Jan 7, 2014

ಮೋಕ್ಷದ ಹುಡುಕಾಟದಲ್ಲಿ ಕಳೆದುಹೋದ ಸಿದ್ಧಾರ್ಥ...

ಡಾ. ಅಶೋಕ್. ಕೆ. ಆರ್
ಜರ್ಮನ್ ಲೇಖಕ ಹರ್ಮನ್ ಹೆಸ್ಸೆ (Hermann Hesse) 1922ರಲ್ಲಿ ಬರೆದ ಕಾದಂಬರಿ ‘ಸಿದ್ಧಾರ್ಥ’. ಹಲವು ವರುಷಗಳು ಕಳೆದ ನಂತರ ಪುಸ್ತಕವೊಂದರ ಕಾಪಿರೈಟ್ ಮುಗಿದುಹೋಗುತ್ತದೆ. ಅಂಥಹ ಪುಸ್ತಕಗಳನ್ನು ‘ಗುಟೆನ್ ಬರ್ಗ್’ ಎಂಬ ಅಂತರ್ಜಾಲ ತಾಣ ಮೊಬೈಲ್, ಟ್ಯಾಬ್ಲೆಟ್, ಕಂಪ್ಯೂಟರುಗಳಲ್ಲಿ ಓದಲನುಕೂಲವಾಗುವಂತೆ ಮಾಡುತ್ತಿದೆ. ‘ಗುಟೆನ್ ಬರ್ಗಿನ’ ಗೃಂಥಾಲಯದಲ್ಲಿ ಸಾವಿರಾರು ಪುಸ್ತಕಗಳು ಲಭ್ಯವಿದೆ. ‘ಸಿದ್ಧಾರ್ಥ’ ಎಂಬ ಶೀರ್ಷಿಕೆ ನೋಡಿ ‘ಬುದ್ಧ’ನ ಬಗೆಗೆ ಪಾಶ್ಚಿಮಾತ್ಯ ಚಿಂತನೆಯ ಪುಸ್ತಕವಿರಬೇಕು, ಪಶ್ಚಿಮದವರಿಗೆ ಕಂಡ ಬುದ್ಧನ ರೂಪ ಯಾವುದಿರಬೇಕೆಂಬ ಕುತೂಹಲದಿಂದ ಪುಸ್ತಕವನ್ನು ಓದಲಾರಂಭಿಸಿದೆ.


