Sep 30, 2016

ಮೇಕಿಂಗ್ ಹಿಸ್ಟರಿ: ಬೆಳಗುತ್ತಿ-ಬಾದಾಮಿ-ನಿಪ್ಪಾಣಿ-ಚಿತ್ರದುರ್ಗ-ಬೀದರ್

saketh rajan
ಸಾಕೇತ್ ರಾಜನ್ 

ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
26/09/2016
7. ಬೆಳಗುತ್ತಿ (1835)


ಬೆಳಗುತ್ತಿಯನ್ನು 1804ರಲ್ಲಿ ಮೂರನೇ ಕೃಷ್ಣರಾಜ ಒಡೆಯರ್, ವೆಂಕಟಪ್ಪ ನಾಯಕನಿಗೆ ಇನಾಮು ಹಳ್ಳಿಯಾಗಿ ನೀಡಿದ್ದ. ಜೊತೆಗೆ, ವೆಂಕಟ್ಟಪ್ಪ ಮಗ ತಿಮ್ಮಾ ನಾಯಕನ ದಿನನಿತ್ಯದ ಹಾಲು ಬೆಣ್ಣೆಗಾಗಿ, ರಾಜ ವಾರ್ಷಿಕ 220 ವರಹಗಳನ್ನು ಕೊಡುಗೆಯಾಗಿ ನೀಡುತ್ತಿದ್ದ. ಆದರಿದನ್ನು ನಂತರದಲ್ಲಿ ಬ್ರಿಟೀಷರು ನಿಲ್ಲಿಸಿಬಿಟ್ಟರು. 1830ರಲ್ಲಿ, ತಿಮ್ಮಪ್ಪ ನಾಯಕ ತನ್ನ ಬಡತನದ ಬಗ್ಗೆ ಬರೆದುಕೊಂಡು ಮುಂಚಿದ್ದ ಜಾಗೀರನ್ನು ಮತ್ತೆ ಸ್ಥಾಪಿಸಬೇಕೆಂದು ಕೇಳಿಕೊಂಡ. ಆದರೆ ಬ್ರಿಟೀಷರು ಇದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ. 1830ರಲ್ಲಿ, ನಗರದ ಬಂಡಾಯವನ್ನು ಮುನ್ನಡೆಸಿದ್ದ ಬೂಡಿ ಬಸಪ್ಪ, ಬೆಳಗುತ್ತಿಗೆ ಭೇಟಿ ನೀಡಿ, ತನ್ನ ಗೆಲುವಿನೊಂದಿಗೆ ನಿನ್ನ ಜಾಗೀರು ನಿನಗೆ ಸಿಗುತ್ತದೆ ಎಂದು ತಿಮ್ಮಪ್ಪನಿಗೆ ಭರವಸೆ ಕೊಟ್ಟಿದ್ದ. ತಿಮ್ಮಪ್ಪ ನಾಯಕ ನಗರದ ಬಂಡಾಯಕ್ಕೆ ತನ್ನ ಬೆಂಬಲ ಸೂಚಿಸಿದ. (48)

Sep 27, 2016

ಕರ್ನಾಟಕದಲ್ಲಿ ಲ್ಯಾಂಡ್ ಬ್ಯಾಂಕಿನ ವಿಸರ್ಜನೆ: ಸ್ವಾಗತಾರ್ಹ ಕ್ರಮ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಕೈಗಾರಿಕೆಗಳಿಗೆ ಸುಲಭವಾಗಿ ಭೂಮಿ ಒದಗಿಸಲು ಸರಕಾರವೇ ರಚಿಸಿದ್ದ ಲ್ಯಾಂಡ್ ಬ್ಯಾಂಕನ್ನು ವಿಸರ್ಜಿಸುವುದರೊಂದಿಗೆ ಕರ್ನಾಟಕ ಸರಕಾರ ಒಂದು ಮಹತ್ವಪೂರ್ಣ ಹೆಜ್ಜೆಯನ್ನಿಟ್ಟಿದೆ. 

ಹಾಗೆ ನೋಡಿದರೆ ಈ ಲ್ಯಾಂಡ್ ಬ್ಯಾಂಕ್ ಎನ್ನುವುದೇ ರೈತ ವಿರೋಧಿಯಾದ ಮತ್ತು ಬಂಡವಾಳಶಾಹಿ ಸ್ನೇಹಿಯಾದ ಒಂದು ಸಂಸ್ಥೆ! ಯಾಕೆಂದರೆ ಜಾಗತೀಕರಣದ ನಂತರ ಇಂಡಿಯಾದಲ್ಲಿ ತಮ್ಮ ಉದ್ದಿಮೆಗಳನ್ನು ಸ್ಥಾಪಿಸುವಂತೆ ಸ್ವದೇಶಿ ಮತ್ತು ವಿದೇಶಿ ಬಹುರಾಷ್ಟ್ರೀಯ ಕಂಪನಿಗಳನ್ನು ರತ್ನಗಂಬಳಿ ಹಾಸಿ ಸ್ವಾಗತಕ್ಕೆ ನಿಂತ ಸರಕಾರಕ್ಕೆ ಇದ್ದ ಮೊದಲ ಸಮಸ್ಯೆ ಎಂದರೆ ಸದರಿ ಉದ್ದಿಮೆಗಳಿಗೆ ಭೂಮಿ ಒದಗಿಸುವುದಾಗಿತ್ತು. ಮುಕ್ತ ಆರ್ಥಿಕ ನೀತಿಗೆ ಬದಲಾದ ನಮ್ಮ ಹೊಸ ಆರ್ಥಿಕ ವ್ಯವಸ್ಥೆಗಾಗಿ ಕೇಂದ್ರ ಸರಕಾರ ಹಲವಾರು ಕಾನೂನುಗಳನ್ನು ತಿದ್ದುಪಡಿ ಮಾಡುವುದರ ಮತ್ತು ಹೊಸ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಕೈಗಾರೀಕರಣದ ಪ್ರಕ್ರಿಯೆಯ ವೇಗ ಹೆಚ್ಚಿಸುವ ಕ್ರಮಕ್ಕೆ ಟೊಂಕ ಕಟ್ಟಿ ನಿಂತಿತು.

Sep 24, 2016

ಒಕ್ಕೂಟ ವ್ಯವಸ್ಥೆಯೂ ಪ್ರಾದೇಶಿಕ ಪಕ್ಷಗಳೂ: ಒಂದು ಟಿಪ್ಪಣಿ.

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ರಾಜ್ಯವೊಂದಕ್ಕೆ ಒಕ್ಕೂಟ ವ್ಯವಸ್ಥೆಯಲ್ಲಿ ಅನ್ಯಾಯವಾಗುತ್ತಿದೆ ಎಂದೆನಿಸಿದಾಗೆಲ್ಲ ಆ ರಾಜ್ಯದ ಜನತೆ ಪ್ರಾದೇಶಿಕ ಪಕ್ಷವೊಂದು ತಮಗೆ ಇದ್ದಿದ್ದೇ ಆಗಿದ್ದರೆ ಇಂತಹದೊಂದು ಅನ್ಯಾಯ ತಮಗಾಗುತ್ತಿರಲಿಲ್ಲವೆಂದು ಕೊರಗುವುದು ಮತ್ತು ತಾತ್ಕಾಲಿಕವಾಗಿ ಅದರ ಬಗ್ಗೆ ಒಂದಿಷ್ಟು ಚರ್ಚಿಸುವುದು ಕಳೆದ ಏಳು ದಶಕಗಳಿಂದಲೂ ಇಂಡಿಯಾದ ಹಲವಾರು ರಾಜ್ಯಗಳಲ್ಲಿ ನಡೆಯುತ್ತ ಬಂದಿರುವ ವಿದ್ಯಾಮಾನ. ಇದೀಗ ಅಂತಹುದೇ ಒಂದು ಚರ್ಚೆ ನಮ್ಮ ನಾಡಿನ ಜನರಲ್ಲಿಯೂ ಪ್ರಾರಂಭವಾದಂತಿದೆ. ಆದರೆ ಇಂತಹ ಚರ್ಚೆಯಿನ್ನೂ ಒಂದು ನೆಲೆಯಲ್ಲಿ ಮಾತ್ರ ನಡೆಯುತ್ತಿದ್ದು,. ಅದರಲ್ಲೂ ಇಂತಹದೊಂದು ಚರ್ಚೆ ಹೆಚ್ಚಾಗಿ ನಡೆಯುತ್ತಿರುವುದು ಅಕ್ಷರಸ್ಥರೇ ಹೆಚ್ಚಾಗಿರುವ ಸಾಮಾಜಿಕ ತಾಲತಾಣಗಳಲ್ಲಿ ಮತ್ತು ಆಗೀಗ ಸುದ್ದಿ ವಾಹಿನಿಗಳ ಚರ್ಚೆಗಳಲ್ಲಿ ಬಂದು ತಮ್ಮ ಅನಿಸಿಕೆಗಳನ್ನು ಹೇಳುವ ಹೋರಾಟಗಾರರ ಮಟ್ಟದಲ್ಲಿ ಮಾತ್ರ. ಆದರೆ ಪರಿಸ್ಥಿತಿ ಹೀಗೇ ಮುಂದುವರೆದರೆ ಈ ಚರ್ಚೆ ಸಮಾಜದ ಎಲ್ಲ ಸ್ತರಗಳಲ್ಲಿಯೂ ನಡೆಯುವುದು ಖಚಿತವೆನಿಸುತ್ತಿದೆ.

Sep 23, 2016

ಮೇಕಿಂಗ್ ಹಿಸ್ಟರಿ: ಕಿತ್ತೂರು (1824)

Making history by saketh rajan
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
23/09/2016
ಕಿತ್ತೂರನ್ನು ಬ್ರಿಟೀಷ್ ವಸಾಹತುಶಾಹಿಯ ಕೈಗೊಂಬೆ ರಾಜ್ಯವನ್ನಾಗಿ ಉಳಿಸಿಕೊಳ್ಳುವ ಚೆನ್ನಮ್ಮಳ ಹೋರಾಟ, ವಿವಿಧ ಊಳಿಗಮಾನ್ಯ ದೊರೆಗಳ ಪ್ರಕರಣಗಳಲ್ಲಾದಂತೆಯೇ, ಬ್ರಿಟೀಷರೊಂದಿಗೆ ಸಶಸ್ತ್ರ ಕದನಕ್ಕೆ ದಾರಿ ಮಾಡಿತು. 

ನಾವೀಗಾಗಲೇ ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದ ಕೊನೆಯ ಅಧ್ಯಾಯದಲ್ಲಿ ಗಮನಿಸಿದಂತೆ, ಕಿತ್ತೂರಿನ ದೇಸಾಯಿ, ಮಲ್ಲಾಸರ್ಜಾರ ಮಗ ಶಿವಲಿಂಗ ರುದ್ರ ಸರ್ಜಾ ಬ್ರಿಟೀಷರ ಸಲುವಾಗಿ ಪೇಶ್ವೆಗಳನ್ನು ತೊರೆದುಬಿಟ್ಟ, 1818ರಲ್ಲಿ. ಮರಾಠ ಪ್ರಾಂತ್ಯವನ್ನು ವಶಪಡಿಸಿಕೊಳ್ಳುವ ಹೋರಾಟದಲ್ಲಿ ಅವನು ಬ್ರಿಟೀಷರ ಕೈ ಜೋಡಿಸಿದ. (36) ಈ ಸೇವೆಯನ್ನು ಪರಿಗಣಿಸುತ್ತಾ, ಮುನ್ನೂರ ಐವತ್ತು ಹಳ್ಳಿಗಳಷ್ಟಿದ್ದ ಅವನ ಪ್ರಾಂತ್ಯವನ್ನು ಉಳಿಸಿಕೊಳ್ಳುವ ಅವಧಿಯನ್ನು ಬ್ರಿಟೀಷರು ವಿಸ್ತರಿಸಿದರು, ಮೈಸೂರಿನ ನಂತರ ಕರ್ನಾಟಕದಲ್ಲಿದ್ದ ಅತಿ ದೊಡ್ಡ ಪ್ರಾಂತ್ಯವಿದು. ಮಲ್ಲಸರ್ಜವನ್ನು ಟಿಪ್ಪು ಸುಲ್ತಾನ್ 1785ರಲ್ಲಿ ಸೋಲಿಸಿ, ವಶಪಡಿಸಿಕೊಂಡು ಬಂಧನದಲ್ಲಿಟ್ಟಿದ್ದ. ಅವನ ಸಂಸ್ಥಾನ ಕೊನೆಗೊಂಡಿತ್ತು. ಕಿತ್ತೂರು ದೇಶಗತಿಗಳಿಗೆ, ಇತಿಹಾಸ ಒಂದು ಪೂರ್ಣ ಸುತ್ತು ಹೊಡೆದಿತ್ತು. ಆದರೆ 1787ರಲ್ಲಿ, ಮರಾಠರ ಸಂಚು ಟಿಪ್ಪು ಸುಲ್ತಾನನನ್ನು ಸೋಲಿಸಿದಾಗ, ಮಲ್ಲಸರ್ಜ ಮತ್ತೆ ಸ್ಥಾಪಿತನಾಗಿದ್ದ. ವಿಜಯಿಗಳು ಗಡಿಯಾರದ ಮುಳ್ಳನ್ನು ಮತ್ತೆ ತಿರುಗಿಸಿದ್ದರು ಮತ್ತು ಮಲ್ಲಸರ್ಜನಿಗೆ ಅವನ ಅಧಿಕಾರ ಕ್ಷೇತ್ರವಿದ್ದ ಹನ್ನೊಂದು ಹಳ್ಳಿಗಳನ್ನು ಕಾಣ್ಕೆಯಾಗಿ ನೀಡಿದ್ದರು. (37) 1800ರಲ್ಲಿ, ದೊಂಡಿಯಾ ವಾಗ್ ಕರ್ನಾಟಕದ ಉತ್ತರ ಭಾಗಗಳಲ್ಲಿ ಸಂಚರಿಸುತ್ತಿದ್ದಾಗ, ಕಿತ್ತೂರು ದೇಸಾಯಿಗಳು ದೊಂಡಿಯಾನನ್ನು ಹುಡುಕುತ್ತಿದ್ದ ಬ್ರಿಟೀಷರಿಗೆ ನೂರು ಕುದುರೆಸವಾರರನ್ನು ಮತ್ತು ನೂರು ಕಾಲಾಳು ಸೈನಿಕರನ್ನು ಕೊಟ್ಟರು. ಸಂಗೊಳ್ಳಿಯ ಕೋಟೆಯನ್ನೂ ವಸಾಹತುಶಾಹಿಗಳು ಸೇವೆಗೆ ಮೀಸಲಿಟ್ಟರು. (38) ಮನ್ರೋ ಬಹಿರಂಗಪಡಿಸಿದಂತೆ, ಬ್ರಿಟೀಷರು ಕಳೆದೆರಡು ದಶಕಗಳಿಂದ ದೇಸಾಯಿಗಳನ್ನು ಪೋಷಿಸಿ ಬೆಳೆಸಿದ್ದರು. ಬ್ರಿಟೀಷರ ಉದಾರತನ ಅಂತಿಮವಾಗಿ ಶಿವಲಿಂಗ ರುದ್ರ ಸರ್ಜನನ್ನು ಅವರೆಡೆಗೆ ಬರುವಂತೆ ಮಾಡಿತು ಮತ್ತು ಅವನು ತನ್ನ ಕಡೆಯಿಂದ ಮುನ್ನೂರೈವತ್ತು ಹಳ್ಳಿಗಳನ್ನು ಪಡೆದುಕೊಂಡು, ಪೇಶ್ವೆಗಳ ಸಾಮ್ರಾಜ್ಯದ ದಕ್ಷಿಣಕ್ಕಿರುವ ಪ್ರಮುಖ ಆಸರೆಯಾಗಿದ್ದ.

Sep 20, 2016

ಪ್ರೀತಿಯನ್ನೇ ಮರೆತಿರಲು

ಪ್ರವೀಣಕುಮಾರ್ ಗೋಣಿ
20/09/2016
ಪ್ರೀತಿಯ ಪರಿಮಳವಿಲ್ಲದ
ರಸಹೀನ ಬದುಕಿಗಿಂತ
ಚರಾ ಚರಗಳಲ್ಲಿ ಅವನಿರುವ
ಗ್ರಹಿಸದೆ ಗೋಳಾಡುವ ಅಜ್ಞಾನಕಿಂತ
ಬೇರೆ ಪಾಮರತೇ ಉಂಟೇ ?

Sep 18, 2016

ಅಡ್ಗೆ ಮನೆ: ಅಣಬೆ ಮಸಾಲಾ.

ತಾಜಾ ಆಯ್ಸ್ಟರ್ ಅಣಬೆಯನ್ನು ಬಳಸಿಕೊಂಡು ರುಚಿಯಾದ ಅಣಬೆ ಮಸಾಲಾ ಮಾಡುವ ವಿಧಾನ. ಬಟನ್ ಅಣಬೆ ಬಳಸಿದರೂ ರುಚಿಯಾಗಿರುತ್ತದೆ.
ಒಂದು ಪ್ಯಾಕೆಟ್ ಆಯ್ಸ್ಟರ್ ಅಣಬೆಯನ್ನು ಸ್ವಲ್ಪ ಸಣ್ಣಗೆ ಹೆಚ್ಚಿಕೊಳ್ಳಿ.

Sep 17, 2016

ಮರಳಿ ಭೂಮಿ ಪಡೆದ ಸಿಂಗೂರಿನ ರೈತರು: ಕೃಷಿವಲಯಕ್ಕೆ ಸಂದ ಜಯ!

ಸಾಂದರ್ಭಿಕ ಚಿತ್ರ
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
17/09/2016
ಸುದ್ದಿ-ನಿನ್ನೆ ಮಮತಾಬ್ಯಾನರ್ಜಿಯವರು ಸಿಂಗೂರಿನ ರೈತರಿಗೆ ಅವರ ಕೃಷಿಭೂಮಿಯನ್ನು ಪರಿಹಾರದ ಸಮೇತ ಮರಳಿಸಿದ್ದಾರೆ!

ಇಡೀ ಇಂಡಿಯಾ ಮುಕ್ತ ಆರ್ಥಿಕ ನೀತಿಗೆ ತನ್ನನ್ನು ತೆರದುಕೊಂಡು ತನ್ನ ಸಮಾಜವಾದಿ ಆಶಯಗಳನ್ನೆಲ್ಲ ಗಾಳಿಗೆ ತೂರುವ ರೀತಿಯಲ್ಲಿ ಹೊಸ ಹೊಸ ಶಾಸನಗಳನ್ನು ರೂಪಿಸುತ್ತಿರುವ ಈ ಹೊತ್ತಿನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದ ಕುಮಾರಿ ಮಮತಾ ಬ್ಯಾನರ್ಜಿಯವರ ಈ ನಡೆ ನನ್ನ ಮಟ್ಟಿಗಂತು ಐತಿಹಾಸಿಕವೆನಿಸುತ್ತಿದೆ. ಏಕೆಂದರೆ ಚುನಾವಣೆಗಳಲ್ಲಿ ನೀಡುವ ಜನಪರ ಆಶ್ವಾಸನೆಗಳನ್ನು ನೆನಪಲ್ಲಿಟ್ಟುಕೊಂಡು ರಾಜಕಾರಣ ಮಾಡುವವರ ಸಂಖ್ಯೆ ವಿರಳವಾಗುತ್ತಿರುವ ಈ ದಿನಗಳಲ್ಲಿ, ತಾವು ಅಧಿಕಾರದಲ್ಲಿರದೆ ಹೋದಾಗ ಸಿಂಗೂರು ರೈತರ ಹೋರಾಟದಲ್ಲಿ ಬಾಗವಹಿಸಿ ಅವರಿಗೆ ಭೂಮಿಯನ್ನು ಮರಳಿಸುವುದಾಗಿ ಭರವಸೆ ನೀಡಿಯೇ ಅಧಿಕಾರದ ಖುರ್ಚಿಗೆ ಲಗ್ಗೆ ಹಾಕಿದ ಅವರು ತಮ್ಮ ಮಾತನ್ನು ಉಳಿಸಿಕೊಳ್ಳುವುದರ ಮೂಲಕ ಎರಡು ಅಂಶಗಳನ್ನು ಭಾರತೀಯರಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ.

Sep 16, 2016

ಮೇಕಿಂಗ್ ಹಿಸ್ಟರಿ: ಐಜೂರ್ - ಕೊಪ್ಪಳ - ಬೀದರ್ - ಸಿಂಧಗಿ.

Making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
16/09/2016
ಶ್ರೀರಂಗಪಟ್ಟಣದಿಂದ ಓಡಿಹೋದ ಮೇಲೆ ದೊಂಡಿಯಾ ಮೊದಲಿಗೆ ತಲುಪಿದ್ದು ಬ್ರಿಟೀಷರ ವಿರುದ್ಧ ಹೋರಾಡಲು ತಯಾರಿ ಮಾಡಿಕೊಳ್ಳುತ್ತಿದ್ದ ಪಾಳೇಗಾರ ವೆಂಕಟಾದ್ರಿ ನಾಯಕರ ಪ್ರಾಂತ್ಯವಾದ ಐಜೂರಿಗೆ. 

ಹಾಸನದ ಸಕಲೇಶಪುರ ತಾಲ್ಲೂಕಿನ ಐಜೂರಿನ ಪಾಳೇಗಾರರು ಇಕ್ಕೇರಿಯ ನಾಯಕರ ಸಾಮಂತರು. ಕೊಡವರನ್ನು ನಿಗ್ರಹಿಸಲು ಪ್ರಯತ್ನಿಸಿ ಕಲಿತ ಪಾಠಗಳಿಂದ, ಟಿಪ್ಪು ಐಜೂರಿನ ಪಾಳೇಗಾರ ಕೃಷ್ಣಪ್ಪ ನಾಯಕನೊಡನೆ ಗೆಳೆತನ ಬೆಳೆಸಿಕೊಂಡು; ಐಜೂರಿನ ಪಾಳೇಗಾರ ಕೃಷ್ಣಪ್ಪ ನಾಯಕ ಬ್ರಿಟೀಷರಿಗೆ ಬೆಂಬಲ ಕೊಡುತ್ತಿದ್ದರೂ ಅವನೊಡನೆ ಗೆಳೆತನ ಬೆಳೆಸಿಕೊಂಡ ಟಿಪ್ಪು, ಅವನಿಗೆ ತನ್ನ ಪ್ರಾಂತ್ಯವನ್ನು ಉಳಿಸಿಕೊಳ್ಳಲು ಅನುಮತಿ ನೀಡಿದ, ವಾರ್ಷಿಕ ಕಪ್ಪ ಕಾಣಿಕೆಯನ್ನು ಶ್ರೀರಂಗಪಟ್ಟಣಕ್ಕೆ ನೀಡಬೇಕು ಎಂಬ ಶರತ್ತಿನೊಂದಿಗೆ. ನಂತರ, ಬೆಂಗಳೂರು ಮಂಗಳೂರು ರಸ್ತೆಯಲ್ಲಿರುವ ಬಲ್ಲಂ ಪ್ರದೇಶದಲ್ಲಿ ಮಂಜರಾಬಾದ್ ಕೋಟೆಯನ್ನು ಕಟ್ಟಿದ, ಕರಾವಳಿಯೊಡನೆ ತೊಂದರೆಯಿಲ್ಲದ ವಾಣಿಜ್ಯಕ ವ್ಯವಹಾರವನ್ನು ಸಾಧಿಸಿದ.

