Nov 28, 2018

ಪರಿತ್ಯಕ್ತೆ

ಪದ್ಮಜಾ ಜೋಯ್ಸ್ ದರಲಗೋಡು
ವಿಷಾದವೇ ಮಡುಗಟ್ಟಿದಂತೆ ನಿಸ್ಸಾರವಾಗಿ ಮಾಗಿದ ವಯಸ್ಸಿನ ದುಗುಡದ ಮನಸ್ಸಿನಿಂದೆಂಬಂತೆ ಸದ್ದಿಲ್ಲದೇ ಸರಿದು ಬಂದ ಅವನನ್ನು ಹೊತ್ತ ಕಾರೊಂದು ಆ ಕಟ್ಟಡದ ಎದುರು ಬಂದು ನಿ಼ಂತಾಗ ನಿರೀಕ್ಷೆಯಲ್ಲಿದ್ದಂತೇ ಒಳಗಿನಿಂದ ಎರಡು ಜೋಡಿ ಕಂಗಳು ಗಮನಿಸಿದ್ದವು.....ಅದೊಂದು ಮಾನಸಿಕ ಚಿಕಿತ್ಸಾ ಕೇಂದ್ರ....
ಗಮನಿಸಿದ, ನಿರೀಕ್ಷೆಯಲ್ಲೇ ಇದ್ದ ಒಂದು ಜೋಡಿ ಕಂಗಳಲ್ಲೊಂದು ಮನೋರೋಗ ತಜ್ಞರಾದರೇ... ಇನ್ನೊಂದು ಚಿಕಿತ್ಸೆ ಪಡೆಯುತ್ತಿರುವ ರೋಗಿಯದು.... ಇಂದವಳ ಹುಟ್ಟಿದ ಹಬ್ಬ , ಇದು ದಶಕದಿಂದಲೂ ಅನೂಚಾನವಾಗಿ ನೆಡೆಯುತ್ತಿರುವ ಘಟನೆಯೇ ಆದರೂ ಯಾವುದೋ ನಿರೀಕ್ಷೆ ಹೊತ್ತು ಬರುವವರಲ್ಲಿ ದಿನದಿನಕ್ಕೂ ನಿರಾಸೆ ಮಡುಗಟ್ಟುತ್ತಿರುವುದನ್ನು .. ತಜ್ಞರೂ .. ಗಮನಿಸಿ ಸತ್ಯವನ್ನು ಹೇಳಿಬಿಡಿಬೇಕೆಂಬ ತುಡಿತ ಅತಿಯಾದರೂ ರೋಗಿಗಿತ್ತ ವಾಗ್ದಾನ ನೆನಪಾಗಿ ಖೇದದಿಂದ ತುಟಿ ಬಿಗಿದುಕೊಂಡರು...
ಕಾರು ನಿಲ್ಲಿಸಿದವ ಏನನ್ನೋ ನಿರೀಕ್ಷಿಸುವಂತೆ "ಅವಳ" ರೂಮಿನ ಕಿಟಕಿಯತ್ತ ಕಣ್ಣು ಹಾಯಿಸಿ ನಿರಾಸೆಯಿ಼ಂದ ನಿಟ್ಟುಸಿರಿಟ್ಟು, ತಲೆಕೊಡವಿ ಅವನು "ಅವಳಿಗಾಗಿ" ತಂದ ವಸ್ತುಗಳನ್ನು ಎದೆಗವಚಿಕೊಂಡು ಹಿಂದೆ ಬ಼ಂದ ಇನ್ನೊಂದು ಕಾರು ಹಾಗೂ ಬ಼ಂದವರಿಗೆ ಕಾಯದೇ ಒಳನೆಡೆದ , 
ಮತ್ತುಳಿದವರು "ಆವಳ" ಬಳಗ ಅವರೂ ತ಼ಂದದ್ದೆಲ್ಲವನ್ನೂ ಎತ್ತಿಕೊಂಡು ಹಿ಼ಂದೆಯೇ ನೆಡೆದರು... ಎಲ್ಲ ಮೌನವಾಗಿ ಪರಸ್ಪರ ದಿಟ್ಟಿಸಿಕೊಂಡರೇ ವಿನಾ ಆಡಲ್ಯಾವ ಮಾತುಗಳಿರಲಿಲ್ಲ... 

