Dec 31, 2013

ಕಲಿಕಾ ಮಾಧ್ಯಮ ವಿವಾದ

ವೆಂಕಟೇಶ ಮಾಚಕನೂರ, ನಿವೃತ್ತ ಶಿಕ್ಷಣ ಆಯುಕ್ತರು, ಧಾರವಾಡ
(ಕೃಪೆ - ಜಗದೀಶ್ ಕೊಪ್ಪ ರವರ ಫೇಸ್ಬುಕ್ ಪುಟ )
ಪ್ರಾಥಮಿಕ ಶಾಲಾ ಹಂತದಲ್ಲಿ ಮಾತೃಭಾಷೆ ಶಿಕ್ಷಣ ಮಾಧ್ಯಮ ಇರಬೇಕೆಂಬ ಕರ್ನಾಟಕ ಸರ್ಕಾರದ ಆದೇಶದ ವಿವಾದವು ಈಗ ಸುಪ್ರೀಂ ಕೋರ್ಟಿನ ಐವರು ನ್ಯಾಯಮೂರ್ತಿಗನ್ನೊಳಗೊಂಡ ಸಂವಿಧಾನಿಕ ಪೀಠದ ಮುಂದೆ ಜನೇವರಿ 21 ರಿಂದ ವಿಚಾರಣೆಗೆ ಬರಲಿರುವ ವಿಷಯ ಎಲ್ಲರಿಗೂ ಗೊತ್ತಿರಲು ಸಾಕು.


ಸಂವಿಧಾನದ ಪೀಠದ ಮುಂದೆ ನಿಷ್ಕರ್ಷೆಗೆ ಬರಲಿರುವ ಅಂಶಗಳಲ್ಲಿ

1. ಮಾತೃ ಭಾಷೆ ಎಂದರೇನು?
2. ಮಾತೃಭಾಷೆಯಲ್ಲಿ ಮಗುವಿನ ಕಲಿಕೆ ಹೆಚ್ಚು ಸುಲಲಿತ ಆಗುವುದೇ?
3. ಮಗುವಿನ ಕಲಿಕಾ ಮಾಧ್ಯಮ ನಿರ್ಧರಿಸುವವರು ಯಾರು?
4. ಸರ್ಕಾರದ ಕಲಿಕಾ ಮಾಧ್ಯಮ ನಿರ್ಧಾರ ಪ್ರಜೆಗಳು/ಅಲ್ಪಸಂಖ್ಯಾತರ ಸಂವಿಧಾನಿಕ ಹಕ್ಕಿಗೆ ಧಕ್ಕೆ ತರುವುದೇ?
ಮೇಲ್ಕಾಣಿಸಿದ ವಿವಾದವು ನಮ್ಮ ರಾಜ್ಯ ಸರ್ಕಾರ 1 ರಿಂದ 4 ನೇ ತರಗತಿಯವರೆಗೆ ಕಡ್ಡಾಯ ಕನ್ನಡ ಮಾಧ್ಯಮ ಆಗಬೇಕೆಂದು 1994 ರಲ್ಲಿ ಆದೇಶಿಸಿದ್ದರ ಮೇಲೆ ಉದ್ಭವಿಸಿದೆ.
 

ಸ್ವಾತಂತ್ರ್ಯ ನಂತರ ಇಷ್ಟು ವರ್ಷಗಳಾದ ಮೇಲೂ ನಮ್ಮ ದೇಶಕ್ಕೆ ಅಥವಾ ರಾಜ್ಯಗಳಿಗೆ ಒಂದು ಭಾಷಾ ನೀತಿ ಎಂಬುದಿಲ್ಲ. ಭಾಷಾವಾರು ಪ್ರಾಂತಗಳು ರಚನೆಗೊಂಡ ಮೇಲೆ ಆಯಾ ಪ್ರಾಂತಗಳ ಭಾಷೆ ಕಲಿಕಾ ಮಾಧ್ಯಮವಾಗಬೇಕಾದುದು ಸಂವಿಧಾನದ ಆಶಯ. ಇದರೊಂದಿಗೆ ಸಮಾನ ಶಿಕ್ಷಣ, ಸಮಾನ ಶಾಲಾ ವ್ಯವಸ್ಥೆಗಳು ಬೆಸೆದುಕೊಂಡಿವೆ. ಇಂಗ್ಲೀಷ ಮಾಧ್ಯಮ ಸಂಸ್ಥೆಗಳ ಒತ್ತಡ, ಭಾಷೆ ಕುರಿತು ಸರಕಾರದ ದೃಢ ನಿಲುವು ಇಲ್ಲದಿರುವುದು, ನ್ಯಾಯಾಲಯಗಳ ವಿಭಿನ್ನ ತೀರ್ಪುಗಳಿಂದಾಗಿ ಭಾರತದ ಎಲ್ಲ ಭಾಷೆಗಳು ಆತಂಕ ಎದುರಿಸುತ್ತಿವೆ. ಮಗುವಿನ ಕಲಿಕೆ ಮಾತೃಭಾಷೆಯಲ್ಲಿಯೇ ಸೂಕ್ತ ಎಂಬುದು ಎಲ್ಲ ಶಿಕ್ಷಣ ತಜ್ಞರ ಅಭಿಪ್ರಾಯ ಅಂಬುದು ಸರ್ವವಿಧಿತ. ಸುಪ್ರಿಂ ಕೋರ್ಟ ತೀರ್ಪು ಇಂಗ್ಲೀಷ ಪರವಾಗಿ ಬಂದಲ್ಲಿ ಭಾರತೀಯ ಭಾಷೆಗಳಿಗೆ ನೇಣು ಬಿಗಿದಂತೆ ಆಗುತ್ತದೆ. ಆದ್ದರಿಂದ ಸುಪ್ರಿಂಕೋರ್ಟ ಮುಂದೆ ಸರ್ಕಾರ ಪ್ರಬಲ ವಾದ ಮಂಡಿಸಿ 1 ರಿ ದ 10 ನೇ ತರಗತಿವರೆಗೆ ರಾಜ್ಯ ಭಾಷೆಗಳು ಕಲಿಕಾ ಮಾಧ್ಯಮವಾಗಲು ಒತ್ತಡ ಹೇರಬೇಕಿದೆ. ಇಂಗ್ಲೀಷನ್ನು ಅದೇ ವೇಳೆಗೆ ಒಂದು ಭಾಷೆಯಾಗಿ ಸಮರ್ಥವಾಗಿ ಕಲಿಸುವ ವ್ಯವಸ್ಥೆ ಕೂಡ ಆಗಬೇಕಿದೆ. ಈ ಕುರಿತು ನಮ್ಮ ಸರಕಾರ ಪರಿಣಾಮಕಾರಿ ಕ್ರಮ ತೆಗೆದುಕೊಂಡು ಸುಪ್ರಿಂ ಕೋರ್ಟ್ ಮುಂದೆ ವಾದ ಮಂಡಿಸಬೇಕಾಗಿದೆ. ತಮಿಳುನಾಡಿನಲ್ಲಿ ಇರುವಂತೆ ಯಾವುದೇ ಮಾಧ್ಯಮದ ಶಾಲೆಗಳಿದ್ದರೂ ತಮಿಳು ಪ್ರಥಮ ಭಾಷೆಯಾಗಿ ಬೋಧಿಸಲ್ಪಡುತ್ತಿರುವಂತೆ ಇತರ ರಾಜ್ಯಗಳಲ್ಲೂ ಆದೇ ಕ್ರಮ ಅನುಸರಿಸಬಹುದಾಗಿದೆ. ಇದರಿಂದ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚು ಆದ್ಯತೆ ಸಿಕ್ಕು ಈಗ ಕನ್ನಡ ಭಾಷೆ ಸಹಿತ ಎಲ್ಲ ಪ್ರಾದೇಶಿಕ ಭಾಷೆಗಳು ಎದುರಿಸುತ್ತಿರುವ ಆತಂಕವಾದರೂ ದೂರಾಗಬಹುದು.

No comments:

Post a Comment