Mar 27, 2016

ಅನುಕಂಪದ ಪ್ರಕೃತಿ ಮತ್ತು ದುರಂಹಕಾರಿ ಮನುಷ್ಯ

ಡಾ. ಅಶೋಕ್.ಕೆ.ಆರ್.
27/03/2016
ಇಂಡಿಪೆಂಡೆನ್ಸ್ ಡೇ ಎನ್ನುವ ಇಂಗ್ಲೀಷ್ ಚಿತ್ರದಲ್ಲಿ ಪರಗ್ರಹ ಜೀವಿಗಳು ಒಂದು ಗ್ರಹದಿಂದ ಮತ್ತೊಂದು ಗ್ರಹಕ್ಕೆ ವಲಸೆ ಹೋಗುತ್ತ ಆ ಗ್ರಹದ ಸಮಸ್ತ ಸಂಪನ್ಮೂಲವನ್ನು ಗೋರಿ ಬಳಿದಾದ ಮೇಲೆ ಮತ್ತೊಂದು ಗ್ರಹದೆಡೆಗೆ ಹೋಗಿಬಿಡುತ್ತಾರೆ. ಈ ಏಲಿಯನ್ನುಗಳ ಅಧ್ಯಯನದಲ್ಲಿ ತೊಡಗಿಕೊಂಡ ಕೆಲವರ ಪ್ರಕಾರ ಮನುಷ್ಯ ಜೀವಿಯೇ ಈ ಭೂಮಿಗೆ ಏಲಿಯನ್ನು, ಬೇರೆ ಗ್ರಹದಿಂದ ಇಲ್ಲಿಗೆ ಬಂದಿದ್ದಾನವನು ಎನ್ನುವ ಗುಮಾನಿಯನ್ನು ವ್ಯಕ್ತಪಡಿಸುತ್ತಾರೆ! ಇಂಡಿಪೆಂಡೆನ್ಸ್ ಡೇ ಚಿತ್ರದಲ್ಲಿ ಭೂಮಿಯನ್ನು ಕಬಳಿಸಲು ಬಂದ ಏಲಿಯನ್ನಿಗೂ ಭೂಮಿ ಮೇಲಿದ್ದು ಭೂಮಿಯನ್ನು ಕಬಳಿಸುತ್ತ ಅನ್ಯಗ್ರಹದೆಡೆಗೆ ದೃಷ್ಟಿ ಹರಿಸಿರುವ ಮನುಷ್ಯನಿಗೂ ಸಾಮ್ಯತೆ ಇದೆಯಲ್ಲವೇ?! 

ಈ ಬಾರಿ ರಣ ಬಿಸಿಲು, ಪ್ರತೀ ಬಾರಿಯೂ ಹಿಂದಿನ ಸಲಕ್ಕಿಂತ ಹೆಚ್ಚು ಬಿಸಿಲಿದೆ ಎಂಬನುಭವವಾಗುತ್ತಿದೆ. ‘ಅಯ್ಯೋ ಬಳ್ಳಾರಿ ರಾಯಚೂರಿನಲ್ಲಿ ಟೆಂಪರೇಚರ್ರು ನಲವತ್ತು ದಾಟುತ್ತಂತೆ ಅದೆಂಗೆ ಇರ್ತಾರೋ!’ ಎಂದಚ್ಚರಿ ವ್ಯಕ್ತಪಡಿಸುತ್ತಿದ್ದ ಹಳೇ ಮೈಸೂರಿಗರಿಗೂ ಈಗ ನಲವತ್ತು ಡಿಗ್ರಿ ನೋಡುವ ಸಂಭ್ರಮ ಹತ್ತಿರದಲ್ಲೇ ಇದೆ ಎಂಬ ಭಾವನೆ ಬರುತ್ತಿದೆ. ಇನ್ನು ಏಪ್ರಿಲ್ ಮೇ ತಿಂಗಳಿನಲ್ಲಿ ನಲವತ್ತು ನೋಡುತ್ತಿದ್ದ ಉತ್ತರ ಕರ್ನಾಟಕದಲ್ಲಿ ಫೆಬ್ರವರಿ ತಿಂಗಳಲ್ಲೇ ನಲವತ್ತೊಂದು ನಲವತ್ತೆರಡು ನೋಡುವ ಕರ್ಮ ಎದುರಾಗಿದೆ. ಶಿವರಾತ್ರಿವರ್ಗೂ ಚಳಿ ಇರುತ್ತೆ ಅನ್ನೋ ನಂಬಿಕೆ ಸುಳ್ಳಾಗಿಬಿಟ್ಟಿದೆ ಈ ವರ್ಷ. ಈ ರೀತಿಯ ಹವಾಮಾನ ವೈಪರೀತ್ಯಗಳು ಕೂಡ ಪ್ರಕೃತಿಯ ನಿಗೂಡ ನೀತಿ ನಿಯಮಗಳ ಅನುಸಾರವಾಗಿಯೇ ಇರುತ್ತದೆ ಎನ್ನುವುದು ಹೌದಾದರೂ ಮನುಷ್ಯ ತನ್ನ ಪ್ರತಿ ಹೆಜ್ಜೆಯಲ್ಲೂ ಪ್ರಕೃತಿಯ ಮೇಲೆ ನಡೆಸುತ್ತಿರುವ ಅನಾಚಾರಗಳು ಈ ಹವಾಮಾನ ವೈಪರೀತ್ಯಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದ್ದಾನೆ. ಏನೇ ಆದ್ರೂ ಪ್ರಕೃತಿಗೆ ತನ್ನದೇ ಒಡಲ ಕುಡಿಯಾದ ಮನುಷ್ಯನ ಬಗೆಗೂ ಒಂದಷ್ಟು ಪ್ರೀತಿ, ಕನಿಕರ, ಅನುಕಂಪವಿದ್ದೇ ಇದೆ. ಆ ಅನುಕಂಪವನ್ನೂ ದುರಹಂಕಾರದಿಂದ ಕಡೆಗಣಿಸುವಷ್ಟು ನಾವು ನೀಚರಾಗಿಬಿಟ್ಟಿದ್ದೇವೆ ಎನ್ನುವುದಕ್ಕೆ ಸಾಕ್ಷಿಯಾಗಿ ದಾವಣಗೆರೆಯ ಜಗಳೂರು ತಾಲ್ಲೂಕಿನ ದೊಣೆಹಳ್ಳಿಯ ಕಲ್ಲು ಕ್ವಾರಿಯ ಉದಾಹರಣೆಯಿದೆ.

ಒಂದು ರೌಂಡು ಭೂಮಿ ಮೇಲಿನ ನೀರನ್ನೆಲ್ಲ ಮಲಿನಗೊಳಿಸಿ, ಉಪಯೋಗಿಸಲು ಯೋಗ್ಯವಾಗದಂತೆ ಮಾಡಿ, ಖಾಲಿಮಾಡಿ ಅಂತರ್ಜಾಲಕ್ಕೆ ಕೈ ಹಾಕಿ ಬಹಳಷ್ಟು ದಶಕಗಳೇ ಕಳೆದುಹೋದವು. ನೂರಡಿಯಲ್ಲಿ ನೀರು ದೊರಕುತ್ತಿದ್ದ ನದಿ ಪಾತ್ರಗಳಲ್ಲೂ ಈಗ ಸಾವಿರ ಅಡಿಯವರೆಗೆ ಕೊರೆಸಬೇಕಾದ ಅನಿವಾರ್ಯತೆ. ಸಾವಿರ ಅಡಿ ಕೊರಸಿದ ಮಾತ್ರಕ್ಕೇ ನೀರು ಸಿಕ್ಕೇಬಿಡುತ್ತದೆನ್ನುವ ಗ್ಯಾರಂಟಿಯೇನಿಲ್ಲ. ಒಂದಾದ ಮೇಲೊಂದು ಬೋರ್ ವೆಲ್ ಕೊರೆಸಿ ಕೊರೆಸಿ ಸಾಲ ಹೆಚ್ಚಾಗಿ ಆರಂಭ ತೊರೆದು ಬೆಂಗಳೂರು ಸೇರಿರುವವರ ಸಂಖೈ ಕಡಿಮೆಯೇನಲ್ಲ. ಭೂಮಿ ಮೇಲೆ ಭೂಮಿ ಕೆಳಗೆ ಮನುಷ್ಯನಿಂದ ಇಷ್ಟೆಲ್ಲ ತೊಂದರೆ ಅನುಭವಿಸಿದ ನೀರಿಗೂ ಈ ಬಿಸಿಲಿನ ಝಳಕ್ಕೆ ಮನುಷ್ಯ ಮತ್ತು ಇನ್ನಿತರೆ ಪ್ರಾಣಿಗಳು ಅನುಭವಿಸುತ್ತಿರುವ ಕಷ್ಟಗಳನ್ನು ನೋಡಿ ಅನುಕಂಪ ಮೂಡಿರಬೇಕು. ಕೊಳವೆ ಬಾವಿಗಳ ಬಾಯಿಗೆ ಸಿಗದೇ ತಪ್ಪಿಸಿಕೊಂಡು ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಎಂಬ ಊರಿನಲ್ಲಿ ನವ ಭಾರತ ಬಿಲ್ಡಿಂಗ್ ಕಂಪನಿಯವರ ಕಲ್ಲು ಕ್ವಾರಿಯ ಹೊಂಡದ ಸಂದಿಯಲ್ಲಿ ಆಕಾಶ ನೋಡಿತು ನೀರು! ನೋಡನೋಡುತ್ತಿದ್ದಂತೆಯೇ ಇಡೀ ಕಲ್ಲು ಕ್ವಾರಿಯಲ್ಲಿ ಬೇಸಿಗೆಯಿಡೀ ಸುತ್ತಮುತ್ತಲಿನ ಹಳ್ಳಿಗಳ ಜನ – ಜಾನುವಾರುಗಳಿಗೆಲ್ಲ ಪೂರೈಸಲು ಸಾಕಾಗುವಷ್ಟು ನೀರು ತುಂಬಿಕೊಂಡಿಬಿಟ್ಟಿತು. ಊರಿನ ಜನರಿಗೆಲ್ಲ ಸಂತಸ, ಆದರೆ ಈ ಸಂತಸ ಎಲ್ಲರಲ್ಲೂ ಕಾಣಲಿಲ್ಲ.

ಕಲ್ಲು ಕ್ವಾರಿಯ ಮೇಲಿನ ಅಧಿಕಾರವಿದ್ದಿದ್ದು ಖಾಸಗಿ ಕಂಪನಿಗೆ. ಕಾನೂನಿನ ಪ್ರಕಾರ ಅದು ಅವರ ಜಾಗ, ಅವರ ಜಾಗದಲ್ಲಿನ ನೀರನ್ನು ಅವರು ಏನು ಬೇಕಾದರೂ ಮಾಡಬಹುದು. ಸುತ್ತಮುತ್ತಲಿನ ಊರಿನವರಿಗೆಲ್ಲ ನೀರು ಕೊಟ್ಟು ಕಂಪನಿಯವರಿಗೇನಾಬೇಕಿತ್ತು? ದೊಡ್ಡ ದೊಡ್ಡ ಮೋಟಾರು ಪಂಪುಗಳನ್ನು ತರಿಸಿ ಕಲ್ಲು ಕ್ವಾರಿಯ ಹೊಂಡದಲ್ಲಿ ತುಂಬಿದ ಸಿಹಿ ನೀರನ್ನು ರಸ್ತೆಗೆ ಹರಿಸಲಾರಂಭಿಸಿದರು. ಇದು ಸಾರ್ವಜನಿಕ ಆಸ್ತಿ ಎಂದು ಘೋಷಿಸಿ, ಆ ಕಂಪನಿಗೆ ಒಂದಷ್ಟು ಪರಿಹಾರವನ್ನೂ ಕೊಟ್ಟು ನೀರು ಹೊಂಡವನ್ನು ರಕ್ಷಿಸಬೇಕಾದ ಆಡಳಿತ ಯಂತ್ರ ಕೂಡ ಕಲ್ಲು ಕ್ವಾರಿಯ ‘ಒಡೆಯರ’ ನಿರ್ಧಾರಗಳಿಗೇ ಮಣೆ ಹಾಕಿತು. ಸಾವಿರ ಸಾವಿರ ನೀರು ರಸ್ತೆಯ ಮೇಲೆ ಹರಿಯಲಾರಂಭಿಸಿತು. ಪ್ರಕೃತಿಯೇ ಕುಡೀರಪ್ಪ ಅಂತ ಹೊರಹಾಕಿದ ನೀರನ್ನು ಮತ್ತೆ ಅಂತರ್ಜಲಕ್ಕೇ ಕಳಿಸುವ ಹುನ್ನಾರ! ಬೇಸತ್ತ ಅಲ್ಲಿನ ಜನತೆ ಹೊಂಡಕ್ಕೆ ಮುತ್ತಿಗ ಹಾಕಿ ಪಂಪುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದಿವತ್ತಿನ ಪ್ರಜಾವಾಣಿ ವರದಿ ಹೇಳುತ್ತಿದೆ. ಈ ಮುತ್ತಿಗೆ ಕಾನೂನಿನ ಬೆಂಬಲ ಸದ್ಯಕ್ಕಿಲ್ಲವೇನೋ, ಆದರೆ ಆಡಳಿತಾಧಿಕಾರಿಗಳು ಮನಸ್ಸು ಮಾಡಿದರೆ ದೊಣೆಹಳ್ಳಿ ಮತ್ತು ಸುತ್ತಮುತ್ತಲಿನ ಊರುಗಳ ನೀರಿನ ದಾಹ ಕಡೇ ಪಕ್ಷ ಈ ವರ್ಷವಾದರೂ ನೀಗುತ್ತದೆಯಲ್ಲವೇ? ದುರಹಂಕಾರಿ ಮನುಷ್ಯ ಏನು ಮಾಡುತ್ತಾನೋ ಕಾದು ನೋಡೋಣ.
Update: ಕಲ್ಲುಕ್ವಾರಿಯ ಹೊಂಡದಲ್ಲಿನ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಬೇಕೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ದಾವಣಗೆರೆಯ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

Mar 25, 2016

ಮೇಕಿಂಗ್ ಹಿಸ್ಟರಿ: ಮಧ್ಯವರ್ತಿ – ಖರೀದಿದಾರ ವರ್ಗದ ಉಗಮಕ್ಕಿದ್ದ ಸಾಮಾಜಿಕ ಸ್ಥಿತಿಗತಿ:- 2

making history ashok kr
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
25/03/2016
ಅಡಿಕೆ ಮತ್ತು ತಂಬಾಕು ವ್ಯಾಪಾರದಲ್ಲಿ ಮಧ್ಯವರ್ತಿ ವ್ಯಕ್ತಿತ್ವ ಬೆಳೆಸಿಕೊಳ್ಳದ ಕನ್ನಡಿಗ ವರ್ತಕರ ಏಕಸಾಮ್ಯವನ್ನು ಹಾಳು ಮಾಡಿದ ವಸಾಹತು ಶಕ್ತಿ ತನ್ನ ಮಧ್ಯವರ್ತಿಗಳನ್ನು ಬೆಳೆಸಿದ ರೀತಿಯನ್ನು ಸ್ಪಷ್ಟವಾಗಿ ಕಾಣಬಹುದು. 

ನರೇಂದ್ರ ಪಣಿ ಹೇಳುತ್ತಾರೆ: “ವರ್ತಕರಲ್ಲಿ ಮತ್ತಷ್ಟು ಅಸಹನೆ ಉಂಟಾಗಿತ್ತು; ಕಬ್ಬನ್ (ಬ್ರಿಟೀಷರ ನೇರ ಆಡಳಿತ ಜಾರಿಯಾದ ಮೇಲೆ ಮೈಸೂರು ರಾಜ್ಯದ ಕಮಿಷನರ್ ಕಬ್ಬನ್) ವರ್ತಕರು ಒಂದು ಮಿತಿಗಿಂತ ಮೇಲೆ ಬೆಳೆಯದಂತೆ ಮಾಡಿದ ಮೇಲೆ. ಇದರಿಂದ ತಂಬಾಕು ಮತ್ತು ಅಡಿಕೆ ವ್ಯಾಪಾರ ನಡೆಸಿಕೊಂಡು ಬಂದಿದ್ದ ಶ್ರೀಮಂತ ವರ್ತಕರ ಒಂದು ವರ್ಗದ ಪಾರಂಪರಿಕ ಏಕಸಾಮ್ಯತೆ ಮುರಿದುಬಿತ್ತು. ಬೆಂಗಳೂರು ಮತ್ತು ಸುತ್ತಮುತ್ತಲಿನ ತಂಬಾಕು ಏಕಸಾಮ್ಯತೆಯನ್ನು ಮುರಿಯಲು ಮೊದಲು ಕಟ್ಟಳೆ ವಿಧಿಸಿ ನಂತರ ಉತ್ತಮ ಗುಣಮಟ್ಟದ ವಿದೇಶಿ ತಂಬಾಕನ್ನು ಕಡಿಮೆ ಬೆಲೆಗೆ ಮಾರುಕಟ್ಟೆಗೆ ಪರಿಚಯಿಸಿ ಮತ್ತು ಒಂದು ಮಣ ತಂಬಾಕಿಗೆ ಮೂರುವರೆ ರುಪಾಯಿ ಸಾಯರ್ ತೆರಿಗೆಯನ್ನು ಮಾರಾಟವಾಗುವ ಎಲ್ಲಾ ತಂಬಾಕಿನ ಮೇಲೂ ವಿಧಿಸಿದರು.” (89) 

ಹೀಗೆ ಸ್ವತಂತ್ರವಾಗಿದ್ದ ಕನ್ನಡ ವರ್ತಕರನ್ನು ಬುಡಸಹಿತ ಕೀಳಲಾಯಿತು. ಮೊದಲ ಸಂಪುಟದಲ್ಲಿ ಬಣಜಿಗ ವರ್ತಕ ಸಮುದಾಯ ಉನ್ನತಿಯಿಂದ ಜಾರಿಬಿದ್ದಿದ್ದನ್ನು ನಾವು ನೋಡಿದ್ದೇವೆ. (90) ಮೂರನೇ ಸಂಪುಟದಲ್ಲಿ ಈ ಬೆಳವಣಿಗೆಗಳು ಕರ್ನಾಟಕದ ರಾಷ್ಟ್ರೀಯ ಪ್ರಶ್ನೆಯ ಮೇಲುಂಟು ಮಾಡಿದ ಪರಿಣಾಮಗಳನ್ನು ನೋಡೋಣ. ಸದ್ಯಕ್ಕೆ ಇದೇ ರೀತಿಯ ವಿದ್ಯಮಾನ ಬೇರೊಂದು ಪ್ರದೇಶದಲ್ಲಿ ನಡೆದದ್ದರ ಬಗ್ಗೆ ಉಲ್ಲೇಖಿಸುವ ಸುನಿತಿ ಘೋಷರ ಬರಹ ನೋಡೋಣ: “ವಸಾಹತು ಆಳ್ವಿಕೆಯ ಮೊದಲ ಕೆಲವು ವರ್ಷಗಳಲ್ಲಿ ಪೂರ್ವ ಭಾರತದ ಹಳೆಯ ದೊಡ್ಡ ವರ್ತಕರು ಮತ್ತು ಬ್ಯಾಂಕರ್ಗಳು ದಿವಾಳಿಯಾದರೆ ಬ್ರಿಟೀಷರ ದಲ್ಲಾಳಿಗಳಾಗಿ ಕಾರ್ಯನಿರ್ವಹಿಸಿದವರು ಮತ್ತು ಬನಿಯಾಗಳು ಉನ್ನತಿ ಕಂಡರು. ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ವರ್ತಕರನ್ನು ವಿದೇಶಿ ವಹಿವಾಟಿನ ಜೊತೆಗೆ ದೇಶೀ ವ್ಯಾಪಾರದಿಂದಲೂ ಮೂಲೋಚ್ಛಾಟನೆ ಮಾಡಲಾಯಿತು.” (91) 

ಮತ್ತೊಂದು ವಿಧದ ಮಧ್ಯವರ್ತಿತನವನ್ನು ಅಧಿಕಾರಶಾಹಿಯಲ್ಲಿ ಕಾಣಬಹುದು. ವಸಾಹತುಶಾಹಿಯ ಪ್ರಾರಂಭದ ದಿನಗಳಲ್ಲಿ ನಕಲಿ ಅಧಿಕಾರಶಾಹಿಯನ್ನು ಹುಟ್ಟುಹಾಕುವ ವಸಾಹತಿನ ಪ್ರಯತ್ನವನ್ನು ಕಾಣಬಹುದು; ಇದು ಮಧ್ಯವರ್ತಿಯ ರೂಪವನ್ನು ಹೊಂದಿತ್ತು. ಈ ವರ್ಗದ ಜನನವಾಗದೆ ತಮ್ಮ ಆಳ್ವಿಕೆ ಅಭದ್ರವೆಂದು ನಿರ್ಧರಿಸಿದ್ದರು. 

ರಾಜಾ ಎಂಬ ನಾಮಕಾವಸ್ಥೆ ಆಡಳಿತಗಾರನನ್ನು ಕಿತ್ತು ಹಾಕಿ 1831ರಲ್ಲಿ ಈಸ್ಟ್ ಇಂಡಿಯಾ ಕಂಪನಿ ನೇರ ಆಳ್ವಿಕೆಯನ್ನು ನಡೆಸಲಾರಂಭಿಸಿದಾಗ: “ಸಾಮ್ರಾಜ್ಯವನ್ನು ವಶಪಡಿಸಿಕೊಂಡ ಪ್ರಾರಂಭದಲ್ಲಿ ಗವರ್ನರ್ ಜೆನರಲ್ ಮದ್ರಾಸಿನ ಸರಕಾರಕ್ಕೆ ಕೊಟ್ಟ ಮೊದಲ ಸೂಚನೆ – ಕಮಿಷನರ್ ಗಳ ಕೆಳಗೆ ಕಾರ್ಯನಿರ್ವಹಿಸುವ ಏಜೆಂಟರು ದೇಶೀಯರಾಗಿರಬೇಕು…” (92) 

ಬ್ರಿಟೀಷರ ಈ ನಿರ್ಣಯಕ್ಕೆ ಕಾರಣ ಮನ್ರೋ ಕೈಗೊಂಡ ನಿರಂತರ ಪ್ರಚಾರ; ವಸಾಹತು ಸೌಧವನ್ನುಳಿಸಲು ಮಧ್ಯವರ್ತಿ ಅಧಿಕಾರಶಾಹಿಯ ಪಾತ್ರದ ಬಗೆಗಿನ ಮನ್ರೋನ ದೂರದರ್ಶಿ ಒಳನೋಟವನ್ನು ವಸಾಹತಿನ ಸಮರ್ಥಕರು “ಮನ್ರೋ ಲಿಬರಲಿಸಂ” (ಮನ್ರೋನ ಪ್ರಗತಿಪರತೆ) ಎಂದು ಕರೆದರು.” (93) 

1822ರಲ್ಲಿ ಎಲ್ಫಿನ್ ಸ್ಟೋನಿಗೆ ಬರೆದ ಪತ್ರದಲ್ಲಿ ಮನ್ರೋ: “ಕಂದಾಯ ಮಂಡಳಿಗೆ ಸಂಪೂರ್ಣ ದೇಶೀ ಸ್ಪರ್ಶ ನೀಡಿದ್ದೇನೆ….. ಇದು ಸಮರ್ಥ ಮತ್ತು ಮಹತ್ವಾಕಾಂಕ್ಷೆಯುಳ್ಳ ಸ್ಥಳೀಯರಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ ಮತ್ತು ಅರ್ಧ ಶತಮಾನ ಅಥವಾ ಮುಂದಿನ ಒಂದು ಶತಮಾನದವರೆಗೆ ಸರ್ಕಾರ ಅವರಿಗೊಂದು ಪಾಲು ಕೊಡುವುದಕ್ಕೆ ದಾರಿ ತಯಾರುಮಾಡುತ್ತದೆ.” (95) 

ವಸಾಹತುಶಾಹಿ ಸ್ವಲ್ಪ ತಡವಾಗಿ ವಶಪಡಿಸಿಕೊಂಡ ಕರ್ನಾಟಕ ಪ್ರಾಂತ್ಯಕ್ಕೆ ಈಗಾಗಲೇ ‘ಅಭಿವೃದ್ಧಿ’ ಹೊಂದಿದ ಮದ್ರಾಸ್ ಮತ್ತು ಬಾಂಬೆಯ ಮಧ್ಯವರ್ತಿ ಅಧಿಕಾರಿಗಳು ಪ್ರವೇಶಿಸಿದರು. ಬ್ರಿಟೀಷ್ ಆಡಳಿತದ ವಕ್ತಾರರಾದ ಈ ಮೇಲ್ಮಟ್ಟದ ಅಧಿಕಾರಿಶಾಹಿ ಚಿಕ್ಕ ಸಂಖೈಯಲ್ಲಿದ್ದರೂ ಕರ್ನಾಟಕಕ್ಕೆ ಮಧ್ಯವರ್ತಿ ಅಧಿಕಾರಿಗಳನ್ನು ಪೂರೈಸುವ ಪ್ರಮುಖ ಮೂಲವಾದರು. 

ರಾಜ್ಯದ ಎರಡು ತೋಳುಗಳಂತಿದ್ದ ರೆವಿನ್ಯೂ ಆಡಳಿತ (ಪೋಲೀಸ್ ಮತ್ತು ಮ್ಯಾಜಿಸ್ಟ್ರೇಟ್ ಕಾರ್ಯ ಜೊತೆಗೂಡಿದ) ಮತ್ತು ಸೈನ್ಯ, ವಸಾಹತುಶಾಹಿಯ ಮೊದಲ ದಶಕಗಳಲ್ಲಿ ಮಧ್ಯವರ್ತಿ ಅಧಿಕಾರಿಗಳನ್ನು ಅಂದಗೊಳಿಸಿದರು. ಈ ಎರಡೂ ವ್ಯವಸ್ಥೆಗೆ ಹಸಿ ಮಾಂಸವನ್ನೇ ಭಕ್ಷಿಸುವಷ್ಟು ಹಸಿವಿತ್ತು. ಕರ್ನಾಟಕದ ರೆವೆನ್ಯೂ ಆಡಳಿತದಲ್ಲಿ, ಅದು ತಳಮಟ್ಟದಲ್ಲಿರಬಹುದು ಮೇಲ್ಮಟ್ಟದಲ್ಲಿರಬಹುದು, ಶ್ರೀಮಂತ ಭೂಮಾಲೀಕರೇ ಇದ್ದರು. ರೆವೆನ್ಯೂ ವ್ಯವಸ್ಥೆಯಲ್ಲಿ ಬ್ರಾಹ್ಮಣರ ಪ್ರಾಬಲ್ಯವಿತ್ತು. ಹತ್ತಲವು ಬಣ್ಣಗಳಲ್ಲಿ ತಮ್ಮನ್ನು ತಾವು ತೋರ್ಪಡಿಸಿಕೊಳ್ಳುತ್ತಿದ್ದರು. ಆದರೆ ಲಂಬ ಕಪ್ಪು ಪಟ್ಟಿಯವರು ತೆರಿಗೆ ವಸೂಲಿಯ ಶರಾತ್ ವ್ಯವಸ್ಥೆ ಜಾರಿಗೆ ಬಂದಾಗ ಮೈಸೂರು ಸರಕಾರದ 30% ಜಾಗಗಳನ್ನಾಕ್ರಮಿಸಿಕೊಂಡುಬಿಟ್ಟಿದ್ದರು. ಪ್ರತಿರೋಧ ಎದ್ದ ನಂತರ ನಗರದ ಸೈನ್ಯದ ಮುಂದಾಳತ್ವ ವಹಿಸಿದ ಹೆಚ್. ಸ್ಟೋಕ್ಸ್ ಅಧಿಕಾರಶಾಹಿಯಲ್ಲಿ ಲಿಂಗಾಯತರನ್ನು ಸೇರಿಸಿಕೊಳ್ಳಬೇಕೆಂದು ಶಿಫಾರಸು ಮಾಡಿದ. (96) ಅಧಿಕಾರಶಾಹಿಯು, ಕಟ್ಟಿಕೊಂಡ ಚರಂಡಿಯಾಗಿದ್ದನ್ನು ನೋಡಿದ ಕೆಲವು ಸಮಕಾಲೀನ ಲೇಖಕರಿಗೆ ಇದು ಬ್ರಿಟೀಷರ ಬ್ರಾಹ್ಮಣ ವಿರೋಧಿ ನ್ಯಾಯಪರತೆಯಂತೆ ಕಂಡಿತು. ಆದರಿದು ಕುತಂತ್ರಿ ಬ್ರಿಟೀಷರು ಆಳ್ವಿಕೆಯ ಚಕ್ರ ಮುಂದೋಡಲು ಕಂಡುಕೊಂಡ ಅವಕಾಶವಾದಿ ಅನುಕೂಲತೆಯಾಗಿತ್ತು. ಕೆಳಮಟ್ಟದ ಅಧಿಕಾರಿಗಳಲ್ಲಿ ಹೆಚ್ಚಿನವರು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದರು. ಮೇಲಿನ ಅಧಿಕಾರ, ಬ್ರಹ್ಮನ ಆದೇಶದಂತೆಯೇ, ಬ್ರಾಹ್ಮಣರ ವಶವಾಗಿತ್ತು. 

ಈ ಸಂಪುಟ ನಿಷ್ಠವಾಗಿರುವ ವಸಾಹತಿನ ಮೊದಲ ದಶಕಗಳಲ್ಲಿ ಅಧಿಕಾರಶಾಹಿಯನ್ನು ಭೂಮಾಲೀಕರಿಂದ ಬೇರ್ಪಡಿಸುವ ನಿರೀಕ್ಷೆಯನ್ನು ಕಲ್ಪಿಸುವುದೂ ಸಾಧ್ಯವಿಲ್ಲ. ಕೊಬ್ಬಿದ ಅಧಿಕಾರಶಾಹಿಗಳು ಅದೇ ಸಮಯದಲ್ಲಿ ವಿಸ್ತಾರ ಭೂಪ್ರದೇಶದ ಮಾಲೀಕರಾಗಿಯೂ ಏಳಿಗೆ ಹೊಂದಿದರು. ಹಾಗಾಗಿ ಇವರನ್ನು ‘ಊಳಿಗಮಾನ್ಯ – ಮಧ್ಯವರ್ತಿ ಅಧಿಕಾರಿಗಳು’ ಎಂದು ಕರೆದರೆ ತಪ್ಪಾಗಲಾರದು. 

ಮೈಸೂರಿನ ಆಡಳಿತಶಾಹಿಯ ಕಟ್ಟುವಿಕೆಯ ಬಗ್ಗೆ ಶಾಮ ರಾವ್ ಹೇಳುತ್ತಾರೆ: “ಮೂರನೇ ಕೃಷ್ಣರಾಜ ಒಡೆಯರ ನೇತೃತ್ವದಲ್ಲಿ ಹೊಸ ಸರಕಾರದ ಸ್ಥಾಪನೆಯಾದಾಗ ಹಲವು ಪಾಳೇಗಾರರು ದೇಶದ ವಿವಿಧ ಭಾಗಗಳಿಗೆ ನಿವೃತ್ತರಾದರು, ಭವಿಷ್ಯದ ಗೊಂದಲಗಳಿಂದ ಸಿಗಬಹುದಾದ ಅವಕಾಶಗಳ ನಿರೀಕ್ಷೆಯಲ್ಲಿ. ಪ್ರತಿರೋಧದ ವ್ಯಕ್ತಿತ್ವದ ಚಿಕ್ಕ ಸಂಖೈಯ ಪಾಳೇಗಾರರನ್ನು ಬಂಧಿಸಲಾಯಿತು, ರಾಜಿ ಸೂತ್ರಕ್ಕೆ ಒಪ್ಪಿಕೊಂಡವರಿಗೆ (ಇವರ ಸಂಖೈಯೇ ಅಧಿಕ) ಸೂಕ್ತ ಸರಕಾರಿ ಪಿಂಚಣಿ ನೀಡಲಾಯಿತು ಅಥವಾ ಸಾರ್ವಜನಿಕ ಆಡಳಿತ/ ಸೈನ್ಯಕ್ಕೆ ನೇಮಕ ಮಾಡಿಕೊಳ್ಳಲಾಯಿತು…… ಪೂರ್ಣಯ್ಯ ಇವರ ಭಾವನೆಗಳಿಗೆ ಯಾವಾಗಲೂ ಗೌರವ ಕೊಡುತ್ತ ದಯಾಳುತನದಿಂದ ಮತ್ತು ಕೃಪಾ ದೃಷ್ಟಿಯಿಂದ ನೋಡಿಕೊಂಡರು.” (97) 

ಮಧ್ಯವರ್ತಿ ಅಧಿಕಾರಶಾಹಿಯ ಸಂಯೋಜನೆ ಮತ್ತು ಅದಕ್ಕಿದ್ದ ಊಳಿಗಮಾನ್ಯತೆಯ ಬೇರುಗಳ ಬಗ್ಗೆ ಶ್ಯಾಮ್ ಭಟ್ ಹೀಗೆ ತಿಳಿಸುತ್ತಾರೆ: “ರೆವೆನ್ಯೂ ಆಡಳಿತವನ್ನು ಬ್ರಿಟೀಷರು ಪರಿಚಯಿಸಿದಾಗ ಅದರ ಕಾರ್ಯನಿರ್ವಹಣೆಗೆ ಸ್ಥಳೀಯ ವೈಶಿಷ್ಟ್ಯಗಳನ್ನು ಚೆನ್ನಾಗಿ ಬಲ್ಲ ಜನರ ಅವಶ್ಯಕತೆಯಿತ್ತು. ಕಂಪನಿಯ ಅಧಿಕಾರಿಗಳಿಗೆ ಆ ರೀತಿಯ ಜನರು ಬ್ರಾಹ್ಮಣ, ಸಾರಸ್ವತ ಬ್ರಾಹ್ಮಣ ಮತ್ತು ಬಂಟ್ ಸಮುದಾಯದಲ್ಲಿ ಸಿಕ್ಕಿದರು. ಇವರಲ್ಲಿ ಬ್ರಿಟೀಷರ ಕೃಷಿ ಪದ್ಧತಿಯನ್ನು ನಿರ್ವಹಿಸಲು ಬೇಕಿದ್ದ ಗುಣಗಳಿದ್ದವು.” (98) 

ಕರಾವಳಿ ಜಿಲ್ಲೆಗಳಲ್ಲಿ ಹುಟ್ಟಿಕೊಂಡ ಅಧಿಕಾರಶಾಹಿಯ ಬಗ್ಗೆ ನಮಗೆ ಮಾಹಿತಿ ನೀಡುತ್ತ ಸೂರ್ಯಕಾಂತ್ ಕಾಮತ್ ಚಿತ್ರಾಪುರ ಬ್ರಾಹ್ಮಣರ ಬಗ್ಗೆ ಹೀಗೆ ಹೇಳುತ್ತಾರೆ: “ಕೆಲವು ವಿಶಿಷ್ಟ ಐತಿಹಾಸಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ, ಈ ಗುಂಪಿನ ಜನರು ಆಂಗ್ಲ ಶಿಕ್ಷಣವನ್ನು ಕೆನರಾದ ಉಳಿದೆಲ್ಲ ಸಮುದಾಯಗಳಿಗಿಂಗಲೂ ಮುಂಚೆ ಪಡೆದುಕೊಂಡರು. ಹಾಗಾಗಿ ಈ ಎರಡೂ ಸಮುದಾಯಗಳು ಕೆನರಾ ಜಿಲ್ಲೆಗಳಲ್ಲಿನ ಬ್ರಿಟೀಷ್ ಸೇವೆಯಲ್ಲಿ ಪ್ರಾಬಲ್ಯ ಮೆರೆದರು.” (98A) 

ಮತ್ತೆ, ಬಾಂಬೆ ಕರ್ನಾಟಕ ಭಾಗದ ಮುಂಡರಗಿಯ ಭೀಮರಾವಿನ ಉದಾಹರಣೆಯೂ ಇದೆ. ಅವನ ತಾತ ದಂಬಲ್ ದೇಸಾಯಿಯ ನ್ಯಾಯಾಲಯದಲ್ಲಿ ಮುಖ್ಯ ಸಲಹೆಗಾರರಾಗಿದ್ದರು ಮತ್ತವರ ತಂದೆ ಪೇಶ್ವೆ ಆಡಳಿತದಲ್ಲಿ ನ್ಯಾಯಾಧೀಶರಾಗಿದ್ದರು. (99) ಮತ್ತೊಂದು ಮಜಲಿನಲ್ಲಿ ಹೇಳುವುದಾದರೆ ಭೀಮರಾವ್ ನ ವಂಶಾವಳಿ ಪ್ರಭುತ್ವದ ಜೊತೆಗಿನ ಸಂಬಂಧವನ್ನು ಸಲೀಸುಗೊಳಿಸಿತ್ತು. ಬ್ರಿಟೀಷರು ದಯಪಾಲಿಸಿದ ಹನ್ನೆರಡು ಇನಾಮುಗಳನ್ನು ಭೀಮಾರಾವ್ ಸಂತೋಷದಿಂದ ಅನುಭವಿಸಿದ. ಆದರೆ ಭೀಮರಾವ್, ತನ್ನ ಪೂರ್ವಜರಂತೆ ಸರಳ ಭೂಮಾಲೀಕನಾಗಿರಲಿಲ್ಲ. ಬ್ರಿಟೀಷರ ಅಧಿಕಾರಿಯಾಗಿಯೂ ಸೇವೆಗೈದ. ಮೊದಲು ಹರಪನಹಳ್ಳಿಯ ತಹಸೀಲ್ದಾರನಾಗಿ, ನಂತರ ಬಳ್ಳಾರಿಯ ತಹಸೀಲ್ದಾರನಾಗಿ ನೇಮಕಗೊಂಡಿದ್ದ ಭೀಮಾರಾವನ ರೀತಿ ಅನೇಕರಿದ್ದರು. ಅವನಂತಲ್ಲದ ಕೆಲವೇ ಕೆಲವರು ಬ್ರಿಟೀಷರ ಜೊತೆಗಿನ ಸಂಬಂಧವನ್ನು ಮುರಿದುಕೊಂಡಿದ್ದರು. ಇರಲಿ, ಅದು ಈಗ ಸದ್ಯ ಬೇಕಿಲ್ಲದ ಅಂಶ; ಈ ಸಂಪುಟದ ಎರಡನೇ ಭಾಗ ಅದರ ಬಗ್ಗೆ ಹೆಚ್ಚು ತಿಳಿಸಿಕೊಡುತ್ತದೆ. 

