Oct 31, 2016

ಲೋಕಸಭೆ ಮತ್ತು ವಿದಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ - ಸಾಧಕ ಬಾಧಕಗಳು: ಒಂದು ವಿಶ್ಲೇಷಣೆ.

ಕು.ಸ.ಮಧುಸೂದನ್ ರಂಗೇನಹಳ್ಳಿ
ಲೋಕಸಭೆ ಮತ್ತು ದೇಶದ ಎಲ್ಲಾ ರಾಜ್ಯಗಳ ವಿದಾನಸಭೆಗಳಿಗೆ ಏಕಕಾಲದಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸುವುದು ಸೂಕ್ತವೆಂಬ ಶಿಫಾರಸ್ಸನ್ನು ಕೇಂದ್ರ ಚುನಾವಣಾ ಆಯೋಗವು ಕಾನೂನು ಸಚಿವಾಲಯಕ್ಕೆ ನೀಡುವುದರ ಮೂಲಕ ಈ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆಗೆ, ಮತ್ತೊಂದಿಷ್ಟು ವಿವಾದಗಳಿಗೆ ನಾಂದಿ ಹಾಡಿದೆ. ಈ ಹಿಂದೆ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಸಹ ಇಂತಹದೊಂದು ಅನಿಸಿಕೆಯನ್ನು ಸಾರ್ವಜನಿಕವಾಗಿಯೇ ಹೇಳಿದ್ದರು. ಆದರೆ ಅದರ ಹಿಂದೆ ಇರಬಹುದಾದ ರಾಜಕೀಯ ಕಾರಣಗಳನ್ನು ಮನಗಂಡವರ್ಯಾರೂ ಅದರ ಬಗ್ಗೆ ಅಷ್ಟೊಂದು ಗಂಬೀರವಾಗೇನು ಚರ್ಚೆ ಮಾಡಲು ಹೋಗಲಿಲ್ಲ. ಆದರೆ ಇದೀಗ ಚುನಾವಣಾ ಆಯೋಗವೇ ಇಂತಹದೊಂದು ವಿಷಯವನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸುತ್ತ, ಕಾನೂನು ಇಲಾಖೆಗೆ ಈ ಬಗ್ಗೆ ತನ್ನ ಒಪ್ಪಿಗೆಯನ್ನು ಸೂಚಿಸಿರುವುದರಿಂದ ಏಕಕಾಲದ ಚುನಾವಣೆಯ ವಿಷಯವನ್ನು ಚರ್ಚಿಸಲೇ ಬೇಕಾದ ಅನಿವಾರ್ಯತೆ ಬಂದೊದಗಿದೆ. ಆದರೆ ಇದಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸರ್ವಾನುಮತದ ಒಪ್ಪಿಗೆಯೂ ಬೇಕೆಂಬ ಮಾತನ್ನೂ ಆಯೋಗವು ಒತ್ತಿ ಹೇಳಿದೆ.

Oct 28, 2016

ಮೇಕಿಂಗ್ ಹಿಸ್ಟರಿ: ನಗರದ ರೈತಾಪಿ ಬಂಡಾಯ ಭಾಗ 2

Saketh rajan
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಇ. ಮೊದಲ ಅಲೆ: ಕೂಟವೆಂಬ ಸಾಮೂಹಿಕ ಎಚ್ಚರಿಕೆ 
ಹೋರಾಟವು ಮೂರು ಅಲೆಗಳಾಗಿ ನಡೆಯಿತು. ಮೊದಲನೆಯದು ಸಾಮೂಹಿಕ ಚಳುವಳಿ; ಎರಡನೆಯದು ಸಾಮೂಹಿಕ ಕಾರ್ಯ, ಮತ್ತು; ಮೂರನೆಯದರಲ್ಲಿ ಸಶಸ್ತ್ರ ಹೋರಾಟ ಪ್ರಮುಖವಾಗಿತ್ತು. 

ಸಾಮೂಹಿಕ ಚಳುವಳಿ ಮತ್ತು ಹೋರಾಟಗಳು 1830ರ ಮೊದಲ ಭಾಗದಲ್ಲೇ ಪ್ರಾರಂಭವಾಯಿತು ಮತ್ತು ಹಲವಾರು ರೂಪಗಳನ್ನು ಪಡೆಯಿತು. ಇವೆಲ್ಲವುಗಳಲ್ಲಿ ಪ್ರಮುಖವಾಗಿದ್ದದ್ದು ಕೂಟ ಅಥವಾ ಸರಳವಾಗಿ ಹೇಳಬೇಕೆಂದರೆ ಜೊತೆ ಸೇರುವಿಕೆ. ಕೂಟದಲ್ಲಿ ಜೊತೆಯಾದ ಕಾರಣದಿಂದ ಸಾಮೂಹಿಕ ಎಚ್ಚರ ಹೊತ್ತಿಕೊಂಡಿತು, ಇದು ಜನಸಮೂಹವನ್ನು ಸಂಘಟತಿರಾಗಿಸುವುದಕ್ಕಿದ್ದ ವಿಶಾಲ ವೇದಿಕೆ. ನಗರದ ಕ್ರಾಂತಿಯ ಸಮಯದಲ್ಲಿ ಕೂಟವು ಸ್ವಾಭಾವಿಕವಾಗಿ ರೂಪುಗೊಂಡಿತು ಎಂದು ತೋರುತ್ತದೆಯಾದರೂ, ಶ್ಯಾಮ ಭಟ್ಟರು ಕರಾವಳಿಯಲ್ಲಿ ನಡೆಸಿರುವ ಅಧ್ಯಯನವು ಕೂಟ ರಚನೆಯು ಕರ್ನಾಟಕದಲ್ಲಿ ಪುರಾತನವಾಗಿದ್ದ ಒಂದು ಪದ್ಧತಿ ಮತ್ತು ಸಾಮಾನ್ಯ ವಿಚಾರವೆಂದು ತಿಳಿದುಬರುತ್ತದೆ. ಹೋರಾಟಗಳು ಸ್ವಾಭಾವಿಕವಾಗಿದ್ದಿರಬಹುದು, ಕೂಟಗಳ ರಚನೆ ತುಂಬ ಅಭಿವೃದ್ಧಿಗೊಂಡ ಪದ್ಧತಿಯಾಗಿತ್ತು. ಇದೇನನ್ನು ತೋರಿಸುತ್ತದೆಯೆಂದರೆ, ರೈತಾಪಿ ವರ್ಗವು ತನ್ನ ವರ್ಗ ಹೋರಾಟದ ದೀರ್ಘೇತಿಹಾಸದಲ್ಲಿ ಮತ್ತು ಬಂಡಾಯಗಳಲ್ಲಿ, ಊಳಿಗಮಾನ್ಯತೆ ವಿರೋಧಿ ಹೋರಾಟದ ಇತಿಹಾಸದ ಭಾಗವಾಗಿ, ಅಳವಡಿಸಿಕೊಂಡಿದ್ದ ಚಳುವಳಿಯ ರೂಪಗಳು ಈ ಹೊಸ ಕಾಲಘಟ್ಟದಲ್ಲೂ ಮುಂದುವರೆಯಿತು ಮತ್ತು ಅದೇ ಸಮಯದಲ್ಲಿ ವಸಾಹತುಶಾಹಿಯನ್ನು ಪ್ರಶ್ನಿಸಲಾರಂಭಿಸಿತು. 

Oct 26, 2016

ಇಂಡಿಯಾದ ಪ್ರಜಾಪ್ರಭುತ್ವದ ಎರಡು ಮುಖ್ಯ ಸಮಸ್ಯೆಗಳು: ಜಾಗತೀಕರಣ ಮತ್ತು ಭಯೋತ್ಪಾದಕತೆ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ 
ಇಂಡಿಯಾದ ಪ್ರಜಾಪ್ರಭುತ್ವಕ್ಕೀಗ ಸರಿ ಸುಮಾರು ಅರವತ್ತೇಳರ ಹರಯ! ಎರಡನೆಯ ಮಹಾಯುದ್ದ ಮುಗಿದ ಕೆಲವೇ ವರ್ಷಗಳಲ್ಲಿ ನಾವು ಪಡೆದ ಸ್ವಾತಂತ್ರ ಇಂಡಿಯಾದ ಜನರಿಗೆ ಪ್ರಜಾಪ್ರಭುತ್ವದಲ್ಲಿ ಬಾಗವಹಿಸುವ ಸೌಭಾಗ್ಯವನ್ನು ಕಲ್ಪಿಸಿದ್ದು ಅಂದಿನ ರಾಷ್ಟ್ರ ನಾಯಕರುಗಳ ಹಿರಿಮೆಯೆಂದೇ ಹೇಳಬೇಕು. ಯಾಕೆಂದರೆ ಅದಾಗ ತಾನೇ ವಿಶ್ವದ ಪಾಲಿಗೆ ಸಿಂಹಸ್ವಪ್ನರಾಗಿ, ಸರ್ವಾಧಿಕಾರಿಗಳಾಗಿದ್ದ ಜರ್ಮನಿಯ ಅಡಾಲ್ಫ್ ಹಿಟ್ಲರ ಮತ್ತುಇಟಲಿಯ ಮುಸಲೋನಿಯವರ ಅಂತ್ಯವಾಗಿದ್ದರೂ ಅವರು ಬಿತ್ತಿಹೋಗಿದ್ದ ರಾಷ್ಟ್ರೀಯವಾದಗಳಾಗಲಿ, ಜನಾಂಗೀಯ ಶ್ರೇಷ್ಠತೆಯ ವ್ಯಸನಗಳಾಗಲಿ ಜನತೆಯ ಮನಸ್ಸಿಂದ ಪೂರ್ಣವಾಗಿ ಮರೆಯಾಗಿರಲಿಲ್ಲ. ಇದರ ಜೊತೆಗೆ ಅಂದಿನ ವಿಶ್ವದ ಪ್ರಬಲ ಶಕ್ತಿಶಾಲಿ ರಾಷ್ಟ್ರವಾಗಿದ್ದ ಸೋವಿಯತ್ ಯೂನಿಯನ್ ಕಮ್ಯುನಿಸ್ಟ್ ಆಡಳಿತಕ್ಕೆ ಒಳಪಟ್ಟಿದ್ದು, ಪ್ರಪಂಚದ ಇತರೇ ರಾಷ್ಟ್ರಗಳಲ್ಲಿಯೂ ಕಮ್ಯುನಿಸ್ಟ್ ಸರಕಾರಗಳನ್ನು ಸ್ಥಾಪಿಸುವ ಪ್ರಯತ್ನದಲ್ಲಿತ್ತು. ಇಂಡಿಯಾದ ಆಚೆಗೆ ಇಂತಹ ಫ್ಯಾಸಿಸ್ಟ್ ಸಿದ್ದಾಂತಗಳು, ಕಮ್ಯುನಿಸ್ಟ್ ಸಿದ್ದಾಂತಗಳು ಪ್ರಬಲವಾಗಿದ್ದ ಕಾಲದಲ್ಲಿ ಇಂಡಿಯಾದಂತಹ ಬಹುಮುಖ ಸಂಸ್ಕೃತಿಯ ರಾಷ್ಟ್ರವೊಂದು ಇವ್ಯಾವುದರ ಪ್ರಬಾವಕ್ಕೂ ಒಳಗಾಗದೆ ತನ್ನನ್ನು ಆಳುತ್ತಿದ್ದ ವಸಾಹತುಶಾಹಿ ರಾಷ್ಟ್ರವಾದ ಇಂಗ್ಲೇಂಡಿನ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪ್ಪಿಕೊಂಡಿದ್ದು ವಿಶೇಷವೇ ಸರಿ. ಈ ವಿಷಯದಲ್ಲಿ ನಾವು ಒಂದು ಹಂತದವರೆಗೂ ಅದೃಷ್ಠಶಾಲಿಗಳೇ ಸರಿ. ಅಕಸ್ಮಾತ್ ಅಂದು ಈ ಪ್ರಜಾಪ್ರಭುತ್ವ ಶೈಲಿಯನ್ನು ಒಪ್ಪಿಕೊಳ್ಳದೇ ಹೋಗಿದ್ದಲ್ಲಿ ಇವತ್ತು ಇಂಡಿಯಾ ದೇಶ ಒಂದು ಸಮಗ್ರ,ಸಾರ್ವಭೌಮ ರಾಷ್ಟ್ರವಾಗಿ ಬದುಕುಳಿಯಲು ಸಾದ್ಯವಿರಲಿಲ್ಲ.

Oct 25, 2016

ಬಲಾಢ್ಯ ರಾಜಕೀಯ ಶಕ್ತಿಯಾಗಬೇಕಿರುವ ಕನ್ನಡಬಾಷಿಕ ಸಮುದಾಯ ಮತ್ತು ಕನ್ನಡ ಚಳುವಳಿ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ನಿಜವಾದ ಅರ್ಥದಲ್ಲಿ ಇವತ್ತು ಕನ್ನಡ ಚಳುವಳಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಂತೆ ಕಾಣುತ್ತಿವೆ. ಇಂತಹ ಚಳುವಳಿಗಳ ಆತ್ಮವಾಗಿರಬೇಕಾಗಿದ್ದ ಅಕ್ಷರಸ್ಥ ಮದ್ಯಮವರ್ಗ ಸ್ವತ: ಜಡಗೊಂಡಿರುವ ಈ ಸನ್ನಿವೇಶದಲ್ಲಿ ನಮ್ಮ ಕನ್ನಡ ಚಳುವಳಿ ಸಹ ನಿಸ್ತೇಜಗೊಂಡಂತೆ ನಮಗೆ ಬಾಸವಾಗುತ್ತಿದ್ದರೆ ಅಚ್ಚರಿಯೇನಲ್ಲ. ಇಂತಹ ನಿರಾಶಾದಾಯಕ ಸನ್ನಿವೇಶದಲ್ಲಿಯೂ ಕನ್ನಡ ಚಳುವಳಿಯ ಕುರಿತು ಒಂದಿಷ್ಟು ಆಶಾಬಾವನೆ ಒಡಮೂಡಿದ್ದು ಇತ್ತೀಚೆಗೆ ನಡೆದ ಕಳಸಾಬಂಡೂರಿ ಮತ್ತು ಕಾವೇರಿ ನದಿ ನೀರಿನ ಹಂಚಿಕೆಯ ವಿವಾದಗಳ ಬಗ್ಗೆ ನಡೆದ ಹೋರಾಟದ ಕ್ಷಣದಲ್ಲಿ ಮಾತ್ರ.

Oct 24, 2016

ರಾಮಾ ರಾಮಾ ರೇ: ಹುಟ್ಟು ಸಾವಿನ ನಡುವಿನ ಬದುಕಿನ ಪಯಣ.

ಡಾ. ಅಶೋಕ್. ಕೆ. ಆರ್.
ಸಂಪಿಗೆಯಂಥ ಸಂಪಿಗೆ ಥೀಯೇಟರ್ರಿನ ಬಾಲ್ಕಾನಿ ಹೆಚ್ಚು ಕಡಿಮೆ ಪೂರ್ತಿ ತುಂಬಿಹೋಗಿತ್ತು. ಈ ರೀತಿ ತುಂಬಿ ಹೋಗಿದ್ದಕ್ಕೆ ಕಾರಣ ಸಾಮಾಜಿಕ ಜಾಲತಾಣಗಳು ಎಂದರದು ಉತ್ಪ್ರೇಕ್ಷೆಯಲ್ಲ. ಪ್ರಚಾರವಿರಲಿ, ಶುಕ್ರವಾರದ ಪತ್ರಿಕೆಗಳಲ್ಲಿ ಜಾಹೀರಾತನ್ನೂ ನೀಡದ ರಾಮಾ ರಾಮಾ ರೇ ಚಿತ್ರ ಸಾಮಾಜಿಕ ಜಾಲತಾಣಗಳಿಲ್ಲದ ಸಮಯದಲ್ಲಿ ಬಿಡುಗಡೆಗೊಂಡಿದ್ದರೆ ಒಂದೇ ದಿನಕ್ಕೆ ಚಿತ್ರಮಂದಿರಗಳಿಂದ ಮರೆಯಾಗಿಬಿಡುತ್ತಿತ್ತು. ಸಾಮಾಜಿಕ ಜಾಲತಾಣಗಳು ಜನರನ್ನೇನೋ ಚಿತ್ರಮಂದಿರಕ್ಕೆ ಸೆಳೆದು ತಂದಿದೆ, ಅವರಿಗೆ ತಲುಪಿದೆಯಾ? ಹೇಳುವುದು ಕಷ್ಟ. ಇಂಟರ್ವೆಲ್ಲಿನಲ್ಲಿ ‘ಯಾವ್ದಾರಾ ನಾರ್ಮಲ್ ಪಿಚ್ಚರ್ರಿಗೆ ಕರ್ಕೊಂಡ್ ಹೋಗು ಅಂದ್ರೆ ಇದ್ಯಾವ ಫಿಲಮ್ಮಿಗೆ ಕರ್ಕಂಡ್ ಬಂದಪ್ಪ’ ‘ಮನೇಲಿ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಬರ್ತಿತ್ತು. ಅಲ್ಲೇ ಇದ್ದಿದ್ರೆ ಆಗಿರಾದು’ ಅನ್ನೋ ಮಾತುಗಳು ಕೇಳಿಬಂದರೆ ಚಿತ್ರ ಮುಗಿದ ನಂತರ ‘ಫಸ್ಟ್ ಆಫ್ ಸ್ವಲ್ಪ ಬೋರು ಸೆಕೆಂಡ್ ಆಫ್ ಅದ್ಭುತ’ ಅನ್ನುವಂತಹ ಮಾತುಗಳು! ಇಪ್ಪತ್ತೆಂಟಕ್ಕೆ ಇರೋ ಬರೋ ಥಿಯೇಟರುಗಳಿಗೆಲ್ಲ ‘ಮುಕುಂದ ಮುರಾರಿ’ ‘ಸಂತು’ ಚಿತ್ರಗಳು ಬರುತ್ತಿವೆ. ಆ ಚಿತ್ರಗಳಬ್ಬರವನ್ನೆದುರಿಸಿ ರಾಮಾ ರಾಮಾ ರೇ ನಿಲ್ಲಬಲ್ಲದಾ? ಕಷ್ಟವಿದೆ. ಕಾದು ನೋಡುವ!

