ನವೆಂ 12, 2018

ಮಾತನಾಡಲಾಗಲೇ ಇಲ್ಲ!

ಕು.ಸ.ಮಧುಸೂದನ ರಂಗೇನಹಳ್ಳಿ
ಅಪರೂಪಕ್ಕೆ ಸಿಕ್ಕ ಗೆಳೆಯ
ಮಾತನಾಡುತ್ತ ಹೋದೆವು
ಬೇಸಿಗೆ ಬಗ್ಗೆ
ಬಾರದ ಮಳೆ ಏರುತ್ತಿರುವ ಬೆಲೆ ಬಗ್ಗೆ
ಬೆಳೆಯುತ್ತಿರುವ ಮಕ್ಕಳ ಅವರ ಓದಿನ ಬಗ್ಗೆ
ಮದುವೆಗೆ ಬಂದ ಮಗಳ 
ಮದುವೆಗೆಂದು ಚೀಟಿಹಾಕಿದ ಹಣದ ಬಗ್ಗೆ 
ಮಾತಾಡಿದೆವು
ಮಿತಿ ಮೀರುತ್ತಿರುವ ಬಿಪಿ ಶುಗರ್ ಬಗ್ಗೆ
ಹೆಂಡತಿಯನ್ನು ಕಾಡುತ್ತಿರುವ ಮಂಡಿನೋವಿನ ಬಗ್ಗೆ
ಮುಡಬಾದ ನಾಟಿ ಔಷದಿ ಎಣ್ಣೆಯ ಬಗ್ಗೆ
ಖರ್ಚಾಗುತ್ತಿರುವ ಹಣದ ಬಗ್ಗೆ
ಮಾತಾಡಿದೆವು.

ಆಫೀಸಿನಲ್ಲಾಗುತ್ತಿರುವ ಬದಲಾವಣೆಯ ಬಗ್ಗೆ 
ಅರ್ಥವಾಗದ ಕಂಪ್ಯೂಟರಿನ ಬಳಕೆ ಬಗ್ಗೆ
ಸಿಗದೆಹೋದ ಪ್ರಮೋಷನ್ನಿನ ಬಗ್ಗೆ
ಮಾತಾಡಿದೆವು.

ಇಷ್ಟೆಲ್ಲ ಮಾತಾಡಿದ ಮೇಲೂ
ಹಲವು ವಿಷಯಗಳು ಉಳಿದೇ ಹೋದವು
ಕಾಡುತ್ತಿರುವ ನಡುವಯಸ್ಸಿನ ಒಂಟಿತನದ ಬಗ್ಗೆ
ಹೆಂಡತಿಯೊಡನೆ ಕೂಡಲಾಗದ ಅಸಹಾಯಕತೆಯ ಬಗ್ಗೆ
ಎಷ್ಟು ನಿಯಂತ್ರಿಸಿದರೂ ಕಾಡುವ ಅಪರಿಚಿತ ಹೆಣ್ಣಿನ ಬಗ್ಗೆ
ಹಿಂಬಾಲಿಸುತ್ತಿರುವ ಸಾವಿನ ಭಯದ ಬಗ್ಗೆ
ಮಾತನಾಡಲಾಗಲೇ ಇಲ್ಲ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