Oct 22, 2014

ಮೋಟಾರ್ ಸೈಕಲ್ ಡೈರಿ - ಅನುವಾದಕರ ಮಾತು



(ನವೆಂಬರ್ ಎರಡರಂದು ಬಿಡುಗಡೆಗೊಳ್ಳುತ್ತಿರುವ ಲಡಾಯಿ ಪ್ರಕಾಶನ ಹೊರತಂದಿರುವ ಚೆಗೆವಾರನ ಮೋಟಾರ್ ಸೈಕಲ್ ಡೈರಿಗೆ ಅನುವಾದಕಿ ಡಾ.ಎಚ್.ಎಸ್ ಅನುಪಮ ಬರೆದಿರುವ ಸಾಲುಗಳು ಹಿಂಗ್ಯಾಕೆಯ ಓದುಗರಿಗಾಗಿ)

ಅರ್ನೆಸ್ಟೋ ಚೆ ಗೆವಾರ ಡಿ ಲಾ ಸೆರ್ನಾ
ಕವಿಯ ಮನಸು, ಕ್ರಾಂತಿಯ ಕನಸು..
ನೋಡಲು ಕಿಲಾಡಿ ಹುಡುಗನಂತೆ ಕಾಣುವ ಹೊಳೆವ ಕಣ್ಣುಗಳ ತೇಜೋಮಯ ತರುಣ; ಬಡರೋಗಿಗಳನ್ನು, ಕೃಷಿಕರನ್ನು, ಗಣಿಕೆಲಸಗಾರರನ್ನು ಕಂಡು ಅವರಿಗಾಗಿ ಏನಾದರೂ ಮಾಡಲೇಬೇಕೆಂದು ಪಣತೊಟ್ಟ ವೈದ್ಯ; ಬದುಕಿನ ಕೊನೆಯ ಕ್ಷಣಗಳಲ್ಲಿ ಬೊಲಿವಿಯನ್ ಪರ್ವತಗಳಲ್ಲಿ ಅಲೆದಾಡುವಾಗ ತನ್ನ ಒರಟು ಉಣ್ಣೆಯ ಬ್ಯಾಗಿನಲ್ಲಿ ಆಯುಧಗಳ ಜೊತೆ ನೆರೂಡನ ಕ್ಯಾಂಟೋ ಜನರಲ್ ಕವಿತೆ ಪುಸ್ತಕ ಇಟ್ಟುಕೊಂಡ ಕಾವ್ಯಪ್ರೇಮಿ; ಒಂದು ದೇಶದಲ್ಲಿ ಹುಟ್ಟಿ, ಮತ್ತೊಂದು ದೇಶದ ಬಿಡುಗಡೆಗಾಗಿ ಹೋರಾಡಿ, ಮಗದೊಂದು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣವೊಪ್ಪಿಸಿದ ವಿಶ್ವಮಾನವ: ಬದುಕಿದ ಕೇವಲ 39 ವರ್ಷಗಳಲ್ಲಿ ವಿಶ್ವದ ಮುಕ್ಕಾಲು ದೇಶಗಳ ಸಂದರ್ಶಿಸಿದ ಜಂಗಮ; ಜಗತ್ತಿನ ಅಸಂಖ್ಯ ಜನರ ಸ್ಫೂರ್ತಿ; ನನ್ನಲ್ಲೂ ನಿರಂತರ ಬೆಳೆಯುತ್ತಲಿರುವ ಮಗು..
ಅವ ಅರ್ನೆಸ್ಟೋ ಗೆವಾರಾ ಡಿ ಲಾ ಸೆರ್ನಾ. ಸಂಕ್ಷಿಪ್ತವಾಗಿ ಚೆಗೆವಾರ. ಪ್ರೀತಿಯಿಂದ ಚೆ..

ಆತನನ್ನು ಪ್ರಾಣಬಿಡುವಷ್ಟು ಪ್ರೀತಿಸುವವರಿದ್ದಾರೆ, ಕುರುಡು ಅಭಿಮಾನ ಹೊಂದಿದವರಿದ್ದಾರೆ, ಕೊಲೆಗಡುಕನೆಂದು ದ್ವೇಷಿಸುವವರೂ ಇದ್ದಾರೆ. ತಟ್ಟೆ, ಲೋಟ, ಪೆನ್ನು, ಪುಸ್ತಕ, ಕವಿತೆ, ಟೀ ಶರ್ಟ್, ಬ್ಯಾಗ್, ನೋಟು, ನಾಣ್ಯ, ಟೋಪಿ, ಹಚ್ಚೆ, ಸ್ಮಾರಕ - ಹೀಗೆ ಎಲ್ಲೆಂದರಲ್ಲಿ ಕಾಣುವ ಚೆಗೆವಾರ ಜಗತ್ತಿನ ಅತಿ ಪ್ರಸಿದ್ಧ ಮುಖ. ಅತಿಹೆಚ್ಚು ಕಮರ್ಷಿಯಲೈಸ್ ಆದ ನಾಯಕ. ನಮ್ಮ ನೆಲದಿಂದ ಹದಿನೈದು ಸಾವಿರ ಕಿಲೋಮೀಟರು ದೂರದಲ್ಲಿದ್ದರೇನಾಯಿತು? ಕನ್ನಡ ಮನಸುಗಳನ್ನು ಇನ್ನಿಲ್ಲದಂತೆ ಪ್ರಭಾವಿಸಿದ್ದಾನೆ. ಚೆ ಕುರಿತ ಪುಸ್ತಕ ಇಟ್ಟರೆ ತಮ್ಮನ್ನು ನಕ್ಸಲೈಟ್ ಬೆಂಬಲಿಗರೆಂದುಕೊಳ್ಳುವರೆಂದು ಹಿಂಜರಿವ ಪುಸ್ತಕದಂಗಡಿ ಮಾಲೀಕರಿಂದ ಹಿಡಿದು ತನ್ನ ಮಗನಿಗೆ ಚೆಗೆವಾರ ಎಂದು ಹೆಸರಿಟ್ಟ ವಿ.ಆರ್.ಕಾರ್ಪೆಂಟರ್ ಕವಿಯ ತನಕ ಕನ್ನಡ ಅಕ್ಷರಗಳಲ್ಲಿ ಅವ ಹಾಸುಹೊಕ್ಕಾಗಿದ್ದಾನೆ.
ನನ್ನ ಮಟ್ಟಿಗೆ ಹೇಳುವುದಾದರೆ ಕನಸು, ಕೆಚ್ಚು, ಚೆಲುವಾಂತ ನಗೆ, ತೀವ್ರತೆ, ದುಡುಕುಗಳ ಮೊತ್ತವಾಗಿ; ಸಫಲನೋ ವಿಫಲನೋ ಎಂದು ಅಳೆಯಬಾರದ ಕೌತುಕವಾಗಿ ಚೆ ನನ್ನೊಳಗಿದ್ದಾನೆ. `ಜಗತ್ತಿನ ಯಾವುದೇ ಭಾಗದಲ್ಲಿರುವ ಶೋಷಿತನಿಗಾಗಿ ನಿನ್ನೆದೆ ಕಂಪಿಸುತ್ತಿದ್ದರೆ ನಾನು ನಿನ್ನ ಸಂಗಾತಿ ಎಂದ ಚೆಗೆವಾರನನ್ನು ಕಮ್ಯುನಿಸ್ಟ್ ನಾಯಕ, ಗೆರಿಲ್ಲಾ ಹೋರಾಟಗಾರ ಎಂದಷ್ಟೇ ನೋಡಲು ಸಾಧ್ಯವಿಲ್ಲ. ಅವನು ಹುಟ್ಟಿದ ಅರೆ ಶತಮಾನದ ನಂತರ ನಾ ಹುಟ್ಟಿದರೇನಾಯಿತು, ಬಹುವಚನದಲ್ಲಿ ಗೌರವ ಪೂರ್ವಕವಾಗಿ ಸಂಬೋಧಿಸಲೂ ಸಾಧ್ಯವಿಲ್ಲ.
ಆತ ನನ್ನ ಸಂಗಾತಿ.
ತನ್ನ ಬಳಿ ಚಿಕಿತ್ಸೆಗೆ ಬರುತ್ತಿದ್ದ ಬಟ್ಟೆ ತೊಳೆಯುವ ಮುದುಕಿಗಾಗಿ ಮರುಗಿ ಅವಳಂಥವರಿಗಾಗಿ ಏನಾದರೂ ಮಾಡಲೇಬೇಕೆಂದು ಪಣ ತೊಟ್ಟು ಒಂದು ಕವಿತೆಯನ್ನು ಅವಳಿಗರ್ಪಿಸಿದ ಹೆಂಗರುಳಿನ ಚೆ; ಮುಗುಳುನಗೆಯಿಲ್ಲದೆ ಮಾತಾಡದಿದ್ದ ಚೆ; ರಾತ್ರಿಯ ಹೊತ್ತು ನದಿನೀರಿನಲ್ಲಿ ಮುಳುಗಲು, ಬಾಗಿಲಿರದ ಕೋಣೆಯಲ್ಲಿ ಮಲಗಿ ಕರಿಚಿರತೆ ಬರಬಹುದೆಂದು ಹೆದರುತ್ತಿದ್ದ ಚೆ ಕಡು ಕ್ರಾಂತಿಕಾರಿಯಾದದ್ದು ಹೇಗೆ? ಎಳೆತನದಿಂದ ತೀವ್ರ ಅಸ್ತಮಾ ಬಾಧಿಸುತ್ತಿದ್ದ; ಓದಿನಲ್ಲಿ ಮುಂದಿದ್ದು ತನ್ನ ಮನೆಯ 3000 ಪುಸ್ತಕಗಳ ಲೈಬ್ರರಿಯ ಬಹುಪಾಲು ಪುಸ್ತಕಗಳ ಓದಿದ್ದ ವಿಚಾರಮಗ್ನ ಚೆ ಗೆರಿಲ್ಲಾ ಹೋರಾಟಗಾರನಾಗಿ ಬದಲಾದದ್ದು ಯಾವಾಗ? ಎನ್ನುವುದು ಹಲವರಂತೆ ನನ್ನನ್ನೂ ಸತತ ಕಾಡಿದೆ. ಎಂದೇ ಅವನಿಗೆ ಸಂಬಂಧಿಸಿದ್ದೆಲ್ಲವನ್ನು ಹುಡುಕಿ, ಓದುವ ಭರದಲ್ಲಿ ಕನ್ನಡಕ್ಕೂ ಅನುವಾದಿಸಿಕೊಂಡಿದ್ದಾನೆ.