Oct 22, 2016

ಚುನಾವಣೆಗಳು ಹತ್ತಿರವಾದಂತೆ ಬಣ್ಣ ಬದಲಾಯಿಸುತ್ತಿರುವ ರಾಜಕೀಯ ಪಕ್ಷಗಳು.

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ರಾಜಕೀಯ ಪಕ್ಷಗಳ ಮತ್ತು ರಾಜಕಾರಣಿಗಳ ನಿಜ ಬಣ್ಣ ಬಯಲಾಗುವುದು ಚುನಾವಣೆಗಳು ಹತ್ತಿರ ಬಂದಾಗಲೇ ಎಂಬ ಮಾತನ್ನು ಉತ್ತರಪ್ರದೇಶದ ಬರಲಿರುವ ರಾಜ್ಯವಿದಾನಸಭಾ ಚುನಾವಣೆಗಳು ಸಾಭೀತು ಪಡಿಸುತ್ತಿವೆ.ಈ ವರ್ಷದ ಆರಂಭದಿಂದಲೇ ಶುರುವಾದ ಚುನಾವಣಾ ತಯಾರಿಗಳು ಅಲ್ಲಿನ ನಾಲ್ಕೂ ಪ್ರಮುಖ ಪಕ್ಷಗಳ ಮುಖವಾಡಗಳನ್ನು ಕಳಚಿಹಾಕುತ್ತಿವೆ. 

ಪ್ರಾರಂಭವಾಗಿರುವ ಪಕ್ಷಾಂತರ ಪರ್ವ:

ಪ್ರತಿ ಚುನಾವಣೆಗೂ ಮೊದಲು ಮುಂದೆ ಅಧಿಕಾರಕ್ಕೆ ಬರುವ ಹೆಚ್ಚು ಸಾದ್ಯತೆಯನ್ನುಳ್ಳ ಪಕ್ಷವೊಂದಕ್ಕೆ ಇತರೇ ಪಕ್ಷಗಳ ನಾಯಕರುಗಳು ಪಕ್ಷಾಂತರ ಮಾಡುವುದು ಇಂಡಿಯಾದ ಪ್ರಜಾಸತ್ತೆಯಲ್ಲಿ ಮಾಮೂಲಿಯಾಗಿ ಹೋಗಿದೆ. ಇದಕ್ಕೆ ಉತ್ತರಪ್ರದೇಶವೇನೂ ಹೊರತಲ್ಲ. ಬಹುಜನಪಕ್ಷದ ಹಿಂದುಳಿದವರ್ಗಗಳ ಪ್ರಮುಖನಾಯಕ ಶ್ರೀಸ್ವಾಮಿಪ್ರಸಾದ್ ಮೌರ್ಯರವರಿಂದ ಶುರುವಾದ ಪಕ್ಷಾಂತರ ಪರ್ವ ಮುಂದುವರೆದಿದೆ. ಬಹುಜನಪಕ್ಷದ ನಾಯಕಿ ಮಾಯಾವತಿಯವರು ವಿದಾನಸಭಾ ಟಿಕೆಟ್ ಮಾರಿಕೊಳ್ಳುತ್ತಿದ್ದಾರೆಂದು ಆರೋಪಿಸಿ ಪಕ್ಷ ತೊರೆದ ಮೌರ್ಯ ಬಾಜಪವನ್ನು ಸೇರುವುದರೊಂದಿಗೆ ಇದುವರೆಗಿನ ತಮ್ಮ ಜಾತ್ಯಾತೀತ ರಾಜಕಾರಣದ ಸಿದ್ದಾಂತಗಳೆಲ್ಲ ಪೊಳ್ಳು ಎಂದು ತೋರಿಸಿಕೊಟ್ಟರು. ಅವರೊಂದಿಗೆ ಬಹುಜನ ಪಕ್ಷದಿಂದ ಉಚ್ಚಾಟನೆಗೊಂಡ ಮತ್ತು ಪಕ್ಷ ತ್ಯಜಿಸಿದ ಸುಮಾರು ಹತ್ತು ಜನ ಹಾಲಿ ಶಾಸಕರುಗಳು ಸಹ ಬಾಜಪವನ್ನು ಸೇರುವುದರೊಂದಿಗೆ ತಮ್ಮ ಅಧಿಕಾರ ಲಾಲಸೆಯನ್ನು ಬಹಿರಂಗಗೊಳಿಸಿದರು. ರಾಜ್ಯಸಭಾ ಸದಸ್ಯರೂ, ಇನ್ನೊಬ್ಬ ಮುಖ್ಯ ದಲಿತ ನಾಯಕರೂ ಆದ ಶ್ರೀ ಜುಗಲ್ ಕಿಶೋರ್ ಸಹ ಬಾಜಪಕ್ಕೆ ಪಕ್ಷಾಂತರ ಮಾಡಿದರು. ಮಾಯಾವತಿಯವರ ಬಹುಜನ ಪಕ್ಷವನ್ನು ಮುಗಿಸುವುದೇ ತಮ್ಮ ಮುಖ್ಯ ಧ್ಯೇಯವೆಂದು ಘೋಷಿಸಿರುವ ಮೌರ್ಯರವರು ಬಹುಜನ ಪಕ್ಷದಲ್ಲಿ ತಮಗಿದ್ದ ಸಂಪರ್ಕಗಳನ್ನು ಬಳಸಿ ಇನ್ನಷ್ಟು ಪ್ರಮುಖ ನಾಯಕರುಗಳನ್ನು ಬಾಜಪಕ್ಕೆ ಸೆಳೆಯುವ ಪ್ರಯತ್ನ ಮುಂದುವರೆಸಿದ್ದಾರೆ. ಇಷ್ಟು ವರ್ಷಗಳ ಕಾಲ ಪಕ್ಷಾಂತರಗಳನ್ನು ಪ್ರೋತ್ಸಾಹಿಸುವ ವರ್ತನೆಯನ್ನು ಖಂಡಿಸುತ್ತಿದ್ದ ಬಾಜಪ ಇದೀಗ ಸ್ವತ: ಅಂತಹ ಪಕ್ಷಾಂತರಗಳನ್ನು ಕಾರ್ಯಗತಗೊಳಿಸುತ್ತ ತಮ್ಮ ಪಕ್ಷವನ್ನು ಬಲಪಡಿಸುವ ಕೈಂಕರ್ಯದಲ್ಲಿ ತೊಡಗಿದೆ. ತನ್ನ ಸಂಘಪರಿವಾರದ ಮೂಲ ಸಿದ್ದಾಂತಗಳನ್ನು ಒಪ್ಪಿಕೊಳ್ಳುವವರಿಗೆ ಮಾತ್ರ ತನ್ನ ಪಕ್ಷದಲ್ಲಿ ಸ್ಥಾನವೆಂದು ಬೊಬ್ಬೆ ಹೊಡೆಯುತ್ತಿದ್ದ ಬಾಜಪ ಇದೀಗ ತನ್ನೆಲ್ಲ ತಾತ್ವಿಕತೆಯನ್ನು ತೊರೆದು ಅಧಿಕಾರ ಹಿಡಿಯುವ ಏಕೈಕ ಗುರಿಯಿಂದ ಅನ್ಯಪಕ್ಷಗಳ ನಾಯಕರುಗಳನ್ನು ತನ್ನತ್ತ ಸೆಳೆಯಲು ವಾಮಮಾರ್ಗವನ್ನು ಹಿಡಿದಿದೆ. ಹೀಗೆ ಪಕ್ಷಾಂತರಗೊಂಡ ನಾಯಕರುಗಳಿಗೆ ಮುಂದಿನ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಟಿಕೇಟು ನೀಡುವ ಮತ್ತು ಸಚಿವ ಸ್ಥಾನ ನೀಡುವ ವಾಗ್ದಾನಗಳನ್ನು ಮಾಡಿರುವುದರಿಂದ ಪಕ್ಷದೊಳಗೆ ಉಂಟಾಗಬಹುದಾದ ಆಂತರಿಕ ಗೊಂದಲಗಳು ಬಾಜಪದ ಮಟ್ಟಿಗೆ ಯಾವ ಪರಿಣಾಮವನ್ನು ಉಂಟು ಮಾಡಬಲ್ಲವೆಂಬುದನ್ನು ಕಾದು ನೋಡಬೇಕಿದೆ. ಇದೊಂದು ಕಡೆಯಾದರೆ ತನ್ನ ಕೌಟುಂಬಿಕ ಒಳಜಗಳಗಳಿಂದ ತತ್ತರಿಸಿರುವ ಸಮಾಜವಾದಿ ಪಕ್ಷವನ್ನು ತೊರೆಯಲು ಸಿದ್ದವಿರುವ ಹಲವಾರು ನಾಯಕರುಗಳನ್ನು ತಮ್ಮತ್ತ ಸೆಳೆಯಲು ಬಾಜಪದ ಜೊತೆಗೆ ಕಾಂಗ್ರೆಸ್ ಕೂಡ ತಮ್ಮ ಪಕ್ಷದ ಕಛೇರಿಯ ಬಾಗಿಲನ್ನು ತೆರೆದು ಕೂತಿದೆ. 