Nov 26, 2018

ಡ್ರಾಫ್ಟ್ ಮೇಲ್: ಭಾಗ 4 - ಬಟವಾಡೆಯಾಗದ ಪತ್ರ ಮತ್ತು ಗೌತಮ # 2

ಚೇತನ ತೀರ್ಥಹಳ್ಳಿ. 
To: editor@kt.com

ವಿಷಯ: ನಿಮ್ಮ ಪತ್ರಿಕೆಯ ಪಕ್ಷಪಾತ ಧೋರಣೆ ಕುರಿತು

ನಮಸ್ತೇ

ಗೋಧ್ರಾ ಹಿಂಸಾಚಾರ ಕುರಿತು ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಓದಿದೆ. ನೀವು ಗೋಧ್ರಾದಲ್ಲಿ ಹಿಂದುತ್ವವಾದಿಗಳು ನಡೆಸಿದ ವಿಧ್ವಂಸದ ಬಗ್ಗೆ ಬರೆದುದೆಲ್ಲವೂ ಸರಿಯಾಗಿದೆ. ಆದರೆ, ಅದೇ ವೇಳೆ ನೀವು ಮುಸಲ್ಮಾನರು ನಡೆಸಿದ ದುಷ್ಕøತ್ಯಗಳನ್ನು ಸಂಪೂರ್ಣ ಮರೆಮಾಚಿದ್ದೀರಿ.

ಮುಗ್ಧ ಕೌಸರಳ ಭ್ರೂಣ ಬಗೆದು ಎಂದೆಲ್ಲ ಅತಿರಂಜಿತವಾಗಿ ಬರೆದಿರುವ ಲೇಖಕರು (ಆ ಹೆಣ್ಣುಮಗಳ ಅವಸ್ಥೆಗೆ ಪ್ರಾಮಾಣಿಕ ಸಂತಾಪವಿದೆ. ಆ ಕೃತ್ಯವನ್ನು ಕಟುವಾಗಿ ಖಂಡಿಸುತ್ತೇನೆ) ಕಾಶ್ಮೀರಿ ಪಂಡಿತಾಯಿನರನ್ನು ಜೀವಂತ ಗರಗಸದಲ್ಲಿ ಕೊಯ್ದಿದ್ದು ಮರೆತೇಬಿಟ್ಟಿದ್ದಾರೆ.

ಇಷ್ಟಕ್ಕೂ ಕರಸೇವಕರನ್ನು ರೈಲಿನ ಬೋಗಿಯಲ್ಲಿ ಕೂಡಿ ಹಾಕಿ ಜೀವಂತ ಸುಡದೆ ಹೋಗಿದ್ದರೆ, ಈ ಪ್ರತೀಕಾರಕ್ಕೆ ಅವರು ಇಳಿಯುತ್ತಿದ್ದರೆ?

ದಯವಿಟ್ಟು ನಿಷ್ಪಕ್ಷಪಾತವಾದ ಲೇಖನಗಳನ್ನು ಪ್ರಕಟಿಸಲು ವಿನಂತಿ.

ವಂದೇ,

ಚಿನ್ಮಯಿ ಕೆಸ್ತೂರ್

Nov 22, 2018

ಅವಳು

ಪ್ರವೀಣಕುಮಾರ್ ಗೋಣಿ
ಅವಳ ಕಣ್ಣಂಚಿನ ಬೆಳಕೊಳಗೆ
ಬದುಕು ಮತ್ತೆ ಚಿಗುರೊಡೆಯುವುದು 
ಕತ್ತಲಿನ ಭಯವ ಅಳಿಸಿ 
ಉಲ್ಲಾಸದ ಅಭಯ ಹೃದಯದೊಳಗೆ ಅರಳುವುದು .

Nov 19, 2018

ಡ್ರಾಫ್ಟ್ ಮೇಲ್: ಭಾಗ 3 - ಗೌತಮ #1


ಚೇತನ ತೀರ್ಥಹಳ್ಳಿ. 

ಚಿನ್ಮಯಿ ಆ ಮೇಲ್ ಕಳಿಸಲೂ ಇಲ್ಲ, ಸಾಯಲೂ ಇಲ್ಲ. ಆ ಮೊದಲ ಡ್ರಾಫ್ಟ್‍ನಿಂದ ಈವರೆಗಿನ ಕೊನೆಯ ಡ್ರಾಫ್ಟ್’ವರೆಗೆ ಹತ್ತು ವರ್ಷಗಳು ಕಳೆದಿವೆ. 

ಅದಕ್ಕೂ ಹಿಂದಿನದೆಲ್ಲ ಸೇರಿ, ಈ ಹದಿನೈದು ವರ್ಷಗಳ ಹರಿವಿನಲ್ಲಿ ಅವಳು ಈಜಿದ್ದೆಷ್ಟು, ಮುಳುಗಿದ್ದೆಷ್ಟು!

