ಸೆಪ್ಟೆಂ 8, 2016

ಗೋಹತ್ಯೆ – ಒಂದು ಪರಾಮರ್ಶೆ: ಭಾಗ 3.

ನಾಗೇಶ್ ಹೆಗಡೆ
25/08/2016
ಗೋಹತ್ಯೆ – ಒಂದು ಪರಾಮರ್ಶೆ: ಭಾಗ 1 ಓದಲು ಇಲ್ಲಿ ಕ್ಲಿಕ್ಕಿಸಿ
ಗೋಹತ್ಯೆ – ಒಂದು ಪರಾಮರ್ಶೆ: ಭಾಗ 2 ಓದಲು ಇಲ್ಲಿ ಕ್ಲಿಕ್ಕಿಸಿ
ಅಂಥದ್ದೇನೂ ಆಗುವುದಿಲ್ಲ; ದನಕರುಗಳು ಶಾಶ್ವತವೇನಲ್ಲವಲ್ಲ! ಅವು ಸಹಜವಾಗಿ ಸಾಯುತ್ತಿರುತ್ತವೆ. ಈಗಿನಷ್ಟೇ ಸಂಖೈಯಲ್ಲಿ ಆಗಲೂ ಸಾಯುತ್ತಿರುತ್ತವೆ. ಅವುಗಳ ಮಾಂಸ ತೆಗೆದು ಮಾರಲು ಅಥವಾ ಮೃಗಾಲಯಕ್ಕೆ ಸಾಗಿಸಲು ಅನುಮತಿ ಸಿಕ್ಕೇ ಸಿಗುತ್ತದೆ. ನೀವು ಉತ್ಪ್ರೇಕ್ಷೆ ಮಾಡಬೇಡಿ.
ಉತ್ಪ್ರೇಕ್ಷೆ ಅಲ್ಲ. ಈಗಿನ ವ್ಯವಸ್ಥೆಯಲ್ಲಿ ಅಲ್ಲಲ್ಲಿ ಕೇಂದ್ರೀಕೃತ ಕಸಾಯಿಖಾನೆಗಳಲ್ಲಿ ದಿನವೂ ಇಷ್ಟಿಷ್ಟೆಂಬಂತೆ ಮಾಂಸ ಲಭಿಸುತ್ತಿದೆ. ಎಲ್ಲೆಲ್ಲಿ ಎಂದೆಂದು ಎಷ್ಟೆಷ್ಟು ಡಿಮಾಂಡ್ ಇದೆಯೊ ಅಂದಂದು ಅಷ್ಟಷ್ಟು ಪೂರೈಕೆ ಆಗುತ್ತಿದೆ. ಗೋಹತ್ಯೆ ನಿಷೇಧಿಸಿದರೆ ಈ ಸಪ್ಲೈ ಚೇನ್ ನಲ್ಲಿ ಅವ್ಯವಸ್ಥೆ ಉಂಟಾಗುತ್ತದೆ. ಏಕೆಂದರೆ ಎಲ್ಲಿ, ಯಾವ ದಿನ ಎಷ್ಟು ದನಕರುಗಳು ಸಾಯಲಿವೆ ಎಂಬುದು ಯಾರಿಗೂ ಗೊತ್ತಾಗಲು ಸಾಧ್ಯವಿಲ್ಲ. ದನಗಳ ಕಳೇಬರದ ಸಾಗಾಣಿಕೆಗೆ ಸಂಬಂಧಿಸಿದಂತೆ ಪೊಲೀಸ್ ಕಿರುಕುಳ ಹೆಚ್ಚುವುದರಿಂದ, ಇಂಥ ರಗಳೆಯೇ ಬೇಡವೆಂದು ರೈತರು ತಮ್ಮ ದನ ಸತ್ತಾಗ ಯಾರಿಗೂ ತಿಳಿಸದೇ ಮಣ್ಣು ಮಾಡುವ ಸಾಧ್ಯತೆ ಹೆಚ್ಚುತ್ತದೆ. ಹೀಗಾದರೆ ಚರ್ಮೋದ್ಯಮವೂ ತತ್ತರಿಸಬಹುದು. ಪಶು ಆಹಾರ, ಔಷಧ ಉತ್ಪಾದನೆ ಮತ್ತು ಔದ್ಯಮಿಕ ಕಚ್ಚಾಪದಾರ್ಥ, ಸೌಂದರ್ಯವರ್ಧಕ ರಸವಸ್ತುಗಳ ತಯಾರಿಕೆ ಹೀಗೆ ಎಲ್ಲಕ್ಕೂ ನಾವು ವಿದೇಶೀ ಆಮದನ್ನೇ ಅವಲಂಬಿಸಲಬೇಕಾಗುತ್ತದೆ. ನಾಡಿನುದ್ದಕ್ಕೂ ಹಳ್ಳಿಗಳಲ್ಲಿ ಅಲ್ಲಲ್ಲಿ ಆಗಾಗ ಒಂದೋ ಎರಡೋ ರಾಸುಗಳು ಸತ್ತಿದ್ದು ಗೊತ್ತಾದರೂ ಅದರ ಮಾಂಸವನ್ನು ಸಾಗಿಸಿ ತಂದು ಆಹಾರವಾಗಿ ವಿಲೇವಾರಿ ಮಾಡುವುದಾದರೆ ಗುಣಮಟ್ಟ ಕೆಟ್ಟು ರೋಗರುಜಿನ ಹಬ್ಬಲು ಕಾರಣವಾಗಬಹುದು. ಬನ್ನೇರುಘಟ್ಟದಲ್ಲಿ ಐದು ಹುಲಿಗಳು ‘ಸಾಲ್ಮೊನೆಲ್ಲಾ’ ವಿಷಾಣು ಸೇರಿದ್ದ ರೋಗಗ್ರಸ್ತ ಮಾಂಸವನ್ನ ತಿಂದೇ ಸತ್ತಿವೆ.

ಸೆಪ್ಟೆಂ 1, 2016

ಗೋಹತ್ಯೆ – ಒಂದು ಪರಾಮರ್ಶೆ: ಭಾಗ 2.

ನಾಗೇಶ್ ಹೆಗಡೆ.
01/09/2016
ಗೋಹತ್ಯೆ – ಒಂದು ಪರಾಮರ್ಶೆ: ಭಾಗ 1 ಓದಲು ಇಲ್ಲಿ ಕ್ಲಿಕ್ಕಿಸಿ
ಆದರೂ ಬುದ್ಧ – ಗಾಂಧೀಜಿಯವರಂಥ ಅಹಿಂಸಾವಾದಿಗಳ ನಾಡಿನಲ್ಲಿ ಗೋವಧೆ ಸರಿಯಲ್ಲ ತಾನೆ?
ಎಲ್ಲಿದ್ದೀರಿ? ಬುದ್ಧನ ಅನುಯಾಯಿಗಳು ಬಿಡುಬೀಸಾಗಿ ಗೋಮಾಂಸ ಭಕ್ಷಣೆ ಮಾಡುತ್ತಾರೆ! ಥಾಯ್ಲೆಂಡ್, ಜಪಾನ್, ಕೊರಿಯಾಗಳಲ್ಲಷ್ಟೇ ಅಲ್ಲ, ನಮ್ಮ ನಾಡಿನಲ್ಲೇ ಇರುವ ಟಿಬೆಟನ್ ಜನರು ನಿತ್ಯ ಊಟದಲ್ಲಿ ಗೋಮಾಂಸ ಬಳಸುತ್ತಾರೆ. ಅವರು ಗೋವುಗಳನ್ನು ಪ್ರೀತಿಯಿಂದಲೇ ಸಾಕುತ್ತಾರೆ ಕೂಡ. ಮಹಾತ್ಮಾ ಗಾಂಧಿಯವರು ಮಾಂಸಾಹಾರ ಸೇವನೆ ಮಾಡುತ್ತಿರಲಿಲ್ಲ. ಆದರೆ ಎಂದೂ ಅವರು ಇತರ ಧರ್ಮೀಯರ ಮೇಲೆ ತಮ್ಮ ಕಟ್ಟುಪಾಡುಗಳನ್ನು ಹೇರುತ್ತಿರಲಿಲ್ಲ.

