Dec 31, 2016

ಅಂಗಾಧಿಪತಿ

ಸವಿತ ಎಸ್ ಪಿ
ಬಾಲ್ಯದಿಂದಲೂ....
ನಿನ್ನ ಹುಟ್ಟಿನ ಬಗ್ಗೆ ಅಪರಿಮಿತ ಸಂತಾಪ...
ನಿನ್ನ‌ ಶ್ರದ್ಧೆ,ಗುರುಭಕ್ತಿಯ ಪ್ರಕೋಪ....
ಅಜರಾಮರ ಸ್ನೇಹದ ಬಗ್ಗೆ ಒಲುಮೆ
ನಿಸ್ವಾರ್ಥ ತ್ಯಾಗದ ಬಗ್ಗೆ ಹೆಮ್ಮೆ...
ಮುಂತಾಗಿ....
ಬೆಳೆಸಿಕೊಂಡ‌ ನನ್ನ ಯೋಚನಾಲಹರಿಯ 
ದಿಕ್ಕು ಬದಲಾಗಿದೆ....
ದುಷ್ಟರ‌ ಜೊತೆ‌ ಸೇರಿ ಅನ್ಯಾಯಕ್ಕೆ...
ಅಧರ್ಮಕ್ಕೆ.... 
ಪರೋಕ್ಷವಾಗಿಯಾದರೂ
‌ಕೈ ಜೋಡಿಸಿದೆಯಲ್ಲ.....
ಒಂದು ಹೆಣ್ಣಿನ ಮಾನಾಪಹರಣದ 
ಸಮಯದಲೂ ನೀ ಕೈಕಟ್ಟಿ ಕುಳಿತೆಯಲ್ಲ...
ಧರ್ಮದ ಬೆಳಕಲಿ ನೀ ನಡೆದಿದ್ದರೆ.....
ದುಷ್ಟರ ಕೂಟದಲಿ ಗುರುತಿಸಿಕೊಳ್ಳುವ
ದುರಾದೃಷ್ಟ ನಿನಗೆ ಒದಗುತ್ತಿರಲಿಲ್ಲ...
ಅಲ್ಲವೇ ದಾನಶೂರವೀರ‌ಕರ್ಣ...

Dec 30, 2016

ಮೇಕಿಂಗ್ ಹಿಸ್ಟರಿ: ಸವಾಲು, ಭ್ರಾಂತಿ ಮತ್ತು ಬಿಕ್ಕಟ್ಟು

Saketh Rajan
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಬಂಡಾಯವನ್ನು ಹತ್ತಿಕ್ಕಲು ಕಾಸಾಮೈಯೂರ್ ಹತ್ತಲವು ಲೆಕ್ಕಾಚಾರಗಳನ್ನು ಮಾಡಿದ. ಮೊದಲಿಗೆ ಆತ ಸೈನ್ಯವನ್ನು ಪ್ರಮುಖ ಪಟ್ಟಣ ಮತ್ತು ಕೋಟೆಗಳನ್ನು ವಶಪಡಿಸಿಕೊಳ್ಳುವ ಸಲುವಾಗಿ ಕಳುಹಿಸಿದ. ಆದರೆ ಸೈನ್ಯ ಅಲ್ಲಿಂದ ತೆರಳುತ್ತಿದ್ದಂತೆಯೇ ಪಟ್ಟಣ ಹಾಗೂ ಕೋಟೆಗಳು ಮರಳಿ ಗೆರಿಲ್ಲಾಗಳ ವಶವಾಗಿಬಿಡುತ್ತಿದ್ದವು. ಆದ್ದರಿಂದ ಆತ ಇನ್ನೂ ಹೆಚ್ಚಿನ ಸೈನ್ಯಕ್ಕಾಗಿ ವಿನಂತಿಸಿಕೊಂಡ, ಬ್ರಿಟೀಷ್ ಸೈನ್ಯವನ್ನು ಕರೆಸಿಕೊಂಡ ಮತ್ತು ನಿರಂತರವಾಗಿ ಸೈನ್ಯದ ಬಲವನ್ನು ಹತ್ತಿರತ್ತಿರ ಹತ್ತು ಸಾವಿರದಷ್ಟು ಹೆಚ್ಚಿಸಿದ, ಇದರಲ್ಲಿ ಅರ್ಧದಷ್ಟು ಸೈನಿಕರನ್ನು ಮೈಸೂರೇ ಪೂರೈಸಿತ್ತು. 

Dec 27, 2016

ಸೀತಾ ಸ್ವಗತ

ಸವಿತ ಎಸ್ ಪಿ
ಬಿಲ್ಲ ಹೆದೆಯೇರಿಸಿ ನನ್ನ ವರಿಸಿದ 
ಸೀತಾರಾಮ‌....
ನಿನ್ನ ಅರಮನೆಗೆ, ಮನಕೆ ಬೆಳಕಾಗಿ, 
ಹೆಜ್ಜೆಗೆ ಹೆಜ್ಜೆ ಸೇರಿಸಿದ ನನಗೆ 
ನಿನ್ನ ಜೊತೆಗಿನ ವನವಾಸವೂ ಸಹ್ಯವಾಗಿತ್ತು...

ರಾಷ್ಟ್ರ ರಾಜಕಾರಣದತ್ತ ಮಮತಾ ಬ್ಯಾನರ್ಜಿ ಚಿತ್ತ!

ಕು.ಸ.ಮಧುಸೂದನ
ರಾಷ್ಟ್ರ ರಾಜಕೀಯದ ಇತ್ತಿಚೆಗಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯು, ತೃಣಮೂಲ ಕಾಂಗ್ರೆಸ್ಸಿನ ನಾಯಕಿಯೂ ಆದ ಮಮತಾಬ್ಯಾನರ್ಜಿಯವರು ನಿದಾನವಾಗಿ ಆದರೆ ಬಹಳ ಎಚ್ಚರಿಕೆಯಿಂದ ರಾಷ್ಟ್ರ ರಾಜಕಾರಣಕ್ಕೆ ಪದಾರ್ಪಣೆ ಮಾಡುವತ್ತ ಮನಸ್ಸು ಮಾಡಿರುವುದನ್ನು ಗಮನಿಸಬಹುದಾಗಿದೆ. ನೋಟ್ ಬ್ಯಾನಿನಂತಹ ಪ್ರಮುಖವಾದ, ಆದರೆ ಅಷ್ಟೇ ಸೂಕ್ಷ್ಮವಾದ ವಿಷಯದಲ್ಲಿ ಅವರು ತೆಗೆದುಕೊಂಡಿರುವ ನಿಲುವುಗಳನ್ನು ಆಧರಿಸಿ ಈ ನಿರ್ದಾರಕ್ಕೆ ಬರಬಹುದಾಗಿದೆ. 

Dec 23, 2016

ಮೇಕಿಂಗ್ ಹಿಸ್ಟರಿ: ಶತ್ರು ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿದ್ದು

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಗೆರಿಲ್ಲಾ ಯುದ್ಧವು ಅಳವಡಿಸಿಕೊಂಡ ಮತ್ತೊಂದು ಕ್ರಮವೆಂದರೆ ಶತ್ರು ಪಾಳಯದ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿದ್ದು. 1833ರ ಮಾರ್ಚಿ ತಿಂಗಳಿನಲ್ಲಿ, ಬರ್ರಿನ ಸಿಪಾಯಿ ನದೀಮ್ ಖಾನ್, ಬ್ರಿಟೀಷ್ ಅಧಿಕಾರಿ ಮೇಜರ್ ಜೇಮ್ಸ್ ಮೇಲೆ ಬೆಂಕಿಪುರದಲ್ಲಿ (ಇವತ್ತಿನ ಭದ್ರಾವತಿ) ಅಂತಹುದೊಂದು ದಾಳಿಯನ್ನು ಆಯೋಜಿಸಿದ. ಮಾರ್ಚಿ 25ರ ರಾತ್ರಿ ಜೇಮ್ಸ್ ತನ್ನ ಟೆಂಟಿಗೆ ವಾಪಸ್ಸಾಗುವ ಸಮಯದಲ್ಲಿ, ಬಂಧನಕ್ಕೊಳಗಾಗುವ ಮುನ್ನ ನದೀಮ್ ಖಾನ್ ತನ್ನ ಖಡ್ಗದಿಂದ ಅವನ ತೋಳ ಮೇಲೆ, ತಲೆಯ ಮೇಲೆ ದಾಳಿ ನಡೆಸಿದ, ತದನಂತರ ನದೀಮ್ ಖಾನನನ್ನು ನೇಣಿಗೇರಿಸಲಾಯಿತು. (166) 

Dec 22, 2016

ಸುಪ್ತಭಾವ

ಸವಿತ ಎಸ್ ಪಿ
ಹುಣ್ಣಿಮೆ ಚಂದಿರನ
ಮನೋಹರ ರೂಪ
ನೆನಪಿಸಿಹುದು ಏನನು
ನಿನ್ನ ಮುದ್ದುಮೊಗವನು....

ತಂಪು ತಂಗಾಳಿ ಸುಳಿದಾಡಿ
ಶೀತಲ ಸ್ಪರ್ಶ‌ದಲೂ

ಗುಜರಾತ್: ನಿಗದಿತ ಅವಧಿಗೆ ಮುನ್ನವೇ ರಾಜ್ಯ ವಿದಾನಸಭೆಗೆ ಚುನಾವಣೆ ನಡೆಸಲು ರಾಜಕೀಯ ಕಸರತ್ತು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಆಡಳಿತಾರೂಢ ಪಕ್ಷವೊಂದು ತನ್ನ ಅಧಿಕಾರದ ಅವಧಿ ಮುಗಿದ ನಂತರ ನಡೆಯಲಿರುವ ಚುನಾವಣೆಗಳಲ್ಲಿ ಗೆಲ್ಲುವ ಭರವಸೆ ಕಳೆದುಕೊಂಡಾಗ, ತನ್ನ ಅನುಕೂಲಕ್ಕೆ ತಕ್ಕಂತೆ ಅವಧಿಗೆ ಮುಂಚಿತವಾಗಿಯೇ ಚುನಾವಣೆಗಳನ್ನು ನಡೆಸಿ ಗೆಲ್ಲಲೆತ್ನಿಸುವುದು ಇಂಡಿಯಾದ ರಾಜಕಾರಣದಲ್ಲಿ ಸಹಜವಾಗಿ ನಡೆದು ಬಂದ ಬೆಳವಣಿಗೆ. ಅದಿಕಾರದಲ್ಲಿ ಇರುವ ಪಕ್ಷವೊಂದು ತನಗೆ ಬೇಕಾದಾಗ ವಿದಾನಸಭೆಯನ್ನು ವಿಸರ್ಜಿಸಿ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುವುದರಲ್ಲಿ ಯಾವ ಕಾನೂನಿನ ತೊಡಕೂ ಇಲ್ಲ. ಸರಕಾರ ಕೇಳಿದಾಗ ಚುನಾವಣೆ ನಡೆಸುವುದಷ್ಟೆ ಆಯೋಗದ ಕೆಲಸವಾಗಿದ್ದು, ಒಂದು ವಿದಾನಸಭೆಯ ಅವಧಿಯನ್ನು ಪೂರ್ಣಗೊಳಿಸಿದ ನಂತರವಷ್ಟೇ ತಾನು ಚುನಾವಣೆ ನಡೆಸುವುದೆಂದು ಹೇಳುವ ಅಧಿಕಾರ ಆಯೋಗಕ್ಕೆ ಇಲ್ಲವಾಗಿರುವುದೆ ಇದಕ್ಕೆ ಕಾರಣ ಎನ್ನಬಹುದು. ಕಳೆದ ಎಪ್ಪತ್ತು ವರ್ಷಗಳಲ್ಲಿ ಬಹಳಷ್ಟು ರಾಜ್ಯಗಳಲ್ಲಿ ಈ ತೆರನಾದ ಅವಧಿಪೂರ್ವ ಚುನಾವಣೆಗಳು ನಡೆದಿವೆ. ತನ್ಮೂಲಕ ಸರಕಾರದ ಬೊಕ್ಕಸಕ್ಕೆ ಹೊರೆಯಾಗಿದ್ದು ಮಾತ್ರವಲ್ಲದೆ, ಜನರ ವಿಶ್ವಾಸಕ್ಕೆ ದ್ರೋಹ ಬಗೆಯುವಲ್ಲಿಯೂ ಸಫಲವಾಗಿವೆ. ಇಂತಹ ವಿಷಯಗಳಲ್ಲಿ ಕಾಂಗ್ರೆಸ್ ಪಕ್ಷದ ನಡವಳಿಕೆಗಳನ್ನು ಕಟುವಾಗಿ ಟೀಕಿಸುತ್ತಿದ್ದ ಬಾಜಪ ಕೂಡ ಇದೀಗ ಅದೇ ದಾರಿಯಲ್ಲಿ ನಡೆಯಲು ತೀರ್ಮಾನಿಸಿದ್ದು, ತಾನು ಯಾವ ವಿಚಾರದಲ್ಲು ಕಾಂಗ್ರೆಸ್ಸಿಗಿಂತ ಭಿನ್ನವೇನಲ್ಲ ಎಂಬುದನ್ನು ಸಾಬೀತು ಪಡಿಸಲು ಹೊರಟಿದೆ.

Dec 16, 2016

ಮೇಕಿಂಗ್ ಹಿಸ್ಟರಿ: ಮಳೆ ಮತ್ತು ಭೂಪ್ರದೇಶದ ಲಾಭ ಪಡೆದುಕೊಂಡಿದ್ದು

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ನಗರ ವಿಭಾಗವು ಸಮೃದ್ಧ ಮಲೆನಾಡಿನಿಂದ ಸುತ್ತುವರಿದಿತ್ತು ಮತ್ತಿದನ್ನು ಗೆರಿಲ್ಲಾಗಳು ತುಂಬಾ ಚೆಂದಾಗಿ ಉಪಯೋಗಿಸಿಕೊಂಡರು. ದಟ್ಟ ಅರಣ್ಯ ಪ್ರದೇಶವನ್ನು ತಮ್ಮನುಕೂಲಕ್ಕೆ ಬಳಸಿಕೊಂಡಿದ್ದು ಹೋರಾಟದ ಅಸ್ತಿತ್ವ ಉಳಿಯುವಲ್ಲಿ ಬಹುಮುಖ್ಯ ಪಾತ್ರ ವಹಿಸಿತ್ತು. ಭೂಪ್ರದೇಶವು ಎಷ್ಟು ಉತ್ತೇಜನಕಾರಿಯಾಗಿತ್ತೆಂದರೆ ಹಲವು ಪಾಳೇಗಾರರು ಕೂಡ ತಮ್ಮ ಕೋಟೆಯನ್ನು ತೊರೆದು ಅರಣ್ಯದೊಳಗೆ ರಕ್ಷಣೆ ಪಡೆದುಕೊಂಡರು. 

ಸಶಸ್ತ್ರ ಹೋರಾಟದುದ್ದಕ್ಕೂ, ಗೆರಿಲ್ಲಾ ಯುದ್ಧದ ಪ್ರತಿಯೊಂದು ಪ್ರಮುಖ ತಂತ್ರ ರೂಪುಗೊಂಡಾಗಲೂ, ಅದನ್ನು ಅರಣ್ಯ ಕೊಟ್ಟ ಅನುಕೂಲತೆಗಳಾಧಾರದ ಮೇಲೆಯೇ ಮಾಡಲಾಗಿತ್ತು ಎನ್ನುವುದನ್ನು ಗಮನಿಸಬಹುದು.

Dec 15, 2016

ಗೋವಾ: ಆಮ್ಆದ್ಮಿಯ ಆಕ್ರಮಣಾಕಾರಿ ಪ್ರಚಾರ

goa elections
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಈಗಾಗಲೇ ದೆಹಲಿಯ ಗದ್ದುಗೆಯನ್ನು ಹಿಡಿದಿರುವ ಶ್ರೀ ಅರವಿಂದ್ ಕೇಜ್ರೀವಾಲಾರವರ ಆಮ್ ಆದ್ಮಿ ಪಕ್ಷ ಇದೀಗ ಮುಂದಿನ ವರ್ಷದ ಪೂರ್ವಾರ್ದದಲ್ಲಿ ನಡೆಯಲಿರುವ ಪಂಜಾಬ್ ಮತ್ತು ಗೋವಾ ರಾಜ್ಯಗಳ ವಿದಾನಸಭಾ ಚುನಾವಣೆಗಳ ಮೇಲೆ ಕಣ್ಣು ನೆಟ್ಟಿದೆ. ಅಷ್ಟು ಮಾತ್ರವಲ್ಲದೆ ಈಗಾಗಲೇ ಈ ಎರಡೂ ರಾಜ್ಯಗಳಲ್ಲಿ ಕೆಲವು ಪ್ರಮುಖ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನೂ ಘೋಷಿಸಿದೆ. ಜೊತೆಗೆ ಲಭ್ಯವಿರುವ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಚುನಾವಣಾ ಪ್ರಚಾರವನ್ನೂ ಪ್ರಾರಂಭಿಸಿದೆ. ಈಗಾಗಲೇ ಕಳೆದ 2014ರ ಸಾರ್ವತ್ರಿಕ ಚುನಾವಣೆಗಳಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದಿರುವ ಪಂಜಾಬನ್ನು ಹೊರತು ಪಡಿಸಿ ಇದೇ ಮೊದಲ ಬಾರಿಗೆ ಚುನಾವಣಾ ರಂಗಕ್ಕೆ ಕಾಲಿರಿಸಿರುವ ಗೋವಾ ರಾಜ್ಯದಲ್ಲಿ ಆ ಪಕ್ಷ ತೀರಾ ಆಕ್ರಮಣಾ ಕಾರಿ ರಾಜಕಾರಣ ಶುರು ಮಾಡಿದೆ. ಈಗಾಗಲೇ ಗೋವಾದಲ್ಲಿ ಒಂದು ರ್ಯಾಲಿಯನ್ನೂ ನಡೆಸಿರುವ ಅರವಿಂದ್ ಕೇಜ್ರೀವಾಲರ ಸಿದ್ದತೆಗಳನ್ನು ಮತ್ತು ಪಕ್ಷದ ನಾಯಕರುಗಳ ಉತ್ಸಾಹವನ್ನು ನೋಡಿದರೆ ಈ ಬಾರಿ ಕಾಂಗ್ರೆಸ್ ಮತ್ತು ಬಾಜಪಕ್ಕೆ ಈ ಚುನಾವಣೆ ಕಷ್ಟವಾಗುವುದಂತು ಖಚಿತವೆನಿಸುತ್ತಿದೆ.

