Oct 22, 2014

'ಹುಲಿಯ ನೆರಳಿನೊಳಗೆ' ಪುಸ್ತಕದ ಮುನ್ನುಡಿಯಿಂದ



namadeva nimgade
ನಂ 2 ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿರುವ ಲಡಾಯಿ ಪ್ರಕಾಶನದಿಂದ ಪ್ರಕಟವಾಗಿರುವ 'ಹುಲಿಯ ನೆರಳಿನೊಳಗೆ - ಅಂಬೇಡ್ಕರ್ ವಾದಿಯ ಆತ್ಮಕಥೆ' ಪುಸ್ತಕಕ್ಕೆ ಅಪ್ಪಗೆರೆ ಸೋಮಶೇಖರ್ ಬರೆದ ಮುನ್ನುಡಿ ಹಿಂಗ್ಯಾಕೆಯ ಓದುಗರಿಗಾಗಿ. 
ಆತ್ಮಕಥೆಯಲ್ಲೊಂದು ಅಂಬೇಡ್ಕರ್ ಕಥೆ

 ದೆಹಲಿಯ ನವಯಾನ ಪ್ರಕಾಶನ ಪ್ರಕಟಿಸಿರುವ In The Tiger’s Shadow : The Autobiography of An Ambedkariteಪ್ರಖ್ಯಾತ ವಿಜ್ಞಾನಿಡಾ. ನಾಮದೇವ ನಿಮ್ಗಾಡೆ ಅವರ ಆತ್ಮಕಥೆ. ಮಹತ್ವದ ಆತ್ಮಕಥೆಯನ್ನುಹುಲಿಯ ನೆರಳಿನೊಳಗೆ : ಅಂಬೇಡ್ಕರ್ವಾದಿಯ ಆತ್ಮಕಥೆ ಎಂಬ ಶೀರ್ಷಿಕೆಯ ಅಡಿಯಲ್ಲಿ ಬಿ. ಶ್ರೀಪಾದ ಭಟ್ ಅವರು ಕನ್ನಡ ಓದುಗರಿಗೆ ಪರಿಚಯಿಸುತ್ತಿದ್ದಾರೆ. ಭಾರತೀಯ ಅನ್ಯ ಭಾಷೆಗಳಿಂದ ಕನ್ನಡಕ್ಕೆ ಅನುವಾದಗೊಂಡಿರುವ ಹಲವು ಪ್ರಮುಖ ದಲಿತ ಆತ್ಮಕಥೆಗಳು ಕನ್ನಡ ಪ್ರಜ್ಞೆ ಹಾಗೂ ಅನುಭವ ಜಗತ್ತನ್ನು ವಿಸ್ತರಿಸಿವೆ. ಜೊತೆಗೆ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕನ್ನಡ ದಲಿತ ಆತ್ಮಕಥೆಗಳನ್ನು ಕುರಿತ ಜಿಜ್ಞಾಸೆಗೆ ಭಿನ್ನ ಆಯಾಮವನ್ನು ಒದಗಿಸಿಕೊಟ್ಟಿವೆ. ಅವುಗಳಲ್ಲಿ ಲಕ್ಷ್ಮಣ ಗಾಯಕವಾಡರಉಚಲ್ಯಾ; ಮಾದವಿ ದೇಸಾಯಿ ಅವರಕುಣಿಯೇ ಘುಮ(ಕನ್ನಡಕ್ಕೆ-ಚಂದ್ರಕಾಂತ ಪೋಕಳೆ); ಶರಣಕುಮಾರ ಲಿಂಬಾಳೆ ಅವರಅಕ್ರಮ ಸಂತಾನ; ದಾದಾ ಸಾಹೇಬ್ ಮಲ್ಲಾರಿ ಮೋರೆ ಅವರಗಬಾಳ(ಕನ್ನಡಕ್ಕೆ-ದು. ನಿಂ. ಬೆಳಗಲಿ); ಎಸ್. ಕೆ. ಥೊರಟ್ ಅವರಬಾಲ್ಯದಿಂದ ಪ್ರಾಯಕ್ಕೆ(ಕನ್ನಡಕ್ಕೆ-ನಗರಗೆರೆ ರಮೇಶ್, ಗಂಗಾಧರಮೂರ್ತಿ); ನರೇಂದ್ರಜಾದವ್ ಅವರಬಹಿಷ್ಕø(ಕನ್ನಡಕ್ಕೆ-ಸುಮಾಧ್ವಾರಕನಾಥ್); ಭಗವಾನ್ ದಾಸ್ ಅವರಭಂಗಿಜನ ಕಥಾ(ಕನ್ನಡಕ್ಕೆ-ಕೆ. ನಾರಾಯಣಸ್ವಾಮಿ); ಭೀಮರಾವ್ ಗಸ್ತಿ ಅವರವಾಲ್ಮೀಕಿ(ಕನ್ನಡಕ್ಕೆ-ಸರಜೂ ಕಾಟ್ಕರ್); ಭಾಮ ಅವರಕರುಕ್ಕು(ಕನ್ನಡಕ್ಕೆ-ಎಸ್. ಪ್ಲೋಮಿನ್ದಾಸ್); ದಯಾ ಪವಾರ ಅವರಬಲುತ(ಕನ್ನಡಕ್ಕೆ-ಪ್ರೊ. ಚಂದ್ರಕಾಂತ ಪೋಕಳೆ) ; ಬೇಬಿ ಹಾಲ್ದಾರ್ ಅವರನೋವು ತುಂಬಿದ ಬದುಕು(ಕನ್ನಡಕ್ಕೆ-ಜಿ. ಕುಮಾರಪ್ಪ)–ಮುಂತಾದವು ಪ್ರಮುಖ ಆತ್ಮಕಥಗಳಾಗಿವೆ. ಪರಂಪರೆಗೆ ಹೊಸ ಸೇರ್ಪಡೆ ಡಾ. ನಾಮದೇವ ನಿಮ್ಗಾಡೆ ಅವರ ಆತ್ಮಕಥೆ.