ಮಧ್ಯವರ್ತಿ ಅಧಿಕಾರಿಗಳ ರೂಪುಗೊಳ್ಳುವಿಕೆಗೆ ಎರಡನೇ ಮೂಲ ಸೈನ್ಯ. ಬ್ರಿಟೀಷರ ಭಾರತೀಯ ಸೈನ್ಯ ಟಿಪ್ಪು ಸುಲ್ತಾನನ ಸೈನ್ಯದಿಂದ ಯಾರನ್ನೂ ನೇಮಿಸಿಕೊಳ್ಳದಿರುವ ನೀತಿಯನ್ನು ಅಳವಡಿಸಿಕೊಂಡಿತು, ಕಮಾಂಡರುಗಳಿಗೆ ನಿವೃತ್ತಿ ಕೊಟ್ಟು ಉಳಿದ ಸೈನಿಕರನ್ನು ಕೆಲಸದಿಂದ ತೆಗೆದುಹಾಕಿದರು. (100) ಇದಾದ ನಂತರವೂ ಸುಮಾರು ಅರ್ಧ ಲಕ್ಷದಷ್ಟು ಜನರು ಮೈಸೂರು ರಾಜ, ಕೊಡಗು ರಾಜ ಮತ್ತು ವಿವಿಧ ಪಾಳೇಗಾರರು ಹಾಗೂ ದೇಶಗತಿಗಳ ಸೈನ್ಯದಲ್ಲಿದ್ದರು. ಈ ಸೈನ್ಯದ ಮೇಲ್ಮಟ್ಟದ ಅಧಿಕಾರಿಗಳು ಮಧ್ಯವರ್ತಿಗಳಾಗಿ ಬೆಳೆದರು. ಕೊಡಗಿನಿಂದ ಸೆಳೆದುಕೊಂಡ ಕೆಲವು ಉನ್ನತ ಸೇನಾಧಿಕಾರಿಗಳನ್ನು ನೇರವಾಗಿ ಬ್ರಿಟೀಷರ ಭಾರತೀಯ ಸೈನ್ಯಕ್ಕೆ ಸೇರಿಸಿಕೊಳ್ಳಲಾಯಿತು. ಆದಾಗ್ಯೂ ಈ ವಿಭಾಗದಲ್ಲಿ ಬ್ರಾಹ್ಮಣರ ಸಂಖೈ ಕಡಿಮೆಯಿತ್ತು; ಕಡಿಮೆಯಿತ್ತು, ಗಣನೆಗೆ ಬಾರದಷ್ಟೇನಲ್ಲ. ಅರಸು, ಕೊಡವ ಮತ್ತು ಲಿಂಗಾಯತರು ಬ್ರಿಟೀಷರು ಕೊಟ್ಟ ಬಣ್ಣಬಣ್ಣದ ರಿಬ್ಬನ್ನು ಮತ್ತು ಪದಕಗಳನ್ನು ಸಂತಸದಿಂದ, ಹೆಮ್ಮೆಯಿಂದ ತಮ್ಮ ಸಮವಸ್ತ್ರದ ಮೇಲೆ ಹಾಕಿಕೊಂಡರು. 

ಮಧ್ಯವರ್ತಿಗಳ ರೂಪುಗೊಳ್ಳುವಿಕೆ ನೇರ ರೇಖೆಯಂತೆ ಸಾಗಿತೆಂದು ನೋಡಬಾರದೆನ್ನುವ ಎಚ್ಚರಿಕೆ ಇರಬೇಕು. ವಸಾಹತು ಕರ್ನಾಟಕದ ಪ್ರಾರಂಭದಲ್ಲಿ ಈ ಪ್ರಕ್ರಿಯೆ ಅಂಕುಡೊಂಡು ದಾರಿಯಲ್ಲಿ ಸಾಗಿದೆ. ಮಧ್ಯವರ್ತಿ ಅಧಿಕಾರಿಯೊಬ್ಬ ಪುನಃ ಅರೆಊಳಿಗಮಾನ್ಯ ದೊರೆಯಾಗಿಬಿಟ್ಟಿದ್ದಾನೆ, ಪೂರ್ಣಯ್ಯನ ಪ್ರಕರಣದಲ್ಲಾದಂತೆ. ಅಥವಾ ವರ್ತಕನೊಬ್ಬ ಕೃಷಿ ದಾರಿಯಲ್ಲಿ ಸಾಗಿ ಭೂಮಾಲೀಕನಾಗಿ ನೆಲೆಕಂಡುಕೊಂಡಿದ್ದಾನೆ, ತುಳುನಾಡಿನ ಕೃಷಿ ಕ್ಷೇತ್ರದಲ್ಲಿ ನೆಲೆ ಕಂಡುಕೊಂಡ ಗೌಡ ಸಾರಸ್ವತರಂತೆ. (101) 

ಮಧ್ಯವರ್ತಿ ವರ್ತಕ ಮತ್ತು ಮಧ್ಯವರ್ತಿ ಅಧಿಕಾರಿಯನ್ನು ಒದಗಿಸಿದ್ದು ಊಳಿಗಮಾನ್ಯತೆ. ಜೊತೆಯಾಗಿ ಈ ಮಧ್ಯವರ್ತಿಗಳು ಕರ್ನಾಟಕ ಮತ್ತು ಭಾರತದಲ್ಲಿ ಬ್ರಿಟೀಷರ ಆರ್ಥಿಕ ಮತ್ತು ರಾಜಕೀಯ ನೀತಿಗಳಿಗೆ ಪೂರಕವಾಗಿ ಕೆಲಸ ಮಾಡುವವರಾದರು. ಅವರ ಅವಶ್ಯಕತೆಗಳನ್ನು ಹೆಣೆದಿದ್ದು ಈ ಮಧ್ಯವರ್ತಿಗಳು. ಊಳಿಗಮಾನ್ಯತೆ ಮತ್ತು ವಸಾಹತಿನ ನಡುವೆ ಬೇಕಿದ್ದ ಬಂಧ ಸಾಧ್ಯವಾಗಿದ್ದು ಮಧ್ಯವರ್ತಿಗಳಿಂದ. 

ಗೌಡ ಸಾರಸ್ವತ ಬ್ರಾಹ್ಮಣರ ಬಗ್ಗೆ ಸ್ಟರ್ರಾಕ್(Sturrock)ನನ್ನು ಉಲ್ಲೇಖಿಸುತ್ತ ಸೂರ್ಯಕಾಂತ್ ಕಾಮತ್ ಕೊಡುವ ಈ ವಿವರಣೆ, ಅರೆಊಳಿಗಮಾನ್ಯತೆಯ ಭೂಮಾಲೀಕರು, ಬಡ್ಡಿ ವ್ಯಾಪಾರಿಗಳು ಮತ್ತು ಅಧಿಕಾರಿಗಳ ನಡುವಿನ ಬಂಧವನ್ನು ತಿಳಿಸಿಕೊಡುತ್ತದೆ: “ಕೊಂಕಣಿಗಳಲ್ಲನೇಕರು ಅಂಗಡಿ ಇಟ್ಟಿದ್ದಾರೆ ಮತ್ತು ಜಿಲ್ಲೆಯ ಪ್ರತಿ ಪೇಟೆಯಲ್ಲೂ ಅವರನ್ನು ಕಾಣಬಹುದು……ಜಿಲ್ಲೆಯ ಶ್ರೀಮಂತ ಭೂಮಾಲೀಕರವರು…..ಕೆಲವರು ಸರಕಾರಿ ನೌಕರಿಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ……” (101A) 

ಮಧ್ಯವರ್ತಿ ವರ್ಗದ ಸಾಂಸ್ಕೃತಿಕ ರೂಪ ಊಳಿಗಮಾನ್ಯ – ಪ್ರತಿಗಾಮಿ ನೆಲೆಯಿಂದ ಬಂದ ಕಾರಣ ಅವರು ಜನ ವಿರೋಧಿಗಳಾಗಿದ್ದರು. ತಮ್ಮ ಕೊಳೆತ ಪ್ರಣಾಳಿಕೆ ಮತ್ತು ಚೇತನವಿಲ್ಲದ ಸಿದ್ಧಾಂತಗಳನ್ನು ಎತ್ತಿ ಹಿಡಿಯುತ್ತ ಬಿಳಿ ದೇವರನ್ನು ದಿನನಿತ್ಯ ಪೂಜಿಸುತ್ತಿದ್ದರು. 

ಮಧ್ಯಮವರ್ಗದ ಮಧ್ಯವರ್ತಿಗಳು ಆರ್ಥಿಕತೆಯಲ್ಲಿ ಬಹುಮುಖ್ಯ ಕೆಲಸ ಮಾಡಬೇಕಿತ್ತು. ವಸಾಹತುಶಾಹಿ, ಆಡಳಿತ ವಹಿಸಿಕೊಂಡ ಮೊದಲ ಹಂತಗಳಲ್ಲಿ, ಮಧ್ಯವರ್ತಿ ಅಧಿಕಾರಶಾಹಿಗಳ ಆರ್ಥಿಕತೆಯ ಪಾತ್ರ ವಸಾಹತುಶಾಹಿ ಮತ್ತು ಊಳಿಗಮಾನ್ಯ ಪದ್ಧತಿಯ ತೆರಿಗೆ ನೀಡುವ ರೈತನನ್ನು ಸಂಪರ್ಕಿಸುವುದಕ್ಕೆ ಸೀಮಿತವಾಗಿತ್ತು. ಭಾರತದಲ್ಲಿ ಬ್ರಿಟೀಷರ ಕೈಗಾರಿಕಾ ಬಂಡವಾಳ ಹೆಚ್ಚುತ್ತಿದ್ದಂತೆ ಮಧ್ಯವರ್ತಿ ವರ್ತಕರ ಪ್ರಾಮುಖ್ಯತೆಯೂ ಹೆಚ್ಚಿತು. ಮಧ್ಯವರ್ತಿ ವರ್ತಕರು ಕರ್ನಾಟಕವನ್ನು ಕೊಳ್ಳೆ ಹೊಡೆಯಲು ಬಹುಮುಖ್ಯ ಕೊಂಡಿಯಾದರು; ಬ್ರಿಟೀಷ್ ಉತ್ಪನ್ನಗಳನ್ನು ಬಹುದೂರದ ಪ್ರದೇಶಗಳಿಗೆ ಸಾಗಿಸಿದ ಮಧ್ಯವರ್ತಿಗಳು ವಾಪಸ್ಸಾಗುವಾಗ ವಸಾಹತು ರಾಕ್ಷಸನ ಹಸಿವು ನೀಗಿಸಲು ಕಚ್ಚಾ ವಸ್ತುಗಳನ್ನು ಮತ್ತು ಕೃಷಿ ಉತ್ಪನ್ನಗಳನ್ನು ತೆಗೆದುಕೊಂಡು ಹೋದರು. 

ಅದಾಗ್ಯೂ ಇದರ ರಾಜಕೀಯ ಪಾತ್ರ ಮಹತ್ವದ್ದಾಗಿತ್ತು; ವಸಾಹತುಶಾಹಿ ಸರಕಾರವನ್ನು ಆ ಸದ್ಯದಲ್ಲಿ ಸುಭದ್ರಗೊಳಿಸಲು ಮತ್ತು ದೂರಗಾಮಿಯಲ್ಲಿ ವಸಾಹತನ್ನು ಜನರು ಸಹಿಸುವಂತಾಗಲು. ಈ ಸ್ಪಷ್ಟ ಕಾರಣಕ್ಕಾಗಿ, ಪೂರ್ಣಯ್ಯನವರಂತಹ ವಿದ್ರೋಹಿಗಳನ್ನು ಬ್ರಿಟೀಷರು ಹೊಗಳಿ ಅಟ್ಟಕ್ಕೇರಿಸಿ ಉಡುಗೊರೆಗಳನ್ನು ನೀಡುತ್ತಿದ್ದರು. ಮಧ್ಯವರ್ತಿ ಅಧಿಕಾರಶಾಹಿಯ ರಾಜಕೀಯ ಮಹತ್ವದ ಬಗ್ಗೆ ಮನ್ರೋ ಬರೆಯುತ್ತಾನೆ: “ನಮ್ಮ ಯುರೋಪಿಯನ್ ಸಂಸ್ಥೆಗಳನ್ನು ಹೆಚ್ಚಿಸಿ ಭದ್ರವಾಗುವ ಪ್ರಯತ್ನ ಮಾಡಬಹುದು. ತುಂಬ ಹೆಚ್ಚಿನ ಖರ್ಚಾಗುತ್ತದೆ, ಪಾಪದ ಕೆಲಸಗಳು ಕೆಲಸಮಯ ಇಲ್ಲವಾಗಲೂಬಹುದು. ಆದರೆ ಯುರೋಪಿಯನ್ನರ ಹೆಚ್ಚಳ ನಮ್ಮ ಪ್ರಾಬಲ್ಯದ ಅಸ್ತಿತ್ವವನ್ನು ಹೆಚ್ಚು ದಿನಗಳ ಕಾಲ ಉಳಿಸಲಾಗದು. ಆ ರೀತಿ ಮಾಡಿದರೆ ಸ್ಥಳೀಯರಿಂದ ಯಾವುದೇ ಸಹಾಯವನ್ನು ನಿರೀಕ್ಷಿಸಬಾರದು. ದೇಶೀ ಸೈನ್ಯಕ್ಕೆ ಈಗ ನಿರುದ್ಯೋಗಿಗಳಾಗಿರುವ ಕಂದಾಯ ಮತ್ತು ಪೋಲೀಸ್ ಇಲಾಖೆಗಳಲ್ಲಿದ್ದ ಸಕ್ರಿಯ ಜನರ ವರ್ಗ ಸೇರಿಬಿಡುತ್ತಾರೆ. ಜೊತೆಗೆ ಈಗ ಆ ಇಲಾಖೆಗಳಲ್ಲಿರುವ ಉನ್ನತ ಸ್ಥಾನ ಬಯಸುತ್ತಿರುವವರೂ ಸೇರಿಬಿಡುತ್ತಾರೆ. ಈ ಜನರ ಮೂಲಕ ತಮ್ಮನ್ನು ತಾವೇ ಸ್ವತಂತ್ರ ದೇಶಗಳ ದೊರೆಗಳೆಂದು ಘೋಷಿಸಿಕೊಂಡು ಅಲ್ಲಿನ ಆದಾಯವನ್ನು ತೆಗೆದುಕೊಂಡುಬಿಡುತ್ತಾರೆ; ಜನ ಸಮೂಹ ಮೌನವಾಗಿರುತ್ತದೆ. ಸಿಕ್ಕಿರುವ ವ್ಯವಹಾರಿಕ ಅನುಕೂಲಗಳ ಕಾರಣದಿಂದ ವ್ಯಾಪಾರಿಗಳು ನಮ್ಮ ಯಶಸ್ಸಿಗೆ ಶುಭಕೋರಬಹುದು, ಆದರೆ ಅದಕ್ಕಿಂತ ಹೆಚ್ಚೇನನ್ನು ಅವರು ಮಾಡುವುದಿಲ್ಲ. ಯುದ್ಧಕ್ಕೆ ಸನ್ನದ್ಧರಾಗಿರುವವರನ್ನು ಹೊಂದಿರುವ ಹಳ್ಳಿಗಳ ಮುಖ್ಯಸ್ಥರು ನಮ್ಮ ಉದ್ದೇಶವನ್ನು ಬೆಂಬಲಿಸುವುದಕ್ಕಿಂತ ತಮ್ಮ ದೇಶದವರ ಜೊತೆಗೆ ಸೇರುವ ಸಾಧ್ಯತೆಯೇ ಹೆಚ್ಚು. ಸ್ಥಳೀಯರ ಆಳ್ವಿಕೆಗೊಳಪಟ್ಟಾಗ ಅವರು ನಮ್ಮ ಆಳ್ವಿಕೆಯನ್ನು ಬರಮಾಡಿಕೊಳ್ಳಲು ಇಚ್ಛೆಪಟ್ಟಿದ್ದು ಸತ್ಯವೇ ಆದರೂ ಆ ಭಾವನೆ ತಾತ್ಕಾಲಿಕ ಕಾರಣಗಳಿಗಾಗಿತ್ತು – ದುರ್ಬಲ, ಕೇಡುಗ ಸರಕಾರದಿಂದ ಬಿಡುಗಡೆಯೊಂದಿ ತಮ್ಮ ಏಳಿಗೆಯಾಗಬಹುದೆಂಬ ಭರವಸೆಯಿಂದ ಬದಲಾವಣೆಯನ್ನು ಬೆಂಬಲಿಸಿದ್ದರು. ಈಗ ನಮ್ಮ ಸರಕಾರದ ವೈಖರಿಯನ್ನವರು ನೋಡಿದ್ದಾರೆ; ಅವರ ಮತ್ತವರ ಆಸ್ತಿಪಾಸ್ತಿಯ ರಕ್ಷಣೆಯಾಗಿದ್ದರೂ ಸಹ ಸಡಿಲ ತೆರಿಗೆ ವ್ಯವಸ್ಥೆಯಿಂದಾಗಿ ಅವರಿಗೆ ಸಿಗುತ್ತಿದ್ದ ಹೆಚ್ಚುವರಿ ಹಣವೀಗ ತಪ್ಪಿ ಹೋಗಿದೆ. ಜೊತೆಗೆ ಸ್ಥಳೀಯ ನಿವಾಸಿಗಳ ಮೇಲಿದ್ದ ತಮ್ಮ ಅಧಿಕಾರದಲ್ಲಿ ಹೆಚ್ಚಿನಂಶವನ್ನು ನಮ್ಮ ನ್ಯಾಯಾಲಯಗಳು, ಮ್ಯಾಜಿಸ್ಟ್ರೇಟರು, ಕಲೆಕ್ಟರುಗಳ ಕಾರಣದಿಂದ ಕಳೆದುಕೊಂಡಿದ್ದಾರೆ. ತಮ್ಮ ಹಳೆಯ ಅಧಿಕಾರ ಮತ್ತು ಪ್ರಭಾವವನ್ನು ಮರಳಿಸುವ ಭರವಸೆಯೊಂದೇ ಸಾಕು ಅವರಲ್ಲಿನ ಹೆಚ್ಚಿನವರು ನಮ್ಮ ಆಳ್ವಿಕೆಯನ್ನು ಪದಚ್ಯುತಗೊಳಿಸುವ ಯೋಜನೆಗಳಿಗೆ ಸಹಕರಿಸಲು. ಅವರನ್ನು ರಕ್ಷಿಸಿದ್ದಕ್ಕೆ ಕೃತಜ್ಞತೆಯಾಗಿ ಅಥವಾ ನಮ್ಮ ಮೃದು ಸರಕಾರದ ಜೊತೆಗಿನ ಬಾಂಧವ್ಯದ ಕಾರಣಕ್ಕಾಗಿ ಈ ಜನರು ದೇಶಿ ಸೈನ್ಯದ ವಿರುದ್ಧದ ಹೋರಾಟದಲ್ಲಿ ನಮಗೆ ಜೊತೆಯಾಗುತ್ತಾರೆ ಎಂದು ನಂಬುವುದು ನಮ್ಮನ್ನು ನಾವೇ ವಂಚಿಕೊಂಡಂತೆ.” (102) 

ಇದು 1857ರ ಹೋರಾಟದ ಬಗ್ಗೆ ಮನ್ರೋಗಿದ್ದ ನಿರೀಕ್ಷೆ, ಜನಸಮೂಹದ ಪಾತ್ರವನ್ನು ಅಂದಾಜಿಸುವಲ್ಲಿ ಆತ ಎಡವಿದ್ದ. ಹಾಗಾಗಿ ಬ್ರಿಟೀಷ್ ರಾಜ್ ನ ನಿರಂತರ ಆಳ್ವಿಕೆಗೆ ಮಧ್ಯವರ್ತಿ ಅಧಿಕಾರಶಾಹಿ ಅತ್ಯವಶ್ಯ ಎಂಬುದನ್ನಾತ ಕಂಡುಕೊಂಡಿದ್ದ. ಮನ್ರೋ ಬರೆಯುತ್ತಾನೆ: “ಈ ವಿಷಯದಲ್ಲಿ (ತೆರಿಗೆ) ಬುದ್ಧಿವಂತ ಮತ್ತು ಅನುಭವಿ ಸ್ಥಳೀಯರನ್ನು ರೆವೆನ್ಯೂ ಮುಖ್ಯಸ್ಥರನ್ನಾಗಿ ಮಾಡಿ ರೆವೆನ್ಯೂ ಮಂಡಳಿಗೆ ಸಹಾಯ ಮಾಡುವಂತೆ ನೋಡಿಕೊಳ್ಳಬೇಕು. ಬೇರೆ ಇಲಾಖೆಗಳಲ್ಲಿ ಯುರೋಪಿನ ಅಧಿಕಾರಿಗಳಿಗೆ ಸಹಾಯ ಮಾಡಲು ಅನುಭವಿ ಸ್ಥಳೀಯರನ್ನು ನೇಮಿಸಿರುವಾಗ ತುಂಬಾ ಕಷ್ಟದ ಮತ್ತು ಅತ್ಯಂತ ಪ್ರಮುಖವಾದ ಕೆಲಸವಿರುವ ರೆವಿನ್ಯೂ ಇಲಾಖೆಯಲ್ಲಿ ಮಾಡದಿರುವುದು ಸಾಧುವಾ? ಅವರನ್ನು ಹೊರಗಿಡುವುದು ನಮಗೂ ಅವರಿಗೂ ಹಾನಿಯುಂಟುಮಾಡುತ್ತದೆ; ಅವರಿಲ್ಲದೆ ಇಲಾಖೆಯನ್ನು ಸಮರ್ಥವಾಗಿ ನಡೆಸುವುದು ಸಾಧ್ಯವಿಲ್ಲ. ಅವರನ್ನು ನೇಮಿಸಿಕೊಂಡ ಮೇಲೂ ತೆರಿಗೆ ವಿಧಿಸುವ ವ್ಯಾಪಾರದಲ್ಲಿ ಅವರಿಗೂ ಒಂದು ಭಾಗ ಕೊಡಬೇಕು. ಇದು ಅವರ ಮತ್ತು ಸರಕಾರದ ನಡುವೆ ಬಂಧವನ್ನೇರ್ಪಿಡುಸುತ್ತದೆ, ಅವರ ದೃಷ್ಟಿಯಲ್ಲಿ ಅವರು ಮೇಲ್ಮೆಗೇರುತ್ತಾರೆ ಮತ್ತು ಉನ್ನತ ಸ್ಥಾನ ಪಡೆಯುವ ಸಲುವಾಗಿ ತಮ್ಮ ಕರ್ತವ್ಯವನ್ನು ಉತ್ಸುಕತೆಯಿಂದ ಮಾಡಲು ಪ್ರೋತ್ಸಾಹಿಸುತ್ತದೆ. ದೇಶಕ್ಕೆ ತೆರಿಗೆ ವಿಧಿಸುವ ಅಧಿಕಾರವನ್ನು ಸಂಪೂರ್ಣವಾಗಿ ಸ್ಥಳೀಯರ ಕೈಗೆ ಕೊಡುವುದು ಸಾಧ್ಯವಿಲ್ಲವಾದರೂ ನಮ್ಮ ಮೇಲ್ವಿಚಾರಿಕೆಯಲ್ಲಿ ಅವರನ್ನು ಎಷ್ಟು ನಂಬಿ ಕೆಲಸ ವಹಿಸಬಹುದೋ ಅಷ್ಟನ್ನೂ ವಹಿಸಬಹುದು. “(103) 

1831ರಲ್ಲಿ ಮೂರನೇ ಕೃಷ್ಣರಾಜ ಒಡೆಯರನ ಆಳ್ವಿಕೆಯನ್ನು ರದ್ದು ಆಡಿ ಮೈಸೂರಿನಲ್ಲಿ ಬ್ರಿಟೀಷರು ನೇರ ಆಡಳಿತ ನಡೆಸಿದಾಗ ಕಮಿಷನರ್ರಾಗಿದ್ದ ಎಲ್.ಬಿ.ಬೌರಿಂಗ್ ಮನ್ರೋನ ಯೋಜನೆಗಳನ್ನು ಪುರಸ್ಕರಿಸುತ್ತಾನೆ. ಬೌರಿಂಗ್ ಬರೆಯುತ್ತಾನೆ: “ಪ್ರಸ್ತುತ ಪರಿಸ್ಥಿತಿಯಲ್ಲಿ ಮೈಸೂರು ಸರಕಾರದ ಆಡಳಿತ ನಡೆಸುತ್ತಿರುವುದು ಮಹಾರಾಜನ ಪರವಾಗಿ ಎನ್ನುವುದರ ನೆನಪು ನಮಗಿರಬೇಕು. ದಾರಿತೋರುವ ಕೈ ಯುರೋಪಿನ ಅಧಿಕಾರಿಗಳದಾದರೂ ಸೂಕ್ತ ಸಂಖೈಯಲ್ಲಿ ಸ್ಥಳೀಯ ಅಧಿಕಾರಿಗಳನ್ನು ನಂಬಿಕಸ್ಥ ಮತ್ತು ಪ್ರಮುಖ ಸ್ಥಾನಗಳಲ್ಲಿರುಸುವುದು ನ್ಯಾಯಯುತವಾದ ಉತ್ತಮ ನೀತಿಯಾಗಿದೆ. ಈ ನಿರ್ಧಾರಗಳು ಮಹಾರಾಜನನ್ನೊರತುಪಡಿಸಿ ಬೇರೆ ಆಳ್ವಿಕೆಯ ಬಗ್ಗೆ ಯೋಚಿಸದ ಸ್ಥಳೀಯ ಅಧಿಕಾರಿಗಳಿಗೆ ಸಮಾಧಾನ ಕೊಡುತ್ತದೆ, ನಮ್ಮ ಪ್ರಭಾವವನ್ನು ಹೆಚ್ಚಿಸುತ್ತದೆ ಎಂದು ನನ್ನ ಅನಿಸಿಕೆ.” (104) 

ಭಾರತೀಯರನ್ನು ‘ಬೆಳೆಸಲು’ದ್ದೇಶಿಸಿದ ಬ್ರಿಟೀಷರಿಗಿದ್ದ ಗ್ರಹಿಕೆಯಿದು; ಭಾರತೀಯರು ಕೂಡ ಅವರ ಉದ್ದೇಶಗಳಿಗೆ ಜೊತೆಯಾಗಿ ವಸಾಹತಿನ ಜೊತೆ ನಿಲ್ಲಲಿ ಎಂಬ ನಿರೀಕ್ಷೆ. ಮನ್ರೋಗಿದು ಬ್ರಿಟೀಷ್ ವಸಾಹತುಶಾಹಿಯ ನಿರಂತರತೆಗೆ ಬೇಕೇ ಬೇಕಿದ್ದ ಅಂಶವೆನ್ನಿಸಿತ್ತು. ಕೊನೆಗೆ ದೇಶದಲ್ಲಿ ಬ್ರಿಟೀಷರೇ ಇಲ್ಲದಿದ್ದರೂ ಪರೋಕ್ಷ ಆಡಳಿತ ನೀತಿಯಿಂದ ವಸಾಹತುಶಾಹಿಯ ಪ್ರಭಾವ ಇದ್ದೇ ಇರಬೇಕೆಂಬ ದೂರಗಾಮಿ ಆಲೋಚನೆ. ಅಂಥ ಪರಿಸ್ಥಿತಿ ಇನ್ನೂ ಉದಯಿಸಿರಲಿಲ್ಲವಾದರೂ ಜನಪ್ರಿಯ ವಾಂಛೆಗಳನ್ನು ಅಭ್ಯಸಿಸಿದ್ದ ಮನ್ರೋಗೆ ಅಂತದೊಂದು ಮುಕ್ತಾಯವಿರಬಹುದೆಂದು ಅನ್ನಿಸಿತ್ತು. ಒಬ್ಬ ನಿಜವಾದ ವಸಾಹತುಶಾಹಿಯಾಗಿ, ಕಡಲಾಚೆ ಇರುವ ವಸಾಹತು ದೊರೆಯ ಪ್ರಭಾವ ಅಚ್ಚಳಿಯದಂತಿರಲು ಮಧ್ಯವರ್ತಿಗಳ ಪಾತ್ರದ ಪ್ರಾಮುಖ್ಯತೆಯನ್ನಾತ ಅರಿತಿದ್ದ. 

ಮನ್ರೋ ಬರೆಯುತ್ತಾನೆ: “ಭಾರತವನ್ನು ವಶಪಡಿಸಿಕೊಂಡಿರುವುದನ್ನು ತಾತ್ಕಾಲಿಕ ಪ್ರಕ್ತಿಯೆ ಎಂಬಂತೆ ನೋಡಬಾರದು. ಎಲ್ಲಿಯವರೆಗೆ ಸ್ಥಳೀಯರು ತಮ್ಮ ಗತಕಾಲದ ಮೂಢನಂಬಿಕೆಗಳನ್ನು ಮತ್ತು ಪೂರ್ವಾಗ್ರಹಗಳನ್ನು ಸಂಪೂರ್ಣವಾಗಿ ತೊಡೆದು ಹಾಕಿ ಒಂದು ಸುಭದ್ರ ಸರಕಾರವನ್ನು ರಚಿಸಿ ನಿರ್ವಹಿಸುವುದಕ್ಕೆ ಯೋಗ್ಯರಾಗುತ್ತಾರೋ ಅಲ್ಲಿಯವರೆಗೂ ಭಾರತ ನಮ್ಮ ವಶದಲ್ಲಿಯೇ ಇರಬೇಕು. ಅಂತಹುದೊಂದು ಸಮಯ ಬಂದಾಗ ಬ್ರಿಟೀಷರು ನಿಧಾನಕ್ಕೆ ಹಂತಹಂತವಾಗಿ ಭಾರತದ ಮೇಲಿನ ತಮ್ಮ ನಿಯಂತ್ರಣ ಹಿಂತೆಗೆದುಕೊಳ್ಳುವುದು ಬಹುಶಃ ಎರಡೂ ದೇಶಗಳ ದೃಷ್ಟಿಯಿಂದ ಒಳ್ಳೆಯದು.” (105) 

ಮಧ್ಯವರ್ತಿಗಳನ್ನು ಬೆಳೆಸಲು ಬ್ರಿಟೀಷ್ ವಸಾಹತಿಗಿದ್ದ ಕಾರಣವಿದು. ಬಂಡವಾಳಶಾಹಿ ನಾಗರೀಕತೆಗೆ ಕೆಲಸಗಳನ್ನು ನಿರ್ವಹಿಸಲು ಸಮರ್ಥನಿರದ ಫ್ಯೂಡಲ್ ದೊರೆ ಅವಲಕ್ಷಣದಂತಿದ್ದ. ಮೇಕಿಂಗ್ ಹಿಸ್ಟರಿಯ ಮೂರನೇ ಸಂಪುಟದಲ್ಲಿ ಮಧ್ಯವರ್ತಿಗಳಿಗೆ ಅಧಿಕಾರ ಹಸ್ತಾಂತರಿಸಿದ ಕಾರ್ಯ ಹೇಗೆ ವಸಾಹತು ನಮ್ಮನ್ನು ಲೂಟಿ ಮಾಡಲು ಅನುವು ಮಾಡಿಕೊಟ್ಟಿತು ಮತ್ತು ಬ್ರಿಟೀಷರು ಕಾಲ್ತೆಗೆದ ಮೇಲೂ ಹೇಗದು ಧಕ್ಕೆಯಾಗದೆ ಉಳಿಯಿತು ಎಂಬುದನ್ನು ನೋಡೋಣ. 

ಮುಂದಿನ ವಾರ:
ಶೋಷಕ ತ್ರಿಮೂರ್ತಿಗಳು ಮತ್ತು ಪ್ರತಿಗಾಮಿ ಸರಕಾರ

Disclaimer: ಮೇಕಿಂಗ್ ಹಿಸ್ಟರಿ ಆಂಗ್ಲ ಪುಸ್ತಕದ ಅನುವಾದಿಸಲು ಬೇಕಾದ ಅಧಿಕೃತ ಹಕ್ಕುಗಳು ನನ್ನಲ್ಲಿಲ್ಲ. ಅನುವಾದದ ಹಕ್ಕನ್ನು ಕೊಡುವವರಲ್ಲನೇಕರು ಜೈಲಿನಲ್ಲಿದ್ದಾರಂತೆ. ಯಾರಲ್ಲಾದರೂ ಅಧಿಕೃತ ಅನುವಾದದ ಹಕ್ಕುಗಳು ಇದ್ದು ಆಕ್ಷೇಪಣೆ ಎತ್ತಿದರೆ ಕ್ಷಮಾಪಣೆಯೊಂದಿಗೆ ಅನುವಾದದ ಕಾರ್ಯವನ್ನು ನಿಲ್ಲಿಸಲಾಗುವುದು. ಸಾಕೇತ್ ರಾಜನ್ ದೃಷ್ಟಿಯ ಕರ್ನಾಟಕದ ಇತಿಹಾಸ ಕನ್ನಡ ಬಲ್ಲವರಿಗೂ ತಲುಪಲಿ ಎಂಬ ಉದ್ದೇಶದಿಂದ ಇದನ್ನು ಪ್ರಕಟಿಸಲಾಗುತ್ತಿದೆಯೇ ಹೊರತು ಯಾವುದೇ ವಾಣಿಜ್ಯ ಉದ್ದೇಶದಿಂದಲ್ಲ - ಡಾ. ಅಶೋಕ್. ಕೆ. ಆರ್.

Mar 22, 2016

ಸಿದ್ದು ತಂದ “ಸೌಭಾಗ್ಯ”!

ಡಾ. ಅಶೋಕ್. ಕೆ. ಆರ್
22/03/2016
ಹೆಚ್ಚೇನು ಹಿಂದಿನ ಮಾತಲ್ಲ, ವರುಷಗಳ ಹಿಂದೆ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದಾಗ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಕಾಂಗ್ರೆಸ್ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಬಳ್ಳಾರಿಗೆ ಪಾದಯಾತ್ರೆ ಬೆಳೆಸಿತ್ತು. ಬಿಜೆಪಿಯ ಭ್ರಷ್ಟಾಚಾರ, ಬಳ್ಳಾರಿಯ ರೆಡ್ಡಿ ಸಹೋದರರ ಭ್ರಷ್ಟತೆ, ಆಪರೇಷನ್ ಕಮಲ ಮತ್ತು ಬಳ್ಳಾರಿ ರೆಡ್ಡಿ ಸಹೋದರರ ರಿಪಬ್ಲಿಕ್ ನಂತೆ ಆಗಿಬಿಟ್ಟಿದ್ದನ್ನು ವಿರೋಧಿಸಿ ಬೆಂಗಳೂರಿನಿಂದ ಬಳ್ಳಾರಿಗೆ ಸಿದ್ಧರಾಮಯ್ಯ ಪಾದಯಾತ್ರೆ ನಡೆಸಿದ್ದರು. ವೈಯಕ್ತಿಕವಾಗಿ ಸಿದ್ಧರಾಮಯ್ಯ ಕೂಡ ಭ್ರಷ್ಟರಲ್ಲ ಎಂದು ಅಲ್ಲಿಯವರೆಗಿನ ನಂಬಿಕೆಯಾಗಿತ್ತು. ಬಿಜೆಪಿಯ ಐದು ವರುಷದ ಆಡಳಿತಾವಧಿಯಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಕೆಲಸ ಮಾಡಿದ್ದು ಇದೊಂದೇ ಬಾರಿ. ಅಧಿಕೃತ ವಿರೋಧ ಪಕ್ಷವಲ್ಲದಿದ್ದರೂ ಜೆ.ಡಿ.ಎಸ್ ನ ಕುಮಾರಸ್ವಾಮಿ ಬಿಜೆಪಿಯ ಭ್ರಷ್ಟಾಚಾರ ಪ್ರಕರಣಗಳನ್ನು ಒಂದಾದ ಮೇಲೊಂದರಂತೆ ಬಯಲಿಗೆಳೆಯುತ್ತ (ಇವರ ಬಯಲಿಗೆಳೆಯುವಿಕೆಯು ಕೂಡ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಇಳಿದು ಸದಾನಂದಗೌಡ ಮುಖ್ಯಮಂತ್ರಿಯಾದ ತಕ್ಷಣ ನಿಂತುಹೋಗಿತ್ತು!) ಕಾಂಗ್ರೆಸ್ಸಿನ ಗೆಲುವಿಗೆ ಮುನ್ನುಡಿ ಬರೆದರು. ಹೆಚ್ಚೇನೂ ಕಷ್ಟಪಡದೆ ಬಿಜೆಪಿಯ ಸ್ವಯಂಕೃತ ಅಪರಾಧ, ಯಡಿಯೂರಪ್ಪ ಕೆಜೆಪಿ ಸೇರಿದ್ದರ ಲಾಭ ಪಡೆದ ಕಾಂಗ್ರೆಸ್ ಸರಳ ಬಹುಮತ ಪಡೆದು ಅಧಿಕಾರವಿಡಿಯಿತು. ಮತ್ತೇನಲ್ಲದಿದ್ದರೂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಹಿಂದಿನ ಬಿಜೆಪಿಯಷ್ಟು ಭ್ರಷ್ಟವಾಗಲಾರದು ಎಂದೊಂದು ನಂಬಿಕೆಯಿತ್ತು. ವೈಯಕ್ತಿಕವಾಗಿ ಯಾರ್ಯಾರು ಎಷ್ಟೆಷ್ಟು ಭ್ರಷ್ಟರಾದರೋ ಬಿಟ್ಟರೋ ಭ್ರಷ್ಟರಿಗೆಲ್ಲ ರಕ್ಷಣೆ ನೀಡುವಂತೆ ಕರ್ನಾಟಕ ಲೋಕಾಯುಕ್ತದ ಬಲ ಕುಗ್ಗಿಸಿಬಿಡಲು ಅಧಿಸೂಚನೆ ಹೊರಡಿಸಿಬಿಟ್ಟಿದೆ ಸಿದ್ಧು ನೇತೃತ್ವದ ಕಾಂಗ್ರೆಸ್ ಸರಕಾರ. ಭ್ರಷ್ಟರ ರಕ್ಷಣೆ ನಮ್ಮ ಗುರಿಯಲ್ಲ ಎಂಬುದನ್ನು ತೋರ್ಪಡಿಸಲು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಗಳ ಮೂಗಿನಡಿ ಕಾರ್ಯನಿರ್ವಹಿಸುವ ಭ್ರಷ್ಟಾಚಾರ ನಿಗ್ರಹ ದಳವನ್ನು (Anticorruption bureau – ಎಸಿಬಿ) ಸ್ಥಾಪಿಸಲಾಗಿದೆ. ನಿನ್ನೆ ವಿಧಾನಸಭೆಯಲ್ಲಿ ಬಿಜೆಪಿಯ ಜಗದೀಶ್ ಶೆಟ್ಟರ್ ಹೇಳಿರುವಂತೆ ಇದು ಎಸಿಬಿಯಲ್ಲ ಸಿಪಿಬಿ – corruption protection bureau. 

ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಕಾರ್ಯಾರಂಭವಾಗಿದ್ದು 1986ರಲ್ಲಿ. ಎರಡು ವರ್ಷಕ್ಕೆ ಮೊದಲು 1984ರಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆ ಅನುಷ್ಠಾನಗೊಂಡಿತ್ತು. ಮಹಾರಾಷ್ಟ್ರ 1971ರಲ್ಲಿ ಲೋಕಾಯುಕ್ತ ಸ್ಥಾಪಿಸಿದ್ದರೆ ಕರ್ನಾಟಕ 1984ರಲ್ಲಿ ಸ್ಥಾಪಿಸಿತ್ತು. 1966ರಲ್ಲಿಯೇ ಇಂತಹುದೊಂದು ಅಗತ್ಯವನ್ನು ಮನಗಂಡಿದ್ದ administrative reforms commission ಕೇಂದ್ರದ ಮಟ್ಟದಲ್ಲಿ ಲೋಕಪಾಲ ಸಂಸ್ಥೆ ಮತ್ತು ರಾಜ್ಯ ಮಟ್ಟದಲ್ಲಿ ಲೋಕಾಯುಕ್ತವನ್ನು ಸ್ಥಾಪಿಸಲು ಸಲಹೆ ನೀಡಿತ್ತು. ಕರ್ನಾಟಕದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಸರಕಾರಗಳ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ್ದ ಜನತಾ ಪರಿವಾರ 1983ರ ಚುನಾವಣೆಯಲ್ಲಿನ ತನ್ನ ಪ್ರಣಾಳಿಕೆಯಲ್ಲಿ ಲೋಕಾಯುಕ್ತ ಕಾಯ್ದೆಯನ್ನು ಜಾರಿಗೆ ತರುವುದಾಗಿ ತಿಳಿಸಿತ್ತು. ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಅಧಿಕಾರವಿಡಿದ ಜನತಾ ಪರಿವಾರ ಕೊಟ್ಟ ಮಾತಿನಂತೆಯೇ ಮುಂದಿನ ವರುಷ ಲೋಕಾಯುಕ್ತ ಕಾಯ್ದೆಯನ್ನು ಜಾರಿಗೆ ತಂದಿತು. ಜನತಾ ಪರಿವಾರದಿಂದ ಜಾರಿಯಾದ ಲೋಕಾಯುಕ್ತ ಸಂಸ್ಥೆಯನ್ನು ಹಿಂದೊಮ್ಮೆ ಜನತಾ ಪರಿವಾರದ ನಾಯಕನಾಗಿದ್ದ ಸಿದ್ಧರಾಮಯ್ಯ ಮಣ್ಣು ಮಾಡಲು ಹೊರಟಿದ್ದಾರೆ.