ಇಲ್ಲಿ ಬುದ್ಧನಿದ್ದಾನೆ; ಆದರವನು ‘ಸಿದ್ಧಾರ್ಥ’ನಲ್ಲ ‘ಗೌತಮ’. ಬುದ್ಧನನ್ನೇ ಧಿಕ್ಕರಿಸಿ ನಡೆಯುವ ಸಿದ್ಧಾರ್ಥನಿದ್ದಾನೆ. ಕಾದಂಬರಿಯ ನಾಯಕ ‘ಸಿದ್ಧಾರ್ಥ’ ಬ್ರಾಹ್ಮಣನೊಬ್ಬನ ಮಗ. ‘ಅರಿವು’ ಪಡೆದು ಮುಕ್ತಿ ಪಡೆಯಲೋಸಗ ಮನೆ ತೊರೆದು ಜ್ಞಾನಿಗಳೆಂದು ಹೆಸರಾದ ಸಮಾನರೊಡನೆ ಹೋಗುವ ಸಂಕಲ್ಪ ಮಾಡುತ್ತಾನೆ. ಸಿದ್ಧಾರ್ಥನ ತಂದೆ ಒಪ್ಪುವುದಿಲ್ಲ. ಸಿದ್ಧಾರ್ಥ ಹಟ ಬಿಡುವುದಿಲ್ಲ, ಅನುಮತಿ ಕೊಡುವವರೆಗೂ ನಿಂತ ಸ್ಥಳದಿಂದ ಅಲುಗಾಡುವುದಿಲ್ಲ. ಮಗನ ಕಾಠಿಣ್ಯವನ್ನು ನೋಡಿ ಬೆಚ್ಚಿ ಬೇಸರದಿಂದಲೇ ಮಗನನ್ನು ಆಶೀರ್ವದಿಸಿ ಕಳುಹಿಸುತ್ತಾರೆ. ತನ್ನ ಗೆಳೆಯ ಗೋವಿಂದನ ಜತೆಗೆ ಅರಿವಿನ ಪಯಣ ಪ್ರಾರಂಭಿಸುತ್ತಾನೆ. ಕೆಲವು ದಿನಗಳಲ್ಲೇ ಪಡೆದ ಜ್ಞಾನ ತನ್ನನ್ನು ತಾನೇ ಅರಿಯುವುದಕ್ಕೆ ಸಾಲುತ್ತಿಲ್ಲವೆನ್ನಿಸಿ ಮನೋಕ್ಷೋಬೆಗೊಳಗಾಗುತ್ತಾನೆ. ರಾಜತ್ವವನ್ನು ತೊರೆದು ಜ್ಞಾನೋದಯ ಪಡೆದ ಗೌತಮ ಬುದ್ಧನ ಹೆಸರು ಪ್ರಖ್ಯಾತವಾಗುತ್ತಿದ್ದ ಕಾಲವದು. ಗೆಳೆಯ ಗೋವಿಂದನ ಜೊತೆಗೆ ಬುದ್ಧನ ತತ್ವಗಳನ್ನರಿಯಲು ಹೊರಡುತ್ತಾನೆ ಸಿದ್ಧಾರ್ಥ. ಬುದ್ಧನ ಉಪದೇಶಗಳಿಂದ ಈರ್ವರೂ ಪ್ರಭಾವಿತರಾಗುತ್ತಾರೆ. ‘ಸಮಾನ’ರು ತಿಳಿಸಿಕೊಟ್ಟದ್ದಕ್ಕಿಂತ ಹೆಚ್ಚಿನ ಅರಿವು ಬೌದ್ಧ ಧರ್ಮದಲ್ಲಿದೆ ಎಂದು ಮನವರಿಕೆಯಾದರೂ ಸಿದ್ಧಾರ್ಥ ಬುದ್ಧನ ಶಿಷ್ಯನಾಗಲು ಆಶಿಸುವುದಿಲ್ಲ.
ಬುದ್ಧನ ಶಿಷ್ಯನಾಗಿ ಉಳಿದ ಜೀವನ ಸಾಗಿಸಲು ನಿರ್ಧರಿಸುವ ಬಾಲ್ಯ ಕಾಲದ ಗೆಳೆಯ ಗೋವಿಂದನಿಗೆ ಶುಭ ಕೋರಿ ಹೊರಡುವಾಗ ಸಿದ್ಧಾರ್ಥನಿಗೆ ಗೌತಮ ಬುದ್ಧನ ಭೇಟಿಯಾಗುತ್ತದೆ. “You have found salvation from death. It has come to you in the course of your own search, on your own path, through thoughts, through enlightenment. It has not come to you by means of teacings! And thus is my thought oh exalted one, nobody will obtain salvation by means of teachings. You will not be able to convey and say to anybody oh venerable one, in words and through teachings what has happened to you in the hour of enlightenment” ಎಂದು ಹೇಳಿ ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂಬ ನಂಬಿಕೆಗೆ ತಿಲಾಂಜಲಿ ಇಟ್ಟು ಗೊತ್ತು ಗುರಿಯಿಲ್ಲದ ದಾರಿಯಲ್ಲಿ ಮೋಕ್ಷವನ್ನರಸುತ್ತಾ ಸಾಗಿಬಿಡುತ್ತಾನೆ ಸಿದ್ಧಾರ್ಥ.