Dec 11, 2016

ಪಂಜಾಬ್ ಚುನಾವಣೆ: ದಲಿತರ ಓಲೈಕೆ ಮತ್ತು ಡ್ರಗ್ಸ್ ಮಾಫಿಯಾ ವಿರುದ್ದ ಹೋರಾಟಗಳೇ ಪ್ರಮುಖ ವಿಷಯಗಳು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಪಂಜಾಬ್ ರಾಜ್ಯದ ವಿದಾನಸಭಾ ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳ ಒಳಗೆ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿವೆ. ಈ ಚುನಾವಣಾ ರಾಜಕಾರಣವನ್ನು ಹತ್ತಿರದಿಂದ ಗಮನಿಸುತ್ತಿರುವವರಿಗೆ ಪ್ರಮುಖವಾಗಿ ಗೋಚರಿಸುತ್ತಿರುವ ಎರಡು ವಿಷಯಗಳಿವೆ. ಅದರಲ್ಲಿ ಮೊದಲನೆಯದು ಪಂಜಾಬಿನಲ್ಲಿ ತೀವ್ರವಾಗಿ ಚರ್ಚಿತವಾಗುತ್ತಿರುವ ಡ್ರಗ್ಸ್ ಮಾಫಿಯಾದ ಕಾನೂನುಬಾಹಿರ ಚಟುವಟಿಕೆಗಳು. ಇನ್ನೊಂದು ಪಂಜಾಬಿನ ರಾಜಕೀಯ ವಲಯದಲ್ಲಿ ಅಷ್ಟೇನೂ ಪ್ರಾಮುಖ್ಯ ಪಡೆಯದ ದಲಿತ ರಾಜಕಾರಣ ಎಲ್ಲ ಪಕ್ಷಗಳ ಒಳಗೆ ಚರ್ಚಿತವಾಗುತ್ತಿರುವುದಾಗಿದೆ. ಅದು ಇದುವರೆಗು ಪಂಜಾಬಿನ ರಾಜಕಾರಣದಲ್ಲಿ ದಲಿತ ಶಕ್ತಿಯ ಪ್ರಭಾವವೇ ಇರದಂತಹ ವಾತಾವರಣವಿದ್ದು, ಇದೀಗ ಅದು ಬದಲಾಗುವ ಮುನ್ಸೂಚನೆಯೊಂದು ಕಾಣುತ್ತಿರುವುದಾಗಿದೆ. ಈ ವಿಷಯಗಳ ಬಗ್ಗೆ ಒಂದಿಷ್ಟು ನೋಡೋಣ:

Dec 9, 2016

ಮೇಕಿಂಗ್ ಹಿಸ್ಟರಿ: ನಿರ್ಣಾಯಕ ಯುದ್ಧಗಳಿಂದ ದೂರವಿರುವುದು

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಗೆರಿಲ್ಲಾ ಯುದ್ಧದ ಒಂದು ಪ್ರಮುಖ ಲಕ್ಷಣವೆಂದರೆ ನಿರ್ಣಾಯಕ ಯುದ್ಧಗಳಿಂದ ತಪ್ಪಿಸಿಕೊಳ್ಳುವುದು. ಪಾಳೇಗಾರ ಮುಖಂಡತ್ವವು ಹೆಚ್ಚಿದ್ದ ಮತ್ತು ಕೋಟೆ ಯುದ್ಧದ ನೆನಹುಗಳು ಸಶಕ್ತವಾಗಿದ್ದ ಕೆಲವು ಸಂದರ್ಭಗಳನ್ನು ಹೊರತುಪಡಿಸಿದರೆ, ಬಂಡಾಯಗಾರರು ಸುದೀರ್ಘ ಯುದ್ಧದಿಂದ ಸಾಮಾನ್ಯವಾಗಿ ದೂರವಿರುತ್ತಿದ್ದರು ಮತ್ತು ಶತ್ರುಗಳು ಸುತ್ತುವರಿಯಬಹುದು ಎನ್ನಿಸಿದಾಗ ಶೀಘ್ರವಾಗಿ ಹಿಮ್ಮೆಟ್ಟುತ್ತಿದ್ದರು. ಯುದ್ಧದಲ್ಲಿ ತೊಡಗಿದ್ದ ಬ್ರಿಟೀಷ್ ಅಧಿಕಾರಿಗಳ ವರದಿಗಳಲ್ಲಿ ಬಂಡಾಯಗಾರರು “ಚದುರಿದ” ಬಗ್ಗೆ ಹೆಚ್ಚು ಪ್ರಸ್ತಾಪವಿದೆಯೇ ಹೊರತು ಬಂಡಾಯಗಾರರ ಸಾವಿನ ಬಗ್ಗೆಯಲ್ಲ.

Dec 8, 2016

ನಗದು ರಹಿತ ವಹಿವಾಟಿನ ತಳಮಟ್ಟದ ಸಮಸ್ಯೆಗಳು.

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಯೋಜನೆಗಳನ್ನು ರೂಪಿಸಿ, ಜಾರಿಗೆ ತರುವ ಅಧಿಕಾರಸ್ಥರಿಗೆ ತಳಮಟ್ಟದ ಜನರ ಬದುಕಿನ ವಾಸ್ತತವತೆಯ ಅರಿವಿಲ್ಲದೇ ಹೋದರೆ ಆಗುವ ಪರಿಣಾಮ ಎಂತಹುದೆಂಬುದನ್ನು ನಾವು ನೋಟು ಬ್ಯಾನ್ ಮೂಲಕ ಕಂಡುಕೊಂಡಿದ್ದೇವೆ, ಒಂದಷ್ಟು ಜನ ಕಪ್ಪುಹಣ ಖದೀಮರನ್ನು ಬಲೆ ಹಾಕಿ ಹಿಡಿಯಲು ಕೋಟ್ಯಾಂತರ ಜನರ ಬದುಕನ್ನು ಒಂದಷ್ಟು ದಿನಗಳ ಮಟ್ಟಿಗಾದರು, ಮೂರಾ ಬಟ್ಟೆಯಾಗಿಸುವ ಈ ಕ್ರಮದ ಇನ್ನೊಂದು ಹಂತವಾಗಿ ಇಂಡಿಯಾವನ್ನು ಕ್ಯಾಶ್ ಲೆಸ್ ಎಕಾನಮಿ(ನಗದು ರಹಿತ ಆರ್ಥಿಕ ವ್ಯವಸ್ಥೆ)ಯನ್ನಾಗಿ ಮಾಬೇಕೆಂಬ ಹಂಬಲದಲ್ಲಿ ನಮ್ಮ ಕೇಂದ್ರ ಸರಕಾರ ಆಲೋಚಿಸುತ್ತಿದೆ.

Dec 7, 2016

ಫಿಡೆಲ್ ಕ್ಯಾಸ್ಟ್ರೋ – ಒಂದು ಯುಗಾಂತ್ಯ.

ಡಾ. ಅಶೋಕ್. ಕೆ. ಆರ್
ಫಿಡೆಲ್ ಕ್ಯಾಸ್ಟ್ರೋ! ರೋಮಾಂಚನ, ಭೀತಿ, ಕೋಪವೆಲ್ಲವನ್ನೂ ಹುಟ್ಟಿಸಿದ ವ್ಯಕ್ತಿ ಈಗ ಹೆಸರು ಮಾತ್ರ. ಒಂದಷ್ಟು ವರುಷಗಳಿಂದ ಅನಾರೋಗ್ಯಕ್ಕೀಡಾಗಿದ್ದ ಫಿಡೆಲ್ ಕ್ಯಾಸ್ಟ್ರೋ ಇನ್ನಿಲ್ಲ ಎನ್ನುವ ಸುದ್ದಿ ಕ್ಯೂಬಾದ ಕ್ರಾಂತಿ ಹೋರಾಟವನ್ನು ಒಂದು ಕ್ಷಣ ನೆನಪಿಸಿತು, ಕ್ಯಾಸ್ಟ್ರೋ ಜೊತೆಜೊತೆಗೇ ಚೆ ಗುವಾರ ಮತ್ತೊಮ್ಮೆ ನೆನಪಾದರು. ಪ್ರಪಂಚದ ಯಶಸ್ವಿ ಗೆರಿಲ್ಲಾ ಹೋರಾಟದ ರೂವಾರಿ ಫಿಡೆಲ್. ಎಡಪಂಥೀಯ ಸಿದ್ಧಾಂತದ ಆಧಾರದಲ್ಲಿ, ಗೆರಿಲ್ಲಾ ಯುದ್ಧ ತಂತ್ರದಲ್ಲಿ ಯಶ ಕಂಡು ದಶಕಗಳ ಕಾಲ ಕ್ಯೂಬಾದ ಚುಕ್ಕಾಣಿ ಹಿಡಿದಿದ್ದ ಫಿಡೆಲ್ ಕ್ಯಾಸ್ಟ್ರೋನನ್ನು ಅರ್ಥೈಸಿಕೊಳ್ಳುವ ಬಗೆ ಹೇಗೆ? ಅರವತ್ತು ವರುಷಗಳ ಹಿಂದೆ ಬ್ಯಾಟಿಸ್ಟಾನ ಮಿಲಿಟರಿ ಸರ್ವಾಧಿಕಾರದ ವಿರುದ್ಧ ನಡೆದ ಹೋರಾಟದ ನೆವದಲ್ಲೇ ರೊಮ್ಯಾಂಟಿಸಿಸಮ್ ಮೂಲಕ ಕಾಣಬೇಕಾ? ಅರವತ್ತು ವರುಷಗಳಿಂದ ಅಮೆರಿಕಾದ ವಸಾಹತುಶಾಹಿ ಹೊಡೆತಗಳಿಗೆ ಧೈರ್ಯದಿಂದ ಎದೆಯೊಡ್ಡಿ ನಿಂತು ಸಮಾಜವಾದದ ಆಧಾರದಲ್ಲಿ ದೇಶ ಕಟ್ಟಿದ ಅವರ ಶ್ರಮದ ಮೂಲಕ ಕಾಣಬೇಕಾ? ನಮಗೆ ಬೇಕೋ ಬೇಡವೋ ಪ್ರಪಂಚದ ಹೆಚ್ಚಿನ ಭಾಗ ಬಂವಾಳಶಾಹಿತನದೆಡೆಗೇ ಜಾರಿ ಹೋಗುತ್ತಿರುವ ಕಾಲಘಟ್ಟದಲ್ಲಿ ಫೀಡೆಲ್ ಕ್ಯಾಸ್ಟ್ರೋನನ್ನು ಬಂಡವಾಳಶಾಹಿ ಕನ್ನಡಕದ ಮೂಲಕವಷ್ಟೇ ಕಾಣಬೇಕಾ? ಅಥವಾ ಪ್ರಜಾಪ್ರಭುತ್ವವಾದಿ ದೃಷ್ಟಿಯಿಂದ ನೋಡಬೇಕಾ? 

Dec 6, 2016

ಮನದ ಮಾತು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

ಸಭ್ಯಸ್ಥನಾದವನು ಎಲ್ಲರಿಗು ಪ್ರಿಯವಾಗುತ್ತಾನೆ
ಮುಗುಳ್ನಗುವ ಮುಖಕೆ ಮೆತ್ತಿಕೊಂಡು
ಸಿಹಿಯಾದ ನುಡಿಗಟ್ಟುಗಳ ಉರು ಹೊಡೆದು ಉದುರಿಸುವ 
ಅವನ ತುಟಿಗಳ ಚಲನೆಗೆ
ಜನ ಮರುಳಾಗುತ್ತಾರೆ.
ಕುಷ್ಠ ಹತ್ತಿದ ಮುದುಕನನ್ನು
ಹರಿದ ಬಟ್ಟೆಯ ಬಿಕ್ಷುಕನನ್ನು

Dec 5, 2016

ಸಮತೆ ಎಂಬುದು ಅರಿವು: ಅಭಿಮತ 2016

  ಮೂಲಭೂತವಾದ ಹಾಗೂ ಬಂಡವಾಳವಾದ ಈ ಎರಡೂ ಸಾಹಿತ್ಯ-ಸಂಸ್ಕೃತಿಗಳ ಮುಖವಾಡ ತೊಟ್ಟು ಜನಪರವೆಂದು ತಮ್ಮನ್ನು ಬಿಂಬಿಸಿಕೊಳ್ಳುತ್ತ, ತಮ್ಮ ಕಾರ್ಯಯೋಜನೆಗಳಿಗೆ ಮನ್ನಣೆ ಪಡೆಯಲು ಪೈಪೋಟಿ ನಡೆಸುತ್ತಿವೆ. ಜನಸಾಮಾನ್ಯರ ದೈನಂದಿನ ಬದುಕಿನೊಳಗೂ ಮಾರುಕಟ್ಟೆ ಮತ್ತು ಧಾರ್ಮಿಕ ಹಿತಾಸಕ್ತಿ ಅನಾರೋಗ್ಯಕರ ಸ್ಪರ್ಧೆ ಹಾಗೂ ಅಸಹನೆ ಹುಟ್ಟುಹಾಕುತ್ತಿವೆ. ಇವುಗಳ ಮುಖವಾಡವನ್ನು ಗುರುತಿಸದವರು ಸನ್ನಿವೇಶದ ಸನ್ನಿಗೆ ಒಳಗಾದಂತೆ ಮಾರುಹೋಗುತ್ತಿದ್ದಾರೆ, ಈ ವರ್ತುಲದ ಸಹಭಾಗಿಗಳಾಗುತ್ತಿದ್ದಾರೆ. ಇದು ಯುವ ಪೀಳಿಗೆಯನ್ನು ಗೊಂದಲಗೊಳಿಸಿ ದಿಕ್ಕು ತಪ್ಪಿಸುವ ಅಪಾಯ ದಟ್ಟವಾಗಿದೆ. 

ನೋಟು ನಿಷೇಧದಿಂದ ಭ್ರಷ್ಟಾಚಾರ ನಿಗ್ರಹ ಅಸಾದ್ಯ: ಸುಧಾರಣೆಯಾಗಬೇಕಿರುವ ಚುನಾವಣಾ ವ್ಯವಸ್ಥೆ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ನವೆಂಬರ್ ಎಂಟನೇ ತಾರೀಖಿನ ರಾತ್ರಿ ದೊಡ್ಡ ಮುಖಬೆಲೆಯ ನೋಟುಗಳನ್ನು ನಿಷೇಧಗೊಳಿಸಿದ್ದಕ್ಕೆ ಕಾರಣಗಳನ್ನು ನೀಡುತ್ತ ಹೇಳಿದ ಬಹುಮುಖ್ಯ ಮಾತುಗಳೆಂದರೆ, ಈ ನಿಷೇಧದಿಂದ ಕಪ್ಪಹಣದ ಹಾವಳಿ ಇಲ್ಲವಾಗುತ್ತದೆ ಮತ್ತು ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂಬುದಾಗಿತ್ತು. ಈ ಮಾತುಗಳನ್ನು ಕೇಳಿಸಿಕೊಂಡ ಜನತೆಗೆ ತಕ್ಷಣಕ್ಕೆ ಇದು ನಿಜವೆನಿಸಿ ಮೋದಿಯವರ ಬಗ್ಗೆ ಮೆಚ್ಚುಗೆ ಮೂಡಿದ್ದು ಸುಳ್ಳಲ್ಲ. ಹಾಗಾಗಿಯೇ ಆರಂಭದಲ್ಲಿ ವಿರೋಧಪಕ್ಷಗಳು ಸಹ ಈ ನಿಷೇಧವನ್ನು ವಿರೋಧಿಸಲು ಹಿಂದೆ ಮುಂದೆ ನೋಡುವಂತಾಯಿತು.

Dec 2, 2016

ಮೇಕಿಂಗ್ ಹಿಸ್ಟರಿ: ಯುದ್ಧದ ಸ್ವಭಾವ

saketh rajan
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಶತ್ರುವಿನ ಲೆಕ್ಕದಲ್ಲಿ ಸೈನಿಕ ಕಾರ್ಯಾಚರಣೆಯು ತುಂಬ ಅಸಹ್ಯಕರ ರೀತಿಯಲ್ಲಿ ಶುರುವಾಗಿತ್ತು, ಮೈಸೂರು ಪಡೆಗಳನ್ನು ಸುತ್ತುವರೆಯಲಾಗಿತ್ತು, ಹೊಡೆದು ಬಡಿದು ಕಿರುಕುಳ ಕೊಡಲಾಗಿತ್ತು ಮತ್ತು ಪ್ರಥಮ ಆಕ್ರಮಣದಲ್ಲಿಯೇ ದೂರಕ್ಕಟ್ಟಲಾಗಿತ್ತು. ಕೆಲವು ನೂರರಷ್ಟಿದ್ದ ಪಡೆಗಳು ಅಣ್ಣಪ್ಪನ ನೇತೃತ್ವದಲ್ಲಿ ತರೀಕೆರೆಯನ್ನು ವಶಪಡಿಸಿಕೊಂಡು ಕ್ಯಾಂಪು ಹಾಕಿದ್ದರು. ಗೆರಿಲ್ಲಾ ಪಡೆಗಳು, ಕೋಟೆಯನ್ನು ಸುತ್ತುವರಿದವು ಮತ್ತು ದಾಳಿಗಳನ್ನು ಪದೇ ಪದೇ ನಡೆಸಿದರು, ಹಲವಾರು ಸೈನಿಕರನ್ನು ಸಾಯಿಸಿದರು. “ಕೋಟೆಗಿದ್ದ ಎಲ್ಲಾ ರಸ್ತೆಗಳನ್ನೂ ಆಕ್ರಮಿಸಿಕೊಂಡಿದ್ದರಿಂದ ಕೋಟೆಯಲ್ಲಿದ್ದ ಮೈಸೂರು ಪಡೆಗಳಿಗೆ ಸಾಮಗ್ರಿಗಳು ಸಿಗುವುದು ಕಡಿಮೆಯಾಗಿಬಿಟ್ಟಿತು. ಟಪಾಲುಗಳಿಗೆ ತಡೆಯೊಡ್ಡಲಾಯಿತು ಮತ್ತು ಧಾನ್ಯ ಹಾಗೂ ಹಣದ ಪೂರೈಕೆಯನ್ನು ಕತ್ತರಿಸಿ ಹಾಕಲಾಯಿತು”. (129) 

Nov 28, 2016

ಪಂಜಾಬ್ ವಿದಾನಸಭಾ ಚುನಾವಣೆ: ಪ್ರಯಾಸ ಪಡಬೇಕಿರುವ ಬಾಜಪ-ಅಕಾಲಿದಳ ಮೈತ್ರಿಕೂಟ!

ಕು.ಸ.ಮಧುಸೂದನ
ಉತ್ತರಪ್ರದೇಶದಲ್ಲಿನ 2017ರ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಾಜಪ ಇದೀಗ ತಾನು ಶಿರೋಮಣಿ ಅಕಾಲಿದಳದೊಂದಿಗೆ ಮೈತ್ರಿಮಾಡಿಕೊಂಡು ಆಡಳಿತ ನಡೆಸುತ್ತಿರುವ ಪಂಜಾಬ್ ರಾಜ್ಯವನ್ನು ಉಳಿಸಿಕೊಳ್ಳಬೇಕಾದ ಸಂಕಷ್ಟಕ್ಕೆ ಸಿಲುಕಿದೆ. ಸತತವಾಗಿ ಎರಡು ಅವಧಿಗೆ ಅಧಿಕಾರ ನಡೆಸಿರುವ ಬಾಜಪ ಮೈತ್ರಿಕೂಟಕ್ಕೆ ಈ ಬಾರಿಯ ಚುನಾವಣೆ ನಿಜಕ್ಕೂ ಕಷ್ಟಕರವಾಗಲಿದೆ. ಇದಕ್ಕಿರಬಹುದಾದ ಕಾರಣಗಳನ್ನು ನೋಡೋಣ:

ಮೊದಲನೆಯದಾಗಿ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ್ದರ ಪರಿಣಾಮವಾಗಿ ಅದು ಸಹಜವಾಗಿಯೇ ಆಡಳಿತ ವಿರೋಧಿ ಅಲೆಯನ್ನು ಎದುರಿಸಬೇಕಾಗಿದೆ. ಎರಡನೆಯದಾಗಿ ಮೊದಲಿಂದಲೂ ಇದ್ದ ಮಾದಕದ್ರವ್ಯಗಳ ಮಾಫಿಯಾ ಹೆಚ್ಚಾಗಿದ್ದು, ಇದರಲ್ಲಿ ಆಡಳಿತ ಪಕ್ಷದ ಕೆಲವು ಸದಸ್ಯರೂ ಷಾಮೀಲಾಗಿದ್ದಾರೆಂಬ ಆರೋಪವನ್ನು ವಿರೋಧ ಪಕ್ಷಗಳು ಸತತವಾಗಿ ಮಾಡುತ್ತಲೇ ಬಂದಿದ್ದಾರೆ.