ಲೋಕಾಯುಕ್ತದ ಸ್ಥಾಪನೆಯೊಂದಿಗೆ ಭ್ರಷ್ಟಾಚಾರವೇನೂ ಅಂತ್ಯ ಕಾಣಲಿಲ್ಲ. ಲೋಕಾಯುಕ್ತವೆಂಬುದು ಸ್ವಾಯತ್ತ ಸಂಸ್ಥೆಯಾದರೂ ಲೋಕಾಯುಕ್ತ, ಉಪಲೋಕಾಯುಕ್ತರ ನೇಮಕದಲ್ಲಿ ರಾಜಕೀಯ ನಡೆದೇ ನಡೆಯುತ್ತದೆ. ಜೊತೆಗೆ ಆಯ್ಕೆಯಾದ ಲೋಕಾಯುಕ್ತರು ‘ಸರಿಯಾಗಿ’ ಕಾರ್ಯನಿರ್ವಹಿಸಲೇಬೇಕು ಎಂದೇನೂ ಒತ್ತಡವಿರುವುದಿಲ್ಲವಲ್ಲ. ಭ್ರಷ್ಟಾಚಾರ ತಡೆಗಟ್ಟಲು ಲೋಕಾಯುಕ್ತ ಸಂಸ್ಥೆಯೊಂದು ಅಸ್ತಿತ್ವದಲ್ಲಿದೆ ಎಂದು ಬಹುತೇಕ ಜನರ ಅರಿವಿಗೆ ಬಂದಿದ್ದೇ 2001ರಲ್ಲಿ ವೆಂಕಟಾಚಲಯ್ಯ ಅಧಿಕಾರವಿಡಿದಾಗ. ವಿವಿಧ ಕಛೇರಿಗಳಿಗೆ, ಆಸ್ಪತ್ರೆಗಳಿಗೆ ದಿಡೀರ್ ಎಂದು ಭೇಟಿ ನೀಡಿ ಲಂಚಕೋರರನ್ನು ಜನರ, ಮಾಧ್ಯಮದ ಎದುರಿಗೇ ಬಯ್ದಾಗಷ್ಟೇ ಜನರಿಗೆ ಲೋಕಾಯುಕ್ತದ ಅಸ್ತಿತ್ವದ ಅರಿವಾಗಿದ್ದು. ವೆಂಕಟಾಚಲಯ್ಯ ಭ್ರಷ್ಟತೆ ತಡೆಯುವುದಕ್ಕಿಂತ ಪ್ರಚಾರಕ್ಕೇ ಹೆಚ್ಚು ಆದ್ಯತೆ ಕೊಟ್ಟುಬಿಟ್ಟರು ಎಂದನ್ನಿಸುವುದು ಹೌದಾದರೂ ಲೋಕಾಯುಕ್ತ ಸಂಸ್ಥೆಯ ಶಕ್ತಿಯನ್ನು ಲೋಕಾಯುಕ್ತಕ್ಕೆ ತೋರಿಸಿಕೊಟ್ಟದ್ದೇ ವೆಂಕಟಾಚಲಯ್ಯ ಎಂದರದು ತಪ್ಪಲ್ಲ. ನಂತರ ಲೋಕಾಯುಕ್ತರಾದ ಸಂತೋಷ್ ಹೆಗಡೆ ಗಣಿ ದೋಚುವವರ ಬೆವರಿಳಿಸಿದರು. ರಾಜ್ಯದ ಗಣಿ ಲೂಟಿಯ ಬಗ್ಗೆ ವಿಸ್ತೃತ ವರದಿ ಕೊಟ್ಟರು. ನಂತರ ಲೋಕಾಯುಕ್ತರಾದ ಶಿವರಾಜ್ ಪಾಟೀಲ್ ಸರಕಾರದಿಂದ ಅಕ್ರಮವಾಗಿ ಭೂಮಿ ಪಡೆದುಕೊಂಡಿರುವ ಆರೋಪದ ಕಾರಣದಿಂದ ಮೂರು ತಿಂಗಳಿಗೇ ರಾಜೀನಾಮೆ ಕೊಟ್ಟುಬಿಟ್ಟರು. ಆಮೇಲೆ ನೇಮಕಗೊಂಡಿದ್ದ ವೈ.ಭಾಸ್ಕರ್ ರಾವ್ ಲೋಕಾಯುಕ್ತ ಸಂಸ್ಥೆ ಹತ್ತು ವರುಷದಿಂದ ಗಳಿಸಿಕೊಂಡಿದ್ದ ಚೂರುಪಾರು ವಿಶ್ವಾಸವನ್ನು ಮಣ್ಣು ಮಾಡಲು ಪ್ರಾರಂಭಿಸಿಬಿಟ್ಟಿತು. ಭಾಸ್ಕರ್ ರಾವರ ಭ್ರಷ್ಟಾಚಾರ, ಅವರ ಮಗ ಲೋಕಾಯುಕ್ತ ಸಂಸ್ಥೆಯನ್ನು ಭ್ರಷ್ಟವಾಗಿಸಿದ್ದರ ಬಗ್ಗೆ ಒಂದರ ಹಿಂದೊಂದರಂತೆ ವರದಿಗಳು ಬರಲಾರಂಭಿಸಿದವು. ಭ್ರಷ್ಟರಿಗ ಶಿಕ್ಷೆಯಾಗುವಂತೆ ಮಾಡಿ ಲೋಕಾಯುಕ್ತ ಸಂಸ್ಥೆಯ ಘನತ ಮರಳ ಗಳಿಸಬೇಕಿದ್ದ ರಾಜ್ಯ ಸರಕಾರ ಲೋಕಾಯುಕ್ತ ಸಂಸ್ಥೆಯನ್ನೇ ನಾಶ ಪಡಿಸಲು ಹೊರಟು ಬಿಟ್ಟಿದೆ. 

ಲೋಕಾಯುಕ್ತ ಸಂಸ್ಥೆ ತನ್ನೆಲ್ಲ ಅಧಿಕಾರಗಳೊಂದಿಗೆ ಅಸ್ತಿತ್ವದಲ್ಲಿರುತ್ತದೆ, ಜೊತೆಗೆ ಎಸಿಬಿ ಕೂಡ ಇರುತ್ತದೆ ಎಂಬ ನೆಪವನ್ನು ಕಾಂಗ್ರೆಸ್ಸಿನ ಸಿದ್ಧರಾಮಯ್ಯ, ಟಿ.ಬಿ.ಜಯಚಂದ್ರ ಹೇಳುತ್ತಿದ್ದಾರಾದರೂ ಮುಖ್ಯಮಂತ್ರಿಯ, ಮುಖ್ಯಕಾರ್ಯದರ್ಶಿಗಳ ಅಧೀನದಲ್ಲಿರುವ ಸಂಸ್ಥೆಯೊಂದು ಅದು ಹೇಗೆ ನಿಷ್ಪಕ್ಷವಾಗಿರಲು ಸಾಧ್ಯ? ಲೋಕಾಯುಕ್ತ ಅಸ್ತಿತ್ವದಲ್ಲಿರುತ್ತದೆ ಎಂದ್ಹೇಳುತ್ತಲೇ ಲೋಕಾಯುಕ್ತದ ಅಡಿ ಇದ್ದ ಏಳು ನೂರಕ್ಕೂ ಅಧಿಕ ಪ್ರಕರಣಗಳನ್ನು ಎಸಿಬಿಗೆ ವರ್ಗಾಯಿಸಿದ್ಯಾಕೆ? ಲೋಕಾಯುಕ್ತಕ್ಕಿಂತ ಶಿಸ್ತಿನ ಭ್ರಷ್ಟಾಚಾರ ನಿಗ್ರಹ ಪಡೆಯನ್ನು ಕಟ್ಟುವುದೇ ರಾಜ್ಯ ಸರಕಾರದ ಉದ್ದೇಶವಾಗಿದ್ದರೆ ಇಷ್ಟೊಂದು ತಡಬಡಿಸಿ ಶೀಘ್ರವಾಗಿ ಎಸಿಬಿಯನ್ನು ರಚಿಸಿದ್ಯಾಕೆ? ಸ್ವಾಯತ್ತ ಸಂಸ್ಥೆಗಳನ್ನೇ ಆಡಳಿತ ಪಕ್ಷಗಳ ಉದ್ದಿಶ್ಯಗಳಿಗೆ ಬಳಸಿಕೊಳ್ಳುವಾಗ ಸ್ವಾಯತ್ತತೆ ಇಲ್ಲದ ಸಂಸ್ಥೆಯೊಂದು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವೇ? ಕೊನೇ ಪಕ್ಷ, ಲೋಕಾಯುಕ್ತದ ಅಸ್ತಿತ್ವ ಜನರಿಗೊಂದು ನೈತಿಕ ಬಲವನ್ನಾದರೂ ಕೊಡುತ್ತಿತ್ತು. ಈಗಲೂ ನೈತಿಕ ಬಲ ಸಿಕ್ಕಿದೆ, ಸಾಮಾನ್ಯರಿಗಲ್ಲ ಭ್ರಷ್ಟಾಚಾರಿಗಳಿಗೆ, ಲಂಚಕೋರರಿಗೆ. ಆಡಳಿತ ಪಕ್ಷದ ಜೊತೆ ‘ಚೆನ್ನಾಗಿದ್ದರೆ’ ಸಾಕು ಎಂಬ ಸೌಭಾಗ್ಯವನ್ನು ಸಿದ್ಧು ದಯಪಾಲಿಸಿಬಿಟ್ಟಿದ್ದಾರೆ. 

ಆಕರ: ವಿಕಿಪೀಡಿಯಾ, lokayukta.kar.nic.in

Mar 19, 2016

ಭಾರತ್ ಮಾತಾ ಕೀ ಜೈ

bharat-mata-ki-jai
ಡಾ. ಅಶೋಕ್. ಕೆ. ಆರ್
19/03/2016
‘ಈ ಸಲ ಆಗಿದ್ದಾಗೋಗ್ಲಿ. ಇಂಡಿಪೆಂಡೆನ್ಸ್ ಡೇಗೆ ಟೌನ್ ಹಾಲಲ್ಲಿ ನಡೆಯೋ ಮಾರ್ಚ್ ಫಾಸ್ಟಿನಲ್ಲಿ ಇರಲೇಬೇಕು’ ಅಂತ ತೀರ್ಮಾನ ಮಾಡ್ಕೊಂಡು ಸ್ಕೌಟ್ಸಿನ ಮಿನಿ ವಿಭಾಗವಾದ ಕಬ್ಬಿಗೆ ಸೇರಿದ್ದು ಮೂರನೇ ಕ್ಲಾಸಿನಲ್ಲಿ. ಲೆಫ್ಟ್ ರೈಟ್ ಲೆಫ್ಟ್ ರೈಟ್ ಲೆಫ್ಟ್ ರೈಟ್ ಲೆಫ್ಟ್…….ಲೆಫ್ಟ್…….ಲೆಫ್ಟ್……ಲೆಫ್ಟ್ ರೈಟ್ ಲೆಫ್ಟ್ ರೈಟ್……….. ಅಂತ ಕೂಗ್ತಾ ಕೈಬೀಸ್ತಾ ಕಾಲನ್ನು ನೆಲಕ್ಕೆ ಜೋರಾಗಿ ಕುಟ್ತಾ ಹೋಗ್ತಿದ್ರೆ … ಅದರ ಮಜಾನೇ ಬೇರೆ ಬಿಡಿ. ಈ ಮಜಾ ಒಂದು ದಿನ ಗೆಳೆಯನಿಗೆ ಸಜೆಯಾಗಿಬಿಟ್ಟಿತು. Co ordination ಸರಿಯಾಗಿ ಬರಲಿಲ್ಲವೆಂಬ ಕಾರಣಕ್ಕೆ ಮಾರ್ಚ್ ಫಾಸ್ಟು ಅಭ್ಯಾಸ ನಡೀತಿರಬೇಕಾದರೇನೇ ಛಟೀರಂತ ಅವನ ತೋಳಿನ ಮೇಲೆ ಬಾರಿಸಿದ್ದರು. ‘ಓ ಸರಿಯಾಗಿ ನಡೆಯದಿದ್ದರೆ ಏಟು ಗ್ಯಾರಂಟಿ’ ಅಂತ ಗೊತ್ತಾಗಿದ್ದೇ ತಡ ಮಾರನೇ ದಿನದಿಂದಲೇ ಕಬ್ಬಿಗೂ ಮಾರ್ಚ್ ಫಾಸ್ಟಿಗೂ ಟಾಟಾ ಬೈ ಬೈ! ಆ ವರ್ಷದ ಸ್ವಾತಂತ್ರ್ಯ ದಿನದಂದು ಹುಣಸೂರಿನ ಟೌನ್ ಹಾಲಿನಲ್ಲಿ ಪ್ರೇಕ್ಷಕರಾಗಷ್ಟೇ ಉಳಿದು ಮಾರ್ಚ್ ಫಾಸ್ಟು ನೋಡುವುದು ಹಿಂಸೆಯಂತೆಯೇ ಭಾಸವಾಗಿತ್ತು.

ಹೈಸ್ಕೂಲಿಗೆ ಹೋದ ಮೇಲೆ ಮತ್ತೆ ಮಾರ್ಚ್ ಫಾಸ್ಟಿನೆಡೆಗಿನ ಆಸಕ್ತಿ ಚಿಗುರೊಡೆದು ಸ್ಕೌಟ್ಸು ಸೇರುವಂತೆ ಮಾಡಿತ್ತು. ನಮ್ ಸೆಂಟ್ ಜೋಸೆಫ್ ಶಾಲೆಯ ಪಿಟಿ ಮಾಸ್ಟ್ರು ವಸಂತ್ ಸರ್, ಆ್ಯನಿ ಸಿಸ್ಟರ್ ಸ್ಕೌಟ್ಸು ಗೈಡ್ಸಿನ ಇನ್ ಚಾರ್ಜ್ ಆಗಿದ್ದರು. ಸ್ಕೌಟ್ಸು ಗೈಡ್ಸಂದ್ರೆ ಸ್ವಾತಂತ್ರ್ಯ ದಿನಾಚರಣೆಯ ದಿನ, ಗಣರಾಜ್ಯೋತ್ಸವದ ದಿನ ಶಾಲೆಗೆ ಬೆಳಿಗ್ಗೆ ಎಲ್ಲರಿಗಿಂತ ಮುಂಚಿತವಾಗಿ ಬಂದು ಶಾಲೆಯಲ್ಲಿ ಧ್ವಜಾರೋಹಣ ಮುಗಿಸಿದ ನಂತರ ಶಿಸ್ತಾಗಿ ಸಾಲಿನಲ್ಲಿ ನಮ್ ಶಾಲೆಯಿಂದ ನೂರಿನ್ನೂರು ಮೀಟರು ದೂರದಲ್ಲಿದ್ದ ಟೌನ್ ಹಾಲಿಗೆ ಹೋಗಿ ಅಲ್ಲಿ ನಿಂತು, ಕಾರ್ಯಕ್ರಮ ಚೂರು ಲೇಟಾದರೆ ಕುಳಿತು ಧ್ವಜಾರೋಹಣ ಮುಗಿದ ನಂತರ ಮತ್ತೆ ಲೆಫ್ಟ್ ರೈಟ್ ಲೆಫ್ಟ್ ರೈಟ್ ಲೆಫ್ಟ್ ರೈಟ್ ಅಂತ ಕೂಗ್ತಾ ಒಂದು ಸುತ್ತು ಹೊಡೆದು ಮತ್ತೆ ಮೊದಲ ಸ್ಥಾನಕ್ಕೆ ಬಂದು ಸ್ವಲ್ಪೊತ್ತು ಕುಳಿತು ನಂತರ ಚುರುಮುರಿ, ಐಸ್ಕ್ರೀಂ ತಿಂದ್ಕೊಂಡು ಮನೆಗೆ ಹೋಗೋದು ಅಷ್ಟೇ ಅಂದ್ಕೊಂಡಿದ್ದೆ. ಅದರ ಜೊತೆಗೆ ಸ್ಕೌಟ್ಸು ಗೈಡ್ಸಿನಲ್ಲಿ ಇನ್ನು ಅನೇಕಾನೇಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ವಾರಕ್ಕೊಂದಷ್ಟು ತರಬೇತಿ ಇರೋದು. ಹಗ್ಗವಿಡಿದು ಗಂಟು ಹಾಕೋದು ಕಲಿಸೋರು, ನೆಲದ ಮೇಲೆ ನದಿ ಬರೆದು ಅದಕ್ಕೆ ಸೇತುವೆ ಕಟ್ಟಬೇಕಾದರೆ ನದಿಯ ವಿಸ್ತಾರ ಎಷ್ಟಿದೆ ಅನ್ನೋದನ್ನ ಲೆಕ್ಕ ಹಾಕೋದು ಹೇಗೆ ಅಂತ ಹೇಳಿ ಕೊಡೋರು, ಸ್ಕೌಟ್ಸು ಗೈಡ್ಸಿಗೇ ಹಾಡಿತ್ತು, ಸೆಲ್ಯೂಟಿತ್ತು, ಹೃದಯಕ್ಕೆ ಹತ್ತಿರವೆಂಬ ಕಾರಣದಿಂದ ಎಡಗೈಯಿಂದ ಕೈಕುಲುಕಬೇಕಿತ್ತು……ಹಿಂಗೇ ಸ್ಕೌಟ್ಸು ಗೈಡ್ಸಿನಲ್ಲಿ ಹತ್ತಲವು ನೀತಿ ನಿಯಮ ರೀತಿ ರಿವಾಜುಗಳಿದ್ದವು. ಎಲ್ಲಕ್ಕಿಂತ ಆಸಕ್ತಿದಾಯಕವಾದದ್ದೆಂದರೆ ಸ್ಕೌಟ್ಸು ಗೈಡ್ಸಿನ ಕ್ಯಾಂಪಿನ ನೆಪದಲ್ಲಿ ಟ್ರಿಪ್ಪು ಮಾಡುವ ಅವಕಾಶ ಸಿಕ್ಕಿದ್ದು.

ಮೊದಲ ಕ್ಯಾಂಪು ನಂಜನಗೂಡಿನಲ್ಲಿ ನಡೆದಿತ್ತು. ಅಲ್ಲಿನ ಛತ್ರವೊಂದರಲ್ಲಿ ವಾಸ್ತವ್ಯ. ಅವ್ಯವಸ್ಥೆ ತುಂಬಾ ಚೆನ್ನಾಗಿತ್ತು! ಟಾಯ್ಲೆಟ್ಟಿಗೆ ಹೋದರೆ ನೀರಿರುತ್ತಿರಲಿಲ್ಲ. ನೀರಿಲ್ಲದ ಹೊತ್ತಿನಲ್ಲೇ ಗೆಳೆಯನೊಬ್ಬನಿಗೆ ಅರ್ಜೆಂಟಾಗಿ ಕೊನೆಗೆ ನ್ಯೂಸ್ ಪೇಪರ್ರನ್ನು ಭಕ್ತಿ ಭಾವದಿಂದ ಉಪಯೋಗಿಸಿದ್ದ. ನ್ಯೂಸ್ ಪೇಪರನ್ನು ಈ ರೀತಿಯಾಗಿ ಉಪಯೋಗಿಸಿದವರ ಸಂಖೈ ಬಹಳಷ್ಟಿತ್ತು! ನಮ್ ಶಾಲೇಲಿ ಸ್ಕೌಟ್ಸು ಗೈಡ್ಸು ತರಬೇತಿಯಲ್ಲಿ ಹೇಳಿಕೊಡುತ್ತಿದ್ದುದನ್ನೇ ಇಲ್ಲಿ ಇನ್ನೂ ಆಳವಾಗಿ ಕಲಿಸುತ್ತಿದ್ದರು. ಇಂತಹ ಕಲಿಕೆಗಿಂತ ಹೆಚ್ಚಿನ ಪ್ರಯೋಜನ ವಿವಿಧ ಊರುಗಳಿಂದ ಬಂದವರೊಂದಿಗಿನ ಒಡನಾಟ. ನಮ್ಮದೇ ಶಾಲೆಯ ಸಹಪಾಠಿಗಳೊಂದಿಗೆ ಬೆಳೆವ ಬಾಂಧವ್ಯ. ಸರಿಯಾಗಿ ಉರಿಯದ ಕಾರಣ ಲೋಳೆ ಲೋಳೆಯಾಗಿದ್ದ ಬೆಂಡೆಕಾಯಿ ಪಲ್ಯವನ್ನೂ ಮರೆತಿಲ್ಲ! ಬೆಂಡೇಕಾಯಿ ನನಗೆ ಬಾಳಾ ಇಷ್ಟ ಅಂತ ಒಂದು ಸೌಟು ಹೆಚ್ಚು ಹಾಕಿಸಿಕೊಂಡು ವಾಕರಿಕೆ ಬರಿಸಿಕೊಂಡಿದ್ದೆ, ಒಂದು ಸೌಟು ಹೆಚ್ಚು ವಾಕರಿಕೆ! ಮುಂದಿನ ಕ್ಯಾಂಪು ದಾವಣಗೆರೆ ಸಮೀಪದ ಕೊಂಡಜ್ಜಿಯಲ್ಲಿ. ಇದು ನಿಜಕ್ಕೂ ಕ್ಯಾಂಪಿನಂತೆಯೇ ಇತ್ತು. ಟೆಂಟಿನಲ್ಲಿ ವಾಸ್ತವ್ಯ. ಟೆಂಟಿಗೆರಡು ಲಾಟೀನು. ರಾತ್ರಿಯೊತ್ತು ಟೆಂಟಿನ ಸಂದಿಗೊಂದಿಗಳಲ್ಲಿ ಚೇಳು! ಕ್ಯಾಂಪಿನಲ್ಲಿ ನಡೆದ ಸಂಗತಿಗಳಿಗಿಂತ ಗೆಳೆಯ ಗೆಳತಿಯರ ನಡುವಿನ ಮುನಿಸು ಸೊಗಸು ಕಿತ್ತಾಟಗಳೇ ಹೆಚ್ಚು ನೆನಪಿನಲ್ಲಿವೆ. ಕ್ಯಾಂಪು ಮುಗಿದ ಮೇಲೆ ಚಿತ್ರದುರ್ಗದ ಕೋಟೆ ನೋಡಲು ಬಸ್ಸಿನಲ್ಲಿ ಹೊರಟೆವು. ಇಂಜಿನ್ನಿನ ಪಕ್ಕದ ಸೀಟಿನಲ್ಲಿ ಕುಳಿತಿದ್ದೆ. ಪಕ್ಕದಲ್ಲಿ ಕುಳಿತಿದ್ದಾತನಿಗೆ ಬಲಗಾಲಿರಲಿಲ್ಲ. ಏನಾಯ್ತು ಅಂತ ಕೇಳಿದ್ದೇ ತಡ ಆತ ದಾವಣಗೆರೆ ಚಿತ್ರದುರ್ಗ ರೋಡಿನ ವ್ಯಥೆಯ ಕಥೆಗಳನ್ನು ಹೇಳಲಾರಂಭಿಸಿದ. ಇದೇ ರೋಡಲ್ಲಿ ಅಪಘಾತವಾಗಿ ಕಾಲು ಕಳೆದುಕೊಂಡಿದ್ದಂತೆ. ಅಪಘಾತಗಳಿಗೆ ವಿಪರೀತ ಫೇಮಸ್ಸಂತೆ ಆ ರಸ್ತೆ. ಒಂದೊಂದು ಜಾಗ ಬಂದಾಗಲೂ ಇಲ್ಲೇ ನೋಡಿ ಸುನಿಲ್ ಸತ್ತಿದ್ದು, ಇಲ್ಲೇ ನೋಡಿ ಶಂಕರ್ ನಾಗ್ ಸತ್ತಿದ್ದು, ಇದೇ ಹೊಂಡಕ್ಕೆ ಬಸ್ಸು ಬಿದ್ದು ಹತ್ತಾರು ಮಂದಿ ಸತ್ತಿದ್ದು, ಇಲ್ಲೇ ನೋಡಿ ನನ್ನ ಕಾಲು ಹೋಗಿದ್ದ ಅಂತ ಅಪಘಾತಗಳ ಬಗ್ಗೆ ರನ್ನಿಂಗ್ ಕಾಮೆಂಟರಿ ಕೊಟ್ಟು ನಡುಕ ಹುಟ್ಟಿಸಿದ್ದ. ನಡುಕ ಹೆಚ್ಚಿಸಲು ಆ ಖಾಸಗಿ ಬಸ್ಸಿನ ಶರವೇಗದ ಡ್ರೈವರ್ರೂ ಕಾರಣ!

ಹೈಸ್ಕೂಲಿನ ಚೆಂದದ ದಿನಗಳನ್ನು ಮುಗಿಸಿ ಪಿಯುಸಿಗೆ ಮಂಡ್ಯಕ್ಕೆ ಬಂದ ನಂತರ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವಗಳೆಲ್ಲ ‘ರಜೆಯ’ ದಿನಗಳಾಗಷ್ಟೇ ಮನದಲ್ಲಿ ಉಳಿದವು. ಪಿಯು ಕಾಲೇಜಿನಲ್ಲೂ ಧ್ವಜ ಹಾರಿಸುತ್ತಿದ್ದರು, ವಿದ್ಯಾರ್ಥಿಗಳ ಭಾಗವಹಿಸುವಿಕೆ ಕಡಿಮೆ ಇರುತ್ತಿತ್ತು. ಯಾಕೋ ಎನ್.ಸಿ.ಸಿಗೆ ಸೇರಲು ಮನಸ್ಸಾಗಲಿಲ್ಲ. ಮೊದಲ ಪಿಯುಸಿಯಲ್ಲಿ ಅಧ್ಯಯನವೆಲ್ಲ ಥಿಯೇಟರುಗಳಲ್ಲಿ, ನಗರ ಕೇಂದ್ರ ಗ್ರಂಥಾಲಯದಲ್ಲಿ ನಡೆದರೆ ಎರಡನೇ ಪಿಯುಸಿ ಪೂರ್ತಿ ಟ್ಯೂಷನ್ನು ಕಾಲೇಜು ಓದು ಓದು! ಇನ್ನು ಮೆಡಿಕಲ್ ಓದಲು ಮೈಸೂರಿಗೆ ಬಂದ ಮೇಲೆ ಕಾಲೇಜಿನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ್ದೇ ಇಲ್ಲ. ರಜೆ ಬಂದ್ರೆ ಹೆಚ್ಚಿನಂಶ ಮಂಡ್ಯಕ್ಕೆ ಹೊರಟುಬಿಡುತ್ತಿದ್ದೆ. ಮೊದಲೆರಡು ವರ್ಷ ಮುಗಿಯುವಷ್ಟರಲ್ಲಿ ಭಗತ್ ಸಿಂಗ್, ರಾಜ್ ಗುರು, ಸುಖದೇವ್, ಕಾರ್ಲ್ ಮಾರ್ಕ್ಸ್, ಚಾರು ಮಜುಂದಾರ್ ಚಂದ್ರಶೇಖರ್ ಆಜಾದ್, ಸುಭಾಷ್ ಚಂದ್ರ ಬೋಸ್ ಜೊತೆಗೆಲ್ಲ ಒಡನಾಟ ಶುರುವಾಗಿತ್ತು. ಭಗತ್ ಸಿಂಗ್ ಹೆಸರಿನ ಸಂಘಟನೆಯೊಂದು (ಅದರ ಹೆಸರು ಮರೆತಿದೆ) ಶಾಂತಲಾ ಥಿಯೇಟರ್ ಎದುರಿಗಿನ ಪಾರ್ಕಿನಲ್ಲಿ ಆಗಸ್ಟ್ ಹದಿನಾಲ್ಕರ ಮಧ್ಯರಾತ್ರಿ ಧ್ವಜಾರೋಹಣ ನಡೆಸಿ ಸ್ವಾತಂತ್ರೋತ್ಸವ ಆಚರಿಸುತ್ತಿದ್ದರು. ಟೆಂಪೋದಲ್ಲಿ ಸಿಟಿಗೆ ಹೋದಾಗ ಒಂಭತ್ತೂವರೆಯಾಗಿತ್ತು. ಶಾಂತಲಾ ಥಿಯೇಟರಿನ ಕಡೆಗೆ ನಡೆದು ಹೊರಟೆ, ಹತ್ತೂವರೆಯಷ್ಟೊತ್ತಿಗೆ ಅಲ್ಲಿಗೆ ತಲುಪಿಬಿಟ್ಟಿದ್ದೆ. ತಯಾರಿಗಳು ನಡೆಯುತ್ತಿದ್ದವು. ಅಲ್ಲೇ ಒಂದು ಕಡೆ ಕುಂತು ಅದೂ ಇದೂ ಯೋಚಿಸುತ್ತ ಕಾಲ ಕಳೆದೆ. ಧ್ವಜಾರೋಹಣ ನಡೆಯಿತು, ಜೊತೆಗೆ ಬೋಲೋ ಭಾರತ್ ಮಾತಾ ಕೀ ಜೈ ಅನ್ನುವ ಘೋಷಣೆಗಳು ಕೂಗಿದವು. ನಾನು ಮೊದಲ ಬಾರಿಗೆ ಜೈ ಅಂತ ಕೋರಸ್ ಕೂಗಿದ್ದು ಅವತ್ತೇ. ಕಾರ್ಯಕ್ರಮ ಮುಗಿದಾಗ ಒಂದಾಗಿತ್ತು. ಕೊಟ್ಟ ಸ್ವೀಟನ್ನು ತಿಂದುಕೊಂಡು ಹೆಚ್ಚು ಕಮ್ಮಿ ಹತ್ತು ಕಿಲೋಮೀಟರು ದೂರವಿರುವ ರೂಮಿನೆಡೆಗೆ ನಡೆಯುತ್ತಾ ಹೊರಟೆ, ಭಗತ್ ಸಿಂಗ್ ಜೊತೆ ಹರಟುತ್ತ! ಐದೂವರೆ ವರ್ಷದ ಮೆಡಿಕಲ್ಲು ಜೀವನದಲ್ಲಿ ಅದೊಂದೇ ಸಲವೇನೋ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಿದ್ದು.

ಮುಂದೆ ಗುಲ್ಬರ್ಗಾಗೆ ಬಂದಾಗ ಹಾಸ್ಟೆಲ್ಲು ವಾಸ. ಒಂದು ದಿನದ ರಜೆಗೆ ಮಂಡ್ಯಕ್ಕೆ ಹೋಗಿ ಬರುವಷ್ಟು ಗುಲ್ಬರ್ಗ ಹತ್ತಿರದಲ್ಲಿಲ್ಲ. ಗುಲ್ಬರ್ಗದ ಸಿನಿಮಾ ಥಿಯೇಟರಿನಲ್ಲಿ ಪಿಕ್ಚರ್ ತೋರಿಸುವ ಮೊದಲು ರಾಷ್ಟ್ರಗೀತೆ ಹಾಕುತ್ತಿದ್ದರು. ಶಾಲಾ ದಿನಗಳ ನಂತರ ರಾಷ್ಟ್ರಗೀತೆಯನ್ನು ಹಾಡಿದ್ದು ಮೈಸೂರಿನಲ್ಲಿ ಒಮ್ಮೆ ಮಾತ್ರ. ಪಿಚ್ಚರ್ ಥಿಯೇಟರಿನಲ್ಲಿ ನಿಂತು ರಾಷ್ಟ್ರಗೀತೆಯನ್ನು ಗುನುಗುವಾಗ ಗೊತ್ತಾಯಿತು, ಎಷ್ಟೋ ಪದಗಳು ಮರೆತು ಹೋಗಿಬಿಟ್ಟಿವೆಯೆಂದು! ಅರೆರೆ ರಾಷ್ಟ್ರಗೀತೆಯನ್ನೇ ತಡವರಿಸುವಷ್ಟು ಮರೆವು ಶುರುವಾಗಿಬಿಟ್ಟಿತಾ ಅಂತ ಅನುಮಾನವಾಯಿತು, ರವಷ್ಟು ನಾಚಿಕೆಯಾಯಿತು. ಅಭ್ಯಾಸ ತಪ್ಪೋದ್ರೆ ಹಾಗೆಯೇ ಅಲ್ಲವೇ ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡೆ. ಗುಲ್ಬರ್ಗದಲ್ಲಿ ಮಿಸ್ಸೇ ಮಾಡದೆ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದ ದಿನ ಹಾಸ್ಟೆಲ್ಲಿನ ಧ್ವಜಾರೋಹಣ, ನಂತರ ಕಾಲೇಜಿನ ಧ್ವಜಾರೋಹಣದಲ್ಲಿ ಭಾಗವಹಿಸುತ್ತಿದ್ದೆ. ಹಾಸ್ಟೆಲ್ಲಿನಲ್ಲಿ ಸಾಮಾನ್ಯವಾಗಿ ಕೇಸರಿಬಾತು, ಸಣ್ಣ ಜಲ್ಲಿ ಕಾಂಕ್ರೀಟು. ಕಾಂಕ್ರೀಟಿಗೂ ನಮಗೂ ಆಗಿ ಬರೋದಿಲ್ಲ, ಆಗಾಗಿ ಒಂದು ಸ್ಪೂನು ಹೆಚ್ಚು ಕೇಸರಿಬಾತು ತಿಂದು ಕಾಲೇಜಿಗೆ ಹೋಗಿ ಅಲ್ಲಿನ ಧ್ವಜಾರೋಹಣ ಮುಗಿಯುವಾಗ ಯಾರಾದರೊಬ್ಬರು ‘ಬೋಲೋ ಭಾರತ್ ಮಾತಾ ಕೀ ಜೈ’ ಎಂದರೆ ಕೋರಸ್ಸಿನಂತೆ ನಾವು ‘ಜೈ’ ಎಂದು ಬರುತ್ತಿದ್ದೆವು. ಯಾರೂ ಕೂಗದಿದ್ದರೆ ನಮ್ಮ ಕೋರಸ್ಸೂ ಇರುತ್ತಿರಲಿಲ್ಲ.

ಇನ್ನು ಓದೋದೆಲ್ಲ ಮುಗಿಸಿ ಕೆಲಸಕ್ಕೆ ಸೇರಿದ್ದು ಖಾಸಗಿ ಕಾಲೇಜಿಗೆ. ಮತ್ತೆ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ರಜಾ ದಿನಗಳಂತಷ್ಟೇ ಕಾಣಿಸಲಾರಂಭಿಸಿತು. ಕ್ಯಾಮೆರಾ ತಕ್ಕೊಂಡು ಗಾಡಿ ಹತ್ಕೊಂಡು ಊರೂರು ಅಲೆದಿದ್ದೇ ಹೆಚ್ಚು. ಇಲ್ಲ, ರಜಾ ಬಂತು ಅಂದ್ರೆ ಊರು ಸೇರ್ಕೋಳ್ಳೋದು. ಅಲ್ಲಿಗೆ ತೂಗಿ ಕಳೆದು ಗುಣಿಸಿ ಭಾಗಾಕಾರ ಮಾಡಿದ್ರೂ ಮೂವತ್ತೊಂದು ವರ್ಷದಲ್ಲಿ ಹೆಚ್ಚೆಂದರೆ ಒಂದು ಆರರಿಂದ ಏಳು ಸಲ ‘ಭಾರತ್ ಮಾತಾ ಕೀ ಜೈ’ ಎಂದು ಕೂಗಿರಬಹುದು. ನೀವು ‘ಭಾರತ್ ಮಾತಾ ಕೀ ಜೈ’ ಅಂತ ಎಷ್ಟು ಸಲ ಕೂಗಿದ್ದೀರಾ? ಕೆಲವು ಸಂಘಟನೆಗಳಲ್ಲಿ ಈ ಘೋಷಣೆಯನ್ನು ಕೂಗಿಸುತ್ತಾರಾದ್ದರಿಂದ ಆ ಸಂಘಟನೆಯ ಸದಸ್ಯರು ಹೆಚ್ಚು ಕೂಗಿರಬಹುದಷ್ಟೇ. ಇಂತಹ ಘೋಷಣೆಯ ಬಗ್ಗೆ ಇದ್ದಕ್ಕಿದ್ದಂತೆ ಬಿಸಿ ಬಿಸಿ ಚರ್ಚೆಯಾಗುವುದ್ಯಾಕೆ? ಮುಸ್ಲಿಮರ ಸಂರಕ್ಷನೆಂದು ಬಣ್ಣಿಸಿಕೊಳ್ಳುವ ಒವೈಸಿ ಮುಸ್ಲಿಂ ಸಮಾಜದ ದುಃಖ ದುಮ್ಮಾನಗಳೆಡೆಗೆ ಗಮನ ಹರಿಸುವುದರ ಬದಲಾಗಿ ಈ ಘೋಷಣೆಯನ್ನು ಕೂಗುವುದಿಲ್ಲ ಎಂಬ ಹೇಳಿಕೆ ಕೊಟ್ಟಿದ್ಯಾಕೆ? ಒವೈಸಿಯ ಹೇಳಿಕೆಯ ಸುತ್ತಲೇ ನಡೆದ ಚರ್ಚೆಗಳಲ್ಲೇನಾದರೂ ಅರ್ಥವಿದೆಯಾ? ಮತಗಳ ಧ್ರುವೀಕರಣವೇ ಮತೀಯ ರಾಜಕಾರಣಿಗಳ ಗುರಿ. ಮುಸ್ಲಿಂ ಕೋಮುವಾದಿ ರಾಜಕಾರಣಿ ಒವೈಸಿ ವಿವಾದಾತ್ಮಕ ಹೇಳಿಕೆಗಳಿಂದಲೇ ಕುಪ್ರಸಿದ್ಧ. ಇಂತಹ ವಿಷಯಗಳಿಗೆ ಹೆಚ್ಚು ಮೈಲೇಜು ದೊರೆಯುತ್ತದೆ ಎಂಬ ಕಾರಣಕ್ಕೆ ಈ ರೀತಿಯಾಗಿ ಮಾತನಾಡುತ್ತಾರಾ? ಘೋಷಣೆ ಕೂಗಿ ಅಂತ ಯಾರೂ ಒವೈಸಿಯ ಕುತ್ತಿಗೆ ಪಟ್ಟಿ ಹಿಡಿದಿರಲಿಲ್ಲ. ಬೆಳಗಾಗೆದ್ದು ದಿನಕ್ಕೊಮ್ಮೆ ಘೋಷಣೆ ಕೂಗಿ ಅಂತ ಯಾರೂ ಒವೈಸಿಯನ್ನು ಬಲವಂತಪಡಿಸಿರಲಿಲ್ಲ. ಪ್ರಜ್ಞಾಪೂರ್ವಕವಾಗಿ ಅದನ್ನೊಂದು ಘೋಷಣೆಯಂತೆ ಸಭೆ ನಡೆಸಿದಾಗೆಲ್ಲ ಕೂಗುವ ಸಂಘಟನೆಗಳನ್ನು ಹೊರತುಪಡಿಸಿದರೆ ಜನಸಾಮಾನ್ಯರಿಗಾಗಲೀ, ಚಟುವಟಿಕೆಯ ರಾಜಕಾರಣಿಗಳಿಗೇ ಆಗಲಿ ‘ಬೋಲೋ ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗುವ ಸಂದರ್ಭ ಎಷ್ಟು ಬಂದುಬಿಡಬಹುದು? ಚರ್ಚೆಯಾಗಬೇಕಾದ ವಿಷಯಗಳು ಚರ್ಚೆಯಾಗದಿರಲಿಂದೇ ಎಲ್ಲಾ ಪಕ್ಷದ ರಾಜಕಾರಣಿಗಳು ಸೇರಿ, ಜನರು ತಮ್ಮ ತಮ್ಮಲ್ಲೇ ಬೇಡದ ಸಂಗತಿಗಳ ಬಗ್ಗೆ ಭಾವನಾತ್ಮಕವಾಗಿ ಚರ್ಚಿಸುತ್ತ ಕಾಲಹರಣ ಮಾಡಿಕೊಳ್ಳಲಿ ಎಂದು ಈ ರೀತಿಯ ಷಡ್ಯಂತ್ರ ಮಾಡುತ್ತಾರಾ? ಕಳೆದಾರೇಳು ತಿಂಗಳಿನಿಂದ ದೇಶಭಕ್ತಿ, ದೇಶಪ್ರೇಮ, ದೇಶದ್ರೋಹ ಮಣ್ಣೂ ಮಸಿ ಅಂತ ನಡೆಯುತ್ತಿರುವ ಚರ್ಚೆಗಳನ್ನು ನೋಡಿದರೆ ಇಂತಹುದೊಂದು ಅಭಿಪ್ರಾಯ ಮೂಡುತ್ತದೆ. ಸರಕಾರೀ ಅಥವಾ ಖಾಸಗೀ ಭ್ರಷ್ಟತೆ ನಡೆಸದೆ, ನೆರೆಯ ಮನುಷ್ಯನನ್ನು ಮೇಲು ಕೀಳೆಂಬ ದೃಷ್ಟಿಯಿಂದ ನೋಡದೆ ಪ್ರಾಮಾಣಿಕವಾಗಿ ಬದುಕು ಸಾಗಿಸಿದರದೇ ದೇಶಪ್ರೇಮ, ಮಿಕ್ಕ ಚರ್ಚೆಗಳೆಲ್ಲ ಬೂಟಾಟಿಕೆಯಷ್ಟೇ.