ಆಗಾಗ ಮನೆಗೆ ಬರುವ ತವರು ಅವಳ ತಲೆ ನೇವರಿಸಿ ಕಣ್ಣೀರಿಡುತ್ತದೆ. ಚಿನ್ಮಯಿಗೆ ಯಾಕೆಂದೇ ಅರ್ಥವಾಗೋದಿಲ್ಲ.

ಮಧ್ಯಾಹ್ನದಲ್ಲಿ ಬೆಳಕಿನ ಬಾಗಿಲಾಗುವ ಬಿಸಿಲು, ಹೊತ್ತು ಕಳೆದಂತೆ ಕರಗುವುದು ಅವಳಿಗೆ ಗೊತ್ತಿದೆ; ಮತ್ತೆ ಮರುದಿನ ಮೂಡುತ್ತದೆ ಅನ್ನೋದು ಕೂಡಾ.

ಒಂದೇ ಒಂದು ಜನ್ಮದಲ್ಲಿ ಹಲವು ಬದುಕು ಬಾಳುವ ಅವಕಾಶ ಎಲ್ಲರಿಗೂ ಸಿಗೋದಿಲ್ಲ. 

ವಾಸ್ತವದಲ್ಲಿ, ಅದು ಸಿಗುವಂಥದಲ್ಲ… ನಾವೇ ಕಂಡುಕೊಳ್ಳುವಂಥದ್ದು. ಹಲವು ಬದುಕುಗಳ ಅವಕಾಶ ನಾವೇ ಸೃಷ್ಟಿ ಮಾಡಿಕೊಳ್ಳಬೇಕು. ಹಾಗಂತ ಚಿನ್ಮಯಿ ನಂಬಿಕೊಂಡಿದ್ದಾಳೆ. ಅದನ್ನು ಸಾವಧಾನವಾಗಿ ಸಾಕಾರ ಮಾಡಿಕೊಂಡಿದ್ದಾಳೆ ಕೂಡ.

ತಾನು ಏನಾಗಿದ್ದಾಳೋ ಆ ಬಗ್ಗೆ ಅವಳಿಗೆ ಖುಷಿ ಇದೆ. ಹಾಗಂತ ಅವಳು ಏನೋ ಆಗಿಬಿಟ್ಟಿದ್ದಾಳೆ ಎಂದಲ್ಲ. ಅವಳಿಗೆ ತಾನು ‘ಚಿನ್ಮಯಿ’ ಆಗಿರುವ ಬಗ್ಗೆ ನೆಮ್ಮದಿಯಿದೆ! ಹಾಗೆಂದೇ ಮನಮಂದಿಯ ದುಃಖ ಅವಳನ್ನು ಗಲಿಬಿಲಿಗೊಳಿಸುತ್ತದೆ. ಕೆಲವೊಮ್ಮೆ ರೇಜಿಗೆ ಹುಟ್ಟಿಸುತ್ತೆ ಕೂಡಾ. 

Nov 17, 2018

ಆತ್ಮ ಮತ್ತು ಕಸಾಯಿಖಾನೆ!

ಕು.ಸ.ಮಧುಸೂದನ ರಂಗೇನಹಳ್ಳಿ
ಹಾಗೆ ಆತ್ಮವನ್ನು ಹಾಡಹಗಲೇ
ಬಟಾಬಯಲೊಳಗೆ ಬಿಚ್ಚಿಡಬಾರದೆಂಬುದನ್ನು
ಮರೆತಿದ್ದೆ.

ಬೀದಿಗೆ ಬಂದ ಅಪರೂಪದ ಆತ್ಮವನ್ನು
ಕಸಾಯಿ ಖಾನೆಯ ಚಕ್ಕೆಗಳೆದ್ದ ಮರದ ದಿಮ್ಮಿಯ ಮೇಲಿಟ್ಟು
ಕತ್ತು ಕತ್ತರಿಸಿದರು
ಮುಂಡದಿಂದ ಚಿಮ್ಮಿದ ರಕ್ತವನ್ನು ದೊಡ್ಡ 
ಅಲ್ಯೂಮಿನಿಯಂ ಪಾತ್ರೆಯಲ್ಲಿ ಹಿಡಿದು
ದಾಹ ತೀರುವವರೆಗು ಕುಡಿದರು

Nov 13, 2018

ಮೇರ್ಕು ತೊಡರ್ಚಿ ಮಲೈ ಎಂಬ ದೃಶ್ಯ ಕಾವ್ಯ.