ಇನ್ನು ಹಿಂಸೆಯ ಪ್ರಶ್ನೆ ಬಂದಾಗ, ನಾವು ತುಸು ಕಣ್ತೆರೆದು ವಾಸ್ತವದ, ಅಂದರೆ ನೈಸರ್ಗಿಕ ಜಗತ್ತನ್ನು ನೋಡಬೇಕಾಗುತ್ತದೆ. ಒಂದು ಜೀವಿ ಇನ್ನೊಂದಕ್ಕೆ ಆಹಾರವಾಗಿರುವುದೇ ನಿಸರ್ಗದ ಮೂಲಧರ್ಮ. ಅಲ್ಲಿ ಹಿಂಸೆ ಅಥವಾ ಅಹಿಂಸೆ ಎಂಬ ಪದಗಳೇ ಇಲ್ಲ. ಹಲ್ಲು, ಉಗುರು, ವಿಷ, ಉರುಳು ಎಲ್ಲವೂ ಅಲ್ಲಿವೆ. ಊಜಿನೊಣವೊಂದು ರೇಷ್ಮೆಹುಳದ ಬೆನ್ನಮೇಲೆ ರಂಧ್ರ ಮಾಡಿ ಮೊಟ್ಟೆ ಇಟ್ಟು ಹೋಗುತ್ತದೆ. ಊಜಿಮೊಟ್ಟೆಯಿಂದ ಹೊರಬಿದ್ದ ಲಾರ್ವಾ ಹುಳ ಮೆಲ್ಲಗೆ ರೇಷ್ಮೆಹುಳುವಿನ ಬೆನ್ನನ್ನು, ನಂತರ ಹೊಟ್ಟೆಯನ್ನು, ಭುಜವನ್ನು ಹಂತಹಂತವಾಗಿ ಮೂರು ದಿನಗಳವರೆಗೆ ತಿನ್ನುತ್ತ, ಅದುವರೆಗೂ ತನ್ನ ಬಲಿಯನ್ನು ಜೀವಂತ ಇಟ್ಟು ಕೊನೆಗೆ ತಿನ್ನಲು ಇನ್ನೇನೂ ಉಳಿದಿಲ್ಲ ಎನ್ನುವಾಗ ರೇಷ್ಮೆಹುಳದ ಹೃದಯ, ಶ್ವಾಸಕೋಶ ಮತ್ತು ಮಿದುಳನ್ನು ತಿಂದು ಮುಗಿಸುತ್ತದೆ. ಅಲ್ಲಿ ಕರುಣೆ, ದಯೆ ಎಂಬ ಪದಗಳೂ ಇಲ್ಲ. ಇದ್ದಿದ್ದರೆ ಮೊದಲ ದಿನವೇ ಮಿದುಳನ್ನು ತಿಂದು, ರೇಷ್ಮೆ ಹುಳಕ್ಕೆ ನೋವೇ ಗೊತ್ತಾಗದಂತೆ ಅದನ್ನು ಪ್ರಜ್ಞಾಶೂನ್ಯ ಮಾಡಿ ನಂತರವೇ ಊಜಿಲಾರ್ವಾ ತನ್ನ ಊಟವನ್ನು ಮುಂದುವರಿಸಬಹುದಿತ್ತು. ‘ಬೆಕ್ಕು ಇಲಿಯನ್ನು ಅತ್ತ ಇತ್ತ ತಿರುಗಿಸಿ ಗೋಳಾಡಿಸಿದಂತೆ ಅನ್ನಿಸಿದರ ಇಲಿಗೆ ನೋವಿನ ಅನುಭವ ಆಗುವುದಿಲ್ಲ’ ಎಂದು ಹೆಸರಾಂತ ವೈದ್ಯ – ಚಿಂತಕ ಡಾ. ಲೀವಿಸ್ ಥಾಮಸ್ ಹೇಳುತ್ತಾರೆ. ಅದಕ್ಕೆ ಕಾರಣವನ್ನು ಕೊಡುತ್ತಾರೆ: ನೋವಿನ ಅನುಭವ ಮಿದುಳಿಗೆ ಏಕೆ ರವಾನೆ ಆಗುತ್ತದೆಂದರೆ ಶರೀರವನ್ನು ಬಚಾವು ಮಾಡಲಿಕ್ಕೆ ಮಾತ್ರ. ಶರೀರಕ್ಕೆ ಪೆಟ್ಟು ಬಿದ್ದರೆ ಓಡಬೇಕು, ಇಲ್ಲವೆ ಎದುರಾಳಿಯ ಜತೆ ಹೋರಾಡಿ ಆತನನ್ನು ಓಡಿಸಬೇಕು. ಅಂತೂ ಬಚಾವಾಗಬೇಕು. ಓಟ ಇಲ್ಲವೇ ಹೋರಾಟ ಎರಡೂ ಸಾಧ್ಯವಿಲ್ಲ ಎಂಬಂಥ ‘ಶರಣಾಗತ’ ಸ್ಥಿತಿಗೆ ತಲುಪಿದಾಗ ಇಲಿಯ ಮಿದುಳಿಗೆ ನೋವನ್ನು ರವಾನಿಸುವ ರಸಸಂಜ್ಞೆ ಸ್ವಿಚಾಫ್ ಆಗುತ್ತದೆ. ಏಕೆಂದರೆ ಚಿತ್ರಹಿಂಸೆ ಅನುಭವಿಸುವುದರಿಂದ ಜೀವಿಗೆ ಯಾವ ಲಾಭವೂ ಇಲ್ಲ. ಪುರುಷಾರ್ಥವೂ ಇಲ್ಲ. ಹಾಗಾಗಿ ಅಲ್ಲಿ ನೋವಿನ ಪ್ರಶ್ನೆ ಬರುವುದೇ ಇಲ್ಲ.

ಆದರೆ ಹಸುವನ್ನು ಹಿಂಸಿಸಿದಾಗ ನಮ್ಮ ಮನಸ್ಸಿಗೇ ನೋವಾಗುತ್ತದಲ್ಲ?
ಒಪ್ಪೋಣ. ಹಿಂಸೆ ಕೊಡಬಾರದು. ಸಾಕುಪ್ರಾಣಿಗಳಿಗೆ ಛಡಿ ಏಟು ಕೊಡುವುದು, ಬರೆ ಹಾಕುವುದು, ನೊಗ ಹೊತ್ತು ಹುಣ್ಣಾದ ಹೆಗಲಿಗೇ ಮತ್ತೆ ನೊಗ ಹೇರುವುದು..... ಹೀಗೆ ನಿಸರ್ಗದಲ್ಲಿ ಇಲ್ಲದಂಥ ಚಿತ್ರಹಿಂಸೆಗಳನ್ನು ನಾವು ಕೊಡುತ್ತೇವೆ. ಮನುಷ್ಯಪ್ರಾಣಿಯನ್ನು ಯಾರಾದರೂ ಕಟ್ಟಿ ಹಾಕಿ ಈ ರೀತಿ ಹಿಂಸೆ ಕೊಟ್ಟರೆ ಆತ, ‘ನನ್ನನ್ನು ಕೊಂದುಬಿಡ್ರಪ್ಪಾ’ ಎಂದು ಬೇಡಿಕೊಳ್ಳಬಹುದು. ರಾಸುಗಳಿಗೆ ನಾವು ಅಂಥ ಮುಕ್ತಿಯನ್ನೂ ಕೊಡುವುದಿಲ್ಲ. ಇನ್ನು ಕರುವಿಗೆ ಹಾಲೂಡಿಸುತ್ತಿರುವಾಗ ತಾಯಿಯಿಂದ ಕರುವನ್ನು ಹಿಂದಕ್ಕೆಳೆದು ಗೂಟಕ್ಕೆ ಕಟ್ಟಿ, ನಮ್ಮ ಸ್ವಾರ್ಥಕ್ಕಾಗಿ ನಾವು ಹಾಲು ಹಿಂಡಲು ತೊಡಗಿದರೆ ಅದೂ ಮಾನಸಿಕ ಹಿಂಸೆಯ ಕೃತ್ಯವೇ ಆಗುತ್ತದೆ. ಹೋರಿ ಕರು ಹುಟ್ಟಿದರೆ ಅದನ್ನೂ ಎಳೆಗರುವಾಗಿದ್ದಾಗಲೇ ತಾಯಿಯಿಂದ ಶಾಶ್ವತವಾಗಿ ಬೇರ್ಪಡಿಸಿ ದೂರ ಸಾಗಿಸುವುದೂ ಕ್ರೌರ್ಯವೇ ಆಗುತ್ತದೆ. ಅಷ್ಟೇಕೆ, ಕೆಲವು ಗೋಪ್ರೇಮಿಗಳು ವಾರಕ್ಕೊಮ್ಮೆ ಗೋಶಾಲೆಗಳಿಗೆ ಹೋಗಿ ಪ್ರೀತಿಯಿಂದಲೇ ಅವಕ್ಕೆ ತುಪ್ಪದಲ್ಲಿ ತಯಾರಿಸಿ ಲಡ್ಡೂ, ಒಬ್ಬಟ್ಟು ತಿನ್ನಿಸಿ ಅವು ಗ್ಯಾಸ್ ಟ್ರಬಲ್, ಹೊಟ್ಟೆನೋವಿನಿಂದ ಸಂಕಟಪಟ್ಟು ಒದ್ದಾಡುವ, ಸಾಯುವ ಉದಾಹರಣೆಗಳೂ ಇವೆ. ಆದರೆ ನಾವು ಅವನ್ನೆಲ್ಲ ಒಪ್ಪಿಕೊಂಡಿದ್ದೇವೆ. ಹೀಗೆ, ‘ಬದುಕಿರುವಾಗ ಹಿಂಸೆ ಕೊಟ್ಟು ಕೊಟ್ಟು ಜೀವಂತ ಇಟ್ಟಿರುವುದು ಸರಿ, ಆದರೆ ಸಾವಿನ ಮುಂಚಿನ ಕ್ಷಣಗಳಲ್ಲಿ ಹಿಂಸೆ ಮಾತ್ರ ಬೇಡ’ ಎನ್ನುವುದು ಅದೆಷ್ಟು ಸರಿ? ಅಥವಾ, ‘ಆಡು – ಕುರಿ – ಹಂದಿ – ಕೋಳಿಗಳನ್ನು ಕೊಂದರೆ ಸರಿ, ದನಗಳನ್ನು ಮಾತ್ರ ಕೊಲ್ಲುವುದು ಸಲ್ಲ’ ಎಂದು ವಾದಿಸುವುದೂ ಅದೆಷ್ಟು ತಾರ್ಕಿಕ? ಗೋವಿನ ಶರೀರದಲ್ಲಿ 33 ಕೋಟಿ ದೇವತೆಗಳಿರುವುದೇ ನಿಜವಾದರೆ ಮೇಕೆಯ ಶರೀರದಲ್ಲಿ 22 ಕೋಟಿಯಾದರೂ ಇರಬಹುದಲ್ಲ? ದೊಡ್ಡ ಜೀವಿಗಳಿಗೆ ಮಾತ್ರ ನೋವಿನ ಸಂವೇದನೆ ಇರುತ್ತದೆ ಎಂದು ಹೇಳಲು ಯಾವ ಆಧಾರ ಇದೆ? ಇಷ್ಟಕ್ಕೂ ಆಧುನಿಕ ಕಸಾಯಿಖಾನೆಗಳಲ್ಲಿ ದನದ ಕೆನ್ನೆಗಳಿಗೆ ವಿದ್ಯುತ್ ದಂಡವನ್ನು ಒತ್ತಿ ಆಘಾತ ಕೊಟ್ಟು ಪ್ರಜ್ಞೆ ತಪ್ಪಿಸಿ ಕೊಲ್ಲುವ ವ್ಯವಸ್ಥೆ ಇದೆ. ಧಾರ್ಮಿಕ ನಂಬುಗೆಗಳಿಗೆ ಅಡ್ಡಗಾಲು ಹಾಕದಂತೆ ನೋಡಿಕೊಂಡು, ಸಾಧ್ಯವಿದ್ದಲ್ಲೆಲ್ಲ ಹಿಂಸೆಯನ್ನು ಸಾಧ್ಯವಿದ್ದಷ್ಟೂ ಕಡಿಮೆ ಮಾಡಬಲ್ಲ ವ್ಯವಸ್ಥೆ ಎಲ್ಲೆಡೆ ಜಾರಿಗ ಬರಲೆಂದು ಒತ್ತಾಯಿಸೋಣ. ಸುಧಾರಿತ ದೇಶಗಳಲ್ಲಿ ದೃಶ್ಯಮಾಲಿನ್ಯವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅದು ನಮ್ಮಲ್ಲೂ ಜಾರಿಗೆ ಬರಬೇಕೆಂದು ಒತ್ತಾಯಿಸೋಣ. ಬೀದಿಯ ಕೊಳಕು ಸಂದುಗೊಂದುಗಳಲ್ಲಿ ಎಲ್ಲರಿಗೂ ಕಾಣುವಂತೆ ಪ್ರಾಣಿವಧೆ ಮಾಡಕೂಡದು. ಕತ್ತರಿಸಿದ ರುಂಡ ಮುಂಡ ಕಾಲು ಗೊರಸುಗಳನ್ನು (ಅದು ಕುರಿ – ಮೇಕೆಗಳದ್ದಾದರೂ) ಬೀದಿಬದಿಯಲ್ಲಿ ಇಲ್ಲವ ಅಂಗಡ ಮುಂಗಟ್ಟುಗಳಲ್ಲಿ ಪ್ರದರ್ಶಿಸಬಾರದು ಎಂದು ಒತ್ತಾಯಿಸೋಣ. ಕಂತೆಕಂತೆ ತರಕಾರಿಯ ಹಾಗೆ ಕೋಳಿಗಳನ್ನು ತಲೆಕೆಳಗಾಗಿ ತೂಗಾಡಿಸುತ್ತ ದ್ವಿಚಕ್ರ ವಾಹನಗಳಲ್ಲಿ ಬಹಿರಂಗವಾಗಿ ಸಾಗಿಸುವುದನ್ನು ನಿಷೇಧಿಸಬೇಕೆಂದು ಒತ್ತಾಯಿಸೋಣ. ಅಂಥ ಅನಾಗರಿಕ ಕೃತ್ಯಗಳ ನಡೆಯಕೂಡದು.

