗಾಗಿ ನಮ್ಮ ಚಳವಳಿಯನ್ನು ತೀವ್ರಗೊಳಿಸಬೇಕಾಗಿದೆ. ಮಹಿಳೆಯರು ಒಂದು ವರ್ಗದ ದಾಳಿಯಿಂದ, ಜಾತಿಯ ದಾಳಿಯಿಂದ ಕಷ್ಟಪಡುತ್ತಿರುವ ಈ ಸಂದರ್ಭದೊಳಗೆ ನಾವು ಮಹಿಳಾ ಚಳುವಳಿಯನ್ನು ತೀವ್ರಗೊಳಿಸಬೇಕು ಅನ್ನುವ ಮಾತನ್ನು ಹೇಳುತ್ತಾ, ಈ ಚಳುವಳಿಗೆ ಹೆಗಲು ಕೊಟ್ಟಂತಹ ಇಲ್ಲಿ ಸೇರಿದಂತಹ ನಿಮಗೆಲ್ಲರಿಗೂ ವಂದಿಸುತ್ತೇನೆ. 

ಸಮಾನತೆಯ ಕನಸಿನೊಂದಿಗೆ....

ladai prakashana
ಡಾ. ಪ್ರೀತಿ ಶುಭಚಂದ್ರ ಮತ್ತು ಎಂ. ಎನ್. ಸುಮನ ಸಂಪಾದಿಸಿರುವ 'ಸಾಕಾರದತ್ತ ಸಮಾನತೆಯ ಕನಸು' ಪುಸ್ತಕ ಮಹಿಳಾ ದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಡಾ. ಪ್ರೀತಿ ಶುಭಚಂದ್ರರವರ ಪ್ರಸ್ತಾವಿಕ ಮಾತುಗಳು ಹಿಂಗ್ಯಾಕೆಯ ಓದುಗರಿಗಾಗಿ.

ಮಹಿಳಾ ದಿನದ ಆಚರಣೆಗೆ ಮಹಿಳಾ ಬಿಡುಗಡೆಯ ಮಹಾನ್ ಆಶಯವಿದೆ. ಈ ಆಶಯಕ್ಕೆ ಖಚಿತವಾದ ರಾಜಕೀಯ ಉದ್ದೇಶವಿದೆ. ಶೋಷಣಮುಕ್ತ ಬದುಕಿನೆಡೆಗೆ ಮಹಿಳಾ ಬದುಕು ಬದಲಾಗಬಲ್ಲದೆಂಬ ದೃಢ ನಂಬಿಕೆ ಮತ್ತು ಆತ್ಮವಿಶ್ವಾಸವಿದೆ. ಈ ನಂಬಿಕೆ ಮತ್ತು ಆತ್ಮವಿಶ್ವಾಸಕ್ಕೆ ತಳಹದಿಯಾಗಿ ಹಿಂಸಾಮುಕ್ತ ಸರ್ವ ಸಮಾನತೆಯುಳ್ಳ ಸಾಮಾಜಿಕ ಬದುಕನ್ನು ಕುರಿತ ಆರೋಗ್ಯಮುಖಿ ಕನಸುಗಳಿವೆ. ಈ ಕನಸುಗಳು ಕೇವಲ ಪಲಾಯನವಾದಿ ಕಲ್ಪಿತ ಭ್ರಮೆಗಳಲ್ಲ. ಏಕೆಂದರೆ ಸ್ತ್ರೀ-ಪುರುಷ ಅಸಮಾನತೆ ಅನಾದಿ ಕಾಲದಿಂದಲೂ ಇದೆ ಎಂಬ ವಿಧಿವಾದಿ ನಿಷ್ಕ್ರಿಯತೆಯ ಕಡೆ ದೂಡಬಲ್ಲ ಸರ್ವೇ ಸಾಮಾನ್ಯ ಜನಪ್ರಿಯ ನಿಲುವು ತಾಂಡವವಾಡುತ್ತಿದೆ. ಇದು ನಮ್ಮೆಲ್ಲರ ಬದುಕನ್ನು ನುಂಗಿ ನೊಣೆಯಬಲ್ಲ ಸಾಮಾಜಿಕ ಬದುಕಿಗೆ ಅನಾರೋಗ್ಯಕ್ಕೆ ಕಾರಣವಾಗಿದೆ. 
ಇಂಥ ಅನಾರೋಗ್ಯ ಪೀಡಿತ ಸಾಮಾಜಿಕ ಬದುಕನ್ನು ಗುಣಮುಖಗೊಳಿಸುವ ಹೊಣೆಗಾರಿಕೆಯನ್ನು ಮಹಿಳಾ ಹೋರಾಟಗಾರರು ಹೊತ್ತಿದ್ದಾರೆ. ಲಿಂಗ ಅಸಮಾನತೆಯ ಕೇಂದ್ರದಿಂದಲೇ ಅಧಿಕಾರ ಹಾಗೂ ಯಾಜಮಾನ್ಯದ ಪರಿಕಲ್ಪನೆಗಳು ಸೃಷ್ಟಿಗೊಂಡು ಕಾರ್ಯನಿರ್ವಹಿಸುತ್ತಿವೆ. ಸ್ತ್ರೀ-ಪುರುಷರ ಅಸಮಾನತೆಯ ಸ್ಥಾಪನೆಗಾಗಿ ಕಟ್ಟಲಾಗಿರುವ ತಾತ್ವಿಕ ಪರಿಭಾಷೆಯ ಸುತ್ತಲೇ ಸಾಹಿತ್ಯ, ಧರ್ಮ, ರಾಜಕೀಯ, ಯುದ್ಧ ಮೊದಲಾದ ವಲಯಗಳ ಮೀಮಾಂಸೆಗಳಲ್ಲಿ ಮಹಿಳಾ ವಿರೋಧಿ ಅಂಶಗಳು ಸೂಕ್ಷ್ಮಾತಿಸೂಕ್ಷ್ಮವಾಗಿ ಹಾಸುಹೊಕ್ಕಾಗಿವೆ. ಇಷ್ಟಾಗಿ, ತಮಗೆಂದೇ ನಿರ್ಮಿಸಲಾದ ಸಾಮಾಜಿಕ ಲಿಂಗ ಪಾತ್ರತೆಯ ಇಕ್ಕಟ್ಟಿನಲ್ಲೇ ಕೈಕಟ್ಟಿ ಕೂರದೆ ಮಹಿಳೆಯರು ಕ್ರಿಯಾಶೀಲರಾಗಿದ್ದಾರೆ. ವ್ಯಕ್ತಿತ್ವದ ಗುರುತಿಲ್ಲದ ಮುಖಹೀನ ಸ್ಥಿತಿಗೆ ದೂಡಿದ ಸಾಮಾಜಿಕ ನಿರ್ಬಂಧಗಳನ್ನು ಸ್ವಂತ ಆಯ್ಕೆ ಹಾಗೂ ಹೊಣೆಗಾರಿಕೆಯ ಜವಾಬ್ದಾರಿಯೊಂದಿಗೆ ಒಡೆಯಲೆತ್ನಿಸಿದ್ದಾರೆ. ಈ ಯತ್ನಕ್ಕೆ ಬಹುಮುಖಿ ಆಯಾಮಗಳಿವೆ. ಮೌನ, ರಾಜಿ-ಸಂಧಾನ, ಪ್ರಶ್ನೆ, ಪ್ರತಿಭಟನೆ ಪ್ರತಿಸ್ಪಂದನ, ಸಾಮೂಹಿಕ ಹೋರಾಟಗಳವರೆಗೂ ಹರಹಿದೆ. 

ಎಲ್ಲ ದಿನಾಚರಣೆ, ಸಂಭ್ರಮಗಳು ಸಾಂಕೇತಿಕವಾಗುತ್ತ, ಕೇವಲ ಸಂಭ್ರಮದ, ಸ್ವಾರ್ಥಪೂರಿತ, ರಾಜಕೀಯ ಲಾಭೋದ್ದೇಶವುಳ್ಳ ಸಾಂಸ್ಕೃತಿಕ ಅವನತಿ ಸೂಚಕವಾಗಿಯೂ ನಡೆಯುತ್ತಿರುವ ಅಪಾಯವನ್ನು ನಾವೆಲ್ಲ ಮನಗಾಣಬೇಕಿದೆ. ಮತ್ತೆಮತ್ತೆ ಮಹಿಳಾ ಬದುಕನ್ನು ಹಿನ್ನಡೆಗೊಳಿಸಬಲ್ಲ ಇಂಥ ಅಪಾಯಗಳ ಮಧ್ಯೆಯೇ ಮಹಿಳೆಯರಾಗಿ ನಮ್ಮ ಬದುಕನ್ನು ನಾವೇ ಅರ್ಥಪೂರ್ಣವಾಗಿ ವಿನ್ಯಾಸಗೊಳಿಸಿಕೊಳ್ಳಬೇಕಾದಾಗ ಕರ್ತವ್ಯ ಪ್ರಜ್ಞೆಯ ದ್ಯೋತಕವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಚರಣೆ ಇದೆ. ಚರಿತ್ರಾರ್ಹ ಫಾನ್ಸ್ ನ ಕ್ರಾಂತಿ, ರಾಷ್ಯದ ಕ್ರಾಂತಿಗೆ ನೇರ ಪ್ರೇರಣೆಯನ್ನೊದಗಿಸಿದ ಮಹಿಳಾ ಚಳುವಳಿಗಳ ಚರಿತ್ರೆಯೊಂದಿಗೆ ಸಾತತ್ಯ ಸಂಬಂಧ ಹೊಂದುವುದು ಮಹಿಳೆಯರಿಗೆ ಅತ್ಯಗತ್ಯವಾಗಿದೆ. ಮಹಿಳೆಯರ ಮೇಲಿನ ವಿವಿಧ ಸ್ವರೂಪದ ದೌರ್ಜನ್ಯದ ವಿರುದ್ಧ ಮಂಡಿಸಲಾದ ಪ್ರತಿಭಟನಾತ್ಮಕ ನಿರಾಕರಣೆಗೆ ಆಚರಣಾತ್ಮಕ ಸ್ವರೂಪವನ್ನು ಅಂತಾರಾಷ್ಟ್ರೀಯ ಮಹಿಳಾ ದಿನದ ಕಲ್ಪನೆ ನೀಡಿದೆ. ಮಹಿಳೆಯ ಸ್ಥಾನ ಚರಿತ್ರೆಯಲ್ಲಿದೆ. ಆ ಚರಿತ್ರೆಯನ್ನು ನಿರ್ಮಿಸುತ್ತಿರುವ ಸಾಮಾಜಿಕ ಕ್ರಾಂತಿಯಲ್ಲಿ ಆಕೆಯ ಪಾತ್ರ ಪ್ರಧಾನವಾದುದೆಂಬುದನ್ನು ಸಾರ್ವಜನಿಕ ಪ್ರಣಾಳಿಕೆಯಾಗಿಸುವಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಮಹತ್ವ, ಅರ್ಥಪೂರ್ಣತೆ ಇದೆ. ಹೋರಾಟವೆಂದರೆ ಅದು ಸ್ತ್ರೀ-ಪುರುಷರ ನಡುವಿನದೇ ಆಗಬೇಕೆಂದಿಲ್ಲ. ಸ್ತ್ರೀಪುರುಷರಿಬ್ಬರೂ ಜೊತೆಗೂಡಿ ಸಮಾನತೆ ಹಾಗೂ ವಿಮೋಚನೆಗಾಗಿ ನಡೆಸುವ ಅವಿರತ ಛಲವುಳ್ಳ ಹೋರಾಟವಿದು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ರೂವಾರಿಯಾದ ಕ್ಲಾರಾ ಜೆಟ್ಕಿನ್‍ರ ವಿಚಾರಗಳು ಮನನೀಯ. ಜಾಗತಿಕ ಆರ್ಥಿಕತೆಯೊಂದಿಗೆ ಸಂಬಂಧಿಸಿದಂತೆ ಸಮಾಜದಲ್ಲಿ ಮಹಿಳೆ ವಹಿಸುವ ಪ್ರಮುಖ ಪಾತ್ರವನ್ನು ಅಧಿಕೃತವಾಗಿ ಗುರುತಿಸುವ ಕ್ರಿಯೆಯೇ ಮಹಿಳಾ ದಿನಾಚರಣೆ ಎಂದು ಕ್ಲಾರಾ ಜೆಟ್ಕಿನ್ ಹೇಳುತ್ತಾರೆ. ಅವರ ಪ್ರಕಾರ ಯುದ್ಧಗಳಿಂದ ಶ್ರಮಜೀವಿಗಳು ಏನನ್ನೂ ಗಳಿಸಲಾರರು. ಬದಲಿಗೆ ಆಪ್ತ, ಅತ್ಯಮೂಲ್ಯವಾದದ್ದೆಲ್ಲವನ್ನು ಅವರು ಕಳೆದುಕೊಳ್ಳುತ್ತಾರೆ. ಮಹಿಳೆಯ ಶ್ರಮಕ್ಕಿರುವ ಅತ್ಯಲ್ಪ ಬೆಲೆ ಹಾಗೂ ಮಹಿಳೆಯರ ಶರಣಾಗತಿಯೇ ಬಂಡವಾಳಶಾಹಿಗಳಿಗೆ ಮಹಿಳಾ ಶ್ರಮವು ಆಕರ್ಷಕ ಸಂಪನ್ಮೂಲವೆನಿಸಲು ಕಾರಣವಾಗಿವೆ. ಯುದ್ಧ, ಸ್ಪರ್ಧೆಗಳಲ್ಲಿ ಗಂಡಸರು ಕೊಲ್ಲುತ್ತಾ ಹೋದಂತೆ ಜೀವರಕ್ಷಣೆಗಾಗಿ ಮಹಿಳೆಯರು ಟೊಂಕಕಟ್ಟಿ ನಿಲ್ಲುತ್ತಾ ಹೋಗಬೇಕಾಗುತ್ತದೆ. 