ಡಾ. ಅಶೋಕ್. ಕೆ. ಆರ್.
ಜಾತಿ ವ್ಯವಸ್ಥೆಯ ಬಗ್ಗೆ ವರ್ಗ ವ್ಯವಸ್ಥೆಯ ಬಗ್ಗೆ ನಮ್ಮಲ್ಲಿ ಆವಾಗವಾಗ ಒಂದೊಂದು ಚಿತ್ರ ಬಂದಿದೆಯಾದರೂ ಭೂರಹಿತ ಕಾರ್ಮಿಕರನ್ನೇ ಮುಖ್ಯಭೂಮಿಯಲ್ಲಿರಿಸಿಕೊಂಡು ಬಂದ ಚಿತ್ರಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯೆಂದು ಹೇಳಬಹುದು. ಜಾತಿ ವರ್ಗ ವ್ಯವಸ್ಥೆಯ ಕುರಿತಾದ ಚಿತ್ರಗಳಲ್ಲಿ ಕೆಲವೊಂದು ವಾಸ್ತವಿಕತೆಯನ್ನು ನಮ್ಮ ಕಣ್ಣ ಮುಂದೆ ಇರಿಸುತ್ತಾದರೂ ವಾಸ್ತವಿಕತೆಯನ್ನು ತಲುಪಿಸುವ ನಿಟ್ಟಿನಲ್ಲಿ ಅದನ್ನು ವೈಭವೀಕರಿಸುವ ಕೆಲಸ ಮಾಡುತ್ತವೆ, ನಾಯಕ ಪಾತ್ರದ ಒಳಿತನ್ನು ಋಜುವಾತುಪಡಿಸುವುದಕ್ಕೆ ಪ್ರತಿನಾಯಕರ ರಕ್ತದಲ್ಲೇ ಕೆಟ್ಟತನವಿದೆಯೆನ್ನುವಂಶವನ್ನು ಒತ್ತಿ ಒತ್ತಿ ಹೇಳುವ ಕ್ರಮವನ್ನೇ ಬಹಳಷ್ಟು ಸಿನಿಮಾಗಳು ಅಳವಡಿಸಿಕೊಂಡಿರುತ್ತವೆ. ಈ ಚಿತ್ರಗಳ ಇನ್ನೊಂದು ದೌರ್ಬಲ್ಯ (ಅದನ್ನು ಈ ಚಿತ್ರಗಳ ಶಕ್ತಿಯೆಂದೂ ಕರೆಯಬಹುದು!) ಅತಿ ಭಾವುಕತೆ. ನಿಜ ಜೀವನದಲ್ಲಿ ಕಂಡುಬರದಷ್ಟು ಭಾವುಕತೆಯನ್ನು ಚಿತ್ರಗಳಲ್ಲಿ ತುಂಬಿಬಿಡಲಾಗುತ್ತದೆ. ಅತಿ ಭಾವುಕತೆ ಅತಿ ವಾಸ್ತವತೆಯ ಕ್ರಮದಿಂದೊರತಾಗಿ ನಿಂತು, ಅತಿ ಎನ್ನುವಷ್ಟು ಒಳ್ಳೆಯ ನಾಯಕ, ಅತಿ ಎನ್ನಿಸುವಷ್ಟು ಕೆಟ್ಟ ವಿಲನ್ನು ಎಂಬ ಕ್ರಮದಿಂದಲೂ ಹೊರತಾಗಿದ್ದು ದೀರ್ಘಕಾಲದವರೆಗೆ ಕಾಡುವಂತಹ ದೃಶ್ಯಕಾವ್ಯವೇ ‘ಮೇರ್ಕು ತೊಡರ್ಚಿ ಮಲೈ’ (ಅರ್ಥಾತ್ ಪಶ್ಚಿಮ ಘಟ್ಟ). 