ತಥಾಕಥಿತ ಸುಧಾರಿತ ದೇಶಗಳಲ್ಲಿ ಬಹುಪಾಲು ಧಾನ್ಯವೆಲ್ಲ ಪಶು ಆಹಾರಕ್ಕೆಂದೇ ಬಳಕೆಯಾಗುತ್ತದೆ. ಜನರು ಕಾಳುಕಡಿ ತಿನ್ನುವ ಬದಲು ಮಾಂಸವನ್ನೇ ತಿನ್ನುತ್ತಾರೆ. ಒಂದು ಕಿಲೊ ಮಾಂಸ ಬೆಳೆಸಲು 150 ಕಿಲೋ ಧಾನ್ಯವನ್ನು ವ್ಯಯಿಸಬೇಕಾಗುತ್ತದೆ. ನಮ್ಮಲ್ಲೂ ಅದೇ ಸಂಸ್ಕೃತಿ ರೂಢಿಗೆ ಬಂದರೆ ಧಾನ್ಯದ ಅಭಾವ ತಲೆದೋರೀತಲ್ಲವೆ? ಭಾರತದ ಕೃಷಿಭೂಮಿಗೆ ಅಷ್ಟೊಂದು ಧಾರಣ ಸಾಮರ್ಥ್ಯ ಇದೆಯೆ?
ನಮ್ಮ ಚರ್ಚೆ ಈಗ ಆರ್ಥಿಕ ರಂಗದತ್ತ ತಿರುಗುತ್ತಿದೆ. ಔದ್ಯಮಿಕ ಮಾದರಿಯ ಪಶುಸಂಗೋಪನೆ ಎಂಬುದು ಇಡೀ ಭೂಮಿಗೆ ಅತಿ ದೊಡ್ಡ ಹೊರೆಯಾಗುತ್ತಿದೆ, ನಿಜ. ಜಗತ್ತಿನ ಒಟ್ಟು ಕೃಷಿಭೂಮಿಯ ಶೇಕಡಾ 70 ಭಾಗ ಬರೀ ಪಶುಗಳ ಆಹಾರ ಬೆಳೆಯುವ ಉದ್ದೇಶಕ್ಕೇ ಮೀಸಲಾಗಿದೆ. ಪ್ರತಿವರ್ಷ ಸರಾಸರಿ 50 ಲಕ್ಷ ಅರಣ್ಯಪ್ರದೇಶ ಹೊಸದಾಗಿ ಪಶುಸಂಗೋಪನೆಗೆಂದು ಬಲಿಯಾಗುತ್ತಿದೆ. ಅಂದಾಜು 84 ಕೋಟಿ ಟನ್ ಆಹಾರಧಾನ್ಯ ಅವುಗಳಿಗೆಂದೇ ಧ್ವಂಸವಾಗುತ್ತಿದೆ. ಸೋಯಾ ಅವರೆಯದ್ದಂತೂ ಇನ್ನೂ ದೊಡ್ಡ ಕತೆ. ಅದರ ಜಾಗತಿಕ ಉತ್ಪಾದನೆ 24 ಕೋಟಿ ಟನ್ ಇದ್ದು ಅದರ ಶೇಕಡಾ 95 ಭಾಗ ಪಶು ಆಹಾರಕ್ಕೆಂದೇ ಹೋಗುತ್ತಿದೆ. ಇನ್ನು ನೀರು? ಪ್ರಪಂಚದ ಪ್ರತಿ ವ್ಯಕ್ತಿ ದಿನಕ್ಕೆ ಎಂಟು ಬಾರಿ ಸ್ನಾನ ಮಾಡಿದರೆ ಬೇಕಾಗುವಷ್ಟು ನೀರು (ಪ್ರತಿ ಸೆಕೆಂಡ್ ಗೆ 28 ಲಕ್ಷ ಲೀಟರ್) ಪಶುಸಂಗೋಪನೆಗೆ ವ್ಯಯವಾಗುತ್ತಿದೆ ಎಂದು ಅಂಕಿಸಂಖೈಗಳು ಹೇಳುತ್ತಿವೆ. ಒಂದು ಲೀಟರ್ ಹಾಲಿನ ಉತ್ಪಾದನೆಗೆ ಸರಾಸರಿ 900 ಲೀಟರ್ ನೀರು ವ್ಯಯವಾಗುತ್ತಿದೆ.

ನಮ್ಮ ದೇಶದ ಪಶುಸಂಗೋಪನೆಯ ಚಿತ್ರ ತುಸು ಭಿನ್ನವಾಗಿದೆ. ಇಲ್ಲಿ ಮಾಂಸಕ್ಕೆಂದು ದನಗಳನ್ನು ಬೆಳೆಸುವುದಿಲ್ಲ. ಆದರೆ ಹೈನು ಉದ್ಯಮವೇ ದೇಶಕ್ಕೆ ಬಹುದೊಡ್ಡ ಹೊರೆಯಾಗಿ ಪರಿಣಮಿಸುತ್ತಿದೆ. ಕರ್ನಾಟಕವಂತೂ ಇಡೀ ದೇಶದಲ್ಲೇ ಹೈನು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಸರಕಾರ ಹೈನು ಕ್ರಾಂತಿಗೆ ಅಷ್ಟೆಲ್ಲ ಒತ್ತುಕೊಟ್ಟಿದ್ದರಿಂದ ಹಳ್ಳಿ ಹಳ್ಳಿಗಳಲ್ಲಿ ಡೇರಿ ಉದ್ಯಮ ವಿಕಾಸವಾಗಿದೆ. ಐದು ವರ್ಷಗಳ ಹಿಂದೆ ಬ್ರಿಟನ್ನಿನ ಹೆಸರಾಂತ ‘ನ್ಯೂ ಸೈಂಟಿಸ್ಟ್’ ಪತ್ರಿಕೆಯ ವರದಿಗಾರ ಫ್ರೆಡ್ ಪಿಯರ್ಸ್ ಎಂಬಾತ ಗುಜರಾತಿಗೆ ಭೇಟಿಕೊಟ್ಟಿದ್ದ. ಅಮುಲ್ ಡೇರಿ ಇರುವ ಆನಂದ್ ಪಟ್ಟಣದ ಸುತ್ತಮುತ್ತ ಅಡ್ಡಾಡಿ “ಇಲ್ಲಿ ಪ್ರತಿ ಲೀಟರ್ ಹಾಲಿನ ಉತ್ಪಾದನೆಗೆ ಎರಡು ಸಾವಿರ ಲೀಟರ್ ನೀರನ್ನು ಬಳಸುತ್ತಾರೆ” ಎಂದು ಖಚಿತ ಲೆಕ್ಕಾಚಾರಗಳ ಮೂಲಕ ವರದಿ ಮಾಡಿದ್ದ. ನೀರು ಅವಿನಾಶಿ ನಿಜ. ಆದರೆ ಪ್ರತಿ ಬಾರಿ ಕೊಳವೆ ಬಾವಿಯಿಂದ ನೀರನ್ನು ಎತ್ತಿ ಬಳಸಿದಾಗಲೂ ಒಂದಿಷ್ಟು ನೀರು ಆವಿಯಾಗಿ ಆಕಾಶಕ್ಕೆ ಹೋಗುತ್ತದೆ. ನಾವು ಅಗಾಧ ಪ್ರಮಾಣದಲ್ಲಿ ಹಾಲಿಗಾಗಿ ನೀರನ್ನು ಎತ್ತಿ ಬಳಸುತ್ತ ಋತುಮಾನದ ಅಸಮತೋಲಕ್ಕೆ ಕಾರಣರಾಗುತ್ತಿದ್ದೇವೆ.