ಚಳವಳಿಯ ಕಥನಗಳೆಲ್ಲ ಅದರಲ್ಲಿ ಭಾಗವಹಿಸಿದವರ ಸ್ವತಂತ್ರ ಸಂಕಲ್ಪ ಶಕ್ತಿಯ ಪ್ರಜ್ಞಾಪೂರಕ ಆಯ್ಕೆಯ ಫಲಿತಗಳನ್ನು ಒಳಗೊಂಡಿವೆ. ಮಹಿಳಾ ಬಿಡುಗಡೆಯ ಹಾದಿಯ ನಿರ್ಮಾಣದ ಹೊಣೆ ಹೊತ್ತು ಭಾರತದ ಸ್ವಾಯತ್ತ ಮಹಿಳಾ ಸಂಘಟನೆಗಳು ಆಸ್ತಿತ್ವಕ್ಕೆ ಬಂದವು. ಬಂಧನದ ಆತಂಕ, ಸಂಪನ್ಮೂಲಗಳ ಕೊರತೆ, ಸಾಮಾಜಿಕ ನಿಂದನೆ-ತಿರಸ್ಕಾರ, ಅಧಿಕಾರಶಾಹಿಯ ದಬ್ಬಾಳಿಕೆ, ಕ್ರೌರ್ಯಗಳಿಂದ ನಲುಗಿ ನೊಂದರೂ, ಭರವಸೆಯ ಬೆಳಕನ್ನು ಕಾಪಿಟ್ಟುಕೊಂಡ ಹೋರಾಟಗಾರ್ತಿಯರ ಕಥನಗಳು ನಮ್ಮ ಮುಂದಿವೆ. ಭಾರತೀಯ ಸಮಾಜದ ಸನಾತನವಾದಿ ಹಾಗೂ ಸುಧಾರಣವಾದಿಗಳಿಬ್ಬರೂ ಸ್ತ್ರೀವಾದಿ ಪ್ರಜ್ಞೆ ಸ್ಪಷ್ಟವಾಗಿ ನಮ್ಮಲ್ಲಿ ಮೈದಾಳದಂತೆ ಮಾಡಿದವು. ಸಂವಿಧಾನದತ್ತ ಕಾನೂನುಬದ್ಧ ನ್ಯಾಯಿಕ ಹೋರಾಟಕ್ಕೆ ಮಹಿಳೆಯನ್ನು ಸಜ್ಜುಗೊಳಿಸುವಲ್ಲಿ ಅಂಬೇಡ್ಕರ್‍ರವರ ಕೊಡುಗೆ ಅತ್ಯಮೂಲ್ಯವಾಗಿದೆ. 

ವಿವಿಧ ಕಾಲ, ದೇಶ, ಸಮಾಜಬದ್ಧ ಸನ್ನಿವೇಶಗಳಲ್ಲಿ ರೂಪುಗೊಂಡ ಆಯಾ ಮಹಿಳಾ ಸಮುದಾಯಗಳ ಅನುಭವಗಳನ್ನಾಧರಿಸಿದ ಸ್ತ್ರೀವಾದಿ ಜ್ಞಾನವನ್ನು ಭಾರತೀಯ ಸಾಮಾಜಿಕ ನೆಲೆಯಲ್ಲಿ ಅಂತರ್ಗತೀಕರಿಸಿಕೊಳ್ಳುವ ಯತ್ನ ಸವಾಲಿನದು. ತಮ್ಮ ವರ್ತಮಾನದ ಸಾಮಾಜಿಕ ಬದುಕಿನಲ್ಲಿನ ಮಹಿಳಾ ಶೋಷಣೆಯ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಬರೇ ಸೈದ್ಧಾಂತಿಕ ತಿಳಿವಳಿಕೆ ಇದ್ದರೆ ಸಾಲದು. ಮಹಿಳಾ ದೌರ್ಜನ್ಯದ ವಿರಾಟ್ ಸ್ವರೂಪವನ್ನು ಕಣ್ಣೆದುರಿಗಿನ ಜೀವಂತ ಕ್ಷಣಗಳಲ್ಲಿನ ಪ್ರಖರ ಅನುಭವಾತ್ಮಕ ಜ್ಞಾನವಾಗಿ ಪಡೆಯುವ ಪ್ರಕ್ರಿಯೆಯಾಗಿ ಮಹಿಳಾ ಚಳವಳಿಗಳಲ್ಲಿನ ಸಹಭಾಗಿತ್ವಕ್ಕೆ ಪ್ರಾಮುಖ್ಯತೆಯಿದೆ. ಇರುವಿಕೆಯಿಂದ ಆಗುವಿಕೆಯತ್ತ ಚಲಿಸುವ ಅಸ್ತಿತ್ವವಾದೀ ಜೀವ ಮಿಡಿತದ ಕ್ಷಣಗಳಿವು. 

ಇಂಥ ಜೀವ ಸ್ಪಂದನದ ನೆಲೆಯಲ್ಲಿಯೇ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಮಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದಿತು. ಬಿಡಿಬಿಡಿಯಾಗಿ ಮಹಿಳಾ ಸಂಘಟನೆಗಳು ಸ್ಥಳೀಯವಾಗಿ ನಡೆಸುವ ಮಹಿಳಾ ದಿನಾಚರಣೆಗಳ ಅರಿವು ಅನುಭವಗಳು ಏಕಕಾಲದಲ್ಲಿ ಎಲ್ಲರಿಗೂ ಸಂವಹನಗೊಳ್ಳುವುದು ಸಾಧ್ಯವಿರಲಿಲ್ಲ. ಸಂಘಟನೆಗಳೆಲ್ಲ ಒಟ್ಟಾಗಿ ಸೇರಿ ಒಂದು ದಿನ ಒಂದು ಪ್ರದೇಶದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸುವುದರ ಮೂಲಕ ಒದಗುವ ಗರಿಷ್ಠ ಪ್ರಮಾಣದ ಸಂವಹನ ಸಾಧ್ಯತೆಯಿಂದಾಗಿ ಹೋರಾಟದ ಅನುಭವ ಲೋಕ ಮತ್ತೂ ವಿಶಾಲಗೊಂಡು ಬಹುಮುಖಿ ಚಿಂತನೆಗಳನ್ನೊಳಗೊಳ್ಳಲು ಸಾಧ್ಯವಾಗಬಲ್ಲದೆಂಬ ಹಿರಿಯಾಸೆ ಈ ಒಕ್ಕೂಟದ್ದು. 

ಒಕ್ಕೂಟದ ವತಿಯಿಂದ ನಡೆಸಲಾಗುವ ಮಹಿಳಾ ದಿನಾಚರಣೆಗೆ ತನ್ನದೇ ಆದ ಕಾರ್ಯ ವಿನ್ಯಾಸವಿದೆ. ಮಾರ್ಚ್ 7, 8ರಂದು ನಡೆಯುವ ಆಚರಣೆಯ ಮೊದಲ ಭಾಗವಾಗಿ ಶೈಕ್ಷಣಿಕ ವಲಯದಲ್ಲಿ ನಡೆಯುವ ವಿಚಾರ ಸಂಕಿರಣವಿದೆ. ಅದರಲ್ಲಿ ಕಳೆದ ವರ್ಷ ನಡೆದ ಮಹಿಳಾ ದಿನಾಚರಣೆಯ ಸ್ಮøತಿ ಸಂಚಯವನ್ನು ಬಿಡುಗಡೆ ಮಾಡಲಾಗುತ್ತದೆ. ಈ ಬಾರಿ `ಇನ್ನು ಸಾಕು’ ಸ್ಮøತಿ ಸಂಚಯ ಬಿಡುಗಡೆಯಾಯಿತು. ವಿಚಾರಸಂಕಿರಣದ ಮೂಲಕ ಕರ್ನಾಟಕವಷ್ಟೇ ಅಲ್ಲ, ಭಾರತದಾದ್ಯಂತ ನಡೆಯುವ ಮಹಿಳಾ ಹೋರಾಟಗಳ ಮುಂಚೂಣಿಯ ನಾಯಕಿಯರನ್ನು ಸ್ಥಳೀಯ ನೆರೆಯಲ್ಲಿ, ಮುಖ್ಯವಾಗಿ ವಿದ್ಯಾರ್ಥಿಗಳಿಗೆ, ನಾಗರಿಕರಿಗೆ ಪರಿಚಯಿಸುವ; ಅವರ ನುಡಿಗಳನ್ನು ಕೇಳಿಸುವ ಅವಕಾಶವನ್ನು ಈ ಮೂಲಕ ಕಲ್ಪಿಸಲಾಯಿತು. ಮಹಿಳಾ ಶೋಷಣೆಯ ವಿವಿಧ ನೆಲೆಗಳನ್ನು ಕುರಿತಂತೆ ಹೋರಾಟದಲ್ಲಿ ತೊಡಗಿರುವ ಹೋರಾಟಗಾರರ ಪ್ರತ್ಯಕ್ಷಾನುಭವದ ಮೂಸೆಯಲ್ಲಿ ಮೂಡಿಬಂದ ಚಿಂತನೆಗಳನ್ನು ವಿಚಾರ ಸಂಕಿರಣ ಹಾಗೂ ಸಮಾವೇಶದ ವೇದಿಕೆಯಲ್ಲಿ ಹಂಚಿಕೊಳ್ಳಲಾಯಿತು. 