ಲೆನಿನ್ ಭಾರತಿ ನಿರ್ದೇಶನದ ಚಿತ್ರವನ್ನು ನಿರ್ಮಿಸಿರುವುದು ವಿಜಯ್ ಸೇತುಪತಿ. ಸ್ವತಃ ಉತ್ತಮ ನಟನಾದರೂ ವಿಜಯ್ ಸೇತುಪತಿ ಈ ಚಿತ್ರದಲ್ಲಿ ಅಭಿನಯಿಸಿಲ್ಲ. ಒಂದು ಚಿಕ್ಕ ಪಾತ್ರದಲ್ಲಾದರೂ ವಿಜಯ್ ಸೇತುಪತಿ ನಟಿಸಿದ್ದರೆ ಇಂತಹುದೊಂದು ಚಿತ್ರ ಹೆಚ್ಚು ಜನರನ್ನು ತಲುಪುತ್ತಿತ್ತು ಎನ್ನುವುದು ಸತ್ಯ. ಚಿತ್ರದ ನಾಯಕ ರಂಗಸ್ವಾಮಿ. ಭೂರಹಿತ ಕಾರ್ಮಿಕ. ತಮಿಳುನಾಡು ಕೇರಳ ಗಡಿಪ್ರದೇಶದ ಘಟ್ಟ ಪ್ರದೇಶದಲ್ಲಿ ಆತನ ವಾಸ. ಏಲಕ್ಕಿ ಕಾಯಿಯ ಮೂಟೆಯನ್ನು ಹೆಗಲ ಮೇಲೊತ್ತು ಘಟ್ಟದಿಂದ ಮಾರುಕಟ್ಟೆಗೆ ಸಾಗಿಸುವ ಕೆಲಸ ಆತನದು. ಘಟ್ಟ ಪ್ರದೇಶವನ್ನು ಹೊಸತಾಗಿ ದಾಟುವವರಿಗೆ ದಾರಿಯಾಗುತ್ತಾನೆ, ಆಸರೆಯಾಗುತ್ತಾನೆ. ಎಲ್ಲರ ಮೆಚ್ಚಿನ ವ್ಯಕ್ತಿ ರಂಗಸ್ವಾಮಿ ತನ್ನೂರಿನ ಮನೆಯಲ್ಲಿ ಅಮ್ಮನೊಂದಿಗೆ ವಾಸವಾಗಿದ್ದಾನೆ. ಇಂತಿಪ್ಪ ರಂಗಸ್ವಾಮಿಗೆ ಒಂದು ತುಂಡು ಭೂಮಿಯನ್ನು ಖರೀದಿಸಬೇಕೆಂಬುದೇ ಜೀವನದ ಗುರಿ. ಯಾವುದೇ ದುಶ್ಚಟಗಳಿಲ್ಲದ ರಂಗಸ್ವಾಮಿ ಕೂಡಿಹಾಕಿದ್ದ ಹಣದಿಂದ ಇನ್ನೇನು ಭೂಮಿ ಖರೀದಿಸಿಯೇಬಿಟ್ಟ ಎನ್ನುವಾಗ ಭೂಮಿಯ ಒಡೆಯರ ಕೌಟುಂಬಿಕ ಜಗಳದಿಂದ ಆಸೆಗೆ ಕಲ್ಲು ಬೀಳುತ್ತದೆ. ಮತ್ತೆ ಏಲಕ್ಕಿ ಮೂಟೆಯನ್ನು ಘಟ್ಟದಿಂದಿಳಿಸುವ ಕೆಲಸಕ್ಕೆ ರಂಗಸ್ವಾಮಿ ಮುಂದಾಗುತ್ತಾನೆ. 

Nov 12, 2018

ಮಾತನಾಡಲಾಗಲೇ ಇಲ್ಲ!

ಕು.ಸ.ಮಧುಸೂದನ ರಂಗೇನಹಳ್ಳಿ
ಅಪರೂಪಕ್ಕೆ ಸಿಕ್ಕ ಗೆಳೆಯ
ಮಾತನಾಡುತ್ತ ಹೋದೆವು
ಬೇಸಿಗೆ ಬಗ್ಗೆ
ಬಾರದ ಮಳೆ ಏರುತ್ತಿರುವ ಬೆಲೆ ಬಗ್ಗೆ
ಬೆಳೆಯುತ್ತಿರುವ ಮಕ್ಕಳ ಅವರ ಓದಿನ ಬಗ್ಗೆ
ಮದುವೆಗೆ ಬಂದ ಮಗಳ 
ಮದುವೆಗೆಂದು ಚೀಟಿಹಾಕಿದ ಹಣದ ಬಗ್ಗೆ 
ಮಾತಾಡಿದೆವು

ಡ್ರಾಫ್ಟ್ ಮೇಲ್: ಭಾಗ 2 - ಡ್ರಾಫ್ಟ್ ಸೇರಿದ ಮೊದಲ ಪತ್ರ


ಚೇತನ ತೀರ್ಥಹಳ್ಳಿ. 

ಡಿಯರ್ ಫೆಲೋಟ್ರಾವೆಲರ್,

ನನ್ನ ತಿರುವಿನಲ್ಲಿ ತಿರುಗುತ್ತಿದ್ದೇನೆ. ಈ ತಿರುವೇ ನನ್ನ ನಿಲ್ದಾಣವೂ ಆಗಲಿದೆ. 

ನಂಗೆ ಸತ್ತುಹೋಗಬೇಕು ಅನಿಸುತ್ತಿದೆ. ಇದನ್ನು ನನ್ನ ಕೊನೆಯ ಪತ್ರ ಅಂದುಕೋ. 