ಹೈನುಗಾರಿಕೆಗೆ ಅತಿ ಆದ್ಯತೆ ಕೊಟ್ಟಿದ್ದರಿಂದ ಇನ್ನೂ ಅನೇಕ ಬಗೆಯ ಅಸಮತೋಲನ ಕಾಣಿಸಿಕೊಳ್ಳುತ್ತಿದೆ. ಹಿಂದೆಲ್ಲ ಪಶುಸಂಗೋಪನೆ ಎಂಬುದು ಒಟ್ಟಾರೆ ಗ್ರಾಮೀಣ ಬದುಕಿನ ಭಾಗವಾಗಿತ್ತು. ಸ್ಥಳೀಯ ತಳಿಗಳಿದ್ದವು. ಗೋಮಾಳವಿತ್ತು. ಕೆರೆಗಳಿದ್ದವು. ಹೊಲದಲ್ಲಿ, ಬೆಟ್ಟದಲ್ಲಿ ಮೇವಿರುತ್ತಿತ್ತು. ಹೋರಿಗಳಿಗೆ ಹೊಲದಲ್ಲಿ ಕೆಲಸವಿರುತ್ತಿತ್ತು. ಈಗ ಎಲ್ಲವೂ ಏರುಪೇರಾಗಿವೆ. ಸ್ಥಳೀಯ ಗೋ – ತಳಿಗಳು ಕಣ್ಮರೆಯಾಗುತ್ತಿವೆ. ಹೊಲಗಳಿಗೆ ಟ್ರ್ಯಾಕ್ಟರ್, ಟಿಲ್ಲರ್ ಗಳು ಬಂದಿವೆ. ಜರ್ಸಿ ಅಥವಾ ಎಚ್ ಎಫ್ ಹಸುಗಳಿಗೆ ಹೊರಿ ಕರು ಹುಟ್ಟಿದರೆ ಅದನ್ನು ಇಟ್ಟುಕೊಳ್ಳುವಂತಿಲ್ಲ. ಏಕೆಂದರೆ ಚಕ್ಕಡಿಗೆ ಕಟ್ಟುವಂತಿಲ್ಲ, ನೇಗಿಲಿಗೆ ಹಚ್ಚುವಂತಿಲ್ಲ. ಇನ್ನು ಇತ್ತ ಗೋಮಾಳವೂ ಇಲ್ಲ. ಬೆಟ್ಟಗಳಲ್ಲಿ ಜಾಲಿ, ಲಂಟಾನಾ ತುಂಬಿದೆ. ಇಂಥ ಸ್ಥಿತಿಯಲ್ಲಿ ಹೈನುಗಾರಿಕೆಗೆ ನಾವು ಅತಿ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿದ್ದೇವೆ. ಅವುಗಳಿಗೆ ನೀಡುವ ಮೇವು ಎಂಥದ್ದು? ಹೊಲದ ಭತ್ತ – ರಾಗಿಯ ಹುಲ್ಲಿನಲ್ಲಿ ಯೂರಿಯಾ, ಡಿಎಪಿ ಮತ್ತು ಪೀಡೆನಾಶಕ ವಿಷ ಸಂಚಯವಾಗಿರುತ್ತದೆ. ಸರಕಾರಿ ಗೋದಾಮುಗಳಲ್ಲಿ ಕೊಳೆಯುತ್ತಿರುವ ಕಾಳುಕಡಿಗೆ ಕಸಾಯಿಖಾನೆಯ ತ್ಯಾಜ್ಯಗಳನ್ನು ಸೇರಿಸಿ ಫ್ಯಾಕ್ಟರಿಗಳಲ್ಲಿ ತಯಾರಿಸಿದ ಪಶು ಆಹಾರವನ್ನು ಹಸುಗಳಿಗೆ ತಿನ್ನಿಸಿ, ಆಗಾಗ ಹಾರ್ಮೋನ್ ಚುಚ್ಚುಮದ್ದು ಕೊಟ್ಟು, ಕೃತಕ ಗರ್ಭಧಾರಣೆ ಮಾಡಿಸಿ ಹಾಲು ಉತ್ಪಾದನೆ ಮಾಡುತ್ತಿದ್ದೇವೆ. ಹಾಲನ್ನು ತಾಜಾ ಇಡಲೆಂದು ಹೈಡ್ರೊಜನ್ ಪೆರಾಕ್ಸೈಡ್ ಸೇರಿಸಿ, ಯೂರಿಯಾ ಬೆರೆಸಿ, ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ..... ಅಂಥ ಅನೈಸರ್ಗಿಕ ಹಾಲು ಸೇವಿಸಿ ನಗರವಾಸಿಗಳ ಯಾರ ಆರೋಗ್ಯ ಎಷ್ಟು ಸುಧಾರಿಸಿತೋ ಗೊತ್ತಿಲ್ಲ. ಆದರೆ ಗ್ರಾಮೀಣ ಜನರಿಗೂ ಈಗ ದಪ್ಪ ಹೊಟ್ಟೆ, ಬಿಪಿ, ಡಯಾಬಿಟೀಸ್, ಹೃದ್ರೋಗ, ಲಕ್ವ, ಕಿಡ್ನಿ ವೈಫಲ್ಯ, ಎಲ್ಲ ಕಾಯಿಲೆಗಳೂ ಅಮರಿಕೊಳ್ಳುತ್ತಿವೆ.

ಲಯತಪ್ಪಿದ ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ವಿದೇಶೀ ದನಗಳಿಗೆ, ಅದರಲ್ಲೂ ಹಸುಗಳಿಗೆ ಮಾತ್ರ ಅತಿಯಾದ ಆದ್ಯತೆ ನೀಡಿದ್ದರಿಂದ ಹಳ್ಳಿಯ ಸಮಗ್ರ ಬದುಕಿನ ಸಮತೋಲವೇ ಏರುಪೇರಾಗಿದೆ. ಇಂಥ ಅಸಮತೋಲ ಸ್ಥಿತಿಯಲ್ಲಿ ನಿರುಪಯುಕ್ತ ದನಗಳ ಸಂಖೈಯನ್ನು ಕಡಿಮೆ ಮಾಡುವುದೇ ಸೂಕ್ತವೆಂದು ದೇಶದ ಹೆಸರಾಂತ ಅರ್ಥತಜ್ಞ ವಿ.ಎಮ್. ದಾಂಡೇಕರ್ ಇಪ್ಪತ್ತು ವರ್ಷಗಳ ಹಿಂದೆಯೇ ಹೇಳಿದ್ದರು. ಇದ್ದುದರಲ್ಲಿ ಒಂದು ನೆಮ್ಮದಿಯ ಸಂಗತಿ ಏನಿತ್ತೆಂದರೆ ಯಾರಿಗೂ ಬೇಡವಾದ ಹೋರಿಗಳ ಮತ್ತು ಕರಾವು ಮುಗಿದಿರುವ ಹಸುಗಳ ವಿಲೆವಾರಿ ತಂತಾನೆ ನಡೆದು ಹೋಗುತ್ತಿತ್ತು. ಅವು ಮಾಂಸಾಹಾರಿಗಳ ಹೊಟ್ಟೆಗೆ ಹೋಗುತ್ತಿದ್ದವು. “ನಮ್ಮ ದೇಶದಲ್ಲಿ ಮಾರಾಟಕ್ಕೆ ಲಭಿಸುವ ಮಾಂಸದಲ್ಲಿ ಶೇಕಡಾ 60ಕ್ಕೂ ಹೆಚ್ಚು ಪಾಲು ರಾಸುಗಳಿಂದಲೇ (ಅಂದರೆ ಎತ್ತು, ಆಕಳು, ಎಮ್ಮೆ, ಕೋಣ) ಬರುತ್ತಿದೆ” ಎಂದು ಐಸೆಕ್ ನ ಇಕಾಲಜಿ ಅರ್ಥತಜ್ಞ ಡಾ. ಸಯ್ಯದ್ ಪಾಷಾ ಹೇಳುತ್ತಾರೆ. ನಾವು ವಿದೇಶಗಳಿಗೆ ರಫ್ತು ಮಾಡುವ ಒಟ್ಟೂ ಕೃಷಿ ಉತ್ಪನ್ನಗಳಲ್ಲಿ ರಾಸುಮಾಂಸದ ಪ್ರಮಾಣ ಶೇಕಡಾ 20ರಷ್ಟಿದೆ. ಇದು ತುಂಬ ಮಹತ್ವದ ಸಂಗತಿ. ಗೋಹತ್ಯೆಯನ್ನು ನಿಷೀಧಿಸಿದರೆ, ಇಷ್ಟು ದೊಡ್ಡ ಪ್ರಮಾಣದ ಆಹಾರ ಮೂಲವನ್ನು, ಡಾಲರ್ ಗಳಿಸುವ ಸಂಪನ್ಮೂಲವನ್ನು ನಾವು ವ್ಯರ್ಥವಾಗಿ ಹೂಳಬೇಕಾಗುತ್ತದೆ. ಅದೂ ಸುಲಭದ ಕೆಲಸವಲ್ಲ. ರಾಸುಗಳು ನಿರುಪಯುಕ್ತವಾಗಿ ಬದುಕಿರುವಷ್ಟು ವರ್ಷವೂ ಅವಕ್ಕೆ ಮೇವು ನೀರು ಒದಗಿಸುತ್ತಿರಬೇಕಾಗುತ್ತದೆ. ಹಾಗೆ ವ್ಯರ್ಥ ವ್ಯಯವಾಗುವ ರಾಸುಮಾಂಸಕ್ಕೆ ಬದಲಿಯಾಗಿ, ಅಷ್ಟೇ ದೊಡ್ಡ ಪ್ರಮಾಣದ ಮಾಂಸವನ್ನು ಬೇರೆ ಮೂಲಗಳಿಂದ ಒದಗಿಸಬೇಕಾಗುತ್ತದೆ. ಬೇರೆ ಮೂಲ ಎಂದರೆ ಮತ್ತೇನಲ್ಲ, ಆಡು – ಕುರಿಗಳನ್ನು ಬೆಳೆಸುವುದು.