 ಕನ್ನಡಕ್ಕೆ ಅನುವಾದಗೊಂಡಿರುವ ಆತ್ಮಕಥೆಗಳಲ್ಲಿಯೇಹುಲಿಯ ನೆರಳಿನೊಳಗೆ : ಅಂಬೇಡ್ಕರ್ವಾದಿಯ ಆತ್ಮಕಥೆ  ಭಿನ್ನ ಹಾಗೂ ವಿಶೇಷ. ಕಾರಣ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬದುಕು, ಹೋರಾಟ, ಚಿಂತನೆ ಹಾಗೂ ವ್ಯಕ್ತಿತ್ವ ಆತ್ಮಕಥೆಯ ಪ್ರಧಾನ ಕೇಂದ್ರ ಬಿಂದು ಆಗಿರುವುದರಿಂದ. “

Waiting for a Visa-Reminiscenes” (ಕನ್ನಡಕ್ಕೆ : ‘ವೀಸಾದ ನಿರೀಕ್ಷೆಯಲ್ಲಿ-ನೆನಪುಗಳು -ಸದಾಶಿವ ಮರ್ಜಿ, ಅವಿರತ ಪುಸ್ತಕ, 2011) ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಪೂರ್ಣ ಆತ್ಮಕಥೆ. ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳ ಸಂಪುಟಗಳಲ್ಲಿ ಭಿನ್ನ ಸ್ವರೂಪದಲ್ಲಿ ವ್ಯಾಪಿಸಿಕೊಂಡಿರುವ ಅವರ ಬದುಕಿನ ಅನುಭವಗಳು ಸಮಗ್ರ ಸ್ವರೂಪದಲ್ಲಿ ಆತ್ಮಕಥೆಯ ಪಠ್ಯವಾಗಿ ದಾಖಲಾಗಿದ್ದಿದ್ದರೆ, ಭಾರತೀಯ ಸಾಮಾಜಿಕ, ಚಾರಿತ್ರಿಕವಾದ ಪಾರಂಪರಿಕ ನೆಲೆಗಳು ವಿಶಿಷ್ಟವಾದ ತರ್ಕಕ್ಕೆ ಒಳಪಡುತ್ತಿದ್ದವು. ಜೊತೆಗೆ, ಭಾರತೀಯ ಸಾಹಿತ್ಯ ಪರಂಪರೆಯಲ್ಲಿನ ಆತ್ಮಕಥೆ ಪ್ರಕಾರ ಕುರಿತ ಚರ್ಚೆಯನ್ನು ಇನ್ನಷ್ಟು ವಿಭಿನ್ನವೂ, ಚರ್ಚಾಸ್ಪದವೂ ಆದ ವಿಮರ್ಶಾತ್ಮಕ ನೆಲೆಯ ವಾಗ್ವಾದದ ಸ್ತರಕ್ಕೆ ವಿಸ್ತರಿಸುತ್ತಿತ್ತು. ದಲಿತ ಆತ್ಮಕಥೆಗಳನ್ನು ಕುರಿತ ಸಂಶೋಧನಾತ್ಮಕ ಅಧ್ಯಯನದ ಒಳನೋಟಗಳು ಸಹಾ ಈಗಿರುವುದಕ್ಕಿಂತ ವಿಶಿಷ್ಟವಾಗಿ ರೂಪುಗೊಳ್ಳುತ್ತಿದ್ದವು. ಅಂಬೇಡ್ಕರ್ ಅವರ ಆತ್ಮಕಥೆಯಿಂದ ಬಯಸಲಾದ ಎಲ್ಲಾ ಬಹುತೇಕ ನಿರೀಕ್ಷೆಗಳಲ್ಲಿ ಕೆಲವನ್ನಾದರು ನಾಮದೇವ ನಿಮ್ಗಾಡೆಯವರ ಆತ್ಮಕಥೆ ದಕ್ಕಿಸಿಕೊಡುವುದರಿಂದ ಉಳಿದೆಲ್ಲಾ ಅನುವಾದಿತ ದಲಿತ ಆತ್ಮಕಥೆಗಳಿಗಿಂತ ಇದು ವಿಶೇಷವಾಗಿದೆ.
ಶ್ರೀಪಾದ ಭಟ್ವರ ಪ್ರಸ್ತಾವನೆಯ ಜೊತೆಗೆ, ಒಟ್ಟು 11 ಉಪ-ಅಧ್ಯಾಯಗಳಲ್ಲಿ ವಿಸ್ತರಿಸಿಕೊಂಡಿರುವ ಆತ್ಮಕಥೆ, ನಾಮದೇವ ನಿಮ್ಗಾಡೆ ಅವರ ಮೂಲ ಆತ್ಮಕಥೆಯ ಯತಾವತ್ತಾದ ಅನುವಾದವಲ್ಲ. ಅನುವಾದಕರಾದ ಶ್ರೀಪಾದ ಭಟ್ ಅವರೇ ಹೇಳಿಕೊಂಡಿರುವ ಹಾಗೆ, ಆತ್ಮಕಥೆಯನ್ನು ಓದುವಾಗ ಅವರಿಗೆ ಕಾಡಿದ, ಮುಖ್ಯವೆನಿಸಿದ ಆತ್ಮಕಥೆಯ ಭಾಗಗಳು ಕನ್ನಡದ ಓದುಗರಿಗೂ ಮುಖ್ಯವೆನಿಸಿ ಕಾಡಬಹುದೆಂಬ ಭರವಸೆಯಿಂದ ಕನ್ನಡೀಕರಿಸಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆ, ಬರಹ ಕುರಿತು ಸಂಶೋಧನಾತ್ಮಕ ಅಧ್ಯಯನಕ್ಕೆ ತೊಡಗಿರುವ ಮನಸ್ಸುಗಳಿಗೆ ಕೃತಿಯ ಓದು ಅಂಬೇಡ್ಕರ್ ಅವರ ಭಾವನಾತ್ಮಕ, ವೈಚಾರಿಕ ಹಾಗೂ ಹೋರಾಟದ ಭಿನ್ನ ವ್ಯಕ್ತಿತ್ವದ ನೆಲೆಗಳನ್ನು ಪರಿಚಯಿಸಬಹುದೆಂಬ ನಂಬಿಕೆ ನನ್ನದು. ಭಾರತೀಯರಾದ ನಾವು ಬಾಬಾ ಸಾಹೇಬ್ ಅಂಬೇಡ್ಕರ್ ಅವರನಿಜ ರಾಷ್ಟ್ರೀಯತೆ ಅರಿವನ್ನು ಅರ್ಥೈಸಿಕೊಳ್ಳುವಲ್ಲಿ ಸೋತಿದ್ದೀವೇನೋ ಎಂದೆನಿಸುತ್ತದೆ. 21ನೇ ಶತಮಾನದ ಹೊತ್ತಿನಲ್ಲಿ ನಾವೆಲ್ಲರೂ ಕೇಳಿಕೊಳ್ಳಬಹುದಾದಬಾಬಾ ಸಾಹೇಬ್ ಅಂಬೇಡ್ಕರ್ ಎಂದರೆ ಏನು? ಯಾರು?” ಎಂಬ ಪ್ರಶ್ನೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಬರೆದಿರುವ ಭಾರತ ಸಂವಿಧಾನದ ಪ್ರಸ್ತಾವನೆ(ಪ್ರಿಯಾಂಬಲ್)ಯೇ ನಿಜವಾದ ಅರ್ಥದಲ್ಲಿ ಉತ್ತರ ಎಂಬುದು ನನ್ನ ಪ್ರಾಮಾಣಿಕ ಅಭಿಪ್ರಾಯ. ಅಭಿಪ್ರಾಯಕ್ಕೆ ಪೂರಕವಾದ ಸಾಕ್ಷ್ಯಾಧಾರಗಳನ್ನು ಪ್ರಸ್ತುತ ಆತ್ಮಕಥೆಯ ಅನೇಕ ಪ್ರಸಂಗಗಳು ಒದಗಿಸುತ್ತವೆ. ಶ್ರೀಪಾದ ಭಟ್ ಅವರು ತಮ್ಮ ಪ್ರಸ್ತಾವನೆಯ ಕೊನೆಯಲ್ಲಿ ಹೇಳಿರುವ ಹಾಗೆ, ನಾಮದೇವ ನಿಮ್ಗಾಡೆ ಅವರ ಆತ್ಮಕಥೆಯಾಗಲಿ; ಅಥವಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬದುಕು, ಚಿಂತನೆ, ಹೋರಾಟ, ವ್ಯಕ್ತಿತ್ವಗಳಾಗಲಿ ಕೇವಲ ದಲಿತರಿಗೆ ಮಾತ್ರವಲ್ಲ ಸಮಗ್ರ ಭಾರತೀಯರಿಗೂಕೈ ದೀಪವಾಗಬಲ್ಲದು; ಹೊಸ ಬದುಕಿಗೆ ಕೈಮರವಾಗಬಲ್ಲವು.