2014 ಮಾರ್ಚ್ 7 ರಂದು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ವಿಚಾರ ಸಂಕಿರಣವನ್ನು ಆಯೋಜಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿತು. ಅದಕ್ಕೆ ಪೂರಕವಾಗಿ ಮೊದಲೇ ವಿದ್ಯಾರ್ಥಿಗಳಿಗೆ ಮಹಿಳಾ ವಿಷಯಗಳನ್ನೊಳಗೊಂಡ ಆಶುಭಾಷಣ ಸ್ಪರ್ಧೆ ಏರ್ಪಡಿಸಿ ಹುರಿದುಂಬಿಸಿತ್ತು. ಸಂಕಿರಣದ ದಿನ ಬಹುಮಾನ ನೀಡಲಾಯಿತು. ಕರ್ನಾಟಕದ ವಿವಿಧ ಭಾಗಗಳ ಮಹಿಳಾ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡ ಹೋರಾಟಗಾರರು ಹಾಗೂ ಸಾಮಾಜಿಕ ಕಾರ್ಯತರ್ಕರು ವಿಚಾರ ಸಂಕಿರಣದ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡದ್ದು ವಿಚಾರ ಸಂಕಿರಣಕ್ಕೆ ಅಭೂತಪೂರ್ವ ಯಶಸ್ಸನ್ನು ನೀಡಿತು. ಸಾಮಾಜಿಕ ಹೋರಾಟಗಾರರ ನುಡಿಗಳಿಗೆ ಮೈಯಲ್ಲ ಕಣ್ಣಾಗಿ ವಿದ್ಯಾರ್ಥಿಗಳು, ನಾಗರಿಕರು, ಅಧ್ಯಾಪಕರು, ಸಂಶೋಧಕರು, ಸಂಘಟನೆಗಳ ಕಾರ್ಯಕರ್ತರು ಸ್ಪಂದಿಸಿದರು. ಆ ನುಡಿಗಳಿಗೆ ಅಕ್ಷರ ರೂಪವನ್ನು ಈ ಹೊತ್ತಿಗೆಯಲ್ಲಿ ಸಂಪಾದಿತವಾದ ಲೇಖನಗಳ ಮೂಲಕ ನೀಡಲಾಗಿದೆ. 

ಕಾನೂನು, ಸಾಮಾಜಿಕ ನ್ಯಾಯದ ಪ್ರಶ್ನೆ ಅತ್ಯಂತ ಜಟಿಲವೂ ತೊಡಕಿನದೂ ಆಗಿದೆ. ಇವುಗಳನ್ನು ಅನುಭವ ಆಧಾರಿತ ಚರ್ಚೆ-ಪ್ರಶ್ನೆಗಳ ಮೂಲಕವೇ ಅರಿಯಲು ಯತ್ನಿಸುವ ನಿಟ್ಟಿನಲ್ಲಿ ಈ ವಿಚಾರ ಸಂಕಿರಣ ಯಶಸ್ವಿಯಾಯಿತು. ಇವು ಶುದ್ಧ ಬೌದ್ಧಿಕ ನೆಲೆಯ ಭಾಷಣಗಳಾಗಿರಲಿಲ್ಲ. ಯಾವುದೇ ಕ್ಲೀಷೆ, ವೈಭವೀಕರಣಗಳಿಲ್ಲದ ಸ್ಪಟಿಕದ ಸಲಾಕೆಯಂತಹ ಮಾತೆಂಬ ಬೆಳಕು ಸಭೆಯನ್ನು ಆವರಿಸಿತ್ತು. ವಿಷಯ ವೈವಿಧ್ಯಗಳಿಗೆ ಅವಕಾಶವಿತ್ತು. ಹಾಡು, ರೂಪಕಗಳ ಕಲಾತ್ಮಕ ಅಭಿವ್ಯಕ್ತಿಯೊಂದಿಗೆ ಇಡೀ ವಿಚಾರ ಸಂಕಿರಣ ನೇಯ್ಗೆಗೊಂಡಿತ್ತು.

ಪುರುಷ ತನ್ನನ್ನು ಯಾವ ಮಟ್ಟಿನವರೆಗೂ ದ್ವೇಷಿಸುತ್ತಾನೆಂಬ ಕಲ್ಪನೆ ಮಾಡಿಕೊಳ್ಳಲು ಮಹಿಳೆಗೆ ಸಾಧ್ಯವಿಲ್ಲ ಎಂಬ ಮಾತಿಗೆ ನಿದರ್ಶನವೆಂಬಂತೆ ಊಹಾತೀತವಾಗಿ ಮಹಿಳಾ ದೌರ್ಜನ್ಯದ ಸ್ವರೂಪವಿದೆ. ಸಹನೆ, ಶಾಂತಿ, ತ್ಯಾಗ, ಕ್ಷಮೆಗಳಂಥ ಆದರ್ಶವಾದಿ ಒಮ್ಮುಖದ ಗುಣಗಳ ಹೇರಿಕೆಯಡಿ ಸಿಲುಕಿದ ಮಹಿಳೆಗೆ ತನ್ನನ್ನು ತಾನು ಹಿಂಸಿಸಿಕೊಳ್ಳುವುದು ಹಾಗೂ ಹಿಂಸೆಯನ್ನು ಸಹಿಸಿಕೊಳ್ಳುವುದು ರೂಢಿಯಾಗಿದೆ. ಸ್ವಯಂ ಹಿಂಸೆಯಿಂದ ಬಿಡುಗಡೆ ಹೊಂದದ ಹೊರತು ಆಕೆಗೆ ಅನ್ಯ ಹಿಂಸೆಯ ಅರಿವಾಗದು. ದ್ವೇಷದ, ಹಿಂಸೆಯ, ಪರಾಕಾಷ್ಠೆಯ ಸಾಂಕೇತಿಕ ರೂಪವದ ಮಹಿಳಾ ರೇಪ್ ಅನ್ನು ವಿಚಾರ ಸಂಕಿರಣದ ಗೋಷ್ಠಿಗಳು ಕೇಂದ್ರವಾಗಿಟ್ಟುಕೊಂಡವು. ದೆಹಲಿಯ ನಿರ್ಭಯಾ ಪ್ರಕರಣದ ಕ್ರೌರ್ಯವನ್ನು ಕೆ. ಸುಮತಿ ಅವರ ನಿರ್ದೇಶನದ ಕಿರು ರೂಪಕದ ಮೂಲಕ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಸಭಿಕರ ಅಂತರಾಳಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು. 

ಮಹಿಳಾ ಚಳುವಳಿಯಲ್ಲಿ ಯುವ ಪೀಳಿಗೆ ಸಕ್ರಿಯವಾಗಿ ಪಾಲ್ಗೊಳ್ಳುವಂತೆ, ಅವರಿಗೂ ಸಹ ಭಾಗಿತ್ವ ಕಲ್ಪಿಸುವಲ್ಲಿ ಈ ವಿಚಾರ ಸಂಕಿರಣ ಉಪಯುಕ್ತವಾಯಿತು. ಆ ದಿನ ಸಂಜೆ ಗಾಂಧಿ ಚೌಕದಲ್ಲಿ ನಡೆದ ವಿಮೆನ್ ಇನ್ ಬ್ಲ್ಯಾಕ್ ಪ್ರತಿಭಟನಾತ್ಮಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಗಮನಾರ್ಹ ಸಂಗತಿ. ತುಂತುರು ಮಳೆಯಲ್ಲಿಯೇ ನೆನೆಯುತ್ತಾ ಸಾವಿರ ಸಂಖ್ಯೆಯಲ್ಲಿ ಕಪ್ಪು ಉಡುಗೆ ತೊಟ್ಟ ಹೋರಾಟಗಾರರ ಕೈಯಲ್ಲಿ ಮಹಿಳಾ ದೌರ್ಜನ್ಯ ವಿರೋಧಿ ಘೋಷಣಾವಾಕ್ಯಗಳ ಫಲಕಗಳಿದ್ದವು. ಕತ್ತಲಾಗುತ್ತಿದ್ದಂತೆ, ಒಬ್ಬರಿಂದ ಒಬ್ಬರಿಗೆ ಮೇಣದ ಬತ್ತಿಗಳನ್ನು ಹಚ್ಚಿಕೊಟ್ಟು ಏಕ ಕಾಲದಲ್ಲಿ ಸಾವಿರ ಸಂಖ್ಯೆಯ ದೀಪದ ಕುಡಿಗಳನ್ನು ಗಾಂಧಿ ಪ್ರತಿಮೆಯ ಸುತ್ತಾ ಬೆಳಗಿಸಲಾಯಿತು. ಅರಿವಿನ ಬೆಳಕಿದ್ದಲ್ಲಿ ಅಜ್ಞಾನ – ಕ್ರೌರ್ಯದ ಕತ್ತಲೆಗೆ ಸ್ಥಾನವಿಲ್ಲ. ‘ಮಹಿಳಾ ಯುದ್ಧ’ದ ಹೊಸ ಚರಿತ್ರೆಯನ್ನೇ ರೂಪಿಸಿದ ಮಣಿಪುರದ ಮಹಿಳಾ ಹೋರಾಟಗಾರ್ತಿಯರಾದ ಇಮಾ ಲಾರೆಂಮ್‍ಬಮ್ ನಾನ್ಬಿ, ರೇಣುಬಾಲಾದೇವಿ ಹಾಗೂ ಚಿತ್ರ ಅಹೆಂತಮ್ ಕರ್ನಾಟಕದ ಮಹಿಳಾ ಹೋರಾಟಗಾರ್ತಿಯರೊಂದಿಗೆ ಮೇಣದ ಬತ್ತಿ ಬೆಳಗಿಸಿ ಎತ್ತಿ ಹಿಡಿದದ್ದು ಆ ಕಾರ್ಯಕ್ರಮವನ್ನು ಚರಿತ್ರಾರ್ಹವಾಗಿಸಿತು. ಹೀಗೆ ಹೊತ್ತಿಸಿದ ಆ ದೀಪದ ಬೆಳಕು ಮಹಿಳಾ ಕ್ರೌರ್ಯಕ್ಕೆ ಒಡ್ಡಿದ ಪ್ರತಿರೋಧವಷ್ಟೇ ಅಲ್ಲ; ಹಿಂಸೆ-ಕ್ರೌರ್ಯದ ಕತ್ತಲ ಹಾದಿಯಲ್ಲಿರುವವರನ್ನು ಸರಿಯಾದ, ಮಾನವಪರ ಪಥಕ್ಕೆ ಕರೆದೊಯ್ಯುವ ಮಾರ್ಗದರ್ಶಿಯೂ ಹೌದು. 