ಕಮಲ ಎಂಬ ಸ್ಫುರದ್ರೂಪಿ ವೇಶ್ಯೆಯೊಡನೆ ಪ್ರೇಮದಾರಂಭವಾಗಿ, ಕಾಮಸ್ವಾಮಿ ಎಂಬ ವರ್ತಕನ ಸಹಾಯದಿಂದ ಊರಿನಲ್ಲೇ ಉತ್ತಮ ವರ್ತಕನಾಗಿ ಲೌಕಿಕತೆಯ ಎಲ್ಲಾ ಕಷ್ಟ ಸುಖಗಳನ್ನನುಭವಿಸುತ್ತಾನೆ. ಕಮಲಳ ಪ್ರೀತಿಯಿಂದ ಕಾಮಸ್ವಾಮಿಯ ವ್ಯಾಪಾರಿ ಮನೋಭಾವದಿಂದ ಊರ ಜನರೊಡನೆ ನಡೆಸಿದ ಒಡನಾಟದಿಂದ ಅನೇಕ ಸಂಗತಿಗಳನ್ನು ಕಲಿಯುತ್ತಾನೆ. ಕೊನೆಗೊಂದು ದಿನ ಲೌಕಿಕತೆಗಳೆಲ್ಲವೂ ಮನೆ ತೊರೆದು ಬಂದ ತನ್ನ ಉದ್ದಿಶ್ಯವನ್ನೇ ಅಣಕಿಸಿದಂತಾಗಿ ಗಳಿಸಿದ್ದೆಲ್ಲವನ್ನೂ ಎಲ್ಲರನ್ನೂ ತ್ಯಜಿಸಿ ಮಗದೊಮ್ಮೆ ಗೊತ್ತುಗುರಿಯಿಲ್ಲದ ಪಯಣವನ್ನಾರಂಭಿಸುತ್ತಾನೆ ಸಿದ್ಧಾರ್ಥ. ಹಿಂದೊಮ್ಮೆ ನದಿಯೊಂದನ್ನು ದಾಟಿಸಿದ್ದ ಅಂಬಿಗ ಮತ್ತೆ ಸಿಗುತ್ತಾನೆ. ವಾಸುದೇವನೆಂಬ ಆ ಅಂಬಿಗನೊಡನೆ ದಿನ ದೂಡಲಾರಂಭಿಸುತ್ತಾನೆ. ಜನರನ್ನು ದಡ ಸೇರಿಸುವ ಕಾಯಕದ ಅಂಬಿಗ ಸಿದ್ಧಾರ್ಥನ ಮನದ ಜಿಜ್ಞಾಸೆಗಳಿಗೂ ಉತ್ತರವಾಗುತ್ತ ಸಾಗುವುದು ಕಾದಂಬರಿಯ ಪ್ರಮುಖ ಘಟ್ಟ. ಜೀವನ ಪಯಣದಲ್ಲಿ ಮತ್ತೊಮ್ಮೆ ಕಮಲ ಮತ್ತು ತಮ್ಮ ಮಗನ ಭೇಟಿಯಾಗುತ್ತದೆ. ಸಿದ್ಧಾರ್ಥನ ಮಗ ಸಿದ್ಧಾರ್ಥನ ಮಾತುಗಳನ್ನು ಧಿಕ್ಕರಿಸಿದಾಗಲೆಲ್ಲ ತಾನು ತನ್ನ ತಂದೆಯನ್ನು ತೊರೆದು ನೀಡಿದ ನೋವಿನ ನೆನಪಾಗುತ್ತದೆ. ವೃತ್ತ ಪೂರ್ಣವಾದಂತೆನಿಸಿ ನಿಡುಸುಯ್ಯುತ್ತಾನೆ.

ಕೊನೆಯಲ್ಲಿ ಗೆಳೆಯ ಗೋವಿಂದನೊಡನೆ ನಡೆಸುವ ಚರ್ಚೆ ಆಧ್ಯಾತ್ಮದ ಒಳತೋಟಿಯ ಅನಾವರಣ. ಮನೆ ಬಿಟ್ಟು ಹೊರಡುವ ನಾಯಕನಿಗೆ ಸಿದ್ಧಾರ್ಥನೆಂಬ ಹೆಸರು, ನಾಯಕನ ಮನದಲ್ಲಿ ಪ್ರೇಮವನ್ನರಳಿಸುವಾಕೆಗೆ ಕಮಲ, ದಡ ಸೇರಿಸುವ ಅಂಬಿಗನಿಗೆ ಕೃಷ್ಣನ ಮತ್ತೊಂದು ಹೆಸರಾದ ವಾಸುದೇವ – ಹೀಗೆ ಪಾತ್ರ ಸೃಷ್ಟಿಯಲ್ಲಿ ಮಹಾಭಾರತದಿಂದಿಡಿದು ಬುದ್ಧನವರೆಗಿನ ಕಾಲಘಟ್ಟದ ವ್ಯಕ್ತಿ ವ್ಯಕ್ತಿತ್ವಗಳನ್ನು ಬಳಸಿಕೊಂಡಿದ್ದಾನೆ ಹರ್ಮನ್ ಹೆಸ್ಸೆ. ಕಾದಂಬರಿಯ ಓದಿಗೆ ತೆರೆದುಕೊಂಡವರು ಮತ್ತು ಆಧ್ಯಾತ್ಮದ ಸೆಳೆತವಿರುವವರು ಓದಲೇಬೇಕಾದ ಪುಸ್ತಕ “ಸಿದ್ಧಾರ್ಥ”

ಚಿತ್ರಮೂಲ - ವಿಕಿಮೀಡಿಯಾ

No comments:

Post a Comment