ಜಂಗಮ ಪಾದಮೋಟಾರ್ ಸೈಕಲ್ ಡೈರೀಸ್
1928. ಅರ್ಜೆಂಟೀನಾದ ರೊಸಾರಿಯೋದಲ್ಲಿ ಅರ್ನೆಸ್ಟೋ ಗೆವಾರಾ ಲಿಂಚ್ ಹಾಗೂ ಸೆಲಿಯಾ ಡಿ ಲಾ ಸೆರ್ನಾ ಅವರ ಮೊದಲ ಮಗನಾಗಿ ಹುಟ್ಟಿದ ಅರ್ನೆಸ್ಟೋ ಸದಾ ಚಟುವಟಿಕೆಯ ಹುಡುಗ. ಅರೆ ಐರಿಶ್ ಮೂಲದ ಅವನ ಕುಟುಂಬದಲ್ಲಿ ಅಪ್ಪ ರಿಪಬ್ಲಿಕನ್ ಬೆಂಬಲಿಗ. ಸ್ಪ್ಯಾನಿಶ್ ಕ್ರಾಂತಿಕಾರಿಗಳ ಪರ. ಮಗನ ಅವಿಶ್ರಾಂತ ಚಟುವಟಿಕೆಗಳನ್ನು ನೋಡಿದ ತಂದೆ, `ಅವ ಹುಟ್ಟಿದ ಕೂಡಲೇ ನನಗೆ ಗೊತ್ತಾಯಿತು, ಅವನ ರಕ್ತದಲ್ಲಿ ಐರಿಶ್ ಕ್ರಾಂತಿಕಾರಿಗಳ ರಕ್ತ ಹರಿಯುತ್ತಿದೆ ಅಂದರಂತೆ. ಅಸ್ತಮಾ ಬಾಧಿಸುತ್ತಿದ್ದರೂ ಉತ್ತಮ ಕ್ರೀಡಾಪಟು. ಅಪ್ಪನ ಜೊತೆ ಆಡಿಆಡಿ ಚೆಸ್ ಕಲಿತಿದ್ದ. ಫುಟ್ಬಾಲ್, ರಗ್ಬಿ, ಈಜು, ಗಾಲ್ಫ್, ಸೈಕ್ಲಿಂಗ್, ಶೂಟಿಂಗ್ ಎಲ್ಲದರಲ್ಲೂ ಅವ ಮುಂದು. ಯಾವುದೇ ಆಟವಿದ್ದರೂ ಆತನ ಅಗ್ರೆಸ್ಸಿವ್ ಶೈಲಿ ಎದ್ದು ಕಾಣುತ್ತಿತ್ತು. ನೆರೂಡ, ಕೀಟ್ಸ್, ಮಚಾಡೋ ಅಲ್ಲದೆ ಹಲವು ದೇಶೀ ಮತ್ತು ವಿದೇಶೀ ಕವಿಗಳನ್ನು ಕಂಠಪಾಠವಾಗುವಷ್ಟು ಓದಿಕೊಂಡಿದ್ದ. ವಿಜ್ಞಾನ, ಗಣಿತ, ಕವಿತೆ, ಕಾದಂಬರಿ, ವಿಚಾರ ಸಾಹಿತ್ಯ - ಹೀಗೆ ಜ್ಞಾನಕ್ಕೆ ಸಂಬಂಧಿಸಿದ ಹಲವು ಶಾಖೆಗಳ ಬಗೆಗೆ ಆಳ ತಿಳುವಳಿಕೆ ಹೊಂದಿದ್ದ ಪುಸ್ತಕ ಪ್ರೇಮಿ. ಅಮೆರಿಕದ ಸಿಐಎಯ ಡಿಕ್ಲಾಸಿಫೈಡ್ ದಾಖಲೆಗಳು `ತುಂಬ ಓದಿಕೊಂಡ ವ್ಯಕ್ತಿ. ಒಬ್ಬ ಲ್ಯಾಟಿನೋಗೆ ಹೆಚ್ಚೇ ಎನ್ನುವಷ್ಟು ಬೌದ್ಧಿಕ ಸಾಮಥ್ರ್ಯವಿರುವವ ಎಂದು ಬಣ್ಣಿಸಿದ್ದವು.
ಚಟುವಟಿಕೆಯ ವ್ಯಕ್ತಿತ್ವ, ತೀವ್ರ ಭಾವುಕತನವೇ ಅವನನ್ನು ಅಲೆಮಾರಿಯನ್ನಾಗಿ ಮಾಡಿತು. ವಿದ್ಯಾರ್ಥಿ ಜೀವನದಲ್ಲೇ ತಿರುಗಾಟ ಶುರುವಾಯಿತು.  ಎಲ್ಲೆಲ್ಲೂ ಇದ್ದ ಬಡತನ, ಹಸಿವು, ರೋಗ, ಶೋಷಣೆ ಅವನ ಗಮನ ಸೆಳೆದಿದ್ದವು. 1950ರಲ್ಲಿ ಒಬ್ಬನೇ ಮೋಟರ್ ಅಳವಡಿಸಿದ ತನ್ನ ಸೈಕಲಿನಲ್ಲಿ ಉತ್ತರ ಅರ್ಜೆಂಟೀನಾದ ಹಳ್ಳಿಗಾಡುಗಳ 4500 ಕಿಮೀ ಸಂಚರಿಸಿದ. 1951ರಲ್ಲಿ ಆಲ್ಬರ್ಟೋ ಗ್ರೆನಾಡೋ ಜೊತೆಗೂಡಿ 8000 ಕಿಮೀ ದೂರವನ್ನು, 9 ತಿಂಗಳಲ್ಲಿ ಕ್ರಮಿಸಿದ. 1953ರಲ್ಲಿ ಮತ್ತೆ ಹೊರಟ.
ಇಲ್ಲಿ ಅನುವಾದಿಸಲಾಗಿರುವ `ಮೋಟಾರ್ ಸೈಕಲ್ ಡೈರೀಸ್ ಅವನ ಎರಡನೆಯ ತಿರುಗಾಟದ ಅನುಭವವನ್ನು ಟಿಪ್ಪಣಿಯ ರೂಪದಲ್ಲಿ ಹೊಂದಿರುವಂಥದು. 1951 ಅಕ್ಟೋಬರಿನಿಂದ ಅರ್ಜೆಂಟೀನಾ, ಚಿಲಿ, ಪೆರು, ಈಕ್ವೆಡಾರ್, ಕೊಲಂಬಿಯಾ, ವೆನಿಜುವೆಲಾ, ಪನಾಮಾ ಮತ್ತು ಮಿಯಾಮಿಗಳಲ್ಲಿ ಸುತ್ತಾಡಿ ಅಲ್ಲಿಂದ ಮನೆಗೆ ವಾಪಸಾದ ಅವನ ತಿರುಗಾಟದ ಟಿಪ್ಪಣಿಗಳ ಸಂಗ್ರಹ ಪುಸ್ತಕ. ಟಿಪ್ಪಣಿಗಳು ಹೇಗೆ ರಸ್ತೆಯ ಮೇಲಿರುವ ಸೂಕ್ಷ್ಮ ಮನದ ವ್ಯಕ್ತಿ ಸುತ್ತಮುತ್ತಲನ್ನು ಗ್ರಹಿಸುತ್ತಾನೆ ಹಾಗೂ ಹೋರಾಟಗಾರ ರೂಪುಗೊಳ್ಳುತ್ತಾನೆ ಎಂಬ ಸುಳಿವು ನೀಡುತ್ತದೆ. ಮುಂದಿನ ಊಟ ಎಲ್ಲಿ? ಡ್ರಿಂಕ್ಸ್ ಎಲ್ಲಿ ಸಿಕ್ಕೀತು? ಎಂಬ ಯೋಚನೆಗಳೇ ಪ್ರಧಾನವಾದ ತರುಣ ಮನಸ್ಸು 9 ತಿಂಗಳ ಕೊನೆಗೆ ಅಖಂಡ ಲ್ಯಾಟಿನ್ ಅಮೆರಿಕಕ್ಕಾಗಿ ತನ್ನ ಹುಟ್ಟುಹಬ್ಬದ ಕೇಕನ್ನು ಕುಷ್ಠರೋಗಿಗಳೊಂದಿಗೆ ಹಂಚಿಕೊಳ್ಳುವಷ್ಟು ಬದಲಾಗುತ್ತದೆ. ತನ್ನ ದೇಹವನ್ನು ಕನಸುಗಾರರ ಪವಿತ್ರ ನೆಲೆಯಾಗಿಸುವ ಪಣ ತೊಡುತ್ತದೆ.
ಪ್ರಯಾಣದ ಸಮಯದಲ್ಲಿ ಅವರು ಭೇಟಿ ನೀಡಿದ ನಗರ ಮತ್ತು ಸ್ಥಳಗಳ ಪಟ್ಟಿ ನೋಡಿದರೆ ಅವರು ಏನನ್ನು ನೋಡಹೊರಟರೆಂದು ತಿಳಿಯುತ್ತದೆ. ರಜಾ ಕಳೆಯಲು ಅಥವಾ ಅಧ್ಯಯನ ಕುತೂಹಲದಿಂದ ಕೈಗೊಳ್ಳುವ ಪೂರ್ವನಿಯೋಜಿತ ಐಷಾರಾಮಿ ಪ್ರವಾಸವಾಗಿರಲಿಲ್ಲ ಅದು. ಅಲ್ಲಿ ಪೂರ್ವ ನಿಶ್ಚಿತವಾಗಿದ್ದುದು ಹೋಗಬೇಕಾದ ಜಾಗವಷ್ಟೇ. ಅಮ್ಮನಿಗೆ ಬರೆದ ಒಂದು ಪತ್ರದಲ್ಲಿ ಹೇಳಿರುವಂತೆ ಹೋಟೆಲಲ್ಲಿ, ಹಾಸ್ಟೆಲಿನಲ್ಲಿ ಉಳಿಯುವುದು `ಬೂಷ್ರ್ವಾ ಪ್ರವಾಸ. ಅವತ್ತಿನದು ಅವತ್ತೇ ನಿರ್ಧಾರವಾಗಬೇಕು. `ಆಶು ಬದುಕುಇದು ಪ್ರಯಾಣದ ಪೂರ್ವ ಷರತ್ತು.