Mar 18, 2016

ಮೇಕಿಂಗ್ ಹಿಸ್ಟರಿ: ಮಧ್ಯವರ್ತಿ – ಖರೀದಿದಾರ ವರ್ಗದ ಉಗಮಕ್ಕಿದ್ದ ಸಾಮಾಜಿಕ ಸ್ಥಿತಿಗತಿ:- 1

saketh rajan
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
18/03/2016
ಕರ್ನಾಟಕವನ್ನು ಕೊಳ್ಳೆ ಹೊಡೆಯಲು ವಸಾಹತುಶಾಹಿ ಮತ್ತು ಊಳಿಗಮಾನ್ಯ ಪದ್ಧತಿಯ ಒಗ್ಗಟ್ಟೇ ಆಧಾರವಾಗಿತ್ತು. ಬೇರೊಂದು ಪ್ರಮುಖ ವ್ಯವಸ್ಥೆಯ ಸಹಕಾರವಿಲ್ಲದೆ ಭವಿಷ್ಯದ ದಿನಗಳಲ್ಲಿ ರಾಜಕೀಯ ಮತ್ತು ಆರ್ಥಿಕ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವುದು ವಸಾಹತುಶಾಹಿಗೆ ಸಾಧ್ಯವಿರಲಿಲ್ಲ. ಸಾಮಾಜಿಕ ರಚನೆಯ ಮಧ್ಯವರ್ತಿ ವರ್ಗವೇ ಈ ಪ್ರಮುಖ ವ್ಯವಸ್ಥೆಯಾಗಿತ್ತು. ಮೇಲ್ನೋಟಕ್ಕೆ ಊಳಿಗಮಾನ್ಯತೆ ಮತ್ತು ವಸಾಹತುಶಾಹಿ ಸಹಬಾಳ್ವೆಯಿಂದ ಜೊತೆಯಾಗಿ ನಡೆಯುವಂತೆ ತೋರಿದರೂ ಅಂತಿಮವಾಗಿ ವಸಾಹತುಶಾಹಿಯ ಹಸ್ತಕ್ಷೇಪದಿಂದ ಅದರ ನಿಜ ವಕ್ತಾರನಂತೆ ಹೊರಹೊಮ್ಮಿದ್ದು ಮಧ್ಯವರ್ತಿ ವರ್ಗ. ಪಾಳೇಗಾರರು, ದೇಸಾಯಿ, ಜಾಗೀರುದಾರರು ಮತ್ತು ದೇಶಮುಖರು ನೆಲೆ ನಿಂತ ನಂತರ ವಸಾಹತುಶಾಹಿ ತನ್ನ ನೆಲೆ ಸುಭದ್ರಗೊಳಿಸಲು ಮಾಡಬೇಕಿದ್ದ ಬಹುಮುಖ್ಯ ಕಾರ್ಯವೆಂದರೆ ಮಧ್ಯವರ್ತಿ ವರ್ಗವನ್ನು ಸೃಷ್ಟಿಸುವುದು. ಭೂಮಾಲೀಕರು ವಸಾಹತುಶಾಹಿಯ ಮೈತ್ರಿಕೂಟದ ಭಾಗವಾಗಿದ್ದರು; ಮಧ್ಯವರ್ತಿಗಳು ವಸಾಹತುಶಾಹಿ ಬಂಡವಾಳದ ಏಜೆಂಟುಗಳಾಗಿದ್ದರು. 

ಕರ್ನಾಟಕದಲ್ಲಿ ಮಧ್ಯಮವರ್ಗದ ಮಧ್ಯವರ್ತಿ ಅಧಿಕಾರಿಗಳ (Comprador bureaucrat bourgeoise) ಜನನವಾಗಲು ಒಂದು ಶತಮಾನಕ್ಕೂ ಅಧಿಕ ಸಮಯವಿಡಿಯಿತು. ಈ ಸೃಷ್ಟಿ ಸಾಧ್ಯವಾಗಲು ಬೇಕಾಗಿದ್ದ ಸಾಮಾಜಿಕ ಆಧಾರಗಳನ್ನು ಇತಿಹಾಸದ ಈ ಘಟ್ಟದಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಮಧ್ಯವರ್ತಿ ವರ್ತಕರು ಮತ್ತು ಮಧ್ಯವರ್ತಿ ಅಧಿಕಾರಿಗಳು ಶತಮಾನದ ನಂತರ ಮಧ್ಯಮವರ್ಗದ ಮಧ್ಯವರ್ತಿ ಅಧಿಕಾರಿಗಳ ಸೃಷ್ಟಿಗೆ ಚಿಮ್ಮುಹಲಗೆಯಾದರು. ಕರ್ನಾಟಕದಲ್ಲಿನ ವಸಾಹತುಶಾಹಿ ಆಡಳಿತದ ಮೊದಲ ದಶಕಗಳಲ್ಲಿ ಮಧ್ಯವರ್ತಿ ವರ್ತಕರು ಮತ್ತು ಅಧಿಕಾರಿಗಳನ್ನು ಸೃಷ್ಟಿಸಲಿಡಿದ ದಾರಿಯನ್ನು ಈ ಭಾಗದಲ್ಲಿ ನೋಡೋಣ. ಪೋರ್ಚುಗೀಸರ ವಸಾಹತಿನಿಂದ ಕರ್ನಾಟಕದ ಕರಾವಳಿ ಭಾಗಗಳಲ್ಲಿ ಮಧ್ಯಮವರ್ಗದ ಮಧ್ಯವರ್ತಿ ವರ್ತಕರು ಹೊರಹೊಮ್ಮಿದ್ದನ್ನು ಈಗಾಗಲೇ ಒಂದನೇ ಸಂಪುಟದಲ್ಲಿ ನೋಡಿದ್ದೇವೆ. (72) ಈಗ ರಾಜ್ಯದ ಇತರೆ ಭಾಗಗಳಲ್ಲಿ ಮಧ್ಯವರ್ತಿ ವರ್ಗದ ಸೃಷ್ಟಿಯಾದ ಬಗೆಯನ್ನು ನೋಡೋಣ. 

ವಸಾಹತುಶಾಹಿಯ ಬಹುಮುಖ್ಯ ಮೈತ್ರಿಯಾಗಿದ್ದ ಊಳಿಗಮಾನ್ಯತೆ, ಅದೇ ಸಮಯದಲ್ಲಿ ಮಧ್ಯವರ್ತಿ ವರ್ಗದ ಜನನಕ್ಕೆ ಬೇಕಾದ ಪ್ರಮುಖ ಸಾಮಾಜಿಕ ತಳಹದಿಯಾಗಿತ್ತು. ಭಾರತದ ಮಧ್ಯಮವರ್ಗದ ಮಧ್ಯವರ್ತಿಗಳ ಬಗ್ಗೆ ಮೆಚ್ಚುವಂತಹ ಅಧ್ಯಯನ ಮಾಡಿರುವ ಸುನಿತಿ ಕುಮಾರ್ ಘೋಷ್ ತಮ್ಮ ಪುಸ್ತಕ The Indian Big Bourgeoisieನಲ್ಲಿ ಹತ್ತಲವು ಬಾರಿ ಊಳಿಗಮಾನ್ಯ ಪದ್ಧತಿ ಮಧ್ಯವರ್ತಿಗಳ ಉಗಮಕ್ಕೆ ಸಹಕರಿಸಿದ್ದನ್ನು ನೆನೆಯುತ್ತಾರೆ. ಬ್ರಿಟೀಷರು ಒಂದುಗೂಡಿಸಿದ್ದ ಊಳಿಗಮಾನ್ಯತೆಯ ಕಸದಿಂದ ಮಧ್ಯವರ್ತಿ ವರ್ಗ ಉದ್ಭವಿಸಿತು. ನಿವೃತ್ತಿ ವೇತನ ಪಡೆದ ಅಥವಾ ‘ನೆಲೆ ಕಂಡ’ ಈ ಊಳಿಗಮಾನ್ಯ ಶಕ್ತಿಗಳು ಅಥವಾ ಬ್ರಿಟೀಷರಿಂದ ನೇರವಾಗಿ ಸನ್ನದು ಪಡೆದ ಅವರ ವಂಶಸ್ಥರು ಅಧಿಕಾರದ ದಾರಿ ಅಥವಾ ವಸಾಹತಿನ ವ್ಯಾಪಾರದ ಹಾದಿ ಹಿಡಿದರು; ವ್ಯಾಪಾರ ವಹಿವಾಟಿನ ಮೊದಲ ರೂಪ ಹಣವನ್ನು ಸಾಲದ ರೂಪದಲ್ಲಿ ನೀಡುವುದು. ಭೂಮಾಲೀಕ ಸಮುದಾಯದಲ್ಲಾದ ಈ ವ್ಯತ್ಯಾಸ ಹಲವು ವರುಷಗಳ ಬ್ರಿಟೀಷ್ ಆಡಳಿತ ಮತ್ತು ವ್ಯಾಪಾರದಲ್ಲಿ ವ್ಯಾಪಾರದಲ್ಲಿ ಮುಂದುವರೆದ ಪರಿಣಾಮವಾಗಿ ಮಧ್ಯವರ್ತಿ ವರ್ತಕರು ಮತ್ತು ಅಧಿಕಾರಿಗಳ ಮೊದಲ ಸಾಲು ರೂಪುಗೊಂಡಿತು. ರೂಪುಗೊಳ್ಳುತ್ತಿದ್ದ ಈ ಮಧ್ಯವರ್ತಿ ವರ್ಗದ ಮೂಲಕ್ಕೆ ಕೈಗೊಂಬೆ ರಾಜರನ್ನೂ ಸೇರಿಸಬೇಕು. ಊಳಿಗಮಾನ್ಯತೆಯ ಕೈಗೊಂಬೆಯಾಗಿದ್ದ ಒಡೆಯರ್ ಸಾಮ್ರಾಜ್ಯ ಬ್ರಿಟೀಷ್ ಬಂಡವಾಳದ ಬೆಳವಣಿಗೆಯೊಂದಿಗೆ ನಿಧಾನವಾಗಿ ಮಧ್ಯವರ್ತಿಯಾಗಿ ಭ್ರಷ್ಟಗೊಂಡಿತು. 

ಸಂಡೂರಿನ ‘ಸಂತೃಪ್ತ’ ಘೋರ್ಪಡೆಗಳನ್ನೂ ಈ ಸಂದರ್ಭದಲ್ಲಿ ನೆನೆಸಿಕೊಳ್ಳಬೇಕು. ಮರಾಠರೆಡೆಗಿದ್ದ ತಮ್ಮ ನಿಷ್ಠೆಯನ್ನು ಘೋರ್ಪಡೆಗಳು ಬದಲಿಸಿದರು. ಮನ್ರೋನನ್ನು ಬೆಂಬಲಿಸುತ್ತ ತಮ್ಮ ಬಂದೂಕುಗಳನ್ನು ಮಾಜಿ ಗುರುಗಳಾದ ಪೇಶ್ವೆಯರೆಡೆಗೆ ತಿರುಗಿಸಿ, ಗೆದ್ದು ಬಳ್ಳಾರಿ ಜಿಲ್ಲೆಯ ಸಂಡೂರು ಸಾಮ್ರಾಜ್ಯವನ್ನು ತಮ್ಮದಾಗಿಸಿಕೊಂಡರು. ಹತ್ತೊಂಬತ್ತನೆಯ ಶತಮಾನದ ಪ್ರಾರಂಭದ ದಶಕಗಳಲ್ಲಿ ಪ್ರಮುಖ ವರ್ತಕರಾಗಿ ಮತ್ತು ಆಯಕಟ್ಟಿನ ಜಾಗಗಳಲ್ಲಿನ ಅಧಿಕಾರಿಗಳಾಗಿ ಅವರು ಹೊರಹೊಮ್ಮಿದರು. ಅವರು ಒರಗಿ ಕುಳಿತ ಆರಾಮು ಖುರ್ಚಿ ಮೂರು ಕಾಲಿನ ಮೇಲೆ ಸಮತೋಲನ ಸಾಧಿಸಿತ್ತು – ಒಂದು ಕಾಲು ಊಳಿಗಮಾನ್ಯತೆ, ಒಂದು ವ್ಯಾಪಾರ ಮತ್ತೊಂದು ಅಧಿಕಾರಶಾಹಿತನ. 

ಮಸೂದ್ ದನ್ಮೋಲೆ ಸರಿಯಾಗಿ ಹೇಳುತ್ತಾನೆ: “…ಬಹಳ ಸ್ಪಷ್ಟವಾಗಿ ತಿಳಿಯುವ ಅಂಶವೆಂದರೆ ಈ ಸಾಂಪ್ರದಾಯಿಕ ಆಳ್ವಿಕೆದಾರರು ಅಥವಾ ಅವರ ವಂಶಸ್ಥರು ಅಥವಾ ಅವರಂತೆಯೇ ಯೋಚಿಸುವವರು, ಸ್ಥಳೀಯ ಸಮುದಾಯ ಮತ್ತು ವಿದೇಶಿ ಬಂಡವಾಳಗಾರರ ಮಧ್ಯೆ ಇದ್ದ ಮಧ್ಯಮವರ್ಗದ ಮಧ್ಯವರ್ತಿಗಳ ಬೆಳವಣಿಗೆಗೆ ಮೊಲೆಯುಣಿಸುವವರಾಗಿದ್ದರು. ಈ ಹೊಸ ಸ್ಥಳೀಯ ಮಧ್ಯವರ್ತಿಗಳ ವರ್ಗ, ಹೆಚ್ಚೂ ಇಲ್ಲ ಕಡಿಮೆಯೂ ಅಲ್ಲ, ಸಾಮ್ರಾಜ್ಯಶಾಹಿಯ ಕೈಕೆಲಸದವರಾಗಿದ್ದರು.” (73) 

ಹಾಗಾಗಿ ಮಧ್ಯವರ್ತಿಗಳ ಸೃಷ್ಟಿಗೆ ಅತ್ಯಗತ್ಯವಾಗಿ ಬೇಕಿದ್ದ ಮೂಲವಾಗಿತ್ತು ಊಳಿಗಮಾನ್ಯತೆ. ಊಳಿಗಮಾನ್ಯತೆಯ ಹಲಗೆಯಿಂದ ಮಧ್ಯವರ್ತಿ ಅಧಿಕಾರಶಾಹಿ ಮತ್ತು ವರ್ತಕರು ಚಿಮ್ಮಿದರು. ಮೊದಲಿಗೆ ಮಧ್ಯವರ್ತಿ ವರ್ತಕರ ಮೂಲವನ್ನು ನೋಡೋಣ. ಈ ವರ್ಗ ಹಲವು ವಿಧದಲ್ಲಿ ಹೊರಹೊಮ್ಮಿತು. 

ಮೊದಲಿಗೆ, ನಮ್ಮ ಬಳಿ ಮಾವೋ ತ್ಸೇ ತುಂಗ್ ತನ್ನ Analysis of the classes in chinaದಲ್ಲಿ ವಿವರಿಸಿದ ಮಾದರಿಯಿದೆ; ಮದ್ಯವರ್ತಿಗಳು ವಸಾಹತುಶಾಹಿ ಕಾರ್ಖಾನೆಗಳ ವ್ಯಾಪಾರದ ಸ್ಥಳಗಳಲ್ಲಿ ಅಧಿಕಾರಿಗಳ ರೂಪದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಾಯಿತು. (74) ಕರ್ನಾಟಕದ ಬಂದರುಗಳು ಬ್ರಿಟೀಷರ ವ್ಯಾಪಾರದ ಪ್ರವೇಶದ್ವಾರವಾಗಿರಲಿಲ್ಲ; ಕಲ್ಕತ್ತಾ, ಬಾಂಬೆ, ಮದ್ರಾಸ್ ಮತ್ತು ಸೂರತ್ ಈ ಪಾತ್ರವನ್ನು ನಿರ್ವಹಿಸುತ್ತಿದ್ದವು, ಮಾವೋ ವಿವರಿಸಿದ ಮಧ್ಯಮವರ್ತಿಗಳ ಉಗಮದ ಮಾದರಿಯನ್ನು ಈ ನಗರಗಳಲ್ಲಿ ಕಾಣಬಹುದು. ಕರ್ನಾಟಕದ ಕಾಫೀ ವ್ಯಾಪಾರವನ್ನು ಉದಾಹರಣೆಯಾಗಿಸಿಕೊಂಡು ಮಧ್ಯವರ್ತಿತನದ ನೇರ ಹೇರಿಕೆಯನ್ನು ಕರ್ನಾಟಕದಲ್ಲಿ ಕಾಣಬಹುದು, ಸಣ್ಣ ಪ್ರಮಾಣದಲ್ಲಿ. (75) 

ಈ ವಿದ್ಯಮಾನಗಳನ್ನು ಧೃಡೀಕರಿಸುತ್ತ ಮಾಲತಿ. ಕೆ. ಮೂರ್ತಿ ಬರೆಯುತ್ತಾರೆ: “….ದಕ್ಷಿಣ ಕೆನರಾ ಮತ್ತು ವಿದೇಶಗಳ ನಡುವೆ ನೇರ ವ್ಯಾಪಾರ ಕಡಿಮೆಯಿತ್ತು.” (76) ಈ ಸಮಯದ ಬ್ರಿಟೀಷ್ ವರದಿಗಳು: “ಯಾವ ದೇಶದ ಹಡಗುಗಳೂ ಈ ಜಿಲ್ಲೆಯ ಬಂದರುಗಳಿಗೆ ಯಾವತ್ತೂ ಬಂದಿರಲಿಲ್ಲ” ಎಂದು ಹೇಳುತ್ತವೆ. (77) ಮತ್ತಷ್ಟು ಸೇರಿಸುತ್ತ ಮಾಲತಿ: “ಈ ಪ್ರದೇಶದಲ್ಲಿ ಯುರೋಪಿಯನ್ ವರ್ತಕರ ಹೆಚ್ಚು ಕಮ್ಮಿ ಎಲ್ಲಾ ವ್ಯಾಪಾರವನ್ನೂ ದಲ್ಲಾಳಿಗಳ ಮೂಲಕ, ಸಹಾಯಕರ ನೆರವಿನೊಂದಿಗೆ ನಡೆಸಲಾಗುತ್ತಿತ್ತು.” (78) 

1818ರಲ್ಲಿ ಬಾಂಬೆಯೊಂದರ ವ್ಯಾಪಾರವೇ ಇಡೀ ಕೆನರಾದ ವಹಿವಾಟಿಗಿಂತ ನಲವತ್ತು ಪ್ರತಿಶತಃ ಅಧಿಕವಿತ್ತು. (79) ಕರ್ನಾಟಕದ ಕರಾವಳಿಯುದ್ದಕ್ಕಿದ್ದ ಬಂದರುಗಳು ಒಳನಾಡು ಮತ್ತು ಬಾಂಬೆಯ ನಡುವಿನ ಸಾಗಾಣಿಕೆಯ ಸ್ಥಳವಾಗಿತ್ತು. 

ಬ್ರಿಟೀಷರು ಕನ್ನಡ, ತುಳು ಮತ್ತು ಕೊಡವ ನಾಡಿನಲ್ಲಿ ನೇರವಾಗಿ ವ್ಯಾಪಾರ ಮಾಡದ ಕಾರಣ ಕರ್ನಾಟಕದ ಮಧ್ಯವರ್ತಿ ವರ್ತಕರು ದಲ್ಲಾಳಿಗಳಾಗಿ ಬಾಂಬೆ ಮತ್ತು ಮದ್ರಾಸಿನ ಮಧ್ಯವರ್ತಿಗಳಾದರು. ಹಾಗಾಗಿ ಗಮನಿಸಿದಾಗ – ಯಾವಾಗಲೂ ಅಲ್ಲದಿದ್ದರೂ – ಹತ್ತೊಂಬತ್ತನೇ ಶತಮಾನದಲ್ಲಿ ಆಕ್ರಮಣಕ್ಕೊಳಗಾದ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಮಧ್ಯವರ್ತಿ ವರ್ತಕರ ಬೆಳವಣಿಗೆ ಕುಂಠಿತವಾಗಿತ್ತು. ಹತ್ತೊಂಬತ್ತನೇ ಶತಮಾನ ಬ್ರಿಟೀಷರಿಗೆ ಹದಿನೆಂಟನೇ ಶತಮಾನಕ್ಕಿಂತ ಹೆಚ್ಚಿನ ಪ್ರದೇಶಗಳನ್ನು ನೀಡಿತು. ಇದು ಏನನ್ನು ಸೂಚಿಸುತ್ತಿತ್ತೆಂದರೆ ಈಗಾಗಲೇ ಬಾಂಬೆ, ಮದ್ರಾಸ್, ಕಲ್ಕತ್ತಾ ಮತ್ತು ಸೂರತ್ತಿನಲ್ಲಿ ವಸಾಹತುಶಾಹಿಯ ವ್ಯಾಪಾರ ವಹಿವಾಟಿನಲ್ಲಿ ಗೂಡು ಕಟ್ಟಿಕೊಂಡಿದ್ದ ಮಧ್ಯವರ್ತಿಗಳಿಗೆ ಬ್ರಿಟೀಷ್ ಸಾಮ್ರಾಜ್ಯ ಇಂಚಿನಷ್ಟು ವಿಸ್ತಾರಗೊಂಡರೂ ಅಪಾರ ಅನುಕೂಲವಾಗುತ್ತಿತ್ತು. ಬ್ರಿಟೀಷರ ಸೇವೆಗೈದ ಕರ್ನಾಟಕದ ವರ್ತಕರು ನೇರ ಮಧ್ಯವರ್ತಿಗಳಾಗದಿದ್ದರೂ ತಮ್ಮ ಮಧ್ಯವರ್ತಿ ವ್ಯಕ್ತಿತ್ವಕ್ಕೆ ‘ಚ್ಯುತಿ’ ಬರುವಂತೆ ನಡೆದುಕೊಳ್ಳಲಿಲ್ಲ ಮತ್ತು ಮಧ್ಯವರ್ತಿಗಳ ಆರ್ಥಿಕ ಮತ್ತು ರಾಜಕೀಯ ಪಾತ್ರ ವಸಾಹತುಶಾಹಿಯ ಸೇವೆಯಲ್ಲಿರುವಂತೆ ನೋಡಿಕೊಂಡರು. ದಲ್ಲಾಳಿಗಳ ದಲ್ಲಾಳಿಗಳಾಗಿದ್ದ ಒಂದಷ್ಟು ಕುಳ್ಳಗೆ, ದಪ್ಪಕ್ಕಿದ್ದ ಇವರು ರುಪಾಯಿಗಳಲ್ಲಿ ವ್ಯವಹರಿಸುತ್ತಿದ್ದರೆ ಇವರ ಬಲಾಢ್ಯ ದಾಯಾದಿಗಳು ಪೌಂಡ್ ಮತ್ತು ಬಾಂಬೆಯಲ್ಲಿ ಸ್ಟರ್ಲಿಂಗಿನಲ್ಲಿ ವ್ಯವಹಾರ ಮಾಡುತ್ತಿದ್ದರು. 

ಬ್ರಿಟೀಷರು ಪರಿಚಯಿಸಿದ ಆರ್ಥಿಕತೆಯ ಗುರಿ ಸ್ಥಳೀಯ ವರ್ತಕರ ಬಹುದೊಡ್ಡ ಗುಂಪನ್ನು ಹೇಳಹೆಸರಿಲ್ಲದಂತೆ ಮಾಡುವುದಾಗಿತ್ತು ಮತ್ತು ಆ ಗುಂಪಿನ ಕೆಲವೇ ಕೆಲವರನ್ನು ಮಧ್ಯವರ್ತಿಗಳನ್ನಾಗಿ ಪರಿವರ್ತಿಸುವುದಾಗಿತ್ತು; ಆಧಾರಗಳ ಕೊರತೆಯಿಂದ ಈ ಮೇಲ್ಪದರದ ಜನರ್ಯಾರು ಎಂದು ಗುರುತಿಸುವುದು ನಮಗೆ ಸಾಧ್ಯವಾಗುತ್ತಿಲ್ಲ. 

ಇವೆಲ್ಲವೂ ಕರ್ನಾಟಕದಲ್ಲಿ ಮಧ್ಯವರ್ತಿ ವರ್ತಕರ ರೂಪುಗೊಳ್ಳುವಿಕೆಗೆ ನಡೆಯುತ್ತಿದ್ದ ಚಟುವಟಿಕೆಗಳಾದರೆ, ಒಳಗೊಳಗೇ ಮತ್ತೊಂದು ಬೆಳವಣಿಗೆ ನಡೆಯುತ್ತಿತ್ತು. ಕೆಲವು ನೇರ ಮಧ್ಯವರ್ತಿಗಳು ಬ್ರಿಟೀಷ್ ಸಾಮ್ರಾಜ್ಯದಿಂದ ಕರ್ನಾಟಕಕ್ಕೆ ವಲಸೆ ಬಂದರು. ಕರ್ನಾಟಕ ಇತಿಹಾಸದ ಈ ಭಾಗ ರಾಜಕೀಯವಾಗಿ ಬಹಳ ಪ್ರಮುಖವಾದ ಸಂಕೇತವಾಗಿದೆ. ಆರನೇ ಪಾವ್ ಲಾವ್ (Pavlov) ಇದರ ಬಗ್ಗೆ ಬರೆಯುತ್ತ: “ಜಗತ್ ಸೇಠರು 1782ರವರೆಗೆ ಕಂಪನಿಯ ಬ್ಯಾಂಕರುಗಳಾಗಿದ್ದರು. ಅವರ ಜಾಗಕ್ಕೆ ಅಗರ್ ವಾಲ್ ಸಮುದಾಯದ ದೊಡ್ಡ ಮಾರ್ವಾಡಿ ಬ್ಯಾಂಕರುಗಳ ಸದಸ್ಯರಲ್ಲೊಬ್ಬರಾದ ಗೋಪಾಲ್ ದಾಸರ ಮಾರ್ವಾಡಿ ಬ್ಯಾಂಕ್ ಬಂತು. ಅವನು ಮತ್ತವನ ತಮ್ಮ 1770ರಲ್ಲಿ ಕಲ್ಕತ್ತಾಗೆ ಹೋದರು. ಮತ್ತಲ್ಲವರ ಅದೃಷ್ಟ ಖುಲಾಯಿಸಿತು. ಅವನ ಮಗ ಭವಾನಿದಾಸ್ ಬ್ರಿಟೀಷರ ಸೈನ್ಯ 1799ರಲ್ಲಿ ಮೈಸೂರನ್ನಾಕ್ರಮಿಸುವಾಗ ಶಸ್ತ್ರಾಸ್ತ್ರಗಳನ್ನು ಪೂರೈಸಿದರು. ಭವಾನಿದಾಸರ ಸೇವೆ ಎಷ್ಟು ಮಹತ್ವದ್ದಾಗಿತ್ತೆಂಬುದಕ್ಕೆ ಆಕ್ರಮಣಕಾರರಾದ ಬ್ರಿಟೀಷರು ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡ ನಂತರ ಟಿಪ್ಪು ಸುಲ್ತಾನನ ಖಡ್ಗವನ್ನು ಅವರಿಗೆ ನೀಡಿದ್ದೇ ಸಾಕ್ಷಿ.”(80) 

ವಸಾಹತುಶಾಹಿಯ ವಿರುದ್ಧ ಕಾದಾಡಿದ, ಬ್ರಿಟೀಷರ ವಿರುದ್ಧದ ಹೋರಾಟದ ಸಂಕೇತವಾಗಿದ್ದ ಖಡ್ಗ ಮಾರ್ವಾಡಿ ಮಧ್ಯವರ್ತಿಗಳಿಗೆ ಬಹುಮಾನವಾಗಿ ದಕ್ಕಿದ್ದು ಇತಿಹಾಸದ ವ್ಯಂಗ್ಯವೇ ಸರಿ. ಈ ಬಹುಮಾನ ಕರ್ನಾಟಕದ ಮಾರುಕಟ್ಟೆಯನ್ನು ಕರ್ನಾಟಕದ ಶತ್ರುಗಳಿಗೆ ಉಡುಗೊರೆಯಾಗಿ ಒಪ್ಪಿಸುವುದರ ಭವಿಷ್ಯವಾಣಿಯಾಗಿತ್ತು ಮತ್ತು ಕರ್ನಾಟಕದಲ್ಲಿ ಬ್ರಿಟೀಷ್ ವಸಾಹತಿನ ಸೇವೆಗೆ ಮತ್ತು ಅವರ ಲೂಟಿಯ ರಕ್ಷಣೆಯ ಹೊಣೆಯನ್ನು ಈ ಗುಲಾಮರಿಗೆ ಒಪ್ಪಿಸಿತ್ತು. ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದಲ್ಲಿ ಬನಿಯಾಗಳು ಬಿಜಾಪುರ ಭಾಗದಲ್ಲಿ ಮಧ್ಯವರ್ತಿ ಬಲೆ ಹರಡಿದ್ದನ್ನು ಈಗಾಗಲೇ ನೋಡಿದ್ದೇವೆ. (81) 

ಮೈಸೂರಿನ ಹೃದಯ ಭಾಗಕ್ಕೆ ಪಶ್ಚಿಮ ಮತ್ತು ವಾಯುವ್ಯ ಭಾರತದಿಂದ ಬಂದ ವಸಾಹತಿನ ಮಧ್ಯವರ್ತಿಗಳ ಬಗ್ಗೆ ತಿಳಿಯುವುದು ಆನಂದ ರಂಗ ಪಿಳ್ಳೈರ (ಎ.ಆರ್. ಪಿಳ್ಳೈ) ಡೈರಿಯಲ್ಲಿನ ಬರಹಗಳನ್ನು ಭೇಟಿಯಾದಾಗ. ಪಿಳ್ಳೈ ಫ್ರೆಂಚ್ ವಸಾಹತಿನ ಪ್ರಮುಖ ಮಧ್ಯವರ್ತಿಗಳಾಗಿದ್ದರು, ಫ್ರೆಂಚರ ವಹಿವಾಟಿನಲ್ಲಿ ಅವರ ಪಾತ್ರ ಗಮನಾರ್ಹವಾಗಿತ್ತು. 1709ರಲ್ಲಿ ಹುಟ್ಟಿದ್ದ ಎ.ಆರ್. ಪಿಳ್ಳೈ 1716ರಲ್ಲಿ ಮದ್ರಾಸಿನಿಂದ ಪಾಂಡಿಚೇರಿಗೆ ವಲಸೆ ಹೋದರು. ತಮ್ಮ ಭಾಮೈದ, ಫ್ರೆಂಚಿನ ಪ್ರಮುಖ ಸ್ಥಳೀಯ ಏಜೆಂಟಾಗಿದ್ದ ನನಿಯಾ ಪಿಳ್ಳೈರವರ ಸೂಚನೆಯ ಮೇರೆಗೆ.” (82) 

ತಮಿಳುನಾಡಿನಲ್ಲಿ ಅನೇಕ ವ್ಯಾಪಾರಗಳನ್ನು ಸ್ಥಾಪಿಸಿ “ಯುರೋಪಿನ ವಸ್ತುಗಳಿಗೆ ದೇಶದೊಳಗಡೆ ಮಾರುಕಟ್ಟೆ ಸ್ಥಾಪಿಸುವ ಕೆಲಸವನ್ನು ಚುರುಕುಗೊಳಿಸಿದರು” (83) 

ಆದಾಗ್ಯೂ, ಮುಖ್ಯವಾದ ಅಂಶವೆಂದರೆ “ಚಿಕ್ಕದೇವರಾಜರ ನಂತರ ಬಂದ ಒಡೆಯರ್ ಗಳು ಫ್ರೆಂಚಿನ ಮಧ್ಯವರ್ತಿಗಳಾದ ಆನಂದ ರಂಗ ಪಿಳ್ಳೈರಂತವರ ಚಟುವಟಿಕೆಗಳು ವ್ಯಾಪಿಸುವುದಕ್ಕೆ ಅವಕಾಶಗಳನ್ನೊದಗಿಸಿದರು; ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವವರ ಸಹಾಯಕ್ಕೆ ಕರ್ನಾಟಕದ ವರ್ತಕರನ್ನು ನಂಬದೆ ಕರ್ನಾಟಕದ ಒಳನಾಡಿನಲ್ಲಿ ವಸಾಹತುಶಾಹಿಯ ಆರ್ಥಿಕ ದಲ್ಲಾಳಿಗಳಾಗಿದ್ದ ಮಾರವಾಡಿ ಮತ್ತು ಗುಜರಾತಿಗಳನ್ನು ನಂಬಿದರು. ಆನಂದ ರಂಗ ಪಿಳ್ಳೈರವರ ಡೈರಿಯಲ್ಲಿ ಅವರ ಜೊತೆ ವ್ಯವಹರಿಸಿದ ಸಂಬು ದಾಸ್ ಗೆ ಪುರಸ್ಕಾರ ಕೊಟ್ಟ ಬಗ್ಗೆ ಹೇಳಲಾಗಿದೆ. ಅದು ಮೈಸೂರಿನ ಶ್ರೀರಂಗಪಟ್ಟಣದ ಗುಜರಾತಿ ಲಾಲ್ ದಾಸ್ ಗೆ ಸಿಗಬೇಕಿತ್ತು.” (84) 

ಮೈಸೂರಿನ ವಸಾಹತು ವಿರೋಧಿ ಸರಕಾರದ ಪತನದ ನಂತರ ಹೊಸ ಮಾರುಕಟ್ಟೆಗೆ ವಸಾಹತುಶಾಹಿಯ ಪ್ರವೇಶದ ದಲ್ಲಾಳಿಗಳಾಗಿ ಪಶ್ಚಿಮ ಭಾರತದ ಸ್ಥಾಪಿತ ಮಧ್ಯವರ್ತಿ ಕುಟುಂಬಗಳು ದಕ್ಷಿಣದ ಕಡೆಗೆ ಹೆಜ್ಜೆ ಹಾಕಿದರು. ಇದು ಎಷ್ಟು ವೇಗವಾಗಿ ನಡೆಯುತ್ತಿತ್ತೆಂದರೆ ಮಂಗಳೂರು ಬ್ರಿಟೀಷರ ಕೈವಶವಾದ ತಿಂಗಳ ನಂತರ ಅಲ್ಲಿಗೆ ಭೇಟಿ ಕೊಟ್ಟ ಬುಚನನ್ನಿಗೆ ಬದಲಾವಣೆಗಳು ಗೋಚರಿಸಲಾರಂಭಿಸುತ್ತು. ಬುಚನನ್ ಬರೆಯುತ್ತಾನೆ: “ಹೈದರಾಲಿಯ ಕಾಲದ ಪ್ರಮುಖ ವರ್ತಕರು ಮಾಪಿಳ್ಳೈ ಮತ್ತು ಕೊಂಕಣಿಗಳು (ಗೌಡ ಸಾರಸ್ವತ ಬ್ರಾಹ್ಮಣರು); ಕಂಪನಿ ಈ ಸರಕಾರವನ್ನು ವಶಪಡಿಸಿಕೊಂಡ ನಂತರ ಕೆಲವರು ಗುಜರಾತಿನಿಂದ ಬಂದಿದ್ದಾರೆ, ಹಲವರು ಸೂರತ್, ಖಚ್, ಬಾಂಬೆ ಮತ್ತು ಉತ್ತರದ ಇತರೆ ಜಾಗಗಳಿಂದ ಬಂದಿದ್ದಾರೆ. ಇವರು ಮುಖ್ಯವಾಗಿ ವೈಶ್ಯ ಜಾತಿಗೆ ಸೇರಿದವರು, ಪಾರ್ಸಿ ಜನಾಂಗದವರೂ ಹಲವರಿದ್ದಾರೆ….. ವಹಿವಾಟಿಗೆ ಉಪಯೋಗಿಸಲಾಗುವ ಹಡಗುಗಳು ಇತರೆ ಬಂದರುಗಳಿಗೆ ಸೇರಿರುವುದೇ ಜಾಸ್ತಿ.” (85) 

ಈ ಅಂಶವನ್ನು ಆರ್. ಡಿ. ಚೋಕ್ಸಿ (Choksey) ದೃಡೀಕರಿಸುತ್ತ: “ಬ್ರಿಟೀಷ್ ಆಕ್ರಮಣದ ತರುವಾಯ ಮಾರವಾಡಿಗಳು ಹೆಚ್ಚಿನ ಸಂಖೈಯಲ್ಲಿ ನೆಲೆ ಕಂಡಿದ್ದಾರೆ. ಅವರಲ್ಲಿನ ಬಹುತೇಕರು ಬಾಂಬೆಯಿಂದ ಬಂದಿದ್ದಾರೆ, ಬನಿಯಾಗಳಂತಲ್ಲದೆ, ಇವರು ದೂರದೂರದ ಹಳ್ಳಿಗಳಿಗೆ ಹೋಗಿ ನೆಲೆ ನಿಂತು ನಿಧಾನಕ್ಕೆ ಆ ಹಳ್ಳಿಗಳಲ್ಲಿ ಬಡ್ಡಿ ಕೊಡುತ್ತಿದ್ದ ಸ್ಥಳೀಯರನ್ನು ಇಲ್ಲವಾಗಿಸಿದರು.” (86) 

