Jan 31, 2016

ಹುಡುಕಿಕೊಡಿ

ಪ್ರವೀಣಕುಮಾರ್ .ವೀ.ಗೋಣಿ, ಹುಬ್ಬಳ್ಳಿ
ದೈನ್ಯದಿಂದ ಕೇಳುತಿರುವೆ ದೀನನಾಗಿ
ದಾನವನಾಗಿ ಕಳೆದು
ಹೋಗಿರುವವನ ಹುಡುಕಿಕೊಡಿ ದಯಮಾಡಿ .

ಸರಿವ ಕಾಲದ ತೊರೆಯಲಿ
ಬಿಡದೆ ಕಾಡುವ ಜಂಜಡಗಳ ಅಡಿಗೆ
ಸಿಲುಕಿ ನರಳುವವನ ಹುಡುಕಿಕೊಡಿ .

ತನ್ನ ಇರುವನೇ ಮರೆತು ಜಗದ
ಗದ್ದಲದ ಅಡಿಗೆ ಸಿಕ್ಕಿ ಬೇಕುಗಳ
ಬೆನ್ನತ್ತಿ ಕಳೆದು ಹೋಗಿರುವವನ ಹುಡುಕಿಕೊಡಿ .

ಪ್ರೀತಿ ,ವಾತ್ಸಲ್ಯಗಳ ತೊರೆದು
ಬರಿ ಸ್ವಾರ್ಥ ಸಾಧನೆಯ ದಂಡಕಾರಣ್ಯದೊಳು
ಕಳೆದು ಹೋಗಿರುವವನ ಹುಡುಕಿಕೊಡಿ .

ರೋಹಿತ್ ವೇಮುಲನ ಆತ್ಮಹತ್ಯೆಯನ್ನು ರಾಜಕೀಯಗೊಳಿಸುತ್ತಿರುವವರಾರು?

ರೋಹಿತ್ ವೇಮುಲನ ಸಾವನ್ನು ಪ್ರತಿಭಟಿಸಿದ ವಿರೋಧ ಪಕ್ಷದವರಲ್ಲಿ ಅವಕಾಶವಾದಿತನದ ಒಂದಂಶವಿತ್ತು. ಆದರೆ ಬಿಜೆಪಿಗೆ ಹೋಲಿಸಿದರೆ ಅವರು ಬಂದಿದ್ದು ತುಂಬ ತಡವಾಗಿ.
ಅಂಜಲಿ ಮೋದಿ, scroll.in
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್

ರೋಹಿತ್ ವೇಮುಲನ ಗೆಳೆಯರು ಮತ್ತು ಸಂಗಾತಿಗಳು ಅವನ ಆತ್ಮಹತ್ಯೆಗಿದ್ದ ನೈಜ ಕಾರಣವನ್ನು ತಿಳಿಸಲು ಪ್ರಯತ್ನಪಡುವಾಗ, ರೋಹಿತನ ಸಾರ್ವಜನಿಕ ಜೀವನ ಮತ್ತು ವೈಯಕ್ತಿಕ ಹತಾಶೆ ಮತ್ತು ಏಕಾಂಗಿ ಸಾವನ್ನು ಬೇರೆಬೇರೆಯಾಗಿ ನೋಡುವುದು ಸಾಧ್ಯವೇ ಇಲ್ಲ. ಸಂದರ್ಶನವೊಂದರಲ್ಲಿ ಅವನ ರೂಮ್ ಮೇಟ್: “ಬಹುಶಃ ವಸ್ತುಸ್ಥಿತಿ ಬದಲಾಗಲು ಒಬ್ಬರ್ಯಾರಾದರೂ ಸಾಯಬೇಕು ಎಂದವನು ಯೋಚಿಸಿರಬೇಕು. ಮತ್ತವನು ಹೀಗೆ ಮಾಡಿಕೊಂಡುಬಿಟ್ಟ.”

ಆದರೆ, ಜೀವ ತೆಗೆದುಕೊಂಡುಬಿಡುವ ರೋಹಿತನ ನಿರ್ಧಾರ ಸಮಾಜವನ್ನು ಬದಲಿಸಲು ತೆಗೆದುಕೊಂಡ ಕೊನೆಯ ರಾಜಕೀಯ ನಡೆಯಾ? ರಾಜಕೀಯ ಶಕ್ತಿಗಳ ದುರುಪಯೋಗದಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಂಡನಾ? ಶೂನ್ಯದಾಚೆಗೆ ಮತ್ತೇನನ್ನು ನೋಡದ ಯುವಕನೊಬ್ಬನ ವಿವೇಚನಾರಹಿತ ಕಾರ್ಯವಾ?

ಅವನ ಕಾವ್ಯಾತ್ಮಾಕ ಕೊನೆಯ ಪತ್ರವನ್ನು ನೂರು ರೀತಿಯಲ್ಲಿ ಓದಿಕೊಳ್ಳಬಹುದು, ಪ್ರತಿ ಓದುಗ ತನಗನುಕೂಲವಾದ ಅರ್ಥವನ್ನು ಕಂಡುಕೊಳ್ಳುತ್ತಾಳೆ.

ಬಿಜೆಪಿ ರೋಹಿತನ ಪತ್ರವನ್ನು ಕ್ಲೀನ್ ಚಿಟ್ ನಂತೆ ನೋಡುವ ನಿರ್ಧಾರ ಮಾಡಿಬಿಟ್ಟಿದೆ. ಬಿಜೆಪಿಯ ವಿದ್ಯಾರ್ಥಿ ಪಡೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪರವಾಗಿ ಹೈದರಾಬಾದ್ ವಿಶ್ವವಿದ್ಯಾಲಯದ ಮೇಲೆ ಒತ್ತಡ ಹೇರಿದ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಘೋಷಿಸುತ್ತಾರೆ: 

“ಈ ಪತ್ರದಲ್ಲಿ ವಿಶ್ವವಿದ್ಯಾಲಯದ ಯಾವ ಅಧಿಕಾರಿಯ ಹೆಸರಿಲ್ಲ, ಯಾವುದೇ ರಾಷ್ಟ್ರೀಯ ರಾಜಕೀಯ ಪಕ್ಷವನ್ನು ಹೆಸರಿಸಿಲ್ಲ, ಯಾವ ಸಂಸದನ ಹೆಸರಿಲ್ಲ”

ಎಬಿವಿಪಿಯ ಮುಖಂಡ ಸುಶೀಲ್ ಕುಮಾರ ಹಲ್ಲೆಯ ದೂರು ನೀಡಿದ್ದು (ಪೋಲೀಸರ ಪ್ರಕಾರ ದೂರನ್ನು ಉತ್ಪ್ರೇಕ್ಷಿಸಲಾಗಿತ್ತು) ರೋಹಿತ್ ವೇಮುಲ ರಾಜಕೀಯ ಸುಳಿಯಲ್ಲಿ ಸಿಲುಕುವ ಮುನ್ನುಡಿಯಾಗಿತ್ತು. ಸುಶೀಲ್ ಕುಮಾರ್ ಕೂಡ ಸ್ಮೃತಿ ಇರಾನಿಯವರೆಂತೆಯೇ ಪತ್ರವನ್ನು ವಿಶ್ಲೇಷಿಸುತ್ತಾರೆ:

“ಆ ಆತ್ಮಹತ್ಯಾ ಪತ್ರವನ್ನು ನೂರರಿಂದ ಇನ್ನೂರು ಸಲ ಓದಿದ್ದೇನೆ. ಯಾರ ಹೆಸರನ್ನೂ ಆತ ಉಲ್ಲೇಖಿಸುವುದಿಲ್ಲ; ಇಂತಿಂತವರು ಜವಾಬ್ದಾರರು ಎಂದು ಹೇಳುವುದಿಲ್ಲ”

ಬಿಜೆಪಿ ಈ ಸಾವಿನ ಆರೋಪದಿಂದ ಮುಕ್ತವಾಗುವುದಷ್ಟೇ ಬೇಕಾಗಿಲ್ಲ, ರೋಹಿತ್ ವೇಮುಲನ ಸಾವು ನಡೆದದ್ದೇಗೆ ಎನ್ನುವುದರ ನಿರೂಪಣೆಯನ್ನು ಅವರೇ ನಿಯಂತ್ರಿಸಬೇಕೆಂದಿದ್ದಾರೆ. ಜನರು ರೋಹಿತನ ಪತ್ರವನ್ನು ಜಾತಿ ವ್ಯವಸ್ಥೆಯ ಅಸಮಾನತೆಗಳ ಕುರಿತ ಪತ್ರ, ಅಂಚಿನ ಸಮುದಾಯದ ಜನರು ಎದುರಿಸುತ್ತಿರುವ ಪಕ್ಷಪಾತದ ಕುರಿತ ಪತ್ರದಂತೆ ಓದಿಕೊಂಡಿದ್ದು ಬಿಜೆಪಿಗೆ ಇರುಸುಮುರುಸು ಉಂಟುಮಾಡಿತು. ರೋಹಿತ್ ಬರೆಯುತ್ತಾನೆ, 

“ಮನುಷ್ಯನ ಮೌಲ್ಯ ಅವನ ತತ್ ಕ್ಷಣದ ಗುರುತು ಮತ್ತು ಸಾಧ್ಯತೆಗಳಿಗೆ ಇಳಿದುಬಿಟ್ಟಿದೆ. ಒಂದು ವೋಟಿಗೆ. ಒಂದು ನಂಬರ್ರಿಗೆ. ಒಂದು ವಸ್ತುವಿಗೆ. ನಕ್ಷತ್ರದ ಧೂಳಿನಿಂದ ಉದ್ಭವವಾದ ಅತ್ಯದ್ಭುತ ವಸ್ತುವಿನಂತಹ ಬುದ್ಧಿವಂತಿಕೆ ಮೂಲಕ ಎಂದೂ ಮನುಷ್ಯನನ್ನು ಗುರುತಿಸಲಿಲ್ಲ. ಬೀದಿಯಲ್ಲಿ, ಓದಿನಲ್ಲಿ, ರಾಜಕೀಯದಲ್ಲಿ, ಸಾವಿನಲ್ಲಿ, ಬದುಕಿನಲ್ಲಿ.”

ಜನರು ಈ ಪ್ರಕರಣವನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆಂದು ಹೇಳುವ ಇರಾನಿ “ಇದನ್ನು ಜಾತಿ ಕದನವಾಗಿ ಮಾರ್ಪಡಿಸಿ ಕೆರಳಿಸುವ ದುರುದ್ದೇಶದಿಂದ ಕೂಡಿದ ಪ್ರಯತ್ನ” ಎಂದು ಹೇಳುತ್ತಾರೆ.

ಯಾವುದೇ ಅನುಭೂತಿಯಿಲ್ಲ.

ಆದರೆ, ರೋಹಿತನ ಪತ್ರವನ್ನು ಓದಿದ ಜನರದನ್ನು ಜಾತಿ ತಾರತಮ್ಯ ಎಂದು ಭಾವಿಸುವುದಕ್ಕೆ ಬಹಳ ಮೊದಲೇ, ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ರೋಹಿತ್ ಭಾಗಿಯಾಗಿದ್ದ ಅಂಬೇಡ್ಕರ್ ವಿದ್ಯಾರ್ಥಿ ಸಂಘವನ್ನು “ಜಾತಿವಾದಿ” ಎಂದು ಕರೆದು “ಒಳಿತಿಗಾಗಿ ಕ್ಯಾಂಪಸ್ಸನ್ನು ಬದಲಿಸಿ” ಎಂದು ಇರಾನಿಗೆ ಕೇಳಿಕೊಂಡಿದ್ದರು.

ಬಂಡಾರು ದತ್ತಾತ್ರೇಯ ಪತ್ರ ಬರೆಯಲಿದ್ದ ಏಕೈಕ ಪ್ರಚೋದನೆಯೆಂದರೆ ಎಬಿವಿಪಿಯ ವಿರುದ್ಧ ಅಂಬೇಡ್ಕರ್ ವಿದ್ಯಾರ್ಥಿ ಸಂಘದವರು ಮುಜಾಫರ್ ನಗರದ ಕೋಮುಗಲಭೆಯ ಬಗೆಗಿನ ಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಏರ್ಪಡಿಸಿದ್ದ ಪ್ರತಿಭಟನೆ. ಇಲ್ಲಿ ದತ್ತಾತ್ರೇಯರವರಿಗೆ ಜಾತಿ ಎಲ್ಲಿಂದ ಕಾಣಿಸಿತು, ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಹೆಸರಿನಲ್ಲಿರುವ ‘ಅಂಬೇಡ್ಕರ್’ ಅವರಿಗೆ ಜಾತಿ ಸೂಚಕವಾಗಿ ಕಂಡರಾ?

ಬಿಜೆಪಿಗೆ ರೋಹಿತ್ ವೇಮುಲನ ಸಾವಿನಿಂದಿನ ಘಟನಾವಳಿಗಳನ್ನು ನಿಯಂತ್ರಿಸುವ ಮನಸ್ಸಿರಬಹುದು ಆದರದು ಸಾಧ್ಯವಿಲ್ಲ, ಕಾರಣ ಅದಕ್ಕೆ ಅನುಭೂತಿಯ ಕೊರತೆಯಿದೆ – ಅದರ ಸಿದ್ಧಾಂತ ಮತ್ತು ಸಂಘಗಳಲ್ಲಿ ಸಾಮಾನ್ಯ ಮನುಷ್ಯತ್ವಕ್ಕೆ ಆಸ್ಪದವಿಲ್ಲ. ಆತ್ಮಹತ್ಯೆಯ ಸುದ್ದಿ ಹರಡುತ್ತಿದ್ದಂತೆ, ಯುವ ಪ್ರಾಯದಲ್ಲಿ ಜೀವ ಕಳೆದುಕೊಂಡವನ ಬಗ್ಗೆ ಹೆಸರಿಗೊಂದಷ್ಟು ದುಃಖ ಸೂಚಿಸಿದ ಮರುಕ್ಷಣವೇ ಬಿಜೆಪಿ ಆಕ್ರಮಶೀಲವಾಗಿ ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಬಗೆಗಿನ ದತ್ತಾತ್ರೇಯರ ಅಭಿಪ್ರಾಯವನ್ನು ಸಮರ್ಥಿಸಿಕೊಳ್ಳುತ್ತದೆ ಮತ್ತು ಅದರ ಮುಂದುವರಿಕೆಯಂತೆ ರೋಹಿತ ವೇಮುಲ ಜಾತಿವಾದಿ, ತೀವ್ರಗಾಮಿ ಮತ್ತು ದೇಶದ್ರೋಹಿ, ಹಾಗಾಗಿ ಅವನ ಸಾವಿಗೆ ಸಹಾನುಭೂತಿ ತೋರಬೇಕಿಲ್ಲ ಎಂದು ವಾದಿಸುತ್ತದೆ. ಬಿಜೆಪಿಯ ವಕ್ತಾರರು ಮತ್ತು ಎಬಿವಿಪಿ ಅಂಬೇಡ್ಕರ್ ವಿದ್ಯಾರ್ಥಿ ಸಂಘವು ಯಾಕೂಬ್ ಮೆಮನನ ನೇಣು ಶಿಕ್ಷೆಯನ್ನು ವಿರೋಧಿಸಿದ್ದನ್ನು – ವಿರೋಧವಿದ್ದದ್ದು ಗಲ್ಲು ಶಿಕ್ಷೆಯ ವಿರುದ್ಧ – ಅವರ ದೇಶದ್ರೋಹಿ ಚಟುವಟಿಕೆಗೆ ಆಧಾರದಂತೆ ನೀಡುತ್ತಾರೆ.

ಆತ್ಮಹತ್ಯೆಯ ರಾಜಕೀಯಗೊಳಿಸುವಿಕೆ.

ಯಾವುದೇ ಅಚ್ಚರಿ ಬೇಡ, ಬಿಜೆಪಿ ತನ್ನ ರಾಜಕೀಯ ವಿರೋಧಿಗಳು ರೋಹಿತನ ಆತ್ಮಹತ್ಯೆಯನ್ನು ಬಂಡಾರು ದತ್ತಾತ್ರೇಯರ ಪತ್ರಕ್ಕೆ ಮತ್ತು ಮಾನವ ಸಂಪನ್ಮೂಲ ಇಲಾಖೆ ಹಲವು ಸಲ ಹೈದರಾಬಾದ್ ವಿಶ್ವವಿದ್ಯಾಲಯಕ್ಕೆ ಈ ವಿಷಯವನ್ನು ನೆನಪಿಸಿದ್ದಕ್ಕೆ ಜೋಡಿಸಿದ್ದನ್ನು ‘ರಾಜಕೀಯ’ ಎಂದು ಆರೋಪಿಸಿತು. ವಿರೋಧ ಪಕ್ಷದ ರಾಷ್ಟ್ರ ಮಟ್ಟದ ನಾಯಕರು ರೋಹಿತ್ ವೇಮುಲನ ಸಾವಿಗೆ ಸಂತಾಪ ಸೂಚಿಸಿ ಪ್ರತಿಭಟನೆಗೆ ಇಳಿದಿದ್ದರಲ್ಲಿ ರಾಜಕೀಯದ ಒಂದಂಶವಿದ್ದೇ ಇದೆ. ಆದರವರು ಎಬಿವಿಪಿಯ ಆಪಾದನೆಯನ್ನು ಪರಿಶೀಲಿಸದೆ ವಿದ್ಯಾರ್ಥಿ ಸಂಘಟನೆಯನ್ನು “ಜಾತಿವಾದಿ, ತೀವ್ರಗಾಮಿ ಮತ್ತು ದೇಶವಿರೋಧಿ” ಎಂದು ಬರೆದು, ಯಾವೊಂದು ಆಧಾರವಿಲ್ಲದೆ ಎಬಿವಿಪಿಯ ಸದಸ್ಯ ಮಾರಣಾಂತಿಕ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದೆ ಎಂದು ಹೇಳಿದ್ದನ್ನು ಪತ್ರದಲ್ಲಿ ಪುನರುಚ್ಛರಿಸಿದ ಬಿಜೆಪಿಯ ಮಂತ್ರಿಗಳಿಗೆ ಹೋಲಿಸಿದರೆ ನಿಧಾನಕ್ಕೆ ಬಂದರು.

ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಗಳು ವಿರೋಧ ಪಕ್ಷಗಳ ಈ ಬೆಂಬಲವನ್ನು ಸ್ವಾಗತಿಸುತ್ತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಹಗೆಯುಳ್ಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು ತಮ್ಮ ವಿರುದ್ಧದ ದುರುದ್ದೇಶಪೂರಿತ ದೂರುಗಳಿಗೂ ಪ್ರೋತ್ಸಾಹ ನೀಡುವ ಕೇಂದ್ರ ಸರಕಾರದ ವಿರುದ್ಧ ಹೋರಾಡಲು ಈ ಬೆಂಬಲ ಬೇಕೆನ್ನಿಸಿದ್ದರೆ ಅಚ್ಚರಿಯಿಲ್ಲ.

ರೋಹಿತ್ ವೇಮುಲ ತನ್ನ ಕೊನೆಯ ದಿನಗಳನ್ನು ಹಾಸ್ಟೆಲಿನ ರೂಮಿನ ಬದಲಾಗಿ ತಾತ್ಕಾಲಿಕ ಶೆಡ್ಡಿನಲ್ಲಿ ಕಳೆದ; ಸಂಶೋಧನೆಯನ್ನು ಮುಂದುವರೆಸಲಾಗದ, ಲ್ಯಾಬ್ ಕೆಲಸವನ್ನು ಮುಗಿಸಲಾಗದ ರೋಹಿತ್ ಪೋಲೀಸ್ ದೂರುಗಳು ಮತ್ತು ಮಾತ್ಸರ್ಯದಿಂದ ಎಬಿವಿಪಿಯ ಸದಸ್ಯ ಹಾಕಿದ್ದ ಕೇಸುಗಳು ತನ್ನ ಭವಿಷ್ಯವನ್ನು ನಿರ್ಧರಿಸುವುದನ್ನು ಕಾಯುತ್ತಿದ್ದ. ರೋಹಿತ ವೇಮುಲ ಆಯ್ದುಕೊಂಡ ದಾರಿಯನ್ನು ಅರ್ಥಮಾಡಿಕೊಳ್ಳಬಯಸುವವರು ತಮ್ಮ ಗಮನವನ್ನು ರೋಹಿತನ ಸಾವಿನಿಂದಾರಂಭವಾದ ದೊಡ್ಡ ರಾಜಕೀಯ ನಾಟಕದಿಂದ ಸರಿಸಿ, ಮನುಷ್ಯನನ್ನು ಒಂದು ವೋಟು, ಒಂದು ಸಂಖೈ, ಒಂದು ವಸ್ತುವಾಗಿ ಮಾರ್ಪಡಿಸಿಬಿಟ್ಟ ಸಂಕುಚಿತ ಭಾವ ಮತ್ತು ಭ್ರಷ್ಟತೆಯಿಂದ ಕೂಡಿದ ಮುಖ್ಯವಾಹಿನಿ ರಾಜಕೀಯದ ಪ್ರತಿಬಿಂಬದಂತಿರುವ ವಿಶ್ವವಿದ್ಯಾಲಯ ಮತ್ತು ವಿದ್ಯಾರ್ಥಿಗಳ ರಾಜಕೀಯದತ್ತ ಹರಿಸಬೇಕು.

ಅಖಂಡತೆಯ ಅರ್ಥ

ಕು.ಸ.ಮಧುಸೂದನ
ಮುಂಚೆ ಈಗಿರಲಿಲ್ಲ
ಅಖಂಡತೆಯ ಕಲ್ಪನೆ ಕಂಡಿರಲಿಲ್ಲ
ತುಂಡು ತುಂಡಾಗಿ ಬೇರೆಯಾಗಿದ್ದರೂ
ಪರಸ್ಪರರ ಕಷ್ಟಸುಖಕ್ಕೆ ಆಗುತ್ತಾ
ಅವರತ್ತಾಗ ನಾವು
ನಾವತ್ತಾಗ ಅವರೂ
ಸಮಾದಾನ ಹೇಳುತ್ತ
ಇದ್ದೆವು ಇಷ್ಟೂ ದಿನ
ಅವರ ಮನೆಯ ಮಾಂಸದ ಸಾರಿಗೆ
ನಾವು ಮೂಗರಳಿಸುತ್ತ
ನಮ್ಮ ಮನೆಯ ಮೀನೂಟಕ್ಕೆ
ಅವರನ್ನು ಕರೆಯುತ್ತ
ಶ್ರೀನಗರದ ಜಮಖಾನವ ನಮ್ಮ ನಡೂ ಮನೆಗೆ ಹಾಸಿ
ನಮ್ಮ ತಾಳಕಟ್ಟೆ ಕಂಬಳಿಗಳನವರ ಚಳಿಗಾಲಕ್ಕೆ ಕೊಟ್ಟು
ಈಶಾನ್ಯದವರ ಬಿಗು ನೃತ್ಯಕ್ಕೆ ನಮ್ಮ ಕಾಲು ಕುಣಿಸುತ್ತ
ನಮ್ಮ ಭರತನಾಟ್ಯಕ್ಕವರು ತಲೆದೂಗುತ್ತ
ಅವರ ಬೇಲ್ ಪೂರಿಗೆ ನಮ್ಮ ಇಡ್ಲಿ ಸಾಂಬಾರನ್ನು ವಿನಿಮಯಿಸಿಕೊಳ್ಳುತ್ತ
ಬದುಕುತ್ತಿದ್ದೆವು ಅಖಂಡತೆಯ
ಅರ್ಥವೇ ಗೊತ್ತಿಲ್ಲದೆ!
ಇದೀಗ ತಿಳಿದವರು
ಅಖಂಡತೆಯ ಬಗ್ಗೆ ಮಾತಾಡುತ್ತಿದ್ದಾರೆ
ಅಸಹಿಷ್ಣುತೆಯ ಹೊಗೆಹಾಕುತ್ತಿದ್ದಾರೆ!

Jan 30, 2016

ಹಿಂದಿ ಹೇರಿಕೆ ನಿಲ್ಬೇಕ್!

ದಿನೇ ದಿನೇ ಹೆಚ್ಚುತ್ತಲೇ ಇರುವ ಹಿಂದಿ ಹೇರಿಕೆಯ ವಿರುದ್ಧ ಹೋರಾಟಗಳು ನಾನಾ ರೂಪ ಪಡೆದುಕೊಳ್ಳುತ್ತಿವೆ, ಸರಕಾರಗಳು ಎಚ್ಚೆತ್ತುಕೊಳ್ಳದಿದ್ದರೆ ಒಂದೋ ಹೋರಾಟಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತವೆ ಇಲ್ಲಾ ಕುರಿಮಂದೆಯಂತಹ ಕನ್ನಡಿಗರು ‘ರಾಷ್ಟ್ರಭಾಷೆ’ ‘ಏಕತೆ’ ‘ಭಾರತ ದೇಶ’ ಎಂಬ ರಾಷ್ಟ್ರೀಯ ಪಕ್ಷಗಳ ಘೋಷಣೆಗಳ ಭ್ರಮೆಯಲ್ಲಿ ಮುಳುಗಿಹೋಗಿ ಕನ್ನಡವನ್ನೂ ಮುಳುಗಿಸಿಬಿಡುತ್ತಾರೆ. ರತೀಶ್ ರತ್ನಾಕರ ಇಂಥಹ ಕನ್ನಡಿಗರನ್ನು ಬಡಿದೆಬ್ಬಿಸಲು ‘ಪರಪಂಚ’ ಚಿತ್ರದ “ಹುಟ್ಟಿದ ಊರನ್ನು ಬಿಟ್ಟು ಬಂದ ಮೇಲೆ” ಹಾಡಿನ ದಾಟಿಯಲ್ಲಿ “ಹುಟ್ಟಿದ ಊರಿಗೆ ಹಿಂದಿ ಬಂದ ಮೇಲೆ” ಎಂಬ ಗೀತೆ ರಚಿಸಿದ್ದಾರೆ. ಪರಪಂಚ ಚಿತ್ರದ ಹಾಡು ಎಲ್ಲರ ಬಾಯಲ್ಲಿ ನಲಿಯಲಾರಂಭಿಸಿದ್ದು ಅನವಶ್ಯಕ ಕಾರಣಗಳಿಂದ ಪ್ರಸಿದ್ಧಿಗೆ ಬಂದಿದ್ದ ವೆಂಕಟ್ ಬಾಯಲ್ಲಿ ಅದನ್ನು ಮತ್ತೆ ಹಾಡಿಸಿದಾಗ. ರತೀಶ್ ರತ್ನಾಕರರ ಹಾಡನ್ನೊಮ್ಮೆ ಓದಿಬಿಡಿ, ಹಂಚಿಕೊಳ್ಳಿ, ಸಾಧ್ಯವಾದರೆ ಅದೇ ರಾಗದಲ್ಲಿ ಹಾಡಿ ವೀಡಿಯೋ ಅಪ್ ಲೋಡ್ ಮಾಡಿ, ಎಲ್ಲದಕ್ಕಿಂತ ಮುಖ್ಯವಾಗಿ ಹಿಂದಿ ಹೇರಿಕೆಯ ವಿರುದ್ಧ ದನಿಎತ್ತಿ.

‘ಹುಟ್ಟಿದ ಊರಿಗೆ ಹಿಂದಿ ಬಂದ ಮೇಲೆ ಇನ್ನೇನು ಬರುವುದು ಬಾಕಿ ಇದೆ
ನಿನ್ನೂರಲ್ಲೇ ನೀನು ಆಗ್ಬೇಡ ಪರದೇಸಿ ಎದ್ದೇಳು ಕಾಲ ಮಿಂಚಿ ಹೋಗೋದ್ರೊಳ್ಗೆ
ಹಿಂದೆ ಹೇರಿಕೆ ಊರ ತುಂಬಿದೆ ನಿನ್ನ ಇರುವನು ಅಳಿಸಲು
ತಾಯ್ನುಡಿಗಿಂತ ಇನ್ನೇನು ಬೇಕು ನಿನ್ನಯ ಬದುಕು ಬೆಳಗಲು
ನಿದ್ದೆಯಿಂದೇಳೋ ಮಗನೆ ಮೈಕೊಡ್ವಿ ನಿಲ್ಲೋ ಸಿವನೆ
ಕಣ್ಣುಬಿಡು ಎಲ್ಲಾ ನೋಡು ಕೈಯನ್ನೆತ್ತಿ ಕೂಗಿಬಿಡು || ಹುಟ್ಟಿದ ಊರಿಗೆ ||

ನಿನ್ನುಡಿ ಒಟ್ಟಿಗೆ ಹಿಂದಿಯೂ ಇದ್ದರು ಅಲ್ಲೇನೋ ಮಾಟ ಅಡಗಿದೆ
ಕನ್ನಡ ಅಳಿಸಿ ಹಿಂದಿಯೇ ಸಾಕು ಅನ್ನುವ ಕಾಲ ಬರಲಿದೆ
ಆಸೆಯ ತೋರಿಸಿ ಒತ್ತಾಯ ಮಾಡಿಸಿ ಹಿಂದಿಯ ಒಪ್ಪ ಬೇಕಂತಾರೊ
ಒಪ್ಪಿದರೆ ಅಲ್ಲಿ ಗುಂಡಿಯ ತೆಗೆದು ಇದ್ದಂತೆ ಮಣ್ಣು ಮಾಡ್ತಾರೊ

ಅಂಚೆಲಿ ಹಿಂದಿಯೇ ಮೊದಲಂತೆ ರೈಲಲ್ಲಿ ಕನ್ನಡ ಇಲ್ವಂತೆ
ಬ್ಯಾಂಕಲ್ಲಿ ಕೇಳೋದ್ ಬ್ಯಾಡ್ವಂತೆ ಕನ್ನಡ ಮಾಯ ಆಯ್ತಂತೆ
ಆಳೋರು ಕೈಯ ಕೊಟ್ರಂತೆ ಹಿಂದಿಯ ದಾಸರಾಗ್ ಬಿಟ್ರಂತೆ
ವಲಸೆಯೆ ಎಲ್ಲಾ ಹೆಚ್ಚಾಯ್ತು, ಕೆಲಸಾನೆ ನಿಂಗೆ ದೂರಾಯ್ತು
ನಿಂಗು ತಾಕತ್ತಿದೆ ಮಗನೆ, ತಲೆಯೆತ್ತಿ ನಿಲ್ಲೋ ಸಿವನೆ
ನಿದ್ದೆ ಬಿಡು ಎದ್ದು ನೋಡು ಹೆಜ್ಜೆಯಿಟ್ಟು ನುಗ್ಗಿಬಿಡು || ಹುಟ್ಟಿದ ಊರಿಗೆ ||

Jan 29, 2016

ಕು ಸ ಮಧುಸೂದನ್: ಮೂರು ಪದ್ಯಗಳು.

ಕು.ಸ. ಮಧುಸೂದನ್
ಮೂರು ಪದ್ಯಗಳು
ಯಾವುದೂ ಹೊಸತೇನಲ್ಲ!
ಹೊಸಬಾಟಲಿಯಲ್ಲಿ ಹಳೆ ಮದ್ಯ
ಹೊಸದ್ವನಿಯಲ್ಲಿ ಹಳೆ ಘೋಷಣೆಗಳು
ಹೊಸನಾಯಕರ ಬಾಯಲ್ಲಿ ಹಳೆಯ ಘರ್ಜನೆಗಳು
ಹೊಸ ದಾರಿಯಲ್ಲಿ ಹಳೆ ಹೆಜ್ಜೆಗಳು
ತಟ್ಟೆ ಹೊಸತಾದರು ಊಟ ಹಳೆಯದೆ
ಬಟ್ಟೆ ಹೊಸತಾದರು ದೇಹ ಹಳೆಯದೆ
ನಾಯಕ ಹೊಸಬನಾದರು ಭಟ್ಟಂಗಿ ಹಳಬನೇ!
ಹಳೆ ಪ್ರಪಂಚದಲ್ಲಿ ಹೊಸ ಶೋಷಕರು
ಹಳೆ ಹೋರಾಟದಲ್ಲಿ ಹೊಸ ಕ್ರಾಂತಿಕಾರಿಗಳು
ಹೊಸ ಕವಿತೆಗೆ ಜೋತುಬಿದ್ದ ಅದೇ ಹಳೆ ಕವಿಗೆ
ತೆರೆದುಕೊಂಡದ್ದು ಮಾತ್ರ ಹೊಸ ಕಿವಿಗಳು!

**************
ಒಳ್ಳೆಯ ಮನುಷ್ಯ!
ಒಳ್ಳೆಯ ಮನುಷ್ಯನನ್ನು ಎಲ್ಲರೂ ಇಷ್ಟಪಡುತ್ತಾರೆ!
ಆದರೆ ಒಳ್ಳೆ ಮನುಷ್ಯನಾಗಲು ಯಾರೂ ತಯಾರಿರೋದಿಲ್ಲ
ಅನ್ನೋದೆ ವಿಷಾದನೀಯ!
ನೋಡಿ:
ಯಾವನೊ ಒಬ್ಬ ದಾರಿಹೋಕ
ನಡೆದು ಹೋಗುವಾಗ ಸುಮ್ಮನೇ ಸುರಿದು ಹೋಗುತ್ತಿದ್ದ
ಬೀದಿ ನಲ್ಲಿಯ ನಿಲ್ಲಿಸಿದಾಗ ಜನ ಅವನನ್ನು
ಅಚ್ಚರಿ ಚಕಿತನನ್ನಾಗಿ ನೋಡುತ್ತಾರೆ
ನೀರು ವೃಥಾ ಸೋರಿ ಹೋಗುವುದನ್ನು ನೋಡುವ ಜನ
ಕಾರ್ಪೋರೇಷನ್ನಿಗೆ ಪೋನ್ ಮಾಡುತ್ತಾರೆಯೇ ಹೊರತು
ನಲ್ಲಿ ನಿಲ್ಲಿಸಲು ತಯಾರಿರುವುದಿಲ್ಲ!
ಒಳ್ಳೆಯ ಮನುಷ್ಯ ಮೆಚ್ಚಲಷ್ಟೇ ಬೇಕು!
*****************
ಬನ್ನಿ ಮಾತಾಡೋಣ:
ಬನ್ನಿ ಮಾತಾಡೋಣ
ಗೋರಿಗಳಾದ ಊರುಗಳ ಬಗ್ಗೆ
ಕಾರ್ಖಾನೆಗಳಾದ ಗದ್ದೆಗಳ ಬಗ್ಗೆ
ಬಯಲಾದ ಕಾಡುಗಳ ಬಗ್ಗೆ
ನೀರಿರದೆ ಸೊರಗದ ನದಿಗಳ ಬಗ್ಗೆ
ಬನ್ನಿ ಇವತ್ತೊಂದು ದಿನವಾದರೂ ಮಾತಾಡೋಣ:
ದರವೇಸಿಗಳೆಲ್ಲ ಪ್ರಭುಗಳಾದ ಬಗ್ಗೆ
ಮಾಲೀಕರೆಲ್ಲ ಕೂಲಿಗಳಾದ ಬಗ್ಗೆ
ಕೂಲಿಗಳೆಲ್ಲ ಬಿಕಾರಿಗಳಾದ ಬಗ್ಗೆ
ಬಿಕಾರಿಗಳೆಲ್ಲ ಸತ್ತುಹೋದ ಬಗ್ಗೆ
ಬನ್ನಿ ಮಾತಾಡಿಬಿಡೋಣ ಕೊನೆಯದಾಗಿ
ನಿಮ್ಮ ಕೈ ಮುಗಿಯುತ್ತೇನೆ!