ರೋಗಗ್ರಸ್ತ ಸಾರ್ವಜನಿಕ ಉದ್ದಿಮೆಗಳಿಗೆ ಅಂತಿಮ ಸಂಸ್ಕಾರ! ನೀತಿ ಆಯೋಗದಿಂದ ಸರಕಾರಕ್ಕೆ ಸೂಚನೆ

ಕು.ಸ. ಮಧುಸೂದನ್ ರಂಗೇನಹಳ್ಳಿ.
16/09/2016
ನಷ್ಟದಲ್ಲಿವೆಯೆಂದು ಹೇಳಲಾಗುತ್ತಿರುವ ಸುಮಾರು 74 ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳ ಪಟ್ಟಿಯನ್ನು ಸರಕಾರಕ್ಕೆ ನೀಡಿರುವ ನೀತಿ ಆಯೋಗವು ಬಹುತೇಕ ಅವುಗಳನ್ನು ಮುಚ್ಚುವ ಅಥವಾ ಖಾಸಗಿಯವರಿಗೆ ವಹಿಸಿಕೊಡುವ ಪ್ರಸ್ತಾವನೆಯನ್ನು ಸಲ್ಲಿಸಿದೆ.

ತೊಂಭತ್ತರ ದಶಕದಲ್ಲಿ ಆರಂಭಗೊಂಡ ಜಾಗತೀಕರಣದ ಪ್ರಕ್ರಿಯೆಯನ್ನು ಅರ್ಥಮಾಡಿಕೊಂಡವರ್ಯಾರಿಗೂ ನೀತಿ ಆಯೋಗದ ಇವತ್ತಿನ ಈ ನಡೆ ಅಚ್ಚರಿಯನ್ನೇನು ಉಂಟು ಮಾಡುವುದಿಲ್ಲ. ಯಾಕೆಂದರೆ ಮುಕ್ತ ಆರ್ಥಿಕ ನೀತಿಯ ಮೂಲ ಉದ್ದೇಶವೇ ಸರಕಾರಿ ಸ್ವಾಮ್ಯದ ಎಲ್ಲ ಉದ್ದಿಮೆಗಳನ್ನು ಖಾಸಗಿ ಬಂಡವಾಳಶಾಹಿಗಳ ಪಾದಗಳಿಗೆ ಸಮರ್ಪಿಸುವುದಾಗಿತ್ತು. ಸರಕಾರದ ಕೆಂಪು ಪಟ್ಟಿಗಳ, ಲೈಸೆನ್ಸ್ ರಾಜ್ ಬಗ್ಗೆ ಮಾತಾಡುವ ಮುಕ್ತ ಆರ್ಥಿಕ ನೀತಿಯ ಪರವಾದ ಬಂಡವಾಳಶಾಹಿಗಳ ಹುನ್ನಾರವೇ ಸಮಾಜವಾದಿ ವ್ಯವಸ್ತೆಯಲ್ಲಿರಬಹುದಾದ ದೋಷಗಳನ್ನು ಭೂತಗನ್ನಡಿಯಲ್ಲಿ ತೋರಿಸುತ್ತ, ಜನರ ದೃಷ್ಠಿಯಲ್ಲಿ ಸರಕಾರಿ ಸ್ವಾಮ್ಯದ ಉದ್ದಿಮೆಗಳೆಂದರೆ ಭ್ರಷ್ಟಾಚಾರದ ಕೂಪಗಳೆಂಬ ಅನುಮಾನ ಮೂಡಿಸಿ, ಖಾಸಗಿಯವರು ಮಾತ್ರ ಅವುಗಳನ್ನು ಉದ್ದಾರ ಮಾಡಬಲ್ಲರೆಂಬ ನಂಬಿಕೆಯೊಂದನ್ನು ಹುಟ್ಟು ಹಾಕುವುದಾಗಿದೆ.ಕಳೆದ 25 ವರ್ಷಗಳಲ್ಲಿ ಆಗಿ ಹೋದ ಎಲ್ಲ ಸರಕಾರಗಳ ನೀತಿಗಳೂ ಸಹ ಇಂತಹದೊಂದು ಕ್ರಿಯೆಗೆ ಉತ್ತೇಜನ ನೀಡುತ್ತಲೇ ಬಂದವು.

Sep 12, 2016

ನವಜೋತ್ ಸಿಂಗ್ ಸಿದ್ದು: ಬಾಜಪದ ಪಾಲಿನ ಮತ್ತೊಬ್ಬ ಯಡಿಯೂರಪ್ಪಆಗಲಿದ್ದಾರೆಯೇ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
12/09/2016
ನವಜೋತ್ ಸಿಂಗ್ ಸಿದ್ದು ಪಂಜಾಬಿನ ಬಾಜಪದ ಪಾಲಿಗೆ ಮತ್ತೊಬ್ಬ ಯಡಿಯೂರಪ್ಪ ಆಗಲಿದ್ದಾರೆಯೇ?

ಈಗೊಂದು ಸಂಶಯ, ಪಂಜಾಬ್ ರಾಜ್ಯದ ರಾಜಕೀಯ ವಲಯಗಳಲ್ಲಿ, ಬಿರುಸಿನ ಚರ್ಚೆಗಳಲ್ಲಿ ವ್ಯಕ್ತವಾಗುತ್ತಿದೆ. 2013ರ ಕರ್ನಾಟಕದ ವಿದಾನಸಭಾ ಚುನಾವಣೆಗಳಿಗೆ ಮುಂಚೆ ಯಡಿಯೂರಪ್ಪನವರು ಬಾಜಪ ತೊರೆದು ಕೆಜೆಪಿ ಕಟ್ಟಿ ಚುನಾವಣೆಗಳಲ್ಲಿ ಬಾಗವಹಿಸಿದ ಕಾರಣ ಬಾಜಪದ ಸಾಂಪ್ರದಾಯಿಕ ಮತಗಳು ಚದುರಿ ಕಾಂಗ್ರೆಸ್ ಅಧಿಕಾರಕ್ಕೆ ಏರುವಂತಾಗಿದ್ದು ನಿಮಗೆ ನೆನಪಿರಬಹುದು. ಸದ್ಯಕ್ಕೆ ಪಂಜಾಬ್‍ನಲ್ಲಿಯೂ ಅಂತಹುದೇ ಒಂದು ಸನ್ನಿವೇಶ ನಿರ್ಮಾಣವಾಗುತ್ತಿರುವಂತಿದೆ. ಕೆಲ ತಿಂಗಳ ಹಿಂದೆ ತನ್ನ ರಾಜ್ಯಸಭಾ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರಬಂದ ಸಿದ್ದುರವರು ಪಂಜಾಬ್ ಮಟ್ಟಿಗೆ ಬಾಜಪದ ತಾರಾ ಮೆರುಗು ಹೊಂದಿದ ನಾಯಕರಾಗಿದ್ದರು. ಸತತವಾಗಿ ಅಮೃತಸರದಿಂದ ಲೋಕಸಭೆಗೆ ಆಯ್ಕೆಯಾಗುತ್ತ ಬಂದಿದ್ದ ಅವರನ್ನು 2014ರಲ್ಲಿ ಕಡೆಗಣಿಸಿ ಅರುಣ್ ಜೇಟ್ಲಿಯವರಿಗೆ ಟಿಕೇಟು ನೀಡಿದ್ದರ ಪರಿಣಾಮವಾಗಿ ಸಿದ್ದು ಚುನಾವಣಾ ಪ್ರಚಾರದಿಂದ ದೂರ ಉಳಿದು ಜೇಟ್ಲಿಯವರ ಸೋಲಿಗೆ ಪರೋಕ್ಷವಾಗಿ ಕಾರಣರಾಗಿದ್ದರು. ತದನಂತರ ಸಿದ್ದುರವರನ್ನು ಸಮಾದಾನ ಪಡಿಸಲು ಅವರನ್ನು ರಾಜ್ಯಸಭೆಗೆ ಆರಿಸಲಾಯಿತಾದರು, ಪ್ರಂಜಾಬಿನ ರಾಜ್ಯ ರಾಜಕೀಯದಲ್ಲಿ ಅಕಾಲಿದಳಕ್ಕೆ ಕಿರಿಯ ಪಾಲುದಾರ ಪಕ್ಷವಾಗಿರುವ ಬಾಜಪ ಸಿದ್ದುರವರಿಗೆ ಕೊಡಬೇಕಾದಷ್ಟು ಪ್ರಾಧಾನ್ಯತೆ ಕೊಡದೆ ಅವರನ್ನು ನಿರ್ಲಕ್ಷಿಸತೊಡಗಿತ್ತು. ಬಾಜಪದ ರಾಜ್ಯಘಟಕದ ಯಾವೊಂದು ಚಟುವಟಿಕೆಗಳಿಗೂ ಅವರನ್ನು ಬಳಸಿಕೊಳ್ಳದೆ ಅವರನ್ನು ಕೇವಲ ತಾರಾ ಪ್ರಚಾರಕರನ್ನಾಗಿ ಬಳಸಿಕೊಳ್ಳುವ ಬಾಜಪದ ನಡೆಯಿಂದ ಬೇಸರಗೊಂಡ ಸಿದ್ದು ಪಕ್ಷ ತ್ಯಜಿಸಿದಾಗ, ಅವರು ಅರವಿಂದ್ ಕೇಜ್ರೀವಾಲಾರ ಆಮ್ ಆದ್ಮಿ ಪಕ್ಷವನ್ನು ಸೇರುತ್ತಾರೆಂದು ಬಾವಿಸಲಾಗಿತ್ತು. ಅದಕ್ಕೆ ಪೂರಕವಾಗಿ ಸ್ವತ: ಕೇಜ್ರೀವಾಲರೇ ಸಿದ್ದುರವರನ್ನು ಹೊಗಳುತ್ತ ತಮ್ಮ ಪಕ್ಷಕ್ಕೆ ಅವರನ್ನು ಸ್ವಾಗತಿಸುವುದಾಗಿ ಹೇಳಿಕೊಂಡಿದ್ದರು. ಆದರೆ ಈ ಬಗ್ಗೆ ಸಾರ್ವಜನಿಕವಾಗಿ ಯಾವ ಪ್ರತಿಕ್ರಿಯೆಗಳನ್ನೂ ನೀಡದ ಸಿದ್ದುರವರು ಮೌನಕ್ಕೆ ಶರಣಾಗಿಬಿಟ್ಟಿದ್ದರು.

Sep 9, 2016

ಮೇಕಿಂಗ್ ಹಿಸ್ಟರಿ: ಊಳಿಗಮಾನ್ಯ ದೊರೆಗಳು ಮುನ್ನಡೆಸಿದ ಸಶಸ್ತ್ರ ಹೋರಾಟ

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
09/09/2016
ಬ್ರಿಟೀಷರಾಳ್ವಿಕೆಯಲ್ಲಿ ಊಳಿಗಮಾನ್ಯ ದೊರೆಗಳು ತಮ್ಮ ಹಳೆಯ ಸೌಕರ್ಯಗಳನ್ನೆಲ್ಲ ಕಳೆದುಕೊಂಡರು. ಉತ್ತರಾಧಿಕಾರತ್ವದ ಬಗೆಗಿನ ಬ್ರಿಟೀಷರ ನೀತಿಗಳಿಂದಾಗಿ ಕೆಲವು ಕುಟುಂಬಗಳು ನಿರ್ವೀರ್ಯರಾಗುವ ಹಂತಕ್ಕೆ ಬಂದು ನಿಂತಿದ್ದವು. ತಮ್ಮ ಕಳೆದುಹೋದ ಘನತೆಯನ್ನು ಮರಳಿ ಗಳಿಸುವುದಕ್ಕಾಗಿ ಅವರು ಬ್ರಿಟೀಷರನ್ನು ಕಿತ್ತೆಸೆಯುವ ನಿರ್ಧಾರ ಮಾಡಿದ್ದು, 1857ರವರೆಗೆ ನಡೆದ ಸಶಸ್ತ್ರ ಹೋರಾಟಗಳನ್ನು ಅವರು ಮುನ್ನಡೆಸಿದರು. ನಾವೀಗ ಈ ರೀತಿಯ ಪ್ರತಿಯೊಂದು ಹೋರಾಟವನ್ನೂ ಗಮನಿಸೋಣ, ತದನಂತರ ಕರ್ನಾಟಕ ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ನಡೆಸಿದ ಯುದ್ಧಗಳಲ್ಲಿನ ಅವರ ತ್ಯಾಗದ ಅನುಭವಗಳನ್ನು ಒಟ್ಟುಗೂಡಿಸೋಣ.

Sep 8, 2016

ದಲಿತ ಮತ್ತು ಮಹಿಳೆಯನ್ನು ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ನೋಡಲು ಇಚ್ಚಿಸದ ನಮ್ಮ ರಾಜಕೀಯ ವ್ಯವಸ್ಥೆ: ಮಾಯಾವತಿಯವರ ವಿರುದ್ದ ಮೂರೂ ಪಕ್ಷಗಳ ಕೆಂಗಣ್ಣು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
08/09/2016
ಇಂಡಿಯಾದ ರಾಜಕಾರಣ ಕಳೆದ ಏಳು ದಶಕಗಳಲ್ಲಿ ಸಾಕಷ್ಟು ಪ್ರಬುದ್ದತೆಯನ್ನು ಪಡೆದಿದೆಯೆಂಬ ಮಾತು ಕೆಲ ಮಟ್ಟಿಗೆ ನಿಜವಾದರು, ಅದರ ಸಮಯಸಾಧಕತನದ ಕನಿಷ್ಠಬುದ್ದಿಯೇನೂ ಕಡಿಮೆಯಾಗಿಲ್ಲವೆಂಬ ಮಾತು ಸಹ ನಿಜ. ಇದರ ಜೊತೆಗೆ ಜಾತಿ ತಾರತಮ್ಯದ ರಾಜಕಾರಣ ಹಿಂದೆಂದಿಗಿಂತಲೂ ಹೆಚ್ಚಾಗಿ ತನ್ನ ಇರುವಿಕೆಯನ್ನು ತೋರಿಸುತ್ತಿರುವುದು ಕೂಡ ಅಷ್ಟೇ ಸತ್ಯ. ಕಾಲದಿಂದ ಕಾಲಕ್ಕೆ ಚುನಾವಣೆಯಿಂದ ಚುನಾವಣೆಗೆ ಇದು ಮತ್ತೆ ಮತ್ತೆ ಸಾಬೀತಾಗುತ್ತ ಬರುತ್ತಿದೆ. ಜಾತಿ ರಾಜಕಾರಣದ ಜೊತೆಜೊತೆಗೆ ಲಿಂಗ ತಾರತಮ್ಯದ ರಾಜಕಾರಣವೂ ಸಹ ನಮ್ಮ ದೇಶದ ರಾಜಕಾರಣಕ್ಕೆ ಅಂಟಿರುವ ಒಂದು ಕಳಂಕವೆನ್ನಬಹುದಾಗಿದೆ. ಏಳು ದಶಕಗಳ ನಂತರವೂ ನಾವು ಮಹಿಳೆಯರಿಗೆ ಶೇಕಡಾವಾರು ಮೀಸಲಾತಿಯನ್ನು ನೀಡುವ ಮಾತಾಡುತ್ತಿದ್ದೇವೆಯೇ ಹೊರತು ಸಮಾನತೆಯನ್ನಲ್ಲ. ಜೊತೆಗೆ ಯಾವುದೆ ಪ್ರತಿಷ್ಠಿತ ಕುಟುಂಬದ ಹಿನ್ನೆಲೆಯಿಲ್ಲದ ಹೆಣ್ಣುಮಗಳೊಬ್ಬಳು ಈ ನೆಲದಲ್ಲಿ ಸ್ವತಂತ್ರವಾಗಿ ತನ್ನದೇ ಸಿದ್ದಾಂತಗಳಿಗನುಗುಣವಾಗಿ ರಾಜಕೀಯ ಮಾಡುವ ವಾತಾವರಣ ನಮ್ಮಲ್ಲಿನ್ನೂ ಸೃಷ್ಠಿಯಾಗಿಲ್ಲ. ಈ ಮಾತುಗಳನ್ನು ನಾನು ಹೇಳುವುದಕ್ಕೆ ಮುಖ್ಯ ಕಾರಣ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿಯಾದ, ಬಹುಜನ ಪಕ್ಷದ ನಾಯಕಿ ಕುಮಾರಿ ಮಾಯಾವತಿಯವರಿಗೆ ಇಂದು ಎದುರಾಗುತ್ತಿರುವ ಅಡೆತಡೆಗಳು. ಯಾಕೆಂದರೆ ಮೇಲೆ ನಾನು ಹೇಳಿದ ಜಾತಿ ಮತ್ತು ಲಿಂಗ ತಾರತಮ್ಯದ ಎರಡೂ ಕೆಡುಕುಗಳು ಇವತ್ತು ಮಾಯಾವತಿಯವರ ರಾಜಕೀಯ ಜೀವನವನ್ನು ಮುಗಿಸಲು ಬಳಕೆಯಾಗುತ್ತಿವೆ. ಮೊದಲಿಗೆ ಆಕೆ ಒಬ್ಬ ದಲಿತ ಮಹಿಳೆಯೆನ್ನುವ ಕಾರಣವಾದರೆ, ಎರಡನೆಯದು ಆಕೆ ಒಬ್ಬ ಮಹಿಳೆ ಎನ್ನುವುದಾಗಿದೆ. ಇವತ್ತೇನು ಉತ್ತರ ಪ್ರದೇಶದ ಮಟ್ಟಿಗೆ ಸಮಾಜವಾದಿ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಶ್ರೀ ಮುಲಾಯಂ ಸಿಂಗ್ ಯಾದವರ ವರ್ಚಸ್ಸಿಗೆ ಸರಿಸಮಾನವಾಗಿರುವವರು ಯಾರಾದರು ಇದ್ದರೆ ಅದು ಮಾಯಾವತಿಯವರು ಮಾತ್ರ. ಜನಪ್ರಿಯತೆಯಲ್ಲಿ ಹಾಗು ಸಮುದಾಯಗಳ ನಾಯಕರಾಗಿ ಮತ ಸೆಳೆಯುವ ತಾಕತ್ತಿನಲ್ಲಿ, ಹಾಗು ಹಿಡಿದ ಹಟ ಸಾಧನೆಯಲ್ಲಿ ಮುಲಾಯಮರಿಗೆ ಜಿದ್ದಾಜಿದ್ದಿಯಾಗಿ ನಿಲ್ಲಬಲ್ಲವರೆಂದರೆ ಅದು ಮಾಯಾವತಿಯವರು ಮಾತ್ರ. ಅಷ್ಟಲ್ಲದೆ ಚುನಾವಣಾ ತಂತ್ರಗಾರಿಕೆಯಲ್ಲಿ ಕೂಡ ಅವರು ಅಸಾಮಾನ್ಯರಾಗಿದ್ದಾರೆ.

ಗೋಹತ್ಯೆ – ಒಂದು ಪರಾಮರ್ಶೆ: ಭಾಗ 3.

ನಾಗೇಶ್ ಹೆಗಡೆ
25/08/2016
ಗೋಹತ್ಯೆ – ಒಂದು ಪರಾಮರ್ಶೆ: ಭಾಗ 1 ಓದಲು ಇಲ್ಲಿ ಕ್ಲಿಕ್ಕಿಸಿ
ಗೋಹತ್ಯೆ – ಒಂದು ಪರಾಮರ್ಶೆ: ಭಾಗ 2 ಓದಲು ಇಲ್ಲಿ ಕ್ಲಿಕ್ಕಿಸಿ
ಅಂಥದ್ದೇನೂ ಆಗುವುದಿಲ್ಲ; ದನಕರುಗಳು ಶಾಶ್ವತವೇನಲ್ಲವಲ್ಲ! ಅವು ಸಹಜವಾಗಿ ಸಾಯುತ್ತಿರುತ್ತವೆ. ಈಗಿನಷ್ಟೇ ಸಂಖೈಯಲ್ಲಿ ಆಗಲೂ ಸಾಯುತ್ತಿರುತ್ತವೆ. ಅವುಗಳ ಮಾಂಸ ತೆಗೆದು ಮಾರಲು ಅಥವಾ ಮೃಗಾಲಯಕ್ಕೆ ಸಾಗಿಸಲು ಅನುಮತಿ ಸಿಕ್ಕೇ ಸಿಗುತ್ತದೆ. ನೀವು ಉತ್ಪ್ರೇಕ್ಷೆ ಮಾಡಬೇಡಿ.
ಉತ್ಪ್ರೇಕ್ಷೆ ಅಲ್ಲ. ಈಗಿನ ವ್ಯವಸ್ಥೆಯಲ್ಲಿ ಅಲ್ಲಲ್ಲಿ ಕೇಂದ್ರೀಕೃತ ಕಸಾಯಿಖಾನೆಗಳಲ್ಲಿ ದಿನವೂ ಇಷ್ಟಿಷ್ಟೆಂಬಂತೆ ಮಾಂಸ ಲಭಿಸುತ್ತಿದೆ. ಎಲ್ಲೆಲ್ಲಿ ಎಂದೆಂದು ಎಷ್ಟೆಷ್ಟು ಡಿಮಾಂಡ್ ಇದೆಯೊ ಅಂದಂದು ಅಷ್ಟಷ್ಟು ಪೂರೈಕೆ ಆಗುತ್ತಿದೆ. ಗೋಹತ್ಯೆ ನಿಷೇಧಿಸಿದರೆ ಈ ಸಪ್ಲೈ ಚೇನ್ ನಲ್ಲಿ ಅವ್ಯವಸ್ಥೆ ಉಂಟಾಗುತ್ತದೆ. ಏಕೆಂದರೆ ಎಲ್ಲಿ, ಯಾವ ದಿನ ಎಷ್ಟು ದನಕರುಗಳು ಸಾಯಲಿವೆ ಎಂಬುದು ಯಾರಿಗೂ ಗೊತ್ತಾಗಲು ಸಾಧ್ಯವಿಲ್ಲ. ದನಗಳ ಕಳೇಬರದ ಸಾಗಾಣಿಕೆಗೆ ಸಂಬಂಧಿಸಿದಂತೆ ಪೊಲೀಸ್ ಕಿರುಕುಳ ಹೆಚ್ಚುವುದರಿಂದ, ಇಂಥ ರಗಳೆಯೇ ಬೇಡವೆಂದು ರೈತರು ತಮ್ಮ ದನ ಸತ್ತಾಗ ಯಾರಿಗೂ ತಿಳಿಸದೇ ಮಣ್ಣು ಮಾಡುವ ಸಾಧ್ಯತೆ ಹೆಚ್ಚುತ್ತದೆ. ಹೀಗಾದರೆ ಚರ್ಮೋದ್ಯಮವೂ ತತ್ತರಿಸಬಹುದು. ಪಶು ಆಹಾರ, ಔಷಧ ಉತ್ಪಾದನೆ ಮತ್ತು ಔದ್ಯಮಿಕ ಕಚ್ಚಾಪದಾರ್ಥ, ಸೌಂದರ್ಯವರ್ಧಕ ರಸವಸ್ತುಗಳ ತಯಾರಿಕೆ ಹೀಗೆ ಎಲ್ಲಕ್ಕೂ ನಾವು ವಿದೇಶೀ ಆಮದನ್ನೇ ಅವಲಂಬಿಸಲಬೇಕಾಗುತ್ತದೆ. ನಾಡಿನುದ್ದಕ್ಕೂ ಹಳ್ಳಿಗಳಲ್ಲಿ ಅಲ್ಲಲ್ಲಿ ಆಗಾಗ ಒಂದೋ ಎರಡೋ ರಾಸುಗಳು ಸತ್ತಿದ್ದು ಗೊತ್ತಾದರೂ ಅದರ ಮಾಂಸವನ್ನು ಸಾಗಿಸಿ ತಂದು ಆಹಾರವಾಗಿ ವಿಲೇವಾರಿ ಮಾಡುವುದಾದರೆ ಗುಣಮಟ್ಟ ಕೆಟ್ಟು ರೋಗರುಜಿನ ಹಬ್ಬಲು ಕಾರಣವಾಗಬಹುದು. ಬನ್ನೇರುಘಟ್ಟದಲ್ಲಿ ಐದು ಹುಲಿಗಳು ‘ಸಾಲ್ಮೊನೆಲ್ಲಾ’ ವಿಷಾಣು ಸೇರಿದ್ದ ರೋಗಗ್ರಸ್ತ ಮಾಂಸವನ್ನ ತಿಂದೇ ಸತ್ತಿವೆ.

Sep 7, 2016

ರಿಲಾಯನ್ಸ್ ಜಿಯೋ - ಹುಸಿಯಾದ ನಿರೀಕ್ಷೆ

ಆನಂದ ಪ್ರಸಾದ್

07/09/2016

ಕಳೆದ ಕೆಲವು ತಿಂಗಳುಗಳಿಂದ ಭಾರೀ ನಿರೀಕ್ಷೆ ಮೂಡಿಸಿದ್ದ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ಕೊನೆಗೂ ತನ್ನ ವಾಣಿಜ್ಯ ಸೇವೆಯನ್ನು ಸೆಪ್ಟೆಂಬರ್ 5ರಿಂದ ಆರಂಭಿಸಿದೆ. ರಿಲಾಯನ್ಸ್ ಜಿಯೋ ತನ್ನ ವೆಬ್ಸೈಟಿನಲ್ಲಿ ಕೊಟ್ಟಿರುವ ಪ್ಲಾನ್, ಡಾಟಾ ದರಗಳನ್ನು ಪರಿಶೀಲಿಸಿದಾಗ ನರೇಂದ್ರ ಮೋದಿಯವರ 'ಡಿಜಿಟಲ್ ಇಂಡಿಯಾ' ಘೋಷಣೆ ಸಾಕಾರವಾಗುವ ಸಂಭವ ಕಡಿಮೆ. ಏಕೆಂದರೆ ಡಾಟಾ ದರಗಳು ಸಾಮಾನ್ಯ ಗ್ರಾಹಕನಿಗೆ ಅನುಕೂಲಕರವಾಗಿ ಇಲ್ಲ. 149 ರೂಪಾಯಿಗಳಿಗೆ 28 ದಿನಗಳ ಅವಧಿಗೆ 300 ಎಂಬಿ ಡಾಟಾ ಹಾಗೂ ಉಚಿತ ದೇಶೀಯ ಕರೆ ರೋಮಿಂಗ್ ವೆಚ್ಚವಿಲ್ಲದೆ ಹಾಗೂ ದಿನಕ್ಕೆ 100 ಎಸ್ಸೆಮ್ಮೆಸ್ ಕೊಡುಗೆ ನೀಡಿದೆ. ಉಚಿತ ಕರೆ ಮಾಡಬೇಕಿದ್ದರೆ ಗ್ರಾಹಕ 4ಜಿ ಮೊಬೈಲ್ ಹೊಂದಿರಬೇಕು. ಹೀಗಾಗಿ 2ಜಿ ಅಥವಾ 3ಜಿ ಮೊಬೈಲ್ ಹೊಂದಿರುವ ಸಾಮಾನ್ಯ ಗ್ರಾಹಕ ರಿಲಾಯನ್ಸ್ ಜಿಯೋ 4ಜಿಗೆ ಬದಲಾಗಲು ಕನಿಷ್ಠ 3000 ರೂಪಾಯಿಗಳನ್ನು ವ್ಯಯಿಸಬೇಕು. ಇದು 4ಜಿ ಸೌಲಭ್ಯವುಳ್ಳ ರಿಲಾಯನ್ಸ್ ಫ್ಲೇಮ್ ಬ್ರಾಂಡಿನ ಅತಿ ಕಡಿಮೆ ದರದ ಮೊಬೈಲ್ ಆಗಿದೆ. ಇನ್ನೂ ಹೆಚ್ಚಿನ ಸೌಲಭ್ಯವುಳ್ಳ 4ಜಿ ಮೊಬೈಲ್ ಬೇಕಿದ್ದರೆ 7,000ದಿಂದ 10,000 ರೂಪಾಯಿ ತೆರಬೇಕು. ಇಷ್ಟು ಹಣ ಖರ್ಚು ಮಾಡಿ ರಿಲಾಯನ್ಸ್ ಜಿಯೋ 4ಜಿ ನೆಟ್ವರ್ಕಿಗೆ ಬದಲಾಯಿಸಿಕೊಳ್ಳಲು ಸಾಮಾನ್ಯ ಭಾರತೀಯ ಗ್ರಾಹಕರು ಹಿಂದೇಟು ಹಾಕುತ್ತಾರೆ. ಏಕೆಂದರೆ ಭಾರತೀಯರು ಈಗಾಗಲೇ ಉತ್ತಮ ಸ್ಥಿತಿಯಲ್ಲಿರುವ 2ಜಿ/3ಜಿ ಮೊಬೈಲ್ ಫೋನ್ ಅನ್ನು ತ್ಯಜಿಸಿ ಹೊಸದನ್ನು ಕೊಳ್ಳುವ ಪ್ರವೃತ್ತಿಯನ್ನು ಹೊಂದಿಲ್ಲ. ತಮ್ಮ 2ಜಿ/3ಜಿ ಮೊಬೈಲ್ ಫೋನ್ ಹಾಳಾದ ನಂತರವೇ ಸಾಮಾನ್ಯ ಜನರು ಹೊಸ ಮೊಬೈಲ್ ಕೊಳ್ಳುವ ಬಗ್ಗೆ ಯೋಚಿಸುತ್ತಾರೆ. ಏಕೆಂದರೆ ಜನಸಾಮಾನ್ಯರ ಆದಾಯ ಮಟ್ಟವು ಕಡಿಮೆ ಇರುತ್ತದೆ. ಇದರಿಂದಾಗಿ ರಿಲಾಯನ್ಸ್ ಜಿಯೋ ಉಚಿತ ಕರೆ ರೋಮಿಂಗ್ ಸಹಿತ, ಉಚಿತ ಎಸ್ಸೆಮ್ಮೆಸ್ ದಿನಕ್ಕೆ 100 ಕೊಡುಗೆ ನೀಡಿದರೂ ಇದಕ್ಕೆ ಬದಲಾಗಲು ಸಾಕಷ್ಟು ಸಮಯ ಹಿಡಿಯಬಹುದು.

ಕಾವೇರಿದರೆ ಪ್ರಯೋಜನವಿದೆಯೇ?

ಡಾ. ಅಶೋಕ್. ಕೆ. ಆರ್
07/09/2016
ಪ್ರಜಾಪ್ರಭುತ್ವದಲ್ಲಿ ಬಂದ್, ಮುಷ್ಕರ, ಕೆಲಸಕ್ಕೆ ಹಾಜರಾಗದೇ ಇರುವುದು, ರಸ್ತೆತಡೆ, ರೈಲುತಡೆಗಳೆಲ್ಲವೂ ಪ್ರತಿಭಟಿಸುವ ವಿವಿಧ ಮಾರ್ಗಗಳು. ಬೇಡಿಕೆ ಈಡೇರಲು, ಆಳುವ ಸರ್ಕಾರದ, ಕಂಪನಿಗಳ ತಪ್ಪು ನಡೆಗಳನ್ನು ಖಂಡಿಸಲು – ಆ ನಡೆಯನ್ನು ಅವರು ಪುನರ್ ಪರಿಶೀಲಿಸುವಂತೆ ಮಾಡಲು ಈ ಪ್ರತಿಭಟನೆಯ ಮಾರ್ಗಗಳು ಇರಲೇಬೇಕು. ಬೆಂಗಳೂರಿನ ಗಾರ್ಮೆಂಟ್ ನೌಕರರು ಎರಡು ದಿನ ನಡೆಸಿದ ಪ್ರತಿಭಟನೆಯು ಸರಕಾರವು ಪಿ.ಎಫ್ ನೀತಿಯನ್ನು ಪುನರ್ ಪರಿಶೀಲಿಸುವಂತೆ ಮಾಡಿದ್ದು, ರಸ್ತೆ ಸಾರಿಗೆ ನೌಕರರು ನಡೆಸಿದ ಪ್ರತಿಭಟನೆಯಿಂದ ಒಂದಷ್ಟು ಬೇಡಿಕೆಗಳನ್ನಾದರೂ ಸರಕಾರ ಒಪ್ಪುವಂತೆ ಮಾಡಿದ ಇತ್ತೀಚಿನ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಸರ್ಕಾರದ ವಿರುದ್ಧ, ಖಾಸಗಿ ಕಂಪನಿಗಳ ವಿರುದ್ಧ ನಡೆಯುವ ಪ್ರತಿಭಟನೆಗಳು ಯಶಸ್ವಿಯಾಗಬಹುದು, ಒಂದು ಮಟ್ಟದ ಒಪ್ಪಂದಕ್ಕಾದರೂ ಕಾರಣವಾಗಬಹುದು. ಆದರೆ ನ್ಯಾಯಾಧೀಕರಣದ, ನ್ಯಾಯಾಲಯದ ವಿರುದ್ಧ ನಡೆಯುವ ಪ್ರತಿಭಟನೆಗಳಿಂದ ಪ್ರಯೋಜನವಿದೆಯೇ? ಪ್ರತಿಭಟನೆಯ ಬಿಸಿಯಿಂದಾಗಿ ನ್ಯಾಯಾಲಯಗಳು ಯಾವುದೇ ಕಾರಣಕ್ಕೂ ತಮ್ಮ ತೀರ್ಪನ್ನು ಪುನರ್ ಪರಿಶೀಲಿಸುವುದಾಗಲೀ, ನೀಡಿದ ತೀರ್ಪನ್ನು ವಾಪಸ್ಸು ಪಡೆದುಬಿಡುವುದಾಗಲೀ ಸಾಧ್ಯವಿದೆಯೇ? ಸಾಧ್ಯವಿಲ್ಲ ಎನ್ನುವುದು ಸ್ಪಷ್ಟವಾಗಿರುವಾಗ ಕಾವೇರಿಯ ವಿಚಾರದಲ್ಲಿ ನಮ್ಮ ಕಾವೇರಿದ ಪ್ರತಿಭಟನೆಯು, ಶುಕ್ರವಾರ ಕರೆ ನೀಡಲಾಗಿರುವ ಬಂದ್ ಯಾವುದಕ್ಕಾಗಿ? ಯಾರ ವಿರುದ್ಧ?

ನಿನ್ನೆ ಮಂಡ್ಯದಲ್ಲಿ ನಡೆದ ಬಂದ್ ಇರಬಹುದು, ರಾಜ್ಯದ ವಿವಿದೆಡೆ ನಡೆದ ಪ್ರತಿಭಟನೆಗಳಿರಬಹುದು ಅದು ರಾಜ್ಯ ಸರಕಾರ ನೀರು ಬಿಡಬಾರದು ಎಂಬ ಬೇಡಿಕೆಯನ್ನೊಳಗೊಂಡಿದೆ. 1991ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ನ್ಯಾಯಾಧೀಕರಣದ ತೀರ್ಪನ್ನು ಧಿಕ್ಕರಿಸಿದ್ದರು, ಸಿದ್ಧರಾಮಯ್ಯ ಕೂಡ ಅದೇ ರೀತಿ ಮಾಡಬೇಕು ಎನ್ನುವ ಬೇಡಿಕೆಗಳೂ ಇವೆ. ಧಿಕ್ಕರಿಸುವುದು ಸಾಧ್ಯವೇ? ಒಂದು ವೇಳೆ ಸಿದ್ಧರಾಮಯ್ಯ ನೀರು ನೀಡದೇ ಹೋದರೆ, ಸಹಜವಾಗಿ ತಮಿಳುನಾಡು ಮತ್ತೆ ಸುಪ್ರೀಂ ಕೋರ್ಟಿನ ಮೊರೆ ಹೋಗುತ್ತದೆ, ಕರ್ನಾಟಕದ ಮೇಲೆ ನ್ಯಾಯಾಂಗ ನಿಂದನೆಯ ಆಪಾದನೆ ಬರುತ್ತದೆ. ರಾಜ್ಯ ಸರಕಾರ ವಜಾಗೊಳ್ಳಬಹುದು, ಕೆ.ಆರ್.ಎಸ್ ಕೇಂದ್ರದ ಸುಪರ್ದಿಗೆ ಅಂದರೆ ಮಿಲಿಟರಿ/ಪ್ಯಾರಾ ಮಿಲಟರಿ ಪಡೆಗಳು ಅಣೆಕಟ್ಟನ್ನು ವಶಕ್ಕೆ ತೆಗೆದುಕೊಳ್ಳಬಹುದು. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನೀರು ಬಿಡುವ ಎಲ್ಲಾ ಸಾಧ್ಯತೆಗಳೂ ಇವೆ. ಈಗಾಗಲೇ ಸುಪ್ರೀಂ ಕೋರ್ಟಿನ ಆದೇಶದಂತೆ 15,000 ಕ್ಯುಸೆಕ್ಸ್ ನೀರು ಹರಿದು ಹೋಗಿರಲಿಕ್ಕೂ ಸಾಕು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲೂ ನೀರು ಬಿಡೆನು ಎಂದು ಬೆಂಗಳೂರಿನಿಂದ ಮಂಡ್ಯದವರೆಗೂ ಪಾದಯಾತ್ರೆ ನಡೆಸಿದರು, ನಂತರ ಕದ್ದು ಮುಚ್ಚಿ ನೀರು ಬಿಟ್ಟುಬಿಟ್ಟಿದ್ದರು. 

ಕಾವೇರಿಯ ವಿಷಯದಲ್ಲಿ ಕರ್ನಾಟಕ ಸಂಪೂರ್ಣವಾಗಿ ಸೋತು ಹೋಗಿ ಬಹಳ ಕಾಲವಾಗಿದೆ ಎನ್ನುವುದನ್ನು ಮೊದಲು ಅರ್ಥೈಸಿಕೊಳ್ಳಬೇಕು. ಸ್ವಾತಂತ್ರಪೂರ್ವದಲ್ಲೂ ಸೋತಿದೆ, ಸ್ವಾತಂತ್ರ್ಯಾನಂತರದಲ್ಲಿ 2007ರಲ್ಲಿ ನ್ಯಾಯಾಧೀಕರಣ ಕೊಟ್ಟ ತೀರ್ಪಿನ ನಂತರ ಪೂರ್ಣವಾಗಿ ಸೋತು ಹೋಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಟಿಪ್ಪು ಸುಲ್ತಾನನ್ನು ಬ್ರಿಟೀಷರು ಸೋಲಿಸಿದ ನಂತರ ಸ್ಥಾಪನೆಯಾಗಿದ್ದು ಮೈಸೂರು ಒಡೆಯರ್ ಗಳ ಆಡಳಿತ. ಹೆಸರಿಗಿಲ್ಲಿ ಮೈಸೂರಿನ ಒಡೆಯರ್ ಗಳು ರಾಜರಾದರೂ ಪರೋಕ್ಷವಾಗಿ ಆಡಳಿತ ನಡೆಸುತ್ತಿದ್ದಿದ್ದು ಬ್ರಿಟೀಷರು. ಅತ್ತ ಕಡೆ ಮದ್ರಾಸಿನಲ್ಲಿ ಬ್ರಿಟೀಷರದೇ ನೇರ ಆಡಳಿತವಿತ್ತು. ಸಹಜವಾಗಿ ಕಾವೇರಿಯ ವಿಷಯದಲ್ಲಿ ಬ್ರಿಟೀಷರು ತಮ್ಮ ನೇರ ಆಳ್ವಿಕೆಯಿದ್ದ ಪ್ರದೇಶಕ್ಕೆ ಹೆಚ್ಚು ಅನುಕೂಲ ಮಾಡಿಕೊಡುವಂತಹ ಕಾನೂನುಗಳನ್ನು ಜಾರಿಗೆ ತಂದರು. ಬ್ರಿಟೀಷರ ಕೃಪೆಯಲ್ಲಿದ್ದ ಮೈಸೂರು ರಾಜರಿಗೆ ಅದನ್ನು ಒಪ್ಪದೇ ಬೇರೆ ನಿರ್ವಾಹವಿರಲಿಲ್ಲ. ಕೆ.ಆರ್.ಎಸ್ ಅಣೆಕಟ್ಟೆಯನ್ನು ಕಟ್ಟುವಾಗಲೂ ಬ್ರಿಟೀಷರ ಅರ್ಥಾತ್ ಮದ್ರಾಸಿನ ಕಟ್ಟಪ್ಪಣೆಗಳಿಗೆ ಒಪ್ಪಲಾಗಿತ್ತು. ಸ್ವಾತಂತ್ರ್ಯ ನಂತರದಲ್ಲಾದರೂ ನಮಗೆ ಬೇಕಾದಂತೆ ಅಣೆಕಟ್ಟೆ ಕಟ್ಟುವುದು ಸಾಧ್ಯವಾಯಿತೇ? ಇಲ್ಲ. 1968ರಲ್ಲಿ ಹಾರಂಗಿ ಮತ್ತು ಕಬಿನಿ ಜಲಾಶಯಗಳನ್ನು ‘ಆರು ತಿಂಗಳಿಗಿಂತ ಹೆಚ್ಚಾಗಿ ಈ ಅಣೆಕಟ್ಟೆಗಳಲ್ಲಿ ನೀರು ಇಟ್ಟುಕೊಳ್ಳುವುದಿಲ್ಲ’ ಎನ್ನುವ ಶರತ್ತಿನೊಂದಿಗೇ ಕಟ್ಟಿದ್ದು. ಕರ್ನಾಟಕ ಸರಿಯಾಗಿ ನೀರು ಬಿಡುತ್ತಿಲ್ಲ ಎಂದು ಆರೋಪಿಸಿ ತಮಿಳುನಾಡು ನ್ಯಾಯಾಲಯಕ್ಕೆ ಹೋಯಿತು. ನೆಲ ಜಲ ಭಾಷೆಯ ವಿಷಯ ಬಂದಾಗ ತಮಿಳರಿಗೆ ತಮಿಳರೇ ಸಾಟಿ. ಪಕ್ಷ ಬೇಧ ಮರೆತು ಸಂಸತ್ತಿನಲ್ಲಿ ಒಗ್ಗಟ್ಟು ಪ್ರದರ್ಶಿಸುತ್ತಾರೆ, ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುತ್ತಾರೆ, ಪ್ರಬಲವಾಗಿ ಲಾಬಿ ಮಾಡುತ್ತಾರೆ. ತಮಿಳುನಾಡಿನ ಪಕ್ಷಗಳಿಗಿರುವ ಮತ್ತೊಂದು ಅನುಕೂಲತೆಯೆಂದರೆ, ‘ನೀವು ಈ ವಿಷಯ ಮಾತಾಡ್ಬೇಡಿ, ಬಾಯ್ಮುಚ್ಚಿ’ ಎಂದು ಅಲ್ಲಿನ ಶಾಸಕ – ಸಂಸದರಿಗೆ ಹೇಳಲು ದೆಹಲಿಯಲ್ಲಿ ಯಾವುದೇ ಹೈಕಮ್ಯಾಂಡ್ ಇಲ್ಲ. ಅವರ ಹೈಕಮ್ಯಾಂಡುಗಳೆಲ್ಲ ಚೆನ್ನೈನಲ್ಲೇ ಇವೆ. ಪ್ರಾದೇಶಿಕ ಪಕ್ಷವಿಲ್ಲದ ಕರ್ನಾಟಕ ಹೈಕಮ್ಯಾಂಡಿನ ಮರ್ಜಿಗೆ ಬಿದ್ದಿರುವುದು ನಾವು ಸೋತು ಹೋಗಿರುವುದಕ್ಕೆ ಕಾರಣವೆಂದರೆ ತಪ್ಪಲ್ಲ. ಇನ್ನು ನ್ಯಾಯಾಲಯಗಳಲ್ಲಿ, ಟ್ರಿಬ್ಯುನಲ್ ಗಳ ಮುಂದೆ ಕರ್ನಾಟಕದ ವಕೀಲರು ಯಾವತ್ತೂ ಸರಿಯಾಗಿ ವಾದಿಸುವುದೇ ಇಲ್ಲ ಎನ್ನುವ ಆರೋಪವೂ ಇದೆ. ಜಲದ ವಿಷಯದಲ್ಲಿ ನಾವು ಪದೇ ಪದೇ ಸೋಲುತ್ತಿರುವುದು ನೋಡಿದರೆ ವಕೀಲರ ಅದಕ್ಷತೆಯೂ ನಮ್ಮ ಸೋಲಿಗೆ ಕಾರಣ ಎನ್ನಿಸದೇ ಇರದು. ಮೊನ್ನಿನ ತೀರ್ಪಿನ ಸಂದರ್ಭದಲ್ಲೂ ಕರ್ನಾಟಕ ಹತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡುತ್ತೇವೆ ಎಂದು ಹೇಳಿಕೆ ನೀಡಿತು, ತಮಿಳುನಾಡು ಇಪ್ಪತ್ತು ಸಾವಿರ ಕ್ಯುಸೆಕ್ಸ್ ನೀರು ಕೇಳಿತು. ಚೌಕಾಶಿ ಮಾಡಿದ ನ್ಯಾಯಾಲಯ ಹದಿನೈದು ಸಾವಿರ ಕ್ಯುಸೆಕ್ಸ್ ನೀರು ಬಿಡಬೇಕೆಂದು ತೀರ್ಪು ನೀಡಿತು. ನ್ಯಾಯಾಧೀಕರಣದ ಅಂತಿಮ ತೀರ್ಪಿನ ಪ್ರಕಾರ ಇನ್ನೂ ಬಹಳಷ್ಟು ನೀರು ಬಿಡಬೇಕಿದ್ದ ಕರ್ನಾಟಕವು ಬರ ಬಿದ್ದ ಕಾರಣ ನೀರು ಬಿಟ್ಟಿರಲಿಲ್ಲ. ನೀರು ಕೊಡುವುದಕ್ಕೆ ಸಾಧ್ಯವೇ ಇಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿಬಿಟ್ಟರೆ, ನ್ಯಾಯಾಲಯ ಅದನ್ನು ಅಮಾನವೀಯ ನಿರ್ಣಯ ಎಂದು ತೀರ್ಮಾನಿಸಿ ತಮಿಳುನಾಡಿನ ಬೇಡಿಕೆಯನ್ನೇ ಮನ್ನಿಸಿಬಿಡಬಹುದು ಎನ್ನುವ ಕಾರಣಕ್ಕೆ ಹತ್ತು ಸಾವಿರ ಕ್ಯುಸೆಕ್ಸ್ ನೀರು ಬಿಡುವ ಮಾತನಾಡಿತಾ? 

ಒಟ್ಟಿನಲ್ಲಿ ಇವೆಲ್ಲದರಿಂದಲೂ ಸ್ಪಷ್ಟವಾಗುವ ಅಂಶವೆಂದರೆ ಕಾವೇರಿ ಕರ್ನಾಟಕದಲ್ಲೇ ಹುಟ್ಟಿ, ತಮಿಳುನಾಡಿಗಿಂತ ಹೆಚ್ಚಾಗಿ ಕರ್ನಾಟಕದಲ್ಲೇ ಹರಿದರೂ ಕೂಡ ಕಾವೇರಿ ನದಿ ನೀರಿನ ಮೇಲೆ ಹೆಚ್ಚು ಹಕ್ಕು ಹೊಂದಿರುವುದು ತಮಿಳುನಾಡು. ಟ್ರಿಬ್ಯುನಲ್ಲಿನ ಕೊನೆಯ ತೀರ್ಪು ತಮಿಳುನಾಡಿನ ಪರವಾಗೇ ಬಂದಿದೆ, ನಾವದರಲ್ಲಿ ಸೋತುಹೋಗಿದ್ದೇವೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಮಳೆಯಾದ ದಿನಗಳಲ್ಲಿ ಇವ್ಯಾವುದೂ ನೆನಪಾಗುವುದಿಲ್ಲವಾದರೂ ಬರ ಬಿದ್ದ ಸಮಯದಲ್ಲಿ ಮತ್ತೆ ಭಾವನಾತ್ಮಕವಾಗಿ ನಾವೆಷ್ಟೇ ಪ್ರತಿಭಟಿಸಿದರೂ ಕೊನೆಗೆ ನೀರು ಬಿಡಲೇಬೇಕು ಎನ್ನುವ ವಾಸ್ತವವನ್ನು ಅರ್ಥೈಸಿಕೊಂಡಾದ ಮೇಲೆ ಇದಕ್ಕೆ ಯಾವುದೇ ರೀತಿಯ ಪರಿಹಾರವೂ ಇಲ್ಲವೇ ಎನ್ನುವ ಪ್ರಶ್ನೆಗಳೇಳುತ್ತವೆ. ನನ್ನ ಪ್ರಕಾರ ಕಾವೇರಿ ಸಮಸ್ಯೆಗೆ ಮೂರು ರೀತಿಯ ಪರಿಹಾರವಿದೆ.

1. ಕರ್ನಾಟಕ ರಾಜ್ಯವು ಭಾರತದಿಂದ ಬೇರ್ಪಟ್ಟು ಪ್ರತ್ಯೇಕ ದೇಶವಾಗುವುದು

ತಮಿಳುನಾಡು ಕೇಂದ್ರದ ಮಟ್ಟದಲ್ಲಿ ಮಾಡುವ ಲಾಬಿ, ಅಲ್ಲಿನ ಪ್ರಾದೇಶಿಕ ಪಕ್ಷಗಳು ಕೇಂದ್ರದ ಮೇಲೆ ನಡೆಸುವ ಸವಾರಿ, ನಮ್ಮಲ್ಲಿ ಯಾವುದೇ ಪ್ರಾದೇಶಿಕ ಪಕ್ಷವಿಲ್ಲದಿರುವುದರಿಂದ ಭಾರತ ದೇಶದೊಳಗೆ ಕರ್ನಾಟಕ ಒಂದು ರಾಜ್ಯವಾಗಿ ಇರುವವರೆಗೂ ಈ ಸಮಸ್ಯೆ ಬಗೆಹರಿಯುವುದಿಲ್ಲ. ಕರ್ನಾಟಕ ಪ್ರತ್ಯೇಕ ದೇಶವಾಗಿಬಿಟ್ಟರೆ ಈಗಿರುವ ಯಾವ ಕಾನೂನೂ ಅನ್ವಯವಾಗುವುದಿಲ್ಲ, ಅಂತರರಾಷ್ಟ್ರೀಯ ಟ್ರಿಬ್ಯುನಲ್ ಗಳಲ್ಲಿ ವಾದ ವಿವಾದ ನಡೆಯಬಹುದು. ಕರ್ನಾಟಕ ದೇಶದ ಸೈನ್ಯ ಬಲವಾಗಿದ್ದರೆ ಆ ಟ್ರಿಬ್ಯುನಲ್ಲಿನ ತೀರ್ಪನ್ನು ಒಪ್ಪಬೇಕೆಂಬ ಕಟ್ಟಪ್ಪಣೆಯೂ ಇರುವುದಿಲ್ಲ. ಕಾವೇರಿಯ ನೀರು ಬರ್ತಾ ಬರ್ತಾ ಬೆಂಗಳೂರಿನ ಕುಡಿಯುವ ನೀರಾಗಷ್ಟೇ ಉಳಿದುಹೋಗುತ್ತಿದೆ. ಇದಕ್ಕೆ ಅನ್ಯರಾಜ್ಯಗಳ ವಲಸಿಗರ ಹೆಚ್ಚಳವೂ ಕಾರಣ. ಪ್ರತ್ಯೇಕ ದೇಶವಾಗಿಬಿಟ್ಟರೆ ಆ ಸಮಸ್ಯೆಗೂ ಪರಿಹಾರ ಸಿಗುತ್ತದೆ. 

2. ಅಣೆಕಟ್ಟೆಗಳನ್ನು ರೈತರ – ಜನರ ಸುಪರ್ದಿಗೆ ಬಿಟ್ಟುಬಿಡುವುದು

ರಾಜಕೀಯವೇ ಮುಖ್ಯವಾದ ರಾಜಕಾರಣಿಗಳು ಇದಕ್ಕೊಂದು ಪರಿಹಾರ ಕಂಡುಹಿಡಿಯುವುದಿಲ್ಲ, ನ್ಯಾಯಾಲಯಗಳು ಕೊಡುವ ಪರಿಹಾರ ನ್ಯಾಯಬದ್ಧವಾಗಿದೆಯೆಂದು ಎರಡೂ ಕಡೆಯವರಿಗೆ ಅನ್ನಿಸುವುದಿಲ್ಲ. ಸರಕಾರ ಮತ್ತು ನ್ಯಾಯಾಲಯದ ಮಟ್ಟದಲ್ಲಿ ಪರಿಹಾರವಾಗದ ಸಮಸ್ಯೆಯನ್ನು ಜನರೇ ಪರಿಹರಿಸಿಕೊಳ್ಳಲು ಸರಕಾರಗಳ ನಿಯಂತ್ರಣದಲ್ಲಿರುವ ಅಣೆಕಟ್ಟೆಗಳನ್ನು ರೈತರ – ಜನರ ಸುಪರ್ದಿಗೆ ಬಿಟ್ಟುಬಿಡಬೇಕು. ಎರಡೂ ರಾಜ್ಯಗಳ ರೈತರು – ಜನರು ಎರಡೂ ರಾಜ್ಯಗಳಲ್ಲಾಗಿರುವ ಮಳೆ, ಅಣೆಕಟ್ಟೆಯಲ್ಲಿರುವ ನೀರನ್ನು ಅಳೆದು ತೂಗಿ ಆಯಾ ವರುಷಕ್ಕೆ ನಿಯಮಗಳನ್ನು ರೂಪಿಸಿಕೊಳ್ಳುವುದು. ನದಿಪಾತ್ರದ ಜನರು ಈ ವರ್ಷ ಯಾವ ಯಾವ ಬೆಳೆಗಳನ್ನು ಬೆಳೆಯಬಹುದು, ಎಷ್ಟು ಬೆಳೆ ಬೆಳೆಯಬಹುದು ಎನ್ನುವ ಒಪ್ಪಂದವು ಪ್ರತಿ ವರುಷ ನವೀಕರಣವಾಗುತ್ತಲೇ ಇರಬೇಕು. ಇಲ್ಲಿನ ರೈತರ ಕಷ್ಟ ಅಲ್ಲಿನವರಿಗೆ, ಅಲ್ಲಿನ ರೈತರ ಕಷ್ಟ ಇಲ್ಲಿನವರಿಗೆ ಅರ್ಥವಾದರೆ ಅರ್ಧಕ್ಕರ್ಧ ಸಮಸ್ಯೆ ಪರಿಹಾರವಾಗಿಬಿಡುತ್ತದೆ. 

3. ತಮಿಳುನಾಡಿನ ಮಾದರಿಯನ್ನು ಅನುಸರಿಸುವುದು

ಮೇಲಿನೆರಡೂ ಪರಿಹಾರಗಳು ಎಷ್ಟು ಅವಾಸ್ತವಿಕ ಎನ್ನುವುದು ನಿಮ್ಮ ಅರಿವಿಗೂ ಬಂದಿರಬೇಕು. ಕರ್ನಾಟಕ ಭಾರತದಿಂದ ಬೇರ್ಪಟ್ಟು ಪ್ರತ್ಯೇಕ ದೇಶವಾಗುವುದಿಲ್ಲ, ಭಾವನಾತ್ಮಕವಾಗಿ ಉಪಯೋಗಕ್ಕೆ ಬರುವ ವಿಷಯದಲ್ಲಿ ತಟಸ್ಥರಾಗಿ ನೀವೇ ಪರಿಹರಿಸಿಕೊಳ್ಳಿ ಎಂದು ಯಾವ ಸರಕಾರವೂ –ಯಾವ ಪಕ್ಷವೂ ಈ ಸಂಗತಿಯನ್ನು ಜನರೇ ಪರಿಹರಿಸಿಕೊಳ್ಳುವುದಕ್ಕೆ ಬಿಡುವುದಿಲ್ಲ. ಮತ್ತಿದಕ್ಕಿರುವ ಪರಿಹಾರವೇನು? ತಮಿಳುನಾಡಿನ ಮಾದರಿಯೇ ಇದಕ್ಕೆ ಪರಿಹಾರ! ತಮಿಳುನಾಡು ನಡೆಸುವ ಲಾಬಿ, ಚಾಕಚಕ್ಯತೆಯಿಂದ ವಾದ ಮುಂದಿಡುವ ಅವರ ವಕೀಲರು, ನೆಲ-ಜಲ-ಭಾಷೆಯ ವಿಷಯಲ್ಲಿ ಅಲ್ಲಿನ ರಾಜಕಾರಣಿಗಳಲ್ಲಿರುವ ಒಗ್ಗಟ್ಟಿನ ಮಾದರಿಯನ್ನು ಕರ್ನಾಟಕವೀಗ ಅನುಸರಿಸಿದರೂ ಹೆಚ್ಚಿನ ಪ್ರಯೋಜನವಿಲ್ಲ. ಯಾಕೆಂದರೆ ಈಗಾಗಲೇ ಹೇಳಿರುವಂತೆ, ಕಾವೇರಿ ವಿಷಯದಲ್ಲಿ ಕರ್ನಾಟಕ ಸೋತು ಹೋಗಿ ಬಹಳ ವರುಷಗಳಾಗಿಬಿಟ್ಟಿದೆ. ಮತ್ಯಾವುದಿದು ನಾವು ಅನುಸರಿಸಬೇಕಿರುವ ತಮಿಳುನಾಡು ಮಾದರಿ?

ಗೂಗಲ್ ಮ್ಯಾಪ್ ತೆರೆಯಿರಿ. ಕಾವೇರಿ ಉಗಮವಾಗುವ ತಲಕಾವೇರಿಯಿಂದ ಕಾವೇರಿ ಸಮುದ್ರ ಸೇರುವವರೆಗೂ ಸ್ಕ್ರಾಲ್ ಮಾಡಿಕೊಂಡು ಸಾಗಿ. ನದಿಯ ಅಕ್ಕಪಕ್ಕದಲ್ಲಿ ಹಲವು ನೀಲಿ ಪ್ರದೇಶಗಳು ಕಾಣುತ್ತವೆ. ಕರ್ನಾಟಕದಲ್ಲಿ ವಿರಳವಾಗಿ ಕಂಡುಬರುವ ಈ ನೀಲಿ ಪ್ರದೇಶಗಳು, ಕಾವೇರಿ ನದಿ ತಮಿಳುನಾಡಿಗೆ ಪ್ರವೇಶಿಸಿದ ನಂತರ ಹೆಚ್ಚಾಗುತ್ತದೆ. ಮೆಟ್ಟೂರು ದಾಟಿ ಸಮುದ್ರದ ಬಳಿ ಸಾಗುತ್ತಿದ್ದಂತೆ ಮತ್ತಷ್ಟು ಮಗದಷ್ಟು ಹೆಚ್ಚಾಗುತ್ತದೆ. ಏನಿದು ನೀಲಿ ಪ್ರದೇಶಗಳು? ಚಿಕ್ಕ ಚಿಕ್ಕ ಕೆರಗಳನ್ನು ಸೂಚಿಸುತ್ತವೆ ಈ ನೀಲಿ ಪ್ರದೇಶಗಳು. ಕಾವೇರಿ ನದಿಯ ವಿಷಯದಲ್ಲಿ ಕರ್ನಾಟಕಕ್ಕೆ ಏನಾದರೂ ಪರಿಹಾರ ಅಂತ ಇದ್ದರೆ ಅದು ಕೆರೆಗಳಲ್ಲಿದೆ. ನಮ್ಮ ನೀರಾವರಿ ತಜ್ಞರು, ಜಲ ತಜ್ಞರು, ನೀರಾವರಿ ಇಲಾಖೆಯ ಅಧಿಕಾರಿಗಳು ನೀರಿನ ವಿಷಯದಲ್ಲಿ ಮುಂದಾಗಿ ಯೋಚಿಸದೆ ಹಲವು ಶತಮಾನಗಳ ಹಿಂದಾಗಿ ಯೋಚಿಸಿದರಷ್ಟೇ ನೀರಿನ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಬಹುದು. ಕರ್ನಾಟಕದಲ್ಲಿ ಕಾವೇರಿ ನದಿ ಹರಿಯುವ ಊರುಗಳಲ್ಲಿನ ಕೆರೆಗಳು ಮಾಯವಾಗಿಬಿಟ್ಟಿವೆ, ನಾಲೆ ನೀರು ಕೊಂಡೊಯ್ಯುವ ಪ್ರದೇಶಗಳಲ್ಲಿನ ಬಹುತೇಕ ಕೆರೆಗಳಲ್ಲಿ ಒಂದೋ ಹೂಳು ತುಂಬಿಕೊಂಡಿದೆ, ಇಲ್ಲಾ ಒತ್ತುವರಿಯಾಗಿಬಿಟ್ಟಿದೆ. ಮಂಡ್ಯ ನಗರದಲ್ಲಿರುವ ನಮ್ಮ ಮನೆಯಲ್ಲಿರುವ ಬಾವಿಯಲ್ಲಿ ನೀರು ಬತ್ತಿದ್ದೇ ಇಲ್ಲ. ಆ ಬಾವಿಯೇನೂ ಆಳವಾದದ್ದಲ್ಲ, ಕೇವಲ ಹದಿಮೂರು ಅಡಿಯ ಬಾವಿಯದು. ಮಂಡ್ಯದ ಬಸ್ ನಿಲ್ದಾಣದಿಂದ ಎರಡು ಕಿಲೋಮೀಟರುಗಳ ಅಂತರದಲ್ಲಿದ್ದ ಚಿಕ್ಕಮಂಡ್ಯ ಕೆರೆಯನ್ನು ಮುಚ್ಚಿ ಹಾಕಿ ಅಲ್ಲಿ ನಿವೇಶನಗಳನ್ನು ಮಾಡಿಬಿಡೋಣ ಎಂಬ ಭಯಂಕರ ಯೋಚನೆ ಯಾರಿಗೆ ಬಂತೋ ಏನೋ ಕೆರೆ ಮುಚ್ಚಿ ಹೋಯಿತು. ನಮ್ಮ ಮನೆಯ, ಮಂಡ್ಯದ ಬಹುತೇಕ ಮನೆಗಳ ಕಡಿಮೆ ಆಳದ ಬಾವಿಗಳೂ ನೀರಿಲ್ಲದಂತಾಗಿಬಿಟ್ಟವು. ಈಗ ಮಂಡ್ಯಕ್ಕೂ ಪೈಪುಗಳ ಮೂಲಕ ಬರುವ ಕಾವೇರಿ ನೀರೇ ಬೇಕು, ಇಲ್ಲಾ ಅಂತರ್ಜಲವನ್ನು ಮೇಲೆತ್ತುವ ಬೋರ್ ವೆಲ್ಲುಗಳೇ ಬೇಕು. ಬೆಂಗಳೂರಿನಲ್ಲಿನ ಕೆರೆ ಒತ್ತುವರಿಯೂ ಇಲ್ಲಿನ ನೀರಿನ ಸಮಸ್ಯೆಗೆ ಕಾರಣವೆನ್ನುವುದು ತಿಳಿದೇ ಇದೆಯಲ್ಲ. ಇರೋ ಕೆರೆಗಳ ಹೂಳೆತ್ತುವುದಕ್ಕೆ ಆಸಕ್ತಿ ತೋರಿಸದ ಸರಕಾರ, ಊರಲ್ಲಿರುವ – ಊರಲ್ಲಿದ್ದ ಕೆರೆಗಳನ್ನು ಉಳಿಸಿಕೊಳ್ಳುವುದಕ್ಕೆ ಆಸಕ್ತಿ ತೋರಿಸದ ಸ್ಥಳೀಯರ ಸಂಖೈ ಹೆಚ್ಚಿರುವಾಗ ತಮಿಳುನಾಡಿನ ಮಾದರಿಯನ್ನು ಅನುಸರಿಸುತ್ತೀವಾ? ಹಳೆಯ ಕೆರೆಗಳನ್ನೇ ಉಳಿಸಿಕೊಳ್ಳದವರು ಹೊಸ ಕೆರೆಗಳನ್ನು ನಿರ್ಮಿಸಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೀವಾ? ಕೆರೆಗಳ ಬಗ್ಗೆ ಯೋಚಿಸದ ಸರಕಾರ ಮೇಕೆದಾಟುವಿನಲ್ಲಿ ಮತ್ತೊಂದು ಅಣೆಕಟ್ಟೆ ಕಟ್ಟುವ ಮಾತನ್ನಾಡುತ್ತದೆ. ಮತ್ತೊಂದು ಅಣೆಕಟ್ಟೆಯೆಂದರೆ ತಮಿಳುನಾಡಿನ ಜೊತೆಗೆ ಮತ್ತೊಂದು ಸುತ್ತಿನ ವಾದ ವಿವಾದಕ್ಕೆ ದಾರಿಯೆಂದೇ ಅರ್ಥವಲ್ಲವೇ? 

ಕೆರೆಗಳನ್ನು ನಿರ್ಮಿಸುವುದರಿಂದ ನೀರಿನ ಸಮಸ್ಯೆ ಅರ್ಧಕ್ಕರ್ಧ ಬಗೆಹರಿಯುತ್ತದೆ. ಆದರದಲ್ಲಿ ಅಣೆಕಟ್ಟೆಯ ನಿರ್ಮಾಣಕ್ಕೆ ಖರ್ಚಾಗುವಷ್ಟು ದುಡ್ಡಿಲ್ಲ, ಭಾವನಾತ್ಮಕವಾಗಿಯೂ ಕೆರೆಯ ನೀರು ನಮ್ಮನ್ನು ತಟ್ಟುವುದಿಲ್ಲ. ಮುಂದಿನ ವರುಷ ಮಳೆ ಚೆನ್ನಾಗಿ ಆದಾಗ ಕಾವೇರಿ ಸಮಸ್ಯೆಯೂ ಮರೆತುಹೋಗಿರುತ್ತದೆ, ತಮಿಳುನಾಡೂ ಮರೆತುಹೋಗಿರುತ್ತದೆ – ಐದಾರು ವರುಷಗಳ ನಂತರ ಮತ್ತೆ ಬರ ಬಿದ್ದಾಗ ಮತ್ತಿದೇ ಘಟನೆಗಳು ಪುನರಾವರ್ತನೆಯಾಗುತ್ತವೆ……

ಕಾವೇರಿಯ ವಿಷಯದಲ್ಲಿ ನಾವು ಸೋತು ಬಹಳ ಕಾಲವಾಗಿದೆ…… ಹೊಸ ಕೆರೆಗಳ ನಿರ್ಮಾಣ ಮತ್ತು ಇರುವ ಕೆರೆಗಳ ನವೀಕರಣದಿಂದಷ್ಟೇ ನಮ್ಮ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯ…….

(ಕಾವೇರಿ ನದಿ ವಿವಾದದ ಬಗ್ಗೆ ಪೂರ್ಣವಾಗಿ ತಿಳಿದುಕೊಳ್ಳಲು ವಸಂತಬಂದಾ ಬ್ಲಾಗಿನ ಈ ಲೇಖನಗಳನ್ನೂ ಓದಿ: ಭಾಗ 1, ಭಾಗ 2, ಭಾಗ 3, ಭಾಗ 4)

Sep 2, 2016

ಮೇಕಿಂಗ್ ಹಿಸ್ಟರಿ: ವೆಲ್ಲೂರಿನ ಬಂಡಾಯ (1806)

ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
02/09/2016
ಮುಂದಿನ ಭಾಗದಲ್ಲಿ 1800-1801ರ ಸಮಯದಲ್ಲಿ ಊಳಿಗಮಾನ್ಯ ದೊರೆಗಳು, ಈ ಮುಂಚೆ ಮೈಸೂರು ಸೈನ್ಯದಲ್ಲಿದ್ದ, ಪಾಳೇಗಾರರೊಡನೆ ಸೇರಿ ಬ್ರಿಟೀಷರೊಡನೆ ದಕ್ಷಿಣ ಕನ್ನಡದಲ್ಲಿ ಹೋರಾಡಿದ್ದ ಸುಬ್ಬಾ ರಾವ್ ಮತ್ತು ಮಹತಾಬ್ ಖಾನನ ನೇತೃತ್ವದಲ್ಲಿ ನಡೆಸಿದ ಸಶಸ್ತ್ರ ಪ್ರತಿರೋಧದ ಬಗ್ಗೆ ಚರ್ಚಿಸೋಣ. 

ಕಾರ್ಲ್ ಮಾರ್ಕ್ಸ್ ನ್ಯೂ ಯಾರ್ಕ್ ಡೈಲಿ ಟ್ರಿಬ್ಯೂನಿಗೆ 1857ರ ಭಾರತದ ಬಂಡಾಯದ ಬಗ್ಗೆ ಬರೆದ ಲೇಖನ, ಕೆಲವು ಪ್ರಶ್ನೆಗಳ ತೀಕ್ಷ್ಣ ವಿಶ್ಲೇಷಣೆ ನಡೆಸಿರುವುದು ವೆಲ್ಲೂರಿನ ಬಂಡಾಯವನ್ನು ಅರ್ಥೈಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ಇಪ್ಪತ್ತು ಕೋಟಿ ಜನರನ್ನು ಎರಡು ಲಕ್ಷ ಜನರ ಸೈನ್ಯವೊಂದು ಆಳುತ್ತಿರುವ ದೇಶ ಭಾರತ ಎಂದು ಮಾರ್ಕ್ಸ್ ಬರೆಯುತ್ತಾರೆ. ಮತ್ತಿದರಲ್ಲಿ, ಬ್ರಿಟೀಷರ ಸಂಖೈ ಕೇವಲ ನಲವತ್ತು ಸಾವಿರ. (12) 

ಬಂಗಾಳದ ಸೈನ್ಯದ ರಚನೆಯಲ್ಲಿ ಮತ್ತು ಮದ್ರಾಸ್ – ಬಾಂಬೆಯ ಸೈನ್ಯದ ರಚನೆಯಲ್ಲಿ ವ್ಯತ್ಯಾಸಗಳಿದ್ದವು. 

ಬಂಗಾಳದ ಸೈನ್ಯದಲ್ಲಿದ್ದ 80,000 ಜನರಲ್ಲಿ, 30,000ದಷ್ಟು ಬ್ರಿಟೀಷರಿದ್ದರು, 28,000 ರಜಪೂತರು, 23,000 ಬ್ರಾಹ್ಮಣರು, 13,000 ಮುಸ್ಲಿಮರು ಮತ್ತು ಕೇವಲ 5,000ದಷ್ಟು “ಕೆಳಜಾತಿಯವರು”. (13) 

ಮಾರ್ಕ್ಸ್ ಬರೆಯುತ್ತಾರೆ “ಬಾಂಬೆ ಮತ್ತು ಮದ್ರಾಸಿನ ಸೈನ್ಯದಲ್ಲಿದ್ದ ಹೆಚ್ಚಿನವರು ಕೆಳ ಜಾತಿಯ ಜನರು”. (14) ಮದ್ರಾಸ್ ಸೈನ್ಯದಲ್ಲಿದ್ದ ಯುರೋಪಿಯನ್ ಪ್ರಾಬಲ್ಯ ಬಂಗಾಳದ ಸೈನ್ಯಕ್ಕೆ ಹೋಲಿಸಿದರೆ ಬಹಳವೇ ಕಡಿಮೆಯಿತ್ತು. 

ಟಿಪ್ಪುವಿನ ಮಕ್ಕಳನ್ನು ಬ್ರಿಟೀಷರು ತಮಿಳುನಾಡಿನ ವೆಲ್ಲೂರು ಜೈಲಿನಲ್ಲಿಟ್ಟಿದ್ದರು. ಅಲ್ಲಿ ಕಾವಲಿಗಿದ್ದ ಮದ್ರಾಸ್ ಸೈನ್ಯದಲ್ಲಿದ್ದ ಹೆಚ್ಚಿನವರು ಶೋಷಿತ ಜಾತಿಗೆ ಸೇರಿದ್ದವರು. ಆದ್ದರಿಂದಾಗಿ, ವಸ್ತುನಿಷ್ಠವಾಗಿ ನೋಡಿದರೆ, ಕೆಲವೇ ಕೆಲವು ಸಂಖೈಯಲ್ಲಿದ್ದ ಯುರೋಪಿಯನ್ ಅಧಿಕಾರಿಗಳು ಮತ್ತು ಸೈನಿಕರನ್ನು ಇಲ್ಲವಾಗಿಸಲು ಹೆಚ್ಚು ಸಮಯವೂ ಬೇಕಿರಲಿಲ್ಲ, ಯೋಜನೆಯೂ ಮಾಡಬೇಕಿರಲಿಲ್ಲ. 

“ಮೊದಲ ನೋಟದಲ್ಲಿ, ಭಾರತದ ಜನರ ನಿಷ್ಠೆ ಸ್ಥಳೀಯ ಸೈನ್ಯದ ನಿಷ್ಠೆಯ ಮೇಲವಲಂಬಿತವಾಗಿದೆ ಎಂದು ತೋರುತ್ತದೆ, ಭಾರತದ ಜನರಲ್ಲಿದ್ದ ಪ್ರತಿಭಟನೆಯ ಮನೋಭಾವವನ್ನು ಕೇಂದ್ರೀಕೃತಗೊಳಿಸಿದ್ದು ಬ್ರಿಟೀಷ್ ಆಳ್ವಿಕೆ” ಎಂದು ಮಾರ್ಕ್ಸ್ ಪರಿಸ್ಥಿತಿಯನ್ನು ಸರಿಯಾಗಿ ಅವಲೋಕಿಸುತ್ತಾರೆ. (15) 

ಬ್ರಿಟೀಷ್ ಸೈನ್ಯದಲ್ಲಿ ಭಾರತೀಯ ಸೈನಿಕರಿಗಿದ್ದ ಶೋಷಣಾತ್ಮಕ ಪರಿಸ್ಥಿತಿ ಸೈನಿಕರಲ್ಲಿ ಆಗಾಗ ಉಂಟಾಗುವ ಅಸಮಾಧಾನಕ್ಕೆ ಕಾರಣವಾಗಿತ್ತು ಮತ್ತಿದು ದಂಡನಾತ್ಮಕ ಕೋರ್ಟ್ ಮಾರ್ಷಲ್ಲುಗಳಲ್ಲಿ ಅಂತ್ಯವಾಗುತ್ತಿತ್ತು. 1857ರ ಸ್ವಾತಂತ್ರ್ಯದ ಯುದ್ಧವನ್ನಾರಂಭಿಸಿದ್ದು ಬ್ರಿಟೀಷ್ ಸೈನ್ಯದಲ್ಲಿ ಭಾರತೀಯ ಸಿಪಾಯಿಗಳು, ಅವರಲ್ಲಿದ್ದ ವಸಾಹತು ವಿರೋಧಿ ಕ್ರಾಂತಿಕಾರತೆಯನ್ನು 1857ರ ಸ್ವಾತಂತ್ರ್ಯ ಹೋರಾಟ ಹೊರಗೆಳೆದಿತ್ತು. ಟಿಪ್ಪುವಿನ ಮಗ ಫತಾ ಹೈದರನ ನೇತೃತ್ವದಲ್ಲಿ ವೆಲ್ಲೂರಿನ ಸಿಪಾಯಿಗಳ ರೋಷವನ್ನು ಕ್ರೋಡೀಕರಿಸಲಾಯಿತು, ಫತಾ ಹೈದರನ ನೇತೃತ್ವವನ್ನು ಅವರು ತತ್ ಕ್ಷಣ ಒಪ್ಪಿಕೊಂಡರು; ಪರಿಣಾಮವಾಗಿ ನಗರದ ಜನರ ಬೆಂಬಲದೊಂದಿಗೆ ಬಂಡಾಯ ಪ್ರಾರಂಭವಾಯಿತು. 

ಈ ದಂಗೆಯ ಬಗ್ಗೆ ನಂತರದಲ್ಲಿ ನಡೆದ ತನಿಖಾ ಸಮಿತಿ ಕೊಟ್ಟ ವರದಿಯನ್ನಾಧರಿಸಿ ಚೋಪ್ರಾ, ರವಿಚಂದ್ರನ್ ಮತ್ತು ಸುಬ್ರಮಣಿಯನ್ ಬರೆಯುತ್ತಾರೆ: “ಭಾರತೀಯ ಸೈನಿಕರಿಗೆ ಬಡ್ತಿ ಸಿಗುವ ಸಾಧ್ಯತೆಗಳು ಕಡಿಮೆಯಿರುತ್ತಿತ್ತು; ಸುಬೇದಾರನ ಸ್ಥಾನದಿಂದ ಮೇಲೇರಲು ಅವರಿಗೆ ಸಾಧ್ಯವೇ ಇರಲಿಲ್ಲ. ಚಿಕ್ಕ ಪುಟ್ಟ ತಪ್ಪಿಗೂ ಭಾರತೀಯ ಅಧಿಕಾರಿಗಳನ್ನು ಅವಮಾನಿಸಿ ಹಿಂಬಡ್ತಿ ನೀಡಲಾಗುತ್ತಿತ್ತು. ಅವರಿಗೆ ಸಿಗುತ್ತಿದ್ದ ಪಗಾರವೂ ತುಂಬಾ ಕಮ್ಮಿ; ನಿಜಾಮ್ ಮತ್ತು ಮರಾಠ ಮುಖ್ಯಸ್ಥರ ಕೆಳಗಿದ್ದ ಸಾಮಾನ್ಯ ಸಿಪಾಯಿಗಳಿಗೂ ಕಂಪನಿಯ ಕೆಳಗಿದ್ದ ಸುಬೇದಾರರು ಮತ್ತು ಜಮಾದಾರರಿಗಿಂತ ಹೆಚ್ಚಿನ ಸಂಬಳ ಸಿಗುತ್ತಿತ್ತು ಎಂದವರು ಆರೋಪಿಸುತ್ತಾರೆ. ಆದಾಗ್ಯೂ, ಈ ಅಸಮಾಧಾನಗಳೆಲ್ಲವೂ ಮೇಲ್ ಬಂದಿದ್ದು ಸಿಪಾಯಿಗಳಿಗೆ ಹೊಸ ತಲೆ ವಸ್ತ್ರವನ್ನು ಕಂಪನಿ ಪರಿಚಯಿಸಲು ಪ್ರಯತ್ನಿಸಿದಾಗ”. (16) 

1857ರ ದಂಗೆಯ ರೋಷಕ್ಕೆ ಕಿಡಿ ಹಚ್ಚಲು ಬೀಫ್ ಮತ್ತು ಪೋರ್ಕ್ ಕಾರಣವಾದ ರೀತಿಯಲ್ಲೇ, ನಾಮಕಾವಾಸ್ಥೆ ವಿಷಯವಾದ ತಲೆ ವಸ್ತ್ರದ ಕಾರಣದಿಂದ ಇಲ್ಲಿನ ಅಸಮಾಧಾನ ಸ್ಪೋಟಗೊಂಡಿತು. ಬ್ರಿಟೀಷ್ ತನಿಖಾ ಸಮಿತಿಯ ದಾಟಿಯಲ್ಲೇ ಬರೆಯುತ್ತಾ ಈ ಭಾರತೀಯ ಲೇಖಕರು ಬರೆಯುತ್ತಾರೆ: “ಸಿಪಾಯಿಗಳು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಲು, ಯುರೋಪಿನ ಟೋಪಿಯಂತೆ ಕಾಣುವ ಹೊಸ ತಲೆ ವಸ್ತ್ರವನ್ನು ಪರಿಚಯಿಸಲಾಯಿತು. ಕಿವಿ ಓಲೆ ಮತ್ತು ಹಣೆಯ ಮೇಲೆ ಜಾತಿ ಸೂಚಕ ಚಿಹ್ನೆಗಳನ್ನು ನಿಷೇಧಿಸಲಾಯಿತು…. ಆದರೆ ಸಿಪಾಯಿಗಳು ಹೊಸ ತಲೆ ವಸ್ತ್ರವನ್ನು ಒಪ್ಪಲು ನಿರಾಕರಿಸಿದರು ಮತ್ತು ಬಂಧನದ ಭೀತಿಯ ಹೊರತಾಗಿಯೂ ಈ ಆದೇಶದ ವಿರುದ್ಧ ಬಹಿರಂಗವಾಗಿ ಪ್ರತಿಭಟಿಸಿದರು. ತತ್ಪರಿಣಾಮವಾಗಿ ಕೆಲವರನ್ನು ಬಂಧಿಸಲಾಯಿತು. 1806ರ ಮೇ 7ರಂದು ಬೆಳಗಿನ ಪೆರೇಡಿನ ಸಮಯದಲ್ಲಿ ಹೊಸ ತಲೆ ವಸ್ತ್ರವನ್ನು ಧರಿಸುವಂತೆ ಸಿಪಾಯಿಗಳಿಗೆ ಆದೇಶಿಸಿದಾಗ, ಆದೇಶವನ್ನು ಧಿಕ್ಕರಿಸಿದ ಸಿಪಾಯಿಗಳು ತಲೆಯ ಮೇಲೊಂದು ಕೈಚೌಕವನ್ನು ಹಾಕಿಕೊಂಡು ಇಂಗ್ಲೀಷ್ ಅಧಿಕಾರಿಗಳನ್ನು ‘ನಾಯಿ’ಗಳೆಂದು ಹೀಗಳೆದರು…. 

ವೆಲ್ಲೂರಿನಲ್ಲಿ ಈ ಘಟನೆ ಶುರುವಾದ ಕೆಲವೇ ದಿನಗಳಲ್ಲಿ ಉತ್ತರ ಆರ್ಕಾಟಿನ ವಲ್ಲಜಾಬಾದಿನಲ್ಲಿದ್ದ ಸಿಪಾಯಿಗಳು ಇದೇ ರೀತಿಯ ಪ್ರತಿಭಟನೆಯನ್ನು ನಡೆಸಿದರು. ಈ ಪ್ರಕರಣ ಸಾರ್ವಜನಿಕರ ನೇತೃತ್ವದಿಂದ ಪ್ರಾರಂಭವಾಗಿತ್ತು; ಯುರೋಪಿಯನ್ ಶೈಲಿಯ ಟೋಪಿಗಳನ್ನು ಹಾಕಿದ್ದ ಸಿಪಾಯಿಗಳನ್ನು ಅವರು ಹೀಯಾಳಿಸಿದ್ದರು. ಪರಿಣಾಮವಾಗಿ ಸಿಪಾಯಿಗಳು ಆ ಟೋಪಿಗಳನ್ನು ತೆಗೆದೆಸೆದರು ಮತ್ತಿನ್ನೂ ಅದನ್ನು ಧರಿಸಿದವರನ್ನು ತೆಗಳಿದರು. 

ಈ ಸಂದರ್ಭವನ್ನು ವೆಲ್ಲೂರಿನಲ್ಲಿ ಬಂಧನದಲ್ಲಿದ್ದ ಟಿಪ್ಪುವಿನ ಮಕ್ಕಳು ಸಂಪೂರ್ಣವಾಗಿ ಉಪಯೋಗಿಸಿಕೊಂಡರು….ಈ ದಂಗೆಗೊಂದು ರಾಜಕೀಯ ಗುರಿ ನೀಡುವ ಪ್ರಯತ್ನ ಮಾಡಿದರು….ಮತ್ತು ಸಿಪಾಯಿಗಳೊಡನೆ ಗುಪ್ತ ಸಂಪರ್ಕವನ್ನು ಬೆಳೆಸಿಕೊಂಡು, ಅವರ ಅಸಮಾಧಾನವನ್ನು ಇಂಗ್ಲೀಷರ ವಿರುದ್ಧದ ಹಿಂಸಾತ್ಮಕ ಹೋರಾಟಕ್ಕೆ ತಿರುಗಿಸಿದರು, ದಕ್ಷಿಣ ಭಾರತದದಿಂದ ಬ್ರಿಟೀಷರನ್ನು ಓಡಿಸುವ ಸ್ಪಷ್ಟ ಉದ್ದೇಶದೊಂದಿಗೆ…..ಟಿಪ್ಪುವಿನ ನಾಲ್ಕನೇ ಮಗನಾದ ಮೊಯಿನುದ್ದೀನನ ನೇತೃತ್ವದಲ್ಲಿ, ದಕ್ಷಿಣ ಭಾರತದ ವಿವಿಧ ಭಾಗಗಳಿಂದ ದೊರೆಯುವ ಬೆಂಬಲದಿಂದ ಬಂಡಾಯ ನಡೆಯುತ್ತದೆ ಎಂದು ಸಿಪಾಯಿಗಳಿಗೆ ತಿಳಿಸಲಾಯಿತು. ಬಂಡಾಯವನ್ನು ಹಿಂಸಾತ್ಮವಾಗಿ ಪ್ರಾರಂಭಿಸಬೇಕೆಂದು ರಹಸ್ಯವಾಗಿ ನಿರ್ಧರಿಸಲಾಯಿತು ಮತ್ತು ಇದರಾರಂಭಕ್ಕೆ 1806ರ ಜುಲೈ 10ನೇ ತಾರೀಖನ್ನು ನಿಗದಿಗೊಳಿಸಲಾಯಿತು. ರಾತ್ರಿಯಷ್ಟರಲ್ಲಿ ಸಿಪಾಯಿಗಳು ಕಾರ್ಯಾಚರಣೆಗೆ ಇಳಿದಿದ್ದರು; ಮುಖ್ಯ ದ್ವಾರದಲ್ಲಿದ್ದ ಇಂಗ್ಲೀಷ್ ಕಾವಲುಗಾರರನ್ನು ಅವರು ಕೊಂದರು ಮತ್ತು ಸೇನಾ ಉಗ್ರಾಣವನ್ನು ವಶಕ್ಕೆ ಪಡೆದುಕೊಂಡರು. ಇದರ ನಂತರ ಯುರೋಪಿಯನ್ ಪಡೆಯ ಸೈನಿಕರ ಮತ್ತು ಅಧಿಕಾರಿಗಳ ಮಾರಣಹೋಮ ನಡೆಯಿತು, ಹೆಂಗಸರು ಮತ್ತು ಮಕ್ಕಳನ್ನು ಹೊರತುಪಡಿಸಿ…..ಲೂಟಿ ಮತ್ತು ನಿಧಿ ಹುಡುಕುವಿಕೆ ಅವ್ಯಾಹತವಾಗಿ ನಡೆಯಿತು. ರಕ್ಷಣೆಯಿಲ್ಲದ ಇಂಗ್ಲೀಷರ ಸಂಪತ್ತನ್ನು ದೋಚಲಾಯಿತು ಮತ್ತು ಎಲ್ಲೆಡೆ ಗೊಂದಲಗಳಿದ್ದವು”. (17) 

ಒಟ್ಟಾರೆ, 14 ಬ್ರಿಟೀಷ್ ಅಧಿಕಾರಿಗಳು ಮತ್ತು ಸೈನಿಕರನ್ನು ಕೊಲ್ಲಲಾಯಿತು ಮತ್ತು 76 ಮಂದಿ ಗಾಯಗೊಂಡರು. “ಕಗ್ಗೊಲೆ”ಯನ್ನು ಚೆನ್ನಾಗಿ ನಿಯಂತ್ರಿಸಿ ನಿರ್ವಹಿಸಲಾಯಿತು. ಬ್ರಿಟೀಷ್ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಭಾರತೀಯ ಸೈನಿಕರು ದಂಗೆಯೆದ್ದು ತಮ್ಮ ಯುರೋಪಿಯನ್ ಅಧಿಕಾರಿಗಳನ್ನು ಹತ್ಯೆ ಮಾಡಿದ್ದರು. ವೆಲ್ಲೂರಿನ ಜನತೆ ಈ ದಂಗೆಗೆ ತುಂಬು ಹೃದಯದ ಬೆಂಬಲ ನೀಡಿದರು ಮತ್ತು ಸೈನಿಕರಿಗೆ ಬೇಕಾದ ಎಲ್ಲಾ ರೀತಿಯ ಸಹಾಯವನ್ನೂ ಮಾಡಿದರು. ದಂಗೆಯನ್ನು ಇತರೆ ರಕ್ಷಣಾ ಕೋಟೆಗಳೆಡೆಗೂ ಹಬ್ಬಿಸುವ ಯೋಜನೆಗಳನ್ನು ರೂಪಿಸಲಾಗಿತ್ತಾದರೂ, ಬ್ರಿಟೀಷರು ವೆಲ್ಲೂರನ್ನು ಸುತ್ತುವರಿದರು ಮತ್ತು ಯುದ್ಧದಿಂದ ಕೋಟೆಯನ್ನು ಪುನರ್ ವಶಪಡಿಸಿಕೊಂಡರು. ಕೋಟೆಯ ಹೊರಗಡೆ ಅಸಂಖ್ಯಾತ ಜನರನ್ನು ಹತ್ಯೆಗೈದ ನಂತರ ಅವರು ಕೋಟೆಯೊಳಗಿನಿಂದ 800 ದೇಹಗಳನ್ನು ಎಳೆದು ಬಿಸಾಡಿದರು, ವಿದೇಶಿಗರಿಂದ ಓಡಿಸಲ್ಪಟ್ಟ ಮೈಸೂರು ಸುಲ್ತಾನರಿಗೆ ಮತ್ತೆ ಅಧಿಕಾರ ನೀಡಲು ನಡೆದ ಬಂಡಾಯವನ್ನು ಶಮನ ಮಾಡಿಬಿಟ್ಟರು. ವ್ಯಂಗ್ಯದ ವಿಷಯವೆಂದರೆ ತನಿಖಾ ಸಮಿತಿಗೆ ಈ “ಸ್ವೇಚ್ಛಾಚಾರದ ಹತ್ಯಾಕಾಂಡದ” ಬಗ್ಗೆ ಯಾವ ಸುಳಿವೂ ಸಿಗಲಿಲ್ಲ! ಕೊಲೊನೆಲ್ ಗಿಲೆಸ್ಪಿ ತನ್ನ 

ಡ್ರಾಗನ್ ರೆಜಿಮೆಂಟಿನೊಂದಿಗೆ ಹಲವರನ್ನು ಕೊಂದ ಎಂದು ಮಾರ್ಕ್ಸ್ ಹೇಳುತ್ತಾನೆ, ವೆಲ್ಲೂರನ್ನು ವಶಪಡಿಸಿಕೊಳ್ಳುವಾಗ, ಗವರ್ನರ್ ಜೆನರಲ್ ಮಿಂಟೋ, ಬಂಡಾಯವೆದ್ದವರಿಗೆ “ಕುಲೀನ” ಉಪಚಾರ ನೀಡುತ್ತಾನೆ. ಒಬ್ಬ ಪರಿಪೂರ್ಣ ಸಭ್ಯಸ್ಥನಂತೆ, ಆತ ಹಲವಾರು ಜನರನ್ನು ಸಾವಿನ ಮನೆಗೆ ಕಳುಹಿಸಿರಬೇಕು. (18) 

ಹಾಗಿದ್ದರೂ, ಬ್ರಿಟೀಷರು ನಡೆಸಿದ ಹತ್ಯಾಕಾಂಡವನ್ನು ಮೌನದಿಂದ ನೋಡುತ್ತಾ ಕೂರಲಿಲ್ಲ. ಬ್ರಿಟೀಷರು ನಡೆಸಿದ ಮನುಷ್ಯಹರಣವನ್ನು ಸಮರ್ಥಿಸುವ ಅನೇಕಾನೇಕ ವಸಾಹತುಶಾಹಿ ನೆಲೆಯ ಬರಹಗಳಿವೆ. ಇಲ್ಲೊಂದು ಗಿಲೆಸ್ಪಿಯ ಕಾರ್ಯಗಳನ್ನು ವಿವರಿಸುವ ಬರಹವಿದೆ: “ಹತ್ತೊಂಬತ್ತನೆಯ ಹಾಗೂ ಮದ್ರಾಸಿನ ಸೈನ್ಯ ತನ್ನ ಹಾದಿಗೆ ಅಡ್ಡ ಬಂದ ಪ್ರತಿಯೊಬ್ಬರ ಮೇಲೂ ದಾಳಿ ನಡೆಸಿ ಕೊಂದು ಹಾಕಿತು. ಅಸಹಾಯಕ ಯುರೋಪಿಯನ್ನಿನ ರೋಗಿಗಳನ್ನೂ ಹತ್ಯೆ ಮಾಡಿದ್ದು ಬ್ರಿಟೀಷರಿಗೆ ಎಷ್ಟು ಕೋಪ ತರಿಸಿತ್ತೆಂದರೆ ಯಾವುದೇ ವಿಧದ ಕರುಣೆಯನ್ನೂ ಅವರು ತೋರಲಿಲ್ಲ; ಅರಮನೆಯಲ್ಲಿ ಆಸರೆ ಪಡೆದಿದ್ದ ನೂರು ಮಂದಿ ಸಿಪಾಯಿಗಳನ್ನು ಹೊರಗೆಳೆದು ತಂದು, ಗೋಡೆಗೊರಗಿ ನಿಲ್ಲಿಸಿ, ಎಲ್ಲರೂ ಸಾಯುವವರೆಗೂ ಗುಂಡಿನ ಮಳೆಗೆರೆಯಲಾಯಿತು. ಕೋಟೆಯ ದ್ವಾರಗಳನ್ನು ಒಡೆದು ಹಾಕುವ ಯೋಜನೆ ಹಾಕಿದ ಇಂಜಿನಿಯರ್ ಜಾನ್ ಬ್ಲಾಕಿಸ್ಟನ್ ಆ ದಿನಗಳನ್ನು ನೆನಪಿಸಿಕೊಳ್ಳುತ್ತ, ಈ ರೀತಿಯ ಶಿಕ್ಷೆ ಕೊಡುವುದು ನಾಗರೀಕ ಸಮಾಜದ ಎಲ್ಲಾ ನಂಬುಗೆಗಳಿಗೆ ವಿರುದ್ಧವಾದುದು, ‘ಈ ಭೀಬತ್ಸ ದೃಶ್ಯವನ್ನು ನಾನು, ಹೇಳಬೇಕೆಂದರೆ ತುಂಬಾ ಸಮಚಿತ್ತದಿಂದ ನೋಡುತ್ತಿದೆ. ಇದು ನ್ಯಾಯಕ್ಕಾಗಿ ನಡೆಯುತ್ತಿರುವ ಕೃತ್ಯ ಮತ್ತು ಎಲ್ಲಾ ಕೋನದಿಂದಲೂ ಇದು ಸರಿಯಾದುದು.’ ಭಾರತದಲ್ಲಿ ನಡೆಯುತ್ತಿದ್ದ ಯುದ್ಧದ ಗುಣಲಕ್ಷಣಗಳಿವು, ಇಲ್ಲಿ ಯುರೋಪಿನ ಯುದ್ಧದಲ್ಲಿನ ‘ನಾಗರೀಕ’ ನಡವಳಿಕೆಗಳನ್ನು ಅಳವಡಿಸಲಾಗುವುದಿಲ್ಲ.” (19) 

ಸೋಲಿಸಿದ ತಕ್ಷಣವೇ, ಬ್ರಿಟೀಷರು ಟಿಪ್ಪುವಿನ ಮಕ್ಕಳನ್ನು ಕಲ್ಕತ್ತಾಗೆ ಕಳುಹಿಸಿದರು. ಬ್ರಿಟೀಷ್ ಅಧಿಕಾರದ ಶಕ್ತಿ ಕೇಂದ್ರವಾಗಿತ್ತು ಕಲ್ಕತ್ತ. ಬ್ರಿಟೀಷರ ಅಭಿಪ್ರಾಯದಲ್ಲಿ, ಟಿಪ್ಪುವಿನ ಮಕ್ಕಳು ಮೈಸೂರಿಗೆ ಹತ್ತಿರವಿದ್ದಷ್ಟೂ ಜನಸಮೂಹವನ್ನು ಕಲುಷಿತಗೊಳಿಸಿ ವಸಾಹತುಶಾಹಿಯ ವಿರುದ್ಧದ ಹೋರಾಟಕ್ಕೆ ಸ್ಫೂರ್ತಿ ತುಂಬುತ್ತಾರೆ. 

ವೆಲ್ಲೂರು ಬಂಡಾಯದ ಗಂಭೀರತೆ ಮತ್ತು ಬ್ರಿಟೀಷ್ ಆಳ್ವಿಕೆಯ ಭವಿಷ್ಯತ್ತಿನ ಮೇಲೆ ಅದು ಉಂಟು ಮಾಡಬಹುದಾದಂತಹ ಪರಿಣಾಮಗಳ ಬಗ್ಗೆ ಮದ್ರಾಸಿನ ಗವರ್ನರ್ ವಿಲಿಯಂ ಬೆಂಟಿಕ್, ಥಾಮಸ್ ಮನ್ರೋಗೆ ಆಗಷ್ಟ್ 1806ರಲ್ಲಿ ಒಂದು ರಹಸ್ಯ ಪತ್ರ ಬರೆಯುತ್ತಾನೆ: “ಟಿಪ್ಪು ಸುಲ್ತಾನನ ಮಕ್ಕಳ ಗುಪ್ತಚರರು ಮತ್ತು ಅನುಯಾಯಿಗಳು ಘಟ್ಟದ ಕೆಳಗೆ ಹೆಚ್ಚು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಅನುಮಾನವಿಲ್ಲದೇ ನಂಬಲು ನಮಗೆ ಎಲ್ಲಾ ಕಾರಣಗಳೂ ಇವೆ. ಅದೇ ರೀತಿಯ ಪಿತೂರಿಗಳನ್ನು ಘಟ್ಟದ ಮೇಲೂ ಕೈಗೊಳ್ಳುತ್ತಾರೆ ಎನ್ನಲಾಗಿದೆ. ಗುರ್ರಂಕೊಂಡದ ಪಾಳೇಗಾರರ ಮೇಲೆ ಯುವರಾಜರು ಹೆಚ್ಚಿನ ನಂಬುಗೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಅತೀವ ಜಾಗರೂಕತೆ ಮತ್ತು ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕೆಂದು ನಾನು ನಿಮಗೆ ಶಿಫಾರಸು ಮಾಡುತ್ತಿದ್ದೇನೆ; ಮತ್ತು ಆ ರೀತಿಯ ಬಂಡಾಯದ ಯಾವುದೇ ಮುನ್ಸೂಚನೆ ಅಥವಾ ಚಿಹ್ನೆಗಳು ಕಂಡ ಕೂಡಲೇ, ನಿಮ್ಮ ಅನ್ನಿಸಿಕೆಯ ಪ್ರಕಾರ ಅವಶ್ಯವಿರುವ ಕ್ರಮಗಳನ್ನು ಯಾವುದೇ ಹಿಂಜರಿತವಿಲ್ಲದಂತೆ ತೆಗೆದುಕೊಳ್ಳಲು ಈ ಮೂಲಕ ನಿಮಗೆ ಅಧಿಕಾರ ನೀಡುತ್ತಿದ್ದೇನೆ. ಸ್ಥಳೀಯ ಪಡೆಗಳ ಮೇಲೆ ತುಂಬ ಹೆಚ್ಚಿನ ಅವಲಂಬನೆ ಬೇಡ ಎನ್ನುವುದು ನನ್ನ ಸಲಹೆ. ಈ ಸಂದರ್ಭದಲ್ಲಿ, ಸ್ಥಳೀಯ ಪಡೆಗಳು ಅವಶ್ಯಕತೆ ಬಿದ್ದಾಗ ಎಷ್ಟರ ಮಟ್ಟಿಗೆ ನಮ್ಮ ಪರವಾಗಿ ನಿಲ್ಲುತ್ತವೆ ಎಂದು ಹೇಳುವುದು ಅಸಾಧ್ಯ. ಸೈನಿಕರು ನಮ್ಮ ಬಗ್ಗೆ ಅಸಂತುಷ್ಟಗೊಂಡಿದ್ದಾರೆ, ಅಸಮಾಧಾನಗೊಂಡಿದ್ದಾರೆ ಮತ್ತು ಈ ಭಾವನೆಗಳ ಮೇಲೆ ಮುಸಲ್ಮಾನರ ಸರಕಾರವನ್ನು ಮರು ಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿವೆ, ಟಿಪ್ಪು ಸುಲ್ತಾನನ ಒಬ್ಬ ಮಗನ ನೇತೃತ್ವದಲ್ಲಿ: ಇದನ್ನು ನಮ್ಮರಿವಿಗೆ ಬರದಂತೆ ಮತ್ತು ತುಂಬಾ ಕಡಿಮೆ ಸಮಯದಲ್ಲಿ ಮಾಡುವುದು ಅಸಾಧ್ಯವೇ ಸರಿ. ಆದರೆ, ನನ್ನನ್ನು ನಂಬಿ, ಪಿತೂರಿಗಳು ನಮ್ಮೆಲ್ಲಾ ನಂಬಿಕೆಯನ್ನು ಮೀರಿ ನಡೆದಿದೆ ಮತ್ತು ದೂರದೂರಲ್ಲಿರುವ ಸೈನ್ಯವನ್ನೂ ತಲುಪಿಬಿಟ್ಟಿದೆ; ಮತ್ತು ಒಳಸಂಚುಗಳನ್ನು ಎಲ್ಲೆಡೆಯೂ ಯಶಸ್ವಿಯಾಗಿ ನಡೆಸಿದಂತೆ ಕಾಣುತ್ತದೆ. ವೆಲ್ಲೂರನ್ನು ಆಕ್ರಮಿಸಿದ್ದು ಮತ್ತು ಇತರೆ ಚಿಂತನಾ ಕ್ರಮಗಳನ್ನು ಜಾರಿಗೆ ತಂದು ಎಲ್ಲೆಡೆಯೂ ಕಣ್ಗಾವಲನ್ನು ಹೆಚ್ಚಿಸಿದರೆ, ನನ್ನ ನಂಬಿಕೆಯ ಪ್ರಕಾರ ದೊಡ್ಡ ಮಟ್ಟದ ಸ್ಪೋಟವನ್ನು ತಡೆಗಟ್ಟಬಹುದು”. (20) 

ಬೆಂಟಿಕ್ ಇದೇ ರೀತಿಯ ದಂಗೆಗಳನ್ನು ನಿರೀಕ್ಷಿಸುತ್ತಿದ್ದನಷ್ಟೇ ಅಲ್ಲ, ಜೊತೆಗೆ, ಪತ್ರದಲ್ಲಿ ಬ್ರಿಟೀಷ್ ಸೈನ್ಯದಲ್ಲಿದ್ದ ಭಾರತೀಯ ಸೈನಿಕರ ನಿಯತ್ತಿನ ಬಗ್ಗೆ ಅವನಲ್ಲಿದ್ದ ಸಂಪೂರ್ಣ ಅಪನಂಬಿಕೆ, ಆತ ಬಹುಶಃ ಮನ್ರೋನಂತಹ ಬ್ರಿಟೀಷ್ ಅಧಿಕಾರಿಗಳ ಸುರಕ್ಷತೆಯ ಬಗ್ಗೆ ಚಿಂತಿಸುತ್ತಿದ್ದ ಎನ್ನಿಸುತ್ತದೆ. ಆಗ ಲೆಫ್ಟಿನೆಂಟ್ ಕಲೋನಲ್ ಆಗಿದ್ದ ಥಾಮಸ್ ಮನ್ರೋ, ಸಂಪೂರ್ಣವಾಗಿ, ತನ್ನ ಚಿಕ್ಕ ಪುಟ್ಟ ವೈಯಕ್ತಿಕ ಕೆಲಸಕ್ಕೂ ಭಾರತೀಯ ಸೈನಿಕರ ಮೇಲೆಯೇ ಅವಲಂಬಿತನಾಗಿದ್ದ. 

ವೆಲ್ಲೂರಿನ ಬಂಡಾಯದ ಕಾರಣಗಳನ್ನು ಆಳವಾಗಿ ಗಮನಿಸಿ ಮತ್ತು ಇನ್ನೂ ನಿರ್ದಿಷ್ಟವಾಗಿ ಭಾರತದಲ್ಲಿನ ಬ್ರಿಟೀಷ್ ಸೈನ್ಯದ ಇರುವಿಕೆಯ ಬಗ್ಗೆ ಅಧ್ಯಯನ ನಡೆಸಿದ ಥಾಮಸ್ ಮನ್ರೋ, 1822ರಲ್ಲಿನ ಬರಹದಲ್ಲಿ, ಮದ್ರಾಸಿನಲ್ಲಿ ಬ್ರಿಟೀಷ್ ಪತ್ರಿಕೆಗಳಿಗೆ ಅನುಮತಿ ನೀಡುವ ಪ್ರಶ್ನೆ ಎದ್ದಾಗ, ಆ ಪ್ರಸ್ತಾಪವನ್ನು ತಿರಸ್ಕರಿಸುತ್ತಾನೆ, ಕಾರಣ ಈ ರೀತಿಯ ಅನುಮತಿಗಳು ಭಾರತದಲ್ಲಿನ ಸ್ಪೋಟಕ ಪರಿಸ್ಥಿತಿಗೆ ಕಿಡಿ ಹಚ್ಚುವ ಕೆಲಸ ಮಾಡಿ ಬ್ರಿಟೀಷರನ್ನು ಗಂಟುಮೂಟೆ ಕಟ್ಟಿಕೊಂಡು ಹೋಗುವಂತೆ ಮಾಡುತ್ತಿತ್ತು ಮತ್ತು ಮನ್ರೋನ ಅಂದಾಜಿನಂತೆ ಈ ಕಾರ್ಯದಲ್ಲಿ ಸೈನ್ಯದ ಬಹುಮುಖ್ಯ ಪಾತ್ರವಿರುತ್ತಿತ್ತು. ಬಹಳ ವಿಧದಲ್ಲಿ, ವೆಲ್ಲೂರಿನಲ್ಲಿ ನಡೆದ ಘಟನೆ 1857ರ ಬಂಡಾಯದ ಚಿಕ್ಕ ಪ್ರತಿಕೃತಿಯಂತಿತ್ತು ಮತ್ತು ಮನ್ರೋ, ವಸಾಹತು ಗುಂಪಿನ ದೊಡ್ಡ ಅಯೋಗ್ಯ, ಅದರ ವಾಸ್ತವವನ್ನು ಬಹು ಚೆನ್ನಾಗಿ ಗ್ರಹಿಸಿಬಿಟ್ಟಿದ್ದ. ಕೆ.ಎನ್.ವಿ. ಶಾಸ್ತ್ರಿ ಮತ್ತು ಇತರೆ ಬ್ರಿಟೀಷ್ ಎಸೆದ ಬ್ರೆಡ್ಡು ತಿಂದ ‘ಸ್ಥಳೀಯ’ ಇತಿಹಾಸಕಾರರು ಮನ್ರೋನನ್ನು “ಪ್ರಗತಿಪರ” ಎಂದು ಕರೆಯಲಿಚ್ಛಿಸುತ್ತಾರೆ. ಇದು ಪೈಶಾಚಿಕ ಪ್ರಭುತ್ವದ ಕಾರ್ಯಗಳನ್ನು ಮರೆಮಾಚುವ ‘ಸ್ಥಳೀಯ’ ಬಣ್ಣಗಳಷ್ಟೇ. ಮನ್ರೋ ಬ್ರಿಟೀಷ್ ಮಾಧ್ಯಮಕ್ಕೆ ಅನುಮತಿ ಕೊಡುವುದರಿಂದಾಗುವ ಪರಿಣಾಮಗಳ ಬಗ್ಗೆ ನೀಡಿರುವ ಈ ಕೆಳಗಿನ ಹೇಳಿಕೆ ಅಂತಹ ಇತಿಹಾಸಕಾರರಿಗೆ ಸರಿಯಾಗಿ ಕಪಾಳ ಮೋಕ್ಷ ಮಾಡುತ್ತದೆ. ಇಂಗ್ಲೆಂಡಿನ ಮಧ್ಯಮವರ್ಗೀಯ ಪ್ರಜಾಪ್ರಭುತ್ವ ಕ್ರಾಂತಿ ನೀಡಿದ ರಾಜಕೀಯ ಕೊಡುಗೆಗಳನ್ನೊಂದನ್ನು ಮನ್ರೋ ಬಿಟ್ಟುಬಿಟ್ಟಿದ್ದು ಬಣ್ಣದ ಖಂಡದಲ್ಲಿ ಬಿಳಿ ಜನರ ನಾಗರೀಕತೆಯನ್ನು ಮುಂದೊಯ್ಯುವುದಕ್ಕಾಗಿ. ಥಾಮಸ್ ಮನ್ರೋ ಒಬ್ಬ ನಾಜೂಕಾಗಿ ಬೆಳೆದ ಪಟ್ಟುಬಿಡದ ವಸಾಹತುಶಾಹಿಯಾಗಿದ್ದ, ಯಾವುದೇ ಸಂಕೋಚವಿಲ್ಲದೆ. ಅವನು ಬರೆಯುತ್ತಾನೆ: “ನಮ್ಮ ಬಗ್ಗೆ ಸ್ಥಳೀಯರಿಗಿರುವ ಉನ್ನತಾಭಿಪ್ರಾಯಗಳು ಮತ್ತು ನಮ್ಮಧಿಕಾರದ ಬಗ್ಗೆ ಅವರು ಕೊಡುವ ಮಾನ್ಯತೆ ಹಾಗೂ ಗೌರವ, ಇದುವರೆಗೆ ಇದು ನಮ್ಮೊಳಗಷ್ಟೇ ಇತ್ತು, ಈ ದೇಶದೊಳಗೆ ನಾವು ಯಶಸ್ಸು ಕಂಡಿರುವುದಕ್ಕೆ ಪ್ರಮುಖ ಕಾರಣ; ಆದರೆ ಈ ತತ್ವಗಳಾಧಾರ ಅಲುಗಲಾರಂಭಿಸಿದರೆ ಅಥವಾ ಮುಕ್ತ ಮಾಧ್ಯಮದ ಮೂಲಕ ಕೊಚ್ಚಿ ಹೋದರೆ, ನಮ್ಮ ಜ್ಯೂರಿಗಳ ಪ್ರೋತ್ಸಾಹದಿಂದ ವಿಷಯಲಂಪಟತನವಾಗಿಬಿಟ್ಟರೆ, ಬದಲಾವಣೆ ಅತಿ ವೇಗದಲ್ಲಿ ಇಡೀ ಸ್ಥಳೀಯ ಸೈನ್ಯಕ್ಕೆ ತಲುಪಿಬಿಡುತ್ತದೆ. ಸ್ಥಳೀಯ ಸೈನ್ಯ ಪಡೆಗಳಷ್ಟೇ ಯುರೋಪಿಯನ್ನರ ಜೊತೆಗೆ ಯಾವಾಗಲೂ ಬೆರೆತು ಇರುವುದು, ಮತ್ತು ಅವರ ಬಗ್ಗೆ ಪತ್ರಿಕೆಗಳಲ್ಲಿ ಬಂದ ವಿಷಯಗಳನ್ನು, ಸಿದ್ಧಾಂತಗಳನ್ನು ಮೊದಲು ಅವರೇ ತಿಳಿದುಕೊಂಡುಬಿಡುತ್ತಾರೆ; ಯಾಕೆಂದರೆ ಈ ವಿಷಯ – ಸಿದ್ಧಾಂತಗಳು, ಯುರೋಪಿಯನ್ ಅಧಿಕಾರಿಗಳ ಚರ್ಚೆಯ ವಿಷಯವಾಗಿರುತ್ತದೆ, ಸ್ಥಳೀಯ ಅಧಿಕಾರಿಗಳಿಗೆ ಮತ್ತು ಸೈನಿಕ ಪಡೆಗಳಿಗೆ ಈ ವಿಷಯಗಳು ತಿಳಿಯುವುದಕ್ಕೆ ಹೆಚ್ಚೇನು ಸಮಯ ಬೇಕಾಗುವುದಿಲ್ಲ. ಆ ಜನರು ಬಹುಶಃ ಹಾನಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಾರರು, ಜನರ ಹಕ್ಕುಗಳ ಬಗ್ಗೆಯಾಗಲೀ, ಸರಕಾರ ರಚಿಸುವುದರ ಬಗ್ಗೆಯಾಗಲೀ ಜಾಸ್ತಿ ಯೋಚಿಸಲಾರರು, ಆದರೆ ತಮಗೆ ತತ್ ಕ್ಷಣಕ್ಕೆ ಸಂಬಂಧಪಟ್ಟ ಸಂಗತಿಗಳು ಯಾವುವು ಎನ್ನುವುದನ್ನು ತಾವು ಕೇಳುವುದರ ಮೂಲಕ ಅರಿತುಕೊಂಡುಬಿಡುತ್ತಾರೆ, ಮತ್ತು ಇದಕ್ಕೆ ಅವರಿಗೆ ಚೂರೇ ಚೂರು ಪ್ರೇರೇಪಣೆ ಸಾಕು. ತಮಗೆ ಸಿಗುತ್ತಿರುವ ಕಡಿಮೆ ಸಂಬಳ ಮತ್ತು ಕೆಳ ದರ್ಜೆಯನ್ನು ಯುರೋಪಿಯನ್ ಅಧಿಕಾರಿಗಳಿಗೆ ಹೋಲಿಸಿ ನೋಡುವುದನ್ನವರು ಕಲಿತುಕೊಳ್ಳುತ್ತಾರೆ, - ಯಾವ ಆಧಾರದ ಮೇಲೆ ಈ ವಿಸ್ತಾರದ ವ್ಯತ್ಸಾಸವಿದೆ ಎಂದು ಪರೀಕ್ಷಿಸುತ್ತಾರೆ – ತಮ್ಮದೇ ಶಕ್ತಿಯನ್ನು ಮತ್ತು ಸಂಪನ್ಮೂಲವನ್ನು ಪರೀಕ್ಷಿಸುತ್ತಾರೆ, ವಿದೇಶಿ ನೊಗವನ್ನು ಅಲುಗಾಡಿಸುವುದು ತಮ್ಮ ಕರ್ತವ್ಯವೆಂದು ನಂಬುತ್ತಾರೆ ಮತ್ತು ತಮ್ಮ ದೇಶದ ಗೌರವ ಹಾಗೂ ಘನತೆಯನ್ನು ರಕ್ಷಿಸುವ ಸಲುವಾಗಿ ತಯಾರಾಗುತ್ತಾರೆ. ಮಾಧ್ಯಮ ಮುಕ್ತವಾಗಿಬಿಟ್ಟರೆ, ಅವರು ಅತಿ ಶೀಘ್ರವಾಗಿ ಇವೆಲ್ಲಕ್ಕೂ ಮತ್ತು ಇನ್ನೂ ಹೆಚ್ಚಿನದಕ್ಕೆ ಹಾನಿಯುಂಟು ಮಾಡಬೇಕಾಗುತ್ತದೆ. ಶಸ್ತ್ರಗಾರಗಳಲ್ಲಿ ಮತ್ತು ದಂಡು ಪ್ರದೇಶಗಳಲ್ಲಿ ಅವರು ಜೊತೆ ಸೇರುವುದು ಅವರ ಕೆಲಸವನ್ನು ಸಲೀಸು ಮಾಡಿಬಿಡುತ್ತದೆ; ತಮ್ಮನ್ನು ಮುನ್ನಡೆಸಬಲ್ಲ ಯೋಗ್ಯ ನಾಯಕರಾರು ಎನ್ನುವುದನ್ನು ತಿಳಿಯುವುದು ಅವರಿಗೆ ಅಂತ ಕಷ್ಟದ ಕೆಲಸವೇನಲ್ಲ; ಅವರ ಸಹನೆ, ಅವರ ಶಿಸ್ತಿನ ಅಭ್ಯಾಸ ಮತ್ತು ಯುದ್ಧದಲ್ಲಿ ಅವರ ಅನುಭವಗಳೆಲ್ಲವೂ ಅವರಿಗೆ ಯಶ ತಂದು ಕೊಡುವ ಎಲ್ಲಾ ಸಾಧ್ಯತೆಗಳಿವೆ; ಅಧಿಕಾರ ಮತ್ತು ಸ್ವಾತಂತ್ರ್ಯದೆಡೆಗಿನ ಪ್ರೀತಿ ಅವರನ್ನು ಉತ್ತೇಜಿಸುತ್ತದೆ, ಹಾಗೂ ಹಣದಾಸೆ ಮತ್ತು ಮಹತ್ವಾಕಾಂಕ್ಷೆಗಳು ಅವರ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಂತೆ ಮಾಡುತ್ತದೆ. ಈ ಪ್ರಯತ್ನಗಳು ಅಪಾಯಕಾರಿ ಎಂಬ ಬಗ್ಗೆ ಅನುಮಾನ ಬೇಡ; ಆದರೆ ಶ್ರೀಮಂತ ರಾಜ್ಯದ ಸಂಬಂಧವಾಗಿ ನಡೆಯುತ್ತಿರುವ ಸ್ಪರ್ಧೆಯಾದ್ದರಿಂದ ಆ ಅಪಾಯಗಳು ಅವರನ್ನು ಹಿಮ್ಮೆಟ್ಟಿಸಲಾರದು. ಅವರು ತಮ್ಮ ಮೊದಲ ಯತ್ನಗಳಲ್ಲಿ ವಿಫಲವಾಗಬಹುದು, ಆದರೆ ಅವರ ವಿಫಲತೆಯೂ ಸಹಿತ, ಕೇಂದ್ರ ಸರಕಾರವಾದ ನಮ್ಮ ಅಧಿಕಾರದ ಬುಡವನ್ನೇ ಅಲುಗಾಡಿಸಿಬಿಡುತ್ತದೆ. ಸೈನ್ಯದಲ್ಲಿನ ಅವಿಧೇಯತೆ ತಾತ್ಕಾಲಿಕ ಕಾರಣಕ್ಕಾಗಿ ಆಗಿದ್ದರೆ ಅದನ್ನು ನಿವಾರಿಸಿಬಿಡಬಹುದು, ಆದರೆ ಸೈನಿಕ ಪಡೆಯಲ್ಲಿನ ಗುಣ – ವ್ಯಕ್ತಿತ್ವದಲ್ಲಾಗುವ ಬದಲಾವಣೆಯಿಂದ ಮೂಡುವ ಅವಿಧೇಯತೆ, ವ್ಯವಸ್ಥಿತ ರೀತಿಯಲ್ಲಿ ವಿರೋಧಿಸುವ ಗುಣ ಮೂಡಿಸುತ್ತದೆ, ಅದನ್ನು ಹತ್ತಿಕ್ಕಲಾಗುವುದಿಲ್ಲ, ನಮ್ಮ ವರ್ತಮಾನದ ಏಳ್ಗೆಯನ್ನು ನಾವು ಮತ್ಯಾವತ್ತೂ ಮರಳಿ ಪಡೆಯಲಾಗುವುದಿಲ್ಲ; ಅವರು ನಮ್ಮ ಮೇಲಿಟ್ಟಿರುವ ಎಲ್ಲಾ ನಂಬಿಕೆಗಳೂ ನಾಶವಾಗಿಬಿಡುತ್ತದೆ; ಕೊನೆಗೊಮ್ಮೆ ಯಶಸ್ಸು ಸಿಗುವವರೆಗೂ ಅವರು ಪಟ್ಟು ಸಡಿಲಿಸದೆ ತಮ್ಮ ಕಾರ್ಯಗಳನ್ನು ಮಾಡಬಹುದು; ಮತ್ತು ಒಂದು ರಕ್ತಪಿಪಾಸು ಅಂತರ್ಯುದ್ಧದ ನಂತರ, ಅಥವಾ ಸಾಲು ಸಾಲು ಬಂಡಾಯ ಮತ್ತು ಸಾಮೂಹಿಕ ಹತ್ಯೆಯ ನಂತರ, ನಾವು ದೇಶವನ್ನು ಬಿಡಬೇಕಾದ ಪರಿಸ್ಥಿತಿ ಬರಬಹುದು”. (21) 