ದನದ ಮಾಂಸಕ್ಕೆ ಬದಲಿಯಾಗಿ ಆಡು – ಕುರಿಗಳ ಮಾಂಸವನ್ನು ದೇಶಕ್ಕೆಲ್ಲ ಒದಗಿಸಬೇಕೆಂದರೆ ನಿಸರ್ಗ ಸಮತೋಲ ಇನ್ನಷ್ಟು ಹದಗೆಡುತ್ತದೆ. ಏಕೆಂದರೆ ಅವುಗಳನ್ನು ಕಟ್ಟಿ ಬೆಳೆಸುವ ಪರಿಪಾಠ ನಮ್ಮಲ್ಲಿಲ್ಲ. ಗುಡ್ಡಬೆಟ್ಟಗಳಲ್ಲಿ ಆಡು – ಮೇಕೆಗಳು ಲಂಗುಲಗಾಮಿಲ್ಲದೆ ಓಡಾಡುವುದರಿಂದಲೇ ನಮ್ಮ ಬಹುಪಾಲು ಸಸ್ಯಸಂಪತ್ತು ಹೇಳಹೆಸರಿಲ್ಲದೆ ನಾಶವಾಗಿದೆ. ಅವು ಚಲಿಸಿದಲ್ಲೆಲ್ಲ ಮಣ್ಣು ಸವಕಳಿಯಾಗಿ, ಕೆಂದೂಳೆದ್ದು ಬರಸದೃಶ ಪ್ರದೇಶ ನಿರ್ಮಾಣಗೊಳ್ಳುತ್ತದೆ. ಇನ್ನು ಗೋಹತ್ಯೆ ನಿಲ್ಲಿಸಿದರೆ ಆ ಪ್ರಮಾಣದ ಮಾಂಸಕ್ಕಾಗಿ ಇವುಗಳನ್ನು ಬೆಳೆಸಬೇಕೆಂದರೆ ಈಗಿಗಿಂತ ಆರು ಪಟ್ಟು ಹೆಚ್ಚು ಕುರಿಮೇಕೆಗಳಿಗೆ ಬೇಡಿಕೆ ಬರುತ್ತದೆ. ಆಗ ದೇಶದ ಇದ್ದಬದ್ದ ಧಾರಣ ಸಾಮರ್ಥ್ಯವೂ ಕುಸಿಯುತ್ತದೆ. ಹಸಿರುಕವಚದ ಸ್ಥಿತಿ ಏನಾದೀತೆಂದು ಯಾರೂ ಊಹಿಸಬಹುದು. ಇದು ಜೀವಜಾಲದ (ಇಕಾಲಜಿ) ಪ್ರಶ್ನೆಯಾದರೆ, ಇದರೊಟ್ಟಿಗೆ ಅರ್ಥವ್ಯವಸ್ಥೆ (ಇಕಾನಮಿ) ಕೂಡ ಬಿಗಡಾಯಿಸುತ್ತದೆ. ದನ – ಎಮ್ಮೆಗಳ ಮಾಂಸದ ಬೆಲೆಗೆ ಹೋಲಿಸಿದರೆ ಈಗ ಆಡುಕುರಿಗಳ ಮಾಂಸದ ಬೆಲೆ ಐದು ಪಟ್ಟು ಹೆಚ್ಚಿಗೆ ಇದೆ. ಅದು ಸಾಮಾನ್ಯರಿಗೆ ಎಟಕುವಂಥದ್ದಲ್ಲ. ಮಾಂಸಾಹಾರಿಗಳಿಗೆಲ್ಲ ಕಡ್ಡಾಯವಾಗಿ ದುಬಾರಿಯ ಕುರಿಕೋಳಿಗಳನ್ನು ತಿನ್ನಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವಾಗುತ್ತದೆ. ಇದರ ಪರಿಣಾಮ ಏನೆಂದರೆ ವನ್ಯಜೀವಿಗಳ ಮೇಲೆ ಇನ್ನಷ್ಟು ಒತ್ತಡ ಬೀಳುತ್ತದೆ. ದೇಶದ ಮೃಗಾಯಲಗಳಲ್ಲಿರುವ ಮಾಂಸಾಹಾರಿ ಪ್ರಾಣಿಗಳಿಗೆ ಇಷ್ಟು ದಿನ ದನದ ಮಾಂಸವನ್ನೇ ಕೊಡಲಾಗುತ್ತಿತ್ತು – ಅದು ಅಗ್ಗದ್ದೆಂಬ ಕಾರಣದಿಂದ. ಆದರೆ ಇನ್ನುಮೇಲೆ ಅಲ್ಲಿಗೂ ಹಂದಿ ಮಾಂಸವನ್ನೋ, ಆಡುಕುರಿಗಳ ಮಾಂಸವನ್ನೋ ನೀಡಲು ಹೊರಟರೆ ಅದರ ವೆಚ್ಚವೂ ನಾಲ್ಕಾರು ಪಟ್ಟು ಹೆಚ್ಚಾಗುತ್ತದೆ.

ಮುಂದುವರೆಯುವುದು.....

ಆಗ 25, 2016

ಗೋಹತ್ಯೆ – ಒಂದು ಪರಾಮರ್ಶೆ: ಭಾಗ 1.

