Jan 7, 2016

ಮಲ್ಡಾದ ಮತಿಗೆಟ್ಟ ಮುಸ್ಲಿಮರು…

Dr Ashok K R
ಈ ದೇಶದಲ್ಲಿ ಬೇಳೆ ಬೆಲೆ ಇನ್ನೂರು ದಾಟುದ್ರೂ ಪ್ರತಿಭಟನೆ ನಡೆಯೋಲ್ಲ, ತರಕಾರಿ ಬೆಲೆ ಗಗನ ಮುಟ್ಟಿದ್ರೂ ತಲೆ ಕೆಡಿಸಿಕೊಳ್ಳೋರಿಲ್ಲ, ಪಂಚಾಯತ್ ಚುನಾವಣೆಯ ಮೇಲೆ ಕಣ್ಣಿಟ್ಟು ಹಾಲು ಮೊಸರಿನ ದರವನ್ನು ಏಕಾಏಕಿ ಏರಿಸಿಬಿಟ್ಟರೂ ಕೇಳೋರಿಲ್ಲ ಅದೇ ದೇವರ ಬಗ್ಗೆ, ದೇವದೂತನ ಬಗ್ಗೆ ಯಾರೋ ಒಬ್ಬ ಮನಸ್ಸಿಗೆ ತೋಚಿದ ಹೊಲಸನ್ನು ಹೇಳಿಬಿಟ್ಟರೆ ಪ್ರಪಂಚವೇ ಮುಳುಗಿಹೋದಂತೆ ಪ್ರತಿಭಟಿಸೋದಕ್ಕೆ ನಾಮುಂದು ತಾಮುಂದು ಎಂದು ಓಡೋಡಿ ಬರುವ ಮತಿಗೆಟ್ಟ ಜನರ ಸಂಖೈಗಂತೂ ಇಲ್ಲಿ ಕೊರತೆಯಿಲ್ಲ. ಮತ್ತಿವರನ್ನು ಬೆಂಬಲಿಸುವುದಕ್ಕೆ ಮತಬ್ಯಾಂಕಿನ ಮೇಲೆ, ಹತ್ತಿರದಲ್ಲಿರುವ ಚುನಾವಣೆಗಳ ಮೇಲೆ ಕಣ್ಣಿಡುವ ರಾಜಕಾರಣಿಗಳ ಸಂಖೈಯಂತೂ ಭಾರತದಲ್ಲಿ ಬೇಕಾದಷ್ಟಿದೆ. 

ಅದೇನು ಈ ಅಜಂ ಖಾನೆಂಬ ಉತ್ತರಪ್ರದೇಶದ ಸಚಿವರೆಂಬ ಬ್ರಹಸ್ಪತಿಯ ನಾಲಿಗೆಯಲ್ಲೇ ಹೊಲಸಿದೆಯೋ ಗೊತ್ತಿಲ್ಲ, ಮಾತನಾಡಿದ್ದೆಲ್ಲವೂ ವಿವಾದಾತ್ಮಕವಾಗಿರುತ್ತದೆ; ಅಥವಾ ವಿವಾದಾತ್ಮಕವಾಗಿರಲೆಂದೇ ಮಾತನಾಡುತ್ತಾರೇನೋ. ಆರ್.ಎಸ್.ಎಸ್ಸಿನಲ್ಲಿರುವವರು ಬಹಳಷ್ಟು ಜನ ಮದುವೆಯಾಗುವುದಿಲ್ಲವಲ್ಲ, ಅದಕ್ಕೇ ಅವರು ಸಲಿಂಗಕಾಮಿಗಳಾಗಿರುತ್ತಾರೆ ಎಂದೊಂದು ಹೇಳಿಕೆಯನ್ನು ಒಗಾಯಿಸಿಬಿಟ್ಟರು. ಆರ್.ಎಸ್.ಎಸ್ಸಿನವರು ಸಲಿಂಗಕಾಮಿಗಳಾಗಿದ್ದರೇನು ಬಿಟ್ಟರೇನು? ಕಾಮವೆಂಬುದು ಅವರವರ ವೈಯಕ್ತಿಕ ಬದುಕು. ಉಳಿದವರಿಗೆ ತೊಂದರೆ ಕೊಡದಿದ್ದರಾಯಿತು. ಈ ಅಜಂ ಖಾನ್ ಹುಟ್ಟಿದಾರಾಭ್ಯ ಆರ್.