ನೀನು ವಾಪಸ್ ಬರುವ ಹೊತ್ತಿಗೆ ನಾನು ಇರೋದಿಲ್ಲ. ಶೋಕೇಸಿನಲ್ಲಿ ನಿನ್ನ ಫೋಟೋ ಹಿಂದೆ ಡೆತ್ ನೋಟ್ ಬರೆದಿಟ್ಟಿದ್ದೀನಿ. ಅದನ್ನು ಪೊಲೀಸರಿಗೆ ಕೊಡು. 

ಅದರಲ್ಲೂ ವಿಶೇಷವೇನಿಲ್ಲ. ಯಾಕೆ ಬದುಕಬೇಕು ಅಂತ ಗೊತ್ತಿಲ್ಲದ ಕಾರಣ ಸತ್ತು ಹೋಗ್ತಿದ್ದೀನಿ ಅಂತ ಬರೆದಿದ್ದೀನಿ. 

ಇತ್ತೀಚೆಗೆ ನಮ್ಮ ನಡುವೆ ಜಗಳ ಜಾಸ್ತಿಯಾಗ್ತಿದೆ. ನೀನು ಇಷ್ಟು ಅಸಹನೆ ಮಾಡಿದರೆ ನಾನು ಹೇಗೆ ಬದುಕಿರಲಿ? ಖುಷಿಗೆ, ಬದುಕಿಗೆ, ಧೈರ್ಯಕ್ಕೆ ಜೊತೆ ಯಾರಿದ್ದಾರೆ?

ಆದರೆ ಡೆತ್ ನೋಟಿನಲ್ಲಿ ಇದನ್ನೆಲ್ಲ ಬರೆದಿಲ್ಲ.

Nov 9, 2018

ಖಾಸಗಿ ಬ್ಯಾಂಕಿನ ಅಮಾನವೀಯ ನಡೆ! ಮುಕ್ತ ಆರ್ಥಿಕ ನೀತಿಯ ಫಲ

ಕು.ಸ.ಮಧುಸೂದನ ರಂಗೇನಹಳ್ಳಿ
ಜಾಗತೀಕರಣದ ಮತ್ತೊಂದು ಮಾರಕಾಯುಧ ನಮ್ಮ ರೈತರ ಬಲಿ ಪಡೆಯುವತ್ತ ಮುಂದಾಗಿದೆ.ಅದೇ ಆಕ್ಸಿಸ್ ಬ್ಯಾಂಕ್! 

ತೊಂಭತ್ತರ ದಶಕದಲ್ಲಿ ಜಾರಿಗೊಂಡ ಮುಕ್ತ ಆರ್ಥಿಕ ನೀತಿಯ ಫಲವಾಗಿ 1993ರಲ್ಲಿ ಜನ್ಮ ತಳೆದ ಖಾಸಗಿ ವಲಯದ ಈ ಬ್ಯಾಂಕ್ ದೇಶದಾದ್ಯಂತ 1947 ಶಾಖೆಗಳನ್ನು ಹೊಂದಿದೆ. ಖಾಸಗಿ ವಲಯದ ಅತ್ಯಂತ ಪ್ರಮುಖ ಬ್ಯಾಂಕ್ ಎಂದು ಹೆಸರು ಮಾಡಿರುವ ಇದು ದೇಶದ ಬೇರೆಲ್ಲ ಬ್ಯಾಂಕುಗಳಿಗಿಂತ ಹೆಚ್ಚು ಎ.ಟಿ.ಎಂ. ಗಳನ್ನು ಸಹ ಹೊಂದಿದೆ. ಇದರ ಕೇಂದ್ರಕಛೇರಿ ಮುಂಬೈನಲ್ಲಿದೆ..ಇರಲಿ ನಾನೇನು ಇಲ್ಲಿಈ ಬ್ಯಾಂಕಿನ ಮಾಹಿತಿ ನೀಡಲು ಇದನ್ನು ಬರೆಯುತ್ತಿಲ್ಲ. ವಿಷಯಕ್ಕೆ ಹೋಗುವ ಮೊದಲು ಈ ಬ್ಯಾಂಕಿನ ಬಗ್ಗೆ ಒಂದಿಷ್ಟು ಮಾಹಿತಿ ನಿಮಗಿರಲೆಂದು ಹೇಳಿದೆ. 