(ಕಳೆದ ಬಾರಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಗೋಹತ್ಯೆಯನ್ನು ನಿಷೇಧಿಸುವ ಕಾಯ್ದೆಯನ್ನು ಜಾರಿಗೆ ತರುವ ಸಂದರ್ಭದಲ್ಲಿ 'ನವ ಕರ್ನಾಟಕ ಪ್ರಕಾಶನ' ಪ್ರಕಟಿಸಿದ ಕಿರು ಪುಸ್ತಕ "ಗೋಹತ್ಯೆ - ಒಂದು ಪರಾಮರ್ಶೆ". 2010ರಲ್ಲಿ ಮೊದಲು ಪ್ರಕಟವಾಗಿದ್ದ ನಾಗೇಶ್ ಹೆಗಡೆಯವರ ಈ ಪುಸ್ತಕ ಅವತ್ತಿಗಿಂತಲೂ ಇವತ್ತಿಗೇ ಹೆಚ್ಚು ಪ್ರಸ್ತುತ. ದನದ ಹೆಸರಿನಲ್ಲಿ ಜನರನ್ನು ಸಾಯಿಸುವ ಪ್ರವೃತ್ತಿ ಅಲ್ಲೆಲ್ಲೋ ದೂರದ ಊರಿನ ಘಟನೆಯಾಗಿ ಉಳಿದಿಲ್ಲ. ನಮ್ಮ ಕರಾವಳಿಯಲ್ಲೇ ಒಂದು ಬಲಿ ಪಡೆದುಕೊಂಡಿದೆ ಈ ಗೋ - ರಾಜಕೀಯ. ಈ ಸಂದರ್ಭದಲ್ಲಿ ನಾಗೇಶ್ ಹೆಗಡೆಯವರು ವೈಜ್ಞಾನಿಕ - ಆರ್ಥಿಕ - ಸಾಮಾಜಿಕ ದೃಷ್ಟಿಕೋನದಿಂದ ಬರೆದಿರುವ "ಗೋಹತ್ಯೆ - ಒಂದು ಪರಾಮರ್ಶೆ"ಯನ್ನು ಹಿಂಗ್ಯಾಕೆಯಲ್ಲಿ ಮೂರು ಕಂತುಗಳಲ್ಲಿ ಪ್ರಕಟಿಸಲಾಗುತ್ತಿದೆ. ಪ್ರಶ್ನೋತ್ತರ ರೂಪದಲ್ಲಿರುವ ಈ ಕಿರುಪುಸ್ತಕವನ್ನು ಮರುಪ್ರಕಟಿಸಲು ಅನುಮತಿ ನೀಡಿದ ನಾಗೇಶ್ ಹೆಗಡೆಯವರಿಗೆ ಧನ್ಯವಾದಗಳು - ಹಿಂಗ್ಯಾಕೆ.)
ನಾಗೇಶ್ ಹೆಗಡೆ
25/08/2016
ಕರ್ನಾಟಕದಲ್ಲಿ ಗೋಹತ್ಯೆಯನ್ನು ನಿಷೇಧಿಸಬೇಕೆಂದು ಬಿಜೆಪಿ ಸರಕಾರ ನಿರ್ಧರಿಸಿರುವಾಗ ಅದನ್ನು ಏಕೆ ವಿಚಾರವಾದಿಗಳು ವಿರೋಧಿಸುತ್ತಿದ್ದಾರೆ? ರೈತರ ಹೆಸರಿನಲ್ಲೇ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದು ‘ರೈತಪರ’ ಎಂದು ಹೇಳಿಕೊಳ್ಳುವವರು ರೈತರ ಹಿತಾಸಕ್ತಿಗೆ ಧಕ್ಕೆ ತರುವಂತಹ ಕೆಲಸವನ್ನು ಎಂದಾದರೂ ಮಾಡುತ್ತಾರೆಯೆ?
ಮೊದಲನೆಯದಾಗಿ, ಇದರಲ್ಲಿ ರೈತರ ಹಿತಾಸಕ್ತಿ ಒಂದೇ ಅಲ್ಲ, ಇಡೀ ಸಮಾಜದ ಹಿತಾಸಕ್ತಿಯ ಪ್ರಶ್ನೆಯಿದೆ. ಅವನ್ನು ಮುಂದೆ ನೋಡೋಣ. ಸದ್ಯಕ್ಕೆ ರೈತರ ವಿಚಾರವನ್ನೇ ಮೊದಲು ಚರ್ಚಿಸೋಣ. ರೈತರಿಗೆ ಪಶು ಎಂದರೆ ಕೇವಲ ದನ ಅಲ್ಲ, ಅದು ಪಶು’ಧನ’ ಎನ್ನಿಸಿತ್ತು. ರೈತ ಸಮುದಾಯಕ್ಕೆ ಜಮೀನು – ಮನೆ ಇವು ಶಾಶ್ವತ ಆಸ್ತಿ ಆಗಿದ್ದಂತೆ, ಗಿಡಮರ ಮತ್ತು ಸಾಕುಪ್ರಾಣಿಗಳು ಚರಾಸ್ತಿ (ಲಿಕ್ವಿಡ್ ಅಸೆಟ್) ಎನಿಸಿದ್ದವು. ಕಷ್ಟ ಬಂದಾಗ, ಇವನ್ನು ಮಾರಿ ನಂತರ ಕಷ್ಟಗಳೆಲ್ಲ ನೀಗಿದ ಮೇಲೆ ಮತ್ತೆ ಅವನ್ನು ಗಳಿಸಿ, ಬೆಳೆಸಿಕೊಳ್ಳುವ ಒಂದು ಸುಭದ್ರ ವ್ಯವಸ್ಥೆ ಇದಾಗಿತ್ತು. ತಾನು ಬೆಳೆಸಿದ ಮರಗಳ ಬಗ್ಗೆ ಅಥವಾ ಹಸು – ಹೋರಿಗಳ ಬಗ್ಗೆ ಅದೆಷ್ಟೇ ಪ್ರೀತಿ ಇದ್ದರೂ ಅನಿವಾರ್ಯ ಪ್ರಸಂಗಗಳಲ್ಲಿ ಅವುಗಳಿಗೆ ವಿದಾಯ ಹೇಳುವ ಒಂದು ಸುಸ್ಥಿರ ವ್ಯವಸ್ಥೆಯನ್ನು ರೈತ ಸಮುದಾಯ ರೂಢಿಸಿಕೊಂಡಿತ್ತು. ದಯೆ, ಪ್ರೀತಿ, ಮಮಕಾರದ ಬಂಧನಗಳ ನಡುವೆಯೇ ವಾಸ್ತವದ ಅರಿವೂ ಅವರಿಗಿತ್ತು. ಕಾಯಿಲೆ ಬಿದ್ದ ಪತ್ನಿಯನ್ನು ಉಳಿಸಿಕೊಳ್ಳುವುದು ಮುಖ್ಯವೋ ಅಥವಾ ಕೊಟ್ಟಿಗೆಯ ಪ್ರೀತಿಯ ದನ ಮುಖ್ಯವೋ ಎಂಬ ಪ್ರಶ್ನೆ ಎದುರಾದಾಗ ದನವನ್ನು ಮಾರಿ ಪತ್ನಿಗೆ ಚಿಕಿತ್ಸೆ ಕೊಡುವ ಸ್ವಾತಂತ್ರ್ಯ ರೈತನಿಗಿತ್ತು. ಈಗಿನ ಸರಕಾರ ಅವನ ಆ ಮೂಲಭೂತ ಸ್ವಾತಂತ್ರ್ಯವನ್ನೇ ಪರೋಕ್ಷವಾಗ ಕಿತ್ತುಕೊಳ್ಳುತ್ತಿದೆ. 

ಹಾಗೇನಿಲ್ಲವಲ್ಲ? ಹಸು ಅಥವಾ ಎತ್ತನ್ನು ಈಗಲೂ ಮಾರಬಹುದು. ಆದರೆ ಕಟುಕರಿಗೆ ಮಾರಬಾರದು......
ಐದನೇ ಸೂಲು ಮುಗಿದ ಹಸುವನ್ನು ಬೇರೆ ಯಾರು ಯಾಕೆ ಕೊಳ್ಳುತ್ತಾರೆ? ರೈತನ ಕೊಟ್ಟಿಗೆಯಲ್ಲೇ ಅದು ಮುದಿಯಾಗಬೇಕು. ಹಾಲು ಕೊಡದಿದ್ದರೂ ಬದುಕಿದ್ದಷ್ಟು ದಿನವೂ ಅದಕ್ಕೆ ಮೇವು ಹಾಕಬೇಕು. ಕಾಯಿಲೆ ಬಿದ್ದರೆ ಪಶುವೈದ್ಯರನ್ನು ಕರೆಸಬೇಕು. ದಿನವೂ ಅದರ ಸೆಗಣಿ ಗಂಜಳ ಬಾಚಬೇಕು. ಮೈ ತೊಳೆಸಬೇಕು. ಬಿಸಿಲಲ್ಲಿ ಓಡಾಡಿಸಬೇಕು. ಪ್ರತಿ ತಿಂಗಳು ಕನಿಷ್ಠ ಸಾವಿರ ರೂಪಾಯಿಗಳನ್ನು ಅದಕ್ಕೆಂದು ವೆಚ್ಚ ಮಾಡಬೇಕು.

ಸೆಗಣಿ – ಗಂಜಳ ಗೊಬ್ಬರವನ್ನು ಮಾರಿದರೆ ಹಣ ಬರುತ್ತದಲ್ಲ
ಹಿಂದೆಲ್ಲ ಅದು ಸಾಧ್ಯವಿತ್ತು. ಹಗಲೆಲ್ಲ ಅದು ತನ್ನ ಪಾಡಿಗೆ ಗುಡ್ಡಬೆಟ್ಟ ಮೇಯ್ದು ಬಂದು ರಾತ್ರಿ ತಂಗಿದರೂ ತುಸುಮಟ್ಟಿಗೆ ಲಾಭದಾಯಕವೇ ಆಗಿತ್ತು. ಆದರೆ ಈಗ ಮೇಯಲು ಏನಿದೆ? ಗೋಮಾಳ ಎಲ್ಲಿ ಉಳಿದಿವೆ? ಇತ್ತ ಹೋದರೆ ಜಾಲಿಮರ, ಅತ್ತ ಹೋದರೆ ನೀಲಗಿರಿ. ಹಾಗಾಗಿ ಕಟ್ಟಿಯೇ ಮೇವು ಹಾಕಬೇಕು. ಹಣಕೊಟ್ಟು ಖರೀದಿಸಿದ ಮೇವು ಹಾಕಬೇಕು. ಒಂದು ದಿನ ಆ ಹಸು ಸತ್ತುಹೋಗುತ್ತದೆ. ಏನು ಮಾಡುವುದು? ಅದನ್ನು ಎಳೆದು ದೂರ ಬಿಸಾಕಲು ಹಳ್ಳಿಯಲ್ಲಿ ನಾಲ್ಕು ಜನ ಸಹಾಯಕರು ಸಿಗುವುದಿಲ್ಲ. ಹಿಂದಿನ ಕಾಲದಲ್ಲಿ ಹೆಣವನ್ನು ರಣಹದ್ದುಗಳು, ನರಿ – ಕಿರುಬಗಳು ಎರಡೇ ದಿನದಲ್ಲಿ ಖಾಲಿ ಮಾಡುತ್ತಿದ್ದವು. ಈಗ ಅವು ಯಾವುವೂ ಇಲ್ಲ. ಕೊಳೆತ ಭಾಗಗಳು ನಾರುವುದಲ್ಲದೇ ರೋಗಗಳನ್ನು ಹಬ್ಬಿಸುತ್ತವೆ. ಅಂಥ್ರಾಕ್ಸ್ ರೋಗಾಣುಗಳು ಮನುಷ್ಯರಿಗೆ ಪ್ರಾಣಾಪಾಯ ಉಂಟುಮಾಡುತ್ತವೆ. ಊರ ನಾಯಿಗಳು ರೋಗಗ್ರಸ್ತ ಕೊಳೆತ ಬಿಡಿಭಾಗಗಳನ್ನು ಎಳೆದಾಡಿ, ಊರಿನೊಳಕ್ಕೂ ತಂದು ರಗಳ ಆಗುತ್ತದೆ. ಇವೆಲ್ಲವನ್ನೂ ಅನುಭವಿಸಿದ ಊರಿನ ಜನರು ಸತ್ತ ದನವನ್ನು ಸಮೀಪವೆಲ್ಲೂ ಬಿಸಾಕಲು ಬಿಡುವುದಿಲ್ಲ. ಹತ್ತಿರದಲ್ಲೇ ಎಲ್ಲಾದರೂ ಗುಂಡಿ ತೋಡ ಹೂಣಬೇಕೆಂದರೆ ಆರಡಿ ಉದ್ದದ, ನಾಲ್ಕಡಿ ಆಳದ ಗುಂಡಿ ತೋಡಲು ಜನರು ಸಿಗುವುದಿಲ್ಲ. ‘ಜೆಸಿಬಿ ತರಿಸಿ’ ಎನ್ನುತ್ತಾರೆ. ಅವರಿವರನ್ನು ಬೇಡಿಕೊಂಡು ಜೆಸಿಬಿ ತರಿಸಿದರೆ ಕನಿಷ್ಠ ಅದು ಬೇಸಿಗೆಯ ಕಾಲವಾಗಿದ್ದರೆ ಎರಡು ಸಾವಿರ ರೂಪಾಯಿ ತೆರಬೇಕು. ಸೆಗಣಿ ಗಂಜಳದಿಂದ ಗಳಿಸಿದ ಹಣವೆಲ್ಲ ಅದರ ಸಂಸ್ಕಾರಕ್ಕೇ ಹೋಗುತ್ತದೆ. ಅಂತೂ ಒಂದು ಮುದಿ ದನ ಮನೆಯಲ್ಲಿದ್ದರೂ ಕಷ್ಟ, ಸತ್ತರೆ ಇನ್ನೂ ಕಷ್ಟ ಎಂಬ ಸ್ಥಿತ ಬರುತ್ತದೆ.