ಪ್ರಯಾಣಕ್ಕೆ, ಚಲನೆಗೆ ಏನೋ ಚೈತನ್ಯವಿದೆ. ಭೂತ-ಭವಿಷ್ಯಗಳ ನಡುವಿನ ವರ್ತಮಾನದಲ್ಲಿರುವ ನಮ್ಮನ್ನು ನಾವು ಹೆಚ್ಚೆಚ್ಚು ಅರಿಯಲು ಅದು ಸಹಾಯ ಮಾಡುತ್ತದೆ. ಪ್ರಯಾಣ ಅವನನ್ನು ಅವ ನೋಡಿಕೊಳ್ಳುವ ರೀತಿಯನ್ನು, ಲ್ಯಾಟಿನ್ ಅಮೆರಿಕವನ್ನು ಅವ ಅರ್ಥಮಾಡಿಕೊಂಡ ಬಗೆಯನ್ನು ಬದಲಾಯಿಸಿತು. ಹಲವು ದೇಶಗಳ ಸುತ್ತಿ ಚೆ ಮತ್ತು ಗ್ರೆನಾಡೋ ಜನರನ್ನು ಬಾಧಿಸುತ್ತಿರುವ ಕಾಯಿಲೆ ಮತ್ತದರ ಮೂಲ ಏನೆಂದು ಅರ್ಥ ಮಾಡಿಕೊಂಡರು. ತನ್ನ ಟಿಪ್ಪಣಿಗಳಲ್ಲಿ ಚೆ ಚಿಲಿಯ ಗಣಿ ಕಾರ್ಮಿಕರ ದುಸ್ಥಿತಿ ಬಗ್ಗೆ ಬರೆದಿದ್ದಾನೆ. ದಾರಿಯಲ್ಲಿ ಭೇಟಿಯಾದ ನಿರ್ಗತಿಕ ಕಮ್ಯುನಿಸ್ಟ್ ದಂಪತಿಗಳಿಗಾಗಿ ಮರುಗಿದ್ದಾನೆ. ಮಚುಪಿಚುವಿನಲ್ಲಿ ಮೂಲನಿವಾಸಿಗಳನ್ನು ವಸಾಹತುಶಾಹಿಗಳು ಹೇಗೆ ಹೊಸಕಿಹಾಕಿದರು ಎಂದು ಗುರುತಿಸಿದ್ದಾನೆ. ಕುಷ್ಠರೋಗ ಕಾಲನಿಗಳಲ್ಲಿ ರೋಗಿಗಳು ತೋರಿಸಿದ ಪ್ರೀತಿಗೆ ಮನಸೋತು `ಅತಿ ಹೆಚ್ಚು ವಿಶ್ವಾಸ ಮತ್ತು ಸಹಭಾಗಿತ್ವ ನಿಸ್ಸಹಾಯಕರು ಮತ್ತು ಏಕಾಂಗಿಗಳ ನಡುವೆಯೇ ಒದಗಿಬರುತ್ತದೆ ಎಂದು ಬರೆದಿದ್ದಾನೆ. ಲ್ಯಾಟಿನ್ ಅಮೆರಿಕದ ದೇಶಗಳು ಗಣಿ, ಕಾಡು, ಖನಿಜ ಮತ್ತಿತರ ಸಂಪನ್ಮೂಲಗಳ ಹೊರತಾಗಿಯೂ ಹಿಂದುಳಿದಿರುವುದಕ್ಕೆ ಒಂದಾನೊಂದು ಕಾಲದ ಸಾಮ್ರಾಜ್ಯಶಾಹಿಗಳ ಆಕ್ರಮಣ ಹಾಗೂ ವರ್ತಮಾನದ ನವವಸಾಹತುಶಾಹಿ ಬಂಡವಾಳಶಾಹಿ ಹಿತಾಸಕ್ತಿಯೇ ಪ್ರಮುಖ ಕಾರಣ ಎಂದು ಅವನಿಗೆ ಅರ್ಥವಾಗಿಹೋಯಿತು. ಲ್ಯಾಟಿನ್ ಅಮೆರಿಕದ ಮೇಲೆ ಉತ್ತರ ಅಮೆರಿಕಾದ ಹಿಡಿತ, ಮೂಲನಿವಾಸಿಗಳಿಗೆ ಆಗುತ್ತಿರುವ ಅನ್ಯಾಯದ ಕುರಿತು ಪ್ರಯಾಣ ಜಾಗೃತಿ ಮೂಡಿಸಿತು. ದುಡ್ಡಿಲ್ಲ ಎಂದು ಚಿಕಿತ್ಸೆ ಪಡೆಲಾಗದ ಮಗು, ನಿರಂತರ ಹಸಿವು ಹುಟ್ಟಿಸುವ ಮೂಢನಂಬಿಕೆಗಳು, ಅಪಘಾತದಿಂದ ಮಗ ಸತ್ತದ್ದನ್ನೂ ವಿಧಿಯೆಂದು ಭಾವಿಸುವ ತಂದೆಯ ಅಸಹಾಯಕತೆ ಅವನನ್ನು ಅಲುಗಾಡಿಸಿದವು. ಪ್ರಯಾಣದ ಕೊನೆಯಲ್ಲಿ ಅವನಿಗೆ ಅಲ್ಲಿನ ಎಲ್ಲ ಸಮಸ್ಯೆಗಳಿಗೆ ಉತ್ತರ ಅಖಂಡ ಲ್ಯಾಟಿನ್ ಅಮೆರಿಕಾ, ಶ್ರಮಿಕರ ಅಂತರರಾಷ್ಟ್ರೀಯತೆ ಹಾಗೂ ವಿಶ್ವಕ್ರಾಂತಿಯಲ್ಲಿದೆ ಎಂದು ಮನದಟ್ಟಾಯಿತು. ಗಡಿಯಿಲ್ಲದ ಏಕೀಕೃತ ಹಿಸ್ಪ್ಯಾನಿಕ್ ಅಮೆರಿಕವನ್ನು ಕಲ್ಪಿಸಿಕೊಂಡು ಇದನ್ನೇ ಮುಂದೆಯೂ ಪ್ರತಿಪಾದಿಸುತ್ತ ಬಂದ.
ಚೆ ಬರವಣಿಗೆ ವಿಪುಲ. ದಿನಚರಿಯನ್ನು ಕಟ್ಟುನಿಟ್ಟಾಗಿ ಬರೆದ. ಗೆರಿಲ್ಲಾ ಯುದ್ಧಕ್ಕೆ ಮ್ಯಾನುವಲ್ ಬರೆದ. ಅವನ ದಿನಚರಿಯ ಜೊತೆಗೆ ಇತರೆ ಬರಹ ಮತ್ತು ಕ್ರಿಯೆಗಳನ್ನು ಇಟ್ಟು ಹೋಲಿಸಿದರೆ ಅವನ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಎಷ್ಟೆಂದು ತಿಳಿಯುತ್ತದೆ. ಎಂದೇ ಟಿಪ್ಪಣಿಗಳನ್ನು ಅದರ ಸಾಹಿತ್ಯಿಕ ಮೌಲ್ಯ, ಬರವಣಿಗೆಯ ಶೈಲಿ ಮತ್ತಿತರ ಮಾಪನಗಳಿಂದಲ್ಲದೇ ಸೂಕ್ಷ್ಮ ಮನದ ನನ್ನ ವೃತ್ತಿ ಬಾಂಧವ ಮೆಡಿಸಿನ್ ಕಿಟ್ ಎತ್ತಿಟ್ಟು ಶಸ್ತ್ರಾಸ್ತ್ರ ಸಂಗ್ರಹ ಕೈಗೆತ್ತಿಕೊಳ್ಳುವಂತೆ ಯಾವುದು ಪ್ರೇರೇಪಿಸಿತು ಎಂದು ತಿಳಿಯಲು ಓದಬೇಕಾಗಿದೆ ಎಂದು ಅನಿಸುತ್ತಿದೆ. 
ಮೆಟಮಾರ್ಫಸಿಸ್
ಚೆಗೆವಾರ ಸಶಸ್ತ್ರ ಹೋರಾಟ ಪ್ರತಿಪಾದಿಸಿದವ. ಕ್ರಾಂತಿಗೆ ಇನ್ನೊಂದು ಹೆಸರು. ಸಮಾನತೆಗೆ ತುಡಿವ ಹೋರಾಟಗಾರರ ಗುರು. ಸಶಸ್ತ್ರ ಹೋರಾಟಗಾರ ಎಂದರೆ ಚೆ ರಕ್ತ ಪಿಪಾಸುವಲ್ಲ. ಅವನ ಭಾವತೀವ್ರತೆ ಅವನನ್ನು ತೀವ್ರಗಾಮಿಯನ್ನಾಗಿ, ದುಡುಕುತನ ಧೈರ್ಯವಾಗಿ ಕ್ರಾಂತಿಕಾರಿ ಗುಣ ರೂಪುಗೊಂಡಿತು. ಅವನಿದ್ದ ಕಾಲಮಾನ, ಅಲೆದಾಟ, ದೊರೆತ ಸಂಪರ್ಕಗಳು ಇವೆಲ್ಲ ಅಖಂಡ ಲ್ಯಾಟಿನ್ ಅಮೆರಿಕಕ್ಕಾಗಿ ಅವ ಕನಸುವಂತೆ ಮಾಡಿದವು. ಅದನ್ನು ಸಾಕಾರಗೊಳಿಸಲೋ ಎಂಬಂತೆ ಗಡಿ ಮರೆತು ದೇಶ ಸುತ್ತಿದ. ಆದರೆ ತನ್ನನ್ನು, ತನ್ನ ಕನಸುಗಳನ್ನು ಲೋಕ ಅರ್ಥಮಾಡಿಕೊಳ್ಳುತ್ತಿಲ್ಲ ಎನಿಸಿದಾಗ; ಅದರ ಸಾಕಾರಕ್ಕೆ ಸಶಸ್ತ್ರ ಮಾರ್ಗವಲ್ಲದೆ ಬೇರೆ ದಾರಿಯಿಲ್ಲ ಎನಿಸಿದಾಗ ಇಂಜೆಕ್ಷನ್ ಕೊಡುವ ಕೈ ಬಂದೂಕು ಹಿಡಿಯಿತು. ಜೊತೆಗೆ ಇನ್ನೊಂದು ಅಂಶವನ್ನೂ ಗಮನಿಸಬೇಕು: ದಕ್ಷಿಣ ಅಮೆರಿಕಾ ಗಾಂಧಿ-ಅಂಬೇಡ್ಕರರಂಥ, ಮಂಡೇಲಾ-ಟುಟು ಅವರಂಥ ಅಹಿಂಸಾತ್ಮಕ ಹೋರಾಟ ಪ್ರತಿಪಾದಿಸುವವರನ್ನು ಸೃಷ್ಟಿಸಲಿಲ್ಲ. ಏಕೆಂದರೆ ಕಾಲಮಾನದ ದಕ್ಷಿಣ ಅಮೆರಿಕಾದ ಪರಿಸ್ಥಿತಿ ಮತ್ತು ಎದುರಾಳಿಯ ಮನಸ್ಥಿತಿ ಹಾಗಿತ್ತು. ಇಡೀ ಲ್ಯಾಟಿನ್ ಅಮೆರಿಕಾ ಇತಿಹಾಸ, ಅಂದಿನ ಸಾಮಾಜಿಕ/ಆರ್ಥಿಕ ಸ್ಥಿತಿ ವೈದ್ಯನೊಬ್ಬ ಮಾಕ್ರ್ಸಿಸ್ಟ್ ಹ್ಯೂಮನಿಸ್ಟ್ ಹೋರಾಟಗಾರನಾಗುವಂತೆ ಮಾಡಿತು.  