Nov 25, 2016

ಮೇಕಿಂಗ್ ಹಿಸ್ಟರಿ: ಊಳಿಗಮಾನ್ಯತೆಗೆ ಹೊಡೆತಗಳು ಬಿದ್ದಾಗ

ashok k r
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಊಳಿಗಮಾನ್ಯತೆಯನ್ನು ಎರಡು ರೀತಿಯಿಂದ ಗುರಿಯಾಗಿಸಲಾಗಿತ್ತು. ಒಂದನ್ನು ಸುಲಭವಾಗಿ ಗುರುತಿಸಬಹುದಿತ್ತು. ಊಳಿಗಮಾನ್ಯ ವರ್ಗಗಳ ಮೇಲೆ ಸತತವಾಗಿ ನಡೆದ ದಾಳಿಯದು. ಎರಡನೆಯ ರೀತಿ ಸೂಕ್ಷ್ಮವಾಗಿತ್ತು ಮತ್ತು ಅದು ಒಂದು ಸಂದರ್ಭದಲ್ಲಿ ತುಂಬಾ ಖಚಿತವಾಗಿ ತೋರಿಸಿಕೊಂಡಿತಾದರೂ ಅದರ ಬಗ್ಗೆ ನಮ್ಮಲ್ಲಿ ತುಂಬಾ ಸಾಕ್ಷ್ಯಗಳಿಲ್ಲ. ಈ ಎರಡನೆಯ ಅಂಶವನ್ನು ಮೊದಲು ಪರೀಕ್ಷಿಸೋಣ. 

ಸಂಗೊಳ್ಳಿ ರಾಯಣ್ಣ ಪರಿಚಯಿಸಿದ ರೀತಿಯಲ್ಲಿಯೇ, ಹೊಸಂತೆಯಲ್ಲಿ ನಡೆದ ರೈತ ರ್ಯಾಲಿಯಲ್ಲಿ, ಎಲ್ಲಾ ರೈತರು, ತಮ್ಮ ನಡುವಿನ ಜಾತಿ ಭೇದದ ನಡುವೆಯೂ ಸಹಭೋಜನ ನಡೆಸಿದ್ದರು. (120) ವ್ಯಾಪಕ ಜನ ಸಮೂಹ ಜೊತೆಯಾದಾಗ, ಊಳಿಗಮಾನ್ಯತೆ ವಿಧಿಸಿದ್ದ ಕಟ್ಟಳೆಗಳಲ್ಲಿ ಸಂಪೂರ್ಣ ವಿರುದ್ಧ ದಿಕ್ಕಿನ ಮೌಲ್ಯಗಳು ಮತ್ತು ಗ್ರಹಿಕೆಗಳೊಡನೆ ಜೊತೆಯಾಗುತ್ತಿತ್ತು. ಈ ಹೊಸ ಪರಂಪರೆಯು, ದಮನಿತರ ನಡುವಿನ ಒಗ್ಗಟ್ಟನ್ನು ದೃಡಗೊಳಿಸುತ್ತಿತ್ತು ಮತ್ತು ಮೇಲ್ಜಾತಿಯ ಊಳಿಗಮಾನ್ಯ ಮನಸ್ಥಿತಿಯ ವಿರುದ್ಧ ಬಹಿರಂಗವಾಗಿ ದೃಢವಾಗಿ ದಾಳಿ ನಡೆಸುವಂತೆ ಮಾಡುತ್ತಿತ್ತು. 

Nov 23, 2016

ಬಾಜಪಕ್ಕೆ ಎದುರಾಗಿರುವ ಅಗ್ನಿಪರೀಕ್ಷೆ: ಗೋವಾ ವಿದಾನಸಭಾ ಚುನಾವಣೆ.

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಇದುವರೆಗಿನ ರಾಷ್ಟ್ರ ರಾಜಕಾರಣದಲ್ಲಿ ಅಷ್ಟೇನೂ ಪ್ರಾಮುಖ್ಯತೆ ಪಡೆಯದ ಗೋವಾ ರಾಜ್ಯದ ವಿದಾನಸಭಾ ಚುನಾವಣೆಗಳು ಮುಂದಿನ ವರ್ಷದ ಮೊದಲಭಾಗದಲ್ಲಿ ನಡೆಯಲಿವೆ. ಮೂರು ಕಾರಣಗಳಿಗಾಗಿ ಈ ಚುನಾವಣೆಗಳು ಮೊದಲಬಾರಿಗೆ ರಾಷ್ಟ್ರೀಯ ಸುದ್ದಿ ಮಾಧ್ಯಮಗಳಲ್ಲಿ ಮಹತ್ವ ಪಡೆಯಲಾರಂಬಿಸಿವೆ. ಈ ಮೂರು ಕಾರಣಗಳನ್ನು ತಿಳಿದು, ಸದ್ಯದ ಅಲ್ಲಿನ ರಾಜಕೀಯ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳುವ ಮುಂಚೆ ಗೋವಾದ ರಾಜಕೀಯ ಹಿನ್ನೆಲೆಯನ್ನು ಒಮದಿಷ್ಟು ಅವಲೋಕಿಸೋಣ: 

1985ರವರೆಗು ಕೇಂದ್ರಾಡಳಿತ ಪ್ರದೇಶವಾಗಿದ್ದ ಗೋವಾ, ನಂತರದಲ್ಲಿ ಪೂರ್ಣಪ್ರಮಾಣದ ರಾಜ್ಯ ಸ್ಥಾನಮಾನ ಪಡೆದು 40 ಸ್ಥಾನಗಳ ವಿದಾನಸಭೆ ರಚನೆಯಾಯಿತು. ಅಲ್ಲಿಯವರೆಗು ಶಕ್ತಿಶಾಲಿಯಾಗಿಯು, ಪ್ರಬಾವಶಾಲಿಯೂ ಆಗಿದ್ದ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ ನಂತರದ ದಿನಗಳಲ್ಲಿ ನಿದಾನವಾಗಿ ನೇಪಥ್ಯಕ್ಕೆ ಸರಿಯುತ್ತ ಕಾಂಗ್ರೆಸ್ ಮತ್ತು ಬಾಜಪಗಳು ಬೆಳೆಯುವಂತಾಯಿತು.

Nov 21, 2016

ಜಾತಿಗಣತಿಯ ವರದಿ ಬಹಿರಂಗ ಪಡಿಸದ ಸರಕಾರ: ಮೇಲ್ವರ್ಗಗಳ ಒತ್ತಡಕ್ಕೆ ಮಣಿದರೇ ಮುಖ್ಯಮಂತ್ರಿಗಳು?

ಸಾಂದರ್ಭಿಕ ಚಿತ್ರ: ಬ್ಯುಸಿನೆಸ್ ಲೈನ್
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
2013ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಚುನಾವಣೆಗಳಿಗೂ ಮುಂಚೆ ಹೇಳಿದಂತೆಯೇ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಗಣತಿಯನ್ನು ( ಇನ್ನೊಂದು ಅರ್ಥದಲ್ಲಿ ಜಾತಿಗಣತಿ), ಮೇಲ್ವರ್ಗಗಳ ಮತ್ತು ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಮಾಡಿ ಮುಗಿಸಿದರು. ಇವತ್ತು ನಾವೇನೇ ಜಾತಿವಿನಾಶದ ಆದರ್ಶದ ಮಾತುಗಳನ್ನು ಆಡಿದರೂ ಜಾತಿ ಎನ್ನುವುದು ಈ ದೇಶದ ಕಟುವಾಸ್ತವ ಎಂಬುದನ್ನು ಮರೆಯಬಾರದು. ಈ ಗಣತಿ ಕಾರ್ಯವನ್ನು ವಿರೋಧಿಸಿದವರೆಲ್ಲ ಜಾತಿಪದ್ದತಿಯ ಪೋಷಕರೇ ಆಗಿದ್ದುದು ಮತ್ತು ಅಂತಹ ಮೇಲ್ವರ್ಗಗಳ ಬೆಂಬಲ ಪಡೆದ ರಾಜಕೀಯ ಪಕ್ಷಗಳೇ ಆಗಿದ್ದವು. ಸರಕಾರದ ಒಳಗೇ ಇರುವ ಹಲವು ಮೇಲ್ವರ್ಗಗಳ ನಾಯಕರುಗಳೇ ಈ ಜಾತಿ ಗಣತಿಯನ್ನು ಆಂತರಿಕವಾಗಿ ವಿರೋಧಿಸಿದ್ದರು. ಇಷ್ಟಲ್ಲದೆ ಮೇಲ್ವರ್ಗಗಳ ಹಿಡಿತದಲ್ಲಿರುವ ನಮ್ಮ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ಸಹ ಈ ಜಾತಿ ಗಣತಿಯನ್ನು ವಿಡಂಬನೆ ಮಾಡುತ್ತ, ಪರೋಕ್ಷವಾಗಿ ತಮ್ಮ ಅಸಮಾದಾನವನ್ನೂ ವ್ತಕ್ತ ಪಡಿಸಿದ್ದವು. ಆದರೆ ಯಥಾ ಪ್ರಕಾರ ತಮ್ಮ ನಿಲುವನ್ನು ಸಡಿಲಿಸದ ಮುಖ್ಯಮಂತ್ರಿಗಳು ಗಣತಿ ಕಾರ್ಯ ಮುಗಿಯುವಂತೆ ನೋಡಿಕೊಂಡರು, ಸ್ವಾತಂತ್ರ ಪೂರ್ವದಲ್ಲಿ ಅಂದರೆ ಬ್ರಿಟೀಷರ ಆಳ್ವಿಕೆಯಲ್ಲಿ 1931ನೇ ಇಸವಿಯಲ್ಲಿ ನಡೆದ ಜಾತಿಗಣತಿಯ ನಂತರ ಇದುವರೆಗು ಇಂಡಿಯಾದ ಯಾವ ರಾಜ್ಯದಲ್ಲು ಇಂತಹ ಗಣತಿಕಾರ್ಯ ನಡೆದಿರಲಿಲ್ಲ.

Nov 18, 2016

ಅನಾಣ್ಯೀಕರಣ ಮತ್ತು ರಾಜಕೀಯ ಲಾಭ!

ಕು.ಸ.ಮದುಸೂದನನಾಯರ್ ರಂಗೇನಹಳ್ಳಿ
ದಿನಾಂಕ 9-11-2016ರ ಬುದವಾರ ತಡಸಂಜೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಮೋದಿಯವರು, ಅನಾಣ್ಯೀಕರಣದ(ಡಿಮೊನೈಟೇಷನ್) ನಿರ್ದಾರವನ್ನು ಪ್ರಕಟಿಸಿದ ಕೂಡಲೆ ಇಡೀ ರಾಷ್ಟ್ರ ಒಮ್ಮೆಲೇ ಬೆಚ್ಚಿ ಬಿದ್ದಿತ್ತು. ಊಟ ಮಾಡುತ್ತ ಅಥವಾ ಊಟ ಮುಗಿಸಿ ವಾಹಿನಿಗಳಲ್ಲಿ ಸುದ್ದಿ ನೋಡುತ್ತ(ಕೇಳತ್ತ) ಕೂತಿದ್ದ ಜನತೆ ಆತಂಕಕ್ಕೀಡಾಗಿದ್ದು ಸುಳ್ಳಲ್ಲ. ಅನಾಣ್ಯೀಕರಣದ ಬಗ್ಗೆ ಹೆಚ್ಚೆನು ಮಾಹಿತಿ ಇರದ ಜನತೆಗೆ ಇದರ ಹಿಂದಿನ ಉದ್ದೇಶ ಮತ್ತು ಸಾಧಕಬಾದಕಗಳನ್ನು ಅರ್ಥಮಾಡಿಕೊಳ್ಳಲು ಸುಮಾರು ಮೂರು ದಿನ ಬೇಕಾಗಿತ್ತು. ಸುದ್ದಿವಾಹಿನಿಗಳನ್ನು ನೋಡಿದವರು, ವೃತ್ತಪತ್ರಿಕೆಗಳನ್ನು ಓದಿದವರು ಒಂದಷ್ಟು ಅರ್ಥಮಾಡಿಕೊಂಡರೂ, ಬಹಳಷ್ಟು ಜನ ಅವಿದ್ಯಾವಂತರಿಗೆ ಈ ನಡೆಯನ್ನು ಅರಿತುಕೊಳ್ಳಲು ಕಷ್ಟವಾಗಿದ್ದು ನಿಜ. ಅನಾಣ್ಯೀಕರಣವೆಂದರೆ ಜಾಸ್ತಿ ಮುಖಬೆಲೆಯ ಅಂದರೆ ಐನೂರು ಮತ್ತು ಸಾವಿರದ ನೋಟುಗಳನ್ನು ಸರಕಾರ ಹಿಂದಿರುಗಿ ಪಡೆದು ಅವುಗಳ ಬದಲಿಗೆ ಅದೇ ಮೌಲ್ಯದ ಕಡಿಮೆ ಮುಖಬೆಲೆಯ ನೋಟುಗಳನ್ನು ಜನರಿಗೆ ನೀಡುವುದೆಂಬ ಮಾತು ಜನರಿಗೆ ಅರ್ಥವಾದರೂ, ಅವರಿಗೆ ಅರ್ಥವಾಗದೇ ಹೋದದ್ದು. ಹೀಗೆ ನೋಟು ಬದಲಿಸಿಕೊಳ್ಳುವ ಮಾರ್ಗ ಮತ್ತು ಅವಧಿಯ ಬಗ್ಗೆ. ಅಂತೂ ಮೂರ್ನಾಲ್ಕು ದಿನಗಳ ಒಳಗೆ ಜನರಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿಯಂತು ಸಿಕ್ಕಿತ್ತು.

ಮೇಕಿಂಗ್ ಹಿಸ್ಟರಿ: ಮೂರನೇ ಅಲೆ: ರೈತರ ಗೆರಿಲ್ಲಾ ಯುದ್ಧ

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ನಗರ ರೈತರ ಗೆರಿಲ್ಲಾ ಯುದ್ಧದ ಕೆಲವು ವಿಶಿಷ್ಟ ಲಕ್ಷಣಗಳನ್ನೀಗ ನೋಡೋಣ; ಆ ಯುದ್ಧದ ಸಾಧನೆಗಳು ಮತ್ತು ಅದು ಸೃಷ್ಟಿಸಿದ ಸಂಕಟಗಳು ಶತ್ರುಗಳನ್ನು ಮುಗ್ಗರಿಸುವಂತೆ ಮಾಡಿದ್ದನ್ನು ನೋಡೋಣ. ನಗರದ ಬಂಡಾಯದ ಮೂರನೇ ಹಂತದಲ್ಲಿ ಸಶಸ್ತ್ರ ಹೋರಾಟವು ಬಹುಮುಖ್ಯ ಜನಪ್ರಿಯ ಹೋರಾಟವಾಗಿದ್ದದ್ದು ಸ್ಪಷ್ಟವಾಗಿದೆ. 

i) ವರ್ಗ ಸಂಯೋಜನೆಯಲ್ಲಾದ ಬದಲಾವಣೆ 
ಹೋರಾಟದ ವಿವಿಧ ಹಂತಗಳಲ್ಲಿ, ಹೋರಾಟದ ಮಾದರಿಯೂ ಬದಲಾಗುತ್ತಿತ್ತು. ಜೊತೆ ಜೊತೆಗೇ, ಚಳುವಳಿಯಲ್ಲಿನ ವರ್ಗ ಸಂಯೋಜನೆ ಮತ್ತು ಪಾತ್ರಗಳಲ್ಲೂ ಬದಲಾವಣೆಯಾಗುತ್ತಿತ್ತು. ಈ ಬದಲಾವಣೆಗಳು ಹೋರಾಟದ ಹಂತಗಳ ಮಾರ್ಪಡುವಿಕೆಯನ್ನು ಗುರುತಿಸುತ್ತಿತ್ತು ಮತ್ತು ಅಳವಡಿಸಿಕೊಂಡ ಮಾದರಿಯನ್ನು ನಿರ್ಧರಿಸುತ್ತಿತ್ತು. ಬಂಡಾಯದ ಬಗೆಗಿನ ಯಾವುದೇ ಸಾಮಾನ್ಯ ವಿಶ್ಲೇಷಣೆಯನ್ನೂ ಈ ಅಂಶದ ಆಧಾರದ ಮೇಲೆ ನಿರ್ಧರಿಸುವುದು ಅವಶ್ಯಕ. 

Nov 17, 2016

ಬ್ಯಾಂಕುಗಳ ಮುಂದೆ ಬಸವಳಿದ ಭಾರತ.

ಡಾ.ಅಶೋಕ್.ಕೆ.ಆರ್
ಇಡೀ ದೇಶ ಅಚ್ಚರಿ ಮತ್ತು ಆಘಾತಕ್ಕೊಳಗಾಗಿ ಒಂದು ವಾರವಾಯಿತು. ಭ್ರಷ್ಟಾಚಾರ ರಹಿತ, ಅಭಿವೃದ್ಧಿಗೆ ಪೂರಕವಾಗಿ ಆಡಳಿತ ನೀಡುವ ಆಶ್ವಾಸನೆಯೊಂದಿಗೆ ಕೇಂದ್ರದಲ್ಲಿ ಅಧಿಕಾರವಿಡಿದ ಬಿಜೆಪಿ ನೇತೃತ್ವದ ಎನ್.ಡಿ.ಎ ಸರಕಾರ ಕೊಟ್ಟ ಮೊದಲ ಅಚ್ಚರಿಯಿದು. ಅಚ್ಚರಿಗೆ ಕಾರಣ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಅಚ್ಚರಿ ಆಘಾತವಾಗಿ ಪರಿವರ್ತನೆಯಾಗುವುದಕ್ಕೆ ಹೆಚ್ಚೇನೂ ಸಮಯ ಬೇಕಾಗಲಿಲ್ಲ. ಜನರ ಹೊಗಳಿಕೆಯ ಮಾತುಗಳು ತೆಗಳಿಕೆಯಾಗಿ ಮಾರ್ಪಡುವುದಕ್ಕೂ ಹೆಚ್ಚು ಸಮಯ ಹಿಡಿಯಲಿಲ್ಲ. ಒಳ್ಳೆಯ ಉದ್ದೇಶದಿಂದ ಕೂಡಿದೆ ಎನ್ನಿಸುವ ದೂರಗಾಮಿಯಲ್ಲಿ ಉತ್ತಮ ಪರಿಣಾಮಗಳನ್ನುಂಟು ಮಾಡುತ್ತದೆ ಎನ್ನಲಾದ ಯೋಜನೆಯೊಂದು ಪೂರ್ವ ಸಿದ್ಧತೆಯ ಕೊರತೆಯ ಕಾರಣದಿಂದಾಗಿ ದೇಶದ ಜನರ – ಹೆಚ್ಚಾಗಿ ಬಡ, ಕೆಳ ಮಧ್ಯಮ ಮತ್ತು ಮಧ್ಯಮ ವರ್ಗದ ಜನರ – ದಿನಗಳನ್ನೇ ಏರುಪೇರುಮಾಡಿಬಿಟ್ಟಿದೆ. ದೇಶಕ್ಕೆ ಒಳ್ಳೇದಾಗುತ್ತೇನೋ ಎಂಬ ನಿರೀಕ್ಷೆಯಿಂದ ಜನರೂ ಒಂದು ಮಟ್ಟಿಗೆ ತಾಳ್ಮೆಯಿಂದಲೇ ಕಷ್ಟವನ್ನನುಭವಿಸುತ್ತಿದ್ದಾರೆ. ನಿಜಕ್ಕೂ ಪ್ರಧಾನ ಮಂತ್ರಿ ಮೋದಿಯವರ ಈ ನಿರ್ಧಾರದಿಂದ ಒಳ್ಳೆಯದಾಗುತ್ತದಾ?