  ಆತ್ಮಕಥೆಯು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬದುಕಿನ ವಿವರಗಳೊಟ್ಟಿಗೆ, ನಿಮ್ಗಾಡೆಯವರ ಜೀವನ ವೃತ್ತಾಂತದ ಜೊತೆಜೊತೆಗೇ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. 1920 ಅಸುಪಾಸಿನಲ್ಲಿ ಮಹಾರಾಷ್ಟ್ರದ ಸತಗಾಂವ್ ಎಂಬ ಹಳ್ಳಿಯ ದಲಿತ ಕುಟುಂಬದಲ್ಲಿ ಜನಿಸಿದ;  ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತರುವಾಯ ಅಮೇರಿಕಾ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. (ವಿಸ್ಕಾನಸಿನ್ ವಿಶ್ವವಿದ್ಯಾಲಯ : 1962)ಪದವಿ ಗಳಿಸಿದ ಎರಡನೇ ದಲಿತ ಎಂದು ಹೆಸರಾದ ಡಾ. ನಾಮದೇವ ನಿಮ್ಗಾಡೆ ಅವರ ಬಾಲ್ಯದ ಕೌಟುಂಬಿಕ ವಿವರದೊಟ್ಟಿಗೆ ಆತ್ಮಕಥೆ ಆರಂಭವಾಗುತ್ತದೆ. ಹಸಿವು-ಬಡತನ, ಜಾತಿ-ಅಪಮಾನ, ಬಾಬಾ ಸಾಹೇಬ್ ಅಂಬೇಡ್ಕರ್ ಒಟ್ಟಿಗಿನ ಒಡನಾಟ-ಹೋರಾಟ, ಬಾಬಾ ಸಾಹೇಬರ ನಿಧನ ಎಲ್ಲಾ ಅನುಭವಗಳ ವಿವರದೊಟ್ಟಿಗೆ ಸಾಗುತ್ತದೆ.  ನಿಮ್ಗಾಡೆ ಅವರು ಅಕ್ಟೋಬರ್ 2006ರಂದು ನಾಗಪುರದ ದೀಕ್ಷಾಭೂಮಿಯಲ್ಲಿ ನಡೆದ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧಮ್ಮಕ್ಕೆ ಮರಳಿದ 50ನೇ ವರ್ಷಾಚರಣೆಯ ಸಮಾರಂಭದಲ್ಲಿ ಭಾಗವಹಿಸಿದ ವಿವರದೊಟ್ಟಿಗೆ ಆತ್ಮಕಥೆ ಮುಕ್ತಾಯವಾಗುತ್ತದೆ. ಏಕಕಾಲದಲ್ಲಿಹುಲಿಯ ನೆರಳಿನೊಳಗೆ ನಿಮ್ಗಾಡೆ ಅವರ ಆತ್ಮಕಥೆಯೂ; ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ಚರಿತ್ರೆಯೂ ಆಗಿದೆ.
ಮಹಾರಾಷ್ಟ್ರದ ದಲಿತರು ಪ್ರಕೃತಿಯಲ್ಲಿನ ಮರಗಿಡಗಳ ಹೆಸರನ್ನೆ ತಮ್ಮ ಮನೆತನದ ಹೆಸರನ್ನಾಗಿ ಇಟ್ಟುಕೊಳ್ಳುತ್ತಿದ್ದ ಸಂಗತಿಯನ್ನು ವಿವರಿಸುವ ನಾಮದೇವರ ಮನೆತನದ ಹೆಸರಾದನಿಮ್ಗಾಡೆ ಎಂದರೆ ಬೇವಿನ ಮರ ಎಂದರ್ಥ. “ಕೋಬ್ರಗಾಡೆ(=ತೆಂಗಿನ ಮರ); ಅಂಬಗಾಡೆ(=ಮಾವಿನ ಗಿಡ); ಜಮಗಾಡೆ(=ಸೀಬೆ ಮರೆ); ಬೋರ್ಕರ್(=ಚೆಕ್ಕಕಾಯಿ ಮರ)” ಎಂಬ ಪ್ರಕೃತಿ ಸಂಬಂಧಿ ಹೆಸರುಗಳು ದಲಿತರ ಮನೆತನದ ಹೆಸರುಗಳಾಗಿವೆ. ಸಂಪ್ರದಾಯ ಬಹುತೇಕ ಭಾರತೀಯ ದಲಿತ ಸಮುದಾಯಗಳಲ್ಲಿ ಸಹಜವಾಗಿರುವುದನ್ನು ಕಾಣಬಹುದು. ಮಾದರಿಯ ಹೆಸರುಗಳು ಬುದ್ಧನ ಕಾಲದಿಂದಲೂ ಬಳಕೆಯಲ್ಲಿರುವುದರಿಂದ ದೇಶದ ದಲಿತರು ಬೌದ್ಧರು(ಅರ್ಥಾತ್ ಪ್ರಕೃತಿ ಪ್ರಿಯರಾದ ದ್ರಾವಿಡರು)ಎಂಬುದಾಗಿ ನಿಮ್ಗಾಡೆಯವರ ಅಭಿಪ್ರಾಯ ಸೂಕ್ತವಾಗಿದೆ. ನಿಮ್ಗಾಡೆಯವರ ತಾತ ಬುಧ ಜೀತಗಾರನಾಗಿದ್ದು; ಸವರ್ಣೀಯರ ಮದುವೆ ಸಂದರ್ಭದಲ್ಲಿ ದಲಿತರು ಮದುಮಗನ ಗಾಡಿಯ ಮುಂದೆ ಬರಿಗಾಲಲ್ಲಿ ಓಡಬೇಕಿದ್ದ ಆಚರಣೆ; ಶಾಲಾ ಪ್ರವೇಶ ನಿಷೇಧಕ್ಕೆ ಒಳಗಾಗಿದ್ದ ಅಸ್ಪøಶ್ಯ ಮಕ್ಕಳು ಬಿಸಿಲಿನಲ್ಲಿ ಶಾಲೆಯ ಪಡಸಾಲೆಯ ಕಿಟಕಿಯ ಹತ್ತಿರ ನಿಂತು ಪಾಠ ಕೇಳಬೇಕೆಂಬ ಸಂಪ್ರದಾಯ; ಅಸ್ಪøಶ್ಯ ಮಕ್ಕಳು ಎಷ್ಟೇ ಬಾಯಾರಿಕೆಯಾದರೂ ಶಾಲೆಯ ಬಾವಿಯಿಂದ ನೀರು ಕುಡಿಯಬಾರದೆಂಬ ಕಟ್ಟಾಜ್ಞೆ; ಸವರ್ಣೀಯ ಸಹಪಾಠಿ ಹುಡುಗಿ ಓದುತ್ತಿದ್ದ ತುಳಸಿ ರಾಮಾಯಣ ಪುಸ್ತಕ ಮುಟ್ಟಿದ್ದಕ್ಕೆಹೊಲೆಯ ಮುಂಡೇದೆ ರಾಮಾಯಣ ಮುಟ್ಟಲು ನಿನಗೆಷ್ಟು ಧೈರ್ಯ ಎಂಬು ಬೈಸಿಕೊಂಡದ್ದುಆತ್ಮಕಥೆಯಲ್ಲಿನ ಎಲ್ಲಾ ವಿವರಗಳು ದಲಿತ ಸಮುದಾಯಗಳು ಅನುಭವಿಸುತ್ತಿದ್ದ ಜಾತಿ ಸಂಬಂಧಿತ ಅವಮಾನಗಳನ್ನು ಖಚಿತಪಡಿಸುತ್ತವೆ. ನಿಮ್ಗಾಡೆಯವರು ತಮ್ಮ ತಂದೆ 1936ರಲ್ಲಿ ಸತಗಾಂವ್ ದಲಿತ ಕೇರಿಯಲ್ಲಿ ಮಾಡಿದ ಭಾಷಣದಲ್ಲಿ ಮೊದಲ ಬಾರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ಕೇಳಿದ ಘಟನೆಯ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಸಂಬಂಧಿತ ಸಂಗತಿಗಳು ತೆರೆದುಕೊಳ್ಳುತ್ತವೆ. ಆತ್ಮಕಥೆಯ ಉದ್ದಕ್ಕೂ ಮೇಲಿಂದ ಮೇಲೆ ಅಂಬೇಡ್ಕರ್ ವಿಚಾರಗಳು ಅಭಿವ್ಯಕ್ತಿಗೊಂಡಿರುವುದನ್ನು ಗಮನಿಸಿದರೆ, ನಿಮ್ಗಾಡೆಯವರು ತಮ್ಮ ಆತ್ಮಕಥೆಯನ್ನು ಬರೆಯುವುದರ ಮೂಲ ಉದ್ದೇಶ, ತಮ್ಮ ಬದುಕನ್ನು ಅನಾವರಣ ಮಾಡುವುದಕ್ಕಿಂತ ಮಿಗಿಲಾಗಿ; ತಮ್ಮ ಬದುಕಿನ ಅಸ್ತಿತ್ವಕ್ಕೆ ಕಾರಣರಾದ, ತಮ್ಮ ವ್ಯಕ್ತಿತ್ವವನ್ನು ಪರಿಣಾಮಕಾರಿಯಾಗಿ ಪ್ರಭಾವಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬದುಕು-ವ್ಯಕ್ತಿತ್ವ-ಹೋರಾಟವನ್ನು ಅನಾವರಣ ಮಾಡುವುದೇ ಆಗಿದೆ. ಇಡೀ ಆತ್ಮಕಥೆಯನ್ನು ಓದಿದಾಗಿ ಇದು ಮನವರಿಕೆಯಾಗುತ್ತದೆ. ಒಟ್ಟು ಆತ್ಮಕಥೆಯನ್ನು ಓದಿದ ತರುವಾಯ ನಿಮ್ಗಾಡೆಗಿಂತ ಬಾಬಾ ಸಾಹೇಬ್ ಅಂಬೇಡ್ಕರ್ ನಮ್ಮನ್ನು ಆವರಿಸಿಕೊಂಡು ಹೆಚ್ಚು ಕಾಡುತ್ತಾರೆ.
ಶೋಷಿತರು ಅವಮಾನ, ಅಸಹಾಯಕತೆಯಿಂದ ಬಿಡುಗಡೆ ಹೊಂದಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಧೋರಣೆಯನ್ನು ಮನಗಂಡ ನಿಮ್ಗಾಡೆ ಅಕ್ಷರದ ಬೆನ್ನತ್ತಿ ಯಶಸ್ವಿಯಾದ ಬಗೆ ಶೋಷಿತ ಸಮುದಾಯಗಳಿಗೆ ಮಾದರಿಯೆನಿಸುತ್ತದೆ. ಪರೀಕ್ಷೆಯ ಸಮಯದಲ್ಲಿ ಬಹುತೇಕ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆ ಆರಂಭದಲ್ಲಿ ಹಿಂದೂ ದೇವತೆಗಳ ಹೆಸರು ಬರೆದರೆ, ನಿಮ್ಗಾಡೆಜೈ ಭೀಮ್ ಎಂದು ಬರೆಯುತ್ತಿದ್ದದ್ದು ಅವರಲ್ಲಿನ ಅಂಬೇಡ್ಕರ್ವಾದಿ ಧೋರಣೆಯನ್ನು ಸ್ಪಷ್ಟಪಡಿಸುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸ್ಥಾಪಿಸಿದಸಮತಾ ಸೈನಿಕ ದಳದ ಉಮ್ರೇರ್ ಪಟ್ಟಣದ ಅಧ್ಯಕ್ಷನಾಗಿದ್ದ ಗೆಳೆಯ ಡೋಂಗ್ರೆ ಜೊತೆ ಸೇರಿ ಮಾಡಿದ ಸವರ್ಣೀಯರ ಬಾವಿ ನೀರು ಮುಟ್ಟುವ ಚಳವಳಿಯಲ್ಲಿ ಭಾಗವಹಿಸಿದ್ದು, ದಲಿತ ಯುವಕರನ್ನು ಸಂಘಟಿಸಿತರುಣ ಉದಯ ಕಾಲ ಮಂಡಳಿ ಸ್ಥಾಪಿಸಿ ಅನೇಕ ಹೋರಾಟ ರೂಪಿಸಿದ್ದನ್ನು ಇಲ್ಲಿ ವಿಶ್ಲೇಷಿಸುತ್ತಾರೆ. 