2014 ಮಾರ್ಚ್ 8ರಂದು ಮೈಸೂರಿನ ರಾಮಸ್ವಾಮಿ ವೃತ್ತದಿಂದ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆಯುವ ಸಮಾವೇಶದ ಸ್ಥಳವಾದ ಬಿ.ವಿ. ಕಾರಂತ ವೇದಿಕೆಯವರೆಗೂ ಮಹಿಳಾ ಒಕ್ಕೂಟಗಳ ಬೃಹತ್ ರಾಲಿಯನ್ನು ಏರ್ಪಡಿಸಲಾಗಿದ್ದು ಒಕ್ಕೂಟಗಳ ಪ್ರತಿನಿಧಿಗಳು ಹಾಗೂ ಮಹಿಳಾ ಹೋರಾಟದ ಮುಂಚೂಣಿಯ ನಾಯಕಿಯರಾದ ಮೀರಾ ನಾಯಕ್, ವಿಜಯ ದಬ್ಬೆ, ದು. ಸರಸ್ವತಿ, ಇಳಾ ವಿಜಯ, ಸುಮತಿ, ಫಾತಿಮಾ ನಸೀಮಾ, ಅಕೈ ಪದ್ಮಶಾಲಿ, ಜಯಲಕ್ಷ್ಮಿ ಹಾಗೂ ಮಣಿಪುರದ ಮೂವರು ಹೋರಾಟಗಾರ್ತಿಯರಿಂದ ಬೆಲೂನು, ದೀಪದ ಬುಟ್ಟಿಯನ್ನು ಹಾರಿಸುವುದರ ಮೂಲಕ ರಾಲಿಗೆ ಚಾಲನೆ ನೀಡಲಾಯಿತು. ವಿವಿಧ ಸಂಘಟನೆಗಳ ಬ್ಯಾನರ್ ಹಾಗೂ ಮಹಿಳಾ ದೌರ್ಜನ್ಯ ವಿರೋಧಿ, ಮಹಿಳಾ ಪರ ಘೋಷಣೆ ಹೊತ್ತ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕ ಮಹಿಳೆಯರು, ನಾಗರಿಕರು, ಮಧ್ಯಲಿಂಗಿಗಳು, ಹೋರಾಟಗಾರರು ಭಾಗವಿಹಿಸಿದ್ದ ರಾಲಿಯ ದೃಶ್ಯ ಅಭೂತಪೂರ್ವವಾಗಿತ್ತು. ಹಾಗೂ ಮಹಿಳಾ ಸಶಕ್ತತೆಯ ಸಂಕೇತವಾಗಿತ್ತು. ಮಧ್ಯೆ ಮಧ್ಯೆ ಕ್ರಾಂತಿಗೀತೆಗಳು, ಸ್ಲೋಗನ್‍ಗಳು ಮೊಳಗುತ್ತಾ ಹೋರಾಟದ ಬತ್ತದ ಉತ್ಸಾಹಕ್ಕೆ ಸಾಕ್ಷಿಯಾಗಿತ್ತು. ಮಹಿಳಾ ದೌರ್ಜನ್ಯದ ವಿಷಯವನ್ನೊಳಗೊಂಡ ಕಿರು ರೂಪಕ ಪ್ರದರ್ಶನವನ್ನು ನಾಗರೀಕರು ಸ್ಪಂದನೆಯೊಂದಿಗೆ ವೀಕ್ಷಿಸಿದರು. ಹೋರಾಟದ ಕೆಚ್ಚನ್ನು ಪ್ರತಿಧ್ವನಿಸುವಂತೆ ಲಯಬದ್ಧ ಹೆಜ್ಜೆ ಹಾಕುತ್ತಾ ಯುವತಿಯರಿಬ್ಬರೂ ಬಾರಿಸುತ್ತಿದ್ದ ತಮಟೆಯ ಸದ್ದು ಕಿವಿಗಡಚಿಕ್ಕುವಂತಿತ್ತು.

ಸರಿಸುಮಾರು 5 ರಿಂದ 6 ಸಾವಿರ ಸಂಖ್ಯೆಯಲ್ಲಿ ನೆರೆದಿದ್ದ ಬೃಹತ್ ಮಹಿಳಾ ಸಮುದಾಯವುಳ್ಳ ಸಮಾವೇಶಕ್ಕೆ ‘ತೂರಬೇಡಿ ಗಾಳಿಗೆ ಹೆಣ್ತನದ ಘನತೆಯ/ಜೀವಕೊಡುವ ಜೀವವಿದು ಕಡಿಮೆ ಯಾರಿಗೆ’ ಎಂಬ ಪಲ್ಲವಿಯುಳ್ಳ ಸಮತಾ ಗೀತೆಯಿಂದ ಚಾಲನೆ ದೊರಕಿತು. ಪ್ರಾಸ್ತಾವಿಕ ನುಡಿಗಳನ್ನು ಸುಮನಾ ಆಡಿದರು. ಒಕ್ಕೂಟದ ಧ್ಯೆಯೋದ್ದೇಶಗಳನ್ನು ಡಾ. ಸಬಿಹಾ ಭೂಮೀಗೌಡ ಮಂಡಿಸಿದರು. ಡಾ. ಎಚ್.ಎಸ್ ಅನುಪಮಾ ಮುಖ್ಯ ಅತಿಥಿಗಳಾದ ಇಮಾ ಲೋರೆಂಬಮ್ ನಾನ್ಬಿ, ರೇಣುಕಾಬಾಲದೇವಿ, ಚಿತ್ರಾ ಅಹೆಂತಮ್ ಅವರ ಸಾಧನೆಗಳನ್ನು ಪರಿಚಯಿಸಿದರು. ಸಮಾವೇಶದ ಕೇಂದ್ರಬಿಂದುವಾದ ಇಮಾ ಲೋರೆಂಬಮ್ ನಾನ್ಬಿ ಅವರು ಸುದೀರ್ಘವಾಗಿ ತಮ್ಮ ಬದುಕಿನೊಂದಿಗೆ ಹೆಣೆದುಕೊಂಡ ಮಣಿಪುರದ ಮಹಿಳಾ ಹೋರಾಟದ ಗಾಥೆಯನ್ನು ಕಂಚಿನ ಕಂಠದಲ್ಲಿ ನಿರೂಪಿಸಿದರು. ಆ ಮಾತುಗಳ ಸಾರವನ್ನು ಡಾ. ಸುಮಾ ಎಂಬಾರ್ ಕನ್ನಡದಲ್ಲಿ ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮ ಕಳೆಗಟ್ಟುವಂತೆ ವಿವಿಧ ಸಂಘಟನೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ಮಹಿಳಾ ವಿಷಯ ಸಂಬಂಧಿತ ನೃತ್ಯ, ರೂಪಕ, ಗೀತೆಗಳು ಪ್ರದರ್ಶನಗೊಂಡವು. ವಿವಿಧ ಮಹಿಳಾ ಸಂಘಟನೆಗಳ ಪ್ರಾತಿನಿಧಿಕ ವ್ಯಕ್ತಿಗಳು ತಮ್ಮ ಸಂಘಟನೆಗಳ ಧ್ಯೇಯೋದ್ದೇಶ, ಕಾರ್ಯಯೋಜನೆ ಹಾಗೂ ಮಹಿಳಾ ದಿನಾಚರಣೆಯ ತಮ್ಮ ಅನುಭವಗಳನ್ನು ಕುರಿತು ಮಾತನಾಡಿದರು. ಅಂತಿಮವಾಗಿ ಮಹಿಳಾ ಹೋರಾಟಗಾರ್ತಿಯರನ್ನು ವೇದಿಕೆಯಲ್ಲಿ ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು. ಎಲ್ಲರಿಂದ ಅನುಮೋದಿತವಾದ ಸಮಾವೇಶದ ನಿರ್ಣಯಗಳ ಮಂಡನೆಯು ಸಮಾವೇಶದ ಅಂತಿಮ ಹಾಗೂ ಮಹತ್ವದ ಭಾಗವಾಗಿತ್ತು. ಅದು ಮಹಿಳಾ ಬಿಡುಗಡೆಯ ಕನಸನ್ನು ಸಾಕಾರಗೊಳಿಸುವ ನಿಟ್ಟಿನತ್ತ ಇಟ್ಟ, ದಿಟ್ಟ ಹಕ್ಕೊತ್ತಾಯವೂ ಆಗಿತ್ತು. 