Nov 15, 2016

ಜನಪರ ಕೆಲಸಗಳ ಜೊತೆಯೇ ಶಕ್ತಿರಾಜಕಾರಣದಲ್ಲಿಯೂ ಯಶಸ್ವಿಯಾದ ನಾಯಕ - ಶ್ರೀ ದೇವರಾಜ್ ಅರಸ್

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಸಕ್ರಿಯ ರಾಜಕಾರಣಿಯೊಬ್ಬ ತಾನು ಮಾಡುವ ಜನಪರ ಕೆಲಸಗಳಿಗೆ ಚ್ಯುತಿ ಬಾರದಂತೆ ರಾಜಕಾರಣ ಮಾಡುವುದು ತೀರಾ ಅಪರೂಪ ಮತ್ತು ವಿಶೇಷ!. ಯಾಕೆಂದರೆ ಶಕ್ತಿರಾಜಕಾರಣದ ಕುತಂತ್ರಗಳಲ್ಲಿ ಮುಳುಗಿ ಹೋಗುವ ರಾಜಕೀಯ ನಾಯಕನೊಬ್ಬ ಜನಪರವಾಗಿ ಕೆಲಸ ಮಾಡಲಾಗದಷ್ಟು ಮಟ್ಟಿಗೆ ತನ್ನ ತಂತ್ರಗಾರಿಕೆಯಲ್ಲಿ ಮುಳುಗಿ ಹೋಗಿರುವುದನ್ನು ನಾವು ಇಂಡಿಯಾದ ಪ್ರಜಾಸತ್ತೆಯ ಇತಿಹಾಸದಲ್ಲಿ ಬಹಳಷ್ಟು ಉದಾಹರಣೆಗಳನ್ನು ಕಂಡಿದ್ದೇವೆ. ಹಾಗೆಯೇ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವ ಭರದಲ್ಲಿ ರಾಜಕೀಯ ತಂತ್ರಗಾರಿಕೆಗಳಲ್ಲಿ ವಿಫಲರಾಗಿ ಹೋದ ಹಲವರನ್ನೂ ನಾವು ನೋಡಿರುವುದುಂಟು. ಇಂಡಿಯಾದ ಮಟ್ಟಿಗೆ ಜನಪರ ಕಾರ್ಯಗಳನ್ನೂ ಹಾಗು ಶಕ್ತಿ ರಾಜಕಾರಣವನ್ನೂ ಒಟ್ಟೊಟ್ಟಿಗೆ ಮಾಡಿಕೊಂಡು ಅದರಲ್ಲಿ ಗೆದ್ದವರ ಸಂಖ್ಯೆ ತೀರಾ ವಿರಳ.

Nov 14, 2016

ದ್ವಂದ್ವದಲ್ಲಿರುವ ಜನತಾದಳದ ಮುಂದಿನ ನಡೆಗಳು?

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಕರ್ನಾಟಕದ ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರಿಗೆ ಅರ್ಥವಾಗುವ ಒಂದು ವಿಷಯವೆಂದರೆ: ಆಡಳಿತಾರೂಢ ಕಾಂಗ್ರೆಸ್ ವಿರೋಧಪಕ್ಷಗಳಿವೆಯೆಂಬುದನ್ನು ಮರೆತಂತೆ ತನ್ನ ಪಾಡಿಗೆ ತಾನು ಅಡರಿದ ಮಂಪರಿನಲ್ಲಿ ಆಡಳಿತ ನಡೆಸುತ್ತಿದ್ದರೆ (ಆಡಳಿತದ ವೈಖರಿಯ ಬಗ್ಗೆ ಬೇರೆಯದೇ ಆಗಿ ಬರೆಯಬೇಕಾಗುತ್ತದೆ), ಅಧಿಕೃತ ವಿರೋಧಪಕ್ಷವಾದ ಬಾಜಪ ವಸ್ತುನಿಷ್ಠವಾಗಿ ಆಡಳಿತದ ಲೋಪದೋಷಗಳ ಬಗ್ಗೆ ಸರಕಾರದ ಗಮನ ಸೆಳೆಯುವ ಹಾಗು ಜನಪರ ಆಡಳಿತದ ಬಗ್ಗೆ ಸರಕಾರದ ಕಣ್ಣು ತೆರೆಸುವ ಯಾವುದೇ ಕಾರ್ಯಕ್ರಮಗಳನ್ನೂ ಹಾಕಿಕೊಳ್ಳದೆ, ಕೇವಲ ಜನರನ್ನು ಬಾವನಾತ್ಮಕವಾಗಿ ಕೆರಳಿಸುವಂತಹ ಜನಪ್ರಿಯವಾಗಬಲ್ಲಂತ ವಿಷಯಗಳನ್ನೇ ಮುಂಚೂಣಿಯಲ್ಲಿಟ್ಟುಕೊಂಡು ತನ್ನ ರಾಜಕೀಯ ಮಾಡುತ್ತಿದೆ (ಇದನ್ನು ಸಹ ಪ್ರತ್ಯೇಕವಾಗಿ ಬರೆಯಬಹುದಾಗಿದೆ).

Nov 12, 2016

ಜಾತಿ ಮತ್ತು ಧರ್ಮ ರಾಜಕಾರಣಗಳ ಸುಳಿಯಲ್ಲಿ ಉತ್ತರಪ್ರದೇಶದ ಚುನಾವಣೆಗಳು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಉತ್ತರ ಪ್ರದೇಶದ ರಾಜ್ಯವಿದಾನಸಭೆಗೆ 2017ರ ಪೂರ್ವಾರ್ದದಲ್ಲಿ ನಡೆಯಲಿರುವ ಚುನಾವಣೆಗಳಿಗಾಗಿ ಬಹುತೇಕ ರಾಜಕೀಯ ಪಕ್ಷಗಳು ಈಗಾಗಲೇ ಸಿದ್ದತೆ ನಡೆಸುತ್ತಿದ್ದು,ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಬಹುದಾದ ವಿಷಯಗಳಿಗೆ ಪ್ರದಾನ್ಯತೆ ಕೊಡುತ್ತ ಚುನಾವಣೆಯ ಕಾವನ್ನು ಏರಿಸುತ್ತಿವೆ. ಈ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಜನರ ಬಾವನಾತ್ಮಕ ವಿಷಯಗಳಿಗೇ ಹೆಚ್ಚು ಮಹತ್ವ ನೀಡುತ್ತ, ಜಾತಿ ಧರ್ಮಗಳ ನೆಲೆಯಲ್ಲಿಯೇ ಮತ ಪಡೆಯುವ ಹುನ್ನಾರ ನಡೆಸಿವೆ. ಉತ್ತರ ಪ್ರದೇಶದ ಮಟ್ಟಿಗೆ ಜಾತಿ ರಾಜಕಾರಣ ತೀರಾ ವಾಸ್ತವವಾಗಿದ್ದು, ಈಗಾಗಲೇ ಜಾತಿ ಸಮೀಕರಣಗಳ ಲೆಕ್ಕಾಚಾರಗಳು ಎಲ್ಲ ಪಕ್ಷಗಳ ಆಂತರೀಕ ವಲಯದಲ್ಲಿ ಮಹತ್ವ ಪಡೆಯುತ್ತಿವೆ.

Nov 11, 2016

ದಲಿತಶಕ್ತಿಯ ವಿರುದ್ದ ಒಗ್ಗಟ್ಟಾಗುತ್ತಿರುವ ಉತ್ತರಪ್ರದೇಶದ ರಾಜಕೀಯ ಪಕ್ಷಗಳು.

ku sa madhusudhan
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಒಬ್ಬ ದಲಿತ ನಾಯಕಿ ಮಾಯಾವತಿಯವರನ್ನು ಮತ್ತು ದಲಿತರ ರಾಜಕೀಯ ದ್ವನಿಯಾದ ಬಹುಜನ ಪಕ್ಷವನ್ನು ಮುಗಿಸುವ ಒಂದು ಷಡ್ಯಂತ್ರ ಉತ್ತರ ಪ್ರದೇಶದಲ್ಲಿ ಸದ್ದಿರದೆ ನಡೆಯುತ್ತಿದೆ. ಇನ್ನೇನು ಮುಂದಿನ ವರ್ಷದ ಪೂರ್ವಾರ್ದದಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ಬಹುಜನ ಪಕ್ಷವನ್ನು ಸೋಲಿಸುವ ಮೂಲಕ ದಲಿತರ ದನಿಯನ್ನು ಹತ್ತಿಕ್ಕುವ ರಾಜಕೀಯ ಚದುರಂಗದಾಟ ಈಗಾಗಲೇ ಶುರುವಾಗಿದೆ. ಕಳೆದ ಬಾರಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವನ್ನು ಬೆಂಬಲಿಸಿದ್ದ ಮುಸ್ಲಿಂ ಸಮುದಾಯ ತದನಂತರ ನಡೆದ ಕೆಲವು ಕೋಮುಗಲಭೆಗಳಲ್ಲಿ ಸಮಾಜವಾದಿ ಪಕ್ಷ ತೆಗೆದುಕೊಂಡ ನಿರ್ದಾರಗಳಿಂದ ಅಸಮಾದಾನಗೊಂಡು ಅದರಿಂದ ದೂರ ಸರಿಯುತ್ತಿದೆಯೆಂಬ ಬಾವನೆ ಸಾರ್ವಜನಿಕರಲ್ಲಿ ಮೂಡಿತ್ತು. ಇದರ ಲಾಭ ಪಡೆಯಲು ಹೊರಟ ಬಹುಜನ ಪಕ್ಷ ಈಗಾಗಲೇ ತಾನು ಸಿದ್ದಪಡಿಸಿಕೊಂಡಿರುವ ದಲಿತ ಮತ್ತು ಬ್ರಾಹ್ಮಣ ಮತಬ್ಯಾಂಕಿನ ಜೊತೆಗೆ ಮುಸ್ಲಿಂ ಸಮುದಾಯದ ಬೆಂಬಲ ಪಡೆಯಲು ನಿರ್ದರಿಸಿ ಪಶ್ಚಿಮ ಉತ್ತರಪ್ರದೇಶದ ಸುಮಾರು 125ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೇಟು ನೀಡಲು ನಿರ್ದರಿಸಿತು.

ಮೇಕಿಂಗ್ ಹಿಸ್ಟರಿ: ರಾಜನ ಉಗ್ರ ಪ್ರವಾಸ

saketh rajan
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
1830ರ ಡಿಸೆಂಬರ್ 14ರಿಂದು 1831ರ ಜನವರಿ 10ರವರೆಗೆ ಶತ್ರುಗಳು ರೈತರಲ್ಲಿ ಭೀತಿಯನ್ನುಟ್ಟಿಸಲು ಪ್ರಚಾರ ನಡೆಸಿದರು. ಈ ಭೀತಿಯ ಪ್ರಚಾರವನ್ನು ರಾಜನ ಪ್ರವಾಸದ ಭಾಗವಾಗಿ ನಡೆಸಲಾಯಿತು; ಮೈಸೂರು, ಹಾಸನ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳ ತೊಂದರೆಗೀಡಾದ ಪ್ರದೇಶಗಳಿಗೆ ರಾಜ ಪ್ರವಾಸ ನಡೆಸುತ್ತಿದ್ದ. 

ರಾಜನೊಂದಿಗೆ ಸಾವಿರ ಸೊವರ್ಗಳು, 200 ಮಂದಿ ಅಂಗರಕ್ಷಕರು ಮತ್ತು ಮೂರು ಬೆಟಾಲಿಯನ್ನಿನಷ್ಟು ಕಾಲಾಳು ಸೈನಿಕರಿದ್ದರು. ರೈತರನ್ನು ಸಂತೈಸುವುದು ಇದರ ಉದ್ದೇಶವಾಗಿತ್ತು, ಆದರೆ ವಾಸ್ತವದಲ್ಲಿ, ರೈತರು ಪ್ರತಿರೋಧಿಸುವ ಧೈರ್ಯವನ್ನೂ ಮಾಡಬಾರದೆಂಬ ನಿಟ್ಟಿನಲ್ಲಿ ನಡೆದ ಪ್ರಭುತ್ವದ ಶಕ್ತಿ ಪ್ರದರ್ಶನವಾಗಿತ್ತಿದು. 

ಉಪಲಬ್ಧತೆ

ಪ್ರವೀಣಕುಮಾರ್ ಗೋಣಿ 
ಎದೆಯ ಬಾಗಿಲ ತೆರೆಯದೆ 
ಬಂದು ಪವಡಿಸುವನೇ ಪರಮಾತ್ಮ ?
ಭೋಗದ ಬಲೆಯಲ್ಲಿ ಸಿಲುಕಿ 
ಕಾಣೆಯಾಗಿಹ ಮನಕೆ ತಾಕೀತೆ 
ಅವನ ಬರುವೆಯಾ ಪುಳಕ ?


Nov 9, 2016

ಮಾಹಿತಿ ಹಕ್ಕು ಮತ್ತು ರಾಜಕೀಯ ಪಕ್ಷಗಳ ಜಾಣಮೌನ?

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಇವತ್ತು ಮಾಹಿತಿ ಹಕ್ಕು ಕಾಯಿದೆ ದೇಶದಾದ್ಯಂತ ಸಂಚಲನ ಮೂಡಿಸಿದೆ. ಒಂದು ದಶಕದ ಹಿಂದೆ ಶಾಸನವಾಗಿ ಜಾರಿಗೆ ಬಂದಮಾಹಿತಿ ಹಕ್ಕು ಕಾಯಿದೆಯಡಿ ಕೇಂದ್ರ ಹಾಗು ಹಲವು ರಾಜ್ಯ ಸರಕಾರಗಳ ಭ್ರಷ್ಟತೆಯ ಹಲವು ಪ್ರಕರಣಗಳು ಬಯಲಾಗಿವೆ,ಆಗುತ್ತಿವೆ.ಅದರಲ್ಲೂ ಪತ್ರಕರ್ತರುಗಳ ಹಾಗು ನಮ್ಮವರೇ ಆದ ಭ್ರಷ್ಟಾಚಾರದ ವಿರುದ್ದ ಸತತವಾಗಿ ಹೋರಾಡುತ್ತಿರುವ ಶ್ರೀಯುತ ಹಿರೇಮಠರಂತವರ ಕೈಲಿ ಸಿಕ್ಕ ಈ ಆಯುಧ ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದೆ.. ದೇಶದಾದ್ಯಂತ ಇರುವ ನೂರಾರು ಮಾಹಿತಿ ಹಕ್ಕು ಕಾರ್ಯಕರ್ತರು ಈ ಕಾಯಿದೆಯನ್ನು ಬಳಸಿ ಜನರಲ್ಲಿ ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಮಾಹಿತಿ ಹಕ್ಕು ಹೋರಾಟಗಾರರೆಂಬ ಹೊಸದೊಂದು ಸಮುದಾಯವೇ ಸೃಷ್ಠಿಯಾಗಿದೆ. ಯಾಕಾದರೂ ಈ ಕಾಯಿದೆಯನ್ನು ಜಾರಿಗೆ ತಂದೆವೋ ಎಂದು ರಾಜಕಾರಣಿಗಳು ಇವತ್ತು ಪರಿತಪಿಸುತ್ತಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಇದರ ಜೊತೆಗೆ ಕೆಲವು ಅಡ್ಡ ಪರಿಣಾಮಗಳೂ ಈ ಕಾಯಿದೆಯಿಂದಾಗಿವೆ. ಸಮಾಜಸೇವಕರ ಮುಖವಾಡ ಹಾಕಿಕೊಂಡ ಕೆಲವರು ಈ ಕಾಯ್ದೆಯನ್ನು ಬಳಸಿಕೊಂಡು ಪಡೆದ ಅಧಿಕೃತ ಮಾಹಿತಿಗಳನ್ನೇ ಆಧಾರವಾಗಿಟ್ಟುಕೊಂಡು ಸರಕಾರದ ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡುತ್ತ ದುಡ್ಡು ಮಾಡುವ ದಂದೆಯೊಂದನ್ನು ಸಹ ಶುರು ಮಾಡಿರುವುದು ಕೆಲವೆಡೆ ಕಂಡು ಬರುತ್ತಿದೆ. ಇಂತಹ ಕೆಲವು ದೌರ್ಬಲ್ಯಗಳ ಹೊರತಾಗಿಯೂ ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಈ ಕಾಯಿದೆ ಸ್ವಲ್ಪ ಮಟ್ಟಿಗಾದರು ಧನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ.

Nov 8, 2016

ಮೊದಲು ಕವಿತೆ ಹೀಗಿರಲಿಲ್ಲ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಈ ಮೊದಲು ಕವಿತೆ ಹೀಗಿರಲಿಲ್ಲ
ಕಾಡಂಚಲ್ಲಿ ದನಕರುಗಳ ಮೇಯಿಸುತ್ತಿದ್ದ ಹರಯದ ಹುಡುಗ ಹುಡುಗಿಯರ ಕೊರಳಲ್ಲಿ ಹುಟ್ಟಿ
ಊರೊಳಗಿನ
ರಾಗಿ ಬೀಸುವ ಹೆಂಗಸರ ಗಂಟಲೊಳಗೆ
ಹರಯದ ಹುಡುಗಿಯರ ಹೊಸಗೆಯ ಆರತಿಯೊಳಗೆ
ಜೋಳಿಗೆ ಹಾಕಿ ಕೇರಿಗಳ ತಿರುಗುತ್ತಿದ್ದಅಲೆಮಾರಿ ಕೊರಳುಗಳೊಳಗೆ
ಹಾಡುಗಳಾಗಿ ಬೆಳೆಯುತ್ತ ಹೋಯಿತು.

Nov 6, 2016

ಬಾಲ್ಯವೆಂದರೆ…..!

ಕು.ಸ.ಮಧುಸೂದನ್
ಬಾಲ್ಯದ ಬಗ್ಗೆ ಬಹಳ ಜನ
ರೊಮ್ಯಾಂಟಿಕ್
ಆಗಿ ಮಾತಾಡುತ್ತಾರೆ
ನನ್ನ ಕೈಲಿ ಆಗೋದಿಲ್ಲ.

ಬಾಲ್ಯವನ್ನು ನೆನಪಿಸಿಕೊಳ್ಳುವುದೆಂದರೆ
ನನಗೆ
ಹಳೆ ಗಾಯದ ಕಲೆಗಳನ್ನು
ಅದರ ನೋವನ್ನು 
ನೆಕ್ಕಿದಂತಾಗುತ್ತದೆ.

Nov 5, 2016

ನೀನು ಮಾತ್ರ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ನೀನೊಂದು ಬರೀ ರಕ್ತಮಾಂಸದ
ಏರುಯೌವನದ ಜೀವಂತ ಹೆಣ್ಣು 
ಮಾತ್ರವಾಗಿದ್ದರೆ ಇಷ್ಟೊಂದು ಪ್ರೀತಿಸುತ್ತಿರಲಿಲ್ಲ ನಾನು!

ನನ್ನಗಾಢ ವಿಷಾದದ ಬಟ್ಟಲೊಳಗಿನ ಮಧು ನೀನು
ನನ್ನ ಒಂಟಿತನದ ನಟ್ಟಿರುಳುಗಳ ಕನಸು ನೀನು
ನನ್ನ ಅನಾಥಅಲೆಮಾರಿ ಹಗಲುಗಳ ಹುಡುಕಾಟ ನೀನು
ನಾನು ಕಳೆದುಕೊಂಡ ಎಲ್ಲವನೂ
ಮೊಗೆಮೊಗೆದು ಕೊಡಬಲ್ಲ 
ಸಾವಿರದ ನೋವಿರದ ದೇವತೆ ನೀನು.

Nov 4, 2016

ಮೇಕಿಂಗ್ ಹಿಸ್ಟರಿ: ನಗರದ ರೈತಾಪಿ ಬಂಡಾಯ ಭಾಗ 3

ashok k r
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಈ. ರೈತರ ವರ್ಗ ಬೇಡಿಕೆಗಳು 
ಬುಡಿ ಬಸಪ್ಪ 1830ರಲ್ಲಿ ನಗರದ ಅನೇಕ ಭಾಗಗಳಲ್ಲಿ ಪ್ರವಾಸ ಮಾಡಿದ್ದ. ತನ್ನ ಪ್ರತಿನಿಧಿಯಾಗಿ ಮಾನಪ್ಪನನ್ನು ನೇಮಿಸಿದ್ದ. ಮಾನಪ್ಪನನ್ನು ಬುಡಿ ಬಸಪ್ಪನ “ಪ್ರಧಾನ ದಂಡನಾಯಕ”ನೆಂದೂ ಕರೆಯಲಾಗುತ್ತಿತ್ತು. (96) 

ಶಿವಮೊಗ್ಗ ಜಿಲ್ಲೆಯ ಆನಂದಪುರ ಸಮೀಪದ ಹೊಸಂತೆ ಗ್ರಾಮದಲ್ಲಿ 1830ರ ಆಗಷ್ಟ್ 23ರಂದು ರ್ಯಾಲಿಗೆ ಕರೆ ನೀಡಲಾಗಿತ್ತು. ಸಾವಿರಾರು ರೈತರು ಅದರಲ್ಲಿ ಭಾಗವಹಿಸಿದರು. ನೂರಾರು ಎತ್ತಿನಗಾಡಿಗಳು ಹೊಸಂತೆಯ ಮೈದಾನವನ್ನು ತುಂಬಿದವು ಎಂದು ರಾಮಭಟ್ಟ ಬರೆಯುತ್ತಾರೆ. ರೈತರು ಧಾರವಾಡ ಮತ್ತು ಬಳ್ಳಾರಿ ಜಿಲ್ಲೆಗಳಿಂದಲೂ ಬಂದಿದ್ದರು. 

Nov 3, 2016

ಸರ್ಜಿಕಲ್ ಸ್ಟ್ರೈಕ್ ರಾಜಕೀಯ.

ಸಾಂದರ್ಭಿಕ ಚಿತ್ರ.
ಡಾ.ಅಶೋಕ್.ಕೆ.ಆರ್
ಯಾವುದು ನಡೆಯಬಾರದಿತ್ತೋ ಅದೇ ನಡೆಯುತ್ತಿದೆ. ಸೈನಿಕ ಕಾರ್ಯಾಚರಣೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ದುರ್ನಡೆಯನ್ನು ನಾನಂತೂ ಇಲ್ಲಿಯವರೆಗೆ ಕಂಡಿರಲಿಲ್ಲ. ಕೇಂದ್ರದ ಬಿಜೆಪಿ ನೇತೃತ್ವದ ಎನ್.ಡಿ.ಎ ಸರಕಾರ ಸೈನ್ಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುವಲ್ಲಿ ಅತೀವ ಆಸಕ್ತಿ ತೋರುತ್ತಿದೆ. ಈ ಆಸಕ್ತಿಗೆ ಕಾರಣ ಬಾಗಿಲಲ್ಲೇ ಇರುವ ಹಲವು ರಾಜ್ಯಗಳ ಚುನಾವಣೆ. ಅದರಲ್ಲೂ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ. ಸೈನಿಕರ ಬಗ್ಗೆ ಸೈನ್ಯದ ಬಗ್ಗೆ ಯಾವುದೇ ರೀತಿಯ ಪ್ರಶ್ನೆ ಕೇಳುವುದು, ಸೈನಿಕರ ಉಪಟಳಗಳ ಬಗ್ಗೆ ಮಾತಾಡುವುದು, ಅದನ್ನು ಖಂಡಿಸುವುದೇ ದೇಶದ್ರೋಹ ಎನ್ನುವಂತಹ ವಾತಾವರಣವನ್ನೂ ಸೃಷ್ಟಿಸಲಾಗುತ್ತಿದೆ. ಸೈನಿಕರೆಂದರೆ ಪ್ರಶ್ನಾತೀತರೇ? ಸೈನ್ಯವನ್ನು ಹೊಗಳುವುದಷ್ಟೇ ದೇಶಪ್ರೇಮವೇ? ಎಲ್ಲಕ್ಕಿಂತ ಮುಖ್ಯವಾಗಿ ಸೈನಿಕ ಕಾರ್ಯಾಚರಣೆಯನ್ನು ರಾಜಕೀಯ ಪಕ್ಷವೊಂದು ತನ್ನ ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಳ್ಳುವುದು ಸರಿಯೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಕೂಡ ನವ ಭಾರತದ ‘ದೇಶಭಕ್ತ’ರ ದೃಷ್ಟಿಯಲ್ಲಿ ದೇಶದ್ರೋಹವೇ ಹೌದು.

Oct 31, 2016

ಲೋಕಸಭೆ ಮತ್ತು ವಿದಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ - ಸಾಧಕ ಬಾಧಕಗಳು: ಒಂದು ವಿಶ್ಲೇಷಣೆ.

ಕು.ಸ.ಮಧುಸೂದನ್ ರಂಗೇನಹಳ್ಳಿ
ಲೋಕಸಭೆ ಮತ್ತು ದೇಶದ ಎಲ್ಲಾ ರಾಜ್ಯಗಳ ವಿದಾನಸಭೆಗಳಿಗೆ ಏಕಕಾಲದಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸುವುದು ಸೂಕ್ತವೆಂಬ ಶಿಫಾರಸ್ಸನ್ನು ಕೇಂದ್ರ ಚುನಾವಣಾ ಆಯೋಗವು ಕಾನೂನು ಸಚಿವಾಲಯಕ್ಕೆ ನೀಡುವುದರ ಮೂಲಕ ಈ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆಗೆ, ಮತ್ತೊಂದಿಷ್ಟು ವಿವಾದಗಳಿಗೆ ನಾಂದಿ ಹಾಡಿದೆ. ಈ ಹಿಂದೆ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಸಹ ಇಂತಹದೊಂದು ಅನಿಸಿಕೆಯನ್ನು ಸಾರ್ವಜನಿಕವಾಗಿಯೇ ಹೇಳಿದ್ದರು. ಆದರೆ ಅದರ ಹಿಂದೆ ಇರಬಹುದಾದ ರಾಜಕೀಯ ಕಾರಣಗಳನ್ನು ಮನಗಂಡವರ್ಯಾರೂ ಅದರ ಬಗ್ಗೆ ಅಷ್ಟೊಂದು ಗಂಬೀರವಾಗೇನು ಚರ್ಚೆ ಮಾಡಲು ಹೋಗಲಿಲ್ಲ. ಆದರೆ ಇದೀಗ ಚುನಾವಣಾ ಆಯೋಗವೇ ಇಂತಹದೊಂದು ವಿಷಯವನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸುತ್ತ, ಕಾನೂನು ಇಲಾಖೆಗೆ ಈ ಬಗ್ಗೆ ತನ್ನ ಒಪ್ಪಿಗೆಯನ್ನು ಸೂಚಿಸಿರುವುದರಿಂದ ಏಕಕಾಲದ ಚುನಾವಣೆಯ ವಿಷಯವನ್ನು ಚರ್ಚಿಸಲೇ ಬೇಕಾದ ಅನಿವಾರ್ಯತೆ ಬಂದೊದಗಿದೆ. ಆದರೆ ಇದಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸರ್ವಾನುಮತದ ಒಪ್ಪಿಗೆಯೂ ಬೇಕೆಂಬ ಮಾತನ್ನೂ ಆಯೋಗವು ಒತ್ತಿ ಹೇಳಿದೆ.

Oct 28, 2016

ಮೇಕಿಂಗ್ ಹಿಸ್ಟರಿ: ನಗರದ ರೈತಾಪಿ ಬಂಡಾಯ ಭಾಗ 2

Saketh rajan
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಇ. ಮೊದಲ ಅಲೆ: ಕೂಟವೆಂಬ ಸಾಮೂಹಿಕ ಎಚ್ಚರಿಕೆ 
ಹೋರಾಟವು ಮೂರು ಅಲೆಗಳಾಗಿ ನಡೆಯಿತು. ಮೊದಲನೆಯದು ಸಾಮೂಹಿಕ ಚಳುವಳಿ; ಎರಡನೆಯದು ಸಾಮೂಹಿಕ ಕಾರ್ಯ, ಮತ್ತು; ಮೂರನೆಯದರಲ್ಲಿ ಸಶಸ್ತ್ರ ಹೋರಾಟ ಪ್ರಮುಖವಾಗಿತ್ತು. 

ಸಾಮೂಹಿಕ ಚಳುವಳಿ ಮತ್ತು ಹೋರಾಟಗಳು 1830ರ ಮೊದಲ ಭಾಗದಲ್ಲೇ ಪ್ರಾರಂಭವಾಯಿತು ಮತ್ತು ಹಲವಾರು ರೂಪಗಳನ್ನು ಪಡೆಯಿತು. ಇವೆಲ್ಲವುಗಳಲ್ಲಿ ಪ್ರಮುಖವಾಗಿದ್ದದ್ದು ಕೂಟ ಅಥವಾ ಸರಳವಾಗಿ ಹೇಳಬೇಕೆಂದರೆ ಜೊತೆ ಸೇರುವಿಕೆ. ಕೂಟದಲ್ಲಿ ಜೊತೆಯಾದ ಕಾರಣದಿಂದ ಸಾಮೂಹಿಕ ಎಚ್ಚರ ಹೊತ್ತಿಕೊಂಡಿತು, ಇದು ಜನಸಮೂಹವನ್ನು ಸಂಘಟತಿರಾಗಿಸುವುದಕ್ಕಿದ್ದ ವಿಶಾಲ ವೇದಿಕೆ. ನಗರದ ಕ್ರಾಂತಿಯ ಸಮಯದಲ್ಲಿ ಕೂಟವು ಸ್ವಾಭಾವಿಕವಾಗಿ ರೂಪುಗೊಂಡಿತು ಎಂದು ತೋರುತ್ತದೆಯಾದರೂ, ಶ್ಯಾಮ ಭಟ್ಟರು ಕರಾವಳಿಯಲ್ಲಿ ನಡೆಸಿರುವ ಅಧ್ಯಯನವು ಕೂಟ ರಚನೆಯು ಕರ್ನಾಟಕದಲ್ಲಿ ಪುರಾತನವಾಗಿದ್ದ ಒಂದು ಪದ್ಧತಿ ಮತ್ತು ಸಾಮಾನ್ಯ ವಿಚಾರವೆಂದು ತಿಳಿದುಬರುತ್ತದೆ. ಹೋರಾಟಗಳು ಸ್ವಾಭಾವಿಕವಾಗಿದ್ದಿರಬಹುದು, ಕೂಟಗಳ ರಚನೆ ತುಂಬ ಅಭಿವೃದ್ಧಿಗೊಂಡ ಪದ್ಧತಿಯಾಗಿತ್ತು. ಇದೇನನ್ನು ತೋರಿಸುತ್ತದೆಯೆಂದರೆ, ರೈತಾಪಿ ವರ್ಗವು ತನ್ನ ವರ್ಗ ಹೋರಾಟದ ದೀರ್ಘೇತಿಹಾಸದಲ್ಲಿ ಮತ್ತು ಬಂಡಾಯಗಳಲ್ಲಿ, ಊಳಿಗಮಾನ್ಯತೆ ವಿರೋಧಿ ಹೋರಾಟದ ಇತಿಹಾಸದ ಭಾಗವಾಗಿ, ಅಳವಡಿಸಿಕೊಂಡಿದ್ದ ಚಳುವಳಿಯ ರೂಪಗಳು ಈ ಹೊಸ ಕಾಲಘಟ್ಟದಲ್ಲೂ ಮುಂದುವರೆಯಿತು ಮತ್ತು ಅದೇ ಸಮಯದಲ್ಲಿ ವಸಾಹತುಶಾಹಿಯನ್ನು ಪ್ರಶ್ನಿಸಲಾರಂಭಿಸಿತು. 

Oct 26, 2016

ಇಂಡಿಯಾದ ಪ್ರಜಾಪ್ರಭುತ್ವದ ಎರಡು ಮುಖ್ಯ ಸಮಸ್ಯೆಗಳು: ಜಾಗತೀಕರಣ ಮತ್ತು ಭಯೋತ್ಪಾದಕತೆ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ 
ಇಂಡಿಯಾದ ಪ್ರಜಾಪ್ರಭುತ್ವಕ್ಕೀಗ ಸರಿ ಸುಮಾರು ಅರವತ್ತೇಳರ ಹರಯ! ಎರಡನೆಯ ಮಹಾಯುದ್ದ ಮುಗಿದ ಕೆಲವೇ ವರ್ಷಗಳಲ್ಲಿ ನಾವು ಪಡೆದ ಸ್ವಾತಂತ್ರ ಇಂಡಿಯಾದ ಜನರಿಗೆ ಪ್ರಜಾಪ್ರಭುತ್ವದಲ್ಲಿ ಬಾಗವಹಿಸುವ ಸೌಭಾಗ್ಯವನ್ನು ಕಲ್ಪಿಸಿದ್ದು ಅಂದಿನ ರಾಷ್ಟ್ರ ನಾಯಕರುಗಳ ಹಿರಿಮೆಯೆಂದೇ ಹೇಳಬೇಕು. ಯಾಕೆಂದರೆ ಅದಾಗ ತಾನೇ ವಿಶ್ವದ ಪಾಲಿಗೆ ಸಿಂಹಸ್ವಪ್ನರಾಗಿ, ಸರ್ವಾಧಿಕಾರಿಗಳಾಗಿದ್ದ ಜರ್ಮನಿಯ ಅಡಾಲ್ಫ್ ಹಿಟ್ಲರ ಮತ್ತುಇಟಲಿಯ ಮುಸಲೋನಿಯವರ ಅಂತ್ಯವಾಗಿದ್ದರೂ ಅವರು ಬಿತ್ತಿಹೋಗಿದ್ದ ರಾಷ್ಟ್ರೀಯವಾದಗಳಾಗಲಿ, ಜನಾಂಗೀಯ ಶ್ರೇಷ್ಠತೆಯ ವ್ಯಸನಗಳಾಗಲಿ ಜನತೆಯ ಮನಸ್ಸಿಂದ ಪೂರ್ಣವಾಗಿ ಮರೆಯಾಗಿರಲಿಲ್ಲ. ಇದರ ಜೊತೆಗೆ ಅಂದಿನ ವಿಶ್ವದ ಪ್ರಬಲ ಶಕ್ತಿಶಾಲಿ ರಾಷ್ಟ್ರವಾಗಿದ್ದ ಸೋವಿಯತ್ ಯೂನಿಯನ್ ಕಮ್ಯುನಿಸ್ಟ್ ಆಡಳಿತಕ್ಕೆ ಒಳಪಟ್ಟಿದ್ದು, ಪ್ರಪಂಚದ ಇತರೇ ರಾಷ್ಟ್ರಗಳಲ್ಲಿಯೂ ಕಮ್ಯುನಿಸ್ಟ್ ಸರಕಾರಗಳನ್ನು ಸ್ಥಾಪಿಸುವ ಪ್ರಯತ್ನದಲ್ಲಿತ್ತು. ಇಂಡಿಯಾದ ಆಚೆಗೆ ಇಂತಹ ಫ್ಯಾಸಿಸ್ಟ್ ಸಿದ್ದಾಂತಗಳು, ಕಮ್ಯುನಿಸ್ಟ್ ಸಿದ್ದಾಂತಗಳು ಪ್ರಬಲವಾಗಿದ್ದ ಕಾಲದಲ್ಲಿ ಇಂಡಿಯಾದಂತಹ ಬಹುಮುಖ ಸಂಸ್ಕೃತಿಯ ರಾಷ್ಟ್ರವೊಂದು ಇವ್ಯಾವುದರ ಪ್ರಬಾವಕ್ಕೂ ಒಳಗಾಗದೆ ತನ್ನನ್ನು ಆಳುತ್ತಿದ್ದ ವಸಾಹತುಶಾಹಿ ರಾಷ್ಟ್ರವಾದ ಇಂಗ್ಲೇಂಡಿನ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪ್ಪಿಕೊಂಡಿದ್ದು ವಿಶೇಷವೇ ಸರಿ. ಈ ವಿಷಯದಲ್ಲಿ ನಾವು ಒಂದು ಹಂತದವರೆಗೂ ಅದೃಷ್ಠಶಾಲಿಗಳೇ ಸರಿ. ಅಕಸ್ಮಾತ್ ಅಂದು ಈ ಪ್ರಜಾಪ್ರಭುತ್ವ ಶೈಲಿಯನ್ನು ಒಪ್ಪಿಕೊಳ್ಳದೇ ಹೋಗಿದ್ದಲ್ಲಿ ಇವತ್ತು ಇಂಡಿಯಾ ದೇಶ ಒಂದು ಸಮಗ್ರ,ಸಾರ್ವಭೌಮ ರಾಷ್ಟ್ರವಾಗಿ ಬದುಕುಳಿಯಲು ಸಾದ್ಯವಿರಲಿಲ್ಲ.

Oct 25, 2016

ಬಲಾಢ್ಯ ರಾಜಕೀಯ ಶಕ್ತಿಯಾಗಬೇಕಿರುವ ಕನ್ನಡಬಾಷಿಕ ಸಮುದಾಯ ಮತ್ತು ಕನ್ನಡ ಚಳುವಳಿ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ನಿಜವಾದ ಅರ್ಥದಲ್ಲಿ ಇವತ್ತು ಕನ್ನಡ ಚಳುವಳಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಂತೆ ಕಾಣುತ್ತಿವೆ. ಇಂತಹ ಚಳುವಳಿಗಳ ಆತ್ಮವಾಗಿರಬೇಕಾಗಿದ್ದ ಅಕ್ಷರಸ್ಥ ಮದ್ಯಮವರ್ಗ ಸ್ವತ: ಜಡಗೊಂಡಿರುವ ಈ ಸನ್ನಿವೇಶದಲ್ಲಿ ನಮ್ಮ ಕನ್ನಡ ಚಳುವಳಿ ಸಹ ನಿಸ್ತೇಜಗೊಂಡಂತೆ ನಮಗೆ ಬಾಸವಾಗುತ್ತಿದ್ದರೆ ಅಚ್ಚರಿಯೇನಲ್ಲ. ಇಂತಹ ನಿರಾಶಾದಾಯಕ ಸನ್ನಿವೇಶದಲ್ಲಿಯೂ ಕನ್ನಡ ಚಳುವಳಿಯ ಕುರಿತು ಒಂದಿಷ್ಟು ಆಶಾಬಾವನೆ ಒಡಮೂಡಿದ್ದು ಇತ್ತೀಚೆಗೆ ನಡೆದ ಕಳಸಾಬಂಡೂರಿ ಮತ್ತು ಕಾವೇರಿ ನದಿ ನೀರಿನ ಹಂಚಿಕೆಯ ವಿವಾದಗಳ ಬಗ್ಗೆ ನಡೆದ ಹೋರಾಟದ ಕ್ಷಣದಲ್ಲಿ ಮಾತ್ರ.

Oct 24, 2016

ರಾಮಾ ರಾಮಾ ರೇ: ಹುಟ್ಟು ಸಾವಿನ ನಡುವಿನ ಬದುಕಿನ ಪಯಣ.

ಡಾ. ಅಶೋಕ್. ಕೆ. ಆರ್.
ಸಂಪಿಗೆಯಂಥ ಸಂಪಿಗೆ ಥೀಯೇಟರ್ರಿನ ಬಾಲ್ಕಾನಿ ಹೆಚ್ಚು ಕಡಿಮೆ ಪೂರ್ತಿ ತುಂಬಿಹೋಗಿತ್ತು. ಈ ರೀತಿ ತುಂಬಿ ಹೋಗಿದ್ದಕ್ಕೆ ಕಾರಣ ಸಾಮಾಜಿಕ ಜಾಲತಾಣಗಳು ಎಂದರದು ಉತ್ಪ್ರೇಕ್ಷೆಯಲ್ಲ. ಪ್ರಚಾರವಿರಲಿ, ಶುಕ್ರವಾರದ ಪತ್ರಿಕೆಗಳಲ್ಲಿ ಜಾಹೀರಾತನ್ನೂ ನೀಡದ ರಾಮಾ ರಾಮಾ ರೇ ಚಿತ್ರ ಸಾಮಾಜಿಕ ಜಾಲತಾಣಗಳಿಲ್ಲದ ಸಮಯದಲ್ಲಿ ಬಿಡುಗಡೆಗೊಂಡಿದ್ದರೆ ಒಂದೇ ದಿನಕ್ಕೆ ಚಿತ್ರಮಂದಿರಗಳಿಂದ ಮರೆಯಾಗಿಬಿಡುತ್ತಿತ್ತು. ಸಾಮಾಜಿಕ ಜಾಲತಾಣಗಳು ಜನರನ್ನೇನೋ ಚಿತ್ರಮಂದಿರಕ್ಕೆ ಸೆಳೆದು ತಂದಿದೆ, ಅವರಿಗೆ ತಲುಪಿದೆಯಾ? ಹೇಳುವುದು ಕಷ್ಟ. ಇಂಟರ್ವೆಲ್ಲಿನಲ್ಲಿ ‘ಯಾವ್ದಾರಾ ನಾರ್ಮಲ್ ಪಿಚ್ಚರ್ರಿಗೆ ಕರ್ಕೊಂಡ್ ಹೋಗು ಅಂದ್ರೆ ಇದ್ಯಾವ ಫಿಲಮ್ಮಿಗೆ ಕರ್ಕಂಡ್ ಬಂದಪ್ಪ’ ‘ಮನೇಲಿ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಬರ್ತಿತ್ತು. ಅಲ್ಲೇ ಇದ್ದಿದ್ರೆ ಆಗಿರಾದು’ ಅನ್ನೋ ಮಾತುಗಳು ಕೇಳಿಬಂದರೆ ಚಿತ್ರ ಮುಗಿದ ನಂತರ ‘ಫಸ್ಟ್ ಆಫ್ ಸ್ವಲ್ಪ ಬೋರು ಸೆಕೆಂಡ್ ಆಫ್ ಅದ್ಭುತ’ ಅನ್ನುವಂತಹ ಮಾತುಗಳು! ಇಪ್ಪತ್ತೆಂಟಕ್ಕೆ ಇರೋ ಬರೋ ಥಿಯೇಟರುಗಳಿಗೆಲ್ಲ ‘ಮುಕುಂದ ಮುರಾರಿ’ ‘ಸಂತು’ ಚಿತ್ರಗಳು ಬರುತ್ತಿವೆ. ಆ ಚಿತ್ರಗಳಬ್ಬರವನ್ನೆದುರಿಸಿ ರಾಮಾ ರಾಮಾ ರೇ ನಿಲ್ಲಬಲ್ಲದಾ? ಕಷ್ಟವಿದೆ. ಕಾದು ನೋಡುವ!

Oct 22, 2016

ಚುನಾವಣೆಗಳು ಹತ್ತಿರವಾದಂತೆ ಬಣ್ಣ ಬದಲಾಯಿಸುತ್ತಿರುವ ರಾಜಕೀಯ ಪಕ್ಷಗಳು.

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ರಾಜಕೀಯ ಪಕ್ಷಗಳ ಮತ್ತು ರಾಜಕಾರಣಿಗಳ ನಿಜ ಬಣ್ಣ ಬಯಲಾಗುವುದು ಚುನಾವಣೆಗಳು ಹತ್ತಿರ ಬಂದಾಗಲೇ ಎಂಬ ಮಾತನ್ನು ಉತ್ತರಪ್ರದೇಶದ ಬರಲಿರುವ ರಾಜ್ಯವಿದಾನಸಭಾ ಚುನಾವಣೆಗಳು ಸಾಭೀತು ಪಡಿಸುತ್ತಿವೆ.ಈ ವರ್ಷದ ಆರಂಭದಿಂದಲೇ ಶುರುವಾದ ಚುನಾವಣಾ ತಯಾರಿಗಳು ಅಲ್ಲಿನ ನಾಲ್ಕೂ ಪ್ರಮುಖ ಪಕ್ಷಗಳ ಮುಖವಾಡಗಳನ್ನು ಕಳಚಿಹಾಕುತ್ತಿವೆ. 

ಪ್ರಾರಂಭವಾಗಿರುವ ಪಕ್ಷಾಂತರ ಪರ್ವ:

ಪ್ರತಿ ಚುನಾವಣೆಗೂ ಮೊದಲು ಮುಂದೆ ಅಧಿಕಾರಕ್ಕೆ ಬರುವ ಹೆಚ್ಚು ಸಾದ್ಯತೆಯನ್ನುಳ್ಳ ಪಕ್ಷವೊಂದಕ್ಕೆ ಇತರೇ ಪಕ್ಷಗಳ ನಾಯಕರುಗಳು ಪಕ್ಷಾಂತರ ಮಾಡುವುದು ಇಂಡಿಯಾದ ಪ್ರಜಾಸತ್ತೆಯಲ್ಲಿ ಮಾಮೂಲಿಯಾಗಿ ಹೋಗಿದೆ. ಇದಕ್ಕೆ ಉತ್ತರಪ್ರದೇಶವೇನೂ ಹೊರತಲ್ಲ. ಬಹುಜನಪಕ್ಷದ ಹಿಂದುಳಿದವರ್ಗಗಳ ಪ್ರಮುಖನಾಯಕ ಶ್ರೀಸ್ವಾಮಿಪ್ರಸಾದ್ ಮೌರ್ಯರವರಿಂದ ಶುರುವಾದ ಪಕ್ಷಾಂತರ ಪರ್ವ ಮುಂದುವರೆದಿದೆ. ಬಹುಜನಪಕ್ಷದ ನಾಯಕಿ ಮಾಯಾವತಿಯವರು ವಿದಾನಸಭಾ ಟಿಕೆಟ್ ಮಾರಿಕೊಳ್ಳುತ್ತಿದ್ದಾರೆಂದು ಆರೋಪಿಸಿ ಪಕ್ಷ ತೊರೆದ ಮೌರ್ಯ ಬಾಜಪವನ್ನು ಸೇರುವುದರೊಂದಿಗೆ ಇದುವರೆಗಿನ ತಮ್ಮ ಜಾತ್ಯಾತೀತ ರಾಜಕಾರಣದ ಸಿದ್ದಾಂತಗಳೆಲ್ಲ ಪೊಳ್ಳು ಎಂದು ತೋರಿಸಿಕೊಟ್ಟರು. ಅವರೊಂದಿಗೆ ಬಹುಜನ ಪಕ್ಷದಿಂದ ಉಚ್ಚಾಟನೆಗೊಂಡ ಮತ್ತು ಪಕ್ಷ ತ್ಯಜಿಸಿದ ಸುಮಾರು ಹತ್ತು ಜನ ಹಾಲಿ ಶಾಸಕರುಗಳು ಸಹ ಬಾಜಪವನ್ನು ಸೇರುವುದರೊಂದಿಗೆ ತಮ್ಮ ಅಧಿಕಾರ ಲಾಲಸೆಯನ್ನು ಬಹಿರಂಗಗೊಳಿಸಿದರು. ರಾಜ್ಯಸಭಾ ಸದಸ್ಯರೂ, ಇನ್ನೊಬ್ಬ ಮುಖ್ಯ ದಲಿತ ನಾಯಕರೂ ಆದ ಶ್ರೀ ಜುಗಲ್ ಕಿಶೋರ್ ಸಹ ಬಾಜಪಕ್ಕೆ ಪಕ್ಷಾಂತರ ಮಾಡಿದರು. ಮಾಯಾವತಿಯವರ ಬಹುಜನ ಪಕ್ಷವನ್ನು ಮುಗಿಸುವುದೇ ತಮ್ಮ ಮುಖ್ಯ ಧ್ಯೇಯವೆಂದು ಘೋಷಿಸಿರುವ ಮೌರ್ಯರವರು ಬಹುಜನ ಪಕ್ಷದಲ್ಲಿ ತಮಗಿದ್ದ ಸಂಪರ್ಕಗಳನ್ನು ಬಳಸಿ ಇನ್ನಷ್ಟು ಪ್ರಮುಖ ನಾಯಕರುಗಳನ್ನು ಬಾಜಪಕ್ಕೆ ಸೆಳೆಯುವ ಪ್ರಯತ್ನ ಮುಂದುವರೆಸಿದ್ದಾರೆ. ಇಷ್ಟು ವರ್ಷಗಳ ಕಾಲ ಪಕ್ಷಾಂತರಗಳನ್ನು ಪ್ರೋತ್ಸಾಹಿಸುವ ವರ್ತನೆಯನ್ನು ಖಂಡಿಸುತ್ತಿದ್ದ ಬಾಜಪ ಇದೀಗ ಸ್ವತ: ಅಂತಹ ಪಕ್ಷಾಂತರಗಳನ್ನು ಕಾರ್ಯಗತಗೊಳಿಸುತ್ತ ತಮ್ಮ ಪಕ್ಷವನ್ನು ಬಲಪಡಿಸುವ ಕೈಂಕರ್ಯದಲ್ಲಿ ತೊಡಗಿದೆ. ತನ್ನ ಸಂಘಪರಿವಾರದ ಮೂಲ ಸಿದ್ದಾಂತಗಳನ್ನು ಒಪ್ಪಿಕೊಳ್ಳುವವರಿಗೆ ಮಾತ್ರ ತನ್ನ ಪಕ್ಷದಲ್ಲಿ ಸ್ಥಾನವೆಂದು ಬೊಬ್ಬೆ ಹೊಡೆಯುತ್ತಿದ್ದ ಬಾಜಪ ಇದೀಗ ತನ್ನೆಲ್ಲ ತಾತ್ವಿಕತೆಯನ್ನು ತೊರೆದು ಅಧಿಕಾರ ಹಿಡಿಯುವ ಏಕೈಕ ಗುರಿಯಿಂದ ಅನ್ಯಪಕ್ಷಗಳ ನಾಯಕರುಗಳನ್ನು ತನ್ನತ್ತ ಸೆಳೆಯಲು ವಾಮಮಾರ್ಗವನ್ನು ಹಿಡಿದಿದೆ. ಹೀಗೆ ಪಕ್ಷಾಂತರಗೊಂಡ ನಾಯಕರುಗಳಿಗೆ ಮುಂದಿನ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಟಿಕೇಟು ನೀಡುವ ಮತ್ತು ಸಚಿವ ಸ್ಥಾನ ನೀಡುವ ವಾಗ್ದಾನಗಳನ್ನು ಮಾಡಿರುವುದರಿಂದ ಪಕ್ಷದೊಳಗೆ ಉಂಟಾಗಬಹುದಾದ ಆಂತರಿಕ ಗೊಂದಲಗಳು ಬಾಜಪದ ಮಟ್ಟಿಗೆ ಯಾವ ಪರಿಣಾಮವನ್ನು ಉಂಟು ಮಾಡಬಲ್ಲವೆಂಬುದನ್ನು ಕಾದು ನೋಡಬೇಕಿದೆ. ಇದೊಂದು ಕಡೆಯಾದರೆ ತನ್ನ ಕೌಟುಂಬಿಕ ಒಳಜಗಳಗಳಿಂದ ತತ್ತರಿಸಿರುವ ಸಮಾಜವಾದಿ ಪಕ್ಷವನ್ನು ತೊರೆಯಲು ಸಿದ್ದವಿರುವ ಹಲವಾರು ನಾಯಕರುಗಳನ್ನು ತಮ್ಮತ್ತ ಸೆಳೆಯಲು ಬಾಜಪದ ಜೊತೆಗೆ ಕಾಂಗ್ರೆಸ್ ಕೂಡ ತಮ್ಮ ಪಕ್ಷದ ಕಛೇರಿಯ ಬಾಗಿಲನ್ನು ತೆರೆದು ಕೂತಿದೆ. 

ಅಯೋದ್ಯೆಯ ವಿಷಯದಲ್ಲಿ ಬದಲಾದ ಸಮಾಜವಾದಿ ಪಕ್ಷದ ನಿಲುವು:

ಮುಂದಿನ ಚುನಾವಣೆಯಲ್ಲಿ ಬಾಜಪದ ಹಿಂದುತ್ವವಾದಿ ನಿಲುವಿಗೆ ಪ್ರತಿತಂತ್ರ ಹೆಣೆಯುವ ಭರದಲ್ಲಿ ಸಮಾಜವಾದಿ ಪಕ್ಷ ರಾಮಜನ್ಮಭೂಮಿ ವಿವಾದವನ್ನು ಬೇರೊಂದು ರೀತಿಯಲ್ಲಿ ಜೀವಂತವಾಗಿರಿಸಿ ಹಿಂದೂಮತಗಳನ್ನು ಸೆಳೆಯುವ ತಂತ್ರಗಾರಿಕೆಯನ್ನು ಹೂಡುತ್ತಿದೆ. ಕಳೆದ ಐದು ವರ್ಷಗಳ ತನ್ನ ಆಳ್ವಿಕೆಯಿಂದ ಬೇಸರಗೊಂಡಿರುವ ಮುಸ್ಲಿಮರು ಈ ಬಾರಿ ಸರಾಸಗಟಾಗಿ ತನಗೆ ಮತ ನೀಡಲಾರರೆಂಬುದನ್ನು ಅರ್ಥಮಾಡಿಕೊಂಡಿರುವ ಸಮಾಜವಾದಿ ಪಕ್ಷ ಆ ಕೊರತೆಯನ್ನು ನೀಗಿಸಿಕೊಳ್ಳಲು ಇದೀಗ ಅಯೋದ್ಯೆಯನ್ನು ಚುನಾವಣಾ ವಿಷಯವನ್ನಾಗಿಸುವ ಪ್ರಯತ್ನದಲ್ಲಿದೆ. ಇದಕ್ಕಾಗಿ ಅದು ಅಯೋದ್ಯೆಯಲ್ಲಿ ರಾಮಲೀಲಾ ಥೀಮ್ ಪಾರ್ಕೊಂದನ್ನು ಸ್ಥಾಪಿಸಲು ಸಂಪುಟದಲ್ಲಿ ನಿರ್ಣಯ ಅಂಗೀಕರಿಸಿದೆ. ಇಷ್ಟಲ್ಲದೆ ಅಲ್ಲಿ ಅರ್ದ ವರ್ತುಲಾಕಾರದ ಥಿಯೇಟರ್ ಒಂದನ್ನು ಸಹ ಸ್ಥಾಪಿಸುವ ನಿರ್ದಾರವನ್ನು ಪ್ರಕಟಿಸಿದೆ. ರಾಮಮಂದಿರವನ್ನು ಕೇಂದ್ರವಾಗಿಟ್ಟುಕೊಂಡು ಅಯೋದ್ಯೆಯನ್ನು ವಿಶ್ವದ ಪ್ರಮುಖ ಪ್ರವಾಸಿ ತಾಣವನ್ನಾಗಿಸಲು ಸಹ ಅದು ಯೋಜನೆಯನ್ನು ರೂಪಿಸಿದೆ. ಸಮಾಜವಾದಿ ಪಕ್ಷದ ಮೂಲಗಳೇ ಹೇಳುವಂತೆ ಇದು ಆಯೋದ್ಯೆಯ ವಿಚಾರವನ್ನು ತನ್ನ ಚುನಾವಣಾ ವಿಷಯವನ್ನಾಗಿ ಮಾಡಿಕೊಳ್ಳುವ ಬಾಜಪದ ತಂತ್ರಕ್ಕೆ ಪ್ರತಿತಂತ್ರವಾಗಿದ್ದು, ತಾನು ಅಲ್ಪಸಂಖ್ಯಾತರನ್ನು ಓಲೈಸುತ್ತಿಲ್ಲವೆಂದು ಬಹುಸಂಖ್ಯಾತ ಹಿಂದೂಗಳಿಗೆ ಮನವರಿಕೆ ಮಾಡಿ ಕೊಡುವ ಚಾಣಾಕ್ಷ್ಯ ನಡೆಯ ಒಂದು ಭಾಗವೆಂದೇ ಹೇಳಲಾಗುತ್ತಿದೆ. ಇದುವರೆಗೂ ಅಯೋದ್ಯೆಯ ವಿಚಾರದಲ್ಲಿ ಅಲ್ಪಸಂಖ್ಯಾತರ ಪರ ನಿಂತು ಬಾಜಪವನ್ನು ಕೋಮುವಾದಿ ರಾಜಕೀಯ ಪಕ್ಷವೆಂದು ಆರೋಪಿಸುತ್ತಿದ್ದ ಸಮಾಜವಾದಿ ಪಕ್ಷ ಇದೀಗ ತನ್ನ ನಿಲುವಿನಲ್ಲಿ 360 ಡಿಗ್ರಿಯ ಬದಲಾವಣೆಯನ್ನು ತಂದು ಕೊಂಡಿದೆ.

ರಕ್ಷಣೆಯ ವಿಚಾರದಲ್ಲೂ ರಾಜಕೀಯ:

ಇತ್ತೀಚೆಗೆ ಗಡಿಯಾಚೆ ನಮ್ಮ ಸೈನ್ಯ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಅನ್ನು ಪಕ್ಷದ ಯಾರೂ ಬಹಿರಂಗವಾಗಿ ಸಾಧನೆಯೆಂಬಂತೆ ಹೇಳಿಕೊಳ್ಳಬಾರದೆಂಬ ಪ್ರದಾನಿಗಳ ಹೇಳಿಕೆಯ ಹಿಂದೆಯೇ ಹಣಕಾಸು ಸಚಿವರಾದ ಶ್ರೀ ಅರುಣ್ ಜೈಟ್ಲಿಯವರ ನಿವಾಸದಲ್ಲಿ ನಡೆದ ಬಾಜಪದ ಸಭೆಯಲ್ಲಿ ಮುಂದಿನ ಚುನಾವಣೆಗಳಲ್ಲಿ ಈ ಸರ್ಜಿಕಲ್ ಸ್ಟ್ರೈಕನ್ನು ಕಾನೂನಿನ ಚೌಕಟ್ಟಿನಲ್ಲಿ ಹೇಗೆ ಬಳಸಬಹುದೆಂಬ ಬಗ್ಗೆ ವಿಸ್ತೃತ ಚರ್ಚೆಯೊಂದು ನಡೆದಿದೆ. ಚುನಾವಣೆಯ ಸಾರ್ವಜನಿಕ ಸಭೆಗಳಲ್ಲಿ ಈ ವಿಷಯವನ್ನು ಬಳಸಿದರೆ ವಿರೋಧಪಕ್ಷಗಳು ಕಾನೂನಿನ ನೆರವಿನಿಂದ ಬಾಜಪವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾದ್ಯತೆಯಿದ್ದು ಇದರ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದುವರೆಯಲು ಆ ಸಭೆಯಲ್ಲಿ ನಿರ್ದರಿಸಲಾಗಿದೆ.

ಇಷ್ಟಲ್ಲದೆ ಅಹಮದಾಬಾದಿನಲ್ಲಿ ರಕ್ಷಣಾ ಸಚಿವರಾದ ಶ್ರೀಪರಿಕ್ಕರ ಮಾತಾಡುತ್ತಾ, ನಾನು ಎಂದೂ ನಿರ್ದಿಷ್ಟ ದಾಳಿಯನ್ನು ನೋಡದ ಗೋವಾದಿಂದ ಬಂದವನಾಗಿದ್ದು, ಪ್ರದಾನಿ ಮೋದಿಯವರು ಅಹಿಂಸೆಯ ಪ್ರತಿಪಾದಕರಾದ ಮಹಾತ್ಮಗಾಂದಿಯವರ ನಾಡಿನಿಂದ ಬಂದವರಾಗಿದ್ದು, ನಾವಿಬ್ಬರೂ ಸರ್ಜಿಕಲ್ ದಾಳಿಗೆ ಆದೇಶ ನೀಡುವುದರ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಭೋದನೆಯಿದ್ದು, ಅದರ ಪ್ರಭಾವವಿದೆ ಎಂದು ಹೇಳುವುದರ ಮೂಲಕ ದೇಶದ ರಕ್ಷಣಾ ವಿಷಯವನ್ನು ಸಂಘಪರಿವಾರದ ಸಿದ್ದಾಂತಗಳಿಗೆ ಥಳುಕು ಹಾಕಿದ್ದಾರೆ. ಈ ಮೂಲಕ, ದೇಶದ ಗಡಿಯನ್ನು ಬಾಜಪ ಮಾತ್ರ ರಕ್ಷಿಸಬಲ್ಲದೆಂಬ ಬಾವನೆಯನ್ನು ಬಿತ್ತುತ್ತ, ಗಡಿಯ ವಿಷಯವನ್ನೂ ಚುನಾವಣೆಯ ಬಾವನಾತ್ಮಕ ವಿಷಯವನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಚುನಾವಣೆಗು ಮುಂಚೆಯೇ ಸೋಲನ್ನೊಪ್ಪಿಕೊಂಡಂತಿರುವ ಕಾಂಗ್ರೆಸ್ ಪರೋಕ್ಷವಾಗಿ ಸರ್ಜಿಕಲ್ ದಾಳಿಯೇ ಮಿಥ್ಯವೆಂದು ಆರೋಪಿಸುತ್ತ ದೇಶದ ರಕ್ಷಣಾ ವಿಷಯದಲ್ಲಿ ರಾಜಕೀಯ ಮಾಡಲು ತನಗೂ ಬರುತ್ತದೆಯೆನ್ನುವುದನ್ನು ನಿರೂಪಿಸುವ ದಿಸೆಯಲ್ಲಿ ಕೆಲಸ ಮಾಡುತ್ತಿದೆ.

ಒಟ್ಟಿನಲ್ಲಿ ಚುನಾವಣೆಗಳು ಇರದೇ ಇದ್ದಂತಹ ಶಾಂತಿಸಮಯದಲ್ಲಿ ತತ್ವ ಸಿದ್ದಾಂತಗಳ ಬಗ್ಗೆ ಮಾತಾಡುತ್ತ, ನೀತಿ ಅನೀತಿಯ ಬಗ್ಗೆ ಬಾಷಣ ಮಾಡುವ ರಾಜಕೀಯ ಪಕ್ಷಗಳು ಚುನಾವಣೆಗಳು ಹತ್ತಿರವಾದೊಡನೆ ಎಲ್ಲವನ್ನೂ ಮರೆತು ಕೀಳುಮಟ್ಟದ ರಾಜಕಾರಣ ಮಾಡಲು ತೊಡಗುತ್ತವೆ ಎನ್ನುವುದೇ ಇಂಡಿಯಾದ ಪ್ರಜಾಪ್ರಭುತ್ವದ ದೊಡ್ಡ ದೋಷವಾಗಿದೆ. ಇದನ್ನೆಲ್ಲ ನೋಡಿದರೆ ನಮ್ಮ ಪ್ರಜಾಪ್ರಭುತ್ವ ಪೌಢಾವಸ್ಥೆಯನ್ನು ತಲುಪಿದೆಯೆಂದು ಹೇಳುವವರು ಮೂರ್ಖರಿರಬೇಕು ಅನಿಸದೇ ಇರದು.

Oct 21, 2016

ಮೇಕಿಂಗ್ ಹಿಸ್ಟರಿ: ನಗರದ ರೈತಾಪಿ ಬಂಡಾಯ ಭಾಗ1

Making history
ಸಾಕೇತ್ ರಾಜನ್ 

ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್

ಅ. ವ್ಯಾಪಕ ಬಂಡಾಯ
1830 – 33ರ ಸಮಯದಲ್ಲಿ ಕರ್ನಾಟಕದ ಹಲವು ಭಾಗಗಳಲ್ಲಿ ರೈತಾಪಿ – ಜನರ ವ್ಯಾಪಕ ಬಂಡಾಯವೆದ್ದಿತು. ಇದು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡಿದ್ದ ನಗರ ಫೌಜುದಾರಿಯಲ್ಲಿ ತೀರ್ವವಾಗಿದ್ದ ಕಾರಣದಿಂದಾಗಿ ನಗರ ರೈತಾಪಿ ಬಂಡಾಯ ಎಂದು ಖ್ಯಾತವಾಯಿತು. ಇದೇ ಸಮಯದಲ್ಲಿ ಇತರೆ ಜಿಲ್ಲೆಗಳಿಗೂ ಸಶಸ್ತ್ರ ಕ್ರಾಂತಿ ಹಬ್ಬಿತ್ತು. ಉತ್ತರ ಕನ್ನಡ, ಚಿತ್ರದುರ್ಗ, ತುಮಕೂರು, ಹಾಸನ, ಮೈಸೂರು, ಮಂಡ್ಯ ಮತ್ತು ಬೆಂಗಳೂರಿನಲ್ಲಿ ಸಶಸ್ತ್ರ ಕ್ರಾಂತಿ ನಡೆದಿತ್ತು. ಹಿಂಸಾತ್ಮಕ ರೂಪವನ್ನಿನ್ನೂ ಪಡೆಯದ ಜನ ಸಮೂಹದ ಹೋರಾಟಗಳು ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ನಡೆದಿದ್ದವು. ರಾಯಚೂರು ಮತ್ತು ಧಾರವಾಡ ಜಿಲ್ಲೆಗಳು ವಿವಿಧ ರೂಪಗಳಲ್ಲಿ ಹೋರಾಟಕ್ಕೆ ತಮ್ಮ ಬೆಂಬಲವನ್ನು ನೀಡಿದವು. ಧಾರವಾಡದ ಉತ್ತರ ಭಾಗದಲ್ಲಿ ಸಂಗೊಳ್ಳಿ ರಾಯಣ್ಣನ ನೇತೃತ್ವದಲ್ಲಿ ಬಂಡಾಯ ನಡೆದಿದ್ದರೆ, ದಕ್ಷಿಣದ ಭಾಗಗಳು ಆ ಬಂಡಾಯಕ್ಕೆ ಕೈಲಾದ ಸಹಾಯವನ್ನು ಮಾಡಿದವು. ಹಾಗಾಗಿ ನಗರದ ರೈತಾಪಿ ಬಂಡಾಯ ಬಹುಶಃ ಕರ್ನಾಟಕದಲ್ಲಷ್ಟೇ ಅಲ್ಲದೆ ಇಡೀ ಭಾರತದಲ್ಲಿ ಬ್ರಿಟೀಷ್ ವಸಾಹತುಶಾಹಿಯ ಆಳ್ವಿಕೆಯ ಮೊದಲ ದಶಕಗಳಲ್ಲಿ ನಡೆದ ವ್ಯಾಪಕ ಊಳಿಗಮಾನ್ಯ ವಿರೋಧಿ ಮತ್ತು ವಸಾಹತು ವಿರೋಧಿ ಹೋರಾಟವಾಗಿತ್ತು.

Oct 17, 2016

ಹಿಂದುತ್ವದ ಅಜೆಂಡಾದಿಂದ ಹೊರಬರಲಾಗದ ಈಶ್ವರಪ್ಪನವರ ‘ಹಿಂದ’ದ ಗೊಂದಲಗಳು

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ರಾಜಕೀಯ ನಾಯಕನೊಬ್ಬನಿಗೆ ಸ್ಪಷ್ಟವಾದ ಸಿದ್ದಾಂತವೊಂದು ಇಲ್ಲದೇ ಹೋದಾಗ ಆತನಲ್ಲಿ ಉಂಟಾಗಬಹುದಾದ ಗೊಂದಲಗಳು ಸಮಕಾಲೀನ ರಾಜಕೀಯದಲ್ಲಿ ಅಪಹಾಸ್ಯದ ಮಟ್ಟಕ್ಕಿಳಿದಿಡಬಹುದು. ಇದೀಗ ಸದ್ಯದ ಮಟ್ಟಿಗೆ ’ಹಿಂದ’ದ ನಾಯಕನೆಂದು ಸ್ವಘೋಷಿಸಿಕೊಂಡಿರುವ ಈಶ್ವರಪ್ಪನವರು ಸಹ ಇಂತಹ ನಗೆಪಾಟಲಿಗೆ ಈಡಾಗುತ್ತಿರುವುದರ ಕಾರಣ ಅವರೇ ಸೃಷ್ಠಿಸಿಕೊಂಡ ದ್ವಂದ್ವಗಳ ಪರಿಣಾಮವೇ ಆಗಿದೆ. ಕಳೆದ ವಿದಾನಸಭೆಗೆ ಮುಂಚೆ ಬಾಜಪವನ್ನು ತೊರೆದ ಮಾಜಿಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರು ತಮ್ಮದೇ ಆದ ಕೆಜೆಪಿಯನ್ನು ಕಟ್ಟಿದಾಗ ಈಶ್ವರಪ್ಪನವರೂ ಸೇರಿದಂತೆ ರಾಜ್ಯಮಟ್ಟದ ಯಾವ ನಾಯಕರೂ ಅವರನ್ನು ಹಿಂಬಾಲಿಸಲಿಲ್ಲ, ಒಬ್ಬ ಶೋಭಾ ಕರಂದ್ಲಾಜೆಯನ್ನು ಹೊರತು ಪಡಿಸಿ. ಆದರೆ ನಡೆದ ಚುನಾವಣೆಗಳಲ್ಲಿ ಕೇವಲ ಶೇಕಡಾ ಹತ್ತರಷ್ಟು ಮತಗಳನ್ನು ಪಡೆಯಲು ಯಾಶಸ್ವಿಯಾದ ಕೆಜೆಪಿ ಹೆಚ್ಚೇನನ್ನೂ ಗೆಲ್ಲಲು ಸಾದ್ಯವಾಗದೇ ಹೋದರು ಅದರ ನಾಯಕನ ಉದ್ದೇಶದಂತೆ ಬಾಜಪವನ್ನು ಸೋಲಿಸಲು ಶಕ್ತವಾಯಿತು. ನಂತರದ್ದು ಈಗ ಇತಿಹಾಸ: ಬಾಜಪದ ಅನಿವಾರ್ಯತೆ ಯಡಿಯೂರಪ್ಪನವರಿಗು, ಯಡಿಯೂರಪ್ಪನವರ ಅಗತ್ಯತೆ ಬಾಜಪಕ್ಕೂ ಅರ್ಥವಾಗಿ, ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಏಕೈಕ ಗುರಿಯಿಂದ ಯಡಿಯೂರಪ್ಪನವರನ್ನು ಬಾಜಪ ಮತ್ತೆ ತನ್ನ ತೆಕ್ಕೆಗೆ ಸೆಳೆದುಕೊಂಡಿತು. ಯಾರು ಮೊದಲು ಆಹ್ವಾನವಿತ್ತರೆಂಬುದೀಗ ಅಪ್ರಸ್ತುತ. ಒಟ್ಟಿನಲ್ಲಿ ೨೦೧೪ರ ಲೋಕಸಭಾ ಚುನಾವಣೆಯ ಹೊತ್ತಿಗೆ ಯಡಿಯೂರಪ್ಪನವರು ಬಾಜಪದಿಂದ ಸಂಸದರಾದರು. ಆದರೆ ೨೮ ಸ್ತಾನಗಳ ಪೈಕಿ ಬಾಜಪ ಗೆಲ್ಲಲು ಶಕ್ಯವಾಗಿದ್ದು ೧೭ ಸ್ಥಾನಗಳನ್ನು.

Oct 15, 2016

ನಮ್ಮ ಹಳ್ಳಿಗಳು: ಜಾತಿ ಪೋಷಣೆಯ ಮತ್ತು ಶೋಷಣೆಯ ಕೇಂದ್ರಗಳು!



ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಪೀಠಿಕೆ:

ಜಾತಿ ಎನ್ನುವುದು ಇಂಡಿಯಾದ ಮಟ್ಟಿಗೆ ಒಂದು ಕ್ರೂರ ವಾಸ್ತವ!ವೇದಕಾಲದ ವರ್ಣಾಶ್ರಮ ವ್ಯವಸ್ಥೆಯೇ ಇದರ ಮೂಲವಾಗಿದೆ. ಈ ವರ್ಣ ವ್ಯವಸ್ಥೆಯಲ್ಲಿ ನಾಲ್ಕು ವರ್ಣಗಳನ್ನು. ಬ್ರಾಹ್ಮಣ, ಕ್ಷತ್ರಿಯ,ವೈಶ್ಯ ಮತ್ತು ಶೂದ್ರ ಎಂದು ಗುರುತಿಸಲಾಗಿದೆ. ಹೀಗೆ ಅನಾದಿಕಾಲದಿಂದಲೂ ಭಾರತೀಯ ಸಮಾಜವನ್ನು ವರ್ಣಗಳ ಹೆಸರಲ್ಲಿ ಒಡೆದ ಮಹನೀಯರುಗಳಿಗೆ ಐದನೆಯದಾದ ದಲಿತ ಎನ್ನುವ ಸಮುದಾಯ ಸಹ ಮನುಷ್ಯರನ್ನೊಳಗೊಂಡಿದೆ ಎಂದು ಅನಿಸದೇ ಹೋದದ್ದೇ ಈ ನೆಲದ ದುರಂತ.

ಇಲ್ಲಿ ಜಾತಿಯೆನ್ನುವುದು ವ್ಯಕ್ತಿಯ ಹುಟ್ಟಿನ ಮೂಲವನ್ನು, ಅವನ ಕುಲಕಸುಬನ್ನೂ ಅವಲಂಬಿಸಿ ಗುರುತಿಸಲಾಗುತ್ತಿದೆ. ಇವತ್ತಿಗೂ ಇಂಡಿಯಾದ ಹಳ್ಳಿಗಳಲ್ಲಿ ಜಾತಿಯೆನ್ನುವುದು ಪ್ರತಿ ವ್ಯಕ್ತಿಯ ಬದುಕಲ್ಲಿಯೂ ಮಹತ್ತರ ಪಾತ್ರ ವಹಿಸುತ್ತಿದೆ. ಅಷ್ಟಲ್ಲದೆ ವ್ಯಕ್ತಿಯೊಬ್ಬನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಾನಮಾನಗಳನ್ನು ಸಹ ಜಾತಿಯ ಆಧಾರದಿಂದಲೇ ಅಳೆಯಲಾಗುತ್ತಿದೆ. ಯಾಕೆಂದರೆ ಒಂದು ಹಳ್ಳಿಯ ಮಟ್ಟಿಗೆ ವ್ಯಕ್ತಿಯೊಬ್ಬನ ಜಾತಿಯೇ ಅವನ ಕಸುಬನ್ನು, ಅವನು ಬದುಕುವ ಬಗೆಯನ್ನು ನಿರ್ದರಿಸುವ ಮಾನದಂಡವಾಗಿ ಪರಿವರ್ತನೆಯಾಗಿದೆ. ಹೀಗಾಗಿ 21ನೇ ಶತಮಾನದ ಆಧುನಿಕ ದಿನಮಾನದಲ್ಲಿಯೂ ನಮ್ಮ ಹಳ್ಳಿಗಳು ಜಾತಿ ವ್ಯವಸ್ಥೆಯನ್ನು ಪೋಷಿಸುವ ಮತ್ತು ಜಾತಿಯ ಆಧಾರದ ಮೇಲೆ ಜನಸಮುದಾಯವನ್ನು ಶೋಷಿಸುವ ಕೇಂದ್ರಗಳಾಗಿಯೇ ಉಳಿದಿದೆ.

ವ್ಯಕ್ತಿಗತ ಪ್ರತಿಷ್ಠೆ ಮತ್ತು ವಂಶಪಾರಂಪರ್ಯ ರಾಜಕಾರಣಕ್ಕೆ ಉದಾಹರಣೆಯಾದ ನಮ್ಮ ಪ್ರಾದೇಶಿಕ ಪಕ್ಷಗಳು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ.
ಸದ್ಯಕ್ಕೆ ತಮಿಳುನಾಡಿನಲ್ಲಿ ಕಾವೇರಿ ನೀರಿಗಿಂತ ಹೆಚ್ಚು ಹಾಹಾಕಾರ ಉಂಟು ಮಾಡುತ್ತಿರುವ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಎ.ಐ.ಎ.ಡಿ.ಎಂ.ಕೆ ಪಕ್ಷದ ಸರ್ವೋಚ್ಚ ನಾಯಕಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿರುವ ಸಂದರ್ಭದಲ್ಲಿ ಅಲ್ಲಿ ನಡೆಯುತ್ತಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಮತ್ತು ಆಡಳಿತದಲ್ಲಿ ಆವರಿಸಿರುವ ಶೂನ್ಯತೆಯು ಪ್ರಾದೇಶಿಕ ಪಕ್ಷಗಳ ಇತಿಮಿತಿಯ ಬಗ್ಗೆ ಮತ್ತು ಆಗಬಹುದಾದ ಅಪಾಯಗಳ ಬಗ್ಗೆ ನಮಗೆ ಸ್ಪಷ್ಟವಾದ ನಿದರ್ಶನವಾಗುವಂತಿದೆ. ರಾಜ್ಯವೊಂದಕ್ಕೆ ಇಂಡಿಯಾದ ಒಕ್ಕೂಟ ವ್ಯವಸ್ಥೆಯಿಂದ ಅನ್ಯಾಯವಾದಾಗೆಲ್ಲ ನಾವು ಪ್ರಾದೇಶಿಕ ಪಕ್ಷಗಳ ಅನಿವಾರ್ಯತೆ ಕುರಿತು ಮಾತಾಡುವುದು, ತದನಂತರದಲ್ಲಿ ಮೌನವಾಗಿಬಿಡುವುದು ಮಾಮೂಲಿಯಾಗಿದೆ. ಸ್ವತ: ನಾನೇ ಬಹಳಷ್ಟು ಲೇಖನಗಳಲ್ಲಿ ಪ್ರಾದೇಶಿಕ ಪಕ್ಷಗಳ ಅಗತ್ಯದ ಬಗ್ಗೆ ಮತ್ತು ಅದರಿಂದಾಗಬಹುದಾದ ಅನುಕೂಲಗಳ ಬಗ್ಗೆ ಸಾಕಷ್ಟು ಬರೆದಿದ್ದೇನೆ. ಆದರೆ ಪ್ರಾದೇಶಿಕ ಪಕ್ಷಗಳ ಇನ್ನೊಂದು ಮುಖದ ಬಗ್ಗೆಯೂ ಅಂದರೆ ಅವುಗಳ ಋಣಾತ್ಮಕ ಗುಣಗಳ ಬಗ್ಗೆಯೂ ಬರೆಯುವುದು ಅಗತ್ಯವೆಂಬ ಬಾವನೆಯಿಂದ ಇದನ್ನು ಬರೆಯುತ್ತಿರುವೆ.

Oct 14, 2016

ಮೇಕಿಂಗ್ ಹಿಸ್ಟರಿ: ಸಂಗೊಳ್ಳಿ ರಾಯಣ್ಣನ ಗೆರಿಲ್ಲಾ ಯುದ್ಧ - 2

ಮೇಕಿಂಗ್ ಹಿಸ್ಟರಿ
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಇ. ಭೂಭಾಗದ ಸರಿಯಾದ ಉಪಯೋಗ
ಬೆಳಗಾವಿ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಭಾಗಗಳನ್ನೊಳಗೊಂಡಿದ್ದ ಕಿತ್ತೂರು ಸಂಸ್ಥಾನದ ಪಶ್ಚಿಮ ಭಾಗದಲ್ಲಿ ಮಲೆನಾಡಿನ ಅರಣ್ಯ ಪ್ರದೇಶವಿತ್ತು. ಇನ್ನಿತರ ದಿಕ್ಕುಗಳು ಪಕ್ಕದ ದೇಶಗಳಿಗೆ ತೆರೆದುಕೊಂಡಿತ್ತು. ಚೆನ್ನಮ್ಮಳ ಹೋರಾಟ ಪ್ರಾರಂಭವಾದಾಗಲೂ ಬ್ರಿಟೀಷರಿಗೆ ಕಿತ್ತೂರಿನ ಮಲೆನಾಡಿನಲ್ಲಿ ಸೋಲುಂಟಾಗಬಹುದೆಂಬ ಭಯವಿತ್ತು. ಹಾಗಾಗ್ಯೂ, ರಾಣಿ ಮತ್ತವಳ ಮಂತ್ರಿಗಳ ಊಳಿಗಮಾನ್ಯ ಮನಸ್ಥಿತಿ ಭೂಭಾಗದ ಸರಿಯಾದ ಉಪಯೋಗವನ್ನು ತಡೆದುಬಿಟ್ಟಿತು. ಆದರೂ, ಬ್ರಿಟೀಷರು ಈ ಪ್ರದೇಶದ ಬಗ್ಗೆ ಪದೇ ಪದೇ ತೋರಿದ ಆತಂಕ 1829 – 30ರಲ್ಲಿ ಸತ್ಯವಾಯಿತು. ಕಿತ್ತೂರಿನ ಬಂಡಾಯದ ಬಗ್ಗೆ ಬರೆದ ಮೊದಲ ಟಿಪ್ಪಣಿಯಲ್ಲೇ ಎಲ್ಫಿನ್ ಸ್ಟೋನ್: “……ಕಿತ್ತೂರು ಜಾಗೀರುದಾರರ ಭೂಮಿಯ ಮಧ್ಯದಲ್ಲಿದೆ, ಕೊಲ್ಲಾಪುರದಿಂದಾಗಲೀ ಅಥವಾ ವಾರೀಯಿಂದಾಗಲೀ ಹೆಚ್ಚು ದೂರವೇನಿಲ್ಲ, ಮತ್ತು ನಮ್ಮ ಮತ್ತು ಪೋರ್ಚುಗೀಸರ ಪ್ರಾಂತ್ಯದ ಮಧ್ಯೆ ಇರುವ ಕಾಡು ಗುಡ್ಡಗಳ ಸಮೀಪದಲ್ಲಿದೆ. ಈ ಕಾರಣಗಳಿಂದ, ಅರಣ್ಯ ಯುದ್ಧವಿಲ್ಲಿ ದೀರ್ಘಕಾಲೀನವಾಗುವ ಪರಿಸ್ಥಿತಿಯುಂಟಾಗಬಹುದು ಮತ್ತು ಆ ಯುದ್ಧ ಹೆಚ್ಚೆಚ್ಚು ಕಡೆಗೆ ಹರಡುತ್ತದೆ, ಅತಿ ಶೀಘ್ರವಾಗಿ ನಿಯಂತ್ರಿಸದಿದ್ದರೆ”. (69)

Oct 8, 2016

ಕನ್ನಡಿಗರಿಗಿವತ್ತು ಪ್ರಾದೇಶಿಕ ಪಕ್ಷವೊಂದು ಅನಿವಾರ್ಯವಾಗಿದೆ. ಆದರೆ,ಯಾಕೆ?

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಇಂಡಿಯಾದಂತಹ ಒಕ್ಕೂಟ ವ್ಯವಸ್ಥೆಯೊಳಗಿನ ಅತಿ ದೊಡ್ಡ ದೋಷವೆಂದರೆ ಕೇಂದ್ರ ಸರಕಾರ ಅತೀವ ಬಲಿಷ್ಠವಾಗಿದ್ದು, ರಾಜ್ಯಗಳು ಕೇಂದ್ರದ ಮರ್ಜಿಗನುಗುಣವಾಗಿ ಬದುಕಬೇಕಾಗಿರುವುದು. ವೈವಿದ್ಯತೆಯಲ್ಲಿ ಏಕತೆ ಎಂಬ ಬಾವನಾತ್ಮಕ ಘೋಷಣೆಯ ಮೂಲಕವೇ ಇಂಡಿಯಾವನ್ನು ಹಿಡಿದಿಟ್ಟುಕೊಂಡಿರುವ ರಾಜಕೀಯ ವ್ಯವಸ್ಥೆ ರಾಜ್ಯಗಳನ್ನು ದುರ್ಬಲಗೊಳಿಸುತ್ತ ಸಮಗ್ರತೆಯ ಹೆಸರಲ್ಲಿ ಕೇಂದ್ರವನ್ನು ಬಲಿಷ್ಠವನ್ನಾಗಿಸುತ್ತ ನಡೆಯುತ್ತಿರುವ ರಾಜಕಾರಣದಲ್ಲಿ ರಾಷ್ಟ್ರೀಯ ಪಕ್ಷಗಳ ಸರಕಾರಗಳನ್ನು ಹೊಂದಿದ ಹಲವು ರಾಜ್ಯಗಳು ಕೇಂದ್ರದ ಮಲತಾಯಿ ಧೋರಣೆಗೆ ತುತ್ತಾಗಿವೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುದೊಡ್ಡ ಈ ದೋಷವನ್ನು ಮನಗಂಡ ಅನೇಕ ರಾಜ್ಯಗಳು ರಾಜಕೀಯವಾಗಿ ಬಲಿಷ್ಠವಾಗುತ್ತ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ದಾರಿ ಕಂಡುಕೊಂಡಿವೆ. ನಮ್ಮ ನೆರೆ ರಾಜ್ಯಗಳಾದ ಆಂದ್ರಪ್ರದೇಶ, ತಮಿಳುನಾಡುಗಳು ಹಾಗೂ ಪಶ್ಚಿಮ ಬಂಗಾಳ, ಬಿಹಾರ, ಉತ್ತರಪ್ರದೇಶ, ಒರಿಸ್ಸಾಗಳು ಸಹ ತಮ್ಮದೇ ಆದ ಪ್ರಾದೇಶಿಕ ಪಕ್ಷಗಳನ್ನು ರಚಿಸಿಕೊಂಡು ದೆಹಲಿಯ ರಾಜಕಾರಣದಲ್ಲಿ ತಮ್ಮ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿವೆ.ಇದರಲ್ಲಿ ತಮಿಳುನಾಡು ಮೊದಲಿನಿಂದಲೂ ಪ್ರಾದೇಶಿಕ ಪಕ್ಷಗಳನ್ನು ಹೊಂದಿದ್ದು ಯಾವುದೇ ವಿಚಾರದಲ್ಲಿಯೂ ಅದು ಕೇಂದ್ರದ ವಂಚನೆಗೆ ಒಳಗಾಗದ ರೀತಿಯಲ್ಲಿ ತನ್ನ ರಾಜಕೀಯ ದಾಳಗಳನ್ನು ಉರುಳಿಸುತ್ತಿದೆ. ಉಳಿದೆಲ್ಲ ರಾಜ್ಯಗಳು ಎಂಭತ್ತರ ದಶಕದ ನಂತರ ಕ್ಷಿಪ್ರವಾಗಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ, ಒಂದು ರಾಷ್ಟ್ರೀಯ ಪಕ್ಷವಾಗಿ ದುರ್ಬಲವಾಗುತ್ತ ಸಾಗಿರುವ ಕಾಂಗ್ರೆಸ್ಸಿನ ದೌರ್ಬಲ್ಯದ ಲಾಭ ಪಡೆದು ತಮ್ಮದೇ ನೆಲದ ಸೊಗಡಿನ ಪ್ರಾದೇಶಿಕ ಪಕ್ಷಗಳನ್ನು ಕಟ್ಟಿಕೊಳ್ಳುತ್ತ ಬಲಾಢ್ಯವಾಗಿ ಹೋಗುತ್ತಿವೆ ಇತ್ತೀಚೆಗಿನ ದಿನಗಳಲ್ಲಿ ಕರ್ನಾಟಕದಂತ ರಾಜ್ಯದಲ್ಲಿಯೂ ಪ್ರಾದೇಶಿಕ ಪಕ್ಷವೊಂದು ಬೇಕೆನ್ನುವ ಕೂಗು ಕೇಳಿ ಬರುತ್ತಿದ್ದು,ಮುಂದಿನ ದಿನಮಾನಗಳಲ್ಲಿ ಇದು ದೊಡ್ಡದಾಗುವ ಸಾದ್ಯತೆ ಹೆಚ್ಚಾಗಿದೆ.

Oct 7, 2016

ಮೇಕಿಂಗ್ ಹಿಸ್ಟರಿ: ಸಂಗೊಳ್ಳಿ ರಾಯಣ್ಣನ ಗೆರಿಲ್ಲಾ ಯುದ್ಧ - 1

saketh rajan
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ರೈತಾಪಿ ಜನರು ಬಂದೂಕು ಹಿಡಿದರು 
ಮೂರನೇ ರೀತಿಯ ಸಶಸ್ತ್ರ ಹೋರಾಟದಲ್ಲಿ ರೈತ ಕಾರ್ಮಿಕರು ನೇತೃತ್ವ ವಹಿಸಿದರು. ಹತ್ತೊಂಭತ್ತನೇ ಶತಮಾನದ ಮೊದಲರ್ಧದಲ್ಲಿ ಕರ್ನಾಟಕದ ವಿಮೋಚನಾ ಹೋರಾಟದಲ್ಲಿ ಇದು ಅತ್ಯಂತ ಮಹತ್ವದ ವಿಚಾರ. ಕರ್ನಾಟಕದ ರೈತಾಪಿ ಸಮೂಹ ವಸಾಹತು ವಿರೋಧಿ ಹೋರಾಟದ ಹಾದಿಯಲ್ಲಿ ದೀವಿಗೆ ಹಿಡಿದು ಬೆಳಕು ಚೆಲ್ಲಿದರು. ನಾಯಕರು ಹುಟ್ಟಿದರು. ಸಂಗೊಳ್ಳಿ ರಾಯಣ್ಣ ಇವರೆಲ್ಲರಲ್ಲಿ ಮುಂಚೂಣಿಯಲ್ಲಿದ್ದರು. ಅವರ ಹೋರಾಟ ವಸಾಹತುಶಾಹಿ ಮತ್ತವರ ಊಳಿಗಮಾನ್ಯ ಮಿತ್ರರ ಮೇಲೂ ದಾಳಿ ನಡೆಸಿತು ಮತ್ತು ರೈತ – ಕಾರ್ಮಿಕ ಸಮೂಹದಾಧಾರದಲ್ಲಿ ಗೆರಿಲ್ಲಾ ಯುದ್ಧ ನಡೆಸಿ ವಿಮೋಚನಾ ಹಾದಿಯನ್ನು ರೂಪಿಸಿತು. ನಾವೀಗ ಇವುಗಳಲ್ಲಿ ಮೂರು ಪ್ರಮುಖ ಹೋರಾಟಗಳನ್ನು ಗಮನಿಸೋಣ, ಈ ಮೂರೂ ನಿರಂತರ ಚಳುವಳಿಯಾಗಿತ್ತು, ಒಂದಾದ ನಂತರ ಮತ್ತೊಂದು ನಡೆದಿತ್ತು ಮತ್ತು 1829 ಹಾಗು 1837ರ ಅವಧಿಯ ಮಧ್ಯೆ ನಡೆದಿತ್ತು – ಸಂಗೊಳ್ಳಿ ರಾಯಣ್ಣನ ಗೆರಿಲ್ಲಾ ಯುದ್ಧ, ನಗರದ ಸಶಸ್ತ್ರ ಬಂಡಾಯ ಹಾಗೂ ಕಲ್ಯಾಣಸ್ವಾಮಿ ಮುನ್ನಡೆಸಿದ ಸಶಸ್ತ್ರ ಹೋರಾಟ. ಕರ್ನಾಟಕದ ಜನಸಮೂಹದ ಶ್ರೀಮಂತ ಅನುಭವದಿಂದ ನಾವು ಕಲಿಯೋಣ. ರಕ್ತ ಮತ್ತು ಕಣ್ಣೀರು, ಅತ್ಯಂತ ಅಮೂಲ್ಯವಾದ – ಜೀವದ – ತ್ಯಾಗವೇ ಅಲ್ಲವೇ ಇತಿಹಾಸವನ್ನು ಮುಂದಿನ ಪೀಳಿಗೆಗೆ ಸಮೃದ್ಧಗೊಳಿಸುವುದು? 

Oct 5, 2016

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ವಿಫಲವಾಗಲು ಕಾರಣಗಳು: ಒಂದು ಟಿಪ್ಪಣಿ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಮನ್ನಣೆ ಸಿಗುವುದಿಲ್ಲ ಮತ್ತು ಕರ್ನಾಟಕದ ಜನತೆ ಆ ವಿಷಯದ ಮಟ್ಟಿಗೆ ರಾಷ್ಟ್ರೀಯವಾಗಿ ಚಿಂತಿಸುತ್ತಾರೆಂಬ ಮಾತು ಮಾಮೂಲಿಯಾಗಿಬಿಟ್ಟಿದೆ. ಕರ್ನಾಟಕದ ಜನತೆ ಒಕ್ಕೂಟ ವ್ಯವಸ್ಥೆಗೆ ಎಷ್ಟು ಒಗ್ಗಿ ಹೋಗಿದ್ದಾರೆಂದರೆ ನಮ್ಮ ಜನತೆ ಇದುವರೆಗು ಯಾವುದೇ ಪ್ರಾದೇಶಿಕ ಪಕ್ಷವೊಂದನ್ನು ನಮ್ಮದೂ ಎಂದು ಒಪ್ಪಿಕೊಂಡು ಸಂಪೂರ್ಣವಾಗಿ ಅದನ್ನು ಬೆಂಬಲಿಸಿದ ನಿದರ್ಶನಗಳೇ ಸಿಗುವುದಿಲ್ಲ. ಕನ್ನಡದ ನೆಲಜಲಗಳ ಪ್ರಶ್ನೆ ಬಂದಾಗ ಪ್ರಾದೇಶಿಕ ಪಕ್ಷವೊಂದರ ಅನಿವಾರ್ಯತೆಯ ಬಗ್ಗೆ ಆವೇಶದಿಂದ ಮಾತಾಡುವ ಕನ್ನಡಿಗರು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಬಾಜಪ ಅಥವಾ ಕಾಂಗ್ರೆಸ್ ಅನ್ನುವ ಎರಡು ರಾಷ್ಟ್ರೀಯ ಪಕ್ಷಗಳತ್ತ ವಾಲಿಬಿಡತ್ತಾರೆ ಎನ್ನುವ ಆರೋಪವೂ ಕನ್ನಡಿಗರ ಮೇಲಿದೆ. ಈ ವಿಚಾರದ ವಿಶ್ಲೇಷಣೆಯಲ್ಲಿ ನಾನು ಬಹಳ ಹಿಂದಕ್ಕೇನು ಹೋಗುವುದಿಲ್ಲ. ಎಂಭತ್ತರ ದಶಕದ ನಂತರದ ಕರ್ನಾಟಕದ ರಾಜಕಾರಣದ ಆಗು ಹೋಗುಗಳನ್ನು ಅದ್ಯಯನ ಮಾಡಿದರೆ ಸಾಕು ಇದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಹಾಗಿದ್ದರೆ ಕರ್ನಾಟಕದ ಜನತೆಗೆ ಯಾಕೆ ಪ್ರಾದೇಶಿಕ ಪಕ್ಷಗಳ ಬಗ್ಗೆ ಈ ರೀತಿಯ ಅಸಡ್ಡೆ? ಯಾಕೆ ಕನ್ನಡಿಗರು ಪ್ರಾದೇಶಿಕ ಪಕ್ಷಗಳತ್ತ ಒಲವು ತೋರಿಸುವುದಿಲ್ಲವೆಂಬ ಪ್ರಶ್ನೆಗೆ ಎರಡು ನೆಲೆಯಲ್ಲಿ ಉತ್ತರ ಕಂಡುಕೊಳ್ಳಬಹುದು:

Sep 30, 2016

ಮೇಕಿಂಗ್ ಹಿಸ್ಟರಿ: ಬೆಳಗುತ್ತಿ-ಬಾದಾಮಿ-ನಿಪ್ಪಾಣಿ-ಚಿತ್ರದುರ್ಗ-ಬೀದರ್

saketh rajan
ಸಾಕೇತ್ ರಾಜನ್ 

ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
26/09/2016
7. ಬೆಳಗುತ್ತಿ (1835)


ಬೆಳಗುತ್ತಿಯನ್ನು 1804ರಲ್ಲಿ ಮೂರನೇ ಕೃಷ್ಣರಾಜ ಒಡೆಯರ್, ವೆಂಕಟಪ್ಪ ನಾಯಕನಿಗೆ ಇನಾಮು ಹಳ್ಳಿಯಾಗಿ ನೀಡಿದ್ದ. ಜೊತೆಗೆ, ವೆಂಕಟ್ಟಪ್ಪ ಮಗ ತಿಮ್ಮಾ ನಾಯಕನ ದಿನನಿತ್ಯದ ಹಾಲು ಬೆಣ್ಣೆಗಾಗಿ, ರಾಜ ವಾರ್ಷಿಕ 220 ವರಹಗಳನ್ನು ಕೊಡುಗೆಯಾಗಿ ನೀಡುತ್ತಿದ್ದ. ಆದರಿದನ್ನು ನಂತರದಲ್ಲಿ ಬ್ರಿಟೀಷರು ನಿಲ್ಲಿಸಿಬಿಟ್ಟರು. 1830ರಲ್ಲಿ, ತಿಮ್ಮಪ್ಪ ನಾಯಕ ತನ್ನ ಬಡತನದ ಬಗ್ಗೆ ಬರೆದುಕೊಂಡು ಮುಂಚಿದ್ದ ಜಾಗೀರನ್ನು ಮತ್ತೆ ಸ್ಥಾಪಿಸಬೇಕೆಂದು ಕೇಳಿಕೊಂಡ. ಆದರೆ ಬ್ರಿಟೀಷರು ಇದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ. 1830ರಲ್ಲಿ, ನಗರದ ಬಂಡಾಯವನ್ನು ಮುನ್ನಡೆಸಿದ್ದ ಬೂಡಿ ಬಸಪ್ಪ, ಬೆಳಗುತ್ತಿಗೆ ಭೇಟಿ ನೀಡಿ, ತನ್ನ ಗೆಲುವಿನೊಂದಿಗೆ ನಿನ್ನ ಜಾಗೀರು ನಿನಗೆ ಸಿಗುತ್ತದೆ ಎಂದು ತಿಮ್ಮಪ್ಪನಿಗೆ ಭರವಸೆ ಕೊಟ್ಟಿದ್ದ. ತಿಮ್ಮಪ್ಪ ನಾಯಕ ನಗರದ ಬಂಡಾಯಕ್ಕೆ ತನ್ನ ಬೆಂಬಲ ಸೂಚಿಸಿದ. (48)