ಮೇಕಿಂಗ್ ಹಿಸ್ಟರಿ: ಕಂಪನಿಯ ಹೊಗಳುಭಟ್ಟ ಮಕ್ಕಳು

making history
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಬ್ರಿಟೀಷರೆಡೆಗೆ ಒಡೆಯರ್ ಕುಟುಂಬ ತೋರಿದ ನಿಷ್ಠೆ ರಾಜವಂಶದ ಆಡಳಿತದ ಉಳಿದ ಅವಧಿಯಲ್ಲೂ ಬದಲಾಗಲಿಲ್ಲ. ಸಹಕಾರಿ ಒಪ್ಪಂದಕ್ಕೆ ಸಹಿ ಹಾಕಿದ ಕೆಲವು ದಿನಗಳ ನಂತರ ಲಕ್ಷ್ಮಿ ಅಮ್ಮಣ್ಣಿ ಮತ್ತವರ ಅತ್ತೆ ದೇವಜಮ್ಮಣ್ಣಿ ಗವರ್ನರ್ ಜೆನರಲ್ ಗೆ ಕೃತಜ್ಞತಾಪತ್ರ ಬರೆಯುತ್ತಾರೆ. “ನಮ್ಮ ಮಕ್ಕಳಿಗೆ ಮೈಸೂರು, ನಗರ ಮತ್ತು ಚಿತ್ರದುರ್ಗವನ್ನು ನೀವು ದಯಪಾಲಿಸಿರುವುದು ಮತ್ತು ಪೂರ್ಣಯ್ಯನವರನ್ನು ದಿವಾನರನ್ನಾಗಿ ನೇಮಿಸಿರುವುದು ನಮಗೆ ಅತೀವ ಸಂತಸವನ್ನುಂಟುಮಾಡಿದೆ. ನಮ್ಮ ಸರಕಾರ ಅಧಿಕಾರವಂಚಿತವಾಗಿ ನಲವತ್ತು ವರುಷಗಳಾಗಿತ್ತು. ಈಗ ನಮ್ಮ ಮಕ್ಕಳಿಗೆ ಸರಕಾರದಲ್ಲಿರುವ ಅವಕಾಶವನ್ನು ನೀಡುವ ಕೃಪೆ ತೋರಿದ್ದೀರಿ ಮತ್ತು ದಿವಾನರಾಗಿ ಪೂರ್ಣಯ್ಯನವರನ್ನು ನೇಮಿಸಿದ್ದೀರಿ. ಸೂರ್ಯ ಚಂದ್ರರಿರುವವರೆಗೆ ನಾವು ನಿಮಗೆ ಎದುರಾಡುವುದಿಲ್ಲ. ಯಾವಾಗಲೂ ನಾವು ನಿಮ್ಮ ರಕ್ಷಣೆಯಲ್ಲಿರುತ್ತೀವಿ, ಆಜ್ಞಾಪಾಲಕರಾಗಿರುತ್ತೀವಿ. ನೀವು ನಮಗೆ ಮಾಡಿದ ಈ ಸಹಾಯದ ನೆನಪು ಮುಂದಿನ ಎಲ್ಲಾ ತಲೆಮಾರಿನವರಲ್ಲೂ ಇರುತ್ತದೆ. ನಿಮ್ಮ ಸರಕಾರದ ಮೇಲಿನ ನಮ್ಮ ಅವಲಂಬನೆಯನ್ನು ನಮ್ಮ ವಂಶಾವಳಿಯಲ್ಲಾರೂ ಮರೆಯುವುದಿಲ್ಲ”. (17)

ಮೈಸೂರು ಮತ್ತು ಕರ್ನಾಟಕದಲ್ಲಿ ಗೆರಿಲ್ಲಾ ಯುದ್ಧದ ಲಕ್ಷಣಗಳು 1831ರಲ್ಲಿ ಕಾಣಿಸಿಕೊಂಡಾಗ ಮದ್ರಾಸಿನ ಗವರ್ನರ್ ಲಷಿಂಗ್ಟನ್ ಗೆ ರಾಜ ಪತ್ರ ಬರೆಯುತ್ತಾರೆ: “ನಿಮ್ಮ ದೃಡ ನಿಶ್ಚಯ ಮತ್ತು ಕಾರುಣ್ಯದಿಂದ ನನಗೆ ಅತ್ಯಂತ ಉನ್ನತ ಪದವಿ ಸಿಕ್ಕಿದೆ; ನಾನು ಹುಟ್ಟಿದ ಶ್ರೀರಂಗಪಟ್ಟಣದ ಮುಖ್ಯಸ್ಥನಾಗುವ ಅವಕಾಶ ಲಭಿಸಿದೆ. ದಯಾಮಯನಾದ ದೇವರು ನಿಮ್ಮ ಪ್ರೀತಿ – ಕರುಣೆಯ ನೆರಳನ್ನು ನಮ್ಮ ಮೇಲೆ ಸದಾ ಇರುವಂತೆ ನೋಡಿಕೊಳ್ಳಲಿ. ನಿಮ್ಮ ನಿರ್ದೇಶನದ ಪ್ರಕಾರವೇ ಶ್ರೀರಂಗಪಟ್ಟಣದ ವ್ಯವಹಾರಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ನನ್ನನ್ನು ಬೆಳೆಸಿ ಪೋಷಿಸಿ ರಕ್ಷಿಸುತ್ತಿರುವವರು ನೀವು. ನನ್ನಾಸೆಗಳು ಈಡೇರಲು ನಿಮ್ಮ ಕರುಣೆಯನ್ನು ನಿರೀಕ್ಷಿಸುವೆ. ನೀವು ನಮ್ಮೆಡೆಗೆ ತೋರಿದ ಕೃಪೆಗಳಲ್ಲಿ ಹಾಲಿ ರೆಸೆಡೆಂಟರ ನೇಮಕ ಪ್ರಮುಖವಾದುದು. ಅತ್ಯಂತ ಅರ್ಹರಾದ ಈ ರೆಸಿಡೆಂಟರು ತಮ್ಮ ನ್ಯಾಯಪರತೆಯ ಸಲಹೆಗಳಿಂದ ನಮ್ಮ ಸರಕಾರದ ವ್ಯವಹಾರಗಳನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುತ್ತಾರೆ. ನನ್ನ ವ್ಯವಹಾರದ ನಿರ್ವಹಣೆಯಲ್ಲಿ ಮತ್ತು ನನ್ನ ಏಳಿಗೆಯಲ್ಲಿ ರೆಸಿಡೆಂಟರು ವಹಿಸುವ ಪಾತ್ರವನ್ನು ಲೇಖನಿಯಿಂದಾಗಲೀ, ಮಾತಿನಿಂದಾಗಲೀ ವರ್ಣಿಸುವುದು ಅಸಾಧ್ಯ. ನಿಮಗೆ ಸರಿಯಾದ ರೀತಿಯಿಂದ ಧನ್ಯವಾದಗಳನ್ನೇಳುವುದೂ ನನಗೆ ಶಕ್ಯವಿಲ್ಲ.

ಮತ್ತಿನ್ನೇನು ಹೇಳಲಿ” (18)

ಮತ್ತೇನೂ ಬೇಡ! ಅಯ್ಯೋ ವಿಧಿಯೇ! ಹೇಳುವುದಕ್ಕೇನು ಉಳಿದಿದೆ?

ಅದೇ ವರುಷ ಆರ್ಥಿಕ ಮತ್ತು ರಾಜಕೀಯ ಅಸ್ಥಿರತೆಯ ನೆಪವೊಡ್ಡಿ ಬ್ರಿಟೀಷರು ಮೈಸೂರಿನ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಂಡರು. ಬ್ರಿಟೀಷ್ ಸರಕಾರದ ಈ ನಿರ್ಧಾರವನ್ನು ಕೇಳಿ ಬೇಸರಗೊಂಡ ರಾಜ ಕ್ಷೀಣ ಅಳುವಿನ ಮೂಲಕ ಅಸಹನೆ ತೋರಿದ; ರಾಜನ ಪ್ರತಿಕ್ರಿಯೆಯನ್ನು ಫೋರ್ಟ್ ಸೇಂಟ್ ಜಾರ್ಜಿಗೆ ಬರೆದ ಪತ್ರದಲ್ಲಿ ರೆಸೆಡೆಂಟ್ ಕ್ಯಾರಾಮೇಯರ್ ವಿವರಿಸುತ್ತಾ “……ನಿನ್ನೆ ಸಂಜೆ ರಾಜನ ಜೊತೆ ಚರ್ಚೆ ನಡೆಸಿದೆ…..ರಾಜನ ಸುತ್ತ ಅವನ ಕುಟುಂಬದವರಿದ್ದರು – ಮಾನಸಿಕವಾಗಿ ಜರ್ಜರಿತರಾಗಿದ್ದರು. ಸಂಧಾನ ನಡೆಸಲು ರಾಜ ನನ್ನ ಸಹಾಯ ಕೇಳಿದ. ಸಾಮ್ರಾಜ್ಯದಾದ್ಯಂತ ರಾಜನ ವ್ಯಕ್ತಿತ್ವಕ್ಕೆ ಅಪಮಾನವುಂಟಾಗುವುದನ್ನು ತಡೆಯುವುದು ಆತನ ಪ್ರಮುಖ ಉದ್ದೇಶವಾಗಿತ್ತು. ….. ಇಡೀ ಮೈಸೂರು ಸಂಸ್ಥಾನವನ್ನು ನೇರ ಆಡಳಿತಕ್ಕೆ ಒಳಪಡಿಸುವ ಗವರ್ನರ್ ಜೆನರಲ್ ನ ನಿರ್ಧಾರದಲ್ಲಿ ರವಷ್ಟು ಬದಲಾವಣೆ ಮಾಡಬೇಕೆನ್ನುವುದು ರಾಜನ ಕೋರಿಕೆಯಾಗಿತ್ತು. ಮೈಸೂರಿನ ಎಂಟು ಗ್ರಾಮಗಳನ್ನು ಬಿಟ್ಟುಕೊಟ್ಟರೆ ಸಾಕು ನಾನು ‘ರಾಜ’ನಾಗಿಯೇ ಉಳಿಯುತ್ತೇನೆ ಎಂಬುದಾತನ ಕೋರಿಕೆ”. (19)

ತನ್ನ ವಯಸ್ಸಾದ ಮೂಳೆಗಳಿಗೆ ಕಚಗುಳಿ ಇಟ್ಟುಕೊಂಡು ನಗುತ್ತಾ ವೆಲ್ಲೆಸ್ಲಿ ಮರಣಗುಂಡಿಯೊಳಗೆ ಮಗ್ಗಲು ಬದಲಿಸಿರಬೇಕು. ತುಣುಕು ಚೂರಿಗೆ ಅರ್ಹನೆಂದು ಸ್ವತಃ ನಂಬಿದ್ದ ರಾಜನಿಗೆ ಪೂರ್ತಿ ಪೌಂಡ್ ಬ್ರೆಡ್ಡೇ ಲಭಿಸಿತ್ತು!

ಸಹಕಾರಿ ಒಪ್ಪಂದಕ್ಕೆ ಸಹಿ ಹಾಕಿದಾಗ ರಾಜನಿನ್ನೂ ಅಂಬೆಗಾಲಿಡುತ್ತಿದ್ದ ಹಸುಗೂಸು. ಈಗ ಮೂವತ್ತೈದು ವರ್ಷದ ಗಂಡಸು. ಮೂರು ವಾರದ ನಂತರ ಈ ಕೈಗೊಂಬೆ ರಾಜ ಗವರ್ನರ್ ಜೆನರಲ್ ವಿಲಿಯಂ ಬೆಂಟಿಕ್ ಗೆ ಒಂದು ಪತ್ರ ಬರೆಯುತ್ತಾನೆ. “ನನ್ನನ್ನು ಎತ್ತರಕ್ಕೇರಿಸುವ ಸಾಮರ್ಥ್ಯವಿರುವ ನಿಮ್ಮ ಅಮೂಲ್ಯ ಸಲಹೆಗಳಿಗಾಗಿ ಎದುರು ನೋಡುತ್ತಿದ್ದೀನಿ. ಕಾರಣ ನನ್ನನ್ನು ಸಾಕಿ ರಕ್ಷಿಸಿ ಪೋಷಿಸಿದ ಘನ ಸರಕಾರಕ್ಕೆ ನನ್ನ ಜೀವ ಮುಡಿಪು……

ಸೋಲರಿಯದ ಬ್ರಿಟೀಷ್ ಸರಕಾರದ ಕಾಂತಿಯಿಂದ ಹೈದರಾಲಿ ಎಂಬ ಶಕ್ತ ನಕ್ಷತ್ರ ಮುಳುಗಲಾರಂಭಿಸಿದಾಗಷ್ಟೇ ನನ್ನ ಮನೆಯ ಮೇಲೆ ಏಳಿಗೆಯ ಸೂರ್ಯೋದಯವಾಗಿದ್ದು; ಸರಕಾರದ ಕೃಪೆಯ ಅಂಚಿನಿಂದ.

ಆ ಸಂದರ್ಭದಲ್ಲಿ ಘನ ಸರಕಾರ ಈ ದಿಕ್ಕುಗೆಟ್ಟ ಕುಟುಂಬಕ್ಕೆ ಜೀವ ಕೊಟ್ಟು ಶಕ್ತಿ ನೀಡಿತು. ಪ್ರಾರ್ಥಿಸುವುದರ ಹೊರತಾಗಿ ನಮ್ಮ ಕುಟುಂಬ ಬ್ರಿಟೀಷ್ ಸರಕಾರಕ್ಕೆ ಯಾವ ಸೇವೆಯನ್ನೂ ನೀಡಲಾಗಲಿಲ್ಲ. ಯುದ್ಧದಲ್ಲೂ ಭಾಗಿಯಾಗಲಿಲ್ಲ. ಆಕ್ರಮಿಸಿದ ರಾಜ್ಯವನ್ನಾಳುವ ಹಕ್ಕು ಸರಕಾರದ್ದು. ಏನೇನೂ ಅಲ್ಲದ ನನ್ನನ್ನು ಕಂಪನಿಯು ಮಗನಂತೆ ಕಂಡಿತು….. ಈ ರಾಜ್ಯದ ಪೀಠದ ಮೇಲೆ ನನ್ನನ್ನು ಕುಳ್ಳಿರಿಸಿದರು. ನಾನಿನ್ನೂ ಮಗುವಾಗಿದ್ದಾಗಲೇ ಪಿತೃ ವಾತ್ಸಲ್ಯದಿಂದ ನನಗೀ ಸ್ಥಾನ ನೀಡಿದರು.

ಕಂಪನಿ ಸರಕಾರದ ದತ್ತು ಪುತ್ರ ನಾನೆಂದು ಎಣಿಸಿದ್ದೇನೆ.

ನನ್ನ ನಿಷ್ಠೆಭರಿತ ಸೇವೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ. ಶಕ್ತಿಯುತ ಸರಕಾರಕ್ಕೆ ನನ್ನ ನಿಷ್ಠೆಯನ್ನು ತೋರಿಸಿ ನಿಮ್ಮ ಕರುಣೆ ಭವಿಷ್ಯದಲ್ಲೂ ಮುಂದುವರೆಯಲಿ ಎಂದು ಆಶಿಸುತ್ತೇನೆಯೇ ಹೊರತು ಉಳಿದ ರಾಜರಂತೆ ಸಾಮ್ರಾಜ್ಯವನ್ನು ವಿಸ್ತರಿಸುವ, ಸಂಪತ್ತೆಚ್ಚಿಸಿಕೊಳ್ಳುವ ಆಸೆಗಳು ನನಗಿಲ್ಲ.

…….ನನ್ನ ಬಾಲ್ಯದ ಸಮಯದಲ್ಲಿದ್ದ ‘ಗೌರವ’ವನ್ನು, ಅಸಹಾಯಕ ಪರಿಸ್ಥಿಯನ್ನು ಈಗ ವರುಷಗಳ ನಂತರ ಪ್ರಬುದ್ಧತೆಯ ದೃಷ್ಟಿಯಿಂದ ನೆನಪಿಸಿಕೊಂಡಾಗ ನಾಚಿಕೆಯಾಗುತ್ತದೆ. ದುಃಖಭರಿತ ಆತ್ಮ ಅಸ್ತಿತ್ವದಲ್ಲಿರುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವುದೇ ಲೇಸು. ದೈವಾಂಶಸಂಭೂತರಾದ ದೊರೆಯ ದೃಷ್ಟಿ ನನ್ನ ಮೇಲೆ ಬಿದ್ದು ನನ್ನ ವಿಧಿಯನ್ನೇ ಬದಲಿಸಿಬಿಟ್ಟಿತು. ನಿರ್ಗತಿಕನ ಮೇಲೆ ನಿಮ್ಮ ಕೃಪಾ ದೃಷ್ಟಿ ಬಿದ್ದರೆ ಅವನ ಅವಶ್ಯಕತೆಗಳೆಲ್ಲವೂ ಸಾಕೆನ್ನುವವರೆಗೆ ಪೂರೈಸುತ್ತದೆ, ಅವನ ದೌರ್ಬಲ್ಯಗಳೇ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ದೊರೆಯ ಒಂದು ತೀಕ್ಷ್ಣದೃಷ್ಟಿಗೆ ತಾಮ್ರದಂತಿರುವ ನನ್ನನ್ನು ಶುದ್ಧ ಚಿನ್ನವನ್ನಾಗಿ ಪರಿವರ್ತಿಸುವ ಶಕ್ತಿಯಿದೆ.” (20)

ಇಷ್ಟು ಮಾತುಗಳನ್ನು ಲೇಖನಿಯಿಂದ ಹರಿಯಬಿಟ್ಟ ವಸಾಹತುಶಾಹಿಯ ಮಧ್ಯವರ್ತಿ ಕೊನೆಗೆ ವಿಷಯಕ್ಕೆ ಬಂದ. “ಈ ಸಂದರ್ಭದಲ್ಲಿ ನನ್ನ ಕೋರಿಕೆ ಮತ್ತು ಮೊದಲ ಆಸೆಯನ್ನು ನಿಮ್ಮಲ್ಲಿ ಹೇಳಬಯಸುತ್ತೇನೆ…..ಈ ಸರಕಾರದ ಬಗ್ಗೆ ನೀವು ಮಾಡಿರುವ ಹೊಸ ಯೋಜನೆಯಲ್ಲಿ ನನ್ನ ಹೆಸರಾಗಲೀ, ಕುಟುಂಬದ ಪ್ರತಿಷ್ಟೆಯಾಗಲಿ ಪ್ರಸ್ತಾಪವಾಗಿಲ್ಲ. ಗೌರವ ಮತ್ತು ಪ್ರತಿಷ್ಠೆಗೆ ಮುಕ್ಕಾಗುವುದು ಜೀವ ಕಳೆದುಕೊಳ್ಳುವುದಕ್ಕಿಂತ ಹೆಚ್ಚಿನ ಭೀತಿ ಮೂಡಿಸುತ್ತದೆ. ದೊರೆಯಲ್ಲಿ ನನ್ನ ಕೋರಿಕೆಯೆಂದರೆ ಹೊಸ ನೀತಿಯಲ್ಲಿ ನನ್ನ ಹೆಸರು ಮುಂದುವರೆಸಬೇಕು ಮತ್ತು ಪ್ರತಿಷ್ಟೆಯನ್ನು ಕಾಪಿಡಬೇಕು. ನನ್ನ ಬಹುತೇಕ ವ್ಯವಹಾರಗಳು ಮೈಸೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ನಡೆಯುತ್ತಾದ್ದರಿಂದ ಆ ತಾಲ್ಲೂಕಿನ ಆಳ್ವಿಕೆ ಕೈತಪ್ಪಿಹೋದರೆ ಕಷ್ಟವಾಗುತ್ತದೆ.” (21)

ಮಂಡಿಯೂರಿ ಬೇಡಿಕೊಂಡಂತಿದ್ದ ರಾಜನ ಪತ್ರಕ್ಕೆ ಬೆಂಟಿಕ್ ಕಾಟಾಚಾರಕ್ಕೊಂದು ಪ್ರತಿಕ್ರಿಯೆ ಕೊಟ್ಟ. ರಾಜನ ಹಳಹಳಿಕೆಗಳನ್ನು ಲೆಕ್ಕಕ್ಕಿಟ್ಟುಕೊಳ್ಳದ ಬ್ರಿಟೀಷರು 1881ರವರೆಗೂ ತಮ್ಮ ನಿರ್ಣಯವನ್ನು ಜಾರಿಯಲ್ಲಿಟ್ಟಿದ್ದರು. ಪ್ರತಿಷ್ಟೆ ಮತ್ತು ಗೌರವ ಮಣ್ಣುಪಾಲಾದ ಮೇಲೂ ಮೂರನೇ ಕೃಷ್ಣರಾಜ ಒಡೆಯರ್ ತುಂಬು ಜೀವನವನ್ನು ಪೂರೈಸಿದರು, ಬ್ರಿಟೀಷರಿಗೆ ಸಂಪೂರ್ಣ ನಿಷ್ಠರಾಗಿ. ಒಂದಿನಿತೂ ಪಶ್ಚಾತ್ತಾಪದ ಮನೋಭಾವವಿಲ್ಲದೆ ಸುಖದ ಸುಪ್ಪತ್ತಿಗೆಯಲ್ಲಿ ರಾಜ ಕೊನೆಯ ಉಸಿರೆಳೆದ.

ಶಾಮ ರಾವ್ ಬರೆಯುತ್ತಾರೆ: “1846ರ ಜನವರಿ ತಿಂಗಳಿನಲ್ಲಿ ಬ್ರಿಟೀಷರು ಸಟ್ಲೆಜ್ ನದಿದಂಡೆಯಲ್ಲಿ ಸಿಖ್ ಪಡೆಗಳನ್ನು ಸೋಲಿಸಿದ ಸುದ್ದಿ ಗವರ್ನರ್ ಜನರಲ್ ಮುಖಾಂತರ ಮಾರ್ಚಿನಲ್ಲಿ ಮೈಸೂರು ಮಹಾರಾಜರಿಗೆ ತಲುಪುತ್ತದೆ. ವಿಜಯಕ್ಕೆ ಅಭಿನಂದನೆಗಳನ್ನು ಕಳುಹಿಸಿದ ಮಹಾರಾಜ ಕೋಟೆಯೊಳಗಿಂದ ಆಕಾಶಕ್ಕೆ 21 ಸುತ್ತು ಗುಂಡು ಹಾರಿಸುವ (ರಾಯಲ್ ಸೆಲ್ಯೂಟ್) ಮೂಲಕ ಬ್ರಿಟೀಷರ ಗೆಲುವನ್ನು ಸಂಭ್ರಮಿಸುತ್ತಾರೆ. ಬ್ರಿಟೀಷ್ ಸೈನ್ಯದ ಗೆಲುವಿನ ಸುದ್ದಿಗಳು ತಲುಪಿದಾಗಲೆಲ್ಲ ಇಂತಹ ಗೌರವಾನ್ವಿತ ಕೆಲಸಗಳು ನಡೆಯುತ್ತಲೇ ಇದ್ದವು. ಲಾರ್ಡ್ ದಾಲ್ ಹೌಸಿ ಭಾರತ ಸರಕಾರದ ಉನ್ನತ ಹುದ್ದೆ ಅಲಂಕರಿಸಿದಾಗ ಮಹಾರಾಜ ಏಪ್ರಿಲ್ 1848ರಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತಾ ಕಳೆದ ನಲವತ್ತೊಂಭತ್ತು ವರುಷಗಳಿಂದ ಬ್ರಿಟೀಷ್ ಸರಕಾರದೊಂದಿಗಿರುವ ಸ್ನೇಹ ಮತ್ತು ಗೌರವವನ್ನು ಮುಂದೆಯೂ ಕಾಪಿಡುವುದು ನನ್ನ ಕರ್ತವ್ಯ ಎಂದು ಬರೆಯುತ್ತಾರೆ.” (22)

ಕೈಗೊಂಬೆ ರಾಜ ಬ್ರಿಟೀಷರ ಮುಂದೆ ಮತ್ತಷ್ಟು ಮಗದಷ್ಟು ಶರಣಾದರು. ಫೆಬ್ರವರಿ 1854ರಲ್ಲಿ ತನ್ನ ಅರವತ್ತನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗವಹಿಸುವಂತೆ ಕೋರಿ ಗವರ್ನರ್ ಜನರಲ್ ದಾಲ್ ಹೌಸಿಗೊಂದು ಆಮಂತ್ರಣ ಪತ್ರ ಬರೆಯುತ್ತಾರೆ: “ನನ್ನ ಏಳಿಗೆಗೆ ನನಗೇ ಮುಜುಗರವಾಗುವ ರೀತಿಯಲ್ಲಿ ಆಸಕ್ತಿ ತೋರುವ ದೊರೆಗಳಿಗೆ, ನನಗೆ ಅರವತ್ತು ವರುಷ ತುಂಬಿದ ಸಂದರ್ಭದಲ್ಲಿ ಶಾಸ್ತ್ರರೀತ್ಯ ಕೆಲವು ವಿಧಿವಿಧಾನದ ಸಮಾರಂಭವನ್ನು ಆಯೋಜಿಸಿದ್ದೇನೆ ಎಂದು ತಿಳಿಸಬಯಸುತ್ತೇನೆ. ದೊರೆಗಳ ಅಮೂಲ್ಯ ಸಮಯ ವ್ಯರ್ಥ ಪಡಿಸುವ ಉದ್ದೇಶ ನನಗಿಲ್ಲ. ನಮ್ಮಲ್ಲಿ ಅರವತ್ತು ವರುಷವಾಗುವುದು ತುಂಬ ಸಂಭ್ರಮದ ಸಂಗತಿ. ನಮ್ಮ ಕುಟುಂಬಕ್ಕೆ ಈ ವಿಷಯ ಮತ್ತಷ್ಟು ಮಹತ್ವದ್ದಾಗಿರುವುದಕ್ಕೆ ಕಾರಣ ಕಳೆದ ಇಪ್ಪತ್ತು ತಲೆಮಾರಿನಿಂದ ನಮ್ಮ ವಂಶದಲ್ಯಾರೂ ಅರವತ್ತರ ಪ್ರಾಯ ಮುಟ್ಟಿಲ್ಲ. ನನ್ನನ್ನು ಉಳಿಸಿ ಬೆಳೆಸಿದ ನೀವು ಆ ದಿನದಂದು ನಮ್ಮ ಜೊತೆ ಇರಬೇಕೆಂದು ಆಶಿಸುತ್ತೇನೆ. ನನ್ನ ಸುವಿಧಿಗೆ ಬ್ರಿಟೀಷ್ ಸರಕಾರದ ರಕ್ಷಣೆಯೇ ಕಾರಣ. ಬ್ರಿಟೀಷ್ ಸರಕಾರವೆಂದರೆ ನನ್ನ ಹೆತ್ತವರ ಸಮಾನ…..” (23)

ವಯಸ್ಸಿನ ಜೊತೆಜೊತೆಗೆ ರಾಜನ ನಾಯಿ ನಿಯತ್ತು ಮತ್ತು ಹೊಗಳುಭಟ್ಟತನವೂ ಹೆಚ್ಚುತ್ತಿದ್ದುದಕ್ಕೆ ಶಾಮರಾಯರ ಈ ಹೇಳಿಕೆಯೇ ಸಾಕ್ಷಿ: “ಬ್ರಿಟೀಷ್ ಸೈನ್ಯ ಸೆಬಾಸ್ಟಪೋಲ್ ನಲ್ಲಿ ರಷ್ಯನ್ನರ ವಿರುದ್ಧ ಜಯಗಳಿಸಿದ ಸುದ್ದಿ ದಾಲ್ ಹೌಸಿಯ ಪತ್ರದ ಮೂಲಕ ತಿಳಿದಾಗ ಮಹಾರಾಜ ಅಭಿನಂದಿಸುತ್ತಾ ದೊರೆಗಳ ಪತ್ರದಲ್ಲಿದ್ದ ವಿಜಯದಲೆಗಳನ್ನು ಸಂಭ್ರಮಿಸುವ ಉದ್ದೇಶದಿಂದ ಭಾರತದ ಸಂಪ್ರದಾಯದಲ್ಲಿ ಮಾಡುತ್ತಿದ್ದಂತೆ ಬೀದಿ ಬೀದಿಯಲ್ಲಿ ಸಿಹಿ ಹಂಚಲು ಮತ್ತು ರಾಯಲ್ ಸೆಲ್ಯೂಟ್ ಮೂಲಕ ಗೌರವ ಸಲ್ಲಿಸುವಂತೆ ಆದೇಶ ನೀಡಿದ್ದೇನೆ ಎಂದು ಬರೆಯುತ್ತಾರೆ.

1856ರ ಫೆಬ್ರವರಿ 29ರಂದು ಕ್ಯಾನಿಂಗ್ ಕಲ್ಕತ್ತಾಗೆ ಆಗಮಿಸಿ ಗವರ್ನರ್ ಜನರಲ್ ಹುದ್ದೆಯನ್ನಲಂಕರಿಸಿದರು. ಪತ್ರ ಮುಖೇನ ಮಹಾರಾಜರಿಗೆ ಈ ವಿಷಯ ತಿಳಿದಾಗ ನಿಮ್ಮ ಆಗಮನ ರಾಜ್ಯಗಳಿಗೆ ಮತ್ತು ಒಟ್ಟಾರೆಯಾಗಿ ಭಾರತದ ಜನರಿಗೆ ಹೆಚ್ಚು ಸಂತಸ ಮತ್ತು ಸಮೃದ್ಧಿ ತರಲಿದೆಯೆಂದು ನಂಬಿದ್ದೇವೆ ಎಂದು ಬರೆಯುತ್ತಾರೆ. ಲಾರ್ಡ್ ಕ್ಯಾನಿಂಗರಿಂದ ರಷ್ಯಾದ ಜೊತೆಗಾದ ಶಾಂತಿಯ ಒಪ್ಪಂದದ ಬಗ್ಗೆ ಮಹಾರಾಜರಿಗೆ ತಿಳಿದಾಗ, ವಿಷಯ ತಿಳಿಯುತ್ತಿದ್ದಂತೆಯೇ ರಾಯಲ್ ಸೆಲ್ಯೂಟಿಗೆ ಆದೇಶಿಸಿದ್ದಾಗಿ ತಿಳಿಸುತ್ತಾ ‘ದೊರೆಗಳ ಪತ್ರದಿಂದ ಬ್ರಿಟೀಷ್ ಮಹಾರಾಣಿಯವರ ಸೈನ್ಯ ಕ್ರಿಮಿಯಾದಲ್ಲಿ ರಷ್ಯನ್ನರ ವಿರುದ್ಧ ವಿಜಯದುಂಧುಬಿ ಮೊಳಗಿಸಿದ ವಿಷಯ ತಿಳಿದು ಅಪಾರ ಸಂತಸವಾಯಿತು. ಶೌರ್ಯ, ಸಾಹಸ, ಯುದ್ಧ ಕಾಲದ ಸಂಕಷ್ಟಗಳನ್ನು ತಾಳ್ಮೆಯಿಂದ ಎದುರಿಸಿದ ರೀತಿಯೆಲ್ಲವೂ ಪ್ರತಿಷ್ಟೆ ಮತ್ತು ವ್ಯಕ್ತಿತ್ವನ್ನು ಎತ್ತಿ ಹಿಡಿಯುವಂತವು. ಯುರೋಪಿನ ಶಾಂತಿ ಒಳ್ಳೆಯದನ್ನೇ ಮಾಡುತ್ತದೆ. ಇಂಗ್ಲೆಂಡಿನಲ್ಲಿ ಶಾಂತಿಯ ಮರುಸ್ಥಾಪನೆಯಾಗಿರುವುದಕ್ಕೆ ದೊರೆಗಳಿಗೆ ಮತ್ತು ಬ್ರಿಟೀಷ್ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತಾ ಮಹಾರಾಣಿಯವರು ನೂರ್ಕಾಲ ಸಮೃದ್ಧಿಯಾಗಿ ಬಾಳಲಿ ಎಂದು ಪ್ರಾರ್ಥಿಸುತ್ತೇನೆ. ವ್ಯಾಪಾರ ಮತ್ತು ವ್ಯವಹಾರ ಹೆಚ್ಚಲಿ, ಪ್ರಪಂಚದ ಎಲ್ಲಾ ಭಾಗಗಳಿಗೂ ತಲುಪಲಿ’.”(24)

ಕಂಪನಿಯ ದತ್ತು ಪುತ್ರರ ಬಂದೂಕಿನಿಂದ ಗುಂಡು ಹಾರಿದ್ದು ವಸಾಹತುಶಾಹಿಯ ನಿರ್ನಾಮಕ್ಕಲ್ಲ ಬದಲಿಗೆ ಅವರ ಕುಟಿಲ ವಿಜಯಗಳಿಗೆ. ಇದನ್ನು ರಾಜರ ಶಾಂತಿಪ್ರಿಯತೆ ಎಂದು ತಪ್ಪಾಗಿ ಅರ್ಥೈಸಿಬಿಡಬಾರದು. ಕೈಗೊಂಬೆ ರಾಜ ಮುಠ್ಠಾಳನೇನಲ್ಲ. ಬ್ರಿಟೀಷ್ ರಕ್ಷಣೆಯ ಫ್ಯೂಡಲ್ ದೊರೆಯಾತ. ಜನಪ್ರತಿರೋಧವನ್ನು ಹತ್ತಿಕ್ಕುವುದರಲ್ಲಿ ಯಾವತ್ತಿಗೂ ಹಿಂದೆ ಬೀಳಲಿಲ್ಲ. ಆತನ ಬಂದೂಕು ಮೈಸೂರನ್ನು ಬ್ರಿಟೀಷ್ ಇಂಡಿಯಾದ ಆಭರಣವನ್ನಾಗಿ ಮಾಡಿತು; ರಾಣಿ ತೊಟ್ಟಿದ್ದ ಭಾರತವೆಂಬ ನೆಕ್ಲೇಸಿನಲ್ಲಿದ್ದ ಅಮೂಲ್ಯವಾದ ಮುತ್ತು.