ಒಂದು ವರ್ಷ ಹಿಂದೆ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಮೈಸೂರಿನ ಎಂ. ಎನ್. ಸುಮನಾ, ರತಿ ರಾವ್, ಸುಮತಿ, ರೂಪಾ, ವೀಣಾ, ಲತಾ ಮೈಸೂರು ಮೊದಲಾದ ಹಲವು ಕ್ರಿಯಾಶೀಲ ವ್ಯಕ್ತಿ/ಸಂಘಟನೆಗಳೊಂದಿಗೆ ಅತ್ಯಂತ ವ್ಯವಸ್ಥಿತವಾಗಿ ವಿವಿಧ ಹಂತಗಳಲ್ಲಿ ಸಭೆಯನ್ನು ನಡೆಸಿ, ಸಮಿತಿಗಳನ್ನು ರಚಿಸಿ, ಕಾರ್ಯಕ್ರಮದ ರೂಪು ರೇಖೆ ಸಿದ್ಧಪಡಿಸಿಕೊಂಡಿತು. ಎರಡು ದಿನಗಳ ಅವಧಿಯ ಈ ಮಹಿಳಾ ದಿನಾಚರಣೆಯ ಕಾರ್ಯಚಟುವಟಿಕೆಗಳಲ್ಲಿ ಮೈಸೂರು-ಮಂಡ್ಯ-ಚಾಮರಾಜನಗರದ ಸಂಘಸಂಸ್ಥೆಗಳು, ಸಮಾನ ಮನಸ್ಕ ವ್ಯಕ್ತಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ತನುಮನಧನ ಧಾರೆಯೆರೆದು ಅಭೂತಪೂರ್ವ ಒಗ್ಗಟ್ಟಿನ ಕೆಲಸ ಮಾಡಿದರು. ಈ ಸಮಾವೇಶಕ್ಕೆ ಚಾರಿತ್ರಿಕ ಮಹತ್ವವಿದೆ. ಚರಿತ್ರೆಯ ಭಾಗವಾಗಿ ಸಾಗಿಬಂದ ಮಹಿಳಾ ಹೋರಾಟಗಳ ಸಮೃದ್ಧ ಅನುಭವಗಳ ನೆನಪು-ವಿಸ್ತರಣೆಗಳು ವರ್ತಮಾನದ ಹೋರಾಟಕ್ಕೆ ಅತ್ಯಗತ್ಯ. ಹೋರಾಟಗಾರ್ತಿಯರ ನುಡಿಗಳನ್ನು ತಮ್ಮ ವರ್ತಮಾನದ ನಡೆಯಲ್ಲಿ ಸಾಕಾರಗೊಳಿಸಿಕೊಳ್ಳಬೇಕಾದ ಹೊಣೆಗಾರಿಕೆಯ ಪ್ರಜ್ಞೆ ಅತ್ಯಗತ್ಯ. ಹಾಗಾಗಿ ಎರಡು ದಿನಗಳು ನಡೆದ ಈ ಕಾರ್ಯಕ್ರಮಗಳನ್ನು ಮೈಸೂರಿನವರಲ್ಲದೆ, ಕರ್ನಾಟಕದ ಎಲ್ಲೆಡೆಯಿಂದ ಬಂದ ಜನತೆ ಶ್ರದ್ಧೆ ಆಸಕ್ತಿಯಿಂದ ಗಮನಿಸಿದೆ. ಮಹಿಳಾ ಪರ ನಿಲುವು ಸಾಮಾಜಿಕವಾಗಿ ಗಟ್ಟಿಗೊಳ್ಳುವತ್ತ ಇಂಥ ಕಾರ್ಯಕ್ರಮಗಳು ಪ್ರೇರಕವಾಗಬಲ್ಲವು. 

ಪ್ರಸ್ತುತ ಕೃತಿಯಲ್ಲಿ ವಿಚಾರ ಸಂಕಿರಣ ಹಾಗೂ ಸಮಾವೇಶ ಸಂದರ್ಭದ ನುಡಿಗಳನ್ನು ಬರಹರೂಪದಲ್ಲಿ ಸಂಕಲಿಸಿ ದಾಖಲಿಸಲಾಗಿದೆ. ಗತ ಹಾಗೂ ಭವಿಷ್ಯದ ಮಧ್ಯೆ ನಿಂತ ನಮ್ಮ ಹೋರಾಟದ ಅನುಭವಗಳು ಕಾಲದ ಕಠೋರ ಸತ್ಯಕ್ಕೆ ಒಳಗಾಗಿ ಲಯವಾಗಿ ಹೋಗದಿರಲೆಂಬ ಕಾಳಜಿಯಿಂದ ಅವುಗಳನ್ನು ದಾಖಲಿಸುವುದೇ ಈ ಕೃತಿ ಪ್ರಕಟನೆಯ ಒತ್ತಾಸೆಯಾಗಿದೆ. ದಿನದಿನಕ್ಕೂ ಮಹಿಳೆಯರ ಸಮಸ್ಯೆಗಳು ಹೊಸ ಹೊಸ ರೂಪ ತಾಳುತ್ತಿರುವ ಸಂದರ್ಭದಲ್ಲಿ ಮಹಿಳಾ ಹೋರಾಟಕ್ಕೆ ಹೊಸ ಬಿಕ್ಕಟು ಸವಾಲುಗಳು ಎದುರಾಗುತ್ತಿವೆ. ಇವುಗಳನ್ನು ಎದುರಿಸಲು, ಚರಿತ್ರೆಯಾಗಿ ದಾಖಲಾದ ಮಹಿಳಾ ಹೋರಾಟಗಳ ನೆನಪುಗಳು ಅತ್ಯಮೂಲ್ಯ ಆಕರ ಸಾಮಗ್ರಿ ಸಾಧನಗಳಾಗುತ್ತವೆ. 

ಹೀಗೆ, ಮಂಗಳೂರಿನಲ್ಲಿ ನಡೆದ ಒಕ್ಕೂಟದ ಮಹಿಳಾ ದಿನಾಚರಣೆಯ ಸ್ಮೃತಿ ಸಂಚಯ ‘ಇನ್ನು ಸಾಕು’ ಕೃತಿಯ ಹೆಜ್ಜೆ ಗುರುತಿನ ಹಾದಿಯನ್ನೇ ಅನುಸರಿಸಿ ಈ ಕೃತಿ ಸಂಪಾದಿತವಾಗಿದೆ. ಹೋರಾಟದ ಪಥದಲ್ಲಿನ ತಪ್ಪು-ಒಪ್ಪು, ಸಾಧಕ-ಬಾಧಕಗಳ ವಿಮರ್ಶೆ, ವಿಶ್ಲೇಷಣೆಗೆ ಬೇಕಾದ ಮಹಿಳಾ ಹೋರಾಟದ ಚರಿತ್ರೆಯ ನಿರ್ಮಿತಿಗೆ ‘ಸಾಕಾರದತ್ತ ಸಮಾನತೆಯ ಕನಸು’ ಕೃತಿಯು ಕಾಣಿಕೆ ಸಲ್ಲಿಸೀತೆಂಬ ಸದಾಶಯ ನಮ್ಮದು.

ಈ ಕೃತಿ ಪ್ರಕಟನೆಯ ಹೊಣೆಗಾರಿಕೆಯನ್ನು ನನ್ನೊಂದಿಗೆ ಹಂಚಿಕೊಂಡ ಸಹಸಂಪಾದಕರಾದ ಸುಮನಾ ಅವರಿಗೆ ಕೃತಜ್ಞತೆ ಸಲ್ಲಿಕೆಯ ಮಾತು ಔಪಚಾರಿಕ ಮಾತ್ರ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಬೃಹತ್ ಹೊಣೆಯನ್ನು ಹೊತ್ತ ಚೇತನ ಅವರು. ಸುಮನಾ ಹಾಗೂ ಅವರೊಡನೆ ಹೆಗಲೆಣೆಯಾಗಿ ನಿಂತು ಮೈಸೂರಿನ ಸಮಾವೇಶದಲ್ಲಿ ದುಡಿದ ಮೈಸೂರು-ಮಂಡ್ಯ-ಚಾಮರಾಜನಗರದ ಸಹಭಾಗಿಗಳಿಗೆ; ಒಕ್ಕೂಟದ ಎಲ್ಲಾ ಸೋದರಿ/ಸದಸ್ಯರಿಗೆ; ಕೃತಿ ಪ್ರಕಟನೆಯ ಹೊಣೆಗಾರಿಕೆಯಲ್ಲಿ ಕೈಜೋಡಿಸಿದ ಗೆಳತಿಯರಾದ ಎಚ್. ಎಸ್. ಅನುಪಮಾ ಹಾಗೂ ಸಬಿಹಾ ಭೂಮಿಗೌಡ ಅವರಿಗೆ; ಭಾಷಣಗಳನ್ನು ಬರಹ ರೂಪಕ್ಕಿಳಿಸಿಕೊಟ್ಟ ಮಂಗಳೂರು ವಿವಿ, ಕನ್ನಡ ವಿಭಾಗದ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು ಹಾಗೂ ಯು. ಶೈಲಾ ಅವರಿಗೆ; ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ನೀಲಗಿರಿ ಎಂ. ತಳವಾರ್ ಹಾಗೂ ವಿಚಾರ ಸಂಕಿರಣದ ಸಹ ಸಂಯೋಜಕರಾದ ಡಾ. ಜಯಲಕ್ಷ್ಮೀ ಸೀತಾಪುರ ಅವರಿಗೆ ಮನದಾಳದ ಕೃತಜ್ಞತೆ ಅರ್ಪಿಸುತ್ತೇನೆ. 

ಒಂದೇ ದೀಪದ ಹಲವು ಕುಡಿಗಳಂತೆ ಮಹಿಳಾ ಚೇತನಗಳು ಸದಾ ಒಗ್ಗಟ್ಟಾಗಿ ಬೆಳಗಲಿ ಎಂದು ಹಾರೈಸುತ್ತಾ..

ಮಾರ್ಚ್ 6, 2015

ಧರಣಿ ಮಂಡಲ ಮಧ್ಯದೊಳಗೆ.. 180 ವರ್ಷ ಕೆಳಗೆ..


ಕ್ರಾಂತಿ ಜ್ಯೋತಿ ಪುಸ್ತಕದ ಒಂದು ಆಯ್ದ ಅಧ್ಯಾಯ "ಹಿಂಗ್ಯಾಕೆ"ಯ ಓದುಗರಿಗಾಗಿ....

ಅದಿನ್ನೂ ಸ್ವಾತಂತ್ರ್ಯ ಚಳುವಳಿ ರೂಪುಗೊಳ್ಳದಿದ್ದ ಕಾಲ. ಗಾಂಧಿ, ಅಂಬೇಡ್ಕರರಂಥ ದೂರದೃಷ್ಟಿಯ ಜನನಾಯಕರು ಹುಟ್ಟಿರದಿದ್ದ ಕಾಲ. ಆಳುವವರ ನಿರಂತರ ಬದಲಾವಣೆಯಿಂದ ಕ್ಷೋಭೆಗೊಂಡ ಸಮಾಜ ಸ್ವವಿಮರ್ಶೆಯನ್ನು ಮರೆತಿತ್ತು. ಬಂಗಾಳ ಮತ್ತು ಉತ್ತರ ಭಾರತದ ಕೆಲ ಸಮಾಜ ಸುಧಾರಕರು ಇಂಗ್ಲಿಷ್ ಶಿಕ್ಷಣ ಪಡೆದು ಆಗಷ್ಟೇ ಭಾರತದ ಸಾಮಾಜಿಕ ಅನಿಷ್ಟಗಳ ಬಗೆಗೆ ಮಾತನಾಡತೊಡಗಿದ್ದರು. 