ಈ ವಿದ್ಯಮಾನವನ್ನು ಸುನಿತಿ ಘೋಷ್ ವಿವರಿಸುತ್ತಾ: “ಕಡಲಾಚೆ ಮತ್ತು ಸ್ಥಳೀಯ ವ್ಯವಹಾರದ ಪರಿಸ್ಥಿತಿಯಲ್ಲಿ ವಿದೇಶಿ ವರ್ತಕರ ದಲ್ಲಾಳಿಗಳಾಗದ ಭಾರತೀಯ ವರ್ತಕರು ಪತನ ಕಂಡು ಮಧ್ಯವರ್ತಿ ವರ್ತಕರು ಶಕ್ತರಾಗಿದ್ದನ್ನು ವಿಧಿ ಕೂಡ ತಡೆಯಲು ಸಾಧ್ಯವಿರಲಿಲ್ಲ.” (87) 

ವಸಾಹತು ಸರಕಾರದ ಮಧ್ಯಸ್ಥಿಕೆ, ಬ್ರಿಟೀಷರ ನೇರ ಆಡಳಿತವಿದ್ದ ಬೆಂಗಳೂರಿನ ಕಂಟೋನ್ಮೆಂಟಿನಲ್ಲಿ ಸ್ಥಳೀಯ ವರ್ತಕರ ವಿರುದ್ಧ ಮದ್ರಾಸಿನ ಮಧ್ಯವರ್ತಿಗಳನ್ನು ರಕ್ಷಿಸಿ ಪ್ರೋತ್ಸಾಹಿಸಿದ್ದನ್ನು ನರೇಂದ್ರ ಫಣಿ ಧೃಡೀಕರಿಸುತ್ತಾರೆ. ಅವರು ಬರೆಯುತ್ತಾರೆ: “ಬ್ರಿಟೀಷರ ಸಂಪೂರ್ಣ ನಿಯಂತ್ರಣದಲ್ಲಿದ್ದ ಆಡಳಿತ ಮತ್ತು ಸೈನ್ಯವನ್ನು ಮತ್ತಷ್ಟು ಬಲಪಡಿಸಿದ್ದು ಬಹುತೇಕ ನಿವಾಸಿಗಳು ಮೈಸೂರೇತರರಾಗಿರುವಂತೆ ನೋಡಿಕೊಂಡದ್ದು. ಈ ಕ್ರಮ ಮೈಸೂರು ರಾಜ್ಯದ ಮೇಲಿನ ನಿಯಂತ್ರಣವನ್ನು ಪ್ರಭಾವಿಯಾಗಿಸಲು ಬಹುಶಃ ಅವಶ್ಯಕವಾಗಿತ್ತು, ಬ್ರಿಟೀಷರ ಸಂಪೂರ್ಣ ನಿಯಂತ್ರಣವಿಲ್ಲದ ಸಾಮ್ರಾಜ್ಯದ ‘ಬ್ರಿಟೀಷ್ ದ್ವೀಪವಾಗಿತ್ತು’ ಕಂಟೋನ್ಮೆಂಟ್; ಮೈಸೂರಿನಿಂದ ಹೊರತಾಗಿ ಅದರಲ್ಲೂ ಬೆಂಗಳೂರಿನ ಪೇಟೆಯಿಂದ ಹೊರತಾಗಿ ಉಳಿಸಿಕೊಳ್ಳುವ ಜರೂರಿತ್ತು. ಇಲ್ಲಿನ ಅಧಿಕಾರಿಗಳಿಗೆ ‘ಸಾಧ್ಯವಾದಷ್ಟು ಖಾಸಗಿ ಕಟ್ಟಡಗಳು ಬೆಂಗಳೂರಿನ ಪೇಟೆಯ ಕಡೆಗೆ ಬೆಳೆಯದಂತೆ’ ನೋಡಿಕೊಳ್ಳಬೇಕೆಂದು ಸೂಚಿಸಲಾಗಿತ್ತು. ಈ ಸೂಚನೆ ಕೇವಲ ಭೌಗೋಳಿಕ ಉದ್ದೇಶದ್ದಾಗಿದ್ದರೆ ಅದನ್ನು ಮೀರುವುದು ಅಷ್ಟೇನೂ ಮಹತ್ವದ್ದಾಗಿರುತ್ತಿರಲಿಲ್ಲ. ಹಾಗಾಗಿ ಬ್ರಿಟೀಷರು ಕಂಟೋನ್ಮೆಂಟ್ ಮತ್ತು ಬೆಂಗಳೂರು ನಗರದ ನಡುವಿನ ವ್ಯಾವಹಾರಿಕ ಸಂಬಂಧಗಳು ಒಂದು ಮಿತಿಯಲ್ಲಿರುವಂತೆ ನೋಡಿಕೊಂಡರು. ಪೇಟೆಯಲ್ಲಿ ಇದೇ ಸಮಯದಲ್ಲಿ ಸುರಕ್ಷಿತವಾಗಿದ್ದ ವರ್ತಕರು ಕಂಟೋನ್ಮೆಂಟಿನಲ್ಲಿ ಉನ್ನತಿ ಪಡೆಯದಂತೆ ‘ನ್ಯಾಯಬದ್ಧ’ವಾಗಿಯೇ ಹೊರಗಿಡಲಾಯಿತು. ಪೇಟೆಯ ವರ್ತಕರಿಗೆ ಕಂಟೋನ್ಮೆಂಟಿನಲ್ಲಿ ಅಂಗಡಿ ತೆರೆಯುವ ಅವಕಾಶವಿರಲಿಲ್ಲ. ಆದರೆ ತಮ್ಮ ವಸ್ತುಗಳನ್ನು ಕಂಟೋನ್ಮೆಂಟಿನ ಸಾಮಾನ್ಯ ಮತ್ತು ರೆಜಿಮೆಂಟಿನ ಬಜಾರುಗಳಿಗೆ ವೋಲ್ ಸೇಲ್ ದರದಲ್ಲಿ ಮಾರಾಟಮಾಡಬಹುದಾಗಿತ್ತು.” (88)

ಮುಂದಿನ ವಾರ: 
ಮಧ್ಯವರ್ತಿ - ಖರೀದಿದಾರ ವರ್ಗದ ಉಗಮಕ್ಕಿದ್ದ ಸಾಮಾಜಿಕ ಸ್ಥಿತಿಗತಿ ಭಾಗ 2

Disclaimer: ಮೇಕಿಂಗ್ ಹಿಸ್ಟರಿ ಆಂಗ್ಲ ಪುಸ್ತಕದ ಅನುವಾದಿಸಲು ಬೇಕಾದ ಅಧಿಕೃತ ಹಕ್ಕುಗಳು ನನ್ನಲ್ಲಿಲ್ಲ. ಅನುವಾದದ ಹಕ್ಕನ್ನು ಕೊಡುವವರಲ್ಲನೇಕರು ಜೈಲಿನಲ್ಲಿದ್ದಾರಂತೆ. ಯಾರಲ್ಲಾದರೂ ಅಧಿಕೃತ ಅನುವಾದದ ಹಕ್ಕುಗಳು ಇದ್ದು ಆಕ್ಷೇಪಣೆ ಎತ್ತಿದರೆ ಕ್ಷಮಾಪಣೆಯೊಂದಿಗೆ ಅನುವಾದದ ಕಾರ್ಯವನ್ನು ನಿಲ್ಲಿಸಲಾಗುವುದು. ಸಾಕೇತ್ ರಾಜನ್ ದೃಷ್ಟಿಯ ಕರ್ನಾಟಕದ ಇತಿಹಾಸ ಕನ್ನಡ ಬಲ್ಲವರಿಗೂ ತಲುಪಲಿ ಎಂಬ ಉದ್ದೇಶದಿಂದ ಇದನ್ನು ಪ್ರಕಟಿಸಲಾಗುತ್ತಿದೆಯೇ ಹೊರತು ಯಾವುದೇ ವಾಣಿಜ್ಯ ಉದ್ದೇಶದಿಂದಲ್ಲ - ಡಾ. ಅಶೋಕ್. ಕೆ. ಆರ್.

Mar 17, 2016

Decentralized budgeting- Need of the hour

Narasimhan Khadri
17/03/2016
There was one particularly disturbing news in today's (17th march 2016) Prajavani titled "Jaarige baarada ghoshane" . It lists out many programmes and schemes that were announced in the last year's budget which has not been implemented even now. Also another worrisome statistics published In the same article is the fact that only 76 percent of the money that was cleared by the state legislature house has been utilized till February end. The rest 24 per cent money will have to used by march 31st else it will be expired. In a phenomenon disparagingly called by scholars as the 'March Rush' , money approved in the previous year's budget will be hurriedly spent only in the last month of the financial year. Does such hastiness result in any effective government expenditure? Does it yield positive result? All this is happening while the state is in one of its worst periods of drought and every penny spent by the government can have a positive cyclical impact on our people.

This can only be called as fiscal arrogance . These incidents are not unique to Karnataka government alone. This happens in almost all the states and even the central government cant be absolved of the guilt. Another important inference that can be drawn from this disturbing statistics is , it dispels the myth propagated by our pink newspapers that governments don't have 'enough' money. The fact is governments have a lot of money, the only thing lacking really is will to spend it in a right manner. This cannot be stressed enough.

The reasons for such 'fiscal arrogance' by governments are as follows .
a) Budget making is completely a centralized process.
b) Only a select group of ministers and bureaucrats are involved in the decision making as to what amount of money must be spent in which schemes. ZPs, TPs, and GPs are not even consulted- even if they are consulted in rare cases it is only done to fulfil statutory obligations.
c) Media creates a hoopla around these schemes only for a few days after the budget statement is made
d) Thereafter there is lack of sustained monitoring and accountability.
e) Budget making process is entirely focussed on grabbing headlines. It lacks clear long term vision.
f) Financial committees- which are watchdogs in legislatures and lok sabha- lack teeth to enforce fiscal discipline .

It is in this context that AAP government's very ingenious experiment of decentralized budgeting in Delhi must be studied and lauded. This involves delimitation of entire Delhi into Mohalla Sabhas and allocating a fixed sum to these 'sabhas'. How these money will be spent will be decided by the registered voters of the 'Sabha' wherein each voter will cast his/her vote. This process ensures that people take ownership of the money that has been approved. This increases confidence amongst the people , most importantly women get a significant voice since they get to vote on issues like sanitation, girl's health, security etc.

It is a constitutional obligation that even we demand such a decentralized budget making process from our state governments. For this to happen we have to advertise the advantages of such a process so that it becomes an election issue. We have to pinch our leaders who are blissfully asleep.
References: 
http://indianexpress.com/article/cities/delhi/aap-team-works-towards-turning-mohalla-sabha-promise-into-reality/

Mar 16, 2016

ವ್ಯವಸ್ಥೆಯ ಹಿಂಸೆಯ ‘ವಿಸಾರಣೈ’


visaranai tamil movie review
ಡಾ. ಅಶೋಕ್. ಕೆ. ಆರ್
16/03/2016
ನೈಜತೆಯ ವಿಷಯಕ್ಕೆ ಬಂದರೆ ತಮಿಳು ಸಿನಿಮಾಗಳಿಗೆ ತಮಿಳು ಸಿನಿಮಾಗಳೇ ಸಾಟಿ. ‘ಲಾಕ್ ಅಪ್’ ಎಂಬ ನೈಜ ಘಟನೆಗಳ ಬಗೆಗಿನ ಪುಸ್ತಕವನ್ನಾಧರಿಸಿ ವೆಟ್ರೀಮಾರನ್ ನಿರ್ದೇಶಿಸಿರುವ ‘ವಿಸಾರಣೈ’ ಸಿನಿಮಾ ವ್ಯವಸ್ಥೆಯ ವ್ಯವಸ್ಥಿತ ಹಿಂಸೆಯ ಛಾಯೆಯಲ್ಲಿ ನರಳುವ ನಾಲ್ಕು ಮುಗ್ಧರ ಕತೆ. ಇದು ಬರೀ ವ್ಯವಸ್ಥೆಯ, ಪೋಲೀಸ್ ಹಿಂಸೆಯ ಕತೆಯಷ್ಟೇ ಅಲ್ಲ; ಪೋಲೀಸರ, ಅವರ ಮೇಲಧಿಕಾರಿಗಳಲ್ಲಿರುವ ಕ್ರೌರ್ಯದ ಕತೆ; ಅವರೊಳಗಿರುವ ಪೂರ್ವಾಗ್ರಹಪೀಡಿತ ಮನಸ್ಸುಗಳ ಕತೆ. ವ್ಯವಸ್ಥೆ ನಮಗೆ ಮೋಸ ಮಾಡುವುದಿಲ್ಲ ಎಂದು ನಂಬಿಕೊಂಡ ಅಮಾಯಕರ ಕತೆಯಿದು.

ತಮಿಳುನಾಡಿನ ವಿವಿಧ ಊರುಗಳಿಂದ ನಾನಾ ಕಾರಣಗಳಿಗಾಗಿ ಓಡಿ ಹೋಗಿ ಆಂಧ್ರದಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ – ಪಾಂಡಿ, ಮುರುಗನ್, ಅಫ್ಜಲ್, ಕುಮಾರ್. ಚೆನ್ನಾಗಿ ಸಂಪಾದನೆ ಮಾಡಿ ಊರಿಗೆ ಮರಳಬೇಕೆಂಬ ಕನಸು. ಗಾಂಧಿ ಪಾರ್ಕಿನಲ್ಲಿ ರಾತ್ರಿ ಕಳೆಯುತ್ತಾರೆ, ಬಾಡಿಗೆ ದುಡ್ಡು ಉಳಿಸಲು. ಇವರು ನಾಲ್ವರನ್ನೂ ಆಂಧ್ರದ ಪೋಲೀಸರು ಒಂದು ಮುಂಜಾನೆ ಪೋಲೀಸ್ ಠಾಣೆಗೆ ಕರೆದೊಯ್ದು ಮನಬಂದಂತೆ ಹೊಡೆಯುತ್ತಾರೆ. ಈ ನಾಲ್ವರಿಗೂ ಯಾಕೆ ಹೊಡೆಸಿಕೊಳ್ಳುತ್ತಿದ್ದೀವೆಂದೇ ತಿಳಿಯುವುದಿಲ್ಲ. ಭಾಷೆ ಪೂರ್ಣವಾಗಿ ಬರುವುದಿಲ್ಲ. ಪ್ರಶ್ನೆ ಕೇಳಿದರೆ ಮತ್ತಷ್ಟು ಬಡಿತ. ಪ್ರತಿಷ್ಠಿತರ ಮನೆಯಲ್ಲಿ ದೊಡ್ಡ ಮೊತ್ತ ಕಳುವಾಗಿರುತ್ತದೆ. ಆದಷ್ಟು ಶೀಘ್ರವಾಗಿ ದರೋಡೆಕೋರರನ್ನು ಬಂಧಿಸಬೇಕೆಂದು ಮೇಲಧಿಕಾರಿಗಳಿಂದ ಒತ್ತಡ. ಕಳುವು ಮಾಡಿದವರು ತಮಿಳು ಮಾತನಾಡುತ್ತಿದ್ದರೆಂಬುದನ್ನೇ ನೆಪಮಾಡಿಕೊಂಡು ಈ ನಾಲ್ವರನ್ನು ಹಿಡಿದು ತಂದು ಅವರು ಅಪರಾಧವನ್ನು ಒಪ್ಪಿಕೊಳ್ಳುವಂತೆ ಮಾಡುವುದು ಪೋಲೀಸರ ಉದ್ದೇಶ. ಗಾಂಧಿ ಪಾರ್ಕಿನಿಂದ ಶುರುವಾಗುವ ಚಿತ್ರ ಗಾಂಧಿಯ ಸತ್ಯಾಗ್ರಹ ಮಾರ್ಗವನ್ನು ಪಾಂಡಿ ಮತ್ತು ಗೆಳೆಯರು ಪಾಲಿಸುವಂತೆ ಮಾಡುತ್ತದೆ. ಪೋಲೀಸರು ಕೊಟ್ಟ ಯಾವೊಂದು ಆಹಾರ ಪದಾರ್ಥವನ್ನೂ ಮುಟ್ಟುವುದಿಲ್ಲ. ಕೇಸು ಕ್ಲೋಸು ಮಾಡಲು ಪೋಲೀಸರಿಗೆ ಆತುರ. ಕುಟಿಲತೆಯಿಂದ ಸತ್ಯಾಗ್ರಹವನ್ನು ಮುರಿದುಬಿಡುತ್ತಾರೆ. ವ್ಯವಸ್ಥೆ ಗಾಂಧಿವಾದವನ್ನು ಕುಟಿಲತೆಯಿಂದ ಅಂತ್ಯಗೊಳಿಸಿದ್ದರ ಸಂಕೇತದಂತೆಯೂ ಇದು ಕಾಣಿಸುತ್ತದೆ. ಹಿಂಸೆಯ ಯಾವ ರೂಪವೂ ಪಾಂಡಿಯ ಮನಸ್ಸನ್ನು ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡಲು ಸಫಲತೆ ಕಾಣದಾಗ ಭಾವನೆಗಳ ಜೊತೆಗೆ ಆಟವಾಡಿ ಪೋಲೀಸರ ಸಮ್ಮುಖದಲ್ಲಿ ಎಲ್ಲವನ್ನೂ ಒಪ್ಪಿಕೊಳ್ಳುವಂತೆ ಮಾಡುತ್ತದೆ. ಈ ನಾಲ್ಕು ಪಾತ್ರಧಾರಿಗಳನ್ನಿಟ್ಟುಕೊಂಡು ದೊಡ್ಡದೊಂದು ದರೋಡೆಯ ಕತೆ ಹೆಣೆಯುತ್ತಾರೆ ಪೋಲೀಸರು. ಆದರೆ ನ್ಯಾಯಾಲಯದಲ್ಲಿ ಪಾಂಡಿಗೆ ತಡೆಯಲಾಗುವುದಿಲ್ಲ, ತೆಲುಗು ನ್ಯಾಯಾಧೀಶರಿಗೆ ತಮಿಳಿನಲ್ಲೇ ತಾವುಂಡ ಕಷ್ಟಗಳನ್ನೆಲ್ಲ ಹೇಳಿಬಿಡುತ್ತಾನೆ. ಅದೇ ಸಮಯಕ್ಕೆ ಕೆ.ಕೆ ಎಂಬ ಕ್ರಿಮಿನಲ್ಲನ್ನು ಹಿಡಿಯಲು ಬಂದಿರುತ್ತಾರೆ ತಮಿಳುನಾಡಿನ ಪೋಲೀಸರು. ತಮಿಳುನಾಡು ಪೋಲೀಸ್ ಮುತ್ತುವೇಲು ನ್ಯಾಯಾಧೀಶರ ಮುಂದೆ ಇವರು ತಮಿಳಿನಲ್ಲಿ ಹೇಳಿದ್ದನ್ನು ಇಂಗ್ಲೀಷಿಗೆ ಅನುವಾದಿಸಿ ಅವರು ಬಿಡುಗಡೆಯಾಗುವಂತೆ ಮಾಡುತ್ತಾನೆ. ನ್ಯಾಯಾಲಯದಲ್ಲಿ ಶರಣಾಗಲು ಬಂದಿದ್ದ ಕೆ.ಕೆ.ಯನ್ನು ಹಿರಿಯ ಅಧಿಕಾರಿಗಳ ಒತ್ತಡದಿಂದ ಈ ನಾಲ್ವರನ್ನು ಉಪಯೋಗಿಸಿ ಅಪಹರಿಸಿ ತಮಿಳುನಾಡು ಕಡೆಗೆ ಹೊರಳುತ್ತದೆ ಚಿತ್ರ. ಆಂಧ್ರ ಪೋಲೀಸರ ತೆಕ್ಕೆಯಿಂದ ತಮಿಳುನಾಡು ಪೋಲೀಸರ ತೋಳಿಗೆ ಬೀಳುತ್ತಾರೆ ಈ ನಾಲ್ವರು.

ನಾಲ್ವರಲ್ಲಿ ಕುಮಾರ್ ಪೋಲೀಸ್ ಸ್ಟೇಷನ್ ಬರುವ ಮುಂಚೆಯೇ ತನ್ನ ಊರಿನ ಬಳಿ ಇಳಿದುಕೊಳ್ಳುತ್ತಾನೆ. ಉಳಿದ ಮೂವರು ಪೋಲೀಸ್ ಠಾಣೆಯನ್ನು ಸ್ವಚ್ಛಗೊಳಿಸುತ್ತ ಅಲ್ಲೇ ಉಳಿದುಬಿಡುತ್ತಾರೆ. ಕೆಕೆ ಸುತ್ತಲಿನ ರಾಜಕೀಯಕ್ಕೆ ಸಾಕ್ಷಿಯಾಗಿ, ಡಿಸಿ, ಎಸಿ, ಪೋಲೀಸ್ ಅಧಿಕಾರಿಗಳ ಹಣದ ದಾಹಗಳಿಗೆ ಸಾಕ್ಷಿಯಾಗಿ. ಕೊನೆಗೆ ಈ ಮೂವರು ಬದುಕಿರುವುದು ತಮ್ಮ ಅಸ್ತಿತ್ವಕ್ಕೇ ಅಪಾಯಕಾರಿ ಎಂದರಿತ ಮೇಲಧಿಕಾರಿಗಳು ಅವರನ್ನು ಖೊಟ್ಟಿ ಎನ್ ಕೌಂಟರಿನಲ್ಲಿ ಮುಗಿಸಿಬಿಡಬೇಕೆಂದು ನಿರ್ಧರಿಸುತ್ತಾರೆ. ಮೊದಮೊದಲು ಮುತ್ತುವೇಲು ಅದಕ್ಕೆ ನಿರಾಕರಿಸುತ್ತಾನಾದರೂ ವೈಯಕ್ತಿಕವಾಗಿ ಅವನಿಗೆ ಯಾವೆಲ್ಲ ತೊಂದರೆಗಳು ಬರಬಹುದೆಂಬ ಹೆದರಿಕೆ ಮೂಡಿಸಿಯೇ ಅವನನ್ನು ಒಪ್ಪಿಸಿಬಿಡುತ್ತಾರೆ. ಬಂದೂಕು ಹಿಡಿಯುತ್ತಾನಾದರೂ ಮುತ್ತುವೇಲು ಗುಂಡು ಹಾರಿಸುವುದಿಲ್ಲ. ಎಲ್ಲೋ ಒಳಗೆ ಅವನ ಆತ್ಮಸಾಕ್ಷಿ ಚುಚ್ಚುತ್ತಲೇ ಇತ್ತೇನೋ? ಕೊನೆಗೆ ವ್ಯವಸ್ಥೆಯ ಕ್ರೌರ್ಯಕ್ಕೆ ಮುತ್ತುವೇಲು ಕೂಡ ಬಲಿಪಶುವಾಗಿಬಿಡುತ್ತಾನೆ. ಕುಮಾರ್ ಇಳಿದುಕೊಳ್ಳದಿದ್ದರೆ ಈ ದೌರ್ಜನ್ಯದ ಕತೆ ಹೊರಗಡೆಯೇ ಬರುತ್ತಿರಲಿಲ್ಲವೇನೋ?

ಇನ್ನು ಚಿತ್ರದುದ್ದಕ್ಕೂ ಪೋಲೀಸರಲ್ಲಿ, ವ್ಯವಸ್ಥೆಯಲ್ಲಿ ಇರುವ ಪೂರ್ವಾಗ್ರಹದ ಚಿತ್ರಣ ಒಂದೆರಡು ದೃಶ್ಯಗಳಲ್ಲೇ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ. ನಾಲ್ವರಲ್ಲಿ ಮೊದಲು ಬಂಧನಕ್ಕೊಳಗಾಗುವುದು ಅಫ್ಜಲ್. ರಾತ್ರಿ ಸಿನಿಮಾ ನೋಡಿಕೊಂಡು ಗಾಂಧಿ ಪಾರ್ಕಿನ ಕಡೆಗೆ ಹೋಗುತ್ತಿರುತ್ತಾನೆ. ಗಸ್ತಿನಲ್ಲಿದ್ದ ಪೋಲೀಸರು ‘ವಿಚಾರಿಸುತ್ತಾರೆ’. ಹೆಸರೇನು ಅನ್ನುತ್ತಾರೆ, ‘ಅಫ್ಜಲ್’ ಅನ್ನುತ್ತಿದ್ದಂತೆ ‘ಅಲ್ ಖೈದಾನ? ಐಸಿಸ್ಸಾ?’ ಅನ್ನುವ ಪ್ರಶ್ನೆ. ‘ಇಲ್ಲಾ ಸರ್ ನಾನು ತಮಿಳುನಾಡಿನವ’ ಎಂಬ ಉತ್ತರಕ್ಕೆ ‘ಓ! ತಮಿಳುನಾಡು! ಹಂಗಾಂದ್ರೆ ನೀನು ಎಲ್.ಟಿ.ಟಿ.ಇ, ಹತ್ತು ಗಾಡಿ’ ಎಂದು ಬಂಧಿಸಿಬಿಡುತ್ತಾರೆ….. ಅಮಾಯಕರನ್ನು ಕೊಲ್ಲುವುದನ್ನು ವಿರೋಧಿಸುವ ಮುತ್ತುವೇಲುವಿಗೆ ಹಿರಿಯ ಅಧಿಕಾರಿ ‘ಈ ರಿಸರ್ವೇಷನ್ನಿನವರಿಂದ ಬಂದವರಿಗೆ ಇವೇನೂ ತಲೇಗೇ ಹೋಗಲ್ಲ’ ಎನ್ನುವ ಮಾತಿನಲ್ಲಿ ಮೇಲ್ಜಾತಿಯವರಿಗಿರುವ ದ್ವೇಷದ ಪರಿಚಯವಾಗಿಬಿಡುತ್ತದೆ. ಪೋಲೀಸರ ಪೂರ್ವಾಗ್ರಹ ಪೀಡಿತ ಮನಸ್ಸಿನಿಂದ ನೋವನುಭವಿಸಿದರೂ ಮುರುಗನ್, ಅಫ್ಜಲ್ ಪೋಲೀಸರ ಬಗ್ಗೆ ಒಳಿತನ್ನೇ ಯೋಚಿಸುತ್ತಾರೆ. ಆಂಧ್ರದ ಪೋಲೀಸರು ಇವರ ಸತ್ಯಾಗ್ರಹ ಮುರಿಯುವ ಸಲುವಾಗಿ ನಾಟಕವನ್ನಾಡಿದಾಗ ಮುರುಗನ್ ‘ನಾವಂದುಕೊಂಡಷ್ಟು ಪಾಪ ಕೆಟ್ಟವರಲ್ಲ’ ಎಂದು ಮುರಿಸಿಕೊಂಡ ಹಲ್ಲಿನೊಡನೆಯೇ ಅನುಕಂಪ ತೋರಿಸುತ್ತಾನೆ. ಇನ್ನೇನು ತಮಿಳುನಾಡು ಪೋಲೀಸರು ನಮ್ಮನ್ನು ಕೊಂದೇ ಬಿಡುತ್ತಾರೆ ಎಂಬ ಸನ್ನಿವೇಶದಲ್ಲೂ ‘ನಮ್ಮನ್ನು ಆಂಧ್ರ ಪೋಲೀಸರಿಂದ ಬಚಾವು ಮಾಡಿಸಿ ತಂದಿದ್ದಾರೆ, ಹೆಂಗೆ ಸಾಯಿಸ್ತಾರೆ’ ಅಂತ ಕೇಳುವಷ್ಟು ಮುಗ್ಧತೆ ಅಫ್ಜಲ್ ನಲ್ಲಿದೆ. ವ್ಯವಸ್ಥೆಯ ಪೂರ್ವಾಗ್ರಹಗಳ ಮುಂದೆ ಅಮಾಯಕರ ಮುಗ್ಧತೆಗೆ ಬೆಲೆಯಿರುತ್ತದೆಯೇ? ಇಂತಹ ವ್ಯವಸ್ಥೆಯಲ್ಲೂ ಈ ಅಮಾಯಕರ ಪರವಾಗಿ ಮಿಡಿದಿದ್ದು ಆಂಧ್ರ ಠಾಣೆಯ ಮಹಿಳಾ ಇನ್ಸ್ ಪೆಕ್ಟರ್ ಮತ್ತು ತಮಿಳುನಾಡಿನ ಮುತ್ತುವೇಲು ಮಾತ್ರ. ಕೊನೆಗೆ ಮುತ್ತುವೇಲು ಕೂಡ ವ್ಯವಸ್ಥೆಯ ಭಾಗವಾಗಿಬಿಡುವುದು ದುರಂತ.

ಇನ್ನು ಚಿತ್ರದ ಪ್ರಾರಂಭದಲ್ಲಿ ತಮಿಳು ಪಾಂಡಿ ಮತ್ತು ತೆಲುಗು ಶಾಂತಿಯ ನಡುವೊಂದು ಭಾಷೆ ಅರ್ಥವಾಗದ, ಭಾವದಿಂದಲೇ ನಡೆಯುವ ಪ್ರೇಮವಿದೆ. ದಕ್ಷಿಣ ಭಾರತದ ಚಿತ್ರಗಳು ಹೇಗೆ ದ್ವಿಭಾಷಾ ಚಿತ್ರಗಳಾಗಿ ಹೊಸ ರೀತಿಯ ಸಿನಿಮಾಗಳನ್ನು ಕೊಡಬಹುದು ಎನ್ನುವುದಕ್ಕೂ ಈ ಚಿತ್ರ ಸಾಕ್ಷಿಯಾಗಿದೆ. ಕನ್ನಡದಲ್ಲೂ ಹಿಂದೆ H2O ಚಿತ್ರದಲ್ಲಿ ಕನ್ನಡ ಮತ್ತು ತಮಿಳು ಭಾಷೆಗಳೆರಡೂ ಇತ್ತು, ದ್ವಿಭಾಷಾ ಚಿತ್ರದ ದೃಷ್ಟಿಯಿಂದ ಅದೊಂದು ಉತ್ತಮ ಪ್ರಯತ್ನ, ಕಾವೇರಿ ವಿಷಯವಾಗಿ ತಮಿಳುನಾಡನ್ನು ವಿರೋಧಿಸುವವರ ಒತ್ತಡ, ಪ್ರತಿಭಟನೆಯಿಂದಾಗಿ ಕೊನೆಗೆ ತಮಿಳು ಭಾಗಗಳನ್ನೆಲ್ಲ ಕನ್ನಡವನ್ನಾಗಿ ಮಾಡಿಬಿಡಲಾಯಿತು. ದ್ವಿಭಾಷೆಯ ಪ್ರಯತ್ನಗಳೂ ನಂತರ ದೊಡ್ಡ ಮಟ್ಟದಲ್ಲಿ ನಡೆಯಲಿಲ್ಲ. ಇರಲಿ. ವಿಸಾರಣೈ ನೋಡಲು ಮರೆಯಬೇಡಿ ಮತ್ತೆ.

Mar 11, 2016

ಮೇಕಿಂಗ್ ಹಿಸ್ಟರಿ: ತಲ್ಲೂರು ದೇಶಗತಿಯ ಸೂಕ್ಷ್ಮಜಗತ್ತು

Making History
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್

11/03/2016
ಬೆಳಗಾವಿ ಜಿಲ್ಲೆಯ ಸೌಂದತ್ತಿ ತಾಲ್ಲೂಕಿನ ಒಂದು ಹಳ್ಳಿ ತಲ್ಲೂರು. ಬ್ರಿಟೀಷರ ಆಗಮನಕ್ಕೂ ಮುನ್ನ ತಲ್ಲೂರಿನಲ್ಲಿದ್ದ ಲಿಂಗಾಯತ ದೇಸಾಯಿ ಕುಟುಂಬದ ಸಾಮ್ರಾಜ್ಯ ಮೂವತ್ತು ಹಳ್ಳಿಗಳಿಗೆ ವಿಸ್ತರಿಸಿತ್ತು. ತಲ್ಲೂರು ದೇಶಗತಿ ಮೇಲೆ ಅಶೋಕ್ ಶೆಟ್ಟರ್ ರವರು ನಡೆಸಿದ ಸಂಶೋಧನೆಯ ಆಧಾರದಲ್ಲಿ ಕರ್ನಾಟಕ ಅರೆಊಳಿಗಮಾನ್ಯ ಪದ್ಧತಿಯ ಸೂಕ್ಷ್ಮಜಗತ್ತಿನ ತುಣುಕುಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ. (71)

ಬ್ರಿಟೀಷರು ಕೈವಶ ಮಾಡಿಕೊಂಡ ನಂತರ ತಲ್ಲೂರು ಮಾತ್ರ ದೇಸಾಯಿಗಳ ಇನಾಂ ಆಗಿ ಮುಂದುವರೆಯಿತು. ಆದರೂ ಉಳಿದ ಮೂವತ್ತು ಹಳ್ಳಿಗಳ ಕಾಲುಭಾಗದಷ್ಟು ಆದಾಯವನ್ನು ತಲ್ಲೂರಿನ ದೇಸಾಯಿಗಳಿಗೆ ನೀಡಲಾಗುತ್ತಿತ್ತು. ತಲ್ಲೂರಿನ ಇನಾಂ ಒಂದರಲ್ಲೇ 10,600 ಎಕರೆಗಳಷ್ಟಿತ್ತು ಎಂದು ಹೇಳಲಾಗುತ್ತದೆ. ಇದರಲ್ಲಿ ಆರುಸಾವಿರ ಎಕರೆ ಕಾಡು, ಉಳಿದ ನಾಲ್ಕುಸಾವಿರ ಎಕರೆ ಕೃಷಿಭೂಮಿ. ಸರಕಾರಕ್ಕೆ 2,200 ರುಪಾಯಿ ವಾರ್ಷಿಕ ತೆರಿಗೆ ಕಟ್ಟಲಾಗುತ್ತಿತ್ತು. ಇದರಲ್ಲಿ ‘ಪರಿಹಾರಾರ್ಥ’ವಾಗಿ 192 ರುಪಾಯಿಗಳನ್ನು ಬ್ರಿಟೀಷ್ ಸರಕಾರ ಹಿಂದಿರುಗಿಸುತ್ತಿತ್ತು. ತಲ್ಲೂರಿನಲ್ಲಿ ಬ್ರಿಟೀಷ್ ಸರಕಾರವನ್ನು ಗೌಡ ಪ್ರತಿನಿಧಿಸುತ್ತಿದ್ದ. ಆದಾಯ ತೆರಿಗೆ ಮತ್ತು ನ್ಯಾಯಪಾಲನೆಯೆರಡೂ ಅವನ ಕೆಲಸವಾಗಿತ್ತು. ತಲ್ಲೂರು ದೇಸಾಯಿಗಳ ವಾರ್ಷಿಕ ತೆರಿಗೆಯನ್ನು ಗೌಡ ಟ್ರೆಷರಿಗೆ ವರ್ಗಾಯಿಸುತ್ತಿದ್ದ.

ಹಿಂದೆ ಜಹಗೀರಿನವರು ದೇಸಾಯಿಗೆ ಕೊಡಬೇಕಿದ್ದ ತೆರಿಗೆಗಳನ್ನು ವಸ್ತುವಿನ ರೂಪದಲ್ಲಿ ಸಂಗ್ರಹಿಸಲಾಗುತ್ತಿತ್ತು. ಆದರೆ ಬ್ರಿಟೀಷರು ಅಧಿಕಾರ ಹಿಡಿದ ನಂತರ ಹಣದ ರೂಪದಲ್ಲಿ ಮಾತ್ರ ತೆರಿಗೆ ಸಂಗ್ರಹಿಸುವುದಾರಂಭವಾಯಿತು.

ಹಳ್ಳಿಯ ಜನರು ದೇಸಾಯಿಗಳಿಗೆ ಉಪಯುಕ್ತರಾಗುವಂತಿರಬೇಕು ಎಂಬ ಪೂರ್ವ ನಿರ್ಧರಿತ ನಿಯಮವಿತ್ತು. ಇದಕ್ಕೆ ಕಾರಣ ತಲ್ಲೂರಿನ ಸುತ್ತಮುತ್ತಲಿದ್ದ ರೈತರು ಹತ್ತಲವು ವಿಧದಲ್ಲಿ ದೇಸಾಯಿಗಳ ಮೇಲೆ ಅವಲಂಬಿತರಾಗಿದ್ದರು. ಅವರ ಹಸುಗಳು ದೇಸಾಯಿಯ ಕಾಡಿನಲ್ಲಿ ಮೇಯಬೇಕಿತ್ತು. ಉರುವಲನ್ನು, ಮರಮುಟ್ಟುಗಳನ್ನು ಇದೇ ಕಾಡಿನಿಂದ ಪಡೆಯಬೇಕಿತ್ತು. ನೀರನ್ನು ಇಲ್ಲಿಂದಲೇ ತೆಗೆದುಕೊಳ್ಳುತ್ತಿದ್ದರು. ದೇಸಾಯಿಗಳ ವಿರುದ್ಧ ದನಿಯೆತ್ತುವ ಧೈರ್ಯ ತೋರಿದರೆ ಈ ಸವಲತ್ತುಗಳಿಗೆಲ್ಲ ಕೊಕ್ಕೆ ಬೀಳುತ್ತಿತ್ತು. ಹರಾಜಿನ ಮುಖಾಂತರ ಭೂಮಿಯನ್ನು ಐದು ವರ್ಷದ ವ್ಯವಸಾಯಕ್ಕೆ ರೈತರಿಗೆ ಗುತ್ತಿಗೆ ನೀಡಿದ ನಂತರ ಈ ಬಾಡಿಗೆದಾರರು ದೇಸಾಯಿಗಳಿಗೆ ಕೊರ್ವಿ (ಬಿಟ್ಟಿ) ಸಲ್ಲಿಸಬೇಕಿತ್ತು. ಸಲ್ಲಿಸದಿದ್ದಲ್ಲಿ ಪ್ರತೀ ವರುಷದ ಕಟಾವಿನ ಸಮಯದಲ್ಲಿ 20 ರುಪಾಯಿಗಳನ್ನು ನೀಡಬೇಕಿತ್ತು.

ತಲ್ಲೂರಿನ ಪಂಚಾಯತಿಯನ್ನು ಉಚಿತ ಶ್ರಮದಿಂದ ಕಟ್ಟಿದ್ದು ರೈತ ಕಾರ್ಮಿಕರು. ಕಟ್ಟಲು ಬೇಕಾದ ಮರದ ದಿಮ್ಮಿಗಳನ್ನು ದೂರದ ಉತ್ತರ ಕನ್ನಡ ಜಿಲ್ಲೆಯ ಕಾಡುಗಳಿಂದಲೂ ಹೊತ್ತು ತಂದಿದ್ದರು.

ತಲ್ಲೂರಿನಲ್ಲಿ ಎಂಟು ಹೊಲೆಯರ ಕುಟುಂಬಗಳಿದ್ದವು. ದೇಶಗತಿಗಳಿಗೆ ಅವರು ಮಾಡುವ ಸೇವೆಗೆ ಊರಿನ ಜನರು ಹಣ ಪಾವತಿಸಬೇಕಿತ್ತು.

ದೇಶಗತಿ ಸಾಮ್ರಾಜ್ಯದ ಆಳ್ವಿಕೆಯಿಂದ ಉದ್ಭವವಾದ ಕೆಲವು ಧಾರ್ಮಿಕ ಆಚರಣೆಗಳ ಕುರಿತು ಅಶೋಕ್ ಶೆಟ್ಟರ್ ಉತ್ತಮ ಒಳನೋಟಗಳನ್ನು ಕೊಡುತ್ತಾರೆ.

ತಲ್ಲೂರಿನ ದೇಸಾಯಿಗಳಂತ ಕುಟುಂಬಗಳಿಂದ ಮಧ್ಯವರ್ತಿ – ಖರೀದಿದಾರರ (comprador) ವರ್ಗ ಹುಟ್ಟುತ್ತದೆ. ಇದು ಹತ್ತೊಂಬತ್ತನೇ ಶತಮಾನದ ಕೊನೆ ಮತ್ತು ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ನಿಚ್ಚಳವಾಗುತ್ತದೆ. ಅದನ್ನು ಮೇಕಿಂಗ್ ಹಿಸ್ಟರಿಯ ಮೂರನೇ ಭಾಗದಲ್ಲಿ ಚರ್ಚಿಸೋಣ. (ಸಾಕಿಯ ಸಾವಿನಿಂದಾಗಿ ಮೂರನೇ ಭಾಗ ಹೊರಬರಲಿಲ್ಲ – ಅನುವಾದಕ)

ಸದ್ಯಕ್ಕೆ ತಲ್ಲೂರಿನ ದೃಷ್ಟಿಯಿಂದ ಕಂಡಾಗ ವಸಾಹತುಶಾಹಿ ಅರೆಊಳಿಗಮಾನ್ಯ ಪದ್ಧತಿಯ ಅಡಿಪಾಯ ಮತ್ತು ಮೇಲ್ರಚನೆಯನ್ನು ಹೇಗೆ ಗಟ್ಟಿಗೊಳಿಸಿತು ಎನ್ನುವುದು ಗೋಚರಿಸುತ್ತದೆ.

ಮುಂದಿನ ವಾರ:
ಮಧ್ಯವರ್ತಿ – ಖರೀದಿದಾರ ವರ್ಗದ ಉಗಮಕ್ಕಿದ್ದ ಸಾಮಾಜಿಕ ಆವರಣ


Disclaimer: ಮೇಕಿಂಗ್ ಹಿಸ್ಟರಿ ಆಂಗ್ಲ ಪುಸ್ತಕದ ಅನುವಾದಿಸಲು ಬೇಕಾದ ಅಧಿಕೃತ ಹಕ್ಕುಗಳು ನನ್ನಲ್ಲಿಲ್ಲ. ಅನುವಾದದ ಹಕ್ಕನ್ನು ಕೊಡುವವರಲ್ಲನೇಕರು ಜೈಲಿನಲ್ಲಿದ್ದಾರಂತೆ. ಯಾರಲ್ಲಾದರೂ ಅಧಿಕೃತ ಅನುವಾದದ ಹಕ್ಕುಗಳು ಇದ್ದು ಆಕ್ಷೇಪಣೆ ಎತ್ತಿದರೆ ಕ್ಷಮಾಪಣೆಯೊಂದಿಗೆ ಅನುವಾದದ ಕಾರ್ಯವನ್ನು ನಿಲ್ಲಿಸಲಾಗುವುದು. ಸಾಕೇತ್ ರಾಜನ್ ದೃಷ್ಟಿಯ ಕರ್ನಾಟಕದ ಇತಿಹಾಸ ಕನ್ನಡ ಬಲ್ಲವರಿಗೂ ತಲುಪಲಿ ಎಂಬ ಉದ್ದೇಶದಿಂದ ಇದನ್ನು ಪ್ರಕಟಿಸಲಾಗುತ್ತಿದೆಯೇ ಹೊರತು ಯಾವುದೇ ವಾಣಿಜ್ಯ ಉದ್ದೇಶದಿಂದಲ್ಲ - ಡಾ. ಅಶೋಕ್. ಕೆ. ಆರ್.

Mar 10, 2016

ಬ್ರಾಹ್ಮಣ್ಯವ್ಯಾಧಿಗಳ ಸಾಂಸ್ಕೃತಿಕ ರಾಜಕಾರಣ

ಡಾ. ಅಶೋಕ್ ಕೆ ಆರ್
10/03/2016
ಬ್ರಾಹ್ಮಣ್ಯವ್ಯಾಧಿಗಳಿಂದ ನೀವು ಏನನ್ನಾದರೂ ಕಲಿಯಬೇಕೆಂದರೆ ಅದು ಅವರು ನಡೆಸುವ ಸಾಂಸ್ಕೃತಿಕ ರಾಜಕಾರಣವನ್ನು. ಕ್ರಿಮಿನಲ್ಲುಗಳನ್ನು ಹಿಡಿಯಲು ಕ್ರಿಮಿನಲ್ಲಿನಂತೆಯೇ ಯೋಚಿಸಬೇಕಂತೆ. ಬ್ರಾಹ್ಮಣ್ಯದ ಕುಟಿಲ ಮಾರ್ಗವನ್ನೆದುರಿಸಲು ಕುಟಿಲ ಮಾರ್ಗಗಳನ್ನೇ ಹಿಡಿಯುವ ಅನಿವಾರ್ಯತೆ ಖಂಡಿತವಾಗಿಯೂ ಇದೆ. ಇದನ್ನೆಲ್ಲ ಹೇಳುವುದಕ್ಕೆ ಕಾರಣ ನಿನ್ನೆ ದಿನ ಬೆಂಗಳೂರಿನ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನೋಡಿದ ಯಕ್ಷಗಾನ ಪ್ರಸಂಗದ ಕೆಲವು ಮಾತುಗಳು.

ಮನೆಗೆ ಕೂಗಳತೆಯಲ್ಲೇ ಇರುವ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಒಮ್ಮೆಯೂ ಕಾಲಿರಿಸಿರಲಿಲ್ಲ. ನಿನ್ನೆ ದಿನ ದೇವಸ್ಥಾನದಿಂದ ಮೈಕಿನ ದನಿ ಜೋರಾಗಿಯೇ ಕೇಳಿಬರುತ್ತಿತ್ತು. ಏನೋ ಕಾರ್ಯಕ್ರಮವಿರಬೇಕು ನೋಡಿ ಬರೋಣವೆಂದು ದೇವಸ್ಥಾನದ ಕಡೆಗೆ ಹೆಜ್ಜೆ ಹಾಕಿದರೆ ಅರೆರೆ! ಯಕ್ಷಗಾನ ನಡೆಯುತ್ತಿದೆ. ಸುಳ್ಯದಲ್ಲಿ ಕೆಲ ಸಮಯ ಕೆಲಸದಲ್ಲಿದ್ದಾಗ ಯಕ್ಷಗಾನವನ್ನು ನೋಡಿದ್ದೆ. ಟೆನ್ ಬೈ ಟೆನ್ ಸ್ಟೇಜಿನಲ್ಲಿ ನಡೆಯುವ ಯಕ್ಷಗಾನದಾಟ ಆಕರ್ಷಣೀಯ. ಹೊಸದಾಗಿ ನೋಡುವವರಿಗೆ ಶುರುವಿನಲ್ಲಿ ಒಂದಷ್ಟು ಬೇಸರವಾಗಬಹುದಾದರೂ ನೋಡುತ್ತ ನೋಡುತ್ತ ಕತೆಯೊಳಗೆ, ಭಾಗವತರ ದನಿಯೊಳಗೆ, ರಂಗದ ಮೇಲಿನ ನಟ – ನಟಿಯರ ಕುಣಿತದೊಳಗೆ ಕಳೆದುಹೋಗುವುದು ಗ್ಯಾರಂಟಿ. ಇಂತಹ ಯಕ್ಷಗಾನ ಮೂಡಿಸುವ ಅಸಹ್ಯವೆಂದರೆ ಸನಾತನ ಧರ್ಮ ರಕ್ಷಣೆಯ ಹೆಸರಿನಲ್ಲಿ ಪಾತ್ರಧಾರಿಗಳ ಕೈಲಿ ವರ್ಣಾಶ್ರಮ, ಜಾತಿ ವ್ಯವಸ್ಥೆಯನ್ನು ಬಲಪಡಿಸುವಂತಹ ಸಂಭಾಷಣೆಗಳನ್ನು ಹೇಳಿಸುವುದು. 

ನಿನ್ನೆ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಡೆದ ಯಕ್ಷಗಾನದ ಪ್ರಾರಂಭದಲ್ಲಿ ನಾರದ ಮುನಿ ಮತ್ತು ಹರಿಯ ನಡುವೆ ನಡೆವ ಮಾತುಕತೆಯಲ್ಲಿ ಹೇಗೆ ಭೂಮಿ ಮೇಲಿನ ಜನರು ವರ್ಣಾಶ್ರಮ ವ್ಯವಸ್ಥೆಯನ್ನು ಪಾಲಿಸದೆ ದುರುಳರಾಗಿದ್ದಾರೆ ಎನ್ನುವುದನ್ನು ವರ್ಣಿಸುವುದರಿಂದಲೇ ಪ್ರಾರಂಭವಾಯಿತು. ಮೊದಲು ನಾರದ ಮುನಿಯ ಪಾತ್ರಧಾರಿ ಅದನ್ನು ಹರಿಗೆ ತಿಳಿಸಿದರೆ ಮುಂದಿನ ದೃಶ್ಯದಲ್ಲಿ ಹರಿಯ ಬಾಯಿಂದ ವರ್ಣಾಶ್ರಮವನ್ನು ಹೇಗೆ ನಾಲ್ಕೂ ವರ್ಣದ ಜನರು ಹಾಳುಗೆಡವಿದ್ದಾರೆ ಎಂದು ವರ್ಣಿಸಲಾಯಿತು. ಹೆಚ್ಚಿನ ಆರೋಪ ಕೇಳಿಬಂದಿದ್ದು ಶೂದ್ರರ ಮೇಲೆಯೇ ಬಿಡಿ! ಹೋಮ ಯಜ್ಞ ನಡೆಸಿ ಹವಿಸ್ಸನ್ನು ಸಮರ್ಪಿಸಬೇಕಾದ ಬ್ರಾಹ್ಮಣರು ಆ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ, ಭಕ್ತಾಧಿಗಳು ಕೊಡುವ ದುಡ್ಡಿನ ಮೇಲೆಯೇ ಅವರ ಆಸಕ್ತಿಯೆಲ್ಲ; ಇನ್ನು ದೇಶ ರಕ್ಷಿಸಬೇಕಾದ ಕ್ಷತ್ರಿಯರು ತಮ್ಮ ರಕ್ಷಣೆ ತಾವು ಮಾಡಿಕೊಳ್ಳುತ್ತ ಕಾಲ ತಳ್ಳುತ್ತಿದ್ದಾರೆ; ವ್ಯಾಪಾರ ಮಾಡಬೇಕಾದ ವೈಶ್ಯರು ಹದಿನೇಳನೇ ಒಂದಂಶದಷ್ಟನ್ನು ತಾವು ಇಟ್ಟುಕೊಂಡು ಉಳಿದಿದ್ದನ್ನು ಭಂಡಾರಕ್ಕೆ ಒಪ್ಪಿಸಬೇಕಿತ್ತು, ಆದರೆ ಎಲ್ಲವನ್ನ ತಾವೇ ಇಟ್ಟುಕೊಳ್ಳುತ್ತಿದ್ದಾರೆ; ಇನ್ನು ಶೂದ್ರರು ಮೇಲಿನ ಮೂರು ಪಂಗಡಗಳ ಸೇವೆ ಮಾಡಬೇಕಿತ್ತು, ಕೃಷಿ ನಡೆಸಿ ಜೀವನ ನಡೆಸಬೇಕಿತ್ತು ಆದರವರು ಅದನ್ನು ಮಾಡದೆ ಅಹಂಕಾರದಿಂದ ಬದುಕುತ್ತಿದ್ದಾರೆ ಎನ್ನುವಂತಹ ಮಾತುಗಳನ್ನು ಪಾತ್ರಧಾರಿಗಳಿಂದ ಉದುರಿಸಿ ನೋಡುಗರಲ್ಲಿ ವರ್ಣಾಶ್ರಮ ಎಷ್ಟು ಶ್ರೇಷ್ಟವಾದದ್ದು ಎಂಬ ಭ್ರಮೆ ಹುಟ್ಟಿಸುವ ಕೆಲಸ ಮಾಡುವುದೇ ಬ್ರಾಹ್ಮಣ್ಯದ ಸಾಂಸ್ಕ್ರತಿಕ ರಾಜಕಾರಣ. ಕೆಲವೇ ಕಡೆ ಇಂತಹ ಮಾತುಗಳನ್ನು ಆಡಿ ಇನ್ನುಳಿದ ಭಾಗದಲ್ಲೆಲ್ಲ ಪೌರಾಣಿಕ ಕತೆಯನ್ನು ಅಚ್ಚುಕಟ್ಟಾಗ ನಿರ್ವಹಿಸಿಬಿಟ್ಟು ಆ ಮಾತುಗಳು ಜನರ ಮನದಲ್ಲುಳಿಯುವಂತೆ, ಆದರದವರಲ್ಲಿ ವಿರೋಧಿಸಬೇಕೆನ್ನುವ ಕಿಚ್ಚು ಮೂಡಿಸದಂತೆ ನೋಡಿಕೊಳ್ಳುವಲ್ಲಿ ವರ್ಣಾಶ್ರಮದ, ಬ್ರಾಹ್ಮಣ್ಯದ ವಾದಿಗಳು ಯಶಸ್ಸು ಕಾಣುತ್ತಾರೆ. 

ಯಕ್ಷಗಾನದಲ್ಲಿ ಇದೊಂದು ಅಪರೂಪದ ಘಟನೆಯೇನಲ್ಲ. ನಿನ್ನೆಯ ನಾಟಕದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರು ತಮ್ಮ ಕೆಲಸವನ್ನೇ ಮಾಡುತ್ತ ‘ಚೂರು ಹಾದಿ ತಪ್ಪಿದ್ದಾರೆ’ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದರೆ ಕೃಷಿ ಬಿಟ್ಟ, ಅದಕ್ಕೂ ಮಿಗಿಲಾಗಿ ಬ್ರಾಹ್ಮಣ – ಕ್ಷತ್ರಿಯ – ವೈಶ್ಯರ ಸೇವೆ ಮಾಡುವುದನ್ನು ಮರೆತ ಶೂದ್ರರದ್ದು ಘೋರ ಅಪರಾಧದಂತೆ ಚಿತ್ರಿಸಲಾಗುತ್ತದೆ. ವರ್ಣಾಶ್ರಮದೊಳಗೂ ಬಿಟ್ಟುಕೊಳ್ಳದ ‘ದಲಿತ – ಅಸ್ಪೃಶ್ಯ’ರ ಬಗ್ಗೆ ಯಕ್ಷಗಾನದಲ್ಲಿ ಕೀಳಾಗಿ ಮಾತನಾಡುವುದು ಕೂಡ ಬಹಳಷ್ಟು ನಡೆಯುತ್ತದೆ. ಸುಳ್ಯದಲ್ಲಿ ನಡೆದ ನಾಟಕಗಳಲ್ಲಿ ಅದನ್ನು ಕೇಳಿಸಿಕೊಂಡಿದ್ದೆ. ಯಕ್ಷಗಾನ ಎಷ್ಟೇ ಉತ್ತಾನು ಉತ್ತಮ ಕಲೆಯಾದರೂ, ಯಕ್ಷಗಾನ ಸುಳ್ಯದ ದಿನಗಳನ್ನು ನನಗೆ ನೆನಪಿಸಿದರೂ ಕೊನೆಗೆ ಈ ಮೇಲು ಕೀಳಿನ ವ್ಯವಸ್ಥೆಯನ್ನು ಉಳಿಸುವ ಸಾಂಸ್ಕೃತಿಕ ರಾಜಕಾರಣದ ಭಾಗವಾಗಿ ಕಾರ್ಯನಿರ್ವಹಿಸುತ್ತಿರುವ ಯಕ್ಷಗಾನವೆಂದರೆ ನನಗೊಂದಷ್ಟು ಅಸಹ್ಯ ಮೂಡಿಬಿಡುವುದು ಸುಳ್ಳಲ್ಲ.

Mar 8, 2016

ಮುಖ್ಯಮಂತ್ರಿ ಸಾಂತ್ವನ 'ಹರೀಶ್' ಯೋಜನೆ.

ಕರ್ನಾಟಕ ಸರಕಾರ ಆರೋಗ್ಯ ಕ್ಷೇತ್ರಗಳಲ್ಲಿ ಜಾರಿ ಮಾಡಿದ ಮತ್ತೊಂದು ಉತ್ತಮ ಯೋಜನೆಯಿದು. ತಿಂಗಳುಗಳ ಕೆಳಗೆ ಬೈಕ್ ಆ್ಯಂಬುಲೆನ್ಸನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿತ್ತು. ಟ್ರಾಫಿಕ್ಕಿನಲ್ಲೇ ಆ್ಯಂಬುಲೆನ್ಸ್ ಸಿಕ್ಕಿಕೊಳ್ಳುವ ಸಂದರ್ಭದಲ್ಲಿ ತುರ್ತು ಪ್ರಥಮ ಚಿಕಿತ್ಸೆಯನ್ನು ನೀಡಲು ಬೈಕ್ ಆ್ಯಂಬುಲೆನ್ಸ್ ಸಹಕಾರಿಯಾಗುತ್ತಿತ್ತು. ಈಗ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ತ್ವರಿತವಾಗಿ ಉಚಿತವಾಗಿ ಸಿಗಲು ಈ ಯೋಜನೆ ಸಹಕಾರಿಯಾಗಲಿದೆ. ಯಾವುದೇ ಅಪಘಾತದಲ್ಲೂ ತೀರ್ವವಾಗಿ ಗಾಯಗೊಂಡಿದ್ದಾಗ ಮೊದಲ ಕೆಲ ಘಂಟೆಗಳಲ್ಲಿ ಸಿಗುವ ಚಿಕಿತ್ಸೆಗೆ ಪ್ರಾಮುಖ್ಯತೆ ಹೆಚ್ಚು. 108 ಆ್ಯಂಬುಲೆನ್ಸುಗಳು ಅತ್ಯಂತ ತ್ವರಿತವಾಗಿ ಪೆಟ್ಟು ಬಿದ್ದವರನ್ನು ಆಸ್ಪತ್ರೆಗೆ ದಾಖಲಿಸಲು ಸಹಕಾರ ನೀಡುತ್ತಿವೆ. ಕೆಲವೊಮ್ಮೆ ಆಸ್ಪತ್ರೆಗಳಲ್ಲಿ ಹಣದ ಕೊರತೆಯಿಂದ ಚಿಕಿತ್ಸೆ ತಡವಾಗಿಬಿಡುತ್ತದೆ. ಸರಕಾರದ ಈ ಹೊಸ ಯೋಜನೆ ಅಪಘಾತದಲ್ಲಿ ಗಾಯಗೊಂಡವರಿಗೆ ಇಪ್ಪತ್ತೈದು ಸಾವಿರ ರುಪಾಯಿಗಳಷ್ಟು ಸಹಾಯಧನ ನೀಡುವುದಾಗಿ ಘೋಷಿಸಿದೆ. ಸರಕಾರೀ ಆಸ್ಪತ್ರೆಗಳ ಮೂಲಭೂತ ಸೌಲಭ್ಯಗಳನ್ನು ಉತ್ತಮಗೊಳಿಸುವುದು ಈ ಯೋಜನೆಯಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಪ್ರಯೋಜನಕಾರಿ. ಸರಕಾರದ ಯೋಜನೆಯಾಗಷ್ಟೇ ಹೆಸರಾಗಿಬಿಡಬಹುದಾಗಿದ್ದ ಈ ಮುಖ್ಯಮಂತ್ರಿ ಸಾಂತ್ವನ ಯೋಜನೆಗೆ ಒಂದು ಮಾನವೀಯತೆಯ ಸ್ಪರ್ಶ ಸಿಕ್ಕಿದ್ದು 'ಹರೀಶ್' ಎಂಬ ಯುವಕನಿಂದ. ಈ ಯೋಜನೆಯ ಪೂರ್ಣ ಹೆಸರು "ಮುಖ್ಯಮಂತ್ರಿ ಸಾಂತ್ವನ 'ಹರೀಶ್' ಯೋಜನೆ".

ನಿಮ್ಮಲ್ಲಿ ಬಹಳಷ್ಟು ಜನರು ಆ ವೀಡಿಯೋ ನೋಡಿರುತ್ತೀರಿ. ಲಾರಿಯೊಂದು ಹರಿದ ಪರಿಣಾಮ ಹರೀಶ್ ಎಂಬ ಯುವಕನ ದೇಹ  ಎರಡು ತುಂಡಾಗಿತ್ತು. ದೇಹ ತುಂಡಾದರೂ, ರಕ್ತ ಹರಿಯುತ್ತಿದ್ದರೂ ಹರೀಶ ಇನ್ನೂ ಜೀವಂತವಾಗಿದ್ದ. ಕೈಯಾಡಿಸುತ್ತಿದ್ದ, ಮಾತನಾಡುತ್ತಿದ್ದ. ಕ್ಷಣದ ನಂತರ ತನ್ನ ದೇಹ ತುಂಡಾಗಿರುವುದು ಗಮನಕ್ಕೆ ಬಂದಾಗ ತಲೆ ತಲೆ ಚೆಚ್ಚಿಕೊಳ್ಳುತ್ತಿದ್ದ, ನೀರು ಕೇಳುತ್ತಿದ್ದ. ಹೈವೇಯಲ್ಲಿ ವಾಹನಗಳು ತಮ್ಮ ಪಾಡಿಗೆ ತಾವು ಹೋಗುತ್ತಿದ್ದರು. ವೀಡಿಯೋ ಮಾಡುತ್ತಿದ್ದ ಜನರು ದೂರದಲ್ಲೇ ನಿಂತಿದ್ದರು; ಯಾರೊಬ್ಬರೂ ಅವನಿಗೆ ನೀರು ನೀಡಲಿಲ್ಲ. ಇಂತಹ ಭೀಭತ್ಸ ದೃಶ್ಯ ನೋಡಿದ ಜನರು ಗಾಬರಿಯಾಗಿ ದೂರದಲ್ಲೇ ನಿಂತುಬಿಟ್ಟರು ಎಂದೇ ಅಂದುಕೊಳ್ಳೋಣ. ಪುಣ್ಯಕ್ಕೆ ಒಬ್ಬರ್ಯಾರೋ ಆ್ಯಂಬುಲೆನ್ಸಿಗೆ ಫೋನಾಯಿಸಿದ್ದರು. ಆ್ಯಂಬುಲೆನ್ಸ್ ಶೀಘ್ರದಲ್ಲೇ ಬಂತು. ಜನರ ಮಾನವೀಯತೆ ಎಷ್ಟರಮಟ್ಟಿಗೆ ಕುಲಗೆಟ್ಟುಹೋಗಿತ್ತೆಂದರೆ ಕೊನೆಗೆ ಆ್ಯಂಬುಲೆನ್ಸ್ ಚಾಲಕ ಗೋಗರೆದರೂ ಹೆಚ್ಚಿನವರು ಹರೀಶನನ್ನು ಮೇಲೆತ್ತಿ ಆ್ಯಂಬುಲೆನ್ಸಿಗೆ ಹಾಕಲು ಮುಂದೆ ಬರಲಿಲ್ಲ. ಮಾನವೀಯತೆಯ ಮೇಲಿನ ನಂಬುಗೆಯನ್ನೇ ಅಲುಗಾಡಿಸಬಹುದಾದ ಇಂತಹ ಘಟನೆಯಲ್ಲಿ ಮಾನವೀಯತೆಯನ್ನು ಸೃಜಿಸಿದ್ದು ಕಾಲುಗಳೆರಡನ್ನೂ ಕಳೆದುಕೊಂಡು ಲೀಟರುಗಟ್ಟಲೆ ರಕ್ತವನ್ನು ಕಳೆದುಕೊಂಡು ಒದ್ದಾಡುತ್ತಿದ್ದ ಹರೀಶ. ಸಾಯುವುದು ಗೊತ್ತಾಗಿಬಿಟ್ಟಿತ್ತವನಿಗೆ. ಸಾಯುವ ಮುಂಚೆ ನನ್ನ ದೇಹದ ಅಂಗಾಂಗಗಳನ್ನು ಉಪಯೋಗವಾಗುವವರಿಗೆ ದಾನವಾಗಿ ಕೊಟ್ಟುಬಿಡಿ ಎಂದು ಹೇಳಿ ಸತ್ತುಹೋದ. ಲಾರಿ ಹರಿದಿದ್ದ ಪರಿಣಾಮವಾಗಿ ಉಳಿದ ಅಂಗಗಳ್ಯಾವುವೂ ಉಪಯೋಗಿಸುವ ಪರಿಸ್ಥಿತಿಯಿರಲಿಲ್ಲ. ಕೊನೆಗಾತನ ಎರಡು ಕಣ್ಣುಗಳನ್ನು ದಾನವಾಗಿ ನೀಡಲಾಯಿತು. ನಂತರದ ದಿನದಲ್ಲಿ ಹರೀಶನ ಊರಿನವರೆಲ್ಲರೂ ಕಣ್ಣುದಾನ ಮಾಡಲು ಮುಂದಾದ ಬಗ್ಗೆ ವರದಿಯಾಯಿತು. ಮುಖ್ಯಮಂತ್ರಿ ಸಾಂತ್ವನ ಯೋಜನೆ ಎಂದಷ್ಟೇ ಇದ್ದ ಹೆಸರಿಗೆ 'ಹರೀಶನ' ಹೆಸರು ಸೇರಿಸಲು ಸಲಹೆ ನೀಡಿದ್ದು ಆರೋಗ್ಯ ಸಚಿವ ಯು.ಟಿ.ಖಾದರ್. ಸಾವು ಕದ ತಟ್ಟುವಾಗಲೂ ಅಂಗ ದಾನದ ಬಗ್ಗೆ ಯೋಚಿಸಿದ 'ಹರೀಶ'ನ ಹೆಸರನ್ನು ಇಂತಹ ಯೋಜನೆಗೆ ಇಟ್ಟಿರುವುದು ಅತ್ಯಂತ ಸೂಕ್ತವಾದ ನಿರ್ಧಾರ. 

ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಯ ಹೆಸರು ಕೇಳಿದಾಗಲೆಲ್ಲ ಹರೀಶನೆಂಬ ಯುವಕನ ಕೊನೆಯ ಕ್ಷಣಗಳಲ್ಲಿ ನಮ್ಮ ಜನ ತೋರಿದ ಅಮಾನವೀಯತೆಯ ನೆನಪೂ ಆಗಲಿ, ನಾಳೆ ದಿನ ನಮ್ಮ ಕಣ್ಣ ಮುಂದೆಯೇ ಯಾರೋ ಅಪಘಾತದಲ್ಲಿ ನೋವುಣ್ಣುತ್ತಿರುವಾಗ ಕೊನೆ ಪಕ್ಷ ಒಂದು ಗುಟುಕು ನೀರನ್ನು ಕೊಡುವ ಮಾನವೀಯತೆಯನ್ನಾದರೂ ನಮ್ಮಲ್ಲಿ ಮೂಡಿಸಲಿ........

This Green v/s That Green

Narasimhan Khadri
08/03/2015
"If someone had collected teardrops of all of us, our irrigation problems would have been solved" A farmer from the vidharba region had once said to a reporter. Vidharbha is notoriously called the suicide capital of India. .It is also a biological mystery as to how the people of this intensely water scarce region secrete so much of tears. 'Great' leader Ajit Pawar gave a novel solution to the water woes of vidharba. He said " Lets all urinate in the dams" ( I pray to god that he gets dysuria and every time he pees it burns).

Recent protests by farmers in karnataka when they blocked major highways leading to Bengaluru brought to the fore water problems in our own state. Our farmers might be lacking in land, credit, fertilizers, seeds, water, support prices etc, but one thing they have is highways that they can block. This is at least the case with the farmers of south Karnataka. Their unlucky counterparts of North Karnataka do not have even that. If they block Kushtagi- Kalburgi highway it would make hardly any difference to anyone. CM Siddu would not lose even a wink of sleep. 


On a serious note, these recent protests poses a serious dilemma among our policy framers. Farmers are demanding the expeditious completion of Yettinahole project- which in a nutshell is to block the west flowing river of Netravati and through lift irrigation divert it to the water scarce regions of Kolar and chickballapur. This is only a part of the comprehensive irrigation project recommended by G.S. Paramashivaiah report, which goes on to suggest the diversion of 11 more rivers flowing through the water surplus regions to the water scare region. All sounds hunky dory. But here lies the catch. All these rivers flow in the most ecologically fragile region of the Western Ghats( It is a biological hotspot and also extremely critical for the survival of the entire human race in the Indian subcontinent). For this reason Yettinahole is still to get a 'green' signal from National Green Tribunal( Which is like a supreme court for all environmental litigations in India).
ಸಾಂದರ್ಭಿಕ ಚಿತ್ರ
This classical case of farmer interests on one side and ecological interests on the other , has tore even the 'left' political groups asunder. Our brothers from the left would normally jump to brand anything and everything as anti-poor and anti-environment. ( Just like our brothers from 'right' brand everything and everyone as anti national). Now even they are confused as to what stand they must take.

So what must one do? One thing all the stakeholders ( farmers , civil society, journalists, policy makers) must understand is that there is no quick fix to this tactical conundrum. It takes leaders with farsightedness, vision and patience to find a golden mean. Of coarse it is clear that CM Siddu is not at all equipped with any of these traits.

This problem hence is a 'fertile ground' ( pun intended) for future leaders.

It remains to be seen as to which green will win this battle- Green of the environment or the Green of the raitha sangha. Although it seems More likely that both the greens will lose the battle.

ದೇಶಭಕ್ತಿಯ ನೆಪದಲ್ಲಿ!

ಕು.ಸ.ಮಧುಸೂದನ
08/03/2016
ಅವತ್ತಿನಿಂದ ಇವತ್ತಿನೀ ಕ್ಷಣದವರೆಗೂ
ಹೊಡೆದಾಡುತ್ತಲೇ ಇದ್ದೇವೆ:
ಮೊದಮೊದಲು ಭರ್ಜಿಗಳ ಬಳಸಿ
ಆಮೇಲೆ ಕತ್ತಿ ಕೋವಿಗಳ
ಆಮೇಲಾಮೇಲೆ ರಾಕೆಟ್ಟು ಬಾಂಬುಗಳ!
ಈಗಂತೂ
ಅದೂ ಇದೂ ಅಂತೇನೂ ಇಲ್ಲ:
ಕೈಗಳಿಗೆ ಸಿಕ್ಕದ್ದನ್ನೆಲ್ಲ ಆಯುಧ ಮಾಡಿಕೊಳ್ಳುವ ಕಲೆ
ಕರಗತ ಮಾಡಿಕೊಂಡಿದ್ದೇವೆ!
ಕಂಪ್ಯೂಟರಿನ ಚಿಪ್ಪಿನಿಂದ ಹಿಡಿದೆ
ಮೊಬೈಲಿನ ಸಂದೇಶದವರೆಗೂ
ಎಲ್ಲವನೂ ಉಪಯೋಗಿಸಿ ಬಡಿದಾಡುತ್ತಿದ್ದೇವೆ
ಯಾರೇ ಕೇಳಿದರೂ ಯಾಕೆಂದು
ಕೊಡುತ್ತೇವೆ ಇಬ್ಬರೂ ಒಂದೇ ಉತ್ತರ:
ಇದರಲ್ಲೇನು ಇಲ್ಲ ಸ್ವಹಿತಾಸಕ್ತಿ
ಕಾಪಾಡಬೇಕಿದೆ ರಾಷ್ಟ್ರದ ಹಿತಾಸಕ್ತಿ!

Mar 4, 2016

ಮಾರ್ಚ್ 3ರಂದು ಜೆ ಎನ್ ಯು ಕ್ಯಾಂಪಸ್ಸಿನಲ್ಲಿ ಕನ್ಹಯ್ಯ ಕುಮಾರ್ ಮಾಡಿದ ಭಾಷಣ.

ಸಾಂದರ್ಭಿಕ ಚಿತ್ರ
ಮಧ್ಯಂತರ ಜಾಮೀನು ಪಡೆದು ಹೊರಬಂದ ಕನ್ಹಯ್ಯಕುಮಾರ್ ಜೆ.ಎನ್.ಯು ಆವರಣದಲ್ಲಿ ಸಹವಿದ್ಯಾರ್ಥಿಗಳನ್ನುದ್ದೇಶಿಸಿ ಮಾಡಿದ ಭಾಷಣ.
ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ
04/03/2016(updated)
ಸಂಗಾತಿಗಳೇ,
ಜೆ ಎನ್ ಯು ಎಸ್ ಯು ಅಧ್ಯಕ್ಷನಾಗಿ ನಾನು, ನಮ್ಮನ್ನು ಬೆಂಬಲಿಸಿದ ಈ ದೇಶದ ಸಮಸ್ತ ಜನತೆಗೆ ನಿಮ್ಮೆಲ್ಲರ ಪರವಾಗಿ ಇಲ್ಲಿ ನೆರೆದಿರುವ ಮಾಧ್ಯಮಗಳ ಮೂಲಕ ಧನ್ಯವಾದ ಸಮರ್ಪಿಸುತ್ತೇನೆ. ನಮ್ಮ ಜೊತೆ ನಿಂತ ಪ್ರತಿಯೊಬ್ಬರಿಗೂ ನನ್ನ ಸಲಾಮ್. 

ಜಗತ್ತಿನ ಬೇರೆ ಬೇರೆ ಭಾಗಗಳ ಜನ ಕೂಡ ಜೆ ಎನ್ ಯು ಜೊತೆ, ಬಂಧಿತರಾದವರ ಜೊತೆ ನಿಂತು, ನಮಗಾಗಿ ದನಿ ಎತ್ತಿದ್ದಾರೆ. ಅವರೆಲ್ಲರಿಗೂ ನಿಮ್ಮ ಪರವಾಗಿ ಧನ್ಯವಾದಗಳನ್ನು ಸಮರ್ಪಿಸುತ್ತೇನೆ. 

ಮೀಡಿಯಾದ ಮೂಲಕ ನಮಗೆ ಬೆಂಬಲ ಸೂಚಿಸಿದ ಎಲ್ಲರಿಗೂ, ಪತ್ರಕರ್ತರು, ಸಾಹಿತಿಗಳು, ರಾಜಕಾರಣಿಗಳು, ರಾಜಕಾರಣದಿಂದ ಹೊರತಾಗಿರುವವರು – ಹೀಗೆ ಯಾರೆಲ್ಲ ಜೆ ಎನ್ ಯು ಗೆ ನ್ಯಾಯ ದೊರಕಿಸಿಕೊಡಲು ಹೋರಾಡ್ತಿದ್ದಾರೋ, ರೋಹಿತ್ ವೇಮುಲನ ಸಾವಿಗೆ ನ್ಯಾಯ ದೊರಕಿಸಿಕೊಡಲು ಹೋರಾಡುತ್ತಿದ್ದಾರೋ ಅವರೆಲ್ಲರಿಗೂ ಲಾಲ್ ಸಲಾಮ್ ಸಲ್ಲಿಸುವ ಮೂಲಕ ಧನ್ಯವಾದಗಳನ್ನು ಸಮರ್ಪಿಸುತ್ತೇನೆ. 

ಹಾಗೇ ಪಾರ್ಲಿಮೆಂಟಿನಲ್ಲಿ ಕುಳಿತು ಯಾವುದು ಸರಿ, ಯಾವುದು ತಪ್ಪು ಅಂತ ನಿಶ್ಚಯಿಸುವ ಈ ದೇಶದ ದೊಡ್ಡ ದೊಡ್ಡ ಮಹಾನುಭಾವರಿಗೆ ಧನ್ಯವಾದ, ಅವರ ಪೊಲೀಸರಿಗೆ ಧನ್ಯವಾದ, ಅವರ ಮುಖವಾಣಿಯಂತಿರುವ ಮೀಡಿಯಾದ ಆ ಚಾನೆಲ್ಲುಗಳಿಗೂ ನನ್ನ ಧನ್ಯವಾದ. ನಮ್ಮ ಕಡೆ ಒಂದು ಮಾತಿದೆ. ಹೆಸರು ಹಾಳಾದರೇನು ಹೋಯ್ತು? ಹೆಸರಂತೂ ಬಂತು!! ಜೆ ಎನ್ ಯುವಿನ ಹೆಸರುಗೆಡಿಸೋಕೆಂದೇ ಅವರು ಪ್ರೈಮ್ ಟೈಮಿನಲ್ಲಿ ಜಾಗ ಕೊಟ್ಟರು. ಅವರಿಗೂ ನನ್ನ ಧನ್ಯವಾದಗಳನ್ನು ಸಮರ್ಪಿಸುತ್ತೇನೆ. 

ನಮಗೆ ಯಾರ ಕುರಿತೂ ದ್ವೇಷವಿಲ್ಲ. ಅದರಲ್ಲೂ ಎಬಿವಿಪಿ ಕುರಿತು ಇಲ್ಲವೇ ಇಲ್ಲ. ಬದಲಿಗೆ ಸಹಾನುಭೂತಿಯಿದೆ. ನಮ್ಮ ಕ್ಯಾಂಪಸ್ಸಿನಲ್ಲಿರುವ ಎಬಿವಿಪಿ ಹೊರಗಿನ ಎಬಿವಿಪಿಗಿಂತ ಹೆಚ್ಚು ರ್ಯಾಷನಲ್ ಆಗಿದೆ. ಚರ್ಚೆಯಲ್ಲಿ ನಾವು ಹೇಗೆ ಅವರ ನೀರಿಳಿಸಿದೆವೆಂದು ನೀವು ನೋಡಿದ್ದೀರಿ. ಅವರ ಬಗ್ಗೆ ನಮಗೆ ಯಾವುದೇ ಕೆಟ್ಟ ಭಾವನೆ ಇಲ್ಲ. ಅವರಿಗಿಂತ ಹೆಚ್ಚು ನಾವು ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿದ್ದೀವಿ. ನಾವು ನಿಜಕ್ಕೂ ಸಂವಿಧಾನದಲ್ಲಿ ನಂಬಿಕೆ ಇರಿಸಿದ್ದೀವಿ. ಆದ್ದರಿಂದ ಎಬಿವಿಪಿಯನ್ನು ಶತ್ರುವಿನಂತೆ ನೋಡದೆ ವಿರೋಧ ಪಕ್ಷವೆಂದು ಪರಿಗಣಿಸ್ತೀವಿ. ಎಬಿವಿಪಿ ಗೆಳೆಯರೇ, ನಾನು ನಿಮ್ಮನ್ನು ಬೇಟೆಯಾಡೋದಿಲ್ಲ. ಶಿಕಾರಿಗೆ ಲಾಯಕ್ಕಾದವರನ್ನು ಮಾತ್ರ ಶಿಕಾರಿ ಮಾಡಲಾಗ್ತದೆ. 