1942ರಲ್ಲಿ ನಾಗಪುರದಲ್ಲಿ ನಡೆದ ಪರಿಶಿಷ್ಟ ಜಾತಿಗಳ ಒಕ್ಕೂಟದ ಸಮ್ಮೇಳನದಲ್ಲಿ ಅಂಬೇಡ್ಕರ್ ಅವರು ಭಾಗವಹಿಸುತ್ತಾರೆ ಎಂಬ ವಿಚಾರ ತಿಳಿದ ನಿಮ್ಗಾಡೆಯವರು ಕಾಲ್ನಡಿಗೆಯಲ್ಲಿ ನಾಗಪುರಕ್ಕೆ ಹೋಗಿ, ಮೂರು ದಿನಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಂಗರಕ್ಷಕರಾಗಿ ಸೇವೆಸಲ್ಲಿಸುತ್ತಾರೆ. 1945ರಲ್ಲಿ ಬಾಂಬೆಯಲ್ಲಿ ನಡೆದ ಪರಿಶಿಷ್ಟ ಜಾತಿಗಳ ಒಕ್ಕೂಟ ಮತ್ತು ವಿದ್ಯಾರ್ಥಿ ಒಕ್ಕೂಟದ ಮೂರುದಿನಗಳ ಸಮ್ಮೇಳನದಲ್ಲಿ ಭಾಗವಹಿಸಿದ್ದ ನಿಮ್ಗಾಡೆಯವರು, ಸಮ್ಮೇಳನದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ: ‘ಪ್ರತಿಯೊಬ್ಬ ಅಸ್ಪøಶ್ಯನೂ ಕಷ್ಟಪಟ್ಟು, ದೃಢ ಸಂಕಲ್ಪದಿಂದ ಅಕ್ಷರಸ್ಥನಾಗಬೇಕು. ವೈಯಕ್ತಿಕವಾಗಿ ತಾನು ಬೆಳೆದು ನಂತರ ತನ್ನೊಂದಿಗೆ ತನ್ನ ಜನಾಂಗವನ್ನು ಕರೆದೊಯ್ಯಬೇಕು ಎಂಬ ಮಾತುಗಳಿಂದ ಪ್ರಭಾವಿತರಾಗಿದ್ದನ್ನು ದಾಖಲಿಸಿದ್ದಾರೆ. ದಲಿತರ ರಾಜ್ಯಾಧಿಕಾರದ ಬಗೆಗೆ ಗಾಂಧೀಜಿಗಿದ್ದ ಭಿನ್ನಾಭಿಪ್ರಾಯವನ್ನು ನಿಮ್ಗಾಡೆ ಒಂದು ಘಟನೆಯ ಮೂಲಕ ಹೀಗೆ ವಿವರಿಸುತ್ತಾರೆ: 1938ರಲ್ಲಿ ಪ್ರಾಂತೀಯ ರಾಜ್ಯದ ಪ್ರಧಾನ ಮಂತ್ರಿಯಾಗಿದ್ದ ಡಾ. ಎನ್. ಬಿ. ಖಾರೆ ಅಸ್ಪøಶ್ಯ ಚಮ್ಮಾರ ಕುಲಕ್ಕೆ ಸೇರಿದ್ದ ಆರ್. ಯು. ಅಗ್ನಿಭೋಜ್ ಅವರನ್ನು ಕ್ಯಾಬಿನೆಟ್ಗೆ ನೇಮಕ ಮಾಡುತ್ತಾರೆ. ಗಾಂಧೀಜಿ ಇದನ್ನು ವಿರೋಧಿಸುತ್ತಾಅಸ್ಪøಶ್ಯರು ಕೌಂಟಿ ವಲಯದ ಅಧಿಕಾರಿಗಳಾಗಲು ಮಾತ್ರ ಅರ್ಹರು. ಆದರೆ ಮಂತ್ರಿಗಳಾಗಿ ಅಲ್ಲ ಎಂದು ಟೀಕಿಸುತ್ತಾರೆ. ಇದರಿಂದ ಮನನೊಂದ ಖಾರೆ ಅವರು ತಮ್ಮ ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಘಟನೆಯು, ದಲಿತರ ರಾಜ್ಯಾಧಿಕಾರದ ಪ್ರಶ್ನೆ ಬಂದಾಗ ಹೇಗೆ ಚರಿತ್ರೆಯ ಉದ್ದಕ್ಕೂ ನಿರಾಕರಿಸಲಾಗಿದೆ ಎಂಬುದನ್ನು; ಸಂದರ್ಭದ ಗಾಂಧೀಜಿಯವರ ದಲಿತ ವಿರೋಧಿ ನಿಲುವನ್ನು ಸ್ಪಷ್ಟಪಡಿಸುತ್ತದೆ. ಇದೇ ಗಾಂಧೀಜಿಯವರು ಸಂವಿಧಾನ ರಚನೆಯ ವಿಷಯದಲ್ಲಿ ನೆಹರೂ ಅವರಿಗೆ : ‘ನಮ್ಮ ಮನೆಯಲ್ಲಿಯೇ ಅತ್ಯಂತ ಶ್ರೇಷ್ಠ ಕಾನೂನು ತಜ್ಞ ಅಂಬೇಡ್ಕರ್ ಇರುವಾಗ ನೀವು ವಿದೇಶದಲ್ಲಿ ಬೇರೆಯವರನ್ನು ಹುಡುಕುವುದು ಸಮಂಜಸವಲ್ಲ ಎಂದು ಹೇಳುತ್ತಾರೆ. ನಿಮ್ಮ ಮತ್ತು ಅಂಬೇಡ್ಕರ್ ನಡುವೆ ಭಿನ್ನಾಭಿಪ್ರಾಯ ಇದೆಯಲ್ಲ ಎಂದು ಅನುಮಾನಿಸಿದಾಗ ಗಾಂಧೀಜಿಯವರು : ‘ಡಾ. ಅಂಬೇಡ್ಕರ್ ಅವರು ನಿಜದ ದೇಶಪ್ರೇಮಿ. ಅದಕ್ಕಾಗಿಯೇ ಅವರು ನನ್ನನ್ನು ಟೀಕಿಸುತ್ತಾರೆ ಎಂದು ಉತ್ತರಿಸುತ್ತಾರೆ. ಇದು ಗಾಂಧೀಜಿಯವರ ಇನ್ನೊಂದು ಬಗೆಯ ವ್ಯಕ್ತಿತ್ವ. ಹೀಗೆ ನಿಮ್ಗಾಡೆಯವರು ಗಾಂಧಿಯವರ ವ್ಯಕ್ತಿತ್ವದಲ್ಲಿನ ವೈರುಧ್ಯವನ್ನು ಸಹಾ ತಮ್ಮ ಆತ್ಮಕಥೆಯಲ್ಲಿ ಅನಾವರಣ ಮಾಡಿದ್ದಾರೆ.