ಶಿಕ್ಷಣ: ಹೃದಯದಿಂದ ಹರಿವ ಜ್ಞಾನ ನದಿ

savithri bai pule
ಇದೇ ಭಾನುವಾರ ಬಿಡುಗಡೆಯಾಗಲಿರುವ ಲಡಾಯಿ ಪ್ರಕಾಶನ ಪ್ರಕಟಿಸಿರುವ ಕ್ರಾಂತಿ ಜ್ಯೋತಿ ಸಾವಿತ್ರಿ ಬಾಯಿ ಫುಲೆ ಪುಸ್ತಕದ ಲೇಖಕಿ ಡಾ. ಹೆಚ್. ಎಸ್. ಅನುಪಮ ಮಾತುಗಳು. 
ಭೂ ತಾಪಮಾನ ಏರುತ್ತಿದೆ. ಕೆರೆಕಟ್ಟೆ ಬಾವಿ ಹಳ್ಳತೊರೆಗಳಷ್ಟೇ ಅಲ್ಲ, ಮನುಷ್ಯನ ಅಂತರಾಳದ ಜೀವಸೆಲೆಯೂ ಒಣಗತೊಡಗಿದೆ. ವಿಷಪೂರಿತ ತ್ಯಾಜ್ಯಗಳಿಂದ ಪವಿತ್ರ ನದಿಗಳಷ್ಟೇ ಅಲ್ಲ, ಒಳ ಹರಿವ ಅಂತರಗಂಗೆಯೂ ಮಲಿನಗೊಂಡಿದೆ. ವಿಶ್ವದೆಲ್ಲೆಡೆ ಮಕ್ಕಳು, ಹೆಣ್ಮಕ್ಕಳು, ದುರ್ಬಲರ ಮೇಲೆ ದಾಳಿಯಾಗುತ್ತ ಜನಸಾಮಾನ್ಯರನ್ನು ಭಯಗ್ರಸ್ತ ಸ್ಥಿತಿಯಲ್ಲಿಡುವುದೇ ಹೋರಾಟ ಎಂದು ಕರೆಸಿಕೊಳ್ಳುತ್ತಿದೆ. ವೈಚಾರಿಕ ಜಾಗೃತಿ ಮೂಡಿಸಬೇಕಾದ ಆಧುನಿಕ ಶಿಕ್ಷಣ ಜನರನ್ನು ಮೂಢನಂಬಿಕೆಗಳಿಗೆ ಜೋತುಬೀಳುವಂತೆ ಮಾಡುತ್ತಿದೆ. ಶಿಕ್ಷಣ ಮೂಲಭೂತ ಹಕ್ಕು ಎನ್ನುವ ಹೊತ್ತಿಗೆ ಅದು ಖಾಸಗೀಕರಣಗೊಂಡಿದೆ. ನಗರ ಪ್ರದೇಶಗಳಲ್ಲಿ ಶಿಕ್ಷಣಸಂಸ್ಥೆ ತೆರೆಯುವುದೇ ಒಂದು ಉದ್ಯಮವಾಗಿ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುವವರು ಶಿಕ್ಷಣತಜ್ಞರೆನಿಸಿಕೊಂಡಿದ್ದಾರೆ! 

ಫೆಬ್ರ 9, 2015

ಹುಲಿಯ ನೆರಳಿನೊಳಗೆ ಪ್ರಖರವಾಗಿ ಬೆಳಗಿದ ನಾಮದೇವ ನಿಮ್ಗಾಡೆ

in the tigers shadow
ಹುಲಿಯ ನೆರಳಿನೊಳಗೆ
Dr Ashok K R
ಗೌಡ, ಜಮೀನ್ದಾರ, ಪೋಲೀಸ್ ಪಾಟೀಲ್, ಮಾಲಿ ಪಾಟೀಲ್, ಪೂಜಾರಿ, ಅಯ್ಯಂಗಾರಿ ಇನ್ನೂ ಹತ್ತಲವು ಪದಗಳು ನಮ್ಮಲ್ಲನೇಕರ ಹೆಸರುಗಳನ್ನಲಂಕರಿಸುತ್ತವೆ. ಈಗವುಗಳಲ್ಲಿ ಬಹುತೇಕವು ತಲೆಮಾರಿನ ಮುಂದುವರಿಕೆಗೆ ಇದ್ದರೆ ಮುಂಚಿನ ದಿನಗಳಲ್ಲಿ ಅವರ ಸುಪರ್ದಿಯಲ್ಲಿದ್ದ ದೇವಸ್ಥಾನ, ಜಮೀನು, ಕೆಲಸವನ್ನು ಸೂಚಿಸುತ್ತಿದ್ದವು, ಜೊತೆಗೆ ಜಾತಿ ಸೂಚಕವಾಗಿದ್ದವು. ದೇವಸ್ಥಾನದ ಒಳಗೆ ಕಾಲಿಡಲಾಗದ, ಜಮೀನಿನ ಒಡೆತನವೇ ಇಲ್ಲದ, ಮಾಡುವ ಕೆಲಸವನ್ನು ಹೇಳಿಕೊಳ್ಳಲಾಗದ, ಹೆಸರೇ ಕೀಳರಿಮೆ ಹುಟ್ಟಿಸುವ ಜಾತಿಯಲ್ಲಿ ನರಳಿದ ಜನರು ಸರ್ ನೇಮಿಗಾಗಿ ಏನು ಮಾಡುತ್ತಿದ್ದರು?! ಆಸ್ತಿ ಪಾಸ್ತಿ ಇಲ್ಲದ ಜನರು ಪ್ರಕೃತಿಯಲ್ಲಿ ಉಳಿದವರಿಗಿಂತ ಹೆಚ್ಚಾಗಿ ಒಡನಾಡಿದವರು. ಅಂಥಹ ಪ್ರಕೃತಿಯೊಂದಿಗೇ ತಮ್ಮನ್ನು ಗುರುತಿಸಿಕೊಳ್ಳುವ ಅತ್ಯದ್ಭುತ ವಾಸ್ತವಾತ್ಮಕ ಕಲ್ಪನೆಯೊಂದಿಗೆ ಕನ್ನಡಕ್ಕೆ ಭಾವಾನುವಾದಗೊಂಡಿರುವ ನಾಮದೇವ ನಿಮ್ಗಾಡೆಯವರ ಆತ್ಮಕಥನ ‘ಹುಲಿಯ ನೆರಳಿನೊಳಗೆ – ಅಂಬೇಡ್ಕರ್ ವಾದಿಯ ಆತ್ಮಕಥೆ’ ಪ್ರಾರಂಭವಾಗುತ್ತದೆ. ನಿಮ್ಗಾಡೆಯ ಅರ್ಥ ಬೇವಿನ ಮರ! ಇದೇ ರೀತಿ ತೆಂಗಿನ ಮರ(ಕೋಬ್ರಗಾಡೆ), ಮಾವಿನ ಗಿಡ (ಅಂಬಗಾಡೆ), ಸೀಬೆ ಮರ (ಜಮಗಾಡೆ), ಚೆಕ್ಕಕಾಯಿ (ಬೋರ್ಕರ್) ಎಂಬ ಹೆಸರುಗಳೂ ಇವೆಯಂತೆ. ಪ್ರಕೃತಿಯೊಂದಿಗೆ ಇದಕ್ಕಿಂತ ಹೆಚ್ಚಿನ ರೀತಿಯ ಸಹಬಾಳ್ವೆಯ ಉದಾಹರಣೆಯನ್ನು ನಾನಂತೂ ಇದುವರೆಗೆ ಓದಿರಲಿಲ್ಲ.

ನವೆಂ 4, 2014

ಲಡಾಯಿ ಪ್ರಕಾಶನದ ಪುಸ್ತಕ ಬಿಡುಗಡೆ ಸಮಾರಂಭ.

ladai prakashana
ದಸಂಸದವರಿಂದ ಕ್ರಾಂತಿಗೀತೆ
ನವೆಂಬರ್ ಎರಡರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಲಡಾಯಿ ಪ್ರಕಾಶನ ಪ್ರಕಟಿಸಿರುವ ಹುಲಿಯ ನೆರಳಿನೊಳಗೆ, ಚೆ - ಕ್ರಾಂತಿಯ ಸಹಜೀವನ ಮತ್ತು ಮೋಟಾರ್ ಸೈಕಲ್ ಡೈರಿಯ ಕನ್ನಡ ಅವತರಿಣಿಕೆಯ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇಂಧೂದರ್ ಹೊನ್ನಾಪುರ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಅಕ್ಟೋ 22, 2014

ಅಂಬೇಡ್ಕರ್ ವಾದಿಯ ಕಣ್ಣಲ್ಲಿ ಬಾಬಾಸಾಹೇಬ್

ladai prakashana
ಬಿ. ಶ್ರೀಪಾದ್ ಭಾವಾನುವಾದ ಮಾಡಿರುವ ನಾಮದೇವ ನಿಮ್ಗಾಡೆ ಬರೆದಿರುವ "ಹುಲಿಯ ನೆರಳಿನೊಳಗೆ - ಅಂಬೇಡ್ಕರ್ ವಾದಿಯ ಆತ್ಮಕಥೆ" ಪುಸ್ತಕದ ಬಗ್ಗೆ ಡಾ.ಎಚ್.ಎಸ್. ಅನುಪಮರವರ ಬರಹ. ಲಡಾಯಿ ಪ್ರಕಾಶನದಿಂದ ಮುದ್ರಣ ಕಂಡಿರುವ ಪುಸ್ತಕ ನವೆಂಬರ್ ಎರಡರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಪುಸ್ತಕ ಬಿಡುಗಡೆಗೊಳ್ಳಲಿದೆ.