ಇದೀಗ ಈ ಬ್ಯಾಂಕು ಕನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸುಮಾರು 181 ರೈತರ ವಿರುದ್ದ ಸಾಲ ಮರುಪಾವತಿ ಮಾಡಿಲ್ಲವೆಂದು ಕೋರ್ಟಿನಿಂದ ಬಂಧನದ ಆದೇಶವನ್ನು ಹೊರಡಿಸಿ ತನ್ನ ರಾಕ್ಷಸೀತನವನ್ನು ಮೆರೆದಿದೆ. ಇದೀಗ ರೈತಸಂಘ ಮತ್ತು ರಾಜ್ಯ ಸರಕಾರಗಳ ಮದ್ಯಸ್ಥಿಕೆಯಿಂದ ತನ್ನ ಕಾನೂನು ಹೋರಾಟವನ್ನು ಸ್ಥಗಿತಗೊಳಿಸುವುದಾಗಿ ಬ್ಯಾಂಕಿನ ಸ್ಥಳೀಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆದರೆ ಅಷ್ಟು ಸುಲಭಕ್ಕೆ ಈ ಬಂಧನದ ವಾರೆಂಟುಗಳು ರದ್ದಾಗುವುದಿಲ್ಲ. ಯಾಕೆಂದರೆ ಈ ವಾರೆಂಟುಗಳನ್ನು ಹೊರಡಿಸಿರುವುದು ಎರಡು ಸಾವಿರ ಮೈಲುಗಳಷ್ಟು ದೂರವಿರುವ ಕೊಲ್ಕತ್ತಾದ ನ್ಯಾಯಾಲಯಗಳು. ಕಾರಣ ಕರ್ನಾಟಕದಲ್ಲಿನ ಈ ಬ್ಯಾಂಕುಗಳು ಕೊಲ್ಕತ್ತಾದ ಆಡಳಿತವಲಯಕ್ಕೆ ಸೇರಿರುವುದು. ಈಗ ಅಲ್ಲಿ ನ್ಯಾಯಾಲಯಗಳಿಗೆ ದೀಪಾವಳಿಯ ರಜೆ ಇರುವುದರಿಂದ ಅವುಗಳು ಮತ್ತೆ ತಮ್ಮಕಲಾಪಗಳನ್ನು ಪ್ರಾರಂಭಿಸುವವರೆಗು ನಮ್ಮ ರೈತರು ಬಂಧನದ ಭೀತಿಯಲ್ಲಿಯೇ ಬದುಕುವ ಅನಿವಾರ್ಯ ಸೃಷ್ಠಿಯಾಗಿದೆ.

Nov 8, 2018

ಕಾಯುತ್ತಲೇ ಇರುತ್ತೇವೆ!

ಕು.ಸ.ಮಧುಸೂದನ ರಂಗೇನಹಳ್ಳಿ
ಯಾವತ್ತೂ ಅಚಲವಾಗಿ ಎದ್ದು ನಿಲ್ಲದೆ
ಗಟ್ಟಿ ದ್ವನಿಯಲ್ಲಿ ಮಾತಾಡದೆ
ನಡುಬಾಗಿಸಿ ನಿಂತವರಿಗೆ
ನೋವುಗಳೇನು ಅಪರಿಚಿತ ನೆಂಟರಲ್ಲ
ಒಡಹುಟ್ಟಿದ ಒಡನಾಡಿಗಳು.
ಮೂಗು ಹಿಡಿದರೆ ಬಾಯಿ ತಾನಾಗೆ ಬಿಡುತ್ತದೆಯೆಂದು ಗೊತ್ತಿದ್ದರು
ಹಿಡಿಯುವ ಧೈರ್ಯ ಸಾಲದೆ
ಕಾಯುತ್ತಿದ್ದೇವೆ ಬೆಕ್ಕಿಗೆ ಗಂಟೆ ಕಟ್ಟಬಲ್ಲ ನಾಯಕನಿಗಾಗಿ.

Nov 5, 2018

ಡ್ರಾಫ್ಟ್ ಮೇಲ್: ಭಾಗ 1

ಚೇತನ ತೀರ್ಥಹಳ್ಳಿ. 
ಚಿನ್ಮಯಿ ಕಾಲು ನೀಡಿಕೊಂಡು, ಲ್ಯಾಪ್‍ಟಾಪ್ ತೆರೆದು ಕುಳಿತಿದ್ದಾಳೆ. ನಡು ಮಧ್ಯಾಹ್ನದ ಬಿಸಿಲು ಗೋಡೆಗೆ ಅಪ್ಪಳಿಸಿ, ಬಾಗಿಲುದ್ದ ನೆಲದ ಮೇಲೆ ಅಂಗಾತ ಬಿದ್ದಿದೆ.

“ಅರೆ! ಬೆಳಕಿನ ಬಾಗಿಲು..” ತನ್ನೊಳಗೆ ಬೆರಗಾಗುತ್ತಾಳೆ.

ಹಗೂರ ಎದ್ದು, ಹೊಸ್ತಿಲಾಚೆ ಬಿಸಿಲಿಗೆ ಬೆನ್ನಾಗಿ ನಿಲ್ಲುತ್ತಾಳೆ. ಮನೆಯೊಳಗೆ ನೆಲದಲ್ಲಿ ಅವಳ ನೆರಳು!