ಅಯೋದ್ಯೆಯ ವಿಷಯದಲ್ಲಿ ಬದಲಾದ ಸಮಾಜವಾದಿ ಪಕ್ಷದ ನಿಲುವು:

ಮುಂದಿನ ಚುನಾವಣೆಯಲ್ಲಿ ಬಾಜಪದ ಹಿಂದುತ್ವವಾದಿ ನಿಲುವಿಗೆ ಪ್ರತಿತಂತ್ರ ಹೆಣೆಯುವ ಭರದಲ್ಲಿ ಸಮಾಜವಾದಿ ಪಕ್ಷ ರಾಮಜನ್ಮಭೂಮಿ ವಿವಾದವನ್ನು ಬೇರೊಂದು ರೀತಿಯಲ್ಲಿ ಜೀವಂತವಾಗಿರಿಸಿ ಹಿಂದೂಮತಗಳನ್ನು ಸೆಳೆಯುವ ತಂತ್ರಗಾರಿಕೆಯನ್ನು ಹೂಡುತ್ತಿದೆ. ಕಳೆದ ಐದು ವರ್ಷಗಳ ತನ್ನ ಆಳ್ವಿಕೆಯಿಂದ ಬೇಸರಗೊಂಡಿರುವ ಮುಸ್ಲಿಮರು ಈ ಬಾರಿ ಸರಾಸಗಟಾಗಿ ತನಗೆ ಮತ ನೀಡಲಾರರೆಂಬುದನ್ನು ಅರ್ಥಮಾಡಿಕೊಂಡಿರುವ ಸಮಾಜವಾದಿ ಪಕ್ಷ ಆ ಕೊರತೆಯನ್ನು ನೀಗಿಸಿಕೊಳ್ಳಲು ಇದೀಗ ಅಯೋದ್ಯೆಯನ್ನು ಚುನಾವಣಾ ವಿಷಯವನ್ನಾಗಿಸುವ ಪ್ರಯತ್ನದಲ್ಲಿದೆ. ಇದಕ್ಕಾಗಿ ಅದು ಅಯೋದ್ಯೆಯಲ್ಲಿ ರಾಮಲೀಲಾ ಥೀಮ್ ಪಾರ್ಕೊಂದನ್ನು ಸ್ಥಾಪಿಸಲು ಸಂಪುಟದಲ್ಲಿ ನಿರ್ಣಯ ಅಂಗೀಕರಿಸಿದೆ. ಇಷ್ಟಲ್ಲದೆ ಅಲ್ಲಿ ಅರ್ದ ವರ್ತುಲಾಕಾರದ ಥಿಯೇಟರ್ ಒಂದನ್ನು ಸಹ ಸ್ಥಾಪಿಸುವ ನಿರ್ದಾರವನ್ನು ಪ್ರಕಟಿಸಿದೆ. ರಾಮಮಂದಿರವನ್ನು ಕೇಂದ್ರವಾಗಿಟ್ಟುಕೊಂಡು ಅಯೋದ್ಯೆಯನ್ನು ವಿಶ್ವದ ಪ್ರಮುಖ ಪ್ರವಾಸಿ ತಾಣವನ್ನಾಗಿಸಲು ಸಹ ಅದು ಯೋಜನೆಯನ್ನು ರೂಪಿಸಿದೆ. ಸಮಾಜವಾದಿ ಪಕ್ಷದ ಮೂಲಗಳೇ ಹೇಳುವಂತೆ ಇದು ಆಯೋದ್ಯೆಯ ವಿಚಾರವನ್ನು ತನ್ನ ಚುನಾವಣಾ ವಿಷಯವನ್ನಾಗಿ ಮಾಡಿಕೊಳ್ಳುವ ಬಾಜಪದ ತಂತ್ರಕ್ಕೆ ಪ್ರತಿತಂತ್ರವಾಗಿದ್ದು, ತಾನು ಅಲ್ಪಸಂಖ್ಯಾತರನ್ನು ಓಲೈಸುತ್ತಿಲ್ಲವೆಂದು ಬಹುಸಂಖ್ಯಾತ ಹಿಂದೂಗಳಿಗೆ ಮನವರಿಕೆ ಮಾಡಿ ಕೊಡುವ ಚಾಣಾಕ್ಷ್ಯ ನಡೆಯ ಒಂದು ಭಾಗವೆಂದೇ ಹೇಳಲಾಗುತ್ತಿದೆ. ಇದುವರೆಗೂ ಅಯೋದ್ಯೆಯ ವಿಚಾರದಲ್ಲಿ ಅಲ್ಪಸಂಖ್ಯಾತರ ಪರ ನಿಂತು ಬಾಜಪವನ್ನು ಕೋಮುವಾದಿ ರಾಜಕೀಯ ಪಕ್ಷವೆಂದು ಆರೋಪಿಸುತ್ತಿದ್ದ ಸಮಾಜವಾದಿ ಪಕ್ಷ ಇದೀಗ ತನ್ನ ನಿಲುವಿನಲ್ಲಿ 360 ಡಿಗ್ರಿಯ ಬದಲಾವಣೆಯನ್ನು ತಂದು ಕೊಂಡಿದೆ.

ರಕ್ಷಣೆಯ ವಿಚಾರದಲ್ಲೂ ರಾಜಕೀಯ:

ಇತ್ತೀಚೆಗೆ ಗಡಿಯಾಚೆ ನಮ್ಮ ಸೈನ್ಯ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಅನ್ನು ಪಕ್ಷದ ಯಾರೂ ಬಹಿರಂಗವಾಗಿ ಸಾಧನೆಯೆಂಬಂತೆ ಹೇಳಿಕೊಳ್ಳಬಾರದೆಂಬ ಪ್ರದಾನಿಗಳ ಹೇಳಿಕೆಯ ಹಿಂದೆಯೇ ಹಣಕಾಸು ಸಚಿವರಾದ ಶ್ರೀ ಅರುಣ್ ಜೈಟ್ಲಿಯವರ ನಿವಾಸದಲ್ಲಿ ನಡೆದ ಬಾಜಪದ ಸಭೆಯಲ್ಲಿ ಮುಂದಿನ ಚುನಾವಣೆಗಳಲ್ಲಿ ಈ ಸರ್ಜಿಕಲ್ ಸ್ಟ್ರೈಕನ್ನು ಕಾನೂನಿನ ಚೌಕಟ್ಟಿನಲ್ಲಿ ಹೇಗೆ ಬಳಸಬಹುದೆಂಬ ಬಗ್ಗೆ ವಿಸ್ತೃತ ಚರ್ಚೆಯೊಂದು ನಡೆದಿದೆ. ಚುನಾವಣೆಯ ಸಾರ್ವಜನಿಕ ಸಭೆಗಳಲ್ಲಿ ಈ ವಿಷಯವನ್ನು ಬಳಸಿದರೆ ವಿರೋಧಪಕ್ಷಗಳು ಕಾನೂನಿನ ನೆರವಿನಿಂದ ಬಾಜಪವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾದ್ಯತೆಯಿದ್ದು ಇದರ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದುವರೆಯಲು ಆ ಸಭೆಯಲ್ಲಿ ನಿರ್ದರಿಸಲಾಗಿದೆ.