 ಮಧ್ಯಪ್ರದೇಶದ ಸಾತಗಾಂವ್ ಎಂಬ ಹಳ್ಳಿಯ ಮಹಾರ್ ಕೇರಿಯಲ್ಲಿ 1920ನೇ ಇಸವಿಯ `ಮಳೆಗಾಲದ ಯಾವುದೋ ಒಂದು ದಿನ ಹುಟ್ಟಿದ ನಾಮದೇವನೆಂಬ ಹುಡುಗನೊಬ್ಬ, ತನ್ನ 14ನೇ ವರ್ಷಕ್ಕೆ ಶಾಲೆ ಸೇರಿ ಓದಿ, ಪದವೀಧರನಾಗಿ, ಅಮೆರಿಕದ ವಿಸ್ಕಾನ್ಸಿನ್ ವಿಶ್ವವಿದ್ಯಾಲಯಕ್ಕೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಹೋಗಿ, ನಂತರ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ನಾಮದೇವ್ ನಿಮ್ಗಾಡೆಯಾಗಿ ಬೆಳೆದ ಕತೆಯೇ, `ಇನ್ ಟೈಗರ್ಸ್ ಶಾಡೋ.’
ಉಳಿದ ದಲಿತ ಆತ್ಮಕಥೆಗಳಲ್ಲಿರುವಂತೆಯೇ ಇಲ್ಲೂ ನಿಮ್ಗಾಡೆ ತಾವು ಎದುರಿಸಿದ ಅಸ್ಪೃಶ್ಯತೆಯ ಅವಮಾನ, ಜಾತೀಯತೆಯ ಕ್ರೌರ್ಯಗಳು, ಮಾನವೀಯ ಅನುಕಂಪದ ಸಹಾಯಗಳು ಇವನ್ನೆಲ್ಲ ನೆನೆದು ದಾಖಲಿಸುತ್ತಲೇ, ಅಂಬೇಡ್ಕರ್ ಅವರ ವ್ಯಕ್ತಿತ್ವ-ವೈಯುಕ್ತಿಕ ಜೀವನದ ಬಗೆಗೊಂದು ಆಪ್ತ ಮತ್ತು ಖಾಸಾ ಆದ ಫಸ್ಟ್ಹ್ಯಾಂಡ್ ನೋಟವೊಂದನ್ನು ಕೊಟ್ಟಿದ್ದಾರೆ. ಕಳೆದ ಶತಮಾನದ 40-50 ದಶಕವು ನಮ್ಮ ದೇಶದ ಮಟ್ಟಿಗೆ ಮಹಾಸಂಕ್ರಮಣದ ಕಾಲ. ದಿನಗಳಲ್ಲಿ ಅಂಬೇಡ್ಕರರೊಡನೆ ಹತ್ತಿರದಿಂದ ಒಡನಾಡಿದ ನಾಮದೇವ ನಿಮ್ಗಾಡೆ, ತಮ್ಮ ಗುರು-ಸ್ಪೂರ್ತಿ-ಸಲಹಾಕಾರ-ಆಪದ್ಭಾಂಧವ ಎಲ್ಲವೂ ಆಗಿದ್ದ ಬಾಬಾಸಾಹೇಬ್ ಅವರನ್ನು ಹೆಜ್ಜೆಹೆಜ್ಜೆಗೂ ನೆನಪಿಸಿಕೊಂಡಿದ್ದಾರೆ. ತಮ್ಮ ಯಶಸ್ಸಿನ ರೂವಾರಿ ಅವರೇ ಎಂದು ಹುಲಿ ನಡೆದ ಜಾಡಿನಲ್ಲಿ ನಡೆಯುತ್ತಾರೆ.
ಪುಸ್ತಕದ ಬಗೆಗೆ ಹೆಚ್ಚು ಬರೆಯುವುದಕ್ಕಿಂತ ಅದರ ಇಣುಕುನೋಟವನ್ನು ಕೊಡುವುದು ಸೂಕ್ತ. ಅದರಲ್ಲೂ ಮತ್ತೆಮತ್ತೆ ಬರುವ ಅಂಬೇಡ್ಕರ್ ಕುರಿತಾದ ಘಟನೆಗಳ ಸಾರಸಂಗ್ರಹ ಇಲ್ಲಿದೆ..

'ಹುಲಿಯ ನೆರಳಿನೊಳಗೆ' ಪುಸ್ತಕದ ಮುನ್ನುಡಿಯಿಂದ



namadeva nimgade
ನಂ 2 ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿರುವ ಲಡಾಯಿ ಪ್ರಕಾಶನದಿಂದ ಪ್ರಕಟವಾಗಿರುವ 'ಹುಲಿಯ ನೆರಳಿನೊಳಗೆ - ಅಂಬೇಡ್ಕರ್ ವಾದಿಯ ಆತ್ಮಕಥೆ' ಪುಸ್ತಕಕ್ಕೆ ಅಪ್ಪಗೆರೆ ಸೋಮಶೇಖರ್ ಬರೆದ ಮುನ್ನುಡಿ ಹಿಂಗ್ಯಾಕೆಯ ಓದುಗರಿಗಾಗಿ. 
ಆತ್ಮಕಥೆಯಲ್ಲೊಂದು ಅಂಬೇಡ್ಕರ್ ಕಥೆ

 ದೆಹಲಿಯ ನವಯಾನ ಪ್ರಕಾಶನ ಪ್ರಕಟಿಸಿರುವ In The Tiger’s Shadow : The Autobiography of An Ambedkariteಪ್ರಖ್ಯಾತ ವಿಜ್ಞಾನಿಡಾ. ನಾಮದೇವ ನಿಮ್ಗಾಡೆ ಅವರ ಆತ್ಮಕಥೆ. ಮಹತ್ವದ ಆತ್ಮಕಥೆಯನ್ನುಹುಲಿಯ ನೆರಳಿನೊಳಗೆ : ಅಂಬೇಡ್ಕರ್ವಾದಿಯ ಆತ್ಮಕಥೆ ಎಂಬ ಶೀರ್ಷಿಕೆಯ ಅಡಿಯಲ್ಲಿ ಬಿ. ಶ್ರೀಪಾದ ಭಟ್ ಅವರು ಕನ್ನಡ ಓದುಗರಿಗೆ ಪರಿಚಯಿಸುತ್ತಿದ್ದಾರೆ. ಭಾರತೀಯ ಅನ್ಯ ಭಾಷೆಗಳಿಂದ ಕನ್ನಡಕ್ಕೆ ಅನುವಾದಗೊಂಡಿರುವ ಹಲವು ಪ್ರಮುಖ ದಲಿತ ಆತ್ಮಕಥೆಗಳು ಕನ್ನಡ ಪ್ರಜ್ಞೆ ಹಾಗೂ ಅನುಭವ ಜಗತ್ತನ್ನು ವಿಸ್ತರಿಸಿವೆ. ಜೊತೆಗೆ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕನ್ನಡ ದಲಿತ ಆತ್ಮಕಥೆಗಳನ್ನು ಕುರಿತ ಜಿಜ್ಞಾಸೆಗೆ ಭಿನ್ನ ಆಯಾಮವನ್ನು ಒದಗಿಸಿಕೊಟ್ಟಿವೆ. ಅವುಗಳಲ್ಲಿ ಲಕ್ಷ್ಮಣ ಗಾಯಕವಾಡರಉಚಲ್ಯಾ; ಮಾದವಿ ದೇಸಾಯಿ ಅವರಕುಣಿಯೇ ಘುಮ(ಕನ್ನಡಕ್ಕೆ-ಚಂದ್ರಕಾಂತ ಪೋಕಳೆ); ಶರಣಕುಮಾರ ಲಿಂಬಾಳೆ ಅವರಅಕ್ರಮ ಸಂತಾನ; ದಾದಾ ಸಾಹೇಬ್ ಮಲ್ಲಾರಿ ಮೋರೆ ಅವರಗಬಾಳ(ಕನ್ನಡಕ್ಕೆ-ದು. ನಿಂ. ಬೆಳಗಲಿ); ಎಸ್. ಕೆ. ಥೊರಟ್ ಅವರಬಾಲ್ಯದಿಂದ ಪ್ರಾಯಕ್ಕೆ(ಕನ್ನಡಕ್ಕೆ-ನಗರಗೆರೆ ರಮೇಶ್, ಗಂಗಾಧರಮೂರ್ತಿ); ನರೇಂದ್ರಜಾದವ್ ಅವರಬಹಿಷ್ಕø(ಕನ್ನಡಕ್ಕೆ-ಸುಮಾಧ್ವಾರಕನಾಥ್); ಭಗವಾನ್ ದಾಸ್ ಅವರಭಂಗಿಜನ ಕಥಾ(ಕನ್ನಡಕ್ಕೆ-ಕೆ. ನಾರಾಯಣಸ್ವಾಮಿ); ಭೀಮರಾವ್ ಗಸ್ತಿ ಅವರವಾಲ್ಮೀಕಿ(ಕನ್ನಡಕ್ಕೆ-ಸರಜೂ ಕಾಟ್ಕರ್); ಭಾಮ ಅವರಕರುಕ್ಕು(ಕನ್ನಡಕ್ಕೆ-ಎಸ್. ಪ್ಲೋಮಿನ್ದಾಸ್); ದಯಾ ಪವಾರ ಅವರಬಲುತ(ಕನ್ನಡಕ್ಕೆ-ಪ್ರೊ. ಚಂದ್ರಕಾಂತ ಪೋಕಳೆ) ; ಬೇಬಿ ಹಾಲ್ದಾರ್ ಅವರನೋವು ತುಂಬಿದ ಬದುಕು(ಕನ್ನಡಕ್ಕೆ-ಜಿ. ಕುಮಾರಪ್ಪ)–ಮುಂತಾದವು ಪ್ರಮುಖ ಆತ್ಮಕಥಗಳಾಗಿವೆ. ಪರಂಪರೆಗೆ ಹೊಸ ಸೇರ್ಪಡೆ ಡಾ. ನಾಮದೇವ ನಿಮ್ಗಾಡೆ ಅವರ ಆತ್ಮಕಥೆ.

ಮೋಟಾರ್ ಸೈಕಲ್ ಡೈರಿ - ಅನುವಾದಕರ ಮಾತು



(ನವೆಂಬರ್ ಎರಡರಂದು ಬಿಡುಗಡೆಗೊಳ್ಳುತ್ತಿರುವ ಲಡಾಯಿ ಪ್ರಕಾಶನ ಹೊರತಂದಿರುವ ಚೆಗೆವಾರನ ಮೋಟಾರ್ ಸೈಕಲ್ ಡೈರಿಗೆ ಅನುವಾದಕಿ ಡಾ.ಎಚ್.ಎಸ್ ಅನುಪಮ ಬರೆದಿರುವ ಸಾಲುಗಳು ಹಿಂಗ್ಯಾಕೆಯ ಓದುಗರಿಗಾಗಿ)

ಅರ್ನೆಸ್ಟೋ ಚೆ ಗೆವಾರ ಡಿ ಲಾ ಸೆರ್ನಾ
ಕವಿಯ ಮನಸು, ಕ್ರಾಂತಿಯ ಕನಸು..
ನೋಡಲು ಕಿಲಾಡಿ ಹುಡುಗನಂತೆ ಕಾಣುವ ಹೊಳೆವ ಕಣ್ಣುಗಳ ತೇಜೋಮಯ ತರುಣ; ಬಡರೋಗಿಗಳನ್ನು, ಕೃಷಿಕರನ್ನು, ಗಣಿಕೆಲಸಗಾರರನ್ನು ಕಂಡು ಅವರಿಗಾಗಿ ಏನಾದರೂ ಮಾಡಲೇಬೇಕೆಂದು ಪಣತೊಟ್ಟ ವೈದ್ಯ; ಬದುಕಿನ ಕೊನೆಯ ಕ್ಷಣಗಳಲ್ಲಿ ಬೊಲಿವಿಯನ್ ಪರ್ವತಗಳಲ್ಲಿ ಅಲೆದಾಡುವಾಗ ತನ್ನ ಒರಟು ಉಣ್ಣೆಯ ಬ್ಯಾಗಿನಲ್ಲಿ ಆಯುಧಗಳ ಜೊತೆ ನೆರೂಡನ ಕ್ಯಾಂಟೋ ಜನರಲ್ ಕವಿತೆ ಪುಸ್ತಕ ಇಟ್ಟುಕೊಂಡ ಕಾವ್ಯಪ್ರೇಮಿ; ಒಂದು ದೇಶದಲ್ಲಿ ಹುಟ್ಟಿ, ಮತ್ತೊಂದು ದೇಶದ ಬಿಡುಗಡೆಗಾಗಿ ಹೋರಾಡಿ, ಮಗದೊಂದು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣವೊಪ್ಪಿಸಿದ ವಿಶ್ವಮಾನವ: ಬದುಕಿದ ಕೇವಲ 39 ವರ್ಷಗಳಲ್ಲಿ ವಿಶ್ವದ ಮುಕ್ಕಾಲು ದೇಶಗಳ ಸಂದರ್ಶಿಸಿದ ಜಂಗಮ; ಜಗತ್ತಿನ ಅಸಂಖ್ಯ ಜನರ ಸ್ಫೂರ್ತಿ; ನನ್ನಲ್ಲೂ ನಿರಂತರ ಬೆಳೆಯುತ್ತಲಿರುವ ಮಗು..
ಅವ ಅರ್ನೆಸ್ಟೋ ಗೆವಾರಾ ಡಿ ಲಾ ಸೆರ್ನಾ. ಸಂಕ್ಷಿಪ್ತವಾಗಿ ಚೆಗೆವಾರ. ಪ್ರೀತಿಯಿಂದ ಚೆ..