ಮೊಬೈಲ್ ಕ್ಯಾಮೆರಾ ಆನ್ ಮಾಡಿ, ಸೆಲ್ಫಿ ಮೋಡಿನಿಂದ ಮಾಮೂಲಿಗೆ ಬರುತ್ತಾಳೆ.

ಯಾವ ಕೋನದಿಂದ ತೆಗೆದರೆ ಫೋಟೋ ಚೆನ್ನಾಗಿ ಬರುತ್ತದೆ ಅನ್ನೋದು ಅವಳಿಗೆ ಗೊತ್ತಿದೆ.

ತಮ್ಮದೇ ಫೋಟೋ ತೆಗೆದುಕೊಳ್ಳುವವರು ಛಾಯಾಗ್ರಹಣವನ್ನ ವಿಶೇಷವಾಗಿ ಅಭ್ಯಾಸ ಮಾಡಬೇಕಿಲ್ಲ.. ನಾರ್ಸಿಸಿಸ್ಟ್‍ಗಳಾದರೆ ಸಾಕು ಅನ್ನೋದು ಅವಳ ನಂಬಿಕೆ.

ಚಿನ್ಮಯಿ ತೆಗೆದ ಫೋಟೋ ಅದ್ಭುತವಾಗಿ ಬಂದೇಬಂದಿದೆ. ‘ದೇಹ ಮೀರಿದರೂ ನೆರಳಿಗೆ ಹೊಸ್ತಿಲು ದಾಟಲಾರದ ಭಯ’ ಅನ್ನುವ ಒಕ್ಕಣೆ ಕೊಟ್ಟು ಇನ್ಸ್ಟಾಗ್ರಾಮಿನಲ್ಲಿ ಶೇರ್ ಮಾಡುತ್ತಾಳೆ.

ಅವಳು ತೀರ ಪುರುಸೊತ್ತಿನಲ್ಲಿ ಇದ್ದಾಳೆಂದು ಇದನ್ನೆಲ್ಲ ಮಾಡುತ್ತಿಲ್ಲ. ಮಾಡಲೇಬೇಕಿರುವ ಕೆಲಸವೊಂದನ್ನು ಎಷ್ಟು ಸಾಧ್ಯವೋ ಅಷ್ಟು ಹೊತ್ತು ಮುಂದೂಡಲಿಕ್ಕಾಗಿ ಮಾಡುತ್ತಿದ್ದಾಳೆ. ಅದೊಂದು ಮಾಡಿಬಿಟ್ಟರೆ ಈ ದಿನದ ಕೆಲಸವೇ ಮುಗಿದುಹೋಗುತ್ತದೆ. ಆದರೆ ಚಿನ್ಮಯಿ ಯಾವುದನ್ನು ವಿಪರೀತ ಇಷ್ಟಪಡುತ್ತಾಳೋ ಅದನ್ನು ಹೊಂದಲು ಭಯಪಡುತ್ತಾಳೆ.

ಅವಳಿಗೆ ಖಾಲಿಯಾಗುವುದೆಂದರೆ ಇಷ್ಟ.

ಅವಳಿಗೆ ಖಾಲಿಯಾಗುವುದೆಂದರೆ ಭಯ.

Nov 4, 2018

ಧಗಧಗಿಸುವೊಂದು ಮದ್ಯಾಹ್ನ!


ಕು.ಸ.ಮಧುಸೂದನ್

ನಕ್ಷತ್ರಗಳು ಬೂದಿಯಾಗಿ
ಚಂದ್ರ ಕರಗಿ
ಸೂರ್ಯ ನಿಗಿನಿಗಿ ಕೆಂಡವಾಗಿ

ತೆಂಗಿನ ಮರಕೆ ಬಡಿದು ಸಿಡಿಲು
ನಾಲ್ಕಂಕಣದ ಮನೆತೊಲೆಗಳಿಗೆ ಗೆದ್ದಲು
ನೆಲ ಮಾಳಿಗೆಯೊಲು ಹೂತಿಟ್ಟ ಹೆಣಗಳು ತೂಗಿ

ಹುಳು ಬಿದ್ದು ಅನ್ನದ ತಟ್ಟೆಯೊಳಗೆ
ಹದ್ದುಗಳು ಹಣಕುತ್ತ ಅಮೃತದ 
ಬಟ್ಟಲೊಳಗೆ ಬಾಗಿ
ಕು.ಸ.ಮಧುಸೂದನ್ ರವರ ಮತ್ತಷ್ಟು ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.