ಜೆ ಎನ್ ಯು ಮೊದಲ ಬಾರಿಗೆ ಇಷ್ಟು ದೊಡ್ಡ ದನಿಯಾಗಿ ಎದ್ದು ನಿಂತಿದೆ. ಸರಿಯನ್ನು ಸರಿಯೆಂದೂ ತಪ್ಪನ್ನು ತಪ್ಪೆಂದೂ ಗಟ್ಟಿಯಾಗಿ ಕೂಗಿ ಹೇಳುವ ಎದೆಗಾರಿಕೆ ತೋರಿದೆ. ಇದು ಜೆ ಎನ್ ಯುವಿನ ತಾಖತ್ತು. ನಮಗೆ ಆಜಾದಿ ಬೇಕು. ಹೌದು. ಆಜಾದಿ ಬೇಕು ಅಂತ ಕೇಳೋದು ತಪ್ಪೇನು? ಈ ದೇಶದ ನೆಲದಲ್ಲಿ ನಿಂತು ಸರಿಯನ್ನು ಸರಿ ತಪ್ಪನ್ನು ತಪ್ಪು ಅಂತ ಹೆಳುವ ಆಜಾದಿ ನಮಗೆ ಬೇಕು. ಒಂದು ಮಜದ ವಿಷಯ ಗೊತ್ತಾ? ನಮ್ಮದು ಆಯಾ ಕ್ಷಣದ ಪ್ರತಿಕ್ರಿಯೆ. ಆಯಾ ಸಂದರ್ಭಗಳಿಗೆ ತಕ್ಕಂಥ ಸ್ಪಾಂಟೆನಸ್ ಆದ ಪ್ರತಿಕ್ರಿಯೆ. ಆದರೆ ಅವರದ್ದು ಪೂರ್ತಿ ಉಲ್ಟಾ. ಅವರದ್ದೆಲ್ಲ ಪೂರ್ವ ನಿಯೋಜಿತೆ. ಆದರೆ ನಮ್ಮದು ಆಯಾ ಹೊತ್ತಿಗೆ ನಮ್ಮ ಒಳಗಿನಿಂದ ಹೊಮ್ಮುವ ಪ್ರತಿಕ್ರಿಯೆ. ಅದಕ್ಕೇ ನಮ್ಮ ದನಿ ಗಟ್ಟಿಯಾಗಿದೆ. ನ್ಯಾಯವಾಗಿದೆ. ಈ ದೇಶದ ಸಂವಿಧಾನದಲ್ಲಿ, ದೇಶದ ಕಾನೂನಿನಲ್ಲಿ, ಈ ದೇಶದ ನ್ಯಾಯ ಪ್ರಕ್ರಿಯೆಯಲ್ಲಿ ನಮಗೆ ಭರವಸೆ ಇದೆ. ಹಾಗೇ, ಬದಲಾವಣೆಯೇ ಸತ್ಯ ಅನ್ನೋ ಮಾತಿನಲ್ಲೂ ಭರವಸೆ ಇದೆ. ಎಲ್ಲವೂ ಬದಲಾಗುತ್ತವೆ. ನಾವು ಬದಲಾವಣೆಯ ಪಕ್ಷದಲ್ಲಿ ನಿಂತಿದ್ದೀವಿ. ಬದಲಾವಣೆ ಸಾಧಿಸಿ ತೋರಿಸ್ತೀವಿ. ಸಂವಿಧಾನದ ಮೇಲೆ ನಮಗೆ ಸಂಫೂರ್ಣ ಭರವಸೆ ಇದೆ. ಸಂವಿಧಾನದ ಆಶಯಗಳ ಜೊತೆ ನಾವು ಗಟ್ಟಿಯಾಗಿ ನಿಲ್ತೀವಿ. ಪ್ರಸ್ತಾವನೆಯಲ್ಲಿ ಹೇಳಲಾಗಿರುವ ಅದರ ಎಲ್ಲ ಧಾರೆಗಳ ಜೊತೆ ಪ್ರವಹಿಸ್ತೀವಿ. ಸಮಾಜವಾದ, ಧರ್ಮನಿರಪೇಕ್ಷತೆ, ಸಮಾನತೆ – ಇವುಗಳ ಜೊತೆ ಬೆಸೆದುಕೊಂಡಿದ್ದೀವಿ. 

ನಾನು ಈ ಹಿಂದೆಲ್ಲ ಸಾಕಷ್ಟು ಪ್ರಶ್ನೆಗಳನ್ನ ಕೇಳ್ತಿದ್ದೆ. ನಾನಿವತ್ತು ಭಾಷಣ ಮಾಡೋದಿಲ್ಲ. ನನ್ನ ಅನುಭವಗಳನ್ನ ನಿಮ್ಮ ಜೊತೆ ಹಂಚಿಕೊಳ್ತೀನಿ. ಮೊದಲು ಭಾಷಣಕ್ಕೆ ಮುಂಚೆ ಸಿಕ್ಕಾಪಟ್ಟೆ ಓದ್ತಾ ಇದ್ದೆ, ವ್ಯವಸ್ಥೆಯನ್ನು ಛೇಡಿಸ್ತಿದ್ದೆ. ಈ ಸಲ ಓದಿದ್ದು ಕಡಿಮೆಯಾಗಿದೆ ಮತ್ತು ಛೇಡಿಸೋಕೆ ಸಾಕಷ್ಟಿದೆ. ಒಬ್ರು ಹೇಳ್ತಾರೆ, ಜೆ ಎನ್ ಯು ನ ಜಾಲಾಡಿದೀನಿ ಅಂತ. ಅವರೊಂದಷ್ಟು ದಾಖಲೆ ಕೊಡ್ತಾರೆ. ಫಸ್ಟ್ ಹ್ಯಾಂಡ್ ಇನ್ಫರ್ಮೇಷನ್ ಇದೆ ಅಂತ ಹೇಳ್ತಾರೆ! ಈಗ ನ್ಯಾಯಾಲಯದ ಅಧೀನದಲ್ಲಿರೋ ಸಂಗತಿ ಬಗ್ಗೆ ನಾನು ಏನೂ ಹೇಳೋದಿಲ್ಲ. ಆಂದ್ರೆ ಒಂದು ಮಾತು, ಸಂವಿಧಾನವನ್ನ ನಿಜಕ್ಕೂ ಪ್ರೀತಿಸುವ, ಬಾಬಾ ಸಾಹೇಬರ ಕನಸುಗಳನ್ನ ಸಾಕಾರಗೊಳಿಸಲು ಬಯಸುವ ಈ ದೇಶದ ಜನತೆ, ನಾನು ಏನು ಹೇಳಬಯಸ್ತಿದ್ದೀನಿ ಅನ್ನೋದನ್ನ ಇಷಾರೆಗಳಲ್ಲೇ ಅರ್ಥ ಮಾಡಿಕೊಂಡಿರುತ್ತೆ.

ಪ್ರಧಾನ ಮಂತ್ರಿ ಟ್ವೀಟ್ ಮಾಡಿದಾರೆ; ಹೇಳಿದಾರೆ, “ಸತ್ಯಮೇವ ಜಯತೆ!”. ನಾನೂ ಹೇಳ್ತೀನಿ, “ಪ್ರಧಾನ ಮಂತ್ರೀ ಜೀ, ನಿಮ್ಮ ಜೊತೆ ಬಹಳವೇ ಮತಭೇದವಿದೆ. ಆದ್ರೆ ಸತ್ಯಮೇವ ಜಯತೆಯ ಘೋಷ ಬರೀ ನಿಮ್ಮ ಪಾಲಿಗಲ್ಲ, ಈ ದೇಶದ ಪಾಲಿಗೂ ಇದೆ, ಸಂವಿಧಾನದ ಪಾಲಿಗೂ ಇದೆ. ನಾನೂ ಕೂಡ ಹೇಳ್ತೀನಿ, ಸತ್ಯಮೇವ ಜಯತೇ!” ಮತ್ತು ಸತ್ಯಕ್ಕೆ ಜಯವಾಗುತ್ತೆ, ಮತ್ತು ಈ ಹೋರಾಟದಲ್ಲಿ ತೊಡಗಿಕೊಂಡಿರುವ ಸಮಸ್ತ ಜನತೆಗಾಗಿ ನನ್ನ ಅನುಭವಗಳನ್ನ ಹಂಚಿಕೊಳ್ತೀನಷ್ಟೆ.  

ಮೊದಲನೆಯದಾಗಿ, ಕೆಲವು ವಿದ್ಯಾರ್ಥಿಗಳ ಮೇಲೆ ಒಂದು ರಾಜಕೀಯ ಅಸ್ತ್ರವಾಗಿ ದೇಶದ್ರೋಹದ ಆಪಾದನೆ ಹೊರಿಸಲಾಗಿದೆ ಅಂತ ಅಂದುಕೊಳ್ಬೇಡಿ. ಅದನ್ನ ತಿಳಿಯಬೇಕಿರೋದು ಹೀಗೆ. ನಾನಿದನ್ನ ಈ ಹಿಂದೆಯೂ ಬಹಳ ಸಲ ಹೇಳಿದೀನಿ. ನಾವು ಹಳ್ಳಿಯಿಂದ ಬಂದವರು. ನಿಮಗೆ ಈಗಾಗ್ಲೇ ನನ್ನ ಮನೆಜನರ ಪರಿಚಯವಾಗಿರಬೇಕು. ನಮ್ಮ ಕಡೆ ರೈಲ್ವೇ ಸ್ಟೇಷನ್ ಹತ್ರ ಆಗಾಗ ಜಾದೂ ಪ್ರದರ್ಶನ ನಡೀತಾ ಇರತ್ತೆ. ಜಾದೂಗಾರ ಜಾದೂ ತೋರಿಸ್ತಾನೆ, ಹೆಬ್ಬೆಟ್ಟಿನ ಮಂದಿ ಅದನ್ನ ನೋಡ್ತಾರೆ. ಜಾದೂ ತೋರಿಸಲು ಅವರು ಬಳಸೋದು ನಮ್ಮೆಲ್ಲರ ಮೆಚ್ಚಿನ ಉಂಗುರವನ್ನ. ಉಂಗುರ ಮುಷ್ಟಿಯಲ್ಲಿ ಹಿಡಿದು ಛೂಮಂತರ್ ಅಂದ್ರೆ ಅದು ಮಾಯವಾಗುತ್ತೆ. ಇಲ್ಲಾ, ಮಾಯವಾದ ುಂಗುರ ಬಂದುಬಿಡತ್ತೆ. ಈ ದೇಶ ಆಳೋರ ಕಥೆಯೂ ಹೀಗೇನೇ. ಅವ್ರು ಹೇಳ್ತಿದ್ರು, ಕಪ್ಪು ಹಣ ಬರುತ್ತೆ ಅಂತ. “ಹರ ಹರ ಮೋದಿ!! ಬೆಲೆ ಏರಿಕೆ ಗಗನ ಮುಟ್ಟಿದೆ. ಎಷ್ಟೂಂತ ಸಹಿಸ್ತೀರಿ? ಈ ಸಲ ಮೋದಿಯನ್ನ ಆರಿಸಿ” “ಸಬ್ ಕಾ ಸಾಥ್ ಸಬ್ ಕ ವಿಕಾಸ್” ಅಂತೆಲ್ಲ. ಆ ಎಲ್ಲ ಆಶ್ವಾಸನೆಗಳನ್ನ ಜನ ಇನ್ನೂ ನೆನಪಿಟ್ಟುಕೊಂಡಿದ್ದಾರೆ. ಸಾಮಾನ್ಯವಾಗಿ ನಾವು ಭಾರತೀಯರು ಬಹಳ ಬೇಗ ಮರೀತೇವೆ. ಆದ್ರೆ ಈಸಲದ ತಮಾಷೆ ಎಷ್ಟು ಜೋರಿತ್ತು ಅಂದ್ರೆ, ಅದನ್ನ ಮರೆಯೋದಕ್ಕೇ ಆಗ್ತಿಲ್ಲ. ಈ ಜುಮ್ಲಾಗಳನ್ನ ಜನ ಮರೆಯುವಂತೆ ಮಾಡೋಕೆ ಅವರು ಪ್ರಯತ್ನಿಸ್ತಿದ್ದಾರೆ. ಮೊದಲು ಸುಳ್ಳುಗಳನ್ನ ಸೃಷ್ಟಿಸೋದು. ಆಮೇಲೆ ಈ ದೇಶದಲ್ಲಿ ಯಾರೆಲ್ಲ ರಿಸರ್ಚ್ ಸ್ಕಾಲರುಗಳಿದ್ದಾರೋ ಅವರ ಫೆಲೋಷಿಪ್ ನಿಲ್ಲಿಸಿಬಿಡೋದು. ಜನ ಆಗ ಏನ್ಮಾಡ್ತಾರೆ? “ಫೆಲೋಷಿಪ್ ಕೊಟ್ಬಿಡಿ, ಫೆಲೋಷಿಪ್ ಕೊಟ್ಬಿಡಿ” ಅಂತ ಬೆನ್ನು ಬೀಳ್ತಾರೆ. ಇವ್ರು ಹೇಳ್ತಾರೆ, ಮೊದಲೇನು ಕೊಡ್ತಿದ್ವೋ ಐದರಿಂದ ಎಂಟು ಸಾವಿರ… ಅಷ್ಟನ್ನೇ ಮುಂದುವರೆಸ್ತೀವಿ ಅಂತ. ಇದರರ್ಥ, ಹೆಚ್ಚಿಸೋ ಮಾತಿಗೆ ಅವಕಾಶವೇ ಇಲ್ಲ ಅಂತ. ಈಗಯಾರು ಮಾತಾಡೋದು? ಜೆ ಎನ್ ಯು! 

ಆದ್ರಿಂದ ನಿಮಗೆ ಬೈಗುಳ ಬೀಳ್ತಾ ಇದ್ರೆ ಚಿಂತೆ ಮಾಡ್ಬೇಡಿ. ಏನನ್ನ ಗಳಿಸಿದೀವೋ ಅದನ್ನೇ ತಿನ್ತಾ ಇದ್ದೀವಿ ನಾವಿವತ್ತು. ಈ ದೇಶದಲ್ಲಿ ಜನವಿರೋಧಿ ಸರ್ಕಾರವಿದೆ. ಈ ಜನವಿರೋಧಿ ಸರ್ಕಾರ ಆದೇಶ ಕೊಟ್ರೆ ಸಾಕು, ಅದರ ಸೈಬರ್ ಸೆಲ್ ಏನ್ಮಾಡತ್ತೆ ಹೇಳಿ? ಅದು ಡಾಕ್ಟರ್ಡ್ ವಿಡಿಯೋ ತಯಾರಿಸುತ್ತೆ!! ನಿಮ್ಮ ಮೇಲೆ ಬೈಗುಳಗಳ ಮಳೆ ಸುರಿಸುತ್ತೆ. ಮತ್ತು ಅದು ನಿಮ್ಮ ಡಸ್ಟ್ ಬಿನ್ನಿನಲ್ಲಿ ಎಷ್ಟು ಕಾಂಡೋಮ್ ಇವೆ ಅಂತ ಗಣತಿಗೆ ಶುರುವಿಡತ್ತೆ!

ಈಗ ಸಮಯ ಬಹಳ ಗಂಭೀರವಾಗಿದೆ. ಈ ಗಂಭೀರ ಸಮಯದಲ್ಲಿ ನಾವು ಯೋಚಿಸಬೇಕಿರೋದು ಬಹಳ ಇದೆ. ಜೆ ಎನ್ ಯು ಮೇಲೆ ನಡೆಸಿದ ದಾಳಿ ಒಂದು ನಿಯೋಜಿತ ದಾಳಿಯಾಗಿತ್ತು ಅನ್ನೋದನ್ನ ನಾವು ಅರ್ಥ ಮಾಡಿಕೊಳ್ಳಬೇಕಿದೆ. ನಾವು ಅಕ್ಯುಪೈ ಯುಜಿಸಿ ಚಳವಳಿಯನ್ನ ಮುಂದುವರೆಸೋಕೆ ಬಯಸಿದ್ದರಿಂದಲೇ ಈ ದಾಳಿ ರೂಪುಗೊಳಿಸಲಾಗಿದೆ. ರೋಹಿತ್ ವೇಮುಲನ ಸಾವಿಗೆ ನ್ಯಾಯ ದೊರಕಿಸುವ ಹೋರಾಟವನ್ನ ಕೈಗೆತ್ತಿಕೊಂಡಿದ್ದೇವಲ್ಲ, ಈ ಹೋರಾಟವನ್ನ ಮುಗಿಸಿಬಿಡುವ ಉದ್ದೇಶದಿಂದ ಈ ದಾಳಿ ರೂಪಿಸಲಾಗಿದೆ. 

ನೀವು ಜೆ ಎನ್ ಯು ಸಂಗತಿಯನ್ನು ಪ್ರೈಮ್ ಟೈಮಿಗೆ ತಂದಿರೋದೇ ಈ ಕಾರಣಕ್ಕೆ ಅಂತ ನಮಗೆ ಗೊತ್ತಿದೆ ಮಾನನೀಯ ಎಕ್ಸ್ ಆರೆಸ್ಸೆಸ್… ನೀವು ಈ ದೇಶದ ಜನರ ಮನಸಿನಿಂದ ಸಾಕಷ್ಟು ವಿಷಯಗಳನ್ನ ಅಳಿಸಿಹಾಕುವ ಹುನ್ನಾರದಲ್ಲಿದ್ದೀರಿ. ಈ ದೇಶದ ಪ್ರಧಾನಿ ಪ್ರತಿಯೊಬ್ಬರ ಖಾತೆಯಲ್ಲಿ ಹದಿನೈದು ಲಕ್ಷ ರುಪಾಯಿ ಜಮೆ ಮಾಡುವ ಮಾತಾಡಿದ್ದರು. ಆದರೆ ಒಂದು ಮಾತು ಹೇಳೋಕೆ ಬಯಸ್ತೀನಿ. ಜೆ ಎನ್ ಯು ನಲ್ಲಿ ಪ್ರವೇಶ ಪಡೆಯೋದು ಸುಲಭದ ಮಾತಲ್ಲ. ಜೆ ಎನ್ ಯು ನಲ್ಲಿರುವವರ ಬಳಿ ಮಾತು ಮರೆಸೋದು ಕೂಡ ಸುಲಭವಲ್ಲ. ನೀವು ಬಯಸೋದಾದ್ರೆ ನಾವು ಮರೆತುಹೋಗ್ತೀವಿ. ಆದ್ರೆ ನಾವೂ ನಿಮಗೆ ಮತ್ತೆ ಮತ್ತೆ ನೆನಪಿಸೋಕೆ ಇಷ್ಟಪಡ್ತೀವಿ, ಯಾವಾಗೆಲ್ಲ ಈ ದೇಶದ ಆಡಳಿತ ಯಂತ್ರ ಅತ್ಯಾಚಾರ ನಡೆಸಿದೆಯೋ ಆಗೆಲ್ಲ ಜೆ ಎನ್ ಯು ನಿಂದ ಗಟ್ಟಿಯಾದ ದನಿ ಮೊಳಗಿದೆ. ಮತ್ತು ನಾವು ಈಗ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ, ಈ ಮಾತನ್ನು ನಾನು ಮತ್ತೆಮತ್ತೆ ಹೇಳಲು ಬಯಸ್ತೀನಿ. ನೀವು ನಮ್ಮ ಹೋರಾಟವನ್ನ ದುರ್ಬಲಗೊಳಿಸೋಕೆ ಸಾಧ್ಯವಿಲ್ಲ. 

ನೀವೇನು ಹೇಳ್ತೀರಿ? ಒಂದು ಕಡೆ ದೇಶದ ಯುವಕರು ಗಡಿಗಳಲ್ಲಿ ಕಾದಾಡಿ ಜೀವ ಕೊಡ್ತಿದ್ದಾರೆ. ಅವರೆಲ್ಲರಿಗೆ ನನ್ನ ವಂದನೆಗಳನ್ನ ಸಲ್ಲಿಸ್ತೀನಿ. ನನ್ನದೊಂದು ಪ್ರಶ್ನೆಯಿದೆ. ನಾನು ಜೈಲಲ್ಲಿ ಒಂದು ಪಾಠ ಕಲಿತುಬಂದೆ. ವಿಚಾರಧಾರೆಯ ಸವಾಲುಗಳನ್ನು ಎತ್ತುವಾಗ ಸುಖಾಸುಮ್ಮನೆ ಯಾರೊಬ್ಬ ವ್ಯಕ್ತಿಗೂ ಪಬ್ಲಿಸಿಟಿ ಕೊಡಕೂಡದು ಅಂತ. ಆದ್ದರಿಂದ ನಾನು ಆ ಲೀಡರ್ ನ ಹೆಸರು ಹೇಳೋದಿಲ್ಲ. ಬಿಜೆಪಿಯ ಒಬ್ಬ ನೇತಾ ಲೋಕಸಭೆಯಲ್ಲಿ ಹೇಳಿದ್ರು ಈ ದೇಶದ ಗಡಿಗಳಲ್ಲಿ ಯುವಕರು ಸಾಯ್ತಿದ್ದಾರೆ ಅಂತ. ಅವರಿಗೆ ನಾನು ಕೇಳ್ತೀನಿ, ಅವರು ನಿಮ್ಮ ತಮ್ಮಂದಿರೇನು? ಈ ದೇಶದೊಳಗೆ ಕೋಟ್ಯಂತರ ರೈತರು ಸಂಕಟ ಪಡ್ತಿದ್ದಾರೆ. ನಮಗಾಗಿ ಅನ್ನ ಬೆಳೆಯುವವರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಗಡಿಯಲ್ಲಿ ನಿಂತಿರುವ ಆ ಯುವಕರ ತಂದೆಯಂದಿರೂ ಅಂಥವರಲ್ಲಿ ಸೇರಿದ್ದಾರೆ. ಈ ಜನರ ಬಗ್ಗೆ ನೀವು ಏನು ಹೇಳ್ತೀರಿ? ಹೊಲದಲ್ಲಿ ದುಡಿಯುವ ರೈತ ನನ್ನಪ್ಪ. ನನ್ನ ಅಣ್ಣ ಸೇನೆಗೆ ಸೇರಿಕೊಳ್ತಾನೆ. ರೈತನಾದ ನನ್ನಪ್ಪನೂ ಸಾಯುತ್ತಾನೆ, ಗಡಿಯಲ್ಲಿ ನಿಂತ ಅಣ್ಣನೂ ಸಾಯ್ತಾನೆ. ಇದ್ಯಾವುದಕ್ಕೂ ಸಂಬಂಧವೇ ಇಲ್ಲದ ನೀವು ಇದನ್ನೊಂದು ಸರಕಾಗಿಸ್ಕೊಂಡು ವಾಗ್ವಾದ ಶುರುಹಚ್ಚಬೇಡಿ. ನನ್ನ ಜನರು ದೇಶದ ಒಳಗೂ ಸಾಯ್ತಾರೆ. ನನ್ನ ಜನರು ದೇಶದ ಗಡಿಯಲ್ಲೂ ಸಾಯ್ತಾರೆ. ನನ್ನ ಪ್ರಶ್ನೆ ಇದೆ ನಿಮಗೆ, ಪಾರ್ಲಿಮೆಂಟಿನಲ್ಲಿ ನಿಂತು ಯಾರಿಗೋಸ್ಕರ ರಾಜಕೀಯ ಮಾಡ್ತಿದ್ದೀರಿ? ಅಲ್ಲಿ ಸಾಯ್ತಿರುವವರ ಜವಾಬ್ದಾರಿ ಯಾರು ಹೊರುತ್ತಾರೆ? ಸಾಯುವವರು ಜವಾಬ್ದಾರರಲ್ಲ, ಯುದ್ಧಕ್ಕೆ ಹಚ್ಚುವವರು ಜವಾಬ್ದಾರರು. ನನ್ನ ತಂದೆ, ನನ್ನ ಅಣ್ಣ ಇವರೆಲ್ಲ ಹೇಗೆ ಸಾಯ್ತಿದ್ದಾರೆ ನೋಡಿ. ಪ್ರೈಮ್ ಟೈಮಿನಲ್ಲಿ ಕೂತವರು ಎರಡು ಕಾಸಿನ ಸ್ಪೀಕರ್ ಮುಂದೆ ಕಿರುಚಾಡುತ್ತಾರಷ್ಟೆ. ಇಂಥವರಿಗೆ ನನ್ನ ಪ್ರಶ್ನೆಗಳಿವೆ. 

ದೇಶದೊಳಗೆ ಸಮಸ್ಯೆಗಳಿವೆ. ಈ ಸಮಸ್ಯೆಗಳಿಂದ ಮುಕ್ತಿ ಬಯಸೋದು ತಪ್ಪಾ? ಅವರು ಕೇಳ್ತಾರೆ, “ಯಾರಿಂದ ಆಜಾದಿ (ಸ್ವಾತಂತ್ರ್ಯ) ಕೇಳ್ತಿದ್ದೀಯ?” ಅಂತ. “ನೀನೇ ಹೇಳು, ಭಾರತ ಯಾರನ್ನಾದ್ರೂ ಗುಲಾಮರನ್ನಾಗಿ ಮಾಡಿಟ್ಟುಕೊಂಡಿದೆಯೇನು? ಹೇಳು ನೋಡೋಣ?” ಇಲ್ಲ… ನಾವು ಭಾರತದಿಂದ ಸ್ವಾತಂತ್ರ್ಯ ಕೇಳ್ತಿಲ್ಲ. ಸರಿಯಾಗಿ ಕೆಳಿಸ್ಕೊಳ್ಳಿ, ನಾವು ಭಾರತದಿಂದ ಸ್ವಾತಂತ್ರ್ಯ ಕೇಳ್ತಿಲ್ಲ… ಭಾರತದಲ್ಲಿ ಸ್ವಾತಂತ್ರ್ಯ ಕೆಳ್ತಿದ್ದೀವಿ. ಇಂದ ಮತ್ತು ಅಲ್ಲಿ – ಈ ಪ್ರತ್ಯಯಗಳಲ್ಲಿ ವ್ಯತ್ಯಾಸವಿದೆ. ಬ್ರಿಟಿಷರಿಂದ ಸ್ವಾತಂತ್ರ್ಯ ಕೇಳ್ತಿಲ್ಲ. ಈ ದೇಶದ ಜನ ಅದನ್ನು ಹೋರಾಡಿ ಪಡೆದಿದ್ದಾರೆ. 

ಈಗ ನಾನು ನನ್ನ ಅನುಭವ ಹೇಳ್ತೀನಿ ಕೇಳಿ. ಪೊಲೀಸರು ಕೇಳಿದ್ರು, “ನೀವು ಲಾಲ್ ಸಲಾಮ್, ಲಾಲ್ ಸಲಾಮ್ ಅಂತ ಕೂಗ್ತಿದ್ರಲ್ಲ ಯಾಕೆ?” ಅದೇನೂ ಔಪಚಾರಿಕ ವಿಚಾರಣೆಯಾಗಿರಲಿಲ್ಲ. ನನ್ನನ್ನ ಊಟ ತಿಂಡಿಗೆ, ಮೆಡಿಕಲ್ ಚೆಕಪ್ಪಿಗೆ ಕರೆದ್ಕೊಂಡು ಹೋಗುವಾಗ ಅವೆಲ್ಲ ಮಾತಾಡ್ತಿದ್ವಿ. ನನಗಂತೂ ಸುಮ್ಮನಿರೋಕೇ ಬರೋದಿಲ್ಲ. ನಾವು ಜೆ ಎನ್ ಯು ನವರು ಸುಮ್ಮನೆ ಇರಬಲ್ಲೆವಾದ್ರೂ ಹೇಗೆ!? ನಾನು ಅವರೊಂದಿಗೆ ಹರಟುತ್ತಿದ್ದೆ. ಮಾತುಮಾತಲ್ಲೆ ನನಗೆ ಗೊತ್ತಾಯ್ತು, ಆ ಮನುಷ್ಯನೂ ನನ್ನ ಥರದವರೇ ಅಂತ. ಪೊಲೀಸ್ ಇಲಾಖೆಯಲ್ಲಿ ಯಾರು ಕೆಲಸ ಮಾಡ್ತಾರೆ ಹೇಳಿ? ರೈತರ ಮಕ್ಕಳು, ಕಾರ್ಮಿಕರ ಮಕ್ಕಳು, ಹಿಂದುಳಿದ ವರ್ಗಗಳಿಂದ ಬಂದವರು – ಇಂಥವರೇ ಪೊಲೀಸ್ ನೌಕರಿಗೆ ಸೇರೋದು. ನಾನು ಕೂಡ ಈ ದೇಶದ ಅತ್ಯಂತ ಹಿಂದುಳಿದ ರಾಜ್ಯಗಳಲ್ಲಿ ಒಂದಾದ ಬಿಹಾರದಿಂದ ಬಂದವನು. ನಾನೂ ಬಡ, ರೈತ ಕುಟುಂಬದಿಂದ ಬಂದವನು. ಪೊಲೀಸ್ ಇಲಾಖೆಯಲ್ಲೂ ಬಡ ಪರಿವಾರದ ಜನರೇ ಹೆಚ್ಚು ಕೆಲಸ ಮಾಡೋದು. ನಾನು ಕಾನ್ಸ್ಟೆಬಲ್, ಹೆಡ್ ಕಾನ್ಸ್ಟೆಬಲ್, ಇನ್ಸ್ಪೆಕ್ಟರ್ ವರೆಗಿನವರ ಬಗ್ಗೆ ಹೇಳ್ತಿದೀನಿ. ಐಪಿಎಸ್ ಮಾಡಿದ ಸಾಹೇಬರೊಂದಿಗೆ ನನಗೆ ಹೆಚ್ಚು ಮಾತುಕತೆಯಿಲ್ಲ. ಅಲ್ಲಿದ್ದ ಸಿಪಾಯಿಗಳೊಂದಿಗೆ ನಾನು ಮಾತಾಡಿದೆ. ನಾನು ಹೇಳೋಕೆ ಹೊರಟಿರೋದು ಆ ಮಾತುಕತೆಯ ತುಣುಕುಗಳನ್ನೇ. 

ಒಬ್ಬ ಸಿಪಾಯಿ ಕೇಳಿದ, “ಈ ಲಾಲ್ ಸಲಾಮ್ ಲಾಲ್ ಸಲಾಮ್ ಏನು!?” ನಾನೇಳಿದೆ, “ಲಾಲ್ ಅಂದ್ರೆ ಕ್ರಾಂತಿ. ಸಲಾಮ್ ಅಂದ್ರೆ ಕ್ರಾಂತಿಗೊಂದು ಸಲಾಮು” ಅಂತ. ಅವನಿಗೆ ಅರ್ಥವಾಗ್ಲಿಲ್ಲ. “ನಿಮಗೆ ಇಂಕ್ವಿಲಾಬ್ ಜಿಂದಾಬಾದ್ ಗೊತ್ತಾ?” ಅಂತ ಕೇಳಿದೆ. ಅವನು ತಲೆಯಾಡಿಸ್ತಾ ಹೇಳಿದ, “ಕ್ರಾಂತಿಯನ್ನ ಉರ್ದುವಿನಲ್ಲಿ ಇಂಕ್ವಿಲಾಬ್ ಅಂತಾರೆ ಅಲ್ವ? ಈ ಸ್ಲೋಗನ್ ಎಬಿವಿಪಿಯವ್ರೂ ಹಿಡ್ಕೊಂಡಿರ್ತಾರೆ!” ನಾನು ಹೇಳಿದೆ, “ಅದು ನಕಲಿ ಇಂಕ್ವಿಲಾಬ್. ನಮ್ಮದು ಅಸಲಿ ಇಂಕ್ವಿಲಾಬ್!!” 

ಅವನು ಮತ್ತೂ ವಿಚಾರಿಸಿದ, “ಜೆ ಎನ್ ಯು ನಲ್ಲಿ ನಿಮಗೆ ಎಲ್ಲವೂ ಸಸ್ತಾದಲ್ಲಿ ಸಿಗ್ತವೆ ತಾನೆ?” ಅಂತ. ಅವನು ದಿನಕ್ಕೆ ಹದಿನೆಂಟು ಗಂಟೆ ಡ್ಯೂಟಿ ಮಾಡ್ತಿದ್ದನ್ನು ನಾನು ಗಮನಿಸಿದ್ದೆ. ಆದ್ರೂ ಓಟಿ ಪಡೆಯೋಕೆ ಪರದಾಡಬೇಕಿತ್ತು. ನಿನಗ್ಯಾಕೆ ಸಸ್ತಾದಲ್ಲಿ ಯಾವುದೂ ಸಿಗೋದಿಲ್ಲ ಅಂತ ನಾನು ಕೇಳಿದೆ. ಆತ ಅಷ್ಟು ಕೆಲಸ ಮಾಡಿಯೂ ಬಡ್ತಿ ಬೇಕು ಅಂದ್ರೆ, ಸವಲತ್ತುಗಳು ಬೇಕು ಅಂದ್ರೆ ಭ್ರಷ್ಟಾಚಾರಕ್ಕೆ ಒಳಗಾಗಬೇಕಿತ್ತು. ನಾನು ಅದನ್ನೇ ಹೇಳಿದೆ. “ಈ ಕಾರಣಗಳಿಗಾಗಿಯೇ ನಾವು ಆಜಾದಿ ಬೇಕು ಅಂತ ಕೆಳ್ತಿರೋದು. ಹಸಿವಿನಿಂದ ಆಜಾದಿ, ಭ್ರಷ್ಟಾಚಾರದಿಂದ ಆಜಾದಿ… ಇವುಗಳ ಬೇಡಿಕೆಯಿಂದಲೇ ಒಂದು ಆಂದೋಲನ ಶುರುವಾಗಿಬಿಡ್ತು. ನಿಮಗ್ಗೊತ್ತಾ, ದೆಹಲಿಯ ಬಹಳಷ್ಟು ಪೊಲೀಸರು ಹರ್ಯಾಣಾದಿಂದ ಬಂದವರಾಗಿರ್ತಾರೆ. ಅವ್ರು ತುಂಬಾ ಶ್ರಮಜೀವಿಗಳು. ಅವನು ಮಾತಾಡ್ತಾ ಹೇಳಿದ, “ಜಾತಿವಾದ ಬಹಳ ಕೆಟ್ಟದ್ದು”. ನಾನು ಹೇಳಿದೆ, “ನಾವು ಕೇಳ್ತಿರೋದು ಈ ಜಾತಿವಾದದಿಂದ ಆಜಾದಿ ಬೇಕು ಅಂತಲೇ!” ಅವನು ಹೇಳಿದ, ಇದೇನೂ ತಪ್ಪಲ್ವಲ್ಲ! ಇದು ದೇಶದ್ರೋಹ ಹೇಗಾಗತ್ತೆ? ನಾನು ಕೇಳಿದೆ, “ಹೇಳಿ ನೋಡೋಣ, ವ್ಯವಸ್ಥೆಯಲ್ಲಿ ಅತಿ ಹೆಚ್ಚು ಅಧಿಕಾರ ಇರೋದು ಯಾರಿಗೆ?” ಅವನು ಠೀವಿಯಿಂದ ಹೇಳಿದ “ನಮ್ಮ ದಂಡಕ್ಕೆ”. “ಸರಿಯೇ ಸರಿ. ನೀನು ಈ ದಂಡವನ್ನು ನಿಮ್ಮ ಇಚ್ಛೆಯಿಂದ ಚಲಾಯಿಸಬಲ್ಲೆಯೇನು?” “ಇಲ್ಲ” “ಹಾಗಾದ್ರೆ ಅಧಿಕಾರವೆಲ್ಲ ಯಾರ ಬಳಿ ಹೋಯ್ತು?” “ಭರ್ಜಿ, ಟ್ವೀಟ್ ಗಳ ಮೂಲಕ ಸ್ಟೇಟ್ಮೆಂಟ್ ಕೊಡೋರ ಹತ್ತಿರ!!” “ ಈ ಭರ್ಜಿ ಇಟ್ಕೊಂಡು, ಟ್ವೀಟ್ ಮಾಡಿಕೊಂಡು ಇರೋ ಸಂಘಿಗಳಿಂದ ಆಜಾದಿ ಬೇಕಂತಲೇ ನಮ್ಮ ಹೋರಾಟ ಇರೋದು!” ಅವನಂದ, “ಹಾಗಾದ್ರೆ ನಾನೂ ನೀನೂ ಈಗ ಒಂದೇ ಕಡೆ ನಿಂತಿದ್ದೀವಿ ಅಂತಾಯ್ತು!”. 

