![]() |
ದಸಂಸದವರಿಂದ ಕ್ರಾಂತಿಗೀತೆ |
ನವೆಂಬರ್ ಎರಡರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಲಡಾಯಿ ಪ್ರಕಾಶನ ಪ್ರಕಟಿಸಿರುವ ಹುಲಿಯ ನೆರಳಿನೊಳಗೆ, ಚೆ - ಕ್ರಾಂತಿಯ ಸಹಜೀವನ ಮತ್ತು ಮೋಟಾರ್ ಸೈಕಲ್ ಡೈರಿಯ ಕನ್ನಡ ಅವತರಿಣಿಕೆಯ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇಂಧೂದರ್ ಹೊನ್ನಾಪುರ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಚೆ ಬಗೆಗೆ ಬಹುತೇಕರಿಗೆ ತಿಳಿದಿದೆ, ನಮ್ಮ ಪಕ್ಕದ ರಾಜ್ಯದ ನಾಮದೇವ ನಿಮ್ಗಾಡೆಯವರ ಬಗ್ಗೆ ಗೊತ್ತೇ ಇರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸುತ್ತ ಲಡಾಯಿ ಪ್ರಕಾಶನದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು. ಮಾತು ಮುಂದುವರಿಸಿದ ಅವರು ಪುಸ್ತಕಕ್ಕಿಂತ ಹೆಚ್ಚಾಗಿ ದಲಿತ ಚಳುವಳಿಯ (ದಸಂಸ - ಅಂಬೇಡ್ಕರ್ ವಾದ ಕೂಡ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಮುಖ ಪಾತ್ರ ವಹಿಸಿತ್ತು) ಮತ್ತು ದಲಿತ ಚಳುವಳಿಯ ಕಾರ್ಯಕರ್ತರ - ನೇತಾರರ ಬದಲಾದ ಮನಸ್ಥಿತಿಯ ಬಗ್ಗೆ ಹೆಚ್ಚು ಮಾತನಾಡಿದರು. ದಲಿತರು ಕೂಡ ಹೇಗೆ ಜಾತಿವಾದಕ್ಕೆ,
![]() |
ಬಸೂ ಮಾತು |
ಮೂಲಭೂತವಾದಿತನಕ್ಕೆ, ವ್ಯಾಖ್ಯಾನ - ವಿಮರ್ಶೆಗಳನ್ನು ಸ್ವೀಕರಿಸದ ಮಟ್ಟಕ್ಕೆ 'ಬೆಳೆದಿದ್ದಾರೆ' ಎಂದು ವಿಷಾದ ವ್ಯಕ್ತಪಡಿಸಿದರು. ಆತ್ಮವಂಚನೆಯ ಕಲೆ ಚೆನ್ನಾಗಿ ಗೊತ್ತಿರುವ ಸಾಹಿತಿಗಳ ಆತ್ಮಕಥನಗಳಿಗಿಂತ ನಾಮದೇವ ನಿಮ್ಗಾಡೆಯವರ ಆತ್ಮಕಥೆಯಲ್ಲಿನ ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡರು.
ಚೆ ಬಗೆಗಿನ ಪುಸ್ತಕಗಳ ಬಗ್ಗೆ ಡಾ. ವಸು ಮಳಲಿ ಮಾತನಾಡಿದರು. ಚೆ ಹೇಗೆ ಟೀ ಶರ್ಟ್ ಮೂಲಕ, ಕಾಫಿ ಲೋಟದ ಮೂಲಕ ಕೊನೆಗೆ ಅಮೆರಿಕಾದಲ್ಲಿ ಚಪ್ಪಲಿಯ ಮೂಲಕವೂ ಜನರನ್ನು ತಲುಪುತ್ತಿದ್ದಾರೆ, ಇವತ್ತಿಗೂ ಹೇಗೆ ಅವರು ಒಬ್ಬರಲ್ಲ ಮತ್ತೊಬ್ಬರಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ, ಸೆಲೆಯಾಗುತ್ತಲೇ ಇದ್ದಾರೆ ಎಂದರು. ಮುಂದಿನ ವಾರದಿಂದ