ನಿಮ್ಗಾಡೆಯವರ ಉನ್ನತ ವ್ಯಾಸಂಗಕ್ಕಾಗಿ ಇವರ ಗೆಳೆಯ ದಾಮೋದರ ಪಾಟೀಲನ ಮಲತಾಯಿ ತನ್ನ ಬಂಗಾರದ ಬಳೆಗಳನ್ನು ಗಿರವಿ ಇಟ್ಟು ಹಣಕಾಸಿನ ನೆರವು ನೀಡಿದ್ದನ್ನು ನೆನೆಯುತ್ತಾರೆ. ಇದು ಜಾತಿ ಮೀರಿದ ಮಾನವೀಯ ವ್ಯಕ್ತಿತ್ವಕ್ಕೊಂದು ನಿದರ್ಶನವಾಗಿದೆ. ನಿಮ್ಗಾಡೆಯವರು ದೆಹಲಿಯಲ್ಲಿ ವ್ಯಾಸಂಗ ಮಾಡುವಾಗ ಕೂಲಿಕಾರರು ವಾಸಿಸುತ್ತಿದ್ದ ಬಡಾವಣೆಯಲ್ಲಿಭೀಮ್ರಾವ್ ಸಂಜೆ ಶಾಲೆಯನ್ನು ಸ್ಥಾಪಿಸುವ ಮೂಲಕ ಕೂಲಿಕಾರರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಅಕ್ಷರದ ಅರಿವು ಮೂಡಿಸುವಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಾರೆ. ಇವರು ಓದುತ್ತಿದ್ದಐಎಆರ್ ಇನ್ಸ್ಟಿಟ್ಯೂಟ್ನಲ್ಲಿ ಭೌತ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆಗಾಗಿ ಬಂದಿದ್ದ ಪ್ರಧಾನಮಂತ್ರಿ ನೆಹರೂ ಅವರು ತಮ್ಮ ಭಾಷಣದಲ್ಲಿವಿಜ್ಞಾನದ ಪ್ರಯೋಗಾಲಯಗಳೇ ಭಾರತದ ದೇವಾಲಯಗಳು. ನವ ದೇವಾಲಯಗಳೇ ಇಂಡಿಯಾವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತವೆ ಎಂದು ಹೇಳುತ್ತಾರೆ. ಮಾತುಗಳನ್ನು ಕೇಳಿದ ನಿಮ್ಗಾಡೆ ಸಮಾರಂಭದ ತರುವಾಯ ನೆಹರೂ ಅವರನ್ನು ಭೇಟಿ ಮಾಡಿ : “ಸರ್, ...ನೀವು ವಿವರಿಸಿದ ಆಧುನಿಕ ದೇವಾಲಯಗಳು ನನ್ನ ಸಮುದಾಯದ ಅಸ್ಪøಶ್ಯರಿಗೆ ಪ್ರವೇಶವನ್ನು ಕೊಡುತ್ತವೆಯೇ? ಏಕೆಂದರೆ ಭಾರತದ ದೇವಾಲಯಗಳಲ್ಲಿ ಅಸ್ಪøಶ್ಯರಿಗೆ ಪ್ರವೇಶವನ್ನು ನಿರಾಕರಿಸಿದೆಯಲ್ಲ?” ಎಂದು ಮಾರ್ಮಿಕವಾಗಿ ಪ್ರಶ್ನಿಸುತ್ತಾರೆ. ಅಸ್ಪøಶ್ಯರಲ್ಲೇ ಮಹಾರ್ ಮತ್ತು ಮಾಂಗ್ ಉಪಜಾತಿಗಳ ನಡುವೆ ಇರುವ ಭೇದನೀತಿಯನ್ನು ತೀವ್ರವಾಗಿ ಖಂಡಿಸುವ ನಿಮ್ಗಾಡೆಯವರುನಮ್ಮೊಳಗಿನ ತಾರತಮ್ಯವನ್ನು ಅಳಿಸಿ ಹಾಕದ ಹೊರತು ಅಸ್ಪೃಶ್ಯತೆ ನಿರ್ಮೂಲನೆ ಅಸಾಧ್ಯ ಎಂಬುದನ್ನು ಸ್ಪಷ್ಟಪಡಿಸುತ್ತಾರೆ. ಇತ್ತೀಚಿನ ದಿನಮಾನಗಳಲ್ಲಿ ಕರ್ನಾಟಕದ ದಲಿತರನ್ನು ಕಾಡುತ್ತಿರುವಎಡ-ಬಲ ಸಮಸ್ಯೆಯನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಸಹಾ ಮಾತನ್ನು ಗಂಭೀರವಾಗಿ ಯೋಚಿಸಬೇಕಿದೆ.
 ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗಿದ್ದ ಅಗಾಧವಾದ ನೆನಪಿನ ಶಕ್ತಿ, ಅಧ್ಯಯನದ ಪರಿಶ್ರಮ ಹಾಗೂ ಮಾನವೀಯ ಗುಣವನ್ನು ನಿಮ್ಗಾಡೆ ಅನೇಕ ಪ್ರಸಂಗಗಳ ಮೂಲಕ ದಾಖಲಿಸಿದ್ದಾರೆ. ಒಮ್ಮೆ ಅಂಬೇಡ್ಕರ್ ಅವರನ್ನು ಭೇಟಿ ಮಾಡಿದ ನಿಮ್ಗಾಡೆ ಅವರುಬಾಬಾ ನಿಮ್ಮ ದೀರ್ಘ ಅಧ್ಯಯನದ ಸಂದರ್ಭದಲ್ಲಿ ವಿಶ್ರಾಂತಿಗೆ ಹೇಗೆ ಸಮಯ ಹೊಂದಿಸಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದಾಗ ಬಾಬಾ ಸಾಹೇಬರುನನಗೆ ವಿಶ್ರಾಂತಿಯೆಂದರೆ ಒಂದು ವಿಷಯದ ಪುಸ್ತಕದ ಅಧ್ಯಯನದಿಂದ ಮತ್ತೊಂದು ವಿಷಯದ ಪುಸ್ತಕಕ್ಕೆ ಹೊರಳುವುದು ಎಂದು ಉತ್ತರಿಸುತ್ತಾರೆ. ನಿಮ್ಗಾಡೆ ಅವರು ಒಮ್ಮೆ ಚುನಾವಣ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾಗ ಬೇಸರಗೊಂಡ ಅಂಬೇಡ್ಕರ್ ಅವರು