ಕೃಷ್ಣರಾಜ ಒಡೆಯರ್ ಯಾವಾಗಲೂ ಇಟ್ಟುಕೊಳ್ಳುತ್ತಿದ್ದ ಖಡ್ಗದ ಹಿಡಿಯಲ್ಲಿ ಇಂಗ್ಲೆಂಡಿನ ರಾಣಿ ದಯಪಾಲಿಸಿದ ‘ಪದಕ’ವಿತ್ತು. (25)

Jan 28, 2016

ಪಿ. ಸಾಯಿನಾಥ್: ಇದು ಹಿಂದೂ ಮೇಲ್ಜಾತಿ ಮೂಲಭೂತವಾದಿಗಳು ಮತ್ತು ದಲಿತ, ದಲಿತೇತರರು, ಮನುಷ್ಯತ್ವವುಳ್ಳ ಮನುಷ್ಯರ ನಡುವಿನ ಸಂಘರ್ಷ

ಸಾಂದರ್ಭಿಕ ಚಿತ್ರ
ರೋಹಿತ್ ವೇಮುಲ ಆತ್ಮಹತ್ಯೆಯನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ಉದ್ದೇಶಿಸಿ ನಮ್ಮ ನಡುವಿನ ಖ್ಯಾತ ಪತ್ರಕರ್ತ ಮತ್ತು ಚಿಂತಕ ಪಿ. ಸಾಯಿನಾಥ್ ಮಾಡಿದ ಭಾಷಣದ ಕನ್ನಡ ಭಾವಾನುವಾದ. . . 
ಕನ್ನಡಕ್ಕೆ: ಡಾ. ಕಿರಣ್ ಎಂ ಗಾಜನೂರು
ಭಾರತದ ತಳವರ್ಗದ, ತುಳಿತಕ್ಕೊಳಗಾದವರ, ಅಂಚಿಗೆ ತಳ್ಳಲ್ಪಟ್ಟವರ ನೆಲೆಯಲ್ಲಿ ಯೋಚಿಸಿದರೆ ರೋಹಿತ್ ಬಹಳ ದೊಡ್ಡ ಸಾಧನೆ ಮಾಡಿದ್ದಾನೆ! ಆತ ಮಾಡಿದ ಸಾಧನೆಯನ್ನು ನೀವು ತಿಳಿದುಕೊಳ್ಳಬೇಕಾದರೆ ಈ ದೇಶದ ಜನಗಣತಿಯ ವರದಿಗಳನ್ನು, ಸಮುದಾಯಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳ ಸಮೀಕ್ಷೆಗಳನ್ನು, ನ್ಯಾಷನಲ್ ಸ್ಯಾಂಪೆಲ್ ಸರ್ವೇ (National Sample Survey) ಇಲಾಖೆಯ ಅಂಕಿ-ಅಂಶಗಳನ್ನು ಗಮನಿಸಬೇಕು. ಆಗ ಆತ ಮಾಡಿರುವ ಸಾಧನೆ ಏನು ಎಂಬುದು ಅರ್ಥವಾಗುತ್ತದೆ.
1.28 ಬಿಲಿಯನ್ ಜನಸಂಖ್ಯೆಯುಳ್ಳ ಭಾರತದಲ್ಲಿ ಕೇವಲ 3 ಶೇಕಡಾ, ಕೇವಲ ಮೂರೇ ಮೂರು ಶೇಕಡಾ ಗ್ರಾಮೀಣ ಕುಟುಂಬಗಳಲ್ಲಿ ಮಾತ್ರ ಪದವೀಧರರಿದ್ದಾರೆ. ಇದು ಭಾರತದ ಒಟ್ಟು ಜನಸಂಖ್ಯೆಯ ಸರಾಸರಿ. ಇದನ್ನು ಆದಿವಾಸಿ ಮತ್ತು ದಲಿತರ ಹಿನ್ನಲೆಯಲ್ಲಿ ನೋಡಿದರೆ ಆ ಸಂಖ್ಯೆ ಇನ್ನೂ ಕೆಳಹಂತದಲ್ಲಿದೆ. ಭಾರತದ ಜನಗಣತಿಯ ವರದಿಗಳು ತೋರಿಸುವಂತೆ ಈ ದೇಶದಲ್ಲಿ ಸುಮಾರು 400 ಮಿಲಿಯನ್ ಜನರು ಇದುವರೆಗೂ ಯಾವುದೇ ಹಂತದ ಶಿಕ್ಷಣ ಸಂಸ್ಥೆಗಳ ಒಳಭಾಗವನ್ನು ನೋಡಿಯೇ ಇಲ್ಲ ! ಆ ಹಿನ್ನಲೆಯಿಂದ ಬಂದ ರೋಹಿತ್ ಮೆರಿಟ್ ಕೋಟಾದಲ್ಲಿ ಪಿ.ಹೆಚ್.ಡಿ ಹಂತಕ್ಕೆ ಬರುತ್ತಾನೆ ಎಂದರೆ ಅದಕ್ಕಿಂತ ಸಾಧನೆ ಏನಿದೆ! ಇದು ಸಾಧನೆ ಎಂದರೆ.
ಆದರೆ ದುರಂತ ಎಂದರೆ ಇಂದು ಈ ಸಮಾಜದ ನಿರಂತರ ಶೋಷಣೆಯನ್ನು, ತಾರತಮ್ಯವನ್ನು ಜಯಿಸಿ ಮೆರಿಟ್ ಆಧಾರದಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಪಿ.ಹಚ್.ಡಿ ಹಂತಕ್ಕೆ ಬಂದ ರೋಹಿತನ ವಿರುದ್ಧ ನಿಂತಿರುವುದು ಕಾಲೇಜು ಡ್ರಾಪ್ ಔಟ್ ಆದ ಶಿಕ್ಷಣ ಸಚಿವರು! ನನಗೆ ತಿಳಿದಿರುವಂತೆ ಇವರು ಭಾರತದ ರಾಜಕೀಯ ಇತಿಹಾಸದಲ್ಲಿನ ಅತ್ಯಂತ ಕಳಪೆ ಶಿಕ್ಷಣ ಸಚಿವರು. ಇದರಲ್ಲಿ ನನಗೆ ಯಾವ ಸಂಶಯವೂ ಇಲ್ಲ! ನಾನು ರೋಹಿತ್ ನನ್ನು ಅವರೊಂದಿಗೆ ಹೋಲಿಸುವುದಿಲ್ಲ, ಏಕೆಂದರೆ ನಮಗೆ ಅವರ ಶೈಕ್ಷಣಿಕ ಅರ್ಹತೆಗಳೇನು ಎಂಬುದೇ ಗೊತ್ತಿಲ್ಲ! ಅವರು ಪ್ರತಿಬಾರಿ ಪ್ರಮಾಣ ಪತ್ರಗಳನ್ನು ಸಲ್ಲಿಸುವಾಗ ಅವರ ಪದವಿ ಬದಲಾಗುತ್ತಿರುತ್ತವೆ, ಕಳೆದ ಚುನಾವಣೆಯ ನಂತರ ಅವರು ಎ.ಎಲ್ ವಿಶ್ವವಿದ್ಯಾನಿಲಯದ ಪ್ರಮಾಣ ಪತ್ರ ಪ್ರದರ್ಶಿಸಿದ್ದರು. . . 
sainath speech on rohit vemula
ಆ ಹುಡುಗನನ್ನು ನೋಡಿ, ಅವನು ಶಾಲೆಗಳ ಮುಖವನ್ನೇ ನೋಡದ ಆ ೪೦೦ ಮಿಲಿಯನ್ ಜನರ ನಡುವಿನಿಂದ ಬಂದಿದ್ದಾನೆ, ಈ ದೇಶದ ಶೋಷಿತ ಇತಿಹಾಸದ ಮಧ್ಯದಿಂದ ಎದ್ದು ಬಂದಿದ್ದಾನೆ. ಈ ಸಮಾಜದ ಶೋಷಣೆಯಿಂದ ನಲುಗಿ, ಜೀತ ಕಾರ್ಮಿಕನಾಗಿ ದುಡಿದು ಪಿ.ಹೆಚ್.ಡಿ ಅಧ್ಯಯನಕ್ಕೆಂದು ಬಂದಿದ್ದಾನೆ.
ಆದರೆ ಏನಾಗುತ್ತಿದೆ ನೋಡಿ? ಕೇಂದ್ರ ಮಂತ್ರಿ ನಾನು ಎರಡು ಪತ್ರ ಬರೆದೆ ಎನ್ನುತ್ತಾರೆ! ಶಿಕ್ಷಣ ಸಚಿವರು ನಾನು ಐದು ಪತ್ರ ಬರೆದೆ ಎಂದು ಹೇಳುತ್ತಿದ್ದಾರೆ. ಆಶ್ಚರ್ಯದ ವಿಷಯ ಎಂದರೆ ಆ ಹುಡುಗರ ಮೇಲೆ ಏನು ಕ್ರಮ ಜರುಗಿಸಲಾಗಿದೆ ಎಂದು ಐದು ಪತ್ರ ಬರೆಯುವ ಶಿಕ್ಷಣ ಸಚಿವರು ಆ ಮಕ್ಕಳಿಗೆ ಕಳೆದ ಏಳು ತಿಂಗಳಿಂದ ಶಿಷ್ಯವೇತನ ಏಕೆ ಕೊಟ್ಟಿಲ್ಲ ಎಂದು ಒಂದೇ ಒಂದು ಸಾಲು ಬರೆಯುವುದಿಲ್ಲ. . .
ಆ ಮಕ್ಕಳ ಕುರಿತು ತೆಗೆದುಕೊಂಡ ಕ್ರಮವನ್ನು ತಿಳಿಯಲು ಐದು ಪತ್ರ ಬರೆಯುವ ನೀವು ಪತ್ರದಲ್ಲಿ ಆ ಹುಡುಗನ ಕುಟುಂಬ ಆಧರಿಸಿದ್ದ, ಆತ ಸರಳವಾಗಿ ಬದುಕು ನಡೆಸಿ ಉಳಿಸಿ ಕುಟುಂಬಕ್ಕೆ ಕಳುಹಿಸುತ್ತಿದ್ದ ಶಿಷ್ಯವೇತನವನ್ನು ತಡೆದ ವ್ಯವಸ್ಥೆಯ ಕುರಿತು ಒಂದು ಪ್ಯಾರ, ಒಂದು ಸಾಲು, ಒಂದೇ ಒಂದು ಪದವನ್ನು ಬರೆಯುವುದಿಲ್ಲ. ಆತನ ಮೇಲೆ ತೆಗೆದುಕೊಂಡ ಕ್ರಮದ ಮೇಲಿನ ನಿಮ್ಮ ಆಸಕ್ತಿ ಆತನ ಶಿಷ್ಯವೇತನ ನಿಲ್ಲಿಸಿರುವುದರ ಕುರಿತು, ಅದನ್ನೇ ನಂಬಿಕೊಂಡ ಆತನ ಕುಟುಂಬದ ಪರಿಸ್ಥಿತಿಯ ಮೇಲೆ ಇರುವುದಿಲ್ಲ!
ನಾವು ಇಂದು ರಾಜಕೀಯ, ಅಕಾಡೆಮಿಕ್ ಮತ್ತು ರಾಷ್ಟ್ರ ಎಂಬ ಮೂರು ಮುಖ್ಯ ವಿಷಯಗಳನ್ನು ಗಮನಿಸುವ ಹಂತಕ್ಕೆ ಬಂದಿದ್ದೇನೆ. ನಾನು ಈ ವಿಷಯಗಳ ಕುರಿತ ಪತ್ರಿಕಾ ವರದಿಗಳನ್ನು ಗಮನಿಸುತ್ತಿದ್ದೇನೆ, ಇಲ್ಲಿ ಆತ ಬರೆದ ಆತ್ಮಹತ್ಯಾ ಪತ್ರವನ್ನು ಆತ್ಮಹತ್ಯೆಯಿಂದ ಪ್ರತ್ಯೇಕಿಸಿ ನೋಡುವ ಪ್ರಯತ್ನ ನಡೆಯುತ್ತಿದೆ, ಆತ್ಮಹತ್ಯಾ ಪತ್ರವನ್ನು ಆತನ ಬದುಕಿನಿಂದ ಪ್ರತ್ಯೇಕಿಸಿ ನೋಡುವ ಪ್ರಯತ್ನಗಳು ನಡೆಯುತ್ತಿವೆ. ನಾವು ರೋಹಿತನ ಸಾವನ್ನಷ್ಟೆ ನೋಡಿದರೆ ಸಾಲದು, ಬದಲಾಗಿ ಆತ ಬದುಕಿದ ಬದುಕಿನ ರೀತಿಯನ್ನು ಗಮನಿಸಬೇಕು. ರೋಹಿತನ ಬದುಕನ್ನು, ಸಂಘಟನೆಯನ್ನು, ಸ್ನೇಹಿತರನ್ನು ಸಂಗಾತಿಗಳನ್ನು ಆತ ಬರೆದ ಪತ್ರದಿಂದ ಪ್ರತ್ಯೇಕಿಸಿ ಓಹೋ ಇದು ಒಂದು ದುಖ: ತರುವ ಆತ್ಮಹತ್ಯೆ ಅಷ್ಟೆ, ಇದಕ್ಕೂ ಶೋಷಣೆಗೂ, ಇದಕ್ಕೂ ಈ ಸಮಾಜದಲ್ಲಿನ ರಚನಾತ್ಮಕ ತಾರಮತ್ಯಕ್ಕೂ ಸಂಬಂದವಿಲ್ಲ ಎಂದು ಮಾತನಾಡುವ ಶುಷ್ಕ ಮನಸ್ಸಿನವರು ನಮ್ಮ ನಡುವೆ ಬರೆಯುತ್ತಿದ್ದಾರೆ. . . . 
ಇನ್ನೂ ಮುಖ್ಯವಾದ ವಿಚಾರ ಇಂದು ಹಿಂದೂಸ್ಥಾನ್ ಟೈಮ್ಸ್ ನಲ್ಲಿ ಒಬ್ಬ ಪತ್ರಕರ್ತ ಇದು ಒತ್ತಡದಿಂದ ಸಂಬವಿಸಿದ ಆತ್ಮಹತ್ಯೆ ಎಂದು ಬರೆಯುತ್ತಾರೆ. ಇದೇ ವ್ಯಕ್ತಿ ಹಿಂದೆ ರೈತರ ಆತ್ಮಹತ್ಯೆಗಳು ಒತ್ತಡದಿಂದ ಸಂಬವಿಸಿರುವುದು ಇದಕ್ಕೂ ಆರ್ಥಿಕತೆಗೂ ಯಾವುದೇ ಸಂಬಂದವಿಲ್ಲ ಎಂದು ಬರೆದಿದ್ದರು. ಇಂದು ರೋಹಿತನ ಆತ್ಮಹತ್ಯೆ ಒತ್ತಡದಿಂದ ಸಂಬವಿಸಿದೆ ಇದು ಶೋಷಣೆಯ ಕಾರಣಕ್ಕೆ ನಡೆದ ಘಟನೆ ಅಲ್ಲ ಎಂದು ಬರೆಯುತ್ತಾರೆ. ನಾವು ಇವರಿಗೆ 27ರ ಆ ಹುಡುಗ ಸಾಯುವ ಒತ್ತಡ ಎಲ್ಲಿಂದ ಬಂತು? ನಿಮ್ಮ ತರ್ಕವೆ ಸರಿ ಎಂದಾದರೆ ಈ ಸಮಾಜದ ಕೆಲವೇ ವರ್ಗ ಮತ್ತು ಜಾತಿಯವರು ಯಾಕೆ ಒತ್ತಡಕ್ಕೆ ಒಳಗಾಗುತ್ತಾರೆ? ಎಂಬ ಪ್ರಶ್ನೆಗಳನ್ನು ಕೇಳಬೇಕಿದೆ. . .
ಇಲ್ಲಿ ಇನ್ನೊಂದು ವಿಷಪೂರಿತ ತರ್ಕವೊಂದಿದೆ. ಈ ಲೇಖಕ ವಿವರಿಸುವಂತೆ ಇದು ಭಾವಾನಾತ್ಮಕ ಒತ್ತಡದಿಂದ ಸಂಬವಿಸಿದ ಆತ್ಮಹತ್ಯೆ ಅಲ್ಲ! ಬದಲಾಗಿ ಇದು ಮನೋವೈಜ್ಞಾನಿಕ , ಮಾನಸಿಕ ಸ್ಥಿಮಿತಕ್ಕೆ ಸಂಬಂಧಿಸಿ ಆತನೊಳಗೆ ಸಂಬವಿಸಿರುವ ಸಂಗತಿಯೆಂದು ಅವರು ಬರೆಯುತ್ತಾರೆ. ರೋಹಿತ್ ನ ಆತ್ಮಹತ್ಯಾ ಪತ್ರ ಎಲ್ಲಿಯೂ ನಮಗೆ ಬೇರೆ ಕಾರಣಗಳನ್ನು ತೋರಿಸುವುದಿಲ್ಲ ಅದು ಆತನೊಳಗೆ ಹುಟ್ಟಿರುವ ಜೀಗುಪ್ಸೆಯ ಕಾರಣದಿಂದ ಸಂಬವಿಸಿರುವ ಕ್ರಿಯೆ, ಇದಕ್ಕೂ ಹೊರಗಿನ ಸಂಗತಿಗಳಿಗೂ ಸಂಬಂಧವಿಲ್ಲ ಎಂದು ಬರೆಯುತ್ತಾರೆ. ಇಂತಹ ಮಂದಿ ನಮ್ಮ ನಡುವೆ ಇದ್ದಾರೆ. ಸದ್ಯಕ್ಕೆ ದೇಶದ ವಿದ್ಯಾರ್ಥಿಗಳ ಈ ಎಲ್ಲಾ ಹೋರಾಟವನ್ನು ಒಂದು ಪಿತೂರಿ ಎಂದು ಕರೆಯುತ್ತಿರುವ ಬರಹಗಾರರನ್ನು ಮರೆತು ಬಿಡೋಣ.... 
ಅದಕ್ಕೆ ಬದಲಾಗಿ ವಿಶಾಲ ದೃಷ್ಟಿಯಲ್ಲಿ ಈ ಸಮಾಜವನ್ನು ಅರ್ಥಮಾಡಿಕೊಳ್ಳಲು, ಸಮಸ್ಯೆಯನ್ನು ಗುರುತಿಸಲು ಈ ಸಮಾಜದಲ್ಲಿ ರೋಹಿತ್ ಎಲ್ಲಿದ್ದಾನೆ, ದಲಿತರು ಎಲ್ಲಿದ್ದಾರೆ, ಎಲ್ಲಿ ಶೋಷಣೆ ನಡೆಯುತ್ತಿದೆ ಎಂಬುದನ್ನು ನೋಡೋಣ. 3 ದಿನಗಳ ಹಿಂದೆ ನಾನು ರಾಜಸ್ಥಾನದಲ್ಲಿ ಇದ್ದೆ. ಅಲ್ಲಿನ ಹೈಕೋರ್ಟ್ “ರಾಜಸ್ಥಾನ್ ಪಂಚಾಯಿತಿ ಕಾಯ್ದೆಯನ್ನು” ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಅನೂರ್ಜಿತಗೊಳಿಸಿದೆ. ನಿಮಗೆ ಗೊತ್ತಿರಲಿ ಪ್ರಸ್ತಾಪಿತ ರಾಜಸ್ಥಾನ್ ಪಂಚಾಯಿತಿ ಕಾಯ್ದೆ ಶೈಕ್ಷಣಿಕ ಅರ್ಹತೆಯನ್ನು ಒಂದು ಮಾನದಂಡ ಎಂದು ಪರಿಗಣಿಸಿರುವುದರಿಂದ ಇದು ಶೇ ತೊಂಭತ್ತರಷ್ಟು ಮಹಿಳೆಯರು ಗ್ರಾಮೀಣ ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸುವ ಅವಕಾಶವನ್ನು ನಿರಾಕರಿಸುತ್ತದೆ. ಇದು ಜಾರಿಯಾದರೆ ಶೇ75 ದಲಿತ ಮಹಿಳೆಯರು ಗ್ರಾಮೀಣ ಚುನಾವಣೆಗಳಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳಲಿದ್ದಾರೆ.
ವಿವರವಾಗಿ ನೋಡುವುದಾದರೆ ಈ ಕಾಯ್ದೆಯ ಪ್ರಕಾರ 21 ವರ್ಷಕ್ಕೆ ಮೇಲ್ಪಟ್ಟ ಪ್ರಾಥಮಿಕ ಶಿಕ್ಷಣ ಪೂರೈಸಿದ ಮಹಿಳೆಯರು ಚುನಾವಣೆಗೆ ಸ್ಪರ್ಧಿಸಬಹುದು. 21ರ ವಯಸ್ಕರ ಗುಂಪಿನಲ್ಲಿ ಕೇವಲ 11.1 ಶೇ ಜನರು ಮಾತ್ರ ಶಾಲೆಯಲ್ಲಿ ಕಲಿತಿದ್ದಾರೆ. ಆ ಕಾರಣಕ್ಕೆ ಮಿಕ್ಕ 89.9 ಶೇ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನೆ ಕಳೆದುಕೊಳ್ಳಲಿದ್ದಾರೆ. ಇನ್ನೂ ಪಂಚಾಯಿತಿ ಅಧ್ಯಕ್ಷರಾಗಲು 8ನೇ ತರಗತಿಗಿಂತ ಮೇಲಿನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು ಎನ್ನುತ್ತದೆ ಈ ಕಾಯ್ದೆ. ಇದರಿಂದ 90.4 ಶೇ ದಲಿತ ಮಹಿಳೆಯರು ಮತ್ತು 62 ಶೇ ಪುರುಷರು ಪಂಚಾಯಿತಿ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ.
ನಿಮಗೆ ಒಂದು ಆಸಕ್ತಿಕರ ಅಂಶ ತಿಳಿಸಬೇಕು ದೇಶದ ಎಲ್ಲಾ ನ್ಯಾಯಾಲಯಗಳಿಗೆ ಹೋಲಿಸಿದರೆ ರಾಜಸ್ತಾನ್ ಹೈಕೊರ್ಟ್ ಗೆ ಒಂದು ವಿಷೇಷತೆ ಇದೆ. ಅಲ್ಲಿ ಸಂವಿಧಾನ ಕರ್ತೃ ಡಾ. ಅಂಬೇಡ್ಕರ್ ಪ್ರತಿಮೆ ನ್ಯಾಯಾಲಯದ ಹೊರಗೆ ಟ್ರಾಫಿಕ್ ಕಡೆ ಮುಖ ಮಾಡಿಕೊಂಡು ನಿಂತಿದ್ದರೆ ನ್ಯಾಯಾಲಯದ ಒಳಗೆ ಮನುವಿನ 20 ಅಡಿ ಪ್ರತಿಮೆ ನಿಲ್ಲಿಸಲಾಗಿದೆ. ದೇಶದ ಯಾವ ನ್ಯಾಯಾಲಯದಲ್ಲಿಯೂ ಇಂತಹ ಅಸಂಗತಿ ಕಾಣಲು ಸಿಗಲಾರದು! ಇರಲಿ, ವಿಷಯ ಅದಲ್ಲ. ಈ ರೀತಿಯ ಅನ್ಯಾಯಯುತ ಕಾಯ್ದೆಯನ್ನು ಸುಪ್ರಿಂ ಕೊರ್ಟ್‌ನ ಸಂವಿಧಾನಿಕ ಪೀಠ ಪರಿಶಿಲನೆಗೆ ಒಳಪಡಿಸುತ್ತದೆ ಎಂಬ ಭರವಸೆಯನ್ನು ನಾವು ಉಳಿಸಿಕೊಳ್ಳೊಣ. ಆದರೆ ಈ ಕಾಯ್ದೆ ನಿಜಕ್ಕೂ ಅನ್ಯಾಯ ಮತ್ತು ಶೋಷಣೆಯ ಪ್ರತೀಕವಾಗಿದೆ ಇದರ ವಿರುದ್ಧ ನಾವು ಹೋರಾಟವನ್ನು ರೂಪಿಸಬೇಕಿದೆ. . . .
ಇದೊಂದೇ ಸಮಸ್ಯೆಯಲ್ಲ. ನಾವು ಜಾತಿಗಳ ಸಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಂಕಿ-ಅಂಶಗಳನ್ನು ನೋಡಿದರೆ ಈ ದೇಶದಲ್ಲಿ ಬಡವರ ಬದುಕು ಏನಾಗಿದೆ ಎಂಬುದು ಅರ್ಥವಾಗುತ್ತದೆ. ಒಂದು ವಿಷಯದಲ್ಲಿ ನಾನು ಸ್ಮೃತಿ ಇರಾನಿಯವರ “ಇದು ದಲಿತ ಮತ್ತು ದಲಿತೇತರರ ನಡುವಿನ ಸಂಘರ್ಷವಲ್ಲ” ಎಂಬ ಹೇಳಿಕೆಯನ್ನು ಸಮರ್ಥಿಸುತ್ತೇನೆ. ಖಂಡಿತ ಅದು ಸತ್ಯ. ಇದು ದಲಿತ ಮತ್ತು ದಲಿತೇತರರ ನಡುವಿನ ಹೋರಾಟವಲ್ಲ ಬದಲಾಗಿ ಇದು “ಹಿಂದೂ ಮೇಲ್ಜಾತಿ ಮೂಲಭೂತವಾದಿಗಳು ಮತ್ತು ದಲಿತ, ದಲಿತೇತರರ ಹಾಗೂ ಮನುಷ್ಯತ್ವವುಳ್ಳ ಮನುಷ್ಯರ ನಡುವಿನ ಸಂಘರ್ಷ”. ನಾವು ಮೊದಲೇ ಗುರುತಿಸಿದಂತೆ ಈ ದೇಶದಲ್ಲಿ 400 ಮಿಲಿಯನ್ ಜನರು ಇದುವರೆಗೂ ಯಾವ ಮಾದರಿಯ ಶಿಕ್ಷಣ ಸಂಸ್ಥೆಗಳ ಒಳಗೂ ಕಾಲಿಡಲಾಗಿಲ್ಲ ಈ ದೇಶಧ ಒಟ್ಟು ಜನಸಂಖ್ಯೆಯ ಮೂರನೆ ಒಂದು ಭಾಗದಷ್ಟು ಜನರಿಗೆ ಶಿಕ್ಷಣವನ್ನು ನಿರಾಕರಿಸಲಾಗಿದೆ ಇವರಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ವಂಚನೆಗೆ ಒಳಪಟ್ಟವರು ದಲಿತರು, ಆದಿವಾಸಿಗಳು, ಮಹಿಳೆಯರು ಮತ್ತು ಬಡ ಹಿಂದುಳಿದ ಸಮುದಾಯಗಳ ವಿಧ್ಯಾರ್ಥಿಗಳು 
ಇಂದು ಭಾರತ 68 ಮಿಲಿಯನ್ ಪದವೀಧರರನ್ನು ಹೊಂದಿದೆ. ಆದರೆ ಇದರ ಆರು ಪಟ್ಟು ಜನರು ಅನಕ್ಷರಸ್ತರಾಗಿದ್ದಾರೆ. ಈ ದೇಶದಲ್ಲಿ ಅಸಮಾನತೆ ಎಷ್ಟು ಹೆಚ್ಚಿದೆ ಎಂದರೆ ಎಲ್ಲಾ ಮಾದರಿಯ ತಾರತಮ್ಯಗಳನ್ನು ಮರುಹೇರಿಕೆ ಮಾಡಲಾಗುತ್ತಿದೆ. ಇಂದು ಸಮೀಕ್ಷೆಗಳನ್ನು ನೋಡಿದರೆ ಈ 1.28 ಬಿಲಿಯನ್ ಜನಸಂಖ್ಯೆಯ ದೇಶದಲ್ಲಿ 100 ಜನ ಭಾರತೀಯರು ಒಟ್ಟು ಜನಸಂಖ್ಯೆಯ ಎರಡನೇ ಒಂದು ಭಾಗದಷ್ಟು ಸಂಪತ್ತನ್ನು ಹೊಂದಿದ್ದಾರೆ. ಅದರಲ್ಲಿ 15 ಜನ ಭಾರತೀಯರು ಈ ದೇಶದ ಅರ್ಧದಷ್ಟು ಜನಸಂಖ್ಯೆಯ ಸಂಪತ್ತನ್ನು ಹೊಂದಿದ್ದಾರೆ. ಈ ಎಲ್ಲಾ ಪ್ರಕರಣಗಳ ಪರಿಣಾಮ ಅನುಭವಿಸುತ್ತಿರುವವರು ಈ ದೇಶದ ದಲಿತ, ಆದಿವಾಸಿ, ಮಹಿಳೆ ಮತ್ತು ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳು. . . 
ಇನ್ನು ಈ ದೇಶದ ಜನಸಂಖ್ಯೆಯ ಉಗ್ರಾಣವಾದ ಗ್ರಾಮೀಣ ಭಾರತವನ್ನು ನೋಡಿದರೆ ನಿಮಗೆ ಆಶ್ಚರ್ಯವಾಗಬಹದು. ಈ ದೇಶದ ಪ್ರತಿಶತಃ ಒಂದರಷ್ಟು ಜನರು ಈ ದೇಶದ ಶೇ 46 ರಷ್ಟು ಸಂಪನ್ಮೂಲಗಳ ಮೇಲಿನ ಒಡೆತನ ಹೊಂದಿದ್ದಾರೆ. ಇದು ಅಮೇರಿಕಾಕ್ಕಿಂತ ಕೆಟ್ಟ ಸ್ಥಿತಿ. ಅಲ್ಲಿ ಶೇ1 ಜನರು ಆ ದೇಶದ 39ಶೇ ಸಂಪತ್ತಿನ ಒಡೆತನ ಹೊಂದಿದ್ದಾರೆ. ಈ ಎಲ್ಲಾ ಘಟನೆಗಳು ಕಳೆದು 15-20 ವರ್ಷಗಳಿಂದ ಈಚೆಗೆ ನವ ಉದಾರಿಕರಣದ ಹೆಸರಿನಲ್ಲಿ ಘಟಿಸಲ್ಪಟ್ಟಿವೆ.
ನೀವು ಒಪ್ಪಿ ಬಿಡಿ, ನಿಜವಾದ ಅರ್ಥದಲ್ಲಿ ಇಂದು ನಿಮ್ಮ ದೇಶ ಅಳಲ್ಪಡುತ್ತಿರುವುದು “ಸಾಮಾಜಿಕ ಮತ್ತು ಆರ್ಥಿಕ ಮೂಲಭೂತವಾದಿಗಳ ಒಕ್ಕೂಟ" ಮತ್ತು ಮಾರುಕಟ್ಟೆ ಆರ್ಥಿಕತೆಯ ಮೂಲಭೂತವಾದಿಗಳಿಂದ ಇದು ಭಾರತಕ್ಕೆ ಸೀಮಿತವಾದ ಮೈತ್ರಿಕೂಟವಲ್ಲ ಬದಲಾಗಿ ಇದು ವಿಶ್ವವ್ಯಾಪಿಯಾಗಿದೆ. ನಿಮಗೆ ಆಶ್ಚರ್ಯವಾಗಬಹದು ಜಗತ್ತಿನ ಅತ್ಯಂತ ಅಪಾಯಕಾರಿ ಬಂಡವಾಳಶಾಹಿ ಆರ್ಥಿಕತೆಯ ಜನಕ ಯುನೈಟೆಡ್ ಸ್ಟೇಟ್ಸ್ ಜಗತ್ತಿನ ಅತಿ ಅಪಾಯಕಾರಿಯಾದ ಎರಡು ಧಾರ್ಮಿಕ ಮೂಲಭೂತವಾದಿಗಳಾದ ಇಸ್ರೇಲ್ ಮತ್ತು ಸೌದಿ ಅರೇಬಿಯಾಗಳನ್ನು ತನ್ನ ಯುದ್ಧಗಳಿಗಾಗಿ ಆಶ್ರಯಿಸಿದೆ. ಹಾಗೆ ನೊಡಿದರೆ ನಾವೀಗ ಅತ್ಯಂತ ಶಕ್ತಿಶಾಲಿ, ಒಗ್ಗೂಡಿದ ಶತ್ರುವಿನ ವಿರುದ್ದ ಹೋರಾಡಬೇಕಿದೆ. . . . 
ನಾವು ಇಂದು ನಮ್ಮ ನಡುವಿನ ರಚನಾತ್ಮಕ, ಸಾಮಾಜಿಕ, ಆರ್ಥಿಕ, ಕಾನೂನಾತ್ಮಕ ತಾರತಮ್ಯಗಳ ಕುರಿತು ಧ್ವನಿ ಎತ್ತಬೇಕಿದೆ ಈ ದೇಶದಲ್ಲಿನ 75ಶೇ ಗ್ರಾಮೀಣ ಕುಟುಂಬಗಳ ಮುಖ್ಯಸ್ಥ ಹೆಚ್ಚೆಂದರೆ ತಿಂಗಳಿಗೆ 5000 ಸಂಪಾದನೆ ಮಾಡುತ್ತಿದ್ದಾನೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ. ಇದು ದೇಶದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ದೊರೆಯುವ ಚಿತ್ರಣ. ಇದನ್ನು ನೀವು ಅದಿವಾಸಿ ಮತ್ತು ದಲಿತರಿಗೆ ಅನ್ವಯಿಸಿ ನೋಡಿದರೆ ಪರಿಸ್ಥಿತಿ ಇನ್ನೂ ಭೀಕರವಾಗಿದೆ, ಇದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. . .
ಪ್ರಮುಖವಾಗಿ academic institutionಗಳಿಗೆ ಸಂಬಂಧಿಸಿದ ಇತ್ತೀಚಿನ ಈ ಹೋರಾಟಗಳನ್ನು ಕೆಲವು ಜನರು ಓಹೋ ಇದು ಹೈದರಾಬಾದ್ ಪ್ರಕರಣವಾ, ಅಯ್ಯೋ ಅಲ್ಲಿನ ಸ್ಥಿತಿಯೇ ಹಾಗಿದೆ ಬಿಡಿ ಈ ತರಹದ ಘಟನೆಗಳು ಅಲ್ಲಿ ನಡೆಯುತ್ತಲೇ ಇರುತ್ತವೆ ನಮಗ್ಯಾಕೆ ಎಂಬ ಮಾತುಗಳನ್ನು ಹೇಳುತ್ತಾರೆ. ಆದರೆ ನಿಮಗೆ ನಾನು ಒಂದು ವಿಷಯ ಹೇಳಬೇಕು ನಾನು ದೇಶದ ಪ್ರತಿಷ್ಟಿತ ಜವಾಹಾರ್ ಲಾಲ್ ನೆಹರು ವಿಶ್ವವಿದ್ಯಾನಿಲಯದ ಕಾರ್ಯಕಾರಿ ಮಂಡಳಿಯ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ. ಒಬ್ಬ ಕಾರ್ಯಕಾರಿ ಮಂಡಳಿಯ ಸದಸ್ಯನಾಗಿ ನನ್ನ ಅವಧಿಯ ಶೇ 80ರಷ್ಟು ಸಮಯ ಮಿಸಲಾತಿ ವಿರೋಧಿಸುವ ಮನಸ್ಸುಗಳನ್ನು ಎದುರಿಸುವುದರಲ್ಲಿಯೇ ಕಳೆದು ಹೋಗಿದೆ ಎಂಬ ಸತ್ಯವನ್ನು ನಿಮ್ಮೆದುರು ಇಡುತ್ತಿದ್ದೇನೆ. ಆ ಎಲ್ಲಾ ಹೋರಾಟಗಳು ಇಂದು ದಾಖಲೆಗಳಲ್ಲಿವೆ. ಆ ಸಮಯದಲ್ಲಿ ಸುಪ್ರಿಂ ಕೊರ್ಟ್ ಅದೇಶವನ್ನು ಧಿಕ್ಕರಿಸಿ ಹಿಂದುಳಿದ ವರ್ಗದ 27ಶೇ ಮಿಸಲಾತಿಯನ್ನು ಕಡಿತಗೊಳಿಸುವ ಪ್ರಯತ್ನಗಳು ನಡೆದವು. ಆದ್ದರಿಂದ ದಯಮಾಡಿ ಇದು ಹೈದಾರಾಬದ್ ನಲ್ಲಿ ಮಾತ್ರ ನಡೆಯುತ್ತಿರುವ ಸಂಗತಿ ಎಂಬ ಮೂರ್ಖತನದ ಹೇಳಿಕೆಗಳನ್ನು ನಂಬಬೇಡಿ. ಇಂದು ತಾರತಮ್ಯ ಎಂಬುದು ದೇಶದ ಪ್ರತಿಷ್ಟಿತ ಸಂಸ್ಥೆಗಳಲ್ಲಿಯೇ ನಡೆಯುತ್ತಿದೆ . . .
ಈ ಹಂತದಲ್ಲಿ ನಾವು ವಿಶ್ವವಿದ್ಯಾನಿಲಯಗಳ ಉಳಿವಿಗೆ ಏನು ಮಾಡಬೇಕು? ಎಂಬುದರ ಕುರಿತು ನನ್ನ ಸ್ನೇಹಿತ ಪ್ರೊ. ಸುಖ್ದೇವ್ ಥೋರಟ್ ಒಂದು ನೀಲನಕ್ಷೆಯನ್ನು ಒದಗಿಸಿದ್ದಾರೆ. ನಾನು ಅವರು ನೀಡಿದ ಆ ವರದಿಯನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ನಾವು ಬದಲಾವಣೆ ಆರಂಭಿಸುವುದಿದ್ದರೆ ಅದು ಈ ವರದಿಯಿಂದಲೇ ಆರಂಭವಾಗಲಿ, ನಮಗಿರುವ ಉತ್ತಮ ಆರಂಭ ಅದೆ ಆಗಲಿದೆ . . .
ಇದರ ಮುಂದೆ ನಾವು ಹಲವು ರಾಜಕೀಯ ಹೋರಾಟಗಳನ್ನು ನಡೆಸಬೇಕಿದೆ. ಹೊರಗೆ ಇನ್ನೂ ಹಲವು ಹೋರಾಟಗಳು ನಮ್ಮನ್ನು ಎದಿರು ನೋಡುತ್ತಿವೆ. ದಯಮಾಡಿ ಅರ್ಥಮಾಡಿಕೊಳ್ಳಿ, ಇದು ಹೈದರಾಬಾದ್ ಗೆ ಮಾತ್ರ ಸೀಮಿತವಾಗಿಲ್ಲ. ಅಲಹಬಾದ್ ವಿಶ್ವವಿದ್ಯಾನಿಲಯದಲ್ಲಿ ನನ್ನ ಸ್ನೇಹಿತ ಸಿದ್ಧಾರ್ಥ್ ವರದರಾಜ್ ಅವರನ್ನು ಇದೇ ಎಬಿವಿಪಿ ಗುಂಪು ಕುಲಪತಿಗಳ ಕಟ್ಟಡದಲ್ಲಿ ಬಂಧನಕ್ಕೆ ಒಳಪಡಿಸಿತ್ತು. ಅವರ ಭಾಷಣವನ್ನು ಕ್ಯಾಂಪಸ್ ನಲ್ಲಿ ನಿಷೇಧಿಸಲಾಯಿತು. ನೀವು ಹೊರಕ್ಕೆ ಬಂದರೆ ದಾಳಿ ನಡೆಸುತ್ತೇವೆ ಎಂದು ಬೆದರಿಕೆಯನ್ನು ಒಡ್ಡಲಾಗಿತ್ತು! ಜನ ಮರೆತಿರಬಹದು, ಮಧ್ಯಪ್ರದೇಶದ ಒಬ್ಬರು ಕುಲಪತಿಗಳನ್ನು ಮನಬಂದಂತೆ ಧಳಿಸಲಾಗಿತ್ತು, ಬಿದ್ದ ಹೊಡೆತಗಳನ್ನು ತಾಳಲಾರದೆ ಅವರು ಅಸುನೀಗಿದ್ದರು. ಇದು ಈ ವಿವಿ ಯಲ್ಲಿ ನಡೆಯುತ್ತಿರುವ ಘಟನೆ ಮಾತ್ರ ಅಲ್ಲ. ಇನ್ನೂ ನಿಮ್ಮ ಉಪಕುಲಪತಿಗಳ ವಿಷಯ ಅವರು ಧೀರ್ಘ ರಜೆಯ ಮೇಲೆ ತೆರಳಿದ್ದಾರೆ ಅವರ ರಜೆ ಹಾಗೆ ದೀರ್ಘವಾಗಲಿ ಎಂದು ಆಶಿಸುತ್ತೇನೆ . . .
ನನಗೆ ಅನ್ನಿಸುವಂತೆ ರೋಹಿತ್ ಸಾವು/ಆತ್ಮಹತ್ಯೆ ನಮ್ಮನ್ನು ಒಂದಾಗಿಸಬೇಕಿದೆಯೇ ಹೊರತು ನಮ್ಮಲ್ಲೆ ಒಡಕು ಮೂಡಿಸಬಾರದು! ಅವನು ಅವನ ಸಂಘಟನೆಯ ವಿರೋಧವನ್ನು ಮಾಡುತ್ತಿದ್ದ, ಅವನು ತನ್ನದೆ ಸ್ನೇಹಿತರನ್ನು ವಿರೋಧಿಸುತ್ತಿದ್ದ, ಎಂಬ ಹೇಳಿಕೆಗಳನ್ನು ನೀಡುವ, ಆ ಮೂಲಕ ನಮ್ಮನ್ನು ಒಡೆಯುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆತನ ನೆನಪನ್ನು ನಮ್ಮಿಂದ ಅಳಿಸುವ ಕ್ರೌರ್ಯಕ್ಕೆ, ಅನ್ಯಾಯಕ್ಕೆ ಜನ ಮುಂದಾಗುತ್ತಿದ್ದಾರೆ. ಆದರೆ ಒಂದು ಶ್ಲಾಘನೀಯ ಅಂಶ ಎಂದರೆ ಈ ಎಲ್ಲಾ ವಿರೋಧ, ತಂತ್ರ, ಕುತಂತ್ರಗಳನ್ನು ಎದುರಿಸಿ ಪ್ರತಿರೋಧ ಎಂಬುದು ದೇಶದ ಮೂಲೆ ಮೂಲೆಗಳಿಂದ ಹರಿದು ಬರುತ್ತಿದೆ ಮತ್ತು ಅದು ವಿಧ್ಯಾರ್ಥಿಗಳ ಕಡೆಯಿಂದ ಹರಿದು ಬರುತ್ತಿದೆ . . . . 
ನಿಮಗೆ ನೆನಪಿರಲಿ ಕಳೆದ 105 ದಿನಗಳಿಂದ “ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟೀಟ್ಯೋಟ್” ಪುಣೆ ವಿಧ್ಯಾರ್ಥಿಗಳು ಈ ಸರ್ಕಾರದ ವಿರುದ್ಧ ವಿಶ್ವವಿದ್ಯಾನಿಲಯದ ಮೇಲೆ ಯುಧಿಷ್ಟರನ ಹೇರಿಕೆಯನ್ನು ವಿರೋಧಿಸಿ ಹೋರಾಡುತ್ತಿದ್ದಾರೆ. ನಿಮಗೆ ಗೊತ್ತಾ ನೈಜವಾದ ಮಹಾಭಾರತದಲ್ಲಿ ಯುಧಿಷ್ಟಿರ ಎಷ್ಟು ಪರಿಶುಧ್ಧ ಆತ್ಮ ಎಂದರೆ ಅವನು ಎಂದೂ ಸುಳ್ಳನ್ನೆ ಹೇಳಿರಲಿಲ್ಲ! ಆ ಕಾರಣಕ್ಕೆ ಆತನ ರಥ ಭೂಮಿಯಿಂದ 6 ಇಂಚು ಮೇಲಕ್ಕೆ ಚಲಿಸುತ್ತಿತ್ತು. ಇದೊಂದು ಆಸಕ್ತಿಕರ ಪವಿತ್ರತೆಯ ಉದಾಹರಣೆ ಯುಧಿಷ್ಟರ ಒಬ್ಬ ಕುಡುಕ, ಜೂಜುಕೋರ, ಜೂಜಿನಲ್ಲಿ ತನ್ನ ಹೆಂಡತಿಯನ್ನೆ ಪಣವಾಗಿ ಸೋತವನು ಆದರೆ ಅವನು ಸುಳ್ಳನ್ನು ಮಾತ್ರ ಹೇಳಿರಲಿಲ್ಲ ಆ ಕಾರಣಕ್ಕೆ ಅವನು ಪವಿತ್ರ. . .! ಅವನು ದ್ರೋಣರಿಗೆ “ಅಶ್ವಥಾಮ ಸತ್ತ” ಎಂದು ಸುಳ್ಳು ಹೇಳಿದ ದಿನ ಅವನ ರಥ ನೆಲವನ್ನು ತಾಕಿತಂತೆ ಆದರೆ “ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟೀಟ್ಯೋಟ್” ನ ಯುಧಿಷ್ಟರರ ರಥ ಭೂಮಿಯಿಂದ ಮೇಲೆ ಎದ್ದೆ ಇಲ್ಲ! ಅದು ಕೆಸರಿನಲ್ಲಿ ಹೂತು ಹೋಗಿದೆ. ಆ ಕಾರಣಕ್ಕೆ ಅವರನ್ನು ಯಾರು ಗೌರವಿಸುತ್ತಿಲ್ಲ. . .. 
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿಧ್ಯಾರ್ಥಿಗಳೆ, ನೀವು ಈ ಹೋರಾಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕಿದೆ. ಈ ಹೋರಾಟದ ಜೊತೆಗೆ ಇನ್ನು ಮುಖ್ಯವಾದ ಸಂಗತಿಗಳನ್ನು ನೀವು ಮುಂಚೂಣಿಗೆ ತರಬೇಕಿದೆ. ಇದನ್ನು ನಾವು ರೋಹಿತ್ ವೇಮುಲ ಎಂಬ ಚೇತನದ ಆತ್ಮಹತ್ಯೆಯ ಪರಿಣಾಮ ಎಂದು ನಾನು ಗುರುತಿಸುತ್ತೇನೆ, ಜಗತ್ತು ಓದಿಕೊಳ್ಳುತ್ತದೆ . . .
ಬಹಳ ಹಿಂದೆ ಒಬ್ಬ ಫ್ರೆಂಚ್ ಬರಹಗಾರ ವಿಕ್ಟರ್ ಹ್ಯೂಗೋ ಬರೆಯುತ್ತಾನೆ All the forces in the world are not so powerful as an idea whose time has come.. . .ನನಗೆ ಅನ್ನಿಸುವಂತೆ 2016 ರಲ್ಲಿ ಭಾರತಕ್ಕೆ ಆ ಸಮಯ ಬಂದಿದೆ. ಆ ಅಲೋಚನೆ ಹಿಂದಿನ ಬೇಡಿಕೆ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಲಿಂಗಾಧಾರಿತ ನ್ಯಾಯದ ಹಕ್ಕೊತ್ತಾಯವಾಗಿದೆ. ಜೊತೆಗೆ ರೋಹಿತ್ ಮತ್ತು ಲಕ್ಷಾಂತರ ರೋಹಿತರುಗಳ ನ್ಯಾಯಯುತ ಹಕ್ಕಾಗಿದೆ. ನಮ್ಮ ಹೋರಾಟದ ಮಾದರಿಗಳು ಭಿನ್ನ ಇರಬಹದು ಆದರೆ ಉದ್ದೇಶ ಅಂಬೇಡ್ಕರ್ ಹೇಳಿದ ಶಿಕ್ಷಣ , ಸಂಘಟನೆ, ಹೋರಾಟದ ಹಕ್ಕುಗಳಿಗಾಗಿದೆ ಎಂಬುದನ್ನು ಮರೆಯದಿರೋಣ. . . 
ಧನ್ಯವಾದಗಳು. . . .