ಚೆ - ಕ್ರಾಂತಿಯ ಸಹಜೀವನ ಪುಸ್ತಕದ ಮುನ್ನುಡಿಯಿಂದ



che guevera kannada book
(ಡೇವಿಡ್ ಡಚ್ ಮನ್ ಸಂಪಾದಿಸಿರುವ ಚೆ - ಕ್ರಾಂತಿಯ ಸಹಜೀವನ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿರುವವರು ನಾ.ದಿವಾಕರ. ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿ ನಂ.2ರಂದು ಬಿಡುಗಡೆಗೊಳ್ಳಲಿದೆ. ಪುಸ್ತಕದ ಮುನ್ನುಡಿ ಹಿಂಗ್ಯಾಕೆಯ ಓದುಗರಿಗಾಗಿ)
ಜೀಸಸ್ ಮಾಂಟೇನ್ ಒರೋಪೆಸ್
ಕ್ಯೂಬಾದಲ್ಲಿ ತನ್ನ ಪ್ರಾಣಕ್ಕೆ ಅಪಾಯವಿದ್ದುದರಿಂದ ಗಡೀಪಾರು ಆಗಿ ಜುಲೈ 7, 1955 ಗುರುವಾರ ಹವಾನಾದಿಂದ ಮೆಕ್ಸಿಕೋಗೆ ತೆರಳುವ ಮುನ್ನ ಫಿಡೆಲ್ ಕ್ಯಾಸ್ಟ್ರೋ ಚೆ ಅವರನ್ನು ಭೇಟಿಯಾಗಿದ್ದರು.
ಜುಲೈ 26, 1953 ಮೊಂಕಾಡ ರಕ್ಷಣಾ ದಳದ ಮೇಲಿನ ದಾಳಿ ಪ್ರಜಾ ಸಶಸ್ತ್ರ ದಂಗೆಯನ್ನು ಹುಟ್ಟುಹಾಕುವ ಪ್ರಥಮ ಸೋಪಾನವಾಗಿ ಪರಿಣಮಿಸಿತ್ತು. ದಾಳಿಯಲ್ಲಿ ಬದುಕುಳಿದವರನ್ನು ಪೈನ್ಸ್ ದ್ವೀಪದ ಕಾರಾಗೃಹದಲ್ಲಿ ಬಂಧಿಸಲಾಗಿತ್ತು. ಮೇ 15, 1955 ಭಾನುವಾರದಂದು, ಬಂಧನದ 53 ದಿನಗಳ ನಂತರ ನಮ್ಮೆಲ್ಲರನ್ನೂ ಬಿಡುಗಡೆ ಮಾಡಲಾಗಿತ್ತು.
53 ದಿನಗಳ ಅವಧಿಯಲ್ಲಿ ಹವಾನಾದಲ್ಲೇ ಇದ್ದ ಫಿಡೆಲ್ ಸಮೂಹ ಮಾಧ್ಯಮಗಳ ಮೂಲಕ  ದಿಟ್ಟವಾಗಿ ರಾಜಕೀಯ ಸಂಘರ್ಷವನ್ನು ಜಾರಿಯಲ್ಲಿರಿಸಿದ್ದರು. ಬ್ಯಾಟಿಸ್ಟಾ ಸರ್ವಾಧಿಕಾರದ ಪಾತಕಿ ಕೃತ್ಯಗಳನ್ನು ಮತ್ತು ಮೊಂಕಾಡ, ಬಯಾರ್ಮೋ ದಾಳಿಯಲ್ಲಿ ಭಾಗಿಯಾದವರ ಮೇಲಿನ ದೌರ್ಜನ್ಯವನ್ನು ಖಂಡಿಸುತ್ತಿದ್ದ ಫಿಡೆಲ್ ಬ್ಯಾಟಿಸ್ಟಾ ಸರ್ಕಾರದ ದಮನಕಾರಿ ನೀತಿಗಳನ್ನು ಉಗ್ರವಾಗಿ ಖಂಡಿಸುತ್ತಿದ್ದರು. ವ್ಯವಸ್ಥೆಯ ವಿರುದ್ಧ ಹೋರಾಡುವವರನ್ನು ಹತ್ತಿಕ್ಕುವ, ಕಾರ್ಮಿಕರನ್ನು ಶೋಷಿಸುವ ವ್ಯವಸ್ಥೆಯನ್ನು ಸಮರ್ಥಿಸುವ, ಶಾಂತಿಯುತ ರಾಜಕೀಯ ಹೋರಾಟಗಳಿಗೆ ಅವಕಾಶವೀಯದ ಬ್ಯಾಟಿಸ್ಟಾ ಆಡಳಿತದ ವಿರುದ್ಧ ಫಿಡೆಲ್ ತಮ್ಮ ಪ್ರತಿರೋಧ ವ್ಯಕ್ತಪಡಿಸುತ್ತಿದ್ದರು. ಕೂಡಲೇ ಸಾರ್ವತ್ರಿಕ ಚುನಾವಣೆಗಳನ್ನು ನಡೆಸುವಂತೆ ಸರ್ಕಾರಕ್ಕೆ ಸವಾಲು ಹಾಕಿದ್ದರು. ಕ್ಯೂಬಾ ದೇಶದಲ್ಲಿ ಪ್ರಜಾತಂತ್ರವನ್ನು ಸ್ಥಾಪಿಸುವ ಉದ್ದೇಶದಿಂದ ತಾವು ನೀಡುತ್ತಿದ್ದ ಪ್ರಚೋದನಕಾರಿ ಹೇಳಿಕೆಗಳ ಹಿಂದೆ ಸರ್ವಾಧಿಕಾರಿ ಬ್ಯಾಟಿಸ್ಟಾನನ್ನು ಒತ್ತಾಯಿಸುವ ಉದ್ದೇಶವಿದ್ದುದನ್ನು ಕಾಣಬಹುದಿತ್ತು
Also Read

ಚೆ - ಕ್ರಾಂತಿಯ ಸಹಜೀವನ - ಪ್ರಕಾಶಕರ ನುಡಿ

che guevera kannada book
ನಂ. 2ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿರುವ  (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ) "ಚೆ- ಕ್ರಾಂತಿಯ ಸಹಜೀವನ" ಪುಸ್ತಕಕ್ಕೆ ಲಡಾಯಿ ಪ್ರಕಾಶನದ ಬಸೂ ಬರೆದಿರುವ ಸಾಲುಗಳು.


ಅನ್ಯಾಯವನ್ನು ಪ್ರತಿಭಟಿಸಿದ್ದಕ್ಕಾಗಿ ಚೆ ನನ್ನ ಸಂಗಾತಿ..

ಜೀವಮಾನವಿಡೀ ದುಡಿಯುತ್ತ ಸವೆದರೂ ಕಣ್ಣಿಂದ ನೋಡಲಾಗದ, ಕನಸಿನಲ್ಲೂ ಊಹಿಸಲಾಗದ ಸಾವಿರ ಕೋಟಿ ಎಂಬ ಧನರಾಶಿಯ ಕುರಿತು ಜನಸಾಮಾನ್ಯ ದಿಗ್ಭ್ರಮೆಗೊಳ್ಳುವಾಗಲೇ ರಟ್ಟೆ ಕಸುವಿದ್ದರಷ್ಟೇ ಹೊಟ್ಟೆ ತುಂಬುವ, ಪ್ರತಿದಿನದ ಕೂಳೂ ಅವತ್ತಿನ ಸೂರ್ಯನೊಂದಿಗೇ ಮೂಡಿಬರುವ ಅನಿವಾರ್ಯ ವಾಸ್ತವ ಅವನನ್ನು ಕಂಗೆಡಿಸುತ್ತಿದೆ. ಜಾಗತಿಕ ಬಂಡವಾಳ ಹೂಡಿಕೆದಾರರು ಫಲವತ್ತಾದ ನೆಲೆ-ನೆಲ ಅರಸಿ ವಿಶ್ವದ ಬಡದೇಶಗಳನ್ನು ಸುತ್ತಿ ಪ್ರತಿವರ್ಷ ಸಮಾವೇಶ ನಡೆಸುತ್ತಾರೆ. ಸಾವಿರಾರು ಕೋಟಿ ಬಂಡವಾಳ `ಬಡದೇಶಗಳತ್ತ ಹರಿದುಬರುತ್ತದೆ. ಹಾಗೆ ಬಂದದ್ದು ಸ್ಥಳೀಯ ಹಳ್ಳ-ತೊರೆ-ಗುಂಡಿ-ಕೆರೆಗಳಲ್ಲಿರುವುದನ್ನೆಲ್ಲ ಬಾಚಿ ಬರಿದಾಗಿಸಿ ಭೋರ್ಗರೆದು ಸಮುದ್ರದತ್ತಲೇ ಹರಿಯುತ್ತದೆ. ಮರಳುಗಾಡು, ಬರದ ನಾಡುಗಳು ಹರಿವಿನ ದೂರದ ಕನಸಿನಲ್ಲೂ ಇರುವುದಿಲ್ಲ
Also Read

ಲಡಾಯಿ ಪ್ರಕಾಶನದ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭದ ವಿವರ

ladai prakashana
ಬಿಡುಗಡೆ ಸಮಾರಂಭದ ವಿವರಗಳು
ಎಡಪಂಥೀಯ ವಿಚಾರಧಾರೆಯ, ದಲಿತ ಪರ, ಮಹಿಳಾ ಪರ, ಪ್ರಗತಿಪರ ಪುಸ್ತಕಗಳನ್ನು ಹೊರತರುತ್ತಿರುವ ಗದಗ ಜಿಲ್ಲೆಯ ಲಡಾಯಿ ಪ್ರಕಾಶನದ ಮೂರು ಅನುವಾದಿತ ಪುಸ್ತಕಗಳನ್ನು ನವೆಂಬರ್ ಎರಡರಂದು ಬೆಳಿಗ್ಗೆ 10:30ಕ್ಕೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಬಿಡುಗಡೆಗೊಳ್ಳಲಿವೆ.
Also Read
ಎಲ್ಲೋ ಹಾಳಾಗಿಹೋಗಿದ್ದಾನೆ ವಸಂತ