ಕೊಲಂಬಸ್ ಅಮೆರಿಕಾ ಖಂಡವನ್ನು ಅನ್ವೇಷಿಸಿದ ಮೇಲೆ ಉತ್ತರ ಅಮೆರಿಕಾ ಬ್ರಿಟಿಷ್ ವಸಾಹತುಶಾಹಿಗಳಿಂದ, ಅವರ ಗುಲಾಮರಿಂದ ತುಂಬಿಹೋದರೆ; ಜನವಸತಿಯಿದ್ದ ಸಂಪದ್ಭರಿತ ದಕ್ಷಿಣ ಅಮೆರಿಕಾವನ್ನು ಯೂರೋಪಿನ ವಸಾಹತುಶಾಹಿ ದೇಶಗಳು ಪಾಲು ಮಾಡಿಕೊಂಡವು. ಪೂರ್ವದಲ್ಲಿ ಪೋರ್ಚುಗಲ್, ಪಶ್ಚಿಮದಲ್ಲಿ ಸ್ಪೇನ್, ಮೇಲ್ಭಾಗದಲ್ಲಿ ಫ್ರೆಂಚ್ ಕಾಲನಿಗಳಾಗಿ ನೆಲವನ್ನು ಹಂಚಿಕೊಳ್ಳಲಾಯಿತು. ಅಲ್ಲಿನ ಮೂಲ ನಿವಾಸಿಗಳಾದ ಅಜಟೆಕ್ ಮತ್ತು ಇಂಕಾಗಳು ನೇಪಥ್ಯಕ್ಕೆ ಸರಿದರು. ಆದರೆ ಹೊತ್ತಿಗೆ ಉತ್ತರ ಅಮೆರಿಕಾ ವಸಾಹತುಶಾಹಿ ಬ್ರಿಟಿಷ್ ರಾಜಸತ್ತೆಯಿಂದಲೇ ಬೇರೆಯಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನವಾಗಿ, ಹೊಸ ಮಹತ್ವಾಕಾಂಕ್ಷಿ ದೇಶವಾಗಿ ಉದಯವಾಗಿತ್ತು. ಯೂರೋಪಿನ ವಸಾಹತುಶಾಹಿಗಳಿಂದ ಆಕ್ರಮಣಕ್ಕೆ ಒಳಗಾಗಿದ್ದ ದಕ್ಷಿಣ ಅಮೆರಿಕದ ಮೇಲೆ ಉತ್ತರ ಅಮೆರಿಕದ ಬಂಡವಾಳಗಾರರ ಕಣ್ಣುಬಿತ್ತು. ಅಲ್ಲಿನ ಅತ್ಯಮೂಲ್ಯ ಖನಿಜ ಸಂಪತ್ತು, ಫಲವತ್ತಾದ ನೆಲ ಬಂಡವಾಳಗಾರರನ್ನು ಇನ್ನಿಲ್ಲದಂತೆ ಆಕರ್ಷಿಸಿದವು. ಬಹುರಾಷ್ಟ್ರೀಯ ವ್ಯಾಪಾರೀ-ಗಣಿ-ಕೈಗಾರಿಕಾ ಕಂಪನಿಗಳು ನೆಲವನ್ನು ಹಾಗೂ ಜನರನ್ನು ಕಂಡುಕೇಳರಿಯದ ಶೋಷಣೆಗೆ ದೂಡಿದವು. ಅಮೆರಿಕಾ ಸಂಯುಕ್ತ ಸಂಸ್ಥಾನವು ಲ್ಯಾಟಿನ್ ಅಮೆರಿಕಾದ ನೆಲ-ಜಲ-ಜನರನ್ನು ತನ್ನ ಕಚ್ಛಾವಸ್ತುಗಳಂತೆ, ಗ್ರಾಹಕರಂತೆ, ಉತ್ಪಾದಿಸುವ ಕೆಲಸಗಾರರಂತೆ ನೋಡಿತು. ಯೂರೋಪಿನ ಪ್ರಾಬಲ್ಯ ಕಡಿಮೆಯಾಗಿ ಸ್ವತಂತ್ರ ದೇಶಗಳು ಉದಯವಾದಾಗ ಅಮೆರಿಕದ ವಾಣಿಜ್ಯ ಹಿತಾಸಕ್ತಿ ಅದೆಲ್ಲದರಲ್ಲೂ ಕೈಯಾಡಿಸುತ್ತ ಹೋಯಿತು.
ವ್ಯಾಪಾರೀ ಹಿತಾಸಕ್ತಿ ಹೇಗೆ ಒಂದು ಸ್ವಾಯತ್ತ ದೇಶದ ಆಂತರಿಕ ವಿಷಯಗಳ ಮೇಲೆ ಹಿಡಿತ ಸಾಧಿಸುತ್ತದೆ ಎಂದು ತಿಳಿಯಲು ಯುನೈಟೆಡ್ ಫ್ರುಟ್ ಕಂಪನಿ (ಯುಫ್ಕೊ) ಒಂದೇ ಉದಾಹರಣೆ ಸಾಕು. ಮಧ್ಯ ಮತ್ತು ದಕ್ಷಿಣ ಅಮೆರಿಕದಲ್ಲಿ ಬೆಳೆದ ಹಣ್ಣನ್ನುಮುಖ್ಯವಾಗಿ ಬಾಳೆಯ ಹಣ್ಣನ್ನು ಕೊಂಡು ಯೂರೋಪ್ ಮತ್ತು ಉತ್ತರ ಅಮೆರಿಕ ಸೇರಿದಂತೆ ಬೇರೆ ದೇಶಗಳಿಗೆ ಮಾರಾಟ ಮಾಡುವುದು ಕಂಪನಿಯ ವ್ಯವಹಾರವಾಗಿತ್ತು. 1899ರಲ್ಲಿ ಶುರುವಾದ ಅಮೆರಿಕದ ಹಣ್ಣಿನ ಕಂಪನಿ ಬರಬರುತ್ತ ವಿಸ್ತಾರಗೊಂಡು ಅದಕ್ಕೆ ಪ್ರತಿಸ್ಪರ್ಧಿಗಳೇ ಇಲ್ಲ ಎನ್ನುವಂತಾಯಿತು. ಲ್ಯಾಟಿನ್ ಅಮೆರಿಕದ ಸಣ್ಣದೊಡ್ಡ ದೇಶಗಳ ಬಹುಪಾಲು ಭೂಮಿಯ ಮೇಲೆ ಒಡೆತನದ ಹಕ್ಕು ಪಡೆದು, ರೈತರು ಕಂಪನಿ ಹೇಳಿದ ಬೆಳೆಯನ್ನೇ ಬೆಳೆಯುವಂತೆ - ಅದರಲ್ಲೂ ಬಾಳೆಯಹಣ್ಣನ್ನೇ ಮುಖ್ಯ ಬೆಳೆಯನ್ನಾಗಿ ಬೆಳೆಯುವಂತೆ; ತಮ್ಮ ಸಾಂಪ್ರದಾಯಿಕ ಕೃಷಿ ಕೈಬಿಡುವಂತೆ; ಬೆಳೆದಿದ್ದನ್ನು ಕಂಪನಿಗೇ ಮಾರುವಂತೆ ಪರಿಸ್ಥಿತಿ ನಿರ್ಮಾಣ ಮಾಡಿತು. ತನಗೆ ಪ್ರತಿಸ್ಪರ್ಧಿಗಳಾಗಿದ್ದ 33 ಹಣ್ಣು ಮಾರಾಟಗಾರ ಕಂಪನಿಗಳು ತಂತಮ್ಮ ಕಂಪನಿಯನ್ನು ಯುಫ್ಕೊಗೆ ವಹಿಸಿಕೊಡಬೇಕಾದ ಅನಿವಾರ್ಯತೆ ಸೃಷ್ಟಿಸಿತು. ತಮಗೆ ತೆರಿಗೆ ರಿಯಾಯ್ತಿಗಳನ್ನು ಪಡೆದು; ಅದನ್ನು ಕೊಡಬಲ್ಲ ಸರ್ಕಾರ ಬರಲು ಆಂತರಿಕ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತ ಯುನೈಟೆಡ್ ಫ್ರುಟ್ ಕಂಪನಿ ಒಂದು ಹಂತದಲ್ಲಿ ಮಧ್ಯ ಅಮೆರಿಕಾದ ಅತಿದೊಡ್ಡ ಭೂಮಾಲೀಕನೆನಿಸಿಕೊಂಡಿತು. ಪ್ರತಿ ದೇಶದಲ್ಲೂ ಲಕ್ಷಾಂತರ ಎಕರೆ ಭೂಮಿ ಕಂಪನಿ ಒಡೆತನದಲ್ಲಿತ್ತು. ಅದರ ಏಕಸ್ವಾಮ್ಯವಿರುವ ಪ್ರದೇಶಗಳನ್ನು `ಬನಾನಾ ರಿಪಬ್ಲಿಕ್ಗಳೆಂದು ಕರೆಯಲಾಯ್ತು. ಹೊಸ ವಸಾಹತುಶಾಹಿ 1901ರಲ್ಲಿ ಗ್ವಾಟೆಮಾಲಾದಲ್ಲಿ ಪೋಸ್ಟಲ್ ಸರ್ವೀಸ್ ಶುರುಮಾಡಿತು. 1913ರಲ್ಲಿ ಟ್ರಾಪಿಕಲ್ ರೇಡಿಯೋ ಅಂಡ್ ಟೆಲಿಗ್ರಾಫ್ ಕಂಪನಿ ಶುರುಮಾಡಿತು. ವ್ಯಾಪಾರೀ ಹಡಗು ಸಂಚಾರ ವ್ಯವಸ್ಥೆ ಶುರುಮಾಡಿತು. 1928 ಕಾರ್ಮಿಕರ ಮುಷ್ಕರದ ವೇಳೆ ನಡೆದ ಗೋಲಿಬಾರಿನಲ್ಲಿ ಅಂದಾಜು 2000 ಕೆಲಸಗಾರರ ಹತ್ಯೆಯಾಯಿತು. 1930 ವೇಳೆಗೆ ಅದು ಅತಿ ದೊಡ್ಡ ಉದ್ಯೋಗದಾತನಾಯಿತು. ಕ್ಯೂಬಾದ ಸಕ್ಕರೆ ಮಿಲ್ಗಳನ್ನೂ, ಉಳಿದ ದೇಶಗಳ ಹಣ್ಣು ಮತ್ತು ಕೃಷಿ ಉತ್ಪನ್ನಗಳನ್ನೂ ನಿಯಂತ್ರಿಸುವ ಮಟ್ಟಕ್ಕೆ ಹೋಯಿತು. ಬಾಳೆಹಣ್ಣಿನ ಕಂಪನಿ ಎದುರು ಸಣ್ಣಪುಟ್ಟ ರೈತರು, ಅವರ ಬೆಳೆಗಳು, ದರ, ಅವಕಾಶ ಎಲ್ಲ ನೆಲಕಚ್ಚಿದವು.