ಇದು ಖಂಡಿತವಾಗಿ 1857ರ ಪೂರ್ವ ನಿರೀಕ್ಷಣೆ, 1806ರಲ್ಲಿ ವೆಲ್ಲೂರಿನಲ್ಲಿ ನಡೆದಿದ್ದು ಅದರ ಪ್ರಾರಂಭವಷ್ಟೇ. ಮಾವೋ ಹೇಳುತ್ತಾರೆ: “ಎಲ್ಲಾ ಸಾಮ್ರಾಜ್ಯವಾದಿಗಳೂ ಕಾಗದದ ಮೇಲಿನ ಹುಲಿಗಳು”. “ಯುದ್ಧ” ಅಥವಾ “ಸಾಲು ಸಾಲು ಬಂಡಾಯಗಳು” ವಸಾಹತುಶಾಹಿಯನ್ನು ಗುರಿ ಮಾಡಿಕೊಂಡಾಗ ಬ್ರಿಟೀಷರು ಭಾರತವನ್ನು ಆಳಲು ಸಾಧ್ಯವೇ ಇಲ್ಲ, ಈ ನೆಲದಿಂದ ವಿದೇಶಿಗರು ಕೊನೆಗೆ ಹೊರಗೋಗಲೇ ಬೇಕಾಗುತ್ತದೆ ಎಂದು ಮಾನ್ಯತೆ ಪಡೆದ ವಸಾಹತುಶಾಹಿ ಥಾಮಸ್ ಮನ್ರೋನಂತವರೇ ಒಪ್ಪಿಕೊಳ್ಳುವುದು ಮಾವೋನ ಅಭಿಪ್ರಾಯವನ್ನು ಧೃಡೀಕರಿಸುತ್ತದೆ.

ಮುಂದಿನ ವಾರ:
ಊಳಿಗಮಾನ್ಯ ದೊರೆಗಳು ಮುನ್ನಡೆಸಿದ ಸಶಸ್ತ್ರ ಹೋರಾಟ

Sep 1, 2016

ಗೋಹತ್ಯೆ – ಒಂದು ಪರಾಮರ್ಶೆ: ಭಾಗ 2.

ನಾಗೇಶ್ ಹೆಗಡೆ.
01/09/2016
ಗೋಹತ್ಯೆ – ಒಂದು ಪರಾಮರ್ಶೆ: ಭಾಗ 1 ಓದಲು ಇಲ್ಲಿ ಕ್ಲಿಕ್ಕಿಸಿ
ಆದರೂ ಬುದ್ಧ – ಗಾಂಧೀಜಿಯವರಂಥ ಅಹಿಂಸಾವಾದಿಗಳ ನಾಡಿನಲ್ಲಿ ಗೋವಧೆ ಸರಿಯಲ್ಲ ತಾನೆ?
ಎಲ್ಲಿದ್ದೀರಿ? ಬುದ್ಧನ ಅನುಯಾಯಿಗಳು ಬಿಡುಬೀಸಾಗಿ ಗೋಮಾಂಸ ಭಕ್ಷಣೆ ಮಾಡುತ್ತಾರೆ! ಥಾಯ್ಲೆಂಡ್, ಜಪಾನ್, ಕೊರಿಯಾಗಳಲ್ಲಷ್ಟೇ ಅಲ್ಲ, ನಮ್ಮ ನಾಡಿನಲ್ಲೇ ಇರುವ ಟಿಬೆಟನ್ ಜನರು ನಿತ್ಯ ಊಟದಲ್ಲಿ ಗೋಮಾಂಸ ಬಳಸುತ್ತಾರೆ. ಅವರು ಗೋವುಗಳನ್ನು ಪ್ರೀತಿಯಿಂದಲೇ ಸಾಕುತ್ತಾರೆ ಕೂಡ. ಮಹಾತ್ಮಾ ಗಾಂಧಿಯವರು ಮಾಂಸಾಹಾರ ಸೇವನೆ ಮಾಡುತ್ತಿರಲಿಲ್ಲ. ಆದರೆ ಎಂದೂ ಅವರು ಇತರ ಧರ್ಮೀಯರ ಮೇಲೆ ತಮ್ಮ ಕಟ್ಟುಪಾಡುಗಳನ್ನು ಹೇರುತ್ತಿರಲಿಲ್ಲ.

ಇನ್ನು ಹಿಂಸೆಯ ಪ್ರಶ್ನೆ ಬಂದಾಗ, ನಾವು ತುಸು ಕಣ್ತೆರೆದು ವಾಸ್ತವದ, ಅಂದರೆ ನೈಸರ್ಗಿಕ ಜಗತ್ತನ್ನು ನೋಡಬೇಕಾಗುತ್ತದೆ. ಒಂದು ಜೀವಿ ಇನ್ನೊಂದಕ್ಕೆ ಆಹಾರವಾಗಿರುವುದೇ ನಿಸರ್ಗದ ಮೂಲಧರ್ಮ. ಅಲ್ಲಿ ಹಿಂಸೆ ಅಥವಾ ಅಹಿಂಸೆ ಎಂಬ ಪದಗಳೇ ಇಲ್ಲ. ಹಲ್ಲು, ಉಗುರು, ವಿಷ, ಉರುಳು ಎಲ್ಲವೂ ಅಲ್ಲಿವೆ. ಊಜಿನೊಣವೊಂದು ರೇಷ್ಮೆಹುಳದ ಬೆನ್ನಮೇಲೆ ರಂಧ್ರ ಮಾಡಿ ಮೊಟ್ಟೆ ಇಟ್ಟು ಹೋಗುತ್ತದೆ. ಊಜಿಮೊಟ್ಟೆಯಿಂದ ಹೊರಬಿದ್ದ ಲಾರ್ವಾ ಹುಳ ಮೆಲ್ಲಗೆ ರೇಷ್ಮೆಹುಳುವಿನ ಬೆನ್ನನ್ನು, ನಂತರ ಹೊಟ್ಟೆಯನ್ನು, ಭುಜವನ್ನು ಹಂತಹಂತವಾಗಿ ಮೂರು ದಿನಗಳವರೆಗೆ ತಿನ್ನುತ್ತ, ಅದುವರೆಗೂ ತನ್ನ ಬಲಿಯನ್ನು ಜೀವಂತ ಇಟ್ಟು ಕೊನೆಗೆ ತಿನ್ನಲು ಇನ್ನೇನೂ ಉಳಿದಿಲ್ಲ ಎನ್ನುವಾಗ ರೇಷ್ಮೆಹುಳದ ಹೃದಯ, ಶ್ವಾಸಕೋಶ ಮತ್ತು ಮಿದುಳನ್ನು ತಿಂದು ಮುಗಿಸುತ್ತದೆ. ಅಲ್ಲಿ ಕರುಣೆ, ದಯೆ ಎಂಬ ಪದಗಳೂ ಇಲ್ಲ. ಇದ್ದಿದ್ದರೆ ಮೊದಲ ದಿನವೇ ಮಿದುಳನ್ನು ತಿಂದು, ರೇಷ್ಮೆ ಹುಳಕ್ಕೆ ನೋವೇ ಗೊತ್ತಾಗದಂತೆ ಅದನ್ನು ಪ್ರಜ್ಞಾಶೂನ್ಯ ಮಾಡಿ ನಂತರವೇ ಊಜಿಲಾರ್ವಾ ತನ್ನ ಊಟವನ್ನು ಮುಂದುವರಿಸಬಹುದಿತ್ತು. ‘ಬೆಕ್ಕು ಇಲಿಯನ್ನು ಅತ್ತ ಇತ್ತ ತಿರುಗಿಸಿ ಗೋಳಾಡಿಸಿದಂತೆ ಅನ್ನಿಸಿದರ ಇಲಿಗೆ ನೋವಿನ ಅನುಭವ ಆಗುವುದಿಲ್ಲ’ ಎಂದು ಹೆಸರಾಂತ ವೈದ್ಯ – ಚಿಂತಕ ಡಾ. ಲೀವಿಸ್ ಥಾಮಸ್ ಹೇಳುತ್ತಾರೆ. ಅದಕ್ಕೆ ಕಾರಣವನ್ನು ಕೊಡುತ್ತಾರೆ: ನೋವಿನ ಅನುಭವ ಮಿದುಳಿಗೆ ಏಕೆ ರವಾನೆ ಆಗುತ್ತದೆಂದರೆ ಶರೀರವನ್ನು ಬಚಾವು ಮಾಡಲಿಕ್ಕೆ ಮಾತ್ರ. ಶರೀರಕ್ಕೆ ಪೆಟ್ಟು ಬಿದ್ದರೆ ಓಡಬೇಕು, ಇಲ್ಲವೆ ಎದುರಾಳಿಯ ಜತೆ ಹೋರಾಡಿ ಆತನನ್ನು ಓಡಿಸಬೇಕು. ಅಂತೂ ಬಚಾವಾಗಬೇಕು. ಓಟ ಇಲ್ಲವೇ ಹೋರಾಟ ಎರಡೂ ಸಾಧ್ಯವಿಲ್ಲ ಎಂಬಂಥ ‘ಶರಣಾಗತ’ ಸ್ಥಿತಿಗೆ ತಲುಪಿದಾಗ ಇಲಿಯ ಮಿದುಳಿಗೆ ನೋವನ್ನು ರವಾನಿಸುವ ರಸಸಂಜ್ಞೆ ಸ್ವಿಚಾಫ್ ಆಗುತ್ತದೆ. ಏಕೆಂದರೆ ಚಿತ್ರಹಿಂಸೆ ಅನುಭವಿಸುವುದರಿಂದ ಜೀವಿಗೆ ಯಾವ ಲಾಭವೂ ಇಲ್ಲ. ಪುರುಷಾರ್ಥವೂ ಇಲ್ಲ. ಹಾಗಾಗಿ ಅಲ್ಲಿ ನೋವಿನ ಪ್ರಶ್ನೆ ಬರುವುದೇ ಇಲ್ಲ.

ಆದರೆ ಹಸುವನ್ನು ಹಿಂಸಿಸಿದಾಗ ನಮ್ಮ ಮನಸ್ಸಿಗೇ ನೋವಾಗುತ್ತದಲ್ಲ?
ಒಪ್ಪೋಣ. ಹಿಂಸೆ ಕೊಡಬಾರದು. ಸಾಕುಪ್ರಾಣಿಗಳಿಗೆ ಛಡಿ ಏಟು ಕೊಡುವುದು, ಬರೆ ಹಾಕುವುದು, ನೊಗ ಹೊತ್ತು ಹುಣ್ಣಾದ ಹೆಗಲಿಗೇ ಮತ್ತೆ ನೊಗ ಹೇರುವುದು..... ಹೀಗೆ ನಿಸರ್ಗದಲ್ಲಿ ಇಲ್ಲದಂಥ ಚಿತ್ರಹಿಂಸೆಗಳನ್ನು ನಾವು ಕೊಡುತ್ತೇವೆ. ಮನುಷ್ಯಪ್ರಾಣಿಯನ್ನು ಯಾರಾದರೂ ಕಟ್ಟಿ ಹಾಕಿ ಈ ರೀತಿ ಹಿಂಸೆ ಕೊಟ್ಟರೆ ಆತ, ‘ನನ್ನನ್ನು ಕೊಂದುಬಿಡ್ರಪ್ಪಾ’ ಎಂದು ಬೇಡಿಕೊಳ್ಳಬಹುದು. ರಾಸುಗಳಿಗೆ ನಾವು ಅಂಥ ಮುಕ್ತಿಯನ್ನೂ ಕೊಡುವುದಿಲ್ಲ. ಇನ್ನು ಕರುವಿಗೆ ಹಾಲೂಡಿಸುತ್ತಿರುವಾಗ ತಾಯಿಯಿಂದ ಕರುವನ್ನು ಹಿಂದಕ್ಕೆಳೆದು ಗೂಟಕ್ಕೆ ಕಟ್ಟಿ, ನಮ್ಮ ಸ್ವಾರ್ಥಕ್ಕಾಗಿ ನಾವು ಹಾಲು ಹಿಂಡಲು ತೊಡಗಿದರೆ ಅದೂ ಮಾನಸಿಕ ಹಿಂಸೆಯ ಕೃತ್ಯವೇ ಆಗುತ್ತದೆ. ಹೋರಿ ಕರು ಹುಟ್ಟಿದರೆ ಅದನ್ನೂ ಎಳೆಗರುವಾಗಿದ್ದಾಗಲೇ ತಾಯಿಯಿಂದ ಶಾಶ್ವತವಾಗಿ ಬೇರ್ಪಡಿಸಿ ದೂರ ಸಾಗಿಸುವುದೂ ಕ್ರೌರ್ಯವೇ ಆಗುತ್ತದೆ. ಅಷ್ಟೇಕೆ, ಕೆಲವು ಗೋಪ್ರೇಮಿಗಳು ವಾರಕ್ಕೊಮ್ಮೆ ಗೋಶಾಲೆಗಳಿಗೆ ಹೋಗಿ ಪ್ರೀತಿಯಿಂದಲೇ ಅವಕ್ಕೆ ತುಪ್ಪದಲ್ಲಿ ತಯಾರಿಸಿ ಲಡ್ಡೂ, ಒಬ್ಬಟ್ಟು ತಿನ್ನಿಸಿ ಅವು ಗ್ಯಾಸ್ ಟ್ರಬಲ್, ಹೊಟ್ಟೆನೋವಿನಿಂದ ಸಂಕಟಪಟ್ಟು ಒದ್ದಾಡುವ, ಸಾಯುವ ಉದಾಹರಣೆಗಳೂ ಇವೆ. ಆದರೆ ನಾವು ಅವನ್ನೆಲ್ಲ ಒಪ್ಪಿಕೊಂಡಿದ್ದೇವೆ. ಹೀಗೆ, ‘ಬದುಕಿರುವಾಗ ಹಿಂಸೆ ಕೊಟ್ಟು ಕೊಟ್ಟು ಜೀವಂತ ಇಟ್ಟಿರುವುದು ಸರಿ, ಆದರೆ ಸಾವಿನ ಮುಂಚಿನ ಕ್ಷಣಗಳಲ್ಲಿ ಹಿಂಸೆ ಮಾತ್ರ ಬೇಡ’ ಎನ್ನುವುದು ಅದೆಷ್ಟು ಸರಿ? ಅಥವಾ, ‘ಆಡು – ಕುರಿ – ಹಂದಿ – ಕೋಳಿಗಳನ್ನು ಕೊಂದರೆ ಸರಿ, ದನಗಳನ್ನು ಮಾತ್ರ ಕೊಲ್ಲುವುದು ಸಲ್ಲ’ ಎಂದು ವಾದಿಸುವುದೂ ಅದೆಷ್ಟು ತಾರ್ಕಿಕ? ಗೋವಿನ ಶರೀರದಲ್ಲಿ 33 ಕೋಟಿ ದೇವತೆಗಳಿರುವುದೇ ನಿಜವಾದರೆ ಮೇಕೆಯ ಶರೀರದಲ್ಲಿ 22 ಕೋಟಿಯಾದರೂ ಇರಬಹುದಲ್ಲ? ದೊಡ್ಡ ಜೀವಿಗಳಿಗೆ ಮಾತ್ರ ನೋವಿನ ಸಂವೇದನೆ ಇರುತ್ತದೆ ಎಂದು ಹೇಳಲು ಯಾವ ಆಧಾರ ಇದೆ? ಇಷ್ಟಕ್ಕೂ ಆಧುನಿಕ ಕಸಾಯಿಖಾನೆಗಳಲ್ಲಿ ದನದ ಕೆನ್ನೆಗಳಿಗೆ ವಿದ್ಯುತ್ ದಂಡವನ್ನು ಒತ್ತಿ ಆಘಾತ ಕೊಟ್ಟು ಪ್ರಜ್ಞೆ ತಪ್ಪಿಸಿ ಕೊಲ್ಲುವ ವ್ಯವಸ್ಥೆ ಇದೆ. ಧಾರ್ಮಿಕ ನಂಬುಗೆಗಳಿಗೆ ಅಡ್ಡಗಾಲು ಹಾಕದಂತೆ ನೋಡಿಕೊಂಡು, ಸಾಧ್ಯವಿದ್ದಲ್ಲೆಲ್ಲ ಹಿಂಸೆಯನ್ನು ಸಾಧ್ಯವಿದ್ದಷ್ಟೂ ಕಡಿಮೆ ಮಾಡಬಲ್ಲ ವ್ಯವಸ್ಥೆ ಎಲ್ಲೆಡೆ ಜಾರಿಗ ಬರಲೆಂದು ಒತ್ತಾಯಿಸೋಣ. ಸುಧಾರಿತ ದೇಶಗಳಲ್ಲಿ ದೃಶ್ಯಮಾಲಿನ್ಯವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅದು ನಮ್ಮಲ್ಲೂ ಜಾರಿಗೆ ಬರಬೇಕೆಂದು ಒತ್ತಾಯಿಸೋಣ. ಬೀದಿಯ ಕೊಳಕು ಸಂದುಗೊಂದುಗಳಲ್ಲಿ ಎಲ್ಲರಿಗೂ ಕಾಣುವಂತೆ ಪ್ರಾಣಿವಧೆ ಮಾಡಕೂಡದು. ಕತ್ತರಿಸಿದ ರುಂಡ ಮುಂಡ ಕಾಲು ಗೊರಸುಗಳನ್ನು (ಅದು ಕುರಿ – ಮೇಕೆಗಳದ್ದಾದರೂ) ಬೀದಿಬದಿಯಲ್ಲಿ ಇಲ್ಲವ ಅಂಗಡ ಮುಂಗಟ್ಟುಗಳಲ್ಲಿ ಪ್ರದರ್ಶಿಸಬಾರದು ಎಂದು ಒತ್ತಾಯಿಸೋಣ. ಕಂತೆಕಂತೆ ತರಕಾರಿಯ ಹಾಗೆ ಕೋಳಿಗಳನ್ನು ತಲೆಕೆಳಗಾಗಿ ತೂಗಾಡಿಸುತ್ತ ದ್ವಿಚಕ್ರ ವಾಹನಗಳಲ್ಲಿ ಬಹಿರಂಗವಾಗಿ ಸಾಗಿಸುವುದನ್ನು ನಿಷೇಧಿಸಬೇಕೆಂದು ಒತ್ತಾಯಿಸೋಣ. ಅಂಥ ಅನಾಗರಿಕ ಕೃತ್ಯಗಳ ನಡೆಯಕೂಡದು.

ತಥಾಕಥಿತ ಸುಧಾರಿತ ದೇಶಗಳಲ್ಲಿ ಬಹುಪಾಲು ಧಾನ್ಯವೆಲ್ಲ ಪಶು ಆಹಾರಕ್ಕೆಂದೇ ಬಳಕೆಯಾಗುತ್ತದೆ. ಜನರು ಕಾಳುಕಡಿ ತಿನ್ನುವ ಬದಲು ಮಾಂಸವನ್ನೇ ತಿನ್ನುತ್ತಾರೆ. ಒಂದು ಕಿಲೊ ಮಾಂಸ ಬೆಳೆಸಲು 150 ಕಿಲೋ ಧಾನ್ಯವನ್ನು ವ್ಯಯಿಸಬೇಕಾಗುತ್ತದೆ. ನಮ್ಮಲ್ಲೂ ಅದೇ ಸಂಸ್ಕೃತಿ ರೂಢಿಗೆ ಬಂದರೆ ಧಾನ್ಯದ ಅಭಾವ ತಲೆದೋರೀತಲ್ಲವೆ? ಭಾರತದ ಕೃಷಿಭೂಮಿಗೆ ಅಷ್ಟೊಂದು ಧಾರಣ ಸಾಮರ್ಥ್ಯ ಇದೆಯೆ?
ನಮ್ಮ ಚರ್ಚೆ ಈಗ ಆರ್ಥಿಕ ರಂಗದತ್ತ ತಿರುಗುತ್ತಿದೆ. ಔದ್ಯಮಿಕ ಮಾದರಿಯ ಪಶುಸಂಗೋಪನೆ ಎಂಬುದು ಇಡೀ ಭೂಮಿಗೆ ಅತಿ ದೊಡ್ಡ ಹೊರೆಯಾಗುತ್ತಿದೆ, ನಿಜ. ಜಗತ್ತಿನ ಒಟ್ಟು ಕೃಷಿಭೂಮಿಯ ಶೇಕಡಾ 70 ಭಾಗ ಬರೀ ಪಶುಗಳ ಆಹಾರ ಬೆಳೆಯುವ ಉದ್ದೇಶಕ್ಕೇ ಮೀಸಲಾಗಿದೆ. ಪ್ರತಿವರ್ಷ ಸರಾಸರಿ 50 ಲಕ್ಷ ಅರಣ್ಯಪ್ರದೇಶ ಹೊಸದಾಗಿ ಪಶುಸಂಗೋಪನೆಗೆಂದು ಬಲಿಯಾಗುತ್ತಿದೆ. ಅಂದಾಜು 84 ಕೋಟಿ ಟನ್ ಆಹಾರಧಾನ್ಯ ಅವುಗಳಿಗೆಂದೇ ಧ್ವಂಸವಾಗುತ್ತಿದೆ. ಸೋಯಾ ಅವರೆಯದ್ದಂತೂ ಇನ್ನೂ ದೊಡ್ಡ ಕತೆ. ಅದರ ಜಾಗತಿಕ ಉತ್ಪಾದನೆ 24 ಕೋಟಿ ಟನ್ ಇದ್ದು ಅದರ ಶೇಕಡಾ 95 ಭಾಗ ಪಶು ಆಹಾರಕ್ಕೆಂದೇ ಹೋಗುತ್ತಿದೆ. ಇನ್ನು ನೀರು? ಪ್ರಪಂಚದ ಪ್ರತಿ ವ್ಯಕ್ತಿ ದಿನಕ್ಕೆ ಎಂಟು ಬಾರಿ ಸ್ನಾನ ಮಾಡಿದರೆ ಬೇಕಾಗುವಷ್ಟು ನೀರು (ಪ್ರತಿ ಸೆಕೆಂಡ್ ಗೆ 28 ಲಕ್ಷ ಲೀಟರ್) ಪಶುಸಂಗೋಪನೆಗೆ ವ್ಯಯವಾಗುತ್ತಿದೆ ಎಂದು ಅಂಕಿಸಂಖೈಗಳು ಹೇಳುತ್ತಿವೆ. ಒಂದು ಲೀಟರ್ ಹಾಲಿನ ಉತ್ಪಾದನೆಗೆ ಸರಾಸರಿ 900 ಲೀಟರ್ ನೀರು ವ್ಯಯವಾಗುತ್ತಿದೆ.

ನಮ್ಮ ದೇಶದ ಪಶುಸಂಗೋಪನೆಯ ಚಿತ್ರ ತುಸು ಭಿನ್ನವಾಗಿದೆ. ಇಲ್ಲಿ ಮಾಂಸಕ್ಕೆಂದು ದನಗಳನ್ನು ಬೆಳೆಸುವುದಿಲ್ಲ. ಆದರೆ ಹೈನು ಉದ್ಯಮವೇ ದೇಶಕ್ಕೆ ಬಹುದೊಡ್ಡ ಹೊರೆಯಾಗಿ ಪರಿಣಮಿಸುತ್ತಿದೆ. ಕರ್ನಾಟಕವಂತೂ ಇಡೀ ದೇಶದಲ್ಲೇ ಹೈನು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಸರಕಾರ ಹೈನು ಕ್ರಾಂತಿಗೆ ಅಷ್ಟೆಲ್ಲ ಒತ್ತುಕೊಟ್ಟಿದ್ದರಿಂದ ಹಳ್ಳಿ ಹಳ್ಳಿಗಳಲ್ಲಿ ಡೇರಿ ಉದ್ಯಮ ವಿಕಾಸವಾಗಿದೆ. ಐದು ವರ್ಷಗಳ ಹಿಂದೆ ಬ್ರಿಟನ್ನಿನ ಹೆಸರಾಂತ ‘ನ್ಯೂ ಸೈಂಟಿಸ್ಟ್’ ಪತ್ರಿಕೆಯ ವರದಿಗಾರ ಫ್ರೆಡ್ ಪಿಯರ್ಸ್ ಎಂಬಾತ ಗುಜರಾತಿಗೆ ಭೇಟಿಕೊಟ್ಟಿದ್ದ. ಅಮುಲ್ ಡೇರಿ ಇರುವ ಆನಂದ್ ಪಟ್ಟಣದ ಸುತ್ತಮುತ್ತ ಅಡ್ಡಾಡಿ “ಇಲ್ಲಿ ಪ್ರತಿ ಲೀಟರ್ ಹಾಲಿನ ಉತ್ಪಾದನೆಗೆ ಎರಡು ಸಾವಿರ ಲೀಟರ್ ನೀರನ್ನು ಬಳಸುತ್ತಾರೆ” ಎಂದು ಖಚಿತ ಲೆಕ್ಕಾಚಾರಗಳ ಮೂಲಕ ವರದಿ ಮಾಡಿದ್ದ. ನೀರು ಅವಿನಾಶಿ ನಿಜ. ಆದರೆ ಪ್ರತಿ ಬಾರಿ ಕೊಳವೆ ಬಾವಿಯಿಂದ ನೀರನ್ನು ಎತ್ತಿ ಬಳಸಿದಾಗಲೂ ಒಂದಿಷ್ಟು ನೀರು ಆವಿಯಾಗಿ ಆಕಾಶಕ್ಕೆ ಹೋಗುತ್ತದೆ. ನಾವು ಅಗಾಧ ಪ್ರಮಾಣದಲ್ಲಿ ಹಾಲಿಗಾಗಿ ನೀರನ್ನು ಎತ್ತಿ ಬಳಸುತ್ತ ಋತುಮಾನದ ಅಸಮತೋಲಕ್ಕೆ ಕಾರಣರಾಗುತ್ತಿದ್ದೇವೆ.

ಹೈನುಗಾರಿಕೆಗೆ ಅತಿ ಆದ್ಯತೆ ಕೊಟ್ಟಿದ್ದರಿಂದ ಇನ್ನೂ ಅನೇಕ ಬಗೆಯ ಅಸಮತೋಲನ ಕಾಣಿಸಿಕೊಳ್ಳುತ್ತಿದೆ. ಹಿಂದೆಲ್ಲ ಪಶುಸಂಗೋಪನೆ ಎಂಬುದು ಒಟ್ಟಾರೆ ಗ್ರಾಮೀಣ ಬದುಕಿನ ಭಾಗವಾಗಿತ್ತು. ಸ್ಥಳೀಯ ತಳಿಗಳಿದ್ದವು. ಗೋಮಾಳವಿತ್ತು. ಕೆರೆಗಳಿದ್ದವು. ಹೊಲದಲ್ಲಿ, ಬೆಟ್ಟದಲ್ಲಿ ಮೇವಿರುತ್ತಿತ್ತು. ಹೋರಿಗಳಿಗೆ ಹೊಲದಲ್ಲಿ ಕೆಲಸವಿರುತ್ತಿತ್ತು. ಈಗ ಎಲ್ಲವೂ ಏರುಪೇರಾಗಿವೆ. ಸ್ಥಳೀಯ ಗೋ – ತಳಿಗಳು ಕಣ್ಮರೆಯಾಗುತ್ತಿವೆ. ಹೊಲಗಳಿಗೆ ಟ್ರ್ಯಾಕ್ಟರ್, ಟಿಲ್ಲರ್ ಗಳು ಬಂದಿವೆ. ಜರ್ಸಿ ಅಥವಾ ಎಚ್ ಎಫ್ ಹಸುಗಳಿಗೆ ಹೊರಿ ಕರು ಹುಟ್ಟಿದರೆ ಅದನ್ನು ಇಟ್ಟುಕೊಳ್ಳುವಂತಿಲ್ಲ. ಏಕೆಂದರೆ ಚಕ್ಕಡಿಗೆ ಕಟ್ಟುವಂತಿಲ್ಲ, ನೇಗಿಲಿಗೆ ಹಚ್ಚುವಂತಿಲ್ಲ. ಇನ್ನು ಇತ್ತ ಗೋಮಾಳವೂ ಇಲ್ಲ. ಬೆಟ್ಟಗಳಲ್ಲಿ ಜಾಲಿ, ಲಂಟಾನಾ ತುಂಬಿದೆ. ಇಂಥ ಸ್ಥಿತಿಯಲ್ಲಿ ಹೈನುಗಾರಿಕೆಗೆ ನಾವು ಅತಿ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿದ್ದೇವೆ. ಅವುಗಳಿಗೆ ನೀಡುವ ಮೇವು ಎಂಥದ್ದು? ಹೊಲದ ಭತ್ತ – ರಾಗಿಯ ಹುಲ್ಲಿನಲ್ಲಿ ಯೂರಿಯಾ, ಡಿಎಪಿ ಮತ್ತು ಪೀಡೆನಾಶಕ ವಿಷ ಸಂಚಯವಾಗಿರುತ್ತದೆ. ಸರಕಾರಿ ಗೋದಾಮುಗಳಲ್ಲಿ ಕೊಳೆಯುತ್ತಿರುವ ಕಾಳುಕಡಿಗೆ ಕಸಾಯಿಖಾನೆಯ ತ್ಯಾಜ್ಯಗಳನ್ನು ಸೇರಿಸಿ ಫ್ಯಾಕ್ಟರಿಗಳಲ್ಲಿ ತಯಾರಿಸಿದ ಪಶು ಆಹಾರವನ್ನು ಹಸುಗಳಿಗೆ ತಿನ್ನಿಸಿ, ಆಗಾಗ ಹಾರ್ಮೋನ್ ಚುಚ್ಚುಮದ್ದು ಕೊಟ್ಟು, ಕೃತಕ ಗರ್ಭಧಾರಣೆ ಮಾಡಿಸಿ ಹಾಲು ಉತ್ಪಾದನೆ ಮಾಡುತ್ತಿದ್ದೇವೆ. ಹಾಲನ್ನು ತಾಜಾ ಇಡಲೆಂದು ಹೈಡ್ರೊಜನ್ ಪೆರಾಕ್ಸೈಡ್ ಸೇರಿಸಿ, ಯೂರಿಯಾ ಬೆರೆಸಿ, ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ..... ಅಂಥ ಅನೈಸರ್ಗಿಕ ಹಾಲು ಸೇವಿಸಿ ನಗರವಾಸಿಗಳ ಯಾರ ಆರೋಗ್ಯ ಎಷ್ಟು ಸುಧಾರಿಸಿತೋ ಗೊತ್ತಿಲ್ಲ. ಆದರೆ ಗ್ರಾಮೀಣ ಜನರಿಗೂ ಈಗ ದಪ್ಪ ಹೊಟ್ಟೆ, ಬಿಪಿ, ಡಯಾಬಿಟೀಸ್, ಹೃದ್ರೋಗ, ಲಕ್ವ, ಕಿಡ್ನಿ ವೈಫಲ್ಯ, ಎಲ್ಲ ಕಾಯಿಲೆಗಳೂ ಅಮರಿಕೊಳ್ಳುತ್ತಿವೆ.

ಲಯತಪ್ಪಿದ ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ವಿದೇಶೀ ದನಗಳಿಗೆ, ಅದರಲ್ಲೂ ಹಸುಗಳಿಗೆ ಮಾತ್ರ ಅತಿಯಾದ ಆದ್ಯತೆ ನೀಡಿದ್ದರಿಂದ ಹಳ್ಳಿಯ ಸಮಗ್ರ ಬದುಕಿನ ಸಮತೋಲವೇ ಏರುಪೇರಾಗಿದೆ. ಇಂಥ ಅಸಮತೋಲ ಸ್ಥಿತಿಯಲ್ಲಿ ನಿರುಪಯುಕ್ತ ದನಗಳ ಸಂಖೈಯನ್ನು ಕಡಿಮೆ ಮಾಡುವುದೇ ಸೂಕ್ತವೆಂದು ದೇಶದ ಹೆಸರಾಂತ ಅರ್ಥತಜ್ಞ ವಿ.ಎಮ್. ದಾಂಡೇಕರ್ ಇಪ್ಪತ್ತು ವರ್ಷಗಳ ಹಿಂದೆಯೇ ಹೇಳಿದ್ದರು. ಇದ್ದುದರಲ್ಲಿ ಒಂದು ನೆಮ್ಮದಿಯ ಸಂಗತಿ ಏನಿತ್ತೆಂದರೆ ಯಾರಿಗೂ ಬೇಡವಾದ ಹೋರಿಗಳ ಮತ್ತು ಕರಾವು ಮುಗಿದಿರುವ ಹಸುಗಳ ವಿಲೆವಾರಿ ತಂತಾನೆ ನಡೆದು ಹೋಗುತ್ತಿತ್ತು. ಅವು ಮಾಂಸಾಹಾರಿಗಳ ಹೊಟ್ಟೆಗೆ ಹೋಗುತ್ತಿದ್ದವು. “ನಮ್ಮ ದೇಶದಲ್ಲಿ ಮಾರಾಟಕ್ಕೆ ಲಭಿಸುವ ಮಾಂಸದಲ್ಲಿ ಶೇಕಡಾ 60ಕ್ಕೂ ಹೆಚ್ಚು ಪಾಲು ರಾಸುಗಳಿಂದಲೇ (ಅಂದರೆ ಎತ್ತು, ಆಕಳು, ಎಮ್ಮೆ, ಕೋಣ) ಬರುತ್ತಿದೆ” ಎಂದು ಐಸೆಕ್ ನ ಇಕಾಲಜಿ ಅರ್ಥತಜ್ಞ ಡಾ. ಸಯ್ಯದ್ ಪಾಷಾ ಹೇಳುತ್ತಾರೆ. ನಾವು ವಿದೇಶಗಳಿಗೆ ರಫ್ತು ಮಾಡುವ ಒಟ್ಟೂ ಕೃಷಿ ಉತ್ಪನ್ನಗಳಲ್ಲಿ ರಾಸುಮಾಂಸದ ಪ್ರಮಾಣ ಶೇಕಡಾ 20ರಷ್ಟಿದೆ. ಇದು ತುಂಬ ಮಹತ್ವದ ಸಂಗತಿ. ಗೋಹತ್ಯೆಯನ್ನು ನಿಷೀಧಿಸಿದರೆ, ಇಷ್ಟು ದೊಡ್ಡ ಪ್ರಮಾಣದ ಆಹಾರ ಮೂಲವನ್ನು, ಡಾಲರ್ ಗಳಿಸುವ ಸಂಪನ್ಮೂಲವನ್ನು ನಾವು ವ್ಯರ್ಥವಾಗಿ ಹೂಳಬೇಕಾಗುತ್ತದೆ. ಅದೂ ಸುಲಭದ ಕೆಲಸವಲ್ಲ. ರಾಸುಗಳು ನಿರುಪಯುಕ್ತವಾಗಿ ಬದುಕಿರುವಷ್ಟು ವರ್ಷವೂ ಅವಕ್ಕೆ ಮೇವು ನೀರು ಒದಗಿಸುತ್ತಿರಬೇಕಾಗುತ್ತದೆ. ಹಾಗೆ ವ್ಯರ್ಥ ವ್ಯಯವಾಗುವ ರಾಸುಮಾಂಸಕ್ಕೆ ಬದಲಿಯಾಗಿ, ಅಷ್ಟೇ ದೊಡ್ಡ ಪ್ರಮಾಣದ ಮಾಂಸವನ್ನು ಬೇರೆ ಮೂಲಗಳಿಂದ ಒದಗಿಸಬೇಕಾಗುತ್ತದೆ. ಬೇರೆ ಮೂಲ ಎಂದರೆ ಮತ್ತೇನಲ್ಲ, ಆಡು – ಕುರಿಗಳನ್ನು ಬೆಳೆಸುವುದು.

ದನದ ಮಾಂಸಕ್ಕೆ ಬದಲಿಯಾಗಿ ಆಡು – ಕುರಿಗಳ ಮಾಂಸವನ್ನು ದೇಶಕ್ಕೆಲ್ಲ ಒದಗಿಸಬೇಕೆಂದರೆ ನಿಸರ್ಗ ಸಮತೋಲ ಇನ್ನಷ್ಟು ಹದಗೆಡುತ್ತದೆ. ಏಕೆಂದರೆ ಅವುಗಳನ್ನು ಕಟ್ಟಿ ಬೆಳೆಸುವ ಪರಿಪಾಠ ನಮ್ಮಲ್ಲಿಲ್ಲ. ಗುಡ್ಡಬೆಟ್ಟಗಳಲ್ಲಿ ಆಡು – ಮೇಕೆಗಳು ಲಂಗುಲಗಾಮಿಲ್ಲದೆ ಓಡಾಡುವುದರಿಂದಲೇ ನಮ್ಮ ಬಹುಪಾಲು ಸಸ್ಯಸಂಪತ್ತು ಹೇಳಹೆಸರಿಲ್ಲದೆ ನಾಶವಾಗಿದೆ. ಅವು ಚಲಿಸಿದಲ್ಲೆಲ್ಲ ಮಣ್ಣು ಸವಕಳಿಯಾಗಿ, ಕೆಂದೂಳೆದ್ದು ಬರಸದೃಶ ಪ್ರದೇಶ ನಿರ್ಮಾಣಗೊಳ್ಳುತ್ತದೆ. ಇನ್ನು ಗೋಹತ್ಯೆ ನಿಲ್ಲಿಸಿದರೆ ಆ ಪ್ರಮಾಣದ ಮಾಂಸಕ್ಕಾಗಿ ಇವುಗಳನ್ನು ಬೆಳೆಸಬೇಕೆಂದರೆ ಈಗಿಗಿಂತ ಆರು ಪಟ್ಟು ಹೆಚ್ಚು ಕುರಿಮೇಕೆಗಳಿಗೆ ಬೇಡಿಕೆ ಬರುತ್ತದೆ. ಆಗ ದೇಶದ ಇದ್ದಬದ್ದ ಧಾರಣ ಸಾಮರ್ಥ್ಯವೂ ಕುಸಿಯುತ್ತದೆ. ಹಸಿರುಕವಚದ ಸ್ಥಿತಿ ಏನಾದೀತೆಂದು ಯಾರೂ ಊಹಿಸಬಹುದು. ಇದು ಜೀವಜಾಲದ (ಇಕಾಲಜಿ) ಪ್ರಶ್ನೆಯಾದರೆ, ಇದರೊಟ್ಟಿಗೆ ಅರ್ಥವ್ಯವಸ್ಥೆ (ಇಕಾನಮಿ) ಕೂಡ ಬಿಗಡಾಯಿಸುತ್ತದೆ. ದನ – ಎಮ್ಮೆಗಳ ಮಾಂಸದ ಬೆಲೆಗೆ ಹೋಲಿಸಿದರೆ ಈಗ ಆಡುಕುರಿಗಳ ಮಾಂಸದ ಬೆಲೆ ಐದು ಪಟ್ಟು ಹೆಚ್ಚಿಗೆ ಇದೆ. ಅದು ಸಾಮಾನ್ಯರಿಗೆ ಎಟಕುವಂಥದ್ದಲ್ಲ. ಮಾಂಸಾಹಾರಿಗಳಿಗೆಲ್ಲ ಕಡ್ಡಾಯವಾಗಿ ದುಬಾರಿಯ ಕುರಿಕೋಳಿಗಳನ್ನು ತಿನ್ನಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವಾಗುತ್ತದೆ. ಇದರ ಪರಿಣಾಮ ಏನೆಂದರೆ ವನ್ಯಜೀವಿಗಳ ಮೇಲೆ ಇನ್ನಷ್ಟು ಒತ್ತಡ ಬೀಳುತ್ತದೆ. ದೇಶದ ಮೃಗಾಯಲಗಳಲ್ಲಿರುವ ಮಾಂಸಾಹಾರಿ ಪ್ರಾಣಿಗಳಿಗೆ ಇಷ್ಟು ದಿನ ದನದ ಮಾಂಸವನ್ನೇ ಕೊಡಲಾಗುತ್ತಿತ್ತು – ಅದು ಅಗ್ಗದ್ದೆಂಬ ಕಾರಣದಿಂದ. ಆದರೆ ಇನ್ನುಮೇಲೆ ಅಲ್ಲಿಗೂ ಹಂದಿ ಮಾಂಸವನ್ನೋ, ಆಡುಕುರಿಗಳ ಮಾಂಸವನ್ನೋ ನೀಡಲು ಹೊರಟರೆ ಅದರ ವೆಚ್ಚವೂ ನಾಲ್ಕಾರು ಪಟ್ಟು ಹೆಚ್ಚಾಗುತ್ತದೆ.

ಮುಂದುವರೆಯುವುದು.....