ಇಲ್ಲೊಂದು ಅಡ್ಡಿ ಇದೆ. ನಾನು ಎಲ್ಲ ಮೀಡಿಯಾದವರಿಗೂ ಈ ಮಾತು ಹೇಳ್ತಿಲ್ಲ. ಎಲ್ಲರಿಗೂ ಅಲ್ಲಿಂದ ಕಪ್ಪ ಕಾಣಿಕೆ ಬರೋದಿಲ್ಲ. ಕೆಲವ್ರಿಗೆ ಮಾತ್ರ ಅದು ಬರೋದು. ಕೆಲವರು ಕುಳಿತಲ್ಲಿಯೆ ಕತೆ ಹೆಣೆದು ನನ್ನನ್ನು ಹೇಗೆ ಬಿಂಬಿಸಿದ್ರು ಅಂದ್ರೆ, ಆ ಸಿಪಾಯಿ ನನ್ನನ್ನು ಜೈಲಿಗೆ ಹಾಕಿದಾಗ ನನಗೆ ಸರಿಯಾಗಿ ಬಾರಿಸಬೇಕು ಅಂದ್ಕೊಂಡಿದ್ನಂತೆ. ಅದಕ್ಕಾಗೇ ನನ್ನ ಹೆಸರನ್ನ ಎಲ್ಲಕ್ಕಿಂತ ಮೇಲೆ ಬರೆದಿಟ್ಟುಕೊಂಡಿದ್ನಂತೆ. ನನ್ನ ಜೊತೆ ಮಾತುಕತೆಯಾಡಿದ ಮೇಲೆ ಅವನು ಹೇಳಿದ್ದನ್ನ ನಿಮಗೆ ಹೇಳ್ತೀನಿ ಕೇಳಿ. ಅವನೀಗ ಹಾಗೆಲ್ಲ ನನ್ನನ್ನು ಬಿಂಬಿಸಿದವನಿಗೆ ಒಂದು ಗತಿ ಕಾಣಿಸ್ಬೇಕು ಅಂತ ಯೋಚಿಸತೊಡಗಿದ್ದ. ಆ ಸಿಪಾಯಿ ನನ್ನ ಹಾಗೇ ಬಡ ಹಿಂದುಳಿದ ವರ್ಗದಿಂದ ಬಂದವನು. ಒಂದು ಕಾಲದಲ್ಲಿ ತಾನೂ ಉನ್ನತ ಶಿಕ್ಷಣ ಪಡೀಬೇಕು ಅನ್ನೋ ಆಸೆ ಇದ್ದವನು. ಆದರೆ ಹಣದ ಅಭಾವ ಅವನ ಆಸೆಯನ್ನ ಪೂರೈಸಲಿಲ್ಲ. ಅವನಲ್ಲಿ ಸಾಮರ್ಥ್ಯವಿತ್ತು ಆದರೆ ಅದನ್ನು ಪೂರೈಸಿಕೊಳ್ಳುವ ಹಣಬಲವಿರಲಿಲ್ಲ. ಈ ಜನ ಇಂಥವರು ಉನ್ನತ ಶಿಕ್ಷಣ ಪಡೆಯೋದನ್ನ ತಡೀತಾರೆ. ಇವರಿಗೆ ನನ್ನ ಸಮುದಾಯದವರು, ಹಿಂದುಳಿದವರು ಪಿಎಚ್ಡಿ ಮಾಡೋದು ಬೇಕಿಲ್ಲ. ಯಾಕಂದ್ರೆ ನಮ್ಮ ಬಳಿ ವಿದ್ಯೆಯನ್ನ ಕೊಳ್ಳೋಕೆ ಹಣವಿರೋದಿಲ್ಲ. ಇಂಥವರಿಗಾಗಿ ಜೆ ಎನ್ ಯು ದನಿ ಎತ್ತಿದೆ, ಎತ್ತುತ್ತಲೇ ಇರುತ್ತೆ. ಅದು ರೈತನಿರಲಿ, ಕಾರ್ಮಿಕ…. ಜೆ ಎನ್ ಯು ಅವರಿಗಾಗಿ ಹೋರಾಡುತ್ತೆ. ಬಾಬಾ ಸಾಹೇಬರು ಹೇಳಿದ್ದರು, ರಾಜನೈತಿಕ ಲೋಕತಂತ್ರದಿಂದಷ್ಟೆ ಕೆಲಸ ಆಗೋದಿಲ್ಲ, ನಾವು ಸಾಮಾಜಿಕ ಲೋಕತಂತ್ರವನ್ನ ಸ್ಥಾಪಿಸೋಣ ಅಂತ. ಆದ್ದರಿಂದಲೇ ನಾನು ಮತ್ತೆ ಮತ್ತೆ ಸಂವಿಧಾನದ ಮಾತಾಡೋದು. ‘ಡೆಮಾಕ್ರಸಿ ಇಸ್ ಇನ್ಡಿಸ್ಪೆನ್ಸಬಲ್ ಟು ಸೋಷಿಯಲಿಸಮ್’ ಅಂತಾನೆ ಲೆನಿನ್. ಆದ್ರಿಂದ್ಲೇ ನಾವು ಸಮಾಜವಾದದ ಮಾತಾಡ್ತೀವಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಮಾತಾಡ್ತೀವಿ. ಸಮಾನತೆಯ ಮಾತಾಡ್ತೀವಿ. ಒಬ್ಬ ಚಪ್ರಾಸಿಯ ಮಗ, ಒಬ್ಬ ರಾಷ್ಟ್ರಪತಿಯ ಮಗ – ಇಬ್ರೂ ಒಂದೇ ಸ್ಕೂಲಲ್ಲಿ ಜೊತೆಯಾಗಿ ವಿದ್ಯೆ ಪಡೆಯುವಂತಾಗಬೇಕು ಅನ್ನೋದು ನಮ್ಮ ಬಯಕೆ. ಅದಕ್ಕಾಗಿ ನಾವು ದನಿ ಎತ್ತುತ್ತೇವೆ. ಆದ್ರೆ ನೀವು, ನಮ್ಮ ಸದ್ದಡಗಿಸೋಕೆ ಯತ್ನಿಸ್ತಿದ್ದೀರಿ. ಆದರೆ ಎಂಥಾ ಪವಾಡ ನೋಡಿ! ವಿಜ್ಞಾನ ಹೆಳುತ್ತೆ, ನೀವು ಎಷ್ಟು ದಬಾಯಿಸಿ ತಳ್ತೀರೋ ಅಷ್ಟು ಹೆಚ್ಚಿನದಾಗಿ ಪುಟಿದೇಳುತ್ತೆ ಅಂತ. ವಿಜ್ಞಾನ ಓದೋದು ಒಂದು ಥರವಾದ್ರೆ, ವೈಜ್ಞಾನಿಕವಾಗಿರೋದು ಇನ್ನೊಂಥರ. ಎರಡೂ ಬೇರೆಬೇರೆ. ಯಾರು ವೈಜ್ಞಾನಿಕವಾಗಿ ಆಲೋಚಿಸಬಲ್ಲರೋ ಅವರಿಗೆ ಇವೆಲ್ಲ ಅರ್ಥವಾಗುತ್ತೆ. ಹಸಿವು ಮತ್ತು ಬಡತನಗಳಿಂದ ಆಜಾದಿ, ಭ್ರಷ್ಟಾಚಾರ ಮತ್ತು ಅತ್ಯಾಚಾರಗಳಿಂದ ಆಜಾದಿ ಹಾಗೂ ಬಡವರು, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಅಧಿಕಾರಕ್ಕಾಗಿ ನಾವು ಆ ಆಜಾದಿಯನ್ನ ಪಡೆದೇ ತೀರುತ್ತೀವಿ. ಮತ್ತು ಅದನ್ನು ಇದೇ ಸಂವಿಧಾನದ ಅಡಿಯಲ್ಲಿ. ಇದೇ ಕಾನೂನಿನ ಅಡಿಯಲ್ಲಿ, ಇದೇ ನ್ಯಾಯ ಪ್ರಕ್ರಿಯೆಯ ಮೂಲಕ ಪಡೆದು ಈ ದೇಶಕ್ಕೆ ತೋರಿಸ್ತೀವಿ. ಇದು ನಮ್ಮ ದೃಢನಿಶ್ಚಯ. 

ಇದು ನಮ್ಮ ರೋಹಿತನ ಕನಸೂ ಆಗಿತ್ತು. ಒಬ್ಬ ರೋಹಿತನನ್ನು ಕೊಂದಿರಿ. ಹೋರಾಟದ ಉಸಿರುಗಟ್ಟಿಸಲು ನೋಡಿದಿರಿ. ಅದೇ ಹೋರಾಟ ಈಗ ಎಷ್ಟು ವಿಸ್ತಾರವಾಗಿ ಹರಡಿಕೊಂಡಿದೆ ನೋಡಿ. ನನ್ನ ಜೈಲುವಾಸದ ಅನುಭವದಿಂದ ಹೇಳ್ತೀನಿ ಕೇಳಿ. ಇದನ್ನ ಸ್ವವಿಮರ್ಶೆ ಅಂದ್ಕೊಳ್ಳಿ. ನಾವು ಜೆ ಎನ್ ಯು ನವರು ತಳಮಟ್ಟದ ಸಂಗತಿಗಳಿಗಾಗಿ ಹೋರಾಡ್ತೀವಿ ಅನ್ನೋದೇನೋ ನಿಜವೇ. ಆದರೆ ನಾವು ಬಳಸುವ ಭಾಷೆ ಭಾರವಾಗಿರುತ್ತದೆ. ಇದು ದೇಶದ ಜನಸಾಮಾನ್ಯರನ್ನ ತಲುಪೋದಿಲ್ಲ. ಅವರಿಗೆ ಅರ್ಥವಾಗೋದಿಲ್ಲ. ಇದು ಅವರ ದೋಷವಲ್ಲ. ಅವರು ಸಜ್ಜನ, ಪ್ರಾಮಾಣಿಕ, ಬುದ್ಧಿವಂತ ಜನ. ಅವರ ಪರಿಕರಗಳ ಮೂಲಕವೇ ನಮ್ಮ ಮಾತುಗಳನ್ನ ಅವರಿಗೆ ತಲುಪಿಸಬೇಕಾಗುತ್ತೆ. ಅವರನ್ನು ಎಂಥವು ತಲುಪುತ್ತವೆ ಹೇಳಿ? “ಬೇಗ ಬೇಗ ಫಾರ್ವರ್ಡ್ ಮಾಡಿ, ಲೈನ್ ಉದ್ದವಾಗಿಬಿಡತ್ತೆ” ಅನ್ನುವಂಥ ಜಾಹೀರಾತುಗಳು. “ಬೇಗ ಬೇಗ ವಿಷಯ ಹರಡಿ, ಗ್ರೂಪ್ ಫಾರ್ವರ್ಡ್ ಮಾಡಿ” – ಇಂಥವು. ಆನ್ ಲೈನ್ ಮಾರಾಟ ಮಾಡ್ತಾರೆ, ಓಎಲೆಕ್ಸ್ ಮೂಲಕ ಮಾರಾಟ ಮಾಡ್ತಾರೆ. ನಮ್ಮ ದೇಶದಲ್ಲಿ ಮಾರಾಟ ಮಾಡುವುದೊಂದು ವ್ಯಸನ ಶುರುವಾಗಿದೆ. ಅಂಥ ಜನರೊಂದಿಗೆ ನಮಗೆ ಸಂವಾದ ಸಾಧ್ಯವಾಗಬೇಕು. 

ಜೈಲಿನಲ್ಲಿರುವಾಗ ನನಗೆ ಇನ್ನೊಂದು ಅನುಭವವಾಯ್ತು. ಅಲ್ಲಿ ಊಟದ ತಟ್ಟೆಯಲ್ಲಿ ಎರಡು ಕಟೋರಿಗಳನ್ನ ಇಡುತ್ತಿದ್ದರು. ಒಂದರ ಬಣ್ಣ ನೀಲಿ, ಒಂದರ ಬಣ್ಣ ಕೆಂಪು. ನನಗೆ ಅದೃಷ್ಟದ ಮೇಲೆ ನಂಬಿಕೆಯಿಲ್ಲ. ದೇವರ ವಿಷಯ ನನಗೆ ಗೊತ್ತಿಲ್ಲ. ಆದರೆ ಆ ತಟ್ಟೆ ಮತ್ತು ಬಟ್ಟಲುಗಳನ್ನ ನೋಡಿ ನನಗೆ ಮತ್ತೆ ಮತ್ತೆ ಅನ್ನಿಸ್ತಾ ಇತ್ತು. ಈ ತಟ್ಟೆ – ಬಟ್ಟಲುಗಳು ಭಾರತದ ಒಳಿತನ್ನ ಸೂಚಿಸ್ತಿವೆಯೇನೋ ಅನಿಸುತ್ತಿತ್ತು. ನನಗೆ ತಟ್ಟೆ ಭಾರತದಂತೆಯೂ ನೀಲಿ ಬಟ್ಟಲು ಅಂಬೇಡ್ಕರ್ ಸೇನೆಯಂತೆಯೂ ಕೆಂಪು ಬಟ್ಟಲು ಕಮ್ಯುನಿಸ್ಟರಂತೆ. ಈ ಎರಡು ಶಕ್ತಿಗಳು ಈ ದೇಶದಲ್ಲಿ ಒಗ್ಗೂಡಿಬಿಟ್ಟರೆ ಅದರ ಕಥೆಯೇ ಬೇರೆ. ನಮ್ಮ ದೇಶಕ್ಕೆ ಮಾರಾಟಮಾಡುವವರು ಬೇಡ. ಮಾರಾಟಗಾರರನ್ನ ಕಳಿಸಬಿಡೋಣ. ಕೊಡುಕೊಳ್ಳುವಿಕೆಯ ಸೌಹಾರ್ದವನ್ನ ಮೂಡಿಸೋಣ. ಅಂಥ ಸರಕಾರವನ್ನ ರಚಿಸೋಣ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅನ್ನುವ ಮಾತನ್ನ ನಾವು ವಾಸ್ತವದಲ್ಲೂ ನಿಜಗೊಳಿಸೋಣ. ನನಗೆ ಬಲವಾಗಿ ಅನಿಸ್ತಿದೆ, ನಾವಿದನ್ನ ಸಾಧಿಸ್ತೀವಿ. ಖಂಡಿತಾ ಮಾಡಿಯೇಮಾಡ್ತೀವಿ. 

ಬಹಳ ಕಾಲದ ನಂತರ ಜೆ ಎನ್ ಯು ವಿದ್ಯಾರ್ಥಿಯನ್ನ ಜೈಲಿಗೆ ಕಳಿಸಲಾಗಿದೆ. ಹೆಳಿಕೊಳ್ಳುವಂಥ ಅನುಭವಗಳು ಸಾಕಷ್ಟಿದೆ. ಆದರಣೀಯ ಮಾನನೀಯ ಪ್ರಧಾನ ಮಂತ್ರಿಯವರು… ಹಾಗೆಲ್ಲ ಹೇಳಲೇಬೇಕು ತಾನೆ? ನಮ್ಮ ಪ್ರಧಾನಮಂತ್ರಿಯವರು ದೊಡ್ಡ ದೊಡ್ಡ ಮಾತಾಡ್ತಿದ್ದರು. ಒಳ್ಳೆಯ ದಿನಗಳ ಬಗ್ಗೆ ಹೇಳ್ತಿದ್ದರು. ನನಗೆ ಹಾಗೇ ಟೀವಿಯೊಳಗೆ ನುಗ್ಗಿಬಿಡೋಣ ಅನ್ನಿಸ್ತಿತ್ತು. ಮತ್ತು ಅವರ ಸೂಟ್ ಹಿಡಿದೆಳೆದು ಕೆಳಬೇಕನ್ನಿಸ್ತು, “ಮೋದಿ ಜೀ, ಸ್ವಲ್ಪ ಹಿಟ್ಲರನ ಮಾತುಗಳನ್ನಾಡಿ ನೋಡೋಣ!” “ಹಿಟ್ಲರನದು ಬಿಡಿ, ಕರಿ ಟೊಪ್ಪಿ ತೊಡುತ್ತಿದ್ದ ಮುಸೋಲಿನಿಯದಾದರೂ ಮಾತುಗಳನ್ನಾಡಿ ನೋಡೋಣ!! ಅವರನ್ನ ನಿಮ್ಮ ಗುರೂಜಿ ಗೋಳವಾಲ್ಕರ್ ಭೇಟಿ ಮಾಡಲು ಹೋಗಿದ್ದರಲ್ವಾ? ಮತ್ತು ಭಾರತೀಯ ಪರಿಭಾಷೆಯನ್ನು ಜರ್ಮನರಿಂದ ಕಲಿಯಲು ಹೊರಟಿದ್ದರಲ್ವಾ?” ಅಂತೆಲ್ಲ. ಈ ಹಿಟ್ಲರನ ಮಾತು, ಮುಸೋಲಿನಿಯ ಮಾತು, ಪ್ರಧಾನಮಂತ್ರಿಯ ಮಾತು ಇವೆಲ್ಲ ಒಂದೇ ಥರ ಅನಿಸ್ತಿತ್ತು. ಮೋದಿ ಮನ್ ಕಿ ಬಾತ್ - ಮನದ ಮಾತುಗಳನ್ನ ಆಡ್ತಾರೆ ಹೊರತು ಕೇಳಿಸ್ಕೊಳೋದಿಲ್ಲ. 
ಒಂದು ಖಾಸಗಿ ವಿಷಯ. ಇವತ್ತು ಸುಮಾರು ಮೂರು ತಿಂಗಳ ನಂತರ ನನ್ನ ಅಮ್ಮನ ಜೊತೆ ಮಾತಾಡಿದೆ. ಜೆ ಎನ್ ಯುನಲ್ಲಿ ಇರುವಾಗ ನಾನು ಮನೆಗೆ ಕಾಲ್ ಮಾಡೋದು ಕಡಿಮೆ ಇತ್ತು. ಜೈಲಿಗೆ ಹೋದಾಗ ಅನ್ನಿಸ್ತು, ಇನ್ಮೇಲೆ ಆಗಾಗ ಮಾತಾಡ್ತಾ ಇರಬೇಕು ಅಂತ! ನೀವೆಲ್ಲರೂ ಕೂಡ ನಿಮ್ಮ ಮನೆಜನಗಳ ಜೊತೆ ಆಗಾಗ ಮಾತಾಡ್ತಾ ಇರಿ. ನಾನು ಅಮ್ಮಂಗೆ ಹೇಳಿದೆ, ನೀನು ಮೋದಿಯನ್ನ ಒಳ್ಳೆ ಪೀಕಲಾಟಕ್ಕೆ ತಳ್ಳಿದೆ ಅಂತ ಅಮ್ಮ ಹೇಳಿದ್ಲು, “ನಾನು ಪೀಕಲಾಟಕ್ಕೆ ನೂಕಿಲ್ಲ. ಅಂಥ ಕೆಲಸ ಮಾಡೋದು ವಿದೂಷಕರು. ನಗೋದು ನಗಿಸೋದು ಅವರ ಕೆಲಸ. ನಾವು ನಮ್ಮ ನೋವು ಹೇಳಿಕೊಳ್ತೀವಷ್ಟೆ. ಅವರಿಗೆ ನಮ್ಮ ಮಾತು ಅರ್ಥವಾಗೋದಿಲ್ಲ, ಆದ್ದರಿಂದ ನಕ್ಕು ಹಾರಿಸ್ತಾರೆ. ನನ್ನಲ್ಲಿ ನೋವಿತ್ತು. ಆದ್ರಿಂದ್ಲೇ ನಾನು ಹಾಗೆ ಮಾತಾಡಿದೆ. ಮೋದಿ ಕೂಡ ಒಬ್ಬ ತಾಯಿಯ ಮಗ. ನನ್ನ ಮಗನನ್ನು ದೇಶದ್ರೋಹದ ಆಪಾದನೆ ಹೊರೆಸಿ ಜೈಲಿಗೆ ಹಾಕಲಾಗಿದೆ. ಯಾವಾಗಲೂ ಮನದ ಮಾತಾಡ್ತಾರೆ, ಈಗಲಾದರೂ ಒಮ್ಮೆ ಮಾತೆಯ ಮಾತಾಡಲಿ…” ಅಂತ. 

ಅವಳಿಗೆ ಉತ್ತರಿಸಲು ನನ್ನಲ್ಲಿ ಶಬ್ದಗಳಿರಲಿಲ್ಲ. ಈ ದೇಶದಲ್ಲಿ ಬಹಳ ಆತಂಕಕಾರಿಯಾದ ಸಂಗತಿಗಳು ಘಟಿಸ್ತಿವೆ. ಬಹಳ ಸೂಕ್ಷ್ಮವಾಗಿ ಅದು ನಡೀತಿದೆ. ಆದ್ದರಿಂದ ನಾನಿಲ್ಲಿ ಯಾವುದೋ ಒಂದು ಮೀಡಿಯಾ ಚಾನಲ್ ಬಗ್ಗೆ ಮಾತಾಡ್ತಿಲ್ಲ. ಸೈನಿಕರ ಬಗ್ಗೆ ಮಾತಾಡ್ತಿಲ್ಲ. ನಾನು ಇಡೀ ದೇಶದ ಬಗ್ಗೆ ಹೇಳ್ತಿದ್ದೀನಿ. ಇದು ಹೀಗೇ ನಡೆದರೆ ಈ ದೇಶ ಹೇಗಾಗುತ್ತೆ? ಈ ದೇಶದ ಜನ ಏನಾಗ್ತಾರೆ? ಜೆ ಎನ್ ಯು ಜೊತೆ ಯಾರೆಲ್ಲ ನಿಲ್ಲುತ್ತಿದ್ದಾರೋ ಅವರ ಹೆಜ್ಜೆಹೆಜ್ಜೆಗೂ ಸೆಲ್ಯೂಟ್ ಹೊಡೆಯಬೇಕಿದೆ. ಏಕೆಂದರೆ ಅವರಿಗೆ ಒಂದು ಮಾತು ಅರ್ಥವಾಗಿದೆ. ಜೆ ಎನ್ ಯುವಿಗೆ ಎಂಥವರು ಬರುತ್ತಾರೆ ಅನ್ನೋದನ್ನ ಅವರು ಅರ್ಥ ಮಾಡಿಕೊಂಡಿದ್ದಾರೆ. ಇಲ್ಲಿ ಶೇ.60ರಷ್ಟು ಹೆಣ್ಮಕ್ಕಳು ಇದ್ದಾರೆ. ಇಲ್ಲಿ ಮೀಸಲಾತಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗ್ತಿದೆ. ಇಂಥ ಸಂಸ್ಥೆ ಅಪರೂಪದ್ದು. ನನ್ನ ಪರಿವಾರ 3 ಸಾವಿರ ರುಪಾಯಿಗಳಷ್ಟು ದುಡಿಯುತ್ತದೆ. ನನ್ನಂಥವರು ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವಷ್ಟು ಅರ್ಹತೆ ಪಡೆಯಲು ಸಾಧ್ಯವಾ? ಹಾಗಿದ್ದೂ ನಾನಿಲ್ಲಿ ಓದಲು ಸಾಧ್ಯವಾಗಿದೆ. ಆದ್ದರಿಂದಲೇ ನಾನು ದೇಶದ್ರೋಹಿ ಅನ್ನಿಸಿಕೊಳ್ತಿದ್ದೀನಿ. ನನ್ನ ಬೆಂಬಲಕ್ಕೆ ನಿಂತ ಸಿತಾರಾಮ್ ಯೆಚೂರಿಯವರನ್ನೂ ದೇಶದ್ರೋಹಿ ಅನ್ನಲಾಗ್ತಿದೆ. ರಾಹುಲ್ ಗಾಂಧಿ, ರಾಜಾ ಮೊದಲಾದವರನ್ನೂ ನನ್ನ ಜೊತೆ ದೇಶದ್ರೋಹಿ ಅಂತ ಕರೆಯಲಾಗ್ತಿದೆ. ಜೆ ಎನ್ ಯು ಪರವಾಗಿ ನಿಂತವರೆಲ್ಲರನ್ನೂ, ಮೀಡಿಯಾದವರನ್ನೂ… ನಮ್ಮ ಪರವಾಗಿ ನಿಂತವರು ಅನ್ನೋದಕ್ಕಿಂತ ಸರಿಯಾದುದರ ಪರ ನಿಂತವರನ್ನು ಮತ್ತು ತಪ್ಪನ್ನು ತಪ್ಪೆಂದು ಖಂಡಿಸಿದವರನ್ನು ದೇಶದ್ರೋಹಿಗಳೆಂದು ಕರೆಯಲಾಗ್ತಿದೆ, ನಿಂದಿಸಿ ಬೆದರಿಕೆ ಹಾಕಲಾಗ್ತಿದೆ. 

ನೀನು ನಿಜವಾಗಿ ಘೋಷಣೆ ಕೂಗಿದೆಯೇನು ಅಂತ ಸಿಪಾಯಿ ಕೇಳಿದ. ನಾನು ಹೌದು ಅಂದೆ. ಅದರಲ್ಲಿ ತಪ್ಪೇನಿದೆ ಅಂತ ಕೇಳಿದೆ. ಹಾಗೇ ನಾನು ಘೋಷಣೆ ಕೂಗಿದ್ದೇನು ಅಂತಲೂ ವಿವರಿಸಿದೆ. ಈ ಸರ್ಕಾರ ಬಂದು 2 ವರ್ಷಗಳಾದವು. ಇನ್ನೂ 3 ವರ್ಷ ಸಹಿಸಬೇಕು. ಅಷ್ಟು ಬೇಗ ಸಹನೆ ಕಳೆದುಕೊಳ್ಳುವಂತಿಲ್ಲ. ಈ ದೇಶದ 69% ಜನ ಅವರ ವಿರುದ್ಧ ಮತ ನೀಡಿದ್ದಾರೆ. ಇದನ್ನ ನಾವು ನೆನಪಿಟ್ಟುಕೊಳ್ಬೇಕು. 

ನೂರು ಸಲ ಸುಳ್ಳನ್ನ ಸುಳ್ಳು ಅಂದು ಸಾಧಿಸಬಹುದು. ಆದರೆ ಇದು ಸುಳ್ಳಿನ ಜೊತೆ ಮಾತ್ರ ಸಾಧ್ಯ, ನಿಜದ ಜೊತೆ ಸಾಧ್ಯವಾಗೋದಿಲ್ಲ. ನೂರು ಸಲ ಸೂರ್ಯನನ್ನ ಚಂದ್ರ ಚಂದ್ರ ಅನ್ತಾ ಇದ್ದರೆ ಅದು ಚಂದ್ರವಾಗಿಬಿಡುತ್ತೇನು? ಸಾವಿರ ಸಲ ಹೇಳಿದರೂ ಅದು ಸೂರ್ಯನಾಗೇ ಇರುತ್ತೆ. ನೀವು ಸುಳ್ಳನ್ನಷ್ಟೆ ಸುಳ್ಳಾಗಿರಿಸಬಲ್ಲಿರಿ ಹೊರತು ಸತ್ಯವನ್ನು ಸುಳ್ಳಾಗಿಸಲಾರಿರಿ. ನೀವು ಸಂಸತ್ತಿನ ಒಳಗೆ ಏನೆಲ್ಲ ಪ್ರಸ್ತಾಪಗಳನ್ನಿಡ್ತೀರಿ, ಜನರ ಮನಸ್ಸು ಅತ್ತ ತಿರುಗದಂತೆ ಮಾಡಲು ಸುಳ್ಳುಗಳನ್ನ ಹೇರುತ್ತೀರಿ. ಇಲ್ಲಿ ಆಕ್ಯುಪೈ ಯುಜಿಸಿ ಚಳವಳಿ ನಡೀತಿತ್ತು, ಅಲ್ಲಿ ರೋಹಿತನ ಹತ್ಯೆಯಾಯ್ತು. ರೋಹಿತನಿಗಾಗಿ ಜೆ ಎನ್ ಯು ದನಿ ಎತ್ತಿದರೆ, “ನೋಡಿ! ನೋಡಿ!! ಎಂಥಾ ದೇಶದ್ರೋಹ! ಜೆ ಎನ್ ಯು ರಾಷ್ಟ್ರದ್ರೋಹಿಗಳ ಅಡ್ಡೆಯಾಗ್ಬಿಟ್ಟಿದೆ” ಅಂತ ಕಥೆ ಕಟ್ಟಲಾಯ್ತು. ಇದು ಕೂಡ ಜಾಸ್ತಿ ದಿನ ನಡೆಯೋದಿಲ್ಲ. ಹೊಸ ತಯಾರಿ ಮಾಡ್ಕೊಳ್ಳಿ. ರಾಮಮಂದಿರ ಮಾಡಿ. 

ಇವತ್ತಿನ ಕತೆ ಹೇಳ್ತೀನಿ. ಜೈಲಿಂದ ಹೊರಡೋ ಮುಂಚೆ ಒಬ್ಬ ಸಿಪಾಯಿ ಮಾತಿಗೆ ಸಿಕ್ಕ. “ಧರ್ಮವನ್ನ ನಂಬ್ತೀಯಾ?” ನಾನೇಳಿದೆ, “ನನಗೆ ಹಾಗೆಂದರೇನು ಅಂತಲೇ ಗೊತ್ತಿಲ್ಲ”. ಮೊದಲು ಹಾಗಂದರೇನು ಅಂತ ಗೊತ್ತಾದರೆ ತಾನೆ ನಂಬುವ ಕೆಲಸ? “ಯಾವುದಾದ್ರೂ ಪರಿವಾರದಲ್ಲಂತೂ ಹುಟ್ಟೀರ್ತೀಯ!?” “ಹೌದು. ಪವಾಡವೆಂಬಂತೆ ಹಿಂದೂ ಪರಿವಾರದಲ್ಲಿ ಹುಟ್ಟಿಕೊಂಡಿದ್ದೀನಿ”. “ಈ ಬ್ರಹ್ಮಾಂಡವನ್ನ ಭಗವಂತ ಸೃಷ್ಟಿ ಮಾಡಿದಾನೆ. ಸೃಷ್ಟಿಯ ಕಣಕಣದಲ್ಲೂ ಭಗವಂತ ಇದ್ದಾನೆ. ಈ ಮಾತಿಗೆ ನೀನೇನು ಹೆಳ್ತೀ?” “ಖಂಡಿತಾ. ಎಲ್ಲರಲ್ಲೂ ಎಲ್ಲದರಲ್ಲೂ ಭಗವಂತ ಇರಬಹುದು. ಆದರೆ ಇಂಥಾ ಭಗವಂತನಿಗೂ ಒಂದು ಮಂದಿರ ಕಟ್ಟಿಸಿ ಇಡೋಕೆ ಕೆಲವರು ಪರದಾಡ್ತಿದ್ದಾರೆ. ಅಂಥವರ ಬಗ್ಗೆ ನೀನೇನು ಹೇಳ್ತೀ?” “ಬಹಳ ಕೆಟ್ಟ ಯೋಚನೆ ಇದು!” ಅವನಂದ. ಹೀಗೆ ಯೋಚಿಸುವ ಜನರನ್ನೂ ಅವರು ಪ್ರಚೋದಿಸ್ತಾರೆ. ಈ ದೇಶದೊಳಗೆ ಸದಾ ಪ್ರಕ್ಷುಬ್ಧತೆ ಇರಲೆಂದು ಅವರ ಬಯಸುತ್ತಾರೆ. 

ನೀವಿವತ್ತು ಇಲ್ಲಿ ಕುಳಿತಿದ್ದೀರಲ್ಲ, ನಿಮಗನ್ನಿಸ್ತಿದೆ ತಾನೆ, ನಿಮ್ಮ ಮೇಲೆ ದೊಡ್ಡದೊಂದು ದಾಳಿ ನಡೆದಿದೆ ಅಂತ? ಆದರೆ ಈ ದಾಳಿ ಹೊಸತಲ್ಲ. ಇದು ಈಗಿನದ್ದೂ ಅಲ್ಲ. ನಿಮಗೆ ನೆನಪಿದೆಯಾ, ಆರೆಸ್ಸೆಸ್ಸಿನ ಮುಖವಾಣಿ ಆರ್ಗನೈಸರಿನಲ್ಲಿ ಜೆ ಎನ್ ಯು ಕುರಿತು ಕವರ್ ಸ್ಟೋರಿ ಮಾಡಲಾಗಿತ್ತು. ಸ್ವಾಮೀಜಿ ಜೆ ಎನ್ ಯು ಕುರಿತು ಸಾಕ್ಷ್ಯ ಹೆಳಿದ್ದರು. ಆದರೆ ನನಗೆ ಸಂವಿಧಾನದ ಮೇಲೆ ಭರವಸೆ ಇದೆ. ನನ್ನ ಎಬಿವಿಪಿ ಗೆಳೆಯರಿದ್ದರೆ ಕೇಳಿಸಿಕೊಳ್ಳಲಿ, ಒಂದು ಬಾರಿ ಆ ಸ್ವಾಮೀಜಿಯನ್ನು ಕರೆತರಲಿ. ಮುಖಾಮುಖಿಯಾಗಿ ಮಾತಿಗೆ ಕೂರಿಸಲಿ. ನಾವು ಸೋಲಿಸ್ತೀವಿ. ತಾರ್ಕಿಕವಾಗಿಯೇ ಸೋಲಿಸ್ತೀವಿ, ಕುತರ್ಕದಿಂದಲ್ಲ. ಹಾಗೇ ಅವರು ಕೂಡ ಜೆ ಎನ್ ಯುವನ್ನು ನಾಲ್ಕು ತಿಂಗಳ ಕಾಲ ಬಂದ್ ಮಾಡಬೇಕು ಅಂತ ತಾರ್ಕಿಕವಾಗಿಯೇ ಒಪ್ಪಿಸಲು ಸಫಲರಾದರೆ, ನಾನು ಅವರ ಪಾದಸೇವಕನಾಗ್ತೀನಿ. ಅವರಿಂದ ಸಾಧ್ಯವಾಗದೆ ಹೋದರೆ, ನಾನು ಅವರಲ್ಲಿ ಬಿನ್ನವಿಸಿಕೊಳ್ತೀನಿ, “ಮೊದಲು ಹೇಗೆ ನೀವು ಈ ದೇಶದಿಂದ ಹೊರಗಿರ್ತಿದ್ದರೋ ಈಗಲೂ ಹಾಗೇ ಹೊರಟುಹೋಗಿ” ಅಂತ. 

ನಿಮಗೆ ಇನ್ನೊಂದು ಮಜದ ವಿಷಯ ಹೇಳಲಿಕ್ಕಿದೆ. ನೀವೆಲ್ಲ ಕ್ಯಾಂಪಸ್ಸಿನ ಒಳಗಿದ್ದುದರಿಂದ ನಿಮ್ಮ ಕಣ್ಣಿಗೆ ಬೀಳದೆ ಹೋಗಿರಬಹುದು. ಎಂಥಾ ಯೋಜನೆ ರೂಪಿಸ್ಕೊಂಡಿದ್ದರು… ಮೊದಲ ದಿನದಿಂದಲೂ ಪ್ರತಿಯೊಂದನ್ನೂ ಯೋಜಿತವಾಗಿಯೇ ನಡೆಸಿದ್ದರು. ಇಷ್ಟೆಲ್ಲ ತಲೆಕೆಡಿಸಿಕೊಂಡು ಪ್ಲಾನ್ ಮಾಡಬಾರದಿತ್ತು ಗೆಳೆಯರೇ! ಪೋಸ್ಟರ್ ಕೂಡ ಬದಲಿಸೊದಿಲ್ಲ ನೀವು!ಯಾವ ಸ್ಲೋಗನ್ ಇಟ್ಟುಕೊಂಡು, ಹ್ಯಾಂಡ್ ಬಿಲ್ ಇಟ್ಟುಕೊಂಡು ಹಿಂದೂಕ್ರಾಂತಿ ಸೇನೆ ಗಲಭೆ ನಡೆಸುತ್ತದೆಯೋ ಅದೇ ಸ್ಲೋಗನ್ ಇಟ್ಟುಕೊಂಡು ಎಬಿವಿಪಿ ಕೂಡ ಹೋರಾಡುತ್ತದೆ. ಅವೇ ಎಲ್ಲ ಪರಿಕರಗಳನ್ನು, ಘೋಷಣೆಗಳನ್ನು ಇಟ್ಟುಕೊಂಡು ಮಾಜಿ ಯೋಧರೊಂದಷ್ಟು ಜನ ಪ್ರತಿಭಟನೆಗೆ ಇಳಿಯುತ್ತಾರೆ. ಇದರರ್ಥ ಇವರೆಲ್ಲರ ಕಾರ್ಯಕ್ರಮಗಳನ್ನು ಒಮ್ಮೆಗೇ ನಾಗ್ಪುರದಲ್ಲಿ ಯೋಜಿಸಲಾಗಿರುತ್ತದೆ! ಅವರಾಡೋದೆಲ್ಲ ದೊಡ್ಡ ದೊಡ್ಡ ಮಾತುಗಳು. ಅಬ್ಬರದ ಮಾತುಗಳು. ಈ ದೇಶದ ಸಂಘರ್ಷವನ್ನ, ಪ್ರತಿಭಟನೆಯ ದನಿಯನ್ನ ಹೊಸಕಿಹಾಕುವಂಥ ಮಾತುಗಳು. ಈ ದೇಶದ ಜನರು ತಮ್ಮ ಜೀವನದ ಅಗತ್ಯಗಳಿಗಾಗಿ ಎತ್ತುವ ಪ್ರಶ್ನೆಗಳ, ನಡೆಸುವ ಚಿಂತನೆಗಳ ದಿಕ್ಕುತಪ್ಪಿಸುವ ಮಾತುಗಳು. ಅದೇ ಜೆ ಎನ್ ಯುನಲ್ಲಿಯೂ ದೊಡ್ಡ ದೊಡ್ಡ ಪ್ರಶ್ನೆಗಳಿವೆ. ನಾವು ಈ ಹೇರಲಾಗುವ ಭಾರದ ಮಾತುಗಳನ್ನ ಪ್ರಶ್ನಿಸ್ತೀವಿ. ನನ್ನ, ಉಮರನ, ಅನಿರ್ಬಾಣ್, ಆಶುತೋಶ್, ನಾಗ, ಶೆಹ್ಲಾ, ಯಾರೇ ಇರಲಿ ನಮ್ಮೆಲ್ಲರ ಗಂಟಲೊತ್ತುವ ಪ್ರಯತ್ನ ಅದೆಷ್ಟು ಮಾಡಿದರೂ ಅಷ್ಟೇ, ನಮ್ಮ ಸಂಘರ್ಷ ಮುಗಿಸಿಬಿಡಲು ಎಷ್ಟು ಹೆಣಗಾಡಿದರೂ ಅಷ್ಟೇ, ನಾವು ಹೋರಾಟದಿಂದ ಹಿಂದೆ ಸರಿಯೋದಿಲ್ಲ. ಸರಿಯಾಗಿ ಕೇಳಿಸಿಕೊಳ್ಳಿ, ನೀವೆಷ್ಟೋ ದಬ್ಬಿದರೂ ನಾವು ಮತ್ತೆಮತ್ತೆ ಎದ್ದುಬರುತ್ತೀವಿ. ನಮ್ಮ ಸಂಘರ್ಷವನ್ನು ನೀವು ಅದುಮಿಹಾಕಲು ಸಾಧ್ಯವಿಲ್ಲ. ನೀವೆಷ್ಟು ದಬ್ಬುತ್ತೀರೋ ನಾವು ಅಷ್ಟೇ ಪುಟಿದು ಬರುತ್ತೇವೆ. ಅಷ್ಟೇ ತೀವ್ರವಾಗಿ ಹೋರಾಟ ಮುಂದುವರೆಸುತ್ತೇವೆ. 

ಇದು ಸುದೀರ್ಘ ಕದನ. ಎಲ್ಲಿಯೂ ನಿಲ್ಲದೆ, ಯಾರಿಗೂ ಬಾಗದೆ, ಉಸಿರು ಬಿಗಿಹಿಡಿದು ನಾವು ಇದನ್ನು ಮುನ್ನಡೆಸಬೇಕು. ಮತ್ತು ಈ ಕ್ಯಾಂಪಸ್ ಒಳಗಿನ ವಿಧ್ವಂಸಕ ಚಿಂತನೆಯ ಎಬಿವಿಪಿ ಜನರು, ಕ್ಯಾಂಪಸ್ ಹೊರಗಿನ ಈ ದೇಶವನ್ನು ಬರಬಾದ್ ಮಾಡಲು ಹವಣಿಸ್ತಿರುವ ಭಾಜಪದ ಜನರು ಅದ್ಯಾರೇ ಇದ್ದರೂ ನಾವು ಅವರೆಲ್ಲರ ವಿರುದ್ಧ ಒಗ್ಗಟ್ಟಿನಿಂದ ಎದ್ದು ನಿಲ್ಲುತ್ತೇವೆ. ಜೆ ಎನ್ ಯು ಎದ್ದು ನಿಲ್ಲುತ್ತದೆ. ಜೆ ಎನ್ ಯು ಗಾಗಿ ಶುರುವಾದ ಈ ಹೋರಾಟ, ರೋಹಿತ್ ವೇಮುಲಾನ ಸಾವಿನ ನ್ಯಾಯಕ್ಕಾಗಿ ಶುರುವಾದ ಈ ಹೋರಾಟ, ನಿಮ್ಮೆಲ್ಲರ ಕಳಕಳಿಯಿಂದ ಶುರುವಾದ ಈ ಹೋರಾಟ, ಈ ದೇಶದ ಸೌಹಾರ್ದ ಜೀವಿಗಳು, ಪ್ರಗತಿಪರರು ಶುರುಮಾಡಿದ ಈ ಹೋರಾಟವೇನಿದೆ, ಈ ಹೋರಾಟವನ್ನು ನಾವು ನಡೆಸ್ತೀವಿ, ಗೆದ್ದೇಗೆಲ್ತೀವಿ. ಇದು ನಮ್ಮ ವಿಶ್ವಾಸ. 

*** 

ಕನ್ಹಯ್ಯನ ‘ಆಜಾದಿ ಕಾ ನಾರಾ’:

ಮನುವಾದದಿಂದ ಆಜಾದಿ

ಬ್ರಾಹ್ಮಣ್ಯವಾದದಿಂದ ಆಜಾದಿ

ಸಾಮ್ರಾಜ್ಯವಾದದಿಂದ ಆಜಾದಿ

ಅಸ್ಪೃಶ್ಯತೆಯಿಂದ ಆಜಾದಿ
ಜಾತಿಪದ್ಧತಿಯಿಂದ ಆಜಾದಿ

ಕೋಮುವಾದದಿಂದ ಆಜಾದಿ
ಭಯೋತ್ಪಾದನೆಯಿಂದ ಆಜಾದಿ
ಫ್ಯಾಸಿಸ್ಟ್ ವಾದದಿಂದ ಆಜಾದಿ
ಬಂಡವಾಳಶಾಹಿಯಿಂದ ಆಜಾದಿ
ಹಸಿವಿನಿಂದ ಆಜಾದಿ

ಅನಾರೋಗ್ಯದಿಂದ ಆಜಾದಿ
ಅನಕ್ಷರತೆಯಿಂದ ಆಜಾದಿ

ನಿರುದ್ಯೋಗದಿಂದ ಆಜಾದಿ
ಲಿಂಗ ಅಸಮಾನತೆಯಿಂದ ಆಜಾದಿ
ಶೋಷಣೆ-ವಂಚನೆ ಅನ್ಯಾಯಗಳಿಂದ ಆಜಾದಿ