ನಿರುದ್ಯೋಗ, ಬಡತನ, ಹಸಿವು, ಕಾಯಿಲೆ, ದಬ್ಬಾಳಿಕೆಗಳು ಮನುಷ್ಯನನ್ನು ದಂಗೆಯೇಳಲು ಪ್ರೇರೇಪಿಸುತ್ತವೆ. ಕಾಲಮಾನದ ಲ್ಯಾಟಿನ್ ಅಮೆರಿಕಾ ದೇಶಗಳಲ್ಲಿ ಒಂದೆಡೆ ಗಣಿ ಕೆಲಸಗಾರರ ದುಸ್ಥಿತಿ, ಕಡಿಮೆ ವೇತನ, ಬಡತನ, ಹಸಿವು, ನಿರುದ್ಯೋಗವಿದ್ದರೆ ಇನ್ನೊಂದೆಡೆ ರೈತರನ್ನು ಯುಫ್ಕೋ ಸುಲಿಯಿತು. ಇವೆಲ್ಲವೂ ನವವಸಾಹತುಶಾಹಿಗಳ ವಿರುದ್ಧ ಸಂಘಟನೆ, ಹೋರಾಟ ಶುರುವಾಗಲು ಕಾರಣವಾಯಿತು. ಕಮ್ಯುನಿಸಂ ಎಂದು ಕರೆಯದೇ ವರ್ಗ ಹೋರಾಟ ಶುರುವಾಯಿತು.
ಕೆಲವೆಡೆ ಚುನಾಯಿತ ಸರ್ಕಾರಗಳೂ ಅಸ್ತಿತ್ವಕ್ಕೆ ಬಂದವು. ಅವು ಭೂ ಸುಧಾರಣೆಯನ್ನು ಮೊದಲ ಆದ್ಯತೆಯನ್ನಾಗಿ ತೆಗೆದುಕೊಂಡು ಜನರಿಗೆ ಭೂಮಿ ಹಂಚುವುದನ್ನು ಮುಖ್ಯ ಕಾರ್ಯಕ್ರಮವಾಗಿ ಮಾಡಿಕೊಂಡವು. ಜೊತೆಗೆ ಗಣಿ, ಬ್ಯಾಂಕು, ಕೈಗಾರಿಕೆಗಳ ರಾಷ್ಟ್ರೀಕರಣ ಮಾಡಿದವು. ಇಂಥ ಸಮಾಜ ಕಲ್ಯಾಣ ಕಾರ್ಯಕ್ರಮಗಳು ಮೊದಲು ಪೆಟ್ಟು ಕೊಟ್ಟಿದ್ದು ಬಾಳೆಹಣ್ಣು ಕಂಪನಿ ಮತ್ತು ಅದರಂಥ ವ್ಯಾಪಾರಿ ಮಾಲೀಕರಿಗೆ. ಬಂಡವಾಳಗಾರ ಹಿತಾಸಕ್ತಿಗಳು ಸುಮ್ಮನೆ ಕೂರಲಿಲ್ಲ. ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಯಾರು ವರ್ತಿಸುವರೋ ಅವರು ಅಧಿಕಾರದ ಮುಖ್ಯಸ್ಥಾನಗಳಲ್ಲಿರುವಂತೆ ನೋಡಿಕೊಂಡವು. ಸರ್ಕಾರಗಳನ್ನು ಉರುಳಿಸಿದವು. ಕೈಗೊಂಬೆಗಳನ್ನು ಕೂರಿಸಿದವು. ಕ್ಯೂಬಾ, ಗ್ವಾಟೆಮಾಲಾ, ಬೊಲಿವಿಯಾ ದೇಶಗಳ ಹೋರಾಟಕ್ಕೆ ಇದೇ ಪರಿಸ್ಥಿತಿ ಕಾರಣವಾಯಿತು.
ಸರ್ವಾಧಿಕಾರವೇ ಆಡಳಿತ ವಿಧಾನವಾದ, ಪ್ರಜಾಪ್ರಭುತ್ವವಾದಿ ಸಂವಾದ-ಮಾತುಕತೆ-ಕ್ರಿಯೆಗಳಿಗೆ ಅವಕಾಶವೇ ಇರದ ಲ್ಯಾಟಿನ್ ಅಮೆರಿಕಾದಲ್ಲಿ ಚೆಗೆವಾರನ ಸಮಕಾಲೀನರು, ಸಮಾನ ಮನಸ್ಕರು, ನ್ಯಾಯಯುತ ಬದುಕಿಗಾಗಿ ಹೋರಾಡುವವರ ಎದುರು ಬಹಳ ಆಯ್ಕೆಗಳಿರಲಿಲ್ಲ. ಅಂದಿನ ಸಮಾಜವೇ ಮೊದಲು ಶಸ್ತ್ರಾಸ್ತ್ರಗಳನ್ನು ನೆಚ್ಚದ ಚೆಗೆವಾರ ಹಾಗೂ ಕ್ಯಾಸ್ಟ್ರೋ ಅಂಥವರು ಅಹಿಂಸಾವಾದಿಗಳಾಗಿ ಉಳಿಯದಂತೆ ಮಾಡಿತು. ಅವರು ಸಶಸ್ತ್ರ ಹೋರಾಟಗಾರರಾದ ಪ್ರಕ್ರಿಯೆ ಮರಿಹುಳ ಕಂಬಳಿಹುಳವಾದಷ್ಟೇ ಸಹಜವಾಗಿ ನಡೆಯಿತು.
ಕಟ್ಟಿದ ಮುಷ್ಟಿ, ಕೊನೆಯುಸಿರುವವರೆಗೆ..
ಎರಡು ವಿದ್ಯಾರ್ಥಿ ಜೀವನದ ಪ್ರವಾಸದ ನಂತರ ವೈದ್ಯಕೀಯ ಡಿಗ್ರಿ ಪಡೆದ ಚೆ ಹೊತ್ತಿಗಾಗಲೇ ರಾಜಕೀಯ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಸ್ಪಷ್ಟ ನಿಲುವು ಹೊಂದಿದ್ದ. ತಿರುಗಾಟದಲ್ಲಿ ಏರ್ಪಟ್ಟ ಸಂಪರ್ಕಗಳಿಂದ ಸಂಘರ್ಷದ ಪಾಲುದಾರನಾದ.
1953ರಲ್ಲಿ ಗ್ವಾಟೆಮಾಲಾದಲ್ಲಿದ್ದಾಗ ಚಿಕ್ಕಮ್ಮನಿಗೆ ಬರೆದ ಪತ್ರದಲ್ಲಿ ತಾನು ಯುನೈಟೆಡ್ ಫ್ರುಟ್ ಕಂಪನಿಯ ಬಾಳೆಹಣ್ಣಿನ ಸಾಮ್ರಾಜ್ಯದಲ್ಲಿ ಪ್ರಯಾಣ ಮಾಡುತ್ತಿರುವುದಾಗಿ, ಅಲ್ಲಿ `ಕ್ಯಾಪಿಟಲಿಸ್ಟ್ ಆಕ್ಟೋಪಸ್ಗಳು ನೆಲವನ್ನು, ರೈತರನ್ನು ಹೇಗೆ ಹಿಡಿದಿಟ್ಟುಕೊಂಡಿವೆ ಎಂಬುದಾಗಿ ವರ್ಣಿಸಿದ್ದ. ಅವನು ಅಲ್ಲಿದ್ದಾಗಲೇ ಚುನಾಯಿತ ಸರ್ಕಾರದ ಪ್ರತಿನಿಧಿಯಾಗಿ ಭೂಸುಧಾರಣೆ ತರಲು ಯತ್ನಿಸುತ್ತಿದ್ದ ಜೇಕಬೊ ಆರ್ಬೆಂಜ್ ಸರ್ಕಾರವನ್ನು ಅಮೆರಿಕದ ಸಿಐಎ ಬೆಂಬಲಿತ ಕಾರ್ಲೋಸ್ ಕ್ಯಾಸ್ಟಿಲೊ ಕ್ಷಿಪ್ರಕ್ರಾಂತಿ ನಡೆಸಿ ಉರುಳಿಸಿದ. ಯುನೈಟೆಡ್ ಫ್ರುಟ್ ಕಂಪನಿಯ 2.25 ಲಕ್ಷ ಎಕರೆಯನ್ನು ಭೂಸುಧಾರಣೆಗಾಗಿ ಅದಾಗಲೇ ಆರ್ಬೆಂಜ್ ಸರ್ಕಾರ ವಹಿಸಿಕೊಂಡಿತ್ತು. ಅದರಿಂದ ಕಂಗಾಲಾದ ಕಂಪನಿ ತನ್ನ ವ್ಯಾಪಾರೀ ಹಿತಾಸಕ್ತಿ ಕಾಯುವ ಸರ್ಕಾರವನ್ನು ಸ್ಥಾಪಿಸಲು ಸಿಐಎ ಜೊತೆ ಸೇರಿ ಸಂಚು ನಡೆಸಿತು. ಸಂಚಿನ ವಿರುದ್ಧ ಅಲ್ಲಿ ದಂಗೆಯೇಳಲು ಸೂಕ್ತ ವಾತಾವರಣವಿತ್ತು. ಆಗ ಆರ್ಬೆಂಜೊ ಬೆಂಬಲಿಗರನ್ನು ಚೆ ಸೇರಿದ. ಅಲ್ಲೇ ಮುಂದೆ ಮದುವೆಯಾದ ಹಿಲ್ಡಾ ಗಾಡಿಯಾಳ ಪರಿಚಯವಾದದ್ದು. ಕ್ಷಿಪ್ರಕ್ರಾಂತಿ ಕೂಡಲೇ ನಡೆಯಬೇಕೆಂಬುದು ಚೆ ಅಭಿಪ್ರಾಯವಾಗಿದ್ದರೂ ಉಳಿದವರು ಅವನಷ್ಟು ವೇಗವಾಗಿ ಯೋಚಿಸಲು ವಿಫಲರಾದರು. ಜೀವಕ್ಕೆ ಕುತ್ತು ಬರುವ ಸಾಧ್ಯತೆ ಎದುರಾಗಿ ಚೆ ಗ್ವಾಟೆಮಾಲಾ ತೊರೆದು ಮೆಕ್ಸಿಕೋಗೆ ಹೋದ. 