ಸೆನ್ಸಾರ್ ಬೋರ್ಡಿನ ಮೇಲೆ ಕೋಪವಿದ್ದರೆ ಹೀಗೂ ಮಾಡಬಹುದು!

ಸಿನಿಮಾ ಮಂದಿಗೆಲ್ಲ ಸೆನ್ಸಾರು ಬೋರ್ಡಿನ ಮೇಲೆ ಕೋಪವಿದ್ದೇ ಇರುತ್ತದೆ. ತಮಿಳಲ್ಲಿ ಬುಟ್ರು ಕನ್ನಡದಲ್ಲಿ ಬುಡ್ಲಿಲ್ಲ, ಹಿಂದೀಲಿ ಮಾತ್ರ ಕ್ಯಾರೆ ಅನ್ನಲ್ಲ ನಮಗೆ ಮಾತ್ರ ಟಾರ್ಚರ್ರು ಕೊಡ್ತಾರೆ ಅನ್ನೋ ಮಾತುಗಳು ಗಾಂಧಿನಗರದಲ್ಲಿ ಚಿತ್ರವೊಂದು ಸೆನ್ಸಾರಿಗೆ ಹೋದಾಗಿನಿಂದಲೂ ಹರಿದಾಡುತ್ತಲೇ ಇರುತ್ತವೆ. ಇನ್ನು ಟಿವಿಗಿಲ್ಲದ, ನಾಟಕಕ್ಕಿಲ್ಲದ, ಬೇರ್ಯಾವ ಕಲೆಗೂ ಇಲ್ಲದ ಸೆನ್ಸಾರು ಬೋರ್ಡು ನಮಗೆ ಮಾತ್ರ ಯಾಕೆ? ತೀರ ಅಷ್ಟೊಂದು ಕೆಟ್ಟ ಸಂಗತಿಗಳನ್ನು ತೋರಿಸಿಬಿಟ್ಟರೆ ನಂತರ ಕೇಸು ಹಾಕಿಕೊಳ್ಳಲಿ ಬಿಡಿ ಮುಂಚೇನೆ ಕಷ್ಟಪಟ್ಟು ತೆಗೆದಿದ್ದನ್ನೆಲ್ಲ ಕಟ್ ಮಾಡಿ ಬಿಸಾಕಲು ಹೇಳೋಕೆ ಅವರೆಲ್ಲ ಯಾರು? ಎಂದು ವಾದಿಸುವವರ ಸಂಖೈಯೂ ಕಮ್ಮಿಯೇನಿಲ್ಲ. ಸೆನ್ಸಾರು ಮಂಡಳಿಯ ಕಾಟಗಳು ನಮಲ್ಲಷ್ಟೇ ಸೀಮಿತವಾಗಿಲ್ಲ. British Board of Film classification ಕೂಡ ಇದೇ ರೀತಿಯ ತೊಂದರೆ ಕೊಡುತ್ತಿತ್ತಂತೆ. ಸೆನ್ಸಾರ್ ಮಂಡಳಿಯ ವಿರುದ್ಧ ಪ್ರತಿಭಟಿಸಬೇಕೆನ್ನುವವರು ಬಿ.ಬಿ.ಎಫ್.ಸಿಯ ವಿರುದ್ಧ ಪ್ರತಿಭಟಿಸಿದ ಚಾರ್ಲ್ಸ್ ಲೈನಿಯಿಂದ ಕಲಿಯುವುದು ಸಾಕಷ್ಟಿದೆ!
ಅಂದಹಾಗೆ ಚಾರ್ಲ್ಸ್ ಲೈನಿ 'ಪೈಂಟ್ ಡ್ರೈಯಿಂಗ್' (Paint drying) ಹೆಸರಿನ ಚಿತ್ರ ತೆಗೆಯುತ್ತಾನೆ. ಬಿ.ಬಿ.ಎಫ್.ಸಿಯಲ್ಲಿ ಒಂದು ಚಿತ್ರವನ್ನು ಸೆನ್ಸಾರಿಗೆ ತಂದರೆ ಮೊದಲು 145 ಡಾಲರ್ ಹಣವನ್ನು ಕಟ್ಟಿಸಿಕೊಳ್ಳಲಾಗುತ್ತದೆ, ನಂತರ ಸಿನಿಮಾದ ಪ್ರತೀ ನಿಮಿಷಕ್ಕೆ ಹತ್ತು ಡಾಲರಿನಷ್ಟು ಹಣವನ್ನು ಕಟ್ಟಬೇಕಾಗುತ್ತದೆ. ಸೆನ್ಸಾರು ಮಂಡಳಿಗೆ ದುಡ್ಡು ಕಟ್ಟಲು ಹಣವೆತ್ತಲು ಪ್ರಾರಂಭಿಸುತ್ತಾನೆ ಚಾರ್ಲ್ಸ್. ಒಟ್ಟಾದ ಹಣದ ಮೊತ್ತ ಚಿತ್ರದ ಸಮಯವನ್ನು ನಿರ್ಧರಿಸುತ್ತೆ! ಅದ್ಹೇಗೆ ಅಂತೀರಾ? ಚಿತ್ರದ ಹೆಸರು ಸೂಚಿಸುವಂತೆ ಗೋಡೆಯೊಂದಕ್ಕೆ ಪೈಂಟು ಬಳಿದಿರಲಾಗುತ್ತದೆ. ಕ್ಯಾಮೆರಾದ ತುಂಬ ಬಣ್ಣ ಬಳಿಸಿಕೊಂಡ ಗೋಡೆ. ಇಡೀ ಚಿತ್ರದಲ್ಲಿ ಬಳಿದ ಬಣ್ಣ ಒಣಗುವುದನ್ನಷ್ಟೇ ತೋರಿಸಲಾಗಿದೆ! ಮೊದಲ ನಿಮಿಷದಿಂದ ಕೊನೆಯ ನಿಮಿಷದವರೆಗೂ ಕ್ಯಾಮೆರಾ ಚೂರೂ ಮಿಸುಕದೆ ಬಣ್ಣ ಒಣಗುವ 'ಪ್ರಕ್ರಿಯೆ'ಯನ್ನು ತೋರಿಸಲಾಗಿದೆ! ಬಣ್ಣ ಒಣಗುವುದನ್ನು ಹತ್ತು ನಿಮಿಷವೂ ತೋರಿಸಬಹುದು ಒಂದು ಘಂಟೆಯೂ ತೋರಿಸಬಹುದು, ನಿಮಿಷಕ್ಕಿಷ್ಟು ಹಣ ಕಟ್ಟುವ ಚೈತನ್ಯವಿರಬೇಕಷ್ಟೇ! ಚಾರ್ಲ್ಸ್ ನ ಉದ್ದೇಶವರಿತ ಮಂದಿ ಹೆಚ್ಚಾಗೇ ಹಣ ನೀಡಿದ ಪರಿಣಾಮ 'ಪೈಂಟ್ ಡ್ರೈಯಿಂಗ್'ನ ಒಟ್ಟು ಸಮಯ ಹತ್ತು ಘಂಟೆಗಳಾಗಿಬಿಟ್ಟಿತು! ಸೆನ್ಸಾರು ಮಂಡಳಿಯವರ ಕರ್ಮ ನೋಡಿ, ಒಣಗುವ ಪೈಂಟಿನ ಚಿತ್ರವನ್ನು ಒಂದು ನಿಮಿಷವೂ ತಪ್ಪಿಸದೇ ನೋಡಲೇಬೇಕು! ಇನ್ನೂ ತಮಾಷೆಯೆಂದರೆ ಬಿ.ಬಿ.ಎಫ್.ಸಿ ಸದಸ್ಯರಿಗೆ ದಿನಕ್ಕೆ ಒಂಭತ್ತು ಘಂಟೆ ಮಾತ್ರ ಸಿನಿಮಾ ನೋಡುವ ಅವಕಾಶವಿರುವುದು! ಮೊದಲ ದಿನ ಒಂಭತ್ತು ಘಂಟೆ ಬಣ್ಣ ಒಣಗುವುದನ್ನು ಕಂಡು ಮಾರನೇ ದಿನ ಮತ್ತೆ ಒಂದು ಘಂಟೆ ಬಣ್ಣವನ್ನು ಒಣಗಿಸಿ ಮುಗಿಸಿದ ನಂತರ ಸೆನ್ಸಾರ್ ಸರ್ಟಿಫಿಕೇಟು ಕೊಡುವ ಸೌಭಾಗ್ಯ! 
ಇದು ಎಷ್ಟು ಸರಿಯೋ ಎಷ್ಟು ತಪ್ಪೋ ಪ್ರತಿಭಟನೆಯ ನವೀನ ಮಾದರಿ ಎಂಬುದಂತೂ ದಿಟ!

Jan 24, 2016

ದಯೆಯಿರುವ ಜೂಜ್ಯಾವುದಯ್ಯಾ?

Dr Ashok K R
ಈ ಮೂರೂ ಕಡೆ ಮನುಷ್ಯನ ಮನೋರಂಜನೆಗೆ ಪ್ರಾಣಿಗಳನ್ನು ಉಪಯೋಗಿಸಲಾಗುತ್ತದೆ. ವರುಷಕ್ಕೆ ಮೂರ್ನಾಲ್ಕು ಬಾರಿ ಮನೋರಂಜನೆಗೆಂದು ಉಪಯೋಗಿಸಲ್ಪಡುವ ಪ್ರಾಣಿಗಳನ್ನು ವರುಷ ಪೂರ್ತಿ ಕಣ್ಣಲ್ಲಿ ಕಣ್ಣಿಟ್ಟು ಸಾಕಲಾಗುತ್ತದೆ. ಅದನ್ನು ಸಾಕಿದವರು ಅಷ್ಟು ಚೆಂದ ತಿಂದುಂಡಿರುತ್ತಾರೋ ಗೊತ್ತಿಲ್ಲ ಆ ಪ್ರಾಣಿಗಳಿಗಂತೂ ಭರ್ಜರಿ ಆಹಾರ ನೀಡಿ ಬೆಳಿಗ್ಗೆ ಸಂಜೆ ಮಸಾಜು ಮಾಡಿ, ಬಿಸಿಲಿಗೆಲ್ಲ ಹೋಗಿ ಬಳಲದಂತೆ ನೋಡಿಕೊಂಡು ಮನೆಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಾರೆ. ದಕ್ಷಿಣ ಕನ್ನಡದ ಕಡೆ ಕೋಣಗಳನ್ನು ಈ ರೀತಿ ಸಾಕಿ ಕಂಬಳಕ್ಕೆ ಅಣಿಗೊಳಿಸಿದರೆ, ತಮಿಳುನಾಡಿನಲ್ಲಿ ಹೋರಿಗಳನ್ನು ಸಾಕಿ ಬೆಳೆಸಿ ಜಲ್ಲಿಕಟ್ಟುವಿಗೆ ಅಣಿಗೊಳಿಸುತ್ತಾರೆ, ಇನ್ನೂ ದೇಶಾದ್ಯಂತ (ಅಥವಾ ವಿಶ್ವದಾದ್ಯಂತ) ಕುದುರೆಗಳನ್ನು ಮನೆಮಕ್ಕಳಂತೆ ಸಾಕಿ ಕುದುರೆ ರೇಸುಗಳಿಗೆ ಅಣಿಗೊಳಿಸಲಾಗುತ್ತದೆ. ಈ ಮೂರೂ ಆಟಗಳೇ, ಜಲ್ಲಿಕಟ್ಟುವಿನಲ್ಲಿ ಜೂಜಿರುತ್ತದಾ ಗೊತ್ತಿಲ್ಲ ಕಂಬಳದಲ್ಲಿ ಸ್ಥಳೀಯರ ಮಟ್ಟಿಗೆ ಜೂಜಾಟ ನಡೆದರೆ ಕುದುರೆ ರೇಸಿನಲ್ಲಿ ಕೋಟಿಗಳ ಲೆಕ್ಕದಲ್ಲಿ ಜೂಜು ನಡೆಯುತ್ತದೆ. 

ಜಲ್ಲಿಕಟ್ಟು ಹೋರಿ ‘ಹಿಡಿಯುವ’ ಸ್ಪರ್ಧೆ, ಅಲ್ಲಿ ಜನರ ಕೂಗಾಟ ಹಾರಾಟ, ಹೋರಿಯನ್ನು ಹಿಡಿದು ನೆಲಕ್ಕೆ ಒತ್ತುವ ಉದ್ವೇಗವೆಲ್ಲವೂ ಹೋರಿಗೆ ಹಿಂಸೆ ನೀಡುತ್ತದೆ ಎಂದುಕೊಳ್ಳೋಣ; ಕಂಬಳದಲ್ಲಿ ಕೋಣಗಳನ್ನು ಕೆಸರು ಗದ್ದೆಯಲ್ಲಿ ಓಡಿಸುವಾತ ಕೈಯಲ್ಲೊಂದು ಬೆತ್ತ ಹಿಡಿದು ಅವು ವೇಗವಾಗಿ ಓಡಲೆಂದು ಮಧ್ಯೆ ಮಧ್ಯೆ ಕೋಣಗಳ ಬೆನ್ನ ಮೇಲೆ ಬಾರಿಸುವುದು, ಗದ್ದೆಯ ಸುತ್ತ ನಿಂತ ಜನರು ‘ಓ’ ಎಂದು ಕೂಗೆಬ್ಬಿಸುವುದೆಲ್ಲವೂ ಕೋಣಗಳಿಗೆ ಹಿಂಸೆ ನೀಡುತ್ತದೆ ಎಂದುಕೊಳ್ಳೋಣ; ಕುದುರೆ ರೇಸಿನಲ್ಲಿ ಕುದುರೆಗಳು ಓಡುವಾಗ ಸುತ್ತಲೂ ನಿಂತ ಜನರ ಕೂಗಾಟ ಹಾರಾಟವೇನು ಕಮ್ಮಿಯಿರುವುದಿಲ್ಲ, ಕುದುರೆಯ ಬೆನ್ನ ಮೇಲೆಯೇ ಕುಳಿತುಕೊಳ್ಳುವ ಜಾಕಿ ಕೈಯಲ್ಲೊಂದು ಕೋಲು ಹಿಡಿದುಕೊಂಡು ಕುದುರೆ ವೇಗವಾಗಿ ಓಡಲೆಂದು ಮಧ್ಯೆ ಮಧ್ಯೆ ಬಾರಿಸುತ್ತಾನೆ – ಕಂಬಳ ಮತ್ತು ಜಲ್ಲಿಕಟ್ಟಿನಲ್ಲಿ ನಡೆಯುವಂತದ್ದೇ ಕುದುರೆ ರೇಸಿನಲ್ಲೂ ನಡೆದರೂ ಅದ್ಯಾಕೆ ಹಿಂಸೆ ರೂಪದಲ್ಲಿ ಕಾಣುವುದಿಲ್ಲ? ಕುದುರೆಗಳೇನು ಪ್ರಾಣಿಗಳಲ್ಲವೇ? ಹಾಗೆ ನೋಡಿದರೆ ಉಳಿದೆರಡು ಆಟಗಳಲ್ಲಿಲ್ಲದ ‘ಸವಾರಿ’ ಈ ಆಟದಲ್ಲಿದೆ ಆದರೂ ಇದು ಹಿಂಸೆಯಾಗಿ ಕಾಣುವುದಿಲ್ಲ. ರೇಸು ಓಡುವ ಪ್ರಾಯ ಮುಗಿಸಿದ ಕುದುರೆಯನ್ನು ಕಡಿಮೆ ಬೆಲೆಗೆ ಕೊಟ್ಟುಬಿಡುತ್ತಾರೆ, ಹಲವು ಸಲ ಸಾಯಿಸಿಬಿಡುತ್ತಾರೆ ಎನ್ನುವ ಮಾತೂ ಕೇಳಿಬರುತ್ತದೆ. ಜಲ್ಲಿಕಟ್ಟು – ಕಂಬಳ – ಕುದುರೆ ರೇಸಿನ ನಡುವೆ ಇಷ್ಟೆಲ್ಲ ಸಾಮ್ಯತೆಗಳಿದ್ದರೂ ಕುದುರೆ ರೇಸು ಯಾಕೆ ಪ್ರಾಣಿ ಹಿಂಸೆಯಂತೆ ಕಾಣುವುದಿಲ್ಲವೆಂದರೆ…..

ಯಾಕೆ ಕಾಣುವುದಿಲ್ಲವೆನ್ನುವುದಕ್ಕೆ ಗೂಗಲ್ ಇಮೇಜ್ ಸರ್ಚ್ ಒಂದು ಉತ್ತಮ ಉದಾಹರಣೆ ನೀಡುತ್ತದೆ. ಗೂಗಲ್ ಇಮೇಜ್ ಸರ್ಚಿಗೆ ಹೋಗಿ ಕಂಬಳ ಎಂದು ಟೈಪಿಸಿ, ಜಲ್ಲಿಕಟ್ಟು ಎಂದು ಟೈಪಿಸಿ, ಬೆಂಗಳೂರು ಡರ್ಬಿ ಎಂದು ಟೈಪಿಸಿ ಬರುವ ಚಿತ್ರಗಳನ್ನು ನೋಡಿ! 
ಹಿಂಸೆ

ಹಿಂಸೆ
ಸಂಭ್ರಮ!

ಜಲ್ಲಿಕಟ್ಟು ಮತ್ತು ಕಂಬಳದಲ್ಲಿ ಪ್ರಾಣಿ ಹಿಂಸೆಯಂತೆ ತೋರುವ, ಮನುಷ್ಯ ಕೋಪೋದ್ರೇಕವಾಗಿರುವಂತೆ ಕಾಣಿಸುವ ಚಿತ್ರಗಳು ಮೊದಲು ಬಂದರೆ, ಬೆಂಗಳೂರು ಡರ್ಬಿಯಲ್ಲಿ ಕುದರೆಯಿರುವ ಮೂರೇ ಮೂರು ಫೋಟೋ! ಉಳಿದವೆಲ್ಲದರಲ್ಲೂ ನಗುನಗುತ್ತಾ ನಿಂತಿರುವ ಜನರ ಫೋಟೋಗಳು ಮಾತ್ರ! ನಗುವಿನ ಹಿಂದಿರುವ ‘ಹಿಂಸೆ’ಯ ಚಿತ್ರಗಳು ಮಾತ್ರ ಸಿಗುವುದಿಲ್ಲ. ಕುದುರೆ ರೇಸಿಗೂ ಪ್ರಾಣಿ ಹಿಂಸೆಗೂ ಸಂಬಂಧವೇ ಇಲ್ಲ ಎನ್ನುವ ಅಭಿಪ್ರಾಯ ಮೂಡುವುದಕ್ಕೆ ಪತ್ರಿಕೆಗಳೂ ಕಾರಣವಾಗಿವೆ. ನಿನ್ನೆಯಿಂದ ಬೆಂಗಳೂರು ಡರ್ಬಿ ಪ್ರಾರಂಭವಾಗಿದೆ. ಪತ್ರಿಕೆಗಳಲ್ಲಿ ಸುಂದರ ತರುಣ – ತರುಣಿಯರ (ಹೆಚ್ಚಾಗಿ ತರುಣಿಯರು) ಫೋಟೋಗಳು ರಾರಾಜಿಸುತ್ತಿವೆ. ಜಲ್ಲಿಕಟ್ಟು ಮತ್ತು ಕಂಬಳದಲ್ಲಿ ಇದೇ ಪತ್ರಿಕೆಗಳು ಹಾಕುವ ಫೋಟೋಗಳನ್ನೊಮ್ಮೆ ನೆನಪಿಸಿಕೊಳ್ಳಿ.

ಪ್ರಾಣಿಗಳ ಮೇಲೆ ಅಪಾರವಾದ ದಯೆಯನ್ನೊಂದಿರುವ ನಮ್ಮ ಘನ ನ್ಯಾಯಾಲಯವು ಜಲ್ಲಿಕಟ್ಟು ಮತ್ತು ಕಂಬಳವನ್ನು ನಿಷೇಧಿಸಿ ಆದೇಶ ಹೊರಡಿಸಿದರೆ ಕುದುರೆ ರೇಸಿನ ಬಗ್ಗೆ ಚಕಾರವೆತ್ತುವುದಿಲ್ಲ, ನ್ಯಾಯಾಲಯಕ್ಕೂ ಅತ್ತಿತ್ತ ನೋಡದಂತೆ ಜೀನು ತೊಡಿಸಲಾಗಿದೆಯಾ? ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯನ್ನೂ ಪ್ರಶ್ನಿಸಬಹುದು ಆದರೆ ನ್ಯಾಯಾಲಯವನ್ನು ಪ್ರಶ್ನಿಸಿಬಿಟ್ಟರೆ ನ್ಯಾಯಾಲಯದ ತೀರ್ಪನ್ನು ವಿಮರ್ಶಿಸಿಬಿಟ್ಟರೆ ನ್ಯಾಯಾಂಗ ನಿಂದನೆ! ಪ್ರಜಾಪ್ರಭುತ್ವದ ಎಲ್ಲಾ ಅಂಗಗಳೂ ಪ್ರಶ್ನಾರ್ಹವಾಗಿದ್ದರಷ್ಟೇ ಸೊಗಸು.

ಸ್ಟಾರ್ಟಾದ ಇಂಡಿಯಾದಲ್ಲಿ ಕಾರ್ಮಿಕರಿಗೆ ಬೆಲೆಯಿಲ್ಲ?

labour law
Supreeth K S
ಇತ್ತೀಚೆಗೆ ಭಾರತದಲ್ಲಿ ಸ್ಟಾರ್ಟ್ ಅಪ್ ಗಳನ್ನು ಉತ್ತೇಜಿಸುವುದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿರುವ ಯೋಜನೆಗಳು ಸುದ್ದಿಯಲ್ಲಿವೆ. ಒಂದು ಸಾವಿರ ಕೋಟಿ ಸರಕಾರಿ ಫಂಡ್ ಜೊತೆಗೆ ತೆರಿಗೆ ವಿನಾಯಿತಿ, ಪರಿಸರ ಸಂರಕ್ಷಣೆಯ ಕಾಯ್ದೆಗಳಿಂದ ವಿನಾಯಿತಿ ಅಲ್ಲದೆ ಕಾರ್ಮಿಕ ಕಾಯ್ದೆಗಳಿಂದಲೂ ವಿನಾಯಿತಿ ಸ್ಟಾರ್ಟ್ ಅಪ್ ಗಳಿಗೆ ದೊರಕಲಿದೆ. 

ಇವುಗಳಲ್ಲಿ ನನಗೆ ಹೆಚ್ಚಿನ ಆಘಾತವುಂಟು ಮಾಡಿದ್ದು ಭಾರತದಂತಹ ದೇಶದಲ್ಲಿ ಕಾರ್ಮಿಕ ಕಾಯ್ದೆಗಳಿಂದ ವಿನಾಯಿತಿ ನೀಡುವ ನಿರ್ಧಾರ. ನಾಲ್ಕು ವರ್ಷಗಳ ಹಿಂದೆ ನಾನು ಹರಿಪ್ರಸಾದ್ ನಾಡಿಗ್ ಎನ್ನುವವರು ಪ್ರಾರಂಭಿಸಿದ್ದ ಸಾರಂಗ ಇನ್ಫೋಟೆಕ್ ಎಂಬ ಸ್ಟಾರ್ಟ್ ಅಪ್ ಒಂದರಲ್ಲಿ ನನ್ನ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದೆ. ಕ್ಯಾಂಪಸ್ ನಲ್ಲಿರುವಾಗಲೇ ಮಲ್ಟಿ ನ್ಯಾಶನಲ್ ಕಂಪೆನಿಯೊಂದರಲ್ಲಿ ಕೆಲಸ ಸಿಕ್ಕಿತ್ತಾದರೂ ಸ್ಟಾರ್ಟ್ ಅಪ್ ಗಳಲ್ಲಿ ಕೆಲಸ ಮಾಡಬೇಕೆಂಬ ನನ್ನ ಹಂಬಲದಿಂದ ಅವರ ಕಂಪೆನಿಯನ್ನು ಸೇರಿದೆ. 