ಇಷ್ಟಲ್ಲದೆ ಅಹಮದಾಬಾದಿನಲ್ಲಿ ರಕ್ಷಣಾ ಸಚಿವರಾದ ಶ್ರೀಪರಿಕ್ಕರ ಮಾತಾಡುತ್ತಾ, ನಾನು ಎಂದೂ ನಿರ್ದಿಷ್ಟ ದಾಳಿಯನ್ನು ನೋಡದ ಗೋವಾದಿಂದ ಬಂದವನಾಗಿದ್ದು, ಪ್ರದಾನಿ ಮೋದಿಯವರು ಅಹಿಂಸೆಯ ಪ್ರತಿಪಾದಕರಾದ ಮಹಾತ್ಮಗಾಂದಿಯವರ ನಾಡಿನಿಂದ ಬಂದವರಾಗಿದ್ದು, ನಾವಿಬ್ಬರೂ ಸರ್ಜಿಕಲ್ ದಾಳಿಗೆ ಆದೇಶ ನೀಡುವುದರ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಭೋದನೆಯಿದ್ದು, ಅದರ ಪ್ರಭಾವವಿದೆ ಎಂದು ಹೇಳುವುದರ ಮೂಲಕ ದೇಶದ ರಕ್ಷಣಾ ವಿಷಯವನ್ನು ಸಂಘಪರಿವಾರದ ಸಿದ್ದಾಂತಗಳಿಗೆ ಥಳುಕು ಹಾಕಿದ್ದಾರೆ. ಈ ಮೂಲಕ, ದೇಶದ ಗಡಿಯನ್ನು ಬಾಜಪ ಮಾತ್ರ ರಕ್ಷಿಸಬಲ್ಲದೆಂಬ ಬಾವನೆಯನ್ನು ಬಿತ್ತುತ್ತ, ಗಡಿಯ ವಿಷಯವನ್ನೂ ಚುನಾವಣೆಯ ಬಾವನಾತ್ಮಕ ವಿಷಯವನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಚುನಾವಣೆಗು ಮುಂಚೆಯೇ ಸೋಲನ್ನೊಪ್ಪಿಕೊಂಡಂತಿರುವ ಕಾಂಗ್ರೆಸ್ ಪರೋಕ್ಷವಾಗಿ ಸರ್ಜಿಕಲ್ ದಾಳಿಯೇ ಮಿಥ್ಯವೆಂದು ಆರೋಪಿಸುತ್ತ ದೇಶದ ರಕ್ಷಣಾ ವಿಷಯದಲ್ಲಿ ರಾಜಕೀಯ ಮಾಡಲು ತನಗೂ ಬರುತ್ತದೆಯೆನ್ನುವುದನ್ನು ನಿರೂಪಿಸುವ ದಿಸೆಯಲ್ಲಿ ಕೆಲಸ ಮಾಡುತ್ತಿದೆ.

ಒಟ್ಟಿನಲ್ಲಿ ಚುನಾವಣೆಗಳು ಇರದೇ ಇದ್ದಂತಹ ಶಾಂತಿಸಮಯದಲ್ಲಿ ತತ್ವ ಸಿದ್ದಾಂತಗಳ ಬಗ್ಗೆ ಮಾತಾಡುತ್ತ, ನೀತಿ ಅನೀತಿಯ ಬಗ್ಗೆ ಬಾಷಣ ಮಾಡುವ ರಾಜಕೀಯ ಪಕ್ಷಗಳು ಚುನಾವಣೆಗಳು ಹತ್ತಿರವಾದೊಡನೆ ಎಲ್ಲವನ್ನೂ ಮರೆತು ಕೀಳುಮಟ್ಟದ ರಾಜಕಾರಣ ಮಾಡಲು ತೊಡಗುತ್ತವೆ ಎನ್ನುವುದೇ ಇಂಡಿಯಾದ ಪ್ರಜಾಪ್ರಭುತ್ವದ ದೊಡ್ಡ ದೋಷವಾಗಿದೆ. ಇದನ್ನೆಲ್ಲ ನೋಡಿದರೆ ನಮ್ಮ ಪ್ರಜಾಪ್ರಭುತ್ವ ಪೌಢಾವಸ್ಥೆಯನ್ನು ತಲುಪಿದೆಯೆಂದು ಹೇಳುವವರು ಮೂರ್ಖರಿರಬೇಕು ಅನಿಸದೇ ಇರದು.

Oct 21, 2016

ಮೇಕಿಂಗ್ ಹಿಸ್ಟರಿ: ನಗರದ ರೈತಾಪಿ ಬಂಡಾಯ ಭಾಗ1

Making history
ಸಾಕೇತ್ ರಾಜನ್ 

ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್

ಅ. ವ್ಯಾಪಕ ಬಂಡಾಯ
1830 – 33ರ ಸಮಯದಲ್ಲಿ ಕರ್ನಾಟಕದ ಹಲವು ಭಾಗಗಳಲ್ಲಿ ರೈತಾಪಿ – ಜನರ ವ್ಯಾಪಕ ಬಂಡಾಯವೆದ್ದಿತು. ಇದು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡಿದ್ದ ನಗರ ಫೌಜುದಾರಿಯಲ್ಲಿ ತೀರ್ವವಾಗಿದ್ದ ಕಾರಣದಿಂದಾಗಿ ನಗರ ರೈತಾಪಿ ಬಂಡಾಯ ಎಂದು ಖ್ಯಾತವಾಯಿತು. ಇದೇ ಸಮಯದಲ್ಲಿ ಇತರೆ ಜಿಲ್ಲೆಗಳಿಗೂ ಸಶಸ್ತ್ರ ಕ್ರಾಂತಿ ಹಬ್ಬಿತ್ತು. ಉತ್ತರ ಕನ್ನಡ, ಚಿತ್ರದುರ್ಗ, ತುಮಕೂರು, ಹಾಸನ, ಮೈಸೂರು, ಮಂಡ್ಯ ಮತ್ತು ಬೆಂಗಳೂರಿನಲ್ಲಿ ಸಶಸ್ತ್ರ ಕ್ರಾಂತಿ ನಡೆದಿತ್ತು. ಹಿಂಸಾತ್ಮಕ ರೂಪವನ್ನಿನ್ನೂ ಪಡೆಯದ ಜನ ಸಮೂಹದ ಹೋರಾಟಗಳು ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ನಡೆದಿದ್ದವು. ರಾಯಚೂರು ಮತ್ತು ಧಾರವಾಡ ಜಿಲ್ಲೆಗಳು ವಿವಿಧ ರೂಪಗಳಲ್ಲಿ ಹೋರಾಟಕ್ಕೆ ತಮ್ಮ ಬೆಂಬಲವನ್ನು ನೀಡಿದವು. ಧಾರವಾಡದ ಉತ್ತರ ಭಾಗದಲ್ಲಿ ಸಂಗೊಳ್ಳಿ ರಾಯಣ್ಣನ ನೇತೃತ್ವದಲ್ಲಿ ಬಂಡಾಯ ನಡೆದಿದ್ದರೆ, ದಕ್ಷಿಣದ ಭಾಗಗಳು ಆ ಬಂಡಾಯಕ್ಕೆ ಕೈಲಾದ ಸಹಾಯವನ್ನು ಮಾಡಿದವು. ಹಾಗಾಗಿ ನಗರದ ರೈತಾಪಿ ಬಂಡಾಯ ಬಹುಶಃ ಕರ್ನಾಟಕದಲ್ಲಷ್ಟೇ ಅಲ್ಲದೆ ಇಡೀ ಭಾರತದಲ್ಲಿ ಬ್ರಿಟೀಷ್ ವಸಾಹತುಶಾಹಿಯ ಆಳ್ವಿಕೆಯ ಮೊದಲ ದಶಕಗಳಲ್ಲಿ ನಡೆದ ವ್ಯಾಪಕ ಊಳಿಗಮಾನ್ಯ ವಿರೋಧಿ ಮತ್ತು ವಸಾಹತು ವಿರೋಧಿ ಹೋರಾಟವಾಗಿತ್ತು.