![]() |
ಇಂಧೂದರ ಹೊನ್ನಾಪುರರಿಂದ ಪುಸ್ತಕ ಬಿಡುಗಡೆ |
ಶುರುಮಾಡಬೇಕೆಂದಿರುವ ತಮ್ಮ ಸಿನಿಮಾ ನಿರ್ದೇಶನಕ್ಕೂ ಚೆ ಹೇಗೆ ಸ್ಪೂರ್ತಿಯಾಗಬಹುದು ಎಂದು ವಿವರಿಸಿದರು. ನಾಮದೇವ ನಿಮ್ಗಾಡೆಯವರ ಪುಸ್ತಕದ ಬಗ್ಗೆ ಮಾತನಾಡಿದ ಡಾ. ಸಿ.ಜಿ ಲಕ್ಷೀಪತಿ ಪುಸ್ತಕದ ಭಾವಾನುವಾದ ಮಾಡಿರುವ ಬಿ. ಶ್ರೀಪಾದ್ ಭಟ್ಟರು ಪುಸ್ತಕದ ಮೇಲೆ ತಮ್ಮ ಹೆಸರಿನಲ್ಲಿರುವ ಭಟ್ ಪದವನ್ನು ತೆಗೆದಿರುವ ಬಗ್ಗೆ ಒಂದಷ್ಟು ಕಿಚಾಯಿಸುವ ದನಿಯಲ್ಲಿ ಹೊಗಳಿದರು. ನಿಮ್ಗಾಡೆಯವರ ಪುಸ್ತಕವನ್ನು ಓದುತ್ತಿದ್ದರೆ ಅಂದಿಗೂ ಮತ್ತು ಇಂದಿಗೂ ಕೋಮುವಾದಿಗಳು ಕಾರ್ಯನಿರ್ವಹಿಸುವ ರೀತಿಯಲ್ಲಿ ಯಾವುದೇ ರೀತಿಯ ಬದಲಾವಣೆಯಿಲ್ಲ. ಅವತ್ತು ಮಂದಿರದ ಮೇಲೆ ಮಾಂಸ ಎಸೆದಿರಿ ಎಂದು ಗುಲ್ಲೆಬ್ಬಿಸುತ್ತಿದ್ದರು ಇವತ್ತಿಗೂ ಅದನ್ನೇ ಮಾಡುತ್ತಿದ್ದಾರೆ. ಆದರೆ ಒಂದೇ ವ್ಯತ್ಯಾಸವೆಂದರೆ ಅವತ್ತು ಇವರ ಗುರಿ ದಲಿತರಾಗಿದ್ದರೆ, ಇವತ್ತು ಮುಸ್ಲಿಮರಾಗಿದ್ದಾರೆ ಎಂದರು. ಭಾವಾನುವಾದಕ್ಕಿಂತ ಪುಸ್ತಕದ ಸಂಪೂರ್ಣ ಅನುವಾದ ಮಾಡಿದ್ದರೆ ಇನ್ನೂ ಹೆಚ್ಚಿನ ಖುಷಿ ಓದಿನಿಂದ ಸಿಗುತ್ತಿತ್ತು ಎಂದರು.
ಪುಸ್ತಕದ ಕತೃಗಳಾದ ಡಾ.ಎಚ್.ಎಸ್.ಅನುಪಮ, ಶ್ರೀಪಾದ, ನಾ.ದಿವಾಕರ ಚಿಕ್ಕದಾಗಿ ಚೊಕ್ಕವಾಗಿ ಮಾತನಾಡಿದ ನಂತರ ಅಧ್ಯಕ್ಷತೆ ವಹಿಸಿದ್ದ ಮಾವಳ್ಳಿ ಶಂಕರರ ಮಾತುಗಳೊಡನೆ ಸಮಾರಂಭ ಮುಕ್ತಾಯವಾಯಿತು. ಬಹುತೇಕ ಭಾಷಣಕಾರರು ಆ ಸಮಾರಂಭಕ್ಕೆ ಅನಗತ್ಯವಾಗಿದ್ದ ಮಾತುಗಳನ್ನೇ ಹೆಚ್ಚು ಆಡಿದ ಕಾರಣ ಬಿಡುಗಡೆ ಸಮಾರಂಭಕ್ಕೆ ಬಂದಿದ್ದನೇಕರು ಮಧ್ಯೆ ಮಧ್ಯೆ ಎದ್ದು ಹೋಗಿದ್ದು ಸಾಮಾನ್ಯವಾಗಿತ್ತು! ಪುಸ್ತಕಗಳ 'ತೂಕ'ಕ್ಕಿಂತ ಭಾಷಣದ ತೂಕ ಹೆಚ್ಚಾಗಿ ತೂಕಡಿಸುವಂತಾದದ್ದು ಸುಳ್ಳಲ್ಲ!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