ಆ ಕಂಪೆನಿಯಲ್ಲಿ ನನ್ನ ಗೆಳೆಯರನ್ನೂ ಸೇರಿಸಿದೆ. ಕಾಲಕ್ರಮೇಣ ಹರಿ ಪ್ರಸಾದ್ ನಾಡಿಗ್ ವರ್ತನೆಯಿಂದ ಬೇಸತ್ತು ಕೆಲವರು ಕೆಲಸ ಬಿಟ್ಟರು. ನನ್ನ ಮೇಲೆ ನಂಬಿಕೆಯಿಟ್ಟು ಕೆಲಸಕ್ಕೆ ಸೇರಿದವರನ್ನು ನಾನಾ ರೀತಿಯಲ್ಲಿ ಪೀಡಿಸಲಾಯ್ತು. ಇದನ್ನು ಪ್ರಶ್ನಿಸಿದಕ್ಕೆ ನನ್ನನ್ನು ಅಪರಾಧಿಯೆಂಬಂತೆ ನೋಡಿಕೊಳ್ಳಲಾಯ್ತು, ವಿಪರೀತ ಮಾನಸಿಕ ಕಿರುಕುಳ ನೀಡಲಾಯ್ತು. ಸಂಬಳ, ಅನುಭವ ಪತ್ರಗಳನ್ನು ನೀಡದೆ ಹೊರಹಾಕಲಾಯ್ತು. 

ವಿಪರ್ಯಾಸವೆಂದರೆ ಈ ಕಂಪೆನಿಯ ಡೈರೆಕ್ಟರ್ ಗಳಲ್ಲಿ ಒಬ್ಬರಾದ ಅಡ್ಡೂರು ಕೃಷ್ಣರಾವ್ ಹೆಸರಾಂತ ಆರ್ಟಿಐ ಹೋರಾಟಗಾರರು, ಗ್ರಾಹಕ ಹಾಗೂ ಕಾರ್ಮಿಕ ಹಕ್ಕು ಸಂರಕ್ಷಣೆಯ ಹೋರಾಟಗಾರರು.

ಕಂಪೆನಿ ಹಾಗೂ ಅದರ ನಿರ್ವಾಹಕರ ವರ್ತನೆಯನ್ನು ಸಹಿಸದೆ ನ್ಯಾಯ ಕೋರಿ ನಾನು ಕಾರ್ಮಿಕ ಇಲಾಖೆಗೆ ಅಲೆದಾಯ್ತು. ಡೈರಿ ಸರ್ಕಲ್ ನಲ್ಲಿರುವ ಕಾರ್ಮಿಕ ಇಲಾಖೆಯಲ್ಲಿ ವಿಚಾರಣೆ ನಡೆದು ಕಂಪೆನಿ ನನ್ನ ದೂರನ್ನು ಇತ್ಯರ್ಥಗೊಳಿಸಲು ಸಹಕರಿಸುತ್ತಿಲ್ಲ ಎಂದು ಕಾರ್ಮಿಕ ಇಲಾಖೆಯ ಅಧೀಕ್ಷಕರು ಕೈಚೆಲ್ಲಿದರು. ದೂರನ್ನು ಸಿವಿಲ್ ನ್ಯಾಯಾಲಯಕ್ಕೆ ಕೊಂಡೊಯ್ಯುವಂತೆ ಸೂಚಿಸಿದರು. ನ್ಯಾಯಾಲಯದಲ್ಲಿಯೂ ಸಹ ದೂರನ್ನು ಸಲ್ಲಿಸಯಾಯ್ತು. ಇದೆಲ್ಲ ಶುರುವಾಗಿ ಮೂರು ವರ್ಷಗಳು ಕಳೆದಿವೆ. ನ್ಯಾಯಾಲಯದಲ್ಲಿ ಸಾರಂಗ ಇನ್ಫೋಟೆಕ್ ಸಂಸ್ಥೆಯ ಹರಿಪ್ರಸಾದ್ ನಾಡಿಗ್ ಹಾಗೂ ಸುಮ ಅಡ್ಡೂರು ವಿರುದ್ಧ ಮೊಕದ್ದಮೆ ನಡೆಯುತ್ತಿದೆ. 

ನ್ಯಾಯಾಲಯದೆದುರು ನಡೆಯುತ್ತಿರುವ ನಾಟಕಗಳು, ಮೊಕದ್ದಮೆ ವಿಳಂಬವಾಗಿಸುವ ತಂತ್ರಗಳು ಇವೆಲ್ಲವನ್ನು ದಾಖಲಿಸಿದರೆ ದೊಡ್ದ ಪುಸ್ತಕವೇ ಆದೀತು. 

ಇದನ್ನು ಇಂದು ನೆನಪಿಸಿಕೊಳ್ಳುವುದಕ್ಕೆ ಈ ಮೊದಲು ಉಲ್ಲೇಖಿಸಿದ ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯ ಕಾರ್ಮಿಕ ಕಾಯ್ದೆಗಳ ವಿನಾಯಿತಿ ಕಾರಣ. ಅಸಮಾನ ಅಧಿಕಾರವಿರುವ ಯಾವುದೇ ಸಂಬಂಧದಲ್ಲಿ ಸರ್ಕಾರದ ಜವಾಬ್ದಾರಿ ದುರ್ಬಲರ ಪರವಾಗಿ ನಿಲ್ಲುವುದರಲ್ಲಿ ಇರಬೇಕು. ಐಟಿ ವಲಯದ ನೌಕರರಲ್ಲಿ ಸಂಘಟನೆ ಎಂಬುದೇ ಇಲ್ಲ. ವ್ಯಾಜ್ಯಗಳಲ್ಲಿ ನೌಕರರನ್ನು ಸಿಂಗಲ್ ಔಟ್ ಮಾಡಿ ಕಿರುಕುಳ ನೀಡಲಾಗುತ್ತೆ. ಈಗಿರುವ ಹಲ್ಲಿಲ್ಲದ ಕಾಯ್ದೆಗಳನ್ನು ಜೇಬು ಭದ್ರವಾಗಿರುವ ಕಂಪೆನಿಗಳು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು. ಕಾನೂನು ಹೋರಾಟವನ್ನು "ಬಿಸಿನೆಸ್ ಕಾಸ್ಟ್" ಎಂದು ಎಷ್ಟು ವರ್ಷಗಳವರೆಗಾದರೂ ಎಳೆದಾಡಬಹುದು. 

ಇಷ್ಟಲ್ಲದೆ ಸ್ಟಾರ್ಟ್ ಅಪ್ ಗಳಲ್ಲಿ ಕೆಲಸ ಮಾಡುವ ನೌಕರರು ಎಷ್ಟು ವಲ್ನರಬಲ್ ಆಗಿರುತ್ತಾರೆಂದರೆ ಅವರಿಗೆ ಪಿ ಎಫ್ ಇರುವುದಿಲ್ಲ, ಆರೋಗ್ಯ ವಿಮೆ ಇರುವುದಿಲ್ಲ, ಉದ್ಯೋಗ ಭದ್ರತೆಯಿರುವುದಿಲ್ಲ. ಮೇಲಾಗಿ ಪುಡಿಗಾಸಿಗೆ ಕತ್ತೆ ಚಾಕರಿ ಮಾಡಿಸಿಕೊಳ್ಳುವ "ಆಂತ್ರಪ್ರಿನರ್" ಉದ್ಯೋಗದಾತರು! ಇಂತಹ ಪರಿಸ್ಥಿತಿಯಲ್ಲಿ ನೆರವಾಗಬಹುದಾದ ಕಾಯ್ದೆಗಳಿಂದಲೂ ಈ ಕಂಪೆನಿಗಳಿಗೆ ವಿನಾಯಿತಿ ಕೊಟ್ಟುಬಿಟ್ಟರೆ ನೌಕರರ ಜುಟ್ಟು ಹಿಡಿದು ಕ್ಯಾಪಿಟಲಿಸ್ಟರ ಕೈಗೆ ಕೊಟ್ಟಂತೆಯೇ! ನಷ್ಟವಾದ ಕಂಪೆನಿ ದಿವಾಳಿ ಘೋಷಿಸಬಹುದು ಆದರೆ ಕೆಲಸ ಕಳೆದುಕೊಂಡು, ಮಾನಸಿಕ (ಕೆಲವೊಮ್ಮೆ ದೈಹಿಕ)ಕಿರುಕುಳ ಅನುಭವಿಸಿ ಬೀದಿಗೆ ಬೀಳುವ ನೌಕರರು ಸ್ಟಾರ್ಟ್ ಅಪ್ ಇರಲಿ ಸ್ಟ್ಯಾಂಡ್ ಅಪ್ ಆಗುವುದು ಕನಸಿನ ಮಾತಾಗುವುದು

Jan 22, 2016

ಮೇಕಿಂಗ್ ಹಿಸ್ಟರಿ: ನಿಗ್ರಹಕ್ಕಾಗಿ ಸಹಕಾರಿ ಒಪ್ಪಂದ!

saketh rajan
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್

ಟಿಪ್ಪು ಸಾಮ್ರಾಜ್ಯದ ಪತನದ ಎರಡು ತಿಂಗಳ ನಂತರ ಬ್ರಿಟೀಷರು ಮತ್ತು ಎರಡನೆ ಕೃಷ್ಣರಾಜ ಒಡೆಯರ್ ನಡುವೆ ಆದ ಹದಿನಾರು ಕಲಮುಗಳ ಒಪ್ಪಂದ ಸ್ವತಂತ್ರವಾಗಿದ್ದ ಕರ್ನಾಟಕವನ್ನು ವಸಾಹತುಶಾಹಿಯ ಸರಪಳಿಗಳಿಂದ ಬಂಧಿಸಿತು. ಈ ಒಪ್ಪಂದವು ನಿಜಾರ್ಥದಲ್ಲಿ ದಾಸ್ಯ ಮನೋಭಾವಕ್ಕೆ ಶರಣಾದುದನ್ನು ಸೂಚಿಸುತ್ತಿತ್ತು. ಹೆಸರೇ ಸೂಚಿಸುವಂತೆ ಈ ಒಪ್ಪಂದವು ಮೈಸೂರಿನ ಸ್ವತಂತ್ರವನ್ನು ಕಸಿದುಕೊಂಡು ಬ್ರಿಟೀಷರ ವಸಾಹತಿನ ಒಂದು ಹೆಚ್ಚುವರಿ ರಾಜ್ಯವಾಗಿ ಮಾಡಿತು. ಈ ಒಪ್ಪಂದದಲ್ಲಿನ ಪ್ರಮುಖಾಂಶಗಳ ಬಗ್ಗೆ ಗಮನ ಹರಿಸೋಣ.

ಎರಡನೇ ಕಲಮಿನ ಪ್ರಕಾರ ಸ್ವತಂತ್ರ ಸೇನೆಯನ್ನು ಕಟ್ಟುವ ಹಕ್ಕನ್ನು ಕಸಿಯಲಾಯಿತು. ಬ್ರಿಟೀಷರು ‘ಪ್ರಭುತ್ವದ ರಕ್ಷಣೆಗೆ ಮತ್ತು ಭದ್ರತೆಗೆ’ ಸೇನೆಯನ್ನು ನಿಯೋಜಿಸುತ್ತದೆ. ಒಂದೇ ಏಟಿನಲ್ಲಿ ಮೈಸೂರಿನ ಸ್ವತಂತ್ರವೂ ಹೋಯಿತು ಮತ್ತು ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ಶಕ್ತಿಹೀನವೂ ಆಯಿತು. ಬ್ರಿಟೀಷರ ಸೈನ್ಯವನ್ನು ಬೆಂಗಳೂರಿನ ಕಂಟೋನ್ ಮೆಂಟ್ ಪ್ರದೇಶದಲ್ಲಿ ಸ್ಥಾಪಿಸಲಾಯಿತು ಮತ್ತು ಈ ಜಾಗದಲ್ಲಿ ಮೈಸೂರು ಸರಕಾರದ ಆಡಳಿತವಿರದೆ ನೇರವಾಗಿ ಬ್ರಿಟೀಷರ ಆಡಳಿತವಿತ್ತು. ಆದರೂ ಮೈಸೂರಿಗೆ ಒಂದು ಪುಟ್ಟ ಸೇನೆಯನ್ನು ಬ್ರಿಟೀಷರ ಮೇಲ್ವಿಚಾರಣೆಯಲ್ಲಿ ಇಟ್ಟುಕೊಳ್ಳುವ ಭಿಕ್ಷೆ ಲಭಿಸಿತು; ಸಂಸ್ಥಾನದೊಳಗೆ ಕಾನೂನು ಸುವ್ಯವಸ್ಥೆಯನ್ನು ಕಾಪಿಡಲು ಮತ್ತು ಬ್ರಿಟೀಷರ ಇನ್ನಿತರೆ ಯುದ್ಧಗಳಿಗೆ ಸೈನಿಕರನ್ನು ಪೂರೈಸಲು.

“1807ರಲ್ಲಿ ಗವರ್ನರ್ ಜೆನರಲ್ ಸರ್ ಜಾರ್ಜ್ ಬಾರ್ಲವ್ ಈ ರೀತಿಯ ನಿರ್ಣಯ ಕೈಗೊಂಡರು….. ಮೈಸೂರಿನ ರಾಜ ಯುದ್ಧ ಮತ್ತು ಶಾಂತಿಯ ಸಮಯದಲ್ಲಿ ನಾಲ್ಕು ಸಾವಿರ ಕುದುರೆಗಳನ್ನು ತನ್ನ ಸ್ವಂತ ಖರ್ಚಿನಿಂದ ಸಾಕಬೇಕು. ಕಂಪನಿಯ ಅಧಿಕಾರಿಗಳು ಈ ವ್ಯವಸ್ಥೆಯನ್ನು ಆಗಾಗ್ಗೆ ಪರಿಶೀಲಿಸುತ್ತಾರೆ ಮತ್ತು ಅವರ ಮರ್ಜಿಯಲ್ಲಿ ಈ ಸಾಕಾಣಿಕೆ ಚಾಲ್ತಿಯಲ್ಲಿರುತ್ತದೆ……”  – ಲಷಿಂಗ್ ಟನ್, ಮದ್ರಾಸಿನ ಗವರ್ನರ್ (10).

ಮೈಸೂರಿನ ಹಣಕಾಸು ಒಪ್ಪಂದದ ಬಗ್ಗೆಯೂ ಅದೇ ಕಲಮಿನಲ್ಲಿ ವಿವರಿಸಲಾಗಿದೆ. ಅದರ ಪ್ರಕಾರ ಮುಂದಿನ ತಿಂಗಳಿನಿಂದಲೇ ವರುಷಕ್ಕೆ 24.5 ಲಕ್ಷ ರುಪಾಯಿಗಳನ್ನು ಹನ್ನೆರಡು ಕಂತುಗಳಲ್ಲಿ ಮೈಸೂರು ಸಂಸ್ಥಾನ ಕಕ್ಕಬೇಕು. 1896ರಲ್ಲಿ ಈ ಮೊತ್ತವನ್ನು 35 ಲಕ್ಷ ರುಪಾಯಿಗಳಿಗೆ ಏರಿಸಲಾಯಿತು ಮತ್ತು 1928ರಲ್ಲಿ ಮತ್ತೆ ಹಳೆಯ ಮೊತ್ತಕ್ಕೇ ಇಳಿಸಲಾಯಿತು. ಇಷ್ಟು ದೊಡ್ಡ ಖರ್ಚು ಮೈಸೂರು ಸಾಮ್ರಾಜ್ಯದ ಮೇಲುಂಟು ಮಾಡಿದ ಅನಾಹುತಗಳನ್ನು ಮೂರನೇ ಅಧ್ಯಾಯದ ಕೊನೆಯ ಪುಟಗಳಲ್ಲಿ ಚರ್ಚಿಸೋಣ. ಸದ್ಯಕ್ಕೆ ನೆನಪಿಡಬೇಕಾದ ವಿಷಯವೆಂದರೆ ಮುಂದಿನ ನೂರು ವರುಷಗಳ ಕಾಲ ಬ್ರಿಟೀಷರಿಗೆ ಕೊಡಬೇಕಾದ ಈ ಹಣ ಮೈಸೂರು ಸಂಸ್ಥಾನದ ಅತಿ ದೊಡ್ಡ ಖರ್ಚಿನ ಬಾಬತ್ತಾಗಿತ್ತು. 1809 – 10ರ ಸಮಯದಲ್ಲಿ ಮೈಸೂರು ಸಂಸ್ಥಾನದ ವಾರ್ಷಿಕ ಆದಾಯವಿದ್ದಿದ್ದು ಕೇವಲ 28,24,646 (11).

ಮುಂದಿನ ಕಲಮು ಮೈಸೂರನ್ನು ಬ್ರಿಟೀಷರ ಮುಂದಿನ ಆಕ್ರಮಣಕ್ಕೆ ಬೇಕಾದ ಭೌಗೋಳಿಕ ಮತ್ತು ವಾಣಿಜ್ಯಕ ಚಿಮ್ಮುಹಲಗೆಯನ್ನಾಗಿ ಮಾಡಿಬಿಟ್ಟಿತು. ಬ್ರಿಟೀಷ್ ಸಾಮ್ರಾಜ್ಯದ ವಿರುದ್ಧ ನಡೆಯಬಹುದಾದ ಯಾವುದೇ ಆಕ್ರಮಣವನ್ನು ಮೈಸೂರಿನ ಭೂಗೋಳ, ಸೈನ್ಯ ಮತ್ತು ಆದಾಯ ತಡೆಯುವಂತೆ ಯೋಜನೆಗಳನ್ನು ರೂಪಿಸಲಾಯಿತು. ಒಡೆಯರ್ “ಸೈನಿಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಮತ್ತು ಅನಿರೀಕ್ಷಿತ ಯುದ್ಧಗಳಿಂದುಟಾಗುವ ಖರ್ಚನ್ನು ಭರಿಸಬೇಕು” ಎಂದು ಸ್ಪಷ್ಟವಾಗಿ ತಿಳಿಸಲಾಯಿತು.

ನಾಲ್ಕನೇ ಕಲಮು ಬ್ರಿಟೀಷರಿಗೆ ಆದಾಯ ತೆರಿಗೆಯ ಸಂಗ್ರಹ ಮತ್ತು ಎಲ್ಲಾ ರೀತಿಯ ಆರ್ಥಿಕ ವ್ಯವಹಾರಗಳನ್ನು ನಿಯಂತ್ರಿಸುವ ಹಕ್ಕನ್ನು ನೀಡಿತು. ಅಲ್ಲಿಗೆ ಮೈಸೂರಿನ ಆರ್ಥಿಕ ಸ್ವಾತಂತ್ರ್ಯವನ್ನೂ ಮೊಟಕುಗೊಳಿಸಲಾಯಿತು.

ಆರ್ಥಿಕ ಮತ್ತು ರಾಜಕೀಯ ಸಂಕಷ್ಟದ ಸಮಯದಲ್ಲಿ ಮೈಸೂರು ಸಂಸ್ಥಾನವನ್ನು ಭಾಗಶಃ ಅಥವಾ ಪೂರ್ಣವಾಗಿ ವಶಪಡಿಸಿಕೊಳ್ಳುವ ಅಧಿಕಾರವನ್ನು ಐದನೇ ಕಲಮು ನೀಡಿತು. ರಾಜ್ಯದ ಸ್ವಾಯತ್ತತೆ ಹೆಸರಿಗೆ ಮಾತ್ರ ಉಳಿಯಿತು. ಇದೇ ಕಲಮು ರಾಜನಿಗೆ ವಾರ್ಷಿಕ ಆದಾಯದ ಇಪ್ಪತ್ತು ಪರ್ಸೆಂಟಿನಷ್ಟು (ನಂತರದ ದಿನಗಳಲ್ಲಿ ಇದನ್ನು 5%ಗೆ ಇಳಿಸಲಾಯಿತು) ಮತ್ತು ವಾರ್ಷಿಕ 3 ಲಕ್ಷ ರುಪಾಯಿಗಳನ್ನು ನೀಡಿತು. ಸಾರ್ವಜನಿಕರ ಹಣ ರಾಜರ ಮನೆಯ ಎಲ್ಲಾ ಖರ್ಚುಗಳಿಗೆ ವಿನಿಯೋಗವಾಗುತ್ತಿದ್ದರಿಂದ ಈ ಕಲಮು ನೀಡಿದ ಪ್ರತ್ಯೇಕ ಮೊತ್ತ ರಾಜನ ಪಾಕೆಟ್ ಮನಿಯಾಗಿತ್ತು. ಇದೇ ರೀತಿ ಮೈಸೂರಿನ ದಿವಾನರಿಗೆ ನಿಯಮಿತ ಸಂಬಳದ ಜೊತೆಗೆ ಒಟ್ಟು ಆದಾಯದ 1% ಮೊತ್ತವನ್ನು ನೀಡಲಾಗುತ್ತಿತ್ತು. ಈ ರೀತಿಯಾಗಿ ಮೈಸೂರಿನ ರಾಜ ಮತ್ತವನ ಪ್ರಧಾನ ಮಂತ್ರಿ ವಸಾಹತುಶಾಹಿಯ ನಾಚಿಕೆಗೆಟ್ಟ ಮಧ್ಯವರ್ತಿಗಳಾದರು, ಮೈಸೂರಿನ ಜನಸಮೂಹದ ಶ್ರಮದ ಹಣದಲ್ಲಿ ಐಷಾರಾಮಿ ಜೀವನ ನಡೆಸುವವರಾದರು.

ಒಪ್ಪಂದದ ಹದಿಮೂರನೇ ಕಲಮು ಮೈಸೂರು ರಾಜ್ಯವನ್ನು ಬ್ರಿಟೀಷ್ ಬಂಡವಾಳದ ಮಾರುಕಟ್ಟೆಯನ್ನಾಗಿ ಪರಿವರ್ತಿಸಿತು.

ಈ ಒಪ್ಪಂದವು ಬ್ರಿಟೀಷ್ ಸರಕಾರ ವ್ಯಕ್ತಿಯೊಬ್ಬನನ್ನು ಮೈಸೂರು ಸಂಸ್ಥಾನದ ಏಜೆಂಟನನ್ನಾಗಿ ಬಲವಂತದಿಂದ ನೇಮಿಸಿತು. ವಸಾಹತುಶಾಹಿಯ ಕಾಣದ ಕೈಯಾದ ಈ ಏಜೆಂಟನಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇನೇ ಸಾಮ್ರಾಜ್ಯದೊಳಗೆ ನಡೆಯುವ ಪ್ರತೀ ಸಂಗತಿಯನ್ನು ಕೂಲಂಕುಷವಾಗಿ ಪರಿಶೀಲಿಸಿ, ಮೇಲ್ವಿಚಾರಿಸಿ, ‘ಸಲಹೆ’ ನೀಡುವ ಅಧಿಕಾರವಿತ್ತು. ರಾಜನ ವೈಯಕ್ತಿಕ ವಿಷಯದಲ್ಲಿಯೂ ‘ಸಲಹೆ’ ನೀಡಬಹುದಾಗಿತ್ತು ಮತ್ತು ಈ ಎಲ್ಲಾ ಸಲಹೆಗಳನ್ನೂ ರಾಜ ಒಂದು ನಗುವಿನೊಂದಿಗೆ ತಲೆದೂಗಿ ಒಪ್ಪಿ ಜಾರಿಗೊಳಿಸಬೇಕಿತ್ತು. 14ನೇ ಕಲಮಿನ ಪ್ರಕಾರ “ಅಗತ್ಯವಿರುವಾಗ ಕಂಪನಿ ಸರಕಾರ ರಾಜನ ವ್ಯವಹಾರ, ನ್ಯಾಯಪಾಲನೆ, ವಹಿವಾಟು ವಿಸ್ತರಣೆ, ಕೃಷಿ, ರಫ್ತು – ಆಮದು, ಕೈಗಾರಿಕೆಗೆ ನೀಡಬೇಕಾದ ಪ್ರೋತ್ಸಾಹ ಮತ್ತು ಇನ್ನಿತರೆ ವಿಷಯಗಳ ಬಗ್ಗೆ ನಿರ್ಧಾರಗಳನ್ನು ತಿಳಿಸುತ್ತದೆ. ಕಂಪನಿ ಸರ್ಕಾರದ ಎಲ್ಲಾ ನಿರ್ಧಾರಗಳನ್ನೂ ಗಮನವಿಟ್ಟು ಆಲಿಸಿ ಪಾಲಿಸುತ್ತೇನೆಂದು” ಮಹಾರಾಜ ಪ್ರಮಾಣ ಮಾಡಬೇಕಿತ್ತು.

ಈ ಒಪ್ಪಂದದ ಬಗ್ಗೆ ಬರೆಯುತ್ತಾ, ವೆಲ್ಲೆಸ್ಲಿ: “ಈ ಒಪ್ಪಂದವನ್ನು ರಚಿಸುವಾಗ ಮೈಸೂರು ಸರಕಾರ ಮತ್ತು ಕಂಪನಿಯ ನಡುವೆ ಅಸಮತೋಲನದ ಉದ್ದಿಶ್ಯಗಳಿರಬೇಕು ಎನ್ನುವುದು ನನ್ನ ನಿರ್ಧಾರವಾಗಿತ್ತು. ಮತ್ತು ರಾಜ ಉತ್ತರ ದಿಕ್ಕನ್ನು ನಮ್ಮ ಸಶಕ್ತ ಬೇಲಿಯನ್ನಾಗಿ ಕೊಡುವಂತೆ ಮಾಡುವುದಾಗಿತ್ತು.

ಈ ದೃಷ್ಟಿಕೋನದಿಂದ ರಾಜನ ದೇಶದ ರಕ್ಷಣೆಗಾಗಿ ವಾರ್ಷಿಕ ಏಳು ಲಕ್ಷ ಪಗೋಡಾಗಳನ್ನು ಪಡೆಯುವ ಬಗ್ಗೆ ಚರ್ಚೆ ನಡೆಸಿದೆ. ದುರದೃಷ್ಟವಶಾತ್ ಎರಡೆರಡು ಸರಕಾರ ಮತ್ತು ಆಡಳಿತಗಾರರಲ್ಲಿನ ದ್ವಂದ್ವಗಳು ಔಧ್, ಕರ್ನಾಟಿಕ್ ಮತ್ತು ತಂಜಾವೂರಿನಲ್ಲಿ ಅಸ್ತಿತ್ವಕ್ಕೆ ಬಂದು ಎಲ್ಲರಿಗೂ ಮುಜುಗರ ಉಂಟುಮಾಡಿದ್ದನ್ನು ನೆನಪಿಗೆ ತಂದುಕೊಂಡು ಮೈಸೂರಿನ ಆಂತರಿಕ ವ್ಯವಹಾರವನ್ನು ನಿಯಂತ್ರಿಸುವ ಸರ್ವ – ಶಕ್ತ ಅಧಿಕಾರವನ್ನು ಕಂಪನಿಗೆ ನೀಡಬೇಕೆಂದು ದೃಡ ನಿಶ್ಚಯ ಮಾಡಿದೆ. ಮೈಸೂರಿನ ಮೇಲೆ ಅಗತ್ಯ ಬಿದ್ದಾಗ ನೇರ ಆಡಳಿತ ನಡೆಸುವ ಹಕ್ಕನ್ನು ಉಳಿಸಿಕೊಳ್ಳಬೇಕು. ಯುದ್ಧದ ಸಮಯದಲ್ಲಿ ಮತ್ತು ಕಂಪನಿಯ ವಿರುದ್ಧ ದ್ರೋಹ ನಡೆದಲ್ಲಿ ನಿಗದಿತ ಮೊತ್ತಕ್ಕಿಂತ ಅಧಿಕ ಮೊತ್ತವನ್ನು ಪಡೆಯಬಹುದಾಗಿದೆ.

ಈ ವ್ಯವಸ್ಥೆಯಿಂದ ರಾಜನ ಸಂಸ್ಥಾನದ ಎಲ್ಲಾ ಸಂಪನ್ಮೂಲಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂದು ನನ್ನ ನಂಬುಗೆ…. ನನ್ನ ದೃಷ್ಟಿಯಲ್ಲಿದು ಅತ್ಯಂತ ಸರಳ, ಮುಕ್ತ ಮತ್ತು ಚಾಣಾಕ್ಷ ನಡೆ. ರಾಜನನ್ನು ಪಟ್ಟಕ್ಕೇರಿಸುವ ಸಂದರ್ಭದಲ್ಲಿ ಕಂಪನಿಯ ಮೇಲಿನ ಆತನ ಅವಲಂಬನೆಯನ್ನು ಸ್ಪಷ್ಟವಾಗಿ ತಿಳಿಯಪಡಿಸುವುದು ಭವಿಷ್ಯದಲ್ಲಿನ ಅನುಮಾನ ಮತ್ತು ಅನವಶ್ಯಕ ಚರ್ಚೆಗಳಿಗಿಂತ ಉತ್ತಮ” (12).

ಇದು ಅವತ್ತಿನ ಒಪ್ಪಂದದ ಬಹುಮುಖ್ಯ ಅಂಶವಾಗಿತ್ತು, ಉಳಿದೆಲ್ಲ ಕಲಮುಗಳು ಈ ಶರತ್ತುಗಳ ಆಧಾರದ ಮೇಲೆ ರೂಪಿಸಲಾಗಿದ್ದ ಅಲ್ಪ ಸ್ವಲ್ಪ ಬದಲಾವಣೆಗಳಷ್ಟೇ. ಕೀರಿಟಧಾರಿ ಹುಳುವಿಗೆ ಮುಲುಕಲೂ ಆಗದಷ್ಟು ಸ್ಥಳವಷ್ಟೇ ಕೊನೆಗೆ ಉಳಿದಿದ್ದು. ಕರ್ನಾಟಕದ ಇತಿಹಾಸದಲ್ಲಿಯೇ ಯಾವೊಬ್ಬ ರಾಜನೂ ತನ್ನ ಅಧಿಕಾರದ ವ್ಯಾಪ್ತಿಯನ್ನು ಇಷ್ಟೊಂದು ಶರತ್ತುಗಳಿಗೆ ಒಪ್ಪಿಸಿರಲಿಲ್ಲ. ಮೈಸೂರಿನ ಈ ಕೈಗೊಂಬೆಗಳು ತಮ್ಮ ಕೆಲಸವನ್ನು ‘ನಿಷ್ಟೆಯಿಂದ’ ನಿರ್ವಹಿಸಿದರು. ಸಕಲ ಅವಮಾನಗಳನ್ನೂ ನುಂಗಿಕೊಂಡು. ಈ ರಾಜರು ಬ್ರಿಟೀಷರ ಮುಖಸ್ತುತಿ ಮಾಡಿದ್ದ ರೀತಿಯನ್ನು ನಂತರ ನೋಡೋಣ. ಕೊಳೆಯಲಾರಂಭಿಸಿದ್ದ ಫ್ಯೂಡಲ್ ಸಮುಚ್ಛಯದಿಂದ ಬಂದ ಈ ಸೋತ ರಾಜರಿಗೆ ಅಚಾನಕ್ಕಾಗಿ ನೆನಪಾಗಬಹುದಾಗಿದ್ದ ‘ಫ್ಯೂಡಲ್ ಪ್ರತಿಷ್ಟೆಯ’ ನೆವವೂ ಬ್ರಿಟೀಷರ ವಿರುದ್ಧ ಪ್ರಚೋದಿಸಲಿಲ್ಲ.

ಈ ಒಪ್ಪಂದದಲ್ಲಿದ್ದ ಅವಮಾನಕಾರಿ ಅಂಶಗಳಿಂದ ಸಮಾಧಾನಗೊಳ್ಳದ ಬ್ರಿಟೀಷರು 1807ರಲ್ಲಿ ಪೂರಕ ಒಪ್ಪಂದದ ಮೂಲಕ ಪಟ್ಟನ್ನು ಮತ್ತಷ್ಟು ಬಿಗಿಗೊಳಿಸಿದರು (13).

ಕರ್ನಾಟಕವನ್ನು ವಸಾಹತು ಶಕ್ತಿಗಳಿಗೆ ಒಪ್ಪಿಸಲು ಈ ಪೂರಕ ಒಪ್ಪಂದದ ಪಾತ್ರ ಹಿರಿದು. ಹತ್ತು ಜಿಲ್ಲೆಯ ಸಂಸ್ಥಾನ ಹೊಂದಿದ್ದ ಮೈಸೂರು ಒಡೆಯರ್ ಗಳ ಜೊತೆಗೆ ಬ್ರಿಟೀಷರು ಇನ್ನೂ ಹಲವು ರಾಜರು, ಪಾಳೇಗಾರರೊಂದಿಗೆ ಇದೇ ತರಹದ ಹೊಂದಾಣಿಕೆಯನ್ನು ಮಾಡಿಕೊಂಡರು. 

1798ರಲ್ಲಿ ಬ್ರಿಟೀಷರು ಹೈದರಾಬಾದಿನ ನಿಜಾಮರೊಡನೆ ಸಹಕಾರಿ ಒಪ್ಪಂದಕ್ಕೆ ಸಹಿ ಹಾಕಿದರು; ಬ್ರಿಟೀಷ್ ಸೈನ್ಯದ ಖರ್ಚಿಗೆ ವಾರ್ಷಿಕ ಹದಿನಾಲ್ಕು ಲಕ್ಷ ರುಪಾಯಿಗಳನ್ನು ಕಪ್ಪವಾಗಿ ನೀಡುವ ಅಂಶ ಒಪ್ಪಂದದಲ್ಲಿತ್ತು (14). ಕಂಪನಿಯ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಸ್ವತಃ ಗವರ್ನರ್ ಜೆನರಲ್ ತಿಳಿಸಿದಂತೆ ಮೈಸೂರಿನ ಒಡೆಯರ್ ಜೊತೆ ಮಾಡಿಕೊಂಡ ಒಪ್ಪಂದ ನಿಜಾಮರು ಸಹಿ ಮಾಡಿದ ಒಪ್ಪಂದದ ಸ್ವಲ್ಪ ಬದಲಾದ ರೂಪವಾಗಿತ್ತಷ್ಟೆ (15). ಬೀದರ್, ರಾಯಚೂರು ಮತ್ತು ಗುಲ್ಬರ್ಗಾ ವಸಾಹತುಶಾಹಿಯ ಪರೋಕ್ಷ ಆಳ್ವಿಕೆಗೆ ಒಳಪಟ್ಟಿತು.

ಬೆಳಗಾವಿ, ಧಾರವಾಡ ಮತ್ತು ಉತ್ತರ ಕನ್ನಡದ ಭಾಗಗಳ ಆಳ್ವಿಕೆ ನಡೆಸುತ್ತಿದ್ದ ಕಿತ್ತೂರಿನ ದೇಸಾಯಿ ಕೂಡ ಈ ಸಹಕಾರಿ ಒಪ್ಪಂದಕ್ಕೆ ಸಹಿ ಹಾಕಿದವರಲ್ಲಿ ಒಬ್ಬ. 1792ರಲ್ಲಿ ಪೇಶ್ವೆಗಳಿಗೆ ಎಪ್ಪತ್ತು ಸಾವಿರ ರುಪಾಯಿಗಳನ್ನು ಕಾಣ್ಕೆಯಾಗಿ ನೀಡುತ್ತಿದ್ದ ದೇಸಾಯಿ 1818ರಲ್ಲಿ ಬ್ರಿಟೀಷರಿಗೆ 1,70,000 ರುಪಾಯಿಗಳನ್ನು ನೀಡಲು ಒಪ್ಪಿದ. ಆಗ ದೇಸಾಯಿ ಸಂಸ್ಥಾನದ ವಾರ್ಷಿಕ ಆದಾಯ ನಾಲ್ಕು ಲಕ್ಷವಿತ್ತು (16).

ವಿವಿಧ ಪಾಳೇಗಾರರು ಹಾಗು ದೇಶಗತಿಗಳು ವಿದೇಶಿ ಆಳ್ವಿಕೆಯ ಮುಂದೆ ಸಾಲುಗಟ್ಟಿ ನಿಂತು ತಮ್ಮ ಚಿಕ್ಕಪುಟ್ಟ ಆದರ್ಶಗಳನ್ನೆಲ್ಲ ಮೂಟೆಕಟ್ಟಿಟ್ಟು ಇದೇ ರೀತಿಯ ಒಪ್ಪಂದಗಳಿಗೆ ನಾಮುಂದು ತಾಮುಂದು ಎಂಬಂತೆ ಸಹಿ ಮಾಡಿದರು. ಕರ್ನಾಟಕ ದೇಶ ಗುಲಾಮತ್ವವನ್ನಪ್ಪಿಕೊಳ್ಳುವುದಕ್ಕೆ ಈ ಸಹಕಾರಿ ಒಪ್ಪಂದಗಳು ಕೀಲಿಕೈ ಆಯಿತು.


Jan 21, 2016

ಅಂತರರಾಷ್ಟ್ರೀಯ ಚಿತ್ರೋತ್ಸವ ಕೂಡ ಮಾಲುಗಳಿಗೆ ಸೀಮಿತವೇ?

S Abhi Hanakere
ಬೇರೆ ಇನ್ಯಾವುದೇ ಕಲಾ ಪ್ರಕಾರಗಳಿಗೆ ಸೆನ್ಸಾರ್‍ ಇಲ್ಲ! ಸಿನಿಮಾಗೆ ಮಾತ್ರ ಇದೆ? ಯಾಕೆಂದರೆ ಸಿನಿಮಾ ಒಂದು (ಟಾಕೀಸ್‍ನಲ್ಲಿ ನೋಡೋ) ಬೆಳಕಿನಿಂದ ಕತ್ತಲೆಗೆ ಕರೆದುಕೊಂಡು ಬಂದು, ಯಾವುದೇ ಜಾತಿ-ಮತ-ಲಿಂಗ ಭೇದವಿಲ್ಲದೆ ಅಕ್ಕ-ಪಕ್ಕದಲ್ಲಿ ಕುಳ್ಳಿರಿಸಿ, ಪರದೆಯ ಮುಖಾಂತರ ಹೃದಯ ಮತ್ತು ಮನಸ್ಸಿನಲ್ಲಿ ಬೆಳಕು ಚೆಲ್ಲುವ ಮಾಧ್ಯಮ ಮತ್ತು ಪರಿಣಾಮಕಾರಿಯಾಗಿ ಮನುಷ್ಯನನ್ನು ಆಕರ್ಷಿಸಿ ಆಕ್ರಮಿಸಿಕೊಳ್ಳುವಂತದ್ದು. ಆದರೆ ವ್ಯಾಪಾರದ ದೃಷ್ಠಿಯಿಂದ ಬರೀ ಕೊಳಕನ್ನೇ ನೀಡುವ ಅಪಾಯವಿರುವ ಕಾರಣ ಸೆನ್ಸಾರ್‍ ಇದೆ. ಇಂಥ ಸಿನಿಮಾ ಟಾಕೀಸ್‍ಗಳ ಸ್ಥಿತಿ ದುರ್ಗತಿಗೆ ತಲುಪುತ್ತಿರುವ ಸಮಯದಲ್ಲಿ ಅದನ್ನ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಮೊದಲೆಲ್ಲಾ ಚಿಕ್ಕ-ಪುಟ್ಟ ಊರುಗಳಲ್ಲಿದ್ದ ಟೆಂಟುಗಳನ್ನು ಟಿ.ವಿ ನುಂಗಿ ಹಾಕಿತು. ಈಗ ಸಿ.ಡಿಗಳು, ಮೊಬೈಲ್ ಚಿಪ್‍ಗಳು ಸಣ್ಣ-ಪುಟ್ಟ ನಗರಗಳ ಟಾಕೀಸ್‍ಗಳನ್ನು ನುಂಗಿ ಹಾಕ್ತಿವೆ. ಒಮ್ಮೆ ಮಾಲ್‍ಗಳಲ್ಲಿ ಚಿತ್ರ ವೀಕ್ಷಿಸಿದ ಪ್ರೇಕ್ಷಕ ತನ್ನೂರಿನ ಟಾಕೀಸ್‍ ಕಡೆ ಮುಖ ಕೂಡ ಮಾಡದೆ ಹಿಂತಿರುಗುತ್ತಿರುವ ಈ ಸಂದರ್ಭದಲ್ಲಿ, ಸರ್ಕಾರದ ವತಿಯಿಂದ ನಡೆಯುತ್ತಿರುವ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವವನ್ನು “ಕರ್ನಾಟಕ ಅಂತರರಾಷ್ಟ್ರೀಯ ಚಿತ್ರೋತ್ಸವ” ಎಂದು ಮರುನಾಮಕರಣ ಮಾಡಿ, ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ವರ್ಷ-ವರ್ಷವು ಅಭಿವೃದ್ಧಿ ವಂಚಿತ ಊರುಗಳಲ್ಲಿ ಆಯೋಜಿಸಿದರೆ ಈ ನೆಪದಲ್ಲಿ ಅಂಥ ಊರಿನ ಭೌತಿಕ ಮತ್ತು ಆ ಊರಿನ ಸುತ್ತ-ಮುತ್ತಾ ಜನರ ಬೌದ್ಧಿಕ ಅಭಿವೃದ್ಧಿಗೆ ಎಡೆ ಮಾಡಿಕೊಟ್ಟಂತಾಗುತ್ತದೆ.

ಒಂದು ಮಾತು ನೆನಪಿರಲಿ, ನಾವು ಟಿ.ವಿ, ಮೊಬೈಲ್, ಲ್ಯಾಪ್‍ಟಾಪ್‍ ಇತ್ಯಾದಿ ವಯಕ್ತಿಕ ಡಿವೈಸ್‍ಗಳಲ್ಲಿ ಸಿನಿಮಾ ವೀಕ್ಷಿಸುವುದರಿಂದ ಮನುಷ್ಯ ಸಂಬಂಧಗಳು ಕ್ಷೀಣಿಸುತ್ತವೆ ಅದೇ ಟಾಕೀಸ್‍ನಲ್ಲಿ ಮಾನವೀಯ ಸಂಬಂಧಗಳು ಗಟ್ಟಿಗೊಳ್ಳುತ್ತವೆ ಮತ್ತು ಹೊಸ ಸಂಬಂಧಗಳಾಗುತ್ತದೆ ಮತ್ತೆ ಪರಿಣಾಮಕಾರಿಯಾಗಿ ಕಲೆಯ ಮುಖೇನ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು.

ಈ ಒಂದು ಕ್ರಮದಿಂದ ನಿಶ್ಚಿತವಾಗಿ ಕನ್ನಡ ಚಿತ್ರರಂಗದ ಅಭಿವೃದ್ಧಿ, ಕರ್ನಾಟಕದಾದ್ಯಂತ ಟಾಕೀಸ್‍ಗಳ ಅಭಿವೃದ್ಧಿ, ಕರ್ನಾಟಕದಾದ್ಯಂತ ಪ್ರವಾಸಿ ತಾಣಗಳ ಅಭಿವೃದ್ಧಿ ಮತ್ತು ಎಲ್ಲರಿಗೂ, ಮುಖ್ಯವಾಗಿ ಸಣ್ಣ-ಪುಟ್ಟ ಊರಿನಲ್ಲಿ ವಾಸಿಸುತ್ತಿರುವವರಿಗೆ ಅಂತರರಾಷ್ಟ್ರೀಯ ಸಿನಿಮಾಗಳು ತಲುಪುತ್ತವೆ. ಅದರಲ್ಲು ಅಂತರರಾಷ್ಟ್ರೀಯ ಚಿತ್ರೋತ್ಸವ ಅಂದರೆ ಮನರಂಜನೆಯೇ ಪ್ರಧಾನವಾಗಿರೋ, ಹೀರೋ-ಹೀರೋಯಿನ್ ಪ್ರಧಾನವಾಗಿರೋ ಚಿತ್ರಗಳು ಇರೋದಿಲ್ಲ. ಇಂಥ ಚಿತ್ರೋತ್ಸವದಲ್ಲಿ ಮನಷ್ಯನ ಮನಸ್ಸು ಮತ್ತು ಹೃದಯಕ್ಕೆ ನಾಟಿ, ವಿಮರ್ಶೆ ಮಾಡಿಸುವಂತಹ ಚಿತ್ರಗಳೇ ಪ್ರದರ್ಶನವಾಗುವುದರಿಂದ ಇದು ಸಣ್ಣ-ಪುಟ್ಟ ಊರುಗಳಲ್ಲಿ ನಡೆದರೆ ಹೆಚ್ಚು ಪರಿಣಾಮಕಾರಿ.

ಈಗಾಗಲೇ ಜನಸಂಖ್ಯೆ ಮತ್ತು ಭೌತಿಕ ಅಭಿವೃದ್ಧಿ ಅತೀ ಅನಿಸಿರುವ ಬೆಂಗಳೂರು-ಮೈಸೂರಿಗೆ ಅಂತರರಾಷ್ಟ್ರೀಯ ಚಿತ್ರೋತ್ಸವ ಸೀಮಿತ ಮಾಡದೆ, ಕನ್ನಡ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಸಣ್ಣ-ಪುಟ್ಟ ಊರುಗಳಲ್ಲಿ ಅಂತರರಾಷ್ಟ್ರೀಯ ಚಿತ್ರೋತ್ಸವ ಆಯೋಜಿಸಿದರೆ ಹೇಗೆ? ಎಂದು ನಿಮ್ಮೆಲ್ಲರ ಅಭಿಪ್ರಾಯವನ್ನು ಕೇಳುತ್ತಿದ್ದೇನೆ?

ನಿಮ್ಮೆಲ್ಲರ ಪ್ರತಿಕ್ರಿಯೆ ಮತ್ತು ಚರ್ಚೆಯ ನಂತರ ಸರಿ-ತಪ್ಪುಗಳ ಆಧಾರದ ಮೇಲೆ ಮುಂದಿನ ನಡೆ ಬಗ್ಗೆ ಯೋಚಿಸೋಣ. ಕಡೆ ಪಕ್ಷ ಆಚರಣೆಗಳನ್ನಾದರು ಮಾಡುವ ಮುಖೇನ ಬೆಂಗಳೂರಿನ ದಟ್ಟಣೆಯನ್ನ ಕಡಿಮೆ ಮಾಡೋಣ.

Jan 19, 2016

ದನಕ್ಕಿರುವ ಬೆಲೆ ದಲಿತನಿಗಿಲ್ಲದ ದೇಶದಲ್ಲಿ....

(ಈ ಲೇಖನ ಓದಿದ ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಕೋಪ ಮತ್ತು ಬೇಸರ ವ್ಯಕ್ತಪಡಿಸಿರುವುದರಿಂದ ಈ ಸ್ಪಷ್ಟೀಕರಣ. ನಮ್ಮ ನಡುವೆ ಮಾನವೀಯತೆ ಮರೆತ ಮನುವಾದಿ ಮನಸ್ಥಿತಿಯವರು ಹೀಗೂ ಯೋಚಿಸಬಹುದು ಎನ್ನುವ ವಿಡಂಬನಾತ್ಮಕ ಲೇಖನವೇ ಹೊರತು ರೋಹಿತ್ ವೇಮುಲನ ಕುರಿತಾಗಲೀ ಅಥವಾ ದಲಿತರ ಕುರಿತಾಗಲೀ ಅವಹೇಳನ ಮಾಡುವ ಉದ್ದೇಶದ ಲೇಖನವಲ್ಲ. ಸತ್ಯ ಶೋಧನಾ ವರದಿ ಮತ್ತೊಂದು ಮಗದೊಂದು ಎಂಬ ನಾಟಕಗಳಿಂದ ಮೂಡಿದ ವಿಡಂಬನೆಯಿದು. ಆಗಸ್ಟಿನಿಂದ ಇಲ್ಲಿಯವರೆಗೆ ರೋಹಿತ್ ವೇಮುಲ ಮತ್ತವನ ಗೆಳೆಯರ ಸುತ್ತ ನಡೆದ ರಾಜಕೀಯಗಳ ಬಗ್ಗೆ ವಿವರವಾಗಿ ಹಿಂದಿನ ಬರಹದಲ್ಲಿ ದಾಖಲೆಗಳ ಸಮೇತ ಬರೆಯಲಾಗಿದೆ. ಅದನ್ನೋದಲು ಇಲ್ಲಿ ಕ್ಲಿಕ್ಕಿಸಿ - ಹಿಂಗ್ಯಾಕೆ?)
ಡಾ. ಅಶೋಕ್. ಕೆ. ಆರ್
ಭಾನುವಾರ ರಾತ್ರಿ ಒಂದು ಭಾವಪೂರ್ಣ ಪತ್ರ ಬರೆದಿಟ್ಟು ನೇಣಿಗೆ ಶರಣಾಗಿಬಿಟ್ಟವನು ರೋಹಿತ್ ವೇಮುಲ. ಇಂಗ್ಲೀಷಿನಲ್ಲಿದ್ದ ಆ ಪತ್ರವನ್ನು ಕನ್ನಡಕ್ಕೆ ಅನುವಾದಿಸಿ ಜೊತೆಗೆ ಹೈದರಾಬಾದಿನಲ್ಲಿ ಕಳೆದ ಆಗಸ್ಟಿನಿಂದ ನಡೆದಿದ್ದೇನು ಎನ್ನುವುದನ್ನು ನಿನ್ನೆ ಪ್ರಕಟಿಸಲಾಗಿತ್ತು. ಕಿರಣ್ ಗಾಜನೂರು ಕೂಡ ಆ ಪತ್ರವನ್ನು ಕನ್ನಡಕ್ಕೆ ಅನುವಾದಿಸಿ ಫೇಸ್ ಬುಕ್ಕಿನಲ್ಲಿ ಹಾಕಿಕೊಂಡಿದ್ದರು. ಹಿಂಗ್ಯಾಕೆಯಲ್ಲಿ ಬಂದಿದ್ದ ಅನುವಾದ, ಕಿರಣ್ ಗಾಜನೂರು ಮಾಡಿದ್ದ ಅನುವಾದ ಉಳಿದ ವೆಬ್ ಪುಟಗಳಲ್ಲಿ, ಫೇಸ್ ಬುಕ್ಕಿನಲ್ಲಿ, ವಾಟ್ಸ್ ಅಪ್ಪಿನಲ್ಲಿ ಹರಿದಾಡುತ್ತಲೇ ಇದೆ. ನನ್ನ ವಾಟ್ಸಪ್ಪಿಗೆ ಹಲವು ಸಲ ಬಂದಿದೆ. ಎಷ್ಟೇ ಸಲ ಬಂದರೂ ಮತ್ತೆ ಮತ್ತೆ ಓದಬೇಕೆನ್ನಿಸುತ್ತಿತ್ತು. ಓದಿ ಓದಿ ಈಗ ರೋಹಿತನ ಮೇಲೆ ಕೋಪ ಬಂದಿದೆ. ಹೈದರಾಬಾದಿನ ಉಪಕುಲಪತಿ ಅಪ್ಪಾರಾವ್, ಈ ಐದು ಹುಡುಗರ ಜಾತಿವಾದಿ, ದೇಶದ್ರೋಹಿ ಕೆಲಸಗಳಿಗೆ ತಡೆ ಹಾಕಬೇಕೆಂದು ಸ್ಮೃತಿ ಇರಾನಿಗೆ ಪತ್ರ ಬರೆದ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯರ ವಿರುದ್ಧ ಆತ್ಮಹತ್ಯಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕೇಸು ದಾಖಲಾಗಿದೆ. ಸಚಿವೆ ಸ್ಮೃತಿ ಇರಾನಿಯವರು ಸತ್ಯ ಶೋಧನಾ ಸಮಿತಿಯನ್ನು ಕಳುಹಿಸಲಾಗುವುದೆಂದು ಹೇಳಿದ್ದಾರೆ. ಸತ್ಯ ಕಣ್ಣಿಗೆ ಕಾಣುವಾಗ ಶೋಧನಾ ಸಮಿತಿ ಯಾಕೆ? ಮೊದಲಿಗೆ ಮಾಡಬೇಕಾದ ಕೆಲಸವೆಂದರೆ ಅಮಾಯಕರಾದ ಬಂಡಾರು ದತ್ತಾತ್ರೇಯ ಮತ್ತು ಅಪ್ಪಾರಾವರ ವಿರುದ್ಧ ಹಾಕಿರುವ ಕೇಸುಗಳನ್ನು ಹಿಂತೆಗೆದುಕೊಳ್ಳಬೇಕು. ಯಾರ್ಯಾರು ಈ ಪ್ರಕರಣದಲ್ಲಿ ಅಪರಾಧಿಗಳೆಂದು ನೋಡೋಣ.
ಮೊದಲ ಅಪರಾಧಿಯ ಸ್ಥಾನದಲ್ಲಿ ಅಂಬೇಡ್ಕರರನ್ನು ನಿಲ್ಲಿಸಬೇಕು. ಚಾತುರ್ವರ್ಣ ನೀತಿಯೊಳಗೂ ಇಲ್ಲದ ದಲಿತರಿಗೊಂದು ಆತ್ಮಾಭಿಮಾನ ಮೂಡಿಸುವ ಕೆಲಸಕ್ಕಿಂತ ದೊಡ್ಡ ಅಪರಾಧ ಯಾವುದಾದರೂ ಇದೆಯೇ? ದಲಿತರು ಓದಬೇಕು, ದಲಿತರಿಗೆ ಸಮಾನತೆ ಸಿಗಬೇಕು ಎಂಬ ಕೆಟ್ಟ ಬುದ್ಧಿಯನ್ನೆಲ್ಲ ಅವರು ಪ್ರಚುರಪಡಿಸದಿದ್ದರೆ ಎಲ್ಲಾ ದಲಿತರು ಊರಾಚೆ ಬದುಕಿ ದೊಡ್ಡ ಜಾತಿಯವರ ಮಲ ಬಳಿದು, ಸತ್ತ ದನದ ಚರ್ಮ ಸುಲಿದು, ಊರೊಳಗೆ ಬರುವಾಗ ತಮಟೆ ಬಡಿಯುತ್ತ, ತಮ್ಮ ನೆರಳು ಮೇಲ್ಜಾತಿಯವರಿಗೆ ತಗುಲದಂತೆ ಎಚ್ಚರ ವಹಿಸುತ್ತ ಅಕ್ಷರ ಭಯೋತ್ಪಾದಕರ ಹಂಗಿಲ್ಲದೆ ನೆಮ್ಮದಿಯಾಗಿ ಇದ್ದುಬಿಡಬಹುದಿತ್ತಲ್ಲ. ಸುಖಾಸುಮ್ಮನೆ ಹದಿನೆಂಟು ಪರ್ಸೆಂಟು, ರಿಸರ್ವೆಷನ್ನು ಅಂತೆಲ್ಲ ಹೀಯಾಳಿಸಿಕೊಂಡು ಓದಿ ಉದ್ಧಾರವಾಗಬೇಕಾದ ದರ್ದೇನಿತ್ತಿವರಿಗೆ? ಇಂತ ಕೆಟ್ಟ ಬುದ್ಧಿಯನ್ನೆಲ್ಲ ಹೇಳಿಕೊಟ್ಟು ಸ್ವಾಭಿಮಾನ ತುಂಬಿದ್ದು ಆ ಅಂಬೇಡ್ಕರ್ ತಾನೇ? ಅದಿಕ್ಕೆ ಅವರ ಮೇಲೆ ಮೊದಲು ಕೇಸು ಹಾಕಬೇಕು. ಜೊತೆಗೆ ಎಲ್ಲರಿಗೂ ಶಿಕ್ಷಣ ನೀಡಲು ಶ್ರಮಿಸಿದ ಜ್ಯೋತಿಭಾ ಪುಲೆ, ಸಾವಿತ್ರಿಭಾಯಿ ಪುಲೆಯವರ ಮೇಲೆ ಕೇಸು ಜಡಿಯುವುದನ್ನು ಮರೆಯಬಾರದು. ಸತ್ತೋರ ಮೇಲೆ ಹಾಕುವ ಕೇಸಿನಿಂದ ಉಪಯೋಗ ಜಾಸ್ತಿ ಇಲ್ಲ ಅಲ್ಲವೇ.
ಮುಂದಿನ ಕೇಸನ್ನು ರೋಹಿತ್ ವೇಮುಲನ ತಂದೆ ತಾಯಿಯ ಮೇಲೆ ಹಾಕಬೇಕು. ಆಂಧ್ರದಲ್ಲೇನು ಜಮೀನುದಾರರಿಗೆ, ಭೂಮಾಲೀಕರಿಗೆ ಕೊರತೆಯೇ? ಅಂತವರ ಬಳಿಗೆ ತಮ್ಮ ಮಗನನ್ನು ಜೀತಕ್ಕೋ ಕೂಲಿಗೋ ಕಳುಹಿಸಿ ಚಾತುರ್ವರ್ಣ ಪದ್ಧತಿಯ ಉಳಿವಿಗೆ ಶ್ರಮಿಸುವುದನ್ನು ಬಿಟ್ಟು ಹೈದರಾಬಾದಿನ ವಿಶ್ವವಿದ್ಯಾಲಯಕ್ಕೆ ಓದಲು ಕಳುಹಿಸುವ ದುರಹಂಕಾರದ ಕೆಲಸವನ್ಯಾಕೆ ಮಾಡಬೇಕಿತ್ತವರು. ಓದಲಾತ ಇಲ್ಲಿಗೆ ಬರದಿದ್ದರೆ ಹೋರಾಟ ಮಣ್ಣು ಮಸಿ ಅಂತೆಲ್ಲ ಅವನ ತಲೆಗೆ ಹೋಗುತ್ತಲೇ ಇರಲಿಲ್ಲ. ನೆಮ್ಮದಿಯಾಗಿ ತಂಗಳನ್ನ ತಿಂದುಕೊಂಡು ಮೈಮುರಿದು ದುಡಿದು, ದಲಿತರ ಮೇಲಿನ ಅನ್ಯಾಯ ಕಣ್ಣಿಗೆ ಬಿದ್ದಾಗ 'ಎಲ್ಲಾ ನಮ್ ಪೂರ್ವಜನ್ಮದ ಪಾಪದ ಫಲ' ಎಂಬ ಅಯ್ನೋರ ಹೇಳಿಕೆಯನ್ನು ನೆನಪಿಸಿಕೊಂಡು ತಲೆ ತಗ್ಗಿಸಿ ಹೋಗಿಬಿಡಬಹುದಾಗಿದ್ದ ಯುವಕನನ್ನು ಓದಿಸಿ ಅವನ ಸಾವಿಗೆ ಕಾರಣವಾಗಿದ್ದು ವೇಮುಲನ ತಂದೆ ತಾಯಿಯೇ ಅಲ್ಲವೇ?
ಹೋಗ್ಲಿ ಹೈದರಾಬಾದ್ ವಿಶ್ವವಿದ್ಯಾಲಯಕ್ಕೆ ಓದಲು ಬಂದ ಮೇಲೆ ರಾಜಕೀಯ ಪ್ರಜ್ಞೆಯನ್ನು ಚೂರೂ ಬೆಳೆಸಿಕೊಳ್ಳದೇ ಓದಿಕೊಂಡು, ನಲಿದಾಡಿಕೊಂಡು, ಪಿಚ್ಚರ್ರು, ಮಾಲೂ ಅಂತ ತಿರುಗಾಡಿಕೊಂಡು ಇರುವುದನ್ನು ಬಿಟ್ಟು ಅದ್ಯಾಕೆ ಅಂಬೇಡ್ಕರ್ ವಿದ್ಯಾರ್ಥಿ ಸಂಘಕ್ಕೆಲ್ಲ ಸೇರಬೇಕಿತ್ತು? (ನೋಡಿ ಮತ್ತೆ ಇಲ್ಲಿ ಅಂಬೇಡ್ಕರ್ ಅಪರಾಧಿ). ಮುಜಾಫರ್ ನಗರದಲ್ಲಿ ನಡೆದ ಘಟನೆ ಕಟ್ಟಿಕೊಂಡು ಇವರಿಗೇನಾಬೇಕು? ಅಲ್ಲಿನ ಗಲಭೆಯ ಬಗೆಗಿನ ಡಾಕ್ಯುಮೆಂಟರಿಯನ್ನು ದೆಹಲಿಯಲ್ಲಿ ಪ್ರದರ್ಶನ ಮಾಡಲು ಬಿಡದಿದ್ದರೆ ಇವರಿಗೇನು ಹೋಗಬೇಕು? ಓ! ಅಲ್ಲಿನ ಕೋಮುಗಲಭೆಯಲ್ಲಿ ಹಿಂಸೆಗೊಳಗಾಗಿದ್ದು ಮುಸ್ಲಿಮರು, ಇದ್ದ ಹೆಚ್ಚು ಕಡಿಮೆ ಎಲ್ಲಾ ನಿರಾಶ್ರಿತ ಶಿಬಿರಗಳು ಮುಸ್ಲಿಮರದು, ಎರಡೇ ಎರಡು ನಿರಾಶ್ರಿತ ಶಿಬಿರಗಳು ಹಿಂದೂಗಳದ್ದಿತ್ತು. ಹಿಂದೂ ಧರ್ಮ ಅಸಹ್ಯಿಸುವ ದಲಿತರ ನಿರಾಶ್ತಿತ ಶಿಬಿರಗಳು. ದಲಿತರ ಮೇಲೆ ಮುಸ್ಲಿಮರು ಹಲ್ಲೆ ನಡೆಸಿದ ಬಗ್ಗೆಯೂ ಸಾಕ್ಷ್ಯಚಿತ್ರದಲ್ಲಿತ್ತು
(ಮುಜಾಫರ್ ನಗರದ ಕೋಮುಗಲಭೆಯಲ್ಲಿ ನಲುಗಿದ ಧರ್ಮವ್ಯಾವುದು?

ಅದರ ಬಗ್ಗೆಯೆಲ್ಲ ಇವರ್ಯಾಕೆ ತಲೆಕೆಡಿಸಿಕೊಳ್ಳಬೇಕಿತ್ತು. ದೇಶದಲ್ಲಿ ಹಿಂದೂ ಧರ್ಮವನ್ನು ರಕ್ಷಿಸಲು ಬಹುದೊಡ್ಡ ಪಡೆ ಸಿದ್ಧವಾಗಿರುವಾಗ ಅಂತವರ ಜೊತೆ ಕೈಜೋಡಿಸುವ ಕೆಲಸ ಮಾಡುವುದನ್ನು ಬಿಟ್ಟು ಸತ್ಯ - ಧರ್ಮ - ನ್ಯಾಯ ಎಂದೆಲ್ಲ ಬೊಬ್ಬೆ ಹೊಡೆಯುವುದ್ಯಾಕೆ? ಇಂತಹ ಚಿಂತನೆಗಳನ್ನೆಲ್ಲ ತಲೆಗೆ ತುಂಬಿದ ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಮೇಲೂ ಮರೆಯದೆ ಪ್ರಕರಣ ದಾಖಲಾಗಬೇಕು.
ರೋಹಿತನ ತಲೆಕೆಡಿಸಿದ ಅಂಬೇಡ್ಕರ್, ಜ್ಯೋತಿಭಾ ಪುಲೆ, ಶಿಕ್ಷಣ ಕೊಡಿಸಿದ ತಂದೆ ತಾಯಿ, ವಿಚಾರಗಳನ್ನು ತುಂಬಿದ ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಮೇಲೆ ಕೇಸುಗಳನ್ನು ದಾಖಲಿಸುವುದನ್ನು ಬಿಟ್ಟು ಹಿಂದೂ ಧರ್ಮ ರಕ್ಷಕರ ಮೇಲೆ ಕೇಸು ಹಾಕಿರುವುದು ಸರಿಯಲ್ಲ. ಮತ್ತು ದನ ಸಾಯಿಸಿದಾಗ ಮಾತನಾಡದವರೆಲ್ಲರೂ ಯಕಶ್ಚಿತ್ ಒಬ್ಬ ದಲಿತ ಸತ್ತಾಗ ದೇಶವೇ ಹಾಳಾಯಿತೆಂದು ಬೊಬ್ಬೆ ಹೊಡೆಯುವ ದುರ್ವಿಧಿ ಈ ದೇಶಕ್ಕೆ ಬರಬಾರದಿತ್ತು. ಅಲ್ಲರೀ ದನದೊಳಗೆ ಮೂವತ್ತುಮೂರು ಕೋಟಿ ದೇವತೆಗಳು ಬದುಕಿ ಬಾಳುತ್ತಿವೆ, ಈ ಹಾಳಾದ ದಲಿತರಲ್ಲೇನಿದೆ? ಅವರ ಮುಖ ಕಂಡ್ರೆ ನಮ್ ದೇವ್ರಿಗೇ ಮೈಲಿಯಾಗಿಬಿಡುತ್ತೆ ಅನ್ನೋ ಕಾಮನ್ ಸೆನ್ಸ್ ಕೂಡ ನಮ್ ಜನರಲ್ಲಿ ಕಾಣೆಯಾಗಿಬಿಟ್ಟಿದೆಯಲ್ಲ. ಸಮಾನ ಆಹಾರದ ಹಕ್ಕಿನ ಕುರಿತು ಮಾಂಸ ತಿನ್ನೋರು ತಿನ್ದೇ ಇರೋರೆಲ್ಲ ಸೇರ್ಕಂಡು ವಡೆ, ಬೀಫು ತಿಂದು ಪ್ರತಿಭಟನೆ ನಡೆಸಿದಾಗ ಅಂಡು ಬಡ್ಕೊಂಡು ಅರಚಿಕೊಂಡವರೆಲ್ಲ ನೋಡಿ ಎಷ್ಟೊಂದು ಮೌನದಿಂದಿದ್ದಾರೆ. ಅವರಿಗೆ ಗೊತ್ತು ಇಂತಹ ಘಟನೆಗಳು ಸನಾತನ ಧರ್ಮ ಮರುಪ್ರತಿಷ್ಟಾಪನೆಯಾಗುತ್ತಿರುವ ಲಕ್ಷಣಗಳೆಂದು. ಅವರ ಮೌನವನ್ನು ನೋಡಿಯೂ ಕಲಿಯದ ಈ ದೇಶದ ದ್ರೋಹಿಗಳು ರೋಹಿತನ ಆತ್ಮಹತ್ಯೆಯನ್ನು ಪ್ರತಿಭಟಿಸಿ ಇವತ್ತು (19/01/2015) ಅದೇ ಬೆಂಗಳೂರಿನ ಟೌನ್ ಹಾಲಿನ ಮುಂದೆ ಸಂಜೆ ನಾಲ್ಕೂವರೆಗೆ ನಾಲಕ್ಕು ಫೋಟೋ ಇಟ್ಕೊಂಡು, ಹತ್ತು ಬ್ಯಾನರ್ ಕಟ್ಕೊಂಡು ಕೂಗುವ ಕಾರ್ಯಕ್ರಮ ಇಟ್ಕೊಂಡಿದ್ದಾರಂತೆ. ಬಿಡುವಾಗಿದ್ದರೆ ನೀವು ಅತ್ತ ಕಡೆ ಒಮ್ಮೆ ಬಂದು ದೇಶದ್ರೋಹಿಗಳನ್ನು ಕಣ್ತುಂಬ ನೋಡಿಕೊಂಡು ಹೋಗಬೇಕಾಗಿ ವಿನಂತಿ

Jan 18, 2016

ರೋಹಿತ್ ವೇಮುಲನ ಸಾವಿಗೆ ಹೊಣೆಯಾರು?

“ಶುಭ ಮುಂಜಾನೆ,
ಈ ಪತ್ರವನ್ನು ನೀವು ಓದುವಾಗ ನಾನಿರುವುದಿಲ್ಲ. ಕೋಪ ಮಾಡಿಕೊಳ್ಳಬೇಡಿ. ನನಗೆ ಗೊತ್ತು, ನಿಮ್ಮಲ್ಲಿ ಹಲವರು ನನ್ನ ಒಳಿತು ಬಯಸಿದಿರಿ, ಪ್ರೀತಿಸಿದಿರಿ ಮತ್ತು ಚೆಂದ ನೋಡಿಕೊಂಡಿರಿ. ಯಾರ ಮೇಲೂ ನನಗೆ ದೂರುಗಳಿಲ್ಲ. ಯಾವಾಗಲೂ ನಾನೇ ನನ್ನ ಸಮಸ್ಯೆಗಳಿಗೆ ಕಾರಣ. ನನ್ನ ದೇಹ ಮತ್ತು ಆತ್ಮದ ನಡುನಿನ ಕಂದಕ ದೊಡ್ಡದಾಗುತ್ತಿರುವ ಭಾವನೆ. ಮತ್ತು ನಾನು ರಾಕ್ಷಸನಾಗಿಬಿಟ್ಟಿದ್ದೇನೆ. ನನಗೆ ಬರಹಗಾರನಾಗಬೇಕೆಂದಿತ್ತು. ವಿಜ್ಞಾನ ಲೇಖಕ ಕಾರ್ಲ್ ಸಗಾನಿನ ಹಾಗೆ. ಕೊನಗೆ, ಇದೊಂದೇ ಪತ್ರವನ್ನಷ್ಟೇ ಬರೆಯಲು ನನ್ನಿಂದಾದದ್ದು.

ವಿಜ್ಞಾನ, ನಕ್ಷತ್ರ, ಪ್ರಕೃತಿಯನ್ನು ಪ್ರೀತಿಸಿದೆ; ಪ್ರಕೃತಿಯಿಂದ ಮನುಷ್ಯರು ವಿಚ್ಛೇದನ ಪಡೆದು ಬಹಳ ದಿನಗಳಾಯಿತು ಎಂಬುದನ್ನು ಅರಿಯದೆ ಮನುಷ್ಯರನ್ನು ಪ್ರೀತಿಸಿದೆ. ನಮ್ಮ ಭಾವನೆಗಳೆಲ್ಲ ಸೆಕೆಂಡ್ ಹ್ಯಾಂಡು. ಪ್ರೀತಿಯನ್ನಿಲ್ಲಿ ‘ಕಟ್ಟಲಾಗಿದೆ’. ನಂಬಿಕೆಗಳಿಗೆ ಬಣ್ಣ ಬಳಿಯಲಾಗಿದೆ. ನಮ್ಮ ಸ್ವಂತಿಕೆಗೆ ಬೆಲೆ ಬರುವುದು ಕೃತಕ ಕಲೆಯಿಂದ. ನೋವುಣ್ಣದೆ ಪ್ರೀತಿಸುವುದು ನಿಜಕ್ಕೂ ಕಷ್ಟಕರವಾಗಿಬಿಟ್ಟಿದೆ.

ಮನುಷ್ಯನ ಮೌಲ್ಯ ಅವನ ತತ್ ಕ್ಷಣದ ಗುರುತು ಮತ್ತು ಸಾಧ್ಯತೆಗಳಿಗೆ ಇಳಿದುಬಿಟ್ಟಿದೆ. ಒಂದು ವೋಟಿಗೆ. ಒಂದು ನಂಬರ್ರಿಗೆ. ಒಂದು ವಸ್ತುವಿಗೆ. ನಕ್ಷತ್ರದ ಧೂಳಿನಿಂದ ಉದ್ಭವವಾದ ಅತ್ಯದ್ಭುತ ವಸ್ತುವಿನಂತಹ ಬುದ್ಧಿವಂತಿಕೆ ಮೂಲಕ ಎಂದೂ ಮನುಷ್ಯನನ್ನು ಗುರುತಿಸಲಿಲ್ಲ. ಬೀದಿಯಲ್ಲಿ, ಓದಿನಲ್ಲಿ, ರಾಜಕೀಯದಲ್ಲಿ, ಸಾವಿನಲ್ಲಿ, ಬದುಕಿನಲ್ಲಿ.