ಸಿಟ್ಟಿನಿಂದಅತ್ಯುತ್ತಮ ವಿದ್ಯಾರ್ಥಿಗಳು ಬಗೆಯಲ್ಲಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುವುದು ತಮಗಿಷ್ಟವಿಲ್ಲ ಎಂದು ಹೇಳುತ್ತಾರೆ. ಆಮೂಲಕ ವಿದ್ಯಾರ್ಥಿಗಳ ಮೇಲಿರುವ ಜವಾಬ್ದಾರಿಯನ್ನು ಎಚ್ಚರಿಸುತ್ತಾರೆ. ವಿದೇಶಿ ಪತ್ರಕರ್ತನೊಬ್ಬ ಅಂಬೇಡ್ಕರ್ ಅವರನ್ನು ಮಧ್ಯರಾತ್ರಿಯ ವೇಳೆ ಭೇಟಿಯಾಗಿನಾನು ನೆಹರೂ, ಗಾಂಧಿ ಅವರನ್ನು ಭೇಟಿಯಾಗಲು ಬಯಸಿದಾಗ ಅವರು ನಿದ್ರಿಸುತ್ತಿದ್ದಾರೆಂದು ತಿಳಿಸಿದರು. ಆದರೆ ನೀವೇಕೆ ಮಧ್ಯರಾತ್ರಿಯಲ್ಲಿ ಎಚ್ಚರದಿಂದಿದ್ದೀರಿ?’ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಉತ್ತರಿಸುತ್ತ ಅಂಬೇಡ್ಕರ್ : ‘ಅವರು ಅದೃಷ್ಟಶಾಲಿಗಳು ಅವರ ಹಿಂಬಾಲಕರು ಸದಾಕಾಲ ಎಚ್ಚರದಿಂದಿರುತ್ತಾರೆ ಅದಕ್ಕೆ ಅವರು ನಿದ್ರಿಸುತ್ತಾರೆ. ಆದರೆ ನಾನು ಸದಾ ಎಚ್ಚರದಿಂದಿರಬೇಕು ಏಕೆಂದರೆ ನನ್ನ ಅನುಯಾಯಿಗಳು ಇನ್ನೂ ನಿದ್ರಿಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸುತ್ತಾರೆ.  ಪ್ರಸಂಗವು ಅಂಬೇಡ್ಕರ್ ಅವರಿಗೆ ಶೋಷಿತ ಸಮುದಾಯದ ಬಗೆಗೆ ಇದ್ದ ಬದ್ಧತೆಯನ್ನು ಸಾಬೀತುಪಡಿಸುತ್ತದೆ. ಜೊತೆಗೆ ಶೋಷಿತ ಸಮುದಾಯ ಎಚ್ಚರಗೊಳ್ಳಬೇಕೆಂಬ ಕಾಳಜಿ ಇದೆ. ಸಂವಿಧಾನವನ್ನು ರಾಜಕಾರಣಿಗಳು ಸರಿಯಾಗಿ ಪಾಲಿಸದಿದ್ದದ್ದನು ಮನಗಂಡಿದ್ದ ಅಂಬೇಡ್ಕರ್ ಸಿಟ್ಟಿನಿಂದ ಆಗಾಗಾ ತಮ್ಮ ಭಾಷಣಗಳಲ್ಲಿಕೆಲವೊಮ್ಮೆ ನನಗೆ ಸಂವಿಧಾನವನ್ನೇ ಸುಟ್ಟುಬಿಡಬೇಕು ಎಂದೆನಿಸುತ್ತದೆ ಎಂದು ಹೇಳುತ್ತಿದ್ದದ್ದನ್ನು; ಮಹಿಳಾ ಪರವಾದಹಿಂದೂ ಕೋಡ್ ಬಿಲ್ ಜಾರಿಯಾಗದ ಕಾರಣ ತಮ್ಮ ಕಾನೂನು ಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದನ್ನು ನಿಮ್ಗಾಡೆ ದಾಖಲಿಸಿದ್ದಾರೆ. ಒಮ್ಮೆ ನಿಮ್ಗಾಡೆಯವರುಬಾಬಾ ಸಾಹೇಬ್ ನೀವು ಏಕಾಂಗಿಯಾಗಿ ಅದು ಹೇಗೆ ಬಹುಸಂಖ್ಯೆಯಲ್ಲಿರುವ ನಿಮ್ಮ ಎದುರಾಳಿಗಳನ್ನು ಎದುರಿಸುತ್ತೀರಿ? ನಿಮಗೆ ಭಯವಾಗುವುದಿಲ್ಲವೇ?’ ಎಂದು ಪ್ರಶ್ನಿಸಿದಾಗ ಅಂಬೇಡ್ಕರ್ ಅವರು ಉತ್ತರಿಸುತ್ತ : ‘ನಾನು ಬುದ್ಧನ ಅನುಯಾಯಿ. ಆತನ ಮೇಲಿನ ನಂಬಿಕೆ ನನಗೆ ಆತ್ಮಸ್ಥೈರ್ಯವನ್ನು ಕೊಡುತ್ತದೆ. ನನ್ನ ನಂಬಿಕೆಯೇ ನನಗೆ ಹೊಸ ದಾರಿಯನ್ನು ಕಂಡುಕೊಳ್ಳಲು ನೆರವಾಗುತ್ತದೆ ಎಂದು ಹೇಳುತ್ತಾರೆ. ಇಂತಹ ಪ್ರಮುಖ ಸಂಗತಿಗಳ ಜೊತೆಗೆ ನಿಮ್ಗಾಡೆಯವರು, ಕೊನೆಯ ದಿನಗಳಲ್ಲಿ ಅಂಬೇಡ್ಕರ್ ಅವರು ತಮ್ಮ ಮಡದಿ ರಮಾಬಾಯಿ, ಚಿಕ್ಕ ವಯಸ್ಸಿನಲ್ಲೆ ಮರಣ ಹೊಂದಿದ ತಮ್ಮ ಮಕ್ಕಳನ್ನು ನೆನೆದು ತೀವ್ರ ದುಃಖಕ್ಕೆ ಒಳಗಾಗಿದ್ದು; ಬೌದ್ಧ ಧಮ್ಮಕ್ಕೆ ಮರಳಿದ ಸಂಗತಿ; ಬಾಬಾ ಸಾಹೇಬ್ ಮರಣ ಹೊಂದಿದ್ದು -ಹೀಗೆ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಅನೇಕ ವಿಚಾರಗಳನ್ನು ವಿವರಿಸಿದ್ದಾರೆ. ಅಂಬೇಡ್ಕರ್ ಸಂಬಂಧಿತ ಎಲ್ಲಾ ವಿವರಗಳು ನಿಮ್ಗಾಡೆಯವರ ಆತ್ಮಕಥೆ ಅಂಬೇಡ್ಕರ್ವಾದಿ ಆತ್ಮಕಥೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.
 ನಿಮ್ಗಾಡೆಯವರ ಮದುವೆಗಾಗಿ ಉಡುಗೊರೆಯಾಗಿ ಅಂಬೇಡ್ಕರ್ ಅವರು ಅಶೋಕನ ಶಾಸನವೊಂದನ್ನು ಮರಾಠಿ ಭಾಷೆಗೆ ಅನುವಾದಿಸಿ ಕೊಡುತ್ತಾರೆ. ಶಾಸನದ ಮುಖ್ಯ ಅಂಶಗಳನ್ನು ಹೀಗಿವೆ : ‘ತನ್ನ ದೇಶದ ಪ್ರಜೆಗಳು ಸಚ್ಚಾರಿತ್ರ್ಯವಂತರಾಗಿ ಬದುಕಲು ಧಮ್ಮವನ್ನು ಅನುಸರಿಸಬೇಕೆಂದು ರಾಜ ಅಶೋಕ ಬಯಸುತ್ತಾನೆ. ಪ್ರತಿಯೊಬ್ಬ ಪ್ರಜೆಯೂ ಎಲ್ಲರನ್ನೂ ಗೌರವದಿಂದ ಕಾಣುತ್ತ, ಸಮಾನತೆಯಲ್ಲಿ ನಂಬಿಕೆ ಇಡಬೇಕು. ಸತ್ಯದ ಮಾರ್ಗವನ್ನೇ ತುಳಿಯಬೇಕು ಎಂದು ಹಂಬಲಿಸುತ್ತಾನೆ.’ ಮಾತುಗಳು ಭಾರತೀಯರಾದ ನಮ್ಮೆಲ್ಲರಿಗೂ ದಿಕ್ಸೂಚಿಯಾಗಬೇಕಿದೆ. ನಿಮ್ಗಾಡೆಯವರು ಅಮೇರಿಕಾದಲ್ಲಿ ಸಂಶೋಧನೆ ಮಾಡುವ ಸಂದರ್ಭದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಅವರ ಭಾಷಣ ಕೇಳುವ ಅವಕಾಶ ಸಿಗುತ್ತದೆ. ಕಿಂಗ್ ಅವರು ತಮ್ಮ ಭಾಷಣದಲ್ಲಿ ಭಾರತದ ವಿಷಯವನ್ನು ಪ್ರಸ್ತಾಪಿಸುತ್ತ, ತಾವು ಭಾರತಕ್ಕೆ ಹೋಗಿದ್ದ ಸಂದರ್ಭದಲ್ಲಿ ನೆಹರೂ ಅವರು ಹೇಳಿದರೆಂದುನೆಹರೂ ಅವರು ಭಾರತದಲ್ಲಿ ಅಸ್ಪøಶ್ಯತೆಯನ್ನು ಸಂಪೂರ್ಣವಾಗಿ ತೊಡೆದು ಹಾಕಿದ್ದಾರೆ ಎಂಬುದನ್ನು ಪ್ರಸ್ತಾಪಿಸುತ್ತಾರೆ. ಇದನ್ನು ಕೇಳಿಸಿಕೊಂಡ ನಿಮ್ಗಾಡೆಯವರು ಸಭೆಯಲ್ಲಿ ಎದ್ದು ನಿಂತು ತೀವ್ರವಾಗಿ ಆಕ್ಷೇಪಿಸಿ ಭಾರತದ ವಾಸ್ತವಿಕತೆಯನ್ನು, ಅಂಬೇಡ್ಕರ್ ಅವರ ಹೋರಾಟವನ್ನು ಕುರಿತು ಮಾತನಾಡಿ ಇಡೀ ಸಭೀಕರ ಮೆಚ್ಚುಗೆಗೆ ಪಾತ್ರರಾದ ಘಟನೆಯನ್ನು ದಾಖಲಿಸಿದ್ದಾರೆ. ಹೀಗೆ ಅಂಬೇಡ್ಕರ್ ಅವರ ಕಟ್ಟಾ ಅನುಯಾಯಿಯಾಗಿದ್ದ ನಿಮ್ಗಾಡೆಯವರು ತಮ್ಮ ಮಗನಿಗೆಭೀಮ್ರಾವ್ ಎಂದು ಹೆಸರಿಡುತ್ತಾರೆ. ಮುಂದೆ ನಿಮ್ಗಾಡೆಯವರು ತಮ್ಮ ನಿವೃತ್ತಿಯ ತರುವಾಯ ಸಂಸದ ಕಸ್ತೂರೆ ಅವರೊಟ್ಟಿಗೆ ಸೇರಿ ಬಾಬಾ ಸಾಹೇಬ್ ಅಂಬೇಡ್ಕರ್ ಮೆಮೋರಿಯಲ್ ಸ್ಥಾಪಿಸುತ್ತಾರೆ. ಆಮೂಲಕ ಅಂಬೇಡ್ಕರ್ ಅವರ ಅಪ್ರಕಟಿತ ಲೇಖನಗಳನ್ನು 17 ಸಂಪುಟಗಳಲ್ಲಿ ಸಂಪಾದಿಸಲು ವಸಂತರಾವ್ ಮೂನ್ ಅವರಿಗೆ ಸಹಕರಿಸುತ್ತಾರೆ. ಜೊತೆಗೆ ಸತಗಾಂವ್ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತಿರುಗಾಡಿ ಬುದ್ಧ ಮತ್ತು ಬಾಬಾ ಸಾಹೇಬರ ವಿಚಾರಗಳನ್ನು ಜನರಿಗೆ ತಿಳಿಸುತ್ತಾ ಅವರಲ್ಲಿ ಜಾಗೃತಿ ಮೂಡಿಸುವ ಕಾಯಕದಲ್ಲಿ ತಮ್ಮನ್ನು ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುತ್ತಾರೆ. ಆಮೂಲಕ ನಿಜದ ಅರ್ಥದಲ್ಲಿ ತಾವು ಅಂಬೇಡ್ಕರ್ ಅನುಯಾಯಿ ಎಂಬುದನ್ನು ಸಾಬೀತು ಮಾಡುತ್ತಾರೆ. ಹೀಗೆ ನಿಮ್ಗಾಡೆಯವರು ತಮ್ಮ ಆತ್ಮಕಥೆಯ ಮೂಲಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬದುಕು ವ್ಯಕ್ತಿತ್ವ ಹೋರಾಟವನ್ನು ಅನಾವರಣ ಮಾಡಿದ್ದಾರೆ. ಆತ್ಮಕಥೆಯ ಮೂಲಕ ಅಂಬೇಡ್ಕರ್ ಅವರು ಕನ್ನಡ ಓದುಗರಿಗೆ ಆದರ್ಶವಾಗಲಿ. ಮಹತ್ವದ ಉದ್ದೇಶಕ್ಕೆ ಕಾರಣರಾಗಿರುವ ಶ್ರೀಪಾದ ಭಟ್ ಅವರಿಗೆ, ಆತ್ಮಕಥೆ ಪುಸ್ತಕವನ್ನು ಪ್ರಕಟಿಸುತ್ತಿರುವ ಲಡಾಯಿ ಪ್ರಕಾಶನದ ಬಸೂ ಅವರಿಗೂ ನನ್ನ ಪ್ರೀತಿಯ ಕೃತಜ್ಞತೆಗಳು.
ಜೈ ಭೀಮ್
17 ಮಾರ್ಚ್ 2014                                                                                                                          -

No comments:

Post a Comment