ಅಮೆರಿಕ ಕುರಿತ ಅವನ ಅಭಿಪ್ರಾಯ ಗ್ವಾಟೆಮಾಲಾದಲ್ಲಿ ಗಟ್ಟಿಯಾಯಿತು. ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ಸರಿಪಡಿಸಲು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಎಲ್ಲ ಸರ್ಕಾರಗಳನ್ನೂ ಅದು ಬುಡಮೇಲು ಮಾಡುತ್ತದೆ ಎಂದು ತಿಳಿಯಿತು. `ಅಮೆರಿಕಕ್ಕೆ ಭೂ ಸುಧಾರಣೆ ಮಾತು ಬೇಡ, ಅವರು ಬೆಚ್ಚಗಿರಲು ಕುಡಿಯುವ ನೀರಿನ ಸಮಸ್ಯೆ ಕುರಿತು ಬೇಕಾದಷ್ಟು ಮಾತಾಡುತ್ತಾರೆ. ಬಹುಶಃ ಶೌಚ ಕ್ರಾಂತಿಗೆ ಜಗತ್ತನ್ನು ಸಿದ್ಧಮಾಡುತ್ತಿದ್ದಾರೆ ಎಂದು ಛೇಡಿಸಿದ. ಸಶಸ್ತ್ರ ಹೋರಾಟ, ಸಶಸ್ತ್ರ ಜನಸಮುದಾಯ ಮಾತ್ರ ನವವಸಾಹತುಶಾಹಿಗಳ ಹಗಲು ದರೋಡೆಯನ್ನು ತಡೆಗಟ್ಟಬಲ್ಲದು ಎಂಬ ಭಾವನೆ ಧೃಢವಾಯಿತು.
1955ರಲ್ಲಿ ಮೆಕ್ಸಿಕೋನಲ್ಲಿ ಕ್ಯೂಬಾದ ದೇಶಭ್ರಷ್ಟ ಕ್ರಾಂತಿಕಾರಿಗಳ ಪರಿಚಯವಾಯಿತು. ಫಿಡೆಲ್ ಕ್ಯಾಸ್ಟ್ರೋ ಮತ್ತು ಸಂಗಡಿಗರು ಸರ್ವಾಧಿಕಾರಿ ಬಾಟಿಸ್ಟಾನ ಸರ್ಕಾರ ಕಿತ್ತೊಗೆಯಲು ಜನ ಹೋರಾಟ ಸಂಘಟಿಸತೊಡಗಿದ್ದರು. ಅವರ ಯೋಜನೆಯನ್ನು ಸಂಪೂರ್ಣ ಬೆಂಬಲಿಸಿದ ಚೆ ಕ್ಯೂಬಾ ಕ್ರಾಂತಿಯಲ್ಲಿ ಪಾಲ್ಗೊಳ್ಳಲು ತಕ್ಷಣ ನಿರ್ಧರಿಸಿದ. ಗೆರಿಲ್ಲಾ ತರಬೇತಿ ಪಡೆದ. ಹೊಸಬರನ್ನು ನೇಮಿಸಿಕೊಳ್ಳಲು ನೆರವಾಗಿ ಅವರಿಗೆ ತರಬೇತಿ, ತಿಳುವಳಿಕೆ ಕೊಟ್ಟ. ಶಸ್ತ್ರಾಸ್ತ್ರ ಫ್ಯಾಕ್ಟರಿಯನ್ನು ಶುರುಮಾಡುವಲ್ಲಿ ಅವನ ಪಾತ್ರ ಹಿರಿದು. ಅವರಿಗೆಲ್ಲ ವೈದ್ಯಕೀಯ ನೆರವನ್ನು ಕಲ್ಪಿಸುತ್ತಲೇ ಕ್ಷಿಪ್ರದಾಳಿ ನಡೆಸುವ ತುಕಡಿಯ ಕಮ್ಯಾಂಡರ್ ಆದ. ತಂಡದಲ್ಲಿ ವೈದ್ಯನಾಗಿ ಹೋಗಿದ್ದ ಚೆ ಮೊದಲ ಯತ್ನ ಸೋಲಿನಲ್ಲಿ ಕೊನೆಗೊಳ್ಳುವುದನ್ನು ನೋಡಬೇಕಾಯಿತು.
1959ರಲ್ಲಿ ತುಂಬ ಯೋಜಿತವಾಗಿ ನಡೆಸಿದ ಎರಡನೆಯ ಹೋರಾಟದಲ್ಲಿ ಕ್ಯಾಸ್ಟ್ರೋ ಬೆಂಬಲಿಗರಿಗೆ ಗೆಲುವಾಯಿತು. ಕ್ರಾಂತಿಕಾರಿಗಳ ನಾಯಕ ಕ್ಯಾಸ್ಟ್ರೋ ದೇಶದ ಅಧ್ಯಕ್ಷನಾದ. ಆಗ ಚೆಗೆ ಕ್ಯೂಬಾ ಪೌರತ್ವ ನೀಡಲಾಯಿತು. ಹಲವು ಜವಾಬ್ದಾರಿಗಳನ್ನು ನೀಡಲಾಯಿತು. ಕ್ಯೂಬಾ ಸರ್ಕಾರದ ಪ್ರತಿನಿಧಿಯಾಗಿ ಹಲವು ದೇಶಗಳಿಗೆ ಭೇಟಿಕೊಟ್ಟ. ಅಮೆರಿಕವನ್ನು ವಿರೋಧಿಸುತ್ತಿದ್ದ ಚೆ ಸೋವಿಯತ್ ಯೂನಿಯನ್ ಜೊತೆ ಕ್ಯೂಬಾ ಉತ್ತಮ ಸಂಬಂಧ ಹೊಂದಲಿ ಎಂದು ಆಶಿಸಿದ. ಅಮೆರಿಕ ಆರ್ಥಿಕ ದಿಗ್ಭಂಧನ ಹೇರಿದ್ದರಿಂದ ಕ್ರಮ ಅನಿವಾರ್ಯವಾಗಿತ್ತು. ಹಲವು ದೇಶಗಳ ಜೊತೆ ವ್ಯಾಪಾರ ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕಿದ. ಕ್ಯೂಬಾ ನ್ಯಾಷನಲ್ ಬ್ಯಾಂಕಿನ ಅಧ್ಯಕ್ಷನಾದ, ಕೈಗಾರಿಕಾ ಮಂತ್ರಿಯಾದ, ಕೃಷಿ ಸುಧಾರಣಾ ಸಮಿತಿಯ ಅಧ್ಯಕ್ಷನಾದ. ಭುಸುಧಾರಣೆಯತ್ತ ವಿಶೇಷ ಗಮನ ಕೊಟ್ಟ. ಅದಕ್ಕಾಗಿ ಒಂದು ಲಕ್ಷ ಕಾರ್ಯಕರ್ತರನ್ನು ನೇಮಿಸಿಕೊಳ್ಳಲಾಯಿತು. ಹೆಚ್ಚುವರಿ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಹಂಚಲಾಯಿತು. ಅಮೆರಿಕ ಕಂಪನಿಗಳ ವಶದಲ್ಲಿದ್ದ 4.8 ಲಕ್ಷ ಎಕರೆ ವಶಪಡಿಸಿಕೊಳ್ಳಲಾಯಿತು. ಜೊತೆಗೆ ಕೈಗಾರಿಕೆ, ಬ್ಯಾಂಕ್ ಹಾಗೂ ವ್ಯಾಪಾರ ವಹಿವಾಟು ರಾಷ್ಟ್ರೀಕರಣಗೊಂಡಿತು. ಉನ್ನತ ಶಿಕ್ಷಣದಲ್ಲಿ ಎಲ್ಲ ಸಮುದಾಯಗಳಿಗೂ ಸೂಕ್ತ ಪ್ರಾತಿನಿಧ್ಯ ಇರುವಂತೆ ನೋಡಿಕೊಳ್ಳಬೇಕೆಂದು ವಿಶ್ವವಿದ್ಯಾಲಯಗಳಿಗೆ ಸೂಚಿಸಲಾಯ್ತು. ಶಿಕ್ಷಣದ ಕಡೆ ಗಮನ ಕೊಟ್ಟು 1961ನ್ನು `ಶಿಕ್ಷಣ ವರ್ಷ ಎಂದು ಘೋಷಿಸಲಾಯ್ತು. ಹೀಗೆ ಹಲವು ಹುದ್ದೆ, ಅಧಿಕಾರ ವಹಿಸಿಕೊಂಡ ಚೆ ದಣಿವರಿಯದೆ ಕೆಲಸ ಮಾಡಿದ. ಅದೇವೇಳೆ ಕ್ರಾಂತಿಕಾರಿಗಳಿಗೆ ವಿರುದ್ಧವಾಗಿದ್ದ, ಅಮೆರಿಕ ಬೆಂಬಲಿಗರನ್ನು `ಶಿಕ್ಷಿಸುವ ಸಮಿತಿಯೂ ರಚನೆಯಾಗಿ ಅತ್ಯಂತ ಶಿಸ್ತಿನ, ಕಟ್ಟುನಿಟ್ಟಿನ ಮನುಷ್ಯನಾಗಿದ್ದ ಚೆಯನ್ನು ಅದರ ಮೇಲ್ವಿಚಾರಣೆಗೆ ನೇಮಿಸಲಾಯಿತು. ಅಪರಾಧಗಳಿಗೆ ಮರಣದಂಡನೆಯೇ ಸರಿಯಾದ ಶಿಕ್ಷೆಯೆಂದು ಗೊತ್ತು ಮಾಡಿದ ಚೆ, `ಕ್ರಾಂತಿಯನ್ನು ರಕ್ಷಿಸುವುದು ಎಂದರೆ ಅದರ ಶತ್ರುಗಳನ್ನು ನಾಶ ಮಾಡುವುದು. ಅದರಲ್ಲಿ ರಾಜಕಾರಣ, ಮಾನವೀಯತೆ ಮುಂತಾದ ವಾದಗಳು ತಲೆ ಹಾಕಬಾರದು ಎಂದು ಪ್ರತಿಪಾದಿಸಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗುವುದು ಸಮಾಜದ ಆರೋಗ್ಯದ ದೃಷ್ಟಿಯಿಂದ ಮುಖ್ಯ ಎಂದು ಹೇಳಿದ.