Oct 17, 2016

ಹಿಂದುತ್ವದ ಅಜೆಂಡಾದಿಂದ ಹೊರಬರಲಾಗದ ಈಶ್ವರಪ್ಪನವರ ‘ಹಿಂದ’ದ ಗೊಂದಲಗಳು

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ರಾಜಕೀಯ ನಾಯಕನೊಬ್ಬನಿಗೆ ಸ್ಪಷ್ಟವಾದ ಸಿದ್ದಾಂತವೊಂದು ಇಲ್ಲದೇ ಹೋದಾಗ ಆತನಲ್ಲಿ ಉಂಟಾಗಬಹುದಾದ ಗೊಂದಲಗಳು ಸಮಕಾಲೀನ ರಾಜಕೀಯದಲ್ಲಿ ಅಪಹಾಸ್ಯದ ಮಟ್ಟಕ್ಕಿಳಿದಿಡಬಹುದು. ಇದೀಗ ಸದ್ಯದ ಮಟ್ಟಿಗೆ ’ಹಿಂದ’ದ ನಾಯಕನೆಂದು ಸ್ವಘೋಷಿಸಿಕೊಂಡಿರುವ ಈಶ್ವರಪ್ಪನವರು ಸಹ ಇಂತಹ ನಗೆಪಾಟಲಿಗೆ ಈಡಾಗುತ್ತಿರುವುದರ ಕಾರಣ ಅವರೇ ಸೃಷ್ಠಿಸಿಕೊಂಡ ದ್ವಂದ್ವಗಳ ಪರಿಣಾಮವೇ ಆಗಿದೆ. ಕಳೆದ ವಿದಾನಸಭೆಗೆ ಮುಂಚೆ ಬಾಜಪವನ್ನು ತೊರೆದ ಮಾಜಿಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರು ತಮ್ಮದೇ ಆದ ಕೆಜೆಪಿಯನ್ನು ಕಟ್ಟಿದಾಗ ಈಶ್ವರಪ್ಪನವರೂ ಸೇರಿದಂತೆ ರಾಜ್ಯಮಟ್ಟದ ಯಾವ ನಾಯಕರೂ ಅವರನ್ನು ಹಿಂಬಾಲಿಸಲಿಲ್ಲ, ಒಬ್ಬ ಶೋಭಾ ಕರಂದ್ಲಾಜೆಯನ್ನು ಹೊರತು ಪಡಿಸಿ. ಆದರೆ ನಡೆದ ಚುನಾವಣೆಗಳಲ್ಲಿ ಕೇವಲ ಶೇಕಡಾ ಹತ್ತರಷ್ಟು ಮತಗಳನ್ನು ಪಡೆಯಲು ಯಾಶಸ್ವಿಯಾದ ಕೆಜೆಪಿ ಹೆಚ್ಚೇನನ್ನೂ ಗೆಲ್ಲಲು ಸಾದ್ಯವಾಗದೇ ಹೋದರು ಅದರ ನಾಯಕನ ಉದ್ದೇಶದಂತೆ ಬಾಜಪವನ್ನು ಸೋಲಿಸಲು ಶಕ್ತವಾಯಿತು. ನಂತರದ್ದು ಈಗ ಇತಿಹಾಸ: ಬಾಜಪದ ಅನಿವಾರ್ಯತೆ ಯಡಿಯೂರಪ್ಪನವರಿಗು, ಯಡಿಯೂರಪ್ಪನವರ ಅಗತ್ಯತೆ ಬಾಜಪಕ್ಕೂ ಅರ್ಥವಾಗಿ, ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಏಕೈಕ ಗುರಿಯಿಂದ ಯಡಿಯೂರಪ್ಪನವರನ್ನು ಬಾಜಪ ಮತ್ತೆ ತನ್ನ ತೆಕ್ಕೆಗೆ ಸೆಳೆದುಕೊಂಡಿತು. ಯಾರು ಮೊದಲು ಆಹ್ವಾನವಿತ್ತರೆಂಬುದೀಗ ಅಪ್ರಸ್ತುತ. ಒಟ್ಟಿನಲ್ಲಿ ೨೦೧೪ರ ಲೋಕಸಭಾ ಚುನಾವಣೆಯ ಹೊತ್ತಿಗೆ ಯಡಿಯೂರಪ್ಪನವರು ಬಾಜಪದಿಂದ ಸಂಸದರಾದರು. ಆದರೆ ೨೮ ಸ್ತಾನಗಳ ಪೈಕಿ ಬಾಜಪ ಗೆಲ್ಲಲು ಶಕ್ಯವಾಗಿದ್ದು ೧೭ ಸ್ಥಾನಗಳನ್ನು.

Oct 15, 2016

ನಮ್ಮ ಹಳ್ಳಿಗಳು: ಜಾತಿ ಪೋಷಣೆಯ ಮತ್ತು ಶೋಷಣೆಯ ಕೇಂದ್ರಗಳು!



ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಪೀಠಿಕೆ:

ಜಾತಿ ಎನ್ನುವುದು ಇಂಡಿಯಾದ ಮಟ್ಟಿಗೆ ಒಂದು ಕ್ರೂರ ವಾಸ್ತವ!ವೇದಕಾಲದ ವರ್ಣಾಶ್ರಮ ವ್ಯವಸ್ಥೆಯೇ ಇದರ ಮೂಲವಾಗಿದೆ. ಈ ವರ್ಣ ವ್ಯವಸ್ಥೆಯಲ್ಲಿ ನಾಲ್ಕು ವರ್ಣಗಳನ್ನು. ಬ್ರಾಹ್ಮಣ, ಕ್ಷತ್ರಿಯ,ವೈಶ್ಯ ಮತ್ತು ಶೂದ್ರ ಎಂದು ಗುರುತಿಸಲಾಗಿದೆ. ಹೀಗೆ ಅನಾದಿಕಾಲದಿಂದಲೂ ಭಾರತೀಯ ಸಮಾಜವನ್ನು ವರ್ಣಗಳ ಹೆಸರಲ್ಲಿ ಒಡೆದ ಮಹನೀಯರುಗಳಿಗೆ ಐದನೆಯದಾದ ದಲಿತ ಎನ್ನುವ ಸಮುದಾಯ ಸಹ ಮನುಷ್ಯರನ್ನೊಳಗೊಂಡಿದೆ ಎಂದು ಅನಿಸದೇ ಹೋದದ್ದೇ ಈ ನೆಲದ ದುರಂತ.

ಇಲ್ಲಿ ಜಾತಿಯೆನ್ನುವುದು ವ್ಯಕ್ತಿಯ ಹುಟ್ಟಿನ ಮೂಲವನ್ನು, ಅವನ ಕುಲಕಸುಬನ್ನೂ ಅವಲಂಬಿಸಿ ಗುರುತಿಸಲಾಗುತ್ತಿದೆ. ಇವತ್ತಿಗೂ ಇಂಡಿಯಾದ ಹಳ್ಳಿಗಳಲ್ಲಿ ಜಾತಿಯೆನ್ನುವುದು ಪ್ರತಿ ವ್ಯಕ್ತಿಯ ಬದುಕಲ್ಲಿಯೂ ಮಹತ್ತರ ಪಾತ್ರ ವಹಿಸುತ್ತಿದೆ. ಅಷ್ಟಲ್ಲದೆ ವ್ಯಕ್ತಿಯೊಬ್ಬನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಾನಮಾನಗಳನ್ನು ಸಹ ಜಾತಿಯ ಆಧಾರದಿಂದಲೇ ಅಳೆಯಲಾಗುತ್ತಿದೆ. ಯಾಕೆಂದರೆ ಒಂದು ಹಳ್ಳಿಯ ಮಟ್ಟಿಗೆ ವ್ಯಕ್ತಿಯೊಬ್ಬನ ಜಾತಿಯೇ ಅವನ ಕಸುಬನ್ನು, ಅವನು ಬದುಕುವ ಬಗೆಯನ್ನು ನಿರ್ದರಿಸುವ ಮಾನದಂಡವಾಗಿ ಪರಿವರ್ತನೆಯಾಗಿದೆ. ಹೀಗಾಗಿ 21ನೇ ಶತಮಾನದ ಆಧುನಿಕ ದಿನಮಾನದಲ್ಲಿಯೂ ನಮ್ಮ ಹಳ್ಳಿಗಳು ಜಾತಿ ವ್ಯವಸ್ಥೆಯನ್ನು ಪೋಷಿಸುವ ಮತ್ತು ಜಾತಿಯ ಆಧಾರದ ಮೇಲೆ ಜನಸಮುದಾಯವನ್ನು ಶೋಷಿಸುವ ಕೇಂದ್ರಗಳಾಗಿಯೇ ಉಳಿದಿದೆ.

ವ್ಯಕ್ತಿಗತ ಪ್ರತಿಷ್ಠೆ ಮತ್ತು ವಂಶಪಾರಂಪರ್ಯ ರಾಜಕಾರಣಕ್ಕೆ ಉದಾಹರಣೆಯಾದ ನಮ್ಮ ಪ್ರಾದೇಶಿಕ ಪಕ್ಷಗಳು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ.
ಸದ್ಯಕ್ಕೆ ತಮಿಳುನಾಡಿನಲ್ಲಿ ಕಾವೇರಿ ನೀರಿಗಿಂತ ಹೆಚ್ಚು ಹಾಹಾಕಾರ ಉಂಟು ಮಾಡುತ್ತಿರುವ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಎ.ಐ.ಎ.ಡಿ.ಎಂ.ಕೆ ಪಕ್ಷದ ಸರ್ವೋಚ್ಚ ನಾಯಕಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿರುವ ಸಂದರ್ಭದಲ್ಲಿ ಅಲ್ಲಿ ನಡೆಯುತ್ತಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಮತ್ತು ಆಡಳಿತದಲ್ಲಿ ಆವರಿಸಿರುವ ಶೂನ್ಯತೆಯು ಪ್ರಾದೇಶಿಕ ಪಕ್ಷಗಳ ಇತಿಮಿತಿಯ ಬಗ್ಗೆ ಮತ್ತು ಆಗಬಹುದಾದ ಅಪಾಯಗಳ ಬಗ್ಗೆ ನಮಗೆ ಸ್ಪಷ್ಟವಾದ ನಿದರ್ಶನವಾಗುವಂತಿದೆ. ರಾಜ್ಯವೊಂದಕ್ಕೆ ಇಂಡಿಯಾದ ಒಕ್ಕೂಟ ವ್ಯವಸ್ಥೆಯಿಂದ ಅನ್ಯಾಯವಾದಾಗೆಲ್ಲ ನಾವು ಪ್ರಾದೇಶಿಕ ಪಕ್ಷಗಳ ಅನಿವಾರ್ಯತೆ ಕುರಿತು ಮಾತಾಡುವುದು, ತದನಂತರದಲ್ಲಿ ಮೌನವಾಗಿಬಿಡುವುದು ಮಾಮೂಲಿಯಾಗಿದೆ. ಸ್ವತ: ನಾನೇ ಬಹಳಷ್ಟು ಲೇಖನಗಳಲ್ಲಿ ಪ್ರಾದೇಶಿಕ ಪಕ್ಷಗಳ ಅಗತ್ಯದ ಬಗ್ಗೆ ಮತ್ತು ಅದರಿಂದಾಗಬಹುದಾದ ಅನುಕೂಲಗಳ ಬಗ್ಗೆ ಸಾಕಷ್ಟು ಬರೆದಿದ್ದೇನೆ. ಆದರೆ ಪ್ರಾದೇಶಿಕ ಪಕ್ಷಗಳ ಇನ್ನೊಂದು ಮುಖದ ಬಗ್ಗೆಯೂ ಅಂದರೆ ಅವುಗಳ ಋಣಾತ್ಮಕ ಗುಣಗಳ ಬಗ್ಗೆಯೂ ಬರೆಯುವುದು ಅಗತ್ಯವೆಂಬ ಬಾವನೆಯಿಂದ ಇದನ್ನು ಬರೆಯುತ್ತಿರುವೆ.

Oct 14, 2016

ಮೇಕಿಂಗ್ ಹಿಸ್ಟರಿ: ಸಂಗೊಳ್ಳಿ ರಾಯಣ್ಣನ ಗೆರಿಲ್ಲಾ ಯುದ್ಧ - 2

ಮೇಕಿಂಗ್ ಹಿಸ್ಟರಿ
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಇ. ಭೂಭಾಗದ ಸರಿಯಾದ ಉಪಯೋಗ
ಬೆಳಗಾವಿ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಭಾಗಗಳನ್ನೊಳಗೊಂಡಿದ್ದ ಕಿತ್ತೂರು ಸಂಸ್ಥಾನದ ಪಶ್ಚಿಮ ಭಾಗದಲ್ಲಿ ಮಲೆನಾಡಿನ ಅರಣ್ಯ ಪ್ರದೇಶವಿತ್ತು. ಇನ್ನಿತರ ದಿಕ್ಕುಗಳು ಪಕ್ಕದ ದೇಶಗಳಿಗೆ ತೆರೆದುಕೊಂಡಿತ್ತು. ಚೆನ್ನಮ್ಮಳ ಹೋರಾಟ ಪ್ರಾರಂಭವಾದಾಗಲೂ ಬ್ರಿಟೀಷರಿಗೆ ಕಿತ್ತೂರಿನ ಮಲೆನಾಡಿನಲ್ಲಿ ಸೋಲುಂಟಾಗಬಹುದೆಂಬ ಭಯವಿತ್ತು. ಹಾಗಾಗ್ಯೂ, ರಾಣಿ ಮತ್ತವಳ ಮಂತ್ರಿಗಳ ಊಳಿಗಮಾನ್ಯ ಮನಸ್ಥಿತಿ ಭೂಭಾಗದ ಸರಿಯಾದ ಉಪಯೋಗವನ್ನು ತಡೆದುಬಿಟ್ಟಿತು. ಆದರೂ, ಬ್ರಿಟೀಷರು ಈ ಪ್ರದೇಶದ ಬಗ್ಗೆ ಪದೇ ಪದೇ ತೋರಿದ ಆತಂಕ 1829 – 30ರಲ್ಲಿ ಸತ್ಯವಾಯಿತು. ಕಿತ್ತೂರಿನ ಬಂಡಾಯದ ಬಗ್ಗೆ ಬರೆದ ಮೊದಲ ಟಿಪ್ಪಣಿಯಲ್ಲೇ ಎಲ್ಫಿನ್ ಸ್ಟೋನ್: “……ಕಿತ್ತೂರು ಜಾಗೀರುದಾರರ ಭೂಮಿಯ ಮಧ್ಯದಲ್ಲಿದೆ, ಕೊಲ್ಲಾಪುರದಿಂದಾಗಲೀ ಅಥವಾ ವಾರೀಯಿಂದಾಗಲೀ ಹೆಚ್ಚು ದೂರವೇನಿಲ್ಲ, ಮತ್ತು ನಮ್ಮ ಮತ್ತು ಪೋರ್ಚುಗೀಸರ ಪ್ರಾಂತ್ಯದ ಮಧ್ಯೆ ಇರುವ ಕಾಡು ಗುಡ್ಡಗಳ ಸಮೀಪದಲ್ಲಿದೆ. ಈ ಕಾರಣಗಳಿಂದ, ಅರಣ್ಯ ಯುದ್ಧವಿಲ್ಲಿ ದೀರ್ಘಕಾಲೀನವಾಗುವ ಪರಿಸ್ಥಿತಿಯುಂಟಾಗಬಹುದು ಮತ್ತು ಆ ಯುದ್ಧ ಹೆಚ್ಚೆಚ್ಚು ಕಡೆಗೆ ಹರಡುತ್ತದೆ, ಅತಿ ಶೀಘ್ರವಾಗಿ ನಿಯಂತ್ರಿಸದಿದ್ದರೆ”. (69)

Oct 8, 2016

ಕನ್ನಡಿಗರಿಗಿವತ್ತು ಪ್ರಾದೇಶಿಕ ಪಕ್ಷವೊಂದು ಅನಿವಾರ್ಯವಾಗಿದೆ. ಆದರೆ,ಯಾಕೆ?

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಇಂಡಿಯಾದಂತಹ ಒಕ್ಕೂಟ ವ್ಯವಸ್ಥೆಯೊಳಗಿನ ಅತಿ ದೊಡ್ಡ ದೋಷವೆಂದರೆ ಕೇಂದ್ರ ಸರಕಾರ ಅತೀವ ಬಲಿಷ್ಠವಾಗಿದ್ದು, ರಾಜ್ಯಗಳು ಕೇಂದ್ರದ ಮರ್ಜಿಗನುಗುಣವಾಗಿ ಬದುಕಬೇಕಾಗಿರುವುದು. ವೈವಿದ್ಯತೆಯಲ್ಲಿ ಏಕತೆ ಎಂಬ ಬಾವನಾತ್ಮಕ ಘೋಷಣೆಯ ಮೂಲಕವೇ ಇಂಡಿಯಾವನ್ನು ಹಿಡಿದಿಟ್ಟುಕೊಂಡಿರುವ ರಾಜಕೀಯ ವ್ಯವಸ್ಥೆ ರಾಜ್ಯಗಳನ್ನು ದುರ್ಬಲಗೊಳಿಸುತ್ತ ಸಮಗ್ರತೆಯ ಹೆಸರಲ್ಲಿ ಕೇಂದ್ರವನ್ನು ಬಲಿಷ್ಠವನ್ನಾಗಿಸುತ್ತ ನಡೆಯುತ್ತಿರುವ ರಾಜಕಾರಣದಲ್ಲಿ ರಾಷ್ಟ್ರೀಯ ಪಕ್ಷಗಳ ಸರಕಾರಗಳನ್ನು ಹೊಂದಿದ ಹಲವು ರಾಜ್ಯಗಳು ಕೇಂದ್ರದ ಮಲತಾಯಿ ಧೋರಣೆಗೆ ತುತ್ತಾಗಿವೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುದೊಡ್ಡ ಈ ದೋಷವನ್ನು ಮನಗಂಡ ಅನೇಕ ರಾಜ್ಯಗಳು ರಾಜಕೀಯವಾಗಿ ಬಲಿಷ್ಠವಾಗುತ್ತ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ದಾರಿ ಕಂಡುಕೊಂಡಿವೆ. ನಮ್ಮ ನೆರೆ ರಾಜ್ಯಗಳಾದ ಆಂದ್ರಪ್ರದೇಶ, ತಮಿಳುನಾಡುಗಳು ಹಾಗೂ ಪಶ್ಚಿಮ ಬಂಗಾಳ, ಬಿಹಾರ, ಉತ್ತರಪ್ರದೇಶ, ಒರಿಸ್ಸಾಗಳು ಸಹ ತಮ್ಮದೇ ಆದ ಪ್ರಾದೇಶಿಕ ಪಕ್ಷಗಳನ್ನು ರಚಿಸಿಕೊಂಡು ದೆಹಲಿಯ ರಾಜಕಾರಣದಲ್ಲಿ ತಮ್ಮ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿವೆ.ಇದರಲ್ಲಿ ತಮಿಳುನಾಡು ಮೊದಲಿನಿಂದಲೂ ಪ್ರಾದೇಶಿಕ ಪಕ್ಷಗಳನ್ನು ಹೊಂದಿದ್ದು ಯಾವುದೇ ವಿಚಾರದಲ್ಲಿಯೂ ಅದು ಕೇಂದ್ರದ ವಂಚನೆಗೆ ಒಳಗಾಗದ ರೀತಿಯಲ್ಲಿ ತನ್ನ ರಾಜಕೀಯ ದಾಳಗಳನ್ನು ಉರುಳಿಸುತ್ತಿದೆ. ಉಳಿದೆಲ್ಲ ರಾಜ್ಯಗಳು ಎಂಭತ್ತರ ದಶಕದ ನಂತರ ಕ್ಷಿಪ್ರವಾಗಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ, ಒಂದು ರಾಷ್ಟ್ರೀಯ ಪಕ್ಷವಾಗಿ ದುರ್ಬಲವಾಗುತ್ತ ಸಾಗಿರುವ ಕಾಂಗ್ರೆಸ್ಸಿನ ದೌರ್ಬಲ್ಯದ ಲಾಭ ಪಡೆದು ತಮ್ಮದೇ ನೆಲದ ಸೊಗಡಿನ ಪ್ರಾದೇಶಿಕ ಪಕ್ಷಗಳನ್ನು ಕಟ್ಟಿಕೊಳ್ಳುತ್ತ ಬಲಾಢ್ಯವಾಗಿ ಹೋಗುತ್ತಿವೆ ಇತ್ತೀಚೆಗಿನ ದಿನಗಳಲ್ಲಿ ಕರ್ನಾಟಕದಂತ ರಾಜ್ಯದಲ್ಲಿಯೂ ಪ್ರಾದೇಶಿಕ ಪಕ್ಷವೊಂದು ಬೇಕೆನ್ನುವ ಕೂಗು ಕೇಳಿ ಬರುತ್ತಿದ್ದು,ಮುಂದಿನ ದಿನಮಾನಗಳಲ್ಲಿ ಇದು ದೊಡ್ಡದಾಗುವ ಸಾದ್ಯತೆ ಹೆಚ್ಚಾಗಿದೆ.

Oct 7, 2016

ಮೇಕಿಂಗ್ ಹಿಸ್ಟರಿ: ಸಂಗೊಳ್ಳಿ ರಾಯಣ್ಣನ ಗೆರಿಲ್ಲಾ ಯುದ್ಧ - 1

saketh rajan
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ರೈತಾಪಿ ಜನರು ಬಂದೂಕು ಹಿಡಿದರು 
ಮೂರನೇ ರೀತಿಯ ಸಶಸ್ತ್ರ ಹೋರಾಟದಲ್ಲಿ ರೈತ ಕಾರ್ಮಿಕರು ನೇತೃತ್ವ ವಹಿಸಿದರು. ಹತ್ತೊಂಭತ್ತನೇ ಶತಮಾನದ ಮೊದಲರ್ಧದಲ್ಲಿ ಕರ್ನಾಟಕದ ವಿಮೋಚನಾ ಹೋರಾಟದಲ್ಲಿ ಇದು ಅತ್ಯಂತ ಮಹತ್ವದ ವಿಚಾರ. ಕರ್ನಾಟಕದ ರೈತಾಪಿ ಸಮೂಹ ವಸಾಹತು ವಿರೋಧಿ ಹೋರಾಟದ ಹಾದಿಯಲ್ಲಿ ದೀವಿಗೆ ಹಿಡಿದು ಬೆಳಕು ಚೆಲ್ಲಿದರು. ನಾಯಕರು ಹುಟ್ಟಿದರು. ಸಂಗೊಳ್ಳಿ ರಾಯಣ್ಣ ಇವರೆಲ್ಲರಲ್ಲಿ ಮುಂಚೂಣಿಯಲ್ಲಿದ್ದರು. ಅವರ ಹೋರಾಟ ವಸಾಹತುಶಾಹಿ ಮತ್ತವರ ಊಳಿಗಮಾನ್ಯ ಮಿತ್ರರ ಮೇಲೂ ದಾಳಿ ನಡೆಸಿತು ಮತ್ತು ರೈತ – ಕಾರ್ಮಿಕ ಸಮೂಹದಾಧಾರದಲ್ಲಿ ಗೆರಿಲ್ಲಾ ಯುದ್ಧ ನಡೆಸಿ ವಿಮೋಚನಾ ಹಾದಿಯನ್ನು ರೂಪಿಸಿತು. ನಾವೀಗ ಇವುಗಳಲ್ಲಿ ಮೂರು ಪ್ರಮುಖ ಹೋರಾಟಗಳನ್ನು ಗಮನಿಸೋಣ, ಈ ಮೂರೂ ನಿರಂತರ ಚಳುವಳಿಯಾಗಿತ್ತು, ಒಂದಾದ ನಂತರ ಮತ್ತೊಂದು ನಡೆದಿತ್ತು ಮತ್ತು 1829 ಹಾಗು 1837ರ ಅವಧಿಯ ಮಧ್ಯೆ ನಡೆದಿತ್ತು – ಸಂಗೊಳ್ಳಿ ರಾಯಣ್ಣನ ಗೆರಿಲ್ಲಾ ಯುದ್ಧ, ನಗರದ ಸಶಸ್ತ್ರ ಬಂಡಾಯ ಹಾಗೂ ಕಲ್ಯಾಣಸ್ವಾಮಿ ಮುನ್ನಡೆಸಿದ ಸಶಸ್ತ್ರ ಹೋರಾಟ. ಕರ್ನಾಟಕದ ಜನಸಮೂಹದ ಶ್ರೀಮಂತ ಅನುಭವದಿಂದ ನಾವು ಕಲಿಯೋಣ. ರಕ್ತ ಮತ್ತು ಕಣ್ಣೀರು, ಅತ್ಯಂತ ಅಮೂಲ್ಯವಾದ – ಜೀವದ – ತ್ಯಾಗವೇ ಅಲ್ಲವೇ ಇತಿಹಾಸವನ್ನು ಮುಂದಿನ ಪೀಳಿಗೆಗೆ ಸಮೃದ್ಧಗೊಳಿಸುವುದು? 

Oct 5, 2016

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ವಿಫಲವಾಗಲು ಕಾರಣಗಳು: ಒಂದು ಟಿಪ್ಪಣಿ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಮನ್ನಣೆ ಸಿಗುವುದಿಲ್ಲ ಮತ್ತು ಕರ್ನಾಟಕದ ಜನತೆ ಆ ವಿಷಯದ ಮಟ್ಟಿಗೆ ರಾಷ್ಟ್ರೀಯವಾಗಿ ಚಿಂತಿಸುತ್ತಾರೆಂಬ ಮಾತು ಮಾಮೂಲಿಯಾಗಿಬಿಟ್ಟಿದೆ. ಕರ್ನಾಟಕದ ಜನತೆ ಒಕ್ಕೂಟ ವ್ಯವಸ್ಥೆಗೆ ಎಷ್ಟು ಒಗ್ಗಿ ಹೋಗಿದ್ದಾರೆಂದರೆ ನಮ್ಮ ಜನತೆ ಇದುವರೆಗು ಯಾವುದೇ ಪ್ರಾದೇಶಿಕ ಪಕ್ಷವೊಂದನ್ನು ನಮ್ಮದೂ ಎಂದು ಒಪ್ಪಿಕೊಂಡು ಸಂಪೂರ್ಣವಾಗಿ ಅದನ್ನು ಬೆಂಬಲಿಸಿದ ನಿದರ್ಶನಗಳೇ ಸಿಗುವುದಿಲ್ಲ. ಕನ್ನಡದ ನೆಲಜಲಗಳ ಪ್ರಶ್ನೆ ಬಂದಾಗ ಪ್ರಾದೇಶಿಕ ಪಕ್ಷವೊಂದರ ಅನಿವಾರ್ಯತೆಯ ಬಗ್ಗೆ ಆವೇಶದಿಂದ ಮಾತಾಡುವ ಕನ್ನಡಿಗರು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಬಾಜಪ ಅಥವಾ ಕಾಂಗ್ರೆಸ್ ಅನ್ನುವ ಎರಡು ರಾಷ್ಟ್ರೀಯ ಪಕ್ಷಗಳತ್ತ ವಾಲಿಬಿಡತ್ತಾರೆ ಎನ್ನುವ ಆರೋಪವೂ ಕನ್ನಡಿಗರ ಮೇಲಿದೆ. ಈ ವಿಚಾರದ ವಿಶ್ಲೇಷಣೆಯಲ್ಲಿ ನಾನು ಬಹಳ ಹಿಂದಕ್ಕೇನು ಹೋಗುವುದಿಲ್ಲ. ಎಂಭತ್ತರ ದಶಕದ ನಂತರದ ಕರ್ನಾಟಕದ ರಾಜಕಾರಣದ ಆಗು ಹೋಗುಗಳನ್ನು ಅದ್ಯಯನ ಮಾಡಿದರೆ ಸಾಕು ಇದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಹಾಗಿದ್ದರೆ ಕರ್ನಾಟಕದ ಜನತೆಗೆ ಯಾಕೆ ಪ್ರಾದೇಶಿಕ ಪಕ್ಷಗಳ ಬಗ್ಗೆ ಈ ರೀತಿಯ ಅಸಡ್ಡೆ? ಯಾಕೆ ಕನ್ನಡಿಗರು ಪ್ರಾದೇಶಿಕ ಪಕ್ಷಗಳತ್ತ ಒಲವು ತೋರಿಸುವುದಿಲ್ಲವೆಂಬ ಪ್ರಶ್ನೆಗೆ ಎರಡು ನೆಲೆಯಲ್ಲಿ ಉತ್ತರ ಕಂಡುಕೊಳ್ಳಬಹುದು: