Mar 12, 2019

ಒಂದು ಬೊಗಸೆ ಪ್ರೀತಿ - 9

ಡಾ. ಅಶೋಕ್.‌ ಕೆ. ಆರ್.‌
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ರಾಜೀವ್ ಮದುವೆಯಾದ ಹೊಸತರಲ್ಲಿ ಸರಿಯಾಗೇ ಇದ್ದರು. ಕೇರಳದ ವಯನಾಡಿನ ಹತ್ತಿರವಿರುವ ವಿಲೇಜ್ ರೆಸಾರ್ಟಿಗೆ ಕರೆದುಕೊಂಡು ಹೋಗಿದ್ದರು ಹನಿಮೂನಿಗೆಂದು. ತುಂಬಾ ಚೆಂದದ ಜಾಗವದು. ಐದೇ ಐದು ಗುಡಿಸಲಿನಂತಹ ಮನೆ. ಒಂದು ಮೂಲೆಯಲ್ಲಿ ಊಟದ ಕೋಣೆ. ಸುತ್ತಲೂ ಅಡಿಕೆ ತೋಟ. ಅಡಿಕೆಯ ಮಧ್ಯೆ ಅಲ್ಲೊಂದಿಲ್ಲೊಂದು ಬಾಳೆಗಿಡಗಳು. ಸುತ್ತಮುತ್ತ ಎರಡು ಕಿಲೋಮೀಟರು ಯಾವ ಮನೆಯೂ ಇರಲಿಲ್ಲ. ರೂಮು ಹನಿಮೂನಿಗೆಂದು ಬರುವವರಿಗೇ ಮಾಡಿಸಿದಂತಿತ್ತು. ದೊಡ್ಡ ಮಂಚ, ಮೆದುವಾದ ಹಾಸಿಗೆ, ಮಂಚದ ಪಕ್ಕದ ಮೇಜಿನ ಮೇಲೆ ಘಮ್ಮೆನ್ನುವ ಮಲ್ಲಿಗೆ ಮತ್ತು ಸಂಪಿಗೆ ಹೂವು. ಕುಳಿತುಕೊಳ್ಳಲು ಕುರ್ಚಿಯೇ ಇಟ್ಟಿರಲಿಲ್ಲ! ಇನ್ನು ರೂಮಿಗೆ ಹೊಂದಿಕೊಂಡಿದ್ದ ಬಚ್ಚಲು ಕೋಣೆಯಲ್ಲಿ ಒಂದು ಮೂಲೆಗೆ ಕಮೋಡು. ಮತ್ತೊಂದು ಮೂಲೆಯಲ್ಲಿ ಇಬ್ಬರು ಆರಾಮಾಗಿ ಕೂರಬಹುದಾದ ಬಾತ್ ಟಬ್. ಬಿಸಿ ನೀರು ಟಬ್ಬಿನೊಳಗಡೆ ಮಾತ್ರ ಬರುತ್ತಿತ್ತು! ರಾಜಿ ಮುಂದೆ ಮೊದಲು ಬೆತ್ತಲಾಗಿದ್ದು ಬಚ್ಚಲು ಮನೆಯ ಆ ಟಬ್ಬಿನಲ್ಲೇ. ನಾನು ಪ್ಯಾಂಟು ಟಿ ಶರಟು ಧರಿಸಿದ್ದೆ, ಅವರು ಬನಿಯನ್ನು, ಚೆಡ್ಡಿ. ಇಬ್ಬರೂ ಬಟ್ಟೆಯಲ್ಲೇ ಟಬ್ಬಿನೊಳಗಡೆ ಕುಳಿತೆವು. ನಾನು ನೀರು ತಿರುಗಿಸಿದೆ. ಬೆಚ್ಚಗಿನ ನೀರು ದೇಹವನ್ನಾವರಿಸುತ್ತಿತ್ತು. ರಾಜಿ ಮುಖದ ತುಂಬ ಮುತ್ತಿನ ಮಳೆ ಸುರಿಸುತ್ತಿದ್ದರು. ನಿಧಾನಕ್ಕೆ ನನ್ನ ಬಟ್ಟೆಗಳನ್ನೆಲ್ಲ ಕಳಚಿದರು. ಇಬ್ಬರೂ ಬೆತ್ತಲಾಗುವಷ್ಟರಲ್ಲಿ ಟಬ್ಬಿನ ನೀರು ತುಂಬಿತ್ತು. ನೀರಿನೊಳಗಡೆಯೇ ನನ್ನ ದೇಹವನ್ನೆಲ್ಲ ಸ್ಪರ್ಶಿಸಿದರು. ಸತತ ಸ್ಪರ್ಶದ ಕೆಲಸದಿಂದ ಸುಸ್ತಾಗಿ ಕುಳಿತಾಗ ಅವರ ದೇಹವನ್ನು ಸ್ಪರ್ಶಿಸುವ ಕೆಲಸ ನನ್ನದಾಯಿತು. ಗಡುಸಾಗಿದ್ದರು. ಹಾಗೇ ಮೇಲೆ ಎದ್ದು ಬಂದು ಒಂದಷ್ಟು ಚೇಷ್ಟೆ ಮಾಡಿಕೊಳ್ಳುತ್ತ ಮೈ ಒರೆಸಿಕೊಂಡೆವು. ನನ್ನನ್ನು ಹಿಂದಿನಿಂದ ತಬ್ಬಿಕೊಂಡು ‘ಇದು ತುಂಬಾ ಚೆನ್ನಾಗಿದೆ’ ಎಂದು ಎರಡೂ ಮೊಲೆಗಳನ್ನು ಬಿಗಿಯಾಗಿ ಹಿಡಿದುಕೊಂಡರು. ‘ರೀ ಮೆಲ್ಲಗೆ’ ಎಂದು ಕಿರುಚಿದೆ.
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಏನೇ ಮೆಡಿಕಲ್ ಓದಿದ್ರೂ ಮೊದಲ ಅನುಭವ ಭಯ ಹುಟ್ಟಿಸಿತ್ತು. ಒಂದೆರಡು ಸಲ ಸ್ಥಾನ ಪಲ್ಲಟವಾಗಿ ಅವರಿಗೆ ನಿರಾಶೆಯಾಯಿತು. ಹಣೆ ಮೇಲೊಂದು ಮುತ್ತನಿತ್ತು ಮತ್ತೆ ಪ್ರಯತ್ನಿಸಿ ಎಂದೆ. ಸಫಲವಾಯಿತು. ಇಬ್ಬರಿಗೂ ಒಂದಷ್ಟು ನೋವಾಯಿತು. ಎರಡು ಹನಿ ರಕ್ತ. ಯೋನಿಯೊಳಗಿನ ಪದರ ಒಡೆದುಹೋಗಲು ನೂರಾರು ಕಾರಣಗಳಿರುತ್ತವೆ ಅದಕ್ಕೂ ಕನ್ಯತ್ವಕ್ಕೂ ಸಂಬಂಧವಿಲ್ಲ ಎಂದು ಓದಿ ತಿಳಿದುಕೊಂಡಿದ್ದರೂ ಆ ಕ್ಷಣದಲ್ಲಿ ಒಂದು ಹನಿ ರಕ್ತವಾದರೂ ಬರಲಪ್ಪ ದೇವರೇ ಎಂದು ಕೇಳಿಕೊಂಡಿದ್ದು ಸುಳ್ಳಲ್ಲ. ಅದರ ಬಗ್ಗೆ ಮಿಲನ ಸುಖ ಮುಗಿದ ನಂತರ ಬೇಸರಪಟ್ಟುಕೊಂಡಿದ್ದೂ ಸುಳ್ಳಲ್ಲ. ವಯನಾಡಿನಿಂದ ಬಂದ ಸ್ವಲ್ಪ ದಿನಕ್ಕೆ ಇಬ್ಬರ ರಜೆಗಳೂ ಮುಗಿದುಹೋದವು. ರಜೆಯೊಂದಿಗೆ ಒಂದು ಲೆಕ್ಕದಲ್ಲಿ ಖುಷಿಯೂ ಮುಗಿದುಹೋಯಿತು. ಕೆಲಸದ ಬಗೆಗಿನ ಅಸಹನೆ ಆಗಿನಿಂದಲೇ ಇತ್ತಿವರಿಗೆ. ಅಸಹನೆ ದಿನೇ ದಿನೇ ಜಾಸ್ತಿಯಾಗುತ್ತಿತ್ತು. ಅಸಹನೆಗೆ ಪರಿಹಾರವೆಂಬಂತೆ ಏನಾದರು ಹೊಸತಾಗಿ ಯೋಚನೆ ಮಾಡುತ್ತಾರ ಎಂದರೆ ಇಲ್ಲ. ಕೆಲಸ ಸಿಕ್ಕ ಹೊಸತರಲ್ಲೇ ಲಕ್ಷ ಲಕ್ಷ ಎಣಿಸಿಕೊಡಬೇಕು ಎನ್ನುವ ಮನಸ್ಥಿತಿ ಇವರಿಗೆ. ತಾಳ್ಮೆಯಿಲ್ಲ. ಆ ಅಸಹನೆಗೆ ಬಲಿಪಶುವಾಗಿದ್ದು ನಾನು, ಕೆಟ್ಟವಳೆನ್ನಿಸಿಕೊಂಡಿದ್ದು ನಾನು. ಇವರು ಮಾತ್ರ ಈಗಲೂ ಅವರ ಮನೆಯವರೊಂದಿಗೆ ಚೆನ್ನಾಗೇ ಇದ್ದಾರೆ. ಒಬ್ಬೊಬ್ಬರೇ ಮನೆಗೆ ಹೋಗಿ ಬರುತ್ತಾರೆ. ಹೇಳಿದ್ರೆ ನಾನೂ ಬರ್ತಿದ್ನಲ್ರೀ ಅಂದರೆ ಇಲ್ಲ ಅಲ್ಲೇ ಹತ್ತಿರ ಏನೋ ಕೆಲಸದ ಮೇಲೆ ಹೋಗಿದ್ದೆ ಹಂಗೆ ಸುಮ್ನೆ ಹೋಗಿ ಬಂದೆ ಅನ್ನೋ ತೇಲಿಸುವ ಉತ್ತರ. ನನಗೆ ಒಮ್ಮೊಮ್ಮೆ ಅನುಮಾನ ಬರುತ್ತೆ, ಅಷ್ಟು ಚೆನ್ನಾಗಿ ಮಾತನಾಡುತ್ತಿದ್ದ ಅತ್ತೆ ಮಾವ ನನ್ನೊಡನೆ ಮುಖ ಕೊಟ್ಟು ಮಾತನಾಡುವುದನ್ನೇ ನಿಲ್ಲಿಸಿದ್ದಕ್ಕೆ ಇವರೇ ಕಾರಣವಿರಬೇಕೆಂದು. ನನ್ನದ್ಯಾವ ತಪ್ಪೂ ಇಲ್ಲದೆ ಇವೆಲ್ಲವನ್ನೂ ಅನುಭವಿಸುವಂತಾಯಿತಲ್ಲ ಎಂದು ಕೊರಗುತ್ತಿದ್ದೆ. ಸಾಗರನೊಡನೆ ಈ ವಿಷಯ ಹಂಚಿಕೊಂಡ ಮೇಲೆ ನನ್ನ ತಪ್ಪಿನ ಅರಿವಾಯಿತು. ಮೌನವಾಗಿದ್ದುದೇ ನನ್ನ ತಪ್ಪು. ಏನು ಮಾಡೋದು ಮಾತನಾಡುವುದೇ ಮರೆತಂತಾಗಿದ್ದ ದುರ್ದಿನಗಳವು. ಯೋಚನೆಗಳನ್ನು ಬದಿಗೆ ಸರಿಸಿ ಕಣ್ಣು ಮುಚ್ಚಿದೆ.

* * *
ಶಶಿಯ ಪ್ರೀತಿ ವಿಷಯದಲ್ಲಾದ ಗಲಾಟೆಯ ನಂತರ ಅಪ್ಪನ ಮನೆಯ ಕಡೆಗೆ ಹೋಗಿರಲಿಲ್ಲ. ಅವರೂ ಫೋನ್ ಮಾಡಿರಲಿಲ್ಲ. ಶಶಿ ಒಮ್ಮೆ ಸೋನಿಯಾ ಒಮ್ಮೆ ಫೋನ್ ಮಾಡಿದ್ದರು. ರಾಮೇಗೌಡ್ರ ಮನೆಯಲ್ಲಿ ಮಾತನಾಡಲಾ ಅಥವಾ ಅಪ್ಪನಿಗೆ ಹುಡುಗಿ ಯಾರೆಂದು ಮೊದಲು ಹೇಳಿಬಿಡಲಾ ಎನ್ನುವುದವನ ಪ್ರಶ್ನೆಯಾಗಿತ್ತು. ಏನು ಹೇಳುವುದೆಂದು ತಿಳಿಯಲಿಲ್ಲ. ಒಂದು ಕಡೆ ಶ್ರೇಷ್ಟ ಜಾತಿಯವರೆಂದು ‘ಹೆಮ್ಮೆ’ಪಡುವ ರಾಮೇಗೌಡರು; ಮತ್ತೊಂದೆಡೆ ನಮ್ಮನ್ನು ಕೀಳಾಗಿ ಕಾಣುವವರ ಹತ್ತಿರ ನಮಗೆಂತ ಸಂಬಂಧ ಎಂದು ಕಡ್ಡಿಮುರಿದಂತೆ ಮಾತನಾಡುವ ಅಪ್ಪ. ಇವರಿಬ್ಬರ ನಡುವೆ ಶಶಿ – ಸೋನಿಯಾರವರ ಪ್ರೀತಿ ಮುರುಟಿಹೋಗುವ ಸಾಧ್ಯತೆಯೇ ಹೆಚ್ಚು. ಅಪ್ಪ ಹೇಳೋದು ಒಂದು ರೀತಿ ಸರಿಯೇ. ಏನೇ ಜಾತಿಯಿಲ್ಲ, ನಗರಗಳ ಉಗಮದೊಂದಿಗೆ ಜಾತಿ ಪದ್ಧತಿ ಸತ್ತು ಹೋಗಿದೆ ಎಂದು ಬೊಂಬಡ ಹೊಡೆದರೂ ಜಾತಿ ಪದ್ಧತಿ ಇರುವುದು ಸುಳ್ಳಲ್ಲವಲ್ಲ. ನನ್ನದೇ ಉದಾಹರಣೆಯಿದೆ. ಪಿಯುಸಿಯಲ್ಲಿ ತೊಂಭತ್ತೈದು ಪರ್ಸೆಂಟ್ ತಗಂಡಿದ್ದೆ. ಅಷ್ಟಾದರೂ ಮೆಡಿಕಲ್ ಓದುವಾಗ ಹಲವರು ಬೆನ್ನ ಹಿಂದೆ ಕೆಲವರು ಮುಖಕ್ಕೆ ಹೊಡೆದಂತೆಯೇ ‘ನಿಮ್ದು ಬಿಡ್ರಮ್ಮ ರಿಸರ್ವೇಷನ್ ಕೋಟಾ’ ಎಂದು ಹೀಯಾಳಿಸುತ್ತಿದ್ದರು. ಮೆಡಿಕಲ್ಲಿನಲ್ಲೂ ಫಸ್ಟ್ ಕ್ಲಾಸ್ ಡಿಸ್ಟಿಂಕ್ಷನ್ ತಗಂಡ್ರೂ ‘ಪ್ಚ್. ಎಸ್ಸಿ ಕ್ಯಾಂಡಿಡೇಟು’ ಎಂದರ್ಧ ಉತ್ಸಾಹವನ್ನೇ ಕುಗ್ಗಿಸಿಬಿಡುತ್ತಿದ್ದರು. ಅದೇನೋ ಗೊತ್ತಿಲ್ಲ ಬ್ರಾಹ್ಮಣ ಹುಡುಗರು ಬ್ರಾಹ್ಮಣ ಹುಡುಗರದೇ ಗುಂಪು