ಸತ್ತ ದನವನ್ನು ಮಾರಬಹುದಲ್ಲ? ಅದಕ್ಕೆ ಹೊಸ ಕಾನೂನಿನಲ್ಲಿ ಅವಕಾಶ ಇದ್ದೇ ಇರುತ್ತದೆ.
ಮಾರುವುದು ಸುಲಭವೇ? ದನವೊಂದು ಸತ್ತ ತಕ್ಷಣ ಪಶುವೈದ್ಯರನ್ನು ಕರೆಸಿ, (ಅವರು ತುರ್ತಾಗಿ ಬಂದರೆ) ದನ ಸತ್ತಿದೆ ಎಂದು ಪ್ರಮಾಣಪತ್ರವನ್ನು ಅವರಿಂದ ಬರೆಸಿಕೊಂಡು ಅದರ ದ್ವಿಪ್ರತಿ ಮಾಡಿಸಿ, ಕಳೇವರವನ್ನು ಖರೀದಿಸುವವರಿಗೆ ಒಂದು ಪ್ರತಿಯನ್ನು ಕೊಡಬೇಕು. ಇನ್ನೊಂದು ಪ್ರತಿಯನ್ನು ತಾನು ಕಾದಿರಿಸಬೇಕು. ಹೆಣ ದುರ್ವಾಸನೆ ಸೂಸುವ ಮುನ್ನ ಅವೆಲ್ಲ ಆಗಿಬಿಡಬೇಕು. ಅಷ್ಟೆಲ್ಲ ಮಾಡಿದರೂ ಸತ್ತ ದನವನ್ನು ಖರೀದಿ ಮಾಡಲು ಯಾರೂ ಬರದೇ ಇರಬಹುದು. ಏಕೆಂದರೆ, ದನ ತಾನಾಗಿ ಸತ್ತಿದ್ದರೂ, ಪ್ರಮಾಣಪತ್ರದ ಪ್ರತಿ ತನ್ನ ಬಳಿ ಇದ್ದರೂ ಪೋಲೀಸರ ತನಿಖೆ, ದಬ್ಬಾಳಿಕೆ ಎಲ್ಲ ಇದ್ದೇ ಇರುತ್ತದೆ. ರಗಳೆ ಯಾರಿಗೆ ಬೇಕು ಎಂದೆಲ್ಲ ಹಿಂದಿನ ಕಹಿ ಅನುಭವಗಳು ನೆನಪಾಗಿ, ಆತ ಖರೀದಿಗೆ ಬರಲು ನಿರಾಕರಿಸಬಹುದು. ಪಶುವೈದ್ಯರು ಸಮಯಕ್ಕೆ ಸರಿಯಾಗಿ ಬರದೇ ಇದ್ದರಂತೂ ಮೂಗು ಮುಚ್ಚಿಕೊಂಡು ಎಲ್ಲವನ್ನೂ ಸಹಿಸಿಕೊಳ್ಳಬೇಕು.

ದನ ಸಾಯುವ ದಿನ ಮನೆಯಲ್ಲಿ ಯುವಕರು ಯಾರೂ ಇಲ್ಲದಿದ್ದರೆ (ಈಗಂತೂ ಬಹಳಷ್ಟು ಹಳ್ಳಿಗಳಲ್ಲಿ ಯುವಕರೆಲ್ಲ ಪಟ್ಟಣ ಸೇರಿದ್ದಾರೆ) ವಯಸ್ಸಾದ ಹಿರಿಯರಿಗೆ ದೊಡ್ಡ ಸಂಕಟವೇ ಎದುರಾಗುತ್ತದೆ. ಮೈಯಲ್ಲಿ ತಾಕತ್ತಿಲ್ಲದಿದ್ದರೂ ಆತ ಜೀವಂತ ಇದ್ದಷ್ಟು ದಿನ ಮುದಿ ಹಸುವನ್ನು ಹೇಗೋ ಸಾಕಿಕೊಂಡಾನು, ಆದರೆ ಅದು ಸತ್ತರೆ ಅವನ ಕಷ್ಟಗಳು ಬೆಟ್ಟದಷ್ಟಾಗುತ್ತವೆ.


ಅಲ್ಲಲ್ಲಿ ಗೋಶಾಲೆಗಳನ್ನು ತೆರೆದು, ಮುದಿ ದನಗಳನ್ನು ಸರಕಾರವೇ ಸಾಕಿಕೊಳ್ಳುತ್ತದಂತಲ್ಲ?
ಸರಕಾರ? ಅದು ನಡೆಸುವ ವೃದ್ಧಾಶ್ರಮಗಳ ಸ್ಥಿತಿಗತಿ ನೋಡಿದ್ದೀರಾ? ಅಲ್ಲಿ ಅನಿವಾರ್ಯ ವಾಸಿಸುವ ಹಿರಿಯರ ನೋವು – ಸಂಕಟಗಳಿಗೆ ಸ್ಪಂದಿಸುವುದು ಹಾಗಿರಲಿ, ಅವರ ಪಾಲಿನ ಗಂಜಿಯನ್ನೂ ಕೊಳ್ಳೆಹೊಡೆದು ಮುಕ್ಕುವ ಅದೆಷ್ಟು ಉದಾಹರಣೆಗಳು ನಿಮಗೆ ಬೇಕು? ಇನ್ನು ಮೂಕಪ್ರಾಣಿಗಳನ್ನು ಒಂದೆಡೆ ಸಾಕುವುದೆಂದರೆ ಸುಲಭದ ಮಾತೆ? ಸಹೃದಯೀ ದಾನಿಗಳು ನಡೆಸುವ ‘ಗೋಶಾಲೆ’ಗಳಲ್ಲೇ ಮೇವು ನೀರಿಗೆ ತತ್ವಾರ ಇರುತ್ತದೆ. ಶುಚಿತ್ವದ ಅಭಾವ, ತುರ್ತು ಔಷಧಗಳ ಅಭಾವ, ವೈದ್ಯರ ಕಾಳಜಿಯ ಅಭಾವ ಇರುತ್ತದೆ. ಹಾಗಿರುವಾಗ ಇನ್ನು ಸರಕಾರಿ ಇಲಾಖೆಗಳು ಗೋಶಾಲೆಗಳನ್ನು ನಡೆಸುತ್ತವೆಂದರೆ ಮೇಲ್ವಿಚಾರಣೆ ಸುಲಭವೆ?


ಮೇಲ್ವಿಚಾರಣೆಗೆ ಮಠಾಧೀಶರು, ಧರ್ಮಾಧಿಕಾರಿಗಳು, ಹಿಂದೂ ಸ್ವಯಂಸೇವಕರು ಇರುತ್ತಾರಲ್ಲ? ಗೊಡ್ಡು ಗೋವುಗಳನ್ನು ಜೋಪಾನವಾಗಿ ರಕ್ಷಿಸುತ್ತೇವೆಂದು ಮಠಗಳು ಹೇಳುತ್ತಿವೆಯಲ್ಲ?
ಇಂದಿನ ಬಹುಪಾಲು ಮಠಗಳು ಗೊಡ್ಡು ಸಂಪ್ರದಾಯಗಳನ್ನಷ್ಟೇ ಜೋಪಾನವಾಗಿ ಕಾಪಾಡಿಕೊಂಡಿವೆ. ಅವು ಹಿಂದಿನ ಕಾಲದ ನೀತಿ, ನ್ಯಾಯ, ಧರ್ಮಗಳನ್ನಾಗಲೀ ಪರಂಪರೆಯನ್ನಾಗಲೀ ಪಾವಿತ್ರ್ಯವನ್ನಾಗಲೀ ಉಳಿಸಿಕೊಂಡಿಲ್ಲ. ಹಿಂದಿನ ಮೌಲ್ಯಗಳನ್ನಂತೂ ಉಳಿಸಿಕೊಂಡಿಲ್ಲ, ಇಂದಿನ ವೈಜ್ಞಾನಿಕ ದೃಷ್ಟಿಕೋನವನ್ನೂ ಬೆಳೆಸಿಕೊಂಡಿಲ್ಲ.