ಎಸ್.ಎಸ್ ಕಾರ್ಯಕರ್ತರ ಬೆಡ್ ರೂಮಿನೊಳಗೆ ಕುಳಿತು ಎಲ್ಲವನ್ನೂ ನೋಡಿದ್ದಾರೆಯೇ? ಮತ್ತೇನಿಲ್ಲ, ಸುಮ್ನೆ ಸುದ್ದಿಯಲ್ಲಿರೋಕೆ ಒಂದು ಹೇಳಿಕೆಯದು ಅಷ್ಟೇ. ಇಲ್ಯಾರೋ ಸುದ್ದಿಯಲ್ಲಿದ್ದಾರೆಂದರೆ ಅಲ್ಲಿನ್ಯಾರೋ ಸುದ್ದಿ ಮಾಡುವುದು ತಪ್ಪಲ್ಲವಲ್ಲ. ಅಖಿಲ ಭಾರತ ಹಿಂದೂ ಮಹಾಸಭಾದ ಸದಸ್ಯ (ತದನಂತರ ಆ ಸಂಘಟನೆ ಈತ ನಮ್ಮ ಸದಸ್ಯನಲ್ಲ ಎಂದು ಕೈತೊಳೆದುಕೊಂಡಿತು) ಕಮಲೇಶ್ ತಿವಾರಿ ಎಂಬ ‘ಇತಿಹಾಸಕಾರ’ ಪ್ರಪಂಚದ ಮೊದಲ ಸಲಿಂಗಿ ಪ್ರವಾದಿ ಮೊಹಮ್ಮದ್ ಎಂದು ಪ್ರಚಾರಪ್ರಿಯ ಹೇಳಿಕೆ ನೀಡಿಬಿಟ್ಟರು. ಅದ್ಯಾವಾಗ ಈ ಪುಣ್ಯಾತ್ಮ ಸೌದಿ ಅರೇಬಿಯಾಗೆ ಹೋಗಿ ಸಂಶೋಧನೆ ನಡೆಸಿದರೋ, ಅಥವಾ ಪ್ರವಾದಿಗಳ ಬಗ್ಗೆ ಬಂದಿರುವ ಸಂಶೋಧನಾತ್ಮಕ ಲೇಖನಗಳನ್ನೆಲ್ಲ ಗುಡ್ಡೆ ಹಾಕಿಕೊಂಡು ಯಾವಾಗ ಓದಿದರೋ ಪ್ರವಾದಿಗಳೇ ಹೇಳಬೇಕು. ಪ್ರಚಾರಪ್ರಿಯರ ಅಸಂಬದ್ಧ ಮಾತುಗಳನ್ನು ವಿರೋಧಿಸಲು ಪ್ರಜಾಪ್ರಭುತ್ವದಲ್ಲಿ ಕಾನೂನಿನ ಮಾರ್ಗವಿದೆ. ಅಜಂ ಖಾನರ ವಿರುದ್ಧ, ಕಮಲೇಶ್ ತಿವಾರಿಯ ವಿರುದ್ಧ ಪೋಲೀಸರಲ್ಲಿ ದೂರು ನೀಡಬಹುದು. ಮಿಕ್ಕ ಕೆಲಸವನ್ನು ಪೋಲೀಸರು ಕಾನೂನಿನ ಪ್ರಕಾರ ಮಾಡುತ್ತಾರೆ. ಆ ಹೇಳಿಕೆಗಳನ್ನು ವಿರೋಧಿಸಲು ಪ್ರತಿಭಟನೆಯ ಮಾರ್ಗವೂ ಇದ್ದೇ ಇದೆ. ಪೋಲೀಸರು ತಮ್ಮ ಕೆಲಸವನ್ನು ಸರಿಯಾಗಿ ಮಾಡದಿದ್ದರೆ ಪ್ರತಿಭಟನೆಯನ್ನು ಸತತವಾಗಿ ಮಾಡಿ ಒತ್ತಡ ಹಾಕುವ ಮಾರ್ಗವೂ ಉಂಟು. ತಲೆಕೆಟ್ಟವರ ಮಾತುಗಳನ್ನು ವಿರೋಧಿಸುವವರಿಗೆ ತಲೆ ಸರಿಯಿರಬೇಕೆಂದು ನಂಬಲಾದೀತೇ?

ಪಶ್ಚಿಮ ಬಂಗಾಳದ ಮಲ್ಡಾದಲ್ಲಿ ಕಮಲೇಶ್ ತಿವಾರಿಯ ಹೇಳಿಕೆಯನ್ನು ವಿರೋಧಿಸಿ ಲಕ್ಷದ ಲೆಕ್ಕದಲ್ಲಿ ಮುಸ್ಲಿಮರು ಬೀದಿಗಿಳಿದಿದ್ದರು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವುದು ಎಲ್ಲರ ಹಕ್ಕು ಸರಿ, ಆದರೆ ಕಮಲೇಶ್ ತಿವಾರಿಯನ್ನು ನೇಣಿಗಾಕಿ ಎಂದೆಲ್ಲ ಪ್ರತಿಭಟಿಸುವುದು ಯಾವ ಪುರುಷಾರ್ಥಕ್ಕೆ? ಅದು ಅತ್ಲಾಗಿರಲಿ, ಪ್ರತಿಭಟನೆಯ ನೆಪದಲ್ಲಿ ಈ ಮತಿಗೆಟ್ಟ ಮುಸ್ಲಿಮರು ಹಿಂದೂ ಅಂಗಡಿಗಳಿಗೆ, ವಾಹನಗಳಿಗೆ ಬೆಂಕಿ ಇಕ್ಕಿದ್ದಾರೆ; ಪೋಲೀಸರ ವಾಹನಗಳಿಗೆ ಕೊನೆಗೆ ನಮ್ಮ ಗಡಿ ಕಾಯುವ ಬಿ.ಎಸ್.ಎಫ್ ವಾಹನಗಳಿಗೂ ಬೆಂಕಿ ಹಚ್ಚಿ ಇಡೀ ಊರನ್ನು ಕೋಮುಗಲಭೆಗೆ ನೂಕಿಬಿಟ್ಟಿದ್ದಾರೆ. ಶತಮಾನಗಳ ಹಿಂದೆ ಸತ್ತ ಪ್ರವಾದಿಯ ಬಗ್ಗೆ ಪ್ರಚಾರಪ್ರಿಯನೊಬ್ಬ ನೀಡಿದ ಹೇಳಿಕೆಗೆ ಈ ಪಾಟಿ ಪ್ರತಿಭಟಿಸುವವರು ತಮ್ಮ ಸ್ಥಳೀಯ ಸಮಸ್ಯೆಗಳ ಬಗ್ಗೆ ಇದೇ ರೀತಿ ಬೀದಿಗಿಳಿಯುವ ಮನಸ್ಸು ಮಾಡಿದ್ದಿದ್ದರೆ ದೇಶ ಯಾವಾಗ್ಲೋ ಉದ್ಧಾರವಾಗಿಬಿಟ್ಟಿರೋದು. ಇಷ್ಟೆಲ್ಲ ಗಲಾಟೆಗಳಾದ ಮೇಲೆ ರಾಜಕೀಯವಿರದೆ ಇದ್ದರೆ ಹೇಗೆ? ಅದೂ ಈ ವರುಷವೇ ಪಶ್ಚಿಮ ಬಂಗಾಳದ ವಿಧಾನಸಭೆಗೆ ಚುನಾವಣೆಗಳು ನಡೆಯುವಾಗ ರಾಜಕೀಯವಿರಲೇಬೇಕಲ್ಲ. ಪಶ್ಚಿಮ ಬಂಗಾಳದಲ್ಲಿರುವುದು ತೃಣಮೂಲ ಕಾಂಗ್ರೆಸ್ಸಿನ ಸರಕಾರ; ಗಲಭೆಗೆ ಸಂಬಂಧಪಟ್ಟಂತೆ 130ಜನರ ಮೇಲೆ ಕೇಸುಗಳು ಬಿದ್ದಿವೆ. ಬಂಧನವಾಗಿರುವುದು ಕೇವಲ ಹತ್ತು ಜನರು, ಅದರಲ್ಲೂ ಕೆಲವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಮುಸ್ಲಿಮರ ಮತಗಳನ್ನು ಕಳೆದುಕೊಳ್ಳಲಿಚ್ಛಿಸದ ತೃಣಮೂಲ ಕಾಂಗ್ರೆಸ್ ಸರಕಾರ ಒಂದಷ್ಟು ಮೆದುವಾಗಿಬಿಟ್ಟಿದೆ ಈ ಮತಿಗೆಟ್ಟವರ ವಿರುದ್ಧ. ಇನ್ನು ಪಶ್ಚಿಮ ಬಂಗಾಳದಲ್ಲಿ ಅಸ್ತಿತ್ವ ಕಂಡುಕೊಳ್ಳುವ ದಾರಿಯಲ್ಲಿರುವ ಬಿಜೆಪಿಗೆ ಹಿಂದೂ ರಕ್ಷಕ ನಾನೊಬ್ಬನೇ ಎಂದು ತೋರಿಸಿಕೊಳ್ಳುವ ಹಪಾಹಪಿ, ಸಿಪಿಎಂ ಮತ್ತು ಅಸ್ತಿತ್ವನ್ನಾಗಲೇ ಕಳೆದುಕೊಂಡಿರುವ ಕಾಂಗ್ರೆಸ್ಸಿಗೆ ಮಲ್ಡಾದಲ್ಲಿ ಹೆಚ್ಚಿನ ಸಂಖೈಯಲ್ಲಿರುವ ಮುಸ್ಲಿಮರ ಮತಗಳನ್ನು ಸುಖಾಸುಮ್ಮನೆ ಅದೂ ಇದೂ ಹೇಳಿಕೆ ನೀಡಿ ಕಳೆದುಕೊಳ್ಳಬೇಕೆ ಎಂಬ ಚಿಂತೆ. ಒಟ್ನಲ್ಲಿ ಮತಿಗೆಟ್ಟ ಜನರನ್ನು ಆಳಲು ತಲೆಕೆಟ್ಟ ಜನರೇ ಸರಿ ಬಿಡಿ. ‘ಅದ್ಯಾರೋ ಏನೋ ಮಾತಾಡುದ್ರೆ ನಿಮ್ದೇನ್ರಯ್ಯಾ ಹಾಳಾಗಿದ್ದು, ಮುಚ್ಕೊಂಡು ನಿಮ್ ನಿಮ್ ಕೆಲ್ಸ ಮಾಡೋಗ್ರಯ್ಯ’ ಎಂದು ಈ ಮತಿಗೆಟ್ಟವರಿಗೆ ಹೇಳುವಂತಹ ನಾಯಕ ಧರ್ಮದೊಳಗಿನ ಸಮುದಾಯದಲ್ಲೂ ಇಲ್ಲ, ರಾಜಕಾರಣಿಗಳಲ್ಲೂ ಇಲ್ಲ. ಹೇಳಿದರೂ ಕೇಳುವಷ್ಟು ಬುದ್ಧಿವಂತರೇ ನಾವು? ‘ಧರ್ಮವೆಂಬುದು ಅಫೀಮಿದ್ದ ಹಾಗೆ’ ಎಂಬ ಕಾರ್ಲ್ ಮಾರ್ಕ್ಸನ ಮಾತುಗಳನ್ನು ಪದೇ ಪದೇ ನೆನಪಿಸಿಕೊಳ್ಳುತ್ತಲೇ ಇರಬೇಕು.

No comments:

Post a Comment