1964ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಚೆ ಅಮೆರಿಕವನ್ನು ತರಾಟೆಗೆ ತೆಗೆದುಕೊಂಡ. `ಚರ್ಮದ ಬಣ್ಣದ ಕಾರಣವಾಗಿ ತಮ್ಮದೇ ಮಕ್ಕಳಿಗೆ ತಾರತಮ್ಯ ತೋರಿಸಿ ಕೊಲ್ಲುವವರು; ಕರಿಯರ ಕೊಲೆಗಾರರನ್ನು ಶಿಕ್ಷಿಸದೆ ರಕ್ಷಿಸುವವರು; ಸ್ವತಂತ್ರ ಮನುಷ್ಯರಾಗಲು  ನ್ಯಾಯಯುತ ಹಕ್ಕು ಪ್ರತಿಪಾದಿಸುವ ಕರಿಯರನ್ನು ಶಿಕ್ಷಿಸಿದವರು ಬೇರೆ ದೇಶಗಳ ಸ್ವಾತಂತ್ರ್ಯ ರಕ್ಷಕರೆಂದು ಹೇಗೆ ಹೇಳಿಕೊಳ್ಳುತ್ತಾರೆ?’ ಎಂದು ಪ್ರಶ್ನಿಸಿದ. ವರ್ಣಭೇಧವನ್ನು ತೀವ್ರವಾಗಿ ಖಂಡಿಸಿ ಅದನ್ನು ಕೊನೆಗೊಳಿಸುವ ಸಲುವಾಗಿ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಲೇಬೇಕು ಎಂದು ಹೇಳಿದ.
ತೀಕ್ಷ್ಣವಾದ ಹಾಗೂ ಸ್ಪಷ್ಟವಾದ ಮಾತುಗಳಲ್ಲಿ ಸೂಕ್ತವಾಗಿ ವಾದ ಮಂಡಿಸುತ್ತಿದ್ದ ಕಾರಣ ಚೆ ತೃತೀಯ ಜಗತ್ತಿನ ರಾಷ್ಟ್ರಗಳ ಪ್ರತಿನಿಧಿಯಂತೆ ಮಾತನಾಡತೊಡಗಿದ. ಜೊತೆಗೆ ಕ್ರಾಂತಿ ಎಲ್ಲೆಲ್ಲೂ ಸಂಭವಿಸಬೇಕು ಎನ್ನತೊಡಗಿದ. ಸಮಾನತೆಯ ಮಾತು ಕೇಳಿದೊಡನೆ ಬಂಡವಾಳಶಾಹಿಗಳಿಗೆ ಎದೆ ನಡುಕ ಹುಟ್ಟುತ್ತದೆ. ಎಂದೇ ಚೆಯ ಪ್ರಾಣ ತೆಗೆವ ಹಲವು ಪ್ರಯತ್ನಗಳು ನಡೆದವು.
ಬರಬರುತ್ತ ಅವನಿಗೆ ಸೋವಿಯತ್ ಯೂನಿಯನ್ನಲ್ಲಿ ಮಾಕ್ರ್ಸ್ ಇಲ್ಲ ಎನಿಸತೊಡಗಿತು. ಆಲ್ಜೀರಿಯಾದ ಒಂದು ಸಮ್ಮೇಳನದಲ್ಲಿ ಬಹಿರಂಗವಾಗಿಯೇ ಅಮೆರಿಕ ಮತ್ತು ಸೋವಿಯತ್ ಯೂನಿಯನ್ ಎರಡನ್ನೂ ಒಂದೇ ಉಸಿರಿನಲ್ಲಿ ಖಂಡಿಸಿದ. ಉತ್ತರ ಗೋಳದ ಪೂರ್ವ-ಪಶ್ಚಿಮದಲ್ಲಿರುವ ಎರಡು ದೇಶಗಳು ದಕ್ಷಿಣ ಗೋಳಾರ್ಧವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿವೆಯೆಂದು ದೂರಿದ. ವಿಮರ್ಶೆ ಕ್ಯೂಬಾಕ್ಕೆ ಬಿಸಿ ತುಪ್ಪವಾಯಿತು. ಆಗ ಸೋವಿಯತ್ ಮತ್ತು ಚೀನಾ ಸಂಬಂಧಗಳು ಬಿಗುವಾಗಿದ್ದವು. ಸಮ್ಮೇಳನದ ಮಾತುಗಳೇ ಅವನ ಕೊನೆಯ ಅಂತರರಾಷ್ಟ್ರೀಯ ವೇದಿಕೆ ಮೇಲಿನ ಭಾಷಣ. ನಂತರ ಅವನು ಕ್ಯೂಬಾದಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಆತನ ಇರುವಿಕೆ ಬಗ್ಗೆ ಪ್ರಶ್ನೆಗಳೆದ್ದವು. ಕೊನೆಗೊಂದು ದಿನ ಕ್ಯಾಸ್ಟ್ರೋ ಚೆಯ ವಿದಾಯ ಪತ್ರ ಓದಿದ. ಚೆ ಕ್ಯೂಬಾದಲ್ಲಿ ತಾನು ವಹಿಸಿಕೊಂಡಿದ್ದ ಎಲ್ಲ ಜವಾಬ್ದಾರಿಯನ್ನೂ ತ್ಯಜಿಸಿ ಪೌರತ್ವವನ್ನೂ ಬಿಟ್ಟುಕೊಟ್ಟಿದ್ದ. ತಾನು ಕ್ರಾಂತಿಯನ್ನು ಹರಡಲು ಇತರ ದೇಶಗಳಲ್ಲೂ ಕೆಲಸ ಮಾಡುವೆನೆಂದು ತಿಳಿಸಿ ಕಾಂಗೋಗೆ ಕ್ರಾಂತಿಕಾರಿಗಳಿಗೆ ತರಬೇತಿ ನೀಡಲು ಹೋದ. ಆದರೆ ಅಲ್ಲಿ ಅವನ ಪ್ರಯತ್ನ ವಿಫಲವಾಯಿತು. ನಂತರ ಗುಟ್ಟಾಗಿ ಕ್ಯೂಬಾಗೆ ಬಂದು ಬೊಲಿವಿಯಾಗೆ ಹೋದ. ಅಲ್ಲಿ ಕ್ರಾಂತಿಕಾರರನ್ನು ಸೇರಿಕೊಂಡಾಗ ಅವನ ಪಡೆ ಇಬ್ಭಾಗವಾಯಿತು. ಕೇವಲ 17 ಜನರೊಂದಿಗೆ ಉಳಿದ ಚೆಯನ್ನು . 8, 1967ರಲ್ಲಿ ಸೆರೆ ಹಿಡಿಯಲಾಯ್ತು. ಮರುದಿನ ವಾಷಿಂಗ್ಟನ್ನಿನ ಮಾರ್ಗದರ್ಶನದಂತೆ ಹತ್ಯೆ ಮಾಡಲಾಯಿತು. ಉಳಿದ ದೇಹಗಳ ಜೊತೆ ಎಲ್ಲೆಂದು ತಿಳಿಸದೇ ಹೂಳಲಾಯಿತು.
ನಂತರ ಬೆರಳಚ್ಚು ಪರೀಕ್ಷೆಗಾಗಿ ಅವನ ಕೈ ಕತ್ತರಿಸಿ ಅರ್ಜೆಂಟೀನಾಗೆ ಕಳಿಸಲಾಯ್ತು. 1997ರಲ್ಲಿ ಗುರುತಿಸದ ಗೋರಿಯಲ್ಲಿ ಬೊಲಿವಿಯಾದಲ್ಲಿದ್ದ ಅವನ ದೇಹವನ್ನು ಹೊರತೆಗೆದು ಕ್ಯೂಬಾಕ್ಕೆ ತಂದು ಸಂತ ಕ್ಲಾರಾದಲ್ಲಿ ಸ್ಮಾರಕ, ಸಮಾಧಿ ನಿರ್ಮಿಸಲಾಯಿತು.
***
ಚೆ ಅಸ್ತಮಾ ಬಾಧಿತ. ಅವನ ಉಸಿರಿನಂತೇ ಉಸಿರನ್ನು ಬಿಗಿಹಿಡಿಯುವ ಅಸ್ತಮಾ ಕೂಡಾ ಅವನ ಸಂಗಾತಿಯಾಗಿತ್ತು. ಅವನ ವ್ಯಕ್ತಿತ್ವದ ನಿರಂತರ ಚಡಪಡಿಕೆಗೆ ಉಸಿರುಗಟ್ಟಿದ ಅನುಭವ ನೀಡುವ ಕ್ರಾನಿಕ್ ಅಸ್ತಮಾವೂ ಒಂದು ಕಾರಣವಾಗಿತ್ತೇ?
ಈಗಲೂ ಚೆಯನ್ನು ಬಾಧಿಸಿದ ಅಸ್ತಮಾ ಇದೆ. ಆಗವನು ಅಸ್ತಮಾಗೆ ತೆಗೆದುಕೊಳ್ಳುತ್ತಿದ್ದ ಚಿಕಿತ್ಸೆ ಬೇರೆ. ಈಗ ನೀಡುವ ಚಿಕಿತ್ಸೆ ಬೇರೆ. ಆಗ ಅವ ಚಿಕಿತ್ಸೆ ನೀಡಿದ ಕುಷ್ಠರೋಗ ಈಗಲೂ ಇದೆ. ಆದರೆ ಅದರ ಪ್ರಮಾಣ, ಚಿಕಿತ್ಸೆಯ ರೀತಿ ಎಲ್ಲ ಬೇರೆಯಾಗಿದೆ. ಈಗ ರೋಗಿಗಳನ್ನು ಬೇರ್ಪಡಿಸಿ ಕಾಲನಿಗಳಲ್ಲಿ ಒಂದೆಡೆ ಇಟ್ಟು ಚಿಕಿತ್ಸೆ ಕೊಡುವುದಿಲ್ಲ. ಬದಲಾಗಿ ಅವರವರು ಎಲ್ಲೆಲ್ಲಿ ಇದ್ದಾರೋ ಅಲ್ಲಲ್ಲೇ ಚಿಕಿತ್ಸೆ ಕೊಡಲಾಗುತ್ತಿದೆ.
ಎಲ್ಲವೂ ಹಾಗೆಯೇ ಅಲ್ಲವೆ? ಸಮಸ್ಯೆ ಆಗಲೂ ಇತ್ತು, ಈಗಲೂ ಇದೆ. ಪರಿಹಾರ ಆಯಾ ಕಾಲದೇಶಗಳಿಗೆ ತಕ್ಕ ಸ್ವರೂಪ ಪಡೆದುಕೊಳ್ಳಬೇಕು ಅಷ್ಟೇ. ಅಮೆರಿಕವನ್ನು ಎದುರು ಹಾಕಿಕೊಂಡು ಪನಾಮಾ ಕಾಲುವೆಯ ಮೇಲಿನ ಹಕ್ಕಿಗಾಗಿ ಹೋರಾಡಿ ಗೆದ್ದ ಒಮರ್ ಟೊರಿಜೋಸ್ ಎಂಬ ಪನಾಮಾ ಅಧ್ಯಕ್ಷ, `ಸ್ವಾತಂತ್ರ್ಯ ನನ್ನ ಆಶಯ, ಆಶಯವನ್ನು ಕೊಲ್ಲುವ ಕ್ಷಿಪಣಿ ಇನ್ನೂ ಹುಟ್ಟಿಲ್ಲ ಎಂದು ಹೇಳಿ ಅಮೆರಿಕವನ್ನು ಬೆಚ್ಚಿ ಬೀಳಿಸಿದ್ದ. ಒಮರ್, ಅರ್ನೆಸ್ಟೋ, ಆರ್ಬೆಂಜ್, ಅಲೆಂಡೆ ಎಲ್ಲರೂ ಇಂಥ ಚಿಂತನೆಗಳನ್ನು ಹೊಂದಿದ್ದವರೇ. ಆದರೆ ಅವರಿಗೆಲ್ಲ ಏನಾಯಿತು? ಎಂದೇ ಇತಿಹಾಸದಿಂದ ತಿಳಿಯಬೇಕಾದ ಅರಿವಾಗಿ ಅವನ ಜೀವನ, ಧ್ಯೇಯ, ಚಿಂತನೆ ಮುಖ್ಯವಾಗಿವೆ. ನಮ್ಮ ರೋಗಗಳ ಗುರುತಿಸುವ ಡಯಾಗ್ನೋಸ್ಟಿಕ್ ಟೂಲ್ ಆಗಿ ಅವ ಹೆಚ್ಚು ಮುಖ್ಯವಾಗುತ್ತಾನೆ. ಅವನ ಸ್ಪಿರಿಟ್ ತರುಣರಲ್ಲಿ ವ್ಯವಸ್ಥೆಯ ಜಡತನದ ವಿರುದ್ಧ ಬಂಡೇಳುವ ಗುಣ ಹುಟ್ಟಿಸುವ ಉತ್ತೇಜಕವಾಗಬೇಕಿದೆ
ನೆರೂಡನಿಗೆ ಅವ ಹೇಳಿದ ಮಾತೊಂದು ಇಲ್ಲಿ ಪ್ರಸ್ತುತವೆನಿಸುತ್ತದೆ: `ನಾವೆಲ್ಲ ಯುದ್ಧ ವಿರೋಧಿಗಳೇ. ಆದರೆ ಒಮ್ಮೆ ಅದರಲ್ಲಿ ಭಾಗಿಯಾದೆವು ಅಂದರೆ ಮುಗಿಯಿತು, ಅದನ್ನು ಬಿಟ್ಟಿರಲಿಕ್ಕೇ ಆಗುವುದಿಲ್ಲ. ಮತ್ತೆಮತ್ತೆ ಅದು ನಮ್ಮನ್ನು ಸೆಳೆದುಕೊಳ್ಳುತ್ತದೆ.’ ಇವತ್ತು ಶಾಂತಿಗಾಗಿ ಯುದ್ಧ ನಡೆಯುತ್ತಿದೆ. ಧರ್ಮಕ್ಕಾಗಿ ಯುದ್ಧ ನಡೆಯುತ್ತಿದೆ. ವೈಯಕ್ತಿಕ ಕಾರಣಗಳಿಗಾಗಿ, ಗಡಿಗಾಗಿ ಯುದ್ಧ ನಡೆಯುತ್ತಿದೆ. ನಾನು ನಂಬಿರುವುದನ್ನೇ ಎಲ್ಲರೂ ನಂಬುವಂತೆ ಮಾಡಲು ಯುದ್ಧ ಏರ್ಪಡುತ್ತಿದೆ. ಹೀಗಿರುವಾಗ ಹಿಂಸೆಯನ್ನು ಇವತ್ತಿನ ವಿಶ್ವಗ್ರಾಮ ಅರ್ಥಿಕತೆಯಲ್ಲಿ ಬೇರೆಯೇ ಆಗಿ ಗ್ರಹಿಸಬೇಕಿದೆ. ಜನರ ವಿಮೋಚನೆಯ ಹೋರಾಟದಲ್ಲಿ ಜಾಗೃತಿಯ ಉಪಕರಣಗಳನ್ನಾಗಿ ಯಾವ್ಯಾವುದನ್ನು ಸುರಕ್ಷಿತವಾಗಿ ಬಳಸಿಕೊಳ್ಳಬಹುದು? ಎಂದು ವಿವೇಚಿಸುವ ಕಾಲ ಬಂದಿದೆ. ಜೊತೆಗೆ ಹೆಚ್ಚುಕಡಿಮೆ ನೂರು ವರ್ಷಗಳ ಹಿಂದೆ ಲ್ಯಾಟಿನ್ ಅಮೆರಿಕದಲ್ಲಿದ್ದ ಪರಿಸ್ಥಿತಿ ಇಲ್ಲಿ ಈಗ ಇದೆ. ಉದಾರವಾದ, ಮುಕ್ತ ಆರ್ಥಿಕತೆಯ ಆಕ್ಟೋಪಸ್ ಹಿಡಿತದಲ್ಲಿ ಜನ ಸಮುದಾಯ ನಲುಗುವಾಗ ಅದರಿಂದ ಬಿಡಿಸಿಕೊಳ್ಳಲು ಪರ್ಯಾಯ ಮಾರ್ಗಗಳ ಶೋಧಿಸುವವರು ಇಂಥ ಒಂದು ದಾರಿಯೂ ಇತ್ತು ಎಂದು ಅದರ ಸಾಧಕ-ಬಾಧಕಗಳ ಕುರಿತು ತಿಳಿದಿರಲೇಬೇಕಾದ ಒಂದು ಮಾರ್ಗ ಚೆಗೆವಾರನದು ಎನಿಸುತ್ತಿದೆ.
ಶಸ್ತ್ರ ಹಿಡಿದ ರಕ್ತ ಪಿಪಾಸುಗಳನ್ನೂ, ಸರ್ವಾಧಿಕಾರಿಗಳನ್ನೂ, ಧಾರ್ಮಿಕ ಮೂಲಭೂತವಾದಿಗಳನ್ನೂ ಚೆಯೊಡನಿಟ್ಟು ಹೋಲಿಸುವ `ಅಹಿಂಸಾವಾದಿ ಪ್ರತಿಪಾದನೆಗಳು ನಮ್ಮೆದುರು ಇವೆ. ಜೊತೆಗೆ ಅವನ ಹೆಸರೆತ್ತುವವರನ್ನು `ನಕ್ಸಲೈಟರೆಂಬ ಗುಮಾನಿಯಿಂದ ನೋಡುವ ಪರಿಪಾಠವೂ ಬೆಳೆದಿದೆ. ಎಂದೇ `ಮೋಟಾರ್ ಸೈಕಲ್ ಡೈರಿಯನ್ನು ಕನ್ನಡಿಗರಿಗೆ ತಲುಪಿಸುತ್ತಿರುವುದರಲ್ಲಿ ಪೂರ್ವಯೋಜಿತ ವ್ಯಕ್ತಿ ಚಿತ್ರದಾಚೆಗೆ, ಅಡಿ ಟಿಪ್ಪಣಿಗಳ ವಿವರಗಳಾಚೆಗೆ ಅವನನ್ನು ಅವನು ಮಂಡಿಸಿಕೊಂಡ ಹಾಗೆಯೇ ಎಲ್ಲರೂ ನೋಡಲಿ; ಒಂದು ವಿಚಾರ ಧಾರೆಯ ಹೋರಾಟಗಾರರಿಗಷ್ಟೇ ಅವನು ಸೀಮಿತವಾಗದೇ ಎಲ್ಲರನ್ನೂ ಅವ ತಲುಪಲಿ ಎಂಬ ಉದ್ದೇಶವಿದೆ. ಅವನ ದಾರಿಯನ್ನು ವಿಮರ್ಶಿಸುತ್ತಲೇ ಅದರ ಪ್ರಧಾನ ಆಶಯ ಏನಾಗಿತ್ತು ಎನ್ನುವುದನ್ನು ಗಮನಿಸುವುದೂ ನಮ್ಮ ಜವಾಬ್ದಾರಿಯಾಗಿದೆ
ಎರಡು ವರ್ಷಗಳಿಂದ ಅರೆಬರೆ ಮಾಡಿಟ್ಟಿದ್ದ ಅನುವಾದವನ್ನು ಕಾಲಮಿತಿಯಲ್ಲಿ ಮುಗಿಸುವಂತೆ ತಾಕೀತು ಮಾಡಿ ಪುಸ್ತಕವಾಗಿ ಪ್ರಕಟಿಸುತ್ತಿರುವ ಸಂಗಾತಿ ಬಸೂವಿನ ಒತ್ತಾಸೆಯ ಜೀವಫಲ ಪುಸ್ತಕ. ಲಡಾಯಿ ಪ್ರಕಾಶನ ಮತ್ತವನ ಕನಸು;
ಈಜಿಪ್ಟ್ ಮತ್ತು ರಾಜಸ್ಥಾನ ಪ್ರವಾಸದ ವೇಳೆ ಬಿಡುವಿನ ಸಮಯದಲ್ಲಿ ಓದಿಗೆ, ಅನುವಾದಕ್ಕೆ ಅನುವು ಮಾಡಿಕೊಟ್ಟ ಪುಟ್ಟಿಪವಿಕೃಷ್ಣ;
`ನಾನ್ವಯಲೆನ್ಸ್ ಈಸ್ ನಾಟ್ ನ್ಯಾಚುರಲ್ ಎಂದು ಲ್ಯಾಟಿನ್ ಅಮೆರಿಕಾದಲ್ಲಿ ಗಾಂಧಿಯಂಥವರು ಏಕೆ ಹುಟ್ಟಲಿಲ್ಲ ಎಂಬ ಗಹನ ಪ್ರಶ್ನೆಗೆ ಸರಳವಾಗಿ ಉತ್ತರಿಸಿದ ಪುಟ್ಟ ಗೆಳತಿ;
ಕುತೂಹಲ, ಮೆಚ್ಚುಗೆ ಸೂಸುತ್ತ ಬರವಣಿಗೆಗೆ ಸ್ಫೂರ್ತಿ ನೀಡುವ ಗೆಳೆಯ ಗೆಳತಿಯರ ಬಳಗ;
ಮುಖಪುಟ ರಚಿಸಿದ ಕಲಾವಿದ ಮಿತ್ರ ಅರುಣ ಕುಮಾರ್ ಹಾಗೂ ಮುದ್ರಣ ಸಿಬ್ಬಂದಿಗಳು..
ಇವರೆಲ್ಲ ಇರದೇ `..ಡೈರಿ ಪುಸ್ತಕವಾಗಿ ಬರಲು ಸಾಧ್ಯವಾಗುತ್ತಿತ್ತೆ?

No comments:

Post a Comment