ಗೋರಕ್ಷಣೆ ಎಂಬುದು ಹಿಂದಿನ ಕಾಲದ ಮೌಲ್ಯವೇ ಆಗಿತ್ತಲ್ಲವೇ? ಅಂಥ ಸಭ್ಯ ಪ್ರಾಣಿಗಳನ್ನು ಹಿಂಸಿಸುವುದಾಗಲೀ ಕೊಲ್ಲುವುದಾಗಲೀ ಹಿಂದೂ ಸಂಪ್ರದಾಯಕ್ಕೆ ವಿರುದ್ಧವಲ್ಲವೆ?
ಇಲ್ಲಿ ಸಾಕಷ್ಟು ತಪ್ಪುಕಲ್ಪನೆಗಳಿವೆ. ಹಿಂದಿನವರು ಗೋವುಗಳನ್ನು ಸಾಕುತ್ತಿದ್ದರು ನಿಜ. ಹಾಲು ಹೈನಕ್ಕಾಗಿಯೂ ಸಾಕುತ್ತಿದ್ದರು. ಮಾಂಸಕ್ಕಾಗಿಯೂ ಸಾಕುತ್ತಿದ್ದರು. ವೇದಕಾಲದಲ್ಲಿ ಔತಣಕೂಟಗಳಲ್ಲಷ್ಟೇ ಅಲ್ಲ, ಯಾಗ – ಯಜ್ಞಗಳಂಥ ಪವಿತ್ರ ಕಾರ್ಯಗಳಲ್ಲೂ ಗೋವಧೆ, ಗೋಮಾಂಸ ನೈವೇದ್ಯ ಮತ್ತು ಭಕ್ಷಣೆಯಲ್ಲಿ ಋತ್ವಿಜರೂ ಪಾಲ್ಗೊಳ್ಳುತ್ತಿದ್ದರು. ಕುದುರೆಯ ಮಾಂಸವನ್ನು ಬೇಯಿಸುವಾಗಿನ ಪರಿಮಳ ಅದೆಷ್ಟು ದೂರ ಪಸರಿಸುತ್ತಿತ್ತು ಎಂಬುದರ ಬಗ್ಗೆ ವೇದಗಳಲ್ಲೇ ವಿವರ ವರ್ಣನೆಗಳಿವೆ. ಅಷ್ಟೇಕೆ, ಕಾಳಿದಾಸನ ಮೇಘದೂತದಲ್ಲಿ ರಂತಿದೇವನ ಸಾಮ್ರಾಜ್ಯದ ವರ್ಣನ ಬರುತ್ತದೆ. ರಾಜ ಆಗಾಗ ಏರ್ಪಡಿಸುತ್ತಿದ್ದ ಮೋಜಿನ ಕೂಟದಲ್ಲಿ ದನಗಳ ಮಾಂಸ ತೆಗೆದ ನಂತರ ಉಳಿಯುವ ಚರ್ಮವನ್ನು ನದಿಗಳಲ್ಲಿ ತೇಲಿಬಿಡುತ್ತಿದ್ದರಂತೆ. ಹಾಸು ಹಾಸು ಚರ್ಮಗಳು ತೇಲಾಡುವ ‘ಚರ್ಮಣ್ವತೀ’ ನದಿಯನ್ನು ಎತ್ತರದಿಂದಲೇ ಗುರುತಿಸಬಹುದು ಎಂದ ಅದರಲ್ಲಿ ವಿವರಗಳಿವೆ. ಕಾಲ ಬದಲಾದಂತೆ ಕ್ರಮೇಣ ಕೆಲವು ವರ್ಗದ ಜನರು ಮಾಂಸಭಕ್ಷಣೆಯನ್ನು ತ್ಯಜಿಸಿದರು. ಅವಕ್ಕೆ ಕಾರಣಗಳು ಅನೇಕ ಇರಬಹುದು. ಚಿಕ್ಕ ಸಮುದಾಯಗಳಲ್ಲಿ ಗೋವಧೆ ಮಾಡಿದರೆ ತಿಂದು ಮುಗಿಸುವುದು ಕಷ್ಟ. ಜಾಸ್ತಿ ತಿಂದರೂ ಕಷ್ಟ; ಎರಡು ಮೂರು ದಿನಗಳವರೆಗೆ ಅದನ್ನೇ ತಿನ್ನುತ್ತಿದ್ದರೆ ಇನ್ನೂ ಕಷ್ಟ. ಅದರಿಂದುಂಟಾಗುವ ರೋಗರುಜಿನಗಳ ಭಯ ಇರಬಹುದು ಅಥವಾ ಶ್ರೇಷ್ಠತೆಯ ವ್ಯಸನವೂ ಇರಬಹುದು. ತಾನು ಇತರರಿಗಿಂತ ಶ್ರೇಷ್ಠನೆಂದು ತೋರಿಸಿಕೊಳ್ಳುವವರು ಕೆಲವು ನಿತ್ಯಸುಖಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಕಟ್ಟಳೆಗಳನ್ನು ಕಟ್ಟಿಕೊಂಡು ಕ್ರಮೇಣ ಅದೇ ಒಂದು ಸಂಪ್ರದಾಯವಾಗಿ ಬೆಳೆದುಬಂದಿರಬಹುದು. ಅದೇನೇ ಇರಲಿ, ಅವರ ಪಾಡಿಗೆ ಅವರಿರಲಿ. ಚಿಂತಕ ಡಾ. ಜಿ. ರಾಮಕೃಷ್ಣ ಹೇಳುವ ಹಾಗೆ, “ತಾನೇ ಶ್ರೇಷ್ಠ, ತನಗೆ ವರ್ಜ್ಯವಾದುದನ್ನು ಇತರರೂ ವರ್ಜಿಸಬೇಕು” ಎನ್ನುವುದು ಸರಿಯಲ್ಲ. ಗೋಮಾಂಸವನ್ನು ತ್ಯಜಿಸಿದವರು ತಮ್ಮ ಬಳ ಬಂದರೆ ಮೇಲ್ಜಾತಿಯ “ದೀಕ್ಷೆ ಕೊಡಿಸುತ್ತೇನೆ” ಎಂದು ಮಠಾಧೀಶರೊಬ್ಬರು ಹೇಳಿದ್ದಾಗಿ ವರದಿಯಾಗಿದೆ. ಅವರಿಗೂ ಅದೇ ಮಾತನ್ನು ಅನ್ವಯಿಸಬಹುದಲ್ಲ; “ಸ್ವಾಮೀಜಿ, ನೀವು ಮಾಂಸ ತಿನ್ನಲು ಆರಂಭಿಸಿದರೆ, ಬನ್ನಿ ನಾವೇ ನಿಮಗೆ ದೀಕ್ಷೆ ಕೊಟ್ಟು ದಲಿತ ಸಮುದಾಯಕ್ಕೆ ಸೇರಿಸಿಕೊಳ್ಳುತ್ತೇವೆ” ಎನ್ನಬಹುದಲ್ಲ? ತಮ್ಮ ಕಟ್ಟಳೆಗಳನ್ನೇ ಇತರರ ಮೇಲೂ ಹೇರಬೇಕು, ಅದೂ ಕಾನೂನಿನ ಮೂಲಕ ಹೇರಬೇಕು ಎನ್ನುವುದು ಸರಿಯಲ್ಲ.

ಅದೇನೇ ಇರಲಿ, ಮಠಾಧೀಶರೆನ್ನಿಸಿಕೊಂಡವರು ಹಿಂದೂ ಧರ್ಮದ ಮೂಲತತ್ವಗಳನ್ನು ಕಾಪಾಡಿಕೊಂಡು ಬರಬೇಕಲ್ಲವೇ? ಅವರದ್ದು ತಪ್ಪೆಂದು ಹೇಗೆ ಹೇಳುತ್ತೀರಿ?
ಬೇರೆಯವರ ಊಟವನ್ನು ಕಸಿಯುವುದು ಎಂದಿಗೂ ಯಾವ ಧರ್ಮದ್ದೂ ಮೂಲತತ್ವ ಆಗಿರಲು ಸಾಧ್ಯವಿಲ್ಲ. ಹಿಂದೂ ಧರ್ಮದ್ದಂತೂ ಅಲ್ಲವೇ ಅಲ್ಲ. ಮೇಲಾಗಿ ಹಿಂದೂ ಧರ್ಮದಲ್ಲೂ ವೈವಿಧ್ಯಮಯ ಆಹಾರ ಸೇವನೆ ಇದೆ. ಕೆಲವರು ಮಾತ್ರ ಮಾಂಸ ಭಕ್ಷಣೆ ಮಾಡುವುದಿಲ್ಲ; ಕೆಲವರು ಕುರಿ – ಕೋಳಿ ತಿನ್ನುತ್ತಾರೆ; ಕೆಲವರು ಹಂದಿಮಾಂಸ ಭಕ್ಷಣೆ ಮಾಡುತ್ತಾರೆ. ಇನ್ನು ಕೆಲವರು ಗೋಮಾಂಸ ಭಕ್ಷಣೆ ಮಾಡುತ್ತಾರೆ. ಅವರೆಲ್ಲರನ್ನೊಳಗೊಂಡ ಧರ್ಮ ಇದು.

ಮುಂದುವರೆಯುವುದು....