ಈ ರೀತಿಯ ಪತ್ರವನ್ನು ಮೊದಲ ಬಾರಿಗೆ ಬರೆಯುತ್ತಿದ್ದೇನೆ. ಮೊದಲ ಬಾರಿಗೆ ಕೊನೆಯ ಪತ್ರ. ಸರಿಯಿರದಿದ್ದರೆ ಕ್ಷಮಿಸಿ.

ಬಹುಶಃ ಪ್ರಪಂಚವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾನು ತಪ್ಪಿದೆ. ಪ್ರೀತಿ, ನೋವು, ಬದುಕು, ಸಾವು ಅರ್ಥ ಮಾಡಿಕೊಳ್ಳುವಲ್ಲಿ ಸೋತೆ. ಆತುರವೇನಿರಲಿಲ್ಲ, ನಾನು ಓಡುತ್ತಲೇ ಇದ್ದೆ. ಬದುಕು ಪ್ರಾರಂಭಿಸುವ ಅವಸರವಿತ್ತು. ಕೆಲವರಿಗೆ ಬದುಕೇ ಶಾಪ. ನನಗೆ, ನನ್ನ ಹುಟ್ಟೇ ಮಾರಾಣಾಂತಿಕ ಅಪಘಾತ. ಬಾಲ್ಯದ ಒಂಟಿತನದಿಂದ ನಾನೆಂದೂ ಹೊರಬರಲಾರೆ. ಹೊಗಳಿಕೆ ಪಡೆಯದ ಮಗುವಿನ ಭೂತ.

ಈ ಕ್ಷಣದಲ್ಲಿ ನನಗೆ ನೋವಾಗುತ್ತಿಲ್ಲ, ದುಃಖವಾಗುತ್ತಿಲ್ಲ; ಖಾಲಿಯಾಗಿದ್ದೀನಷ್ಟೇ. ನನ್ನ ಬಗ್ಗೆ ನನಗೇ ಕ್ಯಾರೆಯಿಲ್ಲ. ಇದು ಅಸಹ್ಯ. ಹಾಗಾಗಿ ಈ ಕೆಲಸ ಮಾಡುತ್ತಿದ್ದೇನೆ.

ಜನರು ನನ್ನನ್ನು ಹೇಡಿಯೆಂದು ಜರಿಯಬಹುದು. ನಾನು ಹೋದ ಮೇಲೆ ಮೂರ್ಖ, ಸ್ವಾರ್ಥಿ ಎನ್ನಬಹುದು. ನನ್ನನ್ನು ಹೇಗೆ ಕರೆಯುತ್ತಾರೋ ಎನ್ನುವುದರ ಬಗ್ಗೆ ನನಗೆ ಚಿಂತೆಯಿಲ್ಲ. ಮರಣಾನಂತರದ ಕತೆಗಳಲ್ಲಿ, ದೆವ್ವಗಳಲ್ಲಿ ನನಗೆ ನಂಬಿಕೆಯಿಲ್ಲ. ಏನನ್ನಾದರೂ ನಂಬಬಹುದೆಂದರೆ, ನಕ್ಷತ್ರಗಳ ಜೊತೆ ಪಯಣಿಸುವುದನ್ನು ನಂಬುತ್ತೇನೆ. ಮತ್ತು ಇತರೆ ವಿಶ್ವಗಳ ಬಗ್ಗೆ ತಿಳಿದುಕೊಳ್ಳಬಯಸುತ್ತೇನೆ.

ಈ ಪತ್ರ ಓದುತ್ತಿರುವ ನೀವು ನನಗೇನಾದರೂ ಮಾಡಬಹುದಾದರೆ, ಕಳೆದ ಏಳು ತಿಂಗಳಿನ ಫೆಲ್ಲೋಶಿಪ್ ಹಣ ಒಂದು ಲಕ್ಷದ ಎಪ್ಪತ್ತೈದು ಸಾವಿರ ರುಪಾಯಿ ಇನ್ನೂ ಬರಬೇಕಿದೆ. ನನ್ನ ಕುಟುಂಬದವರಿಗೆ ಆ ಹಣ ತಲುಪುವುದನ್ನು ಖಾತ್ರಿ ಪಡಿಸಿಕೊಳ್ಳಿ. ರಾಮ್ಜಿಗೆ ನಲವತ್ತು ಸಾವಿರದತ್ತಿರ ಕೊಡಬೇಕಿದೆ. ಅವನದ್ಯಾವತ್ತನ್ನೂ ವಾಪಸ್ಸು ಕೇಳಿಲ್ಲ. ದಯವಿಟ್ಟು ನನಗೆ ಬರುವ ಹಣದಲ್ಲಿ ಅವನ ಹಣವನ್ನು ಕೊಟ್ಟುಬಿಡಿ.

ನನ್ನ ಅಂತ್ಯಕ್ರಿಯೆ ಶಾಂತವಾಗಿ ಸರಾಗವಾಗಿ ನಡೆಯಲಿ. ಹಿಂಗೆ ಕಾಣಿಸಿಕೊಂಡು ಹಂಗೆ ಮರೆಯಾಗಿಬಿಟ್ಟ ಎನ್ನುವಂತೆ ವರ್ತಿಸಿ. ನನಗಾಗಿ ಕಣ್ಣೀರು ಬೇಡ. ಬದುಕಿಗಿಂತ ಸಾವಿನಲ್ಲೇ ನನಗೆ ಹೆಚ್ಚು ಖುಷಿಯಿದೆ ಎನ್ನುವುದು ಗೊತ್ತಿರಲಿ.

ಉಮಾ ಅಣ್ಣ, ಈ ಕೆಲಸಕ್ಕೆ ನಿಮ್ಮ ರೂಮನ್ನು ಉಪಯೋಗಿಸಿದ್ದಕ್ಕೆ ಕ್ಷಮೆ ಇರಲಿ.

ನಿರಾಸೆ ಮೂಡಿಸಿದ್ದಕ್ಕೆ ಎ.ಎಸ್.ಎ ಕುಟುಂಬದ (ASA: Ambedkar Students Association) ಕ್ಷಮೆ ಕೇಳುತ್ತೇನೆ. ನೀವೆಲ್ಲರೂ ನನ್ನನ್ನು ತುಂಬಾ ಪ್ರೀತಿಸಿದಿರಿ. ಎ.ಎಸ್.ಎನ ಭವಿಷ್ಯಕ್ಕೆ ಶುಭ ಕೋರುತ್ತೇನೆ.
ಕೊನೆಯ ಬಾರಿಗೆ,
ಜೈ ಭೀಮ್.

ಫಾರ್ಮಾಲಿಟಿಗಳನ್ನು ಬರೆಯುವುದನ್ನು ಮರೆತುಬಿಟ್ಟೆ. ಈ ಆತ್ಮಹತ್ಯೆಗೆ ಯಾರೂ ಜವಾಬ್ದಾರರಲ್ಲ. 
ತಮ್ಮ ಕಾರ್ಯ ಅಥವಾ ತಮ್ಮ ಮಾತಿನಿಂದ ಯಾರೂ ಪ್ರೇರೇಪಿಸಲಿಲ್ಲ.
ಇದು ನನ್ನ ನಿರ್ಧಾರ ಮತ್ತು ಇದಕ್ಕೆ ನಾನೊಬ್ಬನೇ ಜವಾಬ್ದಾರ.
ನಾನು ಹೋದ ಮೇಲೆ ಈ ವಿಷಯವಾಗಿ ನನ್ನ ಸ್ನೇಹಿತರಿಗೆ ಮತ್ತು ಶತ್ರುಗಳಿಗೆ ತೊಂದರೆ ಕೊಡಬೇಡಿ.”

ಇಂತಹುದೊಂದು ಮನಕಲಕುವ ಪತ್ರವನ್ನು ಬರೆದು ಭಾನುವಾರ ರಾತ್ರಿ ನೇಣಿನ ಕುಣಿಕೆಗೆ ಕುತ್ತಿಗೆಯನ್ನೊಡ್ಡಿದವನು ರೋಹಿತ್ ವೇಮುಲಾ, ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ, ಪೂರ್ಣವಾಗಿ ಹೇಳಬೇಕೆಂದರೆ Dalit Research scholar. ಮರಣ ಪತ್ರ ಸಾವಿಗೆ ಹತ್ತಲವು ಕಾರಣಗಳಿದ್ದಿರಬಹುದೆಂಬ ಅನುಮಾನ ಮೂಡಿಸುತ್ತದೆ. ಹತ್ತಲವು ಕಾರಣಗಳಲ್ಲಿ ಕಳೆದೈದು ತಿಂಗಳುಗಳಿಂದ ರೋಹಿತ್ ವೇಮುಲ ಮತ್ತವನ ಸ್ನೇಹಿತರ ಮೇಲಾದ ಮಾನಸಿಕ ಕ್ರೌರ್ಯ ಪ್ರಮುಖವಾದುದು. ಉಳಿದ ಕಾರಣಗಳನ್ನು ಪ್ರಮುಖವಾಗಿಸಿ ಮೂಲಕಾರಣವನ್ನು ಮರೆಮಾಚುವ ಮುನ್ನ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ನಡೆದಿದ್ದರ ಕಡೆಗೆ ಗಮನಹರಿಸೋಣ.

ದೆಹಲಿ ವಿಶ್ವವಿದ್ಯಾಲಯದಲ್ಲಿ ‘ಮುಝಾಫರ್ ನಗರ್ ಬಾಕೀ ಹೈ’ ಸಾಕ್ಷ್ಯಚಿತ್ರದ ಪ್ರದರ್ಶನದ ವೇಳೆ ಎಬಿವಿಪಿಯ ಕಾರ್ಯಕರ್ತರು ನುಗ್ಗಿ ದಾಂಧಲೆ ಮಾಡಿ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ನಿಲ್ಲಿಸಿಬಿಟ್ಟರು. ಎಬಿವಿಪಿಯ ಈ ಕೃತ್ಯವನ್ನು ವಿರೋಧಿಸಿ ಹೈದರಾಬಾದ್ ವಿಶ್ವವಿದ್ಯಾಲಯದ ಅಂಬೇಡ್ಕರ್ ವಿದ್ಯಾರ್ಥಿ ಸಂಘ (ಎ.ಎಸ್.ಎ: Ambedkar student association) 2015ರ ಆಗಸ್ಟ್ ಮೂರರಂದು ಪ್ರತಿಭಟನೆ ಆಯೋಜಿಸುತ್ತಾರೆ. 
ಪ್ರತಿಭಟಿಸುವುದು ತಪ್ಪೇ?
ಹೈದರಾಬಾದ್ ವಿಶ್ವವಿದ್ಯಾಲಯದ ಎಬಿವಿಪಿಯ ಮುಖಂಡ ನಂದನಂ ಸುಶೀಲ್ ಕುಮಾರ್ ಈ ಪ್ರತಿಭಟನೆಯ ಕುರಿತಂತೆ ಕೆಳಗಿನಂತೆ ಫೇಸ್ ಬುಕ್ಕಿನಲ್ಲೊಂದು ಪೋಸ್ಟ್ ಹಾಕುತ್ತಾನೆ. 
ಸುಶೀಲ್ ಕುಮಾರನ ಫೇಸ್ ಬುಕ್ ಪೋಸ್ಟ್
ಕೆರಳಿದ ಎ.ಎಸ್.ಎ ಹುಡುಗರು ಗುಂಪು ಕಟ್ಟಿಕೊಂಡು ಸುಶೀಲ್ ಕುಮಾರನ ರೂಮಿಗೆ ನುಗ್ಗುತ್ತಾರೆ. ಅಲ್ಲವನು ಸೆಕ್ಯುರಿಟಿಯವರ ಮುಂದೆ ಒಂದು ಕ್ಷಮಾಪಣೆ ಪತ್ರ ಬರೆದುಕೊಡುತ್ತಾನೆ. ಸಂಘಟನೆಗಳ ಗಲಾಟೆ, ಹುಡುಗರ ಗಲಾಟೆ ಅಲ್ಲಿಗೆ ಮುಗಿಯಬೇಕಿತ್ತು. ಮುಗಿಯಲಿಲ್ಲ. 
ಸುಶೀಲ್ ಕುಮಾರ್ ಬರೆದುಕೊಟ್ಟ ಕ್ಷಮಾಪಣಾ ಪತ್ರ
ಸುಶೀಲ್ ಕುಮಾರ್ ಎ.ಎಸ್.ಎ ಹುಡುಗರಿಂದ ಪೆಟ್ಟು ತಿಂದಿದ್ದಾನೆ ಎಂದು ಆಸ್ಪತ್ರೆಗೆ ಸೇರುತ್ತಾನೆ. ಬಿಜೆಪಿಯಲ್ಲಿರುವ ಸುಶೀಲನ ಅಣ್ಣ, ಬಿಜೆಪಿಯ ಎಂ.ಎಲ್.ಸಿ ರಾಮಚಂದ್ರ ರಾವ್ ಹೀಗೆ ರಾಜಕೀಯ ಪಕ್ಷದ ಪ್ರವೇಶವಾಗುತ್ತದೆ. ದಲಿತ ಹುಡುಗರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗುತ್ತದೆ.

ನಡೆದಿದ್ದೇನು ಎನ್ನುವುದನ್ನು ವಿಚಾರಿಸಲು ಆಗಿದ್ದ ಉಪಕುಲಪತಿ ಪ್ರೊಫೆಸರ್ ಆರ್.ಪಿ.ಶರ್ಮಾ, ಪ್ರೊಫೆಸರ್ ಅಲೋಕ್ ಪಾಂಡೆಯವರ ನೇತೃತ್ವದಲ್ಲೊಂದು ಸಮಿತಿ ರಚಿಸುತ್ತಾರೆ. ಈ ಸಮಿತಿ ಕೊಟ್ಟ ವರದಿ ಅವರೇ ಕಂಡುಕೊಂಡೆವೆಂದು ಬರೆದಿದ್ದ ಸಂಗತಿಗಳಿಂತ ಸಂಪೂರ್ಣ ಭಿನ್ನವಾಗಿತ್ತು! 



ಸಮಿತಿಯ ಮೊದಲ ನಿರ್ಧಾರಗಳು

ಸಮಿತಿ ಕಂಡುಕೊಂಡ ಸಂಗತಿಗಳಲ್ಲಿ ಸುಶೀಲ್ ಕುಮಾರ್ ಮೇಲೆ ಹಲ್ಲೆಯಾಗಿದ್ದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಸುಶೀಲ್ ಕುಮಾರರನ್ನು ನೋಡಿಕೊಳ್ಳುತ್ತದ್ದ ಡಾ. ಅನುಪಮಾ ಕೊಟ್ಟ ವರದಿಯಲ್ಲೂ ಹಲ್ಲೆಗೂ ಸುಶೀಲ್ ಕುಮಾರನ ಪರಿಸ್ಥಿತಿಗೂ ಸಂಬಂಧವಿಲ್ಲವೆಂದೇ ಹೇಳುತ್ತಿತ್ತು. (ಸುಶೀಲ್ ಕುಮಾರನಿಗೆ ಅಪೆಂಡಿಸೈಟಿಸ್ ಆಗಿತ್ತು). ಎಡ ತೋಳಿನ ಮೇಲೆ ಕೆಲವು ಗೀರು ಗಾಯಗಳಿದ್ದವು ಎಂದಷ್ಟೇ ವೈದ್ಯೆ ಹೇಳಿದ್ದರು. ಸೆಕ್ಯುರಿಟಿ ಆಫೀಸರ್ ದಿಲೀಪ್ ಸಿಂಗ್ ಕೂಡ ಎ.ಎಸ್.ಎ ಹುಡುಗರು ಸುಶೀಲ್ ಕುಮಾರನನ್ನು ಹೊಡೆದಿದ್ದನ್ನು ನಾನು ನೋಡಲಿಲ್ಲ ಎಂದು ತಿಳಿಸಿದರು. ಸುಶೀಲ್ ಕುಮಾರ್ ಆಸ್ಪತ್ರೆಯಲ್ಲಿದ್ದರಿಂದ ಆತನ ಹೇಳಿಕೆಯನ್ನು ಪಡೆದಿರಲಿಲ್ಲ. ಎ.ಎಸ್.ಎ ಬಗ್ಗೆ ಸುಶೀಲ್ ಕುಮಾರ್ ಬರೆದ ಫೇಸ್ ಬುಕ್ ಪೋಸ್ಟು, ಅದರಿಂದಾಗಿ ಉಂಟಾದ ವಾಗ್ವಾದ ಮತ್ತು ಕೊನೆಯಲ್ಲಿ ಬರೆದುಕೊಟ್ಟ ಕ್ಷಮಾಪಣಾ ಪತ್ರದ ಬಗ್ಗೆ ಪ್ರಸ್ತಾಪಿಸುತ್ತಾರೆ. ಗಮನಿಸಬೇಕಾದ್ದೆಂದರೆ ವಿಚಾರಣೆಯನ್ನು ಮೂರ್ನಾಲ್ಕು ದಿನದಲ್ಲೇ ಕೊಡಬೇಕೆಂಬ ಒತ್ತಡದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವ ಸಮಿತಿ ತನ್ನ ಮೊದಲ ನಿರ್ಧಾರದಲ್ಲಿ ಫೇಸ್ ಬುಕ್ಕಿನಲ್ಲಿ ಆ ರೀತಿ ಬರೆದ ಸುಶೀಲ್ ಕುಮಾರನಿಗೆ ಎಚ್ಚರಿಕೆ ಕೊಡಬೇಕು ಮತ್ತು ಸಂಬಂಧಪಟ್ಟವರಲ್ಲಿ ದೂರು ನೀಡದೆ ಸುಶೀಲ್ ಕುಮಾರನ ರೂಮಿಗೆ ಹೋಗಿ ಕ್ಷಮೆ ಕೋರುವಂತೆ ಮಾಡಿದ ಡಿ.ಪ್ರಶಾಂತ್, ವಿನ್ಸೆಂಟ್, ರೋಹಿತ್ ವೆಮುಲ, ಪಿ.ವಿಜಯ್, ಸುಂಕನ್ನ, ಸೇಶು ಚೆಮುದುಗುಂಟರಿಗೆಲ್ಲ ಎಚ್ಚರಿಕೆ ನೀಡಬೇಕು ಎಂದು ಹೇಳುತ್ತಾರೆ. ಜೊತೆಗೆ ರಾಜಕೀಯ ಸಂಘಟನೆಗಳು ಹೇಗೆ ವಿಶ್ವವಿದ್ಯಾಲಯದ ಗೌರವವನ್ನು ಮಣ್ಣುಪಾಲು ಮಾಡುತ್ತಿವೆ, ಮತ್ತಿದನ್ನು ತಡೆಯಲು ಮಾಡಬೇಕಾದ ಕೆಲಸಗಳ್ಯಾವುವು ಎಂದು ವಿವರಿಸುತ್ತಾರೆ. ಆದರೆ ಕೊನೆಯ ನಿರ್ಣಯದಲ್ಲಿ ಎರಡೂ ಕಡೆಯವರಿಗೆ ಎಚ್ಚರಿಕೆ ಕೊಡುವ ನಿರ್ಧಾರ ದಲಿತ ಹುಡುಗರನ್ನೆಲ್ಲರನ್ನೂ ವಿಶ್ವವಿದ್ಯಾಲಯದಿಂದ ಹೊರಹಾಕಬೇಕೆಂದು ಬರೆದುಬಿಡುತ್ತಾರೆ! ಸುಂಕನ್ನ ವಿದ್ಯಾರ್ಥಿಯಲ್ಲ, ಹೊರಗಿನವರ ಪ್ರವೇಶದ ಮೇಲೆ ನಿಗಾ ಇಡಬೇಕು ಎಂಬ ಸಮಿತಿಯ ನಿರ್ಧಾರವನ್ನೇನೋ ಒಪ್ಪಬಹುದು. ಆದರೆ ಹೊರಗಿನವರ ಒತ್ತಾಯಕ್ಕೆ ಇಡೀ ವರದಿಯನ್ನೇ ಬದಲಿಸುವುದನ್ನು ಹೇಗೆ ಒಪ್ಪುವುದು? 
ಸಮಿತಿಯ ಅಂತಿಮ ನಿರ್ಧಾರ
ವರದಿಯಲ್ಲಿನ ಅಂತಿಮ ವಿಷಯಗಳನ್ನು ತಿಳಿಯುತ್ತಿದ್ದಂತೆ ಎ.ಎಸ್.ಎ ಪ್ರತಿಭಟನೆ ನಡೆಸುತ್ತದೆ. ಆಗಿನ ಉಪಕುಲಪತಿ ಆರ್.ಪಿ.ಶರ್ಮಾರವರೊಡನೆ ಚರ್ಚೆ ನಡೆಸುತ್ತದೆ. ಅಮಾನತ್ತಿನ ಆದೇಶವನ್ನು ಹಿಂಪಡೆದು ತನಿಖೆ ನಡೆಸಲು ಮತ್ತೊಂದು ಸಮಿತಿ ರಚಿಸಲವರು ಒಪ್ಪುತ್ತಾರೆ. 
ಹೊಸ ತನಿಖೆ ನಡೆಸಲು ಮಾಡಿದ ಆದೇಶ
ಆದರೆ ಈಗಿನ ಉಪಕುಲಪತಿ ಪ್ರೊಫೆಸರ್ ಪೋಡಿಲೇ ಅಪ್ಪಾರಾವ್ ಹೊಸ ತನಿಖೆಗೆ ಆದೇಶಿಸುವುದಿಲ್ಲ. ಐದೂ ಜನ ಹುಡುಗರನ್ನು ಹಾಸ್ಟೆಲಿನ ರೂಮು ಖಾಲಿ ಮಾಡುವಂತೆ ಆದೇಶ ಹೊರಡಿಸುತ್ತಾರೆ.
ಹಾಸ್ಟೆಲ್ಲಿನಿಂದ ಹೊರಹಾಕಿದ ಆದೇಶ
ಮೇಲ್ನೋಟಕ್ಕೆ ಎರಡೂ ಕಡೆಯಿಂದ ಒಂದಷ್ಟಷ್ಟು ತಪ್ಪುಗಳಾಗಿರುವುದು ಎದ್ದು ಕಾಣುತ್ತಿರುವ ಪ್ರಕರಣದಲ್ಲಿ ಎರಡೂ ಕಡೆಯವರನ್ನು ಕರೆಸಿ ಕೂರಿಸಿ ಮಾತನಾಡಿ ಬಗೆಹರಿಸಬೇಕಾದ ವಿಷಯವಿಲ್ಲಿ ಬಿಜೆಪಿ ಮತ್ತು ಹಿಂದೂ ಬಲಪಂಥೀಯ ಸಂಘಟನೆಗಳ ಒತ್ತಡದಿಂದ ದಲಿತ ಹುಡುಗರಷ್ಟೇ ಬಲಿಪಶುವಾಗುವಂತಹ ಸಂದರ್ಭವನ್ನು ಸೃಷ್ಟಿಸಿದೆ.
ಹಾಸ್ಟೆಲ್ಲಿನಿಂದ ಹೊರಗಡಿಯಿಟ್ಟಾಗ (ಅಂಬೇಡ್ಕರ್ ಫೋಟೋ ಇಟ್ಟುಕೊಂಡಿರುವವನು ರೋಹಿತ್ ವೇಮುಲ
ಹಾಸ್ಟೆಲ್ಲಿನಿಂದ ಹೊರಹಾಕಲ್ಪಟ್ಟ ಹುಡುಗರು ರಸ್ತೆಯಲ್ಲೇ ಮಲಗಿ ಪ್ರತಿಭಟಿಸಿದ್ದಾರೆ. ಪ್ರತಿಭಟನೆ ಮುಂದುವರೆಯುತ್ತಿರುವ ಹೊತ್ತಿನಲ್ಲೇ ರೋಹಿತ್ ವೆಮುಲ ನೇಣಿಗೆ ಶರಣಾಗಿದ್ದಾನೆ. ಈ ಸಾವಿಗೆ ಹೊಣೆಯಾರು?
ಮೂಲ: ಎ.ಎಸ್.ಎ, ಸ್ಕ್ರಾಲ್, ದಿ ಹಿಂದೂ ಮತ್ತು ಇತರೆ ನ್ಯೂಸ್ ತಾಣಗಳು.

Jan 15, 2016

ಮೇಕಿಂಗ್ ಹಿಸ್ಟರಿ: ಒಡೆಯರ್-ಕರ್ನಾಟಕದ ಮೊದಲ ಕೈಗೊಂಬೆ

saketh rajan
ಕೈಗೊಂಬೆಯ ತಯಾರಿಕೆ.
ಸಾಕೇತ್ ರಾಜನ್
ಕನ್ನಡಕ್ಕೆ: ಡಾ ಅಶೋಕ್ ಕೆ ಆರ್
ಒಂದು ಶತಮಾನದ ಪ್ರಭುತ್ವ ಬ್ರಿಟೀಷರಿಗೆ ತಮ್ಮ ವಸಾಹತು ನೀತಿಗಳನ್ನು ರೂಪಿಸಲು ಸಹಕರಿಸಿತ್ತು. 1799ರಲ್ಲಿ ಟಿಪ್ಪು ಸುಲ್ತಾನನ ಸೋಲಿನ ನಂತರ ಒಡೆಯರ್ ವಂಶವನ್ನು ಪೀಠದ ಮೇಲೆ ವಿಜ್ರಂಭಿಸುವಂತೆ ಮಾಡುವಲ್ಲಿ ಬ್ರಿಟೀಷ್ ವಸಾಹತು ನೀತಿ ಮಹತ್ತರ ಪಾತ್ರ ವಹಿಸಿತು. ಒಡೆಯರ್ ಆಡಳಿತದ ಉನ್ನತಿಯ ಹಿಂದಿನ ಕಾರಣಗಳ ಬಗ್ಗೆ ಅಂದಿನ ಗವರ್ನರ್ ಜೆನರಲ್ ವೆಲ್ಲೆಸ್ಲಿ ಹೇಳಿದ ಮಾತುಗಳನ್ನು ಗಮನಿಸುವುದಕ್ಕೆ ಮುಂಚೆ ಮೈಸೂರಿನ ರಾಣಿ ಲಕ್ಷ್ಮಿ ಅಮ್ಮಣ್ಣಿ ವಸಾಹತು ಶಕ್ತಿಯ ಮುಂದೆ ತಲೆಬಾಗಿ ಶರಣಾಗಿ ಒಡೆಯರನ್ನು ಬ್ರಿಟೀಷರ ಕೈಗೊಂಬೆಯಾಗಿ ತಯಾರಿಸುವುದರಲ್ಲಿ ವಹಿಸಿದ ಪಾತ್ರವನ್ನು ಅರಿಯೋಣ.

1766ರಲ್ಲಿ ಮರಣಹೊಂದಿದ ಎರಡನೇ ಕೃಷ್ಣರಾಜ ಒಡೆಯರನ ಹೆಂಡತಿ ಲಕ್ಷ್ಮಿ ಅಮ್ಮಣ್ಣಿ. ನಂಜರಾಜ ಮತ್ತು ಚಾಮರಾಜ ಅವರ ಮಕ್ಕಳು. ಈರ್ವರನ್ನೂ ಹೈದರಾಲಿ ಅರಮನೆಯಲ್ಲೇ ಬಂಧಿಯಾಗಿಸಿದ್ದ. ಕೆಲವು ವರುಷಗಳ ನಂತರ ಮಕ್ಕಳಿಬ್ಬರ ಮರಣವಾಗಿ ಲಕ್ಷ್ಮಿ ಅಮ್ಮಣ್ಣಿ ಮೊಮ್ಮಗನಾದ ಮೂರನೇ ಕೃಷ್ಣರಾಜ ಒಡೆಯರನನ್ನು ದತ್ತಕಕ್ಕೆ ತೆಗೆದುಕೊಳ್ಳುತ್ತಾರೆ. ಆತ ಹುಟ್ಟಿದ್ದು 1792ರಲ್ಲಿ.

1770ರ ಸಮಯದಲ್ಲೇ ಮದ್ರಾಸಿನ ಬ್ರಿಟೀಷ್ ಗವರ್ನರನ್ನು ಸಂಪರ್ಕಿಸಿದ್ದ ಲಕ್ಷ್ಮಿ ಅಮ್ಮಣ್ಣಿ ಹೈದರಾಲಿಯ ಪತನಕ್ಕೆ ಬ್ರಿಟೀಷರು ಶ್ರಮಪಟ್ಟರೆ ಬ್ರಿಟೀಷರಿಗೆ ವಿಧೇಯಳಾಗಿರುವುದಾಗಿ ತಿಳಿಸಿದರು. “ಬ್ರಿಟೀಷರ ಕ್ಯಾಂಪಿನ ಖರ್ಚಿಗೆ ಒಂದು ಕೋಟಿ ರುಪಾಯಿ; ಕಂಪನಿಗೆ ವರುಷಕ್ಕೆ ಹದಿನೈದು ಲಕ್ಷ; ಜೊತೆಗೆ ಮೈಸೂರು ರಾಜ್ಯದ ರಕ್ಷಣೆಗೆ ನಿಲ್ಲುವ ಬ್ರಿಟೀಷ್ ಸೈನಿಕರ ಖರ್ಚಿಗೆ ವಾರ್ಷಿಕ ಮೂವತ್ತಾರು ಲಕ್ಷ ಹಣವನ್ನು ನೀಡುವುದಾಗಿ” ಲಕ್ಷ್ಮಿ ಅಮ್ಮಣ್ಣಿ 1782ರ ಮೇ ತಿಂಗಳಲ್ಲಿ ಮದ್ರಾಸಿನ ಗವರ್ನರ್ ಮೆಕ್ ಕಾರ್ಟ್ನಿಗೆ ಪತ್ರ ಬರೆಯುತ್ತಾರೆ (1).

ಬಹಳಷ್ಟು ಚರ್ಚೆ, ಸಂಧಾನದ ನಂತರ ರಾಣಿ ಲಕ್ಷ್ಮಿ ಅಮ್ಮಣ್ಣಿ ಮತ್ತು ಬ್ರಿಟೀಷ್ ಸಾಮ್ರಾಜ್ಯ 1782ರಲ್ಲಿ ರಹಸ್ಯ ಒಪ್ಪಂದವೊಂದಕ್ಕೆ ಸಹಿ ಹಾಕುತ್ತಾರೆ. ಅದು ‘ಮೈಸೂರಿನ ಹಿಂದೂ ಸಾಮ್ರಾಜ್ಯವನ್ನು ಪುನರ್ ಸ್ಥಾಪಿಸುವ ರಾಣಾ ಒಪ್ಪಂದ’(2). ಹೈದರಾಲಿಯನ್ನು ಸೋಲಿಸಿ ಒಡೆಯರ್ ಸಾಮ್ರಾಜ್ಯವನ್ನು ಮರುಸ್ಥಾಪಿಸುವುದಕ್ಕೆ ಬ್ರಿಟೀಷರು ಒಪ್ಪಿದರಾದರೂ ಬ್ರಿಟೀಷರಿಡುವ ಪ್ರತಿ ಹೆಜ್ಜೆಗೂ ಇಂತಿಷ್ಟು ಬೆಲೆ ನಿಗದಿ ಮಾಡಿದರು. ಕೊಯಮತ್ತೂರನ್ನು ಆಕ್ರಮಿಸಲು ಮೂರು ಲಕ್ಷ ಪಗೋಡಾ, ಬಾಲಘಟಕ್ಕೆ ಏರಲು ಒಂದು ಲಕ್ಷ, ಮೈಸೂರನ್ನು ಆಕ್ರಮಿಸಲು ಒಂದು ಲಕ್ಷ ಮತ್ತು ಕೊನೆಯದಾಗಿ ಶ್ರೀರಂಗಪಟ್ಟಣಕ್ಕೆ ಪ್ರವೇಶಿಲು ಐದು ಲಕ್ಷ ಪಗೋಡಾ (3). ಲಕ್ಷ್ಮಿ ಅಮ್ಮಣ್ಣಿ ಬ್ರಿಟೀಷರಿಗೆ ಒಟ್ಟು ಹತ್ತು ಲಕ್ಷ ಪಗೋಡಾಗಳನ್ನು ನೀಡುವ ಆಶ್ವಾಸನೆ ಕೊಟ್ಟಳು.

1792ರಲ್ಲಿ ವಸಾಹತುವಿನ ವಿರುದ್ಧ ಪ್ರಾರಂಭವಾದ ಮೂರನೇ ಯುದ್ಧದ ಸಮಯದಲ್ಲಿ ಮೈಸೂರು ವಸಾಹತುವಿಗೆ ಒಳಪಡುವ ಸಾಧ್ಯತೆಗಳು ರಾಣಿಯನ್ನು ಉತ್ಸುಕಗೊಳಿಸಿದ್ದವು! ಬ್ರಿಟೀಷರಿಗೆ ಕೊಡುವ ಪಗೋಡಗಳನ್ನು ಮತ್ತಷ್ಟು ಹೆಚ್ಚಿಸುವಂತೆ ಈ ಉತ್ಸುಕತೆ ಪ್ರೇರೇಪಿಸಿತು. “ದೇವರ ದಯೆಯಿಂದ ನಾವು ಬದುಕುಳಿದು ಆಂಗ್ಲರು ಟಿಪ್ಪುವನ್ನು ಸೋಲಿಸಿ ನಮ್ಮ ರಾಜ್ಯವನ್ನು ಮರಳಿಸಿದರೆ ಬ್ರಿಟೀಷ್ ಸೈನಿಕರ ಖರ್ಚಿಗಾಗಿ ಒಂದು ಕೋಟಿ ಪಗೋಡಾವರೆಗೂ ನೀಡುತ್ತೇವೆ” ಎಂದು ಬರೆದರು (4).

“……..ನಮ್ಮ ಸಾಮ್ರಾಜ್ಯವನ್ನು ಮರಳಿ ಗಳಿಸಲು ಸಹಾಯ ಮಾಡಲೆಂದೇ ನಿಮ್ಮನ್ನು ಈ ಭೂಮಿಗೆ ಕಳುಹಿಸಲಾಗಿದೆ ಎನ್ನುವ ಅರಿವು ನಮಗುಂಟಾಗಿದೆ. ನಿಮ್ಮ ಮನಸ್ಸಿನ ಶುದ್ಧತೆ ಮತ್ತು ವ್ಯಕ್ತಿತ್ವದ ಘನತೆಯ ಬಗ್ಗೆ ಕೇಳಿ ತಿಳಿದಿದ್ದೀವಿ. ನಿಮ್ಮಲ್ಲಿ ಸಂಪೂರ್ಣ ನಂಬಿಕೆಯಿಟ್ಟು ನಮ್ಮನ್ನು ರಕ್ಷಿಸಬೇಕು, ನಮಗೆ ಸಹಾಯ ಮಾಡಬೇಕು ಎಂದು ಬೇಡಿಕೊಳ್ಳುತ್ತೇವೆ. ನ್ಯಾಯಾನ್ಯಾಯಗಳನ್ನು ಪರಿಶೀಲಿಸಿ ದೇವರ ಚಿತ್ತ ಮತ್ತು ನಿಮ್ಮ ಅಚ್ಚಳಿಯದ ಖ್ಯಾತಿಯನ್ನು ನೆನಪಿಟ್ಟುಕೊಂಡು ನಿಮ್ಮ ಎಂದಿನ ಒಳ್ಳೆಯತನದ ಮೂಲಕ ಶತ್ರುಗಳನ್ನು ಬೇರುಸಹಿತ ಕಿತ್ತು ನಮ್ಮ ಸಾಮ್ರಾಜ್ಯದ ಮರುಸ್ಥಾಪನೆಗೆ ಕಾರಣಕರ್ತರಾಗಬೇಕು. ಕಳೆದ ಬಾರಿಯ ಒಪ್ಪಂದದ ಪ್ರಕಾರ ನಡೆದುಕೊಳ್ಳಬೇಕು. ಒಂದು ಕೋಟಿ ಪಗೋಡಾಗಳನ್ನು ಯುದ್ಧದ ಖರ್ಚು – ವೆಚ್ಚಕ್ಕಾಗಿ ನೀಡುತ್ತೇವೆ” ವಸಾಹುತಿನ ಜೀತ ರಾಣಿ ಲಕ್ಷ್ಮಿ ಅಮ್ಮಣ್ಣಿ 1798ರಲ್ಲಿ ಮದ್ರಾಸಿನ ಗವರ್ನರ್ರಿಗೆ ಬರೆದ ಪತ್ರವಿದು (5).

ಬ್ರಿಟೀಷ್ ಸುಲಿಗೆಕೋರರು ದೇಶ ರಕ್ಷಿಸಲು ಬಂದಿರುವ ದೇವದೂತರು ಎಂಬ ರಾಣಿಯ ನಂಬಿಕೆಯ ಪ್ರದರ್ಶನ ಮತ್ತೆ 1799ರ ಫೆಬ್ರವರಿಯಲ್ಲಿ ಜಾಹೀರಾಯಿತು. ಈ ಬಾರಿಯ ಪತ್ರ ಮುಖ್ಯ ದೇವರಾದ ಗವರ್ನರ್ ಜೆನರಲ್ ಗೆ! “ನಾವು ಇತ್ತೀಚೆಗೆ ಕೇಳಿದ ಪ್ರಕಾರ ದಯಾಮಯನಾದ ದೇವರು ಅಪಾರ ಶಕ್ತಿಯನ್ನು ನಿಮಗೆ ಕರುಣಿಸಿ ಈ ದೇಶಕ್ಕೆ ಕಳುಹಿಸಿರುವುದು ನಮ್ಮನ್ನು ದುಃಖ ಸಂಕಟಗಳಿಂದ ಪಾರು ಮಾಡಲು. ಅನುಮಾನವೇ ಇಲ್ಲ. ನೀವು ಉದಾರವಾದಿ, ಸದುದ್ದೇಶದ ಧರ್ಮಬೀರು ಎಂದು ಕೇಳಿದ್ದೇವೆ. ಈ ಕಾರಣದಿಂದ ನಮ್ಮನ್ನು ರಕ್ಷಿಸಬೇಕೆಂದು ಕೋರುತ್ತೇನೆ” ಎಂದು ವಿನಮ್ರವಾಗಿ ತಲೆಬಾಗುತ್ತಾರೆ ಲಕ್ಷ್ಮಿ ಅಮ್ಮಣ್ಣಿ (6).

ಇದರ ನಂತರ ಬ್ರಿಟೀಷ್ ಸಾಮ್ರಾಜ್ಯ ಕಾರ್ಯತತ್ಪರವಾಗಲು ಹೆಚ್ಚಿನ ಸಮಯ ಬೇಕಾಗಲಿಲ್ಲ. ಕೈಗೊಂಬೆ ರಾಣಿಯ ಪ್ರಾರ್ಥನೆಗೆ ಒಲಿದು ಬಂದ ಬ್ರಿಟೀಷರು ಎರಡನೇ ಕೃಷ್ಣರಾಜ ಒಡೆಯರ್ ರವರ ರಂಗ ಪ್ರವೇಶ ನೆರವೇರಿಸಿದರು. ಒಂದು ಶತಮಾನದವರೆಗೆ ಯುದ್ಧ – ಆಕ್ರಮಣ – ನೇರ ವಸಾಹತು ಆಡಳಿತ ನೀತಿಯನ್ನು ಪಾಲಿಸಿದ್ದ ಬ್ರಿಟೀಷರು ಔಧಿನ ಆಕ್ರಮಣದ ನಂತರ ಕೈಗೊಂಬೆ ರಾಜರ ಮೂಲಕ ಆಡಳಿತ ನಡೆಸುವ – ದೇಶವನ್ನು ನಿಯಂತ್ರಿಸುವ ನೀತಿಯನ್ನು ಅಪ್ಪಿಕೊಂಡಿದ್ದರು.

“ಹೇಸ್ಟಿಂಗ್ಸಿನ ನಿರ್ಬಿಡೆಯ ನಿರ್ಧಾರ ಸ್ಥಳೀಯ ರಾಜರಿಗೆ ಯಾವುದೇ ಸ್ವತಂತ್ರ ನಿರ್ಣಯದ ಹಕ್ಕನ್ನು ನೀಡದೆ ಬ್ರಿಟೀಷರ ಅಧೀರರನ್ನಾಗಿ ಮಾಡಿತು. ಈ ಅಧೀನ ರಾಜ್ಯದ ಪರಿಕಲ್ಪನೆಯನ್ನು ಔಧಿನಲ್ಲಿ ಮೊದಲು ಪರಿಚಯಿಸಿದ್ದು ಹೇಸ್ಟಿಂಗ್ಸ್” – ಜಾರ್ಜ್ ಫಾರೆಸ್ಟ್.

ಈ ಕೈಗೊಂಬೆ ರಾಜರು ಬ್ರಿಟೀಷರಿಗೆ ಅನುಕೂಲ ಮಾಡಿಕೊಟ್ಟರು. ಪ್ರತ್ಯಕ್ಷ ಆಡಳಿತ ನೀತಿಯಿಂದ ಈ ರೀತಿಯ ಪರೋಕ್ಷ ಆಡಳಿತವನ್ನು ಅಪ್ಪಿಕೊಳ್ಳಲು ಬ್ರಿಟೀಷರಿಗೆ ಅನೇಕ ಕಾರಣಗಳಿದ್ದವು.

ಬಹುಮುಖ್ಯ ಕಾರಣವೆಂದರೆ – ಫ್ಯೂಡಲ್ ಮನಸ್ಥಿತಿಯಲ್ಲೇ ಇದ್ದ ಜನ ಸಮೂಹ, ನಮ್ಮನ್ನು ಆಳುತ್ತಿರುವುದು ನಮ್ಮದೇ ರಾಜ; ಬಣ್ಣ – ಭಾಷೆ – ಸಂಸ್ಕೃತಿಯಲ್ಲಿ ಚೂರೂ ಸಾಮ್ಯತೆಯಿರದ ಹೊರಗಿನವರಲ್ಲ ಎಂಬ ಭಾವನಾತ್ಮಕ ಭ್ರಮೆಯಲ್ಲಿ ಉಳಿಯಲು ಈ ಹೊಸ ನೀತಿ ಸಹಕಾರಿಯಾಗುತ್ತಿತ್ತು.

ಆಕ್ರಮಣಕಾರ ಸಮೂಹದ ದೃಷ್ಟಿಯಿಂದ ಅಡಗಿಕೊಂಡಿದ್ದ ಬ್ರಿಟೀಷ್ ನಾಗರೀಕತೆಯ ಬೆತ್ತಲನ್ನು ಫ್ಯೂಡಲ್ ಎಲೆ ಮುಚ್ಚುತ್ತಿತ್ತು. ಮೇಲಾಗಿ ಜನಸಮೂಹ ರಾಜನ ವಿರುದ್ಧವೋ ಸಮಾಜದ ವಿರುದ್ಧವೋ ಅಸಹನೆಯಿಂದ ರೊಚ್ಚಿಗೆದ್ದಾಗ ‘ಜನರಿಗಾಗಿ’ ಎಂಬ ನೆಪವೊಡ್ಡಿ ಬ್ರಿಟೀಷರು ಕೈಯಾಡಿಸಬಹುದಿತ್ತು. ಸಮೂಹದ ದೃಷ್ಟಿಯಲ್ಲಿ ಬ್ರಿಟೀಷರು ಔದಾರ್ಯ ತುಂಬಿದ ಅಧಿಪತಿಗಳಾದರು, ಅಂತಿಮ ತೀರ್ಪು ಹೇಳುವ ನ್ಯಾಯಾಧೀಶರಾದರು. ಈ ಅಂಶ ಅವರ ಲೂಟಿಯ ನಡವಳಿಕೆಯ ಮೇಲೊಂದು ಪರದೆ ಎಳೆದಿತ್ತು. ಕೈಗೊಂಬೆ ರಾಜರ ಮೂಲಕ ಹತ್ತೊಂಬತ್ತನೇ ಶತಮಾನವನ್ನು ಆಳುವ ಬ್ರಿಟೀಷರ ನಿರ್ಧಾರ ವಸಾಹತುಶಾಹಿ ವಿರೋಧಿ ಪ್ರಜ್ಞೆಯ ಬೆಳವಣಿಗೆಯನ್ನು ಮೊಟಕುಗೊಳಿಸಿತು.

ಟಿಪ್ಪುವಿನ ಸೋಲು ಭಾರತವನ್ನು ಸಂಪೂರ್ಣವಾಗಿ ಆಕ್ರಮಿಸುವುದರ ಸಂಕೇತವಾಯಿತು. ಈಗಷ್ಟೇ ಲಕ್ಷ್ಮಿ ಅಮ್ಮಣ್ಣಿಯ ಪ್ರಕರಣದಲ್ಲಿ ನೋಡಿದಂತೆ ಕರ್ನಾಟಕದ ಇನ್ನಿತರ ಸಣ್ಣ ಪುಟ್ಟ ರಾಜರು ಮತ್ತು ಮುಖ್ಯಸ್ಥರು ಸ್ವಇಚ್ಛೆಯಿಂದ ಬ್ರಿಟೀಷರಿಗೆ ಶರಣಾಗಿ ದಾಸ್ಯಕ್ಕೊಳಪಟ್ಟರು.

ಒಂದು ಶತಮಾನದ ಹಿಂದೆ ಬ್ರಿಟೀಷರ ಆಳ್ವಿಕೆಗೆ ಬಹುದೊಡ್ಡ ಭೂಪ್ರದೇಶ ಒಳಗಾಗಬಹುದೆಂಬ ಕಲ್ಪನೆ ಮೂಡುವುದೂ ಶಕ್ಯವಿರಲಿಲ್ಲ. ಕಾರಣ ಬ್ರಿಟೀಷರ ವಸಾಹತುಶಾಹಿ ನೆಲೆ ಕಂಡಿರಲಿಲ್ಲ ಮತ್ತವರು ತಮ್ಮ ಶಕ್ತಿ ಪ್ರದರ್ಶನ ಮಾಡಿರಲಿಲ್ಲ. ಹದಿನೆಂಟನೆಯ ಶತಮಾನದ ಪ್ರಾರಂಭದಲ್ಲಿ ಕೈಗೊಂಬೆ ರಾಜರು ತಮ್ಮ ನಿಯತ್ತನ್ನು ಬ್ರಿಟೀಷರಿಗೆ ಒತ್ತೆ ಇಡಲಾರಂಭಿಸುತ್ತಿದ್ದಂತೆ ವಸಾಹತುಶಾಹಿಯ ವ್ಯಾಪ್ತಿ ವಿಸ್ತಾರಗೊಳ್ಳಲಾರಂಭಿಸಿತು. ಈ ‘ನಿಯತ್ತಿನ’ ರಾಜರು ಇರದಿದ್ದರೆ ಪರೋಕ್ಷ ಆಳ್ವಿಕೆಯನ್ನು ಪ್ರಾಯೋಗಿಕವಾಗಿಯಾದರೂ ಪ್ರಾರಂಭಿಸಲು ಬ್ರಿಟೀಷರು ಮನಸ್ಸು ಮಾಡುತ್ತಿರಲಿಲ್ಲ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಭಾರತದ ಉದ್ದಗಲಕ್ಕೂ ಬ್ರಿಟೀಷ್ ಸಾಮ್ರಾಜ್ಯ ತಳವೂರಿದಾಗ ದೇಶದ ಎರಡನೇ ಮೂರರಷ್ಟು ಭೂಪ್ರದೇಶದಲ್ಲಿ ದೇಶೀಯ ರಾಜರೇ ಆಳ್ವಿಕೆ ನಡೆಸುತ್ತಿದ್ದರು. ಉಳಿಕೆ ಒಂದನೇ ಮೂರರಷ್ಟು ಭಾಗ ಮಾತ್ರ ನೇರವಾಗಿ ಬ್ರಿಟೀಷರ ಆಡಳಿತದಲ್ಲಿತ್ತು.

ಈ ಪರೋಕ್ಷ ಆಡಳಿತಕ್ಕೆ ಮತ್ತೊಂದು ಕಾರಣ ಆಡಳಿತಗಾರರ ಕೊರತೆ ಬ್ರಿಟೀಷರಿಗೆ ಎದುರಾಗಿದ್ದು. ಭಾರತ ಮತ್ತು ಪ್ರಪಂಚದ ಇತರೆ ಭಾಗಗಳ ಮೇಲಿನ ಅತಿಕ್ರಮಣ ಮುಂದುವರೆದಂತೆ ದೊಡ್ಡದಾಗುತ್ತಲೇ ಸಾಗಿದ್ದ ಸಾಮ್ರಾಜ್ಯದ ರಕ್ಷಣೆಗೆ ತನ್ನ ದೇಶದ ಪ್ರಜೆಗಳನ್ನೇ ನೇಮಿಸುವುದು ತಲೆನೋವಿನ ಕೆಲಸವಾಯಿತು. ಈ ಕೊರತೆಯಿಂದಾಗಿಯೇ ಬ್ರಿಟೀಷರಷ್ಟೇ ಆಸೆಬುರುಕುರಾದ ಪೋರ್ಚುಗೀಸರು ದೇಶದಿಂದ ದೇಶಕ್ಕೆ ಅತಿಕ್ರಮಿಸುವುದನ್ನು ಕಡಿಮೆ ಮಾಡಿಬಿಟ್ಟಿದ್ದರು. ಈ ಸಮಸ್ಯೆಗೆ ಪರಿಹಾರವೆಂಬಂತೆ ಬ್ರಿಟೀಷರು ಕೈಗೊಂಬೆ ರಾಜರ ಮೂಲಕ ಆಡಳಿತ ನಡೆಸಲಾರಂಭಿಸಿದರು. ಕೈಗೊಂಬೆ ರಾಜರ ಸಹಾಯವಿಲ್ಲದಿದ್ದರೆ ಬ್ರಿಟೀಷ್ ಸಾಮ್ರಾಜ್ಯ ಇಷ್ಟರಮಟ್ಟಿಗೆ ವಿಸ್ತಾರಗೊಳ್ಳುವ ಸಾಧ್ಯತೆಯೇ ಇರಲಿಲ್ಲ.

ಮತ್ತು ಕೊನೆಯದಾಗಿ ಇಂಗ್ಲೆಂಡಿನ ಕೈಗಾರಿಕಾ ಬಂಡವಾಳದಲ್ಲಾದ ಏರಿಕೆ ಹದಿನೆಂಟನೆ ಶತಮಾನದ ಕೊನೆಗೆ ವಸಾಹತುಶಾಹಿಯ ಬುಡವನ್ನು ಗಟ್ಟಿಗೊಳಿಸಿತು. ಊಳಿಗಮಾನ್ಯ, ಕೈಗೊಂಬೆ ರಾಜರ ದೌರ್ಬಲ್ಯಗಳನ್ನು ಉಪಯೋಗಿಸಿಕೊಂಡು ಬಂಡವಾಳಶಾಹಿತನ ಮತ್ತು ವಸಾಹತುಶಾಹಿ ತಳವೂರಿತು.

1799ರ ಜೂನ್ 7ರಂದು ಈಸ್ಟ್ ಇಂಡಿಯಾ ಕಂಪನಿಯ ನಿರ್ದೇಶಕ ಹೆನ್ರಿ ದುಂಡಾಸ್ ಗೆ ಬರೆದ ಪತ್ರದಲ್ಲಿ ಗವರ್ನರ್ ಜೆನರಲ್ ವೆಲ್ಲೆಸ್ಲಿ ಪರೋಕ್ಷವಾಗಿ ಈ ಎಲ್ಲಾ ಅಂಶಗಳನ್ನು ಪ್ರಸ್ತಾಪಿಸಿದ್ದರು. ಕರ್ನಾಟಕದಲ್ಲಿ ಆಕ್ರಮಿಸಿದ ಪ್ರಾಂತ್ಯಗಳಲ್ಲಿ ಯಾವ ರೀತಿಯ ಆಡಳಿತವನ್ನು ಸ್ಥಾಪಿಸಬೇಕೆಂದು ಆತ ಚಿಂತಿಸುತ್ತಿದ್ದ. ರಾಣಾ ಒಪ್ಪಂದದ ಬಗ್ಗೆ ತಿಳಿಸುವ ಶ್ರಮವನ್ನಾತ ತೆಗೆದುಕೊಳ್ಳಲಿಲ್ಲ. ಆ ಒಪ್ಪಂದ ಪತ್ರ ರದ್ದಿ ಕಾಗದಕ್ಕಿಂತ ಹೆಚ್ಚಿನದ್ದಾಗಿರಲಿಲ್ಲ. 

ಅಷ್ಟರಲ್ಲಾಗಲೇ ಬ್ರಿಟೀಷರು ಅಂತಹ ಹಲವು ಒಪ್ಪಂದಗಳನ್ನು ಬರೆದು – ಸಹಿ ಹಾಕಿ – ಬಿಸಾಡಿದ್ದರು. ರಾಣಾ ಒಪ್ಪಂದಕ್ಕೆ ಬದ್ಧವಾಗಿರುವ ಅನಿವಾರ್ಯತೆ ಕಂಪನಿಗಿಲ್ಲವೆಂಬ ಅರಿವು ವೆಲ್ಲೆಸ್ಲಿಗಿತ್ತು. 

“ಘನತೆವೆತ್ತ ನಿರ್ದೇಶಕರ ಗಮನಕ್ಕೆ, ಟಿಪ್ಪು ಸುಲ್ತಾನನ ಪ್ರಾಂತ್ಯವನ್ನು ವಿಂಗಡಿಸಲು ಇರುವ ಹಲವು ಯೋಜನೆಗಳ ಸಾಧಕ ಭಾದಕಗಳ ವರದಿಯನ್ನು ಈ ಪತ್ರದ ಜೊತೆಗೆ ಲಗತ್ತಿಸಲಾಗಿದೆ. ಈ ವಿಂಗಡನೆಯನ್ನು ನಿಜಾಮರಿಗೆ, ಮರಾಠರಿಗೆ ಮತ್ತು ಕಂಪನಿಗೆ ಅನುಕೂಲಕರವಾಗುವಂತೆ ಮಾಡಲಾಗಿದೆ. ಈ ಭಾಗದ ಭೂಪ್ರದೇಶ, ಸಂಪನ್ಮೂಲ ಮತ್ತು ಹಲವು ಕೋಟೆಗಳ ಮತ್ತು ಆಳ್ವಿಕೆಗಳ ಶಕ್ತಿ ಹಾಗು ಸ್ಥಳವನ್ನು ಪರಿಶೀಲಿಸಿ ಈ ವರದಿ ತಯಾರಿಸಲಾಗಿದೆ. ನನ್ನ ನಿರ್ಧಾರದ ಪ್ರಕಾರ ಬ್ರಿಟೀಷರ ಮೇಲ್ವಿಚಾರಣೆಯಲ್ಲಿ ಮೈಸೂರಿನಲ್ಲೊಂದು ಸರಕಾರ ರಚಿಸಿ, ಟಿಪ್ಪು ರಾಜ್ಯದ ವಿಂಗಡಣೆಯಲ್ಲಿ ಒಂದು ಹಂತದವರೆಗೆ ಮರಾಠಾರನ್ನು ಒಳಗೊಳ್ಳುವುದು ಉತ್ತಮ. ಎಲ್ಲರ ಒಳಿತುಗಳನ್ನೂ ಲೆಕ್ಕ ಹಾಕಿ, ಕಂಪನಿಯನ್ನು ಮತ್ತಷ್ಟು ಸುಭದ್ರವಾಗಿಸಬೇಕು. ಆದಾಯ, ಸಂಪನ್ಮೂಲ, ಲಾಭ ಮತ್ತು ಮಿಲಿಟರಿ ಮೇಲುಗೈ ಪಡೆಯಲು ಈ ರೀತಿಯ ವಿಂಗಡಣೆ ಸಹಾಯಕ. ಜೊತೆಗೆ ಭಾರತ ನಿದ್ರಾವಸ್ಥೆಗೆ ಜಾರುವುದಕ್ಕೂ ಈ ವರದಿಯ ಅನುಷ್ಠಾನದ ಅಗತ್ಯವಿದೆ” ಎಂದು ಬರೆಯುತ್ತಾರೆ ವೆಲ್ಲೆಸ್ಲಿ (8).

ನೀರಿನಿಂದ ಸುತ್ತುವರಿದ ದೇಶದಿಂದ ಬಂದ, ಸಮುದ್ರ ವ್ಯಾಪಾರದಲ್ಲಿ ಏಕಸ್ವಾಮ್ಯ ಮೆರೆದಿರುವ ಕಂಪನಿಯೊಂದರ ಪರವಾಗಿ ಕಾರ್ಯನಿರ್ವಹಿಸುವ, ಆಕ್ರಮಣಕಾರಿ ಯೋಧರ ಪಡೆಯನ್ನು ಹೊಂದಿರುವ ವೆಲ್ಲೆಸ್ಲಿ ಈ ರೀತಿಯಲ್ಲಿಯೇ ಯೋಚಿಸಬೇಕಿತ್ತು. ಕಣ್ರೆಪ್ಪೆ ಬಡಿಯುವಷ್ಟರ ಶ್ರಮವನ್ನೂ ಪಡದೆ ಮೈಸೂರು ಸಂಸ್ಥಾನವನ್ನು ಲಂಡನ್ನಿನಲ್ಲಿದ್ದ ನಿರ್ದೇಶಕರ ಜೇಬಿಗೆ ಸೇರಿಸಿಬಿಡುತ್ತಾರೆ. ಬ್ರಿಟೀಷರಿಂದ ಗುತ್ತಿಗೆ ಪಡೆದ ಆಧಾರದ ಮೇಲೆ ಭಾರತವನ್ನಾಳುತ್ತಿದ್ದ 568 ರಾಜರಲ್ಲಿ ಕೆಲವೇ ಕೆಲವರಿಗೆ ಮಾತ್ರ ಕಡಲ ತೀರದ ಭಾಗ್ಯ ದಕ್ಕಿತ್ತು. ಮೈಸೂರು ಸಾಮ್ರಾಜ್ಯ ಭೂಪ್ರದೇಶದಿಂದ ಸುತ್ತುವರಿದಿತ್ತು, ಕಡಲ ತೀರಕ್ಕೆ ಸಂಪರ್ಕವಿರಲಿಲ್ಲ.

ಒಡೆಯರ್ ಸೂಕ್ತ ಕೈಗೊಂಬೆ ಎನ್ನುವುದನ್ನು ಸಾಬೀತುಪಡಿಸಲು ತನ್ನ ವಾದಗಳನ್ನು ಮುಂದಿಡುತ್ತಾನೆ ವೆಲ್ಲೆಸ್ಲಿ “ಮೈಸೂರಿನ ಹೊಸ ಸರಕಾರವನ್ನು ಯಾರ ಕೈಯಲ್ಲಿಡಬೇಕು ಎಂದು ನಿರ್ಧರಿಸುವ ಅನಿವಾರ್ಯತೆ ಎದುರಾಗಿದೆ. ಪಟ್ಟಕ್ಕೆ ಸರಿಯಾದ ವ್ಯಕ್ತಿ ಯಾವ ಪಕ್ಷದಲ್ಲೂ ಇಲ್ಲದಿದ್ದಾಗ್ಯೂ ನನ್ನ ಪ್ರಕಾರ ಟಿಪ್ಪುವಿನ ಕುಟುಂಬ ಮತ್ತು ಮೈಸೂರಿನ ಹಳೆಯ ರಾಜ ಕುಟುಂಬದಿಂದ ಆಯ್ಕೆ ಮಾಡಬೇಕು.

1796ರ ನಂತರ ಭಾರತದಲ್ಲಿ ಬ್ರಿಟೀಷರ ಶಕ್ತಿಯನ್ನು ಕುಂದಿಸುವುದೇ ಟಿಪ್ಪುವಿನ ಆಸೆ – ಆಶಯವಾಗಿತ್ತು. ಅವನ ಕೆಲಸಗಳೆಲ್ಲವೂ ಆ ನಿಟ್ಟಿನಲ್ಲಿಯೇ ಇದ್ದವು…. ಅಚಲ ಉದ್ದೇಶ ಕಾರ್ಯತತ್ಪರವಾಗಲೆಂದು ಟಿಪ್ಪು ಅತ್ಯುತ್ಸಾಹದಿಂದ ಉಗ್ರತೆಯಿಂದ ಹಗೆಕಾರುತ್ತಿದ್ದ…. ಶ್ರೀರಂಗಪಟ್ಟಣದಲ್ಲಿ ಲಭ್ಯವಾಗಿರುವ ಅನೇಕ ಸಾಕ್ಷ್ಯಾಧಾರಗಳು ಇಂಗ್ಲೀಷರ ವಿರುದ್ಧ ಆತನಿಗಿದ್ದ ಅಸಹನೆಯನ್ನು ತೋರಿಸುತ್ತದೆ. ಆಡಳಿತ ನಡೆಸಲು ಬೇಕಾದ ಉತ್ಸಾಹ ಆತನ ಹೃದಯದಲ್ಲಿ ಚಿಮ್ಮುತ್ತಿದ್ದುದೇ ಈ ಅಸಹನೆಯಿಂದ. ಅವನ ನೀತಿ ನಿಯಮಗಳು, ಅವನ ಸರಕಾರದ ರೂಪುರೇಷೆಗಳೆಲ್ಲವುದರಲ್ಲೂ ಬ್ರಿಟೀಷರ ವಿರುದ್ಧದ ದ್ವೇಷ ಎದ್ದು ಕಾಣಿಸುತ್ತದೆ.

ಟಿಪ್ಪುವಿನ ವಂಶಜರೂ ಕೂಡ ಈ ನೀತಿ ನಿಯಮಾವಳಿಗಳ ಪ್ರಕಾರವೇ ಶಿಕ್ಷಣ ಪಡೆದಿರುತ್ತಾರೆ. ಮತ್ತು ಅದೇ ಪೂರ್ವಾಗ್ರಹದಿಂದ ಮೈಸೂರಿನ ರಾಜಪೀಠದಿಂದ ಕಾರ್ಯನಿರ್ವಹಿಸುತ್ತಾರೆ. ಈ ಭಾವನೆಗಳು ಯುದ್ಧದ ಕಾರಣದಿಂದ ಮತ್ತಷ್ಟು ಹೆಚ್ಚಾದರೆ ಅಚ್ಚರಿಯಿಲ್ಲ. ನಮ್ಮ ಯಶಸ್ಸು ಅವನ ತಂದೆಯ ಸಾಮ್ರಾಜ್ಯವನ್ನು ಅಲುಗಾಡಿಸಿದೆ…. ಅವನು ಪಟ್ಟದ ಮೇಲೆ ಕೂರುವುದು ನಮ್ಮ ಕೃಪೆಯಿಂದ…. ನಮ್ಮ ನಿಯಂತ್ರಣದಲ್ಲಾತ ಇರಬೇಕು….. ಈ ಎಲ್ಲಾ ಅಂಶಗಳು ಅವನನ್ನು ಅಪಮಾನಿತನನ್ನಾಗಿಸುತ್ತದೆ….. ಆತ್ಮಸಾಕ್ಷಿಯ ರಾಜನಾರೂ ಇದನ್ನು ಒಪ್ಪಿಕೊಳ್ಳಲಾರರು…. ಸಾಮ್ರಾಜ್ಯ ಮತ್ತು ಸಂಪನ್ಮೂಲದಲ್ಲಿ ಕಡಿತವಾದಾಗ ಅವನು ತಂದೆಯ ಸಾಮ್ರಾಜ್ಯವನ್ನು ಮರಳಿ ಗಳಿಸಲು ನಮ್ಮೊಡನೆ ಯುದ್ಧದಲ್ಲಿ ತೊಡಗಿದರೂ ಕಳೆದುಕೊಳ್ಳುವುದಕ್ಕಿಂತ ಗಳಿಸುವುದೇ ಹೆಚ್ಚು. ಹೆತ್ತವರ ಬತ್ತದ ಉತ್ಸಾಹ ಮತ್ತವರ ಭಯರಹಿತ ಶಕ್ತಿಯನ್ನು ನೋಡಿಯೇ ಬೆಳೆದ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ವಂಶಸ್ಥರು ಸ್ವತಂತ್ರ ಆಡಳಿತದ ಅಧಿಕಾರಯುತ ನಡವಳಿಕೆಗೆ ಒಗ್ಗಿಹೋಗಿರುವವರು ಮತ್ತು ಮಿಲಿಟರಿ ಶಕ್ತಿಯ ವೈಭವವನ್ನು ಕಂಡವರು. ಉದ್ದೇಶಪೂರ್ವಕವಾಗಿ ವಿಸ್ತಾರವಾದ ಶಕ್ತಿಯುತ ಸಾಮ್ರಾಜ್ಯವನ್ನು ಮರಳಿಗಳಿಸಲು ಅವರು ಪ್ರಯತ್ನಿಸಬಹುದು.

ಹಾಗಾಗಿ ಅವರ ವಂಶಸ್ಥರನ್ನು ಮೈಸೂರು ಸಾಮ್ರಾಜ್ಯದ ಪಟ್ಟದಲ್ಲಿ ಕೂರಿಸುವುದು ಕುಸಿದುಬಿಡಬಹುದಾದ ತಳಪಾಯವನ್ನು ನಾವೇ ಹಾಕಿದಂತೆ.

ಮೈಸೂರಿನ ಈ ವಿಚ್ಛಿದ್ರಕಾರಿ ಶಕ್ತಿ ದುರ್ಬಲಗೊಂಡಿದೆಯೇ ಹೊರತು ನಿರ್ನಾಮವಾಗಿಲ್ಲ.

ಬ್ರಿಟೀಷ್ ಸರಕಾರ ಮತ್ತು ಒಡೆಯರ್ ಕುಟುಂಬದ ಮಧ್ಯೆ ಸ್ನೇಹ – ಕಾರುಣ್ಯ ಅವರ ದುರ್ವಿಧಿಯ ದೆಸೆಯಿಂದಾಗಿ ಇದ್ದೇ ಇದೆ. ನಮ್ಮ ಶತ್ರುಗಳೊಡನೆ ಅವರಿಗೆ ಯಾವುದೇ ಸಂಬಂಧವಿಲ್ಲ. ಅವರ ಸ್ಥಾನದ ಉನ್ನತೀಕರಣ ನಿಮ್ಮ ಕೃಪೆಯ ಫಲವಾಗಿರುತ್ತದೆ ಮತ್ತು ನಿಮ್ಮ ಬೆಂಬಲದಿಂದ ಮಾತ್ರ ಅವರು ಪೀಠದ ಮೇಲೆ ಉಳಿಯಬಲ್ಲರು.

ಮೈಸೂರಿನ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಈ ವ್ಯವಸ್ಥೆ ನಮ್ಮ ಸುರಕ್ಷತೆಗೆ ಅಪಾಯವೊಡ್ಡಿದ ಶತ್ರುಗಳನ್ನು ನಾಶಪಡಿಸುವುದಕ್ಕೆ ಸಹಾಯ ಮಾಡುವುದರ ಜೊತೆಗೆ ಅಧಿಕಾರವನ್ನು ನಮ್ಮ ಅನುಕೂಲಗಳಿಗೆ ತಕ್ಕಂತೆ ಸಂಪನ್ಮೂಲ ಒದಗಿಸುವವರಿಗೆ ಹಸ್ತಾಂತರಿಸಿದಂತಾಗುತ್ತದೆ. ಇಲ್ಲಿಯವರೆಗೂ ಅಶಾಂತಿಗೆ ಮತ್ತು ಎಚ್ಚರಿಕೆಗೆ ಕಾರಣವಾಗಿದ್ದ ಮೈಸೂರು ಸಂಸ್ಥಾನ ಬಹುಶಃ ಇನ್ನು ಮುಂದೆ ನಮ್ಮ ಹೊಸ ರಕ್ಷಣಾ ಕವಚವಾಗಬಹುದು. ಜೊತೆಗೆ ಕಂಪನಿಗೆ ಹಣ ಮತ್ತು ಶಕ್ತಿಯ ಹೊಸ ಮೂಲವಾಗಬಹುದು.

ಈ ಎಲ್ಲಾ ವಿಚಾರಗಳು ಮೈಸೂರು ಸಾಮ್ರಾಜ್ಯಕ್ಕೆ ಟಿಪ್ಪು ವಂಶಸ್ಥರಿಗಿಂತ ಮೈಸೂರು ರಾಜರ ವಂಶಸ್ಥರು ಸೂಕ್ತವೆಂಬ ನನ್ನ ನಿರ್ಧಾರಕ್ಕೆ ಪೂರಕವಾದವು” (9)

ವೆಲ್ಲೆಸ್ಲಿ ಇದಕ್ಕಿಂತ ಉತ್ತಮ ಆಯ್ಕೆಯನ್ನು ಮಾಡಲು ಸಾಧ್ಯವಿರಲಿಲ್ಲ. ನಾವು ಮುಂದೆ ನೋಡುವಂತೆ ಕರ್ನಾಟಕದಲ್ಲಿ ಒಡೆಯರ್ ಗಳು ಬ್ರಿಟೀಷರ ಮೊದಲ ಕೈಗೊಂಬೆ ರಾಜರಾದರು ಮತ್ತು ಬ್ರಿಟೀಷರಿಗೆ ಅತ್ಯಂತ ವಿಷಮ ಪರಿಸ್ಥಿತಿ ಎದುರಾದಾಗಲೂ ತಮ್ಮ ನಿಷ್ಠೆಯನ್ನು ಬದಲಿಸಲಿಲ್ಲ.

ಕರುನಾಡ ಇತಿಹಾಸದ ವ್ಯಂಗ್ಯವೆಂದರೆ ಕೆಲವೇ ದಿನಗಳ ಅಂತರದಲ್ಲಿ ಸಂಪೂರ್ಣ ವಿರುದ್ಧ ಅಭಿಪ್ರಾಯದ ರಾಜರು ಮೈಸೂರು ಸಂಸ್ಥಾನದ ಪೀಠವನ್ನು ಅಲಂಕರಿಸಿದ್ದು – ಟಿಪ್ಪು ಸುಲ್ತಾನ್ ಮತ್ತು ಎರಡನೆ ಕೃಷ್ಣರಾಜ ಒಡೆಯರ್. ವಸಾಹತುಶಾಹಿಯ ವಿರುದ್ಧ ಉಗ್ರ ದೇಶಪ್ರೇಮದಿಂದ ಹುಲಿಯಂತೆ ಘರ್ಜಿಸಿದ ಟಿಪ್ಪು ಒಂದೆಡೆಯಿದ್ದರೆ ಮತ್ತೊಂದೆಡೆ ವಸಾಹತುಶಾಹಿಯ ಅಂಗಿಯ ಚುಂಗಿಡಿದು ನೇತಾಡುತ್ತಿರುವ ದುರ್ಬಲ ಇಲಿ.