ಕಟ್ಟಿಕೊಳ್ಳುತ್ತಿದ್ದರು. ಇನ್ನು ಈ ಒಕ್ಕಲಿಗರು ಲಿಂಗಾಯತರದು ಬೇರೆ ಬೇರೆ ಗುಂಪುಗಳಿದ್ದವು, ಕೆಲವು ಗುಂಪಿನಲ್ಲಿ ಇಬ್ಬರೂ ಇರುತ್ತಿದ್ದರು. ಅಲ್ಲೊಂದು ಇಲ್ಲೊಂದು ಅಪವಾದದಂತೆ ಎಸ್ಸಿ ಎಸ್ಟಿಗಳು ಈ ಗುಂಪಿನಲ್ಲಿರುತ್ತಿದ್ದರು. ನನ್ನ ಫ್ರೆಂಡ್ಸ್ ಸರ್ಕಲ್ಲಲ್ಲೇ ನೋಡಿದರೂ ನಾನು ಭಾವನ ಎಸ್ಸಿ, ಐಶ್ವರ್ಯ ಎಸ್ಟಿ, ದರ್ಶಿನಿ 2ಎನೋ 1ಎನೋ ಇರಬೇಕು. ಅದೇನ್ ನಾವೇ ಬ್ರಾಹ್ಮಣ ಮತ್ತು ಶೂದ್ರರ ಸಹವಾಸ ಮಾಡುತ್ತಿರಲಿಲ್ಲವೋ ಅಥವಾ ಅವರೇ ನಮಗರಿವಾಗದಂತೆ ನಮ್ಮನ್ನು ದೂರವಿಟ್ಟುಬಿಟ್ಟಿದ್ದರೋ ನಿರ್ಧಾರ ಕಷ್ಟ. ಹಂಗ್ ನೋಡಿದ್ರೆ ಸ್ಕೂಲಿನಲ್ಲಿ ಪಿಯುಸಿಯಲ್ಲಿ ಇಂತಹ ವ್ಯತ್ಯಾಸಗಳಿರಲಿಲ್ಲ. ಹೈಸ್ಕೂಲಿನಿಂದ ಪಿಯುಸಿವರೆಗೆ ನನಗೆ ತುಂಬ ಹತ್ತಿರದ ಗೆಳತಿಯೆಂದರೆ ಅಶ್ವಿನಿ. ಅವಳು ಬ್ರಾಹ್ಮಣ ಹುಡುಗಿ. ಲಿಂಗಾಯತರು ಒಕ್ಕಲಿಗರು ಸಾಬರು ಯಾವ ಜಾತಿಯವರೆಂದು ಗೊತ್ತಿಲ್ಲದವರೆಲ್ಲ ಸ್ನೇಹಿತರ ಪಟ್ಟಿಯಲ್ಲಿದ್ದರು. ಅದ್ಯಾಕೆ ಉನ್ನತ ಶಿಕ್ಷಣಕ್ಕೆ ಸೇರುತ್ತಿದ್ದಂತೆ ಜಾತಿಯಾಧಾರಿತ ಸ್ನೇಹವಲಯ ಹೆಚ್ಚಾಯಿತು? ಅಪವಾದಗಳಿರಬಹುದು. ಆದರೂ ಅಪ್ರಜ್ಞಾಪೂರ್ವಕವಾಗಿ ಜಾತಿಯೆಂಬುದು ಸ್ನೇಹವನ್ನು ನಿರ್ಧರಿಸುವ ಸಂಗತಿಯಾಗಿತ್ತು. ನಾನು ಮೆಡಿಕಲ್ಲಿಗೆ ಸೇರಿದರೆ ಅಶ್ವಿನಿ ಎಂಜಿನಿಯರಿಂಗ್ ಸೇರಿದಳು. ಈಗ ಅವರ ಮೂರು ಸ್ನೇಹಿತೆಯರ ಪೈಕಿ ಇಬ್ಬರು ಬ್ರಾಹ್ಮಣರು! ಕೆಲವರ ಪ್ರಜ್ಞೆಯ ಒಳಗೆ, ಕೆಲವರ ಪ್ರಜ್ಞೆಯ ಹೊರಗೆ ಜಾತಿಯೆಂಬ ನದಿ ಹರಿಯುತ್ತಲೇ ಇದೆ. ಅತ್ಯುಗ್ರವಾಗಿ ಜಾತಿಯನ್ನು ಪಾಲಿಸುವ ರಾಮೇಗೌಡರು ಈ ಸಂಬಂಧಕ್ಕೆ ಒಪ್ಪಲು ಸಾಧ್ಯವೇ? ಸುಮ್ಮನೆ ಶಶಿ ಹೇಳಿದಂತೆ ಇಬ್ಬರೂ ಓಡಿ ಹೋಗಿ ಮದುವೆಯಾಗಿಬಿಡುವುದೇ ಒಳ್ಳೆಯದೇನೋ. ಪಾಪ ಆ ಹುಡುಗಿ ಸೋನಿಯಾ ಜೀವನಪರ್ಯಂತ ಓಡಿಹೋದವಳೆಂಬ ಪಟ್ಟ ಕಟ್ಟಿಕೊಳ್ಳಬೇಕೆ? ಅವರ ಮನೆಯವರಿರಲಿ ಓಡಿ ಹೋಗಿ ಮದುವೆಯಾದರೆ ನಮ್ಮಪ್ಪನ ಬಾಯಿಂದ ಕೆಟ್ಟ ಕೆಟ್ಟ ಮಾತುಗಳನ್ನು ಸಾಯುವವರೆಗೂ ಕೇಳಬೇಕು. ಅವಳು ಸಾಯುವವರೆಗೆ ಅಥವಾ ನಮ್ಮಪ್ಪ ಸಾಯುವವರೆಗೆ, ಯಾರ ಸಾವು ಮೊದಲಾಗುತ್ತೋ ಅಲ್ಲಿಯವರೆಗೆ. ಸೋನಿಯಾ ಫೋನು ಮಾಡಿದಾಗ ಮಾತಿಗಿಂತ ಅಳು ಜಾಸ್ತಿಯಿತ್ತು. ಓಡಿ ಹೋಗಲು ಇಷ್ಟವಿಲ್ಲ. ಮನೆಯಲ್ಲಿ ಅಪ್ಪ ಒಪ್ಪುವುದರ ಬಗ್ಗೆ ನಂಬಿಕೆಯಿಲ್ಲ. ಅಮ್ಮನಿಗೆ ವಿಷಯ ಗೊತ್ತಿದೆ, ಅವರದೇನು ತಕರಾರಿಲ್ಲ. ಮದುವೆಯಾಗಿ ಬೆಂಗಳೂರಿನಲ್ಲಿರುವ ಅಣ್ಣ ಅತ್ತಿಗೆ ಊರಿನ ಕಡೆಗೆ ಬರುವುದೇ ಅಪರೂಪ. ಅವರು ಒಪ್ಪುವುದು ಬಿಡುವುದು ಸೋನಿಯಾಗೆ ಮುಖ್ಯವೇನಲ್ಲ. ನಾನೇ ನಿಮ್ಮ ತಮ್ಮನ್ನ ಇಷ್ಟಪಟ್ಟಿದ್ದು, ನಾನೇ ಮೊದಲು ಪ್ರಪೋಸ್ ಮಾಡಿದ್ದು ಸುಖಾಸುಮ್ನೆ ಈ ತೊಂದ್ರೆಗೆಲ್ಲ ನಾನೇ ಕಾರಣ ಎಂದು ಗೋಳಿಡುತ್ತಾಳೆ. ‘ಪ್ರೀತಿ ಪ್ರೇಮ ತೊಂದರೆಯಲ್ಲ ಸೋನಿಯಾ. ಮೊದಲು ಯಾರು ಪ್ರಪೋಸ್ ಮಾಡಿದ್ದು ಎನ್ನುವುದೆಲ್ಲ ಚರ್ಚೆಯ ವಿಷಯವೇ ಆಗಬಾರದು. ಇಬ್ಬರೂ ಒಪ್ಪಿದ ಮೇಲೆ ತಾನೇ ಪ್ರೀತಿ ಶುರುವಾಗೋದು? ನೀನು ಪ್ರಪೋಸ್ ಮಾಡದೇ ಇದ್ದಿದ್ದರೆ ಅವನೇ ಪ್ರಪೋಸ್ ಮಾಡ್ತಿದ್ದನೇನೋ? ಇಷ್ಟಕ್ಕೆಲ್ಲ ಧೃತಿಗೆಡಬೇಡ. ಸುಮ್ನಿರು. ಸ್ವಲ್ಪ ತಾಳ್ಮೆಯಿಂದಿರು. ನಮ್ಮಪ್ಪ ಜಾತಿಯ ಕಾರಣಕ್ಕೆ ಮದುವೆಗೆ ಒಪ್ಪಿಲ್ಲ. ನೀನೇ ನೋಡಿದ್ದೀಯ ನಿಮ್ಮ ಅಪ್ಪ ನಮ್ಮ ಮನೆಯವರಿಗೆ ಕೊಡೋ ಮರ್ಯಾದೇನ. ಅವರ ಸಿಟ್ಟು ನನಗೇ ಅರ್ಥವಾಗಲ್ಲ ಇನ್ನು ನಿನಗೆ ಅರ್ಥವಾಗುತ್ತಾ? ಏನೇ ಅಂದ್ರೂ ನಮ್ಮಪ್ಪ ಒಳ್ಳೆಯವರೇ. ಮನಸ್ಸು ಸ್ವಲ್ಪ ಸಮಾಧಾನವಾದ ನಂತರ ಒಪ್ಪೇ ಒಪ್ಪುತ್ತಾರೆ. ಒಮ್ಮೆ ಅವರು ಒಪ್ಪಿದರೆ ಸಾಕು. ನಮ್ಮಪ್ಪ ಮಾತಿನಲ್ಲಿ ಚತುರ. ನಿಮ್ಮಪ್ಪನನ್ನೂ ಒಪ್ಪಿಸಿಯೇ ತೀರುತ್ತಾರೆ. ನೀನು ಮತ್ತು ಶಶಿ ಇಬ್ಬರೂ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ ಅಷ್ಟೇ’ ಎಂದು ಸಮಾಧಾನ ಮಾಡಿದ್ರೂ ‘ಅಂದ್ರೂ ಈ ಕಷ್ಟವೆಲ್ಲ ಬೇಕಿತ್ತೇನಕ್ಕ ನಮಗೆ. ಸಾಕಾಗಿಹೋಗಿದೆ’ ಎಂದು ಅಲವತ್ತುಕೊಳ್ಳುತ್ತಾಳೆ. ‘ನನ್ನ ಜೀವನಾನೂ ನೋಡಿದ್ದಿ ಸೋನಿಯಾ ನೀನು. ನಾನಭುವಸಿದ್ದನ್ನು ಕಂಡಿದ್ದೀಯ. ಅದಕ್ಕಿಂತ ಕಷ್ಟವಾಗಿದೆಯಾ ನಿನ್ನ ಜೀವನ ಹೇಳು’ ಎಂದಾಗ ಒಂದಷ್ಟು ಸಮಚಿತ್ತವನ್ನು ವಾಪಸ್ಸು ತರಿಸಿಕೊಳ್ಳುತ್ತಿದ್ದಳು. ಸಲಹೆ ಸೂಚನೆ ಕೊಟ್ಟು ಕೊಟ್ಟು ನನಗೂ ಸಾಕಾಗಿಹೋಗಿತ್ತು. ಸಲಹೆ ಕೊಡುವುದೆಂದರೆ ಸೂಚನೆ ನೀಡುವುದೆಂದರೆ ನನ್ನ ಮದುವೆಯ ಸಂದರ್ಭದ ನೆನಪನ್ನು ಮುನ್ನೆಲೆಗೆ ತರುವುದು. ಆ ನೆನಪುಗಳು ನೀಡುವ ಹಿಂಸೆಯಿಂದ ಒಂದಷ್ಟು ನರಳುವುದು. ಶಶಿ ಮತ್ತು ಸೋನಿಯಾರ ಮದುವೆ ಎಷ್ಟು ಬೇಗ ಆಗುತ್ತೋ ಅಷ್ಟು ನನಗೇ ಒಳ್ಳೆಯದು ಎನ್ನಿಸಲಾರಂಭಿಸಿತ್ತು.

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

2 comments: